[ಆರನೆಯ ಅಧ್ಯಾಯ]
ಭಾಗಸೂಚನಾ
ದೇವತೆಗಳು ಶ್ರೀಕೃಷ್ಣನನ್ನು ತನ್ನ ಪರಮಪದಕ್ಕೆ ಹಿಂದಿರುಗಲು ಪ್ರಾರ್ಥಿಸಿದುದು; ಯಾದವರು ಪ್ರಭಾಸ ಕ್ಷೇತ್ರಕ್ಕೆ ಹೊರಡಲು ಸಿದ್ಧರಾಗುತ್ತಿರುವುದನ್ನು ನೋಡಿ, ಉದ್ಧವನು ಶ್ರೀಕೃಷ್ಣನ ಬಳಿಗೆ ಹೋದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅಥ ಬ್ರಹ್ಮಾತ್ಮಜೈರ್ದೇವೈಃ ಪ್ರಜೇಶೈರಾವೃತೋಭ್ಯಗಾತ್ ।
ಭವಶ್ಚ ಭೂತಭವ್ಯೇಶೋ ಯಯೌ ಭೂತಗಣೈರ್ವೃತಃ ॥
(ಶ್ಲೋಕ - 2)
ಮೂಲಮ್
ಇಂದ್ರೋ ಮರುದ್ಭಿರ್ಭಗವಾನಾದಿತ್ಯಾ ವಸವೋಶ್ವಿನೌ ।
ಋಭವೋಂಗಿರಸೋ ರುದ್ರಾ ವಿಶ್ವೇ ಸಾಧ್ಯಾಶ್ಚ ದೇವತಾಃ ॥
(ಶ್ಲೋಕ - 3)
ಮೂಲಮ್
ಗಂಧರ್ವಾಪ್ಸರಸೋ ನಾಗಾಃ ಸಿದ್ಧಚಾರಣಗುಹ್ಯಕಾಃ ।
ಋಷಯಃ ಪಿತರಶ್ಚೈವ ಸವಿದ್ಯಾಧರಕಿನ್ನರಾಃ ॥
(ಶ್ಲೋಕ - 4)
ಮೂಲಮ್
ದ್ವಾರಕಾಮುಪಸಂಜಗ್ಮುಃ ಸರ್ವೇ ಕೃಷ್ಣದಿದೃಕ್ಷವಃ ।
ವಪುಷಾ ಯೇನ ಭಗವಾನ್ ನರಲೋಕಮನೋರಮಃ ।
ಯಶೋ ವಿತೇನೇ ಲೋಕೇಷು ಸರ್ವಲೋಕಮಲಾಪಹಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯ ಪರೀಕ್ಷಿತರಾಜನೇ! ಮಹರ್ಷಿಗಳಾದ ನಾರದರು ವಸುದೇವನಿಗೆ ಭಾಗವತಧರ್ಮವನ್ನು ಉಪದೇಶಿಸಿ ಹೊರಟು ಹೋದ ಬಳಿಕ, ಒಮ್ಮೆ ಬ್ರಹ್ಮದೇವರು ಭಗವಾನ್ ಶ್ರೀಕೃಷ್ಣನನ್ನು ದರ್ಶಿಸುವ ಇಚ್ಛೆಯಿಂದ ದ್ವಾರಕೆಗೆ ಬಂದರು. ಅವರೊಂದಿಗೆ ಅವರ ಪುತ್ರರಾದ ಸನಕಾದಿಗಳು, ಬೇರೆ ದೇವತೆಗಳೂ, ಪ್ರಜಾಪತಿಗಳೂ ಇದ್ದರು. ಶಂಕರನೂ ಭೂತಗಣಗಳೊಂದಿಗೆ ಬಂದರು. ಮರುದ್ಗಣರೊಡನೆ ದೇವರಾಜ ಇಂದ್ರನೂ ಆಗಮಿಸಿದನು. ಇಂದ್ರನನ್ನು ಅನುಸರಿಸಿ ದ್ವಾದಶ ಆದಿತ್ಯರೂ, ಅಷ್ಟವಸುಗಳೂ, ಅಶ್ವಿನೀ ದೇವತೆಗಳೂ, ಋಭು, ಅಂಗೀರಸ ವಂಶಜ ಋಷಿಗಳೂ, ಏಕಾದಶ ರುದ್ರರೂ, ವಿಶ್ವೇದೇವತೆಗಳೂ, ಸಾಧ್ಯದೇವತೆ ಗಳೂ, ಗಂಧರ್ವಾಪ್ಸರೆಯರೂ, ನಾಗರೂ, ಸಿದ್ಧರೂ, ಚಾರಣರೂ, ಗುಹ್ಯಕರೂ, ಋಷಿಗಳೂ, ಪಿತೃಗಳೂ, ವಿದ್ಯಾಧರ-ಕಿನ್ನರರೂ ಶ್ರೀಕೃಷ್ಣನನ್ನು ಸಂದರ್ಶಿಸಲು ದ್ವಾರಕೆಗೆ ಬಂದರು. ಭಗವಂತನ ಶ್ಯಾಮಸುಂದರ ವಿಗ್ರಹ ಶ್ರೀಕೃಷ್ಣನ ಸ್ವರೂಪವು ಎಲ್ಲರ ಮನಸ್ಸನ್ನು ಆನಂದಿತವಾಗಿಸುವಂತಹುದು. ಶ್ರೀಕೃಷ್ಣಾವತಾರದ ಮೂಲಕ ಗೈದ ಲೀಲೆಗಳನ್ನು ಗಾಯನ, ಶ್ರವಣ, ವರ್ಣನೆ ಮಾಡುವುದರಿಂದ ಎಲ್ಲ ಪಾಪರಾಶಿಗಳು ಸುಟ್ಟುಹೋಗುವಂತಹ ಮಂಗಲಮಯ ಕೀರ್ತಿಯನ್ನು ವಿಸ್ತರಿಸಿದನು. ॥1-4॥
(ಶ್ಲೋಕ - 5)
ಮೂಲಮ್
ತಸ್ಯಾಂ ವಿಭ್ರಾಜಮಾನಾಯಾಂ ಸಮೃದ್ಧಾಯಾಂ ಮಹರ್ದ್ಧಿಭಿಃ ।
ವ್ಯಚಕ್ಷತಾವಿತೃಪ್ತಾಕ್ಷಾಃ ಕೃಷ್ಣಮದ್ಭುತದರ್ಶನಮ್ ॥
ಅನುವಾದ
ಸರ್ವಸಂಪತ್ತಿನಿಂದಲೂ ಸಮೃದ್ಧವಾಗಿ, ಲೋಕೋತ್ತರವಾದ ಪ್ರಕಾಶದಿಂದ ಬೆಳಗುತ್ತಿರುವ ದ್ವಾರಕಾಪಟ್ಟಣದಲ್ಲಿ ಅದ್ಭುತ ದರ್ಶನನಾದ ಶ್ರೀಕೃಷ್ಣನನ್ನು ಎಷ್ಟು ನೋಡಿದರೂ ತೃಪ್ತಿಹೊಂದದ ಕಣ್ಣುಗಳಿಂದ ಬ್ರಹ್ಮಾದಿದೇವತೆಗಳು ನೋಡುತ್ತಿದ್ದರು. ॥5॥
(ಶ್ಲೋಕ - 6)
ಮೂಲಮ್
ಸ್ವರ್ಗೋದ್ಯಾನೋಪಗೈರ್ಮಾಲ್ಯೈಶ್ಛಾದಯಂತೋ ಯದೂತ್ತಮಮ್ ।
ಗೀರ್ಭಿಶ್ಚಿತ್ರಪದಾರ್ಥಾಭಿಸ್ತುಷ್ಟುವುರ್ಜಗದೀಶ್ವರಮ್ ॥
ಅನುವಾದ
ಶ್ರೀಕೃಷ್ಣನ ದಿವ್ಯದರ್ಶನದಿಂದ ಆನಂದ ತುಂದಿಲರಾದ ಅವರು ಸ್ವರ್ಗದ ಉದ್ಯಾನವಾದ ನಂದನ ವನದಿಂದಲೂ, ಚೈತ್ರರಥವನದಿಂದಲೂ ತಂದಿರುವ ದಿವ್ಯವಾದ ಪುಷ್ಪಮಾಲಿಕೆಗಳಿಂದ ಜಗದೀಶ್ವರನಾದ ಭಗವಾನ್ ಶ್ರೀಕೃಷ್ಣನನ್ನು ನಾನಾ ವಿಧವಾಗಿ ಅಲಂಕರಿಸಿ, ಸುಂದರ ಸ್ತೋತ್ರಗಳಿಂದ ಹಾಗೂ ಅರ್ಥವತ್ತಾದ ಸವಿಮಾತುಗಳ ಮೂಲಕ ಭಗವಂತನನ್ನು ಸ್ತುತಿಸತೊಡಗಿದರು. ॥6॥
(ಶ್ಲೋಕ - 7)
ಮೂಲಮ್ (ವಾಚನಮ್)
ದೇವಾ ಊಚುಃ
ಮೂಲಮ್
ನತಾಃ ಸ್ಮ ತೇ ನಾಥ ಪದಾರವಿಂದಂ
ಬುದ್ಧೀಂದ್ರಿಯಪ್ರಾಣಮನೋವಚೋಭಿಃ ।
ಯಚ್ಚಿಂತ್ಯತೇಂತರ್ಹೃದಿ ಭಾವಯುಕ್ತೈ-
ರ್ಮುಮುಕ್ಷುಭಿಃ ಕರ್ಮಮಯೋರುಪಾಶಾತ್ ॥
ಅನುವಾದ
ದೇವತೆಗಳು ಇಂತೆಂದರು — ಸ್ವಾಮಿಯೇ! ನಾವೆಲ್ಲರೂ ನಿನ್ನ ಚರಣಕಮಲಗಳಲ್ಲಿ ವಂದಿಸಿಕೊಳ್ಳುವೆವು. ಕರ್ಮಗಳೆಂಬ ಮಹಾಪಾಶಗಳಿಂದ ಬಿಡಿಸಿಕೊಳ್ಳುವ ಸಲುವಾಗಿ ಮೋಕ್ಷವನ್ನು ಬಯಸುವ ಜನರು ಭಕ್ತಿಭಾವದಿಂದ ಯಾವ ನಿನ್ನ ದಿವ್ಯ ಪಾದಾರವಿಂದಗಳನ್ನು ತಮ್ಮ ಹೃದಯದಲ್ಲಿ ಚಿಂತಿಸುವರೋ ಅಂತಹ ನಿನ್ನ ಚರಣ ಕಮಲಗಳಿಗೆ ನಾವು ಬುದ್ಧಿ, ಇಂದ್ರಿಯ, ಪ್ರಾಣ, ಮನಸ್ಸು, ಮಾತು ಇವುಗಳ ಮೂಲಕ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇವೆ.* ॥7॥
ಟಿಪ್ಪನೀ
- ಇಲ್ಲಿ ಸಾಷ್ಟಾಂಗ ಪ್ರಣಾಮವನ್ನು ಹೇಳಿದ್ದಾರೆ
ದೋರ್ಭ್ಯಾಂ ಪದ್ಭ್ಯಾಂ ಚ ಜಾನುಭ್ಯಾಮುರಸಾ ಶಿರಸಾ ದೃಶಾ । ಮನಸಾ ವಚಸಾ ಚೈವ ಪ್ರಣಾಮೋಷ್ಟಾಂಗ ಈರಿತಃ ॥
ಏಕಕಾಲದಲ್ಲಿ ಕೈಗಳಿಂದಲೂ, ಕಾಲುಗಳಿಂದಲೂ, ಮಂಡಿಗಳಿಂದಲೂ, ವಕ್ಷಃಸ್ಥಳದಿಂದಲೂ, ಶಿರಸ್ಸಿನಿಂದಲೂ, ಕಣ್ಣುಗಳಿಂದಲೂ, ಮನಸ್ಸಿನಿಂದಲೂ, ಮಾತಿನಿಂದಲೂ ಮಾಡುವ ನಮಸ್ಕಾರಕ್ಕೆ ಸಾಷ್ಟಾಂಗನಮಸ್ಕಾರವೆಂದು ಹೇಳುತ್ತಾರೆ.
