[ಇಪ್ಪತ್ತೆಂಟನೆಯ ಅಧ್ಯಾಯ]
ಭಾಗಸೂಚನಾ
ಪರಮಾರ್ಥ ನಿರೂಪಣೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಪರಸ್ವಭಾವಕರ್ಮಾಣಿ ನ ಪ್ರಶಂಸೇನ್ನ ಗರ್ಹಯೇತ್ ।
ವಿಶ್ವಮೇಕಾತ್ಮಕಂ ಪಶ್ಯನ್ ಪ್ರಕೃತ್ಯಾ ಪುರುಷೇಣ ಚ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಉದ್ಧವನೇ! ಬೇರೆಯವರ ಸ್ವಭಾವದ ಅಥವಾ ಅವರ ಕರ್ಮಗಳ ಬಗ್ಗೆ ಚರ್ಚೆ ಎಂದೂ ಮಾಡಬಾರದು. ಅವರನ್ನು ಹೊಗಳುವುದಾಗಲೀ, ತೆಗಳುವುದಾಗಲೀ ಮಾಡಬಾರದು. ಸಮಸ್ತ ವಿಶ್ವದಲ್ಲಿ ಒಂದೇ ಆತ್ಮನು ಒಳಗೆ-ಹೊರಗೆ ವ್ಯಾಪ್ತನಾಗಿದ್ದಾನೆ. ಪ್ರಕೃತಿ-ಪುರುಷರಿಂದ ಉಂಟಾದ ಈ ವಿಶ್ವದಲ್ಲಿ ಒಂದೇ ಆತ್ಮನಸತ್ತೆಯನ್ನು ನೋಡಬೇಕು. ॥1॥
(ಶ್ಲೋಕ - 2)
ಮೂಲಮ್
ಪರಸ್ವಭಾವಕರ್ಮಾಣಿ ಯಃ ಪ್ರಶಂಸತಿ ನಿಂದತಿ ।
ಸ ಆಶು ಭ್ರಶ್ಯತೇ ಸ್ವಾರ್ಥಾದಸತ್ಯಭಿನಿವೇಶತಃ ॥
ಅನುವಾದ
ಬೇರೆಯವರ ಸ್ವಭಾವ ಮತ್ತು ಕರ್ಮದ ನಿಂದೆ-ಸ್ತುತಿ ಮಾಡುವ ವ್ಯಕ್ತಿಯು ಬೇಗನೇ ಅಸತ್ತಿನಲ್ಲಿ ಆಗ್ರಹವಿರಿಸಿ, ತನ್ನ ಉನ್ನತಿಯ ಮಾರ್ಗದಿಂದ ಭ್ರಷ್ಟನಾಗಿ ಪತಿತನಾಗುತ್ತಾನೆ. ॥2॥
(ಶ್ಲೋಕ - 3)
ಮೂಲಮ್
ತೈಜಸೇ ನಿದ್ರಯಾಪನ್ನೇ ಪಿಂಡಸ್ಥೋ ನಷ್ಟಚೇತನಃ ।
ಮಾಯಾಂ ಪ್ರಾಪ್ನೋತಿ ಮೃತ್ಯುಂ ವಾ ತದ್ವನ್ನಾನಾರ್ಥದೃಕ್ ಪುಮಾನ್ ॥
ಅನುವಾದ
ನಿದ್ರಾವಸ್ಥೆಯಲ್ಲಿ ಇಂದ್ರಿಯಗಳು ಮಲಗಿ ಬಿಡುತ್ತವೆ. ದೇಹದಲ್ಲಿರುವ ಜೀವಿಯು ಆಗ ಜ್ಞಾನಶೂನ್ಯನಾಗುತ್ತಾನೆ. ಹೀಗೆ ನಿದ್ರಾವಸ್ಥೆಯಲ್ಲಿ ಎಂದಾದರೂ ಈ ಮನುಷ್ಯನು ಮಾಯೆ (ಸ್ವಪ್ನ)ಯನ್ನು ನೋಡುತ್ತಾನೆ. ಅಥವಾ ಸುಷುಪ್ತಿ ಅವಸ್ಥೆಯಲ್ಲಿ ಗಾಢನಿದ್ದೆಯಲ್ಲಿ ಪೂರ್ಣ ಜ್ಞಾನಶೂನ್ಯನಾಗುತ್ತಾನೆ. ಹಾಗೆಯೇ ಜಾಗ್ರತ್ ಅವಸ್ಥೆಯಲ್ಲಿಯೂ ಅನೇಕ ಪ್ರಕಾರದ ಪದಾರ್ಥಗಳನ್ನು ಚಿಂತಿಸುತ್ತಾನೆ ಮತ್ತು ನೋಡುತ್ತಾ ಇರುತ್ತಾನೆ. ಆದರೆ ಇದೆಲ್ಲವೂ ಮಿಥ್ಯೆಯೇ ಆಗಿದೆ. ಸತ್ಯ ವಸ್ತು ಏಕಮಾತ್ರ ಪರಮಾತ್ಮ ತತ್ತ್ವವೇ ಆಗಿದೆ. ॥3॥
(ಶ್ಲೋಕ - 4)
ಮೂಲಮ್
ಕಿಂ ಭದ್ರಂ ಕಿಮಭದ್ರಂ ವಾ ದ್ವೈತಸ್ಯಾವಸ್ತುನಃ ಕಿಯತ್ ।
ವಾಚೋದಿತಂ ತದನೃತಂ ಮನಸಾ ಧ್ಯಾತಮೇವ ಚ ॥
ಅನುವಾದ
ಯಥಾರ್ಥದಲ್ಲಿ ಇಲ್ಲವೇ ಇಲ್ಲದ ವಸ್ತುವಿನ ಬಗ್ಗೆ ಏನು ಒಳ್ಳೆಯದು ಹೇಳಬಹುದು, ಏನು ಕೆಟ್ಟದೆಂದು ಹೇಳಬಹುದು? ಇದೆಲ್ಲವೂ ಕೇವಲ ವಾಣಿಯ ವಿಲಾಸಮಾತ್ರವಾಗಿದೆ, ಆದ್ದರಿಂದ ಮಿಥ್ಯೆ ಯಾಗಿದೆ. ಹೀಗೆಯೇ ಮನಸ್ಸಿನಿಂದ ಈ ಅಸತ್ ಪದಾರ್ಥಗಳನ್ನು ಚಿಂತಿಸುವುದೂ ವ್ಯರ್ಥವೇ ಆಗಿದೆ. ॥4॥
(ಶ್ಲೋಕ - 5)
ಮೂಲಮ್
ಛಾಯಾಪ್ರತ್ಯಾಹ್ವಯಾಭಾಸಾ ಹ್ಯಸಂತೋಪ್ಯರ್ಥಕಾರಿಣಃ ।
ಏವಂ ದೇಹಾದಯೋ ಭಾವಾ ಯಚ್ಛಂತ್ಯಾಮೃತ್ಯುತೋ ಭಯಮ್ ॥
ಅನುವಾದ
ಛಾಯೆ, ಪ್ರತಿಧ್ವನಿ ಮತ್ತು ಆಭಾಸ ಇವು ಮೂರೂ ನಿಜವಲ್ಲದಿದ್ದರೂ ತಮ್ಮ-ತಮ್ಮ ಕಾರ್ಯಗಳನ್ನಾದರೋ ಮಾಡಿಯೇ ಮಾಡುತ್ತವೆ. (ಛಾಯೆ (ನೆರಳು)ಯಲ್ಲಿ ಕುಳಿತಿರುತ್ತಾರೆ ಮತ್ತು ಅದನ್ನು ಒಪ್ಪಿಕೊಂಡು ಕಾರ್ಯವನ್ನೂ ಮಾಡುತ್ತಾರೆ. ಪ್ರತಿಧ್ವನಿಯಾದರೆ ‘ಇದೇನಾಯಿತು?’ ಎಂದು ಗಾಬರಿಗೊಳ್ಳುವನು. ಹಗ್ಗದಲ್ಲಿ ಸರ್ಪದ ಭ್ರಮೆಯಿಂದ ಭಯವಾಗುತ್ತದೆ. ಇವೆಲ್ಲವೂ ತಮ್ಮ-ತಮ್ಮ ಕಾರ್ಯ ಮಾಡುತ್ತಿದ್ದರೂ ಇವು ಮೂರೂ ಮಿಥ್ಯೆಯಾಗಿದೆ.) ಹೀಗೆಯೇ ದೇಹಾದಿ ಪದಾರ್ಥಗಳೆಲ್ಲವೂ ಮಿಥ್ಯೆಯೇ ಆಗಿವೆ. ಆದರೂ ಪ್ರಾಣಿಗಳಿಗೆ ಸಾಯುವವರೆಗೆ ಭಯ, ದುಃಖಗಳಾದರೋ ಕೊಡುತ್ತಲೇ ಇರುತ್ತವೆ. ॥5॥
(ಶ್ಲೋಕ - 6)
ಮೂಲಮ್
ಆತ್ಮೈವ ತದಿದಂ ವಿಶ್ವಂ ಸೃಜ್ಯತೇ ಸೃಜತಿ ಪ್ರಭುಃ ।
ತ್ರಾಯತೇ ತ್ರಾತಿ ವಿಶ್ವಾತ್ಮಾ ಹ್ರಿಯತೇ ಹರತೀಶ್ವರಃ ॥
ಅನುವಾದ
