೧೭

[ಹದಿನೇಳನೆಯ ಅಧ್ಯಾಯ]

ಭಾಗಸೂಚನಾ

ವರ್ಣಾಶ್ರಮ ಧರ್ಮದ ನಿರೂಪಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಯಸ್ತ್ವಯಾಭಿಹಿತಃ ಪೂರ್ವಂ ಧರ್ಮಸ್ತ್ವದ್ಭಕ್ತಿಲಕ್ಷಣಃ ।
ವರ್ಣಾಶ್ರಮಾಚಾರವತಾಂ ಸರ್ವೇಷಾಂ ದ್ವಿಪದಾಮಪಿ ॥

(ಶ್ಲೋಕ - 2)

ಮೂಲಮ್

ಯಥಾನುಷ್ಠೀಯಮಾನೇನ ತ್ವಯಿ ಭಕ್ತಿರ್ನೃಣಾಂ ಭವೇತ್ ।
ಸ್ವಧರ್ಮೇಣಾರವಿಂದಾಕ್ಷ ತತ್ಸಮಾಖ್ಯಾತುಮರ್ಹಸಿ ॥

ಅನುವಾದ

ಉದ್ಧವನು ಕೇಳಿದನು — ಕಮಲನಯನ ಶ್ರೀಕೃಷ್ಣಾ! ಈಗ ನೀನು ಧರ್ಮದ ವಿಷಯದಲ್ಲಿ ನಿರೂಪಿಸಿದೆ. ಅದರಿಂದ ನಿನ್ನ ಭಕ್ತಿಯು ಪ್ರಾಪ್ತವಾಗುತ್ತದೆ. ಅದು ಎಲ್ಲ ವರ್ಣ ಆಶ್ರಮದ ಮನುಷ್ಯರಿಗೆ ದೊರೆಯಬಲ್ಲದು. ತಮ್ಮ-ತಮ್ಮ ಧರ್ಮದ ಅನುಷ್ಠಾನವನ್ನು ಮಾಡುತ್ತಾ ಮನುಷ್ಯನು ನಿನ್ನ ಭಕ್ತಿಯನ್ನು ಸಹಜವಾಗಿ ಹೇಗೆ ಪಡೆಯಬಲ್ಲನು ಎಂಬುದನ್ನು ತಿಳಿಸುವ ಕೃಪೆಮಾಡಬೇಕು. ॥1-2॥

ಮೂಲಮ್

(ಶ್ಲೋಕ - 3)
ಪುರಾ ಕಿಲ ಮಹಾಬಾಹೋ ಧರ್ಮಂ ಪರಮಕಂ ಪ್ರಭೋ ।
ಯತ್ತೇನ ಹಂಸರೂಪೇಣ ಬ್ರಹ್ಮಣೇಭ್ಯಾತ್ಥ ಮಾಧವ ॥

ಅನುವಾದ

ಮಹಾಬಾಹು ಮಾಧವಾ! ಸ್ವಾಮೀ! ಮೊದಲು ನೀನು ಹಂಸರೂಪದಿಂದ ಅವತರಿಸಿ ಬ್ರಹ್ಮದೇವರಿಗೆ ಪರಮ ಧರ್ಮವನ್ನು ಉಪದೇಶಿಸಿರುವೆ. ॥3॥

(ಶ್ಲೋಕ - 4)

ಮೂಲಮ್

ಸ ಇದಾನೀಂ ಸುಮಹತಾ ಕಾಲೇನಾಮಿತ್ರಕರ್ಶನ ।
ನ ಪ್ರಾಯೋ ಭವಿತಾ ಮರ್ತ್ಯಲೋಕೇ ಪ್ರಾಗನುಶಾಸಿತಃ ॥

ಅನುವಾದ

ಶತ್ರುಮರ್ದನಾ! ಅನೇಕ ಕಾಲವು ಕಳೆದುಹೋದ ಕಾರಣ ಅದು ಈಗ ಮರ್ತ್ಯಲೋಕದಲ್ಲಿ ಪ್ರಾಯಶಃ ಇಲ್ಲವೆಂದೇ ಆಗಿದೆ. ಏಕೆಂದರೆ, ನೀನು ಅದನ್ನು ಉಪದೇಶಿಸಿ ಬಹಳ ದಿನಗಳು ಕಳೆದುಹೋದುವು. ॥4॥

(ಶ್ಲೋಕ - 5)

ಮೂಲಮ್

ವಕ್ತಾ ಕರ್ತಾವಿತಾ ನಾನ್ಯೋ ಧರ್ಮಸ್ಯಾಚ್ಯುತ ತೇ ಭುವಿ ।
ಸಭಾಯಾಮಪಿ ವೈರಿಂಚ್ಯಾಂ ಯತ್ರ ಮೂರ್ತಿಧರಾಃ ಕಲಾಃ ॥

ಅನುವಾದ

ಅಚ್ಯುತಾ! ಈ ಪೃಥ್ವಿಯಲ್ಲಾಗಲೀ, ಸಮಸ್ತ ವೇದಗಳು ಮೂರ್ತಿಮಂತವಾಗಿ ವಿರಾಜಿಸುತ್ತಿರುವ ಚತುರ್ಮುಖ ಬ್ರಹ್ಮನ ಆ ಸಭೆಯಲ್ಲಾಗಲೀ, ನಿನ್ನ ಈ ಧರ್ಮದ ಪ್ರವಚನ, ಪ್ರವರ್ತನ ಅಥವಾ ಸಂರಕ್ಷಣ ಮಾಡಬಲ್ಲವರು ನೀನಲ್ಲದೆ ಬೇರೆ ಯಾರೂ ಇಲ್ಲ. ॥5॥

(ಶ್ಲೋಕ - 6)

ಮೂಲಮ್

ಕರ್ತ್ರಾವಿತ್ರಾ ಪ್ರವಕಾ ಚ ಭವತಾ ಮಧುಸೂದನ ।
ತ್ಯಕ್ತೇ ಮಹೀತಲೇ ದೇವ ವಿನಷ್ಟಂ ಕಃ ಪ್ರವಕ್ಷ್ಯತಿ ॥

ಅನುವಾದ

ಓ ಮಧುಸೂದನಾ! ನೀನೇ ಈ ಧರ್ಮದ ಪ್ರವರ್ತಕ, ರಕ್ಷಕ ಮತ್ತು ಉಪದೇಶಕನಾಗಿರುವೆ. ಓ ಪರಮಾತ್ಮಾ! ನೀನು ಈ ಮಹೀತಲದಿಂದ ನಿನ್ನ ಲೀಲೆಯನ್ನು ಸಂವರಣ ಮಾಡಿಕೊಂಡಾಗ ಈ ಧರ್ಮದ ಲೋಪವೇ ಆಗಿ ಹೋದೀತು. ಹಾಗಿರುವಾಗ ಅದನ್ನು ಯಾರು ಹೇಳುವರು? ॥6॥

(ಶ್ಲೋಕ - 7)

ಮೂಲಮ್

ತತ್ತ್ವಂ ನಃ ಸರ್ವಧರ್ಮಜ್ಞ ಧರ್ಮಸ್ತ್ವದ್ಭಕ್ತಿಲಕ್ಷಣಃ ।
ಯಥಾ ಯಸ್ಯ ವಿಧೀಯೇತ ತಥಾ ವರ್ಣಯ ಮೇ ಪ್ರಭೋ ॥

ಅನುವಾದ

ಆದ್ದರಿಂದ ಓ ಸರ್ವಧರ್ಮದ ಜ್ಞಾತೃವಾದ ಪ್ರಭೋ! ನಿನ್ನ ಭಕ್ತಿಯು ಪ್ರಾಪ್ತವಾಗಿಸುವ, ಆ ಧರ್ಮವನ್ನು ನೀನು ವರ್ಣಿಸು. ಯಾರಿಗಾಗಿ ಅದರ ಯಾವ ವಿಧಾನವಾಗಿದೆ, ಅದನ್ನೂ ತಿಳಿಸುವವನಾಗು. ॥7॥

(ಶ್ಲೋಕ - 8)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತ್ಥಂ ಸ್ವಭೃತ್ಯಮುಖ್ಯೇನ ಪೃಷ್ಟಃ ಸ ಭಗವಾನ್ ಹರಿಃ ।
ಪ್ರೀತಃ ಕ್ಷೇಮಾಯ ಮರ್ತ್ಯಾನಾಂ ಧರ್ಮಾನಾಹ ಸನಾತನಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಕ್ತಶಿರೋಮಣಿ ಉದ್ಧವನು ಈ ವಿಧವಾಗಿ ಪ್ರಶ್ನಿಸಿದಾಗ ಭಗವಾನ್ ಶ್ರೀಕೃಷ್ಣನು ಅತ್ಯಂತ ಪ್ರಸನ್ನನಾಗಿ ಪ್ರಾಣಿಗಳ ಶ್ರೇಯಸ್ಸಿಗಾಗಿ ಸನಾತನ ಧರ್ಮವನ್ನು ಉಪದೇಶಿಸಿದನು. ॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಧರ್ಮ್ಯ ಏಷ ತವ ಪ್ರಶ್ನೋ ನೈಃಶ್ರೇಯಸಕರೋ ನೃಣಾಮ್ ।
ವರ್ಣಾಶ್ರಮಾಚಾರವತಾಂ ತಮುದ್ಧವ ನಿಬೋಧ ಮೇ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ನಿನ್ನ ಪ್ರಶ್ನೆಯು ಧರ್ಮಮಯವಾಗಿದೆ. ಏಕೆಂದರೆ, ಇದು ಎಲ್ಲ ವರ್ಣಾಶ್ರಮಧರ್ಮಿ ಮನುಷ್ಯರಿಗೆ ಪರಮ ಶ್ರೇಯಸ್ಕರ ಮೋಕ್ಷವನ್ನು ಕೊಡುವುದಾಗಿದೆ. ಮನಸ್ಸು ಕೊಟ್ಟು ಕೇಳು. ॥9॥

