[ಮೂವತ್ತನೆಯ ಅಧ್ಯಾಯ]
ಭಾಗಸೂಚನಾ
ಯದುಕುಲದ ಸಂಹಾರ
(ಶ್ಲೋಕ - 1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ತತೋ ಮಹಾಭಾಗವತ ಉದ್ಧವೇ ನಿರ್ಗತೇ ವನಮ್ ।
ದ್ವಾರವತ್ಯಾಂ ಕಿಮಕರೋದ್ಭಗವಾನ್ ಭೂತಭಾವನಃ ॥
ಅನುವಾದ
ಪರೀಕ್ಷಿತರಾಜನು ಕೇಳಿದನು — ಪೂಜ್ಯರೇ! ಮಹಾ ಭಾಗವತ ಉದ್ಧವನು ಬದರಿಕಾಶ್ರಮಕ್ಕೆ ಹೊರಟುಹೋದ ಬಳಿಕ ಸಮಸ್ತ ಪ್ರಾಣಿಗಳ ಆತ್ಮಸ್ವರೂಪೀ ಭಗವಾನ್ ಶ್ರೀಕೃಷ್ಣನು ದ್ವಾರಕೆಯಲ್ಲಿ ಯಾವ-ಯಾವ ಲೀಲೆಗಳನ್ನು ಮಾಡಿದನು? ॥1॥
(ಶ್ಲೋಕ - 2)
ಮೂಲಮ್
ಬ್ರಹ್ಮಶಾಪೋಪಸಂಸೃಷ್ಟೇ ಸ್ವಕುಲೇ ಯಾದವರ್ಷಭಃ ।
ಪ್ರೇಯಸೀಂ ಸರ್ವನೇತ್ರಾಣಾಂ ತನುಂ ಸ ಕಥಮತ್ಯಜತ್ ॥
ಅನುವಾದ
ಸ್ವಾಮಿ! ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನು ತನ್ನ ಕುಲವು ಶಾಪಗ್ರಸ್ತವಾದಾಗ ಸಮಸ್ತರ ಕಣ್ಣುಗಳಿಗೆ ‘ಆನಂದಕರವಾಗಿದ್ದ ತನ್ನ ದಿವ್ಯ ಶ್ರೀವಿಗ್ರಹದ ಲೀಲೆಯನ್ನು ಹೇಗೆ ಉಪಸಂಹಾರ ಮಾಡಿದನು? ॥2॥
(ಶ್ಲೋಕ - 3)
ಮೂಲಮ್
ಪ್ರತ್ಯಾಕ್ರಷ್ಟುಂ ನಯನಮಬಲಾ ಯತ್ರ ಲಗ್ನಂ ನ ಶೇಕುಃ
ಕರ್ಣಾವಿಷ್ಟಂ ನ ಸರತಿ ತತೋ ಯತ್ಸತಾಮಾತ್ಮಲಗ್ನಮ್ ।
ಯಚ್ಛ್ರೀರ್ವಾಚಾಂ ಜನಯತಿ ರತಿಂ ಕಿಂ ನು ಮಾನಂ ಕವೀನಾಂ
ದೃಷ್ಟ್ವಾಘಿಘಿಜಿಷ್ಣೋರ್ಯುಧಿಘಿರಥಗತಂಘಿಯಚ್ಚಘಿತತ್ಸಾಮ್ಯಮೀಯುಃ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಆ ಸ್ವರೂಪದಲ್ಲಿ ವ್ರಜಾಂಗನೆಯರ ಕಣ್ಣುಗಳು ಒಮ್ಮೆ ನೆಟ್ಟುಬಿಟ್ಟರೆ ಅಲ್ಲಿಂದ ಅವನ್ನು ಕೀಳುವುದಕ್ಕೆ ಅವರು ಅಸಮರ್ಥರಾಗುತ್ತಿದ್ದರು, ಅಷ್ಟೊಂದು ಸುಂದರವಾಗಿತ್ತು ಆ ಶ್ರೀವಿಗ್ರಹ. ಭಕ್ತರು, ರುಕ್ಮಿಣೀ, ಯಜ್ಞಪತ್ನಿಯರು (ಭಾಗ 10/23/23) ಮುಂತಾದವರು ಕಿವಿಗಳ ಮೂಲಕ ಭಗವಂತನ ಆ ದಿವ್ಯರೂಪ ಸೌಂದರ್ಯವನ್ನು ವರ್ಣನೆಯನ್ನು ಕೇಳಿದಾಗ ಆ ರೂಪಮಾಧುರಿಯು ಅವರ ಚಿತ್ತದಿಂದ ಯಾವ ರೀತಿಯಿಂದಲೂ ವಿಸ್ಮೃತವಾಗುತ್ತಿರಲಿಲ್ಲ. ಭಗವಂತನ ಅದೇ ಶ್ರೀವಿಗ್ರಹದ ಶೋಭೆಯ ಕುರಿತು ಕವಿಗಳು ವರ್ಣಿಸುತ್ತಾ-ವರ್ಣಿಸುತ್ತಾ ಅವರಿಗೆ ತೃಪ್ತಿಯೇ ಆಗದಷ್ಟು ಅದರಲ್ಲಿ ಅನುರಾಗ ಬೆಳೆದುಹೋಯಿತು. ಅಷ್ಟೇ ಅಲ್ಲ, ಅದರಿಂದ ಆ ಕವಿಗಳೂ ಗೌರವಕ್ಕೆ ಪಾತ್ರರಾದರು. ಅರ್ಜುನನ ರಥದಲ್ಲಿ ಸಾರಥಿಯಾಗಿ ಕುಳಿತಿರುವ ಆ ಶ್ರೀಕೃಷ್ಣನ ಅದೇ ರೂಪಮಾಧುರಿಯನ್ನು ನೋಡುತ್ತಾ-ನೋಡುತ್ತಾ ಮಹಾಭಾರತಯುದ್ಧದಲ್ಲಿ ಪ್ರಾಣಗಳನ್ನು ತ್ಯಜಿಸಿದವರು ಅವನ ಸಾರೂಪ್ಯವನ್ನು ಪಡೆದರು. ಭಗವಂತನ ಅಂತಹ ಆ ಮುಗ್ಧಮನೋಹರ ಸ್ವರೂಪವನ್ನು ಅವನು ಹೇಗೆ ತ್ಯಜಿಸಿದನು.॥3॥
(ಶ್ಲೋಕ - 4)
ಮೂಲಮ್ (ವಾಚನಮ್)
ಋಷಿರುವಾಚ
ಮೂಲಮ್
ದಿವಿ ಭುವ್ಯಂತರಿಕ್ಷೇ ಚ ಮಹೋತ್ಪಾತಾನ್ ಸಮುತ್ಥಿತಾನ್ ।
ದೃಷ್ಟ್ವಾಸೀನಾನ್ಸುಧರ್ಮಾಯಾಂ ಕೃಷ್ಣಃ ಪ್ರಾಹ ಯದೂನಿದಮ್ ॥
ಅನುವಾದ
ಶ್ರೀಶುಕಯೋಗಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಆಕಾಶ, ಪೃಥಿವಿ, ಅಂತರಿಕ್ಷಗಳಲ್ಲಿ ದೊಡ್ಡ-ದೊಡ್ಡ ಉತ್ಪಾತ- ಅಪಶಕುನಗಳು ಆಗುತ್ತಿರುವುದನ್ನು ನೋಡಿದಾಗ, ಭಗವಾನ್ ಶ್ರೀಕೃಷ್ಣನು ಸುಧರ್ಮಸಭೆಯಲ್ಲಿ ಉಪಸ್ಥಿತ ಎಲ್ಲ ಯದುವಂಶೀಯರಲ್ಲಿ ಹೀಗೆ ಹೇಳಿದನು ॥4॥
(ಶ್ಲೋಕ - 5)
ಮೂಲಮ್
