೧೬

[ಹದಿನಾರನೆಯ ಅಧ್ಯಾಯ]

ಭಾಗಸೂಚನಾ

ಭಗವಂತನ ವಿಭೂತಿಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ತ್ವಂ ಬ್ರಹ್ಮ ಪರಮಂ ಸಾಕ್ಷಾದನಾದ್ಯಂತಮಪಾವೃತಮ್ ।
ಸರ್ವೇಷಾಮಪಿ ಭಾವಾನಾಂ ತ್ರಾಣಸ್ಥಿತ್ಯಪ್ಯಯೋದ್ಭವಃ ॥

(ಶ್ಲೋಕ - 2)

ಮೂಲಮ್

ಉಚ್ಚಾವಚೇಷು ಭೂತೇಷು ದುರ್ಜ್ಞೇಯಮಕೃತಾತ್ಮಭಿಃ ।
ಉಪಾಸತೇ ತ್ವಾಂ ಭಗವನ್ ಯಾಥಾತಥ್ಯೇನ ಬ್ರಾಹ್ಮಣಾಃ ॥

ಅನುವಾದ

ಉದ್ಧವನೆಂದನು — ಓ ಭಗವಂತನೇ! ನೀನು ಸ್ವತಃ ಭಗವಂತನಾಗಿರುವೆ. ನಿನಗೆ ಆದಿಯಾಗಲೀ, ಅಂತ್ಯವಾಗಲೀ ಇಲ್ಲ. ನೀನು ಆವರಣರಹಿತ, ಅದ್ವಿತೀಯ ತತ್ತ್ವನಾಗಿರುವೆ. ಸಮಸ್ತ ಪ್ರಾಣಿಗಳ ಮತ್ತು ಪದಾರ್ಥಗಳ ಉತ್ಪತ್ತಿ, ಸ್ಥಿತಿ, ರಕ್ಷಣೆ ಪ್ರಳಯದ ಕಾರಣವೂ ನೀನೇ ಆಗಿರುವೆ. ನೀನು ಉಚ್ಚ-ನೀಚ ಎಲ್ಲ ಪ್ರಾಣಿಗಳಲ್ಲಿ ಸ್ಥಿತನಾಗಿರುವೆ. ಆದರೆ ತಮ್ಮ ಮನಸ್ಸನ್ನು ವಶಪಡಿಸಿಕೊಳ್ಳದ ಜನರು ನಿನ್ನನ್ನು ಅರಿಯಲಾರರು. ಆದರೆ ನಿನ್ನ ವಿಷಯದಲ್ಲಿ ಯಥಾರ್ಥವಾಗಿ ತಿಳಿದವರೇ ನಿನ್ನ ಉಪಾಸನೆಯನ್ನು ಮಾಡುತ್ತಾರೆ. ॥1-2॥

(ಶ್ಲೋಕ - 3)

ಮೂಲಮ್

ಯೇಷು ಯೇಷು ಚ ಭಾವೇಷು ಭಕ್ತ್ಯಾ ತ್ವಾಂ ಪರಮರ್ಷಯಃ ।
ಉಪಾಸೀನಾಃ ಪ್ರಪದ್ಯಂತೇ ಸಂಸಿದ್ಧಿಂ ತದ್ವದಸ್ವ ಮೇ ॥

ಅನುವಾದ

ದೊಡ್ಡ-ದೊಡ್ಡ ಋಷಿ-ಮಹರ್ಷಿಗಳು ನಿನ್ನ ಯಾವ ರೂಪಗಳನ್ನು ಮತ್ತು ವಿಭೂತಿಗಳನ್ನು ಪರಮ ಭಕ್ತಿಯಿಂದ ಉಪಾಸಿಸಿ ಸಿದ್ಧಿಯನ್ನು ಪಡೆಯುತ್ತಾರೋ ಅವನ್ನು ನೀನು ನನಗೆ ಹೇಳುವ ಕೃಪೆಮಾಡು. ॥3॥

(ಶ್ಲೋಕ - 4)

ಮೂಲಮ್

ಗೂಢಶ್ಚರಸಿ ಭೂತಾತ್ಮಾ ಭೂತಾನಾಂ ಭೂತಭಾವನ ।
ನ ತ್ವಾಂ ಪಶ್ಯಂತಿ ಭೂತಾನಿ ಪಶ್ಯಂತಂ ಮೋಹಿತಾನಿ ತೇ ॥

ಅನುವಾದ

ಸಮಸ್ತ ಪ್ರಾಣಿಗಳ ಜೀವನ ದಾತೃವಾದ ಪ್ರಭುವೇ! ನೀನು ಸಮಸ್ತ ಪ್ರಾಣಿಗಳ ಅಂತರಾತ್ಮನಾಗಿರುವೆ. ನೀನು ಅವುಗಳಲ್ಲಿ ನಿನ್ನನ್ನು ಗುಪ್ತವಾಗಿರಿಸಿಕೊಂಡು ಲೀಲೆಮಾಡುತ್ತಿರುವೆ. ನೀನಾದರೋ ಎಲ್ಲರನ್ನು ನೋಡುತ್ತೀಯೆ, ಆದರೆ ಜಗತ್ತಿನ ಪ್ರಾಣಿಗಳು ನಿನ್ನ ಮಾಯೆಯಿಂದ ಮೋಹಿತರಾಗಿ ನಿನ್ನನ್ನು ನೋಡಲಾರರು. ॥4॥

(ಶ್ಲೋಕ - 5)

ಮೂಲಮ್

ಯಾಃ ಕಾಶ್ಚ ಭೂವೌ ದಿವಿ ವೈ ರಸಾಯಾಂ
ವಿಭೂತಯೋ ದಿಕ್ಷು ಮಹಾವಿಭೂತೇ ।
ತಾ ಮಹ್ಯಮಾಖ್ಯಾಹ್ಯನುಭಾವಿತಾಸ್ತೇ
ನಮಾಮಿ ತೇ ತೀರ್ಥಪದಾಂಘ್ರಿಪದ್ಮಮ್ ॥

ಅನುವಾದ

ಅಚಿಂತ್ಯ ಐಶ್ವರ್ಯ ಸಂಪನ್ನ ಪ್ರಭೋ! ಪೃಥಿವಿ, ಸ್ವರ್ಗ, ಪಾತಾಳ ಹಾಗೂ ದಶದಿಕ್ಕುಗಳಲ್ಲಿ ನಿನ್ನ ಪ್ರಭಾವದಿಂದ ಕೂಡಿದ ಯಾವ-ಯಾವ ವಿಭೂತಿಗಳು ಇವೆಯೋ, ಅವನ್ನು ನೀನು ದಯಾಮಾಡಿ ನನಗೆ ವರ್ಣಿಸಿಹೇಳು. ಸ್ವಾಮಿ! ಸಮಸ್ತ ತೀರ್ಥಗಳನ್ನು ಕೂಡ ತೀರ್ಥವಾಗಿಸುವ ನಿನ್ನ ಈ ಚರಣ ಕಮಲಗಳನ್ನು ನಾನು ವಂದಿಸುತ್ತೇನೆ. ॥5॥

