[ಎರಡನೆಯ ಅಧ್ಯಾಯ]
ಭಾಗಸೂಚನಾ
ಯಮುನಾ ಮತ್ತು ಶ್ರೀಕೃಷ್ಣಪತ್ನಿಯರ ಸಂವಾದ, ಕೀರ್ತನೋತ್ಸವದಲ್ಲಿ ಉದ್ಧವನು ಪ್ರಕಟವಾದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಋಷಯ ಊಚುಃ
ಮೂಲಮ್
ಶಾಂಡಿಲ್ಯೇ ತೌ ಸಮಾದಿಶ್ಯ ಪರಾವೃತ್ತೇ ಸ್ವಮಾಶ್ರಮಮ್ ।
ಕಿಂ ಕಥಂ ಚಕ್ರತುಸ್ತೌ ತು ರಾಜಾನೌ ಸೂತ ತದ್ವದ ॥
ಅನುವಾದ
ಶೌನಕಾದಿಋಷಿಗಳು ಪ್ರಶ್ನಿಸುತ್ತಾರೆ — ‘‘ಸೂತಪುರಾಣಿಕರೇ! ಶಾಂಡಿಲ್ಯಮಹರ್ಷಿಗಳು ಮಹಾರಾಜ ಪರೀಕ್ಷಿತನಿಗೂ ಮತ್ತು ವಜ್ರನಾಭನಿಗೂ ಸಂದೇಶನೀಡಿ ತಮ್ಮ ಆಶ್ರಮಕ್ಕೆ ಹಿಂದಿರುಗಿದ ಬಳಿಕ ಆ ರಾಜರು ಏನೇನು ಕಾರ್ಯಗಳನ್ನು ಮಾಡಿದರು ಮತ್ತು ಹೇಗೆ ಮಾಡಿದರು? ಎಂಬುದನ್ನು ಹೇಳಿರಿ.’’ ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ತತಸ್ತು ವಿಷ್ಣುರಾತೇನ ಶ್ರೇಣೀಮುಖ್ಯಾಃ ಸಹಸ್ರಶಃ ।
ಇಂದ್ರಪ್ರಸ್ಥಾತ್ಸಮಾನಾಯ್ಯ ಮಥುರಾಸ್ಥಾನಮಾಪಿತಾಃ ॥
ಅನುವಾದ
ಸೂತಪುರಾಣಿಕರು ಹೇಳತೊಡಗಿದರು — ‘‘ಅನಂತರ ಮಹಾರಾಜ ಪರೀಕ್ಷಿತನು ಇಂದ್ರಪ್ರಸ್ಥದಿಂದ ಸಾವಿರಾರು ಮಂದಿ ದೊಡ್ಡ-ದೊಡ್ಡ ವ್ಯಾಪಾರಿಪ್ರಮುಖರನ್ನು ಕರೆಯಿಸಿ ಮಥುರಾನಗರಿಯಲ್ಲಿ ನೆಲೆಸುವಂತೆ ಮಾಡಿದನು. ॥2॥
(ಶ್ಲೋಕ - 3)
ಮೂಲಮ್
ಮಾಥುರಾನ್ ಬ್ರಾಹ್ಮಣಾಂಸ್ತತ್ರ ವಾನರಾಂಶ್ಚ ಪುರಾತನಾನ್ ।
ವಿಜ್ಞಾಯ ಮಾನನೀಯತ್ವಂ ತೇಷು ಸ್ಥಾಪಿತವಾನ್ ಸ್ವರಾಟ್ ॥
ಅನುವಾದ
ಸಾರ್ವಭೌಮನು ಇವರನ್ನು ಮಾತ್ರವಲ್ಲದೆ ಮಾನನೀಯರಾದ ಮಥುರಾಮಂಡಲದ ಬ್ರಾಹ್ಮಣಶ್ರೇಷ್ಠರನ್ನೂ ಮತ್ತು ಪ್ರಾಚೀನರಾದ ವಾನರಶ್ರೇಷ್ಠರನ್ನೂ ಕರೆಯಿಸಿ, ಅವರನ್ನು ಆ ಮಥುರಾನಗರಿಯಲ್ಲಿ ನೆಲೆಗೊಳಿಸಿದನು. ॥3॥
(ಶ್ಲೋಕ - 4)
ಮೂಲಮ್
ವಜ್ರಸ್ತು ತತ್ಸಹಾಯೇನ ಶಾಂಡಿಲ್ಯಸ್ಯಾಪ್ಯನುಗ್ರಹಾತ್ ।
ಗೋವಿಂದಗೋಪಗೋಪೀನಾಂ ಲೀಲಾಸ್ಥಾನಾನ್ಯನುಕ್ರಮಾತ್ ॥
(ಶ್ಲೋಕ - 5)
ಮೂಲಮ್
ವಿಜ್ಞಾಯಾಭಿಧಯಾಸ್ಥಾಪ್ಯ ಗ್ರಾಮಾನಾವಾಸಯದ್ಬಹೂನ್ ।
ಕುಂಡಕೂಪಾದಿಪೂರ್ತೇನ ಶಿವಾದಿಸ್ಥಾಪನೇನ ಚ ॥
ಅನುವಾದ
ಹೀಗೆ ವಜ್ರನಾಭನು ಪರೀಕ್ಷಿದ್ರಾಜನ ಸಹಾಯದಿಂದಲೂ ಮತ್ತು ಶಾಂಡಿಲ್ಯಮುನಿಗಳ ಅನುಗ್ರಹದಿಂದಲೂ ಭಗವಾನ್ ಶ್ರೀಕೃಷ್ಣನು ತನ್ನ ಪ್ರೇಮಿಗಳಾಗಿದ್ದ ಗೋಪ-ಗೋಪಿಯರೊಡನೆ ಲೀಲೆಗಳನ್ನು ನಡೆಸಿದ ಎಲ್ಲ ಸ್ಥಾನಗಳನ್ನೂ ಶೋಧನೆ ಮಾಡಿದನು. ಆ ಲೀಲಾಸ್ಥಾನಗಳು ಯಾವವು? ಎಂಬುದನ್ನು ಖಚಿತಪಡಿಸಿಕೊಂಡು ಆಯಾಲೀಲೆಗನುಗುಣವಾಗಿ ಆಯಾಸ್ಥಾನಗಳಿಗೆ ಹೆಸರುಗಳನ್ನು ಕೊಟ್ಟು ಭಗವಂತನ ಲೀಲಾವಿಗ್ರಹಗಳನ್ನು ಅಲ್ಲಿ ಸ್ಥಾಪನೆಮಾಡಿದನು. ಅಲ್ಲಲ್ಲಿ ಅನೇಕ ಗ್ರಾಮಗಳನ್ನು ನೆಲೆಗೊಳಿಸಿ, ಲತಾಗೃಹಗಳನ್ನೂ, ಉದ್ಯಾನವನಗಳನ್ನೂ ಸ್ಥಾಪಿಸಿ ಶಿವನೇ ಮುಂತಾದ ದೇವತೆಗಳ ಪ್ರತಿಷ್ಠೆಯನ್ನೂ ಮಾಡಿಸಿದನು. ॥4-5॥
