೨೬

[ಇಪ್ಪತ್ತಾರನೆಯ ಅಧ್ಯಾಯ]

ಭಾಗಸೂಚನಾ

ಪುರೂರವನ ವೈರಾಗ್ಯೋಕ್ತಿ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಮಲ್ಲಕ್ಷಣಮಿಮಂ ಕಾಯಂ ಲಬ್ಧ್ವಾ ಮದ್ಧರ್ಮ ಆಸ್ಥಿತಃ ।
ಆನಂದಂ ಪರಮಾಮತ್ಮಾನಮಾತ್ಮಸ್ಥಂ ಸಮುಪೈತಿ ಮಾಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಎಲೈ ಉದ್ಧವನೇ! ಈ ಮನುಷ್ಯಶರೀರವು ನನ್ನ ಸ್ವರೂಪಜ್ಞಾನದ ಮತ್ತು ನನ್ನ ಪ್ರಾಪ್ತಿಯ ಮುಖ್ಯಸಾಧನವಾಗಿದೆ. ಇದನ್ನು ಪಡೆದ ಯಾವ ಮನುಷ್ಯನು ನಿಜವಾದ ಪ್ರೇಮದಿಂದ ನನ್ನ ಭಕ್ತಿ ಮಾಡುವನೋ, ಅವನು ಅಂತಃಕರಣದಲ್ಲಿ ಸ್ಥಿತನಾದ ಆನಂದ ಸ್ವರೂಪೀ ಪರಮಾತ್ಮನಾದ ನನ್ನನ್ನು ಪಡೆದುಕೊಳ್ಳುವನು. ॥1॥

(ಶ್ಲೋಕ - 2)

ಮೂಲಮ್

ಗುಣ ಮಯ್ಯಾ ಜೀವಯೋನ್ಯಾ ವಿಮುಕ್ತೋ ಜ್ಞಾನನಿಷ್ಠಯಾ ।
ಗುಣೇಷು ಮಾಯಾಮಾತ್ರೇಷು ದೃಶ್ಯಮಾನೇಷ್ವವಸ್ತುತಃ ।
ವರ್ತಮಾನೋಪಿ ನ ಪುಮಾನ್ ಯುಜ್ಯತೇವಸ್ತುಭಿರ್ಗುಣೈಃ ॥

ಅನುವಾದ

ಜೀವಿಗಳ ಎಲ್ಲ ಯೋನಿಗಳು, ಎಲ್ಲ ಗತಿಗಳು ತ್ರಿಗುಣ ಮಯವಾಗಿವೆ. ಜೀವಿಯು ಜ್ಞಾನನಿಷ್ಠೆಯ ಮೂಲಕ ಅವುಗಳಿಂದ ಎಂದೆಂದಿಗೂ ಮುಕ್ತನಾಗಿ ಹೋಗುತ್ತಾನೆ. ಕಂಡು ಬರುವ ಸತ್ತ್ವ, ರಜ ಮುಂತಾದ ಗುಣಗಳು ವಾಸ್ತವಿಕವಾಗಿಲ್ಲ, ಮಾಯಾಮಾತ್ರವಾಗಿವೆ. ಜ್ಞಾನ ಉಂಟಾದ ಬಳಿಕ ಪುರುಷನು ಅವುಗಳ ನಡುವೆ ಇದ್ದರೂ ಕೂಡ, ಅವುಗಳ ಮೂಲಕ ವ್ಯವಹರಿಸುತ್ತಿದ್ದರೂ ಕೂಡ, ಅವುಗಳಿಂದ ಬಂಧಿತನಾಗುವುದಿಲ್ಲ. ಏಕೆಂದರೆ, ಆ ಗುಣಗಳ ವಾಸ್ತವಿಕ ಅಸ್ತಿತ್ವವೇ ಇರುವುದಿಲ್ಲ. ॥2॥

ಮೂಲಮ್

(ಶ್ಲೋಕ - 3)
ಸಂಗಂ ನ ಕುರ್ಯಾದಸತಾಂ ಶಿಶ್ನೋದರತೃಪಾಂ ಕ್ವಚಿತ್ ।
ತಸ್ಯಾನುಗಸ್ತಮಸ್ಯಂಧೇ ಪತತ್ಯಂಧಾನುಗಾಂಧವತ್ ॥

ಅನುವಾದ

ವಿಷಯಗಳ ಸೇವನೆ ಮತ್ತು ಉದರ ಪೋಷಣೆಯಲ್ಲೇ ತೊಡಗಿರುವ ಅಸತ್ ಪುರುಷರ ಸಂಗವನ್ನು ಎಂದೂ ಮಾಡಬಾರದು. ಸಾಮಾನ್ಯವಾಗಿ ಇದರ ಕುರಿತು ಜನರು ಲಕ್ಷ್ಯವಿಡಬೇಕು; ಏಕೆಂದರೆ, ಅವರನ್ನು ಅನುಸರಿಸುವವರಿಗೆ ‘ಕುರುಡನ ಆಸರೆಯಿಂದ ನಡೆಯುವ ಕುರುಡನಂತೆ’ ದುರ್ದಶೆ ಉಂಟಾಗುತ್ತದೆ. ಅವನಿಗಾದರೋ ಘೋರ ಅಂಧಕಾರದಲ್ಲಿ ಅಲೆಯಬೇಕಾಗುತ್ತದೆ. ॥3॥

(ಶ್ಲೋಕ - 4)

ಮೂಲಮ್

ಐಲಃ ಸಮ್ರಾಡಿಮಾಂ ಗಾಥಾಮಗಾಯತ ಬೃಹಚ್ಛ್ರವಾಃ ।
ಊರ್ವಶೀವಿರಹಾನ್ಮುಹ್ಯನ್ನಿರ್ವಿಣ್ಣಃ ಶೋಕಸಂಯಮೇ ॥

ಅನುವಾದ

ಉದ್ಧವನೇ! ಹಿಂದೆ ಪರಮ ಯಶಸ್ವೀ ಸಾಮ್ರಾಟ ಇಲಾನಂದನ ಪುರೂರವನು ಊರ್ವಶಿಯ ವಿರಹದಿಂದ ಅತ್ಯಂತ ವ್ಯಾಕುಲನಾಗಿದ್ದನು. ಮತ್ತೆ ಶೋಕ ದೂರವಾದಾಗ ಅವನಲ್ಲಿ ಪ್ರಬಲವಾದ ವೈರಾಗ್ಯವು ಉದಿಸಿತು. ಆಗ ಅವನು ಅನುಭವಸಿದ್ಧವಾದ ಈ ಗಾಥೆಯನ್ನು ಹಾಡಿದನು. ॥4॥

