೧೦

[ಹತ್ತನೆಯ ಅಧ್ಯಾಯ]

ಭಾಗಸೂಚನಾ

ಅಸಾರವಾದ ಲೌಕಿಕ ಮತ್ತು ಪಾರಲೌಕಿಕವಾದ ಭೋಗಗಳ ನಿರೂಪಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಮಯೋದಿತೇಷ್ವವಹಿತಃ ಸ್ವಧರ್ಮೇಷು ಮದಾಶ್ರಯಃ ।
ವರ್ಣಾಶ್ರಮಕುಲಾಚಾರಮಕಾಮಾತ್ಮಾ ಸಮಾಚರೇತ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳುತ್ತಾನೆ — ಪ್ರಿಯ ಉದ್ಧವನೇ! ಸಾಧಕನಾದವನು ಎಲ್ಲ ರೀತಿಯಿಂದ ನನಗೆ ಶರಣಾಗಿ, ನನ್ನಿಂದ ಉಪದಿಷ್ಟವಾದ ಧರ್ಮಗಳನ್ನು ಜಾಗರೂಕತೆಯಿಂದ ಪಾಲನೆ ಮಾಡಬೇಕು. ನಿಷ್ಕಾಮ ಭಾವದಿಂದ ತಮ್ಮ ವರ್ಣ-ಆಶ್ರಮ ಹಾಗೂ ಕುಲಕ್ಕನುಸಾರ ಸದಾಚಾರವನ್ನು ಅನುಷ್ಠಾನ ಮಾಡಬೇಕು. ॥1॥

(ಶ್ಲೋಕ - 2)

ಮೂಲಮ್

ಅನ್ವಿಕ್ಷೇತ ವಿಶುದ್ಧಾತ್ಮಾ ದೇಹಿನಾಂ ವಿಷಯಾತ್ಮನಾಮ್ ।
ಗುಣೇಷು ತತ್ತ್ವ ಧ್ಯಾನೇನ ಸರ್ವಾರಂಭವಿಪರ್ಯಯಮ್ ॥

ಅನುವಾದ

ವಿಷಯಗಳಲ್ಲಿ ಮುಳುಗಿದ ಚಿತ್ತವುಳ್ಳ ಸಂಸಾರೀ ಜನರ ಎಲ್ಲ ಕರ್ಮಗಳ ಪರಿಣಾಮವು ವಿಪರೀತವೇ ಆಗುತ್ತದೆ. ಈ ಮಾತನ್ನು ಆಳವಾಗಿ ತಿಳಿದುಕೊಂಡು ಶುದ್ಧ ಅಂತಃಕರಣನಾಗಿ ಸಂಸಾರದಿಂದ ವಿಮುಖನಾಗಬೇಕು. ॥2॥

(ಶ್ಲೋಕ - 3)

ಮೂಲಮ್

ಸುಪ್ತಸ್ಯ ವಿಷಯಾಲೋಕೋ ಧ್ಯಾಯತೋ ವಾ ಮನೋರಥಃ ।
ನಾನಾತ್ಮಕತ್ವಾದ್ವಿಲಸ್ತಥಾ ಭೇದಾತ್ಮಧೀರ್ಗುಣೈಃ ॥

ಅನುವಾದ

ಮಲಗಿದ ಮನುಷ್ಯನು ಸ್ವಪ್ನಾವಸ್ಥೆಯಲಿ ವಿಷಯಗಳನ್ನು ಕಂಡು, ಎಚ್ಚರಗೊಂಡಾಗ ಅವನಿಗೆ ಅವುಗಳ ಮಿಥ್ಯತ್ವ ತಿಳಿದುಬರುತ್ತದೆ. ಹಾಗೆಯೇ ಜಾಗ್ರತ್ ಅವಸ್ಥೆಯಲ್ಲಿಯೂ ಮನಸ್ಸಿನಿಂದ ಮಾಡುವ ಸಂಕಲ್ಪ-ವಿಕಲ್ಪಗಳೆಲ್ಲವೂ ಮಿಥ್ಯೆಯೇ ಆಗಿದೆ. ಈ ನಾನಾತ್ವದ ಭ್ರಮೆಯು ಅಜ್ಞಾನದ ಕಾರಣದಿಂದಲೇ ಇದೆ. ॥3॥

(ಶ್ಲೋಕ - 4)

ಮೂಲಮ್

ನಿವೃತ್ತಂ ಕರ್ಮ ಸೇವೇತ ಪ್ರವೃತ್ತಂ ಮತ್ಪರಸ್ತ್ಯಜೇತ್ ।
ಜಿಜ್ಞಾಸಾಯಾಂ ಸಂಪ್ರವೃತ್ತೋ ನಾದ್ರಿಯೇತ್ಕರ್ಮಚೋದನಾಮ್ ॥

ಅನುವಾದ

ಮನುಷ್ಯನು ನಿಷ್ಕಾಮ ಕರ್ಮವನ್ನು ಆಚರಿಸಬೇಕು. ಎಲ್ಲ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ ಬಿಡಬೇಕು. ಸಕಾಮ ಕರ್ಮವನ್ನು ಎಂದೂ ಮಾಡಬಾರದು. ಆತ್ಮಜ್ಞಾನದ ಉತ್ಕಟ ಇಚ್ಛೆ ಇದ್ದರೆ ಕರ್ಮಸಂಬಂಧೀ ವಿಧಾನವನ್ನು ಆದರಿಸಬಾರದು. ॥4॥

(ಶ್ಲೋಕ - 5)

ಮೂಲಮ್

ಯಮಾನಭೀಕ್ಷ್ಣಂ ಸೇವೇತ ನಿಯಮಾನ್ಮತ್ಪರಃ ಕ್ವಚಿತ್ ।
ಮದಭಿಜ್ಞಂ ಗುರುಂ ಶಾಂತಮುಪಾಸೀತ ಮದಾತ್ಮಕಮ್ ॥

(ಶ್ಲೋಕ - 6)

