೦೯

[ಒಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಮಾರ್ಕಂಡೇಯರು ಭಗವಂತನ ಮಾಯೆಯನ್ನು ದರ್ಶಿಸಿದುದು

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಸಂಸ್ತುತೋ ಭಗವಾನಿತ್ಥಂ ಮಾರ್ಕಂಡೇಯೇನ ಧೀಮತಾ ।
ನಾರಾಯಣೋ ನರಸಖಃ ಪ್ರೀತ ಆಹ ಭೃಗೂದ್ವಹಮ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಜ್ಞಾನಸಂಪನ್ನರಾದ ಮಾರ್ಕಂಡೇಯರು ಹೀಗೆ ಸ್ತುತಿಸಿದಾಗ ಭಗವಾನ್ ನರ- ನಾರಾಯಣರು ಪ್ರಸನ್ನರಾಗಿ ಮುನಿಗೆ ಹೀಗೆಂದರು. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಭೋ ಭೋ ಬ್ರಹ್ಮರ್ಷಿವರ್ಯಾಸಿ ಸಿದ್ಧ ಆತ್ಮಸಮಾಧಿನಾ ।
ಮಯಿ ಭಕ್ತ್ಯಾನಪಾಯಿನ್ಯಾ ತಪಃಸ್ವಾಧ್ಯಾಯಸಂಯಮೈಃ ॥

ಅನುವಾದ

ಶ್ರೀಭಗವಾನ್ ನಾರಾಯಣನು ಹೇಳಿದನು — ಸನ್ಮಾನ್ಯ ಬ್ರಹ್ಮರ್ಷಿ ಶಿರೋಮಣಿಯೇ! ನೀನು ಚಿತ್ತದ ಏಕಾಗ್ರತೆ, ತಪಸ್ಸು, ಸ್ವಾಧ್ಯಾಯ, ಸಂಯಮ ಮತ್ತು ನನ್ನ ಅನನ್ಯ ಭಕ್ತಿಯಿಂದ ಸಿದ್ಧನೆನಿಸಿರುವೆ. ॥2॥

(ಶ್ಲೋಕ - 3)

ಮೂಲಮ್

ವಯಂ ತೇ ಪರಿತುಷ್ಟಾಃ ಸ್ಮ ತ್ವದ್ಬೃಹದ್ವ್ರತಚರ್ಯಯಾ ।
ವರಂ ಪ್ರತೀಚ್ಛ ಭದ್ರಂ ತೇ ವರದೇಶಾದಭೀಪ್ಸಿತಮ್ ॥

ಅನುವಾದ

ನಿನ್ನ ಈ ಆಜೀವನ ಬ್ರಹ್ಮಚರ್ಯೆನಿಷ್ಠೆಯನ್ನು ನೋಡಿ ನಾವು ನಿನ್ನ ಮೇಲೆ ಬಹಳ ಪ್ರಸನ್ನರಾಗಿರುವೆವು. ನಿನಗೆ ಮಂಗಳವಾಗಲಿ! ಸಮಸ್ತ ವರ ಕೊಡುವವರಿಗೆಲ್ಲ ಸ್ವಾಮಿಯಾದ ನಮ್ಮಿಂದ ನಿನಗೆ ಅಭೀಷ್ಟವಾದ ವರವನ್ನು ಕೇಳಿಕೊ. ॥3॥

(ಶ್ಲೋಕ - 4)

ಮೂಲಮ್ (ವಾಚನಮ್)

ಋಷಿರುವಾಚ

ಮೂಲಮ್

ಜಿತಂ ತೇ ದೇವದೇವೇಶ ಪ್ರಪನ್ನಾರ್ತಿಹರಾಚ್ಯುತ ।
ವರೇಣೈತಾವತಾಲಂ ನೋ ಯದ್ಭವಾನ್ಸಮದೃಶ್ಯತ ॥

ಅನುವಾದ

ಮಾರ್ಕಂಡೇಯ ಮುನಿಗಳು ಹೇಳಿದರು — ದೇವ ದೇವ! ಶರಣಾಗತ ಭಯಹಾರಿಯಾದ ಅಚ್ಯುತನೇ! ನಿನಗೆ ಜಯವಾಗಲಿ, ಜಯವಾಗಲಿ. ನೀನು ಕೃಪೆಗೈದು ನಿನ್ನ ಮನೋಹರ ಸ್ವರೂಪದ ದರ್ಶನ ಕೊಟ್ಟಿರುವೆಯಲ್ಲ, ಇದೇ ವರವು ನನಗೆ ಸಾಕು. ॥4॥

(ಶ್ಲೋಕ - 5)

ಮೂಲಮ್

ಗೃಹೀತ್ವಾಜಾದಯೋ ಯಸ್ಯ ಶ್ರೀಮತ್ಪಾದಾಬ್ಜದರ್ಶನಮ್ ।
ಮನಸಾ ಯೋಗಪಕ್ವೇನ ಸ ಭವಾನ್ ಮೇಕ್ಷಗೋಚರಃ ॥

ಅನುವಾದ

ಬ್ರಹ್ಮರುದ್ರರೇ ಮೊದಲಾದ ಮಹಾದೇವತೆಗಳು ಯೋಗಸಾಧನೆಯಿಂದ ಏಕಾಗ್ರವಾದ ಮನಸ್ಸಿನಿಂದ ನಿನ್ನ ಪರಮಸುಂದರ ಶ್ರೀಚರಣಾರವಿಂದಗಳನ್ನು ದರ್ಶನ ಪಡೆದು ಕೃತಾರ್ಥರಾಗುವರಲ್ಲ! ॥5॥

(ಶ್ಲೋಕ - 6)

ಮೂಲಮ್

ಅಥಾಪ್ಯಂಬುಜಪತ್ರಾಕ್ಷ ಪುಣ್ಯಶ್ಲೋಕಶಿಖಾಮಣೇ ।
ದ್ರಕ್ಷ್ಯೇ ಮಾಯಾಂ ಯಯಾ ಲೋಕಃ ಸಪಾಲೋ ವೇದ ಸದ್ಭಿದಾಮ್ ॥