(ಶ್ಲೋಕ - 6)
ಮೂಲಮ್
ಗೋವಿಂದಹರಿದೇವಾದಿಸ್ವರೂಪಾರೋಪಣೇನ ಚ ।
ಕೃಷ್ಣೈಕಭಕ್ತಿಂ ಸ್ವೇ ರಾಜ್ಯೇ ತತಾನ ಚ ಮುಮೋದ ಹ ॥
ಅನುವಾದ
ಗೋವಿಂದ ದೇವ, ಹರಿದೇವ ಮುಂತಾದ ಹೆಸರುಗಳಿಂದ ಕೂಡಿದ ಶ್ರೀಕೃಷ್ಣಪರಮಾತ್ಮನ ವಿಗ್ರಹಗಳನ್ನೂ ಸ್ಥಾಪಿಸಿದನು. ಇಂತಹ ನಾನಾಶುಭಕರ್ಮಗಳ ಮೂಲಕ ವಜ್ರನಾಭಮಹಾರಾಜನು ತನ್ನ ರಾಜ್ಯದಲ್ಲಿ ಎಲ್ಲೆಡೆಗಳಲ್ಲೂ ಶ್ರೀಕೃಷ್ಣನೊಬ್ಬನಲ್ಲೇ ಏಕಾಂತ ಭಾವದಿಂದ ಕೂಡಿದ ಶ್ರೀಕೃಷ್ಣಭಕ್ತಿಯನ್ನು ಪ್ರಚುರಪಡಿಸಿ ಪರಮಾನಂದಿತನಾದನು. ॥6॥
(ಶ್ಲೋಕ - 7)
ಮೂಲಮ್
ಪ್ರಜಾಸ್ತು ಮುದಿತಾಸ್ತಸ್ಯ ಕೃಷ್ಣಕೀರ್ತನತತ್ಪರಾಃ ।
ಪರಮಾನಂದಸಂಪನ್ನಾ ರಾಜ್ಯಂ ತಸ್ಯೈವ ತುಷ್ಟುವುಃ ॥
ಅನುವಾದ
ಆತನ ಪ್ರಜೆಗಳಿಗೂ ಇದರಿಂದ ಪರಮಾನಂದವುಂಟಾಯಿತು. ಅವರು ಸದಾ ಭಗವಂತನ ಮಧುರವಾದ ನಾಮದ ಮತ್ತು ಲೀಲೆಗಳ ಸಂಕೀರ್ತನೆಯಲ್ಲಿ ಆಸಕ್ತರಾಗಿ ಪರಮಾನಂದಸಮುದ್ರದಲ್ಲಿ ಮುಳುಗಿದವರಾಗಿ ವಜ್ರನಾಭನ ರಾಜ್ಯಭಾರವನ್ನು ಕೊಂಡಾಡುತ್ತಿದ್ದರು. ॥7॥
(ಶ್ಲೋಕ - 8)
ಮೂಲಮ್
ಏಕದಾ ಕೃಷ್ಣಪತ್ನ್ಯಸ್ತು ಶ್ರೀಕೃಷ್ಣವಿರಹಾತುರಾಃ ।
ಕಾಲಿಂದೀಂ ಮುದಿತಾಂ ವೀಕ್ಷ್ಯ ಪಪ್ರಚ್ಛುರ್ಗತಮತ್ಸರಾಃ ॥
ಅನುವಾದ
ಒಮ್ಮೆ ಪತಿಯ ವಿರಹದಿಂದ ವ್ಯಥೆಗೊಂಡಿದ್ದ ಬಹುಮಂದಿ ಕೃಷ್ಣಪತ್ನಿಯರು ಕಾಳಿಂದೀ (ಯಮುನಾ) ದೇವಿಯ ಬಳಿಗೆ ಹೋಗಿ ಆಕೆಯು ಮಾತ್ರ ಸಂತೋಷವಾಗಿಯೇ ಇರುವುದನ್ನು ಕಂಡು ಅಸೂಯೆಯಿಲ್ಲದ ಮನಸ್ಸಿನಿಂದ ಆಕೆಯನ್ನು ಪ್ರಶ್ನೆಮಾಡಿದರು. ॥8॥
(ಶ್ಲೋಕ - 9)
ಮೂಲಮ್ (ವಾಚನಮ್)
ಶ್ರೀಕೃಷ್ಣಪತ್ನ್ಯ ಊಚುಃ
ಮೂಲಮ್
ಯಥಾ ವಯಂ ಕೃಷ್ಣಪತ್ನ್ಯಸ್ತಥಾ ತ್ವಮಪಿ ಶೋಭನೇ ।
ವಯಂ ವಿರಹದುಃಖಾರ್ತಾಸ್ತ್ವಂ ನ ಕಾಲಿಂದಿ ತದ್ವದ ॥
ಅನುವಾದ
ಶ್ರೀಕೃಷ್ಣನ ಪತ್ನಿಯರು ಕೇಳಿದರು — ‘‘ಎಲೌ ಮಂಗಳಾಂಗಿಯೇ! ನಮ್ಮೆಲ್ಲರಂತೆಯೇ ನೀನೂ ಶ್ರೀಕೃಷ್ಣನ ಧರ್ಮಪತ್ನಿಯು. ಆದರೆ ನಾವೆಲ್ಲರೂ ವಿರಹಾಗ್ನಿಯಲ್ಲಿ ಬೆಂದುಹೋಗುತ್ತಿರುವಾಗ ನೀನೊಬ್ಬಳು ಮಾತ್ರ ಸಂತೋಷವಾಗಿದ್ದೀಯಲ್ಲ? ಇದಕ್ಕೆ ಕಾರಣವೇನು? ಹೇಳಮ್ಮಾ!’’ ॥9॥
