೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ನಾಲ್ಕು ಪ್ರಕಾರದ ಪ್ರಳಯಗಳು

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಕಾಲಸ್ತೇ ಪರಮಾಣ್ವಾದಿರ್ದ್ವಿಪರಾರ್ಧಾವಧಿರ್ನೃಪ ।
ಕಥಿತೋ ಯುಗಮಾನಂ ಚ ಶೃಣು ಕಲ್ಪಲಯಾವಪಿ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಪರಮಾಣುವಿನಿಂದ ಹಿಡಿದು ದ್ವಿಪರಾರ್ಧವರೆಗಿನ ಕಾಲದ ಸ್ವರೂಪವನ್ನು ಮತ್ತು ಒಂದೊಂದು ಯುಗದ ಪರಿಮಾಣಗಳನ್ನು ನಾನು ಹಿಂದೆ ಮೂರನೆಯ ಸ್ಕಂಧದಲ್ಲಿ ಹೇಳಿ ಬಿಟ್ಟಿರುವೆನು. ಈಗ ಕಲ್ಪದಸ್ಥಿತಿ ಹಾಗೂ ಅದರ ಪ್ರಳಯದ ವರ್ಣನೆಯನ್ನು ಕೇಳು. ॥1॥

(ಶ್ಲೋಕ - 2)

ಮೂಲಮ್

ಚತುರ್ಯುಗಸಹಸ್ರಂ ಚ ಬ್ರಹ್ಮಣೋ ದಿನಮುಚ್ಯತೇ ।
ಸ ಕಲ್ಪೋ ಯತ್ರ ಮನವಶ್ಚತುರ್ದಶ ವಿಶಾಂಪತೇ ॥

ಅನುವಾದ

ರಾಜೇಂದ್ರನೇ! ಒಂದು ಸಾವಿರ ಚತುರ್ಯುಗಗಳ ಅವಧಿಯು ಬ್ರಹ್ಮದೇವರಿಗೆ ಒಂದು ದಿನವಾಗುತ್ತದೆ. ಬ್ರಹ್ಮನ ಈ ದಿನವನ್ನೇ ಕಲ್ಪವೆಂದು ಹೇಳುತ್ತಾರೆ. ಒಂದು ಕಲ್ಪದಲ್ಲಿ ಹದಿನಾಲ್ಕು, ಮನುಗಳು ಆಗಿ ಹೋಗುತ್ತಾರೆ. ॥2॥

(ಶ್ಲೋಕ - 3)

ಮೂಲಮ್

ತದಂತೇ ಪ್ರಲಯಸ್ತಾವಾನ್ ಬ್ರಾಹ್ಮೀ ರಾತ್ರಿರುದಾಹೃತಾ ।
ತ್ರಯೋ ಲೋಕಾ ಇಮೇ ತತ್ರ ಕಲ್ಪಂತೇ ಪ್ರಲಯಾಯ ಹಿ ॥

ಅನುವಾದ

ಕಲ್ಪಾಂತ್ಯದಲ್ಲಿ ಅಷ್ಟೇ ಸಮಯದವರೆಗೆ ಪ್ರಳಯವೂ ಇರುತ್ತದೆ. ಪ್ರಳಯವನ್ನೇ ಬ್ರಹ್ಮನ ರಾತ್ರಿ ಎಂದೂ ಹೇಳುತ್ತಾರೆ. ಆ ಸಮಯದಲ್ಲಿ ಈ ಮೂರು ಲೋಕಗಳೂ ಲೀನವಾಗುತ್ತವೆ, ಅವುಗಳ ಪ್ರಳಯವಾಗುತ್ತದೆ. ॥3॥

(ಶ್ಲೋಕ - 4)

ಮೂಲಮ್

ಏಷ ನೈಮಿತ್ತಿಕಃ ಪ್ರೋಕ್ತಃ ಪ್ರಲಯೋ ಯತ್ರ ವಿಶ್ವಸೃಕ್ ।
ಶೇತೇನಂತಾಸನೋ ವಿಶ್ವಮಾತ್ಮಸಾತ್ಕೃತ್ಯ ಚಾತ್ಮಭೂಃ ॥

ಅನುವಾದ

ಇದಕ್ಕೆ ನೈಮಿತ್ತಿಕ ಪ್ರಳಯವೆಂದು ಹೇಳುತ್ತಾರೆ. ಈ ಪ್ರಳಯದ ಸಂದರ್ಭದಲ್ಲಿ ಇಡೀ ವಿಶ್ವವನ್ನು ತನ್ನೊಳಗೆ ಅಡಗಿಸಿಕೊಂಡು ಬ್ರಹ್ಮದೇವರು ಹಾಗೂ ಶೇಷಶಾಯಿ ಭಗವಾನ್ ನಾರಾಯಣನೂ ಶಯನ ಮಾಡುತ್ತಾರೆ. ॥4॥

(ಶ್ಲೋಕ - 5)

ಮೂಲಮ್

ದ್ವಿಪರಾರ್ಧೇ ತ್ವತಿಕ್ರಾಂತೇ ಬ್ರಹ್ಮಣಃ ಪರಮೇಷ್ಠಿ ನಃ ।
ತದಾ ಪ್ರಕೃತಯಃ ಸಪ್ತ ಕಲ್ಪಂತೇ ಪ್ರಲಯಾಯ ವೈ ॥

ಅನುವಾದ

ಹೀಗೆ ರಾತ್ರಿಯ ಬಳಿಕ ಹಗಲು, ಹಗಲಿನ ಬಳಿಕ ರಾತ್ರೆ ಆಗುತ್ತಾಗುತ್ತಾ ಬ್ರಹ್ಮದೇವರ ಮಾನದಿಂದ ನೂರು ವರ್ಷದ ಮತ್ತು ಮನುಷ್ಯರ ದೃಷ್ಟಿಯಲ್ಲಿ ಎರಡು ಪರಾರ್ಧಗಳ ಆಯುಸ್ಸು ಮುಗಿದಾಗ ಮಹತತ್ತ್ವ, ಅಹಂಕಾರ, ಪಂಚತನ್ಮಾತ್ರೆಗಳು - ಈ ಏಳು ಪ್ರಕೃತಿಗಳು ತಮಗೆ ಕಾರಣವಾದ ಮೂಲ ಪ್ರಕೃತಿಯಲ್ಲಿ ಲೀನ ಹೊಂದುವವು. ॥5॥

(ಶ್ಲೋಕ - 6)

ಮೂಲಮ್

ಏಷ ಪ್ರಾಕೃತಿಕೋ ರಾಜನ್ ಪ್ರಲಯೋ ಯತ್ರ ಲೀಯತೇ ।
ಆಂಡಕೋಶಸ್ತು ಸಂಘಾತೋ ವಿಘಾತ ಉಪಸಾದಿತೇ ॥

ಅನುವಾದ

ರಾಜೇಂದ್ರನೇ! ಇದಕ್ಕೆ ಪ್ರಾಕೃತಿಕ ಪ್ರಳಯವೆಂದು ಹೇಳುತ್ತಾರೆ. ಈ ಪ್ರಳಯದಲ್ಲಿ ಪ್ರಳಯದ ಕಾರಣ ಒದಗಿದಾಗ ಪಂಚ-ಭೂತಗಳ ಮಿಶ್ರಣದಿಂದ ಉಂಟಾದ ಬ್ರಹ್ಮಾಂಡವು ತನ್ನ ಸ್ಥೂಲರೂಪವನ್ನು ಬಿಟ್ಟು ಕಾರಣ ರೂಪದಲ್ಲಿ ನೆಲೆಸುತ್ತದೆ, ಸೇರಿಹೋಗುತ್ತದೆ. ॥6॥

(ಶ್ಲೋಕ - 7)

