[ಏಳನೆಯ ಅಧ್ಯಾಯ]
ಭಾಗಸೂಚನಾ
ಅವಧೂತೋಪಾಖ್ಯಾನ ಪೃಥ್ವಿಯಿಂದ ಪಾರಿವಾಳದ ತನಕ ಎಂಟು ಗುರುಗಳ ಕಥೆ
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯದಾತ್ಥ ಮಾಂ ಮಹಾಭಾಗ ತಚ್ಚಿಕೀರ್ಷಿತಮೇವ ಮೇ ।
ಬ್ರಹ್ಮಾ ಭವೋ ಲೋಕಪಾಲಾಃ ಸ್ವರ್ವಾಸಂ ಮೇಭಿಕಾಂಕ್ಷಿಣಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಮಹಾಭಾಗ್ಯ ಶಾಲಿಯಾದ ಉದ್ಧವನೇ! ನೀನು ನನ್ನೊಡನೆ ಹೇಳಿದುದನ್ನೇ ನಾನು ಮಾಡಲು ಅಪೇಕ್ಷಿಸಿದ್ದೇನೆ. ಬ್ರಹ್ಮ, ರುದ್ರಾದಿ, ಇಂದ್ರನೇ ಮೊದಲಾದ ಲೋಕಪಾಲರೂ ಕೂಡ ನಾನು ಭೂಲೋಕವನ್ನು ತ್ಯಜಿಸಿ ಸ್ವಧಾಮದಲ್ಲಿ ವಾಸಿಸಬೇಕೆಂದು ಅಪೇಕ್ಷಿಸುತ್ತಿದ್ದಾರೆ. ॥1॥
(ಶ್ಲೋಕ - 2)
ಮೂಲಮ್
ಮಯಾ ನಿಷ್ಪಾದಿತಂ ಹ್ಯತ್ರ ದೇವಕಾರ್ಯಮಶೇಷತಃ ।
ಯದರ್ಥಮವತೀರ್ಣೋಹಮಂಶೇನ ಬ್ರಹ್ಮಣಾರ್ಥಿತಃ ॥
ಅನುವಾದ
ಬ್ರಹ್ಮನ ಪ್ರಾರ್ಥನೆಯಂತೆ ನಾನು ನನ್ನ ಅಂಶ ಬಲರಾಮನೊಂದಿಗೆ ಭೂತಲದಲ್ಲಿ ಅವತರಿಸಿದ್ದೆ. ದೇವತೆಗಳ ಸಲುವಾಗಿ ಇದ್ದ ಎಲ್ಲ ಕಾರ್ಯಗಳನ್ನು ಮಾಡಿ ಮುಗಿಸಿದೆ. ॥2॥
(ಶ್ಲೋಕ - 3)
ಮೂಲಮ್
ಕುಲಂ ವೈ ಶಾಪನಿರ್ದಗ್ಧಂ ನಂಕ್ಷ್ಯತ್ಯನ್ಯೋನ್ಯ ವಿಗ್ರಹಾತ್ ।
ಸಮುದ್ರಃ ಸಪ್ತಮೇಹ್ನ್ಯೇತಾಂ ಪುರೀಂ ಚ ಪ್ಲಾವಯಿಷ್ಯತಿ ॥
ಅನುವಾದ
ನಮ್ಮ ಕುಲವು ಈಗಾಗಲೇ ಬ್ರಾಹ್ಮಣರ ಶಾಪದಿಂದ ದಗ್ಧವಾಗಿದ್ದು, ಪರಸ್ಪರ ಕಲಹದಿಂದ ಮತ್ತು ಯುದ್ಧದಿಂದ ವಿನಾಶ ಹೊಂದುತ್ತದೆ. ಇಂದಿನಿಂದ ಏಳನೆಯ ದಿನ ಸಮುದ್ರವು ಈ ದ್ವಾರಕಾ ಪುರಿಯನ್ನು ಮುಳುಗಿಸಿ ಬಿಡುತ್ತದೆ. ॥3॥
(ಶ್ಲೋಕ - 4)
ಮೂಲಮ್
ಯರ್ಹ್ಯೇವಾಯಂ ಮಯಾ ತ್ಯಕ್ತೋ ಲೋಕೋಯಂ ನಷ್ಟಮಂಗಲಃ ।
ಭವಿಷ್ಯತ್ಯಚಿರಾತ್ ಸಾಧೋ ಕಲಿನಾಪಿ ನಿರಾಕೃತಃ ॥
ಅನುವಾದ
ಪ್ರಿಯ ಉದ್ಧವನೇ! ಈ ಮರ್ತ್ಯಲೋಕವನ್ನು ನಾನು ಪರಿತ್ಯಜಿಸಿ ಹೊರಟುಹೋದೊಡನೆಯೇ ಇದರ ಎಲ್ಲ ಮಂಗಳಗಳೂ ನಾಶವಾಗಿ ಹೋಗುವವು ಮತ್ತು ಕೆಲವೇ ದಿನಗಳಲ್ಲಿ ಕಲಿಯುಗವು ಪೂರ್ಣವಾಗಿ ಆವರಿಸಿಬಿಡುವುದು. ॥4॥
(ಶ್ಲೋಕ - 5)
ಮೂಲಮ್
ನ ವಸ್ತವ್ಯಂ ತ್ವಯೈವೇಹ ಮಯಾ ತ್ಯಕ್ತೇ ಮಹೀತಲೇ ।
ಜನೋಧರ್ಮರುಚಿರ್ಭದ್ರ ಭವಿಷ್ಯತಿ ಕಲೌ ಯುಗೇ ॥
ಅನುವಾದ
ಸಾಧು ಉದ್ಧವನೇ! ನಾನು ಪೃಥ್ವಿಯನ್ನು ತ್ಯಜಿಸಿದ ಬಳಿಕ ನೀನೂ ಇಲ್ಲಿರಬಾರದು. ಏಕೆಂದರೆ ಕಲಿಯುಗದಲ್ಲಿ ಜನರು ಅಧರ್ಮದಲ್ಲಿಯೇ ಹೆಚ್ಚು ಅಭಿರುಚಿಯುಳ್ಳವರಾಗಿರುತ್ತಾರೆ. ಅಂತಹವರ ಮಧ್ಯದಲ್ಲಿ ನೀನು ಇರಬಾರದು. ॥5॥
(ಶ್ಲೋಕ - 6)
ಮೂಲಮ್
ತ್ವಂ ತು ಸರ್ವಂ ಪರಿತ್ಯಜ್ಯ ಸ್ನೇಹಂ ಸ್ವಜನಬಂಧುಷು ।
ಮಯ್ಯಾವೇಶ್ಯ ಮನಃ ಸಮ್ಯಕ್ ಸಮದೃಗ್ವಿಚರಸ್ವ ಗಾಮ್ ॥
ಅನುವಾದ
ಈಗ ನೀನಾದರೋ ನಿನ್ನ ಆತ್ಮೀಯ ಸ್ವಜನ ಬಂಧು-ಬಾಂಧವರಲ್ಲಿದ್ದ ಸ್ನೇಹಸಂಬಂಧವನ್ನು ತೊರೆದು, ನಿನ್ನ ಮನಸ್ಸನ್ನು ಅನನ್ಯಭಕ್ತಿಯಿಂದ ನನ್ನಲ್ಲಿ ತೊಡಗಿಸಿ, ಚರಾಚರ ಪ್ರಾಣಿಗಳನ್ನು ಸಮದೃಷ್ಟಿಯಿಂದ ನೋಡುತ್ತಾ ಭೂಮಿಯಲ್ಲಿ ಸ್ವಚ್ಛಂದವಾಗಿ ಸಂಚರಿಸುತ್ತಿರು. ॥6॥
(ಶ್ಲೋಕ - 7)
ಮೂಲಮ್
ಯದಿದಂ ಮನಸಾ ವಾಚಾ ಚಕ್ಷುರ್ಭ್ಯಾಂ ಶ್ರವಣಾದಿಭಿಃ ।
ನಶ್ವರಂ ಗೃಹ್ಯಮಾಣಂ ಚ ವಿದ್ಧಿ ಮಾಯಾ ಮನೋಮಯಮ್ ॥
ಅನುವಾದ
ಈ ಜಗತ್ತಿನಲ್ಲಿ ಮನಸ್ಸಿನಿಂದ ಯೋಚಿಸಲಾಗುವ, ವಾಣಿಯಿಂದ ನುಡಿಯಲಾಗುವ, ಕಣ್ಣುಗಳಿಂದ ನೋಡಲಾಗುವ, ಕಿವಿಗಳಿಂದ ಕೇಳಲಾಗುವ, ಮೂಗಿನಿಂದ ಮೂಸುವ, ಚರ್ಮದಿಂದ ಸ್ಪರ್ಶಿಸುವ ಎಲ್ಲವೂ ನಾಶವುಳ್ಳದ್ದಾಗಿದೆ. ಸ್ವಪ್ನದಂತೆ ಮನೋವಿಲಾಸವಾಗಿದೆ. ಅದಕ್ಕಾಗಿ ಮಾಯಾಮಾತ್ರವಾಗಿದ್ದು ಮಿಥ್ಯೆಯಾಗಿದೆ ಎಂದು ತಿಳಿದುಕೊ. ॥7॥
(ಶ್ಲೋಕ - 8)
ಮೂಲಮ್
ಪುಂಸೋಯುಕ್ತಸ್ಯ ನಾನಾರ್ಥೋ ಭ್ರಮಃ ಸ ಗುಣದೋಷಭಾಕ್ ।
ಕರ್ಮಾಕರ್ಮವಿಕರ್ಮೇತಿ ಗುಣದೋಷಧಿಯೋ ಭಿದಾ ॥
ಅನುವಾದ
ಚಂಚಲಚಿತ್ತವುಳ್ಳ ಅಸಂಯಮಿ ಮನುಷ್ಯನಿಗೆ ನಾನಾತ್ವದ ಭಾವನೆ ಉಂಟಾಗುತ್ತದೆ. ಇಂತಹ ಭ್ರಮೆ ಉಂಟಾದಬಳಿಕ ಇದು ಗುಣ, ಇದು ದೋಷ ಎಂಬೀ ಭೇದದೃಷ್ಟಿ ಉಂಟಾಗಿದ್ದು ತನ್ನಲ್ಲೇ ಕಲ್ಪಿಸಿಕೊಂಡದ್ದಾಗಿದೆ. ಇಂತಹ ಜನರಿಗಾಗಿಯೇ ಕರ್ಮ (ಶಾಸ್ತ್ರವಿಹಿತ ಕರ್ಮ), ಅಕರ್ಮ (ಶಾಸ್ತ್ರ ನಿಷಿದ್ಧಕರ್ಮ), ವಿಕರ್ಮ (ವಿಹಿತಕರ್ಮದ ತ್ಯಾಗ) ಇವುಗಳ ವಿಷಯದಲ್ಲಿ ಪ್ರತಿಪಾದಿಸಲಾಗುತ್ತದೆ. ॥8॥
(ಶ್ಲೋಕ - 9)
ಮೂಲಮ್
ತಸ್ಮಾದ್ಯುಕ್ತೇಂದ್ರಿಯಗ್ರಾಮೋ ಯುಕ್ತಚಿತ್ತ ಇದಂ ಜಗತ್ ।
ಆತ್ಮನೀಕ್ಷಸ್ವ ವಿತತಮಾತ್ಮಾನಂ ಮಯ್ಯಧೀಶ್ವರೇ ॥
ಅನುವಾದ
ಆದುದರಿಂದ ಎಲೈ ಉದ್ಧವನೇ! ನೀನು ನಿನ್ನ ಇಂದ್ರಿಯಗಳನ್ನು, ಚಿತ್ತವನ್ನು ವಶಪಡಿಸಿಕೊಂಡು ಈ ಸಮಸ್ತ ವಿಶ್ವವನ್ನು ಆತ್ಮನಲ್ಲಿ ನೋಡು ಮತ್ತು ಆತ್ಮವನ್ನು ಅಧೀಶ್ವರನಾದ ನನ್ನಲ್ಲಿ ನೋಡು. ॥9॥
(ಶ್ಲೋಕ - 10)
ಮೂಲಮ್
ಜ್ಞಾನವಿಜ್ಞಾನಸಂಯುಕ್ತ ಆತ್ಮಭೂತಃ ಶರೀರಿಣಾಮ್ ।
ಆತ್ಮಾನುಭವತುಷ್ಟಾತ್ಮಾ ನಾಂತರಾಯೈರ್ವಿಹನ್ಯಸೇ ॥
ಅನುವಾದ
ಎಲ್ಲರ ಆತ್ಮವು ನಾನೇ ಆಗಿದ್ದೇನೆ ಎಂದು ಅರಿತು ಎಲ್ಲ ದೇಹಧಾರಿಗಳಲ್ಲಿ ಆತ್ಮಭೂತನಾಗಿ ಹೋಗು. ತನ್ನ ಆತ್ಮಾನುಭವದಲ್ಲಿ ಆನಂದಮಗ್ನನಾಗಿ, ಜ್ಞಾನ ವಿಜ್ಞಾನದಿಂದ ಸಂಪನ್ನನಾಗಿರು. ಮತ್ತೆ ಯಾವುದೇ ವಿಘ್ನಗಳು ಬಂದರೂ ನೀನು ಪೀಡಿತನಾಗಲಾರೆ. ॥10॥