(ಶ್ಲೋಕ - 10)

ಮೂಲಮ್

ಆದೌ ಕೃತಯುಗೇ ವರ್ಣೋ ನೃಣಾಂ ಹಂಸ ಇತಿ ಸ್ಮೃತಃ ।
ಕೃತಕೃತ್ಯಾಃ ಪ್ರಜಾ ಜಾತ್ಯಾ ತಸ್ಮಾತ್ ಕೃತಯುಗಂ ವಿದುಃ ॥

ಅನುವಾದ

ಈ ಕಲ್ಪದ ಪ್ರಾರಂಭದ ಕೃತಯುಗದಲ್ಲಿ ಎಲ್ಲ ಜನರೂ ಹುಟ್ಟಿದಂದಿನಿಂದಲೇ ಕೃತಕೃತ್ಯರಾಗಿರುತ್ತಿದ್ದರು. ಆಗ ಎಲ್ಲರ ವರ್ಣವು ಹಂಸವೆಂದೇ ಇತ್ತು. ಅದಕ್ಕಾಗಿ ಅದರ ಹೆಸರೂ ಕೂಡ ಕೃತಯುಗವೆಂದಾಯಿತು. ॥10॥

(ಶ್ಲೋಕ - 11)

ಮೂಲಮ್

ವೇದಃ ಪ್ರಣವ ಏವಾಗ್ರೇ ಧರ್ಮೋಹಂ ವೃಷರೂಪಧೃಕ್ ।
ಉಪಾಸತೇ ತಪೋನಿಷ್ಠಾ ಹಂಸಂ ಮಾಂ ಮುಕ್ತಕಿಲ್ಬಿಷಾಃ ॥

ಅನುವಾದ

ಆಗ ಕೇವಲ ಪ್ರಣವವೇ ವೇದವಾಗಿತ್ತು. ತಪಸ್ಸು, ಶೌಚ, ದಯಾ, ಸತ್ಯ ಎಂಬ ನಾಲ್ಕು ಚರಣಗಳಿಂದ ಯುಕ್ತವಾದ ಧರ್ಮವು ವೃಷರೂಪಿಯಾಗಿ ನಾನೇ ಆಗಿದ್ದೆ. ಆಗ ನಿಷ್ಪಾಪರೂ, ಪರಮ ತಪಸ್ವಿಗಳೂ ಆದ ಭಕ್ತಜನರು ಹಂಸ ಸ್ವರೂಪಿಯೂ, ಶುದ್ಧ ಪರಮಾತ್ಮನೂ ಆದ ನನ್ನನ್ನು ಉಪಾಸಿಸುತ್ತಿದ್ದರು. ॥11॥

(ಶ್ಲೋಕ - 12)

ಮೂಲಮ್

ತ್ರೇತಾಮುಖೇ ಮಹಾಭಾಗ ಪ್ರಾಣಾನ್ಮೇ ಹೃದಯಾತಯೀ ।
ವಿದ್ಯಾ ಪ್ರಾದುರಭೂತ್ತಸ್ಯಾ ಅಹಮಾಸಂ ತ್ರಿವೃನ್ಮಖಃ ॥

ಅನುವಾದ

ಪರಮ ಭಾಗ್ಯಶಾಲಿಯಾದ ಉದ್ಧವನೇ! ಕೃತಯುಗದ ಬಳಿಕ ತ್ರೇತಾಯುಗದ ಪ್ರಾರಂಭದಲ್ಲಿ ನನ್ನ ಹೃದಯದಿಂದ ಪ್ರಾಣಗಳ ಮೂಲಕ ಋಗ್ವೇದ, ಸಾಮವೇದ, ಯಜುರ್ವೇದ ರೂಪೀ ತ್ರಯೀ ವಿದ್ಯೆ ಪ್ರಕಟವಾಯಿತು ಮತ್ತು ಆ ತ್ರಯೀ ವಿದ್ಯೆಯಿಂದ ಹೋತಾ, ಅಧ್ವರ್ಯು, ಉದ್ಗಾತಾ ಇವರ ಕರ್ಮರೂಪೀ ಮೂರು ಭೇದಗಳುಳ್ಳ ಯಜ್ಞದ ರೂಪದಲ್ಲಿ ನಾನೇ ಪ್ರಕಟನಾದೆ. ॥12॥

(ಶ್ಲೋಕ - 13)

ಮೂಲಮ್

ವಿಪ್ರಕ್ಷತ್ರಿಯವಿಟ್ಶೂದ್ರಾ ಮುಖಬಾಹೂರುಪಾದಜಾಃ ।
ವೈರಾಜಾತ್ ಪುರುಷಾಜ್ಜಾತಾ ಯ ಆತ್ಮಾಚಾರಲಕ್ಷಣಾಃ ॥

ಅನುವಾದ

ವಿರಾಟ್ಪುರುಷನ ಮುಖದಿಂದ ಬ್ರಾಹ್ಮಣರು, ಭುಜದಿಂದ ಕ್ಷತ್ರಿಯರು, ತೊಡೆಯಿಂದ ವೈಶ್ಯರು, ಚರಣಗಳಿಂದ ಶೂದ್ರರ ಉತ್ಪತ್ತಿಯಾಯಿತು. ಅವರ ಸ್ವಭಾವಕ್ಕನುಸಾರ ಹಾಗೂ ಆಚರಣಗಳಿಂದ ಅವರ ಪರಿಚಯವಾಗುತ್ತದೆ. ॥13॥

(ಶ್ಲೋಕ - 14)

ಮೂಲಮ್

ಗೃಹಾಶ್ರಮೋ ಜಘನತೋ ಬ್ರಹ್ಮಚರ್ಯಂ ಹೃದೋ ಮಮ ।
ವಕ್ಷಃಸ್ಥಾನಾದ್ವನೇ ವಾಸೋ ನ್ಯಾಸಃ ಶೀರ್ಷಣಿ ಸಂಸ್ಥಿತಃ ॥

ಅನುವಾದ

ಉದ್ಧವನೇ! ವಿರಾಟ್ ಪುರುಷನಾದ ನನ್ನ ತೊಡೆಯಿಂದ ಗೃಹಸ್ಥಾಶ್ರಮವು, ಹೃದಯದಿಂದ ಬ್ರಹ್ಮಚರ್ಯಾಶ್ರಮವೂ, ವಕ್ಷಃಸ್ಥಳದಿಂದ ವಾನಪ್ರಸ್ಥಾಶ್ರಮವೂ, ಮಸ್ತಕದಿಂದ ಸಂನ್ಯಾಸಾಶ್ರಮವೂ ಉಂಟಾಯಿತು. ॥14॥

(ಶ್ಲೋಕ - 15)

ಮೂಲಮ್

ವರ್ಣಾನಾಮಾಶ್ರಮಾಣಾಂ ಚ ಜನ್ಮಭೂಮ್ಯನುಸಾರಿಣೀಃ ।
ಆಸನ್ ಪ್ರಕೃತಯೋ ನೃಣಾಂ ನೀಚೈರ್ನೀಚೋತ್ತಮೋತ್ತಮಾಃ ॥

ಅನುವಾದ

ಈ ವರ್ಣ ಮತ್ತು ಆಶ್ರಮಗಳ ಪುರುಷರ ಸ್ವಭಾವವೂ ಇವರ ಜನ್ಮಸ್ಥಾನಕ್ಕನುಸಾರವೇ ಉತ್ತಮ, ಮಧ್ಯಮ, ಅಧಮವೆಂದಾಯಿತು. ಅರ್ಥಾತ್ ಉತ್ತಮ ಸ್ಥಾನದಿಂದ ಉತ್ಪನ್ನ ವಾಗುವ ವರ್ಣ ಮತ್ತು ಆಶ್ರಮಗಳ ಸ್ವಭಾವವು ಉತ್ತಮ ವಾಯಿತು. ಅಧಮ ಸ್ಥಾನದಿಂದ ಉತ್ಪನ್ನರಾದವರ ಸ್ವಭಾವ ಅಧಮವಾಯಿತು. ॥15॥

(ಶ್ಲೋಕ - 16)

ಮೂಲಮ್

ಶಮೋ ದಮಸ್ತಪಃ ಶೌಚಂ ಸಂತೋಷಃ ಕ್ಷಾಂತಿರಾರ್ಜವಮ್ ।
ಮದ್ಭಕ್ತಿಶ್ಚ ದಯಾ ಸತ್ಯಂ ಬ್ರಹ್ಮಪ್ರಕೃತಯಸ್ತ್ವಿಮಾಃ ॥

ಅನುವಾದ

ಶಮ, ದಮ, ತಪಸ್ಸು, ಪವಿತ್ರತೆ, ಸಂತೋಷ, ಕ್ಷಮಾಶೀಲತೆ, ಸರಳತೆ, ನನ್ನ ಭಕ್ತಿ, ದಯೆ ಮತ್ತು ಸತ್ಯ ಇವು ಬ್ರಾಹ್ಮಣವರ್ಣದ ಸ್ವಭಾವವಾಗಿದೆ. ॥16॥

(ಶ್ಲೋಕ - 17)

ಮೂಲಮ್

ತೇಜೋ ಬಲಂ ಧೃತಿಃ ಶೌರ್ಯಂ ತಿತಿಕ್ಷೌದಾರ್ಯಮುದ್ಯಮಃ ।
ಸ್ಥೈರ್ಯಂ ಬ್ರಹ್ಮಣ್ಯತೈಶ್ವರ್ಯಂ ಕ್ಷತ್ರಪ್ರಕೃತಯಸ್ತ್ವಿಮಾಃ ॥

ಅನುವಾದ

ತೇಜ, ಬಲ, ಧೈರ್ಯ, ಶೌರ್ಯ, ಸಹನಶೀಲತೆ, ಉದಾರತೆ, ಉದ್ಯೋಗ ಶೀಲತೆ, ಸ್ಥಿರತೆ, ಬ್ರಾಹ್ಮಣಭಕ್ತಿ, ಐಶ್ವರ್ಯ ಇವು ಕ್ಷತ್ರಿಯ ಧರ್ಮದ ಸ್ವಾಭಾವಿಕ ಸ್ವಭಾವವಾಗಿವೆ. ॥17॥

