[ಹನ್ನೊಂದನೆಯ ಅಧ್ಯಾಯ]
ಭಾಗಸೂಚನಾ
ಬದ್ಧ, ಮುಕ್ತ ಮತ್ತು ಭಕ್ತಜನರ ಲಕ್ಷಣಗಳು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಬದ್ಧೋ ಮುಕ್ತ ಇತಿ ವ್ಯಾಖ್ಯಾ ಗುಣತೋ ಮೇ ನ ವಸ್ತುತಃ ।
ಗುಣಸ್ಯ ಮಾಯಾಮೂಲತ್ವಾನ್ನ ಮೇ ಮೋಕ್ಷೋ ನ ಬಂಧನಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ಬದ್ಧ ಅಥವಾ ಮುಕ್ತನೆಂದು ಹೇಳುವುದು ಗುಣಗಳನ್ನು ಪರಿಗಣಿಸಿಯೇ ಆಗಿದೆ. ವಸ್ತುತಃ ನನ್ನ ಸ್ವರೂಪದಲ್ಲಿ ಅರ್ಥಾತ್ ಆತ್ಮನಲ್ಲಿ ಇವೆರಡು ಇಲ್ಲವೇ ಇಲ್ಲ. ಗುಣಗಳು ಮಾಯಾ ಮೂಲಕವಾಗಿವೆ. ಆತ್ಮ ಸ್ವರೂಪದಲ್ಲಿ ಬಂಧನವಾಗಲಿ, ಮೋಕ್ಷವಾಗಲಿ ಇಲ್ಲ. ॥1॥
(ಶ್ಲೋಕ - 2)
ಮೂಲಮ್
ಶೋಕಮೋಹೌ ಸುಖಂ ದುಃಖಂ ದೇಹಾಪತ್ತಿಶ್ಚ ಮಾಯಯಾ ।
ಸ್ವಪ್ನೋ ಯಥಾತ್ಮನಃ ಖ್ಯಾತಿಃ ಸಂಸೃತಿರ್ನ ತು ವಾಸ್ತವೀ ॥
ಅನುವಾದ
ಶೋಕ, ಮೋಹ, ಸುಖ, ದುಃಖ, ದೇಹಪ್ರಾಪ್ತಿ ಇವೆಲ್ಲವೂ ಮಾಯೆಯ ಕಾರಣದಿಂದಲೇ ಇದೆ. ಆತ್ಮನಿಗಾಗಿ ಸಂಸೃತಿಯ ಮಾತು ಹೇಳುವುದು ಯಥಾರ್ಥವಲ್ಲ, ಸ್ವಪ್ನದ ಮಾತಿನಂತೆ ಇದೆ. ಅರ್ಥಾತ್ ಸ್ವಪ್ನವು ಮಿಥ್ಯೆಯಾಗಿರುವಂತೆ ಆತ್ಮನಿಗಾಗಿ ಸಂಸೃತಿ ಹೇಳುವುದು ಮಿಥ್ಯೆಯೇ ಆಗಿದೆ. ॥2॥
(ಶ್ಲೋಕ - 3)
ಮೂಲಮ್
ವಿದ್ಯಾವಿದ್ಯೇ ಮಮ ತನೂ ವಿದ್ಧ್ಯುದ್ಧವ ಶರೀರಿಣಾಮ್ ।
ಮೋಕ್ಷಬಂಧಕರೀ ಆದ್ಯೇ ಮಾಯಯಾ ಮೇ ವಿನಿರ್ಮಿತೇ ॥
ಅನುವಾದ
ಎಲೈ ಉದ್ಧವಾ! ವಿದ್ಯೆ ಮತ್ತು ಅವಿದ್ಯೆ ಇವೆರಡೂ ನನ್ನದೇ ಶಕ್ತಿಗಳಾಗಿವೆ. ಅದು ಶರೀರಧಾರಿಗಳಿಗೆ ಕ್ರಮಶಃ ಮೋಕ್ಷ ಹಾಗೂ ಬಂಧನಗಳನ್ನು ಕೊಡುವುದಾಗಿದೆ. ಇವೆರಡೂ ಅನಾದಿಯಾಗಿದ್ದು, ನನ್ನ ಮಾಯೆಯಿಂದ ರಚಿತವಾಗಿವೆ. ॥3॥
(ಶ್ಲೋಕ - 4)
ಮೂಲಮ್
ಏಕಸ್ಯೈವ ಮಮಾಂಶಸ್ಯ ಜೀವಸ್ಯೈವ ಮಹಾಮತೇ ।
ಬಂಧೋಸ್ಯಾವಿದ್ಯಯಾನಾದಿರ್ವಿದ್ಯಯಾ ಚ ತಥೇತರಃ ॥
ಅನುವಾದ
ಬುದ್ಧಿವಂತನೇ! ಈ ಜೀವಿಯು ಏಕಮಾತ್ರ ನನ್ನದೇ ಅಂಶವಾಗಿದ್ದಾನೆ. ಅನಾದಿ ಅವಿದ್ಯೆಯು ಜೀವಿಯನ್ನು ಬಂಧಿಸುತ್ತದೆ, ಎರಡನೆಯದಾದ ನನ್ನ ವಿದ್ಯಾಶಕ್ತಿಯಿಂದ ಮೋಕ್ಷ ಉಂಟಾಗುತ್ತದೆ. ॥4॥
(ಶ್ಲೋಕ - 5)
ಮೂಲಮ್
ಅಥ ಬದ್ಧಸ್ಯ ಮುಕ್ತಸ್ಯ ವೈಲಕ್ಷಣ್ಯಂ ವದಾಮಿ ತೇ ।
ವಿರುದ್ಧಧರ್ಮಿಣೋಸ್ತಾತ ಸ್ಥಿತಯೋರೇಕಧರ್ಮಿಣಿ ॥
ಅನುವಾದ
ಬದ್ಧ ಮತ್ತು ಮುಕ್ತ ಎರಡರಲ್ಲಿರುವ ಪ್ರಭೇದವನ್ನು ಈಗ ನಾನು ನಿನಗೆ ಹೇಳುತ್ತೇನೆ. ಪ್ರಿಯ ಉದ್ಧವನೇ! ಜೀವವು ನನ್ನದೇ ಸ್ವರೂಪವಾದ್ದರಿಂದ ವಾಸ್ತವವಾಗಿ ಆತ್ಮಾ ಮತ್ತು ಜೀವ ಇವೆರಡೂ ಒಂದೇ ಆಗಿದೆ. ಆದರೂ ಇವೆರಡರಲ್ಲಿ ಇರುವ ಪರಸ್ಪರ ಭೇದವನ್ನು ಕೇಳು. ನಾನು ಶಾಸಕ (ಆಳುವವನು)ನಾಗಿದ್ದೇನೆ, ಜೀವಿಯು ಶಾಸಿತಾ(ಆಳಲ್ಪಡುವವನು) ಆಗಿದ್ದಾನೆ. ನಾನು ಆನಂದಸ್ವರೂಪನಾಗಿದ್ದೇನೆ, ಜೀವಿಯು ಶೋಕ-ಮೋಹದಿಂದ ಗ್ರಸಿತನಾಗಿ ಸುಖೀ-ದುಃಖೀಯಾಗುತ್ತಾನೆ. ॥5॥
(ಶ್ಲೋಕ - 6)
ಮೂಲಮ್
ಸುಪರ್ಣಾವೇತೌ ಸದೃಶೌ ಸಖಾಯೌ
ಯದೃಚ್ಛಯೈತೌ ಕೃತನೀಡೌ ಚ ವೃಕ್ಷೇ ।
ಏಕಸ್ತಯೋಃ ಖಾದತಿ ಪಿಪ್ಪಲಾನ್ನ-
ಮನ್ಯೋ ನಿರನ್ನೋಪಿ ಬಲೇನ ಭೂಯಾನ್ ॥
ಅನುವಾದ
ಈ ಶರೀರರೂಪೀ ವೃಕ್ಷದಲ್ಲಿ ಗೂಡು ಕಟ್ಟಿಕೊಂಡು ಜೊತೆಗೆ ವಾಸಿಸುವ ಇವೆರಡು ಪಕ್ಷಿಗಳಾಗಿವೆ. ಇಬ್ಬರೂ ಮಿತ್ರರಾಗಿದ್ದು, ಸಮಾನ ಧರ್ಮಿಗಳಾಗಿವೆ. ಇವೆರಡರಲ್ಲಿ ಒಂದಾದರೋ ಈ ಶರೀರದ ಮೂಲಕ ಗೈದ ಕರ್ಮಗಳ ಫಲವನ್ನು ಉಪಭೋಗಿಸುತ್ತದೆ. ಆದರೆ ಅದು ಅವನ್ನು ಉಪಭೋಗಿಸಿಯೂ ಕ್ಷೀಣವಾಗುತ್ತದೆ. ಆದರೆ ಇನ್ನೊಂದು ಪಕ್ಷಿಯು ಆ ಫಲಗಳನ್ನು ಉಪಭೋಗಿಸುವುದಿಲ್ಲ. ಆದರೂ ಅದು ಸಾಕಷ್ಟು ಬಲಶಾಲಿಯಾಗಿದೆ. ॥6॥
