೨೭

[ಇಪ್ಪತ್ತೇಳನೆಯ ಅಧ್ಯಾಯ]

ಭಾಗಸೂಚನಾ

ಭಗವಂತನ ಪೂಜಾ ವಿಧಾನ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಕ್ರಿಯಾಯೋಗಂ ಸಮಾಚಕ್ಷ್ವ ಭವದಾರಾಧನಂ ಪ್ರಭೋ ।
ಯಸ್ಮಾತ್ತ್ವಾಂ ಯೇ ಯಥಾರ್ಚಂತಿ ಸಾತ್ವತಾಃ ಸಾತ್ವತರ್ಷಭ ॥

ಅನುವಾದ

ಉದ್ಧವನು ಕೇಳಿದನು — ಭಕ್ತವತ್ಸಲ ಕೃಷ್ಣಾ! ಯಾವ ಕ್ರಿಯಾ ಯೋಗವನ್ನು ಆಶ್ರಯಿಸಿ ಭಕ್ತಜನರು ಯಾವ ಪ್ರಕಾರದಿಂದ, ಯಾವ ಉದ್ದೇಶಕ್ಕಾಗಿ, ನಿನ್ನನ್ನು ಆರಾಧಿಸುತ್ತಾರೆ? ನೀನು ನಿನ್ನ ಆರಾಧನಾರೂಪವಾದ ಆ ಕ್ರಿಯಾ ಯೋಗವನ್ನು ವರ್ಣಿಸುವ ಕೃಪೆಮಾಡು. ॥1॥

(ಶ್ಲೋಕ - 2)

ಮೂಲಮ್

ಏತದ್ವದಂತಿ ಮುನಯೋ ಮುಹುರ್ನಿಃಶ್ರೇಯಸಂ ನೃಣಾಮ್ ।
ನಾರದೋ ಭಗವಾನ್ ವ್ಯಾಸ ಆಚಾರ್ಯೋಂಗಿರಸಃ ಸುತಃ ॥

ಅನುವಾದ

ದೇವರ್ಷಿಗಳಾದ ನಾರದರು, ಭಗವಾನ್ ವೇದವ್ಯಾಸರು, ಆಚಾರ್ಯ ಬೃಹಸ್ಪತಿಯರು ಮುಂತಾದ ದೊಡ್ಡ ದೊಡ್ಡ ಋಷಿ-ಮುನಿಗಳು ‘ಕ್ರಿಯಾಯೋಗದ ಮೂಲಕ ನಿನ್ನ ಆರಾಧನೆಯು ಮನುಷ್ಯರ ಪರಮ ಶ್ರೇಯಸ್ಸಿನ ಸಾಧನೆಯಾಗಿದೆ’ ಎಂದು ಪದೇ-ಪದೇ ಹೇಳುತ್ತಾರೆ. ॥2॥

(ಶ್ಲೋಕ - 3)

ಮೂಲಮ್

ನಿಸ್ಸೃತಂ ತೇ ಮುಖಾಂಭೋಜಾದ್ಯದಾಹ ಭಗವಾನಜಃ ।
ಪುತ್ರೇಭ್ಯೋ ಭೃಗುಮುಖ್ಯೋಭ್ಯೋ ದೇವ್ಯೈ ಚ ಭಗವಾನ್ ಭವಃ ॥

ಅನುವಾದ

ಈ ಪೂಜಾವಿಧಾನವು ಮೊಟ್ಟಮೊದಲು ನಿನ್ನ ಮುಖಾರವಿಂದದಿಂದಲೇ ಹೊರಟಿತ್ತು. ಇದನ್ನು ಬ್ರಹ್ಮದೇವರು ನಿನ್ನಿಂದ ಗ್ರಹಿಸಿ, ತನ್ನ ಪುತ್ರ ಭೃಗು ಮುಂತಾದ ಮಹರ್ಷಿಗಳಿಗೆ ಹಾಗೂ ಭಗವಾನ್ ಶಂಕರನು ತನ್ನ ಅರ್ಧಾಂಗಿನೀ ಭಗವತೀ ಪಾರ್ವತಿಗೆ ಉಪದೇಶಿಸಿದ್ದರು.॥3॥

(ಶ್ಲೋಕ - 4)

ಮೂಲಮ್

ಏತದ್ವೈ ಸರ್ವವರ್ಣಾನಾಮಾಶ್ರಮಾಣಾಂ ಚ ಸಮ್ಮತಮ್ ।
ಶ್ರೇಯಸಾಮುತ್ತಮಂ ಮನ್ಯೇ ಸೀಶೂದ್ರಾಣಾಂ ಚ ಮಾನದ ॥

ಅನುವಾದ

ಮರ್ಯಾದಾರಕ್ಷಕ ಪ್ರಭೋ! ಈ ಪೂಜಾ ಪದ್ಧತಿಯು ಬ್ರಾಹ್ಮಣ ಕ್ಷತ್ರಿಯ ಮುಂತಾದ ವರ್ಣಗಳಿಗೆ, ಬ್ರಹ್ಮಚಾರೀ-ಗೃಹಸ್ಥ ಮುಂತಾದ ಆಶ್ರಮಿಗಳಿಗೆ ಪರಮ ಶ್ರೇಯಸ್ಕರವಾಗಿದೆ. ಸ್ತ್ರೀ ಶೂದ್ರಾದಿಗಳಿಗಾಗಿಯೂ ಇದು ಎಲ್ಲಕ್ಕಿಂತ ಶ್ರೇಷ್ಠಸಾಧನ ಪದ್ಧತಿಯಾಗಿದೆ ಎಂದು ನಾನು ತಿಳಿಯುತ್ತೇನೆ.॥4॥

(ಶ್ಲೋಕ - 5)

ಮೂಲಮ್

ಏತತ್ಕಮಲಪತ್ರಾಕ್ಷ ಕರ್ಮಬಂಧವಿಮೋಚನಮ್ ।
ಭಕ್ತಾಯ ಚಾನುರಕ್ತಾಯ ಬ್ರೂಹಿ ವಿಶ್ವೇಶ್ವರೇಶ್ವರ ॥

ಅನುವಾದ

ಕಮಲನಯನ ಶ್ಯಾಮಸುಂದರಾ! ನೀನು ಶಂಕರಾದಿ ಜಗದೀಶ್ವರರಿಗೂ ಈಶ್ವರನಾಗಿರುವೆ. ನಾನು ನಿನ್ನ ಚರಣಗಳ ಪ್ರೇಮೀ ಭಕ್ತನಾಗಿದ್ದೇನೆ. ನೀನು ದಯಮಾಡಿ ನನಗೆ ಕರ್ಮಬಂಧನದಿಂದ ಬಿಡುಗಡೆ ಗೊಳಿಸುವ ಈ ವಿಧಿಯನ್ನು ತಿಳಿಸುವವನಾಗು. ॥5॥

ಮೂಲಮ್

(ಶ್ಲೋಕ - 6)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ನ ಹ್ಯಂತೋನಂತಪಾರಸ್ಯ ಕರ್ಮಕಾಂಡಸ್ಯ ಚೋದ್ಧವ ।
ಸಂಕ್ಷಿಪ್ತಂ ವರ್ಣಯಿಷ್ಯಾಮಿ ಯಥಾವದನುಪೂರ್ವಶಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಎಲೈ ಉದ್ಧವನೇ! ಕರ್ಮಕಾಂಡವು ಸೀಮೆಯೇ ಇಲ್ಲದಷ್ಟು ವಿಸ್ತಾರವಾಗಿದೆ. ಅದಕ್ಕಾಗಿ ನಾನು ಸ್ವಲ್ಪದರಲ್ಲಿ ಪೂರ್ವಾಪರಕ್ರಮದಿಂದ ವರ್ಣಿಸುವೆನು. ॥6॥

(ಶ್ಲೋಕ - 7)

ಮೂಲಮ್

ವೈದಿಕಸ್ತಾಂತ್ರಿಕೋ ಮಿಶ್ರ ಇತಿ ಮೇ ತ್ರಿವಿಧೋ ಮಖಃ ।
ತ್ರಯಾಣಾಮೀಪ್ಸಿತೇನೈವ ವಿಧಿನಾ ಮಾಂ ಸಮರ್ಚಯೇತ್ ॥

ಅನುವಾದ

ನನ್ನ ಪೂಜೆಯಲ್ಲಿ ವೈದಿಕ, ತಾಂತ್ರಿಕ ಮತ್ತು ಮಿಶ್ರಿತ ಎಂಬ ಮೂರು ವಿಧಿಗಳಿವೆ. ಈ ಮೂರರಲ್ಲಿನ ಯಾವ ವಿಧಿಯು ನನ್ನ ಭಕ್ತನಿಗೆ ಅನುಕೂಲವಾಗಿದೆಯೋ, ಅದೇ ವಿಧಿಯಿಂದ ನನ್ನನ್ನು ಆರಾಧಿಸಬೇಕು. ॥7॥

(ಶ್ಲೋಕ - 8)

ಮೂಲಮ್

ಯದಾ ಸ್ವನಿಗಮೇನೋಕ್ತಂ ದ್ವಿಜತ್ವಂ ಪ್ರಾಪ್ಯ ಪೂರುಷಃ ।
ಯಥಾ ಯಜೇತ ಮಾಂ ಭಕ್ತ್ಯಾ ಶ್ರದ್ಧಯಾ ತನ್ನಿಬೋಧ ಮೇ ॥

ಅನುವಾದ

ಮೊದಲಿಗೆ ತನ್ನ ಅಧಿಕಾರಾನುಸಾರವಾಗಿ ಶಾಸೋಕ್ತ ವಿಧಿಯಿಂದ ಸಮಯಕ್ಕೆ ಸರಿಯಾಗಿ ಉಪನಯನ ಸಂಸ್ಕಾರದ ಮೂಲಕ ದ್ವಿಜತ್ವವನ್ನು ಪಡೆದು, ಮತ್ತೆ ಶ್ರದ್ಧೆ, ಭಕ್ತಿಯಿಂದೊಡಗೂಡಿ ಅವನು ಯಾವ ವಿಧಿಯಿಂದ ನನ್ನನ್ನು ಪೂಜಿಸಬೇಕೆಂಬುದನ್ನು ನಿನಗೆ ತಿಳಿಸುತ್ತೇನೆ. ॥8॥