ಇಲ್ಲಿ ಭಗವಂತನ ಪಾದಾರವಿಂದಗಳಲ್ಲಿ ಮಾನಸಿಕ ಪ್ರಣಾಮ, ವಾಚಿಕ ಪ್ರಣಾಮ, ಕಾಯಿಕ ಪ್ರಣಾಮ ಎಂಬ ಮೂರು ಬಗೆಯ ಪ್ರಣಾಮ ಹೇಳಿದೆ. ಬುದ್ಧಿ, ಶಬ್ದದಿಂದ ಮಾನಸಿಕ, ವಚಃಶಬ್ದದಿಂದ ವಾಚಿಕ ಮತ್ತು ಇಂದ್ರಿಯ, ಪ್ರಾಣ ಇವುಗಳಿಂದ ಕಾಯಕ ನಮಸ್ಕಾರವೂ ಹೇಳಲ್ಪಟ್ಟಿದೆ.
(ಶ್ಲೋಕ - 8)
ಮೂಲಮ್
ತ್ವಂ ಮಾಯಯಾ ತ್ರಿಗುಣಯಾತ್ಮನಿ ದುರ್ವಿಭಾವ್ಯಂ
ವ್ಯಕ್ತಂ ಸೃಜಸ್ಯವಸಿ ಲುಂಪಸಿ ತದ್ಗುಣಸ್ಥಃ ।
ನೈತೈರ್ಭವಾನಜಿತ ಕರ್ಮಭಿರಜ್ಯತೇ ವೈ
ಯತ್ಸ್ವೇ ಸುಖೇವ್ಯವಹಿತೇಭಿರತೋನವದ್ಯಃ ॥
ಅನುವಾದ
ಓ ಭಗವಂತಾ! ನಿನ್ನ ತ್ರಿಗುಣಮಯ ಮಾಯೆಯನ್ನು ತಿಳಿದುಕೊಳ್ಳುವುದು ತುಂಬಾ ಕಠಿಣವು. ಇಂತಹ ಮಾಯೆಯ ಮೂಲಕ ನಿನ್ನಲ್ಲೇ ನೀನು ಈ ದೃಶ್ಯಜಗತ್ತನ್ನು ಲೀಲೆಯಿಂದಲೇ ರಜೋಗುಣದಿಂದ ನಿರ್ಮಿಸಿರುವೆ. ಸತ್ತ್ವಗುಣದಿಂದ ಪಾಲಿಸುತ್ತಿರುವೆ. ತಮೋಗುಣದಿಂದ ಸಂಹಾರವನ್ನೂ ಮಾಡುವೆ. ಇದೆಲ್ಲವನ್ನು ಮಾಡುತ್ತಿದ್ದರೂ ನೀನು ಇವುಗಳೊಂದಿಗೆ ಲಿಪ್ತನಾಗುವುದಿಲ್ಲ. ನೀನು ನಿನ್ನ ಅಖಂಡ ಆನಂದದಲ್ಲಿ ಮಗ್ನನಾಗಿರುವೆ. ನಿನ್ನೊಳಗೆ ಮಾಯೆಯ ಯಾವುದೇ ವ್ಯವಧಾನವಿಲ್ಲ. ನೀನು ನಿರಂಜನನಾಗಿದ್ದು, ನಿನ್ನ ಅಖಂಡ ಸ್ವರೂಪ ಪರಮಾನಂದದಲ್ಲಿ ಮುಳುಗಿರುವೆ. ॥8॥
(ಶ್ಲೋಕ - 9)
ಮೂಲಮ್
ಶುದ್ಧಿರ್ನೃಣಾಂ ನ ತು ತಥೇಡ್ಯ ದುರಾಶಯಾನಾಂ
ವಿದ್ಯಾಶ್ರುತಾಧ್ಯಯನದಾನತಪಃ ಕ್ರಿಯಾಭಿಃ ।
ಸತ್ತ್ವಾತ್ಮನಾಮೃಷಭ ತೇ ಯಶಸಿ ಪ್ರವೃದ್ಧ-
ಸಚ್ಛ್ರದ್ಧಯಾ ಶ್ರವಣಸಂಭೃತಯಾ ಯಥಾ ಸ್ಯಾತ್ ॥
ಅನುವಾದ
ಸ್ತುತಿಸಲು ಯೋಗ್ಯನಾದ ಓ ಪರಮಾತ್ಮನೇ! ಅಂತಃಕರಣ ಶುದ್ಧವಿಲ್ಲದ ಜನರ ಚಿತ್ತಶುದ್ಧಿಯು ವಿದ್ಯಾಭ್ಯಾಸದಿಂದಾಗಲೀ, ವೇದಾಧ್ಯಯನದಿಂದಾಗಲೀ, ದಾನ, ತಪಸ್ಸು, ಯಜ್ಞಾದಿ ಕ್ರಿಯೆಗಳಿಂದಾಗಲೀ, ಆಗುವುದಿಲ್ಲ. ಆದರೆ ಓ ದೇವಶ್ರೇಷ್ಠನೇ! ಶುದ್ಧ ಅಂತಃಕರಣವುಳ್ಳ ನಿನ್ನ ಭಕ್ತರು ನಿನ್ನ ಲೀಲಾಕಥೆಗಳನ್ನು, ಮಹಿಮೆಯನ್ನು, ಯಶಸ್ಸನ್ನು, ನಿನ್ನ ಕಲ್ಯಾಣ ಗುಣಗಳನ್ನು ವರ್ಣಿಸುತ್ತಾ, ಶ್ರವಣಿಸುತ್ತಾರೆ. ಈ ಶ್ರವಣದಿಂದ ಉಂಟಾದ ಶ್ರದ್ಧೆಯಿಂದ ಉತ್ಕಟಭಕ್ತಿ ಉಂಟಾಗುತ್ತದೆ. ಅದರಿಂದ ಅವರ ಅಂತಃಕರಣವು ತತ್ಕಾಲವೇ ಪವಿತ್ರವಾಗುತ್ತದೆ. ॥9॥
(ಶ್ಲೋಕ - 10)
ಮೂಲಮ್
ಸ್ಯಾನ್ನಸ್ತವಾಂಘ್ರಿರಶುಭಾಶಯಧೂಮಕೇತುಃ
ಕ್ಷೇಮಾಯ ಯೋ ಮುನಿಭಿರಾರ್ದ್ರಹೃದೋಹ್ಯಮಾನಃ ।
ಯಃ ಸಾತ್ವತೈಃ ಸಮವಿಭೂತಯ ಆತ್ಮವದ್ಭಿ-
ರ್ವ್ಯೆಹೇರ್ಚಿತಃ ಸವನಶಃ ಸ್ವರತಿಕ್ರಮಾಯ ॥
ಅನುವಾದ
ಓ ಪ್ರಭುವೇ! ನಿನ್ನ ಚರಣ ಕಮಲಗಳು ನಮ್ಮ ಎಲ್ಲ ಅಮಂಗಳಗಳನ್ನು ಬೆಂಕಿಯಾಗಿ ಸುಟ್ಟು ನಾಶವಾಗಿಸಲಿ. ನಿನ್ನ ಇವೇ ಚರಣಕಮಲಗಳನ್ನು ನಿನ್ನ ಭಕ್ತರು ಪ್ರೇಮಮಗ್ನರಾಗಿ ತಮ್ಮ ಹೃದಯದಲ್ಲಿ ಧರಿಸುತ್ತಿರುವರು. ಇವು ನಮ್ಮ ಶ್ರೇಯಸ್ಸನ್ನು ವಿಸ್ತರಿಸುವಂತಾಗಲಿ. ಇಂದ್ರಿಯಗಳನ್ನು ವಶದಲ್ಲಿರಿಸಿಕೊಂಡಂತಹ ನಿನ್ನ ಭಕ್ತರು ನಿನ್ನ ಸಾಯುಜ್ಯವನ್ನು ಪಡೆಯುವುದಕ್ಕಾಗಿ ಮೂರೂ ಕಾಲಗಳಲ್ಲಿ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರ ವ್ಯೆಹದಲ್ಲಿ ನಿನ್ನ ಇವೇ ಚರಣಕಮಲಗಳನ್ನು ಉಪಾಸಿಸುತ್ತಾ ಸ್ವರ್ಗವನ್ನು ಅತಿಕ್ರಮಿಸಿ ನಿನ್ನ ಧಾಮಕ್ಕೆ ತೆರಳುತ್ತಾರೆ. ॥10॥
(ಶ್ಲೋಕ - 11)
ಮೂಲಮ್
ಯಶ್ಚಿಂತ್ಯತೇ ಪ್ರಯತಪಾಣಿಭಿರಧ್ವರಾಗ್ನೌ
ತ್ರಯ್ಯಾ ನಿರುಕ್ತವಿಧಿನೇಶ ಹವಿರ್ಗೃಹೀತ್ವಾ ।
ಅಧ್ಯಾತ್ಮಯೋಗ ಉತ ಯೋಗಿಭಿರಾತ್ಮಮಾಯಾಂ
ಜಿಜ್ಞಾಸುಭಿಃ ಪರಮಭಾಗವತೈಃ ಪರೀಷ್ಟಃ ॥
ಅನುವಾದ
ನಿನ್ನ ಭಕ್ತರು ವೇದೋಕ್ತವಿಧಿಯಿಂದ ಪುರೋಡಾಷಾದಿ ಹವಿಸ್ಸನ್ನು ಮೂರು ವೇದಗಳ ಮಂತ್ರಗಳಿಂದಲೂ, ನಿರುಕ್ತದ ವಿಧಾನವನ್ನು ಅನುಸರಿಸಿ ಅಗ್ನಿಯಲ್ಲಿ ಹೋಮಮಾಡುವಾಗಲೂ ಇವೇ ಚರಣಕಮಲಗಳನ್ನು ಚಿಂತಿಸುವರು. ಜ್ಞಾನಮಾರ್ಗದ ಮೂಲಕ ಸಾಕ್ಷಾತ್ಕಾರ ಪಡೆಯಲು ಯೋಗಿಗಳು ಇವೇ ಚರಣಕಮಲಗಳನ್ನು ಧ್ಯಾನಿಸುವರು. ಹೀಗೆಯೇ ನಿನ್ನ ಮಾಯೆಯ ಸ್ವರೂಪವನ್ನು ತಿಳಿಯಬಯಸುವ ಜಿಜ್ಞಾಸುಭಕ್ತರೂ ಕೂಡ ನಿನ್ನ ಚರಣಗಳನ್ನೇ ನೆನೆಯುತ್ತಾರೆ. ಈ ವಿಧವಾಗಿ ನಿನ್ನ ಪ್ರೇಮಿಭಕ್ತರು ನಿನ್ನ ಚರಣಕಮಲಗಳನ್ನೇ ತಮ್ಮ ಸರ್ವೋತ್ಕೃಷ್ಟ ಪರಮ ಆರಾಧ್ಯವೆಂದು ತಿಳಿದು ಇವುಗಳನ್ನೇ ಉಪಾಸಿಸುತ್ತಾರೆ. ॥11॥