(ಶ್ಲೋಕ - 7)
ಮೂಲಮ್
ಆತ್ಮಾನಮನ್ಯಂ ಚ ಸ ವೇದ ವಿದ್ವಾ-
ನಪಿಪ್ಪಲಾದೋ ನ ತು ಪಿಪ್ಪಲಾದಃ ।
ಯೋವಿದ್ಯಯಾ ಯುಕ್ ಸ ತು ನಿತ್ಯಬದ್ಧೋ
ವಿದ್ಯಾಮಯೋ ಯಃ ಸ ತು ನಿತ್ಯಮುಕ್ತಃ ॥
ಅನುವಾದ
ಫಲವನ್ನು ಉಪಭೋಗಿಸದಿರುವವನು ತನ್ನನ್ನೂ ತಿಳಿಯುತ್ತಾನೆ ಹಾಗೂ ತನ್ನ ಸಖನಾದ ಇನ್ನೊಂದು ಜೀವವನ್ನೂ ತಿಳಿಯುತ್ತಾನೆ. ಆದರೆ ಭೋಗಗಳನ್ನು ಉಪಭೋಗಿಸುವವನು ತನ್ನನ್ನೂ ತಿಳಿಯುವುದಿಲ್ಲ, ತನ್ನ ಸಖನಾದ ಆತ್ಮಸ್ವರೂಪವನ್ನೂ ತಿಳಿಯುವುದಿಲ್ಲ. ಈ ವಿಧವಾಗಿ ಅವಿದ್ಯೆಯಲ್ಲಿ ತೊಡಗಿರುವವನು ನಿತ್ಯಬದ್ಧನಾಗಿದ್ದಾನೆ ಮತ್ತು ತನ್ನ ನಿಜಸ್ವರೂಪವನ್ನು ಅರಿಯುವವನು ನಿತ್ಯಮುಕ್ತನಾಗಿದ್ದಾನೆ. ॥7॥
(ಶ್ಲೋಕ - 8)
ಮೂಲಮ್
ದೇಹಸ್ಥೋಪಿ ನ ದೇಹಸ್ಥೋ ವಿದ್ವಾನ್ ಸ್ವಪ್ನಾದ್ಯಥೋತ್ಥಿತಃ ।
ಅದೇಹಸ್ಥೋಪಿ ದೇಹಸ್ಥಃ ಕುಮತಿಃ ಸ್ವಪ್ನದೃಗ್ಯಥಾ ॥
ಅನುವಾದ
ತನ್ನ ಆತ್ಮ ಸ್ವರೂಪವನ್ನು ಅರಿತುಕೊಂಡವನು ಈ ದೇಹದಲ್ಲಿ ಇದ್ದರೂ ದೇಹದ ಗುಣಧರ್ಮಗಳಿಂದ ಅತೀತನಾಗಿದ್ದಾನೆ. ಏಕೆಂದರೆ, ಸ್ವಪ್ನ ಪ್ರಪಂಚವು ಮಿಥ್ಯೆಯಾಗಿರುವಂತೆ ಈ ಪ್ರಪಂಚವೆಲ್ಲವೂ ಮಾಯಾಮಯವಾಗಿದ್ದು ಮಿಥ್ಯೆಯೇ ಆಗಿದೆ ಎಂದು ಅವನು ತಿಳಿದಿರುವನು. ಆದರೆ ಆತ್ಮನಿಗೆ ಶರೀರದೊಂದಿಗೆ ಯಾವ ಸಂಬಂಧವೂ ಇರದಿದ್ದರೂ ಅಜ್ಞಾನಿಯು ಸ್ವಪ್ನದ ಪ್ರಪಂಚವನ್ನು ನೋಡಿ ಸುಖಿ-ದುಃಖಿಯಾಗುವಂತೆ ಈ ಜಗತ್ತನ್ನೂ ಸತ್ಯವೆಂದು ತಿಳಿದು ಸುಖೀ-ದುಃಖಿಯಾಗುತ್ತಾ ಇರುತ್ತಾನೆ. ॥8॥
(ಶ್ಲೋಕ - 9)
ಮೂಲಮ್
ಇಂದ್ರಿಯೈರಿಂದ್ರಿಯಾರ್ಥೇಶು ಗುಣೈರಪಿ ಗುಣೇಷು ಚ ।
ಗೃಹ್ಯಮಾಣೇಷ್ವಹಂಕುರ್ಯಾನ್ನ ವಿದ್ವಾನ್ ಯಸ್ತ್ವವಿಕ್ರಿಯಃ ॥
ಅನುವಾದ
ಇಂದ್ರಿಯಗಳೂ ಕೂಡ ತ್ರಿಗುಣಗಳ ವಿಕಾರವಾಗಿವೆ. ಮತ್ತು ಈ ವಿಷಯ ಭೋಗಗಳೂ ತ್ರಿಗುಣಗಳದ್ದೇ ವಿಕಾರವಾಗಿವೆ. ಹೀಗೆ ಗುಣಗಳ ಮೂಲಕ ಗುಣಗಳ ವ್ಯವಹಾರ ಪರಸ್ಪರ ನಡೆಯುತ್ತಾ ಇರುತ್ತದೆ. ವಿದ್ವಾಂಸನು ತನ್ನ ಆತ್ಮಸ್ವರೂಪದಲ್ಲಿ ಸ್ಥಿತನಾದ್ದರಿಂದ ಇವುಗಳಿಂದ ಪೂರ್ಣವಾಗಿ ನಿರ್ವಿಕಾರಿಯಾಗಿರುತ್ತಾನೆ ಹಾಗೂ ನಾನು ಏನನ್ನೂ ಮಾಡುವುದಿಲ್ಲ ಎಂದು ತಿಳಿಯುತ್ತಾನೆ. ॥9॥
(ಶ್ಲೋಕ - 10)
ಮೂಲಮ್
ದೈವಾಧೀನೇ ಶರೀರೇಸ್ಮಿನ್ ಗುಣಭಾವ್ಯೇನ ಕರ್ಮಣಾ ।
ವರ್ತಮಾನೋಬುಧಸ್ತತ್ರ ಕರ್ತಾಸ್ಮೀತಿ ನಿಬದ್ಧ್ಯತೇ ॥
ಅನುವಾದ
ಈ ಶರೀರವಾದರೋ ಪ್ರಾರಬ್ಧಕ್ಕಧೀನವಾಗಿದೆ. ಇಂದ್ರಿಯಗಳಿಂದ ಕರ್ಮಗಳು ಮಾಡಲ್ಪಡುತ್ತವೆ ಅವುಗಳ ಪ್ರೇರಕವು ಮನಸ್ಸಾಗಿದೆ. ಹೀಗೆ ಈ ಮನ ಮತ್ತು ಇಂದ್ರಿಯಗಳು ಎರಡೂ ಗುಣಗಳ ಕಾರ್ಯವೇ ಆಗಿದೆ. ವಾಸ್ತವವಾಗಿ ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ. ಆದರೆ ಅಜ್ಞಾನಿಯು ‘ನಾನು ಕರ್ತಾ ಆಗಿದ್ದೇನೆ’ ಹೀಗೆ ತಿಳಿದು ಬಂಧಿತನಾಗುತ್ತಾನೆ. ॥10॥
ಮೂಲಮ್
(ಶ್ಲೋಕ - 11)
ಏವಂ ವಿರಕ್ತಃ ಶಯನೇ ಆಸನಾಟನಮಜ್ಜನೇ ।
ದರ್ಶನಸ್ಪರ್ಶನಘ್ರಾಣಭೋಜನಶ್ರವಣಾದಿಷು ॥
(ಶ್ಲೋಕ - 12)
ಮೂಲಮ್
ನ ತಥಾ ಬದ್ಧ್ಯತೇ ವಿದ್ವಾಂಸ್ತತ್ರ ತತ್ರಾದಯನ್ಗುಣಾನ್ ।
ಪ್ರಕೃತಿಸ್ಥೋಪ್ಯಸಂಸಕ್ತೋ ಯಥಾ ಖಂ ಸವಿತಾನಿಲಃ ॥
(ಶ್ಲೋಕ - 13)
ಮೂಲಮ್
ವೈಶಾರದ್ಯೇಕ್ಷಯಾಸಂಗಶಿತಯಾ ಛಿನ್ನಸಂಶಯಃ ।
ಪ್ರತಿಬುದ್ಧ ಇವ ಸ್ವಪ್ನಾನ್ನಾನಾತ್ವಾದ್ವಿನಿವರ್ತತೇ ॥
ಅನುವಾದ
