[ನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಶ್ರೀಮದ್ಭಾಗವತದ ಸ್ವರೂಪ, ಪ್ರಮಾಣ, ಶ್ರೋತೃಗಳ ಮತ್ತು ಪ್ರವಚನಕಾರರ ಲಕ್ಷಣ, ಶ್ರವಣವಿಧಿ ಮತ್ತು ಮಾಹಾತ್ಮ್ಯ
(ಶ್ಲೋಕ - 1)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಸಾಧು ಸೂತ ಚಿರಂ ಜೀವ ಚಿರಮೇವಂ ಪ್ರಶಾಧಿ ನಃ ।
ಶ್ರೀಭಾಗವತಮಾಹಾತ್ಮ್ಯಮಪೂರ್ವಂ ತ್ವನ್ಮುಖಾಚ್ಛ್ರುತಮ್ ॥
ಅನುವಾದ
ಋಷಿಗಳು ಸೂತಪುರಾಣಿಕರಲ್ಲಿ ಪ್ರಾರ್ಥಿಸುತ್ತಾರೆ — ‘‘ಸಾಧು-ಸಾಧು ಸೂತಪುರಾಣಿಕರೇ! ನೀವು ಚಿರಂಜೀವಿಯಾಗುವಿರಿ. ಹೀಗೆಯೇ ನಮಗೆ ಉಪದೇಶಾಮೃತವನ್ನು ನೀಡುತ್ತಾ ಇರಿ. ಇಂದು ನಿಮ್ಮಿಂದ ನಾವು ಅಪೂರ್ವವಾದ ಶ್ರೀಮದ್ಭಾಗವತ ಮಾಹಾತ್ಮ್ಯವನ್ನು ಕೇಳಿದೆವು. ॥1॥
(ಶ್ಲೋಕ - 2)
ಮೂಲಮ್
ತತ್ಸ್ವರೂಪಂ ಪ್ರಮಾಣಂ ಚ ವಿಧಿಂ ಚ ಶ್ರವಣೇ ವದ ।
ತದ್ವಕ್ತುರ್ಲಕ್ಷಣಂ ಸೂತ ಶ್ರೋತುಶ್ಚಾಪಿ ವದಾಧುನಾ ॥
ಅನುವಾದ
ಈಗ ನಮಗೆ ಶ್ರೀಮದ್ಭಾಗವತದ ಪ್ರಮಾಣವೇನು? ಶ್ರವಣದ ವಿಧಿಯೇನು? ಭಾಗವತದ ಪ್ರವಚನಕಾರನ ಮತ್ತು ಶ್ರೋತೃವಿನ ಲಕ್ಷಣಗಳೇನು? ಎಂಬುದನ್ನು ತಿಳಿಸಿರಿ.’’ ॥2॥
(ಶ್ಲೋಕ - 3)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಶ್ರೀಮದ್ಭಾಗವತಸ್ಯಾಥ ಶ್ರೀಮದ್ಭಗವತಃ ಸದಾ ।
ಸ್ವರೂಪಮೇಕಮೇವಾಸ್ತಿ ಸಚ್ಚಿದಾನಂದಲಕ್ಷಣಮ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ‘‘ಎಲೈ ಋಷಿಗಳೇ! ಶ್ರೀಮದ್ಭಾಗವತದ ಮತ್ತು ಶ್ರೀಭಗವಂತನ ಸ್ವರೂಪವು ಒಂದೇ ಆಗಿದ್ದು ಅದು ಸಚ್ಚಿದಾನಂದಮಯ ಸ್ವರೂಪವಾಗಿದೆ. ॥3॥
(ಶ್ಲೋಕ - 4)
ಮೂಲಮ್
ಶ್ರೀಕೃಷ್ಣಾಸಕ್ತಭಕ್ತಾನಾಂ ತನ್ಮಾಧುರ್ಯಪ್ರಕಾಶಕಮ್ ।
ಸಮುಜ್ಜೃಂಭತಿ ಯದ್ವಾಕ್ಯಂ ವಿದ್ಧಿ ಭಾಗವತಂ ಹಿ ತತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನಲ್ಲಿ ಆಸಕ್ತಿಯುಳ್ಳ ಭಾವುಕರಾದ ಭಕ್ತರ ಹೃದಯದಲ್ಲಿ ಮಾಧುರ್ಯಭಾವವನ್ನು ಪ್ರಕಾಶಪಡಿಸುವ, ಆ ಮಾಧುರ್ಯ ರಸದ ಸವಿಯನ್ನು ಉಂಟುಮಾಡುವ, ಯಾವ ಯಾವ ವಾಕ್ಯಗಳುಂಟೋ ಅವೆಲ್ಲಾ ಭಾಗವತವೇ ಆಗಿದೆ. ॥4॥
(ಶ್ಲೋಕ - 5)
ಮೂಲಮ್
ಜ್ಞಾನವಿಜ್ಞಾನಭಕ್ತ್ಯಂಗಚತುಷ್ಟಯಪರಂ ವಚಃ ।
ಮಾಯಾಮರ್ದನದಕ್ಷಂ ಚ ವಿದ್ಧಿ ಭಾಗವತಂ ಚ ತತ್ ॥
ಅನುವಾದ
ಜ್ಞಾನ, ವಿಜ್ಞಾನ, ಭಕ್ತಿ ಮತ್ತು ಅವುಗಳಿಗೆ ಅಂಗವಾದ ಸಾಧನ ಚತುಷ್ಟಯವನ್ನು ಪ್ರಕಾಶಗೊಳಿಸುವ ಮತ್ತು ಮಾಯೆಯನ್ನು ಮರ್ದನ ಮಾಡುವ ಶಕ್ತಿಯುಳ್ಳ ವಾಕ್ಯಗಳನ್ನು ಭಾಗವತವೇ ಎಂದು ತಿಳಿಯಿರಿ. ॥5॥
(ಶ್ಲೋಕ - 6)
ಮೂಲಮ್
ಪ್ರಮಾಣಂ ತಸ್ಯ ಕೋ ವೇದ ಹ್ಯನಂತಸ್ಯಾಕ್ಷರಾತ್ಮನಃ ।
ಬ್ರಹ್ಮಣೇ ಹರಿಣಾ ತದ್ದಿಕ್ಚತುಃ ಶ್ಲೋಕ್ಯಾ ಪ್ರದರ್ಶಿತಾ ॥
ಅನುವಾದ
ಶ್ರೀಮದ್ಭಾಗವತವು ಅನಂತ ಅಕ್ಷರಸ್ವರೂಪವಾದುದು. ಇದರ ನಿಯತವಾದ ಪ್ರಮಾಣವು ಇಷ್ಟೇ ಎಂಬುದನ್ನು ಯಾರು ತಾನೇ ಬಲ್ಲರು? ಹಿಂದೆ ಭಗವಂತನಾದ ಶ್ರೀಹರಿಯು ಬ್ರಹ್ಮದೇವರನ್ನು ಕುರಿತು ನಾಲ್ಕು ಶ್ಲೋಕಗಳ ಮೂಲಕ ಅದರ ದಿಗ್ದರ್ಶನವನ್ನು ಮಾತ್ರ ಮಾಡಿಸಿದನು. ॥6॥
(ಶ್ಲೋಕ - 7)
ಮೂಲಮ್
ತದಾನಂತ್ಯಾವಗಾಹೇನ ಸ್ವೇಪ್ಸಿತಾವಹನಕ್ಷಮಾಃ ।
ತ ಏವ ಸಂತಿ ಭೋ ವಿಪ್ರಾ ಬ್ರಹ್ಮವಿಷ್ಣುಶಿವಾದಯಃ ॥
ಅನುವಾದ
