೦೮

[ಎಂಟನೆಯ ಅಧ್ಯಾಯ]

ಭಾಗಸೂಚನಾ

ಅವಧೂತೋಪಾಖ್ಯಾನ ಹೆಬ್ಬಾವಿನಿಂದ ಪಿಂಗಳೆಯ ತನಕ ಒಂಭತ್ತು ಗುರುಗಳ ಕಥೆ

(ಶ್ಲೋಕ - 1)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಸುಖಮೈಂದ್ರಿಯಕಂ ರಾಜನ್ ಸ್ವರ್ಗೇ ನರಕ ಏವ ಚ ।
ದೇಹಿನಾಂ ಯದ್ಯಥಾದುಃಖಂ ತಸ್ಮಾನ್ನೇಚ್ಛೇತ ತದ್ಬುಧಃ ॥

ಅನುವಾದ

ಅವಧೂತ ದತ್ತಾತ್ರೇಯರು ಹೇಳುತ್ತಾರೆ — ಎಲೈ ರಾಜನೇ! ಇಂದ್ರಿಯಗಳಿಂದ ದೊರೆಯುವ ಸುಖವು ಸ್ವರ್ಗದಲ್ಲಿ ಇರುವಂತೆ ನರಕದಲ್ಲಿಯೂ ಇದೆ. ಪ್ರಯತ್ನವಿಲ್ಲದೆ ದುಃಖಗಳು ಬರುವಂತೆ ಸುಖವೂ ಬರುತ್ತದೆ. ಆದ್ದರಿಂದ ಬುದ್ಧಿವಂತರು ಅದನ್ನು ಬಯಸಬಾರದು. ॥1॥

(ಶ್ಲೋಕ - 2)

ಮೂಲಮ್

ಗ್ರಾಸಂ ಸುಮೃಷ್ಟಂ ವಿರಸಂ ಮಹಾಂತಂ ಸ್ತೋಕಮೇವ ವಾ ।
ಯದೃಚ್ಛಯೈವಾಪತಿತಂ ಗ್ರಸೇದಾಜಗರೋಕ್ರಿಯಃ ॥

ಅನುವಾದ

(ಈಗ ಹೆಬ್ಬಾವಿನ ದೃಷ್ಟಾಂತದಿಂದ ಮೂರು ಶ್ಲೋಕಗಳನ್ನು ಹೇಳುತ್ತಾರೆ) ಯೋಗಿಯು ತಾನೇ ತಾನಾಗಿ ದೊರೆತುದನ್ನು ತಿಂದು ಸಂತುಷ್ಟನಾಗಿರಬೇಕು. ಅದು ಬೇಕಾದರೆ ಮಧುರವಾಗಿರಲೀ, ನೀರಸವಾಗಿರಲೀ, ಹೆಚ್ಚಿರಲೀ, ಕಡಿಮೆಯಿರಲಿ ಹೆಬ್ಬಾವಿನಂತೆ ಜೀವನ - ನಿರ್ವಾಹಗೈದು ಉದಾಸೀನನಾಗಿರಬೇಕು. ॥2॥

(ಶ್ಲೋಕ - 3)

ಮೂಲಮ್

ಶಯೀತಾಹಾನಿ ಭೂರೀಣಿ ನಿರಾಹಾರೋನುಪಕ್ರಮಃ ।
ಯದಿ ನೋಪನಮೇದ್ಗ್ರಾಸೋ ಮಹಾಹಿರಿವ ದಿಷ್ಟಭುಕ್ ॥

ಅನುವಾದ

ಒಂದೊಮ್ಮೆ ಅನೇಕ ದಿನಗಳವರೆಗೆ ಭೋಜನ ಸಿಗದಿದ್ದರೂ ಅದಕ್ಕಾಗಿ ಪ್ರಯತ್ನಿಸಬಾರದು. ಪ್ರಾರಬ್ಧದ ಭೋಗವೆಂದು ತಿಳಿದು ಅಜಗರದಂತೆ ಬಿದ್ದುಕೊಂಡಿರಬೇಕು. ॥3॥

(ಶ್ಲೋಕ - 4)

ಮೂಲಮ್

ಓಜಃಸಹೋಬಲಯುತಂ ಬಿಭ್ರದ್ದೇಹಮಕರ್ಮಕಮ್ ।
ಶಯಾನೋ ವೀತನಿದ್ರಶ್ಚ ನೇಹೇತೇಂದ್ರಿಯವಾನಪಿ ॥

ಅನುವಾದ

ಓಜ (ಮನೋಬಲ) ಸಹ (ಇಂದ್ರಿಯಬಲ) ಬಲ (ಶಾರೀರಿಕಬಲ) ಇವು ಮೂರರಿಂದ ಕೂಡಿದ್ದರೂ, ಇಂದ್ರಿಯಗಳಲ್ಲಿ ಕಾರ್ಯವೆಸಗುವ ಕ್ಷಮತೆ ಇದ್ದರೂ ಮಲಗಿದಂತೆ ಇರಬೇಕು. ॥4॥

(ಶ್ಲೋಕ - 5)

ಮೂಲಮ್

ಮುನಿಃ ಪ್ರಸನ್ನಗಂಭೀರೋ ದುರ್ವಿಗಾಹ್ಯೋ ದುರತ್ಯಯಃ ।
ಅನಂತಪಾರೋ ಹ್ಯಕ್ಷೋಭ್ಯಃ ಸ್ತಿಮಿತೋದ ಇವಾರ್ಣವಃ ॥

ಅನುವಾದ

(ಸಮುದ್ರದ ದೃಷ್ಟಾಂತವನ್ನು ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ) ಮುನಿಯಾದವನು ಸಮುದ್ರದಂತೆ ಪ್ರಸನ್ನ ಮತ್ತು ಗಂಭೀರನಾಗಿರಬೇಕು. ಅವನ ಭಾವ ಅಗಾಧವಾಗಿರಬೇಕು. ಅವನು ಪ್ರಭಾವಶಾಲಿಯಾಗಿರುತ್ತಾನೆ. ಅವನನ್ನು ಅತಿಕ್ರಮಿಸಲು ಕಠಿಣವಾಗಿರುತ್ತದೆ. ಅವನನ್ನು ಕಾಮ, ಕ್ರೋಧ ಮುಂತಾದ ಯಾವ ಶತ್ರುಗಳೂ ವಿಚಲಿತಗೊಳಿಸಲಾರವು. ನಿಶ್ಚಲ, ಪ್ರಶಾಂತ ಸಮುದ್ರದಂತೆ ಯಾವಾಗಲೂ ಇರುವ ಶಾಂತಿಯು ಅವನಲ್ಲಿ ಪ್ರತ್ಯಕ್ಷವಾಗಿರುತ್ತದೆ. ॥5॥

(ಶ್ಲೋಕ - 6)

ಮೂಲಮ್

ಸಮೃದ್ಧಕಾಮೋ ಹೀನೋ ವಾ ನಾರಾಯಣಪರೋ ಮುನಿಃ ।
ನೋತ್ಸರ್ಪೇತ ನ ಶುಷ್ಯೇತ ಸರಿದ್ಭಿರಿವ ಸಾಗರಃ ॥

ಅನುವಾದ

ಸಮುದ್ರದಲ್ಲಿ ನದಿಗಳ ನೀರು ಬಂದು ಸೇರಿದರೂ ಸಮುದ್ರವು ತನ್ನ ಎಲ್ಲೆಯನ್ನು ಮೀರುವುದಿಲ್ಲ, ನೀರು ಬಾರದಿದ್ದರೂ ಒಣಗುವುದಿಲ್ಲ. ಹೀಗೆಯೇ ಮುನಿಯೂ ಕೂಡ ಸಮೃದ್ಧಿಯಿಂದ ಕೂಡಿದ್ದರೂ ಉಬ್ಬುವುದಿಲ್ಲ, ಸಮೃದ್ಧಿಹೀನನಾದರೂ ಕುಗ್ಗುವುದಿಲ್ಲ. ಸಮುದ್ರದಂತೆ ಎರಡೂ ಸ್ಥಿತಿಯಲ್ಲಿ ಒಂದೇ ರೀತಿಯಾಗಿರುತ್ತಾನೆ. ॥6॥

