[ಎಂಟನೆಯ ಅಧ್ಯಾಯ]
ಭಾಗಸೂಚನಾ
ಮಾರ್ಕಂಡೇಯರ ತಪಸ್ಸು ಮತ್ತು ವರಪ್ರಾಪ್ತಿ
(ಶ್ಲೋಕ - 1)
ಮೂಲಮ್ (ವಾಚನಮ್)
ಶೌನಕ ಉವಾಚ
ಮೂಲಮ್
ಸೂತ ಜೀವ ಚಿರಂ ಸಾಧೋ ವದ ನೋ ವದತಾಂ ವರ ।
ತಮಸ್ಯಪಾರೇ ಭ್ರಮತಾಂ ನೃಣಾಂ ತ್ವಂ ಪಾರದರ್ಶನಃ ॥
ಅನುವಾದ
ಶೌನಕರು ಕೇಳಿದರು — ಸಾಧುಶಿರೋಮಣಿಗಳಾದ ಸೂತರೇ! ನೀವು ಚಿರಕಾಲ ಬಾಳಿರಿ. ವಾಗ್ಮಿಗಳಲ್ಲಿ ವರಿಷ್ಠರಾದವರು ನೀವು. ಅಪಾರವಾದ ಅಜ್ಞಾನಾಂಧಕಾರದಲ್ಲಿ ಅಲೆಯುತ್ತಿರುವ ಜನರನ್ನು ಪಾರುಗಾಣಿಸಿ ಪರಮಾತ್ಮನ ದರ್ಶನಮಾಡಿಸುವ ಮಹಾನುಭಾವರು ನೀವು. ದಯಮಾಡಿ ನನ್ನ ಇದೊಂದು ಪ್ರಶ್ನೆಗೆ ಉತ್ತರವನ್ನು ನೀಡಿರಿ. ॥1॥
(ಶ್ಲೋಕ - 2)
ಮೂಲಮ್
ಆಹುಶ್ಚಿರಾಯುಷಮೃಷಿಂ ಮೃಕಂಡುತನಯಂ ಜನಾಃ ।
ಯಃ ಕಲ್ಪಾಂತೇ ಉರ್ವರಿತೋ ಯೇನ ಗ್ರಸ್ತಮಿದಂ ಜಗತ್ ॥
ಅನುವಾದ
ಮೃಕಂಡುವಿನ ಪುತ್ರ ಮಾರ್ಕಂಡೇಯ ಮಹರ್ಷಿಯು ಚಿರಂಜೀವಿಗಳೂ, ಜಗತ್ತನ್ನೆಲ್ಲ ನುಂಗಿ ಹಾಕುವ ಪ್ರಳಯಕಾಲದಲ್ಲಿಯೂ ಅವರು ಜೀವಿತರಾಗಿದ್ದರೆಂದೂ ಜನರು ಹೇಳುತ್ತಾರೆ. ॥2॥
(ಶ್ಲೋಕ - 3)
ಮೂಲಮ್
ಸ ವಾ ಅಸ್ಮತ್ಕುಲೋತ್ಪನ್ನಃ ಕಲ್ಪೇಸ್ಮಿನ್ಭಾರ್ಗವರ್ಷಭಃ ।
ನೈವಾಧುನಾಪಿ ಭೂತಾನಾಂ ಸಂಪ್ಲವಃ ಕೋಪಿ ಜಾಯತೇ ॥
ಅನುವಾದ
ಆದರೆ ಸೂತಪುರಾಣಿಕರೇ! ಅವರಾದರೋ ಇದೇ ಕಲ್ಪದಲ್ಲಿ ನಮ್ಮ ವಂಶದಲ್ಲೇ ಹುಟ್ಟಿದ ಓರ್ವ ಶ್ರೇಷ್ಠ ಭೃಗುವಂಶಿಯರಾಗಿದ್ದಾರೆ. ಈ ಕಲ್ಪದಲ್ಲಿ ಇಲ್ಲಿಯವರೆಗೆ ಯಾವ ಪ್ರಳಯವೂ ಆಗಿಲ್ಲವೆಂಬುದು ನಮಗೆ ಗೊತ್ತಿದೆ. ॥3॥
(ಶ್ಲೋಕ - 4)
ಮೂಲಮ್
ಏಕ ಏವಾರ್ಣವೇ ಭ್ರಾಮ್ಯನ್ ದದರ್ಶ ಪುರುಷಂ ಕಿಲ ।
ವಟಪತ್ರಪುಟೇ ತೋಕಂ ಶಯಾನಂ ತ್ವೇಕಮದ್ಭುತಮ್ ॥
ಅನುವಾದ
ಹೀಗಿರುವಾಗ ಸಮಸ್ತ ಭೂಮಂಡಲವು ಪ್ರಳಯ ಸಮುದ್ರದಲ್ಲಿ ಮುಳುಗಿ ಹೋಗಿದ್ದಾಗ ಮಾರ್ಕಂಡೇಯರು ಅದರಲ್ಲಿ ಮುಳುಗದೆ ಇದ್ದರು ಮತ್ತು ಅಕ್ಷಯವಟ ಪತ್ರದ ಮೇಲೆ ಮಲಗಿದ ಶಿಶುರೂಪಿ ಬಾಲಮುಕುಂದನನ್ನು ದರ್ಶಿಸಿದ್ದರು. ಇವೆರಡೂ ಹೇಗೆ ಸತ್ಯವಾಗ ಬಲ್ಲದು? ॥4॥
(ಶ್ಲೋಕ - 5)
ಮೂಲಮ್
ಏಷ ನಃ ಸಂಶಯೋ ಭೂಯಾನ್ಸೂತ ಕೌತೂಹಲಂ ಯತಃ ।
ತಂ ನಶ್ಛಿಂಧಿ ಮಹಾಯೋಗಿನ್ಪುರಾಣೇಷ್ವಪಿ ಸಮ್ಮತಃ ॥
ಅನುವಾದ
ನಮ್ಮ ಮನಸ್ಸಿನಲ್ಲಿ ಇದೊಂದು ದೊಡ್ಡ ಸಂದೇಹ ಉಂಟಾಗಿದೆ. ಇದನ್ನು ತಿಳಿಯಬೇಕೆಂಬ ಉತ್ಕಂಠತೆಯೂ ಇದೆ. ನೀವು ಮಹಾಯೋಗಿಗಳೂ, ಪೌರಾಣಿಕರಲ್ಲಿ ಅಗ್ರಗಣ್ಯರೂ ಆಗಿರುವಿರಿ. ಕೃಪೆಯಿಟ್ಟು ನಮ್ಮ ಸಂದೇಹವನ್ನು ನಿವಾರಿಸಿರಿ. ॥5॥
(ಶ್ಲೋಕ - 6)
ಮೂಲಮ್ (ವಾಚನಮ್)
ಸೂತ ಉವಾಚ
ಮೂಲಮ್
ಪ್ರಶ್ನಸ್ತ್ವಯಾ ಮಹರ್ಷೇಯಂ ಕೃತೋ ಲೋಕಭ್ರಮಾಪಹಃ ।
ನಾರಾಯಣಕಥಾ ಯತ್ರ ಗೀತಾ ಕಲಿಮಲಾಪಹಾ ॥
ಅನುವಾದ
ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿಗಳೇ! ನೀವು ತುಂಬಾ ಚೆನ್ನಾದ ಪ್ರಶ್ನೆಯನ್ನೇ ಕೇಳಿರುವಿರಿ ಇದರಿಂದ ಜನರ ಭ್ರಮೆಯು ಹೊರಟುಹೋದೀತು. ಅದಕ್ಕಿಂತಲೂ ಹೆಚ್ಚೆಂದರೆ ಕಲಿಮಲವನ್ನು ತೊಳೆದುಹಾಕುವ ಶ್ರೀಮನ್ನಾರಾಯಣನ ಕಥೆಯೂ ಇದರಲ್ಲಿ ಹಾಡಲ್ಪಟ್ಟಿದೆ. ಆ ಪವಿತ್ರಚರಿತ್ರವನ್ನು ಹೇಳುವೆನು, ಕೇಳಿರಿ. ॥6॥
(ಶ್ಲೋಕ - 7)
ಮೂಲಮ್
ಪ್ರಾಪ್ತದ್ವಿಜಾತಿಸಂಸ್ಕಾರೋ ಮಾರ್ಕಂಡೇಯಃ ಪಿತುಃ ಕ್ರಮಾತ್ ।
ಛಂದಾಂಸ್ಯಧೀತ್ಯ ಧರ್ಮೇಣ ತಪಸ್ಸ್ವಾಧ್ಯಾಯಸಂಯುತಃ ॥
ಅನುವಾದ
ಶೌನಕರೇ! ಮೃಕಂಡ ಋಷಿಯು ತನ್ನ ಪುತ್ರನಾದ ಮಾರ್ಕಂಡೇಯನ ಎಲ್ಲ ಸಂಸ್ಕಾರಗಳನ್ನು ಸಮಯಕ್ಕೆ ಸರಿಯಾಗಿ ಮಾಡಿದರು. ಮಾರ್ಕಂಡೇಯನು ವಿಧಿವತ್ತಾಗಿ ವೇದಗಳ ಅಧ್ಯಯನವನ್ನು ಮಾಡಿದ ತಪಸ್ಸು ಮತ್ತು ಸ್ವಾಧ್ಯಾಯದಿಂದ ಸಂಪನ್ನನಾಗಿದ್ದನು. ॥7॥
(ಶ್ಲೋಕ - 8)
ಮೂಲಮ್
