[ಆರನೆಯ ಅಧ್ಯಾಯ]
ಭಾಗಸೂಚನಾ
ಸಪ್ತಾಹ ಯಜ್ಞದ ವಿಧಿ
(ಶ್ಲೋಕ - 1)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಅಥ ತೇ ಸಂಪ್ರವಕ್ಷ್ಯಾಮಃ ಸಪ್ತಾಹಶ್ರವಣೇ ವಿಧಿಮ್ ।
ಸಹಾಯೈರ್ವಸುಭಿಶ್ಚೈವ ಪ್ರಾಯಃ ಸಾಧ್ಯೋ ವಿಧಿಃ ಸ್ಮೃತಃ ॥
ಅನುವಾದ
ಸನಕಾದಿಗಳು ಹೇಳುತ್ತಾರೆ — ಓ ನಾರದರೇ! ಈಗ ನಾವು ನಿಮಗೆ ಸಪ್ತಾಹ ಶ್ರವಣದ ವಿಧಿಯನ್ನು ಹೇಳುವೆವು. ಈ ವಿಧಿಯು ಪ್ರಾಯಶಃ ಜನರ ಸಹಾಯದಿಂದ ಮತ್ತು ಧನದಿಂದ ಸಾಧ್ಯವೆಂದು ಹೇಳಲಾಗಿದೆ. ॥1॥
(ಶ್ಲೋಕ - 2)
ಮೂಲಮ್
ದೈವಜ್ಞಂ ತು ಸಮಾಹೂಯ ಮುಹೂರ್ತಂ ಪೃಚ್ಛ್ಯ ಯತ್ನತಃ ।
ವಿವಾಹೇ ಯಾದೃಶಂ ವಿತ್ತಂ ತಾದೃಶಂ ಪರಿಕಲ್ಪಯೇತ್ ॥
ಅನುವಾದ
ಮೊಟ್ಟ ಮೊದಲಿಗೆ ಜ್ಯೋತಿಷಿಯನ್ನು ಕರೆಸಿ ಮುಹೂರ್ತವನ್ನು ಕೇಳಬೇಕು. ಬಳಿಕ ವಿವಾಹಕ್ಕಾಗಿ ಧನದ ವ್ಯವಸ್ಥೆ ಮಾಡಿ ಕೊಂಡಂತೆ ಪ್ರಯತ್ನಪೂರ್ವಕವಾಗಿ ಹಣದ ವ್ಯವಸ್ಥೆ ಮಾಡಿಕೊಳ್ಳಬೇಕು. ॥2॥
(ಶ್ಲೋಕ - 3)
ಮೂಲಮ್
ನಭಸ್ಯ ಆಶ್ವಿನೋರ್ಜೌ ಚ ಮಾರ್ಗಶೀರ್ಷಃ ಶುಚಿರ್ನಭಾಃ ।
ಏತೇ ಮಾಸಾಃ ಕಥಾರಂಭೇ ಶ್ರೋತೄಣಾಂ ಮೋಕ್ಷಸೂಚಕಾಃ ॥
ಅನುವಾದ
ಕಥೆಯನ್ನು ಪ್ರಾರಂಭಿಸಲು ಭಾದ್ರಪದ, ಆಶ್ವೀಜ, ಕಾರ್ತಿಕ, ಮಾರ್ಗಶೀರ್ಷ, ಆಷಾಢ ಮತ್ತು ಶ್ರಾವಣ ಈ ಆರುತಿಂಗಳು ಶೋತೃಗಳಿಗಾಗಿ ಮೋಕ್ಷದ ಪ್ರಾಪ್ತಿಯ ಕಾರಣವಾಗಿವೆ. ॥3॥
(ಶ್ಲೋಕ - 4)
ಮೂಲಮ್
ಮಾಸಾನಾಂ ವಿಪ್ರ ಹೇಯಾನಿ ತಾನಿ ತ್ಯಾಜ್ಯಾನಿ ಸರ್ವಥಾ ।
ಸಹಾಯಾಶ್ಚೇತರೇ ತತ್ರ ಕರ್ತವ್ಯಾಃ ಸೋದ್ಯಮಾಶ್ಚ ಯೇ ॥
ಅನುವಾದ
ದೇವ ಋಷಿಗಳೇ! ಈ ತಿಂಗಳಲ್ಲಿಯೂ ಭದ್ರಾ-ವ್ಯತೀಪಾತ ಮುಂತಾದ ಕುಯೋಗಗಳನ್ನು ಸರ್ವಥಾ ತ್ಯಜಿಸಬೇಕು. ಬೇರೆ ಉತ್ಸಾಹೀ ಜನರನ್ನು ತನ್ನ ಸಹಾಯಕರನ್ನಾಗಿಸಿಕೊಳ್ಳಬೇಕು. ॥4॥
(ಶ್ಲೋಕ - 5)
ಮೂಲಮ್
ದೇಶೇದೇಶೇತಥಾ ಸೇಯಂ ವಾರ್ತಾ ಪ್ರೇಷ್ಯಾ ಪ್ರಯತ್ನತಃ ।
ಭವಿಷ್ಯತಿ ಕಥಾ ಚಾತ್ರ ಆಗಂತವ್ಯಂ ಕುಟುಂಬಿಭಿಃ ॥
ಅನುವಾದ
ಮತ್ತೆ ‘ಇಲ್ಲಿ ಕಥೆ ನಡೆಯುವುದು, ಎಲ್ಲರೂ ಸಪರಿವಾರ ಆಗಮಿಸಬೇಕು’ ಎಂದು ಎಲ್ಲ ಊರುಗಳಿಗೂ ಪ್ರಯತ್ನ ಪೂರ್ವಕವಾಗಿ ಆಮಂತ್ರಣ ಕಳಿಸಬೇಕು. ॥5॥
(ಶ್ಲೋಕ - 6)
ಮೂಲಮ್
ದೂರೇ ಹರಿಕಥಾಃ ಕೇಚಿ-
ದ್ದೂರೇ ಚಾಚ್ಯುತಕೀರ್ತನಾಃ ।
ಸ್ತ್ರಿಯಃ ಶೂದ್ರಾದಯೋ ಯೇ ಚ
ತೇಷಾಂ ಬೋಧೋ ಯತೋ ಭವೇತ್ ॥
ಅನುವಾದ
ಭಗವತ್ಕಥೆ, ಸಂಕೀರ್ತನೆಗಳಿಂದ ದೂರವಾದ ಸ್ತ್ರೀ, ಶೂದ್ರಾದಿಗಳಿಗೂ ಕೂಡ ಸೂಚನೆ ಸಿಗುವಂತೆ ಪ್ರಯತ್ನಿಸಬೇಕು. ॥6॥
(ಶ್ಲೋಕ - 7)
ಮೂಲಮ್
ದೇಶೇ ದೇಶೇ ವಿರಕ್ತಾ ಯೇ ವೈಷ್ಣವಾಃ ಕೀರ್ತನೋತ್ಸುಕಾಃ ।
ತೇಷ್ವೇವ ಪತ್ರಂ ಪ್ರೇಷ್ಯಂ ಚ ತಲ್ಲೇಖನಮಿತೀರಿತಮ್ ॥
ಅನುವಾದ
ಊರು-ಊರುಗಳಲ್ಲಿರುವ ವಿರಕ್ತ ವೈಷ್ಣವರಿಗೆ, ಹರಿಕೀರ್ತನೆಯ ಪ್ರೇಮಿಗಳಿಗೆ ಆಮಂತ್ರಣವನ್ನು ಅವಶ್ಯವಾಗಿ ಕಳಿಸಬೇಕು. ಅದನ್ನು ಬರೆಯುವ ವಿಧಿಯನ್ನು ಈ ರೀತಿಯಾಗಿ ತಿಳಿಸಲಾಗಿದೆ. ॥7॥
(ಶ್ಲೋಕ - 8)
ಮೂಲಮ್
ಸತಾಂ ಸಮಾಜೋ ಭವಿತಾ ಸಪ್ತರಾತ್ರಂ ಸುದುರ್ಲಭಃ ।
ಅಪೂರ್ವರಸರೂಪೈವ ಕಥಾ ಚಾತ್ರ ಭವಿಷ್ಯತಿ ॥
ಅನುವಾದ
‘‘ಮಹನೀಯರೇ! ಇಲ್ಲಿ ಏಳು ದಿನಗಳವರೆಗೆ ಬಹಳ ದುರ್ಲಭವಾದ ಸತ್ಪುರುಷರ ಸಭೆ ಸೇರುವುದು ಮತ್ತು ಅಪೂರ್ವರಸಮಯವಾದ ಶ್ರೀಮದ್ಭಾಗವತದ ಕಥಾ ಪ್ರವಚನ ನಡೆಯುವುದು. ॥8॥
(ಶ್ಲೋಕ - 9)
ಮೂಲಮ್
ಶ್ರೀಭಾಗವತಪೀಯೂಷಪಾನಾಯ ರಸಲಂಪಟಾಃ ।
ಭವಂತಶ್ಚ ತಥಾ ಶೀಘ್ರಮಾಯಾತ ಪ್ರೇಮತತ್ಪರಾಃ ॥
ಅನುವಾದ
ಶ್ರೀಮದ್ಭಾಗವತ ಕಥಾಮೃತವನ್ನು ಪಾನಮಾಡುವ ರಸಿಕ ಭಕ್ತರಾದ ತಾವು ಪ್ರೇಮದಿಂದ ಶೀಘ್ರವಾಗಿ ದಯಮಾಡಿಸಬೇಕು. ॥9॥
(ಶ್ಲೋಕ - 10)
ಮೂಲಮ್
ನಾವಕಾಶಃ ಕದಾಚಿಚ್ಚೇದ್ದಿನಮಾತ್ರಂ ತಥಾಪಿ ತು ।
ಸರ್ವಥಾಗಮನಂ ಕಾರ್ಯಂ ಕ್ಷಣೋಽತ್ರೈವ ಸುದುರ್ಲಭಃ ॥
ಅನುವಾದ
ತಮಗೆ ಹೆಚ್ಚು ಅವಕಾಶವಿಲ್ಲದಿದ್ದರೆ ಒಂದು ದಿನವಾದರೂ ಇಲ್ಲಿಗೆ ಅವಶ್ಯ ವಾಗಿ ಆಗಮಿಸಬೇಕು. ಏಕೆಂದರೆ, ಇಲ್ಲಿಯ ಪ್ರತಿಕ್ಷಣವೂ ಅತ್ಯಂತ ದುರ್ಲಭವಾಗಿದೆ.’’ ॥10॥
(ಶ್ಲೋಕ - 11)
ಮೂಲಮ್
ಏವಮಾಕಾರಣಂ ತೇಷಾಂ ಕರ್ತವ್ಯಂ ವಿನಯೇನ ಚ ।
ಆಗಂತುಕಾನಾಂ ಸರ್ವೇಷಾಂ ವಾಸಸ್ಥಾನಾನಿ ಕಲ್ಪಯೇತ್ ॥
ಅನುವಾದ
ಹೀಗೆ ಎಲ್ಲರಿಗೂ ವಿನಯ ಪೂರ್ವಕವಾಗಿ ಆಮಂತ್ರಣವನ್ನು ಕಳಿಸಬೇಕು. ಬಂದವರೆಲ್ಲರಿಗೂ ವಾಸಮಾಡಲು ಯಥೋಚಿತ ಜಾಗವನ್ನು ಏರ್ಪಡಿಸಬೇಕು. ॥11॥
(ಶ್ಲೋಕ - 12)
ಮೂಲಮ್
ತೀರ್ಥೇ ವಾಪಿ ವನೇ ವಾಪಿ ಗೃಹೇ ವಾ ಶ್ರವಣಂ ಮತಮ್ ।
ವಿಶಾಲಾ ವಸುಧಾ ಯತ್ರ ಕರ್ತವ್ಯಂ ತತ್ಕಥಾಸ್ಥಲಮ್ ॥
ಅನುವಾದ
ಕಥಾ ಶ್ರವಣವನ್ನು ಯಾವುದಾದರೂ ತೀರ್ಥಕ್ಷೇತ್ರ ದಲ್ಲಾಗಲೀ, ವನದಲ್ಲಾಗಲೀ, ತನ್ನ ಮನೆಯಲ್ಲೇ ಆಗಲಿ ಏರ್ಪಡಿಸುವುದು ಒಳ್ಳೆಯದೆಂದು ತಿಳಿಯಲಾಗಿದೆ. ಉದ್ದ ಅಗಲ ವಿಶಾಲವಾಗಿರುವ ಜಾಗದಲ್ಲೇ ಕಥಾಸ್ಥಳವನ್ನು ಏರ್ಪಡಿಸಬೇಕು. ॥12॥
(ಶ್ಲೋಕ - 13)
ಮೂಲಮ್
ಶೋಧನಂ ಮಾರ್ಜನಂ ಭೂಮೇರ್ಲೇಪನಂ ಧಾತುಮಂಡನಮ್ ।
ಗೃಹೋಪಸ್ಕರಮುದ್ಧೃತ್ಯ ಗೃಹಕೋಣೇ ನಿವೇಶಯೇತ್ ॥
ಅನುವಾದ
ಆ ಭೂಮಿಯನ್ನು ಗುಡಿಸಿ, ಸಾರಿಸಿ, ರಂಗವಲ್ಲಿಗಳಿಂದ ಅಲಂಕರಿಸಬೇಕು. ಮನೆಯ ಸಾಮಾನುಗಳನ್ನೆಲ್ಲ ತೆಗೆದು ಒಂದು ಮೂಲೆಯಲ್ಲಿ ಇರಿಸಬೇಕು. ॥13॥
(ಶ್ಲೋಕ - 14)
ಮೂಲಮ್
ಅರ್ವಾಕ್ಪಂಚಾಹತೋ ಯತ್ನಾದಾಸ್ತೀರ್ಣಾಣಿ ಪ್ರಮೇಲಯೇತ್ ।
ಕರ್ತವ್ಯೋ ಮಂಡಪಃ ಪ್ರೋಚ್ಚೈಃ ಕದಲೀಖಂಡ ಮಂಡಿತಃ ॥
ಅನುವಾದ
ಐದು ದಿನಗಳ ಮೊದಲಿಂದಲೇ ಹಾಸುವ ಬಟ್ಟೆಗಳನ್ನು ಪ್ರಯತ್ನಪೂರ್ವಕ ಸಂಗ್ರಹಿಸಿಡಬೇಕು. ಬಾಳೆಯ ಕಂಬಗಳಿಂದ ಅಲಂಕೃತವಾದ ಒಂದು ಎತ್ತರವಾದ ಮಂಟಪವನ್ನು ಸಿದ್ಧಗೊಳಿಸಬೇಕು. ॥14॥
(ಶ್ಲೋಕ - 15)
ಮೂಲಮ್
ಫಲಪುಷ್ಪದಲೈರ್ವಿಷ್ವಗ್ವಿತಾನೇನ ವಿರಾಜಿತಃ ।
ಚತುರ್ದಿಕ್ಷು ಧ್ವಜಾರೋಪೋ ಬಹುಸಂಪದ್ವಿರಾಜಿತಃ ॥
ಅನುವಾದ
ಅದನ್ನು ಎಲ್ಲ ಕಡೆಗಳಲ್ಲಿಯೂ ಹಣ್ಣು, ಹೂವೂ, ಪತ್ರೆ, ತಳಿರುತೋರಣಗಳಿಂದ ಅಲಂಕರಿಸಬೇಕು. ಸುತ್ತಲೂ ಬಹುಸಂಪತ್ತಿನಿಂದ ಶೋಭಿಸುವ ಧ್ವಜ-ಪತಾಕೆಗಳಿಂದ ಸಜ್ಜುಗೊಳಿಸಬೇಕು. ॥15॥
(ಶ್ಲೋಕ - 16)
ಮೂಲಮ್
