೦೭

[ಏಳನೆಯ ಅಧ್ಯಾಯ]

ಭಾಗಸೂಚನಾ

ಅಥರ್ವವೇದದ ಶಾಖೆಗಳು ಮತ್ತು ಪುರಾಣಗಳ ಲಕ್ಷಣ

(ಶ್ಲೋಕ - 1)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಅಥರ್ವವಿತ್ಸುಮಂತುಶ್ಚ ಶಿಷ್ಯಮಧ್ಯಾಪಯತ್ ಸ್ವಕಾಮ್ ।
ಸಂಹಿತಾಂ ಸೋಪಿ ಪಥ್ಯಾಯ ವೇದದರ್ಶಾಯ ಚೋಕ್ತವಾನ್ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳಿರಾ! ಅಥರ್ವವೇದವನ್ನು ಸುಮಂತುವು ಅಧ್ಯಯನ ಮಾಡಿದ್ದನು ಎಂದು ಹೇಳಿದ್ದೆನಷ್ಟೆ. ಅವನು ಅಥರ್ವ ಸಂಹಿತೆಯನ್ನು ತನ್ನ ಶಿಷ್ಯನಾದ ಕಬಂಧನಿಗೆ ಹೇಳಿಕೊಟ್ಟರು. ಕಬಂಧಕನು ಆ ಸಂಹಿತೆಯನ್ನು ಎರಡು ಭಾಗಗಳಾಗಿಸಿ ಪಥ್ಯ ಮತ್ತು ವೇದ ದರ್ಶರಿಗೆ ಅದನ್ನು ಅಧ್ಯಯನ ಮಾಡಿಸಿದನು. ॥1॥

(ಶ್ಲೋಕ - 2)

ಮೂಲಮ್

ಶೌಕ್ಲಾಯನಿರ್ಬ್ರಹ್ಮಬಲಿರ್ಮೋದೋಷಃ ಪಿಪ್ಪಲಾಯನಿಃ ।
ವೇದದರ್ಶಸ್ಯ ಶಿಷ್ಯಾಸ್ತೇ ಪಥ್ಯಶಿಷ್ಯಾನಥೋ ಶೃಣು ॥

ಅನುವಾದ

ವೇದದರ್ಶನಿಗೆ ಶೌಕ್ಲಾಯನಿ, ಬ್ರಹ್ಮಬಲಿ, ಮೊದೋಷ ಮತ್ತು ಪಿಪ್ಪಲಾಯನಿ ಎಂಬ ನಾಲ್ಕು ಶಿಷ್ಯರಿದ್ದರು. ಈಗ ಪಥ್ಯರ ಶಿಷ್ಯರ ಹೆಸರನ್ನು ಕೇಳಿರಿ. ॥2॥

(ಶ್ಲೋಕ - 3)

ಮೂಲಮ್

ಕುಮುದಃ ಶುನಕೋ ಬ್ರಹ್ಮನ್ ಜಾಜಲಿಶ್ಚಾಪ್ಯಥರ್ವವಿತ್ ।
ಬಭ್ರುಃ ಶಿಷ್ಯೋಥಾಂಗಿರಸಃ ಸೈಂಧವಾಯನ ಏವ ಚ ।
ಅಧೀಯೇತಾಂ ಸಂಹಿತೇ ದ್ವೇ ಸಾವರ್ಣ್ಯಾದ್ಯಾಸ್ತಥಾಪರೇ ॥

(ಶ್ಲೋಕ - 4)