(ಶ್ಲೋಕ - 6)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏವಮೇತದಹಂ ಪೃಷ್ಟಃ ಪ್ರಶ್ನಂ ಪ್ರಶ್ನವಿದಾಂ ವರ ।
ಯುಯುತ್ಸುನಾ ವಿನಶನೇ ಸಪತ್ನೈರರ್ಜುನೇನ ವೈ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯಉದ್ಧವಾ! ನೀನು ಪ್ರಶ್ನೆಯ ಮರ್ಮವನ್ನು ತಿಳಿಯುವವರಲ್ಲಿ ಶ್ರೇಷ್ಠನಾಗಿರುವೆ. ಕುರುಕ್ಷೇತ್ರದಲ್ಲಿ ಕೌರವ-ಪಾಂಡವರಿಗೆ ಯುದ್ಧವು ಸನ್ನದ್ಧವಾದಾಗ ಶತ್ರುಗಳೊಡನೆ ಯುದ್ಧಕ್ಕಾಗಿ ತತ್ಪರನಾದ ಅರ್ಜುನನು ನನ್ನಲ್ಲಿ ಹೀಗೆಯೇ ಪ್ರಶ್ನಿಸಿದ್ದನು. ॥6॥

(ಶ್ಲೋಕ - 7)

ಮೂಲಮ್

ಜ್ಞಾತ್ವಾ ಜ್ಞಾತಿವಧಂ ಗರ್ಹ್ಯಮಧರ್ಮಂ ರಾಜ್ಯ ಹೇತುಕಮ್ ।
ತತೋ ನಿವೃತ್ತೋ ಹಂತಾಹಂ ಹತೋಯಮಿತಿ ಲೌಕಿಕಃ ॥

ಅನುವಾದ

ಕುಟುಂಬದವರನ್ನು ರಾಜ್ಯಕ್ಕಾಗಿ ಕೊಲ್ಲುವುದು ಬಹಳನಿಂದನೀಯವೂ, ಅಧರ್ಮವೂ ಆಗಿದೆ ಎಂಬ ಧೋರಣೆ ಅರ್ಜುನನ ಮನಸ್ಸಿನಲ್ಲಿ ಉಂಟಾಗಿತ್ತು. ಸಾಧಾರಣ ಜನರಂತೆ ‘ನಾನು ಕೊಲ್ಲುವವನೂ, ಇವರೆಲ್ಲ ಸಾಯುವವರಾಗಿದ್ದಾರೆ’ ಹೀಗೆ ಯೋಚಿಸುತ್ತಾ ಅವನು ಯುದ್ಧದಿಂದ ನಿವೃತ್ತನಾಗಲು ಬಯಸಿದ್ದನು. ॥7॥

ಮೂಲಮ್

(ಶ್ಲೋಕ - 8)
ಸ ತದಾ ಪುರುಷವ್ಯಾಘ್ರೋ ಯುಕ್ತ್ಯಾ ಮೇ ಪ್ರತಿಬೋಧಿತಃ ।
ಅಭ್ಯಭಾಷತ ಮಾಮೇವಂ ಯಥಾ ತ್ವಂ ರಣಮೂರ್ಧನಿ ॥

ಅನುವಾದ

ಆಗ ನಾನು ರಣಭೂಮಿಯಲ್ಲಿ ಬಹಳಷ್ಟು ಯುಕ್ತಿಗಳಿಂದ ವೀರವರ ಅರ್ಜುನನಿಗೆ ತಿಳಿಸಿಹೇಳಿದ್ದೆ. ಆಗಲೂ ಅರ್ಜುನನು ನೀನು ನನ್ನಲ್ಲಿ ಪ್ರಶ್ನಿಸಿದಂತೆ ಪ್ರಶ್ನಿಸಿದ್ದನು. ॥8॥

(ಶ್ಲೋಕ - 9)

ಮೂಲಮ್

ಅಹಮಾತ್ಮೋದ್ಧವಾಮೀಷಾಂ ಭೂತಾನಾಂ ಸುಹೃದೀಶ್ವರಃ ।
ಅಹಂ ಸರ್ವಾಣಿ ಭೂತಾನಿ ತೇಷಾಂ ಸ್ಥಿತ್ಯುದ್ಭವಾಪ್ಯಯಃ ॥

ಅನುವಾದ

ಎಲೈ ಉದ್ಧವನೇ! ನಾನು ಸಮಸ್ತ ಪ್ರಾಣಿಗಳ ಆತ್ಮಾ, ಹಿತೈಷಿ, ಸುಹೃದ್, ಈಶ್ವರ ನಿಯಾಮಕನಾಗಿದ್ದೇನೆ. ನಾನೇ ಈ ಸಮಸ್ತ ಪ್ರಾಣಿ-ಪದಾರ್ಥಗಳ ರೂಪದಲ್ಲಿದ್ದೇನೆ. ಇವುಗಳ ಉತ್ಪತ್ತಿ, ಸ್ಥಿತಿ ಮತ್ತು ಪ್ರಳಯದ ಕಾರಣನೂ ನಾನೇ ಆಗಿದ್ದೇನೆ. ॥9॥

(ಶ್ಲೋಕ - 10)

ಮೂಲಮ್

ಅಹಂ ಗತಿರ್ಗತಿಮತಾಂ ಕಾಲಃ ಕಲಯತಾಮಹಮ್ ।
ಗುಣಾನಾಂ ಚಾಪ್ಯಹಂ ಸಾಮ್ಯಂ ಗುಣಿನ್ಯೌತ್ಪತ್ತಿಕೋ ಗುಣಃ ॥

ಅನುವಾದ

ಗತಿಶೀಲ ಪದಾರ್ಥಗಳ ಗತಿಯು ನಾನೇ ಆಗಿದ್ದೇನೆ. ಗಣನೆ ಮಾಡುವವರಲ್ಲಿ ಕಾಲವು, ಗುಣಗಳ ಸಾಮ್ಯಾವಸ್ಥಾ ಪ್ರಕೃತಿ, ಗುಣಿಗಳ ನೈಸರ್ಗಿಕ ಗುಣಗಳು ನಾನೇ ಆಗಿದ್ದೇನೆ. ॥10॥

(ಶ್ಲೋಕ - 11)

ಮೂಲಮ್

ಗುಣಿನಾಮಪ್ಯಹಂ ಸೂತ್ರಂ ಮಹತಾಂ ಚ ಮಹಾನಹಮ್ ।
ಸೂಕ್ಷ್ಮಾಣಾಮಪ್ಯಹಂ ಜೀವೋ ದುರ್ಜಯಾನಾಮಹಂ ಮನಃ ॥

ಅನುವಾದ

ಗುಣಗಳಲ್ಲಿ ಕ್ಷೋಭೆ ಉಂಟಾಗಿ ಕ್ರಿಯಾಶಕ್ತಿ ಪ್ರಧಾನ ಸೂತ್ರಾತ್ಮಾ, ಜ್ಞಾನಶಕ್ತಿ ಪ್ರಧಾನ ಮಹತ್ತತ್ತ್ವ, ಸೂಕ್ಷ್ಮಗಳಲ್ಲಿಯೂ ಕೂಡ ಜೀವರೂಪದಿಂದ ನಾನೇ ಆಗಿರುವೆನು. ಕಷ್ಟವಾಗಿ ವಶಕ್ಕೆ ಬರುವಂತಹ ಮನಸ್ಸೂ ನಾನೇ ಆಗಿದ್ದೇನೆ. ॥11॥