(ಶ್ಲೋಕ - 12)
ಮೂಲಮ್
ಪರ್ಯುಷ್ಟಯಾ ತವ ವಿಭೋ ವನಮಾಲಯೇಯಂ
ಸಂಸ್ಪರ್ಧಿನೀ ಭಗವತೀ ಪ್ರತಿಪತ್ನಿವಚ್ಛ್ರೀಃ ।
ಯಃ ಸುಪ್ರಣೀತಮಮುಯಾರ್ಹಣಮಾದದನ್ನೋ
ಭೂಯಾತ್ಸದಾಂಘ್ರಿರಶುಭಾಶಯಧೂಮಕೇತುಃ ॥
ಅನುವಾದ
ಓ ಪ್ರಭುವೇ! ನಿನ್ನ ಭಕ್ತರು ಪ್ರೇಮದಿಂದ ಅರ್ಪಿಸುವ ವನಮಾಲೆಯನ್ನು ನೀನು ತುಂಬಾ ಸಮ್ಮಾನದಿಂದ ಸ್ವೀಕರಿಸುತ್ತಿರುವೆ. ಭಕ್ತರ ಕುರಿತು ನಿನಗಿರುವ ವಿಲಕ್ಷಣ ಪ್ರೇಮದ ಪ್ರತ್ಯಕ್ಷ ಉದಾಹರಣೆ ಇದಾಗಿದೆ. ಸಾಕ್ಷಾತ್ ಭಗವತಿ ಲಕ್ಷ್ಮಿಯೂ ನಿನ್ನಲ್ಲಿ ಪ್ರೇಮವಿಟ್ಟಿರುವಳು. ಆದರೆ ನಿನ್ನ ವಕ್ಷಃಸ್ಥಳದಲ್ಲಿ ಸುತ್ತಲೂ ಹರಡಿಕೊಂಡಿರುವ ವನಮಾಲೆಯನ್ನು ನೋಡಿ ಹಾಗೂ ಭಕ್ತರ ಕುರಿತು ನಿನಗಿರುವ ವಿಶೇಷ ಪ್ರೇಮವನ್ನು ನೋಡಿ ಸವತಿಯಂತೆ ವನಮಾಲೆಯೊಂದಿಗೆ ಸ್ಪರ್ಧಿಸುತ್ತಿರುವಳು. ಆ ವನಮಾಲೆಯಲ್ಲಿ ತುಳಸಿಯೂ ಇರುತ್ತದೆ. ತುಳಸಿಯನ್ನು ಅರ್ಪಿಸುವುದರಿಂದ ನಿನ್ನ ಪೂಜೆಯು ಸಾಂಗವಾಗಿ ಪೂರ್ಣಗೊಂಡು, ನೀನು ಇನ್ನೂ ಹೆಚ್ಚು ಪ್ರಸನ್ನನಾಗುವೆ. ಅಂತಹ ವನಮಾಲೆಯಿಂದ ಸಮಲಂಕೃತವಾದ ನಿನ್ನ ಚರಣಕಮಲಗಳು ನಮ್ಮ ಎಲ್ಲ ವಿಷಯವಾಸನೆಗಳನ್ನು ಭಸ್ಮಮಾಡುವ ಅಗ್ನಿಯಂತಾಗಲಿ. ॥12॥
(ಶ್ಲೋಕ - 13)
ಮೂಲಮ್
ಕೇತುಸಿವಿಕ್ರಮಯುತಸಿಪತತ್ಪತಾಕೋ
ಯಸ್ತೇ ಭಯಾಭಯಕರೋಸುರದೇವಚಮ್ವೋಃ ।
ಸ್ವರ್ಗಾಯ ಸಾಧುಷು ಖಲೇಷ್ವಿತರಾಯ ಭೂಮನ್
ಪಾದಃ ಪುನಾತು ಭಗವನ್ ಭಜತಾಮಘಂ ನಃ ॥
ಅನುವಾದ
ವಾಮನಾವತಾರದಲ್ಲಿ ದೈತ್ಯನಾದ ಬಲಿಯು ದಾನಮಾಡಿದ ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಅಳೆಯುವಾಗ ಮೊದಲನೆಯ ಹೆಜ್ಜೆಯಿಂದ ಭೂಮಂಡಲವನ್ನೇ ವ್ಯಾಪಿಸಿ, ಎರಡನೆಯ ಹೆಜ್ಜೆಯು ವ್ಯೋಮವನ್ನು ಅತಿಕ್ರಮಿಸಿದಾಗ ಸತ್ಯಲೋಕವನ್ನೂ ವ್ಯಾಪಿಸಿದ ಆ ದಿವ್ಯಪಾದವು ದೊಡ್ಡದಾದ ವಿಜಯಧ್ವಜದಂತೆ ಕಂಗೊಳಿಸಿತು. ಆಗ ಬ್ರಹ್ಮದೇವರು ಆ ಪವಿತ್ರಪಾದವನ್ನು ತೊಳೆದು ಆ ಪಾದೋದಕವನ್ನು ತನ್ನ ಕಮಂಡಲುವಿನಲ್ಲಿರಿಸಿಕೊಂಡರು. ಅಲ್ಲಿಂದ ಹೊರಟ ಮೂರು ಪ್ರವಾಹಗಳು ಭಾಗೀರಥಿ ಗಂಗೆಯಾಗಿ ಹರಿದು ನಿನ್ನ ಕೀರ್ತಿ ಪತಾಕೆಯಂತೆ ಕಾಣುತ್ತಿದ್ದವು. ಇದನ್ನು ನೋಡಿ ಅಸುರ ಸೈನ್ಯವು ಭಯಗೊಂಡಿತು. ಭಕ್ತರು, ದೇವತೆಗಳು ನಿರ್ಭಯರಾದರು. ಹೇ ಪರಬ್ರಹ್ಮ ಸ್ವರೂಪಿಯೇ! ಅಂತಹ ನಿನ್ನ ಪಾದಕಮಲವು ಸಾಧು-ಸತ್ಪುರುಷರನ್ನು ಪರಮಧಾಮಕ್ಕೆ ಒಯ್ಯುವುದಕ್ಕೂ, ದುಷ್ಟರನ್ನು ಅಧೋಗತಿಗೆ ತಳ್ಳುವುದಕ್ಕೂ ಕಾರಣವಾಗಿದೆ. ಅಂತಹ ನಿನ್ನ ದಿವ್ಯ-ಸುಂದರ-ಪವಿತ್ರ ಪಾದಾರವಿಂದವು ಪ್ರಾರ್ಥಿಸುತ್ತಿರುವ ನಮ್ಮ ಪಾಪಗಳನ್ನು ಕಳೆದು ನಮ್ಮನ್ನು ಅನವರತವಾಗಿ ರಕ್ಷಿಸಲಿ. ॥13॥
(ಶ್ಲೋಕ - 14)
ಮೂಲಮ್
ನಸ್ಯೋತಗಾವ ಇವ ಯಸ್ಯ ವಶೇ ಭವಂತಿ
ಬ್ರಹ್ಮಾದಯಸ್ತನುಭೃತೋ ಮಿಥುರರ್ದ್ಯಮಾನಾಃ ।
ಕಾಲಸ್ಯ ತೇ ಪ್ರಕೃತಿಪೂರುಷಯೋಃ ಪರಸ್ಯ
ಶಂ ನಸ್ತನೋತು ಚರಣಃ ಪುರುಷೋತ್ತಮಸ್ಯ ॥
ಅನುವಾದ
ಸತ್ತ್ವ-ರಜ-ತಮೋಗುಣಿಗಳಾದ ಬ್ರಹ್ಮನೇ ಮೊದಲಾದ ಸಮಸ್ತ ಶರೀರಧಾರೀ ಜೀವರು ಪರಸ್ಪರವಾಗಿ ಡಿಕ್ಕಿಹೊಡೆಯುತ್ತಿದ್ದರೂ ಮೂಗುದಾರವನ್ನು ಹಾಕಿದ ಎತ್ತು ಒಡೆಯನ ಹಿಡಿತದಲ್ಲಿರುವಂತೆ ಅವರೆಲ್ಲರೂ ನಿನ್ನ ವಶವರ್ತಿಗಳಾಗಿಯೇ ಇರುತ್ತಾರೆ. ನೀನು ಪ್ರಕೃತಿ ಮತ್ತು ಪುರುಷರಿಗಿಂತಲೂ ಮೀರಿದ ಕಾಲಸ್ವರೂಪವಾಗಿರುವೆ. ಅಂತಹ ಪುರುಷೋತ್ತಮ ಸ್ವರೂಪೀ ನಿನ್ನ ಚರಣಕಮಲಗಳು ನಮ್ಮ ಶ್ರೇಯಸ್ಸನ್ನು ವಿಸ್ತರಿಸಲಿ. ॥14॥
(ಶ್ಲೋಕ - 15)
ಮೂಲಮ್
ಅಸ್ಯಾಸಿ ಹೇತುರುದಯಸ್ಥಿತಿಸಂಯಮಾನಾ-
ಮವ್ಯಕ್ತಜೀವಮಹತಾಮಪಿ ಕಾಲಮಾಹುಃ ।
ಸೋಯಂ ತ್ರಿಣಾಭಿರಖಿಲಾಪಚಯೇ ಪ್ರವೃತ್ತಃ
ಕಾಲೋ ಗಭೀರರಯ ಉತ್ತಮಪೂರುಷಸ್ತ್ವಮ್ ॥
ಅನುವಾದ