ಮೂಲಮ್

ಅಮಾನ್ಯಮತ್ಸರೋ ದಕ್ಷೋ ನಿರ್ಮಮೋ ದೃಢಸೌಹೃದಃ ।
ಅಸತ್ವರೋರ್ಥಜಿಜ್ಞಾಸುರನಸೂಯುರಮೋಘವಾಕ್ ॥

ಅನುವಾದ

ಯಮಗಳನ್ನು ಅಂದರೆ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಇವನ್ನು ಪೂರ್ಣ ರೂಪದಿಂದ ಪಾಲಿಸಲಿ. ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ ಈ ನಿಯಮಗಳನ್ನೂ ಕೂಡ ಯಥಾಸಾಧ್ಯ ಪಾಲಿಸಲಿ. ಪರಮಾತ್ಮನಾದ ನನ್ನನ್ನು ತಿಳಿದಿರುವ ಶಾಂತಸ್ವರೂಪೀ ಗುರುವಿನ ಬಳಿಗೆ ಹೋಗಿ, ಗುರುವನ್ನು ನನ್ನ ಸ್ವರೂಪವೆಂದೇ ತಿಳಿಯಲಿ. ಯಾವ ರೀತಿಯ ಅಭಿಮಾನವನ್ನೂ ಪಡದಿರಲಿ. ಯಾವುದೇ ಮತ್ಸರದ ಭಾವ ಇರಿಸದಿರಲಿ. ಎಲ್ಲ ವಿಧದಿಂದ ಕುಶಲನಾಗಲಿ. ಮಮತಾ ರಹಿತನಾಗಲಿ. ಗುರುವಿನಲ್ಲಿ ಮತ್ತು ನನ್ನಲ್ಲಿ ಹೃತ್ಪೂರ್ವಕವಾಗಿ ಅನುರಾಗವಿರಲಿ. ತತ್ತ್ವದ ಜಿಜ್ಞಾಸುವಿನಲ್ಲಿ ಯಾವುದೇ ಬೇಸರಿಕೆ ಇರದಿರಲಿ. ಯಾರೊಂದಿಗೂ ದೋಷದೃಷ್ಟಿ ಇರದಿರಲಿ. ವ್ಯರ್ಥ ಹಾಗೂ ಅಸತ್ಯ ಭಾಷಣದಿಂದ ದೂರವಿರಲಿ. ॥5-6॥

(ಶ್ಲೋಕ - 7)

ಮೂಲಮ್

ಜಾಯಾಪತ್ಯಗೃಹಕ್ಷೇತ್ರಸ್ವಜನದ್ರವಿಣಾದಿಷು ।
ಉದಾಸೀನಃ ಸಮಂ ಪಶ್ಯನ್ಸರ್ವೇಷ್ವರ್ಥಮಿವಾತ್ಮನಃ ॥

ಅನುವಾದ

ಈ ಪ್ರಕಾರ ಅಭ್ಯಾಸ ಮಾಡುತ್ತಾ ಮಾಡುತ್ತಾ ಸಮತೆಯಲ್ಲಿ ಅವನ ಸ್ಥಿತಿ ಉಂಟಾದಾಗ ಪತ್ನೀ ಪುತ್ರ, ಮನೆ, ಭೂಮಿ, ಬಂಧು-ಬಾಂಧವರು, ಧನ ಮುಂತಾದವುಗಳಲ್ಲಿ ಎಲ್ಲಿಯೂ ಅವನಿಗೆ ಆಸಕ್ತಿಯು ಉಳಿಯುವುದಿಲ್ಲ. ಮತ್ತೆ ಅವನು ತನ್ನ ಪದಾರ್ಥದಂತೆಯೇ ಎಲ್ಲದರಲ್ಲಿ ಸಮಭಾವವನ್ನಿಡುತ್ತಾ, ಎಲ್ಲರಿಂದ ಪೂರ್ಣವಾಗಿ ಉದಾಸೀನನಾಗಿ ಹೋಗುತ್ತಾನೆ. ॥7॥

(ಶ್ಲೋಕ - 8)

ಮೂಲಮ್

ವಿಲಕ್ಷಣಃ ಸ್ಥೂಲಸೂಕ್ಷ್ಮಾದ್ದೇಹಾದಾತ್ಮೇಕ್ಷಿತಾ ಸ್ವದೃಕ್ ।
ಯಥಾಗ್ನಿರ್ದಾರುಣೋ ದಾಹ್ಯಾದ್ದಾಹಕೋನ್ಯಃ ಪ್ರಕಾಶಕಃ ॥

ಅನುವಾದ

ಆತ್ಮವು ಸ್ವಯಂ ಪ್ರಕಾಶಸ್ವರೂಪವಾಗಿದ್ದು, ಎಲ್ಲರ ಸಾಕ್ಷಿಯಾಗಿದೆ. ಸ್ಥೂಲ ಮತ್ತು ಸೂಕ್ಷ್ಮ ಇವೆರಡೂ ದೇಹಗಳಿಂದ ಖಂಡಿತವಾಗಿ ಭಿನ್ನನಾಗಿದ್ದಾನೆ. ಉರಿಯುವ ಕಟ್ಟಿಗೆಗಿಂತ ಅದನ್ನು ಸುಡುತ್ತಿರುವ ಅಗ್ನಿಯು ಭಿನ್ನವೇ ಆಗಿದೆ. ಹಾಗೆಯೇ ಇವೆಲ್ಲ ಶರೀರಗಳನ್ನು ಪ್ರಕಾಶಿಸುವ ಆತ್ಮನೂ ಕೂಡ ಈ ಶರೀರಗಳಿಂದ ಭಿನ್ನವಾಗಿದೆ. ॥8॥

(ಶ್ಲೋಕ - 9)

ಮೂಲಮ್

ನಿರೋಧೋತ್ಪತ್ತ್ಯಣುಬೃಹನ್ನಾನಾತ್ವಂ ತತ್ಕೃತಾನ್ಗುಣಾನ್ ।
ಅಂತಃಪ್ರವಿಷ್ಟ ಆಧತ್ತ ಏವಂ ದೇಹಗುಣಾನ್ ಪರಃ ॥

ಅನುವಾದ

ಕಟ್ಟಿಗೆಯ ಸಂಬಂಧದ ಕಾರಣ ಅಗ್ನಿಯು ಕಟ್ಟಿಗೆಯ ಆಕಾರಕ್ಕನುಸಾರ ಚಿಕ್ಕದಾಗಿ ದೊಡ್ಡದಾಗಿ ಕಾಣುತ್ತದೆ. ಕಟ್ಟಿಗೆಯು ಪೂರ್ಣವಾಗಿ ಸುಟ್ಟು ಹೋದಾಗ ಅಗ್ನಿಯು ಶಾಂತವಾಗುವುದು ಮತ್ತು ಉರಿದಾಗ ಕಾಣಿಸಿಕೊಳ್ಳುವುದು ಮುಂತಾಗಿ ಕಂಡು ಬರುತ್ತದೆ. ಆದರೆ ವಾಸ್ತವವಾಗಿ ಕಟ್ಟಿಗೆಯಿಂದ ಅಗ್ನಿಯು ಬೇರೆಯೇ ಆಗಿದೆ. ಹೀಗೆಯೇ ಆತ್ಮನೂ ಕೂಡ ದೇಹದ ಗುಣಗಳನ್ನು ಧರಿಸಿದಾಗ ದೇಹದ ವಿಕಾರಗಳು ಅದರಲ್ಲಿ ಆರೋಪಿತವಾಗುತ್ತದೆ. ॥9॥

(ಶ್ಲೋಕ - 10)

