[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ಭಗವಂತನ ಅಂಗ, ಉಪಾಂಗ ಮತ್ತು ಆಯುಧಗಳ ರಹಸ್ಯ ಹಾಗೂ ಬೇರೆ-ಬೇರೆ ಸೂರ್ಯಗಣಗಳ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಅಥೇಮಮರ್ಥಂ ಪೃಚ್ಛಾಮೋ ಭವಂತಂ ಬಹುವಿತ್ತಮಮ್ ।
ಸಮಸ್ತತಂತ್ರರಾದ್ಧಾಂತೇ ಭವಾನ್ಭಾಗವತತತ್ತ್ವವಿತ್ ॥
ಅನುವಾದ
ಶೌನಕರು ಕೇಳಿದರು — ಸೂತಪುರಾಣಿಕರೇ! ನೀವು ಭಗವಂತನ ಪರಮಭಕ್ತರೂ ಮತ್ತು ವಿಷಯಗಳನ್ನು ಬಲ್ಲ ಶಿರೋಮಣಿಗಳೂ ಆಗಿರುವಿರಿ. ನಾವುಗಳು ಸಮಸ್ತ ಶಾಸ್ತ್ರಗಳ ಸಿದ್ಧಾಂತದ ಕುರಿತು ತಮ್ಮಲ್ಲಿ ಒಂದು ವಿಶೇಷವಾದ ಪ್ರಶ್ನೆಯನ್ನು ಕೇಳಬೇಕೆಂದಿದ್ದೇವೆ. ಏಕೆಂದರೆ, ನೀವು ಅವುಗಳ ಮರ್ಮಜ್ಞರಾಗಿರುವಿರಿ. ॥1॥
(ಶ್ಲೋಕ - 2)
ಮೂಲಮ್
ತಾಂತ್ರಿಕಾಃ ಪರಿಚರ್ಯಾಯಾಂ ಕೇವಲಸ್ಯ ಶ್ರಿಯಃ ಪತೇಃ ।
ಅಂಗೋಪಾಂಗಾಯುಧಾಕಲ್ಪಂ ಕಲ್ಪಯಂತಿ ಯಥಾ ಚ ಯೈಃ ॥
(ಶ್ಲೋಕ - 3)
ಮೂಲಮ್
ತನ್ನೋ ವರ್ಣಯ ಭದ್ರಂ ತೇ ಕ್ರಿಯಾಯೋಗಂ ಬುಭುತ್ಸತಾಮ್ ।
ಯೇನ ಕ್ರಿಯಾನೈಪುಣೇನ ಮರ್ತ್ಯೋ ಯಾಯಾದಮರ್ತ್ಯತಾಮ್ ॥
ಅನುವಾದ
ನಾವು ಕ್ರಿಯಾಯೋಗದ ಯಥಾರ್ಥ ಜ್ಞಾನವನ್ನು ಪಡೆಯಲು ಬಯಸುತ್ತಿರುವೆವು. ಏಕೆಂದರೆ, ಅದನ್ನು ಕುಶಲತೆಯಿಂದ ಸರಿಯಾಗಿ ಆಚರಿಸಿದರೆ ಮರಣಧರ್ಮವುಳ್ಳ ಮನುಷ್ಯನು ಅಮರತ್ವವನ್ನು ಪಡೆದುಕೊಳ್ಳುವನು. ಆದ್ದರಿಂದ ತಾವು ಪಾಂಚರಾತ್ರಾದಿ ವಿಧಿಯನ್ನು ಅರಿತಿರುವ ಜನರು ಕೈವಲ್ಯ ಸ್ವರೂಪನಾದ ಶ್ರೀಲಕ್ಷ್ಮೀಪತಿಯಾದ ಭಗವಂತನನ್ನು ಆರಾಧಿಸುವಾಗ ಯಾವ-ಯಾವ ತತ್ತ್ವಗಳಿಂದ ಅವರ ಚರಣಾದಿ ಅಂಗಗಳು, ಗರುಡಾದಿ ಉಪಾಂಗಗಳು, ಸುದರ್ಶನಾದ ಆಯುಧಗಳನ್ನು, ಕೌಸ್ತುಭಾದಿ ಆಭೂಷಣಗಳನ್ನು ಕಲ್ಪಿಸಿಕೊಳ್ಳಬೇಕು? ಎಂಬುದನ್ನು ತಿಳಿಸಿರಿ. ಭಗವಂತನು ನಿಮಗೆ ಮಂಗಳವನ್ನು ಉಂಟುಮಾಡಲಿ.॥2-3॥
(ಶ್ಲೋಕ - 4)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ನಮಸ್ಕೃತ್ಯ ಗುರೂನ್ ವಕ್ಷ್ಯೇ ವಿಭೂತೀರ್ವೈಷ್ಣವೀರಪಿ ।
ಯಾಃ ಪ್ರೋಕ್ತಾ ವೇದತಂತ್ರಾಭ್ಯಾಮಾಚಾರ್ಯೈಃ ಪದ್ಮಜಾದಿಭಿಃ ॥
ಅನುವಾದ
ಸೂತಪುರಾಣಿಕರು ಹೇಳಿದರು — ಶೌನಕಾದಿಗಳೇ! ಬ್ರಹ್ಮಾದಿ ಆಚಾರ್ಯರು, ವೇದಗಳು ಮತ್ತು ಪಾಂಚರಾತ್ರವೇ ಮುಂತಾದ ಆಗಮ ಗ್ರಂಥಗಳು ವರ್ಣಿಸಿದ ಭಗವಂತನ ವಿಭೂತಿಗಳನ್ನು ಶ್ರೀಸದ್ಗುರುಗಳ ಚರಣಗಳಿಗೆ ನಮಸ್ಕರಿಸಿ ನಿಮಗೆ ಹೇಳುತ್ತೇನೆ. ॥4॥
(ಶ್ಲೋಕ - 5)
ಮೂಲಮ್
ಮಾಯಾದ್ಯೈರ್ನವಭಿಸ್ತತ್ತ್ವೆ ಃ ಸ ವಿಕಾರಮಯೋ ವಿರಾಟ್ ।
ನಿರ್ಮಿತೋ ದೃಶ್ಯತೇ ಯತ್ರ ಸಚಿತ್ಕೇ ಭುವನತ್ರಯಮ್ ॥
ಅನುವಾದ
ಭಗವಂತನ ವಿರಾಟ್ರೂಪದಲ್ಲಿ ಕಂಡುಬರುವ ಚೇತನಾಧಿಷ್ಠಿತ ತ್ರಿಲೋಕಗಳು - ಪ್ರಕೃತಿ, ಸೂತ್ರಾತ್ಮ, ಮಹತ್ತತ್ವ, ಅಹಂಕಾರ ಮತ್ತು ಪಂಚತನ್ಮಾತ್ರೆಗಳು ಈ ಒಂಭತ್ತು ತತ್ತ್ವಗಳೊಂದಿಗೂ, ಹನ್ನೊಂದು ಇಂದ್ರಿಯಗಳು ಮತ್ತು ಪಂಚಭೂತಗಳು - ಈ ಹದಿನಾರು ವಿಕಾರಗಳಿಂದಲೂ ಉಂಟಾಗಿದೆ. ॥5॥
(ಶ್ಲೋಕ - 6)
ಮೂಲಮ್
ಏತದ್ ವೈ ಪೌರುಷಂ ರೂಪಂ ಭೂಃ ಪಾದೌ ದ್ಯೌಃ ಶಿರೋ ನಭಃ ।