ಊರ್ಧ್ವಂ ಸಪ್ತೈವ ಲೋಕಾಶ್ಚ ಕಲ್ಪನೀಯಾಃ ಸವಿಸ್ತರಮ್ ।
ತೇಷು ವಿಪ್ರಾ ವಿರಕ್ತಾಶ್ಚ ಸ್ಥಾಪನೀಯಾಃ ಪ್ರಬೋಧ್ಯ ಚ ॥
ಅನುವಾದ
ಆ ಮಂಟಪದಲ್ಲಿ ಸ್ವಲ್ಪ ಎತ್ತರವಾದ ಜಾಗದಲ್ಲಿ ವಿಶಾಲವಾದ ಸಪ್ತ ಲೋಕಗಳ ಕಲ್ಪನೆಮಾಡಿ, ಅದರಲ್ಲಿ ವಿರಕ್ತರಾದ ಬ್ರಾಹ್ಮಣರನ್ನು ಕರೆದು ಕೂರಿಸಬೇಕು. ॥16॥
(ಶ್ಲೋಕ - 17)
ಮೂಲಮ್
ಪೂರ್ವಂ ತೇಷಾಮಾಸನಾನಿ ಕರ್ತವ್ಯಾನಿ ಯಥೋತ್ತರಮ್ ।
ವಕ್ತುಶ್ಚಾಪಿ ತದಾ ದಿವ್ಯಮಾಸನಂ ಪರಿಕಲ್ಪಯೇತ್ ॥
ಅನುವಾದ
ಅವರಿಗೆ ಮುಂದುಗಡೆಯಲ್ಲಿ ಯಥೋಚಿತವಾದ ಪೀಠಗಳನ್ನು ಹಾಕಿರಬೇಕು. ಅದರ ಮುಂದೆ ಪ್ರವಚನಕಾರರಿಗೂ ದಿವ್ಯವಾದ ಪೀಠವನ್ನು ವ್ಯವಸ್ಥೆ ಮಾಡಬೇಕು. ॥17॥
(ಶ್ಲೋಕ - 18)
ಮೂಲಮ್
ಉದಙ್ಮುಖೋ ಭವೇದ್ವಕ್ತಾ ಶ್ರೋತಾ ವೈ ಪ್ರಾಙ್ಮುಖಸ್ತದಾ ।
ಪ್ರಾಙ್ಮುಖಶ್ಚೇದ್ಭವೇದ್ವಕ್ತಾ ಶ್ರೋತಾ ಚೋದಙ್ಮುಖಸ್ತದಾ ॥
ಅನುವಾದ
ಪ್ರವಚನಕಾರರು ಉತ್ತರಾಭಿಮುಖರಾಗಿದ್ದರೆ ಮುಖ್ಯ ಶ್ರೋತೃವು ಪೂರ್ವಭಿಮುಖವಾಗಿ ಕುಳಿತಿರಬೇಕು. ಪ್ರವಚನಕಾರರು ಪೂರ್ವಾಭಿಮುಖರಾಗಿದ್ದರೆ ಮುಖ್ಯ ಶ್ರೋತೃವು ಉತ್ತರಾಭಿಮುಖನಾಗಿ ಕುಳಿತಿರಬೇಕು. ॥18॥
(ಶ್ಲೋಕ - 19)
ಮೂಲಮ್
ಅಥವಾ ಪೂರ್ವದಿಗ್ಜ್ಞೇಯಾ ಪೂಜ್ಯಪೂಜಕಮಧ್ಯತಃ ।
ಶ್ರೋತೃಣಾಮಾಗಮೇ ಪ್ರೋಕ್ತಾ ದೇಶಕಾಲಾದಿಕೋವಿದೈಃ ॥
ಅನುವಾದ
ಅಥವಾ ಪೂಜ್ಯನಾದ ಪ್ರವಚನಕಾರ ಮತ್ತು ಪೂಜಕನಾದ ಶ್ರೋತೃವು ಇವರ ಮಧ್ಯೆ ಇರುವುದೇ ಪೂರ್ವದಿಕ್ಕು ಎಂದು ಭಾವಿಸಬಹುದು. ಪೂಜ್ಯನು ಪೂರ್ವಾಭಿಮುಖನಾಗಿ ಕುಳಿತಿರುತ್ತಾನೆ. ಆಗ ಪೂಜಕನು ಆ ಪೂಜ್ಯನಿಗೆ ಅಭಿಮುಖನಾಗಿದ್ದರೆ ಅವನಿಗೆ ಅದೇ ಪೂರ್ವದಿಕ್ಕು. ದೇಶಕಾಲ ಇವುಗಳನ್ನು ಅರಿತಿರುವ ವಿದ್ವಾಂಸರು ಶ್ರೋತೃವಿಗೆ ಶಾಸ್ತ್ರದಲ್ಲಿ ಇದೇ ನಿಯಮವನ್ನು ತಿಳಿಸಿರುವರು. ॥19॥
(ಶ್ಲೋಕ - 20)
ಮೂಲಮ್
ವಿರಕ್ತೋ ವೈಷ್ಣವೋ ವಿಪ್ರೋ ವೇದಶಾಸ್ತ್ರ ವಿಶುದ್ಧಿಕೃತ್ ।
ದೃಷ್ಟಾಂತ ಕುಶಲೋ ಧೀರೋ ವಕ್ತಾ ಕಾರ್ಯೋಽತಿನಿಃಸ್ಪೃಹಃ ॥
ಅನುವಾದ
ಯಾರು ವೇದ-ಶಾಸ್ತ್ರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನ ಮಾಡುವುದರಲ್ಲಿ ಸಮರ್ಥನೋ, ನಾನಾರೀತಿಯ ದೃಷ್ಟಾಂತಗಳನ್ನು ಕೊಡಬಲ್ಲನೋ, ವಿವೇಕಿ ಹಾಗೂ ನಿಃಸ್ಪೃಹನೋ ಅಂತಹ ವಿರಕ್ತ, ವಿಷ್ಣುಭಕ್ತ ಬ್ರಾಹ್ಮಣನನ್ನು ಪ್ರವಚನಕಾರನನ್ನಾಗಿಸಬೇಕು. ॥20॥
(ಶ್ಲೋಕ - 21)
ಮೂಲಮ್
ಅನೇಕಧರ್ಮವಿಭ್ರಾಂತಾಃ ಸ್ತ್ರೈಣಾಃ ಪಾಖಂಡವಾದಿನಃ ।
ಶುಕಶಾಸ್ತ್ರ ಕಥೋಚ್ಚಾರೇ ತ್ಯಾಜ್ಯಾಸ್ತೇ ಯದಿ ಪಂಡಿತಾಃ ॥
ಅನುವಾದ
ಪಂಡಿತರು ಆಗಿದ್ದು ಯಾರು ಅನೇಕ ಧರ್ಮಗಳ ಬಗ್ಗೆ ಭ್ರಮೆಯನ್ನು ಹೊಂದಿರುವರೋ, ಸ್ತ್ರೀಲಂಪಟರಾಗಿರುವರೋ, ಪಾಷಂಡ ಮತವನ್ನುವಾದಿಸುತ್ತಾರೋ ಅಂತಹವರನ್ನು ಶ್ರೀಮದ್ಭಾಗವತದ ಪ್ರವಚನಕ್ಕೆ ನಿಯೋಜಿಸಬಾರದು. ॥21॥
(ಶ್ಲೋಕ - 22)
ಮೂಲಮ್
ವಕ್ತುಃ ಪಾರ್ಶ್ವೇ ಸಹಾಯಾರ್ಥಮನ್ಯಃ ಸ್ಥಾಪ್ಯಸ್ತಥಾವಿಧಃ ।
ಪಂಡಿತಃ ಸಂಶಯಚ್ಛೇತ್ತಾ ಲೋಕಬೋಧನತತ್ಪರಃ ॥
ಅನುವಾದ
ಪ್ರವಚನಕಾರನ ಬಳಿಯಲ್ಲೇ ಅವನಿಗೆ ಸಹಾಯಕನಾದ ಅಂತಹವನೇ ಇನ್ನೊಬ್ಬ ವಿದ್ವಾಂಸನನ್ನು ನೇಮಿಸಬೇಕು. ಅವನೂ ಕೂಡ ಎಲ್ಲ ಬಗೆಯ ಸಂಶಯಗಳನ್ನು ಹೋಗಲಾಡಿಸುವುದರಲ್ಲಿ ಸಮರ್ಥನಾಗಿದ್ದು, ಜನರಿಗೆ ತಿಳಿಸುವುದರಲ್ಲಿ ಕುಶಲನಾಗಿರಬೇಕು. ॥22॥
(ಶ್ಲೋಕ - 23)
ಮೂಲಮ್
ವಕ್ತ್ರಾ ಕ್ಷೌರಂ ಪ್ರಕರ್ತವ್ಯಂ ದಿನಾದರ್ವಾಗ್ ವ್ರತಾಪ್ತಯೇ ।
ಅರುಣೋದಯೇಽಸೌ ನಿರ್ವರ್ತ್ಯ ಶೌಚಂ ಸ್ನಾನಂ ಸಮಾಚರೇತ್ ॥
ಅನುವಾದ
ಕಥೆಯನ್ನು ಪ್ರಾರಂಭಿಸುವ ಹಿಂದಿನ ದಿನವೇ ವ್ರತ ಗ್ರಹಣಕ್ಕಾಗಿ ಪ್ರವಚನಕಾರನು ಕ್ಷೌರಮಾಡಿಸಿಕೊಳ್ಳಬೇಕು. ಅರುಣೋದಯ ಸಮಯದಲ್ಲಿ ಶೌಚಾನಂತರ ಸ್ನಾನ ಮಾಡಬೇಕು. ॥23॥
(ಶ್ಲೋಕ - 24)
ಮೂಲಮ್
ನಿತ್ಯಂ ಸಂಕ್ಷೇಪತಃ ಕೃತ್ವಾ ಸಂಧ್ಯಾದ್ಯಂ ಸ್ವಂ ಪ್ರಯತ್ನತಃ ।
ಕಥಾವಿಘ್ನ ವಿಘಾತಾಯ ಗಣನಾಥಂ ಪ್ರಪೂಜಯೇತ್ ॥
ಅನುವಾದ
ಆತನು ಸಂಧ್ಯಾವಂದನಾದಿ ನಿತ್ಯ ಕರ್ಮಗಳನ್ನು ಪ್ರಯತ್ನಪೂರ್ವಕ ಸಂಕ್ಷೇಪವಾಗಿ ಮುಗಿಸಿಕೊಂಡು, ಕಥೆಗೆ ಒದಗಬಹುದಾದ ವಿಘ್ನಗಳ ಪರಿಹಾರಕ್ಕಾಗಿ ಗಣಪತಿಯನ್ನು ಪೂಜಿಸಬೇಕು. ॥24॥
(ಶ್ಲೋಕ - 25)
ಮೂಲಮ್
ಪಿತೃನ್ ಸಂತರ್ಪ್ಯ ಶುದ್ಧ್ಯರ್ಥಂ ಪ್ರಾಯಶ್ಚಿತ್ತಂ ಸಮಾಚರೇತ್ ।
ಮಂಡಲಂ ಚ ಪ್ರಕರ್ತವ್ಯಂ ತತ್ರ ಸ್ಥಾಪ್ಯೋ ಹರಿಸ್ತಥಾ ॥
ಅನುವಾದ
ಅನಂತರ ಪಿತೃಗಳಿಗೆ ತರ್ಪಣ ಕೊಟ್ಟು, ಹಿಂದಿನ ಪಾಪಗಳ ಶುದ್ಧಿಗಾಗಿ ಪ್ರಾಯಶ್ಚಿತ್ತಮಾಡಿಕೊಳ್ಳಬೇಕು. ಒಂದು ಮಂಡಲವನ್ನು ರಚಿಸಿ ಅದರಲ್ಲಿ ಶ್ರೀಹರಿಯನ್ನು ಪ್ರತಿಷ್ಠಾಪಿಸಬೇಕು. ॥25॥
(ಶ್ಲೋಕ - 26)
ಮೂಲಮ್
ಕೃಷ್ಣಮುದ್ದಿಶ್ಯ ಮಂತ್ರೇಣ ಚರೇತ್ಪೂಜಾವಿಧಿಂ ಕ್ರಮಾತ್ ।
ಪ್ರದಕ್ಷಿಣ ನಮಸ್ಕಾರಾನ್ ಪೂಜಾಂತೇ ಸ್ತುತಿಮಾಚರೇತ್ ॥
ಅನುವಾದ
ಮತ್ತೆ ಭಗವಾನ್ ಶ್ರೀಕೃಷ್ಣನನ್ನು ಕುರಿತು ಮಂತ್ರೋಚ್ಚಾರಣ ಪೂರ್ವಕ ಷೋಡಶೋಪಚಾರ ಪೂಜೆಯನ್ನು ಆಚರಿಸಿ, ಪ್ರದಕ್ಷಿಣ ನಮಸ್ಕಾರಗಳನ್ನು ಮಾಡಿ ಹೀಗೆ ಪ್ರಾರ್ಥಿಸಬೇಕು. ॥26॥
(ಶ್ಲೋಕ - 27)
ಮೂಲಮ್
ಸಂಸಾರಸಾಗರೇ ಮಗ್ನಂ ದೀನಂ ಮಾಂ ಕರುಣಾನಿಧೇ ।
ಕರ್ಮಮೋಹಗೃಹೀತಾಂಗಂ ಮಾಮುದ್ಧರ ಭವಾರ್ಣವಾತ್ ॥
ಅನುವಾದ
ಓ ಕರುಣಾನಿಧೇ! ಸಂಸಾರ ಸಾಗರದಲ್ಲಿ ಮುಳುಗಿರುವ ದೀನನು ನಾನು. ಕರ್ಮಗಳ ಮೋಹವೆಂಬ ಮೊಸಳೆಯು ನನ್ನನ್ನು ಹಿಡಿದುಕೊಂಡಿದೆ. ನೀನು ಈ ಭವಾರ್ಣವದಿಂದ ನನ್ನನ್ನು ಪಾರುಮಾಡು. ॥27॥
(ಶ್ಲೋಕ - 28)
ಮೂಲಮ್
ಶ್ರೀಮದ್ಭಾಗವತಸ್ಯಾಪಿ ತತಃ ಪೂಜಾ ಪ್ರಯತ್ನತಃ ।
ಕರ್ತವ್ಯಾ ವಿಧಿನಾ ಪ್ರೀತ್ಯಾ ಧೂಪದೀಪ ಸಮನ್ವಿತಾ ॥
ಅನುವಾದ
ಬಳಿಕ ಶ್ರೀಮದ್ಭಾಗವತಕ್ಕೂ ಧೂಪ-ದೀಪಾದಿ ಪೂಜಾ ಸಾಮಗ್ರಿಗಳಿಂದ ಅತ್ಯಂತ ಉತ್ಸಾಹ ಪ್ರೀತಿಪೂರ್ವಕವಾಗಿ ವಿಧಿಪೂರ್ವಕ ಪೂಜೆಮಾಡಬೇಕು. ॥28॥
(ಶ್ಲೋಕ - 29)
ಮೂಲಮ್
ತತಸ್ತು ಶ್ರೀಫಲಂ ಧೃತ್ವಾ ನಮಸ್ಕಾರಂ ಸಮಾಚರೇತ್ ।
ಸ್ತುತಿಃ ಪ್ರಸನ್ನಚಿತ್ತೇನ ಕರ್ತವ್ಯಾ ಕೇವಲಂ ತದಾ ॥
ಅನುವಾದ
ಮತ್ತೆ ಆ ಪುಸ್ತಕದ ಮುಂದೆ ತೆಂಗಿನ ಕಾಯಿಯನ್ನು ಇಟ್ಟು ನಮಸ್ಕರಿಸಿ ಪ್ರಸನ್ನವಾದ ಮನಸ್ಸಿನಿಂದ ಹೀಗೆ ಸ್ತುತಿಸಬೇಕು. ॥29॥
