೨೩

[ಇಪ್ಪತ್ತಮೂರನೆಯ ಅಧ್ಯಾಯ]

ಭಾಗಸೂಚನಾ

ಓರ್ವ ತಿತಿಕ್ಷು ಬ್ರಾಹ್ಮಣನ ಇತಿಹಾಸ (ಭಿಕ್ಷುಗೀತೆ)

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸ ಏವಮಾಶಂಸಿತ ಉದ್ಧವೇನ
ಭಾಗವತಮುಖ್ಯೇನ ದಾಶಾರ್ಹಮುಖ್ಯಃ ।
ಸಭಾಜಯನ್ ಭೃತ್ಯವಚೋ ಮುಕುಂದ-
ಸ್ತಮಾಬಭಾಷೇ ಶ್ರವಣೀಯವೀರ್ಯಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ನಿಜವಾಗಿ ಭಗವಂತನ ಲೀಲಾಕಥೆಯೇ ಶ್ರವಣಿಸಲು ಯೋಗ್ಯವಾಗಿದೆ. ಅದೇ ಪ್ರೇಮ ಮತ್ತು ಮುಕ್ತಿಯನ್ನು ಕೊಡುವಂತಹುದು. ಶ್ರೀಕೃಷ್ಣನ ಪರಮಪ್ರೇಮೀ ಉದ್ಧವನು ಈ ವಿಧವಾಗಿ ಪ್ರಾರ್ಥನೆ ಮಾಡಿದಾಗ, ಯದುವಂಶ ಶಿರೋಮಣಿ ಶ್ರೀಭಗವಂತನು ಅವನ ಪ್ರಶ್ನೆಯನ್ನು ಪ್ರಶಂಸಿ ಸುತ್ತಾ ಅವನಲ್ಲಿ ಹೀಗೆಂದನು. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಬಾರ್ಹಸ್ಪತ್ಯ ಸ ವೈ ನಾತ್ರ ಸಾಧುರ್ವೈ ದುರ್ಜನೇರಿತೈಃ ।
ದುರುಕ್ತೈರ್ಭಿನ್ನಮಾತ್ಮಾನಂ ಯಃ ಸಮಾಧಾತುಮೀಶ್ವರಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ದೇವಗುರು ಬೃಹಸ್ಪತಿಯ ಶಿಷ್ಯನಾದ ಉದ್ಧವನೇ! ಈ ಪ್ರಪಂಚದಲ್ಲಿ ಪ್ರಾಯಶಃ ದುರ್ಜನರ ಕಟುವಾಣಿಗೆ ಗುರಿಯಾದರೂ ತನ್ನ ಹೃದಯವನ್ನು ಕಾಯ್ದುಕೊಳ್ಳುವಂತಹ ಸಂತ ಪುರುಷರು ಸಿಗಲಾರರು. ॥2॥

(ಶ್ಲೋಕ - 3)

ಮೂಲಮ್

ನ ತಥಾ ತಪ್ಯತೇ ವಿದ್ಧಃ ಪುಮಾನ್ ಬಾಣೈಃ ಸುಮರ್ಮಗೈಃ ।
ಯಥಾ ತುದಂತಿ ಮರ್ಮಸ್ಥಾ ಹ್ಯಸತಾಂ ಪರುಷೇಷವಃ ॥

ಅನುವಾದ

ಮನುಷ್ಯನ ಹೃದಯವು ದುಷ್ಟಜನರ ಮರ್ಮಾಂತಕ ಹಾಗೂ ಕಠೋರ ವಾಗ್ಬಾಣಗಳಿಂದ ಪೀಡಿತವಾದಷ್ಟು, ಮರ್ಮಭೇದೀ ಬಾಣಗಳು ಚುಚ್ಚಿ ದಾಗಲೂ ಆಗುವುದಿಲ್ಲ. ॥3॥

(ಶ್ಲೋಕ - 4)

ಮೂಲಮ್

ಕಥಯಂತಿ ಮಹತ್ಪುಣ್ಯಮಿತಿಹಾಸಮಿಹೋದ್ಧವ ।
ತಮಹಂ ವರ್ಣಯಿಷ್ಯಾಮಿ ನಿಬೋಧ ಸುಸಮಾಹಿತಃ ॥

ಅನುವಾದ

ಉದ್ಧವನೇ! ಈ ವಿಷಯದಲ್ಲಿ ಮಹಾತ್ಮರು ಒಂದು ಬಹಳ ಪವಿತ್ರ, ಪ್ರಾಚೀನ ಇತಿಹಾಸವನ್ನು ಹೇಳುತ್ತಿರುತ್ತಾರೆ. ನಾನು ಅದನ್ನೇ ನಿನಗೆ ಹೇಳುವೆನು. ದತ್ತಚಿತ್ತನಾಗಿ ಅದನ್ನು ಕೇಳು. ॥4॥

(ಶ್ಲೋಕ - 5)

ಮೂಲಮ್

ಕೇನಚಿದ್ಭಿಕ್ಷುಣಾ ಗೀತಂ ಪರಿಭೂತೇನ ದುರ್ಜನೈಃ ।
ಸ್ಮರತಾ ಧೃತಿಯುಕ್ತೇನ ವಿಪಾಕಂ ನಿಜಕರ್ಮಣಾಮ್ ॥

ಅನುವಾದ

ಓರ್ವ ಸಂನ್ಯಾಸಿಯನ್ನು ದುಷ್ಟರು ತುಂಬಾ ಸತಾಯಿಸಿದರು. ಆಗಲೂ ಅವನು ಧೈರ್ಯಗೆಡಲಿಲ್ಲ. ಅವನ್ನು ತನ್ನ ಪೂರ್ವ ಜನ್ಮದ ಕರ್ಮಗಳ ಫಲವೆಂದು ತಿಳಿದುಕೊಂಡು ತನ್ನ ಮಾನಸಿಕ ಕೆಲವು ಉದ್ಗಾರಗಳನ್ನು ಪ್ರಕಟಿಸಿದ್ದನು. ಅದರದ್ದೇ ಈ ಇತಿಹಾಸದಲ್ಲಿ ವರ್ಣನೆ ಇದೆ.॥5॥

(ಶ್ಲೋಕ - 6)

ಮೂಲಮ್

ಅವಂತಿಷು ದ್ವಿಜಃ ಕಶ್ಚಿದಾಸೀದಾಢ್ಯತಮಃ ಶ್ರಿಯಾ ।
ವಾರ್ತಾವೃತ್ತಿಃ ಕದರ್ಯಸ್ತು ಕಾಮೀ ಲುಬ್ಧೋತಿಕೋಪನಃ ॥

ಅನುವಾದ

ಹಿಂದಿನಕಾಲದಲ್ಲಿ ಉಜ್ಜೈನಿಯಲ್ಲಿ ಓರ್ವ ಬ್ರಾಹ್ಮಣನು ವಾಸಿಸುತ್ತಿದ್ದನು. ಅವನು ಕೃಷಿ-ವ್ಯಾಪಾರಾದಿಗಳನ್ನು ಮಾಡಿ ಬಹಳಷ್ಟು ಧನ-ಸಂಪತ್ತನ್ನು ಗಳಿಸಿದನು. ಅವನು ತುಂಬಾ ಕೃಪಣನೂ, ಕಾಮಿಯೂ, ಲೋಭಿಯೂ ಆಗಿದ್ದನು. ಕ್ರೋಧವಾದರೋ ಅವನಿಗೆ ಮಾತು ಮಾತಿಗೆ ಬರುತ್ತಿತ್ತು. ॥6॥

(ಶ್ಲೋಕ - 7)

ಮೂಲಮ್

ಜ್ಞಾತಯೋತಿಥಯಸ್ತಸ್ಯ ವಾಙ್ಮಾತ್ರೇಣಾಪಿ ನಾರ್ಚಿತಾಃ ।
ಶೂನ್ಯಾವಸಥ ಆತ್ಮಾಪಿ ಕಾಲೇ ಕಾಮೈರನರ್ಚಿತಃ ॥

ಅನುವಾದ

ಅವನು ತನ್ನ ಜಾತಿ-ಬಂಧುಗಳನ್ನು, ಅತಿಥಿಗಳನ್ನು ಎಂದೂ ಸಿಹಿಮಾತುಗಳಿಂದಲೂ ಸಂತೋಷಪಡಿಸಲಿಲ್ಲ. ಊಟಕ್ಕಿಕ್ಕು ವುದಂತೂ ದೂರವೇ ಉಳಿಯಿತು. ಅವನು ಧರ್ಮ-ಕರ್ಮದಿಂದ ಶೂನ್ಯವಾದ ಮನೆಯಲ್ಲಿ ಇದ್ದುಕೊಂಡು, ತಾನು ಸ್ವತಃ ತನ್ನ ಧನ-ಸಂಪತ್ತಿನಿಂದ ತನ್ನ ಶರೀರಕ್ಕೂ ಸುಖ ನೀಡಲಿಲ್ಲ. ॥7॥

(ಶ್ಲೋಕ - 8)

ಮೂಲಮ್

ದುಶ್ಶೀಲಸ್ಯ ಕದರ್ಯಸ್ಯ ದ್ರುಹ್ಯಂತೇ ಪುತ್ರಬಾಂಧವಾಃ ।
ದಾರಾ ದುಹಿತರೋ ಭೃತ್ಯಾ ವಿಷಣ್ಣಾ ನಾಚರನ್ ಪ್ರಿಯಮ್ ॥

ಅನುವಾದ

ಅವನ ಲೋಭ ಮತ್ತು ಕೆಟ್ಟ ಸ್ವಭಾವದಿಂದಾಗಿ ಅವನ ಮಕ್ಕಳು, ಬಂಧು-ಬಾಂಧವರು, ಆಳು-ಕಾಳುಗಳು, ಹೆಂಡತಿಯೇ ಮುಂತಾದವರು ದುಃಖಿಗಳಾಗಿದ್ದು, ಮನಸ್ಸಿನಲ್ಲೇ ಅವನ ಅನಿಷ್ಟವನ್ನು ಚಿಂತಿಸುತ್ತಿದ್ದರು. ಯಾರೂ ಅವನ ಮನಸ್ಸಿಗೆ ಪ್ರಿಯವಾಗುವ ವ್ಯವಹಾರ ಮಾಡುತ್ತಿರಲಿಲ್ಲ. ॥8॥

(ಶ್ಲೋಕ - 9)

ಮೂಲಮ್

ತಸ್ಯೈವಂ ಯಕ್ಷವಿತ್ತಸ್ಯ ಚ್ಯುತಸ್ಯೋಭಯಲೋಕತಃ ।
ಧರ್ಮಕಾಮವಿಹೀನಸ್ಯ ಚುಕ್ರುಧುಃ ಪಂಚಭಾಗಿನಃ ॥

ಅನುವಾದ

ಅವನು ಲೋಕ-ಪರಲೋಕ ಎರಡರಿಂದಲೂ ಪತಿತನಾಗಿದ್ದನು. ಯಕ್ಷರಂತೆ ಧನವನ್ನು ಕಾಯುತ್ತಿದ್ದನು. ಆ ಧನದಿಂದ ಅವನಾದರೋ ಧರ್ಮವನ್ನು ಮಾಡುತ್ತಿರಲಿಲ್ಲ, ಭೋಗವನ್ನೂ ಭೋಗಿಸುತ್ತಿರಲಿಲ್ಲ. ಅನೇಕ ದಿನಗಳವರೆಗೆ ಈ ಪ್ರಕಾರ ಜೀವನ ನಡೆಸಿದ್ದರಿಂದ ಪಂಚ-ಮಹಾಯಜ್ಞಗಳ ಭಾಗಿಯಾದ ದೇವತೆಗಳು ಕ್ರುದ್ಧರಾದರು. ॥9॥