ಮೂಲಮ್

ಪರ್ಜನ್ಯಃ ಶತವರ್ಷಾಣಿ ಭೂಮೌ ರಾಜನ್ ನ ವರ್ಷತಿ ।
ತದಾ ನಿರನ್ನೇ ಹ್ಯನ್ಯೋನ್ಯಂ ಭಕ್ಷಮಾಣಾಃ ಕ್ಷುಧಾರ್ದಿತಾಃ ॥

ಅನುವಾದ

ಪರೀಕ್ಷಿತನೇ! ಪ್ರಳಯದ ಸಮಯವು ಬಂದಾಗ ನೂರು ವರ್ಷಗಳವರೆಗೆ ಮೇಘಗಳು ಮಳೆಸುರಿಸುವುದಿಲ್ಲ. ಯಾರಿಗೂ ಅನ್ನ ಸಿಗುವುದಿಲ್ಲ. ಆ ಸಮಯದಲ್ಲಿ ಜನರು ಹಸಿವು-ಬಾಯಾರಿಕೆಗಳಿಂದ ಕಂಗೆಟ್ಟು ಒಬ್ಬರನ್ನೊಬ್ಬರು ತಿನ್ನತೊಡಗುವರು. ॥7॥

(ಶ್ಲೋಕ - 8)

ಮೂಲಮ್

ಕ್ಷಯಂ ಯಾಸ್ಯಂತಿ ಶನಕೈಃ ಕಾಲೇನೋಪದ್ರುತಾಃ ಪ್ರಜಾಃ ।
ಸಾಮುದ್ರಂ ದೈಹಿಕಂ ಭೌಮಂ ರಸಂ ಸಾಂವರ್ತಕೋ ರವಿಃ ॥

(ಶ್ಲೋಕ - 9)

ಮೂಲಮ್

ರಶ್ಮಿಭಿಃ ಪಿಬತೇ ಘೋರೈಃ ಸರ್ವಂ ನೈವ ವಿಮುಂಚತಿ ।
ತತಃ ಸಂವರ್ತಕೋ ವಹ್ನಿಃ ಸಂಕರ್ಷಣಮುಖೋತ್ಥಿತಃ ॥

ಅನುವಾದ

ಹೀಗೆ ಕಾಲದ ಉಪದ್ರವದಿಂದ ಪೀಡಿತವಾಗಿ ಎಲ್ಲ ಪ್ರಜೆಯು ನಿಧಾನವಾಗಿ ಕ್ಷೀಣಿಸಿ ಬಿಡುತ್ತದೆ. ಪ್ರಳಯಕಾಲದ ಸಾಂವರ್ತಕ ಸೂರ್ಯನು ತನ್ನ ಪ್ರಚಂಡ ಕಿರಣಗಳಿಂದ ಸಮುದ್ರ, ಪ್ರಾಣಿಗಳ ಶರೀರಗಳು, ಪೃಥಿವಿಯ ಸಮಸ್ತ ರಸವನ್ನು ಒಣಗಿಸಿಬಿಡುತ್ತಾನೆ. ಮತ್ತೆ ಎಂದಿನಂತೆ ಪೃಥಿವಿಯಲ್ಲಿ ಮಳೆಗರೆಯುವುದಿಲ್ಲ. ಆ ಸಮಯದಲ್ಲಿ ಸಂಕರ್ಷಣ ಭಗವಂತನ ಮುಖದಿಂದ ಪ್ರಳಯಕಾಲದ ಸಂವರ್ತಕವೆಂಬ ಅಗ್ನಿಯು ಪ್ರಕಟವಾಗುತ್ತದೆ. ॥8-9॥

(ಶ್ಲೋಕ - 10)

ಮೂಲಮ್

ದಹತ್ಯನಿಲವೇಗೋತ್ಥಃ ಶೂನ್ಯಾನ್ ಭೂವಿವರಾನಥ ।
ಉಪರ್ಯಧಃ ಸಮಂತಾಚ್ಚ ಶಿಖಾಭಿರ್ವಹ್ನಿ ಸೂರ್ಯಯೋಃ ॥

(ಶ್ಲೋಕ - 11)

ಮೂಲಮ್

ದಹ್ಯಮಾನಂ ವಿಭಾತ್ಯಂಡಂ ದಗ್ಧಗೋಮಯಪಿಂಡವತ್ ।
ತತಃ ಪ್ರಚಂಡಪವನೋ ವರ್ಷಾಣಾಮಧಿಕಂ ಶತಮ್ ॥

(ಶ್ಲೋಕ - 12)

ಮೂಲಮ್

ಪರಃ ಸಾಂವರ್ತಕೋ ವಾತಿ ಧೂಮ್ರಂ ಖಂ ರಜಸಾವೃತಮ್ ।
ತತೋ ಮೇಘಕುಲಾನ್ಯಂಗ ಚಿತ್ರವರ್ಣಾನ್ಯನೇಕಶಃ ॥

(ಶ್ಲೋಕ - 13)

ಮೂಲಮ್

ಶತಂ ವರ್ಷಾಣಿ ವರ್ಷಂತಿ ನದಂತಿ ರಭಸಸ್ವನೈಃ ।
ತತ ಏಕೋದಕಂ ವಿಶ್ವಂ ಬ್ರಹ್ಮಾಂಡವಿವರಾಂತರಮ್ ॥

ಅನುವಾದ

ವಾಯುವಿನ ವೇಗದಿಂದ ಅದು ಇನ್ನೂ ಹೆಚ್ಚುವುದು. ತಲ-ಅತಲ ಮೊದಲಾದ ಕೆಳಗಿನ ಏಳೂ ಲೋಕಗಳನ್ನು ಭಸ್ಮವಾಗಿಮಾಡಿಬಿಡುತ್ತದೆ. ಅಲ್ಲಿಯ ಪ್ರಾಣಿಗಳಾದರೋ ಮೊದಲೇ ಸತ್ತಿರುತ್ತಾರೆ. ಕೆಳಗಿನಿಂದ ಅಗ್ನಿಯ ಭೀಕರ ಜ್ವಾಲೆಗಳು ಮತ್ತು ಮೇಲಿನಿಂದ ಸೂರ್ಯನ ಪ್ರಚಂಡ ಬಿಸಿಲು-ಇವುಗಳಿಂದ ಕೆಳಗೆ-ಮೇಲೆ ನಾಲ್ಕೂ ಕಡೆಯಿಂದ ಈ ಬ್ರಹ್ಮಾಂಡವು ಉರಿಯತೊಡಗಿ ಸುಟ್ಟ ಬೆರಣಿಯಂತೆ ಆಗಿ ಬಿಡುವುದು. ಬಳಿಕ ಪ್ರಳಯ ಕಾಲದ ಅತ್ಯಂತ ಪ್ರಚಂಡವಾದ ಸಾಂವರ್ತಕ ವಾಯುವು ನೂರಾರು ವರ್ಷಗಳವರೆಗೆ ಬೀಸುತ್ತದೆ. ಆ ಸಮಯದಲ್ಲಿ ಆಕಾಶವು ಹೊಗೆಯಿಂದ ಮತ್ತು ಧೂಳಿನಿಂದ ತುಂಬಿರುತ್ತದೆ. ಅನಂತರ ಬಣ್ಣ-ಬಣ್ಣದ ಅಸಂಖ್ಯ ಮೋಡಗಳು ಆಕಾಶದಲ್ಲಿ ಕವಿದುಕೊಂಡು ಭೀಕರ ಗರ್ಜನೆಯೊಡನೆ ಭಯಂಕರವಾಗಿ ನೂರಾರು ವರ್ಷಗಳವರೆಗೆ ಮಳೆಯನ್ನು ಕರೆಯುವವು. ಆ ಸಮಯದಲ್ಲಿ ಬ್ರಹ್ಮಾಂಡದೊಳಗೆ ಇರುವ ಎಲ್ಲ ಪ್ರಪಂಚವು ಒಂದು ಸಮುದ್ರದಂತಾಗಿ ಜಲಮಯವಾಗಿ ಬಿಡುವುದು. ॥10-13॥

