[ಇಪ್ಪತ್ತೈದನೆಯ ಅಧ್ಯಾಯ]
ಭಾಗಸೂಚನಾ
ಮೂರೂ ಗುಣವೃತ್ತಿಗಳ ನಿರೂಪಣೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಗುಣಾನಾಮಸಮಿಶ್ರಾಣಾಂ ಪುಮಾನ್ ಯೇನ ಯಥಾ ಭವೇತ್ ।
ತನ್ಮೇ ಪುರುಷವರ್ಯೇದಮುಪಧಾರಯ ಶಂಸತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪುರುಷಪುಂಗವ ಉದ್ಧವನೇ! ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಪ್ರ-ಪ್ರತ್ಯೇಕ ಗುಣಗಳು ಪ್ರಕಾಶಬೀರುತ್ತವೆ. ಅವುಗಳ ಕಾರಣದಿಂದ ಪ್ರಾಣಿಗಳ ಸ್ವಭಾವದಲ್ಲಿಯೂ ಭೇದಗಳು ಉಂಟಾಗುತ್ತವೆ. ಯಾವ ಗುಣದಿಂದ ಯಾವ-ಯಾವ ಸ್ವಭಾವಗಳು ಉಂಟಾಗುತ್ತವೆ ಎಂಬುದನ್ನು ನಾನು ಈಗ ತಿಳಿಸುತ್ತೇನೆ. ಮನಸ್ಸಿಟ್ಟು ಕೇಳು. ॥1॥
(ಶ್ಲೋಕ - 2)
ಮೂಲಮ್
ಶಮೋ ದಮಸ್ತಿತಿಕ್ಷೇಕ್ಷಾ ತಪಃ ಸತ್ಯಂ ದಯಾ ಸ್ಮೃತಿಃ ।
ತುಷ್ಟಿಸ್ತ್ಯಾಗೋಸ್ಪೃಹಾ ಶ್ರದ್ಧಾ ಹ್ರೀರ್ದಯಾದಿಃ ಸ್ವನಿರ್ವೃತಿಃ ॥
ಅನುವಾದ
ಶಮ (ಮನಸ್ಸಿನ ಸಂಯಮ), ದಮ (ಇಂದ್ರಿಯನಿಗ್ರಹ), ತಿತಿಕ್ಷಾ (ಸಹಿಷ್ಣುತೆ), ವಿವೇಕ, ತಪಸ್ಸು, ಸತ್ಯ, ದಯೆ, ಸ್ಮೃತಿ, ಸಂತೋಷ, ತ್ಯಾಗ, ವಿಷಯಗಳ ಕುರಿತು ಅನಿಚ್ಛೆ, ಶ್ರದ್ಧೆ, ಲಜ್ಜೆ (ಪಾಪಮಾಡು ವುದರಲ್ಲಿ ಸ್ವಾಭಾವಿಕ ಸಂಕೋಚ), ಆತ್ಮರತಿ, ದಾನ, ವಿನಯ, ಸರಳತೆ ಮುಂತಾದವುಗಳು ಸತ್ತ್ವಗುಣದ ವೃತ್ತಿಗಳು. ॥2॥
(ಶ್ಲೋಕ - 3)
ಮೂಲಮ್
ಕಾಮ ಈಹಾ ಮದಸ್ತೃಷ್ಣಾ ಸ್ತಂಭ ಆಶೀರ್ಭಿದಾ ಸುಖಮ್ ।
ಮದೋತ್ಸಾಹೋ ಯಶಃ ಪ್ರೀತಿರ್ಹಾಸ್ಯಂ ವೀರ್ಯಂ ಬಲೋದ್ಯಮಃ ॥
ಅನುವಾದ
ಇಚ್ಛೆ, ಪ್ರಯತ್ನ, ಮದ, ತೃಷ್ಣೆ (ತೃಪ್ತಿಯಿಲ್ಲದಿರುವುದು) ಗರ್ವ, ಧನಕ್ಕಾಗಿ ದೇವತೆಗಳಲ್ಲಿ ಪ್ರಾರ್ಥನೆ, ಭೇದಬುದ್ಧಿ, ವಿಷಯಭೋಗ, ಯುದ್ಧಾದಿಗಳಲ್ಲಿ ಮದಜನಿತ ಉತ್ಸಾಹ, ತನ್ನ ಕೀರ್ತಿಯಲ್ಲಿ ಪ್ರೀತಿ, ಹಾಸ್ಯ, ಪರಾಕ್ರಮ, ಹಠದಿಂದ ಉದ್ಯೋಗಮಾಡುವ ಪ್ರವೃತ್ತಿ ಇವು ರಜೋಗುಣದ ವೃತ್ತಿಗಳು. ॥3॥
(ಶ್ಲೋಕ - 4)
ಮೂಲಮ್
ಕ್ರೋಧೋ ಲೋಭೋನೃತಂ ಹಿಂಸಾ ಯಾಚ್ಞಾ ದಂಭಃ ಕ್ಲಮಃ ಕಲಿಃ ।
ಶೋಕಮೋಹೌ ವಿಷಾದಾರ್ತೀ ನಿದ್ರಾಶಾ ಭೀರನುದ್ಯಮಃ ॥
ಅನುವಾದ
ಕ್ರೋಧ (ಅಸಹಿಷ್ಣುತೆ), ಲೋಭ, ಸುಳ್ಳುಹೇಳುವುದು, ಹಿಂಸೆ, ಯಾಚನೆ, ಡಂಭಾಚಾರ, ಶ್ರಮ, ಕಲಹ, ಶೋಕ, ಮೋಹ, ವಿಷಾದ, ದೀನತೆ, ನಿದ್ದೆ, ಆಸೆ, ಭಯ, ಅಕರ್ಮಣ್ಯತೆ ಇವು ತಮೋಗುಣದ ವೃತ್ತಿಗಳು. ॥4॥