ಸಮಸ್ತ ವಿಶ್ವದ ಆತ್ಮನಾದರೋ ಒಬ್ಬನೇ ಆಗಿದ್ದಾನೆ. ಆ ಆತ್ಮನೇ ಬ್ರಹ್ಮಾ ಆಗಿ ತನ್ನಿಂದಲೇ ತನ್ನನ್ನು (ವಿಶ್ವವಾಗಿ) ನಿರ್ಮಿಸಿಕೊಳ್ಳುವನು. ಆ ಸ್ವಯಂ ವಿಷ್ಣು ರೂಪದಿಂದ ತನ್ನನ್ನೇ ರಕ್ಷಿಸಿಕೊಳ್ಳುವನು. ಪ್ರಳಯಕಾಲದಲ್ಲಿ ರುದ್ರರೂಪದಿಂದ ತನ್ನಿಂದ ಸೃಷ್ಟಿಸಲ್ಪಟ್ಟ ವಿಶ್ವವನ್ನು ಸಂಹಾರ ಮಾಡುತ್ತಾನೆ. ॥6॥
(ಶ್ಲೋಕ - 7)
ಮೂಲಮ್
ತಸ್ಮಾನ್ನಹ್ಯಾತ್ಮನೋನ್ಯಸ್ಮಾದನ್ಯೋ ಭಾವೋ ನಿರೂಪಿತಃ ।
ನಿರೂಪಿತೇಯಂ ತ್ರಿವಿಧಾ ನಿರ್ಮೂಲಾ ಭಾತಿರಾತ್ಮನಿ ।
ಇದಂ ಗುಣಮಯಂ ವಿದ್ಧಿ ತ್ರಿವಿಧಂ ಮಾಯಯಾ ಕೃತಮ್ ॥
ಅನುವಾದ
ಈ ಪ್ರಕಾರ ಆತ್ಮನಲ್ಲದೆ ಬೇರೆ ಯಾವ ವಸ್ತುವೂ ಕೂಡ ಇರುವುದು ಸಿದ್ಧವಾಗುವುದಿಲ್ಲ. ಆತ್ಮನಿಂದ ಭಿನ್ನವಾದ ಇನ್ನೊಂದು ಭಾವ ಕಂಡುಬರುವುದರ ಯಾವ ಕಾರಣವೂ ಇಲ್ಲ. ಆದರೆ ಇಲ್ಲದೆಯೇ ಯಾವುದು ಆತ್ಮನಲ್ಲಿ ಮೂರು ಪ್ರಕಾರದಿಂದ ಭಾಸಮಾನವಾಗುತ್ತದೋ ಅದನ್ನು ನೀನು ತ್ರಿಗುಣಾತ್ಮಿಕಾ ಮಾಯೆಯ ಕಾರ್ಯವೆಂದೇ ತಿಳಿ. ॥7॥
(ಶ್ಲೋಕ - 8)
ಮೂಲಮ್
ಏತದ್ವಿದ್ವಾನ್ ಮದುದಿತಂ ಜ್ಞಾನವಿಜ್ಞಾನನೈಪುಣಮ್ ।
ನ ನಿಂದತಿ ನ ಚ ಸ್ತೌತಿ ಲೋಕೇ ಚರತಿ ಸೂರ್ಯವತ್ ॥
ಅನುವಾದ
ಉದ್ಧವನೇ! ಜ್ಞಾನ-ವಿಜ್ಞಾನದಿಂದ ಕೂಡಿದ ಈ ಉಪದೇಶವನ್ನು ನಾನು ನಿನಗೆ ಹೇಳಿರುವೆನು. ಇದನ್ನು ತಿಳಿದುಕೊಂಡು ವಿದ್ವಾಂಸನು ಯಾರನ್ನೂ ನಿಂದಿಸುವುದಿಲ್ಲ, ಸ್ತುತಿಸುವುದಿಲ್ಲ. ಇಂತಹ ಮಹಾಪುರುಷರು ಸೂರ್ಯನಂತೆ ಎಲ್ಲೆಡೆ ಜ್ಞಾನದ ಪ್ರಕಾಶವನ್ನು ಹರಡುತ್ತಾ ವಿಚರಿಸುತ್ತಿರುತ್ತಾರೆ. ॥8॥
(ಶ್ಲೋಕ - 9)
ಮೂಲಮ್
ಪ್ರತ್ಯಕ್ಷೇಣಾನುಮಾನೇನ ನಿಗಮೇನಾತ್ಮ ಸಂವಿದಾ ।
ಆದ್ಯಂತವದಸಜ್ಜ್ಞಾತ್ವಾ ನಿಸ್ಸಂಗೋ ವಿಚರೇದಿಹ ॥
ಅನುವಾದ
ಪ್ರತ್ಯಕ್ಷ ಪ್ರಮಾಣದಿಂದ, ಅನುಮಾನ ಪ್ರಮಾಣದಿಂದ, ಶಾಸ್ತ್ರ ಮತ್ತು ಮಹಾಪುರುಷರ ವಚನಗಳಿಂದ ಹಾಗೂ ಆತ್ಮಾನುಭೂತಿಯಿಂದ ‘ಕಂಡುಬರುವ ಅಸತ್ ಪದಾರ್ಥಗಳೆಲ್ಲವೂ ಆದಿ-ಅಂತ್ಯಗಳಿಂದ ಕೂಡಿದೆ ಅರ್ಥಾತ್ ನಾಶವುಳ್ಳದ್ದಾಗಿದೆ’ ಎಂದು ಸ್ಪಷ್ಟವಾಗಿ ತಿಳಿದುಕೋ. ಅದರಿಂದ ಅನಾಸಕ್ತನಾಗಿ ಪ್ರಪಂಚದಲ್ಲಿ ವಿಚರಿಸುತ್ತಿರು. ॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ನೈವಾತ್ಮನೋ ನ ದೇಹಸ್ಯ ಸಂಸೃತಿರ್ದ್ರಷ್ಟೃದೃಶ್ಯಯೋಃ ।
ಅನಾತ್ಮಸ್ವದೃಶೋರೀಶ ಕಸ್ಯ ಸ್ಯಾದುಪಲಭ್ಯತೇ ॥
ಅನುವಾದ
ಉದ್ಧವನು ಕೇಳಿದನು — ಭಗವಂತಾ! ಆತ್ಮನು ದ್ರಷ್ಟಾ ಸಾಕ್ಷಿಯಾಗಿದ್ದು, ಸ್ವಯಂಪ್ರಕಾಶವಾಗಿದ್ದಾನೆ. ಅವನು ಏನನ್ನೂ ಮಾಡುವುದಿಲ್ಲ. ದೇಹವೂ ಕೂಡ ದೃಶ್ಯವಾಗಿದ್ದು, ಜಡವಾದ್ದರಿಂದ ಅದೂ ಕೂಡ ಪ್ರಪಂಚವನ್ನು ಮಾಡಲಾರದು. ಇಂತಹ ಸ್ಥಿತಿಯಲ್ಲಿ ಈ ಸಂಸೃತಿ (ಹುಟ್ಟು-ಸಾವು) ಯಾರಿಗಾಗುತ್ತದೆ? ॥10॥
(ಶ್ಲೋಕ - 11)
ಮೂಲಮ್
ಆತ್ಮಾವ್ಯಯೋಗುಣಃ ಶುದ್ಧಃ ಸ್ವಯಂಜ್ಯೋತಿರನಾವೃತಃ ।
ಅಗ್ನಿವದ್ದಾರುವದಚಿದ್ದೇಹಃ ಕಸ್ಯೇಹ ಸಂಸೃತಿಃ ॥
ಅನುವಾದ
ಆತ್ಮನು ಅವಿನಾಶೀ, ನಿರ್ಗುಣ, ಶುದ್ಧ, ಸ್ವಯಂಜ್ಯೋತಿ ಮತ್ತು ಒಳ-ಹೊರಗೆ ಎಲ್ಲೆಡೆ ಪರಿಪೂರ್ಣನಾಗಿದ್ದು, ಅಗ್ನಿಯಂತೆ ಜ್ಯೋತಿರ್ಮಯವಾಗಿದ್ದಾನೆ. ಆದರೆ ಶರೀರವು ಕಾಷ್ಠದಂತೆ ಅಚೇತನವಾಗಿದೆ. ಇಂತಹ ಸ್ಥಿತಿಯಲ್ಲಿ ಜನ್ಮ-ಮೃತ್ಯುವಿನಲ್ಲಿ ಅಲೆಯುವವನು ಯಾರು? ॥11॥
(ಶ್ಲೋಕ - 12)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯಾವದ್ದೇಹೇಂದ್ರಿಯ ಪ್ರಾಣೈರಾತ್ಮನಃ ಸಂನಿಕರ್ಷಣಮ್ ।
ಸಂಸಾರಃ ಲವಾಂಸ್ತಾವದಪಾರ್ಥೋಪ್ಯವಿವೇಕಿನಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ದೇಹ, ಇಂದ್ರಿಯ, ಪ್ರಾಣಗಳೊಂದಿಗೆ ಆತ್ಮನ ಸಂಬಂಧವಿರುವ ತನಕ ಅಜ್ಞಾನಿಗೆ ಈ ಪ್ರಪಂಚವು ಅಸತ್ಯವಾಗಿದ್ದರೂ ಸತ್ಯದಂತೆ ಕಾಣುತ್ತದೆ. ॥12॥