ಅನುವಾದ

ಪುಣ್ಯಶ್ಲೋಕ ಶಿರೋಮಣಿಯೇ! ಪುಂಡರೀಕಾಕ್ಷನೇ! ಹೀಗಿದ್ದರೂ ನಿನ್ನ ಆಜ್ಞೆಯಂತೆ ನಾನು ವರವನ್ನು ಬೇಡುತ್ತೇನೆ. ಯಾವುದರಿಂದ ಮೋಹಿತರಾಗಿ ಎಲ್ಲ ಲೋಕ ಪಾಲರು ಅದ್ವಿತೀಯ ಬ್ರಹ್ಮನಲ್ಲಿ ಅನೇಕ ಪ್ರಕಾರದ ಭೇದ-ವಿಭೇದಗಳನ್ನು ನೋಡುತ್ತಾರೋ ಅಂತಹ ನಿನ್ನ ವೈಷ್ಣವೀ ಮಾಯೆಯನ್ನು ನೋಡಬೇಕೆಂದು ಬಯಸುತ್ತಿದ್ದೇನೆ. ॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತೀಡಿತೋರ್ಚಿತಃ ಕಾಮಮೃಷಿಣಾ ಭಗವಾನ್ಮುನೇ ।
ತಥೇತಿ ಸ ಸ್ಮಯನ್ಪ್ರಾಗಾದ್ಬದರ್ಯಾಶ್ರಮಮೀಶ್ವರಃ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ಮಾರ್ಕಂಡೇಯರು ಈ ಪ್ರಕಾರವಾಗಿ ಭಗವಾನ್ ನರ-ನಾರಾಯಣರನ್ನು ಸ್ತುತಿಸಿ ಪೂಜಿಸಿ ಅವರ ಇಚ್ಛೆಗನುಸಾರವಾದ ವರವನ್ನು ಕೇಳಿದಾಗ, ಅವರು ಮುಗುಳ್ಳಕ್ಕು - ‘ಸರಿ, ಹಾಗೆಯೇ ಆಗಲಿ!’ ಎಂದು ಹೇಳಿ ತಮ್ಮ ಬದರಿಕಾಶ್ರಮಕ್ಕೆ ಹೊರಟು ಹೋದರು. ॥7॥

(ಶ್ಲೋಕ - 8)

ಮೂಲಮ್

ತಮೇವ ಚಿಂತಯನ್ನರ್ಥಮೃಷಿಃ ಸ್ವಾಶ್ರಮ ಏ ಸಃ ।
ವಸನ್ನಗ್ನ್ಯರ್ಕಸೋಮಾಂಬುಭೂವಾಯುವಿಯದಾತ್ಮಸು ॥

(ಶ್ಲೋಕ - 9)

ಮೂಲಮ್

ಧ್ಯಾಯನ್ಸರ್ವತ್ರ ಚ ಹರಿಂ ಭಾವದ್ರವ್ಯೈರಪೂಜಯತ್ ।
ಕ್ವಚಿತ್ ಪೂಜಾಂ ವಿಸಸ್ಮಾರ ಪ್ರೇಮಪ್ರಸರಸಂಪ್ಲುತಃ ॥

ಅನುವಾದ

ಮಾರ್ಕಂಡೇಯರು ತಮ್ಮ ಆಶ್ರಮದಲ್ಲೇ ಇದ್ದುಕೊಂಡು ‘ನನಗೆ ಮಾಯೆಯ ದರ್ಶನ ಎಂದಾಗುವುದು?’ ಎಂದು ನಿರಂತರವಾಗಿ ಚಿಂತಿಸುತ್ತಿದ್ದರು. ಅವರು ಅಗ್ನಿ, ಸೂರ್ಯ, ಚಂದ್ರ, ಜಲ, ಪೃಥಿವಿ, ವಾಯು, ಆಕಾಶ, ಅಂತಃಕರಣದಲ್ಲಿ ಹಾಗೂ ಸರ್ವತ್ರ ಭಗವಂತನನ್ನೇ ದರ್ಶಿಸುತ್ತಾ ಮಾನಸ ಪೂಜೆಯನ್ನು ಮಾಡುತ್ತಿದ್ದರು. ಕೆಲವೊಮ್ಮೆ ಪ್ರೇಮಪ್ರವಾಹದಲ್ಲಿ ಮುಳುಗಿ ಈಗ ಎಲ್ಲಿ ಹೇಗೆ ಭಗವಂತನನ್ನು ಪೂಜಿಸಲಿ ಎಂಬುದನ್ನು ಮರೆತುಬಿಡುತ್ತಿದ್ದರು. ॥8-9॥

(ಶ್ಲೋಕ - 10)

ಮೂಲಮ್

ತಸ್ಯೈಕದಾ ಭೃಗುಶ್ರೇಷ್ಠ ಪುಷ್ಪಭದ್ರಾತಟೇ ಮುನೇಃ ।
ಉಪಾಸೀನಸ್ಯ ಸಂಧ್ಯಾಯಾಂ ಬ್ರಹ್ಮನ್ವಾಯುರಭೂನ್ಮಹಾನ್ ॥

ಅನುವಾದ

ಎಲೈ ಭೃಗುಶ್ರೇಷ್ಠನಾದ ಶೌನಕನೇ! ಒಂದು ದಿನ ಸಂಧ್ಯಾ ಸಮಯದಲ್ಲಿ ಪುಷ್ಪಭದ್ರಾನದಿಯ ತೀರದಲ್ಲಿ ಮಾರ್ಕಂಡೇಯ ಮುನಿಗಳು ಭಗವಂತನ ಉಪಾಸನೆಯಲ್ಲಿ ತನ್ಮಯರಾಗಿದ್ದಾಗ ಒಮ್ಮಿಂದೊಮ್ಮೆಗೆ ಭಯಂಕರವಾದ ಚಂಡಮಾರುತ ಬೀಸತೊಡಗಿತು. ॥10॥

(ಶ್ಲೋಕ - 11)

ಮೂಲಮ್

ತಂ ಚಂಡಶಬ್ದಂ ಸಮುದೀರಯಂತಂ
ಬಲಾಹಕಾ ಅನ್ವಭವನ್ಕರಾಲಾಃ ।
ಅಕ್ಷಸ್ಥವಿಷ್ಠಾ ಮುಮುಚುಸ್ತಡಿದ್ಭಿಃ
ಸ್ವನಂತ ಉಚ್ಚೈರಭಿವರ್ಷಧಾರಾಃ ॥

