೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಮಾರ್ಕಂಡೇಯರಿಗೆ ಭಗವಾನ್ ಶಂಕರನ ವರದಾನ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಸ ಏವಮನುಭೂಯೇದಂ ನಾರಾಯಣವಿನಿರ್ಮಿತಮ್ ।
ವೈಭವಂ ಯೋಗಮಾಯಾಯಾಸ್ತಮೇವ ಶರಣಂ ಯಯೌ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಆ ಮಾರ್ಕಂಡೇಯ ಮುನಿಗಳು ನಾರಾಯಣನು ತೋರಿದ ಮಾಯಾಪ್ರಭಾವವನ್ನು ಹೀಗೆ ಅನುಭವಿಸಿ, ಆ ಮಾಯೆಯನ್ನು ದಾಟಲು ಮಾಯಾಧಿಪತಿಯಾದ ಭಗವಂತನಲ್ಲಿ ಶರಣಾಗುವುದು. ಒಂದೇ ಉಪಾಯವೆಂದರಿತು, ಆತನಲ್ಲಿ ಶರಣಾದರು. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಮಾರ್ಕಂಡೇಯ ಉವಾಚ

ಮೂಲಮ್

ಪ್ರಪನ್ನೋಸ್ಮ್ಯಂಘ್ರಿಮೂಲಂ ತೇ ಪ್ರಪನ್ನಾಭಯದಂ ಹರೇ ।
ಯನ್ಮಾಯಯಾಪಿ ವಿಬುಧಾ ಮುಹ್ಯಂತಿ ಜ್ಞಾನಕಾಶಯಾ ॥

ಅನುವಾದ

ಮಾರ್ಕಂಡೇಯರು ಹೇಳಿದರು — ಪ್ರಭೋ! ನಿನ್ನ ಮಾಯೆಯು ವಾಸ್ತವವಾಗಿ ಪ್ರತೀತಿಮಾತ್ರವಾಗಿದ್ದರೂ ಸತ್ಯ ಜ್ಞಾನದಂತೆ ಪ್ರಕಾಶಿತವಾಗುತ್ತದೆ ಮತ್ತು ದೊಡ್ಡ-ದೊಡ್ಡ ವಿದ್ವಾಂಸರೂ ಕೂಡ ಅದರ ಆಟದಲ್ಲಿ ಮೋಹಿತರಾಗುತ್ತಾರೆ. ನಿನ್ನ ಶ್ರೀಚರಣ ಕಮಲಗಳೇ ಶರಣಾಗತರಿಗೆ ಎಲ್ಲ ವಿಧದಿಂದ ಅಭಯಪ್ರದಾನ ಮಾಡುತ್ತಿವೆ. ಅದಕ್ಕಾಗಿ ನಾನೂ ಅವುಗಳಿಗೆ ಶರಣಾಗುತ್ತೇನೆ. ॥2॥

(ಶ್ಲೋಕ - 3)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ತಮೇವಂ ನಿಭೃತಾತ್ಮಾನಂ ವೃಷೇಣ ದಿವಿ ಪರ್ಯಟನ್ ।
ರುದ್ರಾಣ್ಯಾ ಭಗವಾನ್ ರುದ್ರೋ ದದರ್ಶ ಸ್ವಗಣೈರ್ವೃತಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಮಾರ್ಕಂಡೇಯರು ಹೀಗೆ ಶರಣಾಗತಿಯ ಭಾವದಲ್ಲಿ ತನ್ಮಯರಾಗಿದ್ದಾಗ ಭಗವಾನ್ ಶಂಕರನು ಭಗವತಿ ಪಾರ್ವತಿಯೊಂದಿಗೆ ನಂದಿಯ ಮೇಲೆ ಕುಳಿತುಕೊಂಡು ಆಕಾಶಮಾರ್ಗವಾಗಿ ಸಂಚರಿಸುತ್ತಾ ಆ ದಾರಿಯಿಂದ ಹೋಗುತ್ತಿರುವಾಗ ಮಾರ್ಕಂಡೇಯರನ್ನು ಆ ಸ್ಥಿತಿಯಲ್ಲಿ ನೋಡಿದನು. ಅವನೊಂದಿಗೆ ಬಹಳಷ್ಟು ಗಣಗಳೂ ಸುತ್ತುವರೆದಿದ್ದರು. ॥3॥

(ಶ್ಲೋಕ - 4)

ಮೂಲಮ್

ಅಥೋಮಾ ತಮೃಷಿಂ ವೀಕ್ಷ್ಯ ಗಿರಿಶಂ ಸಮಭಾಷತ ।
ಪಶ್ಯೇಮಂ ಭಗವನ್ವಿಪ್ರಂ ನಿಭೃತಾತ್ಮೇಂದ್ರಿಯಾಶಯಮ್ ॥

(ಶ್ಲೋಕ - 5)

ಮೂಲಮ್

ನಿಭೃತೋದಝಷವ್ರಾತಂ ವಾತಾಪಾಯೇ ಯಥಾರ್ಣವಮ್ ।
ಕುರ್ವಸ್ಯ ತಪಸಃ ಸಾಕ್ಷಾತ್ ಸಂಸಿದ್ಧಿಂ ಸಿದ್ಧಿದೋ ಭವಾನ್ ॥

ಅನುವಾದ

ಭಗವತಿ ಪಾರ್ವತಿಯು ಮಾರ್ಕಂಡೇಯ ಮುನಿಯ ಧ್ಯಾನ ಸ್ಥಿತಿಯನ್ನು ನೋಡಿದಾಗ ಆಕೆಯ ಹೃದಯ ವಾತ್ಸಲ್ಯದಿಂದ ತುಂಬಿಬಂತು. ಆಕೆಯು ಶಂಕರನಲ್ಲಿ ಹೇಳಿದಳು - ಸ್ವಾಮಿ, ಭಗವಂತನೇ! ಸ್ವಲ್ಪ ಈ ಬ್ರಾಹ್ಮಣನ ಕಡೆಗೆ ನೋಡಿರಲ್ಲ! ಚಂಡಮಾರುತವು ಶಾಂತವಾದಾಗ ಸಮುದ್ರದ ಅಲೆಗಳು ಮತ್ತು ಮೀನುಗಳು ಶಾಂತವಾಗಿ ಗಂಭೀರವಾಗುವಂತೆಯೇ ಈ ಬ್ರಾಹ್ಮಣನ ಶರೀರ, ಇಂದ್ರಿಯಗಳು ಮತ್ತು ಅಂತಃಕರಣಗಳು ಶಾಂತವಾಗಿ ಬಿಟ್ಟಿವೆ. ಸಮಸ್ತ ಸಿದ್ಧಿಗಳನ್ನು ಕೊಡುವವರು ತಾವೇ ಆಗಿರುವಿರಲ್ಲ. ಅದಕ್ಕಾಗಿ ಕೃಪೆಗೈದು ನೀವು ಈ ಬ್ರಾಹ್ಮಣನ ತಪಸ್ಸಿನ ಪ್ರತ್ಯಕ್ಷ ಫಲವನ್ನು ಕೊಟ್ಟು ಬಿಡಿರಿ. ॥4-5॥

