೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ಕಲಿಯುಗದ ರಾಜವಂಶಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಸ್ವಧಾಮಾನುಗತೇ ಕೃಷ್ಣೇ ಯದುವಂಶವಿಭೂಷಣೇ ।
ಕಸ್ಯ ವಂಶೋಭವತ್ಪೃಥ್ವ್ಯಾಮೇತದಾಚಕ್ಷ್ವ ಮೇ ಮುನೇ ॥

ಅನುವಾದ

ಪರೀಕ್ಷಿದ್ರಾಜನು ಕೇಳಿದನು — ಮಹಾಮುನಿಗಳೇ! ಯದುವಂಶ ಶಿರೋಮಣಿಯಾದ ಭಗವಾನ್ ಶ್ರೀಕೃಷ್ಣನು ಸ್ವಧಾಮಕ್ಕೆ ತೆರಳಿದ ಬಳಿಕ ಈ ಭೂಮಿಯಲ್ಲಿ ಯಾವ ರಾಜವಂಶದವರು ರಾಜ್ಯವಾಳಿದರು? ಈಗ ಯಾರು ಆಳುತ್ತಿರುವರು? ತಾವು ದಯಮಾಡಿ ತಿಳಿಸಿರಿ. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಯೋಂತ್ಯಃ ಪುರಂಜಯೋ ನಾಮ ಭಾವ್ಯೋ ಬಾರ್ಹದ್ರಥೋ ನೃಪ ।
ತಸ್ಯಾಮಾತ್ಯಸ್ತು ಶುನಕೋ ಹತ್ವಾ ಸ್ವಾಮಿನಮಾತ್ಮಜಮ್ ॥

(ಶ್ಲೋಕ - 3)

ಮೂಲಮ್

ಪ್ರದ್ಯೋತಸಂಜ್ಞಂ ರಾಜಾನಂ ಕರ್ತಾ ಯತ್ಪಾಲಕಃ ಸುತಃ ।
ವಿಶಾಖಯೂಪಸ್ತತ್ಪುತ್ರೋ ಭವಿತಾ ರಾಜಕಸ್ತತಃ ॥

(ಶ್ಲೋಕ - 4)

ಮೂಲಮ್

ನಂದಿವರ್ಧನಸ್ತತ್ಪುತ್ರಃ ಪಂಚ ಪ್ರದ್ಯೋತನಾ ಇಮೇ ।
ಅಷ್ಟತ್ರಿಂಶೋತ್ತರಶತಂ ಭೋಕ್ಷ್ಯಂತಿ ಪೃಥಿವೀಂ ನೃಪಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯ ಪರೀಕ್ಷಿತನೇ! ಜರಾಸಂಧನ ತಂದೆಯಾದ ಬೃಹದ್ರಥನ ವಂಶದಲ್ಲಿ ಪುರಂಜಯ ಅಥವಾ ರಿಪುಂಜಯ ಎನ್ನುವವನು ಕಡೆಯ ರಾಜನಾಗುವನು ಎಂದು ನಾನು ಹಿಂದೆ (ಒಂಭತ್ತನೇ ಸ್ಕಂಧದಲ್ಲಿ) ತಿಳಿಸಿದ್ದೆ. ಅವನಿಗೆ ಶುನಕನೆಂಬ ಮಂತ್ರಿಯಾಗುವನು. ಅವನು ತನ್ನ ಒಡೆಯನನ್ನು ಕೊಂದು ತನ್ನ ಪುತ್ರನಾದ ಪ್ರದ್ಯೋತನನ್ನು ಸಿಂಹಾಸನದಲ್ಲಿ ಕೂರಿಸುವನು. ಪ್ರದ್ಯೋತನಿಗೆ ಪಾಲಕನೆಂಬ ಪುತ್ರನೂ, ಪಾಲಕನಿಗೆ ವಿಶಾಖಯೂಪನೂ, ವಿಶಾಖಯೂಪನಿಗೆ ರಾಜಕ ಹಾಗೂ ರಾಜಕನಿಗೆ ನಂದಿವರ್ಧನನೆಂಬ ಪುತ್ರನು ಹುಟ್ಟುವನು. ಪ್ರದ್ಯೋತವಂಶದಲ್ಲಿ ಇವರೇ ಐದು ಮಂದಿ ರಾಜರಾಗುವರು. ಇವರೆಲ್ಲರೂ ಪ್ರದ್ಯೋತರೆಂದೇ ಕರೆಸಿಕೊಳ್ಳುವರು. ಇವರು ನೂರು ಮೂವತ್ತೆಂಟು ವರ್ಷಗಳವರೆಗೆ ಧರೆಯ ರಾಜತ್ವವನ್ನು ಅನುಭವಿಸುವರು. ॥2-4॥

(ಶ್ಲೋಕ - 5)

ಮೂಲಮ್

ಶಿಶುನಾಗಸ್ತತೋ ಭಾವ್ಯಃ ಕಾಕವರ್ಣಸ್ತು ತತ್ಸುತಃ ।
ಕ್ಷೇಮಧರ್ಮಾ ತಸ್ಯ ಸುತಃ ಕ್ಷೇತ್ರಜ್ಞಃ ಕ್ಷೇಮಧರ್ಮಜಃ ॥

ಅನುವಾದ

ಅನಂತರ ಶಿಶುನಾಗನೆಂಬುವನು ರಾಜನಾಗುವನು. ಅವನ ಪುತ್ರನು ಕಾಕವರ್ಣ, ಅವನಿಗೆ ಕ್ಷೇಮಧರ್ಮನೆಂಬ ಪುತ್ರನೂ, ಅವನಿಗೆ ಕ್ಷೇತ್ರಜ್ಞನೆಂಬ ಪುತ್ರನು ಹುಟ್ಟುವನು. ॥5॥

(ಶ್ಲೋಕ - 6)

ಮೂಲಮ್

ವಿಧಿಸಾರಃ ಸುತಸ್ತಸ್ಯಾಜಾತಶತ್ರುರ್ಭವಿಷ್ಯತಿ ।
ದರ್ಭಕಸ್ತತ್ಸುತೋ ಭಾವೀ ದರ್ಭಕಸ್ಯಾಜಯಃ ಸ್ಮೃತಃ ॥