ಆದರೆ ವಿರಕ್ತಜ್ಞಾನಿಯು ಮಲಗುವುದು, ಕುಳಿತುಕೊಳ್ಳುವುದು, ತಿರುಗಾಡುವುದು, ಸ್ನಾನಮಾಡುವುದು, ನೋಡುವುದು, ಮುಟ್ಟುವುದು, ಮೂಸುವುದು, ತಿನ್ನುವುದು, ಕೇಳುವುದು ಮುಂತಾದ ಕ್ರಿಯೆಗಳನ್ನು ಮಾಡುತ್ತಿದ್ದರೂ ತನ್ನನ್ನು ಕರ್ತಾ ಭೋಕ್ತಾ ಎಂದು ತಿಳಿಯುವುದಿಲ್ಲ. ಅವನು ಪ್ರಕೃತಿಯಲ್ಲಿ ನೆಲೆಸಿಯೂ ಅದರಿಂದ ಪೂರ್ಣ ಅಸಂಗನಾಗಿದ್ದಾನೆ. ಅರ್ಥಾತ್ ಅವನು ಆ ಕರ್ಮಗಳಿಂದ ಲಿಪ್ತನಾಗುವುದಿಲ್ಲ. ಆಕಾಶ, ಸೂರ್ಯ, ವಾಯು ಇವು ಯಾರ ಗುಣದೋಷಗಳನ್ನು ಗ್ರಹಿಸುವುದಿಲ್ಲ, ಎಲ್ಲಿಯೂ ಲಿಪ್ತವಾಗುವುದಿಲ್ಲ. ಹಾಗೆಯೇ ಜ್ಞಾನಿಯು ಪೂರ್ಣವಾಗಿ ನಿರ್ಲಿಪ್ತನಾಗಿರುತ್ತಾನೆ. ಹೀಗೆ ವೈರಾಗ್ಯದಿಂದ ತೀಕ್ಷ್ಣವಾದ ದೃಷ್ಟಿಯುಳ್ಳವನ ಎಲ್ಲ ಸಂಶಯಗಳು ದೂರವಾಗುತ್ತವೆ. ಸ್ವಪ್ನದಿಂದ ಎಚ್ಚತ್ತಮೇಲೆ ಸ್ವಪ್ನದ ಸೃಷ್ಟಿಯು ಕಣ್ಮರೆಯಾಗುವಂತೆ ವಿವೇಕ ಜ್ಞಾನದ ಮೂಲಕ ಅವನ ಎಲ್ಲ ನಾನಾತ್ವದ ಭ್ರಮೆಯು ದೂರವಾಗುತ್ತದೆ. ॥11-13॥
(ಶ್ಲೋಕ - 14)
ಮೂಲಮ್
ಯಸ್ಯ ಸ್ಯುರ್ವೀತಸಂಕಲ್ಪಾಃ ಪ್ರಾಣೇಂದ್ರಿಯಮನೋಧಿಯಾಮ್ ।
ವೃತ್ತಯಃ ಸ ವಿನಿರ್ಮುಕ್ತೋ ದೇಹಸ್ಥೋಪಿ ಹಿ ತದ್ಗುಣೈಃ ॥
ಅನುವಾದ
ಪ್ರಾಣ, ಇಂದ್ರಿಯಗಳು, ಮನಸ್ಸು, ಬುದ್ಧಿ ಇವುಗಳ ಸಂಕಲ್ಪಗಳಿಂದ ಪೂರ್ಣವಾಗಿ ನಿವೃತ್ತವಾದವನು, ಪ್ರಾಪಂಚಿಕ ಕರ್ಮಗಳನ್ನು ಮಾಡುವ ಪರಂಪರೆ ನಾಶವಾದವನು ದೇಹದಲ್ಲಿ ಸ್ಥಿತನಾಗಿದ್ದರೂ ಅದರ ಗುಣಗಳಿಂದ ಸರ್ವಥಾ ಅತೀತನಾಗಿರುತ್ತಾನೆ ಅರ್ಥಾತ್ ಅವನು ಗುಣಾತೀತ ಅವಸ್ಥೆಯನ್ನು ಪಡೆದುಕೊಳ್ಳುತ್ತಾನೆ. ॥14॥
(ಶ್ಲೋಕ - 15)
ಮೂಲಮ್
ಯಸ್ಯಾತ್ಮಾ ಹಿಂಸ್ಯತೇ ಹಿಂಸ್ರೈರ್ಯೇ ನ ಕಿಂಚಿದ್ಯದೃಚ್ಛಯಾ ।
ಅರ್ಚ್ಯತೇ ವಾ ಕ್ವಚಿತ್ತತ್ರ ನ ವ್ಯತಿಕ್ರಿಯತೇ ಬುಧಃ ॥
ಅನುವಾದ
ಆ ತತ್ತ್ವಜ್ಞ ಮುಕ್ತ ಪುರುಷನ ಶರೀರಕ್ಕೆ ಬೇಕಾದರೆ ಹಿಂಸಕರು ಸತಾಯಿಸಿ ದುಃಖಕೊಟ್ಟರೂ, ಬೇಕಾದರೆ ಎಂದಾದರೂ, ಯಾರಾದರೂ ದೈವಯೋಗದಿಂದ ಪೂಜಿಸಿದರೆ, ಅವನು ಸತಾಯಿಸುವುದರಿಂದ ದುಃಖಿಯೂ, ಪೂಜೆಯಿಂದ ಸುಖಿಯೂ ಆಗುವುದಿಲ್ಲ. ॥15॥
(ಶ್ಲೋಕ - 16)
ಮೂಲಮ್
ನ ಸ್ತುವೀತ ನ ನಿಂದೇತ ಕುರ್ವತಃ ಸಾಧ್ವಸಾಧು ವಾ ।
ವದತೋ ಗುಣದೋಷಾಭ್ಯಾಂ ವರ್ಜಿತಃ ಸಮದೃಙ್ಮುನಿಃ ॥
ಅನುವಾದ
ಮುನಿಯಾದವನು ತನ್ನನ್ನು ಬೇಕಾದರೆ ಸ್ತುತಿಸಲಿ, ನಿಂದಿಸಲಿ, ಅವರನ್ನು ಒಳ್ಳೆಯವರೆಂದಾಗಲೀ, ಕೆಟ್ಟವರೆಂದಾಗಲೀ ಹೇಳುವುದಿಲ್ಲ. ಎಲ್ಲೆಡೆ ಸಮದೃಷ್ಟಿಯಿದ್ದು ಓರ್ವ ಪರಮಾತ್ಮನದೇ ಭಾವನೆವಿರಿಸಬೇಕು. ಯಾರಾದರೂ ಗುಣ ದೋಷಗಳ ವಿಷಯದಲ್ಲಿ ಚರ್ಚಿಸುತ್ತಿದ್ದರೆ ಅದರಿಂದ ದೂರವುಳಿಯಬೇಕು. ॥16॥
(ಶ್ಲೋಕ - 17)
ಮೂಲಮ್
ನ ಕುರ್ಯಾನ್ನ ವದೇತ್ಕಿಂಚಿನ್ನ ಧ್ಯಾಯೇತ್ ಸಾಧ್ವಸಾಧು ವಾ ।
ಆತ್ಮಾರಾಮೋನಯಾ ವೃತ್ತ್ಯಾ ವಿಚರೇಜ್ಜಡವನ್ಮುನಿಃ ॥
ಅನುವಾದ
ಹೀಗೆ ಮುನಿಯಾದವನು ತನ್ನ ಆತ್ಮನಲ್ಲೇ ತನ್ಮಯನಾಗಿರಲಿ. ಈ ರೀತಿಯಿಂದ ಪ್ರಕೃತಿಯಲ್ಲಿ ಸ್ಥಿತನಾಗಿದ್ದರೂ ಅವನು ಯಾರಿಗಾಗಿಯೂ ಒಳ್ಳೆಯದಾಗಲೀ, ಕೆಟ್ಟದಾಗಲಿ ಮಾತನಾಡದಿರಲಿ, ಹೇಳದಿರಲಿ, ಚಿಂತಿಸದಿರಲಿ, ಜಡನಂತೆ ವರ್ತಿಸಲಿ. ತನ್ನ ಗೂಢ ಭಾವವನ್ನು ಯಾರಲ್ಲಿಯೂ ಪ್ರಕಟಿಸದಿರಲಿ. ॥17॥
(ಶ್ಲೋಕ - 18)
ಮೂಲಮ್
ಶಬ್ದಬ್ರಹ್ಮಣಿ ನಿಷ್ಣಾತೋ ನ ನಿಷ್ಣಾಯಾತ್ಪರೇ ಯದಿ ।
ಶ್ರಮಸ್ತಸ್ಯ ಶ್ರಮಲೋ ಹ್ಯಧೇನುಮಿವ ರಕ್ಷತಃ ॥
ಅನುವಾದ
ಆದರೆ ಪ್ರಿಯ ಉದ್ಧವನೇ! ವೇದದಲ್ಲಿ ಪಾರಂಗತ ನಾದ ವಿದ್ವಾಂಸನು ಪರಬ್ರಹ್ಮನ ಅನುಭವವು ಆಗದಿದ್ದರೆ, ಅವನ ಪರಿಶ್ರಮವು ಹಾಲುಕೊಡದ ಹಸುವನ್ನು ಸಾಕಿದಂತೆ ಇದೆ ಎಂದು ತಿಳಿಯಬೇಕು. ಅರ್ಥಾತ್ ವ್ಯರ್ಥವೇ ಆಗಿದೆ. ॥18॥
(ಶ್ಲೋಕ - 19)
ಮೂಲಮ್
ಗಾಂ ದುಗ್ಧದೋಹಾಮಸತೀಂ ಚ ಭಾರ್ಯಾಂ
