೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಗೋಕರ್ಣೋಪಾಖ್ಯಾನ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಥ ವೈಷ್ಣವಚಿತ್ತೇಷು ದೃಷ್ಟ್ವಾ ಭಕ್ತಿಮಲೌಕಿಕೀಮ್ ।
ನಿಜಲೋಕಂ ಪರಿತ್ಯಜ್ಯ ಭಗವಾನ್ ಭಕ್ತವತ್ಸಲಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಮುನಿವರ್ಯರೇ! ಆಗ ತನ್ನ ಭಕ್ತರ ಚಿತ್ತದಲ್ಲಿ ಅಲೌಕಿಕ ಭಕ್ತಿಯ ಪ್ರಾದುರ್ಭಾವವಾಗಿರುವುದನ್ನು ಕಂಡು ಭಕ್ತವತ್ಸಲ ಭಗವಂತನು ತನ್ನ ಧಾಮವನ್ನು ಬಿಟ್ಟು ಅಲ್ಲಿಗೆ ಬಂದನು. ॥1॥

(ಶ್ಲೋಕ - 2)

ಮೂಲಮ್

ವನಮಾಲೀ ಘನಶ್ಯಾಮಃ ಪೀತವಾಸಾ ಮನೋಹರಃ ।
ಕಾಂಚೀಕಲಾಪರುಚಿರೋ ಲಸನ್ಮುಕುಟಕುಂಡಲಃ ॥

ಅನುವಾದ

ಅವನ ಕೊರಳಲ್ಲಿ ವನಮಾಲೆಯು ಶೋಭಿಸುತ್ತಿತ್ತು. ಶ್ರೀಅಂಗವು ಸಜಲ ಮೇಘದಂತೆ ಶ್ಯಾಮಲವಾಗಿತ್ತು. ಮನೋಹರ ಪೀತಾಂಬರವನ್ನು ಧರಿಸಿದ್ದನು. ಕಟಿಯಲ್ಲಿ ರತ್ನಖಚಿತ ಉಡಿದಾರವಿದ್ದು, ಶಿರದಲ್ಲಿ ಮುಕುಟ, ಕಿವಿಗಳಲ್ಲಿ ಮಕರಾ ಕೃತಿಯ ಕುಂಡಲಗಳು ಶೋಭಿಸುತ್ತಿದ್ದವು. ॥2॥

(ಶ್ಲೋಕ - 3)

ಮೂಲಮ್

ತ್ರಿಭಂಗಲಲಿತಶ್ಚಾರುಕೌಸ್ತುಭೇನ ವಿರಾಜಿತಃ ।
ಕೋಟಿಮನ್ಮಥಲಾವಣ್ಯೋ ಹರಿಚಂದನಚರ್ಚಿತಃ ॥

ಅನುವಾದ

ಅವನ ತ್ರಿಭಂಗಿಮುದ್ರೆಯ ನಿಲುವು ಚಿತ್ತವನ್ನು ಅಪಹರಿಸುತ್ತಿತ್ತು. ವಕ್ಷಃಸ್ಥಳದಲ್ಲಿ ಕೌಸ್ತುಭ ಮಣಿಯು ವಿರಾಜಿಸುತ್ತಿತ್ತು. ಅವನ ಶ್ರೀಅಂಗಾಂಗಗಳು ಚಂದನ ಚರ್ಚಿತವಾಗಿದ್ದು, ಕೋಟಿ ಮನ್ಮಥರ ಲಾವಣ್ಯವನ್ನು ಅಪಹರಿಸಿದಂತಿತ್ತು. ॥3॥

(ಶ್ಲೋಕ - 4)

ಮೂಲಮ್

ಪರಮಾನಂದಚಿನ್ಮೂರ್ತಿರ್ಮಧುರೋ ಮುರಲೀಧರಃ ।
ಆವಿವೇಶ ಸ್ವಭಕ್ತಾನಾಂ ಹೃದಯಾನ್ಯಮಲಾನಿ ಚ ॥

ಅನುವಾದ

ಆ ಪರಮಾನಂದ ಚಿನ್ಮೂರ್ತಿ, ಅತಿಮಧುರ ಮುರಲೀಧರನು ಇಂತಹ ಅನುಪಮ ಕಾಂತಿಯಿಂದ ತನ್ನ ಭಕ್ತರ ನಿರ್ಮಲ ಹೃದಯದಲ್ಲಿ ಆವಿರ್ಭವಿಸಿದನು. ॥4॥

(ಶ್ಲೋಕ - 5)

ಮೂಲಮ್

ವೈಕುಂಠವಾಸಿನೋ ಯೇ ಚ ವೈಷ್ಣವಾ ಉದ್ಧವಾದಯಃ ।
ತತ್ಕಥಾಶ್ರವಣಾರ್ಥಂ ತೇ ಗೂಢರೂಪೇಣ ಸಂಸ್ಥಿತಾಃ ॥

ಅನುವಾದ

ಭಗವಂತನ ನಿತ್ಯಲೋಕ ನಿವಾಸೀ ಲೀಲಾಪರಿಕರ ಉದ್ಧವಾದಿಗಳು ಅಲ್ಲಿ ಗುಪ್ತರೂಪದಿಂದ ಆ ಕಥೆಯನ್ನು ಕೇಳಲು ಆಗಮಿಸಿದ್ದರು. ॥5॥

(ಶ್ಲೋಕ - 6)

ಮೂಲಮ್

ತದಾ ಜಯಜಯಾರಾವೋ ರಸಪುಷ್ಟಿರಲೌಕಿಕೀ ।
ಚೂರ್ಣಪ್ರಸೂನವೃಷ್ಟಿಶ್ಚ ಮುಹುಃ ಶಂಖರವೋಽಪ್ಯಭೂತ್ ॥

ಅನುವಾದ

ಪ್ರಭುವು ಪ್ರಕಟವಾಗುತ್ತಲೇ ಎಲ್ಲೆಡೆ ಜಯ ಜಯಕಾರ ಧ್ವನಿ ಮೊಳಗಿತು. ಆಗ ಭಕ್ತಿರಸದ ಅದ್ಭುತ ಪ್ರವಾಹವೇ ಹರಿಯಿತು. ಮತ್ತೆ-ಮತ್ತೆ ಅಭೀರ-ಗುಲಾಲ ಹಾಗೂ ಪುಷ್ಪಗಳ ವೃಷ್ಟಿಯಾಯಿತು. ಶಂಖ ಧ್ವನಿ ಉಲಿಯಿತು. ॥6॥

(ಶ್ಲೋಕ - 7)

ಮೂಲಮ್

ತತ್ಸಭಾಸಂಸ್ಥಿತಾನಾಂ ಚ ದೇಹಗೇಹಾತ್ಮ ವಿಸ್ಮೃತಿಃ ।
ದೃಷ್ಟ್ವಾ ಚ ತನ್ಮಯಾವಸ್ಥಾಂ ನಾರದೋ ವಾಕ್ಯಮಬ್ರವೀತ್ ॥

ಅನುವಾದ

ಆ ಸಭೆಯಲ್ಲಿ ಕುಳಿತವರಿಗೆ ತಮ್ಮ ದೇಹ, ಗೇಹ ಹಾಗೂ ಆತ್ಮನ ಎಚ್ಚರ ಕೂಡ ಇರಲಿಲ್ಲ. ಅವರ ಇಂತಹ ತನ್ಮಯತೆಯನ್ನು ಕಂಡು ನಾರದರು ಹೇಳತೊಡಗಿದರು. ॥7॥

(ಶ್ಲೋಕ - 8)

ಮೂಲಮ್

ಅಲೌಕಿಕೋಽಯಂ ಮಹಿಮಾ ಮುನೀಶ್ವರಾಃ
ಸಪ್ತಾಹಜನ್ಯೋಽದ್ಯ ವಿಲೋಕಿತೋ ಮಯಾ ।
ಮೂಢಾಃ ಶಠಾ ಯೇ ಪಶುಪಕ್ಷಿಣೋಽತ್ರ
ಸರ್ವೇಽಪಿ ನಿಷ್ಪಾಪತಮಾ ಭವಂತಿ ॥

ಅನುವಾದ

ಮುನೀಶ್ವರರೇ! ಇಂದು ಸಪ್ತಾಹ ಶ್ರವಣದ ಅಲೌಕಿಕ ಮಹಿಮೆಯನ್ನು ನಾನು ನೋಡಿದೆನು. ಇಲ್ಲಿರುವ ಮಹಾ ಮೂರ್ಖರೂ, ದುಷ್ಟರೂ, ಪಶು-ಪಕ್ಷಿಗಳೂ ಕೂಡ ಎಲ್ಲರೂ ಅತ್ಯಂತ ನಿಷ್ಪಾಪಿಗಳಾಗಿ ಹೋದರು. ॥8॥

(ಶ್ಲೋಕ - 9)

ಮೂಲಮ್

ಅತೋ ನೃಲೋಕೇ ನನು ನಾಸ್ತಿ ಕಿಂಚಿ-
ಚ್ಚಿತ್ತಸ್ಯ ಶೋಧಾಯ ಕಲೌ ಪವಿತ್ರಮ್ ।
ಅಘೌಘವಿಧ್ವಂಸಕರಂ ತಥೈವ
ಕಥಾಸಮಾನಂ ಭುವಿ ನಾಸ್ತಿ ಚಾನ್ಯತ್ ॥

ಅನುವಾದ

ಆದ್ದರಿಂದ ಕಲಿಕಾಲದಲ್ಲಿ ಚಿತ್ತದ ಶುದ್ಧಿಗಾಗಿ ಈ ಭಾಗವತ ಕಥೆಗೆ ಸಮಾನವಾಗಿ ಮರ್ತ್ಯ ಲೋಕದಲ್ಲಿ ಪಾಪಪುಂಜವನ್ನು ನಾಶಮಾಡುವಂತಹ ಇನ್ನೊಂದು ಪವಿತ್ರ ಸಾಧನೆ ಇಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ.॥9॥

(ಶ್ಲೋಕ - 10)

ಮೂಲಮ್

ಕೇ ಕೇ ವಿಶುದ್ಧ್ಯಂತಿ ವದಂತು ಮಹ್ಯಂ
ಸಪ್ತಾಹಯಜ್ಞೇನ ಕಥಾಮಯೇನ ।
ಕೃಪಾಲುಭಿರ್ಲೋಕಹಿತಂ ವಿಚಾರ್ಯ
ಪ್ರಕಾಶಿತಃ ಕೋಽಪಿ ನವೀನಮಾರ್ಗಃ ॥

ಅನುವಾದ

ಮುನಿವರ್ಯರೇ! ನೀವುಗಳು ತುಂಬಾ ಕೃಪಾಳುಗಳಾಗಿದ್ದೀರಿ. ನೀವು ಜಗತ್ತಿನ ಹಿತದ ವಿಚಾರಗೈದು ನಿಶ್ಚಿತವಾದ ಹೊಸದಾದ ಮಾರ್ಗವನ್ನು ಪ್ರಕಾಶಗೊಳಿಸಿರುವಿರಿ. ಈ ಕಥಾರೂಪಿ ಸಪ್ತಾಹ ಯಜ್ಞದ ಮೂಲಕ ಜಗತ್ತಿನಲ್ಲಿ ಯಾರು-ಯಾರು ಪವಿತ್ರರಾಗಿ ಹೋಗಿದ್ದಾರೆಂಬುದನ್ನು ದಯಮಾಡಿ ತಿಳಿಸಿರಿ. ॥10॥

(ಶ್ಲೋಕ - 11)

ಮೂಲಮ್ (ವಾಚನಮ್)