(ಶ್ಲೋಕ - 13)
ಮೂಲಮ್
ಅರ್ಥೇ ಹ್ಯವಿದ್ಯಮಾನೇಪಿ ಸಂಸೃತಿರ್ನ ನಿವರ್ತತೇ ।
ಧ್ಯಾಯತೋ ವಿಷಯಾನಸ್ಯ ಸ್ವಪ್ನೇನರ್ಥಾಗಮೋ ಯಥಾ ॥
ಅನುವಾದ
ಸ್ವಪ್ನದಲ್ಲಿ ನಾನಾ ಪ್ರಕಾರದ ಅನರ್ಥಗಳು ಆಗದಿದ್ದರೂ ಕಂಡುಬರುತ್ತವೆ. ಅದರಿಂದ ಅವನು ದುಃಖಿಯೂ ಆಗುತ್ತಾನೆ. ಆದರೆ ಎಚ್ಚರಗೊಂಡಾಗ ಅವೆಲ್ಲ ಅನರ್ಥಗಳು ದೂರವಾಗುತ್ತವೆ. ಹಾಗೆಯೇ ಜಾಗ್ರತದಲ್ಲಿಯೂ ವಿಷಯಗಳು ಮಿಥ್ಯೆಯೇ ಆಗಿದ್ದರೂ ಆ ವಿಷಯಗಳ ನಿರಂತರ ಚಿಂತನೆ ಮಾಡುತ್ತಿರುವುದರಿಂದ ಪ್ರಪಂಚದಲ್ಲಿ ಅಲೆಯುವುದು ನಿಲ್ಲುವುದಿಲ್ಲ. ॥13॥
(ಶ್ಲೋಕ - 14)
ಮೂಲಮ್
ಯಥಾ ಹ್ಯಪ್ರತಿಬುದ್ಧಸ್ಯ ಪ್ರಸ್ವಾಪೋ ಬಹ್ವನರ್ಥಭೃತ್ ।
ಸ ಏವ ಪ್ರತಿಬುದ್ಧಸ್ಯ ನ ವೈ ಮೋಹಾಯ ಕಲ್ಪತೇ ॥
ಅನುವಾದ
ಮನುಷ್ಯನು ಸ್ವಪ್ನವನ್ನು ನೋಡುತ್ತಾ ಇರುವಾಗ, ನಿದ್ದೆಯಿಂದ ಎಚ್ಚರವಾಗುವ ಮೊದಲು ದೊಡ್ಡ-ದೊಡ್ಡ ವಿಪತ್ತುಗಳನ್ನು ಎದುರಿಸಬೇಕಾಗುತ್ತದೆ. ಆದರೆ ನಿದ್ದೆಯಿಂದ ಎಚ್ಚರಗೊಂಡಾಗ ಸ್ವಪ್ನದ ವಿಪತ್ತುಗಳಾಗಲೀ, ಅವುಗಳ ಕಾರಣದಿಂದ ಉಂಟಾಗುವ ಮೋಹವೇ ಮುಂತಾದ ವಿಕಾರಗಳಾಗಲೀ, ಇರುವುದಿಲ್ಲ. ॥14॥
(ಶ್ಲೋಕ - 15)
ಮೂಲಮ್
ಶೋಕಹರ್ಷಭಯಕ್ರೋಧಲೋಭಮೋಹಸ್ಪೃಹಾದಯಃ ।
ಅಹಂಕಾರಸ್ಯ ದೃಶ್ಯಂತೇ ಜನ್ಮಮೃತ್ಯುಶ್ಚ ನಾತ್ಮನಃ ॥
ಅನುವಾದ
ಉದ್ಧವನೇ! ಇದೇ ರೀತಿ ನಾನು ನನ್ನದು ಎಂಬ ಭಾವನೆ ಇರುವವರೆಗೆ ಶೋಕ, ಹರ್ಷ, ಭಯ, ಕ್ರೋಧ, ಲೋಭ, ಮೋಹ, ಸ್ಪೃಹೆ ಮುಂತಾದ ಭಾವಗಳು ಹಾಗೂ ಜನ್ಮ-ಮೃತ್ಯುವಿನ ದುಃಖ ಜೀವನಿಗೆ ಭೋಗಿಸಬೇಕಾಗುತ್ತದೆ. ಇವೆಲ್ಲವೂ ದೇಹಾಭಿಮಾನದಿಂದಲೇ ಇವೆಯೇ ಹೊರತು ಆತ್ಮನಿಗೆ ಇದರೊಂದಿಗೆ ಯಾವ ಸಂಬಂಧವೂ ಇಲ್ಲ. ॥15॥
(ಶ್ಲೋಕ - 16)
ಮೂಲಮ್
ದೇಹೇಂದ್ರಿಯಪ್ರಾಣಮನೋಭಿಮಾನೋ
ಜೀವೋಂತರಾತ್ಮಾ ಗುಣಕರ್ಮಮೂರ್ತಿಃ ।
ಸೂತ್ರಂ ಮಹಾನಿತ್ಯುರುಧೇವ ಗೀತಃ
ಸಂಸಾರ ಆಧಾವತಿ ಕಾಲತಂತ್ರಃ ॥
ಅನುವಾದ
ಎಲೈ ಉದ್ಧವನೇ! ದೇಹ, ಇಂದ್ರಿಯಗಳು, ಪ್ರಾಣ ಮತ್ತು ಮನಸ್ಸಿನಲ್ಲಿ ಸ್ಥಿತನಾದ ಆತ್ಮನೇ ಗುಣ ಹಾಗೂ ಕರ್ಮಗಳಿಂದ ಉಂಟಾದ ಲಿಂಗಶರೀರದಲ್ಲಿ ಅಹಂಭಾವಪಟ್ಟಾಗ ಅವನೇ ಜೀವನೆಂದು ಹೇಳಲ್ಪಡುತ್ತಾನೆ. ಆಗ ಅವನು ತನ್ನ ಸ್ವರೂಪದಿಂದ ವಿಮುಖನಾಗಿ, ಜಡ ಪದಾರ್ಥಗಳಲ್ಲಿ ಅಹಂತೆ, ಮಮತೆ ಗೈದು ಬದ್ಧನಾಗುತ್ತಾನೆ. ಮತ್ತೆ ಕಾಲದ ಮೂಲಕ ಪ್ರೇರಿತನಾಗಿ ಸಂಸಾರದಲ್ಲಿ ಅಲೆಯುತ್ತಾ ಇರುತ್ತಾನೆ. ವಾಸ್ತವದಲ್ಲಾದರೋ ಈ ಜೀವಿಯು ಸೂಕ್ಷ್ಮಾತಿಸೂಕ್ಷ್ಮ ಆತ್ಮನದೇ ಮೂರ್ತಿಯಾಗಿದೆ. ಈ ಪ್ರಕಾರ ಈ ಆತ್ಮವನ್ನು ಸೂತ್ರಾತ್ಮಾ, ಮಹತ್ತತ್ತ್ವ ಹಾಗೂ ಇನ್ನೂ ಅನೇಕ ಹೆಸರುಗಳಿಂದ ಹೇಳಲಾಗಿದೆ. ॥16॥
(ಶ್ಲೋಕ - 17)
ಮೂಲಮ್
ಅಮೂಲಮೇತದ್ಬಹುರೂಪರೂಪಿತಂ
ಮನೋ ವಚಃ ಪ್ರಾಣಶರೀರಕರ್ಮ ।
ಜ್ಞಾನಾಸಿನೋಪಾಸನಯಾ ಶಿತೇನ-
ಚ್ಛಿತ್ತ್ವಾ ಮುನಿರ್ಗಾಂ ವಿಚರತ್ಯತೃಷ್ಣಃ ॥
ಅನುವಾದ
ಈ ಅಹಂಕಾರವೇ ಮನ, ವಾಣೀ, ಪ್ರಾಣ, ಶರೀರ ಮತ್ತು ಕರ್ಮ ಮುಂತಾದ ಅನೇಕ ರೂಪಗಳಲ್ಲಿ ಕಂಡುಬರುತ್ತದೆ. ಇದಕ್ಕೆ ಯಾವುದೇ ಮೂಲವು ಇಲ್ಲದ್ದರಿಂದ ಮಿಥ್ಯೆಯೇ ಆಗಿದೆ. ಜೀವಿಯು ಸ್ವಯಂ ಇವುಗಳಲ್ಲಿ ಅಹಂಭಾವ ಮಾಡಿದಕಾರಣ ಬದ್ಧನಾಗಿದ್ದಾನೆ. ಇದರಿಂದ ಮುಕ್ತನಾಗಲು ಎಲ್ಲ ರೀತಿಯಿಂದ ತೃಷ್ಣಾರಹಿತನಾಗಿ, ಉಪಾಸನೆಯ ಮೂಲಕ ಜ್ಞಾನರೂಪೀ ತೀಕ್ಷ್ಣಖಡ್ಗದಿಂದ ಆತ್ಮನನ್ನು ಬಂಧಿಸುವ ಅಹಂಕಾರವನ್ನು ಸಮೂಲವಾಗಿ ಕತ್ತರಿಸಿ, ಭಗವತ್ಸ್ವರೂಪವನ್ನು ಮನನ ಮಾಡುತ್ತಾ, ಸ್ವಚ್ಛಂದವಾಗಿ ವಿಚರಿಸುವುದೇ ಉಪಾಯವಾಗಿದೆ. ॥17॥
(ಶ್ಲೋಕ - 18)
ಮೂಲಮ್