(ಶ್ಲೋಕ - 30)
ಮೂಲಮ್
ಶ್ರೀಮದ್ಭಾಗವತಾಖ್ಯೋಽಯಂ ಪ್ರತ್ಯಕ್ಷಃ ಕೃಷ್ಣ ಏವ ಹಿ ।
ಸ್ವೀಕೃತೋಽಸಿ ಮಯಾ ನಾಥ ಮುಕ್ತ್ಯರ್ಥಂ ಭವಸಾಗರೇ ॥
ಅನುವಾದ
ಹೇ ನಾಥಾ! ಶ್ರೀಮದ್ಭಾಗವತ ರೂಪದಲ್ಲಿರುವ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನಾಗಿ ನೀನೇ ಬೆಳಗುತ್ತಿದ್ದೀಯೆ. ಭಗಸಾಗರದಿಂದ ಪಾರಾಗಲು ನಿನ್ನಲ್ಲಿ ಶರಣಾಗಿದ್ದೇನೆ. ॥30॥
(ಶ್ಲೋಕ - 31)
ಮೂಲಮ್
ಮನೋರಥೋ ಮದೀಯೋಽಯಂ ಸಫಲಃ ಸರ್ವಥಾ ತ್ವಯಾ ।
ನಿರ್ವಿಘ್ನೇನೈವ ಕರ್ತವ್ಯೋ ದಾಸೋಽಹಂ ತವ ಕೇಶವ ॥
ಅನುವಾದ
ನನ್ನ ಈ ಮನೋರಥವನ್ನು ಯಾವ ವಿಘ್ನ ಬಾಧೆಗಳು ಬಾರದಂತೆ ಸಾಂಗೋಪಾಂಗವಾಗಿ ನೆರವೇರಿಸು. ಕೇಶವಾ! ನಾನು ನಿನ್ನ ದಾಸನಾಗಿರುವೆನು. ॥31॥
(ಶ್ಲೋಕ - 32)
ಮೂಲಮ್
ಏವಂ ದೀನವಚಃ ಪ್ರೋಚ್ಯ ವಕ್ತಾರಂ ಚಾಥ ಪೂಜಯೇತ್ ।
ಸಂಭೂಷ್ಯ ವಸ್ತ್ರ ಭೂಷಾಭಿಃ ಪೂಜಾಂತೇ ತಂ ಚ ಸಂಸ್ತವೇತ್ ॥
ಅನುವಾದ
ಹೀಗೆ ದೈನ್ಯದ ಮಾತುಗಳನ್ನು ಹೇಳಿ ಮತ್ತೆ ಪ್ರವಚನಕಾರನನ್ನು ಪೂಜಿಸಬೇಕು. ಆತನನ್ನು ಸುಂದರ ವಸ್ತ್ರ - ಆಭರಣ ಮುಂತಾದವುಗಳಿಂದ ಅಲಂಕರಿಸಿ ಪೂಜೆಮಾಡಿ ಕೊನೆಯಲ್ಲಿ ಆತನನ್ನು ಸ್ತುತಿಸಬೇಕು. ॥32॥
(ಶ್ಲೋಕ - 33)
ಮೂಲಮ್
ಶುಕರೂಪ ಪ್ರಬೋಧಜ್ಞ ಸರ್ವಶಾಸ್ತ್ರ ವಿಶಾರದ ।
ಏತತ್ಕಥಾಪ್ರಕಾಶೇನ ಮದಜ್ಞಾನಂ ವಿನಾಶಯ ॥
ಅನುವಾದ
‘ಎಲೈ ಶುಕರೂಪಿಯಾದ ಜ್ಞಾನ ಶ್ರೇಷ್ಠರೇ! ನೀವು ಉಪದೇಶ ಮಾಡುವುದರಲ್ಲಿ ಕುಶಲರಾಗಿದ್ದು, ಸರ್ವ ಶಾಸ್ತ್ರಗಳಲ್ಲಿ ಪಾರಂಗತರಾಗಿರುವಿರಿ. ದಯಮಾಡಿ ಈ ಕಥೆಯನ್ನು ಪ್ರಕಾಶಪಡಿಸಿ ನನ್ನ ಅಜ್ಞಾನವನ್ನು ದೂರಗೊಳಿಸಿರಿ’ ॥33॥
(ಶ್ಲೋಕ - 34)
ಮೂಲಮ್
ತದಗ್ರೇ ನಿಯಮಃ ಪಶ್ಚಾತ್ಕರ್ತವ್ಯಃ ಶ್ರೇಯಸೇ ಮುದಾ ।
ಸಪ್ತರಾತ್ರಂ ಯಥಾಶಕ್ತ್ಯಾ ಧಾರಣೀಯಃ ಸ ಏವ ಹಿ ॥
ಅನುವಾದ
ಆತನ ಮುಂದೆ ಮತ್ತೆ ತನ್ನ ಶ್ರೇಯಸ್ಸಿಗಾಗಿ ಪ್ರಸನ್ನತೆಯಿಂದ ನಿಯಮಗ್ರಹಣಮಾಡಿ, ಏಳು ದಿನಗಳವರೆಗೆ ಯಥಾಶಕ್ತಿಯಾಗಿ ಅದನ್ನು ಪಾಲಿಸಬೇಕು. ॥34॥
(ಶ್ಲೋಕ - 35)
ಮೂಲಮ್
ವರಣಂ ಪಂಚವಿಪ್ರಾಣಾಂ ಕಥಾಭಂಗನಿವೃತ್ತಯೇ ।
ಕರ್ತವ್ಯಂ ತೈರ್ಹರೇರ್ಜಾಪ್ಯಂ ದ್ವಾದಶಾಕ್ಷರವಿದ್ಯಯಾ ॥
ಅನುವಾದ
ಕಥೆಯಲ್ಲಿ ವಿಘ್ನವು ಉಂಟಾಗದಿರಲಿ ಎಂದು ಐದು ಮಂದಿ ಬ್ರಾಹ್ಮಣರನ್ನು ವರಣಮಾಡಬೇಕು. ಅವರು ದ್ವಾದಶಾಕ್ಷರ ಮಹಾಮಂತ್ರದ ಮೂಲಕ ಭಗವಂತನ ನಾಮಗಳನ್ನು ಜಪಿಸಬೇಕು.॥35॥
(ಶ್ಲೋಕ - 36)
ಮೂಲಮ್
ಬ್ರಾಹ್ಮಣಾನ್ ವೈಷ್ಣವಾಂಶ್ಚಾನ್ಯಾಂಸ್ತಥಾ ಕೀರ್ತನಕಾರಿಣಃ ।
ನತ್ವಾ ಸಂಪೂಜ್ಯ ದತ್ತಾಜ್ಞಃ ಸ್ವಯಮಾಸನಮಾವಿಶೇತ್ ॥
ಅನುವಾದ
ವಿಷ್ಣುಭಕ್ತರಾದ ಬ್ರಾಹ್ಮಣರನ್ನು, ಇತರ ಸಂಕೀರ್ತನಕಾರರನ್ನು ನಮಸ್ಕರಿಸಿ, ಪೂಜಿಸಿ, ಅವರ ಅನುಮತಿಯನ್ನು ಪಡೆದು ಸ್ವತಃ ಆಸನದ ಮೇಲೆ ಕುಳಿತುಕೊಳ್ಳಬೇಕು. ॥36॥
(ಶ್ಲೋಕ - 37)
ಮೂಲಮ್
ಲೋಕವಿತ್ತಧನಾಗಾರಪುತ್ರಚಿಂತಾಂ ವ್ಯದಸ್ಯ ಚ ।
ಕಥಾಚಿತ್ತಃ ಶುದ್ಧಮತಿಃ ಸ ಲಭೇತಲಮುತ್ತಮಮ್ ॥
ಅನುವಾದ
ಲೋಕಗಳು, ಸಂಪತ್ತು, ಧನ, ಮನೆ, ಪುತ್ರಾದಿಗಳ ಚಿಂತೆಯನ್ನು ಬಿಟ್ಟು ಶುದ್ಧಚಿತ್ತದಿಂದ ಕೇವಲ ಕಥೆಯಲ್ಲೇ ಲಕ್ಷ್ಯವಿಡುವವನಿಗೆ ಇದರ ಶ್ರವಣದ ಉತ್ತಮ ಫಲವು ದೊರೆಯುತ್ತದೆ.॥37॥
(ಶ್ಲೋಕ - 38)
ಮೂಲಮ್
ಆಸೂರ್ಯೋದಯಮಾರಭ್ಯ ಸಾರ್ಧತ್ರಿಪ್ರಹರಾಂತಕಮ್ ।
ವಾಚನೀಯಾ ಕಥಾ ಸಮ್ಯಗ್ಧೀರಕಂಠಂ ಸುಧೀಮತಾ ॥
ಅನುವಾದ
ಧೀಮಂತನಾದ ಪ್ರವಚನಕಾರನು ಸೂರ್ಯೋದಯದಿಂದ ಕಥೆಯನ್ನು ಪ್ರಾರಂಭಿಸಿ ಮೂರೂವರೆ ಪ್ರಹರದವರೆಗೆ ಮಧ್ಯಮ ಸ್ವರದಿಂದ ಚೆನ್ನಾಗಿ ಕಥಾವಾಚನ ಮಾಡಬೇಕು. ॥38॥
(ಶ್ಲೋಕ - 39)
ಮೂಲಮ್
ಕಥಾವಿರಾಮಃ ಕರ್ತವ್ಯೋ ಮಧ್ಯಾಹ್ನೇ ಘಟಿಕಾದ್ವಯಮ್ ।
ತತ್ಕಥಾಮನು ಕಾರ್ಯಂ ವೈ ಕೀರ್ತನಂ ವೈಷ್ಣವೈಸ್ತದಾ ॥
ಅನುವಾದ
ಮಧ್ಯಾಹ್ನದಲ್ಲಿ ಎರಡು ಗಳಿಗೆಯವರೆಗೆ ವಾಚನವನ್ನು ನಿಲ್ಲಿಸಬೇಕು. ಆ ಸಮಯದಲ್ಲಿ ವಿಷ್ಣುಭಕ್ತರು ಕಥಾಪ್ರಸಂಗಕ್ಕನುಸಾರ ಭಗವಂತನ ಗುಣಗಳನ್ನು ಕೀರ್ತನೆ ಮಾಡುತ್ತಿರಬೇಕು. ವ್ಯರ್ಥವಾದ ಮಾತುಗಳನ್ನು ಆಡಬಾರದು. ॥39॥
(ಶ್ಲೋಕ - 40)
ಮೂಲಮ್
ಮಲಮೂತ್ರಜಯಾರ್ಥಂ ಹಿ ಲಘ್ವಾಹಾರಃ ಸುಖಾವಹಃ ।
ಹವಿಷ್ಯಾನ್ನೇನ ಕರ್ತವ್ಯೋ ಹ್ಯೇಕವಾರಂ ಕಥಾರ್ಥಿನಾ ॥
ಅನುವಾದ
ಕಥಾಶ್ರವಣದ ಕಾಲದಲ್ಲಿ ಮಲ-ಮೂತ್ರಗಳ ವೇಗವನ್ನು ಹತೋಟಿಯಲ್ಲಿಟ್ಟುಕೊಳ್ಳುವುದಕ್ಕಾಗಿ ಅಲ್ಪಾಹಾರ ಸುಖಕರವಾಗಿರುತ್ತದೆ. ಇದಕ್ಕಾಗಿ ಶ್ರೋತೃವು ಒಪ್ಪೊತ್ತು ಹವಿಷ್ಯಾನ್ನವನ್ನು ಸ್ವೀಕರಿಸಬೇಕು. ॥40॥
(ಶ್ಲೋಕ - 41)
ಮೂಲಮ್
ಉಪೋಷ್ಯ ಸಪ್ತರಾತ್ರಂ ವೈ ಶಕ್ತಿಶ್ಚೇಚ್ಛಣುಯಾತ್ತದಾ ।
ಘೃತಪಾನಂ ಪಯಃಪಾನಂ ಕೃತ್ವಾ ವೈ ಶೃಣುಯಾತ್ಸುಖಮ್ ॥
ಅನುವಾದ
ಶಕ್ತಿಯಿದ್ದರೆ ಏಳು ದಿನಗಳೂ ಉಪವಾಸವಿದ್ದು ಕಥಾ ಶ್ರವಣ ಮಾಡಬೇಕು. ಅಥವಾ ಕೇವಲ ತುಪ್ಪವನ್ನೋ, ಹಾಲನ್ನೋ ಕುಡಿದು ಸುಖವಾಗಿ ಕಥೆಯನ್ನು ಶ್ರವಣಿಸಬೇಕು. ॥41॥
(ಶ್ಲೋಕ - 42)
ಮೂಲಮ್
ಫಲಾಹಾರೇಣ ವಾ ಭಾವ್ಯಮೇಕಭುಕ್ತೇನ ವಾ ಪುನಃ ।
ಸುಖಸಾಧ್ಯಂ ಭವೇದ್ಯತ್ತು ಕರ್ತವ್ಯಂ ಶ್ರವಣಾಯ ತತ್ ॥
ಅನುವಾದ
ಅಥವಾ ಫಲಾಹಾರವೋ, ಒಪ್ಪೊತ್ತು ಭೋಜನವೋ ಮಾಡಲಿ. ಈ ಆಹಾರ ನಿಯಮದಲ್ಲಿ ಸುಲಭವಾಗಿ ಅನುಸರಿಸಲು ಸಾಧ್ಯವಾಗುವುದನ್ನು ಅನುಸರಿಸುತ್ತಾ ಕಥಾಶ್ರವಣಮಾಡಬೇಕು. ॥42॥
(ಶ್ಲೋಕ - 43)
ಮೂಲಮ್
ಭೋಜನಂ ತು ವರಂ ಮನ್ಯೇ ಕಥಾಶ್ರವಣಕಾರಕಮ್ ।
ನೋಪವಾಸೋ ವರಃ ಪ್ರೋಕ್ತಃ ಕಥಾವಿಘ್ನಕರೋ ಯದಿ ॥
ಅನುವಾದ
ಉಪವಾಸಕ್ಕಿಂತ ಒಪ್ಪೊತ್ತು ಭೋಜನ ಮಾಡುವುದೇ ಉತ್ತಮವೆಂದು ನಾನು ತಿಳಿಯುತ್ತೇನೆ. ಅದು ಕಥಾ ಶ್ರವಣದಲ್ಲಿ ಸಹಾಯಕವಾದೀತು. ಉಪವಾಸದಿಂದ ಶ್ರವಣದಲ್ಲಿ ಅಡ್ಡಿಯುಂಟಾದರೆ ಆ ಉಪವಾಸವು ಖಂಡಿತವಾಗಿ ಉತ್ತಮವಲ್ಲ. ॥43॥
(ಶ್ಲೋಕ - 44)
ಮೂಲಮ್
ಸಪ್ತಾಹವ್ರತಿನಾಂ ಪುಂಸಾಂ ನಿಯಮಾನ್ ಶೃಣು ನಾರದ ।
ವಿಷ್ಣುದೀಕ್ಷಾವಿಹೀನಾನಾಂ ನಾಧಿಕಾರಃ ಕಥಾಶ್ರವೇ ॥
ಅನುವಾದ
