೧೩

[ಹದಿಮೂರನೆಯ ಅಧ್ಯಾಯ]

ಭಾಗಸೂಚನಾ

ಹಂಸರೂಪದಿಂದ ಸನಕಾದಿಗಳಿಗೆ ಮಾಡಿದ ಉಪದೇಶದ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಸತ್ತ್ವಂ ರಜಸ್ತಮ ಇತಿ ಗುಣಾ ಬುದ್ಧೇರ್ನ ಚಾತ್ಮನಃ ।
ಸತ್ತ್ವೇನಾನ್ಯತವೌ ಹನ್ಯಾತ್ಸತ್ತ್ವಂ ಸತ್ತ್ವೇನ ಚೈವ ಹಿ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವಾ! ಸತ್ತ್ವ, ರಜ, ತಮ, ಈ ಮೂರೂ ಗುಣಗಳು ಬುದ್ಧಿಯ ದಾಗಿವೆ, ಆತ್ಮನದಲ್ಲ. ಸತ್ತ್ವಗುಣದ ಮೂಲಕ ರಜ ಮತ್ತು ತಮೋಗುಣಗಳನ್ನು ನಾಶಮಾಡಿ, ಮತ್ತೆ ಅಂತಃಕರಣದ ಶುದ್ಧಿಯಾದ ಬಳಿಕ ಸತ್ತ್ವಗುಣವನ್ನು ತ್ಯಜಿಸಿ, ಗುಣಾತೀತನಾಗಬೇಕು.॥1॥

(ಶ್ಲೋಕ - 2)

ಮೂಲಮ್

ಸತ್ತ್ವಾದ್ಧರ್ಮೋ ಭವೇದ್ವ ದ್ಧಾತ್ಪುಂಸೋ ಮದ್ಭಕ್ತಿಲಕ್ಷಣಃ ।
ಸಾತ್ತ್ವಿಕೋಪಾಸಯಾ ಸತ್ತ್ವಂ ತತೋ ಧರ್ಮಃ ಪ್ರವರ್ತತೇ ॥

ಅನುವಾದ

ಪುರುಷನು ಸತ್ತ್ವಗುಣ ಸಂಪನ್ನನಾದಾಗ ಭಗವತ್ಪ್ರಾಪ್ತಿಯನ್ನು ಮಾಡಿಸುವ ಧರ್ಮದ ವೃದ್ಧಿಯಾಗುತ್ತದೆ. ಸಾತ್ತ್ವಿಕ ಪದಾರ್ಥಗಳನ್ನೇ ಸೇವಿಸುವುದರಿಂದ ಕ್ರಮಶಃ ಸತ್ತ್ವಗುಣವು ಬೆಳೆಯುತ್ತದೆ. ತತ್ಫಲವಾಗಿ ಧರ್ಮದಲ್ಲಿ ಪ್ರವೃತ್ತಿ ಬೆಳೆಯುತ್ತದೆ. ॥2॥

(ಶ್ಲೋಕ - 3)

ಮೂಲಮ್

ಧರ್ಮೋ ರಜಸ್ತಮೋ ಹನ್ಯಾತ್ಸತ್ತ್ವವೃದ್ಧಿರನುತ್ತಮಃ ।
ಆಶು ನಶ್ಯತಿ ತನ್ಮೂಲೋ ಹ್ಯಧರ್ಮ ಉಭಯೇ ಹತೇ ॥

ಅನುವಾದ

ಸತ್ತ್ವಗುಣವು ಚೆನ್ನಾಗಿ ಬೆಳೆದಾಗ ರಜ ಮತ್ತು ತಮ ಇವೆರಡನ್ನು ಅದು ಪೂರ್ಣವಾಗಿ ನಾಶಮಾಡಿಬಿಡುತ್ತದೆ. ಅಧರ್ಮವು ರಜ ಹಾಗೂ ತಮದ ಮೂಲವಾಗಿದೆ, ಮತ್ತೆ ಆ ಅಧರ್ಮವೂ ಕೂಡಲೇ ನಾಶವಾಗಿಬಿಡುತ್ತದೆ. ಈ ಪ್ರಕಾರ ಪುರುಷನು ಪೂರ್ಣರೂಪದಿಂದ ಶುದ್ಧನಾಗುತ್ತಾನೆ. ॥3॥

ಮೂಲಮ್

(ಶ್ಲೋಕ - 4)
ಆಗಮೋಪಃ ಪ್ರಜಾ ದೇಶಃ ಕಾಲಃ ಕರ್ಮ ಚ ಜನ್ಮ ಚ ।
ಧ್ಯಾನಂ ಮಂತ್ರೋಥ ಸಂಸ್ಕಾರೋ ದಶೈತೇ ಗುಣಹೇತವಃ ॥

ಅನುವಾದ

ಗುಣಗಳ ವೃದ್ಧಿಗಾಗಿ ಈ ಹತ್ತು ಕಾರಣಗಳನ್ನು ಹೇಳಲಾಗಿವೆ. (1) ಶಾಸ, (2) ಜಲ, (3) ಪ್ರಜೆ ‘ಸಂತತಿ’, (4) ದೇಶ, (5) ಕಾಲ, (6) ಕರ್ಮ, (7) ಜನ್ಮ, (8) ಧ್ಯಾನ, (9) ಮಂತ್ರ, (10) ಸಂಸ್ಕಾರ. ಈ ಹತ್ತು ವಸ್ತುಗಳು ಸಾತ್ತ್ವಿಕವಾಗಿದ್ದರೆ ಸತ್ತ್ವಗುಣವನ್ನು, ರಾಜಸವಾಗಿದ್ದರೆ ರಜೋಗುಣವನ್ನು, ತಾಮಸವಾಗಿದ್ದರೆ ತಮೋಗುಣವನ್ನು ವೃದ್ಧಿ ಪಡಿಸುವುದಾಗಿದೆ. ॥4॥

(ಶ್ಲೋಕ - 5)

ಮೂಲಮ್

ತತ್ತತ್ ಸಾತ್ತ್ವಿಕಮೇವೈಷಾಂ ಯದ್ಯದ್ವ ದ್ಧಾಃ ಪ್ರಚಕ್ಷತೇ ।
ನಿಂದಂತಿ ತಾಮಸಂ ತತ್ತದ್ರಾಜಸಂ ತದುಪೇಕ್ಷಿತಮ್ ॥

ಅನುವಾದ

ಈಗ ಗುಣಗಳನ್ನು ಹೇಗೆ ಗುರುತಿಸಬೇಕು; ಅದಕ್ಕಾಗಿ ಹೇಳುತ್ತಾರೆ ಯಾರ ಕುರಿತು ಶ್ರೇಷ್ಠ ಜನರು ಪ್ರಶಂಸಿಸುತ್ತಾರೋ ಅವರನ್ನು ಸಾತ್ತ್ವಿಕರೆಂದೂ, ಯಾರನ್ನು ಉಪೇಕ್ಷಿಸುತ್ತಾರೋ ಅವರನ್ನು ರಾಜಸರೆಂದೂ, ಯಾರನ್ನು ನಿಂದಿಸುವರೋ ಅವರನ್ನು ತಾಮಸರೆಂದೂ ತಿಳಿಯಬೇಕು. ॥5॥

ಮೂಲಮ್

(ಶ್ಲೋಕ - 6)
ಸಾತ್ತ್ವಿಕಾನ್ಯೇವ ಸೇವೇತ ಪುಮಾನ್ ಸತ್ತ್ವವಿವೃದ್ಧಯೇ ।
ತತೋ ಧರ್ಮಸ್ತತೋ ಜ್ಞಾನಂ ಯಾವತ್ ಸ್ಮೃತಿರಪೋಹನಮ್ ॥

