೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ಪರೀಕ್ಷಿದ್ರಾಜ ಮತ್ತು ವಜ್ರನಾಭರ ಸಮಾಗಮ, ಶಾಂಡಿಲ್ಯಮುನಿಯು ಭಗವಂತನ ಲೀಲೆಯ ರಹಸ್ಯವನ್ನೂ ಮತ್ತು ವ್ರಜಭೂಮಿಯ ಮಹತ್ತ್ವವನ್ನೂ ವರ್ಣಿಸಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ವ್ಯಾಸ ಉವಾಚ

ಮೂಲಮ್

ಶ್ರೀಸಚ್ಚಿದಾನಂದಘನಸ್ವರೂಪಿಣೇ
ಕೃಷ್ಣಾಯ ಚಾನಂತಸುಖಾಭಿವರ್ಷಿಣೇ ।
ವಿಶ್ವೋದ್ಭವಸ್ಥಾನನಿರೋಧಹೇತವೇ
ನುಮೋ ವಯಂ ಭಕ್ತಿರಸಾಪ್ತಯೇನಿಶಮ್ ॥

ಅನುವಾದ

ಮಹರ್ಷಿ ವೇದವ್ಯಾಸರು ಹೇಳುತ್ತಾರೆ — ‘‘ನಿತ್ಯ ನಿರಂತರವಾದ ಭಕ್ತಿರಸಾನುಭವವನ್ನು ಪಡೆಯುವುದಕ್ಕಾಗಿ ನಾವು ಶ್ರೀಸಚ್ಚಿದಾನಂದಘನಸ್ವರೂಪಿಯೂ, ಅನಂತವಾದ ಆನಂದದ ಮಳೆಗರೆಯುವವನೂ ಮತ್ತು ವಿಶ್ವದ ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣನೂ ಆಗಿರುವ ಶ್ರೀಕೃಷ್ಣ ಪರಮಾತ್ಮನನ್ನು ಸದಾಕಾಲ ನಮಸ್ಕರಿಸುತ್ತೇವೆ.’’ ॥1॥

(ಶ್ಲೋಕ - 2)

ಮೂಲಮ್

ನೈಮಿಷೇ ಸೂತಮಾಸೀನಮಭಿವಾದ್ಯ ಮಹಾಮತಿಮ್ ।
ಕಥಾಮೃತರಸಾಸ್ವಾದಕುಶಲಾ ಋಷಯೋಬ್ರುವನ್ ॥

ಅನುವಾದ

ಶೌನಕಾದಿಮಹರ್ಷಿಗಳು ಶ್ರೀಭಗವಂತನ ಕಥೆಯ ರಸವನ್ನು ಸವಿಯುವುದರಲ್ಲಿ ಕುಶಲರು. ಈ ಸವಿಯನ್ನು ಪಡೆಯುವುದಕ್ಕಾಗಿ ಅವರು ನೈಮಿಷಾರಣ್ಯದಲ್ಲಿ ಕುಳಿತಿದ್ದ ಮಹಾತ್ಮರಾದ ಸೂತಪುರಾಣಿಕರ ಬಳಿಗೆ ಹೋಗಿ ಅವರಿಗೆ ನಮಸ್ಕಾರಮಾಡಿ ಹೀಗೆ ಪ್ರಶ್ನಿಸಿದರು ॥2॥

(ಶ್ಲೋಕ - 3)

ಮೂಲಮ್ (ವಾಚನಮ್)

ಋಷಯ ಊಚುಃ

ಮೂಲಮ್

ವಜ್ರಂ ಶ್ರೀಮಾಥುರೇ ದೇಶೇ ಸ್ವಪೌತ್ರಂ ಹಸ್ತಿನಾಪುರೇ ।
ಅಭಿಷಿಚ್ಯ ಗತೇ ರಾಜ್ಞಿ ತೌ ಕಥಂ ಕಿಂ ಚ ಚಕ್ರತುಃ ॥

ಅನುವಾದ

ಶೌನಕಾದಿ ಋಷಿಗಳು ಕೇಳಿದರು — ‘‘ಎಲೈ ಮಹಾತ್ಮರೇ! ಧರ್ಮರಾಜ ಯುಧಿಷ್ಠಿರನು ಅನಿರುದ್ಧನ ಪುತ್ರನಾದ ವಜ್ರನಾಭನನ್ನು ಶ್ರೀಮಥುರಾಮಂಡಲದಲ್ಲಿಯೂ ತನ್ನ ಮೊಮ್ಮಗನಾದ ಪರೀಕ್ಷಿತನನ್ನು ಹಸ್ತಿನಾವತಿಯಲ್ಲೂ ಪಟ್ಟದಲ್ಲಿ ಕುಳ್ಳಿರಿಸಿ ಮಹಾಪ್ರಸ್ಥಾನಮಾಡಿ ಹಿಮಾಲಯಕ್ಕೆ ಹೊರಟು ಹೋದನಷ್ಟೇ! ಅನಂತರ ಮಹಾರಾಜವಜ್ರನಾಭನೂ, ಮಹಾರಾಜ ಪರೀಕ್ಷಿತನೂ ಏನೇನು ಕೆಲಸವನ್ನು ಮಾಡಿದರು? ಹೇಗೆ ಮಾಡಿದರು? ಎಂಬುದನ್ನು ತಿಳಿಸಿರಿ.’’ ಮಹರ್ಷಿಗಳ ಪ್ರಶ್ನೆಗೆ ಉತ್ತರಿಸುತ್ತಾ ಸೂತ ಪುರಾಣಿಕರು ಹೀಗೆಂದರು ॥3॥

(ಶ್ಲೋಕ - 4)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ನಾರಾಯಣಂ ನಮಸ್ಕೃತ್ಯ ನರಂ ಚೈವ ನರೋತ್ತಮಮ್ ।
ದೇವೀಂ ಸರಸ್ವತೀಂ ವ್ಯಾಸಂ ತತೋ ಜಯಮುದೀರಯೇತ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ‘‘ಭಗವಾನ್ ನಾರಾಯಣನನ್ನೂ ನರೋತ್ತಮನಾದ ನರಮಹರ್ಷಿಯನ್ನೂ ಶ್ರೀಸರಸ್ವತೀ ದೇವಿಯನ್ನೂ ಮಹರ್ಷಿವ್ಯಾಸರನ್ನೂ ನಮಸ್ಕರಿಸಿ ಶುದ್ಧಸತ್ತ್ವನಾಗಿ ಭಗವತ್ತತ್ತ್ವವನ್ನು ಪ್ರಕಾಶಪಡಿಸುವ ಇತಿಹಾಸ ಪುರಾಣರೂಪವಾದ ‘ಜಯ’ ಎಂಬುದನ್ನು ಹೇಳಬೇಕು. ॥4॥

(ಶ್ಲೋಕ - 5)

ಮೂಲಮ್

ಮಹಾಪಥಂ ಗತೇ ರಾಜ್ಞಿ ಪರೀಕ್ಷಿತ್ ಪೃಥಿವೀಪತಿಃ ।
ಜಗಾಮ ಮಥುರಾಂ ವಿಪ್ರಾ ವಜ್ರನಾಭದಿದೃಕ್ಷಯಾ ॥

ಅನುವಾದ

ಎಲೈ ಮಹರ್ಷಿಗಳೇ! ಧರ್ಮರಾಜನೇ ಮುಂತಾದವರು ಸ್ವರ್ಗಾರೋಹಣಕ್ಕಾಗಿ ಹೊರಟುಹೋದ ಬಳಿಕ ಪರೀಕ್ಷಿನ್ಮಹಾರಾಜನು ಒಂದುದಿನ ವಜ್ರನಾಭನನ್ನು ಕಂಡು ಬರೋಣವೆಂದು ಮಥುರಾನಗರಿಗೆ ಹೋದನು. ॥5॥