(ಶ್ಲೋಕ - 5)
ಮೂಲಮ್
ಸತ್ತ್ವಸ್ಯ ರಜಸಶ್ಚೈತಾಸ್ತಮಸಶ್ಚಾನುಪೂರ್ವಶಃ ।
ವೃತ್ತಯೋ ವರ್ಣಿತಪ್ರಾಯಾಃ ಸನ್ನಿಪಾತಮಥೋ ಶೃಣು ॥
ಅನುವಾದ
ಈ ಕ್ರಮದಿಂದ ಸತ್ತ್ವಗುಣ, ರಜೋಗುಣ, ತಮೋಗುಣ ಇವುಗಳು ಅಧಿಕಾಂಶವಿರುವ ವ್ಯಕ್ತಿಗಳ ವೃತ್ತಿಗಳನ್ನು ಬೇರೆ-ಬೇರೆಯಾಗಿ ವರ್ಣಿಸಿರುವೆನು. ಈಗ ಅವುಗಳ ಬೆರಕೆಯಿಂದ ಆಗುವ ವೃತ್ತಿಗಳ ವರ್ಣನೆಯನ್ನು ಕೇಳು. ॥5॥
(ಶ್ಲೋಕ - 6)
ಮೂಲಮ್
ಸನ್ನಿಪಾತಸ್ತ್ವಹಮಿತಿ ಮಮೇತ್ಯುದ್ಧವ ಯಾ ಮತಿಃ ।
ವ್ಯವಹಾರಃ ಸನ್ನಿಪಾತೋ ಮನೋಮಾತ್ರೇಂದ್ರಿಯಾಸುಭಿಃ ॥
ಅನುವಾದ
ಉದ್ಧವನೇ! ಮೂರೂ ಗುಣಗಳ ಮಿಶ್ರಣದಿಂದಲೇ ‘ನಾನು’ ಮತ್ತು ‘ನನ್ನದು’ ಎಂಬ ಬುದ್ಧಿಯು ಉತ್ಪನ್ನವಾಗುತ್ತದೆ. ಮನಸ್ಸು, ಶಬ್ದಾದಿ ವಿಷಯಗಳು, ಇಂದ್ರಿಯಗಳು ಮತ್ತು ಪ್ರಾಣಗಳು ಇವುಗಳ ಕಾರಣದಿಂದ ವೃತ್ತಿಗಳ ವ್ಯವಹಾರ ನಡೆಯುತ್ತದೆ. ಸಾತ್ತ್ವಿಕ, ರಾಜಸ, ತಾಮಸ ಮೂರೂ ಗುಣಗಳ ಮಿಶ್ರಣದಿಂದಲೇ ಕ್ರಿಯೆಗಳು ನಡೆಯುತ್ತವೆ. ॥6॥
(ಶ್ಲೋಕ - 7)
ಮೂಲಮ್
ಧರ್ಮೇ ಚಾರ್ಥೇ ಚ ಕಾಮೇ ಚ ಯದಾಸೌ ಪರಿನಿಷ್ಠಿತಃ ।
ಗುಣಾನಾಂ ಸನ್ನಿಕರ್ಷೋಯಂ ಶ್ರದ್ಧಾರತಿಧನಾವಹಃ ॥
ಅನುವಾದ
ಮನುಷ್ಯನು ಧರ್ಮ, ಅರ್ಥ, ಕಾಮರೂಪೀ ಪುರುಷಾರ್ಥಗಳನ್ನು ಸಾಧಿಸಲು ತೊಡಗಿದಾಗ, ಅವನಿಗೆ ಮೂರೂ ಗುಣಗಳ ಆವಶ್ಯಕತೆ ಬೀಳುತ್ತದೆ. ಆಗ ಅವನಿಗೆ ಸತ್ತ್ವಗುಣದಿಂದ ಶ್ರದ್ಧೆ, ರಜೋಗುಣದಿಂದ ಆಸಕ್ತಿ, ತಮೋಗುಣದಿಂದ ಧನದ ಪ್ರಾಪ್ತಿಯಾಗುತ್ತದೆ. ಇದೂ ಕೂಡ ಗುಣಗಳ ಮಿಶ್ರಣವೇ ಆಗಿದೆ. ॥7॥
(ಶ್ಲೋಕ - 8)
ಮೂಲಮ್
ಪ್ರವೃತ್ತಿಲಕ್ಷಣೇ ನಿಷ್ಠಾ ಪುಮಾನ್ಯರ್ಹಿ ಗೃಹಾಶ್ರಮೇ ।
ಸ್ವಧರ್ಮೇ ಚಾನುತಿಷ್ಠೇತ ಗುಣಾನಾಂ ಸಮಿತಿರ್ಹಿ ಸಾ ॥
ಅನುವಾದ
ಮನುಷ್ಯನು ಸಕಾಮ ಕರ್ಮದ ಅನುಷ್ಠಾನ ಮಾಡುವಾಗ ಅಥವಾ ಅವನು ಗೃಹಸ್ಥಾಶ್ರಮದಲ್ಲಿ ನಿಷ್ಠೆ ಇರಿಸುತ್ತಾ ತನ್ನ ಕರ್ಮಗಳನ್ನು ಪಾಲಿಸುವಾಗಲೂ ಅವನಲ್ಲಿ ಮೂರೂ ಗುಣಗಳ ಸಮ್ಮಿಶ್ರಣವಿದೆ ಎಂದು ತಿಳಿಯಬೇಕು. ॥8॥
(ಶ್ಲೋಕ - 9)
ಮೂಲಮ್
ಪುರುಷಂ ಸತ್ತ್ವಸಂಯುಕ್ತಮನುಮೀಯಾಚ್ಛಮಾದಿಭಿಃ ।
ಕಾಮಾದಿಭೀ ರಜೋಯುಕ್ತಂ ಕ್ರೋಧಾದ್ಯೈಸ್ತಮಸಾ ಯುತಮ್ ॥
ಅನುವಾದ
ಮಾನಸಿಕ ಶಾಂತಿ, ಜಿತೇಂದ್ರಿಯತೆ ಮೊದಲಾದ ಗುಣಗಳಿಂದ ಸತ್ತ್ವಗುಣೀ ಮನುಷ್ಯನ, ಕಾಮನೆ ಮೊದಲಾದವುಗಳಿಂದ ರಜೋಗುಣಿ ವ್ಯಕ್ತಿಯ ಕ್ರೋಧ, ಹಿಂಸೆ ಮುಂತಾದ ಗುಣಗಳಿಂದ ತಮೋಗುಣಿಯ ಪರಿಚಯವಾಗುತ್ತದೆ. ॥9॥