ಅನುವಾದ

ಕ್ಷೇತ್ರಜ್ಞನಿಗೆ ವಿಧಿಸಾರನೂ, ಅವನಿಗೆ ಅಜಾತ ಶತ್ರುವೂ, ಅಜಾತಶತ್ರುವಿಗೆ ದರ್ಭಕನೂ, ಅವನಿಗೆ ಅಜಯನೆಂಬ ಪುತ್ರ ಜನಿಸುವನು. ॥6॥

(ಶ್ಲೋಕ - 7)

ಮೂಲಮ್

ನಂದಿವರ್ಧನ ಆಜೇಯೋ ಮಹಾನಂದಿಃ ಸುತಸ್ತತಃ ।
ಶಿಶುನಾಗಾ ದಶೈವೈತೇ ಷಷ್ಟ್ಯುತ್ತರಶತತ್ರಯಮ್ ॥

(ಶ್ಲೋಕ - 8)

ಮೂಲಮ್

ಸಮಾ ಭೋಕ್ಷ್ಯಂತಿ ಪೃಥಿವೀಂ ಕುರುಶ್ರೇಷ್ಠ ಕಲೌ ನೃಪಾಃ ।
ಮಹಾನಂದಿಸುತೋ ರಾಜನ್ ಶೂದ್ರೀಗರ್ಭೋದ್ಭವೋ ಬಲೀ ॥

(ಶ್ಲೋಕ - 9)

ಮೂಲಮ್

ಮಹಾಪದ್ಮಪತಿಃ ಕಶ್ಚಿನ್ನಂದಃ ಕ್ಷತ್ರವಿನಾಶಕೃತ್ ।
ತತೋ ನೃಪಾ ಭವಿಷ್ಯಂತಿ ಶೂದ್ರಪ್ರಾಯಾಸ್ತ್ವಧಾರ್ಮಿಕಾಃ ॥

ಅನುವಾದ

ಅಜಯನಿಂದ ನಂದಿವರ್ಧನನೂ, ಅವನಿಂದ ಮಹಾನಂದಿಯು ಹುಟ್ಟುವನು. ಈ ಶಿಶುನಾಗವಂಶದಲ್ಲಿ ಈ ಹತ್ತು ರಾಜರು ಕಲಿಯುಗದಲ್ಲಿ ಮುನ್ನೂರ ಅರವತ್ತು ವರ್ಷಗಳವರೆಗೆ ಭೂಮಿಯಲ್ಲಿ ರಾಜ್ಯವಾಳುವರು. ಮಹಾನಂದಿಯ ಶೂದ್ರಪತ್ನಿಯಲ್ಲಿ ನಂದನೆಂಬ ಪುತ್ರನು ಹುಟ್ಟುವನು. ಈ ಮಹಾಬಲಿಷ್ಠನಾದ ನಂದನು ಮಹಾಪದ್ಮವೆಂಬ ನಿಧಿಗೆ ಅಧಿಕಾರಿಯಾಗುವನು. ಅದರಿಂದ ಜನರು ಇವನಿಗೆ ‘ಮಹಾ ಪದ್ಮ’ ಎಂದೂ ಹೇಳುವರು. ಈತನು ಕ್ಷತ್ರಿಯರಾಜರ ನಾಶಕ್ಕೆ ಕಾರಣನಾಗುವನು. ಅಲ್ಲಿಂದ ಮುಂದಿನ ರಾಜರು ಪ್ರಾಯಶಃ ಶೂದ್ರರೂ, ಅಧಾರ್ಮಿಕರೇ ಆಗುವರು. ॥7-9॥

(ಶ್ಲೋಕ - 10)

ಮೂಲಮ್

ಸ ಏಕಚ್ಛತ್ರಾಂ ಪೃಥಿವೀಮನುಲ್ಲಂಘಿತಶಾಸನಃ ।
ಶಾಸಿಷ್ಯತಿ ಮಹಾಪದ್ಮೋ ದ್ವಿತೀಯ ಇವ ಭಾರ್ಗವಃ ॥

ಅನುವಾದ

ಮಹಾಪದ್ಮನು ಭೂಮಿಯಲ್ಲಿ ಏಕಚ್ಛತ್ರಾಧಿಪತಿಯಾಗುವನು. ಅವನ ಶಾಸನವನ್ನು ಯಾರೂ ಮೀರಲಾರರು. ಕ್ಷತ್ರಿಯರ ವಿನಾಶಕ್ಕೆ ಕಾರಣವಾದ ಇವನು ಇನ್ನೊಬ್ಬ ಪರಶುರಾಮನೆಂದೇ ತಿಳಿಯಬೇಕು. ॥10॥

(ಶ್ಲೋಕ - 11)

ಮೂಲಮ್

ತಸ್ಯ ಚಾಷ್ಟೌ ಭವಿಷ್ಯಂತಿ ಸುಮಾಲ್ಯಪ್ರಮುಖಾಃ ಸುತಾಃ ।
ಯ ಇಮಾಂ ಭೋಕ್ಷ್ಯಂತಿ ಮಹೀಂ ರಾಜಾನಃ ಸ್ಮ ಶತಂ ಸಮಾಃ ॥

ಅನುವಾದ

ಇವನಿಗೆ ಸುಮಾಲ್ಯರೇ ಮೊದಲಾದ ಎಂಟು ಮಂದಿ ಪುತ್ರರಾಗುವರು. ಅವರೆಲ್ಲರೂ ರಾಜರಾಗಿ ನೂರುವರ್ಷಗಳ ಕಾಲ ಭೂಮಿಯನ್ನು ಅನುಭವಿಸುವರು. ॥11॥

(ಶ್ಲೋಕ - 12)

ಮೂಲಮ್

ನವ ನಂದಾನ್ ದ್ವಿಜಃ ಕಶ್ಚಿತ್ಪ್ರಪನ್ನಾನುದ್ಧರಿಷ್ಯತಿ ।
ತೇಷಾಮಭಾವೇ ಜಗತೀಂ ಮೌರ್ಯಾ ಭೋಕ್ಷ್ಯಂತಿ ವೈ ಕಲೌ ॥

