[ಮೊದಲನೆಯ ಅಧ್ಯಾಯ]
ಭಾಗಸೂಚನಾ
ಭಕ್ತಿದೇವಿಯೊಂದಿಗೆ ದೇವರ್ಷಿ ನಾರದರ ಭೇಟಿ
(ಶ್ಲೋಕ - 1)
ಮೂಲಮ್
ಸಚ್ಚಿದಾನಂದರೂಪಾಯ ವಿಶ್ವೋತ್ಪತ್ತ್ಯಾದಿಹೇತವೇ ।
ತಾಪತ್ರಯವಿನಾಶಾಯ ಶ್ರೀಕೃಷ್ಣಾಯ ವಯಂ ನುಮಃ ॥
ಅನುವಾದ
ಸಚ್ಚಿದಾನಂದಸ್ವರೂಪನಾದ ಭಗವಾನ್ ಶ್ರೀಕೃಷ್ಣನಿಗೆ ನಾವು ನಮಸ್ಕರಿಸುತ್ತೇವೆ. ಅವನು ಜಗತ್ತಿನ ಉತ್ಪತ್ತಿ, ಸ್ಥಿತಿ, ವಿನಾಶ ಮಾಡಲು ಹಾಗೂ ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕ ತ್ರಿತಾಪಗಳನ್ನು ನಾಶಮಾಡುವಂತಹವನಾಗಿದ್ದಾನೆ.॥1॥
(ಶ್ಲೋಕ - 2)
ಮೂಲಮ್
ಯಂ ಪ್ರವ್ರಜಂತಮನುಪೇತಮಪೇತಕೃತ್ಯಂ
ದ್ವೈಪಾಯನೋ ವಿರಹಕಾತರ ಆಜುಹಾವ ।
ಪುತ್ರೇತಿ ತನ್ಮಯತಯಾ ತರವೋಽಭಿನೇದು-
ಸ್ತಂ ಸರ್ವಭೂತಹೃದಯಂ ಮುನಿಮಾನತೋಽಸ್ಮಿ ॥
ಅನುವಾದ
ಶ್ರೀಶುಕಮಹಾಮುನಿಗಳು ಉಪನಯನವೇ ಆಗದಿದ್ದರೂ ನೈಸರ್ಗಿಕವಾಗಿಯೇ ಬ್ರಹ್ಮಜ್ಞಾನ ಸಂಪನ್ನರಾಗಿದ್ದರು. ಆದ್ದರಿಂದ ಅವರಿಗೆ ಏನನ್ನೂ ಮಾಡುವುದೂ ಬಾಕಿ ಇರಲಿಲ್ಲ. ಇಂತಹ ಬ್ರಹ್ಮನಿಷ್ಠ ಪುತ್ರನು ಮನೆ ಬಿಟ್ಟು ಹೊರಟು ಹೋಗುವಾಗ ಅವನ ತಂದೆ ವೇದವ್ಯಾಸರು ವ್ಯಾಕುಲರಾಗಿ ಮಗೂ! ಮಗನೇ! ಎಂದು ಕರೆಯ ತೊಡಗಿದರು. ಶುಕಮಹಾಮುನಿಗಳಿಗೆ ಸರ್ವಾತ್ಮಭಾವ ಉಂಟಾದ್ದರಿಂದ ಚರಾಚರಗಳಲ್ಲೂ ಏಕಾಕಾರವಾಗಿ ಹೋಗಿದ್ದರಿಂದ ಆ ಕಾಡಿನ ವೃಕ್ಷಗಳೇ ಅವರ ವತಿಯಿಂದ ಉತ್ತರಿಸತೊಡಗಿದವು. ಅಂತಹ ಸರ್ವಭೂತರ ಆತ್ಮ ಸ್ವರೂಪರಾದ ಶ್ರೀಶುಕಮುನಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ.॥2॥
(ಶ್ಲೋಕ - 3)
ಮೂಲಮ್
ನೈಮಿಷೇ ಸೂತಮಾಸೀನಮಭಿವಾದ್ಯ ಮಹಾಮತಿಮ್ ।
ಕಥಾಮೃತ ರಸಾಸ್ವಾದ ಕುಶಲಃ ಶೌನಕೋಽಬ್ರವೀತ್ ॥
ಅನುವಾದ
ಒಮ್ಮೆ ಭಗವತ್ಕಥಾಮೃತದ ರಸಾಸ್ವಾದದಲ್ಲಿ ಕುಶಲರಾದ ಮುನಿವರ ಶೌನಕರು ನೈಮಿಷಾರಣ್ಯ ಕ್ಷೇತ್ರದಲ್ಲಿ ವಿರಾಜಮಾನರಾದ ಮಹಾಮತಿವಂತ ಸೂತಪುರಾಣಿಕರಿಗೆ ನಮಸ್ಕರಿಸಿ, ಅವರಲ್ಲಿ ಕೇಳಿದರು.॥3॥
(ಶ್ಲೋಕ - 4)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಅಜ್ಞಾನಧ್ವಾಂತ ವಿಧ್ವಂಸಕೋಟಿ ಸೂರ್ಯ ಸಮಪ್ರಭ ।
ಸೂತಾಖ್ಯಾಹಿ ಕಥಾಸಾರಂ ಮಮ ಕರ್ಣರಸಾಯನಮ್ ॥
ಅನುವಾದ
ಶೌನಕರು ಹೇಳಿದರು — ಸೂತಪುರಾಣಿಕರೇ! ನೀವು ಅಜ್ಞಾನಾಂಧಕಾರವನ್ನು ನಾಶಮಾಡುವುದರಲ್ಲಿ ಕೋಟಿಸೂರ್ಯರಿಗೆ ಸಮಾನರಾಗಿದ್ದೀರಿ. ನೀವು ನಮ್ಮಗಳಿಗೆ ಕರ್ಣರಸಾಯನವಾದ ಅಮೃತ ಸ್ವರೂಪವಾದ ಸಾರಗರ್ಭಿತವಾದ ಕಥೆಯನ್ನು ಹೇಳಿರಿ.॥4॥
(ಶ್ಲೋಕ - 5)
ಮೂಲಮ್
ಭಕ್ತಿಜ್ಞಾನವಿರಾಗಾಪ್ತೋ ವಿವೇಕೋ ವರ್ಧತೇ ಮಹಾನ್ ।
ಮಾಯಾಮೋಹನಿರಾಸಶ್ಚ ವೈಷ್ಣವೈಃ ಕ್ರಿಯತೇ ಕಥಮ್ ॥
ಅನುವಾದ
ಭಕ್ತಿ, ಜ್ಞಾನ, ವೈರಾಗ್ಯಗಳಿಂದ ದೊರೆಯುವ ಮಹಾನ್ ವಿವೇಕದ ವೃದ್ಧಿ ಹೇಗಾದೀತು? ಹಾಗೂ ವೈಷ್ಣವರು ಈ ಮಾಯಾಮೋಹದಿಂದ ಹೇಗೆ ಪಾರಾಗಬಲ್ಲರು? ॥5॥
(ಶ್ಲೋಕ - 6)
ಮೂಲಮ್
ಇಹ ಘೋರೇ ಕಲೌ ಪ್ರಾಯೋ ಜೀವಶ್ಚಾಸುರತಾಂ ಗತಃ ।
ಕ್ಲೇಶಾಕ್ರಾಂತಸ್ಯ ತಸ್ಯೈವ ಶೋಧನೇ ಕಿಂ ಪರಾಯಣಮ್ ॥
ಅನುವಾದ
ಈ ಘೋರವಾದ ಕಲಿಕಾಲದಲ್ಲಿ ಜೀವರು ಪ್ರಾಯಶಃ ಆಸುರೀ ಸ್ವಭಾವದವರಾಗಿದ್ದಾರೆ. ವಿವಿಧ ಕ್ಲೇಶಗಳಿಂದ ಆಕ್ರಾಂತರಾದ ಈ ಜೀವರನ್ನು ಶುದ್ಧ(ದೈವೀಶಕ್ತಿ ಸಂಪನ್ನ)ರಾಗಿಸುವ ಸರ್ವಶ್ರೇಷ್ಠವಾದ ಉಪಾಯವೇನು? ॥6॥
(ಶ್ಲೋಕ - 7)
ಮೂಲಮ್
ಶ್ರೇಯಸಾಂಯದ್ಭವೇಚ್ಛ್ರೇಯಃಪಾವನಾನಾಂಚಪಾವನಮ್ ।
ಕೃಷ್ಣಪ್ರಾಪ್ತಿಕರಂ ಶಶ್ವತ್ಸಾಧನಂ ತದ್ವದಾಧುನಾ ॥
ಅನುವಾದ
ಎಲ್ಲಕ್ಕಿಂತ ಹೆಚ್ಚಾದ ಶ್ರೇಯಸ್ಕರವೂ, ಪವಿತ್ರವೂ ಮಾಡುವ ಪವಿತ್ರನಾಗಿರುವ ಭಗವಾನ್ ಶ್ರೀಕೃಷ್ಣನ ಪ್ರಾಪ್ತಿಯಾಗಿಸುವ ಶಾಶ್ವತವಾದ ಸಾಧನೆಯನ್ನು ನೀವು ನಮಗೆ ತಿಳಿಸಿರಿ.॥7॥
(ಶ್ಲೋಕ - 8)
ಮೂಲಮ್
ಚಿಂತಾಮಣಿರ್ಲೋಕಸುಖಂ ಸುರದ್ರುಃ ಸ್ವರ್ಗಸಂಪದಮ್ ।
ಪ್ರಯಚ್ಛತಿ ಗುರುಃ ಪ್ರೀತೋ ವೈಕುಂಠಂ ಯೋಗಿದುರ್ಲಭಮ್ ॥
ಅನುವಾದ
ಚಿಂತಾಮಣಿಯು ಕೇವಲ ಲೌಕಿಕ ಸುಖ ನೀಡಬಲ್ಲದು. ಕಲ್ಪವೃಕ್ಷವು ಹೆಚ್ಚೆಂದರೆ ಸ್ವರ್ಗದ ಸಂಪತ್ತನ್ನು ಕೊಡಬಲ್ಲದು. ಆದರೆ ಸದ್ಗುರುಗಳು ಪ್ರಸನ್ನರಾದರೆ ಯೋಗಿಗಳಿಗೆ ದುರ್ಲಭವಾದ ಭಗವಂತನ ವೈಕುಂಠ ಧಾಮವನ್ನೇ ಕೊಡುತ್ತಾರೆ.॥8॥
(ಶ್ಲೋಕ - 9)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಪ್ರೀತಿಃ ಶೌನಕ ಚಿತ್ತೇ ತೇ ಹ್ಯತೋ ವಚ್ಮಿ ವಿಚಾರ್ಯ ಚ ।