(ಶ್ಲೋಕ - 10)
ಮೂಲಮ್
ಯದಾ ಭಜತಿ ಮಾಂ ಭಕ್ತ್ಯಾ ನಿರಪೇಕ್ಷಃ ಸ್ವಕರ್ಮಭಿಃ ।
ತಂ ಸತ್ತ್ವಪ್ರಕೃತಿಂ ವಿದ್ಯಾತ್ಪುರುಷಂ ಸಿಯಮೇವ ವಾ ॥
ಅನುವಾದ
ಪುರುಷರಿರಲೀ, ಸ್ತ್ರೀಯಾಗಿರಲೀ ಅವರು ನಿಷ್ಕಾಮರಾಗಿ ತಮ್ಮ ನಿತ್ಯ ನೈಮಿತ್ತಿಕ ಕರ್ಮಗಳ ಮೂಲಕ ನನ್ನನ್ನು ಆರಾಧಿಸುತ್ತಿದ್ದರೆ ಅವರನ್ನು ಸತ್ತ್ವಗುಣಿಗಳು ಎಂದು ತಿಳಿಯಬೇಕು. ॥10॥
(ಶ್ಲೋಕ - 11)
ಮೂಲಮ್
ಯದಾ ಆಶಿಷ ಆಶಾಸ್ಯ ಮಾಂ ಭಜೇತ ಸ್ವಕರ್ಮಭಿಃ ।
ತಂ ರಜಃಪ್ರಕೃತಿಂ ವಿದ್ಯಾದ್ಧಿಂಸಾಮಾಶಾಸ್ಯ ತಾಮಸಮ್ ॥
ಅನುವಾದ
ಸಕಾಮಭಾವದಿಂದ ತನ್ನ ಕರ್ಮಗಳ ಮೂಲಕ ನನ್ನ ಭಜನೆ-ಪೂಜೆ ಮಾಡುವವನು ರಜೋಗುಣಿಯಾಗಿದ್ದಾನೆ. ತನ್ನ ಶತ್ರುವಿನ ಮೃತ್ಯುಗಾಗಿ, ಹಿಂಸಾಯುಕ್ತ ನನ್ನ ಭಜನೆ-ಪೂಜೆ ಮಾಡುವವನು ತಮೋಗುಣೀ ಎಂದು ತಿಳಿಯಬೇಕು. ॥11॥
(ಶ್ಲೋಕ - 12)
ಮೂಲಮ್
ಸತ್ತ್ವಂ ರಜಸ್ತಮ ಇತಿ ಗುಣಾ ಜೀವಸ್ಯ ನೈವ ಮೇ ।
ಚಿತ್ತಜಾ ಯೈಸ್ತು ಭೂತಾನಾಂ ಸಜ್ಜಮಾನೋ ನಿಬಧ್ಯತೇ ॥
ಅನುವಾದ
ಸತ್ತ್ವ, ರಜ, ತಮ ಈ ಮೂರೂ ಗುಣಗಳು ಜೀವಿಯದಾಗಿವೆ. ಪರಮಾತ್ಮನಾದ ನನ್ನವುಗಳಲ್ಲ. ಇವು ಪ್ರಾಣಿಗಳ ಚಿತ್ತದಲ್ಲಿ ಹುಟ್ಟುತ್ತವೆ. ಈ ಗುಣಗಳ ಕಾರಣದಿಂದಲೇ ಶರೀರ, ಧನಾದಿಗಳಲ್ಲಿ ಆಸಕ್ತನಾಗಿ ಜೀವಿಯು ಸ್ವಯಂ ಬಂಧಿತನಾಗುತ್ತಾನೆ. ॥12॥
(ಶ್ಲೋಕ - 13)
ಮೂಲಮ್
ಯದೇತರೌ ಜಯೇತ್ಸಸ್ತ್ವಂ ಭಾಸ್ವರಂ ವಿಶದಂ ಶಿವಮ್ ।
ತದಾ ಸುಖೇನ ಯುಜ್ಯೇತ ಧರ್ಮಜ್ಞಾನಾದಿಭಿಃ ಪುಮಾನ್ ॥
ಅನುವಾದ
ಸತ್ತ್ವಗುಣವು ಪ್ರಕಾಶಕ, ನಿರ್ಮಲ ಮತ್ತು ಶಾಂತವಾಗಿದೆ. ಅದು ರಜೋಗುಣ, ತಮೋಗುಣಗಳನ್ನು ಅದುಮಿ ಬೆಳೆದಾಗ ಪುರುಷನು ಸುಖ, ಧರ್ಮ, ಜ್ಞಾನ ಮುಂತಾದುವನ್ನು ಪಡೆದುಕೊಳ್ಳುತ್ತಾನೆ. ॥13॥
(ಶ್ಲೋಕ - 14)
ಮೂಲಮ್
ಯದಾ ಜಯೇತ್ತಮಃ ಸತ್ತ್ವಂ ರಜಃ ಸಂಗಂ ಭಿದಾ ಚಲಮ್ ।
ತದಾ ದುಃಖೇನ ಯುಜ್ಯೇತ ಕರ್ಮಣಾ ಯಶಸಾ ಶ್ರಿಯಾ ॥
ಅನುವಾದ
ರಜೋಗುಣವು ಭೇದ ಬುದ್ಧಿಯ ಕಾರಣವಾಗಿದೆ. ಆಸಕ್ತಿ ಮತ್ತು ಪ್ರವೃತ್ತಿ ಅದರ ಸ್ವಭಾವವಾಗಿದೆ. ತಮೋಗುಣ ಮತ್ತು ಸತ್ತ್ವಗುಣಗಳನ್ನು ಅದುಮಿ ರಜೋಗುಣವು ಬೆಳೆದಾಗ ಮನುಷ್ಯನು ದುಃಖ, ಕರ್ಮ, ಕೀರ್ತಿ, ಲಕ್ಷ್ಮೀ (ಸಂಪತ್ತು) ಇವುಗಳಿಂದ ಸಂಪನ್ನನಾಗುತ್ತಾನೆ. ॥14॥