ಮೂಲಮ್

ನಕ್ಷತ್ರಕಲ್ಪಃ ಶಾಂತಿಶ್ಚ ಕಶ್ಯಪಾಂಗಿರಸಾದಯಃ ।
ಏತೇ ಆಥರ್ವಣಾಚಾರ್ಯಾಃ ಶೃಣು ಪೌರಾಣಿಕಾನ್ಮುನೇ ॥

ಅನುವಾದ

ಶೌನಕರೇ! ಪಥ್ಯನಿಗೆ ಕುಮುದ, ಶುನಕ, ಅಥರ್ವವೇತ್ತಾ ಜಾಜಲಿ ಎಂಬ ಮೂವರು ಶಿಷ್ಯರಿದ್ದರು. ಆಂಗಿರಸ ಗೋತ್ರೋತ್ಪನ್ನ ಶುನಕನಿಗೆ ಬಭ್ರು ಮತ್ತು ಸೈಂಧವಾಯನರೆಂಬ ಇಬ್ಬರು ಶಿಷ್ಯರಿದ್ದರು, ಅವರು ಎರಡು ಸಂಹಿತೆಗಳನ್ನು ಅಧ್ಯಯನ ಮಾಡಿದರು. ಅಥರ್ವವೇದದ ಆಚಾರ್ಯರಲ್ಲಿ ಇವ ರಲ್ಲದೆ ಸೈಂಧವಾಯನಾದಿಗಳ ಶಿಷ್ಯರು ಸಾವರ್ಣ್ಯ ಮುಂತಾದವರು ಹಾಗೂ ನಕ್ಷತ್ರಕಲ್ಪ, ಶಾಂತಿ, ಕಶ್ಯಪ ಆಂಗೀರಸ ಮೊದಲಾದ ಅನೇಕ ವಿದ್ವಾಂಸರು ಇನ್ನೂ ಆಗಿ ಹೋಗಿರುವರು. ಈಗ ನಾನು ಪೌರಾಣಿಕರ ಕುರಿತು ಹೇಳುವೆನು ಕೇಳಿರಿ. ॥3-4॥

(ಶ್ಲೋಕ - 5)

ಮೂಲಮ್

ತ್ರಯ್ಯಾರುಣಿಃ ಕಶ್ಯಪಶ್ಚ ಸಾವರ್ಣಿರಕೃತವ್ರಣಃ ।
ವೈಶಂಪಾಯನಹಾರೀತೌ ಷಡ್ವೈ ಪೌರಾಣಿಕಾ ಇಮೇ ॥

ಅನುವಾದ

ಶೌನಕರೇ! ತ್ರಯ್ಯಾರುಣಿ, ಕಶ್ಯಪ, ಸಾವರ್ಣಿ, ಅಕೃತವ್ರಣ, ವೈಶಂಪಾಯನ ಮತ್ತು ಹಾರೀತ ಈ ಆರು ಮಂದಿ ಪುರಾಣಗಳ ಪ್ರಸಿದ್ಧ ಆಚಾರ್ಯರು. ॥5॥

ಮೂಲಮ್

(ಶ್ಲೋಕ - 6)
ಅಧೀಯಂತ ವ್ಯಾಸಶಿಷ್ಯಾತ್ಸಂಹಿತಾಂ ಮತ್ಪಿತುರ್ಮುಖಾತ್ ।
ಏಕೈಕಾಮಹಮೇತೇಷಾಂ ಶಿಷ್ಯಃ ಸರ್ವಾಃ ಸಮಧ್ಯಗಾಮ್ ॥

ಅನುವಾದ

ಇವರೆಲ್ಲರೂ ನನ್ನ ತಂದೆಯಿಂದ ಒಂದೊಂದು ಪುರಾಣ ಸಂಹಿತೆಯನ್ನು ಅಧ್ಯಯನ ಮಾಡಿದ್ದರು. ನನ್ನ ತಂದೆ ಯಾದರೋ ಸಾಕ್ಷಾತ್ ಮಹರ್ಷಿ ವೇದವ್ಯಾಸರಿಂದ ಆ ಎಲ್ಲ ಸಂಹಿತೆಗಳನ್ನು ಅಧ್ಯಯನ ಮಾಡಿದ್ದರು. ನಾನು ಆ ಆರು ಆಚಾರ್ಯರಿಂದ ಎಲ್ಲ ಸಂಹಿತೆಗಳನ್ನು ಅಧ್ಯಯನ ಮಾಡಿದೆನು. ॥6॥

(ಶ್ಲೋಕ - 7)

ಮೂಲಮ್

ಕಶ್ಯಪೋಹಂ ಚ ಸಾವರ್ಣೀ ರಾಮಶಿಷ್ಯೋಕೃತವ್ರಣಃ ।
ಅಧೀಮಹಿ ವ್ಯಾಸಶಿಷ್ಯಾಚ್ಚತಸ್ರೋ ಮೂಲಸಂಹಿತಾಃ ॥

ಅನುವಾದ

ಆ ಆರು ಸಂಹಿತೆಗಳಲ್ಲದೆ ಇನ್ನೂ ನಾಲ್ಕು ಮೂಲ ಸಂಹಿತೆಗಳಿದ್ದವು. ಅವನ್ನೂ, ಕೂಡ ಕಶ್ಯಪ, ಸಾವರ್ಣಿ, ಪರಶುರಾಮರಶಿಷ್ಯ ಅಕೃತವ್ರಣ ಅವರೆಲ್ಲರೊಂದಿಗೆ ನಾನು ವೇದ ವ್ಯಾಸರ ಶಿಷ್ಯರು ನನ್ನ ತಂದೆಯವರೂ ಆದ ರೋಮ ಹರ್ಷಣರಿಂದ ಅಧ್ಯಯನ ಮಾಡಿದ್ದೆ. ॥7॥

