೦೪

[ನಾಲ್ಕನೆಯ ಅಧ್ಯಾಯ]

ಭಾಗಸೂಚನಾ

ಭಗವಂತನ ಅವತಾರಗಳ ವರ್ಣನೆ

(ಶ್ಲೋಕ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯಾನಿ ಯಾನೀಹ ಕರ್ಮಾಣಿ ಯೈರ್ಯೈಃ ಸ್ವಚ್ಛಂದಜನ್ಮಭಿಃ ।
ಚಕ್ರೇ ಕರೋತಿ ಕರ್ತಾ ವಾ ಹರಿಸ್ತಾನಿ ಬ್ರುವಂತು ನಃ ॥

ಅನುವಾದ

ರಾಜಾ ನಿಮಿಯು ಕೇಳಿದನು — ಯೋಗೀಶ್ವರರೇ! ಭಗವಂತನು ತನ್ನ ಭಕ್ತರ ಭಕ್ತಿಗೆ ವಶೀಭೂತನಾಗಿ ತನ್ನ ಇಚ್ಛಾನುಸಾರವಾಗಿ ಅನೇಕ ಅವತಾರಗಳನ್ನು ಎತ್ತಿ, ನಾನಾ ಪ್ರಕಾರದ ಲೀಲೆಗಳನ್ನು ಮಾಡುತ್ತಾನೆ. ಇಷ್ಟರವರೆಗೆ ಭಗವಂತನು ಎತ್ತಿದ, ಈಗ ಇರುವ, ಮುಂದೆ ಎತ್ತಲಿರುವ ಅವ ತಾರಗಳ ಲೀಲೆಗಳನ್ನು ದಯವಿಟ್ಟು ವರ್ಣಿಸಿರಿ. ॥1॥

(ಶ್ಲೋಕ - 2)

ಮೂಲಮ್ (ವಾಚನಮ್)

ದ್ರುಮಿಲ ಉವಾಚ

ಮೂಲಮ್

ಯೋ ವಾ ಅನಂತಸ್ಯ ಗುಣಾನನಂತಾ-
ನನುಕ್ರಮಿಷ್ಯನ್ ಸ ತು ಬಾಲಬುದ್ಧಿಃ ।
ರಜಾಂಸಿ ಭೂಮೇರ್ಗಣಯೇತ್ ಕಥಂಚಿತ್
ಕಾಲೇನ ನೈವಾಖಿಲಶಕ್ತಿಧಾಮ್ನಃ ॥

ಅನುವಾದ

ಏಳನೆಯವರಾದ ದ್ರುಮಿಲ ಯೋಗೀಶ್ವರರು ಹೇಳಿದರು — ರಾಜನೇ! ಭಗವಂತನು ಅನಂತನು. ಅವನ ಗುಣಗಳೂ ಅನಂತ. ಅಂತಹ ಭಗವಂತನ ಅನಂತ ಕಲ್ಯಾಣಗುಣಗಳನ್ನು ಯಥಾಕ್ರಮದಿಂದ ಪೂರ್ಣವಾಗಿ ಯಾರೂ ವರ್ಣಿಸಲಾರರು. ಭಗವಂತನ ಗುಣಗಳನ್ನು ಪೂರ್ಣವಾಗಿ ವರ್ಣಿಸ ಬಲ್ಲೆ ಎಂದು ಯಾರಾದರೂ ಯೋಚಿಸಿದರೆ ಅವನು ಅಲ್ಪ ಬುದ್ಧಿಯವನೇ ಆಗಿರುವನು. ಭೂಮಿಯಲ್ಲಿರುವ ಧೂಳಿನ ಕಣಗಳನ್ನು ಎಣಿಸುವುದು ಅಸಂಭವವೇ. ಕದಾಚಿತ್ ಅದನ್ನಾದರೂ ಯಾರಾದರೂ ಎಣಿಸಬಹುದು. ಆದರೆ ಸಮಸ್ತ ಶಕ್ತಿಗಳ ಆಶ್ರಯಸ್ವರೂಪೀ ಭಗವಂತನ ಅನಂತ ಗುಣಗಳ ಅಂತವನ್ನು ಯಾರೂ ಮುಟ್ಟಲಾರರು. ॥2॥

(ಶ್ಲೋಕ - 3)

ಮೂಲಮ್

ಭೂತೈರ್ಯದಾ ಪಂಚಭಿರಾತ್ಮಸೃಷ್ಟೈಃ
ಪುರಂ ವಿರಾಜಂ ವಿರಚಯ್ಯ ತಸ್ಮಿನ್ ।
ಸ್ವಾಂಶೇನ ವಿಷ್ಟಃ ಪುರುಷಾಭಿಧಾನ-
ಮವಾಪ ನಾರಾಯಣ ಆದಿದೇವಃ ॥

ಅನುವಾದ

ಭಗವಂತನೇ ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ ಈ ಪಂಚಭೂತಗಳನ್ನು ತಾನೇ-ತನ್ನಿಂದ-ತನ್ನಲ್ಲೇ ಸೃಷ್ಟಿಸಿದನು. ಇವುಗಳ ಮೂಲಕ ವಿರಾಟ್ ಬ್ರಹ್ಮಾಂಡವನ್ನು ನಿರ್ಮಿಸಿ, ಲೀಲೆಯಿಂದ ತನ್ನ ಅಂಶ ಅಂತರ್ಯಾಮಿ ರೂಪದಿಂದ ಅದರಲ್ಲಿ ಪ್ರವೇಶಿಸಿದನು. ಆ ಆದಿದೇವ ನಾರಾಯಣನನ್ನೇ ಪುರುಷನೆಂದು ಹೇಳಲಾಗಿದೆ. ॥3॥

(ಶ್ಲೋಕ - 4)