ಅನುವಾದ

ಸತ್ತ್ವಗುಣದ ವೃದ್ಧಿಗಾಗಿ ಸಾತ್ತ್ವಿಕ ವಸ್ತುಗಳನ್ನೇ ಸೇವಿಸಬೇಕು. ಅದರಿಂದ ಧರ್ಮ, ಜ್ಞಾನದ ವೃದ್ಧಿಯಾದೀತು. ತನ್ನ ಸ್ವರೂಪದ ಸ್ಮೃತಿ ಉಂಟಾದೀತು, ಎಲ್ಲ ರೀತಿಯ ಸಂಶಯಗಳು ನಾಶವಾಗುವವು. ಭಗವತ್ತತ್ತ್ವದ ಜ್ಞಾನ ಉಂಟಾಗುವವರೆಗೆ ಹೀಗೆ ಮಾಡುತ್ತಾ ಇರಬೇಕು. ॥6॥

(ಶ್ಲೋಕ - 7)

ಮೂಲಮ್

ವೇಣುಸಂಘರ್ಷಜೋ ವಹ್ನಿರ್ದಗ್ಧ್ವಾ ಶಾಮ್ಯತಿ ತದ್ವನಮ್ ।
ಏವಂ ಗುಣವ್ಯತ್ಯಯಜೋ ದೇಹಃ ಶಾಮ್ಯತಿ ತತ್ಕ್ರಿಯಃ ॥

ಅನುವಾದ

ಬಿದಿರುಗಳ ಘರ್ಷಣೆಯಿಂದ ಉಂಟಾದ ಬೆಂಕಿಯು ಬಿದಿರಿನ ವನವನ್ನೇ ಸುಟ್ಟು ಸ್ವಯಂ ಶಾಂತವಾಗುತ್ತದೆಯೋ ಹಾಗೆಯೇ ಮನುಷ್ಯನಲ್ಲಿ ಶಾಸ್ತ್ರವಿಚಾರದಿಂದ ಉತ್ಪನ್ನವಾದ ಜ್ಞಾನಾಗ್ನಿಯು ಶರೀರವು ಉಂಟಾಗುವ ಕಾರಣಗಳಾದ ತ್ರಿಗುಣಗಳನ್ನು ನಾಶಮಾಡಿ ಬಿಡುತ್ತದೆ. ಬಳಿಕ ಅದೂ ಸ್ವತಃ ಶಾಂತವಾಗುತ್ತದೆ. ॥7॥

(ಶ್ಲೋಕ - 8)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ವಿದಂತಿ ಮರ್ತ್ಯಾಃ ಪ್ರಾಯೇಣ ವಿಷಯಾನ್ ಪದಮಾಪದಾಮ್ ।
ತಥಾಪಿ ಭುಂಜತೇ ಕೃಷ್ಣ ತತ್ಕಥಂ ಶ್ವಖರಾಜವತ್ ॥

ಅನುವಾದ

ಉದ್ಧವನು ಕೇಳಿದನು ಭಗವಂತಾ! ವಿಷಯಗಳು ವಿಪತ್ತುಗಳ ಮನೆಯಾಗಿದೆ ಎಂದು ಪ್ರಾಯಶಃ ಎಲ್ಲ ಮನುಷ್ಯರು ಇದನ್ನು ತಿಳಿಯುತ್ತಾರೆ. ಆದರೂ ಕೂಡ ಅವರು ನಾಯಿ, ಕತ್ತೆ, ಕುರಿಗಳಂತೆ ದುಃಖವನ್ನು ಸಹಿಸುತ್ತಲೂ ಅವನ್ನು ಭೋಗಿಸುತ್ತಾರೆ. ಇದರ ಕಾರಣವೇನು? ॥8॥

(ಶ್ಲೋಕ - 9)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಅಹಮಿತ್ಯನ್ಯಥಾಬುದ್ಧಿಃ ಪ್ರಮತ್ತಸ್ಯ ಯಥಾ ಹೃದಿ ।
ಉತ್ಸರ್ಪತಿ ರಜೋ ಘೋರಂ ತತೋ ವೈಕಾರಿಕಂ ಮನಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯಉದ್ಧವನೇ! ಅಜ್ಞಾನಿಗಳು ತಮ್ಮ ಹೃದಯದಲ್ಲಿ ‘ನಾನು-ನನ್ನದು’ ಈ ಮಿಥ್ಯಾ ಅಭಿನಿವೇಶ (ಅಭಿಮಾನ) ತಳೆದಿರುತ್ತಾರೆ, ಇದೇ ಇವರ ದುಃಖದ ಕಾರಣವಾಗಿದೆ. ವಾಸ್ತವವಾಗಿ ಮನಸ್ಸು ಸ್ವರೂಪತಃ ಸತ್ತ್ವಗುಣ ವಿಶಿಷ್ಟವಾಗಿದೆ. ಆದ್ದರಿಂದ ಸ್ವರೂಪತಃ ಶುದ್ಧವಾಗಿದ್ದರೂ ಅಹಂತೆ, ಮಮತೆಯ ಕಾರಣ ಅದನ್ನು ಘೋರ ರಜೋಗುಣವು ಆವರಿಸಿ ಬಿಡುತ್ತದೆ. ॥9॥

(ಶ್ಲೋಕ - 10)

ಮೂಲಮ್

ರಜೋಯುಕ್ತಸ್ಯ ಮನಸಃ ಸಂಕಲ್ಪಃ ಸವಿಕಲ್ಪಕಃ ।
ತತಃ ಕಾಮೋ ಗುಣಧ್ಯಾನಾದ್ದುಸ್ಸಹಃ ಸ್ಯಾದ್ಧಿ ದುರ್ಮತೇಃ ॥

(ಶ್ಲೋಕ - 11)

ಮೂಲಮ್

ಕರೋತಿ ಕಾಮವಶಗಃ ಕರ್ಮಾಣ್ಯವಿಜಿತೇಂದ್ರಿಯಃ ।
ದುಃಖೋದರ್ಕಾಣಿ ಸಂಪಶ್ಯನ್ ರಜೋವೇಗವಿಮೋಹಿತಃ ॥

ಅನುವಾದ

ಮತ್ತೆ ರಜೋಗುಣದ ಮೂಲಕ ಆವೃತವಾದ ಮನಸ್ಸು ಅನೇಕ ರೀತಿಯ ಸಂಕಲ್ಪ-ವಿಕಲ್ಪಗಳನ್ನು ಮಾಡತೊಡಗುತ್ತದೆ. ನಿರಂತರ ಆ ಗುಣಗಳದ್ದೇ ಚಿಂತನೆ ಆಗುತ್ತದೆ. ಈ ಪ್ರಕಾರ ದೂಷಿತ ಬುದ್ಧಿಯುಳ್ಳವನು ತನ್ನ ಇಂದ್ರಿಯಗಳ ಮೇಲಿನ ಹತೋಟಿಯನ್ನು ಕಳೆದುಕೊಳ್ಳುತ್ತಾನೆ. ಕಾಮನೆಗಳಿಗೆ ವಶೀಭೂತನಾಗಿ, ರಜೋಗುಣದ ವೇಗದಿಂದ ಮೋಹಿತನಾದವನು ಪರಿಣಾಮದಲ್ಲಿ ದುಃಖವೇ-ದುಃಖವಿರುವ ಕರ್ಮಗಳಲ್ಲಿ ಸಿಕ್ಕಿಕೊಳ್ಳುತ್ತಾನೆ. ॥10-11॥

(ಶ್ಲೋಕ - 12)

ಮೂಲಮ್

ರಜಸ್ತಮೋಭ್ಯಾಂ ಯದಪಿ ವಿದ್ವಾನ್ ವಿಕ್ಷಿಪ್ತಧೀಃ ಪುನಃ ।
ಅತಂದ್ರಿತೋ ಮನೋ ಯುಂಜನ್ ದೋಷದೃಷ್ಟಿರ್ನ ಸಜ್ಜತೇ ॥