(ಶ್ಲೋಕ - 11)
ಮೂಲಮ್
ದೋಷಬುದ್ಧ್ಯೋಭಯಾತೀತೋ ನಿಷೇಧಾನ್ನ ನಿವರ್ತತೇ ।
ಗುಣಬುದ್ಧ್ಯಾ ಚ ವಿಹಿತಂ ನ ಕರೋತಿ ಯಥಾರ್ಭಕಃ ॥
ಅನುವಾದ
ಗುಣ ಮತ್ತು ದೋಷ ಇವೆರಡರಿಂದ ಪೂರ್ಣವಾಗಿ ಅತೀತನಾಗು. ಮಗುವು ಗುಣಬುದ್ಧಿಯಿಂದ ವಿಹಿತಕರ್ಮವನ್ನು ಮಾಡುವುದಿಲ್ಲ. ದೋಷ ಬುದ್ಧಿಯಿಂದ ನಿಷಿದ್ಧದಿಂದ ನಿವೃತ್ತನಾಗುವುದಿಲ್ಲ. ಅರ್ಥಾತ್ ಮಗುವಿನಲ್ಲಿ ಗುಣಬುದ್ಧಿಯೂ ಇರುವುದಿಲ್ಲ, ದೋಷಬುದ್ಧಿಯೂ ಇರುವುದಿಲ್ಲ. ಅದಾದರೋ ಪರಮಹಂಸನಂತೆ ಇರುತ್ತದೆ. ಹಾಗೆಯೇ ನೀನೂ ಗುಣ-ದೋಷಗಳಿಂದ ಅತೀತನಾಗು. ॥11॥
(ಶ್ಲೋಕ - 12)
ಮೂಲಮ್
ಸರ್ವಭೂತಸುಹೃಚ್ಛಾಂತೋ ಜ್ಞಾನವಿಜ್ಞಾನನಿಶ್ಚಯಃ ।
ಪಶ್ಯನ್ಮದಾತ್ಮಕಂ ವಿಶ್ವಂ ನ ವಿಪದ್ಯೇತ ವೈ ಪುನಃ ॥
ಅನುವಾದ
ಯೋಗಿಯು ಸಮಸ್ತ ಪ್ರಾಣಿಗಳಲ್ಲಿ ಸುಹೃದ್ಭಾವವಿರಿಸಬೇಕು. ಚಿತ್ತದಲ್ಲಿ ಸದಾಕಾಲ ಶಾಂತಿಯಿದ್ದು ಏಕಮಾತ್ರ ಪರಮಾತ್ಮನ ಅನುಭವವು ದೃಢವಾಗಿ ಇರಬೇಕು. ಇಡೀ ವಿಶ್ವವು ನನ್ನದೇ ಸ್ವರೂಪವೆಂದು ತಿಳಿಯಬೇಕು. ಹೀಗಾದಾಗ ಮತ್ತೆ ಅವನು ಜನ್ಮ ಮರಣದ ಚಕ್ರದಲ್ಲಿ ಬೀಳುವುದಿಲ್ಲ. ॥12॥
(ಶ್ಲೋಕ - 13)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಾದಿಷ್ಟೋ ಭಗವತಾ ಮಹಾಭಾಗವತೋ ನೃಪ ।
ಉದ್ಧವಃ ಪ್ರಣಿಪತ್ಯಾಹ ತತ್ತ್ವಜಿಜ್ಞಾಸುರಚ್ಯುತಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಹೀಗೆ ಆದೇಶಿಸಿದಾಗ ಪರಮಪ್ರೇಮೀ ಉದ್ಧವನು ಭಗವಂತನಿಗೆ ನಮಸ್ಕರಿಸುತ್ತಾ ತತ್ತ್ವಜ್ಞಾನ ಪ್ರಾಪ್ತಿಯ ಬಯಕೆಯಿಂದ ಇಂತು ಪ್ರಶ್ನಿಸಿದನು ॥13॥
(ಶ್ಲೋಕ - 14)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ಯೋಗೇಶ ಯೋಗವಿನ್ಯಾಸ ಯೋಗಾತ್ಮನ್ ಯೋಗಸಂಭವ ।
ನಿಃಶ್ರೇಯಸಾಯ ಮೇ ಪ್ರೋಕ್ತಸ್ತ್ಯಾಗಃ ಸಂನ್ಯಾಸಲಕ್ಷಣಃ ॥
ಅನುವಾದ
ಉದ್ಧವನಿಂತೆಂದನು — ಓ ಭಗವಂತಾ! ನೀನೇ ಯೋಗದ ಒಡೆಯನಾಗಿರುವೆ. ಯೋಗವು ನಿನ್ನಲ್ಲೇ ಪ್ರತಿಷ್ಠಿತವಾಗಿದೆ. ನೀನು ಸಾಕ್ಷಾತ್ ಯೋಗದ ಸ್ವರೂಪವೇ ಆಗಿರುವೆ. ಯೋಗದ ಜನ್ಮ ಸ್ಥಾನವು ನೀನೇ ಆಗಿರುವೆ. ನೀನು ನನಗಾಗಿ ಪರಮ ಶ್ರೇಯಸ್ಸಿಗಾಗಿಯೇ ಸಂನ್ಯಾಸ ರೂಪೀ ತ್ಯಾಗದ ಲಕ್ಷಣವನ್ನು ಉಪದೇಶಿಸಿರುವೆ. ॥14॥
(ಶ್ಲೋಕ - 15)
ಮೂಲಮ್
ತ್ಯಾಗೋಯಂ ದುಷ್ಕರೋ ಭೂಮನ್ ಕಾಮಾನಾಂ ವಿಷಯಾತ್ಮಭಿಃ ।
ಸುತರಾಂ ತ್ವಯಿ ಸರ್ವಾತ್ಮನ್ನಭಕ್ತೈರಿತಿ ಮೇ ಮತಿಃ ॥
ಅನುವಾದ
ಅನೇಕ ಕಾಮನೆಗಳಲ್ಲಿ ಸಿಕ್ಕಿಕೊಂಡಿರುವ ವಿಷಯೀ ಜೀವರಿಗೆ ಈ ತ್ಯಾಗದ ತತ್ತ್ವವು ತಿಳಿಯಲು ಬಹು ಕಠಿಣವಾಗಿದೆ. ಮುಖ್ಯವಾಗಿ ನಿನ್ನ ಭಕ್ತಿಯಿಂದ ವಿಮುಖರಾದವರಿಗಂತೂ ಇನ್ನೂ ಕಷ್ಟವೇ ಆಗಿದೆ. ಇದು ನನ್ನ ನಿಶ್ಚಿತವಾದ ಅಭಿಪ್ರಾಯವಾಗಿದೆ. ॥15॥
(ಶ್ಲೋಕ - 16)
ಮೂಲಮ್
ಸೋಹಂ ಮಮಾಹಮಿತಿ ಮೂಢಮತಿರ್ವಿಗಾಢ-
ಸ್ತ್ವನ್ಮಾಯಯಾ ವಿರಚಿತಾತ್ಮನಿ ಸಾನುಬಂಧೇ ।
ತತ್ತ್ವಂಜಸಾ ನಿಗದಿತಂ ಭವತಾ ಯಥಾಹಂ
ಸಂಸಾಧಯಾಮಿ ಭಗವನ್ನನುಶಾಧಿ ಭೃತ್ಯಮ್ ॥
ಅನುವಾದ
ಪ್ರಭುವೇ! ನಾನೂ ಕೂಡ ‘ನಾನು-ನನ್ನದು’ ಎಂಬ ಸುಳಿಯಲ್ಲಿ ಸಿಕ್ಕಿಕೊಂಡಿರುವೆನು. ನನ್ನ ಬುದ್ಧಿಯೂ ನಿನ್ನದೇ ಮಾಯೆಯಿಂದ ನನ್ನ ಪರಿವಾರದ ಆಪ್ತಜನರ ಕುರಿತು ಅಹಂತೆ, ಮಮತೆಯಲ್ಲಿ ಮೂಢತೆಯಿಂದ ಬಿಡಲಾರದಷ್ಟು ಆಳವಾಗಿ ಬೇರೂರಿದೆ. ನೀನು ಈಗ ಪ್ರತಿಪಾದಿಸಿದ ಸಂನ್ಯಾಸ ತ್ಯಾಗದ ಧರ್ಮವನ್ನು ನಾನು ಹೇಗೆ ಸಹಜಭಾವದಿಂದ ಸಾಧನೆ ಮಾಡಬಲ್ಲೆ? ಎಂಬುದೇ ಯೋಚನೆಯಾಗಿದೆ. ಸೇವಕನಾದ ನನಗೆ ಸರಳ ರೀತಿಯಿಂದ ನೀನು ಉಪದೇಶಿಸುವ ಕೃಪೆಮಾಡಬೇಕು. ॥16॥
(ಶ್ಲೋಕ - 17)
ಮೂಲಮ್
ಸತ್ಯಸ್ಯ ತೇ ಸ್ವದೃಶ ಆತ್ಮನ ಆತ್ಮನೋನ್ಯಂ
ವಕ್ತಾರಮೀಶ ವಿಬುಧೇಷ್ವಪಿ ನಾನುಚಕ್ಷೇ ।
ಸರ್ವೇ ವಿಮೋಹಿತಧಿಯಸ್ತವ ಮಾಯಯೇಮೇ
ಬ್ರಹ್ಮಾದಯಸ್ತನುಭೃತೋ ಬಹಿರರ್ಥಭಾವಾಃ ॥
ಅನುವಾದ
ಪ್ರಭುವೇ! ನೀನೇ ಸತ್ಯಸ್ವರೂಪನಾಗಿರುವೆ. ಎಲ್ಲರ ನೇತ್ರ ಸ್ವರೂಪ ಅರ್ಥಾತ್ ಪ್ರಕಾಶಕನೂ ನೀನೇ ಆಗಿರುವೆ. ಎಲ್ಲರ ಆತ್ಮವೂ ನೀನೇ ಆಗಿರುವೆ. ಇಂತಹ ನೀನಿರುವಾಗ ಈ ಆತ್ಮ ತತ್ತ್ವದ ವಿಷಯದಲ್ಲಿ ಪ್ರತಿಪಾದಿಸುವವರು ನಿನ್ನಿಂದ ಬೇರೆ ಯಾರನ್ನೂ ನಾನು ನೋಡುವುದಿಲ್ಲ, ಏಕೆಂದರೆ, ಬ್ರಹ್ಮನಿಂದ ಹಿಡಿದು ಇರುವವರೆಲ್ಲ ಜೀವರೂ ನಿನ್ನ ಮಾಯೆಯಿಂದ ಮೋಹಿತರಾಗಿರುವರು. ಆದ್ದರಿಂದ ಅವರು ಬಾಹ್ಯವಸ್ತುಗಳನ್ನೇ ಸತ್ಯವೆಂದು ಭಾವಿಸುತ್ತಾರೆ. ॥17॥
(ಶ್ಲೋಕ - 18)
ಮೂಲಮ್
ತಸ್ಮಾದ್ಭವಂತಮನವದ್ಯಮನಂತಪಾರಂ
ಸರ್ವಜ್ಞಮೀಶ್ವರಮಕುಂಠವಿಕುಂಠಧಿಷ್ಣ್ಯಮ್ ।
ನಿರ್ವಿಣ್ಣಧೀರಹಮು ಹ ವೃಜಿನಾಭಿತಪ್ತೋ
ನಾರಾಯಣಂ ನರಸಖಂ ಶರಣಂ ಪ್ರಪದ್ಯೇ ॥
ಅನುವಾದ
ಪ್ರಭುವೇ! ನರಸಖ ನಾರಾಯಣ ಸ್ವರೂಪಿಯಾದ ನಿನ್ನಲ್ಲಿ ನಾನು ಶರಣಾಗಿದ್ದೇನೆ. ನೀನು ನಿರಂಜನನಾಗಿರುವೆ, ನಿನಗೆ ಅಂತ್ಯ-ಪಾರಗಳಿಲ್ಲ. ನೀನು ಸರ್ವಜ್ಞನಾಗಿದ್ದು, ಎಲ್ಲರ ನಿಯಾಮಕನಾಗಿರುವೆ. ಅವಿನಾಶೀ ವೈಕುಂಠವು ನಿನ್ನದೇ ಧಾಮವಾಗಿದೆ. ನಾನು ಸಂಸಾರದಿಂದ ದುಃಖಿತನಾಗಿ ಸಂತಪ್ತನಾಗಿರುವೆನು. (ನೀನು ನನಗೆ ಶ್ರೇಯಸ್ಸಿನ ಉಪ ದೇಶವನ್ನಿತ್ತು ನನ್ನನ್ನು ಉದ್ಧರಿಸು.) ॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಪ್ರಾಯೇಣ ಮನುಜಾ ಲೋಕೇ ಲೋಕತತ್ತ್ವವಿಚಕ್ಷಣಾಃ ।
