೦೩

[ಮೂರನೆಯ ಅಧ್ಯಾಯ]

ಭಾಗಸೂಚನಾ

ಮಾಯೆ, ಮಾಯೆಯಿಂದ ಪಾರಾಗುವ ಉಪಾಯ ಬ್ರಹ್ಮ ಹಾಗೂ ಕರ್ಮಯೋಗದ ನಿರೂಪಣೆ

(ಶ್ಲೋಕ - 1)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಪರಸ್ಯ ವಿಷ್ಣೋರೀಶಸ್ಯ ಮಾಯಿನಾಮಪಿ ಮೋಹಿನೀಮ್ ।
ಮಾಯಾಂ ವೇದಿತುಮಿಚ್ಛಾಮೋ ಭಗವಂತೋ ಬ್ರುವಂತು ನಃ ॥

ಅನುವಾದ

ರಾಜಾ ನಿಮಿಯು ಕೇಳಿದನು — ಭಗವನ್! ಸರ್ವಶಕ್ತಿಸಂಪನ್ನ ಪರಮಕಾರಣ ಭಗವಾನ್ ವಿಷ್ಣುವಿನ ಮಾಯೆಯು ಬ್ರಹ್ಮದೇವರಿಂದ ಹಿಡಿದು ಸಮಸ್ತ ಜೀವಿ ಗಳನ್ನೂ ಮೋಹಿಸುತ್ತದೆ. ಅದರ ನಿಜರೂಪವನ್ನು ಯಾರೂ ತಿಳಿಯಲಾರರು. ನಾನು ಪ್ರಭುವಿನ ಮಾಯೆಯ ಸ್ವರೂಪ ವನ್ನು ತಿಳಿಯಬಯಸುತ್ತೇನೆ. ಕೃಪೆದೋರಿ ನನಗೆ ತಿಳಿಸುವರಾಗಿರಿ. ॥1॥

(ಶ್ಲೋಕ - 2)

ಮೂಲಮ್

ನಾನುತೃಪ್ಯೇ ಜುಷನ್ಯುಷ್ಮದ್ವಚೋ ಹರಿಕಥಾಮೃತಮ್ ।
ಸಂಸಾರತಾಪನಿಸ್ತಪ್ತೋ ಮರ್ತ್ಯಸ್ತತ್ತಾಪಭೇಷಜಮ್ ॥

ಅನುವಾದ

ಈ ಮನುಷ್ಯನು ಪ್ರಪಂಚದ ತ್ರಿತಾಪದಿಂದ ಬೇಯುತ್ತಿದ್ದಾನೆ. ಇಂತಹ ತಾಪದಿಂದ ಬಿಡುಗಡೆ ಹೊಂದಲು ಭಗವಂತನ ಅಮೃತಮಯ ಹರಿಕಥೆಯೇ ಏಕಮಾತ್ರ ಪರ ಮೌಷಧವಾಗಿದೆ. ನಿಮ್ಮ ಮೂಲಕ ಭಗವತ್ಕಥಾಮೃತವನ್ನು ಪಾನಮಾಡುತ್ತಿದ್ದರೂ ನಮಗೆ ತೃಪ್ತಿಯಾಗುತ್ತಿಲ್ಲ. ಇನ್ನೂ- ಮತ್ತೂ ಕೇಳುವ ಉತ್ಕಂಠತೆ ಹೆಚ್ಚುತ್ತಾ ಹೋಗುತ್ತದೆ. ॥2॥

ಮೂಲಮ್

(ಶ್ಲೋಕ - 3)

ಮೂಲಮ್ (ವಾಚನಮ್)

ಅಂತರಿಕ್ಷ ಉವಾಚ

ಮೂಲಮ್

ಏಭಿರ್ಭೂತಾನಿ ಭೂತಾತ್ಮಾ ಮಹಾಭೂತೈರ್ಮಹಾಭುಜ ।
ಸಸರ್ಜೋಚ್ಚಾವಚಾನ್ಯಾದ್ಯಃ ಸ್ವಮಾತ್ರಾತ್ಮಪ್ರಸಿದ್ಧಯೇ ॥

ಅನುವಾದ

ಮೂರನೇಯ ಅಂತರಿಕ್ಷ ಯೋಗೀಶ್ವರರು ಹೇಳಿದರು — ಮಹಾಬಾಹುವೇ! ಆದಿಪುರುಷ ಭಗವಾನ್ ನಾರಾಯಣನು ಸರ್ವಪ್ರಾಣಿಗಳ ಆತ್ಮಾ ಆಗಿದ್ದಾನೆ. ಅವನೇ ಈ ಪಂಚಭೂತಗಳಿಂದ ಸಣ್ಣ-ದೊಡ್ಡ ಎಲ್ಲ ರೀತಿಯ ಪ್ರಾಣಿಗಳನ್ನು ಸೃಷ್ಟಿಸಿದನು ಹಾಗೂ ತಾನೇ ಸ್ವತಃ ವಿಷಯಭೋಗ ಪ್ರದಾನಮಾಡಲು ಅನೇಕ ವಿಧದಿಂದ ಸಾಮಗ್ರಿಯನ್ನೂ ಪ್ರಸ್ತುತಪಡಿಸಿದನು. ತನ್ನ ಆತ್ಮ ಸ್ವರೂಪದ ಜ್ಞಾನದ ವಿಸ್ತಾರಕ್ಕಾಗಿ ಅವನು ಸ್ವಯಂ ಅನೇಕ ರೂಪಗಳನ್ನು ಧರಿಸಿದನು. ಈ ಪ್ರಕಾರ ಸಮಸ್ತ ಸೃಷ್ಟಿ ಏಕಮಾತ್ರ ಪರಮಾತ್ಮನದ್ದೇ ಸ್ವರೂಪವಾಗಿದೆ. ॥3॥

(ಶ್ಲೋಕ - 4)

ಮೂಲಮ್

ಏವಂ ಸೃಷ್ಟಾನಿ ಭೂತಾನಿ ಪ್ರವಿಷ್ಟಃ ಪಂಚಧಾತುಭಿಃ ।
ಏಕಧಾ ದಶಧಾತ್ಮಾನಂ ವಿಭಜನ್ ಜುಷತೇ ಗುಣಾನ್ ॥

(ಶ್ಲೋಕ - 5)

ಮೂಲಮ್

ಗುಣೈರ್ಗುಣಾನ್ ಸ ಭುಂಜಾನ ಆತ್ಮಪ್ರದ್ಯೋತಿತೈಃ ಪ್ರಭುಃ ।
ಮನ್ಯಮಾನ ಇದಂ ಸೃಷ್ಟಮಾತ್ಮಾನಮಿಹ ಸಜ್ಜತೇ ॥

ಅನುವಾದ

ಈ ವಿಧದಿಂದ ಪರಮಾತ್ಮನು ಎಲ್ಲ ಪ್ರಾಣಿಗಳನ್ನು ನಿರ್ಮಿಸಿ, ಪಂಚಮಹಾಭೂತಗಳಿಂದ ಉಂಟಾದ ಆ ಶರೀರಗಳಲ್ಲಿ ಅಂತರ್ಯಾಮಿಯಾಗಿ ಸ್ವತಃ ಪ್ರವಿಷ್ಟನಾದನು. ಒಂದು ಮನಸ್ಸು ಮತ್ತು ಹತ್ತು ಇಂದ್ರಿಯಗಳ ಮೂಲಕ ತನ್ನನ್ನೇ ವಿಭಕ್ತನನ್ನಾಗಿಸಿ, ಸ್ವಯಂ ಆ ಗುಣಗಳನ್ನು ಉಪಭೋಗಿಸುತ್ತಾನೆ. ಆದರೆ ಅವನು ಆ ಗುಣಗಳಲ್ಲಿ ಆಸಕ್ತನಾಗುವುದಿಲ್ಲ. ತನ್ನ ಮೂಲಕವೇ ಪ್ರಕಾಶಿತವಾದ ಈ ಗುಣಗಳೇ ಗುಣಗಳಲ್ಲಿ ವರ್ತಿಸುತ್ತವೆ. ಆದರೆ ಜೀವಿಯು ಅವನಿಂದ ನಿರ್ಮಿಸಲ್ಪಟ್ಟ ಪ್ರಪಂಚದಲ್ಲಿ ಆತ್ಮಬುದ್ಧಿಯನ್ನಿರಿಸಿ, ‘ಇದೆಲ್ಲವೂ ನಾನೇ ಆಗಿದ್ದೇನೆ, ನನ್ನದೇ ಆಗಿದೆ’ ಎಂಬ ಸಂಬಂಧವನ್ನು ಜೋಡಿಸಿಕೊಂಡು, ತನ್ನಲ್ಲಿ ಕರ್ತೃತ್ವ-ಭೋಕ್ತೃತ್ವವನ್ನು ಆರೋಪಿಸಿಕೊಂಡು ಅವನು ಬಂಧಿತನಾಗುವನು. ಇದೇ ಮಾಯೆ ಆಗಿದೆ. ॥4-5॥