(ಶ್ಲೋಕ - 14)

ಮೂಲಮ್

ತದಾ ಭೂಮೇರ್ಗಂಧಗುಣಂ ಗ್ರಸಂತ್ಯಾಪ ಉದಪ್ಲವೇ ।
ಗ್ರಸ್ತಗಂಧಾ ತು ಪೃಥಿವೀ ಪ್ರಲಯತ್ವಾಯ ಕಲ್ಪತೇ ॥

ಅನುವಾದ

ಹೀಗೆ ಜಲಪ್ರಳಯವಾದಾಗ ಜಲವು ಪೃಥಿವಿಯ ವಿಶೇಷಗುಣವಾದ ಗಂಧವನ್ನು ಸೆಳೆದು ತನ್ನಲ್ಲಿ ಲಯ ಗೊಳಿಸಿಕೊಳ್ಳುವುದು. ಗಂಧಗುಣವು ಜಲದಲ್ಲಿ ಲೀನವಾದಾಗ ಭೂಮಿಯು ಪ್ರಳಯವಾಗುತ್ತದೆ. ಅದು ಜಲದಲ್ಲಿ ಬೆರೆತು ಜಲರೂಪವೇ ಆಗುತ್ತದೆ. ॥14॥

(ಶ್ಲೋಕ - 15)

ಮೂಲಮ್

ಅಪಾಂ ರಸಮಥೋ ತೇಜಸ್ತಾ ಲೀಯಂತೇಥ ನೀರಸಾಃ ।
ಗ್ರಸತೇ ತೇಜಸೋ ರೂಪಂ ವಾಯುಸ್ತದ್ರಹಿತಂ ತದಾ ॥

(ಶ್ಲೋಕ - 16)

ಮೂಲಮ್

ಲೀಯತೇ ಚಾನಿಲೇ ತೇಜೋ ವಾಯೋಃ ಖಂ ಗ್ರಸತೇ ಗುಣಮ್ ।
ಸ ವೈ ವಿಶತಿ ಖಂ ರಾಜಂಸ್ತತಶ್ಚ ನಭಸೋ ಗುಣಮ್ ॥

(ಶ್ಲೋಕ - 17)

ಮೂಲಮ್

ಶಬ್ದಂ ಗ್ರಸತಿ ಭೂತಾದಿರ್ನಭಸ್ತಮನು ಲೀಯತೇ ।
ತೈಜಸಶ್ಚೇಂದ್ರಿಯಾಣ್ಯಂಗ ದೇವಾನ್ವೈಕಾರಿಕೋ ಗುಣೈಃ ॥

ಅನುವಾದ

ರಾಜೇಂದ್ರನೇ! ಬಳಿಕ ಜಲದ ಗುಣವಾದ ರಸವನ್ನು ತೇಜಸ್ತತ್ವವು ಹೀರಿಕೊಂಡು ಜಲವು ನೀರಸವಾಗಿ ತೇಜಸ್ಸಿನಲ್ಲಿ ಸೇರಿಕೊಳ್ಳುವುದು. ಮತ್ತೆ ವಾಯುವು ತೇಜಸ್ಸಿನ ಗುಣವಾದ ರೂಪವನ್ನು ನುಂಗಿಹಾಕಿ ತೇಜವು ರೂಪರಹಿತವಾಗಿ ವಾಯುವಿನಲ್ಲಿ ಲೀನವಾಗುತ್ತದೆ. ಆಕಾಶವು ವಾಯುವಿನ ಗುಣವಾದ ಸ್ವರ್ಶವನ್ನು ತನ್ನೊಳಗೆ ಸೇರಿಸಿಕೊಂಡು, ವಾಯುವು ಸ್ಪರ್ಶರಹಿತವಾಗಿ ಆಕಾಶದಲ್ಲಿ ಶಾಂತವಾಗುತ್ತದೆ. ಅನಂತರ ತಾಮಸ ಅಹಂಕಾರವು ಆಕಾಶದ ಗುಣವಾದ ಶಬ್ದವನ್ನು ಕಬಳಿಸಿ ಆಕಾಶವು ಶಬ್ದಹೀನವಾಗಿ ತಾಮಸಾಹಂಕಾರದಲ್ಲಿ ಲೀನವಾಗಿ ಹೋಗುವುದು. ಹೀಗೆಯೇ ತೈಜಸಾಹಂಕಾರವು ಇಂದ್ರಿಯಗಳ ಮತ್ತು ವೈಕಾರಿಕ ಅಹಂಕಾರವು ಇಂದ್ರಿಯಗಳ ಅಧಿಷ್ಠಾತೃದೇವತೆಗಳೂ, ಮತ್ತು ಇಂದ್ರಿಯಗಳ ವೃತ್ತಿಗಳನ್ನೂ ತನ್ನಲ್ಲಿ ಲೀನಗೊಳಿಸಿಕೊಳ್ಳುವುದು. ॥15-17॥

(ಶ್ಲೋಕ - 18)

ಮೂಲಮ್

ಮಹಾನ್ ಗ್ರಸತ್ಯಹಂಕಾರಂ ಗುಣಾಃ ಸತ್ತ್ವಾದಯಶ್ಚ ತಮ್ ।
ಗ್ರಸತೇವ್ಯಾಕೃತಂ ರಾಜನ್ ಗುಣಾನ್ಕಾಲೇನ ಚೋದಿತಮ್ ॥

ಅನುವಾದ

ಅದಾದ ಬಳಿಕ ಮಹತ್ತತ್ವವು ಅಹಂಕಾರವನ್ನೂ, ಸತ್ವಾದಿಗುಣಗಳು ಮಹತ್ತತ್ವವನ್ನೂ ನುಂಗಿಹಾಕುವುದು. ಪರೀಕ್ಷಿತನೇ! ಇದೆಲ್ಲವು ಕಾಲದ ಮಹಿಮೆಯಾಗಿದೆ. ಅದರ ಪ್ರೇರಣೆಯಿಂದಲೇ ಅವ್ಯಕ್ತ ಪ್ರಕೃತಿಯು ಗುಣಗಳನ್ನು ತನ್ನಲ್ಲಿ ಲೀನಗೊಳಿಸಿಕೊಳ್ಳುವುದು. ಆಗ ಕೇವಲ ಪ್ರಕೃತಿಯೇ ಉಳಿದುಬಿಡುತ್ತದೆ. ॥18॥

(ಶ್ಲೋಕ - 19)

ಮೂಲಮ್

ನ ತಸ್ಯ ಕಾಲಾವಯವೈಃ ಪರಿಣಾಮಾದಯೋ ಗುಣಾಃ ।
ಅನಾದ್ಯನಂತಮವ್ಯಕ್ತಂ ನಿತ್ಯಂ ಕಾರಣಮವ್ಯಯಮ್ ॥

ಅನುವಾದ

ಅದೇ ಚರಾಚರ ಜಗತ್ತಿನ ಮೂಲಕಾರಣವಾಗಿದೆ. ಅದು ಅವ್ಯಕ್ತವೂ, ಅನಾದಿಯೂ, ಅನಂತವೂ, ನಿತ್ಯವೂ, ಅವಿನಾಶಿಯೂ ಆಗಿದೆ. ತನ್ನ ಕಾರ್ಯಗಳನ್ನು ಲೀನಗೊಳಿಸಿಕೊಂಡು ಪ್ರಳಯಕಾಲದಲ್ಲಿ ಸಾಮ್ಯಾವಸ್ಥೆಯನ್ನು ಪಡೆದಾಗ ಕಾಲದ ಅವಯವ ವರ್ಷ, ಮಾಸ, ಹಗಲು-ರಾತ್ರಿ, ಕ್ಷಣ ಮುಂತಾದವುಗಳ ಕಾರಣವಾದ ಅದರಲ್ಲಿ ಪರಿಣಾಮ, ಕ್ಷಯ, ವೃದ್ಧಿ ಮುಂತಾದ ಯಾವ ವಿಧದ ವಿಕಾರಗಳೂ ಉಂಟಾಗುವುದಿಲ್ಲ. ॥19॥