(ಶ್ಲೋಕ - 6)

ಮೂಲಮ್

ಪಿತೃವ್ಯಮಾಗತಂ ಜ್ಞಾತ್ವಾ ವಜ್ರಃ ಪ್ರೇಮಪರಿಪ್ಲುತಃ ।
ಅಭಿಗಮ್ಯಾಭಿವಾದ್ಯಾಥ ನಿನಾಯ ನಿಜಮಂದಿರಮ್ ॥

ಅನುವಾದ

ತನ್ನ ತಂದೆ-ಚಿಕ್ಕಪ್ಪಂದಿರಿಗೆ ಸಮಾನನಾಗಿದ್ದ ಪರೀಕ್ಷಿತನು ಬಂದಿರುವನೆಂಬುದನ್ನು ಕೇಳಿ ವಜ್ರನಾಭನು ಪ್ರೀತಿತುಂಬಿದ ಮನಸ್ಸುಳ್ಳವನಾಗಿ ಆತನ ಬಳಿಗೆ ಹೋಗಿ ನಮಸ್ಕಾರಮಾಡಿ ಆತನನ್ನು ತನ್ನ ಅರಮನೆಗೆ ಕರೆದುಕೊಂಡು ಹೋದನು. ॥6॥

(ಶ್ಲೋಕ - 7)

ಮೂಲಮ್

ಪರಿಷ್ವಜ್ಯ ಸ ತಂ ವೀರಃ ಕೃಷ್ಣೈಕಗತಮಾನಸಃ ।
ರೋಹಿಣ್ಯಾದ್ಯಾ ಹರೇಃ ಪತ್ನೀರ್ವವಂದಾಯತನಾಗತಃ ॥

ಅನುವಾದ

ಮಹಾವೀರನಾದ ಪರೀಕ್ಷಿತನು ಆತನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು ಅಂತಃಪುರಕ್ಕೆ ಹೋಗಿ ಅಲ್ಲಿ ರೋಹಿಣಿಯೇ ಮುಂತಾದ ಶ್ರೀಕೃಷ್ಣನ ಪತ್ನಿಯರಿಗೆ ನಮಸ್ಕಾರಮಾಡಿದನು. ॥7॥

(ಶ್ಲೋಕ - 8)

ಮೂಲಮ್

ತಾಭಿಃ ಸಂಮಾನಿತೋತ್ಯರ್ಥಂ ಪರೀಕ್ಷಿತ್ ಪೃಥಿವೀಪತಿಃ ।
ವಿಶ್ರಾಂತಃ ಸುಖಮಾಸೀನೋ ವಜ್ರನಾಭಮುವಾಚ ಹ ॥

ಅನುವಾದ

ಅವರಿಂದ ತುಂಬಾ ಸಮ್ಮಾನಿಸಲ್ಪಟ್ಟ ಮಹಾರಾಜ ಪರೀಕ್ಷಿತನು ವಿಶ್ರಾಂತಿಪಡೆದು ಸುಖವಾಗಿ ಕುಳಿತಿದ್ದಾಗ ವಜ್ರನಾಭನಿಗೆ ಹೀಗೆಂದನು ॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಪರೀಕ್ಷಿದುವಾಚ

ಮೂಲಮ್

ತಾತ ತ್ವತ್ಪಿತೃಭಿರ್ನೂನಮಸ್ಮತ್ಪಿತೃಪಿತಾಮಹಾಃ ।
ಉದ್ಧೃತಾ ಭೂರಿದುಃಖೌಘಾದಹಂ ಚ ಪರಿರಕ್ಷಿತಃ ॥

ಅನುವಾದ

ಪರೀಕ್ಷಿತ ಮಹಾರಾಜನು ಕೇಳಿದನು — ‘‘ಮಗೂ ವಜ್ರಕುಮಾರ! ನಿನ್ನ ತಂದೆ-ತಾತಂದಿರು ನನ್ನ ತಾತಂದಿರಿಗೆ ನಿಜವಾಗಿಯೂ ಎಷ್ಟು ಉಪಕಾರ ಮಾಡಿದರೆಂಬುದನ್ನು ವರ್ಣಿಸಲಾಗುವುದಿಲ್ಲ. ಅವರು ನನ್ನ ತಂದೆ-ತಾತಂದಿರನ್ನು ಮಹಾದುಃಖರಾಶಿಯಿಂದ ಮೇಲೆತ್ತಿದರು. ನನ್ನ ಪ್ರಾಣವನ್ನೂ ಕಾಪಾಡಿದರು. ॥9॥

(ಶ್ಲೋಕ - 10)

ಮೂಲಮ್

ನ ಪಾರಯಾಮ್ಯಹಂ ತಾತ ಸಾಧು ಕೃತ್ವೋಪಕಾರತಃ ।
ತ್ವಾಮತಃ ಪ್ರಾರ್ಥಯಾಮ್ಯಂಗ ಸುಖಂ ರಾಜ್ಯೇನುಯುಜ್ಯತಾಮ್ ॥

ಅನುವಾದ

ಅವರು ಮಾಡಿದ ಉಪಕಾರಕ್ಕೆ ಬದಲಾಗಿ ನಾನು ಏನು ಮಾಡಿದರೂ ಸಾಲ ತೀರದು. ಆದುದರಿಂದ ನಾನು ನಿನ್ನಲ್ಲಿ ಒಂದು ಪ್ರಾರ್ಥನೆ ಮಾಡುತ್ತೇನೆ. ಅದನ್ನು ನಡೆಸಿಕೊಡು. ನೀನು ರಾಜ್ಯದಲ್ಲಿ ಸುಖವಾಗಿ ಜೀವನ ನಡೆಸುತ್ತಿರು. ॥10॥

(ಶ್ಲೋಕ - 11)

ಮೂಲಮ್

ಕೋಶಸೈನ್ಯಾದಿಜಾ ಚಿಂತಾ ತಥಾರಿದಮನಾದಿಜಾ ।
ಮನಾಗಪಿ ನ ಕಾರ್ಯಾ ತೇ ಸುಸೇವ್ಯಾಃ ಕಿಂತು ಮಾತರಃ ॥

ಅನುವಾದ

ಕೋಶ- ಸೈನ್ಯಾದಿಗಳನ್ನು ನೋಡಿಕೊಳ್ಳುವುದು ಮತ್ತು ಶತ್ರುಗಳನ್ನು ಅಡಗಿಸುವುದು ಇವೇ ಮುಂತಾದ ಕಷ್ಟವಾದ ಕೆಲಸಗಳ ಬಗೆಗೆ ಸ್ವಲ್ಪವೂ ಚಿಂತಿಸಬೇಡ. ನಿನ್ನ ತಾಯಂದಿರ ಸೇವೆಯನ್ನು ಮಾಡುತ್ತಿರು. ॥11॥

(ಶ್ಲೋಕ - 12)