ನಾರದರೇ! ನಿಯಮದಿಂದ ಸಪ್ತಾಹ ಶ್ರವಣ ಮಾಡುವವರು ಅನುಸರಿಸಬೇಕಾದ ನಿಯಮಗಳನ್ನು ಕೇಳಿರಿ. ವಿಷ್ಣುವಿನಲ್ಲಿ ಏಕ ಭಕ್ತಿಯ ದೀಕ್ಷೆಯಿಲ್ಲದವನಿಗೆ ಈ ಕಥಾ ಶ್ರವಣದಲ್ಲಿ ಅಧಿಕಾರವಿಲ್ಲ. ॥44॥
(ಶ್ಲೋಕ - 45)
ಮೂಲಮ್
ಬ್ರಹ್ಮಚರ್ಯಮಧಃಸುಪ್ತಿಃ ಪತ್ರಾವಲ್ಯಾಂ ಚ ಭೋಜನಮ್ ।
ಕಥಾಸಮಾಪ್ತೌ ಭುಕ್ತಿಂ ಚ ಕುರ್ಯಾನ್ನಿತ್ಯಂ ಕಥಾವ್ರತೀ ॥
ಅನುವಾದ
ಕಥಾವ್ರತಿಯು ಬ್ರಹ್ಮಚರ್ಯದಿಂದ ಇರಬೇಕು. ನೆಲದ ಮೇಲೆ ಮಲಗಬೇಕು. ಪ್ರತಿದಿನವು ಕಥಾ ಸಮಾಪ್ತವಾದ ಮೇಲೆಯೇ ಎಲೆಯಲ್ಲಿ ಊಟ ಮಾಡಬೇಕು. ॥45॥
(ಶ್ಲೋಕ - 46)
ಮೂಲಮ್
ದ್ವಿದಲಂ ಮಧು ತೈಲಂ ಚ ಗರಿಷ್ಠಾನ್ನಂ ತಥೈವ ಚ ।
ಭಾವದುಷ್ಟಂ ಪರ್ಯುಷಿತಂ ಜಹ್ಯಾನ್ನಿತ್ಯಂ ಕಥಾವ್ರತೀ ॥
ಅನುವಾದ
ಅವನು ದ್ವಿದಳಧಾನ್ಯ, ಜೇನು, ತುಪ್ಪ, ಎಣ್ಣೆ, ಗರಿಷ್ಠವಾದ ಆಹಾರ, ಭಾವದುಷ್ಟ ಪದಾರ್ಥಗಳು ಹಾಗೂ ಹಳಸಿದ ಅನ್ನವನ್ನು ಸದಾ ತ್ಯಾಗ ಮಾಡಬೇಕು. ॥46॥
(ಶ್ಲೋಕ - 47)
ಮೂಲಮ್
ಕಾಮಂ ಕ್ರೋಧಂ ಮದಂ ಮಾನಂ ಮತ್ಸರಂ ಲೋಭಮೇವ ಚ ।
ದಂಭಂ ಮೋಹಂ ತಥಾ ದ್ವೇಷಂ ದೂರಯೇಚ್ಚ ಕಥಾವ್ರತೀ ॥
ಅನುವಾದ
ಕಾಮ, ಕ್ರೋಧ, ಮದ, ಮಾನ, ಮತ್ಸರ, ಲೋಭ, ಮೋಹ, ಡಾಂಭಿಕತೆ, ದ್ವೇಷ ಇವುಗಳನ್ನು ದೂರವಾಗಿಸಬೇಕು. ॥47॥
(ಶ್ಲೋಕ - 48)
ಮೂಲಮ್
ವೇದವೈಷ್ಣವವಿಪ್ರಾಣಾಂ ಗುರುಗೋವ್ರತಿನಾಂ ತಥಾ ।
ಸ್ತ್ರೀರಾಜಮಹತಾಂ ನಿಂದಾಂ ವರ್ಜಯೇದ್ಯಃ ಕಥಾವ್ರತೀ ॥
ಅನುವಾದ
ವೇದಗಳು, ವಿಷ್ಣುಭಕ್ತರು, ವಿಪ್ರರು, ಗುರುಭಕ್ತರು, ಗೋಸೇವಕರು, ಸ್ತ್ರೀಯರು, ರಾಜರು, ಮಹಾಪುರುಷರು ಇವರ ನಿಂದೆಯನ್ನು ಅವರು ಸರ್ವಥಾ ತ್ಯಜಿಸಬೇಕು. ॥48॥
(ಶ್ಲೋಕ - 49)
ಮೂಲಮ್
ರಜಸ್ವಲಾಂತ್ಯಜಮ್ಲೇಚ್ಛಪತಿತವ್ರಾತ್ಯಕೈಸ್ತಥಾ ।
ದ್ವಿಜದ್ವಿಡ್ವೇದಬಾಹ್ಯೈಶ್ಚ ನ ವದೇದ್ಯಃ ಕಥಾವ್ರತೀ ॥
ಅನುವಾದ
ರಜಸ್ವಲೆಯರು, ಚಾಂಡಾಲರು, ಮ್ಲೇಚ್ಛರು, ಪತಿತರು, ವ್ರತಭ್ರಷ್ಟರು, ಬ್ರಹ್ಮದ್ವೇಷಿಗಳು, ವೈದಿಕ ಮತಕ್ಕೆ ಹೊರಗಾದವರು ಇಂತಹವರೊಡನೆ ಮಾತನಾಡಬಾರದು. ॥49॥
(ಶ್ಲೋಕ - 50)
ಮೂಲಮ್
ಸತ್ಯಂ ಶೌಚಂ ದಯಾ ಮೌನಮಾರ್ಜವಂ ವಿನಯಂ ತಥಾ ।
ಉದಾರಮಾನಸಂ ತದ್ವದೇವಂ ಕುರ್ಯಾತ್ಕಥಾವ್ರತೀ ॥
ಅನುವಾದ
ಸದಾಕಾಲ ಸತ್ಯ, ಶೌಚ, ದಯೆ, ಮೌನ, ಸರಳತೆ ವಿನಯ, ಔದಾರ್ಯ ಇವುಗಳಿಂದ ವರ್ತಿಸಬೇಕು. ॥50॥
(ಶ್ಲೋಕ - 51)
ಮೂಲಮ್
ದರಿದ್ರಶ್ಚ ಕ್ಷಯೀ ರೋಗೀ ನಿರ್ಭಾಗ್ಯಃ ಪಾಪಕರ್ಮವಾನ್ ।
ಅನಪತ್ಯೋ ಮೋಕ್ಷಕಾಮಃ ಶೃಣುಯಾಚ್ಚ ಕಥಾಮಿಮಾಮ್ ॥
ಅನುವಾದ
ಬಡವನು, ಕ್ಷಯವೇ ಮೊದಲಾದ ರೋಗಗಳಿಂದ ಪೀಡಿತನಾದವನು, ಭಾಗ್ಯಹೀನ, ಪಾಪ ಕರ್ಮಿ, ಸಂತಾನಹೀನ, ಮುಮುಕ್ಷು, ಇವರುಗಳೂ ಕೂಡ ಈ ಕಥೆಯನ್ನು ಕೇಳಬೇಕು. ॥51॥
(ಶ್ಲೋಕ - 52)
ಮೂಲಮ್
ಅಪುಷ್ಪಾ ಕಾಕವಂಧ್ಯಾ ಚ ವಂಧ್ಯಾ ಯಾ ಚ ಮೃತಾರ್ಭಕಾ ।
ಸ್ರವದ್ಗರ್ಭಾ ಚ ಯಾ ನಾರೀ ತಯಾ ಶ್ರಾವ್ಯಾ ಪ್ರಯತ್ನತಃ ॥
ಅನುವಾದ
ರಜೋದರ್ಶನ ನಿಂತು ಹೋದ ಸ್ತ್ರೀಯು, ಹುಟ್ಟಿದೊಡನೆಯೇ ಸಾಯುವ ಮಕ್ಕಳುಳ್ಳವಳು, ಗರ್ಭಸ್ರಾವ ಆಗುವವಳು, ಇವರೂ ಕೂಡ ಪ್ರಯತ್ನ ಪೂರ್ವಕ ಕಥೆಯನ್ನು ಕೇಳಬೇಕು. ॥52॥
(ಶ್ಲೋಕ - 53)
ಮೂಲಮ್
ಏತೇಷು ವಿಧಿನಾ ಶ್ರಾವೇ ತದಕ್ಷಯಕರಂ ಭವೇತ್ ।
ಅತ್ಯುತ್ತಮಾ ಕಥಾ ದಿವ್ಯಾ ಕೋಟಿಯಜ್ಞಫಲಪ್ರದಾ ॥
ಅನುವಾದ
ಇವರೆಲ್ಲರೂ ವಿಧಿಪೂರ್ವಕ ಕಥಾ ಶ್ರವಣ ಮಾಡಿದರೆ ಅವರಿಗೆ ಅಕ್ಷಯವಾದ ಫಲವು ದೊರೆಯುತ್ತದೆ. ಈ ಅತ್ಯುತ್ತಮವಾದ ದಿವ್ಯ ಕಥೆಯು ಕೋಟಿಯಜ್ಞಗಳ ಫಲವನ್ನೀಯುತ್ತದೆ. ॥53॥
(ಶ್ಲೋಕ - 54)
ಮೂಲಮ್
ಏವಂ ಕೃತ್ವಾ ವ್ರತವಿಧಿಮುದ್ಯಾಪನಮಥಾಚರೇತ್ ।
ಜನ್ಮಾಷ್ಟಮೀವ್ರತಮಿವ ಕರ್ತವ್ಯಂ ಫಲಕಾಂಕ್ಷಿಭಿಃ ॥
ಅನುವಾದ
ಈ ರೀತಿಯಲ್ಲಿ ವ್ರತದ ವಿಧಿಗಳನ್ನು ಪಾಲಿಸಿ ಕೊನೆಗೆ ವ್ರತದ ಉದ್ಯಾಪನೆಯನ್ನು ಮಾಡಬೇಕು. ಫಲಾಪೇಕ್ಷೆಯುಳ್ಳವರು ಜನ್ಮಾಷ್ಟಮಿ ವ್ರತದಂತೆ ಈ ಕಥಾವ್ರತದ ಉದ್ಯಾಪನೆ ಮಾಡಲಿ. ॥54॥
(ಶ್ಲೋಕ - 55)
ಮೂಲಮ್
ಅಕಿಂಚನೇಷು ಭಕ್ತೇಷು ಪ್ರಾಯೋ ನೋದ್ಯಾಪನಾಗ್ರಹಃ ।
ಶ್ರವಣೇನೈವ ಪೂತಾಸ್ತೇ ನಿಷ್ಕಾಮಾ ವೈಷ್ಣವಾ ಯತಃ ॥
ಅನುವಾದ
ಆದರೆ ಫಲಾಪೇಕ್ಷೆಯಿಲ್ಲದ ವಿರಕ್ತ ಭಕ್ತರಿಗೆ ಈ ಉದ್ಯಾಪನೆಯು ಕಡ್ಡಾಯವಿಲ್ಲ. ಅವರು ಕಥಾಶ್ರವಣದಿಂದಲೇ ಪವಿತ್ರರಾಗಿರುತ್ತಾರೆ. ಏಕೆಂದರೆ, ಅವರು ನಿಷ್ಕಾಮಿಗಳಾದ ವಿಷ್ಣುಭಕ್ತರು. ॥55॥
(ಶ್ಲೋಕ - 56)
ಮೂಲಮ್
ಏವಂ ನಗಾಹಯಜ್ಞೇಽಸ್ಮಿನ್ ಸಮಾಪ್ತೇ ಶ್ರೋತೃಭಿಸ್ತದಾ ।
ಪುಸ್ತಕಸ್ಯ ಚ ವಕ್ತುಶ್ಚ ಪೂಜಾ ಕಾರ್ಯಾತಿಭಕ್ತಿತಃ ॥
ಅನುವಾದ
ಹೀಗೆ ಸಪ್ತಾಹಯಜ್ಞವು ಸಮಾಪ್ತವಾದಾಗ ಶ್ರೋತೃಗಳು ಶ್ರೀಮದ್ಭಾಗವತ ಪುಸ್ತಕವನ್ನು, ಪ್ರವಚನಕಾರರನ್ನೂ ಅತ್ಯಂತ ಭಕ್ತಿಯಿಂದ ಪೂಜಿಸಬೇಕು. ॥56॥
(ಶ್ಲೋಕ - 57)
ಮೂಲಮ್
ಪ್ರಸಾದತುಲಸೀಮಾಲಾ ಶ್ರೋತೃಭ್ಯಶ್ಚಾಥ ದೀಯತಾಮ್ ।
ಮೃದಂಗತಾಲಲಲಿತಂ ಕರ್ತವ್ಯಂ ಕೀರ್ತನಂ ತತಃ ॥
ಅನುವಾದ
ಅನಂತರ ಪ್ರವಚನಕಾರನು ಶ್ರೋತೃಗಳಿಗೆ ಪ್ರಸಾದ, ತುಳಸೀ, ಪುಷ್ಪಮಾಲೆ ಮುಂತಾದವುಗಳನ್ನು ಅನುಗ್ರಹಿಸಬೇಕು. ಎಲ್ಲರೂ ತಾಳ-ಮೃದಂಗಗಳೊಡನೆ ಇಂಪಾದ ಧ್ವನಿಯಿಂದ ಸಂಕೀರ್ತನೆ ಮಾಡಬೇಕು. ॥57॥
(ಶ್ಲೋಕ - 58)
ಮೂಲಮ್
ಜಯಶಬ್ದಂ ನಮಃಶಬ್ದಂ ಶಂಖಶಬ್ದಂ ಚ ಕಾರಯೇತ್ ।
ವಿಪ್ರೇಭ್ಯೋ ಯಾಚಕೇಭ್ಯಶ್ಚ ವಿತ್ತಮನ್ನಂ ಚ ದೀಯತಾಮ್ ॥
ಅನುವಾದ
‘ಜಯ ಜಯ ನಮೋ ನಮಃ’ ಎಂಬ ಧ್ವನಿಗಳೊಡನೆ ಶಂಖಧ್ವನಿ ಗೈದು ಬ್ರಾಹ್ಮಣರಿಗೂ, ಯಾಚಕರಿಗೂ ಅನ್ನಾದಾನ ಮಾಡಬೇಕು. ॥58॥
(ಶ್ಲೋಕ - 59)
ಮೂಲಮ್
ವಿರಕ್ತಶ್ಚೇದ್ಭವೇಚ್ಛ್ರೋತಾ ಗೀತಾ ವಾಚ್ಯಾ ಪರೇಽಹನಿ ।
ಗೃಹಸ್ಥಶ್ಚೇತ್ತದಾ ಹೋಮಃ ಕರ್ತವ್ಯಃ ಕರ್ಮಶಾಂತಯೇ ॥
ಅನುವಾದ
ಶ್ರೋತೃವು ವಿರಕ್ತನಾಗಿದ್ದರೆ ಮರುದಿನ ಕರ್ಮಶಾಂತಿಗಾಗಿ ಗೀತಾಪಾರಾಯಣ ಮಾಡಬೇಕು. ಗೃಹಸ್ಥನಾಗಿದ್ದರೆ ಹೋಮ ಮಾಡಬೇಕು. ॥59॥
(ಶ್ಲೋಕ - 60)
ಮೂಲಮ್
ಪ್ರತಿಶ್ಲೋಕಂ ತು ಜುಹುಯಾದ್ವಿಧಿನಾ ದಶಮಸ್ಯ ಚ ।
ಪಾಯಸಂ ಮಧು ಸರ್ಪಿಶ್ಚ ತಿಲಾನ್ನಾದಿಕಸಂಯುತಮ್ ॥
ಅನುವಾದ
ಆ ಹೋಮದಲ್ಲಿ ದಶಮಸ್ಕಂಧದ ಒಂದೊಂದು ಶ್ಲೋಕವನ್ನು ಪಠಿಸಿ ವಿಧಿಪೂರ್ವಕವಾಗಿ ಪಾಯಸ, ಜೇನು, ತುಪ್ಪ, ಎಳ್ಳು, ಅನ್ನ ಇತ್ಯಾದಿಗಳಿಂದ ಆಹುತಿ ಕೊಡಬೇಕು. ॥60॥