ದೇಹಂ ಪರಾಧೀನಮಸತ್ಪ್ರಜಾಂ ಚ ।
ವಿತ್ತಂ ತ್ವತೀರ್ಥೀಕೃತಮಂಗ ವಾಚಂ
ಹೀನಾಂ ಮಯಾ ರಕ್ಷತಿ ದುಃಖದುಃಖೀ ॥
ಅನುವಾದ
ಎಲೈ ಉದ್ಧವನೇ! ಹಾಲುಕೊಡದ ಹಸು, ಕುಲಟೆಯಾದ ಪತ್ನೀ, ಪರಾಧೀನದೇಹ, ದುಷ್ಟ ಸಂತತಿ, ಸತ್ಪಾತ್ರಕ್ಕೆ ದಾನಕೊಡದ ಧನ, ಭಗವಂತನ ನಾಮ-ರೂಪ-ಲೀಲೆ-ಧಾಮ ಮುಂತಾದ ಭಗವತ್ಸಂಬಂಧೀ ಚರ್ಚೆಯಿಲ್ಲದ ವಾಣೀ, ಇವುಗಳನ್ನು ಆಶ್ರಯಿಸಿದವನಿಗಾದರೋ ದುಃಖದ ಮೇಲೆ ದುಃಖವನ್ನೇ ಭೋಗಿಸ ಬೇಕಾಗುತ್ತದೆ. ॥19॥
(ಶ್ಲೋಕ - 20)
ಮೂಲಮ್
ಯಸ್ಯಾಂ ನ ಮೇ ಪಾವನಮಂಗ ಕರ್ಮ
ಸ್ಥಿತ್ಯುದ್ಭವಪ್ರಾಣನಿರೋಧಮಸ್ಯ ।
ಲೀಲಾವತಾರೇಪ್ಸಿತಜನ್ಮ ವಾ ಸ್ಯಾದ್
ವಂಧ್ಯಾಂ ಗಿರಂ ತಾಂ ಬಿಭೃಯಾನ್ನ ಧೀರಃ ॥
ಅನುವಾದ
ನನ್ನ ಪವಿತ್ರ ಕರ್ಮಗಳ ಉಲ್ಲೇಖವಿಲ್ಲದ ವಾಣೀ, ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರಗೈವ ಭಗವಂತನ ಶಕ್ತಿಯ ನಿರೂಪಣೆಯಿಲ್ಲದ ವಾಣಿಯು, ಭಗವಂತನ ಬೇರೆ-ಬೇರೆ ಅವತಾರಗಳ, ಅವುಗಳ ಪವಿತ್ರಗುಣಗಳ, ಯಶೋಗಾನದ ವರ್ಣನೆ ಇಲ್ಲದಿರುವ ವಾಣಿಯು ವಂಧ್ಯೆಯೇ ಆಗಿದೆ. ಇಂತಹ ವಾಣಿಯನ್ನು ಜ್ಞಾನಿಗಳು ಆದರಿಸಬಾರದು. ॥20॥
(ಶ್ಲೋಕ - 21)
ಮೂಲಮ್
ಏವಂ ಜಿಜ್ಞಾಸಯಾಪೋಹ್ಯ ನಾನಾತ್ವಭ್ರಮಮಾತ್ಮನಿ ।
ಉಪಾರಮೇತ ವಿರಜಂ ಮನೋ ಮಯ್ಯರ್ಪ್ಯ ಸರ್ವಗೇ ॥
ಅನುವಾದ
ಹೀಗೆ ತತ್ತ್ವದ ಜಿಜ್ಞಾಸೆಯಿಂದ ಜಗತ್ತಿನಲ್ಲಿ ಎಲ್ಲೆಡೆ ಓರ್ವ ಬ್ರಹ್ಮವನ್ನೇ ನೋಡಲಿ, ಆತ್ಮನಲ್ಲಿರುವ ನಾನಾತ್ವದ ಭ್ರಮೆಯು ಪೂರ್ಣವಾಗಿ ದೂರಾಗಿಸಲಿ, ಈ ಪ್ರಕಾರ ಶುದ್ಧವಾದ ಮನಸ್ಸನ್ನು ಸರ್ವವ್ಯಾಪೀ ಪರಮಾತ್ಮನಾದ ನನ್ನಲ್ಲಿ ತೊಡಗಿಸಲಿ, ಉಳಿದೆಲ್ಲದರಲ್ಲಿಯೂ ಉಪರಾಮನಾಗಲಿ. ॥21॥
(ಶ್ಲೋಕ - 22)
ಮೂಲಮ್
ಯದ್ಯನೀಶೋ ಧಾರಯಿತುಂ ಮನೋ ಬ್ರಹ್ಮಣಿ ನಿಶ್ಚಲಮ್ ।
ಮಯಿ ಸರ್ವಾಣಿ ಕರ್ಮಾಣಿ ನಿರಪೇಕ್ಷಃ ಸಮಾಚರ ॥
ಅನುವಾದ
ಈ ವಿಧವಾಗಿ ಪರಮಾತ್ಮನಾದ ನನ್ನಲ್ಲಿ ನಿಶ್ಚಲರೂಪದಿಂದ ಮನಸ್ಸನ್ನು ತೊಡಗಿಸಲು ಅಸಮರ್ಥನಾದರೆ, ಮಾಡುವ ಎಲ್ಲ ಕ್ರಿಯೆಗಳನ್ನು ನಿರಪೇಕ್ಷನಾಗಿ ನನಗಾಗಿಯೇ ಮಾಡಲಿ. ॥22॥
(ಶ್ಲೋಕ - 23)
ಮೂಲಮ್
ಶ್ರದ್ಧಾಲುರ್ಮೇ ಕಥಾಃ ಶೃಣ್ವನ್ ಸುಭದ್ರಾ ಲೋಕಪಾವನೀಃ ।
ಗಾಯನ್ನನುಸ್ಮರನ್ಕರ್ಮ ಜನ್ಮ ಚಾಭಿನಯನ್ಮುಹುಃ ॥
ಅನುವಾದ
ಲೋಕಗಳನ್ನು ಪವಿತ್ರಗೊಳಿಸುವ ನನ್ನ ಶ್ರೇಯಸ್ಕರವಾದ ಕಥೆಗಳನ್ನು ಶ್ರದ್ಧಾಳುವಾದವನು ಶ್ರವಣಿಸಲಿ, ಕೀರ್ತಿಸಲಿ ಹಾಗೂ ಸ್ಮರಿಸಲಿ. ಹಾಗೆಯೇ ನನ್ನ ಅವತಾರದ (ರಾಮನವಮಿ, ಕೃಷ್ಣ-ಜನ್ಮಾಷ್ಟಮಿ ಮುಂತಾದ) ಲೀಲೆಗಳನ್ನು ಅಭಿನಯಿಸಲಿ. ॥23॥
ಮೂಲಮ್
(ಶ್ಲೋಕ - 24)
ಮದರ್ಥೇ ಧರ್ಮಕಾಮಾರ್ಥಾನಾಚರನ್ಮದಪಾಶ್ರಯಃ ।
ಲಭತೇ ನಿಶ್ಚಲಾಂ ಭಕ್ತಿಂ ಮಯ್ಯುದ್ಧವ ಸನಾತನೇ ॥
ಅನುವಾದ
ಎಲೈ ಉದ್ಧವಾ! ಈ ಪ್ರಕಾರ ನನಗೆ ಶರಣಾಗಿ, ನನಗಾಗಿಯೇ ಧರ್ಮ, ಅರ್ಥ, ಕಾಮ ಇವುಗಳನ್ನು ಆಚರಿಸುತ್ತಿರುವ ನನ್ನ ಅನನ್ಯ ಪ್ರೇಮಿ ಭಕ್ತನು ಸನಾತನ ಪರಮಾತ್ಮನಾದ ನನ್ನಲ್ಲಿ ನಿಶ್ಚಲ ಭಕ್ತಿಯನ್ನು ಪಡೆದುಕೊಳ್ಳುತ್ತಾನೆ. ॥24॥
(ಶ್ಲೋಕ - 25)
ಮೂಲಮ್
ಸತ್ಸಂಗಲಬ್ಧಯಾ ಭಕ್ತ್ಯಾ ಮಯಿ ಮಾಂ ಸ ಉಪಾಸಿತಾ ।
ಸ ವೈ ಮೇ ದರ್ಶಿತಂ ಸದ್ಭಿರಂಜಸಾ ವಿಂದತೇ ಪದಮ್ ॥
ಅನುವಾದ
ಸತ್ಸಂಗದಿಂದ ಭಕ್ತಿಯು ಪ್ರಾಪ್ತವಾಗುತ್ತದೆ. ಮತ್ತೆ ಅವನು ನನ್ನನ್ನು ಉಪಾಸಿಸುತ್ತಾನೆ. ಸಂತರು ಹೇಳಿದ ಮಾರ್ಗದಿಂದ ನಡೆದು ಅವನು ಸುಲಭವಾಗಿ ನನ್ನನ್ನು ಪಡೆದುಕೊಳ್ಳುತ್ತಾನೆ. ॥25॥
ಮೂಲಮ್