(ಶ್ಲೋಕ - 6)

ಮೂಲಮ್

ಕರ್ಮಾಣಿ ಕರ್ಮಭಿಃ ಕುರ್ವನ್ಸನಿಮಿತ್ತಾನಿ ದೇಹಭೃತ್ ।
ತತ್ತತ್ಕರ್ಮಲಂ ಗೃಹ್ಣನ್ಭ್ರಮತೀಹ ಸುಖೇತರಮ್ ॥

ಅನುವಾದ

ಈ ಪ್ರಕಾರ ದೇಹಾಭಿಮಾನಿ ಮನುಷ್ಯನು ಕರ್ಮೇಂದ್ರಿಯಗಳಿಂದ ಕರ್ಮಗಳನ್ನು ಸಕಾಮಭಾವದಿಂದ ಮಾಡುತ್ತಾ ಆಯಾಯಾ ಕರ್ಮಗಳನುಸಾರ ಫಲವನ್ನು ಭೋಗಿಸುತ್ತಾನೆ ಹಾಗೂ ಸುಖ ದುಃಖಗಳಲ್ಲಿ ಸಿಕ್ಕಿಹಾಕಿಕೊಂಡು ಜನ್ಮ-ಮರಣಗಳ ಸುಳಿಯಲ್ಲಿ ಅಲೆಯುತ್ತಾ ಇರುತ್ತಾನೆ. ಅವನು ಇದರಿಂದ ಮುಕ್ತನಾಗುವುದಿಲ್ಲ. ॥6॥

(ಶ್ಲೋಕ - 7)

ಮೂಲಮ್

ಇತ್ಥಂ ಕರ್ಮಗತೀರ್ಗಚ್ಛನ್ ಬಹ್ವಭದ್ರವಹಾಃ ಪುಮಾನ್ ।
ಆಭೂತಸಂಪ್ಲವಾತ್ ಸರ್ಗಪ್ರಲಯಾವಶ್ನುತೇವಶಃ ॥

ಅನುವಾದ

ಹೀಗೆ ಈ ಜೀವಿಯು ಅಹಂಭಾವದ ಕಾರಣವೇ ಅನೇಕ ಅಮಂಗಳ ಗತಿಗಳನ್ನು ಹೊಂದುತ್ತಾ ಇರುತ್ತಾನೆ. ಮಹಾಪ್ರಳಯದ ವರೆಗೂ ಹುಟ್ಟಿದ ಬಳಿಕ ಮೃತ್ಯು, ಮೃತ್ಯುವಿನ ಬಳಿಕ ಜನ್ಮ ಹೀಗೆ ಪರವಶನಾಗಿ ಹುಟ್ಟು-ಸಾವಿನ ಚಕ್ರದಲ್ಲಿ ಯಾವಾಗಲೂ ಸುತ್ತುತ್ತಾ ಇರುತ್ತಾನೆ. ಇದೆಲ್ಲವೂ ಭಗವಂತನ ಮಾಯೆಯಾಗಿದೆ. ॥7॥

(ಶ್ಲೋಕ - 8)

ಮೂಲಮ್

ಧಾತೂಪಪ್ಲವ ಆಸನ್ನೇ ವ್ಯಕ್ತಂ ದ್ರವ್ಯಗುಣಾತ್ಮಕಮ್ ।
ಅನಾದಿನಿಧನಃ ಕಾಲೋ ಹ್ಯವ್ಯಕ್ತಾಯಾಪಕರ್ಷತಿ ॥

(ಶ್ಲೋಕ - 9)

ಮೂಲಮ್

ಶತವರ್ಷಾ ಹ್ಯನಾವೃಷ್ಟಿರ್ಭವಿಷ್ಯತ್ಯುಲ್ಬಣಾ ಭುವಿ ।
ತತ್ಕಾಲೋಪಚಿತೋಷ್ಣಾರ್ಕೋ ಲೋಕಾಂಸೀನ್ ಪ್ರತಪಿಷ್ಯತಿ ॥

ಅನುವಾದ

ಪಂಚಮಹಾಭೂತಗಳ ಪ್ರಳಯದ ಸಮಯ ಸಮೀಪಸಿದಾಗ ಅನಾದಿ ಹಾಗೂ ಅನಂತ ಕಾಲನೇ ಸ್ಥೂಲ, ಸೂಕ್ಷ್ಮ, ದ್ರವ್ಯ, ಗುಣರೂಪೀ ಈ ಸಮಸ್ತ ದೃಶ್ಯ ಪ್ರಪಂಚವನ್ನು ಅವ್ಯಕ್ತದ ಕಡೆಗೆ ಅರ್ಥಾತ್ ತನ್ನ ಮೂಲ ಪ್ರಕೃತಿಯಲ್ಲಿ ಸೆಳೆದುಕೊಳ್ಳುವನು. ಅಂದರೆ ಎಲ್ಲವನ್ನೂ ತನ್ನಲ್ಲಿ ಲೀನಗೊಳಿಸಿಕೊಳ್ಳುವನು. ಆಗ ಒಂದೇ ಸವನೆ ನೂರುವರ್ಷ ಭಯಂಕರ ಕ್ಷಾಮತಲೆದೋರಿ, ಭೂಮಿಯಲ್ಲಿ ಭಾರೀ ಉಷ್ಣತೆ ಬೆಳೆಯುತ್ತದೆ. ಆ ಹೆಚ್ಚಾದ ಉಷ್ಣತೆಯಿಂದ ಮೂರೂ ಲೋಕಗಳು ಸುಡಲು ತೊಡಗುತ್ತವೆ. ॥8-9॥

(ಶ್ಲೋಕ - 10)

ಮೂಲಮ್

ಪಾತಾಲತಲಮಾರಭ್ಯ ಸಂಕರ್ಷಣಮುಖಾನಲಃ ।
ದಹನ್ನೂರ್ಧ್ವಶಿಖೋ ವಿಷ್ವಗ್ವರ್ಧತೇ ವಾಯುನೇರಿತಃ ॥

ಅನುವಾದ

ಆಗಲೇ ಸಂಕರ್ಷಣನ ಮುಖದಿಂದ ಪ್ರಚಂಡ ಅಗ್ನಿಜ್ವಾಲೆಗಳು ಹೊರ ಬೀಳುತ್ತವೆ. ವಾಯುವಿನ ಪ್ರೇರಣೆಯಿಂದ ಆ ಜ್ವಾಲೆಗಳು ಪಾತಾಳದಿಂದ ಸುಡಲು ಪ್ರಾರಂಭಿಸುತ್ತವೆ ಹಾಗೂ ಅತಿ ಎತ್ತರಕ್ಕೆ ಬೆಳೆಯುತ್ತಾ ಎಲ್ಲೆಡೆ ಹರಡಿಕೊಂಡು ಇಡೀ ವಿಶ್ವವನ್ನು ಸುಡಲು ತೊಡಗುತ್ತವೆ. ॥10॥

(ಶ್ಲೋಕ - 11)

ಮೂಲಮ್

ಸಾಂವರ್ತಕೋ ಮೇಘಗಣೋ ವರ್ಷತಿ ಸ್ಮ ಶತಂ ಸಮಾಃ ।
ಧಾರಾಭಿರ್ಹಸ್ತಿಹಸ್ತಾಭಿರ್ಲೀಯತೇ ಸಲಿಲೇ ವಿರಾಟ್ ॥

ಅನುವಾದ

ಆ ಪ್ರಚಂಡ ಉಷ್ಣತೆಯ ಪರಿಣಾಮವಾಗಿ ನೂರು ವರ್ಷಗಳವರೆಗೆ ಪ್ರಳಯಕಾಲದ ಸಂವರ್ತಕ ಮೇಘಗಳು ಆನೆಯ ಸೊಂಡಿಲಿನ ಗಾತ್ರದ ಭಾರೀ ಮಳೆ ಸುರಿಸುತ್ತವೆ. ಆಗ ಈ ವಿರಾಟ್ ವಿಶ್ವವು ನೀರಿನಲ್ಲಿ ಮುಳುಗಿಹೋಗುತ್ತದೆ. ॥11॥

(ಶ್ಲೋಕ - 12)

ಮೂಲಮ್

ತತೋ ವಿರಾಜಮುತ್ಸೃಜ್ಯ ವೈರಾಜಃ ಪುರುಷೋ ನೃಪ ।
ಅವ್ಯಕ್ತಂ ವಿಶತೇ ಸೂಕ್ಷ್ಮಂ ನಿರಿಂಧನ ಇವಾನಲಃ ॥

(ಶ್ಲೋಕ - 13)

