[ಮೂವತ್ತೊಂದನೆಯ ಅಧ್ಯಾಯ]
ಭಾಗಸೂಚನಾ
ಶ್ರೀಭಗವಂತನ ಸ್ವಧಾಮಗಮನ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥ ತತ್ರಾಗಮದ್ಬ್ರಹ್ಮಾ ಭವಾನ್ಯಾ ಚ ಸಮಂ ಭವಃ ।
ಮಹೇಂದ್ರಪ್ರಮುಖಾ ದೇವಾ ಮುನಯಃ ಸಪ್ರಜೇಶ್ವರಾಃ ॥
(ಶ್ಲೋಕ - 2)
ಮೂಲಮ್
ಪಿತರಃ ಸಿದ್ಧಗಂಧರ್ವಾ ವಿದ್ಯಾಧರಮಹೋರಗಾಃ ।
ಚಾರಣಾ ಯಕ್ಷರಕ್ಷಾಂಸಿ ಕಿನ್ನರಾಪ್ಸರಸೋ ದ್ವಿಜಾಃ ॥
(ಶ್ಲೋಕ - 3)
ಮೂಲಮ್
ದ್ರಷ್ಟುಕಾಮಾ ಭಗವತೋ ನಿರ್ಯಾಣಂ ಪರಮೋತ್ಸುಕಾಃ ।
ಗಾಯಂತಶ್ಚ ಗೃಣಂತಶ್ಚ ಶೌರೇಃ ಕರ್ಮಾಣಿ ಜನ್ಮ ಚ ॥
(ಶ್ಲೋಕ - 4)
ಮೂಲಮ್
ವವೃಷುಃ ಪುಷ್ಪವರ್ಷಾಣಿ ವಿಮಾನಾವಲಿಭಿರ್ನಭಃ ।
ಕುರ್ವಂತಃ ಸಂಕುಲಂ ರಾಜನ್ಭಕ್ತ್ಯಾ ಪರಮಯಾ ಯುತಾಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತ ರಾಜನೇ! ದಾರುಕನು ಹೊರಟುಹೋದ ಮೇಲೆ ಬ್ರಹ್ಮದೇವರು, ಶಿವ ಪಾರ್ವತಿಯರು, ಇಂದ್ರಾದಿಲೋಕ ಪಾಲರು, ಮರೀಚಿ ಆದಿ ಪ್ರಜಾಪತಿಗಳು, ದೊಡ್ಡ-ದೊಡ್ಡ ಋಷಿ-ಮುನಿಗಳು, ಸಿದ್ಧರು, ಪಿತೃಗಳು, ಗಂಧರ್ವರು, ವಿದ್ಯಾಧರರು, ನಾಗರು, ಚಾರಣರು, ಯಕ್ಷ-ರಾಕ್ಷಸರು, ಕಿನ್ನರರು; ಅಪ್ಸರೆಯರು, ಗರುಡ ಆದಿ ಪಕ್ಷಿಗಳು ಹಾಗೂ ಮೈತ್ರೇಯರೇ ಆದಿಬ್ರಾಹ್ಮಣರು ಭಗವಾನ್ ಶ್ರೀಕೃಷ್ಣನ ಪರಮಧಾಮ ಪ್ರಸ್ಥಾನವನ್ನು ನೋಡಲು ತುಂಬಾ ಉತ್ಸುಕತೆಯಿಂದ ಅಲ್ಲಿಗೆ ಬಂದರು. ಅವರೆಲ್ಲರೂ ಭಗವಾನ್ ಶ್ರೀಕೃಷ್ಣನ ಜನ್ಮ ಮತ್ತು ಲೀಲೆಗಳನ್ನು ಹಾಡುತ್ತಾ, ವರ್ಣಿಸುತ್ತಿದ್ದರು. ಅವರ ವಿಮಾನಗಳಿಂದ ಆಕಾಶವಿಡೀ ತುಂಬಿ ಹೋಗಿತ್ತು. ಅವರು ತುಂಬು ಭಕ್ತಿಯಿಂದ ಭಗವಂತನ ಮೇಲೆ ಪುಷ್ಪವೃಷ್ಟಿ ಮಾಡುತ್ತಿದ್ದರು. ॥1-4॥
(ಶ್ಲೋಕ - 5)
ಮೂಲಮ್
ಭಗವಾನ್ಪಿತಾಮಹಂ ವೀಕ್ಷ್ಯ ವಿಭೂತೀರಾತ್ಮನೋ ವಿಭುಃ ।
ಸಂಯೋಜ್ಯಾತ್ಮನಿ ಚಾತ್ಮಾನಂ ಪದ್ಮನೇತ್ರೇ ನ್ಯಮೀಲಯತ್ ॥
ಅನುವಾದ
