೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಶ್ರೀಮದ್ಭಾಗವತದ ಪರಂಪರೆ, ಮಾಹಾತ್ಮ್ಯ ಭಾಗವತ ಶ್ರವಣದಿಂದ ಭಗವದ್ಭಾವದ ಪ್ರಾಪ್ತಿ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಥೋದ್ಧವಸ್ತು ತಾನ್ ದೃಷ್ಟ್ವಾ ಕೃಷ್ಣಕೀರ್ತನತತ್ಪರಾನ್ ।
ಸತ್ಕೃತ್ಯಾಥ ಪರಿಷ್ವಜ್ಯ ಪರೀಕ್ಷಿತಮುವಾಚ ಹ ॥

ಅನುವಾದ

ಸೂತ ಪುರಾಣಿಕರು ಹೇಳುತ್ತಾರೆ — ‘‘ಅನಂತರ ಶ್ರೀಕೃಷ್ಣನ ಸಂಕೀರ್ತನೆಯಲ್ಲಿ ತತ್ಪರರಾಗಿದ್ದ ಅವರನ್ನು ಕಂಡು ಉದ್ಧವನಿಗೆ ಪರಮಾನಂದವಾಯಿತು. ಅವನು ಅವರೆಲ್ಲರನ್ನೂ ಸತ್ಕರಿಸಿ, ಪರೀಕ್ಷಿದ್ರಾಜನನ್ನು ಆಲಿಂಗಿಸಿಕೊಂಡನು. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಧನ್ಯೋಸಿ ರಾಜನ್ಕೃಷ್ಣೈಕಭಕ್ತ್ಯಾ ಪೂರ್ಣೋಸಿ ನಿತ್ಯದಾ ।
ಯಸ್ತ್ವಂ ನಿಮಗ್ನಚಿತ್ತೋಸಿ ಕೃಷ್ಣಸಂಕೀರ್ತನೋತ್ಸವೇ ॥

ಅನುವಾದ

ಉದ್ಧವನು ಹೇಳಿದನು — ನೃಪವರ್ಯ! ನೀನು ಧನ್ಯನಾದೆ. ಅನನ್ಯವೂ ಅನವರತವೂ ಆದ ಶ್ರೀಕೃಷ್ಣಭಕ್ತಿಯಿಂದ ಪೂರ್ಣನಾಗಿರುವೆ. ಏಕೆಂದರೆ, ಶ್ರೀಕೃಷ್ಣ ಸಂಕೀರ್ತನೆಯ ಮಹೋತ್ಸವದಲ್ಲಿ ನಿನ್ನ ಹೃದಯವು ಮುಳುಗಿಹೋಗಿದೆ. ॥2॥

(ಶ್ಲೋಕ - 3)

ಮೂಲಮ್

ಕೃಷ್ಣಪತ್ನೀಷು ವಜ್ರೇ ಚ ದಿಷ್ಟ್ಯಾ ಪ್ರೀತಿಃ ಪ್ರವರ್ತಿತಾ ।
ತವೋಚಿತಮಿದಂ ತಾತ ಕೃಷ್ಣದತ್ತಾಂಗವೈಭವ ॥

ಅನುವಾದ

ಶ್ರೀಕೃಷ್ಣನ ಪತ್ನಿಯರ ಕುರಿತು ನಿನ್ನ ಭಕ್ತಿಯು ಹಾಗೂ ವಜ್ರನಾಭನ ಮೇಲೆ ನಿನಗೆ ಪ್ರೇಮವಿರುವುದು ಸೌಭಾಗ್ಯದ ಮಾತಾಗಿದೆ. ಅಯ್ಯಾ! ನೀನು ಮಾಡಿರುವುದೆಲ್ಲವೂ ನಿನಗೆ ಅನುರೂಪವೇ ಆಗಿದೆ. ಎಷ್ಟಾದರೂ ಶ್ರೀಕೃಷ್ಣನೇ ನಿನಗೆ ಶರೀರ-ವೈಭವಗಳನ್ನು ಕರುಣಿಸಿರುವನು. ಆದ್ದರಿಂದ ಅವನ ಮರಿಮಗನ ಮೇಲೆ ಪ್ರೇಮ ಉಂಟಾಗುವುದು ಸ್ವಾಭಾವಿಕವೇ ಆಗಿದೆ. ॥3॥

(ಶ್ಲೋಕ - 4)

ಮೂಲಮ್

ದ್ವಾರಕಾಸ್ಥೇಷು ಸರ್ವೇಷು ಧನ್ಯಾ ಏತೇ ನ ಸಂಶಯಃ ।
ಯೇಷಾಂ ವ್ರಜನಿವಾಸಾಯ ಪಾರ್ಥಮಾದಿಷ್ಟವಾನ್ ಪ್ರಭುಃ ॥

ಅನುವಾದ

ಸಮಸ್ತ ದ್ವಾರಕಾವಾಸಿಯರಲ್ಲಿ ಈ ಜನರು ಎಲ್ಲರಿಗಿಂತ ಹೆಚ್ಚು ಧನ್ಯರಾಗಿರುವರು ; ಇದರಲ್ಲಿ ಸಂದೇಹವೇ ಇಲ್ಲ. ಇವರು ವ್ರಜದಲ್ಲಿ ವಾಸಿಸಲು ಭಗವಾನ್ ಶ್ರೀಕೃಷ್ಣನೇ ಅರ್ಜುನನಿಗೆ ಆಜ್ಞಾಪಿಸಿದ್ದನು. ॥4॥

(ಶ್ಲೋಕ - 5)

ಮೂಲಮ್

ಶ್ರೀಕೃಷ್ಣಸ್ಯ ಮನಶ್ಚಂದ್ರೋ ರಾಧಾಸ್ಯ ಪ್ರಭಯಾನ್ವಿತಃ ।
ತದ್ವಿಹಾರವನಂ ಗೋಭಿರ್ಮಂಡಯನ್ ರೋಚತೇ ಸದಾ ॥

ಅನುವಾದ

ಶ್ರೀಕೃಷ್ಣನು ಮನೋರೂಪೀ ಚಂದ್ರಮನಾದ ರಾಧೆಯ ಮುಖದ ಪ್ರಭಾರೂಪೀ ಬೆಳದಿಂಗಳಿಂದ ಕೂಡಿದ ಅವನ ಲೀಲಾ ಭೂಮಿಯಾದ ವೃಂದಾವನವನ್ನು ತನ್ನ ಕಿರಣಗಳಿಂದ ಶೋಭಿಸುತ್ತಾ ಇಲ್ಲೇ ಸದಾಕಾಲ ಪ್ರಕಾಶಿಸುತ್ತಿರುವನು. ॥5॥

(ಶ್ಲೋಕ - 6)

ಮೂಲಮ್

ಕೃಷ್ಣಚಂದ್ರಃ ಸದಾ ಪೂರ್ಣಸ್ತಸ್ಯ ಷೋಡಶ ಯಾಃ ಕಲಾಃ ।
ಚಿತ್ಸಹಸ್ರಪ್ರಭಾಭಿನ್ನಾ ಅತ್ರಾಸ್ತೇ ತತ್ಸ್ವರೂಪತಾ ॥

ಅನುವಾದ

ಶ್ರೀಕೃಷ್ಣಚಂದ್ರನು ನಿತ್ಯ ಪರಿಪೂರ್ಣನಾಗಿರುವನು. ಪ್ರಾಕೃತ ಚಂದ್ರನಂತೆ ಅವನಲ್ಲಿ ವೃದ್ಧಿ-ಕ್ಷಯರೂಪೀ ವಿಕಾರಗಳು ಉಂಟಾಗುವುದಿಲ್ಲ. ಅವನ ಹದಿನಾರು ಕಲೆಗಳಿಂದ ಸಾವಿರಾರು ಚಿನ್ಮಯ ಕಿರಣಗಳು ಹೊರಡುತ್ತಾ ಇರುತ್ತವೆ. ಈ ಎಲ್ಲ ಕಲೆಗಳಿಂದ ಕೂಡಿದ, ನಿತ್ಯ ಪರಿಪೂರ್ಣನಾದ ಶ್ರೀಕೃಷ್ಣನು ಈ ವ್ರಜಭೂಮಿಯಲ್ಲಿ ಸದಾಕಾಲ ವಿರಾಜಿಸುತ್ತಿರುವನು. ಈ ಭೂಮಿಯಲ್ಲಿ ಮತ್ತು ಅವನ ಸ್ವರೂಪದಲ್ಲಿ ಯಾವ ಅಂತರವೂ ಇಲ್ಲ. ॥6॥

(ಶ್ಲೋಕ - 7)

ಮೂಲಮ್

ಏವಂ ವಜ್ರಸ್ತು ರಾಜೇಂದ್ರ ಪ್ರಪನ್ನಭಯಭಂಜಕಃ ।
ಶ್ರೀಕೃಷ್ಣದಕ್ಷಿಣೇ ಪಾದೇ ಸ್ಥಾನಮೇತಸ್ಯ ವರ್ತತೇ ॥

ಅನುವಾದ

ಪರೀಕ್ಷಿದ್ರಾಜನೇ! ಹೀಗೆ ವಿಚಾರಮಾಡಿದಾಗ ಎಲ್ಲ ವ್ರಜವಾಸಿಗಳು ಭಗವಂತನ ಅಂಗದಲ್ಲಿ ಸ್ಥಿತರಾಗಿದ್ದಾರೆ. ಶರಣಾಗತರ ಭಯವನ್ನು ದೂರಗೊಳಿಸುವ ಈ ವಜ್ರನಾಭನ ಸ್ಥಾನವು ಶ್ರೀಕೃಷ್ಣನ ಬಲಚರಣದಲ್ಲಿದೆ. ॥7॥

(ಶ್ಲೋಕ - 8)

ಮೂಲಮ್

ಅವತಾರೇತ್ರ ಕೃಷ್ಣೇನ ಯೋಗಮಾಯಾತಿಭಾವಿತಾಃ ।
ತದ್ಬಲೇನಾತ್ಮವಿಸ್ಮೃತ್ಯಾ ಸೀದಂತ್ಯೇತೇ ನ ಸಂಶಯಃ ॥

ಅನುವಾದ

ಈ ಅವತಾರದಲ್ಲಿ ಭಗವಾನ್ ಶ್ರೀಕೃಷ್ಣನು ಇವರೆಲ್ಲರನ್ನು ತನ್ನ ಯೋಗಮಾಯೆಯಿಂದ ಆವರಿಸಿರುವನು. ಅದರ ಪ್ರಭಾವದಿಂದಲೇ ಇವರು ತಮ್ಮ ಸ್ವರೂಪವನ್ನು ಮರೆತಿರುವರು. ಇದರಿಂದಲೇ ಸದಾ ದುಃಖಿತರಾಗಿರುವರು; ಇದರಲ್ಲಿ ಸಂದೇಹವೇ ಇಲ್ಲ. ॥8॥

(ಶ್ಲೋಕ - 9)

ಮೂಲಮ್

ಋತೇ ಕೃಷ್ಣಪ್ರಕಾಶಂ ತು ಸ್ವಾತ್ಮಬೋಧೋ ನ ಕಸ್ಯಚಿತ್ ।
ತತ್ಪ್ರಕಾಶಸ್ತು ಜೀವಾನಾಂ ಮಾಯಯಾ ಪಿಹಿತಃ ಸದಾ ॥

