[ಇಪ್ಪತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಭಾಗವತಧರ್ಮಗಳ ನಿರೂಪಣೆ ಮತ್ತು ಉದ್ಧವನು ಬದರಿಕಾಶ್ರಮಕ್ಕೆ ಹೋದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಸುದುಶ್ಚರಾಮಿಮಾಂ ಮನ್ಯೇ ಯೋಗಚರ್ಯಾಮನಾತ್ಮನಃ ।
ಯಥಾಂಜಸಾ ಪುಮಾನ್ ಸಿದ್ಧ್ಯೇತ್ ತನ್ಮೇ ಬ್ರೂಹ್ಯಂಜಸಾಚ್ಯುತ ॥
ಅನುವಾದ
ಉದ್ಧವನು ಕೇಳಿದನು — ಅಚ್ಯುತಾ! ತನ್ನ ಮನಸ್ಸನ್ನು ವಶಪಡಿಸಿಕೊಳ್ಳಲಾರದವನಿಗೆ ನೀನು ಅರುಹಿದ ಈ ಯೋಗ ಸಾಧನೆಯು ಬಹಳ ಕಠಿಣವೆಂದೇ ನಾನು ತಿಳಿಯುತ್ತೇನೆ. ಆದ್ದರಿಂದ ಈಗ ನೀನು-ಮನುಷ್ಯನು ಆಯಾಸವಿಲ್ಲದೆ ಪರಮಪದವನ್ನು ಪಡೆಯುವಂತಹ ಸರಳ-ಸುಲಭ ಸಾಧನೆಯನ್ನು ತಿಳಿಸುವವನಾಗು. ॥1॥
(ಶ್ಲೋಕ - 2)
ಮೂಲಮ್
ಪ್ರಾಯಶಃ ಪುಂಡರೀಕಾಕ್ಷ ಯುಂಜಂತೋ ಯೋಗಿನೋ ಮನಃ ।
ವಿಷೀದಂತ್ಯಸಮಾಧಾನಾನ್ ಮನೋನಿಗ್ರಹಕರ್ಶಿತಾಃ ॥
ಅನುವಾದ
ಕಮಲನಯನಾ! ನಿನ್ನನ್ನು ಪಡೆಯುವುದಕ್ಕಾಗಿ ಹೆಚ್ಚಿನ ಯೋಗಿಗಳು ತಮ್ಮ ಮನಸ್ಸನ್ನು ಏಕಾಗ್ರಮಾಡಲು ತೊಡಗಿದಾಗ, ಅವರು ಪದೇ-ಪದೇ ಪ್ರಯತ್ನಮಾಡಿದರೂ ಮನಸ್ಸನ್ನು ವಶಪಡಿಸಲು ಸಲರಾಗುವುದಿಲ್ಲ. ಕೊನೆಗೆ ಸೋತು ಹೋಗುತ್ತಾರೆ. ಈ ಪ್ರಕಾರ ನಿನ್ನ ಪ್ರಾಪ್ತಿಯನ್ನು ಮಾಡಿ ಕೊಳ್ಳದ ಕಾರಣ ದುಃಖವನ್ನು ಭೋಗಿಸುತ್ತಾ ಇರುತ್ತಾರೆ. ಇದು ನಿನಗೆ ತಿಳಿದೇ ಇದೆ. ಇಂತಹ ದುಃಖಗಳಿಂದ ಮುಕ್ತವಾಗಲು ಯಾವ ಉಪಾಯವಿದೆ? ಎಂಬುದನ್ನು ತಿಳಿಸುವ ಕೃಪೆ ಮಾಡಬೇಕು. ॥2॥
(ಶ್ಲೋಕ - 3)
ಮೂಲಮ್
ಅಥಾತ ಆನಂದದುಘಂ ಪದಾಂಬುಜಂ
ಹಂಸಾಃ ಶ್ರಯೇರನ್ನರವಿಂದಲೋಚನ ।
ಸುಖಂ ನು ವಿಶ್ವೇಶ್ವರ ಯೋಗಕರ್ಮಭಿ-
ಸ್ತ್ವನ್ಮಾಯಯಾಮೀ ವಿಹತಾ ನ ಮಾನಿನಃ ॥
ಅನುವಾದ
ಓ ಕಮಲನಯನಾ! ಓ ವಿಶ್ವೇಶ್ವರಾ! ನಿನ್ನ ಚರಣ ಕಮಲಗಳು ಆನಂದವನ್ನು ವರ್ಷಿಸುವಂತಹವುಗಳು. ನಿನ್ನ ಅನನ್ಯ ಪ್ರೇಮೀ ಭಕ್ತರು ಆನಂದದಿಂದ ಈ ಚರಣಕಮಲಗಳಲ್ಲಿ ಶರಣಾಗುತ್ತಾರೆ. ಆದರೆ ನಿನ್ನ ಮಾಯೆಯಿಂದ ಮಣ್ಣುಗೂಡಿದ ಬುದ್ಧಿಯುಳ್ಳ ಜನರು ಯೋಗ ಮತ್ತು ಕರ್ಮಗಳಿಂದ ತಮ್ಮನ್ನು ಶ್ರೇಷ್ಠರೆಂದು ತಿಳಿದುಕೊಂಡು ಇವನ್ನು ಆಶ್ರಯಿಸುವುದಿಲ್ಲ. ॥3॥
(ಶ್ಲೋಕ - 4)
ಮೂಲಮ್
ಕಿಂ ಚಿತ್ರಮಚ್ಯುತ ತವೈತದಶೇಷಬಂಧೋ
ದಾಸೇಷ್ವನನ್ಯಶರಣೇಷು ಯದಾತ್ಮಸಾತ್ತ್ವಮ್ ।
ಯೋರೋಚಯತ್ಸಹ ಮೃಗೈಃ ಸ್ವಯಮೀಶ್ವರಾಣಾಂ
ಶ್ರೀಮತ್ಕಿರೀಟತಟಪೀಡಿತಪಾದಪೀಠಃ ॥
ಅನುವಾದ
ಓ ಅಚ್ಯುತಾ! ನೀನು ಸರ್ವಜಗತ್ತಿನ ಹಿತೈಷಿ, ಸುಹೃದನಾಗಿರುವೆ. ನೀನು ನಿನ್ನ ಅನನ್ಯ ಶರಣಾಗತ ಭಕ್ತರನ್ನು ಆತ್ಮಸಾತ್ ಮಾಡಿಕೊಳ್ಳುವೆ. ಅವರಿಗೆ ನಿನ್ನ ಸ್ವರೂಪವನ್ನೇ ಕೊಟ್ಟುಬಿಡುವೆ. ಎಲ್ಲಿಯವರೆಗೆಂದರೆ ತೊಂಡರಿಗೆ ತೊಂಡನಾಗುವೆ. (ಬಲಿಯ ಭಕ್ತಿಗೊಲಿದು ಅವನ ದ್ವಾರ ಪಾಲನಾದೆ, ನರಸಿಂಹ ಮೆಹತಾಗೆ ನೀನು ಏನೇನು ಮಾಡ ಲಿಲ್ಲ? ಇತ್ಯಾದಿ) ನೀನು ಎಲ್ಲ ಲೋಕ ಪಾಲರ ಅಧೀಶ್ವರನಾಗಿರುವೆ. ಬ್ರಹ್ಮಾದಿ ಲೋಕೇಶ್ವರರು ಸದಾಕಾಲ ನಿನಗೆ ಭಕ್ತಿಪೂರ್ವಕ ನಮಸ್ಕರಿಸುತ್ತಿರುತ್ತಾರೆ. ಅವರು ನಿನ್ನ ಚರಣಕಮಲಗಳನ್ನಿಡುವ ಪೀಠಕ್ಕೆ ತಮ್ಮ ಕಿರೀಟಾಗ್ರದಿಂದ ಶ್ರದ್ಧಾ ಪ್ರೇಮಸಹಿತ ಸಾಷ್ಟಾಂಗ ನಮಸ್ಕಾರ ಸಲ್ಲಿಸುತ್ತಾರೆ. ಇಷ್ಟು ಮಹಿಮಾಯುಕ್ತನಾಗಿದ್ದರೂ ನೀನು ರಾಮಾವತಾರದಲ್ಲಿ ಪ್ರೇಮಕ್ಕೆ ಪರವಶನಾಗಿ ವಾನರರೊಂದಿಗೆ ಮಿತ್ರತೆಯಿಂದ ವ್ಯವಹರಿಸಿದೆ. ಇದೇನೋ ನಿನಗಾಗಿ ಆಶ್ಚರ್ಯದ ಮಾತಲ್ಲ. ಏಕೆಂದರೆ ನಿನಗಾದರೋ ಭಕ್ತಿಯೇ ಪ್ರಿಯವಾಗಿದೆ. ॥4॥
(ಶ್ಲೋಕ - 5)
ಮೂಲಮ್
ತಂ ತ್ವಾಖಿಲಾತ್ಮದಯಿತೇಶ್ವರಮಾಶ್ರಿತಾನಾಂ
ಸರ್ವಾರ್ಥದಂ ಸ್ವಕೃತವಿದ್ವಿಸೃಜೇತ ಕೋ ನು ।
ಕೋವಾ ಭಜೇತ್ಕಿಮಪಿ ವಿಸ್ಮೃತಯೇನು ಭೂತ್ಯೈ