(ಶ್ಲೋಕ - 61)
ಮೂಲಮ್
ಅಥವಾ ಹವನಂ ಕುರ್ಯಾದ್ಗಾಯತ್ರ್ಯಾ ಸುಸಮಾಹಿತಃ ।
ತನ್ಮಯತ್ವಾತ್ಪುರಾಣಸ್ಯ ಪರಮಸ್ಯ ಚ ತತ್ತ್ವತಃ ॥
ಅನುವಾದ
ಅಥವಾ ಏಕಾಗ್ರಚಿತ್ತದಿಂದ ಗಾಯತ್ರೀ ಮಂತ್ರದ ಮೂಲಕ ಹೋಮಮಾಡಬೇಕು. ಏಕೆಂದರೆ ಈ ಶ್ರೀಮದ್ಭಾಗವತ ಮಹಾಪುರಾಣವು ತಾತ್ತ್ವಿಕವಾಗಿ ಗಾಯತ್ರೀಸ್ವರೂಪವೇ ಆಗಿದೆ. ॥61॥
(ಶ್ಲೋಕ - 62)
ಮೂಲಮ್
ಹೋಮಾಶಕ್ತೌ ಬುಧೋ ಹೌಮ್ಯಂ ದದ್ಯಾತ್ತತಲಸಿದ್ಧಯೇ ।
ನಾನಾಚ್ಛಿದ್ರನಿರೋಧಾರ್ಥಂ ನ್ಯೂನತಾಧಿಕತಾನಯೋಃ ॥
(ಶ್ಲೋಕ - 63)
ಮೂಲಮ್
ದೋಷಯೋಃ ಪ್ರಶಮಾರ್ಥಂ ಚ ಪಠೇನ್ನಾಮಸಹಸ್ರಕಮ್ ।
ತೇನ ಸ್ಯಾತ್ಸಫಲಂ ಸರ್ವಂ ನಾಸ್ತ್ಯಸ್ಮಾದಧಿಕಂ ಯತಃ ॥
ಅನುವಾದ
ಹೋಮಮಾಡುವ ಶಕ್ತಿ ಇಲ್ಲದಿದ್ದರೆ ಹೋಮ ಫಲವನ್ನು ಪಡೆಯುವುದಕ್ಕಾಗಿ ಬ್ರಾಹ್ಮಣರಿಗೆ ಹೋಮ ದ್ರವ್ಯಗಳನ್ನು ದಾನಮಾಡಬೇಕು. ಸಪ್ತಾಹ ಶ್ರವಣದಲ್ಲಿ ಸಂಭವಿಸಬಹುದಾದ ಬಗೆ-ಬಗೆಯ ಛಿದ್ರಗಳನ್ನು ಪೂರಣ ಮಾಡಲು ಮತ್ತು ವಿಧಿಯಲ್ಲಿ ನ್ಯೂನಾಧಿಕ್ಯ ಆಗಿರುವ ದೋಷಗಳ ಶಾಂತಿಗಾಗಿ ವಿಷ್ಣುಸಹಸ್ರನಾಮವನ್ನು ಪಾರಾಯಣಮಾಡಬೇಕು. ಅದರಿಂದ ಎಲ್ಲ ಕರ್ಮಗಳು ಸಫಲವಾಗುತ್ತವೆ. ಏಕೆಂದರೆ, ಅದಕ್ಕಿಂತ ಶ್ರೇಷ್ಠವಾದ ಕರ್ಮವು ಮತ್ತೊಂದಿಲ್ಲ. ॥62-63॥
(ಶ್ಲೋಕ - 64)
ಮೂಲಮ್
ದ್ವಾದಶ ಬ್ರಾಹ್ಮಣಾನ್ ಪಶ್ಚಾದ್ಭೋಜಯೇನ್ಮ ಧುಪಾಯಸೈಃ ।
ದದ್ಯಾತ್ಸುವರ್ಣಂ ಧೇನುಂ ಚ ವ್ರತಪೂರ್ಣತ್ವಹೇತವೇ ॥
ಅನುವಾದ
ಅನಂತರ ಹನ್ನೆರಡು ಮಂದಿ ಬ್ರಾಹ್ಮಣರಿಗೆ ಪಾಯಸ, ಜೇನುತುಪ್ಪ ಮುಂತಾದವುಗಳಿಂದ ಭೋಜನ ಮಾಡಿಸಬೇಕು. ವ್ರತದ ಪೂರ್ತಿಗಾಗಿ ಗೋದಾನ-ಸುವರ್ಣದಾನಗಳನ್ನು ಮಾಡಬೇಕು. ॥64॥
(ಶ್ಲೋಕ - 65)
ಮೂಲಮ್
ಶಕ್ತೌ ಪಲತ್ರಯಮಿತಂ ಸ್ವರ್ಣಸಿಂಹಂ ವಿಧಾಯ ಚ ।
ತತ್ರಾಸ್ಯ ಪುಸ್ತಕಂ ಸ್ಥಾಪ್ಯಂ ಲಿಖಿತಂ ಲಲಿತಾಕ್ಷರಮ್ ॥
(ಶ್ಲೋಕ - 66)
ಮೂಲಮ್
ಸಂಪೂಜ್ಯಾವಾಹನಾದ್ಯೈಸ್ತದುಪಚಾರೈಃ ಸದಕ್ಷಿಣಮ್ ।
ವಸ್ತ್ರ ಭೂಷಣಗಂಧಾದ್ಯೈಃ ಪೂಜಿತಾಯ ಯತಾತ್ಮನೇ ॥
ಅನುವಾದ
ಸಾಮರ್ಥ್ಯವಿದ್ದರೆ ಮೂರು ತೊಲ ಸುವರ್ಣದಿಂದ ಒಂದು ಸಿಂಹಾಸನವನ್ನು ಮಾಡಿಸಿ, ಅದರಲ್ಲಿ ಸುಂದರವಾದ ಅಕ್ಷರಗಳಿಂದ ಬರೆದ ಶ್ರೀಮದ್ಭಾಗವತ ಗ್ರಂಥವನ್ನಿಟ್ಟು, ಅದನ್ನು ಆವಾಹನಾದಿ ಷೋಡಶೋಪಚಾರ ಪೂಜೆಯನ್ನು ಸಲ್ಲಿಸಿ, ಜಿತೇಂದ್ರಿಯನಾದ ಆಚಾರ್ಯನನ್ನು ವಸ್ತ್ರ-ಭೂಷಣ-ಗಂಧಾದಿಗಳಿಂದ ಪೂಜಿಸಿ, ದಕ್ಷಿಣೆ ಸಹಿತ ಸಮರ್ಪಿಸಬೇಕು. ॥65-66॥
(ಶ್ಲೋಕ - 67)
ಮೂಲಮ್
ಆಚಾರ್ಯಾಯ ಸುಧೀರ್ದತ್ತ್ವಾ ಮುಕ್ತಃ ಸ್ಯಾದ್ಭವಬಂಧನೈಃ ।
ಏವಂ ಕೃತೇ ವಿಧಾನೇ ಚ ಸರ್ವಪಾಪನಿವಾರಣೇ ॥
(ಶ್ಲೋಕ - 68)
ಮೂಲಮ್
ಫಲದಂ ಸ್ಯಾತ್ಪುರಾಣಂ ತು ಶ್ರೀಮದ್ಭಾಗವತಂ ಶುಭಮ್ ।
ಧರ್ಮಕಾಮಾರ್ಥಮೋಕ್ಷಾಣಾಂ ಸಾಧನಂ ಸ್ಯಾನ್ನ ಸಂಶಯಃ ॥
ಅನುವಾದ
ಹೀಗೆ ದಾನಮಾಡಿದ ಬುದ್ಧಿವಂತನಾದ ದಾತೃವು ಭವಬಂಧನದಿಂದ ಬಿಡುಗಡೆ ಹೊಂದುವನು. ಈ ಸಪ್ತಾಹ ಪಾರಾಯಣದ ವಿಧಿಯು ಎಲ್ಲ ಪಾಪಗಳನ್ನು ಕಳೆಯುವಂತಹುದಾಗಿದೆ. ಇದನ್ನು ಈ ಪ್ರಕಾರ ಸರಿಯಾಗಿ ಪಾಲಿಸುವುದರಿಂದ ಈ ಮಂಗಲಮಯ ಭಾಗವತ ಪುರಾಣವು ಅಭೀಷ್ಟ ಫಲವನ್ನು ಕೊಡುತ್ತದೆ. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಅನುಗ್ರಹಿಸುವ ಸಾಧನೆ ಇದು. ಇದರಲ್ಲಿ ಸಂದೇಹವೇ ಇಲ್ಲ. ॥67-68॥
(ಶ್ಲೋಕ - 69)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಇತಿ ತೇ ಕಥಿತಂ ಸರ್ವಂ ಕಿಂ ಭೂಯಃ ಶ್ರೋತುಮಿಚ್ಛಸಿ ।
ಶ್ರೀಮದ್ಭಾಗವತೇನೈವ ಭುಕ್ತಿಮುಕ್ತೀ ಕರೇ ಸ್ಥಿತೇ ॥
ಅನುವಾದ
ಸನಕಾದಿಗಳು ಹೇಳುತ್ತಾರೆ — ನಾರದರೇ! ಈ ರೀತಿಯಾಗಿ ಈ ಸಪ್ತಾಹವಿಧಿಯನ್ನು ನಿಮಗೆ ಪೂರ್ಣವಾಗಿ ತಿಳಿಸಿದ್ದೇವೆ. ಈಗ ಇನ್ನೇನು ಕೇಳಬಯಸುತ್ತಿರಿವಿರಿ? ಈ ಶ್ರೀಮದ್ಭಾಗವತದಿಂದಲೇ ಭೋಗ ಮತ್ತು ಮೋಕ್ಷ ಎರಡೂ ಕೈವಶವಾಗುತ್ತವೆ. ॥69॥
(ಶ್ಲೋಕ - 70)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತ್ಯುಕ್ತ್ವಾ ತೇ ಮಹಾತ್ಮಾನಃ ಪ್ರೋಚುರ್ಭಾಗವತೀಂ ಕಥಾಮ್ ।
ಸರ್ವಪಾಪಹರಾಂ ಪುಣ್ಯಾಂ ಭುಕ್ತಿಮುಕ್ತಿಪ್ರದಾಯಿನೀಮ್ ॥
(ಶ್ಲೋಕ - 71)
ಮೂಲಮ್
ಶೃಣ್ವತಾಂ ಸರ್ವಭೂತಾನಾಂ ಸಪ್ತಾಹಂ ನಿಯತಾತ್ಮನಾಮ್ ।
ಯಥಾವಿಧಿ ತತೋ ದೇವಂ ತುಷ್ಟುವುಃ ಪುರುಷೋತ್ತಮಮ್ ॥
ಅನುವಾದ
ಸೂತ ಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ಹೀಗೆ ಹೇಳಿ ಮಹಾತ್ಮರಾದ ಸನಕಾದಿಗಳು ನಿಯಮ ಪೂರ್ವಕವಾಗಿ ಸರ್ವಪಾಪನಾಶಿನಿಯೂ, ಪರಮ ಪವಿತ್ರವೂ, ಭುಕ್ತಿ-ಮುಕ್ತಿ-ಪ್ರದಾಯಕವೂ ಆದ ಶ್ರೀಮದ್ಭಾಗವತ ಕಥೆಯನ್ನು ಸಪ್ತಾಹ ವಿಧಿಪೂರ್ವಕ ಪ್ರವಚನ ಮಾಡಿದರು. ಅನಂತರ ದೇವದೇವನಾದ ಪುರುಷೋತ್ತಮನನ್ನು ಯಥಾ ವಿಧಿಯಾಗಿ ಸ್ತೋತ್ರಮಾಡಿದರು. ॥70-71॥
(ಶ್ಲೋಕ - 72)
ಮೂಲಮ್
ತದಂತೇ ಜ್ಞಾನವೈರಾಗ್ಯಭಕ್ತೀನಾಂ ಪುಷ್ಟತಾ ಪರಾ ।
ತಾರುಣ್ಯಂ ಪರಮಂ ಚಾಭೂತ್ಸರ್ವಭೂತ ಮನೋಹರಮ್ ॥
ಅನುವಾದ
ಕಥಾ ಶ್ರವಣಮಾಡಿದ ಕೊನೆಯಲ್ಲಿ ಜ್ಞಾನ, ಭಕ್ತಿ, ವೈರಾಗ್ಯಗಳು ಎಲ್ಲ ಭೂತಗಳಿಗೂ ಆಕರ್ಷಕವಾದ ಪುಷ್ಪಿಯನ್ನು, ತಾರುಣ್ಯವನ್ನು ಪಡೆದು ಕಂಗೊಳಿಸಿದರು. ॥72॥
(ಶ್ಲೋಕ - 73)
ಮೂಲಮ್
ನಾರದಶ್ಚ ಕೃತಾರ್ಥೋಽಭೂತ್ಸಿದ್ಧೇ ಸ್ವೀಯೇ ಮನೋರಥೇ ।
ಪುಲಕೀಕೃತ ಸರ್ವಾಂಗಃ ಪರಮಾನಂದ ಸಂಭೃತಃ ॥
ಅನುವಾದ
ತನ್ನ ಮನೋರಥವು ಈಡೇರಿದ್ದರಿಂದ ನಾರದರೂ ಪರಮಾನಂದ ಪೂರ್ಣರಾಗಿ ಪುಳಕಿತರಾದರು. ॥73॥
(ಶ್ಲೋಕ - 74)
ಮೂಲಮ್
ಏವಂ ಕಥಾಂ ಸಮಾಕರ್ಣ್ಯ ನಾರದೋ ಭಗವತ್ಪ್ರಿಯಃ ।
ಪ್ರೇಮಗದ್ಗದಯಾ ವಾಚಾ ತಾನುವಾಚ ಕೃತಾಂಜಲಿಃ ॥
ಅನುವಾದ
ಹೀಗೆ ಕಥೆಯನ್ನು ಶ್ರವಣಿಸಿದ ಭಗವಂತನ ಪ್ರಿಯರಾದ ನಾರದರು ಕೈ ಜೋಡಿಸಿಕೊಂಡು ಪ್ರೇಮ ಗದ್ಗದವಾಣಿಯಿಂದ ಸನಕಾದಿಗಳಲ್ಲಿ ಹೀಗೆ ವಿಜ್ಞಾಪಿಸಿಕೊಂಡರು. ॥74॥
(ಶ್ಲೋಕ - 75)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಧನ್ಯೋಽಸ್ಮ್ಯನುಗೃಹೀತೋಽಸ್ಮಿ ಭವದ್ಭಿಃ ಕರುಣಾಪರೈಃ ।
