[ಐದನೆಯ ಅಧ್ಯಾಯ]
ಭಾಗಸೂಚನಾ
ಭಕ್ತಿಹೀನ ಪುರುಷರ ಗತಿ ಮತ್ತು ಭಗವಂತನ ಪೂಜಾವಿಧಾನದ ವರ್ಣನೆ
(ಶ್ಲೋಕ - 1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಭಗವಂತಂ ಹರಿಂ ಪ್ರಾಯೋ ನ ಭಜಂತ್ಯಾತ್ಮವಿತ್ತಮಾಃ ।
ತೇಷಾಮಶಾಂತಕಾಮಾನಾಂ ಕಾ ನಿಷ್ಠಾವಿಜಿತಾತ್ಮನಾಮ್ ॥
ಅನುವಾದ
ರಾಜಾ ನಿಮಿಯು ಕೇಳಿದನು — ಆತ್ಮ ತತ್ತ್ವವನ್ನು ಅರಿತಿರುವ ಯೋಗೀಶ್ವರರೇ! ತಮ್ಮ ಇಂದ್ರಿಯಗಳನ್ನು ಜಯಿಸದವರು, ಜೊತೆ-ಜೊತೆಗೆ ಚಿತ್ತವೂ ಭೋಗಗಳ ಲಾಲಸೆಯಿಂದ ಅಶಾಂತವಾಗಿರುವ ಜನರು ಪ್ರಾಯಶಃ ಭಗವಂತನನ್ನು ಭಜಿಸುವುದಿಲ್ಲ. ಇಂತಹವರ ಗತಿ ಏನಾಗುತ್ತದೆ? ॥1॥
(ಶ್ಲೋಕ - 2)
ಮೂಲಮ್ (ವಾಚನಮ್)
ಚಮಸ ಉವಾಚ
ಮೂಲಮ್
ಮುಖಬಾಹೂರುಪಾದೇಭ್ಯಃ ಪುರುಷಸ್ಯಾಶ್ರಮೈಃ ಸಹ ।
ಚತ್ವಾರೋ ಜಜ್ಞಿರೇ ವರ್ಣಾ ಗುಣೈರ್ವಿಪ್ರಾದಯಃ ಪೃಥಕ್ ॥
ಅನುವಾದ
ಎಂಟನೆಯವರಾದ ಶ್ರೀಚಮಸ ಯೋಗೀಶ್ವರರು ಹೇಳುತ್ತಾರೆ — ರಾಜನೇ! ವಿರಾಟ್ಪುರುಷ ಪರಮಾತ್ಮನ ಮುಖ, ಬಾಹು, ಊರು, ಚರಣಗಳಿಂದ ನಾಲ್ಕೂ ವರ್ಣ ಮತ್ತು ಆಶ್ರಮಗಳ ಉತ್ಪತ್ತಿಯು ಅವರವರ ಗುಣ ಹಾಗೂ ಕರ್ಮಗಳನುಸಾರ ಆಗಿದೆ. ಭಗವಂತನ ಮುಖದಿಂದ ಸತ್ತ್ವ ಪ್ರಧಾನ ಬ್ರಾಹ್ಮಣರ, ಬಾಹುಗಳಿಂದ ಸತ್ತ್ವ-ರಜ ಮಿಶ್ರಿತ ಕ್ಷತ್ರಿಯರ, ತೊಡೆಯಿಂದ ರಜೋಗುಣ-ತಮೋಗುಣ ಮಿಶ್ರಿತ ವೈಶ್ಯರ, ಚರಣಗಳಿಂದ ತಮೋಗುಣ ಪ್ರಧಾನ ಶೂದ್ರರ ಉತ್ಪತ್ತಿಯಾಯಿತು. ಹೀಗೆಯೇ ಹೃದಯ, ಜಂಘೇ, ವಕ್ಷಃಸ್ಥಳ, ಶಿರ ಇವುಗಳಿಂದ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸಂನ್ಯಾಸ ಆಶ್ರಮಗಳು ಉಂಟಾದುವು. ಈ ಪ್ರಕಾರ ವರ್ಣಾಶ್ರಮದ ವಿಭಾಗದಿಂದ ಇಡೀ ವಿಶ್ವವು ಭಗವಂತ ನಿಂದಲೇ ಉಂಟಾಗಿದೆ. ॥2॥
(ಶ್ಲೋಕ - 3)
ಮೂಲಮ್
ಯ ಏಷಾಂ ಪುರುಷಂ ಸಾಕ್ಷಾದಾತ್ಮಪ್ರಭವಮೀಶ್ವರಮ್ ।
ನ ಭಜಂತ್ಯವಜಾನಂತಿ ಸ್ಥಾನಾದ್ಭ್ರಷ್ಟಾಃ ಪತನ್ತ್ಯಧಃ ॥
ಅನುವಾದ
ಈ ನಾಲ್ಕೂ ವರ್ಣಗಳಲ್ಲಿನ ಜನರು ಪರಾತ್ಪರ ಪರಮಾತ್ಮನನ್ನು ಭಜಿಸದವರು, ಅವನನ್ನು ಆದರಿಸದವರು ತಮ್ಮ ಸ್ಥಾನದಿಂದ ಭ್ರಷ್ಟರಾಗಿ ಅಧೋಗತಿಯನ್ನು ಪಡೆಯುತ್ತಾರೆ. ॥3॥
(ಶ್ಲೋಕ - 4)
ಮೂಲಮ್
ದೂರೇಹರಿಕಥಾಃ ಕೇಚಿದ್ದೂರೇಚಾಚ್ಯುತಕೀರ್ತನಾಃ ।
ಸಿಯಃ ಶೂದ್ರಾದಯಶ್ಚೈವ ತೇನುಕಂಪ್ಯಾ ಭವಾದೃಶಾಮ್ ॥
ಅನುವಾದ
ಇಂತಹ ಭಗವಂತನ ಹರಿಕಥಾ ಸತ್ಸಂಗಾದಿಗಳಿಂದ ದೂರವಿರುವ ಜನರೆಲ್ಲರೂ, ಭಗವಂತನ ಸಂಕೀರ್ತನಾದಿಗಳಿಂದ ದೂರವಾದ ಸ್ತ್ರೀ-ಶೂದ್ರಾದಿಗಳು ನಿಮ್ಮಂತಹ ಭಗವತ್ಭಕ್ತರ ಕೃಪಾಪಾತ್ರರಾಗಿದ್ದಾರೆ. ॥4॥
(ಶ್ಲೋಕ - 5)
ಮೂಲಮ್
ವಿಪ್ರೋ ರಾಜನ್ಯವೈಶ್ಯೌ ಚ ಹರೇಃ ಪ್ರಾಪ್ತಾಃ ಪದಾಂತಿಕಮ್ ।
ಶ್ರೌತೇನ ಜನ್ಮನಾಥಾಪಿ ಮುಹ್ಯಂತ್ಯಾಮ್ನಾಯವಾದಿನಃ ॥
ಅನುವಾದ
ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಇವರುಗಳು ದ್ವಿಜಾತಿಗಳಾಗಿದ್ದಾರೆ. ಆದ್ದರಿಂದ ವೇದಾಧ್ಯಯನಾದಿ ಸಂಸ್ಕಾರಗಳಿಂದ ಸುಸಂಪನ್ನರಾದ ಕಾರಣ ಭಗವತ್ಸನ್ನಿಧಾನ ಪಡೆಯಲು ವಿಶೇಷವಾಗಿ ಯೋಗ್ಯತೆ ಇರುವವರು. ಇಂತಹ ಸೌಲಭ್ಯ ಅವರಿಗೆ ದೊರಕಿದರೂ ಕೂಡ ಅವರಲ್ಲಿನ ಕೆಲವರು ಅಜ್ಞಾನಕ್ಕೆ ವಶೀಭೂತರಾಗಿ, ವೇದಗಳಲ್ಲಿ ವರ್ಣಿಸಿದ ಸಕಾಮಕರ್ಮಗಳ ಅನುಷ್ಠಾನ ಮತ್ತು ಅವುಗಳ ಫಲಗಳಲ್ಲಿ ಮೋಹಿತರಾಗಿರುತ್ತಾರೆ. ॥5॥
(ಶ್ಲೋಕ - 6)
ಮೂಲಮ್
ಕರ್ಮಣ್ಯಕೋವಿದಾಃ ಸ್ತಬ್ಧಾ ಮೂರ್ಖಾಃ ಪಂಡಿತಮಾನಿನಃ ।
ವದಂತಿ ಚಾಟುಕಾನ್ಮೂಢಾ ಯಯಾ ಮಾಧ್ವ್ಯಾ ಗಿರೋತ್ಸುಕಾಃ ॥
ಅನುವಾದ
ಅಂತಹ ಜನರು ಕರ್ಮಗಳ ರಹಸ್ಯವನ್ನಾದರೋ ತಿಳಿಯುವುದೇ ಇಲ್ಲ, ಬದಲಿಗೆ ಗರ್ವಿತರೂ ಹಾಗೂ ಮೂರ್ಖರಾಗಿರುತ್ತಾರೆ ಹಾಗೂ ತಮ್ಮನ್ನು ಪಂಡಿತರೆಂದೇ ತಿಳಿದಿರುತ್ತಾರೆ. ಇಂತಹ ಉದ್ಧಟ, ಮೂರ್ಖಜನರು ಹೇಳುವ ಪುಷ್ಪಿತ ಮಧುರವಾಣಿಯನ್ನು ಕೇಳಿ, ಅಜ್ಞಾನಿಗಳು ಮತ್ತರಾಗಿ ಉಬ್ಬಿಹೋಗುತ್ತಾರೆ. ॥6॥