ಕಿಂ ವಾ ಭವೇನ್ನ ತವ ಪಾದರಜೋಜುಷಾಂ ನಃ ॥
ಅನುವಾದ
ಓ ಸ್ವಾಮಿ! ನೀನು ಎಲ್ಲರ ಪ್ರಿಯತಮ ಪ್ರಭು ಮತ್ತು ಆತ್ಮಾ ಆಗಿರುವೆ. ನೀನು ನಿನ್ನ ಅನನ್ಯ ಶರಣಾಗತರಿಗೆ ಎಲ್ಲವನ್ನೂ ಕೊಟ್ಟುಬಿಡುವೆ. ನೀನು ನಿನ್ನ ಭಕ್ತರಿಗಾಗಿ ಏನೇನು ಅದ್ಭುತಕಾರ್ಯ ಮಾಡಿರುವೆಯೋ, ಅವನ್ನು ತಿಳಿದಿರುವವರು ಯಾವುದೇ ಭೌತಿಕ ಸುಖಕ್ಕಾಗಿ ಯಾರು ನಿನ್ನ ಉಪಾಸನೆ ಮಾಡುವರು? ಏಕೆಂದರೆ, ಈ ಭೌತಿಕ ಸುಖಗಳಾದರೋ ನಿನ್ನ ವಿಸ್ಮೃತಿಯಲ್ಲಿ ಕೆಡಹುವಂತಹವುಗಳು. ನಾವಾದರೋ ನಿನ್ನ ಚರಣಕಮಲ ರಜದ ಅನನ್ಯ ಉಪಾಸಕರಾಗಿದ್ದೇವೆ. ಆದ್ದರಿಂದ ನಮಗಾಗಿ ದುರ್ಲಭವೇನಿದೆ? ॥5॥
(ಶ್ಲೋಕ - 6)
ಮೂಲಮ್
ನೈವೋಪಯಂತ್ಯಪಚಿತಿಂ ಕವಯಸ್ತವೇಶ
ಬ್ರಹ್ಮಾಯುಷಾಪಿ ಕೃತಮೃದ್ಧಮುದಃ ಸ್ಮರಂತಃ ।
ಯೋಂತರ್ಬಹಿಸ್ತನುಭೃತಾಮಶುಭಂ ವಿಧುನ್ವ-
ನ್ನಾಚಾರ್ಯಚೈತ್ಯವಪುಷಾ ಸ್ವಗತಿಂ ವ್ಯನಕ್ತಿ ॥
ಅನುವಾದ
ಓ ಜಗದೀಶಾ! ನೀನು ಮಾಡಿರುವ ಉಪಕಾರಗಳೂ ಪದೇ-ಪದೇ ನಮ್ಮ ಮನಸ್ಸಿನಲ್ಲಿ ಸ್ಮರಣೆಗೆ ಬರುತ್ತವೆ. ಈ ದೇವದುರ್ಲಭವಾದ ಮನುಷ್ಯಶರೀರವು ಕೇವಲ ನಿನ್ನ ಕೃಪೆಯಿಂದಲೇ ದೊರೆತಿದೆ. ನಿನ್ನ ಈ ಅಪಾರ ಅನುಕಂಪವನ್ನು ಮೇಲಿಂದಮೇಲೆ ನೆನೆಯುತ್ತಿರುವಾಗ ನಮ್ಮ ಹೃದಯದಲ್ಲಿ ಪರಮಾನಂದದ ನೆರೆಯೇ ಬರುತ್ತದೆ. ನಿನ್ನ ಕೃಪೆಯು ಊಹಿಸಲೂ ಸಾಧ್ಯವಾಗದಷ್ಟು ಅಪಾರವಾಗಿದೆ. ಒಂದೊಮ್ಮೆ ಬ್ರಹ್ಮನ ಆಯುಸ್ಸೇ ಸಿಕ್ಕಿದರೂ ನಾವು ನಿನ್ನ ಉಪಕಾರದ ಋಣವನ್ನು ತೀರಿಸಲಾರೆವು. ಮನುಷ್ಯನ ಹೊರಗೆ-ಒಳಗೆ ಇರುವ ಅಶುಭಗಳನ್ನು ನಿರ್ಮೂಲನ ಗೊಳಿಸಲು ಹೊರಗಿನಿಂದ ಸದ್ಗುರುರೂಪದಿಂದ ನೀನೇ ಜ್ಞಾನೋಪದೇಶವನ್ನು ಕೊಡುತ್ತಿರುವೆ. ಅಂತರ್ಯಾಮಿಯಾಗಿ ಅಂತರಾತ್ಮರೂಪದಿಂದ ಪ್ರಕಟನಾಗಿ ಅಜ್ಞಾನವನ್ನೂ ನೀನೇ ಕಳೆಯುವೆ. ॥6॥
(ಶ್ಲೋಕ - 7)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುದ್ಧವೇನಾತ್ಯನುರಕ್ತಚೇತಸಾ
ಪೃಷ್ಟೋ ಜಗತ್ಕ್ರೀಡನಕಃ ಸ್ವಶಕ್ತಿಭಿಃ ।
ಗೃಹೀತಮೂರ್ತಿತ್ರಯ ಈಶ್ವರೇಶ್ವರೋ
ಜಗಾದ ಸಪ್ರೇಮ ಮನೋಹರಸ್ಮಿತಃ ॥
ಅನುವಾದ
ಶ್ರೀಶುಕಯೋಗಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಬ್ರಹ್ಮಾದಿದೇವತೆಗಳಿಗೂ ಒಡೆಯನಾಗಿದ್ದಾನೆ. ಅವನೇ ತನ್ನ ಶಕ್ತಿಯಾದ ತ್ರಿಗುಣಗಳಿಂದ ಬ್ರಹ್ಮಾ, ವಿಷ್ಣು, ಮಹೇಶ್ವರ ರೂಪಗಳನ್ನು ಧರಿಸುತ್ತಾನೆ. ಈ ಜಗತ್ತು ಅವನ ಆಟ (ಲೀಲೆ) ಆಗಿದೆ. ಉದ್ಧವನು ಅನುರಾಗತುಂಬಿದ ಚಿತ್ತದಿಂದ ಹೀಗೆ ಪ್ರಶ್ನಿಸಿದಾಗ ಅವನು ಮಂದ-ಮಂದವಾಗಿ ಮುಗುಳ್ನಕ್ಕು ಬಹು ಪ್ರೇಮದಿಂದ ಹೇಳಲು ಪ್ರಾರಂಭಿಸಿದನು ॥7॥
(ಶ್ಲೋಕ - 8)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಹಂತ ತೇ ಕಥಯಿಷ್ಯಾಮಿ ಮಮ ಧರ್ಮಾನ್ ಸುಮಂಗಲಾನ್ ।
ಯಾನ್ ಛ್ರದ್ಧಯಾಚರನ್ಮರ್ತ್ಯೋ ಮೃತ್ಯುಂ ಜಯತಿ ದುರ್ಜಯಮ್ ॥
ಅನುವಾದ
ಶ್ರೀಭಗವಂತನು ಹೇಳಿದನು — ಪ್ರಿಯ ಉದ್ಧವನೇ! ನಿನ್ನ ಅನುರಾಗತುಂಬಿದ ವಾಣಿಯಿಂದ ನನಗೆ ತುಂಬಾ ಆನಂದವಾಯಿತು. ನಾನು ನಿನಗೆ ನನ್ನ ಮಂಗಲಮಯ ಭಾಗವತಧರ್ಮಗಳನ್ನು ಅರುಹುವೆನು. ಇವನ್ನು ಶ್ರದ್ಧೆ ಯಿಂದ ಆಚರಿಸಿದ ಮನುಷ್ಯನು ಸಂಸಾರರೂಪೀ ದುರ್ಜಯ ಮೃತ್ಯುವನ್ನು ಆಯಾಸವಿಲ್ಲದೆ ಗೆಲ್ಲಬಲ್ಲನು. ॥8॥
(ಶ್ಲೋಕ - 9)
ಮೂಲಮ್
ಕುರ್ಯಾತ್ ಸರ್ವಾಣಿ ಕರ್ಮಾಣಿ ಮದರ್ಥಂ ಶನಕೈಃ ಸ್ಮರನ್ ।
ಮಯ್ಯರ್ಪಿತಮನಶ್ಚಿತ್ತೋ ಮದ್ಧರ್ಮಾತ್ಮಮನೋರತಿಃ ॥
ಅನುವಾದ
ಉದ್ಧವನೇ! ನನ್ನ ಭಕ್ತನು ತನ್ನ ಎಲ್ಲ ಕರ್ಮಗಳನ್ನು ನನಗಾಗಿಯೇ ಮಾಡಬೇಕು. ಅವನ್ನು ಮಾಡುತ್ತಿರುವಾಗ ನನ್ನ ಸ್ಮರಣೆಯ ಅಭ್ಯಾಸವನ್ನು ಕ್ರಮವಾಗಿ ಬೆಳೆಸಬೇಕು. ಕೆಲವೇ ದಿನಗಳಲ್ಲಿ ಅವನ ಮನಸ್ಸು-ಚಿತ್ತಗಳು ನನ್ನಲ್ಲಿ ಸಮರ್ಪಿತವಾಗುತ್ತವೆ. ಅವನ ಮನ ಆತ್ಮಗಳು ನನ್ನ ಧರ್ಮದಲ್ಲೇ ರಮಿಸಿ ಹೋಗುವವು. ॥9॥