(ಶ್ಲೋಕ - 5)

ಮೂಲಮ್

ತ್ಯಕ್ತ್ವಾತ್ಮಾನಂ ವ್ರಜಂತೀಂ ತಾಂ ನಗ್ನ ಉನ್ಮತ್ತವನ್ನೃಪಃ ।
ವಿಲಪನ್ನನ್ವಗಾಜ್ಜಾಯೇ ಘೋರೇ ತಿಷ್ಠೇತಿ ವಿಕ್ಲವಃ ॥

ಅನುವಾದ

ತನ್ನನ್ನು ಅಗಲಿ ಓಡಿಹೋಗುತ್ತಿರುವ ಊರ್ವಶಿಯ ಹಿಂದೆ ರಾಜಾ ಪುರೂರವನು ವಿವಸನಾಗಿ ಹುಚ್ಚನಂತೆ ಅತ್ಯಂತ ವಿಹ್ವಲನಾಗಿ ಓಡುತ್ತಾ ಹೀಗೆ ಹೇಳತೊಡಗಿದನು ‘ದೇವೀ! ನಿಷ್ಠುರ ಹೃದಯಳೇ! ಸ್ವಲ್ಪ ಹೊತ್ತಾದರೂ ನಿಂತುಕೋ. ಓಡಿಹೋಗಬೇಡ. ॥5॥

(ಶ್ಲೋಕ - 6)

ಮೂಲಮ್

ಕಾಮಾನತೃಪ್ತೋನುಜುಷನ್ ಕ್ಷುಲ್ಲಕಾನ್ವರ್ಷಯಾಮಿನೀಃ ।
ನ ವೇದ ಯಾಂತೀರ್ನಾಯಾಂತೀರುರ್ವಶ್ಯಾಕೃಷ್ಟಚೇತನಃ ॥

ಅನುವಾದ

ಊರ್ವಶಿಯು ರಾಜನ ಚಿತ್ತವನ್ನು ಸಂಪೂರ್ಣವಾಗಿ ಅಪಹರಿಸಿಬಿಟ್ಟಿದ್ದಳು. ಅವಳೊಂದಿಗಿನ ಕಾಮೋಪಭೋಗದಿಂದ ಅವನಿಗೆ ತೃಪ್ತಿಯೇ ಆಗಿರಲಿಲ್ಲ. ಅವನು ಕ್ಷುದ್ರವಾದ ವಿಷಯಸೇವನೆಯಲ್ಲಿ ಅವನಿಗೆ ಎಷ್ಟೋ ವರ್ಷಗಳ ರಾತ್ರಿಗಳು ಬಂದು ಹೋದುದರ ಅರಿವೇ ಇಲ್ಲದಷ್ಟು ಮುಳುಗಿಹೋಗಿದ್ದನು. ಈಗ ಊರ್ವಶಿಯು ಬಿಟ್ಟು ಹೋದಾಗ ವಿವೇಕ ಉಂಟಾಗಿ, ಮನಸ್ಸಿನಲ್ಲೇ ಹೀಗೆ ಅಂದುಕೊಂಡನು. ॥6॥

(ಶ್ಲೋಕ - 7)

ಮೂಲಮ್ (ವಾಚನಮ್)

ಐಲ ಉವಾಚ

ಮೂಲಮ್

ಅಹೋ ಮೇ ಮೋಹವಿಸ್ತಾರಃ ಕಾಮಕಶ್ಮಲಚೇತಸಃ ।
ದೇವ್ಯಾ ಗೃಹೀತಕಂಠಸ್ಯ ನಾಯುಃಖಂಡಾ ಇಮೇ ಸ್ಮೃತಾಃ ॥

ಅನುವಾದ

ಪುರೂರವನು ಹೇಳಿದನು — ಅಯ್ಯೋ ಶಿವನೇ! ನನ್ನ ಮೂಢತೆಯನ್ನಾದರೋ ನೋಡಬಾರದೇ! ಕಾಮ ವಾಸನೆಯು ನನ್ನ ಚಿತ್ತವನ್ನು ಎಷ್ಟು ಕಲುಷಿತಗೊಳಿಸಿತು! ಊರ್ವಶಿಯು ತನ್ನ ಬಾಹುಗಳಿಂದ ನನ್ನ ಕತ್ತನ್ನು ಅಪ್ಪಿಕೊಂಡಳು, ಅದರಿಂದ ನಾನು ಆಯುಸ್ಸಿನ ಎಷ್ಟು ವರ್ಷಗಳನ್ನು ಕಳೆದುಕೊಂಡೆ! ಅಯ್ಯೋ! ವಿಸ್ಮೃತಿಗೂ ಒಂದು ಮೇರೆ ಇರುತ್ತದಲ್ಲ! ॥7॥

(ಶ್ಲೋಕ - 8)

ಮೂಲಮ್

ನಾಹಂ ವೇದಾಭಿನಿರ್ಮುಕ್ತಃ ಸೂರ್ಯೋ ವಾಭ್ಯುದಿತೋಮುಯಾ ।
ಮುಷಿತೋ ವರ್ಷಪೂಗಾನಾಂ ಬತಾಹಾನಿ ಗತಾನ್ಯುತ ॥

ಅನುವಾದ

ಅಯ್ಯಯ್ಯೋ! ಇವಳು ನನ್ನನ್ನು ಬರಿದಾಗಿಸಿದಳು. ಸೂರ್ಯ ಹುಟ್ಟಿದನೋ, ಮುಳುಗಿದನೋ ಎಂಬುದನ್ನೂ ನಾನು ಅರಿಯದೆ ಹೋದೆ. ಅನೇಕ ವರ್ಷಗಳ ದಿನಗಳ ಮೇಲೆ ದಿನಗಳು ಸಂದು ಹೋದುವು. ಆದರೆ ನನ್ನ ಅರಿವಿಗೆ ಬರಲಿಲ್ಲ. ಎಂತಹ ದುಃಖದ ಮಾತಾಗಿದೆ ಇದು! ॥8॥

