೨೨

[ಇಪ್ಪತ್ತೆರಡನೆಯ ಅಧ್ಯಾಯ]

ಭಾಗಸೂಚನಾ

ತತ್ತ್ವಗಳ ಸಂಖ್ಯೆ ಮತ್ತು ಪ್ರಕೃತಿ ಪುರುಷರ ವಿಶ್ಲೇಷಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಕತಿ ತತ್ತ್ವಾನಿ ವಿಶ್ವೇಶ ಸಂಖ್ಯಾತಾನ್ಯೃಷಿಭಿಃ ಪ್ರಭೋ ।
ನವೈಕಾದಶ ಪಂಚ ತ್ರೀಣ್ಯಾತ್ಥ ತ್ವಮಿಹ ಶುಶ್ರುಮ ॥

(ಶ್ಲೋಕ - 2)

ಮೂಲಮ್

ಕೇಚಿತ್ ಷಡ್ವಿಂಶತಿಂ ಪ್ರಾಹುರಪರೇ ಪಂಚವಿಂಶತಿಮ್ ।
ಸಪ್ತೈಕೇ ನವ ಷಟ್ಕೇಚಿಚ್ಚತ್ವಾರ್ಯೇಕಾದಶಾಪರೇ ॥

ಅನುವಾದ

ಉದ್ಧವನು ಕೇಳಿದನು — ಸ್ವಾಮಿ! ವಿಶ್ವೇಶ್ವರಾ! ಋಷಿಗಳು ತತ್ತ್ವಗಳ ಸಂಖ್ಯೆಯನ್ನು ಎಷ್ಟು ತಿಳಿಸಿರುವರು? ನೀನಾದರೋ ಈಗ (ಹತ್ತೊಂಭತ್ತನೆಯ ಅಧ್ಯಾಯದಲ್ಲಿ) ಒಂಭತ್ತು, ಹನ್ನೊಂದು, ಐದು ಮತ್ತು ಮೂರು ಅರ್ಥಾತ್ ಒಟ್ಟಿಗೆ ಇಪ್ಪತ್ತೆಂಟು ತತ್ತ್ವಗಳನ್ನು ಎಣಿಸಿರುವೆ. ಇದಾದರೋ ನಾನು ಕೇಳಿಯೇ ಇದ್ದೇನೆ. ಆದರೆ ಕೆಲವರು ಇಪ್ಪತ್ತಾರು ತತ್ತ್ವಗಳನ್ನು ಹೇಳುತ್ತಾರೆ; ಕೆಲವರು ಇಪ್ಪತ್ತೈದು; ಕೆಲವರು ಏಳು, ಒಂಭತ್ತು ಅಥವಾ ಆರು ಸ್ವೀಕರಿಸುತ್ತಾರೆ. ಕೆಲವರು ನಾಲ್ಕೆಂದು ಹೇಳಿದರೆ ಕೆಲವರು ಹನ್ನೊಂದು. ॥1-2॥

(ಶ್ಲೋಕ - 3)

ಮೂಲಮ್

ಕೇಚಿತ್ ಸಪ್ತದಶ ಪ್ರಾಹುಃ ಷೋಡಶೈಕೇ ತ್ರಯೋದಶ ।
ಏತಾವತ್ತ್ವಂ ಹಿ ಸಂಖ್ಯಾನಾಮೃಷಯೋ ಯದ್ವಿವಕ್ಷಯಾ ।
ಗಾಯಂತಿ ಪೃಥಗಾಯುಷ್ಮನ್ನಿದಂ ನೋ ವಕ್ತುಮರ್ಹಸಿ ॥

ಅನುವಾದ

ಹೀಗೆಯೇ ಕೆಲ-ಕೆಲ ಋಷಿ-ಮುನಿಗಳ ಮತದಲ್ಲಿ ಅವುಗಳ ಸಂಖ್ಯೆ ಹದಿನೇಳು ಇದೆ, ಕೆಲವರು ಹದಿನಾರು, ಕೆಲವರು ಹದಿಮೂರು ಎಂದು ಹೇಳುತ್ತಾರೆ. ಸನಾತನ ಶ್ರೀಕೃಷ್ಣಾ! ಋಷಿ-ಮುನಿಗಳು ಇಷ್ಟು ಭಿನ್ನವಾದ ಸಂಖ್ಯೆಯನ್ನು ಯಾವ ಅಭಿಪ್ರಾಯದಿಂದ ತಿಳಿಸುತ್ತಾರೆ? ನೀನು ದಯವಿಟ್ಟು ನನಗೆ ತಿಳಿಸುವವನಾಗು. ॥3॥

(ಶ್ಲೋಕ - 4)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯುಕ್ತಂ ಚ ಸಂತಿ ಸರ್ವತ್ರ ಭಾಷಂತೇ ಬ್ರಾಹ್ಮಣಾ ಯಥಾ ।
ಮಾಯಾಂ ಮದೀಯಾಮುದ್ಗೃಹ್ಯ ವದತಾಂ ಕಿಂ ನು ದುರ್ಘಟಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಉದ್ಧವನೇ! ವೇದಜ್ಞ ಬ್ರಾಹ್ಮಣರು ಈ ವಿಷಯದಲ್ಲಿ ಹೇಳಿದುದೆಲ್ಲವೂ ಸರಿಯಾಗಿಯೇ ಇದೆ. ಏಕೆಂದರೆ, ಎಲ್ಲ ತತ್ತ್ವಗಳು ಎಲ್ಲದರಲ್ಲಿ ಅಂತರ್ಭೂತವಾಗಿವೆ. ನನ್ನ ಮಾಯೆಯನ್ನು ಸ್ವೀಕರಿಸಿಕೊಂಡು ಏನು ಹೇಳುವುದು ಅಸಂಭವವಿದೆ? ॥4॥

(ಶ್ಲೋಕ - 5)

ಮೂಲಮ್

ನೈತದೇವಂ ಯಥಾತ್ಥ ತ್ವಂ ಯದಹಂ ವಚ್ಮಿ ತತ್ತಥಾ ।
ಏವಂ ವಿವದತಾಂ ಹೇತುಂ ಶಕ್ತಯೋ ಮೇ ದುರತ್ಯಯಾಃ ॥

ಅನುವಾದ

‘ನೀನು ಹೇಳಿರುವುದು ಸರಿಯಲ್ಲ, ನಾನು ಹೇಳುತ್ತಿರುವುದೇ ಯಥಾರ್ಥವಾಗಿದೆ’ ಈ ಪ್ರಕಾರ ಜಗತ್ತಿನ ಕಾರಣದ ಸಂಬಂಧದಲ್ಲಿ ವಿವಾದ ಏಕೆ ಆಗುತ್ತದೆ ಎಂದರೆ ನನ್ನ ಶಕ್ತಿಗಳು ಸತ್ತ್ವ, ರಜ ಮುಂತಾದ ಗುಣಗಳು ಮತ್ತು ಅವುಗಳ ವೃತ್ತಿಗಳ ರಹಸ್ಯವನ್ನು ಜನರು ತಿಳಿಯುವುದಿಲ್ಲ. ಅದಕ್ಕಾಗಿ ಅವರು ತಮ್ಮ-ತಮ್ಮ ಭಾವಕ್ಕನುಸಾರ ವಾದ- ವಿವಾದ ಮಾಡುತ್ತಾ ಇರುತ್ತಾರೆ. ॥5॥

(ಶ್ಲೋಕ - 6)

ಮೂಲಮ್

ಯಾಸಾಂ ವ್ಯತಿಕರಾದಾಸೀದ್ವಿಕಲ್ಪೋ ವದತಾಂ ಪದಮ್ ।
ಪ್ರಾಪ್ತೇ ಶಮದಮೇಪ್ಯೇತಿ ವಾದಸ್ತಮನುಶಾಮ್ಯತಿ ॥

ಅನುವಾದ

ಸತ್ತ್ವಾದಿ ಗುಣಗಳ ಕ್ಷೋಭದಿಂದಲೇ ಈ ವಿವಿಧ ಕಲ್ಪನಾರೂಪೀ ಪ್ರಪಂಚವು ಯಾವ ವಸ್ತು ಇಲ್ಲದೆ ಕೇವಲ ನಾಮಮಾತ್ರವಿದೆಯೋ, ಅದು ಎದ್ದು ನಿಂತಿದೆ. ಇದೇ ವಾದ-ವಿವಾದ ಮಾಡುವವರ ವಿವಾದದ ವಿಷಯವಾಗಿದೆ. ಇಂದ್ರಿಯಗಳು ತನ್ನ ವಶವಾದಾಗ, ಚಿತ್ತವು ಶಾಂತವಾದಾಗ ಅವರ ಭೇದ ಬುದ್ಧಿಯೂ ದೂರಾಗುತ್ತದೆ ಹಾಗೂ ವಿವಾದವೂ ಮುಗಿದು ಹೋಗುತ್ತದೆ. ॥6॥

(ಶ್ಲೋಕ - 7)

ಮೂಲಮ್

ಪರಸ್ಪರಾನುಪ್ರವೇಶಾತ್ ತತ್ತ್ವಾನಾಂ ಪುರುಷರ್ಷಭ ।
ಪೌರ್ವಾಪರ್ಯಪ್ರಸಂಖ್ಯಾನಂ ಯಥಾ ವಕ್ತುರ್ವಿವಕ್ಷಿತಮ್ ॥

ಅನುವಾದ

ಪುರುಷಶ್ರೇಷ್ಠನೇ! ತತ್ತ್ವಗಳು ಒಂದು ಮತ್ತೊಂದರಲ್ಲಿ ಅನುಪ್ರವೇಶವಾಗಿವೆ. ಅದಕ್ಕಾಗಿ ಪ್ರವಚನಕಾರನು ತಿಳಿಸಲು ಬಯಸುವ ಸಂಖ್ಯೆಗನುಸಾರವಾಗಿ ಕಾರಣಗಳನ್ನು ಕಾರ್ಯದಲ್ಲಿ ಅಥವಾ ಕಾರ್ಯವನ್ನು ಕಾರಣಗಳಲ್ಲಿ ಬೆರೆಸಿ ತಾನು ಬಯಸಿದ ಸಂಖ್ಯೆಯನ್ನು ಸಿದ್ಧಗೊಳಿಸಿಕೊಳ್ಳುತ್ತಾನೆ. ॥7॥

(ಶ್ಲೋಕ - 8)

ಮೂಲಮ್

ಏಕಸ್ಮಿನ್ನಪಿ ದೃಶ್ಯಂತೇ ಪ್ರವಿಷ್ಟಾನೀತರಾಣಿ ಚ ।
ಪೂರ್ವಸ್ಮಿನ್ ವಾಪರಸ್ಮಿನ್ ವಾ ತತ್ತ್ವೇ ತತ್ತ್ವಾನಿ ಸರ್ವಶಃ ॥

ಅನುವಾದ

ಒಂದೇ ಕಾರಣರೂಪೀ ತತ್ತ್ವದಲ್ಲಿ ಅಥವಾ ಕಾರ್ಯರೂಪೀ ತತ್ತ್ವದಲ್ಲಿ ಪೂರ್ಣ ವಾಗಿ ಬೇರೆ ತತ್ತ್ವವು ಬೆರೆತಂತೆ ಕಾಣುತ್ತದೆ.॥8॥

(ಶ್ಲೋಕ - 9)

ಮೂಲಮ್

ಪೌರ್ವಾಪರ್ಯಮತೋಮೀಷಾಂ ಪ್ರಸಂಖ್ಯಾನಮಭೀಪ್ಸತಾಮ್ ।
ಯಥಾ ವಿವಿಕ್ತಂ ಯದ್ವಕಂ ಗೃಹ್ಣೀಮೋ ಯುಕ್ತಿಸಂಭವಾತ್ ॥