ಕುಮಾರಾ ಊಚುಃ

ಮೂಲಮ್

ಯೇ ಮಾನವಾಃ ಪಾಪಕೃತಸ್ತು ಸರ್ವದಾ
ಸದಾ ದುರಾಚಾರರತಾ ವಿಮಾರ್ಗಗಾಃ ।
ಕ್ರೋಧಾಗ್ನಿದಗ್ಧಾಃ ಕುಟಿಲಾಶ್ಚ ಕಾಮಿನಃ
ಸಪ್ತಾಹಯಜ್ಞೇನ ಕಲೌ ಪುನಂತಿ ತೇ ॥

ಅನುವಾದ

ಸನಕಾದಿಗಳು ಹೇಳಿದರು — ಸದಾಕಾಲ ನಾನಾ ರೀತಿಯ ಪಾಪಗಳನ್ನು ಮಾಡುವವರೂ, ನಿರಂತರ ದುರಾಚಾರದಲ್ಲಿ ತತ್ಪರರಾಗಿರುವವರೂ, ಶಾಸ್ತ್ರವಿರುದ್ಧವಾಗಿ ನಡೆಯುವವರೂ, ಕ್ರೋಧಾಗ್ನಿಯಲ್ಲಿ ಬೇಯುತ್ತಿರುವವರೂ, ಕುಟಿಲರೂ, ಕಾಮಪರಾಯಣರೂ ಹೀಗೆ ಇವರೆಲ್ಲರೂ ಈ ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗಿಹೋಗುತ್ತಾರೆ. ॥11॥

(ಶ್ಲೋಕ - 12)

ಮೂಲಮ್

ಸತ್ಯೇನ ಹೀನಾಃ ಪಿತೃಮಾತೃದೂಷಕಾ-
ಸ್ತೃಷ್ಣಾಕುಲಾಶ್ಚಾಶ್ರಮಧರ್ಮವರ್ಜಿತಾಃ ।
ಯೇ ದಾಂಭಿಕಾ ಮತ್ಸರಿಣೋಽಪಿ ಹಿಂಸಕಾಃ
ಸಪ್ತಾಹಯಜ್ಞೇನ ಕಲೌ ಪುನಂತಿ ತೇ ॥

ಅನುವಾದ

ಸತ್ಯದಿಂದ ಚ್ಯುತರಾದವರೂ, ತಂದೆ-ತಾಯಿಯರನ್ನು ನಿಂದಿಸುವವರೂ, ತೃಷ್ಣೆಯಿಂದ ವ್ಯಾಕುಲರಾದವರೂ, ವರ್ಣಾಶ್ರಮಧರ್ಮದಿಂದ ರಹಿತರೂ, ಡಾಂಭಿಕರೂ, ಬೇರೆಯವರ ಉನ್ನತಿಯನ್ನು ನೋಡಿ ಮತ್ಸರಪಡುವವರೂ, ಬೇರೆಯವರಿಗೆ ದುಃಖಕೊಡುವವರೂ, ಇವರೆಲ್ಲರೂ ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗುತ್ತಾರೆ. ॥12॥

(ಶ್ಲೋಕ - 13)

ಮೂಲಮ್

ಪಂಚೋಗ್ರಪಾಪಾಶ್ಛಲಛದ್ಮಕಾರಿಣಃ
ಕ್ರೂರಾಃ ಪಿಶಾಚಾ ಇವ ನಿರ್ದಯಾಶ್ಚ ಯೇ ।
ಬ್ರಹ್ಮಸ್ವಪುಷ್ಟಾ ವ್ಯಭಿಚಾರಕಾರಿಣಃ
ಸಪ್ತಾಹಯಜ್ಞೇನ ಕಲೌ ಪುನಂತಿ ತೇ ॥

ಅನುವಾದ

ಸುರಾಪಾನ, ಬ್ರಹ್ಮಹತ್ಯೆ, ಚಿನ್ನವನ್ನು ಕದಿಯುವುದು, ಗುರುಪತ್ನೀ ಗಮನ, ವಿಶ್ವಾಸಘಾತ ಈ ಪಂಚಮಹಾಪಾತಕಿಗಳೂ, ಛಲಕಪಟ ಪರಾಯಣರೂ, ಕ್ರೂರರೂ, ಪಿಶಾಚಿಗಳಂತೆ ನಿರ್ದಯರೂ, ಬ್ರಾಹ್ಮಣರ ಹಣವನ್ನು ಕಬಳಿಸುವವರೂ, ವ್ಯಭಿಚಾರಿಗಳೂ ಹೀಗೆ ಇವರೆಲ್ಲರೂ ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗುತ್ತಾರೆ. ॥13॥

(ಶ್ಲೋಕ - 14)

ಮೂಲಮ್

ಕಾಯೇನ ವಾಚಾ ಮನಸಾಪಿ ಪಾತಕಂ
ನಿತ್ಯಂ ಪ್ರಕುರ್ವಂತಿ ಶಠಾ ಹಠೇನ ಯೇ ।
ಪರಸ್ವಪುಷ್ಟಾ ಮಲಿನಾ ದುರಾಶಯಾಃ
ಸಪ್ತಾಹಯಜ್ಞೇನ ಕಲೌ ಪುನಂತಿ ತೇ ॥

ಅನುವಾದ

ದುಷ್ಟರೂ, ಹಟದಿಂದ ಸದಾಕಾಲ ಮನಸ್ಸು, ಮಾತು, ಶರೀರದಿಂದ ಪಾಪಮಾಡುತ್ತಿರುವವರೂ, ಪರರ ಧನದಿಂದ ಪುಷ್ಟರಾದವರೂ, ಮಲಿನ ಮನಸ್ಸಿನವರೂ, ದುಷ್ಟಹೃದಯವುಳ್ಳವರೂ ಇವರೆಲ್ಲರೂ ಕಲಿಯುಗದಲ್ಲಿ ಸಪ್ತಾಹ ಯಜ್ಞದಿಂದ ಪವಿತ್ರರಾಗುತ್ತಾರೆ. ॥14॥

(ಶ್ಲೋಕ - 15)

ಮೂಲಮ್

ಅತ್ರ ತೇ ಕೀರ್ತಯಿಷ್ಯಾಮ ಇತಿಹಾಸಂ ಪುರಾತನಮ್ ।
ಯಸ್ಯ ಶ್ರವಣಮಾತ್ರೇಣ ಪಾಪಹಾನಿಃ ಪ್ರಜಾಯತೇ ॥

ಅನುವಾದ

ನಾರದರೇ! ಈಗ ನಿಮಗೆ ಈ ಕುರಿತು ಒಂದು ಪ್ರಾಚೀನ ಇತಿಹಾಸವನ್ನು ಹೇಳುವೆವು. ಅದನ್ನು ಕೇಳುವುದರಿಂದ ಎಲ್ಲ ಪಾಪಗಳೂ ನಾಶವಾಗಿ ಹೋಗುತ್ತವೆ. ॥15॥

(ಶ್ಲೋಕ - 16)

ಮೂಲಮ್

ತುಂಗಭದ್ರಾತಟೇ ಪೂರ್ವಮಭೂತ್ಪತ್ತನಮುತ್ತಮಮ್ ।
ಯತ್ರ ವರ್ಣಾಃ ಸ್ವಧರ್ಮೇಣ ಸತ್ಯಸತ್ಕರ್ಮತತ್ಪರಾಃ ॥

ಅನುವಾದ

ಹಿಂದೆ ತುಂಗಭದ್ರಾ ನದೀತೀರದಲ್ಲಿ ಒಂದು ಅನುಪಮವಾದ ನಗರವು ನೆಲೆಸಿತ್ತು. ಅದರಲ್ಲಿ ಎಲ್ಲ ವರ್ಣದವರೂ ತಮ್ಮ-ತಮ್ಮ ಧರ್ಮಗಳನ್ನು ಆಚರಿಸುತ್ತಾ ಸತ್ಯ ಮತ್ತು ಸತ್ಕರ್ಮದಲ್ಲಿ ತತ್ಪರರಾಗಿ ವಾಸಿಸುತ್ತಿದ್ದರು. ॥16॥

(ಶ್ಲೋಕ - 17)

ಮೂಲಮ್

ಆತ್ಮದೇವಃ ಪುರೇ ತಸ್ಮಿನ್ ಸರ್ವವೇದವಿಶಾರದಃ ।
ಶ್ರೌತಸ್ಮಾರ್ತೇಷು ನಿಷ್ಣಾತೋ ದ್ವಿತೀಯ ಇವ ಭಾಸ್ಕರಃ ॥

ಅನುವಾದ

ಆ ನಗರದಲ್ಲಿ ಸಮಸ್ತ ವೇದಗಳ ವಿಶೇಷಜ್ಞನೂ, ಶ್ರೌತ-ಸ್ಮಾರ್ತ ಕರ್ಮಗಳಲ್ಲಿ ನಿಪುಣನೂ ಆದ ಆತ್ಮದೇವನೆಂಬ ಬ್ರಾಹ್ಮಣನು ಇರುತ್ತಿದ್ದನು. ಅವನು ಸಾಕ್ಷಾತ್ ಸೂರ್ಯನಂತೆ ತೇಜಸ್ವಿಯಾಗಿದ್ದನು. ॥17॥

(ಶ್ಲೋಕ - 18)

ಮೂಲಮ್

ಭಿಕ್ಷುಕೋ ವಿತ್ತವಾಂಲ್ಲೋಕೇ ತತ್ಪ್ರಿಯಾ ದುಂಧುಲೀ ಸ್ಮೃತಾ ।
ಸ್ವವಾಕ್ಯಸ್ಥಾಪಿಕಾ ನಿತ್ಯಂ ಸುಂದರೀ ಸುಕುಲೋದ್ಭವಾ ॥

ಅನುವಾದ

ಅವನು ಪೌರೋಹಿತ್ಯ ವೃತ್ತಿಯಿಂದ ಜೀವಿಸುವವನಾಗಿದ್ದನು. ಮತ್ತು ಧನವಂತನಾಗಿದ್ದನು. ಅವನ ಪ್ರಿಯಪತ್ನೀ ಧುಂಧುಲಿ ಎಂಬುವಳು ಕುಲೀನಳೂ, ಸುಂದರಿಯೂ ಆಗಿದ್ದರೂ ಹಟಮಾರಿಯಾಗಿದ್ದಳು. ॥18॥

(ಶ್ಲೋಕ - 19)

ಮೂಲಮ್

ಲೋಕವಾರ್ತಾ ರತಾ ಕ್ರೂರಾ ಪ್ರಾಯಶೋ ಬಹುಜಲ್ಪಿಕಾ ।
ಶೂರಾ ಚ ಗೃಹಕೃತ್ಯೇಷು ಕೃಪಣಾ ಕಲಹಪ್ರಿಯಾ ॥

ಅನುವಾದ

ಬೇರೆಯವರ ವಿಷಯದಲ್ಲಿ ಮಾತನಾಡುವುದರಲ್ಲೇ ಅವಳು ನಿರತಳಾಗಿದ್ದು, ಯಾವಾಗಲೂ ಹಠಮಾಡುತ್ತಲೇ ಇರುತ್ತಿದ್ದಳು. ಕ್ರೂರಸ್ವಭಾವದವಳಾಗಿದ್ದರೂ, ಮನೆ ಕೆಲಸದಲ್ಲಿ ನಿಪುಣೆಯಾಗಿದ್ದಳು. ಲೋಭಿಯಾಗಿದ್ದು, ಜಗಳಗಂಟಿಯಾಗಿದ್ದಳು. ॥19॥

(ಶ್ಲೋಕ - 20)