(ಶ್ಲೋಕ - 10)
ಮೂಲಮ್
ದೇಶಾನ್ಪುಣ್ಯಾನಾಶ್ರಯೇತ ಮದ್ಭಕ್ತೈಃ ಸಾಧುಭಿಃ ಶ್ರಿತಾನ್ ।
ದೇವಾಸುರಮನುಷ್ಯೇಷು ಮದ್ಭಕ್ತಾಚರಿತಾನಿ ಚ ॥
ಅನುವಾದ
ನನ್ನ ಸಾಧು ಭಕ್ತರು ವಾಸಿಸಿದ ಸ್ಥಾನಗಳಲ್ಲಿ ವಾಸಮಾಡಬೇಕು. ನನ್ನ ಅನನ್ಯ ಭಕ್ತರಾದ ದೇವತೆಗಳು, ಅಸುರರು, ಮನುಷ್ಯರು ಆಚರಿಸಿದ ಆಚರಣೆಗಳನ್ನು ಅನುಸರಿಸಬೇಕು. ॥10॥
(ಶ್ಲೋಕ - 11)
ಮೂಲಮ್
ಪೃಥಕ್ ಸತ್ರೇಣ ವಾ ಮಹ್ಯಂ ಪರ್ವಯಾತ್ರಾಮಹೋತ್ಸವಾನ್ ।
ಕಾರಯೇದ್ಗೀತನೃತ್ಯಾದ್ಯೈರ್ಮಹಾರಾಜವಿಭೂತಿಭಿಃ ॥
ಅನುವಾದ
ಪರ್ವದಿನಗಳಲ್ಲಿ (ರಾಮನವಮಿ, ಕೃಷ್ಣಾಷ್ಟಮಿ) ಎಲ್ಲ ರೊಂದಿಗೆ ಸೇರಿ ಅಥವಾ ಒಂಟಿಯಾಗಿ ಮಹಾ ರಾಜೋಚಿತ ವೈಭವದಿಂದ ನೃತ್ಯ, ಗಾಯನ, ವಾದ್ಯ ಮುಂತಾದವುಗಳಿಂದ ನನ್ನ ಉತ್ಸವಗಳನ್ನು ನಡೆಸಬೇಕು. ॥11॥
(ಶ್ಲೋಕ - 12)
ಮೂಲಮ್
ಮಾಮೇವ ಸರ್ವಭೂತೇಷು ಬಹಿರಂತರಪಾವೃತಮ್ ।
ಈಕ್ಷೇತಾತ್ಮನಿ ಚಾತ್ಮಾನಂ ಯಥಾ ಖಮಮಲಾಶಯಃ ॥
ಅನುವಾದ
ಶುದ್ಧಾಂತಃಕರಣರಾದವರು ಆಕಾಶದಂತೆ ಒಳ-ಹೊರಗೆ ಪರಿಪೂರ್ಣ ಮತ್ತು ನಿರಾವರಣ ಪರಮಾತ್ಮನಾದ ನನ್ನನ್ನೇ ಸಮಸ್ತ ಪ್ರಾಣಿಗಳಲ್ಲಿ ಹಾಗೂ ತನ್ನ ಹೃದಯದಲ್ಲಿ ಸ್ಥಿತನಾಗಿದ್ದಾನೆ ಎಂದು ನೋಡಬೇಕು. ॥12॥
(ಶ್ಲೋಕ - 13)
ಮೂಲಮ್
ಇತಿ ಸರ್ವಾಣಿ ಭೂತಾನಿ ಮದ್ಭಾವೇನ ಮಹಾದ್ಯುತೇ ।
ಸಭಾಜಯನ್ಮನ್ಯಮಾನೋ ಜ್ಞಾನಂ ಕೇವಲಮಾಶ್ರಿತಃ ॥
(ಶ್ಲೋಕ - 14)
ಮೂಲಮ್
ಬ್ರಾಹ್ಮಣೇ ಪುಲ್ಕಸೇ ಸ್ತೇನೇ ಬ್ರಹ್ಮಣ್ಯೇರ್ಕೇ ಸ್ಫುಲಿಂಗಕೇ ।
ಅಕ್ರೂರೇ ಕ್ರೂರಕೇ ಚೈವ ಸಮದೃಕ್ ಪಂಡಿತೋ ಮತಃ ॥
ಅನುವಾದ
ನಿರ್ಮಲ ಬುದ್ಧಿಯುಳ್ಳ ಉದ್ಧವನೇ! ಯಾವ ಸಾಧಕನು ಕೇವಲ ಈ ಜ್ಞಾನದೃಷ್ಟಿಯನ್ನು ಆಶ್ರಯಿಸಿ ಸಮಸ್ತ ಪ್ರಾಣಿ-ಪದಾರ್ಥಗಳಲ್ಲಿ ನನ್ನನ್ನು ದರ್ಶಿಸುತ್ತಾನೋ, ಅವನ್ನು ನನ್ನದೇ ಸ್ವರೂಪವೆಂದು ತಿಳಿದು ಅವುಗಳನ್ನು ಸತ್ಕರಿಸುತ್ತಾನೋ, ಬ್ರಾಹ್ಮಣ ಮತ್ತು ಚಾಂಡಾಲನಲ್ಲಿ, ಕಳ್ಳ ಹಾಗೂ ಬ್ರಾಹ್ಮಣ-ಭಕ್ತರಲ್ಲಿ, ಸೂರ್ಯ ಮತ್ತು ಬೆಂಕಿಯ ಕಿಡಿಯಲ್ಲಿ, ಕೃಪಾಳು ಹಾಗೂ ಕ್ರೂರನಲ್ಲಿ ಸರ್ವತ್ರ ಸಮಾನದೃಷ್ಟಿಯನ್ನು ಇರಿಸುತ್ತಾನೋ, ಅವನೇ ನಿಜವಾದ ಜ್ಞಾನಿ ಎಂದು ತಿಳಿಯಬೇಕು. ॥13-14॥
(ಶ್ಲೋಕ - 15)
ಮೂಲಮ್
ನರೇಷ್ವಭೀಕ್ಷ್ಣಂ ಮದ್ಭಾವಂ ಪುಂಸೋ ಭಾವಯತೋಚಿರಾತ್ ।
ಸ್ಪರ್ಧಾಸೂಯಾತಿರಸ್ಕಾರಾಃ ಸಾಹಂಕಾರಾ ವಿಯಂತಿ ಹಿ ॥
ಅನುವಾದ
ಹೀಗೆ ನಿರಂತರ ಎಲ್ಲ ನರ-ನಾರಿಯರಲ್ಲಿ ನನ್ನ ಭಾವನೆಯನ್ನೇ ಇರಿಸಿದಾಗ ಸ್ವಲ್ಪ ದಿನಗಳಲ್ಲೇ ಸಾಧಕನ ಚಿತ್ತದಿಂದ ಸ್ಪರ್ಧೆ, ಈರ್ಷೆ, ತಿರಸ್ಕಾರ, ಅಹಂಕಾರ ಮುಂತಾದ ದೋಷಗಳು ದೂರವಾಗುತ್ತವೆ. ॥15॥
(ಶ್ಲೋಕ - 16)
ಮೂಲಮ್
ವಿಸೃಜ್ಯ ಸ್ಮಯಮಾನಾನ್ ಸ್ವಾನ್ ದೃಶಂ ವ್ರೀಡಾಂ ಚ ದೈಹಿಕೀಮ್ ।
ಪ್ರಣಮೇದ್ದಂಡವದ್ಭೂಮಾವಾಶ್ವಚಾಂಡಾಲಗೋಖರಮ್ ॥
ಅನುವಾದ
ತನ್ನ ಜನರೇ ಅಪಹಾಸ್ಯಮಾಡಿದರೂ ಅದನ್ನು ಪರಿಗಣಿಸ ಬಾರದು. ಲೋಕ-ಲಜ್ಜೆಯನ್ನು ಬಿಟ್ಟು, ನಾಯಿ, ಚಾಂಡಾಲ, ಹಸು, ಕತ್ತೆ ಹಾಗೂ ತನ್ನಲ್ಲಿಯೂ ಕೂಡ ದೈಹಿಕದೃಷ್ಟಿಯನ್ನು ತೊರೆದು ಎಲ್ಲದರಲ್ಲಿ ಓರ್ವ ಪರಮಾತ್ಮನೇ ವಿರಾಜಮಾನನಾಗಿದ್ದಾನೆ ಎಂಬ ಭಾವನೆಯಿಂದ ಎಲ್ಲರಿಗೆ ಸಾಷ್ಟಾಂಗ ನಮಸ್ಕಾರ ಮಾಡಬೇಕು. ॥16॥
(ಶ್ಲೋಕ - 17)
ಮೂಲಮ್
ಯಾವತ್ಸರ್ವೇಷು ಭೂತೇಷು ಮದ್ಭಾವೋ ನೋಪಜಾಯತೇ ।
ತಾವದೇವಮುಪಾಸೀತ ವಾಙ್ಮನಃಕಾಯವೃತ್ತಿಭಿಃ ॥
ಅನುವಾದ
ಸಮಸ್ತ ಪ್ರಾಣಿಗಳಲ್ಲಿ ನನ್ನ ಭಾವನೆ-ಭಗವದ್ಭಾವನೆ ಉಂಟಾಗುವ ತನಕ ಈ ಪ್ರಕಾರದಿಂದ ಮನಸ್ಸು, ವಾಣೀ, ಶರೀರದ ಎಲ್ಲ ಸಂಕಲ್ಪ ಮತ್ತು ಕರ್ಮಗಳ ಮೂಲಕ ನನ್ನ ಉಪಾಸನೆಮಾಡುತ್ತಾ ಇರಬೇಕು. ॥17॥
