[ಎರಡನೆಯ ಅಧ್ಯಾಯ]
ಭಾಗಸೂಚನಾ
ಕಲಿಯುಗದ ಧರ್ಮಗಳು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತತಶ್ಚಾನುದಿನಂ ಧರ್ಮಃ ಸತ್ಯಂ ಶೌಚಂ ಕ್ಷಮಾ ದಯಾ ।
ಕಾಲೇನ ಬಲಿನಾ ರಾಜನ್ ನಂಕ್ಷ್ಯತ್ಯಾಯುರ್ಬಲಂ ಸ್ಮೃತಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಕಾಲವು ತುಂಬಾ ಬಲಶಾಲಿಯಾದುದು. ಕಲಿಯುಗವು ನಡೆಯುತ್ತಿರುವಂತೆಯೇ ಕ್ರಮೇಣ ಧರ್ಮ, ಸತ್ಯ, ಪವಿತ್ರತೆ, ಕ್ಷಮೆ, ದಯೆ, ಜನರ ಆಯುಸ್ಸು, ಬಲ ಮತ್ತು ಸ್ಮರಣಶಕ್ತಿ ಇವೆಲ್ಲವೂ ಲೋಪ ಹೊಂದುತ್ತಾ ಹೋಗುವವು. ॥1॥
(ಶ್ಲೋಕ - 2)
ಮೂಲಮ್
ವಿತ್ತಮೇವ ಕಲೌ ನೃಣಾಂ ಜನ್ಮಾಚಾರಗುಣೋದಯಃ ।
ಧರ್ಮನ್ಯಾಯವ್ಯವಸ್ಥಾಯಾಂ ಕಾರಣಂ ಬಲಮೇವ ಹಿ ॥
ಅನುವಾದ
ಕಲಿಯುಗದಲ್ಲಿ ಹಣವಿರುವವನನ್ನೇ ಜನರು ಕುಲೀನ, ಸದಾಚಾರಿ, ಸದ್ಗುಣಿಯೆಂದು ತಿಳಿಯುವರು. ಬಲಿಷ್ಠವನಾದವನೇ ಧರ್ಮ ಮತ್ತು ನ್ಯಾಯದ ವ್ಯವಸ್ಥೆಯನ್ನು ತನಗೆ ಅನುಕೂಲವಾಗಿ ಮಾಡಿಕೊಳ್ಳುವನು. ॥2॥
(ಶ್ಲೋಕ - 3)
ಮೂಲಮ್
ದಾಂಪತ್ಯೇಭಿರುಚಿರ್ಹೇತುರ್ಮಾಯೈವ ವ್ಯಾವಹಾರಿಕೇ ।
ಸೀತ್ವೇ ಪುಂಸ್ತ್ವೇ ಚ ಹಿ ರತಿರ್ವಿಪ್ರತ್ವೇ ಸೂತ್ರಮೇವ ಹಿ ॥
ಅನುವಾದ
ವಿವಾಹ ಸಂಬಂಧಲ್ಲಿ ಕುಲ-ಶೀಲ-ಯೋಗ್ಯತೆ ಮುಂತಾದವುಗಳಿಗೆ ಬೆಲೆ ಕೊಡದೆ ಯುವಕ-ಯುವತಿಯರು ಪರಸ್ಪರ ಅಭಿರುಚಿಯಿಂದಲೇ ಸಂಬಂಧಗಳು ಏರ್ಪಡುವವು. ಛಲ-ಕಪಟಗಳೇ ವ್ಯವಹಾರ ನಿಪುಣತೆ ಎನಿಸುವುದು. ಸ್ತ್ರೀ-ಪುರುಷರ ಗುಣ ಮಟ್ಟದಲ್ಲಿ ಶೀಲ-ಸಂಯಮಗಳಿರದೆ ರತಿಕೌಶಲವೇ ಇರುವುದು. ಬ್ರಾಹ್ಮಣ ಪರಿಚಯವು ಗುಣ-ಸ್ವಭಾವದಿಂದ ಆಗದೆ ಕೇವಲ ಜನಿವಾರದಿಂದಲೇ ಆಗುವುದು. ॥3॥
(ಶ್ಲೋಕ - 4)
ಮೂಲಮ್
ಲಿಂಗಮೇವಾಶ್ರಮಖ್ಯಾತಾವನ್ಯೋನ್ಯಾಪತ್ತಿಕಾರಣಮ್ ।
ಅವೃತ್ತ್ಯಾ ನ್ಯಾಯದೌರ್ಬಲ್ಯಂ ಪಾಂಡಿತ್ಯೇ ಚಾಪಲಂ ವಚಃ ॥
ಅನುವಾದ
ಬಟ್ಟೆ, ದಂಡ, ಕಮಂಡಲು ಇವುಗಳೇ ಬ್ರಹ್ಮಚರ್ಯೆ, ಸಂನ್ಯಾಸವೇ ಮೊದಲಾದ ಆಶ್ರಮಗಳ ಗುರುತಾಗುವುದು. ಒಬ್ಬರು ಮತ್ತೊಬ್ಬರ ಚಿಹ್ನೆಗಳನ್ನು ಧರಿಸುವುದೇ ಬೇರೊಂದು ಆಶ್ರಮದಲ್ಲಿ ಪ್ರವೇಶದ ಸ್ವರೂಪವಾಗುವುದು. ಲಂಚ-ಕೊಡಲು, ಹಣವನ್ನು ಖರ್ಚುಮಾಡಲು ಅಸಮರ್ಥನಾದವನಿಗೆ ನ್ಯಾಯಲಯದಲ್ಲಿ ಸರಿಯಾದ ನ್ಯಾಯ ಸಿಗಲಾರದು. ನಡೆ-ನುಡಿಗಳಲ್ಲಿ ನಿಪುಣನಾದವನೇ ದೊಡ್ಡ ಪಂಡಿತನೆಂದು ತಿಳಿಯಲಾಗುವುದು. ॥4॥
(ಶ್ಲೋಕ - 5)
ಮೂಲಮ್
ಅನಾಢ್ಯತೈವಾಸಾಧುತ್ವೇ ಸಾಧುತ್ವೇ ದಂಭ ಏವ ತು ।
ಸ್ವೀಕಾರ ಏವ ಚೋದ್ವಾಹೇ ಸ್ನಾನಮೇವ ಪ್ರಸಾಧನಮ್ ॥
ಅನುವಾದ
