೨೧

[ಇಪ್ಪತ್ತೊಂದನೆಯ ಅಧ್ಯಾಯ]

ಭಾಗಸೂಚನಾ

ಗುಣ-ದೋಷ ವ್ಯವಸ್ಥೆಗಳ ಸ್ವರೂಪ ಮತ್ತು ಅವುಗಳ ರಹಸ್ಯ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯ ಏತಾತ್ ಮತ್ಪಥೋ ಹಿತ್ವಾ ಭಕ್ತಿಜ್ಞಾನಕ್ರಿಯಾತ್ಮಕಾನ್ ।
ಕ್ಷುದ್ರಾನ್ಕಾಮಾಂಶ್ಚಲೈಃ ಪ್ರಾಣೈರ್ಜುಷಂತಃ ಸಂಸರಂತಿ ತೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವನೇ! ನನ್ನ ಪ್ರಾಪ್ತಿಗಾಗಿ ಭಕ್ತಿಯೋಗ, ಜ್ಞಾನಯೋಗ, ಕರ್ಮ ಯೋಗಗಳೆಂಬ ಮೂರುಮಾರ್ಗಗಳಿವೆ. ಇವನ್ನು ಬಿಟ್ಟು ಚಂಚಲ ಇಂದ್ರಿಯಗಳ ಮೂಲಕ ಕ್ಷುದ್ರವಾದ ಭೋಗಗಳನ್ನು ಭೋಗಿಸುತ್ತಿರುವವರು ಪದೇ-ಪದೇ ಜನ್ಮ-ಮೃತ್ಯು ರೂಪೀ ಸಂಸಾರದಲ್ಲಿ ಸುತ್ತುತ್ತಾ ಇರುತ್ತಾರೆ. ॥1॥

(ಶ್ಲೋಕ - 2)

ಮೂಲಮ್

ಸ್ವೇ ಸ್ವೇಧಿಕಾರೇ ಯಾ ನಿಷ್ಠಾ ಸ ಗುಣಃ ಪರಿಕೀರ್ತಿತಃ ।
ವಿಪರ್ಯಯಸ್ತು ದೋಷಃ ಸ್ಯಾದುಭಯೋರೇಷ ನಿಶ್ಚಯಃ ॥

ಅನುವಾದ

ತಮ್ಮ-ತಮ್ಮ ಅಧಿಕಾರಕ್ಕನುಸಾರ ಧರ್ಮದಲ್ಲಿ ದೃಢನಿಷ್ಠೆ ಇರುವುದೇ ಗುಣವಾಗಿದೆ; ಇದಕ್ಕೆ ವಿಪರೀತವಾಗಿ ಅನಧಿಕಾರ ಚೇಷ್ಟೆಯನ್ನು ದೋಷವೆಂದು ಹೇಳಲಾಗಿದೆ. ತಾತ್ಪರ್ಯ ಈ ಗುಣ-ದೋಷಗಳ ವ್ಯವಸ್ಥೆಯನ್ನು ಅಧಿಕಾರಕ್ಕನುಸಾರವೇ ಮಾಡಲಾಗುತ್ತದೆ; ಯಾವುದೇ ವಸ್ತುವಿಗನುಸಾರವಲ್ಲ. ಆದ್ದರಿಂದ ಸ್ವಧರ್ಮವನ್ನು ಪಾಲಿಸಬೇಕು. ॥2॥

(ಶ್ಲೋಕ - 3)

ಮೂಲಮ್

ಶುದ್ಧ್ಯಶುದ್ಧೀ ವಿಧೀಯೇತೇ ಸಮಾನೇಷ್ವಪಿ ವಸ್ತುಷು ।
ದ್ರವ್ಯಸ್ಯ ವಿಚಿಕಿತ್ಸಾರ್ಥಂ ಗುಣದೋಷೌ ಶುಭಾಶುಭೌ ॥

ಅನುವಾದ

ಎಲ್ಲ ವಸ್ತುಗಳು ತಾತ್ತ್ವಿಕ ರೂಪದಿಂದ ಸಮಾನವೇ ಆಗಿವೆ. ಆದರೆ ದ್ರವ್ಯದ ಗುಣ-ದೋಷ, ಶುಭ ಅಥವಾ ಅಶುಭ ಇವುಗಳ ವಿಷಯದಲ್ಲಿ ಆ ವಸ್ತುವಿನ ನಿರ್ಣಯಮಾಡಿಯೇ ಶುದ್ಧಿ-ಅಶುದ್ಧಿಯ ವಿಷಯವಾಗಿ ಹೇಳಲಾಗುತ್ತದೆ. ॥3॥

(ಶ್ಲೋಕ - 4)

ಮೂಲಮ್

ಧರ್ಮಾರ್ಥಂ ವ್ಯವಹಾರಾರ್ಥಂ ಯಾತ್ರಾರ್ಥಮಿತಿ ಚಾನಘ ।
ದರ್ಶಿತೋಯಂ ಮಯಾಚಾರೋ ಧರ್ಮಮುದ್ವಹತಾಂ ಧುರಮ್ ॥

ಅನುವಾದ

ಪುಣ್ಯಾತ್ಮನಾದ ಉದ್ಧವನೇ! ಈ ಶುದ್ಧಿ, ಅಶುದ್ಧಿಯ ನಿರ್ಣಯವು ಧರ್ಮದಿಂದಾಗಿಯೇ ಆಗುತ್ತದೆ. ವ್ಯವಹಾರ ಮತ್ತು ಶರೀರನಿರ್ವಾಹಕ್ಕಾಗಿಯೇ ಇದರ ವ್ಯವಸ್ಥೆ ಹೇಳಲಾಗಿದೆ. ಧರ್ಮದ ಮರ್ಯಾದೆಯನ್ನು ಪಾಲಿಸಲಿಕ್ಕಾಗಿ ನಾನೇ ಈ ಧರ್ಮದ ಆಚಾರವನ್ನು ಹೇಳಿರುವೆನು. ॥4॥

(ಶ್ಲೋಕ - 5)

ಮೂಲಮ್

ಭೂಮ್ಯಂಬ್ವಗ್ನ್ಯನಿಲಾಕಾಶಾ ಭೂತಾನಾಂ ಪಂಚ ಧಾತವಃ ।
ಆಬ್ರಹ್ಮಸ್ಥಾವರಾದೀನಾಂ ಶಾರೀರಾ ಆತ್ಮಸಂಯುತಾಃ ॥

ಅನುವಾದ

ಪೃಥ್ವಿ, ಜಲ, ತೇಜ, ವಾಯು, ಆಕಾಶ ಈ ಪಂಚಭೂತಗಳೇ ಬ್ರಹ್ಮನಿಂದ ಹಿಡಿದು ಪರ್ವತ-ವೃಕ್ಷಗಳವರೆಗೆ ಎಲ್ಲ ಪ್ರಾಣಿಗಳ ಶರೀರಗಳ ಮೂಲ ಕಾರಣವಾಗಿವೆ. ಈ ರೀತಿ ಅವೆಲ್ಲವೂ ಶರೀರದ ದೃಷ್ಟಿಯಿಂದ ಸಮಾನವೇ ಆಗಿವೆ. ಎಲ್ಲರ ಆತ್ಮವೂ ಒಂದೇ ಆಗಿದೆ; ಆದ್ದರಿಂದ ಆತ್ಮನ ದೃಷ್ಟಿಯಿಂದಲೂ ಸಮಾನವಾಗಿವೆ. ॥5॥

(ಶ್ಲೋಕ - 6)

ಮೂಲಮ್

ವೇದೇನ ನಾಮರೂಪಾಣಿ ವಿಷಮಾಣಿ ಸಮೇಷ್ವಪಿ ।
ಧಾತುಷೂದ್ಧವ ಕಲ್ಪ್ಯಂತೇ ಏತೇಷಾಂ ಸ್ವಾರ್ಥಸಿದ್ಧಯೇ ॥

ಅನುವಾದ

ಎಲೈ ಉದ್ಧವನೇ! ಪಂಚ-ಭೂತಗಳಾದರೋ ಎಲ್ಲದರಲ್ಲಿ ಸಮಾನವಾಗಿವೆ. ವೇದಗಳು ಅವುಗಳ ನಾಮ-ರೂಪಗಳನ್ನು ಬೇರೆ-ಬೇರೆಯಾಗಿ ಹೇಳುತ್ತವೆ. ಅವೆಲ್ಲವುಗಳಲ್ಲಿ ಸಜಾತೀಯ-ವಿಜಾತೀಯ, ಸ್ವಗತ ಭೇದಗಳನ್ನು ರಚಿಸಲಾಗಿದೆ. ಅವುಗಳ ಬೇರೆ-ಬೇರೆ ನಾಮ ರೂಪಗಳನ್ನು ಹೇಳಿರುವುದು ಆ ವಸ್ತುಗಳ ವ್ಯವಹಾರಕ್ಕಾಗಿಯೇ ಆಗಿದೆ. ॥6॥