ಮೂಲಮ್

ನಿವೇದ್ಯ ಮಯಿ ಕರ್ತವ್ಯಂ ಸರ್ವಾಧಿಪರಿವರ್ಜನಮ್ ।
ಶ್ರುತ್ವೈತತ್ಪರಮಪ್ರೀತೋ ವಜ್ರಸ್ತಂ ಪ್ರತ್ಯುವಾಚ ಹ ॥

ಅನುವಾದ

ಅಷ್ಟೇ ಸಾಕು. ರಾಜ್ಯ, ಕೋಶ, ಶತ್ರುಜಯಾದಿ ಕಾರ್ಯಗಳೆಲ್ಲವನ್ನೂ ನನಗೆ ಒಪ್ಪಿಸಿ ಯಾವ ಚಿಂತೆಯೂ ಇಲ್ಲದೇ ಸುಖವಾಗಿರು.’’ ಪರೀಕ್ಷಿ ದ್ರಾಜನ ಈ ಪ್ರಿಯವಾದ ಮಾತುಗಳನ್ನು ಕೇಳಿ ತುಂಬಾ ಸಂತೋಷಗೊಂಡ ಮಹಾರಾಜ ವಜ್ರನಾಭನು ಪರೀಕ್ಷಿತ ರಾಜನಲ್ಲಿ ಇಂತೆಂದನು ॥12॥

(ಶ್ಲೋಕ - 13)

ಮೂಲಮ್ (ವಾಚನಮ್)

ವಜ್ರನಾಭ ಉವಾಚ

ಮೂಲಮ್

ರಾಜನ್ನುಚಿತಮೇತತ್ತೇ ಯದಸ್ಮಾಸು ಪ್ರಭಾಷತೇ ।
ತ್ವತ್ಪಿತೋಪಕೃತಶ್ಚಾಹಂ ಧನುರ್ವಿದ್ಯಾಪ್ರದಾನತಃ ॥

ಅನುವಾದ

ವಜ್ರನಾಭನು ಹೇಳಿದನು — ‘‘ಮಹಾರಾಜ! ನೀನು ಹೇಳಿದ ಮಾತು ನಿನ್ನ ಸೌಹಾರ್ದಕ್ಕೆ, ಸಾಮರ್ಥ್ಯಕ್ಕೆ, ಸೌಜನ್ಯ, ಬಂಧು ಪ್ರಿಯತೆಗಳಿಗೆ ಅನುಗುಣವಾಗಿಯೇ ಇದೆ. ನಿನ್ನ ತಂದೆಯೂ ಕೂಡ ನನಗೆ ಧನುರ್ವಿದ್ಯೆಯನ್ನು ಉಪದೇಶ ಮಾಡಿ ಪರಮೋಪಕಾರ ಮಾಡಿದ್ದಾನೆ. ॥13॥

(ಶ್ಲೋಕ - 14)

ಮೂಲಮ್

ತಸ್ಮಾನ್ನಾಲ್ಪಾಪಿ ಮೇ ಚಿಂತಾ ಕ್ಷಾತ್ರಂ ದೃಢಮುಪೇಯುಷಃ ।
ಕಿನ್ತ್ವೇಕಾ ಪರಮಾ ಚಿಂತಾ ತತ್ರ ಕಿಂಚಿದ್ವಿಚಾರ್ಯತಾಮ್ ॥

ಅನುವಾದ

ಆತನ ಕೃಪೆಯಿಂದ ನನ್ನಲ್ಲಿ ಕ್ಷತ್ರಿಯೋಚಿತವಾದ ಶೌರ್ಯ-ಶಕ್ತಿಗಳು ತುಂಬಿವೆ. ಆದುದರಿಂದ ನನ್ನ ರಾಜ್ಯರಕ್ಷಣಾದಿಗಳ ಬಗೆಗೆ ನೀನು ಚಿಂತಿಸಬೇಕಾಗಿಲ್ಲ. ಆದರೆ ಒಂದೇ ಒಂದು ವಿಷಯದಲ್ಲಿ ನನಗೆ ಚಿಂತೆಯು ಕಾಡುತ್ತಿದೆ. ಅದನ್ನು ನೀನು ಗಮನಿಸಿ ಅದರ ಪರಿಹಾರಕ್ಕೆ ಸಹಾಯ ಮಾಡು. ॥14॥

(ಶ್ಲೋಕ - 15)

ಮೂಲಮ್

ಮಾಥುರೇ ತ್ವಭಿಷಿಕ್ತೋಪಿ ಸ್ಥಿತೋಹಂ ನಿರ್ಜನೇ ವನೇ ।
ಕ್ವ ಗತಾ ವೈ ಪ್ರಜಾತ್ರತ್ಯಾ ಯತ್ರ ರಾಜ್ಯಂ ಪ್ರರೋಚತೇ ॥

ಅನುವಾದ

ನನಗೆ ಮಥುರಾಮಂಡಲದ ರಾಜ್ಯದಲ್ಲಿ ಪಟ್ಟಾಭಿಷೇಕವಾಗಿದ್ದರೂ ನಾನು ಒಂದು ನಿರ್ಜನವಾದ ಅರಣ್ಯದಲ್ಲಿ ವಾಸಮಾಡುತ್ತಿದ್ದೇನೆ. ಇಲ್ಲಿದ್ದ ಪ್ರಜೆಗಳು ಎಲ್ಲಿ ಹೋದರು? ಎಂಬುದೇ ನನಗೆ ತಿಳಿಯುತ್ತಿಲ್ಲ. ಪ್ರಜೆಗಳು ಇದ್ದರೆ ತಾನೇ ರಾಜ್ಯಾಧಿಪತ್ಯದ ಸುಖ!’’ ॥15॥

(ಶ್ಲೋಕ - 16)

ಮೂಲಮ್

ಇತ್ಯುಕ್ತೋ ವಿಷ್ಣುರಾತಸ್ತು ನಂದಾದೀನಾಂ ಪುರೋಹಿತಮ್ ।
ಶಾಂಡಿಲ್ಯಮಾಜುಹಾವಾಶು ವಜ್ರಸಂದೇಹನುತ್ತಯೇ ॥

ಅನುವಾದ

ವಜ್ರನಾಭನ ಮಾತನ್ನು ಕೇಳಿದ ಪರೀಕ್ಷಿದ್ರಾಜನು ಆತನ ಸಂದೇಹವನ್ನು ಪರಿ ಹರಿಸಲು ಶಾಂಡಿಲ್ಯಮಹರ್ಷಿಗಳಿಗೆ ಹೇಳಿ ಕಳುಹಿಸಿದನು. ಈ ಶಾಂಡಿಲ್ಯರು ನಂದನೇ ಮುಂತಾದ ಗೋಪರಿಗೆ ಪುರೋಹಿತರಾಗಿದ್ದವರು. ॥16॥

(ಶ್ಲೋಕ - 17)

ಮೂಲಮ್

ಅಥೋಟಜಂ ವಿಹಾಯಾಶು ಶಾಂಡಿಲ್ಯಃ ಸಮುಪಾಗತಃ ।
ಪೂಜಿತೋ ವಜ್ರನಾಭೇನ ನಿಷಸಾದಾಸನೋತ್ತಮೇ ॥

ಅನುವಾದ

ಪರೀಕ್ಷಿತನ ಸಂದೇಶವನ್ನು ಕೇಳಿದೊಡನೆಯೇ ಅವರು ತಮ್ಮ ಪರ್ಣಶಾಲೆಯನ್ನು ಬಿಟ್ಟು ಅಲ್ಲಿಗೆ ದಯಮಾಡಿಸಿದರು. ವಜ್ರನಾಭಮಹಾರಾಜನು ಅವರನ್ನು ವಿಧಿಪೂರ್ವಕವಾಗಿ ಸತ್ಕರಿಸಿ ಉನ್ನತವಾದ ಆಸನದಲ್ಲಿ ಕುಳ್ಳಿರಿಸಿದನು. ॥17॥