(ಶ್ಲೋಕ - 7)

ಮೂಲಮ್

ದೃಷ್ಟ್ವಾ ಸಿಯಂ ದೇವಮಾಯಾಂ ತದ್ಭಾವೈರಜಿತೇಂದ್ರಿಯಃ ।
ಪ್ರಲೋಭಿತಃ ಪತತ್ಯಂಧೇ ತಮಸ್ಯಗ್ನೌ ಪತಂಗವತ್ ॥

ಅನುವಾದ

(ಈಗ ಪತಂಗದ (ದೀಪದಹುಳು) ದೃಷ್ಟಾಂತವನ್ನು ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ.) ದೀಪದ ಹುಳವು ಬೆಂಕಿಗೆ ಆಕರ್ಷಿತನಾಗಿ ಬೆಂಕಿಯಲ್ಲಿ ಬಿದ್ದು ಸಾಯುವಂತೆಯೇ ಅಜಿತೇಂದ್ರಿಯ (ಇಂದ್ರಿಯಗಳ ಗುಲಾಮ) ವ್ಯಕ್ತಿಯು ದೇವಮಾಯಾರೂಪೀ ಸೀಯನ್ನು ನೋಡಿ, ಅವಳ ಮೋಹದಲ್ಲಿ ಮೋಸಹೋಗಿ ಅಂಧಕಾರಮಯ ನರಕದಲ್ಲಿ ಬೀಳುತ್ತಾನೆ. ॥7॥

(ಶ್ಲೋಕ - 8)

ಮೂಲಮ್

ಯೋಷಿದ್ಧಿರಣ್ಯಾಭರಣಾಂಬರಾದಿ-
ದ್ರವ್ಯೇಷು ಮಾಯಾರಚಿತೇಷು ಮೂಢಃ ।
ಪ್ರಲೋಭಿತಾತ್ಮಾ ಹ್ಯುಪಭೋಗಬುದ್ಧ್ಯಾ
ಪತಂಗ ವನ್ನಶ್ಯತಿ ನಷ್ಟದೃಷ್ಟಿಃ ॥

ಅನುವಾದ

ಕಾಮಿನಿ, ಕಾಂಚನ, ಆಭೂಷಣ, ವಸ್ತ್ರ ಮುಂತಾದ ಇರುವ ಎಲ್ಲ ದ್ರವ್ಯಗಳು ಮಾಯಾ ನಿರ್ಮಿತವಾಗಿವೆ. ಮೂಢಬುದ್ಧಿ ಮನುಷ್ಯನು ಉಪಭೋಗ ಬುದ್ಧಿಯಿಂದ ಅವುಗಳಲ್ಲಿ ಆಸಕ್ತನಾಗಿ ತನ್ನ ವಿವೇಕವನ್ನು ಕಳೆದುಕೊಳ್ಳುತ್ತಾನೆ. ದೀಪದ ಹುಳುವಿನಂತೆ ಸ್ವತಃ ಅವುಗಳಲ್ಲಿ ಬಿದ್ದು ತನ್ನ ನಾಶವನ್ನು ಮಾಡಿಕೊಳ್ಳುತ್ತಾನೆ. ॥8॥

(ಶ್ಲೋಕ - 9)

ಮೂಲಮ್

ಸ್ತೋಕಂ ಸ್ತೋಕಂ ಗ್ರಸೇದ್ ಗ್ರಾಸಂ ದೇಹೋ ವರ್ತೇತ ಯಾವತಾ ।
ಗೃಹಾನಹಿಂಸನ್ನಾತಿಷ್ಠೇತ್ವೃತ್ತಿಂ ಮಾಧುಕರೀಂ ಮುನಿಃ ॥

ಅನುವಾದ

(ಈಗ ಭ್ರಮರ (ದುಂಬಿ)ದ ಉದಾಹರಣೆಯನ್ನು ಎರಡು ಶ್ಲೋಕಗಳಲ್ಲಿ ಕೊಡುತ್ತಾರೆ) ಭ್ರಮರವು ಹೂವುಗಳ ಮೇಲೆ ಹಾರಾಡುತ್ತಾ ಪರಾಗವನ್ನು ಗ್ರಹಿಸುವಂತೆ ಮುನಿಯಾದವನು ಅನೇಕ ಮನೆಗಳಿಂದ ಸ್ವಲ್ಪ-ಸ್ವಲ್ಪ ಅನ್ನವನ್ನು ಬೇಡಿತರಬೇಕು.* ಅದರಿಂದ ಶರೀರ ನಿರ್ವಾಹವೂ ನಡೆದು, ಯಾರಿಗೂ ಕೊಡಲು ಕಷ್ಟವಾಗುವುದಿಲ್ಲ. ಈ ಪ್ರಕಾರ ಮಧುಕರೀ ವೃತ್ತಿಯನ್ನು ಆಶ್ರಯಿಸಬೇಕು. ॥9॥

ಟಿಪ್ಪನೀ
  • ಇಲ್ಲದಿದ್ದರೆ ಒಂದೇ ಕಮಲದ ಗಂಧದಲ್ಲಿ ಆಸಕ್ತವಾದ ಭ್ರಮರವು ರಾತ್ರಿಯಲ್ಲಿ ಮುಚ್ಚಿಕೊಂಡ ಆ ಕಮಲದಲ್ಲಿ ಸಿಕ್ಕಿಕೊಂಡು ಸತ್ತುಹೋಗುವಂತೆ, ಸ್ವಾದವಾಸನೆಯಿಂದ ಒಂದೇ ಮನೆಯಲ್ಲಿ ಅನ್ನ ತಿನ್ನುವುದರಿಂದ ಸಾಂಸರ್ಗಿಕ ಮೋಹದಲ್ಲಿ ಸಿಕ್ಕಿಕೊಂಡು ಯತಿಯು ಭ್ರಷ್ಟನಾಗಿ ಹೋಗುವನು.

(ಶ್ಲೋಕ - 10)

ಮೂಲಮ್

ಅಣುಭ್ಯಶ್ಚ ಮಹದ್ಭ್ಯಶ್ಚ ಶಾಸೇಭ್ಯಃ ಕುಶಲೋ ನರಃ ।
ಸರ್ವತಃ ಸಾರಮಾದದ್ಯಾತ್ ಪುಷ್ಪೇಭ್ಯ ಇವ ಷಟ್ಪದಃ ॥

ಅನುವಾದ

ದುಂಬಿಯು ಹೂವುಗಳಿಂದ ಸಾರ-ರಸ ಗ್ರಹಿಸುವಂತೆ ಕುಶಲನಾದ ಮನುಷ್ಯನು ಎಲ್ಲ ಹಿರಿಯ-ಕಿರಿಯ ಶಾಸ್ತ್ರಗಳಿಂದ ಸಾರವಾದ ಮಾತನ್ನು ತೆಗೆದುಕೊಳ್ಳಬೇಕು. (ವಿವಾದದಿಂದ ದೂರವುಳಿಯಬೇಕು.) ॥10॥

(ಶ್ಲೋಕ - 11)

ಮೂಲಮ್

ಸಾಯಂತನಂ ಶ್ವಸ್ತನಂ ವಾ ನ ಸಂಗೃಹ್ಣೀತ ಭಿಕ್ಷಿತಮ್ ।
ಪಾಣಿಪಾತ್ರೋದರಾಮತ್ರೋ ಮಕ್ಷಿಕೇವ ನ ಸಂಗ್ರಹೀ ॥

(ಶ್ಲೋಕ - 12)

ಮೂಲಮ್

ಸಾಯಂತನಂ ಶ್ವಸ್ತನಂ ವಾ ನ ಸಂಗೃಹ್ಣೀತ ಭಿಕ್ಷುಕಃ ।
ಮಕ್ಷಿಕಾ ಇವ ಸಂಗೃಹ್ಣನ್ ಸಹ ತೇನ ವಿನಶ್ಯತಿ ॥