(ಶ್ಲೋಕ - 7)

ಮೂಲಮ್

ದೇಶಕಾಲಾದಿಭಾವಾನಾಂ ವಸ್ತೂನಾಂಮಮ ಸತ್ತಮ ।
ಗುಣದೋಷೌ ವಿಧೀಯೇತೇ ನಿಯಮಾರ್ಥಂ ಹಿ ಕರ್ಮಣಾಮ್ ॥

ಅನುವಾದ

ಸಾಧುಶ್ರೇಷ್ಠ ಉದ್ಧವನೇ! ದೇಶ, ಕಾಲ ಮುಂತಾದವುಗಳ ವಿಷಯದಲ್ಲಿ ಮತ್ತು ಪದಾರ್ಥಗಳ ವಿಷಯದಲ್ಲಿ ಹೇಳಲಾದ ಗುಣ-ದೋಷಗಳ ವಿಧಾನವು ಕರ್ಮಗಳು ನಿಯಮಿತವಾಗಿ ನಡೆಯಲೆಂದೇ ಇದೆ. ॥7॥

(ಶ್ಲೋಕ - 8)

ಮೂಲಮ್

ಅಕೃಷ್ಣಸಾರೋ ದೇಶಾನಾಮಬ್ರಹ್ಮಣ್ಯೋಶುಚಿರ್ಭವೇತ್ ।
ಕೃಷ್ಣಸಾರೋಪ್ಯಸೌವೀರಕೀಕಟಾಸಂಸ್ಕೃತೇರಿಣಮ್ ॥

ಅನುವಾದ

ಕೃಷ್ಣಸಾರ ಮೃಗವು ಇಲ್ಲದಿರುವ ಮತ್ತು ಬ್ರಾಹ್ಮಣಭಕ್ತರು ವಾಸಿಸದ ದೇಶವು ಅಪವಿತ್ರವಾಗಿದೆ. ಕೃಷ್ಣಸಾರ ಮೃಗವಿದ್ದರೂ, ಸಂತ ಪುರುಷರು ವಾಸಿಸುವಷ್ಟು ಪ್ರದೇಶವನ್ನು ಬಿಟ್ಟು ಕೀಕಟ ದೇಶವು ಅಪವಿತ್ರವಾಗಿದೆ. ಇದಲ್ಲದೆ ಸಜ್ಜನರು ಇರದ, ಬರಡುಭೂಮಿಯೂ ಅಪವಿತ್ರವೇ ಆಗಿದೆ. ॥8॥

(ಶ್ಲೋಕ - 9)

ಮೂಲಮ್

ಕರ್ಮಣ್ಯೋ ಗುಣವಾನ್ಕಾಲೋ ದ್ರವ್ಯತಃ ಸ್ವತ ಏವ ವಾ ।
ಯತೋ ನಿವರ್ತತೇ ಕರ್ಮ ಸ ದೋಷೋಕರ್ಮಕಃ ಸ್ಮೃತಃ ॥

ಅನುವಾದ

ಕರ್ಮ ಮಾಡಲು ಯೋಗ್ಯ ಸಾಮಗ್ರಿ ದೊರೆಯಬಹುದಾದ ಹಾಗೂ ಕರ್ಮವೂ ಆಗಬಹುದಾದ ಸಮಯವೇ ಪವಿತ್ರವಾದುದು. ಇದಕ್ಕೆ ವಿಪರೀತವಾಗಿ ಕರ್ಮಮಾಡುವ ಸಾಮಗ್ರಿಯು ದೊರೆಯದಿದ್ದಾಗ, ಹಾಗೆಯೇ ಆಗಂತುಕ ದೋಷಗಳಿಂದ ಅಥವಾ ಸ್ವಾಭಾವಿಕ ದೋಷದ ಕಾರಣ, ಕರ್ಮವು ನಡೆಯದಿರುವ ಸಮಯವು ಅಶುದ್ಧವಾದುದು.॥9॥

(ಶ್ಲೋಕ - 10)

ಮೂಲಮ್

ದ್ರವ್ಯಸ್ಯ ಶುದ್ಧ್ಯಶುದ್ಧೀ ಚ ದ್ರವ್ಯೇಣ ವಚನೇನ ಚ ।
ಸಂಸ್ಕಾರೇಣಾಥ ಕಾಲೇನ ಮಹತ್ತ್ವಾಲ್ಪತಯಾಥವಾ ॥

ಅನುವಾದ

ಪದಾರ್ಥಗಳ ಶುದ್ಧಿ-ಅಶುದ್ಧಿಯ ನಿರ್ಣಯವು, ದ್ರವ್ಯ, ವಚನ, ಸಂಸ್ಕಾರ, ಕಾಲ ಹೆಚ್ಚಾಗಿರುವುದು ಹಾಗೂ ಕಡಿಮೆ ಇರುವುದು ಇದರಿಂದಲೂ ಆಗುತ್ತದೆ. (ಹೇಗೆಂದರೆ ಯಾವುದಾದರೂ ಪಾತ್ರೆಯು ನೀರಿನಿಂದ ಶುದ್ಧಿಗೊಳಿಸಿ ದರೂ ಮೂತ್ರಾದಿಗಳಿಂದ ಅಶುದ್ಧವಾಗುತ್ತದೆ. ಯಾವುದೇ ವಸ್ತುವಿನ ಶುದ್ಧಿ ಅಥವಾ ಅಶುದ್ಧಿಯಲ್ಲಿ ಶಂಕೆ ಉಂಟಾದರೆ ಬ್ರಾಹ್ಮಣರ ವಚನದಿಂದ ಅದು ಶುದ್ಧವಾಗುತ್ತದೆ. ಇಲ್ಲ ದಿದ್ದರೆ ಅಶುದ್ಧವಾಗಿರುತ್ತದೆ. ಪುಷ್ಪಾದಿಗಳು ನೀರು ಚಿಮುಕಿಸುವುದರಿಂದ ಶುದ್ಧ ಮತ್ತು ಮೂಸುವುದರಿಂದ ಅಶುದ್ಧವಾಗುತ್ತವೆ. ಆಗಲೇ ಬೇಯಿಸಿದ ಅನ್ನವು ಶುದ್ಧ ಹಾಗೂ ತಂಗಳಾದುದು ಅಶುದ್ಧವೆಂದು ತಿಳಿಯಲಾಗುತ್ತದೆ. ದೊಡ್ಡ ಸರೋವರ, ನದಿ ಇವುಗಳ ನೀರು ಶುದ್ಧ ಮತ್ತು ಸಣ್ಣ ಹೊಂಡದ ನೀರು ಅಶುದ್ಧ. ಹೀಗೆಯೇ ಬೇರೆ ವಸ್ತುಗಳನ್ನು ತಿಳಿದುಕೊಳ್ಳಬೇಕು.) ॥10॥

(ಶ್ಲೋಕ - 11)

ಮೂಲಮ್

ಶಕ್ತ್ಯಾಶಕ್ತ್ಯಾಥವಾ ಬುದ್ಧ್ಯಾ ಸಮೃದ್ಧ್ಯಾ ಚ ಯದಾತ್ಮನೇ ।
ಅಘಂ ಕುರ್ವಂತಿ ಹಿ ಯಥಾ ದೇಶಾವಸ್ಥಾನುಸಾರತಃ ॥

ಅನುವಾದ

ಶಕ್ತ, ಅಶಕ್ತ (ಅಸಮರ್ಥ, ಬಾಲಕ, ವೃದ್ಧ, ರೋಗಿ ಮುಂತಾದವರು), ಬುದ್ಧಿ ಮತ್ತು ವೈಭವಕ್ಕನುಸಾರವೂ ಪವಿತ್ರತೆ, ಅಪವಿತ್ರತೆಯ ವ್ಯವಸ್ಥೆಯಾಗುತ್ತದೆ. ಅದರಲ್ಲಿಯೂ ಸ್ಥಾನ ಮತ್ತು ಉಪಯೋಗ ಮಾಡುವವನ ಆಯುಸ್ಸಿನ ವಿಚಾರಮಾಡುತ್ತಾ ಅಶುದ್ಧ ವಸ್ತುಗಳ ವ್ಯವಹಾರದ ದೋಷವೂ ಸರಿಯಾಗಿ ಗುರುತಿಸ ಲಾಗುತ್ತದೆ. (ಶ್ರೀಮಂತ-ದರಿದ್ರ, ಬಲಿಷ್ಠ-ನಿರ್ಬಲ, ಬುದ್ಧಿವಂತ-ಮೂರ್ಖ, ಉಪದ್ರವದಿಂದ ಕೂಡಿದ ಮತ್ತು ಸುಖಕರವಾದ ದೇಶ, ತರುಣ-ವೃದ್ಧಾವಸ್ಥೆ, ಇವುಗಳ ಭೇದದಿಂದ ಶುದ್ಧಿ ಹಾಗೂ ಅಶುದ್ಧಿಯ ವ್ಯವಸ್ಥೆಯಲ್ಲಿ ವ್ಯತ್ಯಾಸವಿರುತ್ತದೆ.) ॥11॥