ಮೂಲಮ್

ವಾಯುನಾ ಹೃತಗಂಧಾ ಭೂಃ ಸಲಿಲತ್ವಾಯ ಕಲ್ಪತೇ ।
ಸಲಿಲಂ ತದ್ಧೃತರಸಂ ಜ್ಯೋತಿಷ್ಟ್ವಾಯೋಪಕಲ್ಪತೇ ॥

ಅನುವಾದ

ಎಲೈ ರಾಜನೇ! ಉರವಲು ಮುಗಿದಾಗ ಅಗ್ನಿಯು ತನ್ನ ಅವ್ಯಕ್ತ ಸ್ವರೂಪದಲ್ಲಿ ಲೀನವಾಗುವಂತೆ, ಈ ವಿರಾಟ್ ಸ್ವರೂಪವುಳ್ಳ ಪರಮಾತ್ಮನು ತನ್ನ ವಿರಾಟ್ ಶರೀರವನ್ನು ತ್ಯಜಿಸಿ ತನ್ನ ಅವ್ಯಕ್ತ ಸ್ವರೂಪದಲ್ಲಿ ಇರುತ್ತಾನೆ. ಆ ಪ್ರಳಯಕಾಲದಲ್ಲಿ ಪೃಥ್ವಿಯ ಗಂಧ ತನ್ಮಾತ್ರೆಯನ್ನು ವಾಯುವು ಸೆಳೆದುಕೊಂಡಾಗ ಪೃಥ್ವಿಯು ನೀರಿನಲ್ಲಿ ಮುಳುಗಿಹೋಗುತ್ತದೆ. ಹೀಗೆಯೇ ಜಲದ ತನ್ಮಾತ್ರೆ ರಸವನ್ನೂ ವಾಯು ಸೆಳೆದುಕೊಂಡಾಗ ಜಲವು ತನ್ನ ಕಾರಣವಾದ ಅಗ್ನಿಯಲ್ಲಿ ವಿಲೀನವಾಗುತ್ತದೆ. ॥12-13॥

(ಶ್ಲೋಕ - 14)

ಮೂಲಮ್

ಹೃತರೂಪಂ ತು ತಮಸಾ ವಾಯೌ ಜ್ಯೋತಿಃ ಪ್ರಲೀಯತೇ ।
ಹೃತಸ್ಪರ್ಶೋವಕಾಶೇನ ವಾಯುರ್ನಭಸಿ ಲೀಯತೇ ॥

ಅನುವಾದ

ಅಂಧಕಾರದ ಮೂಲಕ ಅಗ್ನಿಯ ರೂಪತನ್ಮಾತ್ರೆಯನ್ನು ಹೀರಿಕೊಂಡಾಗ ಜ್ಯೋತಿ (ಅಗ್ನಿ) ತತ್ತ್ವವು ವಾಯುವಿನಲ್ಲಿ ವಿಲೀನವಾಗಿ ಹೋಗುತ್ತದೆ. ಹೀಗೆಯೇ ವಾಯುವಿನ ಗುಣ ಸ್ಪರ್ಶ ತನ್ಮಾತ್ರೆಯನ್ನು ಆಕಾಶದ ಮೂಲಕ ಹೀರಿಕೊಂಡಾಗ ವಾಯು ಆಕಾಶದಲ್ಲಿ ವಿಲೀನವಾಗುತ್ತದೆ. ॥14॥

(ಶ್ಲೋಕ - 15)

ಮೂಲಮ್

ಕಾಲಾತ್ಮನಾ ಹೃತಗುಣಂ ನಭ ಆತ್ಮನಿ ಲೀಯತೇ ।
ಇಂದ್ರಿಯಾಣಿ ಮನೋ ಬುದ್ಧಿಃ ಸಹ ವೈಕಾರಿಕೈರ್ನೃಪ ।
ಪ್ರವಿಶಂತಿ ಹ್ಯಹಂಕಾರಂ ಸ್ವಗುಣೈರಹಮಾತ್ಮನಿ ॥

ಅನುವಾದ

ಕಾಲಸ್ವರೂಪಿಯಾದ ಈಶ್ವರನು ಆಕಾಶದ ಗುಣ ಶಬ್ದ ತನ್ಮಾತ್ರೆಯನ್ನು ಹೀರಿಕೊಂಡಾಗ ಆಕಾಶವು ಅಹಂಕಾರ ತತ್ತ್ವದಲ್ಲಿ ಲಯವಾಗುತ್ತದೆ. ಜೊತೆಗೆ ಇಂದ್ರಿಯಗಳು, ಮನ-ಬುದ್ಧಿಗಳು ಇವೆಲ್ಲವೂ ತಮ್ಮ-ತಮ್ಮ ಅಧಿಷ್ಠಾತೃ ದೇವತೆಗಳೊಂದಿಗೆ ಅಹಂಕಾರದಲ್ಲಿ ಲೀನವಾಗುತ್ತವೆ. ಮತ್ತೆ ಅಹಂಕಾರವೂ ಮೂಲಸ್ವರೂಪ ಮಹತ್ತತ್ತ್ವದಲ್ಲಿ ಲೀನವಾಗಿ ಹೋಗುತ್ತದೆ. ॥15॥

(ಶ್ಲೋಕ - 16)

ಮೂಲಮ್

ಏಷಾ ಮಾಯಾ ಭಗವತಃ ಸರ್ಗಸ್ಥಿತ್ಯಂತಕಾರಿಣೀ ।
ತ್ರಿವರ್ಣಾ ವರ್ಣಿತಾಸ್ಮಾಭಿಃ ಕಿಂ ಭೂಯಃ ಶ್ರೋತುಮಿಚ್ಛಸಿ ॥

ಅನುವಾದ

ಈ ವಿಧದಿಂದ ಭಗವಂತನೇ ತ್ರಿಗುಣಮಯಿ ಮಾಯೆಯ ಮೂಲಕ ಈ ಸೃಷ್ಟಿಯ ಉತ್ಪತ್ತಿ, ಸ್ಥಿತಿ, ಸಂಹಾರ ಮಾಡುತ್ತಾ ಇರುತ್ತಾನೆ. ಇದನ್ನು ನಾನು ವರ್ಣಿಸಿದೆ. ಈಗ ನೀನು ಏನನ್ನು ಕೇಳಲು ಬಯಸುವೆ. ॥16॥

(ಶ್ಲೋಕ - 17)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಯಥೈತಾಮೈಶ್ವರೀಂ ಮಾಯಾಂ ದುಸ್ತರಾಮಕೃತಾತ್ಮಭಿಃ ।
ತರಂತ್ಯಂಜಃ ಸ್ಥೂಲಧಿಯೋ ಮಹರ್ಷ ಇದಮುಚ್ಯತಾಮ್ ॥

ಅನುವಾದ

ರಾಜಾ ನಿಮಿಯು ಕೇಳಿದನು — ಓ ಮಹರ್ಷಿಗಳೇ! ತಮ್ಮ ಮನವನ್ನು ವಶಪಡಿಸಿಕೊಂಡಿರದ ಜನರಿಗೆ ಭಗವಂತನ ಮಾಯೆಯನ್ನು ದಾಟುವುದು ತುಂಬಾ ಕಠಿಣವಾಗಿದೆ. ಆದ್ದರಿಂದ ಸಾಮಾನ್ಯ ಜನರೂ ಕೂಡ ಆಯಾಸವಿಲ್ಲದೆ ಈ ಮಾಯೆಯನ್ನು ದಾಟಬಲ್ಲಂತಹ ಯಾವುದಾದರೂ ಸರಳ ಉಪಾಯವನ್ನು ತಾವು ತಿಳಿಸಿರಿ. ॥17॥

(ಶ್ಲೋಕ - 18)

ಮೂಲಮ್ (ವಾಚನಮ್)

ಪ್ರಬುದ್ಧ ಉವಾಚ

ಮೂಲಮ್

ಕರ್ಮಾಣ್ಯಾರಭಮಾಣಾನಾಂ ದುಃಖಹತ್ಯೈ ಸುಖಾಯ ಚ ।
ಪಶ್ಯೇತ್ಪಾಕವಿಪರ್ಯಾಸಂ ಮಿಥುನೀಚಾರಿಣಾಂ ನೃಣಾಮ್ ॥

ಅನುವಾದ

ಈಗ ನಾಲ್ಕನೆಯವರಾದ ಶ್ರೀಪ್ರಬುದ್ಧ ಯೋಗೀಶ್ವರರು ಹೇಳುತ್ತಾರೆ — ಜನರು ಕಾಮನೆಗಳಿಂದ ಬಂಧಿತರಾಗಿ ಅನೇಕ ಪ್ರಕಾರದ ಕರ್ಮಗಳನ್ನು ಮಾಡುತ್ತಾ, ಇದರಿಂದ ತಮ್ಮ ಕಷ್ಟಗಳು ಇಲ್ಲವಾಗುವವು ಹಾಗೂ ಸುಖಿಯಾಗುವೆವು ಎಂದು ಯೋಚಿಸುತ್ತಾರೆ. ಆದರೆ ಅದರ ಪರಿಣಾಮ ವಿಪರೀತವೇ ಆಗುತ್ತದೆ. ಈ ಪ್ರಕಾರ ಜನರು ಕಾಮ್ಯ ಪ್ರವೃತ್ತಿಯಲ್ಲಿ ಸಿಕ್ಕಿಕೊಂಡಿರುವರು. ಅವರ ಆ ಕರ್ಮಗಳ ವಿಪರೀತ ಪರಿಣಾಮವನ್ನು ನೋಡಿ, ವಿಚಾರ ಕುಶಲರಾದವರು ಕಾಮ್ಯಕರ್ಮಗಳಿಂದ ನಿವೃತ್ತರಾಗಬೇಕು. ॥18॥