ನಾಭಿಃ ಸೂರ್ಯೋಕ್ಷಿಣೀ ನಾಸೇ ವಾಯುಃ ಕರ್ಣೌ ದಿಶಃ ಪ್ರಭೋಃ ॥
ಅನುವಾದ
ಇದು ಭಗವಂತನದೇ ಪುರುಷರೂಪವಾಗಿದೆ. ಪೃಥಿವಿಯೇ ಇದರ ಚರಣಗಳು, ಸ್ವರ್ಗವೇ ಮಸ್ತಕ, ಅಂತರಿಕ್ಷವೇ ನಾಭಿಯು, ಸೂರ್ಯನೇ ನೇತ್ರಗಳು, ವಾಯುವೇ ಮೂಗು, ದಿಶೆಗಳೇ ಕಿವಿಗಳಾಗಿವೆ. ॥6॥
(ಶ್ಲೋಕ - 7)
ಮೂಲಮ್
ಪ್ರಜಾಪತಿಃ ಪ್ರಜನನಮಪಾನೋ ಮೃತ್ಯುರೀಶಿತುಃ ।
ತದ್ಬಾಹವೋ ಲೋಕಪಾಲಾ ಮನಶ್ಚಂದ್ರೋ ಭ್ರುವೌ ಯಮಃ ॥
ಅನುವಾದ
ಪ್ರಜಾಪತಿಯೇ ಲಿಂಗ, ಮೃತ್ಯುವೇ ಗುದ, ಲೋಕ ಪಾಲಕರೇ ಭುಜಗಳು, ಚಂದ್ರನೇ ಮನಸ್ಸು, ಯಮನೇ ಹುಬ್ಬುಗಳಾಗಿವೆ. ॥7॥
(ಶ್ಲೋಕ - 8)
ಮೂಲಮ್
ಲಜ್ಜೋತ್ತರೋಧರೋ ಲೋಭೋ ದಂತಾ ಜ್ಯೋತ್ಸ್ನಾ ಸ್ಮಯೋ ಭ್ರಮಃ ।
ರೋಮಾಣಿ ಭೂರುಹಾ ಭೂಮ್ನೋ ಮೇಘಾಃ ಪುರುಷಮೂರ್ಧಜಾಃ ॥
ಅನುವಾದ
ಲಜ್ಜೆಯೇ ಮೇಲ್ದುಟಿಯು, ಲೋಭವೇ ಕೆಳತುಟಿಯು, ಚಂದ್ರನ ಬೆಳದಿಂಗಳೇ ಹಲ್ಲುಗಳು, ಭ್ರಮೆಯೇ ಮುಗುಳ್ನಗೆಯು, ವೃಕ್ಷಗಳೇ ರೋಮಗಳು, ಮೋಡಗಳೇ ವಿರಾಟ ಪುರುಷನ ತಲೆಯ ಮೇಲಿನ ಕೂದಲುಗಳಾಗಿವೆ. ॥8॥
(ಶ್ಲೋಕ - 9)
ಮೂಲಮ್
ಯಾವಾನಯಂ ವೈ ಪುರುಷೋ ಯಾವತ್ಯಾ ಸಂಸ್ಥಯಾ ಮಿತಃ ।
ತಾವಾನಸಾವಪಿ ಮಹಾಪುರುಷೋ ಲೋಕಸಂಸ್ಥಯಾ ॥
ಅನುವಾದ
ಶೌನಕರೇ! ಇನ್ನು ಅವನ ದೇಹದ ಪ್ರಮಾಣವನ್ನು ಹೇಳುವುದಾದರೆ ವ್ಯಷ್ಟಿ ಪುರುಷನಿಗೆ ಆಯಾ ಅವಯವಗಳಿಗೆ ತಕ್ಕಂತೆ ಎಷ್ಟು ಪ್ರಮಾಣವಿದೆಯೋ ಈ ಸಮಷ್ಟಿ ಪುರುಷನಿಗೂ ತನ್ನ ಆಯಾ ಅವಯವಗಳಿಗೆ ತಕ್ಕಂತೆ ಅಷ್ಟೇ ಪ್ರಮಾಣವಿರುವುದು. ॥9॥
(ಶ್ಲೋಕ - 10)
ಮೂಲಮ್
ಕೌಸ್ತುಭವ್ಯಪದೇಶೇನ ಸ್ವಾತ್ಮಜ್ಯೋತಿರ್ಬಿಭರ್ತ್ಯಜಃ ।
ತತ್ ಪ್ರಭಾ ವ್ಯಾಪಿನೀ ಸಾಕ್ಷಾತ್ ಶ್ರೀವತ್ಸಮುರಸಾ ವಿಭುಃ ॥
ಅನುವಾದ
ಸಾಕ್ಷಾತ್ ಭಗವಂತನು ಹುಟ್ಟಿಲ್ಲದವನು. ಅವನು ಕೌಸ್ತುಭಮಣಿಯ ನೆಪದಿಂದ ಜೀವ-ಚೈತನ್ಯರೂಪವಾದ ಆತ್ಮಜ್ಯೋತಿಯನ್ನೇ ಧರಿಸಿರುವನು. ಅವನ ಸರ್ವವ್ಯಾಪಿನಿ ಪ್ರಭೆಯನ್ನೇ ವಕ್ಷಃಸ್ಥಳದಲ್ಲಿ ಶ್ರೀವತ್ಸರೂಪದಿಂದ ಧರಿಸಿರುವನು. ॥10॥
(ಶ್ಲೋಕ - 11)
ಮೂಲಮ್
ಸ್ವಮಾಯಾಂ ವನಮಾಲಾಖ್ಯಾಂ ನಾನಾಗುಣಮಯೀಂ ದಧತ್ ।
ವಾಸಶ್ಛಂದೋಮಯಂ ಪೀತಂ ಬ್ರಹ್ಮಸೂತ್ರಂ ತ್ರಿವೃತ್ಸ್ವರಮ್ ॥
ಅನುವಾದ
ಅವನು ತನ್ನ ಸತ್ತ್ವ, ಮುಂತಾದ ಗುಣಗಳುಳ್ಳ ಮಾಯೆಯನ್ನೇ ವನಮಾಲೆಯ ರೂಪದಿಂದ, ಛಂದಗಳನ್ನೇ ಪೀತಾಂಬರ ರೂಪದಲ್ಲಿ, ಅ+ಉ+ಮ್ ಈ ಮೂರು ಮಾತ್ರೆಗಳ ಪ್ರಣವವನ್ನೇ ಯಜ್ಞೋಪವೀತರೂಪದಲ್ಲಿ ಧರಿಸಿರುವನು. ॥11॥
(ಶ್ಲೋಕ - 12)
ಮೂಲಮ್
ಬಿಭರ್ತಿ ಸಾಂಖ್ಯಂ ಯೋಗಂ ಚ ದೇವೋ ಮಕರಕುಂಡಲೇ ।
ವೌಲಿಂ ಪದಂ ಪಾರಮೇಷ್ಠ್ಯಂ ಸರ್ವಲೋಕಾಭಯಂಕರಮ್ ॥
ಅನುವಾದ
ದೇವಾಧಿದೇವನಾದ ಭಗವಂತನು ಸಾಂಖ್ಯ ಮತ್ತು ಯೋಗ ರೂಪವಾದ ಮಕರಕುಂಡಲಗಳನ್ನು ಹಾಗೂ ಎಲ್ಲ ಲೋಕಗಳಿಗೆ ಅಭಯವನ್ನು ನೀಡುವಂತಹ ಬ್ರಹ್ಮಲೋಕವನ್ನೇ ಮುಕುಟವನ್ನಾಗಿ ಧರಿಸಿರುವನು. ॥12॥
(ಶ್ಲೋಕ - 13)
ಮೂಲಮ್
ಅವ್ಯಾಕೃತಮನಂತಾಖ್ಯಮಾಸನಂ ಯದಧಿಷ್ಠಿತಃ ।
ಧರ್ಮಜ್ಞಾನಾದಿಭಿರ್ಯುಕ್ತಂ ಸತ್ತ್ವಂ ಪದ್ಮಮಿಹೋಚ್ಯತೇ ॥
ಅನುವಾದ