ಅನುವಾದ

(ಈಗ ಜೇನುನೋಣದ ದೃಷ್ಟಾಂತವನ್ನು ಎರಡು ಶ್ಲೋಕಗಳಲ್ಲಿ ತಿಳಿಸುತ್ತಾರೆ) ಸಂನ್ಯಾಸಿಯಾದವನು ಸಂಜೆಗಾಗಿ ಅಥವಾ ಮರುದಿನಕ್ಕಾಗಿ ಭಿಕ್ಷೆಯನ್ನು ಉಳಿಸಿಡಬಾರದು. ಭಿಕ್ಷೆಯ ಪಾತ್ರದ ಸ್ಥಾನದಲ್ಲಿ ಕೇವಲ ಕೈ ಮತ್ತು ಇಡುವುದಕ್ಕಾಗಿ ಹೊಟ್ಟೆಯೇ ಇರಬೇಕು. ಏಕೆಂದರೆ, ಜೇನುನೊಣವು ಜೇನನ್ನು ಸಂಗ್ರಹಿಸಿದರೆ ಜೇನಿನ ಜೊತೆಗೆ ಅದರ ಜೀವನವು ಆಪತ್ತಿಗೆ ಗುರಿಯಾಗುವುದನ್ನು ಪ್ರತ್ಯಕ್ಷವಾಗಿ ನೋಡಲಾಗುತ್ತದೆ. ಇದನ್ನು ಅರಿತುಕೊಂಡು ಸಂನ್ಯಾಸಿಯು ಯಾವುದೇ ರೀತಿಯ ಸಂಗ್ರಹ ಮಾಡಬಾರದು. ॥11-12॥

ಮೂಲಮ್

(ಶ್ಲೋಕ - 13)
ಪದಾಪಿ ಯುವತೀಂ ಭಿಕ್ಷುರ್ನ ಸ್ಪೃಶೇದ್ದಾರವೀಮಪಿ ।
ಸ್ಪೃಶನ್ ಕರೀವ ಬದ್ಧ್ಯೇತ ಕರಿಣ್ಯಾ ಅಂಗಸಂಗತಃ ॥

ಅನುವಾದ

(ಈಗ ಆನೆಯ ದೃಷ್ಟಾಂತವನ್ನು ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ) ಸಂನ್ಯಾಸಿಯಾದವನು ಎಲ್ಲಿಯವರೆಗೆಂದರೆ ಮರದಿಂದ ಮಾಡಿದ ಸ್ತ್ರೀಯನ್ನೂ ಕೂಡ ಕಾಲಿನಿಂದಲೂ ಮುಟ್ಟಬಾರದು. ಇಲ್ಲದಿದ್ದರೆ ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಖೆಡ್ಡಾದಲ್ಲಿ ಬಿದ್ದು ಬಂಧಿತವಾಗುವಂತೆ* ಅವನೂ ಮೋಸಹೋಗುತ್ತಾನೆ. ॥13॥

ಟಿಪ್ಪನೀ
  • ಕಾಡಾನೆಗಳನ್ನು ಹಿಡಿಯಲು ಮಾಡಿದ ಕಂದಕಕ್ಕೆ ಖೆಡ್ಡಾ ಎಂದು ಹೇಳುತ್ತಾರೆ. ಕಂದಕವನ್ನು ಆಳವಾಗಿ ತೋಡಿ, ಅದನ್ನು ಬಿದಿರು ಹುಲ್ಲಿನಿಂದ ಮುಚ್ಚಿ ಅದರ ಮೇಲೆ ಮರದಿಂದ ಮಾಡಿದ ಹೆಣ್ಣಾನೆಯನ್ನು ನಿಲ್ಲಿಸಿಡುತ್ತಾರೆ. ಅದನ್ನು ದೂರದಿಂದ ನೋಡಿದ ಗಂಡುಸಲಗ ಮರದ ಆನೆಯನ್ನು ನಿಜಆನೆಯೆಂದೇ ಭ್ರಮಿಸಿ ಬಂದು ಖೆಡ್ಡದಲ್ಲಿ ಬಿದ್ದು ಪರಾಧೀನವಾಗುತ್ತದೆ. ಅದಕ್ಕಾಗಿಯೇ ಸಂನ್ಯಾಸಿಯು ಮರದ ಹೆಣ್ಣು ಬೊಂಬೆಯನ್ನೂ ಮುಟ್ಟಬಾರದೆಂದು ತಿಳಿಸಲಾಗಿದೆ.

(ಶ್ಲೋಕ - 14)

ಮೂಲಮ್

ನಾಧಿಗಚ್ಛೇತ್ ಸಿಯಂ ಪ್ರಾಜ್ಞಃ ಕರ್ಹಿಚಿನ್ಮೃತ್ಯುಮಾತ್ಮನಃ ।
ಬಲಾಧಿಕೈಃ ಸ ಹನ್ಯೇತ ಗಜೈರನ್ಯೈರ್ಗಜೋ ಯಥಾ ॥

ಅನುವಾದ

ಕದಾಚಿತ್ ಸ್ತ್ರೀಯ ರೂಪದಲ್ಲಿ ತನ್ನ ಮೃತ್ಯುವೂ ಕೂಡ ಆಗಬಹುದು, ಅದಕ್ಕಾಗಿ ವಿವೇಕಿಯಾದ ಪುರುಷನು ಅವಳ ಬಳಿಗೆ ಹೋಗಬಾರದು. ಏಕೆಂದರೆ ಹೆಣ್ಣಾನೆಯಲ್ಲಿ ಆಸಕ್ತವಾದ ಗಂಡಾನೆಯು ಬೇರೆ ಬಲಿಷ್ಠ ಆನೆಗಳಿಂದ ಕೊಲ್ಲಲ್ಪಡುತ್ತದೆ. ಹಾಗೆಯೇ ಅವನೂ ಮೃತ್ಯುವಿಗೆ ತುತ್ತಾಗುತ್ತಾನೆ. ॥14॥

(ಶ್ಲೋಕ - 15)

ಮೂಲಮ್

ನ ದೇಯ ನೋಪಭೋಗ್ಯಂ ಚ ಲುಬ್ಧೈರ್ಯದ್ದುಃಖಸಂಚಿತಮ್ ।
ಭುಂಕ್ತೇ ತದಪಿ ತಚ್ಚಾನ್ಯೋ ಮಧುಹೇವಾರ್ಥವಿನ್ಮಧು ॥

ಅನುವಾದ

(ಈಗ ಜೇನು ತೆಗೆಯುವವನ ದೃಷ್ಟಾಂತವನ್ನು ಕೊಡುತ್ತಾರೆ) ಲೋಭಿಮನುಷ್ಯನು ಕೂಡಿಟ್ಟ ಧನವನ್ನು ಬೇರೆ ಯಾರಿಗೂ ದಾನ ಮಾಡುವುದಿಲ್ಲ, ತಾನೂ ಭೋಗಿಸುವುದೂ ಇಲ್ಲ. ಅವನ ಧನವನ್ನು ಬೇರೆ ಯಾರೋ ಭೋಗಿಸುತ್ತಾನೆ. ಜೇನು ತೆಗೆಯುವವನ ಬಳಿ ಜೇನಿದೆ ಎಂದು ತಿಳಿದಾಗ ಬೇರೆಯವರು ಏನಾದರೂ ಉಪಾಯ ಮಾಡಿ ಅವನಿಂದ ತೆಗೆದುಕೊಳ್ಳುತ್ತಾರೆ. ಅವನು ಜೇನಿನ ಉಪ ಭೋಗದಿಂದ ವಂಚಿತನೇ ಆಗಿರುತ್ತಾನೆ. ॥15॥

(ಶ್ಲೋಕ - 16)

ಮೂಲಮ್

ಸುದುಃಖೋಪಾರ್ಜಿತೈರ್ವಿತ್ತೈರಾಶಾಸಾನಾಂ ಗೃಹಾಶಿಷಃ ।
ಮಧುಹೇವಾಗ್ರತೋ ಭುಂಕ್ತೇ ಯತಿರ್ವೈ ಗೃಹಮೇಧಿನಾಮ್ ॥