ಮೂಲಮ್

ಯೋಸೌ ಗುಣೈರ್ವಿರಚಿತೋ ದೇಹೋಯಂ ಪುರುಷಸ್ಯ ಹಿ ।
ಸಂಸಾರಸ್ತನ್ನಿಬಂಧೋಯಂ ಪುಂಸೋ ವಿದ್ಯಾಚ್ಛಿದಾತ್ಮನಃ ॥

ಅನುವಾದ

ಪುರುಷನ ಈ ಶರೀರವು ತ್ರಿಗುಣಗಳ ರಚನೆಯಾಗಿದೆ. ಈ ಗುಣಗಳಲ್ಲಿ ಅಹಂತೆ-ಮಮತೆಯ ಕಾರಣವೇ ಅವನು ಬಂಧಿತನಾಗಿದ್ದಾನೆ. ಅದು ಆತ್ಮನ ಜ್ಞಾನವನ್ನು ಮುಚ್ಚಿ ಬಿಡುತ್ತದೆ. ॥10॥

(ಶ್ಲೋಕ - 11)

ಮೂಲಮ್

ತಸ್ಮಾಜ್ಜಿಜ್ಞಾಸಯಾತ್ಮಾನಮಾತ್ಮಸ್ಥಂ ಕೇವಲಂ ಪರಮ್ ।
ಸಂಗಮ್ಯ ನಿರಸೇದೇತದ್ವಸ್ತುಬುದ್ಧಿಂ ಯಥಾಕ್ರಮಮ್ ॥

ಅನುವಾದ

ಆದ್ದರಿಂದ ತತ್ತ್ವವನ್ನು ತಿಳಿಯುವ ಇಚ್ಛೆಯನ್ನಿರಿಸಿಕೊಳ್ಳಬೇಕು. ಅದರಿಂದ ಆತ್ಮಸ್ವರೂಪದ ಬೋಧವಾಗುತ್ತದೆ. ಈ ಆತ್ಮನು ತನ್ನಲ್ಲೇ ಸ್ಥಿತನಾಗಿದ್ದಾನೆ, ಕೇವಲನಾಗಿದ್ದಾನೆ, ಶ್ರೇಷ್ಠನಾಗಿದ್ದಾನೆ. ಇದನ್ನು ಅರಿತುಕೊಂಡ ಬಳಿಕ ಅನಾತ್ಮ ಪದಾರ್ಥಗಳಲ್ಲಿ ಇರುವ ಸತ್ಯತೆಯ ಬುದ್ಧಿಯು ಕ್ರಮಶಃ ದೂರವಾಗುತ್ತಾ ಹೋಗುತ್ತದೆ. ॥11॥

(ಶ್ಲೋಕ - 12)

ಮೂಲಮ್

ಆಚಾರ್ಯೋರಣಿರಾದ್ಯಃ ಸ್ಯಾದಂತೇವಾಸ್ಯುತ್ತರಾರಣಿಃ ।
ತತ್ಸಂಧಾನಂ ಪ್ರವಚನಂ ವಿದ್ಯಾಸಂಧಿಃ ಸುಖಾವಹಃ ॥

ಅನುವಾದ

ಈ ವಿದ್ಯೆಯ ಜ್ಞಾನವನ್ನು ಪಡೆಯಲು ಗುರುವನ್ನೇ ಆಶ್ರಯಿಸಬೇಕು. ಅವರ ಬಳಿ ವಾಸಿಸಬೇಕು. ಅರಣಿಯನ್ನು ಕಡೆದು ಯಜ್ಞೇಶ್ವರನನ್ನು ಪ್ರಕಟಗೊಳಿಸುವಂತೆ ಇಲ್ಲಿಯೂ ಆಚಾರ್ಯನೇ ಅಧರಾರಣಿ, (ಕೆಳಗಿನದು) ಶಿಷ್ಯನೇ ಉತ್ತರಾರಣಿ (ಮೇಲಿನದು). ಆಚಾರ್ಯರ ಪ್ರವಚನವೇ ಅದರ ಮಂಥನದಂಡ. ಅದರಿಂದ ವಿದ್ಯಾರೂಪೀ ಅಗ್ನಿಯು ಪ್ರಕಟಗೊಳ್ಳುತ್ತದೆ. ಅದು ಅಜ್ಞಾನವನ್ನು ನಾಶಮಾಡಿ, ಪರಮಾನಂದವನ್ನು ಕರುಣಿಸುತ್ತದೆ. ॥12॥

(ಶ್ಲೋಕ - 13)

ಮೂಲಮ್

ವೈಶಾರದೀ ಸಾತಿವಿಶುದ್ಧಬುದ್ಧಿ-
ರ್ಧುನೋತಿ ಮಾಯಾಂ ಗುಣಸಂಪ್ರಸೂತಾಮ್ ।
ಗುಣಾಂಶ್ಚ ಸಂದಹ್ಯ ಯದಾತ್ಮಮೇತತ್
ಸ್ವಯಂ ಚ ಶಾಮ್ಯತ್ಯಸಮಿದ್ಯಥಾಗ್ನಿಃ ॥

ಅನುವಾದ

ಈ ಪ್ರಕಾರ ಅಭ್ಯಾಸಮಾಡುತ್ತಾ-ಮಾಡುತ್ತಾ ಬುದ್ಧಿಯು ಸೂಕ್ಷ್ಮವಾದಾಗ ಅತ್ಯಂತ ಶುದ್ಧವಾದ ಆ ಬುದ್ಧಿಯು ಮಾಯೆಯಿಂದ ಉಂಟಾಗುವ ಎಲ್ಲ ಗುಣಗಳನ್ನು ಭಸ್ಮಮಾಡಿಬಿಡುತ್ತದೆ. ಗುಣಗಳು ಭಸ್ಮವಾದಾಗ ಗುಣಗಳಿಂದ ಉಂಟಾದ ಈ ವಿಶ್ವವು ಅವನಿಗೆ ಉಳಿಯುವುದಿಲ್ಲ. ಅಗ್ನಿಯು ಇಂಧನಗಳನ್ನು ಭಸ್ಮಮಾಡಿ ಶಾಂತವಾಗುವಂತೆ, ಗುಣಗಳನ್ನು ಸುಟ್ಟು ಮತ್ತೆ ಆ ಬುದ್ಧಿಯು ಶಾಂತವಾಗುತ್ತದೆ.* ॥13॥

ಟಿಪ್ಪನೀ
  • ಸ್ವಯಂಪ್ರಕಾಶ ಜ್ಞಾನಸ್ವರೂಪೀ ಆತ್ಮನು ನಿತ್ಯನೂ, ಏಕನೂ ಆಗಿದ್ದಾನೆ ಎಂಬುದು ಸ್ಪಷ್ಟವಾಯಿತು. ಕರ್ತೃತ್ವ, ಭೋಕ್ತೃತ್ವ ಮುಂತಾದ ಧರ್ಮಗಳು ದೇಹಾಭಿಮಾನದ ಕಾರಣವಾಗಿವೆ. ಆತ್ಮನಲ್ಲದೆ ಇರುವದೆಲ್ಲವೂ ಅನಿತ್ಯವೂ, ಮಾಯಾಮಯವಾಗಿವೆ. ಅದಕ್ಕಾಗಿ ಆತ್ಮಜ್ಞಾನ ಉಂಟಾಗುತ್ತಲೇ ಸಮಸ್ತ ವಿಪತ್ತುಗಳಿಂದ ಮುಕ್ತಿ ದೊರೆಯುತ್ತದೆ.