(ಶ್ಲೋಕ - 15)
ಮೂಲಮ್
ಯದಾ ಜಯೇದ್ರಜಃ ಸತ್ತ್ವಂ ತಮೋ ಮೂಢಂ ಲಯಂ ಜಡಮ್ ।
ಯುಜ್ಯೇತ ಶೋಕಮೋಹಾಭ್ಯಾಂ ನಿದ್ರಯಾ ಹಿಂಸಯಾಶಯಾ ॥
ಅನುವಾದ
ತಮೋಗುಣದ ಸ್ವರೂಪವು ಅಜ್ಞಾನವಾಗಿದೆ. ಆಲಸ್ಯ, ಬುದ್ಧಿಯ ಮೂಢತೆ ಅದರ ಸ್ವಭಾವವಾಗಿದೆ. ಆ ತಮೋಗುಣವು ಬೆಳೆದು ಸತ್ತ್ವಗುಣ ಮತ್ತು ರಜೋಗುಣಗಳನ್ನು ಅದುಮಿಬಿಡುತ್ತದೋ ಆಗ ಪ್ರಾಣಿಯು ಬಗೆ-ಬಗೆಯ ಆಸೆಗಳನ್ನು ಮಾಡುತ್ತಾನೆ. ಶೋಕ-ಮೋಹದಲ್ಲಿ ಬೀಳುವನು. ಹಿಂಸಿಸಲು ತೊಡಗುವನು. ಅಥವಾ ನಿದ್ರಾ-ಆಲಸ್ಯಕ್ಕೆ ವಶೀಭೂತನಾಗಿ ಮಲಗಿಕೊಂಡೇ ಇರುವನು. ॥15॥
(ಶ್ಲೋಕ - 16)
ಮೂಲಮ್
ಯದಾ ಚಿತ್ತಂ ಪ್ರಸೀದೇತ ಇಂದ್ರಿಯಾಣಾಂ ಚ ನಿರ್ವೃತಿಃ ।
ದೇಹೇಭಯಂ ಮನೋಸಂಗಂ ತತ್ಸತ್ತ್ವಂ ವಿದ್ಧಿ ಮತ್ಪದಮ್ ॥
ಅನುವಾದ
ಚಿತ್ತವು ಪ್ರಸನ್ನವಾದಾಗ, ಇಂದ್ರಿಯಗಳು ಶಾಂತವಾದಾಗ, ದೇಹವು ನಿರ್ಭಯವಾದಾಗ, ಮನಸ್ಸಿನಲ್ಲಿ ಆಸಕ್ತಿಯು ಉಳಿಯದಿದ್ದಾಗ, ಸತ್ತ್ವಗುಣವು ವೃದ್ಧಿಯಾಗಿದೆ ಎಂದು ತಿಳಿಯಬೇಕು. ಸತ್ತ್ವಗುಣವು ನನ್ನ ಪ್ರಾಪ್ತಿಯ ಸಾಧನೆಯಾಗಿದೆ. ॥16॥
(ಶ್ಲೋಕ - 17)
ಮೂಲಮ್
ವಿಕುರ್ವನ್ಕ್ರಿಯಯಾ ಚಾಧೀರನಿರ್ವೃತ್ತಿಶ್ಚ ಚೇತಸಾಮ್ ।
ಗಾತ್ರಾಸ್ವಾಸ್ಥ್ಯಂ ಮನೋ ಭ್ರಾಂತಂ ರಜ ಏತೈರ್ನಿಶಾಮಯ ॥
ಅನುವಾದ
ಕೆಲಸ ಮಾಡುತ್ತಾ-ಮಾಡುತ್ತಾ ಜೀವಿಯ ಬುದ್ಧಿಯು ಚಂಚಲವಾದಾಗ; ಜ್ಞಾನೇಂದ್ರಿಯಗಳು ಅಸಂತುಷ್ಟರಾಗಿ, ಕರ್ಮೇಂದ್ರಿಯಗಳು ವಿಕಾರದಿಂದ ಕೂಡಿದರೆ; ಮನಸ್ಸು ಭ್ರಾಂತವಾಗಿ, ಶರೀರವು ಅಸ್ವಸ್ಥವಾದಾಗ ರಜೋಗುಣದ ವೇಗವು ಹೆಚ್ಚುತ್ತಿದೆ ಎಂದು ತಿಳಿಯಬೇಕು. ॥17॥
(ಶ್ಲೋಕ - 18)
ಮೂಲಮ್
ಸೀದಚ್ಚಿತ್ತಂ ವಿಲೀಯೇತ ಚೇತಸೋ ಗ್ರಹಣೇಕ್ಷಮಮ್ ।
ಮನೋ ನಷ್ಟಂ ತಮೋ ಗ್ಲಾನಿಸ್ತಮಸ್ತದುಪಧಾರಯ ॥
ಅನುವಾದ
ಚಿತ್ತವು ಜ್ಞಾನೇಂದ್ರಿಯಗಳ ಮೂಲ ಶಬ್ದಾದಿ ವಿಷಯಗಳನ್ನು ಸರಿಯಾಗಿ ಅರಿಯಲು ಅಸಮರ್ಥವಾದಾಗ ಮತ್ತು ಖಿನ್ನವಾಗಿ ಲೀನವಾಗತೊಡಗಿದಾಗ, ಮನಸ್ಸು ಬರಿದಾಗಿ, ಅಜ್ಞಾನ, ವಿಷಾದಗಳು ಹೆಚ್ಚಿದಾಗ, ತಮೋಗುಣವು ಹೆಚ್ಚಿರುವುದನ್ನು ತಿಳಿಯಬೇಕು. ॥18॥
(ಶ್ಲೋಕ - 19)
ಮೂಲಮ್
ಏಧಮಾನೇ ಗುಣೇ ಸತ್ತ್ವೇ ದೇವಾನಾಂ ಬಲಮೇಧತೇ ।
ಅಸುರಾಣಾಂ ಚ ರಜಸಿ ತಮಸ್ಯುದ್ಧವ ರಕ್ಷಸಾಮ್ ॥
ಅನುವಾದ