ಅನುವಾದ

ವಿದ್ವಾಂಸರ ಬುದ್ಧಿಯೂ ರಜೋಗುಣ, ತಮೋಗುಣಗಳಿಂದ ವಿಕ್ಷಿಪ್ತವಾಗುತ್ತದೆ. ಆದರೆ ಅವನು ಎಚ್ಚರಿಕೆಯಿಂದ ಮನಸ್ಸನ್ನು ಪರಮಾತ್ಮನಲ್ಲಿ ತೊಡಗಿಸಿ, ಆ ಕರ್ಮಗಳ ಕುರಿತು ದೋಷದೃಷ್ಟಿಯನ್ನಿಟ್ಟು ಅವುಗಳಲ್ಲಿ ಆಸಕ್ತನಾಗುವುದಿಲ್ಲ. ॥12॥

(ಶ್ಲೋಕ - 13)

ಮೂಲಮ್

ಅಪ್ರಮತ್ತೋನುಯುಂಜೀತ ಮನೋ ಮಯ್ಯರ್ಪಯನ್ ಶನೈಃ ।
ಅನಿರ್ವಿಣ್ಣೋ ಯಥಾಕಾಲಂ ಜಿತಶ್ವಾಸೋ ಜಿತಾಸನಃ ॥

(ಶ್ಲೋಕ - 14)

ಮೂಲಮ್

ಏತಾವಾನ್ ಯೋಗ ಆದಿಷ್ಟೋ ಮಚ್ಛಿಷ್ಯೈಃ ಸನಕಾದಿಭಿಃ ।
ಸರ್ವತೋ ಮನ ಆಕೃಷ್ಯ ಮಯ್ಯದ್ಧಾವೇಶ್ಯತೇ ಯಥಾ ॥

ಅನುವಾದ

ಆದ್ದರಿಂದ ಎಲೈ ಉದ್ಧವಾ! ಶ್ರೇಯಸ್ಸನ್ನು ಬಯಸುವವನು ಎಚ್ಚರವಾಗಿರಬೇಕು, ಕ್ರಮಾನುಸಾರ ಅಭ್ಯಾಸದ ಮೂಲಕ ಮನಸ್ಸನ್ನು ನನ್ನಲ್ಲಿ ತೊಡಗಿಸಬೇಕು. ಸಾಧನೆಯಲ್ಲಿ ಬೇಸರಿಸಬಾರದು. ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಾ ಇರಬೇಕು. ಪ್ರಾಣ ಮತ್ತು ಆಸನಗಳ ಮೇಲೆ ಹತೋಟಿ ಸಾಧಿಸಬೇಕು. ಎಲ್ಲ ವಿಷಯಗಳಿಂದ ಮನಸ್ಸನ್ನು ಚೆನ್ನಾಗಿ ಸೆಳೆದುಕೊಂಡಾಗ ಆ ನಿರ್ವಿಷಯವಾದ ಮನಸ್ಸು ನನ್ನಲ್ಲಿ ದೃಢವಾಗಿ ಸ್ಥಿರವಾಗಿ ಹೋಗುತ್ತದೆ. ಈ ಯೋಗವನ್ನು ನಾನೇ ಬ್ರಹ್ಮದೇವನ ಸಾನ್ನಿಧ್ಯದಲ್ಲಿ ಸನಕಾದಿಗಳಿಗೆ ಹೇಳಿದ್ದೆ. ॥13-14॥

(ಶ್ಲೋಕ - 15)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಯದಾ ತ್ವಂ ಸನಕಾದಿಭ್ಯೋ ಯೇನ ರೂಪೇಣ ಕೇಶವ ।
ಯೋಗಮಾದಿಷ್ಟ ವಾನೇತದ್ ರೂಪಮಿಚ್ಛಾಮಿ ವೇದಿತುಮ್ ॥

ಅನುವಾದ

ಉದ್ಧವನು ಕೇಳಿದನು — ಕೇಶವಾ! ನೀನು ಈ ಯೋಗ ವನ್ನು ಸನಕಾದಿಗಳಿಗೆ ಎಂದು, ಯಾವ ವಿಧದಿಂದ ಉಪದೇಶಿಸಿದ್ದೆ. ಅದನ್ನು ವಿವರವಾಗಿ ಕೇಳಲು ನಾನು ಬಯಸುತ್ತೇನೆ. ॥15॥

(ಶ್ಲೋಕ - 16)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಪುತ್ರಾ ಹಿರಣ್ಯಗರ್ಭಸ್ಯ ಮಾನಸಾಃ ಸನಕಾದಯಃ ।
ಪಪ್ರಚ್ಛುಃ ಪಿತರಂ ಸೂಕ್ಷ್ಮಾಂ ಯೋಗಸ್ಯೈಕಾಂತಿಕೀಂ ಗತಿಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವಾ! ಸನಕಾದಿಗಳು ಬ್ರಹ್ಮನ ಮಾನಸಪುತ್ರರಾಗಿದ್ದಾರೆ. ಅವರು ಒಮ್ಮೆ ತಮ್ಮ ತಂದೆಯ ಬಳಿ ಯೋಗದ ಸೂಕ್ಷ್ಮ ಮತ್ತು ಅಂತಿಮ ಸೀಮೆಯ ಕುರಿತು ಪ್ರಶ್ನಿಸಿದರು. ಆ ಪ್ರಶ್ನೆ ಹೀಗಿತ್ತು ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ಸನಕಾದಯ ಊಚುಃ

ಮೂಲಮ್

ಗುಣೇಷ್ವಾವಿಶತೇ ಚೇತೋ ಗುಣಾಶ್ಚೇತಸಿ ಚ ಪ್ರಭೋ ।
ಕಥಮನ್ಯೋನ್ಯಸಂತ್ಯಾಗೋ ಮುಮುಕ್ಷೋರತಿತಿತೀರ್ಷೋಃ ॥

ಅನುವಾದ

ಸನಕಾದಿಗಳು ಬ್ರಹ್ಮದೇವರಲ್ಲಿ ಕೇಳಿದರು — ಅಪ್ಪಾ! ಸ್ವಭಾವತಃ ಚಿತ್ತವು ವಿಷಯಗಳಲ್ಲಿ ಆಸಕ್ತವಾಗಿ ಅವುಗಳಲ್ಲಿ ಸೇರಿಕೊಳ್ಳುತ್ತದೆ ಮತ್ತು ಚಿಂತನದಿಂದ ಗುಣಗಳು ಚಿತ್ತದಲ್ಲಿ ಸೇರಿಕೊಂಡು ಬಿಡುತ್ತವೆ. ಹೀಗೆ ಗುಣಗಳು ಮತ್ತು ವಿಷಯಗಳು ಪರಸ್ಪರ ಒಂದರೊಳಗೊಂದು ಬೇರ್ಪಡಿಸುವುದು ಹೇಗೆ? ॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏವಂ ಪೃಷ್ಟೋ ಮಹಾದೇವಃ ಸ್ವಯಂಭೂರ್ಭೂತಭಾವನಃ ।
ಧ್ಯಾಯಮಾನಃ ಪ್ರಶ್ನಬೀಜಂ ನಾಭ್ಯಪದ್ಯತ ಕರ್ಮಧೀಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ಸನಕಾದಿಗಳು ಲೋಕಪಿತಾಮಹ ದೇವಶಿರೋಮಣಿ ಭೂತಭಾವನ ಸ್ವಯಂಭೂ ಬ್ರಹ್ಮದೇವರ ಬಳಿ ಈ ರೀತಿಯಾಗಿ ಪ್ರಶ್ನಿಸಿದರು. ಆದರೆ ಬ್ರಹ್ಮದೇವರ ಬುದ್ಧಿಯು ಕರ್ಮಗಳಲ್ಲೇ ತೊಡಗಿದ್ದರಿಂದ ಅವರು ಆ ಪ್ರಶ್ನೆಯ ಬೀಜವನ್ನು ತಿಳಿಯದೆ ಹೋದರು ಮತ್ತು ಯಾವ ಉತ್ತರವನ್ನು ಕೊಡದಾದರು. ॥18॥