ಬೃಹದ್ವ್ರತಧರಃ ಶಾಂತೋ ಜಟಿಲೋ ವಲ್ಕಲಾಂಬರಃ ।
ಬಿಭ್ರತ್ಕಮಂಡಲುಂ ದಂಡಮುಪವೀತಂ ಸಮೇಖಲಮ್ ॥
ಅನುವಾದ
ಅವರು ಆಜೀವನ, ಬ್ರಹ್ಮಚರ್ಯದ ವ್ರತವನ್ನು ಕೈಗೊಂಡಿದ್ದು, ಶಾಂತಭಾವದಿಂದ ಇರುತ್ತಿದ್ದರು. ತಲೆಯಲ್ಲಿ ಜಟೆಗಳಿದ್ದು, ನಾರುಮಡಿಯನ್ನೇ ಉಡುತ್ತಿದ್ದರು. ಶರೀರದಲ್ಲಿ ಯಜ್ಞೋಪವೀತ ಮತ್ತು ಮೇಖಲೆಯು ಶೋಭಿಸುತ್ತಿತ್ತು. ॥8॥
(ಶ್ಲೋಕ - 9)
ಮೂಲಮ್
ಕೃಷ್ಣಾಜಿನಂ ಸಾಕ್ಷಸೂತ್ರಂ ಕುಶಾಂಶ್ಚ ನಿಯಮರ್ದ್ಧಯೇ ।
ಅಗ್ನ್ಯರ್ಕಗುರುವಿಪ್ರಾತ್ಮಸ್ವರ್ಚಯನ್ಸಂಧ್ಯ ಯೋರ್ಹರಿಮ್ ॥
ಅನುವಾದ
ಕೃಷ್ಣಮೃಗಚರ್ಮ, ರುದ್ರಾಕ್ಷಮಾಲೆ, ದರ್ಭೆ ಮತ್ತು ಕೈಯಲ್ಲಿ ದಂಡ ಮತ್ತು ಕಮಂಡಲು ಇವೇ ಅವರ ಭಂಡವಾಳವಾಗಿತ್ತು. ಇದೆಲ್ಲವನ್ನು ಅವರು ತನ್ನ ಆಜೀವ ಬ್ರಹ್ಮಚರ್ಯ ವ್ರತದ ಪೂರ್ಣತೆಗೆ ಧರಿಸಿದ್ದರು. ಅವರು ಸಾಯಂಪ್ರಾತಃಗಳಲ್ಲಿ ಅಗ್ನಿಹೋತ್ರ, ಸೂರ್ಯೋಪಸ್ಥಾನ, ಗುರುವಂದನೆ, ಬ್ರಾಹ್ಮಣ ಸತ್ಕಾರ, ಮಾನಸಪೂಜೆ ಮಾಡುತ್ತಾ, ‘ನಾನು ಪರಮಾತ್ಮನ ಸ್ವರೂಪನಾಗಿದ್ದೇನೆ’ ಎಂದು ಭಾವಿಸಿಕೊಂಡು ಶ್ರೀಹರಿಯನ್ನು ಆರಾಧಿಸುತ್ತಿದ್ದರು. ॥9॥
ಮೂಲಮ್
(ಶ್ಲೋಕ - 10)
ಸಾಯಂ ಪ್ರಾತಃ ಸ ಗುರವೇ ಭೈಕ್ಷ್ಯಮಾಹೃತ್ಯ ವಾಗ್ಯತಃ ।
ಬುಭುಜೇ ಗುರ್ವನುಜ್ಞಾತಃ ಸಕೃನ್ನೋ ಚೇದುಪೋಷಿತಃ ॥
ಅನುವಾದ
ಸಾಯಂಪ್ರಾತಃಕಾಲಗಳಲ್ಲಿ ಭೀಕ್ಷೆ ಬೇಡಿ ತಂದು ಗುರುಗಳ ಚರಣಗಳಲ್ಲಿ ಅರ್ಪಿಸುತ್ತಿದ್ದು, ಮೌನವಾಗಿರುತ್ತಿದ್ದರು. ಗುರುಗಳು ಅಪ್ಪಣೆನೀಡಿದರೆ ಒಂದು ಹೊತ್ತು ಊಟ ಮಾಡುವರು; ಇಲ್ಲದಿದ್ದರೆ ಉಪವಾಸವೇ ಇರುತ್ತಿದ್ದರು. ॥10॥
(ಶ್ಲೋಕ - 11)
ಮೂಲಮ್
ಏವಂ ತಪಸ್ಸ್ವಾಧ್ಯಾಯಪರೋ ವರ್ಷಾಣಾಮಯುತಾಯುತಮ್ ।
ಆರಾಧಯನ್ ಹೃಷೀಕೇಶಂ ಜಿಗ್ಯೇ ಮೃತ್ಯುಂ ಸುದುರ್ಜಯಮ್ ॥
ಅನುವಾದ
ಮಾರ್ಕಂಡೇಯನು ಹೀಗೆ ತಪಸ್ಸು-ಸ್ವಾಧ್ಯಾಯದಲ್ಲಿ ತತ್ಪರನಾಗಿದ್ದು ಲಕ್ಷ-ಲಕ್ಷ ವರ್ಷಗಳವರೆಗೆ ಭಗವಂತನನ್ನು ಆರಾಧಿಸಿದನು. ಹೀಗೆ ದೊಡ್ಡ-ದೊಡ್ಡ ಯೋಗಿಗಳಿಗೂ ಅತ್ಯಂತ ಕಠಿಣವಾದ ಆ ಮೃತ್ಯುವನ್ನು ಗೆದ್ದುಕೊಂಡಿದ್ದನು. ॥11॥
(ಶ್ಲೋಕ - 12)
ಮೂಲಮ್
ಬ್ರಹ್ಮಾ ಭೃಗುರ್ಭವೋ ದಕ್ಷೋ ಬ್ರಹ್ಮಪುತ್ರಾಶ್ಚ ಯೇಪರೇ ।
ನೃದೇವಪಿತೃಭೂತಾನಿ ತೇನಾಸನ್ನತಿವಿಸ್ಮಿತಾಃ ॥
ಅನುವಾದ
ಮಾರ್ಕಂಡೇಯನ ಮೃತ್ಯು ವಿಜಯವನ್ನು ಕಂಡು ಬ್ರಹ್ಮದೇವರು, ಭೃಗುಗಳು, ರುದ್ರದೇವರು, ದಕ್ಷಪ್ರಜಾಪತಿ, ಬ್ರಹ್ಮಮಾನಸ ಪುತ್ರರು, ಮನುಷ್ಯರು, ದೇವತೆಗಳು, ಪಿತೃಗಳು ಮತ್ತು ಇತರ ಎಲ್ಲ ಪ್ರಾಣಿಗಳೂ ಅತ್ಯಂತ ವಿಸ್ಮಿತರಾದರು. ॥12॥
(ಶ್ಲೋಕ - 13)
ಮೂಲಮ್
ಇತ್ಥಂ ಬೃಹದ್ವ್ರತಧರಸ್ತಪಸ್ಸ್ವಾಧ್ಯಾಯಸಂಯಮೈಃ ।
ದಧ್ಯಾವಧೋಕ್ಷಜಂ ಯೋಗೀ ಧ್ವಸ್ತಕ್ಲೇಶಾಂತರಾತ್ಮನಾ ॥
ಅನುವಾದ
ಆಜೀವನ ಬ್ರಹ್ಮಚರ್ಯವ್ರತವನ್ನು ಕೈಗೊಂಡ ಯೋಗಿ ಮಾರ್ಕಂಡೇಯರು ಹೀಗೆ ತಪಸ್ಸು, ಸ್ವಾಧ್ಯಾಯ, ಸಂಯಮ, ಮೊದಲಾದವುಗಳ ಮೂಲಕ ಅವಿದ್ಯೆಯೇ ಮುಂತಾದ ಎಲ್ಲ ಕ್ಲೇಶಗಳನ್ನು ಇಲ್ಲವಾಗಿಸಿ, ಶುದ್ಧಾಂತಕರಣರಾಗಿ ಇಂದ್ರಿಯಾತೀತ ಪರಮಾತ್ಮನನ್ನು ಧ್ಯಾನಿಸತೊಡಗಿದರು. ॥13॥
(ಶ್ಲೋಕ - 14)
ಮೂಲಮ್
ತಸ್ಯೈವಂ ಯುಂಜತಶ್ಚಿತ್ತಂ ಮಹಾಯೋಗೇನ ಯೋಗಿನಃ ।
ವ್ಯತೀಯಾಯ ಮಹಾನ್ಕಾಲೋ ಮನ್ವಂತರಷಡಾತ್ಮಕಃ ॥
ಅನುವಾದ
ಯೋಗಿಯಾದ ಮಾರ್ಕಂಡೇಯರು ಮಹಾಯೋಗದ ಮೂಲಕ ತನ್ನ ಚಿತ್ತವನ್ನು ಭಗವಂತನ ಸ್ವರೂಪದಲ್ಲಿ ತೊಡಗಿಸಿದ್ದರು. ಹೀಗೆ ಸಾಧನೆ ಮಾಡುತ್ತಾ-ಮಾಡುತ್ತಾ ಆರು ಮನ್ವಂತರಗಳ ಮಹಾಕಾಲವು ಕಳೆದುಹೋಯಿತು. ॥14॥
(ಶ್ಲೋಕ - 15)
ಮೂಲಮ್
ಏತತ್ ಪುರಂದರೋ ಜ್ಞಾತ್ವಾ ಸಪ್ತಮೇಸ್ಮಿನ್ಕಿಲಾಂತರೇ ।
ತಪೋವಿಶಂಕಿತೋ ಬ್ರಹ್ಮನ್ನಾರೇಭೇ ತದ್ವಿಘಾತನಮ್ ॥