ನೀನೇ ಈ ಜಗತ್ತಿನ ಉತ್ಪತ್ತಿ, ಸ್ಥಿತಿ, ಸಂಹಾರ ಇವುಗಳ ಪರಮ ಕಾರಣನಾಗಿರುವೆ. ನೀನೇ ಅವ್ಯಕ್ತ (ಮೂಲಪ್ರಕೃತಿ), ಪುರುಷ, ಮಹತ್ತತ್ತ್ವ ಇವೆಲ್ಲದರ ನಿಯಾಮಕನಾಗಿರುವೆ. ಕಾಲಸ್ವರೂಪನೂ ನೀನೇ ಆಗಿರುವೆ. ಸಂವತ್ಸರ ರೂಪದಿಂದ ಶೀತಕಾಲ, ಬೇಸಿಗೆ ಕಾಲ, ಮಳೆಗಾಲ ಎಂಬ ಈ ಮೂರು ಋತುಗಳು ಮೂರು ಸುಳಿಗಳ ರೂಪದಲ್ಲಿ ನಿನ್ನ ಕಾಲಚಕ್ರವನ್ನು ಅತಿವೇಗವಾಗಿ ತಿರುಗಿಸುತ್ತಿವೆ. ಆ ಕಾಲವು ಎಲ್ಲರ ನಾಶ ಮಾಡುವುದರಲ್ಲಿ ವೇಗವಾಗಿ ತೊಡಗಿದೆ. ಹೀಗೆ ಇವೆಲ್ಲದರ ಶಾಸಕ ಉತ್ತರ ಪುರುಷನು ನೀನೇ ಆಗಿರುವೆ. ॥15॥
(ಶ್ಲೋಕ - 16)
ಮೂಲಮ್
ತ್ವತ್ತಃ ಪುಮಾನ್ಸಮಧಿಗಮ್ಯ ಯಯಾ ಸ್ವವೀರ್ಯಂ
ಧತ್ತೇ ಮಹಾಂತಮಿವ ಗರ್ಭಮಮೋಘವೀರ್ಯಃ ।
ಸೋಯಂ ತಯಾನುಗತ ಆತ್ಮನ ಆಂಡಕೋಶಂ
ಹೈಮಂ ಸಸರ್ಜ ಬಹಿರಾವರಣೈರುಪೇತಮ್ ॥
ಅನುವಾದ
ಸೂತ್ರಾತ್ಮಾ ಹಿರಣ್ಯಗರ್ಭನು ನಿನ್ನಿಂದಲೇ ಶಕ್ತಿಯನ್ನು ಪಡೆದು ಅಮೋಘವೀರ್ಯನಾಗಿ ಮಾಯೆಯೊಡನೆ ಸೇರಿಕೊಂಡು ಜಗತ್ತಿನ ಗರ್ಭದಂತಿರುವ ಮಹತ್ತತ್ತ್ವವನ್ನು ಧರಿಸುವನು. ಮತ್ತೆ ಆ ಮಹತ್ತತ್ತ್ವವೇ (ಹಿರಣ್ಯಗರ್ಭ ಬ್ರಹ್ಮಾ) ತ್ರಿಗುಣಾತ್ಮಕವಾದ ಮಾಯೆಯನ್ನು ಅನುಸರಿಸಿ, ಪೃಥಿವಿ, ಜಲ, ತೇಜಸ್ಸು, ವಾಯು, ಆಕಾಶ, ಅಹಂಕಾರ ಮತ್ತು ಮಹತ್ತತ್ವ ಇವುಗಳ ರೂಪವಾದ ಏಳು ಆವರಣಗಳಿಂದ ಕೂಡಿದ ಸುವರ್ಣಮಯವಾದ ಬ್ರಹ್ಮಾಂಡ ವನ್ನು ಸೃಷ್ಟಿಸಿತು. ಈ ವಿರಾಟ್ ಬ್ರಹ್ಮಾಂಡವು ನಿನ್ನಿಂದಲೇ ಪ್ರಕಟವಾಗಿದೆ. ॥16॥
(ಶ್ಲೋಕ - 17)
ಮೂಲಮ್
ತತ್ತಸ್ಥುಷಶ್ಚ ಜಗತಶ್ಚ ಭವಾನಧೀಶೋ
ಯನ್ಮಾಯಯೋತ್ಥಗುಣವಿಕ್ರಿಯಯೋಪನೀತಾನ್ ।
ಅರ್ಥಾನ್ ಜುಷನ್ನಪಿ ಹೃಷೀಕಪತೇ ನ ಲಿಪ್ತೋ
ಯೇನ್ಯೇ ಸ್ವತಃ ಪರಿಹೃತಾದಪಿ ಬಿಭ್ಯತಿ ಸ್ಮ ॥
ಅನುವಾದ
ನೀನೇ ಈ ಚರಾಚರ ಜಗತ್ತಿನ ಅಧೀಶ್ವರನಾಗಿರುವೆ. ಇಡೀ ಈ ಜಗತ್ತು ಮಾಯೆಯ ಗುಣಗಳಿಂದ ಮತ್ತು ಅವುಗಳ ವಿಕ್ರಿಯೆಯಿಂದಲೇ ಉಂಟಾಗಿದೆ. ಹೇ ಹೃಷೀಕೇಶಾ! ನೀನೇ ಎಲ್ಲ ಇಂದ್ರಿಯಗಳ ಒಡೆಯನಾಗಿದ್ದು, ಅವುಗಳ ವಿಷಯಗಳ ಭೋಕ್ತಾನೂ ನೀನೇ ಆಗಿರುವೆ. ಆದರೆ ನೀನಾದರೋ ಅವುಗಳನ್ನು ಭೋಗಿಸುತ್ತಿದ್ದರೂ ಅವುಗಳಲ್ಲಿ ಲಿಪ್ತನಾಗಿರುವುದಿಲ್ಲ. ಇದು ನಿನ್ನ ಆಶ್ಚರ್ಯವೇ ಆಗಿದೆ. ಆದರೆ ಬೇರೆಯವರು ಸ್ವತಃ ಆ ಭೋಗಗಳನ್ನು ತ್ಯಾಗ ಮಾಡಿಬಿಡುವರು. ಅವರು ತ್ಯಾಗಮಾಡಿದ ಬಳಿಕವೂ ಆ ವಿಷಯಗಳೊಂದಿಗೆ ಹೆದರುತ್ತಿರುತ್ತಾರೆ. ॥17॥
(ಶ್ಲೋಕ - 18)
ಮೂಲಮ್
ಸ್ಮಾಯಾವಲೋಕಲವದರ್ಶಿತಭಾವಹಾರಿ-
ಭ್ರೂಮಂಡಲಪ್ರಹಿತಸೌರತಮಂತ್ರಶೌಂಡೈಃ ।
ಪತ್ನ್ಯಸ್ತು ಷೋಡಶಸಹಸ್ರಮನಂಗಬಾಣೈ-
ರ್ಯಸ್ಯೇಂದ್ರಿಯಂ ವಿಮಥಿತುಂ ಕರಣೈರ್ನ ವಿಭ್ವ್ಯಃ ॥
ಅನುವಾದ
ಹದಿನಾರು ಸಾವಿರ ರಾಣಿಯರು ನಿನ್ನ ಅಂತಃಪುರದಲ್ಲಿದ್ದು, ಅವರೆಲ್ಲರೂ ತಮ್ಮ-ತಮ್ಮ ಕಿರುನಗೆಯಿಂದಲೂ, ಕುಡಿಗಣ್ಣಿನ ನೋಟದಿಂದ, ಮನೋಹರ ಹಾವ-ಭಾವದಿಂದ ನಿನ್ನನ್ನು ನೋಡುತ್ತಿರುತ್ತಾರೆ. ಸುರತ ಮಂತ್ರದಲ್ಲಿ ಪ್ರವೀಣರಾದ ಅವರೆಲ್ಲರೂ ತಮ್ಮ ಕಾಮ ಬಾಣಗಳನ್ನು ನಿನ್ನ ಮೇಲೆ ಎಸೆಯುತ್ತಿರುತ್ತಾರೆ. ಆದರೆ ಅವರು ನಿನ್ನ ಇಂದ್ರಿಯಗಳನ್ನು ಅಸ್ಥಿರಗೊಳಿಸಲು ಸ್ವಲ್ಪವೂ ಸಮರ್ಥರಾಗಲಿಲ್ಲ. ॥18॥
(ಶ್ಲೋಕ - 19)
ಮೂಲಮ್
ವಿಭ್ವ್ಯಸ್ತವಾಮೃತಕಥೋದವಹಾಸಿ ಲೋಕ್ಯಾಃ
ಪಾದಾವನೇಜಸರಿತಃ ಶಮಲಾನಿ ಹಂತುಮ್ ।
ಆನುಶ್ರವಂ ಶ್ರುತಿಭಿರಂಘ್ರಿಜಮಂಗಸಂಗೈ-
ಸ್ತೀರ್ಥದ್ವಯಂ ಶುಚಿಷದಸ್ತ ಉಪಸ್ಪೃಶಂತಿ ॥
ಅನುವಾದ
ಆದರೆ ನಿನ್ನ ಎರಡು ಪುಣ್ಯಮಯ ನದಿಗಳು ತ್ರಿಲೋಕಗಳ ಎಲ್ಲ ಪಾಪಗಳನ್ನು ತೊಳೆಯಲು ಪೂರ್ಣವಾಗಿ ಸಮರ್ಥವಾಗಿವೆ. ಒಂದು : ನಿನ್ನ ಅಮೃತಮಯವಾದ ಲೀಲೆಗಳಿಂದ ಸಮೃದ್ಧವಾದ ಹರಿಕಥಾನದಿ. ಅದನ್ನು ನಿರಂತರ ಕಿವಿಗಳಿಂದ ಶ್ರವಣಿಸಿದರೆ ಹೃದಯ ನಿರ್ಮಲವಾಗುತ್ತದೆ. ಇನ್ನೊಂದು ನಿನ್ನ ಪಾದ ಪ್ರಕ್ಷಾಳನದಿಂದ ಹೊರಟ ಗಂಗಾ ನದಿ. ಅದರಲ್ಲಿ ಸ್ನಾನಮಾಡಿದರೆ ಜನರು ಪುನೀತರಾಗುತ್ತಾರೆ. ಹೀಗೆ ಇವೆರಡೂ ಪವಿತ್ರ ನದಿಗಳನ್ನು ಪುಣ್ಯಾತ್ಮರಾದ ಸಜ್ಜನರು ನಿರಂತರ ಸೇವಿಸುತ್ತಾ ಇರುತ್ತಾರೆ. ॥19॥
(ಶ್ಲೋಕ - 20)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯಭಿಷ್ಟೂಯ ವಿಬುಧೈಃ ಸೇಶಃ ಶತಧೃತಿರ್ಹರಿಮ್ ।