(ಶ್ಲೋಕ - 8)

ಮೂಲಮ್

ಪುರಾಣಲಕ್ಷಣಂ ಬ್ರಹ್ಮನ್ಬ್ರಹ್ಮರ್ಷಿಭಿರ್ನಿರೂಪಿತಮ್ ।
ಶೃಣುಷ್ವ ಬುದ್ಧಿಮಾಶ್ರಿತ್ಯ ವೇದಶಾಸಾನುಸಾರತಃ ॥

ಅನುವಾದ

ಶೌನಕಾದಿಗಳೇ! ಮಹರ್ಷಿಗಳು ವೇದ, ಶಾಸಗಳಿಗೆ ಅನುಗುಣವಾಗಿ ಪುರಾಣಗಳ ಲಕ್ಷಣಗಳನ್ನು ಹೇಳಿರುವರು. ಈಗ ನೀವೆಲ್ಲ ಸಾವಧಾನವಾಗಿ ಅವುಗಳ ವರ್ಣನೆಯನ್ನು ಕೇಳಿರಿ. ॥8॥

(ಶ್ಲೋಕ - 9)

ಮೂಲಮ್

ಸರ್ಗೋಸ್ಯಾಥ ವಿಸರ್ಗಶ್ಚ ವೃತ್ತೀ ರಕ್ಷಾಂತರಾಣಿ ಚ ।
ವಂಶೋ ವಂಶಾನುಚರಿತಂ ಸಂಸ್ಥಾ ಹೇತುರಪಾಶ್ರಯಃ ॥

(ಶ್ಲೋಕ - 10)

ಮೂಲಮ್

ದಶಭಿರ್ಲಕ್ಷಣೈರ್ಯುಕ್ತಂ ಪುರಾಣಂ ತದ್ವಿದೋ ವಿದುಃ ।
ಕೇಚಿತ್ ಪಂಚವಿಧಂ ಬ್ರಹ್ಮನ್ಮಹದಲ್ಪವ್ಯವಸ್ಥಯಾ ॥

ಅನುವಾದ

ಶೌನಕರೇ! ಸರ್ಗ, ವಿಸರ್ಗ, ವೃತ್ತಿ, ರಕ್ಷಣೆ, ಮನ್ವಂತರ, ವಂಶ, ವಂಶಾನುಚರಿತ, ಸಂಸ್ಥೆ (ಪ್ರಳಯ) ಹೇತು (ಊತಿ) ಮತ್ತು ಅಪಾಶ್ರಯಗಳೆಂಬ ಪುರಾಣಗಳ ಹತ್ತು ಲಕ್ಷಣಗಳನ್ನು ಪೌರಾಣಿಕರಾದ ವಿದ್ವಾಂಸರು ಹೇಳಿರುವರು. ಕೆಲ-ಕೆಲವು ಆಚಾರ್ಯರು ಪುರಾಣಗಳ ಐದೇ ಲಕ್ಷಣಗಳನ್ನು ತಿಳಿಸುತ್ತಾರೆ. ಎರಡೂ ಸರಿಯಾಗಿಯೇ ಇದೆ. ಏಕೆಂದರೆ, ದೊಡ್ಡ ಪುರಾಣಗಳಲ್ಲಿ ದಶಲಕ್ಷಣಗಳಿರುತ್ತವೆ. ಸಣ್ಣ ಪುರಾಣಗಳಲ್ಲಿ ಐದು. ವಿಸ್ತಾರಮಾಡಿ ಹತ್ತು ಲಕ್ಷಣ ಹೇಳುತ್ತಾರೆ, ಸಂಕ್ಷೇಪದಲ್ಲಿ ಐದು. ॥9-10॥

(ಶ್ಲೋಕ - 11)