ಅದ್ಯ ಮೇ ಭಗವಾಂಲ್ಲಬ್ಧಃ ಸರ್ವಪಾಪಹರೋ ಹರಿಃ ॥
ಅನುವಾದ
ನಾರದರೆಂದರು — ಓ ಮಹಾತ್ಮರೇ! ಕರುಣಾಪರರಾದ ನಿಮ್ಮಿಂದ ನಾನು ಧನ್ಯನಾದೆನು. ನಿಮ್ಮಿಂದ ಮಹಾನುಗ್ರಹವಾಯಿತು. ಈಗ ನನಗೆ ಸರ್ವಪಾಪಹರನಾದ ಭಗವಾನ್ ಶ್ರೀಹರಿಯ ಪ್ರಾಪ್ತಿಯಾಯಿತು. ॥75॥
(ಶ್ಲೋಕ - 76)
ಮೂಲಮ್
ಶ್ರವಣಂ ಸರ್ವಧರ್ಮೇಭ್ಯೋ ವರಂ ಮನ್ಯೇ ತಪೋಧನಾಃ ।
ವೈಕುಂಠಸ್ಥೋ ಯತಃ ಕೃಷ್ಣಃ ಶ್ರವಣಾದ್ಯಸ್ಯ ಲಭ್ಯತೇ ॥
ಅನುವಾದ
ತಪೋಧನರೇ! ಶ್ರೀಮದ್ಭಾಗವತ ಶ್ರವಣವನ್ನೇ ಸರ್ವಶ್ರೇಷ್ಠವಾದ ಧರ್ಮವೆಂದು ನಾನು ತಿಳಿಯುತ್ತೇನೆ. ಏಕೆಂದರೆ, ಇದರ ಶ್ರವಣದಿಂದ ವೈಕುಂಠ ನಿವಾಸಿಯಾದ ಶ್ರೀಕೃಷ್ಣನ ಪ್ರಾಪ್ತಿಯಾಗುತ್ತದೆ. ॥76॥
(ಶ್ಲೋಕ - 77)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ಬ್ರುವತಿ ವೈ ತತ್ರ ನಾರದೇ ವೈಷ್ಣವೋತ್ತಮೇ ।
ಪರಿಭ್ರಮನ್ ಸಮಾಯಾತಃ ಶುಕೋ ಯೋಗೇಶ್ವರಸ್ತದಾ ॥
ಅನುವಾದ
ಸೂತರು ಹೇಳುತ್ತಾರೆ — ಶೌನಕರೇ! ವೈಷ್ಣವ ಶ್ರೇಷ್ಠರಾದ ನಾರದರು ಹೀಗೆ ಹೇಳುತ್ತಿರುವಂತೆಯೇ ಸುತ್ತಾಡುತ್ತಾ ಮಹಾಯೋಗೇಶ್ವರರಾದ ಶುಕಮಹಾಮುನಿಗಳು ಅಲ್ಲಿಗೆ ಬಂದರು. ॥77॥
(ಶ್ಲೋಕ - 78)
ಮೂಲಮ್
ತತ್ರಾಯಯೌ ಷೋಡಶವಾರ್ಷಿಕಸ್ತದಾ
ವ್ಯಾಸಾತ್ಮಜೋ ಜ್ಞಾನಮಹಾಬ್ಧಿ ಚಂದ್ರಮಾಃ ।
ಕಥಾವಸಾನೇ ನಿಜಲಾಭಪೂರ್ಣಃ
ಪ್ರೇಮ್ಣಾ ಪಠನ್ ಭಾಗವತಂ ಶನೈಃ ಶನೈಃ ॥
ಅನುವಾದ
ಹದಿನಾರು ವಯಸ್ಸಿನ ಹರೆಯಲ್ಲಿದ್ದರೂ ಮಹಾಜ್ಞಾನಿಗಳಾಗಿ ಜ್ಞಾನ ರೂಪೀ ಮಹಾಸಮುದ್ರಕ್ಕೆ ಚಂದ್ರನಂತಿರುವ, ಆತ್ಮಲಾಭದಿಂದ ಕೃತಕೃತ್ಯರಾಗಿದ್ದ ಶ್ರೀವೇದವ್ಯಾಸರ ಸುಪುತ್ರರಾದ ಶುಕಮುನೀಂದ್ರರು ಪರಮ ಪ್ರೇಮದಿಂದ ಮೆಲ್ಲ-ಮೆಲ್ಲನೆ ಶ್ರೀಭಾಗವತವನ್ನು ಪಠಿಸುತ್ತಾ ಕಥಾ ಸಪ್ತಾಹದ ಕೊನೆಯಲ್ಲಿ ಅಲ್ಲಿಗೆ ಆಗಮಿಸಿದರು. ॥78॥
(ಶ್ಲೋಕ - 79)
ಮೂಲಮ್
ದೃಷ್ಟ್ವಾ ಸದಸ್ಯಾಃ ಪರಮೋರುತೇಜಸಂ
ಸದ್ಯಃ ಸಮುತ್ಥಾಯ ದದುರ್ಮಹಾಸನಮ್ ।
ಪ್ರೀತ್ಯಾ ಸುರರ್ಷಿಸ್ತಮಪೂಜಯತ್ಸುಖಂ
ಸ್ಥಿತೋಽವದತ್ಸಂಶೃಣುತಾಮಲಾಂ ಗಿರಮ್ ॥
ಅನುವಾದ
ಪರಮ ತೇಜಸ್ವಿಗಳಾದ ಶುಕಮಹಾಮುನಿಗಳನ್ನು ಕಂಡು ಎಲ್ಲ ಸಭಾಸದರು ಭಕ್ತಿ ಸಂಭ್ರಮದಿಂದ ಎದ್ದು ನಿಂತು, ಅವರಿಗೆ ಉನ್ನತವಾದ ಮಹಾಸನವನ್ನು ನೀಡಿದರು. ದೇವಋಷಿಗಳಾದ ನಾರದರು ಅವರನ್ನು ಪ್ರೇಮದಿಂದ ಪೂಜಿಸಿದರು. ಅವರು ಸುಖಾಸೀನರಾಗಿ ‘ನನ್ನ ನಿರ್ಮಲವಾಣಿಯನ್ನು ಕೇಳಿರಿ’ ಎಂದು ಪ್ರಾರಂಭಿಸಿ ಅನುಗ್ರಹ ಮಾತನ್ನು ಹೇಳಿದರು. ॥79॥
(ಶ್ಲೋಕ - 80)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ನಿಗಮಕಲ್ಪತರೋರ್ಗಲಿತಂ ಫಲಂ
ಶುಕ ಮುಖಾದಮೃತದ್ರವಸಂಯುತಮ್ ।
ಪಿಬತ ಭಾಗವತಂ ರಸಮಾಲಯಂ
ಮುಹುರಹೋ ರಸಿಕಾ ಭುವಿ ಭಾವುಕಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ‘ಓ ರಸಿಕ ಭಾವುಕ ಜನರೇ! ಈ ಶ್ರೀಮದ್ಭಾಗವತವು ವೇದರೂಪೀ ಕಲ್ಪವೃಕ್ಷದ ಪರಿಪಕ್ವವಾದ ಫಲವಾಗಿದೆ. ಶ್ರೀಶುಕನೆಂಬ ಶುಕಪಕ್ಷಿಯ ಮುಖದ ಸಂಯೋಗದಿಂದ ಅಮೃತರಸದಿಂದ ಪರಿಪೂರ್ಣವಾಗಿದೆ. ಇದರಲ್ಲಿ ಸಿಪ್ಪೆ, ಗೊರಟು ಇಲ್ಲದೆ ರಸವೇ-ರಸವು ತುಂಬಿದೆ. ಇದು ಈ ಲೋಕದಲ್ಲಿ ಸುಲಭವಾಗಿ ದೊರೆತಿದೆ. ಶರೀರದಲ್ಲಿ ಚೈತನ್ಯವಿರುವ ತನಕ ನೀವೆಲ್ಲರೂ ಇದನ್ನು ಪದೇ-ಪದೇ ಪಾನಮಾಡುತ್ತಾ ಇರಿ. ॥80॥
(ಶ್ಲೋಕ - 81)
ಮೂಲಮ್
ಧರ್ಮಃ ಪ್ರೋಜ್ಝಿತಕೈತವೋಽತ್ರ ಪರಮೋ
ನಿರ್ಮತ್ಸರಾಣಾಂ ಸತಾಂ
ವೇದ್ಯಂ ವಾಸ್ತವಮತ್ರ ವಸ್ತು ಶಿವದಂ
ತಾಪತ್ರಯೋನ್ಮೂಲನಮ್ ।
ಶ್ರೀಮದ್ಭಾಗವತೇ ಮಹಾಮುನಿಕೃತೇ
ಕಿಂ ವಾ ಪರೈರೀಶ್ವರಃ
ಸದ್ಯೋ ಹೃದ್ಯವರುಧ್ಯತೇಽತ್ರ ಕೃತಿಭಿಃ
ಶುಶ್ರೂಷುಭಿಸ್ತತ್ಕ್ಷಣಾತ್ ॥
ಅನುವಾದ
ಈ ಶ್ರೀಮದ್ಭಾಗವತದಲ್ಲಿ ನಿಷ್ಕಪಟ, ನಿಷ್ಕಾಮ ಪರಮಧರ್ಮವು ನಿರೂಪಿತವಾಗಿದೆ. ಇದು ಪ್ರತಿಪಾದನೆ ಮಾಡುವ ವಸ್ತು ಮಾತ್ಸರ್ಯರಹಿತರಾದ ಸಜ್ಜನರಿಗೆ ವೇದ್ಯವಾದ ಪರಮಸತ್ಯವು. ಇದು ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕಗಳೆಂಬ ಮೂರು ತಾಪಗಳನ್ನು ನಿರ್ಮೂಲನ ಗೊಳಿಸುವುದು. ಪರಮ ಮಂಗಳಕರವಾದುದು. ಮಹಾಮುನಿಗಳಾದ ವೇದವ್ಯಾಸರೇ ರಚಿಸಿರುವ ಇಂತಹ ಶ್ರೀಮದ್ಭಾಗವತವು ಇರುವಾಗ ಬೇರೆ ಶಾಸ್ತ್ರಗಳು, ಸಾಧನೆಗಳ ಆವಶ್ಯಕತೆ ಇರುವುದಿಲ್ಲ. ಸುಕೃತಿಗಳು ಇದನ್ನು ಕೇಳಬೇಕೆಂಬ ಇಚ್ಛೆಯನ್ನು ಪ್ರಕಟಿಸಿದರೂ ಸಾಕು, ಒಡನೆಯೇ ಭಗವಂತನು ಅವರ ಹೃದಯದಲ್ಲಿ ಬಂದು ನೆಲೆಸಿ ಅಲ್ಲಿಯೇ ಸ್ಥಾಯಿಯಾಗುತ್ತಾನೆ. ॥81॥
(ಶ್ಲೋಕ - 82)
ಮೂಲಮ್
ಶ್ರೀಮದ್ಭಾಗವತಂ ಪುರಾಣತಿಲಕಂ
ಯದ್ವೈಷ್ಣವಾನಾಂ ಧನಂ
ಯಸ್ಮಿನ್ಪಾರಮಹಂಸ್ಯಮೇವಮಮಲಂ
ಜ್ಞಾನಂ ಪರಂ ಗೀಯತೇ ।
ಯತ್ರ ಜ್ಞಾನವಿರಾಗಭಕ್ತಿಸಹಿತಂ
ನೈಷ್ಕರ್ಮ್ಯಮಾವಿಷ್ಕೃತಂ
ತಚ್ಛಣ್ವನ್ಪ್ರಪಠನ್ ವಿಚಾರಣಪರೋ
ಭಕ್ತ್ಯಾ ವಿಮುಚ್ಯೇನ್ನರಃ ॥ 82 ॥
ಅನುವಾದ
ಈ ಶ್ರೀಮದ್ಭಾಗವತವು ಪುರಾಣಗಳಿಗೆ ಶಿರೋಮಣಿಯಾಗಿದ್ದು, ವೈಷ್ಣವರಿಗೆ ಪರಮ ಧನವಾಗಿದೆ. ಇದರಲ್ಲಿ ಪರಮಹಂಸರಿಗೆ ಪ್ರಾಪ್ಯವಾಗಿರುವ ವಿಶುದ್ಧವಾದ ಜ್ಞಾನವೇ ವರ್ಣಿತವಾಗಿದೆ. ಜ್ಞಾನ, ವೈರಾಗ್ಯ, ಭಕ್ತಿಗಳಿಂದ ಕೂಡಿದ ನಿವೃತ್ತಿ ಮಾರ್ಗವನ್ನು ಇಲ್ಲಿ ಪ್ರಕಾಶಪಡಿಸಿದೆ. ಇದರ ಶ್ರವಣ, ಪಾರಾಯಣ, ಮನನಗಳಲ್ಲಿ ಆಸಕ್ತನಾದವನು ಮುಕ್ತನಾಗಿ ಬಿಡುತ್ತಾನೆ. ॥82॥
(ಶ್ಲೋಕ - 83)
ಮೂಲಮ್
ಸ್ವರ್ಗೇ ಸತ್ಯೇ ಚ ಕೈಲಾಸೇ ವೈಕುಂಠೇ ನಾಸ್ತ್ಯಯಂ ರಸಃ ।
ಅತಃ ಪಿಬಂತು ಸದ್ಭಾಗ್ಯಾ ಮಾ ಮಾ ಮುಂಚತ ಕರ್ಹಿಚಿತ್ ॥
ಅನುವಾದ
ಈ ರಸವು ಸ್ವರ್ಗದಲ್ಲಾಗಲೀ, ಸತ್ಯಲೋಕದಲ್ಲಾಗಲೀ, ಕೈಲಾಸದಲ್ಲಾಗಲೀ, ವೈಕುಂಠದಲ್ಲಾಗಲೀ ಎಲ್ಲಿಯೂ ಇಲ್ಲ. ಆದುದರಿಂದ ಎಲೈ ಭಾಗ್ಯವಂತರಾದ ಶ್ರೋತೃಗಳೇ! ನೀವು ಇದನ್ನು ಪಾನ ಮಾಡಿರಿ, ಸವಿಯಿರಿ ಇದನ್ನು ಎಂದೂ ಬಿಡಬೇಡಿರಿ. ಖಂಡಿತವಾಗಿ ಬಿಡಬೇಡಿರಿ. ॥83॥
(ಶ್ಲೋಕ - 84)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ಬ್ರುವಾಣೇ ಸತಿ ಬಾದರಾಯಣೌ
ಮಧ್ಯೇ ಸಭಾಯಾಂ ಹರಿರಾವಿರಾಸೀತ್ ।
