೦೯

[ಒಂಭತ್ತನೆಯ ಅಧ್ಯಾಯ]

ಭಾಗಸೂಚನಾ

ಅವಧೂತೋಪಾಖ್ಯಾನ ಕುರರಪಕ್ಷಿಯಿಂದ ಹಿಡಿದು ಭೃಂಗದವರೆಗಿನ ಏಳು ಗುರುಗಳ ಕಥೆ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಪರಿಗ್ರಹೋ ಹಿ ದುಃಖಾಯ ಯದ್ಯತ್ಪ್ರಿಯತಮಂ ನೃಣಾಮ್ ।
ಅನಂತಂ ಸುಖಮಾಪ್ನೋತಿ ತದ್ವಿದ್ವಾನ್ ಯಸ್ತ್ವಕಿಂಚನಃ ॥

ಅನುವಾದ

ಬ್ರಾಹ್ಮಣ ಶ್ರೇಷ್ಠರಾದ ಅವಧೂತ ದತ್ತಾತ್ರೇಯರು ಹೇಳುತ್ತಾರೆ — ರಾಜನೇ! ಮನುಷ್ಯನಿಗೆ ಪ್ರಿಯವೆನಿಸಿದ ವಸ್ತು, ಪದಾರ್ಥಗಳನ್ನೇ ಪರಿಗ್ರಹ, ಸಂಗ್ರಹಮಾಡುತ್ತಾನೆ. ಅವೇ ಅವನ ದುಃಖಕ್ಕೆ ಕಾರಣವಾಗುತ್ತವೆ. ಆದರೆ ಅಕಿಂಚನನೂ, ಅಪರಿಗ್ರಹನೂ ಆದ ವಿದ್ವಾಂಸನು ಆನಂದವನ್ನು ಅನುಭವಿಸುತ್ತಾನೆ. ಆದ್ದರಿಂದ ಶ್ರೇಯೋಕಾಮಿ ಮನುಷ್ಯನು ಸಂಗ್ರಹದಿಂದ ದೂರವುಳಿಯಬೇಕು. ॥1॥

(ಶ್ಲೋಕ - 2)

ಮೂಲಮ್

ಸಾಮಿಷಂ ಕುರರಂ ಜಘ್ನುರ್ಬಲಿನೋ ಯೇ ನಿರಾಮಿಷಾಃ ।
ತದಾಮಿಷಂ ಪರಿತ್ಯಜ್ಯ ಸ ಸುಖಂ ಸಮವಿಂದತ ॥

ಅನುವಾದ

(ಕುರರಪಕ್ಷಿಯ ದೃಷ್ಟಾಂತವನ್ನು ಕೊಟ್ಟು ಹೇಳುತ್ತಾರೆ) ಯಾವುದೋ ಕುರರಪಕ್ಷಿಗೆ ಎಲ್ಲೋ ಒಂದು ಮಾಂಸದ ತುಂಡು ಸಿಕ್ಕಿತು. ಅದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಹಾರುವಾಗ ಅದನ್ನು ನೋಡಿ ಬೇರೆ ಮಾಂಸದ ಲೋಭಿಪಕ್ಷಿಗಳು ಅದನ್ನು ಆಕ್ರಮಿಸಿ ಪೀಡಿಸತೊಡಗಿದವು. ಆಗ ಆ ಪಕ್ಷಿಯು ಮಾಂಸದ ತುಂಡನ್ನು ಎಸೆದು ಬಿಡಲು ಆಕ್ರಮಣದಿಂದ ಪಾರಾಗಿ ಸುಖಿಯಾಯಿತು. ಇದರಿಂದ ಸಂಗ್ರಹಿಸುವುದನ್ನು ಆಪತ್ತಿನ ಮೂಲವೆಂಬುದನ್ನು ತಿಳಿಯಬೇಕು. ॥2॥

(ಶ್ಲೋಕ - 3)

ಮೂಲಮ್

ನ ಮೇ ಮಾನಾವಮಾನೌ ಸ್ತೋ ನ ಚಿಂತಾ ಗೇಹಪುತ್ರಿಣಾಮ್ ।
ಆತ್ಮಕ್ರೀಡ ಆತ್ಮರತಿರ್ವಿಚರಾಮೀಹ ಬಾಲವತ್ ॥

(ಶ್ಲೋಕ - 4)

ಮೂಲಮ್

ದ್ವಾವೇವ ಚಿಂತಯಾ ಮುಕ್ತೌ ಪರಮಾನಂದ ಆಪ್ಲುತೌ ।
ಯೋ ವಿಮುಗ್ಧೋ ಜಡೋ ಬಾಲೋ ಯೋ ಗುಣೇಭ್ಯಃ ಪರಂ ಗತಃ ॥

ಅನುವಾದ

(ಬಾಲಕನ (ಮಗು) ಉದಾಹರಣೆಯಿಂದ ತಿಳಿಸುತ್ತಿದ್ದಾರೆ) ಸಣ್ಣ ಬಾಲಕನು ತಾನೇ-ತನ್ನಲ್ಲಿ ರಮಮಾಣವಾಗಿದ್ದು, ನಿಶ್ಚಿಂತವಾಗಿರುತ್ತಾನೆ. ಹಾಗೆಯೇ ನಾನೂ ನನ್ನ ಆತ್ಮಾನಂದದಲ್ಲಿ ಮಗ್ನನಾಗಿರುತ್ತೇನೆ. ಮಾನ ಬರಲೀ, ಅಪಮಾನವಾಗಲೀ, ಅದರ ಪರಿಣಾಮ ನನ್ನ ಮೇಲೆ ಏನೂ ಆಗುವುದಿಲ್ಲ ಹಾಗೂ ಮನೆ ಪರಿವಾರ ಚಿಂತೆಯೂ ನನಗಿಲ್ಲ. ಪ್ರಪಂಚದಲ್ಲಿ ಇಬ್ಬರೇ ಚಿಂತೆಯಿಂದ ಮುಕ್ತರಾಗಿದ್ದಾರೆ. ಒಂದು ಮುಗ್ಧಮಗು, ಇನ್ನೊಬ್ಬ ಗುಣಾತೀತ ಯೋಗಿ. ಇವರಿಬ್ಬರೂ ಪರಮಾನಂದದಲ್ಲಿ ಮಗ್ನರಾಗಿರುತ್ತಾರೆ. ॥3-4॥

(ಶ್ಲೋಕ - 5)

ಮೂಲಮ್

ಕ್ವಚಿತ್ ಕುಮಾರೀ ತ್ವಾತ್ಮಾನಂ ವೃಣಾನಾನ್ ಗೃಹಮಾಗತಾನ್ ।
ಸ್ವಯಂ ತಾನರ್ಹಯಾಮಾಸ ಕ್ವಾಪಿ ಯಾತೇಷು ಬಂಧುಷು ॥

