೧೨

[ಹನ್ನೆರಡನೆಯ ಅಧ್ಯಾಯ]

ಭಾಗಸೂಚನಾ

ಶ್ರೀಮದ್ಭಾಗವತದ ಸಂಕ್ಷಿಪ್ತ ವಿಷಯಸೂಚಿ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ನಮೋ ಧರ್ಮಾಯ ಮಹತೇ ನಮಃ ಕೃಷ್ಣಾಯ ವೇಧಸೇ ।
ಬ್ರಾಹ್ಮಣೇಭ್ಯೋ ನಮಸ್ಕೃತ್ಯ ಧರ್ಮಾನ್ವಕ್ಷ್ಯೇ ಸನಾತನಾನ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಭಗವದ್ಭಕ್ತಿರೂಪವಾದ ಮಹಾಧರ್ಮಕ್ಕೆ ನಮಸ್ಕಾರವು. ವಿಶ್ವವಿಧಾತನಾದ ಭಗವಾನ್ ಶ್ರೀಕೃಷ್ಣನಿಗೆ ನಮಸ್ಕರವು. ಈಗ ನಾನು ಬ್ರಾಹ್ಮಣರಿಗೆ ನಮಸ್ಕಾರ ಮಾಡಿ ಶ್ರೀಮದ್ಭಾಗವತದಲ್ಲಿ ಹೇಳಿರುವ ಸನಾತನ ಧರ್ಮಗಳ ವಿಷಯಗಳನ್ನು ಸಂಕ್ಷೇಪವಾಗಿ ಹೇಳುತ್ತೇನೆ. ॥1॥

(ಶ್ಲೋಕ - 2)

ಮೂಲಮ್

ಏತದ್ವಃ ಕಥಿತಂ ವಿಪ್ರಾ ವಿಷ್ಣೋಶ್ಚರಿತಮದ್ಭುತಮ್ ।
ಭವದ್ಭಿರ್ಯದಹಂ ಪೃಷ್ಟೋ ನರಾಣಾಂ ಪುರುಷೋಚಿತಮ್ ॥

ಅನುವಾದ

ಶೌನಕಾದಿ ಋಷಿಗಳಿರಾ! ನೀವುಗಳು ನನ್ನಲ್ಲಿ ಕೇಳಿದ ಪ್ರಶ್ನೆಗನುಸಾರವಾಗಿ ನಾನು ಭಗವಾನ್ ವಿಷ್ಣುವಿನ ಅದ್ಭುತ ಚರಿತ್ರೆಯನ್ನು ನಿರೂಪಿಸಿದೆನು. ಇದು ಎಲ್ಲ ಮನುಷ್ಯರಿಗಾಗಿ ಶ್ರವಣಿಸಲು ಯೋಗ್ಯವಾಗಿದೆ. ॥2॥

(ಶ್ಲೋಕ - 3)

ಮೂಲಮ್

ಅತ್ರ ಸಂಕೀರ್ತಿತಃ ಸಾಕ್ಷಾತ್ ಸರ್ವಪಾಪಹರೋ ಹರಿಃ ।
ನಾರಾಯಣೋ ಹೃಷೀಕೇಶೋ ಭಗವಾನ್ ಸಾತ್ತ್ವತಾಂ ಪತಿಃ ॥

ಅನುವಾದ

ಈ ಶ್ರೀಮದ್ಭಾಗವತದಲ್ಲಿ ಸರ್ವ ಪಾಪಹಾರಿಯಾದ ಸಾಕ್ಷಾತ್ ಭಗವಾನ್ ಶ್ರೀಹರಿಯ ಸಂಕೀರ್ತನೆಯೇ ನಡೆದಿದೆ. ಆ ಯದುಪತಿಯು ಎಲ್ಲರ ಹೃದಯದಲ್ಲಿ ವಿರಾಜಿಸುತ್ತಿರುವನು ಎಲ್ಲರ ಇಂದ್ರಿಯಗಳ ಸ್ವಾಮಿಯೂ, ಪ್ರೇಮಿಭಕ್ತರ ಜೀವನಧನನೂ ಆಗಿರುವನು. ॥3॥

(ಶ್ಲೋಕ - 4)

ಮೂಲಮ್

ಅತ್ರ ಬ್ರಹ್ಮ ಪರಂ ಗುಹ್ಯಂ ಜಗತಃ ಪ್ರಭವಾಪ್ಯಯಮ್ ।
ಜ್ಞಾನಂ ಚ ತದುಪಾಖ್ಯಾನಂ ಪ್ರೋಕ್ತಂ ವಿಜ್ಞಾನಸಂಯುತಮ್ ॥

ಅನುವಾದ

ಈ ಶ್ರೀಮದ್ಭಾಗವತ ಪುರಾಣದಲ್ಲಿ ಪರಮಗುಹ್ಯವಾದ ಬ್ರಹ್ಮತತ್ತ್ವದ ವರ್ಣನೆಯೇ ನಡೆದಿದೆ. ಆ ಪರಬ್ರಹ್ಮನಲ್ಲೇ ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯಗಳ ಪ್ರತೀತಿಯಾಗುತ್ತದೆ. ಇದರಲ್ಲಿ ಅದೇ ಪರಮತತ್ತ್ವದ ಜ್ಞಾನ-ವಿಜ್ಞಾನವನ್ನೂ, ಅವನನ್ನು ಪಡೆಯುವ ಸಾಧನೆಯನ್ನು ನಿರೂಪಣೆ ಮಾಡಿದ್ದೇನೆ. ॥4॥

(ಶ್ಲೋಕ - 5)

ಮೂಲಮ್

ಭಕ್ತಿಯೋಗಃ ಸಮಾಖ್ಯಾತೋ ವೈರಾಗ್ಯಂ ಚ ತದಾಶ್ರಯಮ್ ।
ಪಾರೀಕ್ಷಿತಮುಪಾಖ್ಯಾನಂ ನಾರದಾಖ್ಯಾನಮೇವ ಚ ॥

ಅನುವಾದ

ಶೌನಕರೇ! ಈ ಮಹಾಪುರಾಣದ ಪ್ರಥಮ ಸ್ಕಂಧದಲ್ಲಿ ಭಕ್ತಿಯೋಗವು ಚೆನ್ನಾಗಿ ನಿರೂಪಿತವಾಗಿದೆ. ಜೊತೆಗೆ ಭಕ್ತಿಯೋಗದಿಂದ ಉತ್ಪನ್ನವಾಗುವ ವೈರಾಗ್ಯವನ್ನು ವರ್ಣಿಸಲಾಗಿದೆ. ಪರೀಕ್ಷಿತನ ಕಥೆ ಮತ್ತು ವ್ಯಾಸ-ನಾರದರ ಸಂವಾದದ ಪ್ರಸಂಗದಿಂದ ನಾರದರ ಚರಿತ್ರವನ್ನೂ ಹೇಳಲಾಗಿದೆ. ॥5॥

(ಶ್ಲೋಕ - 6)

ಮೂಲಮ್

ಪ್ರಾಯೋಪವೇಶೋ ರಾಜರ್ಷೇರ್ವಿಪ್ರಶಾಪಾತ್ಪರೀಕ್ಷಿತಃ ।
ಶುಕಸ್ಯ ಬ್ರಹ್ಮರ್ಷಭಸ್ಯ ಸಂವಾದಶ್ಚ ಪರೀಕ್ಷಿತಃ ॥

ಅನುವಾದ

ರಾಜರ್ಷಿಯಾದ ಪರೀಕ್ಷಿತನು ಬ್ರಾಹ್ಮಣನ ಶಾಪದಿಂದಾಗಿ ಗಂಗಾತೀರದಲ್ಲಿ ಉಪವಾಸವ್ರತವನ್ನು ಕೈಗೊಂಡು ಹೇಗೆ ಕುಳಿತುಕೊಂಡನು ಮತ್ತು ಋಷಿಶ್ರೇಷ್ಠರಾದ ಶ್ರೀಶುಕ ಮಹಾಮುನಿಗಳೊಡನೆ ಅವರ ಸಂವಾದವು ಹೇಗೆ ಪ್ರಾರಂಭವಾಯಿತು? ಈ ಕಥೆಯೂ ಮೊದಲನೇ ಸ್ಕಂದದಲ್ಲೇ ಇದೆ. ॥6॥

(ಶ್ಲೋಕ - 7)

ಮೂಲಮ್

ಯೋಗಧಾರಣಯೋತ್ಕ್ರಾಂತಿಃ ಸಂವಾದೋ ನಾರದಾಜಯೋಃ ।
ಅವತಾರಾನುಗೀತಂ ಚ ಸರ್ಗಃ ಪ್ರಾಧಾನಿಕೋಗ್ರತಃ ॥

ಅನುವಾದ

ಯೋಗಧಾರಣೆಯ ಮೂಲಕ ಶರೀರ ತ್ಯಾಗದ ವಿಧಾನ, ಬ್ರಹ್ಮದೇವರು - ನಾರದರ ಸಂವಾದ, ಭಗವಂತನ ಅವತಾರಗಳ ಸಂಕ್ಷಿಪ್ತ ನಿರೂಪಣೆ, ಮಹತ್ತತ್ವವೇ ಮೊದಲಾದವುಗಳ ಕ್ರಮದಿಂದ ಪ್ರಾಕೃತಸೃಷ್ಟಿಯ ಉತ್ಪತ್ತಿ ಮುಂತಾದ ವಿಷಯಗಳ ವರ್ಣನೆ ಎರಡನೆಯ ಸ್ಕಂಧದಲ್ಲಿ ಇದೆ. ॥7॥

(ಶ್ಲೋಕ - 8)

ಮೂಲಮ್

ವಿದುರೋದ್ಧವಸಂವಾದಃ ಕ್ಷತ್ತೃಮೈತ್ರೇಯಯೋಸ್ತತಃ ।
ಪುರಾಣಸಂಹಿತಾಪ್ರಶ್ನೋ ಮಹಾಪುರುಷಸಂಸ್ಥಿತಿಃ ॥

ಅನುವಾದ

ಮೂರನೆ ಸ್ಕಂಧದಲ್ಲಿ ಮೊಟ್ಟಮೊದಲಿಗೆ ವಿದುರ-ಉದ್ಧವರ ಹಾಗೂ ಬಳಿಕ ವಿದುರ-ಮೈತ್ರೇಯರ ಸಮಾಗಮ ಮತ್ತು ಸಂವಾದದ ಪ್ರಸಂಗವಿದೆ. ಅನಂತರ ಪುರಾಣಸಂಹಿತೆಯ ವಿಷಯದಲ್ಲಿ ಪ್ರಶ್ನೆಯಿದೆ. ಮತ್ತೆ ಪ್ರಳಯಕಾಲದಲ್ಲಿ ಪರಮಾತ್ಮನು ಹೇಗೆ ಸ್ಥಿತನಾಗಿರುತ್ತಾನೆ ಇದರ ನಿರೂಪಣೆಯಿದೆ. ॥8॥

(ಶ್ಲೋಕ - 9)

ಮೂಲಮ್

ತತಃ ಪ್ರಾಕೃತಿಕಃ ಸರ್ಗಃ ಸಪ್ತ ವೈಕೃತಿಕಾಶ್ಚ ಯೇ ।
ತತೋ ಬ್ರಹ್ಮಾಂಡಸಂಭೂತಿರ್ವೈರಾಜಃ ಪುರುಷೋ ಯತಃ ॥