ಬಡವನಾಗುವುದೇ ಅಸಾಧುತೆಯ-ದೋಷಿಯಾಗುವ ಗುರುತಾಗಬಹುದು. ದಾಂಭಿಕತೆ-ಪಾಖಂಡತೆ ಹೆಚ್ಚು ತೋರುವವನ್ನೇ ದೊಡ್ಡ ಸಾಧುವೆಂದು ತಿಳಿಯುವರು. ವಿವಾಹಕ್ಕೆ ಪರಸ್ಪರ ಒಪ್ಪಿಗೆಯೇ ಸಾಕಾದೀತು. ಶಾಸ್ತ್ರೀಯ ವಿಧಿ-ವಿಧಾನದ ಸಂಸ್ಕಾರಾದಿಗಳ ಯಾವ ಆವಶ್ಯಕತೆಯೂ ಬೇಕಾಗುವುದಿಲ್ಲ. ಚೆನ್ನಾಗಿ ಕೂದಲನ್ನು ಬಾಚಿ ಸ್ವಚ್ಛವಾದ ಬಟ್ಟೆಗಳನ್ನು ತೊಡುವುದೇ ಸ್ನಾನವೆಂದು ತಿಳಿಯುವರು. ॥5॥
(ಶ್ಲೋಕ - 6)
ಮೂಲಮ್
ದೂರೇ ವಾರ್ಯಯನಂ ತೀರ್ಥಂ ಲಾವಣ್ಯಂ ಕೇಶಧಾರಣಮ್ ।
ಉದರಂಭರತಾ ಸ್ವಾರ್ಥಃ ಸತ್ಯತ್ವೇ ಧಾರ್ಷ್ಟ್ಯಮೇವ ಹಿ ॥
ಅನುವಾದ
ದೂರದಲ್ಲಿರುವ ಕುಂಡವನ್ನೇ ತೀರ್ಥವೆಂದು ತಿಳಿಯುವರು. ಬಳಿಯಲ್ಲಿರುವ ಗಂಗೆ-ಗೋಮತಿ, ತಂದೆ-ತಾಯಿ ಇವುಗಳನ್ನು ಉಪೇಕ್ಷಿಸುವರು. ತಲೆಯಲ್ಲಿ ಉದ್ದ-ಉದ್ದ ಕೂದಲು ಬೆಳೆಸುವುದೇ ಶರೀರದ ಸೌಂದರ್ಯ ಚಿಹ್ನೆಯೆಂದು ತಿಳಿಯುವರು. ತನ್ನ ಹೊಟ್ಟೆ ತುಂಬಿಸಿಕೊಳ್ಳುವುದೇ ಎಲ್ಲಕ್ಕಿಂತ ದೊಡ್ಡ ಪುರುಷಾರ್ಥವೆಂದಾದೀತು. ಎಷ್ಟು ಉದ್ಧಟತನ ದಿಂದ ಮಾತನಾಡುವನೋ ಅಷ್ಟೇ ದೊಡ್ಡ ಸತ್ಯಸಂಧ ನೆನಿಸುವನು. ॥6॥
(ಶ್ಲೋಕ - 7)
ಮೂಲಮ್
ದಾಕ್ಷ್ಯಂ ಕುಟುಂಬಭರಣಂ ಯಶೋರ್ಥೇ ಧರ್ಮಸೇವನಮ್ ।
ಏವಂ ಪ್ರಜಾಭಿರ್ದುಷ್ಟಾಭಿರಾಕೀರ್ಣೇ ಕ್ಷಿತಿಮಂಡಲೇ ॥
(ಶ್ಲೋಕ - 8)
ಮೂಲಮ್
ಬ್ರಹ್ಮವಿಟ್ಕ್ಷತ್ರಶೂದ್ರಾಣಾಂ ಯೋ ಬಲೀ ಭವಿತಾ ನೃಪಃ ।
ಪ್ರಜಾ ಹಿ ಲುಬ್ಧೈ ರಾಜನ್ಯೈರ್ನಿರ್ಘೃಣೈರ್ದಸ್ಯುಧರ್ಮಭಿಃ ॥
(ಶ್ಲೋಕ - 9)
ಮೂಲಮ್
fಆಚ್ಛಿನ್ನದಾರದ್ರವಿಣಾ ಯಾಸ್ಯಂತಿ ಗಿರಿಕಾನನಮ್ ।
ಶಾಕಮೂಲಾಮಿಷಕ್ಷೌದ್ರಲಪುಷ್ಪಾಷ್ಟಿಭೋಜನಾಃ ॥
ಅನುವಾದ
ತನ್ನ ಕುಟುಂಬವನ್ನು ಸಾಕುವುದೇ ಮನುಷ್ಯನ ಯೋಗ್ಯತೆ-ಚತುರತೆಯ ದೊಡ್ಡ ಲಕ್ಷಣವಾಗುವುದು. ಕೀರ್ತಿಗಾಗಿ ಧರ್ಮವನ್ನು ಆಚರಿಸಲಾಗುವುದು. ಹೀಗೆ ಇಡೀ ಪೃಥಿವಿಯಲ್ಲಿ ದುಷ್ಟರು ತುಂಬಿಹೋದಾಗ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರಲ್ಲಿ ಹೆಚ್ಚು ಬಲಶಾಲಿಯಾದವನೇ ರಾಜನಾಗುವನು. ಆಗಿನ ರಾಜರು ನೀಚರೂ, ನಿರ್ದಯರೂ, ಕ್ರೂರಿಗಳೂ ಕಡುಲೋಭಿಗಳೂ, ಕಸಿದುಕೊಳ್ಳುವ ಮತ್ತು ಲೂಟಿ ದರೋಡೆ ಮಾಡುವವರಾಗುವರು. ಇವರು ಪ್ರಜೆಗಳ ಹಣ ಹೆಂಡಿರನ್ನು ಕಿತ್ತುಕೊಳ್ಳುವರು. ಇವರಿಗೆ ಹೆದರಿದ ಪ್ರಜೆಗಳು ಬೆಟ್ಟ ಕಾಡುಗಳಿಗೆ ಓಡಿ ಹೋಗುವರು. ಆ ಸಮಯದಲ್ಲಿ ಪ್ರಜೆಯು ಗೆಡ್ಡೆ-ಗೆಣಸು, ಮಾಂಸ, ಜೇನು, ಹಣ್ಣು, ಹೂವು, ಬೀಜ ಮುಂತಾದವುಗಳನ್ನು ತಿಂದುಕೊಂಡು ಹೊಟ್ಟೆಹೊರೆಯುವರು. ॥7-9॥
(ಶ್ಲೋಕ - 10)
ಮೂಲಮ್
ಅನಾವೃಷ್ಟ್ಯಾ ವಿನಂಕ್ಷ್ಯಂತಿ ದುರ್ಭಿಕ್ಷಕರಪೀಡಿತಾಃ ।
ಶೀತವಾತಾತಪಪ್ರಾವೃಡ್ಹಿಮೈರನ್ಯೋನ್ಯತಃ ಪ್ರಜಾಃ ॥
ಅನುವಾದ
ಮಳೆಯೇ ಬಾರದೆ ಕ್ಷಾಮ ತಲೆದೋರಿತು. ಆಗಲೂ ಮೇಲಿಂದ ಮೇಲೆ ಕಂದಾಯ ಹೇರಲಾಗುವುದು. ಕೆಲವೊಮ್ಮೆ ಮೈಸುಡುವ ಸೆಕೆ ಉಂಟಾದೀತು. ಕೆಲವೊಮ್ಮೆ ಪ್ರಾಣಾಂತಕವಾದ ಜಲಪ್ರವಾಹ ಬಂದೀತು. ಇಂತಹ ಉತ್ಪಾತಗಳಿಂದ, ಪರಸ್ಪರ ಸಂಘರ್ಷದಿಂದ ಪ್ರಜೆಯು ಅತ್ಯಂತ ಪೀಡಿತವಾಗಿ ನಾಶವಾಗಿ ಹೋಗುವುದು. ॥10॥