ಮೂಲಮ್

ಅವ್ಯಾಕೃತಗುಣಕ್ಷೋಭಾನ್ಮಹತಸಿವೃತೋಹಮಃ ।
ಭೂತಮಾತ್ರೇಂದ್ರಿಯಾರ್ಥಾನಾಂ ಸಂಭವಃ ಸರ್ಗ ಉಚ್ಯತೇ ॥

ಅನುವಾದ

(ಈಗ ಇವುಗಳ ಲಕ್ಷಣಗಳನ್ನು ಕೇಳಿರಿ) ಮೂಲಪ್ರಕೃತಿಯಲ್ಲಿ ಲೀನವಾದ ಗುಣಗಳು ಕ್ಷುಬ್ಧವಾದಾಗ ಮಹತ್ತತ್ವದ ಉತ್ಪತ್ತಿಯಾಗುತ್ತದೆ. ಮಹತ್ತತ್ವದಿಂದ ತಾಮಸ, ರಾಜಸ ಮತ್ತು ವೈಕಾರಿಕ (ಸಾತ್ವಿಕ)ವೆಂಬ ಮೂರು ಅಹಂಕಾರಗಳು ಉಂಟಾಗುತ್ತವೆ. ತ್ರಿವಿಧ ಅಹಂಕಾರಗಳಿಂದಲೇ ಪಂಚತನ್ಮಾತ್ರೆಗಳು, ಇಂದ್ರಿಯಗಳು ಮತ್ತು ವಿಷಯಗಳ ಉತ್ಪತ್ತಿಯಾಗುತ್ತವೆ. ಈ ಉತ್ಪತ್ತಿಯ ಕ್ರಮವನ್ನೇ ‘ಸರ್ಗ’ ಎಂದು ಹೇಳುತ್ತಾರೆ. ॥11॥

(ಶ್ಲೋಕ - 12)

ಮೂಲಮ್

ಪುರುಷಾನುಗೃಹೀತಾನಾಮ್ ಏತೇಷಾಂ ವಾಸನಾಮಯಃ ।
ವಿಸರ್ಗೋಯಂ ಸಮಾಹಾರೋ ಬೀಜಾದ್ಬೀಜಂ ಚರಾಚರಮ್ ॥

ಅನುವಾದ

ಪರಮೇಶ್ವರನ ಅನುಗ್ರಹದಿಂದ ಸೃಷ್ಟಿಯ ಸಾಮರ್ಥ್ಯವನ್ನು ಪಡೆದು ಮಹತ್ತತ್ತ್ವಾದಿ ಜೀವಿಗಳ ಪೂರ್ವಕರ್ಮಗಳನುಸಾರವಾಗಿ ಒಳ್ಳೆಯ-ಕೆಟ್ಟ ವಾಸನೆಗಳ ಪ್ರಧಾನತೆಯಿಂದ ಬೀಜದಿಂದ ಬೀಜವು ಹುಟ್ಟುವಂತೆ ಈ ಚರಾಚರ ಶರೀರಾತ್ಮಕ ಜೀವಿಯ ಉಪಾಧಿಗಳ ಸೃಷ್ಟಿಯನ್ನೇ ವಿಸರ್ಗ ಎಂದು ಹೇಳುತ್ತಾರೆ. ॥12॥

(ಶ್ಲೋಕ - 13)

ಮೂಲಮ್

ವೃತ್ತಿರ್ಭೂತಾನಿ ಭೂತಾನಾಂ ಚರಾಣಾಮಚರಾಣಿ ಚ ।
ಕೃತಾ ಸ್ವೇನ ನೃಣಾಂ ತತ್ರ ಕಾಮಾಚ್ಚೋದನಯಾಪಿ ವಾ ॥

ಅನುವಾದ

ಚರ ಪ್ರಾಣಿಗಳ, ಅಚರ ಪದಾರ್ಥಗಳ ಜೀವನ ನಿರ್ವಾಹದ ಸಾಮಗ್ರಿಯು ‘ವೃತ್ತಿ’ಯಾಗಿದೆ. ಚರಪ್ರಾಣಿಗಳ ದುಗ್ಧಾದಿಗಳು ಜೀವನೋಪಾಯ ಸಾಮಗ್ರಿಯೇ. ಇವುಗಳಲ್ಲಿ ಕೆಲವನ್ನು ಮನುಷ್ಯರು ಸ್ವಾಭಾವಿಕ ಕಾಮನೆಗಳಿಂದ ನಿಶ್ಚಿತಪಡಿಸಿಕೊಂಡರು. ಕೆಲವನ್ನು ಶಾಸ್ತ್ರದ ಆಜ್ಞೆಯಂತೆ ನಿಶ್ಚಿತಪಡಿಸಿದರು. ॥13॥

(ಶ್ಲೋಕ - 14)

ಮೂಲಮ್

ರಕ್ಷಾಚ್ಯುತಾವತಾರೇಹಾ ವಿಶ್ವಸ್ಯಾನು ಯುಗೇ ಯುಗೇ ।
ತಿರ್ಯಙ್ಮರ್ತ್ಯರ್ಷಿದೇವೇಷು ಹನ್ಯಂತೇ ಯೈಸಯೀದ್ವಿಷಃ ॥