ಸರ್ವಸಿದ್ಧಾಂತ ನಿಷ್ಪನ್ನಂ ಸಂಸಾರ ಭಯ ನಾಶನಮ್ ॥
ಅನುವಾದ
ಸೂತಪುರಾಣಿಕರು ಹೇಳಿದರು — ಶೌನಕರೇ! ನಿಮ್ಮ ಹೃದಯದಲ್ಲಿ ಭಗವಂತನ ಪ್ರೇಮ ತುಂಬಿದೆ. ಅದಕ್ಕಾಗಿ ನಾನು ವಿಚಾರಗೈದು ಜನ್ಮ-ಮೃತ್ಯುವಿನ ಭಯವನ್ನು ನಾಶಮಾಡುವಂತಹ ಸಮಸ್ತ ಸಿದ್ಧಾಂತಗಳ ನಿಷ್ಕರ್ಷವನ್ನು ನಿಮಗೆ ಹೇಳುತ್ತೇನೆ.॥9॥
(ಶ್ಲೋಕ - 10)
ಮೂಲಮ್
ಭಕ್ತ್ಯೋಘವರ್ಧನಂ ಯಚ್ಚ ಕೃಷ್ಣಸಂತೋಷಹೇತುಕಮ್ ।
ತದಹಂ ತೇಽಭಿಧಾಸ್ಯಾಮಿ ಸಾವಧಾನತಯಾ ಶೃಣು ॥
ಅನುವಾದ
ಭಕ್ತಿಯ ಪ್ರವಾಹವನ್ನು ಹೆಚ್ಚಿಸುವ, ಭಗವಾನ್ ಶ್ರೀಕೃಷ್ಣನ ಪ್ರಸನ್ನತೆಯ ಪ್ರಧಾನ ಕಾರಣವಾದ ಸಾಧನೆಯನ್ನು ನಾನು ನಿಮಗೆ ಹೇಳುವೆನು. ಅದನ್ನು ದತ್ತಚಿತ್ತರಾಗಿ ಕೇಳಿರಿ.॥10॥
(ಶ್ಲೋಕ - 11)
ಮೂಲಮ್
ಕಾಲವ್ಯಾಲಮುಖಗ್ರಾಸತ್ರಾಸನಿರ್ಣಾಶಹೇತವೇ ।
ಶ್ರೀಮದ್ಭಾಗವತಂ ಶಾಸ್ತ್ರಂ ಕಲೌ ಕೀರೇಣ ಭಾಷಿತಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಕಲಿಯುಗದಲ್ಲಿ ಜೀವರು ಕಾಲರೂಪವಾದ ಸರ್ಪಕ್ಕೆ ತುತ್ತಾಗುವ ದುಃಖವನ್ನು ಪೂರ್ಣವಾಗಿ ನಾಶಮಾಡಲಿಕ್ಕಾಗಿ ಶ್ರೀಮದ್ಭಾಗವತ ಶಾಸ್ತ್ರವನ್ನು ಹೇಳಿರುವರು.॥11॥
(ಶ್ಲೋಕ - 12)
ಮೂಲಮ್
ಏತಸ್ಮಾದಪರಂ ಕಿಂಚಿನ್ಮನಃ ಶುದ್ಧ್ಯೈ ನ ವಿದ್ಯತೇ ।
ಜನ್ಮಾಂತರೇ ಭವೇತ್ ಪುಣ್ಯಂ ತದಾ ಭಾಗವತಂ ಲಭೇತ್ ॥
ಅನುವಾದ
ಮನಸ್ಸಿನ ಶುದ್ಧಿಗಾಗಿ ಇದರಿಂದ ಮಿಗಿಲಾದ ಯಾವ ಸಾಧನೆಯೂ ಇಲ್ಲ. ಮನುಷ್ಯನ ಜನ್ಮ-ಜನ್ಮಾಂತರದ ಪುಣ್ಯವು ಉದಯಿಸಿದಾಗಲೇ ಅವನಿಗೆ ಈ ಭಾಗವತಶಾಸ್ತ್ರವು ದೊರೆಯುತ್ತದೆ.॥12॥
(ಶ್ಲೋಕ - 13)
ಮೂಲಮ್
ಪರೀಕ್ಷಿತೇ ಕಥಾಂ ವಕ್ತುಂ ಸಭಾಯಾಂ ಸಂಸ್ಥಿತೇ ಶುಕೇ ।
ಸುಧಾಕುಂಭಂ ಗೃಹೀತ್ವೈವ ದೇವಾಸ್ತತ್ರ ಸಮಾಗಮನ್ ॥
ಅನುವಾದ
ಶ್ರೀಶುಕಮಹಾಮುನಿಗಳು ಪರೀಕ್ಷಿತನಿಗೆ ಈ ಕಥೆಯನ್ನು ಹೇಳಲು ಸಭೆಯಲ್ಲಿ ವಿರಾಜಮಾನರಾಗಿದ್ದಾಗ ದೇವತೆಗಳು ಅಮೃತ ಕಲಶವನ್ನೇತ್ತಿಕೊಂಡು ಅವರ ಬಳಿಗೆ ಬಂದರು.॥13॥
(ಶ್ಲೋಕ - 14)
ಮೂಲಮ್
ಶುಕಂ ನತ್ವಾವದನ್ ಸರ್ವೇ ಸ್ವಕಾರ್ಯಕುಶಲಾಃ ಸುರಾಃ ।
ಕಥಾಸುಧಾಂ ಪ್ರಯಚ್ಛಸ್ವ ಗೃಹೀತ್ವೈವ ಸುಧಾಮಿಮಾಮ್ ॥
ಅನುವಾದ
ದೇವತೆಗಳು ತಮ್ಮ ಕಾರ್ಯ ಸಾಧನೆಯಲ್ಲಿ ತುಂಬಾ ಕುಶಲರಾಗಿರುತ್ತಾರೆ. ಆದ್ದರಿಂದ ಇಲ್ಲಿಯೂ ಎಲ್ಲರೂ ಶುಕಮಹಾಮುನಿಗಳಿಗೆ ನಮಸ್ಕರಿಸಿ ಹೇಳಿದರು- ‘‘ನೀವು ಈ ಅಮೃತಕಲಶವನ್ನು ಸ್ವೀಕರಿಸಿ, ಬದಲಿಗೆ ನಮಗೆ ಕಥಾಮೃತದ ದಾನವನ್ನು ಕೊಡಿರಿ. ॥14॥
(ಶ್ಲೋಕ - 15)
ಮೂಲಮ್
ಏವಂ ವಿನಿಮಯೇ ಜಾತೇ ಸುಧಾ ರಾಜ್ಞಾ ಪ್ರಪೀಯತಾಮ್ ।
ಪ್ರಪಾಸ್ಯಾಮೋ ವಯಂ ಸರ್ವೇ ಶ್ರೀಮದ್ಭಾಗವತಾಮೃತಮ್ ॥
ಅನುವಾದ
ಹೀಗೆ ಪರಸ್ಪರ ವಿನಿಮಯವಾದಾಗ ರಾಜಾಪರೀಕ್ಷಿತನು ಅಮೃತವನ್ನು ಪಾನ ಮಾಡುವನು ಹಾಗೂ ನಾವೆಲ್ಲರೂ ಶ್ರೀಮದ್ಭಾಗವತ ರೂಪವಾದ ಅಮೃತವನ್ನು ಪಾನಮಾಡುವೆವು.’’ ॥15॥
(ಶ್ಲೋಕ - 16)
ಮೂಲಮ್
ಕ್ವ ಸುಧಾ ಕ್ವಕಥಾ ಲೋಕೇ ಕ್ವ ಕಾಚಃ ಕ್ವ ಮಣಿರ್ಮಹಾನ್ ।
ಬ್ರಹ್ಮರಾತೋ ವಿಚಾರ್ಯೈವಂ ತದಾ ದೇವಾಂಜಹಾಸಹ ॥
ಅನುವಾದ
ಈ ಪ್ರಪಂಚದಲ್ಲಿ ಗಾಜಿನ ತುಂಡೆಲ್ಲಿ, ಮಹಾಮೂಲ್ಯ ವಜ್ರವೆಲ್ಲಿ? ಎಲ್ಲಿ ಸುಧೆ ಮತ್ತು ಎಲ್ಲಿ ಹರಿಕಥೆ? ಹೀಗೆ ಯೋಚಿಸಿ ಶ್ರೀಶುಕಮುನಿಗಳು ಆಗ ದೇವತೆಗಳನ್ನು ಪರಿಹಾಸ್ಯ ಮಾಡಿದರು. ॥16॥
(ಶ್ಲೋಕ - 17)
ಮೂಲಮ್
ಅಭಕ್ತಾಂಸ್ತಾಂಶ್ಚ ವಿಜ್ಞಾಯ ನ ದದೌ ಸ ಕಥಾಮೃತಮ್ ।
ಶ್ರೀಮದ್ಭಾಗವತೀ ವಾರ್ತಾ ಸುರಾಣಾಮಪಿ ದುರ್ಲಭಾ ॥
ಅನುವಾದ
ಅವರನ್ನು ಭಕ್ತಿ ಶೂನ್ಯ (ಕಥೆಯ ಅನಧಿಕಾರಿ)ರೆಂದು ತಿಳಿದು ಕಥಾಮೃತವನ್ನು ದಾನ ಮಾಡಲಿಲ್ಲ. ಹೀಗೆ ಈ ಶ್ರೀಮದ್ಭಾಗವತದ ಕಥೆ ದೇವತೆಗಳಿಗೂ ದುರ್ಲಭವಾಗಿದೆ.॥17॥
(ಶ್ಲೋಕ - 18)
ಮೂಲಮ್
ರಾಜ್ಞೋ ಮೋಕ್ಷಂ ತಥಾವೀಕ್ಷ್ಯಪುರಾ ಧಾತಾಪಿವಿಸ್ಮಿತಃ ।
ಸತ್ಯಲೋಕೇ ತುಲಾಂ ಬದ್ಧ್ವಾತೋಲಯತ್ಸಾಧನಾನ್ಯಜಃ ॥
ಅನುವಾದ
ಹಿಂದೆ ಶ್ರೀಮದ್ಭಾಗವತದ ಶ್ರವಣದಿಂದಲೇ ರಾಜಾ ಪರೀಕ್ಷಿತನು ಮುಕ್ತನಾದುದನ್ನು ನೋಡಿ ಬ್ರಹ್ಮದೇವರಿಗೆ ಭಾರೀ ಆಶ್ಚರ್ಯವಾಗಿತ್ತು. ಅವರು ಸತ್ಯಲೋಕದಲ್ಲಿ ತಕ್ಕಡಿ ಹಿಡಿದು ಎಲ್ಲ ಸಾಧನೆಗಳನ್ನು ತೂಕಮಾಡಿದರು.॥18॥
(ಶ್ಲೋಕ - 19)
ಮೂಲಮ್
ಲಘೂನ್ಯನ್ಯಾನಿ ಜಾತಾನಿ ಗೌರವೇಣ ಇದಂ ಮಹತ್ ।
ತದಾ ಋಷಿಗಣಾಃ ಸರ್ವೇ ವಿಸ್ಮಯಂ ಪರಮಂ ಯಯುಃ ॥
(ಶ್ಲೋಕ - 20)
ಮೂಲಮ್