ಮೂಲಮ್

ಯತ್ಕಾಯ ಏಷ ಭುವನತ್ರಯಸನ್ನಿವೇಶೋ
ಯಸ್ಯೇಂದ್ರಿಯೈಸ್ತನುಭೃತಾಮುಭಯೇಂದ್ರಿಯಾಣಿ ।
ಜ್ಞಾನಂ ಸ್ವತಃ ಶ್ವಸನತೋ ಬಲಮೋಜ ಈಹಾ
ಸತ್ತ್ವಾದಿಭಿಃ ಸ್ಥಿತಿಲಯೋದ್ಭವ ಆದಿಕರ್ತಾ ॥

ಅನುವಾದ

ಈ ತ್ರಿಭುವನಗಳ ರಚನೆ ಭಗವಂತನದೇ ಶರೀರವಾಗಿದೆ. ಅವನ ಶಕ್ತಿಯಿಂದಲೇ ಸಮಸ್ತ ಪ್ರಾಣಿಗಳ ಜ್ಞಾನೇಂದ್ರಿಯಗಳು, ಕರ್ಮೇಂದ್ರಿಯಗಳು ಉಂಟಾಗಿವೆ. ಅವನೇ ಎಲ್ಲ ಪ್ರಾಣಿಗಳಲ್ಲಿ ಅಂತರ್ಯಾಮಿ ರೂಪದಿಂದ ಸ್ಥಿತನಾಗಿರುವನು. ಅವನು ಇರುವುದರಿಂದಲೇ ಎಲ್ಲರಲ್ಲಿ ಜ್ಞಾನಶಕ್ತಿಯ ಸಂಚಾರವಾಗುತ್ತದೆ. ಅವನೇ ಪ್ರಾಣರೂಪದಿಂದ ಎಲ್ಲರಲ್ಲಿ ನೆಲೆಸಿರುವನು. ಅವನ ಶಕ್ತಿಯಿಂದಲೇ ಎಲ್ಲರಿಗೆ ಶಾರೀರಿಕ ಬಲ, ಮಾನಸಿಕ ಶಕ್ತಿ ಪ್ರಾಪ್ತವಾಗುತ್ತದೆ ಹಾಗೂ ಕ್ರಿಯೆಗಳನ್ನು ಮಾಡುವ ಶಕ್ತಿಯೂ ದೊರೆಯುತ್ತದೆ. ಆ ಆದಿಕರ್ತಾ ಭಗವಾನ್ ನಾರಾಯಣನೇ ಸತ್ತ್ವಾದಿ ಮೂರುಗುಣಗಳಿಂದ ಪ್ರಪಂಚದ ಉತ್ಪತ್ತಿ, ಸ್ಥಿತಿ, ಪ್ರಳಯ ಮಾಡುತ್ತಾ ಇರುತ್ತಾನೆ. ಇದೆಲ್ಲವೂ ಅವನ ಲೀಲಾವಿಲಾಸವೇ ಆಗಿದೆ. ॥4॥

(ಶ್ಲೋಕ - 5)

ಮೂಲಮ್

ಆದಾವಭೂಚ್ಛತಧೃತೀ ರಜಸಾಸ್ಯ ಸರ್ಗೇ
ವಿಷ್ಣುಃ ಸ್ಥಿತೌ ಕ್ರತುಪತಿರ್ದ್ವಿಜಧರ್ಮಸೇತುಃ ।
ರುದ್ರೋಪ್ಯಯಾಯ ತಮಸಾ ಪುರುಷಃ ಸ ಆದ್ಯ
ಇತ್ಯುದ್ಭವಸ್ಥಿತಿಲಯಾಃ ಸತತಂ ಪ್ರಜಾಸು ॥

ಅನುವಾದ

ಆ ಆದಿಪುರುಷ ನಾರಾಯಣನೇ ಮೊಟ್ಟಮೊದಲು ವಿಶ್ವದ ಸೃಷ್ಟಿಗಾಗಿ ರಜೋಗುಣದ ಮೂಲಕ ಚತುರ್ಮುಖ ಬ್ರಹ್ಮನಾದನು. ಯಜ್ಞಗಳ ಅಧಿಪತಿ ಆ ಭಗವಾನ್ ನಾರಾಯಣನೇ ಸತ್ತ್ವ ಗುಣವನ್ನು ಸ್ವೀಕರಿಸಿಕೊಂಡು ಬ್ರಾಹ್ಮಣರನ್ನು, ಧರ್ಮವನ್ನು ರಕ್ಷಿಸುವುದಕ್ಕಾಗಿ ಹಾಗೂ ವಿಶ್ವದ ಪಾಲನೆಗಾಗಿ ವಿಷ್ಣು ರೂಪನಾದನು. ಅದೇ ಆದಿಪುರುಷ ನಾರಾಯಣನು ತಮೋ ಗುಣದಿಂದ ರುದ್ರರೂಪನಾಗಿ ಇದನ್ನು ಸಂಹಾರ ಮಾಡುತ್ತಾನೆ. ಈ ವಿಧವಾಗಿ ಈ ಪ್ರಪಂಚದ ಉತ್ಪತ್ತಿ, ಸ್ಥಿತಿ, ಸಂಹಾರ ಮೂರೂ ಅವನಿಂದಲೇ ಆಗುತ್ತಾ ಇರುತ್ತವೆ. ॥5॥

(ಶ್ಲೋಕ - 6)

ಮೂಲಮ್

ಧರ್ಮಸ್ಯ ದಕ್ಷದುಹಿತರ್ಯಜನಿಷ್ಟ ಮೂರ್ತ್ಯಾಂ
ನಾರಾಯಣೋ ನರ ಋಷಿಪ್ರವರಃ ಪ್ರಶಾಂತಃ ।
ನೈಷ್ಕರ್ಮ್ಯಲಕ್ಷಣಮುವಾಚ ಚಚಾರ ಕರ್ಮ
ಯೋದ್ಯಾಪಿ ಚಾಸ್ತ ಋಷಿವರ್ಯನಿಷೇವಿತಾಂಘ್ರಿಃ ॥