ಏತೇ ಘೋರಾ ಮಹೋತ್ಪಾತಾ ದ್ವಾರ್ವತ್ಯಾಂ ಯಮಕೇತವಃ ।
ಮುಹೂರ್ತಮಪಿ ನ ಸ್ಥೇಯಮತ್ರ ನೋ ಯದುಪುಂಗವಾಃ ॥
ಅನುವಾದ
ಶ್ರೇಷ್ಠ ಯದುವಂಶೀಯರೇ! ದ್ವಾರಕೆಯಲ್ಲಿ ದೊಡ್ಡ-ದೊಡ್ಡ ಭಯಂಕರ ಉತ್ಪಾತಗಳು ನಡೆಯುವುದನ್ನು ನೀವೆಲ್ಲ ನೋಡುತ್ತಿದ್ದೀರಿ. ಇವು ಸಾಕ್ಷಾತ್ ಯಮರಾಜನ ಧ್ವಜದಂತೆ ನಮ್ಮ ಮಹಾನ್ ಅನಿಷ್ಟದ ಸೂಚಕಗಳಾಗಿವೆ. ಇನ್ನು ನಾವು ಇಲ್ಲಿ ಒಂದು ಮುಹೂರ್ತವೂ ನಿಲ್ಲಬಾರದು. ॥5॥
(ಶ್ಲೋಕ - 6)
ಮೂಲಮ್
ಸಿಯೋ ಬಾಲಾಶ್ಚ ವೃದ್ಧಾಶ್ಚ ಶಂಖೋದ್ಧಾರಂ ವ್ರಜನ್ತ್ವಿತಃ ।
ವಯಂ ಪ್ರಭಾಸಂ ಯಾಸ್ಯಾಮೋ ಯತ್ರ ಪ್ರತ್ಯಕ್ಸರಸ್ವತೀ ॥
ಅನುವಾದ
ಸ್ತ್ರೀಯರು, ಮಕ್ಕಳು, ಮುದುಕರು ಇಲ್ಲಿಂದ ಶಂಖೋದ್ಧಾರಕ್ಷೇತ್ರಕ್ಕೆ ಹೊರಟು ಹೋಗಲಿ. ನಾವೆಲ್ಲರೂ ಪ್ರಭಾಸಕ್ಷೇತ್ರಕ್ಕೆ ಹೋಗೋಣ. ಅಲ್ಲಿ ಸರಸ್ವತಿ ನದಿಯು ಪಶ್ಚಿಮದ ಕಡೆಗೆ ಹರಿದು ಸಮುದ್ರಕ್ಕೆ ಸೇರುತ್ತದೆ ಎಂಬುದು ನೀವೆಲ್ಲರೂ ತಿಳಿದಿದ್ದೀರಿ.॥6॥
(ಶ್ಲೋಕ - 7)
ಮೂಲಮ್
ತತ್ರಾಭಿಷಿಚ್ಯ ಶುಚಯ ಉಪೋಷ್ಯ ಸುಸಮಾಹಿತಾಃ ।
ದೇವತಾಃ ಪೂಜಯಿಷ್ಯಾಮಃ ಸ್ನಪನಾಲೇಪನಾರ್ಹಣೈಃ ॥
ಅನುವಾದ
ಅಲ್ಲಿ ನಾವೆಲ್ಲರೂ ಸ್ನಾನ ಮಾಡಿ ಪವಿತ್ರರಾಗಿ ಉಪವಾಸ ಮಾಡುವೆವು. ಏಕಾಗ್ರಚಿತ್ತದಿಂದ ಸ್ನಾನ ಮತ್ತು ಚಂದನಾದಿ ಸಾಮಗ್ರಿಗಳಿಂದ ದೇವತೆಗಳನ್ನು ಪೂಜಿಸೋಣ. ॥7॥
(ಶ್ಲೋಕ - 8)
ಮೂಲಮ್
ಬ್ರಾಹ್ಮಣಾಂಸ್ತು ಮಹಾಭಾಗಾನ್ಕೃತಸ್ವಸ್ತ್ಯಯನಾ ವಯಮ್ ।
ಗೋಭೂಹಿರಣ್ಯವಾಸೋಭಿರ್ಗಜಾಶ್ವರಥವೇಶ್ಮಭಿಃ ॥
ಅನುವಾದ
ಅಲ್ಲಿ ಬ್ರಾಹ್ಮಣರಿಂದ ಸ್ವಸ್ತಿ ವಾಚನ ಮಾಡಿಸಿದ ಬಳಿಕ ನಾವೆಲ್ಲರೂ ಗೋ, ಭೂಮಿ, ಸ್ವರ್ಣ, ವಸ್ತ್ರ, ಆನೆ, ಕುದುರೆ, ರಥ, ಮನೆಯೇ ಮುಂತಾದುವನ್ನು ದಾನಮಾಡಿ ಬ್ರಾಹ್ಮಣರನ್ನು ಸತ್ಕರಿಸುವೆವು. ॥8॥
(ಶ್ಲೋಕ - 9)
ಮೂಲಮ್
ವಿಧಿರೇಷ ಹ್ಯರಿಷ್ಟಘ್ನೋ ಮಂಗಲಾಯನಮುತ್ತಮಮ್ ।
ದೇವದ್ವಿಜಗವಾಂ ಪೂಜಾ ಭೂತೇಷು ಪರಮೋ ಭವಃ ॥
ಅನುವಾದ
ಈ ವಿಧಿಯು ಎಲ್ಲ ರೀತಿಯ ಅಮಂಗಳವನ್ನು ನಾಶಮಾಡುವಂತಹುದು ಮತ್ತು ಪರಮ ಮಂಗಲದ ಜನನಿಯಾಗಿದೆ. ಶ್ರೇಷ್ಠ ಯದುವಂಶೀಯರೇ! ದೇವತೆ, ಬ್ರಾಹ್ಮಣ, ಗೋವು ಇವುಗಳ ಪೂಜೆಯೇ ಪ್ರಾಣಿಗಳ ಜನ್ಮದ ಪರಮಲಾಭವಾಗಿದೆ. ॥9॥
(ಶ್ಲೋಕ - 10)
ಮೂಲಮ್
ಇತಿ ಸರ್ವೇ ಸಮಾಕರ್ಣ್ಯ ಯದುವೃದ್ಧಾ ಮಧುದ್ವಿಷಃ ।
ತಥೇತಿ ನೌಭಿರುತ್ತೀರ್ಯ ಪ್ರಭಾಸಂ ಪ್ರಯಯೂ ರಥೈಃ ॥
ಅನುವಾದ
ಪರೀಕ್ಷಿತನೇ! ಎಲ್ಲ ವೃದ್ಧ ಯದುವಂಶೀಯರು ಭಗವಾನ್ ಶ್ರೀಕೃಷ್ಣನ ಮಾತನ್ನು ಕೇಳಿ ‘ಹಾಗೆಯೇ ಆಗಲಿ’ ಎಂದು ಹೇಳಿ ಅದನ್ನು ಅನುಮೋದಿಸಿದರು. ಕೂಡಲೇ ನಾವೆಗಳಿಂದ ಸಮುದ್ರವನ್ನು ದಾಟಿ ರಥಗಳಲ್ಲಿ ಪ್ರಭಾಸ ಕ್ಷೇತ್ರದ ಯಾತ್ರೆಯನ್ನು ಕೈಗೊಂಡರು. ॥10॥
(ಶ್ಲೋಕ - 11)
ಮೂಲಮ್
ತಸ್ಮಿನ್ಭಗವತಾದಿಷ್ಟಂ ಯದುದೇವೇನ ಯಾದವಾಃ ।
ಚಕ್ರುಃ ಪರಮಯಾ ಭಕ್ತ್ಯಾ ಸರ್ವಶ್ರೇಯೋಪಬೃಂಹಿತಮ್ ॥
ಅನುವಾದ
ಅಲ್ಲಿಗೆ ತಲುಪಿ ಯಾದವರು ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನ ಆದೇಶಾನುಸಾರ ಬಹು ಶ್ರದ್ಧೆ ಮತ್ತು ಭಕ್ತಿಯಿಂದ ಶಾಂತಿಪಾಠಾದಿಗಳನ್ನು ಗೈದು, ಎಲ್ಲ ರೀತಿಯ ಮಂಗಲ ಕೃತ್ಯಗಳನ್ನು ಮಾಡಿದರು. ॥11॥
(ಶ್ಲೋಕ - 12)
ಮೂಲಮ್
ತತಸ್ತಸ್ಮಿನ್ಮಹಾಪಾನಂ ಪಪುರ್ಮೈರೇಯಕಂ ಮಧು ।