ಮೂಲ ಪ್ರಕೃತಿಯೇ ಅವನು ವಿರಾಜಮಾನನಾಗುವ ಶಯ್ಯೆಯು, ಧರ್ಮ ಜ್ಞಾನಾದಿಗಳಿಂದ ಕೂಡಿದ ಸತ್ತ್ವಗುಣವೇ ಅವನ ನಾಭಿಕಮಲ ರೂಪದಿಂದ ವರ್ಣಿತವಾಗಿದೆ. ॥13॥
(ಶ್ಲೋಕ - 14)
ಮೂಲಮ್
ಓಜಸ್ಸಹೋಬಲಯುತಂ ಮುಖ್ಯತತ್ತ್ವಂ ಗದಾಂ ದಧತ್ ।
ಅಪಾಂ ತತ್ತ್ವಂ ದರವರಂ ತೇಜಸ್ತತ್ತ್ವಂ ಸುದರ್ಶನಮ್ ॥
ಅನುವಾದ
ಅವನು ಮನ, ಇಂದ್ರಿಯ ಮತ್ತು ಶರೀರ ಸಂಬಂಧಿ ಶಕ್ತಿಗಳಿಂದ ಕೂಡಿದ ಪ್ರಾಣತತ್ತ್ವರೂಪವಾದ ಕೌಮೋದಕೀಗದೆಯನ್ನು, ಜಲ ತತ್ತ್ವರೂಪವಾದ ಪಾಂಚಜನ್ಯ ಶಂಖವನ್ನು, ತೇಜಸ್ತತ್ತ್ವ ರೂಪವಾದ ಸುದರ್ಶನವನ್ನು ಧರಿಸಿರುವನು. ॥14॥
(ಶ್ಲೋಕ - 15)
ಮೂಲಮ್
ನಭೋನಿಭಂ ನಭಸ್ತತ್ತ್ವಮಸಿಂ ಚರ್ಮ ತಮೋಮಯಮ್ ।
ಕಾಲರೂಪಂ ಧನುಃ ಶಾಂರ್ಗಂ ತಥಾ ಕರ್ಮಮಯೇಷುಧಿಮ್ ॥
ಅನುವಾದ
ಆಕಾಶದಂತೆ ನಿರ್ಮಲ ಆಕಾಶ ಸ್ವರೂಪ ಖಡ್ಗವನ್ನು, ತಮೋಮಯ ಅಜ್ಞಾನರೂಪಿಯಾದ ಗುರಾಣಿಯನ್ನು, ಕಾಲ ಸ್ವರೂಪ ಶಾರ್ಙ್ಗಧನುಸ್ಸು ಮತ್ತು ಕರ್ಮಗಳದ್ದೇ ಬತ್ತಳಿಕೆಯನ್ನು ಧರಿಸಿರುವನು.॥15॥
(ಶ್ಲೋಕ - 16)
ಮೂಲಮ್
ಇಂದ್ರಿಯಾಣಿ ಶರಾನಾಹುರಾಕೂತೀರಸ್ಯ ಸ್ಯಂದನಮ್ ।
ತನ್ಮಾತ್ರಾಣ್ಯಸ್ಯಾಭಿವ್ಯಕ್ತಿಂ ಮುದ್ರಯಾರ್ಥಕ್ರಿಯಾತ್ಮತಾಮ್ ॥
ಅನುವಾದ
ಇಂದ್ರಿಯಗಳನ್ನು ಭಗವಂತನ ಬಾಣಗಳ ರೂಪದಲ್ಲಿ ಹೇಳಲಾಗಿದೆ. ಕ್ರಿಯಾಶಕ್ತಿಯಿಂದ ಕೂಡಿದ ಮನಸ್ಸೇ ರಥವು. ತನ್ಮಾತ್ರೆಗಳೇ ರಥದ ಹೊರಗಿನ ಭಾಗ. ವರಮುದ್ರೆ, ಅಭಯ ಮುದ್ರೆಯೇ ಮುಂತಾದ ಅವನ ಮುದ್ರೆಗಳು ಕ್ರಿಯಾಶೀಲತೆಯಾಗಿವೆ. ॥16॥
(ಶ್ಲೋಕ - 17)
ಮೂಲಮ್
ಮಂಡಲಂ ದೇವಯಜನಂ ದೀಕ್ಷಾ ಸಂಸ್ಕಾರ ಆತ್ಮನಃ ।
ಪರಿಚರ್ಯಾ ಭಗವತ ಆತ್ಮನೋ ದುರಿತಕ್ಷಯಃ ॥
ಅನುವಾದ
ಸೂರ್ಯಮಂಡಲ ಅಥವಾ ಅಗ್ನಿ ಮಂಡಲವೇ ಭಗವಂತನ ಪೂಜೆಯ ಸ್ಥಾನವಾಗಿದೆ. ಅಂತಃ ಕರಣದ ಶುದ್ಧಿಯೇ ಮಂತ್ರದೀಕ್ಷೆ. ತನ್ನ ಸರ್ವಪಾಪಗಳನ್ನು ನಾಶಪಡಿಸುವುದೇ ಭಗವಂತನ ಪೂಜೆ. ॥17॥
(ಶ್ಲೋಕ - 18)
ಮೂಲಮ್
ಭಗವಾನ್ ಭಗಶಬ್ದಾರ್ಥಂ ಲೀಲಾಕಮಲಮುದ್ವಹನ್ ।
ಧರ್ಮಂ ಯಶಶ್ಚ ಭಗವಾನ್ಶ್ಚಾಮರವ್ಯಜನೇಭಜತ್ ॥
(ಶ್ಲೋಕ - 19)
ಮೂಲಮ್
ಆತಪತ್ರಂ ತು ವೈಕುಂಠಂ ದ್ವಿಜಾ ಧಾಮಾಕುತೋಭಯಮ್ ।
ತ್ರಿವೃದ್ವೇದಃ ಸುಪರ್ಣಾಖ್ಯೋ ಯಜ್ಞಂ ವಹತಿ ಪೂರುಷಮ್ ॥
ಅನುವಾದ
ಬ್ರಾಹ್ಮಣರೇ! ಭಗವಂತನು ಕರಕಮಲದಲ್ಲಿ - ಸಮಗ್ರ ಐಶ್ವರ್ಯ, ಧರ್ಮ, ಯಶ, ಲಕ್ಷ್ಮೀ, ಜ್ಞಾನ ಮತ್ತು ವೈರಾಗ್ಯ ಈ ಆರು ಪದಾರ್ಥವೇ ಧರಿಸಿರುವ ಲೀಲಾಕಮಲವು, ಧರ್ಮ ಮತ್ತು ಯಶವನ್ನು ಕ್ರಮಶಃ ಚಾಮರಗಳು, ಬೀಸಣಿಗೆ ಮತ್ತು ನಿರ್ಭಯ ಧಾಮವಾದ ವೈಕುಂಠವೇ ಆತನ ಛತ್ರವು. ಅಂತರ್ಯಾಮಿ ಪರಮಾತ್ಮನನ್ನು ಹೊತ್ತಿರುವ ಗರುಡನೇ ಮೂರು ವೇದಗಳು. ॥18-19॥
(ಶ್ಲೋಕ - 20)
ಮೂಲಮ್
ಅನಪಾಯಿನೀ ಭಗವತೀ ಶ್ರೀಃ ಸಾಕ್ಷಾದಾತ್ಮನೋ ಹರೇಃ ।
ವಿಷ್ವಕ್ಸೇನಸ್ತಂತ್ರಮೂರ್ತಿರ್ವಿದಿತಃ ಪಾರ್ಷದಾಧಿಪಃ ।
ನಂದಾದಯೋಷ್ಟೌ ದ್ವಾಃಸ್ಥಾಶ್ಚ ತೇಣಿಮಾದ್ಯಾ ಹರೇರ್ಗುಣಾಃ ॥
ಅನುವಾದ
ಆತ್ಮ ಸ್ವರೂಪನಾದ ಭಗವಂತನಿಂದ ಎಂದಿಗೂ ಅಗಲದಿರುವ ಆತ್ಮಶಕ್ತಿಯೇ ಮಹಾಲಕ್ಷ್ಮಿಯು. ಭಗವಂತನ ಪಾರ್ಷದರಾದ ವಿಶ್ವವಿಖ್ಯಾತ ವಿಶ್ವಕ್ಸೇನರೇ ಪಾಂಚರಾತ್ರಾದಿ ಆಗಮಗಳು. ಭಗವಂತನ ಸ್ವಾಭಾವಿಕ ಸಿದ್ಧಿಗಳಾದ ಅಣಿಮಾ, ಮಹಿಮಾ ಮೊದಲಾದ ಅಷ್ಟಸಿದ್ಧಿಗಳನ್ನೇ ನಂದ-ಸುನಂದಾದಿ ಎಂಟು ದ್ವಾರಪಾಲಕರೆಂದು ಹೇಳುತ್ತಾರೆ. ॥20॥