(ಶ್ಲೋಕ - 12)

ಮೂಲಮ್

ಹಿರಣ್ಯಗರ್ಭೋ ವೇದಾನಾಂ ಮಂತ್ರಾಣಾಂ ಪ್ರಣವಸಿವೃತ್ ।
ಅಕ್ಷರಾಣಾಮಕಾರೋಸ್ಮಿ ಪದಾನಿಚ್ಛಂದಸಾಮಹಮ್ ॥

ಅನುವಾದ

ವೇದಗಳ ಅಭಿವ್ಯಕ್ತಿಸ್ಥಾನ ಹಿರಣ್ಯಗರ್ಭನೂ, ಮಂತ್ರಗಳಲ್ಲಿ ‘ಅ, ಉ, ಮ್’ ಈ ಮೂರು ಮಾತ್ರೆಗಳಿಂದ ಕೂಡಿದ ಪ್ರಣವವೂ, ಅಕ್ಷರದಲ್ಲಿ ಅಕಾರವೂ, ಛಂದಸ್ಸುಗಳಲ್ಲಿ ತ್ರಿಪದಾ ಗಾಯತ್ರಿಯೂ ನಾನೇ ಆಗಿದ್ದೇನೆ. ॥12॥

(ಶ್ಲೋಕ - 13)

ಮೂಲಮ್

ಇಂದ್ರೋಹಂ ಸರ್ವದೇವಾನಾಂ ವಸೂನಾಮಸ್ಮಿ ಹವ್ಯವಾಟ್ ।
ಆದಿತ್ಯಾನಾಮಹಂ ವಿಷ್ಣೂ ರುದ್ರಾಣಾಂ ನೀಲಲೋಹಿತಃ ॥

(ಶ್ಲೋಕ - 14)

ಮೂಲಮ್

ಬ್ರಹ್ಮರ್ಷೀಣಾಂ ಭೃಗುರಹಂ ರಾಜರ್ಷೀಣಾಮಹಂ ಮನುಃ ।
ದೇವರ್ಷೀಣಾಂ ನಾರದೋಹಂ ಹವಿರ್ಧಾನ್ಯಸ್ಮಿ ಧೇನುಷು ॥

ಅನುವಾದ

ಸಮಸ್ತ ದೇವತೆಗಳಲ್ಲಿ ಇಂದ್ರನೂ, ಎಂಟು ವಸುಗಳಲ್ಲಿ ಅಗ್ನಿಯೂ, ದ್ವಾದಶಾದಿತ್ಯರಲ್ಲಿ ವಿಷ್ಣುವೂ, ಏಕಾದಶ ರುದ್ರರಲ್ಲಿ ನೀಲಲೋಹಿತ ಹೆಸರಿನ ರುದ್ರನು ನಾನೇ ಆಗಿದ್ದೇನೆ. ಬ್ರಹ್ಮರ್ಷಿಗಳಲ್ಲಿ ಭೃಗು, ರಾಜರ್ಷಿಗಳಲ್ಲಿ ಮನು, ದೇವರ್ಷಿಗಳಲ್ಲಿ ನಾರದ, ಹಸುಗಳಲ್ಲಿ ಕಾಮಧೇನು ನಾನೇ ಆಗಿರುವೆನು. ॥13-14॥

(ಶ್ಲೋಕ - 15)

ಮೂಲಮ್

ಸಿದ್ಧೇಶ್ವರಾಣಾಂ ಕಪಿಲಃ ಸುಪರ್ಣೋಹಂ ಪತತಿಣಾಮ್ ।
ಪ್ರಜಾಪತೀನಾಂ ದಕ್ಷೋಹಂ ಪಿತೃಣಾಮಹಮರ್ಯಮಾ ॥

ಅನುವಾದ

ಸಿದ್ಧೇಶ್ವರರಲ್ಲಿ ಕಪಿಲನೂ, ಪಕ್ಷಿಗಳಲ್ಲಿ ಗರುಡನೂ, ಪ್ರಜಾಪತಿಗಳಲ್ಲಿ ದಕ್ಷಪ್ರಜಾಪತಿಯೂ, ಪಿತೃಗಳಲ್ಲಿ ಅರ್ಯಮಾ ನಾನಾಗಿದ್ದೇನೆ. ॥15॥

(ಶ್ಲೋಕ - 16)

ಮೂಲಮ್

ಮಾಂ ವಿದ್ಧ್ಯುದ್ಧವ ದೈತ್ಯಾನಾಂ ಪ್ರಹ್ಲಾದಮಸುರೇಶ್ವರಮ್ ।
ಸೋಮಂ ನಕ್ಷತ್ರೌಷಧೀನಾಂ ಧನೇಶಂ ಯಕ್ಷರಕ್ಷಸಾಮ್ ॥

ಅನುವಾದ

ಪ್ರಿಯ ಉದ್ಧವಾ! ನಾನು ದೈತ್ಯರಲ್ಲಿ ದೈತ್ಯರಾಜ ಪ್ರಹ್ಲಾದನು, ನಕ್ಷತ್ರಗಳ ಅಧಿಪತಿ, ವನಸ್ಪತಿಗಳನ್ನು ಪುಷ್ಟಗೊಳಿಸುವ ಚಂದ್ರನು, ಯಕ್ಷ-ರಾಕ್ಷಸರಲ್ಲಿ ಧನಪತಿ ಕುಬೇರನು ನಾನೇ ಆಗಿದ್ದೇನೆ. ॥16॥

(ಶ್ಲೋಕ - 17)

ಮೂಲಮ್

ಐರಾವತಂ ಗಜೇಂದ್ರಾಣಾಂ ಯಾದಸಾಂ ವರುಣಂ ಪ್ರಭುಮ್ ।
ತಪತಾಂ ದ್ಯುಮತಾಂ ಸೂರ್ಯಂಮನುಷ್ಯಾಣಾಂ ಚ ಭೂಪತಿಮ್ ॥

ಅನುವಾದ

ಗಜೇಂದ್ರರಲ್ಲಿ ಐರಾವತವೂ, ಜಲಚರಗಳ ಅಧಿಪತಿ ವರುಣ, ಬೆಳಗುವವರಲ್ಲಿ ಪ್ರಕಾಶಕೊಡುವಂತಹ ಸೂರ್ಯನೂ, ಮನುಷ್ಯರಲ್ಲಿ ರಾಜನೂ ನಾನೇ ಆಗಿದ್ದೇನೆ. ॥17॥

(ಶ್ಲೋಕ - 18)