ಅನುವಾದ

ಗುಣಗಳ ಕ್ಷೋಭದಿಂದ ಪ್ರಾಕೃತಿಕ ಸೃಷ್ಟಿ ಮತ್ತು ಮಹತ್ತತ್ವವೇ ಮೊದಲಾದ ಏಳು ಪ್ರಕೃತಿ-ವಿಕೃತಿಗಳ ಮೂಲಕ ಕಾರ್ಯಸೃಷ್ಟಿಯ ವರ್ಣನೆಯಿದೆ. ಅನಂತರ ಬ್ರಹ್ಮಾಂಡದ ಉತ್ಪತ್ತಿ, ಅದರಲ್ಲಿ ವಿರಾಟ್ಪುರುಷನ ಸ್ಥಿತಿಯ ಸ್ವರೂಪವನ್ನು ಹೇಳಲಾಗಿದೆ. ॥9॥

(ಶ್ಲೋಕ - 10)

ಮೂಲಮ್

ಕಾಲಸ್ಯ ಸ್ಥೂಲಸೂಕ್ಷ್ಮಸ್ಯ ಗತಿಃ ಪದ್ಮಸಮುದ್ಭವಃ ।
ಭುವ ಉದ್ಧರಣೇಂಭೋಧೇರ್ಹಿರಣ್ಯಾಕ್ಷವಧೋ ಯಥಾ ॥

(ಶ್ಲೋಕ - 11)

ಮೂಲಮ್

ಊರ್ಧ್ವತಿರ್ಯಗವಾಕ್ಸರ್ಗೋ ರುದ್ರಸರ್ಗಸ್ತಥೈವ ಚ ।
ಅರ್ಧನಾರೀನರಸ್ಯಾಥ ಯತಃ ಸ್ವಾಯಂಭುವೋ ಮನುಃ ॥

(ಶ್ಲೋಕ - 12)

ಮೂಲಮ್

ಶತರೂಪಾ ಚ ಯಾ ಸೀಣಾಮಾದ್ಯಾ ಪ್ರಕೃತಿರುತ್ತಮಾ ।
ಸಂತಾನೋ ಧರ್ಮಪತ್ನೀನಾಂ ಕರ್ದಮಸ್ಯ ಪ್ರಜಾಪತೇಃ ॥

(ಶ್ಲೋಕ - 13)

ಮೂಲಮ್

ಅವತಾರೋ ಭಗವತಃ ಕಪಿಲಸ್ಯ ಮಹಾತ್ಮನಃ ।
ದೇವಹೂತ್ಯಾಶ್ಚ ಸಂವಾದಃ ಕಪಿಲೇನ ಚ ಧೀಮತಾ ॥

ಅನುವಾದ

ಬಳಿಕ ಸ್ಥೂಲ-ಸೂಕ್ಷ್ಮ ಕಾಲದ ಸ್ವರೂಪ, ಲೋಕ ಕಮಲದ ಉತ್ಪತ್ತಿ, ಪ್ರಳಯ, ಸಮುದ್ರದಿಂದ ಭೂದೇವಿಯನ್ನು ಉದ್ಧರಿಸುವಾಗ ವರಾಹಭಗವಂತನ ಮೂಲಕ ಹಿರಣ್ಯಾಕ್ಷನವಧೆ; ದೇವತೆಗಳು, ಪಶು-ಪಕ್ಷಿ, ಮನುಷ್ಯರ ಸೃಷ್ಟಿ ಹಾಗೂ ರುದ್ರರ ಉತ್ಪತ್ತಿಯ ಪ್ರಸಂಗವಿದೆ. ಇದಾದ ಬಳಿಕ ಸ್ವಾಯಂಭುವ ಮನು ಮತ್ತು ಸ್ತ್ರೀಯರಲ್ಲಿ ಅತ್ಯಂತ ಉತ್ತಮ ಆದ್ಯಾ ಪ್ರಕೃತಿ ಎನಿಸಿದ ಶತರೂಪಾ ಇವರ ಅರ್ಧ ನರ-ನಾರಿಯ ಸ್ವರೂಪದ ವಿವೇಚನೆಯಿದೆ. ಕರ್ದಮ ಪ್ರಜಾಪತಿಯ ಚರಿತ್ರೆ, ಅವರಲ್ಲಿ ಮುನಿಪತ್ನಿಯರ ಜನ್ಮ, ಮಹಾತ್ಮಾ ಭಗವಾನ್ ಕಪಿಲರ ಅವತಾರ, ಮತ್ತೆ ಕಪಿಲರ ಮತ್ತು ಅವರ ತಾಯಿಯಾದ ದೇವಹೂತಿಯರ ಸಂವಾದ ಪ್ರಸಂಗವಿದೆ. ॥10-13॥

(ಶ್ಲೋಕ - 14)

ಮೂಲಮ್

ನವಬ್ರಹ್ಮ ಸಮುತ್ಪತ್ತಿರ್ದಕ್ಷಯಜ್ಞ ವಿನಾಶನಮ್ ।
ಧ್ರುವಸ್ಯ ಚರಿತಂ ಪಶ್ಚಾತ್ಪೃಥೋಃ ಪ್ರಾಚೀನಬರ್ಹಿಷಃ ॥

(ಶ್ಲೋಕ - 15)

ಮೂಲಮ್

ನಾರದಸ್ಯ ಚ ಸಂವಾದಸ್ತತಃ ಪ್ರೈಯವ್ರತಂ ದ್ವಿಜಾಃ ।
ನಾಭೇಸ್ತತೋನುಚರಿತಮೃಷಭಸ್ಯ ಭರತಸ್ಯ ಚ ॥

(ಶ್ಲೋಕ - 16)

ಮೂಲಮ್

ದ್ವೀಪವರ್ಷಸಮುದ್ರಾಣಾಂ ಗಿರಿನದ್ಯುಪವರ್ಣನಮ್ ।
ಜ್ಯೋತಿಶ್ಚಕ್ರಸ್ಯ ಸಂಸ್ಥಾನಂ ಪಾತಾಲನರಕಸ್ಥಿತಿಃ ॥

ಅನುವಾದ

ನಾಲ್ಕನೆಯ ಸ್ಕಂಧದಲ್ಲಿ ಮರೀಚಿಯೇ ಮೊದಲಾದ ಒಂಭತ್ತು ಪ್ರಜಾಪತಿಗಳ ಉತ್ಪತ್ತಿ, ದಕ್ಷಯಜ್ಞದ ವಿಧ್ವಂಸ, ರಾಜರ್ಷಿ ಧ್ರುವ ಹಾಗೂ ಪೃಥುಚಕ್ರವರ್ತಿಯ ಚರಿತ್ರೆ, ಪ್ರಾಚೀನಬರ್ಹಿ-ನಾರದರ ಸಂವಾದದ ವರ್ಣನೆಯಿದೆ. ಐದನೆಯ ಸ್ಕಂಧದಲ್ಲಿ ಪ್ರಿಯವ್ರತನ ಉಪಾಖ್ಯಾನ, ನಾಭಿ, ಋಷಭ ಮತ್ತು ಭರತರ ಚರಿತ್ರೆ; ದ್ವೀಪ, ವರ್ಷ, ಸಮುದ್ರ, ಪರ್ವತ, ನದಿಗಳ ವರ್ಣನೆ; ಜ್ಯೋತಿಶ್ಚಕ್ರದ ವಿಸ್ತಾರ ಹಾಗೂ ಪಾತಾಳ ಮತ್ತು ನರಕಗಳ ಸ್ಥಿತಿಯನ್ನು ನಿರೂಪಿಸಲಾಗಿದೆ. ॥14-16॥

(ಶ್ಲೋಕ - 17)

ಮೂಲಮ್

ದಕ್ಷಜನ್ಮ ಪ್ರಚೇತೋಭ್ಯಸ್ತತ್ಪುತ್ರೀಣಾಂ ಚ ಸಂತತಿಃ ।
ಯತೋ ದೇವಾಸುರನರಾಸ್ತಿರ್ಯಙ್ ನಗಖಗಾದಯಃ ॥

(ಶ್ಲೋಕ - 18)

ಮೂಲಮ್

ತ್ವಾಷ್ಟ್ರಸ್ಯ ಜನ್ಮ ನಿಧನಂ ಪುತ್ರಯೋಶ್ಚ ದಿತೇರ್ದ್ವಿಜಾಃ ।
ದೈತ್ಯೇಶ್ವರಸ್ಯ ಚರಿತಂ ಪ್ರಹ್ಲಾದಸ್ಯ ಮಹಾತ್ಮನಃ ॥

ಅನುವಾದ

ಶೌನಕಾದಿ ಋಷಿಗಳಿರಾ! ಆರನೆಯ ಸ್ಕಂಧದಲ್ಲಿ - ಪ್ರಚೇ ತಸರಿಂದ ದಕ್ಷನ ಉತ್ಪತ್ತಿ, ದಕ್ಷನ ಪುತ್ರಿಯರ ಸಂತಾನ ದೇವತೆಗಳು, ಅಸುರರು, ಮನುಷ್ಯರು, ಪಶು-ಪಕ್ಷಿ, ಪರ್ವತ ಮುಂತಾದವರ ಜನ್ಮ-ಕರ್ಮ, ವೃತ್ರಾಸುರನ ಉತ್ಪತ್ತಿ ಮತ್ತು ಅವನ ಪರಮಗತಿ ಇವೆಲ್ಲ ವಿಷಯಗಳು ಬಂದಿದೆ. ಏಳನೆಯ ಸ್ಕಂಧದಲ್ಲಿ ಮುಖ್ಯವಾಗಿ ದೈತ್ಯರಾಜ ಹಿರಣ್ಯಕಶಿಪು ಮತ್ತು ಹಿರಣಾಕ್ಷರ ಜನ್ಮ-ಕರ್ಮ ಹಾಗೂ ದೈತ್ಯಶಿರೋಮಣಿ ಮಹಾತ್ಮಾ ಪ್ರಹ್ಲಾದನ ಅತ್ಯುತ್ತಮವಾದ ಚರಿತ್ರೆಯನ್ನು ನಿರೂಪಣೆ ಮಾಡಲಾಗಿದೆ. ॥17-18॥

(ಶ್ಲೋಕ - 19)

ಮೂಲಮ್

ಮನ್ವಂತರಾನುಕಥನಂ ಗಜೇಂದ್ರಸ್ಯ ವಿಮೋಕ್ಷಣಮ್ ।
ಮನ್ವಂತರಾವತಾರಾಶ್ಚ ವಿಷ್ಣೋರ್ಹಯಶಿರಾದಯಃ ॥

(ಶ್ಲೋಕ - 20)

ಮೂಲಮ್

ಕೌರ್ಮಂ ಧಾನ್ವಂತರಂ ಮಾತ್ಸ್ಯಂ ವಾಮನಂ ಚ ಜಗತ್ಪತೇಃ ।
ಕ್ಷೀರೋದಮಥನಂ ತದ್ವದಮೃತಾರ್ಥೇ ದಿವೌಕಸಾಮ್ ॥

(ಶ್ಲೋಕ - 21)