ಅನುವಾದ

ದಕ್ಷ ಪ್ರಜಾಪತಿಯ ಮಗಳೂ, ಧರ್ಮನ ಪತ್ನಿಯೂ ಆದ ಮೂರ್ತಿ ಎಂಬಾಕೆಯಲ್ಲಿ ಋಷಿಶ್ರೇಷ್ಠ ನರ-ನಾರಾಯಣನಾಗಿ ಅವನೇ ಅವತರಿಸಿದನು. ಆ ಅವತಾರದಲ್ಲಿ ಅವನು ಕರ್ಮಬಂಧನದಿಂದ ಬಿಡಿಸಿ, ನೈಷ್ಕರ್ಮ್ಯಸ್ಥಿತಿಯನ್ನು ಪ್ರಾಪ್ತಮಾಡಿಕೊಳ್ಳುವ, ಆತ್ಮತತ್ತ್ವದ ಸಾಕ್ಷಾತ್ಕಾರ ಮಾಡಿಸುವ ಭಗವದ್ ಆರಾಧನಾರೂಪೀ ಕರ್ಮದ ಉಪದೇಶವನ್ನು ನೀಡಿದನು. ಅವನು ಸ್ವತಃ ಆ ವಿಧಿಯಿಂದ ಕರ್ಮಗಳನ್ನು ಆಚರಿಸಿ, ಇಂದೂ ಕೂಡ ಲೋಕಕಲ್ಯಾಣದ ಭಾವನೆಯಿಂದ ಬದರಿಕಾಶ್ರಮದಲ್ಲಿ ನರ-ನಾರಾಯಣ ರೂಪದಿಂದ ವಿರಾಜಮಾನನಾಗಿದ್ದಾನೆ. ದೊಡ್ಡ ದೊಡ್ಡ ಋಷಿ ಮುನಿಗಳು ಅವನ ಚರಣಕಮಲಗಳನ್ನು ಸೇವಿಸುತ್ತಾ ಇದ್ದಾರೆ. ॥6॥

(ಶ್ಲೋಕ - 7)

ಮೂಲಮ್

ಇಂದ್ರೋ ವಿಶಂಕ್ಯ ಮಮ ಧಾಮ ಜಿಘೃಕ್ಷತೀತಿ
ಕಾಮಂ ನ್ಯಯುಂಕ್ತ ಸಗಣಂ ಸ ಬದರ್ಯುಪಾಖ್ಯಮ್ ।
ಗತ್ವಾಪ್ಸರೋಗಣವಸಂತಸುಮಂದವಾತೈಃ
ಸೀಪ್ರೇಕ್ಷಣೇಷುಭಿರವಿಧ್ಯದತನ್ಮಹಿಜ್ಞಃ ॥

ಅನುವಾದ

ಒಮ್ಮೆ ನರ-ನಾರಾಯಣರ ಘೋರ ತಪಸ್ಸನ್ನು ನೋಡಿ ಇವರು ನನ್ನ ಸ್ವರ್ಗವನ್ನು ಕಸಿದುಕೊಳ್ಳಲು ಬಯಸುತ್ತಿರುವರೋ ಎಂದು ಇಂದ್ರನ ಮನಸ್ಸಿನಲ್ಲಿ ಸಂದೇಹ ಉಂಟಾಯಿತು. ಅವನು ಅವರ ತಪಸ್ಸಿನಲ್ಲಿ ವಿಘ್ನವನ್ನೊಡ್ಡಲು ಮನ್ಮಥನನ್ನು ಅವನ ಸೇನೆಯೊಂದಿಗೆ ಬದರಿಕಾಶ್ರಮಕ್ಕೆ ಕಳಿಸಿದನು. ಮನ್ಮಥನಿಗೆ ಅವರ ಮಹಿಮೆಯ ಜ್ಞಾನವಿರಲಿಲ್ಲ. ಆದ್ದರಿಂದ ಅವನು ತನ್ನ ಸೇನೆಯೊಂದಿಗೆ ಅರ್ಥಾತ್ ಅಪ್ಸರೆಯರನ್ನೊಳಗೊಂಡು, ವಸಂತ, ಮಂದ-ಸುಗಂಧ ವಾಯುವಿನೊಂದಿಗೆ ಹೋಗಿ ಸ್ತ್ರೀಯರ ಕಟಾಕ್ಷ ಬಾಣಗಳಿಂದ ಅವರನ್ನು ಘಾಸಿಮಾಡತೊಡಗಿದನು. ॥7॥

(ಶ್ಲೋಕ - 8)

ಮೂಲಮ್

ವಿಜ್ಞಾಯ ಶಕ್ರಕೃತಮಕ್ರಮಮಾದಿದೇವಃ
ಪ್ರಾಹ ಪ್ರಹಸ್ಯ ಗತವಿಸ್ಮಯ ಏಜಮಾನಾನ್ ।
ಮಾ ಭೈಷ್ಟ ಭೋ ಮದನ ಮಾರುತ ದೇವವಧ್ವೋ
ಗೃಹ್ಣೀತ ನೋ ಬಲಿಮಶೂನ್ಯಮಿಮಂ ಕುರುಧ್ವಮ್ ॥