ಅನುವಾದ

ಇವನ್ನು ಎಣಿಸಲು ಬಯಸುವವರು ಯಾವ ಕಾರ್ಯವನ್ನು ಯಾವ ಕಾರಣದಲ್ಲಿ ಅಥವಾ ಯಾವ ಕಾರಣವನ್ನು ಯಾವ ಕಾರ್ಯದಲ್ಲಿ ಅಂತರ್ಭೂತಗೈದು ತತ್ತ್ವಗಳ ಎಷ್ಟು ಸಂಖ್ಯೆ ಸ್ವೀಕರಿಸಲಾಗಿದೆಯೋ ಅವುಗಳ ಪ್ರತಿಪಾದನೆ ಯುಕ್ತಿಸಂಗತವಾದ ಕಾರಣ ಅವರು ಹೇಳುವುದೆಲ್ಲವನ್ನು ಸ್ವೀಕರಿಸುತ್ತಾರೆ. ಯುಕ್ತಿಯಿಂದ ಎಲ್ಲ ಮಾತುಗಳು ಸಿದ್ಧ ವಾಗುತ್ತವೆ. ಆದ್ದರಿಂದ ನಿಜವಾಗಿವೆ. ॥9॥

(ಶ್ಲೋಕ - 10)

ಮೂಲಮ್

ಅನಾದ್ಯವಿದ್ಯಾಯುಕ್ತಸ್ಯ ಪುರುಷಸ್ಯಾತ್ಮವೇದನಮ್ ।
ಸ್ವತೋ ನ ಸಂಭವಾದನ್ಯಸ್ತತ್ತ್ವಜ್ಞೋ ಜ್ಞಾನದೋ ಭವೇತ್ ॥

ಅನುವಾದ

ಉದ್ಧವನೇ! ಇಪ್ಪತ್ತಾರು ಸಂಖ್ಯೆಯನ್ನು ಸ್ವೀಕರಿಸಿದ ಜನರು ಹೀಗೆ ಹೇಳುತ್ತಾರೆ ಜೀವಿಯು ಅನಾದಿಕಾಲದಿಂದ ಅವಿದ್ಯೆಯಿಂದ ಗ್ರಸ್ತನಾಗಿದ್ದಾನೆ. ಅವನು ಸ್ವಯಂ ತನ್ನನ್ನು ತಿಳಿಯಲಾರನು. ಅವನಿಗೆ ಆತ್ಮಜ್ಞಾನ ಮಾಡಿಸಲು ಬೇರೆ ಯಾರಾದರೂ ಸರ್ವಜ್ಞನ ಆವಶ್ಯಕತೆ ಇದೆ. (ಅದಕ್ಕಾಗಿ ಪ್ರಕೃತಿಯ ಕಾರ್ಯ ಕಾರಣರೂಪೀ ಇಪ್ಪತ್ತ ನಾಲ್ಕು ತತ್ತ್ವ, ಇಪ್ಪತ್ತೈದನೆಯ ಪುರುಷ ಮತ್ತು ಇಪ್ಪತ್ತಾರನೆಯ ಈಶ್ವರ ಹೀಗೆ ಒಟ್ಟಿಗೆ ಇಪ್ಪತ್ತಾರು ತತ್ತ್ವಗಳನ್ನು ಸ್ವೀಕರಿಸಬೇಕು.) ॥10॥

(ಶ್ಲೋಕ - 11)

ಮೂಲಮ್

ಪುರುಷೇಶ್ವರಯೋರತ್ರ ನ ವೈಲಕ್ಷಣ್ಯಮಣ್ವಪಿ ।
ತದನ್ಯಕಲ್ಪನಾಪಾರ್ಥಾ ಜ್ಞಾನಂ ಚ ಪ್ರಕೃತೇರ್ಗುಣಃ ॥

ಅನುವಾದ

ಇಪ್ಪತ್ತೈದು ತತ್ತ್ವಗಳನ್ನು ಒಪ್ಪುವವರು ಹೇಳುತ್ತಾರೆ ಈ ಶರೀರದಲ್ಲಿ ಜೀವ ಮತ್ತು ಈಶ್ವರನಲ್ಲಿ ಅಣುಮಾತ್ರವೂ ಭೇದವಿಲ್ಲ. ಆದ್ದರಿಂದ ಅವುಗಳಲ್ಲಿ ಭೇದದ ಕಲ್ಪನೆ ವ್ಯರ್ಥವಾಗಿದೆ. ಉಳಿಯಿತು ಜ್ಞಾನದ ಮಾತು, ಆ ಜ್ಞಾನ ಪ್ರಕೃತಿಯ ಗುಣವಾಗಿದೆ. (ಆದ್ದರಿಂದ ಅವರು ಜ್ಞಾನವನ್ನು ಬೇರೆಯಾಗಿ ಸ್ವೀಕರಿಸುವುದಿಲ್ಲ. ಈ ಪ್ರಕಾರ 24 ಜಡ ತತ್ತ್ವಗಳು ಮತ್ತು ಒಂದು ಚೇತನ ಪುರುಷ ಸೇರಿ 25 ತತ್ತ್ವಗಳಾದವು.) ॥11॥

(ಶ್ಲೋಕ - 12)

ಮೂಲಮ್

ಪ್ರಕೃತಿರ್ಗುಣಸಾಮ್ಯಂ ವೈ ಪ್ರಕೃತೇರ್ನಾತ್ಮನೋ ಗುಣಾಃ ।
ಸತ್ತ್ವಂ ರಜಸ್ತಮ ಇತಿ ಸ್ಥಿತ್ಯುತ್ಪತ್ತ್ಯಂತಹೇತವಃ ॥

ಅನುವಾದ

ಮೂರೂ ಗುಣಗಳ ಸಾಮ್ಯಾವಸ್ಥೆಯೇ ಪ್ರಕೃತಿಯ ಸ್ವರೂಪವಾಗಿದೆ. ಅದಕ್ಕಾಗಿ ಸತ್ತ್ವ, ರಜ ಮುಂತಾದ ಗುಣಗಳು ಆತ್ಮನದಲ್ಲ, ಪ್ರಕೃತಿಯದ್ದೇ ಆಗಿವೆ. ಇವುಗಳ ಮೂಲಕ ಜಗತ್ತಿನ ಸ್ಥಿತಿ, ಉತ್ಪತ್ತಿ, ಪ್ರಳಯ ಆಗುತ್ತಾ ಇರುತ್ತವೆ. ಅದಕ್ಕಾಗಿ ಜ್ಞಾನವು ಆತ್ಮನ ಗುಣವಲ್ಲ, ಪ್ರಕೃತಿಯದೇ ಗುಣವೆಂದು ಸಿದ್ಧವಾಗುತ್ತದೆ. ॥12॥

ಮೂಲಮ್

(ಶ್ಲೋಕ - 13)
ಸತ್ತ್ವಂ ಜ್ಞಾನಂ ರಜಃ ಕರ್ಮ ತಮೋಜ್ಞಾನಮಿಹೋಚ್ಯತೇ ।
ಗುಣವ್ಯತಿಕರಃ ಕಾಲಃ ಸ್ವಭಾವಃ ಸೂತ್ರಮೇವ ಚ ॥

ಅನುವಾದ

ಈ ಪ್ರಸಂಗದಲ್ಲಿ ಸತ್ತ್ವಗುಣವೇ ಜ್ಞಾನವಾಗಿದೆ, ರಜೋಗುಣ ಕರ್ಮವಾಗಿದೆ, ತಮೋಗುಣವೇ ಅಜ್ಞಾನವೆಂದು ಹೇಳಲಾಗುತ್ತದೆ. ಗುಣಗಳಲ್ಲಿ ಕ್ಷೋಭೆಯನ್ನುಂಟುಮಾಡುವ ಈಶ್ವರನೇ ಕಾಲನಾಗಿದ್ದಾನೆ ಮತ್ತು ಸೂತ್ರ ಅರ್ಥಾತ್ ಮಹತ್ತತ್ತ್ವವೇ ಸ್ವಭಾವವಾಗಿದೆ. (ಅದಕ್ಕಾಗಿ 25 ಮತ್ತು 26 ತತ್ತ್ವಗಳ ಎರಡೂ ಸಂಖ್ಯೆಗಳು ಯುಕ್ತಿಸಂಗತವಾಗಿವೆ.) ॥13॥

(ಶ್ಲೋಕ - 14)

ಮೂಲಮ್

ಪುರುಷಃ ಪ್ರಕೃತಿರ್ವ್ಯಕ್ತಮಹಂಕಾರೋ ನಭೋನಿಲಃ ।
ಜ್ಯೋತಿರಾಪಃ ಕ್ಷಿತಿರಿತಿ ತತ್ತ್ವಾನ್ಯುಕ್ತಾನಿ ಮೇ ನವ ॥

(ಶ್ಲೋಕ - 15)

ಮೂಲಮ್

ಶ್ರೋತ್ರಂ ತ್ವಗ್ದರ್ಶನಂ ಘ್ರಾಣೋ ಜಿಹ್ವೇತಿ ಜ್ಞಾನಶಕ್ತಯಃ ।
ವಾಕ್ಪಾಣ್ಯುಪಸ್ಥಪಾಯ್ವಂಘ್ರಿಕರ್ಮಾಣ್ಯಂಗೋಭಯಂ ಮನಃ ॥

(ಶ್ಲೋಕ - 16)

ಮೂಲಮ್

ಶಬ್ದಃ ಸ್ಪರ್ಶೋ ರಸೋ ಗಂಧೋ ರೂಪಂ ಚೇತ್ಯರ್ಥಜಾತಯಃ ।
ಗತ್ಯುಕ್ತ್ಯುತ್ಸರ್ಗಶಿಲ್ಪಾನಿ ಕರ್ಮಾಯತನಸಿದ್ಧಯಃ ॥

ಅನುವಾದ

ಉದ್ಧವನೇ! ಪುರುಷ, ಪ್ರಕೃತಿ, ಮಹತ್ತತ್ತ್ವ, ಅಹಂಕಾರ, ಆಕಾಶ, ವಾಯು, ತೇಜ, ಜಲ, ಪೃಥ್ವಿ ಈ ಒಂಭತ್ತು ತತ್ತ್ವಗಳನ್ನು ನಾನು ಮೊದಲೇ ಎಣಿಸಿದ್ದೆ. ಶ್ರೋತ್ರ, ತ್ವಚಾ, ಚಕ್ಷು, ನಾಸಿಕಾ, ರಸನಾ ಈ ಐದು ಜ್ಞಾನೇಂದ್ರಿಯಗಳು, ವಾಕ್, ಪಾಣಿ, ಪಾದ, ಪಾಯು, ಉಪಸ್ಥ ಈ ಐದು ಕರ್ಮೇಂದ್ರಿಯಗಳು. ಮನಸ್ಸು ಇದು ಜ್ಞಾನೇಂದ್ರಿಯ, ಕರ್ಮೇಂದ್ರಿಯ ಎರಡೂ ಆಗಿದೆ. ಈ ಒಟ್ಟಿಗೆ ಹನ್ನೊಂದು ಇಂದ್ರಿಯಗಳು ಹಾಗೂ ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವು ಜ್ಞಾನೇಂದ್ರಿಯಗಳ ವಿಷಯಗಳು, ಈ ಪ್ರಕಾರ ಮೂರು, ಒಂಭತ್ತು, ಹನ್ನೊಂದು, ಐದು ಎಲ್ಲ ಸೇರಿ ಇಪ್ಪತ್ತೆಂಟು ತತ್ತ್ವಗಳಾಗುತ್ತವೆ. ಕರ್ಮೇಂದ್ರಿಯಗಳ ಮೂಲಕ ನಡೆಯುವ ಕರ್ಮ ನಡೆಯುವುದು, ಮಾತನಾಡುವುದು, ಮಲ-ಮೂತ್ರ ತ್ಯಜಿಸುವುದು, ಕೆಲಸಮಾಡುವುದು ಇವುಗಳಿಂದ ತತ್ತ್ವದ ಸಂಖ್ಯೆ ಬೆಳೆಯುವುದಿಲ್ಲ. ಇವನ್ನು ಕರ್ಮೇಂದ್ರಿಯ ಸ್ವರೂಪವೆಂದೇ ತಿಳಿಯಬೇಕು. ॥14-16॥

(ಶ್ಲೋಕ - 17)

ಮೂಲಮ್

ಸರ್ಗಾದೌ ಪ್ರಕೃತಿರ್ಹ್ಯಸ್ಯ ಕಾರ್ಯಕಾರಣರೂಪಿಣೀ ।
ಸತ್ತ್ವಾದಿಭಿರ್ಗುಣೈರ್ಧತ್ತೇ ಪುರುಷೋವ್ಯಕ್ತ ಈಕ್ಷತೇ ॥