(ಶ್ಲೋಕ - 7)
ಮೂಲಮ್
ರಜಸಾ ಘೋರಸಂಕಲ್ಪಾಃ ಕಾಮುಕಾ ಅಹಿಮನ್ಯವಃ ।
ದಾಂಭಿಕಾ ಮಾನಿನಃ ಪಾಪಾ ವಿಹಸಂತ್ಯಚ್ಯುತಪ್ರಿಯಾನ್ ॥
ಅನುವಾದ
ಇಂತಹ ಜನರು ರಜೋಗುಣದಿಂದ ತುಂಬಿರುತ್ತಾರೆ. ಅವರ ಸಂಕಲ್ಪಗಳೂ ಭಯಾನಕವಾಗಿರುತ್ತವೆ. ಅವರ ಕಾಮನೆಗಳು ಎಂದೂ ಕೊನೆಗೊಳ್ಳುವುದಿಲ್ಲ. ಇವರು ಬಹಳ ಕ್ರೋಧಿಗಳಾಗಿದ್ದು, ದಂಭಾಚಾರದಿಂದ ಕೂಡಿರುತ್ತಾರೆ. ಈ ಉನ್ಮತ್ತ, ಪಾಪಕರ್ಮಿಗಳಾದರೋ ಭಗವಂತನ ಭಕ್ತರ ಉಪಹಾಸವನ್ನೇ ಮಾಡುತ್ತಾರೆ. ॥7॥
(ಶ್ಲೋಕ - 8)
ಮೂಲಮ್
ವದಂತಿ ತೇನ್ಯೋನ್ಯಮುಪಾಸಿತಸಿಯೋ
ಗೃಹೇಷು ಮೈಥುನ್ಯಪರೇಷು ಚಾಶಿಷಃ ।
ಯಜಂತ್ಯಸೃಷ್ಟಾನ್ನವಿಧಾನದಕ್ಷಿಣಂ
ವೃತ್ತ್ಯೆ ಪರಂ ಘ್ನಂತಿ ಪಶೂನತದ್ವಿದಃ ॥
ಅನುವಾದ
ಇಂತಹ ಸ್ತ್ರೀಪರಾಯಣರಾದ ಜನರು ಪರಸ್ಪರ ಮನೆವಾರ್ತೆ ಹಾಗೂ ವ್ಯರ್ಥ ಸಾಂಸಾರಿಕ ಚರ್ಚೆಯಲ್ಲಿ ತಮ್ಮ ಅಮೂಲ್ಯ ಸಮಯವನ್ನು ನಾಶಮಾಡಿಕೊಳ್ಳುತ್ತಾರೆ. ಸ್ತ್ರೀ ಸಹವಾಸದಲ್ಲೇ ಅವರಿಗೆ ಸುಖವೆಲ್ಲವೂ ಸೀಮಿತವಾಗಿರುತ್ತದೆ. ಈ ಅಜ್ಞಾನೀ ಜನರು ಅನ್ನದಾನವಿಲ್ಲದೆ, ದಕ್ಷಿಣೆಯಿಲ್ಲದೆ ಅವಿಧಿಪೂರ್ವಕ ಯಜ್ಞಮಾಡುತ್ತಿರುತ್ತಾರೆ. ತನ್ನ ಜೀವನ ನಿರ್ವಹಣೆಯ ವೃತ್ತಿಯಾಗಿ ಪಶುಗಳನ್ನು ಕೊಂದು ತಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸುತ್ತಾರೆ. ಇಂತಹ ಜನರಿಗೆ ಯಜ್ಞಾನುಷ್ಠಾನದ ಹೆಸರಿನಲ್ಲಿ ಪಶುಹಿಂಸೆಯ ಮೂಲಕ ಗಳಿಸುವ ಪಾಪದ ಮೂಟೆಯ ಅರಿವೂ ಇರುವುದಿಲ್ಲ. ॥8॥
(ಶ್ಲೋಕ - 9)
ಮೂಲಮ್
ಶ್ರಿಯಾ ವಿಭೂತ್ಯಾಭಿಜನೇನ ವಿದ್ಯಯಾ
ತ್ಯಾಗೇನ ರೂಪೇಣ ಬಲೇನ ಕರ್ಮಣಾ ।
ಜಾತಸ್ಮಯೇನಾಂಧಧಿಯಃ ಸಹೇಶ್ವರಾನ್
ಸತೋವಮನ್ಯಂತಿ ಹರಿಪ್ರಿಯಾನ್ ಖಲಾಃ ॥
ಅನುವಾದ
ಇಂತಹ ದುಷ್ಟ ಜನರು ಧನ-ವೈಭವ, ಕುಲೀನತೆ, ವಿದ್ಯೆ, ದಾನ, ಸೌಂದರ್ಯ, ಬಲ, ಕರ್ಮ ಮುಂತಾದವುಗಳಿಂದ ಗರ್ವ, ಅಭಿಮಾನದಲ್ಲಿ ಮುಳುಗಿರುತ್ತಾರೆ. ಅದರಿಂದ ಮದಾಂಧರಾಗಿ ಭಗವಂತನ, ಭಗವಂತನ ಪ್ರಿಯ ಭಕ್ತರ, ಸಂತ-ಮಹಾತ್ಮರ ನಿಂದೆ ಮಾಡುತ್ತಾ ಇರುತ್ತಾರೆ. ॥9॥
(ಶ್ಲೋಕ - 10)
ಮೂಲಮ್
ಸರ್ವೇಷು ಶಶ್ವತ್ತನುಭೃತ್ಸ್ವವಸ್ಥಿತಂ
ಯಥಾ ಖಮಾತ್ಮಾನಮಭೀಷ್ಟಮೀಶ್ವರಮ್ ।
ವೇದೋಪಗೀತಂ ಚ ನ ಶೃಣ್ವತೇಬುಧಾ
ಮನೋರಥಾನಾಂ ಪ್ರವದಂತಿ ವಾರ್ತಯಾ ॥
ಅನುವಾದ
ಆಕಾಶವು ಸಮಾನವಾಗಿ ಸರ್ವತ್ರ ವ್ಯಾಪ್ತವಿರುವಂತೆಯೇ ಪರಮಾತ್ಮನು ಎಲ್ಲ ದೇಹಧಾರಿಗಳ ಒಳ-ಹೊರಗೆ ಎಲ್ಲೆಡೆ ಪರಿಪೂರ್ಣನಾಗಿದ್ದಾನೆ. ವೇದಗಳೂ ಕೂಡ ಇದನ್ನು ಅನೇಕ ಬಾರಿ ವರ್ಣಿಸಿವೆ. ಆದರೆ ಆ ಅಜ್ಞಾನಿಗಳು ಇವೆಲ್ಲ ಮಾತುಗಳನ್ನು ಕೇಳುವುದೇ ಇಲ್ಲ. ಇದಕ್ಕೆ ವಿಪರೀತವಾಗಿ ಅನೇಕ ವಿಧದ ಮನೋರಥಗಳ ವ್ಯರ್ಥಮಾತುಗಳನ್ನು ತಮ್ಮ-ತಮ್ಮಲ್ಲಿ ಆಡುತ್ತಾ ಕೇಳುತ್ತಾ ಇರುತ್ತಾರೆ. ॥10॥
(ಶ್ಲೋಕ - 11)
ಮೂಲಮ್
ಲೋಕೇ ವ್ಯವಾಯಾಮಿಷಮದ್ಯಸೇವಾ
ನಿತ್ಯಾಸ್ತು ಜಂತೋರ್ನ ಹಿ ತತ್ರ ಚೋದನಾ ।
ವ್ಯವಸ್ಥಿತಿಸ್ತೇಷು ವಿವಾಹಯಜ್ಞ-
ಸುರಾಗ್ರಹೈರಾಸು ನಿವೃತ್ತಿರಿಷ್ಟಾ ॥
ಅನುವಾದ
ಜೀವಿಗಳಲ್ಲಿ ಮೈಥುನ, ಮಾಂಸ, ಮದ್ಯ ಇವುಗಳ ಸೇವನೆಯ ಕಡೆಗೆ ಸ್ವಾಭಾವಿಕವಾಗಿಯೇ ಪ್ರವೃತ್ತಿ ಇರುತ್ತದೆ. ಇವು ಮೂರೂ ಪತನವಾಗಿಸುವಂತಹುದು. ವಿವಾಹದ ಬಳಿಕ ಋತುಕಾಲದಲ್ಲಿ ಸ್ತ್ರೀ ಸಹವಾಸ ಮತ್ತು ಸೌತ್ರಾಮಣಿ ಯಜ್ಞದಲ್ಲಿ ಸುರೆಯನ್ನು ಕೇವಲ ಮೂಸಿಬಿಡುವ ವಿಧಾನವನ್ನು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಇವೆಲ್ಲದರಲ್ಲಿ ಈ ವಸ್ತುಗಳಿಂದ ದೂರ ಉಳಿಯಲೆಂದೇ ಶಾಸ್ತ್ರಗಳ ಅಭಿಪ್ರಾಯವಾಗಿದೆ. ಜನರ ಲೌಲ್ಯ ಪ್ರವೃತ್ತಿಯನ್ನು ಮರ್ಯಾದಿತವಾಗಿ ಇಡಲೆಂದೇ ಶಾಸ್ತ್ರಗಳು ಅವುಗಳ ಸೇವನೆಗೆ ಒಂದು ಸೀಮೆಯನ್ನು ವಿಧಿಸಿವೆ. ॥11॥
ಮೂಲಮ್
(ಶ್ಲೋಕ - 12)
