[ಹತ್ತೊಂಭತ್ತನೆಯ ಅಧ್ಯಾಯ]
ಭಾಗಸೂಚನಾ
ಜ್ಞಾನ, ಭಕ್ತಿ, ಯಮ, ನಿಯಮ ಮುಂತಾದ ಸಾಧನೆಗಳ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯೋ ವಿದ್ಯಾಶ್ರುತಸಂಪನ್ನ ಆತ್ಮವಾನ್ ನಾನುಮಾನಿಕಃ ।
ಮಾಯಾಮಾತ್ರಮಿದಂ ಜ್ಞಾತ್ವಾ ಜ್ಞಾನಂ ಚ ಮಯಿ ಸಂನ್ಯಸೇತ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಎಲೈ ಉದ್ಧವನೇ! ಉಪನಿಷದಾದಿ ಶಾಸ್ತ್ರಗಳ ಶ್ರವಣ, ಮನನ, ನಿದಿಧ್ಯಾಸನದ ಮೂಲಕ ಆತ್ಮಸಾಕ್ಷಾತ್ಕಾರ ಪಡೆದಿರುವವನು, ಶ್ರೋತ್ರಿಯ ಹಾಗೂ ಬ್ರಹ್ಮನಿಷ್ಠನಾಗಿರುವವನು, ನಿಶ್ಚಯವು ಕೇವಲ ಯುಕ್ತಿಗಳಿಂದ ಮತ್ತು ಅನುಮಾನದಿಂದ ಪ್ರತ್ಯಕ್ಷವಾಗಿ ಇದೆಲ್ಲವೂ ಮಾಯಾಮಯವಾಗಿದೆ ಎಂಬ ಅನುಭವವನ್ನು ಪಡೆದಿರುವವನು ಪಡೆದ ಜ್ಞಾನವನ್ನೂ ನನ್ನಲ್ಲೇ ಲೀನಗೊಳಿಸಲಿ. ॥1॥
(ಶ್ಲೋಕ - 2)
ಮೂಲಮ್
ಜ್ಞಾನಿನಸ್ತ್ವಹಮೇವೇಷ್ಟಃ ಸ್ವಾರ್ಥೋ ಹೇತುಶ್ಚ ಸಂಮತಃ ।
ಸ್ವರ್ಗಶ್ಚೈವಾಪವರ್ಗಶ್ಚ ನಾನ್ಯೋರ್ಥೋ ಮದೃತೇ ಪ್ರಿಯಃ ॥
ಅನುವಾದ
ಜ್ಞಾನಿಗೆ ಅಭೀಷ್ಟವಸ್ತುವು ನಾನೇ ಆಗಿದ್ದೇನೆ. ಅವನ ಸಾಧನೆ ಸಾಧ್ಯ, ಸ್ವರ್ಗ ಮತ್ತು ಅಪವರ್ಗ (ಮೋಕ್ಷ)ವೂ ನಾನೇ ಆಗಿದ್ದೇನೆ. ನಾನಲ್ಲದೆ ಬೇರೆ ಯಾವ ಪದಾರ್ಥವನ್ನು ಅವನು ಪ್ರೇಮಿಸುವುದಿಲ್ಲ. ॥2॥
(ಶ್ಲೋಕ - 3)
ಮೂಲಮ್
ಜ್ಞಾನವಿಜ್ಞಾನಸಂಸಿದ್ಧಾಃ ಪದಂ ಶ್ರೇಷ್ಠಂ ವಿದುರ್ಮಮ ।
ಜ್ಞಾನೀ ಪ್ರಿಯತಮೋತೋ ಮೇ ಜ್ಞಾನೇನಾಸೌ ಬಿಭರ್ತಿಮಾಮ್ ॥
ಅನುವಾದ
ಜ್ಞಾನ-ವಿಜ್ಞಾನದಿಂದ ಸಂಪನ್ನನಾದ ಸಿದ್ಧ ಪುರುಷನೇ ನನ್ನ ವಾಸ್ತವಿಕ ಸ್ವರೂಪವನ್ನು ಪರಮಪದವನ್ನು ಅರಿಯುತ್ತಾನೆ. ಅದಕ್ಕಾಗಿ ಜ್ಞಾನಿಯು ನನಗೆ ಪ್ರಿಯನಾಗಿದ್ದಾನೆ. ಉದ್ಧವನೇ! ಜ್ಞಾನಿಯು ತನ್ನ ಜ್ಞಾನದಿಂದ ನಿರಂತರವಾಗಿ ನನ್ನನ್ನು ತನ್ನ ಅಂತಃಕರಣದಲ್ಲಿ ಧರಿಸಿಕೊಂಡಿರುತ್ತಾನೆ. ॥3॥
(ಶ್ಲೋಕ - 4)
ಮೂಲಮ್
ತಪಸ್ತೀರ್ಥಂ ಜಪೋ ದಾನಂ ಪವಿತ್ರಾಣೀತರಾಣಿ ಚ ।
ನಾಲಂ ಕುರ್ವಂತಿ ತಾಂ ಸಿದ್ಧಿಂ ಯಾ ಜ್ಞಾನಕಲಯಾ ಕೃತಾ ॥
ಅನುವಾದ
ಜ್ಞಾನದ ಒಂದು ಕಲೆಯಿಂದ ದೊರೆಯಬಹುದಾದ ಸಿದ್ಧಿಯು, ತಪಸ್ಸು, ತೀರ್ಥ ಯಾತ್ರೆ, ಜಪ, ದಾನ, ಅಥವಾ ಬೇರೆ ಪವಿತ್ರ ಕ್ರಿಯಾಕಲಾಪಗಳಿಂದ ಸಿಗಲಾರದು. ॥4॥
(ಶ್ಲೋಕ - 5)
ಮೂಲಮ್
ತಸ್ಮಾಜ್ಜ್ಞಾನೇನ ಸಹಿತಂ ಜ್ಞಾತ್ವಾ ಸ್ವಾತ್ಮಾನಮುದ್ಧವ ।
ಜ್ಞಾನವಿಜ್ಞಾನಸಂಪನ್ನೋ ಭಜ ಮಾಂ ಭಕ್ತಿಭಾವಿತಃ ॥
ಅನುವಾದ
ಅದಕ್ಕಾಗಿ ಪ್ರೀತಿಯ ಉದ್ಧವನೇ! ನೀನು ಜ್ಞಾನದ ಸಹಿತ ನಿನ್ನ ಆತ್ಮಸ್ವರೂಪವನ್ನು ಅರಿತುಕೋ. ಮತ್ತೆ ಜ್ಞಾನ-ವಿಜ್ಞಾನದಿಂದ ಸಂಪನ್ನನಾಗಿ ಭಕ್ತಿಭಾವದಿಂದ ನನ್ನ ಭಜನೆಮಾಡು.॥5॥
(ಶ್ಲೋಕ - 6)
ಮೂಲಮ್
ಜ್ಞಾನವಿಜ್ಞಾನಯಜ್ಞೇನ ಮಾಮಿಷ್ಟ್ವಾತ್ಮಾನಮಾತ್ಮನಿ ।
ಸರ್ವಯಜ್ಞಪತಿಂ ಮಾಂ ವೈ ಸಂಸಿದ್ಧಿಂ ಮುನಯೋಗಮನ್ ॥
ಅನುವಾದ
ದೊಡ್ಡ ದೊಡ್ಡ ಋಷಿ-ಮುನಿಗಳು ಜ್ಞಾನ-ವಿಜ್ಞಾನರೂಪೀ ಯಜ್ಞದ ಮೂಲಕ ತಮ್ಮ ಅಂತಃಕರಣದಲ್ಲೇ ಸ್ಥಿತನಾದ ಸಮಸ್ತ ಯಜ್ಞಗಳಿಗೂ ಅಧಿಪತಿಯೂ, ಆತ್ಮಸ್ವರೂಪನೂ ಆದ ನನ್ನನ್ನು ಆರಾಧಿಸಿ ಸಿದ್ಧಿಯನ್ನು ಪಡೆದುಕೊಂಡಿರುವರು. ॥6॥