ದಿಷ್ಟವಿಭ್ರಂಶಿತಧಿಯೋ ಯದ್ದ್ರವೈರ್ಭ್ರಶ್ಯತೇ ಮತಿಃ ॥
ಅನುವಾದ
ಇದೆಲ್ಲವನ್ನು ಅವರೇನೋ ಮಾಡಿದರು, ಆದರೆ ದೈವವು ಅವರ ಬುದ್ಧಿಯನ್ನು ಅಪಹರಿಸಿತ್ತು. ಆದ್ದರಿಂದ ಅವರು ಮೈರೇಯಕವೆಂಬ ಮದಿರೆಯನ್ನು ಪಾನಮಾಡತೊಡಗಿದರು. ಅದರ ಮತ್ತಿನಿಂದ ಬುದ್ಧಿಯು ಭ್ರಷ್ಟವಾಗುತ್ತದೆ. ಅದು ಕುಡಿಯುವಾಗ ಸಿಹಿಯಾಗಿರುತ್ತದೆ, ಆದರೆ ಪರಿಣಾಮದಲ್ಲಿ ಸರ್ವನಾಶ ಮಾಡುವಂತಹುದು. ॥12॥
(ಶ್ಲೋಕ - 13)
ಮೂಲಮ್
ಮಹಾಪಾನಾಭಿಮತ್ತಾನಾಂ ವೀರಾಣಾಂ ದೃಪ್ತಚೇತಸಾಮ್ ।
ಕೃಷ್ಣಮಾಯಾವಿಮೂಢಾನಾಂ ಸಂಘರ್ಷಃ ಸುಮಹಾನಭೂತ್ ॥
ಅನುವಾದ
ಆ ತೀವ್ರವಾದ ಮದಿರಾಪಾನದಿಂದ ಎಲ್ಲರೂ ಉನ್ಮತ್ತರಾದರು. ಅವರು ಗರ್ವದಿಂದ ಪರಸ್ಪರ ಜಗಳ ಕಾಯಲು ತೊಡಗಿದರು. ನಿಜವಾಗಿ ಯಾದರೋ ಅವರೆಲ್ಲರೂ ಶ್ರೀಕೃಷ್ಣನ ಮಾಯೆಯಿಂದ ಮೂಢರಾಗಿದ್ದರು. ॥13॥
(ಶ್ಲೋಕ - 14)
ಮೂಲಮ್
ಯುಯುಧುಃ ಕ್ರೋಧಸಂರಬ್ಧಾ ವೇಲಾಯಾಮಾತತಾಯಿನಃ ।
ಧನುರ್ಭಿರಸಿಭಿರ್ಭಲ್ಲೈರ್ಗದಾಭಿಸ್ತೋಮರರ್ಷ್ಟಿಭಿಃ ॥
ಅನುವಾದ
ಆಗ ಅವರೆಲ್ಲರೂ ಸಿಟ್ಟುಗೊಂಡು ಒಬ್ಬರು ಮತ್ತೊಬ್ಬರ ಮೇಲೆ ಆಕ್ರಮಣಕ್ಕೆ ತೊಡಗಿದರು. ಧನುಷ್ಯ ಬಾಣ, ಖಡ್ಗ, ಈಟಿ, ಗದೆ, ತೋಮರ, ಋಷ್ಟಿ ಮುಂತಾದ ಅಸ್ತ್ರ ಶಸ್ತ್ರಗಳಿಂದ ಅಲ್ಲೇ ಸಮುದ್ರತಟದಲ್ಲಿ ಪರಸ್ಪರ ಆಕ್ರಮಣ ಮಾಡಿದರು. ॥14॥
(ಶ್ಲೋಕ - 15)
ಮೂಲಮ್
ಪತತ್ಪತಾಕೈ ರಥಕುಂಜರಾದಿಭಿಃ
ಖರೋಷ್ಟ್ರಗೋಭಿರ್ಮಹಿಷೈರ್ನರೈರಪಿ ।
ಮಿಥಃ ಸಮೇತ್ಯಾಶ್ವತರೈಃ ಸುದುರ್ಮದಾ
ನ್ಯಹನ್ಶರೈರ್ದದ್ಭಿರಿವ ದ್ವಿಪಾ ವನೇ ॥
ಅನುವಾದ
ಮದೋನ್ಮತರಾದ ಯದುವಂಶೀಯರು ಆನೆ, ಕುದುರೆ, ಕತ್ತೆ, ಒಂಟೆ, ಹೇಸರಕತ್ತೆ, ಎತ್ತು, ಕೋಣ ಮತ್ತು ಮನುಷ್ಯರನ್ನೇ ವಾಹನವಾಗಿಸಿಕೊಂಡು ಒಬ್ಬರು ಮತ್ತೊಬ್ಬರನ್ನು ಬಾಣಗಳಿಂದ ಘಾಸಿಗೊಳಿಸಿದರು. ಅವನ ಕಾಳಗ ಕಾಡಾನೆಗಳು ಒಂದು ಮತ್ತೊಂದನ್ನು ದಂತದಿಂದ ತಿವಿಯುವಂತೆ ಇತ್ತು ಎಲ್ಲ ವಾಹನಗಳ ಮೇಲೆ ಧ್ವಜಗಳು ಹಾರಾಡುತ್ತಿದ್ದವು. ಕಾಲಾಳುಗಳೂ ಪರಸ್ಪರ ಕಾದುತ್ತಿದ್ದರು. ॥15॥
(ಶ್ಲೋಕ - 16)
ಮೂಲಮ್
ಪ್ರದ್ಯುಮ್ನಸಾಂಬೌ ಯುಧಿ ರೂಢಮತ್ಸರಾ-
ವಕ್ರೂರಭೋಜಾವನಿರುದ್ಧಸಾತ್ಯಕೀ ।
ಸುಭದ್ರಸಂಗ್ರಾಮಜಿತೌ ಸುದಾರುಣೌ
ಗದೌ ಸುಮಿತ್ರಾಸುರಥೌ ಸಮೀಯತುಃ ॥
ಅನುವಾದ
ಪ್ರದ್ಯುಮ್ನನು ಸಾಂಬನೊಂದಿಗೆ, ಅಕ್ರೂರನು ಭೋಜನೊಂದಿಗೆ, ಅನಿರುದ್ಧನು - ಸಾತ್ಯಕಿಯೊಂದಿಗೆ, ಸುಭದ್ರನು ಸಂಗ್ರಾಮಜಿತನೊಂದಿಗೆ, ಶ್ರೀಕೃಷ್ಣನ ತಮ್ಮ ಗದನು ಅದೇ ಹೆಸರಿನ ಅವರ ಪುತ್ರನೊಂದಿಗೆ, ಸುಮಿತ್ರನು ಸುರಥನೊಂದಿಗೆ ಯುದ್ಧ ಮಾಡತೊಡಗಿದರು. ಅವರೆಲ್ಲರೂ ಭಯಂಕರ ಯೋಧರಾಗಿದ್ದರು. ಕ್ರೋಧದಿಂದ ಒಬ್ಬರು ಮತ್ತೊಬ್ಬರ ನಾಶ ಮಾಡಲು ಹವಣಿಸುತ್ತಿದ್ದರು. ॥16॥
(ಶ್ಲೋಕ - 17)
ಮೂಲಮ್
ಅನ್ಯೇ ಚ ಯೇ ವೈ ನಿಶಠೋಲ್ಮುಕಾದಯಃ
ಸಹಸ್ರಜಿಚ್ಛತಜಿದ್ಭಾನುಮುಖ್ಯಾಃ ।
ಅನ್ಯೋನ್ಯಮಾಸಾದ್ಯ ಮದಾಂಧಕಾರಿತಾ
ಜಘ್ನುರ್ಮುಕುಂದೇನ ವಿಮೋಹಿತಾ ಭೃಶಮ್ ॥
ಅನುವಾದ
ಇವರಲ್ಲದೆ ನಿಶಠ, ಉಲ್ಮುಖ, ಸಹಸ್ರಜಿತ್, ಶತಜಿತ್, ಭಾನು ಮುಂತಾದ ಯಾದವರೂ ಪರಸ್ಪರ ಯುದ್ಧದಲ್ಲಿ ತೊಡಗಿದರು ಭಗವಾನ್ ಶ್ರೀಕೃಷ್ಣನ ಮಾಯೆಯಿಂದ ಅವರು ಅತ್ಯಂತ ಮೋಹಿತರಾಗಿದ್ದರು. ಇತ್ತ ಮದಿರೆಯ ಮತ್ತಿನಿಂದ ಅವರು ಕುರುಡಾಗಿದ್ದರು. ॥17॥