ಅನುವಾದ

ಸೃಷ್ಟಿಯ ಪ್ರಾರಂಭದಲ್ಲಿ ಕಾರ್ಯ (ಹನ್ನೊಂದು ಇಂದ್ರಿಯ ಮತ್ತು ಪಂಚಭೂತಗಳು) ಮತ್ತು ಕಾರಣ (ಮಹತ್ತತ್ತ್ವಾದಿ)ದ ರೂಪದಲ್ಲಿ ಪ್ರಕೃತಿಯೇ ಇರುತ್ತದೆ. ಅದೇ ಪ್ರಕೃತಿಯು ಸತ್ತ್ವಗುಣ, ರಜೋಗುಣ, ತಮೋ ಗುಣಗಳ ಸಹಾಯದಿಂದ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರ ಸಂಬಂಧೀ ಅವಸ್ಥೆಗಳನ್ನು ಧರಿಸುತ್ತದೆ. ಅವ್ಯಕ್ತ ಪುರುಷ ನಾದರೋ ಪ್ರಕೃತಿ ಹಾಗೂ ಅದರ ಅವಸ್ಥೆಗಳ ಕೇವಲ ಸಾಕ್ಷಿಮಾತ್ರ ಆಗಿರುತ್ತಾನೆ. ॥17॥

(ಶ್ಲೋಕ - 18)

ಮೂಲಮ್

ವ್ಯಕ್ತಾದಯೋ ವಿಕುರ್ವಾಣಾ ಧಾತವಃ ಪುರುಷೇಕ್ಷಯಾ ।
ಲಬ್ಧವೀರ್ಯಾಃ ಸೃಜಂತ್ಯಂಡಂ ಸಂಹತಾಃ ಪ್ರಕೃತೇರ್ಬಲಾತ್ ॥

ಅನುವಾದ

ಮಹತ್ತತ್ತ್ವಾದಿ ಪ್ರಕೃತಿಯ ಎಷ್ಟು ವಿಕಾರಗಳು ಉಂಟಾಗುತ್ತವೋ ಅವು ಪುರುಷನ ವೀಕ್ಷಣದಿಂದ ಶಕ್ತಿಯನ್ನು ಪಡೆದುಕೊಂಡು ಪರಸ್ಪರ ಬೆರೆತುಹೋಗುತ್ತವೆ. ಬಳಿಕ ಪ್ರಕೃತಿಯ ಆಶ್ರಯ ಪಡೆದು ಅದರ ಬಲದಿಂದಲೇ ಬ್ರಹ್ಮಾಂಡದ ಸೃಷ್ಟಿಯಾಗುತ್ತದೆ. ಅರ್ಥಾತ್ ಈಶ್ವರನ ವೀಕ್ಷಣದಿಂದಲೇ ಪ್ರಕೃತಿಯು ಎಲ್ಲ ಕಾರ್ಯಗಳನ್ನು ಮಾಡುತ್ತದೆ. ॥18॥

(ಶ್ಲೋಕ - 19)

ಮೂಲಮ್

ಸಪ್ತೈವ ಧಾತವ ಇತಿ ತತ್ರಾರ್ಥಾಃ ಪಂಚ ಖಾದಯಃ ।
ಜ್ಞಾನಮಾತ್ಮೋಭಯಾಧಾರಸ್ತತೋ ದೇಹೇಂದ್ರಿಯಾಸವಃ ॥

ಅನುವಾದ

ಎಲೈ ಉದ್ಧವನೇ! ತತ್ತ್ವಗಳ ಸಂಖ್ಯೆ ಏಳು ಎಂದು ಸ್ವೀಕರಿಸುವವರ ವಿಚಾರದಲ್ಲಿ ಆಕಾಶ, ವಾಯು, ತೇಜ, ಜಲ, ಪೃಥ್ವಿ ಈ ಐದು ಭೂತಗಳು, ಆರನೇಯದು ಜೀವ, ಏಳನೆಯದು ಪರಮಾತ್ಮಾ ಅದು ಸಾಕ್ಷೀ ಜೀವ ಮತ್ತು ಸಾಕ್ಷ್ಯ ಜಗತ್ತು ಎರಡರ ಅಧಿಷ್ಠಾನವಾಗಿದೆ. ಇವೇ ತತ್ತ್ವಗಳಾಗಿವೆ. ದೇಹ, ಇಂದ್ರಿಯ ಹಾಗೂ ಪ್ರಾಣಾದಿಗಳ ಉತ್ಪತ್ತಿಯಾದರೋ ಪಂಚ-ಭೂತಗಳಿಂದಲೇ ಆಗಿದೆ. (ಅದಕ್ಕಾಗಿ ಅವರು ಇವನ್ನು ಬೇರೆಯಾಗಿ ಎಣಿಸುವುದಿಲ್ಲ.) ॥19॥

(ಶ್ಲೋಕ - 20)

ಮೂಲಮ್

ಷಡಿತ್ಯತ್ರಾಪಿ ಭೂತಾನಿ ಪಂಚ ಷಷ್ಠಃ ಪರಃ ಪುಮಾನ್ ।
ತೈರ್ಯುಕ್ತ ಆತ್ಮಸಂಭೂತೈಃ ಸೃಷ್ಟ್ವೇದಂ ಸಮುಪಾವಿಶತ್ ॥

ಅನುವಾದ

ಕೇವಲ ಆರು ತತ್ತ್ವಗಳನ್ನು ಸ್ವೀಕರಿಸುವವರು ಹೇಳುತ್ತಾರೆ ಐದು ಭೂತಗಳು ಮತ್ತು ಆರನೆಯ ಪರಮ ಪುರುಷ ಪರಮಾತ್ಮನು. ಆ ಪರಮಾತ್ಮನು ತಾನು ರಚಿಸಿದ ಪಂಚಭೂತಗಳಿಂದ ಕೂಡಿಕೊಂಡು ದೇಹಾದಿಗಳನ್ನು ಸೃಷ್ಟಿಸುತ್ತಾನೆ ಹಾಗೂ ಅದರಲ್ಲಿ ಜೀವರೂಪದಿಂದ ಪ್ರವೇಶಿಸುತ್ತಾನೆ. (ಈ ಮತದನುಸಾರ ಜೀವಿಯು ಪರಮಾತ್ಮನಲ್ಲಿ, ಶರೀರಾದಿಗಳು ಪಂಚಭೂತಗಳಲ್ಲಿ ಸಮಾವೇಶವಾಗುತ್ತದೆ.) ॥20॥

(ಶ್ಲೋಕ - 21)

ಮೂಲಮ್

ಚತ್ವಾರ್ಯೇವೇತಿ ತತ್ರಾಪಿ ತೇಜ ಆಪೋನ್ನಮಾತ್ಮನಃ ।
ಜಾತಾನಿ ತೈರಿದಂ ಜಾತಂ ಜನ್ಮಾವಯವಿನಃ ಖಲು ॥

ಅನುವಾದ

ಕಾರಣದ ರೂಪದಲ್ಲಿ ನಾಲ್ಕೇ ತತ್ತ್ವಗಳನ್ನೂ ಸ್ವೀಕರಿಸುವ ಜನರು ಹೇಳುತ್ತಾರೆ ಆತ್ಮನಿಂದ ತೇಜ, ಜಲ ಮತ್ತು ಪೃಥ್ವಿಯ ಉತ್ಪತ್ತಿಯಾಯಿತು. ಜಗತ್ತಿನಲ್ಲಿರುವ ಎಲ್ಲ ಪದಾರ್ಥಗಳು ಇವುಗಳಿಂದಲೇ ಉತ್ಪನ್ನವಾಗುತ್ತವೆ. ಅವರು ಎಲ್ಲ ಕಾರ್ಯಗಳನ್ನು ಇವುಗಳಲ್ಲೇ ಸಮಾವೇಶ ಮಾಡಿಕೊಳ್ಳುವರು. ॥21॥

ಮೂಲಮ್

(ಶ್ಲೋಕ - 22)
ಸಂಖ್ಯಾನೇ ಸಪ್ತದಶಕೇ ಭೂತಮಾತ್ರೇಂದ್ರಿಯಾಣಿ ಚ ।
ಪಂಚ ಪಂಚೈಕಮನಸಾ ಆತ್ಮಾ ಸಪ್ತದಶಃ ಸ್ಮೃತಃ ॥

ಅನುವಾದ

ತತ್ತ್ವಗಳ ಸಂಖ್ಯೆ ಹದಿನೇಳು ಎಂದು ಹೇಳುವವರು ಈ ಪ್ರಕಾರ ಎಣಿಸುತ್ತಾರೆ ಐದು ಭೂತಗಳು, ಐದು ತನ್ಮಾತ್ರೆಗಳು, ಐದು ಜ್ಞಾನೇಂದ್ರಿಯಗಳು, ಒಂದು ಮನಸ್ಸು, ಒಂದು ಆತ್ಮಾ. ॥22॥

(ಶ್ಲೋಕ - 23)

ಮೂಲಮ್

ತದ್ವತ್ ಷೋಡಶಸಂಖ್ಯಾನೇ ಆತ್ಮೈವ ಮನ ಉಚ್ಯತೇ ।
ಭೂತೇಂದ್ರಿಯಾಣಿ ಪಂಚೈವ ಮನ ಆತ್ಮಾ ತ್ರಯೋದಶ ॥

ಅನುವಾದ

ತತ್ತ್ವಗಳ ಸಂಖ್ಯೆ ಹದಿನಾರು ಎಂದು ಹೇಳುವವರ ಗಣನೆಯೂ ಇದೇ ಪ್ರಕಾರವಾಗಿದೆ. ಆತ್ಮನಲ್ಲೇ ಮನಸ್ಸನ್ನೂ ಸಮಾವೇಶಮಾಡುತ್ತಾರೆ, ಅಂತರ ಇಷ್ಟೇ ಆಗಿದೆ. ಹೀಗೆ ಅವರ ತತ್ತ್ವ ಸಂಖ್ಯೆಯು ಹದಿನಾರೇ ಉಳಿಯುತ್ತದೆ. ಹದಿಮೂರು ತತ್ತ್ವವನ್ನು ಒಪ್ಪಿಕೊಳ್ಳುವವರು ಹೇಳುತ್ತಾರೆ ಆಕಾಶಾದಿ ಪಂಚಭೂತಗಳು, ಶ್ರೋತ್ರಾದಿ ಐದು ಜ್ಞಾನೇಂದ್ರಿಯಗಳು, ಒಂದು ಮನಸ್ಸು, ಒಂದು ಜೀವಾತ್ಮಾ ಮತ್ತು ಪರಮಾತ್ಮಾ ಹೀಗೆ ಹದಿಮೂರು ತತ್ತ್ವಗಳು. ॥23॥

(ಶ್ಲೋಕ - 24)

ಮೂಲಮ್

ಏಕಾದಶತ್ವ ಆತ್ಮಾಸೌ ಮಹಾಭೂತೇಂದ್ರಿಯಾಣಿ ಚ ।
ಅಷ್ಟೌ ಪ್ರಕೃತಯಶ್ಚೈವ ಪುರುಷಶ್ಚ ನವೇತ್ಯಥ ॥

ಅನುವಾದ

ಹನ್ನೊಂದು ತತ್ತ್ವಗಳನ್ನು ಒಪ್ಪುವವರು ಐದು ಭೂತಗಳು, ಐದು ಜ್ಞಾನೇಂದ್ರಿಯಗಳು ಹಾಗೂ ಇವಲ್ಲದೆ ಒಂದು ಆತ್ಮನ ಅಸ್ತಿತ್ವವನ್ನು ಸ್ವೀಕರಿಸಿರುವರು. ಒಂಭತ್ತು ತತ್ತ್ವಗಳನ್ನು ಒಪ್ಪುವವರು ಆಕಾಶಾದಿ ಪಂಚಭೂತಗಳು, ಮನ, ಬುದ್ಧಿ, ಅಹಂಕಾರ ಈ ಎಂಟು ಪ್ರಕೃತಿಗಳು ಮತ್ತು ಒಂಭತ್ತನೆಯ ಪುರುಷ ಇವುಗಳನ್ನು ತತ್ತ್ವಗಳೆಂದು ತಿಳಿಯುವರು. ॥24॥

(ಶ್ಲೋಕ - 25)