(ಶ್ಲೋಕ - 12)

ಮೂಲಮ್

ಧಾನ್ಯದಾರ್ವಸ್ಥಿತಂತೂನಾಂ ರಸತೈಜಸಚರ್ಮಣಾಮ್ ।
ಕಾಲವಾಯ್ವಗ್ನಿಮೃತ್ತೋಯೈಃ ಪಾರ್ಥಿವಾನಾಂ ಯುತಾಯುತೈಃ ॥

ಅನುವಾದ

ಧಾನ್ಯಗಳು, ಮರದಪಾತ್ರೆ, ಆನೆಯ ದಂತ, ನೂಲು, ಜೇನು, ಉಪ್ಪು, ಎಣ್ಣೆ, ತುಪ್ಪ ಮುಂತಾದ ರಸವಸ್ತುಗಳು, ಚಿನ್ನ, ಪಾದರಸ ಮೊದಲಾದ ತೈಜಸ ಪದಾರ್ಥಗಳು, ಹುಲಿ, ಜಿಂಕೆ ಇವುಗಳ ಚರ್ಮ, ಮಣ್ಣಿನ ಗಡಿಗೆಯೇ ಮುಂತಾದವುಗಳು ಸಮಯಾನುಸಾರ ತಾನಾಗಿಯೇ ಗಾಳಿ ತಾಗುವುದರಿಂದ, ಬೆಂಕಿಯಲ್ಲಿ ಸುಟ್ಟಾಗ, ಮಣ್ಣಿನಿಂದ ತಿಕ್ಕುವುದರಿಂದ, ನೀರಿನಿಂದ ತೊಳೆಯುವುದರಿಂದ ಶುದ್ಧವಾಗು ತ್ತವೆ. ದೇಶ, ಕಾಲ ಹಾಗೂ ಅವಸ್ಥೆಗನುಸಾರ ಕೆಲವೊಮ್ಮೆ ನೀರು, ಮಣ್ಣು ಮುಂತಾದ ಶೋಧಕ ಸಾಮಗ್ರಿಯ ಸಂಯೋಗದಿಂದ ಶುದ್ಧ ಮಾಡಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಒಂದೊಂದರಿಂದಲೇ ಶುದ್ಧವಾಗುತ್ತವೆ. ॥12॥

(ಶ್ಲೋಕ - 13)

ಮೂಲಮ್

ಅಮೇಧ್ಯಲಿಪ್ತಂ ಯದ್ಯೇನ ಗಂಧಂ ಲೇಪಂ ವ್ಯಪೋಹತಿ ।
ಭಜತೇ ಪ್ರಕೃತಿಂ ತಸ್ಯ ತಚ್ಛೌಚಂ ತಾವದಿಷ್ಯತೇ ॥

ಅನುವಾದ

ಯಾವುದೇ ವಸ್ತುವಿನಲ್ಲಿ ಯಾವುದಾದರೂ ಅಶುದ್ಧ ಪದಾರ್ಥ ತಗುಲಿದರೆ, ಸುಲಿಯುವುದರಿಂದ ಅಥವಾ ಮಣ್ಣು ಮುಂತಾದವುಗಳಿಂದ ತಿಕ್ಕುವುದರಿಂದ, ಆ ಪದಾರ್ಥದ ವಾಸನೆ, ಲೇಪ ಹೊರಟುಹೋಗಿ ಆ ವಸ್ತುವು ತನ್ನ ಹಿಂದಿನ ರೂಪವನ್ನು ಪಡೆದಾಗ ಅದನ್ನು ಶುದ್ಧವೆಂದು ತಿಳಿಯಬೇಕು. ॥13॥

(ಶ್ಲೋಕ - 14)

ಮೂಲಮ್

ಸ್ನಾನದಾನತಪೋವಸ್ಥಾವೀರ್ಯಸಂಸ್ಕಾರಕರ್ಮಭಿಃ ।
ಮತ್ ಸ್ಮೃತ್ಯಾ ಚಾತ್ಮನಃ ಶೌಚಂ ಶುದ್ಧಃ ಕರ್ಮಾಚರೇದ್ವಜಃ ॥

ಅನುವಾದ

ಸ್ನಾನ, ದಾನ, ತಪಸ್ಸು, ವಯಸ್ಸು, ಸಾಮರ್ಥ್ಯ, ಸಂಸ್ಕಾರ, ಕರ್ಮ ಮತ್ತು ನನ್ನ ಸ್ಮರಣೆಯಿಂದ ಚಿತ್ತದ ಶುದ್ಧಿಯಾಗುತ್ತದೆ. ಇವುಗಳ ಮೂಲಕ ಶುದ್ಧರಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರುಗಳು ವಿಹಿತ ಕರ್ಮಗಳನ್ನು ಆಚರಿಸಬೇಕು. ॥14॥

(ಶ್ಲೋಕ - 15)

ಮೂಲಮ್

ಮಂತ್ರಸ್ಯ ಚ ಪರಿಜ್ಞಾನಂ ಕರ್ಮಶುದ್ಧಿರ್ಮದರ್ಪಣಮ್ ।
ಧರ್ಮಃ ಸಂಪದ್ಯತೇ ಷಡ್ಭಿರಧರ್ಮಸ್ತು ವಿಪರ್ಯಯಃ ॥

ಅನುವಾದ

ಗುರುಮುಖದಿಂದ ಕೇಳಿ ಚೆನ್ನಾಗಿ ಹೃದಯಂಗಮ ಮಾಡಿಕೊಂಡಾಗ ಮಂತ್ರದ ಮತ್ತು ನನಗೆ ಸಮರ್ಪಿಸುವುದರಿಂದ ಕರ್ಮದ ಶುದ್ಧಿಯಾಗುತ್ತದೆ. ಉದ್ಧವನೇ! ಹೀಗೆ ದೇಶ, ಕಾಲ, ಪದಾರ್ಥ, ಕರ್ತಾ, ಮಂತ್ರ ಮತ್ತು ಕರ್ಮ ಈ ಆರು ಶುದ್ಧವಾಗುವುದರಿಂದ ಧರ್ಮವು ಶುದ್ಧವಾಗುತ್ತದೆ. ಅಶುದ್ಧವಾದಾಗ ಅಧರ್ಮವೂ ಆಗುತ್ತದೆ. ॥15॥

(ಶ್ಲೋಕ - 16)

ಮೂಲಮ್

ಕ್ವಚಿದ್ಗುಣೋಪಿ ದೋಷಃ ಸ್ಯಾದ್ದೋಷೋಪಿ ವಿಧಿನಾ ಗುಣಃ ।
ಗುಣದೋಷಾರ್ಥನಿಯಮಸ್ತದ್ಭಿದಾಮೇವ ಬಾಧತೇ ॥

ಅನುವಾದ

ಒಂದೇ ವಸ್ತುವು ಗುಣಿಯಾಗಿದ್ದರೂ ವಿಧಿಯು ನಿಷೇಧ ಮಾಡಿದ್ದರೆ ಆ ವಿಧಿವಾಕ್ಯ ಕ್ಕನುಸಾರ ಗುಣವೂ ದೋಷವಾಗುತ್ತದೆ. ಈ ಪ್ರಕಾರ ವಸ್ತುವಿನ ಗುಣ-ದೋಷಗಳ ವಿಷಯದಲ್ಲಿ ನಿಯಮಗಳನ್ನು ನಿರ್ಧರಿಸಲಾಗಿದೆ. ಆ ನಿಯಮಗಳನ್ನು ಯಾರು ಯಾವುದನ್ನು ಪಾಲಿಸಬೇಕು ಅಥವಾ ಯಾರು ಯಾವುದನ್ನು ಪಾಲಿಸಬಾರದು ಹೀಗೆ ಮಾಡಿರುವ ಭೇದವು ವರ್ಣವ್ಯವಸ್ಥೆಯನ್ನು ಸ್ಥಿರವಾಗಿಡ ಲೆಂದೇ ಆಗಿದೆ. ಆದ್ದರಿಂದಲೇ ಅವುಗಳಲ್ಲಿನ ಗುಣ-ದೋಷ ಭೇದವನ್ನು ಕಲ್ಪಿಸಲಾಗಿದೆ. ॥16॥

