೦೫

[ಐದನೆಯ ಅಧ್ಯಾಯ]

ಭಾಗಸೂಚನಾ

ಧುಂಧುಕಾರಿಗೆ ಪ್ರೇತಯೋನಿ ಪ್ರಾಪ್ತಿ ಮತ್ತು ಅದರಿಂದ ಉದ್ಧಾರ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಪಿತರ್ಯುಪರತೇ ತೇನ ಜನನೀ ತಾಡಿತಾ ಭೃಶಮ್ ।
ಕ್ವ ವಿತ್ತಂ ತಿಷ್ಠತಿ ಬ್ರೂಹಿ ಹನಿಷ್ಯೇ ಲತ್ತಯಾ ನ ಚೇತ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ತಂದೆಯು ಕಾಡಿಗೆ ಹೋದ ಮೇಲೆ ಧುಂಧುಕಾರಿಯು ಒಂದು ದಿನ ತನ್ನ ತಾಯಿಗೆ ತುಂಬಾ ಹೊಡೆದು ಕೇಳಿದನು ‘ಧನವನ್ನು ಎಲ್ಲಿ ಇಟ್ಟಿರುವೆ ಹೇಳು. ಇಲ್ಲದಿದ್ದರೆ ಉರಿಯುತ್ತಿರುವ ಕಟ್ಟಿಗೆಯಿಂದ ನಿನ್ನನ್ನು ಮುಗಿಸಿಬಿಡುವೆನು.’ ॥1॥

(ಶ್ಲೋಕ - 2)

ಮೂಲಮ್

ಇತಿ ತದ್ವಾಕ್ಯ ಸಂತ್ರಾಸಾಜ್ಜನನ್ಯಾ ಪುತ್ರದುಃಖತಃ ।
ಕೂಪೇ ಪಾತಃ ಕೃತೋ ರಾತ್ರೌ ತೇನ ಸಾ ನಿಧನಂ ಗತಾ ॥

ಅನುವಾದ

ಅವನು ಹೀಗೆ ಗದರಿಸಲು ಹೆದರಿ, ಮಗನ ಉಪದ್ರವದಿಂದ ದುಃಖಿತಳಾಗಿ ಅವಳು ರಾತ್ರೆ ಭಾವಿಗೆ ಹಾರಿಕೊಂಡಳು. ಹೀಗೆ ಅವಳ ಮೃತ್ಯುವಾಯಿತು. ॥2॥

(ಶ್ಲೋಕ - 3)

ಮೂಲಮ್

ಗೋಕರ್ಣಸ್ತೀರ್ಥಯಾತ್ರಾರ್ಥಂ ನಿರ್ಗತೋ ಯೋಗಸಂಸ್ಥಿತಃ ।
ನ ದುಃಖಂ ನ ಸುಖಂ ತಸ್ಯ ನ ವೈರೀ ನಾಪಿ ಬಾಂಧವಃ ॥

ಅನುವಾದ

ಯೋಗನಿಷ್ಠ ಗೋಕರ್ಣನು ತೀರ್ಥಯಾತ್ರೆಗಾಗಿ ಹೊರಟು ಹೋದನು. ಅವನಿಗೆ ಈ ಘಟನೆಯಿಂದ ದುಃಖವಾಗಲೀ, ಸುಖವಾಗಲೀ ಆಗಲಿಲ್ಲ. ಏಕೆಂದರೆ ಅವನಿಗೆ ಯಾರೂ ಮಿತ್ರರು, ಶತ್ರುಗಳು ಇರಲಿಲ್ಲ. ॥3॥

(ಶ್ಲೋಕ - 4)

ಮೂಲಮ್

ಧುಂಧುಕಾರೀ ಗೃಹೇಽತಿಷ್ಠತ್ಪಂಚಪಣ್ಯವಧೂವೃತಃ ।
ಅತ್ಯುಗ್ರಕರ್ಮಕರ್ತಾ ಚ ತತ್ಪೋಷಣವಿಮೂಢಧೀಃ ॥

ಅನುವಾದ

ಧುಂಧುಕಾರಿಯು ಐದು ಮಂದಿ ವೇಶ್ಯೆಯರೊಂದಿಗೆ ಮನೆಯಲ್ಲೇ ಇರತೊಡಗಿದನು. ಅವರಿಗಾಗಿ ಭೋಗ-ಸಾಮಗ್ರಿಗಳನ್ನು ಒದಗಿಸುವ ಚಿಂತೆಯಿಂದ ಅವನ ಬುದ್ಧಿಯು ನಷ್ಟವಾಯಿತು. ಅವನು ಅನೇಕ ರೀತಿಯ ಕ್ರೂರ ಕರ್ಮಗಳನ್ನು ಮಾಡತೊಡಗಿದನು.॥4॥

(ಶ್ಲೋಕ - 5)

ಮೂಲಮ್

ಏಕದಾ ಕುಲಟಾಸ್ತಾಸ್ತು ಭೂಷಣಾನ್ಯಭಿಲಿಪ್ಸವಃ ।
ತದರ್ಥಂ ನಿರ್ಗತೋ ಗೇಹಾತ್ಕಾಮಾಂಧೋ ಮೃತ್ಯುಮಸ್ಮರನ್ ॥

ಅನುವಾದ

ಒಂದು ದಿನ ಆ ಕುಲಟೆಯರು ಇವನ ಬಳಿಯಲ್ಲಿ ಅನೇಕ ಒಡವೆಗಳನ್ನು ಬೇಡಿದರು. ಅವನಾದರೋ ಕಾಮದಿಂದ ಕುರುಡನಾಗಿ ಹೋಗಿದ್ದನು. ಸಾವಿನ ನೆನಪೇ ಅವನಿಗಿರಲಿಲ್ಲ. ಸರಿ, ಒಡವೆಗಳನ್ನು ಒದಗಿಸಲು ಅವನು ಮನೆಯಿಂದ ಹೊರಬಿದ್ದನು. ॥5॥

(ಶ್ಲೋಕ - 6)

ಮೂಲಮ್

ಯತಸ್ತತಶ್ಚ ಸಂಹೃತ್ಯ ವಿತ್ತಂ ವೇಶ್ಮ ಪುನರ್ಗತಃ ।
ತಾಭ್ಯೋಽಯಚ್ಛತ್ಸುವಸ್ತ್ರಾಣಿ ಭೂಷಣಾನಿ ಕಿಯಂತಿ ಚ ॥

ಅನುವಾದ

ಅವನು ಅಲ್ಲಿ-ಇಲ್ಲಿ ಹೇರಳ ಧನವನ್ನು ಕದ್ದು ಮನೆಗೆ ಬಂದು, ಅವರಿಗೆ ಸುಂದರ ವಸ್ತ್ರ-ಒಡವೆಗಳನ್ನು ತಂದು ಕೊಟ್ಟನು. ॥6॥

(ಶ್ಲೋಕ - 7)

ಮೂಲಮ್

ಬಹುವಿತ್ತಚಯಂ ದೃಷ್ಟ್ವಾ ರಾತ್ರೌ ನಾರ್ಯೋ ವ್ಯಚಾರಯನ್ ।
ಚೌರ್ಯಂ ಕರೋತ್ಯಸೌ ನಿತ್ಯಮತೋ ರಾಜಾ ಗ್ರಹೀಷ್ಯತಿ ॥

ಅನುವಾದ

ಕಳ್ಳತನದ ಅನೇಕ ವಸ್ತುಗಳನ್ನು ನೋಡಿ ಆ ಸ್ತ್ರೀಯರು ರಾತ್ರೆ ವಿಚಾರ ಮಾಡಿದರು- ‘ಇವನು ಪ್ರತಿದಿನ ಕಳ್ಳತನ ಮಾಡುತ್ತಾನೆ. ಅದರಿಂದ ಒಂದಲ್ಲ ಒಂದು ದಿನ ಖಂಡಿತವಾಗಿ ರಾಜನು ಇವನನ್ನು ಹಿಡಿದುಕೊಂಡು ಹೋದಾನು. ॥7॥

(ಶ್ಲೋಕ - 8)

ಮೂಲಮ್

ವಿತ್ತಂ ಹೃತ್ವಾ ಪುನಶ್ಚೈನಂ ಮಾರಯಿಷ್ಯತಿ ನಿಶ್ಚಿತಮ್ ।
ಅತೋಽರ್ಥಗುಪ್ತಯೇ ಗೂಢಮಸ್ಮಾಭಿಃ ಕಿಂ ನ ಹನ್ಯತೇ ॥

ಅನುವಾದ

ರಾಜನು ಇದೆಲ್ಲ ಸಂಪತ್ತನ್ನು ಕಸಿದುಕೊಂಡು ಇವನಿಗೆ ಪ್ರಾಣದಂಡನೆ ವಿಧಿಸುವುದು ನಿಶ್ಚಿತ. ಒಂದಲ್ಲ ಒಂದು ದಿನ ಇವನಿಗೆ ಸಾಯುವುದೇ ಇದೆಯಾದರೆ ಧನದ ರಕ್ಷಣೆಗಾಗಿ ಗುಪ್ತವಾಗಿ ಇವನನ್ನು ನಾವೇ ಏಕೆ ಕೊಲ್ಲಬಾರದು? ॥8॥

(ಶ್ಲೋಕ - 9)

ಮೂಲಮ್

ನಿಹತ್ಯೈನಂ ಗೃಹೀತ್ವಾರ್ಥಂ ಯಾಸ್ಯಾಮೋ ಯತ್ರ ಕುತ್ರಚಿತ್ ।
ಇತಿ ತಾ ನಿಶ್ಚಯಂ ಕೃತ್ವಾ ಸುಪ್ತಂ ಸಂಬದ್ಧ್ಯ ರಶ್ಮಿಭಿಃ ॥

(ಶ್ಲೋಕ - 10)

ಮೂಲಮ್

ಪಾಶಂ ಕಂಠೇ ನಿಧಾಯಾಸ್ಯ ತನ್ಮೃತ್ಯುಮುಪಚಕ್ರಮುಃ ।
ತ್ವರಿತಂ ನ ಮಮಾರಾಸೌ ಚಿಂತಾಯುಕ್ತಾಸ್ತದಾಭವನ್ ॥

ಅನುವಾದ

ಇವನನ್ನು ಕೊಂದು ನಾವು ಇವನ ಸಂಪತ್ತೆಲ್ಲವನ್ನು ಎತ್ತಿಕೊಂಡು ಎಲ್ಲಾದರೂ ಹೊರಟು ಹೋಗೋಣ.’ ಹೀಗೆ ನಿಶ್ಚಯಿಸಿ ಅವರು ಮಲಗಿರುವ ಧುಂಧುಕಾರಿಯನ್ನು ಹಗ್ಗದಿಂದ ಕಟ್ಟಿ, ಕತ್ತಿಗೆ ಉರುಳನ್ನು ಬಿಗಿದು ಸಾಯಿಸಲು ಪ್ರಯತ್ನಿಸಿದರು. ಇದರಿಂದ ಅವನು ಬೇಗನೇ ಸಾಯದಿದ್ದಾಗ ಅವರಿಗೆ ಭಾರೀ ಚಿಂತೆ ಇಟ್ಟಿಕೊಂಡಿತು. ॥9-10॥

(ಶ್ಲೋಕ - 11)

ಮೂಲಮ್

ತಪ್ತಾಂಗಾರಸಮೂಹಾಂಶ್ಚ ತನ್ಮುಖೇ ಹಿ ವಿಚಿಕ್ಷಿಪುಃ ।
ಅಗ್ನಿಜ್ವಾಲಾತಿದುಃಖೇನ ವ್ಯಾಕುಲೋ ನಿಧನಂ ಗತಃ ॥

ಅನುವಾದ

ಆಗ ಅವರು ಅವನ ಬಾಯಿಯಲ್ಲಿ ಉರಿಯುವ ಕೆಂಡವನ್ನು ಸುರಿದರು. ಇದರಿಂದ ಅವನು ಬೆಂಕಿಯ ಜ್ವಾಲೆಯಿಂದ ತುಂಬಾ ನರಳುತ್ತಾ ಸತ್ತುಹೋದನು. ॥11॥

(ಶ್ಲೋಕ - 12)