(ಶ್ಲೋಕ - 18)

ಮೂಲಮ್

ಆಸ್ತಿಕ್ಯಂ ದಾನನಿಷ್ಠಾ ಚ ಅದಂಭೋ ಬ್ರಹ್ಮಸೇವನಮ್ ।
ಅತುಷ್ಟಿರರ್ಥೋಪಚಯೈರ್ವೈಶ್ಯಪ್ರಕೃತಯಸ್ತ್ವಿಮಾಃ ॥

ಅನುವಾದ

ಆಸ್ತಿಕತೆ, ದಾನ ಶೀಲತೆ, ದಂಭಹೀನತೆ, ಬ್ರಾಹ್ಮಣರ ಸೇವೆಮಾಡುವುದು ಮತ್ತು ಧನಸಂಚಯದಿಂದ ಸಂತುಷ್ಟನಾಗುವುದು ಇವು ವೈಶ್ಯವರ್ಣದ ಸ್ವಭಾವವಾಗಿದೆ. ॥18॥

(ಶ್ಲೋಕ - 19)

ಮೂಲಮ್

ಶುಶ್ರೂಷಣಂ ದ್ವಿಜಗವಾಂ ದೇವಾನಾಂ ಚಾಪ್ಯಮಾಯಯಾ ।
ತತ್ರ ಲಬ್ಧೇನ ಸಂತೋಷಃ ಶೂದ್ರಪ್ರಕೃತಯಸ್ತ್ವಿಮಾಃ ॥

ಅನುವಾದ

ಬ್ರಾಹ್ಮಣ, ಗೋವು ಮತ್ತು ದೇವತೆಗಳ ಸೇವೆಯನ್ನು ನಿಷ್ಕಪಟವಾಗಿ ಮಾಡುವುದು ಹಾಗೂ ಅದರಿಂದ ಏನು ಸಿಗುವುದೋ ಅದರಲ್ಲಿ ಸಂತುಷ್ಟನಾಗಿರುವುದು ಇವು ಶೂದ್ರವರ್ಣದ ಸ್ವಭಾವವಾಗಿದೆ. ॥19॥

(ಶ್ಲೋಕ - 20)

ಮೂಲಮ್

ಅಶೌಚಮನೃತಂ ಸ್ತೇಯಂ ನಾಸ್ತಿಕ್ಯಂ ಶುಷ್ಕವಿಗ್ರಹಃ ।
ಕಾಮಃ ಕ್ರೋಧಶ್ಚ ತರ್ಷಶ್ಚ ಸ್ವಭಾವೋಂತೇವಸಾಯಿನಾಮ್ ॥

ಅನುವಾದ

ಅಪವಿತ್ರತೆ, ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಈಶ್ವರ ಮತ್ತು ಪರಲೋಕದ ಪರಿವೆ ಇಲ್ಲದಿರುವುದು, ಸುಳ್ಳು-ಪಳ್ಳು ಜಗಳ ಕಾದುವುದು, ಕಾಮ, ಕ್ರೋಧ, ತೃಷ್ಣೆಯ ವಶವಾಗುವುದು ಇವು ಅಂತ್ಯಜರ ಸ್ವಭಾವವಾಗಿದೆ. ॥20॥

(ಶ್ಲೋಕ - 21)

ಮೂಲಮ್

ಅಹಿಂಸಾ ಸತ್ಯಮಸ್ತೇಯಮಕಾಮಕ್ರೋಧಲೋಭತಾ ।
ಭೂತಪ್ರಿಯಹಿತೇಹಾ ಚ ಧರ್ಮೋಯಂ ಸಾರ್ವವರ್ಣಿಕಃ ॥

ಅನುವಾದ

ಉದ್ಧವನೇ! ನಾಲ್ಕೂ ವರ್ಣಗಳಿಗೆ ಮತ್ತು ನಾಲ್ಕೂ ಆಶ್ರಮಗಳಿಗೆ ಮನ, ವಾಣಿ ಮತ್ತು ಶರೀರದಿಂದ ಯಾರನ್ನೂ ಹಿಂಸಿಸದಿರುವುದು, ಸತ್ಯದಲ್ಲಿ ದೃಢವಾಗಿರುವುದು, ಕಳ್ಳತನ ಮಾಡದಿರುವುದು, ಕಾಮ, ಕ್ರೋಧ, ಲೋಭದಿಂದ ಬದುಕುಳಿದು, ಸಮಸ್ತ ಪ್ರಾಣಿಗಳ ಪ್ರಸನ್ನತೆ, ಅವರ ಒಳಿತು ಆಗುವಂತಹ ಕೆಲಸಗಳನ್ನೇ ಮಾಡುವುದು ಇವು ಸಾಧಾರಣ ಧರ್ಮಗಳಾಗಿವೆ. ॥21॥

(ಶ್ಲೋಕ - 22)

ಮೂಲಮ್

ದ್ವಿತೀಯಂ ಪ್ರಾಪ್ಯಾನುಪೂರ್ವ್ಯಾಜ್ಜನ್ಮೋಪನಯನಂ ದ್ವಿಜಃ ।
ವಸನ್ ಗುರುಕುಲೇ ದಾಂತೋ ಬ್ರಹ್ಮಾಧೀಯೀತ ಚಾಹುತಃ ॥

ಅನುವಾದ

ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರು ಗರ್ಭಾಧಾನಾದಿ ಸಂಸ್ಕಾರಗಳ ಕ್ರಮ ದಿಂದ ಉಪನಯನ ಸಂಸ್ಕಾರರೂಪೀ ದ್ವಿತೀಯ ಜನ್ಮವನ್ನು ಪಡೆದು ಗುರುಕುಲದಲ್ಲಿ ಇದ್ದು, ತಮ್ಮ ಇಂದ್ರಿಯಗಳನ್ನು ವಶದಲ್ಲಿರಿಸಿಕೊಳ್ಳಬೇಕು. ಆಚಾರ್ಯರಿಂದ ವೇದಾಧ್ಯಯನ ಗೈದು, ಅದರ ಅರ್ಥವನ್ನೂ ವಿಚಾರಮಾಡಬೇಕು. ॥22॥

(ಶ್ಲೋಕ - 23)

ಮೂಲಮ್

ಮೇಖಲಾಜಿನದಂಡಾಕ್ಷಬ್ರಹ್ಮಸೂತ್ರಕಮಂಡಲೂನ್ ।
ಜಟಿಲೋಧೌತದದ್ವಾಸೋರಕ್ತಪೀಠಃ ಕುಶಾನ್ ದಧತ್ ॥

ಅನುವಾದ

ಮೇಖಲೆ, ಮೃಗಚರ್ಮ, ವರ್ಣಕ್ಕನುಸಾರ ದಂಡ, ರುದ್ರಾಕ್ಷದ ಮಾಲೆ, ಯಜ್ಞೋಪವೀತ ಮತ್ತು ಕಮಂಡಲು ಧರಿಸಬೇಕು. ತಲೆಯಲ್ಲಿ ಶಿಖೆ ಇರಿಸಿಕೊಳ್ಳಬೇಕು. ದಂತಧಾವನ ಮತ್ತು ಬಟ್ಟೆ ತೊಳೆಯುವ ಹವ್ಯಾಸವಿರಬಾರದು. ಬಣ್ಣ-ಬಣ್ಣದ ಆಸನದಲ್ಲಿ ಕುಳಿತುಕೊಳ್ಳಬಾರದು. ಕುಶವನ್ನು ಧರಿಸಿಕೊಳ್ಳಬೇಕು. ॥23॥

(ಶ್ಲೋಕ - 24)

ಮೂಲಮ್

ಸ್ನಾನಭೋಜನಹೋಮೇಷು ಜಪೋಚ್ಚಾರೇ ಚ ವಾಗ್ಯತಃ ।
ನಚ್ಛಿಂದ್ಯಾನ್ನಖರೋಮಾಣಿ ಕಕ್ಷೋಪಸ್ಥಗತಾನ್ಯಪಿ ॥

ಅನುವಾದ

ಸ್ನಾನ, ಭೋಜನ, ಹವನ, ಜಪ ಹಾಗೂ ಮಲ-ಮೂತ್ರದ ಸಮಯದಲ್ಲಿ ಮೌನವಾಗಿರಬೇಕು. ಕಕ್ಷ ಮತ್ತು ಗುಹ್ಯೇಂದ್ರಿಯದ ಕೂದಲುಗಳನ್ನು ಮತ್ತು ಉಗುರುಗಳನ್ನು ಎಂದೂ ಕತ್ತರಿಸಬಾರದು. ॥24॥

(ಶ್ಲೋಕ - 25)

ಮೂಲಮ್

ರೇತೋ ನಾವಕಿರೇಜ್ಜಾತು ಬ್ರಹ್ಮವ್ರತಧರಃ ಸ್ವಯಮ್ ।
ಅವಕೀರ್ಣೇವಗಾಹ್ಯಾಪ್ಸು ಯತಾಸುಸಿಪದೀಂ ಜಪೇತ್ ॥

ಅನುವಾದ

ಪೂರ್ಣರೂಪದಿಂದ ಬ್ರಹ್ಮಚರ್ಯವನ್ನು ಪಾಲಿಸಬೇಕು. ಸ್ವತಃ ವೀರ್ಯಪಾತವನ್ನು ಎಂದೂ ಮಾಡಿಕೊಳ್ಳಬಾರದು. ಸ್ವಪ್ನಾದಿಗಳಲ್ಲಿ ವೀರ್ಯಸ್ಖಲನವಾದರೆ ನೀರಿನಲ್ಲಿ ಸ್ನಾನಮಾಡಿ, ಪ್ರಾಣಾಯಾಮಮಾಡಿ, ಗಾಯತ್ರಿಯನ್ನು ಜಪಿಸಬೇಕು. ॥25॥