(ಶ್ಲೋಕ - 9)

ಮೂಲಮ್

ಅರ್ಚಾಯಾಂ ಸ್ಥಂಡಿಲೇಗ್ನೌ ವಾ ಸೂರ್ಯೇ ವಾಪ್ಸು ಹೃದಿ ದ್ವಿಜೇ ।
ದ್ರವ್ಯೇಣ ಭಕ್ತಿಯುಕ್ತೋರ್ಚೇತ್ ಸ್ವಗುರುಂ ಮಾಮಮಾಯಯಾ ॥

ಅನುವಾದ

ಭಕ್ತಿ ಪೂರ್ವಕ ನಿಷ್ಕಪಟ ಭಾವದಿಂದ ನನ್ನ ಪ್ರತೀಕದಲ್ಲಾಗಲೀ, ವೇದಿಯಲ್ಲಾಗಲೀ, ಅಗ್ನಿಯಲ್ಲಾಗಲೀ, ನೀರಿನಲ್ಲಾಗಲೀ, ಹೃದಯದಲ್ಲಾಗಲೀ, ಅಥವಾ ಜ್ಞಾನಿಯಾದ ಬ್ರಾಹ್ಮಣನಲ್ಲಾಗಲೀ ಆತ್ಮಗುರುವಾದ ನನ್ನನ್ನು ಆವಾಹನೆಮಾಡಿ ಆರಾಧನೆ ಮಾಡಬೇಕು. ॥9॥

(ಶ್ಲೋಕ - 10)

ಮೂಲಮ್

ಪೂರ್ವಂ ಸ್ನಾನಂ ಪ್ರಕುರ್ವೀತ ಧೌತದಂತೋಂಗಶುದ್ಧಯೇ ।
ಉಭಯೈರಪಿ ಚ ಸ್ನಾನಂ ಮಂತ್ರೈರ್ಮೃದ್ ಗ್ರಹಣಾದಿನಾ ॥

ಅನುವಾದ

ಉಪಾಸಕನಾದವನು ಪ್ರಾತಃ ಕಾಲದಲ್ಲಿ ಹಲ್ಲುಗಳನ್ನುಜ್ಜಿಕೊಂಡು, ಶರೀರ ಶುದ್ಧಿಗಾಗಿ ಸ್ನಾನ ಮಾಡಬೇಕು. ಮತ್ತೆ ವೈದಿಕ ಮತ್ತು ತಾಂತ್ರಿಕಗಳೆಂಬ ಎರಡೂ ಪ್ರಕಾರದ ಮಂತ್ರಗಳಿಂದ ಮೃತ್ತಿಕಾಸ್ನಾನ ಮಾಡಬೇಕು. ॥10॥

(ಶ್ಲೋಕ - 11)

ಮೂಲಮ್

ಸಂಧ್ಯೋಪಾಸ್ತ್ಯಾದಿಕರ್ಮಾಣಿ ವೇದೇನಾಚೋದಿತಾನಿ ಮೇ ।
ಪೂಜಾಂ ತೈಃ ಕಲ್ಪಯೇತ್ ಸಮ್ಯಕ್ ಸಂಕಲ್ಪಃ ಕರ್ಮಪಾವನೀಮ್ ॥

ಅನುವಾದ

ಇದಾದ ಬಳಿಕ ವೇದೋಕ್ತ ಸಂಧ್ಯಾವಂದನಾದಿ ನಿತ್ಯಕರ್ಮಗಳನ್ನು ಮಾಡಬೇಕು. ಅನಂತರ ನನ್ನ ಆರಾಧನೆ ಗಾಗಿಯೇ ದೃಢವಾದ ಸಂಕಲ್ಪವನ್ನು ಗೈದು, ವೈದಿಕ ಹಾಗೂ ತಾಂತ್ರಿಕವಿಧಿಗಳಿಂದ ಕರ್ಮಬಂಧನದಿಂದ ಬಿಡಿಸುವಂತಹ ನನ್ನ ಪೂಜೆಯನ್ನು ಮಾಡಬೇಕು. ॥11॥

(ಶ್ಲೋಕ - 12)

ಮೂಲಮ್

ಶೈಲೀ ದಾರುಮಯೀ ಲೌಹೀ ಲೇಪ್ಯಾ ಲೇಖ್ಯಾ ಚ ಸೈಕತೀ ।
ಮನೋಮಯೀ ಮಣಿಮಯೀ ಪ್ರತಿಮಾಷ್ಟವಿಧಾ ಸ್ಮೃತಾ ॥

ಅನುವಾದ

ನನ್ನ ಪ್ರತಿಮೆಗಳಲ್ಲಿ (1) ಕಲ್ಲಿನದು, (2) ಮರದ್ದು, (3) ಧಾತುಗಳದ್ದು, (4) ಮಣ್ಣು ಅಥವಾ ಗಂಧದ್ದು, (5) ಚಿತ್ರರೂಪದಲ್ಲಿ ಬರೆದುದು, (6) ಮಳಲಿನದ್ದು, (7) ಮನೋಮಯ ಮತ್ತು (8) ಮಣಿಮಯ ಹೀಗೆ ಎಂಟು ಪ್ರಕಾರಗಳಾಗಿವೆ. ॥12॥

(ಶ್ಲೋಕ - 13)

ಮೂಲಮ್

ಚಲಾಚಲೇತಿ ದ್ವಿವಿಧಾ ಪ್ರತಿಷ್ಠಾ ಜೀವಮಂದಿರಮ್ ।
ಉದ್ವಾಸಾವಾಹನೇ ನ ಸ್ತಃ ಸ್ಥಿರಾಯಾಮುದ್ಧವಾರ್ಚನೇ ॥

ಅನುವಾದ

ಚಲ ಮತ್ತು ಅಚಲ ಭೇದದಿಂದ ಒಂದು ಮೂರ್ತಿಯು ಅಚಲವಾಗಿ ಮಂದಿರದಲ್ಲಿ ಪ್ರತಿಷ್ಠಿತವಾಗಿದ್ದು, ಇನ್ನೊಂದು ರಥೋತ್ಸವಾದಿಗಳಿಗೆ ಉತ್ಸವ ಮೂರ್ತಿಯಾಗಿರುತ್ತದೆ. ಇಂತಹ ಎರಡು ಪ್ರಕಾರದ ಪ್ರತಿಮೆಗಳಲ್ಲಿಯೂ ಭಗವಂತನಾದ ನನ್ನ ಸನ್ನಿಧಾನವಿರುತ್ತದೆ. ಉದ್ಧವನೇ! ಅಚಲ ಪ್ರತಿಮೆಯ ಪೂಜೆಯಲ್ಲಿ ಪ್ರತಿದಿನ ಆವಾಹನೆ, ವಿಸರ್ಜನೆ ಇರುವುದಿಲ್ಲ. ॥13॥

(ಶ್ಲೋಕ - 14)

ಮೂಲಮ್

ಅಸ್ಥಿರಾಯಾಂ ವಿಕಲ್ಪಃ ಸ್ಯಾತ್ಸ್ಥಂಡಿಲೇ ತು ಭವೇದ್ದ್ವಯಮ್ ।
ಸ್ನಪನಂ ತ್ವವಿಲೇಪ್ಯಾಯಾಮನ್ಯತ್ರ ಪರಿಮಾರ್ಜನಮ್ ॥

ಅನುವಾದ

ಚಲ ಪ್ರತಿಮೆಯ ಸಂಬಂಧದಲ್ಲಿ ಆವಾಹನೆ ಮಾಡುವುದೂ, ಮಾಡದಿರುವುದೂ ವಿಕಲ್ಪವಿದೆ. (ಚರಮೂರ್ತಿಯಾದ ಸಾಲಿಗ್ರಾಮದಲ್ಲಿ ಆವಾಹನೆ-ವಿಸರ್ಜನೆಗಳಿಲ್ಲ.) ಆದರೆ ಮಳಲಮೂರ್ತಿಯಲ್ಲಾದರೋ ಪ್ರತಿದಿನ ಆಹಾವನೆ-ವಿಸರ್ಜನೆಮಾಡಬೇಕು. ಮಣ್ಣಿನ, ಗಂಧದ, ಚಿತ್ರಪಟ ಮುಂತಾದ ಪ್ರತಿಮೆಗಳಿಗೆ ಸ್ನಾನಮಾಡಿಸದೆ, ಕೇವಲ ಪ್ರೋಕ್ಷಣೆ ಮಾಡಬೇಕು. ಆದರೆ ಉಳಿದ ಎಲ್ಲ ಪ್ರತಿಮೆಗಳಿಗೆ ಸ್ನಾನ ಮಾಡಿಸಬೇಕು. ॥14॥

(ಶ್ಲೋಕ - 15)

ಮೂಲಮ್

ದ್ರವ್ಯೈಃ ಪ್ರಸಿದ್ಧೈರ್ಮದ್ಯಾಗಃ ಪ್ರತಿಮಾದಿಷ್ವಮಾಯಿನಃ ।
ಭಕ್ತಸ್ಯ ಚ ಯಥಾಲಬ್ಧೈರ್ಹೃದಿ ಭಾವೇನ ಚೈವ ಹಿ ॥

ಅನುವಾದ

ವಿಧಿಗನುಗುಣವಾಗಿ ವಿಶೇಷ ಪೂಜಾಸಾಮಗ್ರಿಗಳಿಂದ ಪ್ರತಿಮಾದಿಗಳಲ್ಲಿ ನನ್ನ ಪೂಜೆ ಮಾಡಬೇಕು. ಆದರೆ ನಿಷ್ಕಾಮಭಕ್ತನು ಸುಲಭವಾಗಿ ದೊರೆಯುವ (ಪತ್ರ, ಪುಷ್ಪ, ಜಲ, ಫಲ) ಸಾಮಗ್ರಿಗಳಿಂದಲೇ ನನ್ನ ಪೂಜೆ ಮಾಡಲಿ. ಅಥವಾ ಹೃದಯದಲ್ಲಿ ನನ್ನನ್ನು ಧ್ಯಾನಿಸುತ್ತಾ ಮಾನಸಿಕ ಪೂಜೆಯನ್ನೂ ಮಾಡಬಹುದು. ॥15॥