(ಶ್ಲೋಕ - 18)

ಮೂಲಮ್

ಉಪೋದ್ಘಾತಂ ವಿಷ್ಣುರಾತಶ್ಚಕಾರಾಶು ತತಸ್ತ್ವಸೌ ।
ಉವಾಚ ಪರಮಪ್ರೀತಸ್ತಾವುಭೌ ಪರಿಸಾಂತ್ವಯನ್ ॥

ಅನುವಾದ

ಆಗ ವಿಷ್ಣುರಾತಮಹಾರಾಜ ಪರೀಕ್ಷಿತನು, ವಜ್ರನಾಭನು ಹೇಳಿದ ಮಾತನ್ನು ಅವರಲ್ಲಿ ನಿವೇದಿಸಿಕೊಂಡನು. ಮಹರ್ಷಿಗಳು ಅದನ್ನು ಕೇಳಿ ಪ್ರಸನ್ನತೆಯಿಂದ ಅವರಿಬ್ಬರನ್ನೂ ಸಮಾಧಾನಪಡಿಸುತ್ತಾ ಹೀಗೆಂದರು. ॥18॥

(ಶ್ಲೋಕ - 19)

ಮೂಲಮ್ (ವಾಚನಮ್)

ಶಾಂಡಿಲ್ಯ ಉವಾಚ

ಮೂಲಮ್

ಶೃಣುತಂ ದತ್ತಚಿತ್ತೌ ಮೇ ರಹಸ್ಯಂ ವ್ರಜಭೂಮಿಜಮ್ ।
ವ್ರಜನಂ ವ್ಯಾಪ್ತಿರಿತ್ಯುಕ್ತ್ಯಾ ವ್ಯಾಪನಾದ್ವ್ರಜ ಉಚ್ಯತೇ ॥

ಅನುವಾದ

ಶಾಂಡಿಲ್ಯರು ಹೇಳುತ್ತಾರೆ — ಪ್ರಿಯ ಪರೀಕ್ಷಿತನೇ ಮತ್ತು ವಜ್ರನಾಭನೇ! ನಿಮ್ಮ ಸಂದೇಹಪರಿಹಾರಕ್ಕಾಗಿ ನಾನು ನಿಮಗೆ ವ್ರಜಭೂಮಿಯ ರಹಸ್ಯವನ್ನು ಹೇಳುತ್ತೇನೆ. ಸಾವಧಾನವಾಗಿ ಕೇಳಿರಿ. ‘ವ್ರಜ’ ಎಂಬ ಶಬ್ದಕ್ಕೆ ‘ವ್ಯಾಪ್ತಿ’ ಎಂದರ್ಥ. ಇದರಂತೆ ಭಗವಂತನ ಲೀಲೆಗಳು ಇಲ್ಲಿ ವ್ಯಾಪಕ ವಾಗಿರುವುದರಿಂದ ಈ ಭೂಮಿಗೆ ವ್ರಜ ಎಂದು ಹೆಸರು. ॥19॥

(ಶ್ಲೋಕ - 20)

ಮೂಲಮ್

ಗುಣಾತೀತಂ ಪರಂ ಬ್ರಹ್ಮ ವ್ಯಾಪಕಂ ವ್ರಜ ಉಚ್ಯತೇ ।
ಸದಾನಂದಂ ಪರಂ ಜ್ಯೋತಿರ್ಮುಕ್ತಾನಾಂ ಪದಮವ್ಯಯಮ್ ॥

ಅನುವಾದ

ಎಲ್ಲವನ್ನೂ ವ್ಯಾಪಿಸಿರುವುದು ತ್ರಿಗುಣಾತೀತವಾದ ಪರಬ್ರಹ್ಮ. ಅದೇ ‘ವ್ರಜ’ ಎಂದೂ ಕರೆಯಲ್ಪಡುವುದು. ಅದು ಸದಾನಂದಮಯ ಪರಮಜ್ಯೋತಿರ್ಮಯ ಮತ್ತು ಅವಿನಾಶಿಯಾದ ತತ್ತ್ವವು. ಮುಕ್ತಪುರುಷರು ನೆಲೆಗೊಂಡಿರುವ ಸ್ಥಾನವು. ॥20॥

(ಶ್ಲೋಕ - 21)

ಮೂಲಮ್

ತಸ್ಮಿನ್ನಂದಾತ್ಮಜಃ ಕೃಷ್ಣಃ ಸದಾನಂದಾಂಗವಿಗ್ರಹಃ ।
ಆತ್ಮಾರಾಮಶ್ಚಾಪ್ತಕಾಮಃ ಪ್ರೇಮಾಕ್ತೈರನುಭೂಯತೇ ॥

ಅನುವಾದ

ಅದರಿಂದಲೇ ಈ ಪರಬ್ರಹ್ಮ ಸ್ವರೂಪವಾದ ವ್ರಜಧಾಮದಲ್ಲಿ ಸದಾನಂದಸ್ವರೂಪನಾದ, ದಿವ್ಯ ಮಂಗಳವಿಗ್ರಹವುಳ್ಳ, ನಂದನಂದನ ಭಗವಾನ್ ಶ್ರೀಕೃಷ್ಣನು ನೆಲೆಗೊಂಡಿರುತ್ತಾನೆ. ಆತನು ಆಪ್ತಕಾಮನು. ಎಲ್ಲ ಕಾಮನೆಗಳೂ ಈಡೇರಿದವನು. ಪ್ರೇಮರಸದಲ್ಲಿ ಮುಳುಗಿರುವ ರಸಿಕ ಜನರು ಮಾತ್ರವೇ ಆತನಲ್ಲಿ ರಮಿಸಬಲ್ಲರು. ॥21॥

(ಶ್ಲೋಕ - 22)

ಮೂಲಮ್

ಆತ್ಮಾ ತು ರಾಧಿಕಾ ತಸ್ಯ ತಯೈವ ರಮಣಾದಸೌ ।
ಆತ್ಮಾರಾಮತಯಾ ಪ್ರಾಜ್ಞೈಃ ಪ್ರೋಚ್ಯತೇ ಗೂಢವೇದಿಭಿಃ ॥

ಅನುವಾದ

ಶ್ರೀಕೃಷ್ಣನನ್ನು ಏಕೆ ಆತ್ಮಾರಾಮ ಎಂದು ಕರೆಯುತ್ತಾರೆ? ಎಂದರೆ ರಾಧಾದೇವಿಯು ಶ್ರೀಕೃಷ್ಣನಿಗೆ ಆತ್ಮಾ ಎನಿಸುತ್ತಾಳೆ. ಆಕೆಯಲ್ಲಿ ಶ್ರೀಕೃಷ್ಣನು ರಮಿಸುವುದರಿಂದ ರಹಸ್ಯವನ್ನರಿತವರು ಆತನನ್ನು ಆತ್ಮಾರಾಮನೆನ್ನುತ್ತಾರೆ. ॥22॥

(ಶ್ಲೋಕ - 23)