(ಶ್ಲೋಕ - 19)

ಮೂಲಮ್

ಸ ಮಾಮಚಿಂತಯದ್ದೇವಃ ಪ್ರಶ್ನಪಾರತಿತೀರ್ಷಯಾ ।
ತಸ್ಯಾಹಂ ಹಂಸರೂಪೇಣ ಸಕಾಶಮಗಮಂ ತದಾ ॥

ಅನುವಾದ

ಪ್ರಶ್ನೆಯ ಅಭಿಪ್ರಾಯವನ್ನು ಅರಿಯಲು ಬ್ರಹ್ಮದೇವರು ನನ್ನನ್ನು ಸ್ಮರಿಸಿದರು. ಆಗ ನಾನು ಹಂಸರೂಪದಿಂದ ಅವರ ಮುಂದೆ ಪ್ರಕಟನಾದೆ. ॥19॥

(ಶ್ಲೋಕ - 20)

ಮೂಲಮ್

ದೃಷ್ಟ್ವಾ ಮಾಂ ತ ಉಪವ್ರಜ್ಯ ಕೃತ್ವಾ ಪಾದಾಭಿವಂದನಮ್ ।
ಬ್ರಹ್ಮಾಣಮಗ್ರತಃ ಕೃತ್ವಾ ಪಪ್ರಚ್ಛುಃ ಕೋ ಭವಾನಿತಿ ॥

(ಶ್ಲೋಕ - 21)

ಮೂಲಮ್

ಇತ್ಯಹಂ ಮುನಿಭಿಃ ಪೃಷ್ಟಸ್ತತ್ತ್ವಜಿಜ್ಞಾಸುಭಿಸ್ತದಾ ।
ಯದವೋಚಮಹಂ ತೇಭ್ಯಸ್ತದುದ್ಧವ ನಿಬೋಧ ಮೇ ॥

ಅನುವಾದ

ಆಗ ಆ ಸನಕಾದಿಗಳು ನನ್ನನ್ನು ನೋಡಿ ಬ್ರಹ್ಮನನ್ನು ಮುಂದೆ ಮಾಡಿಕೊಂಡು ನನ್ನ ಬಳಿಗೆ ಬಂದು ನಮಸ್ಕರಿಸಿ ‘‘ನೀವು ಯಾರು?’’ ಎಂದು ಕೇಳತೊಡಗಿದರು ಎಲೈ ಉದ್ಧವನೇ! ಆ ಸನಕಾದಿ ಮುನಿಗಳು ತತ್ತ್ವದ ವಿಷಯದಲ್ಲಿ ತಿಳಿಯಲೆಂದೇ ಬಂದಿದ್ದರು. ಆದ್ದರಿಂದ ನಾನು ಅವರಿಗೆ ಏನು ಹೇಳಿದೆನೋ ಅದನ್ನು ಕೇಳು ॥20-21॥

(ಶ್ಲೋಕ - 22)

ಮೂಲಮ್

ವಸ್ತುನೋ ಯದ್ಯನಾನಾತ್ವಮಾತ್ಮನಃ ಪ್ರಶ್ನ ಈದೃಶಃ ।
ಕಥಂ ಘಟೇತ ವೋ ವಿಪ್ರಾ ವಕ್ತುರ್ವಾ ಮೇ ಕ ಆಶ್ರಯಃ ॥

ಅನುವಾದ

ವಿಪ್ರೋತ್ತಮರೇ! ಆತ್ಮನ ವಿಷಯದಲ್ಲಿ ನಿಮ್ಮಗಳ ಈ ಪ್ರಶ್ನೆ ಇದ್ದರೆ, ಆತ್ಮನಾದರೋ ಒಂದೇ ಆಗಿದೆ. ನಿಮ್ಮಲ್ಲಿರುವ ಆತ್ಮನೇ ನನ್ನಲ್ಲಿಯೂ ಇದ್ದಾನೆ. ಆತ್ಮನಲ್ಲದೆ ಬೇರೆ ವಸ್ತುವು ಇಲ್ಲವೇ ಇಲ್ಲ. ಹೀಗಿರುವಾಗ ನಾನು ಉತ್ತರ ಕೊಡಲಿಕ್ಕಾಗಿ ಮಾತಾಡಿದರೆ ಯಾವುದರ ಆಧಾರವನ್ನು ಪಡೆದು ಮಾತಾಡಲೀ? ॥22॥

(ಶ್ಲೋಕ - 23)

ಮೂಲಮ್

ಪಂಚಾತ್ಮಕೇಷು ಭೂತೇಷು ಸಮಾನೇಷು ಚ ವಸ್ತುತಃ ।
ಕೋ ಭವಾನಿತಿ ವಃ ಪ್ರಶ್ನೋ ವಾಚಾರಂಭೋ ಹ್ಯನರ್ಥಕಃ ॥

ಅನುವಾದ

ಪಂಚಭೂತಾತ್ಮಕ ತತ್ತ್ವವು ಎಲ್ಲ ಪ್ರಾಣಿಗಳಲ್ಲಿ ಸಮಾನವಾಗಿದೆ, ಆದ್ದರಿಂದ ನೀವು ‘‘ಕೋ ಭವಾನ್’’ ಎಂದು ಪ್ರಶ್ನಿಸಿದುದು ಕೇವಲ ವಾಣಿಯ ವ್ಯವಹಾರವಾಗಿದೆ. ತಾತ್ತ್ವಿಕ ಅರ್ಥದಿಂದ ರಹಿತವಾಗಿದೆ.॥23॥

(ಶ್ಲೋಕ - 24)

ಮೂಲಮ್

ಮನಸಾ ವಚಸಾ ದೃಷ್ಟ್ಯಾ ಗೃಹ್ಯತೇನ್ಯೈರಪೀಂದ್ರಿಯೈಃ ।
ಅಹಮೇವ ನ ಮತ್ತೋನ್ಯದಿತಿ ಬುದ್ಧ್ಯಧ್ವಮಂಜಸಾ ॥

ಅನುವಾದ

ಮನಸ್ಸಿನಿಂದ, ವಾಣಿಯಿಂದ, ದೃಷ್ಟಿಯಿಂದ ಅಥವಾ ಬೇರೆ ಇಂದ್ರಿಯಗಳಿಂದ ಏನೆಲ್ಲ ನೋಡಲು ಕೇಳಲು, ಚಿಂತಿಸಲು ಬರುತ್ತದೋ, ಅದೆಲ್ಲ ‘‘ನಾನೇ ಆಗಿದ್ದೇನೆ, ನಾನಲ್ಲದೆ ಬೇರೆ ಏನೂ ಇಲ್ಲ’’ ಎಂದು ನೀವು ನಿಶ್ಚಯವಾಗಿ ಅರಿತುಕೊಳ್ಳಿರಿ. ॥24॥

(ಶ್ಲೋಕ - 25)