(ಶ್ಲೋಕ - 14)

ಮೂಲಮ್

ಅಥೈಷಾಂ ಕರ್ಮಕರ್ತೃಣಾಂ
ಭೋಕ್ತ ೃಣಾಂ ಸುಖದುಃಖಯೋಃ ।
ನಾನಾತ್ವಮಥ ನಿತ್ಯತ್ವಂ
ಲೋಕಕಾಲಾಗಮಾತ್ಮನಾಮ್ ॥

(ಶ್ಲೋಕ - 15)

ಮೂಲಮ್

ಮನ್ಯಸೇ ಸರ್ವಭಾವಾನಾಂ ಸಂಸ್ಥಾ ಹ್ಯೌತ್ಪತ್ತಿಕೀ ಯಥಾ ।
ತತ್ತದಾಕೃತಿಭೇದೇನ ಜಾಯತೇ ಭಿದ್ಯತೇ ಚ ಧೀಃ ॥

(ಶ್ಲೋಕ - 16)

ಮೂಲಮ್

ಏವಮಪ್ಯಂಗ ಸರ್ವೇಷಾಂ ದೇಹಿನಾಂ ದೇಹಯೋಗತಃ ।
ಕಾಲಾವಯವತಃ ಸಂತಿ ಭಾವಾ ಜನ್ಮಾದಯೋಸಕೃತ್ ॥

(ಶ್ಲೋಕ - 17)

ಮೂಲಮ್

ಅತ್ರಾಪಿ ಕರ್ಮಣಾಂ ಕರ್ತುರಸ್ವಾತಂತ್ರ್ಯಂ ಚ ಲಕ್ಷ್ಯತೇ ।
ಭೋಕ್ತುಶ್ಚ ದುಃಖಸುಖಯೋಃ ಕೋ ನ್ವರ್ಥೋ ವಿವಶಂ ಭಜೇತ್ ॥

ಅನುವಾದ

ಕರ್ಮ ಮಾಡುವವರಲ್ಲಿ ಭಿನ್ನತೆ ಇದೆ ಎಂದು ಕದಾಚಿತ್ ಒಪ್ಪಿಕೊಂಡರೆ, ಅದಕ್ಕನುಸಾರ ಅವರ ಸುಖ-ದುಃಖಾದಿ ಫಲಗಳಲ್ಲಿಯೂ ಭಿನ್ನತೆ ಇದೆ ಹಾಗೂ ಅವರ ಕರ್ಮಗಳನುಸಾರ ಅವರ ಫಲಸ್ವರೂಪ ಸಿಗಬಹುದಾದ ಲೋಕ, ಅವುಗಳ ಭೋಗದ ಸಮಯ, ಆಯಾ ಕರ್ಮಗಳನ್ನು ವಿಧಾನ ಮಾಡುವ ಶಾಸ್ತ್ರಗಳು, ಅದರಿಂದ ದೊರೆಯುವ ಶರೀರ ಇವೆಲ್ಲವೂ ಭಿನ್ನ-ಭಿನ್ನವಾಗಿವೆ. ಈ ಭಿನ್ನತೆಗೆ ಮಾನ್ಯತೆ ಕೊಟ್ಟರೆ ಹಾಗೂ ಎಲ್ಲ ವಸ್ತು, ಪ್ರಾಣೀ, ಪದಾರ್ಥ, ಪ್ರವಾಹ ರೂಪದಿಂದ ಉತ್ಪನ್ನವಾಗುತ್ತವೆ ಮತ್ತು ನಾಶವಾಗುತ್ತವೆ ಎಂದು ಒಪ್ಪಿಕೊಂಡರೆ ಇದರಿಂದ ಬುದ್ಧಿಯಲ್ಲಿ ನಾನಾತ್ವದ ಭ್ರಮೆಯೇ ಉಪಸ್ಥಿತವಾಗುತ್ತದೆ. ಏಕೆಂದರೆ, ಮನುಷ್ಯನು ಯಾವ ರೀತಿಯ ಸತ್ತ್ವಾದಿ ದೇವತೆಗಳನ್ನು ಆರಾಧಿಸುತ್ತಾನೋ, ಅವರ ಆಕೃತಿಗನುಸಾರ ಸತ್ತ್ವಾದಿ ಗುಣಗಳ ತಾರತಮ್ಯದಿಂದ ಅವನ ಬುದ್ಧಿಯೂ ಅಂತಹ ಗುಣ ಗಳಿಂದಲೇ ಕೂಡಿರುತ್ತದೆ. ಆದರೆ ಇವೆಲ್ಲವೂ ದೇಹಾಭಿಮಾನೀ ಜೀವರಿಗೆ ದೇಹದೊಂದಿಗೆ ಸಂಬಂಧ ಬೆಳೆಸುವುದೇ ಆಗಿದೆ. ಕಾಲದ ಪ್ರವಾಹದಿಂದ ಎಲ್ಲ ಪ್ರಾಣಿ, ಪದಾರ್ಥಗಳು ಪ್ರತಿಕ್ಷಣ ವಿನಾಶದತ್ತ ಸಾಗುತ್ತಿವೆ. ಕರ್ಮಮಾಡುವ ಜೀವಿಯೂ ಸ್ವತಂತ್ರನಲ್ಲ. ಅವನು ಸುಖ-ದುಃಖದ ಭೋಗದಲ್ಲಿಯೂ ಪರತಂತ್ರನಾಗಿದ್ದಾನೆ. ಪರತಂತ್ರನಲ್ಲದಿದ್ದರೆ ವಿವಶನಾಗಿ ಯಾರು ದುಃಖವನ್ನು ಅನುಭವಿಸಲು ಬಯಸುವನು? ಎಲ್ಲರೂ ಸುಖವನ್ನೇ ಬಯಸುವರು. ॥14-17॥

(ಶ್ಲೋಕ - 18)

ಮೂಲಮ್

ನ ದೇಹಿನಾಂ ಸುಖಂ ಕಿಂಚಿದ್ವಿದ್ಯತೇ ವಿದುಷಾಮಪಿ ।
ತಥಾ ಚ ದುಃಖಂ ಮೂಢಾನಾಂ ವೃಥಾಹಂಕರಣಂ ಪರಮ್ ॥

(ಶ್ಲೋಕ - 19)