ಮೂಲಮ್

(ಶ್ಲೋಕ - 10)
ತದವಧ್ಯಾನವಿಸ್ರಸ್ತಪುಣ್ಯಸ್ಕಂಧಸ್ಯ ಭೂರಿದ ।
ಅರ್ಥೋಪ್ಯಗಚ್ಛನ್ನಿಧನಂ ಬಹ್ವಾಯಾಸಪರಿಶ್ರಮಃ ॥

ಅನುವಾದ

ಉದಾರನಾದ ಉದ್ಧವನೇ! ಅವನ ಪೂರ್ವ ಪುಣ್ಯದ ಆಸರೆಯಿಂದ ಇಷ್ಟರವರೆಗೆ ನೆಲೆಸಿದ್ದ ಧನವು ಪಂಚಮಹಾಯಜ್ಞದ ಭಾಗಿಗಳ ತಿರಸ್ಕಾರದಿಂದ ಹೊರಟುಹೋಗಲು ತೊಡಗಿತು. ಅವನು ಬಹಳ ಉದ್ಯೋಗ-ಪರಿಶ್ರಮದಿಂದ ಗಳಿಸಿದ ಧನವು, ಅವನ ಕಣ್ಣುಮುಂದೆಯೇ ನಾಶವಾಗಿ ಹೋಯಿತು. ॥10॥

(ಶ್ಲೋಕ - 11)

ಮೂಲಮ್

ಜ್ಞಾತಯೋ ಜಗೃಹುಃ ಕಿಂಚಿತ್ ಕಿಂಚಿದ್ದಸ್ಯವ ಉದ್ಧವ ।
ದೈವತಃ ಕಾಲತಃ ಕಿಂಚಿದ್ಬ್ರಹ್ಮಬಂಧೋರ್ನೃಪಾರ್ಥಿವಾತ್ ॥

ಅನುವಾದ

ಆ ಅಧಮ ಬ್ರಾಹ್ಮಣನ ಸ್ವಲ್ಪ ಧನವನ್ನು ಅವನ ಕುಟುಂಬಿಗಳು ಕಸಿದುಕೊಂಡರು. ಕೆಲವನ್ನು ಕಳ್ಳರು ಕದ್ದುಕೊಂಡು ಹೋದರು. ಕೆಲವು ಬೆಂಕಿಯೇ ಮುಂತಾದ ದೈವೀಕೋಪದಿಂದ ನಷ್ಟವಾಯಿತು. ಕೆಲವು ಸಮಯದ ಪ್ರಭಾವದಿಂದ ನಾಶಹೊಂದಿತು. ಕೆಲವನ್ನು ಸಾಧಾರಣ ಮನುಷ್ಯರು ಎತ್ತಿ ಹಾಕಿದರು. ಅಳಿದುಳಿದ ಧನವನ್ನು ಕರದರೂಪದಲ್ಲಿ, ದಂಡದ ರೂಪದಲ್ಲಿ ಶಾಸಕರು ಎತ್ತಿಕೊಂಡು ಹೋದರು. ॥11॥

(ಶ್ಲೋಕ - 12)

ಮೂಲಮ್

ಸ ಏವಂ ದ್ರವಿಣೇ ನಷ್ಟೇ ಧರ್ಮಕಾಮವಿವರ್ಜಿತಃ ।
ಉಪೇಕ್ಷಿತಶ್ಚ ಸ್ವಜನೈಶ್ಚಿಂತಾಮಾಪ ದುರತ್ಯಯಾಮ್ ॥

ಅನುವಾದ

ಉದ್ಧವನೇ! ಹೀಗೆ ಅವನ ಎಲ್ಲ ಸಂಪತ್ತು ಹೊರಟು ಹೋಯಿತು. ಅವನು ಧರ್ಮವನ್ನೂ ಗಳಿಸಲಿಲ್ಲ, ಭೋಗವನ್ನೂ ಭೋಗಿಸಲಿಲ್ಲ. ಇತ್ತ ಅವನ ನೆಂಟರಿಷ್ಟರೂ ಕೂಡ ಅವನತ್ತ ಮುಖಮುರಿದರು. ಈಗ ಅವನಿಗೆ ಭಾರೀ ಭಯಾನಕ ಚಿಂತೆಯು ಆವರಿಸಿತು. ॥12॥

(ಶ್ಲೋಕ - 13)

ಮೂಲಮ್

ತಸ್ಯೈವಂ ಧ್ಯಾಯತೋ ದೀರ್ಘಂ ನಷ್ಟರಾಯಸ್ತಪಸ್ವಿನಃ ।
ಖಿದ್ಯತೋ ಬಾಷ್ಪಕಂಠಸ್ಯ ನಿರ್ವೇದಃ ಸುಮಹಾನಭೂತ್ ॥

ಅನುವಾದ

ಧನದ ನಾಶದಿಂದ ಅವನ ಹೃದಯದಲ್ಲಿ ಬಹಳ ಉರಿ ಉಂಟಾಯಿತು. ಅವನ ಮನಸ್ಸು ದುಗುಡದಿಂದ ತುಂಬಿತು. ಕಣ್ಣೀರಿನ ಕಾರಣದಿಂದ ಗಂಟಲು ಕಟ್ಟಿಹೋಯಿತು. ಆದರೆ ಈ ಪ್ರಕಾರ ಚಿಂತಿಸುತ್ತಾ-ಚಿಂತಿಸುತ್ತಲೇ ಅವನ ಮನಸ್ಸಿನಲ್ಲಿ ಸಂಸಾರದ ಕುರಿತು ಮಹಾನ್ ದುಃಖಬುದ್ಧಿ ಮತ್ತು ಉತ್ಕಟ ವೈರಾಗ್ಯದ ಉದಯವಾಯಿತು. ॥13॥

(ಶ್ಲೋಕ - 14)

ಮೂಲಮ್

ಸ ಚಾಹೇದಮಹೋ ಕಷ್ಟಂ ವೃಥಾತ್ಮಾ ಮೇನುತಾಪಿತಃ ।
ನ ಧರ್ಮಾಯ ನ ಕಾಮಾಯ ಯಸ್ಯಾರ್ಥಾಯಾಸ ಈದೃಶಃ ॥

ಅನುವಾದ

ಈಗ ಆ ಬ್ರಾಹ್ಮಣನು ಮನಸ್ಸಿನಲ್ಲೇ ಅಂದುಕೊಂಡನು ಅಯ್ಯೋ! ಶಿವನೇ! ನಾನು ಇಷ್ಟು ದಿನಗಳವರೆಗೆ ನನ್ನನ್ನು ವ್ಯರ್ಥವಾಗಿ ಸತಾಯಿಸಿಕೊಂಡೆ. ಇದು ಬಹಳ ದುಃಖದ ಮಾತಾಗಿದೆ. ಯಾವ ಧನಕ್ಕಾಗಿ ನಾನು ಕಠಿಣ ಪರಿಶ್ರಮ ಮಾಡಿದೆನೋ, ಆ ಧನವು ಧರ್ಮಕಾರ್ಯದಲ್ಲಾಗಲೀ, ಸುಖಭೋಗದಲ್ಲಾಗಲೀ ಉಪಯೋಗವಾಗಲೇ ಇಲ್ಲವಲ್ಲ! ॥14॥

(ಶ್ಲೋಕ - 15)

ಮೂಲಮ್

ಪ್ರಾಯೇಣಾರ್ಥಾಃ ಕದರ್ಯಾಣಾಂ ನ ಸುಖಾಯ ಕದಾಚನ ।
ಇಹ ಚಾತ್ಮೋಪತಾಪಾಯ ಮೃತಸ್ಯ ನರಕಾಯ ಚ ॥

ಅನುವಾದ

ಪ್ರಾಯಶಃ ಲೋಭೀ ಮನುಷ್ಯನಿಗೆ ಧನದಿಂದ ಎಂದೂ ಸುಖ ಸಿಗುವುದಿಲ್ಲ ಎಂಬುದನ್ನು ನೋಡಲಾಗುತ್ತದೆ. ಈ ಲೋಕದಲ್ಲಾದರೋ ಅವರು ಧನವನ್ನು ಗಳಿಸುವುದರಲ್ಲಿ ಮತ್ತು ಅದರ ರಕ್ಷಣೆಯ ಚಿಂತೆಯಿಂದ ಸುಡುತ್ತಿರುತ್ತಾರೆ. ಧರ್ಮವನ್ನು ಮಾಡದಿರುವುದರಿಂದ ಸತ್ತ ಬಳಿಕ ನರಕಕ್ಕೆ ಹೋಗುತ್ತಾರೆ. ॥15॥

(ಶ್ಲೋಕ - 16)

ಮೂಲಮ್

ಯಶೋ ಯಶಸ್ವಿನಾಂ ಶುದ್ಧಂ ಶ್ಲಾಘ್ಯಾ ಯೇ ಗುಣಿನಾಂ ಗುಣಾಃ ।
ಲೋಭಃ ಸ್ವಲ್ಪೋಪಿ ತಾನ್ಹಂತಿ ಶ್ವಿತ್ರೋ ರೂಪಮಿವೇಪ್ಸಿತಮ್ ॥

ಅನುವಾದ

ಸ್ವಲ್ಪವೇ ತೊನ್ನು ಸರ್ವಾಂಗ ಸುಂದರ ಸ್ವರೂಪವನ್ನು ಕೆಡಿಸುವಂತೆ, ಸ್ವಲ್ಪವಾದ ಲೋಭವೂ ಕೂಡ ಯಶಸ್ವಿಗಳ ಶುದ್ಧಕೀರ್ತಿಯನ್ನು ಹಾಗೂ ಗುಣಿಗಳ ಪ್ರಶಂಸನೀಯ ಗುಣಗಳನ್ನು ನಾಶ ಮಾಡಿಬಿಡುತ್ತದೆ. ॥16॥

(ಶ್ಲೋಕ - 17)

ಮೂಲಮ್

ಅರ್ಥಸ್ಯ ಸಾಧನೇ ಸಿದ್ಧೇ ಉತ್ಕರ್ಷೇ ರಕ್ಷಣೇ ವ್ಯಯೇ ।
ನಾಶೋಪಭೋಗ ಆಯಾಸಸಾ ಸಶ್ಚಿಂತಾ ಭ್ರಮೋ ನೃಣಾಮ್ ॥

ಅನುವಾದ

ಧನವನ್ನು ಗಳಿಸುವುದರಲ್ಲಿ, ಗಳಿಸಿದ ಬಳಿಕ ಅದನ್ನು ಬೆಳೆಸುವುದರಲ್ಲಿ, ಕಾಪಾಡುವುದರಲ್ಲಿ, ವ್ಯಯಮಾಡುವುದರಲ್ಲಿ, ಅದರ ನಾಶದಲ್ಲಿ, ಉಪಭೋಗದಲ್ಲಿ ಎಲ್ಲಿ ನೋಡಿದರೂ ನಿರಂತರ ಪರಿಶ್ರಮ, ಭಯ, ಚಿಂತೆ, ಭ್ರಮೆ ಇವುಗಳನ್ನು ಎದುರಿಸಬೇಕಾಗುತ್ತದೆ. ॥17॥

(ಶ್ಲೋಕ - 18)

ಮೂಲಮ್

ಸ್ತೇಯಂ ಹಿಂಸಾನೃತಂ ದಂಭಃ ಕಾಮಃ ಕ್ರೋಧಃ ಸ್ಮಯೋ ಮದಃ ।
ಭೇದೋ ವೈರಮವಿಶ್ವಾಸಃ ಸಂಸ್ಪರ್ಧಾ ವ್ಯಸನಾನಿ ಚ ॥