ಅನುವಾದ

ಭಗವಾನ್ ನಾರಾಯಣನು ಇದೆಲ್ಲ ಕೃತ್ಯ ಇಂದ್ರನದೇ ಆಗಿದೆ ಎಂದು ತಿಳಿದುಕೊಂಡನು. ಅವರ ಮುಂದೆ ಕಾಮದೇವನ ಸೇನೆ ಅವರ ಪ್ರಭಾವವನನ್ನು ನೋಡಿ ಭಯದಿಂದ ನಡುಗಿಹೋಯಿತು. ನರ-ನಾರಾಯಣರು ವಿಸ್ಮಿತರಾಗದೆ ಮಂದಹಾಸ ಸೂಸುತ್ತಾ, ಅಭಯವನ್ನಿತ್ತು ಇಂತೆಂದರು ಎಲೈ ಮದನನೇ! ಮಾರುತ ಮತ್ತು ಅಪ್ಸರೆಯರೇ! ನೀವು ಹೆದರಬೇಡಿರಿ. ನಮ್ಮ ಆಶ್ರಮಕ್ಕೆ ನೀವು ಬಂದಿರುವಿರಿ. ನಮ್ಮ ಆತಿಥ್ಯವನ್ನು ಸ್ವೀಕರಿಸಿರಿ. ಈ ಆಶ್ರಮವನ್ನು ಅತಿಥಿರಹಿತನನ್ನಾಗಿಸಬೇಡಿ. ॥8॥

(ಶ್ಲೋಕ - 9)

ಮೂಲಮ್

ಇತ್ಥಂ ಬ್ರುವತ್ಯಭಯದೇ ನರದೇವ ದೇವಾಃ
ಸವ್ರೀಡನಮ್ರಶಿರಸಃ ಸಘೃಣಂ ತಮೂಚುಃ ।
ನೈತದ್ವಿಭೋ ತ್ವಯಿ ಪರೇವಿಕೃತೇ ವಿಚಿತ್ರಂ
ಸ್ವಾರಾಮಧೀರನಿಕರಾನತಪಾದಪದ್ಮೇ ॥

ಅನುವಾದ

ರಾಜನೇ! ನರ-ನಾರಾಯಣ ಋಷಿಗಳು ಅವರಿಗೆ ಅಭಯದಾನವನ್ನಿತ್ತು ನುಡಿದಾಗ ಕಾಮದೇವ ಮುಂತಾದವರ ತಲೆ ನಾಚಿಕೆಯಿಂದ ತಗ್ಗಿತು. ಮದನನು ದಯಾಳು ಭಗವಾನ್ ನಾರಾಯಣನಲ್ಲಿ ಹೇಳಿದನು ಪ್ರಭೋ! ನೀನು ಪರಬ್ರಹ್ಮ ಸ್ವರೂಪನಾಗಿರುವೆ, ನಿರ್ವಿಕಾರನಾಗಿರುವೆ. ಅದರಿಂದ ಇದೇನು ಆಶ್ಚರ್ಯದ ಮಾತಲ್ಲ. ದೊಡ್ಡ-ದೊಡ್ಡ ಆತ್ಮಾರಾಮರಾದ ಧೀರಪುರುಷರು ನಿರಂತರ ನಿನ್ನ ಚರಣಕಮಲಗಳಲ್ಲಿ ವಂದಿಸುತ್ತಿರುತ್ತಾರೆ.॥9॥

(ಶ್ಲೋಕ - 10)

ಮೂಲಮ್

ತ್ವಾಂ ಸೇವತಾಂ ಸುರಕೃತಾ ಬಹವೋಂತರಾಯಾಃ
ಸ್ವೌಕೋ ವಿಲಂಘ್ಯ ಪರಮಂ ವ್ರಜತಾಂ ಪದಂ ತೇ ।
ನಾನ್ಯಸ್ಯ ಬರ್ಹಿಷಿ ಬಲೀನ್ ದದತಃ ಸ್ವಭಾಗಾನ್-
ಧತ್ತೇ ಪದಂ ತ್ವಮವಿತಾ ಯದಿ ವಿಘ್ನಮೂರ್ಧ್ನಿ ॥

ಅನುವಾದ

ಯಾವ ಜನರು ದೇವತೆಗಳ ಆರಾಧನೆಯ ನಿಮಿತ್ತ ಯಜ್ಞಾದಿಗಳಲ್ಲಿ ದೇವತೆಗಳ ಹೆಸರಿನಲ್ಲಿ ಅವರಿಗೆ ಹವಿರ್ಭಾಗ ಅರ್ಪಿಸುತ್ತಾರೋ, ಅವರ ಸಾಧನೆಯಲ್ಲಾದರೋ ದೇವತೆಗಳು ವಿಘ್ನವನ್ನೊಡ್ಡುವುದಿಲ್ಲ. ಆದರೆ ಪ್ರಭೋ! ನಿನ್ನ ಭಕ್ತರು ನಿನ್ನನ್ನು ಆರಾಧಿಸುವಾಗ ಅವರ ಭಕ್ತಿಯಲ್ಲಿ ದೇವತೆಗಳು ಅನೇಕ ವಿಘ್ನಗಳನ್ನು ಉಂಟುಮಾಡುತ್ತಾರೆ. ಅವರು ಯೋಚಿಸುತ್ತಾರೆ ‘ಈ ಭಕ್ತನು ನಮ್ಮಗಳ ಸ್ವರ್ಗವನ್ನು ದಾಟಿ ಪರಮಪದಕ್ಕೆ ಹೋಗುತ್ತಿರುವನು.’ ಆದರೆ ನಿನ್ನ ಭಕ್ತರನ್ನು ನೀನೇ ರಕ್ಷಿಸುತ್ತಿರುವೆ. ಅವರ ವಿಘ್ನಗಳ ಮೇಲೆ ನೀನೇ ಕಾಲನ್ನು ಇಟ್ಟಿರುವೆ. ಆದ್ದರಿಂದ ನಿನ್ನಿಂದ ರಕ್ಷಿತರಾದ ಭಕ್ತರು ನಿನ್ನ ಧಾಮಕ್ಕೆ ಹೊರಟುಹೋಗುತ್ತಾರೆ. ॥10॥

(ಶ್ಲೋಕ - 11)