(ಶ್ಲೋಕ - 9)

ಮೂಲಮ್

ಆಹೋ ಮೇ ಆತ್ಮಸಮ್ಮೋಹೋ ಯೇನಾತ್ಮಾ ಯೋಷಿತಾಂ ಕೃತಃ ।
ಕ್ರೀಡಾಮೃಗಶ್ಚಕ್ರವರ್ತೀ ನರದೇವಶಿಖಾಮಣಿಃ ॥

ಅನುವಾದ

ಅಯ್ಯೋ! ಆಶ್ಚರ್ಯವೇ! ನನ್ನ ಮನಸ್ಸಿನಲ್ಲಿ ಎಷ್ಟು ಮೋಹ ಬೆಳೆದು ಹೋಯಿತು. ಅವಳು ನರಶ್ರೇಷ್ಠ ಚಕ್ರವರ್ತಿ ಶಿಖಾಮಣಿ ಸಾಮ್ರಾಟ ಪುರೂರವನಾದ ನನ್ನನ್ನು ಸ್ತ್ರೀಯರ ಕ್ರೀಡಾಮೃಗ (ಆಟಿಕೆ)ವನ್ನಾಗಿಸಿಬಿಟ್ಟಳು. ॥9॥

(ಶ್ಲೋಕ - 10)

ಮೂಲಮ್

ಸಪರಿಚ್ಛದಮಾತ್ಮಾನಂ ಹಿತ್ವಾ ತೃಣಮಿವೇಶ್ವರಮ್ ।
ಯಾಂತೀಂ ಸಿಯಂ ಚಾನ್ವಗಮಂ ನಗ್ನ ಉನ್ಮತ್ತವದ್ರುದನ್ ॥

ಅನುವಾದ

ನೋಡು! ನಾನು ಪ್ರಜೆಯನ್ನು ಮರ್ಯಾದೆಯಲ್ಲಿ ಇರಿಸುವಂತಹ ಸಾಮ್ರಾಟನಾಗಿದ್ದೇನೆ. ಅವಳು ನನ್ನನ್ನು ಮತ್ತು ನನ್ನ ರಾಜ್ಯವನ್ನು ಹುಲ್ಲಿನ ಕಡ್ಡಿಯಂತೆ ತಿರಸ್ಕರಿಸಿ ಹೊರಟುಹೋದಳು. ನಾನು ಹುಚ್ಚನಂತೆ ಬತ್ತಲೆಯಾಗಿ ಅಳುತ್ತಾ, ಗೋಳಾಡುತ್ತಾ ಅವಳ ಹಿಂದೆ ಓಡುತ್ತಿರುವೆನಲ್ಲ! ಅಯ್ಯೋ! ಇದೊಂದು ಜೀವನವೇ! ॥10॥

(ಶ್ಲೋಕ - 11)

ಮೂಲಮ್

ಕುತಸ್ತಸ್ಯಾನುಭಾವಃ ಸ್ಯಾತ್ತೇಜ ಈಶತ್ವಮೇವ ವಾ ।
ಯೋನ್ವಗಚ್ಛಂ ಸಿಯಂ ಯಾಂತೀಂ ಖರವತ್ಪಾದತಾಡಿತಃ ॥

ಅನುವಾದ

ಹೆಣ್ಣು ಕತ್ತೆಯು ಹಿಂದಿನಿಂದ ಒದೆಯುತ್ತಿದ್ದರೂ ಅದನ್ನು ಲೆಕ್ಕಿಸದೆ ಅದರ ಹಿಂದೆಯೇ ಹೋಗುವ ಗಂಡುಕತ್ತೆಯಂತೆ ನಾನೂ ಈ ಹೆಂಗಸಿನ ಹಿಂದೆ ಓಡುತ್ತಿರುವೆನಲ್ಲ! ಮತ್ತೆ ನನ್ನಲ್ಲಿ ಪ್ರಭಾವ, ತೇಜ ಮತ್ತು ಸ್ವಾಮಿತ್ವ ಹೇಗೆ ತಾನೇ ಇರಬಲ್ಲದು? ॥11॥

(ಶ್ಲೋಕ - 12)

ಮೂಲಮ್

ಕಿಂ ವಿದ್ಯಯಾ ಕಿಂ ತಪಸಾ ಕಿಂ ತ್ಯಾಗೇನ ಶ್ರುತೇನ ವಾ ।
ಕಿಂ ವಿವಿಕ್ತೇನ ವೌನೇನ ಸೀಭಿರ್ಯಸ್ಯ ಮನೋ ಹೃತಮ್ ॥

ಅನುವಾದ

ಯಾವನ ಮನಸ್ಸನ್ನು ಸ್ತ್ರೀಯು ಅಪಹರಿಸುತ್ತಾಳೋ ಅವನಿಗೆ ಎಷ್ಟು ವಿದ್ಯೆ ಇದ್ದರೇನು ವ್ಯರ್ಥವೇ. ಅವನಿಗೆ ತಪಸ್ಸು, ತ್ಯಾಗ, ಶಾಸ್ತ್ರಾಭ್ಯಾಸದಿಂದಲೂ ಯಾವುದೇ ಲಾಭವಿಲ್ಲ. ಅವನ ಏಕಾಂತವಾಸ, ಮೌನ ಇವುಗಳೂ ನಿಷ್ಫಲವೇ. ॥12॥

(ಶ್ಲೋಕ - 13)

ಮೂಲಮ್

ಸ್ವಾರ್ಥಸ್ಯಾಕೋವಿದಂ ಧಿಙ್ಮಾಂ ಮೂರ್ಖಂ ಪಂಡಿತಮಾನಿನಮ್ ।
ಯೋಹಮೀಶ್ವರತಾಂ ಪ್ರಾಪ್ಯ ಸೀಭಿರ್ಗೋಖರವಜ್ಜಿತಃ ॥