(ಶ್ಲೋಕ - 26)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಸಾಧುಸ್ತವೋತ್ತಮಶ್ಲೋಕ ಮತಃ ಕೀದೃಗ್ವಿಧಃ ಪ್ರಭೋ ।
ಭಕ್ತಿಸ್ತ್ವಯ್ಯುಪಯುಜ್ಯೇತ ಕೀದೃಶೀ ಸದ್ಭಿರಾದೃತಾ ॥
ಅನುವಾದ
ಉದ್ಧವನು ಕೇಳಿದನು — ಪವಿತ್ರಕೀರ್ತಿಯುಳ್ಳ ಭಗವಂತನೇ! ನಿನ್ನ ಅಭಿಪ್ರಾಯದಲ್ಲಿ ಸಂತರ ಲಕ್ಷಣಗಳು ಯಾವುವು? ಸಂತಜನರು ಆದರಿಸುತ್ತಿರುವ ನಿನ್ನ ಕುರಿತಾದ ಭಕ್ತಿಯನ್ನು ಹೇಗೆ ಮಾಡಬೇಕು? ನೀನು ದಯಮಾಡಿ ತಿಳಿಸುವವನಾಗು. ॥26॥
(ಶ್ಲೋಕ - 27)
ಮೂಲಮ್
ಏತನ್ಮೇ ಪುರುಷಾಧ್ಯಕ್ಷ ಲೋಕಾಧ್ಯಕ್ಷ ಜಗತ್ಪ್ರಭೋ ।
ಪ್ರಣತಾಯಾನುರಕ್ತಾಯ ಪ್ರಪನ್ನಾಯ ಚ ಕಥ್ಯತಾಮ್ ॥
ಅನುವಾದ
ಭಗವಂತನೇ! ನೀನೇ ಬ್ರಹ್ಮಾದಿ ಶ್ರೇಷ್ಠ ದೇವತೆಗಳಿಗೆ, ಸತ್ಯಾದಿ ಲೋಕಗಳಿಗೆ, ಚರಾಚರ ಜಗತ್ತಿಗೆ ಒಡೆಯನಾಗಿರುವೆ. ನಾನು ವಿನೀತ, ಪ್ರೇಮಿ, ಶರಣಾಗತನಾದ ನಿನ್ನ ಭಕ್ತನಾಗಿರುವೆನು. ನೀನು ನನಗೆ ಭಕ್ತಿ ಹಾಗೂ ಭಕ್ತರ ರಹಸ್ಯವನ್ನು ಹೇಳುವವನಾಗು. ॥27॥
(ಶ್ಲೋಕ - 28)
ಮೂಲಮ್
ತ್ವಂ ಬ್ರಹ್ಮ ಪರಮಂ ವ್ಯೋಮ ಪುರುಷಃ ಪ್ರಕೃತೇಃ ಪರಃ ।
ಅವತೀರ್ಣೋಸಿ ಭಗವನ್ ಸ್ವೇಚ್ಛೋಪಾತ್ತಪೃಥಗ್ವಪುಃ ॥
ಅನುವಾದ
ಪರಮಾತ್ಮಾ! ನೀನು ಪ್ರಕೃತಿಗಿಂತ ಅತೀತನಾದ ಪುರುಷೋತ್ತಮ ಹಾಗೂ ಚಿದಾಕಾಶಸ್ವರೂಪೀ ಬ್ರಹ್ಮನಾಗಿರುವೆ ಎಂಬುದನ್ನು ನಾನು ಬಲ್ಲೆನು. ನಿನ್ನಿಂದ ಭಿನ್ನವಾದುದು ಯಾವುದೂ ಇಲ್ಲ. ಆದರೂ ನೀನು ಲೀಲೆಗಾಗಿ ಸ್ವೇಚ್ಛೆಯಿಂದಲೇ ಈ ಬೇರೆ ಯಾದ ಕೃಷ್ಣರೂಪದಿಂದ ಅವತರಿಸಿರುವೆ. ಆದ್ದರಿಂದ ವಾಸ್ತವವಾಗಿ ನೀನೇ ಭಕ್ತಿ ಮತ್ತು ಭಕ್ತರ ರಹಸ್ಯವನ್ನು ತಿಳಿಸಬಲ್ಲೆ. ॥28॥
(ಶ್ಲೋಕ - 29)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಕೃಪಾಲುರಕೃತದ್ರೋಹಸ್ತಿತಿಕ್ಷುಃ ಸರ್ವದೇಹಿನಾಮ್ ।
ಸತ್ಯಸಾರೋನವದ್ಯಾತ್ಮಾ ಸಮಃ ಸರ್ವೋಪಕಾರಕಃ ॥
ಅನುವಾದ
ಭಗವಾನ್ ಶ್ರೀಕೃಷ್ಣನೆಂದನು — ಪ್ರಿಯ ಉದ್ಧವನೇ! ನನ್ನ ಭಕ್ತನು ಕೃಪೆಯಮೂರ್ತಿಯಾಗಿರುತ್ತಾನೆ. ಅವನು ಯಾವುದೇ ಪ್ರಾಣಿಯಲ್ಲಿ ವೈರಭಾವವಿರಿಸುವುದಿಲ್ಲ ಹಾಗೂ ಭಾರೀ ದೊಡ್ಡ ದುಃಖವನ್ನೂ ಕೂಡ ಸಂತೋಷವಾಗಿ ಸಹಿಸುತ್ತಾನೆ. ಸತ್ಯವೇ ಅವನ ಜೀವನದ ಜೀವಾಳವಾಗಿದೆ. ಅವನ ಮನಸ್ಸಿನಲ್ಲಿ ಯಾವ ವಿಧವಾದ ಪಾಪವಾಸನೆಯು ಎಂದೂ ಉಂಟಾಗುವುದಿಲ್ಲ. ಅವನು ಸಮದರ್ಶಿಯಾಗಿದ್ದು, ಎಲ್ಲರ ಒಳಿತನ್ನೇ ಮಾಡುವವನಾಗಿರುತ್ತಾನೆ. ॥29॥
(ಶ್ಲೋಕ - 30)
ಮೂಲಮ್
ಕಾಮೈರಹತಧೀರ್ದಾಂತೋ ಮೃದುಃ ಶುಚಿರಕಿಂಚನಃ ।
ಅನೀಹೋ ಮಿತಭುಕ್ ಶಾಂತಃ ಸ್ಥಿರೋ ಮಚ್ಛರಣೋ ಮುನಿಃ ॥
ಅನುವಾದ
ಅವನ ಬುದ್ಧಿಯು ಕಾಮನೆಗಳಿಂದ ಕಲುಷಿತವಾಗುವುದಿಲ್ಲ. ಅವನು ಸಂಯಮಿಯೂ, ಮೃದು ಸ್ವಭಾವದವನೂ, ಪವಿತ್ರನೂ ಆಗಿರುತ್ತಾನೆ. ಸಂಗ್ರಹ-ಪರಿಗ್ರಹಗಳಿಂದ ಪೂರ್ಣವಾಗಿ ದೂರವಾಗಿರುತ್ತಾನೆ. ಯಾವುದೇ ವಸ್ತುವಿಗಾಗಿ ಅವನು ಪ್ರಯತ್ನಿಸುವುದಿಲ್ಲ, ಮಿತವಾಗಿ ಭೋಜನ ಮಾಡುತ್ತಾನೆ ಹಾಗೂ ಶಾಂತವಾಗಿರುತ್ತಾನೆ. ಅವನ ಬುದ್ಧಿಯು ಸ್ಥಿರವಾಗಿರುತ್ತದೆ. ಅವನಿಗೆ ಕೇವಲ ನನ್ನ ಭರವಸೆಯೇ ಇರುತ್ತದೆ ಹಾಗೂ ಆತ್ಮತತ್ತ್ವದ ಚಿಂತನೆಯಲ್ಲೇ ಸದಾಕಾಲ ತೊಡಗಿರುತ್ತಾನೆ. ॥30॥
(ಶ್ಲೋಕ - 31)
ಮೂಲಮ್
ಅಪ್ರಮತ್ತೋ ಗಭೀರಾತ್ಮಾ ಧೃತಿಮಾನ್ಜಿತಷಡ್ಗುಣಃ ।
ಅಮಾನೀ ಮಾನದಃ ಕಲ್ಪೋ ಮೈತ್ರಃ ಕಾರುಣಿಕಃ ಕವಿಃ ॥
ಅನುವಾದ