ಮೂಲಮ್

ಏವಂ ನಿವಸತೋಃ ಪ್ರೇಮ್ಣಾ ದಂಪತ್ಯೋರಮಮಾಣಯೋಃ ।
ಅರ್ಥಾಃ ಕಾಮಾಸ್ತಯೋರಾಸನ್ನ ಸುಖಾಯ ಗೃಹಾದಿಕಮ್ ॥

ಅನುವಾದ

ಹೀಗೆ ಈ ಬ್ರಾಹ್ಮಣ ದಂಪತಿಗಳು ಪ್ರೇಮದಿಂದ ಮನೆಯಲ್ಲಿದ್ದು ವಿಹರಿಸುತ್ತಿದ್ದರು. ಅವರ ಬಳಿ ಧನ, ಭೋಗವಿಲಾಸದ ಸಾಮಗ್ರಿ ಹೇರಳವಾಗಿತ್ತು. ಮನೆ ಸುಂದರವಾಗಿದ್ದರೂ ಅವರಿಗೆ ಸಂತಾನ ಸುಖವಿರಲಿಲ್ಲ. ॥20॥

(ಶ್ಲೋಕ - 21)

ಮೂಲಮ್

ಪಶ್ಚಾದ್ಧರ್ಮಾಃ ಸಮಾರಬ್ಧಾಸ್ತಾಭ್ಯಾಂ ಸಂತಾನಹೇತವೇ ।
ಗೋಭೂಹಿರಣ್ಯವಾಸಾಂಸಿ ದೀನೇಭ್ಯೋ ಯಚ್ಛತಃ ಸದಾ ॥

ಅನುವಾದ

ಪ್ರಾಯ ಸಂದುಹೋಗುತ್ತಿರುವಂತೆ ಅವರು ಸಂತಾನ ಪಡೆಯಲು ಬಗೆಬಗೆಯ ಪುಣ್ಯಕಾರ್ಯಗಳನ್ನು ಪ್ರಾರಂಭಿಸಿದರು. ಅವರು ದೀನ-ದುಃಖಿಗಳಿಗೆ ಗೋವು, ಸುವರ್ಣ, ಭೂಮಿ, ವಸ್ತ್ರ ಮುಂತಾದವುಗಳನ್ನು ದಾನಮಾಡಿದರು. ॥21॥

(ಶ್ಲೋಕ - 22)

ಮೂಲಮ್

ಧನಾರ್ಥಂ ಧರ್ಮಮಾರ್ಗೇಣ ತಾಭ್ಯಾಂ ನೀತಂ ತಥಾಪಿ ಚ ।
ನ ಪುತ್ರೋ ನಾಪಿ ವಾ ಪುತ್ರೀ ತತಶ್ಚಿಂತಾತುರೋ ಭೃಶಮ್ ॥

ಅನುವಾದ

ಈ ಪ್ರಕಾರ ಧರ್ಮಕಾರ್ಯದಲ್ಲಿ ಅವರ ಅರ್ಧಭಾಗ ಧನವೂ ಮುಗಿದು ಹೋದರೂ ಅವರಿಗೆ ಗಂಡು ಅಥವಾ ಹೆಣ್ಣು ಮಕ್ಕಳ ಮುಖದರ್ಶನ ಭಾಗ್ಯ ಬಂದಿಲ್ಲ. ಇದರಿಂದ ಆ ಬ್ರಾಹ್ಮಣನು ಬಹಳ ಚಿಂತಾತುರನಾದನು.॥22॥

(ಶ್ಲೋಕ - 23)

ಮೂಲಮ್

ಏಕದಾ ಸ ದ್ವಿಜೋ ದುಃಖಾದ್ಗೃಹಂ ತ್ಯಕ್ತ್ವಾ ವನಂ ಗತಃ ।
ಮಧ್ಯಾಹ್ನೇ ತೃಷಿತೋ ಜಾತಸ್ತಟಾಕಂ ಸಮುಪೇಯಿವಾನ್ ॥

ಅನುವಾದ

ಒಂದು ದಿನ ಆ ಬ್ರಾಹ್ಮಣನು ತುಂಬಾ ದುಃಖಿತನಾಗಿ ಮನೆಯಿಂದ ಹೊರಟು ಕಾಡಿಗೆ ಹೋದನು. ಮಧ್ಯಾಹ್ನದ ಸಮಯ ಬಾಯಾರಿದ್ದರಿಂದ ಒಂದು ಸರೋವರದ ಬಳಿಗೆ ಬಂದನು. ॥23॥

(ಶ್ಲೋಕ - 24)

ಮೂಲಮ್

ಪೀತ್ವಾ ಜಲಂ ನಿಷಣ್ಣಸ್ತು ಪ್ರಜಾದುಃಖೇನ ಕರ್ಶಿತಃ ।
ಮುಹೂರ್ತಾದಪಿ ತತ್ರೈವ ಸಂನ್ಯಾಸೀ ಕಶ್ಚಿದಾಗತಃ ॥

ಅನುವಾದ

ಸಂತಾನವಿಲ್ಲದ ದುಃಖದಿಂದ ಅವನ ಶರೀರವು ಮೊದಲೇ ಕೃಶವಾಗಿತ್ತು. ಅದರಿಂದ ಬಳಲಿದ ಅವನು ನೀರು ಕುಡಿದು ಅಲ್ಲೇ ಕುಳಿತುಬಿಟ್ಟನು. ಎರಡು ಗಳಿಗೆ ಕಳೆಯುವನಿತರಲ್ಲಿ ಓರ್ವ ಸಂನ್ಯಾಸಿಯು ಅಲ್ಲಿಗೆ ಬಂದನು. ॥24॥

(ಶ್ಲೋಕ - 25)

ಮೂಲಮ್

ದೃಷ್ಟ್ವಾ ಪೀತಜಲಂ ತಂ ತು ವಿಪ್ರೋ ಯಾತಸ್ತದಂತಿಕಮ್ ।
ನತ್ವಾ ಚ ಪಾದಯೋಸ್ತಸ್ಯ ನಿಃಶ್ವಸನ್ ಸಂಸ್ಥಿತಃ ಪುರಃ ॥

ಅನುವಾದ

ಅವರು ನೀರು ಕುಡಿದಾದ ಬಳಿಕ ಬ್ರಾಹ್ಮಣನು ಅವರ ಬಳಿಗೆ ಹೋಗಿ ಚರಣಗಳಲ್ಲಿ ವಂದಿಸಿಕೊಂಡು, ಎದುರಿಗೆ ನಿಂತು ನಿಟ್ಟುಸಿರು ಬಿಡತೊಡಗಿದನು. ॥25॥

(ಶ್ಲೋಕ - 26)

ಮೂಲಮ್ (ವಾಚನಮ್)

ಯತಿರುವಾಚ

ಮೂಲಮ್

ಕಥಂ ರೋದಿಷಿ ವಿಪ್ರ ತ್ವಂ ಕಾ ತೇ ಚಿಂತಾ ಬಲೀಯಸೀ ।
ವದ ತ್ವಂ ಸತ್ವರಂ ಮಹ್ಯಂ ಸ್ವಸ್ಯ ದುಃಖಸ್ಯ ಕಾರಣಮ್ ॥

ಅನುವಾದ

ಸಂನ್ಯಾಸಿಯು ಕೇಳಿದರು — ಎಲೈ ಬ್ರಾಹ್ಮಣನೇ! ಏಕೆ ಅಳುತ್ತಿರುವೆ? ನಿನಗೆ ಅಂತಹ ಚಿಂತೆ ಏನಿದೆ? ನಿನ್ನ ದುಃಖದ ಕಾರಣವನ್ನು ನನ್ನಲ್ಲಿ ಬೇಗನೇ ಹೇಳು.॥26॥

(ಶ್ಲೋಕ - 27)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಕಿಂ ಬ್ರವೀಮಿ ಋಷೇ ದುಃಖಂ ಪೂರ್ವಪಾಪೇನ ಸಂಚಿತಮ್ ।
ಮದೀಯಾಃ ಪೂರ್ವಜಾಸ್ತೋಯಂ ಕವೋಷ್ಣಮುಪಭುಂಜತೇ ॥

ಅನುವಾದ

ಬ್ರಾಹ್ಮಣನು ಹೇಳಿದನು — ಸ್ವಾಮಿ! ನಾನು ನನ್ನ ಪೂರ್ವ ಜನ್ಮದ ಪಾಪಗಳ ಸಂಚಿತ ದುಃಖವನ್ನು ಏನೆಂದು ಹೇಳಲಿ? ಈಗ ನನ್ನ ಪಿತೃಗಳು ನಾನು ಕೊಟ್ಟ ತರ್ಪಣಾದಿಗಳ ನೀರನ್ನು ತಮ್ಮ ಚಿಂತೆಯೆಂಬ ಶ್ವಾಸದಿಂದ ಬಿಸಿಯಾಗಿಸಿಕೊಂಡು ಕುಡಿಯುತ್ತಾರೆ. ॥27॥

(ಶ್ಲೋಕ - 28)

ಮೂಲಮ್

ಮದ್ದತ್ತಂ ನೈವ ಗೃಹ್ಣಂತಿ ಪ್ರೀತ್ಯಾ ದೇವಾ ದ್ವಿಜಾತಯಃ ।
ಪ್ರಜಾದುಃಖೇನ ಶೂನ್ಯೋಽಹಂ ಪ್ರಾಣಾಂಸ್ತ್ಯಕ್ತುಮಿಹಾಗತಃ ॥

ಅನುವಾದ

ದೇವತೆಗಳು, ಬ್ರಾಹ್ಮಣರು ನಾನು ಕೊಟ್ಟಿರುವುದನ್ನು ಪ್ರೇಮದಿಂದ ಸ್ವೀಕರಿಸುವುದಿಲ್ಲ. ಸಂತಾನ ವಿಲ್ಲದ್ದರಿಂದ ನನಗೆ ಎಲ್ಲವೂ ಶೂನ್ಯದಂತೆ ಕಾಣುತ್ತದೆ. ನಾನು ಪ್ರಾಣತ್ಯಾಗ ಮಾಡಲು ಇಲ್ಲಿಗೆ ಬಂದಿರುವೆನು. ॥28॥

(ಶ್ಲೋಕ - 29)

ಮೂಲಮ್

ಧಿಗ್ಜೀವಿತಂ ಪ್ರಜಾಹೀನಂ ಧಿಗ್ಗೃಹಂ ಚ ಪ್ರಜಾಂ ವಿನಾ ।
ಧಿಗ್ಧನಂ ಚಾನಪತ್ಯಸ್ಯ ಧಿಕ್ಕುಲಂ ಸಂತತಿಂ ವಿನಾ ॥

ಅನುವಾದ

ಸಂತಾನ ಹೀನವಾದ ಜೀವನಕ್ಕೆ ಧಿಕ್ಕಾರವಿರಲಿ. ಸಂತಾನ ರಹಿತವಾದ ಮನೆ, ಧನ, ಕುಲ ಇವುಗಳಿಗೆ ಧಿಕ್ಕಾರವಿರಲಿ. ॥29॥

(ಶ್ಲೋಕ - 30)

ಮೂಲಮ್

ಪಾಲ್ಯತೇ ಯಾ ಮಯಾ ಧೇನುಃ
ಸಾ ವಂಧ್ಯಾ ಸರ್ವಥಾ ಭವೇತ್ ।
ಯೋ ಮಯಾ ರೋಪಿತೋ ವೃಕ್ಷಃ
ಸೋಽಪಿ ವಂಧ್ಯತ್ವಮಾಶ್ರಯೇತ್ ॥

ಅನುವಾದ

ನಾನು ಸಾಕಿದ ಹಸವೂ ಕೂಡ ಗೊಡ್ಡಾಗುತ್ತದೆ. ನಾನು ನೆಟ್ಟಮರದಲ್ಲಿಯೂ ಹೂವು-ಹಣ್ಣು ಬಿಡುವುದಿಲ್ಲ. ॥30॥

(ಶ್ಲೋಕ - 31)