(ಶ್ಲೋಕ - 7)
ಮೂಲಮ್
ತ್ವಯ್ಯುದ್ಧವಾಶ್ರಯತಿ ಯಸಿವಿಧೋ ವಿಕಾರೋ
ಮಾಯಾಂತರಾಪತತಿ ನಾದ್ಯಪವರ್ಗಯೋರ್ಯತ್ ।
ಜನ್ಮಾದಯೋಸ್ಯ ಯದಮೀ ತವ ತಸ್ಯ ಕಿಂ ಸ್ಯು-
ರಾದ್ಯಂತಯೋರ್ಯದಸತೋಸ್ತಿ ತದೇವ ಮಧ್ಯೇ ॥
ಅನುವಾದ
ಎಲೈ ಉದ್ಧವನೇ! ದೇಹ, ಇಂದ್ರಿಯ, ಅಂತಃಕರಣದ ರೂಪದಿಂದ ಯಾವ ತ್ರಿಗುಣಾತ್ಮಿಕಾ ಪ್ರಕೃತಿಯ ವಿಕಾರರೂಪೀ ಶರೀರವಿದೆಯೋ, ಇದನ್ನೇ ನೀನು ಆಶ್ರಯಿಸಿರುವೆ. ಇದು ಅಜ್ಞಾನದ ಕಾರಣವೇ ಆಗಿದೆ. ಮಾಯೆಯಿಂದ ಆವೃತವಾದ್ದರಿಂದಲೇ ಇದರ ಪ್ರತೀತಿಯಾಗುತ್ತಿದೆ. ಇದು ಹುಟ್ಟುವ ಮೊದಲು ಅವ್ಯಕ್ತವಾಗಿತ್ತು, ಸತ್ತ ಬಳಿಕವೂ ಅವ್ಯಕ್ತವಾಗುತ್ತದೆ. ಕೇವಲ ನಡುವಿನಲ್ಲಿ ಮಾಯೆಯ ಕಾರಣದಿಂದ ಕಾಣುತ್ತಿದೆ. ಜನ್ಮ ಮುಂತಾದ ಆರು ವಿಕಾರಗಳು ಇದಕ್ಕೆ ಆಗುತ್ತವೆ. ಇಂತಹ ನಾಶವುಳ್ಳ ಶರೀರದೊಂದಿಗೆ ನಿನಗೆ ಯಾವ ಸಂಬಂಧವಿದೆ. ಅದು ಆದಿಯಲ್ಲಿ ಅಸತ್ತಾಗಿದೆ, ಅಂತ್ಯದಲ್ಲಿಯೂ ಅಸತ್ತಾಗಿದೆ, ಆದ್ದರಿಂದ ಮಧ್ಯದಲ್ಲಿಯೂ ಅಸತ್ತಾಗಿಯೇ ಇದೆ. ॥7॥
(ಶ್ಲೋಕ - 8)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಜ್ಞಾನಂ ವಿಶುದ್ಧಂ ವಿಪುಲಂ ಯಥೈತದ್
ವೈರಾಗ್ಯವಿಜ್ಞಾನಯುತಂ ಪುರಾಣಮ್ ।
ಆಖ್ಯಾಹಿ ವಿಶ್ವೇಶ್ವರ ವಿಶ್ವಮೂರ್ತೇ
ತ್ವದ್ಭಕ್ತಿಯೋಗಂ ಚ ಮಹದ್ವಿಮೃಗ್ಯಮ್ ॥
ಅನುವಾದ
ಉದ್ಧವನೆಂದನು — ಓ ವಿಶ್ವೇಶ್ವರಾ! ವಿಶ್ವಮೂರ್ತೇ! ಈಗ ನೀನು ವರ್ಣಿಸಿದ ಜ್ಞಾನವು ವಿಶುದ್ಧ, ವಿಪುಲ, ಸನಾತನವಾಗಿದೆ; ವೈರಾಗ್ಯ, ವಿಜ್ಞಾನದಿಂದ ಯುಕ್ತವಾಗಿದೆ. ಈಗ ನೀನು ದಯಮಾಡಿ ಬ್ರಹ್ಮಾದಿ ದೇವತೆಗಳೂ ಹುಡುಕುತ್ತಿರುವ ಭಕ್ತಿಯೋಗದ ವಿಷಯದಲ್ಲಿ ಹೇಳು. ॥8॥
(ಶ್ಲೋಕ - 9)
ಮೂಲಮ್
ತಾಪತ್ರಯೇಣಾಭಿಹತಸ್ಯ ಘೋರೇ
ಸಂತಪ್ಯಮಾನಸ್ಯ ಭವಾಧ್ವನೀಶ ।
ಪಶ್ಯಾಮಿ ನಾನ್ಯಚ್ಛರಣಂ ತವಾಂಘ್ರಿ-
ದ್ವಂದ್ವಾತಪತ್ರಾದಮೃತಾಭಿವರ್ಷಾತ್ ॥
ಅನುವಾದ
ನನ್ನ ಸ್ವಾಮಿಯೇ! ನಾನು ಈ ಭವಸಾಗರದಲ್ಲಿ ಮೂರೂ ತಾಪಗಳಿಗೆ ತುತ್ತಾಗಿ ಅತ್ಯಂತ ಪೀಡಿತನಾಗಿರುವೆನು. ಈ ಸಂಕಟದಿಂದ ಪಾರಾಗಲು ನಿನ್ನ ಈ ಅಮೃತ ವರ್ಷಿಸು ವಂತಹ ಶರಣಾಗತರಿಗೆ ಅಭಯ ಕೊಡುವಂತಹ ಚರಣ ಯುಗಳಗಳಲ್ಲಿ ಶರಣಾಗುವ ಹೊರತು ನನಗೆ ಬೇರೆ ಯಾವ ಉಪಾಯವೂ ಕಾಣುವುದಿಲ್ಲ. ॥9॥
(ಶ್ಲೋಕ - 10)
ಮೂಲಮ್
ದಷ್ಟಂ ಜನಂ ಸಂಪತಿತಂ ಬಿಲೇಸ್ಮಿನ್
ಕಾಲಾಹಿನಾ ಕ್ಷುದ್ರಸುಖೋರುತರ್ಷಮ್ ।
ಸಮುದ್ಧರೈನಂ ಕೃಪಯಾಪವರ್ಗ್ಯೈಃ
ವಚೋಭಿರಾಸಿಂಚ ಮಹಾನುಭಾವ ॥
ಅನುವಾದ
ಮಹಾನುಭಾವಾ! ನಿನ್ನ ಈ ಸೇವಕನು ಕತ್ತಲೆಯ ಮಡುವಿನಲ್ಲಿ ಬಿದ್ದಿರುವನು, ಕಾಲರೂಪೀ ಸರ್ಪವು ಇವನನ್ನು ಕಚ್ಚಿಕೊಂಡಿರುವುದು. ಆದರೂ ವಿಷಯಗಳ ಕ್ಷುದ್ರ ಸುಖ-ಭೋಗಗಳ ತೀವ್ರ ತೃಷ್ಣೆಯು ಇಂಗುವುದಿಲ್ಲ, ಬೆಳೆಯುತ್ತಲೇ ಹೋಗುತ್ತಿದೆ. ನೀನು ದಯಮಾಡಿ ಇವನನ್ನು ಉದ್ಧರಿಸು. ಇದರಿಂದ ಮುಕ್ತಗೊಳಿಸುವಂತಹ ವಾಣಿಯಿಂದ ಅಮೃತ ಸಿಂಚನ ಮಾಡು. ॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಇತ್ಥಮೇತತ್ ಪುರಾ ರಾಜಾ ಭೀಷ್ಮಂ ಧರ್ಮಭೃತಾಂ ವರಮ್ ।