ಸಮುದ್ಧರಂತಿ ಹ್ಯಾತ್ಮಾನಮಾತ್ಮನೈವಾಶುಭಾಶಯಾತ್ ॥
ಅನುವಾದ
ಭಗವಂತನೆಂದನು ಪ್ರಿಯ ಉದ್ಧವಾ! ಪ್ರಾಯಶಃ ಈ ಪ್ರಪಂಚದ ವಾಸ್ತವಿಕ ಸ್ವರೂಪವನ್ನು ತಿಳಿಯಲು ಈ ಲೋಕವು ಅನಿತ್ಯವಾಗಿದೆ ಎಂದು ತಿಳಿದ ವಿದ್ವಾಂಸರಾದವರು ತಾವೇ ತಮ್ಮನ್ನು ಅಮಂಗಳಕರವಾದ ವಿಷಯ ವಾಸನೆಗಳಿಂದ ಉದ್ದರಿಸಿಕೊಳ್ಳುತ್ತಾರೆ.॥19॥
(ಶ್ಲೋಕ - 20)
ಮೂಲಮ್
ಆತ್ಮನೋ ಗುರುರಾತ್ಮೈವ ಪುರುಷಸ್ಯ ವಿಶೇಷತಃ ।
ಯತ್ಪ್ರತ್ಯಕ್ಷಾನುಮಾನಾಭ್ಯಾಂ ಶ್ರೇಯೋಸಾವನುವಿಂದತೇ ॥
ಅನುವಾದ
ವಿಶೇಷವಾಗಿ ಮನುಷ್ಯನಿಗೆ ಅವನ ಆತ್ಮನೇ ಗುರುವಾಗಿದ್ದಾನೆ. ಅವನು ಪ್ರತ್ಯಕ್ಷಪ್ರಮಾಣದ ಮೂಲಕ ಹಾಗೂ ಅನುಮಾನ ಪ್ರಮಾಣದ ಮೂಲಕ ಸ್ವತಃ ತನ್ನ ಶ್ರೇಯಸ್ಸನ್ನು ಪಡೆಯಲು ಸಮರ್ಥನಾಗಿರುವನು. ॥20॥
(ಶ್ಲೋಕ - 21)
ಮೂಲಮ್
ಪುರುಷತ್ವೇ ಚ ಮಾಂ ಧೀರಾಃ ಸಾಂಖ್ಯಯೋಗವಿಶಾರದಾಃ ।
ಆವಿಸ್ತರಾಂ ಪ್ರಪಶ್ಯಂತಿ ಸರ್ವಶಕ್ತ್ಯುಪಬೃಂಹಿತಮ್ ॥
ಅನುವಾದ
ಸಾಂಖ್ಯಶಾಸ ಮತ್ತು ಯೋಗಶಾಸ್ತ್ರಗಳಲ್ಲಿ ಪ್ರವೀಣರಾದ ಜ್ಞಾನಿಗಳು ಮನುಷ್ಯಯೋನಿಯಲ್ಲೇ ಸರ್ವಶಕ್ತಿ ಸಂಪನ್ನ ಪರಮಾತ್ಮನಾದ ನನ್ನನ್ನು ಅಪರೋಕ್ಷದಿಂದ ಹಾಗೂ ಸರ್ವವ್ಯಾಪಕ ವಿರಾಟ್ ಸಗುಣ ನಿರಾಕಾರ ರೂಪದಿಂದಲೂ ನನ್ನ ಸಾಕ್ಷಾತ್ಕಾರವನ್ನು ಪಡೆಯುತ್ತಾರೆ. ॥21॥
(ಶ್ಲೋಕ - 22)
ಮೂಲಮ್
ಏಕದ್ವಿತ್ರಿಚತುಷ್ಪಾದೋ ಬಹುಪಾದಸ್ತಥಾಪದಃ ।
ಬಹ್ವ್ಯಃ ಸಂತಿ ಪುರಃ ಸೃಷ್ಟಾಸ್ತಾಸಾಂ ಮೇ ಪೌರುಷೀ ಪ್ರಿಯಾ ॥
ಅನುವಾದ
ನಾನು ಒಂದು ಕಾಲಿನ ಪ್ರಾಣಿಗಳನ್ನು, ಎರಡು ಕಾಲಿನ, ಮೂರು ಕಾಲಿನ, ನಾಲ್ಕು ಕಾಲಿನ, ಅನೇಕ ಕಾಲುಗಳುಳ್ಳ ಮತ್ತು ಕಾಲಿಲ್ಲದ ಅನೇಕ ಪ್ರಕಾರದ ಯೋನಿಗಳನ್ನು ನಿರ್ಮಾಣ ಮಾಡಿರುವೆನು. ಆದರೆ ಇವೆಲ್ಲದರಲ್ಲಿ ದ್ವಿಪಾದಿಯಾದ ಮನುಷ್ಯ ಶರೀರವೇ ನನಗೆ ಎಲ್ಲಕ್ಕಿಂತ ಹೆಚ್ಚು ಪ್ರಿಯವಾದುದು. ॥22॥
(ಶ್ಲೋಕ - 23)
ಮೂಲಮ್
ಅತ್ರ ಮಾಂ ಮಾರ್ಗಯಂತ್ಯದ್ಧಾ ಯುಕ್ತಾ ಹೇತುಭಿರೀಶ್ವರಮ್ ।
ಗೃಹ್ಯಮಾಣೈರ್ಗುಣೈರ್ಲಿಂಗೈರಗ್ರಾಹ್ಯಮನುಮಾನತಃ ॥
ಅನುವಾದ
ಭಗವಂತ ಹೇಳುತ್ತಾನೆ ನಾನಾದರೋ ಅಗ್ರಾಹ್ಯನಾಗಿದ್ದರೂ ಈ ಮನುಷ್ಯ ಶರೀರದ ಮೂಲಕವೇ ತಿಳಿಯಲ್ಪಡುವ ಕಾರಣಗಳಾದ ಹೇತುಗಳಿಂದ, ಗುಣಗಳಿಂದ, ಚಿಹ್ನೆಗಳಿಂದ, ಅನುಮಾನದಿಂದ ಈಶ್ವರನಾದ ನನ್ನನ್ನು ಹುಡುಕಿಕೊಳ್ಳುತ್ತಾರೆ. ॥23॥
(ಶ್ಲೋಕ - 24)
ಮೂಲಮ್
ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್ ।
ಅವಧೂತಸ್ಯ ಸಂವಾದಂ ಯದೋರಮಿತತೇಜಸಃ ॥
ಅನುವಾದ
ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಿರುತ್ತಾರೆ. ಆ ಇತಿಹಾಸವು ಪರಮ ತೇಜಸ್ವೀ ಅವಧೂತ ದತ್ತಾತ್ರೇಯ* ಮತ್ತು ಯದುರಾಜನ ಸಂವಾದ ರೂಪದಲ್ಲಿದೆ. ॥24॥
ಟಿಪ್ಪನೀ
- ದತ್ತಾತ್ರೇಯನು ಸ್ವಯಂ ಭಗವಂತನ ಅವತಾರವಾಗಿದ್ದಾನೆ. ಅವನು ಜನರಿಗೆ ಪಾಠಹೇಳುವ ಉದ್ದೇಶದಿಂದಲೇ ಈ ಇಪ್ಪತ್ತನಾಲ್ಕು ಗುರುಗಳನ್ನು ಹೆಸರಿಸಿದ್ದಾನೆ. ಉದಾಹರಣೆಯಿಂದ ಉಪದೇಶವನ್ನು ಗ್ರಹಿಸಲು, ತಿಳಿಯಲು ಸುಲಭವಾಗುತ್ತದೆ. ಆದ್ದರಿಂದ ಸಾರವಾದ ಮಾತನ್ನು ಗ್ರಹಿಸಬೇಕು.
(ಶ್ಲೋಕ - 25)
ಮೂಲಮ್
ಅವಧೂತಂ ದ್ವಿಜಂ ಕಂಚಿಚ್ಚರಂತಮಕುತೋಭಯಮ್ ।
ಕವಿಂ ನಿರೀಕ್ಷ್ಯ ತರುಣಂ ಯದುಃ ಪಪ್ರಚ್ಛ ಧರ್ಮವಿತ್ ॥
ಅನುವಾದ
ಒಮ್ಮೆ ಧರ್ಮದ ಮರ್ಮಜ್ಞನಾದ ಯದುರಾಜನು ಓರ್ವ ತ್ರಿಕಾಲದರ್ಶಿ ತರುಣ ಅವಧೂತ ಬ್ರಾಹ್ಮಣನು ನಿರ್ಭಯನಾಗಿ ಸಂಚರಿಸುವುದನ್ನು ನೋಡಿದನು. ಆಗ ಅವನು ಆ ಅವಧೂತನಲ್ಲಿ ಪ್ರಶ್ನಿಸಿದನು ॥25॥
(ಶ್ಲೋಕ - 26)
ಮೂಲಮ್ (ವಾಚನಮ್)
ಯದುರುವಾಚ
ಮೂಲಮ್
ಕುತೋ ಬುದ್ಧಿರಿಯಂ ಬ್ರಹ್ಮನ್ನಕರ್ತುಃ ಸುವಿಶಾರದಾ ।
ಯಾಮಾಸಾದ್ಯ ಭವಾನ್ಲೋಕಂ ವಿದ್ವಾಂಶ್ಚರತಿ ಬಾಲವತ್ ॥
ಅನುವಾದ
ಯದುರಾಜನು ಕೇಳಿದನು — ಬ್ರಾಹ್ಮಣ ಶ್ರೇಷ್ಠರೇ! ನೀವಾದರೋ ಯಾವ ಕರ್ಮವನ್ನೂ ಮಾಡುತ್ತಿಲ್ಲ. ಆದರೂ ನಿಮಗೆ ಈ ಅತ್ಯಂತ ನೈಪುಣ್ಯ ಬುದ್ಧಿಯು ಹೇಗೆ ಬಂತು? ಅಂತಹ ಶ್ರೇಷ್ಠಬುದ್ಧಿಯನ್ನು ಆಶ್ರಯಿಸಿ ನೀವು ಪರಮ ವಿದ್ವಾಂಸರಾಗಿದ್ದರೂ ಬಾಲಕನಂತೆ ಪ್ರಪಂಚದಲ್ಲಿ ಅಲೆ ದಾಡುತ್ತಿರುವಿರಲ್ಲಾ! ॥26॥
(ಶ್ಲೋಕ - 27)
ಮೂಲಮ್
ಪ್ರಾಯೋ ಧರ್ಮಾರ್ಥಕಾಮೇಷು ವಿವಿತ್ಸಾಯಾಂ ಚ ಮಾನವಾಃ ।
ಹೇತುನೈವ ಸಮೀಹಂತೇ ಆಯುಷೋ ಯಶಸಃ ಶ್ರಿಯಃ ॥
(ಶ್ಲೋಕ - 28)
ಮೂಲಮ್
ತ್ವಂ ತು ಕಲ್ಪಃ ಕವಿರ್ದಕ್ಷಃ ಸುಭಗೋಮೃತಭಾಷಣಃ ।
ನ ಕರ್ತಾ ನೇಹಸೇ ಕಿಂಚಿಜ್ಜಡೋನ್ಮತ್ತಪಿಶಾಚವತ್ ॥
ಅನುವಾದ
ಪ್ರಾಯಶಃ ಜನರು ಒಂದಲ್ಲ ಒಂದು ಕಾಮನೆಯಿಂದಲೇ ಧರ್ಮ, ಅರ್ಥ, ಕಾಮದಲ್ಲಿ ಹಾಗೂ ತತ್ತ್ವಜ್ಞಾನದ ಇಚ್ಛೆಯಲ್ಲಿ ಪ್ರವೃತ್ತರಾಗಿ ಅದರ ಬದಲು ಆಯುಸ್ಸು, ಕೀರ್ತಿ, ಅಥವಾ ಧನ-ಸಂಪತ್ತು ಸಿಗಬಹುದು ಎಂದು ಯೋಚಿಸುವುದನ್ನು ನೋಡಲಾಗುತ್ತದೆ. ಆದರೆ ನಿಮ್ಮನ್ನು ನೋಡಿದರೆ ನೀವು ಸಮರ್ಥರಾಗಿದ್ದು, ಜ್ಞಾನೀ ಹಾಗೂ ದಕ್ಷರಾಗಿರುವಿರಿ. ಸುಂದರ ಶರೀರವೂ ಇದೆ. ಅಮೃತ ಭಾಷಿಗಳಾಗಿದ್ದೀರಿ. ಆದರೂ ನೀವು ಏನನ್ನೂ ಮಾಡುವುದಿಲ್ಲ, ಬಯಸುವುದಿಲ್ಲ. ಇಂತಹ ವಿದ್ವಾಂಸರಾಗಿದ್ದರೂ ನೀವು ಜಡನಂತೆ, ಉನ್ಮತ್ತನಂತೆ ಅವಧೂತನಂತೆ ಪ್ರಪಂಚದಲ್ಲಿ ಅಲೆದಾಡುತ್ತಿರುವಿರಿ. ॥27-28॥