(ಶ್ಲೋಕ - 18)
ಮೂಲಮ್
ಸರ್ವಂ ಬ್ರಹ್ಮಾತ್ಮಕಂ ತಸ್ಯ ವಿದ್ಯಯಾಏತ್ಮಮನೀಷಯಾ ।
ಪರಿಪಶ್ಯನ್ನುಪರಮೇತ್ಸರ್ವತೋ ಮುಕ್ತಸಂಶಯಃ ॥
ಅನುವಾದ
ಉದ್ಧವನೇ! ಈ ಪ್ರಕಾರ ಸರ್ವತ್ರ ಆತ್ಮಬುದ್ಧಿ-ಬ್ರಹ್ಮಬುದ್ಧಿಯ ಅಭ್ಯಾಸ ಮಾಡಿದಾಗ ಕೆಲವೇ ದಿನಗಳಲ್ಲಿ ಅವನಿಗೆ ಜ್ಞಾನವುಂಟಾಗಿ ಎಲ್ಲವೂ ಬ್ರಹ್ಮ ಸ್ವರೂಪವಾಗಿ ಕಂಡುಬರಲು ತೊಡಗುತ್ತದೆ. ಇಂತಹ ದೃಷ್ಟಿ ಉಂಟಾದಮೇಲೆ ಎಲ್ಲ ಸಂಶಯಗಳು ತಾನಾಗಿಯೇ ನಿವೃತ್ತವಾಗುತ್ತವೆ. ಹೀಗೆ ಅವನು ನನ್ನ ಸಾಕ್ಷಾತ್ಕಾರಪಡೆದು ಪ್ರಪಂಚದಿಂದ ಉಪರಾಮನಾಗುತ್ತಾನೆ. ॥18॥
(ಶ್ಲೋಕ - 19)
ಮೂಲಮ್
ಅಯಂ ಹಿ ಸರ್ವಕಲ್ಪಾನಾಂ ಸಧ್ರೀಚೀನೋ ಮತೋ ಮಮ ।
ಮದ್ಭಾವಃ ಸರ್ವಭೂತೇಷು ಮನೋವಾಕ್ಕಾಯವೃತ್ತಿಭಿಃ ॥
ಅನುವಾದ
ನನ್ನ ಪ್ರಾಪ್ತಿಯ ಸಾಧನೆಗಳಲ್ಲಿ ಸಮಸ್ತ ಪ್ರಾಣಿ-ಪದಾರ್ಥಗಳಲ್ಲಿ ಮನ-ವಾಣಿ-ಶರೀರದ ಸಮಸ್ತ ವೃತ್ತಿಗಳಿಂದ ನನ್ನನ್ನೇ ಭಾವಿಸುವುದೇ ಎಲ್ಲಕ್ಕಿಂತ ಶ್ರೇಷ್ಠ ಸಾಧನೆಯಾಗಿದೆ. ॥19॥
(ಶ್ಲೋಕ - 20)
ಮೂಲಮ್
ನ ಹ್ಯಂಗೋಪಕ್ರಮೇ ಧ್ವಂಸೋ ಮದ್ಧರ್ಮಸ್ಯೋದ್ಧವಾಣ್ವಪಿ ।
ಮಯಾ ವ್ಯವಸಿತಃ ಸಮ್ಯಙ್ನಿರ್ಗುಣತ್ವಾದನಾಶಿಷಃ ॥
ಅನುವಾದ
ಉದ್ಧವನೇ! ಇದೇ ನನ್ನ ಭಾಗವತಧರ್ಮ ವಾಗಿದೆ. ಇದನ್ನು ಒಮ್ಮೆ ಪ್ರಾರಂಭಿಸಿದ ಬಳಿಕ ಮತ್ತೆ ಯಾವುದೇ ವಿಘ್ನಬಾಧೆಗಳಿಂದ ಇದರಲ್ಲಿ ಕಿಂಚಿತ್ತಾದರೂ ಅಂತರ ಬೀಳುವುದಿಲ್ಲ,. ಏಕೆಂದರೆ ಈ ಧರ್ಮವು ನಿಷ್ಕಾಮ ವಾಗಿದೆ ಮತ್ತು ಇದು ನಿರ್ಗುಣವಾದ್ದರಿಂದ ಸರ್ವೋತ್ತಮವೆಂದು ಸ್ವತಃ ನಾನೇ ನಿಶ್ಚಯಿಸಿರುವೆನು. ॥20॥
(ಶ್ಲೋಕ - 21)
ಮೂಲಮ್
ಯೋ ಯೋ ಮಯಿ ಪರೇ ಧರ್ಮಃ ಕಲ್ಪ್ಯತೇ ನಿಷ್ಫಲಾಯ ಚೇತ್ ।
ತದಾಯಾಸೋ ನಿರರ್ಥಃ ಸ್ಯಾದ್ ಭಯಾದೇರಿವ ಸತ್ತಮ ॥
ಅನುವಾದ
ಈ ಧರ್ಮದ ಸಾಧಕನು ಭಯ-ಶೋಕಾದಿ ಅವಸ್ಥೆಗಳಲ್ಲಿ ಆಗುವ ಭಾವನೆಯನ್ನು ಮತ್ತು ಅಳುವುದು, ಬಡಬಡಿಸು ವುದು, ಓಡುವುದು ಮುಂತಾದ ನಿರರ್ಥಕ ಕರ್ಮಗಳನ್ನೂ, ನಿಷ್ಕಾಮ ಭಾವದಿಂದ ನನಗೆ ಅರ್ಪಿಸಿದರೆ, ಅವುಗಳು ಕೂಡ ನನಗೆ ಅರ್ಪಿಸಿದ ಕಾರಣ ಧರ್ಮಗಳಾಗುವಷ್ಟು ಈ ಭಾಗವತ ಧರ್ಮವು ಸರಳ ಸಾಧನೆಯಾಗಿದೆ. ॥21॥
(ಶ್ಲೋಕ - 22)
ಮೂಲಮ್
ಏಷಾ ಬುದ್ಧಿಮತಾಂ ಬುದ್ಧಿರ್ಮನೀಷಾ ಚ ಮನೀಷಿಣಾಮ್ ।
ಯತ್ಸತ್ಯಮನೃತೇನೇಹ ಮರ್ತ್ಯೇನಾಪ್ನೋತಿ ಮಾಮೃತಮ್ ॥
ಅನುವಾದ
ವಿನಾಶಿಯೂ, ಅಸತ್ಯವೂ ಆದ ಈ ಶರೀರದ ಮೂಲಕವೇ ಅಮೃತಸ್ವರೂಪನೂ, ಸತ್ಯ ಸ್ವರೂಪನೂ ಆದ ಪರಮಾತ್ಮನಾದ ನನ್ನನ್ನು ಪಡೆದುಕೊಳ್ಳುವುದೇ ಬುದ್ಧಿವಂತರಲ್ಲಿರುವ ವಿವೇಕ ಮತ್ತು ಆತ್ಮಜ್ಞಾನಿಗಳ ಜ್ಞಾನವಾಗಿದೆ. ॥22॥
(ಶ್ಲೋಕ - 23)
ಮೂಲಮ್
ಏಷ ತೇಭಿಹಿತಃ ಕೃತ್ಸ್ನೋ ಬ್ರಹ್ಮವಾದಸ್ಯ ಸಂಗ್ರಹಃ ।
ಸಮಾಸವ್ಯಾಸವಿಧಿನಾ ದೇವಾನಾಮಪಿ ದುರ್ಗಮಃ ॥
ಅನುವಾದ
ಉದ್ಧವನೇ! ಸಮಸ್ತ ಬ್ರಹ್ಮವಿದ್ಯೆಯ ಈ ರಹಸ್ಯವನ್ನು ನಾನು ನಿನಗೆ ಸಂಕ್ಷೇಪವಾಗಿ ಮತ್ತು ವಿಸ್ತಾರವಾಗಿ ತಿಳಿಸಿರುವೆನು. ಈ ರಹಸ್ಯವನ್ನು ತಿಳಿಯುವುದು ದೇವತೆಗಳಿಗೂ ಅತ್ಯಂತ ಕಠಿಣವಾಗಿದೆ. ॥23॥
(ಶ್ಲೋಕ - 24)
ಮೂಲಮ್
ಅಭೀಕ್ಷ್ಣಶಸ್ತೇ ಗದಿತಂ ಜ್ಞಾನಂ ವಿಸ್ಪಷ್ಟಯುಕ್ತಿಮತ್ ।
ಏತದ್ವಿಜ್ಞಾಯ ಮುಚ್ಯೇತ ಪುರುಷೋ ನಷ್ಟಸಂಶಯಃ ॥
ಅನುವಾದ
ನಾನು ಪದೇ-ಪದೇ ವರ್ಣಿಸಿದ ಸುಸ್ಪಷ್ಟ ಯುಕ್ತಿಯುಕ್ತವಾಗಿ ಜ್ಞಾನದ ಮರ್ಮವನ್ನು ತಿಳಿದುಕೊಳ್ಳುವವನ ಹೃದಯದ ಸಂಶಯ ಗ್ರಂಥಿಗಳು ಛಿನ್ನ-ಭಿನ್ನವಾಗಿ, ಅವನು ಮುಕ್ತನಾಗುತ್ತಾನೆ. ॥24॥
(ಶ್ಲೋಕ - 25)
ಮೂಲಮ್
ಸುವಿವಿಕ್ತಂ ತವ ಪ್ರಶ್ನಂ ಮಯೈತದಪಿ ಧಾರಯೇತ್ ।
ಸನಾತನಂ ಬ್ರಹ್ಮಗುಹ್ಯಂ ಪರಂ ಬ್ರಹ್ಮಾಧಿಗಚ್ಛತಿ ॥
ಅನುವಾದ