ಅಜಾತಶತ್ರುಃ ಪಪ್ರಚ್ಛ ಸರ್ವೇಷಾಂ ನೋನುಶೃಣ್ವತಾಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಉದ್ಧವನೇ! ನೀನು ನನ್ನಲ್ಲಿ ಪ್ರಶ್ನಿಸಿದಂತೆಯೇ ಧರ್ಮರಾಜ ಯುಧಿಷ್ಠಿರನು ಧಾರ್ಮಿಕ ಶಿರೋಮಣಿ ಭೀಷ್ಮಪಿತಾಮಹರಲ್ಲಿ ಪ್ರಶ್ನೆಮಾಡಿದ್ದನು. ಆಗ ನಾವೆಲ್ಲರೂ ಅಲ್ಲಿ ಉಪಸ್ಥಿತರಾಗಿದ್ದೆವು. ॥11॥
(ಶ್ಲೋಕ - 12)
ಮೂಲಮ್
ನಿವೃತ್ತೇ ಭಾರತೇ ಯುದ್ಧೇ ಸುಹೃನ್ನಿಧನವಿಹ್ವಲಃ ।
ಶ್ರುತ್ವಾ ಧರ್ಮಾನ್ಬಹೂನ್ಪಶ್ಚಾನ್ಮೋಕ್ಷಧರ್ಮಾನಪೃಚ್ಛತ ॥
ಅನುವಾದ
ಮಹಾಭಾರತ ಯುದ್ಧವು ಮುಗಿದು, ಧರ್ಮರಾಜಾ ಯುಧಿಷ್ಠಿರನು ತನ್ನ ಸ್ವಜನ-ಸಂಬಂಧಿಗಳ ಸಂಹಾರದಿಂದಾಗಿ ಶೋಕವಿಹ್ವಲನಾಗಿದ್ದಾಗ, ಅವನು ಭೀಷ್ಮಪಿತಾಮಹರಲ್ಲಿ ಅನೇಕ ಧರ್ಮಗಳ ವಿವರಣೆಯನ್ನು ಕೇಳಿದ ಬಳಿಕ, ಮೋಕ್ಷ ಸಾಧನೆಗಳ ಕುರಿತು ಪ್ರಶ್ನಿಸಿದ್ದನು. ॥12॥
(ಶ್ಲೋಕ - 13)
ಮೂಲಮ್
ತಾನಹಂ ತೇಭಿಧಾಸ್ಯಾಮಿ ದೇವವ್ರತಮುಖಾಚ್ಛ್ರುತಾನ್ ।
ಜ್ಞಾನವೈರಾಗ್ಯವಿಜ್ಞಾನಶ್ರದ್ಧಾಭಕ್ತ್ಯುಪಬೃಂಹಿತಾನ್ ॥
ಅನುವಾದ
ಆಗ ಭೀಷ್ಮ ಪಿತಾಮಹರ ಮುಖದಿಂದ ಕೇಳಿದ ಮೋಕ್ಷಧರ್ಮವನ್ನು ನಾನು ನಿನಗೆ ಹೇಳುವೆನು. ಏಕೆಂದರೆ ಅದು ಜ್ಞಾನ, ವೈರಾಗ್ಯ, ವಿಜ್ಞಾನ, ಶ್ರದ್ಧೆ, ಭಕ್ತಿ ಇವುಗಳ ಭಾವಗಳಿಂದ ಪರಿಪೂರ್ಣವಾಗಿದೆ. ॥13॥
(ಶ್ಲೋಕ - 14)
ಮೂಲಮ್
ನವೈಕಾದಶ ಪಂಚ ತ್ರೀನ್ಭಾವಾನ್ಭೂತೇಷು ಯೇನ ವೈ ।
ಈಕ್ಷೇತಾಥೈಕಮಪ್ಯೇಷು ತಜ್ಜ್ಞಾನಂ ಮಮ ನಿಶ್ಚಿತಮ್ ॥
ಅನುವಾದ
ಉದ್ಧವನೇ! ಪ್ರಕೃತಿ, ಪುರುಷ, ಮಹತ್ತತ್ತ್ವ, ಅಹಂಕಾರ, ಪಂಚತನ್ಮಾತ್ರೆಗಳು ಹೀಗೆ ಈ ಒಂಭತ್ತು; ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು, ಮನಸ್ಸು ಹೀಗೆ ಹನ್ನೊಂದು; ಪಂಚ ಮಹಾಭೂತಗಳು ಹಾಗೂ ತ್ರಿಗುಣಗಳು ಹೀಗೆ ಎಂಟು. ಒಟ್ಟಿಗೆ ಈ ಇಪ್ಪತ್ತೆಂಟು ತತ್ತ್ವಗಳು ಬ್ರಹ್ಮನಿಂದ ಹಿಡಿದು ತೃಣದವರೆಗಿನ ಎಲ್ಲ ಕಾರ್ಯಗಳಲ್ಲಿ ನೋಡಲಾಗುವುದೇ ಜ್ಞಾನವಾಗಿದೆ. ಈ ಇಪ್ಪತ್ತೆಂಟು ತತ್ತ್ವಗಳಲ್ಲಿ ಅನುಗತನಾದ ಪರಮಾತ್ಮ ತತ್ತ್ವವನ್ನು ನೋಡುವುದೇ ವಿಜ್ಞಾನವಾಗಿದೆ ಎಂಬುದು ನನ್ನ ನಿಶ್ಚಿತವಾದ ಅಭಿಪ್ರಾಯವಾಗಿದೆ. ॥14॥
(ಶ್ಲೋಕ - 15)
ಮೂಲಮ್
ಏತದೇವ ಹಿ ವಿಜ್ಞಾನಂ ನ ತಥೈಕೇನ ಯೇನ ಯತ್ ।
ಸ್ಥಿತ್ಯುತ್ಪತ್ತ್ಯಪ್ಯಯಾನ್ ಪಶ್ಯೇದ್ಭಾವಾನಾಂ ತ್ರಿಗುಣಾತ್ಮನಾಮ್ ॥
ಅನುವಾದ
ಈ ಇಪ್ಪತ್ತೆಂಟು ತತ್ತ್ವಗಳು ಉತ್ಪತ್ತಿ, ಸ್ಥಿತಿ ಮತ್ತು ನಾಶ ವುಳ್ಳವುಗಳು. ತ್ರಿಗುಣಾತ್ಮಿಕಾ ಮಾಯೆಯ ಕಾರ್ಯವಾಗಿದೆ. ಈ ಭಾವಗಳಿಂದಲೇ ಭಗವಂತನು ಪ್ರಪಂಚದ ಉತ್ಪತ್ತಿ, ಸ್ಥಿತಿ, ಸಂಹಾರ ರೂಪೀ ಲೀಲೆಮಾಡುತ್ತಾನೆ. ಇದರೆಲ್ಲದರಲ್ಲಿ ಅನುಗತನಾದ ಪರಮಾತ್ಮತತ್ತ್ವವು ಶಾಶ್ವತವಾಗಿದೆ. ಹೀಗೆ ಕೇವಲ ಒಂದೇ ತತ್ತ್ವವು ಅನುಭವದಲ್ಲಿ ಉಳಿದಾಗ, ಅದನ್ನು ವಿಜ್ಞಾನವೆಂದು ಹೇಳುತ್ತಾರೆ. ॥15॥
