[ಎರಡನೆಯ ಅಧ್ಯಾಯ]
ಭಾಗಸೂಚನಾ
ಭಕ್ತಿದೇವಿಯ ದುಃಖವನ್ನು ದೂರಗೊಳಿಸಲು ನಾರದರ ಪ್ರಯತ್ನ
(ಶ್ಲೋಕ - 1)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ವೃಥಾ ಖೇದಯಸೇ ಬಾಲೇ ಅಹೋ ಚಿಂತಾತುರಾ ಕಥಮ್ ।
ಶ್ರೀಕೃಷ್ಣಚರಣಾಂಭೋಜಂ ಸ್ಮರ ದುಃಖಂ ಗಮಿಷ್ಯತಿ ॥
ಅನುವಾದ
ನಾರದರು ಹೇಳುತ್ತಾರೆ — ಎಲೈ ಭಕ್ತಿಯೇ! ನೀನು ವ್ಯರ್ಥವಾಗಿ ಏಕೆ ದುಃಖಿಸುತ್ತಿರುವೆ? ನೀನು ಇಷ್ಟು ಚಿಂತಾತುರ ಏಕೆ ಆಗಿರುವೆ? ಭಗವಾನ್ ಶ್ರೀಕೃಷ್ಣನ ಚರಣ ಕಮಲಗಳನ್ನು ಚಿಂತಿಸು. ಅವನ ಕೃಪೆಯಿಂದ ನಿನ್ನ ದುಃಖವೆಲ್ಲವೂ ದೂರವಾದೀತು. ॥1॥
(ಶ್ಲೋಕ - 2)
ಮೂಲಮ್
ದ್ರೌಪದೀ ಚ ಪರಿತ್ರಾತಾ ಯೇನ ಕೌರವಕಶ್ಮಲಾತ್ ।
ಪಾಲಿತಾ ಗೋಪಸುಂದರ್ಯಃ ಸ ಕೃಷ್ಣಃ ಕ್ವಾಪಿ ನೋ ಗತಃ ॥
ಅನುವಾದ
ಆ ಕೃಷ್ಣನು ಕೌರವರ ಅತ್ಯಾಚಾರದಿಂದ ದ್ರೌಪದಿಯನ್ನು ರಕ್ಷಿಸಿದ್ದನು. ಗೋಪ ಸುಂದರಿಯರನ್ನು ಸನಾಥಗೊಳಿಸಿದ್ದನು. ಅವನು ದೂರ ಎಲ್ಲಿಗಾದರೂ ಹೋಗಿರುವನೇನು? ॥2॥
(ಶ್ಲೋಕ - 3)
ಮೂಲಮ್
ತ್ವಂ ತು ಭಕ್ತಿಃ ಪ್ರಿಯಾ ತಸ್ಯ ಸತತಂ ಪ್ರಾಣತೋಽಧಿಕಾ ।
ತ್ವಯಾಹೂತಸ್ತು ಭಗವಾನ್ ಯಾತಿ ನೀಚಗೃಹೇಷ್ವಪಿ ॥
ಅನುವಾದ
ಅದರಲ್ಲಿಯೂ ನೀನು ಭಕ್ತಿಯಾಗಿರುವೆ ಹಾಗೂ ಯಾವಾಗಲೂ ಅವನಿಗೆ ಪ್ರಾಣಕ್ಕಿಂತಲೂ ಹೆಚ್ಚು ಪ್ರಿಯಳಾಗಿರುವೆ. ನೀನು ಕರೆದಾಗಲಾದರೋ ಭಗವಂತನು ನೀಚರ ಮನೆಗಳಿಗೂ ಹೊರಟು ಹೋಗುತ್ತಾನೆ.॥3॥
(ಶ್ಲೋಕ - 4)
ಮೂಲಮ್
ಸತ್ಯಾದಿತ್ರಿಯುಗೇ ಬೋಧವೈರಾಗ್ಯೌ ಮುಕ್ತಿಸಾಧಕೌ ।
ಕಲೌ ತು ಕೇವಲಾ ಭಕ್ತಿರ್ಬ್ರಹ್ಮ ಸಾಯುಜ್ಯಕಾರಿಣೀ ॥
ಅನುವಾದ
ಕೃತ, ತ್ರೇತಾ, ದ್ವಾಪರ ಈ ಮೂರು ಯುಗಗಳಲ್ಲಿ ಜ್ಞಾನ, ವೈರಾಗ್ಯಗಳು ಮುಕ್ತಿಯ ಸಾಧನೆಗಳಾಗಿದ್ದವು. ಆದರೆ ಕಲಿಯುಗದಲ್ಲಾದರೋ ಕೇವಲ ಭಕ್ತಿಯೇ ಬ್ರಹ್ಮಸಾಯುಜ್ಯ (ಮೋಕ್ಷ)ವನ್ನು ಕರುಣಿಸುವಂತಹುದಾಗಿದೆ. ॥4॥
(ಶ್ಲೋಕ - 5)
ಮೂಲಮ್
ಇತಿ ನಿಶ್ಚಿತ್ಯ ಚಿದ್ರೂಪಃ ಸದ್ರೂಪಾಂ ತ್ವಾಂ ಸಸರ್ಜ ಹ ।
ಪರಮಾನಂದಚಿನ್ಮೂರ್ತಿಃ ಸುಂದರೀಂ ಕೃಷ್ಣವಲ್ಲಭಾಮ್ ॥
ಅನುವಾದ
ಇದನ್ನು ಯೋಚಿಸಿಯೇ ಪರಮಾನಂದ ಚಿನ್ಮೂರ್ತಿ ಜ್ಞಾನಸ್ವರೂಪ ಶ್ರೀಹರಿಯು ತನ್ನ ಸತ್ಸ್ವರೂಪದಿಂದಲೇ ನಿನ್ನನ್ನು ರಚಿಸಿರುವನು. ನೀನು ಸಾಕ್ಷಾತ್ ಶ್ರೀಕೃಷ್ಣಚಂದ್ರನ ಪ್ರಿಯೆಯಾಗಿದ್ದು, ಪರಮ ಸುಂದರಳಾಗಿರುವೆ. ॥5॥
(ಶ್ಲೋಕ - 6)
ಮೂಲಮ್
ಬದ್ಧ್ವಾಂಜಲಿಂ ತ್ವಯಾ ಪೃಷ್ಟಂ ಕಿಂ ಕರೋಮೀತಿ ಚೈಕದಾ ।
ತ್ವಾಂ ತದಾಽಽಜ್ಞಾಪಯತ್ಕೃಷ್ಣೋ ಮದ್ಭಕ್ತಾನ್ ಪೋಷಯೇತಿ ಚ ॥
ಅನುವಾದ
ಒಮ್ಮೆ ನೀನು ಭಗವಂತನಲ್ಲಿ ‘ನಾನೇನು ಮಾಡಲೀ’ ಎಂದು ಕೈಜೋಡಿಸಿಕೊಂಡು ಕೇಳಿದಾಗ, ಅವನು ‘ನನ್ನ ಭಕ್ತರನ್ನು ಪೋಷಿಸು’ ಎಂದು ನಿನಗೆ ಆಜ್ಞಾಪಿಸಿದ್ದನು. ॥6॥
(ಶ್ಲೋಕ - 7)
ಮೂಲಮ್
ಅಂಗೀಕೃತಂ ತ್ವಯಾ ತದ್ವೈ ಪ್ರಸನ್ನೋಽಭೂದ್ಧರಿಸ್ತದಾ ।
ಮುಕ್ತಿಂ ದಾಸೀಂ ದದೌ ತುಭ್ಯಂ ಜ್ಞಾನವೈರಾಗ್ಯಕಾವಿವೌ ॥
ಅನುವಾದ
ನೀನು ಭಗವಂತನ ಆ ಆಜ್ಞೆಯನ್ನು ಸ್ವೀಕರಿಸಿದ್ದರಿಂದ ನಿನ್ನ ಮೇಲೆ ಶ್ರೀಹರಿಯು ಬಹುವಾಗಿ ಪ್ರಸನ್ನನಾಗಿ, ನಿನ್ನ ಸೇವೆಗಾಗಿ ಮುಕ್ತಿಯನ್ನು ನಿನಗೆ ದಾಸಿಯಾಗಿ ಒಪ್ಪಿಸಿದ್ದನು ಮತ್ತು ಈ ಜ್ಞಾನ, ವೈರಾಗ್ಯರನ್ನೂ ಪುತ್ರರಾಗಿ ಕರುಣಿಸಿದ್ದನು. ॥7॥
(ಶ್ಲೋಕ - 8)
ಮೂಲಮ್
ಪೋಷಣಂ ಸ್ವೇನ ರೂಪೇಣ ವೈಕುಂಠೇ ತ್ವಂ ಕರೋಷಿ ಚ ।
ಭೂಮೌ ಭಕ್ತವಿಪೋಷಾಯ ಛಾಯಾರೂಪಂ ತ್ವಯಾ ಕೃತಮ್ ॥
ಅನುವಾದ
ನೀನು ನಿನ್ನ ಸಾಕ್ಷಾತ್ ಸ್ವರೂಪದಿಂದ ವೈಕುಂಠಧಾಮದಲ್ಲಿಯೇ ಭಕ್ತರನ್ನು ಪೋಷಿಸುತ್ತಿರುವೆ. ಭೂಲೋಕದಲ್ಲಾದರೋ ನೀನು ಅವರ ಪುಷ್ಟಿಗಾಗಿ ಕೇವಲ ಛಾಯಾರೂಪವನ್ನು ಧರಿಸಿರುವೆ. ॥8॥
(ಶ್ಲೋಕ - 9)
ಮೂಲಮ್
ಮುಕ್ತಿಂ ಜ್ಞಾನಂ ವಿರಕ್ತಿಂ ಚ ಸಹ ಕೃತ್ವಾ ಗತಾ ಭುವಿ ।
ಕೃತಾದಿದ್ವಾಪರಸ್ಯಾಂತಂ ಮಹಾನಂದೇನ ಸಂಸ್ಥಿತಾ ॥
ಅನುವಾದ
ಆಗ ನೀನು ಮುಕ್ತಿ, ಜ್ಞಾನ, ವೈರಾಗ್ಯ ಇವರೊಂದಿಗೆ ಭೂಲೋಕಕ್ಕೆ ಬಂದೆ ಹಾಗೂ ಕೃತಯುಗದಿಂದ ದ್ವಾಪರದವರೆಗೆ ಬಹಳ ಆನಂದದಿಂದವಾಸಿಸಿದೆ. ॥9॥
(ಶ್ಲೋಕ - 10)
ಮೂಲಮ್