ಮೂಲಮ್

ಯತಲಂ ಮದ್ಗೃಹಾಯಾತಂ ತಚ್ಚ ಶೀಘ್ರಂ ವಿನಶ್ಯತಿ ।
ನಿರ್ಭಾಗ್ಯಸ್ಯಾನಪತ್ಯಸ್ಯ ಕಿಮತೋ ಜೀವಿತೇನ ಮೇ ॥

ಅನುವಾದ

ನಮ್ಮ ಮನೆಗೆ ತಂದಿರುವ ಹಣ್ಣುಗಳೂ ಕೂಡ ಬೇಗನೇ ಕೊಳೆತುಹೋಗುತ್ತವೆ. ಇಂತಹ ಪುತ್ರಹೀನ ನಿರ್ಭಾಗ್ಯನಾಗಿರುವಾಗ ನಾನು ಬದುಕಿ ಏನು ಪ್ರಯೋಜನ? ॥31॥

(ಶ್ಲೋಕ - 32)

ಮೂಲಮ್

ಇತ್ಯುಕ್ತ್ವಾ ಸ ರುರೋದೋಚ್ಚೈಸ್ತತ್ಪಾರ್ಶ್ವಂ ದುಃಖಪೀಡಿತಃ ।
ತದಾ ತಸ್ಯ ಯತೇಶ್ಚಿತ್ತೇ ಕರುಣಾಭೂದ್ಗರೀಯಸೀ ॥

ಅನುವಾದ

ಹೀಗೆ ಹೇಳುತ್ತಾ ಆ ಬ್ರಾಹ್ಮಣನು ದುಃಖದಿಂದ ವ್ಯಾಕುಲನಾಗಿ ಆ ಸಂನ್ಯಾಸೀ ಮಹಾತ್ಮರ ಬಳಿ ಬಿಕ್ಕಿ-ಬಿಕ್ಕಿ ಅಳತೊಡಗಿದನು. ಆಗ ಆ ಯತಿಯ ಹೃದಯದಲ್ಲಿ ತುಂಬಾ ಕರುಣೆ ಉಂಟಾಯಿತು. ॥32॥

(ಶ್ಲೋಕ - 33)

ಮೂಲಮ್

ತದ್ಭಾಲಾಕ್ಷರಮಾಲಾಂ ಚ ವಾಚಯಾಮಾಸ ಯೋಗವಾನ್ ।
ಸರ್ವಂ ಜ್ಞಾತ್ವಾ ಯತಿಃ ಪಶ್ಚಾದ್ವಿಪ್ರಮೂಚೇ ಸವಿಸ್ತರಮ್ ॥

ಅನುವಾದ

ಅವರು ಯೋಗ ನಿಷ್ಠರಾಗಿದ್ದರು. ಬ್ರಾಹ್ಮಣನ ಹಣೆಯ ಬರಹವನ್ನು ಅರಿತುಕೊಂಡು ಎಲ್ಲ ವೃತ್ತಾಂತವನ್ನು ತಿಳಿದುಕೊಂಡರು. ಮತ್ತೆ ಅವನಿಗೆ ವಿಸ್ತಾರವಾಗಿ ಹೇಳತೊಡಗಿದರು. ॥33॥

(ಶ್ಲೋಕ - 34)

ಮೂಲಮ್ (ವಾಚನಮ್)

ಯತಿರುವಾಚ

ಮೂಲಮ್

ಮುಂಚಾಜ್ಞಾನಂ ಪ್ರಜಾರೂಪಂ ಬಲಿಷ್ಠಾ ಕರ್ಮಣೋ ಗತಿಃ ।
ವಿವೇಕಂ ತು ಸಮಾಸಾದ್ಯ ತ್ಯಜ ಸಂಸಾರವಾಸನಾಮ್ ॥

ಅನುವಾದ

ಸಂನ್ಯಾಸಿಯು ಹೇಳಿದರು — ಎಲೈ ಬ್ರಾಹ್ಮಣನೇ! ಈ ಸಂತಾನ ಪ್ರಾಪ್ತಿಯ ಮೋಹವನ್ನು ಬಿಟ್ಟುಬಿಡು. ಕರ್ಮದ ಗತಿಯು ಪ್ರಬಲವಾಗಿದೆ. ವಿವೇಕವನ್ನು ಆಶ್ರಯಿಸಿ ಸಂಸಾರದ ವಾಸನೆ(ಇಚ್ಛೆ)ಯನ್ನು ತ್ಯಜಿಸು. ॥34॥

(ಶ್ಲೋಕ - 35)

ಮೂಲಮ್

ಶೃಣು ವಿಪ್ರ ಮಯಾ ತೇಽದ್ಯ ಪ್ರಾರಬ್ಧಂ ತು ವಿಲೋಕಿತಮ್ ।
ಸಪ್ತಜನ್ಮಾವಧಿ ತವ ಪುತ್ರೋ ನೈವ ಚ ನೈವ ಚ ॥

ಅನುವಾದ

ವಿಪ್ರವರ್ಯ! ಕೇಳು. ನಾನು ಈಗ ನಿನ್ನ ಪ್ರಾರಬ್ಧವನ್ನು ನೋಡಿ ನಿಶ್ಚಯಿಸಿರುವೆನು. ಏಳು ಜನ್ಮಗಳವರೆಗೂ ನಿನಗೆ ಯಾವುದೇ ಸಂತಾನವು ಯಾವ ವಿಧದಿಂದಲೂ ಆಗಲಾರದು. ॥35॥

(ಶ್ಲೋಕ - 36)

ಮೂಲಮ್

ಸಂತತೇಃ ಸಗರೋ ದುಃಖಮವಾಪಾಂಗಃ ಪುರಾ ತಥಾ ।
ರೇ ಮುಂಚಾದ್ಯ ಕುಟುಂಬಾಶಾಂ ಸಂನ್ಯಾಸೇ ಸರ್ವಥಾ ಸುಖಮ್ ॥

ಅನುವಾದ

ಹಿಂದಿನ ಕಾಲದಲ್ಲಿ ರಾಜಾ ಸಗರನಿಗೆ ಹಾಗೂ ಅಂಗರಾಜನಿಗೆ ಸಂತಾನದಿಂದಾಗಿ ದುಃಖ ಭೋಗಿಸಬೇಕಾಯಿತು. ಬ್ರಾಹ್ಮಣನೇ! ಈಗ ನೀನು ಕುಟುಂಬದ ಆಸೆಯನ್ನು ಬಿಟ್ಟು ಬಿಡು. ಸಂನ್ಯಾಸದಲ್ಲೇ ಎಲ್ಲ ವಿಧವಾದ ಸುಖವಿದೆ. ॥36॥

(ಶ್ಲೋಕ - 37)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ವಿವೇಕೇನ ಭವೇತ್ಕಿಂ ಮೇ ಪುತ್ರಂ ದೇಹಿ ಬಲಾದಪಿ ।
ನೋ ಚೇತ್ತ್ಯಜಾಮ್ಯಹಂ ಪ್ರಾಣಾಂಸ್ತ್ವದಗ್ರೇ ಶೋಕಮೂರ್ಛಿತಃ ॥

ಅನುವಾದ

ಬ್ರಾಹ್ಮಣನೆಂದನು — ಮಹಾತ್ಮರೇ! ನಿಮ್ಮ ಜ್ಞಾನೋಪದೇಶದಿಂದ ನನಗೇನು ಪ್ರಯೋಜನ? ನನಗಾದರೋ ಬಲವಂತನಾಗಿ ಓರ್ವ ಪುತ್ರನನ್ನು ಕರುಣಿಸಿರಿ. ಇಲ್ಲವಾದರೆ ನಾನು ನಿಮ್ಮ ಮುಂದೆಯೇ ಶೋಕಮೂರ್ಛಿತನಾಗಿ ಪ್ರಾಣಗಳನ್ನು ತ್ಯಜಿಸಿ ಬಿಡುತ್ತೇನೆ. ॥37॥

(ಶ್ಲೋಕ - 38)

ಮೂಲಮ್

ಪುತ್ರಾದಿಸುಖಹೀನೋಽಯಂ ಸಂನ್ಯಾಸಃ ಶುಷ್ಕ ಏವ ಹಿ ।
ಗೃಹಸ್ಥಃ ಸರಸೋ ಲೋಕೇ ಪುತ್ರಪೌತ್ರಸಮನ್ವಿತಃ ॥

ಅನುವಾದ

ಹೆಂಡತಿ ಮಕ್ಕಳು ಮುಂತಾದವುಗಳು ಇಲ್ಲದ ಸಂನ್ಯಾಸವು ಸರ್ವಥಾ ನೀರಸವಾಗಿದೆ. ಜಗತ್ತಿನಲ್ಲಿ ಮಕ್ಕಳು-ಮೊಮ್ಮಕ್ಕಳು ತುಂಬಿ ತುಳುಕುವ ಗೃಹಸ್ಥಾಶ್ರಮವೇ ಸರಸವಾಗಿದೆ. ॥38॥

(ಶ್ಲೋಕ - 39)

ಮೂಲಮ್

ಇತಿ ವಿಪ್ರಾಗ್ರಹಂ ದೃಷ್ಟ್ವಾ ಪ್ರಾಬ್ರವೀತ್ಸ ತಪೋಧನಃ ।
ಚಿತ್ರಕೇತುರ್ಗತಃ ಕಷ್ಟಂ ವಿಧಿಲೇಖವಿಮಾರ್ಜನಾತ್ ॥

ಅನುವಾದ

ಬ್ರಾಹ್ಮಣನ ಇಂತಹ ಆಗ್ರಹವನ್ನು ನೋಡಿ ಆ ತಪೋ ಧನರು ಹೇಳಿದರು ‘ವಿಧಾತನ ಬರಹವನ್ನು ಅಳಿಸುವ ಹಠವನ್ನು ಮಾಡಿ ರಾಜಾಚಿತ್ರಕೇತುವಿಗೆ ಬಹಳ ಕಷ್ಟ ಸಹಿಸಬೇಕಾಯಿತು. ॥39॥

(ಶ್ಲೋಕ - 40)

ಮೂಲಮ್

ನ ಯಾಸ್ಯಸಿ ಸುಖಂ ಪುತ್ರಾದ್ಯಥಾ ದೈವಹತೋದ್ಯಮಃ ।
ಅತೋ ಹಠೇನ ಯುಕ್ತೋಽಸಿ ಹ್ಯರ್ಥಿನಂ ಕಿಂ ವದಾಮ್ಯಹಮ್ ॥

ಅನುವಾದ

ದೈವವು ಯಾರ ಉದ್ಯೋಗವನ್ನು ಕೆಡಿಸಿಬಿಟ್ಟಿದೆಯೋ ಅವನಂತೆ ನೀನಗೂ ಸುಖಸಿಗಲಾರದು. ನೀನಾದರೋ ಭಾರೀ ಹಠವನ್ನು ತೊಟ್ಟಿರುವೆ ಹಾಗೂ ಅರ್ಥಿಯಾಗಿ ನನ್ನೆದುರಿಗೆ ನಿಂತಿರುವೆ. ಇಂತಹ ಸ್ಥಿತಿಯಲ್ಲಿ ನಾನೇನು ಹೇಳಲಿ ನಿನಗೆ? ॥40॥

(ಶ್ಲೋಕ - 41)

ಮೂಲಮ್

ತಸ್ಯಾಗ್ರಹಂ ಸಮಾಲೋಕ್ಯ ಫಲಮೇಕಂ ಸ ದತ್ತವಾನ್ ।
ಇದಂ ಭಕ್ಷಯ ಪತ್ನ್ಯಾ ತ್ವಂ ತತಃ ಪುತ್ರೋ ಭವಿಷ್ಯತಿ ॥

ಅನುವಾದ

ಇವನು ಯಾವ ವಿಧದಿಂದಲೂ ತನ್ನ ಆಗ್ರಹವನ್ನು ಬಿಡದಿರುವುದನ್ನು ನೋಡಿ ಮಹಾತ್ಮರು ಅವನಿಗೆ ಒಂದು ಫಲವನ್ನಿತ್ತು ಹೇಳಿದರು - ಇದನ್ನು ನೀನು ನಿನ್ನ ಪತ್ನಿಗೆ ತಿನ್ನಿಸು. ಇದರಿಂದ ಓರ್ವ ಪುತ್ರನಾಗುವನು. ॥41॥