ಸರ್ವವ್ಯಾಪಕ ಭಗವಾನ್ ಶ್ರೀಕೃಷ್ಣನು ತನ್ನದೇ ವಿಭೂತಿ ಸ್ವರೂಪ ಲೋಕಪಿತಾಮಹ ಬ್ರಹ್ಮನನ್ನು ಮತ್ತು ಬೇರೆ ದೇವತೆಗಳನ್ನು, ಋಷಿ-ಮುನೀಶ್ವರರನ್ನು ನೋಡಿ ತನ್ನ ಆತ್ಮ ಸ್ವರೂಪದಲ್ಲಿ ಸ್ಥಿತನಾಗಿ, ಕಮಲದಂತಿರುವ ಕಣ್ಣುಗಳನ್ನು ಮುಚ್ಚಿಕೊಂಡನು. ॥5॥
(ಶ್ಲೋಕ - 6)
ಮೂಲಮ್
ಲೋಕಾಭಿರಾಮಾಂ ಸ್ವತನುಂ ಧಾರಣಾಧ್ಯಾನಮಂಗಲಮ್ ।
ಯೋಗಧಾರಣಯಾಗ್ನೇಯ್ಯಾದಗ್ಧ್ವಾ ಧಾಮಾವಿಶತ್ಸ್ವಕಮ್ ॥
ಅನುವಾದ
ಭಗವಂತನ ಮಂಗಲಮಯ ಶ್ರೀವಿಗ್ರಹವು ಉಪಾಸಕರಿಗಾಗಿ ಧಾರಣೆ ಮತ್ತು ಧ್ಯಾನದ ಪರಮ ಮಂಗಲಮಯ ಆಶ್ರಯವಾಗಿದೆ. ಸಮಸ್ತ ಲೋಕಗಳ ಆಶ್ರಯವೂ ಆಗಿದೆ ಹಾಗೂ ಅವುಗಳಿಗೆ ಆನಂದವನ್ನು ಪ್ರದಾನಮಾಡುವುದಾಗಿದೆ. ಆದ್ದರಿಂದ ಭಗವಂತನು ತನ್ನ ಆ ಮಂಗಲಮಯ ವಿಗ್ರಹವನ್ನು ಯೋಗಧಾರಣೆಯ ಅಗ್ನಿಯಿಂದ ಸುಡದೆಯೇ ಸಶರೀರವಾಗಿ ತನ್ನ ಧಾಮಕ್ಕೆ ತೆರಳಿದನು. ॥6॥
(ಶ್ಲೋಕ - 7)
ಮೂಲಮ್
ದಿವಿ ದುಂದುಭಯೋ ನೇದುಃ ಪೇತುಃ ಸುಮನಸಶ್ಚ ಖಾತ್ ।
ಸತ್ಯಂ ಧರ್ಮೋ ಧೃತಿರ್ಭೂಮೇಃ ಕೀರ್ತಿಃ ಶ್ರೀಶ್ಚಾನು ತಂ ಯಯುಃ ॥
ಅನುವಾದ
ಆಗ ಸ್ವರ್ಗದಲ್ಲಿ ದೇವ ದುಂದುಭಿಗಳು ಮೊಳಗಿದವು. ಆಕಾಶದಿಂದ ಪುಷ್ಪವೃಷ್ಟಿ ಆಗತೊಡಗಿತು. ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಹಿಂದೆ-ಹಿಂದೆಯೇ ಭೂಮಿಯಿಂದ ಸತ್ಯ, ಧರ್ಮ, ಧೃತಿ, ಕೀರ್ತಿ ಮತ್ತು ಶ್ರೀದೇವಿ ಹೊರಟುಹೋದರು. ॥7॥
(ಶ್ಲೋಕ - 8)
ಮೂಲಮ್
ದೇವಾದಯೋ ಬ್ರಹ್ಮಮುಖ್ಯಾ ನ ವಿಶಂತಂ ಸ್ವಧಾಮನಿ ।
ಅವಿಜ್ಞಾತಗತಿಂ ಕೃಷ್ಣಂ ದದೃಶುಶ್ಚಾತಿವಿಸ್ಮಿತಾಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಗತಿಯು ಮನ, ವಚನಗಳಿಗೆ ಅತೀತವಾಗಿದೆ. ಅದರಿಂದಲೇ ಭಗವಂತನು ತನ್ನ ಧಾಮಕ್ಕೆ ಪ್ರವೇಶಿಸುವಾಗ ಬ್ರಹ್ಮಾದಿ ದೇವತೆಗಳಿಂದಲೂ ಕೂಡ ಅದನ್ನು ನೋಡಲಾಗಲಿಲ್ಲ. ಈ ಘಟನೆಯಿಂದ ಅವರಿಗೆ ಭಾರೀ ಆಶ್ಚರ್ಯವಾಯಿತು. ॥8॥
(ಶ್ಲೋಕ - 9)
ಮೂಲಮ್
ಸೌದಾಮನ್ಯಾ ಯಥಾಕಾಶೇ ಯಾಂತ್ಯಾ ಹಿತ್ವಾಭ್ರಮಂಡಲಮ್ ।