ಮೇನಿರೇ ಭಗವದ್ರೂಪಂ ಶಾಸ್ತ್ರಂ ಭಾಗವತಂ ಕಲೌ ।
ಪಠನಾಚ್ಛ್ರವಣಾತ್ಸದ್ಯೋ ವೈಕುಂಠಫಲದಾಯಕಮ್ ॥
ಅನುವಾದ
ಬೇರೆ ಎಲ್ಲ ಸಾಧನೆಗಳು ತೂಕದಲ್ಲಿ ಹಗುರವಾಗಿ, ಭಾಗವತವು ಎಲ್ಲಕ್ಕಿಂತ ಭಾರವಾಯಿತು. ಇದನ್ನು ನೋಡಿ ಎಲ್ಲ ಋಷಿಗಳಿಗೆ ಭಾರೀ ವಿಸ್ಮಯವಾಯಿತು. ಅವರೆಲ್ಲರೂ ಕಲಿಯುಗದಲ್ಲಿ ಈ ಭಗವದ್ರೂಪವಾದ ಭಾಗವತ ಶಾಸ್ತ್ರದ ಶ್ರವಣ-ಪಾರಾಯಣವು ಕೂಡಲೇ ಮೋಕ್ಷ ಕೊಡುವಂತಹುದು ಎಂದು ನಿಶ್ಚಯಿಸಿದರು.॥19-20॥
(ಶ್ಲೋಕ - 21)
ಮೂಲಮ್
ಸಪ್ತಾಹೇನ ಶ್ರುತಂ ಚೈತತ್ಸರ್ವಥಾ ಮುಕ್ತಿದಾಯಕಮ್ ।
ಸನಕಾದ್ಯೈಃ ಪುರಾ ಪ್ರೋಕ್ತಂ ನಾರದಾಯ ದಯಾಪರೈಃ ॥
ಅನುವಾದ
ಶ್ರೀಮದ್ಭಾಗವತವನ್ನು ಸಪ್ತಾಹ ವಿಧಿಯಿಂದ ಶ್ರವಣಿಸಿದಾಗ ನಿಶ್ಚಯವಾಗಿಯೂ ಭಕ್ತಿಯು ಲಭಿಸುತ್ತದೆ. ಹಿಂದೆ ಇದನ್ನು ದಯಾಪರಾಯಣರಾದ ಸನಕಾದಿಗಳು ದೇವರ್ಷಿ-ನಾರದರಿಗೆ ಹೇಳಿದ್ದರು.॥21॥
(ಶ್ಲೋಕ - 22)
ಮೂಲಮ್
ಯದ್ಯಪಿ ಬ್ರಹ್ಮಸಂಬಂಧಾಚ್ಛ್ರುತಮೇತತ್ಸುರರ್ಷಿಣಾ ।
ಸಪ್ತಾಹಶ್ರವಣವಿಃ ಕುಮಾರೈಸ್ತಸ್ಯ ಭಾಷಿತಃ ॥
ಅನುವಾದ
ದೇವರ್ಷಿನಾರದರು ಮೊದಲು ಬ್ರಹ್ಮ ದೇವರಿಂದ ಇದನ್ನು ಶ್ರವಣಿಸಿದ್ದರೂ ಕೂಡ ಸಪ್ತಾಹ ಶ್ರವಣದ ವಿಧಿಯನ್ನಾದರೋ ಅವರಿಗೆ ಸನಕಾದಿಗಳೇ ತಿಳಿಸಿದ್ದರು.॥22॥
(ಶ್ಲೋಕ - 23)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಲೋಕವಿಗ್ರಹಮುಕ್ತಸ್ಯ ನಾರದಸ್ಯಾಸ್ಥಿರಸ್ಯ ಚ ।
ವಿಶ್ರವೇ ಕುತಃ ಪ್ರೀತಿಃ ಸಂಯೋಗಃ ಕುತ್ರ ತೈಃ ಸಹ ॥
ಅನುವಾದ
ಶೌನಕರು ಕೇಳಿದರು — ಪ್ರಾಪಂಚಿಕದಿಂದ ಮುಕ್ತರೂ, ವಿಚರಣಶೀಲರೂ ಆದ ನಾರದರಿಗೆ ಸನಕಾದಿಗಳೊಂದಿಗೆ ಸಂಯೋಗ ಎಲ್ಲಿ ಉಂಟಾಯಿತು? ಹಾಗೂ ವಿಧಿವಿಧಾನದಿಂದ ಶ್ರವಣಿಸುವ ಪ್ರೀತಿ ಅವರಿಗೆ ಹೇಗೆ ಉಂಟಾಯಿತು? ॥23॥
(ಶ್ಲೋಕ - 24)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಅತ್ರ ತೇ ಕೀರ್ತಯಿಷ್ಯಾಮಿ ಭಕ್ತಿಯುಕ್ತಂ ಕಥಾನಕಮ್ ।
ಶುಕೇನ ಮಮ ಯತ್ಪ್ರೋಕ್ತಂ ರಹಃ ಶಿಷ್ಯಂ ವಿಚಾರ್ಯ ಚ ॥
ಅನುವಾದ
ಸೂತಪುರಾಣಿಕರು ಹೇಳಿದುರು — ಶ್ರೀಶುಕಮಹಾಮುನಿಗಳು ನನ್ನನ್ನು ತಮ್ಮ ಅನನ್ಯ ಶಿಷ್ಯನೆಂದು ತಿಳಿದು ಏಕಾಂತದಲ್ಲಿ ಹೇಳಿದ ಭಕ್ತಿಪೂರ್ಣ ಕಥಾನಕವನ್ನು ನಿಮಗೆ ಹೇಳುತ್ತೇನೆ. ॥24॥
(ಶ್ಲೋಕ - 25)
ಮೂಲಮ್
ಏಕದಾ ಹಿ ವಿಶಾಲಾಯಾಂ ಚತ್ವಾರ ಋಷಯೋಮಲಾಃ ।
ಸತ್ಸಂಗಾರ್ಥಂ ಸಮಾಯಾತಾ ದದೃಶುಸ್ತತ್ರ ನಾರದಮ್ ॥
ಅನುವಾದ
ಒಂದುದಿನ ವಿಶಾಲಾಪುರಿಗೆ ಸತ್ಸಂಗಕ್ಕಾಗಿ ಬಂದಿರುವ ಸನಕಾದಿ ನಾಲ್ವರು ನಿರ್ಮಲ ಋಷಿಗಳು ನಾರದರನ್ನು ನೋಡಿದರು. ॥25॥
(ಶ್ಲೋಕ - 26)
ಮೂಲಮ್ (ವಾಚನಮ್)
ಕುಮಾರಾ ಊಚುಃ
ಮೂಲಮ್
ಕಥಂ ಬ್ರಹ್ಮನ್ ದೀನಮುಖಃ ಕುತಶ್ಚಿಂತಾತುರೋ ಭವಾನ್ ।
ತ್ವರಿತಂ ಗಮ್ಯತೇ ಕುತ್ರ ಕುತಶ್ಚಾಗಮನಂ ತವ ॥
ಅನುವಾದ
ಸನಕಾದಿಗಳು ಕೇಳಿದರು — ಬ್ರಹ್ಮನ್! ನಿಮ್ಮ ಮುಖ ಏಕೆ ಬಾಡಿದೆ? ನೀವು ಚಿಂತಾತುರ ಹೇಗಾದಿರಿ? ಇಷ್ಟು ಆತುರವಾಗಿ ಯಾವ ಕಡೆಗೆ ಹೋಗುತ್ತಿರುವಿರಿ? ನಿಮ್ಮ ಆಗಮನ ಯಾವ ಕಡೆಯಿಂದಾಯಿತು? ॥26॥
(ಶ್ಲೋಕ - 27)
ಮೂಲಮ್
ಇದಾನೀಂ ಶೂನ್ಯಚಿತ್ತೋಽಸಿ ಗತವಿತ್ತೋ ಯಥಾ ಜನಃ ।
ತವೇದಂ ಮುಕ್ತಸಂಗಸ್ಯ ನೋಚಿತಂ ವದ ಕಾರಣಮ್ ॥
ಅನುವಾದ
ಈಗಲಾದರೋ ನೀವು ಎಲ್ಲ ಧನವನ್ನು ಕಳಕೊಂಡ ಮನುಷ್ಯನಂತೆ ವ್ಯಾಕುಲರಾಗಿರುವಿರಿ ಎಂದು ಕಾಣುತ್ತದೆ. ನಿಮ್ಮಂತಹ ಆಸಕ್ತಿರಹಿತ ಪುರುಷರಿಗೆ ಇದು ಉಚಿತವಲ್ಲ. ಇದರ ಕಾರಣವನ್ನು ಹೇಳಿರಿ. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಅಹಂ ತು ಪೃಥಿವೀಂ ಯಾತೋ ಜ್ಞಾತ್ವಾ ಸರ್ವೋತ್ತಮಾಮಿತಿ ।
ಪುಷ್ಕರಂ ಚ ಪ್ರಯಾಗಂ ಚ ಕಾಶೀಂ ಗೋದಾವರೀಂ ತಥಾ ॥
(ಶ್ಲೋಕ - 29)
ಮೂಲಮ್
ಹರಿಕ್ಷೇತ್ರಂ ಕುರುಕ್ಷೇತ್ರಂ ಶ್ರೀರಂಗಂ ಸೇತುಬಂಧನಮ್ ।
ಏವಮಾದಿಷು ತೀರ್ಥೇಷು ಭ್ರಮಮಾಣ ಇತಸ್ತತಃ ॥
(ಶ್ಲೋಕ - 30)
ಮೂಲಮ್
ನಾಪಸ್ಯಂ ಕುತ್ರಚಿಚ್ಛರ್ಮ ಮನಸ್ಸಂತೋಷಕಾರಕಮ್ ।
ಕಲಿನಾಧರ್ಮಮಿತ್ರೇಣ ಧರೇಯಂ ಬಾತಾಧುನಾ ॥
ಅನುವಾದ
ನಾರದರು ಹೇಳಿದರು — ನಾನು ಸರ್ವೋತ್ತಮ ಲೋಕವೆಂದು ಎಣಿಸಿ ಪೃಥ್ವಿಗೆ ಬಂದೆ. ಇಲ್ಲಿ ಪುಷ್ಕರ, ಪ್ರಯಾಗ, ಕಾಶೀ, ಗೋದಾವರಿ (ನಾಸಿಕ), ಹರಿದ್ವಾರ, ಕುರುಕ್ಷೇತ್ರ, ಶ್ರೀರಂಗ, ಸೇತುಬಂಧ (ರಾಮೇಶ್ವರ) ಮುಂತಾದ ಅನೇಕ ತೀರ್ಥಗಳಲ್ಲಿ ಅತ್ತ-ಇತ್ತ ಅಲೆಯುತ್ತಿದ್ದೆ; ಆದರೆ ಮನಸ್ಸಿಗೆ ಸಂತೋಷವೀಯುವಂತಹ ಶಾಂತಿಯು ನನಗೆ ಸಿಗಲಿಲ್ಲ. ಈಗ ಅಧರ್ಮದ ಸಹಾಯಕ ಕಲಿಯುಗವು ಇಡೀ ಪೃಥಿವಿಯನ್ನು ಬಾಧಿಸುತ್ತಿದೆ. ॥28-30॥