ಧನಂ ಚ ಧರ್ಮೈಕಲಂ ಯತೋ ವೈ
ಜ್ಞಾನಂ ಸವಿಜ್ಞಾನಮನುಪ್ರಶಾಂತಿ ।
ಗೃಹೇಷು ಯುಂಜಂತಿ ಕಲೇವರಸ್ಯ
ಮೃತ್ಯುಂ ನ ಪಶ್ಯಂತಿ ದುರಂತವೀರ್ಯಮ್ ॥
ಅನುವಾದ
ಧನವನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸುವುದೇ ಎಲ್ಲಕ್ಕಿಂತ ಒಳ್ಳೆಯ ಉಪಾಯವಾಗಿದೆ. ಏಕೆಂದರೆ, ಧರ್ಮದಿಂದ ಜ್ಞಾನ ಪ್ರಾಪ್ತವಾಗುತ್ತದೆ. ಜ್ಞಾನದಿಂದ ಪರಮಾತ್ಮನ ಪ್ರಾಪ್ತಿ ಹಾಗೂ ಪರಮ ಶಾಂತಿ ಪ್ರಾಪ್ತವಾಗುತ್ತದೆ. ಆದರೆ ಧನವನ್ನು ಕೇವಲ ತನ್ನ ಮನೆಗಾಗಿ ಹಾಗೂ ಸಂಸಾರಕ್ಕಾಗಿ ಖರ್ಚುಮಾಡುವ ಜನರು ಈ ಶರೀರವನ್ನು ನಾಶಗೊಳಿಸುವಂತಹ ಕರಾಳ ಕಾಲವನ್ನು ನೋಡುವುದಿಲ್ಲ. ॥12॥
(ಶ್ಲೋಕ - 13)
ಮೂಲಮ್
ಯದ್ ಘ್ರಾಣಭಕ್ಷೋ ವಿಹಿತಃ ಸುರಾಯಾ-
ಸ್ತಥಾ ಪಶೋರಾಲಭನಂ ನ ಹಿಂಸಾ ।
ಏವಂ ವ್ಯವಾಯಃ ಪ್ರಜಯಾ ನ ರತ್ಯಾ
ಇಮಂ ವಿಶುದ್ಧಂ ನ ವಿದುಃ ಸ್ವಧರ್ಮಮ್ ॥
ಅನುವಾದ
ಸೌತ್ರಾಮಣಿ ಯಜ್ಞದಲ್ಲಿ ಸುರೆಯನ್ನು ಆಘ್ರಾಣಿಸುವ ವಿಧಾನ ಮಾತ್ರ ಹೇಳಲಾಗಿದೆ. (ಅದನ್ನು ಕುಡಿಯಲು ಇಲ್ಲ) ಯಜ್ಞದಲ್ಲಿ ಪಶುವನ್ನು ಸ್ಪರ್ಶಿಸುವ ವಿಧಾನ ಮಾತ್ರವಿದೆ, (ಅದನ್ನು ಕೊಲ್ಲುವುದಕ್ಕಾಗಿ ಇಲ್ಲ) ಹಾಗೆಯೇ ಮೈಥುನವೂ ಸಂತತಿ ಪರಂಪರೆಯನ್ನು ಬೆಳೆಸಲಿಕ್ಕಾಗಿಯೇ ವಿಧಿಸಿದೆ; ರತಿಸುಖಕ್ಕಾಗಿ ಅಲ್ಲ. ಇಂತಹ ವಿಶುದ್ಧ ಧರ್ಮವನ್ನು ಅಜ್ಞಾನಿಗಳು ತಿಳಿಯುವುದಿಲ್ಲ. ॥13॥
ಮೂಲಮ್
(ಶ್ಲೋಕ - 14)
ಯೇ ತ್ವನೇವಂವಿದೋಸಂತಃ ಸ್ತಬ್ಧಾಃ ಸದಭಿಮಾನಿನಃ ।
ಪಶೂಂದ್ರುಹ್ಯಂತಿ ವಿಸ್ರಬ್ಧಾಃ ಪ್ರೇತ್ಯ ಖಾದಂತಿ ತೇ ಚ ತಾನ್ ॥
ಅನುವಾದ
ಇಂತಹ ವಿಶುದ್ಧ ಧರ್ಮವನ್ನು ತಿಳಿಯದ ಗರ್ವಿಷ್ಠರಾದ ಜನರು ತಮ್ಮದೇ ಮಾತಿನಲ್ಲಿ ಹಟತೊಟ್ಟು, ತಮ್ಮದೇ ಮಾತಿನಲ್ಲಿ ಶ್ರದ್ಧೆಯಿರಿಸಿಕೊಂಡು ಮೂಕಪಶುಗಳ ಹತ್ಯೆ ಮಾಡುತ್ತಿರುತ್ತಾರೆ. ಸತ್ತಬಳಿಕ ಆ ಪಶುಗಳೇ ಈ ಕೊಲ್ಲುವವರನ್ನು ತಿಂದುಬಿಡುತ್ತವೆ.॥14॥
(ಶ್ಲೋಕ - 15)
ಮೂಲಮ್
ದ್ವಿಷಂತಃ ಪರಕಾಯೇಷು ಸ್ವಾತ್ಮಾನಂ ಹರಿಮೀಶ್ವರಮ್ ।
ಮೃತಕೇ ಸಾನುಬಂಧೇಸ್ಮಿನ್ ಬದ್ಧಸ್ನೇಹಾಃ ಪತಂತ್ಯಧಃ ॥
ಅನುವಾದ
ಇಂತಹ ಜನರು ಈ ಮರಣಧರ್ಮಿ ಶರೀರದಲ್ಲೇ ಹಾಗೂ ತಮ್ಮ ಪರಿವಾರದಲ್ಲೇ ತಮ್ಮ ಮಮತೆಯನ್ನು ಇಟ್ಟುಕೊಳ್ಳುತ್ತಾರೆ. ಅವರು ಬೇರೆ ಜನರೊಂದಿಗೆ ದ್ವೇಷಮಾಡುತ್ತಾರೆ. ಭಗವಾನ್ ಶ್ರೀಹರಿಯೇ ಎಲ್ಲರ ಆತ್ಮಾ ಆಗಿದ್ದಾನೆ, ಈ ಮಾತನ್ನು ಅವರು ಯೋಚಿಸುವುದೇ ಇಲ್ಲ.॥15॥
(ಶ್ಲೋಕ - 16)
ಮೂಲಮ್
ಯೇ ಕೈವಲ್ಯಮಸಂಪ್ರಾಪ್ತಾ ಯೇ ಚಾತೀತಾಶ್ಚ ಮೂಢತಾಮ್ ।
ತ್ರೈವರ್ಗಿಕಾ ಹ್ಯಕ್ಷಣಿಕಾ ಆತ್ಮಾನಂ ಘಾತಯಂತಿ ತೇ ॥
ಅನುವಾದ
ಇಂತಹ ಮೂರ್ಖರಿಗೆ ಮೋಕ್ಷದ ಪ್ರಾಪ್ತಿಯಾದರೋ ದೂರವುಳಿಯಿತು, ಅವರು ಮೂರ್ಖತೆಯ ಸೀಮೆಯನ್ನು ದಾಟಿದ ಮಹಾಮೂರ್ಖರು, ಅರ್ಥಾತ್ ವಜ್ರಮೂಢರು. ಈ ಜನರು ವೇದವಾದರೂಪೀ ಕ್ಷಣ ಭಂಗುರವಾದ, ನಾಶವುಳ್ಳ ಧರ್ಮ, ಅರ್ಥ, ಕಾಮ ಈ ಮೂರನ್ನೇ ಪುರುಷಾರ್ಥಗಳೆಂದು ಭಾವಿಸುತ್ತಾರೆ. ಈ ವಿಧವಾಗಿ ಕಾಮ್ಯಕರ್ಮಗಳ ಸುಳಿಯಲ್ಲಿ ಸಿಕ್ಕಿಹಾಕಿಕೊಂಡ ಜನರು ತಮ್ಮ ಆತ್ಮನನ್ನೇ ಕೊಲ್ಲುವವರಾಗಿದ್ದಾರೆ.॥16॥
(ಶ್ಲೋಕ - 17)
ಮೂಲಮ್
ಏತ ಆತ್ಮಹನೋಶಾಂತಾ ಅಜ್ಞಾನೇ ಜ್ಞಾನಮಾನಿನಃ ।
ಸೀದಂತ್ಯಕೃತಕೃತ್ಯಾ ವೈ ಕಾಲಧ್ವಸ್ತಮನೋರಥಾಃ ॥
ಅನುವಾದ
ಈ ಪ್ರಕಾರ ಆತ್ಮಘಾತಿ ಜನರಿಗೆ ಎಂದೂ ಶಾಂತಿ ದೊರೆಯುವುದಿಲ್ಲ. ಇವರು ಅಜ್ಞಾನವನ್ನೇ ಜ್ಞಾನವೆಂದು ತಿಳಿದಿರುವರು. ಮನುಷ್ಯ ಶರೀರವು ಪರಮಾತ್ಮನ ಪ್ರಾಪ್ತಿಗಾಗಿಯೇ ದೊರೆತಿದೆ. ಆದರೆ ಇವರು ಇಂತಹ ಅಮೂಲ್ಯ ಜೀವನವನ್ನು ಪಡೆದುಕೊಂಡಿದ್ದರೂ ಪರಮಲಾಭದಿಂದ ವಂಚಿತರೇ ಆಗಿರುತ್ತಾರೆ ಹಾಗೂ ಕಷ್ಟಗಳನ್ನು ಭೋಗಿಸುತ್ತಲೇ ಇರುತ್ತಾರೆ. ಅವರ ಮನೋರಥಗಳು ಎಂದೂ ಪೂರ್ಣಗೊಳ್ಳುವುದಿಲ್ಲ.॥17॥
(ಶ್ಲೋಕ - 18)