(ಶ್ಲೋಕ - 42)

ಮೂಲಮ್

ಸತ್ಯಂ ಶೌಚಂ ದಯಾ ದಾನಮೇಕಭಕ್ತಂ ತು ಭೋಜನಮ್ ।
ವರ್ಷಾವಧಿ ಸ್ತ್ರಿಯಾ ಕಾರ್ಯಂ ತೇನ ಪುತ್ರೋಽತಿನಿರ್ಮಲಃ ॥

ಅನುವಾದ

ನಿನ್ನ ಪತ್ನಿಯು ಒಂದು ವರ್ಷದವರೆಗೆ ಸತ್ಯ, ಶೌಚ, ದಯಾ, ದಾನ ಮತ್ತು ಒಪ್ಪೊತ್ತು ಊಟದ ನಿಯಮವಿರಿಸಬೇಕು. ಅವಳು ಹೀಗೆ ಮಾಡಿದರೆ ಬಹುಶುದ್ಧ ಸ್ವಭಾವದ ಬಾಲಕನು ಹುಟ್ಟುವನು. ॥42॥

(ಶ್ಲೋಕ - 43)

ಮೂಲಮ್

ಏವಮುಕ್ತ್ವಾ ಯಯೌ ಯೋಗೀ ವಿಪ್ರಸ್ತು ಗೃಹಮಾಗತಃ ।
ಪತ್ನ್ಯಾಃ ಪಾಣೌ ಫಲಂ ದತ್ತ್ವಾ ಸ್ವಯಂ ಯಾತಸ್ತು ಕುತ್ರಚಿತ್ ॥

ಅನುವಾದ

ಹೀಗೆ ಹೇಳಿ ಆ ಯೋಗಿಗಳು ಹೊರಟುಹೋದರು. ಬ್ರಾಹ್ಮಣನೂ ತನ್ನ ಮನೆಗೆ ಮರಳಿದನು ಮನೆಗೆ ಬಂದು ಅವನು ಆ ಫಲವನ್ನು ತನ್ನ ಪತ್ನಿಯ ಕೈಯಲ್ಲಿತ್ತು, ಸ್ವತಃ ಎಲ್ಲಿಗೋ ಹೊರಟು ಹೋದನು. ॥43॥

(ಶ್ಲೋಕ - 44)

ಮೂಲಮ್

ತರುಣೀ ಕುಟಿಲಾ ತಸ್ಯ ಸಖ್ಯಗ್ರೇ ಚ ರುರೋದ ಹ ।
ಅಹೋ ಚಿಂತಾ ಮಮೋತ್ಪನ್ನಾ ಫಲಂ ಚಾಹಂ ನ ಭಕ್ಷಯೇ ॥

ಅನುವಾದ

ಅವನ ಹೆಂಡತಿಯಾದರೋ ಕುಟಿಲ ಸ್ವಭಾವದವಳಾಗಿದ್ದಳು. ಅವಳು ಅಳುತ್ತಾ ತನ್ನ ಗೆಳತಿಯಲ್ಲಿ ಹೇಳತೊಡಗಿದಳು ಎಲೈ ಗೆಳತೀ! ನನಗಾದರೋ ಭಾರೀ ಚಿಂತೆ ಇಟ್ಟುಕೊಂಡಿದೆ. ನಾನು ಈ ಫಲವನ್ನು ತಿನ್ನುವುದಿಲ್ಲ. ॥44॥

(ಶ್ಲೋಕ - 45)

ಮೂಲಮ್

ಫಲಭಕ್ಷೇಣ ಗರ್ಭಃ ಸ್ಯಾದ್ಗರ್ಭೇಣೋದರವೃದ್ಧಿತಾ ।
ಸ್ವಲ್ಪಭಕ್ಷಂ ತತೋಽಶಕ್ತಿರ್ಗೃಹಕಾರ್ಯಂ ಕಥಂ ಭವೇತ್ ॥

ಅನುವಾದ

ಈ ಫಲವನ್ನು ತಿನ್ನುವುದರಿಂದ ನಾನು ಗರ್ಭವತಿಯಾಗುವೆನು. ಅದರಿಂದ ಹೊಟ್ಟೆ ಬೆಳೆದೀತು. ಮತ್ತೆ ಏನನ್ನೂ ತಿನ್ನಲು ಕುಡಿಯಲು ಆಗದು. ಇದರಿಂದ ನನ್ನ ಶಕ್ತಿಯು ಕ್ಷೀಣಿಸಿದಾಗ ಮನೆಯ ಕೆಲಸ ಹೇಗೆ ನಡೆಯುವುದು? ॥45॥

(ಶ್ಲೋಕ - 46)

ಮೂಲಮ್

ದೈವಾದ್ಧಾಟೀ ವ್ರಜೇದ್ ಗ್ರಾಮೇ ಪಲಾಯೇದ್ಗರ್ಭಿಣೀ ಕಥಮ್ ।
ಶುಕವನ್ನಿವಸೇದ್ಗರ್ಭಸ್ತಂ ಕುಕ್ಷೇಃ ಕಥಮುತ್ಸೃಜೇತ್ ॥

ಅನುವಾದ

ದೈವಯೋಗದಿಂದ ಊರಿನಲ್ಲಿ ದರೋಡೆಕೋರರ ಆಕ್ರಮಣವಾದರೆ ಗರ್ಭಿಣಿ ಸ್ತ್ರೀಯು ಹೇಗೆ ಓಡಿಹೋಗಬಲ್ಲಳು? ಶುಕದೇವರಂತೆ ಈ ಗರ್ಭವು ಹೊಟ್ಟೆಯಲ್ಲೇ ಉಳಿದು ಬಿಟ್ಟರೆ ಅದನ್ನು ಹೇಗೆ ಹೊರಗೆ ತೆಗೆಯಲಾದೀತು. ॥46॥

(ಶ್ಲೋಕ - 47)

ಮೂಲಮ್

ತಿರ್ಯಕ್ಚೇದಾಗತೋ ಗರ್ಭಸ್ತದಾ ಮೇ ಮರಣಂ ಭವೇತ್ ।
ಪ್ರಸೂತೌ ದಾರುಣಂ ದುಃಖಂ ಸುಕುಮಾರೀ ಕಥಂ ಸಹೇ ॥

ಅನುವಾದ

ಎಲ್ಲಾದರು ಹೆರಿಗೆಯ ಕಾಲದಲ್ಲಿ ಅದು ಅಡ್ಡಲಾದರೆ ಮತ್ತೆ ಪ್ರಾಣವೇ ಹೊರಟು ಹೋದೀತು. ಅದಲ್ಲದೆ ಪ್ರಸವ ಕಾಲದಲ್ಲಿ ಭಯಂಕರ ನೋವು ಉಂಟಾಗುತ್ತದೆ. ಸುಕುಮಾರಿಯಾದ ನಾನು ಇದನ್ನು ಹೇಗೆ ಸಹಿಸಬಹುದು? ॥47॥

(ಶ್ಲೋಕ - 48)

ಮೂಲಮ್

ಮಂದಾಯಾಂ ಮಯಿ ಸರ್ವಸ್ವಂ ನನಾಂದಾ ಸಂಹರೇತ್ತದಾ ।
ಸತ್ಯಶೌಚಾದಿ ನಿಯಮೋ ದುರಾರಾಧ್ಯಃ ಸ ದೃಶ್ಯತೇ ॥

ಅನುವಾದ

ನಾನು ದುರ್ಬಲಳಾದಾಗ ನಾದಿನಿಯು ಬಂದು ಮನೆಯ ಎಲ್ಲ ಪದಾರ್ಥಗಳನ್ನು ಸಾಗಿಸಿ ಬಿಟ್ಟಾಳು ಹಾಗೂ ಸತ್ಯ ಶೌಚಾದಿ ನಿಯಮಗಳನ್ನು ನನ್ನಿಂದ ಪಾಲಿಸುವುದು ಕಷ್ಟವೆಂದೇ ತೋರುತ್ತದೆ. ॥48॥

(ಶ್ಲೋಕ - 49)

ಮೂಲಮ್

ಲಾಲನೇ ಪಾಲನೇ ದುಃಖಂ ಪ್ರಸೂತಾಯಾಶ್ಚ ವರ್ತತೇ ।
ವಂಧ್ಯಾ ವಾ ವಿಧವಾ ನಾರೀ ಸುಖಿನೀ ಚೇತಿ ಮೇ ಮತಿಃ ॥

ಅನುವಾದ

ಮಗುವನ್ನು ಹಡೆದ ಸ್ತ್ರೀಗೆ ಮಗುವಿನ ಲಾಲನೆ ಪಾಲನೆಯಲ್ಲಿ ತುಂಬಾ ಕಷ್ಟವಾಗುತ್ತದೆ. ನನ್ನ ವಿಚಾರದಲ್ಲಿ ಬಂಜೆಯರು ಅಥವಾ ವಿಧವೆಯರೇ ಸುಖಿಗಳಾಗಿದ್ದಾರೆ. ॥49॥

(ಶ್ಲೋಕ - 50)

ಮೂಲಮ್

ಏವಂ ಕುತರ್ಕಯೋಗೇನ ತತ್ಫಲಂ ನೈವ ಭಕ್ಷಿತಮ್ ।
ಪತ್ಯಾ ಪೃಷ್ಟಂ ಫಲಂ ಭುಕ್ತಂ ಭುಕ್ತಂ ಚೇತಿ ತಯೇರಿತಮ್ ॥

ಅನುವಾದ

ಮನಸ್ಸಿನಲ್ಲಿ ಇಂತಹ ನಾನಾ ಕುತರ್ಕಗಳನ್ನು ಮಾಡುತ್ತಾ ಅವಳು ಆ ಫಲವನ್ನು ತಿನ್ನಲಿಲ್ಲ. ಗಂಡನು ‘ಫಲವನ್ನು ತಿಂದೆಯಾ?’ ಎಂದು ಕೇಳಿದಾಗ ಹೌದು ತಿಂದೆ ಎಂದು ಹೇಳಿದಳು. ॥50॥

(ಶ್ಲೋಕ - 51)

ಮೂಲಮ್

ಏಕದಾ ಭಗಿನೀ ತಸ್ಯಾಸ್ತದ್ಗೃಹಂ ಸ್ವೇಚ್ಛಯಾಗತಾ ।
ತದಗ್ರೇ ಕಥಿತಂ ಸರ್ವಂ ಚಿತ್ತೇಯಂ ಮಹತೀ ಹಿ ಮೇ ॥

ಅನುವಾದ

ಒಂದು ದಿನ ಅವಳ ತಂಗಿಯು ತಾನಾಗಿಯೇ ಇವಳ ಮನೆಗೆ ಬಂದಿದ್ದಳು. ಇವಳು ತನ್ನ ತಂಗಿಗೆ ಎಲ್ಲ ವೃತ್ತಾಂತವನ್ನು ತಿಳಿಸುತ್ತಾ ನನ್ನ ಮನಸ್ಸಿನಲ್ಲಿ ಇದರ ಕುರಿತು ದೊಡ್ಡ ಚಿಂತೆ ಇಟ್ಟುಕೊಂಡಿದೆ ಎಂದು ಹೇಳಿದಳು. ॥51॥

(ಶ್ಲೋಕ - 52)

ಮೂಲಮ್

ದುರ್ಬಲಾ ತೇನ ದುಃಖೇನ ಹ್ಯನುಜೇ ಕರವಾಣಿ ಕಿಮ್ ।
ಸಾಬ್ರವೀನ್ಮಮ ಗರ್ಭೋಽಸ್ತಿ ತಂ ದಾಸ್ಯಾಮಿ ಪ್ರಸೂತಿತಃ ॥