(ಶ್ಲೋಕ - 31)
ಮೂಲಮ್
ಸತ್ಯಂ ನಾಸ್ತಿ ತಪಃ ಶೌಚಂ ದಯಾ ದಾನಂ ನ ವಿದ್ಯತೇ ।
ಉದರಂಭರಿಣೋ ಜೀವಾ ವರಾಕಾಃ ಕೂಟಭಾಷಿಣಃ ॥
(ಶ್ಲೋಕ - 32)
ಮೂಲಮ್
ಮಂದಾಃ ಸುಮಂದ ಮತಯೋ ಮಂದಭಾಗ್ಯಾಹ್ಯುಪದ್ರುತಾಃ ।
ಪಾಖಂಡ ನಿರತಾಃ ಸಂತೋ ವಿರಕ್ತಾಃ ಸಪರಿಗ್ರಹಾಃ ॥
(ಶ್ಲೋಕ - 33)
ಮೂಲಮ್
ತರುಣೀಪ್ರಭುತಾ ಗೇಹೇ ಶ್ಯಾಲಕೋ ಬುದ್ಧಿದಾಯಕಃ ।
ಕನ್ಯಾವಿಕ್ರಯಿಣೋ ಲೋಭಾದ್ದಂಪತೀನಾಂ ಚ ಕಲ್ಕನಮ್ ॥
ಅನುವಾದ
ಈಗ ಇಲ್ಲಿ ಸತ್ಯ, ತಪಸ್ಸು, ಶೌಚ (ಒಳ-ಹೊರಗಿನ ಪವಿತ್ರತೆ), ದಯೆ, ದಾನ, ಇವುಗಳು ಏನೂ ಉಳಿಯಲಿಲ್ಲ. ಬಡಪಾಯಿ ಜೀವರು ಕೇವಲ ಹೊಟ್ಟೆ ಹೊರೆಯುವುದರಲ್ಲೇ ತೊಡಗಿರುವರು. ಅವರು ಸುಳ್ಳನ್ನಾಡುವವರೂ, ಆಲಸಿಗಳೂ, ಮಂದಬುದ್ಧಿಯವರೂ, ಭಾಗ್ಯಹೀನರೂ, ಉಪದ್ರವಗ್ರಸ್ತರೂ ಅಗಿದ್ದಾರೆ. ಹೊರಗಿನ ವೇಷ ಮಾತ್ರ ಇರುವ ಸಾಧು ಸಂತರು ಪೂರ್ಣ ಪಾಷಂಡಿಗಳಾಗಿದ್ದಾರೆ. ನೋಡಲು ವಿರಕ್ತರಂತೆ ಕಂಡುಬಂದರೂ ಸ್ತ್ರೀ, ಸಂಪತ್ತು ಎಲ್ಲವನ್ನೂ ಪರಿಗ್ರಹಿಸುತ್ತಾರೆ. ಮನೆಗಳಲ್ಲಿ ಸ್ತ್ರೀಯರ ರಾಜ್ಯವೇ ನಡೆಯುತ್ತಿದೆ. ಭಾವ ಮೈದುನರೇ ಸಲಹೆಗಾರರಾಗಿದ್ದಾರೆ. ಲೋಭದಿಂದ ಜನರು ಹೆಣ್ಣು ಮಕ್ಕಳನ್ನು ಮಾರುತ್ತಿದ್ದಾರೆ. ಗಂಡ-ಹೆಂಡಿರಲ್ಲಿ ನಿತ್ಯ ಜಗಳ ನಡೆಯುತ್ತಾ ಇದೆ. ॥31-33॥
(ಶ್ಲೋಕ - 34)
ಮೂಲಮ್
ಆಶ್ರಮಾ ಯವನೈ ರುದ್ಧಾಸ್ತೀರ್ಥಾನಿ ಸರಿತಸ್ತಥಾ ।
ದೇವತಾಯತನಾನ್ಯತ್ರ ದುಷ್ಟೈರ್ನಷ್ಟಾನಿ ಭೂರಿಶಃ ॥
ಅನುವಾದ
ಮಹಾತ್ಮರ ಆಶ್ರಮ, ತೀರ್ಥಗಳು, ನದಿಗಳು ಇವುಗಳ ಮೇಲೆ ಯವನರು ಅಧಿಕಾರ ನಡೆಸುತ್ತಿದ್ದಾರೆ. ಆ ದುಷ್ಟರು ಅನೇಕ ದೇವಾಲಯಗಳನ್ನು ನಾಶಮಾಡಿರುವರು. ॥34॥
(ಶ್ಲೋಕ - 35)
ಮೂಲಮ್
ನ ಯೋಗೀ ನೈವ ಸಿದ್ಧೋ ವಾ ನ ಜ್ಞಾನೀ ಸತ್ಕ್ರಿಯೋ ನರಃ ।
ಕಲಿದಾವಾನಲೇ ನಾದ್ಯ ಸಾಧನಂ ಭಸ್ಮತಾಂ ಗತಮ್ ॥
ಅನುವಾದ
ಈಗಲಂತೂ ಇಲ್ಲಿ ಯೋಗಿಗಳೂ, ಸಿದ್ಧರೂ, ಜ್ಞಾನಿಗಳೂ ಯಾರೂ ಇಲ್ಲ. ಸತ್ಕರ್ಮ ಮಾಡುವವರು ಯಾರೂ ಇಲ್ಲ. ಎಲ್ಲ ಸಾಧನೆಗಳು ಈಗ ಕಲಿಯುಗರೂಪಿ ದಾವಾನಲದಿಂದ ಸುಟ್ಟು ಭಸ್ಮವಾಗಿ ಹೋಗಿವೆ. ॥35॥
(ಶ್ಲೋಕ - 36)
ಮೂಲಮ್
ಅಟ್ಟಶೂಲಾ ಜನಪದಾಃ ಶಿವಶೂಲಾ ದ್ವಿಜಾತಯಃ ।
ಕಾಮಿನ್ಯಃ ಕೇಶಶೂಲಿನ್ಯಃ ಸಂಭವಂತಿ ಕಲಾವಿಹ ॥
ಅನುವಾದ
ಈ ಕಲಿಕಾಲದಲ್ಲಿ ಎಲ್ಲೆಡೆ ಪೇಟೆಯಲ್ಲಿ ಅನ್ನವನ್ನು ಮಾರುತ್ತಿದ್ದಾರೆ. ಬ್ರಾಹ್ಮಣರು ಹಣ ಪಡೆದು ವೇದವನ್ನು ಕಲಿಸುತ್ತಿದ್ದಾರೆ. ಸ್ತ್ರೀಯರು ಸದಾಚಾರ ಹೀನರಾಗಿದ್ದಾರೆ. ॥36॥
(ಶ್ಲೋಕ - 37)
ಮೂಲಮ್
ಏವಂ ಪಶ್ಯನ್ ಕಲೇರ್ದೋಷಾನ್ ಪರ್ಯಟನ್ನವನೀಮಹಮ್ ।
ಯಾಮುನಂ ತಟಮಾಪನ್ನೋ ಯತ್ರ ಲೀಲಾ ಹರೇರಭೂತ್ ॥
ಅನುವಾದ
ಈ ವಿಧವಾಗಿ ಕಲಿಯುಗದ ದೋಷಗಳನ್ನು ನೋಡುತ್ತಾ ಪೃಥಿವಿಯಲ್ಲಿ ಸಂಚರಿಸುತ್ತಾ ನಾನು ಯಮುನಾ ತೀರಕ್ಕೆ ಬಂದೆ. ಅಲ್ಲಿ ಭಗವಾನ್ ಶ್ರೀಕೃಷ್ಣನ ಅನೇಕ ಲೀಲೆಗಳು ನಡೆದಿದ್ದವು. ॥37॥
(ಶ್ಲೋಕ - 38)
ಮೂಲಮ್
ತತ್ರಾಶ್ಚರ್ಯಂ ಮಯಾ ದೃಷ್ಟಂ ಶ್ರೂಯತಾಂ ತನ್ಮುನೀಶ್ವರಾಃ ।
ಏಕಾ ತು ತರುಣೀ ತತ್ರ ನಿಷಣ್ಣಾ ಖಿನ್ನಮಾನಸಾ ॥
ಅನುವಾದ
ಮುನಿವರ್ಯರೇ! ಕೇಳಿರಿ. ಅಲ್ಲಿ ನಾನು ಬಹುದೊಡ್ಡ ಆಶ್ಚರ್ಯವನ್ನು ನೋಡಿದೆ. ಅಲ್ಲಿ ಓರ್ವ ಯುವತಿ ಸ್ತ್ರೀಯು ಖಿನ್ನಮನಸ್ಕಳಾಗಿ ಕುಳಿತಿದ್ದಳು. ॥38॥
(ಶ್ಲೋಕ - 39)
ಮೂಲಮ್
ವೃದ್ಧೌ ದ್ವೌ ಪತಿತೌ ಪಾರ್ಶ್ವೇ ನಿಃಶ್ವಸಂತಾವಚೇತನೌ ।
ಶುಶ್ರೂಷಂತೀ ಪ್ರಬೋಧಂತೀ ರುದತೀ ಚ ತಯೋಃ ಪುರಃ ॥
ಅನುವಾದ
ಅವಳ ಬಳಿಯಲ್ಲಿ ಇಬ್ಬರು ವೃದ್ಧಪುರುಷರು ಅಚೇತನರಾಗಿ ಬಿದ್ದು ಜೋರಾಗಿ ಉಸಿರಾಡುತ್ತಿದ್ದರು. ಆ ತರುಣಿಯು ಅವರ ಸೇವೆ ಮಾಡುತ್ತಾ, ಕೆಲವೊಮ್ಮೆ ಅವರನ್ನು ಎಚ್ಚರಿಸಲು ಪ್ರಯತ್ನಿಸಿದರೆ, ಕೆಲವೊಮ್ಮೆ ಅವರ ಮುಂದೆ ಅಳುತ್ತಿದ್ದಳು. ॥39॥
(ಶ್ಲೋಕ - 40)
ಮೂಲಮ್
ದಶದಿಕ್ಷು ನಿರೀಕ್ಷಂತೀ ರಕ್ಷಿತಾರಂ ನಿಜಂ ವಪುಃ ।
ವೀಜ್ಯಮಾನಾ ಶತಸ್ತ್ರೀಭಿರ್ಬೋಧ್ಯಮಾನಾ ಮುಹುರ್ಮುಹುಃ ॥
ಅನುವಾದ
ಅವಳು ತನ್ನ ಶರೀರದ ರಕ್ಷಕನಾದ ಪರಮಾತ್ಮನನ್ನು ಹತ್ತು ದಿಕ್ಕುಗಳಲ್ಲಿಯೂ ನೋಡುತ್ತಿದ್ದಳು. ಅವಳ ಸುತ್ತಲೂ ನೂರಾರು ಸೀಯರು ಅವಳಿಗೆ ಗಾಳಿ ಬೀಸುತ್ತಾ ಪದೇ- ಪದೇ ಸಮಾಧಾನ ಪಡಿಸುತ್ತಿದ್ದರು.॥40॥