(ಶ್ಲೋಕ - 16)
ಮೂಲಮ್
ಆದಾವಂತೇ ಚ ಮಧ್ಯೇ ಚ ಸೃಜ್ಯಾತ್ಸೃಜ್ಯಂ ಯದನ್ವಿಯಾತ್ ।
ಪುನಸ್ತತ್ಪ್ರತಿಸಂಕ್ರಾಮೇ ಯಚ್ಛಿಷ್ಯೇತ ತದೇವ ಸತ್ ॥
ಅನುವಾದ
ಈ ಪ್ರಕಾರ ಓರ್ವ ಪರಮಾತ್ಮನೇ ಆದಿ, ಮಧ್ಯ ಮತ್ತು ಅಂತ್ಯದಲ್ಲಿಯೂ ಇದ್ದಾನೆ. ಅವನು ತನ್ನಲ್ಲಿಯೇ ಈ ವಿಶ್ವವನ್ನು ಸೃಷ್ಟಿಸಿದನು ಹಾಗೂ ಅವನೇ ಇದರಲ್ಲಿ ಅನುಗತನಾದನು, ಅಂದರೆ ಸೇರಿಕೊಂಡನು. ಮತ್ತೆ ಪ್ರಳಯಮಾಡುವಾಗ ಅವನೇ ಪುನಃ ಇದನ್ನು ತನ್ನಲ್ಲೇ ಲೀನಗೊಳಿಸಿಕೊಳ್ಳುವನು. ಹೀಗೆ ಶೇಷ ವಾಗಿ ಉಳಿಯುವುದೇ ಸತ್ತತ್ತ್ವವಾಗಿದೆ. ॥16॥
(ಶ್ಲೋಕ - 17)
ಮೂಲಮ್
ಶ್ರುತಿಃ ಪ್ರತ್ಯಕ್ಷಮೈತಿಹ್ಯಮನುಮಾನಂ ಚತುಷ್ಟಯಮ್ ।
ಪ್ರಮಾಣೇಷ್ವನವಸ್ಥಾನಾದ್ವಿಕಲ್ಪಾತ್ ಸ ವಿರಜ್ಯತೇ ॥
ಅನುವಾದ
ಶ್ರುತಿ (ವೇದ) ಪ್ರಮಾಣದಿಂದ, ಪ್ರತ್ಯಕ್ಷ ಪ್ರಮಾಣದಿಂದ, ಐತಿಹ್ಯ (ಮಹಾಪುರುಷರ ವಚನ)ದಿಂದ ಮತ್ತು ಅನುಮಾನ ಪ್ರಮಾಣದಿಂದ ಭೇದಬುದ್ಧಿಯ ಅಸ್ತಿತ್ವವು ಯಾವುದೇ ರೀತಿಯಿಂದ ಸಿದ್ಧವಾಗುವುದಿಲ್ಲ. ಆದ್ದರಿಂದ ವಿವೇಕಿಯು ಭೇದಬುದ್ಧಿಯಿಂದ ರಹಿತನಾಗಿರುತ್ತಾನೆ. ಅರ್ಥಾತ್ ಅವನ ಜ್ಞಾನದಲ್ಲಿ ಓರ್ವ ಪರಮಾತ್ಮನಲ್ಲದೆ ಬೇರೆ ಏನೂ ಇರುವುದಿಲ್ಲ. ॥17॥
(ಶ್ಲೋಕ - 18)
ಮೂಲಮ್
ಕರ್ಮಣಾಂ ಪರಿಣಾಮಿತ್ವಾದಾವಿರಿಂಚಾದಮಂಗಲಮ್ ।
ವಿಪಶ್ಚಿನ್ನಶ್ವರಂ ಪಶ್ಯೇದದೃಷ್ಟಮಪಿ ದೃಷ್ಟವತ್ ॥
ಅನುವಾದ
ಈ ಲೋಕದ ಭೋಗಗಳಿಗೆ ನಾಶವಿರುವಂತೆ, ಯಜ್ಞಾದಿ ಅನುಷ್ಠಾನದ ಫಲಸ್ವರೂಪವಾಗಿ ದೊರೆಯುವ ಸ್ವರ್ಗಾದಿ ಬ್ರಹ್ಮಲೋಕದವರೆಗಿನ ಎಲ್ಲ ಸುಖಗಳು ಅಮಂಗಲ, ದುಃಖದಾಯಕ ಹಾಗೂ ನಾಶವುಳ್ಳವುಗಳೆಂದು ವಿದ್ವಾಂಸನಾದವನು ನೋಡಬೇಕು.॥18॥
(ಶ್ಲೋಕ - 19)
ಮೂಲಮ್
ಭಕ್ತಿಯೋಗಃ ಪುರೈವೋಕ್ತಃ ಪ್ರೀಯಮಾಣಾಯ ತೇನಘ ।
ಪುನಶ್ಚ ಕಥಯಿಷ್ಯಾಮಿ ಮದ್ಭಕ್ತೇಃ ಕಾರಣಂ ಪರಮ್ ॥
ಅನುವಾದ
ಪುಣ್ಯಾತ್ಮನಾದ ಉದ್ಧವನೇ! ಭಕ್ತಿಯೋಗದ ವರ್ಣನೆಯನ್ನು ನಾನು ನಿನಗೆ ಮೊದಲೇ ಮಾಡಿರುವೆನು. ಆದರೆ ಅದರಲ್ಲಿ ನಿನಗೆ ಬಹಳ ಪ್ರೀತಿ ಇದೆ, ಅದಕ್ಕಾಗಿ ನಾನು ನಿನಗೆ ಪುನಃ ಭಕ್ತಿಯು ಪ್ರಾಪ್ತವಾಗುವ ಶ್ರೇಷ್ಠ ಸಾಧನೆಗಳನ್ನು ಹೇಳುತ್ತೇನೆ. ॥19॥
(ಶ್ಲೋಕ - 20)
ಮೂಲಮ್
ಶ್ರದ್ಧಾಮೃತಕಥಾಯಾಂ ಮೇ ಶಶ್ವನ್ಮದನುಕೀರ್ತನಮ್ ।
ಪರಿನಿಷ್ಠಾ ಚ ಪೂಜಾಯಾಂ ಸ್ತುತಿಭಿಃ ಸ್ತವನಂ ಮಮ ॥
ಅನುವಾದ
ನನ್ನ ಭಕ್ತಿಯನ್ನು ಪಡೆಯಲು ಬಯಸುವವನು ನನ್ನ ಅಮೃತಮಯ ಕಥೆಗಳಲ್ಲಿ ಶ್ರದ್ಧೆ ಯನ್ನಿಡಬೇಕು. ನಿರಂತರ ನನ್ನ ಗುಣ-ಲೀಲೆ, ನಾಮಗಳನ್ನು ಸಂಕೀರ್ತನೆ ಮಾಡಬೇಕು. ನನ್ನ ಪೂಜೆಯಲ್ಲಿ ಅತ್ಯಂತ ನಿಷ್ಠೆಯಿದ್ದು, ಸ್ತೋತ್ರಗಳ ಮೂಲಕ ನನ್ನನ್ನು ಸ್ತುತಿಸಬೇಕು.॥20॥
(ಶ್ಲೋಕ - 21)
ಮೂಲಮ್
ಆದರಃ ಪರಿಚರ್ಯಾಯಾಂ ಸರ್ವಾಂಗೈರಭಿವಂದನಮ್ ।
ಮದ್ಭಕ್ತಪೂಜಾಭ್ಯಧಿಕಾ ಸರ್ವಭೂತೇಷು ಮನ್ಮತಿಃ ॥
ಅನುವಾದ
ನನ್ನ ಸೇವೆ-ಪೂಜೆಯಲ್ಲಿ ಶ್ರದ್ಧೆ ಮತ್ತು ಪ್ರೇಮವಿರಲಿ. ನನ್ನಿದಿರಿಗೆ ಸಾಷ್ಟಾಂಗ ಮಲಗಿ ನಮಸ್ಕರಿಸಲಿ. ನನ್ನ ಭಕ್ತರನ್ನು ನನ್ನ ಪೂಜೆಗಿಂತ ಮಿಗಿಲಾಗಿ ಪೂಜಿಸಲಿ ಮತ್ತು ಸಮಸ್ತ ಪ್ರಾಣಿಗಳಲ್ಲಿ ನನ್ನನ್ನೇ ನೋಡಲಿ. ॥21॥