ಜ್ಞಾನಂ ವಿವೇಕೋ ನಿಗಮಸ್ತಪಶ್ಚ
ಪ್ರತ್ಯಕ್ಷಮೈತಿಹ್ಯಮಥಾನುಮಾನಮ್ ।
ಆದ್ಯಂತಯೋರಸ್ಯ ಯದೇವ ಕೇವಲಂ
ಕಾಲಶ್ಚ ಹೇತುಶ್ಚ ತದೇವ ಮಧ್ಯೇ ॥
ಅನುವಾದ
ಆತ್ಮಾ-ಅನಾತ್ಮದ ಸ್ವರೂಪವನ್ನು ಚೆನ್ನಾಗಿ ತಿಳಿದುಕೊಳ್ಳುವುದೇ ಜ್ಞಾನವಾಗಿದೆ. ಈ ವಿವೇಕವು ಉಂಟಾದಾಗ ದ್ವೈತದ ಅಸ್ತಿತ್ವವು ಇರುವುದಿಲ್ಲ. ಆದ್ದರಿಂದ ಆತ್ಮಚಿಂತನೆಯಿಂದ ಹೃದಯವನ್ನು ಶುದ್ಧಗೊಳಿಸಬೇಕು. ಪ್ರತ್ಯಕ್ಷಪ್ರಮಾಣದಿಂದ, ಮಹಾಪುರುಷರ ವಚನಗಳಿಂದ, ಶಾಸ್ತ್ರಪ್ರಮಾಣದಿಂದ ಮತ್ತು ಅನುಮಾನ ಪ್ರಮಾಣದಿಂದ ಒಂದೇ ಆತ್ಮತತ್ತ್ವವನ್ನು ಎಲ್ಲೆಡೆಗಳಲ್ಲಿ ನೋಡಬೇಕು. ಅವನೇ ಈ ಜಗತ್ತಿನ ಆದಿ ಮತ್ತು ಅಂತ್ಯದಲ್ಲಿರುವನು. ನಡುವಿನಲ್ಲಿಯೂ ಅವನೇ ಇದ್ದಾನೆ ಎಂದು ನಿಶ್ಚಯಿಸಬೇಕು. ಅವನನ್ನೇ ಕಾಲನೆಂದೂ ಹೇತು ಎಂದೂ ಹೇಳುತ್ತಾರೆ. ಈ ಪ್ರಕಾರ ಚಿಂತನೆಯಿಂದ ಓರ್ವ ಪರಮಾತ್ಮನನ್ನೇ ಸರ್ವತ್ರ ನೋಡಬೇಕು.॥18॥
(ಶ್ಲೋಕ - 19)
ಮೂಲಮ್
ಯಥಾ ಹಿರಣ್ಯಂ ಸ್ವಕೃತಂ ಪುರಸ್ತಾತ್
ಪಶ್ಚಾಚ್ಚ ಸರ್ವಸ್ಯ ಹಿರಣ್ಮಯಸ್ಯ ।
ತದೇವ ಮಧ್ಯೇ ವ್ಯವಹಾರ್ಯಮಾಣಂ
ನಾನಾಪದೇಶೈರಹಮಸ್ಯ ತದ್ವತ್ ॥
ಅನುವಾದ
ಉದ್ಧವನೇ! ಚಿನ್ನದಿಂದ ಕಂಕಣ, ಕುಂಡಲಾದಿ ಅನೇಕ ಆಭರಣಗಳು ಆಗುತ್ತವೆ. ಆದರೆ ಒಡವೆಗಳು ಆಗದಿದ್ದಾಗಲೂ ಅದು ಚಿನ್ನವೇ ಇತ್ತು. ಒಡವೆಗಳು ಕರಗಿ ಇಲ್ಲವಾದಾಗಲೂ ಚಿನ್ನವೇ ಆಗಿ ಉಳಿಯುವುದು. ನಡುವಿನಲ್ಲಿ ಅದಕ್ಕೆ ಕಂಕಣ-ಕುಂಡಲಾದಿ ಅನೇಕ ಹೆಸರುಗಳನ್ನಿಟ್ಟು ವ್ಯವಹರಿಸುತ್ತಾರೆ. ಆಗಲೂ ಅದು ಚಿನ್ನವೇ ಆಗಿದೆ. ಸರಿಯಾಗಿ ಹಾಗೆಯೇ ಜಗತ್ತಿನ ಆದಿ, ಅಂತ್ಯ ಮತ್ತು ಮಧ್ಯದಲ್ಲಿಯೂ ನಾನೇ ಇದ್ದೇನೆ. ವಾಸ್ತವವಾಗಿ ನಾನೇ ಸತ್ಯ ತತ್ತ್ವನಾಗಿದ್ದೇನೆ. ॥19॥
(ಶ್ಲೋಕ - 20)
ಮೂಲಮ್
ವಿಜ್ಞಾನಮೇತತಿಯವಸ್ಥಮಂಗ
ಗುಣತ್ರಯಂ ಕಾರಣಕಾರ್ಯಕರ್ತೃ ।
ಸಮನ್ವಯೇನ ವ್ಯತಿರೇಕತಶ್ಚ
ಯೇನೈವ ತುರ್ಯೇಣ ತದೇವ ಸತ್ಯಮ್ ॥
ಅನುವಾದ
ಪ್ರಿಯ ಉದ್ಧವನೇ! ಈ ವಿಶ್ವವು ಜಾಗ್ರತ್, ಸ್ವಪ್ನ, ಸುಷುಪ್ತಿ ಎಂಬ ಮೂರು ಅವಸ್ಥೆಗಳಿಂದ ಕೂಡಿದೆ. ಸತ್ತ್ವ, ರಜ, ತಮ ಹೀಗೆ ಮೂರುಗುಣಗಳಿಂದ ಉಂಟಾಗಿದೆ. ಅಧ್ಯಾತ್ಮ (ಇಂದ್ರಿಯಗಳು ಕರಣ), ಅಧಿಭೂತ (ಪೃಥ್ವಿ ಆದಿಕಾರ್ಯ), ಅಧಿದೈವ (ಕರ್ತಾ) ಈ ರೀತಿಯ ಮೂರು ಭೇದಗಳಿಂದ ಯುಕ್ತವಾಗಿದೆ. ಈ ತ್ರಿವಿಧತೆಯಿಂದ ಯುಕ್ತವಾದ ಈ ಜಗತ್ತು ಅಧಿಷ್ಠಾನದಲ್ಲಿ ಪರಮಾತ್ಮನ ಸತ್ತೆ ಇರುವ ಕಾರಣವೇ ಸತ್ಯದಂತೆ ಕಂಡು ಬರುತ್ತದೆ. ಅನ್ವಯರೂಪದಿಂದ ಎಲ್ಲದರಲ್ಲಿ ಪರಮಾತ್ಮನೇ ಅನುಸ್ಯೂತನಾಗಿದ್ದಾನೆ ಮತ್ತು ವ್ಯತಿರೇಕ ರೂಪದಿಂದ ಅರ್ಥಾತ್ ನೇತಿ-ನೇತಿಯ ಮೂಲಕ ಇವೆಲ್ಲದನ್ನು ನಿರಾಕರಣೆ ಮಾಡಿದಾಗ ಏಕಮಾತ್ರ ಪರಮಾತ್ಮನೇ ಶೇಷವಾಗಿ ಉಳಿಯುತ್ತಾನೆ. ನಾಲ್ಕನೆಯವನಿಂದಲೇ ಇದೆಲ್ಲವೂ ಇದೆ, ಅದೇ ಸತ್ಯತತ್ತ್ವವಾಗಿದೆ. ಆ ತುರೀಯ ತತ್ತ್ವದ ಜ್ಞಾನ ಉಂಟಾದಮೇಲೆ ಎಲ್ಲ ತ್ರಿವಿಧತೆ ಮುಗಿದುಹೋಗುತ್ತದೆ. ॥20॥
(ಶ್ಲೋಕ - 21)
ಮೂಲಮ್
ನ ಯತ್ ಪುರಸ್ತಾದುತ ಯನ್ನ ಪಶ್ಚಾ-
ನ್ಮಧ್ಯೇ ಚ ತನ್ನ ವ್ಯಪದೇಶಮಾತ್ರಮ್ ।
ಭೂತಂ ಪ್ರಸಿದ್ಧಂ ಚ ಪರೇಣ ಯದ್ಯತ್
ತದೇವ ತತ್ಸ್ಯಾದಿತಿ ಮೇ ಮನೀಷಾ ॥
ಅನುವಾದ
ಮೊದಲೂ ಇಲ್ಲದುದು, ನಂತರವೂ ಇಲ್ಲವಾಗುವ ಈ ಜಗತ್ತು ನಡುವಿನಲ್ಲಿಯೂ ಇಲ್ಲ; ಇದು ಕೇವಲ ವಾಣಿಯ ವಿಲಾಸವಾಗಿದೆ. ಇದರಲ್ಲಿ ವಾಸ್ತವವಾದರೋ ಪರಮಾತ್ಮನೇ ಒಳ-ಹೊರಗೆ ಓತಪ್ರೋತವಾಗಿದ್ದಾನೆ. ಅವನಿಂದಲೇ ಭೂತಕಾಲದಲ್ಲಿ ಇದರ ಉತ್ಪತ್ತಿಯಾಗಿತ್ತು. ಇದರ ವ್ಯವಹಾರವೂ ಅವನಿಂದಲೇ ನಡೆಯುತ್ತಿದೆ. ಈ ಪ್ರಕಾರ ಸಮಸ್ತ ವ್ಯವಹಾರವೂ ಅವನ ಮೂಲಕವೇ ಅವನಲ್ಲೇ ಆಗುತ್ತಿವೆ. ಅದೇ ಪರಮಾರ್ಥ ಸತ್ತೆಯಾಗಿದೆ ಎಂಬುದೇ ನನ್ನ ದೃಢನಿಶ್ಚಯವಾಗಿದೆ. ॥21॥