(ಶ್ಲೋಕ - 19)

ಮೂಲಮ್

ಏತೇ ಪಂಚದಶಾನರ್ಥಾ ಹ್ಯರ್ಥಮೂಲಾ ಮತಾ ನೃಣಾಮ್ ।
ತಸ್ಮಾದನರ್ಥಮರ್ಥಾಖ್ಯಂ ಶ್ರೇಯೋರ್ಥೀ ದೂರತಸ್ತ್ಯಜೇತ್ ॥

ಅನುವಾದ

ಕಳ್ಳತನ, ಹಿಂಸೆ, ಸುಳ್ಳು ಮಾತನಾಡುವುದು, ದಂಭ, ಕಾಮ, ಕ್ರೋಧ, ಗರ್ವ, ಅಹಂಕಾರ, ಭೇದಬುದ್ಧಿ, ವೈರ, ಅವಿಶ್ವಾಸ, ಸ್ಪರ್ಧಾ, ಲಂಪಟತೆ, ಜೂಜು, ಹೆಂಡ ಈ ಹದಿನೈದು ಅನರ್ಥಗಳು ಮನುಷ್ಯನಲ್ಲಿ ಧನದ ಕಾರಣದಿಂದಲೇ ಪರಿಗಣಿಸಲಾಗಿದೆ. ಅದಕ್ಕಾಗಿ ಶ್ರೇಯಸ್ಕಾಮಿ ಪುರುಷನು ಸ್ವಾರ್ಥ ಹಾಗೂ ಪರಮಾರ್ಥದ ವಿರೋಧೀ ಅರ್ಥನಾಮಧಾರೀ ಅನರ್ಥವನ್ನು ದೂರದಿಂದಲೇ ಬಿಟ್ಟು ಬಿಡಬೇಕು. ॥18-19॥

(ಶ್ಲೋಕ - 20)

ಮೂಲಮ್

ಭಿದ್ಯಂತೇ ಭ್ರಾತರೋ ದಾರಾಃ ಪಿತರಃ ಸುಹೃದಸ್ತಥಾ ।
ಏಕಾಸ್ನಿಗ್ಧಾಃ ಕಾಕಿಣಿನಾ ಸದ್ಯಃ ಸರ್ವೇರಯಃ ಕೃತಾಃ ॥

ಅನುವಾದ

ಅಣ್ಣ-ತಮ್ಮಂದಿರು, ಪತ್ನೀ-ಪುತ್ರರು, ತಂದೆ-ತಾಯಿ, ಬಂಧು-ಬಾಂಧವರು, ಸ್ನೇಹ ಸಂಬಂಧದಿಂದ ಬಂಧಿತರಾಗಿ ಪೂರ್ಣವಾಗಿ ಒಂದಾಗಿಯೇ ಇರುತ್ತಾರೆ. ಆದರೆ ಧನದ ಕಾರಣದಿಂದ ಎಲ್ಲರೂ ಕೂಡಲೇ ಒಬ್ಬರು ಮತ್ತೊಬ್ಬರ ಶತ್ರುಗಳಾಗಿ ಹರಿದು-ಹಂಚಿಹೋಗುತ್ತಾರೆ. ॥20॥

(ಶ್ಲೋಕ - 21)

ಮೂಲಮ್

ಅರ್ಥೇನಾಲ್ಪೀಯಸಾ ಹ್ಯೇತೇ ಸಂರಬ್ಧಾ ದೀಪ್ತಮನ್ಯವಃ ।
ತ್ಯಜಂತ್ಯಾಶು ಸ್ಪೃಧೋ ಘ್ನಂತಿ ಸಹಸೋತ್ಸೃಜ್ಯ ಸೌಹೃದಮ್ ॥

ಅನುವಾದ

ಈ ಜನರು ಸ್ವಲ್ಪವೇ ಧನಕ್ಕಾಗಿಯೂ ಕ್ಷುಬ್ಧ ಮತ್ತು ಕ್ರುದ್ಧರಾಗುತ್ತಾರೆ. ನೋಡು-ನೋಡುತ್ತಿರುವಂತೆ ಸೌಹಾರ್ದ-ಸಂಬಂಧವನ್ನು ಬಿಟ್ಟುಬಿಡುತ್ತಾರೆ. ಪರಸ್ಪರ ಸ್ಪರ್ಧೆಯಲ್ಲಿ ತೊಡಗುತ್ತಾರೆ. ಒಬ್ಬರು-ಮತ್ತೊಬ್ಬರ ಸರ್ವನಾಶಮಾಡಿ ಪ್ರಾಣತೆಗೆಯುವಷ್ಟು ಮುಂದುವರಿಯುತ್ತಾರೆ. ॥21॥

(ಶ್ಲೋಕ - 22)

ಮೂಲಮ್

ಲಬ್ಧ್ವಾ ಜನ್ಮಾಮರಪ್ರಾರ್ಥ್ಯಂ ಮಾನುಷ್ಯಂ ತದ್ವಿಜಾಗ್ರ್ಯತಾಮ್ ।
ತದನಾದೃತ್ಯ ಯೇ ಸ್ವಾರ್ಥಂ ಘ್ನಂತಿ ಯಾಂತ್ಯಶುಭಾಂ ಗತಿಮ್ ॥

ಅನುವಾದ

ದೇವತೆಗಳೂ ಬಯಸುವ ಮನುಷ್ಯಜನ್ಮವನ್ನು, ಅದರಲ್ಲಿಯೂ ಬ್ರಾಹ್ಮಣಶರೀರವನ್ನು ಪಡೆದುಕೊಂಡು ಅದರ ಅನಾದರ ಮಾಡುವವರು, ತನ್ನ ನಿಜವಾದ ಸ್ವಾರ್ಥ-ಪರಮಾರ್ಥವನ್ನು ನಾಶಮಾಡುವವರು ಅಶುಭಗತಿಯನ್ನು ಪಡೆಯುತ್ತಾರೆ.॥22॥

(ಶ್ಲೋಕ - 23)

ಮೂಲಮ್

ಸ್ವರ್ಗಾಪವರ್ಗಯೋರ್ದ್ವಾರಂ ಪ್ರಾಪ್ಯ ಲೋಕಮಿಮಂ ಪುಮಾನ್ ।
ದ್ರವಿಣೇ ಕೋನುಷಜ್ಜೇತ ಮರ್ತ್ಯೋನರ್ಥಸ್ಯ ಧಾಮನಿ ॥

ಅನುವಾದ

ಈ ಮನುಷ್ಯ ಶರೀರವು ಮೋಕ್ಷ ಮತ್ತು ಸ್ವರ್ಗದ ದ್ವಾರವಾಗಿದೆ. ಇವನ್ನು ಪಡೆದಿದ್ದರೂ ಅನರ್ಥಗಳ ತವರಾದ ಧನದ ಮೋಸದಲ್ಲಿ ಯಾವ ಬುದ್ಧಿವಂತ ಮನುಷ್ಯನು ತಾನೇ ಸಿಕ್ಕಿಕೊಳ್ಳುವನು? ॥23॥

(ಶ್ಲೋಕ - 24)

ಮೂಲಮ್

ದೇವರ್ಷಿಪಿತೃಭೂತಾನಿ ಜ್ಞಾತೀನ್ ಬಂಧೂಂಶ್ಚ ಭಾಗಿನಃ ।
ಅಸಂವಿಭಜ್ಯ ಚಾತ್ಮಾನಂ ಯಕ್ಷವಿತ್ತಃ ಪತತ್ಯಧಃ ॥

ಅನುವಾದ

ಯಾವ ಮನುಷ್ಯನು ದೇವತೆಗಳು, ಋಷಿಗಳು, ಪಿತೃಗಳು, ಪ್ರಾಣಿಗಳು, ಜ್ಞಾತಿ-ಬಾಂಧವರು, ಕುಟುಂಬಿಗಳು ಹಾಗೂ ಧನದ ಇನ್ನಿತರ ಪಾಲುದಾರರು ಇವರಿಗೆಲ್ಲ ಅವರ ಪಾಲನ್ನು ಕೊಟ್ಟು ಸಂತೋಷಪಡಿಸುವುದಿಲ್ಲವೋ ಮತ್ತು ತಾನೂ ಅದನ್ನು ಉಪಭೋಗಿಸುವುದಿಲ್ಲವೋ ಅವನು ಯಕ್ಷನಂತೆ ಧನವನ್ನು ಕಾಯುವ ಕೃಪಣನಾಗಿ, ಅವಶ್ಯವಾಗಿ ಅಧೋಗತಿಯನ್ನು ಪಡೆಯುತ್ತಾನೆ. ॥24॥

(ಶ್ಲೋಕ - 25)

ಮೂಲಮ್

ವ್ಯರ್ಥಯಾರ್ಥೇಹಯಾ ವಿತ್ತಂ ಪ್ರಮತ್ತಸ್ಯ ವಯೋ ಬಲಮ್ ।
ಕುಶಲಾ ಯೇನ ಸಿಧ್ಯಂತಿ ಜರಠಃ ಕಿಂ ನು ಸಾಧಯೇ ॥

ಅನುವಾದ

ನಾನು ನನ್ನ ಕರ್ತವ್ಯದಿಂದ ಚ್ಯುತನಾಗಿದ್ದೇನೆ. ನಾನು ಪ್ರಮಾದದಲ್ಲಿ ಆಯುಸ್ಸನ್ನು, ಧನವನ್ನು, ಬಲವನ್ನು, ಪೌರುಷವನ್ನು ಕಳೆದುಕೊಂಡೆ. ವಿವೇಕೀ ಜನರು ಯಾವ ಸಾಧನೆಗಳಿಂದ ಮೋಕ್ಷವನ್ನೂ ಕೂಡ ಪಡೆದುಕೊಳ್ಳುವರೋ, ಅವನ್ನೂ ನಾನು ಧನ ಗಳಿಸುವ ವ್ಯರ್ಥವಾದ ಪ್ರಯತ್ನದಲ್ಲಿ ಕಳಕೊಂಡುಬಿಟ್ಟೆ. ಈಗ ವೃದ್ಧಾಪ್ಯದಲ್ಲಿ ಯಾವ ಸಾಧನೆ ಮಾಡಲೀ? ಎಂದು ಆ ಬ್ರಾಹ್ಮಣನು ಪಶ್ಚಾತ್ತಾಪಪಟ್ಟನು. ॥25॥

(ಶ್ಲೋಕ - 26)

ಮೂಲಮ್

ಕಸ್ಮಾತ್ ಸಂಕ್ಲಿಶ್ಯತೇ ವಿದ್ವಾನ್ ವ್ಯರ್ಥಯಾರ್ಥೇಹಯಾಸಕೃತ್ ।
ಕಸ್ಯಚಿನ್ಮಾಯಯಾ ನೂನಂ ಲೋಕೋಯಂ ಸುವಿಮೋಹಿತಃ ॥

ಅನುವಾದ

ದೊಡ್ಡ-ದೊಡ್ಡ ವಿದ್ವಾಂಸರೂ ಕೂಡ ಧನದ ವ್ಯರ್ಥ ತೃಷ್ಣೆಯಿಂದ ನಿರಂತರ ಏಕೆ ದುಃಖಿಗಳಾಗಿ ಇರುತ್ತಾರೆ? ಎಂಬುದು ನನಗೆ ತಿಳಿದಿರಲಿಲ್ಲ. ಏನೇ ಇರಲಿ, ಅವಶ್ಯವಾಗಿ ಈ ಪ್ರಪಂಚವು ಯಾರದೋ ಮಾಯೆಯಿಂದ ಅತ್ಯಂತ ಮೋಹಿತವಾಗುತ್ತಿದೆ.॥26॥

(ಶ್ಲೋಕ - 27)