(ಶ್ಲೋಕ - 10)
ಮೂಲಮ್
ತಚ್ಛ್ರುತ್ವಾ ಸ್ಮಯಮಾನಾ ಸಾ ಕಾಲಿಂದೀ ವಾಕ್ಯಮಬ್ರವೀತ್ ।
ಸಾಪತ್ನ್ಯಂ ವೀಕ್ಷ್ಯ ತತ್ತಾಸಾಂ ಕರುಣಾಪರಮಾನಸಾ ॥
ಅನುವಾದ
ಇದನ್ನು ಕೇಳಿ ಕಾಳಿಂದೀದೇವಿಗೆ ನಗೆ ಬಂತು. ಆದರೂ ಆಕೆಯು ಅವರೆಲ್ಲರೂ ತನಗೆ ಸವತಿಯರಾಗಿದ್ದರೂ ಸಹೋದರಿಯರಂತೆ ಭಾವಿಸಿ ಕರಗಿದ ಹೃದಯದಿಂದ ಅವರಿಗೆ ಉತ್ತರಿಸಿದಳು. ॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಕಾಲಿಂದ್ಯುವಾಚ
ಮೂಲಮ್
ಆತ್ಮಾರಾಮಸ್ಯ ಕೃಷ್ಣಸ್ಯ ಧ್ರುವಮಾತ್ಮಾಸ್ತಿ ರಾಧಿಕಾ ।
ತಸ್ಯಾ ದಾಸ್ಯಪ್ರಭಾವೇಣ ವಿರಹೋಸ್ಮಾನ್ನ ಸಂಸ್ಪೃಶೇತ್ ॥
ಅನುವಾದ
ಯಮುನೆಯು ಹೇಳಿದಳು — ‘‘ರಾಧಿಕಾದೇವಿಯು ಆತ್ಮಾರಾಮನಾಗಿರುವ ಶ್ರೀಕೃಷ್ಣಪರಮಾತ್ಮನಿಗೆ ಆತ್ಮಭೂತಳಾಗಿದ್ದಾಳೆ. ನಾನು ದಾಸಿಯಂತೆ ಆಕೆಯ ಸೇವೆಯನ್ನು ಮಾಡುತ್ತಿದ್ದೇನೆ. ಅದರ ಪ್ರಭಾವದಿಂದಲೇ ವಿರಹವು ನನ್ನನ್ನು ಮುಟ್ಟುತ್ತಿಲ್ಲ. ॥11॥
(ಶ್ಲೋಕ - 12)
ಮೂಲಮ್
ತಸ್ಯಾ ಏವಾಂಶವಿಸ್ತಾರಾಃ ಸರ್ವಾಃ ಶ್ರೀಕೃಷ್ಣನಾಯಿಕಾಃ ।
ನಿತ್ಯಸಂಭೋಗ ಏವಾಸ್ತಿ ತಸ್ಯಾಃ ಸಾಮ್ಮುಖ್ಯಯೋಗತಃ ॥
ಅನುವಾದ
ಆ ಭಗವಂತನ ಪತ್ನಿಯರೆಲ್ಲರೂ ರಾಧಾದೇವಿಯ ಅಂಶದ ವಿಸ್ತಾರಗಳೇ ಆಗಿರುವರು. ಶ್ರೀಕೃಷ್ಣಪರಮಾತ್ಮನೂ ಮತ್ತು ಶ್ರೀರಾಧಾದೇವಿಯೂ ಸದಾ ಪರಸ್ಪರ ಎದುರುಬದುರಾಗಿರುತ್ತಾರೆ. ಪರಸ್ಪರ ನಿತ್ಯ ಸಂಯೋಗದಲ್ಲಿದ್ದಾರೆ. ಆದುದರಿಂದ ರಾಧಾಸ್ವರೂಪದಲ್ಲಿ ಅಂಶತಃ ಇರುವ ಎಲ್ಲ ಶ್ರೀಕೃಷ್ಣ ಪತ್ನಿಯರೂ ಶ್ರೀಕೃಷ್ಣನ ನಿತ್ಯ ಸಂಯೋಗದ ಭಾಗ್ಯವನ್ನು ಪಡೆದೇ ಇರುತ್ತಾರೆ. ॥12॥
(ಶ್ಲೋಕ - 13)
ಮೂಲಮ್
ಸ ಏವ ಸಾ ಸ ಸೈವಾಸ್ತಿ ವಂಶೀ ತತ್ಪ್ರೇಮರೂಪಿಕಾ ।
ಶ್ರೀಕೃಷ್ಣನಖಚಂದ್ರಾಲಿಸಂಗಾಚ್ಚಂದ್ರಾವಲೀ ಸ್ಮೃತಾ ॥
ಅನುವಾದ
ಶ್ರೀಕೃಷ್ಣನೇ ರಾಧೆಯು ಮತ್ತು ರಾಧೆಯೇ ಶ್ರೀಕೃಷ್ಣನು. ಇವರಿಬ್ಬರ ಪ್ರೇಮವೇ ಕೊಳಲಿನ ರೂಪದಲ್ಲಿ ಬೆಳಗುತ್ತಿದೆ. ರಾಧೆಯ ಪ್ರೀತಿಯ ಗೆಳತಿಯಾದ ಚಂದ್ರಾವಳೀ ಎಂಬುವಳು ಶ್ರೀಕೃಷ್ಣನ ಚರಣನಖಗಳೆಂಬ ಚಂದ್ರನ ಸೇವೆಯಲ್ಲಿ ಮಿತಿಮೀರಿದ ಆಕಾಂಕ್ಷೆ-ಆಸಕ್ತಿಗಳನ್ನು ಹೊಂದಿರುವುದರಿಂದಲೇ ಚಂದ್ರಾವಲಿ ಎಂಬ ಹೆಸರಿನಿಂದ ಹೇಳಲ್ಪಡುವಳು. ॥13॥
(ಶ್ಲೋಕ - 14)
ಮೂಲಮ್
ರೂಪಾಂತರಮಗೃಹ್ಣಾನಾ ತಯೋಃ ಸೇವಾತಿಲಾಲಸಾ ।
ರುಕ್ಮಿಣ್ಯಾದಿಸಮಾವೇಶೋ ಮಯಾತ್ರೈವ ವಿಲೋಕಿತಃ ॥
ಅನುವಾದ