(ಶ್ಲೋಕ - 22)
ಮೂಲಮ್
ಅವಿದ್ಯಮಾನೋಪ್ಯವಭಾಸತೇ ಯೋ
ವೈಕಾರಿಕೋ ರಾಜಸಸರ್ಗ ಏಷಃ ।
ಬ್ರಹ್ಮ ಸ್ವಯಂಜ್ಯೋತಿರತೋ ವಿಭಾತಿ
ಬ್ರಹ್ಮೇಂದ್ರಿಯಾರ್ಥಾತ್ಮವಿಕಾರಚಿತ್ರಮ್ ॥
ಅನುವಾದ
ಈ ವಿಕಾರಮಯ ರಾಜಸ ಸೃಷ್ಟಿಯು ಇಲ್ಲದೆಯೂ ಕಂಡು ಬರುತ್ತದೆ. ಇದು ಸ್ವಯಂಪ್ರಕಾಶ ಬ್ರಹ್ಮವೇ ಆಗಿದೆ. ಅದಕ್ಕಾಗಿ ಇಂದ್ರಿಯಗಳು, ವಿಷಯ, ಮನಸ್ಸು, ಪಂಚಭೂತಾದಿ ಚಿತ್ರ-ವಿಚಿತ್ರ ಎಷ್ಟು ನಾಮರೂಪಗಳಿವೆಯೋ, ಅವುಗಳ ರೂಪದಲ್ಲಿ ಬ್ರಹ್ಮವೇ ಕಂಡುಬರುತ್ತಿದ್ದಾನೆ. ॥22॥
(ಶ್ಲೋಕ - 23)
ಮೂಲಮ್
ಏವಂ ಸ್ಫುಟಂ ಬ್ರಹ್ಮವಿವೇಕಹೇತುಭಿಃ
ಪರಾಪವಾದೇನ ವಿಶಾರದೇನ ।
ಛಿತ್ತ್ವಾತ್ಮಸಂದೇಹಮುಪಾರಮೇತ
ಸ್ವಾನಂದತುಷ್ಟೋಖಿಲಕಾಮುಕೇಭ್ಯಃ ॥
ಅನುವಾದ
ಹೀಗೆ ಬ್ರಹ್ಮವಿಚಾರ ಮಾಡುವವರು ಎಲ್ಲ ಶ್ರವಣ, ಮನನ, ನಿಧಿ ಧ್ಯಾಸನ ಮತ್ತು ಸ್ವಾನುಭೂತಿ ಸಾಧನೆಗಳ ಮೂಲಕ ಕೌಶಲ್ಯದಿಂದ ಬೇರೆ ವಸ್ತುವನ್ನು ಪೂರ್ಣವಾಗಿ ನಿರಾಕರಣಮಾಡಿ, ಬ್ರಹ್ಮಜ್ಞಾನಿ ಗುರುದೇವರ ಉಪದೇಶದ ಮೂಲಕ ಆತ್ಮನ ವಿಷಯದಲ್ಲಿ ದೃಢನಿಶ್ಚಯಮಾಡಿಕೊಂಡು ಎಲ್ಲ ರೀತಿಯ ಕಾಮನೆಗಳನ್ನು ತ್ಯಜಿಸಿ, ಉಪರಾಮನಾಗಬೇಕು, ಆತ್ಮಾನಂದದಲ್ಲಿ ಮಗ್ನನಾಗಬೇಕು. ॥23॥
(ಶ್ಲೋಕ - 24)
ಮೂಲಮ್
ನಾತ್ಮಾ ವಪುಃ ಪಾರ್ಥಿವಮಿಂದ್ರಿಯಾಣಿ
ದೇವಾ ಹ್ಯಸುರ್ವಾಯುಜಲಂ ಹುತಾಶಃ ।
ಮನೋನ್ನಮಾತ್ರಂ ಧಿಷಣಾ ಚ ಸತ್ತ್ವ-
ಮಹಂಕೃತಿಃ ಖಂ ಕ್ಷಿತಿರರ್ಥಸಾಮ್ಯಮ್ ॥
ಅನುವಾದ
ಈ ಪಾರ್ಥಿವ ಶರೀರವು ಆತ್ಮನಲ್ಲ. ಹೀಗೆಯೇ ಇಂದ್ರಿಯಗಳ ದೇವತೆಗಳು, ಪ್ರಾಣ, ವಾಯು, ಜಲ, ಅಗ್ನಿ, ಮನ ಇವು ಯಾವುವೂ ಆತ್ಮನಲ್ಲ. ಏಕೆಂದರೆ ಇವುಗಳ ಧಾರಣೆ ಪೋಷಣೆಯು ಶರೀರದಂತೆ ಅನ್ನದಿಂದಲೇ ಆಗುತ್ತದೆ. ಬುದ್ಧಿ, ಚಿತ್ತ, ಅಹಂಕಾರ, ಆಕಾಶ, ಪೃಥ್ವಿ, ಶಬ್ದಾದಿ ವಿಷಯಗಳು ಮತ್ತು ಗುಣಗಳ ಸಾಮ್ಯಾವಸ್ಥೆಯಾದ ಈ ಪ್ರಕೃತಿ ಇವೆಲ್ಲವೂ ಆತ್ಮನಲ್ಲ. (ಹೀಗೆ ಅನಾತ್ಮ ವಸ್ತುಗಳನ್ನು ನೇತಿ-ನೇತಿ ವಚನಗಳಿಂದ ನಿರಾಕರಣ ಮಾಡಬೇಕು) ॥24॥
(ಶ್ಲೋಕ - 25)
ಮೂಲಮ್
ಸಮಾಹಿತೈಃ ಕಃ ಕರಣೈರ್ಗುಣಾತ್ಮಭಿ-
ರ್ಗುಣೋ ಭವೇನ್ಮತ್ಸುವಿವಿಕ್ತಧಾಮ್ನಃ ।
ವಿಕ್ಷಿಪ್ಯಮಾಣೈರುತ ಕಿಂ ನು ದೂಷಣಂ
ಘನೈರುಪೇತೈರ್ವಿಗತೈ ರವೇಃ ಕಿಮ್ ॥
ಅನುವಾದ
ಪ್ರಿಯ ಉದ್ಧವನೇ! ಆಕಾಶದಲ್ಲಿ ಮೋಡಗಳು ಬರುತ್ತವೆ, ಹೋಗುತ್ತವೆ, ಅದರಿಂದ ಸೂರ್ಯನಿಗೆ ಏನು ಹಾನಿಯಿದೆ? ಹಾಗೆಯೇ ನನ್ನ ಸ್ವರೂಪದ ಜ್ಞಾನ ಚೆನ್ನಾಗಿ ಉಂಟಾದವನ ಮುಂದೆ ಮೂರೂ ಗುಣಗಳ ವೇಗ ಬರಲಿ, ಹೋಗಲಿ, ಅವನಿಗೆ ಅದರಿಂದ ಯಾವುದೇ ಹಾನಿ-ಲಾಭವಿಲ್ಲ. ಅವು ಅವನ ಮೇಲೆ ಯಾವುದೇ ಪ್ರಭಾವ ಬೀರಲಾರವು. ಏಕೆಂದರೆ ಅವನಾದರೋ ತನ್ನ ಜ್ಞಾನದಲ್ಲಿ ದೃಢನಿಶ್ಚಯಪೂರ್ವಕ ಅಚಲಸ್ಥಿತನಾಗಿರುತ್ತಾನೆ. ॥25॥
(ಶ್ಲೋಕ - 26)
ಮೂಲಮ್
ಯಥಾ ನಭೋ ವಾಯ್ವನಲಾಂಬುಭೂಗುಣೈ-
ರ್ಗತಾಗತೈರ್ವರ್ತುಗುಣೈರ್ನ ಸಜ್ಜತೇ ।
ತಥಾಕ್ಷರಂ ಸತ್ತ್ವರಜಸ್ತಮೋಮಲೈ-
ರಹಂಮತೇಃ ಸಂಸೃತಿಹೇತುಭಿಃ ಪರಮ್ ॥
ಅನುವಾದ
ಆಕಾಶವನ್ನು ಗಾಳಿಯು ಒಣಗಿಸಲಾರದು, ಬೆಂಕಿಸುಡಲಾರದು, ನೀರು ತೋಯಿಸಲಾರದು, ಧೂಳು-ಹೊಗೆ ಮಲಿನವಾಗಿಸದು, ಋತುಗಳ ಗುಣ ಸೆಕೆ-ಚಳಿ ಮುಂತಾದವುಗಳಿಂದ ಪ್ರಭಾವಿತವಾಗಿಸಲಾರದು. ಏಕೆಂದರೆ ಇವೆಲ್ಲವು ಬಂದುಹೋಗುವ ಕ್ಷಣಿಕ ಭಾವಗಳಾಗಿವೆ. ಆಕಾಶವು ಇವೆಲ್ಲದರ ಅಧಿಷ್ಠಾನವಾಗಿದೆ. ಹಾಗೆಯೇ ಸತ್ತ್ವ ಗುಣ, ರಜೋಗುಣ, ತಮೋಗುಣಗಳ ವೃತ್ತಿಗಳೆಲ್ಲವೂ ಹಾಗೂ ಕರ್ಮಗಳೆಲ್ಲವೂ ಅವಿನಾಶೀ ಆತ್ಮನನ್ನು ಸ್ಪರ್ಶಿಸಲಾರವು. ಅವನಾದರೋ ಇವುಗಳಿಂದ ಸರ್ವಥಾ ಅತೀತನಾಗಿದ್ದಾನೆ. ಇವುಗಳಲ್ಲಿ ಅಹಂಕಾರ ಪಡುವ ಜೀವಿಯೇ ಪ್ರಪಂಚದಲ್ಲಿ ಅಲೆಯುತ್ತಿರುತ್ತಾನೆ. ॥26॥