ಅನುವಾದ

ಭಗವಂತನು ಯುಗ-ಯುಗಳಲ್ಲಿ ಪಶು-ಪಕ್ಷಿ, ಮನುಷ್ಯ, ಋಷಿ, ದೇವತೆ ಮುಂತಾದ ರೂಪಗಳಲ್ಲಿ ಅವತರಿಸಿ ಅನೇಕ ಲೀಲೆಗಳನ್ನು ಮಾಡುವನು. ಈ ಅವತಾರಗಳಲ್ಲಿ ಅವನು ವೇದಧರ್ಮದ ವಿರೋಧಿಗಳನ್ನು ಸಂಹರಿಸುತ್ತಾನೆ. ಅವನ ಈ ಅವತಾರ ಲೀಲೆಗಳು ವಿಶ್ವದ ರಕ್ಷಣೆಗಾಗಿಯೇ ಇರುತ್ತವೆ. ಅದಕ್ಕಾಗಿ ಇದನ್ನು ‘ರಕ್ಷೆ’ ಎಂದು ಹೇಳುತ್ತಾರೆ. ॥14॥

(ಶ್ಲೋಕ - 15)

ಮೂಲಮ್

ಮನ್ವಂತರಂ ಮನುರ್ದೇವಾ ಮನುಪುತ್ರಾಃ ಸುರೇಶ್ವರಃ ।
ಋಷಯೋಂಶಾವತಾರಶ್ಚ ಹರೇಃ ಷಡ್ವಿಧಮುಚ್ಯತೇ ॥

ಅನುವಾದ

ಮನುಗಳು, ದೇವತೆಗಳು, ಮನುಪುತ್ರರು, ಇಂದ್ರ, ಸಪ್ತರ್ಷಿಗಳು ಮತ್ತು ಭಗವಂತನ ಅಂಶಾವತಾರಗಳು - ಈ ಆರು ವಿಶೇಷತೆಯಿಂದ ಕೂಡಿದ ಸಮಯಕ್ಕೆ ‘ಮನ್ವಂತರ’ವೆಂದು ಹೇಳುತ್ತಾರೆ. ॥15॥

(ಶ್ಲೋಕ - 16)

ಮೂಲಮ್

ರಾಜ್ಞಾಂ ಬ್ರಹ್ಮಪ್ರಸೂತಾನಾಂ ವಂಶಸೈಕಾಲಿಕೋನ್ವಯಃ ।
ವಂಶಾನುಚರಿತಂ ತೇಷಾಂ ವೃತ್ತಂ ವಂಶಧರಾಶ್ಚ ಯೇ ॥

ಅನುವಾದ

ಬ್ರಹ್ಮದೇವರಿಂದ ಆದ ರಾಜರ ಸೃಷ್ಟಿ, ಅವರ ಭೂತ, ಭವಿಷ್ಯ, ವರ್ತಮಾನ ಕಾಲದ ಸಂತಾನ ಪರಂಪರೆಯನ್ನು ‘ವಂಶ’ ಎಂದು ಹೇಳುತ್ತಾರೆ. ಆ ರಾಜರ ಮತ್ತು ಅವರ ವಂಶದವರ ಚರಿತ್ರೆಗಳನ್ನು ‘ವಂಶಾನುಚರಿತ’ ಎಂದು ಹೇಳುತ್ತಾರೆ. ॥16॥

(ಶ್ಲೋಕ - 17)

ಮೂಲಮ್

ನೈಮಿತ್ತಿಕಃ ಪ್ರಾಕೃತಿಕೋ ನಿತ್ಯ ಆತ್ಯಂತಿಕೋ ಲಯಃ ।
ಸಂಸ್ಥೇತಿ ಕವಿಭಿಃ ಪ್ರೋಕ್ತಾ ಚತುರ್ಧಾಸ್ಯ ಸ್ವಭಾವತಃ ॥

ಅನುವಾದ

ಈ ವಿಶ್ವ ಬ್ರಹ್ಮಾಂಡವು ಸ್ವಾಭಾವಿಕವಾಗಿಯೇ ಪ್ರಳಯವಾಗುತ್ತದೆ. ಆ ಪ್ರಳಯಗಳಲ್ಲಿ ನೈಮಿತ್ತಿಕ, ಪ್ರಾಕೃತಿಕ, ನಿತ್ಯ, ಆತ್ಯಂತಿಕ ಎಂಬ ನಾಲ್ಕು ಭೇದಗಳಿವೆ. ತತ್ತ್ವಜ್ಞರಾದ ವಿದ್ವಾಂಸರು ಇದನ್ನು ‘ಸಂಸ್ಥಾ’ ಎಂದು ಹೇಳಿರುವರು. ॥17॥