ಅನುವಾದ
ಬ್ರಾಹ್ಮಣ ಶ್ರೇಷ್ಠನೇ! ಈ ಏಳನೆಯ ಮನ್ವಂತರದಲ್ಲಿ ಇಂದ್ರನಿಗೆ ಇದರ ಸುಳಿವು ಸಿಕ್ಕಿದಾಗ ಅವನು ಮಾರ್ಕಂಡೇಯನ ತಪಸ್ಸಿನಿಂದ ಶಂಕಿತನಾಗಿ ಭಯಗೊಂಡನು. ಅದಕ್ಕಾಗಿ ಅವನು ತಪಸ್ಸಿನಲ್ಲಿ ವಿಘ್ನವನ್ನೊಡ್ಡಲು ಪ್ರಾರಂಭಿಸಿದನು. ॥15॥
(ಶ್ಲೋಕ - 16)
ಮೂಲಮ್
ಗಂಧರ್ವಾಪ್ಸರಸಃ ಕಾಮಂ ವಸಂತಮಲಯಾನಿಲೌ ।
ಮುನಯೇ ಪ್ರೇಷಯಾಮಾಸ ರಜಸ್ತೋಕಮದೌ ತಥಾ ॥
ಅನುವಾದ
ಶೌನಕರೇ! ಇಂದ್ರನು ಮಾರ್ಕಂಡೇಯನ ತಪೋಭಂಗವನ್ನು ಮಾಡಲಿಕ್ಕಾಗಿ ಅವನ ಆಶ್ರಮಕ್ಕೆ ಗಂಧರ್ವರನ್ನೂ ಅಪ್ಸರೆಯನ್ನು, ಮನ್ಮಥನನ್ನು, ವಸಂತ, ಮಲಯಾನಿಲ, ಲೋಭ ಮತ್ತು ಮದಗಳನ್ನು ಕಳಿಸಿದನು. ॥16॥
(ಶ್ಲೋಕ - 17)
ಮೂಲಮ್
ತೇ ವೈ ತದಾಶ್ರಮಂ ಜಗ್ಮುರ್ಹಿಮಾದ್ರೇಃ ಪಾರ್ಶ್ವ ಉತ್ತರೇ ।
ಪುಷ್ಪಭದ್ರಾ ನದೀ ಯತ್ರ ಚಿತ್ರಾಖ್ಯಾ ಚ ಶಿಲಾ ವಿಭೋ ॥
ಅನುವಾದ
ಇಂದ್ರನ ಆಣತಿಯಂತೆ ಅವರೆಲ್ಲರೂ ಮಹರ್ಷಿಯ ಆಶ್ರಮದ ಸಮೀಪಕ್ಕೆ ಬಂದರು. ಮಾರ್ಕಂಡೇಯನ ಆಶ್ರಮವು ಹಿಮಾಲಯದ ಉತ್ತರಪಾಶ್ವದಲ್ಲಿತ್ತು. ಅಲ್ಲಿ ಪುಷ್ಪಭದ್ರಾ ಎಂಬ ನದಿಯು ಹರಿಯುತ್ತಿತ್ತು. ಅದರ ಪಕ್ಕದಲ್ಲೇ ಚಿತ್ರಾ ಎಂಬ ಒಂದು ಬಂಡೆ ಇತ್ತು. ॥17॥
(ಶ್ಲೋಕ - 18)
ಮೂಲಮ್
ತದಾಶ್ರಮಪದಂ ಪುಣ್ಯಂ ಪುಣ್ಯದ್ರುಮಲತಾಂಚಿತಮ್ ।
ಪುಣ್ಯದ್ವಿಜಕುಲಾಕೀರ್ಣಂ ಪುಣ್ಯಾಮಲಜಲಾಶಯಮ್ ॥
ಅನುವಾದ
ಶೌನಕರೇ! ಮಾರ್ಕಂಡೇಯನ ಆಶ್ರಮವು ಅತ್ಯಂತ ಪವಿತ್ರ ವಾಗಿದೆ. ಸುತ್ತಲೂ ಹಸಿರಾದದಟ್ಟವಾಗಿ ಪವಿತ್ರ ವೃಕ್ಷಗಳ ಸಾಲುಗಳಿದ್ದು ಅವುಗಳಲ್ಲಿ ಬಳ್ಳಿಗಳು ಸುತ್ತಿಕೊಂಡಿದ್ದವು. ಅಂತಹ ವೃಕ್ಷಗಳ ಗುಂಪುಗಳಲ್ಲಿ ಪುಣ್ಯಾತ್ಮರಾದ ಋಷಿಗಳು ವಾಸಿಸುತ್ತಿದ್ದರು. ಅತ್ಯಂತ ಪವಿತ್ರ ಹಾಗೂ ನಿರ್ಮಲ ಜಲದಿಂದ ತುಂಬಿರುವ ಜಲಾಶಯಗಳು ಎಲ್ಲ ಋತುಗಳಲ್ಲಿಯೂ ಒಂದೇರೀತಿಯಾಗಿದ್ದವು. ॥18॥
(ಶ್ಲೋಕ - 19)
ಮೂಲಮ್
ಮತ್ತಭ್ರಮರಸಂಗೀತಂ ಮತ್ತಕೋಕಿಲಕೂಜಿತಮ್ ।
ಮತ್ತಬರ್ಹಿನಟಾಟೋಪಂ ಮತ್ತದ್ವಿಜಕುಲಾಕುಲಮ್ ॥
ಅನುವಾದ
ಕೆಲವೆಡೆ ಮತ್ತ ಭೃಂಗಗಳು ಗುಂಜಾರವದ ಸಂಗೀತದಿಂದ ಜನರ ಮನಸ್ಸನ್ನು ಆಕರ್ಷಿಸುತ್ತಿದ್ದರೆ, ಕೆಲವೆಡೆ ಕೋಗಿಲೆಗಳು ಪಂಚಮದ ಇಂಚರದಿಂದ ಕುಹೂ ಕುಹೂ ಅನ್ನುತ್ತಿದ್ದರೆ, ಕೆಲವೆಡೆ ಮತ್ತಮಯೂರಗಳು ಗರಿಕೆದರಿ ಜಾಗರವಾಡುತ್ತಿದ್ದವು. ಕೆಲವೆಡೆ ಪಕ್ಷಿ ಸಂಕುಲಗಳು ಒಟ್ಟಾಗಿ ವಿಹರಿಸುತ್ತಿದ್ದವು. ॥19॥
(ಶ್ಲೋಕ - 20)
ಮೂಲಮ್
ವಾಯುಃ ಪ್ರವಿಷ್ಟ ಆದಾಯ ಹಿಮನಿರ್ಝರಶೀಕರಾನ್ ।
ಸುಮನೋಭಿಃ ಪರಿಷ್ವಕ್ತೋ ವವಾವುತ್ತಂಭಯನ್ಸ್ಮರಮ್ ॥
ಅನುವಾದ
ಮಾರ್ಕಂಡೇಯನ ಇಂತಹ ಪವಿತ್ರ ಆಶ್ರಮಕ್ಕೆ ಇಂದ್ರನಿಂದ ಕಳುಹಲ್ಪಟ್ಟ ವಾಯುವು ಪ್ರವೇಶಿಸಿತು. ಶೀತಲವಾದ ಝರಿಗಳ ತುಂತುರುಗಳನ್ನು ಹೊತ್ತು, ಸುವಾಸನೆ ತುಂಬಿದ ಕುಸುಮಗಳನ್ನು ಆಲಿಂಗಿಸಿದ ತಂಗಾಳಿಯು ಕಾಮಭಾವವನ್ನು ಉತ್ತೇಜಿಸುತ್ತಾ ಮಂದ-ಮಂದವಾಗಿ ಬೀಸತೊಡಗಿತು. ॥20॥
(ಶ್ಲೋಕ - 21)
ಮೂಲಮ್
ಉದ್ಯಚ್ಚಂದ್ರನಿಶಾವಕಃ ಪ್ರವಾಲಸ್ತಬಕಾಲಿಭಿಃ ।
ಗೋಪದ್ರುಮಲತಾಜಾಲೈಸ್ತತ್ರಾಸೀತ್ ಕುಸುಮಾಕರಃ ॥
ಅನುವಾದ
ಕಾಮದೇವನ ಪ್ರಿಯಸಖನಾದ ವಸಂತನೂ ಅಲ್ಲಿ ತನ್ನ ಮಾಯೆಯನ್ನು ಹರಡಿದನು. ಆಗ ಸಂಧ್ಯಾಸಮಯ. ಆಕಾಶದಲ್ಲಿ ಆಗ ತಾನೇ ಮೂಡಿದ ಚಂದ್ರಮನು ತನ್ನ ಮನೋಹರ ಕಿರಣಗಳನ್ನು ಪಸರಿಸಿದನು. ಸಾವಿರಾರು ಕೊಂಬೆಗಳಿಂದ ಕೂಡಿದ ಮರಗಳು ಬಳ್ಳಿಗಳ ಆಲಿಂಗನದ ಆನಂದದಿಂದ ನೆಲದವರೆಗೆ ಬಾಗಿದ್ದವು. ನವಪಲ್ಲವಗಳಿಂದಲೂ, ಪುಷ್ಪಗುಚ್ಛದಿಂದಲೂ ಫಲಗಳಿಂದಲೂ ವೃಕ್ಷಗಳು ಅತ್ಯಂತ ಶೋಭಾಯಮಾನವಾಗಿದ್ದವು. ॥21॥
(ಶ್ಲೋಕ - 22)
ಮೂಲಮ್
ಅನ್ವೀಯಮಾನೋ ಗಂಧರ್ವೈರ್ಗೀತವಾದಿತ್ರಯೂಥಕೈಃ ।