ಮೂಲಮ್

ದೇವಾಸುರಮಹಾಯುದ್ಧಂ ರಾಜವಂಶಾನುಕೀರ್ತನಮ್ ।
ಇಕ್ಷ್ವಾಕುಜನ್ಮ ತದ್ವಂಶಃ ಸುದ್ಯುಮ್ನಸ್ಯ ಮಹಾತ್ಮನಃ ॥

(ಶ್ಲೋಕ - 22)

ಮೂಲಮ್

ಇಲೋಪಾಖ್ಯಾನಮತ್ರೋಕ್ತಂ ತಾರೋಪಾಖ್ಯಾನಮೇವ ಚ ।
ಸೂರ್ಯವಂಶಾನುಕಥನಂ ಶಶಾದಾದ್ಯಾ ನೃಗಾದಯಃ ॥

(ಶ್ಲೋಕ - 23)

ಮೂಲಮ್

ಸೌಕನ್ಯಂ ಚಾಥ ಶರ್ಯಾತೇಃ ಕಕುತ್ಸ್ಥಸ್ಯ ಚ ಧೀಮತಃ ।
ಖಟ್ವಾಂಗಸ್ಯ ಚ ಮಾಂಧಾತುಃ ಸೌಭರೇಃ ಸಗರಸ್ಯ ಚ ॥

(ಶ್ಲೋಕ - 24)

ಮೂಲಮ್

ರಾಮಸ್ಯ ಕೋಸಲೇಂದ್ರಸ್ಯ ಚರಿತಂ ಕಿಲ್ಬಿಷಾಪಹಮ್ ।
ನಿಮೇರಂಗಪರಿತ್ಯಾಗೋ ಜನಕಾನಾಂ ಚ ಸಂಭವಃ ॥

ಅನುವಾದ

ಎಂಟನೆಯ ಸ್ಕಂಧದಲ್ಲಿ ಮನ್ವಂತರಗಳ ಕಥೆ, ಗಜೇಂದ್ರ ಮೋಕ್ಷ, ಬೇರೆ-ಬೇರೆ ಮನ್ವಂತರಗಳಲ್ಲಿ ಆಗುವ ಕೂರ್ಮ, ಮತ್ಸ್ಯ, ವಾಮನ, ಧನ್ವಂತರಿ, ಹಯಗ್ರೀವ ಮೊದಲಾದ ಜಗದೀ ಶ್ವರ ಭಗವಾನ್ ವಿಷ್ಣುವಿನ ಅವತಾರಗಳು, ಅಮೃತ ಪ್ರಾಪ್ತಿಗಾಗಿ ದೇವ-ದಾನವರಿಂದ ಸಮುದ್ರಮಂಥನ, ದೇವಾಸುರ ಸಂಗ್ರಾಮ ಮೊದಲಾದ ವಿಷಯಗಳ ವರ್ಣನೆಯಿದೆ. ಒಂಭತ್ತನೆಯ ಸ್ಕಂಧದಲ್ಲಿ ಮುಖ್ಯವಾಗಿ ರಾಜರ ವಂಶಗಳ ವರ್ಣನೆಯಿದೆ. ಇಕ್ಷ್ವಾಕುವಿನ ಜನ್ಮ-ಕರ್ಮ, ವಂಶ-ವಿಸ್ತಾರ; ಮಹಾತ್ಮ ಸುದ್ಯುಮ್ನ, ಇಲಾ ಮತ್ತು ತಾರೆಯ ಉಪಾಖ್ಯಾನ, ಇದೆಲ್ಲವನ್ನು ವರ್ಣಿಸಲಾಗಿದೆ. ಸೂರ್ಯವಂಶದ ವೃತ್ತಾಂತ, ಶಶಾದ ಮತ್ತು ನೃಗ ಮೊದಲಾದ ರಾಜರ ವರ್ಣನೆ, ಸುಕನ್ಯಾ ಚರಿತ್ರೆ; ಶರ್ಯಾತಿ, ಖಟ್ವಾಂಗ, ಮಾಂಧಾತ, ಸೌಭರಿ, ಸಗರ, ಬುದ್ಧಿವಂತನಾದ ಕಕುತ್ಸ್ಥ, ಕೋಸಲೇಂದ್ರ ಭಗವಾನ್ ಶ್ರೀರಾಮನ ಸರ್ವಪಾಪಹಾರಿಯಾದ ಚರಿತ್ರದ ವರ್ಣನೆಯೂ ಇದೇ ಸ್ಕಂಧದಲ್ಲಿದೆ. ಅನಂತರ ನಿಮಿಯ ದೇಹತ್ಯಾಗ, ಜನಕರ ಉತ್ಪತ್ತಿಯನ್ನೂ ವರ್ಣಿಸಲಾಗಿದೆ. ॥19-24॥

(ಶ್ಲೋಕ - 25)

ಮೂಲಮ್

ರಾಮಸ್ಯ ಭಾರ್ಗವೇಂದ್ರಸ್ಯ ನಿಃಕ್ಷತ್ರಕರಣಂ ಭುವಃ ।
ಐಲಸ್ಯ ಸೋಮವಂಶಸ್ಯ ಯಯಾತೇರ್ನಹುಷಸ್ಯ ಚ ॥

(ಶ್ಲೋಕ - 26)

ಮೂಲಮ್

ದೌಷ್ಯಂತೇರ್ಭರತಸ್ಯಾಪಿ ಶಂತನೋಸ್ತತ್ಸುತಸ್ಯ ಚ ।
ಯಯಾತೇರ್ಜ್ಯೇಷ್ಠಪುತ್ರಸ್ಯ ಯದೋರ್ವಂಶೋನುಕೀರ್ತಿತಃ ॥

ಅನುವಾದ

ಭೃಗುವಂಶ ಶಿರೋಮಣಿ ಪರಶುರಾಮರ ಕ್ಷತ್ರಿಯ ಸಂಹಾರ, ಚಂದ್ರವಂಶೀ ರಾಜರಾದ ಪುರೂರವ, ಯಯಾತಿ, ನಹುಷ, ದುಷ್ಯಂತ ನಂದನ ಭರತ, ಶಂತನು ಮತ್ತು ಅವನ ಪುತ್ರ ಭೀಷ್ಮಾದಿಗಳ ಸಂಕ್ಷಿಪ್ತ ಕಥೆಗಳೂ ಕೂಡ ಒಂಭತ್ತನೆಯ ಸ್ಕಂಧದಲ್ಲೇ ಇವೆ. ಕೊನೆಗೆ ಯಯಾತಿಯ ಹಿರಿಯ ಮಗ ಯದುವಿನ ವಂಶವಿಸ್ತಾರವನ್ನೂ ಹೇಳಲಾಗಿದೆ. ॥25-26॥

(ಶ್ಲೋಕ - 27)

ಮೂಲಮ್

ಯತ್ರಾವತೀರ್ಣೋ ಭಗವಾನ್ ಕೃಷ್ಣಾಖ್ಯೋ ಜಗದೀಶ್ವರಃ ।
ವಸುದೇವಗೃಹೇ ಜನ್ಮ ತತೋ ವೃದ್ಧಿಶ್ಚ ಗೋಕುಲೇ ॥

(ಶ್ಲೋಕ - 28)

ಮೂಲಮ್

ತಸ್ಯ ಕರ್ಮಾಣ್ಯಪಾರಾಣಿ ಕೀರ್ತಿತಾನ್ಯಸುರದ್ವಿಷಃ ।
ಪೂತನಾಸುಪಯಃಪಾನಂ ಶಕಟೋಚ್ಚಾಟನಂ ಶಿಶೋಃ ॥

ಅನುವಾದ

ಶೌನಕಾದಿ ಋಷಿಗಳಿರಾ! ಇದೇ ಯದುವಂಶದಲ್ಲಿ ಜಗತ್ಪತಿಯಾದ ಭಗವಾನ್ ಶ್ರೀಕೃಷ್ಣನು ಅವತಾರವನ್ನು ಎತ್ತಿದನು. ಅವನು ಅನೇಕ ಅಸುರರನ್ನು ಸಂಹರಿಸಿದನು. ಅವನ ಲೀಲೆಗಳಿಗೆ ಅಂತ್ಯ-ಪಾರವೇ ಇಲ್ಲ. ಹೀಗಿದ್ದರೂ ದಶಮಸ್ಕಂಧದಲ್ಲಿ ಅವನ್ನು ಸ್ವಲ್ಪ ಕೀರ್ತಿಸಲಾಗಿದೆ. ವಸು ದೇವನ ಪತ್ನಿಯಾದ ದೇವಕಿಯ ಗರ್ಭದಿಂದ ಅವನು ಅವತರಿಸಿದನು. ಗೋಕುಲದಲ್ಲಿ ನಂದರಾಜನ ಮನೆಗೆ ಹೋಗಿ ಬೆಳೆದನು. ಪೂತನೆಯ ಪ್ರಾಣಗಳನ್ನು ಹಾಲಿನೊಂದಿಗೆ ಕುಡಿದುಬಿಟ್ಟನು. ಬಾಲ್ಯದಲ್ಲೇ ಶಕಟ(ಬಂಡಿ)ನನ್ನು ಒದ್ದು ಮುರಿದು ಹಾಕಿದನು. ॥27-28॥

(ಶ್ಲೋಕ - 29)

ಮೂಲಮ್

ತೃಣಾವರ್ತಸ್ಯ ನಿಷ್ಪೇಷಸ್ತಥೈವ ಬಕವತ್ಸಯೋಃ ।
ಧೇನುಕಸ್ಯ ಸಹಭ್ರಾತುಃ ಪ್ರಲಂಬಸ್ಯ ಚ ಸಂಕ್ಷಯಃ ॥

ಅನುವಾದ

ತೃಣಾವರ್ತ, ಬಕಾಸುರ, ವತ್ಸಾಸುರರನ್ನು ನುಚ್ಚು ನೂರಾಗಿಸಿದನು. ಪರಿವಾರ ಸಹಿತ ಧೇನುಕಾಸುರ, ಪ್ರಲಂಬಾಸುರರನ್ನು ಕೊಂದು ಹಾಕಿದನು. ॥29॥

(ಶ್ಲೋಕ - 30)

ಮೂಲಮ್

ಗೋಪಾನಾಂ ಚ ಪರಿತ್ರಾಣಂ ದಾವಾಗ್ನೇಃ ಪರಿಸರ್ಪತಃ ।
ದಮನಂ ಕಾಲಿಯಸ್ಯಾಹೇರ್ಮಹಾಹೇರ್ನಂದಮೋಕ್ಷಣಮ್ ॥

ಅನುವಾದ

ದಾವಾನಲದಲ್ಲಿ ಸಿಲುಕಿದ ಗೋಪಾಲರನ್ನು ರಕ್ಷಿಸಿದನು. ಕಾಳಿಯ ನಾಗನನ್ನು ದಮನ ಮಾಡಿ, ಅಜಗರದಿಂದ ನಂದರಾಜನನ್ನು ಬಿಡಿಸಿದನು. ॥30॥

(ಶ್ಲೋಕ - 31)

ಮೂಲಮ್

ವ್ರತಚರ್ಯಾ ತು ಕನ್ಯಾನಾಂ ಯತ್ರ ತುಷ್ಟೋಚ್ಯುತೋ ವ್ರತೈಃ ।
ಪ್ರಸಾದೋ ಯಜ್ಞಪತ್ನೀಭ್ಯೋ ವಿಪ್ರಾಣಾಂ ಚಾನುತಾಪನಮ್ ॥