(ಶ್ಲೋಕ - 18)
ಮೂಲಮ್
ದಾಶಾರ್ಹವೃಷ್ಣ್ಯಂಧಕಭೋಜಸಾತ್ವತಾ
ಮಧ್ವರ್ಬುದಾ ಮಾಥುರಶೂರಸೇನಾಃ ।
ವಿಸರ್ಜನಾಃ ಕುಕುರಾಃ ಕುಂತಯಶ್ಚ
ಮಿಥಸ್ತತಸ್ತೇಥ ವಿಸೃಜ್ಯ ಸೌಹೃದಮ್ ॥
ಅನುವಾದ
ದಾಶಾರ್ಹ, ವೃಷ್ಣೀ ಅಂಧಕ, ಭೋಜ, ಸಾತ್ವತ, ಮಧು, ಅರ್ಬುದ, ಮಾಥುರ, ಶೂರಸೇನ, ವಿಸರ್ಜನ, ಕುಕುರ, ಕುಂತಿ ಮುಂತಾದ ವಂಶಜರು ಸೌಹಾರ್ದ್ರ, ಪ್ರೇಮವನ್ನು ಮರೆತು ಪರಸ್ಪರ ಕಡಿದಾಡಲು ತೊಡಗಿದರು. ॥18॥
(ಶ್ಲೋಕ - 19)
ಮೂಲಮ್
ಪುತ್ರಾ ಅಯುಧ್ಯನ್ ಪಿತೃಭಿರ್ಭ್ರಾತೃಭಿಶ್ಚ
ಸ್ವಸ್ರೀಯದೌಹಿತ್ರಪಿತೃವ್ಯಮಾತುಲೈಃ ।
ಮಿತ್ರಾಣಿ ಮಿತ್ರೈಃ ಸುಹೃದಃ ಸುಹೃದ್ಭಿ-
ರ್ಜ್ಞಾತೀಂಸ್ತ್ವಹನ್ಜ್ಞಾತಯ ಏವ ಮೂಢಾಃ ॥
ಅನುವಾದ
ಮೂಢತೆಯಿಂದ ಮಗನು ತಂದೆಯ, ಸಹೋದರ ಸೋದರನ, ಅಳಿಯ ಮಾವನ, ಮೊಮ್ಮಗ ಅಜ್ಜನ, ಮಿತ್ರನು ಮಿತ್ರನ, ಸುಹೃದ್ ಸುಹೃದನ, ಸೋದರಳಿಯ ಸೋದರ ಮಾವನ ಹಾಗೂ ಒಂದೇ ಗೋತ್ರದವರು ಪರಸ್ಪರ ರಕ್ತಹರಿಸ ತೊಡಗಿದರು. ॥19॥
(ಶ್ಲೋಕ - 20)
ಮೂಲಮ್
ಶರೇಷು ಕ್ಷೀಯಮಾಣೇಷು ಭಜ್ಯಮಾನೇಷು ಧನ್ವಸು ।
ಶಸೇಷು ಕ್ಷೀಯಮಾಣೇಷು ಮುಷ್ಟಿಭಿರ್ಜಹ್ರುರೇರಕಾಃ ॥
ಅನುವಾದ
ಕೊನೆಗೆ ಅವರ ಬಾಣಗಳು ಮುಗಿದಾಗ, ಧನುಸ್ಸುಗಳು ಮುರಿದಾಗ, ಶಸಾಸಗಳು ನಷ್ಟ-ಭ್ರಷ್ಟವಾದಾಗ ಅವರೆಲ್ಲರೂ ತಮ್ಮ ಕೈಗಳಿಂದ ಸಮುದ್ರತಟದಲ್ಲಿ ಬೆಳೆದ ಏರಕಾ ಎಂಬ ಹುಲ್ಲನ್ನು ಕೀಳಲು ತೊಡಗಿದರು. ಆ ಹುಲ್ಲು ಋಷಿಗಳ ಶಾಪದಿಂದ ಉತ್ಪನ್ನವಾದ ಕಬ್ಬಿಣದ ಒನಕೆಯ ಚೂರ್ಣದಿಂದ ಹುಟ್ಟಿತ್ತು. ॥20॥
(ಶ್ಲೋಕ - 21)
ಮೂಲಮ್
ತಾ ವಜ್ರಕಲ್ಪಾಹ್ಯಭವನ್ಪರಿಘಾ ಮುಷ್ಟಿನಾ ಭೃತಾಃ ।
ಜಘ್ನುರ್ದ್ವಿಷಸ್ತೈಃ ಕೃಷ್ಣೇನ ವಾರ್ಯಮಾಣಾಸ್ತು ತಂ ಚ ತೇ ॥
(ಶ್ಲೋಕ - 22)
ಮೂಲಮ್
ಪ್ರತ್ಯನೀಕಂ ಮನ್ಯಮಾನಾ ಬಲಭದ್ರಂ ಚ ಮೋಹಿತಾಃ ।
ಹಂತುಂ ಕೃತಧಿಯೋ ರಾಜನ್ನಾಪನ್ನಾ ಆತತಾಯಿನಃ ॥
ಅನುವಾದ
ಎಲೈ ರಾಜನೇ! ಆ ಹುಲ್ಲನ್ನು ಅವರು ಕೈಗೆತ್ತಿಕೊಳ್ಳುತ್ತಲೇ ಅದು ಪರಿಘದಂತೆ ಶಕ್ತಿಶಾಲಿಯಾಯಿತು. ಆಗ ಅವರು ರೋಷಾವಿಷ್ಟರಾಗಿ ಆ ಹುಲ್ಲಿ ನಿಂದಲೇ ವಿಪಕ್ಷಿಯರನ್ನು ಪ್ರಹರಿತೊಡಗಿದರು. ಭಗವಾನ್ ಶ್ರೀಕೃಷ್ಣನು ಅವರನ್ನು ತಡೆದರೂ ಅವರು ಅವನನ್ನು ಮತ್ತು ಬಲರಾಮನನ್ನು ತಮ್ಮ ಶತ್ರುಗಳೆಂದೇ ಭಾವಿಸಿದರು. ಆ ಆತತಾಯಿಗಳು ಕೃಷ್ಣ, ಬಲರಾಮರನ್ನೇ ಹೊಡೆಯುವಷ್ಟು ಅವರ ಬುದ್ಧಿ ಮೂಢವಾಗಿತ್ತು. ॥21-22॥
(ಶ್ಲೋಕ - 23)
ಮೂಲಮ್
ಅಥ ತಾವಪಿ ಸಂಕ್ರುದ್ಧಾವುದ್ಯಮ್ಯ ಕುರುನಂದನ ।
ಏರಕಾಮುಷ್ಟಿಪರಿಘೌ ಚರಂತೌ ಜಘ್ನತುರ್ಯುಧಿ ॥
ಅನುವಾದ
ಕುರುನಂದನಾ! ಈಗ ಭಗವಾನ್ ಶ್ರೀಕೃಷ್ಣ, ಬಲರಾಮರೂ ಕ್ರೋಧಗೊಂಡು ಯುದ್ಧ ಭೂಮಿಯಲ್ಲಿ ಅತ್ತ-ಇತ್ತ ಹೋಗುತ್ತಾ ಏರಕಾರೂಪೀ ಪರಿಘವನ್ನು ಕೈಯಲ್ಲೆತ್ತಿಕೊಂಡು ಅವರೆಲ್ಲರನ್ನು ಯುದ್ಧದಲ್ಲಿ ಕೊಲ್ಲತೊಡಗಿದರು. ॥23॥
ಮೂಲಮ್
(ಶ್ಲೋಕ - 24)
ಬ್ರಹ್ಮಶಾಪೋಪಸೃಷ್ಟಾನಾಂ ಕೃಷ್ಣಮಾಯಾವೃತಾತ್ಮನಾಮ್ ।
ಸ್ಪರ್ಧಾಕ್ರೋಧಃ ಕ್ಷಯಂ ನಿನ್ಯೇ ವೈಣವೋಗ್ನಿರ್ಯಥಾ ವನಮ್ ॥
ಅನುವಾದ
ಬಿದಿರಿನ ಘರ್ಷಣೆಯಿಂದ ಉಂಟಾದ ಬೆಂಕಿಯು ಬಿದಿರ ಮೇಳೆಯನ್ನೇ ಸುಡುವಂತೆ, ಬ್ರಹ್ಮಶಾಪದಿಂದ ಗ್ರಸ್ತರಾದ ಮತ್ತು ಶ್ರೀಕೃಷ್ಣನ ಮಾಯೆಯಿಂದ ಮೋಹಿತರಾದ ಯದುವಂಶೀಯರ ಸ್ಪರ್ಧಾಮೂಲಕ ಕ್ರೋಧವೇ ಅವರನ್ನು ನಾಶಮಾಡಿಬಿಟ್ಟಿತು. ॥24॥