ಮೂಲಮ್

ಉಚ್ಚೈಃಶ್ರವಾಸ್ತುರಂಗಾಣಾಂ ಧಾತೂನಾಮಸ್ಮಿ ಕಾಂಚನಮ್ ।
ಯಮಃ ಸಂಯಮತಾಂ ಚಾಹಂ ಸರ್ಪಾಣಾಮಸ್ಮಿ ವಾಸುಕಿಃ ॥

ಅನುವಾದ

ಕುದುರೆಗಳಲ್ಲಿ ಉಚ್ಚೈಶ್ರವಸ್ಸು, ಧಾತುಗಳಲ್ಲಿ ಚಿನ್ನ, ದಂಡಧಾರಿಗಳಲ್ಲಿ ಯಮ, ಸರ್ಪಗಳಲ್ಲಿ ವಾಸುಕಿ ನಾನೇ ಆಗಿರುವೆನು. ॥18॥

(ಶ್ಲೋಕ - 19)

ಮೂಲಮ್

ನಾಗೇಂದ್ರಾಣಾಮನಂತೋಹಂ ಮೃಗೇಂದ್ರಃ ಶೃಂಗಿದಂಷ್ಟ್ರಿಣಾಮ್ ।
ಆಶ್ರಮಾಣಾಮಹಂ ತುರ್ಯೋ ವರ್ಣಾನಾಂ ಪ್ರಥಮೋನಘ ॥

ಅನುವಾದ

ಪುಣ್ಯಾತ್ಮಾ ಉದ್ಧವನೇ! ನಾನೇ ನಾಗರಾಜರಲ್ಲಿ ಆದಿಶೇಷನೂ, ಕೊಂಬು ಮತ್ತು ದಾಡೆಗಳುಳ್ಳ ಪ್ರಾಣಿಗಳಲ್ಲಿ ಅವರ ರಾಜನಾದ ಸಿಂಹನೂ, ಆಶ್ರಮಗಳಲ್ಲಿ ಸಂನ್ಯಾಸವೂ, ವರ್ಣಗಳಲ್ಲಿ ಬ್ರಾಹ್ಮಣನೂ ಆಗಿದ್ದೇನೆ. ॥19॥

(ಶ್ಲೋಕ - 20)

ಮೂಲಮ್

ತೀರ್ಥಾನಾಂ ಸ್ರೋತಸಾಂ ಗಂಗಾ ಸಮುದ್ರಃ ಸರಸಾಮಹಮ್ ।
ಆಯುಧಾನಾಂ ಧನುರಹಂ ತ್ರಿಪುರಘ್ನೋ ಧನುಷ್ಮತಾಮ್ ॥

ಅನುವಾದ

ತೀರ್ಥಗಳಲ್ಲಿ ಹಾಗೂ ನದಿಗಳಲ್ಲಿ ಗಂಗೆಯೂ, ಜಲಾಶಯಗಳಲ್ಲಿ ಸಮುದ್ರವೂ, ಅಸ್ತ್ರ-ಶಸ್ತ್ರಗಳಲ್ಲಿ ಧನುಸ್ಸೂ, ಧನುರ್ಧಾರಿಗಳಲ್ಲಿ ತ್ರಿಪುರಾರೀ ಶಂಕರನೂ ನಾನೇ ಆಗಿರುವೆನು. ॥20॥

(ಶ್ಲೋಕ - 21)

ಮೂಲಮ್

ಧಿಷ್ಣ್ಯಾನಾಮಸ್ಮ್ಯಹಂ ಮೇರುರ್ಗಹನಾನಾಂ ಹಿಮಾಲಯಃ ।
ವನಸ್ಪತೀನಾಮಶ್ವತ್ಥ ಓಷಧೀನಾಮಹಂ ಯವಃ ॥

ಅನುವಾದ

ನಿವಾಸಸ್ಥಾನಗಳಲ್ಲಿ ಸುಮೇರುವೂ, ದುರ್ಗಮ ಸ್ಥಾನಗಳಲ್ಲಿ ಹಿಮಾಲಯವೂ, ವನಸ್ಪತಿಗಳಲ್ಲಿ ಅರಳೀಮರವೂ, ಧಾನ್ಯಗಳಲ್ಲಿ ಜವೆಯೂ ನಾನೇ ಆಗಿದ್ದೇನೆ. ॥21॥

(ಶ್ಲೋಕ - 22)

ಮೂಲಮ್

ಪುರೋಧಸಾಂ ವಸಿಷ್ಠೋಹಂ ಬ್ರಹ್ಮಿಷ್ಠಾನಾಂ ಬೃಹಸ್ಪತಿಃ ।
ಸ್ಕಂದೋಹಂ ಸರ್ವಸೇನಾನ್ಯಾಮಗ್ರಣ್ಯಾಂ ಭಗವಾನಜಃ ॥

ಅನುವಾದ

ಪುರೋಹಿತ ರಲ್ಲಿ ವಸಿಷ್ಠನೂ, ವೇದವೇತ್ತರಲ್ಲಿ ಬೃಹಸ್ಪತಿಯೂ, ಎಲ್ಲ ಸೇನಾಪತಿಗಳಲ್ಲಿ ಸ್ಕಂದನೂ, ಸನ್ಮಾರ್ಗ ಪ್ರವರ್ತಕರಲ್ಲಿ ಭಗವಾನ್ ಬ್ರಹ್ಮನೂ ನಾನೇ ಆಗಿರುವೆನು. ॥22॥

(ಶ್ಲೋಕ - 23)

ಮೂಲಮ್

ಯಜ್ಞಾನಾಂ ಬ್ರಹ್ಮಯಜ್ಞೋಹಂ ವ್ರತಾನಾಮವಿಹಿಂಸನಮ್ ।
ವಾಯ್ವಗ್ನ್ಯರ್ಕಾಂಬುವಾಗಾತ್ಮಾ ಶುಚೀನಾಮಪ್ಯಹಂ ಶುಚಿಃ ॥

ಅನುವಾದ

ಪಂಚಮಹಾಯಜ್ಞಗಳಲ್ಲಿ ಬ್ರಹ್ಮಯಜ್ಞ (ಸ್ವಾಧ್ಯಾಯಯಜ್ಞ)ವೂ, ವ್ರತಗಳಲ್ಲಿ ಅಹಿಂಸಾವ್ರತವೂ, ಶುದ್ಧ ಮಾಡುವ ಪದಾರ್ಥಗಳಲ್ಲಿ ನಿತ್ಯಶುದ್ಧ ವಾಯುವೂ ಹಾಗೂ ಅಗ್ನಿ, ಸೂರ್ಯ, ಜಲ, ವಾಣಿ ಮತ್ತು ಆತ್ಮಾ ನಾನೇ ಆಗಿರುವೆನು. ॥23॥

(ಶ್ಲೋಕ - 24)

ಮೂಲಮ್

ಯೋಗಾನಾಮಾತ್ಮಸಂರೋಧೋ ಮಂತ್ರೋಸ್ಮಿ ವಿಜಿಗೀಷತಾಮ್ ।
ಆನ್ವೀಕ್ಷಿಕೀ ಕೌಶಲಾನಾಂ ವಿಕಲ್ಪಃ ಖ್ಯಾತಿವಾದಿನಾಮ್ ॥