ಮೂಲಮ್

ಕ್ಷುತ್ತೃಟ್ತ್ರಿಕಾಲಗುಣಮಾರುತಜೈಹ್ವ್ಯಶೈಶ್ನ್ಯಾ-
ನಸ್ಮಾನಪಾರಜಲಧೀನತಿತೀರ್ಯ ಕೇಚಿತ್ ।
ಕ್ರೋಧಸ್ಯ ಯಾಂತಿ ವಿಲಸ್ಯ ವಶಂ ಪದೇ ಗೋ-
ರ್ಮಜ್ಜಂತಿ ದುಶ್ಚರತಪಶ್ಚ ವೃಥೋತ್ಸೃಜಂತಿ ॥

ಅನುವಾದ

ಕೆಲವರು ಸಹಿಸಲು ತುಂಬಾ ಕಷ್ಟವಾದ-ಹಸಿವು, ಬಾಯಾರಿಕೆ, ಚಳಿ, ಸೆಕೆ, ಮಳೆ, ಚಂಡಮಾರುತದಂತಹ ಕಷ್ಟಗಳನ್ನು ಹಾಗೂ ರಸನೇಂದ್ರಿಯ, ಜನನೇಂದ್ರಿಯಗಳ ವೇಗವನ್ನು ಸಹಿಸಿಕೊಳ್ಳುತ್ತಾರೆ. ಈ ಪ್ರಕಾರ ಅವರು ಅಪಾರ ಸಮುದ್ರದಂತಹ ವೇಗಗಳನ್ನಾದರೋ ದಾಟಿಹೋಗುತ್ತಾರೆ. ಆದರೆ ಕ್ರೋಧಕ್ಕೆ ವಶೀಭೂತರಾಗಿ ಸಾಮಾನ್ಯ ಗೋಷ್ಪಾದದಷ್ಟು ನೀರಿನಲ್ಲಿ ಮಳುಗಿ ಹೋಗುತ್ತಾರೆ. ಈ ವಿಧವಾಗಿ ತಮ್ಮ ಕಠಿಣ ತಪಸ್ಸನ್ನು ವ್ಯರ್ಥವಾಗಿ ಕಳೆದುಕೊಳ್ಳುತ್ತಾರೆ. ॥11॥

(ಶ್ಲೋಕ - 12)

ಮೂಲಮ್

ಇತಿ ಪ್ರಗೃಣತಾಂ ತೇಷಾಂ ಸಿಯೋತ್ಯದ್ಭುತದರ್ಶನಾಃ ।
ದರ್ಶಯಾಮಾಸ ಶುಶ್ರೂಷಾಂ ಸ್ವರ್ಚಿತಾಃ ಕುರ್ವತೀರ್ವಿಭುಃ ॥

ಅನುವಾದ

ಮನ್ಮಥ, ವಸಂತನೇ ಮೊದಲಾದವರು ಭಗವಂತನನ್ನು ಸ್ತುತಿಸಿದಾಗ, ಸರ್ವಶಕ್ತಿವಂತ ಭಗವಂತನು ತನ್ನ ಯೋಗಮಾಯೆಯಿಂದ ಅವರ ಎದುರಿಗೇ ಸರ್ವಾಲಂಕಾರ ಭೂಷಿತರಾದ ಅದ್ಭುತ ರೂಪಲಾವಣ್ಯಯುಕ್ತ ಅನೇಕ ರಮಣಿಯರನ್ನು ಪ್ರಕಟಿಸಿ ತೋರಿಸಿದನು. ಅವರೆಲ್ಲರೂ ಭಗವಂತನನ್ನು ಸೇವಿಸುತ್ತಿದ್ದರು. ॥12॥

(ಶ್ಲೋಕ - 13)

ಮೂಲಮ್

ತೇ ದೇವಾನುಚರಾ ದೃಷ್ಟ್ವಾ ಸಿಯಃ ಶ್ರೀರಿವ ರೂಪಿಣೀಃ ।
ಗಂಧೇನ ಮುಮುಹುಸ್ತಾಸಾಂ ರೂಪೌದಾರ್ಯಹತಶ್ರಿಯಃ ॥

ಅನುವಾದ

ದೇವರಾಜ ಇಂದ್ರನ ಅನುಚರರು ಆ ಲಕ್ಷ್ಮೀದೇವಿಗೆ ಸಮಾನರಾದ ರೂಪವತಿ ಸ್ತ್ರೀಯರನ್ನು ನೋಡಿದಾಗ, ಅವರ ಅಪಾರ ಸೌಂದರ್ಯದ ಮುಂದೆ ಇವರೆಲ್ಲರ ಕಾಂತಿಯು ಮಸಕಾಯಿತು. ಅವರ ಶರೀರದಲ್ಲಿ ಹೊರಸೂಸುತ್ತಿದ್ದ ದಿವ್ಯಗಂಧದಿಂದ ಎಲ್ಲರೂ ಮೋಹಿತರಾದರು. ॥13॥

(ಶ್ಲೋಕ - 14)

ಮೂಲಮ್

ತಾನಾಹ ದೇವದೇವೇಶಃ ಪ್ರಣತಾನ್ಪ್ರಹಸನ್ನಿವ ।
ಆಸಾಮೇಕತಮಾಂ ವೃಙ್ಧ್ವಂ ಸವರ್ಣಾಂ ಸ್ವರ್ಗಭೂಷಣಾಮ್ ॥

ಅನುವಾದ

ಅವರು ವಿನಮ್ರರಾಗಿ ತಲೆಬಾಗಿದರು. ಆಗ ದೇವಾಧಿದೇವ ಭಗವಂತನು ನಗುತ್ತಾ ‘ನಿಮಗೆ ಅನುರೂಪರಾದ ಇವರಲ್ಲಿ ಯಾರನ್ನಾದರೂ ಒಬ್ಬರನ್ನು, ನೀವು ತೆಗೆದುಕೊಳ್ಳಿ. ಅವಳು ನಿಮ್ಮ ಸ್ವರ್ಗಲೋಕದ ಶೋಭೆಯನ್ನು ಹೆಚ್ಚಿಸುವಳು’ ಎಂದು ಹೇಳಿದನು. ॥14॥