ವಿಪ್ರರೇ! ನಾರಾಯಣನಿಂದ ಬ್ರಹ್ಮದೇವರಿಗೆ ಉಪದೇಶಿಸಲ್ಪಟ್ಟ (ಕೇವಲ ನಾಲ್ಕು ಶ್ಲೋಕಗಳುಳ್ಳ) ಈ ಚತುಃಶ್ಲೋಕೀ ಭಾಗವತದಿಂದ ಸಾಮಾನ್ಯಜೀವಿಗಳು ಲಾಭವನ್ನು ಪಡೆಯಲಾರರು. ಇದರ ಅಪಾರವಾದ ಗಾಂಭೀರ್ಯದಲ್ಲಿ ಮುಳುಗಿ ತಮ್ಮ ಇಷ್ಟಾರ್ಥವನ್ನು ಪಡೆಯುವ ಸಾಮರ್ಥ್ಯವು ಬ್ರಹ್ಮ, ವಿಷ್ಣು, ರುದ್ರ ಮುಂತಾದವರಿಗೆ ಮಾತ್ರವೇ ಇರುವುದು. ॥7॥
(ಶ್ಲೋಕ - 8)
ಮೂಲಮ್
ಮಿತಬುದ್ಧ್ಯಾದಿವೃತ್ತೀನಾಂ ಮನುಷ್ಯಾಣಾಂ ಹಿತಾಯ ಚ ।
ಪರೀಕ್ಷಿಚ್ಛುಕಸಂವಾದೋ ಯೋಸೌ ವ್ಯಾಸೇನ ಕೀರ್ತಿತಃ ॥
(ಶ್ಲೋಕ - 9)
ಮೂಲಮ್
ಗ್ರಂಥೋಷ್ಟಾದಶಸಾಹಸ್ರೋ ಯೋಸೌ ಭಾಗವತಾಭಿದಃ ।
ಕಲಿಗ್ರಾಹಗೃಹೀತಾನಾಂ ಸ ಏವ ಪರಮಾಶ್ರಯಃ ॥
ಅನುವಾದ
ಪರಿಮಿತವಾದ ಬುದ್ಧಿಯೇ ಮುಂತಾದ ವೃತ್ತಿಗಳುಳ್ಳ ಮನುಷ್ಯರ ಹಿತಸಾಧನೆಗೆ ಶ್ರೀವ್ಯಾಸಮಹರ್ಷಿಗಳು ಪರೀಕ್ಷಿದ್ರಾಜ ಮತ್ತು ಶುಕ ಮಹರ್ಷಿ ಇವರ ಸಂಭಾಷಣೆಯ ರೂಪದಲ್ಲಿ ಗಾನಮಾಡಿರುವ ಶ್ರೀಮದ್ಭಾಗವತ ಗ್ರಂಥವು ಮಾತ್ರವೇ ಸಮರ್ಥವಾಗುವುದು. ಅವರ ದೃಷ್ಟಿಯಿಂದ ಅದೇ ಶ್ರೀಮದ್ಭಾಗವತವು. ಈ ಗ್ರಂಥದ ಶ್ಲೋಕಸಂಖ್ಯೆಯೂ ಹದಿನೆಂಟುಸಾವಿರ. ಈ ಭವಸಾಗರದಲ್ಲಿ ಕಲಿಪುರುಷನೆಂಬ ಮೊಸಳೆಯ ಬಾಯಿಗೆ ಸಿಲುಕಿರುವ ಪ್ರಾಣಿಗಳಿಗೆ ಈ ಶ್ರೀಮದ್ಭಾಗವತವೇ ಸರ್ವೋತ್ತಮವಾದ ಆಶ್ರಯವು. ॥8-9॥
(ಶ್ಲೋಕ - 10)
ಮೂಲಮ್
ಶ್ರೋತಾರೋಥ ನಿರೂಪ್ಯಂತೇ ಶ್ರೀಮದ್ವಿಷ್ಣುಕಥಾಶ್ರಯಾಃ ।
ಪ್ರವರಾ ಅವರಾಶ್ಚೇತಿ ಶ್ರೋತಾರೋ ದ್ವಿವಿಧಾ ಮತಾಃ ॥
ಅನುವಾದ
ಈಗ ಈ ಶ್ರೀಮದ್ವಿಷ್ಣುಕಥೆಯನ್ನು ಆಶ್ರಯಿಸಿರುವ ಶ್ರೋತೃಗಳ ಲಕ್ಷಣವನ್ನು ಹೇಳುತ್ತೇನೆ. ಪುರುಷಾರ್ಥ ಸಿದ್ಧಿಗಾಗಿ ಈ ಕಥಾಶ್ರವಣ ಮಾಡುವ ಶ್ರೋತೃಗಳಲ್ಲಿ ಪ್ರವರ (ಉತ್ತಮ) ಮತ್ತು ಅವರ (ಅಧಮ) ಎಂದು ಎರಡು ಭೇದಗಳು. ॥10॥
(ಶ್ಲೋಕ - 11)
ಮೂಲಮ್
ಪ್ರವರಾಶ್ಚಾತಕೋ ಹಂಸಃ ಶುಕೋ ಮೀನಾದಯಸ್ತಥಾ ।
ಅವರಾ ವೃಕಭೂರುಂಡವೃಷೋಷ್ಟ್ರಾದ್ಯಾಃ ಪ್ರಕೀರ್ತಿತಾಃ ॥
ಅನುವಾದ
ಪ್ರವರಶ್ರೋತೃಗಳಲ್ಲಿಯೂ ಚಾತಕ, ಹಂಸ, ಶುಕ ಮತ್ತು ಮೀನ ಮುಂತಾದ ಉಪಭೇದಗಳಿವೆ. ಹಾಗೆಯೇ ಅವರ ಶ್ರೋತೃಗಳಲ್ಲಿಯೂ ವೃಕ, ಭೂರುಂಡ, ವೃಷ ಮತ್ತು ಉಷ್ಟ್ರವೇ ಮೊದಲಾದ ನಾಲ್ಕು ಭೇದಗಳುಂಟು. ॥11॥
(ಶ್ಲೋಕ - 12)
ಮೂಲಮ್
ಅಖಿಲೋಪೇಕ್ಷಯಾ ಯಸ್ತು ಕೃಷ್ಣಶಾಸಶ್ರುತೌ ವ್ರತೀ ।
ಸ ಚಾತಕೋ ಯಥಾಂಭೋದಮುಕ್ತೇ ಪಾಥಸಿ ಚಾತಕಃ ॥
ಅನುವಾದ
ಚಾತಕಪಕ್ಷಿಯು ಬೇರೆ ಯಾವ ನೀರನ್ನೂ ಮುಟ್ಟದೆ ಮೋಡವು ಸುರಿಸುವ (ಭೂಮಿಯನ್ನು ಮುಟ್ಟದೇ ಇರುವ) ನೀರನ್ನು ಮಾತ್ರವೇ ಬಯಸುವಂತೆ ಯಾವ ಶ್ರೋತೃಗಳು ಉಳಿದುದೆಲ್ಲವನ್ನೂ ತೊರೆದು ಕೇವಲ ಶ್ರೀಕೃಷ್ಣನಿಗೆ ಸಂಬಂಧಪಟ್ಟ ಶಾಸ್ತ್ರಗಳಾದ ಶ್ರೀಮದ್ಭಾಗವತ ಮುಂತಾದುವುಗಳನ್ನು ಮಾತ್ರ ಕೇಳುವ ವ್ರತವನ್ನು ತೊಟ್ಟಿರುತ್ತಾರೆಯೋ ಅವರು ಚಾತಕ ಎಂಬ ಬಗೆಯ ಉತ್ತಮಶ್ರೋತೃಗಳು. ॥12॥
(ಶ್ಲೋಕ - 13)
ಮೂಲಮ್
ಹಂಸಃ ಸ್ಯಾತ್ಸಾರಮಾದತ್ತೇ ಯಃ ಶ್ರೋತಾ ವಿವಿಧಾತ್ಛ್ರುತಾತ್ ।
ದುಗ್ಧೇನೈಕ್ಯಂ ಗತಾತ್ತೋಯಾದ್ ಯಥಾ ಹಂಸೋಮಲಂ ಪಯಃ ॥
ಅನುವಾದ
ಹಂಸವು ಹೇಗೆ ನೀರು ಮಿಶ್ರವಾದ ಹಾಲಿನಿಂದ ನಿರ್ಮಲವಾದ ಹಾಲನ್ನು ಮಾತ್ರ ಪ್ರತ್ಯೇಕಿಸಿ ಸೇವಿಸಿ ಜಲಭಾಗವನ್ನು ಬಿಟ್ಟುಬಿಡುತ್ತದೆಯೋ ಹಾಗೆ ಯಾವ ಶ್ರೋತೃಗಳು ಅನೇಕ ಶಾಸಗಳನ್ನು ಕೇಳಿದರೂ ಅವುಗಳಲ್ಲಿ ಸಾರಭಾಗವಾದ ಶ್ರೀಕೃಷ್ಣಕಥೆಯನ್ನು ಮಾತ್ರ ಪ್ರತ್ಯೇಕಿಸಿ ಗ್ರಹಿಸುತ್ತಾರೆಯೋ ಅವರು ಉತ್ತಮಶ್ರೋತೃಗಳಲ್ಲಿ ‘ಹಂಸ’ ಎನಿಸುತ್ತಾರೆ. ॥13॥
(ಶ್ಲೋಕ - 14)
ಮೂಲಮ್