ಅನುವಾದ

ಗೋಪಿಯರು ಭಗವಂತನನ್ನು ಪತಿಯ ರೂಪದಿಂದ ಪಡೆಯಲು ವ್ರತ ಮಾಡಿದುದು, ಮತ್ತೆ ಶ್ರೀಕೃಷ್ಣನು ಪ್ರಸನ್ನನಾಗಿ ಅವರಿಗೆ ಅಭೀಷ್ಟ ವರವನ್ನು ಕೊಟ್ಟಿದ್ದು. ಯಜ್ಞಪತ್ನಿಯರ ಮೇಲೆ ಭಗವಂತನ ಕೃಪೆ, ಅವರ ಪತಿಗಳಾದ ಬ್ರಾಹ್ಮಣರಿಗೆ ಆದ ಪಶ್ಚಾತ್ತಾಪ. ॥31॥

(ಶ್ಲೋಕ - 32)

ಮೂಲಮ್

ಗೋವರ್ಧನೋದ್ಧಾರಣಂ ಚ ಶಕ್ರಸ್ಯ ಸುರಭೇರಥ ।
ಯಜ್ಞಾಭಿಷೇಕಂ ಕೃಷ್ಣಸ್ಯ ಸೀಭಿಃ ಕ್ರೀಡಾ ಚ ರಾತ್ರಿಷು ॥

ಅನುವಾದ

ಅನಂತರ ಗೋವರ್ಧನೋದ್ಧರಣದ ಲೀಲೆ ಮಾಡಿದ ಅನಂತರ, ಇಂದ್ರ ಮತ್ತು ಕಾಮಧೇನುಗಳು ಬಂದು ಭಗವಂತನಿಗೆ ಯಜ್ಞಾಭಿಷೇಕ ಮಾಡಿದರು. ಶರದ್ಋತುವಿನ ರಾತ್ರಿಯಲ್ಲಿ ವ್ರಜದ ಸುಂದರ ಗೋಪಿಕೆಯರೊಡನೆ ರಾಸಲೀಲೆಯಾಡಿದನು. ॥32॥

(ಶ್ಲೋಕ - 33)

ಮೂಲಮ್

ಶಂಖಚೂಡಸ್ಯ ದುರ್ಬುದ್ಧೇರ್ವಧೋರಿಷ್ಟಸ್ಯ ಕೇಶಿನಃ ।
ಅಕ್ರೂರಾಗಮನಂ ಪಶ್ಚಾತ್ಪ್ರಸ್ಥಾನಂ ರಾಮಕೃಷ್ಣಯೋಃ ॥

ಅನುವಾದ

ದುಷ್ಟನಾದ ಶಂಖ ಚೂಡ, ಅರಿಷ್ಟ ಮತ್ತು ಕೇಶಿಯ ಸಂಹಾರದ ಲೀಲೆ ನಡೆಯಿತು. ಬಳಿಕ ಅಕ್ರೂರನು ಮಥುರೆಯಿಂದ ವೃಂದಾವನಕ್ಕೆ ಬಂದು, ಅವನೊಂದಿಗೆ ಭಗವಾನ್ ಶ್ರೀಕೃಷ್ಣ-ಬಲರಾಮರು ಮಥುರೆಗೆ ಪ್ರಯಾಣ. ॥33॥

(ಶ್ಲೋಕ - 34)

ಮೂಲಮ್

ವ್ರಜಸೀಣಾಂ ವಿಲಾಪಶ್ಚ ಮಥುರಾಲೋಕನಂ ತತಃ ।
ಗಜಮುಷ್ಟಿಕಚಾಣೂರಕಂಸಾದೀನಾಂ ಚ ಯೋ ವಧಃ ॥

ಅನುವಾದ

ಆ ಪ್ರಸಂಗದಲ್ಲಿ ವ್ರಜಯುವತಿಯರು ಮಾಡಿದ ವಿಲಾಪದ ವರ್ಣನೆಯಿದೆ. ಶ್ರೀಕೃಷ್ಣ-ಬಲರಾಮರು ಮಥುರೆಗೆ ಹೋಗಿ ನಗರದ ಸೌಂದರ್ಯವನ್ನು ನೋಡಿ,ಕುವಲಯಾಪೀಡ ಆನೆಯನ್ನು, ಮುಷ್ಟಿಕ-ಚಾಣೂರ ಹಾಗೂ ಕಂಸಾದಿಗಳ ಸಂಹಾರ ಮಾಡಿದನು. ॥34॥

(ಶ್ಲೋಕ - 35)

ಮೂಲಮ್

ಮೃತಸ್ಯಾನಯನಂ ಸೂನೋಃ ಪುನಃ ಸಾಂದೀಪನೇರ್ಗುರೋಃ ।
ಮಥುರಾಯಾಂ ನಿವಸತಾ ಯದುಚಕ್ರಸ್ಯ ಯತ್ಪ್ರಿಯಮ್ ।
ಕೃತಮುದ್ಧವರಾಮಾಭ್ಯಾಂ ಯುತೇನ ಹರಿಣಾ ದ್ವಿಜಾಃ ॥

ಅನುವಾದ

ಸಾಂದೀಪನಿ ಗುರುಗಳ ಬಳಿ ವಿದ್ಯಾಧ್ಯಯನ ಮಾಡಿ ಅವರ ಸತ್ತು ಹೋದ ಮಗನನ್ನು ಮರಳಿ ತಂದು ಕೊಟ್ಟನು. ಶೌನಕಾದಿ ಋಷಿಗಳಿರಾ! ಭಗವಾನ್ ಶ್ರೀಕೃಷ್ಣನು ಮಥುರೆಯಲ್ಲಿ ವಾಸಿಸುತ್ತಿರುವಾಗ ಅವನು ಉದ್ಧವ, ಬಲರಾಮರೊಂದಿಗೆ ಎಲ್ಲ ವಿಧದಿಂದ ಯಾದವರ ಪ್ರಿಯವನ್ನೂ, ಹಿತವನ್ನೂ ಮಾಡಿದನು. ॥35॥

(ಶ್ಲೋಕ - 36)

ಮೂಲಮ್

ಜರಾಸಂಧ ಸಮಾನೀತಸೈನ್ಯಸ್ಯ ಬಹುಶೋ ವಧಃ ।
ಘಾತನಂ ಯವನೇಂದ್ರಸ್ಯ ಕುಶಸ್ಥಲ್ಯಾ ನಿವೇಶನಮ್ ॥

ಅನುವಾದ

ಜರಾಸಂಧನು ಅನೇಕಸಲ ದೊಡ್ಡ ಸೈನ್ಯವನ್ನು ಕೂಡಿಕೊಂಡು ಯುದ್ಧಕ್ಕೆ ಬಂದಾಗ ಭಗವಂತನು ಅವರನ್ನು ಉದ್ಧರಿಸಿ ಪೃಥಿವಿಯ ಭಾರವನ್ನು ಇಳಿಸಿದನು. ಕಾಲಯವನನ್ನು ಮುಚುಕುಂದನಿಂದ ಭಸ್ಮವಾಗಿಸಿದನು. ದ್ವಾರಕಾಪುರಿಯನ್ನು ನಿರ್ಮಿಸಿ ಒಂದೇ ರಾತ್ರಿಯಲ್ಲಿ ಎಲ್ಲರನ್ನು ಅಲ್ಲಿಗೆ ಸಾಗಿಸಿಬಿಟ್ಟನು. ॥36॥

(ಶ್ಲೋಕ - 37)

ಮೂಲಮ್

ಆದಾನಂ ಪಾರಿಜಾತಸ್ಯ ಸುಧರ್ಮಾಯಾಃ ಸುರಾಲಯಾತ್ ।
ರುಕ್ಮಿಣ್ಯಾ ಹರಣಂ ಯುದ್ಧೇ ಪ್ರಮಥ್ಯ ದ್ವಿಷತೋ ಹರೇಃ ॥

ಅನುವಾದ

ದೇವಲೋಕದಿಂದ ಪಾರಿಜಾತ ಕಲ್ಪವೃಕ್ಷವನ್ನು ಮತ್ತು ಸುಧರ್ಮಸಭೆಯನ್ನು ದ್ವಾರಕೆಗೆ ತಂದದ್ದು, ಶತ್ರು ಸೈನ್ಯವನ್ನು ಪರಾಜಯಗೊಳಿಸಿ ರುಕ್ಮಿಣಿಯನ್ನು ಅಪಹರಿಸಿ ತಂದನು. ॥37॥

(ಶ್ಲೋಕ - 38)

ಮೂಲಮ್

ಹರಸ್ಯ ಜೃಂಭಣಂ ಯುದ್ಧೇ ಬಾಣಸ್ಯ ಭುಜಕೃಂತನಮ್ ।
ಪ್ರಾಗ್ಜ್ಯೋತಿಷಪತಿಂ ಹತ್ವಾ ಕನ್ಯಾನಾಂ ಹರಣಂ ಚ ಯತ್ ॥

ಅನುವಾದ

ಬಾಣಾಸುರನೊಡನೆ ನಡೆದ ಯುದ್ಧದ ಪ್ರಸಂಗದಲ್ಲಿ ಮಹಾದೇವನ ಮೇಲೆ ಜೃಂಭಣಾಸವನ್ನು ಬಿಟ್ಟು ಅವನನ್ನು ಆಕಳಿಸುವಂತೆ ಮಾಡಿ, ಬಾಣಾಸುರನ ಭುಜಗಳನ್ನು ಕತ್ತರಿಸಿ ಹಾಕಿದನು. ಪ್ರಾಗ್ಜ್ಯೋತಿಷಪುರದ ನರಕಾಸುರನನ್ನು ಸಂಹರಿಸಿ, ಅವನ ಸೆರೆಯಲ್ಲಿದ್ದ ಹದಿನಾರುಸಾವಿರ ರಾಜಕನ್ಯೆಯರನ್ನು ಕರೆತಂದು ಪಾಣಿಗ್ರಹಣ ಮಾಡಿದನು. ॥38॥

(ಶ್ಲೋಕ - 39)

ಮೂಲಮ್

ಚೈದ್ಯಪೌಂಡ್ರಕಸಾಲ್ವಾನಾಂ ದಂತವಕಸ್ಯ ದುರ್ಮತೇಃ ।
ಶಂಬರೋ ದ್ವಿವಿದಃ ಪೀಠೋ ಮುರಃ ಪಂಚಜನಾದಯಃ ॥

(ಶ್ಲೋಕ - 40)

ಮೂಲಮ್

ಮಾಹಾತ್ಮ್ಯಂ ಚ ವಧಸ್ತೇಷಾಂ ವಾರಾಣಸ್ಯಾಶ್ಚ ದಾಹನಮ್ ।
ಭಾರಾವತರಣಂ ಭೂಮೇರ್ನಿಮಿತ್ತೀಕೃತ್ಯ ಪಾಂಡವಾನ್ ॥