ಮೂಲಮ್

ಯದಿ ಪ್ರಾಪ್ತಿಂ ವಿಘಾತಂ ಚ ಜಾನಂತಿ ಸುಖದುಃಖಯೋಃ ।
ತೇಪ್ಯದ್ಧಾ ನ ವಿದುರ್ಯೋಗಂ ಮೃತ್ಯುರ್ನ ಪ್ರಭವೇದ್ಯಥಾ ॥

ಅನುವಾದ

ವಿದ್ವಾಂಸನಾದರೂ ಕೂಡಾ ಸುಖಿಯಾಗಿಲ್ಲ ಎಂಬುದನ್ನು ನೋಡಲಾಗುತ್ತದೆ. ಹಾಗೆಯೇ ಮೂಢರಾವರೂ ಕೂಡ ದುಃಖಿಗಳಾಗಿಲ್ಲ. ಇಂತಹ ಸ್ಥಿತಿಯಲ್ಲಿ ಅಹಂಕಾರ ಮಾಡುವುದು ವ್ಯರ್ಥವಾಗಿದೆ. ಸುಖ-ದುಃಖದ ಪ್ರಾಪ್ತಿ ಹಾಗೂ ಅದರ ನಾಶ ಹೇಗಾದೀತು ಎಂದು ತಿಳಿದುಕೊಂಡರೂ ಮೃತ್ಯುವನ್ನು ಎಂದು ಬಂದೀತು ಎಂಬುದಂತೂ ತಿಳಿಯಲಾಗುವುದಿಲ್ಲ. ಮೃತ್ಯುವು ಹೇಗೆ ಪರಿಹರಿಸಬಹುದು, ಇದೂ ಕೂಡ ಯಾರು ತಿಳಿಯಲಾರರು. ॥18-19॥

(ಶ್ಲೋಕ - 20)

ಮೂಲಮ್

ಕೋ ನ್ವರ್ಥಃ ಸುಖಯತ್ಯೇನಂ ಕಾಮೋ ವಾ ಮೃತ್ಯುರಂತಿಕೇ ।
ಆಘಾತಂ ನೀಯಮಾನಸ್ಯ ವಧ್ಯಸ್ಯೇವ ನ ತುಷ್ಟಿದಃ ॥

ಅನುವಾದ

ಯಾರಿಗಾದರೂ ನೇಣುಶಿಕ್ಷೆಯಾಗಿ ಸಾಯುವವನೆಂದಾದರೆ ಅವನಿಗೆ ಯಾವುದೇ ಭೋಗ- ಸಾಮಗ್ರಿಯು ಸಂತುಷ್ಟಪಡಿಸಲಾರದು. ಹಾಗೆಯೇ ಮೃತ್ಯುವಾದರೋ ಪ್ರತಿಯೋರ್ವ ಮನುಷ್ಯನ ತಲೆಯ ಮೇಲೆ ಕುಣಿಯುತ್ತಿದೆ ಎಂದಾದರೆ ಯಾವ ವಸ್ತುವೂ ಈ ಮರಣ ಧರ್ಮಿಯನ್ನು ಹೇಗೆ ಸುಖಿಯಾಗಿಸಬಲ್ಲವು? ॥20॥

(ಶ್ಲೋಕ - 21)

ಮೂಲಮ್

ಶ್ರುತಂ ಚ ದೃಷ್ಟವದ್ದುಷ್ಟಂ ಸ್ಪರ್ಧಾಸೂಯಾತ್ಯಯವ್ಯಯೈಃ ।
ಬಹ್ವಂತರಾಯಕಾಮತ್ವಾತ್ ಕೃಷಿವಚ್ಚಾಪಿ ನಿಷ್ಫಲಮ್ ॥

ಅನುವಾದ

ಈ ಲೋಕದಂತೆಯೇ ಪರಲೋಕಗಳೂ ದೋಷಯುಕ್ತವೇ ಆಗಿವೆ. ಅಲ್ಲಿಯೂ ಸ್ಪರ್ಧೆ, ಅಸೂಯೆ, ನಿಧಾನವಾಗಿ ಕ್ಷೀಣವಾಗುವುದು ಮತ್ತು ನಾಶವಾಗುವುದು ಇವೆಲ್ಲವೂ ಇವೆ. ಪುಣ್ಯವು ಮುಗಿದಾಗ ಅಲ್ಲಿಂದಲೂ ಪತನವಿದ್ದೇ ಇದೆ. ರೈತನು ಪೈರನ್ನು ಬೆಳೆಸುತ್ತಾನೆ, ಆದರೆ ಅದು ಅತಿವೃಷ್ಟಿ, ಅನಾವೃಷ್ಟಿ ಮುಂತಾದ ಈತಿಬಾಧೆಗಳಿಂದ ನಾಶವಾಗಿ ಹೋಗುತ್ತದೆ. ಹಾಗೆಯೇ ಸ್ವರ್ಗಾದಿ ಕಾಮನೆಯಿಂದ ಮನುಷ್ಯನು ಮಾಡುವ ಪ್ರಯಾಸಗಳಲ್ಲಿಯೂ ಅನೇಕ ರೀತಿಯ ವಿಘ್ನಗಳು ಎದುರಾಗುತ್ತವೆ. ಅದರಿಂದ ಅವೂ ನಾಶವಾಗುತ್ತವೆ. ॥21॥

(ಶ್ಲೋಕ - 22)

ಮೂಲಮ್

ಅಂತರಾಯೈರವಿಹತೋ ಯದಿ ಧರ್ಮಃ ಸ್ವನುಷ್ಠಿತಃ ।
ತೇನಾಪಿ ನಿರ್ಜಿತಂ ಸ್ಥಾನಂ ಯಥಾ ಗಚ್ಛತಿ ತಚ್ಛಣು ॥

ಅನುವಾದ

ಒಂದೊಮ್ಮೆ ನಿರ್ವಿಘ್ನತೆಯಿಂದ ಚೆನ್ನಾಗಿ ಯಜ್ಞಾದಿ ಅನುಷ್ಠಾನವು ಸಾಂಗವಾಗಿ ನಡೆದು, ಅವನು ಊರ್ಧ್ವಲೋಕವನ್ನು ಪಡೆದುಕೊಂಡರೂ ಅವನ ಮುಂದಿನ ಗತಿಯ ಮಾತನ್ನು ಕೇಳು. ॥22॥

(ಶ್ಲೋಕ - 23)