(ಶ್ಲೋಕ - 6)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ನೈವೇಚ್ಛತ್ಯಾಶಿಷಃ ಕ್ವಾಪಿ ಬ್ರಹ್ಮರ್ಷಿರ್ಮೋಕ್ಷಮಪ್ಯುತ ।
ಭಕ್ತಿಂ ಪರಾಂ ಭಗವತಿ ಲಬ್ಧವಾನ್ಪುರುಷೇವ್ಯಯೇ ॥

ಅನುವಾದ

ಭಗವಾನ್ ಶಂಕರನು ಹೇಳಿದನು — ದೇವಿ! ಈ ಮಹರ್ಷಿಯು ಲೋಕ ಅಥವಾ ಪರಲೋಕದ ಯಾವುದೇ ವಸ್ತುವನ್ನು ಬಯಸುವುದಿಲ್ಲ. ಇಷ್ಟೇ ಅಲ್ಲ, ಇವರ ಮನಸ್ಸಿನಲ್ಲಿ ಮೋಕ್ಷದ ಇಚ್ಛೆಯೂ ಎಂದಿಗೂ ಉಂಟಾಗುವುದಿಲ್ಲ. ಏಕೆಂದರೆ, ಅವಿನಾಶಿಯಾದ ಭಗವಂತನ ಚರಣಕಮಲಗಳಲ್ಲಿ ಇವರು ಪರಾಭಕ್ತಿಯನ್ನು ಪಡೆದುಕೊಂಡಿರುವರು. ॥6॥

(ಶ್ಲೋಕ - 7)

ಮೂಲಮ್

ಅಥಾಪಿ ಸಂವದಿಷ್ಯಾಮೋ ಭವಾನ್ಯೇತೇನ ಸಾಧುನಾ ।
ಅಯಂ ಹಿ ಪರಮೋ ಲಾಭೋ ನೃಣಾಂ ಸಾಧುಸಮಾಗಮಃ ॥

ಅನುವಾದ

ಪ್ರಿಯೇ! ಇವರಿಗೆ ನಮ್ಮ ಯಾವುದೇ ಆವಶ್ಯಕತೆ ಇಲ್ಲದಿದ್ದರೂ ನಾನು ಇವರೊಂದಿಗೆ ಮಾತನಾಡುವೆನು. ಏಕೆಂದರೆ, ಇವರು ಮಹಾತ್ಮರಾಗಿದ್ದಾರೆ. ಎಲ್ಲ ಜೀವರಿಗೆ ಸಂತ-ಸತ್ಪುರಷರ ಸಮಾಗಮವೇ ಎಲ್ಲಕ್ಕಿಂತ ಮಿಗಿಲಾದಲಾಭದ ವಸ್ತುವಾಗಿದೆ. ॥7॥

(ಶ್ಲೋಕ - 8)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯುಕ್ತ್ವಾ ತಮುಪೇಯಾಯ ಭಗವಾನ್ ಸ ಸತಾಂ ಗತಿಃ ।
ಈಶಾನಃ ಸರ್ವವಿದ್ಯಾನಾಮೀಶ್ವರಃ ಸರ್ವದೇಹಿನಾಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಭಗವಾನ್ ಶಂಕರನು ಸಮಸ್ತ ವಿದ್ಯೆಗಳ ಪ್ರವರ್ತಕನೂ, ಸಮಸ್ತ ಪ್ರಾಣಿಗಳ ಹೃದಯಗಳಲ್ಲಿ ವಿರಾಜಮಾನನಾದ ಅಂತರ್ಯಾಮಿ ಪ್ರಭುವಾಗಿರುವನು. ಜಗತ್ತಿನಲ್ಲಿ ಇರುವ ಎಲ್ಲ ಸಂತರಿಗೆ ಏಕಮಾತ್ರ ಆಶ್ರಯವೂ, ಆದರ್ಶನೂ ಅವನೇ ಆಗಿರುವನು. ಭಗವತಿ ಪಾರ್ವತಿಯಲ್ಲಿ ಹೀಗೆ ಹೇಳಿ ಭಗವಾನ್ ಶಂಕರನು ಮಾರ್ಕಂಡೇಯರ ಬಳಿಗೆ ಬಂದನು. ॥8॥

(ಶ್ಲೋಕ - 9)

ಮೂಲಮ್

ತಯೋರಾಗಮನಂ ಸಾಕ್ಷಾದೀಶಯೋರ್ಜಗದಾತ್ಮನೋಃ ।
ನ ವೇದ ರುದ್ಧಧೀವೃತ್ತಿರಾತ್ಮಾನಂ ವಿಶ್ವಮೇವ ಚ ॥

ಅನುವಾದ

ಆ ಸಮಯದಲ್ಲಿ ಮಾರ್ಕಂಡೇಯ ಮುನಿಯ ಸಮಸ್ತ ಮನೋವೃತ್ತಿಗಳು ಭಗವದ್ಭಾವದಲ್ಲಿ ತನ್ಮಯವಾಗಿದ್ದವು. ಅವರಿಗೆ ತನ್ನ ಶರೀರ ಮತ್ತು ಜಗತ್ತಿನ ಕುರಿತು ಯಾವ ಪ್ರಜ್ಞೆಯೂ ಇರಲಿಲ್ಲ. ಆದುದರಿಂದ ಅವರು ತನ್ನ ಇದಿರಿಗೆ ಸಮಸ್ತ ವಿಶ್ವದ ಆತ್ಮನಾದ ಸಾಕ್ಷಾತ್ ಭಗವಾನ್ ಗೌರೀಶಂಕರನು ದಯಾಮಾಡಿಸಿರುವನು ಎಂಬುದನ್ನೂ ತಿಳಿಯದೇ ಹೋದರು. ॥9॥

(ಶ್ಲೋಕ - 10)

ಮೂಲಮ್

ಭಗವಾನ್ಸ್ತದಭಿಜ್ಞಾಯ ಗಿರೀಶೋ ಯೋಗಮಾಯಯಾ ।
ಆವಿಶತ್ತದ್ಗುಹಾಕಾಶಂ ವಾಯುಶ್ಛಿದ್ರಮಿವೇಶ್ವರಃ ॥

ಅನುವಾದ

ಶೌನಕರೇ! ಮಾರ್ಕಂಡೇಯ ಮುನಿಯು ಈಗ ಯಾವ ಸ್ಥಿತಿಯಲ್ಲಿರುವನು ಎಂಬ ಸಂಗತಿ ಸರ್ವಶಕ್ತನಾದ ಭಗವಾನ್ ಕೈಲಾಸ ಪತಿಗೆ ತಿಳಿಯದೆ ಇರಲಿಲ್ಲ. ಅದಕ್ಕಾಗಿ ವಾಯುವು ಆಕಾಶದಲ್ಲಿ ಅನಾಯಾಸವಾಗಿ ಪ್ರವೇಶಿಸುವಂತೆ ಶಿವನು ತನ್ನ ಯೋಗ ಮಾಯೆಯಿಂದ ಮುನಿಯ ಹೃದಯಾಕಾಶದಲ್ಲಿ ಪ್ರವೇಶಿಸಿದನು. ॥10॥