ಶುಕಃ ಸುಷ್ಠು ಮಿತಂ ವಕ್ತಿ ವ್ಯಾಸಂ ಶ್ರೋತೃಂಶ್ಚ ಹರ್ಷಯನ್ ।
ಸುಪಾಠಿತಃ ಶುಕೋ ಯದ್ವಚ್ಛಿಕ್ಷಕಂ ಪಾರ್ಶ್ವಗಾನಪಿ ॥
ಅನುವಾದ
ಶುಕ ಎಂದರೆ ಗಿಳಿಯು. ಚೆನ್ನಾಗಿ ಶಿಕ್ಷಣಪಡೆದ ಶುಕವು ತನ್ನ ಮಧುರವಾಣಿಯಿಂದ ತನಗೆ ಶಿಕ್ಷಣವನ್ನು ಕೊಟ್ಟವನಿಗೂ ಮತ್ತು ಹತ್ತಿರದಲ್ಲಿರುವ ಶ್ರೋತೃಗಳಿಗೂ ಹೇಗೆ ಸಂತೋಷವನ್ನುಂಟುಮಾಡುತ್ತದೆಯೋ ಹಾಗೆಯೇ ಯಾವ ಶ್ರೋತೃವು ಕಥೆಯನ್ನು ಹೇಳುವ ವ್ಯಾಸರ ಬಾಯಿಂದ ಬರುವ ಉಪದೇಶವನ್ನು ಕೇಳಿ, ಅದನ್ನು ಸುಂದರವೂ ಪರಿಮಿತವೂ ಆದ ವಾಣಿಯಿಂದ ತಾನೂ ಹಾಗೆಯೇ ಇತರರಿಗೆ ಹೇಳುತ್ತಾನೆಯೋ, ಅದರಿಂದ ವ್ಯಾಸರಿಗೂ ಮತ್ತು ಇತರ ಶ್ರೋತೃಗಳಿಗೂ ಆನಂದವನ್ನುಂಟು ಮಾಡುತ್ತಾನೆಯೋ, ಆತನನ್ನು ‘ಶುಕ’ ಎಂದು ಕರೆಯುತ್ತಾರೆ. ॥14॥
(ಶ್ಲೋಕ - 15)
ಮೂಲಮ್
ಶಬ್ದಂ ನಾನಿಮಿಷೋ ಜಾತು ಕರೋತ್ಯಾಸ್ವಾದಯನ್ ರಸಮ್ ।
ಶ್ರೋತಾ ಸ್ನಿಗ್ಧೋ ಭವೇನ್ಮೀನೋ ಮೀನಃ ಕ್ಷೀರನಿಧೌ ಯಥಾ ॥
ಅನುವಾದ
ಕ್ಷೀರಸಾಗರದಲ್ಲಿರುವ ಮೀನು ಹೇಗೆ ಯಾವ ಮಾತನ್ನೂ ಆಡದೆ ಎವೆಯಿಕ್ಕದ ಕಣ್ಣುಗಳಿಂದ ನೋಡುತ್ತಾ, ಸದಾ ಹಾಲನ್ನು ಕುಡಿಯುತ್ತಿರುತ್ತದೆಯೋ ಹಾಗೆಯೇ ಕಥಾಶ್ರವಣಮಾಡುವಾಗ ಎವೆಯಿಕ್ಕದೆ ಕಣ್ಣುಗಳಿಂದ ನೋಡುತ್ತಾ ಯಾವ ಮಾತನ್ನೂ ಆಡದೆ ನಿರಂತರವಾಗಿ ಕಥಾರಸವನ್ನು ಸವಿಯುತ್ತಾ ಇರುವ ಪ್ರೇಮಿಯಾದ ಶ್ರೋತೃವನ್ನು ‘ಮೀನ’ ಎಂದು ಕರೆಯುತ್ತಾರೆ. ॥15॥
(ಶ್ಲೋಕ - 16)
ಮೂಲಮ್
ಯಸ್ತುದನ್ ರಸಿಕಾನ್ಛ್ರೋತೃನ್ ವಿರೌತ್ಯಜ್ಞೋ ವೃಕೋ ಹಿ ಸಃ ।
ವೇಣುಸ್ವನರಸಾಸಕ್ತಾನ್ ವೃಕೋರಣ್ಯೇ ಮೃಗಾನ್ ಯಥಾ ॥
ಅನುವಾದ
ಇವರೆಲ್ಲಾ ಪ್ರವರ (ಉತ್ತಮ) ವರ್ಗದ ಶ್ರೋತೃಗಳು. ಇನ್ನು ಅವರ (ಅಧಮ) ವರ್ಗದ ಶ್ರೋತೃಗಳನ್ನು ನಿರೂಪಿಸುತ್ತೇನೆ. ಇವರಲ್ಲಿ ಮೊದಲನೆಯವರಿಗೆ ‘ವೃಕ’ ಎಂದು ಹೆಸರು. ವೃಕ ಎಂದರೆ ತೋಳ. ತೋಳವು ಅರಣ್ಯದಲ್ಲಿ ಕೊಳಲಿನಂತೆ ಮಧುರಧ್ವನಿ ಮಾಡುತ್ತಿರುವ ಸಾಧುಪ್ರಾಣಿಗಳನ್ನು ಹೆದರಿಸುವಂತಹ ಭಯಂಕರ ವಾದ ಗರ್ಜನೆಯನ್ನು ಮಾಡುವಂತೆ, ಯಾವ ಮೂರ್ಖರು (ಅಥವಾ ದುಷ್ಟರು) ಕಥಾಶ್ರವಣ ಆಗುತ್ತಿರುವಾಗ ಮಧ್ಯೇ ಮಧ್ಯೇ ಗಟ್ಟಿಯಾಗಿ ಮಾತನಾಡುತ್ತಾ ರಸಿಕರಾದ ಶ್ರೋತೃಗಳಿಗೆ ಉದ್ವೇಗವನ್ನುಂಟುಮಾಡುತ್ತಾರೆಯೋ, ಅವರಿಗೆ ‘ವೃಕ’ ಎಂದು ಹೆಸರು. ॥16॥
(ಶ್ಲೋಕ - 17)
ಮೂಲಮ್
ಭೂರುಂಡಃ ಶಿಕ್ಷಯೇದನ್ಯಾನ್ ಚ್ಛ್ರುತ್ವಾ ನ ಸ್ವಯಮಾಚರೇತ್ ।
ಯಥಾ ಹಿಮವತಃ ಶೃಂಗೇ ಭೂರುಂಡಾಖ್ಯೋ ವಿಹಂಗಮಃ ॥
ಅನುವಾದ
ಭೂರುಂಡ ಎನ್ನುವುದು ಹಿಮಾಲಯದ ಶಿಖರದಲ್ಲಿರುವ ಒಂದು ಜಾತಿಯ ಪಕ್ಷಿ. ಅದು ಇತರರು ಹೇಳುವ ಒಳ್ಳೆಯ ವಾಕ್ಯಗಳನ್ನು ಕೇಳಿ ಅದನ್ನು ಹಾಗೆಯೇ ತಾನು ಹೇಳುತ್ತದೆ. ಆದರೆ ಅವರ ಉಪದೇಶದಂತೆ ತಾನು ನಡೆಯುವುದಿಲ್ಲ. ಅದರಿಂದ ತಾನು ಲಾಭಪಡೆಯುವುದಿಲ್ಲ. ಹಾಗೆಯೇ ಕಥಾಶ್ರವಣವಾಗುತ್ತಿರುವಾಗ ಯಾವನು ತಾನು ಉಪ ದೇಶದ ಮಾತುಗಳನ್ನು ಕೇಳಿ ಅದನ್ನು ಹಾಗೆಯೇ ಇತರರಿಗೆ ಉಪದೇಶಮಾಡುತ್ತಾ, ತಾನು ಮಾತ್ರ ಅದರಂತೆ ಅನುಷ್ಠಾನ ಮಾಡುವುದಿಲ್ಲವೋ ಅಂತಹ ಶ್ರೋತೃವನ್ನು ‘ಭೂರುಂಡ’ ಎನ್ನುತ್ತಾರೆ. ॥17॥
(ಶ್ಲೋಕ - 18)
ಮೂಲಮ್
ಸರ್ವಂ ಶ್ರುತಮುಪಾದತ್ತೇ ಸಾರಾಸಾರಾಂಧಧೀರ್ವೃಷಃ ।
ಸ್ವಾದುದ್ರಾಕ್ಷಾಂ ಖಲಿಂ ಚಾಪಿ ನಿರ್ವಿಶೇಷಂ ಯಥಾ ವೃಷಃ ॥
ಅನುವಾದ