ಮೂಲಮ್

ಕಾಮಾಸ್ತು ವಾಂಛಿತಾಸ್ತಸ್ಯ ಗಾವೋ ಗೋಪಾಶ್ಚ ಗೋಪಿಕಾಃ ।
ನಿತ್ಯಾಃ ಸರ್ವೇ ವಿಹಾರಾದ್ಯಾ ಆಪ್ತಕಾಮಸ್ತತಸ್ತ್ವಯಮ್ ॥

ಅನುವಾದ

ಹೀಗೆ ಆಪ್ತಕಾಮ ಎಂಬುದಕ್ಕೂ ವಿಶೇಷವಾದ ಅರ್ಥವಿದೆ. ‘ಕಾಮ’ ಎಂದರೆ ಅಭಿಲಾಷೆ. ‘ವ್ರಜ’ದಲ್ಲಿ ಶ್ರೀಕೃಷ್ಣ ಪರಮಾತ್ಮನ ಅಭಿಲಾಷೆಗೆ ವಿಷಯವಾದ ಅನೇಕ ಪದಾರ್ಥಗಳಿವೆ. ಗೋವುಗಳು, ಗೋಪಬಾಲಕರು, ಗೋಪಿಯರು ಮತ್ತು ಅವರೊಡನೆ ವಿಹರಿಸುವಿಕೆ ಮುಂತಾದುವು. ಅವೆಲ್ಲವೂ ಸಂಪೂರ್ಣವಾಗಿ ಇಲ್ಲಿವೆ. ಆದ್ದರಿಂದಲೇ ಶ್ರೀಕೃಷ್ಣನನ್ನು ಆಪ್ತಕಾಮನೆಂದು ಕರೆಯಲಾಗಿದೆ. ॥23॥

(ಶ್ಲೋಕ - 24)

ಮೂಲಮ್

ರಹಸ್ಯಂ ತ್ವಿದಮೇತಸ್ಯ ಪ್ರಕೃತೇಃ ಪರಮುಚ್ಯತೇ ।
ಪ್ರಕೃತ್ಯಾ ಖೇಲತಸ್ತಸ್ಯ ಲೀಲಾನ್ಯೈರನುಭೂಯತೇ ॥

ಅನುವಾದ

ಭಗವಂತನ ಈ ರಹಸ್ಯಲೀಲೆಯು ಪ್ರಕೃತಿಯನ್ನು ಮೀರಿರುವುದು. ಅವನು ಪ್ರಕೃತಿಯೊಡನೆ ಆಟವಾಡತೊಡಗಿದಾಗ ಇತರರೂ ಆತನ ಲೀಲೆಯನ್ನು ಅನುಭವಿಸುತ್ತಾರೆ. ॥24॥

(ಶ್ಲೋಕ - 25)

ಮೂಲಮ್

ಸರ್ಗಸ್ಥಿತ್ಯಪ್ಯಯಾ ಯತ್ರ ರಜಃಸತ್ತ್ವತಮೋಗುಣೈಃ ।
ಲೀಲೈವಂ ದ್ವಿವಿಧಾ ತಸ್ಯ ವಾಸ್ತವೀ ವ್ಯಾವಹಾರಿಕೀ ॥

ಅನುವಾದ

ಪ್ರಕೃತಿಯೊಡನೆ ಭಗವಂತನು ಆಡುವ ಲೀಲೆಯಲ್ಲಿಯೇ ರಜೋಗುಣ, ಸತ್ತ್ವಗುಣ ಮತ್ತು ತಮೋಗುಣಗಳ ಮೂಲಕ ಸೃಷ್ಟಿ-ಸ್ಥಿತಿ ಮತ್ತು ಲಯಗಳ ಪ್ರತೀತಿ ಉಂಟಾಗುತ್ತದೆ. ಹೀಗೆ ಗಮನಿಸಿದಾಗ ಭಗವಂತನ ಲೀಲೆಯಲ್ಲಿ ವಾಸ್ತವ ಲೀಲಾ ಮತ್ತು ವ್ಯಾವಹಾರಿಕಲೀಲಾ ಎಂದು ಎರಡು ಪ್ರಕಾರಗಳು ಕಂಡುಬರುತ್ತವೆ. ॥25॥

(ಶ್ಲೋಕ - 26)

ಮೂಲಮ್

ವಾಸ್ತವೀ ತತ್ಸ್ವಸಂವೇದ್ಯಾ ಜೀವಾನಾಂ ವ್ಯಾವಹಾರಿಕೀ ।
ಆದ್ಯಾಂ ವಿನಾ ದ್ವಿತೀಯಾ ನ ದ್ವಿತೀಯಾ ನಾದ್ಯಗಾ ಕ್ವಚಿತ್ ॥

ಅನುವಾದ

ವಾಸ್ತವಲೀಲೆಯು ಸ್ವಾನುಭವದಿಂದ ತನಗೇ ತಿಳಿಯತಕ್ಕದ್ದು. ಅದನ್ನು ಸ್ವಯಂ ಭಗವಂತನು ಮತ್ತು ಆತನ ರಸಿಕರಾದ ಭಕ್ತಜನರು ಮಾತ್ರವೇ ತಿಳಿಯಬಲ್ಲರು. ಜೀವರುಗಳ ಎದುರಿಗೆ ನಡೆಯುವ ಲೀಲೆಯೇ ವ್ಯಾವಹಾರಿಕಲೀಲೆ. ವಾಸ್ತವಿಕ ಲೀಲೆಯಿಲ್ಲದೆ ವ್ಯಾವಹಾರಿಕ ಲೀಲೆಯು ನಡೆಯಲಾರದು. ಆದರೆ ವ್ಯಾವಹಾರಿಕಲೀಲೆಯು ವಾಸ್ತವಿಕಲೀಲೆಯ ರಾಜ್ಯಕ್ಕೆ ಪ್ರವೇಶವನ್ನು ಮಾಡಲಾರದು. ॥26॥

(ಶ್ಲೋಕ - 27)

ಮೂಲಮ್

ಯುವಯೋರ್ಗೋಚರೇಯಂ ತು ತಲ್ಲೀಲಾ ವ್ಯಾವಹಾರಿಕೀ ।
ಯತ್ರ ಭೂರಾದಯೋ ಲೋಕಾ ಭುವಿ ಮಾಥುರಮಂಡಲಮ್ ॥

ಅನುವಾದ

ನೀವಿಬ್ಬರೂ ನೋಡುತ್ತಿರುವ ಭಗವಂತನ ಲೀಲೆಯು ವ್ಯಾವಹಾರಿಕ ಲೀಲೆಯು. ಈ ಭೂಮಿ ಮತ್ತು ಸ್ವರ್ಗಲೋಕಗಳು ಈ ಲೀಲೆಯಲ್ಲೇ ಅಡಕವಾಗಿವೆ. ಈ ಭೂಮಿಯಲ್ಲಿಯೇ ಮಥುರಾಮಂಡಲವೂ ಸೇರಿದೆ. ॥27॥

(ಶ್ಲೋಕ - 28)

ಮೂಲಮ್

ಅತ್ರೈವ ವ್ರಜಭೂಮಿಃ ಸಾ ಯತ್ರ ತತ್ತ್ವಂ ಸುಗೋಪಿತಮ್ ।
ಭಾಸತೇ ಪ್ರೇಮಪೂರ್ಣಾನಾಂ ಕದಾಚಿದಪಿ ಸರ್ವತಃ ॥