(ಶ್ಲೋಕ - 29)
ಮೂಲಮ್
ಜನೇಷು ದಹ್ಯಮಾನೇಷು ಕಾಮಲೋಭದವಾಗ್ನಿನಾ ।
ನ ತಪ್ಯಸೇಗ್ನಿನಾ ಮುಕ್ತೋ ಗಂಗಾಂಭಸ್ಥ ಇವ ದ್ವಿಪಃ ॥
ಅನುವಾದ
ಬೇರೆ ಜನರಾದರೋ ಕಾಮ, ಕ್ರೋಧ, ಲೋಭರೂಪೀ ದಾವಾನಲದಲ್ಲಿ ಬೇಯುತ್ತಿರುವರು. ಆ ಅಗ್ನಿಯಿಂದ ರಕ್ಷಿಸಿಕೊಳ್ಳಲು ಯಾವುದೇ ದಾರಿ ಇಲ್ಲದಿದ್ದರೂ ನೀವಾದರೋ ಪೂರ್ಣವಾಗಿ ಮುಕ್ತರಾಗಿದ್ದೀರಿ. ಗಂಗೆಯ ನೀರಿನಲ್ಲಿ ನಿಂತ ಆನೆಗೆ ದಾವಾನಲದ ಶಾಖ ತಗಲದೆ ಶೀತಲತೆಯನ್ನೇ ಅನುಭವಿಸುತ್ತದೆ. ಹಾಗೆಯೇ ನೀವು ಈ ಪ್ರಪಂಚದ ಯಾವ ತಾಪವೂ ಇಲ್ಲದೆ ಸ್ವಸ್ಥರಾಗಿರುವಿರಲ್ಲ! ॥29॥
(ಶ್ಲೋಕ - 30)
ಮೂಲಮ್
ತ್ವಂ ಹಿ ನಃ ಪೃಚ್ಛತಾಂ ಬ್ರಹ್ಮನ್ನಾತ್ಮನ್ಯಾನಂದಕಾರಣಮ್ ।
ಬ್ರೂಹಿ ಸ್ಪರ್ಶವಿಹೀನಸ್ಯ ಭವತಃ ಕೇವಲಾತ್ಮನಃ ॥
ಅನುವಾದ
ಬ್ರಾಹ್ಮಣೋತ್ತಮಾ! ನಿಮಗೆ ಈ ಪ್ರಪಂಚದಲ್ಲಿ ಯಾರ ಕುರಿತು ಕಿಂಚಿತ್ತಾದರೂ ಆಸಕ್ತಿಯಿಲ್ಲ. ನೀವು ನಿಮ್ಮ ಶುದ್ಧ ಸ್ವರೂಪದಲ್ಲಿಯೇ ಸದಾ ಸ್ಥಿತರಾಗಿರುವಿರಿ. ನಿಮ್ಮ ಈ ಅನಿರ್ವಚನೀಯ ಆನಂದದ ಕಾರಣವೇನು? ಇದನ್ನು ತಾವು ನನಗೆ ತಿಳಿಸುವ ಕೃಪೆಮಾಡಬೇಕು. ॥30॥
(ಶ್ಲೋಕ - 31)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಯದುನೈವಂ ಮಹಾಭಾಗೋ ಬ್ರಹ್ಮಣ್ಯೇನ ಸುಮೇಧಸಾ ।
ಪೃಷ್ಟಃ ಸಭಾಜಿತಃ ಪ್ರಾಹ ಪ್ರಶ್ರಯಾವನತಂ ದ್ವಿಜಃ ॥
ಅನುವಾದ
ಶ್ರೀಭಗವಂತನು ಹೇಳುತ್ತಾನೆ — ಉದ್ಧವನೇ! ಬ್ರಾಹ್ಮಣರನ್ನು ಆದರಿಸುವ ಪರಮ ಬುದ್ಧಿವಂತ ಮಹಾರಾಜಾ ಯದುವು ಬಹಳ ವಿನಮ್ರಭಾವದಿಂದ ನತಮಸ್ತಕನಾಗಿ ಮಹಾಭಾಗ್ಯಶಾಲೀ ಬ್ರಾಹ್ಮಣ ಶ್ರೇಷ್ಠ ಅವಧೂತ ದತ್ತಾತ್ರೇಯರನ್ನು ಹೀಗೆ ಸನ್ಮಾನಿಸಿದನು. ಅವನ ಪ್ರಶ್ನೆಗಳಿಗೆ ಅವಧೂತರು ಈ ಪ್ರಕಾರ ಉತ್ತರಿಸತೊಡಗಿದರು. ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಬ್ರಾಹ್ಮಣ ಉವಾಚ
ಮೂಲಮ್
ಸಂತಿ ಮೇ ಗುರವೋ ರಾಜನ್ ಬಹವೋ ಬುದ್ಧ್ಯುಪಾಶ್ರಿತಾಃ ।
ಯತೋ ಬುದ್ಧಿಮುಪಾದಾಯ ಮುಕ್ತೋಟಾಮೀಹ ತಾನ್ಶೃಣು ॥
ಅನುವಾದ
ಶ್ರೀದತ್ತಾತ್ರೇಯರೂಪೀ ಬ್ರಾಹ್ಮಣರು ಇಂತೆಂದರು — ರಾಜನೇ! ನಾನು ನನ್ನ ಬುದ್ಧಿಯಿಂದ ಹಲವಾರು ಗುರುಗಳನ್ನು ಆಶ್ರಯಿಸಿದ್ದೇನೆ. ಅವರಿಂದ ಶಿಕ್ಷಣವನ್ನು ಪಡೆದು ನಾನು ಈ ಜಗತ್ತಿನಲ್ಲಿ ಮುಕ್ತಭಾವದಿಂದ ಸಂಚರಿಸುತ್ತಿದ್ದೇನೆ. ಆ ನನ್ನ ಗುರುಗಳ ಹೆಸರುಗಳನ್ನು ಹಾಗೂ ಅವರಿಂದ ಪಡೆದ ಶಿಕ್ಷಣವನ್ನು ಹೇಳುವೆನು ಕೇಳು. ॥32॥
(ಶ್ಲೋಕ - 33)
ಮೂಲಮ್
ಪೃಥಿವೀ ವಾಯುರಾಕಾಶಮಾಪೋಗ್ನಿಶ್ಚಂದ್ರಮಾ ರವಿಃ ।
ಕಪೋತೋಜಗರಃ ಸಿಂಧುಃ ಪತಂಗೋ ಮಧುಕೃದ್ಗಜಃ ॥
(ಶ್ಲೋಕ - 34)
ಮೂಲಮ್
ಮಧುಹಾ ಹರಿಣೋ ಮೀನಃ ಪಿಂಗಲಾ ಕುರರೋರ್ಭಕಃ ।
ಕುಮಾರೀ ಶರಕೃತ್ಸರ್ಪ ಊರ್ಣನಾಭಿಃ ಸುಪೇಶಕೃತ್ ॥
ಅನುವಾದ
ಭೂಮಿ, ವಾಯು, ಆಕಾಶ, ಜಲ, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ದುಂಬಿ ಅಥವಾ ಜೇನುನೊಣ, ಆನೆ, ಜೇನು ತೆಗೆಯುವವನು, ಜಿಂಕೆ, ಮೀನು, ಪಿಂಗಳಾ ವೇಶ್ಯೆ, ಕುರರಪಕ್ಷಿ, ಮಗು, ಕುಮಾರೀ, ಬಾಣವನ್ನು ತಯಾರಿಸುವವನು, ಸರ್ಪ, ಜೇಡರಹುಳು, ಭೃಂಗ ಕೀಟ ಇವರೇ ನನ್ನ ಇಪ್ಪತ್ತನಾಲ್ಕು ಮಂದಿ ಗುರುಗಳು. ॥33-34॥
(ಶ್ಲೋಕ - 35)
ಮೂಲಮ್
ಏತೇ ಮೇ ಗುರವೋ ರಾಜನ್ಚತುರ್ವಿಂಶತಿರಾಶ್ರಿತಾಃ ।
ಶಿಕ್ಷಾ ವೃತ್ತಿಭಿರೇತೇಷಾಮನ್ವಶಿಕ್ಷಮಿಹಾತ್ಮನಃ ॥
(ಶ್ಲೋಕ - 36)
ಮೂಲಮ್
ಯತೋ ಯದನುಶಿಕ್ಷಾಮಿ ಯಥಾ ವಾ ನಾಹುಷಾತ್ಮಜ ।
ತತ್ತಥಾ ಪುರುಷವ್ಯಾಘ್ರ ನಿಬೋಧ ಕಥಯಾಮಿ ತೇ ॥
ಅನುವಾದ
ರಾಜನೇ! ನಾನು ಈ ಇಪ್ಪತ್ತನಾಲ್ಕು ಗುರುಗಳಿಂದ ಕಲಿತಿರುವ ವಿಷಯವನ್ನು ನಿನಗೆ ಹೇಳುತ್ತೇನೆ. ಎಲೈ ಪುರುಷ ಶ್ರೇಷ್ಠ ಯಯಾತಿನಂದನಾ! ನೀನು ಅದನ್ನು ಯಥಾವತ್ತಾಗಿ ಕೇಳು. ॥35-36॥
(ಶ್ಲೋಕ - 37)
ಮೂಲಮ್
ಭೂತೈರಾಕ್ರಮ್ಯಮಾಣೋಪಿ ಧೀರೋ ದೈವವಶಾನುಗೈಃ ।
ತದ್ವಿದ್ವಾನ್ನ ಚಲೇನ್ಮಾರ್ಗಾದನ್ವಶಿಕ್ಷಂ ಕ್ಷಿತೇರ್ವ್ರತಮ್ ॥
(ಶ್ಲೋಕ - 38)
ಮೂಲಮ್
ಶಶ್ವತ್ಪರಾರ್ಥಸರ್ವೇಹಃ ಪರಾರ್ಥೈಕಾಂತ ಸಂಭವಃ ।
ಸಾಧುಃ ಶಿಕ್ಷೇತ ಭೂಭೃತ್ತೋ ನಗಶಿಷ್ಯಃ ಪರಾತ್ಮತಾಮ್ ॥
ಅನುವಾದ
ಪೃಥ್ವಿಯ ದೃಷ್ಟಾಂತವನ್ನು ಕೊಡುತ್ತಾ ಹೇಳುತ್ತಾರೆ — ಜ್ಞಾನಿಯು ತನಗೆ ಬೇರೆಯವರು ಎಷ್ಟೇ ಕಷ್ಟಕೊಟ್ಟರೂ, ಅದೆಲ್ಲವೂ ಪ್ರಾರಬ್ಧಾನುಸಾರ ಪ್ರಾಪ್ತವಾದುದೆಂದು ತಿಳಿದು, ತನ್ನ ಸ್ವರೂಪದಿಂದ ಕಿಂಚಿತ್ತಾದರೂ ವಿಚಲಿತನಾಗಬಾರದು. ಇದನ್ನು ನಾನು ಪೃಥ್ವಿಯ ಕ್ಷಮಾಗುಣದಿಂದ ಕಲಿತೆ. ಪೃಥ್ವಿಯ ಸಮಸ್ತ ಕ್ರಿಯೆಗಳು ಪರೋಪಕಾರಕ್ಕಾಗಿಯೇ ಇರುತ್ತವೆ. ಪೃಥ್ವಿಯನ್ನು ಆಶ್ರಯಿಸಿದ ಪರ್ವತಗಳಿಂದ ಹಾಗೂ ವೃಕ್ಷಗಳಿಂದಲೂ ನಾನು ಪರೋಪಕಾರದ ಭಾವನೆಯನ್ನು ಕಲಿತೆನು. ॥37-38॥
(ಶ್ಲೋಕ - 39)
ಮೂಲಮ್
ಪ್ರಾಣವೃತ್ತ್ಯೈವ ಸಂತುಷ್ಯೇನ್ಮುನಿರ್ನೈವೇಂದ್ರಿಯಪ್ರಿಯೈಃ ।