(ಶ್ಲೋಕ - 25)
ಮೂಲಮ್
ಏವಂ ನಷ್ಟೇಷು ಸರ್ವೇಷು ಕುಲೇಷು ಸ್ವೇಷು ಕೇಶವಃ ।
ಅವತಾರಿತೋ ಭುವೋ ಭಾರ ಇತಿ ಮೇನೇವಶೇಷಿತಃ ॥
ಅನುವಾದ
ಸಮಸ್ತ ಯದುವಂಶೀಯರ ಸಂಹಾರವಾಗಿ ಹೋದುದನ್ನು ನೋಡಿ ‘ಈಗ ಅಳಿದುಳಿದ ಪೃಥ್ವಿಯ ಭಾರವೂ ತಗ್ಗಿ ಹೋಯಿತು’ ಎಂದು ಭಗವಾನ್ ಶ್ರೀಕೃಷ್ಣನು ಯೋಚಿಸಿದನು. ॥25॥
(ಶ್ಲೋಕ - 26)
ಮೂಲಮ್
ರಾಮಃ ಸಮುದ್ರವೇಲಾಯಾಂ ಯೋಗಮಾಸ್ಥಾಯ ಪೌರುಷಮ್ ।
ತತ್ಯಾಜ ಲೋಕಂ ಮಾನುಷ್ಯಂ ಸಂಯೋಜ್ಯಾತ್ಮಾನಮಾತ್ಮನಿ ॥
ಅನುವಾದ
ಪರೀಕ್ಷಿತನೇ! ಬಲರಾಮದೇವರು ಸಮುದ್ರತಟದಲ್ಲಿ ಕುಳಿತುಕೊಂಡು ಏಕಾಗ್ರಚಿತ್ತದಿಂದ ಪರಮಾತ್ಮನ ಚಿಂತನೆ ಮಾಡುತ್ತಾ ತನ್ನ ಆತ್ಮನನ್ನು ಆತ್ಮಸ್ವರೂಪದಲ್ಲಿ ಸ್ಥಿರಗೊಳಿಸಿದನು ಹಾಗೂ ಈ ಭೂಲೋಕವನ್ನು ಬಿಟ್ಟು ಹೊರಟುಹೋದನು. ॥26॥
(ಶ್ಲೋಕ - 27)
ಮೂಲಮ್
ರಾಮನಿರ್ಯಾಣಮಾಲೋಕ್ಯ ಭಗವಾನ್ ದೇವಕೀಸುತಃ ।
ನಿಷಸಾದ ಧರೋಪಸ್ಥೇ ತೂಷ್ಣೀಮಾಸಾದ್ಯ ಪಿಪ್ಪಲಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ತನ್ನ ಅಣ್ಣ ಬಲರಾಮನು ಪರಮಪದದಲ್ಲಿ ಲೀನವಾದನು ಎಂದು ನೋಡಿದಾಗ, ಅವನೂ ಕೂಡ ಒಂದು ಅರಳಿ ಮರದ ಕೆಳಗೆ ಹೋಗಿ ಮೌನಧರಿಸಿ ನೆಲದ ಮೇಲೆಯೇ ಕುಳಿತು ಬಿಟ್ಟನು. ॥27॥
(ಶ್ಲೋಕ - 28)
ಮೂಲಮ್
ಬಿಭ್ರಚ್ಚತುರ್ಭುಜಂ ರೂಪಂ ಭ್ರಾಜಿಷ್ಣು ಪ್ರಭಯಾ ಸ್ವಯಾ ।
ದಿಶೋ ವಿತಿಮಿರಾಃ ಕುರ್ವನ್ವಿಧೂಮ ಇವ ಪಾವಕಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಆಗ ತನ್ನ ಅಂಗಕಾಂತಿಯಿಂದ ದೇದೀಪ್ಯಮಾನ ಚತುರ್ಭುಜ ರೂಪವನ್ನು ಧರಿಸಿದ್ದನು ಮತ್ತು ಧೂಮರಹಿತ ಅಗ್ನಿಯಂತೆ ಎಲ್ಲ ದಿಕ್ಕುಗಳನ್ನು ಪ್ರಕಾಶಿಸುತ್ತಿದ್ದನು. ॥28॥
(ಶ್ಲೋಕ - 29)
ಮೂಲಮ್
ಶ್ರೀವತ್ಸಾಂಕಂ ಘನಶ್ಯಾಮಂ ತಪ್ತಹಾಟಕವರ್ಚಸಮ್ ।
ಕೌಶೇಯಾಂಬರಯುಗ್ಮೇನ ಪರಿವೀತಂ ಸುಮಂಗಲಮ್ ॥
ಅನುವಾದ
ವರ್ಷಾಕಾಲದ ಮೇಘದಂತೆ ಶ್ಯಾಮಲ ಶರೀರದಿಂದ ಕಾದ ಚಿನ್ನದಂತೆ ಜ್ಯೋತಿಯು ಹೊರಸೂಸುತ್ತಿತ್ತು. ವಕ್ಷಃಸ್ಥಳದಲ್ಲಿ ಶ್ರೀವತ್ಸಲಾಂಛನ ಶೋಭಿಸುತ್ತಿತ್ತು. ಅವನು ರೇಷ್ಮೆ ಪೀತಾಂಬರದ ಧೋತಿ ಮತ್ತು ಶಲ್ಯವನ್ನು ಧರಿಸಿದ್ದನು. ಅವನ ಆ ಸ್ವರೂಪವು ತುಂಬಾ ಮಂಗಲಮಯವಾಗಿತ್ತು. ॥29॥
(ಶ್ಲೋಕ - 30)
ಮೂಲಮ್
ಸುಂದರಸ್ಮಿತವಕಾಬ್ಜಂ ನೀಲಕುಂತಲಮಂಡಿತಮ್ ।
ಪುಂಡರೀಕಾಭಿರಾಮಾಕ್ಷಂ ಸ್ಫುರನ್ಮಕರಕುಂಡಲಮ್ ॥
ಅನುವಾದ
ಮುಖದಲ್ಲಿ ಸುಂದರ ಹಾಸ್ಯ, ಕೋಲಗಳಲ್ಲಿ ಕಪ್ಪಾದ ಮುಂಗುರುಳು ಲಾಸ್ಯವಾಡುತ್ತಿದ್ದವು. ಅವನ ನೇತ್ರಗಳು ಕಮಲದಂತೆ ಸುಂದರ ಹಾಗೂ ಸುಕುಮಾರವಾಗಿದ್ದವು. ಕಿವಿಗಳಲ್ಲಿ ಮಕರಾಕೃತಿಯ ಕುಂಡಲಗಳು ಓಲಾಡುತ್ತಿದ್ದು ಅವನು ಬಹಳ ಅಂದವಾಗಿ ಕಾಣುತ್ತಿದ್ದನು. ॥30॥
(ಶ್ಲೋಕ - 31)
ಮೂಲಮ್
ಕಟಿಸೂತ್ರಬ್ರಹ್ಮಸೂತ್ರಕಿರೀಟಕಟಕಾಂಗದೈಃ ।
ಹಾರನೂಪುರಮುದ್ರಾಭಿಃ ಕೌಸ್ತುಭೇನ ವಿರಾಜಿತಮ್ ॥
ಅನುವಾದ
ಸೊಂಟದಲ್ಲಿ ಉಡಿದಾರದಿಂದಲೂ, ಹೆಗಲಲ್ಲಿ ಯಜ್ಞೋಪವೀತದಿಂದಲೂ, ತಲೆಯ ಮೇಲಿನ ಕಿರೀಟದಿಂದಲೂ, ಕರಕಂಕಣಗಳಿಂದಲೂ, ತೋಳುಗಳಲ್ಲಿ ಬಾಜೂ-ಬಂದಿಗಳಿಂದಲೂ, ವಕ್ಷಃಸ್ಥಳದಲ್ಲಿ ಹಾರಗಳಿಂದಲೂ, ಚರಣಗಳಲ್ಲಿ ನೂಪೂರಗಳಿಂದಲೂ, ಬೆರಳುಗಳಲ್ಲಿ ಉಂಗುರಗಳಿಂದಲೂ, ಕತ್ತಿನಲ್ಲಿ ಕೌಸ್ತುಭಮಣಿಯಿಂದಲೂ ಶೋಭಿಸುತ್ತಿದ್ದನು. ॥31॥