ಕಲೌ ಮುಕ್ತಿಃ ಕ್ಷಯಂ ಪ್ರಾಪ್ತಾ ಪಾಖಂಡಾಮಯಪೀಡಿತಾ ।
ತ್ವದಾಜ್ಞಯಾ ಗತಾ ಶೀಘ್ರಂ ವೈಕುಂಠಂ ಪುನರೇವ ಸಾ ॥
ಅನುವಾದ
ಕಲಿಯುಗದಲ್ಲಿ ನಿನ್ನ ದಾಸಿಯಾದ ಮುಕ್ತಿಯು ಪಾಖಂಡರೂಪೀ ರೋಗದಿಂದ ಪೀಡಿತಳಾಗಿ ಕ್ಷೀಣವಾಗತೊಡಗಿದ್ದಳು. ಇದರಿಂದ ಅವಳಾದರೋ ಕೂಡಲೇ ನಿನ್ನ ಅಪ್ಪಣೆಯಂತೆ ವೈಕುಂಠಲೋಕಕ್ಕೆ ಹೊರಟು ಹೋದಳು. ॥10॥
(ಶ್ಲೋಕ - 11)
ಮೂಲಮ್
ಸ್ಮೃತಾ ತ್ವಯಾಪಿ ಚಾತ್ರೈವ ಮುಕ್ತಿರಾಯಾತಿ ಯಾತಿ ಚ ।
ಪುತ್ರೀಕೃತ್ಯ ತ್ವಯೇಮೌ ಚ ಪಾರ್ಶ್ವೇ ಸ್ವಸ್ಯೈವ ರಕ್ಷಿತೌ ॥
ಅನುವಾದ
ಈ ಲೋಕದಲ್ಲಿಯೂ ನೀನು ನೆನೆದಾಗಲೇ ಅವಳು ಬರುತ್ತಾಳೆ, ಮತ್ತೆ ಪುನಃ ಹೊರಟುಹೋಗುತ್ತಾಳೆ. ಆದರೆ ಈ ಜ್ಞಾನ ವೈರಾಗ್ಯರನ್ನು ನೀನು ಪುತ್ರರೆಂದು ಬಗೆದು ನಿನ್ನ ಬಳಿಯಲ್ಲೇ ಇರಿಸಿಕೊಂಡಿರುವೆ. ॥11॥
(ಶ್ಲೋಕ - 12)
ಮೂಲಮ್
ಉಪೇಕ್ಷಾತಃ ಕಲೌ ಮಂದೌ ವೃದ್ಧೌ ಜಾತೌ ಸುತೌ ತವ ।
ತಥಾಪಿ ಚಿಂತಾಂ ಮುಂಚ ತ್ವಮುಪಾಯಂ ಚಿಂತಯಾಮ್ಯಹಮ್ ॥
ಅನುವಾದ
ಈ ಕಲಿಯುಗದಲ್ಲಿ ಜನರ ಉಪೇಕ್ಷೆಯಿಂದಾಗಿ ನಿನ್ನ ಈ ಪುತ್ರರು ಉತ್ಸಾಹಹೀನರಾಗಿ ವೃದ್ಧರಾಗಿದ್ದಾರೆ. ಹೀಗಿದ್ದರೂ ನೀನು ಚಿಂತಿಸಬೇಡ. ನಾನು ಇವರ ನವಜೀವನದ ಉಪಾಯವನ್ನು ಯೋಚಿಸುತ್ತೇನೆ. ॥12॥
(ಶ್ಲೋಕ - 13)
ಮೂಲಮ್
ಕಲಿನಾ ಸದೃಶಃ ಕೋಽಪಿ ಯುಗೋ ನಾಸ್ತಿ ವರಾನನೇ ।
ತಸ್ಮಿಂಸ್ತ್ವಾಂ ಸ್ಥಾಪಯಿಷ್ಯಾಮಿ ಗೇಹೇ ಗೇಹೇ ಜನೇ ಜನೇ ॥
ಅನುವಾದ
ಸುಂದರೀ! ಕಲಿಯುಗಕ್ಕೆ ಸಮಾನವಾದ ಯುಗವೂ ಬೇರೊಂದಿಲ್ಲ. ಈ ಯುಗದಲ್ಲಿ ನಾನು ನಿನ್ನನ್ನು ಮನೆ-ಮನೆಗಳಲ್ಲಿ, ಪ್ರತಿಯೋರ್ವ ಮನುಷ್ಯನ ಹೃದಯದಲ್ಲಿ ಸ್ಥಾಪಿಸುತ್ತೇನೆ. ॥13॥
(ಶ್ಲೋಕ - 14)
ಮೂಲಮ್
ಅನ್ಯಧರ್ಮಾಂಸ್ತಿರಸ್ಕೃತ್ಯ ಪುರಸ್ಕೃತ್ಯ ಮಹೋತ್ಸವಾನ್ ।
ತದಾ ನಾಹಂ ಹರೇರ್ದಾಸೋ ಲೋಕೇ ತ್ವಾಂ ನ ಪ್ರವರ್ತಯೇ ॥
ಅನುವಾದ
ನೋಡುತ್ತಿರು. ಬೇರೆ ಎಲ್ಲ ಧರ್ಮಗಳನ್ನು ಅದುಮಿ, ಭಕ್ತಿವಿಷಯವಾದ ಮಹೋತ್ಸವಗಳನ್ನು ಮುಂದೆ ಮಾಡಿ ನಾನು ಲೋಕದಲ್ಲಿ ನಿನ್ನ ಪ್ರಚಾರಮಾಡದಿದ್ದರೆ ನಾನು ಶ್ರೀಹರಿಯ ದಾಸನೇ ಅಲ್ಲ. ॥14॥
(ಶ್ಲೋಕ - 15)
ಮೂಲಮ್
ತ್ವದನ್ವಿತಾಶ್ಚ ಯೇ ಜೀವಾ ಭವಿಷ್ಯಂತಿ ಕಲಾವಿಹ ।
ಪಾಪಿನೋಽಪಿ ಗಮಿಷ್ಯಂತಿ ನಿರ್ಭಯಂ ಕೃಷ್ಣಮಂದಿರಮ್ ॥
ಅನುವಾದ
ಈ ಕಲಿಯುಗದಲ್ಲಿ ನಿನ್ನಿಂದ ಯುಕ್ತರಾದ ಜೀವಿಗಳು ಪಾಪಿಗಳಾಗಿದ್ದರೂ ತಡವದೆ ಭಗವಾನ್ ಶ್ರೀಕೃಷ್ಣನ ಅಭಯ ಧಾಮವನ್ನು ಪಡೆದುಕೊಳ್ಳುವರು. ॥15॥
(ಶ್ಲೋಕ - 16)
ಮೂಲಮ್
ಯೇಷಾಂ ಚಿತ್ತೇ ವಸೇದ್ಭಕ್ತಿಃ ಸರ್ವದಾ ಪ್ರೇಮರೂಪಿಣೀ ।
ನ ತೇ ಪಶ್ಯಂತಿ ಕೀನಾಶಂ ಸ್ವಪ್ನೇಽಪ್ಯಮಲಮೂರ್ತಯಃ ॥
ಅನುವಾದ
ಹೃದಯದಲ್ಲಿ ನಿರಂತರ ಪ್ರೇಮ ಸ್ವರೂಪೀ ಭಕ್ತಿಯು ವಾಸಿಸುವ ಶುದ್ಧಾಂತಃ ಕರಣ ಪುರುಷರು ಸ್ವಪ್ನದಲ್ಲಿಯೂ ಯಮರಾಜನನ್ನು ನೋಡಲಾರರು. ॥16॥
(ಶ್ಲೋಕ - 17)
ಮೂಲಮ್
ನ ಪ್ರೇತೋ ನ ಪಿಶಾಚೋ ವಾ ರಾಕ್ಷಸೋ ವಾಸುರೋಽಪಿ ವಾ ।
ಭಕ್ತಿಯುಕ್ತಮನಸ್ಕಾನಾಂ ಸ್ಪರ್ಶನೇ ನ ಪ್ರಭುರ್ಭವೇತ್ ॥
ಅನುವಾದ
ಹೃದಯದಲ್ಲಿ ಭಕ್ತಿಯು ವಾಸಿಸುವವರನ್ನು ಪ್ರೇತ, ಪಿಶಾಚ, ರಾಕ್ಷಸ, ದೈತ್ಯ ಮೊದಲಾದವರು ಮುಟ್ಟಲೂ ಕೂಡ ಸಮರ್ಥರಾಗಲಾರರು. ॥17॥
(ಶ್ಲೋಕ - 18)
ಮೂಲಮ್
ನ ತಪೋಭಿರ್ನ ವೇದೈಶ್ಚ ನ ಜ್ಞಾನೇನಾಪಿ ಕರ್ಮಣಾ ।
ಹರಿರ್ಹಿ ಸಾಧ್ಯತೇ ಭಕ್ತ್ಯಾ ಪ್ರಮಾಣಂ ತತ್ರ ಗೋಪಿಕಾಃ ॥
ಅನುವಾದ
ಭಗವಂತನನ್ನು ತಪಸ್ಸು, ವೇದಾಧ್ಯಯನ, ಜ್ಞಾನ, ಕರ್ಮ ಮುಂತಾದ ಯಾವ ಸಾಧನೆಗಳಿಂದಲೂ ವಶಪಡಿಸಿಕೊಳ್ಳಲಾಗದು. ಅವನು ಕೇವಲ ಭಕ್ತಿಯಿಂದಲೇ ವಶೀಭೂತನಾಗುತ್ತಾನೆ. ಇದರಲ್ಲಿ ವ್ರಜದ ಗೋಪಿಯರೇ ಪ್ರಮಾಣರಾಗಿದ್ದಾರೆ. ॥18॥
(ಶ್ಲೋಕ - 19)
ಮೂಲಮ್
ನೃಣಾಂ ಜನ್ಮ ಸಹಸ್ರೇಣ ಭಕ್ತೌ ಪ್ರೀತಿರ್ಹಿ ಜಾಯತೇ ।
ಕಲೌ ಭಕ್ತಿಃ ಕಲೌ ಭಕ್ತಿರ್ಭಕ್ತ್ಯಾ ಕೃಷ್ಣಃ ಪುರಃ ಸ್ಥಿತಃ ॥
ಅನುವಾದ
ಮನುಷ್ಯರ ಸಾವಿರಾರು ಜನ್ಮಗಳ ಪುಣ್ಯ-ಪ್ರಭಾವದಿಂದಲೇ ಭಕ್ತಿಯಲ್ಲಿ ಪ್ರೀತಿ ಉಂಟಾಗುತ್ತದೆ. ಕಲಿಯುಗದಲ್ಲಿ ಖಂಡಿತವಾಗಿ ಭಕ್ತಿಯೇ ಸಾರವಾಗಿದೆ. ಭಕ್ತಿಯಿಂದಲಾದರೋ ಸಾಕ್ಷಾತ್ ಶ್ರೀಕೃಷ್ಣಚಂದ್ರನು ಇದಿರ್ಗಡೆ ಉಪಸ್ಥಿತನಾಗುತ್ತಾನೆ. ॥19॥
