[ಇಪ್ಪತ್ತನಾಲ್ಕನೆಯ ಅಧ್ಯಾಯ]
ಭಾಗಸೂಚನಾ
ಸಾಂಖ್ಯಯೋಗ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅಥ ತೇ ಸಂಪ್ರವಕ್ಷ್ಯಾಮಿ ಸಾಂಖ್ಯಂ ಪೂರ್ವೈರ್ವಿನಿಶ್ಚಿತಮ್ ।
ಯದ್ವಿಜ್ಞಾಯ ಪುಮಾನ್ಸದ್ಯೋ ಜಹ್ಯಾದ್ವೈಕಲ್ಪಿಕಂ ಭ್ರಮಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವನೇ! ಈಗ ನಿನಗೆ ಸಾಂಖ್ಯಶಾಸದ ನಿರ್ಣಯವನ್ನು ಹೇಳುವೆನು. ಹಿಂದಿನಕಾಲದ ದೊಡ್ಡ-ದೊಡ್ಡ ಋಷಿ-ಮುನಿಗಳು ಇದನ್ನು ನಿಶ್ಚಯಿಸಿರುವರು. ಜೀವಿಯು ಇದನ್ನು ಚೆನ್ನಾಗಿ ತಿಳಿದುಕೊಂಡರೆ, ಅವನು ವೈಕಲ್ಪಿಕ ಭ್ರಮೆಯನ್ನು ತತ್ಕಾಲವೇ ತ್ಯಜಿಸಿಬಿಡುವನು. ಒಂದು ಬ್ರಹ್ಮನಲ್ಲದೆ ಬೇರೆ ಏನೂ ಇಲ್ಲವೇ ಇಲ್ಲ ಎಂಬುದು ಅವನ ಅರಿವಿಗೆ ಬರುತ್ತದೆ. ॥1॥
(ಶ್ಲೋಕ - 2)
ಮೂಲಮ್
ಆಸೀಜ್ಜ್ಞಾನಮಥೋ ಹ್ಯರ್ಥ ಏಕಮೇವಾವಿಕಲ್ಪಿತಮ್ ।
ಯದಾ ವಿವೇಕನಿಪುಣಾ ಆದೌ ಕೃತಯುಗೇಯುಗೇ ॥
ಅನುವಾದ
ಕಲ್ಪದ ಪ್ರಾರಂಭದಲ್ಲಿ ಯುಗವೇ ಇಲ್ಲದಿದ್ದಾಗ ಜ್ಞಾನ-ಜ್ಞೇಯ (ವಸ್ತುಪದಾರ್ಥ) ಹೀಗೆ ಯಾವ ಭೇದವೂ ಇರಲಿಲ್ಲ. ಕೇವಲ ಒಂದೇ ತತ್ತ್ವವು ಅವಿಭಾಜಿತವಾಗಿತ್ತು. ಬಳಿಕ ಕೃತಯುಗವು ಬಂದಾಗ ವಿವೇಕ ನಿಪುಣರಾದ ಜನರು ಬಂದರು. ಆಗ ಎಲ್ಲರಲ್ಲಿಯೂ ಬ್ರಹ್ಮದೃಷ್ಟಿಯೇ ಇತ್ತು. ಅವರು ಎಲ್ಲರನ್ನೂ ಅಭೇದರೂಪವಾಗಿ ಓರ್ವ ಪರಮಾತ್ಮನ ಸ್ವರೂಪವೆಂದೇ ತಿಳಿಯುತ್ತಿದ್ದರು. ॥2॥
(ಶ್ಲೋಕ - 3)
ಮೂಲಮ್
ತನ್ಮಾಯಾಲರೂಪೇಣ ಕೇವಲಂ ನಿರ್ವಿಕಲ್ಪಿತಮ್ ।
ವಾಙ್ಮನೋಗೋಚರಂ ಸತ್ಯಂ ದ್ವಿಧಾ ಸಮಭವದ್ಬೃಹತ್ ॥
ಅನುವಾದ
ಬ್ರಹ್ಮನಲ್ಲಿ ಯಾವ ಪ್ರಕಾರದ ವಿಕಲ್ಪವೂ ಇಲ್ಲ; ಅದು ಕೇವಲ ಅದ್ವಿತೀಯ ಸತ್ಯವಾಗಿದೆ. ಮನಸ್ಸು ವಾಣಿಯ ಗತಿಯು ಅದರಲ್ಲಿಲ್ಲ. ಆ ಬೃಹತ್ ಸತ್ಯಸ್ವರೂಪೀ ಬ್ರಹ್ಮವೇ ಮಾಯೆ ಮತ್ತು ಅದರಲ್ಲಿ ಪ್ರತಿಬಿಂಬಿತ ಜೀವಿಯ ರೂಪದಲ್ಲಿ ದೃಶ್ಯ ಮತ್ತು ದೃಷ್ಟಾನ ರೂಪದಲ್ಲಿ ಎರಡು ಭಾಗವಾಗಿ ವಿಭಕ್ತನಂತೇ ಆದನು. ॥3॥