ಮೂಲಮ್

ಇಷ್ಟ್ವೇಹ ದೇವತಾ ಯಜ್ಞೈಃ ಸ್ವರ್ಲೋಕಂ ಯಾತಿ ಯಾಜ್ಞಿಕಃ ।
ಭುಂಜೀತ ದೇವವತ್ತತ್ರ ಭೋಗಾನ್ ದಿವ್ಯಾನ್ ನಿಜಾರ್ಜಿತಾನ್ ॥

ಅನುವಾದ

ಯಜ್ಞ ಮಾಡುವ ಮನುಷ್ಯನು ಯಜ್ಞದ ಮೂಲಕ ದೇವತೆಗಳನ್ನು ಆರಾಧಿಸಿ ಸ್ವರ್ಗಕ್ಕೆ ಹೋಗುತ್ತಾನೆ ಮತ್ತು ಅಲ್ಲಿ ತನ್ನ ಪುಣ್ಯಕರ್ಮಗಳ ಮೂಲಕ ಗಳಿಸಿದ ದಿವ್ಯ ಭೋಗಗಳನ್ನು ದೇವತೆಗಳಂತೆ ಭೋಗಿಸುತ್ತಾನೆ. ॥23॥

(ಶ್ಲೋಕ - 24)

ಮೂಲಮ್

ಸ್ವಪುಣ್ಯೋಪಚಿತೇ ಶುಭ್ರೇ ವಿಮಾನ ಉಪಗೀಯತೇ ।
ಗಂಧರ್ವೈರ್ವಿಹರನ್ ಮಧ್ಯೇ ದೇವೀನಾಂ ಹೃದ್ಯವೇಷಧೃಕ್ ॥

ಅನುವಾದ

ಅವನಿಗೆ ಅವನ ಪುಣ್ಯಗಳನುಸಾರ ಒಂದು ಹೊಳೆಯುವ ವಿಮಾನ ದೊರೆಯುತ್ತದೆ ಮತ್ತು ಅದರ ಮೂಲಕ ಸುರ-ಸುಂದರಿಯರೊಂದಿಗೆ ವಿಹರಿಸುತ್ತಾನೆ. ಗಂಧರ್ವರು ಅವನ ಗುಣಗಳನ್ನು ಗಾನಮಾಡುತ್ತಾರೆ. ಅವನ ರೂಪಲಾವಣ್ಯವನ್ನು ನೋಡಿ ಬೇರೆಯವರ ಮನಸ್ಸು ಆಕರ್ಷಿತವಾಗುತ್ತದೆ. ॥24॥

(ಶ್ಲೋಕ - 25)

ಮೂಲಮ್

ಸೀಭಿಃ ಕಾಮಗಯಾನೇನ ಕಿಂಕಿಣೀಜಾಲಮಾಲಿನಾ ।
ಕ್ರೀಡನ್ ನ ವೇದಾತ್ಮಪಾತಂ ಸುರಾಕ್ರೀಡೇಷು ನಿರ್ವೃತಃ ॥

ಅನುವಾದ

ಅವನ ವಿಮಾನವು ಅವನು ಬಯಸಿದಲ್ಲಿಗೆ ಕೊಂಡು ಹೋಗುತ್ತದೆ. ಅದರ ಘಂಟೆಗಳ ಧ್ವನಿಗಳು ಎಲ್ಲ ದಿಕ್ಕುಗಳನ್ನು ಪ್ರತಿಧ್ವನಿಸುತ್ತವೆ. ಅವನು ಅಪ್ಸರೆಯರೊಂದಿಗೆ ನಂದನವನ ಮುಂತಾದ ದೇವತೆಗಳ ವಿಹಾರ ಸ್ಥಳಗಳಲ್ಲಿ ಕ್ರೀಡಿಸುತ್ತಾ ಇರುವಾಗ ಅವನಿಗೆ ಈಗ ನನ್ನ ಪುಣ್ಯವು ಮುಗಿದುಹೋದೀತು ಹಾಗೂ ನಾನು ಇಲ್ಲಿಂದ ತಳ್ಳಲ್ಪಡುವೆನೆಂಬ ಮಾತಿನ ಅರಿವು ಕೂಡ ಇರದಷ್ಟು ಮೈಮರೆಯುತ್ತಾನೆ. ॥25॥

(ಶ್ಲೋಕ - 26)

ಮೂಲಮ್

ತಾವತ್ಪ್ರಮೋದತೇ ಸ್ವರ್ಗೇ ಯಾವತ್ಪುಣ್ಯಂ ಸಮಾಪ್ಯತೇ ।
ಕ್ಷೀಣಪುಣ್ಯಃ ಪತತ್ಯರ್ವಾಗನಿಚ್ಛನ್ ಕಾಲಚಾಲಿತಃ ॥

ಅನುವಾದ

ಅವನ ಪುಣ್ಯಗಳು ಶೇಷವಾಗಿರುವತನಕ ಅವನು ಸ್ವರ್ಗದಲ್ಲಿ ಸಂತೋಷ ಪಡುತ್ತಾನೆ. ಪುಣ್ಯವೂ ಕ್ಷೀಣವಾಗುತ್ತಲೇ ಇಚ್ಛೆ ಇಲ್ಲದಿದ್ದರೂ ಅವನನ್ನು ಕಾಲದಮೂಲಕ ಕೆಳಗೆ ತಳ್ಳಲ್ಪಡುತ್ತಾನೆ. ॥26॥

(ಶ್ಲೋಕ - 27)

ಮೂಲಮ್

ಯದ್ಯಧರ್ಮರತಃ ಸಂಗಾದಸತಾಂ ವಾಜಿತೇಂದ್ರಿಯಃ ।
ಕಾಮಾತ್ಮಾ ಕೃಪಣೋ ಲುಬ್ಧಃ ಸೈಣೋ ಭೂತವಿಹಿಂಸಕಃ ॥

(ಶ್ಲೋಕ - 28)

ಮೂಲಮ್

ಪಶೂನವಿಧಿನಾಲಭ್ಯ ಪ್ರೇತಭೂತಗಣಾನ್ಯಜನ್ ।
ನರಕಾನವಶೋ ಜಂತುರ್ಗತ್ವಾ ಯಾತ್ಯುಲ್ಬಣಂ ತಮಃ ॥

ಅನುವಾದ

ಯಾವನಾದರೂ ಮನುಷ್ಯನು ದುಷ್ಟರ ಸಂಗತಿಯಲ್ಲಿ ಬಿದ್ದು, ಅಧರ್ಮಪರಾಯಣನಾದರೆ, ತನ್ನ ಇಂದ್ರಿಯಗಳಿಗೆ ವಶನಾದರೆ, ಸ್ವಚ್ಛಂದವಾಗಿ ವಿಹರಿಸತೊಡಗಿದರೆ, ಲೋಭಿಯಾದರೆ, ಲಂಪಟನಾದರೆ, ಪ್ರಾಣಿಗಳನ್ನು ಸತಾಯಿಸುತ್ತಿದ್ದರೆ. ವಿಧಿ-ವಿರುದ್ಧ ಪಶುಬಲಿಯನ್ನಿತ್ತು ಭೂತ-ಪ್ರೇತಗಳ ಉಪಾಸನೆಯಲ್ಲಿ ತೊಡಗಿದರೆ, ಅವನು ಪರವಶನಾಗಿ ಘೋರ ಅಂಧಕಾರಪೂರ್ಣ ನರಕಕ್ಕೆ ಹೋಗ ಬೇಕಾಗುತ್ತದೆ. ॥27-28॥