ಅನುವಾದ

ನನ್ನ ಲಾಭ-ಹಾನಿಯನ್ನೇ ಅರಿಯದ ನಾನು ನನ್ನನ್ನು ಬಹುದೊಡ್ಡ ಪಂಡಿತನೆಂದು ತಿಳಿಯುತ್ತಿದ್ದೇನೆ. ನನ್ನಂತಹ ಮೂರ್ಖನಿಗೆ ಧಿಕ್ಕಾರವಿರಲಿ. ಅಯ್ಯೋ! ಶಿವನೇ! ನಾನು ಚಕ್ರವರ್ತಿ ಸಾಮ್ರಾಟನಾಗಿದ್ದರೂ ಕತ್ತೆ, ಎತ್ತುಗಳಂತೆ ಸ್ತ್ರೀಯಳ ಬಲೆಯಲ್ಲಿ ಸಿಕ್ಕಿಹೋದೆನಲ್ಲ! ॥13॥

(ಶ್ಲೋಕ - 14)

ಮೂಲಮ್

ಸೇವತೋ ವರ್ಷಪೂಗಾನ್ಮೇ ಉರ್ವಶ್ಯಾ ಅಧರಾಸವಮ್ ।
ನ ತೃಪ್ಯತ್ಯಾತ್ಮಭೂಃ ಕಾಮೋ ವಹ್ನಿರಾಹುತಿಭಿರ್ಯಥಾ ॥

ಅನುವಾದ

ನಾನು ಅನೇಕ ವರ್ಷಗಳವರೆಗೆ ಊರ್ವಶಿಯ ಅಧರಾಮೃತವನ್ನು ಕುಡಿಯುತ್ತಾ ಇದ್ದೆ. ಆದರೆ ನನ್ನ ಕಾಮವಾಸನೆ ತೃಪ್ತವಾಗಲಿಲ್ಲ. ತುಪ್ಪದ ಆಹುತಿಯಿಂದ ಅಗ್ನಿಯು ತೃಪ್ತವಾಗುವುದಿಲ್ಲ, ಹಾಗೆಯೇ ನನ್ನಲ್ಲಿ ಉತ್ಪನ್ನವಾದ ಕಾಮವು ತೃಪ್ತವಾಗುವುದಿಲ್ಲ. ॥14॥

(ಶ್ಲೋಕ - 15)

ಮೂಲಮ್

ಪುಂಶ್ಚಲ್ಯಾಪಹೃತಂ ಚಿತ್ತಂ ಕೋ ನ್ವನ್ಯೋ ಮೋಚಿತುಂ ಪ್ರಭುಃ ।
ಆತ್ಮಾರಾಮೇಶ್ವರಮೃತೇ ಭಗವಂತಮಧೋಕ್ಷಜಮ್ ॥

ಅನುವಾದ

ಆ ಕುಲಟೆಯು ನನ್ನ ಚಿತ್ತವನ್ನು ಅಪಹರಿಸಿಬಿಟ್ಟಿರುವಳು. ಅವಳ ಉರುಳಿನಿಂದ ನನ್ನ ಮನಸ್ಸನ್ನು ಬಿಡಿಸಲು ಆತ್ಮಾರಾಮನೂ, ಜೀವನ್ಮುಕ್ತರ ಸ್ವಾಮಿಯೂ ಆದ ಇಂದ್ರಿಯಾತೀತ ಭಗವಂತನನ್ನು ಬಿಟ್ಟು ಬೇರೆ ಯಾರಿದ್ದಾರೆ? ॥15॥

(ಶ್ಲೋಕ - 16)

ಮೂಲಮ್

ಬೋಧಿತಸ್ಯಾಪಿ ದೇವ್ಯಾ ಮೇ ಸೂಕ್ತವಾಕ್ಯೇನ ದುರ್ಮತೇಃ ।
ಮನೋಗತೋ ಮಹಾಮೋಹೋ ನಾಪಯಾತ್ಯಜಿತಾತ್ಮನಃ ॥

ಅನುವಾದ

ಊರ್ವಶಿಯಾದರೋ ನನಗೆ ವೈದಿಕ ಸೂಕ್ತದಿಂದ ಯಥಾರ್ಥವಾದ ಮಾತನ್ನು ಹೇಳಿದ್ದಳು. ಆದರೆ ನನ್ನ ಮನಸ್ಸಿನ ಆ ಭಯಂಕರ ಮೋಹವು ಅಳಿದುಹೋಗದಿದ್ದಾಗ, ನನ್ನ ಬುದ್ಧಿಯು ಪೂರ್ಣವಾಗಿ ಕೆಟ್ಟುಹೋಗಿತ್ತು. ನನ್ನ ಇಂದ್ರಿಯಗಳೇ ನನ್ನ ಕೈಮೀರಿ ಹೋಗಿದ್ದಾಗ ನಾನು ಹೇಗೆ ತಿಳಿದುಕೊಳ್ಳಬಲ್ಲೆ? ॥16॥

(ಶ್ಲೋಕ - 17)

ಮೂಲಮ್

ಕಿಮೇತಯಾ ನೋಪಕೃತಂ ರಜ್ಜ್ವಾವಾ ಸರ್ಪಚೇತಸಃ ।
ರಜ್ಜುಸ್ವರೂಪಾವಿದುಷೋ ಯೋಹಂ ಯದಜಿತೇಂದ್ರಿಯಃ ॥

ಅನುವಾದ

ಹಗ್ಗವನ್ನು ಸರ್ಪವೆಂದು ತಿಳಿದು ಅದರಲ್ಲಿ ಸರ್ಪದ ಕಲ್ಪನೆ ಮಾಡಿ, ದುಃಖಿತನಾದವನಿಗೆ, ಆ ಹಗ್ಗವು ಏನು ತಾನೇ ಮಾಡಬಲ್ಲದು? ಸ್ವತಃ ನಾನೇ ಅಜಿತೇಂದ್ರಿಯನಾದ ಕಾರಣ ಅಪರಾಧಿ ನಾನೇ ಆಗಿದ್ದೇನೆ. ॥17॥

(ಶ್ಲೋಕ - 18)

ಮೂಲಮ್

ಕ್ವಾಯಂ ಮಲೀಮಸಃಕಾಯೋ ದೌರ್ಗಂಧ್ಯಾದ್ಯಾತ್ಮಕೋಶುಚಿಃ ।
ಕ್ವ ಗುಣಾಃ ಸೌಮನಸ್ಯಾದ್ಯಾ ಹ್ಯಧ್ಯಾಸೋವಿದ್ಯಯಾ ಕೃತಃ ॥