ವೃಷ ಎಂದರೆ ಎತ್ತು. ಎತ್ತಿನ ಮುಂದೆ ಸಿಹಿಯಾದ ದ್ರಾಕ್ಷಿಯಿರಲಿ ಅಥವಾ ಕಹಿಯಾದ ಮೇವು ಇರಲೀ ಎರಡನ್ನೂ ಒಂದೇ ಸಮನಾಗಿ ತಿಳಿದು ಅದು ತಿನ್ನುತ್ತದೆ. ಹಾಗೆಯೇ ಯಾವನು ಕಥಾಪ್ರವಚನದಲ್ಲಿ ಸಾರ, ಅಸಾರ ಎಂದು ವಿವೇಚಿಸದೆ ಎಲ್ಲ ಮಾತುಗಳನ್ನೂ ಸೇವಿಸುತ್ತಾನೆಯೋ ಅಂತಹ ಕುರುಡುಬುದ್ಧಿಯ ಶ್ರೋತೃವು ‘ವೃಷ’ ಎನ್ನಿಸುತ್ತಾನೆ. ॥18॥
(ಶ್ಲೋಕ - 19)
ಮೂಲಮ್
ಸ ಉಷ್ಟ್ರೋ ಮಧುರಂ ಮುಂಚನ್ ವಿಪರೀತೇ ರಮೇತ ಯಃ ।
ಯಥಾ ನಿಂಬಂ ಚರತ್ಯುಷ್ಟ್ರೋ ಹಿತ್ವಾಮ್ರಮಪಿ ತದ್ಯುತಮ್ ॥
ಅನುವಾದ
ಉಷ್ಟ್ರ ಎಂದರೆ ಒಂಟೆ. ರುಚಿಕರವಾದ ಎಳಸಾದ ಮಾವಿನ ಚಿಗುರು ಬಿಟ್ಟು ಕಹಿಯಾದ ಬೇವಿನ ಎಲೆಗಳನ್ನು ಮಾತ್ರ ತಿನ್ನುತ್ತದೆ. ಹಾಗೆಯೇ ಯಾವನು ಕಥಾಶ್ರವಣಪ್ರಸಂಗದಲ್ಲಿ ಮಧುರವಾದ ಸಾಂಸಾರಿಕ ಮಾತುಗಳಲ್ಲಿಯೇ ರಮಿಸುತ್ತಾನೆಯೋ ಅಂತಹ ಶ್ರೋತೃವನ್ನು ‘ಉಷ್ಟ್ರ’ ಎಂದು ಕರೆಯುತ್ತಾರೆ. ॥19॥
(ಶ್ಲೋಕ - 20)
ಮೂಲಮ್
ಅನ್ಯೇಪಿ ಬಹವೋ ಭೇದಾ ದ್ವಯೋರ್ಭೃಂಗಖರಾದಯಃ ।
ವಿಜ್ಞೇಯಾಸ್ತತ್ತದಾಚಾರೈ ಸ್ತತ್ತತ್ಪ್ರಕೃತಿಸಂಭವೈಃ ॥
ಅನುವಾದ
‘ಪ್ರವರ’ ಮತ್ತು ‘ಅವರ’ ಶ್ರೋತೃಗಳಲ್ಲಿ ಈಗ ಹೇಳಲ್ಪಟ್ಟಿರುವ ಭೇದಗಳಲ್ಲದೆ ‘ಭ್ರಮರ’ ‘ಗರ್ದಭ’ ಇವೇ ಮುಂತಾದ ಇನ್ನೂ ಅನೇಕ ಭೇದಗಳುಂಟು. ಅವುಗಳನ್ನು ಶ್ರೋತೃಗಳ ಸ್ವಾಭಾವಿಕವಾದ ಆಚಾರ-ವ್ಯವಹಾರಗಳಿಂದ ನಿರ್ಣಯಿಸಿಕೊಳ್ಳಬೇಕು. ॥20॥
(ಶ್ಲೋಕ - 21)
ಮೂಲಮ್
ಯಃ ಸ್ಥಿತ್ವಾಭಿಮುಖಂ ಪ್ರಣಮ್ಯ ವಿಧಿವ-
ತ್ತ್ಯಕ್ತಾನ್ಯವಾದೋ ಹರೇಃ
ಲೀಲಾಃ ಶ್ರೋತುಮಭೀಪ್ಸತೇತಿ ನಿಪುಣೋ
ನಮ್ರೋಥ ಕ್ಲೃಪ್ತಾಂಜಲಿಃ ।
ಶಿಷ್ಯೋ ವಿಶ್ವಸಿತೋನುಚಿಂತನಪರಃ
ಪ್ರಶ್ನೇನುರಕ್ತಃ ಶುಚಿಃ
ನಿತ್ಯಂ ಕೃಷ್ಣಜನಪ್ರಿಯೋ ನಿಗದಿತಃ
ಶ್ರೋತಾ ಸ ವೈ ವಕ್ತೃಭಿಃ ॥
ಅನುವಾದ
ಶ್ರೀಮದ್ಭಾಗವತ ಪ್ರವಚನವು ನಡೆಯುವಾಗ ಯಾವನು ಪ್ರವಚನಕಾರನಿಗೆ ವಿಧಿಪೂರ್ವಕವಾಗಿ ಪ್ರಣಾಮಮಾಡಿ, ಆತನ ಮುಂದೆ ಕುಳಿತು, ಉಳಿದ ಸಾಂಸಾರಿಕವಾದ ಮಾತುಗಳನ್ನು ತೊರೆದು, ಕೇವಲ ಭಗವಂತನ ಲೀಲಾಕಥೆಗಳನ್ನು ಮಾತ್ರ ಕೇಳಲು ಬಯಸುತ್ತಾನೆಯೋ, ಕಥೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಅತ್ಯಂತ ಕುಶಲನಾಗಿದ್ದಾನೆಯೋ, ನಮ್ರನಾಗಿ ಕೈಜೋಡಿಸಿಕೊಂಡು ಶಿಷ್ಯಭಾವದಿಂದ ಶ್ರದ್ಧಾ ವಿಶ್ವಾಸ ಯುಕ್ತನಾಗಿ ಉಪದೇಶವನ್ನು ಕೇಳುತ್ತಾನೆಯೋ, ಕೇಳಿದ್ದನ್ನು ಕುರಿತು ಚಿಂತನೆಯನ್ನು ಮಾಡುತ್ತಾ, ತಿಳಿಯದ ವಿಷಯಗಳನ್ನು ಕೇಳಿ ತಿಳಿಯುತ್ತಾ, ಪವಿತ್ರಭಾವದಿಂದ ಕೂಡಿ ಶ್ರೀಕೃಷ್ಣಭಕ್ತರಲ್ಲಿ ಸದಾ ಪ್ರೇಮವುಳ್ಳವನಾಗಿರುತ್ತಾನೆಯೋ ಅಂತಹ ಶ್ರೋತೃವನ್ನು ಮಾತ್ರವೇ ಪ್ರವಚನಕಾರರು ‘ಉತ್ತಮವಾದ ಶ್ರೋತೃ’ ಎಂದು ಕರೆಯುತ್ತಾರೆ. ॥21॥
(ಶ್ಲೋಕ - 22)
ಮೂಲಮ್
ಭಗವನ್ಮತಿರನಪೇಕ್ಷಃ ಸುಹೃದೋ
ದೀನೇಷು ಸಾನುಕಂಪೋ ಯಃ ।
ಬಹುಧಾ ಬೋಧನಚತುರೋ
ವಕ್ತಾ ಸಮ್ಮಾನಿತೋ ಮುನಿಭಿಃ ॥
ಅನುವಾದ
ಈಗ ಪ್ರವಚನಕಾರನ ಲಕ್ಷಣವನ್ನು ಹೇಳುತ್ತೇನೆ ಭಗವಂತನಲ್ಲಿ ಆಸಕ್ತವಾದ ಮತಿಯುಳ್ಳವನಾಗಿರಬೇಕು. ಭಗವಂತನನ್ನು ಬಿಟ್ಟು ಬೇರಾವುದನ್ನೂ ಅಪೇಕ್ಷಿಸಬಾರದು. ಸ್ನೇಹ-ಸೌಹಾರ್ದಗಳನ್ನು ಹೊಂದಿರಬೇಕು. ದೀನರ ವಿಷಯದಲ್ಲಿ ದಯಾಳುವಾಗಿರಬೇಕು. ಬಗೆ-ಬಗೆಯಾದ ಯುಕ್ತಿ ದೃಷ್ಟಾಂತ ಇತ್ಯಾದಿಗಳಿಂದ ತತ್ತ್ವವನ್ನು ಬೋಧಿಸುವುದರಲ್ಲಿ ಚತುರನಾಗಿರಬೇಕು. ಇಂತಹ ಲಕ್ಷಣಗಳಿಂದ ಕೂಡಿದ ಪ್ರವಚನಕಾರನನ್ನು ಮುನಿಗಳೂ ಕೂಡ ಗೌರವಿಸುತ್ತಾರೆ. ॥22॥
(ಶ್ಲೋಕ - 23)
ಮೂಲಮ್