ಅನುವಾದ

ನಾನು ಈ ದುಃಖದಿಂದ ಪ್ರತಿದಿನ ಸೊರಗುತ್ತಿದ್ದೇನೆ. ತಂಗೀ! ನಾನೇನು ಮಾಡಲಿ? ಆಗ ಅವಳೆಂದಳು - ‘ನನ್ನ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ. ಹೆರಿಗೆಯಾದಾಕ್ಷಣ ಆ ಮಗುವನ್ನು ನಿನಗೆ ಕೊಡುತ್ತೇನೆ. ॥52॥

(ಶ್ಲೋಕ - 53)

ಮೂಲಮ್

ತಾವತ್ಕಾಲಂ ಸಗರ್ಭೇವ ಗುಪ್ತಾ ತಿಷ್ಠ ಗೃಹೇ ಸುಖಮ್ ।
ವಿತ್ತಂ ತ್ವಂ ಮತ್ಪತೇರ್ಯಚ್ಛ ಸ ತೇ ದಾಸ್ಯತಿ ಬಾಲಕಮ್ ॥

ಅನುವಾದ

ಅಲ್ಲಿಯವರೆಗೆ ನೀನು ಗರ್ಭಿಣಿಯಂತೆ ಮನೆಯಲ್ಲೇ ಅಡಗಿಕೊಂಡಿರು. ನೀನು ನನ್ನ ಪತಿಗೆ ಸ್ವಲ್ಪ ಹಣವನ್ನು ಕೊಟ್ಟರೆ ಅವರು ನಿನಗೆ ತನ್ನ ಮಗುವನ್ನು ಕೊಟ್ಟು ಬಿಡುವರು. ॥53॥

(ಶ್ಲೋಕ - 54)

ಮೂಲಮ್

ಷಾಣ್ಮಾಸಿಕೋ ಮೃತೋ ಬಾಲ ಇತಿ ಲೋಕೋ ವದಿಷ್ಯತಿ ।
ತಂ ಬಾಲಂ ಪೋಷಯಿಷ್ಯಾಮಿ ನಿತ್ಯಮಾಗತ್ಯ ತೇ ಗೃಹೇ ॥

ಅನುವಾದ

(ನಾವು ಒಂದು ಯುಕ್ತಿಮಾಡುವೆವು) ಇವಳ ಮಗು ಆರು ತಿಂಗಳಾದಾಗ ಸತ್ತು ಹೋಯಿತು ಎಂದು ಎಲ್ಲರೂ ಹೇಳುವರು. ನಾನು ಪ್ರತಿ ದಿನ ನಿನ್ನ ಮನೆಗೆ ಬಂದು ಆ ಮಗುವಿನ ಪಾಲನೆ-ಪೋಷಣೆ ಮಾಡುತ್ತಾ ಇರುವೆನು. ॥54॥

(ಶ್ಲೋಕ - 55)

ಮೂಲಮ್

ಫಲಮರ್ಪಯ ಧೇನ್ವೈ ತ್ವಂ ಪರೀಕ್ಷಾರ್ಥಂ ತು ಸಾಂಪ್ರತಮ್ ।
ತತ್ತದಾಚರಿತಂ ಸರ್ವಂ ತಥೈವ ಸ್ತ್ರೀಸ್ವಭಾವತಃ ॥

ಅನುವಾದ

ನೀನು ಈಗ ಇದನ್ನು ಪರೀಕ್ಷಿಸಲು ಈ ಫಲವನ್ನು ಹಸುವಿಗೆ ತಿನ್ನಿಸಿ ಬಿಡು.’ ಬ್ರಾಹ್ಮಣಿಯು ಸ್ತ್ರೀಸ್ವಭಾವಕ್ಕನುಸಾರ ತಂಗಿಯು ಹೇಳಿದಂತೆಯೇ ಎಲ್ಲವನ್ನು ಮಾಡಿದಳು.॥55॥

(ಶ್ಲೋಕ - 56)

ಮೂಲಮ್

ಅಥ ಕಾಲೇನ ಸಾ ನಾರೀ ಪ್ರಸೂತಾ ಬಾಲಕಂ ತದಾ ।
ಆನೀಯ ಜನಕೋ ಬಾಲಂ ರಹಸ್ಯೇ ಧುಂದುಲೀಂ ದದೌ ॥

ಅನುವಾದ

ಇದಾದ ಬಳಿಕ ಸಮಯಕ್ಕೆ ಸರಿಯಾಗಿ ತಂಗಿಗೆ ಮಗು ಹುಟ್ಟಿದಾಗ, ಅವಳ ಗಂಡನು ಯಾರಿಗೂ ತಿಳಿಯದಂತೆ ಅದನ್ನು ಧುಂಧುಲಿಗೆ ತಂದುಕೊಟ್ಟನು. ॥56॥

(ಶ್ಲೋಕ - 57)

ಮೂಲಮ್

ತಯಾ ಚ ಕಥಿತಂ ಭರ್ತ್ರೇ ಪ್ರಸೂತಃ ಸುಖಮರ್ಭಕಃ ।
ಲೋಕಸ್ಯ ಸುಖಮುತ್ಪನ್ನಮಾತ್ಮದೇವ ಪ್ರಜೋದಯಾತ್ ॥

ಅನುವಾದ

ಮತ್ತೆ ಅವಳು ಆತ್ಮದೇವನಿಗೆ ‘ನನಗೆ ಸುಖವಾಗಿ ಮಗುವು ಹುಟ್ಟಿತು’ ಎಂದು ಸೂಚಿಸಿದಳು. ಹೀಗೆ ಆತ್ಮದೇವನಿಗೆ ಪುತ್ರನಾದುದನ್ನು ತಿಳಿದು ಎಲ್ಲರಿಗೂ ಬಹಳ ಸಂತೋಷವಾಯಿತು. ॥57॥

(ಶ್ಲೋಕ - 58)

ಮೂಲಮ್

ದದೌ ದಾನಂ ದ್ವಿಜಾತಿಭ್ಯೋ ಜಾತಕರ್ಮ ವಿಧಾಯ ಚ ।
ಗೀತವಾದಿತ್ರಘೋಷೋಽಭೂತ್ತದ್ದ್ವಾರೇ ಮಂಗಲಂ ಬಹು ॥

ಅನುವಾದ

ಬ್ರಾಹ್ಮಣನು ಮಗುವಿನ ಜಾತಕರ್ಮ ಸಂಸ್ಕಾರ ಗೈದು, ಬ್ರಾಹ್ಮಣರಿಗೆ ದಾನಗಳನ್ನು ಕೊಟ್ಟನು. ಮನೆಯಲ್ಲಿ ವಾದ್ಯ-ಹಾಡುಗಳು ಹಾಗೂ ಅನೇಕ ಮಾಂಗಲಿಕ ಕೃತ್ಯಗಳು ನಡೆದವು. ॥58॥

(ಶ್ಲೋಕ - 59)

ಮೂಲಮ್

ಭರ್ತುರಗ್ರೇಽಬ್ರವೀದ್ವಾಕ್ಯಂ ಸ್ತನ್ಯಂ ನಾಸ್ತಿ ಕುಚೇ ಮಮ ।
ಅನ್ಯಸ್ತನ್ಯೇನ ನಿರ್ದುಗ್ಧಾ ಕಥಂ ಪುಷ್ಣಾಮಿ ಬಾಲಕಮ್ ॥

(ಶ್ಲೋಕ - 60)

ಮೂಲಮ್

ಮತ್ಸ್ವಸುಶ್ಚ ಪ್ರಸೂತಾಯಾ ಮೃತೋ ಬಾಲಸ್ತು ವರ್ತತೇ ।
ತಾಮಾಕಾರ್ಯ ಗೃಹೇ ರಕ್ಷ ಸಾ ತೇಽರ್ಭಂ ಪೋಷಯಿಷ್ಯತಿ ॥

ಅನುವಾದ

ಧುಂಧುಲಿಯು ಗಂಡನ ಬಳಿ ಹೇಳಿದಳು ‘ನನ್ನ ಎದೆಯಲ್ಲಿ ಹಾಲೇ ಇಲ್ಲ. ಮತ್ತೆ ಹಸುವಿನ ಹಾಲಿನಿಂದಲೇ ಈ ಬಾಲಕನನ್ನು ಹೇಗೆ ಸಾಕಲಿ? ನನ್ನ ತಂಗಿಗೆ ಈಗ ತಾನೆ ಮಗು ಹುಟ್ಟಿತು. ಅದು ಸತ್ತು ಹೋಯಿತು. ಅವಳನ್ನು ಕರೆಸಿ ಮನೆಯಲ್ಲಿರಿಸಿಕೊಂಡರೆ ಅವಳು ನಿಮ್ಮ ಈ ಮಗುವನ್ನು ಸಾಕುವಳು’. ॥59-60॥

(ಶ್ಲೋಕ - 61)

ಮೂಲಮ್

ಪತಿನಾ ತತ್ಕೃತಂ ಸರ್ವಂ ಪುತ್ರರಕ್ಷಣಹೇತವೇ ।
ಪುತ್ರಸ್ಯ ಧುಂದುಕಾರೀತಿ ನಾಮ ಮಾತ್ರಾ ಪ್ರತಿಷ್ಠಿತಮ್ ॥

ಅನುವಾದ

ಆಗ ಮಗುವಿನ ಪಾಲನೆಗಾಗಿ ಆತ್ಮದೇವನು ಹಾಗೇ ಮಾಡಿದನು. ತಾಯಿಯಾದ ಧುಂಧುಲಿಯು ಆ ಮಗುವಿಗೆ ‘ಧುಂಧುಕಾರಿ’ ಎಂದು ಹೆಸರಿಟ್ಟಳು. ॥61॥

(ಶ್ಲೋಕ - 62)

ಮೂಲಮ್

ತ್ರಿಮಾಸೇ ನಿರ್ಗತೇ ಚಾಥ ಸಾ ಧೇನುಃ ಸುಷುವೇಽರ್ಭಕಮ್ ।
ಸರ್ವಾಂಗ ಸುಂದರಂ ದಿವ್ಯಂ ನಿರ್ಮಲಂ ಕನಕಪ್ರಭಮ್ ॥

ಅನುವಾದ

ಇದಾದ ಬಳಿಕ ಮೂರು ತಿಂಗಳು ಕಳೆದಾಗ ಆ ಹಸುವಿಗೂ ಒಂದು ಮನುಷ್ಯಾಕಾರ ಮಗು ಹುಟ್ಟಿತು. ಅದು ಸರ್ವಾಂಗ ಸುಂದರ, ದಿವ್ಯ, ನಿರ್ಮಲವಾಗಿದ್ದು, ಬಂಗಾರದ ಕಾಂತಿಯಿಂದ ಒಡಗೊಂಡಿತ್ತು. ॥62॥

(ಶ್ಲೋಕ - 63)

ಮೂಲಮ್

ದೃಷ್ಟ್ವಾ ಪ್ರಸನ್ನೋ ವಿಪ್ರಸ್ತು ಸಂಸ್ಕಾರಾನ್ ಸ್ವಯಮಾದಧೇ ।
ಮತ್ವಾಶ್ಚರ್ಯಂ ಜನಾಃ ಸರ್ವೇ ದಿದೃಕ್ಷಾರ್ಥಂ ಸಮಾಗತಾಃ ॥

ಅನುವಾದ

ಅದನ್ನು ನೋಡಿ ಬ್ರಾಹ್ಮಣನು ಸಂತೋಷಗೊಂಡು ಸ್ವತಃ ತಾನೇ ಅದರ ಎಲ್ಲ ಸಂಸ್ಕಾರಗಳನ್ನು ಮಾಡಿದನು. ಈ ಸಮಾಚಾರದಿಂದ ಎಲ್ಲ ಜನರಿಗೂ ತುಂಬಾ ಆಶ್ಚರ್ಯವಾಯಿತು ಹಾಗೂ ಅವರೆಲ್ಲರೂ ಬಾಲಕನನ್ನು ನೋಡಲು ಬಂದರು. ॥63॥