ಅನುವಾದ

ಶಿಶುಪಾಲ, ಪೌಂಡ್ರಕ, ಶಾಲ್ವ, ದುಷ್ಟನಾದ ದಂತವಕ್ತ್ರ, ಶಂಬರಾಸುರ, ದ್ವಿವಿದ, ಪೀಠ, ಮುರ, ಪಂಚಜನರೇ ಮೊದಲಾದವರ ಬಲ-ಪೌರುಷ ಮತ್ತು ಅಂತಹ ಅತಿಶಯ ಬಲಶಾಲಿಗಳನ್ನೂ ಭಗವಂತನು ಸಂಹರಿಸಿದ್ದು, ತನ್ನ ಸುದರ್ಶನ ಚಕ್ರದಿಂದ ಕಾಶೀನಗರವನ್ನು ಸುಟ್ಟುಹಾಕಿದ್ದು, ಮತ್ತೆ ಮಹಾಭಾರತ ಯುದ್ಧದಲ್ಲಿ ಪಾಂಡವರನ್ನು ನಿಮಿತ್ತವಾಗಿಸಿ ಭೂಭಾರವನ್ನು ಬಹುಮಟ್ಟಿಗೆ ಪರಿಹರಿಸಿದುದು, ಎಂಬಿಷ್ಟು ವಿಷಯಗಳು ಹತ್ತನೆಯ ಸ್ಕಂಧದಲ್ಲಿ ವರ್ಣಿತವಾಗಿದೆ. ॥39-40॥

(ಶ್ಲೋಕ - 41)

ಮೂಲಮ್

ವಿಪ್ರಶಾಪಾಪದೇಶೇನ ಸಂಹಾರಃ ಸ್ವಕುಲಸ್ಯ ಚ ।
ಉದ್ಧವಸ್ಯ ಚ ಸಂವಾದೋ ವಾಸುದೇವಸ್ಯ ಚಾದ್ಭುತಃ ॥

ಅನುವಾದ

ಶೌನಕಾದಿ ಋಷಿಗಳಿರಾ! ಹನ್ನೊಂದನೆಯ ಸ್ಕಂಧದಲ್ಲಿ ಭಗವಂತನು ಬ್ರಾಹ್ಮಣರ ಶಾಪವನ್ನು ನೆಪವನ್ನಾಗಿ ಮಾಡಿಕೊಂಡು ಯದುವಂಶವನ್ನು ಸಂಹಾರಮಾಡಿದ ಪ್ರಸಂಗ ವರ್ಣಿತವಾಗಿದೆ ಮತ್ತು ಭಗವಾನ್ ಶ್ರೀಕೃಷ್ಣ ಹಾಗೂ ಉದ್ಧವರ ಪರಮಾದ್ಭುತವಾದ ಸಂವಾದವೂ ಇದೇ ಸ್ಕಂಧದಲ್ಲಿದೆ. ॥41॥

(ಶ್ಲೋಕ - 42)

ಮೂಲಮ್

ಯತ್ರಾತ್ಮವಿದ್ಯಾ ಹ್ಯಖಿಲಾ ಪ್ರೋಕ್ತಾ ಧರ್ಮವಿನಿರ್ಣಯಃ ।
ತತೋ ಮರ್ತ್ಯಪರಿತ್ಯಾಗ ಆತ್ಮಯೋಗಾನುಭಾವತಃ ॥

ಅನುವಾದ

ಅದರಲ್ಲಿ ಸಮಗ್ರ ಆತ್ಮಜ್ಞಾನ ಮತ್ತು ಧರ್ಮ-ನಿರ್ಣಯದ ನಿರೂಪಣೆ ಆಗಿದೆ. ಕೊನೆಗೆ ಭಗವಾನ್ ಶ್ರೀಕೃಷ್ಣನು ತನ್ನ ಆತ್ಮಯೋಗದ ಪ್ರಭಾವದಿಂದ ಯಾವ ಪ್ರಕಾರ ಮರ್ತ್ಯಲೋಕವನ್ನು ಪರಿತ್ಯಜಿಸಿದನು ಎಂಬುದನ್ನೂ ಇದರಲ್ಲಿ ಹೇಳಲಾಗಿದೆ. ॥42॥

(ಶ್ಲೋಕ - 43)

ಮೂಲಮ್

ಯುಗಲಕ್ಷಣವೃತ್ತಿಶ್ಚ ಕಲೌ ನೃಣಾಮುಪಪ್ಲವಃ ।
ಚತುರ್ವಿಧಶ್ಚ ಪ್ರಲಯ ಉತ್ಪತ್ತಿಸಿವಿಧಾ ತಥಾ ॥

ಅನುವಾದ

ಕಡೆಯದಾದ ಹನ್ನೆರಡನೆಯ ಸ್ಕಂಧದಲ್ಲಿ ಯುಗಗಳ ಲಕ್ಷಣಗಳನ್ನು, ಆಯಾ ಯುಗಗಳಲ್ಲಿ ವಾಸಿಸುವ ಜನರ ವ್ಯವಹಾರಗಳನ್ನು ವರ್ಣನೆ ಮಾಡಿದೆ. ಕಲಿಯುಗದಲ್ಲಿ ಮನುಷ್ಯರ ಗತಿ-ವೃತ್ತಿಗಳು ಹೇಗಿರುತ್ತವೆ? ಎಂಬುದನ್ನೂ ವಿವರಿಸಿ ನಾಲ್ಕು ಬಗೆಯ ಪ್ರಳಯ ಮತ್ತು ಮೂರು ಬಗೆಯ ಉತ್ಪತ್ತಿಯ ವರ್ಣನೆಯನ್ನು ಇದರಲ್ಲಿ ಕಾಣುತ್ತೇವೆ.॥43॥

(ಶ್ಲೋಕ - 44)

ಮೂಲಮ್

ದೇಹತ್ಯಾಗಶ್ಚ ರಾಜರ್ಷೇರ್ವಿಷ್ಣುರಾತಸ್ಯ ಧೀಮತಃ ।
ಶಾಖಾಪ್ರಣಯನಮೃಷೇರ್ಮಾರ್ಕಂಡೇಯಸ್ಯ ಸತ್ಕಥಾ ।
ಮಹಾಪುರುಷವಿನ್ಯಾಸಃ ಸೂರ್ಯಸ್ಯ ಜಗದಾತ್ಮನಃ ॥

ಅನುವಾದ

ಅನಂತರ ಪರಮಜ್ಞಾನಿ ರಾಜರ್ಷಿ ಪರೀಕ್ಷಿತನ ಶರೀರತ್ಯಾಗದ ವಿಷಯವನ್ನೂ ಹೇಳಲಾಗಿದೆ. ಮತ್ತೆ ವೇದಗಳ ಶಾಖೆಗಳ ವಿಭಜನೆಯ ಪ್ರಸಂಗವೂ ಬಂದಿದೆ. ಮಾರ್ಕಂಡೇಯರ ಸುಂದರ ಕಥೆ, ಭಗವಂತನ ಅಂಗ-ಉಪಾಂಗಗಳ ಸ್ವರೂಪ ಕಥನ ಮತ್ತು ಕಟ್ಟಕಡೆಗೆ ವಿಶ್ವಾತ್ಮನಾದ ಭಗವಾನ್ ಸೂರ್ಯನ ಗಣಗಳ ವರ್ಣನೆ ಮಾಡಲಾಗಿದೆ. ॥44॥

(ಶ್ಲೋಕ - 45)

ಮೂಲಮ್

ಇತಿ ಚೋಕ್ತಂ ದ್ವಿಜಶ್ರೇಷ್ಠಾ ಯತ್ಪೃಷ್ಟೋಹಮಿಹಾಸ್ಮಿ ವಃ ।
ಲೀಲಾವತಾರಕರ್ಮಾಣಿ ಕೀರ್ತಿತಾನೀಹ ಸರ್ವಶಃ ॥

ಅನುವಾದ

ಶೌನಕಾದಿಗಳೇ! ಈ ಸತ್ಸಂಗದ ಸಂದರ್ಭದಲ್ಲಿ ನೀವುಗಳು ಕೇಳಿದುದನ್ನು ನಾನು ವರ್ಣಿಸಿರುವೆನು. ಮುಖ್ಯವಾಗಿ ಶ್ರೀಹರಿಯ ಅವತಾರ-ಲೀಲಾಚರಿತ್ರೆಗಳೆಲ್ಲವನ್ನೂ ಸಂಪೂರ್ಣವಾಗಿ ಕೀರ್ತಿಸಿರುವೆನು. ॥45॥

(ಶ್ಲೋಕ - 46)

ಮೂಲಮ್

ಪತಿತಃ ಸ್ಖಲಿತಶ್ಚಾರ್ತಃ ಕ್ಷುತ್ತ್ವಾ ವಾ ವಿವಶೋ ಬ್ರುವನ್ ।
ಹರಯೇ ನಮ ಇತ್ಯುಚ್ಚೈರ್ಮುಚ್ಯತೇ ಸರ್ವಪಾತಕಾತ್ ॥

ಅನುವಾದ

ಮನುಷ್ಯನು ಅಕಸ್ಮಾತ್ತಾಗಿ ಬಿದ್ದಾಗಲೀ, ಜಾರಿ ಮುಗ್ಗರಿಸಿದಾಗಲೀ, ದುಃಖಿಸುವಾಗಲೀ, ಸೀನುವಾಗ ಆಗಲೀ, ಮೈಮರೆತಾಗಲೀ ಗಟ್ಟಿಯಾಗಿ ‘ಹರಯೇನಮಃ’ ಎಂದು ಕೂಗಿದಾಗ, ಅವನು ಸಮಸ್ತ ಪಾಪಗಳಿಂದ ಮುಕ್ತನಾಗಿ ಹೋಗುತ್ತಾನೆ. ॥46॥

(ಶ್ಲೋಕ - 47)

ಮೂಲಮ್

ಸಂಕೀರ್ತ್ಯಮಾನೋ ಭಗವಾನನಂತಃ
ಶ್ರುತಾನುಭಾವೋ ವ್ಯಸನಂ ಹಿ ಪುಂಸಾಮ್ ।
ಪ್ರವಿಶ್ಯ ಚಿತ್ತಂ ವಿಧುನೋತ್ಯಶೇಷಂ
ಯಥಾ ತಮೋರ್ಕೋಭ್ರಮಿವಾತಿವಾತಃ ॥

ಅನುವಾದ

ಭಗವಂತನಾದ ಅನಂತನ ನಾಮ-ರೂಪ-ಗುಣ ಮಹಿಮಾದಿಗಳನ್ನು ಯಾರು ಕೀರ್ತನೆ ಮಾಡುತ್ತಾರೋ, ಅಥವಾ ಶ್ರವಣಿಸುತ್ತಾನೋ ಅವರ ಹೃದಯವನ್ನು ಭಗವಂತನು ಹೊಕ್ಕು ಅವರ ಸಮಸ್ತ ವ್ಯಸನಗಳನ್ನು ಇಲ್ಲವಾಗಿಸುತ್ತಾನೆ. ಸೂರ್ಯನು ಕತ್ತಲೆಯನ್ನೂ, ಬಿರುಗಾಳಿಯು ಮೋಡಗಳನ್ನು ಓಡಿಸಿಬಿಡುವಂತೆಯೇ ಭಗವಂತನು ಅವರ ಎಲ್ಲ ದುಃಖಗಳನ್ನು ಧ್ವಂಸಮಾಡಿ ಬಿಡುತ್ತಾನೆ. ॥47॥

(ಶ್ಲೋಕ - 48)