ಅನುವಾದ

ಶ್ರೀಕೃಷ್ಣನ ಪ್ರಕಾಶವನ್ನು ಪಡೆಯದೆ ಯಾರಿಗೂ ತಮ್ಮ ಆತ್ಮ ಸ್ವರೂಪದ ಬೋಧ ಉಂಟಾಗುವುದಿಲ್ಲ. ಜೀವಿಗಳ ಅಂತಃ ಕರಣದಲ್ಲಿರುವ ಶ್ರೀಕೃಷ್ಣ ತತ್ತ್ವಪ್ರಕಾಶದ ಮೇಲೆ ಸದಾಕಾಲ ಮಾಯೆಯ ಪರದೆ ಬಿದ್ದಿರುತ್ತದೆ. ॥9॥

(ಶ್ಲೋಕ - 10)

ಮೂಲಮ್

ಅಷ್ಟಾವಿಂಶೇ ದ್ವಾಪರಾಂತೇ ಸ್ವಯಮೇವ ಯದಾ ಹರಿಃ ।
ಉತ್ಸಾರಯೇನ್ನಿಜಾಂ ಮಾಯಾಂ ತತ್ಪ್ರಕಾಶೋ ಭವೇತ್ತದಾ ॥

ಅನುವಾದ

ಇಪ್ಪತ್ತೆಂಟನೆಯ ದ್ವಾಪರಯುಗದ ಕೊನೆಯಲ್ಲಿ ಭಗವಾನ್ ಶ್ರೀಕೃಷ್ಣನು ಸಾಕ್ಷಾತ್ತಾಗಿ ಪ್ರಕಟಗೊಂಡು ತನ್ನ ಮಾಯೆಯ ಪರದೆಯನ್ನು ಸರಿಸಿದಾಗ ಜೀವಿಗಳಿಗೆ ಅವನ ಪ್ರಕಾಶವು ಪ್ರಾಪ್ತವಾಗುತ್ತದೆ. ॥10॥

(ಶ್ಲೋಕ - 11)

ಮೂಲಮ್

ಸ ತು ಕಾಲೋ ವ್ಯತಿಕ್ರಾಂತಸ್ತೇನೇದಮಪರಂ ಶೃಣು ।
ಅನ್ಯದಾ ತತ್ಪ್ರಕಾಶಸ್ತು ಶ್ರೀಮದ್ಭಾಗವತಾದ್ಭವೇತ್ ॥

ಅನುವಾದ

ಇಪ್ಪತ್ತೆಂಟನೆಯ ದ್ವಾಪರಯುಗ ವನ್ನು ಬಿಟ್ಟು ಬೇರೆ ಸಮಯದಲ್ಲಿ ಶ್ರೀಕೃಷ್ಣತತ್ತ್ವದ ಪ್ರಕಾಶವನ್ನು ಪಡೆಯಬೇಕಾದರೆ ಅದು ಶ್ರೀಮದ್ಭಾಗವತದ ಮೂಲಕವಾಗಿ ಮಾತ್ರವೇ ಸಾಧ್ಯವಾಗುವುದು. ॥11॥

(ಶ್ಲೋಕ - 12)

ಮೂಲಮ್

ಶ್ರೀಮದ್ಭಾಗವತಂ ಶಾಸಂ ಯತ್ರ ಭಾಗವತೈರ್ಯದಾ ।
ಕೀರ್ತ್ಯತೇ ಶ್ರೂಯತೇ ಚಾಪಿ ಶ್ರೀಕೃಷ್ಣಸ್ತತ್ರ ನಿಶ್ಚಿತಮ್ ॥

ಅನುವಾದ

ಭಗವದ್ಭಕ್ತರು ಯಾವ ಸ್ಥಳ-ಸಮಯಗಳಲ್ಲಿ ಶ್ರೀಮದ್ಭಾಗವತ ಶಾಸ್ತ್ರದ ಸಂಕೀರ್ತನೆ, ಶ್ರವಣಗಳನ್ನು ಮಾಡುತ್ತಾರೆಯೋ ಆ ಸ್ಥಳ-ಸಮಯಗಳಲ್ಲಿ ಶ್ರೀಕೃಷ್ಣನು ನಿಶ್ಚಯವಾಗಿ ಇದ್ದೇ ಇರುವನು. ॥12॥

(ಶ್ಲೋಕ - 13)

ಮೂಲಮ್

ಶ್ರೀಮದ್ಭಾಗವತಂ ಯತ್ರ ಶ್ಲೋಕಂ ಶ್ಲೋಕಾರ್ಧಮೇವ ಚ ।
ತತ್ರಾಪಿ ಭಗವಾನ್ ಕೃಷ್ಣೋ ಬಲ್ಲವೀಭಿರ್ವಿರಾಜತೇ ॥

ಅನುವಾದ

ಶ್ರೀಮದ್ಭಾಗವತದ ಒಂದು ಶ್ಲೋಕವನ್ನಾಗಲೀ, ಅರ್ಧಶ್ಲೋಕವನ್ನಾಗಲೀ ಎಲ್ಲಿ ಶ್ರವಣ-ಸಂಕೀರ್ತನೆಗಳನ್ನು ಮಾಡುತ್ತಾರೆಯೋ ಆ ಸ್ಥಳದಲ್ಲಿಯೂ ಕೂಡ ಭಗವಂತನಾದ ಶ್ರೀಕೃಷ್ಣನು ಗೋಪೀಸಮೇತನಾಗಿ ಬೆಳಗುತ್ತಿರುವನು. ॥13॥

(ಶ್ಲೋಕ - 14)

ಮೂಲಮ್

ಭಾರತೇ ಮಾನವಂ ಜನ್ಮ ಪ್ರಾಪ್ಯ ಭಾಗವತಂ ನ ಯೈಃ ।
ಶ್ರುತಂ ಪಾಪಪರಾಧೀನೈರಾತ್ಮಘಾತಸ್ತು ತೈಃ ಕೃತಃ ॥

ಅನುವಾದ

ಪವಿತ್ರವಾದ ಭಾರತದೇಶದಲ್ಲಿ ಹುಟ್ಟಿ ಅದರಲ್ಲೂ ಮನುಷ್ಯಜನ್ಮವನ್ನು ಪಡೆದಿದ್ದರೂ ಕೂಡ ಪಾಪ ಪರಾಯಣನಾಗಿ ಶ್ರೀಮದ್ಭಾಗವತವನ್ನು ಕೇಳು ವುದಿಲ್ಲವೋ ಅಂತಹವರು ತಮ್ಮ ಕೈಯಿಂದ ತಮ್ಮನ್ನು ತಾವೇ ಕೊಂದುಕೊಂಡಂತೆ ಆಗುತ್ತದೆ. ಆತ್ಮಹತ್ಯೆ ಮಾಡಿಕೊಂಡಂತೆ ಆಗುತ್ತದೆ. ॥14॥

(ಶ್ಲೋಕ - 15)

ಮೂಲಮ್

ಶ್ರೀಮದ್ಭಾಗವತಂ ಶಾಸಂ ನಿತ್ಯಂ ಯೈಃ ಪರಿಸೇವಿತಮ್ ।
ಪಿತುರ್ಮಾತುಶ್ಚ ಭಾರ್ಯಾಯಾಃ ಕುಲಪಂಕ್ತಿಃ ಸುತಾರಿತಾ ॥

ಅನುವಾದ

ಶ್ರೀಮದ್ಭಾಗವತ ಶಾಸ್ತ್ರವನ್ನು ಸದಾಕಾಲ ಸೇವಿಸುವವರು ತಮ್ಮ ತಂದೆಯನ್ನೂ, ತಾಯಿಯನ್ನೂ, ಪತ್ನಿಯನ್ನೂ ಮತ್ತು ಆ ಮೂವರ ಕುಲಗಳನ್ನೂ ಉದ್ಧಾರ ಮಾಡುತ್ತಾರೆ. ॥15॥

(ಶ್ಲೋಕ - 16)

ಮೂಲಮ್

ವಿದ್ಯಾಪ್ರಕಾಶೋ ವಿಪ್ರಾಣಾಂ ರಾಜ್ಞಾಂ ಶತ್ರುಜಯೋ ವಿಶಾಮ್ ।
ಧನಂ ಸ್ವಾಸ್ಥ್ಯಂ ಚ ಶೂದ್ರಾಣಾಂ ಶ್ರೀಮದ್ಭಾಗವತಾದ್ಭವೇತ್ ॥

ಅನುವಾದ

ಶ್ರೀಮದ್ಭಾಗವತದ ಸೇವನೆಯಿಂದ ವಿಪ್ರರಿಗೆ ವಿದ್ಯೆಯು (ಜ್ಞಾನವು) ದೊರೆಯುತ್ತದೆ. ರಾಜರಿಗೆ ಶತ್ರುಗಳ ಮೇಲೆ ವಿಜಯವು ದೊರಕುತ್ತದೆ. ವೈಶ್ಯರು ಧನವನ್ನುಗಳಿಸುತ್ತಾರೆ. ಶೂದ್ರರಿಗೆ ಆರೋಗ್ಯಲಾಭವಾಗುತ್ತದೆ. ॥16॥

(ಶ್ಲೋಕ - 17)

ಮೂಲಮ್

ಯೋಷಿತಾಮಪರೇಷಾಂ ಚ ಸರ್ವವಾಂಛಿತಪೂರಣಮ್ ।
ಅತೋ ಭಾಗವತಂ ನಿತ್ಯಂ ಕೋ ನ ಸೇವೇತ ಭಾಗ್ಯವಾನ್ ॥

ಅನುವಾದ

ಸ್ತ್ರೀಯರಿಗೂ ಮತ್ತು ಇತರರಿಗೂ ಅವರ ಮನಸ್ಸಿನ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಆದುದರಿಂದ ಭಾಗ್ಯವಂತನಾದ ಯಾವನು ತಾನೇ ಭಾಗವತವನ್ನು ಸದಾ ಸೇವಿಸುವುದಿಲ್ಲ? ॥17॥

(ಶ್ಲೋಕ - 18)

ಮೂಲಮ್

ಅನೇಕಜನ್ಮಸಂಸಿದ್ಧಃ ಶ್ರೀಮದ್ಭಾಗವತಂ ಲಭೇತ್ ।
ಪ್ರಕಾಶೋ ಭಗವದ್ಭಕ್ತೇರುದ್ಭವಸ್ತತ್ರ ಜಾಯತೇ ॥

ಅನುವಾದ

ಅನೇಕ ಜನ್ಮಗಳಲ್ಲಿ ಚೆನ್ನಾಗಿ ಸಿದ್ಧಿಯನ್ನು ಪಡೆದವನಿಗೆ ಮಾತ್ರವೇ ಶ್ರೀಮದ್ಭಾಗವತವು ದೊರೆಯುವುದು. ಅದರಿಂದ ಭಗವಂತನ ಪ್ರಕಾಶವು ಲಭಿಸುವುದು. ಭಗವದ್ಭಕ್ತಿಯು ಅಲ್ಲಿಯೇ ಉಂಟಾಗುವುದು.॥18॥

(ಶ್ಲೋಕ - 19)