(ಶ್ಲೋಕ - 15)

ಮೂಲಮ್

ಓಮಿತ್ಯಾದೇಶಮಾದಾಯ ನತ್ವಾ ತಂ ಸುರವಂದಿನಃ ।
ಊರ್ವಶೀಮಪ್ಸರಃಶ್ರೇಷ್ಠಾಂ ಪುರಸ್ಕೃತ್ಯ ದಿವಂ ಯಯುಃ ॥

ಅನುವಾದ

ದೇವೇಂದ್ರನ ಅನುಚರರು ‘ಹಾಗೇ ಆಗಲೀ’ ಎಂದು ಹೇಳುತ್ತಾ ಭಗವಂತನ ಆದೇಶವನ್ನು ಸ್ವೀಕರಿಸಿ, ಅವನನ್ನು ನಮಸ್ಕರಿಸಿ, ಸ್ತ್ರೀಯರಲ್ಲಿ ಶ್ರೇಷ್ಠಳಾದ ಊರ್ವಶೀ ಅಪ್ಸರೆಯನ್ನು ಪಡೆದು ಸ್ವರ್ಗಕ್ಕೆ ತೆರಳಿದರು. ॥15॥

(ಶ್ಲೋಕ - 16)

ಮೂಲಮ್

ಇಂದ್ರಾಯಾನಮ್ಯ ಸದಸಿ ಶೃಣ್ವತಾಂ ತ್ರಿದಿವೌಕಸಾಮ್ ।
ಊಚುರ್ನಾರಾಯಣಬಲಂ ಶಕ್ರಸ್ತತ್ರಾಸ ವಿಸ್ಮಿತಃ ॥

ಅನುವಾದ

ಸ್ವರ್ಗವನ್ನು ಸೇರಿ ದೇವತೆಗಳು ತುಂಬಿದ ಸಭೆಯಲ್ಲಿ ಕಾಮನು ಭಗವಾನ್ ನರ-ನಾರಾಯಣರ ಬಲ, ಮಹಿಮೆಯನ್ನು ವರ್ಣಿಸಿದನು. ಇಂದ್ರನು ತಾನು ಗೈದುದನ್ನು ನೆನೆದು ಭಯಭೀತನಾದನು ಹಾಗೂ ಭಗವಂತನ ಮಹಿಮೆಯನ್ನು ನೋಡಿ ವಿಸ್ಮಿತನಾದನು. ॥16॥

ಮೂಲಮ್

(ಶ್ಲೋಕ - 17)

ಮೂಲಮ್

ಹಂಸಸ್ವರೂಪ್ಯವದದಚ್ಯುತ ಆತ್ಮಯೋಗಂ
ದತ್ತಃ ಕುಮಾರ ಋಷಭೋ ಭಗವಾನ್ ಪಿತಾ ನಃ ।
ವಿಷ್ಣುಃ ಶಿವಾಯ ಜಗತಾಂ ಕಲಯಾವತೀರ್ಣ-
ಸ್ತೇನಾಹೃತಾ ಮಧುಭಿದಾ ಶ್ರುತಯೋ ಹಯಾಸ್ಯೇ ॥

ಅನುವಾದ

ಭಗವಾನ್ ನಾರಾಯಣನೇ ಹಂಸರೂಪನಾಗಿ ಆತ್ಮಯೋಗವನ್ನು ಉಪದೇಶಿಸಿದನು. ಅವನೇ ದತ್ತಾತ್ರೇಯ, ಸನತ್ಕುಮಾರ ಮತ್ತು ನಮ್ಮ ತೀರ್ಥರೂಪರಾದ ಋಷಭ ದೇವರ ರೂಪದಿಂದ ಆತ್ಮಯೋಗವನ್ನು ಕುರಿತು ಉಪದೇಶಿಸಿದನು. ಅದೇ ಭಗವಂತನು ಜಗತ್ತಿನ ಕಲ್ಯಾಣಕ್ಕಾಗಿ ತನ್ನ ಅಂಶದಿಂದ ಅವತರಿಸುತ್ತಾನೆ. ಅವನೇ ಹಯಗ್ರೀವನಾಗಿ ಅವತರಿಸಿ, ಮಧು-ಕೈಟಭರೆಂಬ ಅಸುರರನ್ನು ಸಂಹರಿಸಿ, ಅವರಿಂದ ಕದಿಯಲ್ಪಟ್ಟ ವೇದಗಳನ್ನು ಉದ್ಧರಿಸಿದನು. ॥17॥

(ಶ್ಲೋಕ - 18)

ಮೂಲಮ್

ಗುಪ್ತೋಪ್ಯಯೇ ಮನುರಿಲೌಷಧಯಶ್ಚ ಮಾತ್ಸ್ಯೇ
ಕ್ರೌಡೇ ಹತೋ ದಿತಿಜ ಉದ್ಧರತಾಂಭಸಃ ಕ್ಷ್ಮಾಮ್ ।
ಕೌರ್ಮೇ ಧೃತೋದ್ರಿರಮೃತೋನ್ಮಥನೇ ಸ್ವಪೃಷ್ಠೇ
ಗ್ರಾಹಾತ್ ಪ್ರಪನ್ನಮಿಭರಾಜಮಮುಂಚದಾರ್ತಮ್ ॥