ಅನುವಾದ

ಆಗ ಚಂಡಮಾರುತದಿಂದಾಗಿ ಭೀಕರವಾದ ಶಬ್ದವಾಗುತ್ತಿದ್ದಾಗ ಆಕಾಶದಲ್ಲಿ ಕಾರ್ಮೋಡಗಳು ಕವಿದವು. ಕೋಲ್ಮಿಂಚುಗಳು ಕಾಣಿಸಿಕೊಂಡು ಭಯಂಕರವಾದ ಮೇಘಗರ್ಜನೆಯೊಂದಿಗೆ ರಥದ ನೊಗದಷ್ಟು ದಪ್ಪವಾದ ಜಲಧಾರೆಗಳು ಸುರಿಯತೊಡಗಿದವು.॥11॥

(ಶ್ಲೋಕ - 12)

ಮೂಲಮ್

ತತೋ ವ್ಯದೃಶ್ಯಂತ ಚತುಸ್ಸಮುದ್ರಾಃ
ಸಮಂತತಃ ಕ್ಷ್ಮಾತಲಮಾಗ್ರಸಂತಃ ।
ಸಮೀರವೇಗೋರ್ಮಿಭಿರುಗ್ರನಕ್ರ-
ಮಹಾಭಯಾವರ್ತಗಭೀರಘೋಷಾಃ ॥

ಅನುವಾದ

ಇಷ್ಟೇ ಅಲ್ಲ, ನಾಲ್ಕೂ ಕಡೆಗಳಿಂದ ಭೂಮಿಯನ್ನು ನುಂಗಿಹಾಕುವ ಉಕ್ಕೇರಿದ ಕಡಲುಗಳು ಮಾರ್ಕಂಡೇಯರಿಗೆ ಕಾಣಿಸಿಕೊಂಡವು. ಬಿರುಗಾಳಿಯು ವೇಗದಿಂದ ಸಮುದ್ರದಲ್ಲಿ ದೊಡ್ಡ-ದೊಡ್ಡ ಅಲೆಗಳು ಉದ್ಭವಿಸಿ ಉಬ್ಬಿ ಬರತೊಡಗಿದವು. ಅವುಗಳಲ್ಲಿ ಭೀಕರವಾದ ಮೊಸಳೆಗಳೂ, ಭಯಂಕರವಾದ ಸುಳಿಗಳೂ, ಭೀಕರವಾದ ಭೋರ್ಗರೆತಗಳೂ ಗೋಚರಿಸಿದವು. ॥12॥

(ಶ್ಲೋಕ - 13)

ಮೂಲಮ್

ಅಂತರ್ಬಹಿಶ್ಚಾದ್ಭಿರತಿದ್ಯುಭಿಃ ಖರೈಃ
ಶತಹ್ರದಾಭೀರುಪತಾಪಿತಂ ಜಗತ್ ।
ಚತುರ್ವಿಧಂ ವೀಕ್ಷ್ಯ ಸಹಾತ್ಮನಾ ಮುನಿ-
ರ್ಜಲಾಪ್ಲುತಾಂ ಕ್ಷ್ಮಾಂ ವಿಮನಾಃ ಸಮತ್ರಸತ್ ॥

ಅನುವಾದ

ಆಗ ಒಳಗೆ-ಹೊರಗೆ ಎಲ್ಲೆಡೆ ನೀರೇ ನೀರು ಕಂಡು ಬರುತ್ತಿತ್ತು. ಆ ಜಲರಾಶಿಯಲ್ಲಿ ಪೃಥಿವಿಯೇ ಅಲ್ಲ, ಸ್ವರ್ಗವು ಮುಳುಗಿ ಹೋಗುವಂತೆ ಅನಿಸುತ್ತಿತ್ತು. ಮೇಲಿಂದ ಅತ್ಯಂತ ವೇಗವಾಗಿ ಚಂಡಮಾರುತ ಬೀಸುತ್ತಿದ್ದು, ಗುಡುಗು ಸಿಡಿಲು ಬಡಿಯುತ್ತಿತ್ತು. ಅದರಿಂದ ಸಮಸ್ತ ಜಗತ್ತು ಕಂಗೆಟ್ಟಿತು. ಈ ಜಲ-ಪ್ರಳಯದಿಂದ ಇಡೀ ಪೃಥಿವಿಯು ಮುಳುಗಿಹೋಯಿತು. ಉದ್ಭಿಜ್ಜ, ಸ್ವೇದಜ, ಅಂಡಜ, ಜರಾಯುಜ ಎಂಬ ನಾಲ್ಕು ಪ್ರಕಾರದ ಜೀವಿಗಳು ಹಾಗೂ ಸ್ವತಃ ಅವರೂ ತಳಮಳಗೊಂಡರು. ಮಾರ್ಕಂ ಡೇಯರು ಈ ಭೀಕರ ದೃಶ್ಯವನ್ನು ನೋಡಿ ಅತ್ಯಂತ ಭಯಗೊಂಡರು. ॥13॥

(ಶ್ಲೋಕ - 14)

ಮೂಲಮ್

ತಸ್ಯೈವಮುದ್ವೀಕ್ಷತ ಊರ್ಮಿಭೀಷಣಃ
ಪ್ರಭಂಜನಾಘೂರ್ಣಿತವಾರ್ಮಹಾರ್ಣವಃ ।
ಆಪೂರ್ಯಮಾಣೋ ವರಷದ್ಭಿರಂಬುದೈಃ
ಕ್ಷ್ಮಾಮಪ್ಯಧಾದ್ವೀಪವರ್ಷಾದ್ರಿಭಿಃ ಸಮಮ್ ॥

ಅನುವಾದ

ಅವರ ಇದಿರಿಗೇ ಪ್ರಳಯ ಸಮುದ್ರದಲ್ಲಿ ಭಯಂಕರ ಅಲೆಗಳು ಏಳುತ್ತಿದ್ದವು. ಚಂಡಮಾರುತವು ನೀರನ್ನು ಅಲ್ಲೋಲಕಲ್ಲೋಲ ಮಾಡುತ್ತಿತ್ತು. ಪ್ರಳಯಕಾಲದ ಮೇಘಗಳು ನೀರನ್ನು ಸುರಿಸಿ ಸಮುದ್ರವನ್ನು ತುಂಬುತ್ತಿದ್ದವು. ದ್ವೀಪ, ವರ್ಷ ಮತ್ತು ಪರ್ವತಗಳ ಸಹಿತ ಇಡೀ ಪೃಥಿವಿಯನ್ನು ಸಮುದ್ರವು ಮುಳುಗಿಸಿ ಬಿಟ್ಟಿರುವುದನ್ನು ಅವರು ನೋಡಿದರು. ॥14॥