(ಶ್ಲೋಕ - 16)

ಮೂಲಮ್

ಸ್ನಾನಾಲಂಕರಣಂ ಪ್ರೇಷ್ಠಮರ್ಚಾಯಾಮೇವ ತೂದ್ಧವ ।
ಸ್ಥಂಡಿಲೇ ತತ್ತ್ವವಿನ್ಯಾಸೋ ವಹ್ನಾವಾಜ್ಯಪ್ಲುತಂ ಹವಿಃ ॥

ಅನುವಾದ

ಎಲೈ ಉದ್ಧವನೇ! ಸ್ನಾನ, ವಸ್ತ್ರ, ಆಭೂಷಣಾದಿಗಳಾದರೋ ಕಲ್ಲಿನ ಅಥವಾ ಧಾತುವಿನ ಪ್ರತಿಮೆಯ ಪೂಜೆಯಲ್ಲಿ ವಿನಿಯೋಗಿಸಬೇಕು. ಮಳಲುಮಯ ಮೂರ್ತಿ ಅಥವಾ ಮಣ್ಣಿನ ವೇದಿಕೆಯಲ್ಲಿ ಪೂಜೆ ಮಾಡುವುದಿದ್ದರೆ, ಅವುಗಳಲ್ಲಿ ಮಂತ್ರಗಳ ಮೂಲಕ ತತ್ತ್ವನ್ಯಾಸಮಾಡಿ, ಪ್ರಧಾನ ದೇವತೆಗಳನ್ನು ಸ್ಥಾಪಿಸಿ ಪೂಜಿಸಬೇಕು. ಅಗ್ನಿಯಲ್ಲಿ ಘೃತಮಿಶ್ರಿತ ಹವನ ಸಾಮಗ್ರಿಗಳಿಂದ ಆಹುತಿಗಳನ್ನಿತ್ತು ಪೂಜಿಸಬೇಕು. ॥16॥

(ಶ್ಲೋಕ - 17)

ಮೂಲಮ್

ಸೂರ್ಯೇ ಚಾಭ್ಯರ್ಹಣಂ ಪ್ರೇಷ್ಠಂ ಸಲಿಲೇ ಸಲಿಲಾದಿಭಿಃ ।
ಶ್ರದ್ಧಯೋಪಾಹೃತಂ ಪ್ರೇಷ್ಠಂ ಭಕ್ತೇನ ಮಮ ವಾರ್ಯಪಿ ॥

ಅನುವಾದ

ಸೂರ್ಯನನ್ನೇ ನನ್ನ ಪ್ರತೀಕವಾಗಿಸಿಕೊಂಡು ಮಾಡಲಾಗುವ ಪೂಜೆ-ಉಪಾಸನೆಯಲ್ಲಿ ಪ್ರಧಾನವಾಗಿ ಅರ್ಘ್ಯದಾನ ಮತ್ತು ಉಪಸ್ಥಾನ, ನಮಸ್ಕಾರವಿರಬೇಕು. ನೀರಿನಲ್ಲಿ ತರ್ಪಣಾದಿಗಳಿಂದ ನನ್ನ ಉಪಾಸನೆ ಮಾಡಬೇಕು. ಯಾರಾದರೂ ನನ್ನ ಭಕ್ತನು ಶ್ರದ್ಧೆಯಿಂದ, ಹೃತ್ಪೂರ್ವಕವಾಗಿ ನೀರನ್ನು ಅರ್ಪಿಸಿದರೂ ನಾನು ಅದನ್ನು ತುಂಬಾ ಪ್ರೇಮದಿಂದ ಸ್ವೀಕರಿಸುತ್ತೇನೆ. ॥17॥

(ಶ್ಲೋಕ - 18)

ಮೂಲಮ್

ಭೂರ್ಯಪ್ಯಭಕ್ತೋಪಹೃತಂ ನ ಮೇ ತೋಷಾಯ ಕಲ್ಪತೇ ।
ಗಂಧೋ ಧೂಪಃ ಸುಮನಸೋ ದೀಪೋನ್ನಾದ್ಯಂ ಚ ಕಿಂ ಪುನಃ ॥

ಅನುವಾದ

ಭಕ್ತಿಯಿಲ್ಲದವನು ನನಗೆ ಅನೇಕ ಸಾಮಗ್ರಿಗಳನ್ನು ನಿವೇದನೆ ಮಾಡಿದರೂ ಅದರಿಂದ ನಾನು ಸಂತುಷ್ಟನಾಗುವುದಿಲ್ಲ. ಆದರೆ ನನ್ನ ಭಕ್ತನು ನನಗೆ ಶ್ರದ್ಧಾಭಕ್ತಿ ಪೂರ್ವಕವಾಗಿ ನೀರನ್ನೇ ನಿವೇದನೆಗೈದರೂ ಅದರಿಂದ ನಾನು ಸಂತುಷ್ಟನಾಗುತ್ತೇನೆ. ಮತ್ತೆ ಪುಷ್ಪ, ಧೂಪ, ದೀಪ, ನೈವೇದ್ಯ ಮುಂತಾದ ಸಾಮಗ್ರಿಗಳಿಂದ ನನ್ನನ್ನು ಪೂಜಿಸಿದರೆ ಅವನಿಗಾಗಿ ಹೇಳುವುದೇನಿದೆ? ॥18॥

(ಶ್ಲೋಕ - 19)

ಮೂಲಮ್

ಶುಚಿಃ ಸಂಭೃತಸಂಭಾರಃ ಪ್ರಾಗ್ದರ್ಭೈಃ ಕಲ್ಪಿತಾಸನಃ ।
ಆಸೀನಃ ಪ್ರಾಗುದಗ್ವಾರ್ಚೇದರ್ಚಾಯಾಮಥ ಸಮ್ಮುಖಃ ॥

ಅನುವಾದ

ಉಪಾಸಕನು ಮೊದಲಿಗೆ ಪೂಜೆಯ ಸಾಮಗ್ರಿಗಳನ್ನು ಅಣಿಗೊಳಿಸಿಕೊಳ್ಳಬೇಕು. ಮತ್ತೆ ಪೂರ್ವಾಗ್ರವಾಗಿ ಆಸನಕ್ಕಾಗಿ ದರ್ಭೆಗಳನ್ನು ಹಾಸಿಕೊಂಡು, ಪೂರ್ವ ಅಥವಾ ಉತ್ತರದ ಕಡೆಗೆ ಮುಖಮಾಡಿ ಪವಿತ್ರತೆಯಿಂದ ಆ ದರ್ಭಾಸನದಲ್ಲಿ ಕುಳಿತುಕೊಳ್ಳಬೇಕು. ಪ್ರತಿಮೆ ಅಚಲವಾಗಿದ್ದರೆ ಅದರ ಎದುರಿನಲ್ಲೇ ಕುಳಿತುಕೊಂಡು ಪೂಜೆಯನ್ನು ಪ್ರಾರಂಭಿಸಬೇಕು. ॥19॥

(ಶ್ಲೋಕ - 20)

ಮೂಲಮ್

ಕೃತನ್ಯಾಸಃ ಕೃತನ್ಯಾಸಾಂ ಮದರ್ಚಾಂ ಪಾಣಿನಾಮೃಜೇತ್ ।
ಕಲಶಂ ಪ್ರೋಕ್ಷಣೀಯಂ ಚ ಯಥಾವದುಪಸಾಧಯೇತ್ ॥

ಅನುವಾದ

ಮೊದಲಿಗೆ ವಿಧಿಪೂರ್ವಕ ಅಂಗನ್ಯಾಸ ಮತ್ತು ಕರನ್ಯಾಸಗಳನ್ನು ಮಾಡಿಕೊಂಡು, ಬಳಿಕ ಮೂರ್ತಿಯಲ್ಲಿ ಮಂತ್ರನ್ಯಾಸ (ತತ್ತ್ವನ್ಯಾಸ) ಮಾಡಬೇಕು. ದೇವರ ಮೇಲೆ ಹಿಂದೆ ಸಮರ್ಪಿಸಿದ ನಿರ್ಮಾಲ್ಯವನ್ನು ಕೈಯಿಂದ ತೆಗೆದು, ಚೆನ್ನಾಗಿ ಒರೆಸಿಡಬೇಕು. ಮತ್ತೆ ತುಂಬಿದ ಕಲಶ, ಪ್ರೋಕ್ಷಣಪಾತ್ರೆ, ಶಂಖ, ಗಂಟೆ ಇವುಗಳನ್ನು ಗಂಧಾಕ್ಷತೆಗಳಿಂದ ಪೂಜೆ ಮಾಡಬೇಕು. ॥20॥

(ಶ್ಲೋಕ - 21)

ಮೂಲಮ್

ತದದ್ಭಿರ್ದೇವಯಜನಂ ದ್ರವ್ಯಾಣ್ಯಾತ್ಮಾನಮೇವ ಚ ।
ಪ್ರೋಕ್ಷ್ಯ ಪಾತ್ರಾಣಿ ತ್ರೀಣ್ಯದ್ಭಿಃ ತೈಸ್ತೈರ್ದ್ರವ್ಯೈಶ್ಚ ಸಾಧಯೇತ್ ॥

ಅನುವಾದ

ಅನಂತರ ಪ್ರೋಕ್ಷಣಪಾತ್ರೆಯ ನೀರಿನಿಂದ ಪೂಜಾದ್ರವ್ಯಗಳನ್ನು ಮತ್ತು ತನ್ನ ಶರೀರವನ್ನು ಪ್ರೋಕ್ಷಿಸಿಕೊಳ್ಳಬೇಕು. ಪಾದ್ಯ, ಅರ್ಘ್ಯ, ಆಚಮನಗಳಿಗಾಗಿ ಮೂರು ಸಣ್ಣ ಪಾತ್ರೆಗಳಲ್ಲಿ ಕಲಶೋದಕವನ್ನು ತುಂಬಿ, ಪೂಜಾ ಪದ್ಧತಿಯಂತೆ ಸಾಮಗ್ರಿಗಳನ್ನು ಹಾಕಿ ಸಂಸ್ಕರಿಸಬೇಕು. (ಪಾದ್ಯಪಾತ್ರದಲ್ಲಿ ಶ್ಯಾಮಾಕ, ದೂರ್ವೆ, ಕಮಲ, ವಿಷ್ಣುಕ್ರಾಂತ, ಗಂಧ, ತುಲಸೀದಳ ಇವುಗಳನ್ನೂ; ಅರ್ಘ್ಯಪಾತ್ರೆಯಲ್ಲಿ ಗಂಧ, ಪುಷ್ಪ, ಅಕ್ಷತೆ, ಯವ, ಕುಶ, ಎಳ್ಳು, ಬಿಳಿಸಾಸಿವೆ, ಗರಿಕೆ ಇವುಗಳನ್ನೂ; ಆಚಮನ ಪಾತ್ರೆಯಲ್ಲಿ ಜಾಜಿಹೂವು, ಲವಂಗ, ಕಂಕೋಲ ಇವುಗಳನ್ನೂ ಹಾಕಬೇಕು.) ॥21॥