ಮೂಲಮ್

ಇತಿ ನಾನಾಪ್ರಸಂಖ್ಯಾನಂ ತತ್ತ್ವಾನಾಮೃಷಿಭಿಃ ಕೃತಮ್ ।
ಸರ್ವಂ ನ್ಯಾಯ್ಯಂ ಯುಕ್ತಿಮತ್ತ್ವಾದ್ವಿದುಷಾಂ ಕಿಮಶೋಭನಮ್ ॥

ಅನುವಾದ

ಉದ್ಧವನೇ! ಈ ಪ್ರಕಾರ ಋಷಿ-ಮುನಿಗಳು ಬೇರೆ-ಬೇರೆ ರೀತಿಯಿಂದ ತತ್ತ್ವಗಳನ್ನು ಎಣಿಸಿರುವರು. ಎಲ್ಲರೂ ಹೇಳುವುದೂ ಉಚಿತವೇ ಆಗಿದೆ. ಏಕೆಂದರೆ, ಎಲ್ಲರ ಸಂಖ್ಯೆಯು ಯುಕ್ತಿಯುಕ್ತವೇ ಆಗಿದೆ. ತತ್ತ್ವ ಜ್ಞಾನಿಗಳಾದ ಜನರಿಗೆ ಯಾವುದೇ ಮತದಲ್ಲಿ ಕೆಟ್ಟದು ಕಾಣುವುದಿಲ್ಲ. ಅವರಿಗಾದರೋ ಎಲ್ಲವೂ ಸರಿಯಾಗಿಯೇ ಇದೆ. ॥25॥

(ಶ್ಲೋಕ - 26)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಪ್ರಕೃತಿಃ ಪುರುಷಶ್ಚೋಭೌ ಯದ್ಯಪ್ಯಾತ್ಮವಿಲಕ್ಷಣೌ ।
ಅನ್ಯೋನ್ಯಾಪಾಶ್ರಯಾತ್ ಕೃಷ್ಣ ದೃಶ್ಯತೇ ನ ಭಿದಾ ತಯೋಃ ॥

ಅನುವಾದ

ಉದ್ಧವನು ಕೇಳಿದನು — ಶ್ಯಾಮಸುಂದರಾ! ಸ್ವರೂಪತಃ ಪ್ರಕೃತಿ ಮತ್ತು ಪುರುಷರಿಬ್ಬರೂ ಒಂದು ಮತ್ತೊಂದರಲ್ಲಿ ಸರ್ವಥಾ ಭಿನ್ನವಾಗಿದ್ದರೂ, ಅವುಗಳ ಭೇದವು ಸಾಧಾರಣವಾಗಿ ತಿಳಿಯದಷ್ಟು ಪರಸ್ಪರ ಸೇರಿಕೊಂಡಿದೆ. ಪ್ರಕೃತಿಯಲ್ಲಿ ಪುರುಷ ಮತ್ತು ಪುರುಷನಲ್ಲಿ ಪ್ರಕೃತಿ ಅಭಿನ್ನದಂತೆ ಕಂಡುಬರುತ್ತದೆ. ಇವುಗಳ ಭಿನ್ನತೆ ಹೇಗೆ ಸ್ಪಷ್ಟವಾದೀತು? ॥26॥

(ಶ್ಲೋಕ - 27)

ಮೂಲಮ್

ಪ್ರಕೃತೌ ಲಕ್ಷ್ಯತೇ ಹ್ಯಾತ್ಮಾ ಪ್ರಕೃತಿಶ್ಚ ತಥಾತ್ಮನಿ ।
ಏವಂ ಮೇ ಪುಂಡರೀಕಾಕ್ಷ ಮಹಾಂತಂ ಸಂಶಯಂ ಹೃದಿ ।
ಛೇತ್ತುಮರ್ಹಸಿ ಸರ್ವಜ್ಞ ವಚೋಭಿರ್ನಯನೈಪುಣೈಃ ॥

ಅನುವಾದ

ಕಮಲನಯನ ಶ್ರೀಕೃಷ್ಣಾ! ಹೀಗೆ ನನ್ನ ಹೃದಯದಲ್ಲಿ ಇವುಗಳ ಭಿನ್ನತೆ ಮತ್ತು ಅಭಿನ್ನತೆಯ ಕುರಿತು ಬಹಳ ದೊಡ್ಡ ಸಂದೇಹವಿದೆ. ನೀನಾದರೋ ಸರ್ವಜ್ಞನಾಗಿರುವೆ. ನಿನ್ನ ಯುಕ್ತಿಯುಕ್ತ ವಾಣಿಯಿಂದ ನನ್ನ ಸಂದೇಹವನ್ನೂ ನಿವಾರಿಸುವವನಾಗು. ॥27॥

(ಶ್ಲೋಕ - 28)

ಮೂಲಮ್

ತ್ವತ್ತೋ ಜ್ಞಾನಂ ಹಿ ಜೀವಾನಾಂ ಪ್ರಮೋಷಸ್ತೇತ್ರ ಶಕ್ತಿತಃ ।
ತ್ವಮೇವ ಹ್ಯಾತ್ಮಮಾಯಾಯಾ ಗತಿಂ ವೇತ್ಥ ನ ಚಾಪರಃ ॥

ಅನುವಾದ

ಓ ಭಗವಂತಾ! ನಿನ್ನ ಕೃಪೆಯಿಂದಲೇ ನಿನ್ನ ವಿದ್ಯಾಶಕ್ತಿಯ ಮೂಲಕ ಜೀವಿಗಳಿಗೆ ಜ್ಞಾನ ಉಂಟಾಗು ತ್ತದೆ. ನಿನ್ನದೇ ಅವಿದ್ಯಾಶಕ್ತಿಯಿಂದ ಅವರ ಜ್ಞಾನದ ಲೋಪವಾಗುತ್ತದೆ. ನಿನ್ನ ಆತ್ಮಸ್ವರೂಪಿಣೀ ಮಾಯೆಯ ವಿಚಿತ್ರಗತಿಯನ್ನು ನೀನೇ ತಿಳಿಯುತ್ತಿರುವೆ. ಬೇರೆ ಯಾರೂ ಅರಿಯರು. ಆದ್ದರಿಂದ ನೀನೇ ನನ್ನ ಸಂದೇಹವನ್ನು ಇಲ್ಲವಾಗಿಸಲು ಸಮರ್ಥನಾಗಿರುವೆ.॥28॥

(ಶ್ಲೋಕ - 29)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಪ್ರಕೃತಿಃ ಪುರುಷಶ್ಚೇತಿ ವಿಕಲ್ಪಃ ಪುರುಷರ್ಷಭ ।
ಏಷ ವೈಕಾರಿಕಃ ಸರ್ಗೋ ಗುಣವ್ಯತಿಕರಾತ್ಮಕಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಉದ್ಧವನೇ! ಪ್ರಕೃತಿ ಮತ್ತು ಪುರುಷ ಅರ್ಥಾತ್ ಶರೀರ ಹಾಗೂ ಆತ್ಮಾ ಇವೆರಡರಲ್ಲಿ ಅತ್ಯಂತ ಭೇದವಿದೆ. ಈ ಸೃಷ್ಟಿಯೂ ವಿಕಾರಗಳಿಂದ ಕೂಡಿದೆ. ಗುಣಗಳ ಕ್ಷೋಭೆಯಿಂದಲೇ ಸೃಷ್ಟಿಯು ಉತ್ಪನ್ನವಾಗುತ್ತದೆ. ॥29॥

(ಶ್ಲೋಕ - 30)

ಮೂಲಮ್

ಮಮಾಂಗ ಮಾಯಾ ಗುಣಮಯ್ಯನೇಕಧಾ
ವಿಕಲ್ಪಬುದ್ಧೀಶ್ಚ ಗುಣೈರ್ವಿಧತ್ತೇ ।
ವೈಕಾರಿಕಸಿವಿಧೋಧ್ಯಾತ್ಮಮೇಕ-
ಮಥಾಧಿದೈವಮಧಿಭೂತಮನ್ಯತ್ ॥

ಅನುವಾದ

ಪ್ರಿಯ ಮಿತ್ರನೇ! ನನ್ನ ಮಾಯೆಯು ತ್ರಿಗುಣಾತ್ಮಿಕವಾಗಿದೆ. ಅದೇ ತನ್ನ ಸತ್ತ್ವ, ರಜ ಮುಂತಾದ ಗುಣಗಳಿಂದ ಅನೇಕ ಪ್ರಕಾರದ ಭೇದ ವೃತ್ತಿಗಳನ್ನು ಉಂಟುಮಾಡುತ್ತದೆ. ಇದರ ವಿಸ್ತಾರ ಅಸೀಮವಾಗಿದ್ದರೂ ಕೂಡ ಈ ವಿಕಾರಾತ್ಮಕವಾದ ಸೃಷ್ಟಿಯನ್ನು ಮೂರು ಭಾಗವಾಗಿ ಹಂಚಬಹುದು. ಅಧ್ಯಾತ್ಮ, ಆಧಿದೈವ, ಅಧಿಭೂತ ಇವೇ ಆ ಮೂರು ಭಾಗಗಳಾಗಿವೆ. ॥30॥

(ಶ್ಲೋಕ - 31)

ಮೂಲಮ್

ದೃಗ್ರೂಪಮಾರ್ಕಂ ವಪುರತ್ರ ರಂಧ್ರೇ
ಪರಸ್ಪರಂ ಸಿಧ್ಯತಿ ಯಃ ಸ್ವತಃ ಖೇ ।
ಆತ್ಮಾ ಯದೇಷಾಮಪರೋ ಯ ಆದ್ಯಃ
ಸ್ವಯಾನುಭೂತ್ಯಾಖಿಲಸಿದ್ಧಸಿದ್ಧಿಃ ।
ಏವಂ ತ್ವಗಾದಿ ಶ್ರವಣಾದಿ ಚಕ್ಷು-
ರ್ಜಿಹ್ವಾದಿ ನಾಸಾದಿ ಚ ಚಿತ್ತಯುಕ್ತಮ್ ॥

ಅನುವಾದ

ಉದಾಹರಣೆಗಾಗಿ ನೇತ್ರೇಂದ್ರಿಯ ಅಧ್ಯಾತ್ಮವಾಗಿದೆ, ಅದರ ವಿಷಯರೂಪವು ಅಧಿಭೂತವಾಗಿದೆ. ನೇತ್ರ ಗೋಲಕದಲ್ಲಿ ಸ್ಥಿತ ಸೂರ್ಯದೇವತೆಯ ಅಂಶ ಅಧಿದೈವವಾಗಿದೆ. ಇವು ಮೂರೂ ಪರಸ್ಪರ ಒಂದು ಇನ್ನೊಂದರ ಆಶ್ರಯದಿಂದ ಸಿದ್ಧವಾಗುತ್ತವೆ. ಅದಕ್ಕಾಗಿ ಅಧ್ಯಾತ್ಮ, ಅಧಿದೈವ, ಅಧಿಭೂತ ಇವು ಮೂರೂ ಪರಸ್ಪರ ಒಂದು ಮತ್ತೊಂದರಿಂದ ಸಹಾಯ ಬಯಸುತ್ತವೆ. ಆದರೆ ಆಕಾಶದಲ್ಲಿರುವ ಸೂರ್ಯಮಂಡಲ ಇವು ಮೂರರಿಂದಲೂ ಮುಕ್ತವಾಗಿದೆ. ಏಕೆಂದರೆ ಅದು ಸ್ವತಃಸಿದ್ಧವಾಗಿದೆ. ಹೀಗೆಯೇ ಆತ್ಮನು ಮೇಲೆ ಹೇಳಿದ ಮೂರೂ ಭೇದಗಳ ಮೂಲಕಾರಣ, ಅವುಗಳ ಸಾಕ್ಷಿ ಮತ್ತು ಅವುಗಳಿಂದ ಅತೀತನಾಗಿದ್ದಾನೆ. ಅವನೇ ತನ್ನ ಸ್ವಯಂಸಿದ್ಧ ಪ್ರಕಾಶದಿಂದ ಸಮಸ್ತ ಪದಾರ್ಥಗಳನ್ನು ಸಿದ್ಧಪಡಿಸುತ್ತಾನೆ. ಅವನಿಂದಲೇ ಎಲ್ಲರ ಪ್ರಕಾಶವಾಗುತ್ತದೆ. ಅವನ ಅಸ್ತಿತ್ವ ದಿಂದಲೇ ಬೇರೆಯದಕ್ಕೆ ಅಸ್ತಿತ್ವವಿದೆ. ಹೇಗೆ ಚಕ್ಷುವಿನ ಮೂರು ಭೇದಗಳು ತಿಳಿಸಲಾಗಿದೆಯೋ, ಹಾಗೆಯೇ ತ್ವಚಾ, ಶ್ರೋತೃ, ಜಿಹ್ವೆ, ನಾಸಿಕಾ ಮತ್ತು ಚಿತ್ತ ಇವುಗಳದ್ದೂ ಮೂರು-ಮೂರು ಭೇದಗಳಿವೆ.* ॥31॥