(ಶ್ಲೋಕ - 20)
ಮೂಲಮ್
ಭಕ್ತಿ ದ್ರೋಹಕರಾ ಯೇ ಚ ತೇ ಸೀದಂತಿ ಜಗತ್ತ್ರಯೇ ।
ದುರ್ವಾಸಾ ದುಃಖಮಾಪನ್ನಃ ಪುರಾ ಭಕ್ತವಿನಿಂದಕಃ ॥
ಅನುವಾದ
ಭಕ್ತಿಯೊಂದಿಗೆ ದ್ರೋಹವೆಸಗುವವರು ಮೂರೂ ಲೋಕಗಳಲ್ಲಿ ದುಃಖವೇ-ದುಃಖವನ್ನು ಪಡೆಯುತ್ತಾರೆ. ಹಿಂದೆ ಭಕ್ತ ಅಂಬರೀಷನ ತಿರಸ್ಕಾರಮಾಡಿದ್ದರಿಂದ ದುರ್ವಾಸ ಋಷಿಯು ಬಹಳ ಕಷ್ಟಪಡ ಬೇಕಾಯಿತು. ॥20॥
(ಶ್ಲೋಕ - 21)
ಮೂಲಮ್
ಅಲಂ ವ್ರತೈರಲಂ ತೀರ್ಥೈರಲಂ ಯೋಗೈರಲಂ ಮಖೈಃ ।
ಅಲಂ ಜ್ಞಾನಕಥಾಲಾಪೈರ್ಭಕ್ತಿರೇಕೈವ ಮುಕ್ತಿದಾ ॥
ಅನುವಾದ
ವ್ರತ, ತೀರ್ಥ, ಯೋಗ, ಯಜ್ಞ, ಜ್ಞಾನಚರ್ಚೆ ಇವೆಲ್ಲ ಇನ್ನುಸಾಕು. ಇಂತಹ ಅನೇಕ ಸಾಧನೆಗಳ ಆವಶ್ಯಕತೆ ಇನ್ನಿಲ್ಲ. ಏಕಮಾತ್ರ ಭಕ್ತಿಯೇ ಮುಕ್ತಿಯನ್ನು ಕೊಡುವಂತಹುದಾಗಿದೆ. ॥21॥
(ಶ್ಲೋಕ - 22)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತಿ ನಾರದನಿರ್ಣೀತಂ ಸ್ವಮಾಹಾತ್ಮ್ಯಂ ನಿಶಮ್ಯ ಸಾ ।
ಸರ್ವಾಂಗ ಪುಷ್ಟಿ ಸಂಯುಕ್ತಾ ನಾರದಂ ವಾಕ್ಯಮಬ್ರವೀತ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಹೀಗೆ ನಾರದರು ನಿರ್ಣಯಿಸಿರುವ ತನ್ನ ಮಾಹಾತ್ಮ್ಯವನ್ನು ಕೇಳಿ ಭಕ್ತಿಯ ಸರ್ವಾಂಗಗಳು ಹೃಷ್ಟ-ಪುಷ್ಟವಾದುವು. ಅವಳು ನಾರದರಲ್ಲಿ ಹೇಳತೊಡಗಿದಳು ॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಭಕ್ತಿರುವಾಚ
ಮೂಲಮ್
ಅಹೋ ನಾರದ ಧನ್ಯೋಽಸಿ ಪ್ರೀತಿಸ್ತೇ ಮಯಿ ನಿಶ್ಚಲಾ ।
ನ ಕದಾಚಿದ್ವಿಮುಂಚಾಮಿ ಚಿತ್ತೇ ಸ್ಥಾಸ್ಯಾಮಿ ಸರ್ವದಾ ॥
ಅನುವಾದ
ಭಕ್ತಿಯು ಇಂತೆಂದಳು — ಓ ನಾರದರೇ! ನೀವು ಧನ್ಯರಾಗಿರುವಿರಿ. ನಿಮಗೆ ನನ್ನಲ್ಲಿ ನಿಶ್ಚಲವಾದ ಪ್ರೀತಿ ಇದೆ. ನಾನು ಯಾವಾಗಲೂ ನಿಮ್ಮ ಹೃದಯದಲ್ಲಿ ಇರುವೆನು. ಎಂದೆಂದಿಗೂ ನಿಮ್ಮನ್ನು ಬಿಟ್ಟು ಹೋಗಲಾರೆನು. ॥23॥
(ಶ್ಲೋಕ - 24)
ಮೂಲಮ್
ಕೃಪಾಲುನಾ ತ್ವಯಾ ಸಾಧೋ ಮದ್ಬಾಧಾ ಧ್ವಂಸಿತಾ ಕ್ಷಣಾತ್ ।
ಪುತ್ರಯೋಶ್ಚೇತನಾ ನಾಸ್ತಿ ತತೋ ಬೋಧಯ ಬೋಧಯ ॥
ಅನುವಾದ
ಸಾಧುಗಳೇ! ನೀವು ತುಂಬಾ ಕೃಪಾಳುಗಳಾಗಿದ್ದೀರಿ. ನೀವು ಕ್ಷಣಮಾತ್ರದಲ್ಲಿ ನನ್ನ ದುಃಖವೆಲ್ಲವನ್ನು ದೂರಮಾಡಿದಿರಿ. ಆದರೆ ನನ್ನ ಪುತ್ರರಲ್ಲಿ ಇನ್ನೂ ಚೈತನ್ಯ ಬಂದಿಲ್ಲವಲ್ಲ! ನೀವು ಇವರನ್ನು ಬೇಗನೇ ಎಚ್ಚರಿಸಿ, ಸಚೇತನರಾಗಿಸಿರಿ. ॥24॥
(ಶ್ಲೋಕ - 25)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ತಸ್ಯಾ ವಚಃ ಸಮಾಕರ್ಣ್ಯ ಕಾರುಣ್ಯಂ ನಾರದೋ ಗತಃ ।
ತಯೋರ್ಬೋಧನಮಾರೇಭೇ ಕರಾಗ್ರೇಣ ವಿಮರ್ದಯನ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಭಕ್ತಿಯ ಈ ಮಾತುಗಳನ್ನು ಕೇಳಿ ನಾರದರಿಗೆ ತುಂಬಾ ಕರುಣೆ ಉಂಟಾಗಿ, ಅವರು ಜ್ಞಾನ, ವೈರಾಗ್ಯ ಇವರನ್ನು ಕೈಯಿಂದ ಅಲುಗಾಡಿಸುತ್ತಾ ಎಚ್ಚರಿಸ ತೊಡಗಿದರು. ॥25॥
(ಶ್ಲೋಕ - 26)
ಮೂಲಮ್
ಮುಖಂ ಸಂಯೋಜ್ಯ ಕರ್ಣಾಂತೇ ಶಬ್ದಮುಚ್ಚೈಃ ಸಮುಚ್ಚರನ್ ।
ಜ್ಞಾನ ಪ್ರಬುಧ್ಯತಾಂ ಶೀಘ್ರಂ ರೇ ವೈರಾಗ್ಯ ಪ್ರಬುಧ್ಯತಾಮ್ ॥
ಅನುವಾದ
ಮತ್ತೆ ಅವರ ಕಿವಿಗೆ ಬಾಯಿಹಚ್ಚಿ ಜೋರಾಗಿ ಎಲೈ ಜ್ಞಾನವೇ! ಬೇಗನೇ ಎಚ್ಚರನಾಗು, ಎಲೈ ವೈರಾಗ್ಯವೇ! ಬೇಗನೇ ಎಚ್ಚರವಾಗು ಎಂದು ಹೇಳಿದರು. ॥26॥
(ಶ್ಲೋಕ - 27)
ಮೂಲಮ್
ವೇದವೇದಾಂತಘೋಷೈಶ್ಚ ಗೀತಾಪಾಠೈರ್ಮುಹುರ್ಮುಹುಃ ।
ಬೋಧ್ಯಮಾನೌ ತದಾ ತೇನ ಕಥಂಚಿಚ್ಚೋತ್ಥಿತೌ ಬಲಾತ್ ॥
ಅನುವಾದ
ಬಳಿಕ ಅವರು ವೇದಧ್ವನಿ, ವೇದಾಂತಘೋಷ, ಪುನಃ-ಪುನಃ ಗೀತೆಯನ್ನು ಪಠಿಸಿ ಅವರನ್ನು ಎಚ್ಚರಿಸಿದರು. ಇದರಿಂದ ಅವರು ಹೇಗಾದರೂ ಬಲವಂತವಾಗಿ ಎಚ್ಚರಗೊಂಡರು. ॥27॥
(ಶ್ಲೋಕ - 28)
ಮೂಲಮ್
ನೇತ್ರೈರನವಲೋಕಂತೌ ಜೃಂಭಂತೌ ಸಾಲಸಾವುಭೌ ।
ಬಕವತ್ಪಲಿತೌ ಪ್ರಾಯಃ ಶುಷ್ಕಕಾಷ್ಠಸಮಾಂಗಕೌ ॥
ಅನುವಾದ
ಆದರೆ ಆಲಸ್ಯದ ಕಾರಣ ಅವರಿಬ್ಬರೂ ಆಕಳಿಸುತ್ತಾ, ಕಣ್ಣುಬಿಟ್ಟು ನೋಡದಾದರು. ಅವರ ಕೂದಲು ಕೊಕ್ಕರೆಯಂತೆ ಬೆಳ್ಳಗಾಗಿದ್ದವು. ಅವರ ಅಂಗಾಂಗಗಳು ಒಣಗಿದ ಕಟ್ಟಿಗೆಯಂತಾಗಿ ನಿಸ್ತೇಜ ಹಾಗೂ ಕಠೋರವಾಗಿದ್ದವು. ॥28॥