(ಶ್ಲೋಕ - 64)

ಮೂಲಮ್

ಭಾಗ್ಯೋದಯೋಽಧುನಾ ಜಾತ ಆತ್ಮದೇವಸ್ಯ ಪಶ್ಯತ ।
ಧೇನ್ವಾ ಬಾಲಃ ಪ್ರಸೂತಸ್ತು ದೇವರೂಪೀತಿ ಕೌತುಕಮ್ ॥

ಅನುವಾದ

ಅಯ್ಯಾ! ನೋಡಿದೆಯಾ! ಈಗ ಆತ್ಮದೇವನ ಭಾಗ್ಯ ಹೇಗೆ ಉದಯಿಸಿತು. ಹುಸುವಿನಲ್ಲಿಯೂ ಇಂತಹ ದಿವ್ಯ ಬಾಲಕನು ಹುಟ್ಟುವುದು ಎಷ್ಟು ಆಶ್ಚರ್ಯವಾಗಿದೆ ಎಂದು ತಮ್ಮ-ತಮ್ಮಲ್ಲೇ ಹೇಳಿಕೊಂಡರು. ॥64॥

(ಶ್ಲೋಕ - 65)

ಮೂಲಮ್

ನ ಜ್ಞಾತಂ ತದ್ರಹಸ್ಯಂ ತು ಕೇನಾಪಿ ವಿಧಿಯೋಗತಃ ।
ಗೋಕರ್ಣಂ ತಂ ಸುತಂ ದೃಷ್ಟ್ವಾ ಗೋಕರ್ಣಂ ನಾಮ ಚಾಕರೋತ್ ॥

ಅನುವಾದ

ದೈವಯೋಗದಿಂದ ಈ ಗುಪ್ತ ರಹಸ್ಯವು ಯಾರಿಗೂ ತಿಳಿಯಲಿಲ್ಲ. ಆತ್ಮದೇವನು ಆ ಬಾಲಕನಿಗೆ ಗೋವಿನಂತೆ ಕಿವಿಗಳಿರುವುದನ್ನು ನೋಡಿ ಅವನಿಗೆ ‘ಗೋಕರ್ಣ’ ಎಂದು ಹೆಸರಿಟ್ಟನು. ॥65॥

(ಶ್ಲೋಕ - 66)

ಮೂಲಮ್

ಕಿಯತ್ಕಾಲೇನ ತೌ ಜಾತೌ ತರುಣೌ ತನಯಾವುಭೌ ।
ಗೋಕರ್ಣಃ ಪಂಡಿತೋ ಜ್ಞಾನೀ ದುಂಧುಕಾರೀ ಮಹಾಖಲಃ ॥

ಅನುವಾದ

ಕೆಲ ಕಾಲಾಂತರದಲ್ಲಿ ಆ ಇಬ್ಬರೂ ಬಾಲಕರು ತರುಣರಾದರು. ಅದರಲ್ಲಿ ಗೋಕರ್ಣನಾದರೋ ದೊಡ್ಡ ಪಂಡಿತ ಜ್ಞಾನಿಯಾದನು. ಆದರೆ ಧುಂಧುಕಾರಿಯು ಭಾರೀ ದುಷ್ಟನಾದನು. ॥66॥

(ಶ್ಲೋಕ - 67)

ಮೂಲಮ್

ಸ್ನಾನಶೌಚಕ್ರಿಯಾಹೀನೋ ದುರ್ಭಕ್ಷೀ ಕ್ರೋಧವರ್ಧಿತಃ ।
ದುಷ್ಪರಿಗ್ರಹಕರ್ತಾ ಚ ಶವಹಸ್ತೇನ ಭೋಜನಮ್ ॥

ಅನುವಾದ

ಧುಂಧುಕಾರಿಯಲ್ಲಿ ಸ್ನಾನ ಶೌಚಾದಿ ಬ್ರಾಹ್ಮಣೋಚಿತ ಆಚಾರಗಳ ಹೆಸರೇ ಇರಲಿಲ್ಲ. ಊಟ ತಿಂಡಿಯಲ್ಲಿಯೂ ನಿಯಮವಿರಲಿಲ್ಲ. ಅವನಲ್ಲಿ ಸಿಟ್ಟು ಬಹಳವಾಗಿ ಬೆಳೆದಿತ್ತು. ಅವನು ಕೆಟ್ಟ-ಕೆಟ್ಟ ವಸ್ತುಗಳನ್ನು ಸಂಗ್ರಹಿಸುತ್ತಿದ್ದನು. ಹೆಣ ಮುಟ್ಟಿದ ಅನ್ನವನ್ನೂ ಕೂಡ ಅವನು ತಿಂದು ಬಿಡುತ್ತಿದ್ದನು. ॥67॥

(ಶ್ಲೋಕ - 68)

ಮೂಲಮ್

ಚೌರಃ ಸರ್ವಜನದ್ವೇಷೀ ಪರವೇಶ್ಮಪ್ರದೀಪಕಃ ।
ಲಾಲನಾಯಾರ್ಭಕಾನ್ಧೃತ್ವಾ ಸದ್ಯಃ ಕೂಪೇ ನ್ಯಪಾತಯತ್ ॥

ಅನುವಾದ

ಬೇರೆಯವರ ವಸ್ತುಗಳನ್ನು ಕದಿಯುವುದು ಹಾಗೂ ಎಲ್ಲರನ್ನು ದ್ವೆಷಿಸುವುದು ಅವನ ಸ್ವಭಾವವೇ ಆಗಿ ಹೋಗಿತ್ತು. ಅಡಗಿಕೊಂಡು ಅವನು ಬೇರೆಯವರ ಮನೆಗಳಿಗೆ ಬೆಂಕಿ ಹಚ್ಚುತ್ತಿದ್ದನು. ಬೇರೆಯವರ ಮಕ್ಕಳನ್ನು ಆಡಿಸಲು ಎತ್ತಿಕೊಂಡು, ಅವನ್ನು ಸಟ್ಟನೆ ಬಾವಿಗೆ ಎಸೆದು ಬಿಡುತ್ತಿದ್ದನು. ॥68॥

(ಶ್ಲೋಕ - 69)

ಮೂಲಮ್

ಹಿಂಸಕಃ ಶಸ್ತ್ರಧಾರೀ ಚ ದೀನಾಂಧಾನಾಂ ಪ್ರಪೀಡಕಃ ।
ಚಾಂಡಾಲಾಭಿರತೋ ನಿತ್ಯಂ ಪಾಶಹಸ್ತಃ ಶ್ವ ಸಂಗತಃ ॥

ಅನುವಾದ

ಅವನಿಗೆ ಹಿಂಸೆಯ ಗೀಳೇ ಹತ್ತಿತ್ತು. ಯಾವಾಗಲೂ ಆಯುಧಗಳನ್ನು ಧರಿಸಿಕೊಂಡೆ ಇರುತ್ತಿದ್ದನು. ಬಡಪಾಯಿ ಕುರುಡರು, ದೀನ-ದುಃಖಿಗಳನ್ನು ವ್ಯರ್ಥವಾಗಿ ಸತಾಯಿಸುತ್ತಿದ್ದನು. ಚಾಂಡಾಲರೊಂದಿಗೆ ಅವನಿಗೆ ವಿಶೇಷ ಪ್ರೇಮವಿತ್ತು. ಸರಿ, ಕೈಯಲ್ಲಿ ಬಲೆ ಹಿಡಿದುಕೊಂಡು ನಾಯಿಗಳ ಗುಂಪಿನೊಂದಿಗೆ ಬೇಟೆಗೂ ಹೋಗುತ್ತಿದ್ದನು. ॥69॥

(ಶ್ಲೋಕ - 70)

ಮೂಲಮ್

ತೇನ ವೇಶ್ಯಾಕುಸಂಗೇನ ಪಿತ್ರ್ಯಂ ವಿತ್ತಂ ತು ನಾಶಿತಮ್ ।
ಏಕದಾ ಪಿತರೌ ತಾಡ್ಯ ಪಾತ್ರಾಣಿ ಸ್ವಯಮಾಹರತ್ ॥

ಅನುವಾದ

ವೇಶ್ಯೆಯರ ಜಾಲದಲ್ಲಿ ಸಿಲುಕಿಕೊಂಡು ಅವನು ತನ್ನ ತಂದೆಯ ಎಲ್ಲ ಸಂಪತ್ತನ್ನು ನಾಶ ಮಾಡಿಬಿಟ್ಟನು. ಒಂದು ದಿನ ತಂದೆ-ತಾಯರನ್ನು ಹೊಡೆದು-ಬಡೆದು ಮನೆಯ ಎಲ್ಲ ಪಾತ್ರೆ-ಪಗಡೆಗಳನ್ನು ಎತ್ತಿಕೊಂಡು ಹೋದನು.॥70॥

(ಶ್ಲೋಕ - 71)

ಮೂಲಮ್

ತತ್ಪಿತಾ ಕೃಪಣಃ ಪ್ರೋಚ್ಚೈರ್ಧನಹೀನೋ ರುರೋದ ಹ ।
ವಂಧ್ಯತ್ವಂ ತು ಸಮೀಚೀನಂ ಕುಪುತ್ರೋ ದುಃಖದಾಯಕಃ ॥

ಅನುವಾದ

ಹೀಗೆ ಎಲ್ಲ ಸಂಪತ್ತು ಕಳೆದು ಹೋದಾಗ ಅವನ ಲೋಭೀ ತಂದೆಯು ಎದೆ ಬಡಿದುಕೊಂಡು ಅಳತೊಡಗಿದನು. ಇದಕ್ಕಿಂತ ಇವನ ತಾಯಿಯು ಬಂಜೆಯಾಗಿದ್ದರೂ ಚೆನ್ನಾಗಿತ್ತು. ಕುಪುತ್ರನಾದರೋ ಬಹಳ ದುಃಖದಾಯಕನಾಗುತ್ತಾನೆ ಎಂದು ಹೇಳತೊಡಗಿದನು. ॥71॥

(ಶ್ಲೋಕ - 72)

ಮೂಲಮ್

ಕ್ವ ತಿಷ್ಠಾಮಿ ಕ್ವ ಗಚ್ಛಾಮಿ ಕೋ ಮೇ ದುಃಖಂ ವ್ಯಪೋಹಯೇತ್ ।
ಪ್ರಾಣಾಂಸ್ತ್ಯಜಾಮಿ ದುಃಖೇನ ಹಾ ಕಷ್ಟಂ ಮಮ ಸಂಸ್ಥಿತಮ್ ॥

ಅನುವಾದ

ಅಯ್ಯೋ! ಈಗ ನಾನು ಎಲ್ಲಿರಲಿ? ಎಲ್ಲಿಗೆ ಹೋಗಲಿ? ನನ್ನ ಈ ಕಷ್ಟವನ್ನು ಯಾರು ಕಳೆಯುವರು? ನನ್ನ ಮೇಲೆ ದೊಡ್ಡ ವಿಪತ್ತೇ ಬಂದೊದಗಿತಲ್ಲ! ಈ ದುಃಖದಿಂದ ನಾನು ಖಂಡಿತವಾಗಿ ಸಾಯುವೆನು. ॥72॥

(ಶ್ಲೋಕ - 73)

ಮೂಲಮ್

ತದಾನೀಂ ತು ಸಮಾಗತ್ಯ ಗೋಕರ್ಣೋ ಜ್ಞಾನಸಂಯುತಃ ।
ಬೋಧಯಾಮಾಸ ಜನಕಂ ವೈರಾಗ್ಯಂ ಪರಿದರ್ಶಯನ್ ॥

ಅನುವಾದ

ಆಗಲೇ ಪರಮಜ್ಞಾನಿಯಾದ ಗೋಕರ್ಣನು ಅಲ್ಲಿಗೆ ಬಂದನು. ಅವನು ತಂದೆಗೆ ವೈರಾಗ್ಯವನ್ನು ಉಪದೇಶಿಸಿ ಬಹಳವಾಗಿ ಸಮಜಾಯಿಸಿದನು. ॥73॥