(ಶ್ಲೋಕ - 22)
ಮೂಲಮ್
ಮದರ್ಥೇಷ್ವಂಗಚೇಷ್ಟಾ ಚ ವಚಸಾ ಮದ್ಗುಣೇರಣಮ್ ।
ಮಯ್ಯರ್ಪಣಂ ಚ ಮನಸಃ ಸರ್ವಕಾಮವಿವರ್ಜನಮ್ ॥
ಅನುವಾದ
ತನ್ನ ಎಲ್ಲ ವ್ಯವಹಾರಗಳನ್ನು ಕೇವಲ ನನ್ನದೇ ಸೇವೆಯೆಂದು ಮಾಡಲಿ. ವಾಣಿಯಿಂದ ನನ್ನದೇ ಗುಣಗಳನ್ನು ಹಾಡಲಿ. ತನ್ನ ಮನಸ್ಸನ್ನು ನನ್ನಲ್ಲೇ ಅರ್ಪಿಸಲಿ ಹಾಗೂ ಎಲ್ಲ ಕಾಮನೆಗಳನ್ನು ಬಿಟ್ಟುಬಿಡಲಿ. ॥22॥
(ಶ್ಲೋಕ - 23)
ಮೂಲಮ್
ಮದರ್ಥೇರ್ಥಪರಿತ್ಯಾಗೋ ಭೋಗಸ್ಯ ಚ ಸುಖಸ್ಯ ಚ ।
ಇಷ್ಟಂ ದತ್ತಂ ಹುತಂ ಜಪ್ತಂ ಮದರ್ಥಂ ಯದ್ವ್ರತಂ ತಪಃ ॥
ಅನುವಾದ
ನನಗಾಗಿ ಧನ, ಭೋಗ, ಸುಖ ಇವುಗಳನ್ನು ಪರಿತ್ಯಾಗಮಾಡಲಿ. ಯಜ್ಞ, ದಾನ, ಹವನ, ಜಪ, ವ್ರತ, ತಪಸ್ಸು ಮುಂತಾದುವೆಲ್ಲವನ್ನು ನನಗಾಗಿಯೇ ಮಾಡಲಿ. ॥23॥
(ಶ್ಲೋಕ - 24)
ಮೂಲಮ್
ಏವಂ ಧರ್ಮೈರ್ಮನುಷ್ಯಾಣಾಮುದ್ಧವಾತ್ಮನಿವೇದಿನಾಮ್ ।
ಮಯಿ ಸಂಜಾಯತೇ ಭಕ್ತಿಃ ಕೋನ್ಯೋರ್ಥೋಸ್ಯಾವಶಿಷ್ಯತೇ ॥
ಅನುವಾದ
ಉದ್ಧವನೇ! ಈ ಧರ್ಮಗಳನ್ನು ಪಾಲಿಸುವವನ ಹೃದಯದಲ್ಲಿ ನನ್ನ ಪ್ರೇಮಮಯ ಭಕ್ತಿಯ ಉದಯವಾಗುತ್ತದೆ. ನನ್ನ ಭಕ್ತಿಯು ಪ್ರಾಪ್ತವಾದವನಿಗೆ ಬೇರೆ ಯಾವ ವಸ್ತುವಿನ ಪ್ರಾಪ್ತಿಯು ಬಾಕಿ ಉಳಿಯುವುದಿಲ್ಲ. ॥24॥
(ಶ್ಲೋಕ - 25)
ಮೂಲಮ್
ಯದಾತ್ಮನ್ಯರ್ಪಿತಂ ಚಿತ್ತಂ ಶಾಂತಂ ಸತ್ತ್ವೋಪಬೃಂಹಿತಮ್ ।
ಧರ್ಮಂ ಜ್ಞಾನಂ ಸವೈರಾಗ್ಯಮೈಶ್ವರ್ಯಂ ಚಾಭಿಪದ್ಯತೇ ॥
ಅನುವಾದ
ಈ ಪ್ರಕಾರ ಧರ್ಮಗಳನ್ನು ಪಾಲಿಸುವುದರಿಂದ ಚಿತ್ತದಲ್ಲಿ ಸತ್ತ್ವ ಗುಣದ ವೃದ್ಧಿಯಾಗಿ ಅವನು ಶಾಂತನಾಗಿ ತನ್ನ ಆತ್ಮವನ್ನು ಏಕಮಾತ್ರ ನನ್ನಲ್ಲೇ ತೊಡಗಿಸುತ್ತಾನೆ. ಆಗ ಸಾಧಕನಿಗೆ ಭಕ್ತಿ, ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯ ಇವುಗಳು ತಾನಾಗಿಯೇ ಪ್ರಾಪ್ತವಾಗುತ್ತವೆ. ॥25॥
(ಶ್ಲೋಕ - 26)
ಮೂಲಮ್
ಯದರ್ಪಿತಂ ತದ್ವಿಕಲ್ಪೇ ಇಂದ್ರಿಯೈಃ ಪರಿಧಾವತಿ ।
ರಜಸ್ವಲಂ ಚಾಸನ್ನಿಷ್ಠಂ ಚಿತ್ತಂ ವಿದ್ಧಿ ವಿಪರ್ಯಯಮ್ ॥
ಅನುವಾದ
ಮನಸ್ಸು ನಾನಾವಿಧವಾದ ಕಲ್ಪನೆ ಮಾಡತೊಡಗಿದಾಗ ಅವನ ಇಂದ್ರಿಯಗಳು ಅತ್ತ-ಇತ್ತ ಓಡುತ್ತವೆ. ಚಿತ್ತವು ಸ್ಥಿರವಾಗುವುದಿಲ್ಲ. ಅವನ ಚಿತ್ತ ರಜೋಗುಣದಿಂದ ವ್ಯಾಪ್ತವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಭಕ್ತಿ, ಜ್ಞಾನ, ಧರ್ಮ, ವೈರಾಗ್ಯ, ಐಶ್ವರ್ಯ ಇವುಗಳು ಅವನಿಂದ ದೂರವಾಗುತ್ತವೆ. ॥26॥
(ಶ್ಲೋಕ - 27)
ಮೂಲಮ್
ಧರ್ಮೋ ಮದ್ಭಕ್ತಿಕೃತ್ ಪ್ರೋಕ್ತೋ ಜ್ಞಾನಂ ಚೈಕಾತ್ಮ್ಯದರ್ಶನಮ್ ।
ಗುಣೇಷ್ವಸಂಗೋ ವೈರಾಗ್ಯಮೈಶ್ವರ್ಯಂ ಚಾಣಿಮಾದಯಃ ॥
ಅನುವಾದ
ಉದ್ಧವಾ! ನನ್ನ ಭಕ್ತಿಯು ಯಾವುದರಿಂದ ಉಂಟಾಗುತ್ತದೋ, ಅದೇ ಧರ್ಮವಾಗಿದೆ. ಯಾವುದರಿಂದ ಬ್ರಹ್ಮ ಮತ್ತು ಆತ್ಮದ ಏಕತೆಯ ಸಾಕ್ಷಾತ್ಕಾರವಾಗು ವುದೋ ಅದೇ ಜ್ಞಾನವಾಗಿದೆ. ವಿಷಯಗಳಿಂದ ಅಸಂಗ-ನಿರ್ಲೇಪನಾಗುವುದೇ ವೈರಾಗ್ಯವಾಗಿದೆ ಮತ್ತು ಅಣಿಮಾದಿ ಸಿದ್ಧಿಗಳೇ ಐಶ್ವರ್ಯವಾಗಿದೆ. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಯಮಃ ಕತಿವಿಧಃ ಪ್ರೋಕ್ತೋ ನಿಯಮೋ ವಾರಿಕರ್ಶನ ।