ಅನುವಾದ

ಕೌಟಿಲ್ಯ ವಾತ್ಸ್ಯಾಯನ ಅಥವಾ ಚಾಣಕ್ಯನೆಂದು ಪ್ರಸಿದ್ಧನಾದ ಒಬ್ಬ ಬ್ರಾಹ್ಮಣನು ವಿಶ್ವವಿಖ್ಯಾತನಂದ ಮತ್ತು ಅವನ ಸಮಾಲ್ಯರೇ ಮುಂತಾದ ಎಂಟು ಪುತ್ರರನ್ನು ನಾಶಮಾಡುವನು. ಅವರು ಅಳಿದುಹೋದಮೇಲೆ ಕಲಿಯುಗದಲ್ಲಿ ಮೌರ್ಯವಂಶದ ರಾಜರು ಭೂಮಿಯನ್ನು ಆಳುವರು. ॥12॥

(ಶ್ಲೋಕ - 13)

ಮೂಲಮ್

ಸ ಏವ ಚಂದ್ರಗುಪ್ತಂ ವೈ ದಿಜೋ ರಾಜ್ಯೇಭಿಷೇಕ್ಷ್ಯತಿ ।
ತತ್ಸುತೋ ವಾರಿಸಾರಸ್ತು ತತಶ್ಚಾಶೋಕವರ್ಧನಃ ॥

ಅನುವಾದ

ಚಾಣಕ್ಯನು ಮೊಟ್ಟ ಮೊದಲಿಗೆ ಚಂದ್ರಗುಪ್ತ ಮೌರ್ಯನನ್ನು ರಾಜನಾಗಿ ಪಟ್ಟಾಭಿಷೇಕ ಮಾಡುವನು. ಚಂದ್ರಗುಪ್ತನ ಪುತ್ರ ವಾರಿಸಾರನಾಗುವನು ಮತ್ತು ವಾರಿಸಾರನಿಗೆ ಅಶೋಕ ವರ್ಧನನು ಜನಿಸುವನು. ॥13॥

(ಶ್ಲೋಕ - 14)

ಮೂಲಮ್

ಸುಯಶಾ ಭವಿತಾ ತಸ್ಯ ಸಂಗತಃ ಸುಯಶಃಸುತಃ ।
ಶಾಲಿಶೂಕಸ್ತತಸ್ತಸ್ಯ ಸೋಮಶರ್ಮಾ ಭವಿಷ್ಯತಿ ॥

ಅನುವಾದ

ಅಶೋಕವರ್ಧನನಿಗೆ ಸುಯಶನೆಂಬ ಪುತ್ರನಾಗುವನು. ಅವನಿಗೆ ಸಂಗತ, ಸಂಗತನಿಗೆ ಶಾಲಿಶೂಕ ಮತ್ತು ಶಾಲಿಶೂಕನಿಗೆ ಸೋಮಶರ್ಮಾ ಆಗುವನು. ॥14॥

(ಶ್ಲೋಕ - 15)

ಮೂಲಮ್

ಶತಧನ್ವಾ ತತಸ್ತಸ್ಯ ಭವಿತಾ ತದ್ಬೃಹದ್ರಥಃ ।
ವೌರ್ಯಾ ಹ್ಯೇತೇ ದಶ ನೃಪಾಃ ಸಪ್ತತ್ರಿಂಶಚ್ಛತೋತ್ತರಮ್ ।
ಸಮಾ ಭೋಕ್ಷ್ಯಂತಿ ಪೃಥಿವೀಂ ಕಲೌ ಕುರುಕುಲೋದ್ವಹ ॥

(ಶ್ಲೋಕ - 16)

ಮೂಲಮ್

ಹತ್ವಾ ಬೃಹದ್ರಥಂ ವೌರ್ಯಂ ತಸ್ಯ ಸೇನಾಪತಿಃ ಕಲೌ ।
ಪುಷ್ಯಮಿತ್ರಸ್ತು ಶುಂಗಾಹ್ವಃ ಸ್ವಯಂ ರಾಜ್ಯಂ ಕರಿಷ್ಯತಿ ।
ಅಗ್ನಿಮಿತ್ರಸ್ತತಸ್ತಸ್ಮಾತ್ ಸುಜ್ಯೇಷ್ಠೋಥ ಭವಿಷ್ಯತಿ ॥

ಅನುವಾದ

ಸೋಮಶರ್ಮನಿಗೆ ಶತಧನ್ವಾ, ಶತಧನ್ವನಿಗೆ ಬೃಹದ್ರಥ ಪುತ್ರನಾಗುವನು. ಕುರುವಂಶ ವಿಭೂಷಿತ ಪರೀಕ್ಷಿತನೇ! ಮೌರ್ಯವಂಶದ ಈ ಹತ್ತು ಮಂದಿ*ರಾಜರು ಕಲಿಯುಗದಲ್ಲಿ ಒಂದುನೂರ ಮೂವತ್ತೇಳು ವರ್ಷಗಳ ಕಾಲ ರಾಜ್ಯವನ್ನಾಳುವರು. ಬೃಹದ್ರಥನಿಗೆ ಪುಷ್ಯಮಿತ್ರಶುಂಗನೆಂಬುವನು ಸೇನಾಪತಿ. ಅವನು ತನ್ನ ಒಡೆಯನನ್ನು ಕೊಂದು ತಾನೇ ರಾಜನಾಗುವನು. ಪುಷ್ಯಮಿತ್ರನಿಗೆ ಅಗ್ನಿಮಿತ್ರ ಹಾಗೂ ಅಗ್ನಿಮಿತ್ರನಿಗೆ ಸುಜ್ಯೇಷ್ಠನಾಗುವನು. ॥15-16॥

ಟಿಪ್ಪನೀ
  • ಮೌರ್ಯರಾಜರ ಸಂಖ್ಯೆ ಚಂದ್ರಗುಪ್ತನನ್ನು ಸೇರಿಸಿ ಒಂಭತ್ತೇ ಆಗುವುದು. ಆದರೆ ವಿಷ್ಣುಪುರಾಣಾದಿಗಳಲ್ಲಿ ಚಂದ್ರಗುಪ್ತನಿಂದ ಐದನೆಯವನಾದ ದಶರಥ ಎಂಬ ಮೌರ್ಯವಂಶೀರಾಜನ ಉಲ್ಲೇಖ ದೊರೆಯುತ್ತದೆ. ಅವನನ್ನು ಸೇರಿಸಿ ಇಲ್ಲಿ ಹತ್ತುಮಂದಿ ಎಂದು ತಿಳಿಯಬೇಕು.