(ಶ್ಲೋಕ - 19)

ಮೂಲಮ್

ನಿತ್ಯಾರ್ತಿದೇನ ವಿತ್ತೇನ ದುರ್ಲಭೇನಾತ್ಮಮೃತ್ಯುನಾ ।
ಗೃಹಾಪತ್ಯಾಪ್ತಪಶುಭಿಃ ಕಾ ಪ್ರೀತಿಃ ಸಾಧಿತೈಶ್ಚಲೈಃ ॥

ಅನುವಾದ

ಧನವು ನಿತ್ಯವೂ ದುಃಖ ಕೊಡುವಂತಹುದು. ಅನೇಕ ಕಷ್ಟಗಳಿಂದ ಕೂಡಿದೆ. ಅದನ್ನು ಗಳಿಸಲು ಅನೇಕ ಕಷ್ಟಗಳು ಇದ್ದೇ ಇವೆ. ದೊರಕಿದರೂ ಪಡೆದವರ ಮೃತ್ಯುವಿನ ಕಾರಣವೂ ಆಗುತ್ತದೆ. ಹೀಗೆಯೇ ಮನೆ, ಮಕ್ಕಳು, ನೆಂಟರು, ಪಶು, ಧನ ಮುಂತಾ ದವುಗಳೂ ಕೂಡ ಅನಿತ್ಯ ಮತ್ತು ನಾಶವುಳ್ಳದ್ದಾಗಿದೆ. ಇಂತಹ ನಾಶವುಳ್ಳ ಪದಾರ್ಥಗಳಿಂದ ಶಾಶ್ವತವಾದ ಶಾಂತಿಯು ಹೇಗೆ ದೊರೆಯಬಲ್ಲದು? ॥19॥

(ಶ್ಲೋಕ - 20)

ಮೂಲಮ್

ಏವಂ ಲೋಕಂ ಪರಂ ವಿದ್ಯಾನ್ನಶ್ವರಂ ಕರ್ಮನಿರ್ಮಿತಮ್ ।
ಸತುಲ್ಯಾತಿಶಯಧ್ವಂಸಂ ಯಥಾ ಮಂಡಲವರ್ತಿನಾಮ್ ॥

ಅನುವಾದ

ಇದೇ ಪ್ರಕಾರ ಈ ಸಕಾಮ ಅನುಷ್ಠಾನಗಳಿಂದ ಪಡೆದುಕೊಂಡ ಸ್ವರ್ಗಾದಿಗಳೂ ಅನಿತ್ಯ, ನಾಶವುಳ್ಳದ್ದಾಗಿವೆ ಎಂದೇ ತಿಳಿಯಬೇಕು. ಏಕೆಂದರೆ, ಇಲ್ಲಿಯ ರಾಜರಲ್ಲಿ ಬೇರೆ ರಾಜರ ಕುರಿತು ಇರುವ ಮತ್ಸರದಂತೆ, ಅಲ್ಲಿಯೂ ಕೂಡ ಪರಸ್ಪರ ಸ್ಪರ್ಧೆಯ ಭಾವನೆ, ಈರ್ಷಾದ್ವೇಷದ ಭಾವ ಇರುತ್ತದೆ. ಆದ್ದರಿಂದ ಇಂತಹ ರಾಗ-ದ್ವೇಷದ ವಾತಾವರಣದಲ್ಲಿ ಸುಖ-ಶಾಂತಿ ಹೇಗೆ ಸಿಗಬಲ್ಲದು? ॥20॥

(ಶ್ಲೋಕ - 21)

ಮೂಲಮ್

ತಸ್ಮಾದ್ಗುರುಂ ಪ್ರಪದ್ಯೇತ ಜಿಜ್ಞಾಸುಃ ಶ್ರೇಯ ಉತ್ತಮಮ್ ।
ಶಾಬ್ದೇ ಪರೇ ಚ ನಿಷ್ಣಾತಂ ಬ್ರಹ್ಮಣ್ಯುಪಶಮಾಶ್ರಯಮ್ ॥

ಅನುವಾದ

ಆದ್ದರಿಂದ ಸರ್ವೋತ್ತಮ ಶ್ರೇಯೋಪ್ರಾಪ್ತಿಯ ಜಿಜ್ಞಾಸುವು ಶಬ್ದ ಬ್ರಹ್ಮನಲ್ಲಿ (ವೇದಾದಿಗಳಲ್ಲಿ) ನಿಷ್ಣಾತನಾಗಿದ್ದು, ಪರಬ್ರಹ್ಮ ಪರಮಾತ್ಮನಲ್ಲೇ ಶಾಂತಿಯ ಆಶ್ರಯ ಪಡೆದಂತಹ ಸದ್ಗುರುವನ್ನು ಶರಣು ಹೋಗಬೇಕು. ॥21॥

(ಶ್ಲೋಕ - 22)

ಮೂಲಮ್

ತತ್ರ ಭಾಗವತಾನ್ ಧರ್ಮಾನ್ ಶಿಕ್ಷೇದ್ ಗುರ್ವಾತ್ಮದೈವತಃ ।
ಅಮಾಯಯಾನುವೃತ್ತ್ಯಾ ಯೈಸ್ತುಷ್ಯೇದಾತ್ಮಾತ್ಮದೋ ಹರಿಃ ॥

ಅನುವಾದ

ಆ ಸದ್ಗುರುವು ತನ್ನ ಪ್ರಿಯ ಆತ್ಮಾ, ಇಷ್ಟದೈವವೆಂದು ತಿಳಿಯಬೇಕು. ಅವರ ಬಳಿಯಲ್ಲಿದ್ದು ಭಾಗವತ ಧರ್ಮದ ಉಪದೇಶವನ್ನು ಪಡೆಯಬೇಕು. ನಮ್ಮ ಪ್ರತಿಯೊಂದು ಕ್ರಿಯೆಯ ಮೂಲಕ ನಿಷ್ಕಪಟ ಭಾವದಿಂದ, ಸರಳ ಬುದ್ಧಿಯಿಂದ ಅವರ ಸೇವೆ ಮಾಡಬೇಕು. ಹೀಗೆ ಮಾಡುವುದರಿಂದ ಭಗವಂತನು ಬಹಳ ಬೇಗ ಒಲಿಯುವನು; ಭಗವಂತನು ಕೃಪಾಮೂರ್ತಿಯಾಗಿದ್ದಾನೆ. ಭಕ್ತರ ಮೇಲೆ ಕೃಪೆದೋರಲು ಸಂದರ್ಭ ನೋಡುತ್ತಿರುತ್ತಾನೆ. ಹೆಚ್ಚೇನು, ಅವನು ಭಕ್ತರಿಗೆ ತನ್ನನ್ನೇ ಕೊಟ್ಟುಕೊಳ್ಳುವನು. ॥22॥

ಮೂಲಮ್

(ಶ್ಲೋಕ - 23)
ಸರ್ವತೋ ಮನಸೋಸಂಗಮಾದೌ ಸಂಗಂ ಚ ಸಾಧುಷು ।
ದಯಾಂ ಮೈತ್ರೀಂ ಪ್ರಶ್ರಯಂ ಚ ಭೂತೇಷ್ವದ್ಧಾ ಯಥೋಚಿತಮ್ ॥

ಅನುವಾದ

ಮೊಟ್ಟಮೊದಲಿಗೆ ಎಲ್ಲ ಕಡೆಗಳಿಂದ, ಅಂತರಮನಸ್ಸಿನಿಂದ ಪೂರ್ಣ ಅನಾಸಕ್ತನಾಗಬೇಕು. ಸಾಧು ಸಂತರಲ್ಲಿ ಪ್ರೇಮವಿಡಬೇಕು. ಯಥಾಯೋಗ್ಯ ರೀತಿಯಿಂದ ಸಾಮಾನ್ಯ ಪ್ರಾಣಿಗಳಲ್ಲಿ ಪ್ರೀತಿ-ದಯೆ; ಸಮಾನರಲ್ಲಿ ಮಿತ್ರತೆ, ಹಿರಿಯರಲ್ಲಿ ಗೌರವ-ವಿನಮ್ರತೆ ಇರಬೇಕು. ॥23॥

(ಶ್ಲೋಕ - 24)

ಮೂಲಮ್

ಶೌಚಂ ತಪಸ್ತಿತಿಕ್ಷಾಂ ಚ ವೌನಂ ಸ್ವಾಧ್ಯಾಯಮಾರ್ಜವಮ್ ।
ಬ್ರಹ್ಮಚರ್ಯಮಹಿಂಸಾಂ ಚ ಸಮತ್ವಂ ದ್ವಂದ್ವಸಂಜ್ಞಯೋಃ ॥