(ಶ್ಲೋಕ - 21)
ಮೂಲಮ್
ವಾಸುದೇವಃ ಸಂಕರ್ಷಣಃ ಪ್ರದ್ಯುಮ್ನಃ ಪುರುಷಃ ಸ್ವಯಮ್ ।
ಅನಿರುದ್ಧ ಇತಿ ಬ್ರಹ್ಮನ್ಮೂರ್ತಿವ್ಯೆಹೋಭಿಧೀಯತೇ ॥
ಅನುವಾದ
ಶೌನಕರೇ! ಸಾಕ್ಷಾತ್ ಭಗವಂತನೇ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ಎಂಬ ನಾಲ್ಕು ಮೂರ್ತಿಗಳಾಗಿ ನೆಲೆಸಿರುವನು. ಅದಕ್ಕಾಗಿ ಅವನನ್ನು ಚತುರ್ವ್ಯೆಹರೂಪದಿಂದ ಹೇಳಲಾಗುತ್ತದೆ. ॥21॥
(ಶ್ಲೋಕ - 22)
ಮೂಲಮ್
ಸ ವಿಶ್ವಸ್ತೈಜಸಃ ಪ್ರಾಜ್ಞಸ್ತುರೀಯ ಇತಿ ವೃತ್ತಿಭಿಃ ।
ಅರ್ಥೇಂದ್ರಿಯಾಶಯಜ್ಞಾನೈರ್ಭಗವಾನ್ ಪರಿಭಾವ್ಯತೇ ॥
ಅನುವಾದ
ಅವನೇ ಜಾಗ್ರದವಸ್ಥೆಯ ಅಭಿಮಾನಿ ‘ವಿಶ್ವ’ನಾಗಿ ಶಬ್ದ, ಸ್ಪರ್ಶ ಮೊದಲಾದ ಬಾಹ್ಯ ವಿಷಯಗಳನ್ನು ಗ್ರಹಿಸುತ್ತಾನೆ. ಅವನೇ ಸ್ವಪ್ನಾವಸ್ಥೆಯ ಅಭಿಮಾನಿ ‘ತ್ರೈಜಸ’ನಾಗಿ ಬಾಹ್ಯ ವಿಷಯಗಳಿಲ್ಲದೆಯೇ ಮನಸ್ಸಿನಲ್ಲೇ ಅನೇಕ ವಿಷಯಗಳನ್ನು ನೋಡುತ್ತಾ ಗ್ರಹಿಸುತ್ತಾ ಇರುತ್ತಾನೆ. ಅವನೇ ಸುಷುಪ್ತಿ - ಅವಸ್ಥೆಯ ಅಭಿಮಾನಿ ‘ಪ್ರಾಜ್ಞ’ನಾಗಿ ವಿಷಯ ಮತ್ತು ಮನಸ್ಸಿನ ಸಂಸ್ಕಾರಗಳಿಂದ ಕೂಡಿ ಅಜ್ಞಾನದಿಂದ ಮುಚ್ಚಿಹೋಗುತ್ತಾನೆ. ಅವನೇ ಎಲ್ಲರ ಸಾಕ್ಷಿ ‘ತುರೀಯ’ನಾಗಿ ಸಮಸ್ತ ಜ್ಞಾನಗಳ ಅಧಿಷ್ಠಾನನಾಗಿ ಇರುತ್ತಾನೆ. ॥22॥
(ಶ್ಲೋಕ - 23)
ಮೂಲಮ್
ಅಂಗೋಪಾಂಗಾಯುಧಾಕಲ್ಪೈರ್ಭಗವಾನ್ತಚ್ಚತುಷ್ಟಯಮ್ ।
ಬಿಭರ್ತಿ ಸ್ಮ ಚತುರ್ಮೂರ್ತಿರ್ಭಗವಾನ್ ಹರಿರೀಶ್ವರಃ ॥
ಅನುವಾದ
ಹೀಗೆ ಅಂಗ-ಉಪಾಂಗ, ಆಯುಧ, ಭೂಷಣಗಳಿಂದ ಕೂಡಿ ಹಾಗೂ ವಾಸುವೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಈ ನಾಲ್ಕು ಮೂರ್ತಿಗಳ ರೂಪದಲ್ಲಿ ಪ್ರಕಟನಾಗಿ ಸರ್ವಶಕ್ತನಾದ ಭಗವಾನ್ ಶ್ರೀಹರಿಯೆ ಕ್ರಮಶಃ ವಿಶ್ವ, ತೈಜಸ, ಪ್ರಾಜ್ಞ, ತುರೀಯ ರೂಪಗಳಿಂದ ಪ್ರಕಾಶಿತನಾಗುತ್ತಾನೆ. ॥23॥
(ಶ್ಲೋಕ - 24)
ಮೂಲಮ್
ದ್ವಿಜಋಷಭ ಸ ಏಷ ಬ್ರಹ್ಮಯೋನಿಃ ಸ್ವಯಂದೃಕ್
ಸ್ವಮಹಿಮಪರಿಪೂರ್ಣೋ ಮಾಯಯಾ ಚ ಸ್ವಯೈತತ್ ।
ಸೃಜತಿ ಹರತಿ ಪಾತೀತ್ಯಾಖ್ಯಯಾನಾವೃತಾಕ್ಷೋ
ವಿವೃತ ಇವ ನಿರುಕ್ತಸ್ತತ್ಪರೈರಾತ್ಮಲಭ್ಯಃ ॥
ಅನುವಾದ
ಶೌನಕರೇ! ಸರ್ವಸ್ವರೂಪನಾದ ಭಗವಂತನೇ ವೇದಗಳ ಮೂಲಕಾರಣನಾಗಿದ್ದಾನೆ. ಅವನು ಸ್ವಯಂಪ್ರಕಾಶ ಹಾಗೂ ತನ್ನ ಮಹಿಮೆಯಿಂದ ಪರಿಪೂರ್ಣನಾಗಿದ್ದಾನೆ. ತನ್ನ ಮಾಯೆಯಿಂದ ಬ್ರಹ್ಮಾದಿ ರೂಪಗಳಿಂದ ಹಾಗೂ ನಾಮಗಳಿಂದ ಈ ವಿಶ್ವದ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ನಡೆಸುತ್ತಾ ಇರುತ್ತಾನೆ. ಇವೆಲ್ಲ ಕರ್ಮಗಳಿಂದ, ನಾಮಗಳಿಂದ ಅವನ ಜ್ಞಾನವು ಎಂದೂ ಮುಚ್ಚಿಹೋಗುವುದಿಲ್ಲ. ಶಾಸ್ತ್ರಗಳಲ್ಲಿ ಭಿನ್ನ-ಭಿನ್ನ ನಾಮಗಳಿಂದ ಅವನು ವರ್ಣಿತನಾಗಿದ್ದರೂ ಅವಶ್ಯವಾಗಿ ಅವನು ತನ್ನ ಭಕ್ತರಿಗೆ ಆತ್ಮ ಸ್ವರೂಪದಿಂದಲೇ ಪ್ರಾಪ್ತನಾಗುತ್ತಾನೆ. ॥24॥
(ಶ್ಲೋಕ - 25)
ಮೂಲಮ್
ಶ್ರೀಕೃಷ್ಣ ಕೃಷ್ಣಸಖ ವೃಷ್ಣ್ಯೃಷಭಾವನಿಧ್ರುಕ್