ಅನುವಾದ

ಜಲಪ್ರಳಯದ ಸಮಯ ಮತ್ಸ್ಯಾವತಾರ ತಳೆದು ಅವನೇ ಸತ್ಯವ್ರತ ಮನುವನ್ನು, ಪೃಥ್ವಿಯನ್ನು ಮತ್ತು ಔಷಧಿಗಳನ್ನು ರಕ್ಷಿಸಿದನು. ವರಾಹ ಅವತಾರವನ್ನೆತ್ತಿ ಹಿರಣ್ಯಾಕ್ಷನನ್ನು ವಧಿಸಿ, ರಸಾತಲದಲ್ಲಿ ಮುಳುಗಿಹೋಗಿದ್ದ ಭೂಮಿಯನ್ನು ಉದ್ಧರಿಸಿದನು. ಕೂರ್ಮಾವತಾರದಲ್ಲಿ ಸಮುದ್ರ ಮಂಥನದ ಸಮಯ ಮಂದರಾಚಲವನ್ನು ತನ್ನ ಬೆನ್ನಮೇಲೆ ಹೊತ್ತು ಸುರರನ್ನು ಕಾಪಾಡಿದನು. ಅವನೇ ಮಕರಿಯನ್ನು ತರಿದು ಪೀಡಿತನಾದ ಗಜೇಂದ್ರನನ್ನು ಬಿಡಿಸಿದನು. ॥18॥

(ಶ್ಲೋಕ - 19)

ಮೂಲಮ್

ಸಂಸ್ತುನ್ವತೋಬ್ಧಿಪತಿತಾನ್ ಶ್ರಮಣಾನೃಷೀಂಶ್ಚ
ಶಕ್ರಂ ಚ ವೃತ್ರವಧತಸ್ತಮಸಿ ಪ್ರವಿಷ್ಟಮ್ ।
ದೇವಸಿ ಯೋಸುರಗೃಹೇ ಪಿಹಿತಾ ಅನಾಥಾ
ಜಘ್ನೇಸುರೇಂದ್ರಮಭಯಾಯ ಸತಾಂ ನೃಸಿಂಹೇ ॥

ಅನುವಾದ

ಹಿಂದಿನಕಾಲದ ಮಾತು ವಾಲಖಿಲ್ಯ ಋಷಿಗಳು ತಪಸ್ಸು ಮಾಡುತ್ತಾ-ಮಾಡುತ್ತಾ ಅತ್ಯಂತ ದುರ್ಬಲರಾಗಿದ್ದರು. ಅವರು ಕಶ್ಯಪರಿಗಾಗಿ ಸಮಿಧೆಗಳನ್ನು ತರುತ್ತಿರುವಾಗ ಹಸುವಿನ ಕಾಲಿನಷ್ಟು ಹೊಂಡದಲ್ಲಿ ಬಿದ್ದುಬಿಟ್ಟರು. ಅವರಿಗೆ ಸಮುದ್ರದಲ್ಲೇ ಮುಳುಗಿದಂತಾಯಿತು. ಅವರು ಭಗವಂತ ನನ್ನು ಸ್ತುತಿಸಿದಾಗ, ಅವನು ಅವರನ್ನು ಉದ್ಧರಿಸಿದನು. ವೃತ್ರಾಸುರನನ್ನು ಕೊಂದ ಕಾರಣ ಇಂದ್ರನಿಗೆ ಬ್ರಹ್ಮಹತ್ಯೆ ತಗುಲಿತ್ತು. ಅವನು ಅದರ ಭಯದಿಂದ ಓಡಿಹೋಗಿ ಅಡಗಿದ್ದರೆ ಭಗವಂತನು ಆ ಬ್ರಹ್ಮಹತ್ಯೆಯಿಂದ ಇಂದ್ರನನ್ನು ರಕ್ಷಿಸಿದ್ದನು. ದೇವತೆಗಳ ಹೆಂಡಿರನ್ನು ಹಿರಣ್ಯಕಶಿಪು ಸೆರೆಯಲ್ಲಿಟ್ಟಿದ್ದನು. ಆಗ ಭಗವಂತನು ನರಸಿಂಹರೂಪದಿಂದ ಅವನನ್ನು ಕೊಂದು ಅಸುರನಿಂದ ಬಿಡಿಸಿ, ಪ್ರಹ್ಲಾದಾದಿ ಸಂತರನ್ನು ನಿರ್ಭಯರನ್ನಾಗಿಸಿದನು. ॥19॥

(ಶ್ಲೋಕ - 20)

ಮೂಲಮ್

ದೇವಾಸುರೇ ಯುಧಿ ಚ ದೈತ್ಯಪತೀನ್ಸುರಾರ್ಥೇ
ಹತ್ವಾಂತರೇಷು ಭುವನಾನ್ಯದಧಾತ್ಕಲಾಭಿಃ ।
ಭೂತ್ವಾಥ ವಾಮನ ಇಮಾಮಹರದ್ಬಲೇಃ ಕ್ಷ್ಮಾಂ
ಯಾಚ್ಞಾಚ್ಛಲೇನ ಸಮದಾದದಿತೇಃ ಸುತೇಭ್ಯಃ ॥

ಅನುವಾದ

ಭಗವಂತನೇ ದೇವತೆಗಳನ್ನು ರಕ್ಷಿಸಲಿಕ್ಕಾಗಿ ದೇವಾಸುರ ಸಂಗ್ರಾಮದಲ್ಲಿ ದೈತ್ಯಪತಿಗಳನ್ನು ವಧಿಸಿದನು. ಬೇರೆ-ಬೇರೆ ಮನ್ವಂತರಗಳಲ್ಲಿ ತನ್ನ ಶಕ್ತಿಯಿಂದ ಅನೇಕ ಅಂಶಾವತಾರಗಳನ್ನು ಧರಿಸಿ, ತ್ರಿಭುವನವನ್ನು ರಕ್ಷಿಸಿದನು. ಮತ್ತೆ ವಾಮನ ಅವತಾರದ ಮೂಲಕ ಬೇಡುವ ನೆಪದಿಂದ ದೇವತೆಗಳ ಸಂಪತ್ತನ್ನು ಬಲಿಯಿಂದ ಪಡೆದು ಅವರಿಗೆ ಕೊಡಿಸಿದನು. ॥20॥