(ಶ್ಲೋಕ - 11)

ಮೂಲಮ್

ಆತ್ಮನ್ಯಪಿ ಶಿವಂ ಪ್ರಾಪ್ತಂ ತಡಿತ್ಪಿಂಗಜಟಾಧರಮ್ ।
ತ್ರ್ಯಕ್ಷಂ ದಶಭುಜಂ ಪ್ರಾಂಶುಮುದ್ಯಂತಮಿವ ಭಾಸ್ಕರಮ್ ॥

ಅನುವಾದ

ತನ್ನ ಹೃದಯದಲ್ಲಾದರೋ ಭಗವಾನ್ ಶಂಕರನ ದರ್ಶನವಾಗುತ್ತಿರುವುದನ್ನು ಮಾರ್ಕಂಡೇಯರು ನೋಡಿದರು. ಪರಶಿವನ ತಲೆಯಲ್ಲಿ ವಿದ್ಯುತ್ತಿನಂತೆ ಹೊಳೆಯುವ ಪಿಂಗಳ ಜಟೆಗಳು ಶೋಭಿಸುತ್ತಿವೆ. ಮೂರು ನೇತ್ರಗಳಿದ್ದು, ಹತ್ತು ಭುಜಗಳಿಂದ ಕೂಡಿದ ದೀರ್ಘವಾದ ಶರೀರವು ಉದಯಕಾಲದ ಸೂರ್ಯನಂತೆ, ತೇಜದಿಂದ ಕೂಡಿದೆ. ॥11॥

(ಶ್ಲೋಕ - 12)

ಮೂಲಮ್

ವ್ಯಾಘ್ರಚರ್ಮಾಂಬರಧರಂ ಶೂಲಖಟ್ವಾಂಗ ಚರ್ಮಭಿಃ ।
ಅಕ್ಷಮಾಲಾಡಮರುಕಕಪಾಲಾಸಿಧನುಃ ಸಹ ॥

ಅನುವಾದ

ಶರೀರದ ಮೇಲೆ ವ್ಯಾಘ್ರಾಂಬರ ಧರಿಸಿದ್ದು, ಕೈಗಳಲ್ಲಿ ಶೂಲ, ಖಟ್ವಾಂಗ, ಕತ್ತಿ-ಗುರಾಣಿ, ರುದ್ರಾಕ್ಷ ಮಾಲೆ, ಡಮರು, ಕಪಾಲ ಮತ್ತು ಧನುಸ್ಸುಗಳನ್ನು ಧರಿಸಿರುವನು. ॥12॥

(ಶ್ಲೋಕ - 13)

ಮೂಲಮ್

ಬಿಭ್ರಾಣಂ ಸಹಸಾ ಭಾತಂ ವಿಚಕ್ಷ್ಯ ಹೃದಿ ವಿಸ್ಮಿತಃ ।
ಕಿಮಿದಂ ಕುತ ಏವೇತಿ ಸಮಾಧೇರ್ವಿರತೋ ಮುನಿಃ ॥

ಅನುವಾದ

ತನ್ನ ಹೃದಯದಲ್ಲಿ ಅಕಸ್ಮಾತ್ತಾಗಿ ಭಗವಾನ್ ಶಂಕರನ ಈ ರೂಪವನ್ನು ನೋಡಿದ ಮಾರ್ಕಂಡೇಯರಿಗೆ - ‘ಇದೇನು ನಾನು ನೋಡುತ್ತಿರುವುದು? ಶಿವನು ಎಲ್ಲಿಂದ ಬಂದನು? ಎಂಬುದಾಗಿ ಆಶ್ಚರ್ಯಚಕಿತನಾಗಿ ಸಮಾಧಿಯಿಂದ ಬಹಿರ್ಮುಖರಾದರು. ॥13॥

(ಶ್ಲೋಕ - 14)

ಮೂಲಮ್

ನೇತ್ರೇ ಉನ್ಮೀಲ್ಯ ದದೃಶೇ ಸಗಣಂ ಸೋಮಯಾಗತಮ್ ।
ರುದ್ರಂ ತ್ರಿಲೋಕೈಕಗುರುಂ ನನಾಮ ಶಿರಸಾ ಮುನಿಃ ॥

ಅನುವಾದ

ಕಣ್ಣು ತೆರೆದು ನೋಡಿದಾಗ ತ್ರಿಲೋಕಗಳಿಗೂ ಏಕಮಾತ್ರ ಗುರುಸ್ವರೂಪನಾದ ಭಗವಾನ್ ಪರಶಿವನು ಪಾರ್ವತಿ ಹಾಗೂ ತನ್ನ ಗಣಗಳೊಂದಿಗೆ ಆಗಮಿಸಿರುವನು. ಅವರು ಭಕ್ತಿಯಿಂದ ಅವರ ಚರಣಗಳಲ್ಲಿ ಮಸ್ತಕವನ್ನಿಟ್ಟು ನಮಸ್ಕರಿಸಿದರು. ॥14॥

(ಶ್ಲೋಕ - 15)

ಮೂಲಮ್

ತಸ್ಮೈ ಸಪರ್ಯಾಂ ವ್ಯದಧಾತ್ಸಗಣಾಯ ಸಹೋಮಯಾ ।
ಸ್ವಾಗತಾಸನಪಾದ್ಯಾರ್ಘ್ಯಗಂಧಸ್ರಗ್ಧೂಪದೀಪಕೈಃ ॥

ಅನುವಾದ

ಅನಂತರ ಮಾರ್ಕಂಡೇಯ ಸ್ವಾಗತ, ಆಸನ, ಪಾದ್ಯ, ಅರ್ಘ್ಯ, ಗಂಧಮಾಲ್ಯಾದಿಗಳಿಂದ ಪುಷ್ಪ, ಧೂಪ, ದೀಪ ಮೊದಲಾದ ಉಪಚಾರಗಳಿಂದ ಭಗವಾನ್ ಶಂಕರನನ್ನು, ಪಾರ್ವತಿಯನ್ನು, ಶಿವಗಣಗಳನ್ನೂ ಪೂಜಿಸಿದನು. ॥15॥

(ಶ್ಲೋಕ - 16)

ಮೂಲಮ್

ಆಹ ಚಾತ್ಮಾನುಭಾವೇನ ಪೂರ್ಣಕಾಮಸ್ಯ ತೇ ವಿಭೋ ।
ಕರವಾಮ ಕಿಮೀಶಾನ ಯೇನೇದಂ ನಿರ್ವೃತಂ ಜಗತ್ ॥

ಅನುವಾದ

ಬಳಿಕ ವಂದಿಸಿಕೊಂಡು ಮುನಿಯು ಹೇಳಿದನು - ಸರ್ವ ವ್ಯಾಪಕನೂ, ಸರ್ವಶಕ್ತನೂ ಆದ ಪ್ರಭುವೇ! ನೀನು ನಿನ್ನ ಆತ್ಮಾನುಭೂತಿ ಮತ್ತು ಮಹಿಮೆಯಿಂದ ಪೂರ್ಣಕಾಮನಾಗಿರುವೆ. ನಿನ್ನ ಶಾಂತಿ-ಸುಖದಿಂದಲೇ ಸಮಸ್ತ ಜಗತ್ತಿನಲ್ಲಿ ಸುಖ-ಶಾಂತಿಯನ್ನು ವಿಸ್ತಾರಗೊಳಿಸುತ್ತಿರುವೆ. ಇಂತಹ ಸ್ಥಿತಿಯಲ್ಲಿ ನಾನು ನಿನಗೆ ಯಾವ ಸೇವೆ ಮಾಡಲಿ ? ॥16॥