ಮೂಲಮ್

ಮೃಷಾಗಿರಸ್ತಾ ಹ್ಯಸತೀರಸತ್ಕಥಾ
ನ ಕಥ್ಯತೇ ಯದ್ಭಗವಾನಧೋಕ್ಷಜಃ ।
ತದೇವ ಸತ್ಯಂ ತದುಹೈವ ಮಂಗಲಂ
ತದೇವ ಪುಣ್ಯಂ ಭಗವದ್ಗುಣೋದಯಮ್ ॥

ಅನುವಾದ

ಭಗವಂತನಾದ ಅಧೋಕ್ಷಜನನ್ನು (ಇಂದ್ರಿಯಾತೀತನಾದ ನಾರಾಯಣನನ್ನು) ಕೊಂಡಾಡದೆ ಇರುವ ವಾಣಿಯು ಎಷ್ಟೇ ಸುಂದರವಾಗಿದ್ದರೂ, ಭಾವಪೂರ್ಣವಾಗಿದ್ದರೂ, ಉತ್ತಮ ವಿಷಯಗಳು ಪ್ರತಿಪಾದಿತವಾಗಿದ್ದರೂ ನಿರರ್ಥಕವು, ಸಾರಹೀನವು, ಅಸದ್ವಿಷಯವಾಣಿಯಾಗಿದೆ. ಭಗವಂತನ ಗುಣಗಳಿಂದ ಪರಿಪೂರ್ಣವಾದ ವಾಣಿಯೇ ಸತ್ಯವೂ ಪವಿತ್ರವೂ, ಮಂಗಳಮಯವೂ ಆಗಿದೆ. ॥48॥

(ಶ್ಲೋಕ - 49)

ಮೂಲಮ್

ತದೇವ ರಮ್ಯಂ ರುಚಿರಂ ನವಂ ನವಂ
ತದೇವ ಶಶ್ವನ್ಮನಸೋ ಮಹೋತ್ಸವಮ್ ।
ತದೇವ ಶೋಕಾರ್ಣವಶೋಷಣಂ ನೃಣಾಂ
ಯದುತ್ತಮಶ್ಲೋಕಯಶೋನುಗೀಯತೇ ॥

ಅನುವಾದ

ಯಾವ ವಚನದ ಮೂಲಕ ಭಗವಂತನ ಪರಮಪವಿತ್ರ ಕೀರ್ತಿಯು ಹಾಡಲ್ಪಡುತ್ತದೋ ಅದೇ ರಮಣೀಯವೂ, ರುಚಿಕರವೂ, ನಿತ್ಯ ನೂತನವೂ ಆದ ವಾಣಿಯು. ಅದು ನಿತ್ಯನಿರಂತರ ಮನಸ್ಸಿಗೆ ಆನಂದವನ್ನುಂಟು ಮಾಡುವ ವಾಣಿಯು. ಮನುಷ್ಯರ ಶೋಕ ಕಡಲನ್ನು ಶೋಷಣ ಮಾಡುವ ವಾಣಿಯು. ॥49॥

(ಶ್ಲೋಕ - 50)

ಮೂಲಮ್

ನ ತದ್ವಚಶ್ಚಿತ್ರಪದಂ ಹರೇರ್ಯಶೋ
ಜಗತ್ಪವಿತ್ರಂ ಪ್ರಗೃಣೀತ ಕರ್ಹಿಚಿತ್ ।
ತದ್ಧ್ವಾಂಕ್ಷತೀರ್ಥಂ ನ ತು ಹಂಸಸೇವಿತಂ
ಯತ್ರಾಚ್ಯುತಸ್ತತ್ರ ಹಿ ಸಾಧವೋಮಲಾಃ ॥

ಅನುವಾದ

ಜಗತ್ತನ್ನು ಪಾವನಗೊಳಿಸುವ ಶ್ರೀಹರಿಯ ಕೀರ್ತಿಯನ್ನು ಕೊಂಡಾಡದೇ ಇರುವ ಕಾವ್ಯವು (ರಸಭಾವಾಲಂಕಾರಾದಿಗಳಿಂದ ತುಂಬಿದ್ದರೂ) ಎಷ್ಟೇ ವಿಚಿತ್ರ ಪದಗಳಿಂದ ಅಲಂಕೃತವಾಗಿದ್ದರೂ ಕಾಗೆಗಳು ಮುಳುಗುವ ಕೆಸರು ನೀರಿಗೆ ಸಮಾನವಾದುದು. ಹಂಸಪಕ್ಷಿಗಳಿಂದಲೂ, ಪರಮಹಂಸ ಭಕ್ತರಿಂದಲೂ ಸೇವಿತವಾದ ತೀರ್ಥಕ್ಕೆ ಸದೃಶವಾಗಲಾರದು. ಜ್ಞಾನಿಗಳು ಅದನ್ನು ಮುಟ್ಟುವುದೂ ಇಲ್ಲ. ಅಚ್ಯುತನ ಕಥೆ ನಡೆಯುವಲ್ಲೇ ನಿರ್ಮಲಮನಸ್ಕರಾದ ಸಾಧು-ಸಂತರು ರಮಿಸುವರು. ॥50॥

(ಶ್ಲೋಕ - 51)

ಮೂಲಮ್

ಸ ವಾಗ್ವಿಸರ್ಗೋ ಜನತಾಘಸಂಪ್ಲವೋ
ಯಸ್ಮಿನ್ಪ್ರತಿಶ್ಲೋಕಮಬದ್ಧವತ್ಯಪಿ ।
ನಾಮಾನ್ಯನಂತಸ್ಯ ಯಶೋಂಕಿತಾನಿ ಯತ್
ಶೃಣ್ವಂತಿ ಗಾಯಂತಿ ಗೃಣಂತಿ ಸಾಧವಃ ॥

ಅನುವಾದ

ಯಾವುದಾದರೂ ಕಾವ್ಯದಲ್ಲಿ ಪ್ರತಿಯೊಂದು ಶ್ಲೋಕದಲ್ಲಿ ಸುಂದರ ರಚನೆ ಇರದೆ, ವ್ಯಾಕರಣ ದೃಷ್ಟಿಯಿಂದ ಕಾವ್ಯದೋಷಗಳಿದ್ದು ಅದರಲ್ಲಿ ಶ್ರೀಭಗವಂತನ ನಾಮಗಳಿಂದ ಅಂಕಿತವಾಗಿದ್ದರೆ, ಅದು ಸರ್ವಜನರ ಪಾಪಗಳನ್ನು ಪರಿಹರಿಸುತ್ತದೆ. ಸತ್ಪುರುಷರು ಆ ಭಗವನ್ಮಯವಾದ ವಾಣಿಯನ್ನೇ ಹಾಡುತ್ತಾರೆ ಮತ್ತು ಕೇಳುತ್ತಾರೆ. ॥51॥

(ಶ್ಲೋಕ - 52)

ಮೂಲಮ್

ನೈಷ್ಕರ್ಮ್ಯಮಪ್ಯಚ್ಯುತಭಾವವರ್ಜಿತಂ
ನ ಶೋಭತೇ ಜ್ಞಾನಮಲಂ ನಿರಂಜನಮ್ ।
ಕುತಃ ಪುನಃ ಶಶ್ವದಭದ್ರಮೀಶ್ವರೇ
ನ ಹ್ಯರ್ಪಿತಂ ಕರ್ಮ ಯದಪ್ಯನುತ್ತಮಮ್ ॥

ಅನುವಾದ

ಮೋಕ್ಷಪ್ರಾಪ್ತಿಗೆ ಕಾರಣವಾದ ಶುದ್ಧಜ್ಞಾನವೂ ಕೂಡ, ಭಗವದ್ಭಕ್ತಿ ರಹಿತವಾಗಿದ್ದರೆ ಚೆನ್ನಾಗಿ ಶೋಭಿಸಲಾರದು. ಹಾಗೆಯೇ ಭಗವಂತನಲ್ಲಿ ಭಕ್ತಿಯಿಲ್ಲದ ಜ್ಞಾನವೂ ಕೂಡ ಶೋಭಿಸುವುದಿಲ್ಲ. ಭಗವಂತನಿಗೆ ಅರ್ಪಿಸದೇ ಇರುವ ಕರ್ಮವು ಎಷ್ಟೇ ಉತ್ತಮವಾಗಿದ್ದರೂ ಅಮಂಗಲವೂ ದುಃಖಕರವೂ ಆಗಿದೆ. ॥52॥

(ಶ್ಲೋಕ - 53)

ಮೂಲಮ್

ಯಶಃಶ್ರಿಯಾಮೇವ ಪರಿಶ್ರಮಃ ಪರೋ
ವರ್ಣಾಶ್ರಮಾಚಾರತಪಃಶ್ರುತಾದಿಷು ।
ಅವಿಸ್ಮೃತಿಃ ಶ್ರೀಧರಪಾದಪದ್ಮಯೋ-
ರ್ಗುಣಾನುವಾದಶ್ರವಣಾದಿಭಿರ್ಹರೇಃ ॥

ಅನುವಾದ

ವರ್ಣಾಶ್ರಮಗಳಿಗೆ ಅನುಕೂಲವಾದ ಆಚಾರ ಧರ್ಮಗಳು, ತಪಸ್ಸು, ಅಧ್ಯಯನ, ಇವುಗಳಿಗಾಗಿ ಪಡುವ ಶ್ರಮಕ್ಕೆ ಪ್ರತಿಲವಾದರೂ ಏನು? ಕೀರ್ತಿ ಮತ್ತು ಸಂಪತ್ತು. ಇವು ಕ್ಷಣಭಂಗುರವಾದವುಗಳು. ಆದರೆ ಭಗವಂತನ ಗುಣ, ಲೀಲೆ, ದಿವ್ಯನಾಮಗಳ ಶ್ರವಣ ಕೀರ್ತನೆ ಮಾಡಿದರೆ ಅವನ ಅಡಿದಾವರೆಗಳಲ್ಲಿ ನಿಶ್ಚಲವಾದ ಸ್ಮೃತಿಯು ಉಂಟಾಗುವುದು. ॥53॥

(ಶ್ಲೋಕ - 54)

ಮೂಲಮ್

ಅವಿಸ್ಮೃತಿಃ ಕೃಷ್ಣಪದಾರವಿಂದಯೋಃ
ಕ್ಷಿಣೋತ್ಯಭದ್ರಾಣಿ ಶಮಂ ತನೋತಿ ಚ ।
ಸತ್ತ್ವಸ್ಯ ಶುದ್ಧಿಂ ಪರಮಾತ್ಮಭಕ್ತಿಂ
ಜ್ಞಾನಂ ಚ ವಿಜ್ಞಾನವಿರಾಗಯುಕ್ತಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಚರಣಕಮಲಗಳ ನಿಶ್ಚಲವಾದ ಸ್ಮೃತಿಯು ಸಮಸ್ತ ಪಾಪ-ತಾಪ, ಅಮಂಗಳಗಳನ್ನು ನಾಶಮಾಡಿಬಿಡುತ್ತದೆ. ಪರಮಶಾಂತಿಯ ವಿಸ್ತಾರ ಮಾಡುತ್ತದೆ. ಅದರ ಮೂಲಕ ಅಂತಃಕರಣವು ಶುದ್ಧವಾಗುತ್ತದೆ. ಭಗವಂತನ ಭಕ್ತಿಯೂ ಪರಮ ವೈರಾಗ್ಯದಿಂದ ಕೂಡಿದ ಭಗವಂತನ ಸ್ವರೂಪ ಜ್ಞಾನವು, ಅನುಭವವೂ ಪ್ರಾಪ್ತವಾಗುತ್ತದೆ. ॥54॥