(ಶ್ಲೋಕ - 4)
ಮೂಲಮ್
ತಯೋರೇಕತರೋ ಹ್ಯರ್ಥಃ ಪ್ರಕೃತಿಃ ಸೋಭಯಾತ್ಮಿಕಾ ।
ಜ್ಞಾನಂ ತ್ವನ್ಯತಮೋ ಭಾವಃ ಪುರುಷಃ ಸೋಭಿಧೀಯತೇ ॥
ಅನುವಾದ
ಅದರಲ್ಲಿ ಒಂದು ವಸ್ತುವನ್ನು ಪ್ರಕೃತಿ ಎಂದು ಹೇಳುತ್ತಾರೆ. ಅದೇ ಜಗತ್ತಿನಲ್ಲಿ ಕಾರ್ಯ ಮತ್ತು ಕಾರಣದ ರೂಪವನ್ನು ಧರಿಸಿತು. ಈ ಪ್ರಕಾರ ಕಾರ್ಯ ಮತ್ತು ಕಾರಣರೂಪವನ್ನು ಧರಿಸುವುದರಿಂದ ಪ್ರಕೃತಿಯು ಉಭಯಾತ್ಮಿಕೆಯಾಯಿತು. ಎರಡನೆಯ ವಸ್ತುವು ಚೇತನ ಜೀವಾತ್ಮಾ. ಅದು ಜ್ಞಾನಸ್ವರೂಪನಾಗಿದ್ದು, ಅವನನ್ನು ಪುರುಷನೆಂದು ಹೇಳುತ್ತಾರೆ. ॥4॥
(ಶ್ಲೋಕ - 5)
ಮೂಲಮ್
ತಮೋ ರಜಃ ಸತ್ತ್ವಮಿತಿ ಪ್ರಕೃತೇರಭವನ್ಗುಣಾಃ ।
ಮಯಾ ಪ್ರಕ್ಷೋಭ್ಯಮಾಣಾಯಾಃ ಪುರುಷಾನುಮತೇನ ಚ ॥
ಅನುವಾದ
ಉದ್ಧವನೇ! ನಾನೇ ಜೀವಿಗಳ ಶುಭ-ಅಶುಭ ಕರ್ಮಗಳನುಸಾರವಾಗಿ ಪ್ರಕೃತಿಯನ್ನು ಕ್ಷುಬ್ಧಗೊಳಿಸಿದೆ. ಆಗ ಅದರಿಂದ ಸತ್ತ್ವ, ರಜ, ತಮ ಈ ಮೂರು ಗುಣಗಳು ಪ್ರಕಟವಾದುವು. ॥5॥
(ಶ್ಲೋಕ - 6)
ಮೂಲಮ್
ತೇಭ್ಯಃ ಸಮಭವತ್ಸೂತ್ರಂ ಮಹಾನ್ಸೂತ್ರೇಣ ಸಂಯುತಃ ।
ತತೋ ವಿಕುರ್ವತೋ ಜಾತೋಹಂಕಾರೋ ಯೋ ವಿಮೋಹನಃ ॥
ಅನುವಾದ
ಅವುಗಳಿಂದ ಕ್ರಿಯಾ-ಶಕ್ತಿಪ್ರಧಾನ ಸೂತ್ರ ಮತ್ತು ಜ್ಞಾನಶಕ್ತಿ ಪ್ರಧಾನ ಮಹತ್ತತ್ತ್ವ ಪ್ರಕಟವಾಯಿತು. ಅವೆರಡೂ ಪರಸ್ಪರ ಕೂಡಿಕೊಂಡೇ ಇರುತ್ತವೆ. ಮಹತ್ತತ್ತ್ವದಲ್ಲಿ ವಿಕಾರ ಉಂಟಾದಾಗ ಅಹಂಕಾರ ವ್ಯಕ್ತವಾಯಿತು. ಈ ಅಹಂಕಾರವೇ ಜೀವಿಗಳನ್ನು ಮೋಹದಲ್ಲಿ ಕೆಡಹುವಂತಹುದು. ॥6॥
(ಶ್ಲೋಕ - 7)
ಮೂಲಮ್
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿವೃತ್ ।
ತನ್ಮಾತ್ರೇಂದ್ರಿಯಮನಸಾಂ ಕಾರಣಂ ಚಿದಚಿನ್ಮಯಃ ॥
ಅನುವಾದ