(ಶ್ಲೋಕ - 17)

ಮೂಲಮ್

ಸಮಾನಕರ್ಮಾಚರಣಂ ಪತಿತಾನಾಂ ನ ಪಾತಕಮ್ ।
ಔತ್ಪತ್ತಿಕೋ ಗುಣಃ ಸಂಗೋ ನ ಶಯಾನಃ ಪತತ್ಯಧಃ ॥

ಅನುವಾದ

ಪತಿತರಿಗೆ ಪಾಪದ ಆಚರಣೆಯು ಯಾವ ದೋಷವೂ ಇಲ್ಲ. ಅವರು ಮೊದಲಿನಿಂದಲೇ ಪಾತಕಿಗಳಾಗಿದ್ದಾರೆ. ಅವರು ಇನ್ನೂ ಪಾಪಮಾಡಿದರೆ ಅವರಿಗೆ ಪಾಪ ತಗಲುವುದಿಲ್ಲ. ಏಕೆಂದರೆ, ಗುಣ (ಪಾಪ)ಗಳಲ್ಲಿ ಆಸಕ್ತವಾಗುವುದಾದರೋ ಅವರ ಸ್ವಾಭಾವಿಕ ಪ್ರವೃತ್ತಿಯೇ ಆಗಿದೆ. ನೆಲದ ಮೇಲೆ ಮಲಗಿದ ವನಿಗೆ ಕೆಳಗೆ ಬೀಳುವ ಭಯವಿಲ್ಲ. ॥17॥

(ಶ್ಲೋಕ - 18)

ಮೂಲಮ್

ಯತೋ ಯತೋ ನಿವರ್ತೇತ ವಿಮುಚ್ಯೇತ ತತಸ್ತತಃ ।
ಏಷ ಧರ್ಮೋ ನೃಣಾಂ ಕ್ಷೇಮಃ ಶೋಕಮೋಹಭಯಾಪಹಃ ॥

ಅನುವಾದ

ಯಾವ-ಯಾವ ಗುಣ-ದೋಷಗಳಿಂದ ಮನುಷ್ಯನ ಚಿತ್ತವು ಉಪರತವಾಗುತ್ತಾ ಹೋಗುತ್ತದೆಯೋ, ಆಯಾಯಾ ವಸ್ತುಗಳ ಬಂಧನದಿಂದ ಅವನು ಮುಕ್ತನಾಗುತ್ತಾ ಹೋಗುತ್ತಾನೆ. ಮನುಷ್ಯರಿಗಾಗಿ ಈ ನಿವೃತ್ತಿರೂಪೀ ಧರ್ಮವೇ ಪರಮ ಶ್ರೇಯಸ್ಸಿನ ಸಾಧನೆಯಾಗಿದೆ. ಏಕೆಂದರೆ, ಇದೇ ಶೋಕ, ಭಯ, ಮೋಹ ಇವುಗಳನ್ನು ಇಲ್ಲವಾಗಿಸುವಂತಹುದು. ॥18॥

(ಶ್ಲೋಕ - 19)

ಮೂಲಮ್

ವಿಷಯೇಷು ಗುಣಾಧ್ಯಾಸಾತ್ ಪುಂಸಃ ಸಂಗಸ್ತತೋ ಭವೇತ್ ।
ಸಂಗಾತ್ತತ್ರ ಭವೇತ್ಕಾಮಃ ಕಾಮಾದೇವ ಕಲಿರ್ನೃಣಾಮ್ ॥

ಅನುವಾದ

ಉದ್ಧವನೇ! ವಿಷಯಗಳಲ್ಲಿ ಗುಣಗಳನ್ನು ಆರೋಪಿಸುವುದರಿಂದ ಆ ವಸ್ತುವಿನ ಕುರಿತು ಆಸಕ್ತಿ ಉಂಟಾಗುತ್ತದೆ. ಆಸಕ್ತಿ ಉಂಟಾದಾಗ ಅದನ್ನು ಪಡೆಯುವ ಕಾಮನೆ ಹುಟ್ಟುತ್ತದೆ. ಈ ಕಾಮನೆಯ ಪೂರ್ತಿಯಲ್ಲಿ ಯಾವುದಾದರೂ ಅಡ್ಡಿ ಇದಿರಾದರೆ ಜನರಲ್ಲಿ ಪರಸ್ಪರ ಕಲಹವಾಗತೊಡಗುತ್ತದೆ. ॥19॥

(ಶ್ಲೋಕ - 20)

ಮೂಲಮ್

ಕಲೇರ್ದುರ್ವಿಷಹಃ ಕ್ರೋಧಸ್ತಮಸ್ತಮನುವರ್ತತೇ ।
ತಮಸಾ ಗ್ರಸ್ಯತೇ ಪುಂಸಶ್ಚೇತನಾ ವ್ಯಾಪಿನೀ ದ್ರುತಮ್ ॥

ಅನುವಾದ

ಕಲಹದಿಂದ ಅಸಹ್ಯವಾದ ಕ್ರೋಧವು ಉಂಟಾಗುತ್ತದೆ ಮತ್ತು ಕ್ರೋಧ ಬಂದಾಗ ತನ್ನ ಹಿತ-ಅಹಿತದ ಎಚ್ಚರವಿರುವುದಿಲ್ಲ. ಅಜ್ಞಾನ ಆವರಿಸಿಬಿಡುತ್ತದೆ. ಈ ಅಜ್ಞಾನದಿಂದ ಮನುಷ್ಯನಲ್ಲಿ ಕಾರ್ಯಾ ಕಾರ್ಯವನ್ನು ನಿರ್ಣಯಿಸುವ ಚೇತನಾ ಶಕ್ತಿಯು ಲುಪ್ತವಾಗುತ್ತದೆ. ॥20॥

(ಶ್ಲೋಕ - 21)

ಮೂಲಮ್

ತಯಾ ವಿರಹಿತಃ ಸಾಧೋ ಜಂತುಃ ಶೂನ್ಯಾಯ ಕಲ್ಪತೇ ।
ತತೋಸ್ಯ ಸ್ವಾರ್ಥವಿಭ್ರಂಶೋ ಮೂರ್ಚ್ಛಿತಸ್ಯ ಮೃತಸ್ಯ ಚ ॥

ಅನುವಾದ

ಸಾಧುವೇ! ಚೇತನಾಶಕ್ತಿಯು ಅರ್ಥಾತ್ ಸ್ಮೃತಿಯು ಲುಪ್ತವಾದಾಗ ಮನುಷ್ಯನಲ್ಲಿ ಮನುಷ್ಯತ್ವ ಉಳಿಯುವುದಿಲ್ಲ, ಪಶುತ್ವ ಬಂದುಬಿಡುತ್ತದೆ ಹಾಗೂ ಅವನು ಶೂನ್ಯದಂತೆ ಅಸ್ತಿತ್ವಹೀನನಾಗುತ್ತಾನೆ. ಆಗ ಅವನ ಸ್ಥಿತಿಯು ಮೂರ್ಛಿತ ಅಥವಾ ಹೆಣದಂತಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವನ ಸ್ವಾರ್ಥವೂ ಕೈಗೂಡುವುದಿಲ್ಲ, ಪರಮಾರ್ಥವೂ ಇಲ್ಲ. ॥21॥

(ಶ್ಲೋಕ - 22)

ಮೂಲಮ್

ವಿಷಯಾಭಿನಿವೇಶೇನ ನಾತ್ಮಾನಂ ವೇದ ನಾಪರಮ್ ।
ವೃಕ್ಷಜೀವಿಕಯಾ ಜೀವನ್ವ್ಯರ್ಥಂ ಭಸೇವ ಯಃ ಶ್ವಸನ್ ॥

ಅನುವಾದ

ವಿಷಯಗಳನ್ನು ಚಿಂತಿಸುತ್ತಾ-ಚಿಂತಿಸುತ್ತಾ ಅವನು ವಿಷಯರೂಪನಾಗುತ್ತಾನೆ. ಅವನ ಜೀವನವು ವೃಕ್ಷದಂತೆ ಜಡವಾಗುತ್ತದೆ. ಕಮ್ಮಾರನ ತಿದಿಯಂತೆ ಅವನ ಶರೀರದಲ್ಲಿ ವ್ಯರ್ಥವಾಗಿ ಶ್ವಾಸ ನಡೆಯುತ್ತಾ ಇರುತ್ತದೆ. ಅವನಿಗೆ ತನ್ನದಾಗಲೀ, ಬೇರೆಯವರ ದಾಗಲೀ ಜ್ಞಾನವಿರುವುದಿಲ್ಲ. ಅವನು ಸರ್ವಥಾ ಆತ್ಮ ವಂಚಿತನಾಗುತ್ತಾನೆ. ॥22॥