(ಶ್ಲೋಕ - 15)

ಮೂಲಮ್

ಸಕ್ಷ್ಮಾಂತರಿಕ್ಷಂ ಸದಿವಂ ಸಭಾಗಣಂ
ತ್ರೈಲೋಕ್ಯಮಾಸೀತ್ಸಹ ದಿಗ್ಭಿರಾಪ್ಲುತಮ್ ।
ಸ ಏಕ ಏವೋರ್ವರಿತೋ ಮಹಾಮುನಿ-
ರ್ಬಭ್ರಾಮ ವಿಕ್ಷಿಪ್ಯ ಜಟಾ ಜಡಾಂಧವತ್ ॥

ಅನುವಾದ

ಭೂಮಿ, ಅಂತರಿಕ್ಷ, ಸ್ವರ್ಗ, ಜ್ಯೋತಿರ್ಮಂಡಲ (ಗ್ರಹ, ನಕ್ಷತ್ರ ಗಳೊಂದಿಗೆ) ಮತ್ತು ದಿಕ್ಕುಗಳ ಸಹಿತ ಮೂರು ಲೋಕಗಳೂ ನೀರಿನಲ್ಲಿ ಮುಳುಗಿಹೋದುವು. ಆ ಸಮಯದಲ್ಲಿ ಏಕಮಾತ್ರ ಮಹಾಮುನಿ ಮಾರ್ಕಂಡೇಯರು ಉಳಿದಿದ್ದರು. ಆ ಸಮಯದಲ್ಲಿ ಅವರು ಹುಚ್ಚರಂತಾಗಿ, ಕುರುಡರಂತೆ ಜಟೆಗಳನ್ನು ಕೆದರಿಕೊಂಡು ಅಲ್ಲಿಂದಿಲ್ಲಿಗೆ ಓಡುತ್ತಾ ತನ್ನ ಪ್ರಾಣಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ॥15॥

(ಶ್ಲೋಕ - 16)

ಮೂಲಮ್

ಕ್ಷುತ್ತೃಟ್ಪರೀತೋ ಮಕರೈಸ್ತಿಮಿಂಗಿಲೈ-
ರುಪದ್ರುತೋ ವೀಚಿನಭಸ್ವತಾ ಹತಃ ।
ತಮಸ್ಯಪಾರೇ ಪತಿತೋ ಭ್ರಮನ್ದಿಶೋ
ನ ವೇದ ಖಂ ಗಾಂ ಚ ಪರಿಶ್ರಮೇಷಿತಃ ॥

ಅನುವಾದ

ಹಸಿವು-ಬಾಯಾರಿಕೆಗಳಿಂದ ಕಂಗೆಟ್ಟ ಅವರ ಕಡೆಗೆ ಕೆಲವು ಕಡೆಗಳಿಂದ ಮೊಸಳೆಗಳು, ಕೆಲವು ಕಡೆಗಳಿಂದ ದೊಡ್ಡ-ದೊಡ್ಡ ಮೀನು, ತಿಮಿಂಗಲಗಳು ನುಗ್ಗಿ ಬರುತ್ತಿದ್ದವು. ಕೆಲವು ಕಡೆಗಳಿಂದ ಗಾಳಿಯ ಹೊಡೆತ ಬೀಳುತ್ತಿದ್ದರೆ, ಕೆಲವು ಕಡೆಗಳಿಂದ ನುಗ್ಗಿದ ಅಲೆಗಳ ಏಟುಗಳಿಂದ ಗಾಯಗೊಂಡರು. ಹೀಗೆ ಅಲ್ಲಿ-ಇಲ್ಲಿ ಅಲೆಯುತ್ತಾ ಅವರು ಅಪಾರ ಅಜ್ಞಾನಾಂಧಕಾರದಲ್ಲಿ ಮುಳುಗಿದರು. ಅವರಿಗೆ ಭೂಮ್ಯಾಕಾಶದ ಜ್ಞಾನವೂ ಇರದೇ ಬಳಲಿ ಬೆಂಡಾಗಿ ಎಚ್ಚರದಪ್ಪಿದರು. ॥16॥

(ಶ್ಲೋಕ - 17)

ಮೂಲಮ್

ಕ್ವಚಿದ್ಗತೋ ಮಹಾವರ್ತೇ ತರಲೈಸ್ತಾಡಿತಃ ಕ್ವಚಿತ್ ।
ಯಾದೋಬಿರ್ಭಕ್ಷ್ಯತೇ ಕ್ವಾಪಿ ಸ್ವಯಮನ್ಯೋನ್ಯಘಾತಿಭಿಃ ॥

ಅನುವಾದ

ಅವರು ಕೆಲವೊಮ್ಮೆ ಭಾರೀ ಸುಳಿಯಲ್ಲಿ ಸಿಕ್ಕಿಕೊಂಡರೆ, ಕೆಲವೊಮ್ಮೆ ತರಂಗಗಳ ಏಟಿನಿಂದ ಕಂಗಾಲಾಗುತ್ತಿದ್ದರು. ಕೆಲವೊಮ್ಮೆ ಜಲ ಜಂತುಗಳು ಪರಸ್ಪರ ಕಾದಾಡುತ್ತಿದ್ದಾಗ ಇವರು ಅಕಸ್ಮಾತ್ತಾಗಿ ಅವುಗಳ ನಡುವೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ॥17॥

(ಶ್ಲೋಕ - 18)

ಮೂಲಮ್

ಕ್ವಚಿಚ್ಛೋಕಂ ಕ್ವಚಿನ್ಮೋಹಂ ಕ್ವಚಿದ್ದುಃಖಂ ಸುಖಂ ಭಯಮ್ ।
ಕ್ವಚಿನ್ಮೃತ್ಯುಮವಾಪ್ನೋತಿ ವ್ಯಾಧ್ಯಾದಿಭಿರುತಾರ್ದಿತಃ ॥