ಆ ಅಹಂಕಾರವು ಸಾತ್ತ್ವಿಕ, ರಾಜಸ, ತಾಮಸ ಎಂಬ ಮೂರು ಪ್ರಕಾರದಿಂದಿದೆ. ಅಹಂಕಾರವೇ ಪಂಚತ ನ್ಮಾತ್ರೆಗಳು, ಇಂದ್ರಿಯಗಳು, ಮನಸ್ಸು ಇವುಗಳ ಕಾರಣವಾಗಿದೆ. ಅದು ಜಡ-ಚೇತನ ಉಭಯಾತ್ಮಕವಾಗಿದೆ. ಈ ಅಹಂಕಾರವು ಕಾರ್ಯವೂ, ಕಾರಣವೂ ಆಗಿದೆ. ॥7॥
(ಶ್ಲೋಕ - 8)
ಮೂಲಮ್
ಅರ್ಥಸ್ತನ್ಮಾತ್ರಿಕಾಜ್ಜಜ್ಞೇ ತಾಮಸಾದಿಂದ್ರಿಯಾಣಿ ಚ ।
ತೈಜಸಾದ್ದೇವತಾ ಆಸನ್ನೇಕಾದಶ ಚ ವೈಕೃತಾತ್ ॥
ಅನುವಾದ
ತಾಮಸ ಅಹಂಕಾರದಿಂದ ಪಂಚತನ್ಮಾತ್ರೆಗಳು ಮತ್ತು ಅವುಗಳಿಂದ ಪಂಚಭೂತಗಳ ಉತ್ಪತ್ತಿಯಾಯಿತು. ರಾಜಸ ಅಹಂಕಾರದಿಂದ ಇಂದ್ರಿಯಗಳು ಮತ್ತು ಸಾತ್ತ್ವಿಕ ಅಹಂಕಾರದಿಂದ ಇಂದ್ರಿಯಗಳ ಅಧಿಷ್ಠಾತೃ ಹನ್ನೊಂದು ದೇವತೆಗಳು ಪ್ರಕಟಗೊಂಡವು. ॥8॥
(ಶ್ಲೋಕ - 9)
ಮೂಲಮ್
ಮಯಾ ಸಂಚೋದಿತಾ ಭಾವಾಃ ಸರ್ವೇ ಸಂಹತ್ಯಕಾರಿಣಃ ।
ಅಂಡಮುತ್ಪಾದಯಾಮಾಸುರ್ಮಮಾಯತನಮುತ್ತಮಮ್ ॥
ಅನುವಾದ
ಇವೆಲ್ಲ ಪದಾರ್ಥಗಳು ನನ್ನ ಪ್ರೇರಣೆಯಿಂದ ಒಂದಾಗಿ ಪರಸ್ಪರ ಸೇರಿಕೊಂಡವು. ಇವುಗಳೇ ಈ ಬ್ರಹ್ಮಾಂಡರೂಪೀ ಅಂಡವನ್ನು ಉತ್ಪನ್ನ ಮಾಡಿದವು. ಈ ಬ್ರಹ್ಮಾಂಡವು ನನ್ನ ಉತ್ತಮ ನಿವಾಸವಾಗಿದೆ. ॥9॥
(ಶ್ಲೋಕ - 10)
ಮೂಲಮ್
ತಸ್ಮಿನ್ನಹಂ ಸಮಭವಮಂಡೇ ಸಲಿಲಸಂಸ್ಥಿತೌ ।
ಮಮ ನಾಭ್ಯಾಮಭೂತ್ಪದ್ಮಂ ವಿಶ್ವಾಖ್ಯಂ ತತ್ರ ಚಾತ್ಮಭೂಃ ॥
ಅನುವಾದ
ಈ ಅಂಡವು ನೀರಿನಲ್ಲಿ ಸ್ಥಿತವಾದಾಗ ನಾನೇ ನಾರಾಯಣರೂಪದಿಂದ ಇದರಲ್ಲಿ ವಿರಾಜಮಾನನಾದೆ. ನನ್ನ ನಾಭಿಯಿಂದ ವಿಶ್ವಕಮಲದ ಉತ್ಪತ್ತಿಯಾಯಿತು. ಅದರ ಮೇಲೆ ಬ್ರಹ್ಮನ ಆವಿರ್ಭಾವವಾಯಿತು. ॥10॥
(ಶ್ಲೋಕ - 11)
ಮೂಲಮ್
ಸೋಸೃಜತ್ತಪಸಾ ಯುಕ್ತೋ ರಜಸಾ ಮದನುಗ್ರಹಾತ್ ।
ಲೋಕಾನ್ಸಪಾಲಾನ್ ವಿಶ್ವಾತ್ಮಾ ಭೂರ್ಭುವಃಸ್ವರಿತಿ ತ್ರಿಧಾ ॥
ಅನುವಾದ