ಮೂಲಮ್
ಹಿತ್ವಾತ್ಯಾಯಾಸರಚಿತಾ ಗೃಹಾಪತ್ಯಸುಹೃಚ್ಛ್ರಿಯಃ ।
ತಮೋ ವಿಶಂತ್ಯನಿಚ್ಛಂತೋ ವಾಸುದೇವಪರಾಙ್ಮುಖಾಃ ॥
ಅನುವಾದ
ಇಂತಹ ಜನರು ಭಗವಂತನ ಭಕ್ತಿಯಿಂದ ಪೂರ್ಣವಾಗಿ ವಿಮುಖರಾಗಿರುತ್ತಾರೆ. ಇವರು ಬಹಳ ಕಷ್ಟಪಟ್ಟು, ಭಾರೀ ಪರಿಶ್ರಮದಿಂದ ಗಳಿಸಿದ ಮನೆ, ಪುತ್ರ, ಸ್ನೇಹಿತರು, ಧನ-ಸಂಪತ್ತು ಇವನ್ನು ಬಯಸದೆಯೇ ಬಿಟ್ಟುಹೋಗಬೇಕಾಗುತ್ತದೆ ಹಾಗೂ ನರಕಭಾಜನರಾಗಬೇಕಾಗುತ್ತದೆ. (ಈ ಪ್ರಕಾರ ಭಗವಂತನ ಭಜನೆ ಮಾಡದವರ ಗತಿಯ ಕುರಿತು ನೀನು ಕೇಳಿದ್ದನ್ನು ನಾನು ಹೇಳಿರುವೆ.) ॥18॥
(ಶ್ಲೋಕ - 19)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಕಸ್ಮಿನ್ಕಾಲೇ ಸ ಭಗವಾನ್ ಕಿಂ ವರ್ಣಃ ಕೀದೃಶೋ ನೃಭಿಃ ।
ನಾಮ್ನಾ ವಾ ಕೇನ ವಿಧಿನಾ ಪೂಜ್ಯತೇ ತದಿಹೋಚ್ಯತಾಮ್ ॥
ಅನುವಾದ
ರಾಜಾ ನಿಮಿಯು ಕೇಳಿದನು — ಯೋಗೀಶ್ವರರೇ! ಭಗವಂತನು ಯಾವಾಗ ಯಾವ ಬಣ್ಣವನ್ನು ಹೆಸರನ್ನು, ಆಕಾರವನ್ನು ಸ್ವೀಕರಿಸುತ್ತಾನೆ? ಮನುಷ್ಯರು ಯಾವ ಹೆಸರುಗಳಿಂದ ಹಾಗೂ ಯಾವ ವಿಧಿಯಿಂದ ಅವನನ್ನು ಉಪಾಸಿಸುತ್ತಾರೆ? ದಯವಿಟ್ಟು ನೀವು ತಿಳಿಸುವವರಾಗಿರಿ. ॥19॥
(ಶ್ಲೋಕ - 20)
ಮೂಲಮ್ (ವಾಚನಮ್)
ಕರಭಾಜನ ಉವಾಚ
ಮೂಲಮ್
ಕೃತಂ ತ್ರೇತಾ ದ್ವಾಪರಂ ಚ ಕಲಿರಿತ್ಯೇಷು ಕೇಶವಃ ।
ನಾನಾವರ್ಣಾಭಿಧಾಕಾರೋ ನಾನೈವ ವಿಧಿನೇಜ್ಯತೇ ॥
ಅನುವಾದ
ಒಂಭತ್ತನೆಯವರಾದ ಕರಭಾಜನ ಯೋಗೀಶ್ವರರು ಹೇಳುತ್ತಾರೆ — ರಾಜನೇ! ಕೃತ, ತ್ರೇತಾ, ದ್ವಾಪರ, ಕಲಿ ಈ ನಾಲ್ಕೂ ಯುಗಗಳಲ್ಲಿ ಭಗವಾನ್ ಕೇಶವನ ಅನೇಕ ಬಣ್ಣ, ಹೆಸರು, ಆಕಾರಗಳಿರುತ್ತವೆ ಹಾಗೂ ಅನೇಕ ವಿಧದಿಂದ ಅವನ ಪೂಜೆ ಮಾಡಲಾಗುತ್ತದೆ. ॥20॥
(ಶ್ಲೋಕ - 21)
ಮೂಲಮ್
ಕೃತೇ ಶುಕ್ಲಶ್ಚತುರ್ಬಾಹುರ್ಜಟಿಲೋ ವಲ್ಕಲಾಂಬರಃ ।
ಕೃಷ್ಣಾಜಿನೋಪವೀತಾಕ್ಷಾನ್ ಬಿಭ್ರದ್ ದಂಡಕಮಂಡಲೂ ॥
ಅನುವಾದ
ಕೃತಯುಗದಲ್ಲಿ ಭಗವಂತನ ಶ್ರೀವಿಗ್ರಹದ ಬಣ್ಣ ಶ್ವೇತವಾಗಿರುತ್ತದೆ. ಅವನಿಗೆ ನಾಲ್ಕು ಭುಜಗಳಿದ್ದು ತಲೆಯಮೇಲೆ ಜಟೆ ಇರುತ್ತದೆ. ಅವನು ವಲ್ಕಲವನ್ನು ಧರಿಸಿರುತ್ತಾನೆ. ಕೃಷ್ಣಮೃಗ ಚರ್ಮ, ಯಜ್ಞೋಪವೀತ, ರುದ್ರಾಕ್ಷಮಾಲೆ, ದಂಡ, ಕಮಂಡಲು ಧರಿಸಿರುತ್ತಾನೆ. ॥21॥
(ಶ್ಲೋಕ - 22)
ಮೂಲಮ್
ಮನುಷ್ಯಾಸ್ತು ತದಾ ಶಾಂತಾ ನಿರ್ವೈರಾಃ ಸುಹೃದಃ ಸಮಾಃ ।
ಯಜಂತಿ ತಪಸಾ ದೇವಂ ಶಮೇನ ಚ ದಮೇನ ಚ ॥
ಅನುವಾದ
ಕೃತಯುಗದಲ್ಲಿ ಮನುಷ್ಯರು ತುಂಬಾ ಶಾಂತರೂ, ಪರಸ್ಪರ ವೈರರಹಿತರೂ, ಎಲ್ಲರ ಹಿತೈಷಿಗಳೂ, ಸಮದರ್ಶಿಗಳೂ ಆಗಿರುತ್ತಾರೆ. ಅವರು ಇಂದ್ರಿಯ-ಮನವನ್ನು ವಶದಲ್ಲಿರಿಸಿಕೊಂಡು ಧ್ಯಾನ ರೂಪೀ ತಪಸ್ಸಿನಿಂದ ಪರಮಾತ್ಮನನ್ನು ಆರಾಸುತ್ತಾರೆ. ॥22॥
(ಶ್ಲೋಕ - 23)
ಮೂಲಮ್
ಹಂಸಃಸುಪರ್ಣೋ ವೈಕುಂಠೋ 23ಧರ್ಮೋ ಯೋಗೇಶ್ವರೋಮಲಃ ।
ಈಶ್ವರಃ ಪುರುಷೋವ್ಯಕ್ತಃ ಪರಮಾತ್ಮೇತಿ ಗೀಯತೇ ॥
ಅನುವಾದ
ಅವರು ಪರಮಾತ್ಮನನ್ನು ಹಂಸ, ಸುಪರ್ಣ, ವೈಕುಂಠ, ಧರ್ಮ, ಯೋಗೇಶ್ವರ, ಅಮಲ, ಈಶ್ವರ, ಪುರುಷ, ಅವ್ಯಕ್ತ ಈ ಹೆಸರುಗಳಿಂದ ಭಗವಂತನ ಗುಣ-ಲೀಲೆಗಳನ್ನು ಕೊಂಡಾಡುತ್ತಾರೆ. ॥23॥
(ಶ್ಲೋಕ - 24)
ಮೂಲಮ್
ತ್ರೇತಾಯಾಂ ರಕ್ತವರ್ಣೋಸೌ ಚತುರ್ಬಾಹುಸಿಮೇಖಲಃ ।
ಹಿರಣ್ಯಕೇಶಸಯ್ಯಾತ್ಮಾ ಸ್ರುಕ್ಸ್ರುವಾದ್ಯುಪಲಕ್ಷಣಃ ॥
ಅನುವಾದ
ರಾಜನೇ! ತ್ರೇತಾಯುಗದಲ್ಲಿ ಭಗವಂತನ ಶ್ರೀವಿಗ್ರಹದ ಬಣ್ಣ ಕೆಂಪಾಗಿರುತ್ತದೆ. ನಾಲ್ಕು ಭುಜಗಳಿದ್ದು, ಕಟಿಭಾಗದಲ್ಲಿ ಮೂರು ಮೇಖಲೆಗಳಿರುತ್ತವೆ. ಅವನ ಕೇಶಗಳು ಭಂಗಾರ ವರ್ಣದ್ದಾಗಿರುತ್ತವೆ. ಅವನು ವೇದ ಪ್ರತಿಪಾದಿತ ಯಜ್ಞದ ರೂಪದಲ್ಲಿದ್ದು ಸ್ರುಕ್, ಸ್ರುವೇ ಮುಂತಾದ ಯಜ್ಞಪಾತ್ರೆಗಳನ್ನು ಧರಿಸಿರುತ್ತಾನೆ. ॥24॥
(ಶ್ಲೋಕ - 25)
ಮೂಲಮ್
ತಂ ತದಾ ಮನುಜಾ ದೇವಂ ಸರ್ವದೇವಮಯಂ ಹರಿಮ್ ।