ಅನುವಾದ

(ಈಗ ಕುಮಾರಿಯೊಬ್ಬಳ ಉದಾಹರಣೆಯನ್ನು ತಿಳಿಸುತ್ತಾರೆ) ಒಮ್ಮೆ ಕುಮಾರಿಯೋರ್ವಳ ಮನೆಗೆ ಕನ್ಯಾವರಣಕ್ಕಾಗಿ ಕೆಲವರು ಬಂದರು. ಅಂದು ಉಳಿದ ಮನೆಯವರೆಲ್ಲರೂ ಎಲ್ಲೋ ಹೊರಗೆ ಹೋಗಿದ್ದರು. ಅದಕ್ಕಾಗಿ ಅವಳು ಸ್ವತಃ ಅವರ ಆದರ-ಆತಿಥ್ಯ ಮಾಡಬೇಕಾಗಿ ಬಂತು. ॥5॥

(ಶ್ಲೋಕ - 6)

ಮೂಲಮ್

ತೇಷಾಮಭ್ಯವಹಾರಾರ್ಥಂ ಶಾಲೀನ್ರಹಸಿ ಪಾರ್ಥಿವ ।
ಅವಘ್ನಂತ್ಯಾಃ ಪ್ರಕೋಷ್ಠಸ್ಥಾಶ್ಚಕ್ರುಃ ಶಂಖಾಃ ಸ್ವನಂ ಮಹತ್ ॥

(ಶ್ಲೋಕ - 7)

ಮೂಲಮ್

ಸಾ ತಜ್ಜುಗುಪ್ಸಿತಂ ಮತ್ವಾ ಮಹತೀ ವ್ರೀಡಿತಾ ತತಃ ।
ಬಭಂಜೈಕೈಕಶಃ ಶಂಖಾನ್ ದ್ವೌ ದ್ವೌ ಪಾಣ್ಯೋರಶೇಷಯತ್ ॥

ಅನುವಾದ

ರಾಜನೇ! ಬಂದ ಅತಿಥಿಗಳಿಗೆ ಭೋಜನಕ್ಕಾಗಿ ಅವಳು ಮನೆಯೊಳಗೆ ಏಕಾಂತದಲ್ಲಿ ಭತ್ತ ಕುಟ್ಟುತ್ತಿದ್ದಳು. ಆಗ ಅವಳು ತೊಟ್ಟುಕೊಂಡಿದ್ದ ಶಂಖದ ಬಳೆಗಳು ಒಂದಕ್ಕೊಂದು ತಗುಲಿ ಶಬ್ದಮಾಡತೊಡಗಿದವು. ಈ ಶಬ್ದವನ್ನು ನಿಂದಿತವೆಂದು ತಿಳಿದು ಕುಮಾರಿಗೆ ತುಂಬಾ ನಾಚಿಕೆಯಾಯಿತು.* ಅವಳು ಒಂದೊಂದಾಗಿ ಬಳೆಗಳನ್ನು ಒಡೆದು ಹಾಕಿ ಕೊನೆಗೆ ಎರಡೆರಡು ಬಳೆಗಳು ಉಳಿದವು. ॥6-7॥

ಟಿಪ್ಪನೀ
  • ಏಕೆಂದರೆ, ಅದರಿಂದ ಅವಳು ಸ್ವತಃ ಭತ್ತಕುಟ್ಟುವುದು, ಅವರ ದರಿದ್ರತೆಯನ್ನು ಪ್ರದರ್ಶಿಸುತ್ತಿತ್ತು.

(ಶ್ಲೋಕ - 8)

ಮೂಲಮ್

ಉಭಯೋರಪ್ಯಭೂದ್ಘೋಷೋ ಹ್ಯವಘ್ನಂತ್ಯಾಃ ಸ್ಮ ಶಂಖಯೋಃ ।
ತತ್ರಾಪ್ಯೇಕಂ ನಿರಭಿದದೇ ಕಸ್ಮಾನ್ನಾಭವದ್ಧ್ವನಿಃ ॥

ಅನುವಾದ

ಅವಳು ಪುನಃ ಭತ್ತ ಕುಟ್ಟಲು ಪ್ರಾರಂಭಿಸಿದಳು. ಆದರೆ ಆ ಎರಡೆರಡು ಬಳೆಗಳೂ ಸದ್ದು ಮಾಡುತ್ತಿದ್ದವು. ಕೊನೆಗೆ ಅದರಲ್ಲಿ ಒಂದೊಂದನ್ನು ಒಡೆದುಹಾಕಿ ಕೇವಲ ಒಂದೊಂದೇ ಬಳೆ ಉಳಿಯಿತು. ಆಗ ಯಾವ ಸದ್ದೂ ಉಂಟಾಗುತ್ತಿರಲಿಲ್ಲ. ॥8॥

(ಶ್ಲೋಕ - 9)

ಮೂಲಮ್

ಅನ್ವಶಿಕ್ಷಮಿಮಂ ತಸ್ಯಾ ಉಪದೇಶಮರಿಂದಮ ।
ಲೋಕಾನನುಚರನ್ನೇತಾನ್ಲೋಕತತ್ತ್ವವಿವಿತ್ಸಯಾ ॥

(ಶ್ಲೋಕ - 10)

ಮೂಲಮ್

ವಾಸೇ ಬಹೂನಾಂ ಕಲಹೋ ಭವೇದ್ವಾರ್ತಾ ದ್ವಯೋರಪಿ ।
ಏಕ ಏವ ಚರೇತ್ತಸ್ಮಾತ್ ಕುಮಾರ್ಯಾ ಇವ ಕಂಕಣಃ ॥

ಅನುವಾದ

ಶತ್ರುಸೂದನಾ! ಆಗಲೇ ವ್ಯವಹಾರವನ್ನು ತಿಳಿಯುವ ಇಚ್ಛೆಯಿಂದ ನಾನೂ ಅಲ್ಲಿಗೆ ತಲುಪಿದೆ. ಆಗ ನಾನು ಅವಳಿಂದ ಈ ಶಿಕ್ಷಣವನ್ನು ಪಡೆದು ಕೊಂಡೆ. ಅನೇಕ ಜನರು ಒಟ್ಟಿಗೆ ಒಂದೆಡೆ ಇದ್ದರೆ ಕಲಹ ಉಂಟಾಗುತ್ತದೆ. ಇಬ್ಬರು ಜೊತೆಯಲ್ಲಿದ್ದರೂ ವ್ಯರ್ಥವಾದ ಮಾತುಗಳು ನಡೆಯುತ್ತವೆ. ಅದಕ್ಕಾಗಿ ಆ ಹೆಣ್ಣುಮಗಳ ಬಳೆಗಳಂತೆ ಒಬ್ಬನೇ ಸಂಚರಿಸಬೇಕು. ॥9-10॥