(ಶ್ಲೋಕ - 22)

ಮೂಲಮ್

ಪಾದ್ಯಾರ್ಘ್ಯಾಚಮನೀಯಾರ್ಥಂ ತ್ರೀಣಿ ಪಾತ್ರಾಣಿ ದೈಶಿಕಃ ।
ಹೃದಾ ಶೀರ್ಷ್ಣಾಥ ಶಿಖಯಾ ಗಾಯತ್ರ್ಯಾ ಚಾಭಿಮಂತ್ರಯೇತ್ ॥

ಅನುವಾದ

ಇದಾದ ಬಳಿಕ ಪೂಜಕನು ಪಾತ್ರೆಗಳಲ್ಲಿ ಕ್ರಮವಾಗಿ ಹೃದಯಮಂತ್ರ, ಶಿರೋಮಂತ್ರ, ಶಿಖಾಮಂತ್ರ ಇವುಗಳಿಂದ ಅಭಿಮಂತ್ರಿಸಿ, ಕೊನೆಗೆ ಈ ಮೂರೂ ಪಾತ್ರೆಗಳನ್ನು ಗಾಯತ್ರೀಮಂತ್ರದಿಂದ ಅಭಿಮಂತ್ರಿಸಬೇಕು. ॥22॥

(ಶ್ಲೋಕ - 23)

ಮೂಲಮ್

ಪಿಂಡೇ ವಾಯ್ವಗ್ನಿ ಸಂಶುದ್ಧೇ ಹೃತ್ಪದ್ಮಸ್ಥಾಂ ಪರಾಂ ಮಮ ।
ಅಣ್ವೀಂ ಜೀವಕಲಾಂ ಧ್ಯಾಯೇನ್ನಾದಾಂತೇ ಸಿದ್ಧಭಾವಿತಾಮ್ ॥

ಅನುವಾದ

ಮತ್ತೆ ಪ್ರಾಣಾಯಾಮದಿಂದ ಪ್ರಾಣವಾಯುವನ್ನು ಮತ್ತು ಭಾವನೆಯ ಮೂಲಕ ಶರೀರಸ್ಥ ಅಗ್ನಿಯನ್ನು ಶುದ್ಧಗೊಳಿಸಿ, ಹೃದಯಕಮಲದಲ್ಲಿ ಪರಮಸೂಕ್ಷ್ಮ ಮತ್ತು ಶ್ರೇಷ್ಠವಾದ ದೀಪಶಿಖೆಯಂತಿರುವ ನನ್ನ ಜೀವಕಲೆಯನ್ನು ಧ್ಯಾನಿಸಬೇಕು. ದೊಡ್ಡ-ದೊಡ್ಡ ಸಿದ್ಧ-ಋಷಿ ಮುನಿಗಳು ಓಂಕಾರದ ಅಕಾರ, ಉಕಾರ, ಮಕಾರ, ಬಿಂದು, ನಾದ ಈ ಐದು ಕಲೆಗಳ ಕೊನೆಯಲ್ಲಿ ಆ ಜೀವಕಲೆಯನ್ನು ಧ್ಯಾನಿಸುತ್ತಾರೆ. ॥23॥

(ಶ್ಲೋಕ - 24)

ಮೂಲಮ್

ತಯಾತ್ಮಭೂತಯಾ ಪಿಂಡೇ ವ್ಯಾಪ್ತೇ ಸಂಪೂಜ್ಯ ತನ್ಮಯಃ ।
ಆವಾಹ್ಯಾರ್ಚಾದಿಷು ಸ್ಥಾಪ್ಯನ್ಯಸ್ತಾಂಗಂ ಮಾಂ ಪ್ರಪೂಜಯೇತ್ ॥

ಅನುವಾದ

ಭಗವಂತನ ತೇಜೋಮಯ ಅಂಶವು ನನ್ನ ಹೃದಯದಲ್ಲಿದೆ, ಆ ಜೀವಕಲೆಯು ಆತ್ಮ ಸ್ವರೂಪವಾಗಿದೆ ಎಂದು ಪೂಜಕನು ಭಾವಿಸಬೇಕು. ಅವನ ತೇಜದಿಂದ ಇಡೀ ಅಂತಃಕರಣ ಮತ್ತು ಶರೀರ ತುಂಬಿ ಹೋದಾಗ ಮಾನಸಿಕ ಉಪಚಾರಗಳಿಂದ ಮನಸ್ಸಿನಲ್ಲೇ ಅವನನ್ನು ಪೂಜಿಸಬೇಕು. ತದನಂತರ ತನ್ಮಯನಾಗಿ ನನ್ನನ್ನು ಆವಾಹಿಸಿ ಪ್ರತಿಮಾದಿಗಳಲ್ಲಿ ಸ್ಥಾಪಿಸಬೇಕು. ಮತ್ತೆ ಅಂಗ ನ್ಯಾಸಮಾಡಿ ಮಂತ್ರಗಳ ಮೂಲಕ ನನ್ನ ಪೂಜೆ ಮಾಡಬೇಕು. ॥24॥

(ಶ್ಲೋಕ - 25)

ಮೂಲಮ್

ಪಾದ್ಯೋಪಸ್ಪರ್ಶಾರ್ಹಣಾದೀನ್ ಉಪಚಾರಾನ್ ಪ್ರಕಲ್ಪಯೇತ್ ।
ಧರ್ಮಾದಿಭಿಶ್ಚ ನವಭಿಃ ಕಲ್ಪಯಿತ್ವಾಸನಂ ಮಮ ॥

(ಶ್ಲೋಕ - 26)

ಮೂಲಮ್

ಪದ್ಮಮಷ್ಟದಲಂ ತತ್ರ ಕರ್ಣಿಕಾಕೇಸರೋಜ್ಜ್ವಲಮ್ ।
ಉಭಾಭ್ಯಾಂ ವೇದತಂತ್ರಾಭ್ಯಾಂ ಮಹ್ಯಂ ತೂಭಯಸಿದ್ಧಯೇ ॥

ಅನುವಾದ

ಎಲೈ ಉದ್ಧವನೇ! ನನ್ನ ಸಿಂಹಾಸನ (ಪೀಠ) ದಲ್ಲಿ ಧರ್ಮವೇ ಆದಿ ಗುಣಗಳನ್ನು ಮತ್ತು ವಿಮಲಾ ಮೊದಲಾದ ನವಶಕ್ತಿಗಳನ್ನು ಕಲ್ಪಿಸಿ ಆವಾಹಿಸಬೇಕು. ಅಂದರೆ ಪೀಠದ ನಾಲ್ಕೂ, ಮೂಲೆಗಳಲ್ಲಿ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ ಈ ನಾಲ್ಕು ಕಾಲುಗಳಿವೆ. ಅಧರ್ಮ, ಅಜ್ಞಾನ, ಅವೈರಾಗ್ಯ, ಅನೈಶ್ವರ್ಯ ಎಂಬ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ದಂಡಗಳಿವೆ. ಸತ್ತ್ವ, ರಜ, ತಮ ಎಂಬ ಮೂರು ಮೆಟ್ಟಲುಗಳಿಂದ ಕೂಡಿದ ಪೀಠವಿದೆ. ಅದರ ಮೇಲೆ ವಿಮಲಾ, ಉತ್ಕರ್ಷಿಣೀ, ಜ್ಞಾನಾ, ಕ್ರಿಯಾ, ಯೋಗಾ, ಪ್ರಹ್ವೀ, ಸತ್ಯಾ, ಈಶಾನಾ, ಅನುಗ್ರಹಾ ಎಂಬ ನವಶಕ್ತಿಗಳು ವಿರಾಜಮಾನವಾಗಿವೆ. ಆ ಪೀಠದಲ್ಲಿ ಒಂದು ಅಷ್ಟದಳ ಕಮಲವಿದೆ. ಅದರ ಕರ್ಣಿಕಾ ಅತ್ಯಂತ ಪ್ರಕಾಶಮಾನ ವಾಗಿದೆ ಮತ್ತು ಹಳದಿ ಬಣ್ಣದ ಕೇಸರಗಳ ಪ್ರಭೆ ಅಲೌಕಿಕವಾಗಿದೆ. ಆಸನದ ಸಂಬಂಧವಾಗಿ ಹೀಗೆ ಭಾವನೆ ಮಾಡಿ, ಪಾದ್ಯ, ಅರ್ಘ್ಯ, ಆಚಮನ ಮುಂತಾದ ಉಪಚಾರಗಳನ್ನು ಅರ್ಪಿಸಬೇಕು. ಬಳಿಕ ಭೋಗ ಮತ್ತು ಮೋಕ್ಷದ ಸಿದ್ಧಿಗಾಗಿ ವೈದಿಕ ಹಾಗೂ ತಾಂತ್ರಿಕ ವಿಧಿಯಿಂದ ನನ್ನನ್ನು ಪೂಜಿಸ ಬೇಕು. ॥25-26॥

(ಶ್ಲೋಕ - 27)

ಮೂಲಮ್

ಸುದರ್ಶನಂ ಪಾಂಚಜನ್ಯಂ ಗದಾಸೀಷುಧನುರ್ಹಲಾನ್ ।
ಮುಸಲಂ ಕೌಸ್ತುಭಂ ಮಾಲಾಂ ಶ್ರೀವತ್ಸಂ ಚಾನುಪೂಜಯೇತ್ ॥