(ಶ್ಲೋಕ - 25)

ಮೂಲಮ್

ಸೀಣಾಂ ತು ಶತರೂಪಾಹಂ ಪುಂಸಾಂ ಸ್ವಾಯಂಭುವೋ ಮನುಃ ।
ನಾರಾಯಣೋ ಮುನೀನಾಂ ಚ ಕುಮಾರೋ ಬ್ರಹ್ಮಚಾರಿಣಾಮ್ ॥

ಅನುವಾದ

ಯೋಗಗಳಲ್ಲಿ ಮನೋನಿರೋಧರೂಪೀ ಸಮಾಧಿ ಯೋಗವೂ, ಗೆಲ್ಲುವ ಇಚ್ಛೆಯುಳ್ಳವರಲ್ಲಿ ಗುಪ್ತವಾಗಿಡುವಂತಹ ಮಂತ್ರಾಲೋಚನೆಯೂ, ಆತ್ಮಾನಾತ್ಮ ವಿವೇಕದ ಚರ್ಚೆಯಲ್ಲಿ ಬ್ರಹ್ಮವಿದ್ಯೆಯೂ ನಾನೇ ಆಗಿದ್ದೇನೆ. ತತ್ತ್ವಗಳ ನಿರ್ಣಯ ಮಾಡಲಾಗುವ ವಾದ-ವಿವಾದರೂಪೀ ವಿಕಲ್ಪವೂ ನಾನೇ. (ಏಕೆಂದರೆ ಇಂದಿನವರೆಗೆ ಯಾವುದೇ ತತ್ತ್ವಗಳ ವಿಷಯದಲ್ಲಿ ತತ್ತ್ವಗಳ ಸಂಖ್ಯೆ ಇಷ್ಟೇ ಇದೆ ಎಂಬುದು ನಿರ್ಣಯ ಮಾಡಲಾಗಲಿಲ್ಲ.) ಸೀಯರಲ್ಲಿ ಮನುಪತ್ನೀ ಶತರೂಪಾ, ಪುರುಷರಲ್ಲಿ ಸ್ವಾಯಂಭುವ ಮನು, ಮುನೀಶ್ವರರಲ್ಲಿ ನಾರಾಯಣ, ಬ್ರಹ್ಮಚಾರಿಗಳಲ್ಲಿ ಸನತ್ಕು ಮಾರರು ನಾನೇ ಆಗಿದ್ದೇನೆ. ॥24-25॥

(ಶ್ಲೋಕ - 26)

ಮೂಲಮ್

ಧರ್ಮಾಣಾಮಸ್ಮಿ ಸಂನ್ಯಾಸಃ ಕ್ಷೇಮಾಣಾಮಬಹಿರ್ಮತಿಃ ।
ಗುಹ್ಯಾನಾಂ ಸೂನೃತಂ ವೌನಂ ಮಿಥುನಾನಾಮಜಸ್ತ್ವಹಮ್ ॥

ಅನುವಾದ

ಧರ್ಮಗಳಲ್ಲಿ ಸಂನ್ಯಾಸ ಧರ್ಮವು ಶ್ರೇಯಸ್ಕಾಮೀ ಪುರುಷರ ಅಂತರ್ಮುಖೀ ವೃತ್ತಿಯೂ, ಯಾವುದೇ ಮಾತನ್ನು ಗೋಪನೀಯ ವಾಗಿಡುವುದಕ್ಕಾಗಿ ಮಧುರವಾಣೀ ಮತ್ತು ಮೌನ ನಾನೇ ಆಗಿದ್ದೇನೆ. ಯಾರ ಶರೀರದ ಎರಡು ಭಾಗಗಳಿಂದ ಸ್ತ್ರೀ-ಪುರುಷರ ಮೊದಲನೆಯ ಜೋಡಿಯು ಉತ್ಪನ್ನವಾಯಿತೋ ಆ ಬ್ರಹ್ಮದೇವರು ನಾನೇ ಆಗಿದ್ದೇನೆ. ॥26॥

(ಶ್ಲೋಕ - 27)

ಮೂಲಮ್

ಸಂವತ್ಸರೋಸ್ಮ್ಯನಿಮಿಷಾಮೃತೂನಾಂ ಮಧುಮಾಧವೌ ।
ಮಾಸಾನಾಂ ಮಾರ್ಗಶೀರ್ಷೋಹಂ ನಕ್ಷತ್ರಾಣಾಂ ತಥಾಭಿಜಿತ್ ॥

ಅನುವಾದ

ಸದಾಕಾಲವೂ ಎಚ್ಚರವಾಗಿರುವವರಲ್ಲಿ ಸಂವತ್ಸರ ರೂಪೀ ಕಾಲವು ನಾನೇ. ಋತುಗಳಲ್ಲಿ ವಸಂತನೂ, ತಿಂಗಳುಗಳಲ್ಲಿ ಮಾರ್ಗಶೀರ್ಷವೂ, ನಕ್ಷತ್ರಗಳಲ್ಲಿ ಅಭಿಜಿತ್ ನಾನೇ ಆಗಿದ್ದೇನೆ. ॥27॥

(ಶ್ಲೋಕ - 28)

ಮೂಲಮ್

ಅಹಂ ಯುಗಾನಾಂ ಚ ಕೃತಂ ಧೀರಾಣಾಂ ದೇವಲೋಸಿತಃ ।
ದ್ವೈಪಾಯನೋಸ್ಮಿ ವ್ಯಾಸಾನಾಂ ಕವೀನಾಂ ಕಾವ್ಯ ಆತ್ಮವಾನ್ ॥

ಅನುವಾದ

ಯುಗಗಳಲ್ಲಿ ಕೃತಯುಗವೂ, ವಿವೇಕಿಗಳಲ್ಲಿ ದೇವರ್ಷಿ ದೇವಲ ಮತ್ತು ಅಸಿತನೂ, ವ್ಯಾಸರಲ್ಲಿ ಶ್ರೀಕೃಷ್ಣದ್ವೈಪಾಯನ ವ್ಯಾಸ ಹಾಗೂ ಕವಿಗಳಲ್ಲಿ ಮನಸ್ವೀ ಶುಕ್ರಾಚಾರ್ಯರೂ ನಾನೇ ಆಗಿರುವೆನು. ॥28॥

(ಶ್ಲೋಕ - 29)

ಮೂಲಮ್

ವಾಸುದೇವೋ ಭಗವತಾಂ ತ್ವಂ ತು ಭಾಗವತೇಷ್ವಹಮ್ ।
ಕಿಂಪುರುಷಾಣಾಂ ಹನುಮಾನ್ವಿದ್ಯಾಧ್ರಾಣಾಂ ಸುದರ್ಶನಃ ॥