ರಾಜನ್ಯವಂಶದಹನಾನಪವರ್ಗವೀರ್ಯ ।
ಗೋವಿಂದ ಗೋಪವನಿತಾವ್ರಜಭೃತ್ಯಗೀತ-
ತೀರ್ಥಶ್ರವಃ ಶ್ರವಣಮಂಗಲ ಪಾಹಿ ಭೃತ್ಯಾನ್ ॥
ಅನುವಾದ
ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ! ನೀನು ಅರ್ಜುನ ಸಖನಾಗಿರುವೆ. ನೀನು ಯದುವಂಶಶಿರೋಮಣಿಯ ರೂಪದಲ್ಲಿ ಅವತರಿಸಿ ಪೃಥಿವಿಯ ದ್ರೋಹಿರಾಜರನ್ನು ಭಸ್ಮಮಾಡಿದೆ. ನಿನ್ನ ಪರಾಕ್ರಮವು ಯಾವಾಗಲೂ ಏಕರಸವೇ ಆಗಿರುತ್ತದೆ. ವ್ರಜದ ಗೋಪಿಯರು ಮತ್ತು ನಾರದಾದಿ ಪ್ರೇಮಿಭಕ್ತರು ನಿರಂತರವಾಗಿ ನಿನ್ನ ಪವಿತ್ರ ಕೀರ್ತಿಯನ್ನು ಗಾಯನ ಮಾಡುತ್ತಾ ಇರುತ್ತಾರೆ. ಗೋವಿಂದನೇ! ನಿನ್ನ ನಾಮ-ಗುಣಗಳ, ಲೀಲೆಗಳ ಶ್ರವಣದಿಂದಲೇ ಜೀವಿಯ ಮಂಗಲವಾಗುತ್ತದೆ. ನಾವೆಲ್ಲರೂ ನಿನ್ನ ಸೇವಕರಾಗಿದ್ದು, ನೀನು ದಯಮಾಡಿ ನಮ್ಮನ್ನು ರಕ್ಷಿಸು. ॥25॥
(ಶ್ಲೋಕ - 26)
ಮೂಲಮ್
ಯ ಇದಂ ಕಲ್ಯ ಉತ್ಥಾಯ ಮಹಾಪುರುಷಲಕ್ಷಣಮ್ ।
ತಚ್ಚಿತ್ತಃ ಪ್ರಯತೋ ಜಪ್ತ್ವಾ ಬ್ರಹ್ಮ ವೇದ ಗುಹಾಶಯಮ್ ॥
ಅನುವಾದ
ಪುರುಷೋತ್ತಮ ಭಗವಂತನ ಚಿಹ್ನೆಗಳಾದ ಅಂಗ, ಉಪಾಂಗ, ಆಯುಧಾದಿಗಳ ಈ ವರ್ಣನೆಯನ್ನು ಭಗವಂತನಲ್ಲಿ ನೆಟ್ಟ ಮನಸ್ಸಿನಿಂದ, ಪವಿತ್ರನಾಗಿ, ಪ್ರಾತಃ ಕಾಲದಲ್ಲಿ ಪಠಿಸುವವನಿಗೆ ಎಲ್ಲರ ಹೃದಯದಲ್ಲಿ ನೆಲೆಸಿರುವ ಬ್ರಹ್ಮ ಸ್ವರೂಪ ಪರಮಾತ್ಮನ ಜ್ಞಾನವು ಉಂಟಾಗುವುದು. ॥26॥
(ಶ್ಲೋಕ - 27)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಶುಕೋ ಯದಾಹ ಭಗವಾನ್ ವಿಷ್ಣುರಾತಾಯ ಶೃಣ್ವತೇ ।
ಸೌರೋ ಗಣೋ ಮಾಸಿ ಮಾಸಿ ನಾನಾ ವಸತಿ ಸಪ್ತಕಃ ॥
(ಶ್ಲೋಕ - 28)
ಮೂಲಮ್
ತೇಷಾಂ ನಾಮಾನಿ ಕರ್ಮಾಣಿ ಸಂಯುಕ್ತಾನಾಮಧೀಶ್ವರೈಃ ।
ಬ್ರೂಹಿ ನಃ ಶ್ರದ್ದಧಾನಾನಾಂ ವ್ಯೆಹಂ ಸೂರ್ಯಾತ್ಮನೋ ಹರೇಃ ॥
ಅನುವಾದ
ಶೌನಕರರು ಕೇಳಿದರು — ಸೂತಪುರಾಣಿಕರೇ! ಪೂಜ್ಯರಾದ ಶ್ರೀಶುಕಮಹಾಮುನಿಗಳು ಶ್ರೀಮದ್ಭಾಗವತದ ಕಥೆಯನ್ನು ಪರೀಕ್ಷಿದ್ರಾಜನಿಗೆ ಹೇಳುವಾಗ ಪಂಚಮಸ್ಕಂಧದಲ್ಲಿ ಋಷಿಗಳು, ಗಂಧರ್ವರು, ನಾಗರು, ಅಪ್ಸರೆಯರು, ಯಕ್ಷರು, ರಾಕ್ಷಸರು ಮತ್ತು ದೇವತೆಗಳು ಇವರುಗಳ ಒಂದು ಸೌರಗಣವಿರುತ್ತದೆ ಮತ್ತು ಈ ಏಳು ಪ್ರತಿತಿಂಗಳಲ್ಲಿಯೂ ಬದಲಾಗುತ್ತಾ ಇರುತ್ತಾರೆ ಎಂದು ಹೇಳಿದ್ದರು. ಈ ಹನ್ನೆರಡು ಗಣಗಳು ತಮ್ಮ ಸ್ವಾಮಿಯಾದ ದ್ವಾದಶಾದಿತ್ಯರೊಂದಿಗೆ ಇದ್ದು ಯಾವ ಕೆಲಸ ಮಾಡುತ್ತಾರೆ? ಮತ್ತು ಅವರ ಅಂತರ್ಗತ ವ್ಯಕ್ತಿಗಳ ಹೆಸರುಗಳೇನು? ಸೂರ್ಯನ ರೂಪದಲ್ಲಿ ಸಾಕ್ಷಾತ್ ಭಗವಂತನೇ ಇರುವನು. ಅದಕ್ಕಾಗಿ ಅವುಗಳ ವಿಭಾಗವನ್ನು ಶ್ರದ್ಧಾಳುಗಳಾದ ನಾವು ಕೇಳಲು ಬಯಸುತ್ತಿದ್ದೇವೆ. ದಯಮಾಡಿ ಹೇಳಿರಿ. ॥27-28॥
(ಶ್ಲೋಕ - 29)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಅನಾದ್ಯವಿದ್ಯಯಾ ವಿಷ್ಣೋರಾತ್ಮನಃ ಸರ್ವದೇಹಿನಾಮ್ ।
ನಿರ್ಮಿತೋ ಲೋಕತಂತ್ರೋಯಂ ಲೋಕೇಷು ಪರಿವರ್ತತೇ ॥
ಅನುವಾದ
ಸೂತಪುರಾಣಿಕರು ಹೇಳತೊಡಗಿದರು — ಸಮಸ್ತ ಪ್ರಾಣಿಗಳ ಆತ್ಮನು ಭಗವಾನ್ ವಿಷ್ಣುವೇ ಆಗಿರುವನು. ಅನಾದಿ ಅವಿದ್ಯೆಯಿಂದ ಸಮಸ್ತ ಲೋಕಗಳ ವ್ಯವಹಾರ-ಪ್ರವರ್ತಕ ಪ್ರಾಕೃತ ಸೂರ್ಯಮಂಡಲ ನಿರ್ಮಾಣವಾಗಿದೆ. ಅದೇ ಲೋಕಗಳಲ್ಲಿ ಭ್ರಮಣ ಮಾಡುತ್ತಿದೆ. ॥29॥