(ಶ್ಲೋಕ - 20)

ಮೂಲಮ್

ನ ಯತ್ರ ವಾಚೋ ನ ಮನೋ ನ ಸತ್ತ್ವಂ
ತಮೋ ರಜೋ ವಾ ಮಹದಾದಯೋಮೀ ।
ನ ಪ್ರಾಣಬುದ್ಧೀಂದ್ರಿಯದೇವತಾ ವಾ
ನ ಸಂನಿವೇಶಃ ಖಲು ಲೋಕಕಲ್ಪಃ ॥

ಅನುವಾದ

ಆ ಸಮಯದಲ್ಲಿ ಪ್ರಕೃತಿಯಲ್ಲಿ ಸ್ಥೂಲ ಅಥವಾ ಸೂಕ್ಷ್ಮ ರೂಪದಿಂದಲೂ ವಾಣಿ, ಮನಸ್ಸು, ಸತ್ವಗುಣ, ರಜೋಗುಣ, ತಮೋಗುಣ, ಮಹತ್ತತ್ವವೇ ಮೊದಲಾದ ವಿಕಾರಗಳು, ಪ್ರಾಣ, ಬುದ್ಧಿ, ಇಂದ್ರಿಯಗಳು ಮತ್ತು ಅವುಗಳ ದೇವತೆಗಳು ಯಾವುದೂ ಇರುವುದಿಲ್ಲ. ಸೃಷ್ಟಿಯ ಸಮಯ ದಲ್ಲಿರುವ ಲೋಕಗಳ ಕಲ್ಪನೆ ಹಾಗೂ ಅವುಗಳ ಸ್ಥಿತಿಯೂ ಇರುವುದಿಲ್ಲ. ॥20॥

(ಶ್ಲೋಕ - 21)

ಮೂಲಮ್

ನ ಸ್ವಪ್ನ ಜಾಗ್ರನ್ನ ಚ ತತ್ ಸುಷುಪ್ತಂ
ನ ಖಂ ಜಲಂ ಭೂರನಿಲೋಗ್ನಿರರ್ಕಃ ।
ಸಂಸುಪ್ತವಚ್ಛೂನ್ಯವದಪ್ರತರ್ಕ್ಯಂ
ತನ್ಮೂಲಭೂತಂ ಪದಮಾಮನಂತಿ ॥

ಅನುವಾದ

ಆಗ ಸ್ವಪ್ನ, ಜಾಗ್ರತಿ, ಸುಷುಪ್ತಿ - ಈ ಮೂರು ಅವಸ್ಥೆಗಳೂ ಇರುವುದಿಲ್ಲ. ಆಕಾಶ, ಜಲ, ಪೃಥಿವಿ, ವಾಯು, ಅಗ್ನಿ, ಸೂರ್ಯ ಇವುಗಳೂ ಇರುವುದಿಲ್ಲ. ಎಲ್ಲವೂ ಮಲಗಿರುವ ಶೂನ್ಯದಂತೆ ಇರುತ್ತದೆ. ಆ ಅವಸ್ಥೆಯನ್ನು ತರ್ಕದಿಂದ ಊಹಿಸುವುದಕ್ಕೂ ಅಸಂಭವವೇ. ಆ ಅವ್ಯಕ್ತವನ್ನೇ ಜಗತ್ತಿನ ಮೂಲಕಾರಣ ತತ್ತ್ವವೆಂದು ಹೇಳುತ್ತಾರೆ. ॥21॥

(ಶ್ಲೋಕ - 22)

ಮೂಲಮ್

ಲಯಃ ಪ್ರಾಕೃತಿಕೋ ಹ್ಯೇಷ ಪುರುಷಾವ್ಯಕ್ತಯೋರ್ಯದಾ ।
ಶಕ್ತಯಃ ಸಂಪ್ರಲೀಯಂತೇ ವಿವಶಾಃ ಕಾಲವಿದ್ರುತಾಃ ॥

ಅನುವಾದ

ಈ ಅವಸ್ಥೆಯನ್ನು ‘ಪ್ರಾಕೃತ ಪ್ರಳಯ’ವೆಂದು ಹೇಳುತ್ತಾರೆ. ಆ ಸಮಯದಲ್ಲಿ ಪುರುಷ ಮತ್ತು ಪ್ರಕೃತಿ ಇವೆರೆಡರ ಶಕ್ತಿಗಳೂ ಕಾಲದ ಪ್ರಭಾವದಿಂದ ಕ್ಷೀಣವಾಗುತ್ತವೆ ಹಾಗೂ ವಿವಶರಾಗಿ ತಮ್ಮ ಮೂಲ ಸ್ವರೂಪದಲ್ಲಿ ಲೀನವಾಗಿಹೋಗುತ್ತಾರೆ. ॥22॥

(ಶ್ಲೋಕ - 23)

ಮೂಲಮ್

ಬುದ್ಧೀಂದ್ರಿಯಾರ್ಥರೂಪೇಣ ಜ್ಞಾನಂ ಭಾತಿ ತದಾಶ್ರಯಮ್ ।
ದೃಶ್ಯತ್ವಾವ್ಯತಿರೇಕಾಭ್ಯಾಮಾದ್ಯಂತವದವಸ್ತು ಯತ್ ॥

ಅನುವಾದ

ಪರೀಕ್ಷಿತನೇ! (ಈಗ ನಿನಗೆ ಆತ್ಯಂತಿಕ ಪ್ರಳಯ ಅಂದರೆ ಮೋಕ್ಷದ ಸ್ವರೂಪವನ್ನು ತಿಳಿಸುತ್ತೇನೆ; ಕೇಳು.) ಬುದ್ಧಿ, ಇಂದ್ರಿಯಗಳು ಮತ್ತು ಅವುಗಳ ವಿಷಯಗಳೆಲ್ಲಕ್ಕೂ ಆಶ್ರಯ, ಅಧಿಷ್ಠಾನನಾಗಿರುವ ಜ್ಞಾನಸ್ವರೂಪನಾದ ಪರಮಾತ್ಮನೇ ಇರುತ್ತಾನೆ. ಇವುಗಳಿಗೆ ಆದಿ ಮತ್ತು ಅಂತ್ಯಗಳುಂಟು. ಆದುದರಿಂದ ಅವು ಸತ್ಯವಸ್ತುಗಳಲ್ಲ ಮಿಥ್ಯೆಯೇ ಆಗಿವೆ. ಇವುಗಳಿಗೆ ಧಾರಕನಾದ ಪರಮಾತ್ಮನೊಬ್ಬನೇ ಸತ್ಯವಸ್ತು. ॥23॥

(ಶ್ಲೋಕ - 24)

ಮೂಲಮ್

ದೀಪಶ್ಚಕ್ಷುಶ್ಚ ರೂಪಂ ಚ ಜ್ಯೋತಿಷೋ ನ ಪೃಥಗ್ಭವೇತ್ ।
ಏವಂ ಧೀಃ ಖಾನಿ ಮಾತ್ರಾಶ್ಚ ನ ಸ್ಯುರನ್ಯತಮಾದೃತಾತ್ ॥