ಮೂಲಮ್

ಸಾಂಖ್ಯಾಯನಪ್ರಸಾದಾಪ್ತಂ ಶ್ರೀಮದ್ಭಾಗವತಂ ಪುರಾ ।
ಬೃಹಸ್ಪತಿರ್ದತ್ತವಾನ್ಮೇ ತೇನಾಹಂ ಕೃಷ್ಣವಲ್ಲಭಃ ॥

ಅನುವಾದ

ಹಿಂದಿನ ಕಾಲದಲ್ಲಿ ಸಾಂಖ್ಯಾಯನ ಮುನಿಗಳ ಅನುಗ್ರಹದಿಂದ ಅದನ್ನು ಬೃಹಸ್ಪತ್ಯಾಚಾರ್ಯರು ಪಡೆದರು. ಬೃಹಸ್ಪತ್ಯಾಚಾರ್ಯರು ನನಗೆ ಅದನ್ನು ಅನುಗ್ರಹಿಸಿದರು. ಇದರಿಂದಲೇ ನಾನು ಶ್ರೀಕೃಷ್ಣನಿಗೆ ಪ್ರಿಯಮಿತ್ರನಾಗಲು ಸಾಧ್ಯವಾಯಿತು. ॥19॥

(ಶ್ಲೋಕ - 20)

ಮೂಲಮ್

ಆಖ್ಯಾಯಿಕಾಂ ಚ ತೇನೋಕ್ತಾಂ ವಿಷ್ಣುರಾತ ನಿಬೋಧ ತಾಮ್ ।
ಜ್ಞಾಯತೇ ಸಂಪ್ರದಾಯೋಪಿ ಯತ್ರ ಭಾಗವತಶ್ರುತೇಃ ॥

ಅನುವಾದ

ಎಲೈ ವಿಷ್ಣುರಾತನೇ! ಬೃಹಸ್ಪತ್ಯಾಚಾರ್ಯರು ನನಗೆ ಭಾಗವತಕ್ಕೆ ಸಂಬಂಧಪಟ್ಟ ಒಂದು ಆಖ್ಯಾಯಿಕೆಯನ್ನೂ ಹೇಳಿದ್ದರು. ಅದನ್ನು ಕೇಳು, ಮಹಾರಾಜ! ಆ ಆಖ್ಯಾಯಿಕೆಯಿಂದ ಭಾಗವತಶ್ರವಣದ ಸಂಪ್ರದಾಯದ ಕ್ರಮವೂ ನಮಗೆ ತಿಳಿಯುತ್ತದೆ. ॥20॥

(ಶ್ಲೋಕ - 21)

ಮೂಲಮ್ (ವಾಚನಮ್)

ಬೃಹಸ್ಪತಿರುವಾಚ

ಮೂಲಮ್

ಈಕ್ಷಾಂಚಕ್ರೇ ಯದಾ ಕೃಷ್ಣೋ ಮಾಯಾಪುರುಷರೂಪಧೃತ್ ।
ಬ್ರಹ್ಮಾ ವಿಷ್ಣುಃ ಶಿವಶ್ಚಾಪಿ ರಜಃಸತ್ತ್ವ ತಮೋಗುಣೈಃ ॥

(ಶ್ಲೋಕ - 22)

ಮೂಲಮ್

ಪುರುಷಾಸಯ ಉತ್ತಸ್ಥುರಧಿಕಾರಾಂಸ್ತದಾದಿಶತ್ ।
ಉತ್ಪತ್ತೌ ಪಾಲನೇ ಚೈವ ಸಂಹಾರೇ ಪ್ರಕ್ರಮೇಣ ತಾನ್ ॥

ಅನುವಾದ

ಶ್ರೀಬೃಹಸ್ಪತ್ಯಾಚಾರ್ಯರು ಹೇಳುತ್ತಾರೆ — ‘‘ತನ್ನ ಮಾಯೆಯಿಂದ ಪುರುಷರೂಪವನ್ನು ತಾಳಿದ ಭಗವಾನ್ ಶ್ರೀಕೃಷ್ಣನು ಸೃಷ್ಟಿಯನ್ನು ಮಾಡಲು ಸಂಕಲ್ಪಿಸಿದಾಗ ಆತನ ದಿವ್ಯ ಮಂಗಳ ವಿಗ್ರಹದಿಂದ ಮೂವರು ಪುರುಷರು ಪ್ರಕಟಗೊಂಡರು. ಆ ಮೂವರಲ್ಲಿ ರಜೋಗುಣದ ಪ್ರಾಧಾನ್ಯದಿಂದ ಬ್ರಹ್ಮದೇವರೂ, ಸತ್ತ್ವಗುಣದ ಪ್ರಧಾನತೆಯಿಂದ ಮಹಾವಿಷ್ಣುವೂ ಮತ್ತು ತಮೋಗುಣದ ಪ್ರಾಧಾನ್ಯದಿಂದ ರುದ್ರದೇವರೂ ಪ್ರಕಟಗೊಂಡರು. ಪರಮಾತ್ಮನು ಈ ಮೂವರಿಗೆ ಕ್ರಮವಾಗಿ ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಲಯಗಳ ಅಧಿಕಾರವನ್ನು ಕೊಟ್ಟನು. ॥21-22॥

(ಶ್ಲೋಕ - 23)

ಮೂಲಮ್

ಬ್ರಹ್ಮಾ ತು ನಾಭಿಕಮಲಾದುತ್ಪನ್ನಸ್ತಂ ವ್ಯಜಿಜ್ಞಪತ್ ।

ಮೂಲಮ್ (ವಾಚನಮ್)

ಬ್ರಹ್ಮೋವಾಚ

ಮೂಲಮ್

ನಾರಾಯಣಾದಿಪುರುಷ ಪರಮಾತ್ಮನ್ನಮೋಸ್ತು ತೇ ॥

ಅನುವಾದ

ಆಗ ಭಗವಂತನ ನಾಭಿಕಮಲದಿಂದ ಜನಿಸಿದ ಬ್ರಹ್ಮದೇವರು ಆತನಿಗೆ ತಮ್ಮ ಇಷ್ಟಾರ್ಥವನ್ನು ನಿವೇದಿಸಿಕೊಂಡರು.
ಬ್ರಹ್ಮದೇವರು ಹೇಳಿದರು — ‘‘ಓ ನಾರಾಯಣನೇ! ಆದಿಪುರುಷನೇ! ಪರಮಾತ್ಮನೇ! ನಿನಗೆ ನಮಸ್ಕಾರವು. ॥23॥

(ಶ್ಲೋಕ - 24)

ಮೂಲಮ್

ತ್ವಯಾ ಸರ್ಗೇ ನಿಯುಕ್ತೋಸ್ಮಿ ಪಾಪಿಯಾನ್ ಮಾಂ ರಜೋಗುಣಃ ।
ತ್ವತ್ಸ್ಮೃತೌ ನೈವ ಬಾಧೇತ ತಥೈವ ಕೃಪಯಾ ಪ್ರಭೋ ॥

ಅನುವಾದ

ನೀನು ನನ್ನನ್ನು ಸೃಷ್ಟಿಕಾರ್ಯಮಾಡಲು ನೇಮಿಸಿದ್ದೀಯೆ. ಪಾಪಿಷ್ಠವಾದ ರಜೋಗುಣವು ನನಗೆ ನಿನ್ನ ಸ್ಮರಣೆಗೆ ಅಡ್ಡಿಯನ್ನು ಮಾಡದೇ ಇರುವಂತೆ ಅನುಗ್ರಹಮಾಡು.’’ ॥24॥

(ಶ್ಲೋಕ - 25)

ಮೂಲಮ್ (ವಾಚನಮ್)

ಬೃಹಸ್ಪತಿರುವಾಚ

ಮೂಲಮ್

ಯದಾ ತು ಭಗವಾಂಸ್ತಸ್ಮೈ ಶ್ರೀಮದ್ಭಾಗವತಂ ಪುರಾ ।
ಉಪದಿಶ್ಯಾಬ್ರವೀದ್ಬ್ರಹ್ಮನ್ ಸೇವಸ್ವೈನತ್ಸ್ವ ಸಿದ್ಧಯೇ ॥

ಅನುವಾದ

ಬೃಹಸ್ಪತಿಗಳು ಹೇಳುತ್ತಾರೆ — ಬ್ರಹ್ಮದೇವರು ಸೃಷ್ಟಿಗೆ ಮೊದಲು ಹೀಗೆ ಪ್ರಾರ್ಥನೆಮಾಡಲು ಶ್ರೀಭಗವಂತನು ಅವರಿಗೆ ಶ್ರೀಮದ್ಭಾಗವತವನ್ನು ಉಪದೇಶಮಾಡಿ ‘‘ಬ್ರಹ್ಮನೇ! ಇದನ್ನು ಸೇವಿಸು. ಇದರಿಂದ ನಿನ್ನ ಇಷ್ಟಾರ್ಥ ಸಿದ್ಧಿಸುತ್ತದೆ ’’ ಎಂದು ಆಣತಿಯಿತ್ತನು. ॥25॥

(ಶ್ಲೋಕ - 26)

ಮೂಲಮ್

ಬ್ರಹ್ಮಾ ತು ಪರಮಪ್ರೀತಸ್ತೇನ ಕೃಷ್ಣಾಪ್ತಯೇನಿಶಮ್ ।
ಸಪ್ತಾವರಣಭಂಗಾಯ ಸಪ್ತಾಹಂ ಸಮವರ್ತಯತ್ ॥

ಅನುವಾದ

ಭಾಗವತದ ಉಪದೇಶವನ್ನು ಪಡೆದು ಬ್ರಹ್ಮದೇವರಿಗೆ ತುಂಬಾ ಸಂತೋಷವುಂಟಾಯಿತು. ಅವರು ಶ್ರೀಕೃಷ್ಣನ ಪ್ರಾಪ್ತಿಗಾಗಿಯೂ ಮತ್ತು ಏಳು ಆವರಣಗಳನ್ನು ಭಂಜಿಸುವುದಕ್ಕಾಗಿಯೂ ಶ್ರೀಮದ್ಭಾಗವತದ ಸಪ್ತಾಹ ಪಾರಾಯಣವನ್ನು ಮಾಡಿದರು. ॥26॥

(ಶ್ಲೋಕ - 27)

ಮೂಲಮ್

ಶ್ರೀಭಾಗವತಸಪ್ತಾಹಸೇವನಾಪ್ತಮನೋರಥಃ ।
ಸೃಷ್ಟಿಂ ವಿತನುತೇ ನಿತ್ಯಂ ಸಸಪ್ತಾಹಃ ಪುನಃ ಪುನಃ ॥

ಅನುವಾದ

ಸಪ್ತಾಹಯಜ್ಞದ ವಿಧಿಯಂತೆ ಏಳು ದಿನಗಳ ಕಾಲ ಶ್ರೀಮದ್ಭಾಗವತವನ್ನು ಸೇವಿಸಿದ್ದರಿಂದ ಬ್ರಹ್ಮದೇವರ ಎಲ್ಲ ಮನೋರಥಗಳೂ ಈಡೇರಿದುವು. ಇದರಿಂದ ಅವರು ಸದಾ ಭಗವತ್ಸ್ಮರಣಪೂರ್ವಕ ಸೃಷ್ಟಿಯನ್ನು ವಿಸ್ತಾರಪಡಿಸುತ್ತಾ ಮತ್ತೆ ಮತ್ತೆ ಸಪ್ತಾಹಯಜ್ಞದ ಅನುಷ್ಠಾನವನ್ನು ಮಾಡುತ್ತಿರುತ್ತಾರೆ. ॥27॥