(ಶ್ಲೋಕ - 41)
ಮೂಲಮ್
ದೃಷ್ಟ್ವಾ ದೂರಾದ್ಗತಃ ಸೋಽಹಂ ಕೌತುಕೇನ ತದಂತಿಕಮ್ ।
ಮಾಂ ದೃಷ್ಟ್ವಾ ಚೋತ್ಥಿ ತಾ ಬಾಲಾ ವಿಹ್ವಲಾ ಚಾಬ್ರವೀದ್ವಚಃ ॥
ಅನುವಾದ
ದೂರದಿಂದಲೇ ಇವೆಲ್ಲವನ್ನು ನೋಡಿ ನಾನು ಕುತೂಹಲದಿಂದ ಅವಳ ಬಳಿಗೆ ಹೋದೆ. ನನ್ನನ್ನು ನೋಡುತ್ತಲೇ ಆ ಯುವತಿಯು ಎದ್ದು ನಿಂತು ಬಹುವ್ಯಾಕುಲತೆಯಿಂದ ಹೇಳತೊಡಗಿದಳು.॥41॥
(ಶ್ಲೋಕ - 42)
ಮೂಲಮ್ (ವಾಚನಮ್)
ಬಾಲೋವಾಚ
ಮೂಲಮ್
ಭೋ ಭೋಃ ಸಾಧೋ ಕ್ಷಣಂ ತಿಷ್ಠ ಮಚ್ಚಿಂತಾಮಪಿ ನಾಶಯ ।
ದರ್ಶನಂ ತವ ಲೋಕಸ್ಯ ಸರ್ವಥಾಘಹರಂ ಪರಮ್ ॥
ಅನುವಾದ
ಯುವತಿಯು ಹೇಳಿದಳು — ಮಹಾತ್ಮರೇ! ಒಂದು ಕ್ಷಣ ನಿಂತುಕೊಳ್ಳಿ ಹಾಗೂ ನನ್ನ ಚಿಂತೆಯನ್ನು ದೂರಮಾಡಿರಿ ನಿಮ್ಮ ದರ್ಶನವಾದರೋ ಪ್ರಪಂಚದ ಸಮಸ್ತ ಪಾಪಗಳನ್ನು ಸರ್ವಥಾ ನಾಶಮಾಡುವುದಾಗಿದೆ. ॥42॥
(ಶ್ಲೋಕ - 43)
ಮೂಲಮ್
ಬಹುಧಾ ತವ ವಾಕ್ಯೇನ ದುಃಖಶಾಂತಿರ್ಭವಿಷ್ಯತಿ ।
ಯದಾ ಭಾಗ್ಯಂ ಭವೇದ್ಭೂರಿ ಭವತೋ ದರ್ಶನಂ ತದಾ ॥
ಅನುವಾದ
ನಿಮ್ಮ ಮಾತಿನಿಂದ ನನ್ನ ದುಃಖವು ಶಾಂತವಾದೀತು. ಮನುಷ್ಯನಿಗೆ ಭಾಗ್ಯವು ಒದಗಿದಾಗಲೇ ನಿಮ್ಮ ದರ್ಶನ ವಾಗುತ್ತದೆ.॥43॥
(ಶ್ಲೋಕ - 44)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಕಾಸಿ ತ್ವಂ ಕಾವಿಮೌ ಚೇಮಾ ನಾರ್ಯಃ ಕಾಃ ಪದ್ಮಲೋಚನಾಃ ।
ವದ ದೇವಿ ಸವಿಸ್ತಾರಂ ಸ್ವಸ್ಯ ದುಃಖಸ್ಯ ಕಾರಣಮ್ ॥
ಅನುವಾದ
ನಾರದರು ಹೇಳುತ್ತಾರೆ — ಆಗ ನಾನು ಆ ಸ್ತ್ರೀಯ ಬಳಿ ಕೇಳಿದೆ-ದೇವಿ! ನೀನು ಯಾರು? ಇವರಿಬ್ಬರು ಪುರುಷರು ನಿನಗೇನಾಗಬೇಕು? ನಿನ್ನ ಬಳಿಯಲ್ಲಿ ಕಮಲನಯನೆಯರಾದ ಈ ದೇವಿಯರು ಯಾರು? ನೀನು ನನಗೆ ವಿವರವಾಗಿ ನಿನ್ನ ದುಃಖದ ಕಾರಣವನ್ನು ಹೇಳು. ॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ಬಾಲೋವಾಚ
ಮೂಲಮ್
ಅಹಂ ಭಕ್ತಿರಿತಿ ಖ್ಯಾತಾ ಇಮೌ ಮೇ ತನಯೌ ಮತೌ ।
ಜ್ಞಾನವೈರಾಗ್ಯನಾಮಾನೌ ಕಾಲಯೋಗೇನ ಜರ್ಜರೌ ॥
ಅನುವಾದ
ಯುವತಿಯು ಇಂತೆಂದಳು — ನನ್ನ ಹೆಸರು ಭಕ್ತಿಯೆಂದು. ಇವರಿಬ್ಬರೂ ಜ್ಞಾನ ಮತ್ತು ವೈರಾಗ್ಯರೆಂಬ ನನ್ನ ಮಕ್ಕಳಾಗಿದ್ದಾರೆ. ಕಾಲದ ಮಹಿಮೆಯಿಂದ ಇವರು ಹೀಗೆ ಜರ್ಜರಿತರಾಗಿದ್ದಾರೆ. ॥45॥
(ಶ್ಲೋಕ - 46)
ಮೂಲಮ್
ಗಂಗಾದ್ಯಾಃ ಸರಿತಶ್ಚೇಮಾ ಮತ್ಸೇವಾರ್ಥಂ ಸಮಾಗತಾಃ ।
ತಥಾಪಿ ನ ಚ ಮೇ ಶ್ರೇಯಃ ಸೇವಿತಾಯಾಃ ಸುರೈರಪಿ ॥
ಅನುವಾದ
ಈ ದೇವಿಯರು ಗಂಗಾದಿ ನದಿಗಳು. ಇವರೆಲ್ಲರೂ ನನ್ನ ಸೇವೆ ಮಾಡಲೆಂದು ಬಂದಿರುವರು. ಹೀಗೆ ಸಾಕ್ಷಾತ್ ದೇವಿಯರಿಂದ ಸೇವಿತಳಾಗಿದ್ದರೂ ನನಗೆ ಸುಖ-ಶಾಂತಿ ಇಲ್ಲ. ॥46॥
(ಶ್ಲೋಕ - 47)
ಮೂಲಮ್
ಇದಾನೀಂ ಶೃಣು ಮದ್ವಾರ್ತಾಂ ಸಚಿತ್ತಸ್ತ್ವಂ ತಪೋಧನ ।
ವಾರ್ತಾ ಮೇ ವಿತತಾಪ್ಯಸ್ತಿ ತಾಂ ಶ್ರುತ್ವಾ ಸುಖಮಾವಹ ॥
ಅನುವಾದ
ತಪೋಧನರೇ! ಮನಸ್ಸಿಟ್ಟು ನನ್ನ ವೃತ್ತಾಂತವನ್ನು ಕೇಳಿರಿ. ನನ್ನ ಕಥೆಯಾದರೋ ಪ್ರಸಿದ್ಧವೇ ಇದೆ, ಆದರೂ ಕೂಡ ಅದನ್ನು ಕೇಳಿ ನೀವು ನನಗೆ ಶಾಂತಿಯನ್ನು ಕರುಣಿಸಿರಿ. ॥47॥
(ಶ್ಲೋಕ - 48)
ಮೂಲಮ್
ಉತ್ಪನ್ನಾ ದ್ರವಿಡೇ ಸಾಹಂ ವೃದ್ಧಿಂ ಕರ್ಣಾಟಕೇ ಗತಾ ।
ಕ್ವಚಿತ್ಕ್ವಚಿನ್ಮಹಾರಾಷ್ಟ್ರೇ ಗುರ್ಜರೇ ಜೀರ್ಣತಾಂ ಗತಾ ॥
ಅನುವಾದ
ನಾನು ದ್ರವಿಡ ದೇಶದಲ್ಲಿ ಹುಟ್ಟಿದೆ. ಕರ್ನಾಟಕದಲ್ಲಿ ಬೆಳೆದೆ. ಮಹಾರಾಷ್ಟ್ರದ ಕೆಲವೆಡೆ ಸಮ್ಮಾನಿತಳಾದೆ. ಆದರೆ ಗುಜರಾತದಲ್ಲಿ ನನಗೆ ವೃದ್ಧಾಪ್ಯವು ಆವರಿಸಿತು. ॥48॥
(ಶ್ಲೋಕ - 49)
ಮೂಲಮ್
ತತ್ರ ಘೋರಕಲೇರ್ಯೋಗಾತ್ಪಾಖಂಡೈಃ ಖಂಡಿತಾಂಗಕಾ ।
ದುರ್ಬಲಾಹಂ ಚಿರಂ ಯಾತಾ ಪುತ್ರಾಭ್ಯಾಂ ಸಹ ಮಂದತಾಮ್ ॥
ಅನುವಾದ
ಅಲ್ಲಿ ಘೋರಕಲಿಯುಗದ ಪ್ರಭಾವದಿಂದ ಪಾಷಂಡಿಗಳು ನನ್ನ ಅಂಗ ಭಂಗಮಾಡಿಬಿಟ್ಟರು. ಅನೇಕ ಕಾಲದವರೆಗೆ ಈ ಅವಸ್ಥೆಯಲ್ಲೇ ಇದ್ದ ಕಾರಣ ನಾನು ನನ್ನ ಪುತ್ರರೊಂದಿಗೆ ದುರ್ಬಲಳಾಗಿ ನಿಸ್ತೇಜಳಾಗಿಹೋದೆ. ॥49॥
(ಶ್ಲೋಕ - 50)
ಮೂಲಮ್
ವೃಂದಾವನಂ ಪುನಃ ಪ್ರಾಪ್ಯ ನವೀನೇವ ಸುರೂಪಿಣೀ ।
ಜಾತಾಹಂ ಯುವತೀ ಸಮ್ಯಕ್ ಪ್ರೇಷ್ಠರೂಪಾ ತು ಸಾಂಪ್ರತಮ್ ॥
ಅನುವಾದ
ನಾನು ವೃಂದಾವನಕ್ಕೆ ಬಂದಂದಿನಿಂದ ಪುನಃ ಪರಮ ಸುಂದರ ರೂಪವತಿಯೂ, ನವಯುವತಿಯೂ ಆದೆ. ॥50॥
(ಶ್ಲೋಕ - 51)
ಮೂಲಮ್
ಇಮೌ ತು ಶಯಿತಾವತ್ರ ಸುತೌ ಮೇ ಕ್ಲಿಶ್ಯತಃ ಶ್ರಮಾತ್ ।
ಇದಂ ಸ್ಥಾನಂ ಪರಿತ್ಯಜ್ಯ ವಿದೇಶಂ ಗಮ್ಯತೇ ಮಯಾ ॥