ವಿಶ್ವ ಸ್ರಷ್ಟಾ ಬ್ರಹ್ಮನು ಬಹಳ ದೊಡ್ಡ ತಪಸ್ಸು ಮಾಡಿದನು. ಅನಂತರ ನನ್ನ ಕೃಪಾಪ್ರಸಾದವನ್ನು ಪಡೆದು, ರಜೋಗುಣದ ಮೂಲಕ ಭೂಃ, ಭುವಃ, ಸ್ವಃ, ಅರ್ಥಾತ್-ಪೃಥ್ವಿ, ಅಂತರಿಕ್ಷ, ಸ್ವರ್ಗ ಈ ಮೂರು ಲೋಕಗಳ ಹಾಗೂ ಇವುಗಳ ಲೋಕಪಾಲಕರನ್ನು ರಚಿಸಿದನು. ॥11॥
(ಶ್ಲೋಕ - 12)
ಮೂಲಮ್
ದೇವಾನಾಮೋಕ ಆಸೀತ್ಸ್ವರ್ಭೂತಾನಾಂ ಚ ಭುವಃ ಪದಮ್ ।
ಮರ್ತ್ಯಾದೀನಾಂ ಚ ಭೂರ್ಲೋಕಃ ಸಿದ್ಧಾನಾಂ ತ್ರಿತಯಾತ್ಪರಮ್ ॥
ಅನುವಾದ
ದೇವತೆಗಳ ನಿವಾಸಕ್ಕಾಗಿ ಸ್ವರ್ಲೋಕವನ್ನೂ, ಭೂತ-ಪ್ರೇತಾದಿಗಳಿಗಾಗಿ ಭುವರ್ಲೋಕ (ಅಂತರಿಕ್ಷ)ವನ್ನೂ, ಮನುಷ್ಯಾದಿಗಳಿಗಾಗಿ ಭೂರ್ಲೋಕ (ಪೃಥಿವಿ)ಯನ್ನೂ ನಿಶ್ಚಯಿಸಿದನು. ಈ ಮೂರು ಲೋಕಗಳ ಮೇಲೆ ಮಹರ್ಲೋಕ, ತಪೋಲೋಕ ಮುಂತಾದವುಗಳು ಸಿದ್ಧರ ನಿವಾಸಸ್ಥಾನಗಳಾದವು. ॥12॥
(ಶ್ಲೋಕ - 13)
ಮೂಲಮ್
ಅಧೋಸುರಾಣಾಂ ನಾಗಾನಾಂ ಭೂಮೇರೋಕೋಸೃಜತ್ಪ್ರಭುಃ ।
ತ್ರಿಲೋಕ್ಯಾಂ ಗತಯಃ ಸರ್ವಾಃ ಕರ್ಮಣಾಂ ತ್ರಿಗುಣಾತ್ಮನಾಮ್ ॥
ಅನುವಾದ
ಸೃಷ್ಟಿಕಾರ್ಯದಲ್ಲಿ ಸಮರ್ಥರಾದ ಬ್ರಹ್ಮದೇವರು ಅಸುರ ಮತ್ತು ನಾಗಗಳಿಗಾಗಿ ಪೃಥ್ವಿಯ ಕೆಳಗೆ ಅತಲ, ವಿತಲ, ಸುತಲ ಮುಂತಾದ ಏಳು ಪಾತಾಳಗಳನ್ನು ನಿರ್ಮಿಸಿದರು. ಸ್ವರ್ಗ, ಮರ್ತ್ಯ, ಅಂತರಿಕ್ಷ ಈ ಮೂರು ಲೋಕಗಳಲ್ಲಿ ತ್ರಿಗುಣಾತ್ಮಿಕ ಕರ್ಮಗಳನುಸಾರ ವಿವಿಧಗತಿಗಳು ಪ್ರಾಪ್ತವಾಗುತ್ತವೆ. ॥13॥
(ಶ್ಲೋಕ - 14)
ಮೂಲಮ್
ಯೋಗಸ್ಯ ತಪಸಶ್ಚೈವ ನ್ಯಾಸಸ್ಯ ಗತಯೋಮಲಾಃ ।
ಮಹರ್ಜನಸ್ತಪಃ ಸತ್ಯಂ ಭಕ್ತಿಯೋಗಸ್ಯ ಮದ್ಗತಿಃ ॥
ಅನುವಾದ
ಯೋಗ, ತಪಸ್ಸು, ಸಂನ್ಯಾಸದ ಮೂಲಕ ಮಹರ್ಲೋಕ, ಜನೋಲೋಕ, ತಪೋಲೋಕ ಮತ್ತು ಸತ್ಯಲೋಕರೂಪೀ ಉತ್ತಮ ಗತಿಯು ದೊರೆಯುತ್ತದೆ. ಹಾಗೆಯೇ ಭಕ್ತಿಯೋಗದಿಂದ ನನ್ನ ಪರಮಧಾಮವು ದೊರೆಯುತ್ತದೆ. ॥14॥
(ಶ್ಲೋಕ - 15)
ಮೂಲಮ್
ಮಯಾ ಕಾಲಾತ್ಮನಾ ಧಾತ್ರಾ ಕರ್ಮಯುಕ್ತಮಿದಂ ಜಗತ್ ।
ಗುಣಪ್ರವಾಹ ಏತಸ್ಮಿನ್ನುನ್ಮಜ್ಜತಿ ನಿಮಜ್ಜತಿ ॥
ಅನುವಾದ