ಪ್ರಹ್ಲಾದ ಬಲ್ಯುದ್ಧವಾಲ್ಗುನಾದಿಭಿ -
ರ್ವೃತಃ ಸುರರ್ಷಿಸ್ತಮಪೂಜಯಚ್ಚ ತಾನ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಬಾದರಾಯಣ ಪುತ್ರರಾದ ಶ್ರೀಶುಕರು ಹೀಗೆ ಹೇಳುತ್ತಿರುವಂತೆ ಸಭೆಯ ಮಧ್ಯದಲ್ಲಿ ಪ್ರಹ್ಲಾದ, ಬಲಿ, ಉದ್ಧವ, ಅರ್ಜುನ ಮುಂತಾದ ಪಾರ್ಷದರೊಂದಿಗೆ ಸಾಕ್ಷಾತ್ ಶ್ರೀಹರಿಯು ಪ್ರಕಟನಾದನು. ಆಗ ದೇವ ಋಷಿ ನಾರದರು ಭಗವಂತನನ್ನು ಹಾಗೂ ಅವನ ಭಕ್ತರನ್ನು ಯಥೋಚಿತವಾಗಿ ಪೂಜಿಸಿದರು. ॥84॥
(ಶ್ಲೋಕ - 85)
ಮೂಲಮ್
ದೃಷ್ಟ್ವಾ ಪ್ರಸನ್ನಂ ಮಹದಾಸನೇ ಹರಿಂ
ತೇ ಚಕ್ರಿರೇ ಕೀರ್ತನಮಗ್ರತಸ್ತದಾ ।
ಭವೋ ಭವಾನ್ಯಾ ಕಮಲಾಸನಸ್ತು
ತತ್ರಾಗಮತ್ಕೀರ್ತನದರ್ಶನಾಯ ॥
ಅನುವಾದ
ದೊಡ್ಡ ಆಸನದಲ್ಲಿ ವಿರಾಜಮಾನನಾಗಿ ಪ್ರಸನ್ನನಾದ ಶ್ರೀಹರಿಯನ್ನು ಕಂಡು ಅವರೆಲ್ಲರೂ ಅವನ ಮುಂದೆ ಸಂಕೀರ್ತನೆಯನ್ನು ಪ್ರಾರಂಭಿಸಿದರು. ಆ ಸಂಕೀರ್ತನೆಯನ್ನು ನೋಡಲು ಪಾರ್ವತಿಸಮೇತನಾದ ಮಹಾದೇವನೂ, ಬ್ರಹ್ಮದೇವರೂ ಅಲ್ಲಿಗೆ ದಯಮಾಡಿಸಿದರು. ॥85॥
(ಶ್ಲೋಕ - 86)
ಮೂಲಮ್
ಪ್ರಹ್ಲಾದಸ್ತಾಲಧಾರೀ ತರಲ ಗತಿತಯಾ
ಚೋದ್ಧವಃ ಕಾಂಸ್ಯಧಾರೀ
ವೀಣಾಧಾರೀ ಸುರರ್ಷಿಃ ಸ್ವರಕುಶಲತಯಾ
ರಾಗಕರ್ತಾರ್ಜುನೋಽಭೂತ್ ।
ಇಂದ್ರೋಽವಾದೀನ್ಮೃದಂಗಂ ಜಯಜಯಸುಕರಾಃ
ಕೀರ್ತನೇ ತೇ ಕುಮಾರಾ
ಯತ್ರಾಗ್ರೇ ಭಾವವಕ್ತಾ ಸರಸರಚನಯಾ
ವ್ಯಾಸಪುತ್ರೋ ಬಭೂವ ॥
ಅನುವಾದ
ಸಂಕೀರ್ತನೆ ಪ್ರಾರಂಭವಾಯಿತು. ಅದರಲ್ಲಿ ಪಟುವಾದ ಗತಿಯುಳ್ಳ ಪ್ರಹ್ಲಾದರು ಕರತಾಳ ನುಡಿಸತೊಡಗಿದರು. ಉದ್ಧವರು ಕಂಚಿನ ತಾಳವನ್ನೆತ್ತಿಕೊಂಡು ನುಡಿಸಿದರು. ನಾರದರು ವೀಣೆಯನ್ನು ನುಡಿಸಿದರು. ಸ್ವರ ವಿಜ್ಞಾನ ಕುಶಲನಾದ ಅರ್ಜುನನು ರಾಗಾಲಾಪನೆ ಮಾಡತೊಡಗಿದನು. ಇಂದ್ರನು ಮೃದಂಗ ನುಡಿಸಿದನು. ಸನಕಾದಿಗಳು ನಡು-ನಡುವೆ ಜಯ-ಜಯಕಾರ ಮಾಡುತ್ತಿದ್ದರು. ಇವರೆಲ್ಲರ ಮುಂದೆ ಶುಕಮಹಾಮುನಿಗಳು ಬಗೆ-ಬಗೆಯ ರಸಮಯವಾದ ಅಂಗಭಂಗಿಗಳಿಂದ ಭಾವಗಳನ್ನು ಪ್ರದರ್ಶಿಸುತ್ತಿದ್ದರು. ॥86॥
(ಶ್ಲೋಕ - 87)
ಮೂಲಮ್
ನನರ್ತ ಮಧ್ಯೇ ತ್ರಿಕಮೇವ ತತ್ರ
ಭಕ್ತ್ಯಾದಿಕಾನಾಂ ನಟವತ್ಸುತೇಜಸಾಮ್ ।
ಅಲೌಕಿಕಂ ಕೀರ್ತನಮೇತದೀಕ್ಷ್ಯ
ಹರಿಃ ಪ್ರಸನ್ನೋಽಪಿ ವಚೋಽಬ್ರವೀತ್ತತ್ ॥
ಅನುವಾದ
ಅವರೆಲ್ಲರ ನಡುವೆ ಪರಮ ತೇಜೋ ನಿಧಿಗಳಾದ ಭಕ್ತಿ, ಜ್ಞಾನ, ವೈರಾಗ್ಯಗಳು ನಟರಂತೆ ನರ್ತಿಸತೊಡಗಿದರು. ಇಂತಹ ಅಲೌಕಿಕವಾದ ಕೀರ್ತನವನ್ನು ನೋಡಿ ಭಗವಂತನು ತುಂಬಾ ಪ್ರಸನ್ನನಾಗಿ ಹೀಗೆ ಹೇಳ ತೊಡಗಿದನು. ॥87॥
(ಶ್ಲೋಕ - 88)
ಮೂಲಮ್
ಮತ್ತೋ ವರಂ ಭಾವವೃತಾದ್ ವೃಣುಧ್ವಂ
ಪ್ರೀತಃ ಕಥಾಕೀರ್ತನತೋಽಸ್ಮಿ ಸಾಂಪ್ರತಮ್ ।
ಶ್ರುತ್ವೇತಿ ತದ್ವಾಕ್ಯಮತಿಪ್ರಸನ್ನಾಃ
ಪ್ರೇಮಾರ್ದ್ರಚಿತ್ತಾ ಹರಿಮೂಚಿರೇ ತೇ ॥
ಅನುವಾದ
ನಿಮ್ಮ ಈ ಕಥಾಕೀರ್ತನದಿಂದ ನಾನು ಬಹಳ ಪ್ರಸನ್ನನಾಗಿರುವೆನು. ನಿಮ್ಮ ಭಕ್ತಿ ಭಾವಕ್ಕೆ ನಾನು ವಶನಾಗಿ ಬಿಟ್ಟಿದ್ದೇನೆ. ನಿಮಗೆ ಬೇಕಾದ ವರವನ್ನು ಕೇಳಿರಿ ಭಗವಂತನ ಈ ಮಾತನ್ನು ಕೇಳಿ ಎಲ್ಲ ಜನರೂ ಸಂತಸಗೊಂಡು ಪ್ರೇಮಾರ್ದ್ರ ಚಿತ್ತದಿಂದ ಭಗವಂತನಲ್ಲಿ ಇಂತೆಂದರು. ॥88॥
(ಶ್ಲೋಕ - 89)
ಮೂಲಮ್
ನಗಾಹಗಾಥಾಸು ಚ ಸರ್ವಭಕ್ತೈ-
ರೇಭಿಸ್ತ್ವಯಾ ಭಾವ್ಯಮಿತಿ ಪ್ರಯತ್ನಾತ್ ।
ಮನೋರಥೋಽಯಂ ಪರಿಪೂರಣೀಯ-
ಸ್ತಥೇತಿ ಚೋಕ್ತ್ವಾಂತರಧೀಯತಾಚ್ಯುತಃ ॥
ಅನುವಾದ
‘ಪ್ರಭೋ! ಮುಂದೆಯೂ ಕೂಡ ಎಲ್ಲೆಲ್ಲಿ ಸಪ್ತಾಹಕಥೆ ನಡೆಯುತ್ತದೋ ಅಲ್ಲೆಲ್ಲ ನೀನು ಈ ಪಾರ್ಷದರೊಡನೆ ಅವಶ್ಯವಾಗಿ ದಯಮಾಡಿಸಬೇಕು. ಈ ನಮ್ಮ ಮನೋರಥವನ್ನು ನೀನು ಈಡೇರಿಸಿ ಕೊಡು.’’ ಎಂದು ಬೇಡಿಕೊಂಡರು. ಭಗವಂತನು ‘ತಥಾಸ್ತು’ ಹಾಗೆಯೇ ಆಗಲಿ ಎಂದು ಹೇಳಿ ಅಂತರ್ಧಾನನಾದನು. ॥89॥
(ಶ್ಲೋಕ - 90)
ಮೂಲಮ್
ತತೋಽನಮತ್ತಚ್ಚರಣೇಷು ನಾರದ-
ಸ್ತಥಾ ಶುಕಾದೀನಪಿ ತಾಪಸಾಂಶ್ಚವ ।
ಅಥ ಪ್ರಹೃಷ್ಟಾಃ ಪರಿನಷ್ಟಮೋಹಾಃ
ಸರ್ವೇ ಯಯುಃ ಪೀತಕಥಾಮೃತಾಸ್ತೇ ॥
ಅನುವಾದ
ಅನಂತರ ನಾರದ ಮಹರ್ಷಿಗಳು ಭಗವಂತನ ಹಾಗೂ ಆತನ ಪಾರ್ಷದರ ಪಾದಪದ್ಮಗಳಿಗೆ ಪ್ರಣಾಮ ಮಾಡಿದರು. ಮತ್ತೆ ಶುಕ ಮಹಾಮುನಿಗಳೇ ಮುಂತಾದ ತಪಸ್ವಿಗಳಿಗೂ ನಮಸ್ಕರಿಸಿದರು. ಕಥಾಮೃತವನ್ನು ಪಾನಮಾಡಿದ್ದರಿಂದ ಎಲ್ಲರಿಗೂ ಪರಮಾನಂದವುಂಟಾಯಿತು. ಅವರ ಮೋಹವೆಲ್ಲ ನಾಶವಾಯಿತು. ಮತ್ತೆ ಅವರೆಲ್ಲರೂ ತಮ್ಮ-ತಮ್ಮ ಸ್ಥಾನಗಳಿಗೆ ತೆರಳಿದರು. ॥90॥
(ಶ್ಲೋಕ - 91)
ಮೂಲಮ್
ಭಕ್ತಿಃ ಸುತಾಭ್ಯಾಂ ಸಹ ರಕ್ಷಿತಾ ಸಾ
ಶಾಸ್ತ್ರೇ ಸ್ವಕೀಯೇಽಪಿ ತದಾ ಶುಕೇನ ।
ಅತೋ ಹರಿರ್ಭಾಗವತಸ್ಯ ಸೇವನಾ-
ಚ್ಚಿತ್ತಂ ಸಮಾಯಾತಿ ಹಿ ವೈಷ್ಣವಾನಾಮ್ ॥
ಅನುವಾದ
ಆಗ ಶುಕಮುನಿಗಳು ಪುತ್ರರ ಸಹಿತ ಭಕ್ತಿಯನ್ನು ತಮ್ಮ ಶಾಸ್ತ್ರವಾದ ಶ್ರೀಮದ್ಭಾಗವತದಲ್ಲಿ ಸ್ಥಾಪಿಸಿದರು. ಅದರಿಂದಲೇ ಭಾಗವತವನ್ನು ಸೇವಿಸಿದರೆ ಶ್ರೀಹರಿಯು ವಿಷ್ಣುಭಕ್ತರ ಹೃದಯದಲ್ಲಿ ಬಂದು ವಿರಾಜಿಸುತ್ತಾನೆ. ॥91॥
(ಶ್ಲೋಕ - 92)
ಮೂಲಮ್
ದಾರಿದ್ರ್ಯದುಃಖಜ್ವರದಾಹಿತಾನಾಂ
ಮಾಯಾಪಿಶಾಚೀ ಪರಿಮರ್ದಿತಾನಾಮ್ ।
ಸಂಸಾರಸಿಂಧೌ ಪರಿಪಾತಿತಾನಾಂ
ಕ್ಷೇಮಾಯ ವೈ ಭಾಗವತಂ ಪ್ರಗರ್ಜತಿ ॥
ಅನುವಾದ
ದಾರಿದ್ರ್ಯವೆಂಬ ದುಃಖ ಜ್ವರದ ಜ್ವಾಲೆಯಿಂದ ಬೆಂದು ಹೋದವರು, ಮಾಯಾ ಪಿಶಾಚಿಯಿಂದ ತುಳಿಯಲ್ಪಟ್ಟವರು, ಸಂಸಾರ ಸಾಗರದಲ್ಲಿ ಮುಳುಗಿರುವವರು ಇವರೆಲ್ಲರ ಶ್ರೇಯಸ್ಸನ್ನು ಮಾಡುವುದಕ್ಕಾಗಿ ಶ್ರೀಮದ್ಭಾಗವತವು ಸಿಂಹಘರ್ಜನೆ ಮಾಡುತ್ತಿದೆ. ॥92॥
(ಶ್ಲೋಕ - 93)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಶುಕೇನೋಕ್ತಂ ಕದಾ ರಾಜ್ಞೇ ಗೋಕರ್ಣೇನ ಕದಾ ಪುನಃ ।
ಸುರರ್ಷಯೇ ಕದಾ ಬ್ರಾಹ್ಮೈಶ್ಛಿಂಧಿ ಮೇ ಸಂಶಯಂ ತ್ವಿಮಮ್ ॥
ಅನುವಾದ
ಶೌನಕರು ಕೇಳಿದರು — ಸೂತಪುರಾಣಿಕರೇ! ಶುಕಮುನಿಗಳು ರಾಜಾಪರೀಕ್ಷಿತನಿಗೆ, ಗೋಕರ್ಣನು ಧುಂಧುಕಾರಿಗೆ, ಸನಕಾದಿಗಳು ನಾರದರಿಗೆ ಯಾವ-ಯಾವ ಸಮಯದಲ್ಲಿ ಈ ಗ್ರಂಥವನ್ನು ಉಪದೇಶಿಸಿದರು? ನನ್ನ ಈ ಸಂಶಯವನ್ನು ಪರಿಹರಿಸಿರಿ ॥93॥
(ಶ್ಲೋಕ - 94)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಆಕೃಷ್ಣನಿರ್ಗಮಾತ್ತ್ರಿಂಶದ್ವರ್ಷಾಧಿಕಗತೇ ಕಲೌ ।