(ಶ್ಲೋಕ - 30)
ಮೂಲಮ್
ಏಕ ಏವ ಹಿ ಲೋಕಾನಾಂ ಸೂರ್ಯ ಆತ್ಮಾದಿಕೃದ್ಧರಿಃ ।
ಸರ್ವವೇದಕ್ರಿಯಾಮೂಲಮೃಷಿಭಿರ್ಬಹುಧೋದಿತಃ ॥
ಅನುವಾದ
ನಿಜವಾಗಿ ಸಮಸ್ತ ಲೋಕಗಳ ಆತ್ಮನಾದ, ಆದಿಕರ್ತನಾದ ಏಕಮಾತ್ರ ಶ್ರೀಹರಿಯೇ ಅಂತರ್ಯಾಮಿಯ ರೂಪದಿಂದ ಸೂರ್ಯನಾಗಿರುವನು. ಅವನು ಒಬ್ಬನೇ ಆಗಿದ್ದರೂ ಋಷಿಗಳು ಅವನನ್ನು ಅನೇಕ ರೂಪಗಳಲ್ಲಿ ವರ್ಣಿಸಿರುವರು. ಅವನೇ ಸಮಸ್ತ ವೈದಿಕ ಕ್ರಿಯೆಗಳ ಮೂಲ ಕಾರಣನಾಗಿದ್ದಾನೆ. ॥30॥
(ಶ್ಲೋಕ - 31)
ಮೂಲಮ್
ಕಾಲೋ ದೇಶಃ ಕ್ರಿಯಾ ಕರ್ತಾ ಕರಣಂ ಕಾರ್ಯಮಾಗಮಃ ।
ದ್ರವ್ಯಂ ಲಮಿತಿ ಬ್ರಹ್ಮನ್ ನವಧೋಕ್ತೋಜಯಾ ಹರಿಃ ॥
ಅನುವಾದ
ಶೌನಕರೇ! ಭಗವಂತನೋರ್ವನೇ ಮಾಯೆಯಿಂದ ಕಾಲ, ದೇಶ, ಯಜ್ಞಾದಿಕ್ರಿಯೆಗಳು, ಕರ್ತಾ, ಸ್ರುವೆ ಮೊದಲಾದ ಕರಣಗಳು, ಯಾಗಾದಿ ಕರ್ಮಗಳು, ವೇದಮಂತ್ರ, ಎಳ್ಳು ಮುಂತಾದ ಹವನ ದ್ರವ್ಯಗಳು ಮತ್ತು ಫಲರೂಪದಲ್ಲಿ ಒಂಭತ್ತು ರೀತಿಯಿಂದ ಹೇಳಲ್ಪಡುತ್ತಾನೆ. ॥31॥
(ಶ್ಲೋಕ - 32)
ಮೂಲಮ್
ಮಧ್ವಾದಿಷು ದ್ವಾದಶಸು ಭಗವಾನ್ ಕಾಲರೂಪಧೃಕ್ ।
ಲೋಕತಂತ್ರಾಯ ಚರತಿ ಪೃಥಗ್ದ್ವಾದಶಭಿರ್ಗಣೈಃ ॥
ಅನುವಾದ
ಕಾಲರೂಪಧಾರಿಯಾದ ಭಗವಾನ್ ಸೂರ್ಯನು ಜನರ ವ್ಯವಹಾರಗಳನ್ನು ಸರಿಯಾಗಿ ನಡೆಸಲಿಕ್ಕಾಗಿ ಚೈತ್ರವೇ ಮೊದಲಾದ ಹನ್ನೆರಡು ತಿಂಗಳಲ್ಲಿ ತನ್ನ ಬೇರೆ-ಬೇರೆ ಹನ್ನೆರಡು ಗಣಗಳೊಂದಿಗೆ ಸುತ್ತುತ್ತಾ ಇರುತ್ತಾನೆ. ॥32॥
(ಶ್ಲೋಕ - 33)
ಮೂಲಮ್
ಧಾತಾ ಕೃತಸ್ಥಲೀ ಹೇತಿರ್ವಾಸುಕೀ ರಥಕೃನ್ಮುನೇ ।
ಪುಲಸ್ತ್ಯಸ್ತುಂಬುರುರಿತಿ ಮಧುಮಾಸಂ ನಯಂತ್ಯಮೀ ॥
ಅನುವಾದ
ಶೌನಕರೇ! ಧಾತಾ ಹೆಸರಿನ ಸೂರ್ಯ, ಕೃತಸ್ಥಲೀ ಅಪ್ಸರೆ, ಹೇತಿ ರಾಕ್ಷಸ, ವಾಸುಕೀ ಸರ್ಪ, ರಥಕೃತ್ ಯಕ್ಷ, ಪುಲಸ್ಯಋಷಿ ಮತ್ತು ತುಂಬುರು ಗಂಧರ್ವ - ಇವರುಗಳು ಚೈತ್ರ ತಿಂಗಳಲ್ಲಿ ತಮ್ಮ-ತಮ್ಮ ಕಾರ್ಯಗಳನ್ನು ನಡೆಸುತ್ತಾರೆ. ॥33॥
(ಶ್ಲೋಕ - 34)
ಮೂಲಮ್
ಅರ್ಯಮಾ ಪುಲಹೋಥೌಜಾಃ ಪ್ರಹೇತಿಃ ಪುಂಜಿಕಸ್ಥಲೀ ।
ನಾರದಃ ಕಚ್ಛನೀರಶ್ಚ ನಯಂತ್ಯೇತೇ ಸ್ಮ ಮಾಧವಮ್ ॥
ಅನುವಾದ
ಅರ್ಯಮಾ ಎಂಬ ಸೂರ್ಯ, ಪುಲಹಋಷಿ, ಅಥೌಜಾಯಕ್ಷ, ಪ್ರಹೇತಿ ರಾಕ್ಷಸ, ಪುಂಜಿಕಸ್ಥಲೀ ಅಪ್ಸರೆ, ನಾರದಗಂಧರ್ವ, ಕಚ್ಛನೀರ ಸರ್ಪ ಇವರುಗಳು ವೈಶಾಖ ಮಾಸದಲ್ಲಿ ಕಾರ್ಯಗಳನ್ನು ನಿರ್ವಹಿಸುತ್ತಾರೆ. ॥34॥
(ಶ್ಲೋಕ - 35)
ಮೂಲಮ್
ಮಿತ್ರೋತ್ರಿಃ ಪೌರುಷೇಯೋಥ ತಕ್ಷಕೋ ಮೇನಕಾ ಹಹಾಃ ।
ರಥಸ್ವನ ಇತಿ ಹ್ಯೇತೇ ಶುಕ್ರಮಾಸಂ ನಯಂತ್ಯಮೀ ॥
ಅನುವಾದ
ಮಿತ್ರನೆಂಬ ಸೂರ್ಯ, ಅತ್ರಿಋಷಿ, ಪೌರುಷೇಯ ರಾಕ್ಷಸ, ತಕ್ಷಕ ಸರ್ಪ, ಮೇನಕಾ ಅಪ್ಸರೆ, ಹಾಹಾಗಂಧರ್ವ, ರಥಸ್ವನ ಯಕ್ಷ ಇವರು ಜ್ಯೇಷ್ಠಮಾಸದ ಕಾರ್ಯನಿರ್ವಾಹಕರು. ॥35॥
(ಶ್ಲೋಕ - 36)
ಮೂಲಮ್
ವಸಿಷ್ಠೋ ವರುಣೋ ರಂಭಾ ಸಹಜನ್ಯಸ್ತಥಾ ಹುಹೂಃ ।
ಶುಕ್ರಶ್ಚಿತ್ರಸ್ವನಶ್ಚೈವ ಶುಚಿಮಾಸಂ ನಯಂತ್ಯಮೀ ॥
ಅನುವಾದ