ಅನುವಾದ

ಭಗವಂತನ ವಾಸ್ತವವಾದ ರಹಸ್ಯಲೀಲೆಯು ಗುಪ್ತರೂಪದಿಂದ ನಡೆಯುತ್ತಿರುವ ವ್ರಜಭೂಮಿಯು ಇಲ್ಲಿಯೇ ಇದೆ. ಪ್ರೇಮಪೂರ್ಣವಾದ ಹೃದಯವುಳ್ಳ ರಸಿಕಭಕ್ತರಿಗೆ ಕೆಲವು ವೇಳೆಗಳಲ್ಲಿ ಇದು ಎಲ್ಲೆಡೆಗಳಲ್ಲಿಯೂ ಕಾಣಿಸತೊಡಗುತ್ತದೆ. ॥28॥

(ಶ್ಲೋಕ - 29)

ಮೂಲಮ್

ಕದಾಚಿ ದ್ವಾಪರಸ್ಯಾಂತೇ ರಹೋಲೀಲಾಧಿಕಾರಿಣಃ ।
ಸಮವೇತಾ ಯದಾತ್ರ ಸ್ಯುರ್ಯಥೇದಾನೀಂ ತದಾ ಹರಿಃ ॥

(ಶ್ಲೋಕ - 30)

ಮೂಲಮ್

ಸ್ವೈಃ ಸಹಾವತರೇತ್ಸ್ವೇಷು ಸಮಾವೇಶಾರ್ಥಮೀಪ್ಸಿತಾಃ ।
ತದಾ ದೇವಾದಯೋಪ್ಯನ್ಯೇವತರಂತಿ ಸಮಂತತಃ ॥

ಅನುವಾದ

ಕೆಲವೊಮ್ಮೆ ಇಪ್ಪತ್ತೆಂಟನೆಯ ದ್ವಾಪರಯುಗದ ಕೊನೆಯಲ್ಲಿ ಭಗವಂತನ ರಹಸ್ಯಲೀಲೆಯನ್ನು ಅನುಭವಿಸಲು ಯೋಗ್ಯರಾದ ಭಕ್ತಜನರು ಒಂದೆಡೆ ಸೇರಿದಾಗ ತನ್ನ ಅಂತರಂಗಪ್ರೇಮಿಗಳೊಡನೆ ಅವತಾರ ಮಾಡಿ ಇಲ್ಲೇ ದರ್ಶನಕೊಡುತ್ತಾನೆ. ಇದೇ ಸಮಯದಲ್ಲೇ ಕೊಂಚ ಕಾಲದ ಹಿಂದೆ ಇಂತಹ ಸನ್ನಿವೇಶ ಒದಗಿತ್ತು. ರಹಸ್ಯಲೀಲೆಗೆ ಅಧಿಕಾರಿಗಳಾಗಿರುವ ಭಕ್ತಜನರೂ ಕೂಡ ಅಂತರಂಗಪರಿಕರಗಳೊಡನೆ ಒಂದುಗೂಡಿ ಲೀಲಾರಸವನ್ನು ಸವಿಯಲು ಶಕ್ತರಾಗುವಂತೆ ಮಾಡುವುದೇ ಅವನ ಅವತಾರದ ಪ್ರಯೋಜನವು. ಹೀಗೆ ಭಗವಂತನು ಅವತಾರವನ್ನು ಮಾಡಿದಾಗ ಆ ಭಗವಂತನಿಗೆ ಇಷ್ಟರಾದ ಆತನಲ್ಲಿ ಪ್ರೇಮಾತಿಶಯವುಳ್ಳ ದೇವತೆಗಳೂ ಮತ್ತು ಋಷಿಗಳೂ ಮುಂತಾದವರೂ ಕೂಡ ಎಲ್ಲ ಕಡೆಗಳಲ್ಲೂ ಅವತಾರ ಮಾಡುತ್ತಾರೆ. ॥29-30॥

(ಶ್ಲೋಕ - 31)

ಮೂಲಮ್

ಸರ್ವೇಷಾಂ ವಾಂಛಿತಂ ಕೃತ್ವಾ ಹರಿರಂತರ್ಹಿತೋಭವತ್ ।
ತೇನಾತ್ರ ತ್ರಿವಿಧಾ ಲೋಕಾಃ ಸ್ಥಿತಾಃ ಪೂರ್ವಂ ನ ಸಂಶಯಃ ॥

ಅನುವಾದ

ಈಗ ತಾನೇ ಕೊಂಚಕಾಲದ ಹಿಂದೆ ನಡೆದ ಅವತಾರ ದಲ್ಲಿ ಭಗವಂತನು ತನ್ನ ಪ್ರೇಮಿಗಳಾದ ಭಕ್ತರ ಅಭಿಲಾಷೆಗಳನ್ನು ಪೂರ್ಣಗೊಳಿಸಿ ಈಗ ಅಂತರ್ಧಾನನಾಗಿ ಬಿಟ್ಟಿದ್ದಾನೆ. ಇಲ್ಲಿ ಮೊದಲು ಮೂರು ವರ್ಗಗಳಿಗೆ ಸೇರಿದ ಭಕ್ತಜನರೂ ಉಪಸ್ಥಿತರಾಗಿದ್ದರು ಎಂಬುದು ಇದರಿಂದ ನಿಶ್ಚಿತವಾಗುತ್ತದೆ. ಇದರಲ್ಲಿ ಯಾವ ಸಂದೇಹವೂ ಇಲ್ಲ. ॥31॥

(ಶ್ಲೋಕ - 32)

ಮೂಲಮ್

ನಿತ್ಯಾಸ್ತಲ್ಲಿಪ್ಸವಶ್ಚೈವ ದೇವಾದ್ಯಾಶ್ಚೇತಿ ಭೇದತಃ ।
ದೇವಾದ್ಯಾಸ್ತೇಷು ಕೃಷ್ಣೇನ ದ್ವಾರಕಾಂ ಪ್ರಾಪಿತಾಃ ಪುರಾ ॥

ಅನುವಾದ

ಈ ಮೂರು ವರ್ಗಗಳಲ್ಲಿ ಮೊದಲನೆಯವರು ನಿತ್ಯರಾದ ಭಗವಂತನ ಅಂತರಂಗಪಾರ್ಷದರು. ಇವರು ಎಂದಿಗೂ ಭಗವಂತನನ್ನು ಅಗಲದೇ ಇರುವವರು. ಭಗವಂತ ನೊಬ್ಬನನ್ನೇ ಪಡೆಯುವ ಇಚ್ಛೆಯುಳ್ಳವರಾಗಿ ಆತನ ಅಂತರಂಗಲೀಲೆಯೊಳಗೆ ಪ್ರವೇಶ ಪಡೆಯಲು ಇಚ್ಛೆಯುಳ್ಳವರಾಗಿ ಆತನ ಅಂತರಂಗಲೀಲೆಯೊಳಗೆ ಪ್ರವೇಶ ಪಡೆಯಲು ಬಯಸುವವರು ಎರಡನೆಯ ಸಾಲಿನವರು. ಮೂರನೆಯ ವರ್ಗದಲ್ಲಿ ದೇವತೆಗಳೇ ಮುಂತಾದವರು ಸೇರುತ್ತಾರೆ. ಇವರಲ್ಲಿ ದೇವತೆಗಳೇ ಮುಂತಾದವರ ಅಂಶದಿಂದ ಅವತಾರಮಾಡಿದ್ದವರನ್ನು ಭಗವಂತನು ವ್ರಜಭೂಮಿಯಿಂದ ದೂರವಾಗಿಸಿ ಮೊದಲೇ ದ್ವಾರಕೆಗೆ ಕಳಿಸಿಬಿಟ್ಟಿರುವನು. ॥32॥