ಮೂಲಮ್

ಕಿಂ ಧನೈರ್ಧನದೈರ್ವಾ ಕಿಂ ಕಾಮೈರ್ವಾ ಕಾಮದೈರುತ ।
ಮೃತ್ಯುನಾ ಗ್ರಸ್ಯಮಾನಸ್ಯ ಕರ್ಮಭಿರ್ವೋತ ಜನ್ಮದೈಃ ॥

ಅನುವಾದ

ಈ ಮನುಷ್ಯಶರೀರವು ಕಾಲನ ವಿಕರಾಳ ಹಿಡಿತದಲ್ಲಿ ಸಿಕ್ಕಿಕೊಂಡಿರುವುದು. ಇವನಿಗೆ ಧನದಿಂದಾಗಲೀ, ಧನವನ್ನು ಕೊಡುವ ದೇವತೆಗಳಿಂದಾಗಲೀ, ಜನರಿಂದಾಗಲೀ, ಭೋಗವಾಸನೆಯಿಂದಾಗಲೀ, ಅದನ್ನು ಪೂರ್ಣಗೊಳಿಸು ವುದರಿಂದಾಗಲೀ, ಪದೇ-ಪದೇ ಜನ್ಮ-ಮೃತ್ಯುವಿನ ಚಕ್ರದಲ್ಲಿ ಕೆಡಹುವ ಸಕಾಮ ಕರ್ಮಗಳಿಂದಾಗಲೀ ಏನು ಲಾಭವಿದೆ? ॥27॥

(ಶ್ಲೋಕ - 28)

ಮೂಲಮ್

ನೂನಂ ಮೇ ಭಗವಾಂಸ್ತುಷ್ಟಃ ಸರ್ವದೇವಮಯೋ ಹರಿಃ ।
ಯೇನ ನೀತೋ ದಶಾಮೇತಾಂ ನಿರ್ವೇದಶ್ಚಾತ್ಮನಃ ಪ್ಲವಃ ॥

ಅನುವಾದ

ಸರ್ವದೇವ ಸ್ವರೂಪೀ ಭಗವಂತನು ನನ್ನ ಮೇಲೆ ಪ್ರಸನ್ನನಾಗಿರುವನು, ಇದರಲ್ಲಿ ಸಂದೇಹವೇ ಇಲ್ಲ. ಆದ್ದರಿಂದ ಅವನೇ ನನ್ನನ್ನು ಈ ಸ್ಥಿತಿಗೆ ತಂದು, ಜಗತ್ತಿನ ಕುರಿತು ನನಗೆ ಈ ದುಃಖಬುದ್ಧಿ, ವೈರಾಗ್ಯವನ್ನು ಕೊಟ್ಟಿರುವನು. ವಾಸ್ತವವಾಗಿ ವೈರಾಗ್ಯವೇ ಈ ಸಂಸಾರಸಾಗರದಿಂದ ಪಾರಾಗಲು ದೋಣಿಯಂತೆ ಇದೆ. ॥28॥

(ಶ್ಲೋಕ - 29)

ಮೂಲಮ್

ಸೋಹಂ ಕಾಲಾವಶೇಷೇಣ ಶೋಷಯಿಷ್ಯೇಂಗಮಾತ್ಮನಃ ।
ಅಪ್ರಮತ್ತೋಖಿಲಸ್ವಾರ್ಥೇ ಯದಿ ಸ್ಯಾತ್ಸಿದ್ಧ ಆತ್ಮನಿ ॥

ಅನುವಾದ

ನನ್ನ ಆಯುಸ್ಸು ಬಾಕಿ ಉಳಿದಿದ್ದರೆ, ನಾನು ಆತ್ಮಲಾಭದಲ್ಲೇ ಸಂತುಷ್ಟನಾಗಿದ್ದು, ನನ್ನ ಪರಮಾರ್ಥದ ಸಂಬಂಧದಲ್ಲಿ ಜಾಗರೂಕನಾಗುವೆನು. ಈಗ ಉಳಿದಿರುವ ಸಮಯದಲ್ಲಿ ನನ್ನ ಶರೀರವನ್ನು ತಪಸ್ಸಿನ ಮೂಲಕ ಒಣಗಿಸಿಬಿಡುವೆನು. ಈಗ ನಾನು ಬೇರೆ ಏನನ್ನೂ ಬಯಸದೆ ಇದನ್ನೇ ಸಾಧಿಸುವ ಈ ಸ್ಥಿತಿಗೆ ತಲುಪಿರುವೆನು. ॥29॥

(ಶ್ಲೋಕ - 30)

ಮೂಲಮ್

ತತ್ರ ಮಾಮನುಮೋದೇರನ್ದೇವಾಸಿ ಭುವನೇಶ್ವರಾಃ ।
ಮುಹೂರ್ತೇನ ಬ್ರಹ್ಮಲೋಕಂ ಖಟ್ವಾಂಗಃ ಸಮಸಾಧಯತ್ ॥

ಅನುವಾದ

ಮೂರು ಲೋಕಗಳ ಒಡೆಯ ಹಾಗೂ ದೇವತೆಗಳೆಲ್ಲರೂ ನನ್ನ ಈ ಸಂಕಲ್ಪವನ್ನು ಅನುಮೋದಿಸಲಿ. ಈಗ ನಿರಾಶನಾಗುವ ಯಾವುದೇ ಮಾತಿಲ್ಲ. ಏಕೆಂದರೆ, ಖಟ್ವಾಂಗರಾಜನು ಕೇವಲ ಎರಡೇ ಗಳಿಗೆಯಲ್ಲಿ ಭಗವದ್ಧಾಮವನ್ನು ಪಡೆದುಕೊಂಡು ಬಿಟ್ಟಿದ್ದನು. ॥30॥

(ಶ್ಲೋಕ - 31)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಇತ್ಯಭಿಪ್ರೇತ್ಯ ಮನಸಾ ಹ್ಯಾವಂತ್ಯೋ ದ್ವಿಜಸತ್ತಮಃ ।
ಉನ್ಮುಚ್ಯ ಹೃದಯಗ್ರಂಥೀನ್ ಶಾಂತೋ ಭಿಕ್ಷುರಭೂನ್ಮುನಿಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಉದ್ಧವನೇ! ಆ ಉಜ್ಜೈನಿಯ ನಿವಾಸಿ ಬ್ರಾಹ್ಮಣನು ‘ನಾನು ಮತ್ತು ನನ್ನದು ಎಂಬ ಗಂಟನ್ನು ಬಿಚ್ಚಿಬಿಟ್ಟಿರುವೆನು’ ಎಂದು ಮನಸ್ಸಿನಲ್ಲೇ ನಿಶ್ಚಯಿಸಿದನು. ಅನಂತರ ಅವನು ಶಾಂತವಾಗಿ, ಮೌನೀ ಸಂನ್ಯಾಸಿಯಾಗಿ ಹೋದನು. ॥31॥

(ಶ್ಲೋಕ - 32)

ಮೂಲಮ್

ಸ ಚಚಾರ ಮಹೀಮೇತಾಂ ಸಂಯತಾತ್ಮೇಂದ್ರಿಯಾನಿಲಃ ।
ಭಿಕ್ಷಾರ್ಥಂ ನಗರಗ್ರಾಮಾನಸಂಗೋಲಕ್ಷಿತೋವಿಶತ್ ॥

ಅನುವಾದ

ಈಗ ಅವನ ಚಿತ್ತದಲ್ಲಿ ಯಾವುದೇ ಸ್ಥಾನ, ವಸ್ತು, ವ್ಯಕ್ತಿಯ ಕುರಿತು ಆಸಕ್ತಿ ಉಳಿಯಲಿಲ್ಲ. ಅವನು ತನ್ನ ಮನ, ಇಂದ್ರಿಯ, ಪ್ರಾಣ ಗಳನ್ನು ವಶಪಡಿಸಿಕೊಂಡನು. ಅವನು ಪೃಥ್ವಿಯಲ್ಲಿ ಸ್ವಚ್ಛಂದವಾಗಿ ವಿಚರಿಸತೊಡಗಿದನು. ಅವನು ಭಿಕ್ಷೆಗಾಗಿ ಊರು-ನಗರಕ್ಕೆ ಅವಶ್ಯವಾಗಿ ಹೋಗುತ್ತಿದ್ದನು. ಆದರೆ ಯಾರೂ ಅವನನ್ನು ಗುರುತಿಸದಂತೆ ಇರುತ್ತಿದ್ದನು. ॥32॥

(ಶ್ಲೋಕ - 33)

ಮೂಲಮ್

ತಂ ವೈ ಪ್ರವಯಸಂ ಭಿಕ್ಷುಮವಧೂತಮಸಜ್ಜನಾಃ ।
ದೃಷ್ಟ್ವಾ ಪರ್ಯಭವನ್ಭದ್ರ ಬಹ್ವೀಭಿಃ ಪರಿಭೂತಿಭಿಃ ॥

ಅನುವಾದ

ಎಲೈ ಉದ್ಧವನೇ! ಆ ಅವಧೂತ ಸಂನ್ಯಾಸಿಯು ತುಂಬಾ ಮುದುಕನಾಗಿದ್ದನು. ದುಷ್ಟರು ಅವನನ್ನು ನೋಡುತ್ತಲೇ ಹರಿಹಾಯ್ದು ಬೀಳುತ್ತಿದ್ದರು. ಅನೇಕ ರೀತಿಯಿಂದ ಅವನ ತಿರಸ್ಕಾರಮಾಡುತ್ತಾ ಸತಾಯಿಸುತ್ತಿದ್ದರು. ॥33॥

(ಶ್ಲೋಕ - 34)

ಮೂಲಮ್

ಕೇಚಿತಿವೇಣುಂ ಜಗೃಹುರೇಕೇ ಪಾತ್ರಂ ಕಮಂಡಲುಮ್ ।
ಪೀಠಂ ಚೈಕೇಕ್ಷಸೂತ್ರಂ ಚ ಕಂಥಾಂ ಚೀರಾಣಿ ಕೇಚನ ॥

ಅನುವಾದ

ಕೆಲವರು ಅವನ ದಂಡವನ್ನು ಕಿತ್ತುಕೊಂಡರೆ, ಕೆಲವರು ಭಿಕ್ಷಾಪಾತ್ರೆಯನ್ನು ಎತ್ತಿಕೊಂಡು ಹೋಗುತ್ತಿದ್ದರು. ಕೆಲವರು ಕಮಂಡಲು ಎತ್ತಿಹಾಕುತ್ತಿದ್ದರೆ, ಕೆಲವರು ಆಸನ, ರುದ್ರಾಕ್ಷಿಮಾಲೆ, ಕಂಥಾ (ಚಿಂದಿಬಟ್ಟೆಗಳಿಂದ ಮಾಡಿದ ಕೌದಿ) ತೆಗೆದುಕೊಂಡು ಓಡಿ ಹೋಗುತ್ತಿದ್ದರು. ಕೆಲವರಾದರೋ ಅವನ ಲಂಗೋಟಿ, ವಸವನ್ನೂ ಅತ್ತ-ಇತ್ತ ಎಸೆದುಬಿಡುತ್ತಿದ್ದರು. ॥34॥

(ಶ್ಲೋಕ - 35)

ಮೂಲಮ್

ಪ್ರದಾಯ ಚ ಪುನಸ್ತಾನಿ ದರ್ಶಿತಾನ್ಯಾದದುರ್ಮುನೇಃ ।
ಅನ್ನಂ ಚ ಭೈಕ್ಷ್ಯ ಸಂಪನ್ನಂ ಭುಂಜಾನಸ್ಯ ಸರಿತ್ತಟೇ ॥

(ಶ್ಲೋಕ - 36)