ಆಷಾಢದಲ್ಲಿ ವರುಣನೆಂಬ ಸೂರ್ಯನೊಂದಿಗೆ ವಸಿಷ್ಠ ಋಷಿ, ರಂಬೆ, ಅಪ್ಸರೆ, ಸಹಜನ್ಯಯಕ್ಷ ಹೂಹೂ ಗಂಧರ್ವ, ಶುಕ್ರನಾಗ, ಚಿತ್ರಸ್ವನ ರಾಕ್ಷಸ ಇವರು ತಮ್ಮ ಕಾರ್ಯವನ್ನು ನಿರ್ವಹಿಸುತ್ತಾರೆ. ॥36॥
(ಶ್ಲೋಕ - 37)
ಮೂಲಮ್
ಇಂದ್ರೋ ವಿಶ್ವಾವಸುಃ ಶ್ರೋತಾ ಏಲಾಪತ್ರಸ್ತಥಾಂಗಿರಾಃ ।
ಪ್ರಮ್ಲೋಚಾ ರಾಕ್ಷಸೋ ವರ್ಯೋ ನಭೋಮಾಸಂ ನಯಂತ್ಯಮೀ ॥
ಅನುವಾದ
ಶ್ರಾವಣಮಾಸದಲ್ಲಿ ಇಂದ್ರನೆಂಬ ಸೂರ್ಯ, ವಿಶ್ವಾವಸು ಗಂಧರ್ವ, ಶ್ರೋತಾಯಕ್ಷ, ಏಲಾ ಪತ್ರನಾಗ, ಅಂಗಿರಾಋಷಿ, ಪ್ರಮ್ಲೋಚಾ ಅಪ್ಸರೆ, ವರ್ಯನೆಂಬ ರಾಕ್ಷಸ ಇವರು ಕಾರ್ಯವನ್ನು ಮಾಡುತ್ತಾರೆ. ॥37॥
(ಶ್ಲೋಕ - 38)
ಮೂಲಮ್
ವಿವಸ್ವಾನುಗ್ರಸೇನಶ್ಚ ವ್ಯಾಘ್ರ ಆಸಾರಣೋ ಭೃಗುಃ ।
ಅನುಮ್ಲೋಚಾ ಶಂಖಪಾಲೋ ನಭಸ್ಯಾಖ್ಯಂ ನಯಂತ್ಯಮೀ ॥
ಅನುವಾದ
ಭಾದ್ರಪದ ಮಾಸದ ಸೂರ್ಯನ ಹೆಸರು ವಿವಸ್ವಾನ್. ಅವನೊಂದಿಗೆ ಉಗ್ರಸೇನ ಗಂಧರ್ವ, ವ್ಯಾಘ್ರರಾಕ್ಷಸ, ಆಸಾರಣಯಕ್ಷ, ಭೃಗುಋಷಿ, ಅನುಮ್ಲೋಚಾ ಅಪ್ಸರೆ, ಶಂಖಪಾಲನಾಗ ಇವರುಗಳು ಇರುತ್ತಾರೆ.॥38॥
(ಶ್ಲೋಕ - 39)
ಮೂಲಮ್
ಪೂಷಾ ಧನಂಜಯೋ ವಾತಃ ಸುಷೇಣಃ ಸುರುಚಿಸ್ತಥಾ ।
ಘೃತಾಚೀ ಗೌತಮಶ್ಚೇತಿ ತಪೋಮಾಸಂ ನಯಂತ್ಯಮೀ ॥
ಅನುವಾದ
ಶೌನಕರೇ! ಮಾಘಮಾಸದಲ್ಲಿ ಪೂಷಾ ಎಂಬ ಸೂರ್ಯನೊಂದಿಗೆ ಧನಂಜಯನಾಗ, ವಾತರಾಕ್ಷಸ, ಸುಷೇಣ ಗಂಧರ್ವ, ಸುರುಚಿಯಕ್ಷ, ಘೃತಾಚಿ ಅಪ್ಸರೆ, ಗೌತಮ ಋಷಿ ಇವರುಗಳು ಇರುತ್ತಾರೆ. ॥39॥
(ಶ್ಲೋಕ - 40)
ಮೂಲಮ್
ಕ್ರತುರ್ವರ್ಚಾ ಭರದ್ವಾಜಃ ಪರ್ಜನ್ಯಃ ಸೇನಜಿತ್ತಥಾ ।
ವಿಶ್ವ ಐರಾವತಶ್ಚೈವ ತಪಸ್ಯಾಖ್ಯಂ ನಯಂತ್ಯಮೀ ॥
ಅನುವಾದ
ಫಾಲ್ಗುಣಮಾಸದಲ್ಲಿ ಪರ್ಜನ್ಯನೆಂಬ ಸೂರ್ಯನೊಂದಿಗೆ ಕ್ರತುಯಕ್ಷ, ವರ್ಚಾ ರಾಕ್ಷಸ, ಭರದ್ವಾಜ ಋಷಿ, ಸೇನಜಿತ್ ಅಪ್ಸರೆ, ವಿಶ್ವಗಂಧರ್ವ, ಐರಾವತ ಸರ್ಪ - ಇವರು ಇರುತ್ತಾರೆ. ॥40॥
(ಶ್ಲೋಕ - 41)
ಮೂಲಮ್
ಅಥಾಂಶುಃ ಕಶ್ಯಪಸ್ತಾರ್ಕ್ಷ್ಯ ಋತಸೇನಸ್ತಥೋರ್ವಶೀ ।
ವಿದ್ಯುಚ್ಛತ್ರುರ್ಮಹಾಶಂಖಃ ಸಹೋಮಾಸಂ ನಯಂತ್ಯಮೀ ॥
ಅನುವಾದ
ಮಾರ್ಗಶಿರಮಾಸದಲ್ಲಿ ಅಂಶು ಎಂಬ ಸೂರ್ಯನೊಂದಿಗೆ ಕಶ್ಯಪ ಋಷಿ, ತಾರ್ಕ್ಷ್ಯಯಕ್ಷ, ಋತಸೇನ ಗಂಧರ್ವ, ಊರ್ವಶೀ ಅಪ್ಸರೆ, ವಿದ್ಯುಚ್ಛತ್ರುರಾಕ್ಷಸ, ಮಹಾ ಶಂಖನಾಗ ಇವರು ಇರುತ್ತಾರೆ. ॥41॥
(ಶ್ಲೋಕ - 42)
ಮೂಲಮ್
ಭಗಃ ಸ್ಫೂರ್ಜೋರಿಷ್ಟ ನೇಮಿರೂರ್ಣ ಆಯುಶ್ಚ ಪಂಚಮಃ ।
ಕರ್ಕೋಟಕಃ ಪೂರ್ವಚಿತ್ತಿಃ ಪುಷ್ಯಮಾಸಂ ನಯಂತ್ಯಮೀ ॥
ಅನುವಾದ
ಪೌಷಮಾಸದಲ್ಲಿ ಭಗನೆಂಬ ಸೂರ್ಯನೊಡನೆ ಸ್ಫೂರ್ಜರಾಕ್ಷಸ, ಅರಿಷ್ಟ ನೇಮಿ ಗಂಧರ್ವ, ಊರ್ಣಯಕ್ಷ, ಆಯುಋಷಿ, ಪೂರ್ವ ಚಿತ್ತಿ ಅಪ್ಸರೆ, ಕಾರ್ಕೋಟಕನಾಗ ಇವರು ಇರುತ್ತಾರೆ. ॥42॥
(ಶ್ಲೋಕ - 43)
ಮೂಲಮ್
ತ್ವಷ್ಟಾ ಋಚೀಕತನಯಃ ಕಂಬಲಶ್ಚ ತಿಲೋತ್ತಮಾ ।
ಬ್ರಹ್ಮಾಪೇತೋಥ ಶತಜಿದ್ಧೃತರಾಷ್ಟ್ರ ಇಷಂಭರಾಃ ॥
ಅನುವಾದ
ಆಶ್ವಿನ ಮಾಸದಲ್ಲಿ ತೃಷ್ಟಾಸೂರ್ಯನು, ಜಮದಗ್ನಿ ಋಷಿ, ಕಂಬಲನಾಗ, ತಿಲೋತ್ತಮೆ ಅಪ್ಸರೆ, ಬ್ರಹ್ಮಾಪೇತರಾಕ್ಷಸ, ಶತಜಿತ್ಯಕ್ಷ, ಧೃತರಾಷ್ಟ್ರ ಗಂಧರ್ವ ಇವರ ಕಾರ್ಯ ಕಾಲವಿರುತ್ತದೆ. ॥43॥
(ಶ್ಲೋಕ - 44)
ಮೂಲಮ್