ಶ್ರೀರಾಧಾ ಮತ್ತು ಶ್ರೀಕೃಷ್ಣರ ಸೇವೆಯಲ್ಲೇ ಅವಳಿಗೆ ಹೆಚ್ಚಿನ ಪ್ರೀತಿ, ಆಸಕ್ತಿ ಇರುವುದರಿಂದ ಆಕೆಯು ಎಂದಿಗೂ ಬೇರೆ ಸ್ವರೂಪವನ್ನು ಧರಿಸುವುದಿಲ್ಲ. ನಾನು ಇಲ್ಲೇ ಶ್ರೀರಾಧಾದೇವಿಯಲ್ಲೇ ಶ್ರೀರುಕ್ಮಿಣಿ ಮುಂತಾದವರು ಸೇರಿಕೊಂಡಿರುವುದನ್ನು ನೋಡಿದ್ದೇನೆ. ॥14॥
(ಶ್ಲೋಕ - 15)
ಮೂಲಮ್
ಯುಷ್ಮಾಕಮಪಿ ಕೃಷ್ಣೇನ ವಿರಹೋ ನೈವ ಸರ್ವತಃ ।
ಕಿಂತು ಏವಂ ನ ಜಾನೀಥ ತಸ್ಮಾದ್ವ್ಯಾಕುಲತಾಮಿತಾಃ ॥
ಅನುವಾದ
ನಿಮಗೂ ಕೂಡ ಶ್ರೀಕೃಷ್ಣನಿಂದ ಸರ್ವಾಂಶದಲ್ಲಿಯೂ ಅಗಲಿಕೆಯಾಗಿಲ್ಲ. ಆದರೆ ನೀವು ಈ ರಹಸ್ಯವನ್ನು ಈ ರೂಪದಲ್ಲಿ ಅರಿತಿಲ್ಲದಿರುವುದರಿಂದ ಹೀಗೆಲ್ಲಾ ಇಷ್ಟು ಕಳವಳ ಪಡುತ್ತಿದ್ದೀರಿ. ॥15॥
(ಶ್ಲೋಕ - 16)
ಮೂಲಮ್
ಏವಮೇವಾತ್ರ ಗೋಪೀನಾಮಕ್ರೂರಾವಸರೇ ಪುರಾ ।
ವಿರಹಾಭಾಸ ಏವಾಸೀದುದ್ಧವೇನ ಸಮಾಹಿತಃ ॥
ಅನುವಾದ
ಹೀಗೆಯೇ ಈ ಹಿಂದೆ ಅಕ್ರೂರನು ಶ್ರೀಕೃಷ್ಣನನ್ನು ನಂದಗೋಕುಲದಿಂದ ಮಥುರೆಗೆ ಕರೆದು ಕೊಂಡುಹೋಗಲು ಬಂದಾಗ ಗೋಪಿಯರಲ್ಲಿ ತೋರಿದ ಶ್ರೀಕೃಷ್ಣವಿರಹವೂ ಕೂಡ ವಾಸ್ತವಿಕವಾದ ವಿರಹವಾಗಿರಲಿಲ್ಲ. ವಿರಹದ ಆಭಾಸಮಾತ್ರವೇ ಆಗಿತ್ತು. ಈ ವಿಷಯವು ತಿಳಿಯುವವರೆಗೆ ಅವರು ಅಗಲಿಕೆಯ ಕಷ್ಟವನ್ನು ಅನುಭವಿಸುತ್ತಿದ್ದರು. ಆದರೆ ಮಹಾತ್ಮನಾದ ಉದ್ಧವನು ಬಂದು ಸಮಾಧಾನವನ್ನು ಹೇಳಿ ದೊಡನೆಯೇ ಮೇಲೆ ಹೇಳಿದ ರಹಸ್ಯ ಅವರ ಅರಿವಿಗೆ ಬಂದಿತು. ॥16॥
(ಶ್ಲೋಕ - 17)
ಮೂಲಮ್
ತೇನೈವ ಭವತೀನಾಂ ಚೇದ್ಭವೇದತ್ರ ಸಮಾಗಮಃ ।
ತರ್ಹಿ ನಿತ್ಯಂ ಸ್ವಕಾಂತೇನ ವಿಹಾರಮಪಿ ಲಪ್ಸ್ಯಥ ॥
ಅನುವಾದ
ನಿಮಗೂ ಕೂಡ ಆ ಉದ್ಧವನ ಸಮಾಗಮದ ಭಾಗ್ಯವೇನಾದರೂ ಒದಗಿದರೆ ಆಗ ಪ್ರಿಯತಮನಾದ ಶ್ರೀಕೃಷ್ಣನ ನಿತ್ಯವಿಹಾರದ ಸುಖವನ್ನು ನೀವೂ ಅನುಭವಿಸುವಿರಿ.’’ ॥17॥
(ಶ್ಲೋಕ - 18)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಮುಕ್ತಾಸ್ತು ತಾಃ ಪತ್ನ್ಯಃ ಪ್ರಸನ್ನಾಂ ಪುನರಬ್ರುವನ್ ।
ಉದ್ಧವಾಲೋಕನೇನಾತ್ಮಪ್ರೇಷ್ಠಸಂಗಮಲಾಲಸಾಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಋಷಿವರ್ಯರೇ! ಕಾಳಿಂದೀದೇವಿಯು ಹೀಗೆ ತಿಳಿವಳಿಕೆ ನೀಡಲು ಆ ಕೃಷ್ಣಪತ್ನಿಯರ ಮನಸ್ಸಿನಲ್ಲಿ ‘ಯಾವುದಾದರೂ ಉಪಾಯದಿಂದ ಉದ್ಧವನ ದರ್ಶನವನ್ನು ಪಡೆಯಬೇಕು. ಇದರಿಂದ ನಮಗೆ ನಮ್ಮ ಪ್ರಿಯತಮನ ನಿತ್ಯಸಂಗಮದ ಸೌಭಾಗ್ಯವು ಸಿದ್ಧಿಸುವುದು. ಹೇಗಾದರೂ ಮಹಾತ್ಮನಾದ ಆ ಉದ್ಧವನ ದರ್ಶನವನ್ನು ಪಡೆಯಲೇಬೇಕು’ ಎಂಬ ದೃಢವಾದ ಆಸೆಯುಂಟಾಯಿತು. ಅವರು ಕಾಳಿಂದೀದೇವಿಗೆ ಹೀಗೆಂದರು. ॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ಶ್ರೀಕೃಷ್ಣಪತ್ನ್ಯ ಊಚುಃ