(ಶ್ಲೋಕ - 23)

ಮೂಲಮ್

ಲಶ್ರುತಿರಿಯಂ ನೃಣಾಂ ನ ಶ್ರೇಯೋ ರೋಚನಂ ಪರಮ್ ।
ಶ್ರೇಯೋವಿವಕ್ಷಯಾ ಪ್ರೋಕ್ತಂ ಯಥಾ ಭೈಷಜ್ಯರೋಚನಮ್ ॥

ಅನುವಾದ

ಸವಿಮಾತುಗಳನ್ನಾಡಿ ಮಕ್ಕಳಿಗೆ ಕಹಿ ಔಷಧಿ ಕುಡಿಸುವಂತೆ, ವೇದಗಳಲ್ಲಿರುವ ಲಶ್ರುತಿಯು ವಾಸ್ತವವಾಗಿ ಶ್ರೇಯಸ್ಕರವಲ್ಲ. ಕೇವಲ ವೇದಗಳಲ್ಲಿ ಅಭಿರುಚಿಯನ್ನು ಉಂಟುಮಾಡಲೆಂದೇ ಇವೆ. ಆದ್ದರಿಂದ ವೈದಿಕ ಕರ್ಮಗಳಲ್ಲಿ ಅಭಿರುಚಿ ಉಂಟಾಗಿ ಅವನು ತನ್ನ ಶ್ರೇಯಸ್ಸನ್ನು ಮಾಡಿಕೊಳ್ಳಬಲ್ಲನು. ॥23॥

(ಶ್ಲೋಕ - 24)

ಮೂಲಮ್

ಉತ್ಪತ್ತ್ಯೈವ ಹಿ ಕಾಮೇಷು ಪ್ರಾಣೇಷು ಸ್ವಜನೇಷು ಚ ।
ಆಸಕ್ತಮನಸೋ ಮರ್ತ್ಯಾ ಆತ್ಮನೋನರ್ಥಹೇತುಷು ॥

(ಶ್ಲೋಕ - 25)

ಮೂಲಮ್

ನ ತಾನವಿದುಷಃ ಸ್ವಾರ್ಥಂ ಭ್ರಾಮ್ಯತೋ ವೃಜಿನಾಧ್ವನಿ ।
ಕಥಂ ಯುಂಜ್ಯಾತ್ ಪುನಸ್ತೇಷು ತಾಂಸ್ತಮೋ ವಿಶತೋ ಬುಧಃ ॥

ಅನುವಾದ

ಕರ್ಮಗಳಲ್ಲಿ, ಪ್ರಾಣಗಳಲ್ಲಿ, ತನ್ನ ಹತ್ತಿರದ ನೆಂಟರಲ್ಲಿ, ಮನುಷ್ಯನ ಮನಸ್ಸು ಸ್ವಾಭಾವಿಕವಾಗಿಯೇ ಆಸಕ್ತವಾಗಿರುತ್ತದೆ. ಇದು ಅವನನ್ನು ಪತನವಾಗಿಸುವಂತಹುದು. ಹೀಗೆ ಈ ಮನುಷ್ಯನು ಜನ್ಮ-ಜನ್ಮಾಂತರದ ಸಂಸ್ಕಾರಗಳಿಗೆ ವಶೀಭೂತನಾಗಿ ತನ್ನ ಸ್ವಾರ್ಥದಿಂದ ಭ್ರಷ್ಟನಾಗಿರುವನು. ಪರಮಾರ್ಥಪಥದಿಂದ ಪತಿತನಾದ ಪ್ರಾಣಿಯು ಇನ್ನೂ ಹೆಚ್ಚು ಅಂಧಕಾರದಲ್ಲಿ ಹೋಗು ತ್ತಿದ್ದಾನೆ. ಇದನ್ನು ನೋಡಿ ವೇದವಾಣಿ ಅಥವಾ ಯಾವುದೇ ವಿದ್ವಾಂಸನು ಅವನನ್ನು ಮತ್ತೂ ಹೆಚ್ಚಿನ ಕುಮಾರ್ಗದಲ್ಲಿ ಅಲೆಯಲು ಏಕೆ ಪ್ರವೃತ್ತವಾಗಿಸೀತು? ವೇದವಾದರೋ ಜ್ಞಾನಭಂಡಾರವಾಗಿದೆ. ಆದ್ದರಿಂದ ವೇದವು ಕುಮಾರ್ಗದಿಂದ ತೊಲಗಿಸಿ, ವೈದಿಕ ಕರ್ಮಗಳಲ್ಲಿ ಫಲಶ್ರುತಿಯ ಮಾತನ್ನು ಹೇಳಿ, ಅವನಲ್ಲಿ ರುಚಿಯನ್ನುಂಟುಮಾಡಿ ಸನ್ಮಾರ್ಗಕ್ಕೆ ಹಚ್ಚುವ ಪ್ರೇರಣೆಯನ್ನು ನೀಡುತ್ತದೆ. ॥24-25॥

(ಶ್ಲೋಕ - 26)

ಮೂಲಮ್

ಏವಂ ವ್ಯವಸಿತಂ ಕೇಚಿದವಿಜ್ಞಾಯ ಕುಬುದ್ಧಯಃ ।
ಲಶ್ರುತಿಂ ಕುಸುಮಿತಾಂ ನ ವೇದಜ್ಞಾ ವದಂತಿ ಹಿ ॥

ಅನುವಾದ

ದೂಷಿತ ಬುದ್ಧಿಯ ಜನರು (ಕರ್ಮವಾದಿಗಳು) ವೇದಗಳ ಈ ಅಭಿಪ್ರಾಯವನ್ನು ತಿಳಿಯದೆ ಕರ್ಮಾಸಕ್ತಿವಶರಾಗಿ ಪುಷ್ಪಗಳಂತೆ ಆಕರ್ಷಕವಾಗಿ ಸ್ವರ್ಗಾದಿ ಲೋಕಗಳನ್ನು ವರ್ಣಿಸುತ್ತಾ, ಕೇಳುತ್ತಾ ಇರುತ್ತಾರೆ. ಅವನ್ನೇ ಪರಮ ಫಲವೆಂದು ತಿಳಿದು ದಾರಿತಪ್ಪುತ್ತಾರೆ. ಆದರೆ ವೇದಗಳನ್ನು ತಿಳಿದ ಜನರು ಶ್ರುತಿಗಳ ಇಂತಹ ತಾತ್ಪರ್ಯವನ್ನು ಹೇಳುವುದಿಲ್ಲ. ॥26॥

(ಶ್ಲೋಕ - 27)

ಮೂಲಮ್

ಕಾಮಿನಃ ಕೃಪಣಾ ಲುಬ್ಧಾಃ ಪುಷ್ಪೇಷು ಲಬುದ್ಧಯಃ ।
ಅಗ್ನಿಮುಗ್ಧಾ ಧೂಮತಾಂತಾಃ ಸ್ವಂ ಲೋಕಂ ನ ವಿದಂತಿ ತೇ ॥

ಅನುವಾದ

ವಿಷಯವಾಸನೆಯಲ್ಲಿ ಸಿಕ್ಕಿಬಿದ್ದ ದೀನ-ಹೀನ, ಲೋಭೀಪುರುಷರು ಬಣ್ಣ-ಬಣ್ಣದ ಹೂವುಗಳಂತೆ ಸ್ವರ್ಗಾದಿ ಲೋಕಗಳನ್ನೇ ಎಲ್ಲವೂ ಎಂದು ತಿಳಿದುಕೊಳ್ಳುತ್ತಾರೆ. ಅಗ್ನಿಯ ಮೂಲಕ ಸಿದ್ಧವಾಗುವ ಯಜ್ಞ-ಯಾಗಾದಿ ಕರ್ಮಗಳಲ್ಲೇ ಮೋಹಿತರಾಗಿ ದೇವಲೋಕ, ಪಿತೃಲೋಕ ಮುಂತಾದವುಗಳಿಗೆ ಹೋಗುತ್ತಾರೆ. ಬೇರೆಡೆ ಅಲೆಯುವುದರಿಂದ ಅವರು ತಮ್ಮ ನಿಜಧಾಮವಾದ ಪರಮಪದವನ್ನು ಹೊಂದುವುದಿಲ್ಲ. ॥27॥

(ಶ್ಲೋಕ - 28)