ಅನುವಾದ

ಕೆಲವೊಮ್ಮೆ ಶೋಕಗ್ರಸ್ತರಾದರೆ, ಕೆಲವೊಮ್ಮೆ ಮೋಹಗ್ರಸ್ತರಾಗುತ್ತಿದ್ದರು. ಕೆಲವೊಮ್ಮೆ ದುಃಖವೇ ದುಃಖಗಳು ಎದುರಾಗುತ್ತಿದ್ದವು. ಕೆಲವೊಮ್ಮೆ ಸ್ವಲ್ಪವೂ ಸುಖಸಿಗದೆ ಹೋಗುತ್ತಿತ್ತು. ಕೆಲವೊಮ್ಮೆ ಭಯಗೊಂಡು ಸತ್ತಂತಾಗಿ ನಾನಾವಿಧದ ರೋಗ-ರುಜಿನಗಳು ಕಾಡುತ್ತಿದ್ದವು. ॥18॥

(ಶ್ಲೋಕ - 19)

ಮೂಲಮ್

ಅಯುತಾಯುತವರ್ಷಾಣಾಂ ಸಹಸ್ರಾಣಿ ಶತಾನಿ ಚ ।
ವ್ಯತೀಯುರ್ಭ್ರಮತಸ್ತಸ್ಮಿನ್ ವಿಷ್ಣುಮಾಯಾವೃತಾತ್ಮನಃ ॥

ಅನುವಾದ

ಹೀಗೆ ಮಾರ್ಕಂಡೇಯ ಮುನಿಯು ಭಗವಾನ್ ವಿಷ್ಣುವಿನ ಮಾಯೆಯಿಂದ ಮೋಹಿತರಾಗಿದ್ದರು. ಆ ಪ್ರಳಯ ಸಮುದ್ರದಲ್ಲಿ ಅಲೆಯುತ್ತಾ-ಅಲೆಯುತ್ತಾ ನೂರಾರು ಸಾವಿರ, ಲಕ್ಷ, ಕೋಟ್ಯಾಂತರ ವರ್ಷಗಳೇ ಕಳೆದುಹೋದುವು. ॥19॥

(ಶ್ಲೋಕ - 20)

ಮೂಲಮ್

ಸ ಕದಾಚಿದ್ಭ್ರಮನ್ಸ್ತಸ್ಮಿನ್ ಪೃಥಿವ್ಯಾಃ ಕಕುದಿ ದ್ವಿಜಃ ।
ನ್ಯಗ್ರೋಧಪೂತಂ ದದೃಶೇ ಲಪಲ್ಲವಶೋಭಿತಮ್ ॥

ಅನುವಾದ

ಶೌನಕರೇ! ಮಾರ್ಕಂಡೇಯ ಮುನಿಗಳು ಹೀಗೆ ಪ್ರಳಯ ಜಲದಲ್ಲಿ ಬಹಳ ಸಮಯದವರೆಗೆ ಅಲೆಯುತ್ತಲೇ ಇದ್ದರು. ಒಮ್ಮೆ ಅವರಿಗೆ ಭೂಮಂಡಲದ ಒಂದು ದಿಣ್ಣೆಯ ಮೇಲೆ ಹಸಿರಾದ ಎಲೆಗಳಿಂದಲೂ, ಕೆಂಪಾದ ಹಣ್ಣುಗಳಿಂದ ಶೋಭಿಸುತ್ತಿರುವ ಒಂದು ಸಣ್ಣ ಆಲದ ಮರವು ಕಾಣಿಸಿತು. ॥20॥

(ಶ್ಲೋಕ - 21)

ಮೂಲಮ್

ಪ್ರಾಗುತ್ತರಸ್ಯಾಂ ಶಾಖಾಯಾಂ ತಸ್ಯಾಪಿ ದದೃಶೇ ಶಿಶುಮ್ ।
ಶಯಾನಂ ಪರ್ಣಪುಟಕೇ ಗ್ರಸಂತಂ ಪ್ರಭಯಾ ತಮಃ ॥

ಅನುವಾದ

ಆ ಆಲದ ಮರದ ಈಶಾನ್ಯದ ಮೂಲೆಯಲ್ಲಿ ಒಂದು ಕೊಂಬೆಯಲ್ಲಿ ಎಲೆಗಳ ದೊನ್ನೆಯೊಂದರಲ್ಲಿ ಚೆಲುವಾದ ಒಂದು ಹಸುಗೂಸು ಮಲಗಿರುವುದನ್ನು ಅವರು ನೋಡಿದರು. ಆ ಶಿಶುವಿನ ಶರೀರದಿಂದ ಉಜ್ವಲವಾದ ಕಾಂತಿಯು ಹೊರಹೊಮ್ಮುತ್ತಿದ್ದು ಅದರ ಸುತ್ತಲಿನ ಅಂಧಕಾರವು ಮಾಯವಾಗಿತ್ತು. ॥21॥

(ಶ್ಲೋಕ - 22)

ಮೂಲಮ್

ಮಹಾಮರಕತಶ್ಯಾಮಂ ಶ್ರೀಮದ್ವದನಪಂಕಜಮ್ ।
ಕಂಬುಗ್ರೀವಂ ಮಹೋರಸ್ಕಂ ಸುನಾಸಂ ಸುಂದರಭ್ರುವಮ್ ॥

ಅನುವಾದ

ಆ ಶಿಶುವು ಮರಕತ ಮಣಿಯಂತೆ ಶ್ಯಾಮಲವರ್ಣವಾಗಿದ್ದು, ಮುಖಕಮಲದಿಂದ ಸೌಂದರ್ಯಸಂಪತ್ತು ಪಸರಿಸಿತ್ತು. ಶಂಖವನ್ನು ಹೋಲುವ ಸಿರಿಕಂಠ, ವಿಶಾಲವಾದ ವಕ್ಷಃಸ್ಥಳ, ಗಿಳಿಯ ಕೊಕ್ಕಿನಂತೆ ಸುಂದರವಾದ ಮೂಗು, ಮನೋಹರವಾದ ಹುಬ್ಬುಗಳಿಂದ ಕಂಗೊಳಿಸುತ್ತಿತ್ತು. ॥22॥

(ಶ್ಲೋಕ - 23)