(ಶ್ಲೋಕ - 26)

ಮೂಲಮ್

ಅಗ್ನ್ಯರ್ಕಾಚಾರ್ಯಗೋವಿಪ್ರಗುರುವೃದ್ಧಸುರಾನ್ಶುಚಿಃ ।
ಸಮಾಹಿತ ಉಪಾಸೀತ ಸಂಧ್ಯೇ ಚ ಯತವಾಗ್ಜಪನ್ ॥

ಅನುವಾದ

ಬ್ರಹ್ಮಚಾರಿಯು ಪವಿತ್ರತೆಯಿಂದ ಏಕಾಗ್ರಚಿತ್ತನಾಗಿ ಅಗ್ನಿ, ಸೂರ್ಯ, ಆಚಾರ್ಯ, ಗೋವು, ಬ್ರಾಹ್ಮಣ, ಗುರು, ಹಿರಿಯರು ಹಾಗೂ ದೇವತೆಗಳನ್ನು ಉಪಾಸಿಸಬೇಕು. ಸಾಯಂಕಾಲ ಮತ್ತು ಪ್ರಾತಃಕಾಲಗಳಲ್ಲಿ ವೌನವಾಗಿದ್ದು ಸಂಧ್ಯೋಪಾಸನೆ ಮಾಡಿ ಗಾಯತ್ರಿ ಜಪವನ್ನು ಮಾಡಬೇಕು. ॥26॥

(ಶ್ಲೋಕ - 27)

ಮೂಲಮ್

ಆಚಾರ್ಯಂ ಮಾಂ ವಿಜಾನೀಯಾನ್ನಾವಮನ್ಯೇತ ಕರ್ಹಿಚಿತ್ ।
ನ ಮರ್ತ್ಯಬುದ್ಧ್ಯಾಸೂಯೇತ ಸರ್ವದೇವಮಯೋ ಗುರುಃ ॥

ಅನುವಾದ

ಆಚಾರ್ಯರನ್ನು ನನ್ನ ಸ್ವರೂಪವೆಂದೇ ತಿಳಿದು, ಎಂದೂ ಅವರ ತಿರಸ್ಕಾರ ಮಾಡಬಾರದು. ಅವರನ್ನು ಸಾಮಾನ್ಯ ಮನುಷ್ಯನೆಂದು ತಿಳಿದು ದೋಷ ದೃಷ್ಟಿ ಇರಿಸಬಾರದು. ಏಕೆಂದರೆ ಗುರುವು ಸರ್ವದೇವ ಮಯನಾಗಿರುವನು. ॥27॥

(ಶ್ಲೋಕ - 28)

ಮೂಲಮ್

ಸಾಯಂ ಪ್ರಾತರುಪಾನೀಯ ಭೈಕ್ಷ್ಯಂ ತಸ್ಮೈ ನಿವೇದಯೇತ್ ।
ಯಚ್ಚಾನ್ಯದಪ್ಯನುಜ್ಞಾತಮುಪಯುಂಜೀತ ಸಂಯತಃ ॥

ಅನುವಾದ

ಸಾಯಂಕಾಲ ಮತ್ತು ಪ್ರಾತಃಕಾಲ ಎರಡೂ ಹೊತ್ತು ಭಿಕ್ಷೆಯಲ್ಲಿ ದೊರೆತುದನ್ನು ತಂದು ಗುರುಗಳ ಮುಂದಿರಿಸಿ, ಇನ್ನೇನಾದರೂ ಇದ್ದರೂ ಅದನ್ನೂ ಗುರುಗಳಿಗೆ ನಿವೇದಿಸಬೇಕು. ಅವರ ಅಪ್ಪಣೆಯ ಬಳಿಕವೇ ಅದನ್ನು ಉಪಯೋಗಿಸಬೇಕು. ॥28॥

(ಶ್ಲೋಕ - 29)

ಮೂಲಮ್

ಶುಶ್ರೂಷಮಾಣ ಆಚಾರ್ಯಂ ಸದೋಪಾಸೀತ ನೀಚವತ್ ।
ಯಾನಶಯ್ಯಾಸನಸ್ಥಾನೈರ್ನಾತಿದೂರೇ ಕೃತಾಂಜಲಿಃ ॥

ಅನುವಾದ

ಆಚಾರ್ಯರು ನಡೆದು ಹೋಗುತ್ತಿದ್ದರೆ, ಅವರ ಹಿಂದೆ-ಹಿಂದೆ ನಡೆಯಬೇಕು. ಅವರು ಮಲಗಿದ ಬಳಿಕವೇ ತುಂಬಾ ಎಚ್ಚರಿಕೆಯಿಂದ ಅವರಿಂದ ಸ್ವಲ್ಪ ದೂರದಲ್ಲಿ ಮಲಗಬೇಕು. ಅವರು ಬಳಲಿದ್ದರೆ ಹತ್ತಿರ ಕುಳಿತು ಪಾದಸೇವೆ (ಕಾಲು ಒತ್ತುವುದು) ಮಾಡಬೇಕು. ಅವರು ಕುಳಿತಿದ್ದರೆ ಅವರ ಆದೇಶವನ್ನು ನಿರೀಕ್ಷಿಸುತ್ತಾ ಕೈ ಜೋಡಿಸಿ ಕೊಂಡು ಹತ್ತಿರದಲ್ಲೇ ನಿಂತಿರಬೇಕು. ಹೀಗೆ ಅತ್ಯಂತ ನಮ್ರನಾಗಿ ಸೇವೆ-ಶುಶ್ರೂಷೆಗಳಿಂದ ಸದಾಕಾಲ ಆಚಾರ್ಯರ ಆಜ್ಞೆಯಲ್ಲಿ ತತ್ಪರನಾಗಿರಬೇಕು. ॥29॥

(ಶ್ಲೋಕ - 30)

ಮೂಲಮ್

ಏವಂವೃತ್ತೋ ಗುರುಕುಲೇ ವಸೇದ್ಭೋಗವಿವರ್ಜಿತಃ ।
ವಿದ್ಯಾ ಸಮಾಪ್ಯತೇ ಯಾವದ್ಬಿಭ್ರದ್ವ್ರತಮಖಂಡಿತಮ್ ॥

ಅನುವಾದ

ವಿದ್ಯಾಧ್ಯಯನವು ಸಮಾಪ್ತವಾಗುವ ತನಕ ಎಲ್ಲ ರೀತಿಯ ಭೋಗಗಳಿಂದ ದೂರವಿದ್ದು, ಇದೇ ಪ್ರಕಾರ ಗುರುಕುಲದಲ್ಲಿ ವಾಸಿಸಬೇಕು. ಎಂದಿಗೂ ತನ್ನ ಬ್ರಹ್ಮಚರ್ಯವನ್ನು ಭಂಗಗೊಳಿಸಬಾರದು. ॥30॥

(ಶ್ಲೋಕ - 31)

ಮೂಲಮ್

ಯದ್ಯಸೌ ಛಂದಸಾಂ ಲೋಕಮಾರೋಕ್ಷ್ಯನ್ ಬ್ರಹ್ಮವಿಷ್ಟಪಮ್ ।
ಗುರವೇ ವಿನ್ಯಸೇದ್ದೇಹಂ ಸ್ವಾಧ್ಯಾಯಾರ್ಥಂ ಬೃಹದ್ವ್ರತಃ ॥

ಅನುವಾದ

ಬ್ರಹ್ಮಚಾರಿಯು ಮೂರ್ತಿಮಂತ ವೇದಗಳ ನಿವಾಸಸ್ಥಾನವಾದ ಬ್ರಹ್ಮಲೋಕಕ್ಕೆ ಹೋಗಲು ಬಯಸಿದರೆ, ಅವನು ಆಜೀವನ ಬ್ರಹ್ಮಚರ್ಯ ವ್ರತವನ್ನು ಕೈಗೊಳ್ಳಬೇಕು ಹಾಗೂ ವೇದಗಳ ಸ್ವಾಧ್ಯಾಯಕ್ಕಾಗಿ ತನ್ನ ಇಡೀ ಜೀವನವನ್ನು ಆಚಾರ್ಯರ ಸೇವೆಯಲ್ಲೇ ಸಮರ್ಪಿಸಿಕೊಳ್ಳಬೇಕು.॥31॥

(ಶ್ಲೋಕ - 32)

ಮೂಲಮ್

ಅಗ್ನೌ ಗುರಾವಾತ್ಮನಿ ಚ ಸರ್ವಭೂತೇಷು ಮಾಂ ಪರಮ್ ।
ಅಪೃಥಗ್ಧೀರುಪಾಸೀತ ಬ್ರಹ್ಮವರ್ಚಸ್ವ್ಯಕಲ್ಮಷಃ ॥

ಅನುವಾದ

ಇಂತಹ ಬ್ರಹ್ಮಚಾರಿಯು ನಿಜವಾಗಿಯೂ ಬ್ರಹ್ಮತೇಜದಿಂದ ಸಂಪನ್ನನಾಗಿ, ಅವನ ಎಲ್ಲ ಪಾಪಗಳು ನಾಶವಾಗಿ ಹೋಗುತ್ತವೆ. ಅವನು ಅಗ್ನಿ, ಗುರು, ತನ್ನ ಶರೀರ ಮತ್ತು ಸಮಸ್ತ ಪ್ರಾಣಿಗಳಲ್ಲಿ ನನ್ನನ್ನೇ ಉಪಾಸಿಸಬೇಕು. ನನ್ನ ಹಾಗೂ ಎಲ್ಲರ ಹೃದಯದಲ್ಲಿ ಒಂದೇ ಪರಮಾತ್ಮನು ವಿರಾಜಮಾನನಾಗಿದ್ದಾನೆ ಎಂದು ಭಾವಿಸಬೇಕು. ॥32॥

(ಶ್ಲೋಕ - 33)