ಅದೃಶ್ಯತಾತ್ತಚಾಪೇಷುಃ ಸ್ವಃ ಸೀಯೂಥಪತಿಃ ಸ್ಮರಃ ॥
ಅನುವಾದ
ವಸಂತನ ಸಾಮ್ರಾಜ್ಯವನ್ನು ನೋಡಿ ಮನ್ಮಥನೂ ಅಲ್ಲಿಗೆ ಪ್ರವೇಶಿಸಿದನು. ಅವನೊಡನೆ ವಾದ್ಯಗಳನ್ನು ನುಡಿಸುತ್ತಾ, ಹಾಡುತ್ತಾ ಗಂಧರ್ವರ ಗುಂಪುಗಳು ಅವನನ್ನು ಹಿಂಗಾಲಿಸುತ್ತಿದ್ದರು. ಸುತ್ತಲೂ ಅನೇಕ ಸ್ವರ್ಗೀಯ ಅಪ್ಸರೆಯರು ನಡೆಯುತ್ತಿದ್ದು ಓರ್ವ ಮದನನೇ ಎಲ್ಲರಿಗೆ ನಾಯಕನಾಗಿದ್ದನು. ಅವನ ಕೈಯಲ್ಲಿ ಸಮ್ಮೋಹನವೇ ಮುಂತಾದ ಬಾಣಗಳನ್ನು ಹೂಡಲ್ಪಟ್ಟ ಪುಷ್ಪಧನುಸ್ಸು ಕಂಗೊಳಿಸುತ್ತಿತ್ತು. ॥22॥
(ಶ್ಲೋಕ - 23)
ಮೂಲಮ್
ಹುತ್ವಾಗ್ನಿಂ ಸಮುಪಾಸೀನಂ ದದೃಶುಃ ಶಕ್ರಕಿಂಕರಾಃ ।
ಮೀಲಿತಾಕ್ಷಂ ದುರಾಧರ್ಷಂ ಮೂರ್ತಿಮಂತಮಿವಾನಲಮ್ ॥
ಅನುವಾದ
ಆ ಸಮಯದಲ್ಲಿ ಮಾರ್ಕಂಡೇಯ ಮುನಿಗಳು ಅಗ್ನಿ ಹೋತ್ರವನ್ನು ಮುಗಿಸಿ ಭಗವಂತನ ಉಪಾಸನೆ ಮಾಡುತ್ತಿದ್ದರು. ಕಣ್ಣುಗಳನ್ನು ಮುಚ್ಚಿಕೊಂಡು, ಸಾಕ್ಷಾತ್ ಅಗ್ನಿ ದೇವನೇ ಮೂರ್ತೀಭವಿಸಿ ಕುಳಿತಿರುವರೋ ಎಂಬಂತೆ ತೇಜಸ್ವಿಯಾಗಿದ್ದರು. ಇವರನ್ನು ಪರಾಜಿತಗೊಳಿಸುವುದು ಬಹಳ ಕಷ್ಟವೇ ಆಗಿತ್ತು. ಇಂದ್ರನ ಆಜ್ಞಾಕಾರಿಗಳಾದ ಸೇವಕರು ಮಾರ್ಕಂಡೇಯ ಮುನಿಯನ್ನು ಈ ಸ್ಥಿತಿಯಲ್ಲಿ ನೋಡಿದರು. ॥23॥
(ಶ್ಲೋಕ - 24)
ಮೂಲಮ್
ನನೃತುಸ್ತಸ್ಯ ಪುರತಃ ಸಿಯೋಥೋ ಗಾಯಕಾ ಜಗುಃ ।
ಮೃದಂಗವೀಣಾಪಣವೈರ್ವಾದ್ಯಂ ಚಕ್ರುರ್ಮನೋರಮಮ್ ॥
ಅನುವಾದ
ಆಗ ಅಪ್ಸರೆಯರು ಅವನೆದುರಿಗೆ ನರ್ತಿಸತೊಡಗಿದರು. ಕೆಲವು ಗಂಧರ್ವರು ಇಂಪಾಗಿ ಹಾಡ ತೊಡಗಿದರೆ, ಕೆಲವರು ಮೃದಂಗ, ವೀಣೆ ಮೊದಲಾದ ವಾದ್ಯಗಳನ್ನು ಮನಮೋಹಕವಾಗಿ ನುಡಿಸತೊಡಗಿದರು. ॥24॥
(ಶ್ಲೋಕ - 25)
ಮೂಲಮ್
ಸಂದಧೇಸಂ ಸ್ವಧನುಷಿ ಕಾಮಃ ಪಂಚಮುಖಂ ತದಾ ।
ಮಧುರ್ಮನೋ ರಜಸ್ತೋಕ ಇಂದ್ರಭೃತ್ಯಾ ವ್ಯಕಂಪಯನ್ ॥
ಅನುವಾದ
ಶೌನಕರೇ! ಈಗ ಕಾಮದೇವನು ತನ್ನ ಪುಷ್ಪ ಧನುಸ್ಸಿಗೆ-ಶೋಷಣ, ದೀಪನ, ಸಮ್ಮೋಹನ, ತಾಪನ ಮತ್ತು ಉನ್ಮಾದ ಎಂಬ ಪಂಚಬಾಣಗಳನ್ನು ಹೂಡಿದನು. ಅವನು ಗುರಿಯಿಡಬೇಕೆಂದಿರುವಾಗ ಇಂದ್ರನ ಸೇವಕ ವಸಂತ ಮತ್ತು ಲೋಭ ಇವರು ಮಾರ್ಕಂಡೇಯ ಮುನಿಯ ಮನಸ್ಸನ್ನು ವಿಚಲಿತಗೊಳಿಸಲು ಪ್ರಯತ್ನಶೀಲರಾದರು. ॥25॥
(ಶ್ಲೋಕ - 26)
ಮೂಲಮ್
ಕ್ರೀಡಂತ್ಯಾಃ ಪುಂಜಿಕಸ್ಥಲ್ಯಾಃ ಕಂದುಕೈಃ ಸ್ತನಗೌರವಾತ್ ।
ಭೃಶಮುದ್ವಿಗ್ನಮಧ್ಯಾಯಾಃ ಕೇಶವಿಸ್ರಂಸಿತಸ್ರಜಃ ॥
ಅನುವಾದ
ಮುನಿಯ ಮುಂದೆಯೇ ಪುಂಜಿಕಸ್ಥಲಿ ಎಂಬ ಸುಂದರಿಯಾದ ಅಪ್ಸರೆಯು ಚೆಂಡಾಟವಾಡುತ್ತಿದ್ದಳು. ಸ್ತನಗಳ ಭಾರದಿಂದ ಆಕೆಯ ನಡುವು ಬಳಕುತ್ತಿತ್ತು. ಮುಡಿಯಲ್ಲಿದ್ದ ಸುಂದರವಾದ ಹೂವುಗಳು ಉದುರಿ ನೆಲಕ್ಕೆ ಬೀಳುತ್ತಿದ್ದವು. ॥26॥
(ಶ್ಲೋಕ - 27)
ಮೂಲಮ್
ಇತಸ್ತತೋ ಭ್ರಮದ್ದೃಷ್ಟೇಶ್ಚಲಂತ್ಯಾ ಅನುಕಂದುಕಮ್ ।
ವಾಯುರ್ಜಹಾರ ತದ್ವಾಸಃ ಸೂಕ್ಷ್ಮಂ ತ್ರುಟಿತಮೇಖಲಮ್ ॥
ಅನುವಾದ
ಕೆಲವೊಮ್ಮೆ ಓರೆನೋಟದಿಂದ ಅತ್ತ-ಇತ್ತ ದೃಷ್ಟಿ ಹರಿಸುತ್ತಿದ್ದಳು. ಆಕೆಯ ಕಣ್ಣ ದೃಷ್ಟಿಯು ಕೆಲವೊಮ್ಮೆ ಚೆಂಡಿನ ಕಡೆಗೆ ಆಕಾಶದತ್ತವೂ, ಕೆಲವೊಮ್ಮೆ ನೆಲದಕಡೆಗೂ, ಕೆಲವೊಮ್ಮೆ ಕೈಗಳ ಕಡೆಗೂ ಹರಿಯುತ್ತಿತ್ತು. ಅವಳು ಹಾವಭಾವಗಳಿಂದ ಚೆಂಡಿನ ಕಡೆಗೆ ಓಡುವಾಗ ಆಕೆಯ ನಡುಪಟ್ಟಿಯು ಜಾರಿಬಿತ್ತು. ವಾಯುವು ಆಕೆಯ ತೆಳ್ಳಗಿನ ಸೀರೆಯನ್ನು ಶರೀರದಿಂದ ಬೇರ್ಪಡಿದನು. ॥27॥
(ಶ್ಲೋಕ - 28)
ಮೂಲಮ್
ವಿಸಸರ್ಜ ತದಾ ಬಾಣಂ ಮತ್ವಾ ತಂ ಸ್ವಜಿತಂ ಸ್ಮರಃ ।
ಸರ್ವಂ ತತ್ರಾಭವನ್ಮೋಘಮನೀಶಸ್ಯ ಯಥೋದ್ಯಮಃ ॥
ಅನುವಾದ