(ಶ್ಲೋಕ - 27)
ಮೂಲಮ್
ತಥಾಪಿ ಸಂಗಃ ಪರಿವರ್ಜನೀಯೋ
ಗುಣೇಷು ಮಾಯಾರಚಿತೇಷು ತಾವತ್ ।
ಮದ್ಭಕ್ತಿಯೋಗೇನ ದೃಢೇನ ಯಾವದ್
ರಜೋ ನಿರಸ್ಯೇತ ಮನಃ ಕಷಾಯಃ ॥
ಅನುವಾದ
ಉದ್ಧವನೇ! ಹೀಗಾದರೂ ಕೂಡ ನನ್ನ ಸುದೃಢ ಭಕ್ತಿಯೋಗದ ಮೂಲಕ ಮನಸ್ಸಿನ ರಜೋಗುಣರೂಪೀ ಮಲವು ಪೂರ್ಣವಾಗಿ ಹೊರಟುಹೋಗುವವರೆಗೆ, ಈ ಮಾಯಾನಿರ್ಮಿತ ಗುಣಗಳು ಮತ್ತು ಅವುಗಳ ಕಾರ್ಯಗಳ ಸಂಗವನ್ನು ಪೂರ್ಣವಾಗಿ ತ್ಯಜಿಸಿ ಬಿಡಬೇಕು. ॥27॥
(ಶ್ಲೋಕ - 28)
ಮೂಲಮ್
ಯಥಾಮಯೋಸಾಧುಚಿಕಿತ್ಸಿತೋ ನೃಣಾಂ
ಪುನಃ ಪುನಃ ಸಂತುದತಿ ಪ್ರರೋಹನ್ ।
ಏವಂ ಮನೋಪಕ್ವಕಷಾಯಕರ್ಮ
ಕುಯೋಗಿನಂ ವಿಧ್ಯತಿ ಸರ್ವಸಂಗಮ್ ॥
ಅನುವಾದ
ಉದ್ಧವನೇ! ಚೆನ್ನಾಗಿ ಚಿಕಿತ್ಸೆ ಮಾಡದಿದ್ದಾಗ ರೋಗವು ಸಮೂಲವಾಗಿ ನಾಶವಾಗದೆ, ಅದು ಮೇಲಿಂದ ಮೇಲೆ ಉದ್ರೇಕಗೊಂಡು ಮನುಷ್ಯನನ್ನು ಸತಾಯಿಸುತ್ತಾ ಇರುತ್ತದೆ. ಹಾಗೆಯೇ ಮನಸ್ಸಿನ ವಾಸನೆಗಳು ಮತ್ತು ಕರ್ಮಗಳ ಸಂಸ್ಕಾರಗಳು ಅಳಿದುಹೋಗುವುದಿಲ್ಲವೋ, ಅದು ಪತ್ನೀ-ಪುತ್ರಾದಿಗಳಲ್ಲಿ ಆಸಕ್ತವಾಗಿದೆಯೋ, ಇಂತಹ ಅರ್ಧಂಬರ್ಧ ಯೋಗಿಗೆ ಈ ಕರ್ಮ-ವಾಸನೆಗಳು ಪೀಡಿಸುತ್ತಾ ಇರುತ್ತವೆ. ॥28॥
(ಶ್ಲೋಕ - 29)
ಮೂಲಮ್
ಕುಯೋಗಿನೋ ಯೇ ವಿಹಿತಾಂತರಾಯೈ-
ರ್ಮನುಷ್ಯಭೂತೈಸಿದಶೋಪಸೃಷ್ಟೈಃ ।
ತೇ ಪ್ರಾಕ್ತನಾಭ್ಯಾಸಬಲೇನ ಭೂಯೋ
ಯುಂಜಂತಿ ಯೋಗಂ ನ ತು ಕರ್ಮತಂತ್ರಮ್ ॥
ಅನುವಾದ
ದೇವತೆಗಳ ಮೂಲಕ ಪ್ರೇರಿತನಾಗಿ ಅಥವಾ ಯಾರೇ ಮನುಷ್ಯನು ಒಡ್ಡಿದ ವಿಘ್ನಗಳಿಂದ ಕದಾಚಿತ್ ಯೋಗಿಯು ಯೋಗಭ್ರಷ್ಟನಾಗಿ ಹೋದರೆ, ಅವನು ಪೂರ್ವಾಭ್ಯಾಸದ ಕಾರಣ ಪುನಃ ಯೋಗಾಭ್ಯಾಸದಲ್ಲೇ ತೊಡಗುತ್ತಾನೆ. ಕರ್ಮಾದಿಗಳಲ್ಲಿ ಅವನ ಪ್ರವೃತ್ತಿ ಇರುವುದಿಲ್ಲ. ॥29॥
(ಶ್ಲೋಕ - 30)
ಮೂಲಮ್
ಕರೋತಿ ಕರ್ಮ ಕ್ರಿಯತೇ ಚ ಜಂತುಃ
ಕೇನಾಪ್ಯಸೌ ಚೋದಿತ ಆನಿಪಾತಾತ್ ।
ನ ತತ್ರ ವಿದ್ವಾನ್ಪ್ರಕೃತೌ ಸ್ಥಿತೋಪಿ
ನಿವೃತ್ತತೃಷ್ಣಃ ಸ್ವಸುಖಾನುಭೂತ್ಯಾ ॥
ಅನುವಾದ
ಉದ್ಧವನೇ! ಜೀವಿಯು ಸಂಸ್ಕಾರಾದಿಗಳಿಂದ ಪ್ರೇರಿತನಾಗಿ ಹುಟ್ಟಿನಿಂದ ಸಾಯುವವರೆಗೆ ಕರ್ಮದಲ್ಲೇ ತೊಡಗಿರುತ್ತಾನೆ. ಅವುಗಳಲ್ಲಿ ಇಷ್ಟ-ಅನಿಷ್ಟ ಬುದ್ಧಿಯನ್ನಿರಿಸಿ ಹರ್ಷ-ವಿಷಾದ ಮುಂತಾದ ವಿಕಾರಗಳನ್ನು ಪಡೆಯುತ್ತಾನೆ. ಆದರೆ ತತ್ತ್ವದ ಸಾಕ್ಷಾತ್ಕಾರ ಮಾಡಿಕೊಂಡವನು ಪ್ರಕೃತಿಯಲ್ಲಿ ಸ್ಥಿತನಾಗಿದ್ದರೂ, ಪೂರ್ವ ಸಂಸ್ಕಾರಾನುಸಾರ ಅವನಿಂದ ಕರ್ಮಗಳು ಆಗುತ್ತಿದ್ದರೂ ಕೂಡ ಹರ್ಷ-ಶೋಕಾದಿ ವಿಕಾರಗಳಿಂದ ಕೂಡಿರುವುದಿಲ್ಲ. ಏಕೆಂದರೆ, ಆನಂದಸ್ವರೂಪೀ ಆತ್ಮನ ಸಾಕ್ಷಾತ್ಕಾರದಿಂದ ಅವನ ಸಂಸಾರಸಂಬಂಧೀ ಎಲ್ಲ ಆಸೆ-ತೃಷ್ಣೆಗಳು ಮೊದಲೇ ನಾಶವಾಗಿ ಹೋಗಿದ್ದವು. ॥30॥
(ಶ್ಲೋಕ - 31)
ಮೂಲಮ್
ತಿಷ್ಠಂತಮಾಸೀನಮುತ ವ್ರಜಂತಂ
ಶಯಾನಮುಕ್ಷಂತಮದಂತಮನ್ನಮ್ ।
ಸ್ವಭಾವಮನ್ಯತ್ಕಿಮಪೀಹಮಾನ-
ಮಾತ್ಮಾನಮಾತ್ಮಸ್ಥಮತಿರ್ನ ವೇದ ॥
ಅನುವಾದ
ತನ್ನ ಸ್ವರೂಪದಲ್ಲಿ ಸ್ಥಿತನಾದವನಿಗೆ ತನ್ನ ಶರೀರ ನಿಂತಿದೆಯೋ, ಕುಳಿತಿದೆಯೋ, ನಡೆಯುತ್ತಿದೆಯೋ, ಮಲಗಿದೆಯೋ, ಮಲ-ಮೂತ್ರ ವಿಸರ್ಜಿಸುತ್ತಿದೆಯೋ, ಊಟ ಮಾಡುತ್ತಿದೆಯೋ, ಅಥವಾ ಯಾವುದಾದರೂ ಸ್ವಾಭಾವಿಕ ಕರ್ಮಮಾಡುತ್ತಿದೆಯೋ ಎಂಬುದರ ಅರಿವು ಕೂಡ ಇರುವುದಿಲ್ಲ. ಏಕೆಂದರೆ, ಅವನ ವೃತ್ತಿಗಳಾದರೋ ಆತ್ಮಸ್ವರೂಪದಲ್ಲಿ ಸ್ಥಿತವಾಗಿ ಬ್ರಹ್ಮಾಕಾರವಾಗಿರುತ್ತವೆ. ॥31॥
(ಶ್ಲೋಕ - 32)
ಮೂಲಮ್
ಯದಿ ಸ್ಮ ಪಶ್ಯತ್ಯಸದಿಂದ್ರಿಯಾರ್ಥಂ
ನಾನಾನುಮಾನೇನ ವಿರುದ್ಧಮನ್ಯತ್ ।
ನ ಮನ್ಯತೇ ವಸ್ತುತಯಾ ಮನೀಷೀ
ಸ್ವಾಪ್ನಂ ಯಥೋತ್ಥಾಯ ತಿರೋದಧಾನಮ್ ॥