ಅಥ ಭಾರತಭೂಸ್ಥಾನೇ ಶ್ರೀಭಾಗವತಸೇವನೇ ।
ವಿಧಿಂ ಶೃಣುತ ಭೋ ವಿಪ್ರಾ ಯೇನ ಸ್ಯಾತ್ಸುಖಸಂತತಿಃ ॥
ಅನುವಾದ
ಎಲೈ ವಿಪ್ರಶ್ರೇಷ್ಠರೇ! ಭಾರತವರ್ಷದ ಭೂಮಿಯಲ್ಲಿ ಶ್ರೀಮದ್ಭಾಗವತ ಕಥೆಯನ್ನು ಸೇವಿಸಲು ಅನುಸರಿಸ ಬೇಕಾಗಿರುವ ವಿಧಿಗಳು ಯಾವವು? ಎಂಬುದನ್ನು ಈಗ ಹೇಳುತ್ತೇನೆ. ಈ ವಿಧಿಗಳನ್ನು ಪಾಲನೆಮಾಡಿದರೆ ಶ್ರೋತೃ ವಿಗೆ ಸುಖಪರಂಪರೆಗಳು ವೃದ್ಧಿಹೊಂದುವವು. ॥23॥
(ಶ್ಲೋಕ - 24)
ಮೂಲಮ್
ರಾಜಸಂ ಸಾತ್ತ್ವಿಕಂ ಚಾಪಿ ತಾಮಸಂ ನಿರ್ಗುಣಂ ತಥಾ ।
ಚತುರ್ವಿಧಂ ತು ವಿಜ್ಞೇಯಂ ಶ್ರೀಭಾಗವತಸೇವನಮ್ ॥
ಅನುವಾದ
ಶ್ರೀಮದ್ಭಾಗವತದ ಸೇವನೆಯಲ್ಲಿ ಸಾತ್ತ್ವಿಕ, ರಾಜಸ, ತಾಮಸ ಮತ್ತು ನಿರ್ಗುಣ ಎಂದು ನಾಲ್ಕು ಬಗೆಗಳುಂಟು. ॥24॥
(ಶ್ಲೋಕ - 25)
ಮೂಲಮ್
ಸಪ್ತಾಹಂ ಯಜ್ಞವದ್ಯತ್ತು ಸಶ್ರಮಂ ಸತ್ವರಂ ಮುದಾ ।
ಸೇವಿತಂ ರಾಜಸಂ ತತ್ತು ಬಹುಪೂಜಾದಿಶೋಭನಮ್ ॥
ಅನುವಾದ
ಯಜ್ಞದಲ್ಲಿ ಹೇಗೋ ಹಾಗೆ ವೈಭವದ ಸಿದ್ಧತೆಗಳಿಂದ ಕೂಡಿದ್ದು ಬಗೆ-ಬಗೆಯ ಪೂಜಾಸಾಮಗ್ರಿಗಳಿಂದ ಶೋಭಿಸುತ್ತಿರಬೇಕು. ಬಹಳ ಪರಿಶ್ರಮ ಉತ್ಸಾಹಗಳಿಂದ ಆಚರಿಸಲ್ಪಟ್ಟು ಏಳು ದಿವಸಗಳಲ್ಲಿ ಸಮಾಪ್ತಿಮಂಗಳವನ್ನು ಹೊಂದಬೇಕು. ಈ ವಿವರಣೆಗೆ ತಕ್ಕಂತೆ ಪ್ರಸನ್ನತೆಯಿಂದ ಮಾಡಲ್ಪಡುವ ಶ್ರೀಮದ್ಭಾಗವತ ಸೇವನೆಗೆ ‘ರಾಜಸ’ ಎಂದು ಹೆಸರು. ॥25॥
(ಶ್ಲೋಕ - 26)
ಮೂಲಮ್
ಮಾಸೇನ ಋತುನಾ ವಾಪಿ ಶ್ರವಣಂ ಸ್ವಾದಸಂಯುತಮ್ ।
ಸಾತ್ತ್ವಿಕಂ ಯದನಾಯಾಸಂ ಸಮಸ್ತಾನಂದವರ್ಧನಮ್ ॥
ಅನುವಾದ
ಯಾವ ಆತುರವೂ ಇಲ್ಲದೆ ನಿಧಾನವಾಗಿ ನಡೆಸುತ್ತಾ ಒಂದು ಅಥವಾ ಎರಡು ತಿಂಗಳಲ್ಲಿ ಕಥೆಯ ರಸವನ್ನು ಸವಿಯುತ್ತಾ ಯಾವ ಆಯಾಸವೂ ಇಲ್ಲದೆ ಸಂತೋಷವನ್ನು ವೃದ್ಧಿಪಡಿಸುತ್ತಾ ಮಾಡಲ್ಪಡುವ ಭಾಗವತ ಸೇವನೆಯು ‘ಸಾತ್ತ್ವಿಕ’ ಎನಿಸುತ್ತದೆ. ॥26॥
(ಶ್ಲೋಕ - 27)
ಮೂಲಮ್
ತಾಮಸಂ ಯತ್ತು ವರ್ಷೇಣ ಸಾಲಸಂ ಶ್ರದ್ಧಯಾ ಯುತಮ್ ।
ವಿಸ್ಮೃತಿಸ್ಮೃತಿಸಂಯುಕ್ತಂ ಸೇವನಂ ತಚ್ಚಸೌಖ್ಯದಮ್ ॥
ಅನುವಾದ
ಮಧ್ಯ-ಮಧ್ಯದಲ್ಲಿ ಮರೆವಿನಿಂದ ಕೆಲವು ವಿಷಯಗಳನ್ನು ಬಿಟ್ಟುಬಿಡುವುದು. ಮರೆತದ್ದು ನೆನಪಿಗೆ ಬಂದಾಗ ಅದನ್ನು ಮತ್ತೆ ಆರಂಭಿಸುವುದು ಹೀಗೆ ಒಂದು ವರ್ಷ ಕಾಲದವರೆಗೆ ಆಲಸ್ಯ-ಅಶ್ರದ್ಧೆಗಳಿಂದ ನಡೆಸಲ್ಪಡುವ ಭಾಗವತ ಕಥಾಸೇವನೆಯನ್ನು ‘ತಾಮಸ’ ಎನ್ನುತ್ತಾರೆ. ಭಾಗವ ತಶ್ರವಣವನ್ನು ಮಾಡದೆಯೇ ಇರುವುದಕ್ಕಿಂತಲೂ ತಾಮಸ ರೂಪದಲ್ಲಾದರೂ ಮಾಡುವುದು ಒಳ್ಳೆಯದು. ॥27॥
(ಶ್ಲೋಕ - 28)
ಮೂಲಮ್
ವರ್ಷಮಾಸದಿನಾನಾಂ ತು ವಿಮುಚ್ಯನಿಯಮಾಗ್ರಹಮ್ ।
ಸರ್ವದಾ ಪ್ರೇಮಭಕ್ತ್ಯೈವ ಸೇವನಂ ನಿರ್ಗುಣಂ ಮತಮ್ ॥
ಅನುವಾದ
ವರ್ಷ, ತಿಂಗಳು, ದಿವಸ ಮುಂತಾದ ಕಾಲನಿಯಮದ ಆಗ್ರಹವಿಲ್ಲದೆ ಸದಾ ಭಕ್ತಿಯಿಂದಲೂ, ಪ್ರೇಮದಿಂದಲೂ ಶ್ರೀಮದ್ಭಾಗವತವನ್ನು ಶ್ರವಣಮಾಡುತ್ತಿರುವುದು ‘ನಿರ್ಗುಣ’ ಸೇವನೆ ಎಂದು ಕರೆಯಲ್ಪಡುತ್ತದೆ. ॥28॥
(ಶ್ಲೋಕ - 29)
ಮೂಲಮ್
ಪಾರೀಕ್ಷಿತೇಪಿ ಸಂವಾದೇ ನಿರ್ಗುಣಂ ತತ್ಪ್ರಕೀರ್ತಿತಮ್ ।
ತತ್ರ ಸಪ್ತದಿನಾಖ್ಯಾನಂ ತದಾಯುರ್ದಿನಸಂಖ್ಯಯಾ ॥
ಅನುವಾದ
ಪರೀಕ್ಷಿದ್ರಾಜ ಮತ್ತು ಶುಕಬ್ರಹ್ಮರ್ಷಿಗಳ ಸಂಭಾಷಣೆಯ ರೂಪದಲ್ಲಿ ನಡೆದ ಶ್ರೀಮದ್ಭಾಗವತಕಥಾಶ್ರವಣವು ಈ ‘ನಿರ್ಗುಣ’ ಎಂಬ ವರ್ಗಕ್ಕೆ ಸೇರಿದ್ದು. ಅದರಲ್ಲಿ ಏಳು ದಿವಸಗಳಲ್ಲಿ ಕಥಾಶ್ರವಣ ನಡೆಯಿತು ಎಂಬ ಕಾಲನಿಯಮವು ಕೇಳಿಬರುತ್ತದೆಯಲ್ಲಾ! ಅದು ಹೇಗೆ ‘ನಿರ್ಗುಣ’ವಾಗುವುದು? ಎಂದರೆ ರಾಜನ ಆಯುಸ್ಸಿನಲ್ಲಿ ಉಳಿಕೆಯ ದಿನಗಳು ಏಳೇ ಆಗಿದ್ದುದರಿಂದ ಆ ದಿನ ಸಂಖ್ಯೆಯು ಬಂದಿದೆಯೇ ಹೊರತು ಸಪ್ತಾಹಕಥಾನಿಯಮವನ್ನು ತಿಳಿಸುವುದಕ್ಕಾಗಿ ಅದು ಬಂದಿಲ್ಲ. ॥29॥
