[ಮೂರನೆಯ ಅಧ್ಯಾಯ]
ಭಾಗಸೂಚನಾ
ಭಕ್ತಿದೇವಿಯ ಕಷ್ಟದ ನಿವೃತ್ತಿ
(ಶ್ಲೋಕ - 1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಜ್ಞಾನಯಜ್ಞಂ ಕರಿಷ್ಯಾಮಿ ಶುಕಶಾಸ್ತ್ರ ಕಥೋಜ್ಜ್ವಲಮ್ ।
ಭಕ್ತಿಜ್ಞಾನವಿರಾಗಾಣಾಂ ಸ್ಥಾಪನಾರ್ಥಂ ಪ್ರಯತ್ನತಃ ॥
ಅನುವಾದ
ನಾರದರು ಹೇಳುತ್ತಾರೆ — ಸನಕಾದಿಗಳೇ! ಭಕ್ತಿ, ಜ್ಞಾನ, ವೈರಾಗ್ಯ ಇವುಗಳನ್ನು ಸ್ಥಾಪಿಸಲು ನಾನು ಪ್ರಯತ್ನಪೂರ್ವಕ ಶ್ರೀಶುಕಮುನಿಗಳು ಹೇಳಿರುವ ಭಾಗವತ ಶಾಸ್ತ್ರವನ್ನು ಕಥೆಯ ಮೂಲಕ ಉಜ್ವಲವಾದ ಜ್ಞಾನ ಯಜ್ಞವನ್ನು ಮಾಡುವೆನು. ॥1॥
(ಶ್ಲೋಕ - 2)
ಮೂಲಮ್
ಕುತ್ರ ಕಾರ್ಯೋ ಮಯಾ ಯಜ್ಞಃ ಸ್ಥಲಂ ತದ್ವಾಚ್ಯತಾಮಿಹ ।
ಮಹಿಮಾ ಶುಕಶಾಸ್ತ್ರಸ್ಯ ವಕ್ತವ್ಯೋ ವೇದಪಾರಗೈಃ ॥
ಅನುವಾದ
ಈ ಯಜ್ಞವನ್ನು ನಾನು ಎಲ್ಲಿ ಮಾಡಬೇಕು? ನೀವು ಇದಕ್ಕಾಗಿ ಯಾವುದಾದರೂ ಸ್ಥಾನವನ್ನು ತಿಳಿಸಿರಿ. ನೀವುಗಳು ವೇದಗಳಲ್ಲಿ ಪಾರಂಗತರಾಗಿರುವಿರಿ. ಅದರಿಂದ ನನಗೆ ಈ ಶುಕಶಾಸ್ತ್ರದ ಮಹಿಮೆಯನ್ನು ಹೇಳಿರಿ. ॥2॥
(ಶ್ಲೋಕ - 3)
ಮೂಲಮ್
ಕಿಯದ್ಭಿರ್ದಿವಸೈಃ ಶ್ರಾವ್ಯಾ ಶ್ರೀಮದ್ಭಾಗವತೀ ಕಥಾ ।
ಕೋ ವಿಧಿಸ್ತತ್ರ ಕರ್ತವ್ಯೋ ಮಮೇದಂ ಬ್ರುವತಾಮಿತಃ ॥
ಅನುವಾದ
ಈ ಶ್ರೀಮದ್ಭಾಗವತದ ಕಥೆಯನ್ನು ಎಷ್ಟು ದಿನಗಳಲ್ಲಿ ಹೇಳಬೇಕು? ಅದನ್ನು ಕೇಳುವ ವಿಧಾನವೆಂತು? ಇದನ್ನೂ ಕೂಡ ತಿಳಿಸಿರಿ.॥3॥
(ಶ್ಲೋಕ - 4)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಶೃಣು ನಾರದ ವಕ್ಷ್ಯಾಮೋ ವಿನಮ್ರಾಯ ವಿವೇಕಿನೇ ।
ಗಂಗಾದ್ವಾರಸಮೀಪೇ ತು ತಟಮಾನಂದನಾಮಕಮ್ ॥
ಅನುವಾದ
ಸನಕಾದಿಗಳು ಹೇಳಿದರು — ನಾರದರೇ! ನೀವು ತುಂಬಾ ವಿನೀತರೂ, ವಿವೇಕಿಗಳೂ ಆಗಿರುವಿರಿ. ನಾವು ನಿಮಗೆ ಇದೆಲ್ಲವನ್ನು ತಿಳಿಸುತ್ತೇವೆ, ಕೇಳಿರಿ. ಹರಿದ್ವಾರದ ಬಳಿಯಲ್ಲಿ ಆನಂದವೆಂಬ ಒಂದು ಘಟ್ಟವಿದೆ. ॥4॥
(ಶ್ಲೋಕ - 5)
ಮೂಲಮ್
ನಾನಾ ಋಷಿ ಗಣೈರ್ಜುಷ್ಟಂ ದೇವಸಿದ್ಧ ನಿಷೇವಿತಮ್ ।
ನಾನಾತರುಲತಾಕೀರ್ಣಂ ನವಕೋಮಲವಾಲುಕಮ್ ॥
ಅನುವಾದ
ಅಲ್ಲಿ ಅನೇಕ ಋಷಿಗಳು ವಾಸಿಸುತ್ತಾರೆ ಹಾಗೂ ದೇವತೆಗಳೂ, ಸಿದ್ಧರೂ ಕೂಡ ಅದನ್ನು ಸೇವಿಸುತ್ತಿರುವರು. ಅಲ್ಲಿ ನಾನಾ ರೀತಿಯ ವೃಕ್ಷ-ಲತೆಗಳು ದಟ್ಟವಾಗಿ ಬೆಳೆದಿವೆ. ಅಲ್ಲಿ ತುಂಬಾ ಕೋಮಲ ಹೊಸದಾದ ಮರಳು ಹಾಸಿದ್ದಿದೆ. ॥5॥
(ಶ್ಲೋಕ - 6)
ಮೂಲಮ್
ರಮ್ಯಮೇಕಾಂತದೇಶಸ್ಥಂ ಹೇಮಪದ್ಮಸುಸೌರಭಮ್ ।
ಯತ್ಸಮೀಪಸ್ಥಜೀವಾನಾಂ ವೈರಂ ಚೇತಸಿ ನ ಸ್ಥಿತಮ್ ॥
ಅನುವಾದ
ಆ ಘಟ್ಟವು ಬಹಳ ರಮ್ಯ ಮತ್ತು ಏಕಾಂತ ಪ್ರದೇಶವಾಗಿದೆ. ಅಲ್ಲಿ ಯಾವಾಗಲೂ ಸ್ವರ್ಣಕಮಲಗಳ ಸುಗಂಧ ಬರುತ್ತಿರುತ್ತದೆ. ಅದರ ಸಮೀಪದಲ್ಲಿ ವಾಸಿಸುವ ಸಿಂಹ, ಆನೆ ಮುಂತಾದ ಪರಸ್ಪರ ವಿರೋಧಿ ಜೀವಿಗಳ ಚಿತ್ತದಲ್ಲಿಯೂ ವೈರಭಾವವಿರುವುದಿಲ್ಲ. ॥6॥
(ಶ್ಲೋಕ - 7)
ಮೂಲಮ್
ಜ್ಞಾನಯಜ್ಞಸ್ತ್ವಯಾ ತತ್ರ ಕರ್ತವ್ಯೋ ಹ್ಯಪ್ರಯತ್ನತಃ ।
ಅಪೂರ್ವರಸರೂಪಾ ಚ ಕಥಾ ತತ್ರ ಭವಿಷ್ಯತಿ ॥
ಅನುವಾದ
ಅಲ್ಲಿ ನೀವು ಜ್ಞಾನಯಜ್ಞವನ್ನು ಪ್ರಾರಂಭಿಸಿರಿ. ಯಾವುದೇ ವಿಶೇಷ ಪ್ರಯತ್ನವಿಲ್ಲದೆ ಆ ಜಾಗದಲ್ಲಿ ಕಥೆಯ ಅಪೂರ್ವ ರಸವು ಉದಯವಾದೀತು. ॥7॥
(ಶ್ಲೋಕ - 8)
ಮೂಲಮ್
ಪುರಃಸ್ಥಂ ನಿರ್ಬಲಂ ಚೈವ ಜರಾಜೀರ್ಣ ಕಲೇವರಮ್ ।
ತದ್ದ್ವಯಂ ಚ ಪುರಸ್ಕೃತ್ಯ ಭಕ್ತಿಸ್ತತ್ರಾಗಮಿಷ್ಯತಿ ॥
ಅನುವಾದ
ಭಕ್ತಿಯೂ ಕೂಡ ನಿಮ್ಮ ಕಣ್ಮುಂದೆಯೇ ನಿರ್ಬಲ, ಜರಾ-ಜೀರ್ಣ ಅವಸ್ಥೆಯಲ್ಲಿರುವ ಜ್ಞಾನ, ವೈರಾಗ್ಯರನ್ನು ಕರೆದುಕೊಂಡು ಅಲ್ಲಿಗೆ ಬರುವಳು. ॥8॥
(ಶ್ಲೋಕ - 9)
ಮೂಲಮ್
ಯತ್ರ ಭಾಗವತೀ ವಾರ್ತಾ ತತ್ರ ಭಕ್ತ್ಯಾದಿಕಂ ವ್ರಜೇತ್ ।
ಕಥಾಶಬ್ದಂ ಸಮಾಕರ್ಣ್ಯ ತತ್ತ್ರಿಕಂ ತರುಣಾಯತೇ ॥
ಅನುವಾದ
ಏಕೆಂದರೆ, ಎಲ್ಲೇ ಆಗಲಿ ಶ್ರೀಮದ್ಭಾಗವತದ ಕಥೆ ನಡೆಯುವಲ್ಲಿಗೆ ಭಕ್ತಿಯೇ ಮೊದಲಾದವರು ತಾನೇ-ತಾನಾಗಿ ಬಂದು ಬಿಡುತ್ತಾರೆ. ಅಲ್ಲಿ ಕಥೆಯ ಶಬ್ದ ಕಿವಿಗೆ ಬೀಳುತ್ತಲೇ ಅವರು ಮೂವರೂ ತರುಣರಾಗಿ ಹೋಗುವರು.॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಮುಕ್ತ್ವಾ ಕುಮಾರಾಸ್ತೇ ನಾರದೇನ ಸಮಂತತಃ ।