ಮೂಲಮ್

ತಂ ದೇಹಂ ಮುಮುಚುರ್ಗರ್ತೇ ಪ್ರಾಯಃ ಸಾಹಸಿಕಾಃ ಸ್ತ್ರಿಯಃ ।
ನ ಜ್ಞಾತಂ ತದ್ರಹಸ್ಯಂ ತು ಕೇನಾಪೀದಂ ತಥೈವ ಚ ॥

ಅನುವಾದ

ಅವರು ಇವನ ಶರೀರವನ್ನು ಒಂದು ಹೊಂಡದಲ್ಲಿ ಹೂತು ಬಿಟ್ಟರು. ಸ್ತ್ರೀಯರು ಪ್ರಾಯಶಃ ಭಾರೀ ದುಸ್ಸಾಹಸಿಗಳಾಗುತ್ತಾರೆಂಬುದು ನಿಜವಾಗಿದೆ. ಅವರ ಈ ಕೃತ್ಯವು ಯಾರಿಗೂ ತಿಳಿಯದೇ ಹೋಯಿತು. ॥12॥

(ಶ್ಲೋಕ - 13)

ಮೂಲಮ್

ಲೋಕೈಃ ಪೃಷ್ಟಾ ವದಂತಿ ಸ್ಮ ದೂರಂ ಯಾತಃ ಪ್ರಿಯೋ ಹಿ ನಃ ।
ಆಗಮಿಷ್ಯತಿ ವರ್ಷೇಽಸ್ಮಿನ್ ವಿತ್ತಲೋಭವಿಕರ್ಷಿತಃ ॥

ಅನುವಾದ

ಜನರು ಕೇಳಿದಾಗ ಹೇಳುತ್ತಿದ್ದರು - ನಮ್ಮ ಪ್ರಿಯತಮನು ಹಣದ ಲೋಭದಿಂದ ಈ ಬಾರಿ ಎಲ್ಲೋ ಬಹುದೂರ ಹೋಗಿರಬೇಕು. ಇದೇ ವರ್ಷಾಂತ್ಯದಲ್ಲಿ ಬರುವನು. ॥13॥

(ಶ್ಲೋಕ - 14)

ಮೂಲಮ್

ಸ್ತ್ರೀಣಾಂ ನೈವ ತು ವಿಶ್ವಾಸಂ ದುಷ್ಟಾನಾಂ ಕಾರಯೇದ್ಬುಧಃ ।
ವಿಶ್ವಾಸೇ ಯಃ ಸ್ಥಿತೋ ಮೂಢಃ ಸ ದುಃಖೈಃ ಪರಿಭೂಯತೇ ॥

ಅನುವಾದ

ಬುದ್ಧಿವಂತರಾದವರು ದುಷ್ಟಸ್ತ್ರೀಯರ ಮೇಲೆ ಎಂದೂ ವಿಶ್ವಾಸವಿಡಬಾರದು. ವಿಶ್ವಾಸವಿಡುವ ಮೂರ್ಖನಿಗೆ ದುಃಖಿಯಾಗಬೇಕಾಗುತ್ತದೆ. ॥14॥

(ಶ್ಲೋಕ - 15)

ಮೂಲಮ್

ಸುಧಾಮಯಂ ವಚೋ ಯಾಸಾಂ ಕಾಮಿನಾಂ ರಸವರ್ಧನಮ್ ।
ಹೃದಯಂ ಕ್ಷುರಧಾರಾಭಂ ಪ್ರಿಯಃ ಕೋ ನಾಮ ಯೋಷಿತಾಮ್ ॥

ಅನುವಾದ

ಇವರ ಮಾತುಗಳಾದರೋ ಅಮೃತದಂತೆ ಕಾಮುಕರ ಹೃದಯಲ್ಲಿ ರಸವನ್ನು ಹೆಚ್ಚಿಸುತ್ತದೆ. ಆದರೆ ಅವರ ಹೃದಯ ಕತ್ತಿಯ ಅಲಗಿನಂತೆ ಹರಿತವಾಗಿರುತ್ತದೆ. ಇಂತಹ ಸ್ತ್ರೀಯರನ್ನು ಯಾರು ತಾನೇ ಪ್ರೇಮಿಸುವರು? ॥15॥

(ಶ್ಲೋಕ - 16)

ಮೂಲಮ್

ಸಂಹೃತ್ಯ ವಿತ್ತಂ ತಾ ಯಾತಾಃ ಕುಲಟಾ ಬಹುಭರ್ತೃಕಾಃ ।
ಧುಂದುಕಾರೀ ಬಭೂವಾಥ ಮಹಾನ್ ಪ್ರೇತಃ ಕುಕರ್ಮತಃ ॥

ಅನುವಾದ

ಆ ಕುಲಟೆಯರು ಧುಂಧುಕಾರಿಯ ಸಂಪತ್ತೆಲ್ಲವನ್ನು ದೋಚಿಕೊಂಡು ಪರಾರಿಯಾದರು. ಅವರಿಗೆ ಇಂತಹ ವಿಟರು ಎಷ್ಟಿದ್ದರೋ ಯಾರು ಬಲ್ಲರು? ಧುಂಧುಕಾರಿಯು ತನ್ನ ಕುಕರ್ಮದಿಂದಾಗಿ ಭಯಂಕರ ಪ್ರೇತವಾದನು. ॥16॥

(ಶ್ಲೋಕ - 17)

ಮೂಲಮ್

ವಾತ್ಯಾರೂಪಧರೋ ನಿತ್ಯಂ ಧಾವನ್ ದಶದಿಶೋಽಂತರಮ್ ।
ಶೀತಾತಪಪರಿಕ್ಲಿಷ್ಟೋ ನಿರಾಹಾರಃ ಪಿಪಾಸಿತಃ ॥

(ಶ್ಲೋಕ - 18)

ಮೂಲಮ್

ನ ಲೇಭೇ ಶರಣಂ ಕ್ವಾಪಿ ಹಾ ದೈವೇತಿ ಮುಹುರ್ವದನ್ ।
ಕಿಯತ್ಕಾಲೇನ ಗೋಕರ್ಣೋ ಮೃತಂ ಲೋಕಾದಬುಧ್ಯತ ॥

ಅನುವಾದ

ಅವನು ಬಿರುಗಾಳಿಯಾಗಿ ಯಾವಾಗಲೂ ಹತ್ತು ದಿಕ್ಕುಗಳಲ್ಲಿ ಅಲೆಯುತ್ತಿದ್ದನು. ಬಿಸಿಲು, ಛಳಿಯಿಂದ ಭಾರಿ ಕಷ್ಟಪಡುತ್ತಾ ಹಸಿವು- ಬಾಯಾರಿಕೆಗಳಿಂದ ದುಃಖಿತನಾಗಿ ಅಯ್ಯೋ ದೈವವೇ! ಎಂದು ಕೂಗುತ್ತಿದ್ದನು. ಆದರೆ ಅವನಿಗೆ ಎಲ್ಲಿಯೂ, ಯಾವುದೇ ಆಸರೆ ದೊರೆಯಲಿಲ್ಲ. ಕೆಲಕಾಲ ಕಳೆದ ಬಳಿಕ ಗೋಕರ್ಣನು ಧುಂಧುಕಾರಿಯ ಮರಣದ ಸಮಾಚಾರವನ್ನು ಕೇಳಿದನು. ॥17-18॥

(ಶ್ಲೋಕ - 19)

ಮೂಲಮ್

ಅನಾಥಂ ತಂ ವಿದಿತ್ವೈವ ಗಯಾಶ್ರಾದ್ಧಮಚೀಕರತ್ ।
ಯಸ್ಮಿಂಸ್ತೀರ್ಥೇ ತು ಸಂಯಾತಿ ತತ್ರ ಶ್ರಾದ್ಧ ಮವರ್ತಯತ್ ॥

ಅನುವಾದ

ಆಗ ಅವನು ಅವನನ್ನು ಅನಾಥನೆಂದರಿತು ಗಯೆಯಲ್ಲಿ ಅವನ ಶ್ರಾದ್ಧ ಮಾಡಿದನು. ಅವನು ಹೋದ ಎಲ್ಲ ತೀರ್ಥಗಳಲ್ಲಿಯೂ ಅವನ ಶ್ರಾದ್ಧ ಮಾಡುತ್ತಿದ್ದನು. ॥19॥

(ಶ್ಲೋಕ - 20)

ಮೂಲಮ್

ಏವಂ ಭ್ರಮನ್ ಸ ಗೋಕರ್ಣಃ ಸ್ವಪುರಂ ಸಮುಪೇಯಿವಾನ್ ।
ರಾತ್ರೌ ಗೃಹಾಂಗಣೇ ಸ್ವಪ್ತುಮಾಗತೋಽಲಕ್ಷಿತಃ ಪರೈಃ ॥

ಅನುವಾದ

ಹೀಗೆ ತಿರುಗುತ್ತಾ-ತಿರುಗುತ್ತಾ ಗೋಕರ್ಣನು ತನ್ನ ಊರಿಗೆ ಬಂದನು. ರಾತ್ರಿಯಲ್ಲಿ ಬೇರೆಯವರ ಕಣ್ಣು ತಪ್ಪಿಸಿ ನೇರವಾಗಿ ತನ್ನ ಮನೆಯ ಅಂಗಳದಲ್ಲಿ ಮಲಗಲು ಬಂದನು. ॥20॥

(ಶ್ಲೋಕ - 21)

ಮೂಲಮ್

ತತ್ರ ಸುಪ್ತಂ ಸ ವಿಜ್ಞಾಯ ಧುಂದುಕಾರೀ ಸ್ವಬಾಂಧವಮ್ ।
ನಿಶೀಥೇ ದರ್ಶಯಾಮಾಸ ಮಹಾರೌದ್ರತರಂ ವಪುಃ ॥

ಅನುವಾದ

ಅಲ್ಲಿ ತನ್ನ ತಮ್ಮನು ಮಲಗಿರುವುದನ್ನು ಕಂಡು ನಡುರಾತ್ರಿಯಲ್ಲಿ ಧುಂಧುಕಾರಿಯು ತನ್ನ ಭಾರೀ ವಿಕರಾಳ ರೂಪವನ್ನು ತೋರಿದನು. ॥21॥

(ಶ್ಲೋಕ - 22)

ಮೂಲಮ್

ಸಕೃನ್ಮೇಷಃ ಸಕೃದ್ಧಸ್ತೀ ಸಕೃಚ್ಚ ಮಹಿಷೋಽಭವತ್ ।
ಸಕೃದಿಂದ್ರಃ ಸಕೃಚ್ಚಾಗ್ನಿಃ ಪುನಶ್ಚ ಪುರುಷೋಽಭವತ್ ॥

ಅನುವಾದ

ಅವನು ಕೆಲವೊಮ್ಮೆ ಆಡು, ಕೆಲವೊಮ್ಮೆ ಆನೆ, ಕೆಲವೊಮ್ಮೆ ಕೋಣ, ಕೆಲವೊಮ್ಮೆ ಇಂದ್ರ, ಕೆಲವೊಮ್ಮೆ ಅಗ್ನಿಯಾಗಿ ತೋರುತ್ತಿದ್ದನು. ಕೊನೆಗೆ ಅವನು ಮನುಷ್ಯನ ಆಕಾರದಲ್ಲಿ ಪ್ರಕಟನಾದನು. ॥22॥

(ಶ್ಲೋಕ - 23)

ಮೂಲಮ್

ವೈಪರೀತ್ಯಮಿದಂ ದೃಷ್ಟ್ವಾ ಗೋಕರ್ಣೋ ಧೈರ್ಯಸಂಯುತಃ ।
ಅಯಂ ದುರ್ಗತಿಕಃ ಕೋಽಪಿ ನಿಶ್ಚಿತ್ಯಾಥ ತಮಬ್ರವೀತ್ ॥

ಅನುವಾದ

ಈ ವಿಪರೀತ ಅವಸ್ಥೆಯನ್ನು ನೋಡಿ ಗೋಕರ್ಣನು ಇವನು ಯಾರೋ ದುರ್ಗತಿಯನ್ನು ಪಡೆದ ಜೀವಿಯಾಗಿದ್ದಾನೆ ಎಂದು ನಿಶ್ಚಯಿಸಿ ಅವನು ಅವನಲ್ಲಿ ಧೈರ್ಯದಿಂದ ಕೇಳಿದನು. ॥23॥

(ಶ್ಲೋಕ - 24)

ಮೂಲಮ್ (ವಾಚನಮ್)