(ಶ್ಲೋಕ - 11)
ಮೂಲಮ್
ಕ್ಷುತ್ತೃಡ್ಭ್ಯಾಂ ವ್ಯಾಧಿಭಿಶ್ಚೈವ ಸಂತಪ್ಸ್ಯಂತೇ ಚ ಚಿಂತಯಾ ।
ತ್ರಿಂಶದ್ವಿಂಶತಿವರ್ಷಾಣಿ ಪರಮಾಯುಃ ಕಲೌ ನೃಣಾಮ್ ॥
ಅನುವಾದ
ಜನರು ಹಸಿವು-ಬಾಯಾರಿಕೆಗಳಿಂದ ಕಂಗೆಟ್ಟು, ನಾನಾ ರೀತಿಯ ಚಿಂತೆಗಳಿಂದ ದುಃಖಿತರಾಗಿ, ನಾನಾ ರೋಗಗಳಿಗೆ ತುತ್ತಾಗುವರು. ಕಲಿಯುಗದಲ್ಲಿ ಮನುಷ್ಯರ ಪರಮಾಯುಸ್ಸು ಕೇವಲ ಇಪ್ಪತ್ತು ಅಥವಾ ಮೂವತ್ತು ವರ್ಷಗಳಿರುವುದು. ॥11॥
(ಶ್ಲೋಕ - 12)
ಮೂಲಮ್
ಕ್ಷೀಯಮಾಣೇಷು ದೇಹೇಷು ದೇಹಿನಾಂ ಕಲಿದೋಷತಃ ।
ವರ್ಣಾಶ್ರಮವತಾಂ ಧರ್ಮೇ ನಷ್ಟೇ ವೇದಪಥೇ ನೃಣಾಮ್ ॥
ಅನುವಾದ
ಪರೀಕ್ಷಿತನೇ! ಕಲಿಯದೋಷದಿಂದ ಪ್ರಾಣಿಗಳ ಶರೀರಗಳು ಸಣ್ಣದಾಗಿಯೂ, ಕ್ಷೀಣವಾಗಿಯೂ, ರೋಗಗ್ರಸ್ತವಾಗಿರುವವು. ವರ್ಣಾಶ್ರಮಗಳ ಧರ್ಮವನ್ನು ಹೇಳುವ ವೇದ ಮಾರ್ಗವು ನಷ್ಟಪ್ರಾಯವಾಗುವುದು. ॥12॥
(ಶ್ಲೋಕ - 13)
ಮೂಲಮ್
ಪಾಖಂಡಪ್ರಚುರೇ ಧರ್ಮೇ ದಸ್ಯುಪ್ರಾಯೇಷು ರಾಜಸು ।
ಚೌರ್ಯಾನೃತವೃಥಾಹಿಂಸಾನಾನಾವೃತ್ತಿಷು ವೈ ನೃಷು ॥
ಅನುವಾದ
ಧರ್ಮದಲ್ಲಿ ಪಾಖಂಡತನವೇ ಪ್ರಧಾನವಾದೀತು. ರಾಜ-ಮಹಾರಾಜರು ದರೋಡೆಕೋರರಾಗುವರು. ಜನರು ಕಳ್ಳತನ, ಸುಳ್ಳು, ನಿರಪರಾಧಿಗಳ ಹಿಂಸೆ ಮುಂತಾದ ಅನೇಕ ವಿಧದ ಕೆಟ್ಟಕೆಲಸಗಳಿಂದ ಜೀವನ ನಡೆಸುವರು. ॥13॥
(ಶ್ಲೋಕ - 14)
ಮೂಲಮ್
ಶೂದ್ರಪ್ರಾಯೇಷು ವರ್ಣೇಷುಚ್ಛಾಗಪ್ರಾಯಾಸು ಧೇನುಷು ।
ಗೃಹಪ್ರಾಯೇಷ್ವಾಶ್ರಮೇಷು ಯೌನಪ್ರಾಯೇಷು ಬಂಧುಷು ॥
ಅನುವಾದ
ನಾಲ್ಕು ವರ್ಣದ ಜನರು ಶೂದ್ರರಂತೆ ಆಗಿ ಹೋಗುವರು. ಹಸುಗಳು ಕುರಿಗಳಂತೆ ಸಣ್ಣ-ಸಣ್ಣದಾಗಿ ಕಡಿಮೆ ಹಾಲು ಕೊಡುವವು. ವಾನಪ್ರಸ್ಥರು ಮತ್ತು ಸಂನ್ಯಾಸಿ ಮುಂತಾದ ವಿರಕ್ತ ಆಶ್ರಮದವರೂ ಕೂಡ ಮನೆ-ಮಠಕಟ್ಟಿಕೊಂಡು ಗೃಹಸ್ಥರಂತೆ ವ್ಯಾಪಾರ ಮಾಡುವರು. ವಿವಾಹ ಸಂಬಂಧ ವಿರುವವರೇ ತಮ್ಮ ಸಂಬಂಧಿಗಳೆಂದು ತಿಳಿಯುವರು. ॥14॥
(ಶ್ಲೋಕ - 15)
ಮೂಲಮ್
ಅಣುಪ್ರಾಯಾಸ್ವೋಷಧೀಷು ಶಮೀಪ್ರಾಯೇಷು ಸ್ಥಾಸ್ನುಷು ।
ವಿದ್ಯುತ್ಪ್ರಾಯೇಷು ಮೇಘೇಷು ಶೂನ್ಯಪ್ರಾಯೇಷು ಸದ್ಮಸು ॥
ಅನುವಾದ
ಭತ್ತ, ಗೋಧಿ ಮುಂತಾದ ಗಿಡಗಳು ಕಡುಚಿಕ್ಕದಾಗಿ ಬಿಡುವವು. ವೃಕ್ಷಗಳಲ್ಲಿ ಹೆಚ್ಚಿನವು ಶಮಿಯಂತೆ ಸಣ್ಣದಾಗಿ, ಮುಳ್ಳು ಗಿಡಗಳೇ ಉಳಿಯುವವು. ಮೋಡಗಳಲ್ಲಿ ಮಿಂಚು ಬಳ್ಳಿಗಳು ಹೆಚ್ಚಾಗಿ ಕಾಣಿಸಿಕೊಂಡು ಮಳೆ ಕಡಿಮೆ ಬೀಳುವುದು. ಗೃಹಸ್ಥರ ಮನೆಗಳು ಅತಿಥಿ-ಸತ್ಕಾರ ಅಥವಾ ವೇದಧ್ವನಿ ರಹಿತವಾದ ಕಾರಣ ಅಥವಾ ಜನಸಂಖ್ಯೆಯು ಕಡಿಮೆಯಾಗಿ ಶೂನ್ಯವಾಗುವವು. ॥15॥
(ಶ್ಲೋಕ - 16)
ಮೂಲಮ್
ಇತ್ಥಂ ಕಲೌ ಗತಪ್ರಾಯೇ ಜನೇ ತು ಖರಧರ್ಮಿಣಿ ।