(ಶ್ಲೋಕ - 17)

ಮೂಲಮ್

ನಮಃ ಶಿವಾಯ ಶಾಂತಾಯ ಸತ್ತ್ವಾಯ ಪ್ರಮೃಡಾಯ ಚ ।
ರಜೋಜುಷೇಪ್ಯಘೋರಾಯ ನಮಸ್ತುಭ್ಯಂ ತಮೋಜುಷೇ ॥

ಅನುವಾದ

ನಿನ್ನ ತ್ರಿಗುಣಾತೀತ ಸದಾಶಿವ ಸ್ವರೂಪಕ್ಕೆ ಹಾಗೂ ಸತ್ತ್ವಗುಣದಿಂದ ಕೂಡಿದ ಶಾಂತಸ್ವರೂಪಕ್ಕೆ ನಾನು ನಮಸ್ಕರಿಸುತ್ತೇನೆ. ನಿನ್ನ ರಜೋಗುಣದಿಂದ ಕೂಡಿದ ಸರ್ವ ಪ್ರವರ್ತಕ ಸ್ವರೂಪ ಹಾಗೂ ತಮೋಗುಣದಿಂದ ಕೂಡಿದ ಅಘೋರ ಸ್ವರೂಪವನ್ನು ವಂದಿಸುತ್ತೇನೆ. ॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ಸ್ತುತಃ ಸ ಭಗವಾನಾದಿದೇವಃ ಸತಾಂ ಗತಿಃ ।
ಪರಿತುಷ್ಟಃ ಪ್ರಸನ್ನಾತ್ಮಾ ಪ್ರಹಸಂಸ್ತಮಭಾಷತ ॥

ಅನುವಾದ

ಸೂತಪುರಾಣಿಕರು ಹೇಳಿದರು — ಶೌನಕರೇ! ಸಂತರ ಪರಮಾಶ್ರಯನಾದ ದೇವಾಧಿದೇವ ಭಗವಾನ್ ಶಂಕರನನ್ನು ಮಾರ್ಕಂಡೇಯರು ಹೀಗೆ ಸ್ತುತಿಸಿದಾಗ ಅವನು ಮುನಿಯ ಮೇಲೆ ಅತ್ಯಂತ ಸಂತುಷ್ಟನಾಗಿ ಪ್ರಸನ್ನ ಚಿತ್ತದಿಂದ ಮುಗುಳುನಗುತ್ತಾ ಇಂತೆಂದನು. ॥18॥

(ಶ್ಲೋಕ - 19)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ವರಂ ವೃಣೀಷ್ವ ನಃ ಕಾಮಂ ವರದೇಶಾ ವಯಂ ತ್ರಯಃ ।
ಅಮೋಘಂ ದರ್ಶನಂ ಯೇಷಾಂ ಮರ್ತ್ಯೋಯದ್ವಿಂದತೇಮೃತಮ್ ॥

ಅನುವಾದ

ಭಗವಾನ್ ಶಂಕರನು ಹೇಳಿದನು — ಮಾರ್ಕಂಡೇಯರೇ! ಬ್ರಹ್ಮಾ, ವಿಷ್ಣು ಮತ್ತು ನಾನು-ನಾವು ಮೂವರೂ ವರವನ್ನು ಕೊಡುವವರ ಸ್ವಾಮಿಗಳಾಗಿದ್ದೇವೆ. ನಮ್ಮ ದರ್ಶನವು ಎಂದಿಗೂ ವ್ಯರ್ಥವಾಗುವುದಿಲ್ಲ. ನಮ್ಮಿಂದಲೇ ಮರಣ ಧರ್ಮವುಳ್ಳ ಮನುಷ್ಯರು ಅಮೃತತ್ತ್ವವನ್ನು ಪಡೆದುಕೊಳ್ಳುವರು. ಆದ್ದರಿಂದ ನಿಮಗೆ ಇಚ್ಛಿತವಿರುವ ವರವನ್ನು ನನ್ನಿಂದ ಕೇಳಿಕೊಳ್ಳಿರಿ. ॥19॥

(ಶ್ಲೋಕ - 20)

ಮೂಲಮ್

ಬ್ರಾಹ್ಮಣಾಃ ಸಾಧವಃ ಶಾಂತಾ ನಿಸ್ಸಂಗಾ ಭೂತವತ್ಸಲಾಃ ।
ಏಕಾಂತಭಕ್ತಾ ಅಸ್ಮಾಸು ನಿರ್ವೈರಾಃ ಸಮದರ್ಶಿನಃ ॥

ಅನುವಾದ

ಬ್ರಾಹ್ಮಣರು ಸ್ವಭಾವದಿಂದಲೇ ಪರೋಪಕಾರಿಗಳೂ, ಶಾಂತಚಿತ್ತರೂ, ಅನಾಸಕ್ತರೂ ಆಗಿರುತ್ತಾರೆ. ಅವರು ಯಾರೊಂದಿಗೂ ವೈರವನ್ನು ಇಟ್ಟು ಕೊಳ್ಳುವುದಿಲ್ಲ. ಸಮದರ್ಶಿಗಳಾಗಿದ್ದರೂ ಪ್ರಾಣಿಗಳ ಕಷ್ಟವನ್ನು ನೋಡಿ ಅದರ ನಿವಾರಣೆಗಾಗಿ ಹೃತ್ಪೂರ್ವಕವಾಗಿ ತೊಡಗುತ್ತಾರೆ. ಅವರು ನಮ್ಮ ಅನನ್ಯ ಪ್ರೇಮಿಗಳೂ ಭಕ್ತರೂ ಆಗಿರುವುದೇ ಅವರ ವಿಶೇಷತೆಯಾಗಿದೆ. ॥20॥

(ಶ್ಲೋಕ - 21)

ಮೂಲಮ್

ಸಲೋಕಾ ಲೋಕಪಾಲಾಸ್ತಾನ್ವಂದಂತ್ಯರ್ಚಂತ್ಯುಪಾಸತೇ ।
ಅಹಂ ಚ ಭಗವಾನ್ ಬ್ರಹ್ಮಾ ಸ್ವಯಂ ಚ ಹರಿರೀಶ್ವರಃ ॥