ಈ ಇಡೀ ಜಗತ್ತು ಕರ್ಮ ಮತ್ತು ಅವುಗಳ ಸಂಸ್ಕಾರಗಳಿಂದ ಯುಕ್ತವಾಗಿದೆ. ನಾನೇ ಕಾಲರೂಪದಿಂದ ಕರ್ಮಗಳನುಸಾರ ಅವುಗಳ ಫಲದ ವಿಧಾನವನ್ನು ಮಾಡುತ್ತೇನೆ. ಈ ಗುಣಪ್ರವಾಹದಲ್ಲಿ ಬಿದ್ದು ಜೀವಿಯು ಕೆಲವೊಮ್ಮೆ ಮುಳುಗುತ್ತಾನೆ, ಕೆಲವೊಮ್ಮೆ ಮೇಲಕ್ಕೆ ಬರುತ್ತಾನೆ ಕೆಲವೊಮ್ಮೆ ಅಧೋಗತಿಯಾದರೆ, ಕೆಲವೊಮ್ಮೆ ಅವನಿಗೆ ಪುಣ್ಯವಶದಿಂದ ಉಚ್ಚಗತಿಯು ದೊರೆಯುತ್ತದೆ. ॥15॥
(ಶ್ಲೋಕ - 16)
ಮೂಲಮ್
ಅಣುರ್ಬೃಹತ್ ಕೃಶಃ ಸ್ಥೂಲೋ ಯೋ ಯೋ ಭಾವಃ ಪ್ರಸಿಧ್ಯತಿ ।
ಸರ್ವೋಪ್ಯುಭಯಸಂಯುಕ್ತಃ ಪ್ರಕೃತ್ಯಾ ಪುರುಷೇಣ ಚ ॥
ಅನುವಾದ
ಜಗತ್ತಿನಲ್ಲಿ ಚಿಕ್ಕದು-ದೊಡ್ಡದು, ತೆಳ್ಳನೆಯ ದಪ್ಪನೆಯ, ಎಷ್ಟು ಪದಾರ್ಥಗಳು ಉಂಟಾಗುತ್ತವೋ ಅವೆಲ್ಲವೂ ಪ್ರಕೃತಿ-ಪುರುಷರ ಸಂಯೋಗದಿಂದಲೇ ಉಂಟಾಗುತ್ತವೆ. ॥16॥
(ಶ್ಲೋಕ - 17)
ಮೂಲಮ್
ಯಸ್ತು ಯಸ್ಯಾದಿರಂತಶ್ಚ ಸ ವೈ ಮಧ್ಯಂ ಚ ತಸ್ಯ ಸನ್ ।
ವಿಕಾರೋ ವ್ಯವಹಾರಾರ್ಥೋ ಯಥಾ ತೈಜಸಪಾರ್ಥಿವಾಃ ॥
(ಶ್ಲೋಕ - 18)
ಮೂಲಮ್
ಯದುಪಾದಾಯ ಪೂರ್ವಸ್ತು ಭಾವೋ ವಿಕುರುತೇಪರಮ್ ।
ಆದಿರಂತೋ ಯದಾ ಯಸ್ಯ ತತ್ಸತ್ಯಮಭಿಧೀಯತೇ ॥
ಅನುವಾದ
ಆದಿ ಮತ್ತು ಅಂತ್ಯದಲ್ಲಿರುವುದೇ ಮಧ್ಯದಲ್ಲಿಯೂ ಇದೆ; ಅದೇ ಸತ್ಯವಾಗಿದೆ. ವಿಕಾರವಾದರೋ ಕೇವಲ ವ್ಯವಹಾರಕ್ಕಾಗಿ ಮಾಡಿದ ಕಲ್ಪನೆಮಾತ್ರವಾಗಿದೆ. ಕಂಕಣ-ಕುಂಡಲಗಳು ಚಿನ್ನದ ವಿಕಾರಗಳು. ಮಡಿಕೆ-ಕುಡಿಕೆ ಮಣ್ಣಿನ ವಿಕಾರಗಳು. ಮೊದಲು ಚಿನ್ನ ಮತ್ತು ಮಣ್ಣೇ ಆಗಿದ್ದವು. ಕೊನೆಗೂ ಚಿನ್ನ-ಮಣ್ಣು ಆಗಿಯೇ ಉಳಿಯುವವು. ಆದ್ದರಿಂದ ನಡುವಿನಲ್ಲಿಯೂ ಚಿನ್ನ, ಮಣ್ಣೇ ಆಗಿವೆ. ಪೂರ್ವ ವರ್ತಿ ಕಾರಣ (ಮಹತ್ತತ್ತ್ವಾದಿ)ವೂ ಯಾವ ಪರಮ ಕಾರಣವನ್ನು ಉಪಾದಾನವಾಗಿಸಿಕೊಂಡು ಅಪರ (ಅಹಂಕಾರಾದಿ) ಕಾರ್ಯ-ವರ್ಗವನ್ನು ಸೃಷ್ಟಿಸುತ್ತದೆಯೋ ಅದೇ ಅವುಗಳಿಗಿಂತಲೂ ಪರಮಸತ್ಯವಾಗಿದೆ. ತಾತ್ಪರ್ಯ ಯಾವುದೇ ಕಾರ್ಯದ ಆದಿಯಲ್ಲಿ ಮತ್ತು ಅಂತ್ಯದಲ್ಲಿ ಇರುವುದೋ ಅದೇ ಸತ್ಯವಾಗಿದೆ. ॥17-18॥