ಧರ್ಮತ್ರಾಣಾಯ ಸತ್ತ್ವೇನ ಭಗವಾನವತರಿಷ್ಯತಿ ॥
ಅನುವಾದ
ಪರೀಕ್ಷಿತನೇ! ಕಲಿಯುಗವು ಮುಗಿಯುತ್ತಿರುವಂತೆ ಮನುಷ್ಯರ ಸ್ವಭಾವಗಳು ಕತ್ತೆಗಳಂತೆ ಆಗುವವು. ಜನರು ಸಂಸಾರದ ಹೊರೆಯನ್ನು ಹೊರುವ ವಿಷಯಿಗಳಾಗಿ ಹೋಗುವರು. ಇಂತಹ ಸ್ಥಿತಿಯಲ್ಲಿ ಧರ್ಮವನ್ನು ರಕ್ಷಿಸಲಿಕ್ಕಾಗಿ, ಭಗವಂತನು ಸತ್ವ ಗುಣವನ್ನು ಸ್ವೀಕರಿಸಿ ಅವತರಿಸುವನು. ॥16॥
(ಶ್ಲೋಕ - 17)
ಮೂಲಮ್
ಚರಾಚರಗುರೋರ್ವಿಷ್ಣೋರೀಶ್ವರಸ್ಯಾಖಿಲಾತ್ಮನಃ ।
ಧರ್ಮತ್ರಾಣಾಯ ಸಾಧೂನಾಂ ಜನ್ಮ ಕರ್ಮಾಪನುತ್ತಯೇ ॥
ಅನುವಾದ
ಪ್ರಿಯಪರೀಕ್ಷಿತನೇ! ಸರ್ವವ್ಯಾಪಕ ಭಗವಾನ್ ವಿಷ್ಣುವು ಸರ್ವಶಕ್ತನಾಗಿರುವನು. ಅವನು ಸರ್ವಸ್ವರೂಪನಾಗಿದ್ದರೂ ಚರಾಚರ ಜಗತ್ತಿಗೆ ನಿಜವಾದ ಸದ್ಗುರುವಾಗಿದ್ದಾನೆ. ಅವನು ಸಾಧು-ಸತ್ಪುರುಷರ ಧರ್ಮವನ್ನು ರಕ್ಷಿಸಲಿಕ್ಕಾಗಿ, ಅವರ ಕರ್ಮಬಂಧವನ್ನು ತುಂಡರಿಸಿ ಅವರನ್ನು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡಿಸಲೆಂದೇ ಅವತರಿಸಿರುವನು. ॥17॥
(ಶ್ಲೋಕ - 18)
ಮೂಲಮ್
ಶಂಭಲಗ್ರಾಮಮುಖ್ಯಸ್ಯ ಬ್ರಾಹ್ಮಣಸ್ಯ ಮಹಾತ್ಮನಃ ।
ಭವನೇ ವಿಷ್ಣು ಯಶಸಃ ಕಲ್ಕಿಃ ಪ್ರಾದುರ್ಭವಿಷ್ಯತಿ ॥
ಅನುವಾದ
ಆ ದಿನಗಳಲ್ಲಿ ಶಂಬಲಗ್ರಾಮದಲ್ಲಿ ವಿಷ್ಣುಯಶನೆಂಬ ಬ್ರಾಹ್ಮಣ ನೋರ್ವನು ಇರುವನು. ಅವನು ಉದಾರಹೃದಯಿಯೂ, ಭಕ್ತಿಭಾವ ಸಂಪನ್ನನಾಗುವನು. ಅವನ ಮನೆಯಲ್ಲಿ ಭಗವಂತನು ಕಲ್ಕಿಯಾಗಿ ಅವತರಿಸುವನು. ॥18॥
(ಶ್ಲೋಕ - 19)
ಮೂಲಮ್
ಅಶ್ವಮಾಶುಗಮಾರುಹ್ಯ ದೇವದತ್ತಂ ಜಗತ್ಪತಿಃ ।
ಅಸಿನಾಸಾಧುದಮನಮಷ್ಟೈಶ್ವರ್ಯಗುಣಾನ್ವಿತಃ ॥
ಅನುವಾದ
ಅಷ್ಟ ಸಿದ್ಧಿಗಳ ಹಾಗೂ ಸಮಸ್ತ ಸದ್ಗುಣಗಳ ಏಕಮಾತ್ರ ಆಶ್ರಯನು ಭಗವಂತನೇ ಆಗಿರುವನು. ಸಮಸ್ತ ಚರಾಚರ ಜಗತ್ತಿನ ರಕ್ಷಕನೂ, ಸ್ವಾಮಿಯೂ ಆಗಿದ್ದಾನೆ. ಅವನು ದೇವದತ್ತವೆಂಬ ಶೀಘ್ರಗಾಮಿಯಾದ ಕುದುರೆಯನ್ನೇರಿ ಖಡ್ಗದಿಂದ ದುಷ್ಟರನ್ನು ತರಿದು ಬಿಡುವನು. ॥19॥
(ಶ್ಲೋಕ - 20)
ಮೂಲಮ್
ವಿಚರನ್ನಾಶುನಾ ಕ್ಷೋಣ್ಯಾಂ ಹಯೇನಾಪ್ರತಿಮದ್ಯುತಿಃ ।
ನೃಪಲಿಂಗಚ್ಛದೋ ದಸ್ಯೂನ್ಕೋಟಿಶೋ ನಿಹನಿಷ್ಯತಿ ॥
ಅನುವಾದ
ಅವನ ರೋಮ-ರೋಮಗಳಲ್ಲಿ ಅತುಲ ತೇಜವು ಹೊರಹೊಮ್ಮುವುದು. ಅವನು ತನ್ನ ಮಹಾವೇಗಶಾಲಿಯಾದ ಕುದುರೆಯನ್ನೇರಿ ಪೃಥಿವಿಯಲ್ಲಿ ಎಲ್ಲೆಡೆ ಸಂಚರಿಸಿ, ರಾಜರವೇಷದಲ್ಲಿ ಅಡಗಿಕೊಂಡಿದ್ದ ಕೋಟಿ-ಕೋಟಿ ದಸ್ಯುಗಳನ್ನು ಸಂಹರಿಸುವನು. ॥20॥
(ಶ್ಲೋಕ - 21)
ಮೂಲಮ್
ಅಥ ತೇಷಾಂ ಭವಿಷ್ಯಂತಿ ಮನಾಂಸಿ ವಿಶದಾನಿ ವೈ ।
ವಾಸುದೇವಾಂಗರಾಗಾತಿಪುಣ್ಯಗಂಧಾನಿಲಸ್ಪೃಶಾಮ್ ।
ಪೌರಜಾನಪದಾನಾಂ ವೈ ಹತೇಷ್ವಖಿಲದಸ್ಯುಷು ॥
ಅನುವಾದ