ಅನುವಾದ

ಸಮಸ್ತ ಲೋಕಗಳು ಮತ್ತು ಲೋಕಪಾಲಕರು ಇಂತಹ ಬ್ರಾಹ್ಮಣರನ್ನು ವಂದಿಸುತ್ತಾ, ಪೂಜೆ-ಉಪಾಸನೆ ಮಾಡುತ್ತಾ ಇರುತ್ತಾರೆ. ಕೇವಲ ಅವರಷ್ಟೇ ಅಲ್ಲ, ನಾನು, ಭಗವಾನ್ ಬ್ರಹ್ಮದೇವರು, ಸಾಕ್ಷಾತ್ ಜಗದೊಡೆಯ ವಿಷ್ಣುವೂ ಕೂಡ ಅವರ ಸೇವೆಯಲ್ಲಿ ತೊಡಗಿರುತ್ತೇವೆ. ॥21॥

(ಶ್ಲೋಕ - 22)

ಮೂಲಮ್

ನ ತೇ ಮಯ್ಯಚ್ಯುತೇಜೇ ಚ ಭಿದಾಮಣ್ವಪಿ ಚಕ್ಷತೇ ।
ನಾತ್ಮನಶ್ಚ ಜನಸ್ಯಾಪಿ ತದ್ಯುಷ್ಮಾನ್ವಯಮೀಮಹಿ ॥

ಅನುವಾದ

ಇಂತಹ ಶಾಂತರಾದ ಮಹಾಪುರುಷರು ನನ್ನಲ್ಲಿ, ವಿಷ್ಣು ಭಗವಂತನಲ್ಲಿ, ಬ್ರಹ್ಮದೇವರಲ್ಲಿ, ತಮ್ಮಲ್ಲಿ, ಸರ್ವಥಾ ಏಕರಸವಾದ ಆತ್ಮನನ್ನೇ ದರ್ಶಿಸುತ್ತಾ ಇರುತ್ತಾರೆ. ಅದಕ್ಕಾಗಿ ನಾವು ನಿಮ್ಮಂತಹ ಮಹಾತ್ಮರ ಸ್ತುತಿ-ಸೇವೆ ಮಾಡುತ್ತೇವೆ. ॥22॥

(ಶ್ಲೋಕ - 23)

ಮೂಲಮ್

ನ ಹ್ಯಮ್ಮಯಾನಿ ತೀರ್ಥಾನಿ ನ ದೇವಾಶ್ಚೇತನೋಜ್ಝಿತಾಃ ।
ತೇ ಪುನಂತ್ಯುರುಕಾಲೇನ ಯೂಯಂ ದರ್ಶನಮಾತ್ರತಃ ॥

ಅನುವಾದ

ಮಾರ್ಕಂಡೇಯನೇ! ಕೇವಲ ಜಲಮಯ ತೀರ್ಥವೇ ತೀರ್ಥವಾಗುವುದಿಲ್ಲ. ಕೇವಲ ಜಡಮೂರ್ತಿ ಗಳೇ ದೇವತೆಗಳಾಗುವುದಿಲ್ಲ. ಎಲ್ಲಕ್ಕಿಂತ ಶ್ರೇಷ್ಠವಾದ ತೀರ್ಥ ಮತ್ತು ದೇವತೆ ನಿಮ್ಮಂತಹ ಸಂತರೇ ಆಗಿರುತ್ತಾರೆ. ಏಕೆಂದರೆ, ಆ ತೀರ್ಥ ಹಾಗೂ ದೇವತೆಗಳು ಬಹಳ ದಿನಗಳಲ್ಲಿ ಪವಿತ್ರವಾಗಿಸುತ್ತವೆ. ಆದರೆ ನಿಮ್ಮಂತಹವರು ದರ್ಶನ ಮಾತ್ರದಿಂದಲೇ ಪವಿತ್ರರಾಗಿಸಿಬಿಡುತ್ತೀರಿ. ॥23॥

(ಶ್ಲೋಕ - 24)

ಮೂಲಮ್

ಬ್ರಾಹ್ಮಣೇಭ್ಯೋ ನಮಸ್ಯಾಮೋ ಯೇಸ್ಮದ್ರೂಪಂ ತ್ರಯೀಮಯಮ್ ।
ಬಿಭ್ರತ್ಯಾತ್ಮ ಸಮಾಧಾನತಪಸ್ಸ್ವಾಧ್ಯಾಯಸಂಯಮೈಃ ॥

ಅನುವಾದ

ನಾವಾದರೋ ಬ್ರಾಹ್ಮಣರನ್ನೇ ನಮಸ್ಕರಿಸುತ್ತೇವೆ. ಏಕೆಂದರೆ, ಅವರು ಚಿತ್ತದ ಏಕಾಗ್ರತೆ, ತಪಸ್ಸು, ಸ್ವಾಧ್ಯಾಯ, ಧಾರಣೆ, ಧ್ಯಾನ ಮತ್ತು ಸಮಾಧಿಯ ಮೂಲಕ ನಮ್ಮ ವೇದಮಯ ಶರೀರವನ್ನು ಧರಿಸುತ್ತಾರೆ. ॥24॥

(ಶ್ಲೋಕ - 25)

ಮೂಲಮ್

ಶ್ರವಣಾದ್ದರ್ಶನಾದ್ವಾಪಿ ಮಹಾಪಾತಕಿನೋಪಿ ವಃ ।
ಶುಧ್ಯೇರನ್ನಂತ್ಯಜಾಶ್ಚಾಪಿ ಕಿಮು ಸಂಭಾಷಣಾದಿಭಿಃ ॥

ಅನುವಾದ

ಮಾರ್ಕಂಡೇಯರೇ! ಮಹಾಪಾಪಿಗಳೂ, ಅಂತ್ಯಜರೂ ಕೂಡ ನಿಮ್ಮಂತಹ ಮಹಾಪುರುಷರ ಚರಿತ್ರ ಶ್ರವಣದಿಂದ ಹಾಗೂ ದರ್ಶನದಿಂದಲೇ ಶುದ್ಧರಾಗಿ ಹೋಗುತ್ತಾರೆ. ಹೀಗಿರುವಾಗ ನಿಮ್ಮೊಡನೆ ಸಂಭಾಷಣೆ ಮತ್ತು ಸಹವಾಸದಿಂದ ಶುದ್ಧವಾಗುವುದರಲ್ಲಿ ಹೇಳುವುದೇನಿದೆ? ॥25॥

(ಶ್ಲೋಕ - 26)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತಿ ಚಂದ್ರಲಲಾಮಸ್ಯ ಧರ್ಮಗುಹ್ಯೋಪಬೃಂಹಿತಮ್ ।
ವಚೋಮೃತಾಯನಮೃಷಿರ್ನಾತೃಪ್ಯತ್ಕರ್ಣಯೋಃ ಪಿಬನ್ ॥