(ಶ್ಲೋಕ - 29)

ಮೂಲಮ್

ಕರ್ಮಾಣಿ ದುಃಖೋದರ್ಕಾಣಿ ಕುರ್ವನ್ದೇಹೇನ ತೈಃ ಪುನಃ ।
ದೇಹಮಾಭಜತೇ ತತ್ರ ಕಿಂ ಸುಖಂ ಮರ್ತ್ಯಧರ್ಮಿಣಃ ॥

(ಶ್ಲೋಕ - 30)

ಮೂಲಮ್

ಲೋಕಾನಾಂ ಲೋಕಪಾಲಾನಾಂ ಮದ್ಭಯಂ ಕಲ್ಪಜೀವಿನಾಮ್ ।
ಬ್ರಹ್ಮಣೋಪಿ ಭಯಂ ಮತ್ತೋ ದ್ವಿಪರಾರ್ಧಪರಾಯುಷಃ ॥

ಅನುವಾದ

ಸಕಾಮ ಕರ್ಮಗಳೆಲ್ಲದರ ಫಲವು ದುಃಖವೇ ಆಗಿದೆ. ಶರೀರದಲ್ಲಿ ಅಹಂತೆ-ಮಮತೆಯನ್ನಿಟ್ಟು ಅದರಲ್ಲೇ ತೊಡಗಿರುವ ಜೀವಿಗೆ ಜನ್ಮ-ಮರಣದ ಚಕ್ರದಿಂದ ಬಿಡುಗಡೆ ಸಿಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮೃತ್ಯುಧರ್ಮಿಯಾದ ಜೀವಿಗೆ ಆ ಸಕಾಮ ಕರ್ಮಗಳಿಂದ ಯಾವ ಸುಖ ಸಿಗಬಹುದು? ಲೋಕ ಮತ್ತು ಲೋಕಪಾಲರ ಆಯುಸ್ಸು ಕೂಡ ಕೇವಲ ಒಂದು ಕಲ್ಪವೇ ಆಗಿದೆ. ಅವರೂ ಕೂಡ ನನಗೆ ಭಯ ಪಡುವಾಗ, ಬೇರೆಯವರ ಮಾತೇನಿದೆ? ಸ್ವಯಂ ಬ್ರಹ್ಮನ ಆಯುಸ್ಸು ಎರಡು ಪರಾರ್ಧವಾಗಿದೆ. ಇಷ್ಟು ದೀರ್ಘವಾದ ಆಯುಸ್ಸಿದ್ದರೂ ಅವನೂ ಕೂಡ ನನಗೆ ಭಯಪಡುತ್ತಾನೆ. ॥29-30॥

(ಶ್ಲೋಕ - 31)

ಮೂಲಮ್

ಗುಣಾಃ ಸೃಜಂತಿ ಕರ್ಮಾಣಿ ಗುಣೋನುಸೃಜತೇ ಗುಣಾನ್ ।
ಜೀವಸ್ತು ಗುಣಸಂಯುಕ್ತೋ ಭುಂಕ್ತೇ ಕರ್ಮಲಾನ್ಯಸೌ ॥
(ಶ್ಲೋಕ - 32)
ಯಾವತ್ ಸ್ಯಾದ್ಗುಣವೈಷಮ್ಯಂ ತಾವನ್ನಾನಾತ್ವಮಾತ್ಮನಃ ।
ನಾನಾತ್ವಮಾತ್ಮನೋ ಯಾವತ್ಪಾರತಂತ್ರ್ಯಂ ತದೈವ ಹಿ ॥

ಅನುವಾದ

ಸತ್ತ್ವಾದಿ ಗುಣಗಳು ಇಂದ್ರಿಯಗಳನ್ನು ಅವುಗಳ ಕರ್ಮಗಳಲ್ಲಿ ಪ್ರೇರೇಪಿಸುತ್ತವೆ ಮತ್ತು ಇಂದ್ರಿಯಗಳು ಕರ್ಮಮಾಡುತ್ತವೆ. ಜೀವಿಯು ಅಜ್ಞಾನ ವಶನಾಗಿ ಸತ್ತ್ವ, ರಜ, ತಮ ಗುಣಗಳನ್ನು ಹಾಗೂ ಇಂದ್ರಿಯಗಳನ್ನು ತನ್ನ ಸ್ವರೂಪವೆಂದು ತಿಳಿದುಕೊಳ್ಳುತ್ತಾನೆ. ಅವುಗಳು ಮಾಡಿದ ಕರ್ಮಗಳೊಂದಿಗೆ ಸಂಬಂಧ ಬೆಳೆಸಿ ಸುಖ-ದುಃಖಗಳನ್ನು ಭೋಗಿಸತೊಡಗುತ್ತಾನೆ. ಗುಣಗಳ ವಿಷಮತೆ ಇರುವತನಕ ಅರ್ಥಾತ್ ಶರೀರಾದಿಗಳಲ್ಲಿ ನಾನು-ನನ್ನದೆಂಬ ಅಭಿಮಾನವಿರುವತನಕ ಆತ್ಮನ ಏಕತ್ವದ ಅನು ಭೂತಿ ಉಂಟಾಗುವುದಿಲ್ಲ. ನಾನಾತ್ವದ ಭ್ರಮೆ ಅಳಿಯುವುದಿಲ್ಲ. ಈ ಅಜ್ಞಾನಮೂಲ ಭ್ರಮದ ನಿವೃತ್ತಿ ಆಗುವವರೆಗೆ ಅವನು ಪರತಂತ್ರನೇ ಆಗಿರುವನು. ॥31-32॥

(ಶ್ಲೋಕ - 33)

ಮೂಲಮ್

ಯಾವದಸ್ಯಾಸ್ವತಂತ್ರತ್ವಂ ತಾವದೀಶ್ವರತೋ ಭಯಮ್ ।
ಯ ಏತತ್ಸಮುಪಾಸೀರಂಸ್ತೇ ಮುಹ್ಯಂತಿ ಶುಚಾರ್ಪಿತಾಃ ॥