ಜ್ಞಾನಂ ಯಥಾ ನ ನಶ್ಯೇತ ನಾವಕೀರ್ಯೇತ ವಾಙ್ಮನಃ ॥
ಅನುವಾದ
(ವಾಯುವಿನ ಕುರಿತು ಹೇಳುವಾಗ) ಮುನಿಯು ಪ್ರಾಣವೃತ್ತಿಯಲ್ಲೇ ಸಂತುಷ್ಟನಾಗಿರಬೇಕು. ಅರ್ಥಾತ್ ಪ್ರಾಣಧಾರಣೆ ಆಗುವಷ್ಟೇ ಆಹಾರವನ್ನು ತೆಗೆದುಕೊಳ್ಳಬೇಕು, ಇಂದ್ರಿಯಗಳ ತೃಪ್ತಿಗಾಗಿ ಅಲ್ಲ. ಅದರಿಂದ ವಾಣಿ ಮತ್ತು ಮನಸ್ಸು ಅತ್ತ-ಇತ್ತ ಅಲೆದಾಡದಿರಲಿ. ತನ್ನ ಜ್ಞಾನವೂ ನಷ್ಟವಾಗದಿರಲಿ. ॥39॥
(ಶ್ಲೋಕ - 40)
ಮೂಲಮ್
ವಿಷಯೇಷ್ವಾವಿಷನ್ಯೋಗೀ ನಾನಾಧರ್ಮೇಷು ಸರ್ವತಃ ।
ಗುಣದೋಷವ್ಯಪೇತಾತ್ಮಾ ನ ವಿಷಜ್ಜೇತ ವಾಯುವತ್ ॥
ಅನುವಾದ
ವಾಯುವು ಸರ್ವತ್ರ ಸಂಚರಿಸುತ್ತದೆ, ಆದರೆ ಯಾವುದರಲ್ಲಿಯೂ ಲಿಪ್ತವಾಗುವುದಿಲ್ಲ. ಗಂಧವನ್ನು ಗ್ರಹಿಸುತ್ತದೆ ಹಾಗೂ ಬಿಡುತ್ತದೆ. ಹಾಗೆಯೇ ಯೋಗಿಯು ಎಲ್ಲೆಡೆ ಸಂಚರಿಸುತ್ತಿದ್ದರೂ, ಅನೇಕ ಧರ್ಮಗಳ ವಿಷಯಗಳಿಂದ, ಅವುಗಳ ಗುಣ-ದೋಷಗಳಿಂದ ತನ್ನನ್ನು ಸರ್ವಥಾ ಬೇರೆಯಾಗಿಟ್ಟುಕೊಂಡು, ಅವುಗಳಲ್ಲಿ ಆಸಕ್ತನಾಗಬಾರದು. ॥40॥
(ಶ್ಲೋಕ - 41)
ಮೂಲಮ್
ಪಾರ್ಥಿವೇಷ್ವಿಹ ದೇಹೇಷು ಪ್ರವಿಷ್ಟಸ್ತದ್ಗುಣಾಶ್ರಯಃ ।
ಗುಣೈರ್ನ ಯುಜ್ಯತೇ ಯೋಗೀ ಗಂಧೈರ್ವಾಯುರಿವಾತ್ಮದೃಕ್ ॥
ಅನುವಾದ
ವಾಯುವು ಗಂಧವನ್ನು ಹೊತ್ತುಕೊಂಡು ಹೋಗುತ್ತದೆ, ಆದರೆ ಅದರ ಗುಣ-ದೋಷಗಳಲ್ಲಿ ಅದು ಅಸಂಗವಾಗಿಯೇ ಇರುತ್ತದೆ. ಹಾಗೆಯೇ ಆತ್ಮಜ್ಞಾನಿಯು ಎಲ್ಲೆಡೆ ವಿಚರಿಸುತ್ತಿದ್ದರೂ ಎಲ್ಲಿಯೂ ಗುಣ-ದೋಷಗಳಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಒಂದೇ ಆತ್ಮವು ಸರ್ವತ್ರ ಪರಿಪೂರ್ಣವಾಗಿದೆ. ಅದೇ ಆತ್ಮವು ಪಾರ್ಥಿವ ಶರೀರದಲ್ಲಿಯೂ ಇದೆ. ಆದರೆ ಆತ್ಮವು ಶರೀರದಲ್ಲಿದ್ದರೂ ನಿರ್ಲಿಪ್ತವಾಗಿರುವಂತೆ ಜ್ಞಾನಿಯೂ ಶರೀರದಲ್ಲಿ ಇದ್ದರೂ ಅದರ ಗುಣ-ದೋಷಗಳೊಂದಿಗೆ ತನ್ನನ್ನು ಒಂದಾಗಿಸಬಾರದು. ॥41॥
(ಶ್ಲೋಕ - 42)
ಮೂಲಮ್
ಅಂತರ್ಹಿತಶ್ಚ ಸ್ಥಿರಜಂಗಮೇಷು
ಬ್ರಹ್ಮಾತ್ಮಭಾವೇನ ಸಮನ್ವಯೇನ ।
ವ್ಯಾಪ್ತ್ಯಾವ್ಯವಚ್ಛೇದಮಸಂಗಮಾತ್ಮನೋ
ಮುನಿರ್ನಭಸ್ತ್ವಂ ವಿತತಸ್ಯ ಭಾವಯೇತ್ ॥
ಅನುವಾದ
(ಈಗ ಆಕಾಶದ ಉದಾಹರಣೆಯನ್ನು ಎರಡು ಶ್ಲೋಕಗಳಲ್ಲಿ ತಿಳಿಸುತ್ತಾರೆ) ಆಕಾಶವು ಎಲ್ಲ ಕಡೆಗಳಲ್ಲಿ ತುಂಬಿಕೊಂಡು, ಸರ್ವವ್ಯಾಪಕವಾಗಿದೆ. ಹಾಗೆಯೇ ಆ ಬ್ರಹ್ಮವು ಸ್ಥಾವರ ಜಂಗಮ ಎಲ್ಲ ಪ್ರಾಣಿಗಳಲ್ಲಿ ಸಮರೂಪದಿಂದ ಮತ್ತು ಅನ್ವಯರೂಪದಿಂದ ಸರ್ವವ್ಯಾಪಕವಾಗಿದೆ. ಅರ್ಥಾತ್ ಹೊರಗೆ ಒಳಗೆ ಎಲ್ಲೆಡೆ ಪರಿಪೂರ್ಣವಾಗಿದೆ. ಆ ಬ್ರಹ್ಮವು ಅಖಂಡರೂಪದಿಂದಿದ್ದು ಅಸಂಗವಾಗಿದೆ. ಇಂತಹ ಆತ್ಮನ ಸರ್ವವ್ಯಾಪಕತೆಯ ಅನುಭವವನ್ನು ಮುನಿಯು ಆಕಾಶದ ದೃಷ್ಟಾಂತದಿಂದ ಕಲಿಯಬೇಕು. ॥42॥
(ಶ್ಲೋಕ - 43)
ಮೂಲಮ್
ತೇಜೋಬನ್ನಮಯೈರ್ಭಾವೈರ್ಮೇಘಾದ್ಯೈರ್ವಾಯುನೇರಿತೈಃ ।
ನ ಸ್ಪೃಶ್ಯತೇ ನಭಸ್ತದ್ವತ್ಕಾಲಸೃಷ್ಟೈರ್ಗುಣೈಃ ಪುಮಾನ್ ॥
ಅನುವಾದ
ವಾಯುವಿನಿಂದ ಪ್ರೇರಿತವಾದ ಮೋಡಗಳ ಸಮೂಹ ಆಕಾಶದಲ್ಲೇ ಇರುತ್ತದೆ, ಆದರೆ ಆಕಾಶವು ಅವುಗಳಿಂದ ನಿರ್ಲಿಪ್ತವಾಗಿರುತ್ತದೆ. ಹಾಗೆಯೇ ಕಾಲನ ಪ್ರೇರಣೆಯಿಂದ ಸತ್ತ್ವಾದಿ ಮೂರು ಗುಣಗಳ ಕಾರ್ಯರೂಪೀ ಈ ಅಗ್ನಿ, ಜಲ, ಪೃಥ್ವಿ (ಅನ್ನ) ರೂಪದಲ್ಲಿ ನಿರ್ಮಿತ ಶರೀರ ಇಂದ್ರಿಯಾದಿಗಳಿಂದ ಪುರುಷನಿಗೆ ಯಾವ ಸಂಬಂಧವೂ ಇಲ್ಲ. ॥43॥
ಮೂಲಮ್
(ಶ್ಲೋಕ - 44)
ಸ್ವಚ್ಛಃ ಪ್ರಕೃತಿತಃ ಸ್ನಿಗ್ಧೋಮಾಧುರ್ಯಸ್ತೀರ್ಥಭೂರ್ನೃಣಾಮ್ ।
ಮುನಿಃ ಪುನಾತ್ಯಪಾಂ ಮಿತ್ರಮೀಕ್ಷೋಪಸ್ಪರ್ಶಕೀರ್ತನೈಃ ॥
ಅನುವಾದ
(ಈಗ ಜಲದ ಉದಾಹರಣೆಯನ್ನು ಕೊಡುತ್ತಾ ಹೇಳುತ್ತಾರೆ) ನೀರು ಸ್ವಭಾವತಃ ಸ್ವಚ್ಛವಾಗಿದೆ, ಪ್ರಿಯವಾಗಿದೆ, ತೀರ್ಥವಾಗಿರುವುದರಿಂದ ಮನುಷ್ಯರನ್ನು ಪವಿತ್ರವಾಗಿಸುತ್ತದೆ. ಹಾಗೆಯೇ ಮುನಿಯ ಸ್ವಭಾವವು ಕೂಡ ಸ್ವಚ್ಛವಾಗಿರುತ್ತದೆ. ಅವನು ಎಲ್ಲರಿಗೆ ಪ್ರಿಯನಾಗಿರುತ್ತಾನೆ. ತನ್ನ ದೃಷ್ಟಿಯ ಮೂಲಕ ಹಾಗೂ ಮಧುರವಾಣಿಯಿಂದ ಜನರನ್ನು ಪವಿತ್ರರಾಗಿಸುತ್ತಾನೆ. ಅದಕ್ಕಾಗಿ ಮುನಿಯು ಶುದ್ಧ ಸಿಗ್ಧ ಮಧುರ ಸ್ವಭಾವವನ್ನು ಹೊಂದಿರುತ್ತಾನೆ. ॥44॥
(ಶ್ಲೋಕ - 45)
ಮೂಲಮ್
ತೇಜಸ್ವೀ ತಪಸಾ ದೀಪ್ತೋ ದುರ್ಧರ್ಷೋದರಭಾಜನಃ ।
ಸರ್ವಭಕ್ಷೋಪಿ ಯುಕ್ತಾತ್ಮಾ ನಾದತ್ತೇ ಮಲಮಗ್ನಿವತ್ ॥
ಅನುವಾದ
ಅಗ್ನಿಯು ತೇಜಸ್ವಿಯೂ, ಜ್ಯೋತಿರ್ಮಯನೂ ಆಗಿದ್ದಾನೆ. ಅವನು ದುರಾಧರ್ಷನು ಅವನನ್ನು ಯಾರೂ ಎದುರಿಸಲಾರರು ಸಂಗ್ರಹ ಪರಿಗ್ರಹಕ್ಕಾಗಿ ಅವನು ಪಾತ್ರೆಯಿಲ್ಲ ಉದರವೇ ಅವನ ಪಾತ್ರೆಯು. ಸರ್ವಭಕ್ಷಕನಾಗಿದ್ದರೂ ಆಯಾ ವಸ್ತುಗಳ ಗುಣ ದೋಷಗಳಿಂದ ಲಿಪ್ತನಾಗುವುದಿಲ್ಲ ಹಾಗೆಯೇ ಮುನಿಯು ತಪಸ್ವಿ, ತೇಜಸ್ವಿ ಹಾಗೂ ಸರ್ವ ಭಾಷಿಯಾಗಿದ್ದರೂ ಆಯಾ ವಸ್ತುಗಳ ಗುಣದೋಷಗಳಿಂದ ಲಿಪ್ತನಾಗುವುದಿಲ್ಲ. ಸಂಗ್ರಹ, ಪರಿಗ್ರಹಗಳಿಂದ ದೂರವಿರಬೇಕು. ॥45॥
(ಶ್ಲೋಕ - 46)
ಮೂಲಮ್
ಕ್ವಚಿಚ್ಛನ್ನಃ ಕ್ವಚಿತ್ಸ್ಪಷ್ಟ ಉಪಾಸ್ಯಃ ಶ್ರೇಯ ಇಚ್ಛತಾಮ್ ।
ಭುಂಕ್ತೇ ಸರ್ವತ್ರ ದಾತೃಣಾಂ ದಹನ್ಪ್ರಾಗುತ್ತರಾಶುಭಮ್ ॥
ಅನುವಾದ