(ಶ್ಲೋಕ - 29)
ಮೂಲಮ್
ಕ್ಷುತ್ ಕ್ಷಾಮೌ ತೌ ನಿರೀಕ್ಷ್ಯೈವ ಪುನಃ ಸ್ವಾಪಪರಾಯಣೌ ।
ಋಷಿಶ್ಚಿಂತಾಪರೋ ಜಾತಃ ಕಿಂ ವಿಧೇಯಂ ಮಯೇತಿ ಚ ॥
ಅನುವಾದ
ಹೀಗೆ ಹಸಿವು ಬಾಯಾರಿಕೆಯಿಂದ ಅತ್ಯಂತ ದುರ್ಬಲರಾಗಿದ್ದ ಕಾರಣ ಅವರು ಪುನಃ ಮಲಗುವುದನ್ನು ಕಂಡು ನಾರದರಿಗೆ ಬಹಳ ಚಿಂತೆಯಾಯಿತು. ‘ಈಗ ನಾನು ಏನು ಮಾಡಬೇಕು?’ ಎಂದು ಯೋಚಿಸತೊಡಗಿದರು. ॥29॥
(ಶ್ಲೋಕ - 30)
ಮೂಲಮ್
ಅಹೋ ನಿದ್ರಾ ಕಥಂ ಯಾತಿ ವೃದ್ಧತ್ವಂ ಚ ಮಹತ್ತರಮ್ ।
ಚಿಂತಯನ್ನಿತಿ ಗೋವಿಂದಂ ಸ್ಮಾರಯಾಮಾಸ ಭಾರ್ಗವ ॥
ಅನುವಾದ
ಇವರ ಈ ನಿದ್ದೆ ಮತ್ತು ಇದರಿಂದಲೂ ಹೆಚ್ಚಾಗಿ ಇವರ ವೃದ್ಧಾವಸ್ಥೆ ಹೇಗೆ ದೂರವಾಗಬಹುದು? ಶೌನಕರೇ! ಈ ಪ್ರಕಾರ ಚಿಂತಿಸುತ್ತಾ ಅವರು ಭಗವಂತನನ್ನು ಸ್ಮರಿಸತೊಡಗಿದರು. ॥30॥
(ಶ್ಲೋಕ - 31)
ಮೂಲಮ್
ವ್ಯೋಮವಾಣೀ ತದೈವಾಭೂನ್ಮಾ ಋಷೇ ಖಿದ್ಯತಾಮಿತಿ ।
ಉದ್ಯಮಃ ಸಫಲಸ್ತೇಯಂ ಭವಿಷ್ಯತಿ ನ ಸಂಶಯಃ ॥
ಅನುವಾದ
ಆಗಲೇ ಆಕಾಶವಾಣಿಯೊಂದು ನುಡಿಯಿತು ‘‘ಓ ಮುನಿಯೇ! ದುಃಖಿಸಬೇಡ. ನಿನ್ನ ಈ ಉದ್ಯೋಗವು ನಿಃಸಂದೇಹವಾಗಿ ಸಫಲವಾದೀತು. ॥31॥
(ಶ್ಲೋಕ - 32)
ಮೂಲಮ್
ಏತದರ್ಥಂ ತು ಸತ್ಕರ್ಮ ಸುರರ್ಷೇ ತ್ವಂ ಸಮಾಚರ ।
ತತ್ತೇ ಕರ್ಮಾಭಿಧಾಸ್ಯಂತಿ ಸಾಧವಃ ಸಾಧುಭೂಷಣಾಃ ॥
ಅನುವಾದ
ದೇವರ್ಷಿಯೇ! ಇದಕ್ಕಾಗಿ ನೀನು ಒಂದು ಸತ್ಕರ್ಮವನ್ನು ಮಾಡು. ಆ ಕರ್ಮವನ್ನು ನಿನಗೆ ಸಂತಶಿರೋಮಣಿ ಮಹಾನುಭಾವರು ತಿಳಿಸುವರು. ॥32॥
(ಶ್ಲೋಕ - 33)
ಮೂಲಮ್
ಸತ್ಕರ್ಮಣಿ ಕೃತೇ ತಸ್ಮಿನ್ ಸನಿದ್ರಾ ವೃದ್ಧತಾನಯೋಃ ।
ಗಮಿಷ್ಯತಿ ಕ್ಷಣಾದ್ಭಕ್ತಿಃ ಸರ್ವತಃ ಪ್ರಸರಿಷ್ಯತಿ ॥
ಅನುವಾದ
ಆ ಸತ್ಕರ್ಮದ ಅನುಷ್ಠಾನವನ್ನು ಮಾಡುತ್ತಲೇ ಕ್ಷಣಾರ್ಧದಲ್ಲಿ ಇವರ ನಿದ್ದೆ ಮತ್ತು ವೃದ್ಧಾವಸ್ಥೆಯು ಹೊರಟುಹೋದೀತು. ಎಲ್ಲೆಡೆ ಭಕ್ತಿಯ ಪ್ರಸಾರವಾದೀತು.’’ ॥33॥
(ಶ್ಲೋಕ - 34)
ಮೂಲಮ್
ಇತ್ಯಾಕಾಶವಚಃ ಸ್ಪಷ್ಟಂ ತತ್ಸರ್ವೈರಪಿ ವಿಶ್ರುತಮ್ ।
ನಾರದೋ ವಿಸ್ಮಯಂ ಲೇಭೇ ನೇದಂ ಜ್ಞಾತಮಿತಿ ಬ್ರುವನ್ ॥
ಅನುವಾದ
ಈ ಆಕಾಶವಾಣಿಯು ಅಲ್ಲಿ ಎಲ್ಲರಿಗೆ ಸ್ಪಷ್ಟವಾಗಿ ಕೇಳಿಸಿತು. ಇದರಿಂದ ನಾರದರಿಗೆ ತುಂಬಾ ವಿಸ್ಮಯವಾಗಿ ‘ನನಗಾದರೋ ಇದರ ಅರ್ಥ ಏನೂ ಅರಿವಾಗಲಿಲ್ಲ’ ಎಂದು ಹೇಳತೊಡಗಿದರು. ॥34॥
(ಶ್ಲೋಕ - 35)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಅನಯಾಽಕಾಶವಾಣ್ಯಾಪಿ ಗೋಪ್ಯತ್ವೇನ ನಿರೂಪಿತಮ್ ।
ಕಿಂ ವಾ ತತ್ಸಾಧನಂ ಕಾರ್ಯಂ ಯೇನ ಕಾರ್ಯಂ ಭವೇ ತ್ತಯೋಃ ॥
ಅನುವಾದ
ನಾರದರು ಹೇಳಿದರು — ಈ ಆಕಾಶವಾಣಿಯೂ ಗುಪ್ತವಾಗಿಯೇ ನುಡಿದಿದೆ. ಯಾವ ಸಾಧನೆ ಮಾಡಿದರೆ ಇವರ ಕಾರ್ಯಸಿದ್ಧವಾದೀತೆಂಬುದನ್ನು ಇದು ಹೇಳಲಿಲ್ಲ. ॥35॥
(ಶ್ಲೋಕ - 36)
ಮೂಲಮ್
ಕ್ವ ಭವಿಷ್ಯಂತಿ ಸಂತಸ್ತೇ ಕಥಂ ದಾಸ್ಯಂತಿ ಸಾಧನಮ್ ।
ಮಯಾತ್ರ ಕಿಂ ಪ್ರಕರ್ತವ್ಯಂ ಯದುಕ್ತಂ ವ್ಯೋಮಭಾಷಯಾ ॥
ಅನುವಾದ
ಆ ಸಂತರು ಎಲ್ಲಿ ಸಿಗಬಲ್ಲರೋ ತಿಳಿಯದು ಯಾವ ವಿಧದಿಂದ ಆ ಸಾಧನೆಯನ್ನು ತಿಳಿಸುವರು? ಈಗ ಆಕಾಶವಾಣಿಯು ಏನೆಲ್ಲ ಹೇಳಿತೋ ಅದಕ್ಕನುಸಾರ ನಾನು ಏನು ಮಾಡಬೇಕು? ॥36॥
(ಶ್ಲೋಕ - 37)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ತತ್ರ ದ್ವಾವಪಿ ಸಂಸ್ಥಾಪ್ಯ ನಿರ್ಗತೋ ನಾರದೋ ಮುನಿಃ ।
ತೀರ್ಥಂ ತೀರ್ಥಂ ವಿನಿಷ್ಕ್ರಮ್ಯ ಪೃಚ್ಛನ್ಮಾರ್ಗೇ ಮುನೀಶ್ವರಾನ್ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಆಗ ಜ್ಞಾನ, ವೈರಾಗ್ಯರಿಬ್ಬರನ್ನು ಅಲ್ಲೇ ಬಿಟ್ಟು ನಾರದ ಮುನಿಗಳು ಅಲ್ಲಿಂದ ಹೊರಟುಬಿಟ್ಟರು. ಪ್ರತಿಯೊಂದು ತೀರ್ಥಕ್ಷೇತ್ರಕ್ಕೆ ಹೋಗಿ, ಮಾರ್ಗದಲ್ಲಿ ಸಿಗುವ ಮುನೀಶ್ವರರಲ್ಲಿ ಆ ಸಾಧನೆಯ ಕುರಿತು ಕೇಳತೊಡಗಿದರು. ॥37॥
(ಶ್ಲೋಕ - 38)
ಮೂಲಮ್
ವೃತ್ತಾಂತಃ ಶ್ರೂಯತೇ ಸರ್ವೈಃ ಕಿಂಚಿನ್ನಿಶ್ಚಿತ್ಯ ನೋಚ್ಯತೇ ।
ಅಸಾಧ್ಯಂ ಕೇಚನ ಪ್ರೋಚುರ್ದುಜ್ಞೇಯಮಿತಿ ಚಾಪರೇ ।
ಮೂಕೀಭೂತಾಸ್ತಥಾನ್ಯೇ ತು ಕಿಯಂತಸ್ತು ಪಲಾಯಿತಾಃ ॥
ಅನುವಾದ