ಮೂಲಮ್

ಸೀಣಾಂ ನಿರೀಕ್ಷಣಸ್ಪರ್ಶಸಂಲಾಪಕ್ಷ್ವೇಲನಾದಿಕಮ್ ।
ಪ್ರಾಣಿನೋ ಮಿಥುನೀಭೂತಾನಗೃಹಸ್ಥೋಗ್ರತಸ್ತ್ಯಜೇತ್ ॥

ಅನುವಾದ

ಬ್ರಹ್ಮಚಾರೀ, ವಾನಪ್ರಸ್ಥ, ಸಂನ್ಯಾಸಿಗಳು ಸ್ತ್ರೀಯರನ್ನು ನೋಡುವುದು, ಸ್ಪರ್ಶಿಸುವುದು, ಅವರೊಂದಿಗೆ ಮಾತು-ಕತೆಯಾಡುವುದು, ಹಾಸ್ಯ-ವಿನೋದ ಮುಂತಾದವುಗಳಿಂದ ದೂರವುಳಿಯಬೇಕು. ಮೈಥುನದಲ್ಲಿ ತೊಡಗಿರುವ ಪ್ರಾಣಿಗಳ ಕಡೆಗೆ ಕಣ್ಣೆತ್ತಿಯೂ ನೋಡಬಾರದು. ॥33॥

(ಶ್ಲೋಕ - 34)

ಮೂಲಮ್

ಶೌಚಮಾಚಮನಂ ಸ್ನಾನಂಸಂಧ್ಯೋಪಾಸನಮಾರ್ಜವಮ್ ।
ತೀರ್ಥಸೇವಾ ಜಪೋಸ್ಪೃಶ್ಯಾಭಕ್ಷ್ಯಾಸಂಭಾಷ್ಯವರ್ಜನಮ್ ॥

(ಶ್ಲೋಕ - 35)

ಮೂಲಮ್

ಸರ್ವಾಶ್ರಮಪ್ರಯುಕ್ತೋಯಂ ನಿಯಮಃ ಕುಲನಂದನ ।
ಮದ್ಭಾವಃ ಸರ್ವಭೂತೇಷು ಮನೋವಾಕ್ಕಾಯಸಂಯಮಃ ॥

ಅನುವಾದ

ಪ್ರಿಯ ಉದ್ಧವನೇ! ಶೌಚ, ಆಚಮನ, ಸ್ನಾನ, ಸಂಧ್ಯೋ ಪಾಸನೆ, ಸರಳತೆ, ತೀರ್ಥಸೇವನೆ, ಜಪ, ಸಮಸ್ತ ಪ್ರಾಣಿಗಳಲ್ಲಿ ನನ್ನನ್ನೇ ನೋಡುವುದು, ಮನ, ವಾಣೀ, ಶರೀರದ ಸಂಯಮ ಇವು ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸಿ ಎಲ್ಲರಿಗಾಗಿ ಒಂದೇ ನಿಯಮಗಳಾಗಿವೆ. ಅಸ್ಪೃಶ್ಯರನ್ನು ಮುಟ್ಟದಿರುವುದು, ಅಭಕ್ಷ ವಸ್ತುಗಳನ್ನು ತಿನ್ನದಿರುವುದು, ಯಾರೊಂದಿಗೆ ಮಾತಾಡಬಾರದೋ ಅವ ರೊಂದಿಗೆ ಮಾತಾಡದೇ ಇರುವುದು, ಈ ನಿಯಮಗಳೂ ಕೂಡ ಎಲ್ಲರಿಗಾಗಿಯೇ ಇವೆ. ॥34-35॥

(ಶ್ಲೋಕ - 36)

ಮೂಲಮ್

ಏವಂ ಬೃಹದ್ವ್ರತಧರೋ ಬ್ರಾಹ್ಮಣೋಗ್ನಿರಿವ ಜ್ವಲನ್ ।
ಮದ್ಭಕ್ತಸ್ತೀವ್ರತಪಸಾ ದಗ್ಧಕರ್ಮಾಶಯೋಮಲಃ ॥

ಅನುವಾದ

ನೈಷ್ಠಿಕ ಬ್ರಹ್ಮಚಾರೀ ಬ್ರಾಹ್ಮಣನು ಈ ನಿಯಮಗಳನ್ನು ಪಾಲಿಸು ವುದರಿಂದ ಅಗ್ನಿಯಂತೆ ತೇಜಸ್ವೀಯಾಗುತ್ತಾನೆ. ತೀವ್ರ ತಪಸ್ಸಿನ ಕಾರಣ ಅವನ ಕರ್ಮ-ಸಂಸ್ಕಾರಗಳು ಭಸ್ಮವಾಗಿ ಹೋಗುತ್ತವೆ. ಅಂತಃಕರಣ ಶುದ್ಧವಾಗುತ್ತದೆ. ಅವನು ನನ್ನ ಭಕ್ತನಾಗಿ ನನ್ನನ್ನೇ ಪಡೆದುಕೊಳ್ಳುತ್ತಾನೆ. ॥36॥

(ಶ್ಲೋಕ - 37)

ಮೂಲಮ್

ಅಥಾನಂತರಮಾವೇಕ್ಷ್ಯನ್ ಯಥಾ ಜಿಜ್ಞಾಸಿತಾಗಮಃ ।
ಗುರವೇ ದಕ್ಷಿಣಾಂ ದತ್ತ್ವಾ ಸ್ನಾಯಾದ್ಗುರ್ವನುಮೋದಿತಃ ॥

ಅನುವಾದ

ಪ್ರಿಯ ಉದ್ಧವನೇ! ಬ್ರಹ್ಮಚಾರಿಯು ಗೃಹಸ್ಥಾಶ್ರಮದಲ್ಲಿ ಪ್ರವೇಶಿಸಲು ಬಯಸಿದರೆ ವಿಧಿಪೂರ್ವಕ ವೇದಾಧ್ಯಯನವನ್ನು ಮುಗಿಸಿ, ಆಚಾರ್ಯರಿಗೆ ದಕ್ಷಿಣೆಯನ್ನಿತ್ತು, ಅವರ ಅನುಮತಿ ಪಡೆದು ಸಮಾವರ್ತನ ಸಂಸ್ಕಾರ ಮಾಡಿಕೊಂಡು, ಸ್ನಾತಕನಾಗಿ ಗೃಹಸ್ಥಾಶ್ರಮವನ್ನು ಸ್ವೀಕರಿಸಬೇಕು. ॥37॥

(ಶ್ಲೋಕ - 38)

ಮೂಲಮ್

ಗೃಹಂ ವನಂ ವೋಪವಿಶೇತ್ ಪ್ರವ್ರಜೇದ್ವಾ ದ್ವಿಜೋತ್ತಮಃ ।
ಆಶ್ರಮಾದಾಶ್ರಮಂ ಗಚ್ಛೇನ್ನಾನ್ಯಥಾ ಮತ್ಪರಶ್ಚರೇತ್ ॥

ಅನುವಾದ

ಬ್ರಹ್ಮಚಾರಿಯು ಬ್ರಹ್ಮಚರ್ಯಾಶ್ರಮದ ಬಳಿಕ ಬೇಕಾದರೆ ಗೃಹಸ್ಥ ಅಥವಾ ವಾನಪ್ರಸ್ಥ ಆಶ್ರಮವನ್ನು ಪ್ರವೇಶಿಸಲಿ. ಬ್ರಾಹ್ಮಣನಾಗಿದ್ದರೆ ಸಂನ್ಯಾಸ ವನ್ನು ಸ್ವೀಕರಿಸಲಿ, ಅಥವಾ ಕ್ರಮವಾಗಿ ಒಂದು ಆಶ್ರಮದಿಂದ ಮತ್ತೊಂದು ಆಶ್ರಮವನ್ನೂ ಪ್ರವೇಶಿಸಲಿ. ನನ್ನ ಪರಾಯಣನಾದ ಭಕ್ತನು ಎಂದೂ ಆಶ್ರಮವಿಲ್ಲದೆ ಇರ ಬಾರದು. ಮನಬಂದಂತೆ ಆಶ್ರಮ ಬದಲಾವಣೆ ಮಾಡುವ ಉಚ್ಛಂಖಲ ಪ್ರವೃತ್ತಿಯೂ ಸಲ್ಲದು. ॥38॥

(ಶ್ಲೋಕ - 39)

ಮೂಲಮ್

ಗೃಹಾರ್ಥೀ ಸದೃಶೀಂ ಭಾರ್ಯಾಮುದ್ವಹೇದಜುಗುಪ್ಸಿತಾಮ್ ।
ಯವೀಯಸೀಂ ತು ವಯಸಾ ತಾಂ ಸವರ್ಣಾಮನುಕ್ರಮಾತ್ ॥

ಅನುವಾದ

ಪ್ರಿಯ ಉದ್ಧವನೇ! ಬ್ರಹ್ಮಚಾರಿಯು ಬ್ರಹ್ಮಚರ್ಯಾ ಶ್ರಮದ ಬಳಿಕ ಗೃಹಸ್ಥಾಶ್ರಮವನ್ನು ಸ್ವೀಕರಿಸುವುದಿದ್ದರೆ, ತನಗೆ ಅನುರೂಪ ಹಾಗೂ ಶಾಸ್ತ್ರೋಕ್ತ ಲಕ್ಷಣಗಳಿಂದ ಕೂಡಿದ ಕುಲೀನ ಕನ್ಯೆಯೊಂದಿಗೆ ವಿವಾಹಿತನಾಗಬೇಕು. ಅವಳು ತನ್ನ ವಯಸ್ಸಿನಿಂದ ಕಿರಿಯವಳು ಮತ್ತು ತನ್ನ ವರ್ಣದವಳೇ ಆಗಿರಬೇಕು. ॥39॥

(ಶ್ಲೋಕ - 40)