ಅನುವಾದ

ಭೋಗದ ಕಾಮನೆಯುಳ್ಳವರು ಕೇವಲ ತಮ್ಮ ಸುಖ ಭೋಗದ ಆಸೆಯಿಂದ ಬಹಳ ಕಷ್ಟಪಟ್ಟು ಧನವನ್ನು ಗಳಿಸುತ್ತಾರೆ. ಅವರ ಮನೆಯಲ್ಲಿ ಸಿದ್ಧವಾದ ಅನ್ನವನ್ನು ಜೇನು ತೆಗೆಯವವನ ಜೇನನ್ನು ಬೇರೆ ಜನರೇ ಉಪಭೋಗಿಸುವಂತೆ ಸಂನ್ಯಾಸಿಗಳು ಅವರಿಂದ ಮೊದಲೇ ಊಟಮಾಡುತ್ತಾರೆ. (ಧಾರ್ಮಿಕ ಭಾವನೆಯುಳ್ಳವರಾದರೋ ಎಲ್ಲ ಧನವು ಜನತಾಜನಾರ್ದನದ್ದಾಗಿದೆ ಎಂಬ ಭಾವನೆಯನ್ನಿರಿಸಿ ಅದನ್ನು ಸದ್ವಿನಿಯೋಗ ಮಾಡಿಯೇ ಮಾಡುತ್ತಾರೆ.) ॥16॥

ಮೂಲಮ್

(ಶ್ಲೋಕ - 17)
ಗ್ರಾಮ್ಯಗೀತಂ ನ ಶೃಣುಯಾದ್ಯತಿರ್ವನಚರಃ ಕ್ವಚಿತ್ ।
ಶಿಕ್ಷೇತ ಹರಿಣಾದ್ಬದ್ಧಾನ್ಮೃಗಯೋರ್ಗೀತಮೋಹಿತಾತ್ ॥

ಅನುವಾದ

ವನವಾಸೀ ಸಂನ್ಯಾಸಿಯು ಎಂದೂ ವಿಷಯ-ಸಂಬಂಧೀ ಗ್ರಾಮ್ಯಗೀತೆಗಳನ್ನು ಕೇಳಬಾರದು. ವ್ಯಾಧನ ಹಾಡಿನಿಂದ ಮೋಹಿತವಾಗಿ ಬಂಧಿತವಾಗುವ ಜಿಂಕೆಯಿಂದ ಈ ಪಾಠವನ್ನು ಸಂನ್ಯಾಸಿಯು ಕಲಿತುಕೊಳ್ಳಬೇಕು. ಇದನ್ನು ನಾನು ಜಿಂಕೆಯಿಂದ ಕಲಿತುಕೊಂಡೆ. ॥17॥

(ಶ್ಲೋಕ - 18)

ಮೂಲಮ್

ನೃತ್ಯವಾದಿತ್ರಗೀತಾನಿ ಜುಷನ್ ಗ್ರಾಮ್ಯಾಣಿ ಯೋಷಿತಾಮ್ ।
ಆಸಾಂ ಕ್ರೀಡನಕೋ ವಶ್ಯ ಋಷ್ಯಶೃಂಗೋ ಮೃಗೀಸುತಃ ॥

ಅನುವಾದ

ಜಿಂಕೆಯ ಗರ್ಭದಲ್ಲಿ ಹುಟ್ಟಿದ ಋಷ್ಯಶೃಂಗ ಮುನಿಯು ಸ್ತ್ರೀಯರ ಹಾಡು-ಕುಣಿತಗಳನ್ನು ನೋಡಿ ಕೇಳಿ ಅವರಿಗೆ ವಶನಾಗಿ, ಅವರ ಕೈಗೊಂಬೆಯಾದುದು ನಿನಗೆ ತಿಳಿದೇ ಇದೆ. ॥18॥

(ಶ್ಲೋಕ - 19)

ಮೂಲಮ್

ಜಿಹ್ವಯಾತಿಪ್ರಮಾಥಿನ್ಯಾ ಜನೋ ರಸವಿಮೋಹಿತಃ ।
ಮೃತ್ಯುಮೃಚ್ಛತ್ಯಸದ್ಬುದ್ಧಿರ್ಮೀನಸ್ತು ಬಡಿಶೈರ್ಯಥಾ ॥

ಅನುವಾದ

ಈಗ ನಾನು ನಿನಗೆ ಮೀನಿನಿಂದ ಕಲಿತ ಪಾಠವನ್ನು ತಿಳಿಸುತ್ತೇನೆ. ಗಾಳದ ತುದಿಯಲ್ಲಿದ್ದ ಮಾಂಸದ ತುಂಡಿನ ಆಸೆಯಿಂದ ತನ್ನ ಪ್ರಾಣವನ್ನೇ ಕಳೆದುಕೊಳ್ಳುವಂತೆ, ಜಿಹ್ವಾ ಚಾಪಲ್ಯಕ್ಕೆ ಸಿಲುಕಿದ ದುರ್ಬುದ್ದಿಯುಳ್ಳ ಮನುಷ್ಯನು ಮನಸ್ಸನ್ನು ಮಥಿಸಿ ವ್ಯಾಕುಲಗೊಳಿಸುವ ತನ್ನ ಜಿಹ್ವೆಗೆ ವಶನಾಗಿ ಹೋಗುತ್ತಾನೆ ಹಾಗೂ ಸತ್ತುಹೋಗುತ್ತಾನೆ. ॥19॥

(ಶ್ಲೋಕ - 20)

ಮೂಲಮ್

ಇಂದ್ರಿಯಾಣಿ ಜಯಂತ್ಯಾಶು ನಿರಾಹಾರಾ ಮನೀಷಿಣಃ ।
ವರ್ಜಯಿತ್ವಾ ತು ರಸನಂ ತನ್ನಿರನ್ನಸ್ಯ ವರ್ಧತೇ ॥

ಅನುವಾದ

ವಿವೇಕಿ ಪುರುಷನು ಭೋಜನವನ್ನು ನಿಲ್ಲಿಸಿ, ಬೇರೆ ಇಂದ್ರಿಯಗಳ ಮೇಲೆ ಬೇಗನೆ ವಿಜಯವನ್ನು ಪಡೆದುಕೊಳ್ಳುತ್ತಾನೆ. ಆದರೆ ಇದರಿಂದ ಅವನ ರಸನೇಂದ್ರಿಯ (ನಾಲಿಗೆ) ವಶವಾಗುವುದಿಲ್ಲ. ಅದಾದರೋ ಊಟ ನಿಲ್ಲಿಸುವುದರಿಂದ ಇನ್ನೂ ಪ್ರಬಲವಾಗುತ್ತದೆ. ॥20॥

(ಶ್ಲೋಕ - 21)

ಮೂಲಮ್

ತಾವಜ್ಜಿತೇಂದ್ರಿಯೋ ನ ಸ್ಯಾದ್ವಿಜಿತಾನ್ಯೇಂದ್ರಿಯಃ ಪುಮಾನ್ ।
ನ ಜಯೇದ್ರಸನಂ ಯಾವಜ್ಜಿತಂ ಸರ್ವಂ ಜಿತೇ ರಸೇ ॥

ಅನುವಾದ

ಮನುಷ್ಯನು ಎಲ್ಲ ಇಂದ್ರಿಯಗಳ ಮೇಲೆ ವಿಜಯಪಡೆದ ಬಳಿಕವೂ ರಸನೇಂದ್ರಿಯವನ್ನು ತನ್ನ ವಶಪಡಿಸಿಕೊಳ್ಳುವ ತನಕ ಅವನು ಜಿತೇಂದ್ರಿಯನಾಗಲಾರನು. ರಸನೇಂದ್ರಿಯವನ್ನು ವಶಪಡಿಸಿಕೊಂಡಾಗಲಂತೂ ಎಲ್ಲ ಇಂದ್ರಿಯಗಳನ್ನು ವಶವಾದಂತೆಯೇ ಸರಿ. ॥21॥