ಅನುವಾದ
ಆದರೆ ಎದುರಿಗೆ ಬಿದ್ದಿರುವ ಇವರಿಬ್ಬರೂ ನನ್ನ ಪುತ್ರರು ಬಳಲಿ ದುಃಖಿತರಾಗಿದ್ದಾರೆ. ಈಗ ನಾನು ಈ ಸ್ಥಾನವನ್ನು ಬಿಟ್ಟು ಬೇರೆಲ್ಲಾದರೂ ಹೋಗಲು ಬಯಸುತ್ತಿರುವೆನು. ॥51॥
(ಶ್ಲೋಕ - 52)
ಮೂಲಮ್
ಜರಠತ್ವಂ ಸಮಾಯಾತೌ ತೇನ ದುಃಖೇನ ದುಃಖಿತಾ ।
ಸಾಹಂ ತು ತರುಣೀ ಕಸ್ಮಾತ್ಸುತೌ ವೃದ್ಧಾವಿವೌ ಕುತಃ ॥
ಅನುವಾದ
ಇವರಿಬ್ಬರೂ ಮುದುಕರಾಗಿದ್ದಾರೆ. ಇದರಿಂದಲೇ ನಾನು ದುಃಖಿತಳಾಗಿದ್ದೇನೆ. ನಾನು ತರುಣಿಯಾಗಿದ್ದು, ಇವರಿಬ್ಬರು ಪುತ್ರರೂ ಮುದುಕರೇಕೇ? ॥52॥
(ಶ್ಲೋಕ - 53)
ಮೂಲಮ್
ತ್ರಯಾಣಾಂ ಸಹಚಾರಿತ್ವಾದ್ವೈಪರೀತ್ಯಂ ಕುತಃ ಸ್ಥಿತಮ್ ।
ಘಟತೇ ಜರಠಾ ಮಾತಾ ತರುಣೌ ತನಯಾವಿತಿ ॥
ಅನುವಾದ
ನಾವು ಮೂವರೂ ಜೊತೆ-ಜೊತೆಯಾಗಿ ಇರುವವರು. ಆದರೂ ಹೀಗೆ ವಿಪರೀತವೇಕೆ? ತಾಯಿ ವೃದ್ಧಳಾಗಿದ್ದು, ಪುತ್ರರು ತರುಣರಾಗಬೇಕಾಗಿತ್ತು. ॥53॥
(ಶ್ಲೋಕ - 54)
ಮೂಲಮ್
ಅತಃ ಶೋಚಾಮಿ ಚಾತ್ಮಾನಂ ವಿಸ್ಮಯಾವಿಷ್ಟ ಮಾನಸಾ ।
ವದ ಯೋಗನಿಧೇ ಧೀಮನ್ ಕಾರಣಂ ಚಾತ್ರ ಕಿಂ ಭವೇತ್ ॥
ಅನುವಾದ
ಇದರಿಂದ ನಾನು ಆಶ್ಚರ್ಯ ಚಕಿತಳಾಗಿ ನನ್ನ ಈ ಅವಸ್ಥೆಯ ಕುರಿತು ಶೋಕಿಸುತ್ತಿದ್ದೇನೆ. ನೀವು ಪರಮಬುದ್ಧಿಶಾಲಿಗಳೂ, ಯೋಗನಿಧಿಗಳೂ ಆಗಿರುವಿರಿ. ಅದಕ್ಕಾಗಿ ಇದರ ಕಾರಣವೇನಿರಬಹುದು? ಎಂಬುದನ್ನು ಹೇಳಿರಿ.॥54॥
(ಶ್ಲೋಕ - 55)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಜ್ಞಾನೇನಾತ್ಮನಿ ಪಶ್ಯಾಮಿ ಸರ್ವಮೇತತ್ತವಾನಘೇ ।
ನ ವಿಷಾದಸ್ತ್ವಯಾ ಕಾರ್ಯೋ ಹರಿಃ ಶಂ ತೇ ಕರಿಷ್ಯತಿ ॥
ಅನುವಾದ
ನಾರದರೆಂದರು — ಸಾಧ್ವಿ! ನಾನು ನನ್ನ ಹೃದಯದಲ್ಲಿ ಜ್ಞಾನದೃಷ್ಟಿಯಿಂದ ನಿನ್ನ ಎಲ್ಲ ದುಃಖದ ಕಾರಣವನ್ನು ನೊಡುತ್ತಿದ್ದೇನೆ. ನೀನು ವಿಶಾದಿಸಬಾರದು. ಶ್ರೀಹರಿಯು ನಿನ್ನ ಕಲ್ಯಾಣ ಮಾಡುವನು.॥55॥
(ಶ್ಲೋಕ - 56)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಕ್ಷಣಮಾತ್ರೇಣ ತಜ್ಜ್ಞಾತ್ವಾ ವಾಕ್ಯಮೂಚೇ ಮುನೀಶ್ವರಃ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಮುನಿವರ್ಯರಾದ ನಾರದರು ಒಂದು ಕ್ಷಣದಲ್ಲೇ ಅವಳ ಕಾರಣವನ್ನು ತಿಳಿದುಕೊಂಡು ಹೇಳಿದರು- ॥56॥
(ಶ್ಲೋಕ - 57)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಶೃಣುಷ್ವಾವಹಿತಾ ಬಾಲೇ ಯುಗೋಽಯಂ ದಾರುಣಃ ಕಲಿಃ ।
ತೇನ ಲುಪ್ತಃ ಸದಾಚಾರೋ ಯೋಗಮಾರ್ಗಸ್ತಪಾಂಸಿ ಚ ॥
ಅನುವಾದ
ನಾರದರೆಂದರು — ದೇವಿ! ಎಚ್ಚರಿಕೆಯಿಂದ ಕೇಳು. ಇದು ದಾರುಣವಾದ ಕಲಿಯುಗವಾಗಿದೆ. ಅದರಿಂದಾಗಿ ಈಗ ಸದಾಚಾರ, ಯೋಗಮಾರ್ಗ, ತಪಸ್ಸು ಮೊದಲಾದವುಗಳೆಲ್ಲ ಲುಪ್ತವಾಗಿ ಹೋದುವು.॥57॥
(ಶ್ಲೋಕ - 58)
ಮೂಲಮ್
ಜನಾ ಅಘಾಸುರಾಯಂತೇ ಶಾಠ್ಯ ದುಷ್ಕರ್ಮಕಾರಿಣಃ ।
ಇಹ ಸಂತೋ ವಿಷೀದಂತಿ ಪ್ರಹೃಷ್ಯಂತಿ ಹ್ಯ ಸಾಧವಃ ॥
ಧತ್ತೆ ಧೈರ್ಯಂ ತು ಯೋ ಧೀಮಾನ್ಸ ಧೀರಃ ಪಂಡಿತೋಽಥವಾ ॥
ಅನುವಾದ
ಜನರು ಶಠರಾಗಿ ದುಷ್ಕರ್ಮದಲ್ಲಿ ತೊಡಗಿ ಅಘಾಸುರರಂತಾಗಿದ್ದಾರೆ. ಪ್ರಪಂಚದಲ್ಲಿ ಎಲ್ಲಿ ನೋಡಿದರಲ್ಲಿ ಸತ್ಪುರುಷರು ದುಃಖದಿಂದ ಮ್ಲಾನರಾಗಿದ್ದಾರೆ ಹಾಗೂ ದುಷ್ಟರು ಸುಖಿಗಳಾಗುತ್ತಿದ್ದಾರೆ. ಇಂತಹ ಕಾಲದಲ್ಲಿ ಬುದ್ಧಿವಂತರಾದ ಧೈರ್ಯವುಳ್ಳ ಪುರುಷರೇ ಜ್ಞಾನಿಗಳು ಅಥವಾ ಪಂಡಿತರಾಗಿದ್ದಾರೆ.॥58॥
(ಶ್ಲೋಕ - 59)
ಮೂಲಮ್
ಅಸ್ಪೃಶ್ಯಾನವಲೋಕ್ಯೇಯಂ ಶೇಷಭಾರಕರೀ ಧರಾ ।
ವರ್ಷೇ ವರ್ಷೇ ಕ್ರಮಾಜ್ಜಾ ತಾ ಮಂಗಲಂ ನಾಪಿ ದೃಶ್ಯತೇ ॥
ಅನುವಾದ
ಭೂಮಿಯು ಕ್ರಮಶಃ ಪ್ರತಿವರ್ಷ ಶೇಷನಿಗೆ ಭಾರವಾಗ ತೊಡಗಿದೆ. ಈಗ ಇದನ್ನು ಮುಟ್ಟುವುದಿರಲಿ, ನೋಡಲೂ ಕೂಡ ಯೋಗ್ಯವಾಗಿ ಉಳಿದಿಲ್ಲ. ಇದರಲ್ಲಿ ಎಲ್ಲಿಯೂ ಮಂಗಳವು ಕಂಡು ಬರುವುದೇ ಇಲ್ಲ. ॥59॥
(ಶ್ಲೋಕ - 60)
ಮೂಲಮ್
ನ ತ್ವಾಮಪಿ ಸುತೈಃ ಸಾಕಂ ಕೋಽಪಿ ಪಶ್ಯತಿ ಸಾಂಪ್ರತಮ್ ।
ಉಪೇಕ್ಷಿತಾನುರಾಗಾಂಧೈರ್ಜರ್ಜರತ್ವೇನ ಸಂಸ್ಥಿತಾ ॥
ಅನುವಾದ
ಈಗ ಯಾರಿಗೂ ಪುತ್ರರೊಂದಿಗೆ ನಿನ್ನ ದರ್ಶನವೂ ಆಗುತ್ತಿಲ್ಲ. ವಿಷಯಾನುರಾಗದ ಕಾರಣ ಅಂಧರಾದ ಜೀವಿಗಳಿಂದ ಉಪೇಕ್ಷಿತಳಾಗಿ ನೀನು ಜರ್ಜರಿತಳಾಗಿ ಹೋಗಿರುವೆ. ॥60॥
(ಶ್ಲೋಕ - 61)
ಮೂಲಮ್
ವೃಂದಾವನಸ್ಯ ಸಂಯೋಗಾತ್ ಪುನಸ್ತ್ವಂ ತರುಣೀ ನವಾ ।
ಧನ್ಯಂ ವೃಂದಾವನಂ ತೇನ ಭಕ್ತಿರ್ನೃತ್ಯತಿ ಯತ್ರ ಚ ॥