(ಶ್ಲೋಕ - 17)

ಮೂಲಮ್

ವಸುಮಿತ್ರೋ ಭದ್ರಕಶ್ಚ ಪುಲಿಂದೋ ಭವಿತಾ ತತಃ ।
ತತೋ ಘೋಷಃ ಸುತಸ್ತಸ್ಮಾದ್ವಜ್ರಮಿತ್ರೋ ಭವಿಷ್ಯತಿ ॥

ಅನುವಾದ

ಸುಜ್ಯೇಷ್ಠನಿಗೆ ವಸುಮಿತ್ರ, ವಸುಮಿತ್ರನಿಗೆ ಭದ್ರಕ ಮತ್ತು ಭದ್ರಕನಿಗೆ ಪುಲಿಂದ, ಪುಲಿಂದಕನಿಗೆ ಘೋಷ, ಘೋಷನಿಗೆ ವಜ್ರಮಿತ್ರನು ಮಗನಾಗುವನು. ॥17॥

(ಶ್ಲೋಕ - 18)

ಮೂಲಮ್

ತತೋ ಭಾಗವತಸ್ತಸ್ಮಾದ್ದೇವಭೂತಿರಿತಿ ಶ್ರುತಃ ।
ಶುಂಗಾ ದಶೈತೇ ಭೋಕ್ಷ್ಯಂತಿ ಭೂಮಿಂ ವರ್ಷಶತಾಧಿಕಮ್ ॥

ಅನುವಾದ

ವಜ್ರಮಿತ್ರನಿಗೆ ಭಾಗವತ, ಭಾಗವತನ ಪುತ್ರ ದೇವಭೂತಿ ಎಂಬುವನು. ಶುಂಗವಂಶದ ಈ ಹತ್ತುಮಂದಿ ರಾಜರು ನೂರಹನ್ನೆರಡು ವರ್ಷಗಳವರೆಗೆ ಪೃಥ್ವಿಯನ್ನು ಪಾಲಿಸುವರು. ॥18॥

(ಶ್ಲೋಕ - 19)

ಮೂಲಮ್

ತತಃ ಕಣ್ವಾನಿಯಂ ಭೂಮಿರ್ಯಾಸ್ಯತ್ಯಲ್ಪಗುಣಾನ್ನೃಪ ।
ಶುಂಗಂ ಹತ್ವಾ ದೇವಭೂತಿಂ ಕಣ್ವೋಮಾತ್ಯಸ್ತು ಕಾಮಿನಮ್ ॥

(ಶ್ಲೋಕ - 20)

ಮೂಲಮ್

ಸ್ವಯಂ ಕರಿಷ್ಯತೇ ರಾಜ್ಯಂ ವಸುದೇವೋ ಮಹಾಮತಿಃ ।
ತಸ್ಯ ಪುತ್ರಸ್ತು ಭೂಮಿತ್ರಸ್ತಸ್ಯ ನಾರಾಯಣಃ ಸುತಃ ।
ನಾರಾಯಣಸ್ಯ ಭವಿತಾ ಸುಶರ್ಮಾ ನಾಮ ವಿಶ್ರುತಃ ॥

ಅನುವಾದ

ಪರೀಕ್ಷಿತನೇ! ಶುಂಗವಂಶೀಯರಾಜರ ತರುವಾಯ ಈ ಭೂಮಿಯನ್ನು ಕಣ್ವವಂಶೀಯ ರಾಜರು ಆಳುವರು. ಇವರು ತಮ್ಮ ಹಿಂದಿನ ರಾಜರಿಗಿಂತ ಗುಣಮಟ್ಟದಲ್ಲಿ ಅಲ್ಪರಾಗುವರು. ಶುಂಗವಂಶದ ಕೊನೆಯ ರಾಜನಾದ ದೇವಭೂತಿಯು ಅತ್ಯಂತ ವಿಷಯಲಂಪಟನಾಗುವನು. ಅವನನ್ನು ಕೊಂದು ಮಹಾಮತಿಯಾದ ಮಂತ್ರಿ ಕಣ್ವವಂಶೀಯ ವಸುದೇವನು ರಾಜ್ಯವನ್ನು ಪಡೆಯುವನು. ಆ ವಸುದೇವನಿಗೆ ಭೂಮಿತ್ರನೂ, ಭೂಮಿತ್ರನಿಗೆ ನಾರಾಯಣನೆಂಬುವನೂ, ಅವನಿಗೆ ಅತ್ಯಂತ ಯಶಸ್ವಿಯಾದ ಸುಶರ್ಮಾ ಎಂಬ ಪುತ್ರನಾಗುವನು. ॥19-20॥

(ಶ್ಲೋಕ - 21)

ಮೂಲಮ್

ಕಾಣ್ವಾಯನಾ ಇಮೇ ಭೂಮಿಂ ಚತ್ವಾರಿಂಶಚ್ಚ ಪಂಚ ಚ ।
ಶತಾನಿ ತ್ರೀಣಿ ಭೋಕ್ಷ್ಯಂತಿ ವರ್ಷಾಣಾಂ ಚ ಕಲೌ ಯುಗೇ ॥

ಅನುವಾದ

ಕಣ್ವವಂಶದ ಈ ನಾಲ್ವರು ಕಾಣ್ವಾಯನರೆಂದು ಖ್ಯಾತರಾಗಿ ಕಲಿಯುಗದ ಮೂನ್ನೂರ ನಲವತ್ತೈದು ವರ್ಷಗಳವರೆಗೆ ಭೂಮಿಯನ್ನು ಆಳುವರು. ॥21॥

(ಶ್ಲೋಕ - 22)

ಮೂಲಮ್

ಹತ್ವಾ ಕಾಣ್ವಂ ಸುಶರ್ಮಾಣಂ ತದ್ಭೃತ್ಯೋ ವೃಷಲೋ ಬಲೀ ।
ಗಾಂ ಭೋಕ್ಷ್ಯತ್ಯಂಧ್ರ ಜಾತೀಯಃ ಕಂಚಿತ್ಕಾಲಮಸತ್ತಮಃ ॥