ಯಜಂತಿ ವಿದ್ಯಯಾ ತ್ರಯ್ಯಾ ಧರ್ಮಿಷ್ಠಾ ಬ್ರಹ್ಮವಾದಿನಃ ॥
ಅನುವಾದ
ಈ ಯುಗದಲ್ಲಿ ಮನುಷ್ಯರು ತಮ್ಮ ಧರ್ಮದಲ್ಲಿ ನಿಷ್ಠೆಯುಳ್ಳವರಾಗಿದ್ದು, ವೇದಗಳ ಅಧ್ಯಯನ, ಅಧ್ಯಾಪನೆಯಲ್ಲಿ ತುಂಬಾ ಪ್ರವೀಣರಾಗಿರುತ್ತಾರೆ. ಅವರು ಋಗ್ವೇದ, ಯಜುರ್ವೇದ, ಸಾಮವೇದ ರೂಪೀ ವೇದತ್ರಯಿಯ ಮೂಲಕ ಸರ್ವದೇವ ಸ್ವರೂಪ ದೇವಾಧಿದೇವ ಭಗವಾನ್ ಶ್ರೀಹರಿಯನ್ನು ಆರಾಧಿಸುತ್ತಾರೆ. ॥25॥
(ಶ್ಲೋಕ - 26)
ಮೂಲಮ್
ವಿಷ್ಣುರ್ಯಜ್ಞಃ ಪೃಶ್ನಿಗರ್ಭಃ ಸರ್ವದೇವ ಉರುಕ್ರಮಃ ।
ವೃಷಾಕಪಿರ್ಜಯಂತಶ್ಚ ಉರುಗಾಯ ಇತೀರ್ಯತೇ ॥
ಅನುವಾದ
ಈ ತ್ರೇತಾಯುಗದಲ್ಲಿ ಹೆಚ್ಚಿನ ಜನರು ಭಗವಂತನನ್ನು ವಿಷ್ಣು, ಯಜ್ಞ, ಪ್ರಶ್ನಿಗರ್ಭ, ಸರ್ವದೇವ, ಉರುಕ್ರಮ, ವೃಷಾಕಪಿ, ಜಯಂತ, ಉರುಗಾಯ ಮುಂತಾದ ನಾಮಗಳಿಂದ ಕರೆದು, ಅವನ ಗುಣ-ಲೀಲಾದಿಗಳನ್ನು ಕೀರ್ತಿಸುತ್ತಾರೆ. ॥26॥
(ಶ್ಲೋಕ - 27)
ಮೂಲಮ್
ದ್ವಾಪರೇ ಭಗವಾನ್ ಶ್ಯಾಮಃ ಪೀತವಾಸಾ ನಿಜಾಯುಧಃ ।
ಶ್ರೀವತ್ಸಾದಿಭಿರಂಕೈಶ್ಚ ಲಕ್ಷಣೈರುಪಲಕ್ಷಿತಃ ॥
ಅನುವಾದ
ರಾಜನೇ! ದ್ವಾಪರ ಯುಗದಲ್ಲಿ ಭಗವಂತನ ಶ್ರೀವಿಗ್ರಹದ ಬಣ್ಣ ಶ್ಯಾಮಲವಾಗಿರುತ್ತದೆ. ಅವನು ಪೀತಾಂಬರ, ಶಂಖ, ಚಕ್ರ, ಗದಾ, ಪದ್ಮ ಮುಂತಾದ ಆಯುಧಗಳನ್ನು ಧರಿಸುತ್ತಾನೆ. ವಕ್ಷಸ್ಥಳದಲ್ಲಿ ಶ್ರೀವತ್ಸದ ಚಿಹ್ನೆ, ಭೃಗುಲಾಂಛನ, ಕೌಸ್ತುಭಮಣಿ ಮುಂತಾದ ಲಕ್ಷಣಗಳಿಂದ ಲಕ್ಷಿತನಾಗಿರುತ್ತಾನೆ. ॥27॥
(ಶ್ಲೋಕ - 28)
ಮೂಲಮ್
ತಂ ತದಾ ಪುರುಷಂ ಮರ್ತ್ಯಾ ಮಹಾರಾಜೋಪಲಕ್ಷಣಮ್ ।
ಯಜಂತಿ ವೇದತಂತ್ರಾಭ್ಯಾಂ ಪರಂ ಜಿಜ್ಞಾಸವೋ ನೃಪ ॥
ಅನುವಾದ
ಆಗ ಜಿಜ್ಞಾಸು ಜನರು ಮಹಾರಾಜರ ಚಿಹ್ನೆಗಳಾದ ಛತ್ರ, ಚಾಮರಾದಿಗಳಿಂದ ಯುಕ್ತ ಪರಮಪುರುಷ ಭಗವಂತನನ್ನು ವೈದಿಕ, ಆಗಮವಿಧಿಗಳಿಂದ ಆರಾಧಿಸುತ್ತಾರೆ. ॥28॥
(ಶ್ಲೋಕ - 29)
ಮೂಲಮ್
ನಮಸ್ತೇ ವಾಸುದೇವಾಯ ನಮಃ ಸಂಕರ್ಷಣಾಯ ಚ ।
ಪ್ರದ್ಯುಮ್ನಾಯಾನಿರುದ್ಧಾಯ ತುಭ್ಯಂ ಭಗವತೇ ನಮಃ ॥
(ಶ್ಲೋಕ - 30)
ಮೂಲಮ್
ನಾರಾಯಣಾಯ ಋಷಯೇ ಪುರುಷಾಯ ಮಹಾತ್ಮನೇ ।
ವಿಶ್ವೇಶ್ವರಾಯ ವಿಶ್ವಾಯ ಸರ್ವಭೂತಾತ್ಮನೇ ನಮಃ ॥
ಅನುವಾದ
ಅವರು ಭಗವಂತನನ್ನು ಈ ವಿಧವಾಗಿ ಸ್ತುತಿಸುತ್ತಾರೆ ‘‘ಹೇ ಜ್ಞಾನಸ್ವರೂಪ ಭಗವಾನ್ ವಾಸುದೇವಾ! ಕ್ರಿಯಾಶಕ್ತಿ ರೂಪೀ ಸಂಕರ್ಷಣಾ! ನಾವು ನಿನಗೆ ಪದೇ-ಪದೇ ನಮಸ್ಕರಿಸುತ್ತೇವೆ. ಭಗವಾನ್ ಪ್ರದ್ಯುಮ್ನ ಮತ್ತು ಅನಿರುದ್ಧ ರೂಪದಲ್ಲಿರುವ ನಿನಗೆ ನಾವು ವಂದಿಸುತ್ತೇವೆ. ನಾರಾಯಣ ಋಷಿಯೇ! ಮಹಾತ್ಮಾ ನರನೇ! ವಿಶ್ವೇಶ್ವರ, ವಿಶ್ವರೂಪೀ, ಭಗವಾನ್ ಸರ್ವಭೂತಾತ್ಮಾ! ನಾವು ನಮಸ್ಕರಿಸುತ್ತೇವೆ. ॥29-30॥
(ಶ್ಲೋಕ - 31)
ಮೂಲಮ್
ಇತಿ ದ್ವಾಪರ ಉರ್ವೀಶ ಸ್ತುವಂತಿ ಜಗದೀಶ್ವರಮ್ ।
ನಾನಾತಂತ್ರ ವಿಧಾನೇನ ಕಲಾವಪಿ ಯಥಾ ಶೃಣು ॥
ಅನುವಾದ
ರಾಜನೇ! ದ್ವಾಪರ ಯುಗದಲ್ಲಿ ಜನರು ಈ ಪ್ರಕಾರ ಜಗದೀಶ್ವರ ಭಗವಂತನನ್ನು ಸ್ತುತಿಸು ತ್ತಾರೆ. ಹೀಗೆಯೇ ಕಲಿಯುಗದಲ್ಲಿಯೂ ಅನೇಕ ಆಗ ಮೋಕ್ತ ರೀತಿಯಿಂದ ಭಗವಂತನನ್ನು ಹೇಗೆ ಪೂಜಿಸು ತ್ತಾರೋ ಅದರ ವರ್ಣನೆಯನ್ನು ಕೇಳು. ॥31॥
(ಶ್ಲೋಕ - 32)
ಮೂಲಮ್
ಕೃಷ್ಣವರ್ಣಂ ತ್ವಿಷಾಕೃಷ್ಣಂ ಸಾಂಗೋಪಾಂಗಾಸ ಪಾರ್ಷದಮ್ ।
ಯಜ್ಞೈಃ ಸಂಕೀರ್ತನಪ್ರಾಯೈರ್ಯಜಂತಿ ಹಿ ಸುಮೇಧಸಃ ॥
ಅನುವಾದ
ಕಲಿಯುಗದಲ್ಲಿ ಭಗವಂತನ ಬಣ್ಣವಾದರೋ ಕೃಷ್ಣವಾಗಿರುತ್ತದೆ, ಆದರೆ ಆ ಕೃಷ್ಣವರ್ಣವು ಇಂದ್ರನೀಲಕಾಂತಿಯಂತೆ ಉಜ್ವಲವಾಗಿರುತ್ತದೆ. ಅರ್ಥಾತ್ ಬಹಳ ಮನೋಹರ ರೂಪ ಅವನದಾಗಿರುತ್ತದೆ. ಎಲ್ಲರನ್ನು ತನ್ನತ್ತ ಸೆಳೆದುಕೊಂಡು ಆನಂದಿತರನ್ನಾಗಿಸುತ್ತಾನೆ. ಅವನು ಹೃದಯಾದಿ ಅಂಗ, ಕೌಸ್ತುಭಾದಿ ಉಪಾಂಗಗಳಿಂದಲೂ, ಸುದರ್ಶನಾದಿ ಅಸ್ತ್ರ, ಸುನಂದಾದಿ ಪಾರ್ಷದರಿಂದಲೂ ಕೂಡಿಕೊಂಡಿರುತ್ತಾನೆ. ಈ ಯುಗದಲ್ಲಿ ಶ್ರೇಷ್ಠ ಬುದ್ಧಿ ಸಂಪನ್ನರಾದ ಜನರು ಅವನ ನಾಮ, ಗುಣ, ಲೀಲೆ ಮುಂತಾದವುಗಳು ಪ್ರಧಾನವಿರುವ ಸಂಕೀರ್ತನ ಯಜ್ಞದ ಮೂಲಕ ಅವನನ್ನು ಆರಾಧಿಸುತ್ತಾರೆ. ॥32॥