(ಶ್ಲೋಕ - 11)

ಮೂಲಮ್

ಮನ ಏಕತ್ರ ಸಂಯುಜ್ಯಾಜ್ಜಿತಶ್ವಾಸೋ ಜಿತಾಸನಃ ।
ವೈರಾಗ್ಯಾಭ್ಯಾಸಯೋಗೇನ ಧ್ರಿಯಮಾಣಮತಂದ್ರಿತಃ ॥

ಅನುವಾದ

ರಾಜನೇ! ಆಸನ ಮತ್ತು ಪ್ರಾಣಾಯಾಮದ ಮೂಲಕ ಶ್ವಾಸವನ್ನು ಗೆದ್ದು, ವೈರಾಗ್ಯ ಹಾಗೂ ಅಭ್ಯಾಸದಿಂದ ತನ್ನ ಮನವನ್ನು ವಶಪಡಿಸಿಕೊಳ್ಳಬೇಕು. ಮತ್ತೆ ಬಹಳ ಜಾಗರೂಕತೆಯಿಂದ ಅದನ್ನು ಒಂದು ಗುರಿಯಲ್ಲಿ ನೆಲೆಗೊಳಿಸಬೇಕು. ಇದನ್ನು ನಾನು ಬಾಣವನ್ನು ತಯಾರಿಸುವವನಿಂದ ಕಲಿತೆನು. ॥11॥

(ಶ್ಲೋಕ - 12)

ಮೂಲಮ್

ಯಸ್ಮಿನ್ ಮನೋ ಲಬ್ಧಪದಂ ಯದೇತ-
ಚ್ಛನೈಃ ಶನೈರ್ಮುಂಚತಿ ಕರ್ಮರೇಣೂನ್ ।
ಸತ್ತ್ವೇನ ವೃದ್ಧೇನ ರಜಸ್ತಮಶ್ಚ
ವಿಧೂಯ ನಿರ್ವಾಣಮುಪೈತ್ಯನಿಂಧನಮ್ ॥

ಅನುವಾದ

ಪರಮಾನಂದ ಸ್ವರೂಪೀ ಪರಮಾತ್ಮನಲ್ಲಿ ಮನಸ್ಸು ಸ್ಥಿರವಾದಾಗ ಅದು ಕ್ರಮವಾಗಿ ಕರ್ಮವಾಸನೆಯ ಧೂಳನ್ನು ತೊಳೆದುಬಿಡುತ್ತದೆ. ಸತ್ತ್ವಗುಣದ ವೃದ್ಧಿಯಾಗುತ್ತದೆ. ರಜೋಗುಣ ಮತ್ತು ತಮೋಗುಣ ಇವುಗಳ ವೃತ್ತಿಗಳನ್ನು ತ್ಯಾಗಗೈದು ಮನಸ್ಸು ಕಟ್ಟಿಗೆ ಇಲ್ಲದ ಅಗ್ನಿಯು ಶಾಂತವಾಗುವಂತೆ ಶಾಂತವಾಗುತ್ತದೆ. ॥12॥

(ಶ್ಲೋಕ - 13)

ಮೂಲಮ್

ತದೈವಮಾತ್ಮನ್ಯವರುದ್ಧಚಿತ್ತೋ
ನ ವೇದ ಕಿಂಚಿದ್ಬಹಿರಂತರಂ ವಾ ।
ಯಥೇಷುಕಾರೋ ನೃಪತಿಂ ವ್ರಜಂತ-
ಮಿಷೌ ಗತಾತ್ಮಾ ನ ದದರ್ಶ ಪಾರ್ಶ್ವೇ ॥

ಅನುವಾದ

ಈ ವಿಧವಾಗಿ ಚಿತ್ತವು ತನ್ನ ಆತ್ಮನಲ್ಲೇ ಸ್ಥಿರ-ನಿರುದ್ಧನಾದವನಿಗೆ ಒಳ-ಹೊರಗೆ ಎಲ್ಲಿಯೂ ಯಾವುದೇ ಪದಾರ್ಥದ ಎಚ್ಚರವಿರುವುದಿಲ್ಲ. ಓರ್ವ ಕಮ್ಮಾರನು ಬಾಣವನ್ನು ತಯಾರಿಸುತ್ತಿದ್ದನು. ಅವನ ಬಳಿಯಿಂದಲೇ ಭೇರಿ, ನಗಾರಿ, ಕಹಳೆ ಮುಂತಾದ ವಾದ್ಯಗಳೊಂದಿಗೆ ರಾಜನ ಮೆರವಣಿಗೆ ಹೊರಟಿತ್ತು. ಆದರೆ ಅವನಿಗೆ ಇದರ ಅರಿವೇ ಇರದಷ್ಟು ತನ್ನ ಕಾಯಕದಲ್ಲಿ ತನ್ಮಯನಾಗಿ ಹೋಗಿದ್ದನು. ಇದನ್ನು ನಾನು ನೋಡಿದೆ. ॥13॥

(ಶ್ಲೋಕ - 14)

ಮೂಲಮ್

ಏಕಚಾರ್ಯನಿಕೇತಃ ಸ್ಯಾದಪ್ರಮತ್ತೋ ಗುಹಾಶಯಃ ।
ಅಲಕ್ಷ್ಯಮಾಣ ಆಚಾರೈರ್ಮುನಿರೇಕೋಲ್ಪಭಾಷಣಃ ॥

ಅನುವಾದ

ಸರ್ಪದಿಂದ ನಾನು ಕಲಿತುದು ಮುನಿಯಾದವನು ಒಬ್ಬಂಟಿಗನಾಗಿರಬೇಕು. (ಮಂಡಳಿ ಕಟ್ಟಿಕೊಳ್ಳಬಾರದು.) ಇರುವ ಜಾಗದಲ್ಲಿ ಮಮತೆ ಇರಬಾರದು. ಎಚ್ಚರಿಕೆಯಿಂದಿರಬೇಕು. ಏಕಾಂತದಲ್ಲಿ ಅಥವಾ ಗುಹೆಯಲ್ಲಿ ವಾಸಿಸಬೇಕು. ತನ್ನ ಆಚಾರ-ವ್ಯವಹಾರದಿಂದ ತನ್ನನ್ನು ಯಾರ ಮುಂದೆಯೂ ಪ್ರಕಟಿಸಬಾರದು. ಮಿತಭಾಷಿಯಾಗಿರಬೇಕು. ॥14॥

(ಶ್ಲೋಕ - 15)