ತನಗೆ ಅನುಕೂಲವಾದ ಸಂದರ್ಭವನ್ನು ಗಮನಿಸಿದ ಕಾಮದೇವನು ‘ಈಗ ಮಾರ್ಕಂಡೇಯ ಮುನಿಯನ್ನು ನಾನು ಗೆದ್ದುಬಿಟ್ಟೆ’ ಎಂದು ಯೋಚಿಸಿ ಅವನ ಮೇಲೆ ಬಾಣಗಳನ್ನು ಪ್ರಯೋಗಿಸಿದನು. ಆದರೆ ಅವೆಲ್ಲವೂ ವಿಫಲವಾಯಿತು. ಮಾರ್ಕಂಡೇಯ ಮುನಿಯ ಮೇಲಿನ ಅವನ ಉದ್ಯೋಗವು - ಅಸಮರ್ಥರ ಮತ್ತು ನಿರ್ಭಾಗ್ಯರ ಪ್ರಯತ್ನಗಳು ವಿಫಲವಾಗುವಂತೆ, ವಿಫಲವಾಯಿತು. ॥28॥
(ಶ್ಲೋಕ - 29)
ಮೂಲಮ್
ತ ಇತ್ಥಮಪಕುರ್ವಂತೋ ಮುನೇಸ್ತತ್ತೇಜಸಾ ಮುನೇ ।
ದಹ್ಯಮಾನಾ ನಿವವೃತುಃ ಪ್ರಬೋಧ್ಯಾಹಿಮಿವಾರ್ಭಕಾಃ ॥
ಅನುವಾದ
ಶೌನಕರೇ! ಮಾರ್ಕಂಡೇಯ ಮುನಿಗಳು ಅಪರಿಮಿತ ತೇಜಸ್ವಿಯಾಗಿದ್ದರು. ಕಾಮ, ವಸಂತ ಇವರೆಲ್ಲ ಅವರ ತಪಸ್ಸನ್ನು ಕೆಡಿಸಲು ಬಂದಿದ್ದರು, ಆದರೆ ಈಗ ಅವನ ತೇಜಸ್ಸಿನಿಂದ ಉರಿಯತೊಡಗಿದರು. ಸಣ್ಣಮಕ್ಕಳು ಹಾವನ್ನು ಎಚ್ಚರಿಸಿ ಓಡಿಹೋಗುವಂತೆಯೇ ಅವರು ಓಡಿ ಹೋದರು. ॥29॥
(ಶ್ಲೋಕ - 30)
ಮೂಲಮ್
ಇತೀಂದ್ರಾನುಚರೈರ್ಬ್ರಹ್ಮನ್ ಧರ್ಷಿತೋಪಿ ಮಹಾಮುನಿಃ ।
ಯನ್ನಾಗಾದಹಮೋ ಭಾವಂ ನ ತಚ್ಚಿತ್ರಂ ಮಹತ್ಸು ಹಿ ॥
ಅನುವಾದ
ಶೌನಕರೇ! ಇಂದ್ರನ ಸೇವಕರು ಹೀಗೆ ಮಾರ್ಕಂಡೇಯರನ್ನು ಪರಾಜಿತಗೊಳಿಸಲು ಬಯಸಿದರು. ಆದರೆ ಅವರು ಎಳ್ಳಷ್ಟೂ ವಿಚಲಿತರಾಗಲಿಲ್ಲ. ಇಷ್ಟೇ ಅಲ್ಲ; ಅವರ ಮನಸ್ಸಿನಲ್ಲಿ ಇದರ ಕುರಿತು ಸ್ವಲ್ಪವೂ ಅಹಂಕಾರದ ಭಾವ ಉಂಟಾಗಲಿಲ್ಲ. ಮಹಾಪುರುಷರಿಗೆ ಇದೇನೂ ಆಶ್ವರ್ಯದ ಮಾತಲ್ಲ ಎಂಬುದು ನಿಜವಾಗಿದೆ. ॥30॥
(ಶ್ಲೋಕ - 31)
ಮೂಲಮ್
ದೃಷ್ಟ್ವಾ ನಿಸ್ತೇಜಸಂ ಕಾಮಂ ಸಗಣಂ ಭಗವಾನ್ ಸ್ವರಾಟ್ ।
ಶ್ರುತ್ವಾನುಭಾವಂ ಬ್ರಹ್ಮರ್ಷೇರ್ವಿಸ್ಮಯಂ ಸಮಗಾತ್ಪರಮ್ ॥
ಅನುವಾದ
ಕಾಮದೇವನು ತನ್ನ ಸೈನ್ಯದೊಂದಿಗೆ ನಿಸ್ತೇಜ-ಹತಪ್ರಭ ನಾಗಿ ಮರಳಿದನು ಎಂದು ನೋಡಿದ ದೇವೇಂದ್ರನು - ಬ್ರಹ್ಮರ್ಷಿ ಮಾರ್ಕಂಡೇಯನು ಪರಮಪ್ರಭಾವಶಾಲಿ ಯಾಗಿರುವನೆಂದು ತಿಳಿದಾಗ ಅವನಿಗೆ ಅತ್ಯಂತ ಆಶ್ಚರ್ಯವಾಯಿತು. ॥31॥
(ಶ್ಲೋಕ - 32)
ಮೂಲಮ್
ತಸ್ಯೈವಂ ಯುಂಜತಶ್ಚಿತ್ತಂ ತಪಸ್ಸ್ವಾಧ್ಯಾಯಸಂಯಮೈಃ ।
ಅನುಗ್ರಹಾಯಾವಿರಾಸೀನ್ನರನಾರಾಯಣೋ ಹರಿಃ ॥
ಅನುವಾದ
ಶೌನಕರೇ! ಮಾರ್ಕಂಡೇಯ ಮುನಿಗಳು ತಪಸ್ಸು, ಸ್ವಾಧ್ಯಾಯ, ಧಾರಣೆ, ಧ್ಯಾನ ಮತ್ತು ಸಮಾಧಿಯ ಮೂಲಕ ಭಗವಂತನಲ್ಲಿ ಚಿತ್ತವನ್ನು ತೊಡಗಿಸಲು ಪ್ರಯತ್ನ ಮಾಡುತ್ತಲೇ ಇದ್ದರು. ಆಗ ಅವರ ಮೇಲೆ ಕೃಪಾ ವರ್ಷವನ್ನು ಗರೆಯಲೆಂದೇ ಮುನಿಜನ ನಯನವಿಹಾರಿ ನರೋತ್ತಮ ನರ ಮತ್ತು ಭಗವಾನ್ ನಾರಾಯಣರು ಪ್ರಕಟರಾದರು. ॥32॥
(ಶ್ಲೋಕ - 33)
ಮೂಲಮ್
ತೌ ಶುಕ್ಲಕೃಷ್ಣೌ ನವಕಂಜಲೋಚನೌ
ಚತುರ್ಭುಜೌ ರೌರವವಲ್ಕಲಾಂಬರೌ ।
ಪವಿತ್ರಪಾಣೀ ಉಪವೀತಕಂ ತ್ರಿವೃತ್
ಕಮಂಡಲುಂ ದಂಡಮೃಜುಂ ಚ ವೈಣವಮ್ ॥
ಅನುವಾದ
ಅವರಿಬ್ಬರಲ್ಲಿ ಒಬ್ಬನ ಶರೀರವು ಬಿಳಿಯಬಣ್ಣ, ಮತ್ತೊಬ್ಬನದು ಶ್ಯಾಮಲ ವರ್ಣ. ಇಬ್ಬರ ಕಣ್ಣುಗಳು ಆಗತಾನೇ ಅರಳಿದ ಕಮಲದಂತೆ ಕೋಮಲವೂ, ವಿಶಾಲವೂ ಆಗಿದ್ದವು. ಇಬ್ಬರಿಗೂ ಚತುರ್ಭುಜರಾಗಿದ್ದು ಒಬ್ಬನು ಮೃಗಚರ್ಮವನ್ನು, ಮತ್ತೊಬ್ಬನು ವಲ್ಕಲವನ್ನು ಧರಿಸಿದ್ದರು. ಕರಗಳಲ್ಲಿ ದರ್ಭೆಗಳನ್ನು ಹಿಡಿದಿದ್ದು, ಕಂಠದಲ್ಲಿ ತ್ರಿಸೂತ್ರ ಯಜ್ಞೋಪವೀತ ಶೋಭಿಸುತ್ತಿತ್ತು. ಅವರು ಕಮಂಡಲು ಮತ್ತು ಋಜುವಾದ ಬಿದಿರಿನ ದಂಡವನ್ನು ಧರಿಸಿದ್ದರು. ॥33॥
(ಶ್ಲೋಕ - 34)
ಮೂಲಮ್
ಪದ್ಮಾಕ್ಷಮಾಲಾಮುತ ಜಂತುಮಾರ್ಜನಂ
ವೇದಂ ಚ ಸಾಕ್ಷಾತ್ತಪ ಏವ ರೂಪಿಣೌ ।
ತಪತ್ತಡಿದ್ವರ್ಣಪಿಶಂಗರೋಚಿಷಾ
ಪ್ರಾಂಶೂ ದಧಾನೌ ವಿಬುಧರ್ಷಭಾರ್ಚಿತೌ ॥
(ಶ್ಲೋಕ - 35)
ಮೂಲಮ್
ತೇ ವೈ ಭಗವತೋ ರೂಪೇ ನರನಾರಾಯಣಾವೃಷೀ ।
ದೃಷ್ಟ್ವೋತ್ಥಾಯಾದರೇಣೋಚ್ಚೈರ್ನನಾಮಾಂಗೇನ ದಂಡವತ್ ॥
ಅನುವಾದ
ಹಾಗೆಯೇ ಪದ್ಮಾಕ್ಷಮಣಿ ಮಾಲೆಯನ್ನೂ, ಮೈಗೆ ಮುತ್ತುವ ಕ್ರಿಮಿಕೀಟಗಳನ್ನು ಓಡಿಸಲು ವಸವನ್ನೂ ಧರಿಸಿದ್ದರು. ಬ್ರಹ್ಮೇಂದ್ರಾದಿಗಳಿಗೆ ಪೂಜ್ಯರಾದ ಭಗವಾನ್ ನರ-ನಾರಾಯಣರು ಎತ್ತರವಾದ ಆಕೃತಿಯವರಾಗಿದ್ದರು ಹಾಗೂ ವೇದವನ್ನು ಧರಿಸಿಕೊಂಡಿದ್ದರು. ಅವರ ಶರೀರದಿಂದ ಮಿಂಚಿನಂತೆ ಹೊಳೆಯುವ ಹಳದಿಯಾದ ಬಣ್ಣದ ಕಾಂತಿಯು ಹೊರಸೂಸುತ್ತಿತ್ತು. ನರ-ನಾರಾಯಣ ಋಷಿಗಳು ದಯಮಾಡಿಸಿದನ್ನು ನೋಡಿ ಮಾರ್ಕಂಡೇಯರು ಅತ್ಯಂತ ಆದರಭಾವದಿಂದ ಎದ್ದು ನಿಂತು ದೀರ್ಘದಂಡ ಪ್ರಣಾಮ ಮಾಡಿದರು. ॥34-35॥
(ಶ್ಲೋಕ - 36)
ಮೂಲಮ್
ಸ ತತ್ಸಂದರ್ಶನಾನಂದನಿರ್ವೃತಾತ್ಮೇಂದ್ರಿಯಾಶಯಃ ।
ಹೃಷ್ಟರೋಮಾಶ್ರುಪೂರ್ಣಾಕ್ಷೋ ನ ಸೇಹೇ ತಾವುದೀಕ್ಷಿತುಮ್ ॥
ಅನುವಾದ
ಭಗವಂತನ ದಿವ್ಯದರ್ಶನದಿಂದ ಉಕ್ಕಿಬಂದ ಪರಮಾನಂದದಿಂದ ಆ ಮುನೀಂದ್ರರ ಆತ್ಮ, ಇಂದ್ರಿಯಗಳು, ಅಂತಃಕರಣಗಳೆಲ್ಲ ಶಾಂತಿ ಸಂತೃಪ್ತಿಗಳಿಂದ ತುಂಬಿಹೋಯಿತು. ದೇಹವು ಆನಂದದಿಂದ ನವಿರೆದ್ದು, ಕಣ್ಣುಗಳಲ್ಲಿ ಆನಂದ ಬಾಷ್ಪಗಳು ತುಂಬಿಕೊಳ್ಳಲು ಅವರನ್ನು ನೋಡಲೂ ಅಸಾಧ್ಯವಾಯಿತು. ॥36॥
(ಶ್ಲೋಕ - 37)
ಮೂಲಮ್
ಉತ್ಥಾಯ ಪ್ರಾಂಜಲಿಃ ಪ್ರಹ್ವ ಔತ್ಸುಕ್ಯಾದಾಶ್ಲಿಷನ್ನಿವ ।
ನಮೋ ನಮ ಇತೀಶಾನೌ ಬಭಾಷೇ ಗದ್ಗದಾಕ್ಷರಃ ॥
ಅನುವಾದ
ಅನಂತರ ಅವರು ಕೈ ಜೋಡಿಸಿಕೊಂಡು ಎದ್ದು ನಿಂತರು. ಅವರ ಶರೀರವು ಭಗವಂತನ ಮುಂದೆ ಬಾಗಿತ್ತು. ಭಗವಂತನನ್ನು ಹೃದಯದಲ್ಲೇ ಆಲಿಂಗಿಸಿಕೊಳ್ಳುವರೋ ಎಂಬಂತೆ ಅವರ ಉತ್ಸುಕತೆ ಹೆಚ್ಚಾಗಿತ್ತು. ಅವರ ಕಂಠವು ಗದ್ಗದವಾಗಿ ಮಾತನಾಡಲೂ ಆಗದೆ ಕೇವಲ ‘ನಮೋ ನಮಃ’ ಇಷ್ಟನ್ನು ಬಹುಕಷ್ಟದಿಂದ ನುಡಿದರು. ॥37॥
(ಶ್ಲೋಕ - 38)
ಮೂಲಮ್
ತಯೋರಾಸನಮಾದಾಯ ಪಾದಯೋರವನಿಜ್ಯ ಚ ।
ಅರ್ಹಣೇನಾನುಲೇಪೇನ ಧೂಪಮಾಲ್ಯೈರಪೂಜಯತ್ ॥
ಅನುವಾದ
ಅನಂತರ ಅವರಿಬ್ಬರನ್ನೂ ಆಸನದಲ್ಲಿ ಕುಳ್ಳಿರಿಸಿ ಅತ್ಯಂತ ಭಕ್ತಿಯಿಂದ ಚರಣಗಳನ್ನು ತೊಳೆದು, ಅರ್ಘ್ಯ, ಚಂದನ, ಧೂಪ, ಮಾಲೆ ಮುಂತಾದವುಗಳಿಂದ ಅವರನ್ನು ಪೂಜಿಸತೊಡಗಿದನು. ॥38॥
(ಶ್ಲೋಕ - 39)
ಮೂಲಮ್
ಸುಖಮಾಸನಮಾಸೀನೌ ಪ್ರಸಾದಾಭಿಮುಖೌ ಮುನೀ ।
ಪುನರಾನಮ್ಯ ಪಾದಾಭ್ಯಾಂ ಗರಿಷ್ಠಾವಿದಮಬ್ರವೀತ್ ॥
ಅನುವಾದ
ಭಗವಾನ್ ನರ-ನಾರಾಯಣರು ಸುಖಾಸೀನರಾಗಿ ಕುಳಿತು, ಮಾರ್ಕಂಡೇಯರ ಮೇಲೆ ಕೃಪಾಪ್ರಸಾದದ ಮಳೆಯನ್ನೇ ಸುರಿಸುತ್ತಿದ್ದರು. ಪೂಜಾ ನಂತರ ಮಾರ್ಕಂಡೇಯ ಮುನಿಯು ಆ ಸರ್ವಶ್ರೇಷ್ಠ ಮುನಿವೇಷಧಾರಿ ನರ-ನಾರಾಯಣರ ಚರಣಕಮಲಗಳಲ್ಲಿ ನಮಸ್ಕರಿಸಿ, ವಿನಯದಿಂದ ಹೀಗೆ ಸ್ತುತಿಸತೊಡಗಿದರು. ॥39॥
(ಶ್ಲೋಕ - 40)
ಮೂಲಮ್ (ವಾಚನಮ್)
ಮಾರ್ಕಂಡೇಯ ಉವಾಚ
ಮೂಲಮ್
ಕಿಂ ವರ್ಣಯೇ ತವ ವಿಭೋ ಯದುದೀರಿತೋಸುಃ
ಸಂಸ್ಪಂದತೇ ತಮನು ವಾಙ್ಮನಇಂದ್ರಿಯಾಣಿ ।
ಸ್ಪಂದಂತಿ ವೈ ತನುಭೃತಾಮಜಶರ್ವಯೋಶ್ಚ
ಸ್ವಸ್ಯಾಪ್ಯಥಾಪಿ ಭಜತಾಮಸಿ ಭಾವಬಂಧುಃ ॥
ಅನುವಾದ
ಮಾರ್ಕಂಡೇಯ ಮುನಿಗಳು ಹೇಳಿದರು — ಪ್ರಭೋ! ನಿನ್ನನ್ನು ಹೇಗೆ ವರ್ಣಿಸಲಿ! ಹೇಗೆ ಸ್ತುತಿಸಲಿ! ಎಲ್ಲ ಜೀವರಿಗೂ ಹಾಗೂ ಬ್ರಹ್ಮ-ರುದ್ರರಿಗೂ ಕೂಡ ಪ್ರಾಣ ವ್ಯಾಪಾರ ನಡೆಯುವುದು ನಿನ್ನ ಪ್ರೇರಣೆಯಿಂದಲೇ. ಪ್ರಾಣವನ್ನೇ ಅನುಸರಿಸಿ ಎಲ್ಲರ ಮಾತು, ಮನಸ್ಸು, ಇಂದ್ರಿಯಗಳು ಕೆಲಸ ಮಾಡುವುದು ಆ ನಿನ್ನ ಪ್ರೇರಣೆಯಿಂದಲೇ. ಹೀಗೆ ಸರ್ವನಿಯಾಮಕನಾಗಿ, ಸರ್ವ ಸ್ವತಂತ್ರನಾಗಿದ್ದರೂ ಕೂಡ ನೀನು ನಿನ್ನನ್ನು ಭಜಿಸುವ ಭಕ್ತರ ಪ್ರೇಮಬಂಧನಕ್ಕೆ ಕಟ್ಟು ಬಿದ್ದಿರುವೆಯಲ್ಲ! ॥40॥
(ಶ್ಲೋಕ - 41)
ಮೂಲಮ್
ಮೂರ್ತೀ ಇಮೇ ಭಗವತೋ ಭಗವಂಸಿ ಲೋಕ್ಯಾಃ
ಕ್ಷೇಮಾಯ ತಾಪವಿರಮಾಯ ಚ ಮೃತ್ಯುಜಿತ್ಯೈ ।
ನಾನಾ ಬಿಭರ್ಷ್ಯವಿತುಮನ್ಯತನೂರ್ಯಥೇದಂ
ಸೃಷ್ಟ್ವಾ ಪುನರ್ಗ್ರಸಸಿ ಸರ್ವಮಿವೋರ್ಣನಾಭಿಃ ॥
ಅನುವಾದ