ಮೂಲಮ್

ಗುಣೇಷ್ವಾವಿಶತೇ ಚೇತೋ ಗುಣಾಶ್ಚೇತಸಿ ಚ ಪ್ರಜಾಃ ।
ಜೀವಸ್ಯ ದೇಹ ಉಭಯಂ ಗುಣಾಶ್ಚೇತೋ ಮದಾತ್ಮನಃ ॥

ಅನುವಾದ

ಮಕ್ಕಳಿರಾ! ವಾಸ್ತವಿಕ ರೂಪದಿಂದ ಜೀವಿಯು ನನ್ನದೇ ಸ್ವರೂಪವಾಗಿದ್ದಾನೆ, ಆದರೆ ಅತೀವ ಆಸಕ್ತಿಯ ಕಾರಣ ಚಿತ್ತವು ಗುಣಗಳಲ್ಲಿ ಪ್ರವೇಶಿಸಿ, ಅವುಗಳ ಸತತ ಚಿಂತನೆಯಿಂದ ಆ ಗುಣಗಳು ಚಿತ್ತದಲ್ಲಿ ಆಳವಾಗಿ ಹೊಕ್ಕವು. ಹೀಗೆ ಈ ಗುಣಮಯ ಮತ್ತು ಚಿತ್ತಮಯ ಎರಡೂ ದೇಹಗಳು ಜೀವಿಯ ಉಪಾಧಿಯಾಗಿದೆ. (ಗುಣಗಳಿಂದ ಉಂಟಾದ ಸ್ಥೂಲಶರೀರ ಹಾಗೂ ಚಿತ್ತದಿಂದ ಉಂಟಾದ ಸೂಕ್ಷ್ಮಶರೀರವಾಗಿದೆ.) ಅನಾತ್ಮ ಪದಾರ್ಥಗಳಲ್ಲಿ ಆಸಕ್ತಿಯನ್ನಿರಿಸಿ ಜೀವಿಯು ಕರ್ಮಗಳಲ್ಲಿ ಸಿಕ್ಕಿಕೊಳ್ಳುವನು. ವಾಸನಾಮಯ ಕಾರಣ ಶರೀರವನ್ನು ನಿರ್ಮಿಸಿಕೊಳ್ಳುವನು. ಇದೆಲ್ಲವೂ ಅಜ್ಞಾನದ ಕಾರಣವೇ ಆಗಿದೆ. ॥25॥

(ಶ್ಲೋಕ - 26)

ಮೂಲಮ್

ಗುಣೇಷು ಚಾವಿಶಚ್ಚಿತ್ತಮಭೀಕ್ಷ್ಣಂ ಗುಣಸೇವಯಾ ।
ಗುಣಾಶ್ಚ ಚಿತ್ತಪ್ರಭವಾ ಮದ್ರೂಪ ಉಭಯಂ ತ್ಯಜೇತ್ ॥

ಅನುವಾದ

ಮೇಲಿಂದ-ಮೇಲೆ ವಿಷಯಗಳನ್ನು ಸೇವಿಸುತ್ತಾ ಇರುವುದರಿಂದ ಚಿತ್ತವು ಆ ವಿಷಯಗಳಲ್ಲಿ ಸೇರಿಕೊಳ್ಳುವುದು. ಈ ವಿಷಯಗಳು ಚಿತ್ತವು ಸಂಕಲ್ಪ-ವಿಕಲ್ಪ ಮಾಡುವುದರಿಂದಲೇ ಉತ್ಪನ್ನವಾಗುತ್ತವೆ. ಸಾಧಕನು ಮದ್ರೂಪನಾಗಿ ಚಿತ್ತವು ಅಲೆಯುವುದನ್ನು ಹಾಗೂ ವಿಷಯಗಳ ಚಿಂತನೆಯನ್ನು ಬಿಟ್ಟುಬಿಡಬೇಕು. ॥26॥

(ಶ್ಲೋಕ - 27)

ಮೂಲಮ್

ಜಾಗ್ರತ್ಸ್ವಪ್ನಃ ಸುಷುಪ್ತಂ ಚ ಗುಣತೋ ಬುದ್ಧಿವೃತ್ತಯಃ ।
ತಾಸಾಂ ವಿಲಕ್ಷಣೋ ಜೀವಃ ಸಾಕ್ಷಿತ್ವೇನ ವಿನಿಶ್ಚಿತಃ ॥

ಅನುವಾದ

ಜಾಗ್ರತ್, ಸ್ವಪ್ನ, ಸುಷುಪ್ತಿ ಇವು ಮೂರು ಕ್ರಮಶಃ ಸಾತ್ತ್ವಿಕ, ರಾಜಸ, ತಾಮಸ ಮೂರೂ ಗುಣಗಳ ಕಾರಣ ಬುದ್ಧಿಯದೇ ವೃತ್ತಿಗಳಾಗಿವೆ. ಜೀವಿಯು ಇವೆಲ್ಲವುಗಳ ಸಾಕ್ಷಿಯಾಗಿದ್ದಾನೆ. ಅವನು ಮೂರೂ ಅವಸ್ಥೆಗಳಿಂದ ಅತೀತನಾಗಿದ್ದಾನೆ. ಹೀಗೆ ಸಿದ್ಧಾಂತರೂಪದಿಂದ ತಿಳಿಯಲಾಗಿದೆ. ॥27॥

(ಶ್ಲೋಕ - 28)

ಮೂಲಮ್

ಯರ್ಹಿ ಸಂಸೃತಿಬಂಧೋಯಮಾತ್ಮನೋ ಗುಣವೃತ್ತಿದಃ ।
ಮಯಿ ತುರ್ಯೇ ಸ್ಥಿತೋ ಜಹ್ಯಾತ್ತ್ಯಾಗಸ್ತದ್ಗುಣಚೇತಸಾಮ್ ॥

ಅನುವಾದ

ಈ ಚಿತ್ತವೇ ಸಂಕಲ್ಪ-ವಿಕಲ್ಪಗಳ ಮೂಲಕ ಅನೇಕ ವೃತ್ತಿಗಳನ್ನು ಉಂಟುಮಾಡಿ ಆತ್ಮನನ್ನು ಮೂರೂ ಗುಣಗಳಲ್ಲಿ ಅಲೆಯುವಂತೆ ಮಾಡುತ್ತದೆ. ಇದೇ ಆತ್ಮನ ಬಂಧನವಾಗಿದೆ. ಆದ್ದರಿಂದ ಸಾಧಕನು ತುರೀಯ ಅವಸ್ಥೆಯಲ್ಲಿ ಸ್ಥಿತನಾಗಿ ಗುಣ ಮತ್ತು ಚಿತ್ತ ಎರಡನ್ನೂ ತ್ಯಜಿಸಬೇಕು. ॥28॥

(ಶ್ಲೋಕ - 29)

ಮೂಲಮ್

ಅಹಂಕಾರಕೃತಂ ಬಂಧಮಾತ್ಮನೋರ್ಥವಿಪರ್ಯಯಮ್ ।
ವಿದ್ವಾನ್ ನಿರ್ವಿದ್ಯ ಸಂಸಾರಚಿಂತಾಂ ತುರ್ಯೇ ಸ್ಥಿತಸ್ತ್ಯಜೇತ್ ॥

ಅನುವಾದ

‘‘ನಾನು-ನನ್ನದು’’ ಹೀಗೆ ಅಹಂಕಾರ ಪಡುವುದರಿಂದಲೇ ಬಂಧನವಾಗುತ್ತದೆ. ಅದು ಆತ್ಮನನ್ನು ತಾತ್ತ್ವಿಕ ಅರ್ಥದಿಂದ ವಿಪರೀತವಾಗಿಸುತ್ತದೆ. ವಿದ್ವಾಂಸನು ಇವುಗಳಿಂದ ವಿರಕ್ತನಾಗಿ ಪ್ರಾಪಂಚಿಕ ಚಿಂತೆಯನ್ನು ಬಿಟ್ಟುಬಿಡಬೇಕು. ತನ್ನ ತುರೀಯ ಸ್ವರೂಪದಲ್ಲಿ ಸ್ಥಿತನಾಗಿರಬೇಕು. ॥29॥

(ಶ್ಲೋಕ - 30)

ಮೂಲಮ್

ಯಾವನ್ನಾನಾರ್ಥಧೀಃ ಪುಂಸೋ ನ ನಿವರ್ತೇತ ಯುಕ್ತಿಭಿಃ ।
ಜಾಗರ್ತ್ಯಪಿ ಸ್ವಪನ್ನಜ್ಞಃ ಸ್ವಪ್ನೇ ಜಾಗರಣಂ ಯಥಾ ॥