ಅನುವಾದ

ದೀಪ, ಕಣ್ಣು ಮತ್ತು ಕಾಣುವ ರೂಪ ಇವು ಮೂರು ತೇಜಸ್ಸಿನಿಂದ ಭಿನ್ನವಾಗಿಲ್ಲ. ಹಾಗೆಯೆ ಬುದ್ಧಿ, ಇಂದ್ರಿಯಗಳು ಹಾಗೂ ಅವುಗಳ ವಿಷಯ ತನ್ಮಾತ್ರೆಗಳೂ ತನ್ನ ಅಧಿಷ್ಠಾನಸ್ವರೂಪ ಬ್ರಹ್ಮನಿಂದ ಬೇರೆಯಾಗಿಲ್ಲ. ಹೀಗಿದ್ದರೂ ಅದು ಇವುಗಳಿಂದ ಸರ್ವಥಾ ಭಿನ್ನವಾಗಿದೆ. (ರಜ್ಜು ರೂಪೀ ಅಧಿಷ್ಠಾನದಲ್ಲಿ ಅಧ್ಯಸ್ತವಾದ ಸರ್ಪವು ತನ್ನ ಅಧಿಷ್ಠಾನದಿಂದ ಪೃಥಕ್ಕಾಗಿಲ್ಲ. ಆದರೂ ಅಧ್ಯಸ್ತ ಸರ್ಪದಿಂದ ಅಧಿಷ್ಠಾನಕ್ಕೆ ಯಾವ ಸಂಬಂಧವೂ ಇಲ್ಲ.) ॥24॥

(ಶ್ಲೋಕ - 25)

ಮೂಲಮ್

ಬುದ್ಧೇರ್ಜಾಗರಣಂ ಸ್ವಪ್ನಃ ಸುಷುಪ್ತಿರಿತಿ ಚೋಚ್ಯತೇ ।
ಮಾಯಾಮಾತ್ರಮಿದಂ ರಾಜನ್ ನಾನಾತ್ವಂ ಪ್ರತ್ಯಗಾತ್ಮನಿ ॥

ಅನುವಾದ

ಪರೀಕ್ಷಿತನೇ! ಜಾಗ್ರತ್, ಸ್ವಪ್ನ, ಸುಷುಪ್ತಿ ಈ ಮೂರು ಅವಸ್ಥೆಗಳು ಬುದ್ಧಿಯದಾಗಿದೆ. ಆದ್ದರಿಂದ ಇವುಗಳ ಕಾರಣ ಅಂತರಾತ್ಮನಲ್ಲಿ ಪ್ರತೀತವಾಗುವ ವಿಶ್ವ, ತೈಜಸ, ಪ್ರಾಜ್ಞರೂಪವಾದ ನಾನಾತ್ವವು ಕೇವಲ ಮಾಯಾಮಾತ್ರವಾಗಿದೆ. ಬುದ್ಧಿಗತ ನಾನಾತ್ವದ ಏಕಮಾತ್ರ ಸತ್ಯನಾದ ಆತ್ಮನಿಗೆ ಯಾವ ಸಂಬಂಧವೂ ಇಲ್ಲ. ॥25॥

(ಶ್ಲೋಕ - 26)

ಮೂಲಮ್

ಯಥಾ ಜಲಧರಾ ವ್ಯೋಮ್ನಿ ಭವಂತಿ ನ ಭವಂತಿ ಚ ।
ಬ್ರಹ್ಮಣೀದಂ ತಥಾ ವಿಶ್ವಮವಯವ್ಯದಯಾಪ್ಯಯಾತ್ ॥

ಅನುವಾದ

ಈ ವಿಶ್ವವು ಉತ್ಪತ್ತಿ ಮತ್ತು ಪ್ರಳಯಗಳಿಂದ ಗ್ರಸ್ತವಾಗಿದೆ. ಅದಕ್ಕಾಗಿ ಅನೇಕ ಅವಯವಗಳ ಸಮೂಹವೇ ಈ ವಿಶ್ವವಾಗಿದೆ. ಆದ್ದರಿಂದ ಆಕಾಶದಲ್ಲಿ ಕೆಲವೊಮ್ಮೆ ಮೋಡಗಳು ಇರುತ್ತವೆ ಕೆಲವೊಮ್ಮೆ ಇರುವುದಿಲ್ಲ. ಹಾಗೆಯೇ ಇದು ಕೆಲವೊಮ್ಮೆ ಪರಬ್ರಹ್ಮನಲ್ಲಿ ಇರುತ್ತದೆ ಕೆಲವೊಮ್ಮೆ ಇರುವುದಿಲ್ಲ. ॥26॥

(ಶ್ಲೋಕ - 27)

ಮೂಲಮ್

ಸತ್ಯಂ ಹ್ಯವಯವಃ ಪ್ರೋಕ್ತಃ ಸರ್ವಾವಯವಿನಾಮಿಹ ।
ವಿನಾರ್ಥೇನ ಪ್ರತೀಯೇರನ್ಪಟಸ್ಯೇವಾಂಗ ತಂತವಃ ॥

ಅನುವಾದ

ಪರೀಕ್ಷಿತನೇ! ಜಗತ್ತಿನ ವ್ಯವಹಾರಗಳಲ್ಲಿ ಇರುವ ಅವಯವೀ ಪದಾರ್ಥಗಳು ಇಲ್ಲದಿದ್ದರೂ ಅವುಗಳ ಭಿನ್ನ-ಭಿನ್ನ ಅವಯವಗಳು ಸತ್ಯವಾಗಿರಬಲ್ಲವು. ಏಕೆಂದರೆ ಅವುಗಳು ಕಾರಣವಾಗಿದೆ ಬಟ್ಟೆಯು ಇಲ್ಲದಿದ್ದರೂ ಅದರ ಕಾರಣ ರೂಪವಾದ ನೂಲಿನ ಅಸ್ತಿತ್ವವು ಇರುವಂತೆಯೇ ಕಾರ್ಯ ರೂಪವಾದ ಜಗತ್ತಿನ ಅಭಾವದಲ್ಲಿಯೂ ಈ ಜಗತ್ತಿನ ಕಾರಣ ರೂಪವಾದ ಅವಯವಗಳ ಸ್ಥಿತಿ ಇರಬಲ್ಲದು. ॥27॥

(ಶ್ಲೋಕ - 28)

ಮೂಲಮ್

ಯತ್ ಸಾಮಾನ್ಯವಿಶೇಷಾಭ್ಯಾಮುಪಲಭ್ಯೇತ ಸ ಭ್ರಮಃ ।
ಅನ್ಯೋನ್ಯಾಪಾಶ್ರಯಾತ್ಸರ್ವಮಾದ್ಯಂತವದವಸ್ತು ಯತ್ ॥

ಅನುವಾದ

ಆದರೆ ಬ್ರಹ್ಮವಸ್ತುವಿನಲ್ಲಿ ಈ ಕಾರ್ಯ-ಕಾರಣಭಾವಗಳೂ ವಾಸ್ತವಿಕವಾಗಿರುವುದಿಲ್ಲ. ಏಕೆಂದರೆ, ಕಾರಣವಾದರೋ ಸಾಮಾನ್ಯ ವಸ್ತುವಾಗಿದೆ ಮತ್ತು ಕಾರ್ಯವು ವಿಶೇಷವಸ್ತುವಾಗಿದೆ. ಹೀಗೆ ಕಂಡುಬರುವ ಭೇದವೂ ಕೇವಲ ಭ್ರಮೆಯಾಗಿದೆ. ಸಾಮಾನ್ಯ ಮತ್ತು ವಿಶೇಷ ಭಾವಗಳು ಆಪೇಕ್ಷಿಕವಾಗಿವೆ, ಅನ್ಯೋನ್ಯಾಶ್ರಯವಾಗಿರುವುದೇ ಇದರ ಕಾರಣವಾಗಿದೆ. ವಿಶೇಷವಿಲ್ಲದೆ ಸಾಮಾನ್ಯ ಹಾಗೂ ಸಾಮಾನ್ಯವಿಲ್ಲದೆ ವಿಶೇಷದ ಸ್ಥಿತಿ ಇರಲಾರದು. ಕಾರ್ಯ ಮತ್ತು ಕಾರಣದ ಭಾವಗಳಲ್ಲಿ ಆದಿ-ಅಂತ್ಯವೆರಡೂ ಕಂಡು ಬರುತ್ತವೆ. ಆದ್ದರಿಂದಲೂ ಅವು ಸ್ವಪ್ನದ ಭೇದ-ಭಾವಗಳಂತೆ ಸರ್ವಥಾ ವಸ್ತುಗಳೇ ಅಲ್ಲ. ॥28॥