ಗಂಗಾತಟಂ ಸಮಾಜಗ್ಮುಃ ಕಥಾಪಾನಾಯ ಸತ್ವರಾಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಹೀಗೆ ಹೇಳಿ ನಾರದರೊಂದಿಗೆ ಸನಕಾದಿಗಳೂ ಕೂಡ ಶ್ರೀಮದ್ಭಾಗವತ ಕಥಾಮೃತವನ್ನು ಪಾನಮಾಡಲು ಅಲ್ಲಿಂದ ಕೂಡಲೇ ಹೊರಟು ಗಂಗಾತೀರಕ್ಕೆ ಬಂದರು. ॥10॥
(ಶ್ಲೋಕ - 11)
ಮೂಲಮ್
ಯದಾ ಯಾತಾಸ್ತಟಂ ತೇ ತು ತದಾ ಕೋಲಾಹಲೋಽಪ್ಯಭೂತ್ ।
ಭೂರ್ಲೋಕೇ ದೇವಲೋಕೇ ಚ ಬ್ರಹ್ಮಲೋಕೇ ತಥೈವ ಚ ॥
ಅನುವಾದ
ಅವರು ಗಂಗಾತೀರಕ್ಕೆ ತಲುಪುತ್ತಲೇ ಭೂಲೋಕ, ದೇವಲೋಕ, ಬ್ರಹ್ಮಲೋಕ ಹೀಗೆ ಎಲ್ಲೆಡೆ ಈ ಕಥೆಯ ಗದ್ದಲ ಉಂಟಾಯಿತು. ॥11॥
(ಶ್ಲೋಕ - 12)
ಮೂಲಮ್
ಶ್ರೀಭಾಗವತಪೀಯೂಷಪಾನಾಯ ರಸಲಂಪಟಾಃ ।
ಧಾವಂತೋಽಪ್ಯಾಯಯುಃ ಸರ್ವೇ ಪ್ರಥಮಂ ಯೇ ಚ ವೈಷ್ಣವಾಃ ॥
ಅನುವಾದ
ಭಗವತ್ಕಥೆಯ ರಸಿಕರಾದ ವಿಷ್ಣುಭಕ್ತರೆಲ್ಲರೂ ಶ್ರೀಮದ್ಭಾಗವತಾಮೃತವನ್ನು ಪಾನಮಾಡಲು ಎಲ್ಲರಿಗಿಂತ ಮುಂಚಿತವಾಗಿ ಅಲ್ಲಿಗೆ ಓಡೋಡಿ ಬರ ತೊಡಗಿದರು. ॥12॥
(ಶ್ಲೋಕ - 13)
ಮೂಲಮ್
ಭೃಗುರ್ವಸಿಷ್ಠಶ್ಚ್ಯವನಶ್ಚ ಗೌತಮೋ
ಮೇಧಾತಿಥಿರ್ದೇವಲದೇವರಾತೌ ।
ರಾಮಸ್ತಥಾ ಗಾಧಿಸುತಶ್ಚ ಶಾಕಲೋ
ಮೃಕಂಡುಪುತ್ರಾತ್ರಿಜಪಿಪ್ಪಲಾದಾಃ ॥
(ಶ್ಲೋಕ - 14)
ಮೂಲಮ್
ಯೋಗೇಶ್ವರೌ ವ್ಯಾಸಪರಾಶರೌ ಚ
ಛಾಯಾಶುಕೋ ಜಾಜಲಿಜಹ್ನುಮುಖ್ಯಾಃ ।
ಸರ್ವೇಽಪ್ಯಮೀ ಮುನಿಗಣಾಃ ಸಹಪುತ್ರಶಿಷ್ಯಾಃ
ಸ್ವಸೀಭಿರಾಯಯುರತಿಪ್ರಣಯೇನ ಯುಕ್ತಾಃ ॥
ಅನುವಾದ
ಭೃಗು, ವಸಿಷ್ಠ, ಚ್ಯವನ, ಗೌತಮ, ಮೇಧಾತಿಥಿ, ದೇವಲ, ದೇವರಾತ, ಪರಶುರಾಮ, ವಿಶ್ವಾಮಿತ್ರ, ಶಾಕಲ, ಮಾರ್ಕಂಡೇಯ, ದತ್ತಾತ್ರೇಯ, ಪಿಪ್ಪಲಾದ, ಯೋಗೇಶ್ವರರಾದ ವ್ಯಾಸರು, ಪರಾಶರ, ಛಾಯಾಶುಕ, ಜಾಜಲಿ, ಜಹ್ನು ಮುಂತಾದ ಎಲ್ಲ ಪ್ರಧಾನ-ಪ್ರಧಾನ ಮುನಿಗಣವು ತಮ್ಮ-ತಮ್ಮ ಪುತ್ರರು, ಶಿಷ್ಯರು, ಪತ್ನಿಯರೊಂದಿಗೆ ತುಂಬಾ ಪ್ರೇಮದಿಂದ ಅಲ್ಲಿಗೆ ಬಂದರು. ॥13-14॥
(ಶ್ಲೋಕ - 15)
ಮೂಲಮ್
ವೇದಾಂತಾನಿ ಚ ವೇದಾಶ್ಚ ಮಂತ್ರಾಸ್ತಂತ್ರಾಃ ಸಮೂರ್ತಯಃ ।
ದಶಸಪ್ತಪುರಾಣಾನಿ ಷಟ್ ಶಾಸ್ತ್ರಾಣಿ ತಥಾಯಯುಃ ॥
ಅನುವಾದ
ಇವರಲ್ಲದೆ ವೇದ, ವೇದಾಂತ (ಉಪನಿಷತ್ತು), ಮಂತ್ರ, ತಂತ್ರ, ಹದಿನೇಳು ಪುರಾಣಗಳು, ಆರು ಶಾಸ್ತ್ರಗಳು ಮೂರ್ತೀ ಭವಿಸಿ ಅಲ್ಲಿ ಉಪಸ್ಥಿತರಾದರು. ॥15॥
(ಶ್ಲೋಕ - 16)
ಮೂಲಮ್
ಗಂಗಾದ್ಯಾಃ ಸರಿತಸ್ತತ್ರ ಪುಷ್ಕರಾದಿಸರಾಂಸಿ ಚ ।
ಕ್ಷೇತ್ರಾಣಿ ಚ ದಿಶಃ ಸರ್ವಾ ದಂಡಕಾದಿವನಾನಿ ಚ ॥
(ಶ್ಲೋಕ - 17)
ಮೂಲಮ್
ನಗಾದಯೋ ಯಯುಸ್ತತ್ರ ದೇವಗಂಧರ್ವದಾನವಾಃ ।
ಗುರುತ್ವಾತ್ತತ್ರ ನಾಯಾತಾನ್ ಭೃಗುಃ ಸಂಬೋಧ್ಯ ಚಾನಯತ್ ॥
ಅನುವಾದ
ಗಂಗಾದಿ ನದಿಗಳೂ, ಪುಷ್ಕರವೇ ಮುಂತಾದ ಸರೋವರಗಳೂ, ಕುರುಕ್ಷೇತ್ರಾದಿ ಸಮಸ್ತ ಕ್ಷೇತ್ರಗಳೂ, ಎಲ್ಲ ದಿಕ್ಕುಗಳೂ, ದಂಡಕವೇ ಮುಂತಾದ ವನಗಳೂ, ಹಿಮಾಲಯಾದಿ ಪವರ್ತಗಳೂ, ದೇವತೆಗಳೂ, ಗಂಧರ್ವರೂ, ದಾನವರೇ ಆದಿ ಎಲ್ಲರೂ ಕಥೆಕೇಳಲು ಹೊರಟು ಬಂದರು. ತಮ್ಮ ಗೌರವದಿಂದಾಗಿ ಬಾರದವರನ್ನು ಮಹರ್ಷಿ ಭೃಗುಗಳು ತಿಳಿಹೇಳಿ ಕರೆದುಕೊಂಡು ಬಂದರು. ॥16-17॥
(ಶ್ಲೋಕ - 18)
ಮೂಲಮ್
ದೀಕ್ಷಿತಾ ನಾರದೇನಾಥ ದತ್ತಮಾಸನಮುತ್ತಮಮ್ ।
ಕುಮಾರಾ ವಂದಿತಾಃ ಸರ್ವೈರ್ನಿಷೇದುಃ ಕೃಷ್ಣತತ್ಪರಾಃ ॥
ಅನುವಾದ
ಆಗ ಕಥೆ ಹೇಳಲು ದೀಕ್ಷಿತರಾಗಿ ಶ್ರೀಕೃಷ್ಣಪರಾಯಣರಾದ ಸನಕಾದಿಗಳು ನಾರದರಿತ್ತ ಶ್ರೇಷ್ಠ ಆಸನದಲ್ಲಿ ವಿರಾಜ ಮಾನರಾದರು. ಆಗ ಎಲ್ಲ ಶ್ರೋತೃಗಳು ಅವರನ್ನು ವಂದಿಸಿದರು. ॥18॥
(ಶ್ಲೋಕ - 19)
ಮೂಲಮ್
ವೈಷ್ಣವಾಶ್ಚ ವಿರಕ್ತಾಶ್ಚ ನ್ಯಾಸಿನೋ ಬ್ರಹ್ಮಚಾರಿಣಃ ।
ಮುಖಭಾಗೇ ಸ್ಥಿತಾಸ್ತೇ ಚ ತದಗ್ರೇ ನಾರದಃ ಸ್ಥಿತಃ ॥
ಅನುವಾದ
ಶ್ರೋತೃಗಳಲ್ಲಿ ವೈಷ್ಣವರೂ, ವಿರಕ್ತರೂ, ಸಂನ್ಯಾಸಿಗಳೂ, ಬ್ರಹ್ಮಚಾರಿಗಳೂ ಮುಂದೆ ಕುಳಿತರು. ಅವರೆಲ್ಲರ ಮುಂದುಗಡೆ ನಾರದರು ಆಸೀನರಾದರು. ॥19॥
(ಶ್ಲೋಕ - 20)
ಮೂಲಮ್
ಏಕಭಾಗೇ ಋಷಿಗಣಾಸ್ತದನ್ಯತ್ರ ದಿವೌಕಸಃ ।