ಅನುವಾದ

ಸೂತಪುರಾಣಿಗಳು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಚಂದ್ರಶೇಖರ ಭಗವಾನ್ ಶಂಕರನ ಒಂದೊಂದು ಮಾತು ಧರ್ಮದ ರಹಸ್ಯದಿಂದ ಪರಿಪೂರ್ಣವಾಗಿತ್ತು. ಒಂದೊಂದು ಅಕ್ಷರದಲ್ಲಿಯೂ ಅಮೃತದ ಸಮುದ್ರವೇ ತುಂಬಿತ್ತು. ಮಾರ್ಕಂಡೇಯ ಮುನಿಗಳು ತಮ್ಮ ಕಿವಿಗಳ ಮೂಲಕ ತನ್ಮಯತೆಯಿಂದ ಅದನ್ನು ಪಾನ ಮಾಡುತ್ತಿದ್ದರೂ ಅವರಿಗೆ ತೃಪ್ತಿಯೇ ಆಗಲಿಲ್ಲ. ॥26॥

(ಶ್ಲೋಕ - 27)

ಮೂಲಮ್

ಸ ಚಿರಂ ಮಾಯಯಾ ವಿಷ್ಣೋರ್ಭ್ರಾಮಿತಃ ಕರ್ಶಿತೋ ಭೃಶಮ್ ।
ಶಿವವಾಗಮೃತಧ್ವಸ್ತಕ್ಲೇಶಪುಂಜಸ್ತಮಬ್ರವೀತ್ ॥

ಅನುವಾದ

ಅವರು ಬಹಳಕಾಲದಿಂದ ವಿಷ್ಣುಭಗವಂತನ ಮಾಯೆಯಿಂದ ಅಲೆಯುತ್ತಾ, ಬಹಳ ದಣಿದಿದ್ದರು. ಭಗವಾನ್ ಶಿವನ ಶ್ರೇಯಸ್ಕರ ಅಮೃತಮಯ ವಾಣಿಯನ್ನು ಪಾನಮಾಡಿ ಅವರ ಎಲ್ಲ ಕ್ಲೇಶಗಳು ಕಳೆದುಹೋದುವು. ಅವರು ಭಗವಾನ್ ಶಂಕರನಲ್ಲಿ ಇಂತೆಂದರು. ॥27॥

(ಶ್ಲೋಕ - 28)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಅಹೋ ಈಶ್ವರಲೀಲೇಯಂ ದುರ್ವಿಭಾವ್ಯಾ ಶರೀರಿಣಾಮ್ ।
ಯನ್ನ ಮಂತೀಶಿತವ್ಯಾನಿ ಸ್ತುವಂತಿ ಜಗದೀಶ್ವರಾಃ ॥

ಅನುವಾದ

ಮಾರ್ಕಂಡೇಯರು ಹೇಳಿದರು — ಸ್ವಾಮಿ! ನಿಜ ವಾಗಿಯೂ ಸರ್ವಶಕ್ತನಾದ ಭಗವಂತನ ಲೀಲೆಗಳು ಎಲ್ಲ ಪ್ರಾಣಿಗಳ ಅರಿವಿಗೆ ಬರುವಂತಹುದಲ್ಲ. ಈ ಸಮಸ್ತ ಜಗತ್ತಿನ ಸ್ವಾಮಿಗಳಾಗಿದ್ದರೂ, ತಮ್ಮ ಅಧೀನದಲ್ಲಿರುವ ನಮ್ಮಂತಹ ಜೀವರನ್ನು ತಾವುಗಳು ವಂದಿಸಿ, ಸ್ತುತಿಸುತ್ತಿರುವಿರಲ್ಲ! ॥28॥

(ಶ್ಲೋಕ - 29)

ಮೂಲಮ್

ಧರ್ಮಂ ಗ್ರಾಹಯಿತುಂ ಪ್ರಾಯಃ ಪ್ರವಕ್ತಾರಶ್ಚ ದೇಹಿನಾಮ್ ।
ಆಚರಂತ್ಯನುಮೋದಂತೇ ಕ್ರಿಯಮಾಣಂ ಸ್ತುವಂತಿ ಚ ॥

ಅನುವಾದ

ಧರ್ಮಪ್ರವಚನಕಾರರು ಪ್ರಾಯಶಃ ಪ್ರಾಣಿಗಳಿಗೆ ಧರ್ಮದ ರಹಸ್ಯವನ್ನು ಮತ್ತು ಸ್ವರೂಪವನ್ನು ತಿಳಿಸಲಿಕ್ಕಾಗಿಯೇ ಅದನ್ನು ಆಚರಿಸಿ, ಅನುಮೋದಿಸುತ್ತಾರೆ. ಯಾರಾದರೂ ಧರ್ಮವನ್ನು ಆಚರಿಸುತ್ತಿದ್ದರೆ ಅವನನ್ನು ಪ್ರಶಂಸೆ ಮಾಡುತ್ತಾರೆ. ॥29॥

(ಶ್ಲೋಕ - 30)

ಮೂಲಮ್

ನೈತಾವತಾ ಭಗವತಃ ಸ್ವಮಾಯಾಮಯವೃತ್ತಿಭಿಃ ।
ನ ದುಷ್ಯೇತಾನುಭಾವಸ್ತೈರ್ಮಾಯಿನಃ ಕುಹಕಂ ಯಥಾ ॥

ಅನುವಾದ

ಇಂದ್ರ ಜಾಲಿಕನು ಅನೇಕ ಆಟಗಳನ್ನು ಜನರಿಗೆ ತೋರಿಸುತ್ತಾನೆ ಆದರೆ ಆ ಆಟಗಳಿಂದ ಅವನ ಪ್ರಭಾವದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಹಾಗೆಯೇ ನೀವು ನಿಮ್ಮ ಸ್ವಜನ ಮೋಹಿನೀ ಮಾಯೆಯ ವೃತ್ತಿಗಳನ್ನು ಸ್ವೀಕರಿಸಿ ಯಾರನ್ನಾದರೂ ವಂದಿಸಿ, ಸ್ತುತಿಸಿದರೆ ನಿಮ್ಮ ಮಹಿಮೆಯಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. ॥30॥

(ಶ್ಲೋಕ - 31)

ಮೂಲಮ್

ಸೃಷ್ಟ್ವೇದಂ ಮನಸಾ ವಿಶ್ವಮಾತ್ಮನಾನುಪ್ರವಿಶ್ಯ ಯಃ ।
ಗುಣೈಃ ಕುರ್ವದ್ಭಿರಾಭಾತಿ ಕರ್ತೇವ ಸ್ವಪ್ನದೃಗ್ಯಥಾ ॥

ಅನುವಾದ

ತಾವು ಸ್ವಪ್ನದೃಷ್ಟಾನಂತೆ ತಮ್ಮ ಮನಸ್ಸಿನಿಂದಲೇ ಸಮಸ್ತ ವಿಶ್ವವನ್ನು ಸೃಷ್ಟಿಮಾಡಿರುವಿರಿ. ಅದರಲ್ಲಿ ಸ್ವತಃ ಪ್ರವೇಶಿಸಿ ಕರ್ತಾ ಅಲ್ಲದಿದ್ದರೂ ಕರ್ಮಮಾಡುವವರ ಗುಣಗಳ ಮೂಲಕ ಕರ್ತೃವಿನಂತೆ ಕಂಡುಬರುವಿರಿ. ॥31॥

(ಶ್ಲೋಕ - 32)