ಅನುವಾದ

ದುರ್ಗಂಧದಿಂದ ತುಂಬಿಕೊಂಡಿರುವ ಮಲಿನವೂ, ಅಪವಿತ್ರವೂ ಆಗಿರುವ ಆ ದೇಹವೆಲ್ಲಿ? ಕೋಮಲತೆ, ಪವಿತ್ರತೆ, ಸುಗಂಧವೇ ಮುಂತಾದ ಪುಷ್ಪಗಳಂತಿರುವ ಗುಣವೆಲ್ಲಿ? ಆದರೆ ನಾನೇ ಅಜ್ಞಾನವಶನಾಗಿ ಕುರೂಪದಲ್ಲಿ ಸುಂದರತೆಯ ಆರೋಪಮಾಡಿದೆ, ಇದು ನನ್ನ ಮೂಢತೆಯೇ ಆಗಿದೆ. ॥18॥

(ಶ್ಲೋಕ - 19)

ಮೂಲಮ್

ಪಿತ್ರೋಃ ಕಿಂ ಸ್ವಂ ನು ಭಾರ್ಯಾಯಾಃ ಸ್ವಾಮಿನೋಗ್ನೇಃ ಶ್ವಗೃಧ್ರಯೋಃ ।
ಕಿಮಾತ್ಮನಃ ಕಿಂ ಸುಹೃದಾಮಿತಿ ಯೋ ನಾವಸೀಯತೇ ॥

ಅನುವಾದ

ಈ ಶರೀರವು ಜನ್ಮದಾತರಾದ ತಂದೆ-ತಾಯಿಯರಿಗೆ ಸೇರಿದ್ದೇ? ವಿವಾಹಿತ ಪತ್ನಿಗೆ ಸೇರಿದ್ದೇ? ಅನ್ನವನ್ನಿಟ್ಟು ಸಾಕಿದ ಒಡೆಯನಿಗೆ ಸೇರಿದ್ದೇ? ಕೊನೆಗೆ ಬೆಂಕಿಗೆ ಸೇರಿದ್ದೇ? ನರಿ-ನಾಯಿಗಳಿಗೆ ಸೇರಿದ್ದೇ? ಇದನ್ನು ನನ್ನದೆಂದು ಹೇಳಲೇ? ಸುಹೃದ್ ಸಂಬಂಧಿಗಳದ್ದೆಂದು ಹೇಳಲೇ? ತುಂಬಾ ವಿಚಾರಮಾಡಿದಾಗ ಇದು ಯಾರದೂ ಅಲ್ಲ ಎಂಬುದೇ ನಿಶ್ಚಯವಾಗುತ್ತದೆ. ॥19॥

(ಶ್ಲೋಕ - 20)

ಮೂಲಮ್

ತಸ್ಮಿನ್ ಕಲೇವರೇಮೇಧ್ಯೇ ತುಚ್ಛನಿಷ್ಠೇ ವಿಷಜ್ಜತೇ ।
ಅಹೋ ಸುಭದ್ರಂ ಸುನಸಂ ಸುಸ್ಮಿತಂ ಚ ಮುಖಂ ಸಿಯಃ ॥

ಅನುವಾದ

ಈ ಶರೀರವು ಖಂಡಿತವಾಗಿ ಅಪವಿತ್ರವಾಗಿದ್ದು, ಸ್ವರೂಪತಃ ತುಚ್ಛವಾಗಿದೆ. ಇಂತಹ ಶರೀರದಲ್ಲಿ ಆಸಕ್ತಿಯನ್ನಿರಿಸಿ ‘ಆಹಾ! ಈ ಸ್ತ್ರೀಯ ಮುಖ, ಮೂಗು, ನಗು ಎಷ್ಟು ಸುಂದರವಾಗಿದೆ’ ಎಂದು ಹೇಳತೊಡಗುತ್ತಾನೆ. ॥20॥

ಮೂಲಮ್

(ಶ್ಲೋಕ - 21)
ತ್ವಙ್ಮಾಂಸರುಧಿರಸ್ನಾಯುಮೇದೋಮಜ್ಜಾಸ್ಥಿಸಂಹತೌ ।
ವಿಣ್ಮೂತ್ರಪೂಯೇ ರಮತಾಂ ಕೃಮೀಣಾಂ ಕಿಯದಂತರಮ್ ॥

ಅನುವಾದ

ಈ ಶರೀರವು ಚರ್ಮ, ಮಾಂಸ, ಮಜ್ಜೆ, ರಕ್ತ, ಸ್ನಾಯು, ಮೇದಸ್ಸು, ಎಲುಬುಗಳ ರಾಶಿಯಾಗಿದೆ. ಮಲ-ಮೂತ್ರ, ಕೀವುಗಳಿಂದ ತುಂಬಿಕೊಂಡಿದೆ. ಮನುಷ್ಯನು ಇದರಲ್ಲಿ ರಮಿಸಿದರೆ ಮಲ ಮೂತ್ರದ ಕ್ರಿಮಿಗಳಿಗೂ ಇವನಿಗೂ ಅಂತರವೇನಿದೆ? ॥21॥

(ಶ್ಲೋಕ - 22)

ಮೂಲಮ್

ಅಥಾಪಿ ನೋಪಸಜ್ಜೇತ ಸೀಷು ಸೈಣೇಷು ಚಾರ್ಥವಿತ್ ।
ವಿಷಯೇಂದ್ರಿಯಸಂಯೋಗಾನ್ಮನಃ ಕ್ಷುಭ್ಯತಿ ನಾನ್ಯಥಾ ॥

ಅನುವಾದ

ಅದಕ್ಕಾಗಿ ತನ್ನ ಒಳಿತನ್ನು ಬಯಸುವ ವಿವೇಕಿ ಮನುಷ್ಯನು ಸ್ತ್ರೀಯರ ಹಾಗೂ ಸ್ತ್ರೀಲಂಪಟರ ಸಂಗವನ್ನು ಎಂದಿಗೂ ಮಾಡಬಾರದು. ವಿಷಯ ಮತ್ತು ಇಂದ್ರಿಯಗಳ ಸಂಯೋಗದಿಂದಲೇ ಮನಸ್ಸಿನಲ್ಲಿ ವಿಕಾರ ಉಂಟಾಗುತ್ತದೆ. ಅದು ಬಿಟ್ಟು ವಿಕಾರಕ್ಕೆ ಬೇರೆ ಯಾವ ಅವಕಾಶವೂ ಇಲ್ಲ. ॥22॥