(ಶ್ಲೋಕ - 55)

ಮೂಲಮ್

ಯೂಯಂ ದ್ವಿಜಾಗ್ರ್ಯಾ ಬತ ಭೂರಿಭಾಗಾ
ಯಚ್ಛಶ್ವದಾತ್ಮನ್ಯಖಿಲಾತ್ಮಭೂತಮ್ ।
ನಾರಾಯಣಂ ದೇವಮದೇವಮೀಶಮ್
ಅಜಸ್ರಭಾವಾ ಭಜತಾವಿವೇಶ್ಯ ॥

ಅನುವಾದ

ಶೌನಕಾದಿ ಋಷಿಗಳೇ! ನೀವೆಲ್ಲರೂ ಅತ್ಯಂತ ಭಾಗ್ಯವಂತರು! ಧನ್ಯರೂ ಆಗಿರುವಿರಿ. ಏಕೆಂದರೆ, ನೀವೆಲ್ಲರೂ ಅತ್ಯಂತ ಪ್ರೇಮದಿಂದ ನಿರಂತರವಾಗಿ ತಮ್ಮ ಹೃದಯದಲ್ಲಿ ಸರ್ವಾಂತರ್ಯಾಮಿಯೂ, ಸರ್ವಾತ್ಮನೂ, ಸರ್ವಶಕ್ತಿವಂತನೂ, ಆದಿದೇವನೂ, ಎಲ್ಲರ ಪರಮಾರಾಧ್ಯನೂ ಹಾಗೂ ಸ್ವಯಂ ಇತರ ಆರಾಧ್ಯದೇವರಿಂದರಹಿತನಾದ ನಾರಾಯಣ ಭಗವಂತನನ್ನು ಸ್ಥಾಪಿಸಿಕೊಂಡು ಭಜಿಸುತ್ತಾ ಇರುವಿರಿ. ॥55॥

(ಶ್ಲೋಕ - 56)

ಮೂಲಮ್

ಅಹಂ ಚ ಸಂಸ್ಮಾರಿತ ಆತ್ಮತತ್ತ್ವಂ
ಶ್ರುತಂ ಪುರಾ ಮೇ ಪರಮರ್ಷಿವಕಾತ್ ।
ಪ್ರಾಯೋಪವೇಶೇ ನೃಪತೇಃ ಪರೀಕ್ಷಿತಃ
ಸದಸ್ಯೃಷೀಣಾಂ ಮಹತಾಂ ಚ ಶೃಣ್ವತಾಮ್ ॥

ಅನುವಾದ

ರಾಜರ್ಷಿ ಪರೀಕ್ಷಿತನು ಉಪವಾಸದಿಂದ ದೊಡ್ಡ-ದೊಡ್ಡ ಋಷಿಗಳು ತುಂಬಿದ ಸಭೆಯಲ್ಲಿ, ಎಲ್ಲರೆದುರಿಗೆ ಶ್ರೀಶುಕಮಹಾಮುನಿಗಳಿಂದ ಶ್ರೀಮದ್ಭಾಗವತದ ಕಥೆಯನ್ನು ಕೇಳುತ್ತಿರುವಾಗ ನಾನೂ ಅಲ್ಲೇ ಕುಳಿತುಕೊಂಡು ಆ ಪರಮ ಮಹಿರ್ಷಿಗಳ ಮುಖದಿಂದ ಈ ಆತ್ಮತತ್ತ್ವವನ್ನು ಶ್ರವಣಿಸಿದೆನು. ನೀವುಗಳು ಅದನ್ನು ಸ್ಮರಣೆಗೆ ತಂದುಕೊಟ್ಟು ನನ್ನ ಮೇಲೆ ಮಹತ್ಕೃಪೆಯನ್ನು ಮಾಡಿರುವಿರಿ. ॥56॥

(ಶ್ಲೋಕ - 57)

ಮೂಲಮ್

ಏತದ್ವಃ ಕಥಿತಂ ವಿಪ್ರಾಃ ಕಥನೀಯೋರುಕರ್ಮಣಃ ।
ಮಾಹಾತ್ಮ್ಯಂ ವಾಸುದೇವಸ್ಯ ಸರ್ವಾಶುಭವಿನಾಶನಮ್ ॥

ಅನುವಾದ

ಶೌನಕಾದಿ ಋಷಿಗಳಿರಾ! ಭಗವಾನ್ ವಾಸುದೇವನ ಒಂದೊಂದು ಲೀಲೆಯೂ ಸದಾಕಾಲವೂ ಶ್ರವಣ-ಕೀರ್ತನೆ ಮಾಡಲು ಯೋಗ್ಯವಾದುದು. ನಾನು ಈ ಪ್ರಸಂಗದಲ್ಲಿ ಎಲ್ಲ ಅಶುಭ ಸಂಸ್ಕಾರಗಳನ್ನು ತೊಳೆದುಬಿಡುವ ಅವುಗಳ ಮಹಿಮೆಯನ್ನೇ ವರ್ಣಿಸಿರುವೆನು. ॥57॥

(ಶ್ಲೋಕ - 58)

ಮೂಲಮ್

ಯ ಏವಂ ಶ್ರಾವಯೇನ್ನಿತ್ಯಂ ಯಾಮಕ್ಷಣಮನನ್ಯಧೀಃ ।
ಶ್ರದ್ಧಾವಾನ್ಯೋನುಶೃಣುಯಾತ್ಪುನಾತ್ಯಾತ್ಮಾನಮೇವ ಸಃ ॥

ಅನುವಾದ

ಏಕಾಗ್ರಚಿತ್ತದಿಂದ ಒಂದು ಜಾವ ಅಥವಾ ಒಂದು ಕ್ಷಣವಾದರೂ ಪ್ರತಿದಿನ ಶ್ರೀಮದ್ಭಾಗವತವನ್ನು ಕೀರ್ತಿಸುವವನು, ಶ್ರದ್ಧೆಯಿಂದ ಶ್ರವಣಿಸುವವನು ಖಂಡಿತವಾಗಿ ಶರೀರ ಸಹಿತ ತನ್ನ ಅಂತಃಕರಣವನ್ನು ಪವಿತ್ರವಾಗಿಸಿಕೊಳ್ಳುವನು. ॥58॥

(ಶ್ಲೋಕ - 59)

ಮೂಲಮ್

ದ್ವಾದಶ್ಯಾಮೇಕಾದಶ್ಯಾಂ ವಾ ಶೃಣ್ವನ್ನಾಯುಷ್ಯವಾನ್ ಭವೇತ್ ।
ಪಠತ್ಯನಶ್ನನ್ ಪ್ರಯತಸ್ತತೋ ಭವತ್ಯಪಾತಕೀ ॥

ಅನುವಾದ

ದ್ವಾದಶೀ ಅಥವಾ ಏಕಾದಶಿಯ ದಿನ ಇದನ್ನು ಶ್ರವಣಿಸುವವನು ದೀರ್ಘಾಯುವಾಗುತ್ತಾನೆ. ಸಂಯಮ ಪೂರ್ವಕ ಉಪವಾಸವಿದ್ದು ಇದನ್ನು ಪಠಿಸಿದರೆ ಅವರ ಹಿಂದಿನ ಪಾಪಗಳು ನಾಶವಾಗುವುದರ ಜೊತೆಗೆ, ಪಾಪದ ಪ್ರವೃತ್ತಿಯೂ ನಾಶವಾಗಿ ಹೋಗುತ್ತದೆ. ॥59॥

(ಶ್ಲೋಕ - 60)

ಮೂಲಮ್

ಪುಷ್ಕರೇ ಮಥುರಾಯಾಂ ಚ ದ್ವಾರವತ್ಯಾಂ ಯತಾತ್ಮವಾನ್ ।
ಉಪೋಷ್ಯ ಸಂಹಿತಾಮೇತಾಂ ಪಠಿತ್ವಾ ಮುಚ್ಯತೇ ಭಯಾತ್ ॥

ಅನುವಾದ

ಇಂದ್ರಿಯಗಳನ್ನು ಮತ್ತು ಅಂತಃಕರಣವನ್ನು ವಶಪಡಿಸಿಕೊಂಡು, ಉಪವಾಸದಿಂದಿದ್ದು, ಪುಷ್ಕರ, ಮಥುರೆ ಅಥವಾ ದ್ವಾರಕೆಯಲ್ಲಿ ಈ ಪುರಾಣ ಸಂಹಿತೆಯನ್ನು ಪಾರಾಯಣೆ ಮಾಡುವವನು ಎಲ್ಲ ಭಯಗಳಿಂದ ಬಿಡುಗಡೆ ಹೊಂದುವನು. ॥60॥

(ಶ್ಲೋಕ - 61)

ಮೂಲಮ್

ದೇವತಾ ಮುನಯಃ ಸಿದ್ಧಾಃ ಪಿತರೋ ಮನವೋ ನೃಪಾಃ ।
ಯಚ್ಛಂತಿ ಕಾಮಾನ್ಗೃಣತಃ ಶೃಣ್ವತೋ ಯಸ್ಯ ಕೀರ್ತನಾತ್ ॥

ಅನುವಾದ

ಯಾರು ಇದನ್ನು ಕೇಳುವನೋ, ಅಥವಾ ಉಚ್ಚಾರಿಸುವನೋ, ಅವನು ಮಾಡುವ ಕೀರ್ತನೆಯಿಂದ ದೇವತೆಗಳು, ಮುನಿಗಳು, ಸಿದ್ಧರು, ಪಿತೃಗಳು, ಮನುಗಳು ಮತ್ತು ರಾಜರು ಸಂತುಷ್ಟರಾಗುತ್ತಾರೆ ಹಾಗೂ ಅವನ ಅಭಿಲಾಷೆಗಳು ಪೂರ್ಣಗೊಳ್ಳುವವು. ॥61॥

(ಶ್ಲೋಕ - 62)

ಮೂಲಮ್

ಋಚೋ ಯಜೂಂಷಿ ಸಾಮಾನಿ ದ್ವಿಜೋಧೀತ್ಯಾನುವಿಂದತೇ ।
ಮಧುಕುಲ್ಯಾಃ ಘೃತಕುಲ್ಯಾಃ ಪಯಃಕುಲ್ಯಾಶ್ಚ ತತ್ಫಲಮ್ ॥

ಅನುವಾದ

ಋಗ್ವೇದವನ್ನು, ಯುಜುರ್ವೇದವನ್ನು, ಸಾಮವೇದವನ್ನು ಪಾರಾಯಣೆ ಮಾಡುವ ಬ್ರಾಹ್ಮಣನಿಗೆ ಮಧುಕುಲ್ಯಾ, ಘೃತಕುಲ್ಯಾ, ಪಯಃ ಕುಲ್ಯಾ (ಜೇನು, ತುಪ್ಪ, ಹಾಲಿನ ನದಿಗಳು ಅರ್ಥಾತ್ ಎಲ್ಲ ರೀತಿಯ ಸುಖ-ಸಮೃದ್ಧಿ) ಇವುಗಳು ಪ್ರಾಪ್ತವಾಗುತ್ತವೆ. ಅದೇ ಲವು ಶ್ರೀಮದ್ಭಾಗವತ ಪಾರಾಯಣೆಯಿಂದ ದೊರೆಯುತ್ತದೆ. ॥62॥