ಮೂಲಮ್
ಧನ್ಯಾಸಿ ಸಖಿ ಕಾಂತೇನ ಯಸ್ಯಾ ನೈವಾಸ್ತಿ ವಿಚ್ಯುತಿಃ ।
ಯತಸ್ತೇ ಸ್ವಾರ್ಥಸಂಸಿದ್ಧಿಸ್ತಸ್ಯಾ ದಾಸ್ಯೋ ಭಭೂವಿಮ ॥
ಅನುವಾದ
ಶ್ರೀಕೃಷ್ಣನ ಪತ್ನಿಯರು ಹೇಳಿದರು — ‘‘ಸಖಿ! ನೀನು ಧನ್ಯಳು. ಕಡುಧನ್ಯಳು. ಏಕೆಂದರೆ ನೀನು ಎಂದಿಗೂ ಪ್ರಾಣನಾಥನ ಅಗಲಿಕೆಯ ದುಃಖವನ್ನು ಹೊಂದುವುದಿಲ್ಲ. ಯಾವ ರಾಧಾದೇವಿಯ ಕೃಪೆಯಿಂದ ನಿನ್ನ ಇಷ್ಟಾರ್ಥವು ಈಡೇರಿತೋ ಆ ದೇವಿಗೆ ನಾವೂ ಈಗ ದಾಸಿಯರಾಗುವೆವು. ॥19॥
(ಶ್ಲೋಕ - 20)
ಮೂಲಮ್
ಪರಂತೂದ್ಧವಲಾಭೇ ಸ್ಯಾದಸ್ಮತ್ಸರ್ವಾರ್ಥಸಾಧನಮ್ ।
ತಥಾ ವದಸ್ವ ಕಾಲಿಂದಿ ತಲ್ಲಾಭೋಪಿ ಯಥಾ ಭವೇತ್ ॥
ಅನುವಾದ
ಮಹಾತ್ಮನಾದ ಉದ್ಧವನ ಸಮಾಗಮವಾದರೆ ನಮ್ಮ ಎಲ್ಲ ಇಷ್ಟಾರ್ಥಗಳೂ ಈಡೇರುವುದೆಂದು ಈಗತಾನೇ ಹೇಳಿದೆಯಲ್ಲವೇ? ಆದುದರಿಂದ ದಯೆಯಿಟ್ಟು ಆ ಉದ್ಧವನು ಅತಿಶೀಘ್ರವಾಗಿ ನಮಗೆ ದೊರೆಯಲು ಯಾವುದಾದರೊಂದು ಉಪಾಯವನ್ನು ನಮಗೆ ತಿಳಿಸು.’’ ॥20॥
(ಶ್ಲೋಕ - 21)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಮುಕ್ತಾ ತು ಕಾಲಿಂದೀ ಪ್ರತ್ಯುವಾಚಾಥ ತಾಸ್ತಥಾ ।
ಸ್ಮರಂತೀ ಕೃಷ್ಣಚಂದ್ರಸ್ಯ ಕಲಾಃ ಷೋಡಶರೂಪಿಣೀಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಅವರ ಆ ಮಾತನ್ನು ಕೇಳಿ ಕಾಳಿಂದೀದೇವಿಯು ಶ್ರೀಕೃಷ್ಣಪರಮಾತ್ಮನ ಹದಿನಾರು ಕಲೆಗಳನ್ನೂ ಸ್ಮರಿಸುತ್ತಾ ಅವರಿಗೆ ಹೀಗೆಂದಳು ॥21॥
(ಶ್ಲೋಕ - 22)
ಮೂಲಮ್
ಸಾಧನಭೂಮಿರ್ಬದರೀ ವ್ರಜತಾ ಕೃಷ್ಣೇನ ಮಂತ್ರಿಣೇ ಪ್ರೋಕ್ತಾ ।
ತತ್ರಾಸ್ತೇ ಸ ತು ಸಾಕ್ಷಾತ್ ತದ್ವಯುನಂ ಗ್ರಾಹಯನ್ಲ್ಲೋಕಾನ್ ॥
ಅನುವಾದ
‘‘ಗೆಳತಿಯರೇ! ಭಗವಾನ್ ಶ್ರೀಕೃಷ್ಣನು ತನ್ನ ಪರಂಧಾಮಕ್ಕೆ ತೆರಳಿದ ಸಂದರ್ಭದಲ್ಲಿ ‘ಅಪ್ಪಾ ಉದ್ಧವಾ! ಬದರಿ ಕಾಶ್ರಮವು ಸಾಧನಾಭೂಮಿಯು. ಆದುದರಿಂದ ನೀನು ನಿನ್ನ ಸಾಧನೆಯನ್ನು ಪೂರ್ಣಗೊಳಿಸಿಕೊಳ್ಳಲು ಅಲ್ಲಿಗೆ ಹೋಗು’ ಎಂದು ತನ್ನ ಮಂತ್ರಿ ಉದ್ಧವನಿಗೆ ತಿಳಿಸಿದ್ದನು. ಭಗವಂತನ ಆಜ್ಞೆಯಂತೆ ಮಹಾತ್ಮನಾದ ಉದ್ಧವನು ತನ್ನ ಸಾಕ್ಷಾತ್ಸ್ವರೂಪದಿಂದ ಬದರಿಕಾಶ್ರಮದಲ್ಲಿ ಬೆಳಗುತ್ತಿದ್ದಾನೆ. ಅಲ್ಲಿಗೆ ತತ್ತ್ವಜಿಜ್ಞಾಸುಗಳು ಯಾರು ಹೋದರೂ ಅವರಿಗೆ ಭಗವಂತನು ತನಗೆ ಉಪದೇಶಿಸಿದ್ದ ಜ್ಞಾನವನ್ನು ಅವನು ಉಪದೇಶ ಮಾಡುತ್ತಿರುತ್ತಾನೆ. ॥22॥