(ಶ್ಲೋಕ - 29)

ಮೂಲಮ್

ವಿಕಾರಃ ಖ್ಯಾಯಮಾನೋಪಿ ಪ್ರತ್ಯಗಾತ್ಮಾನಮಂತರಾ ।
ನ ನಿರೂಪ್ಯೋಸ್ತ್ಯಣುರಪಿ ಸ್ಯಾಚ್ಚೇಚ್ಚಿತ್ಸಮ ಆತ್ಮವತ್ ॥

ಅನುವಾದ

ಈ ಪ್ರಪಂಚ ರೂಪವಾದ ವಿಕಾರವು ಸ್ವಪ್ನದ ವಿಕಾರದಂತೆ ಕಂಡು ಬರುತ್ತಿದ್ದರೂ ಇದು ತನ್ನ ಅಧಿಷ್ಠಾನವಾದ ಬ್ರಹ್ಮಸ್ವರೂಪ ಆತ್ಮನಿಂದ ಭಿನ್ನವಾಗಿಲ್ಲವೆನ್ನುವುದರಲ್ಲಿ ಸಂದೇಹವೇ ಇಲ್ಲ. ಯಾರೇ ಆಗಲೀ ಆತ್ಮನಿಂದ ಭಿನ್ನ ರೂಪದಲ್ಲಿ ಅಣುಮಾತ್ರವು ಇದನ್ನು ನಿರೂಪಿಸಲಾರರು. ಆತ್ಮನಿಂದ ಬೇರೆಯಾದ ಇದರ ಅಸ್ತಿತ್ವನ್ನು ಒಪ್ಪಿಕೊಂಡರೆ ಚಿದ್ರೂಪವಾದ ಆತ್ಮನಂತೆ ಇದೂ ಕೂಡ ಸ್ವಯಂ ಪ್ರಕಾಶವಾದೀತು. ಇಂತಹ ಸ್ಥಿತಿಯಲ್ಲಿ ಅದು ಆತ್ಮನಂತೆಯೇ ಏಕರೂಪವೆಂದು ಸಿದ್ಧವಾದೀತು. ॥29॥

(ಶ್ಲೋಕ - 30)

ಮೂಲಮ್

ನಹಿ ಸತ್ಯಸ್ಯ ನಾನಾತ್ವಮವಿದ್ವಾನ್ಯದಿ ಮನ್ಯತೇ ।
ನಾನಾತ್ವಂ ಛಿದ್ರಯೋರ್ಯದ್ವಜ್ಜ್ಯೋತಿಷೋರ್ವಾತಯೋರಿವ ॥

ಅನುವಾದ

ಆದರೆ ಪರಮಾರ್ಥ ಸತ್ಯವಸ್ತುವಿನಲ್ಲಿ ನಾನಾತ್ವವು ಇಲ್ಲವೆಂಬುದೇ ಸರ್ವಥಾ ನಿಶ್ಚಿತವಾಗಿದೆ. ಯಾವನಾದರು ಅಜ್ಞಾನಿಯು ಪರಮಾರ್ಥ ಸತ್ಯತತ್ತ್ವದಲ್ಲಿ ನಾನಾತ್ವವನ್ನು ಸ್ವೀಕರಿಸಿದರೆ - ಘಟಾಕಾಶ ಮತ್ತು ಮಹಾಕಾಶ, ಆಕಾಶದಲ್ಲಿರುವ ಸೂರ್ಯ ಹಾಗೂ ಜಲದಲ್ಲಿ ಪ್ರತಿಬಿಂತಿತ ಸೂರ್ಯ, ಹೊರಗಿನ ವಾಯು ಮತ್ತು ಒಳಗಿನ ವಾಯು ಇವುಗಳಲ್ಲಿ ಭೇದವೆಣಿಸಿದಂತೆಯೇ ಆಗುವುದು. ॥30॥

(ಶ್ಲೋಕ - 31)

ಮೂಲಮ್

ಯಥಾ ಹಿರಣ್ಯಂ ಬಹುಧಾ ಸಮೀಯತೇ
ನೃಭಿಃ ಕ್ರಿಯಾಭಿರ್ವ್ಯವಹಾರವರ್ತ್ಮಸು ।
ಏವಂ ವಚೋಭಿರ್ಭಗವಾನಧೋಕ್ಷಜೋ
ವ್ಯಾಖ್ಯಾಯತೇ ಲೌಕಿಕವೈದಿಕೈರ್ಜನೈಃ ॥

ಅನುವಾದ

ವ್ಯವಹಾರದಲ್ಲಿ ಮನುಷ್ಯನು ಒಂದೇ ಚಿನ್ನವನ್ನು ಕಂಕಣ, ಕುಂಡಲ, ಕಡ ಮುಂತಾದ ಅನೇಕರೂಪದಲ್ಲಿ, ಒಡವೆಗಳಾಗಿಸಿ ಬೇರೆ-ಬೇರೆ ರೂಪದಲ್ಲಿ ಕಂಡುಬರುವಂತೆಯೇ ವ್ಯವಹಾರದಲ್ಲಿ ನಿಪುಣರಾದ ವಿದ್ವಾಂಸರು ಲೌಕಿಕ ಮತ್ತು ವೈದಿಕ ವಾಣಿಯ ಮೂಲಕ ಇಂದ್ರಿಯಾತೀತ ಆತ್ಮಸ್ವರೂಪನಾದ ಭಗವಂತನನ್ನೂ ಅನೇಕ ರೂಪಗಳಲ್ಲಿ ವರ್ಣಿಸುತ್ತಾರೆ. ॥31॥

(ಶ್ಲೋಕ - 32)

ಮೂಲಮ್

ಯಥಾ ಘನೋರ್ಕಪ್ರಭವೋರ್ಕದರ್ಶಿತೋ
ಹ್ಯರ್ಕಾಂಶಭೂತಸ್ಯ ಚ ಚಕ್ಷುಷಸ್ತಮಃ ।
ಏವಂ ತ್ವಹಂ ಬ್ರಹ್ಮಗುಣಸ್ತದೀಕ್ಷಿತೋ
ಬ್ರಹ್ಮಾಂಶಕಸ್ಯಾತ್ಮನ ಆತ್ಮಬಂಧನಃ ॥

ಅನುವಾದ

ಮೋಡಗಳು ಸೂರ್ಯನಿಂದ ಉತ್ಪನ್ನವಾಗುತ್ತವೆ ಮತ್ತು ಸೂರ್ಯನಿಂದಲೇ ಪ್ರಕಾಶಿಸುತ್ತವೆ. ಹೀಗಿದ್ದರೂ ಅವು ಸೂರ್ಯನ ಅಂಶವಾದ ಕಣ್ಣುಗಳಿಗೆ ಸೂರ್ಯನ ದರ್ಶನದಲ್ಲಿ ಬಾಧಕವಾಗುತ್ತವೆ. ಹೀಗೆಯೇ ಅಹಂಕಾರವು ಬ್ರಹ್ಮವಸ್ತುವಿನಿಂದಲೇ ಉತ್ಪನ್ನವಾಗಿ ಬ್ರಹ್ಮನಿಂದಲೇ ಪ್ರಕಾಶಿತವಾಗುತ್ತದೆ. ಆದರೂ ಬ್ರಹ್ಮನ ಅಂಶನಾದ ಜೀವನಿಗೆ ಬ್ರಹ್ಮ ಸ್ವರೂಪದ ಸಾಕ್ಷಾತ್ಕಾರದಲ್ಲಿ ಬಾಧಕವಾಗಿ ಇರುತ್ತದೆ. ॥32॥

(ಶ್ಲೋಕ - 33)