(ಶ್ಲೋಕ - 33)

ಮೂಲಮ್

ಪುನರ್ವೌಶಲಮಾರ್ಗೇಣ ಸ್ವಾಧಿಕಾರೇಷು ಚಾಪಿತಾಃ ।
ತಲ್ಲಿಪ್ಸೂಂಶ್ಚ ಸದಾ ಕೃಷ್ಣಃ ಪ್ರೇಮಾನಂದೈಕರೂಪಿಣಃ ॥

(ಶ್ಲೋಕ - 34)

ಮೂಲಮ್

ವಿಧಾಯ ಸ್ವೀಯನಿತ್ಯೇಷು ಸಮಾವೇಶಿತವಾಂಸ್ತದಾ ।
ನಿತ್ಯಾಃ ಸರ್ವೇಪ್ಯಯೋಗ್ಯೇಷು ದರ್ಶನಾಭಾವತಾಂ ಗತಾಃ ॥

ಅನುವಾದ

ಅನಂತರ ಆ ಭಗವಂತನು ಬ್ರಾಹ್ಮಣರ ಶಾಪದಿಂದುಂಟಾದ ಒನಕೆಯನ್ನು ಒಂದು ನೆಪವನ್ನಾಗಿ ಮಾಡಿಕೊಂಡು ಯದುಕುಲದಲ್ಲಿ ಅವತಾರಮಾಡಿದ್ದ ದೇವತೆಗಳನ್ನು ಸ್ವರ್ಗಕ್ಕೆ ಕಳುಹಿಸಿ ಅವರವರ ಅಧಿಕಾರದಲ್ಲಿ ಮತ್ತೆ ನೆಲೆಗೊಳಿಸಿಬಿಟ್ಟನು ಮತ್ತು ಭಗವಂತನೊಬ್ಬನನ್ನೇ ಪಡೆಯಬೇಕೆಂಬ ಇಚ್ಛೆಯಿಂದ ತುಂಬಿದ್ದ ಭಕ್ತಶ್ರೇಷ್ಠರನ್ನು ಪ್ರೇಮಾನಂದಸ್ವರೂಪರನ್ನಾಗಿ ಮಾಡಿ ಎಂದೆಂದಿಗೂ ತನ್ನೊಡನೆ ಇರುವ ತನ್ನ ಅಂತರಂಗದ ಪಾರ್ಷದರೊಡನೆ ಸೇರಿಸಿಕೊಂಡುಬಿಟ್ಟನು. ಭಗವಂತನ ನಿತ್ಯಪಾರ್ಷದರು ಅಷ್ಟೇ ಗುಪ್ತವಾಗಿ ನಡೆಯುತ್ತಿರುವ ನಿತ್ಯಲೀಲೆಯಲ್ಲಿ ಸದಾ ಇರುತ್ತಿದ್ದರೂ ಅವರ ದರ್ಶನಕ್ಕೆ ಅಧಿಕಾರಿಗಳಲ್ಲದವರಿಗೆ ಕಣ್ಮರೆಯಾಗಿರುತ್ತಾರೆ. ॥33-34॥

(ಶ್ಲೋಕ - 35)

ಮೂಲಮ್

ವ್ಯಾವಹಾರಿಕಲೀಲಾಸ್ಥಾಸ್ತತ್ರ ಯನ್ನಾಧಿಕಾರಿಣಃ ।
ಪಶ್ಯಂತ್ಯತ್ರಾಗತಾಸ್ತಸ್ಮಾನ್ನಿರ್ಜನತ್ವಂ ಸಮಂತತಃ ॥

ಅನುವಾದ

ವ್ಯಾವಹಾರಿಕ ಲೀಲೆಯಲ್ಲೇ ಇರುವವರು ನಿತ್ಯಲೀಲೆಯ ದರ್ಶನವನ್ನು ಪಡೆಯಲು ಅಧಿಕೃತರಾಗಿಲ್ಲ. ಆದುದರಿಂದ ಅವರು ಇಲ್ಲಿಗೆ ಬಂದಾಗ ಇಲ್ಲಿ ಎಲ್ಲೆಲ್ಲಿಯೂ ಜನರಹಿತವಾದ ಅರಣ್ಯ ವನ್ನೇ ಶೂನ್ಯಪ್ರದೇಶವನ್ನೇ ಕಾಣುತ್ತಾರೆ. ವಾಸ್ತವಿಕಲೀಲೆಯಲ್ಲಿರುವ ಭಕ್ತಜನರಿಗೆ ಕಾಣಿಸುವುದಿಲ್ಲ. ॥35॥

(ಶ್ಲೋಕ - 36)

ಮೂಲಮ್

ತಸ್ಮಾಚ್ಚಿಂತಾ ನ ತೇ ಕಾರ್ಯಾ ವಜ್ರನಾಭ ಮದಾಜ್ಞಯಾ ।
ವಾಸಯಾತ್ರ ಬಹೂನ್ ಗ್ರಾಮಾನ್ ಸಂಸಿದ್ಧಿಸ್ತೇ ಭವಿಷ್ಯತಿ ॥

ಅನುವಾದ

ಆದುದರಿಂದ, ವತ್ಸ ವಜ್ರನಾಭ! ಈ ಬಗೆಗೆ ನೀನು ಚಿಂತೆ ಪಡಬೇಡ. ನನ್ನ ಆಜ್ಞೆಯಂತೆ ಇಲ್ಲಿ ಜನಭರಿತವಾದ ಬಹಳಷ್ಟು ಗ್ರಾಮಗಳನ್ನು ನಿರ್ಮಾಣಮಾಡು. ಇದರಿಂದ ನಿಶ್ಚಯವಾಗಿಯೂ ನಿನ್ನ ಮನೋರಥಗಳು ಸಿದ್ಧಿಸುವುದು. ॥36॥

(ಶ್ಲೋಕ - 37)

ಮೂಲಮ್

ಕೃಷ್ಣಲೀಲಾನುಸಾರೇಣ ಕೃತ್ವಾ ನಾಮಾನಿ ಸರ್ವತಃ ।
ತ್ವಯಾ ವಾಸಯತಾ ಗ್ರಾಮಾನ್ ಸಂಸೇವ್ಯಾ ಭೂರಿಯಂ ಪರಾ ॥

ಅನುವಾದ

ಭಗವಂತನಾದ ಶ್ರೀಕೃಷ್ಣನು ಎಲ್ಲೆಲ್ಲಿ ಯಾವ ಯಾವ ಲೀಲೆಗಳನ್ನು ಆಡಿದನೋ ಅದಕ್ಕನುಸಾರವಾಗಿ ಆಯಾ ಹೆಸರುಗಳನ್ನಿಟ್ಟು ಅನೇಕಗ್ರಾಮಗಳನ್ನು ಇಲ್ಲಿ ನಿರ್ಮಿಸಿ ದಿವ್ಯವಾದ ವ್ರಜಭೂಮಿಯನ್ನು ಚೆನ್ನಾಗಿ ಸೇವಿಸುತ್ತಿರು. ॥37॥