ಮೂಲಮ್

ಗೃಹಾರಂಭೋತಿದುಃಖಾಯ ವಿಲಶ್ಚಾಧ್ರುವಾತ್ಮನಃ ।
ಸರ್ಪಃ ಪರಕೃತಂ ವೇಶ್ಮ ಪ್ರವಿಶ್ಯ ಸುಖಮೇಧತೇ ॥

ಅನುವಾದ

ಈ ಅನಿತ್ಯ ಶರೀರಕ್ಕಾಗಿ ಇಷ್ಟು ಕಷ್ಟಪಟ್ಟು ಮನೆಕಟ್ಟುವದು ವ್ಯರ್ಥವಾಗಿದೆ. ಇಲಿಯು ಮಾಡಿದ ಬಿಲದಲ್ಲೇ ಹಾವು ಹಾಯಾಗಿ ವಾಸಿಸುತ್ತದೆ. ಹಾಗೆಯೇ ಎಲ್ಲಾದರೂ ಇದ್ದು ತನ್ನ ನಿರ್ವಾಹವನ್ನು ಮಾಡಿಕೊಳ್ಳಬೇಕು. ॥15॥

(ಶ್ಲೋಕ - 16)

ಮೂಲಮ್

ಏಕೋ ನಾರಾಯಣೋ ದೇವಃ ಪೂರ್ವಸೃಷ್ಟಂ ಸ್ವಮಾಯಯಾ ।
ಸಂಹೃತ್ಯ ಕಾಲಕಲಯಾ ಕಲ್ಪಾಂತ ಇದಮೀಶ್ವರಃ ॥

ಅನುವಾದ

(ಈಗ ಜೇಡರಹುಳುವಿನ ದೃಷ್ಟಾಂತದಿಂದ ತಿಳಿಸುತ್ತಾರೆ) ಅದ್ವಿತೀಯನಾದ, ದೇವದೇವನಾದ ನಾರಾಯಣನೇ ತನ್ನ ಮಾಯೆಯಿಂದ ವಿಶ್ವವನ್ನು ನಿರ್ಮಿಸುತ್ತಾನೆ. ಅವನೇ ಕಲ್ಪದ ಕೊನೆಯಲ್ಲಿ ತನ್ನ ಕಾಲಶಕ್ತಿಯ ಮೂಲಕ ಇದರ ಉಪಸಂಹಾರವನ್ನು ಮಾಡುತ್ತಾನೆ. ॥16॥

(ಶ್ಲೋಕ - 17)

ಮೂಲಮ್

ಏಕ ಏವಾದ್ವಿತೀಯೋಭೂದಾತ್ಮಾಧಾರೋಖಿಲಾಶ್ರಯಃ ।
ಕಾಲೇನಾತ್ಮಾನುಭಾವೇನ ಸಾಮ್ಯಂ ನೀತಾಸು ಶಕ್ತಿಷು ।
ಸತ್ತ್ವಾದಿಷ್ವಾದಿಪುರುಷಃ ಪ್ರಧಾನಪುರುಷೇಶ್ವರಃ ॥

ಅನುವಾದ

ಆ ಪರಮಾತ್ಮನು ಓರ್ವನೇ ಆಗಿದ್ದಾನೆ. (ಅವನಲ್ಲಿ ಸಜಾತಿಯ ಜೀವ ಮುಂತಾದ ಭೇದಗಳಿಲ್ಲ) ಅದ್ವಿತೀಯನಾಗಿದ್ದಾನೆ. (ವಿಜಾತೀಯ ಪ್ರಧಾನಾದಿ ಭೇದದಿಂದ ರಹಿತನಾಗಿದ್ದಾನೆ.) ಹಾಗೂ (ನಿರುಪಾಧಿಕನಾಗಿದ್ದಾನೆ.) ಆದ್ದರಿಂದ ಸ್ವಗತಭೇದರಹಿತ ನಾಗಿದ್ದಾನೆ. ಈ ಪ್ರಕಾರ ಆ ಪರಮಾತ್ಮನು ಅಖಂಡರೂಪದಿಂದ ಸ್ವಯಂ ತಾನೇ ತಾನಾಗಿದ್ದಾನೆ. ಆ ಭಗವಾನ್ ಆದಿನಾರಾಯಣನೇ ಪ್ರಕೃತಿ-ಪುರುಷರ ನಿಯಾಮಕನಾಗಿದ್ದಾನೆ. ಅವನು ತನ್ನ ಕಾಲಶಕ್ತಿಯ ಮೂಲಕ ಈ ಸತ್ತ್ವಾದಿ ಶಕ್ತಿಗಳನ್ನು ಸಾಮ್ಯಾವಸ್ಥೆಗೆ ಒಯ್ದಾಗ ಏಕಮಾತ್ರ ಪರಮಾತ್ಮನೇ ಶೇಷವಾಗಿ ಇರುತ್ತಾನೆ. ॥17॥

(ಶ್ಲೋಕ - 18)

ಮೂಲಮ್

ಪರಾವರಾಣಾಂ ಪರಮ ಆಸ್ತೇ ಕೈವಲ್ಯಸಂಜ್ಞಿತಃ ।
ಕೇವಲಾನುಭವಾನಂದಸಂದೋಹೋ ನಿರುಪಾಧಿಕಃ ॥

ಅನುವಾದ

ಅವನು ಪರಮ ಶ್ರೇಷ್ಠನಾಗಿದ್ದು, ಪರಾ ಮತ್ತು ಅಪರಾ ಇವೆರಡೂ ಪ್ರಕೃತಿಗಳಿಂದ ಅತೀತನಾಗಿದ್ದಾನೆ. ಅವನನ್ನು ಕೈವಲ್ಯನೆಂದೂ ಹೇಳಲಾಗುತ್ತದೆ. ಅವನು ಕೇವಲಸ್ವರೂಪನೂ, ಅನುಭವ ಸ್ವರೂಪನೂ, ಆನಂದ ಪುಂಜನೂ ಆಗಿರುವನು. ಅಲ್ಲಿ ಪ್ರಕೃತಿಯ ಯಾವ ಉಪಾಧಿಯೂ ಇಲ್ಲ. ॥18॥

(ಶ್ಲೋಕ - 19)

ಮೂಲಮ್

ಕೇವಲಾತ್ಮಾನುಭಾವೇನ ಸ್ವಮಾಯಾಂ ತ್ರಿಗುಣಾತ್ಮಿಕಾಮ್ ।
ಸಂಕ್ಷೋಭಯನ್ಸೃಜತ್ಯಾದೌ ತಯಾ ಸೂತ್ರಮರಿಂದಮ ॥