ವೇದೋಪನಿಷದೋಽನ್ಯತ್ರ ತೀರ್ಥಾನ್ಯತ್ರ ಸ್ತ್ರಿಯೋಽನ್ಯತಃ ॥
ಅನುವಾದ
ಒಂದು ಕಡೆ ಋಷಿಗಳು, ಒಂದುಕಡೆ ದೇವತೆಗಳು, ವೇದ, ಉಪನಿಷತ್ತುಗಳೂ ಹಾಗೂ ತೀರ್ಥಗಳೂ ಕುಳಿತರು. ಮತ್ತೊಂದೆಡೆ ಸ್ತ್ರೀಯರು ಕುಳಿತರು. ॥20॥
(ಶ್ಲೋಕ - 21)
ಮೂಲಮ್
ಜಯಶಬ್ದೋ ನಮಃಶಬ್ದಃ ಶಂಖಶಬ್ದಸ್ತಥೈವ ಚ ।
ಚೂರ್ಣಲಾಜಾಪ್ರಸೂನಾನಾಂ ನಿಕ್ಷೇಪಃ ಸುಮಹಾನಭೂತ್ ॥
ಅನುವಾದ
ಆಗ ಎಲ್ಲೆಡೆ ಜಯಕಾರ, ನಮಸ್ಕಾರ, ಶಂಖಧ್ವನಿ ಆಗತೊಡಗಿದವು. ಅಬೀರಗುಲಾಲ, ಅರಳು, ಹೂವುಗಳೂ ಇವುಗಳ ಮಳೆಯೇ ಸುರಿಯ ತೊಡಗಿತು. ॥21॥
(ಶ್ಲೋಕ - 22)
ಮೂಲಮ್
ವಿಮಾನಾನಿ ಸಮಾರುಹ್ಯ ಕಿಯಂತೋ ದೇವನಾಯಕಾಃ ।
ಕಲ್ಪವೃಕ್ಷಪ್ರಸೂನೈಸ್ತಾನ್ ಸರ್ವಾಂಸ್ತತ್ರ ಸಮಾಕಿರನ್ ॥
ಅನುವಾದ
ಕೆಲ ಕೆಲ ದೇವಶ್ರೇಷ್ಠರಾದರೋ ವಿಮಾನಗಳನ್ನಡರಿ ಅಲ್ಲಿ ಕುಳಿತ ಎಲ್ಲ ಜನರ ಮೇಲೆ ಕಲ್ಪವೃಕ್ಷದ ಹೂವುಗಳನ್ನು ಮಳೆಗರೆದರು. ॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ತೇಷ್ವೇಕಚಿತ್ತೇಷು ಶ್ರೀಮದ್ಭಾಗವತಸ್ಯ ಚ ।
ಮಾಹಾತ್ಮ್ಯಮೂಚಿರೇ ಸ್ಪಷ್ಟಂ ನಾರದಾಯ ಮಹಾತ್ಮನೇ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಈ ಪ್ರಕಾರ ಪೂಜೆಯು ಮುಗಿದ ಮೇಲೆ ಎಲ್ಲ ಜನರು ಏಕಾಗ್ರಚಿತ್ತರಾದಾಗ ಸನಕಾದಿ ಋಷಿಗಳು ಮಹಾತ್ಮಾ ನಾರದರಿಗೆ ಶ್ರೀಮದ್ಭಾಗವತದ ಮಾಹಾತ್ಮ್ಯವನ್ನು ಸ್ಪಷ್ಟಪಡಿಸುತ್ತಾ ಹೇಳ ತೊಡಗಿದರು. ॥23॥
(ಶ್ಲೋಕ - 24)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಅಥ ತೇ ವರ್ಣ್ಯತೇಽಸ್ಮಾಭಿರ್ಮಹಿಮಾ ಶುಕಶಾಸ್ತ್ರಜಃ ।
ಯಸ್ಯ ಶ್ರವಣಮಾತ್ರೇಣ ಮುಕ್ತಿಃ ಕರತಲೇ ಸ್ಥಿತಾ ॥
ಅನುವಾದ
ಸನಕಾದಿಗಳು ಹೇಳಿದರು — ಈಗ ನಾವು ನಿಮಗೆ ಈ ಭಾಗವತ ಶಾಸ್ತ್ರದ ಮಹಿಮೆಯನ್ನು ಹೇಳುತ್ತೇವೆ. ಇದರ ಶ್ರವಣ ಮಾತ್ರದಿಂದ ಮುಕ್ತಿಯು ಕರಗತವಾಗುತ್ತದೆ. ॥24॥
(ಶ್ಲೋಕ - 25)
ಮೂಲಮ್
ಸದಾ ಸೇವ್ಯಾ ಸದಾ ಸೇವ್ಯಾ ಶ್ರೀಮದ್ಭಾಗವತೀ ಕಥಾ ।
ಯಸ್ಯಾಃ ಶ್ರವಣಮಾತ್ರೇಣ ಹರಿಶ್ಚಿತ್ತಂ ಸಮಾಶ್ರಯೇತ್ ॥
ಅನುವಾದ
ಶ್ರೀಮದ್ಭಾಗವತ ಕಥೆಯನ್ನು ಸದಾ-ಸರ್ವದಾ ಸೇವಿಸಬೇಕು. ಆಸ್ವಾದಿಸಬೇಕು. ಇದರ ಶ್ರವಣಮಾತ್ರದಿಂದ ಶ್ರೀಹರಿಯು ಹೃದಯಲ್ಲಿ ಬಂದು ನೆಲೆಸುವನು. ॥25॥
(ಶ್ಲೋಕ - 26)
ಮೂಲಮ್
ಗ್ರಂಥೋಽಷ್ಟಾದಶಸಾಹಸ್ರೋ ದ್ವಾದಶಸ್ಕಂಧ ಸಮ್ಮಿತಃ ।
ಪರೀಕ್ಷಿಚ್ಛುಕಸಂವಾದಃ ಶೃಣು ಭಾಗವತಂ ಚ ತತ್ ॥
ಅನುವಾದ
ಈ ಗ್ರಂಥದಲ್ಲಿ ಹದಿನೆಂಟು ಸಾವಿರ ಶ್ಲೋಕಗಳು ಮತ್ತು ಹನ್ನೆರಡು ಸ್ಕಂಧಗಳಿವೆ. ಶ್ರೀಶುಕಮಹಾಮುನಿಗಳ ಹಾಗೂ ಪರೀಕ್ಷಿತರ ಸಂವಾದವಿದೆ. ನೀವೆಲ್ಲ ಈ ಭಾಗವತ ಶಾಸ್ತ್ರವನ್ನು ಗಮನ ವಿಟ್ಟು ಕೇಳಿರಿ. ॥26॥
(ಶ್ಲೋಕ - 27)
ಮೂಲಮ್
ತಾವತ್ಸಂಸಾರಚಕ್ರೇಽಸ್ಮಿನ್ ಭ್ರಮತೇಽಜ್ಞಾನತಃ ಪುಮಾನ್ ।
ಯಾವತ್ಕರ್ಣಗತಾ ನಾಸ್ತಿ ಶುಕಶಾಸ್ತ್ರ ಕಥಾ ಕ್ಷಣಮ್ ॥
ಅನುವಾದ
ಒಂದು ಕ್ಷಣವಾದರೂ ಈ ಶುಕ ಶಾಸ್ತ್ರದ ಕಥೆಯು ಕಿವಿಗೆ ಬೀಳುವ ತನಕ ಈ ಜೀವಿಯು ಅಜ್ಞಾನವಶನಾಗಿ ಸಂಸಾರ ಚಕ್ರದಲ್ಲಿ ಅಲೆಯುತ್ತಾ ಇರುತ್ತಾನೆ. ॥27॥
(ಶ್ಲೋಕ - 28)
ಮೂಲಮ್
ಕಿಂ ಶ್ರುತೈರ್ಬಹುಭಿಃ ಶಾಸ್ತ್ರೈಃ ಪುರಾಣೈಶ್ಚ ಭ್ರಮಾವಹೈಃ ।
ಏಕಂ ಭಾಗವತಂ ಶಾಸ್ತ್ರಂ ಮುಕ್ತಿದಾನೇನ ಗರ್ಜತಿ ॥
ಅನುವಾದ
ಅನೇಕ ಶಾಸ್ತ್ರಗಳು, ಪುರಾಣಗಳು ಕೇಳುವುದರಿಂದ ಯಾವ ಲಾಭವಿದೆ? ಇದರಿಂದ ವ್ಯರ್ಥವಾದ ಭ್ರಮೆಯೇ ಬೆಳೆಯುತ್ತದೆ. ಮುಕ್ತಿಕರುಣಿಸಲೋಸುಗವಾದರೋ ಏಕಮಾತ್ರ ಭಾಗವತ ಶಾಸ್ತ್ರವೇ ಸಾಕಾಗಿದೆ. ॥28॥
(ಶ್ಲೋಕ - 29)
ಮೂಲಮ್
ಕಥಾ ಭಾಗವತಸ್ಯಾಪಿ ನಿತ್ಯಂ ಭವತಿ ಯದ್ಗೃಹೇ ।
ತದ್ಗೃಹಂ ತೀರ್ಥರೂಪಂ ಹಿ ವಸತಾಂ ಪಾಪನಾಶನಮ್ ॥
ಅನುವಾದ
ಪ್ರತಿದಿನವು ಶ್ರೀಮದ್ಭಾಗವತದ ಕಥೆ ನಡೆಯುವ ಮನೆಯು ತೀರ್ಥಸ್ವರೂಪವಾಗುತ್ತದೆ. ಅದರಲ್ಲಿ ವಾಸಿಸುವವರ ಎಲ್ಲ ಪಾಪಗಳು ನಾಶವಾಗಿ ಹೋಗುತ್ತವೆ. ॥29॥
(ಶ್ಲೋಕ - 30)
ಮೂಲಮ್
ಅಶ್ವಮೇಧಸಹಸ್ರಾಣಿ ವಾಜಪೇಯಶತಾನಿ ಚ ।
ಶುಕಶಾಸ್ತ್ರ ಕಥಾಯಾಶ್ಚ ಕಲಾಂ ನಾರ್ಹಂತಿ ಷೋಡಶೀಮ್ ॥