ಅಗ್ನಿಯು ಕೆಲವೆಡೆ ಪ್ರಕಟವಾಗಿದ್ದು, ಕೆಲವೆಡೆ ಅಪ್ರಕಟವಾಗಿರುತ್ತದೆ ಹಾಗೂ ಅದರ ಉಪಾಸನೆಯೂ ಮಾಡಲಾಗುತ್ತದೆ. ಹಾಗೆಯೇ ಸಾಧುವು ಕೆಲವೆಡೆ ತನ್ನನ್ನು ಅಡಗಿಸಿಕೊಂಡು, ಕೆಲವೆಡೆ ಪ್ರಕಟಪಡಿಸುವನು. ಶ್ರೇಯೋಕಾಮಿಯಾದ ಪುರುಷರಿಗೆ ಅವನು ಉಪಾಸ್ಯನೂ ಆಗುತ್ತಾನೆ. ಅಗ್ನಿಯಂತೆ ಅವರು ಸರ್ವಭಕ್ಷಿಯಾಗಿದ್ದಾರೆ. ಇಂತಹ ಮಹಾಪುರುಷರಾದ ಸಾಧುಗಳು ಅನ್ನವೇ ಮುಂತಾದುವನ್ನು ಕೊಡುವವರ ಭೂತ, ಭವಿಷ್ಯದ ಎಲ್ಲ ಅಮಂಗಳಗಳನ್ನು ನಾಶಮಾಡಿ ಬಿಡುತ್ತಾರೆ. ಅವರನ್ನು ಪವಿತ್ರರಾಗಿಸುತ್ತಾರೆ. (ಇಂತಹ ಪವಿತ್ರಾತ್ಮರಾದ ಮಹಾತ್ಮಾ ಸಾಧುಗಳಾದರೋ ಬೇರೆಯವರನ್ನು ಪವಿತ್ರರಾಗಿಸಲೆಂದೇ ಭಿಕ್ಷೆ ಸ್ವೀಕರಿಸುತ್ತಾರೆ.) ॥46॥
(ಶ್ಲೋಕ - 47)
ಮೂಲಮ್
ಸ್ವಮಾಯಯಾ ಸೃಷ್ಟಮಿದಂ ಸದಸಲ್ಲಕ್ಷಣಂ ವಿಭುಃ ।
ಪ್ರವಿಷ್ಟ ಈಯತೇ ತತ್ತತ್ಸ್ವರೂಪೋಗ್ನಿರಿವೈಧಸಿ ॥
ಅನುವಾದ
ಅಗ್ನಿಯು ಎಲ್ಲ ಇಂಧನ (ಕಟ್ಟಿಗೆ)ಗಳಲ್ಲಿ ವ್ಯಾಪಕನಾಗಿರುತ್ತಾನೆ. ಸೌದೆಯ ಆಕಾರದಂತೆ ಅಗ್ನಿಯು ಕಂಡು ಬರುತ್ತಾನೆ. ಹಾಗೆಯೇ ತನ್ನ ಮಾಯೆಯಿಂದ ಉಂಟಾದ ಸತ್-ಅಸತ್ (ವ್ಯಕ್ತ-ಅವ್ಯಕ್ತ) ಎಲ್ಲ ಚರಾಚರ ಪ್ರಾಣಿಗಳಲ್ಲಿ ಪ್ರವಿಷ್ಟನಾದ ಒಂದೇ ಆತ್ಮವು ಆಯಾಯಾ ರೂಪದಲ್ಲಿ ಕಂಡುಬರುತ್ತಾನೆ. ॥47॥
ಮೂಲಮ್
(ಶ್ಲೋಕ - 48)
ವಿಸರ್ಗಾದ್ಯಾಃ ಶ್ಮಶಾನಾಂತಾ ಭಾವಾ ದೇಹಸ್ಯ ನಾತ್ಮನಃ ।
ಕಲಾನಾಮಿವ ಚಂದ್ರಸ್ಯ ಕಾಲೇನಾವ್ಯಕ್ತವರ್ತ್ಮನಾ ॥
(ಶ್ಲೋಕ - 49)
ಮೂಲಮ್
ಕಾಲೇನ ಹ್ಯೋಘವೇಗೇನ ಭೂತಾನಾಂ ಪ್ರಭವಾಪ್ಯಯೌ ।
ನಿತ್ಯಾವಪಿ ನ ದೃಶ್ಯೇತೇ ಆತ್ಮನೋಗ್ನೇರ್ಯಥಾರ್ಚಿಷಾಮ್ ॥
ಅನುವಾದ
(ಈಗ ಚಂದ್ರನ ದೃಷ್ಟಾಂತವನ್ನು ಎರಡು ಶ್ಲೋಕಗಳಲ್ಲಿ ಹೇಳುತ್ತಾರೆ—) ಕಾಲದ ವೇಗದ ಪ್ರಭಾವದಿಂದ ಚಂದ್ರನ ಕಲೆಗಳು ವೃದ್ಧಿ-ಕ್ಷಯವಾಗುತ್ತಾ ಇರುತ್ತವೆ. ಇದೇ ರೀತಿ ದೇಹವು ಉತ್ಪತ್ತಿಯಿಂದ ಹಿಡಿದು ಮೃತ್ಯುವಿನವರೆಗೆ ಆಗುವ ಅವಸ್ಥೆಗಳು ಗಮನಕ್ಕೆ ಬಾರದಿರುವ ಕಾಲದ ಪ್ರಭಾವದಿಂದ ಬದಲಾಗುತ್ತಾ ಇರುತ್ತವೆ. ಆತ್ಮನಿಗೆ ಅವುಗಳ ಯಾವ ಸಂಬಂಧವೂ ಇರುವುದಿಲ್ಲ. ಅಗ್ನಿಯ ಜ್ವಾಲೆಗಳು ಅಗ್ನಿಯಿಂದ ಹೊರಟು ಕಣ್ಮರೆಯಾಗುತ್ತವೆ. ಆದರೆ ಕಾಣುವುದಿಲ್ಲ; ಹಾಗೆಯೇ ಕಾಲದ ಪ್ರಚಂಡವೇಗದಿಂದ ಎಲ್ಲ ಪ್ರಾಣಿಗಳ ಉತ್ಪತ್ತಿ ಮತ್ತು ಮೃತ್ಯು ಸದಾಕಾಲ ಆಗುತ್ತಾ ಇರುತ್ತದೆ. ಆದರೆ ಅದು ಕಾಣುವುದಿಲ್ಲ. ॥48-49॥
(ಶ್ಲೋಕ - 50)
ಮೂಲಮ್
ಗುಣೈರ್ಗುಣಾನುಪಾದತ್ತೇ ಯಥಾಕಾಲಂ ವಿಮುಂಚತಿ ।
ನ ತೇಷು ಯುಜ್ಯತೇ ಯೋಗೀ ಗೋಭಿರ್ಗಾ ಇವ ಗೋಪತಿಃ ॥
ಅನುವಾದ
(ಈಗ ಸೂರ್ಯನ ದೃಷ್ಟಾಂತಕ್ಕಾಗಿ ಎರಡು ಶ್ಲೋಕಗಳನ್ನು ಹೇಳುತ್ತಾರೆ) ‘ಗೋಪತಿಃ’ ಸೂರ್ಯನು ತನ್ನ ಕಿರಣಗಳಿಂದ ಸಮಯಕ್ಕೆ ಸರಿಯಾಗಿ ನೀರನ್ನು ಗ್ರಹಿಸಿ, ಅದನ್ನು ಮಳೆಯಾಗಿ ಸುರಿಸುತ್ತಾನೆ. ಆದರೆ ಸೂರ್ಯನು ಎಲ್ಲಿಯೂ ಆಸಕ್ತನಾಗುವುದಿಲ್ಲ. ಹಾಗೆಯೇ ಯೋಗಿಯು ಗ್ರಹಿಸುವಾಗ ಮತ್ತು ತ್ಯಜಿಸುವಾಗ ಎಲ್ಲಿಯೂ ಆಸಕ್ತನಾಗಿರಬಾರದು. ॥50॥
(ಶ್ಲೋಕ - 51)
ಮೂಲಮ್
ಬುಧ್ಯತೇ ಸ್ವೇನ ಭೇದೇನ ವ್ಯಕ್ತಿಸ್ಥ ಇವ ತದ್ಗತಃ ।
ಲಕ್ಷ್ಯತೇ ಸ್ಥೂಲಮತಿಭಿರಾತ್ಮಾ ಚಾವಸ್ಥಿತೋರ್ಕವತ್ ॥
ಅನುವಾದ
ಹಲವಾರು ಪಾತ್ರೆಗಳಲ್ಲಿ ನೀರನ್ನು ತುಂಬಿಟ್ಟು ನೋಡಿದರೆ, ಆ ಪಾತ್ರೆಗಳಲ್ಲಿ ಪ್ರತಿಲಿತನಾದ ಸೂರ್ಯನು ಅನೇಕನಾಗಿರುವಂತೆ ಕಾಣುತ್ತದೆ. ಆದರೆ ಇರುವ ಸೂರ್ಯನು ಒಬ್ಬನೇ. ಹಾಗೆಯೇ ಆತ್ಮವೂ ಒಂದೇ ಆಗಿದೆ, ಆದರೆ ಸ್ಥೂಲಬುದ್ಧಿಯುಳ್ಳವರಿಗೆ ನಾನಾತ್ವದ ಭಾವನೆಯ ಕಾರಣ ಒಂದೇ ಆತ್ಮದ ಸತ್ತೆಯ ಬೋಧವಾಗುವುದಿಲ್ಲ. ಆದ್ದರಿಂದ ಸೂರ್ಯನ ದೃಷ್ಟಾಂತದಿಂದ ಆತ್ಮನ ಅಖಂಡತೆಯನ್ನು ಅರಿತುಕೊಳ್ಳಬೇಕು. ॥51॥
(ಶ್ಲೋಕ - 52)
ಮೂಲಮ್
ನಾತಿಸ್ನೇಹಃ ಪ್ರಸಂಗೋ ವಾ ಕರ್ತವ್ಯಃ ಕ್ವಾಪಿ ಕೇನಚಿತ್ ।
ಕುರ್ವನ್ವಿಂದೇತ ಸಂತಾಪಂ ಕಪೋತ ಇವ ದೀನಧೀಃ ॥
ಅನುವಾದ
(ಈಗ ಪಾರಿವಾಳದ ಉದಾಹರಣೆಯನ್ನು ಕೊಡುತ್ತಾರೆ) ರಾಜನೇ! ಎಲ್ಲಿಯೂ ಯಾರೊಡನೆಯೂ ಅತಿ ಸ್ನೇಹ ಅಥವಾ ಆಸಕ್ತಿ ಇಡಬಾರದು. ಇಲ್ಲದಿದ್ದರೆ ಅವನು ದೀನನಾಗಿ ಪಾರಿವಾಳದಂತೆ ಅತ್ಯಂತ ಕ್ಲೇಶವನ್ನು ಅನುಭವಿಸಬೇಕಾಗುವುದು. ॥52॥
(ಶ್ಲೋಕ - 53)
ಮೂಲಮ್
ಕಪೋತಃ ಕಶ್ಚನಾರಣ್ಯೇ ಕೃತನೀಡೋ ವನಸ್ಪತೌ ।
ಕಪೋತ್ಯಾ ಭಾರ್ಯಯಾ ಸಾರ್ಧಮುವಾಸ ಕತಿಚಿತ್ಸಮಾಃ ॥
(ಶ್ಲೋಕ - 54)
ಮೂಲಮ್
ಕಪೋತೌ ಸ್ನೇಹಗುಣಿತಹೃದಯೌ ಗೃಹಧರ್ಮಿಣೌ ।
ದೃಷ್ಟಿಂ ದೃಷ್ಟ್ಯಾಂಗಮಂಗೇನ ಬುದ್ಧಿಂ ಬುದ್ಧ್ಯಾ ಬಬಂಧತುಃ ॥
ಅನುವಾದ
ರಾಜನೇ! ಒಂದಾನೊಂದು ಕಾಡಿನಲ್ಲಿ ಒಂದು ಪಾರಿವಾಳವು ವಾಸಿಸುತ್ತಿತ್ತು. ಅದು ಒಂದು ಮರದ ಮೇಲೆ ಗೂಡುಕಟ್ಟಿಕೊಂಡಿತ್ತು. ಅದು ತನ್ನ ಹೆಣ್ಣು ಪಾರಿವಾಳದೊಂದಿಗೆ ಅನೇಕ ವರ್ಷಗಳವರೆಗೆ ಅದೇ ಗೂಡಿನಲ್ಲಿ ವಾಸಿಸುತ್ತಿತ್ತು. ಆ ಪಾರಿವಾಳ ದಂಪತಿಗಳ ಹೃದಯದಲ್ಲಿ ನಿರಂತರ ಒಬ್ಬರ ಕುರಿತು ಮತ್ತೊಬ್ಬರ ಪ್ರೇಮ ಬೆಳೆಯುತ್ತಲೇ ಇತ್ತು. ಅವು ಪರಸ್ಪರ ದೃಷ್ಟಿಯಿಂದ ದೃಷ್ಟಿ, ಅಂಗದಿಂದ ಅಂಗ, ಬುದ್ಧಿಯಿಂದ ಬುದ್ಧಿ ಹೀಗೆ ಬಂಧಿತರಾಗಿ ಗೃಹಸ್ಥ ಧರ್ಮದಲ್ಲಿ ಆಸಕ್ತವಾಗಿದ್ದವು. ॥53-54॥
(ಶ್ಲೋಕ - 55)
ಮೂಲಮ್
ಶಯ್ಯಾಸನಾಟನಸ್ಥಾನವಾರ್ತಾಕ್ರೀಡಾಶನಾದಿಕಮ್ ।