ಅನುವಾದ

ಅವನು ಕೇವಲ ತನ್ನ ಸಾಮರ್ಥ್ಯದಿಂದಲೇ ತನ್ನ ತ್ರಿಗುಣಾತ್ಮಿಕಾ ಮಾಯೆಯಲ್ಲಿ ಕ್ಷೋಭೆ ಉಂಟುಮಾಡುತ್ತಾನೆ. ಹೇ ಶತ್ರುಸೂದನಾ! ಆ ಮಾಯೆಯ ಮೂಲಕ ಮೊಟ್ಟಮೊದಲು ಕ್ರಿಯಾಶಕ್ತಿ ಪ್ರಧಾನನಾದ ಸೂತ್ರಾತ್ಮನನ್ನು ರಚಿಸುತ್ತಾನೆ. ॥19॥

(ಶ್ಲೋಕ - 20)

ಮೂಲಮ್

ತಾಮಾಹುಸಿಗುಣವ್ಯಕ್ತಿಂ ಸೃಜಂತೀಂ ವಿಶ್ವತೋಮುಖಮ್ ।
ಯಸ್ಮಿನ್ ಪ್ರೋತಮಿದಂ ವಿಶ್ವಂ ಯೇನ ಸಂಸರತೇ ಪುಮಾನ್ ॥

ಅನುವಾದ

ಆ ಕ್ರಿಯಾಶಕ್ತಿ ಪ್ರಧಾನ ಸೂತ್ರಾತ್ಮನೇ ತ್ರಿಗುಣಾತ್ಮಿಕಾ ಶಕ್ತಿಯನ್ನು ಮತ್ತು ಮೂರೂ ಗುಣಗಳನ್ನು ಅಭಿವ್ಯಕ್ತಗೊಳಿಸುತ್ತಾನೆ. ಹೀಗೆ ಅವನೇ ಇಡೀ ವಿಶ್ವವನ್ನು ನಿರ್ಮಿಸುತ್ತಾನೆ. ಈ ಎಲ್ಲ ವಿಶ್ವದಲ್ಲಿ ವ್ಯಾಪ್ತವಾಗಿರುವವನು ಅವನೇ. ಆದರೆ ಪುರುಷನು ಅದರಲ್ಲಿ ಅಹಂ ಬುದ್ಧಿಯಿಂದ ಅಲೆಯುತ್ತಾನೆ. ॥20॥

(ಶ್ಲೋಕ - 21)

ಮೂಲಮ್

ಯಥೋರ್ಣನಾಭಿರ್ಹೃದಯಾದೂರ್ಣಾಂ ಸಂತತ್ಯ ವಕತಃ ।
ತಯಾ ವಿಹೃತ್ಯ ಭೂಯಸ್ತಾಂ ಗ್ರಸತ್ಯೇವಂ ಮಹೇಶ್ವರಃ ॥

ಅನುವಾದ

ಜೇಡರಹುಳುವು ಹೃದಯದಿಂದ ಹೊರಬಂದ ನೂಲೆಳೆಯನ್ನು ಬಾಯಿಂದ ಹರಡಿ ಬಲೆಯನ್ನು ಕಟ್ಟಿ, ಅದರಲ್ಲೇ ಸ್ವೇಚ್ಛೆಯಿಂದ ವಿಹರಿಸುತ್ತಿದ್ದು, ಕಡೆಗೆ ತಾನೇ ಅದನ್ನು ನುಂಗಿಬಿಡುತ್ತದೆ. ಹಾಗೆಯೇ ಪರಮೇಶ್ವರನೂ ಈ ಜಗತ್ತನ್ನು ತನ್ನಿಂದಲೇ ಸೃಷ್ಟಿಸಿ, ಅದರಲ್ಲಿ ಜೀವರೂಪದಿಂದ ವಿಹರಿಸುತ್ತಾ ಕೊನೆಗೆ ಅದನ್ನು ತನ್ನಲ್ಲೇ ಲೀನಗೊಳಿಸಿಕೊಳ್ಳುತ್ತಾನೆ. ಇದರಿಂದ ಮೊತ್ತವಾಗಿ ಈ ವಿಶ್ವವು ಪರಮಾತ್ಮನದೇ ಸ್ವರೂಪವಾಗಿದೆ ಎಂದು ತಿಳಿಯಬೇಕು. ॥21॥

(ಶ್ಲೋಕ - 22)

ಮೂಲಮ್

ಯತ್ರ ಯತ್ರ ಮನೋ ದೇಹೀ ಧಾರಯೇತ್ಸಕಲಂ ಧಿಯಾ ।
ಸ್ನೇಹಾದ್ವೇಷಾದ್ಭಯಾದ್ವಾಪಿ ಯಾತಿ ತತ್ತತ್ಸರೂಪತಾಮ್ ॥

ಅನುವಾದ

ರಾಜನೇ! ಪ್ರಾಣಿಯು ಸ್ನೇಹದಿಂದಾಗಲೀ, ದ್ವೇಷದಿಂದಾಗಲೀ ಅಥವಾ ಭಯದಿಂದಾಗಲೀ ತಿಳಿದು - ತಿಳಿದು ಏಕಾಗ್ರವಾಗಿ ತನ್ನ ಮನಸ್ಸನ್ನು ಯಾವುದರಲ್ಲಾದರೂ ತೊಡಗಿಸಿದರೆ, ಅದಕ್ಕೆ ಅದೇ ವಸ್ತುವಿನ ಸ್ವರೂಪ ಪ್ರಾಪ್ತವಾಗುತ್ತದೆ. ಇದನ್ನು ನಾನು ಭೃಂಗೀ (ಕಣಜದ) ಹುಳುವಿನಿಂದ ಕಲಿತುಕೊಂಡೆನು. ॥22॥

(ಶ್ಲೋಕ - 23)

ಮೂಲಮ್

ಕೀಟಃ ಪೇಶಸ್ಕೃತಂ ಧ್ಯಾಯನ್ ಕುಡ್ಯಾಂ ತೇನ ಪ್ರವೇಶಿತಃ ।
ಯಾತಿ ತತ್ಸಾತ್ಮತಾಂ ರಾಜನ್ ಪೂರ್ವರೂಪಮಸಂತ್ಯಜನ್ ॥

ಅನುವಾದ

ಕಣಜದ ಹುಳುವು ಯಾವುದೋ ಹುಳವನ್ನು ತಂದು ಅದನ್ನು ಮಣ್ಣಿನ ಗೂಡಿನಲ್ಲಿ ಮುಚ್ಚಿಡುತ್ತದೆ. ಹೊರಗಿನಿಂದ ತಾನು ಬಂದು ಪದೇ-ಪದೇ ಅದನ್ನು ಭೂಂ-ಭೂಂ ಮಾಡುತ್ತಾ ಹೆದರಿಸುತ್ತದೆ. ಒಳಗಿರುವ ಹುಳುವು ಕಣಜದ ಭಯದಿಂದ ಅದನ್ನೇ ಚಿಂತಿಸುತ್ತಾ ತನ್ನ ಹಿಂದಿನ ಶರೀರವನ್ನು ಬಿಡದೆ ತದ್ರೂಪವಾಗುತ್ತದೆ. ಅಂದರೆ ಕಣಜದ ಹುಳುವೇ ಆಗುತ್ತದೆ.* ಹೀಗೆಯೇ ಹೇಗೆಬೇಕಾದರೂ ಇರಲಿ ಪರಮಾತ್ಮನನ್ನು ಸತತ ಚಿಂತಿಸುವುದರಿಂದ ಮನುಷ್ಯನೂ ಅವಶ್ಯವಾಗಿ ಪರಮಾತ್ಮ ಸ್ವರೂಪನೇ ಆಗುವನು. ॥23॥