ಅನುವಾದ
ಸಾವಿರಾರು ಅಶ್ವಮೇಧಗಳು, ನೂರಾರು ವಾಜಪೇಯ ಯಜ್ಞಗಳು ಈ ಶುಕಶಾಸ್ತ್ರದ ಕಥೆಯ ಹದಿನಾರನೆಯ ಒಂದು ಅಂಶವೂ ಆಗಲಾರವು. ॥30॥
(ಶ್ಲೋಕ - 31)
ಮೂಲಮ್
ತಾವತ್ಪಾಪಾನಿ ದೇಹೇಽಸ್ಮಿನ್ನಿವಸಂತಿ ತಪೋಧನಾಃ ।
ಯಾವನ್ನ ಶ್ರೂಯತೇ ಸಮ್ಯಕ್ ಶ್ರೀಮದ್ಭಾಗವತಂ ನರೈಃ ॥
ಅನುವಾದ
ತಪೋಧನರೇ! ಜನರು ಚೆನ್ನಾಗಿ ಶ್ರೀಮದ್ಭಾಗವತದಕಥೆಯನ್ನು ಶ್ರವಣಿಸುವ ತನಕ ಅವರ ಶರೀರದಲ್ಲಿ ಪಾಪಗಳು ವಾಸಿಸುತ್ತವೆ. ॥31॥
(ಶ್ಲೋಕ - 32)
ಮೂಲಮ್
ನ ಗಂಗಾ ನ ಗಯಾ ಕಾಶೀ ಪುಷ್ಕರಂ ನ ಪ್ರಯಾಗಕಮ್ ।
ಶುಕಶಾಸ್ತ್ರ ಕಥಾಯಾಶ್ಚ ಫಲೇನ ಸಮತಾಂ ನಯೇತ್ ॥
ಅನುವಾದ
ಫಲದ ದೃಷ್ಟಿಯಿಂದ ಈ ಶುಕಶಾಸ್ತ್ರ ಕಥೆಗೆ ಗಂಗೆ, ಯಮುನೆ, ಕಾಶೀ, ಪುಷ್ಕರ, ಪ್ರಯಾಗ ಮುಂತಾದ ತೀರ್ಥಕ್ಷೇತ್ರಗಳು ಸಾಟಿಯಾಗಲಾರವು. ಅರ್ಥಾತ್ ಇವೆಲ್ಲಕ್ಕಿಂತ ಭಾಗವತ ಕಥೆ ಶ್ರೇಷ್ಠವಾಗಿದೆ. ॥32॥
(ಶ್ಲೋಕ - 33)
ಮೂಲಮ್
ಶ್ಲೋಕಾರ್ಧಂ ಶ್ಲೋಕಪಾದಂ ವಾ ನಿತ್ಯಂ ಭಾಗವತೋದ್ಭವಮ್ ।
ಪಠಸ್ವ ಸ್ವಮುಖೇನೈವ ಯದೀಚ್ಛಸಿ ಪರಾಂ ಗತಿಮ್ ॥
ಅನುವಾದ
ನಿಮಗೆ ಪರಮಗತಿಯ ಇಚ್ಛೆ ಇದ್ದರೆ, ಸ್ವಮುಖದಿಂದ ಶ್ರೀಮದ್ಭಾಗವತದ ಅರ್ಧ ಅಥವಾ ಕಾಲು ಶ್ಲೋಕವನ್ನಾದರೂ ಪ್ರತಿದಿನ ನಿಯಮಪೂರ್ವಕ ಪಠಿಸಬೇಕು. ॥33॥
(ಶ್ಲೋಕ - 34)
ಮೂಲಮ್
ವೇದಾದಿರ್ವೇದಮಾತಾ ಚ ಪೌರುಷಂ ಸೂಕ್ತಮೇವ ಚ ।
ತ್ರಯೀ ಭಾಗವತಂ ಚೈವ ದ್ವಾದಶಾಕ್ಷರ ಏವ ಚ ॥
(ಶ್ಲೋಕ - 35)
ಮೂಲಮ್
ದ್ವಾದಶಾತ್ಮಾ ಪ್ರಯಾಗಶ್ಚ ಕಾಲಃ ಸಂವತ್ಸರಾತ್ಮಕಃ ।
ಬ್ರಾಹ್ಮಣಾಶ್ಚಾಗ್ನಿಹೋತ್ರಂ ಚ ಸುರಭಿರ್ದ್ವಾದಶೀ ತಥಾ ॥
(ಶ್ಲೋಕ - 36)
ಮೂಲಮ್
ತುಲಸೀ ಚ ವಸಂತಶ್ಚ ಪುರುಷೋತ್ತಮ ಏವ ಚ ।
ಏತೇಷಾಂ ತತ್ತ್ವತಃ ಪ್ರಾಜ್ಞೈರ್ನ ಪೃಥಗ್ಭಾವ ಇಷ್ಯತೇ ॥
ಅನುವಾದ
ಓಂಕಾರ, ಗಾಯತ್ರೀ, ಪುರುಷಸೂಕ್ತ, ಮೂರೂ ವೇದಗಳು, ಶ್ರೀಮದ್ಭಾಗವತ, ‘ಓಂ ನಮೋ ಭಗವತೇ ವಾಸುದೇವಾಯ’ ಈ ದ್ವಾದಶಾಕ್ಷರ ಮಂತ್ರ, ದ್ವಾದಶರೂಪವುಳ್ಳ ಭಗವಾನ್ ಭಾಸ್ಕರ, ಪ್ರಯಾಗ, ಸಂವತ್ಸರರೂಪೀ ಕಾಲ, ಬ್ರಾಹ್ಮಣ, ಅಗ್ನಿಹೋತ್ರ, ಗೋವು, ದ್ವಾದಶೀ ತಿಥಿ, ತುಲಸೀ, ವಸಂತ ಋತು ಮತ್ತು ಭಗವಾನ್ ಪುರುಷೋತ್ತಮ ಇವೆಲ್ಲವುಗಳಲ್ಲಿ ಬುದ್ಧಿವಂತರು ಯಾವುದೇ ಭೇದವೆಣಿಸುವುದಿಲ್ಲ. ॥34-36॥
(ಶ್ಲೋಕ - 37)
ಮೂಲಮ್
ಯಶ್ಚ ಭಾಗವತಂ ಶಾಸ್ತ್ರಂ ವಾಚಯೇದರ್ಥತೋಽನಿಶಮ್ ।
ಜನ್ಮಕೋಟಿಕೃತಂ ಪಾಪಂ ನಶ್ಯತೇ ನಾತ್ರ ಸಂಶಯಃ ॥
ಅನುವಾದ
ಹಗಲು-ರಾತ್ರಿ ಅರ್ಥಸಹಿತ ಶ್ರೀಮದ್ಭಾಗವತ ಶಾಸ್ತ್ರವನ್ನು ಪಾರಾಯಣೆ ಮಾಡುವವನ ಕೋಟಿ ಜನ್ಮಗಳ ಪಾಪಗಳೂ ನಾಶವಾಗಿ ಹೋಗುತ್ತವೆ. ಇದರಲ್ಲಿ ಕಿಂಚಿತ್ತಾದರೂ ಸಂದೇಹವಿಲ್ಲ. ॥37॥
(ಶ್ಲೋಕ - 38)
ಮೂಲಮ್
ಶ್ಲೋಕಾರ್ಧಂ ಶ್ಲೋಕಪಾದಂ ವಾ ಪಠೇದ್ಭಾಗವತಂ ಚ ಯಃ ।
ನಿತ್ಯಂ ಪುಣ್ಯಮವಾಪ್ನೋತಿ ರಾಜಸೂಯಾಶ್ವಮೇಧಯೋಃ ॥
ಅನುವಾದ
ಪ್ರತಿದಿನವೂ ಭಾಗವತದ ಅರ್ಧ ಅಥವಾ ಕಾಲು ಶ್ಲೋಕವನ್ನಾದರೂ ಪಠಿಸುವವನಿಗೆ ರಾಜಸೂಯ, ಅಶ್ವಮೇಧ ಯಜ್ಞಗಳ ಫಲಗಳು ದೊರೆಯುತ್ತವೆ. ॥38॥
(ಶ್ಲೋಕ - 39)
ಮೂಲಮ್
ಉಕ್ತಂ ಭಾಗವತಂ ನಿತ್ಯಂ ಕೃತಂ ಚ ಹರಿಚಿಂತನಮ್ ।
ತುಲಸೀಪೋಷಣಂ ಚೈವ ಧೇನೂನಾಂ ಸೇವನಂ ಸಮಮ್ ॥
ಅನುವಾದ
ನಿತ್ಯವು ಭಾಗವತದ ಪಾರಾಯಣ ಮಾಡುವುದು, ಭಗವಂತನನ್ನು ಚಿಂತಿಸುವುದು, ತುಲಸೀಗೆ ನೀರೆರೆಯುವುದು, ಗೋಪೂಜೆ ಮಾಡುವುದು ಇವು ನಾಲ್ಕೂ ಸಮಾನವಾಗಿವೆ. ॥39॥
(ಶ್ಲೋಕ - 40)
ಮೂಲಮ್
ಅಂತಕಾಲೇ ತು ಯೇನೈವ ಶ್ರೂಯತೇ ಶುಕಶಾಸ್ತ್ರವಾಕ್ ।
ಪ್ರೀತ್ಯಾ ತಸ್ಯೈವ ವೈಕುಂಠಂ ಗೋವಿಂದೋಽಪಿ ಪ್ರಯಚ್ಛತಿ ॥
ಅನುವಾದ
ಅಂತ್ಯಸಮಯದಲ್ಲಿ ಶ್ರೀಮದ್ಭಾಗವತ ವಾಕ್ಯವನ್ನು ಕೇಳುವವನ ಮೇಲೆ ಭಗವಂತನು ಪ್ರಸನ್ನನಾಗಿ, ವೈಕುಂಠ ಧಾಮವನ್ನು ಕರುಣಿಸುತ್ತಾನೆ. ॥40॥
(ಶ್ಲೋಕ - 41)
ಮೂಲಮ್
ಹೇಮಸಿಂಹಯುತಂ ಚೈತದ್ವೈಷ್ಣವಾಯ ದದಾತಿ ಚ ।
ಕೃಷ್ಣೇನ ಸಹ ಸಾಯುಜ್ಯಂ ಸ ಪುಮಾಂಲ್ಲಭತೇ ಧ್ರುವಮ್ ॥
ಅನುವಾದ
ಈ ಭಾಗವತವನ್ನು ಸ್ವರ್ಣಸಿಂಹಾಸನದಲ್ಲಿಟ್ಟು ವಿಷ್ಣುಭಕ್ತನಿಗೆ ದಾನ ಮಾಡುವವನು ಖಂಡಿತವಾಗಿ ಭಗವಂತನ ಸಾಯುಜ್ಯವನ್ನು ಪಡೆಯುತ್ತಾನೆ. ॥41॥