ಕಃ ಶಮಃ ಕೋ ದಮಃ ಕೃಷ್ಣ ಕಾ ತಿತಿಕ್ಷಾ ಧೃತಿಃ ಪ್ರಭೋ ॥
ಅನುವಾದ
ಉದ್ಧವನೆಂದನು — ಅರಿಸೂದನಾ! ಯಮ ಮತ್ತು ನಿಯಮಗಳು ಎಷ್ಟು ಪ್ರಕಾರದ್ದಾಗಿವೆ? ಶ್ರೀಕೃಷ್ಣಾ! ಶಮ ಎಂದರೇನು? ದಮ ಎಂದರೇನು? ಸ್ವಾಮಿ! ತಿತಿಕ್ಷಾ ಮತ್ತು ಧೈರ್ಯಯಾವುದು? ॥28॥
(ಶ್ಲೋಕ - 29)
ಮೂಲಮ್
ಕಿಂ ದಾನಂ ಕಿಂ ತಪಃ ಶೌರ್ಯಂ ಕಿಂ ಸತ್ಯಮೃತಮುಚ್ಯತೇ ।
ಕಸ್ತ್ಯಾಗಃ ಕಿಂ ಧನಂ ಚೇಷ್ಟಂ ಕೋ ಯಜ್ಞಃ ಕಾ ಚ ದಕ್ಷಿಣಾ ॥
(ಶ್ಲೋಕ - 30)
ಮೂಲಮ್
ಪುಂಸಃ ಕಿಂಸ್ವಿದ್ ಬಲಂ ಶ್ರೀಮನ್ ಭಗೋ ಲಾಭಶ್ಚ ಕೇಶವ ।
ಕಾ ವಿದ್ಯಾ ಹ್ರೀಃ ಪರಾ ಕಾ ಶ್ರೀಃ ಕಿಂ ಸುಖಂ ದುಃಖಮೇವ ಚ ॥
ಅನುವಾದ
ದಾನ, ತಪಸ್ಸು, ಶೌರ್ಯ, ಸತ್ಯ, ಋತ ಇವುಗಳ ಸ್ವರೂಪವನ್ನೂ ನೀನು ನನಗೆ ತಿಳಿಸು. ತ್ಯಾಗ ಎಂದರೇನು? ಅಭೀಷ್ಟಧನವು ಯಾವುದು? ಯಜ್ಞ ಯಾವುದಕ್ಕೆ ಹೇಳುತ್ತಾರೆ? ದಕ್ಷಿಣೆ ಯಾವ ವಸ್ತು ಆಗಿದೆ? ಓ ಕೇಶವಾ! ಪುರುಷನ ನಿಜವಾದ ಬಲವು ಯಾವುದು? ಭಗ ಯಾವುದಕ್ಕೆ ಹೇಳುತ್ತಾರೆ? ಲಾಭವೆಂದರೆ ಯಾವ ವಸ್ತುವಾಗಿದೆ? ಉತ್ತಮ ವಿದ್ಯೆ, ಲಜ್ಜೆ, ಶ್ರೀ, ಸುಖ ಮತ್ತು ದುಃಖ ಇವುಗಳ್ಯಾವುವು? ॥29-30॥
(ಶ್ಲೋಕ - 31)
ಮೂಲಮ್
ಕಃ ಪಂಡಿತಃ ಕಶ್ಚ ಮೂರ್ಖಃ ಕಃ ಪಂಥಾ ಉತ್ಪಥಶ್ಚ ಕಃ ।
ಕಃ ಸ್ವರ್ಗೋ ನರಕಃ ಕಃ ಸ್ವಿತ್ಕೋ ಬಂಧುರುತ ಕಿಂ ಗೃಹಮ್ ॥
(ಶ್ಲೋಕ - 32)
ಮೂಲಮ್
ಕ ಆಢ್ಯಃ ಕೋ ದರಿದ್ರೋ ವಾ ಕೃಪಣಃ ಕಃ ಕ ಈಶ್ವರಃ ।
ಏತಾನ್ ಪ್ರಶ್ನಾನ್ ಮಮ ಬ್ರೂಹಿ ವಿಪರೀತಾಂಶ್ಚ ಸತ್ಪತೇ ॥
ಅನುವಾದ
ಪಂಡಿತ ಮತ್ತು ಮೂರ್ಖರ ಲಕ್ಷಣಗಳೇನು? ಸುಮಾರ್ಗ ಹಾಗೂ ಕುಮಾರ್ಗ ಇವುಗಳ ಲಕ್ಷಣಗಳೇನು? ಸ್ವರ್ಗ ಮತ್ತು ನರಕಗಳು ಯಾವುವು? ಬಂಧು-ಬಾಂಧವರು ಯಾರು? ಮನೆ ಯಾವುದು? ಶ್ರೀಮಂತ ಮತ್ತು ದರಿದ್ರ ಎಂದು ಯಾರನ್ನು ಹೇಳುತ್ತಾರೆ? ಲೋಭಿಯು ಯಾರು? ಈಶ್ವರನೆಂದು ಯಾರನ್ನು ಹೇಳುತ್ತಾರೆ? ಭಕ್ತ ವತ್ಸಲ ಪ್ರಭುವೇ! ನೀನು ನನ್ನ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುವವನಾಗು. ಹಾಗೆಯೇ ಇವುಗಳ ವಿರೋಧೀ ಭಾವಗಳನ್ನೂ ಕೂಡವ್ಯಾಖ್ಯಾನಿಸು. ॥31-32॥
(ಶ್ಲೋಕ - 33)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅಹಿಂಸಾ ಸತ್ಯಮಸ್ತೇಯಮಸಂಗೋ ಹ್ರೀರಸಂಚಯಃ ।
ಆಸ್ತಿಕ್ಯಂ ಬ್ರಹ್ಮಚರ್ಯಂ ಚ ವೌನಂ ಸ್ಥೈರ್ಯಂ ಕ್ಷಮಾಭಯಮ್ ॥
(ಶ್ಲೋಕ - 34)
ಮೂಲಮ್
ಶೌಚಂ ಜಪಸ್ತಪೋ ಹೋಮಃ ಶ್ರದ್ಧಾತಿಥ್ಯಂ ಮದರ್ಚನಮ್ ।
ತೀರ್ಥಾಟನಂ ಪರಾರ್ಥೇಹಾ ತುಷ್ಟಿರಾಚಾರ್ಯಸೇವನಮ್ ॥
(ಶ್ಲೋಕ - 35)
ಮೂಲಮ್
ಏತೇ ಯಮಾಃ ಸನಿಯಮಾ ಉಭಯೋರ್ದ್ವಾದಶ ಸ್ಮೃತಾಃ ।