ಮೂಲಮ್

ಮೂತ್ರಯಂತಿ ಚ ಪಾಪಿಷ್ಠಾಃ ಷ್ಠೀವಂತ್ಯಸ್ಯ ಚ ಮೂರ್ಧನಿ ।
ಯತವಾಚಂ ವಾಚಯಂತಿ ತಾಡಯಂತಿ ನ ವಕ್ತಿ ಚೇತ್ ॥

ಅನುವಾದ

ಕೆಲ-ಕೆಲವರು ಆ ವಸ್ತುಗಳನ್ನು ಕೊಟ್ಟು, ಕೆಲವರು ಕರುಣೆತೋರಿಸಿ ಮತ್ತೆ ಕಿತ್ತುಕೊಳ್ಳುತ್ತಿದ್ದರು. ಆ ಅವಧೂತನು ಮಧುಕರಿಯನ್ನು ಬೇಡಿತಂದು, ನದೀತೀರದಲ್ಲಿ ಅದನ್ನು ತಿನ್ನಲು ಕುಳಿತರೆ, ಪಾಪೀ ಜನರು ಕೆಲವೊಮ್ಮೆ ಅವನ ತಲೆಯಮೇಲೆ ಮೂತ್ರವಿಸರ್ಜನೆ ಮಾಡಿಬಿಡುತ್ತಿದ್ದರೆ, ಕೆಲವರು ಉಗುಳಿ ಬಿಡುತ್ತಿದ್ದರು. ಆ ಜನರು ಆ ಮೌನೀ ಅವಧೂತನನ್ನು ಅನೇಕ ರೀತಿಯಿಂದ ಮಾತನಾಡುವಂತೆ ಕಾಡುತ್ತಿದ್ದರು. ಮಾತನಾಡದಿದ್ದಾಗ ಬಡಿಯುತ್ತಿದ್ದರು. ॥35-36॥

(ಶ್ಲೋಕ - 37)

ಮೂಲಮ್

ತರ್ಜಯಂತ್ಯಪರೇ ವಾಗ್ಭಿಃ ಸ್ತೇನೋಯಮಿತಿ ವಾದಿನಃ ।
ಬಧ್ನಂತಿ ರಜ್ಜ್ವಾ ತಂ ಕೇಚಿದ್ಬಧ್ಯತಾಂ ಬಧ್ಯತಾಮಿತಿ ॥

ಅನುವಾದ

ಕೆಲವರು ಅವನನ್ನು ಕಳ್ಳನೆಂದು ಗದರಿಸಿ-ಬೆದರಿಸುತ್ತಿದ್ದರು. ಕೆಲವರು ‘ಇವನನ್ನು ಕಟ್ಟಿಹಾಕಿ’ ಎಂದು ಹೇಳುತ್ತಾ ಮತ್ತೆ ಅವನನ್ನು ಹಗ್ಗದಿಂದ ಕಟ್ಟಿಹಾಕುತ್ತಿದ್ದರು. ॥37॥

(ಶ್ಲೋಕ - 38)

ಮೂಲಮ್

ಕ್ಷಿಪನ್ತ್ಯೇಕೇವಜಾನಂತ ಏಷ ಧರ್ಮಧ್ವಜಃ ಶಠಃ ।
ಕ್ಷೀಣವಿತ್ತ ಇಮಾಂ ವೃತ್ತಿಮಗ್ರಹೀತ್ಸ್ವಜನೋಜ್ಝಿತಃ ॥

(ಶ್ಲೋಕ - 39)

ಮೂಲಮ್

ಅಹೋ ಏಷ ಮಹಾಸಾರೋ ಧೃತಿಮಾನ್ ಗಿರಿರಾಡಿವ ।
ವೌನೇನ ಸಾಧಯತ್ಯರ್ಥಂ ಬಕವದ್ದೃಢನಿಶ್ಚಯಃ ॥

ಅನುವಾದ

ಕೆಲವರು ಅವನನ್ನು ತಿರಸ್ಕರಿಸುತ್ತಾ ‘ನೋಡಿ-ನೋಡಿ! ಈಗ ಈ ಲೋಭಿಯು ಧರ್ಮದ ಸೋಗು ಹಾಕಿಕೊಂಡಿರುವನು. ಧನ-ಸಂಪತ್ತೆಲ್ಲ ಹೋಯಿತು. ಪತ್ನೀ-ಪುತ್ರರು ಮನೆಯಿಂದ ಹೊರಗೆ ಹಾಕಿದರು. ಈಗ ಇವನು ಭಿಕ್ಷೆಎತ್ತುವ ವೃತ್ತಿಯನ್ನು ತನ್ನದಾಗಿಸಿಕೊಂಡಿರುವನು. ಆಹಾ! ನೋಡಿರಲ್ಲ! ಈ ಧಡಿಯ ಭಿಕ್ಷುಕ ಧೈರ್ಯದಲ್ಲಿ ದೊಡ್ಡ ಪರ್ವತದಂತೆ ಇದ್ದಾನೆ. ಇವನು ಮೌನವಾಗಿದ್ದು ತನ್ನ ಕೆಲಸವನ್ನು ಸಾಧಿಸಿಕೊಳ್ಳಲು ಬಯಸುತ್ತಿರುವನು. ನಿಜವಾಗಿಯೂ ಇವನು ಬಕಪಕ್ಷಿಗಿಂತಲೂ ಮಿಗಿಲಾದ ವಂಚಕ ಮತ್ತು ದೃಢನಿಶ್ಚಯಿಯಾಗಿದ್ದಾನೆ’ ಎಂದು ಗಳಹುತ್ತಿದ್ದರು. ॥38-39॥

(ಶ್ಲೋಕ - 40)

ಮೂಲಮ್

ಇತ್ಯೇಕೇ ವಿಹಸಂತ್ಯೇನಮೇಕೇ ದುರ್ವಾತಯಂತಿ ಚ ।
ತಂ ಬಬಂಧುರ್ನಿರುರುಧುರ್ಯಥಾ ಕ್ರೀಡನಕಂ ದ್ವಿಜಮ್ ॥

ಅನುವಾದ

ಕೆಲವರು ಆ ಅವಧೂತನನ್ನು ಪರಿಹಾಸ್ಯ ಮಾಡಿದರೆ, ಕೆಲವರು ಅವನ ಮೇಲೆ ಅಧೋವಾಯು ಬಿಡುತ್ತಿದ್ದರು. ಸಾಕುಪಕ್ಷಿಗಳಾದ ಗಿಳಿ, ಮೈನಾ ಹಕ್ಕಿಗಳನ್ನು ಜನರು ಬಂಧಿಸಿ ಪಂಜರದಲ್ಲಿ ಕೂಡಿಹಾಕುವಂತೆ, ಅವನನ್ನು ಬಂಧಿಸಿ, ಮನೆಗಳಲ್ಲಿ ಕೂಡಿಹಾಕುತ್ತಿದ್ದರು. ॥40॥

(ಶ್ಲೋಕ - 41)

ಮೂಲಮ್

ಏವಂ ಸ ಭೌತಿಕಂ ದುಃಖಂ ದೈವಿಕಂ ದೈಹಿಕಂ ಚ ಯತ್ ।
ಭೋಕ್ತವ್ಯಮಾತ್ಮನೋ ದಿಷ್ಟಂ ಪ್ರಾಪ್ತಂ ಪ್ರಾಪ್ತಮಬುಧ್ಯತ ॥

ಅನುವಾದ

ಆದರೆ ಅವನು ಬಾಯಿಮುಚ್ಚಿಕೊಂಡು ಎಲ್ಲವನ್ನೂ ಸಹಿಸುತ್ತಿದ್ದನು. ಅವನಿಗೆ ಕೆಲವೊಮ್ಮೆ ಜ್ವರಾದಿಗಳ ಕಾರಣ ದೈಹಿಕಪೀಡೆ ಸಹಿಸಬೇಕಾಗುತ್ತಿತ್ತು. ಕೆಲವೊಮ್ಮೆ ಚಳಿ-ಸೆಕೇ ಮುಂತಾದ ದೈವೀ ಕಷ್ಟಗಳನ್ನು ಅನುಭವಿಸಬೇಕಾಗುತ್ತಿತ್ತು. ಕೆಲವೊಮ್ಮೆ ದುರ್ಜನರು ಅಪಮಾನಾದಿಗಳಿಂದ ಅವನಿಗೆ ಭೌತಿಕಕಷ್ಟ ಕೊಡುತ್ತಿದ್ದರು. ಆದರೆ ಸಂನ್ಯಾಸಿಯ ಮನಸ್ಸಿನಲ್ಲಿ ಇವುಗಳ ಯಾವ ವಿಕಾರಗಳೂ ಆಗುತ್ತಿರಲಿಲ್ಲ. ಇವೆಲ್ಲವೂ ನನ್ನ ಹಿಂದಿನಜನ್ಮದ ಕರ್ಮಗಳ ಫಲವಾಗಿದೆ, ಇದನ್ನು ನಾನು ಅವಶ್ಯವಾಗಿ ಭೋಗಿಸಲೇಬೇಕಾಗುವುದು ಎಂದು ತಿಳಿಯುತ್ತಿದ್ದನು. ॥41॥

(ಶ್ಲೋಕ - 42)

ಮೂಲಮ್

ಪರಿಭೂತ ಇಮಾಂ ಗಾಥಾಮಗಾಯತ ನರಾಧಮೈಃ ।
ಪಾತಯದ್ಭಿಃ ಸ್ವಧರ್ಮಸ್ಥೋ ಧೃತಿಮಾಸ್ಥಾಯ ಸಾತ್ತ್ವಿಕೀಮ್ ॥

ಅನುವಾದ

ನೀಚ ಜನರು ಅನೇಕ ರೀತಿಯ ತಿರಸ್ಕಾರಗೈದು ಅವನನ್ನು ಅವನ ಧರ್ಮದಿಂದ ಪತನ ವಾಗಿಸಲು ಪ್ರಯತ್ನಿಸುತ್ತಿದ್ದರೂ, ಅವನು ಭಾರೀ ದೃಢತೆಯಿಂದ ತನ್ನ ಧರ್ಮದಲ್ಲಿ ಸ್ಥಿರವಾಗಿರುತ್ತಿದ್ದನು. ಅವನು ಸಾತ್ತ್ವಿಕ ಧೃತಿಯ* ಆಶ್ರಯ ಪಡೆದು ಗೀತೆಯೊಂದನ್ನು ಹೀಗೆ ಹಾಡಿದನು ॥42॥

ಟಿಪ್ಪನೀ
  • ಸಾತ್ತ್ವಿಕ ಧೃತಿಯ ಲಕ್ಷಣ ಗೀತೆ 18/33ರಲ್ಲಿ ನೋಡಬೇಕು.