(ಶ್ಲೋಕ - 32)
ಮೂಲಮ್
ವನಮಾಲಾಪರೀತಾಂಗಂ ಮೂರ್ತಿಮದ್ಭಿರ್ನಿಜಾಯುಧೈಃ
ಕೃತ್ವೋರೌ ದಕ್ಷಿಣೇ ಪಾದಮಾಸೀನಂ ಪಂಕಜಾರುಣಮ್ ॥
ಅನುವಾದ
ಮಂಡಿಯವರೆಗೆ ವನಮಾಲೆಯು ಓಲಾಡುತ್ತಿತ್ತು. ಶಂಖ, ಚಕ್ರ, ಗದೆ ಮುಂತಾದ ಆಯುಧಗಳು ಮೂರ್ತಿವತ್ತಾಗಿ ಪ್ರಭುವನ್ನು ಸೇವಿಸುತ್ತಿದ್ದವು. ಆಗ ಭಗವಂತನು ಬಲ ತೊಡೆಯ ಮೇಲೆ ಎಡ ಕಾಲನ್ನಿಟ್ಟುಕೊಂಡು ಕುಳಿತಿದ್ದನು. ಅವನ ಅಂಗಾಲುಗಳು ಕೆಂಪಾದ ಕಮಲದಂತೆ ಹೊಳೆಯುತ್ತಿದ್ದವು. ॥32॥
(ಶ್ಲೋಕ - 33)
ಮೂಲಮ್
ಮುಸಲಾವಶೇಷಾಯಃಖಂಡಕೃತೇಷುರ್ಲುಬ್ಧಕೋ ಜರಾ ।
ಮೃಗಾಸ್ಯಾಕಾರಂ ತಚ್ಚರಣಂ ವಿವ್ಯಾಧ ಮೃಗಶಂಕಯಾ ॥
ಅನುವಾದ
ಪರೀಕ್ಷಿತನೇ! ಜರಾ ಎಂಬ ವ್ಯಾಧನು ಉಳಿದಿದ್ದ ಕಬ್ಬಿಣದ ಒನಕೆಯ ತುಂಡನ್ನು ತನ್ನ ಬಾಣದ ಅಲುಗನ್ನಾಗಿಸಿಕೊಂಡಿದ್ದನು. ಅವನಿಗೆ ದೂರದಿಂದ ಭಗವಂತನ ಕೆಂಪಾದ ಪಾದ ಪದ್ಮವು ಜಿಂಕೆಯ ಮುಖದಂತೆ ಕಂಡುಬಂತು. ಅವನು ಅದನ್ನು ನಿಜವಾದ ಮೃಗವೆಂದೇ ತಿಳಿದು ಅದೇ ಬಾಣವನ್ನು ಪ್ರಯೋಗಿಸಿದನು. ॥33॥
(ಶ್ಲೋಕ - 34)
ಮೂಲಮ್
ಚತುರ್ಭುಜಂ ತಂ ಪುರುಷಂ ದೃಷ್ಟ್ವಾ ಸ ಕೃತಕಿಲ್ಬಿಷಃ ।
ಭೀತಃ ಪಪಾತ ಶಿರಸಾ ಪಾದಯೋರಸುರದ್ವಿಷಃ ॥
ಅನುವಾದ
ಮೃಗವನ್ನರಸುತ್ತಾ ಅವನು ಬಳಿಗೆ ಬಂದಾಗ ನೋಡಿದನು - ಅರೇ! ಇವನಾದರೋ ಚುತರ್ಭುಜ ಸ್ವಯಂ ಭಗವಂತನಾಗಿದ್ದಾನಲ್ಲ! ಈಗಲಾದರೋ ಅಪರಾಧ ನಡೆದುಹೋಯಿತು. ಇದಕ್ಕಾಗಿ ಭಯದಿಂದ ನಡುಗುತ್ತಾ, ಅಸುರರನ್ನು ನಾಶಗೊಳಿಸುವ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ತಲೆಯನ್ನಿಟ್ಟು ಹೊರಳಾಡುತ್ತಾ ಕ್ಷಮೆಕೇಳತೊಡಗಿದನು. ॥34॥
(ಶ್ಲೋಕ - 35)
ಮೂಲಮ್
ಅಜಾನತಾ ಕೃತಮಿದಂ ಪಾಪೇನ ಮಧುಸೂದನ ।
ಕ್ಷಂತುಮರ್ಹಸಿ ಪಾಪಸ್ಯ ಉತ್ತಮಶ್ಲೋಕ ಮೇನಘ ॥
ಅನುವಾದ
ಬೇಡನು ಬೇಡಿಕೊಂಡನು ಓ ಮಧುಸೂದನಾ! ನಾನು ತಿಳಿಯದೆ ಈ ಪಾಪ ಮಾಡಿರುವೆನು. ನಿಜವಾಗಿ ನಾನು ದೊಡ್ಡ ಪಾಪಿಯಾಗಿದ್ದೇನೆ. ಆದರೆ ನೀನು ಪರಮ ಯಶಸ್ವೀ ಮತ್ತು ನಿರ್ವಿಕಾರನಾಗಿರುವೆ. ನೀನು ದಯಮಾಡಿ ನನ್ನ ಅಪಾರಾಧವನ್ನು ಕ್ಷಮಿಸು. ॥35॥
(ಶ್ಲೋಕ - 36)
ಮೂಲಮ್
ಯಸ್ಯಾನುಸ್ಮರಣಂ ನೃಣಾಮಜ್ಞಾನಧ್ವಾಂತನಾಶನಮ್ ।
ವದಂತಿ ತಸ್ಯ ತೇ ವಿಷ್ಣೋ ಮಯಾಸಾಧು ಕೃತಂ ಪ್ರಭೋ ॥
ಅನುವಾದ
ಸರ್ವವ್ಯಾಪಕ ಸರ್ವಶಕ್ತಿವಂತನಾದ ಪ್ರಭುವೇ! ನಿನ್ನ ಸ್ಮರಣಮಾತ್ರದಿಂದ ಮನುಷ್ಯರ ಅಜ್ಞಾನಾಂಧಕಾರವು ನಾಶವಾಗುತ್ತದೆ ಎಂದು ಮಹಾತ್ಮರು ಹೇಳುತ್ತಾರೆ. ನಾನು ಸ್ವಯಂ ನಿನಗೇ ಅನಿಷ್ಟ ಮಾಡಿದೆ ಇದು ತುಂಬಾ ದುಃಖದ ಮಾತಾಗಿದೆ. ॥36॥
(ಶ್ಲೋಕ - 37)
ಮೂಲಮ್
ತನ್ಮಾಶು ಜಹಿ ವೈಕುಂಠ ಪಾಪ್ಮಾನಂ ಮೃಗಲುಬ್ಧಕಮ್ ।
ಯಥಾ ಪುನರಹಂ ತ್ವೇವಂ ನ ಕುರ್ಯಾಂ ಸದತಿಕ್ರಮಮ್ ॥
ಅನುವಾದ
ವೈಕುಂಠನಾಥಾ! ನಾನು ನಿರಪರಾಧಿಯಾದ ಜಿಂಕೆಗಳನ್ನು ಕೊಲ್ಲುವಂತಹ ಮಹಾಪಾಪಿಯಾಗಿದ್ದೇನೆ. ನೀನು ಈಗಲೇ ನನ್ನನ್ನು ಕೊಂದುಬಿಡು. ಏಕೆಂದರೆ, ಸತ್ತು ಹೋದರೆ ನಾನು ಎಂದೂ ನಿನ್ನಂತಹ ಮಹಾಪುರುಷರಿಗೆ ಅಪರಾಧ ಮಾಡಲಾರೆನು. ॥37॥
(ಶ್ಲೋಕ - 38)
ಮೂಲಮ್
ಯಸ್ಯಾತ್ಮಯೋಗರಚಿತಂ ನ ವಿದುರ್ವಿರಿಂಚೋ
ರುದ್ರಾದಯೋಸ್ಯ ತನಯಾಃ ಪತಯೋ ಗಿರಾಂ ಯೇ ।