ಅನುವಾದ

ಸುದರ್ಶನ ಚಕ್ರ, ಪಾಂಚಜನ್ಯ ಶಂಖ ಕೌಮೋದಕೀ ಗದೆ, ಖಡ್ಗ, ಬಾಣ, ಧನುಸ್ಸು, ಹಲ, ಮುಸಲ ಎಂಬ ಎಂಟು ಆಯುಧಗಳನ್ನು ಎಂಟು ದಿಕ್ಕುಗಳಲ್ಲಿಯೂ ಪೂಜಿಸಬೇಕು. ಕೌಸ್ತುಭಮಣಿ, ವೈಜಯಂತೀಮಾಲೆ, ಶ್ರೀವತ್ಸಲಾಂಛನ ವಕ್ಷಃಸ್ಥಳದ ಯಥಾಸ್ಥಾನದಲ್ಲಿ ಪೂಜಿಸಬೇಕು. ॥27॥

(ಶ್ಲೋಕ - 28)

ಮೂಲಮ್

ನಂದಂ ಸುನಂದಂ ಗರುಡಂ ಪ್ರಚಂಡಂ ಚಂಡಮೇವ ಚ ।
ಮಹಾಬಲಂ ಬಲಂ ಚೈವ ಕುಮುದಂ ಕುಮುದೇಕ್ಷಣಮ್ ॥

(ಶ್ಲೋಕ - 29)

ಮೂಲಮ್

ದುರ್ಗಾಂ ವಿನಾಯಕಂ ವ್ಯಾಸಂ ವಿಷ್ವಕ್ಸೇನಂ ಗುರೂನ್ಸುರಾನ್ ।
ಸ್ವೇ ಸ್ವೇ ಸ್ಥಾನೇ ತ್ವಭಿಮುಖಾನ್ ಪೂಜಯೇತ್ ಪ್ರೋಕ್ಷಣಾದಿಭಿಃ ॥

ಅನುವಾದ

ನಂದ, ಸುನಂದ, ಪ್ರಚಂಡ, ಚಂಡ, ಮಹಾಬಲ, ಬಲ, ಕುಮುದ, ಕುಮುದೇಕ್ಷಣ ಈ ಎಂಟು ಮಂದಿ ನನ್ನ ಪಾರ್ಷದರನ್ನು ಎಂಟುದಿಕ್ಕುಗಳಲ್ಲಿ ಸ್ಥಾಪಿಸಿ ಪೂಜಿಸಬೇಕು. ಗರುಡನನ್ನು ಇದಿರುಗಡೆಯಲ್ಲಿ ಸ್ಥಾಪಿಸಿ ಪೂಜಿಸಬೇಕು. ಬಳಿಕ ದುರ್ಗೆ, ವಿನಾಯಕ, ವ್ಯಾಸ, ವಿಷ್ವಕ್ಸೇನರನ್ನು ನಾಲ್ಕೂ ಮೂಲೆಗಳಲ್ಲಿ ಸ್ಥಾಪಿಸಿ ಪೂಜಿಸಬೇಕು. ಬಲಭಾಗದಲ್ಲಿ ಗುರುವನ್ನು, ಪೂರ್ವಾದಿ ಎಂಟು ದಿಕ್ಕುಗಳಲ್ಲಿ ಇಂದ್ರಾದಿ ಅಷ್ಟ-ದಿಕ್ಪಾಲಕರನ್ನು ಸ್ಥಾಪಿಸಿ, ಪ್ರೋಕ್ಷಣ, ಪಾದ್ಯ, ಅರ್ಘ್ಯ ಪ್ರದಾನಾದಿ ಕ್ರಮಗಳಿಂದ ಪೂಜೆ ಮಾಡಬೇಕು. ॥28-29॥

(ಶ್ಲೋಕ - 30)

ಮೂಲಮ್

ಚಂದನೋಶೀರಕರ್ಪೂರಕುಂಕುಮಾಗುರುವಾಸಿತೈಃ ।
ಸಲಿಲೈಃ ಸ್ನಾಪಯೇನ್ಮಂತ್ರೈರ್ನಿತ್ಯದಾ ವಿಭವೇ ಸತಿ ॥

(ಶ್ಲೋಕ - 31)

ಮೂಲಮ್

ಸ್ವರ್ಣಘರ್ಮಾನುವಾಕೇನ ಮಹಾಪುರುಷವಿದ್ಯಯಾ ।
ಪೌರುಷೇಣಾಪಿ ಸೂಕ್ತೇನ ಸಾಮಭೀ ರಾಜನಾದಿಭಿಃ ॥

ಅನುವಾದ

ಪ್ರಿಯ ಉದ್ಧವನೇ! ಸಾಮರ್ಥ್ಯ, ವೈಭವಗಳಿದ್ದರೆ ಪ್ರತಿ ದಿನವೂ ಚಂದನ, ಲಾವಂಚ, ಪಚ್ಚಕರ್ಪೂರ, ಕುಂಕುಕೇಸರಿ, ಅಗರು ಮುಂತಾದ ಸುಗಂಧ ದ್ರವ್ಯಗಳಿಂದ ಸುವಾಸಿತ ಜಲದಿಂದ ನನಗೆ ಅಭಿಷೇಕ ಮಾಡಬೇಕು. ‘ಸುವರ್ಣಂ ಘರ್ಮಂ ಪರಿವೇದ ವೇನಮ್’ ಸ್ವರ್ಣ ಘರ್ಮಾನುವಾಕದಿಂದಲೂ, ‘ಜಿತಂತೇ ಪುಂಡರೀಕಾಕ್ಷ’ ಎಂಬ ಮಹಾ ಪುರುಷವಿದ್ಯೆಯಿಂದಲೂ, ಪುರುಷ ಸೂಕ್ತದಿಂದಲೂ, ‘ಇಂದ್ರಂ ನ ರೋನೇ ಮಧಿತಾ ಹವಂತ’ ಮುಂತಾದ ರಾಜನಾದಿ ಸಾಮಗಾನದಿಂದಲೂ ನನಗೆ ಅಭಿಷೇಕ ಮಾಡಬೇಕು. ॥30-31॥

(ಶ್ಲೋಕ - 32)

ಮೂಲಮ್

ವಸೋಪವೀತಾಭರಣಪತ್ರಸ್ರಗ್ಗಂಧಲೇಪನೈಃ ।
ಅಲಂಕುರ್ವೀತ ಸಪ್ರೇಮ ಮದ್ಭಕ್ತೋ ಮಾಂ ಯಥೋಚಿತಮ್ ॥

ಅನುವಾದ

ನನ್ನ ಭಕ್ತನು ವಸ, ಯಜ್ಞೋಪವೀತ, ಆಭೂಷಣ, ಪತ್ರ, ಪುಷ್ಪಮಾಲೆ, ಗಂಧ, ಚಂದನಾದಿಗಳಿಂದ ಪ್ರೇಮಪೂರ್ವಕ ಯಥಾವತ್ ನನ್ನನ್ನು ಶೃಂಗರಿಸಲಿ. ॥32॥

(ಶ್ಲೋಕ - 33)

ಮೂಲಮ್

ಪಾದ್ಯಮಾಚಮನೀಯಂ ಚ ಗಂಧಂ ಸುಮನಸೋಕ್ಷತಾನ್ ।
ಧೂಪದೀಪೋಪಹಾರ್ಯಾಣಿ ದದ್ಯಾನ್ಮೇ ಶ್ರದ್ಧಯಾರ್ಚಕಃ ॥

ಅನುವಾದ

ಪೂಜಕನು ಶ್ರದ್ಧೆಯಿಂದ ನನಗೆ ಪಾದ್ಯ, ಆಚಮನ, ಚಂದನ, ಪುಷ್ಪ, ಅಕ್ಷತೆ, ಧೂಪ, ದೀಪ, ಮುಂತಾದ ಉಪಚಾರಗಳನ್ನು ಸಮರ್ಪಿಸಲಿ. ॥33॥

(ಶ್ಲೋಕ - 34)

ಮೂಲಮ್

ಗುಡಪಾಯಸಸರ್ಪೀಂಷಿ ಶಷ್ಕುಲ್ಯಾಪೂಪಮೋದಕಾನ್ ।
ಸಂಯಾವದಧಿಸೂಪಾಂಶ್ಚ ನೈವೇದ್ಯಂ ಸತಿ ಕಲ್ಪಯೇತ್ ॥

ಅನುವಾದ

ಅನುಕೂಲಕ್ಕೆ ತಕ್ಕಂತೆ ಬೆಲ್ಲ-ಪಾಯಸ, ತುಪ್ಪ, ಚಕ್ಕುಲಿ, ಅಪೂಪ (ವಡೆ), ಎರೆಯಪ್ಪ, ಅತಿರಸ, ಸಿಹಿಕಡಬು, ಲಾಡು, ಮೊಸರು, ತೊವ್ವೆ ಮೊದಲಾದ ನಾನಾ ವ್ಯಂಜನಗಳನ್ನು ನೈವೇದ್ಯ ಮಾಡಲಿ. ॥34॥

(ಶ್ಲೋಕ - 35)

ಮೂಲಮ್

ಅಭ್ಯಂಗೋನ್ಮರ್ದನಾದರ್ಶದಂತಧಾವಾಭಿಷೇಚನಮ್ ।
ಅನ್ನಾದ್ಯಗೀತನೃತ್ಯಾದಿ ಪರ್ವಣಿ ಸ್ಯುರುತಾನ್ವಹಮ್ ॥

ಅನುವಾದ

ನನ್ನ ಶ್ರೀವಿಗ್ರಹಕ್ಕೆ ದಂತಧಾವನ, ಎಣ್ಣೆ ಮಜ್ಜನ, ಅಂಗಗಳನ್ನು ಒತ್ತುವಿಕೆ, ಪಂಚಾಮೃತಾಭಿಷೇಕ, ಸುಗಂಧದ್ರವ್ಯಗಳ ಲೇಪನಮಾಡಿ, ಅಲಂಕಾರ, ಕನ್ನಡಿಸೇವೆ, ಅನ್ನಭಕ್ಷ್ಯಗಳ ನೈವೇದ್ಯ ಇತ್ಯಾದಿಗಳನ್ನು ಪ್ರತಿನಿತ್ಯವೂ ಮಾಡಬೇಕು. ನೃತ್ಯ-ಗೀತಾದಿ ಸೇವೆಯನ್ನು ನಿತ್ಯವೂ ಮಾಡಬಹುದು, ಸೌಕರ್ಯವಿಲ್ಲದಿದ್ದರೆ ಪರ್ವದಿವಸಗಳಲ್ಲಾದರೂ ಮಾಡಬೇಕು. ಜೊತೆಗೆ ಭಗವನ್ನಾಮ ಸಂಕೀರ್ತನೆ, ಹರಿಕಥೆಗಳನ್ನೂ ಏರ್ಪಡಿಸಬೇಕು. ॥35॥