ಗತಿರ್ನ ಲಕ್ಷ್ಯತೇ ಮರ್ತ್ಯೈಸ್ತಥಾ ಕೃಷ್ಣಸ್ಯ ದೈವತೈಃ ॥
ಅನುವಾದ
ಆಕಾಶದಲ್ಲಿ ಮಿಂಚು ಮೋಡಗಳಲ್ಲಿ ಕಾಣಿಸಿಕೊಂಡು ಕೂಡಲೇ ಆಕಾಶದಲ್ಲೇ ವಿಲೀನವಾಗಿ ಹೋಗುತ್ತದೆ. ಅದನ್ನು ಯಾವ ಮನುಷ್ಯನಿಂದಲೂ ನೋಡಲಾಗುವುದಿಲ್ಲ. ಹಾಗೆಯೇ ಭಗವಾನ್ ಶ್ರೀಕೃಷ್ಣನ ಸ್ವಧಾಮಗಮನದ ಲೀಲೆಯನ್ನು ನೋಡಲು ಅಲ್ಲಿ ನೆರೆದ ದೊಡ್ಡ-ದೊಡ್ಡ ದೇವತೆಗಳು ಋಷಿಗಳು ಮುನಿಗಳು ಯಾರಿಂದಲೂ ನೋಡಲಾಗಲಿಲ್ಲ. ॥9॥
(ಶ್ಲೋಕ - 10)
ಮೂಲಮ್
ಬ್ರಹ್ಮರುದ್ರಾದಯಸ್ತೇ ತು ದೃಷ್ಟ್ವಾ ಯೋಗಗತಿಂ ಹರೇಃ ।
ವಿಸ್ಮಿತಾಸ್ತಾಂ ಪ್ರಶಂಸಂತಃ ಸ್ವಂ ಸ್ವಂ ಲೋಕಂ ಯಯುಸ್ತದಾ ॥
ಅನುವಾದ
ಬ್ರಹ್ಮಾ, ಭಗವಾನ್ ಶಂಕರ ಮುಂತಾದ ದೇವತೆಗಳು ಭಗವಂತನ ಈ ಪರಮಯೋಗಮಯ ಗತಿಯನ್ನು ನೋಡಿ ಬಹುವಿಸ್ಮಯಗೊಂಡು ಅವನನ್ನು ಸ್ತುತಿಸುತ್ತಾ ತಮ್ಮ-ತಮ್ಮ ಲೋಕಗಳಿಗೆ ತೆರಳಿದರು. ॥10॥
(ಶ್ಲೋಕ - 11)
ಮೂಲಮ್
ರಾಜನ್ ಪರಸ್ಯ ತನುಭೃಜ್ಜನನಾಪ್ಯಯೇಹಾ
ಮಾಯಾವಿಡಂಬನಮವೇಹಿ ಯಥಾ ನಟಸ್ಯ ।
ಸೃಷ್ಟ್ವಾತ್ಮನೇದಮನುವಿಶ್ಯ ವಿಹೃತ್ಯ ಚಾಂತೇ
ಸಂಹೃತ್ಯ ಚಾತ್ಮಮಹಿಮೋಪರತಃ ಸ ಆಸ್ತೇ ॥
ಅನುವಾದ
ಪರೀಕ್ಷಿತನೇ! ನಟನಾದವನು ಅನೇಕ ವಿಧದ ಭೂಮಿಕೆಗಳನ್ನು ಧರಿಸಿದರೂ ಅವೆಲ್ಲವುಗಳಿಂದ ನಿರ್ಲೇಪನಾಗಿಯೇ ಇರುವಂತೆ ಭಗವಂತನು ಮನುಷ್ಯರಂತೆ ಅವತರಿಸುವುದು, ಮತ್ತೆ ಅದನ್ನು ತಿರೋಹಿತಗೊಳಿಸುವುದು, ನಾನಾ ರೀತಿಯ ಲೀಲೆಗಳನ್ನು ನಡೆಸುವುದು, ಇದೆಲ್ಲವೂ ಅವನ ಮಾಯಾವಿಲಾಸ ಮಾತ್ರವಾಗಿದೆ — ಅಭಿನಯ ಮಾತ್ರವಾಗಿದೆ. ಅವನು ಸ್ವತಃ ಈ ಜಗತ್ತನ್ನು ಸೃಷ್ಟಿಸಿ, ಇದರಲ್ಲಿ ಪ್ರವೇಶಿಸಿ ವಿಹರಿಸುತ್ತಾನೆ. ಕೊನೆಗೆ ಸಂಹಾರ ಲೀಲೆಗಳನ್ನು ಗೈದು ಎಲ್ಲದರಿಂದಲೂ ಉಪರತನಾಗಿ ತನ್ನ ಅನಂತ ಮಹಿಮಾಮಯ ಸ್ವರೂಪದಲ್ಲೇ ಸ್ಥಿತನಾಗಿರುತ್ತಾನೆ. ॥11॥
(ಶ್ಲೋಕ - 12)
ಮೂಲಮ್
ಮರ್ತ್ಯೇನ ಯೋ ಗುರುಸುತಂ ಯಮಲೋಕನೀತಂ
ತ್ವಾಂ ಚಾನಯಚ್ಛರಣದಃ ಪರಮಾಸ ದಗ್ಧಮ್ ।