ಪ್ರಭೋ! ನೀನು ಕೇವಲ ವಿಶ್ವದ ರಕ್ಷಣೆಗಾಗಿಯೇ ಮತ್ಸ್ಯ-ಕೂರ್ಮ ಮೊದಲಾದ ಅನೇಕ ಅವತಾರಗಳನ್ನು ಧರಿಸಿದಂತೆಯೇ ನೀನು ಈ ಎರಡೂ ರೂಪಗಳನ್ನು ತ್ರೈಲೋಕ್ಯದ ಕಲ್ಯಾಣಕ್ಕಾಗಿ, ಅದರ ದುಃಖ-ನಿವೃತ್ತಿಗಾಗಿಯೇ ಮತ್ತು ವಿಶ್ವದ ಪ್ರಾಣಿಗಳು ಮೃತ್ಯುವನ್ನು ಗೆದ್ದುಕೊಳ್ಳಲೆಂದೇ ಸ್ವೀಕರಿಸಿದ್ದೀಯೆ. ನೀನು ರಕ್ಷಣೆಯನ್ನು ಮಾಡಿಯೇ ಮಾಡುವೆ. ಜೇಡರ ಹುಳದಂತೆ ನೀನು ಈ ವಿಶ್ವವನ್ನು ನಿನ್ನಲ್ಲೇ ಪ್ರಕಟಗೊಳಿಸಿ, ಕೊನೆಗೆ ತನ್ನಲ್ಲೇ ಲೀನಮಾಡಿಕೊಳ್ಳುವೆ. ॥41॥
(ಶ್ಲೋಕ - 42)
ಮೂಲಮ್
ತಸ್ಯಾವಿತುಃ ಸ್ಥಿರಚರೇಶಿತುರಂಘ್ರಿಮೂಲಂ
ಯತ್ಸ್ಥಂ ನ ಕರ್ಮಗುಣಕಾಲರುಜಃ ಸ್ಪೃಶಂತಿ ।
ಯದ್ವೈ ಸ್ತುವಂತಿ ನಿನಮಂತಿ ಯಜಂತ್ಯಭೀಕ್ಷ್ಣಂ
ಧ್ಯಾಯಂತಿ ವೇದಹೃದಯಾ ಮುನಯಸ್ತದಾಪ್ತ್ಯೈ ॥
ಅನುವಾದ
ನೀನು ಚರಾಚರ ಜಗತ್ತಿನ ನಿಯಾಮಕನಾಗಿರುವೆ. ನಾನು ನಿನ್ನ ಚರಣ ಕಮಲಗಳಿಗೆ ನಮಸ್ಕರಿಸುತ್ತೇನೆ. ನಿನ್ನ ಚರಣಕಮಲಗಳಲ್ಲಿ ಶರಣಾಗತನಾದವನಿಗೆ ಕರ್ಮ, ಗುಣ ಮತ್ತು ಕಾಲಜನಿತ ಕ್ಲೇಶಗಳು ಸ್ಪರ್ಶಿಸಲಾರವು. ವೇದದ ಮರ್ಮಜ್ಞರಾದ ಋಷಿ-ಮುನಿಗಳು ನಿನ್ನ ಪ್ರಾಪ್ತಿಗಾಗಿ ನಿರಂತರವಾಗಿ ನಿನ್ನ ಸ್ತುತಿ, ವಂದನೆ, ಪೂಜೆ ಮತ್ತು ಧ್ಯಾನಮಾಡುತ್ತಾ ಇರುತ್ತಾರೆ. ॥42॥
(ಶ್ಲೋಕ - 43)
ಮೂಲಮ್
ನಾನ್ಯಂ ತವಾಂಘ್ರ್ಯುಪನಯಾದಪವರ್ಗಮೂರ್ತೇಃ
ಕ್ಷೇಮಂ ಜನಸ್ಯ ಪರಿತೋಭಿಯ ಈಶ ವಿದ್ಮಃ ।
ಬ್ರಹ್ಮಾ ಬಿಭೇತ್ಯಲಮತೋ ದ್ವಿಪರಾರ್ಧಧಿಷ್ಣ್ಯಃ
ಕಾಲಸ್ಯ ತೇ ಕಿಮುತ ತತ್ಕೃತಭೌತಿಕಾನಾಮ್ ॥
ಅನುವಾದ
ಪ್ರಭೋ! ಜೀವಿಯ ಸುತ್ತಲೂ ಭಯವೇ ತಾಂಡವವಾಡುತ್ತಿದೆ. ಉಳಿದವರ ಮಾತೇನು; ಸಾಕ್ಷಾತ್ ಬ್ರಹ್ಮನೂ ಕೂಡ ನಿನ್ನ ಕಾಲಸ್ವರೂಪದಿಂದ ಅತ್ಯಂತ ಭಯಪಡುತ್ತಿರುವನು. ಏಕೆಂದರೆ, ಅವನ ಆಯುಸ್ಸೂ ಕೂಡ ಕೇವಲ ಎರಡು ಪರಾರ್ಧಕ್ಕೆ ಸೀಮಿತವಾಗಿದೆಯಲ್ಲ! ಹೀಗಿರುವಾಗ ಅವನಿಂದ ನಿರ್ಮಿತವಾದ ಭೌತಿಕ ಶರೀರವುಳ್ಳ ಪ್ರಾಣಿಗಳ ಸಂಬಂಧವಾಗಿ ಹೇಳುವುದೇನಿದೆ? ಇಂತಹ ಸ್ಥಿತಿಯಲ್ಲಿ ಮೋಕ್ಷಸ್ವರೂಪನಾದ ನಿನ್ನ ಚರಣ ಕಮಲಗಳಲ್ಲಿ ಶರಣಾಗುವುದಲ್ಲದೆ ಬೇರೆ ಯಾವುದೇ ಪರಮ ಕಲ್ಯಾಣದ, ಸುಖ-ಶಾಂತಿಯ ಉಪಾಯ ನಮ್ಮ ಅರಿವಿಗೆ ಬರುವುದಿಲ್ಲ. ॥43॥
(ಶ್ಲೋಕ - 44)
ಮೂಲಮ್
ತದ್ವೈ ಭಜಾಮ್ಯೃತಧಿಯಸ್ತವ ಪಾದಮೂಲಂ
ಹಿತ್ವೇದಮಾತ್ಮಚ್ಛದಿ ಚಾತ್ಮಗುರೋಃ ಪರಸ್ಯ ।
ದೇಹಾದ್ಯಪಾರ್ಥಮಸದಂತ್ಯಮಭಿಜ್ಞಮಾತ್ರಂ
ವಿಂದೇತ ತೇ ತರ್ಹಿ ಸರ್ವಮನೀಷಿತಾರ್ಥಮ್ ॥
ಅನುವಾದ
ಭಗವಂತನೇ! ನೀನು ಸಮಸ್ತ ಜೀವರ ಪರಮಗುರುವೂ, ಸರ್ವಶ್ರೇಷ್ಠನೂ, ಸತ್ಯಜ್ಞಾನಸ್ವರೂಪನೂ ಆಗಿರುವೆ. ಅದಕ್ಕಾಗಿ ಆತ್ಮಸ್ವರೂಪವನ್ನು ಮುಚ್ಚಿಬಿಡುವ ದೇಹ-ಗೇಹ ಮೊದಲಾದ ನಿಷ್ಫಲ, ಅಸತ್ಯ, ನಾಶವುಳ್ಳ ಮತ್ತು ಕೇವಲ ಪ್ರತೀತಿ ಮಾತ್ರವಾಗಿರುವ ಪದಾರ್ಥಗಳನ್ನು ತ್ಯಜಿಸಿ ನಾನು ನಿನ್ನ ಚರಣಕಮಲಗಳಲ್ಲಿ ಶರಣಾಗಿದ್ದೇನೆ. ಯಾವುದೇ ಪ್ರಾಣಿಯೂ ನಿನ್ನಲ್ಲಿ ಶರಣಾಗತನಾದರೆ ಅವನು ಅದರಿಂದ ತನ್ನ ಎಲ್ಲ ಅಭೀಷ್ಟವಾದ ಪದಾರ್ಥಗಳನ್ನು ಪಡೆದುಕೊಳ್ಳುವನು. ॥44॥
(ಶ್ಲೋಕ - 45)
ಮೂಲಮ್
ಸತ್ತ್ವಂ ರಜಸ್ತಮ ಇತೀಶ ತವಾತ್ಮಬಂಧೋ
ಮಾಯಾಮಯಾಃ ಸ್ಥಿತಿಲಯೋದಯಹೇತವೋಸ್ಯ ।
ಲೀಲಾ ಧೃತಾ ಯದಪಿ ಸತ್ತ್ವಮಯೀ ಪ್ರಶಾಂತ್ಯೈ
ನಾನ್ಯೇ ನೃಣಾಂ ವ್ಯಸನಮೋಹಭಿಯಶ್ಚ ಯಾಭ್ಯಾಮ್ ॥
ಅನುವಾದ
ಜೀವನ ಪರಮಸುಹೃದನಾದ ಪ್ರಭೋ! ಸತ್ತ್ವ, ರಜ, ತಮ - ಈ ಮೂರು ಗುಣಗಳೂ ನಿನ್ನ ಮೂರ್ತಿಯೇ ಆಗಿದ್ದು, ಇವುಗಳ ಮೂಲಕ ನೀನು ಜಗತ್ತಿನ ಉತ್ಪತ್ತಿ, ಸ್ಥಿತಿ, ಲಯ ಮುಂತಾದ ಅನೇಕ ಮಾಯಾಮಯ ಲೀಲೆಗಳನ್ನು ಮಾಡುತ್ತಿದ್ದರೂ, ನಿನ್ನ ಸತ್ತ್ವಗುಣ ಮಯಮೂರ್ತಿಯೇ ಜೀವಿಗಳಿಗೆ ಶಾಂತಿಯನ್ನು ಕರುಣಿಸುತ್ತದೆ. ರಜೋಗುಣೀ ಮತ್ತು ತಮೋಗುಣೀ ಮೂರ್ತಿಗಳಿಂದ ಜೀವರಿಗೆ ಶಾಂತಿ ಸಿಗಲಾರದು. ಅವರಿಂದಲಾದರೋ ದುಃಖ, ಮೋಹ, ಭಯ ಇವುಗಳ ವೃದ್ಧಿಯೇ ಆಗುವುದು. ॥45॥