ಅನುವಾದ

ಷಡ್ಗುಣೈಶ್ವರ್ಯಗಳಲ್ಲಿ ಭಗವಾನ್ ವಾಸುದೇವನು ನಾನೇ. ನನ್ನ ಪ್ರೇಮಿ ಭಕ್ತರಲ್ಲಿ ನೀನು (ಉದ್ಧವ), ಕಿಂಪುರುಷರಲ್ಲಿ ಹನುಮಂತನೂ, ವಿದ್ಯಾಧರರಲ್ಲಿ ಸುದರ್ಶನವೂ (ಅವನು ಅಜಗರ ರೂಪದಿಂದ ನಂದರಾಜನನ್ನು ನುಂಗಿದ್ದನು ಮತ್ತೆ ಭಗವಂತನ ಪಾದಸ್ಪರ್ಶದಿಂದ ಮುಕ್ತನಾಗಿದ್ದನು.) ನಾನೇ ಆಗಿದ್ದೇನೆ. ॥29॥

(ಶ್ಲೋಕ - 30)

ಮೂಲಮ್

ರತ್ನಾನಾಂ ಪದ್ಮರಾಗೋಸ್ಮಿ ಪದ್ಮಕೋಶಃ ಸುಪೇಶಸಾಮ್ ।
ಕುಶೋಸ್ಮಿ ದರ್ಭಜಾತೀನಾಂ ಗವ್ಯಮಾಜ್ಯಂ ಹವಿಃಷ್ವಹಮ್ ॥

ಅನುವಾದ

ರತ್ನಗಳಲ್ಲಿ ಪದ್ಮರಾಗ(ಕೆಂಪು)ವೂ, ಸುಂದರ ವಸ್ತುಗಳಲ್ಲಿ ಕಮಲದ ಮೊಗ್ಗು, ತೃಣಗಳಲ್ಲಿ ಕುಶ, ಹವಿಸ್ಸುಗಳಲ್ಲಿ ಹಸುವಿನ ತುಪ್ಪ ನಾನೇ ಆಗಿದ್ದೇನೆ. ॥30॥

(ಶ್ಲೋಕ - 31)

ಮೂಲಮ್

ವ್ಯವಸಾಯಿನಾಮಹಂ ಲಕ್ಷ್ಮೀಃ ಕಿತವಾನಾಂ ಛಲಗ್ರಹಃ ।
ತಿತಿಕ್ಷಾಸ್ಮಿ ತಿತಿಕ್ಷೂಣಾಂ ಸತ್ತ್ವಂ ಸತ್ತ್ವವತಾಮಹಮ್ ॥

ಅನುವಾದ

ವ್ಯಾಪಾರಿಗಳಲ್ಲಿ ಇರುವ ಲಕ್ಷ್ಮೀಯೂ, ಛಲ-ಕಪಟ ಮಾಡುವವರಲ್ಲಿ ದ್ಯೂತ ಕ್ರೀಡೆಯೂ, ತಿತಿಕ್ಷುಗಳ ತಿತಿಕ್ಷೆಯೂ, ಸಾತ್ತ್ವಿಕರಲ್ಲಿರುವ ಸತ್ತ್ವಗುಣವೂ ನಾನೇ ಆಗಿರುವೆನು. ॥31॥

(ಶ್ಲೋಕ - 32)

ಮೂಲಮ್

ಓಜಃ ಸಹೋ ಬಲವತಾಂ ಕರ್ಮಾಹಂ ವಿದ್ಧಿ ಸಾತ್ವತಾಮ್ ।
ಸಾತ್ವತಾಂ ನವಮೂರ್ತೀನಾಮಾದಿಮೂರ್ತಿರಹಂ ಪರಾ ॥

ಅನುವಾದ

ಬಲಿಷ್ಠರಲ್ಲಿ ಉತ್ಸಾಹ ಪರಾಕ್ರಮವೂ, ಭಗವದ್ಭಕ್ತರಲ್ಲಿ ಭಕ್ತಿಯುಕ್ತ ನಿಷ್ಕಾಮಕರ್ಮವೂ, ವೈಷ್ಣವರಲ್ಲಿ ವಾಸುದೇವ ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ, ನಾರಾಯಣ, ಹಯಗ್ರೀವ, ವರಾಹ, ನೃಸಿಂಹ ಮತ್ತು ಬ್ರಹ್ಮಾ ಈ ಒಂಭತ್ತು ಮೂರ್ತಿಗಳಲ್ಲಿ ಮೊದಲನೆಯದಾದ ಶ್ರೇಷ್ಠ ವಾಸುದೇವ ಮೂರ್ತಿಯೂ ನಾನೇ ಆಗಿದ್ದೇನೆ. ॥32॥

(ಶ್ಲೋಕ - 33)

ಮೂಲಮ್

ವಿಶ್ವಾವಸುಃ ಪೂರ್ವಚಿತ್ತಿರ್ಗಂಧರ್ವಾಪ್ಸರಸಾಮಹಮ್ ।
ಭೂಧರಾಣಾಮಹಂ ಸ್ಥೈರ್ಯಂ ಗಂಧಮಾತ್ರಮಹಂ ಭುವಃ ॥

ಅನುವಾದ

ಗಂಧರ್ವರಲ್ಲಿ ವಿಶ್ವಾವಸು, ಅಪ್ಸರೆಯರಲ್ಲಿ ಬ್ರಹ್ಮನ ಆಸ್ಥಾನದ ಅಪ್ಸರೆ ಪೂರ್ವಚಿತ್ತಿ, ಪರ್ವತಗಳಲ್ಲಿ ಸ್ಥಿರತೆ, ಪೃಥ್ವಿಯಲ್ಲಿ ಶುದ್ಧಗಂಧ ತನ್ಮಾತ್ರೆಯ ಗುಣ ಶಬ್ದ ನಾನೇ ಆಗಿದ್ದೇನೆ. ॥33॥

(ಶ್ಲೋಕ - 34)

ಮೂಲಮ್

ಅಪಾಂ ರಸಶ್ಚ ಪರಮಸ್ತೇಜಿಷ್ಠಾನಾಂ ವಿಭಾವಸುಃ ।
ಪ್ರಭಾ ಸೂರ್ಯೇಂದುತಾರಾಣಾಂ ಶಬ್ದೋಹಂ ನಭಸಃ ಪರಃ ॥

ಅನುವಾದ

ಜಲದಲ್ಲಿ ರಸವೂ, ತೇಜಸ್ವೀ ಅಗ್ನಿ, ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಪ್ರಭೆನಾನಾಗಿದ್ದೇನೆ. ಆಕಾಶದಲ್ಲಿ ಅದರ ಏಕಮಾತ್ರ ಗುಣವಾದ ಶಬ್ದವು ನಾನೇ ಆಗಿದ್ದೇನೆ. ॥34॥

(ಶ್ಲೋಕ - 35)

ಮೂಲಮ್

ಬ್ರಹ್ಮಣ್ಯಾನಾಂ ಬಲಿರಹಂ ವೀರಾಣಾಮಹಮರ್ಜುನಃ ।
ಭೂತಾನಾಂ ಸ್ಥಿತಿರುತ್ಪತ್ತಿರಹಂ ವೈ ಪ್ರತಿಸಂಕ್ರಮಃ ॥