(ಶ್ಲೋಕ - 28)

ಮೂಲಮ್

ವಿಷ್ಣುರಪ್ಯರ್ಥಯಾಮಾಸ ಪುಮಾಂಸಂ ಸ್ವಾರ್ಥಸಿದ್ಧಯೇ ।
ಪ್ರಜಾನಾಂ ಪಾಲನೇ ಪುಂಸಾ ಯದನೇನಾಪಿ ಕಲ್ಪಿತಃ ॥

ಅನುವಾದ

ಬ್ರಹ್ಮದೇವರಂತೆ ಮಹಾವಿಷ್ಣುವೂ ಕೂಡ ತನ್ನ ಇಷ್ಟಾರ್ಥದ ಸಿದ್ಧಿಗಾಗಿ ಆ ಪರಮಪುರುಷನಾದ ಪರಮಾತ್ಮನನ್ನು ಪ್ರಾರ್ಥನೆಮಾಡಿದನು. ಏಕೆಂದರೆ ಆ ಪುರುಷೋತ್ತಮನೇ ವಿಷ್ಣುವನ್ನು ಪ್ರಜಾಪಾಲನ ರೂಪವಾದ ಕರ್ಮದಲ್ಲಿ ನೇಮಕಮಾಡಿದ್ದನು. ॥28॥

(ಶ್ಲೋಕ - 29)

ಮೂಲಮ್ (ವಾಚನಮ್)

ವಿಷ್ಣುರುವಾಚ

ಮೂಲಮ್

ಪ್ರಜಾನಾಂ ಪಾಲನಂ ದೇವ ಕರಿಷ್ಯಾಮಿ ಯಥೋಚಿತಮ್ ।
ಪ್ರವೃತ್ತ್ಯಾ ಚ ನಿವೃತ್ತ್ಯಾ ಚ ಕರ್ಮಜ್ಞಾನಪ್ರಯೋಜನಾತ್ ॥

ಅನುವಾದ

ವಿಷ್ಣುವು ಪರಮಪುರುಷನಲ್ಲಿ ಪ್ರಾರ್ಥನೆಮಾಡುತ್ತಾನೆ ‘‘ದೇವನೇ! ನಿನ್ನ ಆಜ್ಞೆಯಂತೆ ಕರ್ಮ ಮತ್ತು ಜ್ಞಾನಗಳನ್ನು ಸಾಧಿಸುವುದಕ್ಕಾಗಿ ಪ್ರವೃತ್ತಿ ಮತ್ತು ನಿವೃತ್ತಿಗಳ ಮೂಲಕ ಯಥೋಚಿತವಾದ ರೂಪದಿಂದ ಪ್ರಜೆಗಳನ್ನು ಪಾಲಿಸುತ್ತೇನೆ. ॥29॥

(ಶ್ಲೋಕ - 30)

ಮೂಲಮ್

ಯದಾ ಯದೈವ ಕಾಲೇನ ಧರ್ಮಗ್ಲಾನಿರ್ಭವಿಷ್ಯತಿ ।
ಧರ್ಮಂ ಸಂಸ್ಥಾಪಯಿಷ್ಯಾಮಿ ಹ್ಯವತಾರೈಸ್ತದಾ ತದಾ ॥

ಅನುವಾದ

ಕಾಲಕ್ರಮದಂತೆ ಧರ್ಮಕ್ಕೆ ಗ್ಲಾನಿಯುಂಟಾದಾಗಲೆಲ್ಲಾ ಅನೇಕ ಅವತಾರಗಳನ್ನೆತ್ತಿ ಮತ್ತೆ ಧರ್ಮವನ್ನು ಸ್ಥಾಪಿಸುತ್ತೇನೆ. ॥30॥

(ಶ್ಲೋಕ - 31)

ಮೂಲಮ್

ಭೋಗಾರ್ಥಿಭ್ಯಸ್ತು ಯಜ್ಞಾದಿಲಂ ದಾಸ್ಯಾಮಿ ನಿಶ್ಚಿತಮ್ ।
ಮೋಕ್ಷಾರ್ಥಿಭ್ಯೋ ವಿರಕ್ತೇಭ್ಯೋ ಮುಕ್ತಿಂ ಪಂಚವಿಧಾಂ ತಥಾ ॥

ಅನುವಾದ

ಯಾರು ಭೋಗವನ್ನು ಅಪೇಕ್ಷಿಸುತ್ತಾರೋ ಅವರಿಗೆ ಅವರು ಮಾಡಿದ ಯಜ್ಞಾದಿಕರ್ಮಗಳ ಫಲವನ್ನು ಅವಶ್ಯವಾಗಿ ಕೊಡುವೆನು. ಮೋಕ್ಷವನ್ನು ಬಯಸುವ ವಿರಕ್ತರಿಗೆ ಐದು ಬಗೆಯ ಮುಕ್ತಿಯನ್ನು ಅನುಗ್ರಹಿಸುವೆನು. ॥31॥

(ಶ್ಲೋಕ - 32)

ಮೂಲಮ್

ಯೇಪಿ ಮೋಕ್ಷಂ ನ ವಾಂಛಂತಿ ತಾನ್ಕಥಂ ಪಾಲಯಾಮ್ಯಹಮ್ ।
ಆತ್ಮಾನಂ ಚ ಶ್ರಿಯಂ ಚಾಪಿ ಪಾಲಯಾಮಿ ಕಥಂ ವದ ॥

ಅನುವಾದ

ಆದರೆ ಯಾರು ಆ ಮೋಕ್ಷವನ್ನೂ ಬಯಸುವುದಿಲ್ಲವೋ ಅವರನ್ನು ಹೇಗೆ ಪಾಲಿಸಲಿ? ಇದಲ್ಲದೆ ನಾನು ನನ್ನ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಲಿ? ನನ್ನ ಲಕ್ಷ್ಮಿಯ ರಕ್ಷಣೆಯನ್ನು ಹೇಗೆ ಮಾಡಲಿ? ಇದಕ್ಕೆ ಉಪಾಯ ಯಾವುದು? ಎಂಬುದನ್ನು ತಿಳಿಸುವವನಾಗು.’’ ॥32॥

(ಶ್ಲೋಕ - 33)

ಮೂಲಮ್

ತಸ್ಮಾ ಅಪಿ ಪುಮಾನಾದ್ಯಃ ಶ್ರೀಭಾಗವತಮಾದಿಶತ್ ।
ಉವಾಚ ಚ ಪಠಸ್ವೈನತ್ತವ ಸರ್ವಾರ್ಥಸಿದ್ಧಯೇ ॥

ಅನುವಾದ

ಹೀಗೆ ಪ್ರಾರ್ಥಿಸಿದ ಆ ವಿಷ್ಣುವಿಗೂ ಕೂಡ ಆ ಆದಿ ಪುರುಷನು ಶ್ರೀಮದ್ಭಾಗವತದ ಸೇವನೆಯನ್ನೇ ಉಪಾಯವನ್ನಾಗಿ ಬೋಧಿಸಿದನು. ಅವನಿಗೆ ಶ್ರೀಮದ್ಭಾಗವತವನ್ನು ಉಪದೇಶಮಾಡಿ ‘‘ಇದನ್ನು ಪಠಿಸು. ನಿನ್ನ ಎಲ್ಲ ಇಷ್ಟಾರ್ಥಗಳೂ ಸಿದ್ಧಿಸುತ್ತವೆ ’’ ಎಂದು ತಿಳಿಸಿದನು. ॥33॥

(ಶ್ಲೋಕ - 34)

ಮೂಲಮ್

ತತೋ ವಿಷ್ಣುಃ ಪ್ರಸನ್ನಾತ್ಮಾ ಪರಮಾರ್ಥಕಪಾಲನೇ ।
ಸಮರ್ಥೋಭೂಚ್ಛ್ರಿಯಾ ಮಾಸಿ ಮಾಸಿ ಭಾಗವತಂ ಸ್ಮರನ್ ॥

ಅನುವಾದ

ಈ ಉಪದೇಶದಿಂದ ವಿಷ್ಣುವಿನ ಮನಸ್ಸು ಪ್ರಸನ್ನವಾಗಿ ಆತನು ಪ್ರತಿಮಾಸದಲ್ಲೂ ಶ್ರೀಮದ್ಭಾಗವತವನ್ನು ಸ್ಮರಿಸುತ್ತಾ ಲಕ್ಷ್ಮೀದೇವಿಯೊಡನೆ ಕೂಡಿ ತನ್ನ ಕಾರ್ಯವನ್ನು ನಡೆಸಲು ಸಮರ್ಥನಾದನು. ॥34॥

(ಶ್ಲೋಕ - 35)

ಮೂಲಮ್

ಯದಾ ವಿಷ್ಣುಃ ಸ್ವಯಂ ವಕ್ತಾ ಲಕ್ಷ್ಮೀಶ್ಚ ಶ್ರವಣೇ ರತಾ ।
ತದಾ ಭಾಗವತಶ್ರಾವೋ ಮಾಸೇನೈವ ಪುನಃ ಪುನಃ ॥

ಅನುವಾದ

ವಿಷ್ಣುವು ಭಾಗವತದ ಪ್ರವಚನ ಮಾಡುವವನಾಗಿದ್ದು ಲಕ್ಷ್ಮೀದೇವಿಯು ಶ್ರೋತೃವಾಗಿದ್ದಾಗ ಭಾಗವತ ಶ್ರವಣವು ಒಂದು ತಿಂಗಳಿಗೇ ಮುಗಿಯುತ್ತದೆ. ॥35॥

(ಶ್ಲೋಕ - 36)

ಮೂಲಮ್

ಯದಾ ಲಕ್ಷ್ಮೀಃ ಸ್ವಯಂ ವಕೀ ವಿಷ್ಣುಶ್ಚ ಶ್ರವಣೇ ರತಃ ।
ಮಾಸದ್ವಯಂ ರಸಾಸ್ವಾದಸ್ತದಾತೀವ ಸುಶೋಭತೇ ॥

ಅನುವಾದ

ಲಕ್ಷ್ಮೀದೇವಿಯೇ ಪ್ರವಚನ ಮಾಡುವವಳಾಗಿ ವಿಷ್ಣುವು ಅದರ ಶ್ರವಣದಲ್ಲಿ ಆಸಕ್ತನಾದಾಗ, ಎರಡು ತಿಂಗಳು ಪೂರ್ತಿ ಕಥೆಯ ರಸಾಸ್ವಾದನೆಯು ನಡೆದು ತುಂಬಾ ಶೋಭಿಸುತ್ತದೆ. ॥36॥

(ಶ್ಲೋಕ - 37)

ಮೂಲಮ್

ಅಧಿಕಾರೇ ಸ್ಥಿತೋ ವಿಷ್ಣುರ್ಲಕ್ಷ್ಮೀರ್ನಿಶ್ಚಿಂತಮಾನಸಾ ।
ತೇನ ಭಾಗವತಾಸ್ವಾದಸ್ತಸ್ಯಾ ಭೂರಿ ಪ್ರಕಾಶತೇ ॥