ಮೂಲಮ್

ತಸ್ಮೈ ನಮೋ ಭಗವತೇ ತ್ರಿಗುಣಾಯ ಗುಣಾತ್ಮನೇ ।
ಕೇವಲಾಯಾದ್ವಿತೀಯಾಯ ಗುರವೇ ಬ್ರಹ್ಮಮೂರ್ತಯೇ ॥

ಅನುವಾದ

ಭಗವಂತನೇ! ನೀನು ತ್ರಿಗುಣ ಸ್ವರೂಪನಾಗಿದ್ದರೂ ಅವುಗಳಿಂದ ಅತೀತನಾಗಿದ್ದು ಅವುಗಳ ಆತ್ಮರೂಪದಿಂದ ಸ್ಥಿತನಾಗಿರುವೆ. ನೀನೇ ಸಮಸ್ತ ಜ್ಞಾನದ ಮೂಲನೂ, ನಿರಂಜನನೂ, ಅದ್ವೀತಿಯನೂ, ಬ್ರಹ್ಮಸ್ವರೂಪನು ಆಗಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥32॥

(ಶ್ಲೋಕ - 33)

ಮೂಲಮ್

ಕಂ ವೃಣೇ ನು ಪರಂ ಭೂಮನ್ವರಂ ತ್ವದ್ವರದರ್ಶನಾತ್ ।
ಯದ್ದರ್ಶನಾತ್ಪೂರ್ಣಕಾಮಃ ಸತ್ಯಕಾಮಃ ಪುಮಾನ್ಭವೇತ್ ॥

ಅನುವಾದ

ಅನಂತನೇ! ನಿನ್ನ ಶ್ರೇಷ್ಠವಾದ ದರ್ಶನಕ್ಕಿಂತ ಮಿಗಿಲಾದ ವರದಾನವನ್ನು ಬೇಡಿಕೊಳ್ಳುವ ವಸ್ತು ಯಾವುದಿದೆ? ಮನುಷ್ಯನು ನಿನ್ನ ದರ್ಶನದಿಂದಲೇ ಪೂರ್ಣಕಾಮನೂ ಮತ್ತು ಸತ್ಯ ಸಂಕಲ್ಪನೂ ಆಗಿಹೋಗುವನು. ॥33॥

(ಶ್ಲೋಕ - 34)

ಮೂಲಮ್

ವರಮೇಕಂ ವೃಣೇಥಾಪಿ ಪೂರ್ಣಾತ್ಕಾಮಾಭಿವರ್ಷಣಾತ್ ।
ಭಗವತ್ಯಚ್ಯುತಾಂ ಭಕ್ತಿಂ ತತ್ಪರೇಷು ತಥಾ ತ್ವಯಿ ॥

ಅನುವಾದ

ನೀನು ಸ್ವತಃ ಪರಿಪೂರ್ಣನಾಗಿರುವೆ. ನಿನ್ನ ಭಕ್ತರ ಸಮಸ್ತ ಕಾಮನೆಗಳನ್ನು ಪೂರ್ಣಗೊಳಿಸುವವನಾಗಿರುವೆ. ಅದಕ್ಕಾಗಿ ನಾನು ನಿನ್ನ ದರ್ಶನಪಡೆದಿದ್ದರೂ ಒಂದು ವರವನ್ನು ಕೇಳುವೆನು. ಭಗವಂತನಲ್ಲಿ, ಅವನ ಶರಣಾಗತ ಭಕ್ತರಲ್ಲಿ ಹಾಗೂ ನಿನ್ನಲ್ಲಿ ನನಗೆ ಅವಿಚಲವಾದ ಭಕ್ತಿಯು ಸದಾಕಾಲ ಇದ್ದುಕೊಂಡಿರಲಿ, ಇಷ್ಟೇ ಸಾಕು. ॥34॥

(ಶ್ಲೋಕ - 35)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯರ್ಚಿತೋಭಿಷ್ಟುತಶ್ಚ ಮುನಿನಾ ಸೂಕ್ತಯಾ ಗಿರಾ ।
ತಮಾಹ ಭಗವಾನ್ ಶರ್ವಃ ಶರ್ವಯಾ ಚಾಭಿನಂದಿತಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಮಾರ್ಕಂಡೇಯ ಮುನಿಗಳು ಸುಮಧುರ ವಾಣಿಯಿಂದ ಹೀಗೆ ಭಗವಾನ್ ಶಂಕರನ ಸ್ತುತಿ-ಪೂಜೆ ಮಾಡಿದಾಗ ಶಿವನು ಭಗವತಿ ಪಾರ್ವತಿಯ ಪ್ರೇರಣೆಯಿಂದ ಹೀಗೆಂದನು - ॥35॥

(ಶ್ಲೋಕ - 36)

ಮೂಲಮ್

ಕಾಮೋ ಮಹರ್ಷೇ ಸರ್ವೋಯಂ ಭಕ್ತಿಮಾಂಸ್ತ್ವಮಧೋಕ್ಷಜೇ ।
ಆಕಲ್ಪಾಂತಾದ್ಯಶಃ ಪುಣ್ಯಮಜರಾಮರತಾ ತಥಾ ॥

ಅನುವಾದ

ಮಹರ್ಷಿಗಳೇ! ನಿಮ್ಮ ಎಲ್ಲ ಕಾಮನೆಗಳು ಪೂರ್ಣವಾಗಲೀ. ಇಂದ್ರಿಯಾತೀತ ಪರಮಾತ್ಮನಲ್ಲಿ ನಿನಗೆ ಅನನ್ಯ ಭಕ್ತಿಯು ಸದಾಕಾಲ ಇದ್ದುಕೊಂಡಿರಲಿ. ಕಲ್ಪದವರೆಗೆ ನಿನ್ನ ಪವಿತ್ರಕೀರ್ತಿಯು ಹರಡಿಕೊಂಡು, ನೀನು ಅಜರ-ಅಮರನಾಗಿಹೋಗು. ॥36॥

(ಶ್ಲೋಕ - 37)

ಮೂಲಮ್

ಜ್ಞಾನಂ ತ್ರೈಕಾಲಿಕಂ ಬ್ರಹ್ಮನ್ ವಿಜ್ಞಾನಂ ಚ ವಿರಕ್ತಿಮತ್ ।
ಬ್ರಹ್ಮವರ್ಚಸ್ವಿನೋ ಭೂಯಾತ್ಪುರಾಣಾಚಾರ್ಯತಾಸ್ತು ತೇ ॥

ಅನುವಾದ

ಬ್ರಾಹ್ಮಣಶ್ರೇಷ್ಠನೇ! ನಿನ್ನ ಬ್ರಹ್ಮತೇಜವು ಅಕ್ಷುಣ್ಣವಾಗಿರಲಿ. ನಿನಗೆ ಭೂತ, ಭವಿಷ್ಯ, ವರ್ತಮಾನಗಳೆಂಬ ಸರ್ವಕಾಲಗಳ ಜ್ಞಾನವೂ ಉಂಟಾಗಲಿ, ವೈರಾಗ್ಯದಿಂದ ಕೂಡಿದ ಸ್ವರೂಪಸ್ಥಿತಿಯು ಉಂಟಾಗಲಿ. ನಿನಗೆ ಪುರಾಣದ ಆಚಾರ್ಯತ್ವ ಪದವಿಯು ದೊರೆಯಲಿ. ॥37॥