ಅವನು ಪೂರ್ಣವಾಗಿ ಎಚ್ಚರಿಕೆಯಿಂದಿರುತ್ತಾನೆ. ಗಂಭೀರಸ್ವಭಾವವಿದ್ದು, ಧೈರ್ಯಶಾಲಿಯಾಗಿರುತ್ತಾನೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಈ ಆರು ಅವ ಗುಣಗಳನ್ನು ಗೆದ್ದಿರುತ್ತಾನೆ. ಅವನು ಸ್ವತಃ ಎಂದೂ, ಯಾರಿಂದಲೂ, ಯಾವ ಪ್ರಕಾರದ ಸನ್ಮಾನವನ್ನು ಬಯಸುವುದಿಲ್ಲ, ಆದರೆ ಬೇರೆಯವರನ್ನು ಸನ್ಮಾನಿಸುತ್ತಾನೆ. ಸಮರ್ಥನಾಗಿದ್ದು, ನನ್ನ ಕುರಿತಾದ ವಿಷಯವನ್ನು ಬೇರೆ ಯವರಿಗೆ ತಿಳಿಸಿಹೇಳಲು ತುಂಬಾ ನಿಪುಣನಾಗಿರುತ್ತಾನೆ. ಎಲ್ಲರೊಂದಿಗೆ ಮಿತ್ರತೆಯ ವ್ಯವಹಾರ ಮಾಡುತ್ತಾನೆ. ಅವನ ಹೃದಯದಲ್ಲಿ ಕರುಣೆ ತುಂಬಿರುತ್ತದೆ. ನನ್ನ ತತ್ತ್ವದ ಯಥಾರ್ಥಜ್ಞಾನ ಅವನಿಗಿರುತ್ತದೆ.॥31॥
(ಶ್ಲೋಕ - 32)
ಮೂಲಮ್
ಆಜ್ಞಾಯೈವಂ ಗುಣಾನ್ ದೋಷಾನ್ ಮಯಾದಿಷ್ಟಾನಪಿ ಸ್ವಕಾನ್ ।
ಧರ್ಮಾನ್ ಸಂತ್ಯಜ್ಯ ಯಃ ಸರ್ವಾನ್ ಮಾಂ ಭಜೇತ ಸ ಸತ್ತಮಃ ॥
ಅನುವಾದ
ನನ್ನ ಭಕ್ತನು ಗುಣ ಯಾವುದು, ದೋಷ ಯಾವುದು ಎಂಬುದನ್ನು ತಿಳಿದಿರುತ್ತಾನೆ. ಅವನ ಅಂತಃಕರಣವು ಶುದ್ಧವಾಗಿರುತ್ತದೆ. ಅವನಲ್ಲಿ ಭಕ್ತಿಯ ಪ್ರವಾಹ ನಿರಂತರ ಹೆಚ್ಚುತ್ತಲೇ ಇರುತ್ತದೆ, ಆಗ ಅವನು ನನ್ನಿಂದ ನಿರ್ದೇಶಿಸಲ್ಪಟ್ಟ ಕರ್ಮಗಳನ್ನು ಕೂಡ ಭಕ್ತಿಯಲ್ಲಿ ಬಾಧಕವೆಂದು ತಿಳಿದು ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ, ಅವನು ಎಲ್ಲ ರೀತಿಯ ಕರ್ಮಗಳಿಂದ ಉಪರಾಮನಾಗಿ, ಅನನ್ಯ ಭಾವದಿಂದ ಶರಣಾಗತನಾಗುತ್ತಾನೆ. ಭಕ್ತಿಯಲ್ಲೇ ಮುಳುಗಿರುವ ಇಂತಹ ಭಕ್ತನು ಬಹಳ ಶ್ರೇಷ್ಠನಾಗಿದ್ದಾನೆ.* ॥32॥
ಟಿಪ್ಪನೀ
- ಗೀತೆ 18/66ರಲ್ಲಿ ಭಗವದ್ಗೀತೆಯ ಉಪಸಂಹಾರವನ್ನು ಭಗವಂತನು ಶರಣಾಗತಿಯಲ್ಲೇ ಮಾಡಿರುವನು.
(ಶ್ಲೋಕ - 33)
ಮೂಲಮ್
ಜ್ಞಾತ್ವಾಜ್ಞಾತ್ವಾಥ ಯೇ ವೈ ಮಾಂ ಯಾವಾನ್ಯಶ್ಚಾಸ್ಮಿ ಯಾದೃಶಃ ।
ಭಜಂತ್ಯನನ್ಯಭಾವೇನ ತೇ ಮೇ ಭಕ್ತತಮಾ ಮತಾಃ ॥
ಅನುವಾದ
ನಾನು (ಭಗವಂತನು) ಯಾರು, ಎಷ್ಟು ದೊಡ್ಡವನಾಗಿದ್ದೇನೆ, ಹೇಗಿದ್ದೇನೆ, ಎಂಬುದನ್ನು ತಿಳಿಯಲಿ, ತಿಳಿಯದಿರಲಿ; ಆದರೆ ಅನನ್ಯಭಾವದಿಂದ ನನ್ನನ್ನು ಭಜಿಸುವವನೇ ನನ್ನ ಅಭಿಪ್ರಾಯದಲ್ಲಿ ನನ್ನ ಪರಮಭಕ್ತನಾಗಿದ್ದಾನೆ. ॥33॥
(ಶ್ಲೋಕ - 34)
ಮೂಲಮ್
ಮಲ್ಲಿಂಗ ಮದ್ಭಕ್ತಜನದರ್ಶನಸ್ಪರ್ಶನಾರ್ಚನಮ್ ।
ಪರಿಚರ್ಯಾ ಸ್ತುತಿಃ ಪ್ರಹ್ವಗುಣಕರ್ಮಾನುಕೀರ್ತನಮ್ ॥
ಅನುವಾದ
ಪ್ರಿಯ ಉದ್ಧವನೇ! ಭಕ್ತರಾದವರು ನನ್ನ ಮೂರ್ತಿ ಮತ್ತು ನನ್ನ ಭಕ್ತರ ದರ್ಶನ, ಸ್ಪರ್ಶ, ಪೂಜೆ, ಸೇವೆ, ಶುಶ್ರೂಷೆ, ಸ್ತುತಿ ಮತ್ತು ನಮಸ್ಕಾರ ಮುಂತಾದುವನ್ನು ಮಾಡುತ್ತಾ, ನನ್ನ ಗುಣ-ಕರ್ಮಗಳನ್ನು ಕೀರ್ತಿಸಲಿ. ॥34॥
(ಶ್ಲೋಕ - 35)
ಮೂಲಮ್
ಮತ್ಕಥಾಶ್ರವಣೇ ಶ್ರದ್ಧಾ ಮದನುಧ್ಯಾನಮುದ್ಧವ ।
ಸರ್ವಲಾಭೋಪಹರಣಂ ದಾಸ್ಯೇನಾತ್ಮನಿವೇದನಮ್ ॥
ಅನುವಾದ
ನನ್ನ ಕಥಾ ಶ್ರವಣದಲ್ಲಿ ಶ್ರದ್ಧೆಯಿದ್ದು, ನಿರಂತರ ನನ್ನನ್ನು ಧ್ಯಾನಿಸುತ್ತಿರಲಿ. ದೊರೆತುದೆಲ್ಲವನ್ನು ನನಗೆ ಅರ್ಪಿಸುತ್ತಾ, ದಾಸ್ಯಭಾವದಿಂದ ನನ್ನಲ್ಲಿ ಆತ್ಮನಿವೇದನ ಮಾಡಲಿ ॥35॥
(ಶ್ಲೋಕ - 36)
ಮೂಲಮ್
ಮಜ್ಜನ್ಮ ಕರ್ಮಕಥನಂ ಮಮ ಪರ್ವಾನುಮೋದನಮ್ ।
ಗೀತತಾಂಡವವಾದಿತ್ರಗೋಷ್ಠೀಭಿರ್ಮದ್ಗೃಹೋತ್ಸವಃ ॥
ಅನುವಾದ
ನನ್ನ ದಿವ್ಯವಾದ ಜನ್ಮ-ಕರ್ಮಗಳನ್ನು ಚರ್ಚಿಸುತ್ತಿರಲಿ. ಜನ್ಮಾಷ್ಟಮಿ, ರಾಮನವಮಿ ಮುಂತಾದ ಪರ್ವಗಳಲ್ಲಿ ಉತ್ಸವವನ್ನಾಚರಿಸುತ್ತಾ, ಸಂಗೀತ, ನೃತ್ಯ, ವಾದ್ಯಗೋಷ್ಠಿ ಇವುಗಳಿಂದ ಸೇವೆ ನಡೆಸಲಿ. ಸಮಾಜ ಬಾಂಧವರಿಂದೊಡಗೂಡಿ ನನ್ನ ಮಂದಿರದಲ್ಲಿ ಮಹೋತ್ಸವವನ್ನು ಏರ್ಪಡಿಸಲಿ. ॥36॥
(ಶ್ಲೋಕ - 37)
ಮೂಲಮ್
ಯಾತ್ರಾ ಬಲಿವಿಧಾನಂ ಚ ಸರ್ವವಾರ್ಷಿಕಪರ್ವಸು ।
ವೈದಿಕೀ ತಾಂತ್ರಿಕೀ ದೀಕ್ಷಾ ಮದೀಯವ್ರತಧಾರಣಮ್ ॥