ಪ್ರಿಯಪರೀಕ್ಷಿತನೇ! ಸಮಸ್ತ ದಸ್ಯುಗಳ ಸಂಹಾರವಾದಾಗ ನಗರದ ಮತ್ತು ದೇಶದ ಸಮಸ್ತ ಪ್ರಜೆಗಳ ಹೃದಯ ಪವಿತ್ರತೆಯಿಂದ ತುಂಬಿ ಹೋದೀತು. ಏಕೆಂದರೆ, ಕಲ್ಕಿ ಭಗವಂತನ ಶರೀರಕ್ಕೆ ಹಚ್ಚಿದ ಅಂಗರಾಗದ ಸ್ಪರ್ಶವನ್ನು ಪಡೆದ ಅತ್ಯಂತ ಪವಿತ್ರವಾದ ವಾಯುವು ಅವರನ್ನು ಸ್ಪರ್ಶಿಸುವುದರಿಂದ ಅವರು ಭಗವಂತನ ಶ್ರೀವಿಗ್ರಹದ ದಿವ್ಯ ಸುಗಂಧವನ್ನು ಪಡೆದುಕೊಳ್ಳುವರು. ॥21॥
(ಶ್ಲೋಕ - 22)
ಮೂಲಮ್
ತೇಷಾಂ ಪ್ರಜಾವಿಸರ್ಗಶ್ಚ ಸ್ಥವಿಷ್ಠಃ ಸಂಭವಿಷ್ಯತಿ ।
ವಾಸುದೇವೇ ಭಗವತಿ ಸತ್ತ್ವಮೂರ್ತೌ ಹೃದಿ ಸ್ಥಿತೇ ॥
ಅನುವಾದ
ಅವರ ಪವಿತ್ರ ಹೃದಯಗಳಲ್ಲಿ ಸತ್ತ್ವಮೂರ್ತಿಯಾದ ಭಗವಾನ್ ವಾಸುದೇವನು ವಿರಾಜಮಾನಾಗುವನು. ಮತ್ತೆ ಅವರ ಸಂತಾನಗಳು ಮೊದಲಿನಂತೆ ಹೃಷ್ಟ-ಪುಷ್ಟರೂ ಬಲಿಷ್ಠರೂ ಆಗುವರು. ॥22॥
ಮೂಲಮ್
(ಶ್ಲೋಕ - 23)
ಯದಾವತೀರ್ಣೋ ಭಗವಾನ್ ಕಲ್ಕಿರ್ಧರ್ಮಪತಿರ್ಹರಿಃ ।
ಕೃತಂ ಭವಿಷ್ಯತಿ ತದಾ ಪ್ರಜಾಸೂತಿಶ್ಚ ಸಾತ್ತ್ವಿಕೀ ॥
ಅನುವಾದ
ಪ್ರಜೆಯ ನಯನಮನೋಹರ ಹರಿಯೇ ಧರ್ಮದ ರಕ್ಷಕನು ಸ್ವಾಮಿಯೂ ಆಗಿರುವನು. ಅಂತಹ ಭಗವಂತನು ಕಲ್ಕಿಯಾಗಿ ಅವತರಿಸಿದಾಗಲೇ ಕೃತಯುಗದ ಪ್ರಾರಂಭವಾಗುವುದು ಹಾಗೂ ಪ್ರಜೆಯ ಸಂತಾನ-ಪರಂಪರೆಯು ತಾನಾಗಿಯೇ ಸತ್ತ್ವಗುಣದಿಂದ ಯುಕ್ತರಾಗುವರು. ॥23॥
(ಶ್ಲೋಕ - 24)
ಮೂಲಮ್
ಯದಾಚಂದ್ರಶ್ಚ ಸೂರ್ಯಶ್ಚ ತಥಾ ತಿಷ್ಯಬೃಹಸ್ಪತೀ ।
ಏಕರಾಶೌ ಸಮೇಷ್ಯಂತಿ ತದಾ ಭವತಿ ತತ್ ಕೃತಮ್ ॥
ಅನುವಾದ
ಚಂದ್ರ, ಸೂರ್ಯ ಮತ್ತು ಬೃಹಸ್ಪತಿಯು ಒಂದೇ ಸಮಯದಲ್ಲಿ ಒಟ್ಟಿಗೆ ಪುಷ್ಯನಕ್ಷತ್ರದ ಪ್ರಥಮ ಚರಣದಲ್ಲಿ ಒಂದೇ ರಾಶಿಯಲ್ಲಿ ಪ್ರವೇಶಿಸಿದಾಗಲೇ ಕೃತಯುಗದ ಪ್ರಾರಂಭವಾಗುತ್ತದೆ. ॥24॥
(ಶ್ಲೋಕ - 25)
ಮೂಲಮ್
ಯೇತೀತಾ ವರ್ತಮಾನಾ ಯೇ ಭವಿಷ್ಯಂತಿ ಚ ಪಾರ್ಥಿವಾಃ ।
ತೇ ತ ಉದ್ದೇಶತಃ ಪ್ರೋಕ್ತಾ ವಂಶೀಯಾಃ ಸೋಮಸೂರ್ಯಯೋಃ ॥
ಅನುವಾದ
ಪರೀಕ್ಷಿತನೇ! ಚಂದ್ರವಂಶ ಮತ್ತು ಸೂರ್ಯವಂಶದಲ್ಲಿ ಆಗಿಹೋದ ರಾಜರ ಕುರಿತು, ಮುಂದೆ ಆಗುವವರ ಕುರಿತು ಎಲ್ಲವನ್ನು ಸಂಕ್ಷೇಪವಾಗಿ ನಾನು ನಿನಗೆ ವರ್ಣಿಸಿರುವೆನು. ॥25॥
(ಶ್ಲೋಕ - 26)
ಮೂಲಮ್
ಆರಭ್ಯ ಭವತೋ ಜನ್ಮ ಯಾವನ್ನಂದಾಭಿಷೇಚನಮ್ ।
ಏತದ್ವರ್ಷಸಹಸ್ರಂ ತು ಶತಂ ಪಂಚದಶೋತ್ತರಮ್ ॥
ಅನುವಾದ
ನಿನ್ನ ಜನ್ಮದಿಂದ ಹಿಡಿದು ನಂದರಾಜನ ಪಟ್ಟಾಭಿಷೇಕದವರೆಗೆ ಒಂದು ಸಾವಿರದ ನೂರಹದಿನೈದು ವರ್ಷಗಳ ಸಮಯ ತಗಲುವುದು. ॥26॥
(ಶ್ಲೋಕ - 27)
ಮೂಲಮ್
ಸಪ್ತರ್ಷೀಣಾಂ ತು ಯೌ ಪೂರ್ವೌ ದೃಶ್ಯೇತೇ ಉದಿತೌ ದಿವಿ ।
ತಯೋಸ್ತು ಮಧ್ಯೇ ನಕ್ಷತ್ರಂ ದೃಶ್ಯತೇ ಯತ್ಸಮಂ ನಿಶಿ ॥
ಅನುವಾದ
ಆಕಾಶದಲ್ಲಿ ಸಪ್ತರ್ಷಿಯರ ಉದಯವಾದ ಸಮಯದಲ್ಲಿ ಮೊದಲಿಗೆ ಅವರಲ್ಲಿ ಎರಡೇ ನಕ್ಷತ್ರಗಳು ಕಂಡುಬರುತ್ತವೆ. ಅವುಗಳ ಮಧ್ಯದಲ್ಲಿ ದಕ್ಷಿಣೋತ್ತರ ರೇಖೆಯ ಸಮಭಾಗದಲ್ಲಿ ಅಶ್ವಿನಿಯೇ ಮೊದಲಾದ ನಕ್ಷತ್ರಗಳಲ್ಲಿನ ಒಂದೇ ನಕ್ಷತ್ರವು ಕಂಡು ಬರುತ್ತದೆ. ॥27॥