(ಶ್ಲೋಕ - 38)

ಮೂಲಮ್

ಅಥ ರುದ್ರೋಪಿ ತಂ ದೇವಂ ಸಂಹಾರಾಧಿಕೃತಃ ಪುರಾ ।
ಪುಮಾಂಸಂ ಪ್ರಾರ್ಥಯಾಮಾಸ ಸ್ವಸಾಮರ್ಥ್ಯವಿವೃದ್ಧಯೇ ॥

ಅನುವಾದ

ವಿಷ್ಣುವು ಅಧಿಕಾರದಲ್ಲಿರುವುದರಿಂದ ಆತನಿಗೆ ಜಗತ್ತನ್ನು ಪಾಲಿಸುವ ಚಿಂತೆಯೂ ಇರುತ್ತದೆ. ಆದರೆ ಲಕ್ಷ್ಮೀದೇವಿಗೆ ಈ ಚಿಂತೆ ಇಲ್ಲವಾದ್ದರಿಂದ ಆಕೆಯ ಹೃದಯವು ನೆಮ್ಮದಿಯಾಗಿರುತ್ತದೆ. ಆದುದರಿಂದ ಆಕೆಯ ಮುಖದಿಂದ ಬರುವ ಭಾಗವತದ ಕಥೆಯ ಪ್ರವಚನದಲ್ಲಿ ಹೆಚ್ಚು ರಸಾಸ್ವಾದದ ಪ್ರಕಾಶ ಕಂಡುಬರುವುದು. ಇದಾದನಂತರ ಭಗವಂತನಿಂದ ಹಿಂದೆ ಸಂಹಾರಕಾರ್ಯವನ್ನು ಮಾಡಲು ನೇಮಿಸಲ್ಪಟ್ಟ ರುದ್ರದೇವರೂ ಕೂಡ ತಮ್ಮ ಸಾಮರ್ಥ್ಯದ ಅಭಿವೃದ್ಧಿಗಾಗಿ ಆ ಪರಮಪುರುಷನನ್ನೇ ಪ್ರಾರ್ಥನೆಮಾಡಿದರು. ॥37-38॥

(ಶ್ಲೋಕ - 39)

ಮೂಲಮ್ (ವಾಚನಮ್)

ರುದ್ರ ಉವಾಚ

ಮೂಲಮ್

ನಿತ್ಯೇ ನೈಮಿತ್ತಿಕೇ ಚೈವ ಸಂಹಾರೇ ಪ್ರಾಕೃತೇ ತಥಾ ।
ಶಕ್ತಯೋ ಮಮ ವಿದ್ಯಂತೇ ದೇವದೇವ ಮಮ ಪ್ರಭೋ ॥

(ಶ್ಲೋಕ - 40)

ಮೂಲಮ್

ಆತ್ಯಂತಿಕೇ ತು ಸಂಹಾರೇ ಮಮ ಶಕ್ತಿರ್ನವಿದ್ಯತೇ ।
ಮಹದ್ದುಃಖಂ ಮಮೈತತ್ತು ತೇನ ತ್ವಾಂ ಪ್ರಾರ್ಥಯಾಮ್ಯಹಮ್ ॥

ಅನುವಾದ

ರುದ್ರದೇವರು ಪ್ರಾರ್ಥನೆ ಮಾಡುತ್ತಾರೆ — ‘‘ಓ ಪ್ರಭುವೇ! ನನ್ನಲ್ಲಿ ನಿತ್ಯ-ನೈಮಿತ್ತಿಕ ಮತ್ತು ಪ್ರಾಕೃತವಾದ ಸಂಹಾರ ಕಾರ್ಯಗಳನ್ನು ಮಾಡುವ ಶಕ್ತಿಗಳಿವೆ. ಆದರೆ ಆತ್ಯಂತಿಕ ಸಂಹಾರವನ್ನು ಮಾಡುವ ಶಕ್ತಿ ಇಲ್ಲವಾಗಿದೆ. ಇದು ಬಹಳ ದುಃಖದ ವಿಷಯವಾಗಿದೆ. ನನ್ನ ಈ ಕೊರತೆಯನ್ನು ನೀಗಿಸಬೇಕೆಂದು ನಿನ್ನನ್ನು ಪ್ರಾರ್ಥಿಸುತ್ತೇನೆ.’’ ॥39-40॥

(ಶ್ಲೋಕ - 41)

ಮೂಲಮ್ (ವಾಚನಮ್)

ಬೃಹಸ್ಪತಿರುವಾಚ

ಮೂಲಮ್

ಶ್ರೀಮದ್ಭಾಗವತಂ ತಸ್ಮಾ ಅಪಿ ನಾರಾಯಣೋ ದದೌ ।
ಸ ತು ಸಂಸೇವನಾದಸ್ಯ ಜಿಗ್ಯೇ ಚಾಪಿ ತಮೋಗುಣಮ್ ॥

(ಶ್ಲೋಕ - 42)

ಮೂಲಮ್

ಕಥಾ ಭಾಗವತೀ ತೇನ ಸೇವಿತಾ ವರ್ಷಮಾತ್ರತಃ ।
ಲಯೇ ತ್ವಾತ್ಯಂತಿಕೇ ತೇನಾವಾಪ ಶಕ್ತಿಂ ಸದಾಶಿವಃ ॥

ಅನುವಾದ

ಬೃಹಸ್ಪತ್ಯಾಚಾರ್ಯರು ಹೇಳುತ್ತಾರೆ — ನಾರಾಯಣನು ಆ ರುದ್ರದೇವರಿಗೂ ಕೂಡ ಅವರ ಇಷ್ಟಾರ್ಥಸಿದ್ಧಿಗಾಗಿ ಶ್ರೀಮದ್ಭಾಗವತವನ್ನೇ ಉಪದೇಶಮಾಡಿದನು. ಅದನ್ನು ಸೇವಿಸಿದ್ದರಿಂದ ರುದ್ರದೇವರು ತಮೋಗುಣವನ್ನು ಜಯಿಸಿ ಬಿಟ್ಟರು. ಅವರು ಒಂದು ವರ್ಷದಲ್ಲಿ ಒಂದು ಪಾರಾಯಣ ಎಂಬ ಕ್ರಮದಲ್ಲಿ ಭಾಗವತದ ಕಥೆಯನ್ನು ಸೇವಿಸಿದರು. ಇದರಿಂದ ಅವರು ತಮೋಗುಣದ ಮೇಲೆ ಜಯವನ್ನು ಗಳಿಸಿ ಆತ್ಯಂತಿಕಸಂಹಾರದ (ಮೋಕ್ಷದ) ಶಕ್ತಿಯನ್ನೂ ಪಡೆದುಕೊಂಡರು.’’ ॥41-42॥

(ಶ್ಲೋಕ - 43)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಶ್ರೀಭಾಗವತಮಾಹಾತ್ಮ್ಯ ಇಮಾಮಾಖ್ಯಾಯಿಕಾಂ ಗುರೋಃ ।
ಶ್ರುತ್ವಾ ಭಾಗವತಂ ಲಬ್ಧ್ವಾ ಮುಮುದೇಹಂ ಪ್ರಣಮ್ಯ ತಮ್ ॥

ಅನುವಾದ

ಉದ್ಧವನು ಹೇಳುತ್ತಾನೆ — ‘‘ಶ್ರೀಮದ್ಭಾಗವತದ ಮಾಹಾತ್ಮ್ಯಕ್ಕೆ ಸಂಬಂಧಪಟ್ಟ ಈ ಆಖ್ಯಾಯಿಕೆಯನ್ನು ನಾನು ನನ್ನ ಗುರು ಬೃಹಸ್ಪತ್ಯಾಚಾರ್ಯರಿಂದ ಕೇಳಿದೆನು. ಅವರಿಂದಲೇ ಶ್ರೀಮದ್ಭಾಗವತದ ಉಪದೇಶವನ್ನು ಪಡೆದು ಅವರ ಅಡಿದಾವರೆಗಳಿಗೆ ನಮಸ್ಕಾರ ಮಾಡಿ ನಾನೂ ಪರಮಾನಂದಭರಿತನಾದೆನು. ॥43॥

(ಶ್ಲೋಕ - 44)

ಮೂಲಮ್

ತತಸ್ತು ವೈಷ್ಣವೀಂ ರೀತಿಂ ಗೃಹೀತ್ವಾ ಮಾಸಮಾತ್ರತಃ ।
ಶ್ರೀಮದ್ಭಾಗವತಾಸ್ವಾದೋ ಮಯಾ ಸಮ್ಯಙ್ನೆಷೇವಿತಃ ॥

ಅನುವಾದ

ಅನಂತರ ಭಗವಂತ ನಾದ ಮಹಾವಿಷ್ಣುವಿನಂತೆ ನಾನೂ ಒಂದು ತಿಂಗಳಿನವರೆಗೆ ಶ್ರೀಮದ್ಭಾಗವತದ ಕಥಾಮೃತವನ್ನು ಸವಿದೆನು. ॥44॥

(ಶ್ಲೋಕ - 45)

ಮೂಲಮ್

ತಾವತೈವ ಬಭೂವಾಹಂ ಕೃಷ್ಣಸ್ಯ ದಯಿತಃ ಸಖಾ ।
ಕೃಷ್ಣೇನಾಥ ನಿಯುಕ್ತೋಹಂ ವ್ರಜೇ ಸ್ವಪ್ರೇಯಸೀ ಗಣೇ ॥

ಅನುವಾದ

ಇಷ್ಟರಿಂದಲೇ ನನಗೆ ಶ್ರೀಕೃಷ್ಣಪರಮಾತ್ಮನ ಪ್ರಿಯಮಿತ್ರನಾಗುವ ಭಾಗ್ಯದೊರೆಯಿತು. ಅನಂತರ ಭಗವಂತನು ನನ್ನನ್ನು ವ್ರಜದಲ್ಲಿ ತನ್ನ ಪ್ರಿಯತಮೆಯರಾದ ಗೋಪಿಯರ ಬಳಿಗೆ ಸಂದೇಶ ವಾಹಕನನ್ನಾಗಿ ನೇಮಿಸಿದನು. ॥45॥

(ಶ್ಲೋಕ - 46)

ಮೂಲಮ್

ವಿರಹಾರ್ತ್ತಾಸು ಗೋಪೀಷು ಸ್ವಯಂ ನಿತ್ಯವಿಹಾರಿಣಾ ।
ಶ್ರೀಭಾಗವತಸಂದೇಶೋ ಮನ್ಮುಖೇನ ಪ್ರಯೋಜಿತಃ ॥

ಅನುವಾದ

ಭಗವಂತನು ತನ್ನ ಲೀಲಾ ಪರಿಕರಗಳೊಂದಿಗೆ ಸದಾಕಾಲ ವಿಹರಿಸುತ್ತಿರುವುದರಿಂದ ಗೋಪಿಯರಿಗೆ ಶ್ರೀಕೃಷ್ಣನಿಂದ ಎಂದಿಗೂ ಅಗಲಿಕೆಯುಂಟಾಗುವುದಿಲ್ಲ. ಆದರೂ ಭ್ರಮೆಯಿಂದ ಶ್ರೀಕೃಷ್ಣನಿಂದ ತಮಗೆ ಅಗಲಿಕೆಯುಂಟಾಯಿತೆಂದು ತಿಳಿದು ವಿರಹವೇದನೆಯನ್ನು ಗೋಪಿಯರು ಅನುಭವಿಸುತ್ತಿದ್ದಾಗ ಭಗವಂತನು ಅವರನ್ನು ಕುರಿತು ಭಾಗವತದ ಸಂದೇಶವನ್ನು ನನ್ನ ಮೂಲಕ ಕಳುಹಿಸಿಕೊಟ್ಟನು. ॥46॥