(ಶ್ಲೋಕ - 23)

ಮೂಲಮ್

ಅದೃಷ್ಟಾದಶ್ರುತಾದ್ಭಾವಾನ್ ನ ಭಾವ ಉಪಜಾಯತೇ ।
ಅಸಂಪ್ರಯುಂಜತಃ ಪ್ರಾಣಾನ್ ಶಾಮ್ಯತಿ ಸ್ತಿಮಿತಂ ಮನಃ ॥

(ಶ್ಲೋಕ - 24)

ಮೂಲಮ್

ತಸ್ಮಾತ್ ಸಂಗೋ ನ ಕರ್ತವ್ಯಃ ಸೀಷು ಸೈಣೇಷು ಚೇಂದ್ರಿಯೈಃ ।
ವಿದುಷಾಂ ಚಾಪ್ಯವಿಶ್ರಬ್ಧಃ ಷಡ್ವರ್ಗಃ ಕಿಮು ಮಾದೃಶಾಮ್ ॥

ಅನುವಾದ

ಎಂದೂ ನೋಡದೆ, ಕೇಳದೆ ಇರುವ ವಸ್ತುವಿನ ಕುರಿತು ಮನಸ್ಸಿನಲ್ಲಿ ವಿಕಾರ ಉಂಟಾಗುವುದಿಲ್ಲ. ವಿಷಯಗಳೊಂದಿಗೆ ಇಂದ್ರಿಯಗಳ ಸಂಯೋಗವು ಆಗದಂತೆ ನೋಡುವವನ ಮನಸ್ಸು ತಾನಾಗಿ ನಿಶ್ಚಲವಾಗಿ ಶಾಂತವಾಗುತ್ತದೆ. ಆದ್ದರಿಂದ ಮಾತು, ಕಿವಿ, ಮನಸ್ಸೇ ಮೊದಲಾದ ಇಂದ್ರಿಯಗಳಿಂದ ಸ್ತ್ರೀಯರ, ಸ್ತ್ರೀಲಂಪಟರ ಸಂಗ ಎಂದೂ ಮಾಡಬಾರದು. ನನ್ನಂತಹ ಜನರ ಮಾತಾದರೂ ಏನು, ದೊಡ್ಡ-ದೊಡ್ಡ ವಿದ್ವಾಂಸರಿಗೂ ಕೂಡ ತಮ್ಮ ಇಂದ್ರಿಯಗಳು ಮತ್ತು ಮನಸ್ಸು ನಂಬಲರ್ಹವಾದುವುಗಳಲ್ಲ. ॥23-24॥

(ಶ್ಲೋಕ - 25)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏವಂ ಪ್ರಗಾಯನ್ನೃಪದೇವದೇವಃ
ಸ ಉರ್ವಶೀಲೋಕಮಥೋ ವಿಹಾಯ ।
ಆತ್ಮಾನಮಾತ್ಮನ್ಯವಗಮ್ಯ ಮಾಂ ವೈ
ಉಪಾರಮಜ್ಜ್ಞಾನವಿಧೂತಮೋಹಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಉದ್ಧವನೇ! ರಾಜರಾಜೇಶ್ವರ ಪುರೂರವನ ಮನಸ್ಸಿನಲ್ಲಿ ಈ ರೀತಿಯ ಉದ್ಗಾರಗಳು ಏಳುತ್ತಿದ್ದಾಗ, ಅವನು ಊರ್ವಶಿಯ ಕಡೆಯಿಂದ ತನ್ನ ಮನಸ್ಸನ್ನು ಪೂರ್ಣವಾಗಿ ವಿಮುಖಗೊಳಿಸಿದನು. ಈಗ ಜ್ಞಾನೋದಯವಾದ ಕಾರಣ ಅವನ ಮೋಹವು ತೊಲಗಿತು. ಅವನು ತನ್ನ ಹೃದಯದಲ್ಲೇ ಆತ್ಮ ಸ್ವರೂಪನಾದ ನನ್ನ ಸಾಕ್ಷ್ಯಾತ್ಕಾರಮಾಡಿಕೊಂಡನು ಹಾಗೂ ಶಾಂತಭಾವದಿಂದ ಸ್ಥಿತನಾದನು. ॥25॥

(ಶ್ಲೋಕ - 26)

ಮೂಲಮ್

ತತೋ ದುಸ್ಸಂಗ ಮುತ್ಸೃಜ್ಯ ಸತ್ಸು ಸಜ್ಜೇತ ಬುದ್ಧಿಮಾನ್ ।
ಸಂತ ಏತಸ್ಯ ಚ್ಛಿಂದಂತಿ ಮನೋವ್ಯಾಸಂಗಮುಕ್ತಿಭಿಃ ॥

(ಶ್ಲೋಕ - 27)

ಮೂಲಮ್

ಸಂತೋನಪೇಕ್ಷಾ ಮಚ್ಚಿತ್ತಾಃ ಪ್ರಶಾಂತಾಃ ಸಮದರ್ಶಿನಃ ।
ನಿರ್ಮಮಾ ನಿರಹಂಕಾರಾ ನಿರ್ದ್ವಂದ್ವಾ ನಿಷ್ಪರಿಗ್ರಹಾಃ ॥