(ಶ್ಲೋಕ - 30)
ಮೂಲಮ್
ಅನ್ಯತ್ರ ತ್ರಿಗುಣಂ ಚಾಪಿ ನಿರ್ಗುಣಂ ಚ ಯಥೇಚ್ಛಯಾ ।
ಯಥಾ ಕಥಂಚಿತ್ಕರ್ತವ್ಯಂ ಸೇವನಂ ಭಗವಚ್ಛ್ರುತೇಃ ॥
ಅನುವಾದ
ಭಾರತವರ್ಷವನ್ನು ಬಿಟ್ಟು ಇತರ ಸ್ಥಾನಗಳಲ್ಲಿಯೂ ತನ್ನ ಅಭಿರುಚಿಗೆ ತಕ್ಕಂತೆ ಸಾತ್ತ್ವಿಕ, ರಾಜಸ, ತಾಮಸ ಅಥವಾ ನಿರ್ಗುಣ ರೂಪವಾದ ಕಥಾಶ್ರವಣವನ್ನು ಮಾಡಬಹುದು. ಯಾವುದೇ ರೀತಿಯಲ್ಲಾದರೂ ಶ್ರೀಮದ್ಭಾಗವತದ ಶ್ರವಣವನ್ನು ಮಾಡುತ್ತಲೇ ಇರಬೇಕು ಎಂದು ಇದರ ತಾತ್ಪರ್ಯ. ॥30॥
(ಶ್ಲೋಕ - 31)
ಮೂಲಮ್
ಯೇ ಶ್ರೀಕೃಷ್ಣವಿಹಾರೈಕಭಜನಾಸ್ವಾದಲೋಲುಪಾಃ ।
ಮುಕ್ತಾವಪಿ ನಿರಾಕಾಂಕ್ಷಾಸ್ತೇಷಾಂ ಭಾಗವತಂ ಧನಮ್ ॥
ಅನುವಾದ
ಶ್ರೀಕೃಷ್ಣ ಪರಮಾತ್ಮನ ಲೀಲಾಕಥೆಗಳ ಶ್ರವಣ-ಸಂಕೀರ್ತನ ಮತ್ತು ರಸಾಸ್ವಾದನೆಗಳಿಗಾಗಿಯೇ ಅತ್ಯಂತವಾಗಿ ಇಷ್ಟಪಡುತ್ತಾ ಮೋಕ್ಷವನ್ನೂ ಕೂಡ ಯಾರು ಬಯಸುವುದಿಲ್ಲವೋ ಅವರಿಗಾದರೋ ಶ್ರೀಮದ್ಭಾಗವತವೇ ಪರಮ ಧನವು. ॥31॥
(ಶ್ಲೋಕ - 32)
ಮೂಲಮ್
ಯೇಪಿ ಸಂಸಾರಸಂತಾಪನಿರ್ವಿಣ್ಣಾ ಮೋಕ್ಷಕಾಂಕ್ಷಿಣಃ ।
ತೇಷಾಂ ಭವೌಷಧಂ ಚೈತತ್ಕಲೌ ಸೇವ್ಯಂ ಪ್ರಯತ್ನತಃ ॥
ಅನುವಾದ
ಸಾಂಸಾರಿಕದುಃಖಗಳಿಗೆ ಹೆದರಿ ತಮ್ಮ ಮುಕ್ತಿಯನ್ನು ಬಯಸುವವರಿಗೆ ಇದು ಭವರೋಗದ ಔಷಧವೇ ಆಗಿದೆ. ಆದ್ದರಿಂದ ಈ ಕಲಿಕಾಲದಲ್ಲಿ ಇದನ್ನು ಪ್ರಯತ್ನಪೂರ್ವಕವಾಗಿ ಸೇವಿಸಬೇಕು. ॥32॥
(ಶ್ಲೋಕ - 33)
ಮೂಲಮ್
ಯೇ ಚಾಪಿ ವಿಷಯಾರಾಮಾಃ ಸಾಂಸಾರಿಕಸುಖಸ್ಪೃಹಾಃ ।
ತೇಷಾಂ ತು ಕರ್ಮಮಾರ್ಗೇಣ ಯಾ ಸಿದ್ಧಿಃ ಸಾಧುನಾ ಕಲೌ ॥
(ಶ್ಲೋಕ - 34)
ಮೂಲಮ್
ಸಾಮರ್ಥ್ಯಧನವಿಜ್ಞಾನಾಭಾವಾದತ್ಯಂತದುರ್ಲಭಾ ।
ತಸ್ಮಾತ್ತೈರಪಿ ಸಂಸೇವ್ಯಾ ಶ್ರೀಮದ್ಭಾಗವತೀ ಕಥಾ ॥
ಅನುವಾದ
ಇದಲ್ಲದೆ ಯಾರು ಇಂದ್ರಿಯವಿಷಯಗಳಲ್ಲಿಯೇ ರಮಿಸುತ್ತಾ ಸಾಂಸಾರಿಕ ಸುಖಗಳನ್ನೇ ಸದಾ ಬಯಸುತ್ತಾರೋ ಅಂತಹವರೂ ಕೂಡ ಈ ಕಲಿಯುಗದಲ್ಲಿ ಎಲ್ಲ ರೀತಿಗಳಿಂದಲೂ ಶ್ರೀಮದ್ಭಾಗವತವನ್ನೇ ಸೇವಿಸುವುದು ಒಳ್ಳೆಯದು. ಏಕೆಂದರೆ ಈ ಯುಗದಲ್ಲಿ ಸ್ವರ್ಗಾದಿ ಪ್ರಾಕೃತಿಕ ಸುಖಗಳನ್ನು ಪಡೆಯಲು ಸಾಧನವಾದ ಯಜ್ಞಗಳನ್ನು ಆಚರಿಸುವುದಕ್ಕೆ ಬೇಕಾದ ಶಕ್ತಿ-ಸಾಮರ್ಥ್ಯಗಳೂ, ಐಶ್ವರ್ಯವೂ, ಶಾಸೀಯವಿಧಿ-ವಿಧಾನಗಳ ಜ್ಞಾನವೂ ಜನರಿಗೆ ಇರುವುದಿಲ್ಲವಾದ್ದರಿಂದ ಯಜ್ಞಾದಿಗಳಿಂದ ದೊರೆಯುವ ಸಿದ್ಧಿಯೂ ಅತ್ಯಂತ ದುರ್ಲಭವಾಗಿದೆ. ॥33-34॥
(ಶ್ಲೋಕ - 35)
ಮೂಲಮ್
ಧನಂ ಪುತ್ರಾಂಸ್ತಥಾ ದಾರಾನ್ ವಾಹನಾದಿ ಯಶೋ ಗೃಹಾನ್ ।
ಅಸಾಪತ್ನ್ಯಂ ಚ ರಾಜ್ಯಂ ಚ ದದ್ಯಾದ್ಭಾಗವತೀ ಕಥಾ ॥
ಅನುವಾದ
ಈ ಶ್ರೀಮದ್ಭಾಗವತದ ಕಥೆಯು ತನ್ನನ್ನು ಸಕಾಮರಾಗಿ ಸೇವಿಸುವವರಿಗೆ ಹಣ, ಹೆಂಡಿರು, ಮಕ್ಕಳು, ವಾಹನಾದಿಗಳನ್ನೂ, ಕೀರ್ತಿಯನ್ನೂ, ಮನೆಗಳನ್ನೂ, ನಿಷ್ಕಂಟಕವಾದ ರಾಜ್ಯವನ್ನೂ ಕೊಡುವುದು. ॥35॥
(ಶ್ಲೋಕ - 36)
ಮೂಲಮ್
ಇಹ ಲೋಕೇ ವರಾನ್ಭುಕ್ತ್ವಾ ಭೋಗಾನ್ವೈ ಮನಸೇಪ್ಸಿತಾನ್ ।
ಶ್ರೀಭಾಗವತಸಂಗೇನ ಯಾತ್ಯಂತೇ ಶ್ರೀಹರೇಃ ಪದಮ್ ॥
ಅನುವಾದ
ಹಾಗೆ ಸಕಾಮಭಾವದಿಂದ ಭಾಗವತವನ್ನು ಸೇವಿಸುವವರು ಇಹಲೋಕದಲ್ಲಿ ಮನಸ್ಸು ಅಪೇಕ್ಷಿಸುವ ಉತ್ತಮಭೋಗಗಳನ್ನು ಅನುಭವಿಸಿ ಶ್ರೀಮದ್ಭಾಗವತದ ಮತ್ತು ಭಾಗವತರ ಸಂಗದಿಂದ ಮರಣಾನಂತರ ಶ್ರೀಹರಿಯ ಪರಮಧಾಮವನ್ನು ಹೊಂದುವರು. ॥36॥