ಅನುವಾದ

ಪ್ರಿಯಪರೀಕ್ಷಿತನೇ! ಕಣ್ವವಂಶೀ ಸುಶರ್ಮನಿಗೆ ಬಲಿ ಎಂಬ ಶೂದ್ರ ಸೇವಕನಿರುವನು. ಅವನು ಆಂಧ್ರಜಾತಿಯವನಾಗಿದ್ದು ಬಹಳ ದುಷ್ಟನಾಗಿದ್ದನು. ಅವನು ಸುಶರ್ಮನನ್ನು ಕೊಂದು ಕೆಲವು ಕಾಲ ತಾನೇ ರಾಜನಾಗುವನು. ॥22॥

(ಶ್ಲೋಕ - 23)

ಮೂಲಮ್

ಕೃಷ್ಣನಾಮಾಥ ತದ್ಭ್ರಾತಾ ಭವಿತಾ ಪೃಥಿವೀಪತಿಃ ।
ಶ್ರೀಶಾಂತಕರ್ಣಸ್ತತ್ಪುತ್ರಃ ಪೌರ್ಣಮಾಸಸ್ತು ತತ್ಸುತಃ ॥

ಅನುವಾದ

ಅನಂತರ ಅವನ ತಮ್ಮ ಕೃಷ್ಣನೆಂಬುವನು ರಾಜನಾಗುವನು. ಕೃಷ್ಣನ ಪುತ್ರ ಶ್ರೀಶಾಂತಕರ್ಣನು. ಅವನಿಗೆ ಪೌರ್ಣಮಾಸ ಪುತ್ರನಾಗುವನು. ॥23॥

(ಶ್ಲೋಕ - 24)

ಮೂಲಮ್

ಲಂಬೋದರಸ್ತು ತತ್ಪುತ್ರಸ್ತಸ್ಮಾಚ್ಚಿಬಿಲಕೋ ನೃಪಃ ।
ಮೇಘಸ್ವಾತಿಶ್ಚಿಬಿಲಕಾದಟಮಾನಸ್ತು ತಸ್ಯ ಚ ॥

(ಶ್ಲೋಕ - 25)

ಮೂಲಮ್

ಅನಿಷ್ಟಕರ್ಮಾ ಹಾಲೇಯಸ್ತಲಕಸ್ತಸ್ಯ ಚಾತ್ಮಜಃ ।
ಪುರೀಷಭೀರುಸ್ತತ್ಪುತ್ರಸ್ತತೋ ರಾಜಾ ಸುನಂದನಃ ॥

ಅನುವಾದ

ಪೌರ್ಣಮಾಸನಿಗೆ ಲಂಬೋದರ, ಲಂಬೋದರನಿಗೆ ಚಿಬಿಲಕ, ಚಿಬಿಲಕನಿಗೆ ಮೇಘಸ್ವಾತಿ, ಮೇಘಸ್ವಾತಿಯಿಂದ ಅಟಮಾನೂ, ಅವನಿಗೆ ಅನಿಷ್ಟಕರ್ಮನೂ, ಅನಿಷ್ಟಕರ್ಮನಿಂದ ಹಾಲೇಯ, ಅವನಿಂದ ತಲಕ, ತಲಕನಿಂದ ಪುರೀಷಭೀರು. ಪುರೀಷಭೀರುವಿಗೆ ರಾಜಾಸುನಂದನು ಪುತ್ರನಾಗುವನು. ॥24-25॥

(ಶ್ಲೋಕ - 26)

ಮೂಲಮ್

ಚಕೋರೋ ಬಹವೋ ಯತ್ರ ಶಿವಸ್ವಾತಿರರಿಂದಮಃ ।
ತಸ್ಯಾಪಿ ಗೋಮತೀಪುತ್ರಃ ಪುರೀಮಾನ್ಭವಿತಾ ತತಃ ॥

ಅನುವಾದ

ಪರೀಕ್ಷಿತನೇ! ಸುನಂದನಿಗೆ ಚಕೋರ, ಚಕೋರನಿಗೆ ಎಂಟು ಮಂದಿ ಪುತ್ರರಾಗುವರು. ಅವರು ‘ಬಹು’ ಎಂದು ಹೇಳಲ್ಪಡುವರು. ಇವರೆಲ್ಲರಲ್ಲಿ ಕಿರಿಯವನಾದ ಅತ್ಯಂತ ವೀರನೂ, ಶತ್ರುಗಳನ್ನು ದಮನ ಮಾಡುವವನೂ ಆದ ಶಿವಸ್ವಾತಿಗೆ ಗೋಮತಿಪುತ್ರನೆಂಬುವನೂ, ಅವನಿಗೆ ಪುರೀ ಮಂತ ಎಂಬ ಪುತ್ರನಾಗುವನು. ॥26॥

(ಶ್ಲೋಕ - 27)

ಮೂಲಮ್

ಮೇದಃಶಿರಾಃ ಶಿವಸ್ಕಂಧೋ ಯಜ್ಞಶ್ರೀಸ್ತತ್ಸುತಸ್ತತಃ ।
ವಿಜಯಸ್ತತ್ಸುತೋ ಭಾವ್ಯಶ್ಚಂದ್ರವಿಜ್ಞಃ ಸಲೋಮಧಿಃ ॥

ಅನುವಾದ

ಪುರೀಮಂತನಿಗೆ ಮೇದಶ್ಶಿರ, ಮೇದಶ್ಶಿರನಿಗೆ ಶಿವಸ್ಕಂಧನೂ, ಶಿವಸ್ಕಂಧನಿಗೆ ಯಜ್ಞಶ್ರೀಯು, ಅವನಿಗೆ ವಿಜಯನೂ, ವಿಜಯನಿಗೆ ಚಂದ್ರ ವಿಜ್ಞ ಮತ್ತು ಲೋಮಧಿ ಎಂಬ ಇಬ್ಬರು ಪುತ್ರರಾಗುವರು. ॥27॥

(ಶ್ಲೋಕ - 28)

ಮೂಲಮ್

ಏತೇ ತ್ರಿಂಶನ್ನೃಪತಯಶ್ಚತ್ವಾರ್ಯಬ್ದಶತಾನಿ ಚ ।
ಷಟ್ಪಂಚಾಶಚ್ಚ ಪೃಥಿವೀಂ ಭೋಕ್ಷ್ಯಂತಿ ಕುರುನಂದನ ॥