(ಶ್ಲೋಕ - 43)

ಮೂಲಮ್ (ವಾಚನಮ್)

ದ್ವಿಜ ಉವಾಚ

ಮೂಲಮ್

ನಾಯಂ ಜನೋ ಮೇ ಸುಖದುಃಖಹೇತು-
ರ್ನ ದೇವತಾತ್ಮಾ ಗ್ರಹಕರ್ಮಕಾಲಾಃ ।
ಮನಃ ಪರಂ ಕಾರಣಮಾಮನಂತಿ
ಸಂಸಾರಚಕ್ರಂ ಪರಿವರ್ತಯೇದ್ ಯತ್ ॥

ಅನುವಾದ

ಬ್ರಾಹ್ಮಣನೆಂದನು ನನ್ನ ಸುಖ ಅಥವಾ ದುಃಖದ ಕಾರಣರು ಈ ಮನುಷ್ಯರಾಗಲೀ, ದೇವತೆಗಳಾಗಲೀ, ಶರೀರವಾಗಲೀ, ಗ್ರಹಗಳಾಗಲೀ, ಕರ್ಮವಾಗಲೀ, ಕಾಲವಾಗಲೀ, ಯಾವುದೂ ಅಲ್ಲ. ಶ್ರುತಿಗಳು, ಮಹಾತ್ಮರು ಮನಸ್ಸನ್ನೇ ಇದರ ಪರಮ ಕಾರಣವೆಂದು ಹೇಳುತ್ತಾರೆ. ಮನಸ್ಸೇ ಈ ಸಂಸಾರಚಕ್ರದಲ್ಲಿ ಜೀವಿಯನ್ನು ಅಲೆಸುತ್ತದೆ. ॥43॥

(ಶ್ಲೋಕ - 44)

ಮೂಲಮ್

ಮನೋ ಗುಣಾನ್ ವೈ ಸೃಜತೇ ಬಲೀಯ-
ಸ್ತತಶ್ಚ ಕರ್ಮಾಣಿ ವಿಲಕ್ಷಣಾನಿ ।
ಶುಕ್ಲಾನಿ ಕೃಷ್ಣಾನ್ಯಥ ಲೋಹಿತಾನಿ
ತೇಭ್ಯಃ ಸವರ್ಣಾಃ ಸೃತಯೋ ಭವಂತಿ ॥

ಅನುವಾದ

ನಿಜವಾಗಿಯೂ ಈ ಮನಸ್ಸು ಬಹಳ ಬಲಿಷ್ಠವಾಗಿದೆ. ಇದೇ ವಿಷಯಗಳನ್ನು, ಅವುಗಳ ಕಾರಣ ಗುಣಗಳನ್ನು, ಅವುಗಳೊಂದಿಗೆ ಸಂಬಂಧವಿರಿಸುವ ವೃತ್ತಿಗಳನ್ನು ಸೃಷ್ಟಿಸಿದೆ. ಆ ವೃತ್ತಿಗಳ ಅನುಸಾರವೇ ಸಾತ್ತ್ವಿಕ, ರಾಜಸ, ತಾಮಸ ಹೀಗೆ ಅನೇಕ ಪ್ರಕಾರದ ಕರ್ಮಗಳು ನಡೆಯು ತ್ತವೆ. ಕರ್ಮಗಳನುಸಾರವೇ ಜೀವಿಯ ವಿವಿಧ ಗತಿಗಳಾಗುತ್ತವೆ. ॥44॥

(ಶ್ಲೋಕ - 45)

ಮೂಲಮ್

ಅನೀಹ ಆತ್ಮಾ ಮನಸಾ ಸಮೀಹತಾ
ಹಿರಣ್ಮಯೋ ಮತ್ಸಖ ಉದ್ವಿಚಷ್ಟೇ ।
ಮನಃ ಸ್ವಲಿಂಗಂ ಪರಿಗೃಹ್ಯ ಕಾಮಾನ್
ಜುಷನ್ ನಿಬದ್ಧೋ ಗುಣಸಂಗತೋಸೌ ॥

ಅನುವಾದ

ಮನಸ್ಸಿನ ವೃತ್ತಿಗಳ ಮೂಲಕವೇ ಕರ್ಮ ಪರಂಪರೆ ಉಂಟಾಗುತ್ತದೆ. ಆತ್ಮನಾದರೋ ನಿಷ್ಕ್ರಿಯನಾಗಿ, ಕರ್ಮಗಳ ಸಂಗದಿಂದ ರಹಿತನಾಗಿದ್ದಾನೆ. ಹಿರಣ್ಯಮಯ ಅರ್ಥಾತ್ ವಿಜ್ಞಾನಸ್ವರೂಪಿಯಾಗಿದ್ದು, ಜೀವಿಯ ಸಖನಾಗಿರುವನು. ಸಾಕ್ಷಿರೂಪದಿಂದ ಎಚ್ಚರವಾಗಿದ್ದು ಜೀವಿಯನ್ನು ನೋಡುತ್ತಿರುತ್ತಾನೆ. ಆದರೆ ಜೀವಿಯು ಅಹಂ ಭಾವದಿಂದ ಮನಸ್ಸನ್ನು ಜೊತೆಯಾಗಿಸಿಕೊಂಡು ತನ್ನಲ್ಲಿಯೇ ಅನೇಕ ಪ್ರಕಾರದ ಗುಣವೃತ್ತಿಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಅವುಗಳಲ್ಲಿ ಆಸಕ್ತನಾಗಿ ಸ್ವಯಂ ಬಂಧಿತನಾಗುತ್ತಾನೆ. ಈ ವಿಧವಾಗಿ ಮನಸ್ಸಿಗೆ ವಶೀಭೂತನಾಗಿ ಜೀವಿಯು ಅಲೆಯುತ್ತಾ ಇರುತ್ತಾನೆ. ॥45॥

(ಶ್ಲೋಕ - 46)

ಮೂಲಮ್

ದಾನಂ ಸ್ವಧರ್ಮೋ ನಿಯಮೋ ಯಮಶ್ಚ
ಶ್ರುತಂ ಚ ಕರ್ಮಾಣಿ ಚ ಸದ್ವ್ರತಾನಿ ।
ಸರ್ವೇ ಮನೋನಿಗ್ರಹಲಕ್ಷಣಾಂತಾಃ
ಪರೋ ಹಿ ಯೋಗೋ ಮನಸಃ ಸಮಾಧಿಃ ॥

ಅನುವಾದ

ದಾನ ಕೊಡುವುದು, ಸ್ವಧರ್ಮವನ್ನು ಪಾಲಿಸುವುದು, ಯಮ-ನಿಯಮಗಳನ್ನು ಪಾಲಿಸುವುದು, ವೇದಾಧ್ಯಯನ, ಒಳ್ಳೆಯ ವ್ರತಗಳನ್ನು ಪಾಲಿಸುವುದು, ವೇದಗಳಲ್ಲಿ ಹೇಳಿರುವ ಸತ್ಕರ್ಮಗಳು ಹೀಗೆ ಇವೆಲ್ಲವೂ ಶುಭ ಕರ್ಮಗಳು. ಇವುಗಳಿಂದ ಮನಸ್ಸನ್ನು ವಶಪಡಿಸಲಾಗುತ್ತದೆ. ಇವೆಲ್ಲವನ್ನೂ ಮನಸ್ಸಿನ ನಿಗ್ರಹವಾಗುವ ತನಕ ಮಾಡಲೇ ಬೇಕು. ಆದರೆ ಮನಸ್ಸಿನ ಏಕಾಕಾರ ವೃತ್ತಿಯನ್ನು ಭಗವಂತನಲ್ಲಿ ತೊಡಗಿಸುವುದು ಪರಮ ಯೋಗವಾಗಿದೆ. ಮನಸ್ಸಿನ ಈ ಪ್ರಕಾರದ ಸಮಾಧಿಸ್ಥಿತಿ ಉಂಟಾದಮೇಲೆ ಬೇರೆ ಯಾವುದರ ಆವಶ್ಯಕತೆಯು ಉಳಿಯುವುದಿಲ್ಲ. ॥46॥

(ಶ್ಲೋಕ - 47)

ಮೂಲಮ್

ಸಮಾಹಿತಂ ಯಸ್ಯ ಮನಃ ಪ್ರಶಾಂತಂ
ದಾನಾದಿಭಿಃ ಕಿಂ ವದ ತಸ್ಯ ಕೃತ್ಯಮ್ ।
ಅಸಂಯತಂ ಯಸ್ಯ ಮನೋವಿನಶ್ಯದ್
ದಾನಾದಿಭಿಶ್ಚೇದಪರಂ ಕಿಮೇಭಿಃ ॥

ಅನುವಾದ

ಯಾರ ಮನಸ್ಸು ಸುಸಂಯತವಾಗಿ ಪೂರ್ಣಶಾಂತವಾಗಿದೆಯೋ, ಅವನಿಗಾಗಿ ದಾನಾದಿ ಯಾವುದೇ ಕೃತ್ಯಗಳೂ ಕೂಡ ಬಾಕಿ ಉಳಿಯುವುದಿಲ್ಲ. ಯಾರ ಮನಸ್ಸು ವಶವಾಗಿಲ್ಲವೋ, ಅತ್ತ-ಇತ್ತ ಅಲೆಯುತ್ತಿದೆಯೋ, ಅವನಿಗೆ ದಾನಾದಿ ಕರ್ಮಗಳಿಂದಲೂ ಏನು ಲಾಭ? ॥47॥

(ಶ್ಲೋಕ - 48)

ಮೂಲಮ್

ಮನೋವಶೇನ್ಯೇ ಹ್ಯಭವನ್ ಸ್ಮ ದೇವಾ
ಮನಶ್ಚ ನಾನ್ಯಸ್ಯ ವಶಂ ಸಮೇತಿ ।
ಭೀಷ್ಮೋ ಹಿ ದೇವಃ ಸಹಸಃ ಸಹೀಯಾನ್
ಯುಂಜ್ಯಾದ್ವಶೇ ತಂ ಸ ಹಿ ದೇವದೇವಃ ॥

ಅನುವಾದ

ಮನಸ್ಸು ತನ್ನ ವಶವಾದಮೇಲೆ ಬೇರೆ ಇಂದ್ರಿಯಗಳ ದೇವತೆಗಳೂ ವಶರಾಗುತ್ತಾರೆ. ಇಂದ್ರಿಯಗಳು ಮನಸ್ಸನ್ನು ವಶಪಡಿಸಿಕೊಳ್ಳಲಾರವು. ಏಕೆಂದರೆ, ಮನಸ್ಸು ಬಲಿಷ್ಠರಲ್ಲಿ ಬಲಿಷ್ಠವಾಗಿದೆ. ಈ ಮನಸ್ಸಿನ ಮೇಲೆ ಹತೋಟಿ ಪಡೆಯುವವನು ದೇವತೆಗಳಿಗೂ ದೇವನಾಗುತ್ತಾನೆ. ॥48॥

(ಶ್ಲೋಕ - 49)

ಮೂಲಮ್

ತಂ ದುರ್ಜಯಂ ಶತ್ರುಮಸಹ್ಯವೇಗ-
ಮರುಂತುದಂ ತನ್ನ ವಿಜಿತ್ಯ ಕೇಚಿತ್ ।
ಕುರ್ವಂತ್ಯಸದ್ವಿಗ್ರಹಮತ್ರ ಮರ್ತ್ಯೈ-
ರ್ಮಿತ್ರಾಣ್ಯುದಾಸೀನರಿಪೂನ್ ವಿಮೂಢಾಃ ॥

ಅನುವಾದ

ನಿಜವಾಗಿಯೂ ಮನಸ್ಸು ಬಹುದೊಡ್ಡ ಶತ್ರುವಾಗಿದೆ. ಇದರ ಆಕ್ರಮಣ ಅಸಹ್ಯವಾಗಿದೆ. ಇದು ಹೊರಗಿನ ಶರೀರವನ್ನೇ ಅಲ್ಲ, ಹೃದಯಾದಿ ಮರ್ಮಸ್ಥಾನಗಳನ್ನೂ ಭೇದಿಸುತ್ತದೆ. ಇದನ್ನು ಗೆಲ್ಲುವುದು ತುಂಬಾ ಕಠಿಣವಾಗಿದೆ. ಮನುಷ್ಯನು ಮೊಟ್ಟಮೊದಲಿಗೆ ಈ ಶತ್ರುವಿನ ಮೇಲೆ ವಿಜಯವನ್ನು ಪಡೆಯಬೇಕು. ಆದರೆ ಮೂರ್ಖ ಜನರು ಇದನ್ನು ಗೆಲ್ಲುವ ಪ್ರಯತ್ನವನ್ನೇ ಮಾಡುವುದಿಲ್ಲ. ಬೇರೆ ಮನುಷ್ಯರೊಂದಿಗೆ ಸುಳ್ಳು-ಸುಳ್ಳೇ ಜಗಳಕಾದು, ಈ ಜಗತ್ತಿನ ಜನರನ್ನೇ ಮಿತ್ರ-ಶತ್ರು ಉದಾಸೀನರಾಗಿಸಿ ಕೊಳ್ಳುವರು. ॥49॥