ಜಿಗ್ಯೇಂತಕಾಂತಕಮಪೀಶಮಸಾವನೀಶಃ
ಕಿಂ ಸ್ವಾವನೇ ಸ್ವರನಯನ್ಮೃಗಯುಂ ಸದೇಹಮ್ ॥
ಅನುವಾದ
ಪ್ರಿಯ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಯಮಪುರಕ್ಕೆ ಹೋಗಿ ಗುರುಪುತ್ರರನ್ನು ಮರ್ತ್ಯಶರೀರದಿಂದಲೇ ತಂದನು. ಬ್ರಹ್ಮಾಸದಿಂದ ನಿನ್ನ ಶರೀರವು ಸುಟ್ಟುಹೋದಾಗ ಅದನ್ನು ಅವನು ಜೀವಂತವಾಗಿಸಿದನು. ಅವನು ಕಾಲಕ್ಕೂ ಮಹಾಕಾಲನಾದ ಶಂಕರನನ್ನು ಯುದ್ಧದಲ್ಲಿ ಗೆದ್ದುಕೊಂಡನು. ಜರಾ ವ್ಯಾಧನು ಇಷ್ಟೊಂದು ಭಯಂಕರವಾದ ಅಪರಾಧ ಮಾಡಿದರೂ, ಅವನ ಅಪರಾಧವನ್ನು ಕ್ಷಮಿಸಿ ಅವನನ್ನು ಸಶರೀರದಿಂದ ಸ್ವರ್ಗಕ್ಕೆ ಕಳಿಸಿಬಿಟ್ಟನು. ಹಾಗಿರುವಾಗ ಸರ್ವಸಮರ್ಥ ಪ್ರಭು ಶ್ರೀಕೃಷ್ಣನು ತನ್ನ ಶರೀರವನ್ನು ಇಲ್ಲಿ ಇರಿಸಲಾರನೇನು? ಅವಶ್ಯವಾಗಿ ಇರಿಸುತ್ತಿದ್ದನು. ಇದರಲ್ಲಿ ಆಶ್ಚರ್ಯವೇನಿದೆ? ॥12॥
(ಶ್ಲೋಕ - 13)
ಮೂಲಮ್
ತಥಾಪ್ಯ ಶೇಷಸ್ಥಿತಿಸಂಭವಾಪ್ಯಯೇ-
ಷ್ವನನ್ಯಹೇತುರ್ಯದಶೇಷಶಕ್ತಿಧೃಕ್ ।
ನೈಚ್ಛತ್ಪ್ರಣೇತುಂ ವಪುರತ್ರ ಶೇಷಿತಂ
ಮರ್ತ್ಯೇನ ಕಿಂ ಸ್ವಸ್ಥಗತಿಂ ಪ್ರದರ್ಶಯನ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಸಮಸ್ತ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರಗಳ ನಿರಪೇಕ್ಷ ಕಾರಣನಾಗಿದ್ದಾನೆ. ಸಮಸ್ತ ಶಕ್ತಿಗಳನ್ನು ಧರಿಸುವಂತಹವನು. ಹಾಗಿರುವಾಗ ತನ್ನ ಶರೀರವನ್ನು ಇರಿಸುವುದು ಅವನಿಗೆ ಅಶಕ್ಯವಾಗಿತ್ತೆ? ಭಗವಂತನು ಸಮಸ್ತ ಯಾದವರ ಸಂಹಾರವಾದ ಬಳಿಕ ತನ್ನ ಶರೀರವನ್ನು ಇರಿಸಿಕೊಳ್ಳಲು ಇಚ್ಛಿಸಲಿಲ್ಲ. (ಇಷ್ಟೊಂದು ವಿಶಾಲ ದ್ವಾರಕೆಯ ಐಶ್ವರ್ಯದ ಕಡೆಗೆ ಹಾಗೂ ತನ್ನ ಕುಟುಂಬದ ಕಡೆಗೆ ಪೂರ್ಣ ಅನಾಸಕ್ತನಾಗಿ ತನ್ನ ದಿವ್ಯಧಾಮಕ್ಕೆ ಹೊರಟುಹೋದನು.) ಮನುಷ್ಯ ಶರೀರದ ಮೂಲಕ ಯೋಗಿಯು ಹೇಗೆ ದಿವ್ಯಧಾಮದ ಯಾತ್ರೆ ಮಾಡಬೇಕು? ಈ ಆಚರಣೆಯನ್ನು ಕಲಿಸಲಿಕ್ಕಾಗಿ ಭಗವಂತನು ಹೀಗೆ ಮಾಡಿರಬಹುದೇ? ಅರ್ಥಾತ್ ಯೋಗಿಯು ಸಿದ್ಧಿಗಳ ಮೂಲಕ ತನ್ನ ಶರೀರವನ್ನು ಉಳಿಸಿಕೊಳ್ಳಲು ಹಾಗೂ ಸಂಸಾರದಲ್ಲಿ, ಮನೆಯಲ್ಲಿ, ಕುಟುಂಬದಲ್ಲಿ ರಮಮಾಣನಾಗಲು ಇಚ್ಛಿಸಬಾರದು. ಪೂರ್ಣವಾಗಿ ಅನಾಸಕ್ತನಾಗಿ ತನ್ನ ದಿವ್ಯ ಧಾಮ (ಪರಮಪದ)ದ ಯಾತ್ರೆಯನ್ನು ಕೈಗೊಳ್ಳಬೇಕು. ॥13॥
(ಶ್ಲೋಕ - 14)
ಮೂಲಮ್
ಯ ಏತಾಂ ಪ್ರಾತರುತ್ಥಾಯ ಕೃಷ್ಣಸ್ಯ ಪದವೀಂ ಪರಾಮ್ ।
ಪ್ರಯತಃ ಕೀರ್ತಯೇದ್ಭಕ್ತ್ಯಾ ತಾಮೇವಾಪ್ನೋತ್ಯನುತ್ತಮಾಮ್ ॥
ಅನುವಾದ
ಪ್ರಾತಃಕಾಲ ಎದ್ದು ಭಗವಾನ್ ಶ್ರೀಕೃಷ್ಣನ ಪರಮಧಾಮ ಗಮನದ ಈ ಕಥೆಯನ್ನು ಏಕಾಗ್ರಚಿತ್ತದಿಂದ, ಭಕ್ತಿಯೊಂದಿಗೆ ಕೀರ್ತಿಸುವವನಿಗೆ ಭಗವಂತನ ಆ ಸರ್ವಶ್ರೇಷ್ಠ ಪರಮಪದ ಪ್ರಾಪ್ತಿಯಾವಾಗುವುದು. ॥14॥
(ಶ್ಲೋಕ - 15)
ಮೂಲಮ್
ದಾರುಕೋ ದ್ವಾರಕಾಮೇತ್ಯ ವಸುದೇವೋಗ್ರಸೇನಯೋಃ ।
ಪತಿತ್ವಾ ಚರಣಾವಸ್ರೈರ್ನ್ಯಷಿಂಚತ್ಕೃಷ್ಣವಿಚ್ಯುತಃ ॥
ಅನುವಾದ
ಇತ್ತ ದಾರುಕನು ಭಗವಾನ್ ಶ್ರೀಕೃಷ್ಣನ ವಿರಹದಿಂದ ವ್ಯಾಕುಲನಾಗಿ ದ್ವಾರಕೆಗೆ ಬಂದನು ಮತ್ತು ವಸುದೇವನ ಹಾಗೂ ಉಗ್ರಸೇನನ ಚರಣಗಳಲ್ಲಿ ಬಿದ್ದು, ಅವನ್ನು ಕಣ್ಣೀರಿನಿಂದ ತೊಳೆದನು. ॥15॥
(ಶ್ಲೋಕ - 16)
ಮೂಲಮ್
ಕಥಯಾಮಾಸ ನಿಧನಂ ವೃಷ್ಣೀನಾಂ ಕೃತ್ಸ್ನಶೋ ನೃಪ ।
ತಚ್ಛ್ರುತ್ವೋದ್ವಿಗ್ನ ಹೃದಯಾ ಜನಾಃ ಶೋಕವಿಮೂರ್ಛಿತಾಃ ॥
ಅನುವಾದ
ಪರೀಕ್ಷಿತನೇ! ಅವನು ತನ್ನನ್ನು ಸಾವರಿಸಿಕೊಂಡು ಯದುವಂಶೀಯರ ವಿನಾಶದ ಎಲ್ಲಾ ವಿವರವನ್ನು ತಿಳಿಸಿದನು. ಅದನ್ನು ಕೇಳಿ ಜನರು ತುಂಬಾ ದುಃಖಿತರಾದರು ಮತ್ತು ಶೋಕದಿಂದ ಮೂರ್ಛಿತರಾದರು. ॥16॥
(ಶ್ಲೋಕ - 17)
ಮೂಲಮ್
ತತ್ರ ಸ್ಮ ತ್ವರಿತಾ ಜಗ್ಮುಃ ಕೃಷ್ಣವಿಶ್ಲೇಷವಿಹ್ವಲಾಃ ।
ವ್ಯಸವಃ ಶೇರತೇ ಯತ್ರ ಜ್ಞಾತಯೋ ಘ್ನಂತ ಆನನಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ವಿಯೋಗದಿಂದ ವಿಹ್ವಲರಾಗಿ ಆ ಜನರು ತಲೆಚಚ್ಚಿಕೊಳ್ಳುತ್ತಾ, ಅವರ ಬಂಧು-ಬಾಂಧವರು ನಿಷ್ಪ್ರಾಣರಾಗಿ ಬಿದ್ದಲ್ಲಿಗೆ ಕೂಡಲೇ ತಲುಪಿದರು. ॥17॥