ಮೂಲಮ್

ಶ್ವಾಸೈಜದಲಕಾಭಾತಂ ಕಂಬುಶ್ರೀಕರ್ಣದಾಡಿಮಮ್ ।
ವಿದ್ರುಮಾಧರಭಾಸೇಷಚ್ಛೋಣಾಯಿತಸುಧಾಸ್ಮಿತಮ್ ॥

ಅನುವಾದ

ಗುಂಗುರು-ಗುಂಗುರಾದ ಕಪ್ಪಾದ ಕೇಶರಾಶಿಯು ಗಲ್ಲ-ಹಣೆಯ ಮೇಲೆ ನರ್ತಿಸುತ್ತಿದ್ದವು. ಕೆಲವೊಮ್ಮೆ ಉಸಿರಾಟದ ಗಾಳಿಯಿಂದ ಅಲುಗಾಡುತ್ತಿದ್ದವು. ಶಂಖದಂತೆ ತಿರುವುಗಳಿದ್ದ ಕಿವಿಗಳಲ್ಲಿ ದಾಳಿಂಬೆಯ ಕೆಂಪಾದ ಹೂವುಗಳು ಶೋಭಿಸುತ್ತಿದ್ದವು. ಹವಳದಂತಿರುವ ಕೆಂಪಾದ ತುಟಿಗಳ ಕಾಂತಿಯಿಂದ ಅಮೃತದಂತೆ ಬೆಳ್ಳಗಿರುವ ಮುಗುಳ್ನಗು ರಂಗೇರಿತ್ತು. ॥23॥

(ಶ್ಲೋಕ - 24)

ಮೂಲಮ್

ಪದ್ಮಗರ್ಭಾರುಣಾಪಾಂಗಂ ಹೃದ್ಯಹಾಸಾವಲೋಕನಮ್ ।
ಶ್ವಾಸೈಜದ್ವಲಿಸಂವಿಗ್ನನಿಮ್ನನಾಭಿದಲೋದರಮ್ ॥

ಅನುವಾದ

ತಾವರೆಯ ಒಳಭಾಗದಂತೆ ಕೆಂಪಾದ ಕಡೆ ಗಣ್ಣುಗಳು, ಹೃದ್ಯವಾದ ಹುಸಿನಗೆ ಮತ್ತು ನೋಟಗಳು, ಸುಂದರವಾದ ಸುಳಿ ಹೊಕ್ಕಳು, ತ್ರಿವಳಿಗಳಿಂದ ಕೂಡಿದ ಅರಳಿ ಎಲೆಯಂತೆ ಇದ್ದ ತೆಳುವಾದ ಉದರವು ಉಸಿರಾಟದಿಂದ ಅಲಗುತ್ತಿತ್ತು. ॥24॥

(ಶ್ಲೋಕ - 25)

ಮೂಲಮ್

ಚಾರ್ವಙ್ಗುಲಿಭ್ಯಾಂ ಪಾಣಿಭ್ಯಾಮುನ್ನೀಯ ಚರಣಾಂಬುಜಮ್ ।
ಮುಖೇ ನಿಧಾಯ ವಿಪ್ರೇಂದ್ರೋ ಧಯಂತಂ ವೀಕ್ಷ್ಯ ವಿಸ್ಮಿತಃ ॥

ಅನುವಾದ

ಆ ಶಿಶುವು ಕಮನೀಯ ಕೋಮಲವಾದ ಬೆರಳುಗಳಿಂದ ಒಪ್ಪುತ್ತಿದ್ದ ಎರಡೂ ಕರಕಮಲಗಳಿಂದ ಒಂದು ಚರಣವನ್ನು ಎತ್ತಿಹಿಡಿದು ಆ ಕಾಲಿನ ಹೆಬ್ಬೆರಳನ್ನು ಬಾಯಲ್ಲಿಟ್ಟುಕೊಂಡು ಚಪ್ಪರಿಸುತ್ತಿತ್ತು. ಈ ದಿವ್ಯ ದೃಶ್ಯವನ್ನು ಕಂಡು ಮಾರ್ಕಂಡೇಯ ಮುನಿಗಳು ಅಚ್ಚರಿಯಿಂದ ಬೆಕ್ಕಸಬೆರಗಾದರು. ॥25॥

(ಶ್ಲೋಕ - 26)

ಮೂಲಮ್

ತದ್ದರ್ಶನಾದ್ವೀತಪರಿಶ್ರಮೋ ಮುದಾ
ಪ್ರೋತ್ಫುಲ್ಲಹೃತ್ಪದ್ಮವಿಲೋಚನಾಂಬುಜಃ ।
ಪ್ರಹೃಷ್ಟರೋಮಾದ್ಭುತಭಾವಶಂಕಿತಃ
ಪ್ರಷ್ಟುಂ ಪುರಸ್ತಂ ಪ್ರಸಸಾರ ಬಾಲಕಮ್ ॥

ಅನುವಾದ

ಶೌನಕರೇ! ಆ ದಿವ್ಯ ಶಿಶುವನ್ನು ದರ್ಶಿಸುತ್ತಲೇ ಮಾರ್ಕಂಡೇಯನ ಬಳಲಿಕೆಯೆಲ್ಲ ಮಾಯವಾಯಿತು. ಪರಮಾನಂದದಿಂದ ಅವರ ಹೃದಯಕಮಲ ಮತ್ತು ನೇತ್ರಕಮಲಗಳು ಅರಳಿಕೊಂಡವು. ದೇಹವೆಲ್ಲ ರೋಮಾಂಚಿತ ವಾಯಿತು. ಪರಮಾದ್ಭುತವಾದ ಆ ಎಳೆಗೂಸಿನ ಅಮೃತಮಯ ಭಾವವನ್ನು ನೋಡಿ ಅವರ ಮನಸ್ಸಿನಲ್ಲಿ - ‘ಈ ಮಗು ಯಾರು?’ ಎಂಬ ಅನೇಕ ಶಂಕೆಗಳು ಉಂಟಾಗಿ, ಆ ಶಿಶುವಿನ ಬಳಿಯೇ ಕೇಳಿಬಿಡೋಣವೆಂದು ಮುಂದೆ ಸರಿದರು. ॥26॥

(ಶ್ಲೋಕ - 27)

ಮೂಲಮ್

ತಾವಚ್ಛಿಶೋರ್ವೈ ಶ್ವಸಿತೇನ ಭಾರ್ಗವಃ
ಸೋಂತಶ್ಶರೀರಂ ಮಶಕೋ ಯಥಾವಿಶತ್ ।
ತತ್ರಾಪ್ಯದೋ ನ್ಯಸ್ತಮಚಷ್ಟ ಕೃತ್ಸ್ನಶೋ
ಯಥಾ ಪುರಾ ಮುಹ್ಯದತೀವ ವಿಸ್ಮಿತಃ ॥