(ಶ್ಲೋಕ - 50)

ಮೂಲಮ್

ದೇಹಂ ಮನೋಮಾತ್ರಮಿಮಂ ಗೃಹೀತ್ವಾ
ಮಮಾಹಮಿತ್ಯಂಧಧಿಯೋ ಮನುಷ್ಯಾಃ ।
ಏಷೋಹಮನ್ಯೋಯಮಿತಿ ಭ್ರಮೇಣ
ದುರಂತಪಾರೇ ತಮಸಿ ಭ್ರಮಂತಿ ॥

ಅನುವಾದ

ಸಾಧಾರಣವಾಗಿ ಮನುಷ್ಯರ ಬುದ್ಧಿಯು ಕುರುಡಾಗಿರುತ್ತದೆ. ಅದರಿಂದಲೇ ಅವರು ಈ ಮನಃಕಲ್ಪಿತ ಶರೀರವನ್ನು ‘ನಾನು-ನನ್ನದು’ ಎಂದು ತಿಳಿದುಕೊಳ್ಳುತ್ತಾರೆ. ಮತ್ತೆ ‘ಇದು ನಾನಾಗಿದ್ದೇನೆ ಇದು ಬೇರೆಯಾಗಿದೆ’ ಎಂಬ ಭ್ರಮೆಯ ಉರುಳಿನಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಅವರು ಈ ಅನಂತ ಅಜ್ಞಾನಾಂಧಕಾರದಲ್ಲೇ ಅಲೆಯುತ್ತಾ ಇರುತ್ತಾರೆ. ॥50॥

(ಶ್ಲೋಕ - 51)

ಮೂಲಮ್

ಜನಸ್ತು ಹೇತುಃ ಸುಖದುಃಖಯೋಶ್ಚೇತ್
ಕಿಮಾತ್ಮನಶ್ಚಾತ್ರ ಹ ಭೌಮಯೋಸ್ತತ್ ।
ಜಿಹ್ವಾಂ ಕ್ವಚಿತ್ ಸಂದಶತಿ ಸ್ವದದ್ಭಿಃ
ತದ್ವೇದನಾಯಾಂ ಕತಮಾಯ ಕುಪ್ಯೇತ್ ॥

ಅನುವಾದ

ಮನುಷ್ಯನೇ ಸುಖ-ದುಃಖಗಳಿಗೆ ಕಾರಣನಾಗಿದ್ದಾನೆ ಎಂದು ಒಪ್ಪಿಕೊಂಡರೂ ಅದರಲ್ಲಿ ಆತ್ಮನ ಸಂಬಂಧವೇ ನಿದೆ? ಏಕೆಂದರೆ ಸುಖ-ದುಃಖಗಳನ್ನು ಕೊಡುವುದು ಮೃಣ್ಮಯಶರೀರವೇ ಆಗಿದೆ. ಭೋಗಿಸುವವನೂ ಮಣ್ಣಿನ ಶರೀರವೇ. ಎಂದಾದರೂ ಊಟದ ಸಮಯ ತನ್ನ ಹಲ್ಲುಗಳಿಂದಲೇ ತನ್ನ ನಾಲಿಗೆಯನ್ನು ಕಚ್ಚಿಕೊಂಡು ನೋವು ಉಂಟಾದರೆ ಮನುಷ್ಯನು ಯಾರ ಮೇಲೆ ಸಿಟ್ಟು ಮಾಡುವನು? ॥51॥

(ಶ್ಲೋಕ - 52)

ಮೂಲಮ್

ದುಃಖಸ್ಯ ಹೇತುರ್ಯದಿ ದೇವತಾಸ್ತು
ಕಿಮಾತ್ಮನಸ್ತತ್ರ ವಿಕಾರಯೋಸ್ತತ್ ।
ಯದಂಗಮಂಗೇನ ನಿಹನ್ಯತೇ ಕ್ವಚಿತ್
ಕ್ರುಧ್ಯೇತ ಕಸ್ಮೈ ಪುರುಷಃ ಸ್ವದೇಹೇ ॥

ಅನುವಾದ

ದುಃಖವನ್ನು ಕೊಡುವುದರಲ್ಲಿ ದೇವತೆಗಳನ್ನು ಕಾರಣವೆಂದು ಒಪ್ಪಿಕೊಂಡರೆ, ಅದರಲ್ಲಿ ಆತ್ಮನ ಸಂಬಂಧವೇನಿದೆ? ಏಕೆಂದರೆ, ಎಲ್ಲರ ಶರೀರಗಳಲ್ಲಿ ಇಂದ್ರಿಯಾಭಿಮಾನಿ ದೇವತೆಗಳು ಒಂದೇ ಆಗಿವೆ. ಇಂದ್ರಿಯದ ದೇವತೆಯು ಇನ್ನೊಂದು ಇಂದ್ರಿಯದ ದೇವತೆಗೆ ಕಷ್ಟ ಕೊಟ್ಟರೆ ಇದರಿಂದ ಆತ್ಮನ ಹಾನಿ ಏನಾಯಿತು? ತನ್ನದೇ ಒಂದು ಅವಯವ ಇನ್ನೊಂದು ಅವಯವಕ್ಕೆ ತೊಂದರೆ ಕೊಟ್ಟರೆ ಯಾರಮೇಲೆ ಸಿಟ್ಟಾಗುವುದು? ॥52॥

(ಶ್ಲೋಕ - 53)

ಮೂಲಮ್

ಆತ್ಮಾ ಯದಿ ಸ್ಯಾತ್ಸುಖದುಃಖಹೇತುಃ
ಕಿಮನ್ಯತಸ್ತತ್ರ ನಿಜಸ್ವಭಾವಃ ।
ನ ಹ್ಯಾತ್ಮನೋನ್ಯದ್ಯದಿ ತನ್ಮೃಷಾ ಸ್ಯಾತ್
ಕ್ರುಧ್ಯೇತ ಕಸ್ಮಾನ್ನ ಸುಖಂ ನ ದುಃಖಮ್ ॥

ಅನುವಾದ

ಆತ್ಮ ನನ್ನೇ ಸುಖ-ದುಃಖದ ಕಾರಣವೆಂದು ಒಪ್ಪಿಕೊಂಡರೆ ಬೇರೆ ಯವರಿಂದ ಅವನಿಗೆ ಏನು ಸಂಬಂಧವಿದೆ? ಏಕೆಂದರೆ ಆತ್ಮನಾದರೋ ತನ್ನ ಸ್ವರೂಪವೇ ಆಗಿದೆ. ಆತ್ಮವಲ್ಲದೆ ಬೇರೆ ಏನೂ ಇಲ್ಲವೇ ಇಲ್ಲ. ಕಂಡುಬರುವುದೆಲ್ಲವೂ ಮಿಥ್ಯೆಯೇ ಆಗಿದೆ. ಆತ್ಮನು ಆನಂದ ಸ್ವರೂಪನಾಗಿದ್ದಾನೆ. ಅಲ್ಲಿ ಸುಖ-ದುಃಖ ಎರಡೂ ಇಲ್ಲ. ಹಾಗಾದರೆ ಸಿಟ್ಟು ಯಾರಮೇಲೆ ಮಾಡುವುದು? ॥53॥

(ಶ್ಲೋಕ - 54)

ಮೂಲಮ್

ಗ್ರಹಾ ನಿಮಿತ್ತಂ ಸುಖದುಃಖಯೋಶ್ಚೇತ್
ಕಿಮಾತ್ಮನೋಜಸ್ಯ ಜನಸ್ಯ ತೇ ವೈ ।
ಗ್ರಹೈರ್ಗ್ರಹಸ್ಯೈವ ವದಂತಿ ಪೀಡಾಂ
ಕ್ರುಧ್ಯೇತ ಕಸ್ಮೈ ಪುರುಷಸ್ತತೋನ್ಯಃ ॥

ಅನುವಾದ

ಸುಖ-ದುಃಖಗಳನ್ನು ಕೊಡುವವರು ಗ್ರಹಗಳು ಎಂದು ಒಪ್ಪಿಕೊಂಡರೆ, ಅಜನ್ಮಾ ಆತ್ಮನಿಗೆ ಸುಖ-ದುಃಖಗಳನ್ನು ಕೊಡಲು ಅವು ಕಾರಣವಾಗಲಾರರು. ಏಕೆಂದರೆ, ಹುಟ್ಟಿದವನಿಗೇ ಗ್ರಹಗಳು ಪೀಡೆ ಕೊಡಬಲ್ಲರು. ಆತ್ಮನು ಶಾಶ್ವತನಾಗಿದ್ದಾನೆ. ಶರೀರ ನಾಶವುಳ್ಳದ್ದಾಗಿದೆ. ಆದ್ದರಿಂದ ಗ್ರಹಗಳ ಪ್ರಭಾವ ಶರೀರದ ಮೇಲೆಯೇ ಬೀಳಬಲ್ಲದು. ಆತ್ಮನಿಗೆ ಅದರೊಂದಿಗೆ ಯಾವ ಸಂಬಂಧವೂ ಇಲ್ಲ. ಹಾಗಾದರೆ ಕ್ರೋಧ ಯಾರ ಮೇಲೆ ಮಾಡುವುದು? ॥54॥

(ಶ್ಲೋಕ - 55)

ಮೂಲಮ್

ಕರ್ಮಾಸ್ತು ಹೇತುಃ ಸುಖದುಃಖಯೋಶ್ಚೇತ್
ಕಿಮಾತ್ಮನಸ್ತದ್ಧಿ ಜಡಾಜಡತ್ವೇ ।
ದೇಹಸ್ತ್ವಚಿತ್ ಪುರುಷೋಯಂ ಸುಪರ್ಣಃ
ಕ್ರುಧ್ಯೇತ ಕಸ್ಮೈ ನ ಹಿ ಕರ್ಮಮೂಲಮ್ ॥

ಅನುವಾದ

ಕರ್ಮಗಳನ್ನೇ ಸುಖ-ದುಃಖದ ಕಾರಣವೆಂದು ಒಪ್ಪಿಕೊಂಡರೆ, ಅವುಗಳೊಂದಿಗೆ ಆತ್ಮನ ಸಂಬಂಧ ಏನಿದೆ? ಏಕೆಂದರೆ ಆತ್ಮನು ಸಾಕ್ಷಿಯಾಗಿದ್ದಾನೆ, ಶುದ್ಧ ಜ್ಞಾನ ಸ್ವರೂಪನಾಗಿದ್ದಾನೆ. ಜಡ ಮತ್ತು ಚೇತನಗಳು ಸೇರದೇ ಕರ್ಮ ಸಂಭವವಿಲ್ಲ. ಅವನು ಕರ್ಮಗಳಿಂದ ಸರ್ವಥಾ ನಿರ್ಲಿಪ್ತನಾಗಿರುವನು. ದೇಹವು ಜಡವಾಗಿರುವುದರಿಂದ ಏನೂ ಮಾಡುವುದಿಲ್ಲ. ಅದೇ ರೀತಿ ಆತ್ಮ ಚೇತನವಾಗಿದೆ. ಆದ್ದರಿಂದ ಕರ್ಮಗಳ ಸಂಬಂಧವಿಲ್ಲ. ಹೀಗೆ ಕರ್ಮಮೂಲಕ ಸುಖ-ದುಃಖಗಳು ಮತ್ತು ಆತ್ಮನಿಗೆ ಯಾವ ಸಂಬಂಧವಿದೆ? ಹಾಗೂ ಅವನು ಯಾರಮೇಲೆ ಸಿಟ್ಟುಮಾಡುವುದು? ॥55॥