ಮೂಲಮ್

ನ ತೇ ಮಾಮಂಗ ಜಾನಂತಿ ಹೃದಿಸ್ಥಂ ಯ ಇದಂ ಯತಃ ।
ಉಕ್ಥಶಸಾ ಹ್ಯಸುತೃಪೋ ಯಥಾ ನೀಹಾರಚಕ್ಷುಷಃ ॥

ಅನುವಾದ

ಪ್ರಿಯ ಉದ್ಧವನೇ! ಪರಮಾತ್ಮನಿಂದ ಈ ವಿಶ್ವವು ಉತ್ಪನ್ನವಾಗಿದೆ. ಆ ಪರಮಪಿತಾ ಪರಮಾತ್ಮನಾದರೋ ಅವರ ಹೃದಯದಲ್ಲೇ ವಿರಾಜಮಾನನಾಗಿದ್ದಾನೆ. ಆದರೆ ಅವರು ಕರ್ಮ ಮಾರ್ಗದ ಶಸವನ್ನು ಹಿಡಿದೇ ನಡೆಯುತ್ತಾರೆ. ಇಂತಹ ಪ್ರಾಣಪೋಷಣೆಯಲ್ಲೇ ತೊಡಗಿರುವ ಜನರ ಕಣ್ಣುಗಳಲ್ಲಿ ಪ್ರಾಯಶಃ ಕತ್ತಲೆಯೇ ಆವರಿಸಿರುತ್ತದೆ. ॥28॥

(ಶ್ಲೋಕ - 29)

ಮೂಲಮ್

ತೇ ಮೇ ಮತಮವಿಜ್ಞಾಯ ಪರೋಕ್ಷಂ ವಿಷಯಾತ್ಮಕಾಃ ।
ಹಿಂಸಾಯಾಂ ಯದಿ ರಾಗಃ ಸ್ಯಾದ್ಯಜ್ಞ ಏವ ನ ಚೋದನಾ ॥

ಅನುವಾದ

ಇದೇ ಕಾರಣದಿಂದ ಅವರು ನನ್ನನ್ನು ತಿಳಿಯದೇ ಹೋಗುತ್ತಾರೆ ಹಾಗೂ ನನ್ನ ಪರೋಕ್ಷ ಮತವನ್ನೂ ಕೂಡ ತಿಳಿಯದೆ ಹೋಗುವರು. ಬುದ್ಧಿಯಲ್ಲಿ ವಿಷಯಗಳೇ ನುಸುಳಿದ್ದರಿಂದ ಹಿಂಸೆಯಲ್ಲೇ ಅವರಿಗೆ ಆಸಕ್ತಿ ಇರುತ್ತದೆ. ಆ ಹಿಂಸಾವೃತ್ತಿಯನ್ನು ತಡೆಯುವುದಕ್ಕಾಗಿಯೇ, ಅವರ ಈ ಉಚ್ಛಂಖಲ ಪ್ರವೃತ್ತಿ ಒಂದು ಸೀಮೆಯೊಳಗೆ ಬಂಧಿಸಿರಲಿ ಎಂದೇ ಯಜ್ಞದ ವಿಧಾನವನ್ನು ಮಾಡಲಾಗಿದೆ. ॥29॥

(ಶ್ಲೋಕ - 30)

ಮೂಲಮ್

ಹಿಂಸಾವಿಹಾರಾ ಹ್ಯಾಲಬ್ಧೈಃ ಪಶುಭಿಃ ಸ್ವಸುಖೇಚ್ಛಯಾ ।
ಯಜಂತೇ ದೇವತಾ ಯಜ್ಞೈಃ ಪಿತೃಭೂತಪತೀನ್ ಖಲಾಃ ॥

ಅನುವಾದ

ಈ ಪ್ರಕಾರ ಆ ಪಾಮರ ವಿಷಯಲೋಲುಪರು ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲಿಕ್ಕಾಗಿ ಯಜ್ಞಗಳ ಮೂಲಕ, ದೇವತೆಗಳನ್ನು, ಪಿತೃಗಳನ್ನು ಮತ್ತು ಭೂತಪತಿಗಳನ್ನು ಒಲಿಸಿಕೊಳ್ಳಲು ಯಜನದ ದಂಭಾಚಾರವನ್ನು ಮಾಡುತ್ತಾ, ಮುಗ್ಧ ಮೂಕಪಶುಗಳನ್ನು ಹತ್ಯೆ ಮಾಡುತ್ತಾರೆ. ॥30॥

(ಶ್ಲೋಕ - 31)

ಮೂಲಮ್

ಸ್ವಪ್ನೋಪಮಮಮುಂ ಲೋಕಮಸಂತಂ ಶ್ರವಣಪ್ರಿಯಮ್ ।
ಆಶಿಷೋ ಹೃದಿ ಸಂಕಲ್ಪ್ಯ ತ್ಯಜಂತ್ಯರ್ಥಾನ್ಯಥಾ ವಣಿಕ್ ॥

ಅನುವಾದ

ಎಲೈ ಉದ್ಧವನೇ! ಕೇಳಿಬರುವ ಸ್ವರ್ಗಾದಿ ಲೋಕಗಳ ಸುಖಭೋಗ, ಐಶ್ವರ್ಯಗಳು ಉಂಟಾಗದಿದ್ದರೂ ಕರ್ಣಪ್ರಿಯವಾಗಿವೆ. ವ್ಯಾಪಾರಿಯು ಲಾಭದ ಆಸೆಯಿಂದ ತನ್ನ ಮೂಲ ಭಂಡವಾಳವನ್ನು ಕಳೆದುಕೊಳ್ಳುವಂತೆ ಆ ಭೋಗಗಳ ಆಸೆಯನ್ನಿರಿಸಿ ಅದಕ್ಕಾಗಿ ತನ್ನ ನಿಜವಾದ ದ್ರವ್ಯವನ್ನು ಆ ಕರ್ಮಠರು ಕಳೆದುಕೊಳ್ಳುತ್ತಾರೆ. ॥31॥

(ಶ್ಲೋಕ - 32)

ಮೂಲಮ್

ರಜಃಸತ್ತ್ವತಮೋನಿಷ್ಠಾ ರಜಃಸತ್ತ್ವತಮೋಜುಷಃ ।
ಉಪಾಸತ ಇಂದ್ರಮುಖ್ಯಾನ್ ದೇವಾದೀನ್ ನ ತಥೈವ ಮಾಮ್ ॥

ಅನುವಾದ

ರಜಮಿಶ್ರಿತ ಸತ್ತ್ವಗುಣಿಗಳು ಮತ್ತು ತಮೋಗುಣ ಪ್ರಕೃತಿಯ ಜನರು ಈ ರೀತಿಯ ರಜಮಿಶ್ರಿತ ಸತ್ತ್ವಗುಣ ಮತ್ತು ತಮೋಗುಣಗಳನ್ನು ಸೇವಿಸುತ್ತಾ, ಆ ಸಾಮಗ್ರಿಗಳ ಮೂಲಕ ಇಂದ್ರಾದಿ ದೇವತೆಗಳನ್ನು ಉಪಾಸಿಸುತ್ತಾರೆ. ಆದರೆ ಅವರು ನನ್ನ ಉಪಾಸನೆಯನ್ನು ಮಾಡುವುದಿಲ್ಲ. ॥32॥

(ಶ್ಲೋಕ - 33)

ಮೂಲಮ್

ಇಷ್ಟ್ವೇಹ ದೇವತಾ ಯಜ್ಞೈರ್ಗತ್ವಾ ರಂಸ್ಯಾಮಹೇ ದಿವಿ ।
ತಸ್ಯಾಂತ ಇಹ ಭೂಯಾಸ್ಮ ಮಹಾಶಾಲಾ ಮಹಾಕುಲಾಃ ॥

(ಶ್ಲೋಕ - 34)

ಮೂಲಮ್

ಏವಂ ಪುಷ್ಪಿತಯಾ ವಾಚಾ ವ್ಯಾಕ್ಷಿಪ್ತಮನಸಾಂ ನೃಣಾಮ್ ।
ಮಾನಿನಾಂ ಚಾತಿಸ್ತಬ್ಧಾನಾಂ ಮದ್ವಾರ್ತಾಪಿ ನ ರೋಚತೇ ॥