(ಶ್ಲೋಕ - 47)

ಮೂಲಮ್

ತಂ ಯಥಾಮತಿ ಲಬ್ಧ್ವಾ ತಾ ಆಸನ್ವಿರಹವರ್ಜಿತಾಃ ।
ನಾಜ್ಞಾಸಿಷಂ ರಹಸ್ಯಂ ತಚ್ಚಮತ್ಕಾರಸ್ತು ಲೋಕಿತಃ ॥

ಅನುವಾದ

ಆ ಸಂದೇಶವನ್ನು ನನ್ನಿಂದ ಯಥಾಮತಿಯಾಗಿ ಗ್ರಹಿಸಿ, ಗೋಪಿಯರು ಒಡನೆಯೇ ವಿರಹವೇದನೆಯಿಂದ ಬಿಡುಗಡೆಹೊಂದಿದರು. ನಾನು ಭಾಗವತದ ರಹಸ್ಯವನ್ನು ತಿಳಿಯಲಾಗದಿದ್ದರೂ ಅದರ ಚಮತ್ಕಾರವನ್ನು ಕಣ್ಣಿನಿಂದಲೇ ಕಂಡೆನು. ॥47॥

(ಶ್ಲೋಕ - 48)

ಮೂಲಮ್

ಸ್ವರ್ವಾಸಂ ಪ್ರಾರ್ಥ್ಯ ಕೃಷ್ಣಂ ಚ ಬ್ರಹ್ಮಾದ್ಯೇಷು ಗತೇಷು ಮೇ ।
ಶ್ರೀಮದ್ಭಾಗವತೇ ಕೃಷ್ಣಸ್ತದ್ರಹಸ್ಯಂ ಸ್ವಯಂ ದದೌ ॥

(ಶ್ಲೋಕ - 49)

ಮೂಲಮ್

ಪುರತೋಶ್ವತ್ಥಮೂಲಸ್ಯ ಚಕಾರ ಮಯಿ ತದ್ದೃಢಮ್ ।
ತೇನಾತ್ರ ವ್ರಜವಲ್ಲೀಷು ವಸಾಮಿ ಬದರೀಂ ಗತಃ ॥

ಅನುವಾದ

ಇದಾದ ಮೇಲೆ ಬಹಳ ಸಮಯದನಂತರ ಬ್ರಹ್ಮಾದಿದೇವತೆಗಳು ಭಗವಂತನ ಬಳಿಗೆ ಬಂದು ಆತನನ್ನು ಪರಮಪದಕ್ಕೆ ದಯಮಾಡಿಸಬೇಕೆಂದು ಪ್ರಾರ್ಥನೆಮಾಡಿ ಹೋದರು. ಆಗ ಪ್ರಭುವು ಅಶ್ವತ್ಥವೃಕ್ಷದ ಬುಡದಲ್ಲಿ ನಿಂತಿದ್ದ ನನಗೆ ಶ್ರೀಮದ್ಭಾಗವತ ವಿಷಯವಾದ ಆ ರಹಸ್ಯವನ್ನು ತಾನೇ ಉಪದೇಶಮಾಡಿ ನನ್ನ ಬುದ್ಧಿಯಲ್ಲಿ ಅದರ ದೃಢವಾದ ನಿಶ್ಚಯವು ಉಂಟಾಗುವಂತೆ ಮಾಡಿದನು. ಅದರ ಪ್ರಭಾವದಿಂದಲೇ ನಾನು ಬದರಿಕಾಶ್ರಮದಲ್ಲಿ ವಾಸವಾಗಿದ್ದರೂ ಇಲ್ಲಿ ವ್ರಜದ ಬಳ್ಳಿಗಳಲ್ಲಿಯೂ ವಾಸ ಮಾಡಲು ಸಾಧ್ಯವಾಗಿದೆ. ॥48-49॥

(ಶ್ಲೋಕ - 50)

ಮೂಲಮ್

ತಸ್ಮಾನ್ನಾರದಕುಂಡೇತ್ರ ತಿಷ್ಠಾಮಿ ಸ್ವೇಚ್ಛಯಾ ಸದಾ ।
ಕೃಷ್ಣಪ್ರಕಾಶೋ ಭಕ್ತಾನಾಂ ಶ್ರೀಮದ್ಭಾಗವತಾದ್ಭವೇತ್ ॥

ಅನುವಾದ

ಅದರ ಬಲದಿಂದಲೇ ಇಲ್ಲಿ ನಾರದಕುಂಡದಲ್ಲಿ ಸದಾಯಥೇಚ್ಛವಾಗಿ ಬೆಳಗುತ್ತಿರುತ್ತೇನೆ. ಭಗವಂತನ ಭಕ್ತರಿಗೆ ಶ್ರೀಮದ್ಭಾಗವತವನ್ನು ಸೇವಿಸುವುದರಿಂದ ಶ್ರೀಕೃಷ್ಣತತ್ತ್ವದ ಪ್ರಕಾಶವುಂಟಾಗುವುದು. ॥50॥

(ಶ್ಲೋಕ - 51)

ಮೂಲಮ್

ತದೇಷಾಮಪಿ ಕಾರ್ಯಾರ್ಥಂ ಶ್ರೀಮದ್ಭಾಗವತಂ ತ್ವಹಮ್ ।
ಪ್ರವಕ್ಷ್ಯಾಮಿ ಸಹಾಯೋತ್ರ ತ್ವಯೈವಾನುಷ್ಠಿತೋ ಭವೇತ್ ॥

ಅನುವಾದ

ಆದುದರಿಂದ ನಾನು ಇಲ್ಲಿ ಇರುವ ಈ ಎಲ್ಲ ಭಕ್ತಜನರ ಕಾರ್ಯಸಿದ್ಧಿಗೋಸ್ಕರ ಶ್ರೀಮದ್ಭಾಗವತವನ್ನು ಪಾರಾಯಣ ಮಾಡುವೆನು. ಆದರೆ ಈ ಕೆಲಸದಲ್ಲಿ ನೀನೂ ನನಗೆ ಸಹಾಯ ಮಾಡಬೇಕು.’’ ॥51॥

(ಶ್ಲೋಕ - 52)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ವಿಷ್ಣುರಾತಸ್ತು ಶ್ರುತ್ವಾ ತದುದ್ಧವಂ ಪ್ರಣತೋಬ್ರವೀತ್ ।

ಮೂಲಮ್ (ವಾಚನಮ್)

ಪರೀಕ್ಷಿದುವಾಚ

ಮೂಲಮ್

ಹರಿದಾಸ ತ್ವಯಾ ಕಾರ್ಯಂ ಶ್ರೀಭಾಗವತಕೀರ್ತನಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಇದನ್ನು ಕೇಳಿ ಪರೀಕ್ಷಿದ್ರಾಜನು ಉದ್ಧವನಿಗೆ ಪ್ರಣಾಮಮಾಡಿ, ಹೀಗೆ ವಿಜ್ಞಾಪಿಸಿದನು.
ಪರೀಕ್ಷಿತನು ಹೇಳಿದನು — ‘‘ಓ ಹರಿದಾಸ ಶಿಖಾಮಣಿಯೇ! ನೀವು ಇಲ್ಲಿ ನಿಶ್ಚಿಂತರಾಗಿ ಶ್ರೀಮದ್ಭಾಗವತದ ಸಂಕೀರ್ತನೆಯನ್ನು ಮಾಡಿರಿ. ॥52॥ ನಾನು ನಿಮಗೆ ಏನು ಸಹಾಯ ಮಾಡಬೇಕು? ಎಂಬುದನ್ನು ಆಜ್ಞಾಪಿಸಿರಿ.’’

(ಶ್ಲೋಕ - 53)

ಮೂಲಮ್

ಆಜ್ಞಾಪ್ಯೋಹಂ ಯಥಾ ಕಾರ್ಯಃ
ಸಹಾಯೋತ್ರ ಮಯಾ ತಥಾ ।

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಶ್ರುತ್ವೈತದುದ್ಧವೋ ವಾಕ್ಯಮುವಾಚ ಪ್ರೀತಮಾನಸಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಇದನ್ನು ಕೇಳಿ ಸಂತೋಷಗೊಂಡ ಉದ್ಧವನು ಪರೀಕ್ಷಿತನಿಗೆ ಹೀಗೆಂದನು ॥53॥

(ಶ್ಲೋಕ - 54)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಶ್ರೀಕೃಷ್ಣೇನ ಪರಿತ್ಯಕ್ತೇ ಭೂತಲೇ ಬಲವಾನ್ಕಲಿಃ ।
ಕರಿಷ್ಯತಿ ಪರಂ ವಿಘ್ನಂ ಸತ್ಕಾರ್ಯೇ ಸಮುಪಸ್ಥಿತೇ ॥

ಅನುವಾದ

ಉದ್ಧವರು ಹೇಳುತ್ತಾರೆ — ‘‘ರಾಜೇಂದ್ರನೇ! ಶ್ರೀಕೃಷ್ಣನು ಈ ಭೂಮಿಯನ್ನು ತ್ಯಜಿಸಿದೊಡನೆಯೇ ಮಹಾಬಲಶಾಲಿಯಾದ ಕಲಿಪುರುಷನು ಇಲ್ಲಿ ತನ್ನ ಪ್ರಭುತ್ವ, ಪರಾಕ್ರಮಗಳನ್ನು ಹರಡುತ್ತಿದ್ದಾನೆ. ನಾನು ಶ್ರೀಮದ್ಭಾಗವತ ಪಾರಾಯಣದ ಶುಭಕಾರ್ಯವನ್ನು ಆಚರಿಸತೊಡಗಿದಾಗ ಆತನು ಇದಕ್ಕೆ ಅವಶ್ಯವಾಗಿ ದೊಡ್ಡ ವಿಘ್ನವನ್ನುಂಟುಮಾಡುವನು. ॥54॥

(ಶ್ಲೋಕ - 55)

ಮೂಲಮ್

ತಸ್ಮಾದ್ದಿಗ್ವಿಜಯಂ ಯಾಹಿ ಕಲಿನಿಗ್ರಹಮಾಚರ ।
ಅಹಂ ತು ಮಾಸಮಾತ್ರೇಣ ವೈಷ್ಣವೀಂ ರೀತಿಮಾಸ್ಥಿತಃ ॥

(ಶ್ಲೋಕ - 56)

ಮೂಲಮ್

ಶ್ರೀಮದ್ಭಾಗವತಾಸ್ವಾದಂ ಪ್ರಚಾರ್ಯ ತ್ವತ್ಸಹಾಯತಃ ।
ಏತಾನ್ ಸಂಪ್ರಾಪಯಿಷ್ಯಾಮಿ ನಿತ್ಯಧಾಮ್ನಿ ಮಧುದ್ವಿಷಃ ॥