ಅಭ್ಯಭಾಷತ ಗೋವಿಂದಂ ಪ್ರಣಮ್ಯಾಂಬರಮಾಶ್ರಿತ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತ ಮಹಾರಾಜಾ! ಸಮಸ್ತ ದೇವತೆಗಳೂ, ಮತ್ತು ಭಗವಾನ್ ಶಂಕರನೊಂದಿಗೆ ಬ್ರಹ್ಮದೇವರು ಈ ವಿಧವಾಗಿ ಭಗವಂತನನ್ನು ಸ್ತುತಿಸಿದರು. ಬಳಿಕ ಅವರು ವಂದಿಸಿ ತಮ್ಮ ಸ್ವಧಾಮಕ್ಕೆ ಹಿಂದಿರುಗಲು ಸಿದ್ಧರಾಗಿ ಅಂತರಿಕ್ಷದಲ್ಲಿ ನಿಂತು ಭಗವಾನ್ ಗೋವಿಂದನನ್ನು ಕುರಿತು ಇಂತೆಂದರು ॥20॥
(ಶ್ಲೋಕ - 21)
ಮೂಲಮ್ (ವಾಚನಮ್)
ಬ್ರಹ್ಮೋವಾಚ
ಮೂಲಮ್
ಭೂಮೇರ್ಭಾರಾವತಾರಾಯ ಪುರಾ ವಿಜ್ಞಾಪಿತಃ ಪ್ರಭೋ ।
ತ್ವಮಸ್ಮಾಭಿರಶೇಷಾತ್ಮಂಸ್ತತ್ತಥೈವೋಪಪಾದಿತಮ್ ॥
ಅನುವಾದ
ಬ್ರಹ್ಮದೇವರು ಹೇಳಿದರು — ‘‘ಸರ್ವಾತ್ಮನಾದ ಪ್ರಭುವೇ! ಈ ಮೊದಲು ನಾವು ನಿನ್ನಲ್ಲಿ ಭೂಭಾರ ಹರಣಕ್ಕಾಗಿ ಭುವಿಯಲ್ಲಿ ಅವತರಿಸಲು ಪ್ರಾರ್ಥಿಸಿದ್ದೆವು. ಅದನ್ನು ನೀನು ನಮ್ಮ ಪ್ರಾರ್ಥನೆಗನುಸಾರ ಯಥೋಚಿತವಾದ ರೀತಿಯಲ್ಲಿ ಪೂರ್ಣಗೊಳಿಸಿದೆ. ॥21॥
(ಶ್ಲೋಕ - 22)
ಮೂಲಮ್
ಧರ್ಮಶ್ಚ ಸ್ಥಾಪಿತಃ ಸತ್ಸು ಸತ್ಯಸಂಧೇಷು ವೈ ತ್ವಯಾ ।
ಕೀರ್ತಿಶ್ಚ ದಿಕ್ಷು ವಿಕ್ಷಿಪ್ತಾ ಸರ್ವಲೋಕಮಲಾಪಹಾ ॥
ಅನುವಾದ
ಸತ್ಯ ಪರಾಯಣನಾದ ನೀನು ಸಾಧುಸತ್ಪುರುಷರ ಕಲ್ಯಾಣಾರ್ಥವಾಗಿ ಧರ್ಮವನ್ನು ಪುನಃ ನೆಲೆಗೊಳಿಸಿರುವೆ. ಸಮಸ್ತ ಲೋಕಗಳ ಪಾಪಗಳನ್ನು ಪರಿಹರಿಸುವ ನಿನ್ನ ಧವಳಕೀರ್ತಿಯನ್ನು ಎಲ್ಲ ದಿಕ್ಕುಗಳಲ್ಲಿಯೂ ಹರಡಿರುವೆ. ॥22॥
(ಶ್ಲೋಕ - 23)
ಮೂಲಮ್
ಅವತೀರ್ಯ ಯದೋರ್ವಂಶೇ ಬಿಭ್ರದ್ರೂಪಮನುತ್ತಮಮ್ ।
ಕರ್ಮಾಣ್ಯುದ್ದಾಮವೃತ್ತಾನಿ ಹಿತಾಯ ಜಗತೋಕೃಥಾಃ ॥
ಅನುವಾದ
ನೀನು ಈ ಸರ್ವೋತ್ತಮ ರೂಪವನ್ನು ಧರಿಸಿ ಯದುವಂಶದಲ್ಲಿ ಅವ ತರಿಸಿದೆ. ಜಗತ್ತಿನ ಹಿತಕ್ಕಾಗಿ ಉದಾರ ಪರಾಕ್ರಮವುಳ್ಳ ಅನೇಕ ಲೀಲೆಗಳನ್ನು ನಡೆಸಿದೆ. ॥23॥
ಮೂಲಮ್
(ಶ್ಲೋಕ - 24)
ಯಾನಿ ತೇ ಚರಿತಾನೀಶ ಮನುಷ್ಯಾಃ ಸಾಧವಃ ಕಲೌ ।
ಶೃಣ್ವಂತಃ ಕೀರ್ತಯಂತಶ್ಚ ತರಿಷ್ಯಂತ್ಯಂಜಸಾ ತಮಃ ॥
ಅನುವಾದ
ಪ್ರಭುವೇ! ಕಲಿಯುಗದಲ್ಲಿ ನಿನ್ನ ಈ ಲೀಲೆಗಳನ್ನು ಶ್ರವಣಿಸುವ, ಕೀರ್ತಿಸುವ, ಸಾಧುಸ್ವಭಾವವುಳ್ಳ ಮನುಷ್ಯರು ಬಹಳ ಸುಲಭ ವಾಗಿ ಅಜ್ಞಾನಾಂಧಕಾರವನ್ನು ದಾಟಿಬಿಡುತ್ತಾರೆ. ॥24॥
(ಶ್ಲೋಕ - 25)
ಮೂಲಮ್
ಯದುವಂಶೇವತೀರ್ಣಸ್ಯ ಭವತಃ ಪುರುಷೋತ್ತಮ ।
ಶರಚ್ಛತಂ ವ್ಯತೀಯಾಯ ಪಂಚವಿಂಶಾಧಿಕಂ ಪ್ರಭೋ ॥
ಅನುವಾದ
ಪುರುಷೋತ್ತಮನೇ! ಸರ್ವಶಕ್ತ ಪ್ರಭುವೇ! ನೀನು ಯದುವಂಶದಲ್ಲಿ ಅವತರಿಸಿ ಒಂದುನೂರಇಪ್ಪತ್ತೈದು ವರ್ಷಗಳು ಕಳೆದುಹೋಗಿವೆ. ॥25॥
(ಶ್ಲೋಕ - 26)
ಮೂಲಮ್
ನಾಧುನಾ ತೇಖಿಲಾಧಾರ ದೇವಕಾರ್ಯಾವಶೇಷಿತಮ್ ।
ಕುಲಂ ಚ ವಿಪ್ರಶಾಪೇನ ನಷ್ಟಪ್ರಾಯಮಭೂದಿದಮ್ ॥
ಅನುವಾದ
ಸರ್ವಾಧಾರನೇ! ಈಗ ದೇವತೆಗಳಾದ ನಮ್ಮ ಎಲ್ಲ ಕಾರ್ಯಗಳನ್ನು ಚೆನ್ನಾಗಿ ನೀನು ನಡೆಸಿಕೊಟ್ಟಿರುವೆ. ಈಗ ಯಾವುದೇ ಕಾರ್ಯವು ಬಾಕಿ ಉಳಿಯಲಿಲ್ಲ. ಬ್ರಾಹ್ಮಣರ ಶಾಪದ ಕಾರಣ ಈ ಯದು ವಂಶವೂ ಕೂಡ ಒಂದು ರೀತಿಯಿಂದ ನಾಶವಾಗಿಯೇ ಹೋಗಿದೆ. ॥26॥
(ಶ್ಲೋಕ - 27)
ಮೂಲಮ್
ತತಃ ಸ್ವಧಾಮ ಪರಮಂ ವಿಶಸ್ವ ಯದಿ ಮನ್ಯಸೇ ।
ಸಲೋಕಾನ್ಲೋಕಪಾಲಾನ್ ನಃ ಪಾಹಿ ವೈಕುಂಠ ಕಿಂಕರಾನ್ ॥
ಅನುವಾದ
ಆದುದರಿಂದ ಹೇ ವೈಕುಂಠನಾಥನೇ! ನಿನಗೆ ಉಚಿತವೆನಿಸಿದರೆ ನಿನ್ನ ಪರಮಧಾಮಕ್ಕೆ ಹಿಂದಿರುಗುವವನಾಗು. ಅಲ್ಲಿ ನಿನ್ನ ಸೇವಕರಾದ ನಮ್ಮನ್ನೂ, ಲೋಕಪಾಲಕರನ್ನೂ ಮತ್ತು ನಮ್ಮ ಲೋಕಗಳನ್ನು ಪಾಲಿಸಿ ಪೋಷಿಸುವವನಾಗು.’’ ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಅವಧಾರಿತಮೇತನ್ಮೇ ಯದಾತ್ಥ ವಿಬುಧೇಶ್ವರ ।
ಕೃತಂ ವಃ ಕಾರ್ಯಮಖಿಲಂ ಭೂಮೇರ್ಭಾರೋವತಾರಿತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ದೇವತೆಗಳೊಡೆಯ ಬ್ರಹ್ಮನೇ! ನೀನು ಹೇಳಿದುದನ್ನೇ ನಾನೂ ಕೂಡ ಮೊದಲೇ ನಿಶ್ಚಯ ಮಾಡಿರುವೆನು. ನಾನು ನಿಮ ಕಾರ್ಯಗಳನ್ನೆಲ್ಲ ಪೂರೈಸಿ ಭೂಮಿಯ ಭಾರವನ್ನು ಇಳುಹಿಸಿರುವೆನು. ॥28॥