(ಶ್ಲೋಕ - 38)

ಮೂಲಮ್

ಗೋವರ್ಧನೇ ದೀರ್ಘಪುರೇ ಮಥುರಾಯಾಂ ಮಹಾವನೇ ।
ನಂದಿಗ್ರಾಮೇ ಬೃಹತ್ಸಾನೌ ಕಾರ್ಯಾ ರಾಜ್ಯಸ್ಥಿತಿಸ್ತ್ವಯಾ ॥

ಅನುವಾದ

ಇವುಗಳಲ್ಲಿ ಗೋವರ್ಧನ, ದೀರ್ಘಪುರ (ಡೀಗ್), ಮಥುರಾ, ಮಹಾವನ (ಗೋಕುಲ), ನಂದಿಗ್ರಾಮ (ನಂದ ಗಾವ್) ಮತ್ತು ಬೃಹತ್ಸಾನು (ಬರ್ಸಾನಾ) ಇತ್ಯಾದಿಗಳಲ್ಲಿ ನಿನ್ನ ವಾಸಸ್ಥಾನಗಳನ್ನು ಮಾಡಿಕೋ. ॥38॥

(ಶ್ಲೋಕ - 39)

ಮೂಲಮ್

ನದ್ಯದ್ರಿದ್ರೋಣಿಕುಂಡಾದಿಕುಂಜಾನ್ ಸಂಸೇವತಸ್ತವ ।
ರಾಜ್ಯೇ ಪ್ರಜಾಃ ಸುಸಂಪನ್ನಾಸ್ತ್ವಂ ಚ ಪ್ರೀತೋ ಭವಿಷ್ಯಸಿ ॥

ಅನುವಾದ

ಆಯಾ ಜಾಗಗಳಲ್ಲಿರುತ್ತಾ ಭಗವಂತನ ಲೀಲಾಸ್ಥಾನಗಳಾದ ನದೀ, ಪರ್ವತ, ಕಣಿವೆ, ಸರೋವರ ಮತ್ತು ಕುಂಡ ಕುಂಜವನ (ಲತಾಗೃಹ), ಮುಂತಾದುವುಗಳನ್ನು ಸೇವಿಸುತ್ತಿರಬೇಕು. ಹೀಗೆ ಮಾಡಿದರೆ ನಿನ್ನ ರಾಜ್ಯದಲ್ಲಿ ಪ್ರಜೆಗಳು ತುಂಬಾ ಸಂಪನ್ನರಾಗುವರು ಮತ್ತು ನಿನಗೂ ತುಂಬಾ ಪ್ರಸನ್ನತೆಯುಂಟಾಗುವುದು. ॥39॥

(ಶ್ಲೋಕ - 40)

ಮೂಲಮ್

ಸಚ್ಚಿದಾನಂದಭೂರೇಷಾ ತ್ವಯಾ ಸೇವ್ಯಾ ಪ್ರಯತ್ನತಃ ।
ತವ ಕೃಷ್ಣಸ್ಥಲಾನ್ಯತ್ರ ಸ್ಫುರಂತು ಮದನುಗ್ರಹಾತ್ ॥

ಅನುವಾದ

ಈ ಇಡೀ ವ್ರಜ ಭೂಮಿಯು ಸಚ್ಚಿದಾನಂದಮಯವಾದುದು. ಆದುದರಿಂದ ನೀನು ಪ್ರಯತ್ನಪೂರ್ವಕವಾಗಿ ಈ ಭೂಮಿಯನ್ನು ಸೇವಿಸುತ್ತಿರಬೇಕು. ಇದೋ! ನಾನು ಆಶೀರ್ವಾದ ಮಾಡುತ್ತೇನೆ. ಭಗವಂತನ ಲೀಲಾಸ್ಥಳಗಳೆಲ್ಲವನ್ನೂ ನೀನು ನನ್ನ ಕೃಪೆಯಿಂದ ನೋಡಲು ಸಮರ್ಥನಾಗುವೆ. ॥40॥

(ಶ್ಲೋಕ - 41)

ಮೂಲಮ್

ವಜ್ರ ಸಂಸೇವನಾದಸ್ಯ ಉದ್ಧವಸ್ತ್ವಾಂ ಮಿಲಿಷ್ಯತಿ ।
ತತೋ ರಹಸ್ಯಮೇತಸ್ಮಾತ್ಪ್ರಾಪ್ಸ್ಯಸಿ ತ್ವಂ ಸಮಾತೃಕಃ ॥

ಅನುವಾದ

ಮಗು ವಜ್ರನಾಭ! ಈ ವ್ರಜ ಭೂಮಿಯ ದರ್ಶನ, ಪೂಜನ ಮತ್ತು ಸೇವಿಸುತ್ತಿರುವುದರಿಂದ ನಿನಗೆ ಒಂದಲ್ಲ ಒಂದುದಿನ ಮಹಾತ್ಮನಾದ ಉದ್ಧವನ ಸಮಾಗಮವೂ ಆಗುವುದು. ಮತ್ತೆ ನೀನು ನಿನ್ನ ತಾಯಂದಿರೊಡನೆ ಆತನಿಂದಲೇ ಈ ವ್ರಜಭೂಮಿಯ ಮತ್ತು ಶ್ರೀಭಗವಂತನ ಲೀಲಾರಹಸ್ಯವನ್ನು ತಿಳಿಯಲು ಸಮರ್ಥನಾಗುವೆ.’’ ॥41॥

(ಶ್ಲೋಕ - 42)

ಮೂಲಮ್

ಏವ ಮುಕ್ತ್ವಾ ತು ಶಾಂಡಿಲ್ಯೋ ಗತಃ ಕೃಷ್ಣಮನುಸ್ಮರನ್ ।
ವಿಷ್ಣುರಾತೋಥ ವಜ್ರಶ್ಚ ಪರಾಂ ಪ್ರೀತಿಮವಾಪತುಃ ॥

ಅನುವಾದ

ಮುನಿಶ್ರೇಷ್ಠರಾದ ಶಾಂಡಿಲ್ಯರು ಹೀಗೆ ಪರೀಕ್ಷಿದ್ರಾಜ ಮತ್ತು ವಜ್ರನಾಭ ಇಬ್ಬರಿಗೂ ತಿಳಿವಳಿಕೆಯನ್ನು ನೀಡಿ ಶ್ರೀಕೃಷ್ಣನನ್ನು ಸ್ಮರಿಸುತ್ತಾ ತಮ್ಮ ಆಶ್ರಮಕ್ಕೆ ಹೊರಟುಹೋದರು. ಅವರ ಮಾತುಗಳನ್ನು ಕೇಳಿ ಅವರಿಬ್ಬರೂ ನೃಪತಿಗಳೂ ಅತ್ಯಂತ ಸಂತುಷ್ಟರಾದರು. ॥42॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಸ್ಕಾಂದೇ ಮಹಾಪುರಾಣೇ ಏಕಾಶೀತಿಸಾಹಸ್ರ್ಯಾಂಸಂಹಿತಾಯಾಂ ದ್ವಿತೀಯೇ ವೈಷ್ಣವಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಶಾಂಡಿಲ್ಯೋಪದಿಷ್ಟ ವ್ರಜಭೂಮಿಮಾಹಾತ್ಮ್ಯವರ್ಣನಂ ನಾಮ ಪ್ರಥಮೋಧ್ಯಾಯಃ ॥1॥