ಅನುವಾದ
ಜ್ಞಾನೀ ಪುರುಷನ ದೃಷ್ಟಿಯಲ್ಲಿ ಅಸತ್ತಾದ ಇಂದ್ರಿಯಗಳ ವಿವಿಧ ಬಾಹ್ಯವಿಷಯಗಳು ಬಂದರೂ ಕೂಡ ಅವನು ಅದನ್ನು ತನ್ನ ಆತ್ಮನಿಂದ ಭಿನ್ನವಾಗಿ ತಿಳಿಯುವುದಿಲ್ಲ. ಮತ್ತು ಆತ್ಮನಿಗಿಂತ ಬೇರೆ ಸತ್ತೆಯನ್ನು ಸ್ವೀಕರಿಸುವುದೇ ಇಲ್ಲ. ಏಕೆಂದರೆ ಯುಕ್ತಿಗಳಿಂದ, ಪ್ರಮಾಣಗಳಿಂದ, ಸ್ವಾನುಭೂತಿಯಿಂದ ಅವುಗಳ ಸ್ವತಂತ್ರ ಸತ್ತೆ ಸಿದ್ಧವಾಗುವುದಿಲ್ಲ. ನಿದ್ದೆಯಿಂದ ಎದ್ದಮೇಲೆ ಸ್ವಪ್ನದಲ್ಲಿ ಕಂಡ ಮತ್ತು ಎಚ್ಚರವಾದಾಗ ತಿರೋಹಿತವಾದ ಪದಾರ್ಥಗಳನ್ನು ಯಾರೂ ಸತ್ಯವೆಂದು ತಿಳಿಯುವುದಿಲ್ಲ. ಹಾಗೆಯೇ ಜ್ಞಾನೀ ಪುರುಷನೂ ಕೂಡ ತನ್ನಿಂದ ಭಿನ್ನವಾಗಿ ಕಂಡುಬರುವ ಪದಾರ್ಥಗಳನ್ನು ಸತ್ಯವೆಂದು ತಿಳಿಯುವುದಿಲ್ಲ. ॥32॥
(ಶ್ಲೋಕ - 33)
ಮೂಲಮ್
ಪೂರ್ವಂ ಗೃಹೀತಂ ಗುಣಕರ್ಮಚಿತ್ರ-
ಮಜ್ಞಾನಮಾತ್ಮನ್ಯವಿವಿಕ್ತಮಂಗ ।
ನಿವರ್ತತೇ ತತ್ಪುನರೀಕ್ಷಯೈವ
ನ ಗೃಹ್ಯತೇ ನಾಪಿ ವಿಸೃಜ್ಯ ಆತ್ಮಾ ॥
ಅನುವಾದ
ಪ್ರಿಯ ಉದ್ಧವನೇ! ಅನೇಕ ಪ್ರಕಾರದ ಗುಣ, ಕರ್ಮಗಳಿಂದ ಕೂಡಿದ ಈ ದೇಹ, ಇಂದ್ರಿಯಗಳು, ಪದಾರ್ಥ ಮುಂತಾದವುಗಳಲ್ಲಿ ಮೊದಲು ಅಜ್ಞಾನದ ಕಾರಣ ಇವೆಲ್ಲವೂ ಆತ್ಮನಿಂದ ಬೇರೆಯಲ್ಲವೆಂದು ಕಂಡು ಬರುತ್ತಿತ್ತು. ಆದರೆ ಜ್ಞಾನದಿಂದ ಅವುಗಳ ನಶ್ವರತೆಯ ಅರಿವು ಉಂಟಾದಾಗ, ಹಾಗೂ ಆ ಭ್ರಮೆಯು ಸಂಪೂರ್ಣ ನಿವೃತ್ತಿ ಆಗಿಹೋದಾಗ, ಅವನ ಜ್ಞಾನದಲ್ಲಿ ಏಕಮಾತ್ರ ಆತ್ಮತತ್ತ್ವವೇ ಇರುತ್ತದೆ. ಅವನು ಸ್ವತಃ ಆತ್ಮಸ್ವರೂಪವೇ ಆಗಿ ಹೋಗುತ್ತಾನೆ. ಈ ಸ್ಥಿತಿಯಲ್ಲಿ ಗ್ರಹಿಸುವುದು, ತ್ಯಜಿಸುವುದು ಏನು ಉಳಿಯುವುದಿಲ್ಲ. ॥33॥
(ಶ್ಲೋಕ - 34)
ಮೂಲಮ್
ಯಥಾ ಹಿ ಭಾನೋರುದಯೋ ನೃಚಕ್ಷುಷಾಂ
ತಮೋ ನಿಹನ್ಯಾನ್ನ ತು ಸದ್ವಿಧತ್ತೇ ।
ಏವಂ ಸಮೀಕ್ಷಾ ನಿಪುಣಾ ಸತೀ ಮೇ
ಹನ್ಯಾತ್ತಮಿಸ್ರಂ ಪುರುಷಸ್ಯ ಬುದ್ಧೇಃ ॥
ಅನುವಾದ
ಸೂರ್ಯನು ಉದಿಸಿದಾಗ ಮನುಷ್ಯರ ಅಂಧಕಾರವನ್ನು ದೂರಮಾಡುತ್ತಾನೆ. ಅವನು ಯಾವುದೇ ಹೊಸತನ್ನು ನಿರ್ಮಿಸುವುದಿಲ್ಲ. ಅದೇ ರೀತಿ ನನ್ನ ಪೂರ್ಣಜ್ಞಾನವಾದ ಮನುಷ್ಯನ ಬುದ್ಧಿಯ ಅಜ್ಞಾನ ದೂರವಾಗುತ್ತದೆ. ॥34॥
(ಶ್ಲೋಕ - 35)
ಮೂಲಮ್
ಏಷ ಸ್ವಯಂಜ್ಯೋತಿರಜೋಪ್ರಮೇಯೋ
ಮಹಾನುಭೂತಿಃ ಸಕಲಾನುಭೂತಿಃ ।
ಏಕೋದ್ವಿತೀಯೋ ವಚಸಾಂ ವಿರಾಮೇ
ಯೇನೇಷಿತಾ ವಾಗಸವಶ್ಚರಂತಿ ॥
ಅನುವಾದ
ಈ ಆತ್ಮನು ಸ್ವಯಂ ಜ್ಯೋತಿ, ಅಜನ್ಮಾ, ಅಪ್ರಮೇಯಸ್ವರೂಪೀ, ಮಹಾನುಭೂತಿ ಸ್ವರೂಪವಾಗಿದೆ. ಎಲ್ಲ ಅನುಭೂತಿಗಳು ಅದರಲ್ಲೇ ಆಗುತ್ತವೆ. ಈ ಆತ್ಮನು ಏಕನಾಗಿದ್ದು, ಅದ್ವಿತೀಯನಾಗಿದ್ದಾನೆ. ವಾಣಿಯ ವಿರಾಮವಾದಮೇಲೆ ಏಕ ಮಾತ್ರ ಅವನೇ ಉಳಿಯುತ್ತಾನೆ. ಅವನ ಇಚ್ಛೆಯಿಂದಲೇ ವಾಣೀ ಮತ್ತು ಪ್ರಾಣಗಳು ತಮ್ಮ-ತಮ್ಮ ಕಾರ್ಯಮಾಡುತ್ತವೆ. ॥35॥
(ಶ್ಲೋಕ - 36)
ಮೂಲಮ್
ಏತಾವಾನಾತ್ಮಸಂಮೋಹೋ ಯದ್ವಿಕಲ್ಪಸ್ತು ಕೇವಲೇ ।
ಆತ್ಮನ್ನೃತೇ ಸ್ವಮಾತ್ಮಾನಮವಲಂಬೋ ನ ಯಸ್ಯ ಹಿ ॥
ಅನುವಾದ
ಉದ್ಧವನೇ! ಅದ್ವಿತೀಯ ಅಖಂಡ ಆತ್ಮತತ್ತ್ವದಲ್ಲಿ ಭೇದ ಭ್ರಮೆಯ ಕಲ್ಪನೆಯೇ ಅಜ್ಞಾನವಾಗಿದೆ. ಜೀವಿಯು ಪ್ರಕೃತಿಯೊಂದಿಗೆ ಅಹಂಭಾವವಿರಿಸಿಯೇ ಭೇದವನ್ನು ಕಲ್ಪಿಸುತ್ತಾನೆ. ಈ ಭ್ರಮೆಯ ಮತ್ತು ಅಜ್ಞಾನದ ಸ್ವತಂತ್ರ ಸತ್ತೆಯೇ ಇಲ್ಲ. ಆದರೆ ಇವು ಕಂಡುಬಂದರೆ ಆತ್ಮನ ಅಧಿಷ್ಠಾನದಿಂದಲೇ ಕಾಣುತ್ತವೆ. ಆದ್ದರಿಂದ ಎಲ್ಲವೂ ಆತ್ಮನೇ ಆಗಿದ್ದಾನೆ. ॥36॥
(ಶ್ಲೋಕ - 37)
ಮೂಲಮ್
ಯನ್ನಾಮಾಕೃತಿಭಿರ್ಗ್ರಾಹ್ಯಂ ಪಂಚವರ್ಣಮಬಾಧಿತಮ್ ।
ವ್ಯರ್ಥೇನಾಪ್ಯರ್ಥವಾದೋಯಂ ದ್ವಯಂ ಪಂಡಿತಮಾನಿನಾಮ್ ॥
ಅನುವಾದ