ಅನುವಾದ

ಪರೀಕ್ಷಿತನೇ! ಈ ಮೂವತ್ತುಮಂದಿ ರಾಜರು ನಾಲ್ಕುನೂರು ಐವತ್ತಾರು ವರ್ಷಗಳವರೆಗೆ ಪೃಥಿವಿಯ ಆಳ್ವಿಕೆಯನ್ನು ಅನುಭವಿಸುವರು. ॥28॥

(ಶ್ಲೋಕ - 29)

ಮೂಲಮ್

ಸಪ್ತಾಭೀರಾ ಆವಭೃತ್ಯಾ ದಶ ಗರ್ದಭಿನೋ ನೃಪಾಃ ।
ಕಂಕಾಃ ಷೋಡಶ ಭೂಪಾಲಾ ಭವಿಷ್ಯಂತ್ಯತಿಲೋಲುಪಾಃ ॥

ಅನುವಾದ

ಇವರ ನಂತರ ಅವಭೃತಿನಗರದ ಏಳು ಮಂದಿ ಆಭೀರ ರಾಜರೂ, ಹತ್ತುಮಂದಿ ಗರ್ದಭಿರಾಜರೂ, ಹದಿನಾರು ಕಂಕರೆಂಬರಾಜರೂ ಭೂಮಿಯನ್ನಾಳುವರು. ಇವರೆಲ್ಲರೂ ಕಡುಲೋಭಿಗಳಾಗುವರು. ॥29॥

(ಶ್ಲೋಕ - 30)

ಮೂಲಮ್

ತತೋಷ್ಟೌ ಯವನಾ ಭಾವ್ಯಾಶ್ಚತುರ್ದಶ ತುರುಷ್ಕಕಾಃ ।
ಭೂಯೋ ದಶ ಗುರುಂಡಾಶ್ಚ ವೌನಾ ಏಕಾದಶೈವ ತು ॥

ಅನುವಾದ

ಇವರಾದ ಮೇಲೆ ಎಂಟುಮಂದಿಯವನರೂ, ಹದಿನಾಲ್ಕು ಮಂದಿ ತುರ್ಕರೂ ರಾಜ್ಯವಾಳುವರು. ಮತ್ತೆ ಹತ್ತು ಮಂದಿ ಗುರುಂಡರೂ, ಹನ್ನೊಂದು ಮಂದಿ ಮೌನರೂ ನರಪತಿಗಳಾಗುವರು. ॥30॥

(ಶ್ಲೋಕ - 31)

ಮೂಲಮ್

ಏತೇ ಭೋಕ್ಷ್ಯಂತಿ ಪೃಥಿವೀಂ ದಶವರ್ಷಶತಾನಿ ಚ ।
ನವಾಧಿಕಾಂ ಚ ನವತಿಂ ವೌನಾ ಏಕಾದಶ ಕ್ಷಿತಿಮ್ ॥

(ಶ್ಲೋಕ - 32)

ಮೂಲಮ್

ಭೋಕ್ಷ್ಯಂತ್ಯಬ್ದಶತಾನ್ಯಂಗ ತ್ರೀಣಿ ತೈಃ ಸಂಸ್ಥಿತೇ ತತಃ ।
ಕಿಲಕಿಲಾಯಾಂ ನೃಪತಯೋ ಭೂತನಂದೋಥ ವಂಗಿರಿಃ ॥

(ಶ್ಲೋಕ - 33)

ಮೂಲಮ್

ಶಿಶುನಂದಿಶ್ಚ ತದ್ ಭ್ರಾತಾ ಯಶೋನಂದಿಃ ಪ್ರವೀರಕಃ ।
ಇತ್ಯೇತೇ ವೈ ವರ್ಷಶತಂ ಭವಿಷ್ಯಂತ್ಯಧಿಕಾನಿ ಷಟ್ ॥

ಅನುವಾದ

ಮೌನರಲ್ಲದೆ ಇವರೆಲ್ಲರೂ ಒಂದು ಸಾವಿರದ ತೊಂಭತ್ತೊಂಭತ್ತು ವರ್ಷಗಳು ಭೂಮಿಯನ್ನಾಳುವರು. ಹನ್ನೊಂದು ಮಂದಿ ಮೌನರು ಮುನ್ನೂರು ವರ್ಷಗಳವರೆಗೆ ಪೃಥಿವಿಯನ್ನು ಆಳುವರು. ಇವರ ಆಳ್ವಿಕೆಯು ಮುಗಿದು ಹೋದಾಗ ಕಿಲಕಿಲಾ ಎಂಬ ನಗರದಲ್ಲಿ ಭೂತನಂದನೆಂಬ ರಾಜನಾಗುವನು. ಭೂತನಂದನನಿಗೆ ವಂಗಿರನೂ, ಅವನ ಸೋದರರಾದ ಶಿಶುನಂದಿ ಹಾಗೂ ಯಶೋನಂದಿ ಮತ್ತು ಪ್ರವೀರಕ ಇವರು ಒಂದುನೂರ ಆರು ವರ್ಷಗಳವರೆಗೆ ರಾಜ್ಯವಾಳುವರು. ॥31-33॥

(ಶ್ಲೋಕ - 34)

ಮೂಲಮ್

ತೇಷಾಂ ತ್ರಯೋದಶ ಸುತಾ ಭವಿತಾರಶ್ಚ ಬಾಹ್ಲಿಕಾಃ ।
ಪುಷ್ಯಮಿತ್ರೋಥ ರಾಜನ್ಯೋ ದುರ್ಮಿತ್ರೋಸ್ಯ ತಥೈವ ಚ ॥

ಅನುವಾದ

ಇವರಿಗೆ ಹದಿಮೂರು ಮಂದಿ ಪುತ್ರರಾಗುವರು. ಇವರೆಲ್ಲರಿಗೂ ಬಾಹ್ಲಿಕರೆಂದು ಹೆಸರು. ಇವರ ನಂತರ ಪುಷ್ಯಮಿತ್ರನೆಂಬ ಕ್ಷತ್ರಿಯನೂ ಮತ್ತು ಅವನ ಪುತ್ರನಾದ ದುರ್ಮಿತ್ರನೂ ರಾಜರಾಗುವರು. ॥34॥