ಟಿಪ್ಪನೀ
  • ಅದೇ ಶರೀರದಿಂದ ಚಿಂತಿಸಿದ ಸ್ವರೂಪವೇ ಪ್ರಾಪ್ತವಾಗುವುದಾದರೆ ಬೇರೆ ಶರೀರದಿಂದ ಹೇಳುವುದೇನಿದೆ? ಅದಕ್ಕಾಗಿ ಮನುಷ್ಯನು ಬೇರೆ ವಸ್ತುಗಳ ಚಿಂತನೆಮಾಡದೆ ಭಗವತ್ಪ್ರಾಪ್ತಿಯ ಉದ್ದೇಶದಿಂದ ಕೇವಲ ಪರಮಾತ್ಮನನ್ನೇ ಚಿಂತಿಸುತ್ತಿರಬೇಕು.

(ಶ್ಲೋಕ - 24)

ಮೂಲಮ್

ಏವಂ ಗುರುಭ್ಯ ಏತೇಭ್ಯ ಏಷಾ ಮೇ ಶಿಕ್ಷಿತಾ ಮತಿಃ ।
ಸ್ವಾತ್ಮೋಪಶಿಕ್ಷಿತಾಂ ಬುದ್ಧಿಂ ಶೃಣು ಮೇ ವದತಃ ಪ್ರಭೋ ॥

ಅನುವಾದ

ರಾಜನೇ! ಈ ಪ್ರಕಾರ ನಾನು ಇಷ್ಟು ಗುರುಗಳಿಂದ ಈ ಶಿಕ್ಷಣವನ್ನು ಗ್ರಹಿಸಿದೆ. ಈಗ ನಾನು ನನ್ನ ಶರೀರದಿಂದ ಕಲಿತಿರುವುದನ್ನು ನಿನಗೆ ತಿಳಿಸುತ್ತೇನೆ. ಮನಗೊಟ್ಟು ಕೇಳು. ॥24॥

(ಶ್ಲೋಕ - 25)

ಮೂಲಮ್

ದೇಹೋ ಗುರುರ್ಮಮ ವಿರಕ್ತಿವಿವೇಕಹೇತು-
ರ್ಬಿಭ್ರತ್ ಸ್ಮ ಸತ್ತ್ವನಿಧನಂ ಸತತಾರ್ತ್ಯುದರ್ಕಮ್ ।
ತತ್ತ್ವಾನ್ಯನೇನ ವಿಮೃಶಾಮಿ ಯಥಾ ತಥಾಪಿ
ಪಾರಕ್ಯಮಿತ್ಯವಸಿತೋ ವಿಚರಾಮ್ಯಸಂಗಃ ॥

ಅನುವಾದ

ಈ ದೇಹವೂ ನನ್ನ ಗುರುವಾಗಿದೆ. ಇದು ನನಗೆ ವೈರಾಗ್ಯ ಮತ್ತು ವಿವೇಕವನ್ನು ಉಪದೇಶಿಸುತ್ತದೆ. ದೇಹವು ಜನ್ಮ-ಮರಣಶೀಲವಾಗಿದೆ ಎಂಬುದು ಪ್ರಸಿದ್ಧವೇ ಆಗಿದೆ. ಪರಿಣಾಮದಲ್ಲಿ ಇದರೊಂದಿಗೆ ನಿರಂತರ ದುಃಖವೇ ಅಂಟಿಕೊಂಡಿದೆ. ಆದರೆ ಈ ದೇಹದಿಂದಲೇ ನಾನು ಪರಮಾತ್ಮ ತತ್ತ್ವವನ್ನು ಚಿಂತಿಸುತ್ತೇನೆ, ಇದೇ ಇದರ ದೊಡ್ಡ ಲಾಭವಾಗಿದೆ. ಈ ದೇಹವನ್ನು ಒಂದು ದಿನ ನರಿ-ನಾಯಿಗಳು ತಿಂದುಬಿಡುವುವು ಇದು ನಿಶ್ಚಯವಾಗಿದೆ. ಆದ್ದರಿಂದ ಇದು ನಮ್ಮದಲ್ಲ, ಬೇರೆಯವರದೇ ಆಗಿದೆ. ಅದಕ್ಕಾಗಿ ನಾನು ದೇಹದಿಂದಲೂ ಅಸಂಗನಾಗಿ ಸಂಚರಿಸುತ್ತೇನೆ. ॥25॥

(ಶ್ಲೋಕ - 26)

ಮೂಲಮ್

ಜಾಯಾತ್ಮಜಾರ್ಥಪಶುಭೃತ್ಯಗೃಹಾಪ್ತವರ್ಗಾನ್
ಪುಷ್ಣಾತಿ ಯತ್ಪ್ರಿಯಚಿಕೀರ್ಷುತಯಾ ವಿತನ್ವನ್ ।
ಸ್ವಾಂತೇ ಸಕೃಚ್ಛ್ರಮವರುದ್ಧಧನಃ ಸ ದೇಹಃ
ಸೃಷ್ಟ್ವಾಸ್ಯ ಬೀಜಮವಸೀದತಿ ವೃಕ್ಷಧರ್ಮಾ ॥

ಅನುವಾದ

ಮನುಷ್ಯನು ಪತ್ನೀ-ಪುತ್ರ, ಧನ-ಸಂಪತ್ತು, ಪಶು, ಸೇವಕರು, ಮನೆ, ಸಂಬಂಧಿಗಳು, ಇವುಗಳನ್ನು ಬೆಳೆಸುತ್ತಾ, ಅವುಗಳಿಂದ ಸುಖ ಪಡೆಯುವ ಇಚ್ಛೆಯಿಂದ ಅವರ ಲಾಲನೆ-ಪೋಷಣೆ ಮಾಡುತ್ತಾನೆ. ತುಂಬಾ ಕಷ್ಟಪಟ್ಟು ಧನವನ್ನು ಗಳಿಸುತ್ತಾನೆ. ಬೀಜವನ್ನಿತ್ತು ವೃಕ್ಷವು ನಾಶವಾಗುವಂತೆ ಕೊನೆಗೆ ಅವನು ಮುಂದಿನ ಜನ್ಮಕ್ಕಾಗಿ ಕರ್ಮ ಬೀಜವನ್ನು ನಿರ್ಮಿಸಿಕೊಂಡು ಮೃತ್ಯುಮುಖನಾಗುತ್ತಾನೆ. ಈ ವಿಧವಾಗಿ ದೇಹವು ನಾಶವಾದ ಬಳಿಕವೂ ಅವನ ದುಃಖಗಳ ಕೊನೆಯಾಗುವುದಿಲ್ಲ. ಜನ್ಮ-ಮರಣದ ಚಕ್ರದಲ್ಲಿ ಸುತ್ತುತ್ತಾ ಇರುತ್ತಾನೆ. ॥26॥