(ಶ್ಲೋಕ - 28)
ಮೂಲಮ್
ತೇನೈತ ಋಷಯೋ ಯುಕ್ತಾಸ್ತಿಷ್ಠಂತ್ಯಬ್ದಶತಂ ನೃಣಾಮ್ ।
ತೇ ತ್ವದೀಯೇ ದ್ವಿಜಾಃ ಕಾಲೇ ಅಧುನಾ ಚಾಶ್ರಿತಾ ಮಘಾಃ ॥
ಅನುವಾದ
ಆ ನಕ್ಷತ್ರದೊಂದಿಗೆ ಸಪ್ತರ್ಷಿಗಳು ಮನುಷ್ಯ ಮಾನದ ಒಂದುನೂರು ವರ್ಷಗಳವರೆಗೆ ಇರುತ್ತಾರೆ. ಅವರು ನಿನ್ನ ಜನ್ಮ ಸಮಯದಲ್ಲಿ ಹಾಗೂ ಈಗಲೂ ಮಘಾನಕ್ಷತ್ರದಲ್ಲೇ ಇದ್ದಾರೆ. ॥28॥
(ಶ್ಲೋಕ - 29)
ಮೂಲಮ್
ವಿಷ್ಣೋರ್ಭಗವತೋ ಭಾನುಃ ಕೃಷ್ಣಾಖ್ಯೋಸೌ ದಿವಂ ಗತಃ ।
ತದಾವಿಶತ್ಕಲಿರ್ಲೋಕಂ ಪಾಪೇ ಯದ್ರಮತೇ ಜನಃ ॥
ಅನುವಾದ
ಭಗವಂತನು ಶ್ರೀಕೃಷ್ಣನೆಂಬ ಹೆಸರಿನಿಂದ ಅವತರಿಸಿ ದಿವ್ಯಲೀಲೆಗಳನ್ನು ನಡೆಸಿ ತನ್ನ ಪರಮ ದಿವ್ಯಧಾಮಕ್ಕೆ ಹೊರಟು ಹೋದ ಬಳಿಕ ಕಲಿಯು ಈ ಲೋಕವನ್ನು ಆಕ್ರಮಿಸಿದನು. ಅದರಿಂದಲೇ ಮನುಷ್ಯರ ಮತಿ-ಗತಿ ಪಾಪದ ಕಡೆಗೆವಾಲಿತು. ॥29॥
(ಶ್ಲೋಕ - 30)
ಮೂಲಮ್
ಯಾವತ್ಸ ಪಾದಪದ್ಮಾಭ್ಯಾಂ ಸ್ಪೃಶನ್ನಾಸ್ತೇ ರಮಾಪತಿಃ ।
ತಾವತ್ಕಲಿರ್ವೈ ಪೃಥಿವೀಂ ಪರಾಕ್ರಾಂತುಂ ನ ಚಾಶಕತ್ ॥
ಅನುವಾದ
ಲಕ್ಷ್ಮೀಪತಿಯಾದ ಭಗವಾನ್ ಶ್ರೀಕೃಷ್ಣನು ತನ್ನ ಚರಣಕಮಲಗಳಿಂದ ಭೂಮಿಯನ್ನು ಸ್ಪರ್ಶಿಸುತ್ತಿದ್ದವರೆಗೆ ಕಲಿಯುಗವು ಪೃಥಿವಿಯಲ್ಲಿ ತನ್ನ ಕಾಲನ್ನು ಊರದಾದನು. ॥30॥
(ಶ್ಲೋಕ - 31)
ಮೂಲಮ್
ಯದಾ ದೇವರ್ಷಯಃ ಸಪ್ತ ಮಘಾಸು ವಿಚರಂತಿ ಹಿ ।
ತದಾ ಪ್ರವೃತ್ತಸ್ತು ಕಲಿರ್ದ್ವಾದಶಾಬ್ದಶತಾತ್ಮಕಃ ॥
ಅನುವಾದ
ಪರೀಕ್ಷಿತನೇ! ಸಪ್ತರ್ಷಿಗಳು ಮಘಾನಕ್ಷತ್ರದಲ್ಲಿ ಸಂಚರಿಸುವ ಸಮಯದಲ್ಲೇ ಕಲಿಯುಗದ ಪ್ರಾರಂಭವಾಗುತ್ತದೆ. ಕಲಿಯುಗದ ಅವಧಿ ದೇವತೆಗಳ ವರ್ಷಗಣನೆಯಂತೆ ಹನ್ನೆರಡು ನೂರು ವರ್ಷಗಳು ಅಂದರೆ, ಮನುಷ್ಯರ ಗಣನೆಯಂತೆ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರ್ಷಗಳು. ॥31॥
(ಶ್ಲೋಕ - 32)
ಮೂಲಮ್
ಯದಾ ಮಘಾಭ್ಯೋ ಯಾಸ್ಯಂತಿ ಪೂರ್ವಾಷಾಢಾಂ ಮಹರ್ಷಯಃ ।
ತದಾ ನಂದಾತ್ಪ್ರಭೃತ್ಯೇಷ ಕಲಿರ್ವೃದ್ಧಿಂ ಗಮಿಷ್ಯತಿ ॥
ಅನುವಾದ
ಸಪ್ತರ್ಷಿಗಳು ಮಘಾನಕ್ಷತ್ರದಿಂದ ಪೂರ್ವಾಷಾಢಾ ನಕ್ಷತ್ರಕ್ಕೆ ಹೋದಾಗ ನಂದರಾಜನ ರಾಜ್ಯವಿರುವುದು. ಆಗಿನಿಂದಲೇ ಕಲಿಯುಗದ ವೃದ್ಧಿ ಪ್ರಾರಂಭವಾಗುವುದು. ॥32॥
(ಶ್ಲೋಕ - 33)
ಮೂಲಮ್
ಯಸ್ಮಿನ್ಕೃಷ್ಣೋ ದಿವಂ ಯಾತಸ್ತಸ್ಮಿನ್ನೇವ ತದಾಹನಿ ।
ಪ್ರತಿಪನ್ನಂ ಕಲಿಯುಗಮಿತಿ ಪ್ರಾಹುಃ ಪುರಾವಿದಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಪರಮಧಾಮಕ್ಕೆ ಪ್ರಯಾಣ ಮಾಡಿದ ದಿನವೇ ಕಲಿಯುಗದ ಪ್ರಾರಂಭವಾಯಿತೆಂದು ಪುರಾತತ್ತ್ವವನ್ನು ಬಲ್ಲವರು ಹೇಳುತ್ತಾರೆ. ॥33॥
(ಶ್ಲೋಕ - 34)
ಮೂಲಮ್