ಅನುವಾದ

ಮಾರ್ಕಂಡೇಯರು ಇನ್ನೇನು ಅದರ ಸಮೀಪಕ್ಕೆ ತಲುಪುವಷ್ಟರಲ್ಲಿ ಅದರ ಉಸಿರಿನೊಂದಿಗೆ ಮುನಿಯು ಸೊಳ್ಳೆಯಂತೆ ಅದರ ಶರೀರದೊಳಗೆ ಸೆಳೆಯಲ್ಪಟ್ಟರು. ಶಿಶುವಿನ ಹೊಟ್ಟೆಯೊಳಗೆ ಸೇರಿದ ಅವರು ಅಲ್ಲಿ ಪ್ರಳಯಕ್ಕೆ ಮೊದಲಿದ್ದಂತಹ ಸಮಗ್ರ ಸೃಷ್ಟಿಯನ್ನು ನೋಡಿದರು. ಈ ವಿಚಿತ್ರ ದೃಶ್ಯವನ್ನು ನೋಡಿದ ಅವರು ಆಶ್ಚರ್ಯ ಚಕಿತರಾದರು. ಮೋಹವಶದಿಂದ ಯಾವುದನ್ನೂ ಯೋಚಿಸದಾದರು. ॥27॥

(ಶ್ಲೋಕ - 28)

ಮೂಲಮ್

ಖಂ ರೋದಸೀ ಭಗಣಾನದ್ರಿಸಾಗರಾನ್
ದ್ವೀಪಾನ್ ಸವರ್ಷಾನ್ಕಕುಭಃ ಸುರಾಸುರಾನ್ ।
ವನಾನಿ ದೇಶಾನ್ಸರಿತಃ ಪುರಾಕರಾನ್-
ಖೇಟಾನ್ ವ್ರಜಾನಾಶ್ರಮವರ್ಣವೃತ್ತಯಃ ॥

(ಶ್ಲೋಕ - 29)

ಮೂಲಮ್

ಮಹಾಂತಿ ಭೂತಾನ್ಯಥ ಭೌತಿಕಾನ್ಯಸೌ
ಕಾಲಂ ಚ ನಾನಾಯುಗಕಲ್ಪಕಲ್ಪನಮ್ ।
ಯತ್ಕಿಂಚಿದನ್ಯದ್ವ್ಯವಹಾರಕಾರಣಂ
ದದರ್ಶ ವಿಶ್ವಂ ಸದಿವಾವಭಾಸಿತಮ್ ॥

ಅನುವಾದ

ಅವರು ಆ ಶಿಶುವಿನ ಉದರದಲ್ಲಿ ಆಕಾಶ, ಅಂತರಿಕ್ಷ, ಜ್ಯೋತಿಮಂಡಲ, ಪರ್ವತ, ಸಮುದ್ರ, ದ್ವೀಪ, ವರ್ಷ, ದಿಕ್ಕುಗಳು, ದೇವತೆಗಳು, ದೈತ್ಯರು, ವನ, ದೇಶ, ನದಿಗಳು, ನಗರ, ಗಣಿಗಳು, ರೈತರ ಊರುಗಳು, ಗೊಲ್ಲರು ವಾಸಿಸುವ ಕೇರಿಗಳು, ಆಶ್ರಮಗಳು, ವರ್ಣಗಳು, ಅವರ ಆಚಾರ-ವ್ಯವಹಾರ, ಪಂಚಮಹಾಭೂತಗಳು, ಭೂತಗಳಿಂದ ಉಂಟಾದ ಪ್ರಾಣಿಗಳ ಶರೀರಗಳು ಹಾಗೂ ಪದಾರ್ಥಗಳು, ಅನೇಕಯುಗಗಳು, ಕಲ್ಪಗಳ ಭೇದಗಳಿಂದ ಕೂಡಿದ ಕಾಲ ಮುಂತಾದವೆಲ್ಲವನ್ನೂ ನೋಡಿದರು. ಕೇವಲ ಇಷ್ಟೇ ಅಲ್ಲ ; ಯಾವ ದೇಶ, ವಸ್ತು, ಕಾಲಗಳ ಮೂಲಕ ಜಗತ್ತಿನ ವ್ಯವಹಾರಗಳು ನಡೆಯುತ್ತಿವೆಯೋ ಅದೆಲ್ಲವನ್ನೂ ಕಂಡರು. ಹೆಚ್ಚೇನು ಹೇಳಲಿ? ಸಮಸ್ತ ವಿಶ್ವವು ಸತ್ಯವಾಗಿ ಇರುವಂತೆ ಅವರಿಗೆ ಅಲ್ಲಿ ಕಂಡು ಬಂತು. ॥28-29॥

(ಶ್ಲೋಕ - 30)

ಮೂಲಮ್

ಹಿಮಾಲಯಂ ಪುಷ್ಪವಹಾಂ ಚ ತಾಂ ನದೀಂ
ನಿಜಾಶ್ರಮಂ ತತ್ರ ಋಷೀನಪಶ್ಯತ್ ।
ವಿಶ್ವಂ ವಿಪಶ್ಯನ್ ಶ್ವಸಿತಾಚ್ಛಿಶೋರ್ವೈ
ಬಹಿರ್ನಿರಸ್ತೋ ನ್ಯಪತಲ್ಲಯಾಬ್ಧೌ ॥

ಅನುವಾದ

ಹಿಮಾಲಯ ಪರ್ವತ, ಪುಷ್ಪಭದ್ರಾನದಿ, ಅದರ ದಡದಲ್ಲಿರುವ ತನ್ನ ಆಶ್ರಮ ಮತ್ತು ವಾಸಿಸುವ ಋಷಿಗಳನ್ನು ಕೂಡ ಮಾರ್ಕಂಡೇಯರು ಪ್ರತ್ಯಕ್ಷವಾಗಿ ಕಂಡರು. ಹೀಗೆ ಸಮಸ್ತ ವಿಶ್ವವನ್ನು ನೋಡು-ನೋಡುತ್ತಾ ಇರುವಾಗಲೇ ಆ ದಿವ್ಯ ಶಿಶುವಿನ ಶ್ವಾಸದ ಮೂಲಕ ಹೊರಗೆ ಬಂದು ಪುನಃ ಪ್ರಳಯದ ಸಮುದ್ರದಲ್ಲಿ ಬಿದ್ದರು. ॥30॥