ಟಿಪ್ಪನೀ
  • ಹೇಗೆಂದರೆ - ತ್ವಚಾ, ಸ್ಪರ್ಶ, ವಾಯು; ಶ್ರವಣ, ಶಬ್ದ, ದಿಕ್ಕುಗಳು; ಜಿಹ್ವೆ, ರಸ, ವರುಣ; ನಾಸಿಕಾ, ಗಂಧ, ಅಶ್ವಿನೀಕುಮಾರರು; ಚಿತ್ತ, ಚಿತ್ತದ ವಿಷಯ, ವಾಸುದೇವ; ಮನಸ್ಸು, ಮನಸ್ಸಿನ ವಿಷಯ, ಚಂದ್ರ; ಅಹಂಕಾರ, ಅಹಂಕಾರದ ವಿಷಯ, ರುದ್ರ; ಬುದ್ಧಿ, ತಿಳಿಯುವ ವಿಷಯ, ಬ್ರಹ್ಮಾ; ಇವೆಲ್ಲ ತ್ರಿವಿಧ ತತ್ತ್ವಗಳಿಂದ ಆತ್ಮನಿಗೆ ಯಾವ ಸಂಬಂಧವೂ ಇಲ್ಲ.

(ಶ್ಲೋಕ - 32)

ಮೂಲಮ್

ಯೋಸೌ ಗುಣಕ್ಷೋಭಕೃತೋ ವಿಕಾರಃ
ಪ್ರಧಾನಮೂಲಾನ್ಮಹತಃ ಪ್ರಸೂತಃ ।
ಅಹಂ ತ್ರಿವೃನ್ಮೋಹವಿಕಲ್ಪಹೇತು-
ರ್ವೈಕಾರಿಕಸ್ತಾಮಸ ಐಂದ್ರಿಯಶ್ಚ ॥

ಅನುವಾದ

ಪ್ರಕೃತಿಯಿಂದ ಮಹತ್ತತ್ತ್ವ ಉಂಟಾಗುತ್ತದೆ ಮತ್ತು ಮಹತ್ತತ್ತ್ವದಿಂದ ಅಹಂಕಾರ ಉಂಟಾಗುತ್ತದೆ. ಈ ಪ್ರಕಾರ ಈ ಅಹಂಕಾರವು ಗುಣಗಳ ಕ್ಷೋಭದಿಂದ ಉಂಟಾಗಿದ್ದ ಪ್ರಕೃತಿಯ ಒಂದು ವಿಕಾರವಾಗಿದೆ. ಅಹಂಕಾರದ ಮೂರು ಭೇದಗಳಿವೆ (1) ವೈಕಾರಿಕ-ಸತ್ತ್ವಗುಣ ವಿಶಿಷ್ಟ ಮನ ಹಾಗೂ ಇಂದ್ರಿಯಗಳ ದೇವತೆಗಳು, (2) ತೈಜಸ ಹತ್ತು ಇಂದ್ರಿಯಗಳು, (3) ತಾಮಸ-ಪಂಚಮಹಾಭೂತ ಹಾಗೂ ಐದು ಅವುಗಳ ವಿಷಯಗಳು. ಹೀಗೆ ಈ ಅಹಂಕಾರವೇ ಅಜ್ಞಾನ ಮತ್ತು ಸೃಷ್ಟಿಯ ವಿವಿಧತೆಯ ಮೂಲಕಾರಣವಾಗಿದೆ. ॥32॥

(ಶ್ಲೋಕ - 33)

ಮೂಲಮ್

ಆತ್ಮಾಪರಿಜ್ಞಾನಮಯೋ ವಿವಾದೋ
ಹ್ಯಸ್ತೀತಿ ನಾಸ್ತೀತಿ ಭಿದಾರ್ಥನಿಷ್ಠಃ ।
ವ್ಯರ್ಥೋಪಿ ನೈವೋಪರಮೇತ ಪುಂಸಾಂ
ಮತ್ತಃ ಪರಾವೃತ್ತಧಿಯಾಂ ಸ್ವಲೋಕಾತ್ ॥

ಅನುವಾದ

ಆತ್ಮನು ಜ್ಞಾನ ಸ್ವರೂಪನಾಗಿದ್ದಾನೆ; ಅವನಿಗೆ ಈ ಪದಾರ್ಥಗಳೊಂದಿಗೆ ಯಾವ ಸಂಬಂಧವೂ ಇಲ್ಲ. ಅಸ್ತಿ (ಇದೆ) ನಾಸ್ತಿ (ಇಲ್ಲ) ಸುಗುಣ, ನಿರ್ಗುಣ, ಭಾವ-ಅಭಾವ, ಸತ್ಯ-ಮಿಥ್ಯಾ ಇವೆಲ್ಲವೂ ಭೇದ ದೃಷ್ಟಿಯೇ ಆಗಿದೆ. ಇದು ಸರ್ವಥಾ ವ್ಯರ್ಥವಾಗಿದೆ. ಜ್ಞಾನ ಸ್ವರೂಪೀ ಪರಮಾತ್ಮನಾದ ನನ್ನಿಂದ ವಿಮುಖರಾದ ಜನರು ಈ ವಿವಾದದಿಂದ ಮುಕ್ತರಾಗಲಾರರು. ॥33॥

(ಶ್ಲೋಕ - 34)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ತ್ವತ್ತಃ ಪರಾವೃತ್ತಧಿಯಃ ಸ್ವಕೃತೈಃ ಕರ್ಮಭಿಃ ಪ್ರಭೋ ।
ಉಚ್ಚಾವಚಾನ್ಯಥಾ ದೇಹಾನ್ ಗೃಹ್ಣಂತಿ ವಿಸೃಜಂತಿ ಚ ॥

ಅನುವಾದ

ಉದ್ಧವನು ಕೇಳಿದನು — ಭಗವಂತಾ! ನಿನ್ನಿಂದ ವಿಮುಖರಾದ ಜೀವಿಗಳು ತಾವು ಮಾಡಿದ ಪಾಪ-ಪುಣ್ಯಗಳ ಫಲವಾಗಿ ಉಚ್ಚ-ನೀಚ ಯೋನಿಗಳಲ್ಲಿ ಹುಟ್ಟುತ್ತಾ-ಸಾಯುತ್ತಾ ಇರುತ್ತಾರೆ. ಈಗ ಪ್ರಶ್ನೆಯೆಂದರೆ ವ್ಯಾಪಕ ಆತ್ಮನು ಒಂದು ಶರೀರದಿಂದ ಇನ್ನೊಂದು ಶರೀರಕ್ಕೆ ಹೋಗುವುದು, ಅಕರ್ತನು ಕರ್ಮ ಮಾಡುವುದು, ನಿತ್ಯವಸ್ತುವಿಗೆ ಜನ್ಮ-ಮರಣವಾಗುವುದು, ಇದು ಹೇಗೆ ಸಂಭವಿಸುತ್ತದೆ? ॥34॥

(ಶ್ಲೋಕ - 35)

ಮೂಲಮ್

ತನ್ಮಮಾಖ್ಯಾಹಿ ಗೋವಿಂದ ದುರ್ವಿಭಾವ್ಯಮನಾತ್ಮಭಿಃ ।
ನ ಹ್ಯೇತತ್ ಪ್ರಾಯಶೋ ಲೋಕೇ ವಿದ್ವಾಂಸಃ ಸಂತಿ ವಂಚಿತಾಃ ॥

ಅನುವಾದ

ಗೋವಿಂದಾ! ಆತ್ಮಜ್ಞಾನ ರಹಿತರಾದವರು ಈ ವಿಷಯವನ್ನು ಸರಿಯಾಗಿ ಯೋಚಿಸಲಾರರು ಮತ್ತು ಈ ವಿಷಯ ತಿಳಿದ ವಿದ್ವಾಂಸರು ಪ್ರಪಂಚದಲ್ಲಿ ಪ್ರಾಯಶಃ ಸಿಗುವುದಿಲ್ಲ. ಏಕೆಂದರೆ, ಎಲ್ಲ ಜನರು ನಿನ್ನ ಮಾಯೆಯಿಂದ ಭ್ರಾಂತಿಯಲ್ಲಿ ಬಿದ್ದಿರುವರು. ಅದಕ್ಕಾಗಿ ನೀನೇ ದಯಮಾಡಿ ಈ ರಹಸ್ಯವನ್ನು ನನಗೆ ತಿಳಿಸು. ॥35॥

(ಶ್ಲೋಕ - 36)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಮನಃ ಕರ್ಮಮಯಂ ನೃಣಾಮ್ ಇಂದ್ರಿಯೈಃ ಪಂಚಭಿರ್ಯುತಮ್ ।
ಲೋಕಾಲ್ಲೋಕಂ ಪ್ರಯಾತ್ಯನ್ಯ ಆತ್ಮಾ ತದನುವರ್ತತೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ಮನುಷ್ಯರ ಮನಸ್ಸು ಕರ್ಮ-ಸಂಸ್ಕಾರಗಳ ಪುಂಜವಾಗಿದೆ. ಆ ಸಂಸ್ಕಾರಗಳನುಸಾರ ಭೋಗಗಳನ್ನು ಪಡೆಯಲು ಅದರ ಜೊತೆ ಐದು ಇಂದ್ರಿಯಗಳೂ ತೊಡಗಿವೆ. ಇದರ ಹೆಸರೇ ಲಿಂಗ ಶರೀರ. ಅದೇ ಕರ್ಮಗಳನುಸಾರ ಒಂದು ಶರೀರದಿಂದ ಮತ್ತೊಂದು ಶರೀರದಲ್ಲಿ, ಒಂದು ಲೋಕದಿಂದ ಇನ್ನೊಂದು ಲೋಕಕ್ಕೆ ಹೋಗುತ್ತಾ-ಬರುತ್ತಾ ಇರುತ್ತದೆ. ಆತ್ಮನು ಈ ಲಿಂಗಶರೀರದಿಂದ ಸರ್ವಥಾ ಬೇರೆಯಾಗಿದ್ದಾನೆ. ಆತ್ಮನು ಸರ್ವವ್ಯಾಪಿಯಾಗಿದ್ದಾನೆ. ಆದ್ದರಿಂದ ಅವನ ಗಮನಾಗಮನ ಆಗುವುದಿಲ್ಲ. ಆದರೆ ಅವನು ತನ್ನನ್ನು ಲಿಂಗಶರೀರವೆಂದೇ ತಿಳಿದಾಗ, ಅದರಲ್ಲೇ ಅಹಂಕಾರಪಟ್ಟಾಗ, ಅವನೂ ಕೂಡ ಬಂದು-ಹೋದಂತೆ ಕಂಡುಬರತೊಡಗುತ್ತಾನೆ. ॥36॥

(ಶ್ಲೋಕ - 37)

ಮೂಲಮ್

ಧ್ಯಾಯನ್ಮನೋನು ವಿಷಯಾನ್ದೃಷ್ಟಾನ್ ವಾನುಶ್ರುತಾನಥ ।
ಉದ್ಯತ್ಸೀದತ್ಕರ್ಮತಂತ್ರಂ ಸ್ಮೃತಿಸ್ತದನು ಶಾಮ್ಯತಿ ॥