(ಶ್ಲೋಕ - 33)
ಮೂಲಮ್
ಧ್ಯೇಯಂ ಸದಾ ಪರಿಭವಘ್ನಮಭೀಷ್ಟದೋಹಂ
ತೀರ್ಥಾಸ್ಪದಂ ಶಿವವಿರಿಂಚಿನುತಂ ಶರಣ್ಯಮ್ ।
ಭೃತ್ಯಾರ್ತಿಹಂ ಪ್ರಣತಪಾಲ ಭವಾಬ್ಧಿಪೋತಂ
ವಂದೇ ಮಹಾಪುರುಷ ತೇ ಚರಣಾರವಿಂದಮ್ ॥
ಅನುವಾದ
ಅವರು ಈ ವಿಧವಾಗಿ ಭಗವಂತನನ್ನು ಸ್ತುತಿಸುತ್ತಾರೆ ಓ ಶರಣಾಗತವತ್ಸಲ ಪ್ರಭೋ! ಮಹಾಪುರುಷನೇ! ನಿನ್ನ ಚರಣಾರವಿಂದಗಳಲ್ಲಿ ಪದೇ-ಪದೇ ನಾವು ನಮಸ್ಕರಿಸುತ್ತೇವೆ. ನಿನ್ನ ಚರಣ ಕಮಲಗಳು ಸದಾಕಾಲ ಧ್ಯಾನಿಸಲು ಯೋಗ್ಯವಾಗಿವೆ. ಅವು ಧ್ಯಾನ ಮಾಡುವವರ ಎಲ್ಲ ಪ್ರಕಾರದ ಸಂಕಟಗಳನ್ನು ಇಲ್ಲವಾಗಿಸುವಂತಹುಗಳು. ಭಕ್ತರಿಗೆ ಅಭೀಷ್ಟಪ್ರದವಾಗಿವೆ. ತೀರ್ಥಸ್ವರೂಪವಾಗಿವೆ. ಶಿವ, ಬ್ರಹ್ಮಾದಿ ದೇವತೆಗಳು ಅನವರತ ಇವನನ್ನು ವಂದಿಸುತ್ತಿರುತ್ತಾರೆ. ಶರಣಾಗಲು ಯೋಗ್ಯವಾಗಿದ್ದು, ಭಕ್ತರ ಎಲ್ಲ ವಿಘ್ನ-ಬಾಧೆಗಳನ್ನು ಕಳೆಯುವಂತಹವುಗಳು. ಸಂಸಾರಸಾಗರವನ್ನು ದಾಟಿ ಹೋಗಲು ದೋಣಿಯಂತಿವೆ. ಇಂತಹ ನಿನ್ನ ಚರಣಕಮಲಗಳಿಗೆ ಪುನಃ-ಪುನಃ ವಂದಿಸುತ್ತೇವೆ. ॥33॥
(ಶ್ಲೋಕ - 34)
ಮೂಲಮ್
ತ್ಯಕ್ತ್ವಾ ಸುದುಸ್ತ್ಯಜಸುರೇಪ್ಸಿತರಾಜ್ಯಲಕ್ಷ್ಮೀಂ
ಧರ್ಮಿಷ್ಠ ಆರ್ಯವಚಸಾ ಯದಗಾದರಣ್ಯಮ್ ।
ಮಾಯಾಮೃಗಂ ದಯಿತಯೇಪ್ಸಿತಮನ್ವಧಾವದ್
ವಂದೇ ಮಹಾಪುರುಷ ತೇ ಚರಣಾರವಿಂದಮ್ ॥
ಅನುವಾದ
ಓ ಧರ್ಮಪಾಲಕಾ! ಮಹಾಪುರುಷನೇ! ನಾವು ನಿನ್ನ ಚರಣಕಮಲಗಳಲ್ಲಿ ಅನಂತ ಪ್ರಣಾಮಗಳನ್ನು ಮಾಡುತ್ತೇವೆ. ದೇವತೆಗಳೂ ಕೂಡ ಆಶಿಸುತ್ತಿರುವ ಅಯೋಧ್ಯೆಯ ರಾಜ್ಯಲಕ್ಷ್ಮಿಯನ್ನು ತ್ಯಾಗಮಾಡುವುದು ಬೇರೆಯವರಿಗೆ ತುಂಬಾ ಕಠಿಣವೇ ಆಗಿದೆ. ಆದರೆ ಪಿತೃವಾಕ್ಯ ಪರಿಪಾಲನೆಗಾಗಿ ಅದನ್ನು ಬಿಟ್ಟು ವನಕ್ಕೆ ನಡೆದ ಚರಣಕಮಲಗಳಿಗೆ, ಪ್ರಿಯ ಪತ್ನೀ ಸೀತೆಗಾಗಿ ಮಾಯಾಮೃಗದ ಹಿಂದೆ ಓಡಿದ ಚರಣಾರವಿಂದಗಳಿಗೆ ನಾವು ಕೋಟಿ-ಕೋಟಿ ಪ್ರಣಾಮ ಸಲ್ಲಿಸುತ್ತೇವೆ. ॥34॥
(ಶ್ಲೋಕ - 35)
ಮೂಲಮ್
ಏವಂ ಯುಗಾನುರೂಪಾಭ್ಯಾಂ ಭಗವಾನ್ ಯುಗವರ್ತಿಭಿಃ ।
ಮನುಜೈರಿಜ್ಯತೇ ರಾಜನ್ ಶ್ರೇಯಸಾಮೀಶ್ವರೋ ಹರಿಃ ॥
ಅನುವಾದ
ರಾಜನೇ! ಈ ವಿಧವಾಗಿ ವಿಭಿನ್ನ ಯುಗದ ಜನರು ತಮ್ಮ-ತಮ್ಮ ಯುಗಕ್ಕನುರೂಪವಾಗಿ ನಾಮ ಮತ್ತು ರೂಪಗಳ ಮೂಲಕ ಬೇರೆ-ಬೇರೆ ಪ್ರಕಾರದಿಂದ ಭಗವಂತ ನನ್ನು ಆರಾಧಿಸುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷ ಮೊದಲಾದ ಎಲ್ಲ ಪುರುಷಾರ್ಥಗಳ ಏಕಮಾತ್ರ ಸ್ವಾಮಿ ಯಾದರೋ ಭಗವಾನ್ ಶ್ರೀಹರಿಯೇ ಆಗಿರುವನು ಇದರಲ್ಲಿ ಸಂದೇಹವೇ ಇಲ್ಲ. ॥35॥
(ಶ್ಲೋಕ - 36)
ಮೂಲಮ್
ಕಲಿಂ ಸಭಾಜಯಂತ್ಯಾರ್ಯಾ ಗುಣಜ್ಞಾಃ ಸಾರಭಾಗಿನಃ ।
ಯತ್ರ ಸಂಕೀರ್ತನೇನೈವ ಸರ್ವಃ ಸ್ವಾರ್ಥೋಭಿಲಭ್ಯತೇ ॥
ಅನುವಾದ
ಯುಗಗಳ ಗುಣಗಳನ್ನು ಬಲ್ಲವರು, ಸಾರಗ್ರಾಹಿಗಳು ಕಲಿಯುಗವನ್ನು ತುಂಬಾ ಪ್ರಶಂಸಿಸುತ್ತಾರೆ. ಕಾರಣ ಈ ಕಲಿಯುಗದಲ್ಲಿ ಕೇವಲ ಭಗವಂತನ ನಾಮಸಂಕೀರ್ತನದಿಂದಲೇ ಎಲ್ಲ ಪ್ರಕಾರದ ಸ್ವಾರ್ಥ ಮತ್ತು ಪರಮಾರ್ಥ ಲಭಿಸುತ್ತದೆ. ॥36॥
(ಶ್ಲೋಕ - 37)
ಮೂಲಮ್
ನ ಹ್ಯತಃ ಪರಮೋ ಲಾಭೋ ದೇಹಿನಾಂ ಭ್ರಾಮ್ಯತಾಮಿಹ ।
ಯತೋ ವಿಂದೇತ ಪರಮಾಂ ಶಾಂತಿಂ ನಶ್ಯತಿ ಸಂಸೃತಿಃ ॥
ಅನುವಾದ
ದೇಹಾಭಿಮಾನಿ ಜೀವರು ಈ ಸಂಸಾರಚಕ್ರದಲ್ಲಿ ಸುತ್ತುತ್ತಾ ಇರುತ್ತಾರೆ. ಅವರಿಗಾಗಿ ಭಗವಂತನ ನಾಮ ಸಂಕೀರ್ತನೆಯಂತಹ ಸರಳ ಸಾಧನೆಯಿದೆ. ಇದರಿಂದ ಪರಮ ಶಾಂತಿಯು ಸಿಗುತ್ತದೆ ಹಾಗೂ ಎಂದೆಂದಿಗೂ ಜನ್ಮ-ಮರಣಗಳ ಪರಿಭ್ರಮಣೆ ಮುಗಿದು ಹೋಗುತ್ತದೆ. ಮನುಷ್ಯನಿಗೆ ಇದರಿಂದ ಮಿಗಿಲಾದ ಇನ್ನೊಂದು ಲಾಭವು ಇಲ್ಲವೇ ಇಲ್ಲ. ॥37॥
(ಶ್ಲೋಕ - 38)
ಮೂಲಮ್
ಕೃತಾದಿಷು ಪ್ರಜಾ ರಾಜನ್ ಕಲಾವಿಚ್ಛಂತಿ ಸಂಭವಮ್ ।