ದಿವ್ಯಾಬ್ದಾನಾಂ ಸಹಸ್ರಾಂತೇ ಚತುರ್ಥೇ ತು ಪುನಃ ಕೃತಮ್ ।
ಭವಿಷ್ಯತಿ ಯದಾ ನೃಣಾಂ ಮನ ಆತ್ಮಪ್ರಕಾಶಕಮ್ ॥
ಅನುವಾದ
ಪರೀಕ್ಷಿತನೆ! ದೇವತೆಗಳ ವರ್ಷಗಣನೆಯಂತೆ ಒಂದು ಸಾವಿರ ವರ್ಷಗಳು ಕಳೆದುಹೋದಾಗ ಕಲಿಯುಗದ ಕೊನೆಯ ದಿನಗಳಲ್ಲಿ ಪುನಃ ಭಗವಾನ್ ಕಲ್ಕಿಯ ಕೃಪೆಯಿಂದ ಮನುಷ್ಯರ ಮನಸ್ಸುಗಳಲ್ಲಿ ಸಾತ್ತ್ವಿಕತೆಯ ಸಂಚಾರವಾಗುವುದು. ಜನರು ತಮ್ಮ ವಾಸ್ತವಿಕ ಸ್ವರೂಪವನ್ನು ತಿಳಿದುಕೊಳ್ಳುವರು ಹಾಗೂ ಆಗಿನಿಂದಲೇ ಕೃತಯುಗದ ಪ್ರಾರಂಭವೂ ಆಗುವುದು. ॥34॥
(ಶ್ಲೋಕ - 35)
ಮೂಲಮ್
ಇತ್ಯೇಷ ಮಾನವೋ ವಂಶೋ ಯಥಾ ಸಂಖ್ಯಾಯತೇ ಭುವಿ ।
ತಥಾ ವಿಟ್ಶೂದ್ರ ವಿಪ್ರಾಣಾಂ ತಾಸ್ತಾ ಜ್ಞೇಯಾ ಯುಗೇ ಯುಗೇ ॥
ಅನುವಾದ
ಪರೀಕ್ಷಿತನೇ! ನಾನಾದರೋ ನಿನಗೆ ಕೇವಲ ಮನುವಂಶವನ್ನೇ ಸಂಕ್ಷೇಪವಾಗಿ ವರ್ಣಿಸಿರುವೆನು. ಮನುವಂಶದ ಗಣನೆಯಾಗುವಂತೆಯೇ ಪ್ರತಿಯೊಂದು ಬ್ರಾಹ್ಮಣ, ವೈಶ್ಯ, ಶೂದ್ರರ ವಂಶ ಪರಂಪರೆಯನ್ನು ಭಾವಿಸಬೇಕು. ॥35॥
(ಶ್ಲೋಕ - 36)
ಮೂಲಮ್
ಏತೇಷಾಂ ನಾಮಲಿಂಗಾನಾಂ ಪುರುಷಾಣಾಂ ಮಹಾತ್ಮನಾಮ್ ।
ಕಥಾಮಾತ್ರಾವಶಿಷ್ಟಾನಾಂ ಕೀರ್ತಿರೇವ ಸ್ಥಿತಾ ಭುವಿ ॥
ಅನುವಾದ
ರಾಜನೇ! ಯಾವ ಪುರುಷರ ಮತ್ತು ಮಹಾತ್ಮರ ಕುರಿತು ನಾನು ನಿನಗೆ ವರ್ಣಿಸಿರುವೆನೋ, ಅವರನ್ನು ಕೇವಲ ಹೆಸರಿನಿಂದಲೇ ಈಗ ಗುರುತಿಸಲಾಗುತ್ತದೆ. ಈಗ ಅವರಿಲ್ಲ, ಕೇವಲ ಅವರ ಕಥೆಗಳು ಉಳಿದುಕೊಂಡಿವೆ. ಈಗ ಅವರ ಕೀರ್ತಿಯೇ ಪೃಥಿವಿಯಲ್ಲಿ ಅಲ್ಲಲ್ಲಿ ಕೇಳಲು ಬರುತ್ತದೆ. ॥36॥
(ಶ್ಲೋಕ - 37)
ಮೂಲಮ್
ದೇವಾಪಿಃ ಶಂತನೋರ್ಭ್ರಾತಾ ಮರುಶ್ಚೇಕ್ಷ್ವಾಕುವಂಶಜಃ ।
ಕಲಾಪಗ್ರಾಮ ಆಸಾತೇ ಮಹಾಯೋಗಬಲಾನ್ವಿತೌ ॥
ಅನುವಾದ
ಭೀಷ್ಮಪಿತಾಮಹರ ತಂದೆ ರಾಜಾಶಂತನುವಿನ ತಮ್ಮ ದೇವಾಪಿಯು ಮತ್ತು ಇಕ್ಷ್ವಾಕುವಂಶದ ಮರು ಎಂಬುವರು ಈ ಸಮಯದಲ್ಲಿ ಕಲಾಪಗ್ರಾಮದಲ್ಲಿ ನೆಲೆಸಿರುವರು. ಅವರು ಬಹಳ ದೊಡ್ಡ ಯೋಗಬಲದಿಂದ ಕೂಡಿರುವರು. ॥37॥
(ಶ್ಲೋಕ - 38)
ಮೂಲಮ್
ತಾವಿಹೈತ್ಯ ಕಲೇರಂತೇ ವಾಸುದೇವಾನುಶಿಕ್ಷಿತೌ ।
ವರ್ಣಾಶ್ರಮಯುತಂ ಧರ್ಮಂ ಪೂರ್ವವತ್ಪ್ರಥಯಿಷ್ಯತಃ ॥
ಅನುವಾದ
ಕಲಿಯುಗದ ಕೊನೆಯಲ್ಲಿ ಭಗವಾನ್ ಕಲ್ಕಿಯ ಅಪ್ಪಣೆಯಂತೆ ಅವರು ಪುನಃ ಇಲ್ಲಿಗೆ ಬಂದು ಮೊದಲಿನಂತೆ ವರ್ಣಾಶ್ರಮ ಧರ್ಮವನ್ನು ವಿಸ್ತಾರಗೊಳಿಸುವರು. ॥38॥
(ಶ್ಲೋಕ - 39)
ಮೂಲಮ್
ಕೃತಂ ತ್ರೇತಾ ದ್ವಾಪರಂ ಚ ಕಲಿಶ್ಚೇತಿ ಚತುರ್ಯುಗಮ್ ।
ಅನೇನ ಕ್ರಮಯೋಗೇನ ಭುವಿ ಪ್ರಾಣಿಷು ವರ್ತತೇ ॥
ಅನುವಾದ
ಕೃತ, ತ್ರೇತ, ದ್ವಾಪರ ಮತ್ತು ಕಲಿ ಎಂಬ ಈ ನಾಲ್ಕು ಯುಗಗಳು ಹಿಂದಿನ ಕ್ರಮದಂತೆ ತಮ್ಮ-ತಮ್ಮ ಸಮಯದಲ್ಲಿ ಪೃಥಿವಿಯಲ್ಲಿನ ಪ್ರಾಣಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತಾ ಇರುವವು. ॥39॥