(ಶ್ಲೋಕ - 27)

ಮೂಲಮ್

ಜಿಹ್ವೈಕತೋಮುಮಪಕರ್ಷತಿ ಕರ್ಹಿ ತರ್ಷಾ
ಶಿಶ್ನೋನ್ಯತಸ್ತ್ವಗುದರಂ ಶ್ರವಣಂ ಕುತಶ್ಚಿತ್ ।
ಘ್ರಾಣೋನ್ಯತಶ್ಚಪಲದೃಕ್ ಕ್ವ ಚ ಕರ್ಮಶಕ್ತಿ-
ರ್ಬಹ್ವ್ಯಃ ಸಪತ್ನ್ಯ ಇವ ಗೇಹಪತಿಂ ಲುನಂತಿ ॥

ಅನುವಾದ

ಮನೆಯ ಯಜಮಾನನನ್ನು ಅವನ ಅನೇಕ ಸವತಿಯರು ತಮ್ಮ-ತಮ್ಮ ಕಡೆಗೆ ಸೆಳೆದುಕೊಂಡು ಹರಿದು ಹಂಚಿ ಹಾಕಿ ಬಿಡುವಂತೆ, ದೇಹಾಭಿಮಾನೀ ಜೀವಿಯನ್ನು ಒಂದು ಕಡೆಯಿಂದ ಅವನನ್ನು ನಾಲಿಗೆ ಸೆಳೆದರೆ, ಕೆಲವೊಮ್ಮೆ ಬಾಯಾರಿಕೆ ಕಂಗೆಡಿಸುತ್ತದೆ. ಕೆಲವೊಮ್ಮೆ ಜನನೇಂದ್ರಿಯವು ಸಂಭೋಗಕ್ಕಾಗಿ ವ್ಯಾಕುಲಗೊಳಿಸುತ್ತದೆ. ಹಾಗೆಯೇ ಚರ್ಮ, ಉದರ, ಕಿವಿ ಇವು ತಮ್ಮ-ತಮ್ಮ ವಿಷಯಗಳತ್ತ ಸೆಳೆಯುತ್ತವೆ. ಮೂಗೂ ಪರಿಮಳದತ್ತ ಸೆಳೆದರೆ, ಚಂಚಲನೇತ್ರಗಳು ಸುಂದರರೂಪ ವನ್ನು ನೋಡಲು ಆಕರ್ಷಿಸುತ್ತವೆ. ಹೀಗೆ ಕರ್ಮೇಂದ್ರಿಯ ಜ್ಞಾನೇಂದ್ರಿಯಗಳು ಈ ದೇಹಾಭಿಮಾನಿ ಜೀವಿಯನ್ನು ತಮ್ಮ-ತಮ್ಮ ವಿಷಯಗಳ ಕಡೆಗೆ ಆಕರ್ಷಿಸಿ ಅವನನ್ನು ಕಂಗೆಡಿಸುತ್ತವೆ. ॥27॥

(ಶ್ಲೋಕ - 28)

ಮೂಲಮ್

ಸೃಷ್ಟ್ವಾ ಪುರಾಣಿ ವಿವಿಧಾನ್ಯಜಯಾತ್ಮಶಕ್ತ್ಯಾ
ವೃಕ್ಷಾನ್ಸರೀಸೃಪಪಶೂನ್ ಖಗದಂಶಮತ್ಸ್ಯಾನ್ ।
ತೈಸ್ತೈರತುಷ್ಟಹೃದಯಃ ಪುರುಷಂ ವಿಧಾಯ
ಬ್ರಹ್ಮಾವಲೋಕಧಿಷಣಂ ಮುದಮಾಪ ದೇವಃ ॥

ಅನುವಾದ

ಭಗವಂತನು ತನ್ನ ಅಚಿಂತ್ಯ ಶಕ್ತಿ ಮಾಯೆಯಿಂದ ವೃಕ್ಷ, ಸರೀಸೃಪ, ಪಶು, ಪಕ್ಷಿ, ನೊಣ, ಮೀನು ಮುಂತಾದ ಅನೇಕ ಪ್ರಕಾರದ ಯೋನಿಗಳನ್ನು ರಚಿಸಿದನು. ಆದರೆ ಅದರಿಂದ ಅವನಿಗೆ ಸಂತೋಷವಾಗಲಿಲ್ಲ. ಕೊನೆಗೆ ಅವನು ಮನುಷ್ಯಶರೀರವನ್ನು ಸೃಷ್ಟಿಸಿದನು. ಇದು ಬ್ರಹ್ಮಸಾಕ್ಷಾತ್ಕಾರ ಮಾಡಬಹುದಾದ ಬುದ್ಧಿಯಿಂದ ಕೂಡಿದೆ. ಇದನ್ನು ರಚಿಸಿ ಅವನಿಗೆ ಬಹಳ ಆನಂದವಾಯಿತು. ॥28॥

(ಶ್ಲೋಕ - 29)

ಮೂಲಮ್

ಲಬ್ಧ್ವಾ ಸುದುರ್ಲಭಮಿದಂ ಬಹುಸಂಭವಾಂತೇ
ಮಾನುಷ್ಯಮರ್ಥದಮನಿತ್ಯಮಪೀಹ ಧೀರಃ ।
ತೂರ್ಣಂ ಯತೇತ ನಪತೇದನುಮೃತ್ಯು ಯಾವ-
ನ್ನಿಃಶ್ರೇಯಸಾಯ ವಿಷಯಃ ಖಲು ಸರ್ವತಃ ಸ್ಯಾತ್ ॥