ಅನುವಾದ

ಈ ನಾನಾತ್ವದ ಭ್ರಮೆಯನ್ನು ಯುಕ್ತಿಗಳ ಮೂಲಕ ಮನುಷ್ಯನು ನಾಶಮಾಡುವ ತನಕ ಅವನು ಎಚ್ಚರವಾಗಿದ್ದರೂ ಅಜ್ಞಾನ ನಿದ್ದೆಯಲ್ಲಿ ಮಲಗಿಯೇ ಇರುತ್ತಾನೆ. ಸ್ವಪ್ನಪ್ರಪಂಚದಲ್ಲಿ ಅಜ್ಞಾನಿಯು ಸುಖೀ-ದುಃಖಿಯಾಗುವಂತೆ, ಅವನು ಜಾಗ್ರತ್ ದಲ್ಲಿಯೂ ಪ್ರಪಂಚದ ಅಸ್ತಿತ್ವವನ್ನು ಸ್ವೀಕರಿಸಿ ಸುಖೀ-ದುಃಖಿಯಾಗುತ್ತಾ ಇರುತ್ತಾನೆ. ॥30॥

(ಶ್ಲೋಕ - 31)

ಮೂಲಮ್

ಅಸತ್ತ್ವಾದಾತ್ಮನೋನ್ಯೇಷಾಂ ಭಾವಾನಾಂ ತತ್ಕೃತಾ ಭಿದಾ ।
ಗತಯೋ ಹೇತವಶ್ಚಾಸ್ಯ ಮೃಷಾ ಸ್ವಪ್ನದೃಶೋ ಯಥಾ ॥

ಅನುವಾದ

ನಿಜವಾಗಿ ಆತ್ಮನ ಹೊರತು ಬೇರೆ ಯಾವುದಕ್ಕೂ ಅಸ್ತಿತ್ವವಿಲ್ಲ. ಸ್ವಪ್ನನೋಡುವವನ ಎಲ್ಲ ಕ್ರಿಯೆಗಳು ಮಿಥ್ಯೆಯಾಗಿರುವಂತೆ, ಅಜ್ಞಾನಿಯ ಎಲ್ಲ ಕ್ರಿಯೆಗಳು ಅವುಗಳ ಕಾರಣ ಮತ್ತು ಅವುಗಳಲ್ಲಿ ಭೇದ ಬುದ್ಧಿ ಇವೆಲ್ಲವೂ ಮಿಥ್ಯೆಯೇ ಆಗಿದೆ. (ಜ್ಞಾನ ಉಂಟಾದಾಗಲೇ ಈ ನಾನಾತ್ವದ ಭ್ರಮೆಯು ಹೊರಟು ಹೋಗುತ್ತದೆ.) ॥31॥

(ಶ್ಲೋಕ - 32)

ಮೂಲಮ್

ಯೋ ಜಾಗರೇ ಬಹಿರನುಕ್ಷಣಧರ್ಮಿಣೋರ್ಥಾನ್
ಭುಂಕ್ತೇ ಸಮಸ್ತಕರಣೈರ್ಹೃದಿ ತತ್ಸದೃಕ್ಷಾನ್ ।
ಸ್ವಪ್ನೇ ಸುಷುಪ್ತ ಉಪಸಂಹರತೇ ಸ ಏಕಃ
ಸ್ಮೃತ್ಯನ್ವಯಾತಿ ಗುಣವೃತ್ತಿದೃಗಿಂದ್ರಿಯೇಶಃ ॥

ಅನುವಾದ

ಬಾಹ್ಯವಿಷಯಗಳೆಲ್ಲ ಪ್ರತಿಕ್ಷಣ ಪರಿವರ್ತನಶೀಲವಾಗಿವೆ. ಇಂತಹನಾಶವುಳ್ಳ, ಕ್ಷಣಭಂಗುರವಾದ ವಿಷಯಗಳನ್ನು ಇಂದ್ರಿಯಗಳ ಮೂಲಕ ಜಾಗ್ರದವಸ್ಥೆಯಲ್ಲಿ ಉಪಭೋಗಿಸುವವನೇ ಸ್ವಪ್ನಾವಸ್ಥೆಯಲ್ಲಿಯೂ ಅವನ್ನು ಭೋಗಿಸುತ್ತಿರುತ್ತಾನೆ, ಆದರೆ ಗಾಢವಾದ ನಿದ್ದೆಯಲ್ಲಿ ಇವೆಲ್ಲವೂ ಅಳಿದು ಹೋಗುತ್ತವೆ. ಹೀಗೆ ಈ ಮೂರೂ ಅವಸ್ಥೆಗಳನ್ನು ಅನುಭವಿಸುವ ಸಾಕ್ಷಿ ಚೇತನ ಆತ್ಮನು ಒಂದೇ ಆಗಿದ್ದಾನೆ. ಅವನು ಮೂರೂ ಅವಸ್ಥೆಗಳನ್ನು ಅರಿಯುವವನಾಗಿದ್ದಾನೆ. ಮೂರು ಗುಣಗಳ ವೃತ್ತಿಗಳನ್ನು ನೋಡುವವನಾಗಿದ್ದಾನೆ. ॥32॥

(ಶ್ಲೋಕ - 33)

ಮೂಲಮ್

ಏವಂ ವಿಮೃಶ್ಯ ಗುಣತೋ ಮನಸಸ್ಯವಸ್ಥಾ
ಮನ್ಮಾಯಯಾ ಮಯಿ ಕೃತಾ ಇತಿ ನಿಶ್ಚಿತಾರ್ಥಾಃ ।
ಸಂಛಿದ್ಯ ಹಾರ್ದಮನುಮಾನಸದುಕ್ತಿತೀಕ್ಷ್ಣ-
ಜ್ಞಾನಾಸಿನಾ ಭಜತ ಮಾಖಿಲಸಂಶಯಾಧಿಮ್ ॥

ಅನುವಾದ

ಈ ಮನಸ್ಸಿನ ಮೂರು ಅವಸ್ಥೆಗಳು ಗುಣಗಳ ಕಾರಣದಿಂದಲೇ ಉಂಟಾಗಿವೆ. ಅದು ನನ್ನ ಮಾಯೆಯ ಮೂಲಕ ನನ್ನಲ್ಲೇ ಕಲ್ಪಿತವಾಗಿವೆ. ಈ ಅವಸ್ಥೆಗಳು ‘ನಾನು-ನನ್ನದು’ ಎಂಬ ಭಾವನೆಯಿಂದಲೇ ಉಂಟಾಗಿವೆ ಹೀಗೆ ವಿಚಾರಗೈದು ಈ ಎಲ್ಲ ಸಂಶಯಗಳ ಆಧಾರಸ್ವರೂಪ ಅಹಂಭಾವವನ್ನು ಅನುಮಾನ ಪ್ರಮಾಣದ ಮೂಲಕ, ಸಂತರವಾಣಿಗಳ ಮೂಲಕ, ಹರಿತವಾದ ಜ್ಞಾನರೂಪೀ ಖಡ್ಗದಿಂದ ಚೆನ್ನಾಗಿ ಕತ್ತರಿಸಿ, ತನ್ನ ಹೃದಯದಲ್ಲೇ ಸ್ಥಿತನಾದ ಪರಮಾತ್ಮನಾದ ನನ್ನನ್ನು ಭಜಿಸಬೇಕು. ॥33॥

(ಶ್ಲೋಕ - 34)

ಮೂಲಮ್

ಈಕ್ಷೇತ ವಿಭ್ರಮಮಿದಂ ಮನಸೋ ವಿಲಾಸಂ
ದೃಷ್ಟಂ ವಿನಷ್ಟಮತಿಲೋಲಮಲಾತಚಕ್ರಮ್ ।
ವಿಜ್ಞಾನಮೇಕಮುರುಧೇವ ವಿಭಾತಿ ಮಾಯಾ
ಸ್ವಪ್ನಸಿಧಾ ಗುಣವಿಸರ್ಗಕೃತೋ ವಿಕಲ್ಪಃ ॥