ಮಿಥುನೀಭೂಯ ವಿಸ್ರಬ್ಧೌ ಚೇರತುರ್ವನರಾಜಿಷು ॥
ಅನುವಾದ
ಅವು ನಿಃಶಂಕವಾಗಿ ಅಲ್ಲಿಯ ವೃಕ್ಷಲತೆಗಳಲ್ಲಿ ಒಟ್ಟಿಗೆ ಮಲಗುವುದು, ಕುಳಿತುಕೊಳ್ಳುವುದು, ಅಡ್ಡಾಡುವುದು, ಮಾತು ಕತೆಯಾಡುವುದು, ಆಡುವುದು, ತಿನ್ನುಣ್ಣುವುದು, ವಾಸಿಸುವುದಷ್ಟು ಒಬ್ಬರಿಗೆ ಮತ್ತೊಬ್ಬರಮೇಲೆ ವಿಶ್ವಾಸ ಉಂಟಾಗಿತ್ತು.॥55॥
(ಶ್ಲೋಕ - 56)
ಮೂಲಮ್
ಯಂ ಯಂ ವಾಂಛತಿ ಸಾ ರಾಜನ್ ತರ್ಪಯಂತ್ಯನುಕಂಪಿತಾ ।
ತಂ ತಂ ಸಮನಯತ್ಕಾಮಂ ಕೃಚ್ಛ್ರೇಣಾಪ್ಯಜಿತೇಂದ್ರಿಯಃ ॥
ಅನುವಾದ
ರಾಜನೇ! ಆ ಪಾರಿವಾಳವು ಹೆಣ್ಣು ಪಾರಿವಾಳವು ಏನನ್ನೂ ಬಯಸಿದರೂ ಭಾರೀ ಕಷ್ಟಪಟ್ಟು ಅದರ ಕಾಮನೆ ಪೂರ್ಣಮಾಡುವಷ್ಟು ಅದಕ್ಕೆ ಪ್ರೇಮವಿತ್ತು. ಆ ಹೆಣ್ಣು ಪಾರಿವಾಳವು ಸುರತಾಲಾಪದಿಂದ ಪಾರಿವಾಳವನ್ನು ಸಂತೋಷಪಡಿಸುತ್ತಿತ್ತು. ॥56॥
(ಶ್ಲೋಕ - 57)
ಮೂಲಮ್
ಕಪೋತೀ ಪ್ರಥಮಂ ಗರ್ಭಂ ಗೃಹ್ಣತೀ ಕಾಲ ಆಗತೇ ।
ಅಂಡಾನಿ ಸುಷುವೇ ನೀಡೇ ಸ್ವಪತ್ಯುಃ ಸನ್ನಿಧೌ ಸತೀ ॥
(ಶ್ಲೋಕ - 58)
ಮೂಲಮ್
ತೇಷು ಕಾಲೇ ವ್ಯಜಾಯಂತ ರಚಿತಾವಯವಾ ಹರೇಃ ।
ಶಕ್ತಿಭಿರ್ದುರ್ವಿಭಾವ್ಯಾಭಿಃ ಕೋಮಲಾಂಗತನೂರುಹಾಃ ॥
ಅನುವಾದ
ಸಮಯ ಒದಗಿದಾಗ ಹೆಣ್ಣು ಪಾರಿವಾಳವು ಗರ್ಭವತಿಯಾಗಿ, ಅದು ತನ್ನ ಪತಿಯೊಂದಿಗೆ ಅದೇ ಗೂಡಿನಲ್ಲಿ ಇದ್ದು ಮೊಟ್ಟೆಗಳನ್ನಿಟ್ಟಿತು. ಭಗವಂತನ ಅಚಿಂತ್ಯ ಶಕ್ತಿಯಿಂದ ಸಮಯಕ್ಕೆ ಸರಿಯಾಗಿ ಆ ಮೊಟ್ಟೆಗಳು ಒಡೆದು ಅದರಿಂದ ಕೈಕಾಲುಗಳಿದ್ದ ಮರಿಗಳು ಹೊರಟವು. ಅವುಗಳ ಪ್ರತಿಯೊಂದು ಅಂಗವು ಮತ್ತು ರೆಕ್ಕೆಗಳು ಅತ್ಯಂತ ಕೋಮಲವಾಗಿದ್ದವು. ॥57-58॥
(ಶ್ಲೋಕ - 59)
ಮೂಲಮ್
ಪ್ರಜಾಃ ಪುಪುಷತುಃ ಪ್ರೀತೌ ದಂಪತೀ ಪುತ್ರವತ್ಸಲೌ ।
ಶೃಣ್ವಂತೌ ಕೂಜಿತಂ ತಾಸಾಂ ನಿರ್ವೃತೌ ಕಲಭಾಷಿತೈಃ ॥
ಅನುವಾದ
ಈ ಪಾರಿವಾಳ ದಂಪತಿಗಳ ಕಣ್ಣು ತಮ್ಮ ಮರಿಗಳ ಮೇಲೆಯೇ ನೆಟ್ಟಿತ್ತು. ಅವು ತುಂಬಾ ಪ್ರೇಮ, ಆನಂದದಿಂದ ತನ್ನ ಮರಿಗಳ ಪಾಲನೆ-ಪೋಷಣೆ ಮಾಡುತ್ತಾ, ಅವುಗಳ ಸಿಹಿಯಾದ ಮಾತು, ಅವುಗಳ ಗುಟರ್-ಗುಟರ್ ಕೇಳಿ ಆನಂದಮಗ್ನರಾಗುತ್ತಿದ್ದವು. ॥59॥
(ಶ್ಲೋಕ - 60)
ಮೂಲಮ್
ತಾಸಾಂ ಪತತೈಃ ಸುಸ್ಪರ್ಶೈಃ ಕೂಜಿತೈರ್ಮುಗ್ಧಚೇಷ್ಟಿತೈಃ ।
ಪ್ರತ್ಯುದ್ಗಮೈರದೀನಾನಾಂ ಪಿತರೌ ಮುದಮಾಪತುಃ ॥
ಅನುವಾದ
ಈ ಪ್ರಕಾರ ಆನಂದದಲ್ಲಿ ಮುಳುಗಿ ಮರಿಗಳ ಸುಕೋಮಲ ರೆಕ್ಕೆಗಳನ್ನು ಮುಟ್ಟುತ್ತಾ, ಅವುಗಳ ಕಲರವ ಮತ್ತು ಮುಗ್ಧ ಚೇಷ್ಟೆಗಳನ್ನು ನೋಡ-ನೋಡುತ್ತಾ ಅವುಗಳಿಗೆ ಭಾರೀ ಸಂತೋಷವಾಗುತ್ತಿತ್ತು. ಅವು ನೆಗೆಯುತ್ತಾ-ನೆಗೆಯುತ್ತಾ ತಮ್ಮ ತಂದೆ-ತಾಯಿಗಳ ಬಳಿಗೆ ಬಂದಾಗ ಕಪೋತ-ಕಪೋತಿಯು ಸಂತೋಷಭರಿತರಾಗುತ್ತಿದ್ದವು. ॥60॥
(ಶ್ಲೋಕ - 61)
ಮೂಲಮ್
ಸ್ನೇಹಾನುಬದ್ಧಹೃದಯಾವನ್ಯೋನ್ಯಂ ವಿಷ್ಣುಮಾಯಯಾ ।
ವಿಮೋಹಿತೌ ದೀನಧಿಯೌ ಶಿಶೂನ್ ಪುಪುಷತುಃ ಪ್ರಜಾಃ ॥
ಅನುವಾದ
ರಾಜನೇ! ಹೀಗೆ ಆ ಕಪೋತ ದಂಪತಿಯು ಭಗವಂತನ ಮಾಯೆಯಿಂದ ಮೋಹಿತರಾಗಿದ್ದವು. ಅವುಗಳ ಹೃದಯವು ಒಬ್ಬರು ಮತ್ತೊಬ್ಬರ ಸ್ನೇಹ ಬಂಧನದಲ್ಲಿ ಬಂಧಿತವಾಗಿತ್ತು. ಆ ಬಡಪಾಯಿ ಕಪೋತ ದಂಪತಿಗಳು ತಮ್ಮ ಎಳೆಯ ಮರಿಗಳ ಪಾಲನೆ-ಪೋಷಣೆಯಲ್ಲಿ ಜಗತ್ತು, ಲೋಕ-ಪರಲೋಕದ ನೆನಪು ಕೂಡ ಇರದಷ್ಟು ವ್ಯಗ್ರವಾಗಿದ್ದವು. ॥61॥
(ಶ್ಲೋಕ - 62)
ಮೂಲಮ್
ಏಕದಾ ಜಗ್ಮತುಸ್ತಾಸಾಮನ್ನಾರ್ಥಂ ತೌ ಕುಟುಂಬಿನೌ ।
ಪರಿತಃ ಕಾನನೇ ತಸ್ಮಿನ್ನರ್ಥಿನೌ ಚೇರತುಶ್ಚಿರಮ್ ॥
ಅನುವಾದ
ಒಂದುದಿನ ಇಬ್ಬರೂ ಗಂಡು-ಹೆಣ್ಣು ತಮ್ಮ ಮರಿಗಳಿಗೆ ಆಹಾರವನ್ನು ತರಲು ಕಾಡಿಗೆ ಹೋಗಿದ್ದವು. ಏಕೆಂದರೆ ಈಗ ಅವರ ಕುಟುಂಬ ತುಂಬಾ ಬೆಳೆದುಹೋಗಿತ್ತು. ಅವು ಆಹಾರಕ್ಕಾಗಿ ಹೆಚ್ಚು ಹೊತ್ತು ಕಾಡಿನಲ್ಲಿ ಅಲೆಯುತ್ತಾ ಇದ್ದವು. ॥62॥
ಮೂಲಮ್
(ಶ್ಲೋಕ - 63)
ದೃಷ್ಟ್ವಾ ತಾನ್ ಲುಬ್ಧಕಃ ಕಶ್ಚಿದ್ಯದೃಚ್ಛಾತೋ ವನೇಚರಃ ।
ಜಗೃಹೇ ಜಾಲಮಾತತ್ಯ ಚರತಃ ಸ್ವಾಲಯಾಂತಿಕೇ ॥
ಅನುವಾದ
ಇತ್ತ ಓರ್ವ ಬೇಡನು ತಿರುಗಾಡುತ್ತಾ ಸಂಯೋಗವಶದಿಂದ ಅವುಗಳ ಗೂಡಿನ ಕಡೆಗೆ ಬಂದು ತಲುಪಿದನು. ಅವನು ನೋಡಿದನು ಗೂಡಿನ ಸುತ್ತಲೂ ಪಾರಿವಾಳದ ಮರಿಗಳು ನೆಗೆಯುತ್ತಿದ್ದವು. ಅವನು ಬಲೆಬೀಸಿ ಅವನ್ನು ಹಿಡಿದುಕೊಂಡನು. ॥63॥
(ಶ್ಲೋಕ - 64)
ಮೂಲಮ್
ಕಪೋತಶ್ಚ ಕಪೋತೀ ಚ ಪ್ರಜಾಪೋಷೇ ಸದೋತ್ಸುಕೌ ।
ಗತೌ ಪೋಷಣಮಾದಾಯ ಸ್ವನೀಡಮುಪಜಗ್ಮತುಃ ॥
(ಶ್ಲೋಕ - 65)
ಮೂಲಮ್
ಕಪೋತೀ ಸ್ವಾತ್ಮಜಾನ್ವೀಕ್ಷ್ಯ ಬಾಲಕಾನ್ಜಾಲಸಂವೃತಾನ್ ।
ತಾನಭ್ಯಧಾವತ್ ಕ್ರೋಶಂತೀ ಕ್ರೋಶತೋ ಭೃಶದುಃಖಿತಾ ॥
ಅನುವಾದ
ಕಪೋತ-ಕಪೋತಿಗಳು ಮರಿಗಳಿಗೆ ಉಣಿಸಲು ಯಾವಾಗಲೂ ಉತ್ಸುಕರಾಗಿರುತ್ತಿದ್ದರು. ಈಗ ಅವುಗಳು ಆಹಾರ ಎತ್ತಿಕೊಂಡು ಗೂಡಿನ ಬಳಿಗೆ ಬಂದವು. ಕಪೋತಿ ನೋಡುತ್ತಾಳೆ ಅವಳ ಹೃದಯದ ಹೋಳಾದ ಮುದ್ದಾದ ಮರಿಗಳು ಬಲೆಯಲ್ಲಿ ಸಿಕ್ಕಿಹಾಕಿಕೊಂಡಿವೆ. ದುಃಖದಿಂದ ಚೆಂ-ಚೆಂ ಮಾಡುತ್ತಿವೆ. ಅವುಗಳನ್ನು ಇಂತಹ ಸ್ಥಿತಿಯಲ್ಲಿ ನೋಡಿದ ಕಪೋತಿಯ ದುಃಖಕ್ಕೆ ಸೀಮೆಯೇ ಇರಲಿಲ್ಲ. ಅವಳು ಅಳುತ್ತಾ-ಬೊಬ್ಬೆಯಿಡುತ್ತಾ ಮರಿಗಳ ಬಳಿಗೆ ಹೋದಳು. ॥64-65॥
(ಶ್ಲೋಕ - 66)
ಮೂಲಮ್
ಸಾಸಕೃತ್ಸ್ನೇಹಗುಣಿತಾ ದೀನಚಿತ್ತಾಜಮಾಯಯಾ ।