(ಶ್ಲೋಕ - 56)

ಮೂಲಮ್

ಕಾಲಸ್ತು ಹೇತುಃ ಸುಖದುಃಖಯೋಶ್ಚೇತ್
ಕಿಮಾತ್ಮನಸ್ತತ್ರ ತದಾತ್ಮಕೋಸೌ ।
ನಾಗ್ನೇರ್ಹಿ ತಾಪೋ ನ ಹಿಮಸ್ಯ ತತ್ ಸ್ಯಾತ್
ಕ್ರುಧ್ಯೇತ ಕಸ್ಮೈ ನ ಪರಸ್ಯ ದ್ವಂದ್ವಮ್ ॥

ಅನುವಾದ

ಕಾಲವನ್ನು ಸುಖ-ದುಃಖವನ್ನು ಕೊಡುವವನೆಂದು ಒಪ್ಪಿಕೊಂಡರೆ ಕಾಲ ಮತ್ತು ಆತ್ಮಾ ಒಂದೇ ಆಗಿದೆ. ಈ ರೀತಿ ಆತ್ಮನಿಂದ ಆತ್ಮನಿಗೆ ಕಷ್ಟವಾಗುವುದಿಲ್ಲ. ಅಗ್ನಿಗೆ ಅಗ್ನಿಯಿಂದ ತಾಪವಾಗುವುದಿಲ್ಲ, ಮಂಜುಗಡ್ಡೆಯಿಂದ ಮಂಜು ಗಡ್ಡೆಗೆ ಶೀತಲತೆ ಬಾಧಿಸದು. ಹಾಗೆಯೇ ಆತ್ಮನಿಗೂ ಸುಖ-ದುಃಖಾದಿ ದ್ವಂದ್ವಗಳು ಇಲ್ಲ. ಇಂತಹ ಸ್ಥಿತಿಯಲ್ಲಿ ಸಿಟ್ಟು ಯಾರಮೇಲೆ ಮಾಡುವುದು? ॥56॥

(ಶ್ಲೋಕ - 57)

ಮೂಲಮ್

ನ ಕೇನಚಿತ್ ಕ್ವಾಪಿ ಕಥಂಚನಾಸ್ಯ
ದ್ವಂದ್ವೋಪರಾಗಃ ಪರತಃ ಪರಸ್ಯ ।
ಯಥಾಹಮಃ ಸಂಸೃತಿರೂಪಿಣಃ ಸ್ಯಾ-
ದೇವಂ ಪ್ರಬುದ್ಧೋ ನ ಬಿಭೇತಿ ಭೂತೈಃ ॥

ಅನುವಾದ

ಪ್ರಕೃತಿಯಿಂದಲೂ ಅತೀತನಾದ ಆತ್ಮನಿಗೆ ಯಾರಿಂದಲೂ, ಯಾವ ರೀತಿಯಿಂದಲೂ ದ್ವಂದ್ವಗಳ ಸ್ಪರ್ಶವಾಗುವುದಿಲ್ಲ. ಇರುವ ಈ ಅಹಂಕಾರವೇ ಸಂಸೃತಿ (ಸಂಸಾರ)ರೂಪವಾಗಿದೆ. ಅದರಿಂದಲೇ ದ್ವಂದ್ವಗಳು ಉಂಟಾಗುತ್ತವೆ. ಈ ದ್ವಂದ್ವಗಳಿಂದ ಜನ್ಮ ಮೃತ್ಯು ಉಂಟಾಗುತ್ತದೆ. ಆದರೆ ಆತ್ಮಾ ಈ ದ್ವಂದ್ವಗಳಿಂದ ಮುಕ್ತವಾಗಿದೆ. ಹೀಗೆ ತಿಳಿದುಕೊಂಡ ಯೋಗಿಯು ಯಾವ ಪ್ರಾಣಿಗೂ ಹೆದರುವುದಿಲ್ಲ. ॥57॥

(ಶ್ಲೋಕ - 58)

ಮೂಲಮ್

ಏತಾಂ ಸ ಆಸ್ಥಾಯ ಪರಾತ್ಮನಿಷ್ಠಾ-
ಮಧ್ಯಾಸಿತಾಂ ಪೂರ್ವತಮೈರ್ಮಹರ್ಷಿಭಿಃ ।
ಅಹಂ ತರಿಷ್ಯಾಮಿ ದುರಂತಪಾರಂ
ತಮೋ ಮುಕುಂದಾಂಘ್ರಿನಿಷೇವಯೈವ ॥

ಅನುವಾದ

ಹಿಂದೆ ಮಹರ್ಷಿಗಳು ಆಶ್ರಯಿಸಿದ ಅಧ್ಯಾತ್ಮ-ನಿಷ್ಠೆಯನ್ನೇ ನಾನೂ ಆಶ್ರಯ ಪಡೆಯುವೆನು. ಈ ಪ್ರಕಾರ ಭಗವಾನ್ ಮುಕುಂದನ ಚರಣಕಮಲಗಳ ಸೇವೆಯ ಪ್ರಭಾವದಿಂದ ಈ ಅಜ್ಞಾನರೂಪೀ ಅಗಾಧ ಸಂಸಾರಸಾಗರವನ್ನು ದಾಟಿ ಹೋಗುವೆನು. ॥58॥

(ಶ್ಲೋಕ - 59)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ನಿರ್ವಿದ್ಯ ನಷ್ಟದ್ರವಿಣೋ ಗತಕ್ಲಮಃ
ಪ್ರವ್ರಜ್ಯ ಗಾಂ ಪರ್ಯಟಮಾನ ಇತ್ಥಮ್ ।
ನಿರಾಕೃತೋಸದ್ಭಿರಪಿ ಸ್ವಧರ್ಮಾ-
ದಕಂಪಿತೋಮುಂ ಮುನಿರಾಹ ಗಾಥಾಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಎಲೈ ಉದ್ಧವನೇ! ಆ ಅವಧೂತ ಬ್ರಾಹ್ಮಣನು ನಷ್ಟವಾಗಿ ಹೋದ ಧನದ ಕ್ಲೇಶವನ್ನೂ ಪೂರ್ಣವಾಗಿ ಕಳೆದುಕೊಂಡನು. ಈಗ ಅವನು ಪ್ರಪಂಚದಿಂದ ವಿರಕ್ತನಾಗಿದ್ದು, ಸಂನ್ಯಾಸಿಯಾಗಿ ಭೂಮಿಯಲ್ಲಿ ಸ್ವಚ್ಛಂದವಾಗಿ ವಿಚರಿಸುತ್ತಿದ್ದನು. ದುಷ್ಟರು ಅವನನ್ನು ಬಹಳವಾಗಿ ಕಾಡಿದರೂ ಅವನು ತನ್ನ ಧರ್ಮದಿಂದ ವಿಚಲಿತನಾಗದೇ ಅಚಲವಾಗಿದ್ದನು. ಆಗ ಆ ವೌನೀ ಅವಧೂತನು ಮನಸ್ಸಿನಲ್ಲೇ ಈ ಮೇಲಿನ ಗೀತೆಯನ್ನು ಹಾಡಿದ್ದನು. ॥59॥

(ಶ್ಲೋಕ - 60)

ಮೂಲಮ್

ಸುಖದುಃಖಪ್ರದೋ ನಾನ್ಯಃ ಪುರುಷಸ್ಯಾತ್ಮವಿಭ್ರಮಃ ।
ಮಿತ್ರೋದಾಸೀನರಿಪವಃ ಸಂಸಾರಸ್ತಮಸಃ ಕೃತಃ ॥

ಅನುವಾದ

ಉದ್ಧವನೇ! ಈ ಪ್ರಪಂಚದಲ್ಲಿ ಮನುಷ್ಯನಿಗೆ ಬೇರೆ ಯಾರೂ ಸುಖ-ದುಃಖಗಳನ್ನು ಕೊಡುವುದಿಲ್ಲ. ಇದಾದರೋ ಅವನ ಚಿತ್ತದ ಭ್ರಮೆಮಾತ್ರವಾಗಿದೆ. ಈ ಇಡೀ ಪ್ರಪಂಚ ಮತ್ತು ಇದರೊಳಗಿನ ಮಿತ್ರ, ಉದಾಸೀನ, ಶತ್ರು ಈ ಭೇದಗಳು ಅಜ್ಞಾನ ಕಲ್ಪಿತವಾಗಿವೆ. ॥60॥

(ಶ್ಲೋಕ - 61)

ಮೂಲಮ್

ತಸ್ಮಾತ್ ಸರ್ವಾತ್ಮನಾ ತಾತ ನಿಗೃಹಾಣ ಮನೋ ಧಿಯಾ ।
ಮಯ್ಯಾವೇಶಿತಯಾ ಯುಕ್ತ ಏತಾವಾನ್ಯೋಗಸಂಗ್ರಹಃ ॥

ಅನುವಾದ

ಅದಕ್ಕಾಗಿ ಪ್ರಿಯ ಉದ್ಧವನೇ! ನಿನ್ನ ವೃತ್ತಿಗಳನ್ನು ನನ್ನಲ್ಲಿ ತನ್ಮಯ ಗೊಳಿಸು ಹಾಗೂ ನಿನ್ನ ಶಕ್ತಿಯೆಲ್ಲವನ್ನು ತೊಡಗಿಸಿ ಮನಸ್ಸನ್ನು ವಶಪಡಿಸಿಕೋ. ಮತ್ತೆ ನನ್ನಲ್ಲೇ ನಿತ್ಯ ಯುಕ್ತನಾಗಿ ಸ್ಥಿತನಾಗಿ ಬಿಡು, ಸಾಕು. ಎಲ್ಲ ಯೋಗಸಾಧನೆಯ ಸಾರ-ಸಂಗ್ರಹ ಇದೇ ಆಗಿದೆ. ॥61॥

(ಶ್ಲೋಕ - 62)

ಮೂಲಮ್

ಯ ಏತಾಂ ಭಿಕ್ಷುಣಾ ಗೀತಾಂ ಬ್ರಹ್ಮನಿಷ್ಠಾಂ ಸಮಾಹಿತಃ ।
ಧಾರಯನ್ ಶ್ರಾವಯನ್ ಶೃಣ್ವನ್ ದ್ವಂದ್ವೈರ್ನೈವಾಭಿಭೂಯತೇ ॥

ಅನುವಾದ

ಈ ಭಿಕ್ಷು (ಸಂನ್ಯಾಸಿಯ) ಗೀತೆಯು ಮೂರ್ತಿಮಂತ ಬ್ರಹ್ಮಜ್ಞಾನ ನಿಷ್ಠೆಯೇ ಆಗಿದೆ. ಇದನ್ನು ಏಕಾಗ್ರಚಿತ್ತದಿಂದ ಕೇಳಿ, ಹೇಳಿ, ಧಾರಣೆಮಾಡು ವವನು ಎಂದೂ ದುಃಖಾದಿ ದ್ವಂದ್ವಗಳಿಗೆ ವಶನಾಗಲಾರನು. ॥62॥

ಅನುವಾದ (ಸಮಾಪ್ತಿಃ)

ಇಪ್ಪತ್ತಮೂರನೆಯ ಅಧ್ಯಾಯವು ಮುಗಿಯಿತು. ॥23॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ತ್ರಯೋವಿಂಶೋಧ್ಯಾಯಃ ॥23॥