ನಾನು ನಿನ್ನ ಪ್ರಶ್ನೆಗೆ ಚೆನ್ನಾಗಿ ಉತ್ತರಿಸಿದೆ. ನಮ್ಮ ಈ ಪ್ರಶ್ನೋತ್ತರವನ್ನು ವಿಚಾರಪೂರ್ವಕ ಧರಿಸಿಕೊಳ್ಳುವವನು ವೇದಗಳ ಪರಮರಹಸ್ಯವಾದ ಸನಾತನ ಪರಬ್ರಹ್ಮವನ್ನು ಪಡೆದುಕೊಳ್ಳುತ್ತಾನೆ. ॥25॥
(ಶ್ಲೋಕ - 26)
ಮೂಲಮ್
ಯ ಏತನ್ಮಮ ಭಕ್ತೇಷು ಸಂಪ್ರದದ್ಯಾತ್ಸುಪುಷ್ಕಲಮ್ ।
ತಸ್ಯಾಹಂ ಬ್ರಹ್ಮದಾಯಸ್ಯ ದದಾಮ್ಯಾತ್ಮಾನಮಾತ್ಮನಾ ॥
ಅನುವಾದ
ನನ್ನ ಭಕ್ತರಿಗೆ ಇದನ್ನು ಚೆನ್ನಾಗಿ ಸ್ಪಷ್ಟಪಡಿಸುವವನಿಗೆ, ಆ ಜ್ಞಾನದಾತೃವಿಗೆ ನಾನು ಪ್ರಸನ್ನ ಮನಸ್ಸಿನಿಂದ ನನ್ನ ಸ್ವರೂಪವನ್ನೇ ಕೊಟ್ಟುಬಿಡುತ್ತೇನೆ. ಅವನನ್ನು ಆತ್ಮಜ್ಞಾನಿಯಾಗಿಸುತ್ತೇನೆ. ॥26॥
(ಶ್ಲೋಕ - 27)
ಮೂಲಮ್
ಯ ಏತತ್ಸಮಧೀಯೀತ ಪವಿತ್ರಂ ಪರಮಂ ಶುಚಿ ।
ಸ ಪೂಯೇತಾಹರಹರ್ಮಾಂ ಜ್ಞಾನದೀಪೇನ ದರ್ಶಯನ್ ॥
ಅನುವಾದ
ಎಲೈ ಉದ್ಧವನೇ! ನಿನ್ನ ಮತ್ತು ನನ್ನ ಈ ಸಂವಾದವು ಸ್ವಯಂ ಪರಮ ಪವಿತ್ರವೇ ಆಗಿದೆ, ಬೇರೆಯವರನ್ನೂ ಪವಿತ್ರವಾಗಿಸುವಂತಹುದು. ಪ್ರತಿದಿನವು ಇದನ್ನು ಪಾರಾಯಣ ಮಾಡುವವನು, ಬೇರೆಯವರಿಗೆ ತಿಳಿಸುವವನು ಈ ಜ್ಞಾನದೀಪದ ಮೂಲಕ ಬೇರೆಯವರಿಗೆ ನನ್ನ ದರ್ಶನ ಮಾಡಿಸಿದ್ದರಿಂದ ಪವಿತ್ರನಾಗಿ ಹೋಗುವನು. ॥27॥
(ಶ್ಲೋಕ - 28)
ಮೂಲಮ್
ಯ ಏತಚ್ಛ್ರದ್ಧಯಾ ನಿತ್ಯಮವ್ಯಗ್ರಃ ಶೃಣುಯಾನ್ನರಃ ।
ಮಯಿ ಭಕ್ತಿಂ ಪರಾಂ ಕುರ್ವನ್ಕರ್ಮಭಿರ್ನ ಸ ಬಧ್ಯತೇ ॥
ಅನುವಾದ
ಇದನ್ನು ಏಕಾಗ್ರಚಿತ್ತದಿಂದ, ಶ್ರದ್ಧಾಭಕ್ತಿಯಿಂದ ಕೇಳು ವವನಿಗೆ ನನ್ನ ಪರಾಭಕ್ತಿಯು ಪ್ರಾಪ್ತವಾಗಿ, ಅವನು ಕರ್ಮಬಂಧನದಿಂದ ಮುಕ್ತನಾಗುವನು. ॥28॥
(ಶ್ಲೋಕ - 29)
ಮೂಲಮ್
ಅಪ್ಯುದ್ಧವ ತ್ವಯಾ ಬ್ರಹ್ಮ ಸಖೇ ಸಮವಧಾರಿತಮ್ ।
ಅಪಿ ತೇ ವಿಗತೋ ಮೋಹಃ ಶೋಕಶ್ಚಾಸೌ ಮನೋಭವಃ ॥
ಅನುವಾದ
ಪ್ರಿಯಮಿತ್ರಾ! ನೀನು ಚೆನ್ನಾಗಿ ಬ್ರಹ್ಮಸ್ವರೂಪವನ್ನು ತಿಳಿದುಕೊಂಡೆಯಲ್ಲ? ನಿನ್ನ ಚಿತ್ತದ ಮೋಹ ಹಾಗೂ ಶೋಕವಾದರೋ ದೂರವಾಯಿತಲ್ಲ? ॥29॥
(ಶ್ಲೋಕ - 30)
ಮೂಲಮ್
ನೈತತ್ತ್ವಯಾ ದಾಂಭಿಕಾಯ ನಾಸ್ತಿಕಾಯ ಶಠಾಯ ಚ ।
ಅಶುಶ್ರೂಷೋರಭಕ್ತಾಯ ದುರ್ವಿನೀತಾಯ ದೀಯತಾಮ್ ॥
ಅನುವಾದ
ನೀನು ಇದನ್ನು ದಾಂಭಿಕ, ನಾಸ್ತಿಕ, ಶ್ರದ್ಧೆಯಿಲ್ಲದ ಭಕ್ತಿಹೀನ, ಉದ್ಧಟ ಇಂತಹ ಜನರಿಗೆ ಎಂದಿಗೂ ಹೇಳಬಾರದು. ॥30॥
(ಶ್ಲೋಕ - 31)
ಮೂಲಮ್
ಏತೈರ್ದೋಷೈರ್ವಿಹೀನಾಯ ಬ್ರಹ್ಮಣ್ಯಾಯ ಪ್ರಿಯಾಯ ಚ ।
ಸಾಧವೇ ಶುಚಯೇ ಬ್ರೂಯಾದ್ ಭಕ್ತಿಃ ಸ್ಯಾಚ್ಛೂದ್ರಯೋಷಿತಾಮ್ ॥
ಅನುವಾದ
ಈ ದೋಷಗಳಿಂದ ರಹಿತನೂ, ಬ್ರಾಹ್ಮಣಭಕ್ತನೂ, ಪ್ರೇಮಿಯೂ, ಸಾಧು ಸ್ವಭಾವನೂ, ಶುದ್ಧ ಚರಿತ್ರನೂ ಆದವರಿಗೆ ಈ ಪ್ರಸಂಗವನ್ನು ಹೇಳಬೇಕು. ಶೂದ್ರರು, ಸ್ತ್ರೀಯರು, ನನ್ನಲ್ಲಿ ಭಕ್ತಿಯನ್ನಿಡುವವರಾದರೆ ಅವರಿಗೂ ಇದನ್ನು ಉಪದೇಶಿಸಬೇಕು. ॥31॥
(ಶ್ಲೋಕ - 32)
ಮೂಲಮ್
ನೈತದ್ವಿಜ್ಞಾಯ ಜಿಜ್ಞಾಸೋರ್ಜ್ಞಾತವ್ಯಮವಶಿಷ್ಯತೇ ।
ಪೀತ್ವಾ ಪೀಯೂಷಮಮೃತಂ ಪಾತವ್ಯಂ ನಾವಶಿಷ್ಯತೇ ॥
ಅನುವಾದ
ದಿವ್ಯ ಅಮೃತಪಾನ ಮಾಡಿದಮೇಲೆ ಏನನ್ನೂ ಕುಡಿಯುವುದೂ ಬಾಕಿ ಇರದಂತೆ, ಇದನ್ನು ಅರಿತುಕೊಂಡ ಮೇಲೆ ಜಿಜ್ಞಾಸುವಿಗೆ ಬೇರೆ ಏನನ್ನೂ ತಿಳಿಯುವುದು ಬಾಕಿ ಇರುವುದಿಲ್ಲ. ॥32॥
(ಶ್ಲೋಕ - 33)
ಮೂಲಮ್
ಜ್ಞಾನೇ ಕರ್ಮಣಿ ಯೋಗೇ ಚ ವಾರ್ತಾಯಾಂ ದಂಡಧಾರಣೇ ।
ಯಾವಾನರ್ಥೋ ನೃಣಾಂ ತಾತ ತಾವಾಂಸ್ತೇಹಂ ಚತುರ್ವಿಧಃ ॥
ಅನುವಾದ
ಪ್ರಿಯ ಉದ್ಧವನೇ! ಮನುಷ್ಯರಿಗೆ ಜ್ಞಾನ, ಕರ್ಮ, ಯೋಗ, ವಾಣಿಜ್ಯ, ದಂಡ ನೀತಿ ಇವುಗಳಿಂದ ಕ್ರಮವಾಗಿ ಮೋಕ್ಷ, ಧರ್ಮ, ಕಾಮ, ಅರ್ಥರೂಪೀ ಫಲಗಳು ದೊರೆಯುತ್ತವೆ. ಆದರೆ ನಿನ್ನಂತಹ ಅನನ್ಯ ಭಕ್ತರಿಗೆ ಆ ನಾಲ್ಕು ವಿಧದ ಫಲವೂ ನಾನೇ ಆಗಿದ್ದೇನೆ. ॥33॥
(ಶ್ಲೋಕ - 34)
ಮೂಲಮ್
ಮರ್ತ್ಯೋ ಯದಾ ತ್ಯಕ್ತಸಮಸ್ತಕರ್ಮಾ