ಅನೇಕರು ತಮ್ಮನ್ನು ಪಂಡಿತರೆಂದು ತಿಳಿಯುತ್ತಾರೆ. ಆದರೆ ವಾಸ್ತವವಾಗಿ ಪಂಡಿತರಲ್ಲ. ಇಂತಹ ಜನರು ನಾಮ-ರೂಪ ಮತ್ತು ಇಂದ್ರಿಯಗಳಿಂದ ಗ್ರಹಿಸಲಾಗುವ ಈ ಪಂಚಭೂತಾತ್ಮಕ ದ್ವೈತ ಜಗತ್ತು ಸತ್ಯವಾಗಿದೆ ಎಂದು ಸ್ವೀಕರಿಸುತ್ತಾರೆ. ಆದರೆ ಹೀಗೆ ಹೇಳುವುದು ಅವರ ಶಬ್ದಾಡಂಬರಮಾತ್ರವಾಗಿದೆ. ॥37॥
(ಶ್ಲೋಕ - 38)
ಮೂಲಮ್
ಯೋಗಿನೋಪಕ್ವಯೋಗಸ್ಯ ಯುಂಜತಃ ಕಾಯ ಉತ್ಥಿತೈಃ ।
ಉಪಸರ್ಗೈರ್ವಿಹನ್ಯೇತ ತತ್ರಾಯಂ ವಿಹಿತೋ ವಿಧಿಃ ॥
ಅನುವಾದ
ಉದ್ಧವನೇ! ಯೋಗಸಾಧನೆಯು ಪೂರ್ಣವಾಗುವ ಮೊದಲೇ ಯಾರಾದರೂ ಸಾಧಕನ ಶರೀರವು ರೋಗಾದಿ ಉಪದ್ರವಗಳಿಂದ ಪೀಡಿತವಾದರೆ ಅವನು ಈ ಉಪಾಯಗಳನ್ನು ಆಶ್ರಯಿಸಬೇಕು. ॥38॥
(ಶ್ಲೋಕ - 39)
ಮೂಲಮ್
ಯೋಗಧಾರಣಯಾ ಕಾಂಶ್ಚಿದಾಸನೈರ್ಧಾರಣಾನ್ವಿತೈಃ ।
ತಪೋಮಂತ್ರೌಷಧೈಃ ಕಾಂಶ್ಚಿದುಪಸರ್ಗಾನ್ವಿನಿರ್ದಹೇತ್ ॥
ಅನುವಾದ
ಸೆಕೆ-ಚಳಿ ಮುಂತಾದುವನ್ನು ಚಂದ್ರ-ಸೂರ್ಯರನ್ನು ಧಾರಣೆಯ ಮೂಲಕ, ವಾತಾದಿ ರೋಗಗಳನ್ನು ಪ್ರಾಣಾಯಾಮ ಆದಿಯೋಗ ಧಾರಣಾಯುಕ್ತ ಆಸನಗಳ ಮೂಲಕ, ಗ್ರಹ-ಸರ್ಪಾದಿಕೃತ ವಿಘ್ನಗಳನ್ನು ತಪಸ್ಸು, ತಂತ್ರ ಹಾಗೂ ಔಷಧಿಗಳ ಮೂಲಕ ನಾಶಮಾಡಿಬಿಡಬೇಕು. ॥39॥
(ಶ್ಲೋಕ - 40)
ಮೂಲಮ್
ಕಾಂಶ್ಚಿನ್ಮಮಾನುಧ್ಯಾನೇನ ನಾಮಸಂಕೀರ್ತನಾದಿಭಿಃ ।
ಯೋಗೇಶ್ವರಾನುವೃತ್ತ್ಯಾ ವಾ ಹನ್ಯಾದಶುಭದಾನ್ಶನೈಃ ॥
ಅನುವಾದ
ಕಾಮಕ್ರೋಧಾದಿ ವಿಘ್ನಗಳನ್ನು ನನ್ನ ಚಿಂತನೆ, ನಾಮಸಂಕೀರ್ತನೆ ಮೊದಲಾದುವುಗಳಿಂದ ನಾಶಮಾಡಬೇಕು. ಪತನದತ್ತ ಕೊಂಡುಹೋಗುವ ದಂಭ-ಮದ ಮುಂತಾದ ವಿಘ್ನಗಳನ್ನು ನಿಧಾನವಾಗಿ ಮಹಾಪುರುಷರ ಸೇವೆಯಿಂದ ದೂರಗೊಳಿಸಬೇಕು. ॥40॥
(ಶ್ಲೋಕ - 41)
ಮೂಲಮ್
ಕೇಚಿದ್ದೇಹಮಿಮಂ ಧೀರಾಃ ಸುಕಲ್ಪಂ ವಯಸಿ ಸ್ಥಿರಮ್ ।
ವಿಧಾಯ ವಿವಿಧೋಪಾಯೈರಥ ಯುಂಜಂತಿ ಸಿದ್ಧಯೇ ॥
(ಶ್ಲೋಕ - 42)
ಮೂಲಮ್
ನಹಿ ತತ್ಕುಶಲಾದೃತ್ಯಂ ತದಾಯಾಸೋ ಹ್ಯಪಾರ್ಥಕಃ ।
ಅಂತವತ್ತ್ವಾಚ್ಛರೀರಸ್ಯ ಲಸ್ಯೇವ ವನಸ್ಪತೇಃ ॥
ಅನುವಾದ
ಕೆಲ-ಕೆಲವು ಮನಸ್ವೀ ಯೋಗಿಗಳು ವಿವಿಧ ಉಪಾಯಗಳಿಂದ ಈ ಶರೀರವನ್ನು ಸುದೃಢ ಮತ್ತು ತರುಣವಾಗಿಯೇ ಸ್ಥಿರಗೊಳಿಸಿ ಮತ್ತೆ ಅಣಿಮಾದಿ ಸಿದ್ಧಿಗಳಿಗಾಗಿ ಯೋಗ ಸಾಧನೆ ಮಾಡುತ್ತಾರೆ. ಆದರೆ ಬುದ್ಧಿವಂತರಾದವರು ಇಂತಹ ವಿಚಾರವನ್ನು ಸಮರ್ಥಿಸುವುದಿಲ್ಲ. ಏಕೆಂದರೆ ಇದಾದರೋ ಒಂದು ವ್ಯರ್ಥ ಪ್ರಯಾಸವೇ ಆಗಿದೆ. ವೃಕ್ಷಗಳಲ್ಲಿ ಬಿಟ್ಟ ಲದಂತೆಯೇ ಈ ಶರೀರದ ನಾಶವು ಅವಶ್ಯಂಭಾವಿಯಾಗಿದೆ. ॥41-42॥
(ಶ್ಲೋಕ - 43)
ಮೂಲಮ್
ಯೋಗಂ ನಿಷೇವತೋ ನಿತ್ಯಂ ಕಾಯಶ್ಚೇತ್ಕಲ್ಪತಾಮಿಯಾತ್ ।
ತಚ್ಛ್ರದ್ದಧ್ಯಾನ್ನ ಮತಿಮಾನ್ ಯೋಗಮುತ್ಸೃಜ್ಯ ಮತ್ಪರಃ ॥
ಅನುವಾದ
ಒಂದೊಮ್ಮೆ ಬಹಳ ದಿನಗಳವರೆಗೆ ನಿರಂತರ, ಆದರಪೂರ್ವಕವಾಗಿ ಯೋಗಸಾಧನೆ ಮಾಡುತ್ತಿರುವಾಗ ಶರೀರವು ಸುದೃಢವೂ ಆಗಬಹುದು. ಆಗಲೂ ಬುದ್ಧಿವಂತರಾದವರು ತಮ್ಮ ಸಾಧನೆಯನ್ನು ಬಿಟ್ಟು ಅದರಲ್ಲೇ ಸಂತೋಷಪಡಬಾರದು. ಅವರಾದರೋ ಸದಾಕಾಲವೂ ನನ್ನ ಪ್ರಾಪ್ತಿಗಾಗಿಯೇ ತೊಡಗಿರಬೇಕು. ॥43॥
(ಶ್ಲೋಕ - 44)
ಮೂಲಮ್
ಯೋಗಚರ್ಯಾಮಿಮಾಂ ಯೋಗೀ ವಿಚರನ್ಮದಪಾಶ್ರಯಃ ।
ನಾಂತರಾಯೈರ್ವಿಹನ್ಯೇತ ನಿಃಸ್ಪೃಹಃ ಸ್ವಸುಖಾನುಭೂಃ ॥
ಅನುವಾದ
ನನ್ನನ್ನು ಆಶ್ರಯಿಸಿ, ನನ್ನಿಂದ ಹೇಳಲ್ಪಟ್ಟ ಯೋಗಸಾಧನೆಯಲ್ಲಿ ತೊಡಗಿರುವ ಸಾಧಕನಿಗೆ ಯಾವುದೇ ವಿಘ್ನಗಳು ಕದಲಿಸಲಾರವು. ಅವನ ಕಾಮನೆಗಳೆಲ್ಲ ನಾಶವಾಗಿ ಹೋಗುತ್ತವೆ ಮತ್ತು ಅವನು ಆತ್ಮಾನಂದದ ಅನುಭೂತಿಯಲ್ಲಿ ಮುಳುಗಿಹೋಗುತ್ತಾನೆ. ॥44॥
ಅನುವಾದ (ಸಮಾಪ್ತಿಃ)
ಇಪ್ಪತ್ತೆಂಟನೆಯ ಅಧ್ಯಾಯವು ಮುಗಿಯಿತು. ॥28॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಅಷ್ಟಾವಿಂಶೋಽಧ್ಯಾಯಃ ॥28॥