ಅನುವಾದ

ಉದ್ಧವನೇ! ಬ್ರಾಹ್ಮಣಭಕ್ತರಲ್ಲಿ ಬಲಿ, ವೀರರಲ್ಲಿ ಅರ್ಜುನ, ಪ್ರಾಣಿಗಳಲ್ಲಿ ಅವರ ಉತ್ಪತ್ತಿ, ಸ್ಥಿತಿಯೂ, ಕೊನೆಗೆ ಅವರೆಲ್ಲ ನನ್ನ ಮೂಲಸ್ಥಾನದಲ್ಲಿ (ಪ್ರಳಯದಲ್ಲಿ) ಬಂದು ಸೇರುವ ವಿಧಾನವೂ ನಾನೇ ಆಗಿದ್ದೇನೆ. ॥35॥

(ಶ್ಲೋಕ - 36)

ಮೂಲಮ್

ಗತ್ಯುಕ್ತ್ಯುತ್ಸರ್ಗೋಪಾದಾನಮಾನಂದಸ್ಪರ್ಶಲಕ್ಷಣಮ್ ।
ಆಸ್ವಾದಶ್ರುತ್ಯವಘ್ರಾಣಮಹಂ ಸರ್ವೇಂದ್ರಿಯೇಂದ್ರಿಯಮ್ ॥

(ಶ್ಲೋಕ - 37)

ಮೂಲಮ್

ಪೃಥಿವೀ ವಾಯುರಾಕಾಶ ಆಪೋ ಜ್ಯೋತಿರಹಂ ಮಹಾನ್ ।
ವಿಕಾರಃ ಪುರುಷೋವ್ಯಕ್ತಂ ರಜಃ ಸತ್ತ್ವಂ ತಮಃ ಪರಮ್ ॥

ಅನುವಾದ

ನಾನೇ ಕಾಲುಗಳಿಂದ ನಡೆಯುವ ಶಕ್ತಿ, ವಾಣಿಯಿಂದ ಮಾತಾಡುವ ಶಕ್ತಿ, ವಾಯುವಿನಲ್ಲಿ ಮಲತ್ಯಾಗದ ಶಕ್ತಿ, ಕೈಗಳಲ್ಲಿ ಹಿಡಿಯುವ ಶಕ್ತಿ, ಜನನೇಂದ್ರಿಯದಲ್ಲಿ ಆನಂದೋಪ ಭೋಗದ ಶಕ್ತಿ, ತ್ವಚೆಯಲ್ಲಿ ಸ್ಪರ್ಶದ, ನೇತ್ರಗಳಲ್ಲಿ ದರ್ಶನದ, ರಸನೆಯಲ್ಲಿ ರುಚಿಯಾಗುವ, ಕಿವಿಗಳಲ್ಲಿ ಶ್ರವಣದ, ಮೂಗಿನಲ್ಲಿ ಮೂಸುವ ಶಕ್ತಿಯೂ ಸಮಸ್ತ ಇಂದ್ರಿಯಗಳ ಇಂದ್ರಿಯ ಶಕ್ತಿಯೂ ನಾನೇ ಆಗಿದ್ದೇನೆ. ಪೃಥ್ವೀ, ವಾಯು, ಆಕಾಶ, ಜಲ, ತೇಜ, ಅಹಂಕಾರ, ಮಹತ್ತತ್ತ್ವ, ಪಂಚಮಹಾಭೂತಗಳು, ಜೀವ, ಅವ್ಯಕ್ತ, ಪ್ರಕೃತಿ, ಸತ್ತ್ವ, ರಜ, ತಮ ಇವೆಲ್ಲ ವಿಕಾರಗಳು ಮತ್ತು ಇವುಗಳಿಂದ ಅತೀತವಾಗಿರುವ ಪರಬ್ರಹ್ಮ ಇವೆಲ್ಲವೂ ನಾನೇ ಆಗಿರುವೆನು. ॥36-37॥

(ಶ್ಲೋಕ - 38)

ಮೂಲಮ್

ಅಹಮೇತತ್ಪ್ರಸಂಖ್ಯಾನಂ ಜ್ಞಾನಂ ತತ್ತ್ವವಿನಿಶ್ಚಯಃ ।
ಮಯೇಶ್ವರೇಣ ಜೀವೇನ ಗುಣೇನ ಗುಣಿನಾ ವಿನಾ ।
ಸರ್ವಾತ್ಮನಾಪಿ ಸರ್ವೇಣ ನ ಭಾವೋ ವಿದ್ಯತೇ ಕ್ವಚಿತ್ ॥

ಅನುವಾದ

ಈ ತತ್ತ್ವಗಳ ಗಣನೆ, ಲಕ್ಷಣಗಳ ಮೂಲಕ ಅವುಗಳ ಜ್ಞಾನ, ತತ್ತ್ವಜ್ಞಾನ ರೂಪೀ ಅದರ ಫಲವೂ ನಾನೇ ಆಗಿದ್ದೇನೆ. ನಾನೇ ಈಶ್ವರನೂ, ಜೀವವೂ, ಗುಣವೂ, ಗುಣಿಯೂ, ಎಲ್ಲರ ಆತ್ಮನೂ, ಸರ್ವ ರೂಪನೂ ಆಗಿರುವೆನು. ನಾನಲ್ಲದೆ ಬೇರೆ ಯಾವುದೇ ಪದಾರ್ಥ ಎಲ್ಲಿಯೂ ಇಲ್ಲ. ॥38॥

(ಶ್ಲೋಕ - 39)

ಮೂಲಮ್

ಸಂಖ್ಯಾನಂ ಪರಮಾಣೂನಾಂ ಕಾಲೇನ ಕ್ರಿಯತೇ ಮಯಾ ।
ನ ತಥಾ ಮೇ ವಿಭೂತೀನಾಂ ಸೃಜತೋಂಡಾನಿ ಕೋಟಿಶಃ ॥

ಅನುವಾದ

ಒಂದೊಮ್ಮೆ ಎಣಿಸ ತೊಡಗಿದರೆ, ಪರಮಾಣುಗಳ ಎಣಿಕೆ ಕದಾಚಿತ್ ಆಗಬಹುದು, ಆದರೆ ನನ್ನ ವಿಭೂತಿಗಳ ಎಣಿಕೆ ಸಾಧ್ಯವಾಗದು. ಏಕೆಂದರೆ, ನಾನು ರಚಿಸಿದ ಕೋಟಿ-ಕೋಟಿ ಬ್ರಹ್ಮಾಂಡಗಳ ಎಣಿಕೆಯೇ ಆಗದಿದ್ದಾಗ, ನನ್ನ ವಿಭೂತಿಗಳ ಗಣನೆಯಾದರೂ ಹೇಗಾಗ ಬಲ್ಲದು? ॥39॥