(ಶ್ಲೋಕ - 35)

ಮೂಲಮ್

ಏಕಕಾಲಾ ಇಮೇ ಭೂಪಾಃ ಸಪ್ತಾಂಧ್ರಾಃ ಸಪ್ತ ಕೋಸಲಾಃ ।
ವಿದೂರಪತಯೋ ಭಾವ್ಯಾ ನಿಷಧಾಸ್ತತ ಏವ ಹಿ ॥

ಅನುವಾದ

ಪರೀಕ್ಷಿತನೇ! ಬಾಹ್ಲಿಕವಂಶದ ರಾಜರು ಒಟ್ಟಿಗೆ ಬೇರೆ-ಬೇರೆ ಪ್ರಾಂತಗಳಲ್ಲಿ ರಾಜ್ಯವನ್ನಾಳುವರು. ಅವರಲ್ಲಿ ಏಳು ಮಂದಿ ಆಂಧ್ರ ದೇಶದ, ಏಳು ಮಂದಿ ಕೋಸಲ ದೇಶದ, ಕೆಲವರು ವಿದೂರ ಭೂಮಿಗೂ, ಮತ್ತೆ ಕೆಲವರು ನಿಷಧದೇಶಕ್ಕೆ ಶಾಸಕರಾಗುವರು.॥35॥

(ಶ್ಲೋಕ - 36)

ಮೂಲಮ್

ಮಾಗಧಾನಾಂ ತು ಭವಿತಾ ವಿಶ್ವಸ್ಫೂರ್ಜಿಃ ಪುರಂಜಯಃ ।
ಕರಿಷ್ಯತ್ಯಪರೋ ವರ್ಣಾನ್ಪುಲಿಂದ ಯದುಮದ್ರಕಾನ್ ॥

ಅನುವಾದ

ಅನಂತರ ವಿಶ್ವಸ್ಫೂರ್ಜಿ ಎಂಬುವನು ಮಗಧ ದೇಶಕ್ಕೆ ರಾಜನಾಗುವನು. ಇವನು ಹಿಂದಿನ ಪುರಂಜಯನಲ್ಲದೆ ಎರಡನೇ ಪುರಂಜಯನೆಂದು ಕರೆಯಲ್ಪಡುವನು. ಇವನು ಬ್ರಾಹ್ಮಣರೇ ಆದ ಉಚ್ಚವರ್ಣಿಯರನ್ನು ಪುಲಿಂದ, ಯದು, ಮದ್ರ ಮುಂತಾದ ಮ್ಲೆಚ್ಛಸದೃಶರನ್ನಾಗಿ ಮಾಡುವನು. ॥36॥

(ಶ್ಲೋಕ - 37)

ಮೂಲಮ್

ಪ್ರಜಾಶ್ಚಾಬ್ರಹ್ಮಭೂಯಿಷ್ಠಾಃ ಸ್ಥಾಪಯಿಷ್ಯತಿ ದುರ್ಮತಿಃ ।
ವೀರ್ಯವಾನ್ ಕ್ಷತ್ರಮುತ್ಸಾದ್ಯ ಪದ್ಮವತ್ಯಾಂ ಸ ವೈ ಪುರಿ ।
ಅನುಗಂಗಾಮಾಪ್ರಯಾಗಂ ಗುಪ್ತಾಂ ಭೋಕ್ಷ್ಯತಿ ಮೇದಿನೀಮ್ ॥

ಅನುವಾದ

ಇವನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರನ್ನು ನಾಶಪಡಿಸಿ ಶೂದ್ರಪ್ರಾಯ ಜನರನ್ನು ರಕ್ಷಿಸುವಂತಹ ದುಷ್ಟಬುದ್ಧಿಯಾಗುವನು. ಇವನು ಬಲ-ವಿಕ್ರಮದಿಂದ ಕ್ಷತ್ರಿಯರನ್ನು ನಿರ್ಮೂಲಗೊಳಿಸಿ, ಪದ್ಮಾವತಿ ಪುರವನ್ನು ರಾಜಧಾನಿಯನ್ನಾಗಿಸಿಕೊಂಡು ಹರಿದ್ವಾರದಿಂದ ಪ್ರಯಾಗದವರೆಗಿನ ಸುರಕ್ಷಿತವಾದ ಭೂಮಿಯನ್ನು ಆಳುವನು.॥37॥

(ಶ್ಲೋಕ - 38)

ಮೂಲಮ್

ಸೌರಾಷ್ಟ್ರಾವಂತ್ಯಾಭೀರಾಶ್ಚ ಶೂರಾ ಅರ್ಬುದಮಾಲವಾಃ ।
ವ್ರಾತ್ಯಾ ದ್ವಿಜಾ ಭವಿಷ್ಯಂತಿ ಶೂದ್ರಪ್ರಾಯಾ ಜನಾಧಿಪಾಃ ॥

ಅನುವಾದ

ಪರೀಕ್ಷಿತನೇ! ಕಲಿಯುಗವು ಬಂದು ಹೋದಾಗಲೆಲ್ಲ ಸೌರಾಷ್ಟ್ರ, ಅವಂತಿ, ಆಭೀರ, ಶೂರ, ಅರ್ಬುದ ಮತ್ತು ಮಾಲವ ದೇಶಗಳ ಬ್ರಾಹ್ಮಣರು ಸಂಸ್ಕಾರಶೂನ್ಯರಾಗುವರು ಹಾಗೂ ರಾಜರು ಶೂದ್ರರಂತಾಗುವರು. ॥38॥

(ಶ್ಲೋಕ - 39)

ಮೂಲಮ್

ಸಿಂಧೋಸ್ತಟಂ ಚಂದ್ರಭಾಗಾಂ ಕೌಂತೀಂ ಕಾಶ್ಮೀರಮಂಡಲಮ್ ।
ಭೋಕ್ಷ್ಯಂತಿ ಶೂದ್ರಾ ವ್ರಾತ್ಯಾದ್ಯಾ ಮ್ಲೇಚ್ಛಾಶ್ಚಾಬ್ರಹ್ಮವರ್ಚಸಃ ॥