ಗೋಕರ್ಣ ಉವಾಚ

ಮೂಲಮ್

ಕಸ್ತ್ವ ಮುಗ್ರತರೋ ರಾತ್ರೌ ಕುತೋ ಯಾತೋ ದಶಾಮಿಮಾಮ್ ।
ಕಿಂ ವಾ ಪ್ರೇತಃ ಪಿಶಾಚೋ ವಾ ರಾಕ್ಷಸೋಽಸೀತಿ ಶಂಸ ನಃ ॥

ಅನುವಾದ

ಗೋಕರ್ಣನು ಕೇಳಿದನು — ನೀನು ಯಾರು? ರಾತ್ರಿಯಲ್ಲಿ ಇಂತಹ ಭಯಾನಕ ರೂಪವನ್ನು ಏಕೆ ತೋರುತ್ತಿರುವೆ? ಇಂತಹ ಸ್ಥಿತಿಯು ನಿನಗೆ ಹೇಗೆ ಉಂಟಾಯಿತು? ನೀನು ಪ್ರೇತವೋ, ಪಿಶಾಚಿಯೋ, ಅಥವಾ ಯಾವುದಾದರೂ ರಾಕ್ಷಸನೋ? ನನಗೆ ಹೇಳು. ॥24॥

(ಶ್ಲೋಕ - 25)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಪೃಷ್ಟಸ್ತದಾ ತೇನ ರುರೋದೋಚ್ಚೈಃ ಪುನಃ ಪುನಃ ।
ಅಶಕ್ತೋ ವಚನೋಚ್ಚಾರೇ ಸಂಜ್ಞಾಮಾತ್ರಂ ಚಕಾರ ಹ ॥

ಅನುವಾದ

ಸೂತರು ಹೇಳುತ್ತಾರೆ — ಗೋಕರ್ಣನು ಹೀಗೆ ಕೇಳಲಾಗಿ ಅವನು ಪದೇ-ಪದೇ ಜೋರಾಗಿ ಅಳತೊಡಗಿದನು. ಅವನಲ್ಲಿ ಮಾತನಾಡಲೂ ಶಕ್ತಿ ಇರಲಿಲ್ಲ. ಅದಕ್ಕಾಗಿ ಅವನು ಕೇವಲ ಸಂಕೇತಮಾತ್ರ ಮಾಡಿದನು. ॥25॥

(ಶ್ಲೋಕ - 26)

ಮೂಲಮ್

ತತೋಽಂಜಲೌ ಜಲಂ ಕೃತ್ವಾ ಗೋಕರ್ಣಸ್ತಮುದೈರಯತ್ ।
ತತ್ಸೇಕಹತಪಾಪೋಽಸೌ ಪ್ರವಕ್ತುಮುಪಚಕ್ರವೆುೀ ॥

ಅನುವಾದ

ಆಗ ಗೋಕರ್ಣನು ಬೊಗಸೆಯಲ್ಲಿ ನೀರು ತುಂಬಿ ಅದನ್ನು ಅಭಿಮಂತ್ರಿಸಿ ಅವನ ಮೇಲೆ ಪ್ರೋಕ್ಷಿಸಿದನು. ಇದರಿಂದ ಅವನ ಪಾಪಗಳು ಸ್ವಲ್ಪ ಶಮನವಾಗಿ ಅವನು ಈ ರೀತಿ ಹೇಳತೊಡಗಿದನು. ॥26॥

(ಶ್ಲೋಕ - 27)

ಮೂಲಮ್ (ವಾಚನಮ್)

ಪ್ರೇತ ಉವಾಚ

ಮೂಲಮ್

ಅಹಂ ಭ್ರಾತಾ ತ್ವದೀಯೋಽಸ್ಮಿ ಧುಂಧುಕಾರೀತಿ ನಾಮತಃ ।
ಸ್ವಕೀಯೇನೈವ ದೋಷೇಣ ಬ್ರಹ್ಮತ್ವಂ ನಾಶಿತಂ ಮಯಾ ॥

ಅನುವಾದ

ಪ್ರೇತವೆಂದಿತು — ನಾನು ನಿನ್ನ ಸಹೋದರನಾಗಿರುವೆನು. ಧುಂಧುಕಾರಿ ಎಂದು ನನ್ನ ಹೆಸರು. ನಾನು ನನ್ನದೇ ದೋಷಗಳಿಂದ ನನ್ನ ಬ್ರಾಹ್ಮಣತ್ವವನ್ನು ನಾಶಮಾಡಿಕೊಂಡೆ. ॥27॥

(ಶ್ಲೋಕ - 28)

ಮೂಲಮ್

ಕರ್ಮಣೋ ನಾಸ್ತಿ ಸಂಖ್ಯಾ ಮೇ ಮಹಾಜ್ಞಾ ನೇ ವಿವರ್ತಿನಃ ।
ಲೋಕಾನಾಂ ಹಿಂಸಕಃ ಸೋಽಹಂ ಸ್ತ್ರಿಭಿರ್ದುಃಖೇನ ಮಾರಿತಃ ॥

ಅನುವಾದ

ನನ್ನ ಕುಕರ್ಮಗಳು ಎಣಿಸಲಾರದಷ್ಟಿವೆ. ನಾನಾದರೋ ಮಹಾನ್ ಆಜ್ಞಾನದಲ್ಲಿ ತೊಳಲಾಡುತ್ತಿದ್ದೆ. ಇದರಿಂದ ನಾನು ಜನರನ್ನು ತುಂಬಾ ಹಿಂಸಿಸಿದೆ. ಕೊನೆಗೆ ಕುಲಟೆಯರಾದ ಸ್ತ್ರೀಯರು ನನ್ನನ್ನು ನರಳಾಡಿಸಿಕೊಂದುಬಿಟ್ಟರು. ॥28॥

(ಶ್ಲೋಕ - 29)

ಮೂಲಮ್

ಅತಃ ಪ್ರೇತತ್ವಮಾಪನ್ನೋ ದುರ್ದಶಾಂ ಚ ವಹಾಮ್ಯಹಮ್ ।
ವಾತಾಹಾರೇಣ ಜೀವಾಮಿ ದೈವಾಧೀನಫಲೋದಯಾತ್ ॥

ಅನುವಾದ

ಇದರಿಂದ ಈಗ ಪ್ರೇತಯೋನಿ ಪಡೆದು ಈ ದುರ್ದಶೆಯನ್ನು ಅನುಭವಿಸುತ್ತಿದ್ದೇನೆ. ಈಗ ದೈವವಶಾತ್ ಕರ್ಮಫಲವು ಉದಯಿಸಿದ್ದರಿಂದ ನಾನು ಕೇವಲ ಗಾಳಿಯನ್ನು ಕುಡಿಯುತ್ತಾ ಬದುಕಿದ್ದೇನೆ. ॥29॥

(ಶ್ಲೋಕ - 30)

ಮೂಲಮ್

ಅಹೋ ಬಂಧೋ ಕೃಪಾಸಿಂಧೋ ಭ್ರಾತರ್ಮಾಮಾಶು ಮೋಚಯ ।
ಗೋಕರ್ಣೋ ವಚನಂ ಶ್ರುತ್ವಾ ತಸ್ಮೈ ವಾಕ್ಯಮಥಾಬ್ರವೀತ್ ॥

ಅನುವಾದ

ಅಯ್ಯಾ ತಮ್ಮನೇ! ನೀನು ದಯಾಸಮುದ್ರನಾಗಿರುವಿ. ಈಗ ಹೇಗಾದರೂ ಬೇಗನೇ ನನ್ನನ್ನು ಈ ಪ್ರೇತಯೋನಿಯಿಂದ ಬಿಡಿಸು. ಗೋಕರ್ಣನು ಧುಂಧುಕಾರಿಯ ಎಲ್ಲ ಮಾತುಗಳನ್ನು ಕೇಳಿ ಅವನಲ್ಲಿ ಹೇಳಿದನು. ॥30॥

(ಶ್ಲೋಕ - 31)

ಮೂಲಮ್ (ವಾಚನಮ್)

ಗೋಕರ್ಣ ಉವಾಚ

ಮೂಲಮ್

ತ್ವದರ್ಥಂ ತು ಗಯಾಪಿಂಡೋ ಮಯಾ ದತ್ತೋ ವಿಧಾನತಃ ।
ತತ್ಕಥಂ ನೈವ ಮುಕ್ತೋಽಸಿ ಮಮಾಶ್ಚರ್ಯಮಿದಂ ಮಹತ್ ॥

ಅನುವಾದ

ಗೋಕರ್ಣನೆಂದನು — ಸಹೋದರಾ! ನಾನು ನಿನಗಾಗಿ ವಿಧಿಪೂರ್ವಕ ಗಯೆಯಲ್ಲಿ ಪಿಂಡದಾನ ಮಾಡಿದೆ. ಆದರೂ ನೀನು ಪ್ರೇತಯೋನಿಯಿಂದ ಮುಕ್ತನಾಗಲಿಲ್ಲ ಏಕೆ ಎಂಬುದು ನನಗೆ ಆಶ್ಚರ್ಯವಾಗುತ್ತಿದೆ. ॥31॥

(ಶ್ಲೋಕ - 32)

ಮೂಲಮ್

ಗಯಾಶ್ರಾದ್ಧಾನ್ನ ಮುಕ್ತಿಶ್ಚೇದುಪಾಯೋ ನಾಪರಸ್ತ್ವಿಹ ।
ಕಿಂ ವಿಧೇಯಂ ಮಯಾ ಪ್ರೇತ ತತ್ತ್ವಂ ವದ ಸವಿಸ್ತರಮ್ ॥

ಅನುವಾದ

ಗಯಾ ಶ್ರಾದ್ಧದಿಂದಲೂ ನಿನ್ನ ಮುಕ್ತಿಯಾಗದಿದ್ದಾಗ ಇದಕ್ಕೆ ಬೇರೆ ಯಾವ ಉಪಾಯವೂ ಇಲ್ಲ. ಸರಿ, ನೀನು ಎಲ್ಲ ಮಾತನ್ನು ಬಿಚ್ಚಿಹೇಳು. ಈಗ ನಾನು ಏನು ಮಾಡಬೇಕು? ॥32॥

(ಶ್ಲೋಕ - 33)

ಮೂಲಮ್ (ವಾಚನಮ್)

ಪ್ರೇತ ಉವಾಚ

ಮೂಲಮ್

ಗಯಾಶ್ರಾದ್ಧ ಶತೇನಾಪಿ ಮುಕ್ತಿರ್ಮೇ ನ ಭವಿಷ್ಯತಿ ।
ಉಪಾಯಮಪರಂ ಕಂಚಿತ್ತ್ವಂ ವಿಚಾರಯ ಸಾಂಪ್ರತಮ್ ॥

ಅನುವಾದ

ಪ್ರೇತವೆಂದಿತು — ನೂರಾರು ಗಯಾಶ್ರಾದ್ಧಗಳನ್ನು ಮಾಡಿದರೂ ನನ್ನ ಮುಕ್ತಿಯು ಆಗಲಾರದು. ಈಗಲಾದರೋ ನೀನು ಇದಕ್ಕಾಗಿ ಬೇರೆ ಯಾವುದಾದರೂ ಉಪಾಯವನ್ನು ಯೋಚಿಸು. ॥33॥

(ಶ್ಲೋಕ - 34)

ಮೂಲಮ್

ಇತಿ ತದ್ವಾಕ್ಯಮಾಕರ್ಣ್ಯ ಗೋಕರ್ಣೋ ವಿಸ್ಮಯಂ ಗತಃ ।
ಶತಶ್ರಾದ್ಧೈರ್ನ ಮುಕ್ತಿಶ್ಚೇದಸಾಧ್ಯಂ ಮೋಚನಂ ತವ ॥

ಅನುವಾದ

ಪ್ರೇತದ ಈ ಮಾತನ್ನು ಕೇಳಿ ಗೋಕರ್ಣನಿಗೆ ಬಹಳ ಆಶ್ಚರ್ಯವಾಯಿತು. ಅವನೆಂದನು ನೂರಾರು ಗಯಾ ಶ್ರಾದ್ಧಗಳಿಂದಲೂ ನಿನ್ನ ಮುಕ್ತಿಯು ಆಗದಿದ್ದರೆ, ನಿನ್ನ ಮುಕ್ತಿಯು ಅಸಂಭವವೆಂದೇ ತೋರುತ್ತದೆ. ॥34॥

(ಶ್ಲೋಕ - 35)