ತ್ವನ್ಮಾಯಯಾ ಪಿಹಿತದೃಷ್ಟಯ ಏತದಂಜಃ
ಕಿಂ ತಸ್ಯ ತೇ ವಯಮಸದ್ಗತಯೋ ಗೃಣೀಮಃ ॥
ಅನುವಾದ
ನಿನ್ನ ಯೋಗಮಾಯೆಯಿಂದ ರಚಿತವಾದ ಈ ವಿಶ್ವದ ಕುರಿತು ಬ್ರಹ್ಮರುದ್ರಾದಿಗಳೂ ಹಾಗೂ ವಾಣಿಯ ಅಧಿಷ್ಠಾತಾ ಬೃಹಸ್ಪತಿ ಮುಂತಾದವರೂ ಸರಿಯಾಗಿ ತಿಳಿಯಲಾರರು. ಏಕೆಂದರೆ, ಅವರ ದೃಷ್ಟಿಯು ನಿನ್ನ ಮಾಯೆಯಿಂದ ಮುಚ್ಚಿಹೋಗಿದೆ. ಮತ್ತೆ ನಾವಾದರೋ ಪಾಪಯೋನಿಗಳು. ಅದರ ಕುರಿತು ಏನು ವರ್ಣಿಸ ಬಲ್ಲೆವು? ॥38॥
(ಶ್ಲೋಕ - 39)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಮಾ ಭೈರ್ಜರೇ ತ್ವಮುತ್ತಿಷ್ಠ ಕಾಮ ಏಷ ಕೃತೋ ಹಿ ಮೇ ।
ಯಾಹಿ ತ್ವಂ ಮದನುಜ್ಞಾತಃ ಸ್ವರ್ಗಂ ಸುಕೃತಿನಾಂ ಪದಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಜರಾವ್ಯಾಧನೇ! ಹೆದರಬೇಡ, ಮೇಲೇಳು. ನೀನು ನನಗೆ ಇಷ್ಟವಾದುದನ್ನೇ ಮಾಡಿರುವೆ. ನನ್ನ ಆಜ್ಞೆಯಿಂದ ನೀನು ದೊಡ್ಡ-ದೊಡ್ಡ ಪುಣ್ಯಾತ್ಮರಿಗೆ ದೊರಕುವಂತಹ ಸ್ವರ್ಗಕ್ಕೆ ಹೋಗಿ ವಾಸಿಸು. ॥39॥
(ಶ್ಲೋಕ - 40)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾದಿಷ್ಟೋ ಭಗವತಾ ಕೃಷ್ಣೇನೇಚ್ಛಾಶರೀರಿಣಾ ।
ತ್ರಿಃ ಪರಿಕ್ರಮ್ಯ ತಂ ನತ್ವಾ ವಿಮಾನೇನ ದಿವಂ ಯಯೌ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ತನ್ನ ಇಚ್ಛೆಯಿಂದಲೇ ಶರೀರವನ್ನು ಧರಿಸಿದ್ದನು. ಅವನು ಜರಾವ್ಯಾಧನಿಗೆ ಹೀಗೆ ಅಪ್ಪಣೆ ಮಾಡಿದಾಗ ಅವನು ಭಗವಂತನಿಗೆ ಮೂರು ಪ್ರದಕ್ಷಿಣೆ ಬಂದು, ನಮಸ್ಕರಿಸಿ, ವಿಮಾನವನ್ನು ಹತ್ತಿ ದಿವ್ಯಲೋಕಕ್ಕೆ ಹೊರಟು ಹೋದನು. ॥40॥
(ಶ್ಲೋಕ - 41)
ಮೂಲಮ್
ದಾರುಕಃ ಕೃಷ್ಣಪದವೀಮನ್ವಿಚ್ಛನ್ನಧಿಗಮ್ಯ ತಾಮ್ ।
ವಾಯುಂ ತುಲಸಿಕಾಮೋದಮಾಘ್ರಾಯಾಭಿಮುಖಂ ಯಯೌ ॥
ಅನುವಾದ
ಭಗವಾನ್ ಶ್ರೀಕೃಷ್ಣನ ಸಾರಥಿ ದಾರುಕನು ಅವನನ್ನು ಹುಡುಕುತ್ತಾ, ಅವನು ಧರಿಸಿದ ತುಲಸೀಮಾಲೆಯ ಪರಿಮಳದ ಓಘವನ್ನು ಹಿಡಿದು, ಶ್ರೀಕೃಷ್ಣನಿರುವ ಸ್ಥಳವನ್ನು ಗುರುತಿಸಿ ಅಲ್ಲಿಗೆ ಬಂದು ಸೇರಿದನು. ॥41॥
(ಶ್ಲೋಕ - 42)
ಮೂಲಮ್
ತಂ ತತ್ರ ತಿಗ್ಮದ್ಯುಭಿರಾಯುಧೈರ್ವೃತಂ
ಹ್ಯಶ್ವತ್ಥಮೂಲೇ ಕೃತಕೇತನಂ ಪತಿಮ್ ।
ಸ್ನೇಹಪ್ಲುತಾತ್ಮಾ ನಿಪಪಾತ ಪಾದಯೋಃ
ರಥಾದವಪ್ಲುತ್ಯ ಸಬಾಷ್ಪಲೋಚನಃ ॥
ಅನುವಾದ
ದಾರುಕನು ಅಲ್ಲಿಗೆ ಹೋಗಿ ನೋಡಿದನು - ಭಗವಾನ್ ಶ್ರೀಕೃಷ್ಣನು ಅರಳೀಮರದ ಕೆಳಗೆ ಕುಳಿತಿರುವನು. ಸಹಿಸಲಸಾಧ್ಯವಾದ ತೇಜಸ್ಸಿನಿಂದ ಕೂಡಿದ ಆಯುಧಗಳು ಮೂರ್ತಿಮಂತರಾಗಿ ಅವನ ಸೇವೆಯಲ್ಲಿ ನಿರತವಾಗಿವೆ. ಅವನನ್ನು ನೋಡಿ ದಾರುಕನ ಹೃದಯದಲ್ಲಿ ಪ್ರೇಮದ ನೆರೆಯೇ ಬಂದಂತಾಯಿತು. ಕಣ್ಣುಗಳಿಂದ ಅಶ್ರುಗಳು ಧಾರಾಕಾರವಾಗಿ ಹರಿದವು. ರಥದಿಂದ ಹಾರಿ ಭಗವಂತನ ಚರಣದಲ್ಲಿ ಕುಸಿದು ಬಿದ್ದನು. ॥42॥
(ಶ್ಲೋಕ - 43)
ಮೂಲಮ್
ಅಪಶ್ಯತಸ್ತ್ವಚ್ಚರಣಾಂಬುಜಂ ಪ್ರಭೋ
ದೃಷ್ಟಿಃ ಪ್ರನಷ್ಟಾ ತಮಸಿ ಪ್ರವಿಷ್ಟಾ ।
ದಿಶೋ ನ ಜಾನೇ ನ ಲಭೇ ಚ ಶಾಂತಿಂ
ಯಥಾ ನಿಶಾಯಾಮುಡುಪೇ ಪ್ರನಷ್ಟೇ ॥
ಅನುವಾದ
ದಾರುಕನು ಭಗವಂತನಲ್ಲಿ - ಸ್ವಾಮಿ! ರಾತ್ರಿಯಲ್ಲಿ ಚಂದ್ರನು ಮರೆಯಾದಾಗ ದಿಕ್ಕುಗಳ ಅರಿವು ಆಗದೆ, ಅಂಧಕಾರದಿಂದ ಏನೂ ಕಾಣದಂತೆಯೇ ನಿನ್ನ ಈ ಚರಣ ಕಮಲಗಳನ್ನು ನೋಡದೆ ನನಗೆ ಎಲ್ಲೆಡೆಗಳಲ್ಲಿ ಕತ್ತಲೆಯೇ ಕಂಡು ಬರುತ್ತದೆ. ನನಗೆ ದಿಕ್ಕುಗಳ ಜ್ಞಾನವಿಲ್ಲ, ಹೃದಯದಲ್ಲಿ ಶಾಂತಿಯೂ ಇಲ್ಲ ಎಂದು ಪ್ರಾರ್ಥಿಸಿದನು. ॥43॥