ಮೂಲಮ್

ಇಜ್ಯಾಧ್ಯಯನದಾನಾನಿ ಸರ್ವೇಷಾಂ ಚ ದ್ವಿಜನ್ಮನಾಮ್ ।
ಪ್ರತಿಗ್ರಹೋಧ್ಯಾಪನಂ ಚ ಬ್ರಾಹ್ಮಣಸ್ಯೈವ ಯಾಜನಮ್ ॥

ಅನುವಾದ

ಯಜ್ಞ-ಯಾಗಾದಿ ಮಾಡುವುದು, ಅಧ್ಯಯನ, ದಾನಮಾಡುವ ಅಧಿಕಾರ, ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಸಮಾನವಾಗಿ ಇದೆ. ಆದರೆ ದಾನ ಪಡೆಯುವುದು, ಕಲಿಸುವುದು, ಯಜ್ಞಮಾಡಿಸುವ ಅಧಿಕಾರ ಕೇವಲ ಬ್ರಾಹ್ಮಣರಿಗೇ ಇದೆ. ॥40॥

(ಶ್ಲೋಕ - 41)

ಮೂಲಮ್

ಪ್ರತಿಗ್ರಹಂ ಮನ್ಯಮಾನಸ್ತಪಸ್ತೇಜೋಯಶೋನುದಮ್ ।
ಅನ್ಯಾಭ್ಯಾಮೇವ ಜೀವೇತ ಶಿಲೈರ್ವಾ ದೋಷದೃಕ್ ತಯೋಃ ॥

ಅನುವಾದ

ಬ್ರಾಹ್ಮಣನು ಈ ಮೂರು ವೃತ್ತಿಗಳಲ್ಲಿ ಪ್ರತಿಗ್ರಹ ಅರ್ಥಾತ್ ದಾನ ಪಡೆಯುವ ವೃತ್ತಿಯು ತಪಸ್ಸು, ತೇಜ, ಕೀರ್ತಿ ಇವುಗಳನ್ನು ನಾಶಮಾಡುವುದೆಂದು ತಿಳಿದಿದ್ದರೆ, ಅವನು ಕಲಿಸುವುದು, ಯಜ್ಞಮಾಡಿಸುವ ಮೂಲಕವೇ ತನ್ನ ಜೀವನನಿರ್ವಾಹ ಮಾಡಲಿ. ಈ ಎರಡರಲ್ಲಿಯೂ ದೋಷದೃಷ್ಟಿ ಪರಾವಲಂಬನೆ, ದೀನತೆ ಮುಂತಾದ ದೋಷಗಳು ಕಂಡುಬಂದರೆ, ಪೈರು ಕತ್ತರಿಸಿದ ಬಳಿಕ ಹೊಲದಲ್ಲಿ ಬಿದ್ದಿರುವ ಧಾನ್ಯವನ್ನು ಹೆಕ್ಕಿತಂದು ತನ್ನ ಜೀವನನಿರ್ವಾಹ ಮಾಡಲಿ. ॥41॥

(ಶ್ಲೋಕ - 42)

ಮೂಲಮ್

ಬ್ರಾಹ್ಮಣಸ್ಯ ಹಿ ದೇಹೋಯಂ ಕ್ಷುದ್ರಕಾಮಾಯ ನೇಷ್ಯತೇ ।
ಕೃಚ್ಛ್ರಾಯ ತಪಸೇ ಚೇಹ ಪ್ರೇತ್ಯಾನಂತಸುಖಾಯ ಚ ॥

ಅನುವಾದ

ಉದ್ಧವನೇ! ಬ್ರಾಹ್ಮಣನ ಶರೀರವು ಅತ್ಯಂತ ದುರ್ಲಭವಾಗಿದೆ. ಇದು ತುಚ್ಛವಾದ ಭೋಗಗಳನ್ನು ಭೋಗಿಸಲಿಕ್ಕಾಗಿ ದೊರೆತುದಲ್ಲ. ಜೀವನವಿಡೀ ಕಠಿಣ ತಪಸ್ಸನ್ನಾಚರಿಸುತ್ತಾ ಕೊನೆಗೆ ಅನಂತ ಆನಂದಸ್ವರೂಪೀ ಮೋಕ್ಷವನ್ನು ಪಡೆಯಲೆಂದೇ ಇದೆ. ॥42॥

(ಶ್ಲೋಕ - 43)

ಮೂಲಮ್

ಶಿಲೋಂಛವೃತ್ತ್ಯಾ ಪರಿತುಷ್ಟಚಿತ್ತೋ
ಧರ್ಮಂ ಮಹಾಂತಂ ವಿರಜಂ ಜುಷಾಣಃ ।
ಮಯ್ಯರ್ಪಿತಾತ್ಮಾ ಗೃಹ ಏವ ತಿಷ್ಠ-
ನ್ನಾತಿಪ್ರಸಕ್ತಃ ಸಮುಪೈತಿ ಶಾಂತಿಮ್ ॥

ಅನುವಾದ

ಬ್ರಾಹ್ಮಣನಾದವನು ಮನೆಯಲ್ಲೇ ಇದ್ದು ತನ್ನ ಮಹಾನ್ ಧರ್ಮವನ್ನು ನಿಷ್ಕಾಮವಾಗಿ ಆಚರಿಸುತ್ತಾ, ಹೊಲದಲ್ಲಿ ಬಿದ್ದಿರುವ ಕಾಳುಗಳನ್ನು ಅಥವಾ ಮಂಡಿಯಲ್ಲಿ ಬಿದ್ದಿರುವ ಕಾಳುಗಳನ್ನು ಹೆಕ್ಕಿತಂದು ಸಂತೋಷವಾಗಿ ತನ್ನ ಜೀವನ ನಿರ್ವಾಹ ಮಾಡುವವನು, ಜೊತೆಗೆ ತನ್ನ ಶರೀರ, ಪ್ರಾಣ, ಅಂತಃಕರಣ ಮತ್ತು ಆತ್ಮವನ್ನು ನನ್ನಲ್ಲಿ ಸಮರ್ಪಿಸುವವನು, ಎಲ್ಲಿಯೂ ಆಸಕ್ತಿಯನ್ನಿಡದವನು ಸಂನ್ಯಾಸ ಸ್ವೀಕರಿಸದೆಯೇ ಪರಮ ಶಾಂತಿ ಸ್ವರೂಪೀ ಪರಮಪದವನ್ನು ಪಡೆದುಕೊಳ್ಳುತ್ತಾನೆ.॥43॥

(ಶ್ಲೋಕ - 44)

ಮೂಲಮ್

ಸಮುದ್ಧರಂತಿ ಯೇ ವಿಪ್ರಂ ಸೀದಂತಂ ಮತ್ಪರಾಯಣಮ್ ।
ತಾನುದ್ಧರಿಷ್ಯೇ ನಚಿರಾದಾಪದ್ಭ್ಯೋ ನೌರಿವಾರ್ಣವಾತ್ ॥

ಅನುವಾದ

ವಿಪತ್ತಿನಲ್ಲಿ ಬಿದ್ದು ಕಷ್ಟಪಡುವ ನನ್ನ ಭಕ್ತ ಬ್ರಾಹ್ಮಣನನ್ನು ವಿಪತ್ತಿನಿಂದ ಕಾಪಾಡುವವನನ್ನು ನಾನು ಶೀಘ್ರವಾಗಿ, ಸಮುದ್ರದಲ್ಲಿ ಮುಳುಗುವ ಪ್ರಾಣಿಯನ್ನು ದೋಣಿಯು ಪಾರಾಗಿಸುವಂತೆ, ಅವನನ್ನು ಎಲ್ಲ ವಿಪತ್ತುಗಳಿಂದ ಪಾರಾಗಿಸುತ್ತೇನೆ. ॥44॥

(ಶ್ಲೋಕ - 45)

ಮೂಲಮ್

ಸರ್ವಾಃ ಸಮುದ್ಧರೇದ್ರಾಜಾ ಪಿತೇವ ವ್ಯಸನಾತ್ಪ್ರಜಾಃ ।
ಆತ್ಮಾನಮಾತ್ಮನಾ ಧೀರೋ ಯಥಾ ಗಜಪತಿರ್ಗಜಾನ್ ॥

ಅನುವಾದ

ರಾಜನಾದವನು ತಂದೆಯಂತೆ, ಗಜರಾಜನು ಬೇರೆ ಆನೆಗಳನ್ನು ರಕ್ಷಿಸುವಂತೆ ಎಲ್ಲ ಪ್ರಜೆಗಳನ್ನು ಕಷ್ಟದಿಂದ ಉದ್ಧಾರಗೈದು, ಅವರನ್ನು ರಕ್ಷಿಸಬೇಕು. ಧೀರನಾಗಿ ಸ್ವಯಂ ತಾನೇ-ತನ್ನನ್ನು ಉದ್ಧರಿಸಿಕೊಳ್ಳಬೇಕು. ॥45॥

(ಶ್ಲೋಕ - 46)

ಮೂಲಮ್

ಏವಂವಿಧೋ ನರಪತಿರ್ವಿಮಾನೇನಾರ್ಕವರ್ಚಸಾ ।
ವಿಧೂಯೇಹಾಶುಭಂ ಕೃತ್ಸ್ನಮಿಂದ್ರೇಣ ಸಹ ಮೋದತೇ ॥

ಅನುವಾದ

ಈ ವಿಧವಾಗಿ ಪ್ರಜೆಗಳನ್ನು ರಕ್ಷಿಸುವವನು ಎಲ್ಲ ಪಾಪಗಳಿಂದ ಮುಕ್ತನಾಗಿ ಅಂತ್ಯದಲ್ಲಿ ಸೂರ್ಯನಂತಿರುವ ತೇಜಸ್ವೀ ವಿಮಾನದಲ್ಲಿ ಆರೂಢನಾಗಿ ಸ್ವರ್ಗಲೋಕಕ್ಕೆ ಹೋಗುತ್ತಾನೆ ಮತ್ತು ಇಂದ್ರನೊಡನೆ ಸುಖವನ್ನು ಭೋಗಿಸುತ್ತಾನೆ. ॥46॥