ಅವರ ಮಾತನ್ನು ಎಲ್ಲರೂ ಕೇಳುತ್ತಿದ್ದರು. ಆದರೆ ಅದರ ವಿಷಯದಲ್ಲಿ ಯಾರೂ ನಿಶ್ಚಿತವಾದ ಉತ್ತರವನ್ನು ಕೊಡದಾದರು. ಕೆಲವರು ಅದು ಅಸಾಧ್ಯವೆಂದು ಹೇಳಿದರು. ಕೆಲವರೆಂದರು ಇದನ್ನು ಸರಿಯಾಗಿ ತಿಳಿಸುವುದು ಕಠಿಣವಾಗಿದೆ. ಕೆಲವರು ಕೇಳಿ ಸುಮ್ಮನಾದರೆ, ಕೆಲಕೆಲವರು ಭಯದಿಂದ ಸುಮ್ಮನೆ ಪಲಾಯನ ಮಾಡಿದರು. ॥38॥
(ಶ್ಲೋಕ - 39)
ಮೂಲಮ್
ಹಾಹಾಕಾರೋ ಮಹಾನಾಸೀತ್ ತ್ರೈಲೋಕ್ಯೇ ವಿಸ್ಮಯಾವಹಃ ।
ವೇದವೇದಾಂತಘೋಷೈಶ್ಚ ಗೀತಾಪಾಠೈರ್ವಿಬೋಧಿತಮ್ ॥
(ಶ್ಲೋಕ - 40)
ಮೂಲಮ್
ಭಕ್ತಿಜ್ಞಾನವಿರಾಗಾಣಾಂ ನೋದತಿಷ್ಠತ್ತ್ರಿಕಂ ಯದಾ ।
ಉಪಾಯೋ ನಾಪರೋಽಸ್ತೀತಿ ಕರ್ಣೇ ಕರ್ಣೇಽಜಪಂಜನಾಃ ॥
ಅನುವಾದ
ತ್ರೈಲೋಕ್ಯದಲ್ಲಿ ಆಶ್ಚರ್ಯ ಜನಕ ಮಹಾನ್ ಹಾಹಾಕಾರವೆದ್ದಿತು. ಜನರು ಪರಸ್ಪರ ಮಾತಾಡತೊಡಗಿದರು. ಅಯ್ಯಾ! ವೇದಧ್ವನಿ, ವೇದಾಂತ ಘೋಷ, ಪದೇ-ಪದೇ ಗೀತಾ-ಪಾರಾಯಣ ಕೇಳಿಯೂ ಕೂಡ ಭಕ್ತಿ, ಜ್ಞಾನ, ವೈರಾಗ್ಯ ಇವು ಮೂವರು ಎಚ್ಚರಗೊಳ್ಳದಿರುವಾಗ ಬೇರೆ ಯಾವ ಉಪಾಯವು ಇಲ್ಲ. ॥39-40॥
(ಶ್ಲೋಕ - 41)
ಮೂಲಮ್
ಯೋಗಿನಾ ನಾರದೇನಾಪಿ ಸ್ವಯಂ ನ ಜ್ಞಾಯತೇ ತು ಯತ್ ।
ತತ್ಕಥಂ ಶಕ್ಯತೇ ವಕ್ತುಮಿತರೈರಿಹ ಮಾನುಷೈಃ ॥
ಅನುವಾದ
ಸಾಕ್ಷಾತ್ ಯೋಗಿರಾಜ ನಾರದರಿಗೂ ತಿಳಿಯದಿರುವುದನ್ನು ಬೇರೆ ಸಂಸಾರೀ ಜನರು ಹೇಗೆ ತಿಳಿಸಬಲ್ಲರು? ॥41॥
(ಶ್ಲೋಕ - 42)
ಮೂಲಮ್
ಏವಮೃಷಿಗಣೈಃಪೃಷ್ಟೈರ್ನಿರ್ಣೀಯೋಕ್ತಂ ದುರಾಸದಮ್ ॥
ಅನುವಾದ
ಈ ಪ್ರಕಾರ ಯಾವ-ಯಾವ ಋಷಿಗಳ ಬಳಿ ಇದರ ವಿಷಯದಲ್ಲಿ ಕೇಳಲಾಯಿತೋ ಅವರೆಲ್ಲರು ‘ಇದು ದುಃಸಾಧ್ಯವಾಗಿದೆ’ ಎಂದು ನಿರ್ಣಯಿಸಿ ಹೇಳಿಬಿಟ್ಟರು. ॥42॥
(ಶ್ಲೋಕ - 43)
ಮೂಲಮ್
ತತಶ್ಚಿಂತಾತುರಃ ಸೋಽಥ ಬದರೀವನಮಾಗತಃ ।
ತಪಶ್ಚರಾಮಿ ಚಾತ್ರೇತಿ ತದರ್ಥಂ ಕೃತನಿಶ್ಚಯಃ ॥
ಅನುವಾದ
ಆಗ ನಾರದರು ತುಂಬಾ ಚಿಂತಾತುರರಾಗಿ ಬದರೀ ವನಕ್ಕೆ ಬಂದರು. ಜ್ಞಾನ, ವೈರಾಗ್ಯರನ್ನು ಎಚ್ಚರಿಸಲು ನಾನು ಇಲ್ಲಿ ತಪಸ್ಸನ್ನು ಮಾಡುವೆನೆಂದು ನಿಶ್ಚಯಿಸಿದರು.॥43॥
(ಶ್ಲೋಕ - 44)
ಮೂಲಮ್
ತಾವದ್ದದರ್ಶ ಪುರತಃ ಸನಕಾದೀನ್ ಮುನೀಶ್ವರಾನ್ ।
ಕೋಟಿಸೂರ್ಯಸಮಾಭಾಸಾನುವಾಚ ಮುನಿಸತ್ತಮಃ ॥
ಅನುವಾದ
ಆಗಲೇ ಕೋಟಿ ಸೂರ್ಯರಂತೆ ತೇಜಸ್ವೀಗಳಾದ ಸನಕಾದಿ ಮುನೀಶ್ವರರು ಅವರಿಗೆ ಇದಿರ್ಗಡೆ ಕಂಡುಬಂದರು. ಅವರನ್ನು ನೋಡಿ ಆ ಮುನಿಶ್ರೇಷ್ಠರಾದ ನಾರದರು ಕೇಳ ತೊಡಗಿದರು.॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಇದಾನೀಂ ಭೂರಿಭಾಗ್ಯೇನ ಭವದ್ಭಿಃ ಸಂಗಮೋಽಭವತ್ ।
ಕುಮಾರಾ ಬ್ರುವತಾಂ ಶೀಘ್ರಂ ಕೃಪಾಂ ಕೃತ್ವಾ ಮಮೋಪರಿ ॥
ಅನುವಾದ
ನಾರದರೆಂದರು — ಓ ಮಹಾತ್ಮರೇ! ಈಗ ಮಹದ್ಭಾಗ್ಯದಿಂದ ನನಗೆ ನಿಮ್ಮೊಂದಿಗೆ ಸಮಾಗಮವಾಗಿದೆ. ನೀವು ನನ್ನ ಮೇಲೆ ಕೃಪೆ ದೋರಿ ಬೇಗನೇ ಆ ಸಾಧನೆಯನ್ನು ಹೇಳಿರಿ. ॥45॥
(ಶ್ಲೋಕ - 46)
ಮೂಲಮ್
ಭವಂತೋ ಯೋಗಿನಃ ಸರ್ವೇ ಬುದ್ಧಿಮಂತೋ ಬಹುಶ್ರುತಾಃ ।
ಪಂಚಹಾಯನಸಂಯುಕ್ತಾಃ ಪೂರ್ವೇಷಾಮಪಿ ಪೂರ್ವಜಾಃ ॥
ಅನುವಾದ
ನೀವೆಲ್ಲರೂ ಮಹಾಯೋಗಿಗಳೂ, ಬುದ್ಧಿವಂತರೂ, ವಿದ್ವಾಂಸರೂ ಆಗಿದ್ದೀರಿ. ನೀವು ನೋಡಲು ಐದುವರ್ಷದ ಬಾಲಕರಂತೆ ಕಂಡುಬಂದರೂ ನೀವು ಪೂರ್ವಜರಿಗೂ ಪೂರ್ವಜರಾಗಿದ್ದೀರಿ. ॥46॥
(ಶ್ಲೋಕ - 47)
ಮೂಲಮ್
ಸದಾ ವೈಕುಂಠನಿಲಯಾ ಹರಿಕೀರ್ತನತತ್ಪರಾಃ ।
ಲೀಲಾಮೃತರಸೋನ್ಮತ್ತಾಃ ಕಥಾಮಾತ್ರೈಕಜೀವಿನಃ ॥
ಅನುವಾದ
ನೀವುಗಳು ಸದಾಕಾಲ ವೈಕುಂಠ ಧಾಮದಲ್ಲೇ ವಾಸಿಸುತ್ತಿರಿ. ನಿರಂತರ ಹರಿಕೀರ್ತನೆಯಲ್ಲೇ ತತ್ಪರರಾಗಿರುವಿರಿ. ಭಗವಲ್ಲೀಲಾಮೃತದ ರಸಾಸ್ವಾದ ಮಾಡುತ್ತಾ ಸದಾ ಅದರಲ್ಲೇ ಉನ್ಮತ್ತರಾಗಿರುವಿರಿ. ಭಗವತ್ ಕಥೆಯೇ ನಿಮ್ಮ ಜೀವನದ ಏಕಮಾತ್ರ ಆಧಾರವಾಗಿದೆ. ॥47॥
(ಶ್ಲೋಕ - 48)
ಮೂಲಮ್
ಹರಿಃ ಶರಣಮೇವಂ ಹಿ ನಿತ್ಯಂ ಯೇಷಾಂ ಮುಖೇ ವಚಃ ।
ಅತಃ ಕಾಲಸಮಾದಿಷ್ಟಾ ಜರಾ ಯುಷ್ಮಾನ್ನ ಬಾಧತೇ ॥
ಅನುವಾದ
‘ಹರಿಃ ಶರಣಮ್’ ಎಂಬ ವಾಕ್ಯ (ಮಂತ್ರ) ಯಾವಾಗಲೂ ನಿಮ್ಮ ಬಾಯಲ್ಲಿರುತ್ತದೆ. ಇದರಿಂದ ಕಾಲ ಪ್ರೇರಿತ ವೃದ್ಧಾವಸ್ಥೆಯೂ ನಿಮ್ಮನ್ನು ಬಾಸುವುದಿಲ್ಲ. ॥48॥
(ಶ್ಲೋಕ - 49)