(ಶ್ಲೋಕ - 42)
ಮೂಲಮ್
ಆಜನ್ಮಮಾತ್ರಮಪಿ ಯೇನ ಶಠೇನ ಕಿಂಚಿ-
ಚ್ಚಿತ್ತಂ ವಿಧಾಯ ಶುಕಶಾಸ್ತ್ರ ಕಥಾ ನ ಪೀತಾ ।
ಚಾಂಡಾಲವಚ್ಚ ಖರವದ್ಬತ ತೇನ ನೀತಂ
ಮಿಥ್ಯಾ ಸ್ವಜನ್ಮ ಜನನೀಜನಿದುಃಖಭಾಜಾ ॥
ಅನುವಾದ
ಜೀವನದ ಆಯುಷ್ಯದಲ್ಲಿ ಚಿತ್ತವನ್ನು ಏಕಾಗ್ರ ಮಾಡಿ ಶ್ರೀಮದ್ಭಾಗವತದ ಸ್ವಲ್ಪವಾದರೂ ರಸಾಸ್ವಾದ ಮಾಡದಿರುವ ದುಷ್ಟನು ತನ್ನ ಜನ್ಮವನ್ನು ಚಾಂಡಾಲ, ಕತ್ತೆಯಂತೆ ವ್ಯರ್ಥವಾಗಿ ಕಳೆದಿರುವನು. ಅವನಾದರೋ ತನ್ನ ತಾಯಿಗೆ ಪ್ರಸವ ವೇದನೆಯನ್ನು ಕೊಡಲೆಂದೇ ಹುಟ್ಟಿರುವನು. ॥42॥
(ಶ್ಲೋಕ - 43)
ಮೂಲಮ್
ಜೀವಚ್ಛವೋ ನಿಗದಿತಃ ಸ ತು ಪಾಪಕರ್ಮಾ
ಯೇನ ಶ್ರುತಂ ಶುಕಕಥಾವಚನಂ ನ ಕಿಂಚಿತ್ ।
ಧಿಕ್ ತಂ ನರಂ ಪಶುಸಮಂ ಭುವಿ ಭಾರರೂಪ-
ಮೇವಂ ವದಂತಿ ದಿವಿ ದೇವಸಮಾಜಮುಖ್ಯಾಃ ॥
ಅನುವಾದ
ಈ ಶುಕ ಶಾಸ್ತ್ರವನ್ನು ಸ್ವಲ್ಪವೂ ಕೇಳದ ಪಾಪಾತ್ಮನು ಬದುಕಿದ್ದರೂ ಶವದಂತೆ ಇದ್ದಾನೆ. ‘ಭೂಮಿಗೆ ಭಾರವಾದ ಆ ಪಶುವಿನಂತಿರುವವನಿಗೆ ಧಿಕ್ಕಾರವಿರಲಿ’ ಎಂದು ಸ್ವರ್ಗದಲ್ಲಿ ಇಂದ್ರಾದಿ ಪ್ರಧಾನ ದೇವತೆಗಳು ಹೇಳುತ್ತಿರುತ್ತಾರೆ. ॥43॥
(ಶ್ಲೋಕ - 44)
ಮೂಲಮ್
ದುರ್ಲಭೈವ ಕಥಾ ಲೋಕೇ ಶ್ರೀಮದ್ಭಾಗವತೋದ್ಭವಾ ।
ಕೋಟಿಜನ್ಮ ಸಮುತ್ಥೇನ ಪುಣ್ಯೇನೈವ ತು ಲಭ್ಯತೇ ॥
ಅನುವಾದ
ಪ್ರಪಂಚದಲ್ಲಿ ಶ್ರೀಮದ್ಭಾಗವತದ ಕಥೆಯು ದೊರೆಯುವುದು ಖಂಡಿತವಾಗಿ ಕಠಿಣವಾಗಿದೆ ಕೋಟಿ ಜನ್ಮಗಳ ಪುಣ್ಯವು ಇದ್ದಾಗಲೇ ಇದು ಪ್ರಾಪ್ತಿಯಾಗುತ್ತದೆ. ॥44॥
(ಶ್ಲೋಕ - 45)
ಮೂಲಮ್
ತೇನ ಯೋಗನಿಧೇ ಧೀಮನ್ ಶ್ರೋತವ್ಯಾ ಸಾ ಪ್ರಯತ್ನತಃ ।
ದಿನಾನಾಂ ನಿಯಮೋ ನಾಸ್ತಿ ಸರ್ವದಾ ಶ್ರವಣಂ ಮತಮ್ ॥
ಅನುವಾದ
ನಾರದರೇ! ನೀವು ಬಹಳ ಬುದ್ಧಿವಂತರು ಹಾಗೂ ಯೋಗ ನಿಧಿಗಳಾಗಿರುವಿರಿ. ನೀವು ಪ್ರಯತ್ನಪೂರ್ವಕ ಈ ಕಥೆಯನ್ನು ಶ್ರವಣಿಸಿರಿ. ಇದನ್ನು ಕೇಳಲು ಯಾವುದೇ ದಿನಗಳ ನಿಯಮವಿಲ್ಲ. ಇದನ್ನಾದರೋ ಯಾವಾಗಲೂ ಕೇಳುವುದು ಒಳ್ಳೆಯದೆ. ॥45॥
(ಶ್ಲೋಕ - 46)
ಮೂಲಮ್
ಸತ್ಯೇನ ಬ್ರಹ್ಮಚರ್ಯೇಣ ಸರ್ವದಾ ಶ್ರವಣಂ ಮತಮ್ ।
ಅಶಕ್ಯತ್ವಾತ್ಕಲೌ ಬೋಧ್ಯೋ ವಿಶೇಷೋಽತ್ರ ಶುಕಾಜ್ಞಯಾ ॥
ಅನುವಾದ
ಇದನ್ನು ಸತ್ಯಭಾಷಣ ಮತ್ತು ಬ್ರಹ್ಮಚರ್ಯಪಾಲನೆಯೊಂದಿಗೆ ಯಾವಾಗಲೂ ಕೇಳುವುದು ಶ್ರೇಷ್ಠವೆಂದು ತಿಳಿಯಲಾಗಿದೆ. ಆದರೆ ಕಲಿಯುಗದಲ್ಲಿ ಹೀಗಾಗುವುದು ಕಷ್ಟವಾಗಿದೆ. ಅದಕ್ಕಾಗಿ ಶುಕಮಹಾಮುನಿಗಳು ತಿಳಿಸಿರುವ ವಿಧಿಯನ್ನು ತಿಳಿದುಕೊಳ್ಳಬೇಕು. ॥46॥
(ಶ್ಲೋಕ - 47)
ಮೂಲಮ್
ಮನೋವೃತ್ತಿಜಯಶ್ಚೈವ ನಿಯಮಾಚರಣಂ ತಥಾ ।
ದೀಕ್ಷಾಂ ಕರ್ತುಮಶಕ್ಯತ್ವಾತ್ಸಪ್ತಾಹಶ್ರವಣಂ ಮತಮ್ ॥
ಅನುವಾದ
ಕಲಿಯುಗದಲ್ಲಿ ಅನೇಕ ದಿನಗಳವರೆಗೆ ಚಿತ್ತವೃತ್ತಿಗಳನ್ನು ವಶದಲ್ಲಿರುವುದು, ನಿಯಮಗಳಿಂದ ಬಂಧಿತನಾಗುವುದು, ಯಾವುದೇ ಪುಣ್ಯ ಕಾರ್ಯಕ್ಕಾಗಿ ದೀಕ್ಷಿತನಾಗಿರುವುದು ಕಠಿಣವಾಗಿದೆ. ಅದಕ್ಕಾಗಿ ಸಪ್ತಾಹ ಶ್ರವಣದ ವಿಧಿ ಇದೆ. ॥47॥
(ಶ್ಲೋಕ - 48)
ಮೂಲಮ್
ಶ್ರದ್ಧಾತಃ ಶ್ರವಣೇ ನಿತ್ಯಂ ಮಾಘೇ ತಾವದ್ಧಿ ಯತಲಮ್ ।
ತತಲಂ ಶುಕದೇವೇನ ಸಪ್ತಾಹಶ್ರವಣೇ ಕೃತಮ್ ॥
ಅನುವಾದ
ಶ್ರದ್ಧೆಯಿಂದ ಯಾವಾಗಲೂ ಶ್ರವಣಿಸುವುದರಿಂದ ಅಥವಾ ಮಾಘಮಾಸದಲ್ಲಿ ಶ್ರವಣಿಸುವುದರಿಂದ ಉಂಟಾಗುವ ಫಲವನ್ನು ಶ್ರೀಶುಕದೇವರು ಸಪ್ತಾಹ ಶ್ರವಣದಲ್ಲಿ ನಿರ್ಧರಿಸಿರುವರು. ॥48॥
(ಶ್ಲೋಕ - 49)
ಮೂಲಮ್
ಮನಸಶ್ಚಾಜಯಾದ್ರೋಗಾತ್ಪುಂಸಾಂ ಚೈವಾಯುಷಃ ಕ್ಷಯಾತ್ ।
ಕಲೇರ್ದೋಷಬಹುತ್ವಾಚ್ಚ ಸಪ್ತಾಹಶ್ರವಣಂ ಮತಮ್ ॥
ಅನುವಾದ
ಮನಸ್ಸಿನ ಅಸಂಯಮ, ರೋಗಗಳ ಹೆಚ್ಚಳ, ಆಯುಸ್ಸಿನ ಅಲ್ಪತೆ ಇವುಗಳ ಕಾರಣ ಹಾಗೂ ಕಲಿಯುಗದ ಅನೇಕ ದೋಷಗಳಿಂದಾಗಿಯೇ ಸಪ್ತಾಹ ಶ್ರವಣದ ವಿಧಾನವನ್ನು ಮಾಡಲಾಗಿದೆ. ॥49॥
(ಶ್ಲೋಕ - 50)
ಮೂಲಮ್
ಯತಲಂ ನಾಸ್ತಿ ತಪಸಾ ನ ಯೋಗೇನ ಸಮಾಧಿನಾ ।
ಅನಾಯಾಸೇನ ತತ್ಸರ್ವಂ ಸಪ್ತಾಹಶ್ರವಣೇ ಲಭೇತ್ ॥
ಅನುವಾದ
ತಪಸ್ಸು, ಯೋಗ, ಸಮಾಧಿ ಇವುಗಳಿಂದ ದೊರೆಯದಿರುವ ಫಲವು ಸರ್ವಾಂಗವಾಗಿ ಸಪ್ತಾಹ ಶ್ರವಣದಿಂದ ಸುಲಭವಾಗಿ ದೊರೆಯುತ್ತದೆ. ॥50॥