ಅನುವಾದ

ಮನಸ್ಸು ಕರ್ಮಗಳ ಅಧೀನವಾಗಿದೆ. ಅದು ಈ ಲೋಕ ಅಥವಾ ಪರಲೋಕ ಸಂಬಂಧೀ ವಿಷಯಗಳನ್ನು ಸತತ ಚಿಂತಿಸುತ್ತಾ ಇರುತ್ತದೆ. ಹೊಸ ವಿಷಯ ಬಂದಾಗ ಮೊದಲಿನದನ್ನು ಮರೆಯುತ್ತಾ ಹೋಗುತ್ತದೆ ಹಾಗೂ ಹೊಸದರಲ್ಲಿ ತೊಡಗುತ್ತದೆ. ಹೀಗೆ ಹಿಂದಿನ ವಿಷಯಗಳ ಸ್ಮೃತಿಯೂ ಕೂಡ ಶಾಂತವಾಗುತ್ತಾ ಇರುತ್ತದೆ. ॥37॥

(ಶ್ಲೋಕ - 38)

ಮೂಲಮ್

ವಿಷಯಾಭಿನಿವೇಶೇನ ನಾತ್ಮಾನಂ ಯತ್ಸ್ಮರೇತ್ ಪುನಃ ।
ಜಂತೋರ್ವೈ ಕಸ್ಯಚಿದ್ಧೇತೋರ್ಮೃತ್ಯುರತ್ಯಂತವಿಸ್ಮೃತಿಃ ॥

ಅನುವಾದ

ಹೀಗೆಯೇ ಹೊಸ-ಹೊಸ ವಿಷಯಗಳಲ್ಲಿ ಆಸಕ್ತಿಯನ್ನಿಡುತ್ತಾ, ಅದರಿಂದ ಹಿಂದಿನದನ್ನು ಮರೆಯುತ್ತಾ, ಹೊಸ-ಹೊಸದರ ಚಿಂತನೆ ನಡೆಯುತ್ತದೆ. ಹೀಗೆಯೇ ಯಾವುದೇ ಕಾರಣದಿಂದ ಮನುಷ್ಯನಿಗೆ ತನ್ನ ಹಿಂದಿನ ಶರೀರದ ಸ್ಮರಣೆ ಏನೂ ಉಳಿಯುವುದಿಲ್ಲ. ತನ್ನ ಹಿಂದಿನ ಶರೀರದ ಕುರಿತು ಪೂರ್ಣವಾಗಿ ವಿಸ್ಮೃತಿ ಉಂಟಾಗುತ್ತದೆ. ಇದೇ ಅವನ ಮೃತ್ಯುವಾಗಿದೆ. ॥38॥

(ಶ್ಲೋಕ - 39)

ಮೂಲಮ್

ಜನ್ಮ ತ್ವಾತ್ಮತಯಾ ಪುಂಸಃ ಸರ್ವಭಾವೇನ ಭೂರಿದ ।
ವಿಷಯಸ್ವೀಕೃತಿಂ ಪ್ರಾಹುರ್ಯಥಾ ಸ್ವಪ್ನಮನೋರಥಃ ॥

ಅನುವಾದ

ಉದಾರನಾದ ಉದ್ಧವನೇ! ಮನುಷ್ಯನು ಈ ದೇಹವೇ ನಾನಾಗಿದ್ದೇನೆ, ಇದು ನನ್ನದಾಗಿದೆ, ಹೀಗೆ ತಿಳಿದುಕೊಂಡು ಹೊಸ ಶರೀರವನ್ನು ಸ್ವೀಕರಿಸುವುದೇ ಅವನ ಜನ್ಮವಾಗಿದೆ. ಈ ಹೊಸ ಶರೀರವನ್ನು ಸ್ವೀಕರಿಸಿ, ಸ್ವಪ್ನದಲ್ಲಿ ಮನೋರಥಗಳನ್ನು ಮಾಡುತ್ತಾ-ಮಾಡುತ್ತಾ ಕೆಲವೊಮ್ಮೆ ಸುಖವಾಗುತ್ತದೆ, ಕೆಲವೊಮ್ಮೆ ದುಃಖವಾಗುತ್ತದೆ. ಹೀಗೆಯೇ ಈ ಶರೀರದಲ್ಲಿ ಅವನು ಸುಖೀ-ದುಃಖೀ ಆಗುತ್ತಾ ಇರುತ್ತಾನೆ.॥39॥

(ಶ್ಲೋಕ - 40)

ಮೂಲಮ್

ಸ್ವಪ್ನಂ ಮನೋರಥಂ ಚೇತ್ಥಂ ಪ್ರಾಕ್ತನಂ ನ ಸ್ಮರತ್ಯಸೌ ।
ತತ್ರ ಪೂರ್ವಮಿವಾತ್ಮಾನಮಪೂರ್ವಂ ಚಾನುಪಶ್ಯತಿ ॥

ಅನುವಾದ

ಸ್ವಪ್ನದಲ್ಲಿ ಹೊಸ-ಹೊಸ ಮನೋರಥಗಳು ಬರುವಂತೆ ಜೀವಿಯೂ ಕೂಡ ಪದೇ-ಪದೇ ಹುಟ್ಟುತ್ತಾ ಸಾಯುತ್ತಾ ಇರುತ್ತಾನೆ. ಇದೂ ಕೂಡ ಸ್ವಪ್ನದಂತೆ ಮಿಥ್ಯೆಯೇ ಆಗಿದೆ. ಆದರೂ ಹೊಸ ಶರೀರವನ್ನು ಸ್ವೀಕರಿಸುವುದರಿಂದ ನಾನು ಮೊದಲು ಇರಲಿಲ್ಲ, ಈಗ ಹೊಸದಾಗಿಯೇ ಹುಟ್ಟಿರುವೆನು ಎಂದು ಅವನು ತಿಳಿಯುತ್ತಾನೆ. ಅವನು ತನ್ನ ಹಿಂದಿನ ಶರೀರವನ್ನು ಪೂರ್ಣವಾಗಿ ಮರೆತು ಹೋಗುತ್ತಾನೆ. ॥40॥

(ಶ್ಲೋಕ - 41)

ಮೂಲಮ್

ಇಂದ್ರಿಯಾಯನಸೃಷ್ಟ್ಯೇದಂ ತ್ರೈವಿಧ್ಯಂ ಭಾತಿ ವಸ್ತುನಿ ।
ಬಹಿರಂತರ್ಭಿದಾಹೇತುರ್ಜನೋಸಜ್ಜನಕೃದ್ಯಥಾ ॥

ಅನುವಾದ

ಆತ್ಮನು ಒಂದೇ ಆಗಿದ್ದು, ಅದ್ವಿತೀಯ, ಅಖಂಡನಾಗಿದ್ದಾನೆ. ಇದರಲ್ಲಿ ಯಾವುದೇ ಒಳಗಿನ-ಹೊರಗಿನ ಭೇದವಿಲ್ಲ. ಆತ್ಮನಿಗೆ ಜನ್ಮ-ಮೃತ್ಯುಗಳಿಲ್ಲ. ಆದರೆ ಮನಸ್ಸೇ ಈ ಭೇದಬುದ್ಧಿಯ ಮೂಲ ಕಾರಣವಾಗಿದೆ. ಮನಸ್ಸಿನ ಆಶ್ರಯದಲ್ಲೇ ಇಂದ್ರಿಯಗಳು ಇರುತ್ತವೆ. ಮನಸ್ಸೇ ನಾನಾ ಪ್ರಕಾರದ ಕಲ್ಪನೆ ಮಾಡುತ್ತದೆ. ಅದರಿಂದಲೇ ಜನ್ಮ, ಸ್ಥಿತಿ ಮತ್ತು ಮೃತ್ಯುವಿನ ಭಾಸ ಆತ್ಮನಲ್ಲಾಗುತ್ತದೆ. ಯಾವುದಾದರೂ ಕುಟುಂಬದಲ್ಲಿ ಕೆಟ್ಟಮಗ ಹುಟ್ಟಿದರೆ ಪರಿವಾರದಲ್ಲಿ ಭೇದಬುದ್ಧಿ ಉಂಟುಮಾಡಿ ಇಡೀ ಮನೆಯನ್ನು ಉಧ್ವಸ್ತ ಮಾಡಿಬಿಡುವಂತೆ ಮನಸ್ಸಿನ ಸ್ಥಿತಿಯಾಗಿದೆ. ಇದು ಸತ್ತ್ವಗುಣ ವಿಶಿಷ್ಟವಾಗಿದ್ದರೂ ನಾನಾ ಪ್ರಕಾರದ ಸಂಕಲ್ಪ-ವಿಕಲ್ಪಗಳನ್ನು ಮಾಡುತ್ತಾ ಇಂದ್ರಿಯಗಳನ್ನು ಕ್ಷುಬ್ಧಗೊಳಿಸಿ, ಜೀವಿಯನ್ನು ಅಲೆಸುತ್ತಾ ಇರುತ್ತದೆ. ॥41॥

(ಶ್ಲೋಕ - 42)

ಮೂಲಮ್

ನಿತ್ಯದಾ ಹ್ಯಂಗ ಭೂತಾನಿ ಭವಂತಿ ನ ಭವಂತಿ ಚ ।
ಕಾಲೇನಾಲಕ್ಷ್ಯವೇಗೇನ ಸೂಕ್ಷ್ಮತ್ವಾತ್ತನ್ನ ದೃಶ್ಯತೇ ॥

ಅನುವಾದ

ಪ್ರಿಯ ಉದ್ಧವನೇ! ಕಾಲದ ಗತಿಯು ಕಾಣಲಾರದಷ್ಟು ಸೂಕ್ಷ್ಮವಾಗಿದೆ. ಅದರ ಮೂಲಕ ಪ್ರತಿಕ್ಷಣವೂ ಶರೀರಗಳ ಉತ್ಪತ್ತಿ ಮತ್ತು ನಾಶ ಆಗುತ್ತಾ ಇರುತ್ತದೆ. ಸೂಕ್ಷ್ಮತೆಯ ಕಾರಣದಿಂದಾಗಿ ಪ್ರತಿಕ್ಷಣ ಆಗುವ ಜನ್ಮ-ಮರಣಗಳು ಕಂಡು ಬರುವುದಿಲ್ಲ. ॥42॥

(ಶ್ಲೋಕ - 43)

ಮೂಲಮ್

ಯಥಾರ್ಚಿಷಾಂ ಸ್ರೋತಸಾಂ ಚ ಲಾನಾಂ ವಾ ವನಸ್ಪತೇಃ ।
ತಥೈವ ಸರ್ವಭೂತಾನಾಂ ವಯೋವಸ್ಥಾದಯಃ ಕೃತಾಃ ॥

ಅನುವಾದ

ಕಾಲನ ಪ್ರಭಾವದಿಂದ ದೀಪದ ಜ್ಯೋತಿ, ನದಿಗಳ ಪ್ರವಾಹ, ವೃಕ್ಷದ ಫಲಗಳ ವಿಶೇಷ-ವಿಶೇಷ ಅವಸ್ಥೆ ಇವುಗಳು ಬದಲಾಗುತ್ತಿರುವಂತೆ, ಸಮಸ್ತ ಪ್ರಾಣಿಗಳ ಶರೀರಗಳ ಆಯುಸ್ಸು, ಅವಸ್ಥೆ ಮುಂತಾದವುಗಳೂ ಕೂಡ ಬದಲಾಗುತ್ತಾ ಇರುತ್ತವೆ. ॥43॥

(ಶ್ಲೋಕ - 44)

ಮೂಲಮ್

ಸೋಯಂ ದೀಪೋರ್ಚಿಷಾಂ
ಯದ್ವತ್ಸ್ರೋತಸಾಂ ತದಿದಂ ಜಲಮ್ ।
ಸೋಯಂ ಪುಮಾನಿತಿ ನೃಣಾಂ
ಮೃಷಾಗೀರ್ಧೀರ್ಮೃಷಾಯುಷಾಮ್ ॥

ಅನುವಾದ

ಇದು ಅದೇ ಜ್ಯೋತಿಗಳ ದೀಪವಾಗಿದೆ, ಈ ಪ್ರವಾಹದ ನೀರು ಅದೇ ಆಗಿದೆ ಎಂದು ತಿಳಿಯುವುದು ಮತ್ತು ಹೇಳು ವುದು ಮಿಥ್ಯೆಯಾಗಿರುವಂತೆ, ವಿಷಯ ಚಿಂತನೆಯಲ್ಲಿ ವ್ಯರ್ಥವಾಗಿ ಆಯುಸ್ಸನ್ನು ಕಳೆಯುವ ಅವಿವೇಕಿ ಪುರುಷನು ಅವನೇ ಆಗಿದ್ದಾನೆ ಎಂದು ಹೇಳುವುದು, ತಿಳಿಯುವುದು ಸರ್ವಥಾ ಮಿಥ್ಯೆಯಾಗಿದೆ. ॥44॥