ಅನುವಾದ

ಅವರು ಈ ಪ್ರಕಾರ ಕಲ್ಪನೆ ಮಾಡುತ್ತಿರುತ್ತಾರೆ ‘ನಾವುಗಳು ಈ ಲೋಕದಲ್ಲಿ ಯಜ್ಞಗಳ ಮೂಲಕ ದೇವತೆಗಳನ್ನು ತೃಪ್ತಿಪಡಿಸಿ ಸ್ವರ್ಗಕ್ಕೆ ಹೋಗುವೆವು. ಅಲ್ಲಿ ದಿವ್ಯ ಭೋಗ-ಆನಂದವನ್ನು ಅನುಭವಿಸುವೆವು. ಅನಂತರ ಪುನಃ ನಮ್ಮ ಜನ್ಮವಾದಾಗ ನಾವು ದೊಡ್ಡ ಕುಲೀನ ಪರಿವಾರದಲ್ಲಿ ಹುಟ್ಟುವೆವು. ನಮ್ಮ ದೊಡ್ಡ ದೊಡ್ಡ ಅರಮನೆಗಳಿರುವುವು, ನಮ್ಮ ಕುಟುಂಬ ತುಂಬಾ ಸುಖೀಯಾಗಿದ್ದು ದೊಡ್ಡದಾಗಿರಬಹುದು.’ ಹೀಗೆ ನೋಡಲು ಮಾತ್ರ ಸುಂದರ, ಮಧುರವಾಣಿಯಿಂದ ಅವರ ಚಿತ್ತವು ಕ್ಷುಬ್ಧವಾಗುತ್ತದೆ. ಅದರಲ್ಲೇ ಮೋಹಿತರಾಗಿರುತ್ತಾರೆ. ಆ ಮದಾಂಧರಿಗೆ ನನ್ನ ಸಂಬಂಧವಾದ ಮಾತು ಕೂಡ ಒಳ್ಳೆಯದೆನಿಸುವುದಿಲ್ಲ.॥33-34॥

(ಶ್ಲೋಕ - 35)

ಮೂಲಮ್

ವೇದಾ ಬ್ರಹ್ಮಾತ್ಮವಿಷಯಾಸಿಕಾಂಡವಿಷಯಾ ಇಮೇ ।
ಪರೋಕ್ಷವಾದಾ ಋಷಯಃ ಪರೋಕ್ಷಂ ಮಮ ಚ ಪ್ರಿಯಮ್ ॥

ಅನುವಾದ

ಎಲೈ ಉದ್ಧವನೇ! ವೇದಗಳಲ್ಲಿ ಕರ್ಮಕಾಂಡ, ಉಪಾಸನಾ ಕಾಂಡ, ಜ್ಞಾನಕಾಂಡ ಎಂಬ ಮೂರು ಕಾಂಡಗಳಿವೆ. ಈ ಮೂರರಲ್ಲಿಯೂ ಪ್ರತಿಪಾದಿತ ವಿಷಯವು ಬ್ರಹ್ಮ ಮತ್ತು ಆತ್ಮನ ಏಕತೆಯಾಗಿದೆ. ಎಲ್ಲ ಮಂತ್ರಗಳು ಮತ್ತು ಮಂತ್ರ ದ್ರಷ್ಟಾರ ಋಷಿಗಳು ಈ ವಿಷಯವನ್ನು ತೆರೆದುಹೇಳದೆ ಗುಪ್ತಭಾವದಿಂದ ಹೇಳುತ್ತಾರೆ. ನನಗೂ ಕೂಡ ಈ ಮಾತನ್ನು ಗುಪ್ತರೂಪದಿಂದ ಹೇಳುವುದೇ ಅಭೀಷ್ಟವಾಗಿದೆ.* (ಏಕೆಂದರೆ ಗುಪ್ತವಾಗಿಡುವುದರಿಂದಲೇ ಸೃಷ್ಟಿಯೂ ನಡೆಯಬಲ್ಲದು.) ॥35॥

ಟಿಪ್ಪನೀ
  • ಏಕೆಂದರೆ, ಎಲ್ಲ ಜನರು ಇದರ ಅಧಿಕಾರಿಗಳಲ್ಲ. ಅಂತಃಕರಣ ಶುದ್ಧವಾದ ಮೇಲೆಯೇ ಈ ಮಾತು ಅರಿವಿಗೆ ಬರುತ್ತದೆ.

(ಶ್ಲೋಕ - 36)

ಮೂಲಮ್

ಶಬ್ದಬ್ರಹ್ಮ ಸುದುರ್ಬೋಧಂ ಪ್ರಾಣೇಂದ್ರಿಯಮನೋಮಯಮ್ ।
ಅನಂತಪಾರಂ ಗಂಭೀರಂ ದುರ್ವಿಗಾಹ್ಯಂ ಸಮುದ್ರವತ್ ॥

ಅನುವಾದ

ವೇದಗಳ ಹೆಸರು ಶಬ್ದ ಬ್ರಹ್ಮವಾಗಿದೆ. ಅವು ನನ್ನ ಮೂರ್ತಿಯಾಗಿವೆ. ಇದರಿಂದ ಅವುಗಳ ರಹಸ್ಯವನ್ನು ತಿಳಿಯುವುದು ಅತ್ಯಂತ ಕಠಿಣವಾಗಿದೆ. ಆ ಶಬ್ದ ಬ್ರಹ್ಮವು ಪರಾ, ಪಶ್ಯಂತಿ, ಮಧ್ಯಮಾವಾಣಿಗಳ ರೂಪದಲ್ಲಿ ಪ್ರಾಣ, ಮನ, ಇಂದ್ರಿಯಮಯವಾಗಿದೆ. ಸಮುದ್ರದಂತೆ ಸೀಮಾರಹಿತ, ಗಂಭೀರವಾಗಿದೆ. ಅದರ ಆಳ ತಿಳಿಯುವುದು ಅತ್ಯಂತ ಕಠಿಣ ವಾಗಿದೆ. ದೊಡ್ಡ-ದೊಡ್ಡ ವಿದ್ವಾಂಸರೂ ಕೂಡ ಅವುಗಳ ತಾತ್ಪರ್ಯವನ್ನು ಸರಿಯಾಗಿ ನಿರ್ಣಯ ಮಾಡಲಾರರು. ॥36॥

(ಶ್ಲೋಕ - 37)

ಮೂಲಮ್

ಮಯೋಪಬೃಂಹಿತಂ ಭೂಮ್ನಾ ಬ್ರಹ್ಮಣಾನಂತಶಕ್ತಿನಾ ।
ಭೂತೇಷು ಘೋಷರೂಪೇಣ ಬಿಸೇಷೂರ್ಣೇವ ಲಕ್ಷ್ಯತೇ ॥

ಅನುವಾದ

ಉದ್ಧವನೇ! ನಾನು ಅನಂತಶಕ್ತಿಸಂಪನ್ನ ಹಾಗೂ ಸ್ವಯಂ ಅನಂತ ಬ್ರಹ್ಮನಾಗಿದ್ದೇನೆ. ನಾನೇ ವೇದವಾಣಿಯನ್ನು ವಿಸ್ತರಿಸಿರುವೆನು. ಕಮಲದ ದಂಟಿನಲ್ಲಿ ತೆಳ್ಳನೆಯ ಸೂಕ್ಷ್ಮದಾರವಿರುವಂತೆ ಈ ವೇದವಾಣಿಯು ಪ್ರಾಣಿಗಳ ಅಂತಃಕರಣದಲ್ಲಿ ಅನಾಹತನಾದದ ರೂಪದಲ್ಲಿ ಪ್ರಕಟವಾಗುತ್ತದೆ. ॥37॥

(ಶ್ಲೋಕ - 38)

ಮೂಲಮ್

ಯಥೋರ್ಣನಾಭಿರ್ಹೃದಯಾದೂರ್ಣಾಮುದ್ವಮತೇ ಮುಖಾತ್ ।
ಆಕಾಶಾದ್ಘೋಷವಾನ್ಪ್ರಾಣೋ ಮನಸಾ ಸ್ಪರ್ಶರೂಪಿಣಾ ॥

(ಶ್ಲೋಕ - 39)

ಮೂಲಮ್

ಛಂದೋಮಯೋಮೃತಮಯಃ ಸಹಸ್ರಪದವೀಂ ಪ್ರಭುಃ ।
ಓಂಕಾರಾದ್ವ್ಯಂಜಿತಸ್ಪರ್ಶಸ್ವರೋಷ್ಮಾಂತಃಸ್ಥಭೂಷಿತಾಮ್ ॥

(ಶ್ಲೋಕ - 40)