(ಶ್ಲೋಕ - 23)
ಮೂಲಮ್
ಲಭೂಮಿರ್ವ್ರಜಭೂಮಿಃ ದತ್ತಾ ತಸ್ಮೈಪುರೈವ ಸರಹಸ್ಯಮ್ ।
ಲಮಿಹ ತಿರೋಹಿತಂ ಸತ್ ತದಿಹೇದಾನೀಂ ಸ ಉದ್ಧವೋಲಕ್ಷ್ಯಃ ॥
ಅನುವಾದ
ವ್ರಜಭೂಮಿಯಾದರೋ ಸಾಧನೆಯ ಫಲರೂಪವಾದ ಭೂಮಿಯೇ ಆಗಿದೆ. ಇದನ್ನೂ ಕೂಡ ರಹಸ್ಯಗಳೊಡನೆ ಭಗವಂತನು ಮೊದಲೇ ಉದ್ಧವನಿಗೆ ತಿಳಿಸಿದ್ದನು. ಆದರೆ ಆ ಫಲ ಭೂಮಿಯು ಭಗವಂತನು ಅಂತರ್ಧಾನ ಹೊಂದಿದಾಗ ಆತ ಜೊತೆಯಲ್ಲಿ ತಾನೂ ಸ್ಥೂಲದೃಷ್ಟಿಗೆ ಮರೆಯಾಗಿಬಿಟ್ಟಿದೆ. ಆದ್ದರಿಂದ ಉದ್ಧವನೂ ಈಗ ಇಲ್ಲಿ ಪ್ರತ್ಯಕ್ಷನಾಗಿ ಕಾಣಲಾರನು. ॥23॥
(ಶ್ಲೋಕ - 24)
ಮೂಲಮ್
ಗೋವರ್ಧನಗಿರಿನಿಕಟೇ ಸಖೀಸ್ಥಲೇ ತದ್ರಜಃಕಾಮಃ ।
ತತ್ರತ್ಯಾಂಕುರವಲ್ಲೀರೂಪೇಣಾಸ್ತೇ ಸ ಉದ್ಧವೋ ನೂನಮ್ ॥
ಅನುವಾದ
ಆದರೂ ಉದ್ಧವನ ದರ್ಶನವನ್ನು ಪಡೆಯಲು ಸಾಧ್ಯವಾಗುವ ಒಂದು ಸ್ಥಾನವಿದೆ. ಗೋವರ್ಧನ ಪರ್ವತದ ಬಳಿ ಗೋಪಿಕಾ ಸ್ತ್ರೀಯರೊಡನೆ ಭಗವಂತನು ಅವರೊಡನೆ ವಿಹರಿಸಿದ ಪವಿತ್ರವಾದ ಸ್ಥಳವಿದೆ. ಅಲ್ಲಿಯ ಬಳ್ಳಿ-ಚಿಗುರುಗಳ ರೂಪದಲ್ಲಿ ಉದ್ಧವನು ಅವಶ್ಯವಾಗಿಯೂ ಅಲ್ಲಿರುತ್ತಾನೆ. ಲತೆಗಳ ರೂಪದಲ್ಲಿ ಆತನು ‘ಭಗವಂತನಿಗೆ ಪ್ರಿಯತಮೆಯರಾದ ಗೋಪಿಕಾಸ್ತ್ರೀಯರ ಪಾದಧೂಳಿಯು ತನ್ನ ಮೇಲೆ ಬೀಳಲಿ’ ಎಂಬ ಪವಿತ್ರವಾದ ಆಶಯದಿಂದ ಅಲ್ಲಿರುವನು. ॥24॥
(ಶ್ಲೋಕ - 25)
ಮೂಲಮ್
ಆತ್ಮೋತ್ಸವರೂಪತ್ವಂ ಹರಿಣಾ ತಸ್ಮೈ ಸಮರ್ಪಿತಂ ನಿಯತಮ್ ।
ತಸ್ಮಾಸ್ತತ್ರ ಸ್ಥಿತ್ವಾ ಕುಸುಮಸರಃಪರಿಸರೇ ಸವಜ್ರಾಭಿಃ ॥
ಅನುವಾದ
ಉದ್ಧವನ ವಿಷಯದಲ್ಲಿ ಮತ್ತೊಂದು ನಿಶ್ಚಿತವಾದ ವಿಷಯವಿದೆ. ಉದ್ಧವನಿಗೆ ಭಗವಂತನು ಉತ್ಸವಸ್ವರೂಪವನ್ನು ಕೊಟ್ಟಿರುವನು. ಭಗವಂತನ ಉತ್ಸವವೆಲ್ಲವೂ ಉದ್ಧವನ ಒಂದು ಅಂಗವಾಗುತ್ತವೆ. ಅವನು ಆ ಉತ್ಸವದಿಂದ ಎಂದಿಗೂ ಬೇರ್ಪಡುವುದಿಲ್ಲ. ಆದುದರಿಂದ ಈಗ ನೀವು ವಜ್ರನಾಭನನ್ನು ಜೊತೆಯಲ್ಲಿ ಕರೆದುಕೊಂಡು ಅಲ್ಲಿಗೆ ಹೋಗಿ ಕುಸುಮ ಸರೋವರದ ಬಳಿ ನಿಲ್ಲಿರಿ. ॥25॥
(ಶ್ಲೋಕ - 26)
ಮೂಲಮ್
ವೀಣಾವೇಣುಮೃದಂಗೈಃ ಕೀರ್ತನಕಾವ್ಯಾದಿಸರಸಸಂಗೀತೈಃ ।
ಉತ್ಸವ ಆರಬ್ಧವ್ಯೋ ಹರಿರತಲೋಕಾನ್ ಸಮಾನಾಯ್ಯ ॥
ಅನುವಾದ
ಭಗವದ್ಭಕ್ತರ ಮಂಡಲಿಯನ್ನು ಸೇರಿಸಿಕೊಂಡು ವೀಣೆ, ಕೊಳಲು ಮತ್ತು ಮೃದಂಗವೇ ಮುಂತಾದ ವಾದ್ಯಗಳೊಡನೆ ಭಗವಂತನ ನಾಮಗಳ ಮತ್ತು ಲೀಲೆಗಳ ಸಂಕೀರ್ತನೆ, ಭಗವಂತನಿಗೆ ಸಂಬಂಧಪಟ್ಟ ಕಾವ್ಯ-ಕಥೆಗಳ ಶ್ರವಣ ಮತ್ತು ಭಗವಂತನ ಗುಣಗಳ ಗಾನಗಳಿಂದ ಕೂಡಿದ ಸರಸ ಸಂಗೀತದಿಂದ ಉತ್ಸವವನ್ನು ಪ್ರಾರಂಭಿಸಿರಿ. ॥26॥