ಪುಂಸಾಮುಪಾಸಿತಾಸ್ತಾತ ಯಥಾಕಾಮಂ ದುಹಂತಿ ಹಿ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಅಹಿಂಸಾ, ಸತ್ಯ, ಅಸ್ತೇಯ (ಕಳ್ಳತನ ಮಾಡದಿರುವುದು), ಅಸಂಗತೆ, ಲಜ್ಜೆ, ಅಸಂಚಯ (ಆವಶ್ಯಕತೆಗಿಂತ ಹೆಚ್ಚು ಧನವನ್ನು ಸಂಗ್ರಹಿಸದಿರುವುದು), ಆಸ್ತಿಕತೆ, ಬ್ರಹ್ಮಚರ್ಯ, ವೌನ, ಸ್ಥಿರತೆ, ಕ್ಷಮೆ ಮತ್ತು ಅಭಯ ಇವು ಹನ್ನೆರಡು ‘ಯಮ’ಗಳಾಗಿವೆ. ನಿಯಮಗಳ ಸಂಖ್ಯೆಯೂ ಹನ್ನೆರಡಿವೆ: ಶೌಚ (ಒಳ-ಹೊರಗಿನ ಪವಿತ್ರತೆ), ಜಪ, ತಪಸ್ಸು, ಹವನ, ಶ್ರದ್ಧಾ, ಅತಿಥಿ ಸೇವೆ, ನನ್ನ ಪೂಜೆ, ತೀರ್ಥ ಯಾತ್ರೆ, ಪರೋಪಕಾರ ಸಂತೋಷ ಮತ್ತು ಗುರುಸೇವೆ; ಈ ಪ್ರಕಾರ ‘ಯಮ’ ಮತ್ತು ‘ನಿಯಮ’ ಎರಡರ ಸಂಖ್ಯೆಯೂ ಹನ್ನೆರಡು ಹನ್ನೆರಡಾಗಿದೆ. ಇವು ಸಕಾಮ ಮತ್ತು ನಿಷ್ಕಾಮ ಎರಡೂ ವಿಧದ ಸಾಧಕರಿಗೆ ಉಪಯೋಗಿಯಾಗಿವೆ. ಉದ್ಧವನೇ! ಇವನ್ನು ಪಾಲಿಸುವ ಪುರುಷನಿಗೆ ಈ ಯಮ-ನಿಯಮಗಳು ಅವನ ಇಚ್ಛಾನುಸಾರ ಅವನಿಗೆ ಭೋಗ ಹಾಗೂ ಮೋಕ್ಷವನ್ನು ಪ್ರದಾನ ಮಾಡುತ್ತವೆ. ॥33-35॥
(ಶ್ಲೋಕ - 36)
ಮೂಲಮ್
ಶಮೋ ಮನ್ನಿಷ್ಠತಾ ಬುದ್ಧೇರ್ದಮ ಇಂದ್ರಿಯಸಂಯಮಃ ।
ತಿತಿಕ್ಷಾ ದುಃಖಸಮ್ಮರ್ಷೋ ಜಿಹ್ವೋಪಸ್ಥಜಯೋ ಧೃತಿಃ ॥
ಅನುವಾದ
ಬುದ್ಧಿಯನ್ನು ನನ್ನಲ್ಲಿ ತೊಡಗಿಸುವುದೇ ‘ಶಮ’ವಾಗಿದೆ. ಇಂದ್ರಿಯಗಳ ಸಂಯಮದ ಹೆಸರು ‘ದಮ’ವಾಗಿದೆ. ದುಃಖಗಳನ್ನು ಸಹಿಸುವುದು ‘ತಿತಿಕ್ಷೆ’, ಜಿಹ್ವೆ ಮತ್ತು ಜನನೇಂದ್ರಿಯದ ಮೇಲೆ ವಿಜಯ ಪಡೆಯುವುದೇ ‘ಧೈರ್ಯ’ವಾಗಿದೆ. ॥36॥
(ಶ್ಲೋಕ - 37)
ಮೂಲಮ್
ದಂಡನ್ಯಾಸಃ ಪರಂ ದಾನಂ ಕಾಮತ್ಯಾಗಸ್ತಪಃ ಸ್ಮೃತಮ್ ।
ಸ್ವಭಾವವಿಜಯಃ ಶೌರ್ಯಂ ಸತ್ಯಂ ಚ ಸಮದರ್ಶನಮ್ ॥
ಅನುವಾದ
ಯಾರನ್ನೂ ದಂಡಿಸದೆ, ಎಲ್ಲರಿಗೆ ಅಭಯನೀಡುವುದೇ ‘ದಾನ’ವಾಗಿದೆ. ಕಾಮನೆಗಳನ್ನು ತ್ಯಜಿಸುವುದೇ ‘ತಪಸ್ಸು’ ಆಗಿದೆ. ತನ್ನ ವಾಸನೆಗಳನ್ನು ಗೆಲ್ಲುವುದೇ ‘ಶೌರ್ಯ’ವಾಗಿದೆ. ಎಲ್ಲೆಡೆ ಸಮತ್ವರೂಪೀ, ಸತ್ಯಸ್ವರೂಪೀ ಪರಮಾತ್ಮನನ್ನು ದರ್ಶಿಸುವುದೇ ‘ಸತ್ಯ’ವಾಗಿದೆ. ॥37॥
(ಶ್ಲೋಕ - 38)
ಮೂಲಮ್
ಋತಂ ಚ ಸೂನೃತಾ ವಾಣೀ ಕವಿಭಿಃ ಪರಿಕೀರ್ತಿತಾ ।
ಕರ್ಮಸ್ವಸಂಗಮಃ ಶೌಚಂ ತ್ಯಾಗಃ ಸಂನ್ಯಾಸ ಉಚ್ಯತೇ ॥
ಅನುವಾದ
ಹೀಗೆಯೇ ಸತ್ಯ ಮತ್ತು ಮಧುರ ಭಾಷಣವನ್ನೇ ‘ಋತ’ವೆಂದು ಮಹಾತ್ಮರು ಹೇಳುತ್ತಾರೆ. ಕರ್ಮಗಳಲ್ಲಿ ಆಸಕ್ತನಾಗದಿರುವುದೇ ‘ಶೌಚ’ವಾಗಿದೆ. ಕಾಮನೆಗಳ ತ್ಯಾಗವೇ ನಿಜವಾದ ಸಂನ್ಯಾಸವಾಗಿದೆ. ॥38॥
(ಶ್ಲೋಕ - 39)
ಮೂಲಮ್
ಧರ್ಮ ಇಷ್ಟಂ ಧನಂ ನೃಣಾಂ ಯಜ್ಞೋಹಂ ಭಗವತ್ತಮಃ ।
ದಕ್ಷಿಣಾ ಜ್ಞಾನಸಂದೇಶಃ ಪ್ರಾಣಾಯಾಮಃ ಪರಂ ಬಲಮ್ ॥
ಅನುವಾದ
ಧರ್ಮವೇ ಮನುಷ್ಯರ ಅಭೀಷ್ಟ ‘ಧನ’ವಾಗಿದೆ. ಪರಮೇಶ್ವರನಾದ ನಾನೇ ‘ಯಜ್ಞ’ನಾಗಿದ್ದೇನೆ. ಜ್ಞಾನವನ್ನು ಉಪದೇಶಿಸುವುದೇ ‘ದಕ್ಷಿಣೆ ’ಯಾಗಿದೆ. ಪ್ರಾಣಾಯಾಮವೇ ಶ್ರೇಷ್ಠ ‘ಬಲ’ವಾಗಿದೆ. ॥39॥
(ಶ್ಲೋಕ - 40)
ಮೂಲಮ್
ಭಗೋ ಮ ಐಶ್ವರೋ ಭಾವೋ ಲಾಭೋ ಮದ್ಭಕ್ತಿರುತ್ತಮಃ ।
ವಿದ್ಯಾತ್ಮನಿ ಭಿದಾಬಾಧೋ ಜುಗುಪ್ಸಾ ಹ್ರೀರಕರ್ಮಸು ॥
ಅನುವಾದ