(ಶ್ಲೋಕ - 18)

ಮೂಲಮ್

ಹೇತುರ್ಜೀವೋಸ್ಯ ಸರ್ಗಾದೇರವಿದ್ಯಾ ಕರ್ಮಕಾರಕಃ ।
ಯಂ ಚಾನುಶಯಿನಂ ಪ್ರಾಹುರವ್ಯಾಕೃತಮುತಾಪರೇ ॥

ಅನುವಾದ

ಸರ್ಗ-ವಿಸರ್ಗ ಮುಂತಾದವುಗಳಿಗೆ ಕಾರಣವಾದ ಜೀವನನ್ನೇ ಪುರಾಣಲಕ್ಷಣಗಲ್ಲಿ ‘ಹೇತು’ ಎನಿಸುತ್ತದೆ. ಅಜ್ಞಾನವಶದಿಂದ ಅನೇಕ ಕರ್ಮಕಲಾಪಗಳಲ್ಲಿ ಸಿಕ್ಕಿ ಅಲೆದಾಡುತ್ತಿರುವ ಜೀವವೇ ಈ ಪ್ರಪಂಚ ಸೃಷ್ಟಿಗೆ ಹೇತು (ಕಾರಣ)ವಾಗಿದೆ. ಜೀವಾತ್ಮರಿಗೆ ಕರ್ಮಫಲಗಳನ್ನು ಅನುಭವಿಸಲಿಕ್ಕಾಗಿಯೇ ಪ್ರಪಂಚದ ಸೃಷ್ಟಿಯಾಗಿದೆ. (ಸೃಷ್ಟಿಗೆ ಮುಂಚೆ ಜೀವಿಗಳಿಗೆ ದೇವ-ಮನುಷ್ಯಾದಿ ನಾಮರೂಪ ವಿಭಾಗವಿರುವುದಿಲ್ಲ. ಅವು ತಾವು ಹಿಂದೆ ಅನುಭವಿಸಿ ಮಿಕ್ಕಿರುವ ಕರ್ಮವಾಸನೆಯಿಂದ ಮಾತ್ರ ಕೂಡಿರುತ್ತವೆ. ಹಾಗೆ ಕರ್ಮವಾಸನೆಗಳಿಂದ ಕೂಡಿದ ಜೀವವೇ ಸೃಷ್ಟಿಗೆ ಕಾರಣವಾಗುವುದರಿಂದ ಜೀವಗಳು ಹೇತು ಎನಿಸುತ್ತವೆ.) ಇಂತಹ ಜೀವನನ್ನೇ ಕೆಲವರು ‘ಅನುಶಯಿ’ ಎಂದೂ, ಕೆಲವರು ‘ಅವ್ಯಾಕೃತ’ ಎಂದೂ ಕರೆಯುತ್ತಾರೆ. ಪ್ರಕೃತಿಯಲ್ಲಿ ಶಯನ ಮಾಡುವ ಚೈತನ್ಯವಾಗಿರುವುದರಿಂದ ಈತನು ಅನುಶಯಿ. ನಾಮರೂಪಗಳಿಗೆ ಒಳಪಡದೇ ಪ್ರಕೃತಿಯಲ್ಲಿ ಬೆರೆತಿರುವಾಗ ಈತನೇ ‘ಅವ್ಯಾಕೃತ’ ಎನಿಸುತ್ತಾನೆ. ॥18॥

(ಶ್ಲೋಕ - 19)

ಮೂಲಮ್

ವ್ಯತಿರೇಕಾನ್ವಯೋ ಯಸ್ಯ ಜಾಗ್ರತ್ಸ್ವಪ್ನಸುಷುಪ್ತಿಷು ।
ಮಾಯಾಮಯೇಷು ತದ್ಬ್ರಹ್ಮ ಜೀವವೃತ್ತಿಷ್ವಪಾಶ್ರಯಃ ॥

ಅನುವಾದ

ಜೀವಿಯ ವೃತ್ತಿಗಳಲ್ಲಿ ಜಾಗ್ರತ, ಸ್ವಪ್ನ, ಸುಷುಪ್ತಿಗಳೆಂಬ ಮೂರು ವಿಭಾಗಗಳಿವೆ. ಯಾರು ಈ ಅವಸ್ಥೆಗಳಲ್ಲಿ ಇವುಗಳ ಅಭಿಮಾನಿ ವಿಶ್ವ, ತೈಜಸ, ಪ್ರಾಜ್ಞ ಈ ರೂಪಗಳಿಂದ ಮಾಯೆಯಿಂದ ಕಂಡುಬರುವನೋ, ಈ ಅವಸ್ಥೆಗಳಿಂದ ಪರನಾದ ತುರೀಯತತ್ತ್ವದ ರೂಪದಲ್ಲಿಯೂ ಲಕ್ಷಿತನಾಗುವನೋ ಆ ಬ್ರಹ್ಮ ವಸ್ತುವನ್ನೇ ಇಲ್ಲಿ ‘ಅಪಾಶ್ರಯ’ವೆಂದು ಹೇಳಲಾಗಿದೆ. ॥19॥