(ಶ್ಲೋಕ - 21)

ಮೂಲಮ್

ನಿಃಕ್ಷತ್ರಿಯಾಮಕೃತ ಗಾಂ ಚ ತ್ರಿಃ ಸಪ್ತಕೃತ್ವೋ
ರಾಮಸ್ತು ಹೈಹಯಕುಲಾಪ್ಯಯಭಾರ್ಗವಾಗ್ನಿಃ ।
ಸೋಬ್ಧಿಂ ಬಬಂಧ ದಶವಕ ಮಹನ್ಸಲಂಕಂ
ಸೀತಾಪತಿರ್ಜಯತಿ ಲೋಕಮಲಘ್ನಕೀರ್ತಿಃ ॥

ಅನುವಾದ

ಪರಶುರಾಮಾವತಾರವನ್ನು ಎತ್ತಿ ಇಪ್ಪತ್ತೊಂದು ಬಾರಿ ಪೃಥ್ವಿಯನ್ನು ನಿಃಕ್ಷತ್ರಿಯವಾಗಿಸಿದನು. ಇಂತಹ ಭಾರ್ಗವರಾಮನು ಹೈಹಯ ಕುಲವನ್ನು ನಾಶಗೊಳಿಸಲು ಅಗ್ನಿಸ್ವರೂಪನಾಗಿದ್ದನು. ಅವನೇ ರಾಮಾವತಾರದಲ್ಲಿ ಸಮುದ್ರಕ್ಕೆ ಸೇತುವೆಯನ್ನು ಬಿಗಿದು ದಶಮುಖ ರಾವಣನನ್ನು ಅವನ ಸೇನೆಸಹಿತ ಸಂಹರಿಸಿದನು. ಶೋಕ ಮತ್ತು ಭಯವನ್ನು ನಾಶಗೊಳಿಸುವಂತಹ ಪವಿತ್ರ ಕೀರ್ತಿಯುಳ್ಳ ಸೀತಾಪತಿ ಶ್ರೀರಾಮನಿಗೆ ಜಯವಾಗಲಿ. ॥21॥

(ಶ್ಲೋಕ - 22)

ಮೂಲಮ್

ಭೂಮೇರ್ಭರಾವತರಣಾಯ ಯದುಷ್ವಜನ್ಮಾ
ಜಾತಃ ಕರಿಷ್ಯತಿ ಸುರೈರಪಿ ದುಷ್ಕರಾಣಿ ।
ವಾದೈರ್ವಿಮೋಹಯತಿ ಯಜ್ಞಕೃತೋತದರ್ಹಾನ್
ಶೂದ್ರಾನ್ಕಲೌ ಕ್ಷಿತಿಭುಜೋ ನ್ಯಹನಿಷ್ಯದಂತೇ ॥

ಅನುವಾದ

ಎಲೈ ರಾಜನೇ! ಅಜನ್ಮಾ ಆಗಿದ್ದರೂ ಭಗವಂತನು ಭೂಭಾರವನ್ನು ಹರಿಸಲೋಸುಗ ಯದುವಂಶದಲ್ಲಿ ಅವತರಿಸಿ, ದೊಡ್ಡ-ದೊಡ್ಡ ದೇವತೆಗಳಿಂದಲೂ ಮಾಡಲಾಗದ ಅಲೌಕಿಕ ಕಾರ್ಯಗಳನ್ನು ಮಾಡುವನು. ಮುಂದೆ ಬುದ್ಧನಾಗಿ ಅವತರಿಸುವನು. ಯಜ್ಞದ ಅನಧಿಕಾರಿಗಳು ಯಜ್ಞಮಾಡುವುದನ್ನು ನೋಡಿ, ಅವರನ್ನು ಅನೇಕ ಪ್ರಕಾರದ ವಾದಗಳಿಂದ ಮೋಹಿತಗೊಳಿಸುವನು. ಕಲಿಯುಗದ ಕೊನೆಯಲ್ಲಿ ಕಲ್ಕಿಯಾಗಿ ಅವತರಿಸಿ ಶೂದ್ರ ರಾಜರನ್ನು ವಧಿಸುವನು. ॥22॥

(ಶ್ಲೋಕ - 23)

ಮೂಲಮ್

ಏವಂವಿಧಾನಿ ಕರ್ಮಾಣಿ ಜನ್ಮಾನಿ ಚ ಜಗತ್ಪತೇಃ ।
ಭೂರೀಣಿ ಭೂರಿಯಶಸೋ ವರ್ಣಿತಾನಿ ಮಹಾಭುಜ ॥

ಅನುವಾದ

ಮಹಾಬಾಹುವಾದ ವಿದೇಹರಾಜನೇ! ಭಗವಂತನ ಕೀರ್ತಿ ಅನಂತ. ಮಹಾತ್ಮರು ಜಗತ್ಪತಿ ಭಗವಂತನ ಇಂತಹ ಅನೇಕ ಜನ್ಮ ಮತ್ತು ಕರ್ಮಗಳನ್ನು ಬಹಳ ವಿಧವಾಗಿ ವರ್ಣಿಸಿರುವರು. (ಇದನ್ನು ನಾನು ತುಂಬಾ ಸಂಕ್ಷೇಪವಾಗಿ ಭಗವಂತನ ಕೆಲವು ಲೀಲೆಗಳನ್ನು ಮಾತ್ರವರ್ಣಿಸಿರುವೆನು. ಭಗವಂತನು ಅನಂತ, ಅವನ ಜನ್ಮ-ಕರ್ಮಗಳೂ ಅನಂತ.) ॥23॥

ಅನುವಾದ (ಸಮಾಪ್ತಿಃ)

ನಾಲ್ಕನೆಯ ಅಧ್ಯಾಯವು ಮುಗಿಯಿತು. ॥4॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಚತುರ್ಥೋಽಧ್ಯಾಯಃ ॥4॥