(ಶ್ಲೋಕ - 18)
ಮೂಲಮ್
ದೇವಕೀ ರೋಹಿಣೀ ಚೈವ ವಸುದೇವಸ್ತಥಾ ಸುತೌ ।
ಕೃಷ್ಣರಾಮಾವಪಶ್ಯಂತಃ ಶೋಕಾರ್ತಾ ವಿಜಹುಃ ಸ್ಮೃತಿಮ್ ॥
ಅನುವಾದ
ದೇವಕಿ, ರೋಹಿಣೀ ಮತ್ತು ವಸುದೇವನು ತಮ್ಮ ಪ್ರಿಯ ಪುತ್ರ ಶ್ರೀಕೃಷ್ಣ-ಬಲರಾಮರನ್ನು ಕಾಣದೆ ಶೋಕದಿಂದ ಪೀಡಿತರಾಗಿ ಎಚ್ಚರತಪ್ಪಿದರು. ॥18॥
(ಶ್ಲೋಕ - 19)
ಮೂಲಮ್
ಪ್ರಾಣಾಂಶ್ಚ ವಿಜಹುಸ್ತತ್ರ ಭಗವದ್ವಿರಹಾತುರಾಃ ।
ಉಪಗುಹ್ಯ ಪತೀಂಸ್ತಾತ ಚಿತಾಮಾರುರುಹುಃ ಸಿಯಃ ॥
ಅನುವಾದ
ಅವರು ಭಗವದ್ವಿರಹದಿಂದ ವ್ಯಾಕುಲರಾಗಿ ಅಲ್ಲೇ ತಮ್ಮ ಪ್ರಾಣಗಳನ್ನು ಬಿಟ್ಟು ಬಿಟ್ಟರು. ಸ್ತ್ರೀಯರು ತಮ್ಮ-ತಮ್ಮ ಪತಿಗಳ ಶವಗಳನ್ನು ಗುರುತಿಸಿ, ಅವನ್ನು ಹೃದಯಕ್ಕೆ ಒತ್ತಿಕೊಂಡು, ಅವರೊಂದಿಗೆ ಚಿತೆಯನ್ನೇರಿ ಭಸ್ಮವಾಗಿ ಹೋದರು. ॥19॥
(ಶ್ಲೋಕ - 20)
ಮೂಲಮ್
ರಾಮಪತ್ನ್ಯಶ್ಚ ತದ್ದೇಹಮುಪಗುಹ್ಯಾಗ್ನಿ ಮಾವಿಶನ್ ।
ವಸುದೇವಪತ್ನ್ಯಸ್ತದ್ಗಾತ್ರಂ ಪ್ರದ್ಯುಮ್ನಾದೀನ್ಹರೇಃ ಸ್ನುಷಾಃ ।
ಕೃಷ್ಣಪತ್ನ್ಯೋವಿಶನ್ನಗ್ನಿಂ ರುಕ್ಮಿಣ್ಯಾದ್ಯಾಸ್ತದಾತ್ಮಿಕಾಃ ॥
ಅನುವಾದ
ಬಲರಾಮನ ಪತ್ನಿಯರು. ಅವನ ಶರೀರವನ್ನು, ವಸುದೇವನ ಪತ್ನಿಯರು ಅವನ ಶವವನ್ನು, ಭಗವಂತನ ಸೊಸೆಯರು ತಮ್ಮ ಪತಿಗಳ ಶವದೊಂದಿಗೆ ಅಗ್ನಿಪ್ರವೇಶ ಮಾಡಿದರು. ರುಕ್ಮಿಣಿಯೇ ಮೊದಲಾದ ಭಗವಾನ್ ಶ್ರೀಕೃಷ್ಣನ ಪಟ್ಟ ಮಹಿಷಿಯರು ಜಗತ್ಪತಿಯ ಧ್ಯಾನದಲ್ಲಿ ಮಗ್ನರಾಗಿ ಅಗ್ನಿಪ್ರವೇಶ ಮಾಡಿದರು. ॥20॥
(ಶ್ಲೋಕ - 21)
ಮೂಲಮ್
ಅರ್ಜುನಃ ಪ್ರೇಯಸಃ ಸಖ್ಯುಃ ಕೃಷ್ಣಸ್ಯ ವಿರಹಾತುರಃ ।
ಆತ್ಮಾನಂ ಸಾಂತ್ವಯಾಮಾಸ ಕೃಷ್ಣಗೀತೈಃ ಸದುಕ್ತಿಭಿಃ ॥
ಅನುವಾದ
ಪರೀಕ್ಷಿತನೇ! ಅರ್ಜುನನು ತನ್ನ ಪರಮ ಪ್ರಿಯತಮನೂ, ಸಖನೂ ಆದ ಭಗವಾನ್ ಶ್ರೀಕೃಷ್ಣನ ವಿರಹದಿಂದ ಮೊದಲಿಗೆನೋ ಅತ್ಯಂತ ವ್ಯಾಕುಲನಾದನು. ಮತ್ತೆ ಅವನು ಶ್ರೀಕೃಷ್ಣನ ಗೀತೋಕ್ತ ಸದುಪದೇಶಗಳನ್ನು ಸ್ಮರಿಸುತ್ತಾ ತನ್ನ ಮನಸ್ಸನ್ನು ಸಮಾಧಾನಗೊಳಿಸಿದನು. ॥21॥