(ಶ್ಲೋಕ - 22)

ಮೂಲಮ್

ಪಿಂಗಲಾ ನಾಮ ವೇಶ್ಯಾಸೀದ್ವಿದೇಹನಗರೇ ಪುರಾ ।
ತಸ್ಯಾ ಮೇ ಶಿಕ್ಷಿತಂ ಕಿಂಚಿನ್ನಿಬೋಧ ನೃಪನಂದನ ॥

ಅನುವಾದ

ಎಲೈ ರಾಜನೇ! ಹಿಂದಿನಕಾಲದಲ್ಲಿ ವಿದೇಹನಗರ ಮಿಥಿಲೆಯಲ್ಲಿ ಓರ್ವ ಪಿಂಗಳಾ ಹೆಸರಿನ ವೇಶ್ಯೆ ಇರುತ್ತಿದ್ದಳು. ಅವಳಿಂದ ಕೆಲವನ್ನು ನಾನು ಕಲಿತುಕೊಂಡಿರುವುದನ್ನು ನಿನಗೆ ಹೇಳುತ್ತೇನೆ. ಮನಸ್ಸಿಟ್ಟುಕೇಳು. ॥22॥

(ಶ್ಲೋಕ - 23)

ಮೂಲಮ್

ಸಾ ಸ್ವೈರಿಣ್ಯೇಕದಾ ಕಾಂತಂ ಸಂಕೇತ ಉಪನೇಷ್ಯತೀ ।
ಅಭೂತ್ಕಾಲೇ ಬಹಿರ್ದ್ವಾರಿ ಬಿಭ್ರತೀ ರೂಪಮುತ್ತಮಮ್ ॥

ಅನುವಾದ

ಅವಳು ಸ್ವೇಚ್ಛಾಚಾರಿಣಿಯಾಗಿದ್ದು, ರೂಪವತಿಯೂ ಆಗಿದ್ದಳು. ಒಂದು ದಿನರಾತ್ರೆ ಯಾರೋ ಪುರುಷನನ್ನು ತನ್ನ ರಮಣ ಸ್ಥಾನಕ್ಕೆ ಬರಮಾಡಿಕೊಳ್ಳಲು ತುಂಬಾ ಉತ್ತಮ ವಸ್ತ್ರಾಭೂಷಣಗಳಿಂದ ಅಲಂಕರಿಸಿಕೊಂಡು ಅವಳು ಬಹಳ ಹೊತ್ತು ತನ್ನ ಮನೆಯ ಹೊರಬಾಗಿಲಲ್ಲಿ ನಿಂತಿದ್ದಳು. ॥23॥

(ಶ್ಲೋಕ - 24)

ಮೂಲಮ್

ಮಾರ್ಗ ಆಗಚ್ಛತೋ ವೀಕ್ಷ್ಯ ಪುರುಷಾನ್ ಪುರುಷರ್ಷಭ ।
ತಾನ್ಶುಲ್ಕದಾನ್ವಿತ್ತವತಃ ಕಾಂತಾನ್ ಮೇನೇರ್ಥಕಾಮುಕಾ ॥

ಅನುವಾದ

ಎಲೈ ಪುರುಷಶ್ರೇಷ್ಠ! ಧನದ ಕಾಮನೆಯುಳ್ಳ ಅರ್ಥಲೋಲುಪ ಕಾಮಿನಿಯು ಯಾರೇ ಪುರುಷನು ಅತ್ತಕಡೆಯಿಂದ ಬರುವುದನ್ನು ಕಂಡರೆ, ಇವನು ಯಾರೋ ಶ್ರೀಮಂತನಿರುವನು, ನನಗೆ ಹಣವನ್ನು ಕೊಟ್ಟು ಉಪಭೋಗಿಸಲೆಂದೇ ಈ ಕಡೆ ಬರುತ್ತಿರುವನು ಎಂದು ಯೋಚಿಸುತ್ತಿದ್ದಳು. ॥24॥

(ಶ್ಲೋಕ - 25)

ಮೂಲಮ್

ಆಗತೇಷ್ವಪಯಾತೇಷು ಸಾ ಸಂಕೇತೋಪಜೀವಿನೀ ।
ಅಪ್ಯನ್ಯೋ ವಿತ್ತವಾನ್ಕೋಪಿ ಮಾಮುಪೈಷ್ಯತಿ ಭೂರಿದಃ ॥

ಅನುವಾದ

ಆ ಸಂಕೇತೋಪಜೀವಿಯಾದ ವೇಶ್ಯೆಯು ಪುನಃ ಯಾರಾದರೂ ವಿಟಪುರುಷರನ್ನು ನೋಡುತ್ತಲೇ, ಇವನು ನನ್ನ ಬಳಿಗೆ ಬರುತ್ತಿರುವನು. ನಾನು ಬಯಸಿದಷ್ಟು ಹಣವನ್ನು ಕೊಡುವನು ಎಂದು ಯೋಚಿಸುತ್ತಾಳೆ. ಆದರೆ ಅವನು ಮುಂದಕ್ಕೆ ಹೋದಾಗ, ಈಗಲಂತೂ ಖಂಡಿತವಾಗಿ ಯಾರಾದರೂ ನನಗೆ ಹೇರಳ ಧನವನ್ನು ಕೊಡುವ ಶ್ರೀಮಂತನು ಬಂದೇ ಬರುವನು ಎಂದು ಎಣಿಸಿದಳು. ॥25॥

(ಶ್ಲೋಕ - 26)

ಮೂಲಮ್

ಏವಂ ದುರಾಶಯಾ ಧ್ವಸ್ತನಿದ್ರಾ ದ್ವಾರ್ಯವಲಂಬತೀ ।
ನಿರ್ಗಚ್ಛಂತೀ ಪ್ರವಿಶತೀ ನಿಶೀಥಂ ಸಮಪದ್ಯತ ॥

ಅನುವಾದ

ಅವಳ ಮನಸ್ಸಿನ ಈ ದುರಾಸೆ ಬೆಳೆಯುತ್ತಲೇ ಇತ್ತು. ಅವಳು ಬಹಳ ಹೊತ್ತು ಬಾಗಿಲಲ್ಲಿ ನಿಂತೇ ಇದ್ದಳು. ನಿದ್ದೆಯು ದೂರವಾಯಿತು. ಅವಳು ಒಮ್ಮೆ ಒಳಗೂ ಒಮ್ಮೆ ಹೊರಗೂ ಅಲೆಯುತ್ತಿದ್ದಳು. ಹೀಗೆ ಅರ್ಧರಾತ್ರಿ ಕಳೆದು ಹೋಯಿತು. ॥26॥

(ಶ್ಲೋಕ - 27)

ಮೂಲಮ್

ತಸ್ಯಾ ವಿತ್ತಾಶಯಾ ಶುಷ್ಯದ್ವಕಾಯಾ ದೀನಚೇತಸಃ ।
ನಿರ್ವೇದಃ ಪರಮೋ ಜಜ್ಞೇ ಚಿಂತಾಹೇತುಃ ಸುಖಾವಹಃ ॥

ಅನುವಾದ

ರಾಜನೇ! ನಿಜವಾಗಿಯೂ ಧನದ ಆಸೆಯು ತುಂಬಾ ಕೆಟ್ಟದು. ಶ್ರೀಮಂತರ ದಾರಿ ನೋಡಿ-ನೋಡಿ ಅವಳ ಬಾಯಿ ಒಣಗಿತು, ಚಿತ್ತ ವ್ಯಾಕುಲವಾಯಿತು. ಈಗ ಅವಳಿಗೆ ಈ ವೃತ್ತಿಯಲ್ಲಿ ವೈರಾಗ್ಯ ಉಂಟಾಯಿತು. ಅದರಲ್ಲಿ ದುಃಖ ಬುದ್ಧಿ ಉಂಟಾಯಿತು. ಆ ವಿರಾಗವೇ ಅವಳಿಗೆ ಸುಖಕ್ಕೆ ಕಾರಣವಾಯಿತು. ॥27॥

(ಶ್ಲೋಕ - 28)