(ಶ್ಲೋಕ - 19)
ಮೂಲಮ್
ಪ್ರಕೃತಿರ್ಹ್ಯಸ್ಯೋಪಾದಾನಮಾಧಾರಃ ಪುರುಷಃ ಪರಃ ।
ಸತೋಭಿವ್ಯಂಜಕಃ ಕಾಲೋ ಬ್ರಹ್ಮ ತತಿ ತಯಂ ತ್ವಹಮ್ ॥
ಅನುವಾದ
ಈ ಪ್ರಪಂಚದ ಉಪಾದನ ಕಾರಣ ಪ್ರಕೃತಿಯಾಗಿದೆ, ಆಧಾರ ಪುರುಷ (ಜೀವಾತ್ಮಾ) ಆಗಿದ್ದಾನೆ, ಇದನ್ನು ಪ್ರಕಟಪಡಿಸುವವನು ಕಾಲವಾಗಿದೆ. ಈ ತ್ರಿವಿಧತೆ ವಸ್ತುತಃ ಬ್ರಹ್ಮ ಸ್ವರೂಪವೇ ಆಗಿದೆ. ಆ ಶುದ್ಧಬ್ರಹ್ಮನು ನಾನೇ ಆಗಿದ್ದೇನೆ. ॥19॥
(ಶ್ಲೋಕ - 20)
ಮೂಲಮ್
ಸರ್ಗಃ ಪ್ರವರ್ತತೇ ತಾವತ್ ಪೌರ್ವಾಪರ್ಯೇಣ ನಿತ್ಯಶಃ ।
ಮಹಾನ್ಗುಣವಿಸರ್ಗಾರ್ಥಃ ಸ್ಥಿತ್ಯಂತೋ ಯಾವದೀಕ್ಷಣಮ್ ॥
ಅನುವಾದ
ಪರಮಾತ್ಮನ ಈಕ್ಷಣ ಶಕ್ತಿಯು ತನ್ನ ಕೆಲಸ ಮಾಡುತ್ತಿರುವವರೆಗೆ, ಅವನ ಪಾಲನ ಪ್ರವೃತ್ತಿ ನಡೆಯುತ್ತಾ ಇರುವವರೆಗೆ, ಜೀವಿಗಳ ಕರ್ಮಭೋಗಗಳಿಗಾಗಿ ಕಾರಣವು ಕಾರ್ಯರೂಪದಿಂದ ಅಥವಾ ಪಿತಾ-ಪುತ್ರಾದಿರೂಪದಿಂದ ಈ ಸೃಷ್ಟಿಚಕ್ರವು ನಿರಂತರ ನಡೆಯುತ್ತಾ ಇರುತ್ತದೆ. ॥20॥
(ಶ್ಲೋಕ - 21)
ಮೂಲಮ್
ವಿರಾಣ್ಮಯಾಸಾದ್ಯಮಾನೋ ಲೋಕಕಲ್ಪವಿಕಲ್ಪಕಃ ।
ಪಂಚತ್ವಾಯ ವಿಶೇಷಾಯ ಕಲ್ಪತೇ ಭುವನೈಃ ಸಹ ॥
ಅನುವಾದ
ಈ ವಿರಾಟವೇ ವಿವಿಧ ಲೋಕಗಳ ಸೃಷ್ಟಿ, ಸ್ಥಿತಿ, ಸಂಹಾರದ ಲೀಲಾಭೂಮಿಯಾಗಿದೆ. ನಾನು ಪ್ರಳಯದ ಸಂಕಲ್ಪ ಮಾಡಿದಾಗ, ಕಾಲರೂಪದಿಂದ ಇದರಲ್ಲಿ ಪ್ರವೇಶಿಸು ತ್ತೇನೆ. ಆಗ ಇದು ಭವನಗಳೊಂದಿಗೆ ವಿನಾಶಕ್ಕೆ ಯೋಗ್ಯವಾಗುತ್ತದೆ. ॥21॥
(ಶ್ಲೋಕ - 22)
ಮೂಲಮ್
ಅನ್ನೇ ಪ್ರಲೀಯತೇ ಮರ್ತ್ಯಮನ್ನಂ ಧಾನಾಸು ಲೀಯತೇ ।
ಧಾನಾ ಭೂವೌ ಪ್ರಲೀಯಂತೇ ಭೂಮಿರ್ಗಂಧೇ ಪ್ರಲೀಯತೇ ॥
ಅನುವಾದ
ಅದರ ಲೀನವಾಗುವ ಪ್ರಕ್ರಿಯೆ ಹೀಗಿದೆ ಪ್ರಾಣಿಗಳ ಶರೀರವು ಅನ್ನದಲ್ಲಿ, ಅನ್ನವು ಬೀಜದಲ್ಲಿ, ಬೀಜವು ಭೂಮಿಯಲ್ಲಿ, ಭೂಮಿಯು ಗಂಧ ತನ್ಮಾತ್ರೆಯಲ್ಲಿ ಲೀನವಾಗಿ ಹೋಗುತ್ತದೆ. ॥22॥