ಮೂಲಮ್
ಯೇಷಾಂ ಭ್ರೂಭಂಗ ಮಾತ್ರೇಣ ದ್ವಾರಪಾಲೌ ಹರೇಃ ಪುರಾ ।
ಭೂವೌ ನಿಪತಿತೌ ಸದ್ಯೋ ಯತ್ಕೃಪಾತಃ ಪುರಂ ಗತೌ ॥
ಅನುವಾದ
ಹಿಂದಿನ ಕಾಲದಲ್ಲಿ ನಿಮ್ಮ ಭ್ರೂಭಂಗಮಾತ್ರದಿಂದಲೇ ಭಗವಾನ್ ವಿಷ್ಣುವಿನ ದ್ವಾರಪಾಲಕರಾದ ಜಯ ವಿಜಯರು ಕೂಡಲೇ ಭುವಿಗೆ ತಳ್ಳಲ್ಪಟ್ಟರು. ಮತ್ತೆ ನಿಮ್ಮ ಕೃಪೆಯಿಂದಲೇ ಅವರು ಪುನಃ ವೈಕುಂಠ ಲೋಕವನ್ನು ಸೇರಿದರು. ॥49॥
(ಶ್ಲೋಕ - 50)
ಮೂಲಮ್
ಅಹೋ ಭಾಗ್ಯಸ್ಯ ಯೋಗೇನ ದರ್ಶನಂ ಭವತಾಮಿಹ ।
ಅನುಗ್ರಹಸ್ತು ಕರ್ತವ್ಯೋ ಮಯಿ ದೀನೇ ದಯಾಪರೈಃ ॥
ಅನುವಾದ
ಈಗ ನಿಮ್ಮಗಳ ದರ್ಶನವು ದೊಡ್ಡ ಭಾಗ್ಯದಿಂದಲೇ ಆಗಿದೆ. ನಾನು ಧನ್ಯನಾದೆನು. ಆದರೆ ನಾನು ತುಂಬಾ ದೀನನಾಗಿದ್ದೇನೆ ಹಾಗೂ ನೀವುಗಳು ಸ್ವಭಾವದಿಂದಲೇ ದಯಾಳುಗಳಾಗಿದ್ದೀರಿ. ಅದಕ್ಕಾಗಿ ನನ್ನ ಮೇಲೆ ನೀವು ಅವಶ್ಯವಾಗಿ ಕೃಪೆ ಮಾಡಬೇಕು. ॥50॥
(ಶ್ಲೋಕ - 51)
ಮೂಲಮ್
ಅಶರೀರಗಿರೋಕ್ತಂ ಯತ್ತತ್ಕಿಂ ಸಾಧನಮುಚ್ಯತಾಮ್ ।
ಅನುಷ್ಠೇಯಂ ಕಥಂ ತಾವತ್ಪ್ರಬ್ರುವಂತು ಸವಿಸ್ತರಮ್ ॥
ಅನುವಾದ
ಆಕಾಶವಾಣಿಯು ಹೇಳಿದ ವಿಷಯದ ಆ ಸಾಧನೆಯು ಯಾವುದು? ನಾನು ಯಾವ ಪ್ರಕಾರದಿಂದ ಅದನ್ನು ಅನುಷ್ಠಾನ ಮಾಡಬೇಕು? ಎಂಬುದನ್ನು ವಿಸ್ತಾರವಾಗಿ ತಿಳಿಸಿರಿ ॥51॥
(ಶ್ಲೋಕ - 52)
ಮೂಲಮ್
ಭಕ್ತಿಜ್ಞಾನವಿರಾಗಾಣಾಂ ಸುಖಮುತ್ಪದ್ಯತೇ ಕಥಮ್ ।
ಸ್ಥಾಪನಂ ಸರ್ವವರ್ಣೇಷು ಪ್ರೇಮಪೂರ್ವಂ ಪ್ರಯತ್ನತಃ ॥
ಅನುವಾದ
ಭಕ್ತಿ, ಜ್ಞಾನ, ವೈರಾಗ್ಯ ಇವರಿಗೆ ಹೇಗೆ ಸುಖ ಸಿಗಬಲ್ಲದು? ಯಾವ ರೀತಿಯಲ್ಲಿ ಇವನ್ನು ಪ್ರೇಮ ಪೂರ್ವಕ ಎಲ್ಲ ವರ್ಣದವರಲ್ಲಿ ಪ್ರತಿಷ್ಠಾಪಿಸಬಹುದು? ॥52॥
(ಶ್ಲೋಕ - 53)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಮಾ ಚಿಂತಾಂ ಕುರು ದೇವರ್ಷೇ ಹರ್ಷಂ ಚಿತ್ತೇ ಸಮಾವಹ ।
ಉಪಾಯಃ ಸುಖಸಾಧ್ಯೋಽತ್ರ ವರ್ತತೇ ಪೂರ್ವ ಏವ ಹಿ ॥
ಅನುವಾದ
ಸನಕಾದಿಗಳು ಹೇಳಿದರು — ದೇವ ಋಷಿಗಳೇ! ನೀವು ಚಿಂತಿಸಬೇಡಿ. ಮನಸ್ಸಿನಲ್ಲಿ ಪ್ರಸನ್ನರಾಗಿರಿ. ಅವರ ಉದ್ಧಾರದ ಒಂದು ಸರಳವಾದ ಉಪಾಯವು ಮೊದಲಿನಿಂದಲೇ ವಿದ್ಯಮಾನವಿದೆ. ॥53॥
(ಶ್ಲೋಕ - 54)
ಮೂಲಮ್
ಅಹೋ ನಾರದ ಧನ್ಯೋಽಸಿ ವಿರಕ್ತಾನಾಂ ಶಿರೋಮಣಿಃ ।
ಸದಾ ಶ್ರೀಕೃಷ್ಣದಾಸಾನಾಮಗ್ರಣೀರ್ಯೋಗಭಾಸ್ಕರಃ ॥
ಅನುವಾದ
ನಾರದರೇ! ನೀವು ಧನ್ಯರಾಗಿರುವಿರಿ. ನೀವಾದರೋ ವಿರಕ್ತರ ಶಿರೋಮಣಿಯಾಗಿದ್ದೀರಿ. ಶ್ರೀಕೃಷ್ಣನ ದಾಸರಿಗೆ ಶಾಶ್ವತವಾದ ಪಥಪ್ರದರ್ಶಕರಾಗಿದ್ದು, ಭಕ್ತಿಯೋಗದ ಭಾಸ್ಕರರಾಗಿರುವಿರಿ. ॥54॥
(ಶ್ಲೋಕ - 55)
ಮೂಲಮ್
ತ್ವಯಿ ಚಿತ್ರಂ ನ ಮಂತವ್ಯಂ ಭಕ್ತ್ಯರ್ಥಮನುವರ್ತಿನಿ ।
ಘಟತೇ ಕೃಷ್ಣ ದಾಸಸ್ಯ ಭಕ್ತೇಃ ಸಂಸ್ಥಾಪನಾ ಸದಾ ॥
ಅನುವಾದ
ನೀವು ಭಕ್ತಿಗಾಗಿ ಮಾಡುತ್ತಿರುವ ಉದ್ಯೋಗವು ನಿಮಗೆ ಇದು ಆಶ್ಚರ್ಯದ ಮಾತಲ್ಲವೆಂದು ತಿಳಿಯಬೇಕು. ಭಗವಂತನ ಭಕ್ತನಿಗಾದರೋ ಭಕ್ತಿಯನ್ನು ಚೆನ್ನಾಗಿ ಸ್ಥಾಪಿಸುವುದು ಸದಾ ಉಚಿತವೇ ಆಗಿದೆ. ॥55॥
(ಶ್ಲೋಕ - 56)
ಮೂಲಮ್
ಋಷಿಭಿರ್ಬಹವೋ ಲೋಕೇ ಪಂಥಾನಃ ಪ್ರಕಟೀಕೃತಾಃ ।
ಶ್ರಮಸಾಧ್ಯಾಶ್ಚ ತೇ ಸರ್ವೇ ಪ್ರಾಯಃ ಸ್ವರ್ಗಫಲಪ್ರದಾಃ ॥
ಅನುವಾದ
ಪ್ರಪಂಚದಲ್ಲಿ ಋಷಿಗಳು ಅನೇಕ ಮಾರ್ಗಗಗಳನ್ನು ಪ್ರಕಟಿಸಿರುವರು. ಆದರೆ ಅವೆಲ್ಲವೂ ಕಷ್ಟಸಾಧ್ಯವಾಗಿವೆ. ಪ್ರಾಯಶಃ ಪರಿಣಾಮದಲ್ಲಿ ಸ್ವರ್ಗವನ್ನೇ ದೊರಕಿಸಿಕೊಡುವಂತಹವುಗಳು. ॥56॥
(ಶ್ಲೋಕ - 57)
ಮೂಲಮ್
ವೈಕುಂಠಸಾಧಕಃ ಪಂಥಾ ಸ ತು ಗೋಪ್ಯೋ ಹಿ ವರ್ತತೇ ।
ತಸ್ಯೋಪದೇಷ್ಟಾ ಪುರುಷಃ ಪ್ರಾಯೋ ಭಾಗ್ಯೇನಲಭ್ಯತೇ ॥
ಅನುವಾದ
ಇಂದಿನವರೆಗೆ ಭಗವಂತನ ಪ್ರಾಪ್ತಿಯಾಗಿಸುವ ಮಾರ್ಗವು ಗುಪ್ತವೇ ಆಗಿದೆ. ಅದನ್ನು ಉಪದೇಶಿಸುವ ಪುರುಷನು ಪ್ರಾಯಶಃ ಭಾಗ್ಯದಿಂದಲೇ ದೊರಕುತ್ತಾನೆ. ॥57॥
(ಶ್ಲೋಕ - 58)
ಮೂಲಮ್
ಸತ್ಕರ್ಮ ತವ ನಿರ್ದಿಷ್ಟಂ ವ್ಯೋಮವಾಚಾ ತು ಯತ್ಪುರಾ ।
ತದುಚ್ಯತೇ ಶೃಣುಷ್ವಾದ್ಯ ಸ್ಥಿರಚಿತ್ತಃ ಪ್ರಸನ್ನಧೀಃ ॥
ಅನುವಾದ
ಆಕಾಶವಾಣಿಯು ನಿಮಗೆ ಹೇಳಿದ ಸತ್ಕರ್ಮದ ಸಂಕೇತವನ್ನು ನಾವು ತಿಳಿಸುತ್ತೇವೆ. ನೀವು ಪ್ರಸನ್ನ ಸ್ಥಿರಚಿತ್ತರಾಗಿ ಕೇಳಿರಿ. ॥58॥