ಅನುವಾದ

ಕಂಡುಬರುವ ಈ ಪ್ರಪಂಚವೆಲ್ಲವೂ ಮನಸ್ಸಿನ ವಿಲಾಸ ಮಾತ್ರವಾಗಿದೆ, ಭ್ರಮೆಯಾಗಿದೆ, ಅತಿ ಚಂಚಲವಾಗಿದೆ. ಇದರ ಗತಿಯನ್ನು ಯಾರೂ ತಿಳಿಯಲಾರದಷ್ಟು ವೇಗವಾಗಿ ಇದು ಚಕ್ರದಂತೆ ಸುತ್ತುತ್ತಾ ಇದೆ. ಇದು ನಾಶವುಳ್ಳದ್ದು, ಕ್ಷಣಭಂಗುರವಾಗಿದೆ. ವಿಜ್ಞಾನ ಅರ್ಥಾತ್ ಏಕಮಾತ್ರ ಪರಮಾತ್ಮನೇ ಸಗುಣ-ನಿರಾಕಾರರೂಪದಿಂದ ಅನೇಕ ರೂಪಗಳಾಗಿ ಪ್ರಕಾಶಿಸುತ್ತಿರುವನು, ಆದರೆ ಅವನು ಕಂಡು ಬರುವುದಿಲ್ಲ. ಅವನ ಮಾಯೆಯೇ ಅನೇಕ ರೂಪಗಳನ್ನು ಧರಿಸಿಕೊಂಡು ಕಾಣುತ್ತಿದ್ದಾಳೆ. ಆ ಮಾಯೆಯು ಸ್ವಪ್ನದಂತೆ ಮಿಥ್ಯೆಯೇ ಆಗಿದೆ. ಮೂರೂ ಗುಣಗಳ ಸೃಷ್ಟಿಯ ಕಾರಣದಿಂದಲೇ ಈ ಭೇದ-ಭ್ರಮೆ ಉಂಟಾಗುತ್ತದೆ. ಅದು ಅಜ್ಞಾನದಿಂದಲೇ ಕಲ್ಪಿತವಾಗಿದೆ. ॥34॥

(ಶ್ಲೋಕ - 35)

ಮೂಲಮ್

ದೃಷ್ಟಿಂ ತತಃ ಪ್ರತಿನಿವರ್ತ್ಯ ನಿವೃತ್ತತೃಷ್ಣ-
ಸ್ತೂಷ್ಣೀಂ ಭವೇನ್ನಿಜಸುಖಾನುಭವೋ ನಿರೀಹಃ ।
ಸಂದೃಶ್ಯತೇ ಕ್ವ ಚ ಯದೀದಮವಸ್ತುಬುದ್ಧ್ಯಾ
ತ್ಯಕ್ತಂ ಭ್ರಮಾಯ ನ ಭವೇತ್ ಸ್ಮೃತಿರಾನಿಪಾತಾತ್ ॥

ಅನುವಾದ

ಸಾಧಕನು ತೃಷ್ಣಾರಹಿತನಾಗಿ ವಿಷಯಗಳಿಂದ ದೃಷ್ಟಿಯನ್ನು ತೊಡೆದು ಅಂತರ್ಮುಖಿಯಾಗಬೇಕು. ಪೂರ್ಣವಾಗಿ ಉಪರಮನಾಗಬೇಕು. ತನ್ನ ಆತ್ಮಾನಂದದಲ್ಲೇ ಮಗ್ನನಾಗಿದ್ದು, ಯಾವುದೇ ಕಾಮನೆಯನ್ನು ಮಾಡಬಾರದು. ಏನಾದರೂ ಕಂಡುಬಂದರೆ ಇದು ನಿಜವಲ್ಲ, ಮಾಯೆಯಾಗಿದೆ, ಇದರಿಂದ ನನಗೇನು ಮಾಡುವುದಿದೆ? ಎಂದು ಅರಿತುಕೊಂಡು, ಅದರ ಕಡೆಯಿಂದ ಮುಖ ತಿರುಗಿಸಿಕೊಂಡರೆ ಭ್ರಮೆ ಆಗಲಾರದು. ಶಾರೀರಿಕ ವ್ಯವಹಾರದ ಸಂಸ್ಕಾರವಾದರೋ ಅವನ ಶರೀರವಿರುವ ತನಕ ಇದ್ದೀತು. ॥35॥

(ಶ್ಲೋಕ - 36)

ಮೂಲಮ್

ದೇಹಂ ಚ ನಶ್ವರಮವಸ್ಥಿತಮುತ್ಥಿತಂ ವಾ
ಸಿದ್ಧೋ ನ ಪಶ್ಯತಿ ಯತೋಧ್ಯಗಮತ್ ಸ್ವರೂಪಮ್ ।
ದೈವಾದಪೇತಮುತ ದೈವವಶಾದುಪೇತಂ
ವಾಸೋ ಯಥಾ ಪರಿಕೃತಂ ಮದಿರಾಮದಾಂಧಃ ॥

ಅನುವಾದ

ಸ್ವಸ್ವರೂಪವನ್ನು ಪಡೆದುಕೊಂಡ ಇಂತಹ ಸಿದ್ಧನಿಗೆ ಈ ನಶ್ವರದೇಹ ಕುಳಿತಿದೆ, ಅಥವಾ ನಿಂತಿದೆ ಎಂಬುದು ಅರಿವಿರುವುದಿಲ್ಲ. ಶರೀರದ ಮೇಲೆ ವಸ್ತ್ರವಿದೆ ಅಥವಾ ಇಲ್ಲ ಎಂಬುದೂ ತಿಳಿಯುವುದಿಲ್ಲ. ಮದಿರೆಯಿಂದ ಮದಮತ್ತನಾದವನಿಗೆ ತಮೋಗುಣದ ಪ್ರಭಾವದಿಂದ ಏನೂ ತಿಳಿಯುವುದಿಲ್ಲ. ಆದರೆ ಜ್ಞಾನಿಗಾದರೋ ತನ್ನ ತುರೀಯ ಶುದ್ಧಸ್ವರೂಪದಲ್ಲೇ ಸ್ಥಿತಿ ಇರುತ್ತದೆ. ಇದರಿಂದ ಅವನಿಗೆ ಜಗತ್ತಿನ ಯಾವ ಎಚ್ಚರವೂ ಇರುವುದಿಲ್ಲ. ॥36॥

(ಶ್ಲೋಕ - 37)

ಮೂಲಮ್

ದೇಹೋಪಿ ದೈವವಶಗಃ ಖಲು ಕರ್ಮ ಯಾವತ್
ಸ್ವಾರಂಭಕಂ ಪ್ರತಿಸಮೀಕ್ಷತ ಏವ ಸಾಸುಃ ।
ತಂ ಸಪ್ರಪಂಚಮಧಿರೂಢಸಮಾಧಿಯೋಗಃ
ಸ್ವಾಪ್ನಂ ಪುನರ್ನ ಭಜತೇ ಪ್ರತಿಬುದ್ಧವಸ್ತುಃ ॥