(ಶ್ಲೋಕ - 23)
ಮೂಲಮ್
ಅಪ್ಸು ಪ್ರಲೀಯತೇ ಗಂಧ ಆಪಶ್ಚ ಸ್ವಗುಣೇ ರಸೇ ।
ಲೀಯತೇ ಜ್ಯೋತಿಷಿ ರಸೋ ಜ್ಯೋತೀ ರೂಪೇ ಪ್ರಲೀಯತೇ ॥
ಅನುವಾದ
ಗಂಧವು ಜಲದಲ್ಲಿ, ಜಲವು ತನ್ನ ಗುಣ ರಸದಲ್ಲಿ, ರಸವು ತೇಜದಲ್ಲಿ, ತೇಜವು ರೂಪದಲ್ಲಿ ಲೀನವಾಗಿ ಹೋಗುತ್ತದೆ. ॥23॥
(ಶ್ಲೋಕ - 24)
ಮೂಲಮ್
ರೂಪಂ ವಾಯೌ ಸ ಚ ಸ್ಪರ್ಶೇ ಲೀಯತೇ ಸೋಪಿ ಚಾಂಬರೇ ।
ಅಂಬರಂ ಶಬ್ದತನ್ಮಾತ್ರ ಇಂದ್ರಿಯಾಣಿ ಸ್ವಯೋನಿಷು ॥
ಅನುವಾದ
ರೂಪವು ವಾಯುವಿನಲ್ಲಿ, ವಾಯು ಸ್ಪರ್ಶದಲ್ಲಿ, ಸ್ಪರ್ಶ ಆಕಾಶದಲ್ಲಿ, ಆಕಾಶವು ಶಬ್ದ ತನ್ಮಾತ್ರೆಯಲ್ಲಿ ಲೀನವಾಗುತ್ತದೆ. ಇಂದ್ರಿಯಗಳು ತಮ್ಮ-ತಮ್ಮ ಕಾರಣ ದೇವತೆಗಳಲ್ಲಿ ಮತ್ತು ಕೊನೆಗೆ ರಾಜಸ ಅಹಂಕಾರದಲ್ಲಿ ಸೇರಿ ಹೋಗುತ್ತವೆ. ॥24॥
(ಶ್ಲೋಕ - 25)
ಮೂಲಮ್
ಯೋನಿರ್ವೈಕಾರಿಕೇ ಸೌಮ್ಯ ಲೀಯತೇ ಮನಸೀಶ್ವರೇ ।
ಶಬ್ದೋ ಭೂತಾದಿಮಪ್ಯೇತಿ ಭೂತಾದಿರ್ಮಹತಿ ಪ್ರಭುಃ ॥
ಅನುವಾದ
ಸೌಮ್ಯನೇ! ರಾಜಸ ಅಹಂಕಾರವು ತನ್ನ ನಿಯಂತಾ ಸಾತ್ತ್ವಿಕ ಅಹಂಕಾರರೂಪೀ ಮನಸ್ಸಿನಲ್ಲಿ ಶಬ್ದತನ್ಮಾತ್ರೆ ಪಂಚಭೂತಗಳ ಕಾರಣ ತಾಮಸ ಅಹಂಕಾರದಲ್ಲಿ ಹಾಗೂ ಇಡೀ ಜಗತ್ತನ್ನು ಮೋಹಿತಗೊಳಿಸಲು ಸಮರ್ಥವಾದ ತ್ರಿವಿಧ ಅಹಂಕಾರವು ಮಹತ್ತತ್ತ್ವದಲ್ಲಿ ಲೀನವಾಗುತ್ತದೆ. ॥25॥
(ಶ್ಲೋಕ - 26)
ಮೂಲಮ್
ಸ ಲೀಯತೇ ಮಹಾನ್ಸ್ವೇಷು ಗುಣೇಷು ಗುಣವತ್ತಮಃ ।
ತೇವ್ಯಕ್ತೇ ಸಂಪ್ರಲೀಯಂತೇ ತತ್ಕಾಲೇ ಲೀಯತೇವ್ಯಯೇ ॥
ಅನುವಾದ
ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಪ್ರಧಾನ ಮಹತ್ತತ್ತ್ವವು ತನ್ನ ಕಾರಣ ಗುಣಗಳಲ್ಲಿ ಲೀನವಾಗುತ್ತದೆ. ಗುಣಗಳು ಅವ್ಯಕ್ತ ಪ್ರಕೃತಿಯಲ್ಲಿ ಹಾಗೂ ಪ್ರಕೃತಿಯು ತನ್ನ ಪ್ರೇರಕ ಅವಿನಾಶೀ ಕಾಲನಲ್ಲಿ ಲೀನವಾಗಿ ಹೋಗುತ್ತದೆ. ॥26॥