ನವಮೀತೋ ನಭಸ್ಯೇ ಚ ಕಥಾರಂಭಂ ಶುಕೋಽಕರೋತ್ ॥
ಅನುವಾದ
ಸೂತಪುರಾಣಿಕರು — ಹೇಳಿದರು ಶ್ರೀಕೃಷ್ಣ ಪರಮಾತ್ಮನು ಸ್ವಧಾಮಗಮನದ ಬಳಿಕ ಕಲಿಯುಗದ ಮೂವತ್ತು ವರ್ಷಗಳಿಂದ ಸ್ವಲ್ಪ ಹೆಚ್ಚುಕಾಲ ಕಳೆದ ಮೇಲೆ ಭಾದ್ರಪದ ಮಾಸದ ಶುಕ್ಲ ನವಮಿಯಿಂದ ಶುಕಮಹರ್ಷಿಗಳು ಕಥಾ ಪ್ರವಚನವನ್ನು ಪರೀಕ್ಷಿದ್ರಾಜನ ಮುಂದೆ ಪ್ರಾರಂಭಿಸಿದ್ದರು. ॥94॥
(ಶ್ಲೋಕ - 95)
ಮೂಲಮ್
ಪರೀಕ್ಷಿಚ್ಛ್ರವಣಾಂತೇ ಚ ಕಲೌ ವರ್ಷಶತದ್ವಯೇ ।
ಶುದ್ಧೇ ಶುಚೌ ನವಮ್ಯಾಂ ಚ ಧೇನುಜೋಽಕಥಯತ್ಕಥಾಮ್ ॥
ಅನುವಾದ
ರಾಜಾಪರೀಕ್ಷಿತನು ಕಥೆ ಕೇಳಿದ ಅನಂತರ ಕಲಿಯುಗದ ಇನ್ನೂರು ವರ್ಷಗಳು ಕಳೆದ ಮೇಲೆ ಆಷಾಢ ಶುಕ್ಲ ನವಮಿಯಿಂದ ಗೋಕರ್ಣನು ಈ ಕಥೆಯನ್ನು ಪ್ರವಚನ ಮಾಡಿದ್ದನು. ॥95॥
(ಶ್ಲೋಕ - 96)
ಮೂಲಮ್
ತಸ್ಮಾದಪಿ ಕಲೌ ಪ್ರಾಪ್ತೇ ತ್ರಿಂಶದ್ವರ್ಷಗತೇ ಸತಿ ।
ಊಚುರೂರ್ಜೇ ಸಿತೇ ಪಕ್ಷೇ ನವಮ್ಯಾಂ ಬ್ರಹ್ಮಣಃ ಸುತಾಃ ॥
ಅನುವಾದ
ಅದಕ್ಕೆ ಹಿಂದೆ ಕಲಿಯುಗದ ಮೂವತ್ತು ವರ್ಷಗಳು ಕಳೆದು ಹೋದಾಗ ಕಾರ್ತೀಕ ಶುಕ್ಲ ನವಮಿಯಿಂದ ಬ್ರಹ್ಮಮಾನಸ ಪುತ್ರರಾದ ಸನಕಾದಿಗಳು ಇದನ್ನು ನಾರದರಿಗೆ ಉಪದೇಶಿಸಿದ್ದರು. ॥96॥
(ಶ್ಲೋಕ - 97)
ಮೂಲಮ್
ಇತ್ಯೇತತ್ತೇ ಸಮಾಖ್ಯಾತಂ ಯತ್ಪೃಷ್ಟೋಽಹಂ ತ್ವಯಾನಘ ।
ಕಲೌ ಭಾಗವತೀ ವಾರ್ತಾ ಭವರೋಗವಿನಾಶಿನೀ ॥
ಅನುವಾದ
ಪುಣ್ಯಾತ್ಮರಾದ ಶೌನಕರೇ! ನೀವು ಕೇಳಿದುದಕ್ಕೆ ನಾನು ಉತ್ತರ ಕೊಟ್ಟಾಯಿತು. ಈ ಕಲಿಯುಗದಲ್ಲಿ ಶ್ರೀಮದ್ಭಾಗವತ ಕಥೆಯೇ ಭವರೋಗಕ್ಕೆ ರಾಮಬಾಣ ಔಷಧವಾಗಿದೆ. ॥97॥
(ಶ್ಲೋಕ - 98)
ಮೂಲಮ್
ಕೃಷ್ಣಪ್ರಿಯಂ ಸಕಲಕಲ್ಮಷನಾಶನಂ ಚ
ಮುಕ್ತ್ಯೇಕಹೇತುಮಿಹ ಭಕ್ತಿವಿಲಾಸಕಾರಿ ।
ಸಂತಃ ಕಥಾನಕಮಿದಂ ಪಿಬತಾದರೇಣ
ಲೋಕೇ ಹಿ ತೀರ್ಥಪರಿಶೀಲನಸೇವಯಾ ಕಿಮ್ ॥
ಅನುವಾದ
ಎಲೈ ಸತ್ಪುರುಷರೇ! ನೀವೆಲ್ಲ ಈ ಕಥಾಮೃತವನ್ನು ಆದರದಿಂದ ಪಾನಮಾಡಿರಿ. ಇದು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದುದು. ಸಕಲ ಪಾಪನಾಶ ಮಾಡುವಂತಹುದು ಮುಕ್ತಿಕೊಡುವಂಥದು ಭಕ್ತಿಯ ವಿಲಾಸವನ್ನು ಹೆಚ್ಚಿಸುವಂತಹುದು. ಲೋಕದಲ್ಲಿ ಇತರ ಶ್ರೇಯಸ್ಕರ ಸಾಧನೆಗಳನ್ನು ವಿಚಾರಮಾಡುವುದರಿಂದ ತೀರ್ಥಗಳನ್ನು ಸೇವಿಸುವುದರಿಂದ ಏನಾದೀತು? ॥98॥
(ಶ್ಲೋಕ - 99)
ಮೂಲಮ್
ಸ್ವಪುರುಷಮಪಿ ವೀಕ್ಷ್ಯ ಪಾಶಹಸ್ತಂ
ವದತಿ ಯಮಃ ಕಿಲ ತಸ್ಯ ಕರ್ಣಮೂಲೇ ।
ಪರಿಹರ ಭಗವತ್ಕಥಾಸು ಮತ್ತಾನ್
ಪ್ರಭುರಹಮನ್ಯನೃಣಾಂ ನ ವೈಷ್ಣವಾನಾಮ್ ॥
ಅನುವಾದ
ಕೈಯಲ್ಲಿ ಪಾಶವನ್ನು ಹಿಡಿದುಕೊಂಡಿರುವ ತನ್ನ ದೂತರನ್ನು ನೋಡಿ ಯಮಧರ್ಮನು ಅವರ ಕಿವಿಯಲ್ಲಿ ಹೇಳಿದನು - ನೋಡಿ, ಶ್ರೀಭಗವಂತನ ಕಥೆಗಳಿಂದ ಉನ್ಮತ್ತರಾಗಿರುವವರಿಂದ ದೂರವಿರಿ. ಇತರರಿಗೆ ದಂಡವನ್ನು ವಿಧಿಸುವ ಶಕ್ತಿ ನನಗುಂಟು, ಆದರೆ ವಿಷ್ಣು ಭಕ್ತರ ಮೇಲೆ ನಮಗೆ ಅಧಿಕಾರ ಇಲ್ಲ.॥99॥
(ಶ್ಲೋಕ - 100)
ಮೂಲಮ್
ಅಸಾರೇ ಸಂಸಾರೇ ವಿಷಯವಿಷಸಂಗಾಕುಲಧಿಯಃ
ಕ್ಷಣಾರ್ಧಂ ಕ್ಷೇಮಾರ್ಥಂ ಪಿಬತ ಶುಕಗಾಥಾತುಲಸುಧಾಮ್ ।
ಕಿಮರ್ಥಂ ವ್ಯರ್ಥಂ ಭೋ ವ್ರಜತ ಕುಪಥೇ ಕುತ್ಸಿತಕಥೇ
ಪರೀಕ್ಷಿತ್ಸಾಕ್ಷೀಯಚ್ಛ್ರವಣಗತಮುಕ್ತ್ಯುಕ್ತಿಕಥನೇ ॥
ಅನುವಾದ
ಅಸಾರವಾದ ಸಂಸಾರದಲ್ಲಿ ವಿಷಯ ರೂಪೀ ವಿಷದ ಆಸಕ್ತಿಯ ಕಾರಣ ವ್ಯಾಕುಲವಾದ ಬುದ್ಧಿಯುಳ್ಳವರೇ! ನಿಮ್ಮ ಆತ್ಮ ಕಲ್ಯಾಣಕ್ಕೋಸ್ಕರ ಅರ್ಧ ಕ್ಷಣಕಾಲವಾದರೂ ಶುಕರು ಅನುಗ್ರಹಿಸಿದ ಶ್ರೀಭಾಗವತ ಕಥೆಯೆಂಬ ಅಮೃತವನ್ನು ಪಾನಮಾಡಿರಿ. ಎಲೈ ಜನರಿರಾ! ನಿಂದಿತವಾದ ಕಥೆಗಳಿಂದ ಕೂಡಿದ ಕರ್ಮಮಾರ್ಗದಲ್ಲಿ ವ್ಯರ್ಥವಾಗಿ ಏಕೆ ಅಲೆದಾಡುತ್ತಿದ್ದೀರಿ? ಈ ಕಥೆಯು ಕಿವಿಗೆ ಪ್ರವೇಶ ಮಾಡಿದ್ದರಿಂದಲೇ ಮುಕ್ತಿಯು ದೊರೆಯುವುದು. ಇದಕ್ಕೆ ರಾಜಾಪರೀಕ್ಷಿತನೇ ಸಾಕ್ಷಿ.॥100॥
(ಶ್ಲೋಕ - 101)
ಮೂಲಮ್
ರಸಪ್ರವಾಹಸಂಸ್ಥೇನ ಶ್ರೀಶುಕೇನೇರಿತಾ ಕಥಾ ।
ಕಂಠೇ ಸಂಬಧ್ಯತೇ ಯೇನ ಸ ವೈಕುಂಠಪ್ರಭುರ್ಭವೇತ್ ॥
ಅನುವಾದ
ಶ್ರೀಶುಕ ಮಹಾಮುನಿಗಳು ಪ್ರೇಮರಸ ಪ್ರವಾಹದಲ್ಲಿ ಮುಳುಗಿ ಈ ಕಥೆಯನ್ನು ಉಪದೇಶಿಸಿದರು. ಯಾರ ಕಂಠದಿಂದ ಈ ಕಥೆಯು ಮೊಳಗುತ್ತದೋ ಅವರು ವೈಕುಂಠಕ್ಕೆ ಅಧಿಕಾರಿಗಳಾಗಿ ಬಿಡುತ್ತಾರೆ.॥101॥
(ಶ್ಲೋಕ - 102)
ಮೂಲಮ್
ಇತಿ ಚ ಪರಮಗುಹ್ಯಂ ಸರ್ವಸಿದ್ಧಾಂತಸಿದ್ಧಂ
ಸಪದಿ ನಿಗದಿತಂ ತೇ ಶಾಸ್ತ್ರಪುಂಜಂ ವಿಲೋಕ್ಯ ।
ಜಗತಿ ಶುಕಕಥಾತೋ ನಿರ್ಮಲಂ ನಾಸ್ತಿ ಕಿಂಚಿತ್
ಪಿಬ ಪರಸುಖಹೇತೋರ್ದ್ವಾದಶಸ್ಕಂಧ ಸಾರಮ್ ॥
ಅನುವಾದ
ಶೌನಕರೇ! ನಾನು ಅನೇಕ ಶಾಸ್ತ್ರಗಳನ್ನು ನೋಡಿ ಸಿದ್ಧವಾದ ಗೋಪ್ಯವಾದ ಈ ರಹಸ್ಯವನ್ನು ನಿನಗೆ ಅರುಹಿದ್ದೇನೆ. ಇದು ಎಲ್ಲ ಶಾಸ್ತ್ರಗಳ ಸಿದ್ಧಾಂತಗಳ ಸಾರವಾಗಿದೆ. ಜಗತ್ತಿನಲ್ಲಿ ಈ ಶುಕಶಾಸ್ತ್ರಕ್ಕಿಂತಲೂ ಪವಿತ್ರವಾದ ವಸ್ತು ಇನ್ನೊಂದಿಲ್ಲ. ಆದ್ದರಿಂದ ನೀವೆಲ್ಲರೂ ಪರಮಾನಂದದ ಪ್ರಾಪ್ತಿಗಾಗಿ ಈ ದ್ವಾದಶಸ್ಕಂಧ ರೂಪವಾದ ರಸವನ್ನು ಪಾನಮಾಡಿರಿ, ಸವಿಯಿರಿ. ॥102॥
(ಶ್ಲೋಕ - 103)
ಮೂಲಮ್
ಏತಾಂ ಯೋ ನಿಯತತಯಾ ಶೃಣೋತಿ ಭಕ್ತ್ಯಾ
ಯಶ್ಚೈನಾಂ ಕಥಯತಿ ಶುದ್ಧವೈಷ್ಣವಾಗ್ರೇ ।
ತೌ ಸಮ್ಯಗ್ವಿಧಿಕರಣಾತಲಂ ಲಭೇತೇ
ಯಾಥಾರ್ಥ್ಯಾನ್ನಹಿ ಭುವನೇ ಕಿಮಪ್ಯಸಾಧ್ಯಮ್ ॥
ಅನುವಾದ
ನಿಯಮಪೂರ್ವಕ ಈ ಕಥೆಯನ್ನು ಭಕ್ತಿ-ಭಾವದಿಂದ ಶ್ರವಣಿಸುವವನು, ಶುದ್ಧಾಂತಃಕರಣ ಭಗವದ್ಭಕ್ತರ ಮುಂದೆ ಪ್ರವಚನ ಮಾಡುವವನು, ಹೀಗೆ ಇಬ್ಬರೂ ಶಾಸ್ತ್ರವಿಧಿಯನ್ನು ಪೂರ್ಣವಾಗಿ ಪಾಲಿಸಿದ್ದರಿಂದ ಇದರ ಪಾರಮಾರ್ಥಿಕ ಫಲವನ್ನು ಪಡೆಯುತ್ತಾರೆ. ಅವರಿಗೆ ಮೂರು ಲೋಕಗಳಲ್ಲಿಯೂ ಅಸಾಧ್ಯವಾದುದು ಯಾವುದೂ ಇರುವುದಿಲ್ಲ.॥103॥
ಅನುವಾದ (ಸಮಾಪ್ತಿಃ)
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಶ್ರವಣವಿಕಥನಂ ನಾಮ ಷಷ್ಠೋಽಧ್ಯಾಯಃ ॥6॥
ಇಲ್ಲಿಗೆ ಶ್ರೀಪದ್ಮಪುರಾಣದ ಉತ್ತರಖಂಡದ ಶ್ರೀಮದ್ಭಾಗವತಮಾಹಾತ್ಮ್ಯೆಯಲ್ಲಿ ಸಪ್ತಾಹ ಶ್ರವಣವಿಯನ್ನು ಹೇಳಿದಆರನೆಯ ಅಧ್ಯಾಯವು ಮುಗಿಯಿತು. ॥6॥