(ಶ್ಲೋಕ - 36)

ಮೂಲಮ್

ವಿಧಿನಾ ವಿಹಿತೇ ಕುಂಡೇ ಮೇಖಲಾಗರ್ತವೇದಿಭಿಃ ।
ಅಗ್ನಿಮಾಧಾಯ ಪರಿತಃ ಸಮೂಹೇತ್ಪಾಣಿನೋದಿತಮ್ ॥

ಅನುವಾದ

ಉದ್ಧವನೇ! ಪೂಜಕನು ತನ್ನ ಗೃಹ್ಯೋಕ್ತವಿಧಿಯಿಂದ ನಿರ್ಮಿತವಾದ ಮೇಖಲೇ, ಗರ್ತ, ವೇದಿ ಇವುಗಳಿಂದ ಕೂಡಿದ ಕುಂಡದಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ, ಪ್ರಜ್ವಲನಗೊಳಿಸಬೇಕು. ಸುತ್ತಲೂ ಕೈಯಿಂದ ನೀರನ್ನು ಪ್ರೋಕ್ಷಿಸಿ ಅದನ್ನು ಪರಿಸಮೂಹನ ಮಾಡಬೇಕು. ॥36॥

(ಶ್ಲೋಕ - 37)

ಮೂಲಮ್

ಪರಿಸ್ತೀರ್ಯಾಥ ಪರ್ಯುಕ್ಷೇದನ್ವಾಧಾಯ ಯಥಾವಿಧಿ ।
ಪ್ರೋಕ್ಷಣ್ಯಾಸಾದ್ಯ ದ್ರವ್ಯಾಣಿ ಪ್ರೋಕ್ಷ್ಯಾಗ್ನೌ ಭಾವಯೇತ ಮಾಮ್ ॥

ಅನುವಾದ

ಬಳಿಕ ಹೋಮಕುಂಡದ ನಾಲ್ಕೂ ಕಡೆಗಳಲ್ಲಿಯೂ ಪರಿಸ್ತರಣವನ್ನು ಹಾಸಿ, ಪ್ರೋಕ್ಷಣಪಾತ್ರೆಯಲ್ಲಿರುವ ಜಲದಿಂದ ಸುತ್ತಲೂ ಪ್ರೋಕ್ಷಿಸಿ, ಸ್ವಗೃಹ್ಯೋಕ್ತವಿಧಿಯಿಂದ, ಸಮಿತ್ ಪ್ರಕ್ಷೇಪಾದಿ ವಿಧಿಯಿಂದ ಅನ್ವಾಧಾನ ಕರ್ಮವನ್ನು ಮಾಡಿ, ಅಗ್ನಿಗೆ ಉತ್ತರದಲ್ಲಿ ಹೋಮಕ್ಕೆ ಉಪಯುಕ್ತವಾದ ದ್ರವ್ಯಗಳನ್ನಿಟ್ಟು, ಪ್ರೋಕ್ಷಣೀಪಾತ್ರೆಯ ಜಲದಿಂದ ಪ್ರೋಕ್ಷಿಸಬೇಕು. ಅನಂತರ ಆ ಅಗ್ನಿಯಲ್ಲಿ ನನ್ನನ್ನು ಧ್ಯಾನಿಸಬೇಕು. ॥37॥

(ಶ್ಲೋಕ - 38)

ಮೂಲಮ್

ತಪ್ತಜಾಂಬೂನದಪ್ರಖ್ಯಂ ಶಂಖಚಕ್ರಗದಾಂಬುಜೈಃ ।
ಲಸಚ್ಚತುರ್ಭುಜಂ ಶಾಂತಂ ಪದ್ಮಕಿಂಜಲ್ಕವಾಸಸಮ್ ॥

(ಶ್ಲೋಕ - 39)

ಮೂಲಮ್

ಸ್ಫುರತ್ಕಿರೀಟಕಟಕಕಟಿಸೂತ್ರವರಾಂಗದಮ್ ।
ಶ್ರೀವತ್ಸವಕ್ಷಸಂ ಭ್ರಾಜತ್ಕೌಸ್ತುಭಂ ವನಮಾಲಿನಮ್ ॥

ಅನುವಾದ

ಪುಟಕ್ಕೆ ಹಾಕಿದ ಭಂಗಾರದ ಹೊಂಬಣ್ಣದಿಂದ ಬೆಳಗುವ ಶರೀರದಿಂದ ಕೂಡಿರುವ, ಶಂಖ, ಚಕ್ರ, ಗದೆ, ಪದ್ಮ ಇವುಗಳಿಂದ ಸಮಲಂಕೃತವಾದ ನಾಲ್ಕು ಭುಜಗಳಿಂದ ಶೋಭಾಯಮಾನವಾದ, ಶಾಂತವಾದ ಮುಖ ಭಾವದಿಂದಿರುವ, ಕಮಲದ ಕೇಸರದಂತೆ ನವುರಾಗಿರುವ ಪೀತಾಂಬರವನ್ನು ಉಟ್ಟಿರುವ, ಕಿರೀಟ, ಕಂಕಣ, ಕಟಿಸೂತ್ರ, ಭುಜಕೀರ್ತಿಗಳಿಂದ ಕಂಗೊಳಿಸುತ್ತಿರುವ, ವಕ್ಷಃಸ್ಥಳದಲ್ಲಿ ಶ್ರೀವತ್ಸ ಲಾಂಛನವನ್ನೂ, ಕೌಸ್ತುಭಮಣಿಯನ್ನೂ, ವನಮಾಲೆಯನ್ನೂ ಧರಿಸಿರುವ, ನನ್ನ ದಿವ್ಯ ಮಂಗಳ ವಿಗ್ರಹವನ್ನು ಧ್ಯಾನಿಸಬೇಕು. ॥38-39॥

(ಶ್ಲೋಕ - 40)

ಮೂಲಮ್

ಧ್ಯಾಯನ್ನಭ್ಯರ್ಚ್ಯ ದಾರೂಣಿ ಹವಿಷಾಭಿಘೃತಾನಿ ಚ ।
ಪ್ರಾಸ್ಯಾಜ್ಯಭಾಗಾವಾಘಾರೌ ದತ್ತ್ವಾ ಚಾಜ್ಯಪ್ಲುತಂ ಹವಿಃ ॥

ಅನುವಾದ

ಅಗ್ನಿಯಲ್ಲಿ ನನ್ನ ಈ ಮೂರ್ತಿಯನ್ನು ಧ್ಯಾನಿಸಿ ಪೂಜಿಸಬೇಕು. ಬಳಿಕ ಒಣಗಿದ ಸಮಿಧೆಗಳನ್ನು ತುಪ್ಪದಲ್ಲಿ ಅದ್ದಿ ಆಹುತಿಯನ್ನು ಕೊಡಬೇಕು. ಆಜ್ಯಭಾಗ ಮತ್ತು ಆಘಾರವೆಂಬ ಎರಡು ಆಹುತಿಗಳಿಂದ ಹವನ ಮಾಡಬೇಕು. ಬಳಿಕ ತುಪ್ಪದಲ್ಲಿ ಅದ್ದಿ ಬೇರೆ ಹವನ ದ್ರವ್ಯದಿಂದ ಆಹುತಿಗಳನ್ನು ಕೊಡಬೇಕು. ॥40॥

(ಶ್ಲೋಕ - 41)

ಮೂಲಮ್

ಜುಹುಯಾನ್ಮೂಲಮಂತ್ರೇಣ ಷೋಡಶರ್ಚಾವದಾನತಃ ।
ಧರ್ಮಾದಿಭ್ಯೋ ಯಥಾನ್ಯಾಯಂ ಮಂತ್ರೈಃ ಸ್ವಿಷ್ಟಕೃತಂ ಬುಧಃ ॥

ಅನುವಾದ

ಇದಾದ ಬಳಿಕ ತನ್ನ ಇಷ್ಟಮಂತ್ರದಿಂದ ಅಥವಾ ‘ಓಂ ನಮೋ ನಾರಾಯಣಾಯ’ ಈ ಅಷ್ಟಾಕ್ಷರ ಮಂತ್ರದಿಂದ, ಮತ್ತು ಪುರುಷಸೂಕ್ತದ ಹದಿನಾರು ಮಂತ್ರಗಳಿಂದ ಹವನ ಮಾಡಬೇಕು. ಬುದ್ಧಿವಂತನಾದವನು ಧರ್ಮಾದಿ ದೇವತೆಗಳಿಗೂ ವಿಧಿಪೂರ್ವಕ ಮಂತ್ರಗಳಿಂದ ಆಹುತಿಯನ್ನು ನೀಡಿ ಕೊನೆಯಲ್ಲಿ, ಸ್ವಿಷ್ಟಕೃತ್ ಆಹುತಿಯನ್ನು ಕೊಡಬೇಕು. ॥41॥

(ಶ್ಲೋಕ - 42)

ಮೂಲಮ್

ಅಭ್ಯರ್ಚ್ಯಾಥ ನಮಸ್ಕೃತ್ಯ ಪಾರ್ಷದೇಭ್ಯೋ ಬಲಿಂ ಹರೇತ್ ।
ಮೂಲಮಂತ್ರಂ ಜಪೇದ್ಬ್ರಹ್ಮ ಸ್ಮರನ್ನಾರಾಯಣಾತ್ಮಕಮ್ ॥