ಉದ್ಧವನೇ! ಸತ್ತ್ವಗುಣವು ವೃದ್ಧಿಯಾದಾಗ ದೇವತೆಗಳ, ರಜೋಗುಣ ಬೆಳೆದಾಗ ಅಸುರರ, ತಮೋಗುಣವು ಹೆಚ್ಚಿದಾಗ ರಾಕ್ಷಸರ ಬಲವು ಹೆಚ್ಚುತ್ತದೆ. (ವೃತ್ತಿಗಳಲ್ಲಿಯೂ ಕ್ರಮಶಃ ಸತ್ತ್ವಾದಿ ಗುಣಗಳ ಹೆಚ್ಚಳ ಉಂಟಾದಾಗ ದೇವತ್ವ, ಅಸುರತ್ವ, ರಾಕ್ಷಸತ್ವ ಪ್ರಧಾನವಾದ ನಿವೃತ್ತಿ, ಪ್ರವೃತ್ತಿ, ಮೋಹದ ಪ್ರಧಾನತೆ ಉಂಟಾಗುತ್ತದೆ.) ॥19॥
(ಶ್ಲೋಕ - 20)
ಮೂಲಮ್
ಸತ್ತ್ವಾಜ್ಜಾಗರಣಂ ವಿದ್ಯಾದ್ರಜಸಾ ಸ್ವಪ್ನಮಾದಿಶೇತ್ ।
ಪ್ರಸ್ವಾಪಂ ತಮಸಾ ಜಂತೋಸ್ತುರೀಯಂ ತ್ರಿಷು ಸಂತತಮ್ ॥
ಅನುವಾದ
ಸತ್ತ್ವ ಗುಣದಿಂದ ಜಾಗ್ರತ್-ಅವಸ್ಥೆ, ರಜೋಗುಣದಿಂದ ಸ್ವಪ್ನಾವಸ್ಥೆ, ತಮೋಗುಣದಿಂದ ಸುಷುಪ್ತಿ-ಅವಸ್ಥೆ ಉಂಟಾಗುತ್ತವೆ. ಈ ಮೂರರಲ್ಲಿಯೂ ತುರೀಯವು ಸಮಾನವಾಗಿ ವ್ಯಾಪಿಸಿರುತ್ತದೆ. ಅದೇ ಶುದ್ಧ, ಏಕರಸ ಆತ್ಮನಾಗಿದ್ದಾನೆ. ॥20॥
(ಶ್ಲೋಕ - 21)
ಮೂಲಮ್
ಉಪರ್ಯುಪರಿ ಗಚ್ಛಂತಿ ಸತ್ತ್ವೇನ ಬ್ರಾಹ್ಮಣಾ ಜನಾಃ ।
ತಮಸಾಧೋಧ ಆಮುಖ್ಯಾದ್ ರಜಸಾಂತರಚಾರಿಣಃ ॥
ಅನುವಾದ
ವೇದಗಳ ಅಭ್ಯಾಸದಲ್ಲಿ ತತ್ಪರರಾದ ಬ್ರಾಹ್ಮಣರು ಸತ್ತ್ವಗುಣದ ಮೂಲಕ ಉತ್ತರೋತ್ತರ ಮೇಲಿನ ಲೋಕಗಳಿಗೆ ಹೋಗುತ್ತಾರೆ. ತಮೋಗುಣದಿಂದ ಜೀವಿಗಳಿಗೆ ವೃಕ್ಷಾದಿಗಳವರೆಗಿನ ಅಧೋಗತಿ ಪ್ರಾಪ್ತವಾಗುತ್ತದೆ. ರಜೋ ಗುಣದಿಂದ ಮನುಷ್ಯ ಶರೀರವು ದೊರೆಯುತ್ತದೆ. ॥21॥
(ಶ್ಲೋಕ - 22)
ಮೂಲಮ್
ಸತ್ತ್ವೇ ಪ್ರಲೀನಾಃ ಸ್ವರ್ಯಾಂತಿ ನರಲೋಕಂ ರಜೋಲಯಾಃ ।
ತಮೋಲಯಾಸ್ತು ನಿರಯಂ ಯಾಂತಿ ಮಾಮೇವ ನಿರ್ಗುಣಾಃ ॥
ಅನುವಾದ
ಸತ್ತ್ವಗುಣವು, ವೃದ್ಧಿಯಾದಾಗ ಮೃತ್ಯು ಸಂಭವಿಸಿದರೆ ಅವನು ಸ್ವರ್ಗವನ್ನು ಪಡೆದುಕೊಳ್ಳುತ್ತಾನೆ, ರಜೋಗುಣವು ಹೆಚ್ಚಿದಾಗ ಮೃತ್ಯುವಾದರೆ ಅವನಿಗೆ ಮನುಷ್ಯಲೋಕ ದೊರೆಯುತ್ತದೆ. ತಮೋಗುಣವು ಬೆಳೆದಾಗ ಸತ್ತರೆ ಅವನಿಗೆ ನರಕದ ಪ್ರಾಪ್ತಿಯಾಗುತ್ತದೆ. ಆದರೆ ತ್ರಿಗುಣಾತೀತ-ಜೀವನ್ಮುಕ್ತ ಪುರುಷನಿಗೆ ನನ್ನ ಪ್ರಾಪ್ತಿಯೇ ಆಗುತ್ತದೆ. ॥22॥
(ಶ್ಲೋಕ - 23)
ಮೂಲಮ್
ಮದರ್ಪಣಂ ನಿಷ್ಫಲಂ ವಾ ಸಾತ್ತ್ವಿಕಂ ನಿಜಕರ್ಮ ತತ್ ।
ರಾಜಸಂ ಲಸಂಕಲ್ಪಂ ಹಿಂಸಾಪ್ರಾಯಾದಿ ತಾಮಸಮ್ ॥
ಅನುವಾದ
ತನ್ನ ಸ್ವಧರ್ಮವನ್ನು ಭಗವದರ್ಪಣ ಭಾವದಿಂದ ಅಥವಾ ನಿಷ್ಕಾಮಭಾವದಿಂದ ಮಾಡಿದಾಗ ಅದು ಸಾತ್ತ್ವಿಕವಾಗುತ್ತದೆ. ಯಾವುದೇ ಕರ್ಮಾನುಷ್ಠಾನದಲ್ಲಿ ಫಲದ ಕಾಮನೆ ಇದ್ದಾಗ ಅದು ರಾಜಸವಾಗುತ್ತದೆ. ಯಾವುದೇ ಕರ್ಮದಲ್ಲಿ ಯಾರನ್ನಾದರೂ ಸತಾಯಿಸುವ ಅಥವಾ ತೋರಿಕೆಯ ಭಾವವಿದ್ದರೆ ಅದು ತಾಮಸಿಕವಾಗುತ್ತದೆ. ॥23॥