ಅನುವಾದ

ಅದಕ್ಕಾಗಿ ಬುದ್ಧಿವಂತರಾದ ಮನುಷ್ಯರು ಪುರೂರವನಂತೆ ಕುಸಂಗವನ್ನು ಬಿಟ್ಟು, ಸತ್ಪುರುಷರ ಸಂಗವನ್ನು ಮಾಡಬೇಕು. ಸಂತ ಮಹಾತ್ಮರು ತಮ್ಮ ಸದುಪದೇಶದಿಂದ ಅವನ ಮನಸ್ಸಿನ ಆಸಕ್ತಿಯನ್ನು ಇಲ್ಲವಾಗಿಸುತ್ತಾರೆ. ಸಂತ ಪುರುಷರಿಗೆ ಎಂದೂ ಯಾವುದೇ ವಸ್ತುವಿನ ಅಪೇಕ್ಷೆ ಇರುವುದಿಲ್ಲ. ಅವರ ಚಿತ್ತ ನನ್ನಲ್ಲೇ ತೊಡಗಿರುತ್ತದೆ. ಅವರ ಹೃದಯದಲ್ಲಿ ಶಾಂತಿಯ ಅಗಾಧ ಸಮುದ್ರವೇ ಉಕ್ಕುತ್ತಿರುತ್ತದೆ. ಅವರು ಯಾವಾಗಲೂ ಎಲ್ಲೆಡೆ, ಎಲ್ಲದರಲ್ಲಿ ಸಮರೂಪದಿಂದ ಸ್ಥಿತನಾದ ಭಗವಂತ ನನ್ನೇ ದರ್ಶಿಸುತ್ತಿರುತ್ತಾರೆ. ಅವರಲ್ಲಿ ಮಮತೆ, ಅಹಂಕಾರವು ಲೇಶಮಾತ್ರವೂ ಇರುವುದಿಲ್ಲ. ಅವರು ಚಳಿ-ಸೆಕೆ, ಸುಖ-ದುಃಖಾದಿ ದ್ವಂದ್ವಗಳಲ್ಲಿ ಏಕರಸವಾಗಿರುತ್ತಾರೆ. ಯಾವ ಪ್ರಕಾರದ ಪ್ರತಿಗ್ರಹವನ್ನೂ ಇರಿಸಿಕೊಳ್ಳುವುದಿಲ್ಲ. ॥26-27॥

(ಶ್ಲೋಕ - 28)

ಮೂಲಮ್

ತೇಷು ನಿತ್ಯಂ ಮಹಾಭಾಗ ಮಹಾಭಾಗೇಷು ಮತ್ಕಥಾಃ ।
ಸಂಭವಂತಿ ಹಿತಾ ನೃಣಾಂ ಜುಷತಾಂ ಪ್ರಪುನಂತ್ಯಘಮ್ ॥

ಅನುವಾದ

ಮಹಾ ಭಾಗ್ಯಶಾಲೀ ಉದ್ಧವನೇ! ಸಂತರ ಸೌಭಾಗ್ಯದ ಮಹಿಮೆಯನ್ನು ಯಾರು ಹೊಗಳಬಲ್ಲರು? ಅವರು ನಡೆಸುವ ನನ್ನ ಕಥೆಗಳು ಮನುಷ್ಯರಿಗಾಗಿ ಪರಮ ಹಿತಕರವಾಗಿವೆ. ಅವರನ್ನು ಸೇವಿಸುವವನ ಎಲ್ಲ ಪಾಪಗಳು ತೊಳೆದುಹೋಗುತ್ತವೆ. ॥28॥

(ಶ್ಲೋಕ - 29)

ಮೂಲಮ್

ತಾ ಯೇ ಶೃಣ್ವಂತಿ ಗಾಯಂತಿ ಹ್ಯನುಮೋದಂತಿ ಚಾದೃತಾಃ ।
ಮತ್ಪರಾಃ ಶ್ರದ್ಧಧಾನಾಶ್ಚ ಭಕ್ತಿಂ ವಿಂದಂತಿ ತೇ ಮಯಿ ॥

ಅನುವಾದ

ಯಾರು ಆದರ, ಶ್ರದ್ಧೆಯಿಂದ ನನ್ನ ಲೀಲಾ-ಕಥೆಗಳನ್ನು ಶ್ರವಣಿಸುತ್ತಾ, ಕೀರ್ತಿಸುತ್ತಾ, ಅನುಮೋದಿಸುವರೋ ಅವರು ನನ್ನ ಪರಾಯಣರಾಗಿ ಹೋಗುತ್ತಾರೆ ಮತ್ತು ನನ್ನ ಅನನ್ಯ ಪ್ರೇಮಮಯ ಭಕ್ತಿಯನ್ನು ಪಡೆದುಕೊಳ್ಳುವರು. ॥29॥

(ಶ್ಲೋಕ - 30)

ಮೂಲಮ್

ಭಕ್ತಿಂ ಲಬ್ಧವತಃ ಸಾಧೋಃ ಕಿಮನ್ಯದವಶಿಷ್ಯತೇ ।
ಮಯ್ಯನಂತಗುಣೇ ಬ್ರಹ್ಮಣ್ಯಾನಂದಾನುಭವಾತ್ಮನಿ ॥

ಅನುವಾದ

ಎಲೈ ಉದ್ಧವನೇ! ನಾನೇ ಅನಂತ, ಅಚಿಂತ್ಯ ಕಲ್ಯಾಣಮಯ ಗುಣಗಳ ಆಶ್ರಯನಾಗಿರುವೆನು. ನಾನು ಕೇವಲ ಆನಂದಾನುಭವಸ್ವರೂಪೀ ಎಲ್ಲರ ಆತ್ಮಾ ಸಾಕ್ಷಾತ್ ಪರಬ್ರಹ್ಮನಾಗಿರುವೆನು. ನನ್ನ ಭಕ್ತಿಯು ದೊರಕಿದವನೇ ಸಂತನಾಗಿಹೋದನು. ಈಗ ಅವನಿಗೆ ಪಡೆಯುವುದು ಯಾವುದೂ ಬಾಕಿ ಉಳಿಯಲಿಲ್ಲ. ॥30॥

(ಶ್ಲೋಕ - 31)

ಮೂಲಮ್

ಯಥೋಪಶ್ರಯಮಾಣಸ್ಯ ಭಗವಂತಂ ವಿಭಾವಸುಮ್ ।
ಶೀತಂ ಭಯಂ ತಮೋಪ್ಯೇತಿ ಸಾಧೂನ್ಸಂಸೇವತಸ್ತಥಾ ॥

ಅನುವಾದ

ಅಂತಹ ಸತ್ಪುರುಷರಲ್ಲಿ ಶರಣಾದವರ ಕರ್ಮಜಡತೆ, ಸಂಸಾರಭಯ, ಅಜ್ಞಾನ, ಮುಂತಾದವುಗಳು ಸರ್ವಥಾ ನಿವೃತ್ತವಾಗಿ ಹೋಗುತ್ತವೆ. ಅಗ್ನಿಯನ್ನು ಆಶ್ರಯಿಸಿದವನಿಗೆ ಛಳಿಯಾಗಲೀ, ಅಂಧಕಾರವಾಗಲಿ ಇವುಗಳ ದುಃಖವು ಆಗ ಬಲ್ಲುದೇ? ॥31॥