ನಿವೇದಿತಾತ್ಮಾ ವಿಚಿಕೀರ್ಷಿತೋ ಮೇ ।
ತದಾಮೃತತ್ವಂ ಪ್ರತಿಪದ್ಯಮಾನೋ
ಮಯಾತ್ಮಭೂಯಾಯ ಚ ಕಲ್ಪತೇ ವೈ ॥
ಅನುವಾದ
ಮನುಷ್ಯನು ಎಲ್ಲ ಕರ್ಮಗಳನ್ನು ನನ್ನಲ್ಲಿ ಅರ್ಪಿಸಿ, ನನ್ನಲ್ಲಿ ಅನನ್ಯ ಶರಣಾದಾಗ, ಎಲ್ಲ ಕ್ರಿಯಾಕಲಾಪಗಳನ್ನು ನನಗಾಗಿಯೇ ಮಾಡಿದಾಗ, ಅವನ ಎಲ್ಲ ವ್ಯವಹಾರಗಳು ನನ್ನೊಂದಿಗೆ ಆಗುತ್ತವೆ. ಅವನು ನನಗೆ ತುಂಬಾ ಪ್ರಿಯನಾಗುತ್ತಾನೆ. ಮತ್ತೆ ನಾನೂ ಕೂಡ ಅವನಿಗಾಗಿ ಏನೇನು ಮಾಡಲಿ ಎಂದು ಯೋಚಿಸುತ್ತಾ ಇರುತ್ತೇನೆ. ಅವನಿಗೆ ಪ್ರಿಯವಾದುದನ್ನು ಮಾಡಲು ನನಗೆ ಪ್ರಬಲ ಉತ್ಕಂಠತೆ ಇರುತ್ತದೆ. ಇಂತಹ ನನ್ನ ಭಕ್ತನು ಅಮೃತತ್ತ್ವವನ್ನು ಪಡೆದುಕೊಂಡು, ನನ್ನ ಸ್ವರೂಪವೇ ಆಗುತ್ತಾನೆ. ॥34॥
(ಶ್ಲೋಕ - 35)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಏವಮಾದರ್ಶಿತಯೋಗಮಾರ್ಗ
ಸ್ತದೋತ್ತಮಶ್ಲೋಕವಚೋ ನಿಶಮ್ಯ ।
ಬದ್ಧಾಂಜಲಿಃ ಪ್ರೀತ್ಯುಪರುದ್ಧಕಂಠೋ
ನ ಕಿಂಚಿದೂಚೇಶ್ರುಪರಿಪ್ಲುತಾಕ್ಷಃ ॥
ಅನುವಾದ
ಶ್ರೀಶುಕಯೋಗಿಗಳು ಹೇಳುತ್ತಾರೆ — ಪರೀಕ್ಷಿತನೇ! ಈಗ ಉದ್ಧವನು ಯೋಗಮಾರ್ಗದ ಪೂರ್ಣ ಉಪದೇಶವನ್ನು ಪಡೆದುಕೊಂಡನು. ಭಗವಾನ್ ಶ್ರೀಕೃಷ್ಣನ ಮಾತನ್ನು ಕೇಳಿ ಅವನ ಕಣ್ಣುಗಳಲ್ಲಿ ನೀರು ತುಂಬಿಬಂತು. ಪ್ರೇಮೋದ್ರೇಕದಿಂದ ಕಂಠ ಉಮ್ಮಳಿಸಿತು. ವಾಣಿಯಿಂದ ಏನನ್ನೂ ಮಾತನಾಡಲಾರದೆ ಮೌನವಾಗಿ ಕೈ ಜೋಡಿಸಿಕೊಂಡು ನಿಂತುಕೊಂಡನು. ॥35॥
(ಶ್ಲೋಕ - 36)
ಮೂಲಮ್
ವಿಷ್ಟಭ್ಯ ಚಿತ್ತಂ ಪ್ರಣಯಾವಘೂರ್ಣಂ
ಧೈರ್ಯೇಣ ರಾಜನ್ಬಹು ಮನ್ಯಮಾನಃ ।
ಕೃತಾಂಜಲಿಃ ಪ್ರಾಹ ಯದುಪ್ರವೀರಂ
ಶೀರ್ಷ್ಣಾ ಸ್ಪೃಶಂಸ್ತಚ್ಚರಣಾರವಿಂದಮ್ ॥
ಅನುವಾದ
ಅವನ ಚಿತ್ತವು ಪ್ರೇಮಪರ ವಶವಾಗಿ ವಿಹ್ವಲವಾಗಿತ್ತು. ಅವನು ಧೈರ್ಯದಿಂದ ತಡೆದುಕೊಂಡು, ತನ್ನನ್ನು ಅತ್ಯಂತ ಭಾಗ್ಯಶಾಲಿಯೆಂದು ಅನುಭವಿಸುತ್ತಾ, ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನ ಚರಣಗಳಲ್ಲಿ ಶಿರವನ್ನಿಟ್ಟು ವಂದಿಸಿಕೊಂಡನು ಹಾಗೂ ಕೈಜೋಡಿಸಿ ಅವನಲ್ಲಿ ಹೀಗೆ ಪ್ರಾರ್ಥಿಸಿದನು. ॥36॥
(ಶ್ಲೋಕ - 37)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ವಿದ್ರಾವಿತೋ ಮೋಹಮಹಾಂಧಕಾರೋ
ಯ ಆಶ್ರಿತೋ ಮೇ ತವ ಸಂನಿಧಾನಾತ್ ।
ವಿಭಾವಸೋಃ ಕಿಂ ನು ಸಮೀಪಗಸ್ಯ
ಶೀತಂ ತಮೋ ಭಿಃ ಪ್ರಭವಂತ್ಯಜಾದ್ಯ ॥
ಅನುವಾದ
ಉದ್ಧವನು ಹೇಳಿದನು — ಬ್ರಹ್ಮನಿಗೂ ಆದಿಯಾದವನೇ! ನಾನು ಆಶ್ರಯಿಸಿದ್ದ ಮಹಾನ್ ಮೋಹರೂಪೀ ಅಂಧಕಾರವು ನಿನ್ನ ಜ್ಞಾನದ ಪ್ರಕಾಶದಿಂದ ದೂರವಾಯಿತು. ನಿನ್ನ ಬಳಿಗೆ ಬರುತ್ತಲೇ ಅದು ಎಂದೆಂದಿಗೂ ಓಡಿಹೋಯಿತು. ಬೆಂಕಿಯಬಳಿ ಸಾರಿದವನಿಗೆ ಚಳಿ, ಅಂಧಕಾರ ಮತ್ತು ಅದರಿಂದ ಉಂಟಾಗುವ ಭಯವು ನಿಲ್ಲಬಲ್ಲುದೇನು? ॥37॥
(ಶ್ಲೋಕ - 38)
ಮೂಲಮ್
ಪ್ರತ್ಯರ್ಪಿತೋ ಮೇ ಭವತಾನುಕಂಪಿನಾ
ಭೃತ್ಯಾಯ ವಿಜ್ಞಾನಮಯಃ ಪ್ರದೀಪಃ ।
ಹಿತ್ವಾ ಕೃತಜ್ಞಸ್ತವ ಪಾದಮೂಲಂ
ಕೋನ್ಯತ್ಸಮೀಯಾಚ್ಛರಣಂ ತ್ವದೀಯಮ್ ॥
ಅನುವಾದ
ಭಗವಂತಾ! ನೀನು ದಯಾರ್ದ್ರನಾಗಿ ಸೇವಕನಾದ ನನಗೆ ವಿಜ್ಞಾನರೂಪೀ ದೀಪದ ಪ್ರಕಾಶವನ್ನು ಪ್ರದಾನ ಮಾಡಿದೆ. ನೀನು ನನ್ನಮೇಲೆ ಮಹಾನ್ ಅನುಗ್ರಹವನ್ನು ವರ್ಷಿಸಿದೆ. ನಿನ್ನ ಉಪಕಾರಗಳನ್ನು, ನಿನ್ನ ಮಹಾನ್ ಕೃಪೆಯನ್ನು ಅನುಭವಿಸಿದವನು ಮತ್ತೆ ನಿನ್ನ ಈ ಚರಣ ಕಮಲಗಳನ್ನು ಬಿಟ್ಟು, ಬೇರೆಯವರಿಗೆ ಶರಣಾಗುವವನು ಯಾರು ತಾನೇ ಇರುವನು? ॥38॥
(ಶ್ಲೋಕ - 39)
ಮೂಲಮ್
ವೃಕ್ಣಶ್ಚ ಮೇ ಸುದೃಢಃ ಸ್ನೇಹಪಾಶೋ
ದಾಶಾರ್ಹವೃಷ್ಣ್ಯಂಧಕಸಾತ್ತ್ವತೇಷು ।
ಪ್ರಸಾರಿತಃ ಸೃಷ್ಟಿವಿವೃದ್ಧಯೇ ತ್ವಯಾ
ಸ್ವಮಾಯಯಾ ಹ್ಯಾತ್ಮಸುಬೋಧಹೇತಿನಾ ॥
ಅನುವಾದ