ಮೂಲಮ್

ಇದಾನೀಂ ತು ನಿಜಂ ಸ್ಥಾನಮಾತಿಷ್ಠ ಪ್ರೇತ ನಿರ್ಭಯಃ ।
ತ್ವನ್ಮುಕ್ತಿಸಾಧಕಂ ಕಿಂಚಿದಾಚರಿಷ್ಯೇ ವಿಚಾರ್ಯ ಚ ॥

ಅನುವಾದ

ಇರಲಿ, ಈಗ ನೀನು ನಿರ್ಭಯನಾಗಿ ತನ್ನ ಸ್ಥಾನದಲ್ಲಿ ಇರು. ನಾನು ವಿಚಾರಗೈದು ನಿನ್ನ ಮುಕ್ತಿಗಾಗಿ ಯಾವುದಾದರೂ ಬೇರೆ ಉಪಾಯ ಮಾಡುವೆನು. ॥35॥

(ಶ್ಲೋಕ - 36)

ಮೂಲಮ್

ಧುಂಧುಕಾರೀ ನಿಜಸ್ಥಾನಂ ತೇನಾದಿಷ್ಟಸ್ತತೋ ಗತಃ ।
ಗೋಕರ್ಣಶ್ಚಿಂತಯಾಮಾಸ ತಾಂ ರಾತ್ರಿಂ ನ ತದಧ್ಯಗಾತ್ ॥

ಅನುವಾದ

ಗೋಕರ್ಣನ ಅಪ್ಪಣೆ ಪಡೆದು ಧುಂಧುಕಾರಿಯು ಅಲ್ಲಿಂದ ಹೊರಟು ತನ್ನ ಸ್ಥಾನಕ್ಕೆ ಹೋದನು. ಇತ್ತ ಗೋಕರ್ಣನು ರಾತ್ರಿಯಿಡೀ ವಿಚಾರ ಮಾಡಿದರೂ ಅವನಿಗೆ ಯಾವ ಉಪಾಯವು ಹೊಳೆಯಲಿಲ್ಲ. ॥36॥

(ಶ್ಲೋಕ - 37)

ಮೂಲಮ್

ಪ್ರಾತಸ್ತಮಾಗತಂ ದೃಷ್ಟ್ವಾ ಲೋಕಾಃ ಪ್ರೀತ್ಯಾ ಸಮಾಗತಾಃ ।
ತತ್ಸರ್ವಂ ಕಥಿತಂ ತೇನ ಯಜ್ಜಾತಂ ಚ ಯಥಾ ನಿಶಿ ॥

ಅನುವಾದ

ಬೆಳಿಗ್ಗೆ ಅವನು ಬಂದಿರುವುದನ್ನು ನೋಡಿ ಜನರು ಪ್ರೇಮದಿಂದ ಅವನನ್ನು ಭೆಟ್ಟಿಯಾಗಲು ಬಂದರು. ಆಗ ಗೋಕರ್ಣನು ರಾತ್ರಿಯಲ್ಲಿ ನಡೆದುದೆಲ್ಲವನ್ನು ಅವರಿಗೆ ತಿಳಿಸಿದನು. ॥37॥

(ಶ್ಲೋಕ - 38)

ಮೂಲಮ್

ವಿದ್ವಾಂಸೋ ಯೋಗನಿಷ್ಠಾಶ್ಚ ಜ್ಞಾನಿನೋ ಬ್ರಹ್ಮವಾದಿನಃ ।
ತನ್ಮುಕ್ತಿಂ ನೈವ ತೇಽಪಶ್ಯನ್ ಪಶ್ಯಂತಃ ಶಾಸ್ತ್ರ ಸಂಚಯಾನ್ ॥

ಅನುವಾದ

ಅವರಲ್ಲಿದ್ದ ವಿದ್ವಾಂಸರೂ, ಯೋಗ ನಿಷ್ಠರೂ, ಜ್ಞಾನಿಗಳೂ, ವೇದಜ್ಞರೂ ಹೀಗೆ ಎಲ್ಲರೂ ಅನೇಕ ಶಾಸ್ತ್ರಗಳನ್ನು ತಿರುವಿ ಹಾಕಿದರು. ಆದರೂ ಅವನ ಮುಕ್ತಿಯ ಉಪಾಯವು ಸಿಗಲಿಲ್ಲ. ॥38॥

(ಶ್ಲೋಕ - 39)

ಮೂಲಮ್

ತತಃ ಸರ್ವೈಃ ಸೂರ್ಯವಾಕ್ಯಂ ತನ್ಮುಕ್ತೌ ಸ್ಥಾಪಿತಂ ಪರಮ್ ।
ಗೋಕರ್ಣಃ ಸ್ತಂಭನಂ ಚಕ್ರೇ ಸೂರ್ಯವೇಗಸ್ಯ ವೈ ತದಾ ॥

ಅನುವಾದ

ಕೊನೆಗೆ ಈ ವಿಷಯದಲ್ಲಿ ಭಗವಾನ್ ಭಾಸ್ಕರನು ಏನು ಆಜ್ಞೆ ಕೊಡುವನೋ ಅದನ್ನೇ ಮಾಡುವುದೆಂದು ಎಲ್ಲರೂ ನಿಶ್ಚಯಿಸಿದರು. ಗೋಕರ್ಣನು ತನ್ನ ತಪೋಬಲದಿಂದ ಸೂರ್ಯನ ಗತಿಯನ್ನು ತಡೆದು ಬಿಟ್ಟನು. ॥39॥

(ಶ್ಲೋಕ - 40)

ಮೂಲಮ್

ತುಭ್ಯಂ ನಮೋ ಜಗತ್ಸಾಕ್ಷಿನ್ ಬ್ರೂಹಿ ಮೇ ಮುಕ್ತಿಹೇತುಕಮ್ ।
ತಚ್ಛ್ರುತ್ವಾ ದೂರತಃ ಸೂರ್ಯಃ ಸುಟಮಿತ್ಯಭ್ಯಭಾಷತ ॥

(ಶ್ಲೋಕ - 41)

ಮೂಲಮ್

ಶ್ರೀಮದ್ಭಾಗವತಾನ್ಮುಕ್ತಿಃ ಸಪ್ತಾಹಂ ವಾಚನಂ ಕುರು ।
ಇತಿ ಸೂರ್ಯವಚಃ ಸರ್ವೈರ್ಧರ್ಮರೂಪಂ ತು ವಿಶ್ರುತಮ್ ॥

ಅನುವಾದ

ಅವನು ಸ್ತುತಿಸಿದನು - ‘ಭಗವಂತಾ! ನೀನು ಜಗತ್ಸಾಕ್ಷಿಯಾಗಿರುವೆ. ನಾನು ನಿನಗೆ ನಮಸ್ಕರಿಸುತ್ತೇನೆ. ನೀನು ದಯಮಾಡಿ ಧುಂಧುಕಾರಿಯ ಮುಕ್ತಿಯ ಸಾಧನೆಯನ್ನು ನನಗೆ ತಿಳಿಸು.’ ಗೋಕರ್ಣನ ಈ ಪ್ರಾರ್ಥನೆಯನ್ನು ಕೇಳಿ ಸೂರ್ಯ ನಾರಾಯಣನು ದೂರದಿಂದಲೇ ಸ್ಪಷ್ಟವಾಗಿ ಇಂತೆಂದನು ‘ಶ್ರೀಮದ್ಭಾಗವತದಿಂದ ಮುಕ್ತಿಯಾಗಬಲ್ಲದು. ಅದರಿಂದ ನೀನು ಅದನ್ನು ಸಪ್ತಾಹ ವಿಧಿಯಿಂದ ಪಾರಾಯಣೆ ಮಾಡು’ ಸೂರ್ಯನ ಈ ಧರ್ಮಮಯ ವಚನವನ್ನು ಎಲ್ಲರೂ ಕೇಳಿದರು. ॥40-41॥

(ಶ್ಲೋಕ - 42)

ಮೂಲಮ್

ಸರ್ವೇಽಬ್ರುವನ್ ಪ್ರಯತ್ನೇನ ಕರ್ತವ್ಯಂ ಸುಕರಂ ತ್ವಿದಮ್ ।
ಗೋಕರ್ಣೋ ನಿಶ್ಚಯಂ ಕೃತ್ವಾ ವಾಚನಾರ್ಥಂ ಪ್ರವರ್ತಿತಃ ॥

ಅನುವಾದ

ಆಗ ಎಲ್ಲರೂ ‘ಈ ಸಾಧನೆಯು ತುಂಬಾ ಸರಳವಾಗಿದೆ. ಇದನ್ನು ಪ್ರಯತ್ನ ಪೂರ್ವಕ ಮಾಡು’ ಎಂದು ಹೇಳಿದರು. ಆದ್ದರಿಂದ ಗೋಕರ್ಣನೂ ಹಾಗೆಯೇ ನಿಶ್ಚಯಿಸಿ ಕಥೆಯನ್ನು ಹೇಳಲು ಸಿದ್ಧನಾದನು. ॥42॥

(ಶ್ಲೋಕ - 43)

ಮೂಲಮ್

ತತ್ರ ಸಂಶ್ರವಣಾರ್ಥಾಯ ದೇಶಗ್ರಾಮಾಜ್ಜನಾ ಯಯುಃ ।
ಪಂಗ್ವಂಧವೃದ್ಧಮಂದಾಶ್ಚ ತೇಽಪಿ ಪಾಪಕ್ಷಯಾಯ ವೈ ॥

ಅನುವಾದ

ಅನೇಕ ಊರುಗಳಿಂದ, ಗ್ರಾಮಗಳಿಂದ ಅನೇಕ ಜನರು ಕಥೆ ಕೇಳಲು ಆಗಮಿಸಿದರು. ಬಹಳಷ್ಟು ಕುಂಟರೂ, ಕುರುಡರೂ, ಮುದುಕರೂ, ಮಂದಬುದ್ಧಿಯವರೂ ಹೀಗೆ ತಮ್ಮ ಪಾಪಗಳನ್ನು ಕಳೆದುಕೊಳ್ಳುವ ಉದ್ದೇಶದಿಂದ ಅಲ್ಲಿ ಬಂದು ಸೇರಿದರು. ॥43॥

(ಶ್ಲೋಕ - 44)

ಮೂಲಮ್

ಸಮಾಜಸ್ತು ಮಹಾಂಜಾತೋ ದೇವವಿಸ್ಮಯಕಾರಕಃ ।
ಯದೈವಾಸನಮಾಸ್ಥಾಯ ಗೋಕರ್ಣೋಽಕಥಯತ್ಕಥಾಮ್ ॥

(ಶ್ಲೋಕ - 45)

ಮೂಲಮ್

ಸ ಪ್ರೇತೋಽಪಿ ತದಾಯಾತಃ ಸ್ಥಾನಂ ಪಶ್ಯನ್ನಿತಸ್ತತಃ ।
ಸಪ್ತಗ್ರಂಥಿಯುತಂ ತತ್ರಾಪಶ್ಯತ್ಕೀಚಕಮುಚ್ಛ್ರಿತಮ್ ॥

ಅನುವಾದ

ಹೀಗೆ ಅಲ್ಲಿ ನೆರೆದ ಜನಸಂದಣಿಯನ್ನು ನೋಡಿ ದೇವತೆಗಳಿಗೂ ಆಶ್ಚರ್ಯವಾಯಿತು. ಗೋಕರ್ಣನು ವ್ಯಾಸಪೀಠದಲ್ಲಿ (ವೇದಿಕೆಯಲ್ಲಿ) ಕುಳಿತು ಕಥೆ ಹೇಳಲು ತೊಡಗಿದಾಗ ಧುಂಧುಕಾರಿಯ ಪ್ರೇತವು ಅಲ್ಲಿಗೆ ಬಂದು ಕುಳಿತುಕೊಳ್ಳಲು ಅಲ್ಲಿ-ಇಲ್ಲಿ ಜಾಗ ಹುಡುಕ ತೊಡಗಿತು. ಅಷ್ಟರಲ್ಲಿ ಏಳು ಗಂಟುಗಳಿದ್ದ ಒಂದು ನೇರವಾದ ಬಿದಿರಿನ ಮೇಲೆ ಅದರ ದೃಷ್ಟಿ ಬಿತ್ತು. ॥44-45॥

(ಶ್ಲೋಕ - 46)