ಮೂಲಮ್

ತಸ್ಯಾ ನಿರ್ವಿಣ್ಣಚಿತ್ತಾಯಾ ಗೀತಂ ಶೃಣು ಯಥಾ ಮಮ ।
ನಿರ್ವೇದ ಆಶಾಪಾಶಾನಾಂ ಪುರುಷಸ್ಯ ಯಥಾ ಹ್ಯಸಿಃ ॥

ಅನುವಾದ

ಪಿಂಗಳೆಯ ಚಿತ್ತದಲ್ಲಿ ಈ ಪ್ರಕಾರ ವೈರಾಗ್ಯದ ಭಾವನೆ ಜಾಗ್ರತವಾದಾಗ ಅವಳು ಈ ಗೀತೆಯನ್ನು ಹಾಡಿದಳು. ಅದನ್ನು ಕೇಳು ‘‘ವೈರಾಗ್ಯವೇ ಆಶಾರೂಪೀ ಉರುಳನ್ನು ಕತ್ತರಿಸುವಂತಹ ಹರಿತವಾದ ಖಡ್ಗವಾಗಿದೆ.’’ ವೈರಾಗ್ಯವಿಲ್ಲದೆ ಮನುಷ್ಯನ ದುಃಖದ ನಿವೃತ್ತಿ ಆಗುವುದಿಲ್ಲ.॥28॥

(ಶ್ಲೋಕ - 29)

ಮೂಲಮ್

ನ ಹ್ಯಂಗಾಜಾತನಿರ್ವೇದೋ ದೇಹಬಂಧಂ ಜಿಹಾಸತಿ ।
ಯಥಾ ವಿಜ್ಞಾನರಹಿತೋ ಮನುಜೋ ಮಮತಾಂ ನೃಪ ॥

ಅನುವಾದ

ಪ್ರಿಯರಾಜನೇ! ಯಾರಿಗೆ ವೈರಾಗ್ಯ ಉಂಟಾಗಲಿಲ್ಲವೋ, ಈ ಜಂಜಾಟದಿಂದ ನಿರಾಸಕ್ತನಾಗುವುದಿಲ್ಲವೋ ಆ ಅಜ್ಞಾನಿ ಪುರುಷನು ಮಮತೆಯನ್ನು ಬಿಡಲು ಇಚ್ಛಿಸುವುದಿಲ್ಲ. ಹಾಗೆಯೇ ಈ ಶರೀರಾದಿ ಬಂಧನಗಳನ್ನು ತೊರೆಯಲು ಬಯಸುವುದಿಲ್ಲ. ॥29॥

(ಶ್ಲೋಕ - 30)

ಮೂಲಮ್ (ವಾಚನಮ್)

ಪಿಂಗಲೋವಾಚ

ಮೂಲಮ್

ಅಹೋ ಮೇ ಮೋಹವಿತತಿಂ ಪಶ್ಯತಾವಿಜಿತಾತ್ಮನಃ ।
ಯಾ ಕಾಂತಾದಸತಃ ಕಾಮಂ ಕಾಮಯೇ ಯೇನ ಬಾಲಿಶಾ ॥

ಅನುವಾದ

ಪಿಂಗಳೆಯು ಈ ಗೀತೆಯನ್ನು ಹಾಡಿದಳು ಅಯ್ಯೋ! ನಾನು ಇಂದ್ರಿಯಗಳಿಗೆ ಅಧೀನನಾದೆಯಲ್ಲ! ಇದು ಬಹು ದುಃಖದ ಮಾತಾಗಿದೆ. ನನ್ನ ಮೂರ್ಖತೆಯನ್ನು, ನನ್ನ ಮೋಹದ ವಿಸ್ತಾರವಾದರೋ ನೋಡಿ! ನನ್ನ ಕಾಂತನಲ್ಲದ ಜನರೊಂದಿಗೆ ನಾನು ಕಾಮನೆ ಮಾಡಿದೆನಲ್ಲ! ॥30॥

ಮೂಲಮ್

(ಶ್ಲೋಕ - 31)
ಸಂತಂ ಸಮೀಪೇ ರಮಣಂ ರತಿಪ್ರದಂ
ವಿತ್ತಪ್ರದಂ ನಿತ್ಯಮಿಮಂ ವಿಹಾಯ ।
ಅಕಾಮದಂ ದುಃಖಭಯಾಧಿಶೋಕ-
ಮೋಹಪ್ರದಂ ತುಚ್ಛಮಹಂ ಭಜೇಜ್ಞಾ ॥

ಅನುವಾದ

ನನ್ನ ಪರಮ ಕಾಂತನಾದರೋ ಶಾಶ್ವತವಾಗಿ ನನ್ನ ಬಳಿಯೇ ಇರುವನು. ಅವನು ಪರಮಾನಂದ ಸ್ವರೂಪನೂ, ಸುಖ ಪ್ರದಾತನೂ, ಲಕ್ಷ್ಮೀಪತಿಯೂ ಆಗಿರುವ ಕಾರಣದಿಂದ ಧನವನ್ನೂ ಕೊಡುವವನಾಗಿರುವನು. ನನ್ನ ಹೃದಯದಲ್ಲೇ ವಿರಾಜಮಾನನಾದ ಇಂತಹ ಪ್ರಭುವು ಇರುವಾಗ ಅವನನ್ನು ಬಿಟ್ಟು, ಯಥೇಷ್ಟ ಭೋಗವನ್ನು ಸಂಪಾದಿಸಲು ಅಸಮರ್ಥರೂ, ದುಃಖ, ಭಯ, ಆಧಿ-ವ್ಯಾಧಿ, ಶೋಕ, ಮೋಹ ಇವನ್ನು ಕೊಡುವವರೂ ಆದ ಜನರನ್ನು ನಾನು ಸೇವಿಸಿದೆನಲ್ಲ! ಆದ್ದರಿಂದ ನಾನು ಮೂರ್ಖಳಾಗಿದ್ದೇನೆ. ॥31॥

(ಶ್ಲೋಕ - 32)

ಮೂಲಮ್

ಅಹೋ ಮಯಾತ್ಮಾ ಪರಿತಾಪಿತೋ ವೃಥಾ
ಸಾಂಕೇತ್ಯವೃತ್ತ್ಯಾತಿವಿಗರ್ಹ್ಯವಾರ್ತಯಾ ।
ಸೈಣಾನ್ನರಾದ್ಯಾರ್ಥತೃಷೋನುಶೋಚ್ಯಾತ್
ಕ್ರೀತೇನ ವಿತ್ತಂ ರತಿಮಾತ್ಮನೇಚ್ಛತೀ ॥

ಅನುವಾದ

ನಾನು ಅತ್ಯಂತ ನಿಂದನೀಯ ಆಜೀವಿಕೆಯಾದ ವೇಶ್ಯಾವೃತ್ತಿಯನ್ನು ಆಶ್ರಯಿಸಿದೆ. ವ್ಯರ್ಥವಾಗಿ ನನ್ನ ಶರೀರವನ್ನೂ, ಮನವನ್ನೂ ಮಾರಿಬಿಟ್ಟೆ. ಲಂಪಟರೂ, ಲೋಭಿಗಳೂ, ನಿಂದನೀಯರೂ ಆದ ಮನುಷ್ಯರು ಇದನ್ನು ಕೊಂಡುಕೊಂಡರು. ನಾನು ಇದೇ ಶರೀರದಿಂದ ಧನ ಮತ್ತು ರತಿಸುಖವನ್ನು ಬಯಸಿದೆನಲ್ಲ! ಇದು ಎಂತಹ ದುಃಖದ ಮಾತಾಗಿದೆ. ನನಗೆ ಧಿಕ್ಕಾರವಿರಲಿ! ॥32॥

(ಶ್ಲೋಕ - 33)

ಮೂಲಮ್

ಯದಸ್ಥಿಭಿರ್ನಿರ್ಮಿತವಂಶವಂಶ್ಯ-
ಸ್ಥೂಣಂ ತ್ವಚಾ ರೋಮನಖೈಃ ಪಿನದ್ಧಮ್ ।
ಕ್ಷರನ್ನವದ್ವಾರಮಗಾರಮೇತದ್
ವಿಣ್ಮೂತ್ರಪೂರ್ಣಂ ಮದುಪೈತಿ ಕಾನ್ಯಾ ॥