(ಶ್ಲೋಕ - 63)

ಮೂಲಮ್

ಪುರಾಣಸಂಹಿತಾಮೇತಾಮಧೀತ್ಯ ಪ್ರಯತೋ ದ್ವಿಜಃ ।
ಪ್ರೋಕ್ತಂ ಭಗವತಾ ಯತ್ತು ತತ್ಪದಂ ಪರಮಂ ವ್ರಜೇತ್ ॥

ಅನುವಾದ

ಸಂಯಮ ಪೂರ್ಣವಾಗಿ ಈ ಪುರಾಣಸಂಹಿತೆಯನ್ನು ಅಧ್ಯಯನ ಮಾಡುವ ದ್ವಿಜನಿಗೆ ಸಾಕ್ಷಾತ್ ಭಗವಂತನೇ ವರ್ಣಿಸಿದ ಪರಮಪದವು ಪ್ರಾಪ್ತವಾಗುತ್ತದೆ. ॥63॥

(ಶ್ಲೋಕ - 64)

ಮೂಲಮ್

ವಿಪ್ರೋಧೀತ್ಯಾಪ್ನುಯಾತ್ಪ್ರಜ್ಞಾಂ ರಾಜನ್ಯೋದಧಿಮೇಖಲಾಮ್ ।
ವೈಶ್ಯೋ ನಿಧಿಪತಿತ್ವಂ ಚ ಶೂದ್ರಃ ಶುದ್ಧ್ಯೇತ ಪಾತಕಾತ್ ॥

ಅನುವಾದ

ಇದರ ಅಧ್ಯಯನದಿಂದ ಬ್ರಾಹ್ಮಣನಿಗೆ ಋತಂಭರಾ ಪ್ರಜ್ಞೆ (ತತ್ತ್ವಜ್ಞಾನವನ್ನು ಪ್ರಾಪ್ತವಾಗಿರುವ ಬುದ್ಧಿ)ಯು ಪ್ರಾಪ್ತಿಯಾಗುತ್ತದೆ. ಕ್ಷತ್ರಿಯರಿಗೆ ಸಮುದ್ರಾಂತದ ಭೂಮಂಡಲದ ರಾಜ್ಯದ ಪ್ರಾಪ್ತಿಯಾಗುತ್ತದೆ. ವೈಶ್ಯರಿಗೆ ಕುಬೇರನ ಪದವು ದೊರೆಯುತ್ತದೆ. ಶೂದ್ರರು ಸಮಸ್ತ ಪಾಪಗಳಿಂದ ಬಿಡುಗಡೆ ಹೊಂದುವರು. ॥64॥

(ಶ್ಲೋಕ - 65)

ಮೂಲಮ್

ಕಲಿಮಲಸಂಹತಿಕಾಲನೋಖಿಲೇಶೋ
ಹರಿರಿತರತ್ರ ನ ಗೀಯತೇ ಹ್ಯಭೀಕ್ಷ್ಣಮ್ ।
ಇಹ ತು ಪುನರ್ಭಗವಾನಶೇಷಮೂರ್ತಿಃ
ಪರಿಪಠಿತೋನುಪದಂ ಕಥಾಪ್ರಸಂಗೈಃ ॥

ಅನುವಾದ

ಭಗವಂತನೇ ಎಲ್ಲರ ಸ್ವಾಮಿಯಾಗಿರುವನು ಮತ್ತು ಕಲಿಯುಗದ ಮಲಸಮೂಹಗಳನ್ನು ಧ್ವಂಸಮಾಡುವವನು. ಅವನನ್ನು ವರ್ಣಿಸುವ ಬಹಳಷ್ಟು ಪುರಾಣಗಳಿದ್ದರೂ ಅವುಗಳಲ್ಲಿ ಸರ್ವತ್ರ ಹಾಗೂ ನಿರಂತರ ಭಗವಂತನ ವರ್ಣನೆ ಸಿಗುವುದಿಲ್ಲ. ಶ್ರೀಮದ್ಭಾಗವತದಲ್ಲಾದರೋ ಪ್ರತಿಯೊಂದು ಕಥೆಯಲ್ಲಿಯೂ ಹೆಜ್ಜೆ-ಹೆಜ್ಜೆಗೆ ಸರ್ವಸ್ವರೂಪನಾದ ಭಗವಂತನನ್ನೇ ವರ್ಣಿಸಲಾಗಿದೆ. ॥65॥

(ಶ್ಲೋಕ - 66)

ಮೂಲಮ್

ತಮಹಮಜಮನಂತಮಾತ್ಮತತ್ತ್ವಂ
ಜಗದುದಯಸ್ಥಿತಿಸಂಯಮಾತ್ಮಶಕ್ತಿಮ್ ।
ದ್ಯುಪತಿಭಿರಜಶಕ್ರಶಂಕರಾದ್ಯೈ-
ರ್ದುರವಸಿತಸ್ತವಮಚ್ಯುತಂ ನತೋಸ್ಮಿ ॥

ಅನುವಾದ

ಭಗವಂತನು ಜನ್ಮ-ಮೃತ್ಯು ಮುಂತಾದ ವಿಕಾರಗಳಿಂದರಹಿತನೂ, ದೇಶ ಕಾಲಾದಿಗಳಿಂದ ಅತೀತನೂ, ಸ್ವಯಂ ಆತ್ಮತತ್ತ್ವವೂ ಆಗಿರುವನು. ಜಗತ್ತಿನ ಉತ್ಪತ್ತಿ, ಸ್ಥಿತಿ, ಪ್ರಳಯಗಳನ್ನು ಮಾಡುವ ಶಕ್ತಿಗಳೂ ಕೂಡ ಅವನ ಸ್ವರೂಪಭೂತವೇ ಆಗಿದ್ದು ಭಿನ್ನವಾಗಿಲ್ಲ. ಬ್ರಹ್ಮಾ, ಶಂಕರ, ಇಂದ್ರ ಮೊದಲಾದ ಲೋಕಪಾಲಕರೂ ಕೂಡ ಅವನನ್ನು ಸ್ತುತಿಸುತ್ತಿದ್ದರೂ ಯಾರ ಅಂತವನ್ನು ಕಾಣಲಾರರೋ, ಅಂತಹ ಏಕರಸ ಸಚ್ಚಿದಾನಂದ ಸ್ವರೂಪ ಪರಮಾತ್ಮನಿಗೆ ನಾನು ನಮಸ್ಕರಿಸುತ್ತೇನೆ. ॥66॥

(ಶ್ಲೋಕ - 67)

ಮೂಲಮ್

ಉಪಚಿತನವಶಕ್ತಿಭಿಃ ಸ್ವ ಆತ್ಮ-
ನ್ಯುಪರಚಿತಸ್ಥಿರಜಂಗಮಾಲಯಾಯ ।
ಭಗವತ ಉಪಲಬ್ಧಿಮಾತ್ರಧಾಮ್ನೇ
ಸುರಋಷಭಾಯ ನಮಃ ಸನಾತನಾಯ ॥

ಅನುವಾದ

ಯಾರು ತನ್ನ ಸ್ವರೂಪದಲ್ಲೇ ಪ್ರಕೃತಿಯೇ ಮುಂತಾದ ಒಂಭತ್ತು ಶಕ್ತಿಗಳ ಸಂಕಲ್ಪಮಾಡಿ ಈ ಚರಾಚರ ಜಗತ್ತಿನ ಸೃಷ್ಟಿಯನ್ನು ಮಾಡಿರುವನೋ, ಯಾರು ಇದರ ಅಧಿಷ್ಠಾನ ರೂಪದಿಂದ ನೆಲೆಸಿರುವನೋ, ಯಾರ ಪರಮ ಪದವು ಕೇವಲ ಅನುಭೂತಿಸ್ವರೂಪವಾಗಿದೆಯೋ, ಅಂತಹ ದೇವತೆಗಳ ಆರಾಧ್ಯ ದೇವನಾದ ಸನಾತನ ಭಗವಂತನ ಚರಣಗಳಲ್ಲಿ ನಾನು ನಮಸ್ಕರಿಸುತ್ತಿದ್ದೇನೆ. ॥67॥

(ಶ್ಲೋಕ - 68)

ಮೂಲಮ್

ಸ್ವಸುಖನಿಭೃತಚೇತಾಸ್ತದ್ವ್ಯುದಸ್ತಾನ್ಯಭಾವೋ-
ಪ್ಯಜಿತರುಚಿರಲೀಲಾಕೃಷ್ಟಸಾರಸ್ತದೀಯಮ್ ।
ವ್ಯತನುತ ಕೃಪಯಾ ಯಸ್ತತ್ತ್ವದೀಪಂ ಪುರಾಣಂ
ತಮಖಿಲವೃಜಿನಘ್ನಂವ್ಯಾಸಸೂನುಂನತೋಸ್ಮಿ ॥

ಅನುವಾದ

ಶ್ರೀಶುಕಮಹಾಮುನಿಗಳು ತನ್ನ ಆತ್ಮಾನಂದದಲ್ಲೇ ಮುಳುಗಿದ್ದರು. ಇಂತಹ ಅಖಂಡ ಅದ್ವೈತಸ್ಥಿತಿಯಿಂದ ಅವರ ಭೇದ ದೃಷ್ಟಿಯು ಸರ್ವಥಾ ನಿವೃತ್ತವಾಗಿತ್ತು. ಹೀಗಿದ್ದರೂ ಮುರಲಿ ಮನೋಹರ ಶ್ಯಾಮಸುಂದರನ ಮಧುರ, ಮಂಗಲಮಯ, ಮನೋಹರ ಲೀಲೆಗಳು ಅವರ ವೃತ್ತಿಗಳನ್ನು ತನ್ನತ್ತ ಆಕರ್ಷಿಸಿಕೊಂಡಿದ್ದವು ಮತ್ತು ಅವರು ಜಗತ್ತಿನ ಪ್ರಾಣಿಗಳ ಮೇಲೆ ಕೃಪೆ ಮಾಡಲು ಭಗವತ್ತತ್ವಗಳನ್ನು ಪ್ರಕಾಶಿತಗೊಳಿಸುವ ಈ ಮಹಾಪುರಾಣವನ್ನು ವಿಸ್ತಾರಗೊಳಿಸಿದರು. ಅಂತಹ ಸರ್ವಪಾಪಹಾರೀ ವ್ಯಾಸನಂದನ ಭಗವಾನ್ ಶ್ರೀಶುಕ ಮಹಾಮುನಿಯ ಚರಣಗಳಲ್ಲಿ ನಾನು ನಮಸ್ಕರಿಸುತ್ತೇನೆ.॥68॥

ಅನುವಾದ (ಸಮಾಪ್ತಿಃ)

ಹನ್ನೆರಡನೆಯ ಅಧ್ಯಾಯವು ಮುಗಿಯಿತು. ॥12॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ
ದ್ವಾದಶ ಸ್ಕಂಧಾರ್ಥ ನಿರೂಪಣಂ ನಾಮ ದ್ವಾದಶೋಽಧ್ಯಾಯಃ ॥12॥

ಭಾಗಸೂಚನಾ