(ಶ್ಲೋಕ - 38)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಏವಂ ವರಾನ್ ಸ ಮುನಯೇ ದತ್ತ್ವಾಗಾತ್ಯಕ್ಷ ಈಶ್ವರಃ ।
ದೇವ್ಯೈ ತತ್ಕರ್ಮ ಕಥಯನ್ನನುಭೂತಂ ಪುರಾಮುನಾ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕರೇ! ಹೀಗೆ ಮುಕ್ಕಣ್ಣನಾದ ಭಗವಾನ್ ಶಂಕರನು ಮಾರ್ಕಂಡೇಯ ಮುನಿಗೆ ವರವನ್ನು ಕೊಟ್ಟು, ಭಗವತಿಪಾರ್ವತಿಗೆ ಮಾರ್ಕಂಡೇಯ ಮುನಿಯ ತಪಸ್ಸು, ಅವರ ಪ್ರಳಯ ಸಂಬಂಧಿ ಅನುಭವಗಳನ್ನು ವರ್ಣಿಸುತ್ತಾ ಅಲ್ಲಿಂದ ಹೊರಟು ಹೋದನು. ॥38॥

(ಶ್ಲೋಕ - 39)

ಮೂಲಮ್

ಸೋಪ್ಯವಾಪ್ತಮಹಾಯೋಗಮಹಿಮಾ ಭಾರ್ಗವೋತ್ತಮಃ ।
ವಿಚರತ್ಯಧುನಾಪ್ಯದ್ಧಾ ಹರಾವೇಕಾಂತತಾಂ ಗತಃ ॥

ಅನುವಾದ

ಭೃಗುವಂಶ ಶಿರೋಮಣಿ ಮಾರ್ಕಂಡೇಯ ಮುನಿಗಳಿಗೆ ಅವರ ಮಹಾಯೋಗದ ಪರಮ ಫಲವು ಪ್ರಾಪ್ತವಾಗಿತ್ತು. ಅವರು ಭಗವಂತನ ಅನನ್ಯ ಪ್ರೇಮಿಗಳಾದರು. ಈಗಲೂ ಅವರು ಭಕ್ತಿಭಾವ ತುಂಬಿದ ಹೃದಯದಿಂದ ಭೂಮಿಯಲ್ಲಿ ಸಂಚರಿಸುತ್ತಿರುವರು. ॥39॥

(ಶ್ಲೋಕ - 40)

ಮೂಲಮ್

ಅನುವರ್ಣಿತಮೇತತ್ತೇ ಮಾರ್ಕಂಡೇಯಸ್ಯ ಧೀಮತಃ ।
ಅನುಭೂತಂ ಭಗವತೋ ಮಾಯಾವೈಭವಮದ್ಭುತಮ್ ॥

ಅನುವಾದ

ಪರಮ ಜ್ಞಾನಸಂಪನ್ನ ಮಾರ್ಕಂಡೇಯ ಮುನಿಯು ಭಗವಂತನ ಯೋಗಮಾಯೆಯ ಅದ್ಭುತ ಲೀಲೆಯನ್ನು ಹೇಗೆ ಅನುಭವಿಸಿದ್ದರು? ಎಂಬುದನ್ನು ನಾನು ನಿಮಗೆಲ್ಲ ತಿಳಿಸಿರುವೆನು. ॥40॥

(ಶ್ಲೋಕ - 41)

ಮೂಲಮ್

ಏತತ್ ಕೇಚಿದವಿದ್ವಾಂಸೋ ಮಾಯಾಸಂಸೃತಿಮಾತ್ಮನಃ ।
ಅನಾದ್ಯಾವರ್ತಿತಂ ನೃಣಾಂ ಕಾದಾಚಿತ್ಕಂ ಪ್ರಚಕ್ಷತೇ ॥

ಅನುವಾದ

ಶೌನಕರೇ! ಇದಾದರೋ ಮಾರ್ಕಂಡೇಯರು ಅನೇಕ ಕಲ್ಪಗಳ ಸೃಷ್ಟಿ ಪ್ರಳಯಗಳ ಅನುಭವವನ್ನು ಭಗವಂತನ ಮಾಯೆಯ ವೈಭವವೇ ಆಗಿತ್ತು. ತಾತ್ಕಾಲಿಕವಾಗಿತ್ತು ಮತ್ತು ಅವರಿಗಾಗಿಯೇ ಇತ್ತು. ಸರ್ವ ಸಾಧಾರಣರಿಗಾಗಿ ಅಲ್ಲ. ಕೆಲವರು ಈ ಮಾಯೆಯ ರಚನೆಯನ್ನು ಅರಿಯದೆ ಅನಾದಿ ಕಾಲದಿಂದ ಆಗಾಗ ಆಗುವಂತಹ ಸೃಷ್ಟಿ-ಪ್ರಳಯಗಳೇ ಇವು ಎಂದು ಹೇಳುತ್ತಾರೆ. (ಅದಕ್ಕಾಗಿ ನೀವುಗಳು ಇದೇ ಕಲ್ಪದ ನಮ್ಮ ಪೂರ್ವಜರಾದ ಮಾರ್ಕಂಡೇಯರ ಆಯುಸ್ಸು ಇಷ್ಟು ದೀರ್ಘವಾಗಿ ಹೇಗಾಯಿತೆಂದು ಶಂಕೆ ಪಡಬಾರದು) ॥41॥

(ಶ್ಲೋಕ - 42)

ಮೂಲಮ್

ಯ ಏವಮೇತದ್ ಭೃಗುವರ್ಯ ವರ್ಣಿತಂ
ರಥಾಂಗಪಾಣೇರನುಭಾವಭಾವಿತಮ್ ।
ಸಂಶ್ರಾವಯೇತ್ ಸಂಶೃಣುಯಾದು ತಾವುಭೌ
ತಯೋರ್ನ ಕರ್ಮಾಶಯಸಂಸೃತಿರ್ಭವೇತ್ ॥

ಅನುವಾದ

ಭೃಗುವಂಶ ಶಿರೋಮಣಿಗಳೇ! ನಾನು ನಿಮಗೆ ಹೇಳಿದ ಮಾರ್ಕಂಡೇಯರ ಚರಿತ್ರೆಯು ಭಗವಾನ್ ಚಕ್ರಪಾಣಿಯ ಪ್ರಭಾವ-ಮಹಿಮೆಗಳಿಂದ ತುಂಬಿ ತುಳುತ್ತಿದೆ. ಇದನ್ನು ಶ್ರವಣ-ಕೀರ್ತನೆ ಮಾಡುವವರಿಬ್ಬರೂ ಕರ್ಮ ವಾಸನೆಗಳ ಕಾರಣದಿಂದ ಉಂಟಾಗುವ ಜನ್ಮ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದುವರು. ॥42॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ದಶಮೋಽಧ್ಯಾಯಃ ॥10॥