(ಶ್ಲೋಕ - 51)
ಮೂಲಮ್
ಯಜ್ಞಾದ್ಗರ್ಜತಿ ಸಪ್ತಾಹಃ ಸಪ್ತಾಹೋ ಗರ್ಜತಿ ವ್ರತಾತ್ ।
ತಪಸೋ ಗರ್ಜತಿ ಪ್ರೋಚ್ಚೈಸ್ತೀರ್ಥಾನ್ನಿತ್ಯಂ ಹಿ ಗರ್ಜತಿ ॥
(ಶ್ಲೋಕ - 52)
ಮೂಲಮ್
ಯೋಗಾದ್ಗರ್ಜತಿ ಸಪ್ತಾಹೋ ಧ್ಯಾನಾಜ್ಜ್ಞಾನಾಚ್ಚ ಗರ್ಜತಿ ।
ಕಿಂ ಬ್ರೂಮೋ ಗರ್ಜನಂ ತಸ್ಯ ರೇ ರೇ ಗರ್ಜತಿ ಗರ್ಜತಿ ॥
ಅನುವಾದ
ಸಪ್ತಾಹ ಶ್ರವಣವು ಯಜ್ಞದಿಂದ, ವ್ರತದಿಂದ, ತಪಸ್ಸಿನಿಂದ ಹೆಚ್ಚಿನದಾಗಿದೆ. ತೀರ್ಥ ಸೇವನೆಯಿಂದಲಾದರೋ ಸದಾ ಹೆಚ್ಚಿಗೆಯೇ ಇದೆ. ಯೋಗದಿಂದಲೂ ಮಿಗಿಲಾಗಿದೆ. ಎಲ್ಲಿಯವರೆಗೆಂದರೆ ಧ್ಯಾನ, ಜ್ಞಾನದಿಂದಲೂ ಮಿಗಿಲಾಗಿದೆ. ಅಯ್ಯಾ! ಇದರ ವಿಶೇಷತೆ ಎಲ್ಲಿಯವರೆಗೆ ಹೇಳಲಿ? ಇದಾದರೋ ಎಲ್ಲಕ್ಕಿಂತ ಶ್ರೇಷ್ಠವೇ ಆಗಿದೆ. ॥51-52॥
(ಶ್ಲೋಕ - 53)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಸಾಶ್ಚರ್ಯಮೇತತ್ಕಥಿತಂ ಕಥಾನಕಂ
ಜ್ಞಾನಾದಿಧರ್ಮಾನ್ವಿಗಣಯ್ಯ ಸಾಂಪ್ರತಮ್ ।
ನಿಃಶ್ರೇಯಸೇ ಭಾಗವತಂ ಪುರಾಣಂ
ಜಾತಂ ಕುತೋ ಯೋಗವಿದಾದಿಸೂಚಕಮ್ ॥
ಅನುವಾದ
ಶೌನಕರು ಕೇಳಿದರು — ಸೂತರೇ! ಇದಾದರೋ ನೀವು ತುಂಬಾ ಆಶ್ಚರ್ಯದ ಮಾತನ್ನಾಡಿದಿರಿ. ಅವಶ್ಯವಾಗಿಯೇ ಈ ಭಾಗವತ ಪುರಾಣವು ಯೋಗವೇತ್ತರಾದ ಬ್ರಹ್ಮದೇವರಿಗೂ ಆದಿ ಕಾರಣನಾದ ಶ್ರೀನಾರಾಯಣನನ್ನೇ ನಿರೂಪಿಸುತ್ತದೆ. ಆದರೆ ಇದು ಮೋಕ್ಷದ ಪ್ರಾಪ್ತಿಯಲ್ಲಿ ಜ್ಞಾನಾದಿ ಎಲ್ಲ ಸಾಧನೆಗಳನ್ನು ಹಿಂದಕ್ಕೆ ಹಾಕಿ, ಈ ಯುಗದಲ್ಲಿ ಅದರಿಂದಲೂ ಹೆಚ್ಚು ಹೇಗೆ ಹಿರಿದಾಯಿತು? ॥53॥
(ಶ್ಲೋಕ - 54)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಯದಾ ಕೃಷ್ಣೋ ಧರಾಂ ತ್ಯಕ್ತ್ವಾ ಸ್ವಪದಂ ಗಂತುಮುದ್ಯತಃ ।
ಏಕಾದಶಂ ಪರಿಶ್ರುತ್ಯಾಪ್ಯುದ್ಧವೋ ವಾಕ್ಯಮಬ್ರವೀತ್ ॥
ಅನುವಾದ
ಸೂತಪುರಾಣಿಕರು ಹೇಳಿದರು — ಭಗವಾನ್ ಶ್ರೀಕೃಷ್ಣನು ಈ ಧರಾತಲವನ್ನು ಬಿಟ್ಟು ತನ್ನ ನಿಜಧಾಮಕ್ಕೆ ಹೋಗುವಾಗ ಅವನ ಮುಖಾರವಿಂದದಿಂದ ಏಕಾದಶ ಸ್ಕಂಧದ ಜ್ಞಾನೋಪದೇಶವನ್ನು ಕೇಳಿದ ಉದ್ಧವನೂ ಇದನ್ನೇ ಕೇಳಿದ್ದನು. ॥54॥
(ಶ್ಲೋಕ - 55)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ತ್ವಂ ತು ಯಾಸ್ಯಸಿ ಗೋವಿಂದ ಭಕ್ತಕಾರ್ಯಂ ವಿಧಾಯ ಚ ।
ಮಚ್ಚಿತ್ತೇ ಮಹತೀ ಚಿಂತಾ ತಾಂ ಶ್ರುತ್ವಾ ಸುಖಮಾವಹ ॥
ಅನುವಾದ
ಉದ್ಧವನೆಂದನು — ಗೋವಿಂದಾ! ಈಗ ನೀನು ಭಕ್ತರ ಕಾರ್ಯಗಳನ್ನು ಮಾಡಿ ಪರಮಧಾಮಕ್ಕೆ ತೆರಳಲು ಬಯಸುತ್ತಿರುವಿ. ಆದರೆ ನನ್ನ ಮನಸ್ಸಿನಲ್ಲಿ ಒಂದು ಹಿರಿದಾದ ಚಿಂತೆ ಇದೆ. ಅದನ್ನು ಕೇಳಿ ನೀನು ನನ್ನನ್ನು ಶಾಂತಗೊಳಿಸು. ॥55॥
(ಶ್ಲೋಕ - 56)
ಮೂಲಮ್
ಆಗತೋಽಯಂ ಕಲಿರ್ಘೋರೋ ಭವಿಷ್ಯಂತಿ ಪುನಃ ಖಲಾಃ ।
ತತ್ಸಂಗೇನೈವ ಸಂತೋಽಪಿ ಗಮಿಷ್ಯಂತ್ಯುಗ್ರತಾಂ ಯದಾ ॥
(ಶ್ಲೋಕ - 57)
ಮೂಲಮ್
ತದಾ ಭಾರವತೀ ಭೂಮಿರ್ಗೋರೂಪೇಯಂ ಕಮಾಶ್ರಯೇತ್ ।
ಅನ್ಯೋ ನ ದೃಶ್ಯತೇ ತ್ರಾತಾ ತ್ವತ್ತಃ ಕಮಲಲೋಚನ ॥
ಅನುವಾದ
ಈಗ ಘೋರ ಕಲಿಕಾಲವು ಬಂದಿತೆಂದೇ ತಿಳಿ. ಅದರಿಂದ ಪ್ರಪಂಚದಲ್ಲಿ ಪುನಃ ಅನೇಕ ದುಷ್ಟರು ಪ್ರಕಟರಾಗುವರು. ಅವರ ಸಂಸರ್ಗದಿಂದ ಅನೇಕ ಸತ್ಪುರುಷರು ಉಗ್ರ ಪ್ರಕೃತಿಯವರಾದಾಗ, ಅವರ ಭಾರದಿಂದ ಕಂಗೆಟ್ಟ ಈ ಗೋರೂಪೀ ಪೃಥ್ವಿಯು ಯಾರಿಗೆ ಶರಣು ಹೋಗಬೇಕು? ಕಮಲನಯನಾ! ನನಗಾದರೋ ನಿನ್ನನ್ನು ಬಿಟ್ಟು ಇದನ್ನು ರಕ್ಷಿಸುವವರು ಬೇರೆ ಯಾರೂ ಕಾಣುವುದಿಲ್ಲ. ॥56-57॥
(ಶ್ಲೋಕ - 58)
ಮೂಲಮ್
ಅತಃ ಸತ್ಸು ದಯಾಂ ಕೃತ್ವಾ ಭಕ್ತವತ್ಸಲ ಮಾ ವ್ರಜ ।
ಭಕ್ತಾರ್ಥಂ ಸಗುಣೋ ಜಾತೋ ನಿರಾಕಾರೋಽಪಿ ಚಿನ್ಮಯಃ ॥
ಅನುವಾದ
ಅದಕ್ಕಾಗಿ ಓ ಭಕ್ತವತ್ಸಲಾ! ನೀನು ಸಾಧುಗಳ ಮೇಲೆ ಕೃಪೆಮಾಡಿ ಇಲ್ಲಿಂದ ಹೋಗ ಬೇಡ. ಭಗವಂತಾ! ನೀನು ನಿರಾಕಾರ, ಚಿನ್ಮಾತ್ರನಾಗಿದ್ದರೂ ಕೂಡ ಭಕ್ತರಿಗಾಗಿಯೇ ಈ ಸಗುಣ ರೂಪವನ್ನು ಧರಿಸಿರುವೆ. ॥58॥
(ಶ್ಲೋಕ - 59)
ಮೂಲಮ್
ತ್ವದ್ವಿಯೋಗೇನ ತೇ ಭಕ್ತಾಃ ಕಥಂ ಸ್ಥಾಸ್ಯಂತಿ ಭೂತಲೇ ।