(ಶ್ಲೋಕ - 45)

ಮೂಲಮ್

ಮಾ ಸ್ವಸ್ಯ ಕರ್ಮಬೀಜೇನ
ಜಾಯತೇ ಸೋಪ್ಯಯಂ ಪುಮಾನ್ ।
ಮ್ರಿಯತೇ ವಾಮರೋ ಭ್ರಾಂತ್ಯಾ
ಯಥಾಗ್ನಿರ್ದಾರುಸಂಯುತಃ ॥

ಅನುವಾದ

ಅದೇ ಈ ಆತ್ಮನು ವಾಸ್ತವವಾಗಿಯಾದರೋ ತನ್ನ ಕರ್ಮಬೀಜದಿಂದ ಹುಟ್ಟುವುದಿಲ್ಲ, ಸಾಯುವುದಿಲ್ಲ. ಆದರೆ ಹುಟ್ಟುವುದು ಮತ್ತು ಸಾಯುವುದು ಇವೆರಡೂ ಭ್ರಾಂತಿಯಿಂದಲೇ ತಿಳಿಯಲಾಗುತ್ತದೆ., ಕಟ್ಟಿಗೆಯ ಸಂಯೋಗದಿಂದ ಅಗ್ನಿಯು ಉರಿಯುವಂತೆ ಮತ್ತು ಶಾಂತವಾಗುವಂತೆ ಕಂಡು ಬರುತ್ತದೆ, ಆದರೆ ಅಗ್ನಿಯಾದರೋ ವ್ಯಾಪಕವೇ ಆಗಿದೆ. ಕಟ್ಟಿಗೆಗಳು ಉರಿಯುವುದರಿಂದ ಶಾಂತವಾಗುವುದರಿಂದ ಅಗ್ನಿತತ್ತ್ವದಲ್ಲಿ ಯಾವ ವ್ಯತ್ಯಾಸವೂ ಬೀಳುವುದಿಲ್ಲ; ಸರಿಯಾಗಿ ಹಾಗೆಯೇ ಆತ್ಮನಾದರೋ ಅಮರನಾಗಿದ್ದಾನೆ. ॥45॥

(ಶ್ಲೋಕ - 46)

ಮೂಲಮ್

ನಿಷೇಕಗರ್ಭಜನ್ಮಾನಿ ಬಾಲ್ಯಕೌಮಾರಯೌವನಮ್ ।
ವಯೋಮಧ್ಯಂ ಜರಾ ಮೃತ್ಯುರಿತ್ಯವಸ್ಥಾಸ್ತನೋರ್ನವ ॥

ಅನುವಾದ

ಉದ್ಧವನೇ! ಗರ್ಭಾಧಾನ, ಗರ್ಭವೃದ್ಧಿ, ಜನ್ಮ, ಬಾಲ್ಯ, ಕೌಮಾರ್ಯ, ತಾರುಣ್ಯ, ಪ್ರೌಢ, ಮುಪ್ಪು ಮತ್ತು ಸಾವು ಇವು ಒಂಭತ್ತು ಶರೀರದ ಅವಸ್ಥೆಗಳಾಗಿವೆ. ॥46॥

(ಶ್ಲೋಕ - 47)

ಮೂಲಮ್

ಏತಾ ಮನೋರಥಮಯೀರ್ಹ್ಯನ್ಯಸ್ಯೋಚ್ಚಾವಚಾಸ್ತನೂಃ ।
ಗುಣಸಂಗಾದುಪಾದತ್ತೇ ಕ್ವಚಿತ್ಕಶ್ಚಿಜ್ಜಹಾತಿ ಚ ॥

ಅನುವಾದ

ಈ ಶರೀರವು ಜೀವನಿಂದ ಭಿನ್ನವಾಗಿದೆ ಮತ್ತು ಈ ಉಚ್ಚ-ನೀಚ ಅವಸ್ಥೆಗಳು ಅವನ ಮನೋಕಲ್ಪನೆಯೇ ಆಗಿದೆ; ಆದರೆ ಅವನು ಅಜ್ಞಾನವಶನಾಗಿ ಗುಣಗಳ ಸಂಗದಿಂದ ಇವುಗಳನ್ನು ತನ್ನವು ಎಂದು ತಿಳಿದುಕೊಂಡು ಅಲೆಯ ತೊಡಗುತ್ತಾನೆ. ಯಾರಿಗಾದರೂ ವಿವೇಕ ಉಂಟಾದರೆ ಇವುಗಳನ್ನು ಬಿಟ್ಟುಬಿಡುತ್ತಾನೆ. ॥47॥

(ಶ್ಲೋಕ - 48)

ಮೂಲಮ್

ಆತ್ಮನಃ ಪಿತೃಪುತ್ರಾಭ್ಯಾಮನುಮೇಯೌ ಭವಾಪ್ಯಯೌ ।
ನ ಭವಾಪ್ಯಯವಸ್ತೂನಾಮಭಿಜ್ಞೋ ದ್ವಯಲಕ್ಷಣಃ ॥

ಅನುವಾದ

ತಂದೆಯು ಪುತ್ರನ ಮರಣದಿಂದ ಹಾಗೂ ಪುತ್ರನು ತಂದೆಯ ಮೃತ್ಯುವಿನಿಂದ ತಮ್ಮ ಜನ್ಮ-ಮೃತ್ಯುವಿನ ಅನುಮಾನ ಮಾಡಿಕೊಳ್ಳಬೇಕು. ಜನ್ಮ ಮತ್ತು ಮೃತ್ಯು ಯಾವ ವಸ್ತುಗಳಲ್ಲಿ ಇದೆಯೋ ಅವೆರಡನ್ನೂ ಅರಿಯುವ ಆತ್ಮನು ಜನ್ಮ-ಮೃತ್ಯು ಇವೆರಡೂ ಲಕ್ಷಣಗಳಿಂದ ಸರ್ವಥಾ ಬೇರೆಯೇ ಆಗಿದ್ದಾನೆ. ॥48॥

(ಶ್ಲೋಕ - 49)

ಮೂಲಮ್

ತರೋಬೀಜವಿಪಾಕಾಭ್ಯಾಂ ಯೋ ವಿದ್ವಾನ್ಜನ್ಮಸಂಯವೌ ।
ತರೋರ್ವಿಲಕ್ಷಣೋ ದ್ರಷ್ಟಾಏವಂ ದ್ರಷ್ಟಾ ತನೋಃ ಪೃಥಕ್ ॥

ಅನುವಾದ

ವೃಕ್ಷದ ಬೀಜ ಮತ್ತು ಪರಿಣಾಮಗಳನ್ನು ನೋಡಿ ವಿದ್ವಾಂಸನು ಅದರ ಹುಟ್ಟು-ವಿನಾಶವನ್ನು ನೋಡುತ್ತಾನೆ. ಇವೆರಡನ್ನು ನೋಡುವವನಾದರೋ ವಿಲಕ್ಷಣನೇ ಆಗಿದ್ದಾನೆ. ಅವನು ಬೇರೆಯೇ ಆಗಿದ್ದಾನೆ. ಹೀಗೆಯೇ ಶರೀರದ ಜನ್ಮ-ಮೃತ್ಯು ನೋಡುವವನು ಶರೀರದಿಂದ ಬೇರೆಯಾಗಿದ್ದಾನೆ, ಅವನೇ ಆತ್ಮನಾಗಿದ್ದಾನೆ. ಅವನ ಜನ್ಮ-ನಾಶವಾಗುವುದಿಲ್ಲ ॥49॥

(ಶ್ಲೋಕ - 50)

ಮೂಲಮ್

ಪ್ರಕೃತೇರೇವಮಾತ್ಮಾನಮವಿವಿಚ್ಯಾಬುಧಃ ಪುಮಾನ್ ।
ತತ್ತ್ವೇನ ಸ್ಪರ್ಶಸಮ್ಮೂಢಃ ಸಂಸಾರಂ ಪ್ರತಿಪದ್ಯತೇ ॥

ಅನುವಾದ

ಅಜ್ಞಾನೀ ಪುರುಷನು ಹೀಗೆ ಪ್ರಕೃತಿ ಮತ್ತು ಆತ್ಮವನ್ನು ತಾತ್ತ್ವಿಕ ರೂಪದಿಂದ ವಿವೇಚಿಸುವುದಿಲ್ಲ. ಅವನು ಆತ್ಮವನ್ನು ಪ್ರಕೃತಿಯಿಂದ ತತ್ತ್ವತಃ ಬೇರೆಯಾಗಿ ಅನುಭವ ಪಡೆಯುವುದಿಲ್ಲ ಮತ್ತು ವಿಷಯ ಭೋಗದಲ್ಲೇ ನಿಜ ಸುಖವನ್ನು ತಿಳಿಯತೊಡಗುತ್ತಾ, ಅದರಲ್ಲೇ ಮೋಹಿತನಾಗುತ್ತಾನೆ. ಇದರಿಂದಲೇ ಅವರಿಗೆ ಜನ್ಮ-ಮೃತ್ಯುರೂಪೀ ಸಂಸಾರದಲ್ಲಿ ಅಲೆಯ ಬೇಕಾಗುತ್ತದೆ. ॥50॥

(ಶ್ಲೋಕ - 51)

ಮೂಲಮ್

ಸತ್ತ್ವಸಂಗಾದೃಷೀನ್ದೇವಾನ್ ರಜಸಾಸುರಮಾನುಷಾನ್ ।
ತಮಸಾ ಭೂತತಿರ್ಯಕ್ತ್ವಂ ಭ್ರಾಮಿತೋ ಯಾತಿ ಕರ್ಮಭಿಃ ॥

ಅನುವಾದ

ಅವಿವೇಕಿ ಜೀವಿಯು ತನ್ನ ಕರ್ಮಗಳನುಸಾರ ಜನ್ಮ-ಮೃತ್ಯುವಿನ ಚಕ್ರದಲ್ಲಿ ಅಲೆಯತೊಡಗಿದ್ದಾಗ ಸಾತ್ತ್ವಿಕ ಕರ್ಮಗಳ ಆಸಕ್ತಿಯಿಂದ ಋಷಿಲೋಕ, ದೇವಲೋಕವನ್ನೂ, ರಾಜಸಿಕ ಕರ್ಮಗಳ ಆಸಕ್ತಿಯಿಂದ ಮನುಷ್ಯ ಮತ್ತು ಅಸುರಯೋನಿಯನ್ನು, ತಾಮಸೀ ಕರ್ಮಗಳ ಆಸಕ್ತಿಯಿಂದ ಭೂತ-ಪ್ರೇತ ಹಾಗೂ ಪಶು-ಪಕ್ಷಿಗಳ ಯೋನಿಗಳನ್ನು ಅವನು ಹೊಂದುತ್ತಾನೆ. ॥51॥

(ಶ್ಲೋಕ - 52)

ಮೂಲಮ್

ನೃತ್ಯತೋ ಗಾಯತಃ ಪಶ್ಯನ್ಯಥೈವಾನುಕರೋತಿ ತಾನ್ ।
ಏವಂ ಬುದ್ಧಿಗುಣಾನ್ ಪಶ್ಯನ್ನನೀಹೋಪ್ಯನುಕಾರ್ಯತೇ ॥

ಅನುವಾದ

ಮನುಷ್ಯನು ಯಾರಾದರೂ ಹಾಡುತ್ತಾ ಕುಣಿಯುತ್ತಿರುವುದನ್ನು ನೋಡಿದಾಗ, ಅವನು ಸ್ವತಃ ಅದನ್ನು ಅನುಕರಣೆ ಮಾಡುತ್ತಾ ಆಲಾಪಿಸತೊಡಗುತ್ತಾನೆ,. ಹಾಗೆಯೇ ಜೀವಿಯು ಬುದ್ಧಿಯ ಗುಣಗಳನ್ನು ನೋಡಿದಾಗ ಸ್ವತಃ ನಿಷ್ಕ್ರಿಯನಾಗಿದ್ದರೂ ಅದನ್ನು ಅನುಕರಣೆಮಾಡಲು ಬಾಧ್ಯನಾಗುತ್ತಾನೆ. ॥52॥