(ಶ್ಲೋಕ - 29)
ಮೂಲಮ್
ತದಿದಂ ಯಾದವಕುಲಂ ವೀರ್ಯಶೌರ್ಯಶ್ರಿಯೋದ್ಧತಮ್ ।
ಲೋಕಂ ಜಿಘೃಕ್ಷದ್ರುದ್ಧಂ ಮೇ ವೇಲಯೇವ ಮಹಾರ್ಣವಃ ॥
ಅನುವಾದ
ಆದರೆ ಒಂದು ಕಾರ್ಯ ಹಾಗೆಯೇ ಉಳಿದಿದೆ. ಈ ಯದುವಂಶೀಯರು ಬಲ-ವಿಕ್ರಮಗಳಿಂದಲೂ, ವೀರ್ಯ-ಶೌರ್ಯಾದಿಗಳಿಂದಲೂ, ಧನ-ಸಂಪತ್ತಿನಿಂದಲೂ ಉನ್ಮತ್ತರಾಗಿ ಬಿಟ್ಟಿದ್ದಾರೆ. ಲೋಕವನ್ನೇ ನುಂಗಿಹಾಕ ಬೇಕೆಂದಿರುವ ಅವರ ತವಕವನ್ನು ನಾನು ಕಡಲದಡವು ಕಡಲನ್ನು ತಡೆಹಿಡಿದಂತೆ ತಡೆ ಹಿಡಿದಿಟ್ಟಿರುವೆನು. ॥29॥
(ಶ್ಲೋಕ - 30)
ಮೂಲಮ್
ಯದ್ಯಸಂಹೃತ್ಯ ದೃಪ್ತಾನಾಂ ಯದೂನಾಂ ವಿಪುಲಂ ಕುಲಮ್ ।
ಗಂತಾಸ್ಮ್ಯನೇನ ಲೋಕೋಯಮುದ್ವೇಲೇನ ವಿನಂಕ್ಷ್ಯತಿ ॥
ಅನುವಾದ
ನಾನೇನಾದರೂ ಮದಾಂಧರೂ, ಸ್ವೇಚ್ಛಾಚಾರಿಗಳೂ ಆದ ಯದುವಂಶೀಯರ ಈ ವಿಶಾಲವಂಶವನ್ನು ವಿನಾಶಗೊಳಿಸದೇ ಸ್ವಧಾಮವನ್ನು ಸೇರಿಕೊಂಡರೆ ಇವರು ಎಲ್ಲ ಲೋಕ ಮರ್ಯಾದೆಗಳನ್ನು ಉಲ್ಲಂಘಿಸಿ, ಹದ್ದುಮೀರಿ ನಡೆದು ಸಮಸ್ತ ಲೋಕಗಳನ್ನು ವಿನಾಶಗೊಳಿಸುವರು. ॥30॥
(ಶ್ಲೋಕ - 31)
ಮೂಲಮ್
ಇದಾನೀಂ ನಾಶ ಆರಬ್ಧಃ ಕುಲಸ್ಯ ದ್ವಿಜಶಾಪತಃ ।
ಯಾಸ್ಯಾಮಿ ಭವನಂ ಬ್ರಹ್ಮನ್ನೇತದಂತೇ ತವಾನಘ ॥
ಅನುವಾದ
ಪುಣ್ಯಾತ್ಮನಾದ ಬ್ರಹ್ಮನೇ! ಈ ಬ್ರಾಹ್ಮಣರ ಶಾಪದಿಂದ ಈ ವಂಶದ ನಾಶ ಪ್ರಾರಂಭವಾಗಿಬಿಟ್ಟಿದೆ. ಇದರ ಅಂತ್ಯವಾಗುತ್ತಲೇ ನಾನು ನಿನ್ನ ಧಾಮದ ಮೂಲಕ ಸ್ವಧಾಮಕ್ಕೆ ತೆರಳುವೆನು.’’ ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಇತ್ಯುಕ್ತೋ ಲೋಕನಾಥೇನ ಸ್ವಯಂಭೂಃ ಪ್ರಣಿಪತ್ಯ ತಮ್ ।
ಸಹ ದೇವಗಣೈರ್ದೇವಃ ಸ್ವಧಾಮ ಸಮಪದ್ಯತ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಅಖಿಲ ಲೋಕಾಧಿಪತಿ ಭಗವಾನ್ ಶ್ರೀಕೃಷ್ಣನು ಹೀಗೆ ಹೇಳಲು, ಬ್ರಹ್ಮದೇವರು ಅವನಿಗೆ ವಂದಿಸಿ ದೇವತೆಗಳೊಂದಿಗೆ ತಮ್ಮ ಧಾಮಕ್ಕೆ ಹೊರಟುಹೋದರು. ॥32॥
(ಶ್ಲೋಕ - 33)
ಮೂಲಮ್
ಅಥ ತಸ್ಯಾಂ ಮಹೋತ್ಪಾತಾಂದ್ವಾರವತ್ಯಾನ್ ಸಮುತ್ಥಿತಾನ್ ।
ವಿಲೋಕ್ಯ ಭಗವಾನಾಹ ಯದುವೃದ್ಧಾನ್ಸಮಾಗತಾನ್ ॥
ಅನುವಾದ
ಬ್ರಹ್ಮಾದಿಗಳು ಹೋರಟು ಹೋಗುತ್ತಲೇ ದ್ವಾರಕೆಯಲ್ಲಿ ದೊಡ್ಡ-ದೊಡ್ಡ ಉತ್ಪಾತಗಳೂ, ಅಪಶಕುನಗಳೂ ಕಾಣಿಸಿಕೊಂಡವು. ಇದನ್ನು ನೋಡಿ ಗಾಬರಿಗೊಂಡು ಕೆಲವು ಯದುವಂಶದ ಹಿರಿಯರು ಶ್ರೀಕೃಷ್ಣನ ಬಳಿಗೆ ಬಂದು ತಮ್ಮ ಆತಂಕವನ್ನು ತೋಡಿಕೊಂಡರು. ಆಗ ಭಗವಾನ್ ಶ್ರೀಕೃಷ್ಣನು ಅವರನ್ನು ಸಮಾಧಾನ ಪಡಿಸುತ್ತಾ ಇಂತೆಂದನು. ॥33॥
(ಶ್ಲೋಕ - 34)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಏತೇ ವೈ ಸುಮಹೋತ್ಪಾತಾ ವ್ಯತ್ತಿಷ್ಠಂತೀಹ ಸರ್ವತಃ ।
ಶಾಪಶ್ಚ ನಃ ಕುಲಸ್ಯಾಸೀದ್ಬ್ರಾಹ್ಮಣೇಭ್ಯೋ ದುರತ್ಯಯಃ ॥
(ಶ್ಲೋಕ - 35)
ಮೂಲಮ್
ನ ವಸ್ತವ್ಯಮಿಹಾಸ್ಮಾಭಿರ್ಜಿಜೀವಿಷುಭಿರಾರ್ಯಕಾಃ ।
ಪ್ರಭಾಸಂ ಸುಮಹತ್ಪುಣ್ಯಂ ಯಾಸ್ಯಾಮೋದ್ಯೈವ ಮಾ ಚಿರಮ್ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಹಿರಿಯರೇ! ನಿಮ್ಮ ಆತಂಕವು ಸಹಜವಾಗಿಯೇ ಇದೆ. ಇಂದು ದ್ವಾರಕೆಯಲ್ಲಿ ಎಲ್ಲಿ ನೋಡಿದಲ್ಲಿ ದೊಡ್ಡ-ದೊಡ್ಡ ಅಪಶಕುನಗಳೂ, ಉತ್ಪಾತಗಳೂ ವಿಶೇಷವಾಗಿ ಉಂಟಾಗುತ್ತಿವೆ. ಬ್ರಾಹ್ಮಣರು ನಮ್ಮ ವಂಶಕ್ಕೆ ಪರಿಹರಿಸಲು ಬಹಳ ಕಠಿಣವಾದ ಶಾಪವನ್ನು ಕೊಟ್ಟಿರುವುದು ನಿಮಗೆ ತಿಳಿದೇ ಇದೆ. ನಾವೆಲ್ಲ ನಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳಬೇಕಿದ್ದರೆ ನಾವು ಇಲ್ಲಿ ಇರದೆ, ಇಂದೇ ಪ್ರಭಾಸಕ್ಷೇತ್ರಕ್ಕೆ ಹೊರಡ ಬೇಕೆಂದು ನನಗನಿಸುತ್ತದೆ. ॥34-35॥
(ಶ್ಲೋಕ - 36)
ಮೂಲಮ್
ಯತ್ರ ಸ್ನಾತ್ವಾ ದಕ್ಷಶಾಪಾದ್ಗೃಹೀತೋ ಯಕ್ಷ್ಮಣೋಡುರಾಟ್ ।
ವಿಮುಕ್ತಃ ಕಿಲ್ಬಿಷಾತ್ಸದ್ಯೋ ಭೇಜೇ ಭೂಯಃ ಕಲೋದಯಮ್ ॥
ಅನುವಾದ