(ಶ್ಲೋಕ - 20)

ಮೂಲಮ್

ಪದಾರ್ಥೇಷು ಯಥಾ ದ್ರವ್ಯಂ ಸನ್ಮಾತ್ರಂ ರೂಪನಾಮಸು ।
ಬೀಜಾದಿಪಂಚತಾಂತಾಸು ಹ್ಯವಸ್ಥಾಸು ಯುತಾಯುತಮ್ ॥

ಅನುವಾದ

ಯಾವ ಪ್ರಕಾರ ಬೀಜದಿಂದ ಹಿಡಿದು ನಾಶದವರೆಗೆ (ಉತ್ಪತ್ತಿಯಿಂದ ನಾಶದವರೆಗೆ) ಎಲ್ಲ ಅವಸ್ಥೆಗಳಲ್ಲಿ ನಾನಾ ರೂಪಗಳಲ್ಲಿ ಸತ್ರೂಪೀ ದ್ರವ್ಯವೇ ಇದೆಯೋ, ಹಾಗೆಯೇ ಈ ವಿಶ್ವದ ಸೃಷ್ಟಿಯಿಂದ ಪ್ರಳಯದವರೆಗಿನ ಎಲ್ಲ ಅವಸ್ಥೆಗಳಲ್ಲಿ ಪರಮಾತ್ಮ ತತ್ತ್ವವೇ ಇರುವುದು ಮತ್ತು ಅದರಿಂದ ಅತೀತವೂ ಆಗಿರುವುದು. ಅದನ್ನೇ ಆಶ್ರಯ ತತ್ತ್ವವೆಂದು ಹೇಳುತ್ತಾರೆ. ॥20॥

(ಶ್ಲೋಕ - 21)

ಮೂಲಮ್

ವಿರಮೇತ ಯದಾ ಚಿತ್ತಂ ಹಿತ್ವಾ ವೃತ್ತಿತ್ರಯಂ ಸ್ವಯಮ್ ।
ಯೋಗೇನ ವಾ ತದಾತ್ಮಾನಂ ವೇದೇಹಾಯಾ ನಿವರ್ತತೇ ॥

ಅನುವಾದ

ಚಿತ್ತವು ಆತ್ಮವಿಚಾರದ ಅಥವಾ ಯೋಗಾಭ್ಯಾಸದ ಮೂಲಕ ತ್ರಿಗುಣ ಸಂಬಂಧಿ ವ್ಯಾವಹಾರಿಕ ವೃತ್ತಿಗಳನ್ನು ಮತ್ತು ಜಾಗ್ರತ್, ಸ್ವಪ್ನ ಮುಂತಾದ ಸ್ವಾಭಾವಿಕ ವೃತ್ತಿಗಳನ್ನು ತ್ಯಾಗಮಾಡಿ ಉಪರಾಮವಾದಾಗ ಶಾಂತವೃತ್ತಿಯಲ್ಲಿ ‘ತತ್ತ್ವಮಸಿ’ ಮುಂತಾದ ಮಹಾವಾಕ್ಯಗಳಿಂದ ಆತ್ಮಜ್ಞಾನದ ಉದಯವಾಗುತ್ತದೆ. ಆ ಸಮಯದಲ್ಲಿ ಆತ್ಮವೇತ್ತನಾದ ಪುರುಷನು ಅಜ್ಞಾನಜನಿತ ಕರ್ಮವಾಸನೆ ಹಾಗೂ ಕರ್ಮ ಪ್ರವೃತ್ತಿಗಳಿಂದ ನಿವೃತ್ತನಾಗಿ ಹೋಗುತ್ತಾನೆ. ॥21॥

(ಶ್ಲೋಕ - 22)

ಮೂಲಮ್

ಏವಂ ಲಕ್ಷಣಲಕ್ಷ್ಯಾಣಿ ಪುರಾಣಾನಿ ಪುರಾವಿದಃ ।
ಮುನಯೋಷ್ಟಾದಶ ಪ್ರಾಹುಃ ಕ್ಷುಲ್ಲಕಾನಿ ಮಹಾಂತಿ ಚ ॥