(ಶ್ಲೋಕ - 47)

ಮೂಲಮ್

ಸೀದನ್ವಿಪ್ರೋ ವಣಿಗ್ವ ತ್ತ್ಯಾ ಪಣ್ಯೈರೇವಾಪದಂ ತರೇತ್ ।
ಖಡ್ಗೇನ ವಾಪದಾಕ್ರಾಂತೋ ನ ಶ್ವವೃತ್ತ್ಯಾ ಕಥಂಚನ ॥

ಅನುವಾದ

ಬ್ರಾಹ್ಮಣನಾದವನು ಅಧ್ಯಾಪನ ಅಥವಾ ಯಜ್ಞ-ಯಾಗಾದಿಗಳಿಂದ ಜೀವನ ನಿರ್ವಾಹ ನಡೆಯದಿದ್ದರೆ, ವೈಶ್ಯವೃತ್ತಿಯನ್ನು ಅವಲಂಬಿಸಬೇಕು. ಅದೂ ಕೂಡ ವಿಪತ್ತು ದೂರವಾಗುವವರೆಗೆ ಮಾತ್ರ. ಇನ್ನೂ ದೊಡ್ಡ ಆಪತ್ತನ್ನು ಇದಿರಿಸಬೇಕಾದಾಗ ಖಡ್ಗವನ್ನೆತ್ತಿ ಕ್ಷತ್ರಿಯ ವೃತ್ತಿಯಿಂದಲೂ ತನ್ನ ನಿರ್ವಾಹಮಾಡಿಕೊಳ್ಳಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ‘ಶ್ವಾನವೃತ್ತಿ’ ಅಂದರೆ ನೀಚರ ಸೇವೆ ಎಂದೂ ಮಾಡಬಾರದು. ॥47॥

(ಶ್ಲೋಕ - 48)

ಮೂಲಮ್

ವೈಶ್ಯವೃತ್ತ್ಯಾತು ರಾಜನ್ಯೋ ಜೀವೇನ್ಮೃಗಯಯಾಪದಿ ।
ಚರೇದ್ವಾ ವಿಪ್ರರೂಪೇಣ ನ ಶ್ವವೃತ್ತ್ಯಾ ಕಥಂಚನ ॥

ಅನುವಾದ

ಹೀಗೆಯೇ ಕ್ಷತ್ರಿಯನಾದವನು ಪ್ರಜಾಪಾಲನಾದಿಗಳಿಂದ ಜೀವನ ನಿರ್ವಾಹ ನಡೆಯದಿದ್ದರೆ ವೈಶ್ಯವೃತ್ತಿಯ ವ್ಯಾಪಾರಾದಿಗಳನ್ನು ಮಾಡಬೇಕು. ಬಹಳ ದೊಡ್ಡ ಆಪತ್ತು ಬಂದೊದಗಿದಾಗ ಬೇಟೆಯಿಂದ ಅಥವಾ ವಿದ್ಯಾರ್ಥಿಗಳಿಗೆ ಕಲಿಸಿ ತನ್ನ ಆಪತ್ತನ್ನು ದೂರಮಾಡಿಕೊಳ್ಳಬೇಕು. ಆದರೆ ‘ಶ್ವಾನವೃತ್ತಿ’ ನೀಚರ ಸೇವೆ ಎಂದೂ ಮಾಡಬಾರದು. ॥48॥

(ಶ್ಲೋಕ - 49)

ಮೂಲಮ್

ಶೂದ್ರವೃತ್ತಿಂ ಭಜೇದ್ವೈಶ್ಯಃ ಶೂದ್ರಃ ಕಾರುಕಟಕ್ರಿಯಾಮ್ ।
ಕೃಚ್ಛ್ರಾನ್ಮುಕ್ತೋ ನ ಗರ್ಹ್ಯೇಣ ವೃತ್ತಿಂ ಲಿಪ್ಸೇತ ಕರ್ಮಣಾ ॥

ಅನುವಾದ

ವೈಶ್ಯರೂ ಕೂಡ ಆಪತ್ತಿನ ಸಮಯದಲ್ಲಿ ಶೂದ್ರರ ವೃತ್ತಿ ಸೇವೆಯ ಮೂಲಕ ತಮ್ಮ ಜೀವನನಿರ್ವಾಹ ಮಾಡಿಕೊಳ್ಳಬೇಕು. ಶೂದ್ರರೂ ಕೂಡ ಚಾಪೆ ಹೆಣೆಯುವುದು ಮುಂತಾದ ಕ್ರಿಯೆಗಳಿಂದ ತಮ್ಮ ಜೀವನ ನಡೆಸಬೇಕು. ಆದರೆ ಉದ್ಧವಾ! ಇವೆಲ್ಲ ಮಾತುಗಳು ಆಪತ್ಕಾಲಕ್ಕಾಗಿ ಇವೆ. ಕಷ್ಟದಿಂದ ಮುಕ್ತನಾಗುವವರೆಗೆ ಮಾತ್ರ ಇಂತಹ ಕೆಲಸ ಮಾಡಬೇಕು. ಆದರೆ ಆಪತ್ತಿನ ಸಮಯ ಕಳೆದುಹೋದಮೇಲೆ ಕೆಳಗಿನ ವರ್ಣಗಳ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುವ ಲೋಭ ವಿರಿಸಿಕೊಳ್ಳಬಾರದು. ॥49॥

(ಶ್ಲೋಕ - 50)

ಮೂಲಮ್

ವೇದಾಧ್ಯಾಯಸ್ವಧಾಸ್ವಾಹಾಬಲ್ಯನ್ನಾದ್ಯೈರ್ಯಥೋದಯಮ್ ।
ದೇವರ್ಷಿಪಿತೃಭೂತಾನಿ ಮದ್ರೂಪಾಣ್ಯನ್ವಹಂ ಯಜೇತ್ ॥

ಅನುವಾದ

ಗೃಹಸ್ಥನ ಧರ್ಮವನ್ನು ತಿಳಿಸುವಾಗ ಹೇಳುತ್ತಾರೆ ಗೃಹಸ್ಥನಾದವನು ವೇದಾಧ್ಯಯನರೂಪೀ ಬ್ರಹ್ಮಯಜ್ಞ, ತರ್ಪಣರೂಪೀ ಪಿತೃಯಜ್ಞ, ಹವನರೂಪೀ ದೇವಯಜ್ಞ, ಕಾಕಬಲಿ ಮುಂತಾದ ಭೂತಯಜ್ಞ, ಅನ್ನದಾನರೂಪೀ ಅತಿಥಿಯಜ್ಞ ಇವುಗಳ ಮೂಲಕ ನನ್ನ ಸ್ವರೂಪಭೂತ ಋಷಿಗಳು, ದೇವತೆಗಳು, ಪಿತೃಗಳು, ಮನುಷ್ಯರು ಹಾಗೂ ಬೇರೆ ಸಮಸ್ತ ಪ್ರಾಣಿಗಳು ಇವುಗಳಲ್ಲಿ ನನ್ನ ಭಾವನೆಯನ್ನೇ ಇರಿಸಿ ಯಥಾಶಕ್ತಿ ಪ್ರತಿದಿನವೂ ಪೂಜಿಸಬೇಕು. ॥50॥

(ಶ್ಲೋಕ - 51)

ಮೂಲಮ್

ಯದೃಚ್ಛಯೋಪಪನ್ನೇನ ಶುಕ್ಲೇನೋಪಾರ್ಜಿತೇನ ವಾ ।
ಧನೇನಾಪೀಡಯನ್ಭೃತ್ಯಾನ್ ನ್ಯಾಯೇನೈವಾಹರೇತ್ಕ್ರತೂನ್ ॥

ಅನುವಾದ

ಗೃಹಸ್ಥನು ಅನಾಯಾಸವಾಗಿ ದೊರಕಿದ ಅಥವಾ ಶಾಸಸಮ್ಮತ ರೀತಿಯಿಂದ ಗಳಿಸಿದ ಶುದ್ಧ ಧನದಿಂದ ತನ್ನ ಭೃತ್ಯರನ್ನು, ಆಶ್ರಿತರನ್ನು ಯಾವುದೇ ವಿಧದಿಂದ ಕಷ್ಟಕೊಡದೆ, ಅರ್ಥಾತ್ ಅವರನ್ನು ಸಂತುಷ್ಟಗೊಳಿಸಿಯೇ ನ್ಯಾಯ ಮತ್ತು ವಿಧ್ಯುಕ್ತವಾಗಿಯೇ ಯಜ್ಞಮಾಡಬೇಕು. ॥51॥

(ಶ್ಲೋಕ - 52)

ಮೂಲಮ್

ಕುಟುಂಬೇಷು ನ ಸಜ್ಜೇತ ನ ಪ್ರಮಾದ್ಯೇತ್ ಕುಟುಂಬ್ಯಪಿ ।
ವಿಪಶ್ಚಿನ್ನಶ್ವರಂ ಪಶ್ಯೇದದೃಷ್ಟಮಪಿ ದೃಷ್ಟವತ್ ॥

ಅನುವಾದ

ಪ್ರಿಯ ಉದ್ಧವನೇ! ಗೃಹಸ್ಥನು ಕುಟುಂಬದಲ್ಲಿ ಆಸಕ್ತ ನಾಗಬಾರದು. ಕುಟುಂಬಿಯಾದರೂ ಭಜನೆಯಲ್ಲಿ ಪ್ರಮಾದ ಮಾಡಬಾರದು. ಈ ಲೋಕದ ಸಮಸ್ತ ವಸ್ತುಗಳು ನಾಶ ವುಳ್ಳವುಗಳಂತೆ ಸ್ವರ್ಗಾದಿ ಪರಲೋಕದ ಭೋಗಗಳೂ ನಾಶಯುಕ್ತವೇ ಆಗಿವೆ ಎಂದು ಬುದ್ಧಿವಂತನಾದವನು ಅರಿತುಕೊಳ್ಳಬೇಕು. ॥52॥