ಮೂಲಮ್

ತನ್ಮೂಲಚ್ಛಿದ್ರಮಾವಿಶ್ಯ ಶ್ರವಣಾರ್ಥಂ ಸ್ಥಿತೋ ಹ್ಯಸೌ ।
ವಾತರೂಪೀ ಸ್ಥಿತಿಂ ಕರ್ತುಮಶಕ್ತೋ ವಂಶಮಾವಿಶತ್ ॥

ಅನುವಾದ

ಅದರ ಕೆಳಗಿನ ರಂಧ್ರದಲ್ಲಿ ಹೊಕ್ಕು ಅದು ಕಥೆ ಕೇಳಲು ಕುಳಿತುಕೊಂಡಿತು. ಗಾಳಿಯ ರೂಪದಿಂದ ಇದ್ದ ಕಾರಣ ಅದಕ್ಕೆ ಹೊರಗೆಲ್ಲೂ ಕುಳಿತುಕೊಳ್ಳಲಾರದೆ, ಬಿದಿರಿನಲ್ಲಿ ಹೊಕ್ಕಿತು. ॥46॥

(ಶ್ಲೋಕ - 47)

ಮೂಲಮ್

ವೈಷ್ಣವಂ ಬ್ರಾಹ್ಮಣಂ ಮುಖ್ಯಂ ಶ್ರೋತಾರಂ ಪರಿಕಲ್ಪ್ಯ ಸಃ ।
ಪ್ರಥಮಸ್ಕಂಧತಃ ಸ್ಪಷ್ಟಮಾಖ್ಯಾನಂ ಧೇನುಜೋಽಕರೋತ್ ॥

ಅನುವಾದ

ಗೋಕರ್ಣನು ಓರ್ವ ವೈಷ್ಣವ ಬ್ರಾಹ್ಮಣನನ್ನು ಮುಖ್ಯ ಶ್ರೋತೃವಾಗಿಸಿ, ಪ್ರಥಮಸ್ಕಂಧದಿಂದಲೇ ಸ್ವಪ್ಟವಾಗಿ, ಮಧುರ ಸ್ವರದಿಂದ ಕಥೆ ಹೇಳಲು ಪ್ರಾರಂಭಿಸಿದನು. ॥47॥

(ಶ್ಲೋಕ - 48)

ಮೂಲಮ್

ದಿನಾಂತೇ ರಕ್ಷಿತಾ ಗಾಥಾ ತದಾ ಚಿತ್ರಂ ಬಭೂವ ಹ ।
ವಂಶೈಕಗ್ರಂಥಿಭೇದೋಽಭೂತ್ಸಶಬ್ದಂ ಪಶ್ಯತಾಂ ಸತಾಮ್ ॥

ಅನುವಾದ

ಸಾಯಂಕಾಲ ಅಂದಿನ ಕಥೆಯನ್ನು ಮುಗಿಸಿದಾಗ ಒಂದು ವಿಚಿತ್ರವಾದ ಸಂಗತಿ ನಡೆಯಿತು. ಅಲ್ಲಿ ಸಭಿಕರು ನೋಡು ನೋಡುತ್ತಿರುವಂತೆ ಆ ಬಿದಿರಿನ ಒಂದು ಗಂಟು ಫಟಾರವೆಂದು ಶಬ್ದಮಾಡುತ್ತಾ ಒಡೆದು ಹೋಯಿತು. ॥48॥

(ಶ್ಲೋಕ - 49)

ಮೂಲಮ್

ದ್ವಿತೀಯೇಽಹ್ನಿ ತಥಾ ಸಾಯಂ ದ್ವಿತೀಯಗ್ರಂಥಿ ಭೇದನಮ್ ।
ತೃತೀಯೇಽಹ್ನಿ ತಥಾ ಸಾಯಂ ತೃತೀಯಗ್ರಂಥಿ ಭೇದನಮ್ ॥

ಅನುವಾದ

ಹೀಗೆಯೇ ಎರಡನೆ ದಿನ ಸಂಜೆ ಎರಡನೆಯ ಗಂಟು, ಮೂರನೆಯ ದಿನ ಮೂರನೆಯ ಗಂಟು ಒಡೆದು ಹೋಯಿತು. ॥49॥

(ಶ್ಲೋಕ - 50)

ಮೂಲಮ್

ಏವಂ ಸಪ್ತದಿನೈಶ್ಚೈವ ಸಪ್ತಗ್ರಂಥಿವಿಭೇದನಮ್ ।
ಕೃತ್ವಾ ಸ ದ್ವಾದಶಸ್ಕಂಧ ಶ್ರವಣಾತ್ಪ್ರೇತತಾಂ ಜಹೌ ॥

(ಶ್ಲೋಕ - 51)

ಮೂಲಮ್

ದಿವ್ಯರೂಪಧರೋ ಜಾತಸ್ತುಲಸೀದಾಮಮಂಡಿತಃ ।
ಪೀತವಾಸಾ ಘನಶ್ಯಾಮೋ ಮುಕುಟೀ ಕುಂಡಲಾನ್ವಿತಃ ॥

ಅನುವಾದ

ಈ ವಿಧವಾಗಿ ಏಳು ದಿನಗಳಲ್ಲಿ ಏಳೂ ಗಂಟುಗಳು ಒಡೆದು ಧುಂಧುಕಾರಿಯು ಹನ್ನೆರಡೂ ಸ್ಕಂಧಗಳನ್ನು ಕೇಳಿದ್ದರಿಂದ ಪವಿತ್ರನಾಗಿ, ಪ್ರೇತಯೋನಿಯಿಂದ ಮುಕ್ತನಾಗಿ, ದಿವ್ಯ ರೂಪವನ್ನು ಧರಿಸಿ ಎಲ್ಲರೆದುರಿಗೆ ಪ್ರಕಟನಾದನು. ಅವನ ಶರೀರವು ಮೇಘದಂತೆ ಶ್ಯಾಮಲವಾಗಿದ್ದು, ಪೀತಾಂಬರ, ತುಳಸೀಮಾಲೆಗಳಿಂದ ಸುಶೋಭಿತವಾಗಿತ್ತು. ತಲೆಯ ಮೇಲೆ ಮನೋಹರವಾದ ಕಿರೀಟವಿದ್ದು, ಕಿವಿಗಳಲ್ಲಿ ಕಮನೀಯ ಕುಂಡಲಗಳು ಓಲಾಡುತ್ತಿದ್ದವು. ॥50-51॥

(ಶ್ಲೋಕ - 52)

ಮೂಲಮ್

ನನಾಮ ಭ್ರಾತರಂ ಸದ್ಯೋ ಗೋಕರ್ಣಮಿತಿ ಚಾಬ್ರವೀತ್ ।
ತ್ವಯಾಹಂ ಮೋಚಿತೋ ಬಂಧೋ ಕೃಪಯಾ ಪ್ರೇತಕಶ್ಮಲಾತ್ ॥

ಅನುವಾದ

ಅವನು ಕೂಡಲೇ ಸಹೋದರ ಗೋಕರ್ಣನಿಗೆ ವಂದಿಸಿ ಹೇಳಿದನು- ಸೋದರಾ! ನೀನು ಕೃಪೆಗೈದು ನನ್ನನ್ನು ಪ್ರೇತಯೋನಿಯ ದುಃಖದಿಂದ ಬಿಡಿಸಿದೆ. ॥52॥

(ಶ್ಲೋಕ - 53)

ಮೂಲಮ್

ಧನ್ಯಾ ಭಾಗವತೀ ವಾರ್ತಾ ಪ್ರೇತಪೀಡಾವಿನಾಶಿನೀ ।
ಸಪ್ತಾಹೋಽಪಿ ತಥಾ ಧನ್ಯಃ ಕೃಷ್ಣಲೋಕಫಲಪ್ರದಃ ॥

ಅನುವಾದ

ಈ ಪ್ರೇತಪೀಡೆಯನ್ನು ನಾಶಗೊಳಿಸುವಂತಹ ಶ್ರೀಮದ್ಭಾಗವತ ಕಥೆಯು ಧನ್ಯವಾಗಿದೆ. ಶ್ರೀಕೃಷ್ಣಚಂದ್ರನ ಧಾಮವನ್ನು ದೊರಕಿಸುವಂತಹ ಇದರ ಸಪ್ತಾಹ ಪಾರಾಯಣವೂ ಧನ್ಯವಾಗಿದೆ. ॥53॥

(ಶ್ಲೋಕ - 54)

ಮೂಲಮ್

ಕಂಪಂತೇ ಸರ್ವಪಾಪಾನಿ ಸಪ್ತಾಹಶ್ರವಣೇ ಸ್ಥಿತೇ ।
ಅಸ್ಮಾಕಂ ಪ್ರಲಯಂ ಸದ್ಯಃ ಕಥಾ ಚೇಯಂ ಕರಿಷ್ಯತಿ ॥

ಅನುವಾದ

ಸಪ್ತಾಹ ಶ್ರವಣದ ಯೋಗವು ಒದಗಿದಾಗ ಎಲ್ಲ ಪಾಪಗಳು ನಡುಗಿ ಈಗ ಈ ಭಾಗವತದ ಕಥೆಯು ಬೇಗನೇ ನಮ್ಮನ್ನು ಮುಗಿಸಿಬಿಟ್ಟೀತು ಎಂದು ಹೆದರಿ ಓಡಿ ಹೋಗುವವು. ॥54॥

(ಶ್ಲೋಕ - 55)

ಮೂಲಮ್

ಆರ್ದ್ರಂ ಶುಷ್ಕಂ ಲಘು ಸ್ಥೂಲಂ ವಾಙ್ಮನಃಕರ್ಮಭಿಃ ಕೃತಮ್ ।
ಶ್ರವಣಂ ವಿದಹೇತ್ಪಾಪಂ ಪಾವಕಃ ಸಮಿಧೋ ಯಥಾ ॥

ಅನುವಾದ

ಬೆಂಕಿಯು ಒಣಗಿದ-ಹಸಿ, ದೊಡ್ಡ-ಸಣ್ಣ ಎಲ್ಲ ರೀತಿಯ ಕಟ್ಟಿಗೆಗಳನ್ನು ಸುಟ್ಟು ಬಿಡುವಂತೆ ಈ ಸಪ್ತಾಹ ಶ್ರವಣವು ಮನ, ವಚನ, ಕರ್ಮಗಳ ಮೂಲಕ ಮಾಡಿದ ಎಲ್ಲ ಪ್ರಕಾರದ ಸಣ್ಣ-ದೊಡ್ಡ ಪಾಪಗಳನ್ನು ಭಸ್ಮವಾಗಿಸಿ ಬಿಡುತ್ತದೆ. ॥55॥

(ಶ್ಲೋಕ - 56)

ಮೂಲಮ್

ಅಸ್ಮಿನ್ವೈ ಭಾರತೇ ವರ್ಷೇ ಸೂರಿಭಿರ್ದೇವಸಂಸದಿ ।
ಅಕಥಾಶ್ರಾವಿಣಾಂ ಪುಂಸಾಂ ನಿಷಲಂ ಜನ್ಮ ಕೀರ್ತಿತಮ್ ॥

ಅನುವಾದ

ದೇವತೆಗಳ ಸಭೆಯಲ್ಲಿ ವಿದ್ವಾಂಸರು ಹೇಳುತ್ತಾರೆ — ಈ ಭಾರತವರ್ಷದಲ್ಲಿ ಶ್ರೀಮದ್ಭಾಗವತದ ಕಥೆಯನ್ನು ಕೇಳದವನ ಜನ್ಮವು ವ್ಯರ್ಥವೇ ಆಗಿದೆ. ॥56॥

(ಶ್ಲೋಕ - 57)

ಮೂಲಮ್

ಕಿಂ ಮೋಹತೋ ರಕ್ಷಿತೇನ ಸುಪುಷ್ಟೇನ ಬಲೀಯಸಾ ।
ಅಧ್ರುವೇಣ ಶರೀರೇಣ ಶುಕಶಾಸ್ತ್ರ ಕಥಾಂ ವಿನಾ ॥

ಅನುವಾದ

ಮೋಹದಿಂದ ಸಾಕಿ ಸಲಹಿ ಈ ಅನಿತ್ಯ ಶರೀರವನ್ನು ಹೃಷ್ಟ-ಪುಷ್ಟ, ಬಲಿಷ್ಠವಾಗಿಸಿಕೊಂಡರೂ ಶ್ರೀಮದ್ಭಾಗವತದ ಕಥೆ ಕೇಳದಿದ್ದರೆ ಏನು ಲಾಭವಾದಂತಾಯಿತು? ॥57॥