(ಶ್ಲೋಕ - 59)
ಮೂಲಮ್
ದ್ರವ್ಯಯಜ್ಞಾಸ್ತಪೋಯಜ್ಞಾ ಯೋಗಯಜ್ಞಾಸ್ತಥಾಪರೇ ।
ಸ್ವಾಧ್ಯಾಯಜ್ಞಾನಯಜ್ಞಾಶ್ಚ ತೇ ತು ಕರ್ಮವಿಸೂಚಕಾಃ ॥
ಅನುವಾದ
ನಾರದರೇ! ದ್ರವ್ಯಯಜ್ಞ, ತಪೋಯಜ್ಞ, ಯೋಗಯಜ್ಞ, ಸ್ವಾಧ್ಯಾಯರೂಪೀ ಜ್ಞಾನಯಜ್ಞ ಇವೆಲ್ಲವುಗಳಾದರೋ ಸ್ವರ್ಗಾದಿಗಳನ್ನು ದೊರಕಿಸಿಕೊಡುವ ಕರ್ಮದ ಕಡೆಗೇ ಸಂಕೇತ ಮಾಡುತ್ತವೆ. ॥59॥
(ಶ್ಲೋಕ - 60)
ಮೂಲಮ್
ಸತ್ಕರ್ಮಸೂಚಕೋ ನೂನಂ ಜ್ಞಾನಯಜ್ಞಃ ಸ್ಮೃತೋ ಬುಧೈಃ ।
ಶ್ರೀಮದ್ಭಾಗವತಾಲಾಪಃ ಸ ತು ಗೀತಃ ಶುಕಾದಿಭಿಃ ॥
ಅನುವಾದ
ಆದರೆ ಪಂಡಿತರು ಜ್ಞಾನ ಯಜ್ಞವನ್ನೇ ಸತ್ಕರ್ಮ (ಮುಕ್ತಿದಾಯಕ ಕರ್ಮ)ದ ಸೂಚಕವೆಂದು ಒಪ್ಪಿರುವರು. ಅದು ಶ್ರೀಮದ್ಭಾಗವತದ ಪಾರಾಯಣವೇ ಆಗಿದೆ. ಅದನ್ನು ಶುಕಾದಿ ಮಹಾನುಭಾವರು ಹಾಡಿರುವರು. ॥60॥
(ಶ್ಲೋಕ - 61)
ಮೂಲಮ್
ಭಕ್ತಿಜ್ಞಾನವಿರಾಗಾಣಾಂ ತದ್ಘೋಷೇಣ ಬಲಂ ಮಹತ್ ।
ವ್ರಜಿಷ್ಯತಿ ದ್ವಯೋಃ ಕಷ್ಟಂ ಸುಖಂ ಭಕ್ತೇರ್ಭವಿಷ್ಯತಿ ॥
ಅನುವಾದ
ಅದರ ಶಬ್ದ ಕೇಳುತ್ತಲೇ ಭಕ್ತಿ, ಜ್ಞಾನ, ವೈರಾಗ್ಯ ಇವುಗಳಿಗೆ ಹೆಚ್ಚಿನ ಬಲ ದೊರೆಯಬಹುದು. ಇದರಿಂದ ಜ್ಞಾನ, ವೈರಾಗ್ಯಗಳ ಕಷ್ಟ ಅಳಿದು ಹೋಗಿ ಭಕ್ತಿಗೆ ಆನಂದ ಸಿಗಬಹುದು. ॥61॥
(ಶ್ಲೋಕ - 62)
ಮೂಲಮ್
ಪ್ರಲಯಂ ಹಿ ಗಮಿಷ್ಯಂತಿ ಶ್ರೀಮದ್ಭಾಗವತಧ್ವನೇಃ ।
ಕಲೇರ್ದೋಷಾ ಇಮೇ ಸರ್ವೇ ಸಿಂಹಶಬ್ದಾದ್ ವೃಕಾ ಇವ ॥
ಅನುವಾದ
ಸಿಂಹದ ಗರ್ಜನೆಯನ್ನು ಕೇಳುತ್ತಲೇ ನರಿಗಳು ಓಡಿಹೋಗುವಂತೆ ಶ್ರೀಮದ್ಭಾಗವತದ ಧ್ವನಿಯಿಂದ ಕಲಿಯುಗದ ದೋಷಗಳೆಲ್ಲ ನಾಶವಾಗಿ ಹೋಗುತ್ತವೆ. ॥62॥
(ಶ್ಲೋಕ - 63)
ಮೂಲಮ್
ಜ್ಞಾನವೈರಾಗ್ಯಸಂಯುಕ್ತಾ ಭಕ್ತಿಃ ಪ್ರೇಮರಸಾವಹಾ ।
ಪ್ರತಿಗೇಹಂ ಪ್ರತಿಜನಂ ತತಃ ಕ್ರೀಡಾಂ ಕರಿಷ್ಯತಿ ॥
ಅನುವಾದ
ಆಗ ಪ್ರೇಮರಸವನ್ನು ಪ್ರವಹಿಸುವ ಭಕ್ತಿಯು ಜ್ಞಾನ, ವೈರಾಗ್ಯಗಳೊಂದಿಗೆ ಪ್ರತಿಯೊಂದು ಮನೆ ಮತ್ತು ಜನರ ಹೃದಯದಲ್ಲಿ ಕ್ರೀಡಿಸಬಹುದು. ॥63॥
(ಶ್ಲೋಕ - 64)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ವೇದವೇದಾಂತ ಘೋಷೈಶ್ಚ ಗೀತಾಪಾಠೈಃ ಪ್ರಬೋಧಿತಮ್ ।
ಭಕ್ತಿ ಜ್ಞಾನವಿರಾಗಾಣಾಂ ನೋದತಿಷ್ಠತ್ತ್ರಿಕಂ ಯದಾ ॥
ಅನುವಾದ
ನಾರದರು ಹೇಳಿದರು — ನಾನು ವೇದ-ವೇದಾಂತದ ಧ್ವನಿ ಗೈದು, ಗೀತಾಪಾರಾಯಣ ಮಾಡಿ ಅವರನ್ನು ತುಂಬಾ ಎಚ್ಚರಿಸಿದೆ. ಆದರೂ ಭಕ್ತಿ, ಜ್ಞಾನ, ವೈರಾಗ್ಯ ಇವರು ಎಚ್ಚರಗೊಳ್ಳಲಿಲ್ಲ. ॥64॥
(ಶ್ಲೋಕ - 65)
ಮೂಲಮ್
ಶ್ರೀಮದ್ಭಾಗವತಾಲಾಪಾತ್ತತ್ಕಥಂ ಬೋಧಮೇಷ್ಯತಿ ।
ತತ್ಕಥಾಸು ತು ವೇದಾರ್ಥಃ ಶ್ಲೋಕೇ ಶ್ಲೋಕೇ ಪದೇ ಪದೇ ॥
ಅನುವಾದ
ಇಂತಹ ಸ್ಥಿತಿಯಲ್ಲಿ ಶ್ರೀಮದ್ಭಾಗವತವನ್ನು ಕೇಳುವುದರಿಂದ ಅವರು ಹೇಗೆ ಎಚ್ಚರಗೊಳ್ಳುವರು? ಏಕೆಂದರೆ, ಆ ಕಥೆಯ ಪ್ರತಿಯೊಂದು ಶ್ಲೋಕ ಮತ್ತು ಪದಗಳಲ್ಲಿ ವೇದಗಳ ಸಾರಾಂಶವೇ ಇದೇ ತಾನೇ! ॥65॥
(ಶ್ಲೋಕ - 66)
ಮೂಲಮ್
ಛಿಂದಂತು ಸಂಶಯಂ ಹ್ಯೇನಂ ಭವಂತೋಽಮೋಘದರ್ಶನಾಃ ।
ವಿಲಂಬೋ ನಾತ್ರ ಕರ್ತವ್ಯಃ ಶರಣಾಗತವತ್ಸಲಾಃ ॥
ಅನುವಾದ
ನೀವುಗಳು ಶರಣಾಗತ ವತ್ಸಲರಾಗಿರುವಿರಿ. ನಿಮ್ಮ ದರ್ಶನವು ಎಂದೂ ವ್ಯರ್ಥವಾಗುವುದಿಲ್ಲ. ಅದಕ್ಕಾಗಿ ಈ ಕಾರ್ಯದಲ್ಲಿ ವಿಳಂಬಿಸದೆ ನನ್ನ ಈ ಸಂದೇಹವನ್ನು ಕಳೆಯಿರಿ. ॥66॥
(ಶ್ಲೋಕ - 67)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ವೇದೋಪನಿಷದಾಂ ಸಾರಾಜ್ಜಾತಾ ಭಾಗವತೀ ಕಥಾ ।
ಅತ್ಯುತ್ತಮಾ ತತೋ ಭಾತಿ ಪೃಥಗ್ಭೂತಾ ಫಲಾಕೃತಿಃ ॥
ಅನುವಾದ
ಸನಕಾದಿಗಳು ಹೇಳಿದರು — ಶ್ರೀಮದ್ಭಾಗವತದ ಕಥೆಯು ವೇದ-ಉಪನಿಷತ್ತುಗಳ ಸಾರದಿಂದಲೇ ರಚಿತವಾಗಿದೆ. ಅದಕ್ಕಾಗಿ ಅವುಗಳಿಂದ ಬೇರೆಯಾಗಿ ಇದರ ಫಲಸ್ವರೂಪವಿರುವ ಕಾರಣ ಅದು ತುಂಬಾ ಉತ್ತಮವೆಂದು ತಿಳಿದುಬರುತ್ತದೆ. ॥67॥
(ಶ್ಲೋಕ - 68)
ಮೂಲಮ್
ಆಮೂಲಾಗ್ರಂ ರಸಸ್ತಿಷ್ಠನ್ನಾಸ್ತೇ ನ ಸ್ವಾದ್ಯತೇ ಯಥಾ ।
ಸ ಭೂಯಃ ಸಂಪೃಥಗ್ಭೂತಃ ಫಲೇ ವಿಶ್ವಮನೋಹರಃ ॥
ಅನುವಾದ