(ಶ್ಲೋಕ - 53)

ಮೂಲಮ್

ಪುತ್ರದಾರಾಪ್ತಬಂಧೂನಾಂ ಸಂಗಮಃ ಪಾಂಥಸಂಗಮಃ ।
ಅನುದೇಹಂ ವಿಯಂತ್ಯೇತೇ ಸ್ವಪ್ನೋ ನಿದ್ರಾನುಗೋ ಯಥಾ ॥

ಅನುವಾದ

ಈ ಪತ್ನೀ, ಪುತ್ರರ, ಬಂಧು-ಬಾಂಧವರ, ಗುರುಹಿರಿಯರ ಕೂಡುವಿಕೆಯೂ, ಯಾತ್ರೆಯಲ್ಲಿ ವಿವಿಧ ಯಾತ್ರಿಗಳು ಒಂದಾಗಿ, ಅಗಲುವಂತೆ ಇದೆ. ನಿದ್ದೆಯಲ್ಲಿ ಬರುವ ಸ್ವಪ್ನವು ಬೇರೆ-ಬೇರೆಯಾಗಿರುವಂತೆಯೇ ಪ್ರತಿಯೊಂದು ದೇಹದಲ್ಲಿ ಒಂದುಗೂಡುವ ಅಗಲುವ ವ್ಯಕ್ತಿಗಳೂ ಬೇರೆ- ಬೇರೆಯಾಗಿಯೇ ಇರುತ್ತಾರೆ.* ॥53॥

ಟಿಪ್ಪನೀ
  • ‘ವಿಯಂತಿ - ವಿವಿಧಾಃ ಯಂತಿ’ ಅರ್ಥಾತ್ ಎಲ್ಲ ಬಂಧು-ಬಾಂಧವರು ಬೇರೆ-ಬೇರೆಯೇ ಆಗಿರುತ್ತಾರೆ. ತನ್ನ ಶಾಶ್ವತ ಸಂಬಂಧವಾದರೋ ಪರಮಪಿತಾ ಪರಮೇಶ್ವರನೊಂದಿಗೆ ಇದೆ, ಲೌಕಿಕ ಸಂಬಂಧಗಳಾದರೋ ಮಾಡಿಕೊಂಡದ್ದು ಎಂದು ದೃಢವಾದ ಧಾರಣೆ ಮಾಡಿಕೊಳ್ಳಬೇಕು. ಆದ್ದರಿಂದ ತಮ್ಮ-ತಮ್ಮ ಅಧಿಕಾರಕ್ಕನುಸಾರ ಎಲ್ಲರ ಸೇವೆ ಮಾಡಬೇಕು. ಅವರಲ್ಲಿ ಆಸಕ್ತಿಯನ್ನಿರಿಸಿ ಮೋಸಹೋಗಬಾರದು.

(ಶ್ಲೋಕ - 54)

ಮೂಲಮ್

ಇತ್ಥಂ ಪರಿಮೃಶನ್ಮುಕ್ತೋ ಗೃಹೇಷ್ವತಿಥಿವದ್ವಸನ್ ।
ನ ಗೃಹೈರನುಬಧ್ಯೇತ ನಿರ್ಮಮೋ ನಿರಹಂಕೃತಃ ॥

ಅನುವಾದ

ಗೃಹಸ್ಥನಾದವನು ಹೀಗೆ ವಿಚಾರಮಾಡಿ ಮನೆ ಸಂಸಾರದಲ್ಲಿ ಸಿಕ್ಕಿಕೊಳ್ಳಬಾರದು. ಅದರಲ್ಲಿ ಯಾರೋ ಅತಿಥಿಯು ವಾಸಿಸುತ್ತಿರುವಂತೆ ಅನಾಸಕ್ತ ಭಾವದಿಂದ ಇರಬೇಕು. ಶರೀರ ಮುಂತಾದವುಗಳಲ್ಲಿ, ಅಹಂಕಾರ ಮತ್ತು ಮನೆಯೇ ಮುಂತಾದವುಗಳಲ್ಲಿ ಮಮತೆ ಇಡದಿದ್ದರೆ ಅವನು ಗೃಹಸ್ಥಾಶ್ರಮದಲ್ಲಿ ಬಂಧಿತನಾಗಲಾರನು. ॥54॥

(ಶ್ಲೋಕ - 55)

ಮೂಲಮ್

ಕರ್ಮಭಿರ್ಗೃಹಮೇಧೀಯೈರಿಷ್ಟ್ವಾ ಮಾಮೇವ ಭಕ್ತಿಮಾನ್ ।
ತಿಷ್ಠೇದ್ವನಂ ವೋಪವಿಶೇತ್ ಪ್ರಜಾವಾನ್ವಾ ಪರಿವ್ರಜೇತ್ ॥

ಅನುವಾದ

ನನ್ನ ಭಕ್ತನು ಮಕ್ಕಳೊಂದಿಗನಾಗಿದ್ದರೆ ಗೃಹಸ್ಥೋಚಿತ ಶಾಸ್ತ್ರೋಕ್ತ ಪವಿತ್ರ ಕರ್ಮಗಳ ಮೂಲಕ ನನ್ನ ಆರಾಧನೆ ಮಾಡುತ್ತಾ ಮನೆಯಲ್ಲಿ ಇರಲಿ. ಇಲ್ಲದಿದ್ದರೆ ವಾನಪ್ರಸ್ಥ ಆಶ್ರಮ ಕೈಗೊಳ್ಳಲಿ ಅಥವಾ ಸಂನ್ಯಾಸಾಶ್ರಮವನ್ನು ಸ್ವೀಕರಿಸಲಿ. ॥55॥

(ಶ್ಲೋಕ - 56)

ಮೂಲಮ್

ಯಸ್ತ್ವಾಸಕ್ತಮತಿರ್ಗೇಹೇ ಪುತ್ರವಿತ್ತೈಷಣಾತುರಃ ।
ಸೈಣಃ ಕೃಪಣಧೀರ್ಮೂಢೋ ಮಮಾಹಮಿತಿ ಬಧ್ಯತೇ ॥

ಅನುವಾದ

ಪ್ರಿಯ ಉದ್ಧವನೇ! ಮನೆ-ಸಂಸಾರದಲ್ಲೇ ಆಸಕ್ತನಾಗಿ, ಪತ್ನೀ, ಪುತ್ರ, ಧನ ಇವುಗಳ ಕಾಮನೆಗಳಲ್ಲಿ ಸಿಕ್ಕಿಕೊಂಡು ಅಯ್ಯೋ-ಮುರ್ರೋ ಎಂದು ಪಾಡುಪಡುತ್ತಾ ಇರುವ ಜನರು, ಮೂಢತೆಯಿಂದ ಸ್ತ್ರೀಲಂಪಟ ಮತ್ತು ಕೃಪಣರಾಗಿ ನಾನು-ನನ್ನದು ಎಂಬ ಹೊಂಡದಲ್ಲಿ ಬಿದ್ದು, ಬಂಧಿತರಾಗುತ್ತಾರೆ. ॥56॥

(ಶ್ಲೋಕ - 57)

ಮೂಲಮ್

ಅಹೋ ಮೇ ಪಿತರೌ ವೃದ್ಧೌ ಭಾರ್ಯಾ ಬಾಲಾತ್ಮಜಾತ್ಮಜಾಃ ।
ಅನಾಥಾ ಮಾಮೃತೇ ದೀನಾಃ ಕಥಂ ಜೀವಂತಿ ದುಃಖಿತಾಃ ॥

ಅನುವಾದ

ಅವರು ಅಯ್ಯೋ! ಶಿವನೇ! ನನ್ನ ತಂದೆ-ತಾಯಿಯರು ಮುದುಕರಾದರು. ಪತ್ನೀ-ಮಕ್ಕಳು ಇನ್ನು ಸಣ್ಣ-ಸಣ್ಣವರಾಗಿದ್ದಾರೆ. ನಾನಿಲ್ಲದಿದ್ದರೆ ಇವರು ದೀನರೂ, ದುಃಖಿಗಳೂ, ಅನಾಥರಾಗುವರು. ಮತ್ತೆ ಇವರ ಜೀವನ ಹೇಗೆ ನಡೆಯಬಹುದು? ಎಂದು ಯೋಚಿಸುತ್ತಾ ಇರುತ್ತಾರೆ. ॥57॥

(ಶ್ಲೋಕ - 58)

ಮೂಲಮ್

ಏವಂ ಗೃಹಾಶಯಾಕ್ಷಿಪ್ತಹೃದಯೋ ಮೂಢಧೀರಯಮ್ ।
ಅತೃಪ್ತಸ್ತಾನನುಧ್ಯಾಯನ್ಮೃತೋಂಧಂ ವಿಶತೇ ತಮಃ ॥

ಅನುವಾದ

ಈ ವಿಧವಾದ ಸಂಸಾರದ ಮಮತೆಯಿಂದ ವಿಕ್ಷಿಪ್ತವಾದ ಚಿತ್ತವುಳ್ಳ ಆ ಮೂಢ ಬುದ್ಧಿಯು ವಿಷಯಭೋಗಗಳಿಂದ ಎಂದೂ ತೃಪ್ತನಾಗುವುದಿಲ್ಲ. ಅದರಲ್ಲೇ ಸಿಕ್ಕಿಹಾಕಿಕೊಂಡು ತನ್ನ ಜೀವನವನ್ನು ಕಳೆದುಕೊಳ್ಳುವನು. ಸತ್ತಮೇಲೆ ಘೋರ ಅಂಧ ಕಾರಮಯ ನರಕಕ್ಕೆ ಹೋಗುತ್ತಾನೆ. ॥58॥

ಅನುವಾದ (ಸಮಾಪ್ತಿಃ)

ಹದಿನೇಳನೆಯ ಅಧ್ಯಾಯವು ಮುಗಿಯಿತು. ॥17॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಸಪ್ತದಶೋಽಧ್ಯಾಯಃ ॥17॥