ಕಲೌ ಖಲು ಭವಿಷ್ಯಂತಿ ನಾರಾಯಣಪರಾಯಣಾಃ ॥
ಅನುವಾದ
ರಾಜನೇ! ಕೃತಯುಗವೇ ಮೊದಲಾದ ಯುಗಗಳಲ್ಲಿ ಹುಟ್ಟಿದ ಜನರೂ ಕೂಡ ಈ ಕಲಿಯುಗದಲ್ಲಿ ಜನ್ಮತಳೆಯಲು ಆಶಿಸುತ್ತಾರೆ. ಏಕೆಂದರೆ, ಕಲಿಯುಗದಲ್ಲಿ ಅಲ್ಲಲ್ಲಿ ಭಗವಾನ್ ನಾರಾಯಣನ ಶರಣಾಗತರು ಮತ್ತು ಅವನ ಆಶ್ರಿತರಾದ ಅನೇಕ ಭಕ್ತರು ಉಂಟಾಗುವರು. ॥38॥
(ಶ್ಲೋಕ - 39)
ಮೂಲಮ್
ಕ್ವಚಿತ್ಕ್ವಚಿನ್ಮಹಾರಾಜ ದ್ರವಿಡೇಷು ಚ ಭೂರಿಶಃ ।
ತಾಮ್ರಪರ್ಣೀ ನದೀ ಯತ್ರ ಕೃತಮಾಲಾ ಪಯಸ್ವಿನೀ ॥
(ಶ್ಲೋಕ - 40)
ಮೂಲಮ್
ಕಾವೇರೀ ಚ ಮಹಾಪುಣ್ಯಾ ಪ್ರತೀಚೀ ಚ ಮಹಾನದೀ ।
ಯೇ ಪಿಬಂತಿ ಜಲಂ ತಾಸಾಂ ಮನುಜಾ ಮನುಜೇಶ್ವರ ।
ಪ್ರಾಯೋ ಭಕ್ತಾ ಭಗವತಿ ವಾಸುದೇವೇಮಲಾಶಯಾಃ ॥
ಅನುವಾದ
ಎಲೈ ರಾಜನೇ! ಕಲಿಯುಗದಲ್ಲಿ ದ್ರವಿಡದೇಶದಲ್ಲಿ (ದಕ್ಷಿಣ ಭಾರತದಲ್ಲಿ) ಅನೇಕ ಭಕ್ತರಾಗುವರು. ತಾಮ್ರಪರ್ಣಿ, ಕೃತಮಾಲಾ, ಪಯಸ್ವಿನೀ, ಪರಮಪವಿತ್ರ ಕಾವೇರಿ, ಮಹಾ ನದಿ ಹಾಗೂ ಪ್ರತಿಚೀ ಮೊದಲಾದ ನದಿಗಳು ಹರಿಯು ವಲ್ಲೆಲ್ಲ ಭಕ್ತರು ಹುಟ್ಟುವರು. ರಾಜನೇ! ಈ ಪವಿತ್ರ ನದಿಗಳ ನೀರನ್ನು ಕುಡಿದವರ ಅಂತಃಕರಣ ಶುದ್ಧವಾಗಿ ಅವರು ಭಗವಾನ್ ವಾಸುದೇವನ ಪರಮ ಭಕ್ತರಾಗುವರು. ॥39-40॥
(ಶ್ಲೋಕ - 41)
ಮೂಲಮ್
ದೇವರ್ಷಿಭೂತಾಪ್ತನೃಣಾಂ ಪಿತೃಣಾಂ
ನ ಕಿಂಕರೋ ನಾಯಮೃಣೀ ಚ ರಾಜನ್ ।
ಸರ್ವಾತ್ಮನಾ ಯಃ ಶರಣಂ ಶರಣ್ಯಂ
ಗತೋ ಮುಕುಂದಂ ಪರಿಹೃತ್ಯ ಕರ್ತಮ್ ॥
ಅನುವಾದ
ಶರಣಾಗಲು ಏಕಮಾತ್ರ ಭಗವಂತನೇ ಯೋಗ್ಯನಾಗಿದ್ದಾನೆ. ಪೂರ್ಣರೂಪದಿಂದ ಭಗವಂತನಿಗೆ ಶರಣಾದ ಭಕ್ತನು ದೇವತೆಗಳು, ಋಷಿಗಳು, ಪಿತೃಗಳು, ಕುಟುಂಬಿಗಳು, ಅತಿಥಿಗಳು ಹೀಗೆ ಇವರೆಲ್ಲರ ಋಣದಿಂದ ಮುಕ್ತನಾಗುತ್ತಾನೆ. ಅವನು ಇವರಲ್ಲಿ ಯಾರ ಕಿಂಕರನೂ ಆಗಿರುವುದಿಲ್ಲ. ಅವನು ಎಲ್ಲ ಕರ್ಮವಾಸನೆಗಳಿಂದ, ಕರ್ಮಬಂಧನದಿಂದ ಪೂರ್ಣವಾಗಿ ಮುಕ್ತನಾಗಿ, ಮುಕ್ತಿಯ ಮತ್ತು ಪ್ರೇಮದದಾತೃ ಭಗವಂತನನ್ನು ಪಡೆದುಕೊಳ್ಳುತ್ತಾನೆ. ॥41॥
(ಶ್ಲೋಕ - 42)
ಮೂಲಮ್
ಸ್ವಪಾದಮೂಲಂ ಭಜತಃ ಪ್ರಿಯಸ್ಯ
ತ್ಯಕ್ತಾನ್ಯಭಾವಸ್ಯ ಹರಿಃ ಪರೇಶಃ ।
ವಿಕರ್ಮ ಯಚ್ಚೋತ್ಪತಿತಂ ಕಥಂಚಿದ್
ಧುನೋತಿ ಸರ್ವಂ ಹೃದಿ ಸನ್ನಿವಿಷ್ಟಃ ॥
ಅನುವಾದ
ಭಗವಂತನ ಅನನ್ಯ ಶರಣಾಗತಿಯನ್ನು ಪಡೆದ ಭಕ್ತರಿಂದ ಪಾಪಕರ್ಮಗಳಾದರೋ ಆಗುವುದೇ ಇಲ್ಲ. ಕದಾಚಿತ್ ಯಾವುದಾದರೂ ಪಾಪಕರ್ಮ, ನಿಷಿದ್ಧಕರ್ಮ ನಡೆದು ಹೋದರೂ, ಎಲ್ಲರ ಹೃದಯದಲ್ಲಿ ವಿರಾಜಮಾನನಾದ ಸರ್ವೇಶ್ವರ ಭಗವಾನ್ ಶ್ರೀಹರಿಯು ಸ್ವತಃ ಅವನ ಹೃದಯದ ಪಾಪಗಳನ್ನು ಮತ್ತು ಪಾಪವಾಸನೆಗಳನ್ನು ತೊಳೆದು ಅವನನ್ನು ಶುದ್ಧವಾಗಿಸುತ್ತಾನೆ. ॥42॥*
ಟಿಪ್ಪನೀ
- (ಈ ಪ್ರಕಾರ ನವಯೋಗೀಶ್ವರರ ಪ್ರಕರಣವು ಶರಣಾಗತಿಯಿಂದ ಪ್ರಾರಂಭವಾಗಿ, ಪರ್ಯವಸಾನವೂ ಶರಣಾಗತಿಯಲ್ಲೇ ಆಗಿದೆ. ಆತ್ಯಂತಿಕ ಶ್ರೇಯಸ್ಸನ್ನು ಪಡೆಯಲು ಶರಣಾಗತಿಯೇ ಸರ್ವೋತ್ಕೃಷ್ಟ ಸಾಧನೆಯಾಗಿದೆ.)
(ಶ್ಲೋಕ - 43)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಧರ್ಮಾನ್ಭಾಗವತಾನಿತ್ಥಂ ಶ್ರುತ್ವಾಥ ಮಿಥಿಲೇಶ್ವರಃ ।
ಜಾಯಂತೇಯಾನ್ ಮುನೀನ್ಪ್ರೀತಃ ಸೋಪಾಧ್ಯಾಯೋ ಹ್ಯಪೂಜಯತ್ ॥
ಅನುವಾದ
ನಾರದರು ಹೇಳುತ್ತಾರೆ — ವಸುದೇವನೇ! ಮಿಥಿಲಾಧೀಶ ರಾಜಾನಿಮಿಯು ಒಂಭತ್ತು ಯೋಗೀಶ್ವರರಿಂದ ಈ ವಿಧವಾಗಿ ಭಾಗವತಧರ್ಮಗಳ ವರ್ಣನೆಯನ್ನು ಕೇಳಿ ಬಹಳ ಆನಂದಿತನಾದನು. ಅವನು ತನ್ನ ಋತ್ವಿಜರು ಮತ್ತು ಆಚಾರ್ಯರೊಂದಿಗೆ ಋಷಭನಂದನ* ನವಯೋಗೀಶ್ವರರನ್ನು ಭಕ್ತಿಯಿಂದ ಪೂಜಿಸಿದನು. ॥43॥
ಟಿಪ್ಪನೀ
- ಈ ಯೋಗೀಶ್ವರರ ತಾಯಿಯ ಹೆಸರು ಜಯಂತಿ ಎಂದಿದ್ದು ತಂದೆ ಭಗವಾನ್ ಋಷಭದೇವರಾಗಿದ್ದಾರೆ. ಅದಕ್ಕಾಗಿ ಶ್ಲೋಕದಲ್ಲಿ ‘ಜಾಯಂತೇಯಾನ್’ ಎಂಬ ಶಬ್ದದಿಂದ ಇವರ ತಾಯಿ ಜಯಂತಿಯೆಂದು ತಿಳಿದುಕೊಳ್ಳಬೇಕು.