ವಿಷ್ಣುರಶ್ವತರೋ ರಂಭಾ ಸೂರ್ಯವರ್ಚಾಶ್ಚ ಸತ್ಯಜಿತ್ ।
ವಿಶ್ವಾಮಿತ್ರೋ ಮಖಾಪೇತ ಊರ್ಜಮಾಸಂ ನಯಂತ್ಯಮೀ ॥
ಅನುವಾದ
ಕಾರ್ತೀಕದಲ್ಲಿ ವಿಷ್ಣು ಎಂಬ ಸೂರ್ಯ, ಅಶ್ವತರನಾಗ, ರಂಭೆ, ಅಪ್ಸರೆ, ಸೂರ್ಯ, ವರ್ಚಾ, ಗಂಧರ್ವ, ಸತ್ಯಜಿತ್ಯಕ್ಷ, ವಿಶ್ವಾಮಿತ್ರ ಋಷಿ, ಮಖಾಪೇತ ರಾಕ್ಷಸ ಇವರು ತಮ್ಮ ಕಾರ್ಯವನ್ನು ನಡೆಸುತ್ತಾರೆ. ॥44॥
(ಶ್ಲೋಕ - 45)
ಮೂಲಮ್
ಏತಾ ಭಗವತೋ ವಿಷ್ಣೋರಾದಿತ್ಯಸ್ಯ ವಿಭೂತಯಃ ।
ಸ್ಮರತಾಂ ಸಂಧ್ಯಯೋರ್ನೃಣಾಂ ಹರಂತ್ಯಂಹೋ ದಿನೇ ದಿನೇ ॥
ಅನುವಾದ
ಶೌನಕರೇ! ಇವರೆಲ್ಲ ಸೂರ್ಯರೂಪಗಳು ಭಗವಂತನ ವಿಭೂತಿಗಳಾಗಿವೆ. ಇವನ್ನು ಪ್ರತಿದಿನವು ಸಾಯಂ-ಪ್ರಾತಃ ಕಾಲಗಳಲ್ಲಿ ಸ್ಮರಿಸುವ ಜನರ ಎಲ್ಲ ಪಾಪಗಳೂ ನಾಶವಾಗುತ್ತವೆ. ॥45॥
(ಶ್ಲೋಕ - 46)
ಮೂಲಮ್
ದ್ವಾದಶಸ್ವಪಿ ಮಾಸೇಷು ದೇವೋಸೌ ಷಡ್ಭಿರಸ್ಯ ವೈ ।
ಚರನ್ ಸಮಂತಾತ್ತನುತೇ ಪರತ್ರೇಹ ಚ ಸನ್ಮತಿಮ್ ॥
ಅನುವಾದ
ಈ ಸೂರ್ಯರು ತಮ್ಮ ಆರು ಗಣಗಳೊಂದಿಗೆ ಹನ್ನೆರಡು ತಿಂಗಳು ಎಲ್ಲೆಡೆ ಸಂಚರಿಸುತ್ತಾ ಇರುವರು ಮತ್ತು ಈ ಲೋಕ-ಪರಲೋಕಗಳಲ್ಲಿ ವಿವೇಕ ಬುದ್ಧಿಯನ್ನು ವಿಸ್ತರಿಸುತ್ತಾ ಇರುತ್ತಾರೆ. ॥46॥
(ಶ್ಲೋಕ - 47)
ಮೂಲಮ್
ಸಾಮರ್ಗ್ಯಜುರ್ಭಿಸ್ತಲ್ಲಿಂಗೈರ್ಋಷಯಃ ಸಂಸ್ತುವಂತ್ಯಮುಮ್ ।
ಗಂಧರ್ವಾಸ್ತಂ ಪ್ರಗಾಯಂತಿ ನೃತ್ಯಂತ್ಯಪ್ಸರಸೋಗ್ರತಃ ॥
ಅನುವಾದ
ಸೂರ್ಯಭಗವಂತನ ಗಣಗಳಲ್ಲಿ ಋಷಿಗಳು ಋಗ್ವೇದ, ಯಜುರ್ವೇದ ಸಾಮವೇದ ಇವುಗಳ ಸೂರ್ಯ ಸಂಬಂಧವಾದ ಮಂತ್ರಗಳಿಂದ ಅವನನ್ನು ಸ್ತುತಿಸುತ್ತಾ ಇರುತ್ತಾರೆ. ಗಂಧರ್ವರು ಅವನ ಕೀರ್ತಿಯನ್ನು ಹಾಡುತ್ತಾರೆ. ಅಪ್ಸರೆಯರು ನೃತ್ಯವಾಡುತ್ತಾ ಮುಂದೆ-ಮುಂದೆ ಹೋಗುತ್ತಿರುತ್ತಾರೆ. ॥47॥
(ಶ್ಲೋಕ - 48)
ಮೂಲಮ್
ಉನ್ನಹ್ಯಂತಿ ರಥಂ ನಾಗಾ ಗ್ರಾಮಣ್ಯೋ ರಥಯೋಜಕಾಃ ।
ಚೋದಯಂತಿ ರಥಂ ಪೃಷ್ಠೇ ನೈರ್ಋತಾ ಬಲಶಾಲಿನಃ ॥
ಅನುವಾದ
ನಾಗಗಳು ಹಗ್ಗದಂತೆ ಅವರ ರಥವನ್ನು ಬಿಗಿದುಕೊಂಡಿರುತ್ತವೆ. ಯಕ್ಷರು ರಥವನ್ನು ಸಿಂಗರಿಸುತ್ತಾರೆ. ಬಲಿಷ್ಠರಾದ ರಾಕ್ಷಸರು ರಥವನ್ನು ಹಿಂದಿನಿಂದ ನೂಕೂತ್ತಿರುತ್ತಾರೆ. ॥48॥
(ಶ್ಲೋಕ - 49)
ಮೂಲಮ್
ವಾಲಖಿಲ್ಯಾಃ ಸಹಸ್ರಾಣಿ ಷಷ್ಟಿರ್ಬ್ರಹ್ಮರ್ಷಯೋಮಲಾಃ ।
ಪುರತೋಭಿಮುಖಂ ಯಾಂತಿ ಸ್ತುವಂತಿ ಸ್ತುತಿಭಿರ್ವಿಭುಮ್ ॥
ಅನುವಾದ
ಇವರಲ್ಲದೆ ವಾಲಖಿಲ್ಯರೆಂಬ ಅರವತ್ತು ಸಾವಿರ ನಿರ್ಮಲ ಸ್ವಭಾವದ ಬ್ರಹ್ಮರ್ಷಿಗಳು ಸೂರ್ಯನಕಡೆಗೆ ಮುಖಮಾಡಿ ಅವನನ್ನು ಸ್ತುತಿಸುತ್ತಾ ಹಿಮ್ಮುಖವಾಗಿ ನಡೆಯುತ್ತಾ ಇರುತ್ತಾರೆ. ॥49॥
(ಶ್ಲೋಕ - 50)
ಮೂಲಮ್
ಏವಂ ಹ್ಯನಾದಿನಿಧನೋ ಭಗವಾನ್ ಹರಿರೀಶ್ವರಃ ।
ಕಲ್ಪೇ ಕಲ್ಪೇ ಸ್ವಮಾತ್ಮಾನಂ ವ್ಯೆಹ್ಯ ಲೋಕಾನವತ್ಯಜಃ ॥
ಅನುವಾದ
ಹೀಗೆ ಅನಾದಿಯೂ, ಅನಂತನೂ, ಅಜನೂ ಆದ ಭಗವಾನ್ ಶ್ರೀಹರಿಯೇ ಕಲ್ಪ-ಕಲ್ಪಾಂತರಗಳಲ್ಲಿ ಅನೇಕ ರೂಪಗಳನ್ನಾಗಿ ವಿಭಾಗಿಸಿಕೊಂಡು ಲೋಕಗಳನ್ನು ಪಾಲಿಸಿ-ಪೋಷಿಸುತ್ತಾನೆ.॥50॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ
ಆದಿತ್ಯವ್ಯೆಹವಿವರಣಂ ನಾಮ ಏಕಾದಶೋಽಧ್ಯಾಯಃ ॥11॥