ಅನುವಾದ
ವೃಂದಾವನದ ಸಂಯೋಗದಿಂದ ನೀನು ಮತ್ತೆ ನವತರುಣಿಯಾಗಿರುವೆ. ಈ ವೃಂದಾವನ ಧಾಮವು ಧನ್ಯವಾಗಿದೆ. ಏಕೆಂದರೆ, ಇಲ್ಲಿ ಸರ್ವತ್ರ ಭಕ್ತಿಯು ನೃತ್ಯವಾಡುತ್ತಿದೆ. ॥61॥
(ಶ್ಲೋಕ - 62)
ಮೂಲಮ್
ಅತ್ರೇಮೌ ಗ್ರಾಹಕಾಭಾವಾನ್ನ ಜರಾಮಪಿ ಮುಂಚತಃ ।
ಕಿಂಚಿದಾತ್ಮಸುಖೇನೇಹ ಪ್ರಸುಪ್ತಿರ್ಮನ್ಯತೇನಯೋಃ ॥
ಅನುವಾದ
ಆದರೆ ನಿನ್ನ ಈ ಇಬ್ಬರು ಪುತ್ರರನ್ನು ಇಲ್ಲಿ ಬಯಸುವವರೇ ಇಲ್ಲ. ಅದಕ್ಕಾಗಿ ಇವರ ಮುದಿತನವು ಕಳೆದು ಹೋಗಿಲ್ಲ. ಇಲ್ಲಿ ಇವರಿಗೆ ಸ್ವಲ್ಪ ಆತ್ಮ ಸುಖ (ಭಗವತ್ ಆನಂದ)ದ ಪ್ರಾಪ್ತಿಯಾದ್ದರಿಂದ ಇವರು ಮಲಗಿದಂತೆ ಕಂಡು ಬರುತ್ತಿದ್ದಾರೆ.॥62॥
(ಶ್ಲೋಕ - 63)
ಮೂಲಮ್ (ವಾಚನಮ್)
ಭಕ್ತಿರುವಾಚ
ಮೂಲಮ್
ಕಥಂ ಪರೀಕ್ಷಿತಾ ರಾಜ್ಞಾ ಸ್ಥಾಪಿತೋ ಹ್ಯಶುಚಿಃ ಕಲಿಃ ।
ಪ್ರವೃತ್ತೇ ತು ಕಲೌ ಸರ್ವಸಾರಃ ಕುತ್ರ ಗತೋ ಮಹಾನ್ ॥
ಅನುವಾದ
ಭಕ್ತಿಯು ಹೇಳಿದಳು — ರಾಜಾಪರೀಕ್ಷಿತನು ಈ ಪಾಪೀ ಕಲಿಯುಗವನ್ನು ಇಲ್ಲಿ ಏಕೆ ಇರಲು ಬಿಟ್ಟನು? ಅದು ಬರುತ್ತಲೇ ಎಲ್ಲ ವಸ್ತುಗಳ ಸಾರವು ಎಲ್ಲಿಗೆ ಹೊರಟು ಹೋಯಿತೋ ತಿಳಿಯದು. ॥63॥
(ಶ್ಲೋಕ - 64)
ಮೂಲಮ್
ಕರುಣಾಪರೇಣ ಹರಿಣಾಪ್ಯಧರ್ಮಃ ಕಥಮೀಕ್ಷ್ಯತೇ ।
ಇಮಂ ಮೇ ಸಂಶಯಂ ಛಿಂ ತ್ವದ್ವಾಚಾ ಸುಖಿತಾಸ್ಮ್ಯಹಮ್ ॥
ಅನುವಾದ
ಕರುಣಾಮಯನಾದ ಶ್ರೀಹರಿಯು ಈ ಅಧರ್ಮವನ್ನು ಹೇಗೆ ನೋಡುತ್ತಾನೆ? ಮುನಿವರ್ಯ! ನನ್ನ ಈ ಸಂದೇಹವನ್ನು ದೂರ ಮಾಡಿರಿ. ನಿಮ್ಮ ವಚನಗಳಿಂದ ನನಗೆ ಬಹಳ ಶಾಂತಿ ದೊರೆತಿದೆ. ॥64॥
(ಶ್ಲೋಕ - 65)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಯದಿ ಪೃಷ್ಟಸ್ತ್ವ ಯಾ ಬಾಲೇ ಪ್ರೇಮತಃ ಶ್ರವಣಂ ಕುರು ।
ಸರ್ವಂ ವಕ್ಷ್ಯಾಮಿ ತೇ ಭದ್ರೇ ಕಶ್ಮಲಂ ತೇ ಗಮಿಷ್ಯತಿ ॥
ಅನುವಾದ
ನಾರದರೆಂದರು — ಎಲೈ ಭಕ್ತಿಯೇ! ನೀನು ಕೇಳಿದ್ದರಿಂದ ಪ್ರೇಮದಿಂದ ಆಲಿಸು. ಶುಭಪ್ರದಳೇ! ನಾನೆಲ್ಲವನ್ನು ಹೇಳುವೆನು. ಇದರಿಂದ ನಿನ್ನ ದುಃಖವು ದೂರವಾಗುವುದು. ॥65॥
(ಶ್ಲೋಕ - 66)
ಮೂಲಮ್
ಯದಾ ಮುಕುಂದೋ ಭಗವಾನ್ ಕ್ಷ್ಮಾಂ ತ್ಯಕ್ತ್ವಾ ಸ್ವಪದಂ ಗತಃ ।
ತದ್ದಿನಾತ್ಕಲಿರಾಯಾತಃ ಸರ್ವಸಾಧನಬಾಧಕಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಈ ಭೂಲೋಕವನ್ನು ಬಿಟ್ಟು ತನ್ನ ಪರಮಧಾಮಕ್ಕೆ ಹೊರಟು ಹೋದಂದಿನಿಂದ ಇಲ್ಲಿ ಸಮಸ್ತ ಸಾಧನೆಗಳಲ್ಲಿ ಬಾಧೆಯನ್ನೊಡ್ಡುವ ಕಲಿಯುಗವು ಆವರಿಸಿಬಿಟ್ಟಿದೆ. ॥66॥
(ಶ್ಲೋಕ - 67)
ಮೂಲಮ್
ದೃಷ್ಟೋ ದಿಗ್ವಿಜಯೇ ರಾಜ್ಞಾ ದೀನವಚ್ಛರಣಂ ಗತಃ ।
ನ ಮಯಾ ಮಾರಣೀಯೋಽಯಂ ಸಾರಂಗ ಇವ ಸಾರಭುಕ್ ॥
ಅನುವಾದ
ದಿಗ್ವಿಜಯದ ಸಮಯದಲ್ಲಿ ರಾಜಾಪರೀಕ್ಷಿತನ ದೃಷ್ಟಿಯು ಕಲಿಯುಗದ ಮೇಲೆ ಬಿದ್ದಾಗ ಅದು ದೀನವಾಗಿ ಅವನಿಗೆ ಶರಣಾಯಿತು. ಭ್ರಮರದಂತೆ ಸಾರಗ್ರಾಹಿಯಾದ ರಾಜನು ಇದನ್ನು ನಾನು ಕೊಲ್ಲಬಾರದು ಎಂದು ನಿಶ್ಚಯಿಸಿದನು. ॥67॥
(ಶ್ಲೋಕ - 68)
ಮೂಲಮ್
ಯತ್ಫಲಂ ನಾಸ್ತಿ ತಪಸಾ ನ ಯೋಗೇನ ಸಮಾನಾ ।
ತತ್ಫಲಂ ಲಭತೇ ಸಮ್ಯಕ್ಕಲೌ ಕೇಶವಕೀರ್ತನಾತ್ ॥
ಅನುವಾದ
ಏಕೆಂದರೆ, ತಪಸ್ಸು, ಯೋಗ, ಸಮಾಧಿಯಿಂದಲೂ ಸಿಗದಿರುವ ಫಲವು ಕಲಿಯುಗದಲ್ಲಿ ಶ್ರೀಹರಿಯ ಕೀರ್ತನೆಯಿಂದಲೇ ಸುಲಭವಾಗಿ ದೊರೆಯುತ್ತದೆ. ॥68॥
(ಶ್ಲೋಕ - 69)
ಮೂಲಮ್
ಏಕಾಕಾರಂ ಕಲಿಂ ದೃಷ್ಟ್ವಾ ಸಾರವತ್ಸಾರನೀರಸಮ್ ।
ವಿಷ್ಣುರಾತಃ ಸ್ಥಾಪಿತವಾನ್ ಕಲಿಜಾನಾಂ ಸುಖಾಯ ಚ ॥
ಅನುವಾದ
ಈ ಪ್ರಕಾರ ಸಾರಹೀನವಾದರೂ ಅದನ್ನು ಇದೊಂದೇ ದೃಷ್ಟಿಯಿಂದ ಸಾರಯುಕ್ತವೆಂದರಿತು ಅವನು ಕಲಿಯುಗದಲ್ಲಿ ಹುಟ್ಟುವ ಜೀವಿಗಳ ಸುಖಕ್ಕಾಗಿಯೇ ಅದನ್ನು ಇರಲು ಬಿಟ್ಟನು. ॥69॥
(ಶ್ಲೋಕ - 70)
ಮೂಲಮ್
ಕುಕರ್ಮಾಚರಣಾತ್ಸಾರಃ ಸರ್ವತೋ ನಿರ್ಗತೋಧುನಾ ।
ಪದಾರ್ಥಾಃ ಸಂಸ್ಥಿತಾ ಭೂಮೌ ಬೀಜಹೀನಾಸ್ತುಷಾ ಯಥಾ ॥
ಅನುವಾದ
ಈಗ ಜನರಲ್ಲಿ ಕುಕರ್ಮದಲ್ಲಿ ಪ್ರವೃತ್ತಿಯಿರುವ ಕಾರಣ ಎಲ್ಲ ವಸ್ತುಗಳ ಸಾರವು ಹೊರಟು ಹೋಗಿದೆ. ಪೃಥಿವಿಯ ಎಲ್ಲ ಪದಾರ್ಥಗಳು ಬೀಜಹೀನವಾದ ಹೊಟ್ಟಿಗೆ ಸಮಾನವಾಗಿವೆ. ॥70॥
(ಶ್ಲೋಕ - 71)
ಮೂಲಮ್
ವಿಪ್ರೈರ್ಭಾಗವತೀ ವಾರ್ತಾ ಗೇಹೇ ಗೇಹೇ ಜನೇ ಜನೇ ।
ಕಾರಿತಾ ಕಣಲೋಭೇನ ಕಥಾಸಾರಸ್ತತೋ ಗತಃ ॥
ಅನುವಾದ