(ಶ್ಲೋಕ - 74)

ಮೂಲಮ್

ಅಸಾರಃ ಖಲು ಸಂಸಾರೋ ದುಃಖರೂಪೀ ವಿಮೋಹಕಃ ।
ಸುತಃ ಕಸ್ಯ ಧನಂ ಕಸ್ಯ ಸ್ನೇಹವಾನ್ ಜ್ವಲತೇಽನಿಶಮ್ ॥

ಅನುವಾದ

ಗೋಕರ್ಣನೆಂದನು - ಅಪ್ಪಾ! ಈ ಪ್ರಪಂಚವು ಅಸಾರವಾಗಿದೆ. ಇದು ಅತ್ಯಂತ ದುಃಖರೂಪಿಯಾಗಿದ್ದು, ಮೋಹದಲ್ಲಿ ಕೆಡಹುವುದಾಗಿದೆ. ಯಾರು ಮಗ? ಯಾರ ಧನ? ಆಸಕ್ತಿಯುಳ್ಳವನು ಹಗಲು-ರಾತ್ರಿ ದೀಪದಂತೆ ಸುಡುತ್ತಿರುತ್ತಾನೆ. ॥74॥

(ಶ್ಲೋಕ - 75)

ಮೂಲಮ್

ನ ಚೇಂದ್ರಸ್ಯ ಸುಖಂ ಕಿಂಚಿನ್ನ ಸುಖಂ ಚಕ್ರವರ್ತಿನಃ ।
ಸುಖಮಸ್ತಿ ವಿರಕ್ತಸ್ಯ ಮುನೇರೇಕಾಂತಜೀವಿನಃ ॥

ಅನುವಾದ

ಸುಖವಾದರೋ ಇಂದ್ರನಿಗಿಲ್ಲ, ಚಕ್ರವರ್ತಿಗೂ ಇಲ್ಲ. ಸುಖವು ಕೇವಲ ವಿರಕ್ತ ಏಕಾಂತದಲ್ಲಿರುವ ಮುನಿಗಳಿಗಿದೆ. ॥75॥

(ಶ್ಲೋಕ - 76)

ಮೂಲಮ್

ಮುಂಚಾಜ್ಞಾನಂ ಪ್ರಜಾರೂಪಂ ಮೋಹತೋ ನರಕೇ ಗತಿಃ ।
ನಿಪತಿಷ್ಯತಿ ದೇಹೋಽಯಂ ಸರ್ವಂ ತ್ಯಕ್ತ್ವಾ ವನಂ ವ್ರಜ ॥

ಅನುವಾದ

ಈ ಮಗನು ನನ್ನವನಾಗಿದ್ದಾನೆ. ಈ ಅಜ್ಞಾನವನ್ನು ಬಿಟ್ಟುಬಿಡಿರಿ. ಮೋಹದಿಂದ ನರಕದ ಪ್ರಾಪ್ತಿಯಾಗುತ್ತದೆ. ಈ ಶರೀರವಾದರೋ ನಾಶವಾಗಿಯೇ ಆಗುವುದು. ಅದಕ್ಕಾಗಿ ಎಲ್ಲವನ್ನು ಬಿಟ್ಟು ತಪಸ್ಸಿಗಾಗಿ ಕಾಡಿಗೆ ಹೊರಟು ಹೋಗಿರಿ. ॥76॥

(ಶ್ಲೋಕ - 77)

ಮೂಲಮ್

ತದ್ವಾಕ್ಯಂ ತು ಸಮಾಕರ್ಣ್ಯ ಗಂತುಕಾಮಃ ಪಿತಾಬ್ರವೀತ್ ।
ಕಿಂ ಕರ್ತವ್ಯಂ ವನೇ ತಾತ ತತ್ತ್ವಂ ವದ ಸವಿಸ್ತರಮ್ ॥

ಅನುವಾದ

ಗೋಕರ್ಣನ ಮಾತನ್ನು ಕೇಳಿ ಆತ್ಮದೇವನು ವನಕ್ಕೆ ಹೋಗಲು ಸಿದ್ಧನಾದನು. ಅವನೆಂದ ಮಗು! ವನದಲ್ಲಿದ್ದು ನಾನು ಏನು ಮಾಡಬೇಕು? ಅದನ್ನು ವಿಸ್ತಾರವಾಗಿ ನನಗೆ ಹೇಳು. ॥77॥

(ಶ್ಲೋಕ - 78)

ಮೂಲಮ್

ಅಂಧಕೂಪೇ ಸ್ನೇಹಪಾಶೇ ಬದ್ಧಃ ಪಂಗುರಹಂ ಶಠಃ ।
ಕರ್ಮಣಾ ಪತಿತೋ ನೂನಂ ಮಾಮುದ್ಧರ ದಯಾನಿಧೇ ॥

ಅನುವಾದ

ನಾನು ಬಹಳ ಮೂರ್ಖನಾಗಿದ್ದೇನೆ. ಇಂದಿನ ತನಕ ಕರ್ಮವಶನಾಗಿ ಸ್ನೇಹ ಪಾಶದಲ್ಲಿ ಬಂಧಿತನಾಗಿ, ಹೇಳವನಂತೆ ಈ ಮನೆಯೆಂಬ ಕತ್ತಲೆಯ ಬಾವಿಯಲ್ಲಿ ಬಿದ್ದಿರುವೆನು. ನೀನು ತುಂಬಾ ದಯಾಳುವಾಗಿರುವೆ. ಅದರಿಂದ ನನ್ನ ಉದ್ಧಾರಮಾಡು. ॥78॥

(ಶ್ಲೋಕ - 79)

ಮೂಲಮ್ (ವಾಚನಮ್)

ಗೋಕರ್ಣ ಉವಾಚ

ಮೂಲಮ್

ದೇಹೇಽಸ್ಥಿಮಾಂಸರುಧಿರೇಽಭಿಮತಿಂ ತ್ಯಜ ತ್ವಂ
ಜಾಯಾಸುತಾದಿಷು ಸದಾ ಮಮತಾಂ ವಿಮುಂಚ ।
ಪಶ್ಯಾನಿಶಂ ಜಗದಿದಂ ಕ್ಷಣಭಂಗನಿಷ್ಠಂ
ವೈರಾಗ್ಯರಾಗರಸಿಕೋ ಭವ ಭಕ್ತಿನಿಷ್ಠಃ ॥ 79 ॥

ಅನುವಾದ

ಗೋಕರ್ಣನು ಹೇಳಿದನು — ತಂದೆಯೇ! ಈ ಶರೀರವು ಎಲುಬು, ಮಾಂಸ, ರಕ್ತದ ಪಿಂಡವಾಗಿದೆ. ಇದನ್ನು ‘ನಾನು, ಎಂಬುದನ್ನು ನೀವು ಮರೆತು ಬಿಡಿರಿ. ಪತ್ನೀ-ಪುತ್ರರನ್ನು ‘ನನ್ನವರು’ ಎಂದು ಎಂದಿಗೂ ತಿಳಿಯಬೇಡಿರಿ. ಈ ಪ್ರಪಂಚವನ್ನು ಹಗಲು ರಾತ್ರಿ ಕ್ಷಣಭಂಗುರವೆಂದು ತಿಳಿಯಿರಿ, ಇದರಲ್ಲಿ ಯಾವ ವಸ್ತುವನ್ನು ಸ್ಥಾಯಿಯೆಂದು ತಿಳಿದು ಅನುರಾಗವನ್ನು ಇಡಬೇಡಿರಿ. ಸಾಕು, ಏಕಮಾತ್ರ ವೈರಾಗ್ಯ ರಸದ ರಸಿಕರಾಗಿ ಭಗವಂತನ ಭಕ್ತಿಯಲ್ಲಿ ತೊಡಗಿರಿ. ॥79॥

(ಶ್ಲೋಕ - 80)

ಮೂಲಮ್

ಧರ್ಮಂ ಭಜಸ್ವ ಸತತಂ ತ್ಯಜ ಲೋಕಧರ್ಮಾನ್
ಸೇವಸ್ವ ಸಾಧುಪುರುಷಾಂಜಹಿ ಕಾಮತೃಷ್ಣಾಮ್ ।
ಅನ್ಯಸ್ಯ ದೋಷಗುಣಚಿಂತನಮಾಶು ಮುಕ್ತ್ವಾ
ಸೇವಾಕಥಾರಸಮಹೋ ನಿತರಾಂ ಪಿಬ ತ್ವಮ್ ॥

ಅನುವಾದ

ಭಗವದ್ಭಜನೆಯೇ ಎಲ್ಲಕ್ಕಿಂತ ದೊಡ್ಡ ಧರ್ಮವಾಗಿದೆ. ನಿರಂತರ ಅದನ್ನೆ ಆಶ್ರಯಿಸಿಕೊಂಡಿರಿ, ಉಳಿದ ಎಲ್ಲ ಲೌಕಿಕ ಧರ್ಮಗಳಿಂದ ಪರಾಙ್ಮುಖರಾಗಿರಿ. ಸದಾ ಕಾಲ ಸಾಧುಗಳ ಸೇವೆಮಾಡಿರಿ. ಭೋಗಗಳ ಲಾಲಸೆ ಹತ್ತಿರ ಸುಳಿಯಗೊಡಬೇಡಿ. ಆದಷ್ಟು ಬೇಗ ಬೇರೆಯವರ ಗುಣ ದೋಷಗಳ ವಿಚಾರ ಬಿಟ್ಟು ಏಕಮಾತ್ರ ಭಗವತ್ಸೇವೆ ಹಾಗೂ ಭಗವಂತನ ಕಥೆಗಳ ರಸಪಾನಮಾಡಿರಿ.॥80॥

(ಶ್ಲೋಕ - 81)

ಮೂಲಮ್

ಏವಂ ಸುತೋಕ್ತಿ ವಶತೋಽಪಿ ಗೃಹಂ ವಿಹಾಯ
ಯಾತೋ ವನಂ ಸ್ಥಿರಮತಿರ್ಗತಷಷ್ಟಿ ವರ್ಷಃ ।
ಯುಕ್ತೋ ಹರೇರನುದಿನಂ ಪರಿಚರ್ಯಯಾಸೌ
ಶ್ರೀಕೃಷ್ಣಮಾಪ ನಿಯತಂ ದಶಮಸ್ಯ ಪಾಠಾತ್ ॥

ಅನುವಾದ

ಹೀಗೆ ಪುತ್ರನ ಮಾತಿನಿಂದ ಪ್ರಭಾವಿತನಾಗಿ ಆತ್ಮದೇವನು ಮನೆಯನ್ನು ಬಿಟ್ಟು, ಕಾಡಿಗೆ ತೆರಳಿದನು. ಆಗ ಅವನ ವಯಸ್ಸು ಅರವತ್ತಾಗಿದ್ದರೂ ಬುದ್ಧಿಯಲ್ಲಿ ಪೂರ್ಣವಾಗಿ ದೃಢತೆ ಇತ್ತು. ಅಲ್ಲಿ ಹಗಲು-ಇರಳು ಭಗವಂತನ ಸೇವೆ ಪೂಜೆ ಮಾಡುವುದರಿಂದ ಹಾಗೂ ನಿಯಮ ಪೂರ್ವಕ ಭಾಗವತದ ದಶಮಸ್ಕಂಧವನ್ನು ಪಾರಾಯಣೆ ಮಾಡುವುದರಿಂದ ಅವನು ಭಗವಾನ್ ಶ್ರೀಕೃಷ್ಣನನ್ನು ಪಡೆದುಕೊಂಡನು. ॥81॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ವಿಪ್ರಮೋಕ್ಷೋ ನಾಮ ಚತುರ್ಥೋಽಧ್ಯಾಯಃ ॥4॥