(ಶ್ಲೋಕ - 37)
ಮೂಲಮ್
ಯತ್ರ ಭಾಗವತೀ ವಾರ್ತಾ ಯೇ ಚ ತಚ್ಛ್ರವಣೇ ರತಾಃ ।
ತೇಷಾಂ ಸಂಸೇವನಂ ಕುರ್ಯಾದ್ದೇಹೇನ ಚ ಧನೇನ ಚ ॥
ಅನುವಾದ
ಎಲ್ಲಿಯಾದರೂ ಶ್ರೀಮದ್ಭಾಗವತದ ಕಥೆಯನ್ನು ಕುರಿತ ವಾರ್ತೆಯು ನಡೆಯುತ್ತಿದ್ದರೆ, ಸಜ್ಜನರು ಆ ಕಥಾ ಶ್ರವಣದಲ್ಲಿ ಆಸಕ್ತರಾಗಿರುವುದು ಕಂಡುಬಂದರೆ, ಆ ಕಥಾಕಾರ್ಯಕ್ರಮಕ್ಕೂ ಮತ್ತು ಸಜ್ಜನರಿಗೂ ತನು-ಮನ-ಧನಗಳಿಂದ ಸೇವೆಯನ್ನು ಸಲ್ಲಿಸಬೇಕು. ॥37॥
(ಶ್ಲೋಕ - 38)
ಮೂಲಮ್
ತದನುಗ್ರಹತೋಸ್ಯಾಪಿ ಶ್ರೀಭಾಗವತ ಸೇವನಮ್ ।
ಶ್ರೀಕೃಷ್ಣವ್ಯತಿರಿಕ್ತಂ ಯತ್ತತ್ಸರ್ವಂ ಧನಸಂಜ್ಞಿತಮ್ ॥
ಅನುವಾದ
ಅವರ ಅನುಗ್ರಹದಿಂದಲೂ ಭಾಗವತ ಸೇವನೆಯ ಪುಣ್ಯವು ದೊರೆಯುವುದು. ಲೋಕದಲ್ಲಿ ಜನರು ಶ್ರೀಕೃಷ್ಣ ಮತ್ತು ಧನ ಎಂಬ ಎರಡನ್ನೇ ಬಯಸುತ್ತಾರೆ. ಇಲ್ಲಿ ಶ್ರೀಕೃಷ್ಣನನ್ನು ಬಿಟ್ಟು ಉಳಿದೆಲ್ಲಾ ಪದಾರ್ಥಗಳಿಗೂ ‘ಧನ’ ಎಂದು ಹೆಸರು. ॥38॥
(ಶ್ಲೋಕ - 39)
ಮೂಲಮ್
ಕೃಷ್ಣಾರ್ಥೀತಿ ಧನಾರ್ಥೀತಿ ಶ್ರೋತಾ ವಕ್ತಾ ದ್ವಿಧಾ ಮತಃ ।
ಯಥಾ ವಕ್ತಾ ತಥಾ ಶ್ರೋತಾ ತತ್ರ ಸೌಖ್ಯಂ ವಿವರ್ಧತೇ ॥
ಅನುವಾದ
ಶ್ರೋತೃಗಳಲ್ಲಿ ಕೃಷ್ಣಾರ್ಥೀ (ಶ್ರೀಕೃಷ್ಣನನ್ನೇ ಪ್ರಯೋಜನವನ್ನಾಗಿ ಬಯಸುವವನು) ಮತ್ತು ಧನಾರ್ಥೀ (ಶ್ರೀಕೃಷ್ಣನನ್ನು ಬಿಟ್ಟು ಉಳಿದ ಪದಾರ್ಥಗಳನ್ನು ಪ್ರಯೋಜನವನ್ನಾಗಿ ಬಯಸುವವನು) ಎಂದು ಎರಡು ವಿಧಗಳು. ಹಾಗೆಯೇ ಪ್ರವಚನಕಾರರಲ್ಲೂ ಕೃಷ್ಣಾರ್ಥೀ ಮತ್ತು ಧನಾರ್ಥೀ ಎಂದು ಎರಡು ಬಗೆಗಳು. ॥39॥
(ಶ್ಲೋಕ - 40)
ಮೂಲಮ್
ಉಭಯೋರ್ವೈಪರೀತ್ಯೇ ತು ರಸಾಭಾಸೇ ಲಚ್ಯುತಿಃ ।
ಕಿಂತು ಕೃಷ್ಣಾರ್ಥಿನಾಂ ಸಿದ್ಧಿರ್ವಿಲಂಬೇನಾಪಿ ಜಾಯತೇ ॥
ಅನುವಾದ
ಇವರಿಬ್ಬರೂ ವಿಪರೀತ ವಿಚಾರದವರಾದರೆ ಅಂದರೆ ; ಶ್ರೋತೃವು ಕೃಷ್ಣಾರ್ಥಿಯಾಗಿದ್ದು ಪ್ರವಚನಕಾರನು ಧನಾರ್ಥಿಯಾಗಿದ್ದರೆ ಅಥವಾ ಶ್ರೋತೃವು ಧನಾರ್ಥಿಯಾಗಿದ್ದು ಪ್ರವಚನಕಾರನು ಕೃಷ್ಣಾರ್ಥಿಯಾಗಿದ್ದರೆ ರಸಾಭಾಸವಾಗುವುದು. ಫಲಹಾನಿಯಾಗುವುದು. ಆದರೆ ಪ್ರವಚನಕಾರರು ಮತ್ತು ಶ್ರೋತೃಗಳು ಕೃಷ್ಣಾರ್ಥಿಗಳಾಗಿದ್ದರೆ ಅವರಿಗೆ ತಡವಾಗಿಯಾದರೂ ಸಿದ್ಧಿಯು ಅವಶ್ಯವಾಗಿ ದೊರೆಯುವುದು. ॥40॥
(ಶ್ಲೋಕ - 41)
ಮೂಲಮ್
ಧನಾರ್ಥಿನಸ್ತು ಸಂಸಿದ್ಧಿರ್ವಿಧಿಸಂಪೂರ್ಣತಾವಶಾತ್ ।
ಕೃಷ್ಣಾರ್ಥಿನೋಗುಣಸ್ಯಾಪಿ ಪ್ರೇಮೈವ ವಿಧಿರುತ್ತಮಃ ॥
ಅನುವಾದ
ಆದರೆ ಧನಾರ್ಥಿಗೆ, ಕರ್ಮದ ಅನುಷ್ಠಾನವು ಸಂಪೂರ್ಣವಾಗಿ ವಿಧಿ-ವಿಧಾನಗಳಿಗೆ ಅನುಸಾರವಾಗಿದ್ದರೆ ಮಾತ್ರ ಸಿದ್ಧಿಯು ಸಿಕ್ಕುವುದು. (ಯಾವ ಕುಂದುಕೊರತೆಯೂ ಇಲ್ಲದೆ ವಿಧಿಪೂರ್ವಕವಾಗಿ ಅನುಷ್ಠಾನಮಾಡಿದರೆ ಮಾತ್ರವೇ ಕಾಮ್ಯ ಕರ್ಮವು ಸಿದ್ಧಿಸುವುದು.) ಕೃಷ್ಣಾರ್ಥಿಗಾದರೋ ಆತನು ಗುಣಹೀನನಾಗಿದ್ದರೂ, ಅನುಷ್ಠಾನದ ವಿಧಿಗಳಲ್ಲಿ ಕೆಲವು ಏರುಪೇರುಗಳಿದ್ದರೂ, ಆತನ ಹೃದಯದಲ್ಲಿ ಪ್ರೇಮವೊಂದಿದ್ದರೆ ಸಾಕು, ಅದೇ ಸರ್ವೋತ್ತಮ ವಿಧಿಯಾಗುವುದು. ॥41॥
(ಶ್ಲೋಕ - 42)
ಮೂಲಮ್
ಆಸಮಾಪ್ತಿ ಸಕಾಮೇನ ಕರ್ತವ್ಯೋ ಹಿ ವಿಧಿಃ ಸ್ವಯಮ್ ।
ಸ್ನಾತೋ ನಿತ್ಯಕ್ರಿಯಾಂ ಕೃತ್ವಾ ಪ್ರಾಶ್ಯಪಾದೋದಕಂ ಹರೇಃ ॥
(ಶ್ಲೋಕ - 43)
ಮೂಲಮ್
ಪುಸ್ತಕಂ ಚ ಗುರುಂ ಚೈವ ಪೂಜಯಿತ್ವೋಪಚಾರತಃ ।
ಬ್ರೂಯಾದ್ವಾ ಶೃಣು ಯಾದ್ವಾಪಿ ಶ್ರೀಮದ್ಭಾಗವತಂ ಮುದಾ ॥