(ಶ್ಲೋಕ - 44)
ಮೂಲಮ್
ತತೋಂತರ್ದಧಿರೇ ಸಿದ್ಧಾಃ ಸರ್ವಲೋಕಸ್ಯ ಪಶ್ಯತಃ ।
ರಾಜಾ ಧರ್ಮಾನುಪಾತಿಷ್ಠನ್ನವಾಪ ಪರಮಾಂ ಗತಿಮ್ ॥
ಅನುವಾದ
ಇದಾದ ಬಳಿಕ ಎಲ್ಲರೂ ನೋಡುತ್ತಿರುವಂತೆಯೇ ಆ ಸಿದ್ಧರು ಅಂತರ್ಧಾನರಾದರು. ವಿದೇಹರಾಜಾ ನಿಮಿಯು ಅವರಿಂದ ಕೇಳಿದ ಭಾಗವತ ಧರ್ಮಗಳನ್ನು ಆಚರಿಸುತ್ತಾ, ಪರಮಗತಿಯನ್ನು ಪಡೆದುಕೊಂಡನು. ॥44॥
(ಶ್ಲೋಕ - 45)
ಮೂಲಮ್
ತ್ವಮಪ್ಯೇತಾನ್ಮಹಾಭಾಗ ಧರ್ಮಾನ್ಭಾಗವತಾನ್ ಶ್ರುತಾನ್ ।
ಆಸ್ಥಿತಃ ಶ್ರದ್ಧಯಾ ಯುಕ್ತೋ ನಿಃಸಂಗೋ ಯಾಸ್ಯಸೇ ಪರಮ್ ॥
ಅನುವಾದ
ಮಹಾ ಭಾಗ್ಯವಂತನಾದ ವಸುದೇವನೇ! ನಾನು ನಿನ್ನ ಮುಂದೆಯೂ ಭಾಗವತ ಧರ್ಮಗಳನ್ನು ವರ್ಣಿಸಿರುವೆನು. ನೀನೂ ಕೂಡ ಶ್ರದ್ಧೆಯಿಂದ ಇವುಗಳನ್ನು ಆಚರಿಸಿದರೆ ಕೊನೆಗೆ ಎಲ್ಲ ಆಸಕ್ತಿಗಳಿಂದ ಬಿಡುಗಡೆಹೊಂದಿ ಪರಮಪದವನ್ನು ಪಡೆದು ಕೊಳ್ಳಬಲ್ಲೆ. ॥45॥
(ಶ್ಲೋಕ - 46)
ಮೂಲಮ್
ಯುವಯೋಃ ಖಲು ದಂಪತ್ಯೋರ್ಯಶಸಾ ಪೂರಿತಂ ಜಗತ್ ।
ಪುತ್ರತಾಮಗಮದ್ಯದ್ವಾಂ ಭಗವಾನೀಶ್ವರೋ ಹರಿಃ ॥
ಅನುವಾದ
ವಸುದೇವನೇ! ನಿನ್ನ ಮತ್ತು ದೇವಕಿಯ ಕೀರ್ತಿಯಿಂದಲಾದರೋ ಇಡೀ ವಿಶ್ವವೇ ತುಂಬಿಹೋಗಿದೆ. ಏಕೆಂದರೆ, ಸರ್ವಶಕ್ತಿವಂತ ಭಗವಾನ್ ಶ್ರೀಕೃಷ್ಣನು ನಿಮ್ಮ ಪುತ್ರನಾಗಿ ಅವತರಿಸಿರುವನು. ॥46॥
(ಶ್ಲೋಕ - 47)
ಮೂಲಮ್
ದರ್ಶನಾಲಿಂಗನಾಲಾಪೈಃ ಶಯನಾಸನಭೋಜನೈಃ ।
ಆತ್ಮಾ ವಾಂ ಪಾವಿತಃ ಕೃಷ್ಣೇ ಪುತ್ರಸ್ನೇಹಂ ಪ್ರಕುರ್ವತೋಃ ॥
ಅನುವಾದ
ನೀವುಗಳೆಲ್ಲ ಭಗವಂತನ ದರ್ಶನ, ಆಲಿಂಗನ ಹಾಗೂ ಮಾತು-ಕತೆಗಳಿಂದ, ಅವನನ್ನು ಮಲಗಿಸುವುದು, ಆಡಿಸುವುದು ಇವುಗಳ ಮೂಲಕ ವಾತ್ಸಲ್ಯ ಸ್ನೇಹಗೈದು ನಿಮ್ಮ ಹೃದಯವನ್ನು ಪವಿತ್ರವಾಗಿಸಿಕೊಂಡಿರುವಿರಿ. ಇದರಿಂದ ನೀವು ಪರಮ ಪವಿತ್ರರಾಗಿ ಹೋಗಿದ್ದೀರಿ. ॥47॥
(ಶ್ಲೋಕ - 48)
ಮೂಲಮ್
ವೈರೇಣ ಯಂ ನೃಪತಯಃ ಶಿಶುಪಾಲಪೌಂಡ್ರ-
ಶಾಲ್ವಾದಯೋ ಗತಿವಿಲಾಸವಿಲೋಕನಾದ್ಯೈಃ ।
ಧ್ಯಾಯಂತ ಆಕೃತಧಿಯಃ ಶಯನಾಸನಾದೌ
ತತ್ಸಾಮ್ಯಮಾಪುರನುರಕ್ತಧಿಯಾಂ ಪುನಃ ಕಿಮ್ ॥
ಅನುವಾದ
ವಸುದೇವನೇ! ಶಿಶುಪಾಲ, ಪೌಂಡ್ರಕ, ಶಾಲ್ವ ಮುಂತಾದ ರಾಜರಾದರೋ ವೈರಭಾವದಿಂದ ಶ್ರೀಕೃಷ್ಣನ ನಡೆ-ನುಡಿ, ಲೀಲಾವಿಲಾಸ, ನೋಟ ಮಾಟ ಮುಂತಾದವುಗಳನ್ನು ಸ್ಮರಿಸಿದ್ದರು. ಅದೂ ಕೂಡ ನಿಯಮಾನುಸಾರವಲ್ಲ. ಮಲಗುವಾಗ, ಕುಳಿತಿರುವಾಗ, ಓಡಾಡುವಾಗ ಸ್ವಾಭಾವಿಕವಾಗಿಯೇ ಇತ್ತು. ಆದರೂ ಕೂಡ ಅವರ ಚಿತ್ತವೃತ್ತಿ ಶ್ರೀಕೃಷ್ಣಾಕಾರವಾಯಿತು ಹಾಗೂ ಸಾರೂಪ್ಯ ಮುಕ್ತಿಯ ಅಧಿಕಾರಿಗಳಾದರು. ಹಾಗಿರುವಾಗ ಪ್ರೇಮಭಾವದಿಂದ, ಅನುರಾಗಪೂರ್ವಕ ಶ್ರೀಕೃಷ್ಣನನ್ನು ಚಿಂತಿಸುವವರಿಗೆ ಶ್ರೀಕೃಷ್ಣನ ಪ್ರಾಪ್ತಿಯಾಗುವುದರಲ್ಲಿ ಸಂದೇಹವೇನಿದೆ? ॥48॥
(ಶ್ಲೋಕ - 49)
ಮೂಲಮ್
ಮಾಪತ್ಯಬುದ್ಧಿಮಕೃಥಾಃ ಕೃಷ್ಣೇ ಸರ್ವಾತ್ಮನೀಶ್ವರೇ ।
ಮಾಯಾಮನುಷ್ಯಭಾವೇನ ಗೂಢೈಶ್ವರ್ಯೇ ಪರೇವ್ಯಯೇ ॥
ಅನುವಾದ
ವಸುದೇವಾ! ನೀನು ಶ್ರೀಕೃಷ್ಣನನ್ನು ಕೇವಲ ನಿನ್ನ ಪುತ್ರನೆಂದೇ ತಿಳಿಯಬೇಡ. ಅವನು ಸರ್ವಾತ್ಮಾ ಸರ್ವೇಶ್ವರ, ಕಾರಣಾತೀತ, ಅವಿನಾಶಿಯಾಗಿದ್ದಾನೆ. ಅವನು ಲೀಲೆಗಾಗಿ ಮನುಷ್ಯರೂಪದಿಂದ ಪ್ರಕಟನಾಗಿ, ತನ್ನ ಐಶ್ವರ್ಯವನ್ನು ಅಡಗಿಸಿಟ್ಟಿರುವನು. ॥49॥
(ಶ್ಲೋಕ - 50)
ಮೂಲಮ್
ಭೂಭಾರಾಸುರರಾಜನ್ಯಹಂತವೇ ಗುಪ್ತಯೇ ಸತಾಮ್ ।
ಅವತೀರ್ಣಸ್ಯ ನಿರ್ವೃತ್ಯೈ ಯಶೋ ಲೋಕೇ ವಿತನ್ಯತೇ ॥
ಅನುವಾದ
ಅವನು ಪೃಥ್ವಿಯ ಭಾರರೂಪೀ ರಾಜವೇಷ ಧಾರೀ ಅಸುರರನ್ನು ನಾಶಗೊಳಿಸಲು ಮತ್ತು ಸಂತರನ್ನು ರಕ್ಷಿಸಲು, ಜೀವಿಗಳಿಗೆ ಪರಮ ಶಾಂತಿ, ಮುಕ್ತಿ ಕೊಡಲೋಸುಗವೇ ಅವತರಿಸಿರುವನು. ಅದಕ್ಕಾಗಿಯೇ ಜಗತ್ತಿನಲ್ಲಿ ಅವನ ಕೀರ್ತಿಯು ಹಾಡಲ್ಪಡುತ್ತಿದೆ. ॥50॥
(ಶ್ಲೋಕ - 51)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏತಚ್ಛ್ರುತ್ವಾ ಮಹಾಭಾಗೋ ವಸುದೇವೋತಿವಿಸ್ಮಿತಃ ।
ದೇವಕೀ ಚ ಮಹಾಭಾಗಾ ಜಹತುರ್ಮೋಹಮಾತ್ಮನಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯ ಪರೀಕ್ಷಿತನೇ! ನಾರದರ ಬಾಯಿಂದ ಇದೆಲ್ಲವನ್ನು ಕೇಳಿ ಪರಮಭಾಗ್ಯವಂತ ವಸುದೇವನು ಮತ್ತು ಪರಮ ಭಾಗ್ಯವತಿ ದೇವಕಿಗೆ ಭಾರೀ ವಿಸ್ಮಯವಾಯಿತು. ಅವರಲ್ಲಿದ್ದ ಅಲ್ಪ- ಸ್ವಲ್ಪ ಮಾಯಾ-ಮೋಹ ಶೇಷವನ್ನು ಅವರು ತಕ್ಷಣ ತ್ಯಜಿಸಿದರು. ॥51॥
(ಶ್ಲೋಕ - 52)
ಮೂಲಮ್
ಇತಿಹಾಸಮಿಮಂ ಪುಣ್ಯಂ ಧಾರಯೇದ್ಯಃ ಸಮಾಹಿತಃ ।
ಸ ವಿಧೂಯೇಹ ಶಮಲಂ ಬ್ರಹ್ಮಭೂಯಾಯ ಕಲ್ಪತೇ ॥
ಅನುವಾದ
ರಾಜನೇ ಈ ಪರಮ ಪವಿತ್ರ ಇತಿಹಾಸವನ್ನು ಧರಿಸುವವನು ತನ್ನ ಎಲ್ಲ ಶೋಕ-ಮೋಹಗಳನ್ನು ದೂರಗೈದು ಬ್ರಹ್ಮಪದವನ್ನು ಪಡೆದುಕೊಳ್ಳುವನು. ॥52॥
ಅನುವಾದ (ಸಮಾಪ್ತಿಃ)
ಐದನೆಯ ಅಧ್ಯಾಯವು ಮುಗಿಯಿತು. ॥5॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಪಂಚಮೋಽಧ್ಯಾಯಃ ॥5॥