(ಶ್ಲೋಕ - 31)

ಮೂಲಮ್

ತಸ್ಮಿನ್ ಪೃಥಿವ್ಯಾಃ ಕಕುದಿ ಪ್ರರೂಢಂ
ವಟಂ ಚ ತತ್ಪರ್ಣಪುಟೇ ಶಯಾನಮ್ ।
ತೋಕಂ ಚ ತತ್ಪ್ರೇಮಸುಧಾಸ್ಮಿತೇನ
ನಿರೀಕ್ಷಿತೋಪಾಂಗನಿರೀಕ್ಷಣೇನ ॥

ಅನುವಾದ

ಮತ್ತೆ ಅವರು ಸಮುದ್ರದ ಮಧ್ಯದ ದಿಣ್ಣೆಯಲ್ಲಿದ್ದ ಅದೇ ಆಲದ ಮರ ಮೊದಲಿದ್ದಂತೆ ಇರುವುದನ್ನು ಹಾಗೂ ಅದರ ಎಲೆಯ ಮೇಲೆ ಮಲಗಿದ್ದ ಶಿಶುವನ್ನು ನೋಡಿದರು. ಅದರ ತುಟಿಗಳಲ್ಲಿ ಪ್ರೇಮಾಮೃತದಿಂದ ತುಂಬಿದ ಮಂದವಾದ ಮುಗುಳ್ನಗೆ ಇದ್ದು, ತನ್ನ ಪ್ರೇಮಪೂರ್ಣ ನೋಟದಿಂದ ಅದು ಮಾರ್ಕಂಡೇಯನ ಕಡೆಗೆ ನೋಡುತ್ತಿತ್ತು. ॥31॥

(ಶ್ಲೋಕ - 32)

ಮೂಲಮ್

ಅಥ ತಂ ಬಾಲಕಂ ವೀಕ್ಷ್ಯ ನೇತ್ರಾಭ್ಯಾಂ ಧಿಷ್ಠಿತಂ ಹೃದಿ ।
ಅಭ್ಯಯಾದತಿಸಂಕ್ಲಿಷ್ಟಃ ಪರಿಷ್ವಕ್ತುಮಧೋಕ್ಷಜಮ್ ॥

ಅನುವಾದ

ಈಗ ಮಾರ್ಕಂಡೇಯ ಮುನಿಯು ಶಿಶುರೂಪದಿಂದ ಕ್ರೀಡಿಸುತ್ತಿದ್ದ ಕಣ್ಣುಗಳ ಮೂಲಕ ಮೊದಲೇ ಹೃದಯದಲ್ಲಿ ವಿರಾಜಮಾನನಾಗಿದ್ದ ಇಂದ್ರಿಯಾತೀತನಾದ ಭಗವಂತನನ್ನು ಆಲಿಂಗಿಸಿಕೊಳ್ಳಲು ಅತ್ಯಂತ ಪರಿಶ್ರಮದಿಂದ ಮುಂದಕ್ಕೆ ಸರಿದರು. ॥32॥

(ಶ್ಲೋಕ - 33)

ಮೂಲಮ್

ತಾವತ್ ಸ ಭಗವಾನ್ ಸಾಕ್ಷಾತ್ ಯೋಗಾಧೀಶೋ ಗುಹಾಶಯಃ ।
ಅಂತರ್ದಧ ಋಷೇಃ ಸದ್ಯೋ ಯಥೇಹಾನೀಶನಿರ್ಮಿತಾ ॥

ಅನುವಾದ

ಆದರೆ ಶೌನಕರೇ! ಭಗವಂತನು ಕೇವಲ ಯೋಗಿಗಳಿಗೇ ಅಲ್ಲ, ಸಾಕ್ಷಾತ್ ಯೋಗಕ್ಕೂ, ಸ್ವಾಮಿ ಮತ್ತು ಎಲ್ಲರ ಹೃದಯಗಳಲ್ಲಿ ವಾಸವಾಗಿರುವನು. ಈಗ ಮಾರ್ಕಂಡೇಯ ಮುನಿಗಳು ಅವನ ಬಳಿಗೆ ತಲುಪುವಷ್ಟರಲ್ಲಿ ಕೂಡಲೇ ಅಂತರ್ಧಾನ ಹೊಂದಿದನು. ಮಹರ್ಷಿಗಳ ಉದ್ದೇಶವು ದುರದೃಷ್ಟಶಾಲಿಯಾದ ದರಿದ್ರನ ಪ್ರಯತ್ನದಂತೆ ವ್ಯರ್ಥವಾಗಿ ಬಿಟ್ಟಿತು. ॥33॥

(ಶ್ಲೋಕ - 34)

ಮೂಲಮ್

ತಮನ್ವಥ ವಟೋ ಬ್ರಹ್ಮನ್ ಸಲಿಲಂ ಲೋಕಸಂಪ್ಲವಃ ।
ತಿರೋಧಾಯಿ ಕ್ಷಣಾದಸ್ಯ ಸ್ವಾಶ್ರಮೇ ಪೂರ್ವವತ್ಸ್ಥಿತಃ ॥

ಅನುವಾದ

ಶೌನಕರೇ! ಆ ಶಿಶುವು ಅಂತರ್ಧಾನವಾಗುತ್ತಲೇ ಆ ಆಲದಮರ ಹಾಗೂ ಪ್ರಳಯದ ದೃಶ್ಯ, ನೀರು ಅದೃಶ್ಯವಾಗಿ ಬಿಟ್ಟಿತು. ಮಾರ್ಕಂಡೇಯ ತಾನು ಮೊದಲಿನಂತೆ ತನ್ನ ಆಶ್ರಮದಲ್ಲಿ ಕುಳಿತಿರುವಂತೆ ಗೋಚರಿಸಿತು. ॥34॥

ಒಂಬತ್ತನೆಯ ಅಧ್ಯಾಯವು ಮುಗಿಯಿತು. ॥9॥

ಅನುವಾದ (ಸಮಾಪ್ತಿಃ)

ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಮಾಯಾದರ್ಶನಂ ನಾಮ ನವಮೋಽಧ್ಯಾಯಃ ॥9॥