ಪ್ರಭಾಸ ಕ್ಷೇತ್ರದ ಮಹಿಮೆ ಬಹಳ ಪ್ರಸಿದ್ಧವಾಗಿದೆ. ದಕ್ಷಪ್ರಜಾಪತಿಯ ಶಾಪದಿಂದ ಚಂದ್ರನಿಗೆ ರಾಜಯಕ್ಷ್ಮಾ(ಕ್ಷಯ)ರೋಗವು ಆವರಿಸಿದ್ದಾಗ, ಚಂದ್ರನು ಪ್ರಭಾಸಕ್ಷೇತ್ರಕ್ಕೆ ಹೋಗಿ ಸ್ನಾನಮಾಡಿದನು. ಆಗಲೇ ಆ ಪಾಪ ಜನ್ಯರೋಗದಿಂದ ಬಿಡುಗಡೆ ಹೊಂದಿದನು. ಜೊತೆಗೆ ಅವನಿಗೆ ಕಲೆಗಳ ಅಭಿವೃದ್ಧಿಯು ಪ್ರಾಪ್ತವಾಯಿತು. ॥36॥
(ಶ್ಲೋಕ - 37)
ಮೂಲಮ್
ವಯಂ ಚ ತಸ್ಮಿನ್ನಾಪ್ಲುತ್ಯ ತರ್ಪಯಿತ್ವಾ ಪಿತೃನ್ಸುರಾನ್ ।
ಭೋಜಯಿತ್ವೋಶಿಜೋ ವಿಪ್ರಾನ್ ನಾನಾಗುಣವತಾಂಧಸಾ ॥
(ಶ್ಲೋಕ - 38)
ಮೂಲಮ್
ತೇಷು ದಾನಾನಿ ಪಾತ್ರೇಷು ಶ್ರದ್ಧಯೋಪ್ತ್ವಾ ಮಹಾಂತಿ ವೈ ।
ವೃಜಿನಾನಿ ತರಿಷ್ಯಾಮೋ ದಾನೈರ್ನೌಭಿರಿವಾರ್ಣವಮ್ ॥
ಅನುವಾದ
ನಾವೂ ಕೂಡ ಪ್ರಭಾಸಕ್ಷೇತ್ರಕ್ಕೆ ಹೋಗಿ ಸ್ನಾನಮಾಡಿ, ದೇವತೆಗಳಿಗೆ, ಪಿತೃಗಳಿಗೆ ತರ್ಪಣವಿತ್ತು, ಜೊತೆಗೆ ನಾನಾಗುಣಗಳಿಂದ ಕೂಡಿದ ಪಕ್ವಾನ್ನಗಳನ್ನು ಮಾಡಿ ಶ್ರೇಷ್ಠ ಬ್ರಾಹ್ಮಣರಿಗೆ ಉಣಬಡಿಸೋಣ. ಅಲ್ಲಿ ನಾವು ಆ ಸತ್ಪಾತ್ರ ಬ್ರಾಹ್ಮಣರಿಗೆ ಶ್ರದ್ಧೆಯಿಂದ ಭಾರೀ ದಕ್ಷಿಣೆಗಳನ್ನು ಕೊಟ್ಟು ಅವರ ಮೂಲಕ, ಹಡಗಿನ ಮೂಲಕ ಸಮುದ್ರವನ್ನು ದಾಟುವಂತೆ ನಾವು ದೊಡ್ಡಸಂಕಟದಿಂದ ಪಾರಾಗಿ ಹೋಗೋಣ. ॥37-38॥
(ಶ್ಲೋಕ - 39)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಭಗವತಾದಿಷ್ಟಾ ಯಾದವಾಃ ಕುಲನಂದನ ।
ಗಂತುಂ ಕೃತಧಿಯಸ್ತೀರ್ಥಂ ಸ್ಯಂದನಾನ್ಸಮಯೂಯುಜನ್ ॥
ಅನುವಾದ
ಶ್ರೀಶುಕಮುನಿಗಳು ಹೇಳುತ್ತಾರೆ — ಕುರುಕುಲ ನಂದನನೇ! ಭಗವಾನ್ ಶ್ರೀಕೃಷ್ಣನು ಈ ವಿಧವಾಗಿ ಆಜ್ಞೆ ಮಾಡಿದಾಗ ಯದುವಂಶೀಯರು ಒಮ್ಮತದಿಂದ ಪ್ರಭಾಸ ಕ್ಷೇತ್ರಕ್ಕೆ ಹೋಗಲು ನಿಶ್ಚಯಿಸಿದರು. ಎಲ್ಲರೂ ತಮ್ಮ-ತಮ್ಮ ರಥಗಳನ್ನು ಸಜ್ಜುಗೊಳಿಸ ತೊಡಗಿದರು. ॥39॥
(ಶ್ಲೋಕ - 40)
ಮೂಲಮ್
ತನ್ನಿರೀಕ್ಷ್ಯೋದ್ಧವೋ ರಾಜನ್ ಶ್ರುತ್ವಾ ಭಗವತೋದಿತಮ್ ।
ದೃಷ್ಟ್ವಾರಿಷ್ಟಾನಿ ಘೋರಾಣಿ ನಿತ್ಯಂ ಕೃಷ್ಣಮನುವ್ರತಃ ॥
(ಶ್ಲೋಕ - 41)
ಮೂಲಮ್
ವಿವಿಕ್ತ ಉಪಸಂಗಮ್ಯ ಜಗತಾಮೀಶ್ವರೇಶ್ವರಮ್ ।
ಪ್ರಣಮ್ಯ ಶಿರಸಾ ಪಾದೌ ಪ್ರಾಂಜಲಿಸ್ತಮಭಾಷತ ॥
ಅನುವಾದ
ಪರೀಕ್ಷಿತನೇ! ಉದ್ಧವನು ಭಗವಾನ್ ಶ್ರೀಕೃಷ್ಣನ ಭಕ್ತನೂ, ಸೇವಕನೂ ಆಗಿದ್ದನು. ಅವನು ಯದುವಂಶೀಯರ ಯಾತ್ರೆಯ ಸಿದ್ಧತೆಯನ್ನು ನೋಡಿ, ಭಗವಂತನ ಆಜ್ಞೆ ಯನ್ನು ಕೇಳಿ, ಅತ್ಯಂತ ಘೋರ ಅಪಶಕುನಗಳನ್ನು ಗಮನಿಸಿದಾಗ ಉದ್ಧವನು ಜಗತ್ತಿನ ಏಕಮಾತ್ರ ಅಧೀಶ್ವರ ಭಗವಾನ್ ಶ್ರೀಕೃಷ್ಣನ ಏಕಾಂತವನ್ನು ಪ್ರವೇಶಿಸಿ ಅವನ ಚರಣಗಳಲ್ಲಿ ಶಿರಸ್ಸನ್ನಿಟ್ಟು ವಂದಿಸಿ, ಕೈಜೋಡಿಸಿಕೊಂಡು ಅವನಲ್ಲಿ ಪ್ರಾರ್ಥಿಸತೊಡಗಿದನು. ॥40-41॥
ಮೂಲಮ್
(ಶ್ಲೋಕ - 42)
ಮೂಲಮ್ (ವಾಚನಮ್)
ಉದ್ಧವ ಉವಾಚ
ಮೂಲಮ್
ದೇವದೇವೇಶ ಯೋಗೇಶ ಪುಣ್ಯಶ್ರವಣಕೀರ್ತನ ।
ಸಂಹೃತ್ಯೈತತ್ಕುಲಂ ನೂನಂ ಲೋಕಂ ಸಂತ್ಯಕ್ಷ್ಯತೇ ಭವಾನ್ ।
ವಿಪ್ರಶಾಪಂ ಸಮರ್ಥೋಪಿ ಪ್ರತ್ಯಹನ್ನ ಯದೀಶ್ವರಃ ॥
ಅನುವಾದ
ಉದ್ಧವನಿಂತೆಂದನು ಯೋಗೇಶ್ವರನೇ! ದೇವಾಧಿದೇವನೇ! ನಿನ್ನ ಲೀಲೆಗಳ ಶ್ರವಣ-ಕೀರ್ತನದಿಂದ ಜಗತ್ತು ಪವಿತ್ರವಾಗುತ್ತದೆ. ನೀನು ಸರ್ವಶಕ್ತ ಪರಮೇಶ್ವರನಾಗಿರುವೆ. ಬ್ರಾಹ್ಮಣರ ಶಾಪವನ್ನು ತೊಡೆದುಹಾಕುವಲ್ಲಿ ನೀನು ಸಮರ್ಥನಾಗಿದ್ದರೂ ಹಾಗೆ ಮಾಡಲಿಲ್ಲ. ಈಗ ನೀನು ಯದುವಂಶವನ್ನು ಸಂಹರಿಸಿ, ಇದನ್ನು ಕೊನೆಗಾಣಿಸಿ ನೀನು ಅವಶ್ಯವಾಗಿ ಈ ಲೋಕವನ್ನು ಪರಿತ್ಯಜಿಸುವೆ ಎಂದು ನಾನು ತಿಳಿದುಕೊಂಡೆ. ॥42॥
(ಶ್ಲೋಕ - 43)
ಮೂಲಮ್
ನಾಹಂ ತವಾಂಘ್ರಿಕಮಲಂ ಕ್ಷಣಾರ್ಧಮಪಿ ಕೇಶವ ।
ತ್ಯಕ್ತುಂ ಸಮುತ್ಸಹೇ ನಾಥ ಸ್ವಧಾಮ ನಯ ಮಾಮಪಿ ॥
ಅನುವಾದ
ಓ ಶ್ಯಾಮಸುಂದರಾ! ಪ್ರಾಣನಾಥನೇ! ನಾನು ನಿನ್ನ ದಿವ್ಯವಾದ ಚರಣಕಮಲಗಳನ್ನು ಕ್ಷಣಾರ್ಧವೂ ಬಿಟ್ಟಿರಲಾರೆನು. ನನ್ನ ಜೀವನ ಸರ್ವಸ್ವವಾದ ಸ್ವಾಮಿಯೇ! ನೀನು ನನ್ನನ್ನೂ ನಿನ್ನ ಧಾಮಕ್ಕೆ ಕೊಂಡುಹೋಗಿಬಿಡು. ॥43॥
(ಶ್ಲೋಕ - 44)
ಮೂಲಮ್
ತವ ವಿಕ್ರೀಡಿತಂ ಕೃಷ್ಣ ನೃಣಾಂ ಪರಮಮಂಗಲಮ್ ।
ಕರ್ಣಪೀಯೂಷಮಾಸ್ವಾದ್ಯ ತ್ಯಜತ್ಯನ್ಯಸ್ಪೃಹಾಂ ಜನಃ ॥
(ಶ್ಲೋಕ - 45)
ಮೂಲಮ್
ಶಯ್ಯಾಸನಾಟನಸ್ಥಾನಸ್ನಾನಕ್ರೀಡಾಶನಾದಿಷು ।