(ಶ್ಲೋಕ - 24)
ಮೂಲಮ್
ಕೈವಲ್ಯಂ ಸಾತ್ತ್ವಿಕಂ ಜ್ಞಾನಂ ರಜೋ ವೈಕಲ್ಪಿಕಂ ಚ ಯತ್ ।
ಪ್ರಾಕೃತಂ ತಾಮಸಂ ಜ್ಞಾನಂ ಮನ್ನಿಷ್ಠಂ ನಿರ್ಗುಣಂ ಸ್ಮೃತಮ್ ॥
ಅನುವಾದ
ಶುದ್ಧ ಆತ್ಮನ ಜ್ಞಾನವು ಸಾತ್ತ್ವಿಕಜ್ಞಾನವಾಗಿದೆ. ತನ್ನನ್ನು ಕರ್ತಾ-ಭೋಕ್ತಾ ಎಂದು ತಿಳಿಯುವ ಜ್ಞಾನವು ರಾಜಸವಾಗಿದೆ. ಏಕಮಾತ್ರ ತನ್ನ ಶರೀರವನ್ನೇ ಆತ್ಮನೆಂದು ತಿಳಿಯುವುದು ತಾಮಸಿಕವಾಗಿದೆ. ಈ ಮೂರರಿಂದಲೂ ವಿಲಕ್ಷಣವಾದ ನನ್ನ ಸ್ವರೂಪದ ನಿಜವಾದ ಜ್ಞಾನ ಗುಣಾತೀತವಾಗಿದೆ. ॥24॥
(ಶ್ಲೋಕ - 25)
ಮೂಲಮ್
ವನಂ ತು ಸಾತ್ತ್ವಿಕೋ ವಾಸೋ ಗ್ರಾಮೋ ರಾಜಸ ಉಚ್ಯತೇ ।
ತಾಮಸಂ ದ್ಯೂತಸದನಂ ಮನ್ನಿಕೇತಂ ತು ನಿರ್ಗುಣಮ್ ॥
ಅನುವಾದ
ಏಕಾಂತ ಪವಿತ್ರದೇಶದಲ್ಲಿ ವಾಸಿಸುವುದು ಸಾತ್ತ್ವಿಕವಾಗಿದೆ. ಗೃಹಾಸಕ್ತಿ ಇರುವುದು ರಾಜಸವಾಗಿದೆ ಮತ್ತು ಜೂಜು ಮದ್ಯಪಾನಾದಿಗಳಲ್ಲಿ ಆಸಕ್ತನಾಗುವುದು ತಾಮಸಿಕವಾಗಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನ ಮಂದಿರದಲ್ಲಿ ವಾಸಿಸುವುದು ನಿರ್ಗುಣ ನಿವಾಸವಾಗಿದೆ. ॥25॥
(ಶ್ಲೋಕ - 26)
ಮೂಲಮ್
ಸಾತ್ತ್ವಿಕಃ ಕಾರಕೋಸಂಗೀ ರಾಗಾಂಧೋ ರಾಜಸಃ ಸ್ಮೃತಃ ।
ತಾಮಸಃ ಸ್ಮೃತಿವಿಭ್ರಷ್ಟೋ ನಿರ್ಗುಣೋ ಮದಪಾಶ್ರಯಃ ॥
ಅನುವಾದ
ಅನಾಸಕ್ತಭಾವದಿಂದ ಕರ್ಮಮಾಡುವವನು ಸಾತ್ತ್ವಿಕನು; ರಾಗಾಂಧನಾಗಿ ಕರ್ಮಮಾಡುವವನು ರಾಜಸಿಯು; ಪೂರ್ವಾಪರ ವಿಚಾರರಹಿತನಾಗಿ ಕರ್ಮಮಾಡುವವನು ತಾಮಸಿಕನಾಗಿದ್ದಾನೆ. ಇವುಗಳನ್ನು ಬಿಟ್ಟು ಕೇವಲ ನನಗೆ ಶರಣಾಗಿ, ಅಹಂಕಾರವಿಲ್ಲದೆ ಕರ್ಮಮಾಡುವವನು ನಿರ್ಗುಣನಾಗಿದ್ದಾನೆ. ॥26॥
ಮೂಲಮ್
(ಶ್ಲೋಕ - 27)
ಸಾತ್ತ್ವಿಕ್ಯಾಧ್ಯಾತ್ಮಿಕೀ ಶ್ರದ್ಧಾ ಕರ್ಮಶ್ರದ್ಧಾ ತು ರಾಜಸೀ ।
ತಾಮಸ್ಯಧರ್ಮೇ ಯಾ ಶ್ರದ್ಧಾ ಮತ್ಸೇವಾಯಾಂ ತು ನಿರ್ಗುಣಾ ॥
ಅನುವಾದ
ಆತ್ಮವಿಷಯಕ ಶ್ರದ್ಧೆಯು ಸಾತ್ತ್ವಿಕವಾಗಿದೆ, ಕರ್ಮವಿಷಯಕ ಶ್ರದ್ಧೆಯು ರಾಜಸವಾಗಿದೆ. ಅಧರ್ಮದಲ್ಲಿರುವ ಶ್ರದ್ಧೆಯು ತಾಮಸವಾಗಿದೆ. ನನ್ನ ಸೇವೆಯಲ್ಲೇ ಇರುವ ಶ್ರದ್ಧೆಯು ನಿರ್ಗುಣವಾಗಿದೆ. ॥27॥
(ಶ್ಲೋಕ - 28)
ಮೂಲಮ್
ಪಥ್ಯಂ ಪೂತಮನಾಯಸ್ತ ಮಾಹಾರ್ಯಂ ಸಾತ್ತ್ವಿಕಂ ಸ್ಮೃತಮ್ ।
ರಾಜಸಂ ಚೇಂದ್ರಿಯಪ್ರೇಷ್ಠಂ ತಾಮಸಂ ಚಾರ್ತಿದಾಶುಚಿ ॥
ಅನುವಾದ