ಅನುವಾದ

ಹೀಗೆ ಅಗ್ನಿಯಲ್ಲಿ ಅಂತರ್ಯಾಮಿಯಾಗಿ ಸ್ಥಿತನಾದ ಭಗವಂತನ ಪೂಜೆಮಾಡಿ, ಅವನಿಗೆ ನಮಸ್ಕರಿಸಬೇಕು. ನಂದ, ಸುನಂದ ಮುಂತಾದ ಪಾರ್ಷದರಿಗೆ ಎಂಟೂದಿಕ್ಕುಗಳಲ್ಲಿ ಹವನಾಂಗ ಪಾಯಸಬಲಿಯನ್ನು ಅರ್ಪಿಸಬೇಕು. ಬಳಿಕ ಪ್ರತಿಮೆಯ ಮುಂದೆ ಕುಳಿತು ಪರಬ್ರಹ್ಮಸ್ವರೂಪೀ ಭಗವಾನ್ ನಾರಾಯಣನನ್ನು ಸ್ಮರಿಸಬೇಕು ಮತ್ತು ಭಗವತ್ಸ್ವರೂಪ ಮೂಲಮಂತ್ರ ‘ಓಂ ನಮೋ ನಾರಾಯಣಾಯ’ ಇದರ ಜಪಮಾಡಬೇಕು. ॥42॥

(ಶ್ಲೋಕ - 43)

ಮೂಲಮ್

ದತ್ತ್ವಾಚಮನಮುಚ್ಛೇಷಂ ಘಿವಿಷ್ವಕ್ಸೇನಾಯ ಘಿಕಲ್ಪಯೇತ್ ।
ಮುಖವಾಸಂಘಿಘಿಘಿಸುರಭಿಮತ್ತಾಂಬೂಲಾದ್ಯಮಥಾರ್ಹಯೇತ್ ॥

ಅನುವಾದ

ಇದಾದ ನಂತರ ಭಗವಂತನಿಗೆ ಹಸ್ತ ಪ್ರಕ್ಷಾಳನ, ಮುಖಪ್ರಕ್ಷಾಳನ, ಆಚಮನವನ್ನು ನೀಡಿ, ಅವನ ಪ್ರಸಾದವನ್ನು ವಿಷ್ವಕ್ಸೇನನಿಗೆ ಅರ್ಪಿಸಬೇಕು. ಬಳಿಕ ತನ್ನ ಇಷ್ಟದೇವರಿಗೆ ಮುಖವಾಸಕ್ಕಾಗಿ ಸುಗಂಧಿತ ತಾಂಬೂಲ ವನ್ನು ಅರ್ಪಿಸಿ, ಮಂತ್ರಪುಷ್ಪವನ್ನು ಸಮರ್ಪಿಸಬೇಕು. ॥43॥

(ಶ್ಲೋಕ - 44)

ಮೂಲಮ್

ಉಪಗಾಯನ್ಗೃಣನ್ ನೃತ್ಯನ್ ಕರ್ಮಾಣ್ಯಭಿನಯನ್ ಮಮ ।
ಮತ್ಕಥಾಃ ಶ್ರಾವಯನ್ ಶೃಣ್ವನ್ ಮುಹೂರ್ತಂ ಕ್ಷಣಿಕೋ ಭವೇತ್ ॥

ಅನುವಾದ

ನನ್ನ ಲೀಲೆಗಳನ್ನು ಹಾಡುತ್ತಾ, ಅವನ್ನು ವರ್ಣಿಸಬೇಕು. ನನ್ನ ಲೀಲೆಗಳನ್ನು ಅಭಿನಯದ ಮೂಲಕ ತೋರಿಸಬೇಕು. ಪ್ರೇಮೋನ್ಮತ್ತನಾಗಿ ನರ್ತಿಸಬೇಕು. ನನ್ನ ಲೀಲಾ-ಕಥೆಗಳನ್ನು ಸ್ವತಃ ಕೇಳುತ್ತಾ, ಇತರರಿಗೂ ಹೇಳಬೇಕು. ಆನಂದಪರವಶನಾಗಿ ಹೀಗೆ ನನ್ನ ಶ್ರೀವಿಗ್ರಹದಲ್ಲೇ ತನ್ಮಯನಾಗಿ ಮುಹೂರ್ತಕಾಲವನ್ನು ಕ್ಷಣದಂತೆ ಕಳೆಯಬೇಕು. ॥44॥

(ಶ್ಲೋಕ - 45)

ಮೂಲಮ್

ಸ್ತವೈರುಚ್ಚಾವಚೈಃ ಸ್ತೋತ್ರೈಃ ಪೌರಾಣೈಃ ಪ್ರಾಕೃತೈರಪಿ ।
ಸ್ತುತ್ವಾ ಪ್ರಸೀದ ಭಗವನ್ನಿತಿ ವಂದೇತ ದಂಡವತ್ ॥

ಅನುವಾದ

ಪ್ರಾಚೀನ ಋಷಿ-ಮುನಿಗಳಿಂದ ರಚಿಸಲ್ಪಟ್ಟ ಮತ್ತು ಪ್ರಾಕೃತ ಭಕ್ತರಿಂದ ಹಾಡಲ್ಪಟ್ಟ ಚಿಕ್ಕ-ದೊಡ್ಡ ಸ್ತೋತ್ರಗಳಿಂದ ನನ್ನನ್ನು ಸ್ತುತಿಸಿ, ‘ಭಗವಂತಾ! ನನ್ನ ಮೇಲೆ ಪ್ರಸನ್ನನಾಗು, ನನಗೆ ನಿನ್ನ ಕೃಪಾಪ್ರಸಾದವನ್ನು ಕರುಣಿಸು’ ಎಂದು ಪ್ರಾರ್ಥಿಸಬೇಕು. ಬಳಿಕ ದಂಡವತ್ ಸಾಷ್ಟಾಂಗ ಪ್ರಣಾಮ ಮಾಡಬೇಕು. ॥45॥

(ಶ್ಲೋಕ - 46)

ಮೂಲಮ್

ಶಿರೋ ಮತ್ಪಾದಯೋಃ ಕೃತ್ವಾ ಬಾಹುಭ್ಯಾಂ ಚ ಪರಸ್ಪರಮ್ ।
ಪ್ರಪನ್ನಂ ಪಾಹಿ ಮಾಮೀಶ ಭೀತಂ ಮೃತ್ಯುಗ್ರಹಾರ್ಣವಾತ್ ॥

ಅನುವಾದ

ಅರ್ಚಕನು ತನ್ನ ಶಿರಸ್ಸನ್ನು ನನ್ನ ಪಾದಗಳ ಮೇಲಿರಿಸಿಕೊಂಡು, ಬಲಗೈಯಿಂದ ನನ್ನ ಬಲಕಾಲನ್ನು, ಎಡಕೈಯಿಂದ ಎಡಕಾಲನ್ನು ಭದ್ರವಾಗಿ ಹಿಡಿದುಕೊಂಡು ‘ಭಗವಂತಾ! ಈ ಸಂಸಾರಸಾಗರದಲ್ಲಿ ನಾನು ಮುಳುಗುತ್ತಿದ್ದೇನೆ. ಮೃತ್ಯುರೂಪೀ ಗ್ರಹವು ನನ್ನ ಬೆನ್ನುಬಿದ್ದಿದೆ, ನಾನು ಭಯಗೊಂಡು ನಿನ್ನಲ್ಲಿ ಶರಣಾಗಿದ್ದೇನೆ. ಓ ಪ್ರಭುವೇ! ನೀನು ನನ್ನನ್ನು ಕಾಪಾಡು’ ಎಂದು ಪ್ರಾರ್ಥಿಸಿಕೊಳ್ಳಬೇಕು. ॥46॥

(ಶ್ಲೋಕ - 47)

ಮೂಲಮ್

ಇತಿ ಶೇಷಾಂ ಮಯಾ ದತ್ತಾಂ ಶಿರಸ್ಯಾಧಾಯ ಸಾದರಮ್ ।
ಉದ್ವಾಸಯೇಚ್ಚೇದುದ್ವಾಸ್ಯಂ ಜ್ಯೋತಿರ್ಜ್ಯೋತಿಷಿ ತತ್ಪುನಃ ॥

ಅನುವಾದ

ಹೀಗೆ ದೈನ್ಯದಿಂದ ಪ್ರಾರ್ಥನೆಯನ್ನು ಸಲ್ಲಿಸಿ, ನನಗೆ ಸಮರ್ಪಿತವಾದ ಪುಷ್ಪಮಾಲಿಕೆಯನ್ನು ನಾನೇ ಕೈಯಾರೆ ಕೊಟ್ಟ ಪ್ರಸಾದವೆಂದು ತಿಳಿದು ಕಣ್ಣಿಗೊತ್ತಿಗೊಂಡು, ತಲೆಯಮೇಲೆ ಹೊತ್ತುಕೊಳ್ಳಬೇಕು. ವಿಸರ್ಜನೆ ಮಾಡಬೇಕಿದ್ದರೆ, ಶ್ರೀವಿಗ್ರಹದಲ್ಲಿರುವ ದಿವ್ಯ ಜ್ಯೋತಿಯು ಹೊರ ಬರುತ್ತಿರುವುದೆಂದೂ ತನ್ನ (ಭಕ್ತನ) ಹೃತ್ಕಮಲದಲ್ಲಿರುವ ಜ್ಯೋತಿಯೊಡನೆ ಲೀನವಾಗುತ್ತಿರುವುದೆಂದೂ ಭಾವಿಸಿಕೊಂಡು, ವಿಸರ್ಜನ ಮಂತ್ರವನ್ನು ಹೇಳಬೇಕು. ॥47॥

(ಶ್ಲೋಕ - 48)

ಮೂಲಮ್

ಅರ್ಚಾದಿಷು ಯದಾ ಯತ್ರ ಶ್ರದ್ಧಾ ಮಾಂ ತತ್ರ ಚಾರ್ಚಯೇತ್ ।
ಸರ್ವಭೂತೇಷ್ವಾತ್ಮನಿ ಚ ಸರ್ವಾತ್ಮಾಹಮವಸ್ಥಿತಃ ॥