(ಶ್ಲೋಕ - 27)
ಮೂಲಮ್
ತತ್ರೋದ್ಧವಾವಲೋಕೋ ಭವಿತಾ ನಿಯತಂ ಮಹೋತ್ಸವೇ ವಿತತೇ ।
ಯೌಷ್ಮಾಕೀಣಾಮಭಿಮತಸಿದ್ಧಿಂ ಸವಿತಾ ಸ ಏವ ಸವಿತಾನಾಮ್ ॥
ಅನುವಾದ
ಹೀಗೆ ಆ ಮಹೋತ್ಸವವು ವಿಸ್ತರಿಸಲ್ಪಟ್ಟರೆ ನಿಶ್ಚಯವಾಗಿಯೂ ನಿಮಗೆ ಮಹಾತ್ಮನಾದ ಉದ್ಧವನ ದರ್ಶನವು ಅಲ್ಲಿ ಆಗುವುದು. ಅವನೇ ನಿಮ್ಮ ಮನೋರಥವನ್ನು ಚೆನ್ನಾಗಿ ಪೂರ್ಣಗೊಳಿಸುವನು.’’* ॥27॥
ಟಿಪ್ಪನೀ
- ಸಂಸ್ಕೃತಭಾಷೆಯಲ್ಲಿ ಉದ್ಧವ ಎನ್ನುವ ಶಬ್ದಕ್ಕೆ ಉತ್ಸವ ಎಂಬ ಅರ್ಥವೂ ಇದೆ. ‘ಮಹ ಉದ್ಧವ ಉತ್ಸವಃ’ (ಅಮರಕೋಶ)
(ಶ್ಲೋಕ - 28)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತಿ ಶ್ರುತ್ವಾ ಪ್ರಸನ್ನಾಸ್ತಾಃ ಕಾಲಿಂದೀಮಭಿವಂದ್ಯ ತತ್ ।
ಕಥಯಾಮಾಸುರಾಗತ್ಯ ವಜ್ರಂ ಪ್ರತಿ ಪರೀಕ್ಷಿತಮ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ‘‘ಎಲೈ ಮುನಿಗಳೇ! ಯಮುನಾದೇವಿಯು ಹೇಳಿದ ಮಾತುಗಳನ್ನು ಕೇಳಿ ಶ್ರೀಕೃಷ್ಣನ ಪತ್ನಿಯರಿಗೆ ತುಂಬಾ ಸಂತೋಷವುಂಟಾಯಿತು. ಅವರು ಯಮುನಾದೇವಿಗೆ ನಮಸ್ಕಾರ ಮಾಡಿ ಅಲ್ಲಿಂದ ಹಿಂದಿರುಗಿ ವಜ್ರನಾಭನಿಗೂ ಪರೀಕ್ಷಿದ್ರಾಜನಿಗೂ ಆ ಎಲ್ಲ ಮಾತುಗಳನ್ನೂ ತಿಳಿಸಿದರು. ॥28॥
(ಶ್ಲೋಕ - 29)
ಮೂಲಮ್
ವಿಷ್ಣುರಾತಸ್ತು ತಚ್ಛ್ರುತ್ವಾ ಪ್ರಸನ್ನಸ್ತದ್ಯುತಸ್ತದಾ ।
ತತ್ರೈವಾಗತ್ಯ ತತ್ಸರ್ವಂ ಕಾರಯಾಮಾಸ ಸತ್ವರಮ್ ॥
ಅನುವಾದ
ಇದನ್ನು ಕೇಳಿ ಸಂತುಷ್ಟನಾದ ಪರೀಕ್ಷಿದ್ರಾಜನು ವಜ್ರನಾಭನೊಡನೆಯೂ ಶ್ರೀಕೃಷ್ಣಪತ್ನಿಯರೊಡನೆಯೂ ಒಡನೆಯೇ ಆ ನಿರ್ದಿಷ್ಟ ಸ್ಥಳಕ್ಕೆ ಹೋಗಿ ಯಮುನಾದೇವಿಯು ಹೇಳಿದಂತೆಯೇ ಎಲ್ಲವನ್ನೂ ಮಾಡಿದನು. ॥29॥
(ಶ್ಲೋಕ - 30)
ಮೂಲಮ್
ಗೋವರ್ಧನಾದದೂರೇಣ ವೃಂದಾರಣ್ಯೇ ಸಖೀಸ್ಥಲೇ ।
ಪ್ರವೃತ್ತಃ ಕುಸುಮಾಂಭೋಧೌ ಕೃಷ್ಣಸಂಕೀರ್ತನೋತ್ಸವಃ ॥
ಅನುವಾದ
ಗೋವರ್ಧನ ಪರ್ವತಕ್ಕೆ ಹತ್ತಿರದಲ್ಲಿರುವ ವೃಂದಾವನದ ಸಖೀವಿಹಾರ ಸ್ಥಳವಾದ ಕುಸುಮ ಸರೋವರ ಪ್ರದೇಶದಲ್ಲಿ ಶ್ರೀಕೃಷ್ಣ ಸಂಕೀರ್ತನೋತ್ಸವವು ಪ್ರಾರಂಭಿಸಲ್ಪಟ್ಟಿತು. ॥30॥
(ಶ್ಲೋಕ - 31)
ಮೂಲಮ್
ವೃಷಭಾನುಸುತಾಕಾಂತವಿಹಾರೇ ಕೀರ್ತನಶ್ರಿಯಾ ।
ಸಾಕ್ಷಾದಿವ ಸಮಾವೃತ್ತೇ ಸರ್ವೇನನ್ಯದೃಶೋಭವನ್ ॥
ಅನುವಾದ