(ಶ್ಲೋಕ - 22)
ಮೂಲಮ್
ಬಂಧೂನಾಂ ನಷ್ಟಗೋತ್ರಾಣಾಮರ್ಜುನಃ ಸಾಂಪರಾಯಿಕಮ್ ।
ಹತಾನಾಂ ಕಾರಯಾಮಾಸ ಯಥಾವದನುಪೂರ್ವಶಃ ॥
ಅನುವಾದ
ಯದುವಂಶದ ಮೃತ ವ್ಯಕ್ತಿಗಳಲ್ಲಿ ಪಿಂಡ ಕೊಡಲು ಯಾರೂ ಇಲ್ಲದ್ದರಿಂದ ಶ್ರಾದ್ಧಾದಿಗಳನ್ನು ಅರ್ಜುನನೇ ಕ್ರಮವಾಗಿ, ವಿಧಿಪೂರ್ವಕವಾಗಿ ಮಾಡಿಸಿದನು. ॥22॥
(ಶ್ಲೋಕ - 23)
ಮೂಲಮ್
ದ್ವಾರಕಾಂ ಹರಿಣಾ ತ್ಯಕ್ತಾಂ ಸಮುದ್ರೋಪ್ಲಾವಯತ್ ಕ್ಷಣಾತ್ ।
ವರ್ಜಯಿತ್ವಾ ಮಹಾರಾಜ ಶ್ರೀಮದ್ಭಗವದಾಲಯಮ್ ॥
ಅನುವಾದ
ಮಹಾರಾಜನೇ! ಭಗವಂತನು ಇಲ್ಲದಿದ್ದಾಗ ಸಮುದ್ರವು ಏಕಮಾತ್ರ ಭಗವಾನ್ ಶ್ರೀಕೃಷ್ಣನ ಅರಮನೆಯನ್ನು ಬಿಟ್ಟು ಒಂದೇ ಕ್ಷಣದಲ್ಲಿ ಇಡೀ ದ್ವಾರಕೆಯನ್ನು ಮುಳುಗಿಸಿಬಿಟ್ಟಿತು. ॥23॥
(ಶ್ಲೋಕ - 24)
ಮೂಲಮ್
ನಿತ್ಯಂ ಸಂನಿಹಿತಸ್ತತ್ರ ಭಗವಾನ್ ಮಧುಸೂದನಃ ।
ಸ್ಮೃತ್ಯಾಶೇಷಾಶುಭಹರಂ ಸರ್ವಮಂಗಲಮಂಗಲಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಅಲ್ಲಿ ಈಗಲೂ ಸದಾ-ಸರ್ವದಾ ವಾಸಿಸುತ್ತಿರುವನು. ಆ ಸ್ಥಾನದ ಸ್ಮರಣೆಮಾತ್ರದಿಂದಲೇ ಎಲ್ಲ ಪಾಪ ತಾಪಗಳು ನಾಶವಾಗಿ, ಎಲ್ಲ ಮಂಗಲಗಳಿಗೂ ಮಂಗಲ ಉಂಟಾಗುವುದು. ॥24॥
(ಶ್ಲೋಕ - 25)
ಮೂಲಮ್
ಸೀಬಾಲವೃದ್ಧಾನಾದಾಯ ಹತಶೇಷಾನ್ ಧನಂಜಯಃ ।
ಇಂದ್ರಪ್ರಸ್ಥಂ ಸಮಾವೇಶ್ಯ ವಜ್ರಂ ತತ್ರಾಭ್ಯಷೇಚಯತ್ ॥
ಅನುವಾದ
ಪ್ರಿಯ ಪರೀಕ್ಷಿತನೇ! ಪಿಂಡ ದಾನಾದಿಗಳ ಬಳಿಕ ಅಲ್ಲಿ ಉಳಿದಿದ್ದ ಸ್ತ್ರೀಯರೂ, ಬಾಲಕರು, ವೃದ್ಧರೇ ಮುಂತಾದವರನ್ನು ಕರೆದುಕೊಂಡು ಅರ್ಜುನನು ಇಂದ್ರಪ್ರಸ್ಥಕ್ಕೆ ಬಂದನು. ಅಲ್ಲಿ ಎಲ್ಲರಿಗೂ ಯಥಾಯೋಗ್ಯ ವಸತಿ ಏರ್ಪಡಿಸಿ ಮಥುರೆಯಲ್ಲಿ ಅನಿರುದ್ಧನ ಪುತ್ರ ವಜ್ರನಾಭನಿಗೆ ರಾಜ್ಯಾಭಿಷೇಕ ಮಾಡಿದನು. ॥25॥
(ಶ್ಲೋಕ - 26)
ಮೂಲಮ್
ಶ್ರುತ್ವಾ ಸುಹೃದ್ವಧಂ ರಾಜನ್ನರ್ಜುನಾತ್ತೇ ಪಿತಾಮಹಾಃ ।