ಬ್ರಾಹ್ಮಣರು ಕೇವಲ ಧನ-ಧಾನ್ಯದ ಲೋಭದಿಂದ ಮನೆ-ಮನೆಗಳಲ್ಲಿ ಹಾಗೂ ಎಲ್ಲ ಜನರಿಗೆ (ಅಭಕ್ತರಿಗೆ, ಅಪಾತ್ರರಿಗೆ) ಭಾಗವತದ ಕಥೆಯನ್ನು ಹೇಳ ತೊಡಗಿರುವರು. ಇದರಿಂದ ಕಥೆಯ ಸಾರವು ಹೊರಟು ಹೋಯಿತು. ॥71॥
(ಶ್ಲೋಕ - 72)
ಮೂಲಮ್
ಅತ್ಯುಗ್ರಭೂರಿಕರ್ಮಾಣೋ ನಾಸ್ತಿಕಾ ರೌರವಾ ಜನಾಃ ।
ತೇಽಪಿ ತಿಷ್ಠಂತಿ ತೀರ್ಥೇಷು ತೀರ್ಥಸಾರಸ್ತತೋ ಗತಃ ॥
ಅನುವಾದ
ತೀರ್ಥಗಳಲ್ಲಿ ಅನೇಕ ಪ್ರಕಾರದ ಅತ್ಯಂತ ಘೋರ ಕರ್ಮ ಮಾಡುವವರೂ, ನಾಸ್ತಿಕರೂ, ನರಕ ಭಾಜನರೂ ಆದ ಜನರೇ ಇರತೊಡಗಿದ್ದಾರೆ. ಇದರಿಂದ ತೀರ್ಥಗಳ ಪ್ರಭಾವವೂ ಹೊರಟು ಹೊಗುತ್ತಾ ಇದೆ. ॥72॥
(ಶ್ಲೋಕ - 73)
ಮೂಲಮ್
ಕಾಮಕ್ರೋಧಮಹಾಲೋಭತೃಷ್ಣಾ ವ್ಯಾಕುಲಚೇತಸಃ ।
ತೇಽಪಿ ತಿಷ್ಠಂತಿ ತಪಸಿ ತಪಸ್ಸಾರಸ್ತತೋ ಗತಃ ॥
ಅನುವಾದ
ಕಾಮ, ಕ್ರೋಧ, ಮಹಾನ್ ತೋಭ, ತೃಷ್ಣೆ ಇವುಗಳಿಂದ ನಿರಂತರ ಚಿತ್ತವೂ ತಳಮಳಿಸುವವರೂ ಕೂಡ ತಪಸ್ಸಿನ ಅಣಕಮಾಡ ತೊಡಗಿದರು. ಅದರಿಂದ ತಪಸ್ಸಿನ ಸಾರವೂ ಹೊರಟು ಹೋಯಿತು.॥73॥
(ಶ್ಲೋಕ - 74)
ಮೂಲಮ್
ಮನಸಶ್ಚಾಜಯಾಲ್ಲೋಭಾದ್ದಂಭಾತ್ಪಾಖಂಡ ಸಂಶ್ರಯಾತ್ ।
ಶಾಸ್ತ್ರಾ ನಭ್ಯಸನಾಚ್ಚೈವ ಧ್ಯಾನಯೋಗಫಲಂ ಗತಮ್ ॥
ಅನುವಾದ
ಮನಸ್ಸಿನ ಮೇಲೆ ಹತೋಟಿ ಇಲ್ಲದ್ದರಿಂದ ಲೋಭ, ದಂಭ, ಪಾಷಂಡತನವನ್ನು ಆಶ್ರಯಿಸಿದ್ದರಿಂದ ಹಾಗೂ ಶಾಸ್ತ್ರದ ಅಭ್ಯಾಸ ಮಾಡದೇ ಇರುವುದರಿಂದ ಧ್ಯಾನಯೋಗದ ಫಲವೂ ಮುಗಿದು ಹೋಯಿತು. ॥74॥
(ಶ್ಲೋಕ - 75)
ಮೂಲಮ್
ಪಂಡಿತಾಸ್ತು ಕಲತ್ರೇಣ ರಮಂತೇ ಮಹಿಷಾ ಇವ ।
ಪುತ್ರಸ್ಯೋತ್ಪಾದನೇ ದಕ್ಷಾ ಅದಕ್ಷಾ ಮುಕ್ತಿ ಸಾಧನೇ ॥
ಅನುವಾದ
ಪಂಡಿತರಾದವರು ತಮ್ಮ ಪತ್ನೀಯರೊಂದಿಗೆ ಪಶುಗಳಂತೆ ರಮಿಸುತ್ತಾರೆ. ಅವರಲ್ಲಿ ಸಂತಾನವನ್ನು ಉತ್ಪಾದಿಸುವುದರಲ್ಲಿ ಕುಶಲತೆ ಕಂಡು ಬರುತ್ತದೆ. ಆದರೆ ಮುಕ್ತಿ ಸಾಧನೆಯಲ್ಲಿ ಅವರು ಅಕುಶಲರಾಗಿದ್ದಾರೆ. ॥75॥
(ಶ್ಲೋಕ - 76)
ಮೂಲಮ್
ನ ಹಿ ವೈಷ್ಣವತಾ ಕುತ್ರ ಸಂಪ್ರದಾಯಪುರಸ್ಸರಾ ।
ಏವಂ ಪ್ರಲಯತಾಂ ಪ್ರಾಪ್ತೋ ವಸ್ತುಸಾರಃ ಸ್ಥಲೇ ಸ್ಥಲೇ ॥
ಅನುವಾದ
ಸಂಪ್ರದಾಯಕ್ಕನುಸಾರ ಪ್ರಾಪ್ತವಾದ ವಿಷ್ಣುಭಕ್ತಿ ಎಲ್ಲಿಯೂ ಕಂಡು ಬರುವುದಿಲ್ಲ. ಹೀಗೆ ಎಲ್ಲೆಡೆ ಎಲ್ಲ ವಸ್ತುಗಳ ಸಾರವು ಉಡುಗಿ ಹೋಗಿದೆ. ॥76॥
(ಶ್ಲೋಕ - 77)
ಮೂಲಮ್
ಅಯಂ ತು ಯುಗಧರ್ಮೋ ಹಿ ವರ್ತತೇ ಕಸ್ಯ ದೂಷಣಮ್ ।
ಅತಸ್ತು ಪುಂಡರೀಕಾಕ್ಷಃ ಸಹತೇ ನಿಕಟೇ ಸ್ಥಿತಃ ॥
ಅನುವಾದ
ಇದಾದರೋ ಈ ಯುಗದ ಸ್ವಭಾವವೇ ಆಗಿದೆ. ಇದರಲ್ಲಿ ಯಾರ ದೋಷವೂ ಇಲ್ಲ. ಇದರಿಂದಲೇ ಭಗವಾನ್ ಪುಂಡರೀಕಾಕ್ಷನು ಅತಿಸಮೀಪ ಇರುತ್ತಿದ್ದರೂ ಇದೆಲ್ಲವನ್ನು ಸಹಿಸುತ್ತಿರುವನು. ॥77॥
(ಶ್ಲೋಕ - 78)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಇತಿ ತದ್ವಚನಂ ಶ್ರುತ್ವಾ ವಿಸ್ಮಯಂ ಪರಮಂ ಗತಾ ।
ಭಕ್ತಿರೂಚೇ ವಚೋ ಭೂಯಃ ಶ್ರೂಯತಾಂ ತಚ್ಚ ಶೌನಕ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಹೀಗೆ ದೇವರ್ಷಿನಾರದರ ಮಾತನ್ನು ಕೇಳಿ, ಭಕ್ತಿಗೆ ಅತ್ಯಂತ ಆಶ್ಚರ್ಯವಾಯಿತು. ಮತ್ತೆ ಅವಳು ಹೇಳಿದುದನ್ನು ಮುಂದೆ ಕೇಳಿರಿ. ॥78॥
(ಶ್ಲೋಕ - 79)
ಮೂಲಮ್ (ವಾಚನಮ್)
ಭಕ್ತಿರುವಾಚ
ಮೂಲಮ್
ಸುರರ್ಷೇ ತ್ವಂ ಹಿ ಧನ್ಯೋಽಸಿ ಮದ್ಭಾಗ್ಯೇನ ಸಮಾಗತಃ ।
ಸಾಧೂನಾಂ ದರ್ಶನಂ ಲೋಕೇ ಸರ್ವಸಿದ್ಧಿ ಕರಂ ಪರಮ್ ॥
ಅನುವಾದ
ಭಕ್ತಿಯು ಹೇಳಿದಳು — ದೇವರ್ಷಿಗಳೇ! ನೀವು ಧನ್ಯರಾಗಿದ್ದೀರಿ. ನಿಮ್ಮ ಸಮಾಗಮವಾದುದು ನನ್ನ ದೊಡ್ಡ ಸೌಭಾಗ್ಯವೇ ಸರಿ! ಜಗತ್ತಿನಲ್ಲಿ ಸಾಧುಗಳ ದರ್ಶನವೇ ಸಮಸ್ತ ಸಿದ್ಧಿಗಳ ಪರಮ ಕಾರಣವಾಗಿದೆ. ॥79॥
(ಶ್ಲೋಕ - 80)
ಮೂಲಮ್
ಜಯತಿ ಜಗತಿ ಮಾಯಾಂ ಯಸ್ಯ ಕಾಯಾಧವಸ್ತೇ
ವಚನರಚನಮೇಕಂ ಕೇವಲಂ ಚಾಕಲಯ್ಯ ।
ಧ್ರುವಪದಮಪಿ ಯಾತೋ ಯತ್ಕೃಪಾತೋ ಧ್ರುವೋಽಯಂ
ಸಕಲ ಕುಶಲಪಾತ್ರಂ ಬ್ರಹ್ಮಪುತ್ರಂ ನತಾಸ್ಮಿ ॥
ಅನುವಾದ
ಕೇವಲ ಒಮ್ಮೆಯೇ ನಿಮ್ಮ ಉಪದೇಶವನ್ನು ಕೇಳಿದ ಕಯಾಧು ಕುಮಾರ ಪ್ರಹ್ಲಾದನು ಮಾಯೆಯನ್ನು ಗೆದ್ದಿರುವನು. ಧ್ರುವನೂ ಕೂಡ ನಿಮ್ಮ ಕೃಪೆಯಿಂದಲೇ ಧ್ರುವ ಪದವನ್ನು ಪಡೆದುಕೊಂಡಿದ್ದನು. ನೀವು ಸರ್ವಮಂಗಲಮಯರೂ, ಬ್ರಹ್ಮದೇವರ ಪುತ್ರರೂ ಆಗಿರುವಿರಿ. ನಿಮಗೆ ನಾನು ನಮಸ್ಕರಿಸುತ್ತೇನೆ. ॥80॥
ಅನುವಾದ (ಸಮಾಪ್ತಿಃ)
ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ಶ್ರೀಮದ್ಭಾಗವತಮಾಹಾತ್ಮ್ಯೇ ಭಕ್ತಿನಾರದಸಮಾಗಮೋ ನಾಮ ಪ್ರಥಮೋಽಧ್ಯಾಯಃ ॥1॥