(ಶ್ಲೋಕ - 27)
ಮೂಲಮ್
ಕಾಲೋ ಮಾಯಾಮಯೇ ಜೀವೇ ಜೀವ ಆತ್ಮನಿ ಮಯ್ಯಜೇ ।
ಆತ್ಮಾ ಕೇವಲ ಆತ್ಮಸ್ಥೋ ವಿಕಲ್ಪಾಪಾಯಲಕ್ಷಣಃ ॥
ಅನುವಾದ
ಕಾಲವು ಮಾಯಾಮಯ (ವಿದ್ಯಾಮಯ) ಜೀವನಲ್ಲಿ ಮತ್ತು ಜೀವನು ಅಜನ್ಮಾ ಆತ್ಮನಾದ ನನ್ನಲ್ಲಿ ಲೀನವಾಗಿ ಹೋಗುತ್ತಾನೆ. ಆತ್ಮವು ಯಾವುದರಲ್ಲಿಯೂ ಲೀನವಾಗುವುದಿಲ್ಲ. ಅವನು ಉಪಾಧಿರಹಿತ ತನ್ನ ಸ್ವರೂಪದಲ್ಲೇ ಸ್ಥಿತವಾಗಿರುತ್ತದೆ. ಅವನು ಜಗತ್ತಿನ ಸೃಷ್ಟಿ ಹಾಗೂ ಲಯದ ಅಧಿಷ್ಠಾನ ಮತ್ತು ಅವಧಿಯಾಗಿದ್ದಾನೆ. ॥27॥
(ಶ್ಲೋಕ - 28)
ಮೂಲಮ್
ಏವಮನ್ವೀಕ್ಷಮಾಣಸ್ಯ ಕಥಂ ವೈಕಲ್ಪಿಕೋ ಭ್ರಮಃ ।
ಮನಸೋ ಹೃದಿ ತಿಷ್ಠೇತ ವ್ಯೋಮ್ನೀ ವಾರ್ಕೋದಯೇ ತಮಃ ॥
ಅನುವಾದ
ಉದ್ಧವನೇ! ಈ ಪ್ರಕಾರ ವಿವೇಕ ದೃಷ್ಟಿಯಿಂದ ನೋಡುವವನ ಚಿತ್ತದಲ್ಲಿ ಈ ಪ್ರಪಂಚದ ಭ್ರಮೆ ಎಂದಿಗೂ ಆಗಲಾರದು. ಒಂದೊಮ್ಮೆ ಅದರ ಸ್ಫೂರ್ತಿ ಉಂಟಾದರೂ ಅದು ಹೆಚ್ಚು ಸಮಯದವರೆಗೆ ಹೇಗೆ ನಿಲ್ಲಬಲ್ಲದು? ಸೂರ್ಯೋದಯವಾದ ಬಳಿಕವೂ ಆಕಾಶದಲ್ಲಿ ಅಂಧಕಾರವು ಇರಬಲ್ಲುದೇ? ॥28॥
(ಶ್ಲೋಕ - 29)
ಮೂಲಮ್
ಏಷ ಸಾಂಖ್ಯ ವಿಧಿಃ ಪ್ರೋಕ್ತಃ ಸಂಶಯಗ್ರಂಥಿ ಭೇದನಃ ।
ಪ್ರತಿಲೋಮಾನುಲೋಮಾಭ್ಯಾಂ ಪರಾವರದೃಶಾ ಮಯಾ ॥
ಅನುವಾದ
ಎಲೈ ಉದ್ಧವನೇ! ನಾನು ಕಾರ್ಯ ಮತ್ತು ಕಾರಣ ಇವೆರಡರ ಸಾಕ್ಷಿಯಾಗಿದ್ದೇನೆ. ನಾನು ನಿನಗೆ ಸೃಷ್ಟಿಯಿಂದ ಪ್ರಳಯದ ಮತ್ತು ಪ್ರಳಯದಿಂದ ಸೃಷ್ಟಿವರೆಗಿನ ಸಾಂಖ್ಯವಿಧಿಯನ್ನು ತಿಳಿಸಿಹೇಳಿದೆ. ಇದರಿಂದ ಸಂದೇಹದ ಗ್ರಂಥಿಯು ಬಿಚ್ಚಲ್ಪಟ್ಟು, ಪುರುಷನು ತನ್ನ ಸ್ವರೂಪದಲ್ಲಿ ಸ್ಥಿತನಾಗಿ ಹೋಗುತ್ತಾನೆ. ॥29॥
ಅನುವಾದ (ಸಮಾಪ್ತಿಃ)
ಇಪ್ಪತ್ತನಾಲ್ಕನೆಯ ಅಧ್ಯಾಯವು ಮುಗಿಯಿತು. ॥24॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಚತುರ್ವಿಂಶೋಽಧ್ಯಾಯಃ ॥24॥