ಮರದ ರಸವು ಬೇರಿನಿಂದ ಹಿಡಿದು ಟೊಂಗೆಯ ತುದಿಯವರೆಗೆ ಇರುತ್ತದೆ ಆದರೆ ಈ ಸ್ಥಿತಿಯಲ್ಲಿ ಅದನ್ನು ಆಸ್ವಾದಿಸಲಾಗುವುದಿಲ್ಲ. ಆದರೆ ಅದೇ ಬೇರೆಯಾಗಿ ಫಲದ ರೂಪದಲ್ಲಿ ಬಂದಾಗ ಜಗತ್ತಿನಲ್ಲಿ ಎಲ್ಲರಿಗೆ ಪ್ರಿಯವೆನಿಸುತ್ತದೆ. ॥68॥
(ಶ್ಲೋಕ - 69)
ಮೂಲಮ್
ಯಥಾ ದುಗ್ಧೇ ಸ್ಥಿತಂ ಸರ್ಪಿರ್ನ ಸ್ವಾದಾಯೋಪಕಲ್ಪತೇ ।
ಪೃಥಗ್ಭೂತಂ ಹಿ ತದ್ಗವ್ಯಂ ದೇವಾನಾಂ ರಸವರ್ಧನಮ್ ॥
ಅನುವಾದ
ಹಾಲಿನಲ್ಲಿ ತುಪ್ಪ ಇರುತ್ತದೆ. ಆದರೆ ಆಗ ಅದರ ಬೇರೆಯಾದ ರುಚಿ ಸಿಗುವುದಿಲ್ಲ. ಅದು ಹಾಲಿನಿಂದ ಬೇರೆಯಾದಾಗ ದೇವತೆಗಳಿಗೂ ಕೂಡ ಸ್ವಾದ ವರ್ಧಕವಾಗುತ್ತದೆ. ॥69॥
(ಶ್ಲೋಕ - 70)
ಮೂಲಮ್
ಇಕ್ಷೂಣಾಮಪಿ ಮಧ್ಯಾಂತಂ ಶರ್ಕರಾ ವ್ಯಾಪ್ಯ ತಿಷ್ಠತಿ ।
ಪೃಥಗ್ಭೂತಾ ಚ ಸಾ ಮಿಷ್ಟಾ ತಥಾ ಭಾಗವತೀ ಕಥಾ ॥
ಅನುವಾದ
ಸಿಹಿಯು ಕಬ್ಬಿನಲ್ಲಿ ತುದಿ-ಬುಡ ನಡುವೆ ಎಲ್ಲೆಡೆ ವ್ಯಾಪ್ತವಾಗಿರುತ್ತದೆ. ಆದರೆ ಬೇರೆಯಾದಾಗಲೇ ಅದರ ಸಿಹಿ ಬೇರೆಯೇ ಆಗುತ್ತದೆ. ಹೀಗೆಯೇ ಈ ಭಾಗವತದ ಕಥೆಯಾಗಿದೆ. ॥70॥
(ಶ್ಲೋಕ - 71)
ಮೂಲಮ್
ಇದಂ ಭಾಗವತಂ ನಾಮ ಪುರಾಣಂ ಬ್ರಹ್ಮಸಮ್ಮಿತಮ್ ।
ಭಕ್ತಿಜ್ಞಾನವಿರಾಗಾಣಾಂ ಸ್ಥಾಪನಾಯ ಪ್ರಕಾಶಿತಮ್ ॥
ಅನುವಾದ
ಈ ಭಾಗವತ ಪುರಾಣವು ವೇದಗಳಿಗೆ ಸಮಾನವಾಗಿದೆ. ಶ್ರೀವೇದವ್ಯಾಸ ದೇವರು ಇದನ್ನು ಭಕ್ತಿ, ಜ್ಞಾನ, ವೈರಾಗ್ಯದ ಸ್ಥಾಪನೆಗಾಗಿಯೇ ಪ್ರಕಾಶಿತಗೊಳಿಸಿದ್ದಾರೆ. ॥71॥
(ಶ್ಲೋಕ - 72)
ಮೂಲಮ್
ವೇದಾಂತವೇದಸುಸ್ನಾತೇ ಗೀತಾಯಾ ಅಪಿ ಕರ್ತರಿ ।
ಪರಿತಾಪವತಿ ವ್ಯಾಸೇ ಮುಹ್ಯತ್ಯಜ್ಞಾನಸಾಗರೇ ॥
(ಶ್ಲೋಕ - 73)
ಮೂಲಮ್
ತದಾ ತ್ವಯಾ ಪುರಾ ಪ್ರೋಕ್ತಂ ಚತುಃಶ್ಲೋಕ ಸಮನ್ವಿತಮ್ ।
ತದೀಯ ಶ್ರವಣಾತ್ಸದ್ಯೋ ನಿರ್ಬಾಧೋ ಬಾದರಾಯಣಃ ॥
ಅನುವಾದ
ಹಿಂದೊಮ್ಮೆ ವೇದ-ವೇದಾಂತದ ಪಾರಂಗತರೂ, ಗೀತೆಯನ್ನು ರಚಿಸಿದವರೂ ಆದ ಭಗವಾನ್ ಶ್ರೀವೇದವ್ಯಾಸರು ಖಿನ್ನರಾಗಿ ಅಜ್ಞಾನಸಾಗರದಲ್ಲಿ ಮುಳುಗಿದ್ದಾಗ ನೀವೇ ಅವರಿಗೆ ನಾಲ್ಕು ಶ್ಲೋಕಗಳಲ್ಲಿ ಇದನ್ನು ಉಪದೇಶಿಸಿರುವಿರಿ. ಅದನ್ನು ಕೇಳುತ್ತಲೇ ಅವರ ಎಲ್ಲ ಚಿಂತೆಗಳು ದೂರವಾಗಿದ್ದವು. ॥72-73॥
(ಶ್ಲೋಕ - 74)
ಮೂಲಮ್
ತತ್ರ ತೇ ವಿಸ್ಮಯಃ ಕೇನ ಯತಃ ಪ್ರಶ್ನಕರೋ ಭವಾನ್ ।
ಶ್ರೀಮದ್ಭಾಗವತಂ ಶ್ರಾವ್ಯಂ ಶೋಕದುಃಖವಿನಾಶನಮ್ ॥
ಅನುವಾದ
ಮತ್ತೆ ಇದರಲ್ಲಿ ನಿಮಗೆ ಏಕೆ ಆಶ್ಚರ್ಯವಾಗುತ್ತಿದೆ? ನೀವು ನಮ್ಮಲ್ಲಿ ಪ್ರಶ್ನಿಸುತ್ತಿರುವಿರಲ್ಲ! ನೀವು ಅವರಿಗೆ ದುಃಖ-ಶೋಕವನ್ನು ನಾಶಮಾಡುವಂತಹ ಶ್ರೀಮದ್ಭಾಗವತ ಪುರಾಣವನ್ನು ಹೇಳಬೇಕು. ॥74॥
(ಶ್ಲೋಕ - 75)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಯದ್ದರ್ಶನಂ ಚ ವಿನಿಹಂತ್ಯ ಶುಭಾನಿ ಸದ್ಯಃ
ಶ್ರೇಯಸ್ತನೋತಿ ಭವದುಃಖದವಾರ್ದಿತಾನಾಮ್ ।
ನಿಃಶೇಷಶೇಷಮುಖಗೀತಕಥೈಕಪಾನಾಃ
ಪ್ರೇಮಪ್ರಕಾಶಕೃತಯೇ ಶರಣಂ ಗತೋಽಸ್ಮಿ ॥
ಅನುವಾದ
ನಾರದರು ಹೇಳಿದರು — ಸನಕಾದಿಗಳೇ! ನಿಮ್ಮ ದರ್ಶನವು ಜೀವಿಯ ಸಮಸ್ತ ಪಾಪಗಳನ್ನು ತತ್ಕಾಲ ನಾಶ ಮಾಡಿ ಬಿಡುತ್ತದೆ. ಸಾಂಸಾರಿಕ ದುಃಖರೂಪವಾದ ದಾವಾನಲದಿಂದ ಬೇಯುತ್ತಿರುವವರ ಮೇಲೆ ಬೇಗನೇ ಶಾಂತಿಯ ಮಳೆಗರೆಯುತ್ತದೆ. ನೀವು ನಿರಂತರ ಆದಿಶೇಷನು ಸಾವಿರ ಹೆಡೆಗಳಿಂದ ಹಾಡಿದ ಭಗವತ್ ಕಥಾಮೃತವನ್ನು ಪಾನ ಮಾಡುತ್ತಾ ಇರುತ್ತಿರಿ. ನಾನು ಪ್ರೇಮಲಕ್ಷಣಾ ಭಕ್ತಿಯನ್ನು ಪ್ರಕಾಶಗೊಳಿಸುವ ಉದ್ದೇಶದಿಂದ ತಮ್ಮಲ್ಲಿ ಶರಣಾಗಿದ್ದೇನೆ. ॥75॥
(ಶ್ಲೋಕ - 76)
ಮೂಲಮ್
ಭಾಗ್ಯೋದಯೇನ ಬಹುಜನ್ಮ ಸಮರ್ಜಿತೇನ
ಸತ್ಸಂಗಮಂ ಚ ಲಭತೇ ಪುರುಷೋ ಯದಾ ವೈ ।
ಅಜ್ಞಾನ ಹೇತುಕೃತ ಮೋಹ ಮದಾಂಧಕಾರ-
ನಾಶಂ ವಿಧಾಯ ಹಿ ತದೋದಯತೇ ವಿವೇಕಃ ॥
ಅನುವಾದ
ಅನೇಕ ಜನ್ಮಗಳ ಸಂಚಿತ ಪುಣ್ಯ ಪುಂಜದ ಉದಯವಾದಾಗ ಮನುಷ್ಯನಿಗೆ ಸತ್ಸಂಗವು ಲಭಿಸುತ್ತದೆ. ಆಗ ಅದು ಅವನ ಅಜ್ಞಾನಜನಿತ ಮೋಹ, ಮದ ರೂಪವಾದ ಅಂಧಕಾರವನ್ನು ನಾಶಗೊಳಿಸಿ, ವಿವೇಕದ ಉದಯವಾಗುತ್ತದೆ.॥76॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು.॥2॥
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಕುಮಾರನಾರದಸಂವಾದೋ ನಾಮ ದ್ವಿತೀಯೋಽಧ್ಯಾಯಃ ॥2॥