ತ್ವಾಂ ತು ವಂಶಧರಂ ಕೃತ್ವಾ ಜಗ್ಮುಃ ಸರ್ವೇ ಮಹಾಪಥಮ್ ॥
ಅನುವಾದ
ರಾಜನೇ! ನಿನ್ನ ಪಿತಾಮಹನಾದ ಯುಧಿಷ್ಠಿರ ಮೊದಲಾದ ಪಾಂಡವರಿಗೆ ಯದುವಂಶೀಯರ ಸಂಹಾರವಾಯಿತು ಎಂಬುದು ಅರ್ಜುನನಿಂದಲೇ ತಿಳಿಯಿತು. ಆಗ ಅವರು ತನ್ನ ವಂಶಧರ ನಿನ್ನನ್ನು ರಾಜ್ಯಕ್ಕೆ ಪಟ್ಟಾಭಿಷೇಕಗೈದು ಹಿಮಾಲಯದ ವೀರಯಾತ್ರೆಯನ್ನು ಕೈಗೊಂಡರು. ॥26॥
(ಶ್ಲೋಕ - 27)
ಮೂಲಮ್
ಯ ಏತದ್ದೇವದೇವಸ್ಯ ವಿಷ್ಣೋಃ ಕರ್ಮಾಣಿ ಜನ್ಮ ಚ ।
ಕೀರ್ತಯೇಚ್ಛ್ರದ್ಧಯಾ ಮರ್ತ್ಯಃ ಸರ್ವಪಾಪೈಃ ಪ್ರಮುಚ್ಯತೇ ॥
ಅನುವಾದ
ನಾನು ನಿನಗೆ ದೇವತೆಗಳಿಗೂ ಆರಾಧ್ಯನಾದ ಭಗವಾನ್ ಶ್ರೀಕೃಷ್ಣನ ಜನ್ಮಲೀಲೆ ಮತ್ತು ಕರ್ಮಲೀಲೆಗಳನ್ನು ಹೇಳಿದೆ. ಶ್ರದ್ಧೆಯಿಂದೊಡಗೂಡಿ ಇದನ್ನು ಕೀರ್ತಿಸುವ ಮನುಷ್ಯನು ಸಮಸ್ತ ಪಾಪಗಳಿಂದ ಮುಕ್ತನಾಗಿ ಹೋಗುತ್ತಾನೆ. ॥27॥
(ಶ್ಲೋಕ - 28)
ಮೂಲಮ್
ಇತ್ಥಂ ಹರೇರ್ಭಗವತೋ ರುಚಿರಾವತಾರ-
ವೀರ್ಯಾಣಿ ಬಾಲಚರಿತಾನಿ ಚ ಶಂತಮಾನಿ ।
ಅನ್ಯತ್ರ ಚೇಹ ಚ ಶ್ರುತಾನಿ ಗೃಣನ್ಮನುಷ್ಯೋ
ಭಕ್ತಿಂ ಪರಾಂ ಪರಮಹಂಸಗತೌ ಲಭೇತ ॥
ಅನುವಾದ
ಪರೀಕ್ಷಿತನೇ! ಈ ಪ್ರಕಾರ ಭಕ್ತಭಯಹಾರಿ ನಿಖಿಲ ಸೌಂದರ್ಯ-ಮಾಧುರ್ಯ ನಿಧಿ ಶ್ರೀಕೃಷ್ಣಚಂದ್ರನ ಅವತಾರ ಸಂಬಂಧೀ ರುಚಿರ ಪರಾಕ್ರಮ ಮತ್ತು ಈ ಶ್ರೀಮದ್ಭಾಗವತ ಮಹಾಪುರಾಣದಲ್ಲಿ ಹಾಗೂ ಬೇರೆ ಪುರಾಣಗಳಲ್ಲಿ ವರ್ಣಿತ ಪರಮಾನಂದಮಯ ಬಾಲಲೀಲೆ, ಕೈಶೋರಲೀಲೆ ಮುಂತಾದವುಗಳನ್ನು ಸಂಕೀರ್ತನೆ ಮಾಡುವ ಮನುಷ್ಯನಿಗೆ ಪರಮಹಂಸ ಮುನೀಂದ್ರರ ಅಂತಿಮ ಪ್ರಾಪ್ತವ್ಯವಾದ ಶ್ರೀಕೃಷ್ಣನ ಚರಣಗಳಲ್ಲಿ ಪರಾಭಕ್ತಿಯು ಪ್ರಾಪ್ತವಾಗುತ್ತದೆ. ॥28॥
ಅನುವಾದ (ಸಮಾಪ್ತಿಃ)
ಮೂವತ್ತೊಂದನೆಯ ಅಧ್ಯಾಯವು ಮುಗಿಯಿತು. ॥31॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಏಕತ್ರಿಂಶೋಽಧ್ಯಾಯಃ ॥31॥
ಹನ್ನೊಂದನೆಯ ಸ್ಕಂಧವು ಸಂಪೂರ್ಣವಾಯಿತು.
ಹರಿಃಓಂ ತತ್ಸತ್ - ಹರಿಃಓಂ ತತ್ಸತ್