ವೃಷಭಾನು ಕುಮಾರಿಯಾದ ಭಗವತೀ ಶ್ರೀರಾಧಾದೇವಿ ಮತ್ತು ಭಗವಾನ್ ಶ್ರೀಕೃಷ್ಣರ ಆ ವಿಹಾರ ಭೂಮಿಯು ಸಂಕೀರ್ತನದ ಕಾಂತಿಯಿಂದ ಬೆಳಗಲು, ಅಲ್ಲಿದ್ದ ಭಕ್ತಜನರೆಲ್ಲರೂ ಏಕಾಗ್ರಚಿತ್ತರಾದರು. ಅವರ ಮನೋವೃತ್ತಿಯು ಆ ಉತ್ಸವದಲ್ಲಿಯೇ ನೆಟ್ಟುಕೊಂಡಿತು. ॥31॥
(ಶ್ಲೋಕ - 32)
ಮೂಲಮ್
ತತಃ ಪಶ್ಯತ್ಸು ಸರ್ವೇಷು ತೃಣಗುಲ್ಮಲತಾಚಯಾತ್ ।
ಆಜಗಾಮೋದ್ಧವಃ ಸ್ರಗ್ವೀ ಶ್ಯಾಮಃ ಪೀತಾಂಬರಾವೃತಃ ॥
(ಶ್ಲೋಕ - 33)
ಮೂಲಮ್
ಗುಂಜಾಮಾಲಾಧರೋ ಗಾಯನ್ವಲ್ಲವೀವಲ್ಲಭಂ ಮುಹುಃ ।
ತದಾಗಮನತೋ ರೇಜೇ ಭೃಶಂ ಸಂಕೀರ್ತನೋತ್ಸವಃ ॥
(ಶ್ಲೋಕ - 34)
ಮೂಲಮ್
ಚಂದ್ರಿಕಾಗಮತೋ ಯದ್ವತ್ ಸ್ಫಾಟಿಕಾಟ್ಟಾಲಭೂಮಣಿಃ ।
ಅಥ ಸರ್ವೇ ಸುಖಾಂಭೋಧೌ ಮಗ್ನಾಃ ಸರ್ವಂ ವಿಸಸ್ಮರುಃ ॥
ಅನುವಾದ
ಅನಂತರ ಎಲ್ಲರೂ ನೋಡುತ್ತಿರುವಂತೆಯೇ ಅಲ್ಲಿನ ಹುಲ್ಲು-ಪೊದೆ ಬಳ್ಳಿಗಳ ಸಮೂಹದಿಂದ ಮಹಾತ್ಮನಾದ ಉದ್ಧವನು ಪ್ರಕಟಗೊಂಡು ಎಲ್ಲರ ಮುಂದೆಯೂ ಕಾಣಿಸಿಕೊಂಡನು. ಶ್ಯಾಮಲವರ್ಣದ ದೇಹಕಾಂತಿ, ಪೀತಾಂಬರದ ಉಡುಗೆ, ಕತ್ತಿನಲ್ಲಿ ವನಮಾಲೆ ಮತ್ತು ಗುಲಗಂಜಿಗಳ ಮಾಲೆಯಿಂದ ಅಲಂಕೃತನಾಗಿ ಬೆಳಗುತ್ತಿದ್ದ ಆ ಮಹಾಪುರುಷನ ಮುಖದಿಂದ ಗೋಪೀವಲ್ಲಭಗೋವಿಂದನ ಮಧುರ ಲೀಲೆಗಳ ಗಾನವು ಮತ್ತೆ-ಮತ್ತೆ ಹೊರಹೊಮ್ಮುತ್ತಿತ್ತು. ಉದ್ಧವನ ಆಗಮನದಿಂದ ಸಂಕೀರ್ತನೋತ್ಸವವು ಕಳೆಯೇರಿತು. ಸ್ಫಟಿಕ ಮಣಿಯಿಂದ ರಚಿತವಾದ ದಿವ್ಯಭವನದ ಉಪ್ಪರಿಗೆಯ ಮೇಲೆ ಬೆಳದಿಂಗಳು ಬಿದ್ದಾಗ ಅದರ ಕಾಂತಿಯು ಬಹುಪಾಲು ವೃದ್ಧಿಹೊಂದುವಂತೆ, ಉದ್ಧವನ ಆಗಮನದಿಂದ ಆ ಉತ್ಸವದ ಶೋಭೆಯೂ ಬಹುಗುಣವಾಗಿ ಹೆಚ್ಚಿತು. ಆಗ ಎಲ್ಲರೂ ಸುಖ ಸಮುದ್ರದಲ್ಲಿ ಮುಳುಗಿ ಎಲ್ಲವನ್ನೂ ಮರೆತು ಬಿಟ್ಟರು. ॥32-34॥
(ಶ್ಲೋಕ - 35)
ಮೂಲಮ್
ಕ್ಷಣೇನಾಗತವಿಜ್ಞಾನಾ ದೃಷ್ಟ್ವಾ ಶ್ರೀಕೃಷ್ಣರೂಪಿಣಮ್ ।
ಉದ್ಧವಂ ಪೂಜಯಾಂಚಕ್ರುಃ ಪ್ರತಿಲಬ್ಧ ಮನೋರಥಾಃ ॥
ಅನುವಾದ
ಕೊಂಚ ಹೊತ್ತಿನನಂತರ ಪ್ರಜ್ಞೆ ಬಂದಾಗ ಶ್ರೀಕೃಷ್ಣರೂಪಿಯಾಗಿದ್ದ ಉದ್ಧವನನ್ನು ನೋಡಿ ಅವರ ಮನೋರಥವು ಈಡೇರಿತು. ಅವರು ಆತನನ್ನು ಚೆನ್ನಾಗಿ ಪೂಜಿಸಿದರು.’’ ॥35॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂ ಸಂಹಿತಾಯಾಂ ದ್ವಿತೀಯೇ ವೈಷ್ಣವಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಗೋವರ್ಧನಪರ್ವತಸಮೀಪೇ ಪರೀಕ್ಷಿದಾದೀನಾಮುದ್ಧವದರ್ಶನವರ್ಣನಂ ನಾಮ ದ್ವಿತೀಯೋಧ್ಯಾಯಃ ॥2॥