ಅನುವಾದ

ಶೌನಕಾದಿ ಋಷಿಗಳೇ! ಪುರಾತತ್ತ್ವವನ್ನು ಬಲ್ಲ ವಿದ್ವಾಂಸರು ಇದೇ ಲಕ್ಷಣಗಳಿಂದ ಪುರಾಣಗಳ ಪರಿಚಯವನ್ನು ಹೇಳಿರುವರು. ಇಂತಹ ಲಕ್ಷಣಗಳಿಂದ ಕೂಡಿದ ಸಣ್ಣ-ದೊಡ್ಡ ಹದಿನೆಂಟು ಪುರಾಣಗಳಿವೆ. ॥22॥

(ಶ್ಲೋಕ - 23)

ಮೂಲಮ್

ಬ್ರಾಹ್ಮಂ ಪಾದ್ಮಂ ವೈಷ್ಣವಂ ಚ ಶೈವಂ ಲೈಂಗಂ ಸಗಾರುಡಮ್ ।
ನಾರದೀಯಂ ಭಾಗವತಮಾಗ್ನೇಯಂ ಸ್ಕಾಂದಸಂಜ್ಞಿತಮ್ ॥

(ಶ್ಲೋಕ - 24)

ಮೂಲಮ್

ಭವಿಷ್ಯಂ ಬ್ರಹ್ಮವೈವರ್ತಂ ಮಾರ್ಕಂಡೇಯಂ ಸವಾಮನಮ್ ।
ವಾರಾಹಂ ಮಾತ್ಸ್ಯಂ ಕೌರ್ಮಂ ಚ ಬ್ರಹ್ಮಾಂಡಾಖ್ಯಮಿತಿ ತ್ರಿಷಟ್ ॥

ಅನುವಾದ

ಅವುಗಳ ಹೆಸರು ಇಂತಿವೆ - ಬ್ರಹ್ಮಪುರಾಣ, ಪದ್ಮಪುರಾಣ, ವಿಷ್ಣುಪುರಾಣ, ಶಿವಪುರಾಣ, ಲಿಂಗಪುರಾಣ, ಗರುಡಪುರಾಣ, ನಾರದಪುರಾಣ, ಭಾಗವತಪುರಾಣ, ಅಗ್ನಿಪುರಾಣ, ಸ್ಕಂದಪುರಾಣ, ಭವಿಷ್ಯಪುರಾಣ, ಬ್ರಹ್ಮವೈವರ್ತಪುರಾಣ, ಮಾರ್ಕಂಡೇಯ ಪುರಾಣ, ವಾಮನಪುರಾಣ, ವರಾಹಪುರಾಣ, ಮತ್ಸ್ಯಪುರಾಣ, ಕೂರ್ಮಪುರಾಣ, ಬ್ರಹ್ಮಾಂಡ ಪುರಾಣ - ಹೀಗೆ ಇವು ಹದಿನೆಂಟು. ॥23-24॥

(ಶ್ಲೋಕ - 25)

ಮೂಲಮ್

ಬ್ರಹ್ಮನ್ನಿದಂ ಸಮಾಖ್ಯಾತಂ ಶಾಖಾಪ್ರಣಯನಂ ಮುನೇಃ ।
ಶಿಷ್ಯಶಿಷ್ಯಪ್ರಶಿಷ್ಯಾಣಾಂ ಬ್ರಹ್ಮತೇಜೋವಿವರ್ಧನಮ್ ॥

ಅನುವಾದ

ಶೌನಕರೇ! ವೇದವ್ಯಾಸರ ಶಿಷ್ಯಪರಂಪರೆಯವರು ಹೇಗೆ ವೇದಸಂಹಿತೆಗಳನ್ನು ಹಾಗೂ ಪುರಾಣ ಸಂಹಿತೆಗಳನ್ನು ಅಧ್ಯಯನ-ಅಧ್ಯಾಪನ, ವಿಭಾಜನ ಮಾಡಿರುವರೋ ಅದನ್ನು ನಾನು ನಿಮಗೆ ತಿಳಿಸಿರುವೆನು. ಈ ಪ್ರಸಂಗವನ್ನು ಕೇಳುವವರಿಗೆ, ಓದುವವರಿಗೆ ಬ್ರಹ್ಮತೇಜದ ಅಭಿವೃದ್ಧಿಯಾಗುತ್ತದೆ. ॥25॥

ಅನುವಾದ (ಸಮಾಪ್ತಿಃ)

ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಸಪ್ತಮೋಽಧ್ಯಾಯಃ ॥7॥