ಅನುವಾದ
ವಾರ್ಷಿಕ ಹಬ್ಬ-ಹರಿ ದಿನಗಳಲ್ಲಿ ನನ್ನ ಕ್ಷೇತ್ರಗಳ ಯಾತ್ರೆ ಮಾಡಲಿ, ಮೆರವಣಿಗೆ ಹೊರಡಿಸಲಿ, ವಿವಿಧ ವಸ್ತು, ಉಪಚಾರಗಳಿಂದ ನನ್ನ ಪೂಜೆ ಮಾಡಲಿ, ವೈದಿಕ ಅಥವಾ ತಾಂತ್ರಿಕ ಪದ್ಧತಿಯಿಂದ ದೀಕ್ಷೆಯನ್ನು ಕೈಗೊಂಡು, ನನ್ನ ವ್ರತಗಳನ್ನು ಪಾಲಿಸುತ್ತಿರಲಿ. ॥37॥
(ಶ್ಲೋಕ - 38)
ಮೂಲಮ್
ಮಮಾರ್ಚಾಸ್ಥಾಪನೇ ಶ್ರದ್ಧಾ ಸ್ವತಃ ಸಂಹತ್ಯ ಚೋದ್ಯಮಃ ।
ಉದ್ಯಾನೋಪವನಾಕ್ರೀಡಪುರಮಂದಿರಕರ್ಮಣಿ ॥
ಅನುವಾದ
ಮಂದಿರಗಳಲ್ಲಿ ನನ್ನ ಮೂರ್ತಿಗಳ ಸ್ಥಾಪನೆಯಲ್ಲಿ ಶ್ರದ್ಧೆಯಿರಲಿ. ಒಂದು ವೇಳೆ ಈ ಕಾರ್ಯವು ಒಬ್ಬನಿಂದಾಗದಿದ್ದರೆ, ಬೇರೆಯವರನ್ನು ಸೇರಿಸಿಕೊಂಡು ಉದ್ಯೋಗಮಾಡಲಿ. ನನಗಾಗಿ ಹೂದೋಟ, ಉದ್ಯಾನಗಳು, ಕ್ರೀಡಾಮಂದಿರ, ನಗರ ಹಾಗೂ ದೇವಸ್ಥಾನಗಳನ್ನು ನಿರ್ಮಿಸಲಿ. ॥38॥
(ಶ್ಲೋಕ - 39)
ಮೂಲಮ್
ಸಮ್ಮಾರ್ಜನೋಪಲೇಪಾಭ್ಯಾಂ ಸೇಕಮಂಡಲವರ್ತನೈಃ ।
ಗೃಹಶುಶ್ರೂಷಣಂ ಮಹ್ಯಂ ದಾಸವದ್ಯದಮಾಯಯಾ ॥
ಅನುವಾದ
ಸೇವಕನಂತೆ ಭಕ್ತಿಶ್ರದ್ಧೆಯಿಂದೊಡ ಗೂಡಿ ನಿಷ್ಕಪಟಭಾವದಿಂದ ನನ್ನ ಮಂದಿರದ ಕೈಂಕರ್ಯ ಕೈಗೊಳ್ಳಲಿ. ಗುಡಿಸುವುದು, ಸಾರಿಸುವುದು, ರಂಗೋಲಿ ಯಿಡುವುದು ಮುಂತಾದುವನ್ನು ಮಾಡುತ್ತಾ, ಬಣ್ಣ-ಬಣ್ಣದ ಮಂಡಲಗಳನ್ನು ಅಲಂಕರಿಸಲಿ. ॥39॥
(ಶ್ಲೋಕ - 40)
ಮೂಲಮ್
ಅಮಾನಿತ್ವಮದಂಭಿತ್ವಂ ಕೃತಸ್ಯಾಪರಿಕೀರ್ತನಮ್ ।
ಅಪಿ ದೀಪಾವಲೋಕಂ ಮೇ ನೋಪಯುಂಜ್ಯಾನ್ನಿವೇದಿತಮ್ ॥
ಅನುವಾದ
ಅಭಿಮಾನ, ದಂಭಾಚಾರ ಇಲ್ಲದಿರಲಿ, ಜೊತೆಗೆ ತನ್ನ ಶುಭಕರ್ಮಗಳ ಬಗ್ಗೆ ‘ನಾನು ಇದನ್ನು ಮಾಡಿದೆ’ ಎಂದು ಹೇಳಬಾರದು. ಬೇರೆ ದೇವರಿಗೆ ತೋರಿಸಿದ ದೀಪ(ಆರತಿ)ವನ್ನು ನನ್ನ ಪೂಜೆಯಲ್ಲಿ ಉಪಯೋಗಿಸಬಾರದು. ಅರ್ಥಾತ್ ಬೇರೆಯೇ ದೀಪವನ್ನು ನನಗಾಗಿ ಬೆಳಗಿಸಬೇಕು. ॥40॥
(ಶ್ಲೋಕ - 41)
ಮೂಲಮ್
ಯದ್ಯದಿಷ್ಟತಮಂ ಲೋಕೇ ಯಚ್ಚಾತಿಪ್ರಿಯಮಾತ್ಮನಃ ।
ತತ್ತನ್ನಿವೇದಯೇನ್ಮಹ್ಯಂ ತದಾನಂತ್ಯಾಯ ಕಲ್ಪತೇ ॥
ಅನುವಾದ
ಪ್ರಪಂಚದಲ್ಲಿ ತನಗೆ ಎಲ್ಲಕ್ಕಿಂತ ಪ್ರಿಯವಾದ, ಅಭೀಷ್ಟವಾಗಿ ಕಂಡು ಬರುವ ವಸ್ತುವನ್ನು ನನಗೆ ಸಮರ್ಪಿಸಲಿ. ಹೀಗೆ ಮಾಡುವುದರಿಂದ ಆ ವಸ್ತುಗಳು ಅನಂತ ಫಲವನ್ನು ಕೊಡುವವು. ॥41॥
(ಶ್ಲೋಕ - 42)
ಮೂಲಮ್
ಸೂರ್ಯೋಗ್ನಿರ್ಬ್ರಾಹ್ಮಣೋ ಗಾವೋ ವೈಷ್ಣವಃ ಖಂ ಮರುಜ್ಜಲಮ್ ।
ಭೂರಾತ್ಮಾ ಸರ್ವಭೂತಾನಿ ಭದ್ರ ಪೂಜಾಪದಾನಿ ಮೇ ॥
ಅನುವಾದ
ಪುಣ್ಯಾತ್ಮನಾದ ಉದ್ಧವನೇ! ಸೂರ್ಯ, ಅಗ್ನಿ, ಬ್ರಾಹ್ಮಣ, ಗೋವು, ವೈಷ್ಣವ, ಆಕಾಶ, ವಾಯು, ಜಲ, ಪೃಥ್ವಿ, ಆತ್ಮಾ ಮತ್ತು ಸಮಸ್ತ ಪ್ರಾಣಿಗಳು ಇವೆಲ್ಲವೂ ನನ್ನ ಪೂಜಾಸ್ಥಾನಗಳಾಗಿವೆ. ॥42॥
(ಶ್ಲೋಕ - 43)
ಮೂಲಮ್
ಸೂರ್ಯೇ ತು ವಿದ್ಯಯಾ ತ್ರಯ್ಯಾ ಹವಿಷಾಗ್ನೌ ಯಜೇತ ಮಾಮ್ ।
ಆತಿಥ್ಯೇನ ತು ವಿಪ್ರಾಗ್ರ್ಯೇ ಗೋಷ್ವಂಗ ಯವಸಾದಿನಾ ॥
ಅನುವಾದ
ಪ್ರಿಯ ಉದ್ಧವಾ! ಋಗ್ವೇದ, ಯಜುರ್ವೇದ, ಸಾಮವೇದಗಳ ಮಂತ್ರಗಳಿಂದ ಸೂರ್ಯನಲ್ಲಿ ನನ್ನನ್ನು ಪೂಜಿಸಬೇಕು. ಹವನದ ಮೂಲಕ ಅಗ್ನಿಯಲ್ಲಿ, ಅತಿಥಿಯ ಮೂಲಕ ಶ್ರೇಷ್ಠಬ್ರಾಹ್ಮಣನಲ್ಲಿ, ಹಚ್ಚ-ಹಸಿರಾದ ಹುಲ್ಲಿನ ಮೂಲಕ ಗೋವಿನಲ್ಲಿ ನನ್ನನ್ನು ಪೂಜಿಸಬೇಕು. ॥43॥
(ಶ್ಲೋಕ - 44)
ಮೂಲಮ್
ವೈಷ್ಣವೇ ಬಂಧುಸತ್ಕೃತ್ಯಾ ಹೃದಿ ಖೇ ಧ್ಯಾನನಿಷ್ಠಯಾ ।
ವಾಯೌ ಮುಖ್ಯಧಿಯಾ ತೋಯೇ ದ್ರವ್ಯೈಸ್ತೋಯಪುರಸ್ಕೃತೈಃ ॥
ಅನುವಾದ