ಅನುವಾದ

ಕಂಬಗಳನ್ನು ನೆಟ್ಟು ಮನೆಯನ್ನು ನಿಲ್ಲಿಸುವಂತೆ ಬೆನ್ನು ಹುರಿ, ಎಲುಬುಗಳಿಂದ ಈ ಶರೀರವೆಂಬ ಮನೆಯು ನಿರ್ಮಾಣಗೊಂಡಿದೆ. ಇದನ್ನು ನಖ, ಚರ್ಮ, ರೋಮಗಳಿಂದ ಮುಚ್ಚಲಾಗಿದೆ. ಇದಕ್ಕೆ ಇರುವ ಒಂಭತ್ತು ಬಾಗಿಲುಗಳಿಂದ ಯಾವಾಗಲೂ ಮಲ-ಮೂತ್ರ ಮುಂತಾದವುಗಳು ಒಸರುತ್ತಿರುತ್ತವೆ. ಇಂತಹ ಅಸ್ಥಿಪಂಜರವಾದ, ನಿಂದ್ಯವಾದ ಶರೀರವನ್ನೇ ಪ್ರಿಯವೆಂದು ತಿಳಿದು ಸೇವಿಸುವ ಸ್ತ್ರೀಯು ನಾನಲ್ಲದೆ ಬೇರೆ ಯಾರು ಇರಬಲ್ಲಳು? ॥33॥

(ಶ್ಲೋಕ - 34)

ಮೂಲಮ್

ವಿದೇಹಾನಾಂ ಪುರೇ ಹ್ಯಸ್ಮಿನ್ನಹಮೇಕೈವ ಮೂಢಧೀಃ ।
ಯಾನ್ಯಮಿಚ್ಛಂತ್ಯಸತ್ಯಸ್ಮಾದಾತ್ಮದಾತ್ಕಾಮಮಚ್ಯುತಾತ್ ॥

ಅನುವಾದ

ಇದಾದರೋ ವಿದೇಹಿಗಳ ನಗರವಾಗಿದೆ. ಆದರೆ ಇದರಲ್ಲಿ ನಾನೊಬ್ಬಳೇ ಎಲ್ಲರಿಗಿಂತ ಮೂರ್ಖಳೂ, ದುಷ್ಟಳೂ ಆಗಿರುವೆನು. ಏಕೆಂದರೆ, ನಾನೊಬ್ಬಳೇ ಆತ್ಮದಾನೀ, ಅವಿನಾಶೀ ಹಾಗೂ ಪರಮ ಪ್ರಿಯತಮ ಪರಮಾತ್ಮನನ್ನು ಬಿಟ್ಟು ಬೇರೆ ಪುರುಷರ ಅಭಿಲಾಷೆ ಮಾಡುತ್ತಿರುವೆನಲ್ಲ! ॥34॥

(ಶ್ಲೋಕ - 35)

ಮೂಲಮ್

ಸುಹೃತ್ ಪ್ರೇಷ್ಠತಮೋ ನಾಥ ಆತ್ಮಾ ಚಾಯಂ ಶರೀರಿಣಾಮ್ ।
ತಂ ವಿಕ್ರೀಯಾತ್ಮನೈವಾಹಂ ರಮೇನೇನ ಯಥಾ ರಮಾ ॥

ಅನುವಾದ

ನನ್ನ ಹೃದಯದಲ್ಲಿ ವಿರಾಜಮಾನನಾದ ಪ್ರಭುವೇ ಸಮಸ್ತ ಪ್ರಾಣಿಗಳ ಹಿತೈಷಿಯೂ, ಸುಹೃದನೂ, ಪ್ರಿಯತಮನೂ, ಒಡೆಯನೂ, ಆತ್ಮನೂ ಆಗಿರುವನು. ಈಗ ನಾನು ನನ್ನನ್ನೇ ಕೊಟ್ಟುಕೊಂಡು ಅವನನ್ನು ಕೊಂಡುಕೊಳ್ಳುವೆನು. ಅವನೊಡನೆ ಲಕ್ಷ್ಮೀದೇವಿಯು ವಿಹರಿಸುವಂತೆ ನಾನೂ ವಿಹರಿಸುವೆನು. ॥35॥

(ಶ್ಲೋಕ - 36)

ಮೂಲಮ್

ಕಿಯತ್ ಪ್ರಿಯಂ ತೇ ವ್ಯಭಜನ್ ಕಾಮಾ ಯೇ ಕಾಮದಾ ನರಾಃ ।
ಆದ್ಯಂತವಂತೋ ಭಾರ್ಯಾಯಾ ದೇವಾ ವಾ ಕಾಲವಿದ್ರುತಾಃ ॥

ಅನುವಾದ

ಆದಿ ಮತ್ತು ಅಂತ್ಯವುಳ್ಳ ನಶ್ವರವಾದ ಕಾಮೋಪಭೋಗಗಳಾಗಲೀ, ಆ ಕಾಮೋಪ ಭೋಗಗಳನ್ನು ಒದಗಿಸಿಕೊಡುವ ಪುರುಷರಾಗಲೀ, ಕಾಲದಿಂದ ನಷ್ಟರಾಗಿ ಹೋಗುವ ದೇವತೆಗಳಾಗಲೀ, ತಮ್ಮ ಭಾರ್ಯೆಯರಿಗೆ ಯಾವ ಸಂತೋಷವನ್ನು ನೀಡಬಲ್ಲರು? ಪರಮಾತ್ಮನು ದಯಪಾಲಿಸುವ ಆತ್ಮಸುಖದ ಮುಂದೆ ಮನುಷ್ಯರು ಅಥವಾ ದೇವತೆಗಳು ತಮ್ಮ ಭಾರ್ಯೆಯರಿಗೆ ಕೊಡುವ ಸುಖವು ಅತಿ ತುಚ್ಛವಾದುದು. ॥36॥

(ಶ್ಲೋಕ - 37)

ಮೂಲಮ್

ನೂನಂ ಮೇ ಭಗವಾನ್ ಪ್ರೀತೋ ವಿಷ್ಣುಃ ಕೇನಾಪಿ ಕರ್ಮಣಾ ।
ನಿರ್ವೇದೋಯಂ ದುರಾಶಾಯಾ ಯನ್ಮೇ ಜಾತಃ ಸುಖಾವಹಃ ॥

ಅನುವಾದ

ನನ್ನ ಯಾವುದೋ ಶುಭಕರ್ಮದಿಂದ ಭಗವಾನ್ ವಿಷ್ಣುವು ಅವಶ್ಯವಾಗಿ ನನ್ನ ಮೇಲೆ ಪ್ರಸನ್ನನಾಗಿರುವನು. ಅದಕ್ಕಾಗಿಯೇ ದುರಾಸೆಯಿಂದ ನನಗೆ ಈ ವಿಧವಾದ ವೈರಾಗ್ಯ ಉಂಟಾಯಿತು. ನನ್ನ ಈ ವೈರಾಗ್ಯವು ಅವಶ್ಯವಾಗಿ ಸುಖಕೊಡುವಂತಹುದಾದೀತು.॥37॥

(ಶ್ಲೋಕ - 38)

ಮೂಲಮ್

ಮೈವಂ ಸ್ಯುರ್ಮಂದಭಾಗ್ಯಾಯಾಃ ಕ್ಲೇಶಾ ನಿರ್ವೇದಹೇತವಃ ।
ಯೇನಾನುಬಂಧಂ ನಿರ್ಹೃತ್ಯ ಪುರುಷಃ ಶಮಮೃಚ್ಛತಿ ॥