(ಶ್ಲೋಕ - 32)

ಮೂಲಮ್

ನಿಮಜ್ಜ್ಯೋನ್ಮಜ್ಜತಾಂ ಘೋರೇ ಭವಾಬ್ಧೌ ಪರಮಾಯನಮ್ ।
ಸಂತೋ ಬ್ರಹ್ಮವಿದಃ ಶಾಂತಾ ನೌರ್ದೃಢೇವಾಪ್ಸು ಮಜ್ಜತಾಮ್ ॥

ಅನುವಾದ

ನೀರಿನಲ್ಲಿ ಮುಳುಗಿದವನಿಗೆ ದೃಢವಾದ ನೌಕೆಯು ಆಶ್ರಯವಿರುವಂತೆ ಈ ಘೋರಸಂಸಾರ ಸಾಗರದಲ್ಲಿ ಮುಳುಗಿದವರಿಗೆ ಬ್ರಹ್ಮವೇತ್ತರಾದ, ಶಾಂತ ಸಂತರೇ ಏಕಮಾತ್ರ ಪರಮಾಶ್ರಯರಾಗಿದ್ದಾರೆ. ॥32॥

(ಶ್ಲೋಕ - 33)

ಮೂಲಮ್

ಅನ್ನಂ ಹಿ ಪ್ರಾಣಿನಾಂ ಪ್ರಾಣ ಆರ್ತಾನಾಂ ಶರಣಂ ತ್ವಹಮ್ ।
ಧರ್ಮೋ ವಿತ್ತಂ ನೃಣಾಂ ಪ್ರೇತ್ಯ ಸಂತೋರ್ವಾಗ್ ಭಿಭ್ಯತೋರಣಮ್ ॥

ಅನುವಾದ

ಅನ್ನದಿಂದ ಪ್ರಾಣಿಗಳ ಪ್ರಾಣಗಳು ರಕ್ಷಿಸಲ್ಪಡುವಂತೆ, ದೀನ-ದುಃಖಿಗಳ ಪರಮ ರಕ್ಷಕನು ನಾನೇ ಆಗಿರುವಂತೆ, ಪರಲೋಕದಲ್ಲಿ ಮನುಷ್ಯರಿಗೆ ಏಕಮಾತ್ರ ಧರ್ಮವು ರಕ್ಷಕವಾಗಿರುವಂತೆ, ಸಂಸಾರದಲ್ಲಿ ಭಯ ಭೀತರಾದವರಿಗೆ ಸಂತರೇ ಪರಮ ಧನ, ಪ್ರಾಣ ಮತ್ತು ಪರಮಾಶ್ರಯರಾಗಿದ್ದಾರೆ. ॥33॥

(ಶ್ಲೋಕ - 34)

ಮೂಲಮ್

ಸಂತೋ ದಿಶಂತಿ ಚಕ್ಷೂಂಷಿ ಬಹಿರರ್ಕಃ ಸಮುತ್ಥಿತಃ ।
ದೇವತಾ ಬಾಂಧವಾಃ ಸಂತಃ ಸಂತ ಆತ್ಮಾಹಮೇವ ಚ ॥

ಅನುವಾದ

ಸೂರ್ಯನು ಉದಯಿಸಿ ಜನರ ಕಣ್ಣುಗಳಿಗೆ ಪ್ರಕಾಶ ಕೊಡುವಂತೆ, ಸಂತ ಪುರುಷರು ತನ್ನನ್ನು ಹಾಗೂ ಭಗವಂತನನ್ನು ನೋಡಲಿಕ್ಕಾಗಿ ಅಂತರ್ದೃಷ್ಟಿಯನ್ನು ಕೊಡುತ್ತಾರೆ. ಸಂತರು ಅನುಗ್ರಹಶೀಲ ದೇವತೆಗಳಾಗಿದ್ದಾರೆ. ಸಂತರು ನನ್ನ ಸುಹೃದ್, ಹಿತೈಷಿಗಳಾಗಿದ್ದಾರೆ. ಸಂತರೇ ನನ್ನ ಪ್ರಿಯತಮ ಆತ್ಮಾ ಆಗಿದ್ದಾರೆ. ಹೆಚ್ಚೇನು ಹೇಳಲಿ? ಸ್ವಯಂ ನಾನೇ ಸಂತರ ರೂಪದಲ್ಲಿ ವಿದ್ಯಮಾನನಾಗಿದ್ದೇನೆ. ॥34॥

(ಶ್ಲೋಕ - 35)

ಮೂಲಮ್

ವೈತಸೇನಸ್ತತೋಪ್ಯೇವಮುರ್ವಶ್ಯಾ ಲೋಕನಿಃಸ್ಪೃಹಃ ।
ಮುಕ್ತಸಂಗೋ ಮಹೀಮೇತಾಮಾತ್ಮಾರಾಮಶ್ಚಚಾರ ಹ ॥

ಅನುವಾದ

ಪ್ರಿಯ ಉದ್ಧವನೇ! ಆತ್ಮ ಸಾಕ್ಷಾತ್ಕಾರವಾಗುತ್ತಲೇ ಇಲಾನಂದನ ಪುರೂರವನಿಗೆ ಊರ್ವಶಿಯ ಕಡೆಗಿನ ಸ್ಪೃಹೆಯು ಉಳಿಯಲಿಲ್ಲ. ಅವನ ಎಲ್ಲ ಆಸಕ್ತಿಗಳು ಇಲ್ಲವಾದುವು. ಅವನು ಆತ್ಮಾರಾಮನಾಗಿ ಸ್ವಚ್ಛಂದವಾಗಿ ಈ ಪೃಥ್ವಿಯಲ್ಲಿ ಸಂಚರಿಸತೊಡಗಿದನು. ॥35॥

ಅನುವಾದ (ಸಮಾಪ್ತಿಃ)

ಇಪ್ಪತ್ತಾರನೆಯ ಅಧ್ಯಾಯವು ಮುಗಿಯಿತು. ॥26॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಷಡ್ವಿಂಶೋಽಧ್ಯಾಯಃ ॥26॥