ನೀನೇ ನಿನ್ನ ಮೋಹರೂಪೀ ಮಾಯೆಯಿಂದ ನನ್ನನ್ನು ಮೊದಲು ತನ್ನ ಸೃಷ್ಟಿಯನ್ನು ವೃದ್ಧಿಗೊಳಿಸಲು ದಾಶಾರ್ಹ, ವೃಷ್ಣಿ, ಅಂಧಕ, ಸಾತ್ವತವಂಶೀ ಯಾದವರೊಂದಿಗೆ ಸುದೃಢವಾದ ಸ್ನೇಹಪಾಶದಿಂದ ಕಟ್ಟಿದ್ದೆ ಇಂದು ನೀನೇ ಆತ್ಮಬೋಧದ ಹರಿತವಾದ ಖಡ್ಗದಿಂದ ನನ್ನ ಆ ಬಂಧನವನ್ನು ಅನಾಯಾಸವಾಗಿ ಕತ್ತರಿಸಿ ಬಿಟ್ಟಿರುವೆ. ॥39॥
(ಶ್ಲೋಕ - 40)
ಮೂಲಮ್
ನಮೋಸ್ತು ತೇ ಮಹಾಯೋಗಿನ್ಪ್ರಪನ್ನ ಮನುಶಾಧಿ ಮಾಮ್ ।
ಯಥಾ ತ್ವಚ್ಚರಣಾಂಭೋಜೇ ರತಿಃ ಸ್ಯಾದನಪಾಯಿನೀ ॥
ಅನುವಾದ
ಮಹಾಯೋಗೇಶ್ವರಾ! ನಿನಗೆ ನನ್ನ ನಮಸ್ಕಾರಗಳು. ಈಗ ನೀನು ನಿನ್ನ ಚರಣ ಕಮಲಗಳಲ್ಲಿ ಅನನ್ಯ ಭಕ್ತಿಯು ಉಂಟಾಗುವಂತೆ ಕೃಪೆಮಾಡಿ ಶರಣಾಗತನಾದ ನನಗೆ ಆಜ್ಞೆಯನ್ನು ದಯಪಾಲಿಸು. ॥40॥
(ಶ್ಲೋಕ - 41)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಗಚ್ಛೋದ್ಧವ ಮಯಾದಿಷ್ಟೋ ಬದರ್ಯಾಖ್ಯಂ ಮಮಾಶ್ರಮಮ್ ।
ತತ್ರ ಮತ್ಪಾದತೀರ್ಥೋದೇ ಸ್ನಾನೋಪಸ್ಪರ್ಶನೈಃ ಶುಚಿಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಉದ್ಧವನೇ! ಈಗ ನೀನು ನನ್ನ ಅಪ್ಪಣೆಯಂತೆ ಬದರಿಕಾಶ್ರಮಕ್ಕೆ ಹೋಗು. ಅದು ನನ್ನದೇ ಆಶ್ರಮವಾಗಿದೆ. ಅಲ್ಲಿ ನನ್ನ ಚರಣಕಮಲಗಳನ್ನು ತೊಳೆದ ಗಂಗಾಜಲವನ್ನು ಸ್ನಾನ-ಪಾನಾದಿಗಳ ಮೂಲಕ ಸೇವಿಸುತ್ತಾ ನೀನು ಪವಿತ್ರನಾಗು. ॥41॥
(ಶ್ಲೋಕ - 42)
ಮೂಲಮ್
ಈಕ್ಷಯಾಲಕನಂದಾಯಾ ವಿಧೂತಾಶೇಷಕಲ್ಮಷಃ ।
ವಸಾನೋ ವಲ್ಕಲಾನ್ಯಂಗ ವನ್ಯಭುಕ್ ಸುಖನಿಃಸ್ಪೃಹಃ ॥
ಅನುವಾದ
ಅಲಕನಂದೆಯ ದರ್ಶನಮಾತ್ರದಿಂದಲೇ ನಿನ್ನ ಪಾಪಗಳೆಲ್ಲ ನಾಶವಾಗುವವು. ಪ್ರಿಯ ಉದ್ಧವನೇ! ಅಲ್ಲಿ ನೀನು ವಲ್ಕಲವನ್ನುಟ್ಟು, ಕಾಡಿನ ಕಂದ-ಮೂಲ-ಫಲಗಳನ್ನು ತಿನ್ನುತ್ತಾ, ಯಾವುದೇ ಭೋಗದ ಅಪೇಕ್ಷೆಯನ್ನಿಡದೆ ನಿಃಸ್ಪೃಹ ವೃತ್ತಿಯಿಂದ ನೀನೇ ನಿನ್ನಲ್ಲಿ ಆನಂದವಾಗಿರು. ॥42॥
(ಶ್ಲೋಕ - 43)
ಮೂಲಮ್
ತಿತಿಕ್ಷುರ್ದ್ವಂದ್ವಮಾತ್ರಾಣಾಂ ಸುಶೀಲಃ ಸಂಯತೇಂದ್ರಿಯಃ ।
ಶಾಂತಃ ಸಮಾಹಿತಧಿಯಾ ಜ್ಞಾನವಿಜ್ಞಾನಸಂಯುತಃ ॥
ಅನುವಾದ
ಚಳಿ-ಸೆಕೆ, ಸುಖ-ದುಃಖ, ಏನೆಲ್ಲ ಇದಿರಾಗುತ್ತದೋ ಅದರಲ್ಲಿ ಸಮನಾಗಿದ್ದು ಸಹಿಸು. ಸ್ವಭಾವವು ಸೌಮ್ಯವಾಗಿರಲಿ. ಇಂದ್ರಿಯಗಳು ವಶದಲ್ಲಿರಲಿ. ಚಿತ್ತವು ಶಾಂತವಾಗಿದ್ದು, ಬುದ್ಧಿಸಮಾಹಿತವಾಗಿರಲಿ. ನೀನು ಸ್ವಯಂ ನನ್ನ ಸ್ವರೂಪ ಜ್ಞಾನದಲ್ಲಿ, ಅನುಭವದಲ್ಲಿ ಮುಳುಗಿರು. ॥43॥
(ಶ್ಲೋಕ - 44)
ಮೂಲಮ್
ಮತ್ತೋನುಶಿಕ್ಷಿತಂ ಯತ್ತೇ ವಿವಿಕ್ತಮನುಭಾವಯನ್ ।
ಮಯ್ಯಾವೇಶಿತವಾಕ್ಚಿತ್ತೋ ಮದ್ಧರ್ಮನಿರತೋ ಭವ ।
ಅತಿವ್ರಜ್ಯ ಗತೀಸಿಸ್ರೋ ಮಾಮೇಷ್ಯಸಿ ತತಃ ಪರಮ್ ॥
ಅನುವಾದ
ನಾನು ನಿನಗೆ ಮಾಡಿದ ಉಪದೇಶವನ್ನು ಏಕಾಂತದಲ್ಲಿ ವಿಚಾರ ಪೂರ್ವಕ ಅನುಭವಿಸುತ್ತಿರು. ನಿನ್ನ ವಾಣಿ ಮತ್ತು ಚಿತ್ತವನ್ನು ನನ್ನಲ್ಲಿಯೇ ತೊಡಗಿಸಿಡಬೇಕು. ನಾನು ಹೇಳಿದ ಭಾಗವತ ಧರ್ಮದಲ್ಲಿ ಪ್ರೇಮದಿಂದ ನಿರತನಾಗಿರು. ಕೊನೆಗೆ ನೀನು ತ್ರಿಗುಣ ಮತ್ತು ಅವುಗಳ ಸಂಬಂಧವಿರಿಸುವ ಗತಿಗಳನ್ನು ದಾಟಿ, ಅದರಿಂದ ಆಚೆಗಿರುವ ನನ್ನ ಪರಮಾರ್ಥ ಸ್ವರೂಪದಲ್ಲಿ ಸೇರಿಹೋಗುವೆ. ॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಏವಮುಕ್ತೋ ಹರಿಮೇಧಸೋದ್ಧವಃ
ಪ್ರದಕ್ಷಿಣಂ ತಂ ಪರಿಸೃತ್ಯ ಪಾದಯೋಃ ।
ಶಿರೋ ನಿಧಾಯಾಶ್ರುಕಲಾಭಿರಾರ್ದ್ರಧೀ-
ರ್ನ್ಯಷಿಂಚದದ್ವಂದ್ವಪರೋಪ್ಯಪಕ್ರಮೇ ॥
ಅನುವಾದ