ಆರೋಗ್ಯದಾಯಕ, ಪವಿತ್ರ ಮತ್ತು ಅನಾಯಾಸವಾಗಿ ದೊರೆಯುವ ಭೋಜನವು ಸಾತ್ತ್ವಿಕವಾಗಿದೆ. ನಾಲಿಗೆಗೆ ರುಚಿಯಾದ, ಸ್ವಾದಿಷ್ಟದೃಷ್ಟಿಯಿಂದ ಕೂಡಿದ ಆಹಾರವು ರಾಜಸವಾಗಿದೆ. ದುಃಖಮಯ, ಅಪವಿತ್ರ ಊಟವು ತಾಮಸವಾಗಿದೆ. ॥28॥
(ಶ್ಲೋಕ - 29)
ಮೂಲಮ್
ಸಾತ್ತ್ವಿಕಂ ಸುಖಮಾತ್ಮೋತ್ಥಂ ವಿಷಯೋತ್ಥಂ ತು ರಾಜಸಮ್ ।
ತಾಮಸಂ ಮೋಹದೈನ್ಯೋತ್ಥಂ ನಿರ್ಗುಣಂ ಮದಪಾಶ್ರಯಮ್ ॥
ಅನುವಾದ
ಅಂತರ್ಮುಖತೆಯಿಂದ, ಆತ್ಮಚಿಂತನೆಯಿಂದ ದೊರೆಯುವ ಸುಖವು ಸಾತ್ತ್ವಿಕವಾಗಿದೆ. ಬಹಿರ್ಮುಖತೆಯಿಂದ, ವಿಷಯಗಳಿಂದ ಸಿಗುವ ಸುಖವು ರಾಜಸವಾಗಿದೆ. ಅಜ್ಞಾನ, ದೀನತೆಯಿಂದ ಆಗುವ ಸುಖವು ತಾಮಸವಾಗಿದೆ. ನನ್ನನ್ನು ಆಶ್ರಯಿಸಿದಾಗ ಉಂಟಾಗುವ ಸುಖವು ಗುಣಾತೀತ, ಅಪ್ರಾಕೃತವಾಗಿದೆ. ॥29॥
(ಶ್ಲೋಕ - 30)
ಮೂಲಮ್
ದ್ರವ್ಯಂ ದೇಶಃ ಲಂ ಕಾಲೋ ಜ್ಞಾನಂ ಕರ್ಮ ಚ ಕಾರಕಃ ।
ಶ್ರದ್ಧಾವಸ್ಥಾಕೃತಿರ್ನಿಷ್ಠಾ ತ್ರೈಗುಣ್ಯಃ ಸರ್ವ ಏವ ಹಿ ॥
ಅನುವಾದ
ಉದ್ಧವನೇ! ದ್ರವ್ಯ (ವಸ್ತು), ದೇಶ (ಸ್ಥಾನ), ಫಲ, ಕಾಲ, ಜ್ಞಾನ, ಕರ್ಮ, ಕರ್ತಾ, ಶ್ರದ್ಧೆ, ಅವಸ್ಥೆ, ದೇವ-ಮನುಷ್ಯ- ತಿರ್ಯಗಾದಿ ಶರೀರ ಮತ್ತು ನಿಷ್ಠೆ ಇವೆಲ್ಲವೂ ತ್ರಿಗುಣಾತ್ಮಕವೇ ಆಗಿವೆ. ॥30॥
(ಶ್ಲೋಕ - 31)
ಮೂಲಮ್
ಸರ್ವೇ ಗುಣಮಯಾ ಭಾವಾಃ ಪುರುಷಾವ್ಯಕ್ತಧಿಷ್ಠಿತಾಃ ।
ದೃಷ್ಟಂ ಶ್ರುತಮನುಧ್ಯಾತಂ ಬುದ್ಧ್ಯಾ ವಾ ಪುರುಷರ್ಷಭ ॥
ಅನುವಾದ
ಪುರುಷಶ್ರೇಷ್ಠನೇ! ಪುರುಷ ಮತ್ತು ಪ್ರಕೃತಿಯ ಆಶ್ರಿತವಾಗಿರುವ ಎಲ್ಲ ಭಾವಗಳು ಗುಣ ಮಯವೇ ಆಗಿವೆ. ಅವು ಬೇಕಾದರೆ ನೇತ್ರಾದಿ ಇಂದ್ರಿಯಗಳಿಂದ ಅನುಭವಿಸಿದುದಾಗಲೀ, ಅಥವಾ ಶಾಸಗಳ ಮೂಲಕ ಲೋಕ-ಲೋಕಾಂತರದ ಸಂಬಂಧವಾಗಿ ಕೇಳಿದುದಾಗಲೀ, ಇಲ್ಲವೇ ಬುದ್ಧಿಯಿಂದ ಯೋಚಿಸಿ, ವಿಚಾರ ಮಾಡಿದುದಾಗಲೀ ಎಲ್ಲವೂ ತ್ರಿಗುಣಾತ್ಮಕವೇ ಆಗಿವೆ. ॥31॥
(ಶ್ಲೋಕ - 32)
ಮೂಲಮ್
ಏತಾಃ ಸಂಸೃತಯಃ ಪುಂಸೋ ಗುಣಕರ್ಮನಿಬಂಧನಾಃ ।
ಯೇನೇಮೇ ನಿರ್ಜಿತಾಃ ಸೌಮ್ಯ ಗುಣಾ ಜೀವೇನ ಚಿತ್ತಜಾಃ ।
ಭಕ್ತಿಯೋಗೇನ ಮನ್ನಿಷ್ಠೋ ಮದ್ಭಾವಾಯ ಪ್ರಪದ್ಯತೇ ॥
ಅನುವಾದ
ಜೀವಿಗಳಿಗೆ ದೊರೆಯುವ ಯೋನಿಗಳು ಅಥವಾ ಗತಿಗಳೆಲ್ಲವೂ ಅವನ ಗುಣ-ಕರ್ಮಗಳ ಅನುಸಾರವೇ ಇರುತ್ತವೆ. ಎಲೈ ಸೌಮ್ಯ! ಎಲ್ಲ ಗುಣಗಳು ಚಿತ್ತದೊಂದಿಗೆ ಸಂಬಂಧವಿರಿಸುತ್ತವೆ. ಅವುಗಳ ಮೇಲೆ ವಿಜಯ ಸಾಧಿಸಿದ ಜೀವಿಯು ಭಕ್ತಿಯೋಗದ ಮೂಲಕ ನನ್ನಲ್ಲೇ ಸ್ಥಿತನಾಗಿ, ಕೊನೆಯಲ್ಲಿ ನನ್ನ ಸ್ವರೂಪವನ್ನೇ ಪಡೆದುಕೊಳ್ಳುವನು. ॥32॥