ನಿರ್ಗುಣೋಪಾಸನೇ ಕಷ್ಟಮತಃ ಕಿಂಚಿದ್ವಿಚಾರಯ ॥
ಅನುವಾದ
ಮತ್ತೆ ನಿನ್ನ ವಿಯೋಗವಾದಾಗ ಆ ಭಕ್ತರು ಭೂಮಿಯಲ್ಲಿ ಹೇಗೆ ಇರಬಲ್ಲರು? ನಿರ್ಗುಣೋ ಪಾಸನೆಯಲ್ಲಾದರೋ ತುಂಬಾ ಕಠಿಣತೆ ಇದೆ. ಅದಕ್ಕಾಗಿ ಏನಾದರು ಬೇರೆ ಉಪಾಯ ಮಾಡು. ॥59॥
(ಶ್ಲೋಕ - 60)
ಮೂಲಮ್
ಇತ್ಯುದ್ಧವವಚಃ ಶ್ರುತ್ವಾ ಪ್ರಭಾಸೇಽಚಿಂತಯದ್ಧರಿಃ ।
ಭಕ್ತಾವಲಂಬನಾರ್ಥಾಯ ಕಿಂ ವಿಧೇಯಂ ಮಯೇತಿ ಚ ॥
ಅನುವಾದ
ಪ್ರಭಾಸ ಕ್ಷೇತ್ರದಲ್ಲಿ ಉದ್ಧವನ ಈ ಮಾತನ್ನು ಕೇಳಿ ಭಗವಂತನು ‘ಭಕ್ತರ ಆಲಂಬನೆಗಾಗಿ ನಾನು ಯಾವ ವ್ಯವಸ್ಥೆ ಮಾಡಲೀ’ ಎಂದು ಯೋಚಿಸತೊಡಗಿದನು. ॥60॥
(ಶ್ಲೋಕ - 61)
ಮೂಲಮ್
ಸ್ವಕೀಯಂ ಯದ್ಭವೇತ್ತೇಜಸ್ತಚ್ಚ ಭಾಗವತೇಽದಧಾತ್ ।
ತಿರೋಧಾಯ ಪ್ರವಿಷ್ಟೋಽಯಂ ಶ್ರೀಮದ್ಭಾಗವತಾರ್ಣವಮ್ ॥
ಅನುವಾದ
ಶೌನಕರೇ! ಆಗ ಭಗವಂತನು ತನ್ನ ಎಲ್ಲ ಶಕ್ತಿ ಯನ್ನು ಭಾಗವತದಲ್ಲಿ ಇರಿಸಿದನು. ಅವನು ಅಂತರ್ಧಾನನಾಗಿ ಈ ಭಾಗವತ ಸಮುದ್ರದಲ್ಲಿ ಪ್ರವೇಶಿಸಿದನು. ॥61॥
(ಶ್ಲೋಕ - 62)
ಮೂಲಮ್
ತೇನೇಯಂ ವಾಙ್ಮಯೀ ಮೂರ್ತಿಃ ಪ್ರತ್ಯಕ್ಷಾ ವರ್ತತೇ ಹರೇಃ ।
ಸೇವನಾಚ್ಛ್ರವಣಾತ್ಪಾಠಾದ್ದರ್ಶನಾತ್ಪಾಪನಾಶಿನೀ ॥
ಅನುವಾದ
ಅದರಿಂದ ಇದು ಭಗವಂತನ ಸಾಕ್ಷಾತ್ ಶಬ್ದಮಯ ಮೂರ್ತಿ ಯಾಗಿದೆ. ಇದರ ಸೇವನೆಯಿಂದ, ಶ್ರವಣ, ಪಾರಾಯಣದಿಂದ, ಅಥವಾ ದರ್ಶನದಿಂದಲೇ ಮನುಷ್ಯನ ಪಾಪಗಳೆಲ್ಲವೂ ನಾಶವಾಗಿ ಹೋಗುತ್ತವೆ. ॥62॥
(ಶ್ಲೋಕ - 63)
ಮೂಲಮ್
ಸಪ್ತಾಹಶ್ರವಣಂ ತೇನ ಸರ್ವೇಭ್ಯೋಽಪ್ಯಧಿಕಂ ಕೃತಮ್ ।
ಸಾಧನಾನಿ ತಿರಸ್ಕೃತ್ಯ ಕಲೌ ಧರ್ಮೋಽಯಮೀರಿತಃ ॥
ಅನುವಾದ
ಇದರಿಂದಲೇ ಇದರ ಸಪ್ತಾಹಶ್ರವಣವು ಎಲ್ಲಕ್ಕಿಂತ ಹಿರಿದೆಂದು ತಿಳಿಯಲಾಗಿದೆ. ಕಲಿಯುಗದಲ್ಲಾದರೋ ಬೇರೆ ಎಲ್ಲ ಸಾಧನೆಗಳನ್ನು ಬಿಟ್ಟು ಇದೇ ಪ್ರಧಾನ ಧರ್ಮವೆಂದು ಹೇಳಲಾಗಿದೆ. ॥63॥
(ಶ್ಲೋಕ - 64)
ಮೂಲಮ್
ದುಃಖದಾರಿದ್ರ್ಯದೌರ್ಭಾಗ್ಯಪಾಪಪ್ರಕ್ಷಾಲನಾಯ ಚ ।
ಕಾಮಕ್ರೋಧಜಯಾರ್ಥಂ ಹಿ ಕಲೌ ಧರ್ಮೋಽಯಮೀರಿತಃ ॥
ಅನುವಾದ
ಕಲಿಯುಗದಲ್ಲಿ ದುಃಖ, ದಾರಿದ್ರ್ಯ, ದುರ್ಭಾಗ್ಯ ಮತ್ತು ಪಾಪಗಳನ್ನು ಇಲ್ಲವಾಗಿಸುವ, ಕಾಮ ಕ್ರೋಧಾದಿ ಶತ್ರುಗಳ ಮೇಲೆ ವಿಜಯ ಸಾಧಿಸುವಂತಹ ಧರ್ಮವು ಇದೊಂದೇ ಆಗಿದೆ. ॥64॥
(ಶ್ಲೋಕ - 65)
ಮೂಲಮ್
ಅನ್ಯಥಾ ವೈಷ್ಣವೀ ಮಾಯಾ ದೇವೈರಪಿ ಸುದುಸ್ತ್ಯಜಾ ।
ಕಥಂ ತ್ಯಾಜ್ಯಾ ಭವೇತ್ಪುಂಭಿಃ ಸಪ್ತಾಹೋಽತಃ ಪ್ರಕೀರ್ತಿತಃ ॥
ಅನುವಾದ
ಇದಲ್ಲದೆ ಭಗವಂತನ ಈ ವಿಷ್ಣು ಮಾಯೆಯಿಂದ ಬಿಡಿಸಿಕೊಳ್ಳುವುದು ದೇವತೆಗಳಿಗೂ ಕಠಿಣವಾಗಿದೆ. ಮನುಷ್ಯನಾದರೋ ಇದರಿಂದ ಹೇಗೆ ಪಾರಾಗಬಲ್ಲನು? ಆದ್ದರಿಂದ ಮಾಯೆಯಿಂದ ಬಿಡುಗಡೆ ಹೊಂದಲು ಸಪ್ತಾಹ ಶ್ರವಣದ ವಿಧಾನ ಮಾಡಲಾಗಿದೆ. ॥65॥
(ಶ್ಲೋಕ - 66)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಏವಂ ನಗಾಹಶ್ರವಣೋರುಧರ್ಮೇ
ಪ್ರಕಾಶ್ಯಮಾನೇ ಋಷಿಭಿಃ ಸಭಾಯಾಮ್ ।
ಆಶ್ಚರ್ಯಮೇಕಂ ಸಮಭೂತ್ತದಾನೀಂ
ತದುಚ್ಯತೇ ಸಂಶೃಣು ಶೌನಕ ತ್ವಮ್ ॥
ಅನುವಾದ
ಸೂತರು ಹೇಳುತ್ತಾರೆ — ಶೌನಕರೇ! ಸನಕಾದಿ ಮುನೀಶ್ವರರು ಹೀಗೆ ಸಪ್ತಾಹಶ್ರವಣದ ಮಹಿಮೆಯನ್ನು ಹೊಗಳುತ್ತಿದ್ದಾಗ ಆ ಸಭೆಯಲ್ಲಿ ಒಂದು ಬಹುದೊಡ್ಡ ಆಶ್ಚರ್ಯ ನಡೆಯಿತು. ಅದನ್ನು ನಿನಗೆ ಹೇಳುತ್ತೇನೆ ಕೇಳಿರಿ. ॥66॥
(ಶ್ಲೋಕ - 67)
ಮೂಲಮ್
ಭಕ್ತಿಃ ಸುತೌ ತೌ ತರುಣೌ ಗೃಹಿತ್ವಾ
ಪ್ರೇಮೈಕರೂಪಾ ಸಹಸಾಽಽವಿರಾಸೀತ್ ।
ಶ್ರೀಕೃಷ್ಣ ಗೋವಿಂದ ಹರೇ ಮುರಾರೇ
ನಾಥೇತಿ ನಾಮಾನಿ ಮುಹುರ್ವದಂತೀ ॥
ಅನುವಾದ
ಅಲ್ಲಿ ತರುಣಾವಸ್ಥೆಯನ್ನು ಹೊಂದಿದ ತನ್ನ ಇಬ್ಬರೂ ಪುತ್ರರೊಂದಿಗೆ ವಿಶುದ್ಧ ಪ್ರೇಮರೂಪೀ ಭಕ್ತಿಯು ಪದೇ-ಪದೇ ‘ಶ್ರೀಕೃಷ್ಣ! ಗೋವಿಂದ! ಹರೇ! ಮುರಾರೇ! ಹೇನಾಥ! ನಾರಾಯಣ! ವಾಸುದೇವ! ಮುಂತಾದ ಭಗವನ್ನಾಮಗಳನ್ನು ಉಚ್ಚರಿಸುತ್ತಾ ಅಕಸ್ಮಾತ್ ಪ್ರಕಟಳಾದಳು. ॥67॥
(ಶ್ಲೋಕ - 68)
ಮೂಲಮ್
ತಾಂ ಚಾಗತಾಂ ಭಾಗವತಾರ್ಥಭೂಷಾಂ
ಸುಚಾರುವೇಷಾಂ ದದೃಶುಃ ಸದಸ್ಯಾಃ ।
ಕಥಂ ಪ್ರವಿಷ್ಟಾ ಕಥಮಾಗತೇಯಂ
ಮಧ್ಯೇ ಮುನೀನಾಮಿತಿ ತರ್ಕಯಂತಃ ॥