ಅನುವಾದ

ಆದುದರಿಂದ ನೀನು ದಿಗ್ವಿಜಯಕ್ಕೆ ಹೊರಟು ಕಲಿಯನ್ನು ಗೆದ್ದು ವಶಪಡಿಸಿಕೋ. ಇತ್ತಕಡೆ ನಾನೂ ಕೂಡ ನಿನ್ನ ಸಹಾಯದಿಂದ ವೈಷ್ಣವೀರೀತಿಯನ್ನು ಹಿಡಿದು ಒಂದು ತಿಂಗಳಕಾಲ ಇಲ್ಲಿ ಶ್ರೀಮದ್ಭಾಗವತಕಥೆಯ ರಸದೂಟವನ್ನು ಮಾಡಿಸುವೆನು. ಈ ಕಥಾರಸವನ್ನು ಹರಿಯಿಸಿ ಈ ಶ್ರೋತೃಗಳೆಲ್ಲರನ್ನೂ ಭಗವಾನ್ ಮಧುಸೂದನನ ನಿತ್ಯವಾದ ಗೋಲೋಕ ಧಾಮಕ್ಕೆ ಒಯ್ಯುವೆನು.’’ ॥55-56॥

(ಶ್ಲೋಕ - 57)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಶ್ರುತ್ವೈವಂ ತದ್ವಚೋ ರಾಜಾ ಮುದಿತಶ್ಚಿಂತಯಾತುರಃ ।
ತದಾ ವಿಜ್ಞಾಪಯಾಮಾಸ ಸ್ವಾಭಿಪ್ರಾಯಂ ತಮುದ್ಧವಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ‘‘ಈ ಮಾತನ್ನು ಕೇಳಿ ಪರೀಕ್ಷಿದ್ರಾಜನಿಗೆ ಸಂತೋಷವೇನೋ ಉಂಟಾಯಿತು. ಆದರೆ ತಾನು ಕಲಿಯನ್ನು ನಿಗ್ರಹಿಸುವ ಕಾರ್ಯಕ್ಕೆ ಹೋಗಿ ಶ್ರೀಮದ್ಭಾಗವತದ ಕಥೆಯ ರಸದೌತಣವನ್ನು ತಪ್ಪಿಸಿಕೊಳ್ಳ ಬೇಕಾಗುವುದಲ್ಲಾ! ಎಂದು ಕಳವಳಗೊಂಡು ಆತನು ಮಹಾತ್ಮನಾದ ಉದ್ಧವನಿಗೆ ತನ್ನ ಅಭಿಪ್ರಾಯವನ್ನು ವಿಜ್ಞಾಪಿಸಿದನು. ॥57॥

(ಶ್ಲೋಕ - 58)

ಮೂಲಮ್ (ವಾಚನಮ್)

ಪರೀಕ್ಷಿದುವಾಚ

ಮೂಲಮ್

ಕಲಿಂ ತು ನಿಗ್ರಹಿಷ್ಯಾಮಿ ತಾತ ತೇ ವಚಸಿ ಸ್ಥಿತಃ ।
ಶ್ರೀಭಾಗವತಸಂಪ್ರಾಪ್ತಿಃ ಕಥಂ ಮಮ ಭವಿಷ್ಯತಿ ॥

ಅನುವಾದ

ಪರೀಕ್ಷಿತರಾಜನು ಹೇಳಿದನು — ‘‘ಮಹಾತ್ಮರೇ! ನಿಮ್ಮ ಆಜ್ಞೆಯಂತೆ ನಾನು ಕಲಿಯನ್ನು ಅವಶ್ಯವಾಗಿ ಗೆದ್ದು ವಶಪಡಿಸಿಕೊಳ್ಳುತ್ತೇನೆ. ಆದರೆ ನನಗೆ ಶ್ರೀಮದ್ಭಾಗವತವನ್ನು ಸವಿಯುವ ಭಾಗ್ಯ ಹೇಗೆ ದೊರೆಯುವುದು? ॥58॥ ಆದ್ದರಿಂದ ನಾನು ನಿನ್ನ ಅಡಿದಾವರೆಗಳಲ್ಲಿ ಶರಣು ಬಂದಿದ್ದೇನೆ, ಅನುಗ್ರಹಮಾಡು.’’

(ಶ್ಲೋಕ - 59)

ಮೂಲಮ್

ಅಹಂ ತು ಸಮನುಗ್ರಾಹ್ಯಸ್ತವ ಪಾದತಲೇ ಶ್ರಿತಃ ।

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಶ್ರುತ್ವೈತದ್ವಚನಂ ಭೂಯೋಪ್ಯುದ್ಧವಸ್ತಮುವಾಚ ಹ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಈ ವಿಜ್ಞಾಪನೆ ಯನ್ನು ಕೇಳಿ ಉದ್ಧವನು ಅವನಲ್ಲಿ ಹೀಗೆಂದನು ॥59॥

(ಶ್ಲೋಕ - 60)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ರಾಜನ್ಶ್ಚಿಂತಾ ತು ತೇ ಕಾಪಿ ನೈವ ಕಾರ್ಯಾ ಕಥಂಚನ ।
ತವೈವ ಭಗವಚ್ಛಾಸೇ ಯತೋ ಮುಖ್ಯಾಧಿಕಾರಿತಾ ॥

ಅನುವಾದ

ಉದ್ಧವನು ಹೇಳುತ್ತಾನೆ — ‘‘ರಾಜೇಂದ್ರ! ನೀನು ಯಾವುದಕ್ಕೂ ಚಿಂತೆಪಡಬೇಡ. ಏಕೆಂದರೆ ಭಗವಚ್ಛಾಸ ಶ್ರೀಮದ್ಭಾಗವತವನ್ನು ಗ್ರಹಿಸುವುದಕ್ಕೆ ನೀನೇ ಮುಖ್ಯನಾದ ಅಧಿಕಾರಿಯು. ಪರಮೋತ್ತಮ ಪಾತ್ರನು. ॥60॥

(ಶ್ಲೋಕ - 61)

ಮೂಲಮ್

ಏತಾವತ್ಕಾಲಪರ್ಯಂತಂ ಪ್ರಾಯೋ ಭಾಗವತಶ್ರುತೇಃ ।
ವಾರ್ತಾಮಪಿ ನ ಜಾನಂತಿ ಮನುಷ್ಯಾಃ ಕರ್ಮತತ್ಪರಾಃ ॥

ಅನುವಾದ

ಲೋಕದಲ್ಲಿ ಮನುಷ್ಯರು ಬಗೆ-ಬಗೆಯ ಕರ್ಮಗಳಲ್ಲಿ ಆಸಕ್ತರಾಗಿ ಭಾಗವತಶ್ರವಣದ ಮಾತನ್ನೂ ಅರಿತಿಲ್ಲ. ॥61॥

(ಶ್ಲೋಕ - 62)

ಮೂಲಮ್

ತ್ವತ್ಪ್ರಸಾದೇನ ಬಹವೋ ಮನುಷ್ಯಾ ಭಾರತಾಜಿರೇ ।
ಶ್ರೀಮದ್ಭಾಗವತಪ್ರಾಪ್ತೌ ಸುಖಂ ಪ್ರಾಪ್ಸ್ಯಂತಿ ಶಾಶ್ವತಮ್ ॥

ಅನುವಾದ

ಆದರೆ ನಿನ್ನ ಕಾರಣದಿಂದ, ನಿನ್ನ ಅನುಗ್ರಹದಿಂದ, ಈ ಭಾರತ ವರ್ಷದ ಬಹುಮಂದಿ ಜನರು ಶ್ರೀಮದ್ಭಾಗವತದ ಭಾಗ್ಯವನ್ನು ಪಡೆದು ಅದರಿಂದ ಶಾಶ್ವತವಾದ ಸುಖವನ್ನು ಅನುಭವಿಸುವರು. ॥62॥

(ಶ್ಲೋಕ - 63)

ಮೂಲಮ್

ನಂದನಂದನರೂಪಸ್ತು ಶ್ರೀಶುಕೋ ಭಗವಾನೃಷಿಃ ।
ಶ್ರೀಮದ್ಭಾಗವತಂ ತುಭ್ಯಂ ಶ್ರಾವಯಿಷ್ಯತ್ಯಸಂಶಯಮ್ ॥

ಅನುವಾದ

ಸಾಕ್ಷಾತ್ ಶ್ರೀಕೃಷ್ಣರೂಪಿಗಳಾದ ಭಗವಾನ್ ಶುಕಮಹರ್ಷಿಗಳೇ ನಿನಗೆ ಶ್ರೀಮದ್ಭಾಗವತ ಕಥೆಯನ್ನು ಉಪದೇಶಿಸುವರು. ಇದರಲ್ಲಿ ಸ್ವಲ್ಪವೂ ಸಂದೇಹವಿಲ್ಲರು. ॥63॥

(ಶ್ಲೋಕ - 64)

ಮೂಲಮ್

ತೇನ ಪ್ರಾಪ್ಸ್ಯಸಿ ರಾಜನ್ಸ್ತ್ವಂ ನಿತ್ಯಂ ಧಾಮ ವ್ರಜೇಶಿತುಃ ।
ಶ್ರೀಭಾಗವತಸಂಚಾರಸ್ತತೋ ಭುವಿ ಭವಿಷ್ಯತಿ ॥

ಅನುವಾದ

ರಾಜನೇ! ಈ ಕಥೆಯ ಶ್ರವಣದಿಂದ ನೀನು ವ್ರಜೇಶ್ವರನಾದ ಶ್ರೀಕೃಷ್ಣನ ನಿತ್ಯಧಾಮವನ್ನು ಹೊಂದುವೆ. ಅನಂತರ ಈ ಭೂಮಿ ಯಲ್ಲೆಲ್ಲಾ ಶ್ರೀಮದ್ಭಾಗವತದ ಕಥೆಯ ಪ್ರಚಾರವಾಗುವುದು. ॥64॥

(ಶ್ಲೋಕ - 65)

ಮೂಲಮ್

ತಸ್ಮಾತ್ತ್ವಂ ಗಚ್ಛ ರಾಜೇಂದ್ರ ಕಲಿನಿಗ್ರಹಮಾಚರ ।

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯುಕ್ತಸ್ತಂ ಪರಿಕ್ರಮ್ಯ ಗತೋ ರಾಜಾ ದಿಶಾಂ ಜಯೇ ॥

ಅನುವಾದ

ರಾಜೇಂದ್ರನೇ! ಆದುದರಿಂದ ನೀನು ಹೋಗಿ ಕಲಿಯನ್ನು ನಿಗ್ರಹಿಸು.’’
ಸೂತಪುರಾಣಿಕರು ಹೇಳುತ್ತಾರೆ — ‘‘ಮಹಾತ್ಮನಾದ ಉದ್ಧವನ ಈ ಮಾತನ್ನು ಕೇಳಿ ಪರೀಕ್ಷಿದ್ರಾಜನು ಆತನಿಗೆ ಪ್ರದಕ್ಷಿಣ- ನಮಸ್ಕಾರಗಳನ್ನು ಮಾಡಿ ದಿಗ್ವಿಜಯಕ್ಕಾಗಿ ಹೊರಟನು. ॥65॥

(ಶ್ಲೋಕ - 66)