(ಶ್ಲೋಕ - 53)

ಮೂಲಮ್

ಯಥಾಂಭಸಾ ಪ್ರಚಲತಾ ತರವೋಪಿ ಚಲಾ ಇವ ।
ಚಕ್ಷುಷಾ ಭ್ರಾಮ್ಯಮಾಣೇನ ದೃಶ್ಯತೇ ಭ್ರಮತೀವ ಭೂಃ ॥

(ಶ್ಲೋಕ - 54)

ಮೂಲಮ್

ಯಥಾ ಮನೋರಥಧಿಯೋ ವಿಷಯಾನುಭವೋ ಮೃಷಾ ।
ಸ್ವಪ್ನದೃಷ್ಟಾಶ್ಚ ದಾಶಾರ್ಹ ತಥಾ ಸಂಸಾರ ಆತ್ಮನಃ ॥

ಅನುವಾದ

ಹೊಳೆ, ಕೆರೆ ಮುಂತಾದವುಗಳ ನೀರು ಅಲ್ಲಾಡಿದಾಗ ತಟದಲ್ಲಿದ್ದ ವೃಕ್ಷಗಳ ಪ್ರತಿಬಿಂಬವು ಅಲ್ಲಾಡಿದ ಹಾಗೆ ಕಾಣುವಂತೆ, ಗಿರ-ಗಿರನೆ ತಿರುಗುವಾಗ ತನ್ನೊಂದಿಗೆ ಭೂಮಿಯು ತಿರುಗಿದಂತೆಯೇ ಕಂಡು ಬರುವಂತೆ, ಮನಸ್ಸಿನ ಮೂಲಕ ಯೋಚಿಸಿದ್ದನ್ನು ಹಾಗೂ ಸ್ವಪ್ನದಲ್ಲಿ ನೋಡಲಾದ ಪದಾರ್ಥಗಳು ಸರ್ವಥಾ ಮಿಥ್ಯೆಯೇ ಆಗಿದೆ. ಹಾಗೆಯೇ ಎಲೈ ದಾಶಾರ್ಹನೇ! ಆತ್ಮನ ವಿಷಯಾನುಭವರೂಪೀ ಸಂಸಾರವೂ ಸರ್ವಥಾ ಅಸತ್ಯವಾಗಿದೆ. ಆತ್ಮನಾದರೋ ನಿತ್ಯ, ಶುದ್ಧ-ಬುದ್ಧ-ಮುಕ್ತನೇ ಆಗಿದ್ದಾನೆ. ॥53-54॥

(ಶ್ಲೋಕ - 55)

ಮೂಲಮ್

ಅರ್ಥೇ ಹ್ಯವಿದ್ಯಮಾನೇಪಿ ಸಂಸೃತಿರ್ನ ನಿವರ್ತತೇ ।
ಧ್ಯಾಯತೋ ವಿಷಯಾನಸ್ಯ ಸ್ವಪ್ನೇನರ್ಥಾಗಮೋ ಯಥಾ ॥

ಅನುವಾದ

ವಿಷಯಗಳು ಸತ್ಯವಾಗಿರದಿದ್ದರೂ ಅವುಗಳನ್ನು ಚಿಂತಿಸುತ್ತಾ ಇರುವ ಜೀವಿಯ ಸ್ವಪ್ನದಲ್ಲಿ ಪ್ರಾಪ್ತವಾದ ಅನರ್ಥ ಪರಂಪರೆಯು ಎಚ್ಚರವಾಗದೆ ನಿವೃತ್ತವಾಗದಿರುವಂತೆ ಜನ್ಮ ಮೃತ್ಯುರೂಪೀ ಚಕ್ರವು ಎಂದೂ ನಿವೃತ್ತವಾಗುವುದಿಲ್ಲ. ॥55॥

(ಶ್ಲೋಕ - 56)

ಮೂಲಮ್

ತಸ್ಮಾದುದ್ಧವ ಮಾ ಭುಂಕ್ಷ್ವ ವಿಷಯಾನಸದಿಂದ್ರಿಯೈಃ ।
ಆತ್ಮಾಗ್ರಹಣನಿರ್ಭಾತಂ ಪಶ್ಯ ವೈಕಲ್ಪಿಕಂ ಭ್ರಮಮ್ ॥

ಅನುವಾದ

ಪ್ರಿಯ ಉದ್ಧವನೇ! ಅದಕ್ಕಾಗಿ ಈ ದುಷ್ಟ (ಎಂದಿಗೂ ತೃಪ್ತವಾಗದಿರುವ) ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸಬೇಡ. ಅಜ್ಞಾನದ ಕಾರಣವೇ ಆತ್ಮನಲ್ಲಿ ಭ್ರಮೆಯಿಂದ ಭೇದಬುದ್ಧಿ ಉಂಟಾಗಿದೆ. ಅದನ್ನು ನೋಡಿ ದೂರಗೊಳಿಸು. ॥56॥

ಮೂಲಮ್

(ಶ್ಲೋಕ - 57)

ಮೂಲಮ್

ಕ್ಷಿಪ್ತೋವಮಾನಿತೋಸದ್ಭಿಃ ಪ್ರಲಬ್ಧೋಸೂಯಿತೋಥವಾ ।
ತಾಡಿತಃ ಸನ್ನಿಬದ್ಧೋ ವಾ ವೃತ್ತ್ಯಾ ವಾ ಪರಿಹಾಪಿತಃ ॥

(ಶ್ಲೋಕ - 58)

ಮೂಲಮ್

ನಿಷ್ಠಿತೋ ಮೂತ್ರಿತೋ ವಾಜ್ಞೈರ್ಬಹುಧೈವಂ ಪ್ರಕಂಪಿತಃ ।
ಶ್ರೇಯಸ್ಕಾಮಃ ಕೃಚ್ಛ್ರಗತ ಆತ್ಮನಾತ್ಮಾನಮುದ್ಧರೇತ್ ॥

ಅನುವಾದ

ಅಸಾಧುವಾದ ಪುರುಷನು ಕತ್ತುಹಿಡಿದು ಹೊರಗೆ ದಬ್ಬಲಿ, ಮಾತಿನಿಂದ ಅವಮಾನಿಸಲಿ, ಉಪಹಾಸ್ಯಮಾಡಲಿ, ನಿಂದಿಸಲಿ, ಹೊಡೆಯಲಿ, ಬಡೆಯಲಿ, ಕಟ್ಟಿಹಾಕಲಿ, ಜೀವನ ನಿರ್ವಾಹ ಕಿತ್ತುಕೊಳ್ಳಲಿ, ಮೈಮೇಲೆ ಉಗುಳಲಿ, ಮೂತ್ರ ವಿಸರ್ಜಿಸಲಿ, ಅನೇಕ ರೀತಿಯಿಂದ ವಿಚಲಿತಗೊಳಿಸಲಿ, ನಿಷ್ಠೆಯಿಂದ ಅಲ್ಲಾಡಿಸಲು ಪ್ರಯತ್ನಿಸಲಿ, ಬೇರೆಯವರ ಯಾವುದೇ ಉಪದ್ರವದಿಂದ ಕ್ಷುಬ್ಧನಾಗಬಾರದು. ಏಕೆಂದರೆ ಅವರಾದರೋ ಬಡಪಾಯಿ ಅಜ್ಞಾನಿಗಳಾಗಿದ್ದಾರೆ; ಅವರಿಗೆ ಪರಮಾರ್ಥದ ಅರಿವೇ ಇಲ್ಲ. ಆದ್ದರಿಂದ ತನ್ನ ಶ್ರೇಯಸ್ಸನ್ನು ಬಯಸುವವನು ಎಲ್ಲ ಕಠಿಣತೆಗಳನ್ನು ತನ್ನ ವಿವೇಕ-ಬುದ್ಧಿಯ ಮೂಲಕ, ಹೊರಗಿನ ಯಾವುದೇ ಸಾಧನೆಯನ್ನು ಅವಲಂಬಿಸದೆ, ತನ್ನನ್ನು ಕಾಪಾಡಿಕೊಳ್ಳಬೇಕು. ವಸ್ತುತಃ ಆತ್ಮದೃಷ್ಟಿಯೇ ಸಮಸ್ತ ವಿಪತ್ತುಗಳಿಂದ ಪಾರಾಗಿಸುವ ಏಕಮಾತ್ರ ಸಾಧನೆಯಾಗಿದೆ. ॥57-58॥

(ಶ್ಲೋಕ - 59)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಯಥೈವಮನುಬುಧ್ಯೇಯಂ ವದ ನೋ ವದತಾಂ ವರ ।
ಸುದುಸ್ಸಹಮಿಮಂ ಮನ್ಯೇ ಆತ್ಮನ್ಯಸದತಿಕ್ರಮಮ್ ॥

ಅನುವಾದ

ಉದ್ಧವನು ಕೇಳಿದನು — ಭಗವಂತಾ! ನೀನು ಸಮಸ್ತ ವಕ್ತಾಗಳಲ್ಲಿ ಶ್ರೇಷ್ಠನಾಗಿರುವೆ. ಶಿರೋಮಣಿಯಾಗಿರುವೆ. ನಾನು ಈ ದುರ್ಜನರು ಮಾಡಿದ ತಿರಸ್ಕಾರವನ್ನು ಮನಸ್ಸಿನಲ್ಲಿ ಅತ್ಯಂತ ಅಸಹ್ಯವೆಂದು ತಿಳಿಯುತ್ತೇನೆ. ಆದ್ದರಿಂದ ನಾನು ಇದನ್ನು ತಿಳಿಯುವಂತೆ, ನಿನ್ನ ಉಪದೇಶವನ್ನು ಜೀವನದಲ್ಲಿ ಧರಿಸಿಕೊಳ್ಳುವಂತೆ ನನಗೆ ಉಪದೇಶಿಸು. ॥59॥

(ಶ್ಲೋಕ - 60)

ಮೂಲಮ್

ವಿದುಷಾಮಪಿ ವಿಶ್ವಾತ್ಮನ್ ಪ್ರಕೃತಿರ್ಹಿ ಬಲೀಯಸೀ ।
ಋತೇ ತ್ವದ್ಧರ್ಮನಿರತಾನ್ ಶಾಂತಾಂಸ್ತೇ ಚರಣಾಲಯಾನ್ ॥

ಅನುವಾದ

ವಿಶ್ವಾತ್ಮನೇ! ಪ್ರಕೃತಿಯಾದರೋ ಬಹಳ ಬಲಿಷ್ಠವಾಗಿದೆ. ಅದು ವಿದ್ವಾಂಸರನ್ನೂ ಕೂಡ ಕ್ಷುಬ್ಧಮಾಡಿ ಬಿಡುತ್ತದೆ. ನಿನ್ನ ಚರಣಗಳಲ್ಲಿ ಶರಣಾದವರು ಮಾತ್ರ ಈ ಪ್ರಕೃತಿಯಿಂದ ಬಿಡುಗಡೆ ಹೊಂದಬಲ್ಲರು. ಅವರು ಸದಾಕಾಲ ನಿನ್ನದೇ ಭಾಗವತಧರ್ಮದಲ್ಲಿ ತೊಡಗಿದ್ದಾರೆ, ಶಾಂತರಾಗಿದ್ದಾರೆ. ಅವರಲ್ಲಿ ಊರ್ಮಿಗಳಿಲ್ಲ. ಸುಖ-ದುಃಖರೂಪೀ ದ್ವಂದ್ವಗಳಿಲ್ಲ. ಆದ್ದರಿಂದ ಇಂತಹ ಶರಣಾಗತ ಭಕ್ತರೇ ಈ ಪ್ರಪಂಚದಿಂದ ಬಾಧಿತರಾಗುವುದಿಲ್ಲ. ॥60॥

ಅನುವಾದ (ಸಮಾಪ್ತಿಃ)

ಇಪ್ಪತ್ತೆರಡನೆಯ ಅಧ್ಯಾಯವು ಮುಗಿಯಿತು. ॥22॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ದ್ವಾವಿಂಶೋಽಧ್ಯಾಯಃ ॥22॥