ಮೂಲಮ್

ಘನೋ ಯದಾರ್ಕಪ್ರಭವೋ ವಿದೀರ್ಯತೇ
ಚಕ್ಷುಃ ಸ್ವರೂಪಂ ರವಿಮೀಕ್ಷತೇ ತದಾ ।
ಯದಾ ಹ್ಯಹಂಕಾರ ಉಪಾಧಿರಾತ್ಮನೋ
ಜಿಜ್ಞಾಸಯಾ ನಶ್ಯತಿ ತರ್ಹ್ಯನುಸ್ಮರೇತ್ ॥

ಅನುವಾದ

ಸೂರ್ಯನಿಂದ ಪ್ರಕಟವಾಗುವ ಮೋಡವು ಚಲ್ಲಾಪಿಲ್ಲಿಯಾದಾಗ ಕಣ್ಣುಗಳು ತನ್ನ ಸ್ವರೂಪನಾದ ಸೂರ್ಯನನ್ನು ದರ್ಶಿಸಲು ಸಮರ್ಥವಾಗುವಂತೆಯೇ ಜೀವಿಯ ಹೃದಯದಲ್ಲಿ ಜಿಜ್ಞಾಸೆಯು ಜಾಗ್ರತವಾದಾಗ ಆತ್ಮನ ಉಪಾಧಿಯಾದ ಅಹಂಕಾರವು ನಾಶವಾಗಿಬಿಡುತ್ತದೆ ಹಾಗೂ ಜೀವಿಗೆ ತನ್ನ ಸ್ವರೂಪದ ಸಾಕ್ಷಾತ್ಕಾರ ಉಂಟಾಗುತ್ತದೆ. ॥33॥

(ಶ್ಲೋಕ - 34)

ಮೂಲಮ್

ಯದೈವಮೇತೇನ ವಿವೇಕಹೇತಿನಾ
ಮಾಯಾಮಯಾಹಂಕರಣಾತ್ಮಬಂಧನಮ್ ।
ಛಿತ್ತ್ವಾಚ್ಯುತಾತ್ಮಾನುಭವೋವತಿಷ್ಠತೇ
ತಮಾಹುರಾತ್ಯಂತಿಕಮಂಗ ಸಂಪ್ಲವಮ್ ॥

ಅನುವಾದ

ಪ್ರಿಯ ಪರೀಕ್ಷಿತನೇ! ಜೀವನು ವಿವೇಕ ಖಡ್ಗದಿಂದ ಮಾಯಾಮಯ ಅಹಂಕಾರದ ಬಂಧನವನ್ನು ತುಂಡರಿಸಿದಾಗ ಅವನು ತನ್ನ ಏಕರಸ ಆತ್ಮಸ್ವರೂಪದ ಸಾಕ್ಷಾತ್ಕಾರದಲ್ಲಿ ಸ್ಥಿತನಾಗುತ್ತಾನೆ. ಆತ್ಮನ ಈ ಮಾಯಾಮುಕ್ತ ವಾಸ್ತವಿಕ ಸ್ಥಿತಿಯೇ ಆತ್ಯಂತಿಕ ಪ್ರಳಯವೆಂದು ಹೇಳಲಾಗುತ್ತದೆ. ॥34॥

(ಶ್ಲೋಕ - 35)

ಮೂಲಮ್

ನಿತ್ಯದಾ ಸರ್ವಭೂತಾನಾಂ ಬ್ರಹ್ಮಾದೀನಾಂ ಪರಂತಪ ।
ಉತ್ಪತ್ತಿಪ್ರಲಯಾವೇಕೇ ಸೂಕ್ಷ್ಮಜ್ಞಾಃ ಸಂಪ್ರಚಕ್ಷತೇ ॥

ಅನುವಾದ

ಎಲೈ ಪರಂತಪನೇ! ಚತುರ್ಮುಖ ಬ್ರಹ್ಮನಿಂದ ಹಿಡಿದು ಹುಲ್ಲುಕಡ್ಡಿಯವರೆಗಿನ ಎಲ್ಲ ಪ್ರಾಣಿ-ಪದಾರ್ಥಗಳು ನಿರಂತರವಾಗಿ ಹುಟ್ಟುತ್ತಾ-ಸಾಯುತ್ತಾ ಇರುತ್ತವೆ. ಅರ್ಥಾತ್ ನಿತ್ಯರೂಪದಿಂದ ಉತ್ಪತ್ತಿ ಹಾಗೂ ಪ್ರಳಯವಾಗುತ್ತಾ ಇರುತ್ತವೆ. ॥35॥

(ಶ್ಲೋಕ - 36)

ಮೂಲಮ್

ಕಾಲಸ್ರೋತೋಜವೇನಾಶು ಹ್ರಿಯಮಾಣಸ್ಯ ನಿತ್ಯದಾ ।
ಪರಿಣಾಮಿನಾಮವಸ್ಥಾಸ್ತಾ ಜನ್ಮಪ್ರಲಯಹೇತವಃ ॥

ಅನುವಾದ

ಪ್ರಪಂಚದ ಪರಿಣಾಮಶೀಲವಾದ ನದಿಯ ಪ್ರವಾಹ ಮತ್ತು ದೀಪಶಿಖೆ ಮುಂತಾದ ಪದಾರ್ಥಗಳು ಕ್ಷಣ-ಕ್ಷಣಕ್ಕೂ ಬದಲಾಗುತ್ತಾ ಇರುತ್ತವೆ. ಅವುಗಳ ಬದಲಾಗುವ ಸ್ಥಿತಿಯನ್ನು ಕಂಡು ದೇಹಾದಿಗಳೂ ಕೂಡ ಕಾಲರೂಪ ಪ್ರವಾಹದ ವೇಗದಲ್ಲಿ ಬದಲಾಗುತ್ತಾ ಇರುತ್ತವೆ ಎಂಬುದು ನಿಶ್ಚಯವಾಗುತ್ತದೆ. ಅದಕ್ಕಾಗಿ ಕ್ಷಣ-ಕ್ಷಣದಲ್ಲಿ ಅವುಗಳ ಉತ್ಪತ್ತಿ-ಪ್ರಳಯ ಆಗುತ್ತಾ ಇರುತ್ತದೆ. ॥36॥

(ಶ್ಲೋಕ - 37)

ಮೂಲಮ್

ಅನಾದ್ಯಂತವತಾನೇನ ಕಾಲೇನೇಶ್ವರಮೂರ್ತಿನಾ ।
ಅವಸ್ಥಾ ನೈವ ದೃಶ್ಯಂತೇ ವಿಯತಿ ಜ್ಯೋತಿಷಾಮಿವ ॥

ಅನುವಾದ

ಆಕಾಶದಲ್ಲಿ ನಕ್ಷತ್ರಗಳು ಸದಾ ಚಲಿಸುತ್ತಿದ್ದರೂ ಅವುಗಳ ಗತಿಯು ನಮಗೆ ಸ್ಪಷ್ಟವಾಗಿ ತಿಳಿಯುವುದಿಲ್ಲ. ಹಾಗೆಯೇ ಭಗವಂತನ ಸ್ವರೂಪಭೂತ ಅನಾದಿ-ಅನಂತ ಕಾಲದ ಕಾರಣದಿಂದ ಪ್ರಾಣಿಗಳ ಪ್ರತಿಕ್ಷಣವಾಗುವ ಉತ್ಪತ್ತಿ-ಪ್ರಳಯಗಳೂ ನಮ್ಮ ದೃಷ್ಟಿಗೆ ಗೋಚರಿಸುವುದಿಲ್ಲ. ॥37॥

(ಶ್ಲೋಕ - 38)