ವಿಷ್ಣುಭಕ್ತನನ್ನು ತನ್ನ ಸೋದರನಂತೆ ತಿಳಿದು ಅವನ ಆದರ-ಸತ್ಕಾರ ಮಾಡಬೇಕು. ನಿರಂತರ ಧ್ಯಾನದಲ್ಲೇ ತೊಡಗಿದ್ದು ಹೃದಯಾಕಾಶದಲ್ಲಿ ನನ್ನನ್ನು ಪೂಜಿಸಬೇಕು. ಮುಖ್ಯಪ್ರಾಣನೆಂದು ತಿಳಿದು ವಾಯುವಿನಲ್ಲಿ ಮತ್ತು ಪುಷ್ಪಾದಿ ಸಾಮಗ್ರಿಗಳಿಂದ ನೀರಿನಲ್ಲಿ ನಾರಾಯಣನಾದ ನನ್ನನ್ನು ಆರಾಧಿಸಬೇಕು. ॥44॥
(ಶ್ಲೋಕ - 45)
ಮೂಲಮ್
ಸ್ಥಂಡಿಲೇ ಮಂತ್ರಹೃದಯೈರ್ಭೋಗೈರಾತ್ಮಾನಮಾತ್ಮನಿ ।
ಕ್ಷೇತ್ರಜ್ಞಂ ಸರ್ವಭೂತೇಷು ಸಮತ್ವೇನ ಯಜೇತ ಮಾಮ್ ॥
ಅನುವಾದ
ರಹಸ್ಯಮಯ ಮಂತ್ರಗಳಿಂದ ವೇದೀ(ಸ್ಥಂಡಿಲ)ಯಲ್ಲಿ ಪೂಜಿಸಬೇಕು. ಭೋಗ ಪದಾರ್ಥಗಳನ್ನು ತನ್ನೊಳಗೇ ವಿರಾಜಮಾನನಾದ ಸರ್ವ ಭೂತಾತ್ಮಾ ಪ್ರಭುವೇ ಭೋಜನ ಮಾಡುತ್ತಿದ್ದಾನೆ. (ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹ ಮಾಶ್ರಿತಃ) ಎಂದು ಭಾವಿಸಿ ಊಟಮಾಡಬೇಕು. ಎಲ್ಲ ಪ್ರಾಣಿಗಳಲ್ಲಿಯೂ ಓರ್ವನೇ ಕ್ಷೇತ್ರಜ್ಞ ಆತ್ಮನು ಸಮಭಾವದಿಂದ ವ್ಯಾಪ್ತನಾಗಿದ್ದಾನೆ ಹೀಗೆ ತಿಳಿದು ಎಲ್ಲ ಪ್ರಾಣಿಗಳನ್ನು ನನ್ನ ಸ್ವರೂಪವೆಂದೇ ಅರಿತು ಅವರೊಂದಿಗೆ ತುಂಬು ಪ್ರೇಮ ಪೂರ್ಣವಾಗಿ ವ್ಯವಹರಿಸುತ್ತಾ ಪೂಜಿಸಬೇಕು. ॥45॥
(ಶ್ಲೋಕ - 46)
ಮೂಲಮ್
ಧಿಷ್ಣ್ಯೇಷ್ವೇಷ್ವಿತಿ ಮದ್ರೂಪಂ ಶಂಖಚಕ್ರಗದಾಂಬುಜೈಃ ।
ಯುಕ್ತಂ ಚತುರ್ಭುಜಂ ಶಾಂತಂ ಧ್ಯಾಯನ್ನರ್ಚೇತ್ ಸಮಾಹಿತಃ ॥
ಅನುವಾದ
ಇವೆಲ್ಲ ಸ್ಥಳಗಳಲ್ಲಿ ನನ್ನದೇ ಭಾವನೆಗೈದು ಧ್ಯಾನ ಮಾಡಬೇಕು. ಶಂಖ, ಚಕ್ರ, ಗದೆ, ಪದ್ಮ ಇವುಗಳನ್ನು ಧರಿಸಿದ ಚತುರ್ಭುಜ ಭಗವಾನ್ ವಿಷ್ಣುವು ನನ್ನ ಮುಂದೆ ವಿರಾಜಮಾನನಾಗಿದ್ದಾನೆ. ಅವನು ಸಂಪೂರ್ಣ ಶಾಂತಮೂರ್ತಿಯಾಗಿದ್ದಾನೆ. ಹೀಗೆ ಎಚ್ಚರಿಕೆಯಿಂದ ಭಗವಂತನನ್ನು ಮಾನಸಿಕ ರೀತಿಯಿಂದ ಪೂಜಿಸಬೇಕು. ॥46॥
(ಶ್ಲೋಕ - 47)
ಮೂಲಮ್
ಇಷ್ಟಾಪೂರ್ತೇನ ಮಾಮೇವಂ ಯೋ ಯಜೇತ ಸಮಾಹಿತಃ ।
ಲಭತೇ ಮಯಿ ಸದ್ಭಕ್ತಿಂ ಮತ್ಸ್ಮೃತಿಃ ಸಾಧುಸೇವಯಾ ॥
ಅನುವಾದ
ಈ ಪ್ರಕಾರ ಏಕಾಗ್ರ ಚಿತ್ತದಿಂದ ಯಜ್ಞ-ಯಾಗಾದಿ ‘ಇಷ್ಟ’ವೆಂದೂ ಮತ್ತು ಸಮಾಜದ ಉಪಯೋಗಕ್ಕಾಗಿ ಬರುವ ಧರ್ಮಶಾಲೆಗಳನ್ನು ಕಟ್ಟಿಸುವುದು, ಕೆರೆ-ಬಾವಿಗಳನ್ನು ನಿರ್ಮಿಸುವುದು ಮುಂತಾದ ‘ಪೂರ್ತ’ವೆಂದೂ ಇದೆಲ್ಲ ವನ್ನು ನನ್ನ ಪೂಜೆಯೆಂದೇ ತಿಳಿದು ಮಾಡುವ ಮನುಷ್ಯನಿಗೆ ನನ್ನ ಶ್ರೇಷ್ಠ ಭಕ್ತಿಯು ಪ್ರಾಪ್ತವಾಗುತ್ತದೆ. ಸಂತಪುರುಷರ ಸೇವೆಮಾಡುವುದರಿಂದ ನನ್ನ ಸ್ವರೂಪದ ಜ್ಞಾನವೂ ಉಂಟಾಗುತ್ತದೆ. ॥47॥
(ಶ್ಲೋಕ - 48)
ಮೂಲಮ್
ಪ್ರಾಯೇಣ ಭಕ್ತಿಯೋಗೇನ ಸತ್ಸಂಗೇನ ವಿನೋದ್ಧವ ।
ನೋಪಾಯೋ ವಿದ್ಯತೇ ಸಧ್ರ್ಯಙ್ ಪ್ರಾಯಣಂ ಹಿ ಸತಾಮಹಮ್ ॥
ಅನುವಾದ
ಪ್ರಿಯ ಉದ್ಧವನೇ! ಸತ್ಸಂಗ ಮತ್ತು ಭಕ್ತಿಯೋಗ ಇವೆರಡರ ಸಾಧನೆಗಳ ಅನುಷ್ಠಾನ ಮಾಡುತ್ತಾ ಇರಬೇಕೆಂಬುದೇ ನನ್ನ ನಿಶ್ಚಯವಾಗಿದೆ. ಪ್ರಾಯಶಃ ಇವೆರಡಲ್ಲದೆ ಸಂಸಾರ ಸಾಗರದಿಂದ ಪಾರಾಗಲು ಬೇರೆ ಯಾವ ಉಪಾಯವೂ ಇಲ್ಲ. ಏಕೆಂದರೆ ಸಂತ-ಮಹಾತ್ಮರ ಶ್ರೇಷ್ಠ ಆಶ್ರಯಸ್ಥಾನ ನಾನೇ ಆಗಿರುವೆನು. ॥48॥
(ಶ್ಲೋಕ - 49)
ಮೂಲಮ್
ಅಥೈತತ್ ಪರಮಂ ಗುಹ್ಯಂ ಶೃಣ್ವತೋ ಯದುನಂದನ ।
ಸುಗೋಪ್ಯಮಪಿ ವಕ್ಷ್ಯಾಮಿ ತ್ವಂ ಮೇ ಭೃತ್ಯಃ ಸುಹೃತ್ಸಖಾ ॥
ಅನುವಾದ
ಎಲೈ ಉದ್ಧವನೇ! ಈಗ ನಾನು ನಿನಗೆ ಇನ್ನೊಂದು ಅತ್ಯಂತ ಗೋಪ್ಯವಾದ, ಪರಮ ರಹಸ್ಯವಾದ ಮಾತನ್ನು ಹೇಳುವೆನು. ಏಕೆಂದರೆ ನೀನು ನನ್ನ ಪ್ರಿಯಸೇವಕನೂ, ಹಿತೈಷಿಯೂ, ಸುಹೃದನೂ, ಪ್ರೇಮಿಯೂ, ಸಖನೂ ಆಗಿರುವೆ. ಜೊತೆಗೆ ಕೇಳುವ ಇಚ್ಛುಕನೂ ಆಗಿರುವೆ. ॥49॥
ಅನುವಾದ (ಸಮಾಪ್ತಿಃ)
ಹನ್ನೊಂದನೆಯ ಅಧ್ಯಾಯವು ಮುಗಿಯಿತು. ॥11॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಏಕಾದಶೋಽಧ್ಯಾಯಃ ॥11॥