(ಶ್ಲೋಕ - 44)
ಮೂಲಮ್
ಇತಿ ಬ್ರುವತಿ ಸೂತೇ ವೈ ರಥೋ ಗರುಡಲಾಂಛನಃ ।
ಖಮುತ್ಪಪಾತ ರಾಜೇಂದ್ರ ಸಾಶ್ವಧ್ವಜ ಉದೀಕ್ಷತಃ ॥
ಅನುವಾದ
ಪರೀಕ್ಷಿತನೇ! ದಾರುಕನು ಹೀಗೆ ಹೇಳುತ್ತಿರುವಂತೆ ಅವನ ಇದರಿಲ್ಲೇ ಭಗವಂತನ ಗುರುಡ ಧ್ವಜ ರಥವು, ಪತಾಕೆ, ಕುದುರೆಗಳೊಂದಿಗೆ ಆಕಾಶಕ್ಕೆ ಹಾರಿ ಹೋಯಿತು. ॥44॥
(ಶ್ಲೋಕ - 45)
ಮೂಲಮ್
ತಮನ್ವಗಚ್ಛನ್ ದಿವ್ಯಾನಿ ವಿಷ್ಣುಪ್ರಹರಣಾನಿ ಚ ।
ತೇನಾತಿವಿಸ್ಮಿತಾತ್ಮಾನಂ ಸೂತಮಾಹ ಜನಾರ್ದನಃ ॥
ಅನುವಾದ
ಅದರ ಬೆನ್ನಲ್ಲೇ ಭಗವಂತನ ದಿವ್ಯ ಆಯುಧಗಳೂ ಹೊರಟು ಹೋದವು. ಇದೆಲ್ಲವನ್ನು ನೋಡಿದಾಗ ದಾರುಕನಿಗೆ ಆಶ್ಚರ್ಯದ ಸೀಮೆಯೇ ಉಳಿಯಲಿಲ್ಲ. ಆಗ ಭಗವಂತನು ಅವನಲ್ಲಿ ಹೇಳಿದನು. ॥45॥
(ಶ್ಲೋಕ - 46)
ಮೂಲಮ್
ಗಚ್ಛ ದ್ವಾರವತೀಂ ಸೂತ ಜ್ಞಾತೀನಾಂ ನಿಧನಂ ಮಿಥಃ ।
ಸಂಕರ್ಷಣಸ್ಯ ನಿರ್ಯಾಣಂ ಬಂಧುಭ್ಯೋ ಬ್ರೂಹಿ ಮದ್ದಶಾಮ್ ॥
ಅನುವಾದ
ದಾರುಕನೇ! ಈಗ ನೀನು ದ್ವಾರಕೆಗೆ ಹೊರಟುಹೋಗು. ಅಲ್ಲಿ ಯದವಂಶೀಯರ ಪಾರಸ್ಪರಿಕ ಸಂಹಾರ, ಅಣ್ಣ ಬಲರಾಮನ ಪರಮಗತಿ ಮತ್ತು ನನ್ನ ಸ್ವಧಾಮಗಮನದ ವಾರ್ತೆಯನ್ನು ಎಲ್ಲರಿಗೆ ಹೇಳು. ॥46॥
(ಶ್ಲೋಕ - 47)
ಮೂಲಮ್
ದ್ವಾರಕಾಯಾಂ ಚ ನ ಸ್ಥೇಯಂ ಭವದ್ಭಿಶ್ಚ ಸ್ವಬಂಧುಭಿಃ ।
ಮಯಾ ತ್ಯಕ್ತಾಂ ಯದುಪುರೀಂ ಸಮುದ್ರಃ ಪ್ಲಾವಯಿಷ್ಯತಿ ॥
ಅನುವಾದ
ಈಗ ನೀವೆಲ್ಲರೂ ನಿಮ್ಮ-ನಿಮ್ಮ ಪರಿವಾರಗಳೊಂದಿಗೆ ದ್ವಾರಕೆಯಲ್ಲಿ ಇರಬಾರದು. ನಾನು ಇಲ್ಲದಿರುವುದರಿಂದ ಸಮುದ್ರವು ಆ ನಗರಿಯನ್ನು ಮುಳುಗಿಸಿಬಿಡುತ್ತದೆ. ॥47॥
(ಶ್ಲೋಕ - 48)
ಮೂಲಮ್
ಸ್ವಂ ಸ್ವಂ ಪರಿಗ್ರಹಂ ಸರ್ವೇ ಆದಾಯ ಪಿತರೌ ಚ ನಃ ।
ಅರ್ಜುನೇನಾವಿತಾಃ ಸರ್ವೇ ಇಂದ್ರಪ್ರಸ್ಥಂ ಗಮಿಷ್ಯಥ ॥
ಅನುವಾದ
ಎಲ್ಲ ಜನರು ತಮ್ಮ-ತಮ್ಮ ಧನ-ಸಂಪತ್ತು, ಕುಟುಂಬಸಹಿತ, ನನ್ನ ತಂದೆ-ತಾಯಿಯರನ್ನು ಕರಕೊಂಡು ಅರ್ಜುನನ ಸಂರಕ್ಷಣೆಯಲ್ಲಿ ಇಂದ್ರಪ್ರಸ್ಥಕ್ಕೆ ಹೋಗಿರಿ. ॥48॥
(ಶ್ಲೋಕ - 49)
ಮೂಲಮ್
ತ್ವಂ ತು ಮದ್ಧರ್ಮಮಾಸ್ಥಾಯ ಜ್ಞಾನನಿಷ್ಠ ಉಪೇಕ್ಷಕಃ ।
ಮನ್ಮಾಯಾರಚನಾಮೇತಾಂ ವಿಜ್ಞಾಯೋಪಶಮಂ ವ್ರಜ ॥
ಅನುವಾದ
ದಾರುಕನೇ! ನೀನು ನನ್ನ ಮೂಲಕ ಉಪದೇಶಿಸಲ್ಪಟ್ಟ ಭಾಗವತ ಧರ್ಮವನ್ನು ಆಶ್ರಯಿಸು. ಜ್ಞಾನ ನಿಷ್ಠನಾಗಿ, ಎಲ್ಲವುಗಳಿಂದ ನಿರಪೇಕ್ಷನಾಗು. ಈ ದೃಶ್ಯವನ್ನು ನನ್ನ ಮಾಯೆಯ ರಚನೆ ಎಂದು ತಿಳಿದು ಶಾಂತನಾಗು. ॥49॥
(ಶ್ಲೋಕ - 50)
ಮೂಲಮ್
ಇತ್ಯುಕ್ತಸ್ತಂ ಪರಿಕ್ರಮ್ಯ ನಮಸ್ಕೃತ್ಯ ಪುನಃ ಪುನಃ ।
ತತ್ಪಾದೌ ಶೀರ್ಷ್ಣ್ಯುಪಾಧಾಯ ದುರ್ಮನಾಃ ಪ್ರಯಯೌ ಪುರೀಮ್ ॥
ಅನುವಾದ
ಭಗವಂತನ ಈ ಆದೇಶವನ್ನು ಪಡೆದು ದಾರುಕನು ಭಗವಂತನಿಗೆ ಪ್ರದಕ್ಷಿಣೆಮಾಡಿ, ಅವನ ಚರಣಕಮಲಗಳಲ್ಲಿ ತನ್ನ ಶಿರಸ್ಸನ್ನಿಟ್ಟು ಪದೇ-ಪದೇ ನಮಸ್ಕರಿಸಿದನು. ಅನಂತರ ಖಿನ್ನವಾದ ಮನಸ್ಸಿನಿಂದ ದ್ವಾರಕೆಗೆ ಹೊರಟು ಹೋದನು. ॥50॥
ಅನುವಾದ (ಸಮಾಪ್ತಿಃ)
ಮೂವತ್ತನೆಯ ಅಧ್ಯಾಯವು ಮುಗಿಯಿತು. ॥30॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ತ್ರಿಂಶೋಽಧ್ಯಾಯಃ ॥30॥