ಮೂಲಮ್

(ಶ್ಲೋಕ - 40)
ತೇಜಃ ಶ್ರೀಃ ಕೀರ್ತಿರೈಶ್ವರ್ಯಂ ಹ್ರೀಸ್ತ್ಯಾಗಃ ಸೌಭಗಂ ಭಗಃ ।
ವೀರ್ಯಂ ತಿತಿಕ್ಷಾ ವಿಜ್ಞಾನಂ ಯತ್ರ ಯತ್ರ ಸ ಮೇಂಶಕಃ ॥

ಅನುವಾದ

ಯಾವುದರಲ್ಲೇ ಆಗಲೀ ತೇಜ, ಶ್ರೀ, ಕೀರ್ತಿ, ಐಶ್ವರ್ಯ, ಲಜ್ಜೆ, ತ್ಯಾಗ, ಸೌಂದರ್ಯ, ಸೌಭಾಗ್ಯ, ಪರಾಕ್ರಮ, ತಿತಿಕ್ಷೆ, ವಿಜ್ಞಾನ ಮುಂತಾದ ಇರುವ ಶ್ರೇಷ್ಠ ಗುಣಗಳೆಲ್ಲ ನನ್ನ ಅಂಶವೇ ಆಗಿದೆ ಎಂದು ತಿಳಿದುಕೊ. ॥40॥

(ಶ್ಲೋಕ - 41)

ಮೂಲಮ್

ಏತಾಸ್ತೇ ಕೀರ್ತಿತಾಃ ಸರ್ವಾಃ ಸಂಕ್ಷೇಪೇಣ ವಿಭೂತಯಃ ।
ಮನೋವಿಕಾರಾ ಏವೈತೇ ಯಥಾ ವಾಚಾಭಿಧೀಯತೇ ॥

ಅನುವಾದ

ಉದ್ಧವನೇ! ನಿನ್ನ ಪ್ರಶ್ನೆಗನುಸಾರ ನಾನು ಸಂಕ್ಷೇಪವಾಗಿ ವಿಭೂತಿಗಳನ್ನು ವರ್ಣಿಸಿರುವೆನು. ಇವೆಲ್ಲವೂ ಪರಮಾರ್ಥ ವಸ್ತು ಆಗಿರದೆ ಮನೋವಿಕಾರಮಾತ್ರವಾಗಿವೆ. ಏಕೆಂದರೆ, ಮನಸ್ಸಿನಿಂದ ಯೋಚಿಸಿದ, ವಾಣಿಯಿಂದ ಹೇಳಲಾದ ಯಾವುದೇ ವಸ್ತುವೂ ಪರಮಾರ್ಥ (ವಾಸ್ತವಿಕ)ವಾಗಿರುವುದಿಲ್ಲ. ಅದರ ಒಂದು ಕಲ್ಪನೆಯೇ ಆಗಿರುತ್ತದೆ. ॥41॥

(ಶ್ಲೋಕ - 42)

ಮೂಲಮ್

ವಾಚಂ ಯಚ್ಛ ಮನೋ ಯಚ್ಛ ಪ್ರಾಣಾನ್ಯಚ್ಛೇಂದ್ರಿಯಾಣಿ ಚ ।
ಆತ್ಮಾನಮಾತ್ಮನಾ ಯಚ್ಛ ನ ಭೂಯಃ ಕಲ್ಪಸೇಧ್ವನೇ ॥

ಅನುವಾದ

ಆದ್ದರಿಂದ ನೀನು ವಾಣಿಯನ್ನು ವಶಪಡಿಸಿಕೋ. ಮನಸ್ಸಿನ ಸಂಕಲ್ಪ-ವಿಕಲ್ಪಗಳನ್ನು ನಿಲ್ಲಿಸಿಬಿಡು. ಪ್ರಾಣಗಳನ್ನು ವಶಪಡಿಸಿಕೊಂಡು, ಇಂದ್ರಿಯಗಳನ್ನು ದಮನಮಾಡು. ಸಾತ್ತ್ವಿಕ ಬುದ್ಧಿಯಮೂಲಕ ಪ್ರಪಂಚಾಭಿಮುಖೀ ಬುದ್ಧಿಯನ್ನು ಶಾಂತಗೊಳಿಸು. ಮತ್ತೆ ನಿನಗೆ ಸಂಸಾರದ ಜನ್ಮ-ಮರಣ ರೂಪೀ ದುಃಖಮಯ ಮಾರ್ಗದಲ್ಲಿ ಅಲೆಯ ಬೇಕಾಗುವುದಿಲ್ಲ. ॥42॥

(ಶ್ಲೋಕ - 43)

ಮೂಲಮ್

ಯೋ ವೈ ವಾಙ್ಮನಸೀ ಸಮ್ಯಗಸಂಯಚ್ಛನ್ಧಿಯಾ ಯತಿಃ ।
ತಸ್ಯ ವ್ರತಂ ತಪೋಜ್ಞಾನಂ ಸ್ರವತ್ಯಾಮಘಟಾಂಬುವತ್ ॥

ಅನುವಾದ

ಬುದ್ಧಿಯ ಮೂಲಕ ವಾಣಿ ಮತ್ತು ಮನಸ್ಸನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲಾರದ ಸಾಧಕನ ವ್ರತ, ತಪಸ್ಸು, ಜ್ಞಾನ ಇವುಗಳು ಹಸಿಗಡಿಗೆಯಲ್ಲಿ ತುಂಬಿಟ್ಟ ನೀರಿನಂತೆ, ಕ್ಷೀಣವಾಗುತ್ತದೆ. ॥43॥

(ಶ್ಲೋಕ - 44)

ಮೂಲಮ್

ತಸ್ಮಾನ್ಮನೋವಚಃಪ್ರಾಣಾನ್ ನಿಯಚ್ಛೇನ್ಮತ್ಪರಾಯಣಃ ।
ಮದ್ಭಕ್ತಿಯುಕ್ತಯಾ ಬುದ್ಧ್ಯಾ ತತಃ ಪರಿಸಮಾಪ್ಯತೇ ॥

ಅನುವಾದ

ಅದಕ್ಕಾಗಿ ನನ್ನ ಪ್ರೇಮೀ ಭಕ್ತನು ನನ್ನಲ್ಲಿ ಪರಾಯಣನಾಗಿ ಭಕ್ತಿಯುಕ್ತ ಬುದ್ಧಿಯಿಂದ ವಾಣೀ, ಮನಸ್ಸು, ಪ್ರಾಣಗಳನ್ನು ಸಂಯಮ ಮಾಡಬೇಕು. ಹೀಗೆ ಮಾಡುವುದರಿಂದ ಮತ್ತೆ ಅವನಿಗೆ ಮಾಡಲು ಯಾವುದೇ ಬಾಕಿ ಇರುವುದಿಲ್ಲ. ಅವನು ಕೃತ್ಯ ಕೃತ್ಯನಾಗಿ ಹೋಗುತ್ತಾನೆ. ॥44॥

ಅನುವಾದ (ಸಮಾಪ್ತಿಃ)

ಹದಿನಾರನೆಯ ಅಧ್ಯಾಯವು ಮುಗಿಯಿತು. ॥16॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಷೋಡಶೋಽಧ್ಯಾಯಃ ॥16॥