(ಶ್ಲೋಕ - 33)
ಮೂಲಮ್
ತಸ್ಮಾದ್ದೇಹಮಿಮಂ ಲಬ್ಧ್ವಾ ಜ್ಞಾನವಿಜ್ಞಾನಸಂಭವಮ್ ।
ಗುಣಸಂಗಂ ವಿನಿರ್ಧೂಯ ಮಾಂ ಭಜಂತು ವಿಚಕ್ಷಣಾಃ ॥
ಅನುವಾದ
ಈ ಮನುಷ್ಯ ಶರೀರವು ಬಹಳ ದುರ್ಲಭವಾಗಿದೆ. ಇದೇ ಶರೀರದಲ್ಲಿ ತತ್ತ್ವ ಜ್ಞಾನ ಮತ್ತು ಅದರಲ್ಲಿ ನಿಷ್ಠಾರೂಪೀ ವಿಜ್ಞಾನವನ್ನು ಪಡೆಯುವ ಸಂಭವವಿದೆ. ಅದಕ್ಕಾಗಿ ಇದನ್ನು ಪಡೆದ ಬುದ್ಧಿವಂತನಾದ ಮನುಷ್ಯನು ಗುಣಗಳ ಆಸಕ್ತಿಯನ್ನು ತೊಡೆದು ನನ್ನನ್ನೇ ಭಜಿಸಬೇಕು. ॥33॥
(ಶ್ಲೋಕ - 34)
ಮೂಲಮ್
ನಿಸ್ಸಂಗೋ ಮಾಂ ಭಜೇದ್ವಿದ್ವಾನಪ್ರಮತ್ತೋ ಜಿತೇಂದ್ರಿಯಃ ।
ರಜಸ್ತಮಶ್ಚಾಭಿಜಯೇತ್ಸಸ್ತ್ವ ಸಂಸೇವಯಾ ಮುನಿಃ ॥
ಅನುವಾದ
ವಿಚಾರಶೀಲ ಪುರುಷನು ತುಂಬಾ ಎಚ್ಚರಿಕೆಯಿಂದ ಸತ್ತ್ವಗುಣದ ಸೇವನೆಯಿಂದ ರಜೋಗುಣ, ತಮೋಗುಣಗಳನ್ನು ಗೆದ್ದುಕೊಳ್ಳಬೇಕು. ಇಂದ್ರಿಯಗಳನ್ನು ವಶಪಡಿಸಿಕೊಂಡು, ನನ್ನ ಸ್ವರೂಪವನ್ನು ಅರಿತುಕೊಂಡು, ನನ್ನ ಭಜನೆಯಲ್ಲಿ ತೊಡಗಬೇಕು. ಆಸಕ್ತಿಯು ಲೇಶ ಮಾತ್ರವೂ ಇರಬಾರದು. ॥34॥
(ಶ್ಲೋಕ - 35)
ಮೂಲಮ್
ಸತ್ತ್ವಂ ಚಾಭಿಜಯೇದ್ಯುಕ್ತೋನೈರಪೇಕ್ಷ್ಯೇಣ ಶಾಂತಧೀಃ ।
ಸಂಪದ್ಯತೇ ಗುಣೈರ್ಮುಕ್ತೋ ಜೀವೋ ಜೀವಂ ವಿಹಾಯ ಮಾಮ್ ॥
ಅನುವಾದ
ಧ್ಯಾನಯೋಗದ ಮೂಲಕ ಚಿತ್ತವೃತ್ತಿಗಳನ್ನು ಶಾಂತಗೊಳಿಸಿಕೊಂಡು, ನಿರಪೇಕ್ಷತೆಯಿಂದ ಸತ್ತ್ವಗುಣದ ವಿಜಯ ಸಾಧಿಸಿಕೊಳ್ಳಬೇಕು. ಹೀಗೆ ಗುಣಗಳಿಂದ ಮುಕ್ತನಾದ ಜೀವಿಯು ತನ್ನ ಜೀವಭಾವವನ್ನು ಬಿಟ್ಟು, ನನ್ನಲ್ಲಿ ಒಂದಾಗಿಹೋಗುತ್ತಾನೆ. ॥35॥
(ಶ್ಲೋಕ - 36)
ಮೂಲಮ್
ಜೀವೋ ಜೀವವಿನಿರ್ಮುಕ್ತೋ ಗುಣೈಶ್ಚಾಶಯಸಂಭವೈಃ ।
ಮಯೈವ ಬ್ರಹ್ಮಣಾ ಪೂರ್ಣೋ ನ ಬಹಿರ್ನಾಂತರಶ್ಚರೇತ್ ॥
ಅನುವಾದ
ಜೀವಭಾವದಿಂದ ಮುಕ್ತನಾದ ಜೀವಿಯು ಅಂತಃಕರಣದಲ್ಲಿ ಉತ್ಪನ್ನವಾಗುವ ಗುಣಗಳಿಂದ ಮುಕ್ತನಾಗಿ, ಪರಿಪೂರ್ಣನಾದ ನನ್ನೊಂದಿಗೆ ಏಕೀಭಾವವನ್ನು ಪಡೆದುಕೊಂಡು, ನನ್ನಲ್ಲಿಯೇ ಸೇರಿ ಹೋಗುತ್ತಾನೆ. ಮತ್ತೆ ಅವನಿಗೆ ಪುನರ್ಜನ್ಮ ಇರುವುದಿಲ್ಲ. ॥36॥
ಅನುವಾದ (ಸಮಾಪ್ತಿಃ)
ಇಪ್ಪತ್ತೈದನೆಯ ಅಧ್ಯಾಯವು ಮುಗಿಯಿತು. ॥25॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಪಂಚವಿಂಶೋಽಧ್ಯಾಯಃ ॥25॥