ಅನುವಾದ
ಪರಮ ಸುಂದರಿಯಾದ ಭಕ್ತಿಯು ಭಾಗವತದ ಅರ್ಥಗಳನ್ನು ಆಭೂಷಣಗಳನ್ನಾಗಿ ತೊಟ್ಟು ಅಲ್ಲಿಗೆ ಬಂದಿರುವುದನ್ನು ಸದಸ್ಯರೆಲ್ಲರೂ ನೋಡಿದರು. ಮುನಿಗಳ ಆ ಸಭೆಯಲ್ಲಿ ಇವಳು ಇಲ್ಲಿಗೆ ಹೇಗೆ ಬಂದಳು? ಹೇಗೆ ಪ್ರವಿಷ್ಟಳಾದಳು? ಎಂದು ತರ್ಕವಿತರ್ಕಗಳನ್ನು ಮಾಡತೊಡಗಿದರು. ॥68॥
(ಶ್ಲೋಕ - 69)
ಮೂಲಮ್
ಊಚುಃ ಕುಮಾರಾ ವಚನಂ ತದಾನೀಂ
ಕಥಾರ್ಥತೋ ನಿಷ್ಪತಿತಾಧುನೇಯಮ್
ಏವಂ ಗಿರಃ ಸಾ ಸಸುತಾ ನಿಶಮ್ಯ
ಸನತ್ಕುಮಾರಂ ನಿಜಗಾದ ನಮ್ರಾ ॥
ಅನುವಾದ
ಆಗ ಸನಕಾದಿಗಳು ಹೇಳಿದರು ‘ಈ ಭಕ್ತಿದೇವಿಯು ಈಗಲೇ ಕಥೆಯ ಅರ್ಥದಿಂದ ಮೂಡಿರುವಳು’ ಅವರ ಈ ವಚನಗಳನ್ನು ಕೇಳಿ ಭಕ್ತಿಯು ತನ್ನ ಪುತ್ರರೊಂದಿಗೆ ಅತ್ಯಂತ ವಿನಮ್ರಳಾಗಿ ಸನತ್ಕುಮಾರರಲ್ಲಿ ಹೇಳಿದಳು. ॥69॥
(ಶ್ಲೋಕ - 70)
ಮೂಲಮ್ (ವಾಚನಮ್)
ಭಕ್ತಿರುವಾಚ
ಮೂಲಮ್
ಭವದ್ಭಿರದ್ಯೈವ ಕೃತಾಸ್ಮಿ ಪುಷ್ಟಾ
ಕಲಿಪ್ರಣಷ್ಟಾಪಿ ಕಥಾರಸೇನ ।
ಕ್ವಾಹಂ ತು ತಿಷ್ಠಾಮ್ಯಧುನಾ ಬ್ರುವಂತು
ಬ್ರಾಹ್ಮಾ ಇದಂ ತಾಂ ಗಿರಮೂಚಿರೇ ತೇ ॥
ಅನುವಾದ
ಭಗವದ್ಭಕ್ತಿಯು ಹೇಳಿದಳು — ನಾನು ಕಲಿಯುಗದಲ್ಲಿ ನಷ್ಟಪ್ರಾಯಳಾಗಿದ್ದೆ. ತಾವು ಕಥಾಮೃತವನ್ನು ಸಿಂಪಡಿಸಿ ನನ್ನನ್ನು ಪುನಃ ಪುಷ್ಟಿಗೊಳಿಸಿರುವಿರಿ. ‘ಈಗ ನಾನು ಎಲ್ಲಿರಲಿ’ ಎಂಬುದನ್ನು ತಾವು ತಿಳಿಸಿರಿ. ಇದನ್ನು ಕೇಳಿ ಸನಕಾದಿಗಳು ಅವಳಲ್ಲಿ ಹೇಳಿದರು ॥70॥
(ಶ್ಲೋಕ - 71)
ಮೂಲಮ್
ಭಕ್ತೇಷು ಗೋವಿಂದ ಸ್ವರೂಪಕರ್ತ್ರೀ
ಪ್ರೇಮೈಕಧರ್ತ್ರೀ ಭವರೋಗಹನ್ತ್ರೀ ।
ಸಾ ತ್ವಂ ಚ ತಿಷ್ಠ ಸ್ವ ಸುಧೈರ್ಯಸಂಶ್ರಯಾ
ನಿರಂತರಂ ವೈಷ್ಣವಮಾನಸಾನ್ತ್ರೀ ॥
ಅನುವಾದ
‘ನೀನು ಭಕ್ತರಿಗೆ ಭಗವಂತನ ಸ್ವರೂಪವನ್ನು ಕರುಣಿಸುವವಳೂ, ಅನನ್ಯ ಪ್ರೇಮವನ್ನು ಸಂಪಾದಿಸಿ ಕೊಡುವವಳೂ, ಸಂಸಾರ ರೋಗವನ್ನು ನಿರ್ಮೂಲನ ಮಾಡುವವಳೂ ಆಗಿರುವೆ. ಆದ್ದರಿಂದ ಧೈರ್ಯವಹಿಸಿ ನೀನು ನಿತ್ಯ-ನಿರಂತರ ವಿಷ್ಣು ಭಕ್ತರ ಹೃದಯಲ್ಲೇವಾಸಿಸು. ॥71॥
(ಶ್ಲೋಕ - 72)
ಮೂಲಮ್
ತತೋಽಪಿ ದೋಷಾಃ ಕಲಿಜಾ ಇಮೇ ತ್ವಾಂ
ದ್ರಷ್ಟುಂ ನ ಶಕ್ತಾಃ ಪ್ರಭವೋಽಪಿ ಲೋಕೇ ।
ಏವಂ ತದಾಜ್ಞಾವಸರೇಽಪಿ ಭಕ್ತಿ-
ಸ್ತದಾ ನಿಷಣ್ಣಾ ಹರಿದಾಸಚಿತ್ತೇ ॥
ಅನುವಾದ
ಇಡೀ ಜಗತ್ತಿನಲ್ಲಿ ಕಲಿಯುಗದ ದೋಷಗಳು ಎಷ್ಟೇ ಪ್ರಭಾವ ಬೀರಲಿ, ಆದರೆ ಅಲ್ಲಿ ಇವುಗಳ ದೃಷ್ಟಿಯು ನಿನ್ನ ಮೇಲೆ ಬೀಳಲಾರದು’ ಹೀಗೆ ಅವರ ಅಪ್ಪಣೆ ಪಡೆಯುತ್ತಲೇ ಭಕ್ತಿಯೂ ಕೂಡಲೇ ಭಗವದ್ಭಕ್ತರ ಹೃದಯಗಳಲ್ಲಿ ವಿರಾಜಮಾನಳಾದಳು. ॥72॥
(ಶ್ಲೋಕ - 73)
ಮೂಲಮ್
ಸಕಲಭುವನಮಧ್ಯೇ ನಿರ್ಧನಾಸ್ತೇಽಪಿ ಧನ್ಯಾ
ನಿವಸತಿ ಹೃದಿ ಯೇಷಾಂ ಶ್ರೀಹರೇರ್ಭಕ್ತಿರೇಕಾ ।
ಹರಿರಪಿ ನಿಜಲೋಕಂ ಸರ್ವಥಾತೋ ವಿಹಾಯ
ಪ್ರವಿಶತಿ ಹೃದಿ ತೇಷಾಂ ಭಕ್ತಿಸೂತ್ರೋಪನದ್ಧಃ ॥
ಅನುವಾದ
ಹೃದಯದಲ್ಲಿ ಏಕಮಾತ್ರ ಶ್ರೀಹರಿಯ ಭಕ್ತಿಯು ವಾಸಿಸುವವರು ಮೂರು ಲೋಕಗಳಲ್ಲಿ ನಿರ್ಧನರಾಗಿದ್ದರೂ ಪರಮ ಧನ್ಯರಾಗಿದ್ದಾರೆ. ಏಕೆಂದರೆ, ಈ ಭಕ್ತಿಯೆಂಬ ಹಗ್ಗದಿಂದ ಬಂಧಿತನಾಗಿ ಸಾಕ್ಷಾತ್ ಭಗವಂತನು ತನ್ನ ಪರಮ ಧಾಮ ವೈಕುಂಠವನ್ನು ಬಿಟ್ಟು ಬಂದು ಅವರ ಹೃದಯದಲ್ಲಿ ನೆಲೆ ನಿಲ್ಲುತ್ತಾನೆ. ॥73॥
(ಶ್ಲೋಕ - 74)
ಮೂಲಮ್
ಬ್ರೂಮೋಽದ್ಯ ತೇ ಕಿಮಧಿಕಂ ಟಮಹಿಮಾನಮೇವಂ
ಬ್ರಹ್ಮಾತ್ಮಕಸ್ಯ ಭುವಿ ಭಾಗವತಾಭಿಧಸ್ಯ ।
ಯತ್ಸಂಶ್ರಯಾನ್ನಿಗದಿತೇ ಲಭತೇ ಸುವಕ್ತಾ
ಶ್ರೋತಾಪಿ ಕೃಷ್ಣ ಸಮತಾಮಲಮನ್ಯಧರ್ಮೈಃ ॥
ಅನುವಾದ
ಭೂಲೋಕದಲ್ಲಿ ಈ ಭಾಗವತವು ಸಾಕ್ಷಾತ್ ಪರಬ್ರಹ್ಮನ ವಿಗ್ರಹವಾಗಿದೆ. ನಾವು ಇದರ ಮಹಿಮೆಯನ್ನು ಎಷ್ಟೊಂದು ಹೇಳಲಿ? ಇದರ ಆಶ್ರಯ ಪಡೆದು ಇದನ್ನು ಹೇಳುವುದರಿಂದ ಕೇಳುವವರು ಮತ್ತು ಹೇಳುವವರಿಬ್ಬರಿಗೂ ಭಗವಾನ್ ಶ್ರೀಕೃಷ್ಣನ ಸಾರೂಪ್ಯ ಪ್ರಾಪ್ತಿಯಾಗುತ್ತದೆ. ಆದ್ದರಿಂದ ಇದನ್ನು ಬಿಟ್ಟು ಬೇರೆ ಧರ್ಮಗಳಿಂದ ಏನು ಪ್ರಯೋಜನವಿದೆ? ॥74॥
ಅನುವಾದ (ಸಮಾಪ್ತಿಃ)
ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಭಕ್ತಿಕಷ್ಟನಿವರ್ತನಂ ನಾಮ ತೃತೀಯೋಽಧ್ಯಾಯಃ.॥3॥