ಅನುವಾದ

ಪರತಂತ್ರತೆ ಇರುವ ತನಕ ಈಶ್ವರನಿಂದ ಭಯವಿದ್ದೇ ಇರುತ್ತದೆ. ಈ ಪ್ರಕಾರದ ಗುಣ-ಧರ್ಮಗಳಲ್ಲಿ ಬಿದ್ದು ಕೊಂಡಿರುವವನಿಗೆ ಶೋಕ ಮತ್ತು ಮೋಹದ ಪ್ರಾಪ್ತಿ ಆಗುತ್ತಾ ಇರುತ್ತದೆ. ॥33॥

(ಶ್ಲೋಕ - 34)

ಮೂಲಮ್

ಕಾಲ ಆತ್ಮಾಗಮೋ ಲೋಕಃ ಸ್ವಭಾವೋ ಧರ್ಮ ಏವ ಚ ।
ಇತಿ ಮಾಂ ಬಹುಧಾ ಪ್ರಾಹುರ್ಗುಣವ್ಯತಿಕರೇ ಸತಿ ॥

ಅನುವಾದ

ಪ್ರಿಯ ಉದ್ಧವನೇ! ಮಾಯೆಯ ಗುಣಗಳಲ್ಲಿ ಕ್ಷೋಭೆ ಉಂಟಾದಾಗ ಅವುಗಳ ವ್ಯಾವಹಾರಿಕ ಸತ್ತೆಯು ಅನೇಕವಾಗಿ ಕಂಡುಬರುತ್ತದೆ. ಕಾಲ, ಆತ್ಮಾ, ಆಗಮ (ವೇದ), ಲೋಕ, ಸ್ವಭಾವ ಮತ್ತು ಧರ್ಮ ಇವೆಲ್ಲವೂ ನಾನೇ ಆಗಿದ್ದೇನೆ. (ಹೀಗೆ ಇವೆಲ್ಲದರಲ್ಲಿ ನಾನಾತ್ವದ ಭಾವನೆಯನ್ನಿರಿಸದೆ ಇವೆಲ್ಲದರ ರೂಪದಲ್ಲಿ ಓರ್ವ ಪರಮಾತ್ಮನಾದ ನನ್ನನ್ನೇ ನೋಡಬೇಕು.) ॥34॥

(ಶ್ಲೋಕ - 35)

ಮೂಲಮ್ (ವಾಚನಮ್)

ಉದ್ಧವ ಉವಾಚ

ಮೂಲಮ್

ಗುಣೇಷು ವರ್ತಮಾನೋಪಿ ದೇಹಜೇಷ್ವನಪಾವೃತಃ ।
ಗುಣೈರ್ನ ಬದ್ಧ್ಯತೇ ದೇಹೀ ಬದ್ಧ್ಯತೇ ವಾ ಕಥಂ ವಿಭೋ ॥

ಅನುವಾದ

ಉದ್ಧವನು ಕೇಳಿದನು ಭಗವಂತಾ! ಈ ಜೀವಿಯು ದೇಹದಿಂದ ಉಂಟಾಗುವ ಗುಣಗಳಲ್ಲಿ ಇದ್ದರೂ ಕೂಡ ಅವುಗಳಿಂದ ಮುಕ್ತಜೀವನ ಹೇಗೆ ನಡೆಸುತ್ತಾನೆ ಮತ್ತು ಆ ಗುಣಗಳಿಂದ ಹೇಗೆ ಬಂಧಿತನಾಗುವುದಿಲ್ಲ? ಹಾಗೆಯೇ ಬೇರೆಯವನು ಗುಣಗಳಿಂದ ಬದ್ಧನಾಗುತ್ತಾನೆ. ಇದು ಏಕೆ? ॥35॥

(ಶ್ಲೋಕ - 36)

ಮೂಲಮ್

ಕಥಂ ವರ್ತೇತ ವಿಹರೇತ್ಕೈರ್ವಾ ಜ್ಞಾಯೇತ ಲಕ್ಷಣೈಃ ।
ಕಿಂ ಭುಂಜೀತೋತ ವಿಸೃಜೇಚ್ಛಯೀತಾಸೀತ ಯಾತಿ ವಾ ॥

ಅನುವಾದ

ಬದ್ಧ ಅಥವಾ ಮುಕ್ತ ಪುರುಷನು ಹೇಗೆ ವರ್ತಿಸುತ್ತಾನೆ, ಅವನು ಹೇಗೆ ವಿಹರಿಸುತ್ತಾನೆ, ಅವನನ್ನು ಯಾವ ಲಕ್ಷಣಗಳಿಂದ ಗುರುತಿಸಲಾಗುತ್ತದೆ, ಹೇಗೆ ಊಟಮಾಡುತ್ತಾನೆ ಮತ್ತು ಹೇಗೆ ಮಲತ್ಯಾಗ ಇತ್ಯಾದಿ ಮಾಡುತ್ತಾನೆ, ಹೇಗೆ ಮಲಗುತ್ತಾನೆ, ಹೇಗೆ ಕುಳಿತು ಕೊಳ್ಳುತ್ತಾನೆ ಹಾಗೂ ಹೇಗೆ ನಡೆಯುತ್ತಾನೆ? ॥36॥

(ಶ್ಲೋಕ - 37)

ಮೂಲಮ್

ಏತದಚ್ಯುತ ಮೇ ಬ್ರೂಹಿ ಪ್ರಶ್ನಂ ಪ್ರಶ್ನವಿದಾಂ ವರ ।
ನಿತ್ಯಮುಕ್ತೋ ನಿತ್ಯಬದ್ಧ ಏಕ ಏವೇತಿ ಮೇ ಭ್ರಮಃ ॥

ಅನುವಾದ

ಹೇ ಅಚ್ಯುತಾ! ಪ್ರಶ್ನೆಯ ಮರ್ಮವನ್ನು ತಿಳಿಯುವುದರಲ್ಲಿ ನೀನು ಶ್ರೇಷ್ಠನಾಗಿರುವೆ. ಅದಕ್ಕಾಗಿ ನೀನು ನನ್ನ ಪ್ರಶ್ನೆಗಳ ಉತ್ತರವನ್ನು ಕೊಡುವವನಾಗು. ಒಂದೇ ಆತ್ಮನು ನಿತ್ಯ ಬದ್ಧನೂ ಆಗಿದ್ದಾನೆ ಮತ್ತು ನಿತ್ಯಮುಕ್ತನೂ ಆಗಿದ್ದಾನೆ. ಈ ಮಾತಿನ ಕುರಿತು ನನಗೆ ಭ್ರಮೆ ಉಂಟಾಗುತ್ತಿದೆ. ॥37॥

ಅನುವಾದ (ಸಮಾಪ್ತಿಃ)

ಹತ್ತನೆಯ ಅಧ್ಯಾಯವು ಮುಗಿಯಿತು. ॥10॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಭಗವದುದ್ಧವ ಸಂವಾದೇ ದಶಮೋಽಧ್ಯಾಯಃ ॥10॥