ಸ್ವಯಂ ಚಾಬಧ್ಯತ ಶಿಚಾ ಬದ್ಧಾನ್ಪಶ್ಯಂತ್ಯಪಸ್ಮೃತಿಃ ॥
ಅನುವಾದ
ಭಗವಂತನ ಮಾಯೆಯಿಂದ ಅವರ ಚಿತ್ತವು ಅತ್ಯಂತ ದೀನ-ದುಃಖಿತವಾಗಿತ್ತು. ಅದರ ಸ್ಮೃತಿ ಲುಪ್ತವಾಗಿತ್ತು. ಸ್ನೇಹ ಪಾಶದಿಂದ ಬಂಧಿತಳಾದ ಕಾರಣ ಹಾಗೂ ತನ್ನ ಮರಿಗಳು ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ನೋಡಿ ಸ್ವತಃ ತಾನೂ ಹೋಗಿ ಬಲೆಯಲ್ಲಿ ಸಿಕ್ಕಿಕೊಂಡಳು. ॥66॥
(ಶ್ಲೋಕ - 67)
ಮೂಲಮ್
ಕಪೋತಶ್ಚಾತ್ಮಜಾನ್ಬದ್ಧಾನಾತ್ಮನೋಪ್ಯಧಿಕಾನ್ಪ್ರಿಯಾನ್ ।
ಭಾರ್ಯಾಂ ಚಾತ್ಮಸಮಾಂ ದೀನೋ ವಿಲಲಾಪಾತಿದುಃಖಿತಃ ॥
ಅನುವಾದ
ಗಂಡುಪಾರಿವಾಳ (ಕಪೋತ)ವು ತನ್ನ ಪ್ರಾಣಕ್ಕಿಂತ ಪ್ರಿಯರಾದ ಮರಿಗಳು ಬಲೆಯಲ್ಲಿ ಸಿಕ್ಕಿಕೊಂಡಿರುವವು ಹಾಗೂ ತನ್ನ ಪ್ರಾಣಪ್ರಿಯ ಪತ್ನಿಯೂ ಅದೇ ಸ್ಥಿತಿಯಲ್ಲಿರುವುದನ್ನು ನೋಡಿದಾಗ ಅದು ಅತ್ಯಂತ ದುಃಖಿತವಾಗಿ ವಿಲಪಿಸ ತೊಡಗಿತು. ನಿಜವಾಗಿಯೂ ಆಗ ಅದರ ಸ್ಥಿತಿ ಅತ್ಯಂತ ದಯನೀಯವಾಗಿತ್ತು. ॥67॥
(ಶ್ಲೋಕ - 68)
ಮೂಲಮ್
ಅಹೋ ಮೇ ಪಶ್ಯತಾಪಾಯಮಲ್ಪಪುಣ್ಯಸ್ಯ ದುರ್ಮತೇಃ ।
ಅತೃಪ್ತಸ್ಯಾಕೃತಾರ್ಥಸ್ಯ ಗೃಹಸೈವರ್ಗಿಕೋ ಹತಃ ॥
ಅನುವಾದ
ಅದು ಯೋಚಿಸಿತು ‘‘ನಾನು ನಿರ್ಭಾಗ್ಯನಾಗಿದ್ದೇನೆ, ದುರ್ಮತಿಯಾಗಿದ್ದೇನೆ. ಅಯ್ಯೋ! ನನ್ನದೆಲ್ಲವೂ ಸತ್ಯಾನಾಶವಾಯಿತು. ನೋಡು ನನಗೆ ಇನ್ನೂ ತೃಪ್ತಿ ಆಗಿಲ್ಲ, ನನ್ನ ಆಸೆಗಳು ಪೂರ್ಣಗೊಂಡಿಲ್ಲ. ಅಯ್ಯೊ! ಅಷ್ಟರೊಳಗೆ ನನ್ನ ಧರ್ಮ, ಅರ್ಥ, ಕಾಮದ ಮೂಲವಾದ ಈ ಗೃಹಸ್ಥಾಶ್ರಮವು ನಾಶ ವಾಯಿತಲ್ಲ! ॥68॥
(ಶ್ಲೋಕ - 69)
ಮೂಲಮ್
ಅನುರೂಪಾನುಕೂಲಾ ಚ ಯಸ್ಯ ಮೇ ಪತಿದೇವತಾ ।
ಶೂನ್ಯೇ ಗೃಹೇ ಮಾಂ ಸಂತ್ಯಜ್ಯ ಪುತ್ರೈಃ ಸ್ವರ್ಯಾತಿ ಸಾಧುಭಿಃ ॥
ಅನುವಾದ
ಅಯ್ಯೋ! ನನ್ನ ಪ್ರಾಣವಲ್ಲಭೆ ನನ್ನನ್ನೇ ತನ್ನ ಇಷ್ಟದೇವರೆಂದು ತಿಳಿಯುತ್ತಿದ್ದಳು. ನನ್ನ ಪ್ರತಿಯೊಂದು ಮಾತನ್ನೂ ನಡೆಸುತ್ತಿದ್ದಳು. ನನ್ನ ಸಂಕೇತದಂತೆ ಕುಣಿಯುತ್ತಿದ್ದಳು. ಎಲ್ಲ ರೀತಿಯಿಂದಲೂ ನನಗೆ ಯೋಗ್ಯವಾಗಿದ್ದಳು. ಇಂದು ಅವಳು ನನ್ನನ್ನು ಬರಿದಾದ ಮನೆಯಲ್ಲಿ ಬಿಟ್ಟು ನಮ್ಮ ಅಬೋಧ ಮರಿಗಳೊಂದಿಗೆ ಸ್ವರ್ಗಕ್ಕೆ ಹೋಗುತ್ತಿರುವಳಲ್ಲ! ॥69॥
(ಶ್ಲೋಕ - 70)
ಮೂಲಮ್
ಸೋಹಂ ಶೂನ್ಯೇ ಗೃಹೇ ದೀನೋ ಮೃತದಾರೋ ಮೃತಪ್ರಜಃ ।
ಜಿಜೀವಿಷೇ ಕಿಮರ್ಥಂ ವಾ ವಿಧುರೋ ದುಃಖಜೀವಿತಃ ॥
ಅನುವಾದ
ನನ್ನ ಮಕ್ಕಳು ಸತ್ತುಹೋದುವು. ನನ್ನ ಹೆಂಡತಿ ಹೊರಟುಹೋದಳು. ಇನ್ನು ಈ ಸಂಸಾರದಲ್ಲಿ ನನಗೇನು ಕೆಲಸವಿದೆ. ದೀನನಾದ ನನ್ನ ವಿಧುರ ಜೀವನವು ದುಃಖಮಯವೇ ಆಗಿದೆ. ಈಗ ನಾನು ಈ ಶೂನ್ಯಪ್ರಾಯ ಮನೆಯಲ್ಲಿ ಯಾರಿಗಾಗಿ ಬದುಕಲಿ? ಅವರ ಜೊತೆಯಲ್ಲೇ ನಾನೂ ಹೋಗುವೆನು.’’ ॥70॥
(ಶ್ಲೋಕ - 71)
ಮೂಲಮ್
ತಾಂಸ್ತಥೈವಾವೃತಾನ್ಶಿಗ್ಮಿರ್ಮೃತ್ಯುಗ್ರಸ್ತಾನ್ವಿಚೇಷ್ಟತಃ ।
ಸ್ವಯಂ ಚ ಕೃಪಣಃ ಶಿಕ್ಷು ಪಶ್ಯನ್ನಪ್ಯಬುಧೋಪತತ್ ॥
ಅನುವಾದ
ರಾಜನೇ! ಹೀಗೆ ಅವಿವೇಕಿಯಾದ ಆ ಕಪೋತವು ನಿರ್ಧರಿಸಿ ಬಲೆಯಲ್ಲಿ ಸಿಕ್ಕಿಕೊಂಡು ಸಾವಿನ ದವಡೆಯಲ್ಲಿ ಸಿಲುಕಿ ಪತ್ನೀ-ಪುತ್ರರು ಒದ್ದಾಡುತ್ತಿರುವುದನ್ನು ನೋಡುತ್ತಿದ್ದರೂ ತಾನೂ ಹೋಗಿ ಬೇಡನ ಆ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿತು. ॥71॥
(ಶ್ಲೋಕ - 72)
ಮೂಲಮ್
ತಂ ಲಬ್ಧ್ವಾ ಲುಬ್ಧಕಃ ಕ್ರೂರಃ ಕಪೋತಂ ಗೃಹಮೇಧಿನಮ್ ।
ಕಪೋತಕಾನ್ ಕಪೋತೀಂ ಚ ಸಿದ್ಧಾರ್ಥಃ ಪ್ರಯಯೌ ಗೃಹಮ್ ॥
ಅನುವಾದ
ರಾಜನೇ! ಆ ಬೇಡನು ಬಹಳ ಕ್ರೂರಿಯಾಗಿದ್ದನು. ಗೃಹಸ್ಥಾಶ್ರಮಿ ಪಾರಿವಾಳದ ಪರಿವಾರ ಅನಾಯಾಸವಾಗಿ ದೊರೆತುದರಿಂದ ಭಾರೀ ಸಂತೋಷವಾಯಿತು. ತನ್ನ ಕೆಲಸವಾಯಿತೆಂದು ತಿಳಿದು ಅವನು ಅವನ್ನು ಎತ್ತಿಕೊಂಡು ಹೊರಟುಹೋದನು. ॥72॥
(ಶ್ಲೋಕ - 73)
ಮೂಲಮ್
ಏವಂ ಕುಟುಂಬ್ಯಶಾಂತಾತ್ಮಾ ದ್ವಂದ್ವಾರಾಮಃ ಪತತಿವತ್ ।
ಪುಷ್ಣನ್ ಕುಟುಂಬಂ ಕೃಪಣಃ ಸಾನುಬಂಧೋವಸೀದತಿ ॥
ಅನುವಾದ
ಇದೇ ಪ್ರಕಾರ ಗೃಹಸ್ಥನು ವಿಷಯಗಳಲ್ಲೇ ಸುಖವನ್ನು ಅರಸುತ್ತಾ, ಚಿತ್ತಚಂಚಲನಾದವನು, ತನ್ನ ಪರಿವಾರವನ್ನು ಸಾಕುವುದರಲ್ಲೇ ತೊಡಗಿರುವವನು ಪಾರಿವಾಳ ದಂಪತಿಯಂತೆ ದೀನ ಅವಸ್ಥೆಯನ್ನು ಹೊಂದಿ, ಪರಿವಾರಸಹಿತ ಅವನ ಪತನವಾಗುತ್ತದೆ ಎಂಬುದೇ ಸಾರಾಂಶವಾಗಿದೆ. ॥73॥
(ಶ್ಲೋಕ - 74)
ಮೂಲಮ್
ಯಃ ಪ್ರಾಪ್ಯ ಮಾನುಷಂ ಲೋಕಂ ಮುಕ್ತಿದ್ವಾರಮಪಾವೃತಮ್ ।
ಗೃಹೇಷು ಖಗವತ್ ಸಕ್ತಸ್ತಮಾರೂಢಚ್ಯುತಂ ವಿದುಃ ॥
ಅನುವಾದ
ಅದಕ್ಕಾಗಿ ದೊರೆತಿರುವ ಈ ಮನುಷ್ಯ ಶರೀರವು ತೆರೆದಿರುವ ಮುಕ್ತಿಯ ದ್ವಾರವಾಗಿದೆ ಎಂದು ತಿಳಿಯಬೇಕು. ಇದನ್ನು ಪಡೆದುಕೊಂಡರೂ ಮುಕ್ತಿಗಾಗಿ ಪ್ರಯತ್ನಿಸದಿರುವವನು, ಮನೆ-ಸಂಸಾರದಲ್ಲೇ ಕಪೋತದಂಪತಿಯಂತೆ ಆಸಕ್ತನಾಗಿ ರುವವನು ಶ್ರೇಯೋ ಮಾರ್ಗದ ನಿಚ್ಚಣಿಕೆಯಲ್ಲಿ ಏರಿ ಕೆಳಗೆ ಬಿದ್ದವನೆಂದೇ ತಿಳಿಯಬೇಕು. ಶಾಸದ ಭಾಷೆಯಲ್ಲಿ ಅವನನ್ನು ‘‘ಆರೂಢಚ್ಯುತ’’ ಎಂದು ಹೇಳುತ್ತಾರೆ. ॥74॥
ಅನುವಾದ (ಸಮಾಪ್ತಿಃ)
ಏಳನೆಯ ಅಧ್ಯಾಯವು ಮುಗಿಯಿತು. ॥7॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಸಪ್ತಮೋಽಧ್ಯಾಯಃ ॥7॥