ಅನುವಾದ

ಉದ್ಧವನೇ! ನನ್ನ ಅರ್ಚನೆಗೆ ಹೇಳಿರುವ ಹಲವಾರು ಪ್ರತಿಮೆಗಳಲ್ಲಿ ಯಾವ ಪ್ರತಿಮೆಯಲ್ಲಿ ಯಾವಾಗ ಪೂಜೆಮಾಡಲು ಶ್ರದ್ಧೆ ಉಂಟಾಗುವುದೋ ಆಗಲೇ ಆ ಪ್ರತಿಮೆಯಲ್ಲಿ ನನ್ನನ್ನು ಅರ್ಚಿಸಬೇಕು. ಪ್ರತಿಮೆಗಳಲ್ಲಿ ಯಾವುದೇ ತಾರತಮ್ಯವಿಲ್ಲ. ಸರ್ವಾತ್ಮನಾದ ನಾನು ಸಕಲ ಪ್ರಾಣಿಗಳಲ್ಲಿಯೂ, ಸಕಲ ಪ್ರಾಣಿಗಳ ಹೃದಯದಲ್ಲಿಯೂ ಸರ್ವದಾ ನೆಲೆಸಿರುತ್ತೇನೆ. ॥48॥

ಮೂಲಮ್

(ಶ್ಲೋಕ - 49)

ಮೂಲಮ್

ಏವಂ ಕ್ರಿಯಾಯೋಗಪಥೈಃ ಪುಮಾನ್ ವೈದಿಕತಾಂತ್ರಿಕೈಃ ।
ಅರ್ಚನ್ನುಭಯತಃ ಸಿದ್ಧಿಂ ಮತ್ತೋ ವಿಂದತ್ಯಭೀಪ್ಸಿತಾಮ್ ॥

ಅನುವಾದ

ಎಲೈ ಉದ್ಧವಾ! ಈ ಪ್ರಕಾರ ವೈದಿಕ, ತಾಂತ್ರಿಕ ಕ್ರಿಯಾಯೋಗದ ಮೂಲಕ ನನ್ನನ್ನು ಪೂಜಿಸುವ ಮನುಷ್ಯನು ಈ ಲೋಕ ಮತ್ತು ಪರಲೋಕದಲ್ಲಿ ನನ್ನಿಂದ ಅಭೀಷ್ಟವನ್ನು ಪಡೆದುಕೊಳ್ಳುತ್ತಾನೆ. ॥49॥

(ಶ್ಲೋಕ - 50)

ಮೂಲಮ್

ಮದರ್ಚಾಂ ಸಂಪ್ರತಿಷ್ಠಾಪ್ಯ ಮಂದಿರಂ ಕಾರಯೇದ್ದೃಢಮ್ ।
ಪುಷ್ಪೋದ್ಯಾನಾನಿ ರಮ್ಯಾಣಿ ಪೂಜಾಯಾತ್ರೋತ್ಸವಾಶ್ರಿತಾನ್ ॥

ಅನುವಾದ

ಉಪಾಸಕನು ಸಮರ್ಥ ನಾಗಿದ್ದರೆ ನನ್ನ ಸುಂದರ, ಸುದೃಢವಾದ ಮಂದಿರವನ್ನು ಕಟ್ಟಿ ಅದರಲ್ಲಿ ನನ್ನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಿ. ಸುತ್ತಲೂ ರಮ್ಯವಾದ ಉದ್ಯಾನ ವನಗಳನ್ನು ನಿರ್ಮಿಸಲಿ. ನಿತ್ಯಪೂಜೆ, ನಿತ್ಯೋತ್ಸವ, ರಥೋತ್ಸವಗಳಿಗೆ ಬೇಕಾದ ವ್ಯವಸ್ಥೆ ಮಾಡಲಿ. ॥50॥

(ಶ್ಲೋಕ - 51)

ಮೂಲಮ್

ಪೂಜಾದೀನಾಂ ಪ್ರವಾಹಾರ್ಥಂ ಮಹಾಪರ್ವಸ್ವಥಾನ್ವಹಮ್ ।
ಕ್ಷೇತ್ರಾಪಣಪುರಗ್ರಾಮಾನ್ ದತ್ತ್ವಾ ಮತ್ಸಾರ್ಷ್ಟಿತಾಮಿಯಾತ್ ॥

ಅನುವಾದ

ನನ್ನ ನಿತ್ಯಪೂಜೆ, ಪರ್ವ ದಿವಸಗಳಲ್ಲಿ ವಿಶೇಷ ಪೂಜೆ, ನಿತ್ಯೋತ್ಸವ-ರಥೋತ್ಸವಗಳು ಅವಿಚ್ಛಿನ್ನವಾಗಿ ನಡೆದುಕೊಂಡು ಹೋಗಲು ಶ್ರೀಮಂತರಾದ ಭಕ್ತರು ಹೊಲ-ಗದ್ದೆಗಳನ್ನೂ, ಅಂಗಡಿಗಳನ್ನು, ಗ್ರಾಮ-ಪಟ್ಟಣಗಳನ್ನು ಉಂಬಳಿಯಾಗಿ ಕೊಡಬೇಕು. ಇದರಿಂದ ಅವರಿಗೆ ನನ್ನ ಸಮಾನವಾದ ಐಶ್ವರ್ಯವು ನನ್ನ ಅನುಗ್ರಹದಿಂದ ದೊರೆಯುತ್ತದೆ. ॥51॥

(ಶ್ಲೋಕ - 52)

ಮೂಲಮ್

ಪ್ರತಿಷ್ಠಯಾ ಸಾರ್ವಭೌಮಂ ಸದ್ಮನಾ ಭುವನತ್ರಯಮ್ ।
ಪೂಜಾದಿನಾ ಬ್ರಹ್ಮಲೋಕಂ ತ್ರಿಭಿರ್ಮತ್ಸಾಮ್ಯತಾಮಿಯಾತ್ ॥

ಅನುವಾದ

ನನ್ನ ವಿಗ್ರಹ ಪ್ರತಿಷ್ಠಾಪನೆಯಿಂದ ಪೃಥ್ವಿಯ ಏಕಚ್ಛತ್ರ ರಾಜ್ಯ, ಮಂದಿರ, ನಿರ್ಮಾಣದಿಂದ ತ್ರೈಲೋಕ್ಯದ ರಾಜ್ಯ, ಪೂಜಾದಿಗಳ ವ್ಯವಸ್ಥೆ ಮಾಡಿದವರಿಗೆ ಬ್ರಹ್ಮಲೋಕ ಮತ್ತು ಮೂರನ್ನೂ ಮಾಡಿದಾಗ ನನ್ನ ಸಾರೂಪ್ಯವನ್ನು ಪಡೆದುಕೊಳ್ಳುವನು. ॥52॥

(ಶ್ಲೋಕ - 53)

ಮೂಲಮ್

ಮಾಮೇವ ನೈರಪೇಕ್ಷ್ಯೇಣ ಭಕ್ತಿಯೋಗೇನ ವಿಂದತಿ ।
ಭಕ್ತಿಯೋಗಂ ಸ ಲಭತೇ ಏವಂ ಯಃ ಪೂಜಯೇತ ಮಾಮ್ ॥

ಅನುವಾದ

ನಿಷ್ಕಾಮ ಭಾವದಿಂದ ನನ್ನ ಪೂಜೆ ಮಾಡುವವನಿಗೆ ನನ್ನ ಭಕ್ತಿಯೋಗವು ಪ್ರಾಪ್ತವಾಗುತ್ತದೆ. ಆ ನಿರಪೇಕ್ಷ ಭಕ್ತಿಯೋಗದ ಮೂಲಕ ಅವನು ಸ್ವಯಂ ನನ್ನನ್ನು ಪಡೆದು ಕೊಳ್ಳುತ್ತಾನೆ. ॥53॥

(ಶ್ಲೋಕ - 54)

ಮೂಲಮ್

ಯಃ ಸ್ವದತ್ತಾಂ ಪರೈರ್ದತ್ತಾಂ ಹರೇತ ಸುರವಿಪ್ರಯೋಃ ।
ವೃತ್ತಿಂ ಸ ಜಾಯತೇ ವಿಡ್ಭುಗ್ವರ್ಷಾಣಾಮಯುತಾಯುತಮ್ ॥

ಅನುವಾದ

ದೇವ-ಬ್ರಾಹ್ಮಣರಿಗೆ ತಾನು ಕೊಟ್ಟ ಉಂಬಳಿಯನ್ನಾಗಲೀ, ಇತರರು ಕೊಟ್ಟ ಉಂಬಳಿಯನ್ನಾಗಲೀ ಅಪಹರಿಸುವವನು ಕೋಟ್ಯಂತರ ವರ್ಷಗಳವರೆಗೆ ಅಮೇಧ್ಯದಲ್ಲಿನ ಕ್ರಿಮಿಯಾಗುತ್ತಾನೆ. ॥54॥

(ಶ್ಲೋಕ - 55)

ಮೂಲಮ್

ಕರ್ತುಶ್ಚ ಸಾರಥೇರ್ಹೇತೋರನುಮೋದಿತುರೇವ ಚ ।
ಕರ್ಮಣಾಂ ಭಾಗಿನಃ ಪ್ರೇತ್ಯ ಭೂಯೋ ಭೂಯಸಿ ತತ್ಫಲಮ್ ॥

ಅನುವಾದ

ಇಂತಹ ಪಾಪಿಷ್ಠವಾದ, ಹೇಯವಾದ ಕೆಲಸಕ್ಕೆ ಸಹಾಯ ಮಾಡುವವರು, ಪ್ರೇರಕರೂ, ಅನುಮೋದಕರೂ ಇವರಿಗೂ ಇದೇ ವಿಧವಾದ ದುಷ್ಫಲವು ದೊರೆಯುತ್ತದೆ. ಇವರ ಕೈವಾಡ ಹೆಚ್ಚಿದ್ದರೆ ಅವರಿಗೆ ಫಲವೂ ಹೆಚ್ಚೇಸಿಗುತ್ತದೆ. ॥55॥

ಅನುವಾದ (ಸಮಾಪ್ತಿಃ)

ಇಪ್ಪತ್ತೇಳನೆಯ ಅಧ್ಯಾಯವು ಮುಗಿಯಿತು. ॥27॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಸಪ್ತವಿಂಶೋಽಧ್ಯಾಯಃ ॥27॥