ಅನುವಾದ

ಒಳ-ಹೊರಗಿನ ಶುದ್ಧಿ, ಸ್ವಧರ್ಮಾಚರಣರೂಪೀ ತಪಸ್ಸು, ಸಹಿಷ್ಣುತೆ, ಭಗವತ್ ಸ್ವರೂಪದ ಮನನ, ಸತ್ಶಾಸಗಳ ಸ್ವಾಧ್ಯಾಯ, ನಾಮಜಪ, ಸರಳತೆ, ಬ್ರಹ್ಮಚರ್ಯೆ, ಅಹಿಂಸಾ, ಚಳಿ-ಸೆಕೆ, ಸುಖ-ದುಃಖಾದಿ ದ್ವಂದ್ವಗಳಲ್ಲಿ ಹರ್ಷ-ಶೋಕದಿಂದ ರಹಿತನಾಗಿರಬೇಕು. ॥24॥

(ಶ್ಲೋಕ - 25)

ಮೂಲಮ್

ಸರ್ವತ್ರಾತ್ಮೇಶ್ವರಾನ್ವೀಕ್ಷಾಂ ಕೈವಲ್ಯಮನಿಕೇತತಾಮ್ ।
ವಿವಿಕ್ತಚೀರವಸನಂ ಸಂತೋಷಂ ಯೇನ ಕೇನಚಿತ್ ॥

ಅನುವಾದ

ಒಂದೇ ಆತ್ಮವು ಸರ್ವತ್ರವ್ಯಾಪ್ತವಾಗಿದೆ ಎಂಬ ಭಾವದಿಂದ ಆತ್ಮನ ಅಸ್ತಿತ್ವವನ್ನು ಎಲ್ಲಕಡೆ ನೋಡುವುದು, ಏಕಾಂತ ಪವಿತ್ರಸ್ಥಳದಲ್ಲಿ ಇರುವುದು, ಮನೆಯ ಕುರಿತು ಮಮತೆ ಇಲ್ಲದಿರುವುದು, ಸಾದಾ ಸರಳ ಉಡುಪು ಧರಿಸುವುದು, ಸಂನ್ಯಾಸಿಯಾಗಿದ್ದರೆ ವಲ್ಕಲ ಉಡುವುದು, ದೊರೆತುದರಲ್ಲಿ ಸಂತುಷ್ಟನಾಗಿರಬೇಕು. ॥25॥

(ಶ್ಲೋಕ - 26)

ಮೂಲಮ್

ಶ್ರದ್ಧಾಂ ಭಾಗವತೇ ಶಾಸೇನಿಂದಾಮನ್ಯತ್ರ ಚಾಪಿ ಹಿ ।
ಮನೋವಾಕ್ಕರ್ಮದಂಡಂ ಚ ಸತ್ಯಂ ಶಮದಮಾವಪಿ ॥

ಅನುವಾದ

ಭಗವತ್ ಪ್ರಾಪ್ತಿಯನ್ನು ತಿಳಿಸುವ ಶಾಸ್ತ್ರಗಳಲ್ಲಿ ಶ್ರದ್ಧೆ, ಯಾವುದೇ ಬೇರೆ ಶಾಸವನ್ನು ನಿಂದಿಸದಿರುವುದು; ಮನ, ವಾಣೀ, ಶರೀರದ ಸಂಯಮವಿಡುವುದು, ಸತ್ಯವಾಗಿ ನುಡಿಯುವುದು, ಶಮ-ಮನೋ ನಿಗ್ರಹ, ದಮ-ಇಂದ್ರಿಯ ನಿಗ್ರಹವಿರಬೇಕು. ॥26॥

(ಶ್ಲೋಕ - 27)

ಮೂಲಮ್

ಶ್ರವಣಂ ಕೀರ್ತನಂ ಧ್ಯಾನಂ ಹರೇರದ್ಭುತಕರ್ಮಣಃ ।
ಜನ್ಮಕರ್ಮಗುಣಾನಾಂ ಚ ತದರ್ಥೇಖಿಲಚೇಷ್ಟಿತಮ್ ॥

(ಶ್ಲೋಕ - 28)

ಮೂಲಮ್

ಇಷ್ಟಂ ದತ್ತಂ ತಪೋ ಜಪ್ತಂ ವೃತ್ತಂ ಯಚ್ಚಾತ್ಮನಃ ಪ್ರಿಯಮ್ ।
ದಾರಾನ್ಸುತಾನ್ ಗೃಹಾನ್ ಪ್ರಾಣಾನ್ಯತ್ಪರಸ್ಮೈ ನಿವೇದನಮ್ ॥

ಅನುವಾದ

ಅದ್ಭುತ ಕರ್ಮಿಯಾದ ಶ್ರೀಹರಿಯ ಜನ್ಮ-ಕರ್ಮ ಹಾಗೂ ಗುಣ-ಲೀಲೆಗಳನ್ನು ಶ್ರವಣ, ಕೀರ್ತನೆ, ಧ್ಯಾನ ಮಾಡುತ್ತಾ, ಅವನಿಗಾಗಿಯೇ ಎಲ್ಲ ಕ್ರಿಯೆಗಳನ್ನು ಮಾಡಬೇಕು. ಜಪ, ಯಜ್ಞ, ದಾನ, ಸದಾಚಾರ ಇವುಗಳಲ್ಲದೆ ಬೇರೆ ತನಗೆ ಪ್ರಿಯವಾದ ಪದಾರ್ಥಗಳೆಲ್ಲವನ್ನು, ಅಂದರೆ ತನ್ನ ಪತ್ನೀ, ಪುತ್ರ, ಮನೆ, ಪ್ರಾಣಗಳನ್ನೂ ಹೀಗೆ ಎಲ್ಲವನ್ನು ಭಗವಂತನಿಗೆ ಅರ್ಪಿಸಬೇಕು. ॥27-28॥

(ಶ್ಲೋಕ - 29)

ಮೂಲಮ್

ಏವಂ ಕೃಷ್ಣಾತ್ಮನಾಥೇಷು ಮನುಷ್ಯೇಷು ಚ ಸೌಹೃದಮ್ ।
ಪರಿಚರ್ಯಾಂ ಚೋಭಯತ್ರ ಮಹತ್ಸು ನೃಷು ಸಾಧುಷು ॥

(ಶ್ಲೋಕ - 30)

ಮೂಲಮ್

ಪರಸ್ಪರಾನುಕಥನಂ ಪಾವನಂ ಭಗವದ್ಯಶಃ ।
ಮಿಥೋ ರತಿರ್ಮಿಥಸ್ತುಷ್ಟಿರ್ನಿವೃತ್ತಿರ್ಮಿಥ ಆತ್ಮನಃ ॥

ಅನುವಾದ

ಶ್ರೀಕೃಷ್ಣನೇ ತಮ್ಮ ಆತ್ಮನಾಗಿರುವ ಮನುಷ್ಯರಲ್ಲಿ ನಾವು ಸೌಹಾರ್ದವನ್ನು ಸ್ಥಾಪಿಸಬೇಕು. ಸಂತ-ಮಹಾತ್ಮರನ್ನು ಸೇವಿಸಬೇಕು. ಹಾಗೆಯೇ ಸಾಮಾನ್ಯ ಜನರ ಕೂಡ ಸೇವೆ ಮಾಡಬೇಕು. ಅದರಲ್ಲಿಯೂ ಎಲ್ಲಾದರೂ ದೈವೀ ಆಪತ್ತು ಬಂದಾಗ, ಅದರಲ್ಲಿ ತೊಂದರೆಗೊಳಗಾದ ಜನರಿಗೆ ತುಂಬಾ ಶ್ರದ್ಧೆ, ಪ್ರೇಮದಿಂದ ನಿಷ್ಕಾಮಭಾವದಿಂದ ಸೇವೆಮಾಡಬೇಕು. ಭಗವಂತನ ಪರಮಪಾವನ ಯಶಗಳ ಸಂಬಂಧದಲ್ಲೇ ಪರಸ್ಪರ ಮಾತಾಡಬೇಕು. ಇಂತಹ ಸಾಧಕರನ್ನು ಸೇರಿಸಿ, ಅವರಲ್ಲಿ ಪ್ರೇಮವಿಡುವುದು, ಅವರೊಂದಿಗೆ ಎಲ್ಲ ರೀತಿಯಿಂದ ಪ್ರಸನ್ನನಾಗಿರುವುದು, ಪ್ರಪಂಚದಿಂದ ನಿವೃತ್ತನಾಗಿ ಪರಸ್ಪರ ಆಧ್ಯಾತ್ಮಿಕ ಶಾಂತಿಯನ್ನು ಅನುಭವಿಸಬೇಕು. ॥29-30॥

(ಶ್ಲೋಕ - 31)