(ಶ್ಲೋಕ - 58)

ಮೂಲಮ್

ಅಸ್ಥಿಸ್ತಂಭಂ ಸ್ನಾಯುಬದ್ಧಂ ಮಾಂಸಶೋಣಿತಲೇಪಿತಮ್ ।
ಚರ್ಮಾವನದ್ಧಂ ದುರ್ಗಂಧಂ ಪಾತ್ರಂ ಮೂತ್ರಪುರೀಷಯೋಃ ॥

ಅನುವಾದ

ಅಸ್ಥಿಗಳೇ ಈ ಶರೀರದ ಆಧಾರ ಸ್ತಂಭಗಳು. ನರಗಳಿಂದ ಬಿಗಿದು, ಇದರ ಮೇಲೆ ರಕ್ತ-ಮಾಂಸವನ್ನು ಮೆತ್ತಿ, ಚರ್ಮ ದಿಂದ ಮುಚ್ಚಲಾಗಿದೆ. ಇದರ ಪ್ರತಿಯೊಂದು ಅವಯವದಿಂದಲೂ ದುರ್ಗಂಧ ಬರುತ್ತದೆ. ಏಕೆಂದರೆ, ಇದಾದರೋ ಮಲ-ಮೂತ್ರದ ಭಂಡಾರವೇ ಆಗಿದೆ. ॥58॥

(ಶ್ಲೋಕ - 59)

ಮೂಲಮ್

ಜರಾಶೋಕವಿಪಾಕಾರ್ತಂ ರೋಗಮಂದಿರಮಾತುರಮ್ ।
ದುಷ್ಪೂರಂ ದುರ್ಧರಂ ದುಷ್ಟಂ ಸದೋಽಷಂ ಕ್ಷಣಭಂಗುರಮ್ ॥

ಅನುವಾದ

ವೃದ್ಧಾವಸ್ಥೆ ಮತ್ತು ಶೋಕದ ಕಾರಣ ಪರಿಣಾಮದಲ್ಲಿ ಇದು ದುಃಖಮಯವೇ ಆಗಿದೆ. ರೋಗಗಳ ಆಗರವಾಗಿದೆ. ಇದು ಯಾವಾಗಲೂ ಒಂದಲ್ಲ-ಒಂದು ಕಾಮನೆಯಿಂದ ಪೀಡಿತವಾಗಿರುತ್ತದೆ. ಎಂದೂ ಇದರ ತೃಪ್ತಿಯಾಗುವುದಿಲ್ಲ. ಇದನ್ನು ಧರಿಸಿಕೊಂಡಿರುವುದೂ ಒಂದು ಭಾರವೆ. ಕ್ಷಣ ಭಂಗುರವಾದ ಇದರ ರೋಮ-ರೋಮಗಳಲ್ಲಿ ದೋಷಗಳೇ ತುಂಬಿವೆ. ॥59॥

(ಶ್ಲೋಕ - 60)

ಮೂಲಮ್

ಕೃಮಿವಿಡ್ಭಸ್ಮ ಸಂಜ್ಞಾಂತಂ ಶರೀರಮಿತಿ ವರ್ಣಿತಮ್ ।
ಅಸ್ಥಿರೇಣ ಸ್ಥಿರಂ ಕರ್ಮ ಕುತೋಽಯಂ ಸಾಧಯೇನ್ನ ಹಿ ॥

ಅನುವಾದ

ಕೊನೆಗೆ ಇಟ್ಟರೆ ಹುಳಗಳ ರಾಶಿ, ಸುಟ್ಟರೆ ಎರಡು ಹಿಡಿ ಬೂದಿ, ಪ್ರಾಣಿಗಳು ತಿಂದರೆ ಲದ್ದಿಯಾಗಿ ಹೋಗುವ ಇದರ ಮೂರೇಗತಿಯನ್ನು ಹೇಳಿರುವರು. ಇಂತಹ ಅಸ್ಥಿರ ಶರೀರದಿಂದ ಮನುಷ್ಯನು ಅವಿನಾಶಿ ಯಾದ ಫಲವನ್ನು ಕೊಡುವ ಕೆಲಸವನ್ನು ಏಕೆ ಸಾಧಿಸಿಕೊಳ್ಳುವುದಿಲ್ಲ? ॥60॥

(ಶ್ಲೋಕ - 61)

ಮೂಲಮ್

ಯತ್ಪ್ರಾತಃ ಸಂಸ್ಕೃತಂ ಚಾನ್ನಂ ಸಾಯಂ ತಚ್ಛ ವಿನಶ್ಯತಿ ।
ತದೀಯರಸಸಂಪುಷ್ಟೇ ಕಾಯೇ ಕಾ ನಾಮ ನಿತ್ಯ ತಾ ॥

ಅನುವಾದ

ಬೆಳಿಗ್ಗೆ ಬೇಯಿಸಿದ ಅನ್ನವು ಸಂಜೆಗೆ ಕೆಟ್ಟು ಹೋಗುತ್ತದೆ. ಮತ್ತೆ ಅದೇ ರಸದಿಂದ ಪುಷ್ಪವಾದ ಶರೀರದ ನಿತ್ಯತೆ ಎಲ್ಲಿದೆ? ॥61॥

(ಶ್ಲೋಕ - 62)

ಮೂಲಮ್

ಸಪ್ತಾಹಶ್ರವಣಾಲ್ಲೋಕೇ ಪ್ರಾಪ್ಯತೇ ನಿಕಟೇ ಹರಿಃ ।
ಅತೋ ದೋಷನಿವೃತ್ತ್ಯರ್ಥಮೇತದೇವ ಹಿ ಸಾಧನಮ್ ॥

ಅನುವಾದ

ಈ ಲೋಕದಲ್ಲಿ ಸಪ್ತಾಹ ಶ್ರವಣದಿಂದ ಬೇಗನೇ ಭಗವಂತನ ಪ್ರಾಪ್ತಿಯಾಗಬಲ್ಲದು. ಆದ್ದರಿಂದ ಎಲ್ಲ ಪ್ರಕಾರದ ದೋಷಗಳ ನಿವೃತ್ತಿಗಾಗಿ ಏಕಮಾತ್ರ ಸಾಧನೆ ಇದೇ ಆಗಿದೆ. ॥62॥

(ಶ್ಲೋಕ - 63)

ಮೂಲಮ್

ಬುದ್ಬುದಾ ಇವ ತೋಯೇಷು ಮಶಕಾ ಇವ ಜಂತುಷು ।
ಜಾಯಂತೇ ಮರಣಾಯೈವ ಕಥಾಶ್ರವಣವರ್ಜಿತಾಃ ॥

ಅನುವಾದ

ಭಗವಂತನ ಕಥೆಯಿಂದ ವಂಚಿತರಾದ ಜನರಾದರೋ ನೀರಿನಲ್ಲಿನ ಗುಳ್ಳೆಯಂತೆ, ಜೀವಿಗಳಲ್ಲಿ ಸೊಳ್ಳೆಗಳಂತೆ ಕೇವಲ ಸಾಯಲೆಂದೇ ಹುಟ್ಟಿರುವರು. ॥63॥

(ಶ್ಲೋಕ - 64)

ಮೂಲಮ್

ಜಡಸ್ಯ ಶುಷ್ಕವಂಶಸ್ಯ ಯತ್ರ ಗ್ರಂಥಿ ವಿಭೇದನಮ್ ।
ಚಿತ್ರಂ ಕಿಮು ತದಾ ಚಿತ್ತಗ್ರಂಥಿಭೇದಃ ಕಥಾಶ್ರವಾತ್ ॥

ಅನುವಾದ

ಯಾವುದರ ಪ್ರಭಾವದಿಂದ ಜಡವಾದ ಒಣಗಿದ ಬಿದಿರಿನ ಗಂಟುಗಳೇ ಒಡೆದು ಹೋಗುವಾಗ ಈ ಭಾಗವತಕಥೆಯ ಶ್ರವಣದಿಂದ ಚಿತ್ತದ ಗಂಟು ಬಿಚ್ಚಿಹೋಗುವುದು ಯಾವ ದೊಡ್ಡ ಮಾತಾಗಿದೆ? ॥64॥

(ಶ್ಲೋಕ - 65)

ಮೂಲಮ್

ಭಿದ್ಯತೇ ಹೃದಯಗ್ರಂಥಿಚ್ಛಿದ್ಯಂತೇ ಸರ್ವಸಂಶಯಾಃ ।
ಕ್ಷೀಯಂತೇ ಚಾಸ್ಯ ಕರ್ಮಾಣಿ ಸಪ್ತಾಹಶ್ರವಣೇ ಕೃತೇ ॥

ಅನುವಾದ

ಸಪ್ತಾಹ ಶ್ರವಣದಿಂದ ಮನುಷ್ಯನ ಹೃದಯದ ಗಂಟು ಬಿಚ್ಚಲ್ಪಟ್ಟು ಸಮಸ್ತ ಸಂಶಯಗಳು ಛಿನ್ನ-ಭಿನ್ನವಾಗಿ ಹೋಗುತ್ತವೆ. ಎಲ್ಲ ಕರ್ಮಗಳು ಕ್ಷೀಣವಾಗುತ್ತವೆ. ॥65॥

(ಶ್ಲೋಕ - 66)

ಮೂಲಮ್

ಸಂಸಾರಕರ್ದಮಾಲೇಪಪ್ರಕ್ಷಾಲನಪಟೀಯಸಿ ।
ಕಥಾತೀರ್ಥೇ ಸ್ಥಿತೇ ಚಿತ್ತೇ ಮುಕ್ತಿರೇವ ಬುಧೈಃ ಸ್ಮೃತಾ ॥

ಅನುವಾದ

ಈ ಭಾಗವತಕಥಾ ರೂಪೀ ತೀರ್ಥವು ಸಂಸಾರದ ಕೆಸರನ್ನು ತೊಳೆಯಲು ಪ್ರಧಾನವಾಗಿದೆ. ಇದು ಹೃದಯದಲ್ಲಿ ನೆಲೆಸಿದಾಗ ಮನುಷ್ಯನ ಮುಕ್ತಿಯು ನಿಶ್ಚಿತವೆಂದೇ ವಿದ್ವಾಂಸರು ಹೇಳುತ್ತಾರೆ. ॥66॥

(ಶ್ಲೋಕ - 67)

ಮೂಲಮ್

ಏವಂ ಬ್ರುವತಿ ವೈ ತಸ್ಮಿನ್ವಿಮಾನಮಾಗಮತ್ತದಾ ।
ವೈಕುಂಠವಾಸಿಭಿರ್ಯುಕ್ತಂ ಪ್ರಸುರದ್ದೀಪ್ತಿಮಂಡಲಮ್ ॥

ಅನುವಾದ

ಧುಂಧುಕಾರಿಯು ಇದೆಲ್ಲವನ್ನು ಹೇಳುತ್ತಿರುವಾಗ ಅವನಿಗಾಗಿ ವೈಕುಂಠವಾಸೀ ಪಾರ್ಷದರ ಸಹಿತ ಒಂದು ದಿವ್ಯವಾದ ವಿಮಾನವು ಇಳಿದು ಬಂತು. ಎಲ್ಲೆಡೆ ಅದರ ಪ್ರಕಾಶ ಮಂಡಲಾಕಾರವಾಗಿ ಹರಡಿಕೊಂಡಿತು. ॥67॥

(ಶ್ಲೋಕ - 68)

ಮೂಲಮ್

ಸರ್ವೇಷಾಂ ಪಶ್ಯತಾಂ ಭೇಜೇ ವಿಮಾನಂ ಧುಂಧುಲೀಸುತಃ ।
ವಿಮಾನೇ ವೈಷ್ಣವಾನ್ವೀಕ್ಷ್ಯ ಗೋಕರ್ಣೋ ವಾಕ್ಯಮಬ್ರವೀತ್ ॥

ಅನುವಾದ

ಎಲ್ಲರೆದುರಿಗೇ ಧುಂಧುಕಾರಿಯು ಆ ವಿಮಾನವನ್ನು ಹತ್ತಿದನು. ಆಗ ಆ ವಿಮಾನದಲ್ಲಿ ಬಂದಿರುವ ಪಾರ್ಷದರನ್ನು ನೋಡಿ ಗೋಕರ್ಣನು ಹೀಗೆಂದನು ॥68॥