ಮೂಲಮ್

ವಿಚಿತ್ರಭಾಷಾವಿತತಾಂ ಛಂದೋಭಿಶ್ಚತುರುತ್ತರೈಃ ।
ಅನಂತಪಾರಾಂ ಬೃಹತೀಂ ಸೃಜತ್ಯಾಕ್ಷಿಪತೇ ಸ್ವಯಮ್ ॥

ಅನುವಾದ

ಪ್ರತಿಯೋರ್ವ ಪ್ರಾಣಿಯ ಹೃದಯಾಕಾಶದಲ್ಲಿ ಅನಾಹತನಾದ ರೂಪದಲ್ಲಿ ಘೋಷಯುಕ್ತ ಪ್ರಾಣದ ಅಭಿವ್ಯಕ್ತಿಯು ಅನಾಹತನಾದದ ರೂಪದಲ್ಲಿ ಪ್ರಕಟವಾಗುತ್ತದೆ. ಅದು ಪ್ರಾಣ, ಮನಸ್ಸಿನ ಮೂಲಕ ಸ್ಪರ್ಶ ಆದಿ ವರ್ಣಗಳ ರೂಪದಲ್ಲಿ ಹೊರಗೆ ಬರುತ್ತದೆ. ‘ಅ’ ದಿಂದ ‘ಮ’ವರೆಗೆ ಎಲ್ಲ ವಾಣಿಗಳು ಓಂಕಾರದಿಂದಲೇ ಉತ್ಪನ್ನವಾಗಿವೆ. ಸ್ಥಾನಭೇದದಿಂದ ಸ್ಪರ್ಶ, ಸ್ವರ, ಊಷ್ಮ, ಅಂತಸ್ಥಃ ಹೀಗೆ ಅವುಗಳ ಹೆಸರಾದುವು. ಜೇಡವು ತನ್ನ ಬಾಯಿಂದಲೇ ಬಲೆಯನ್ನುನೆಯ್ದು ಮತ್ತೆ ನುಂಗಿಬಿಡುವಂತೆ ವೇದಮಯ ಪ್ರಭುವಾದ ನಾನು ಓಂಕಾರದಿಂದಲೇ ಸಾವಿರಾರು ಪ್ರಕಾರದ ಬೃಹತೀವಾಣಿಯನ್ನು ಉತ್ಪನ್ನ ಮಾಡುತ್ತೇನೆ ಹಾಗೂ ನನ್ನಲ್ಲೇ ಲೀನಗೊಳಿಸಿಕೊಳ್ಳುತ್ತೇನೆ. ಹೀಗೆ ವಾಣಿಯು ನನ್ನದೇ ಸ್ವರೂಪವಾಗಿದೆ. ಆ ವಾಣಿಯುಹೃದ್ಗತ ಸೂಕ್ಷ್ಮ ಓಂಕಾರದ ಮೂಲಕ ಅಭಿವ್ಯಕ್ತ ಸ್ಪರ್ಶ (‘ಕ’ದಿಂದ ಹಿಡಿದು ‘ಮ’ ವರೆಗೆ 25), ಸ್ವರ (‘ಅ’ ದಿಂದ ‘ಔ’ ವರೆಗೆ 9), ಊಷ್ಮಾ (ಶ, ಷ, ಸ, ಹ), ಅಂತಸ್ಥ (ಯ, ರ, ಲ, ವ) ಈ ವರ್ಣಗಳಿಂದ ವಿಭೂಷಿತವಾಗಿವೆ. ಅವುಗಳಲ್ಲಿ ಉತ್ತರೋತ್ತರ ನಾಲ್ಕು-ನಾಲ್ಕು ವರ್ಣಗಳು ಹೆಚ್ಚುತ್ತಾ ಅನೇಕ ಛಂದಸ್ಸುಗಳು ಇವೆ. ಅವುಗಳ ಮೂಲಕ ವಿಚಿತ್ರ ಭಾಷೆಯ ರೂಪದಲ್ಲಿ ಅದುವಿಸ್ತೃತವಾಗಿದೆ. ॥38-40॥

(ಶ್ಲೋಕ - 41)

ಮೂಲಮ್

ಗಾಯತ್ರುಷ್ಣಿಗನುಷ್ಟುಪ್ ಚ ಬೃಹತೀ ಪಂಕ್ತಿರೇವ ಚ ।
ತ್ರಿಷ್ಟುಬ್ಜಗತ್ಯತಿಚ್ಛಂದೋ ಹ್ಯತ್ಯಷ್ಟ್ಯತಿಜಗದ್ವಿರಾಟ್ ॥

ಅನುವಾದ

ನಾಲ್ಕು-ನಾಲ್ಕು ವರ್ಣಗಳು ಹೆಚ್ಚುತ್ತಾ ಅನೇಕ ಛಂದಸ್ಸುಗಳಾಗುತ್ತವೆ. ಅವು ಹೀಗಿವೆ ಗಾಯತ್ರೀ, ಉಷ್ಣಿಕ್, ಅನುಷ್ಟುಪ್, ಬೃಹತೀ, ಪಂಕ್ತೀ, ತ್ರಿಷ್ಟುಪ್, ಜಗತೀ, ಅತಿಚ್ಛಂದ, ಅತ್ಯಷ್ಟಿ, ಅತಿಜಗತಿ ಮತ್ತು ವಿರಾಟ್. ॥41॥

(ಶ್ಲೋಕ - 42)

ಮೂಲಮ್

ಕಿಂ ವಿಧತ್ತೇ ಕಿಮಾಚಷ್ಟೇ ಕಿಮನೂದ್ಯ ವಿಕಲ್ಪಯೇತ್ ।
ಇತ್ಯಸ್ಯಾ ಹೃದಯಂ ಲೋಕೇ ನಾನ್ಯೋ ಮದ್ವೇದ ಕಶ್ಚನ ॥

ಅನುವಾದ

ಆ ವೇದ ವಾಣಿಯು ಕರ್ಮಕಾಂಡ ದಲ್ಲಿ ಯಾವ ವಿಧಾನ ಮಾಡುತ್ತದೆ, ಉಪಾಸನಾ ಕಾಂಡದಲ್ಲಿ ಯಾವ ದೇವತೆಗಳನ್ನು ವರ್ಣಿಸುತ್ತದೆ, ಜ್ಞಾನಕಾಂಡದಲ್ಲಿ ಯಾವ ಪ್ರತೀತಿಗಳನ್ನು ಅನುವಾದಿಸುತ್ತಾ, ಯಾವುದನ್ನು ನಿಷೇಧ ಮಾಡುತ್ತದೆ. ಇದರ ರಹಸ್ಯ ನಾನಲ್ಲದೆ ಬೇರೆ ಯಾರೂ ತಿಳಿಯಲಾರರು. ॥42॥

(ಶ್ಲೋಕ - 43)

ಮೂಲಮ್

ಮಾಂ ವಿಧತ್ತೇಭಿಧತ್ತೇ ಮಾಂ ವಿಕಲ್ಪ್ಯಾಪೋಹ್ಯತೇ ತ್ವಹಮ್ ।
ಏತಾವಾನ್ ಸರ್ವವೇದಾರ್ಥಃ ಶಬ್ದ ಆಸ್ಥಾಯ ಮಾಂ ಭಿದಾಮ್ ।
ಮಾಯಾಮಾತ್ರಮನೂದ್ಯಾಂತೇ ಪ್ರತಿಷಿಧ್ಯ ಪ್ರಸೀದತಿ ॥

ಅನುವಾದ

ವೇದವು ಯಜ್ಞಾದಿಗಳ ಮೂಲಕ ನನ್ನನ್ನೇ ವರ್ಣಿಸುತ್ತವೆ. ಉಪಾಸನಾಕಾಂಡದಲ್ಲಿ ನನ್ನನ್ನೇ ಮುಖ್ಯಾರ್ಥದಲ್ಲಿ ದೇವತೆಗಳನ್ನು ವರ್ಣಿಸುತ್ತದೆ; ಜ್ಞಾನ ಕಾಂಡದ ಮೂಲಕ ನನ್ನಿಂದ ಬೇರೆಯಾದ ವಸ್ತುವನ್ನು ವರ್ಣಿಸುತ್ತಾ ‘ನೇತಿ-ನೇತಿ’ ವಾಕ್ಯಗಳ ಮೂಲಕ ಬೇರೆಯದನ್ನು ನಿಷೇಧವನ್ನೂ ಮಾಡುತ್ತದೆ. ಈ ಪ್ರಕಾರ ವೇದವು ನನ್ನನ್ನೇ ಮುಂದಿರಿಸಿಕೊಂಡು ನನ್ನಲ್ಲೇ ಭೇದವನ್ನು ಆರೋಪಿಸುತ್ತದೆ, ಇದೆಲ್ಲವೂ ಮಾಯೆಯೇ ಆಗಿದೆ. ಕೊನೆಯಲ್ಲಿ ‘‘ಸರ್ವಂ ಖಲ್ವಿದಂ ಬ್ರಹ್ಮ’’ ಎಂದೇ ಹೇಳಿ ವೇದವು ಸಂತೋಷಪಡುತ್ತದೆ. ॥43॥

ಅನುವಾದ (ಸಮಾಪ್ತಿಃ)

ಇಪ್ಪತ್ತೊಂದನೆಯ ಅಧ್ಯಾಯವು ಮುಗಿಯಿತು. ॥21॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಏಕವಿಂಶೋಽಧ್ಯಾಯಃ ॥21॥