ಮೂಲಮ್

ಸ್ಮರಂತಃ ಸ್ಮಾರಯಂತಶ್ಚ ಮಿಥೋಘೌಘಹರಂ ಹರಿಮ್ ।
ಭಕ್ತ್ಯಾ ಸಂಜಾತಯಾ ಭಕ್ತ್ಯಾ ಬಿಭ್ರತ್ಯುತ್ಪುಲಕಾಂ ತನುಮ್ ॥

ಅನುವಾದ

ರಾಜನೇ! ಶ್ರೀಹರಿಯು ಪಾಪರಾಶಿಗಳನ್ನು ಕ್ಷಣ ಮಾತ್ರದಲ್ಲಿ ಭಸ್ಮಮಾಡಿಬಿಡುತ್ತಾನೆ. ಆದ್ದರಿಂದ ಸತತವಾಗಿ ಅವನನ್ನೇ ಸ್ಮರಿಸಬೇಕು ಮತ್ತು ಇತರರಿಂದಲೂ ಸ್ಮರಣೆ ಮಾಡಿಸಬೇಕು. ಈ ಪ್ರಕಾರದ ಸಾಧನ ಭಕ್ತಿಯ ಅನುಷ್ಠಾನ ಮಾಡುತ್ತಾ-ಮಾಡುತ್ತಾ ಪ್ರೇಮ ಭಕ್ತಿಯ, ಸಾಧ್ಯಭಕ್ತಿಯ ಉದಯವಾಗುತ್ತದೆ. ಈ ಭಕ್ತಿಯಿಂದ ಅವನ ಶರೀರ ಪ್ರೇಮ ಪುಳಕಿತವಾಗುತ್ತಾ ಇರುತ್ತದೆ. ॥31॥

(ಶ್ಲೋಕ - 32)

ಮೂಲಮ್

ಕ್ವಚಿದ್ರುದಂತ್ಯಚ್ಯುತಚಿಂತಯಾ ಕ್ವಚಿ-
ದ್ಧಸಂತಿ ನಂದಂತಿ ವದಂತ್ಯಲೌಕಿಕಾಃ ।
ನೃತ್ಯಂತಿ ಗಾಯಂತ್ಯನುಶೀಲಯಂತ್ಯಜಂ
ಭವಂತಿ ತೂಷ್ಣೀಂ ಪರಮೇತ್ಯ ನಿರ್ವೃತಾಃ ॥

(ಶ್ಲೋಕ - 33)

ಮೂಲಮ್

ಇತಿ ಭಾಗವತಾನ್ ಧರ್ಮಾನ್ ಶಿಕ್ಷನ್ಭಕ್ತ್ಯಾ ತದುತ್ಥಯಾ ।
ನಾರಾಯಣಪರೋ ಮಾಯಾಮಂಜಸ್ತರತಿ ದುಸ್ತರಾಮ್ ॥

ಅನುವಾದ

ಭಗವಂತನ ಇಂತಹ ಭಕ್ತರು ಕೆಲವೊಮ್ಮೆ ‘ಅಯ್ಯೊ! ಇನ್ನೂ ಭಗವಾನ್ ಅಚ್ಯುತನ ದರ್ಶನವಾಗಲಿಲ್ಲವಲ್ಲ!’ ಎಂದು ಅಳುತ್ತಾರೆ; ಕೆಲವೊಮ್ಮೆ ನಗುತ್ತಾರೆ; ಕೆಲವೊಮ್ಮೆ ಆನಂದಿತರಾಗಿ, ಲೋಕೋತ್ತರ ಮಾತುಗಳನ್ನು ಆಡುತ್ತಿರುತ್ತಾರೆ; ಕೆಲವೊಮ್ಮೆ ಕುಣಿಯುತ್ತಾರೆ, ಹಾಡುತ್ತಾರೆ; ಕೆಲವೊಮ್ಮೆ ಪರಮಾತ್ಮನ ಲೀಲೆಗಳ ಅನುಕರಣ ಮಾಡುತ್ತಾರೆ; ಕೆಲವೊಮ್ಮೆ ಸುಮ್ಮನೆ ಇದ್ದುಬಿಡುತ್ತಾರೆ. ಹೀಗೆ ಮಾಡುತ್ತಾ-ಮಾಡುತ್ತಾ ಕೊನೆಗೆ ಅವರು ಪರಮಾತ್ಮನನ್ನು ಪಡೆದು ಪರಮಾನಂದವನ್ನು ಹೊಂದುತ್ತಾರೆ. (ಗೋಪಿಯರು ಭಗವಂತನ ಪ್ರೇಮದಲ್ಲಿ ಮುಳುಗಿರುತ್ತಿದ್ದರೋ ಹಾಗೆ.) ಈ ರೀತಿ ಭಾಗವತ ಧರ್ಮದ ಶಿಕ್ಷಣದಿಂದ ಸಂಪನ್ನರಾಗಿ ಅವರು ಅದರಿಂದ ಉಂಟಾದ ಭಕ್ತಿಯಿಂದ ನಾರಾಯಣ ಪರಾಯಣರಾಗುತ್ತಾರೆ. ಆ ಭಕ್ತಿಯ ಮಹಿಮೆಯಿಂದ ಈ ದುಸ್ತರ ಮಾಯೆಯನ್ನು ಸುಲಭವಾಗಿ ಪಾರಾಗಿ ಹೋಗುತ್ತಾರೆ. (ಇದು ಭಗವಂತನ ಭಕ್ತಿಯ ಮಹಿಮೆಯಾಗಿದೆ.) ॥32-33॥

(ಶ್ಲೋಕ - 34)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ನಾರಾಯಣಾಭಿಧಾನಸ್ಯ ಬ್ರಹ್ಮಣಃ ಪರಮಾತ್ಮನಃ ।
ನಿಷ್ಠಾಮರ್ಹಥ ನೋ ವಕ್ತುಂ ಯೂಯಂ ಹಿ ಬ್ರಹ್ಮವಿತ್ತಮಾಃ ॥

ಅನುವಾದ

ರಾಜಾ ನಿಮಿಯು ಕೇಳಿದನು — ಮಹರ್ಷಿಗಳೇ! ನೀವೆಲ್ಲ ಪರಮಾತ್ಮನ ನಿಜವಾದ ಸ್ವರೂಪವನ್ನು ಅರಿತವರಲ್ಲಿ ಸರ್ವಶ್ರೇಷ್ಠರಾಗಿರುವಿರಿ. ಪರಬ್ರಹ್ಮ ಪರಮಾತ್ಮನನ್ನು ನಾರಾಯಣನ ಹೆಸರಿನಿಂದ ವರ್ಣಿಸಲಾಗಿದೆ. ಅವನ ಸ್ವರೂಪವನ್ನು ನನಗೆ ತಿಳಿಸುವವರಾಗಿರಿ. ॥34॥

(ಶ್ಲೋಕ - 35)

ಮೂಲಮ್ (ವಾಚನಮ್)

ಪಿಪ್ಪಲಾಯನ ಉವಾಚ

ಮೂಲಮ್

ಸ್ಥಿತ್ಯುದ್ಭವಪ್ರಲಯಹೇತುರಹೇತುರಸ್ಯ
ಯತ್ ಸ್ವಪ್ನಜಾಗರಸುಷುಪ್ತಿಷು ಸದ್ಬಹಿಶ್ಚ ।
ದೇಹೇಂದ್ರಿಯಾಸುಹೃದಯಾನಿ ಚರಂತಿ ಯೇನ
ಸಂಜೀವಿತಾನಿ ತದವೇಹಿ ಪರಂ ನರೇಂದ್ರ ॥

ಅನುವಾದ

ಐದನೆಯವರಾದ ಶ್ರೀಪಿಪ್ಪಲಾಯನ ಯೋಗೀಶ್ವರರು ಹೇಳಿದರು — ರಾಜನೇ! ಪರಮಪ್ರಭು ಈ ವಿಶ್ವದ ಉತ್ಪತ್ತಿ, ಸ್ಥಿತಿ, ಪ್ರಳಯದ ಕಾರಣನಾಗಿರುವನು, ಆದರೆ ಅವನಿಗೆ ಯಾವ ಕಾರಣವೂ ಇಲ್ಲ. ಅವನೇ ಜಾಗ್ರತ್, ಸ್ವಪ್ನ, ಸುಷುಪ್ತಿ ಮೂರೂ ಅವಸ್ಥೆಗಳಲ್ಲಿ ಸಾಕ್ಷಿರೂಪದಿಂದ ಇರುತ್ತಾನೆ ಹಾಗೂ ಒಳಗೂ ಹೊರಗೂ ತುಂಬಿರುವನು. ಅವನ ಕಾರಣದಿಂದಲೇ ಈ ದೇಹ, ಇಂದ್ರಿಯಗಳು, ಪ್ರಾಣ, ಹೃದಯ ಉಜ್ಜೀವಿತವಾಗುತ್ತದೆ. ಅವನ ಅಸ್ತಿತ್ವದಿಂದಲೇ ಇವು ತಮ್ಮ-ತಮ್ಮ ಕೆಲಸ ಮಾಡುತ್ತವೆ. ಅವನನ್ನೇ ನೀನು ಪರಮ ಸತ್ಯ ತತ್ತ್ವ ನಾರಾಯಣನೆಂದು ತಿಳಿ. ॥35॥