(ಶ್ಲೋಕ - 69)

ಮೂಲಮ್ (ವಾಚನಮ್)

ಗೋಕರ್ಣ ಉವಾಚ

ಮೂಲಮ್

ಅತ್ರೈವ ಬಹವಃ ಸಂತಿ ಶ್ರೋತಾರೋ ಮಮ ನಿರ್ಮಲಾಃ ।
ಆನೀತಾನಿ ವಿಮಾನಾನಿ ನ ತೇಷಾಂ ಯುಗಪತ್ಕುತಃ ॥

(ಶ್ಲೋಕ - 70)

ಮೂಲಮ್

ಶ್ರವಣಂ ಸಮಭಾಗೇನ ಸರ್ವೇಷಾಮಿಹ ದೃಶ್ಯತೇ ।
ಫಲಭೇದಃ ಕುತೋ ಜಾತಃ ಪ್ರಬ್ರುವಂತು ಹರಿಪ್ರಿಯಾಃ ॥

ಅನುವಾದ

ಗೋಕರ್ಣನು ಕೇಳಿದನು — ಓ ಭಗವಂತನ ಪ್ರಿಯ ಪಾರ್ಷದರೇ! ಇಲ್ಲಿ ನಮ್ಮ ಅನೇಕ ಶುದ್ಧ ಹೃದಯ ಶ್ರೋತೃಗಳಿದ್ದಾರೆ. ಅವರೆಲ್ಲರಿಗಾಗಿ ನೀವು ಒಟ್ಟಿಗೆ ಅನೇಕ ವಿಮಾನಗಳನ್ನು ಏಕೆ ತರಲಿಲ್ಲ? ಇಲ್ಲಿ ಎಲ್ಲರೂ ಸಮಾನವಾಗಿ ಕಥೆ ಕೇಳಿದರು, ಇದನ್ನು ನಾವು ನೋಡುತ್ತೇವೆ. ಹಾಗಿರುವಾಗ ಫಲದಲ್ಲಿ ಈ ಪ್ರಕಾರದ ಭೇದ ಏಕಾಯಿತು? ತಿಳಿಸಿರಿ. ॥69-70॥

(ಶ್ಲೋಕ - 71)

ಮೂಲಮ್ (ವಾಚನಮ್)

ಹರಿದಾಸಾ ಊಚುಃ

ಮೂಲಮ್

ಶ್ರವಣಸ್ಯ ವಿಭೇದೇನ ಫಲಭೇದೋಽತ್ರ ಸಂಸ್ಥಿತಃ ।
ಶ್ರವಣಂ ತು ಕೃತಂ ಸರ್ವೈರ್ನ ತಥಾ ಮನನಂ ಕೃತಮ್ ।
ಫಲಭೇದಸ್ತತೋ ಜಾತೋ ಭಜನಾದಪಿ ಮಾನದ ॥

ಅನುವಾದ

ಪಾರ್ಷದರಾದ ಹರಿದಾಸರೆಂದರು — ಎಲೈ ಮಾನ್ಯವರ! ಈ ಫಲಭೇದದ ಕಾರಣ ಇದರ ಶ್ರವಣದ ಭೇದವೇ ಆಗಿದೆ. ಶ್ರವಣವಾದರೋ ಎಲ್ಲರೂ ಮಾಡಿದರು ಸರಿಯೇ. ಆದರೆ ಇವನಂತೆ ಮನನ ಮಾಡಲಿಲ್ಲ. ಇದರಿಂದ ಒಟ್ಟಿಗೆ ಭಜನೆ ಮಾಡಿದರೂ ಅದರ ಫಲದಲ್ಲಿ ಭೇದ ಉಳಿಯಿತು. ॥71॥

(ಶ್ಲೋಕ - 72)

ಮೂಲಮ್

ಸಪ್ತರಾತ್ರಮುಪೋಷ್ಯೈವ ಪ್ರೇತೇನ ಶ್ರವಣಂ ಕೃತಮ್ ।
ಮನನಾದಿ ತಥಾ ತೇನ ಸ್ಥಿರಚಿತ್ತೇ ಕೃತಂ ಭೃಶಮ್ ॥

ಅನುವಾದ

ಈ ಪ್ರೇತವು ಏಳು ದಿನಗಳವರೆಗೆ ನಿರಾಹಾರವಿದ್ದು ಶ್ರವಣಿಸಿತು. ಕೇಳಿದ ವಿಷಯವನ್ನು ಸ್ಥಿರಚಿತ್ತದಿಂದ ತುಂಬಾ ಮನನ-ನಿದಿಧ್ಯಾಸನವನ್ನು ಮಾಡುತ್ತಿತ್ತು. ॥72॥

(ಶ್ಲೋಕ - 73)

ಮೂಲಮ್

ಅದೃಢಂ ಚ ಹತಂ ಜ್ಞಾನಂ ಪ್ರಮಾದೇನ ಹತಂ ಶ್ರುತಮ್ ।
ಸಂದಿಗ್ಧೋ ಹಿ ಹತೋ ಮಂತ್ರೋ ವ್ಯಗ್ರಚಿತ್ತೋ ಹತೋ ಜಪಃ ॥

ಅನುವಾದ

ದೃಢವಾಗದಿರುವ ಜ್ಞಾನವು ವ್ಯರ್ಥವೇ ಆಗುತ್ತದೆ. ಹೀಗೆಯೇ ಲಕ್ಷಕೊಡದೇ ಇರುವುದರಿಂದ ಶ್ರವಣವು, ಸಂದೇಹದಿಂದ ಮಂತ್ರವು, ಚಿತ್ತವು ಅತ್ತ-ಇತ್ತ ಹರಿದಾಡುವುದರಿಂದ ಜಪವು ಫಲಿಸುವುದಿಲ್ಲ. ॥73॥

(ಶ್ಲೋಕ - 74)

ಮೂಲಮ್

ಅವೈಷ್ಣವೋ ಹತೋ ದೇಶೋ ಹತಂ ಶ್ರಾದ್ಧಮಪಾತ್ರಕಮ್ ।
ಹತಮಶ್ರೋತ್ರಿಯೇ ದಾನಮನಾಚಾರಂ ಹತಂ ಕುಲಮ್ ॥

ಅನುವಾದ

ವೈಷ್ಣವರಿಲ್ಲದ ದೇಶ, ಅಪಾತ್ರನಿಗೆ ನೀಡಿದ ಶ್ರಾದ್ಧ ಭೋಜನ, ಶೋತ್ರಿಯನಲ್ಲದವನಿಗೆ ಕೊಟ್ಟ ದಾನ, ಆಚಾರ ಹೀನ ಕುಲ, ಇವೆಲ್ಲವೂ ನಾಶವಾಗಿ ಹೋಗುತ್ತವೆ. ॥74॥

(ಶ್ಲೋಕ - 75)

ಮೂಲಮ್

ವಿಶ್ವಾಸೋ ಗುರುವಾಕ್ಯೇಷು ಸ್ವಸ್ಮಿಂದೀನತ್ವಭಾವನಾ ।
ಮನೋದೋಷಜಯಶ್ಚೈವ ಕಥಾಯಾಂ ನಿಶ್ಚಲಾ ಮತಿಃ ॥

(ಶ್ಲೋಕ - 76)

ಮೂಲಮ್

ಏವಮಾದಿ ಕೃತಂ ಚೇತ್ಸ್ಯಾತ್ತದಾ ವೈ ಶ್ರವಣೇ ಫಲಮ್ ।
ಪುನಃ ಶ್ರವಾಂತೇ ಸರ್ವೇಷಾಂ ವೈಕುಂಠೇ ವಸತಿರ್ಧ್ರುವಮ್ ॥

ಅನುವಾದ

ಗುರುವಚನದಲ್ಲಿ ವಿಶ್ವಾಸ, ದೀನತೆಯ ಭಾವ, ಮನದ ದೋಷಗಳ ಮೇಲೆ ವಿಜಯ, ಕಥೆಯಲ್ಲಿ ಏಕಾಗ್ರಚಿತ್ತ ಮುಂತಾದ ನಿಯಮಗಳನ್ನು ಪಾಲಿಸಿದರೆ ಶ್ರವಣದ ನಿಜವಾದ ಫಲಸಿಗುತ್ತದೆ. ಈ ಶ್ರೋತೃಗಳು ಪುನಃ ಶ್ರೀಮದ್ಭಾಗವತದ ಕಥೆಯನ್ನು ಕೇಳಿದರೆ ನಿಶ್ಚಯ ವಾಗಿಯೂ ಇವರಿಗೆಲ್ಲ ವೈಕುಂಠ ಪ್ರಾಪ್ತವಾದೀತು. ॥75-76॥

(ಶ್ಲೋಕ - 77)

ಮೂಲಮ್

ಗೋಕರ್ಣ ತವ ಗೋವಿಂದೋ ಗೋಲೋಕಂ ದಾಸ್ಯತಿ ಸ್ವಯಮ್ ।
ಏವಮುಕ್ತ್ವಾ ಯಯುಃ ಸರ್ವೇ ವೈಕುಂಠಂ ಹರಿಕೀರ್ತನಾಃ ॥

ಅನುವಾದ

ಎಲೈ ಗೋಕರ್ಣನೇ! ನಿನಗಾದರೋ ಭಗವಂತನು ಸ್ವತಃ ಬಂದು ಗೋಲೋಕಧಾಮಕ್ಕೆ ಕೊಂಡು ಹೋಗುವನು. ಹೀಗೆ ಹೇಳಿ ಆ ಪಾರ್ಷದರೆಲ್ಲರೂ ಹರಿಕೀರ್ತನೆ ಮಾಡುತ್ತಾ ವೈಕುಂಠ ಲೋಕಕ್ಕೆ ಹೊರಟು ಹೋದರು. ॥77॥

(ಶ್ಲೋಕ - 78)

ಮೂಲಮ್

ಶ್ರಾವಣೇ ಮಾಸಿ ಗೋಕರ್ಣಃ ಕಥಾಮೂಚೇ ತಥಾ ಪುನಃ ।
ಸಪ್ತ ರಾತ್ರವತೀಂ ಭೂಯಃ ಶ್ರವಣಂ ತೈಃ ಕೃತಂ ಪುನಃ ॥

ಅನುವಾದ

ಶ್ರಾವಣ ಮಾಸದಲ್ಲಿ ಗೋಕರ್ಣನು ಪುನಃ ಹಾಗೆಯೇ ಸಪ್ತಾಹ ಕ್ರಮದಿಂದ ಕಥೆ ಹೇಳಿದನು. ಅದೇ ಶೋತೃಗಳು ಅದನ್ನು ಮತ್ತೆ ಕೇಳಿದರು. ॥78॥

(ಶ್ಲೋಕ - 79)

ಮೂಲಮ್

ಕಥಾಸಮಾಪ್ತೌ ಯಜ್ಜಾತಂ ಶ್ರೂಯತಾಂ ತಚ್ಚ ನಾರದ ॥

ಅನುವಾದ

ನಾರದರೇ! ಈ ಕಥೆಯ ಸಮಾಪ್ತಿಯಲ್ಲಿ ನಡೆದುದನ್ನು ಕೇಳಿರಿ. ॥79॥

(ಶ್ಲೋಕ - 80)

ಮೂಲಮ್

ವಿಮಾನೈಃ ಸಹ ಭಕ್ತೈಶ್ಚ ಹರಿರಾವಿರ್ಬಭೂವ ಹ ।
ಜಯಶಬ್ದಾ ನಮಃ ಶಬ್ದಾಸ್ತತ್ರಾಸನ್ ಬಹವಸ್ತದಾ ॥

ಅನುವಾದ

ಅಲ್ಲಿ ಭಕ್ತರಿಂದ ತುಂಬಿದ ವಿಮಾನಗಳಿಂದೊಡಗೂಡಿ ಭಗವಂತನು ಪ್ರಕಟನಾದನು. ಎಲ್ಲೆಡೆ ಜಯ ಜಯಕಾರ ನಡೆದು, ನಮಸ್ಕಾರಗಳ ಧ್ವನಿಗಳು ತುಂಬಿ ಹೋದುವು. ॥80॥

(ಶ್ಲೋಕ - 81)