ಕಥಂ ತ್ವಾಂ ಪ್ರಿಯಮಾತ್ಮಾನಂ ವಯಂ ಭಕ್ತಾಸ್ತ್ಯಜೇಮಹಿ ॥
ಅನುವಾದ
ಪ್ರಿಯ ಕೃಷ್ಣಾ! ನಿನ್ನ ಒಂದೊಂದು ಲೀಲೆಯೂ ಮನುಷ್ಯರಿಗಾಗಿ ಪರಮ ಮಂಗಳದಾಯಕವಾಗಿದೆ. ಕಿವಿಗಳಿಗೆ ಅಮೃತಪ್ರಾಯವಾಗಿದೆ. ಒಮ್ಮೆ ಆ ಅಮೃತದ ಸವಿಯನ್ನು ಮೆದ್ದವನ ಮನಸ್ಸು ಮತ್ತೆ ಬೇರೆಡೆಗೆ ಹೋಗುವುದಿಲ್ಲ. ಸ್ವಾಮಿ! ನಾವಾದರೋ ಎದ್ದಾಗ-ಕೂತಾಗ, ಮಲಗಿ ಎದ್ದಾಗ, ಅಡ್ಡಾಡುವಾಗ ನಿನ್ನ ಜೊತೆಯಲ್ಲೇ ಇದ್ದೆವು. ನಾವು ನಿನ್ನೊಡನೆ ಸ್ನಾನಮಾಡಿದೆವು, ಆಟವಾಡಿದೆವು, ಊಟ ಮಾಡಿದೆವು, ಎಷ್ಟೊಂದು ಹೇಳಲೀ, ನಮ್ಮ ಎಲ್ಲ ಕ್ರಿಯೆಗಳು ನಿನ್ನೊಡನೇ ನಡೆಯುತ್ತಿತ್ತು. ನೀನು ನಮ್ಮ ಪ್ರಿಯತಮನಾಗಿರುವೆ. ಹೆಚ್ಚೇನು ನಮ್ಮ ಆತ್ಮನೇ ಆಗಿರುವೆ. ಇಂತಹ ಸ್ಥಿತಿಯಲ್ಲಿ ಪ್ರೇಮಿ ಭಕ್ತರಾದ ನಾವು ನಿನ್ನನ್ನು ಹೇಗೆ ಬಿಡಬಲ್ಲೆವು! ॥44-45॥
(ಶ್ಲೋಕ - 46)
ಮೂಲಮ್
ತ್ವಯೋಪಭುಕ್ತಸ್ರಗ್ಗಂಧವಾಸೋಲಂಕಾರಚರ್ಚಿತಾಃ ।
ಉಚ್ಛಿಷ್ಟ ಭೋಜಿನೋ ದಾಸಾಸ್ತವ ಮಾಯಾಂ ಜಯೇಮಹಿ ॥
ಅನುವಾದ
ನೀನು ಧರಿಸಿದ ವನಮಾಲೆಯನ್ನು ನಾವು ಪ್ರಸಾದರೂಪವಾಗಿ ಧರಿಸಿದೆವು. ನೀನು ಧರಿಸಿದ ಚಂದನಾದಿ ಅಲಂಕಾರಗಳನ್ನು ನಿನ್ನ ಪ್ರಸಾದವೆಂದು ಪಡೆದುಕೊಂಡೆವು. ನಾವು ನಿನ್ನ ಪ್ರಸಾದವನ್ನು ಪಡೆಯುವ ಸೇವಕರಾಗಿದ್ದೇವೆ. ಅದಕ್ಕಾಗಿ ನಾವು ನಿನ್ನ ಮಾಯೆಯ ಮೇಲೆ ಅವಶ್ಯವಾಗಿ ವಿಜಯವನ್ನು ಪಡೆದುಕೊಂಡೆವು. (ಆದ್ದರಿಂದ ಸ್ವಾಮಿ! ನಮಗೆ ನಿನ್ನ ಮಾಯೆಯ ಭಯವಿಲ್ಲ. ಭಯವಿರುವುದಾದರೆ ಕೇವಲ ನಿನ್ನ ವಿಯೋಗದ್ದು.) ॥46॥
(ಶ್ಲೋಕ - 47)
ಮೂಲಮ್
ವಾತರಶನಾ ಯ ಋಷಯಃ ಶ್ರಮಣಾ ಊರ್ಧ್ವಮಂಥಿನಃ ।
ಬ್ರಹ್ಮಾಖ್ಯಂ ಧಾಮ ತೇ ಯಾಂತಿ ಶಾಂತಾಃ ಸಂನ್ಯಾಸಿನೋಮಲಾಃ ॥
ಅನುವಾದ
ದೊಡ್ಡ ದೊಡ್ಡ ಋಷಿ-ಮುನಿಗಳು ದಿಗಂಬರರಾಗಿದ್ದು, ಆಜೀವನ ನೈಷ್ಠಿಕ ಬ್ರಹ್ಮಚರ್ಯವನ್ನು ಪಾಲಿಸುತ್ತಾ ಅಧ್ಯಾತ್ಮವಿದ್ಯೆಗಾಗಿ ಅತ್ಯಂತ ಪರಿಶ್ರಮ ಪಡುವರು. ಈ ವಿಧವಾಗಿ ಕಠಿಣ ಸಾಧನೆಯಿಂದ ಆ ಸಂನ್ಯಾಸಿಗಳ ಹೃದಯ ನಿರ್ಮಲವಾಗುತ್ತದೆ. ಆಗ ಎಲ್ಲಾದರೂ ಅವರು ಸಮಸ್ತ ವೃತ್ತಿಗಳ ಶಾಂತಿರೂಪೀ ನೈಷ್ಕರ್ಮ್ಯ ಅವಸ್ಥೆಯಲ್ಲಿ ಸ್ಥಿತರಾಗಿ ನಿನ್ನ ಬ್ರಹ್ಮನಾಮಕ ಧಾಮವನ್ನು ಪಡೆದುಕೊಳ್ಳುತ್ತಾರೆ. ॥47॥
(ಶ್ಲೋಕ - 49)
ಮೂಲಮ್
ವಯಂ ತ್ವಿಹ ಮಹಾಯೋಗಿನ್ ಭ್ರಮಂತಃ ಕರ್ಮವರ್ತ್ಮಸು ।
ತ್ವದ್ವಾರ್ತಯಾ ತರಿಷ್ಯಾಮಸ್ತಾವಕೈರ್ದುಸ್ತರಂ ತಮಃ ॥
(ಶ್ಲೋಕ - 49)
ಮೂಲಮ್
ಸ್ಮರಂತಃ ಕೀರ್ತಯಂತಸ್ತೇ ಕೃತಾನಿ ಗದಿತಾನಿ ಚ ।
ಗತ್ಯುತ್ಸ್ಮಿತೇಕ್ಷಣಕ್ಷ್ವೇಲಿ ಯನ್ನೃಲೋಕವಿಡಂಬನಮ್ ॥
ಅನುವಾದ
ಓ ಮಹಾಯೋಗಿಯೇ! ನಾವಾದರೋ ಕರ್ಮಮಾರ್ಗದಲ್ಲೇ ಅಲೆಯುತ್ತಿದ್ದೇವೆ. ಆದರೆ ನಾವು ನಿನ್ನ ಭಕ್ತರೊಡನೆ ನಿನ್ನ ಗುಣ-ಲೀಲೆಗಳನ್ನು ಚರ್ಚಿಸುತ್ತಾ, ಮನುಷ್ಯರಂತೆ ಲೀಲೆಗಳನ್ನು ಮಾಡುತ್ತಾ ನೀನು ಹೇಳಿದುದನ್ನು ಸ್ಮರಣ-ಕೀರ್ತನೆ ಮಾಡುತ್ತಾ ಇರುವೆವು. ಜೊತೆಗೆ ನಿನ್ನ ನಡೆ-ನಿಲುವು, ಮಂದಹಾಸ, ಓರೆನೋಟ, ಹಾಸ-ಪರಿಹಾಸಗಳ ಸ್ಮೃತಿಯಲ್ಲಿ ತಲ್ಲೀನವಾಗಿ ಹೋಗುವೆವು. ಕೇವಲ ಇದರಿಂದಲೇ ನಾವು ದುಸ್ತರವಾದ ಮಾಯೆಯನ್ನು ದಾಟಿಹೋಗುವೆವು. (ಅದಕ್ಕಾಗಿ ನಮಗೆ ಮಾಯೆಯನ್ನು ದಾಟಲು ಚಿಂತೆಯಿಲ್ಲ, ನಿನ್ನ ವಿರಹದ್ದೇ ಚಿಂತೆ ಇದೆ. ನೀನು ನಮ್ಮ ಕೈಬಿಡದೆ, ಜೊತೆಗೆ ಕರೆದುಕೊಂಡು ಹೋಗು.) ॥48-49॥
(ಶ್ಲೋಕ - 50)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ವಿಜ್ಞಾಪಿತೋ ರಾಜನ್ ಭಗವಾನ್ ದೇವಕೀಸುತಃ ।
ಏಕಾಂತಿನಂ ಪ್ರಿಯಂ ಭೃತ್ಯಮುದ್ಧವಂ ಸಮಭಾಷತ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಉದ್ಧವನು ದೇವಕಿನಂದನ ಭಗವಾನ್ ಶ್ರೀಕೃಷ್ಣನಲ್ಲಿ ಈ ಪ್ರಕಾರ ಪ್ರಾರ್ಥಿಸಿದಾಗ ಅವನು ತನ್ನ ಅನನ್ಯ ಪ್ರೇಮಿಯೂ, ಸಖನೂ, ಸೇವಕನೂ ಆದ ಉದ್ಧವನಲ್ಲಿ ಇಂತೆಂದನು ॥50॥
ಅನುವಾದ (ಸಮಾಪ್ತಿಃ)
ಆರನೆಯ ಅಧ್ಯಾಯವು ಮುಗಿಯಿತು. ॥6॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಷಷ್ಠೋಽಧ್ಯಾಯಃ ॥6॥