ಮೂಲಮ್

ನಿತ್ಯೋ ನೈಮಿತ್ತಿಕಶ್ಚೈವ ತಥಾ ಪ್ರಾಕೃತಿಕೋ ಲಯಃ ।
ಆತ್ಯಂತಿಕಶ್ಚ ಕಥಿತಃ ಕಾಲಸ್ಯ ಗತಿರೀದೃಶೀ ॥

ಅನುವಾದ

ಪರೀಕ್ಷಿತನೇ! ನಾನು ನಿನಗೆ ನಿತ್ಯಪ್ರಳಯ, ನೈಮಿತ್ತಿಕಪ್ರಳಯ, ಪ್ರಾಕೃತಿಕಪ್ರಳಯ ಮತ್ತು ಆತ್ಯಂತಿಕ ಪ್ರಳಯ - ಎಂಬ ನಾಲ್ಕು ಪ್ರಕಾರದ ಪ್ರಳಯಗಳನ್ನು ವರ್ಣಿಸಿ ಹೇಳಿರುವೆನು. ಕಾಲದ ಸೂಕ್ಷ್ಮವಾದ ಗತಿಯು ಹೀಗೆ ಇರುವುದು. ॥38॥

(ಶ್ಲೋಕ - 39)

ಮೂಲಮ್

ಏತಾಃ ಕುರುಶ್ರೇಷ್ಠ ಜಗದ್ವಿಧಾತು-
ರ್ನಾರಾಯಣಸ್ಯಾಖಿಲಸತ್ತ್ವಧಾಮ್ನಃ ।
ಲೀಲಾಕಥಾಸ್ತೇ ಕಥಿತಾಃ ಸಮಾಸತಃ
ಕಾರ್ತ್ಸ್ನ್ಯೇನ ನಾಜೋಪ್ಯಭಿಧಾತುಮೀಶಃ ॥

ಅನುವಾದ

ಎಲೈ ಕುರುಶ್ರೇಷ್ಠನೇ! ಜಗತ್ತಿನ ಸೃಷ್ಟಿಕರ್ತನೂ, ಸಮಸ್ತ ಪ್ರಾಣಿಗಳಿಗೂ, ಶಕ್ತಿಗಳಿಗೂ ಆಶ್ರಯನಾಗಿರುವ ಭಗವಾನ್ ನಾರಾಯಣನ ಲೀಲಾಚರಿತ್ರೆಗಳನ್ನು ನಿನಗೆ ಸಂಕ್ಷೇಪವಾಗಿ ಹೇಳಿರುವೆನು. ಭಗವಂತನ ಲೀಲಾ ಕಥೆಗಳನ್ನು ಸಂಪೂರ್ಣ ವಾಗಿ ವರ್ಣಿಸಲು ಬ್ರಹ್ಮದೇವರಿಂದಲೂ ಶಕ್ಯವಾಗಲಾರದು. ॥39॥

(ಶ್ಲೋಕ - 40)

ಮೂಲಮ್

ಸಂಸಾರಸಿಂಧುಮತಿದುಸ್ತರಮುತ್ತಿತೀರ್ಷೋ-
ರ್ನಾನ್ಯಃ ಪ್ಲವೋ ಭಗವತಃ ಪುರುಷೋತ್ತಮಸ್ಯ ।
ಲೀಲಾಕಥಾರಸನಿಷೇವಣಮಂತರೇಣ
ಪುಂಸೋ ಭವೇದ್ವಿವಿಧದುಃಖದವಾರ್ದಿತಸ್ಯ ॥

ಅನುವಾದ

ಅತ್ಯಂತ ದುಸ್ತರವಾದ ಸಂಸಾರ ಸಾಗರದಿಂದ ಪಾರಾಗಲು ಬಯಸುವವನಿಗೆ ಅಥವಾ ಅನೇಕ ಪ್ರಕಾರದ ದುಃಖದಾವಾನಲದಿಂದ ಬೆಂದು ಹೋಗಿರುವವನಿಗಾಗಿ ಭಗವಾನ್ ಪುರುಷೋತ್ತಮನ ಲೀಲಾಕಥಾರೂಪವಾದ ರಸವನ್ನು ಸೇವಿಸುವುದಲ್ಲದೆ ಬೇರೆ ಯಾವ ಸಾಧನೆಯೂ, ನೌಕೆಯೂ ಇರುವುದಿಲ್ಲ. ಇಂತಹ ಲೀಲಾಕಥೆಗಳನ್ನು ರಸಾಯನವನ್ನು ಸೇವಿಸುವುದರಿಂದಲೇ ತನ್ನ ಮನೋರಥವು ಕೈಗೂಡುವುದು. ॥40॥

(ಶ್ಲೋಕ - 41)

ಮೂಲಮ್

ಪುರಾಣಸಂಹಿತಾಮೇತಾಮೃಷಿರ್ನಾರಾಯಣೋವ್ಯಯಃ ।
ನಾರದಾಯ ಪುರಾ ಪ್ರಾಹ ಕೃಷ್ಣದ್ವೈಪಾಯನಾಯ ಸಃ ॥

ಅನುವಾದ

ನಾನು ನಿನಗೆ ಹೇಳಿದ ಈ ಶ್ರೀಮದ್ಭಾಗವತವೆಂಬ ಪುರಾಣಸಂಹಿತೆಯನ್ನು ಸನಾತನ ಋಷಿಗಳಾದ ನರ-ನಾರಾಯಣರು ಮೊದಲಿಗೆ ದೇವಋಷಿ ನಾರದರಿಗೆ ಹೇಳಿದ್ದರು. ಮತ್ತೆ ನಾರದರು ನಮ್ಮ ತೀರ್ಥರೂಪರಾದ ಕೃಷ್ಣದ್ವೈಪಾಯನರಿಗೆ ಉಪದೇಶ ಮಾಡಿದರು. ॥41॥

(ಶ್ಲೋಕ - 42)

ಮೂಲಮ್

ಸ ವೈ ಮಹ್ಯಂ ಮಹಾರಾಜ ಭಗವಾನ್ ಬಾದರಾಯಣಃ ।
ಇಮಾಂ ಭಾಗವತೀಂ ಪ್ರೀತಃ ಸಂಹಿತಾಂ ವೇದಸಮ್ಮಿತಾಮ್ ॥

ಅನುವಾದ

ಮಹಾರಾಜ! ಅಂತಹ ಬದರೀವನ ವಿಹಾರಿಗಳಾದ ಭಗವಾನ್ ಶ್ರೀಕೃಷ್ಣದ್ವೈಪಾಯನರು ಪ್ರಸನ್ನರಾಗಿ ಈ ವೇದತುಲ್ಯ ಶ್ರೀಮದ್ಭಾಗವತ ಸಂಹಿತೆಯನ್ನು ನನಗೆ ಉಪದೇಶಿಸಿದರು. ॥42॥

(ಶ್ಲೋಕ - 43)

ಮೂಲಮ್

ಏತಾಂ ವಕ್ಷ್ಯತ್ಯಸೌ ಸೂತ ಋಷಿಭ್ಯೋ ನೈಮಿಷಾಲಯೇ ।
ದೀರ್ಘಸತ್ರೇ ಕುರುಶ್ರೇಷ್ಠ ಸಂಪೃಷ್ಟಃ ಶೌನಕಾದಿಭಿಃ ॥

ಅನುವಾದ

ಕುರುಶ್ರೇಷ್ಠನೇ! ಮುಂದೆ ನೈಮಿಷಾರಣ್ಯದಲ್ಲಿ ಒಂದು ದೊಡ್ಡ ಸತ್ರಯಾಗವು ನಡೆಯುತ್ತಿರುವಾಗ ಶೌನಕಾದಿ ಋಷಿಗಳ ಪ್ರಾರ್ಥನೆಯ ಮೇರೆಗೆ ಸೂತ ಪುರಾಣಿಕರು ಅವರಿಗೆ ಈ ಸಂಹಿತೆಯನ್ನು ಉಪದೇಶ ಮಾಡುವರು. ॥43॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಚತುರ್ಥೋಽಧ್ಯಾಯಃ ॥4॥