(ಶ್ಲೋಕ - 36)

ಮೂಲಮ್

ನೈತನ್ಮನೋ ವಿಶತಿ ವಾಗುತ ಚಕ್ಷುರಾತ್ಮಾ
ಪ್ರಾಣೇಂದ್ರಿಯಾಣಿ ಚ ಯಥಾನಲಮರ್ಚಿಷಃ ಸ್ವಾಃ ।
ಶಬ್ದೋಪಿ ಬೋಧಕನಿಷೇಧತಯಾತ್ಮಮೂಲ-
ಮರ್ಥೋಕ್ತಮಾಹ ಯದೃತೇ ನ ನಿಷೇಧಸಿದ್ಧಿಃ ॥

ಅನುವಾದ

ಅಗ್ನಿಯ ಜ್ವಾಲೆಗಳು ಅಗ್ನಿಯಿಂದಲೇ ಉತ್ಪನ್ನವಾಗುತ್ತವೆ, ಆದರೆ ತಮ್ಮ ಸ್ವರೂಪ ಅಗ್ನಿಯನ್ನು ಇವು ಪ್ರಕಾಶಿಸಲಾರವು. ಹಾಗೆಯೇ ವಾಣೀ, ನೇತ್ರ, ಪ್ರಾಣ, ಇಂದ್ರಿಯಗಳು, ಅಂತಃ ಕರಣ ಇವೆಲ್ಲದರ ಮೂಲ ಆಧಾರ ಮತ್ತು ಪ್ರಕಾಶಕ ಏಕ ಮಾತ್ರ ಪರಮಾತ್ಮನೇ ಆಗಿರುವನು, ಆದರೆ ಇವೆಲ್ಲವು ತಮ್ಮ ಮೂಲ ಸ್ವರೂಪವನ್ನು ವರ್ಣಿಸಲು ಅಸಮರ್ಥವಾಗಿವೆ. ವೇದಗಳೂ ಕೂಡ ತಮ್ಮ ಕಾರಣಸ್ವರೂಪೀ ಪರಮಾತ್ಮತತ್ತ್ವವನ್ನು ಅದರ ಬೋಧ ಮಾಡಿಸುವ ಸಾಧಕರಿಗೆ ತಾತ್ಪರ್ಯ ರೂಪದಿಂದ ‘ನೇತಿ-ನೇತಿ’ ಹೀಗೆ ನಿಷೇಧಾತ್ಮಕ ವಚನಗಳಿಂದಲೇ ನಿರೂಪಿಸುತ್ತವೆ. ಏಕೆಂದರೆ, ಪರಮಾತ್ಮ ತತ್ತ್ವದ ಸತ್ತೆಯಿಲ್ಲದೆ ನಿಷೇಧವೂ ಕೂಡ ಸಿದ್ಧವಾಗಲಾರದು. ಎಲ್ಲವನ್ನು ನಿಷೇಧ ಮಾಡುತ್ತಾ-ಮಾಡುತ್ತಾ ಕೊನೆಗೆ ಉಳಿಯುವ ತತ್ತ್ವವನ್ನೇ ಪರಮತತ್ತ್ವ ‘ನಾರಾಯಣ’ನೆಂದು ತಿಳಿ. ॥36॥

(ಶ್ಲೋಕ - 37)

ಮೂಲಮ್

ಸತ್ತ್ವಂ ರಜಸ್ತಮ ಇತಿ ತ್ರಿವೃದೇಕಮಾದೌ
ಸೂತ್ರಂ ಮಹಾನಹಮಿತಿ ಪ್ರವದಂತಿ ಜೀವಮ್ ।
ಜ್ಞಾನಕ್ರಿಯಾರ್ಥಲರೂಪತಯೋರುಶಕ್ತಿ
ಬ್ರಹ್ಮೈವ ಭಾತಿ ಸದಸಚ್ಚ ತಯೋಃ ಪರಂ ಯತ್ ॥

ಅನುವಾದ

ಸೃಷ್ಟಿಯ ಆದಿಯಲ್ಲಿ ಏಕಮಾತ್ರ ಬ್ರಹ್ಮವೇ ಇತ್ತು. ಅವನಿಂದಲೇ ಸತ್ತ್ವ, ರಜ, ತಮ ಹೀಗೆ ತ್ರಿಗುಣಾತ್ಮಿಕಾ ಮೂಲಪ್ರಕೃತಿ ಉಂಟಾಯಿತು. ಪ್ರಕೃತಿಯಲ್ಲಿ ಕ್ಷೋಭೆ ಉಂಟಾದಾಗ ಮಹತ್ತತ್ತ್ವ ಉತ್ಪನ್ನವಾಯಿತು. ಅದರಿಂದಲೇ ಸೂತ್ರಾತ್ಮಾ ಹಿರಣ್ಯಗರ್ಭನ ಉತ್ಪತ್ತಿಯಾಯಿತು. ಮತ್ತೆ ಅಹಂಕಾರದಿಂದಲೇ ಮನ ಹಾಗೂ ಇಂದ್ರಿಯಗಳ ಅಧಿಷ್ಠಾತೃ ದೇವತೆಗಳು, ಪ್ರಾಣ, ಇಂದ್ರಿಯಗಳು ಮತ್ತು ವಿಷಯಗಳು ಹುಟ್ಟಿಕೊಂಡವು. ಬಳಿಕ ಆ ಪರಮಾತ್ಮನೇ ಜೀವ ರೂಪದಿಂದ ಇವೆಲ್ಲ ತತ್ತ್ವಗಳಲ್ಲಿ ಪ್ರವೇಶಿಸಿದನು. ಈ ಪ್ರಕಾರ ಅವೆಲ್ಲ ರೂಪದಲ್ಲಿ ಏಕಮಾತ್ರ ಆ ಅನಂತಶಕ್ತಿ ಸ್ವರೂಪ ಪರಬ್ರಹ್ಮ ಪರಮಾತ್ಮನೇ ಪ್ರಕಾಶಿತನಾಗುತ್ತಿರುವನು. ಹೀಗೆ ಸತ್-ಅಸತ್ ಅರ್ಥಾತ್ ಕಾರ್ಯ-ಕಾರಣವೆರಡರಲ್ಲಿಯೂ ಏಕಮಾತ್ರ ಬ್ರಹ್ಮನೇ ಇರುವನು. ಇದರಿಂದ ಆಚೆ ಇರುವವನು ಆ ಬ್ರಹ್ಮನೇ ಆಗಿರುವನು. ॥37॥

(ಶ್ಲೋಕ - 38)

ಮೂಲಮ್

ನಾತ್ಮಾ ಜಜಾನ ನ ಮರಿಷ್ಯತಿ ನೈಧತೇಸೌ
ನ ಕ್ಷೀಯತೇ ಸವನವಿದ್ವ್ಯಭಿಚಾರಿಣಾಂ ಹಿ ।
ಸರ್ವತ್ರ ಶಶ್ವದನಪಾಯ್ಯುಪಲಬ್ಧಿಮಾತ್ರಂ
ಪ್ರಾಣೋ ಯಥೇಂದ್ರಿಯಬಲೇನ ವಿಕಲ್ಪಿತಂ ಸತ್ ॥

(ಶ್ಲೋಕ - 39)

ಮೂಲಮ್

ಅಂಡೇಷು ಪೇಶಿಷು ತರುಷ್ವವಿನಿಶ್ಚಿತೇಷು
ಪ್ರಾಣೋ ಹಿ ಜೀವಮುಪಧಾವತಿ ತತ್ರ ತತ್ರ ।
ಸನ್ನೇ ಯದಿಂದ್ರಿಯಗಣೇಹಮಿ ಚ ಪ್ರಸುಪ್ತೇ
ಕೂಟಸ್ಥ ಆಶಯಮೃತೇ ತದನುಸ್ಮೃತಿರ್ನಃ ॥