(ಶ್ಲೋಕ - 46)
ಮೂಲಮ್
ತಸ್ಮಾತ್ತವೇಹ ಭಗವನ್ನಥ ತಾವಕಾನಾಂ
ಶುಕ್ಲಾಂ ತನುಂ ಸ್ವದಯಿತಾಂ ಕುಶಲಾ ಭಜಂತಿ ।
ಯತ್ ಸಾತ್ವತಾಃ ಪುರುಷರೂಪಮುಶಂತಿ ಸತ್ತ್ವಂ
ಲೋಕೋ ಯತೋಭಯಮುತಾತ್ಮಸುಖಂ ನ ಚಾನ್ಯತ್ ॥
ಅನುವಾದ
ಭಗವಂತನೇ! ಆದುದರಿಂದ ಶ್ರೇಯಸ್ಸನ್ನು ಬಯಸುವ ವಿವೇಕಿಗಳು ನಿನಗೂ ಮತ್ತು ನಿನ್ನ ಭಕ್ತರಿಗೂ ಪ್ರಿಯವಾದ ಶುದ್ಧಸಾತ್ವಿಕ ನರ-ನಾರಾಯಣ ರೂಪವನ್ನೇ ಭಜಿಸುತ್ತಾರೆ. ಪಾಂಚರಾತ್ರ ಸಿದ್ಧಾಂತವನ್ನು ಬಲ್ಲ ಸಾತ್ವತರು ನಿನ್ನ ವಿಶುದ್ಧ ಸತ್ತ್ವಮಯವಾದ ಆ ಪರಮಪುರುಷ ಸ್ವರೂಪವನ್ನೇ ಬಯಸುತ್ತಾರೆ. ಅದರ ಉಪಾಸನೆಯಿಂದಲೆ ಅಭಯ ಪ್ರದವಾದ ವೈಕುಂಠಧಾಮವು ದೊರೆಯುವುದು. ಆತ್ಮ ಸುಖವು ದೊರೆಯುವುದು. ರಜೋಗುಣ-ತಮೋಗುಣ ಮೂರ್ತಿಗಳ ಉಪಾಸನೆಯಿಂದಲ್ಲ. ॥46॥
(ಶ್ಲೋಕ - 47)
ಮೂಲಮ್
ತಸ್ಮೈ ನಮೋ ಭಗವತೇ ಪುರುಷಾಯ ಭೂಮ್ನೇ
ವಿಶ್ವಾಯ ವಿಶ್ವಗುರವೇ ಪರದೇವತಾಯೈ ।
ನಾರಾಯಣಾಯ ಋಷಯೇ ಚ ನರೋತ್ತಮಾಯ
ಹಂಸಾಯ ಸಂಯತಗಿರೇ ನಿಗಮೇಶ್ವರಾಯ ॥
ಅನುವಾದ
ಭಗವಂತನೇ! ಆದುದರಿಂದ ಮಹಾಪುರುಷನೂ, ವಿಶ್ವರೂಪಿಯೂ, ವಿಶ್ವಕ್ಕೆಲ್ಲ ಗುರುವೂ, ಪರದೇವತೆಯೂ, ಶುದ್ಧಹಂಸ ಸ್ವರೂಪಿಯೂ, ಮಹಾಮೌನಿಯೂ, ವೇದಾಚಾರ್ಯನೂ, ನಾರಾಯಣ ಮಹರ್ಷಿ ಮತ್ತು ನರಮಹರ್ಷಿರೂಪಿಯೂ ಆದ ನಿನಗೆ ನಮಸ್ಕಾರವು. ॥47॥
(ಶ್ಲೋಕ - 48)
ಮೂಲಮ್
ಯಂ ವೈ ನ ವೇದ ವಿತಥಾಕ್ಷಪಥೈರ್ಭ್ರಮದ್ಧೀಃ
ಸಂತಂ ಸ್ವಖೇಷ್ವಸುಷು ಹೃದ್ಯಪಿ ದೃಕ್ಪಥೇಷು ।
ತನ್ಮಾಯಯಾವೃತಮತಿಃ ಸ ಉ ಏವ ಸಾಕ್ಷಾ-
ದಾದ್ಯಸ್ತವಾಖಿಲಗುರೋರುಪಸಾದ್ಯ ವೇದಮ್ ॥
ಅನುವಾದ
ಜಗದ್ಗುರುವೇ! ನೀನು ಎಲ್ಲ ಜೀವರ ಇಂದ್ರಿಯಗಳಲ್ಲಿಯೂ ಅವುಗಳ ವಿಷಯಗಳಲ್ಲೂ, ಪ್ರಾಣಗಳಲ್ಲೂ ಹಾಗೂ ಹೃದಯದಲ್ಲೂ ವಾಸವಾಗಿದ್ದರೂ ನಿನ್ನ ಮಾಯೆಯಿಂದ ಮೋಹಗೊಂಡ ಬುದ್ಧಿಯುಳ್ಳ ಜೀವರು ನಿನ್ನನ್ನು ತಿಳಿದುಕೊಳ್ಳಲಾರರು. ಲೋಕಗುರುವಾದ ನೀನು ಉಪದೇಶ ಮಾಡಿದ ಜ್ಞಾನಭಂಡಾರರೂಪವಾದ ವೇದದಲ್ಲಿ ವಿಶ್ವಾಸವುಳ್ಳವರಾಗಿ, ಅದರ ಅನುಷ್ಠಾನದಿಂದ ಶುದ್ಧರಾದಾಗ ತಾನೇ ಅವರು ನಿನ್ನನ್ನು ಸಾಕ್ಷಾತ್ಕರಿಸಿಕೊಳ್ಳಲು ಸಮರ್ಥರಾಗುತ್ತಾರೆ. ॥48॥
(ಶ್ಲೋಕ - 49)
ಮೂಲಮ್
ಯದ್ದರ್ಶನಂ ನಿಗಮ ಆತ್ಮರಹಃಪ್ರಕಾಶಂ
ಮುಹ್ಯಂತಿ ಯತ್ರ ಕವಯೋಜಪರಾ ಯತಂತಃ ।
ತಂ ಸರ್ವವಾದವಿಷಯಪ್ರತಿರೂಪಶೀಲಂ
ವಂದೇ ಮಹಾಪುರುಷಮಾತ್ಮನಿಗೂಢಬೋಧಮ್ ॥
ಅನುವಾದ
ಮಹಾಪುರುಷನಾದ ಪ್ರಭೋ! ನಿನ್ನ ಸ್ವರೂಪದ ರಹಸ್ಯವನ್ನು ಪ್ರಕಟಗೊಳಿಸುವ, ನಿನ್ನ ಸಾಕ್ಷಾತ್ಕಾರ ಮಾಡಿಸುವಂತಹ ಜ್ಞಾನವು ಪೂರ್ಣ ರೂಪದಿಂದ ವೇದದರ್ಶನದಲ್ಲಿ ನಿಹಿತವಾಗಿದೆ. ಬ್ರಹ್ಮದೇವರೇ ಮುಂತಾದ ಮಹಾಜ್ಞಾನಿಗಳೂ ಕೂಡ ಪ್ರಾಕೃತ ತಂತ್ರಗಳಲ್ಲಿ ಆಸಕ್ತರಾದರೆ ಎಷ್ಟೇ ಪ್ರಯತ್ನಪಟ್ಟರೂ ನಿನ್ನ ತತ್ತ್ವದ ವಿಷಯದಲ್ಲಿ ಮೋಹಕ್ಕೆ ಒಳಗಾಗುತ್ತಾರೆ. ಬೇರೆ-ಬೇರೆ ಮತವುಳ್ಳವರು ನಿನ್ನ ಕುರಿತು ಹೇಗೆ ಯೋಚಿಸುತ್ತಾರೋ, ಹಾಗೆಯೇ ಶೀಲ-ಸ್ವಭಾವಗಳನ್ನು ಮತ್ತು ರೂಪಗಳನ್ನು ಧರಿಸಿ ಅವರ ಮುಂದೆ ಪ್ರಕಟನಾಗುವ ಲೀಲಾವಿಹಾರಿಯು ನೀನೇ ಆಗಿರುವೆ. ವಾಸ್ತವವಾಗಿ ದೇಹವೇ ಮೊದಲಾದ ಸಮಸ್ತ ಉಪಾಧಿಗಳಲ್ಲಿ ಅಡಗಿರುವ ವಿಶುದ್ಧ ವಿಜ್ಞಾನಮಯನೂ, ಪುರುಷೋತ್ತಮನೂ ಆದ ನಿನಗೆ ನಾನು ನಮಸ್ಕರಿಸುತ್ತೇನೆ. ॥49॥
ಅನುವಾದ (ಸಮಾಪ್ತಿಃ)
ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಅಷ್ಟಮೋಽಧ್ಯಾಯಃ ॥8॥