ಅನುವಾದ
ಸಕಾಮರಾದ ಶ್ರೊತೃ ಮತ್ತು ಪ್ರವಚನಕಾರರು ಕಥೆಯು ಮುಗಿಯುವವರೆಗೆ ಅತ್ಯಂತ ಎಚ್ಚರಿಕೆಯಿಂದ ಎಲ್ಲ ವಿಧಿಗಳನ್ನೂ ಪಾಲಿಸಬೇಕು. ಶ್ರೋತೃಗಳು ಮತ್ತು ಪ್ರವಚನಕಾರರು ಪ್ರತಿದಿನವೂ ಪ್ರಾತಃಕಾಲದಲ್ಲಿ ಸ್ನಾನಮಾಡಿ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಬೇಕು. ಅನಂತರ ಭಗವಂತನ ಶ್ರೀಪಾದ ತೀರ್ಥವನ್ನು ಸೇವಿಸಿ ಶ್ರೀಮದ್ಭಾಗವತ ಗ್ರಂಥವನ್ನೂ ಮತ್ತು ಗುರುದೇವ ಶ್ರೀವ್ಯಾಸಮಹರ್ಷಿಗಳನ್ನೂ ಪೂಜಿಸಬೇಕು. ಇದಾದ ಮೇಲೆ ಅತ್ಯಂತ ಪ್ರಸನ್ನತೆಯಿಂದ ಶ್ರೀಮದ್ಭಾಗವತದ ಶ್ರವಣ-ಸಂಕೀರ್ತನೆಗಳನ್ನು ಮಾಡಬೇಕು. ॥42-43॥
(ಶ್ಲೋಕ - 44)
ಮೂಲಮ್
ಪಯಸಾ ವಾ ಹವಿಷ್ಯೇಣ ವೌನಂ ಭೋಜನಮಾಚರೇತ್ ।
ಬ್ರಹ್ಮಚರ್ಯಮಧಃ ಸುಪ್ತಿಂ ಕ್ರೋಧಲೋಭಾದಿವರ್ಜನಮ್ ॥
ಅನುವಾದ
ಕ್ಷೀರವನ್ನು ಅಥವಾ ಕ್ಷೀರಾನ್ನವನ್ನು ಮಾತ್ರ ಮೌನವಾಗಿಯೇ ಸೇವಿಸಬೇಕು. ನಿತ್ಯವೂ ಬ್ರಹ್ಮಚರ್ಯನಿಯಮವನ್ನು ಪಾಲಿಸಬೇಕು. ನೆಲದ ಮೇಲೆಯೇ ಮಲಗಬೇಕು. ಕ್ರೋಧ-ಲೋಭಗಳೇ ಮುಂತಾದ ಶತ್ರುಗಳನ್ನು ತೊರೆದುಬಿಡಬೇಕು. ॥44॥
(ಶ್ಲೋಕ - 45)
ಮೂಲಮ್
ಕಥಾಂತೇ ಕೀರ್ತನಂ ನಿತ್ಯಂ ಸಮಾಪ್ತೌ ಜಾಗರಂ ಚರೇತ್ ।
ಬ್ರಾಹ್ಮಣಾನ್ ಭೋಜಯಿತ್ವಾ ತು ದಕ್ಷಿಣಾಭಿಃ ಪ್ರತೋಷಯೇತ್ ॥
ಅನುವಾದ
ಪ್ರತಿದಿನವೂ ಕಥೆಯ ಕೊನೆಯಲ್ಲಿ ಸಂಕೀರ್ತನೆಯನ್ನು ಮಾಡಬೇಕು ಮತ್ತು ಕಥೆಯ ಸಮಾಪ್ತಿ ಮಂಗಳದ ದಿವಸ ರಾತ್ರಿಯಲ್ಲೂ ಜಾಗರಣೆಮಾಡಬೇಕು. ಸಮಾಪ್ತಿಯಾದ ನಂತರ ಬ್ರಾಹ್ಮಣರಿಗೆ ಭೋಜನಮಾಡಿಸಿ ಅವರನ್ನು ದಕ್ಷಿಣೆಯಿಂದ ಸಂತೋಷಪಡಿಸಬೇಕು. ॥45॥
(ಶ್ಲೋಕ - 46)
ಮೂಲಮ್
ಗುರವೇ ವಸಭೂಷಾದಿ ದತ್ತ್ವಾ ಗಾಂ ಚ ಸಮರ್ಪಯೇತ್ ।
ಏವಂ ಕೃತೇ ವಿಧಾನೇ ತು ಲಭತೇ ವಾಂಛಿತಂ ಲಮ್ ॥
(ಶ್ಲೋಕ - 47)
ಮೂಲಮ್
ದಾರಾಗಾರಸುತಾನ್ ರಾಜ್ಯಂ ಧನಾದಿ ಚ ಯದೀಪ್ಸಿತಮ್ ।
ಪರಂತು ಶೋಭತೇ ನಾತ್ರ ಸಕಾಮತ್ವಂ ವಿಡಂಬನಮ್ ॥
ಅನುವಾದ
ಕಥಾ ಪ್ರವಚನ ಮಾಡುವ ಗುರುವಿಗೆ ವಸ್ತ್ರ, ಒಡವೆ ಮುಂತಾದವುಗಳನ್ನು ಸಮರ್ಪಿಸಿ ಗೋವನ್ನೂ ದಾನಮಾಡಬೇಕು. ಹೀಗೆ ವಿಧಿ-ವಿಧಾನಗಳನ್ನು ಪೂರ್ಣಗೊಳಿಸಿದರೆ ಮನುಷ್ಯನಿಗೆ ಹೆಂಡಿರು-ಮಕ್ಕಳು-ಮನೆ-ರಾಜ್ಯ-ಹಣವೇ ಮುಂತಾದ ಅಭೀಷ್ಟ ವಸ್ತುಗಳು ಸಿದ್ಧಿಸುವುವು. ಆದರೆ ಸಕಾಮರಾಗಿ ಶ್ರೀಮದ್ಭಾಗವತವನ್ನು ಸೇವಿಸುವುದು ಎಷ್ಟಾದರೂ ವಿಡಂಬನೆಯೇ ಆಗುತ್ತದೆ. ಅದು ಶೋಭಿಸುವುದಿಲ್ಲ. ॥46-47॥
(ಶ್ಲೋಕ - 48)
ಮೂಲಮ್
ಕೃಷ್ಣಪ್ರಾಪ್ತಿಕರಂ ಶಶ್ವತ್ ಪ್ರೇಮಾನಂದಲಪ್ರದಮ್ ।
ಶ್ರೀಮದ್ಭಾಗವತಂ ಶಾಸಂ ಕಲೌ ಕೀರೇಣ ಭಾಷಿತಮ್ ॥
ಅನುವಾದ
ಶ್ರೀಶುಕಮಹರ್ಷಿಗಳ ಮುಖಕಮಲದಿಂದ ಹೊರ ಸೂಸಿದ ಶ್ರೀಮದ್ಭಾಗವತವೆಂಬ ಶಾಸ್ತ್ರವು ಕಲಿಯುಗದಲ್ಲಿ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನನ್ನೇ ದೊರಕಿಸಿಕೊಡುವುದು ಮತ್ತು ನಿತ್ಯ-ನಿರಂತರ ಪ್ರೇಮಾನಂದರೂಪವಾದ ಫಲವನ್ನು ಕೊಡುವುದು. ॥48॥
ಅನುವಾದ (ಸಮಾಪ್ತಿಃ)
ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ ದ್ವಿತೀಯೇ ವೈಷ್ಣವಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಭಾಗವತಶ್ರೋತೃ-ವಕ್ತೃಲಕ್ಷಣ-ಶ್ರವಣವಿಧಿ ನಿರೂಪಣಂ ನಾಮ ಚತುರ್ಥೋಧ್ಯಾಯಃ ॥4॥
ಶ್ರೀಮದ್ಭಾಗವತಮಾಹಾತ್ಮ್ಯವು ಸಂಪೂರ್ಣವಾಯಿತು.
ಹರಿಃ ಓಂ ತತ್ಸತ್ - ಹರಿಃ ಓಂ ತತ್ಸತ್