ಶ್ರೀಶುಕಯೋಗಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಸ್ವರೂಪದ ಜ್ಞಾನವು ಪ್ರಪಂಚದ ಭೇದ-ಭ್ರಮೆಗಳನ್ನು ಛಿನ್ನ-ಭಿನ್ನವಾಗಿಸುತ್ತದೆ. ಶ್ರೀಕೃಷ್ಣನು ಸ್ವತಃ ಉದ್ಧವನಿಗೆ ಹೀಗೆ ಉಪದೇಶಮಾಡಿದಾಗ, ಅವನು ಭಗವಂತನಿಗೆ ಪ್ರದಕ್ಷಿಣೆಮಾಡಿ, ಅವನ ಚರಣಗಳಲ್ಲಿ ಶಿರವ ನ್ನಿಟ್ಟನು. ಉದ್ಧವನು ಸಂಯೋಗ-ವಿಯೋಗದಿಂದ ಉಂಟಾಗುವ ಸುಖ-ದುಃಖಗಳ ದ್ವಂದ್ವಗಳಿಂದ ಮೀರಿದ್ದನು. ಏಕೆಂದರೆ, ಅವನು ಭಗವಂತನ ಚರಣಗಳಲ್ಲಿ ಶರಣಾಗಿದ್ದನು. ಮತ್ತೆ ಅವನು ಅಲ್ಲಿಂದ ಹೊರಡುವಾಗ ಅವನ ಚಿತ್ತವು ಪ್ರೇಮಾವೇಶದಿಂದ ತುಂಬಿಹೋಗಿತ್ತು. ಅವನು ಕಣ್ಣುಗಳಿಂದ ಹರಿಯುವ ಪ್ರೇಮಾಶ್ರುಗಳಿಂದ ಭಗವಂತನ ಚರಣಕಮಲಗಳನ್ನು ತೊಳೆದುಬಿಟ್ಟನು. ॥45॥
(ಶ್ಲೋಕ - 46)
ಮೂಲಮ್
ಸುದುಸ್ತ್ಯಜಸ್ನೇಹವಿಯೋಗಕಾತರೋ
ನ ಶಕ್ನುವಂಸ್ತಂ ಪರಿಹಾತುಮಾತುರಃ ।
ಕೃಚ್ಛ್ರಂ ಯಯೌ ಮೂರ್ಧನಿ ಭರ್ತೃಪಾದುಕೇ
ಬಿಭ್ರನ್ನಮಸ್ಕೃತ್ಯ ಯಯೌ ಪುನಃ ಪುನಃ ॥
ಅನುವಾದ
ಪರೀಕ್ಷಿತನೇ! ಉದ್ಧವನು ಭಗವಂತನ ಚರಣಕಮಲಗಳನ್ನು ಬಿಟ್ಟು ದೂರ ಹೋಗಲು ಬಯಸುತ್ತಿರಲಿಲ್ಲ. ಆದರೆ ಭಗವಂತನ ಆಜ್ಞೆಯೇ ಹಾಗಿತ್ತು. ಆದ್ದರಿಂದ ಅವನ ವಿಯೋಗದಿಂದ ಕಾತರನಾಗಿ ಬಹುಕಷ್ಟದಿಂದ ಹೋಗಲೇಬೇಕಾಯಿತು. ಹೊರಡುವಾಗ ಅವನು ಭಗವಂತನ ಚರಣಪಾದುಕೆಗಳನ್ನು ತನ್ನ ಶಿರದಲ್ಲಿ ಹೊತ್ತುಕೊಂಡು, ಪದೇ-ಪದೇ ವಂದಿಸುತ್ತಾ ಅಲ್ಲಿಂದ ಹೊರಟು ಹೋದನು. ॥46॥
(ಶ್ಲೋಕ - 47)
ಮೂಲಮ್
ತತಸ್ತಮಂತರ್ಹೃದಿ ಸಂನಿವೇಶ್ಯ
ಗತೋ ಮಹಾಭಾಗವತೋ ವಿಶಾಲಾಮ್ ।
ಯಥೋಪದಿಷ್ಟಾಂ ಜಗದೇಕಬಂಧುನಾ
ತಪಃ ಸಮಾಸ್ಥಾಯ ಹರೇರಗಾದ್ಗತಿಮ್ ॥
ಅನುವಾದ
ಭಗವಂತನ ಪರಮ ಪ್ರೇಮಿ ಉದ್ಧವನು ಹೃದಯದಲ್ಲಿ ಅವನ ದಿವ್ಯಸ್ವರೂಪವನ್ನು ಧರಿಸಿಕೊಂಡು ಬದರಿಕಾಶ್ರಮವನ್ನು ತಲುಪಿದನು. ಅಲ್ಲಿ ಅವನು ತಪೋಮಯ ಜೀವನವನ್ನು ಕಳೆಯುತ್ತಾ, ಜಗತ್ತಿನ ಏಕಮಾತ್ರ ಹಿತೈಷಿ ಭಗವಾನ್ ಶ್ರೀಕೃಷ್ಣನ ಉಪದೇಶದಂತೆ, ಅವನ ಸ್ವರೂಪಭೂತ ಪರಮಗತಿಯನ್ನು ಪಡೆದುಕೊಂಡನು. ॥47॥
(ಶ್ಲೋಕ - 48)
ಮೂಲಮ್
ಯ ಏತದಾನಂದ ಸಮುದ್ರಸಂಭೃತಂ
ಜ್ಞಾನಾಮೃತಂ ಭಾಗವತಾಯ ಭಾಷಿತಮ್ ।
ಕೃಷ್ಣೇನ ಯೋಗೇಶ್ವರಸೇವಿತಾಂಘ್ರಿಣಾ
ಸಚ್ಛ್ರದ್ಧಯಾಸೇವ್ಯ ಜಗದ್ವಿಮುಚ್ಯತೇ ॥
ಅನುವಾದ
ಭಗವಾನ್ ಶಂಕರನೇ ಆದಿ ಯೋಗೇಶ್ವರರೂ ಕೂಡ ಸಚ್ಚಿದಾನಂದಸ್ವರೂಪೀ ಭಗವಾನ್ ಶ್ರೀಕೃಷ್ಣನ ಚರಣಗಳ ಸೇವೆ ಮಾಡುತ್ತಾರೆ. ಅವನು ಸ್ವತಃ ತನ್ನ ಶ್ರೀಮುಖದಿಂದ ಪರಮಪ್ರೇಮಿ ಭಕ್ತ ಉದ್ಧವನಿಗಾಗಿ ಈ ಜ್ಞಾನಾಮೃತವನ್ನು ಉಪದೇಶಿಸಿದನು. ಇದು ಜ್ಞಾನಾಮೃತ ರೂಪೀ ಮಹಾಸಾಗರದ ಸಾರವಾಗಿದೆ. ಶ್ರದ್ಧೆಯೊಂದಿಗೆ ಇದನ್ನು ಸೇವಿಸುವವನು ಮುಕ್ತನಾಗಿಯೇ ಹೋಗುತ್ತಾನೆ. ಅವನ ಸಂಗದಿಂದ ಇಡೀ ಜಗತ್ತು ಮುಕ್ತವಾಗಿ ಹೋಗುತ್ತದೆ. ॥48॥
(ಶ್ಲೋಕ - 49)
ಮೂಲಮ್
ಭವಭಯಮಪಹಂತುಂ ಜ್ಞಾನವಿಜ್ಞಾನಸಾರಂ
ನಿಗಮಕೃದುಪಜಹ್ರೇ ಭೃಂಗವದ್ವೇದಸಾರಮ್ ।
ಅಮೃತಮುದಧಿತಶ್ಚಾಪಾಯಯದ್ ಭೃತ್ಯವರ್ಗಾನ್
ಪುರುಷಮೃಷಭಮಾದ್ಯಂ ಕೃಷ್ಣಸಂಜ್ಞಂ ನತೋಸ್ಮಿ ॥
ಅನುವಾದ
ಪರೀಕ್ಷಿತನೇ! ಭ್ರಮರವು ವಿಭಿನ್ನ ಪುಷ್ಪಗಳಿಂದ ಸಾರವಾದ ಮಧುವನ್ನು ಸಂಗ್ರಹಿಸುವಂತೆ, ಸ್ವಯಂ ವೇದಗಳನ್ನು ಪ್ರಕಾಶಗೊಳಿಸುವ ಭಗವಾನ್ ಶ್ರೀಕೃಷ್ಣನು ಭಕ್ತರನ್ನು ಸಂಸಾರಸಾಗರದಿಂದ ಮುಕ್ತಗೊಳಿಸಲು ಈ ಜ್ಞಾನ-ವಿಜ್ಞಾನದ ಸಾರವನ್ನು ಅಮೃತರೂಪೀ ಸಾಗರದಿಂದ ತೆಗೆದು ತನ್ನ ಸೇವಕರಿಗಾಗಿ ಕೊಟ್ಟನು. ಇಂತಹ ಆ ಭಗವಾನ್ ಶ್ರೀಕೃಷ್ಣನೇ ಪುರುಷೋತ್ತಮನಾಗಿದ್ದಾನೆ, ಶ್ರೇಷ್ಠನಾಗಿದ್ದಾನೆ, ಆದಿನಾರಾಯಣನಾಗಿದ್ದಾನೆ ಹಾಗೂ ಇಡೀ ಜಗತ್ತಿನ ಮೂಲಕಾರಣನಾಗಿದ್ದಾನೆ. ಅವನಿಗೆ ನಾನು ಪದೇ-ಪದೇ ವಂದಿಸುತ್ತೇನೆ. ॥49॥
ಅನುವಾದ (ಸಮಾಪ್ತಿಃ)
ಇಪ್ಪತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥29॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಏಕೋನತ್ರಿಂಶೋಽಧ್ಯಾಯಃ ॥29॥