ಅನುವಾದ

ನನಗೆ ದುಃಖ ಉಂಟಾಯಿತು, ಇದೇ ನನಗೆ ವೈರಾಗ್ಯಕ್ಕೆ ಕಾರಣವಾಯಿತು. ಆದ್ದರಿಂದ ನಾನು ಭಾಗ್ಯಹೀನಳಲ್ಲ. ಏಕೆಂದರೆ, ಇದೇ ವೈರಾಗ್ಯದಿಂದ ಮನುಷ್ಯನು ತನ್ನ ಬಂಧನಗಳನ್ನು ಕಳಕೊಂಡು ಪರಮಶಾಂತಿಯನ್ನು ಪಡೆಯುತ್ತಾನೆ.॥38॥

(ಶ್ಲೋಕ - 39)

ಮೂಲಮ್

ತೇನೋಪಕೃತಮಾದಾಯ ಶಿರಸಾ ಗ್ರಾಮ್ಯಸಂಗತಾಃ ।
ತ್ಯಕ್ತ್ವಾ ದುರಾಶಾಃ ಶರಣಂ ವ್ರಜಾಮಿ ತಮಧೀಶ್ವರಮ್ ॥

ಅನುವಾದ

ಈಗ ನಾನು ಆ ಭಗವಂತನ ಈ ಮಹೋಪಕಾರವನ್ನು ಆದರಪೂರ್ವಕ ತಲೆಬಾಗಿ ಸ್ವೀಕರಿಸುತ್ತೇನೆ. ಇನ್ನು ವಿಷಯ ಭೋಗಗಳ ದುರಾಸೆಯನ್ನು ಬಿಟ್ಟು ಆ ಜಗದೀಶ್ವರನಿಗೇ ಶರಣುಹೋಗುವೆನು. ॥39॥

(ಶ್ಲೋಕ - 40)

ಮೂಲಮ್

ಸಂತುಷ್ಟಾ ಶ್ರದ್ದಧತ್ಯೇತದ್ಯಥಾಲಾಭೇನ ಜೀವತೀ ।
ವಿಹರಾಮ್ಯಮುನೈವಾಹಮಾತ್ಮನಾ ರಮಣೇನ ವೈ ॥

ಅನುವಾದ

ಇನ್ನು ಮುಂದೆ ನಾನು ಪ್ರಾರಬ್ಧಕ್ಕನುಸಾರ ದೊರೆತುದರಲ್ಲೇ ಜೀವನ ನಿರ್ವಾಹ ಮಾಡುವೆನು. ಬಹಳ ಸಂತೋಷ ಮತ್ತು ಶ್ರದ್ಧೆಯಿಂದೊಡ ಗೂಡಿ ಇರುವೆನು. ಇನ್ನು ನಾನು ಯಾವುದೇ ಬೇರೆ ಪುರುಷರತ್ತ ಕಣ್ಣೆತ್ತಿಯೂ ನೋಡದೆ, ನನ್ನ ಹೃದಯೇಶ್ವರ, ಆತ್ಮಸ್ವರೂಪೀ ಪ್ರಭುವಿನೊಂದಿಗೆ ವಿಹರಿಸುವೆನು. ॥40॥

(ಶ್ಲೋಕ - 41)

ಮೂಲಮ್

ಸಂಸಾರಕೂಪೇ ಪತಿತಂ ವಿಷಯೈರ್ಮುಷಿತೇಕ್ಷಣಮ್ ।
ಗ್ರಸ್ತಂ ಕಾಲಾಹಿನಾತ್ಮಾನಂ ಕೋನ್ಯಸಾತುಮಧೀಶ್ವರಃ ॥

ಅನುವಾದ

ಈ ಜೀವಿಯು ಸಂಸಾರ ಕೂಪದಲ್ಲಿ ಬಿದ್ದಿರುವುದು. ವಿಷಯಗಳು ಇವನನ್ನು ಕುರುಡಾಗಿಸಿವೆ. ಕಾಲರೂಪೀ ಅಜಗರವು ಇವನನ್ನು ತನ್ನ ಬಾಯಲ್ಲಿ ಕಚ್ಚಿಕೊಂಡಿದೆ. ಈಗ ಭಗವಂತನನ್ನು ಬಿಟ್ಟು ಇವನನ್ನು ರಕ್ಷಿಸುವವರು ಬೇರೆ ಯಾರು ಸಮರ್ಥರಾಗಿರುವರು? ॥41॥

(ಶ್ಲೋಕ - 42)

ಮೂಲಮ್

ಆತ್ಮೈವ ಹ್ಯಾತ್ಮನೋ ಗೋಪ್ತಾ ನಿರ್ವಿದ್ಯೇತ ಯದಾಖಿಲಾತ್ ।
ಅಪ್ರಮತ್ತ ಇದಂ ಪಶ್ಯೇದ್ ಗ್ರಸ್ತಂ ಕಾಲಾಹಿನಾ ಜಗತ್ ॥

ಅನುವಾದ

ಜೀವಿಯು ಸಮಸ್ತ ವಿಷಯಗಳಿಂದ ವಿರಕ್ತನಾದಾಗ ಅವನು ಸ್ವತಃ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ. ಅದಕ್ಕಾಗಿ ಇಡೀ ಜಗತ್ತು ಕಾಲ ರೂಪೀ ಅಜಗರಕ್ಕೆ ತುತ್ತಾಗಿದೆ ಎಂಬುದನ್ನು ಎಚ್ಚರಿಕೆಯಿಂದ ಗಮನಿಸುತ್ತಿರಬೇಕು. ॥42॥

(ಶ್ಲೋಕ - 43)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಏವಂ ವ್ಯವಸಿತಮತಿರ್ದುರಾಶಾಂ ಕಾಂತತರ್ಷಜಾಮ್ ।
ಛಿತ್ತ್ವೋಪಶಮಮಾಸ್ಥಾಯ ಶಯ್ಯಾಮುಪವಿವೇಶ ಸಾ ॥

ಅನುವಾದ

ಅವಧೂತ ದತ್ತಾತ್ರೇಯರು ಹೇಳುತ್ತಾರೆ — ರಾಜನೇ! ಪಿಂಗಳೆ ವೇಶ್ಯೆಯು ಹೀಗೆ ನಿಶ್ಚಯಿಸಿಕೊಂಡು ತನ್ನ ಪ್ರಿಯ ಶ್ರೀಮಂತರ ದುರಾಸೆಯನ್ನು, ವಿಟರನ್ನು ಸೇರುವ ಲಾಲಸೆಯನ್ನು ಪರಿತ್ಯಜಿಸಿ, ಶಾಂತಭಾವದಿಂದ ಹೋಗಿ ತನ್ನ ಹಾಸಿಗೆಯಲ್ಲಿ ಮಲಗಿಕೊಂಡಳು. ॥43॥

(ಶ್ಲೋಕ - 44)

ಮೂಲಮ್

ಆಶಾ ಹಿ ಪರಮಂ ದುಃಖಂ ನೈರಾಶ್ಯಂ ಪರಮಂ ಸುಖಮ್ ।
ಯಥಾ ಸಂಛಿದ್ಯ ಕಾಂತಾಶಾಂ ಸುಖಂ ಸುಷ್ವಾಪ ಪಿಂಗಲಾ ॥

ಅನುವಾದ

ನಿಜವಾಗಿಯೂ ಆಸೆಯೇ ಎಲ್ಲಕ್ಕಿಂತ ದೊಡ್ಡ ದುಃಖವಾಗಿದೆ, ನಿರಾಸೆಯೇ ಎಲ್ಲಕ್ಕಿಂತ ಭಾರೀ ಸುಖವಾಗಿದೆ. ಏಕೆಂದರೆ, ಪಿಂಗಳೆ ವೇಶ್ಯೆಯು ಪುರುಷರ ಆಸೆಯನ್ನು ತೊರೆದಾಗಲೇ ಅವಳು ಸುಖವಾಗಿ ಮಲಗಲು ಸಾಧ್ಯವಾಯಿತು. ॥44॥

ಅನುವಾದ (ಸಮಾಪ್ತಿಃ)

ಎಂಟನೆಯ ಅಧ್ಯಾಯವು ಮುಗಿಯಿತು. ॥8॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಅಷ್ಟಮೋಽಧ್ಯಾಯಃ ॥8॥