ಮೂಲಮ್

ವಜ್ರಸ್ತು ನಿಜರಾಜ್ಯೇಶಂ ಪ್ರತಿಬಾಹುಂ ವಿಧಾಯ ಚ ।
ತತ್ರೈವ ಮಾತೃಭಿಃ ಸಾಕಂ ತಸ್ಥೌ ಭಾಗವತಾಶಯಾ ॥

ಅನುವಾದ

ಇತ್ತಕಡೆ ವಜ್ರನಾಭನೂ ಕೂಡ ತನ್ನ ಪುತ್ರನಾದ ಪ್ರತಿಬಾಹುವಿಗೆ ತನ್ನ ರಾಜ್ಯದಲ್ಲಿ ಪಟ್ಟಾಭಿಷೇಕ ಮಾಡಿ ತನ್ನ ತಾಯಂದಿರೊಡನೆ ಉದ್ಧವನು ಪ್ರಕಟಗೊಂಡ ನಿರ್ದಿಷ್ಟಸ್ಥಾನಕ್ಕೆ ಹೋಗಿ, ಶ್ರೀಮದ್ಭಾಗವತದ ಕಥೆಯನ್ನು ಸೇವಿಸುವ ಇಚ್ಛೆಯಿಂದ ಅಲ್ಲಿಯೇ ಇರತೊಡಗಿದನು. ॥66॥

(ಶ್ಲೋಕ - 67)

ಮೂಲಮ್

ಅಥ ವೃಂದಾವನೇ ಮಾಸಂ ಗೋವರ್ಧನಸಮೀಪತಃ ।
ಶ್ರೀಮದ್ಭಾಗವತಾಸ್ವಾದಸ್ತೂದ್ಧವೇನ ಪ್ರವರ್ತಿತಃ ॥

ಅನುವಾದ

ಅನಂತರ ಮಹಾತ್ಮನಾದ ಉದ್ಧವನು ವೃಂದಾವನದಲ್ಲಿ ಗೋವರ್ಧನಪರ್ವತದ ಬಳಿ ಒಂದು ತಿಂಗಳಕಾಲ ಶ್ರೀಮದ್ಭಾಗವತದ ಕಥಾಸುಧೆಯನ್ನು ಹರಿಯಿಸಿದನು. ॥67॥

(ಶ್ಲೋಕ - 68)

ಮೂಲಮ್

ತಸ್ಮಿನ್ನಾಸ್ವಾದ್ಯಮಾನೇ ತು ಸಚ್ಚಿದಾನಂದರೂಪಿಣೀ ।
ಪ್ರಚಕಾಶೇ ಹರೇರ್ಲೀಲಾ ಸರ್ವತಃ ಕೃಷ್ಣ ಏವ ಚ ॥

ಅನುವಾದ

ಆ ರಸವನ್ನು ಸವಿಯುತ್ತಿರುವಾಗ ಭಕ್ತರಿಗೆ ಎಲ್ಲೆಡೆ ಯಲ್ಲಿಯೂ ಸಚ್ಚಿದಾನಂದಮಯಿಯಾದ ಶ್ರೀಹರಿಯ ಲೀಲೆಯು ಕಣ್ಣುಗಳಿಗೆ ಹಬ್ಬವಾಗಿ ಪ್ರಕಾಶಿಸತೊಡಗಿತು. ಎಲ್ಲೆಲ್ಲಿಯೂ ಶ್ರೀಕೃಷ್ಣನೇ ಕಾಣತೊಡಗಿದನು. ॥68॥

(ಶ್ಲೋಕ - 69)

ಮೂಲಮ್

ಆತ್ಮಾನಂ ಚ ತದಂತಃಸ್ಥಂ ಸರ್ವೇಪಿ ದದೃಶುಸ್ತದಾ ।
ವಜ್ರಸ್ತು ದಕ್ಷಿಣೇ ದೃಷ್ಟ್ವಾ ಕೃಷ್ಣಪಾದಸರೋರುಹೇ ॥

(ಶ್ಲೋಕ - 70)

ಮೂಲಮ್

ಸ್ವಾತ್ಮಾನಂ ಕೃಷ್ಣವೈಧುರ್ಯಾನ್ಮುಕ್ತಸ್ತದ್ಭುವ್ಯಶೋಭತ ।
ತಾಶ್ಚ ತನ್ಮಾತರಃ ಕೃಷ್ಣೇ ರಾಸರಾತ್ರಿಪ್ರಕಾಶಿನಿ ॥

(ಶ್ಲೋಕ - 71)

ಮೂಲಮ್

ಚಂದ್ರೇ ಕಲಾಪ್ರಭಾರೂಪಮಾತ್ಮಾನಂ ವೀಕ್ಷ್ಯ ವಿಸ್ಮಿತಾಃ ।
ಸ್ವಪ್ರೇಷ್ಠವಿರಹವ್ಯಾಧಿವಿಮುಕ್ತಾಃ ಸ್ವಪದಂ ಯಯುಃ ॥

ಅನುವಾದ

ಆಗ ಎಲ್ಲರೂ ತಾವು ಶ್ರೀಕೃಷ್ಣನ ದೇಹದೊಳಗೇ ಇರುವುದನ್ನು ಕಂಡರು. ವಜ್ರನಾಭನು ತಾನು ಶ್ರೀಕೃಷ್ಣನ ಬಲಭಾಗದ ಅಡಿದಾವರೆಯಲ್ಲಿರುವುದನ್ನು ಕಂಡು ಆ ಭಗವಂತನ ಅಗಲಿಕೆಯಿಂದ ಉಂಟಾಗಿದ್ದ ದುಃಖವನ್ನು ನೀಗಿ ಪ್ರಸನ್ನತೆಯಿಂದ ಕಂಗೊಳಿಸಿದನು. ವಜ್ರನಾಭನ ರೋಹಿಣಿಯೇ ಮುಂತಾದ ತಾಯಂದಿರೂ ಕೂಡ ರಾಸಕ್ರೀಡೆಯ ರಾತ್ರಿಯಲ್ಲಿ ಪ್ರಕಾಶಿಸುತ್ತಿದ್ದ ಶ್ರೀಕೃಷ್ಣನೆಂಬ ಚಂದ್ರನ ದಿವ್ಯಮಂಗಳವಿಗ್ರಹದಲ್ಲಿ ತಾವೂ ಕಲೆಯ ಮತ್ತು ಪ್ರಭೆಯ ರೂಪದಲ್ಲಿರುವುದನ್ನು ಕಂಡು ಆನಂದ-ಆಶ್ಚರ್ಯಗಳಿಂದ ಬೆರಗಾದರು. ತಮ್ಮ ಪ್ರಾಣಪ್ರಿಯನಾದ ಭಗವಂತನ ವಿರಹವೇದನೆಯಿಂದ ಬಿಡುಗಡೆಹೊಂದಿ ಆ ಪರಮಾತ್ಮನ ಧಾಮವನ್ನು ಪ್ರವೇಶಿಸಿಬಿಟ್ಟರು. ॥69-71॥

(ಶ್ಲೋಕ - 72)

ಮೂಲಮ್

ಯೇನ್ಯೇ ಚ ತತ್ರ ತೇ ಸರ್ವೇ ನಿತ್ಯಲೀಲಾಂತರಂ ಗತಾಃ ।
ವ್ಯಾವಹಾರಿಕಲೋಕೇಭ್ಯಃ ಸದ್ಯೋದರ್ಶನಮಾಗತಾಃ ॥

ಅನುವಾದ

ಇವರಲ್ಲದೆ ಅಲ್ಲಿದ್ದ ಇತರ ಶ್ರೋತೃಗಳೂ ಕೂಡ ಭಗವಂತನ ನಿತ್ಯವಾದ ಅಂತರಂಗಲೀಲೆಯಲ್ಲಿ ಸಮ್ಮಿಳಿತರಾಗಿ ಈ ಸ್ಥೂಲವಾದ ವ್ಯಾವ ಹಾರಿಕ ಜಗತ್ತಿನಿಂದ ಒಡನೆಯೇ ಕಣ್ಮರೆಯಾಗಿಬಿಟ್ಟರು. ॥72॥

(ಶ್ಲೋಕ - 73)

ಮೂಲಮ್

ಗೋವರ್ಧನನಿಕುಂಜೇಷು ಗೋಷು ವೃಂದಾವನಾದಿಷು ।
ನಿತ್ಯಂ ಕೃಷ್ಣೇನ ಮೋದಂತೇ ದೃಶ್ಯಂತೇ ಪ್ರೇಮತತ್ಪರೈಃ ॥

ಅನುವಾದ

ಆ ಪ್ರೇಮೀಭಕ್ತರು ಗೋವರ್ಧನ ಪರ್ವತದ ಲತಾಗೃಹಗಳಲ್ಲಿಯೂ, ಪೊದೆಗಳಲ್ಲಿಯೂ, ಬೃಂದಾವನದ ಕಾಮ್ಯವನವೇ ಮುಂತಾದ ಉದ್ಯಾನವನಗಳಲ್ಲಿಯೂ, ದಿವ್ಯವಾದ ಗೋವುಗಳಿಂದ ಕೂಡಿದ ಶ್ರೀಕೃಷ್ಣನೊಡನೆ ಸಂಚರಿಸುತ್ತಾ ಸದಾ ಅನಂತವಾದ ಆನಂದವನ್ನು ಅನುಭವಿಸುತ್ತಿರುತ್ತಾರೆ. ಶ್ರೀಕೃಷ್ಣನ ಪ್ರೇಮದಲ್ಲಿ ಮುಳುಗಿರುವ ಭಾವುಕಭಕ್ತರಿಗೆ ಇಂದಿಗೂ ಇವರ ದರ್ಶನವೂ ಆಗುತ್ತಿರುವದು. ॥73॥

(ಶ್ಲೋಕ - 74)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಯ ಏತಾಂ ಭಗವತ್ಪ್ರಾಪ್ತಿಂ ಶೃಣುಯಾಚ್ಚಾಪಿ ಕೀರ್ತಯೇತ್ ।
ತಸ್ಯ ವೈ ಭಗವತ್ಪ್ರಾಪ್ತಿರ್ದುಃಖಹಾನಿಶ್ಚ ಜಾಯತೇ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಭಕ್ತರಾದ ವಜ್ರನಾಭನೇ ಮುಂತಾದವರು ಭಗವಂತನನ್ನು ಹೊಂದಿದ ಈ ಕಥೆಯನ್ನು ಶ್ರವಣ ಮಾಡುವವರೂ, ಸಂಕೀರ್ತನೆ ಮಾಡುವವರೂ ಶ್ರೀಭಗವಂತನ ಸಮಾಗಮವನ್ನು ಹೊಂದುವರು. ಎಂದಿಗೂ ಯಾವ ದುಃಖವೂ ಇಲ್ಲದೆ ಪರಮ ಸೌಖ್ಯವನ್ನು ಭಗವಂತನೊಡನೆ ಸೇರಿ ಅನುಭವಿಸುವರು.’’ ॥74॥

ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥ 3 ॥
ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ ದ್ವಿತೀಯೇ ವೈಷ್ಣವಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಪರೀಕ್ಷಿದುದ್ಧವ ಸಂವಾದೇ ತೃತೀಯೋಧ್ಯಾಯಃ ॥ 3 ॥