ನನ್ನ ಐಶ್ವರ್ಯವೇ ‘ಭಗ’ವಾಗಿದೆ. ನನ್ನ ಶ್ರೇಷ್ಠ ಭಕ್ತಿಯೇ ಉತ್ತಮ ‘ಲಾಭ’ವಾಗಿದೆ. ಬ್ರಹ್ಮ ಮತ್ತು ಆತ್ಮದ ಭೇದ ಅಳಿದುಹೋಗುವಂತಹುದೇ ನಿಜವಾದ ‘ವಿದ್ಯೆ’ಯಾಗಿದೆ. ಪಾಪಮಾಡಲು ಜುಗುಪ್ಸೆ ಪಡುವುದೇ ‘ಲಜ್ಜೆ’ಯಾಗಿದೆ. ॥40॥
(ಶ್ಲೋಕ - 41)
ಮೂಲಮ್
ಶ್ರೀರ್ಗುಣಾ ನೈರಪೇಕ್ಷ್ಯಾದ್ಯಾಃ ಸುಖಂ ದುಃಖಸುಖಾತ್ಯಯಃ ।
ದುಃಖಂ ಕಾಮಸುಖಾಪೇಕ್ಷಾ ಪಂಡಿತೋ ಬಂಧಮೋಕ್ಷವಿತ್ ॥
(ಶ್ಲೋಕ - 42)
ಮೂಲಮ್
ಮೂರ್ಖೋ ದೇಹಾದ್ಯಹಂಬುದ್ಧಿಃ ಪಂಥಾ ಮನ್ನಿಗಮಃ ಸ್ಮೃತಃ ।
ಉತ್ಪಥಶ್ಚಿತ್ತವಿಕ್ಷೇಪಃ ಸ್ವರ್ಗಃ ಸತ್ತ್ವಗುಣೋದಯಃ ॥
(ಶ್ಲೋಕ - 43)
ಮೂಲಮ್
ನರಕಸ್ತಮಉನ್ನಾಹೋ ಬಂಧುರ್ಗುರುರಹಂ ಸಖೇ ।
ಗೃಹಂ ಶರೀರಂ ಮಾನುಷ್ಯಂ ಗುಣಾಢ್ಯೋ ಹ್ಯಾಢ್ಯ ಉಚ್ಯತೇ ॥
ಅನುವಾದ
ಶರೀರಾದಿಗಳಲ್ಲಿ ನಾನು-ನನ್ನದು ಇರುವವನೇ ‘ಮೂರ್ಖ’ನಾಗಿದ್ದಾನೆ. ಸಂಸಾರದಿಂದ ನಿವೃತ್ತಿಗೊಳಿಸಿ, ನನ್ನನ್ನು ಪ್ರಾಪ್ತಿಮಾಡಿ ಕೊಡುವುದೇ ನಿಜವಾದ ‘ಸುಮಾರ್ಗ’, ಚಿತ್ತದ ಬಹಿರ್ಮುಖತೆಯೇ ‘ಕುಮಾರ್ಗ’ವಾಗಿದೆ. ಸಖನೇ! ಸತ್ತ್ವಗುಣದ ವೃದ್ಧಿಯೇ ‘ಸ್ವರ್ಗ’ ಮತ್ತು ತಮೋಗುಣದ ಹೆಚ್ಚಳವೇ ‘ನರಕ’ವಾಗಿದೆ. ಗುರುವೇ ನಿಜವಾದ ‘ಬಂಧು’ವಾಗಿದ್ದು, ಆ ಗುರುವು ನಾನೇ ಆಗಿದ್ದೇನೆ. ಈ ಮನುಷ್ಯ ಶರೀರವೇ ನಿಜವಾದ ‘ಮನೆ’ಯಾಗಿದೆ. ಗುಣಗಳಿಂದ ಸಂಪನ್ನನಾಗಿದ್ದು, ಗುಣಗಳ ಭಂಡಾರವೇ ಬಳಿಯಲ್ಲಿ ಇರುವವನೇ ನಿಜವಾದ ‘ಶ್ರೀಮಂತ’ನಾಗಿದ್ದಾನೆ. ॥41-43॥
(ಶ್ಲೋಕ - 44)
ಮೂಲಮ್
ದರಿದ್ರೋ ಯಸ್ತ್ವಸಂತುಷ್ಟಃ ಕೃಪಣೋ ಯೋಜಿತೇಂದ್ರಿಯಃ ।
ಗುಣೇಷ್ವಸಕ್ತಧೀರೀಶೋ ಗುಣಸಂಗೋ ವಿಪರ್ಯಯಃ ॥
ಅನುವಾದ
ಯಾರ ಚಿತ್ತದಲ್ಲಿ ಅಸಂತೋಷವಿದ್ದು, ಅಭಾವದ ಬೋಧವಿರುವವನೇ ‘ದರಿದ್ರ’ನು. ಜಿತೇಂದ್ರಿಯನಲ್ಲದವನೇ ‘ಕೃಪಣ’ನು. ಚಿತ್ತವೃತ್ತಿಯು ವಿಷಯಗಳಲ್ಲಿ ಆಸಕ್ತನಾಗದವನೇ ಈಶ್ವರನಾಗಿದ್ದಾನೆ. ಇದಕ್ಕೆ ವಿಪರೀತವಾಗಿ ವಿಷಯಗಳಲ್ಲಿ ಆಸಕ್ತನಾದವನು ಸರ್ವಥಾ ‘ಅಸಮರ್ಥ’ನು.॥44॥
(ಶ್ಲೋಕ - 45)
ಮೂಲಮ್
ಏತ ಉದ್ಧವ ತೇ ಪ್ರಶ್ನಾಃ ಸರ್ವೇ ಸಾಧು ನಿರೂಪಿತಾಃ ।
ಕಿಂ ವರ್ಣಿತೇನ ಬಹುನಾ ಲಕ್ಷಣಂ ಗುಣದೋಷಯೋಃ ।
ಗುಣದೋಷದೃಶಿರ್ದೋಷೋ ಗುಣಸ್ತೂಭಯವರ್ಜಿತಃ ॥
ಅನುವಾದ
ಪ್ರಿಯ ಉದ್ಧವನೇ! ನೀನು ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ನಾನು ನೀಡಿರುವೆನು. ಇವುಗಳನ್ನು ತಿಳಿದುಕೊಳ್ಳುವುದು ಮೋಕ್ಷ ಮಾರ್ಗಕ್ಕೆ ಸಹಾಯಕವಾಗಿದೆ. ನಾನು ನಿನಗೆ ಗುಣ ಮತ್ತು ದೋಷಗಳ ಲಕ್ಷಣಗಳು ಬೇರೆ-ಬೇರೆಯಾಗಿ ಎಷ್ಟೊಂದು ಹೇಳಲಿ? ಎಲ್ಲದರ ಸಾರಾಂಶವಿಷ್ಟೇ ಗುಣ ಮತ್ತು ದೋಷಗಳಲ್ಲಿ ದೃಷ್ಟಿ ಹರಿಸುವುದೇ ದೊಡ್ಡ ದೋಷವಾಗಿದೆ. ಗುಣ-ದೋಷಗಳ ಕಡೆಗೆ ದೃಷ್ಟಿಹೋಗದೆ ತನ್ನ ಶಾಂತ ನಿಃಸಂಕಲ್ಪ ಸ್ವರೂಪದಲ್ಲಿ ಸ್ಥಿತನಾಗಿರುವುದೇ ಎಲ್ಲಕ್ಕಿಂತ ದೊಡ್ಡ ಗುಣವಾಗಿದೆ. ॥45॥
ಅನುವಾದ (ಸಮಾಪ್ತಿಃ)
ಹತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥19॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಏಕೋನವಿಂಶೋಽಧ್ಯಾಯಃ ॥19॥