ಅನುವಾದ

ದೇಹವು ಪ್ರಾರಬ್ಧಕ್ಕಧೀನವಾದ ಕಾರಣ ಶರೀರವನ್ನು ದೊರಕಿಸುವ ಕರ್ಮವು ಶೇಷವಾಗಿರುವ ತನಕ ಇವನು ಪ್ರಾಣಗಳ ಸಹಿತ ಬಿದ್ದುಹೋಗಲು ನಿರೀಕ್ಷಿಸುತ್ತಾನೆ. ಸಮಾಧಿಯಲ್ಲಿ ಅವನ ಸ್ಥಿತಿ ದೃಢವಾಗಿ ಇರುತ್ತದೆ, ಮತ್ತೆ ಅವನು ಪ್ರಪಂಚದಿಂದ ಅರ್ಥಾತ್ ಗುಣಗಳ ಕಾರ್ಯ ರೂಪೀ ದೇಹವನ್ನು ಸ್ವೀಕರಿಸುವುದಿಲ್ಲ. ಏಕೆಂದರೆ, ಅವನು ವಾಸ್ತವಿಕ ಪರಮಾತ್ಮತತ್ತ್ವವನ್ನು ತಿಳಿದುಕೊಂಡಿರುವನು. ಸ್ವಪ್ನದಿಂದ ಎಚ್ಚತ್ತವನು ಸ್ವಪ್ನದ ಮಾತನ್ನು ಸ್ವೀಕರಿಸದಂತೆ ಮತ್ತೆ ಅವನು ಈ ಅಜ್ಞಾನವನ್ನು ಸ್ವೀಕರಿಸುವುದಿಲ್ಲ. ಅವನ ಸ್ಥಿತಿ ಪರಮಾತ್ಮನಲ್ಲಿ ದೃಢವಾಗಿ ಆಗಿರುತ್ತದೆ. ॥37॥

ಮೂಲಮ್

(ಶ್ಲೋಕ - 38)
ಮಯೈತದುಕ್ತಂ ವೋ ವಿಪ್ರಾ ಗುಹ್ಯಂ ಯತ್ಸಾಂಖ್ಯಯೋಗಯೋಃ ।
ಜಾನೀತ ಮಾಗತಂ ಯಜ್ಞಂ ಯುಷ್ಮದ್ಧರ್ಮವಿವಕ್ಷಯಾ ॥

ಅನುವಾದ

ಎಲೈ ಬ್ರಾಹ್ಮಣರೇ! ನಾನು ಸಾಂಖ್ಯ ಮತ್ತು ಯೋಗದ ವಿಷಯದಲ್ಲಿ ಶಾಸ್ತ್ರಗಳಲ್ಲಿ ತಿಳಿಸಿದ ಮಾತನ್ನು ನಿಮ್ಮಗಳಿಗೆ ಹೇಳಿರುವೆನು. ನೀವುಗಳು ಮೋಕ್ಷಧರ್ಮದ ವಿಷಯದಲ್ಲಿ ಅರಿಯಲು ಬಯಸಿದ್ದೀರಿ. ಅದನ್ನು ನಾನು ನಿಮಗೆ ಹೇಳಿದೆ. ಯಜ್ಞಸ್ವರೂಪೀ ಭಗವಂತನಾದ ಸ್ವಯಂ ನಾನೇ ಹಂಸ ರೂಪದಿಂದ ನಿಮ್ಮಗಳಿಗೆ ಉಪದೇಶಿಸಲು ಬಂದಿರುವೆನು. ಹೀಗೆ ನೀವೆಲ್ಲ ತಿಳಿಯಿರಿ. ॥38॥

(ಶ್ಲೋಕ - 39)

ಮೂಲಮ್

ಅಹಂ ಯೋಗಸ್ಯ ಸಾಂಖ್ಯಸ್ಯ ಸತ್ಯಸ್ಯರ್ತಸ್ಯ ತೇಜಸಃ ।
ಪರಾಯಣಂ ದ್ವಿಜಶ್ರೇಷ್ಠಾಃ ಶ್ರಿಯಃ ಕೀರ್ತೇರ್ದಮಸ್ಯ ಚ ॥

ಅನುವಾದ

ಎಲೈ ಶ್ರೇಷ್ಠ ಬ್ರಾಹ್ಮಣರಿರಾ! ಯೋಗ, ಸಾಂಖ್ಯ, ಸತ್ಯ, ಋತ, ತೇಜ, ಶ್ರೀ, ಕೀರ್ತಿ, ದಮ ಇವೆಲ್ಲದರ ಆಶ್ರಯಸ್ಥಾನ ನಾನೇ ಆಗಿದ್ದೇನೆ. ॥39॥

(ಶ್ಲೋಕ - 40)

ಮೂಲಮ್

ಮಾಂ ಭಜಂತಿ ಗುಣಾಃ ಸರ್ವೇ ನಿರ್ಗುಣಂ ನಿರಪೇಕ್ಷಕಮ್ ।
ಸುಹೃದಂ ಪ್ರಿಯಮಾತ್ಮಾನಂ ಸಾಮ್ಯಾಸಂಗಾದಯೋಗುಣಾಃ ॥

ಅನುವಾದ

ಸಮತೆ ಹಾಗೂ ಅನಾಸಕ್ತಿ ಮುಂತಾದ ಇರುವ ಶ್ರೇಷ್ಠ ಗುಣಗಳೆಲ್ಲವೂ ನಿರ್ಗುಣನೂ, ನಿರಪೇಕ್ಷನೂ, ಎಲ್ಲರ ಹೇತುರಹಿತ ಸುಹೃದನೂ, ಎಲ್ಲರ ಪ್ರಿಯನೂ, ಪರಮಾತ್ಮನಾದ ನನ್ನನ್ನು ಭಜಿಸುತ್ತವೆ. ಇವೆಲ್ಲ ಗುಣಗಳು ನನ್ನಲ್ಲೇ ನಿತ್ಯವಾಸವಾಗಿರುವುವು. ॥40॥

(ಶ್ಲೋಕ - 41)

ಮೂಲಮ್

ಇತಿ ಮೇ ಛಿನ್ನಸಂದೇಹಾ ಮುನಯಃ ಸನಕಾದಯಃ ।
ಸಭಾಜಯಿತ್ವಾ ಪರಯಾ ಭಕ್ತ್ಯಾಗೃಣತ ಸಂಸ್ತವೈಃ ॥

ಅನುವಾದ

ಈ ರೀತಿ ಸನಕಾದಿ ಮುನಿಗಳ ಸಂದೇಹವನ್ನು ದೂರಗೊಳಿಸಿ ಅವರಿಗೆ ನಾನು ಉಪದೇಶ ಮಾಡಿದೆ. ಅವರು ಬಹಳ ಸಂತೋಷಗೊಂಡು ಪ್ರೇಮಮಗ್ನರಾಗಿ ಸ್ತುತಿಸತೊಡಗಿದರು. ॥41॥

(ಶ್ಲೋಕ - 42)

ಮೂಲಮ್

ತೈರಹಂ ಪೂಜಿತಃ ಸಮ್ಯಕ್ ಸಂಸ್ತುತಃ ಪರಮರ್ಷಿಭಿಃ ।
ಪ್ರತ್ಯೇಯಾಯ ಸ್ವಕಂ ಧಾಮ ಪಶ್ಯತಃ ಪರಮೇಷ್ಠಿನಃ ॥

ಅನುವಾದ

ಈ ಪ್ರಕಾರ ಆ ಸನಕಾದಿ ಋಷಿಗಳು ಮಾಡಿದ ಸ್ತುತಿಯಿಂದ, ಪೂಜೆಯಿಂದ ನಾನು ಬಹಳ ಸಮ್ಮಾನಿತನಾಗಿ, ಬ್ರಹ್ಮದೇವರು, ಋಷಿಗಳು ನೋಡು-ನೋಡುತ್ತಿರುವಂತೆ ನಾನು ನನ್ನ ಧಾಮಕ್ಕೆ ಹೊರಟು ಹೋದೆನು. ॥42॥

ಅನುವಾದ (ಸಮಾಪ್ತಿಃ)

ಹದಿಮೂರನೆಯ ಅಧ್ಯಾಯವು ಮುಗಿಯಿತು. ॥13॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ತ್ರಯೋದಶೋಽಧ್ಯಾಯಃ ॥13॥