(ಶ್ಲೋಕ - 40)
ಮೂಲಮ್
ರಾಜನ್ನೇತೇ ಮಯಾ ಪ್ರೋಕ್ತಾ ನರದೇವಾಸ್ತಥಾಪರೇ ।
ಭೂವೌ ಮಮತ್ವಂ ಕೃತ್ವಾಂತೇ ಹಿತ್ವೇಮಾಂ ನಿಧನಂ ಗತಾಃ ॥
ಅನುವಾದ
ಪರೀಕ್ಷಿತನೇ! ನಾನು ನಿನಗೆ ವರ್ಣಿಸಿದ ರಾಜರೆಲ್ಲರೂ ಹಾಗೂ ಇವರಲ್ಲದೆ ಇತರ ರಾಜರೂ ಕೂಡ ಈ ಪೃಥಿವಿಯನ್ನು ನನ್ನದು-ನನ್ನದು ಎಂದು ಹೇಳುತ್ತಲೇ ಇದ್ದರು. ಆದರೆ ಕೊನೆಗೆ ಸತ್ತು ಮಣ್ಣು ಪಾಲಾದರು. ॥40॥
(ಶ್ಲೋಕ - 41)
ಮೂಲಮ್
ಕೃಮಿವಿಡ್ಭಸ್ಮಸಂಜ್ಞಾಂತೇ ರಾಜನಾಮ್ನೋಪಿ ಯಸ್ಯ ಚ ।
ಭೂತಧ್ರುಕ್ ತತ್ ಕೃತೇ ಸ್ವಾರ್ಥಂ ಕಿಂ ವೇದ ನಿರಯೋ ಯತಃ ॥
ಅನುವಾದ
ಈ ಶರೀರವನ್ನು ಯಾರೇ ರಾಜರೆಂದು ಹೇಳಲಿ; ಆದರೆ ಕೊನೆಯಲ್ಲಿ ಇದು ಕ್ರಿಮಿಗಳ ರಾಶಿ ಅಥವಾ ಬೂದಿಯಾಗಿಯೇ ಪರಿಣತವಾಗುವುದು. ಬೂದಿಯಾಗಿಯೇ ಇರುವುದು. ಇದೇ ಶರೀರಕ್ಕಾಗಿ ಅಥವಾ ಇದರ ಸಂಬಂಧಿಗಳಿಗಾಗಿ ಯಾವುದೇ ಪ್ರಾಣಿಯನ್ನು ಹಿಂಸಿಸುವವರು ತಮ್ಮ ಸ್ವಾರ್ಥವಾಗಲೀ, ಪರಮಾರ್ಥವಾಗಲೀ ಅರಿತವರಲ್ಲ. ಏಕೆಂದರೆ, ಪ್ರಾಣಿಗಳನ್ನು ಹಿಂಸಿಸುವುದು ನರಕದ ದ್ವಾರವೇಆಗಿದೆ. ॥41॥
(ಶ್ಲೋಕ - 42)
ಮೂಲಮ್
ಕಥಂ ಸೇಯಮಖಂಡಾ ಭೂಃ ಪೂರ್ವೈರ್ಮೇ ಪುರುಷೈರ್ಧೃತಾ ।
ಮತ್ಪುತ್ರಸ್ಯ ಚ ಪೌತ್ರಸ್ಯ ಮತ್ಪೂರ್ವಾ ವಂಶಜಸ್ಯ ವಾ ॥
ಅನುವಾದ
ನನ್ನ ತಾತ-ಮುತ್ತಾತಂದಿರು ಈ ಅಖಂಡ ಭೂಮಂಡಲಕ್ಕೆ ಶಾಸಕರಾಗಿದ್ದರು. ಈಗ ಇದು ನನ್ನ ಅಧೀನದಲ್ಲಿದೆ. ನಾನು ಸತ್ತ ಬಳಿಕ ನನ್ನ ಮಕ್ಕಳು-ಮೊಮ್ಮಕ್ಕಳು, ನನ್ನ ವಂಶದವರು ಹೀಗೆ ಇದನ್ನು ಅನುಭವಿಸುವರು ಎಂದು ಆ ಜನರು ಯೋಚಿಸುತ್ತಲೇ ಇರುವರು. ॥42॥
(ಶ್ಲೋಕ - 43)
ಮೂಲಮ್
ತೇಜೋಬನ್ನಮಯಂ ಕಾಯಂ ಗೃಹೀತ್ವಾತ್ಮತಯಾ ಬುಧಾಃ ।
ಮಹೀಂ ಮಮತಯಾ ಚೋಭೌ ಹಿತ್ವಾಂತೇದರ್ಶನಂ ಗತಾಃ ॥
ಅನುವಾದ
ಅಂತಹ ಆ ಮೂರ್ಖರು ಬೆಂಕಿ, ನೀರು, ಮಣ್ಣಿನ ಈ ಶರೀರವನ್ನು ತನ್ನದೆಂದು ತಿಳಿದುಕೊಂಡು, ದುರಭಿಮಾನದಿಂದ ಈ ಪೃಥಿವಿಯು ನನ್ನದಾಗಿದೆ ಎಂದು ಜಂಭಕೊಚ್ಚಿಕೊಳ್ಳುವರು. ಕೊನೆಗೆ ಈ ಶರೀರ ಮತ್ತು ಪೃಥಿವಿಯನ್ನು ಬಿಟ್ಟು ಅವರು ಅದೃಶ್ಯರಾಗಿ ಹೋಗುವರು. ॥43॥
(ಶ್ಲೋಕ - 44)
ಮೂಲಮ್
ಯೇ ಯೇ ಭೂಪತಯೋ ರಾಜನ್ ಭುಂಜಂತಿ ಭುವಮೋಜಸಾ ।
ಕಾಲೇನ ತೇ ಕೃತಾಃ ಸರ್ವೇ ಕಥಾಮಾತ್ರಾಃ ಕಥಾಸು ಚ ॥
ಅನುವಾದ
ಪ್ರಿಯ ಪರೀಕ್ಷಿತನೇ! ಯಾವ ಯಾವ ರಾಜರು ಬಹಳ ಉತ್ಸಾಹದಿಂದ ಮತ್ತು ಬಲ-ಪೌರುಷದಿಂದ ಈ ಭೂಮಿಯನ್ನು ಅನುಭವಿಸಿದರೋ ಅವರೆಲ್ಲರನ್ನೂ ಕಾಲವು ತನ್ನ ವಿಕರಾಳ ಮುಖದಿಂದ ನುಂಗಿ ಹಾಕಿತು. ಈಗ ಕೇವಲ ಇತಿಹಾಸದಲ್ಲಿ ಅವರ ಕಥೆಮಾತ್ರ ಉಳಿದುಕೊಂಡಿದೆ. ॥44॥
ಅನುವಾದ (ಸಮಾಪ್ತಿಃ)
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ದ್ವಿತೀಯೋಽಧ್ಯಾಯಃ ॥2॥