ಅನುವಾದ

ಸಿಂಧು ನದಿಯ ತೀರ, ಚಂದ್ರಭಾಗಾ ನದಿಯದಡೆದ ಪ್ರದೇಶ, ಕೌಂತಿ ಮತ್ತು ಕಾಶ್ಮೀರ ಮಂಡಲಗಳಲ್ಲಿ ಸಾಮಾನ್ಯವಾಗಿ ಶೂದ್ರರಂತೆ ಸಂಸ್ಕಾರ ಮತ್ತು ಬ್ರಹ್ಮತೇಜದಿಂದ ರಹಿತರಾಗಿ ಹೆಸರಿಗಷ್ಟೇ ಬ್ರಾಹ್ಮಣರೂ ಮತ್ತು ಮ್ಲೇಚ್ಛರೂ ರಾಜ್ಯವನ್ನಾಳುವರು. ॥39॥

(ಶ್ಲೋಕ - 40)

ಮೂಲಮ್

ತುಲ್ಯಕಾಲಾ ಇಮೇ ರಾಜನ್ಮ್ಲೇಚ್ಛಪ್ರಾಯಾಶ್ಚ ಭೂಭೃತಃ ।
ಏತೇಧರ್ಮಾನೃತಪರಾಃ ಲ್ಗುದಾಸ್ತೀವ್ರಮನ್ಯವಃ ॥

ಅನುವಾದ

ಪರೀಕ್ಷಿತನೇ! ಇವರೆಲ್ಲ ರಾಜರೂ ಆಚಾರ-ವಿಚಾರಗಳಲ್ಲಿ ಮ್ಲೇಚ್ಛರಂತಾಗುವರು. ಇವರೆಲ್ಲರೂ ಏಕಕಾಲದಲ್ಲಿ ಬೇರೆ-ಬೇರೆ ಪ್ರಾಂತಗಳಲ್ಲಿ ಆಳ್ವಿಕೆ ನಡೆಸುವರು. ಅಧರ್ಮ-ಅಸತ್ಯಗಳಲ್ಲಿ ನಿರತರಾಗಿದ್ದು, ಅಲ್ಪವಾದ ದಾನಕೊಡುವವರಾಗುವರು. ಸಣ್ಣ-ಪುಟ್ಟ ಮಾತುಗಳಿಗೂ ಸಿಟ್ಟಿನಿಂದ ಉರಿದು ಬೀಳುವರು. ॥40॥

(ಶ್ಲೋಕ - 41)

ಮೂಲಮ್

ಸೀಬಾಲಗೋದ್ವಿಜಘ್ನಾಶ್ಚ ಪರದಾರಧನಾದೃತಾಃ ।
ಉದಿತಾಸ್ತಮಿತಪ್ರಾಯಾ ಅಲ್ಪಸತ್ತ್ವಾಲ್ಪಕಾಯುಷಃ ॥

ಅನುವಾದ

ದುಷ್ಟರಾದ ಇವರು ಸ್ತ್ರೀಯರು, ಮಕ್ಕಳು, ಗೋವು, ಬ್ರಾಹ್ಮಣ ಇವರನ್ನು ಕೊಲ್ಲುವುದರಲ್ಲಿ ಹಿಂದೆ ಸರಿಯಲಾರರು. ಮತ್ತೊಬ್ಬರ ಹಣ, ಹೆಂಡಿರನ್ನು ಅಪಹರಿಸುವುದರಲ್ಲಿ ಸದಾ ಉತ್ಸುಕರಾಗಿರುವರು. ಇವರು ಬೇಗ-ಬೇಗನೆ ಹುಟ್ಟಿ-ಸಾಯುತ್ತಾ ಇರುತ್ತಾರೆ. ಇವರಿಗೆ ಶಕ್ತಿಯೂ ಕಡಿಮೆ, ಆಯುಸ್ಸೂ ಕಡಿಮೆ. ॥41॥

(ಶ್ಲೋಕ - 42)

ಮೂಲಮ್

ಅಸಂಸ್ಕೃತಾಃ ಕ್ರಿಯಾಹೀನಾ ರಜಸಾ ತಮಸಾವೃತಾಃ ।
ಪ್ರಜಾಸ್ತೇ ಭಕ್ಷಯಿಷ್ಯಂತಿ ಮ್ಲೇಚ್ಛಾ ರಾಜನ್ಯರೂಪಿಣಃ ॥

ಅನುವಾದ

ಇವರು ರಜೋಗುಣ-ತಮೋಗುಣಗಳಿಂದ ಕುರುಡಾಗಿ ಸಂಸ್ಕಾರ ಹೀನರಾಗಿರುತ್ತಾರೆ. ಕರ್ತವ್ಯ ಕರ್ಮಗಳನ್ನು ತೊರೆಯುವರು. ರಾಜವೇಷದಲ್ಲಿ ಮ್ಲೇಚ್ಛರೇ ಆಗಿದ್ದು, ಪ್ರಜೆಗಳ ರಕ್ತವನ್ನು ಹೀರುವರು. ॥42॥

(ಶ್ಲೋಕ - 43)

ಮೂಲಮ್

ತನ್ನಾಥಾಸ್ತೇ ಜನಪದಾಸ್ತಚ್ಛೀಲಾಚಾರವಾದಿನಃ ।
ಅನ್ಯೋನ್ಯತೋ ರಾಜಭಿಶ್ಚ ಕ್ಷಯಂ ಯಾಸ್ಯಂತಿ ಪೀಡಿತಾಃ ॥

ಅನುವಾದ

ಇಂತಹ ಜನರ ಶಾಸನ ಕಾಲದಲ್ಲಿ ದೇಶದ ಪ್ರಜೆಗಳು ಅಂತಹದೇ ಸ್ವಭಾವ, ಆಚರಣೆ ಮತ್ತು ಮಾತುಗಳು ಹೆಚ್ಚಾಗುವುವು. ರಾಜರೆನಿಸಿದವರು ಪ್ರಜೆಗಳನ್ನು ಶೋಷಣೆ ಮಾಡುವುದಲ್ಲದೆ ತಾವೂ ಪರಸ್ಪರ ಹಿಂಸಕರಾಗಿ ಕೊನೆಗೆ ಎಲ್ಲರೂ ನಾಶವಾಗುವರು. ॥43॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದ್ವಾದಶ ಸ್ಕಂಧೇ ಪ್ರಥಮೋಽಧ್ಯಾಯಃ ॥1॥