ಮೂಲಮ್

ಪಾಂಚಜನ್ಯಧ್ವನಿಂ ಚಕ್ರೇ ಹರ್ಷಾತ್ತತ್ರ ಸ್ವಯಂ ಹರಿಃ ।
ಗೋಕರ್ಣಂ ತು ಸಮಾಲಿಂಗ್ಯಾಕರೋತ್ಸ್ವಸದೃಶಂ ಹರಿಃ ॥

ಅನುವಾದ

ಭಗವಂತನು ಹರ್ಷಿತನಾಗಿ ತನ್ನ ಪಾಂಚಜನ್ಯವನ್ನು ಊದತೊಡಗಿದನು. ಅವನು ಗೋಕರ್ಣನನ್ನು ಆಲಿಂಗಿಸಿಕೊಂಡು ತನ್ನಂತೆಯೇ ಮಾಡಿದನು. ॥81॥

(ಶ್ಲೋಕ - 82)

ಮೂಲಮ್

ಶ್ರೋತೃ ನನ್ಯಾನ್ ಘನಶ್ಯಾಮಾನ್ ಪೀತಕೌಶೇಯವಾಸಸಃ ।
ಕಿರೀಟಿನಃ ಕುಂಡಲಿನಸ್ತಥಾ ಚಕ್ರೇ ಹರಿಃ ಕ್ಷಣಾತ್ ॥

ಅನುವಾದ

ಅವನು ಕ್ಷಣಾರ್ಧದಲ್ಲಿ ಬೇರೆ ಎಲ್ಲ ಶ್ರೋತೃಗಳನ್ನು ಮೇಘ ಶ್ಯಾಮವರ್ಣ, ರೇಶ್ಮೆ ಪೀತಾಂಬರ, ಕಿರೀಟ, ಕುಂಡಲಾದಿಗಳಿಂದ ವಿಭೂಷಿತ ಗೊಳಿಸಿದನು. ॥82॥

(ಶ್ಲೋಕ - 83)

ಮೂಲಮ್

ತದ್ಗ್ರಾಮೇ ಯೇ ಸ್ಥಿತಾ ಜೀವಾ ಆಶ್ವಚಾಂಡಾಲಜಾತಯಃ ।
ವಿಮಾನೇ ಸ್ಥಾಪಿತಾಸ್ತೇಽಪಿ ಗೋಕರ್ಣಕೃಪಯಾ ತದಾ ॥

ಅನುವಾದ

ಆ ಊರಿನಲ್ಲಿದ್ದ ನಾಯಿಗಳು, ಚಾಂಡಾಲರವರೆಗಿನ ಜೀವಿಗಳೆಲ್ಲರನ್ನೂ ಗೋಕರ್ಣನ ಕೃಪೆಯಿಂದ ವಿಮಾನಗಳಲ್ಲಿ ಹತ್ತಿಸಿಕೊಳ್ಳಲಾಯಿತು. ॥83॥

(ಶ್ಲೋಕ - 84)

ಮೂಲಮ್

ಪ್ರೇಷಿತಾ ಹರಿಲೋಕೇ ತೇ ಯತ್ರ ಗಚ್ಛಂತಿ ಯೋಗಿನಃ ।
ಗೋಕರ್ಣೇನ ಸ ಗೋಪಾಲೋ ಗೋಲೋಕಂ ಗೋಪವಲ್ಲಭಮ್ ।
ಕಥಾಶ್ರವಣತಃ ಪ್ರೀತೋ ನಿರ್ಯಯೌ ಭಕ್ತವತ್ಸಲಃ ॥

ಅನುವಾದ

ಯೋಗಿಗಳು ತಲಪುವ ಭಗವದ್ಧಾಮಕ್ಕೆ ಅವರೆಲ್ಲರನ್ನು ಕಳಿಸಿಕೊಡಲಾಯಿತು. ಹೀಗೆ ಭಕ್ತವತ್ಸಲ ಭಗವಾನ್ ಶ್ರೀಕೃಷ್ಣನು ಕಥಾಶ್ರವಣದಿಂದ ಪ್ರಸನ್ನನಾಗಿ ಗೋಕರ್ಣನನ್ನು ಜೊತೆಗೆ ಕರಕೊಂಡು ಗ್ವಾಲಬಾಲಕರ ಪ್ರಿಯವಾದ ಗೋಲೋಕಕ್ಕೆ ಹೊರಟು ಹೋದನು. ॥84॥

(ಶ್ಲೋಕ - 85)

ಮೂಲಮ್

ಅಯೋಧ್ಯಾವಾಸಿನಃ ಪೂರ್ವಂ ಯಥಾ ರಾಮೇಣ ಸಂಗತಾಃ ।
ತಥಾ ಕೃಷ್ಣೇನ ತೇ ನೀತಾ ಗೋಲೋಕಂ ಯೋಗಿದುರ್ಲಭಮ್ ॥

ಅನುವಾದ

ಹಿಂದಿನ ಕಾಲದಲ್ಲಿ ಅಯೋಧ್ಯಾ ವಾಸಿಗಳು ಭಗವಾನ್ ಶ್ರೀರಾಮನೊಂದಿಗೆ ಸಾಕೇತಧಾಮಕ್ಕೆ ತೆರಳಿದಂತೆ ಭಗವಾನ್ ಶ್ರೀಕೃಷ್ಣನು ಅವರೆಲ್ಲರನ್ನು ಯೋಗಿ ದುರ್ಲಭವಾದ ಗೋಲೋಕ ಧಾಮಕ್ಕೆ ಕೊಂಡುಹೋದನು. ॥85॥

(ಶ್ಲೋಕ - 86)

ಮೂಲಮ್

ಯತ್ರ ಸೂರ್ಯಸ್ಯ ಸೋಮಸ್ಯ ಸಿದ್ಧಾನಾಂ ನ ಗತಿಃ ಕದಾ ।
ತಂ ಲೋಕಂ ಹಿ ಗತಾಸ್ತೇ ತು ಶ್ರೀಮದ್ಭಾಗವತಶ್ರವಾತ್ ॥

ಅನುವಾದ

ಯಾವ ಲೋಕದಲ್ಲಿ ಸೂರ್ಯ, ಚಂದ್ರ, ಸಿದ್ಧರೂ ಕೂಡ ಎಂದೂ ತಲುಪಲಾರರೋ, ಅಲ್ಲಿಗೆ ಅವರೆಲ್ಲರೂ ಶ್ರೀಮದ್ಭಾಗವತ ಶ್ರವಣದಿಂದ ಹೊರಟು ಹೋದರು. ॥86॥

(ಶ್ಲೋಕ - 87)

ಮೂಲಮ್

ಬ್ರೂಮೋಽತ್ರ ತೇ ಕಿಂ ಫಲವೃಂದಮುಜ್ಜ್ವಲಂ
ಸಪ್ತಾಹಯಜ್ಞೇನ ಕಥಾಸು ಸಂಚಿತಮ್ ।
ಕರ್ಣೇನ ಗೋಕರ್ಣಕಥಾಕ್ಷರೋ ಯೈಃ
ಪೀತಶ್ಚ ತೇ ಗರ್ಭಗತಾ ನ ಭೂಯಃ ॥

ಅನುವಾದ

ನಾರದರೇ! ಸಪ್ತಾಹಯಜ್ಞದ ಮೂಲಕ ಕಥಾಶ್ರವಣ ಮಾಡುವುದರಿಂದ ಉಂಟಾಗುವ ಉಜ್ವಲವಾದ ಫಲವು ಸಂಚಿತವಾಗುತ್ತದೆ. ಅದರ ವಿಷಯದಲ್ಲಿ ನಾವು ನಿಮ್ಮಲ್ಲಿ ಏನೆಂದು ಹೇಳಲಿ? ಅಯ್ಯಾ! ಯಾರು ತಮ್ಮ ಕರ್ಣ ಪುಟದಿಂದ ಗೋಕರ್ಣನ ಮೂಲಕ ಹೇಳಿದ ಭಾಗವತ ಕಥೆಯ ಒಂದು ಅಕ್ಷರವನ್ನಾದರೂ ಪಾನಮಾಡಿದ್ದರೋ ಅವರಿಗೆ ಮತ್ತೆ ಗರ್ಭವಾಸ ಉಂಟಾಗಲಿಲ್ಲ. ॥87॥

(ಶ್ಲೋಕ - 88)

ಮೂಲಮ್

ವಾತಾಂಬುಪರ್ಣಾಶನದೇಹಶೋಷಣೈ-
ಸ್ತಪೋಭಿರುಗ್ರೈಶ್ಚಿರಕಾಲಸಂಚಿತೈಃ ।
ಯೋಗೈಶ್ಚ ಸಂಯಾಂತಿ ನ ತಾಂ ಗತಿಂ ವೈ
ಸಪ್ತಾಹಗಾಥಾಶ್ರವಣೇನ ಯಾಂತಿ ಯಾಮ್ ॥

ಅನುವಾದ

ಜನರು ಗಾಳಿ, ನೀರು, ಎಲೆ ತಿಂದುಕೊಂಡು, ಶರೀರವನ್ನು ಸೊರಗಿಸಿ, ಅನೇಕ ಕಾಲದವರೆಗೆ ಮಾಡಿದ ಘೋರತಪಸ್ಸಿ ನಿಂದ, ಯೋಗಾಭ್ಯಾಸದಿಂದ ಪಡೆಯಲಾರದ ಗತಿಯನ್ನು ಅವರು ಸಪ್ತಾಹ ಶ್ರವಣದಿಂದ ಸಹಜವಾಗಿಯೇ ಪಡೆದುಕೊಳ್ಳುತ್ತಾರೆ. ॥88॥

(ಶ್ಲೋಕ - 89)

ಮೂಲಮ್

ಇತಿಹಾಸಮಿಮಂ ಪುಣ್ಯಂ ಶಾಂಡಿಲ್ಯೋಽಪಿ ಮುನೀಶ್ವರಃ ।
ಪಠತೇ ಚಿತ್ರಕೂಟಸ್ಥೋ ಬ್ರಹ್ಮಾನಂದಪರಿಪ್ಲುತಃ ॥

ಅನುವಾದ

ಈ ಪವಿತ್ರ ಇತಿಹಾಸದ ಪಾರಾಯಣೆಯನ್ನು ಚಿತ್ರಕೂಟದಲ್ಲಿ ವಿರಾಜಮಾನ ಮುನೀಶ್ವರ ಶಾಂಡಿಲ್ಯರೂ ಬ್ರಹ್ಮಾನಂದದಲ್ಲಿ ಮಗ್ನರಾಗಿ ಮಾಡುತ್ತಿರುತ್ತಾರೆ. ॥89॥

(ಶ್ಲೋಕ - 90)

ಮೂಲಮ್

ಆಖ್ಯಾನಮೇತತ್ಪರಮಂ ಪವಿತ್ರಂ
ಶ್ರುತಂ ಸಕೃದ್ವೈ ವಿದಹೇದಘೌಘಮ್ ।
ಶ್ರಾದ್ಧೇ ಪ್ರಯುಕ್ತಂ ಪಿತೃತೃಪ್ತಿಮಾವಹೇ-
ನ್ನಿತ್ಯಂ ಸುಪಾಠಾದಪುನರ್ಭವಂ ಚ ॥

ಅನುವಾದ

ಈ ಕಥೆಯು ತುಂಬಾ ಪವಿತ್ರವಾಗಿದೆ. ಒಮ್ಮೆ ಶ್ರವಣದಿಂದಲೇ ಸಮಸ್ತ ಪಾಪರಾಶಿಯನ್ನು ಸುಟ್ಟುಬಿಡುತ್ತದೆ. ಇದನ್ನು ಶ್ರಾದ್ಧದಲ್ಲಿ ಪಾರಾಯಣ ಮಾಡಿದರೆ ಇದರಿಂದ ಪಿತೃಗಳಿಗೆ ತುಂಬಾ ತೃಪ್ತಿಯಾಗುತ್ತದೆ. ಪ್ರತಿದಿನವೂ ಪಾರಾಯಣ ಮಾಡುವುದರಿಂದ ಮೋಕ್ಷದ ಪ್ರಾಪ್ತಿಯಾಗುತ್ತದೆ. ॥90॥

ಅನುವಾದ (ಸಮಾಪ್ತಿಃ)

ಐದನೆಯ ಅಧ್ಯಾಯವು ಮುಗಿಯಿತು.॥5॥
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಗೋಕರ್ಣಮೋಕ್ಷವರ್ಣನಂ ನಾಮ ಪಂಚಮೋಽಧ್ಯಾಯಃ.॥5॥