ಅನುವಾದ

ಈ ಮನುಷ್ಯಶರೀರವು ಅತ್ಯಂತ ದುರ್ಲಭವಾಗಿದೆ. ಅನೇಕ ಜನ್ಮಗಳ ಬಳಿಕ ಭಗವಂತನ ಅಸೀಮ ಕೃಪೆಯಿಂದ ಪ್ರಾಪ್ತವಾಗಿದೆ. ಇದರಿಂದ ಪರಮ ಪುರುಷಾರ್ಥ ಸ್ವರೂಪೀ ಪರಮಾತ್ಮನ ಪ್ರಾಪ್ತಿಯಾಗಬಲ್ಲದು. ಜೊತೆಗೆ ಇದು ಅನಿತ್ಯವೂ ಆಗಿದೆ. ಇಂತಹ ಅಮೂಲ್ಯ ಮನುಷ್ಯ ಜೀವನವನ್ನು ಪಡೆದ ಬಳಿಕ ಶರೀರವನ್ನು ಮೃತ್ಯವು ಬಂದು ನುಂಗಿಬಿಡುವ ಮೊದಲೇ ಭಗವತ್ಪ್ರಾಪ್ತಿರೂಪೀ ತನ್ನ ಪರಮ ಶ್ರೇಯಸ್ಸನ್ನು ಮಾಡಿಕೊಳ್ಳುವುದರಲ್ಲೇ ಮನುಷ್ಯತ್ವವಿದೆ ಎಂದು ಬುದ್ಧಿವಂತರು ತಿಳಿಯಬೇಕು. ಏಕೆಂದರೆ, ವಿಷಯ ಭೋಗಗಳಾದರೋ ಎಲ್ಲ ಯೋನಿಗಳಲ್ಲಿಯೂ ಸಿಗುತ್ತವೆ. ಅದರಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆಯಬಾರದು. ॥29॥

(ಶ್ಲೋಕ - 30)

ಮೂಲಮ್

ಏವಂ ಸಂಜಾತವೈರಾಗ್ಯೋ ವಿಜ್ಞಾನಾಲೋಕ ಆತ್ಮನಿ ।
ವಿಚರಾಮಿ ಮಹೀಮೇತಾಂ ಮುಕ್ತಸಂಗೋನಹಂಕೃತಿಃ ॥

ಅನುವಾದ

ಎಲೈ ರಾಜನೇ! ಈ ವಿಧವಾಗಿ ನನಗೆ ವೈರಾಗ್ಯ ಉಂಟಾಯಿತು. ಅಂತಃಕರಣದಲ್ಲಿ ವಿಜ್ಞಾನದ ಪ್ರಕಾಶ ಹರಡಿಕೊಂಡಿತು. ಈಗ ನಾನು ಅಹಂಕಾರವನ್ನು ಬಿಟ್ಟು ಈ ಭೂತಲದಲ್ಲಿ ಸ್ವಚ್ಛಂದವಾಗಿ ವಿಚರಿಸುತ್ತೇನೆ. ॥30॥

(ಶ್ಲೋಕ - 31)

ಮೂಲಮ್

ನ ಹ್ಯೇಕಸ್ಮಾತ್ ಗುರೋರ್ಜ್ಞಾನಂ ಸುಸ್ಥಿರಂ ಸ್ಯಾತ್ಸುಪುಷ್ಕಲಮ್ ।
ಬ್ರಹ್ಮೈತದದ್ವಿತೀಯಂ ವೈ ಗೀಯತೇ ಬಹುಧರ್ಷಿಭಿಃ ॥

ಅನುವಾದ

ಈ ಪ್ರಕಾರ ಒಬ್ಬನೇ ಗುರುವಿನಿಂದ ಪಡೆಯುವ ಜ್ಞಾನವು ಸುಸ್ಥಿರವೂ, ಪುಷ್ಕಳ ವಿಚಾರವುಳ್ಳದ್ದೂ ಆಗಿರುವುದಿಲ್ಲ. ಇದೆಲ್ಲವನ್ನು ನಾನು ನಿನಗೆ ಅರುಹಿದೆನು. ಒಂದೇ ಅದ್ವಿತೀಯ ಬ್ರಹ್ಮನ ಕುರಿತು ಋಷಿಗಳು ಅನೇಕ ರೀತಿಯಿಂದ ವರ್ಣಿಸಿರುವರು. ॥31॥

(ಶ್ಲೋಕ - 32)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಇತ್ಯುಕ್ತ್ವಾ ಸ ಯದುಂ ವಿಪ್ರಸ್ತಮಾಮಂತ್ರ್ಯಗಭೀರಧೀಃ ।
ವಂದಿತೋಭ್ಯರ್ಥಿತೋ ರಾಜ್ಞಾ ಯಯೌ ಪ್ರೀತೋ ಯಥಾಗತಮ್ ॥

(ಶ್ಲೋಕ - 33)

ಮೂಲಮ್

ಅವಧೂತವಚಃ ಶ್ರುತ್ವಾ ಪೂರ್ವೇಷಾಂ ನಃ ಸ ಪೂರ್ವಜಃ ।
ಸರ್ವಸಂಗವಿನಿರ್ಮುಕ್ತಃ ಸಮಚಿತ್ತೋ ಬಭೂವ ಹ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಉದ್ಧವನೇ! ಆಳವಾದ ಬುದ್ಧಿಯುಳ್ಳ ಅವಧೂತ ದತ್ತಾತ್ರೇಯರು ಯದುರಾಜನಿಗೆ ಹೀಗೆ ಉಪದೇಶಿಸಿದರು. ಯದುವು ಅವರನ್ನು ಪೂಜಿಸಿ, ವಂದಿಸಿಕೊಂಡನು. ದತ್ತಾತ್ರೇಯರು ಅವನಿಂದ ಬೀಳ್ಕೊಂಡು ತುಂಬಾ ಸಂತೋಷವಾಗಿ ತಮ್ಮ ಇಚ್ಛಾನುಸಾರ ದಯಮಾಡಿಸಿದರು. ನಮ್ಮ ಪೂರ್ವಜರ ಪೂರ್ವಜನೂ ಆದ ಯದುರಾಜರು ಅವಧೂತ ದತ್ತಾತ್ರೇಯರ ಈ ಮಾತುಗಳನ್ನು ಆಲಿಸಿ ಸಮಸ್ತ ಆಸಕ್ತಿಗಳಿಂದ ಬಿಡುಗಡೆಹೊಂದಿ ಸಮದರ್ಶಿಗಳಾದರು. (ಹೀಗೆಯೇ ನೀನೂ ಕೂಡ ಸಮಸ್ತ ಆಸಕ್ತಿಗಳನ್ನು ಪರಿತ್ಯಜಿಸಿ ಸಮದರ್ಶಿಯಾಗಬೇಕು.) ॥32-33॥

ಅನುವಾದ (ಸಮಾಪ್ತಿಃ)

ಒಂಭತ್ತನೆಯ ಅಧ್ಯಾಯವು ಮುಗಿಯಿತು. ॥9॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ನವಮೋಽಧ್ಯಾಯಃ ॥9॥