ಅನುವಾದ

ಆ ಪರಬ್ರಹ್ಮಸ್ವರೂಪೀ ಆತ್ಮನು ಹುಟ್ಟುವುದಿಲ್ಲ, ಸಾಯುವುದಿಲ್ಲ. ವೃದ್ಧಿಯನ್ನು ಹೊಂದುವುದಿಲ್ಲ, ಇದೇ ಪ್ರಕಾರ ಅವನು ಕ್ಷೀಣನೂ ಆಗುವುದಿಲ್ಲ. ಅರ್ಥಾತ್ ಆತ್ಮನು ಷಡ್ ಭಾವ ವಿಕಾರಗಳಿಂದ ರಹಿತನಾಗಿರುವನು. ಪರಿವರ್ತನ ಶೀಲ ಎಲ್ಲ ವಸ್ತುಗಳ ಭೂತ, ಭವಿಷ್ಯ, ವರ್ತಮಾನ ಎಲ್ಲ ಅವಸ್ಥೆಗಳನ್ನು ಆತ್ಮನು ತಿಳಿಯುವವನಾಗಿದ್ದು, ಸರ್ವವ್ಯಾಪಿಯೂ, ಅವಿನಾಶಿಯೂ, ಜ್ಞಾನಸ್ವರೂಪನೂ ಆಗಿರುವನು. ಪ್ರಾಣವಾದರೋ ಒಂದೇಯಾಗಿದ್ದು ಸ್ಥಾನ ಭೇದದಿಂದ ಅದರ ಅನೇಕ ಹೆಸರುಗಳಾಗುವಂತೆ, ಒಂದೇ ಜ್ಞಾನವು ಇಂದ್ರಿಯಗಳ ಭೇದದ ಕಾರಣದಿಂದ ಬೇರೆ ಬೇರೆ ಹೆಸರುಗಳಿಂದ ತಿಳಿಯಲಾಗುತ್ತದೆ. ಅರ್ಥಾತ್ ಇಂದ್ರಿಯಗಳ ಭೇದದಿಂದ ನೋಡುವುದು, ಕೇಳುವುದು ಮುಂತಾದ ಕ್ರಿಯೆಗಳ ಹೆಸರು ಬೇರೆ-ಬೇರೆಯಾಗುತ್ತವೆ. ಹಾಗೆಯೇ ಒಂದೇ ಆತ್ಮನ ಸತ್ತೆಯನ್ನು ವಿವಿಧ ರೀತಿಯಿಂದ ತಿಳಿಯಲ್ಪಡುತ್ತದೆ. ಅಂಡಜ, ಜರಾಯುಜ, ಉದ್ಭಿಜ್ಜ, ಸ್ವೇದಜ ಈ ನಾಲ್ಕು ಪ್ರಕಾರದ ಜೀವಿಗಳಿವೆ. ಎಲ್ಲ ಜೀವಿಗಳಲ್ಲಿ ಪ್ರಾಣವು ಅವುಗಳ ಜೊತೆ-ಜೊತೆಗೆ ಹೋಗುತ್ತದೆ. ಜೀವಿಯು ಪ್ರಗಾಢನಿದ್ದೆಯಲ್ಲಿ ಮಲಗಿದ್ದಾಗ ಇಂದ್ರಿಯಗಳ ಸಹಿತ ಅಹಂಕಾರವೂ ನಿಶ್ಚೇಷ್ಟಿತವಾಗುತ್ತದೆ. ಆದರೆ ಸಾಕ್ಷಿರೂಪದಿಂದ ಆತ್ಮನು ನಿರ್ವಿಕಾರನಾಗಿ ಸ್ಥಿರವಾಗಿರುತ್ತಾನೆ. ಆ ಆತ್ಮನ ಸತ್ತೆಯಿಂದಲೇ ಮಲಗಿ ಎದ್ದ ಬಳಿಕ ‘ನಾನು ಗಾಢವಾದ ನಿದ್ದೆಯಲ್ಲಿ ಮಲಗಿದ್ದೆ’ ಎಂಬ ಸ್ಮೃತಿ ಇರುತ್ತದೆ. ಈ ಸ್ಮೃತಿಯೇ ಸುಷುಪ್ತಾವಸ್ತೆಯಲ್ಲಿ ಆತ್ಮನು ಇರುವುದನ್ನು ಸಿದ್ಧಪಡಿಸುತ್ತದೆ. ॥38-39॥

(ಶ್ಲೋಕ - 40)

ಮೂಲಮ್

ಯರ್ಹ್ಯಬ್ಜನಾಭಚರಣೈಷಣಯೋರುಭಕ್ತ್ಯಾ
ಚೇತೋಮಲಾನಿ ವಿಧಮೇದ್ಗುಣಕರ್ಮಜಾನಿ ।
ತಸ್ಮಿನ್ವಿಶುದ್ಧ ಉಪಲಭ್ಯತ ಆತ್ಮತತ್ತ್ವಂ
ಸಾಕ್ಷಾದ್ಯಥಾಮಲದೃಶೋಃ ಸವಿತೃಪ್ರಕಾಶಃ ॥

ಅನುವಾದ

ಭಗವಾನ್ ಕಮಲನಾಭನ ಚರಣಗಳಲ್ಲಿ ತೀವ್ರವಾದ ಭಕ್ತಿಯನ್ನಿರಿಸಿದಾಗ, ಆ ಭಕ್ತಿಯೇ ಗುಣ-ಕರ್ಮಗಳಿಂದ ಉತ್ಪನ್ನವಾದ ಚಿತ್ತದ ಎಲ್ಲ ರೀತಿಯ ಮಲ, ವಿಕ್ಷೇಪ, ಆವರಣ ದೋಷಗಳನ್ನು ತೊಳೆದು ಬಿಡುತ್ತದೆ. ಈ ವಿಧವಾಗಿ ಚಿತ್ತಶುದ್ಧಿಯಾದ ಬಳಿಕ ಆತ್ಮ ತತ್ತ್ವದ ಸಾಕ್ಷಾತ್ಕಾರವು ತಾನಾಗಿ ಆಗುತ್ತದೆ. ॥40॥

(ಶ್ಲೋಕ - 41)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಕರ್ಮಯೋಗಂ ವದತ ನಃ ಪುರುಷೋ ಯೇನ ಸಂಸ್ಕೃತಃ ।
ವಿಧೂಯೇಹಾಶು ಕರ್ಮಾಣಿ ನೈರ್ಷ್ಕರ್ಮ್ಯಂ ವಿಂದತೇ ಪರಮ್ ॥

ಅನುವಾದ

ರಾಜಾ ನಿಮಿಯು ಪ್ರಶ್ನಿಸಿದನು — ಯೋಗೀಶ್ವರರೇ! ಯಾವುದರ ಆಚರಣೆಯಿಂದ ಮನುಷ್ಯನು ಪರಮ ನೈಷ್ಕರ್ಮ್ಯ ಸಿದ್ಧಿಯನ್ನು ಪಡೆದುಕೊಳ್ಳುವನೋ, ತನ್ನ ಎಲ್ಲ ಪ್ರಕಾರದ ಕರ್ಮಗಳನ್ನು ಬೇಗನೇ ತೊಳೆದುಬಿಡುತ್ತಾನೋ, ಅರ್ಥಾತ್ ಯಾವ ಕರ್ಮಯೋಗದ ಆಚರಣೆಯಿಂದ ಮನುಷ್ಯನು ಕರ್ಮಬಂಧನದಿಂದ ಮುಕ್ತನಾಗಿ ಪರಮಶಾಂತಿಯನ್ನು ಪಡೆಯುವನೋ ಅಂತಹ ಕರ್ಮಯೋಗ ವನ್ನು ಈಗ ನನಗೆ ವರ್ಣಿಸಿ ಹೇಳಿರಿ. ॥41॥

(ಶ್ಲೋಕ - 42)

ಮೂಲಮ್

ಏವಂ ಪ್ರಶ್ನಮೃಷೀನ್ ಪೂರ್ವಮಪೃಚ್ಛಂ ಪಿತುರಂತಿಕೇ ।
ನಾಬ್ರುವನ್ ಬ್ರಹ್ಮಣಃ ಪುತ್ರಾಸ್ತತ್ರ ಕಾರಣಮುಚ್ಯತಾಮ್ ॥

ಅನುವಾದ

ಒಮ್ಮೆ ಇದೇ ಪ್ರಶ್ನೆಯನ್ನು ನಾನು ನನ್ನ ತಂದೆಯವರ ಮುಂದೆ ಬ್ರಹ್ಮ ಮಾನಸಪುತ್ರರಾದ ಸನಕಾದಿ ಋಷಿಗಳಲ್ಲಿ ಮಾಡಿದ್ದೆ. ಆದರೆ ಅವರು ಸರ್ವಜ್ಞರಾಗಿದ್ದರೂ ನನ್ನ ಪ್ರಶ್ನೆಗೆ ಉತ್ತರಿಸಲಿಲ್ಲ. ಇದರ ಕಾರಣವೇನಿತ್ತು? ದಯಮಾಡಿ ನನಗೆ ತಿಳಿಸಿರಿ. ॥42॥

(ಶ್ಲೋಕ - 43)

ಮೂಲಮ್ (ವಾಚನಮ್)

ಆವಿರ್ಹೋತ್ರ ಉವಾಚ

ಮೂಲಮ್

ಕರ್ಮಾಕರ್ಮವಿಕರ್ಮೇತಿ ವೇದವಾದೋ ನ ಲೌಕಿಕಃ ।
ವೇದಸ್ಯ ಚೇಶ್ವರಾತ್ಮತ್ವಾತ್ ತತ್ರ ಮುಹ್ಯಂತಿ ಸೂರಯಃ ॥

(ಶ್ಲೋಕ - 44)

ಮೂಲಮ್

ಪರೋಕ್ಷವಾದೋ ವೇದೋಯಂ ಬಾಲಾನಾಮನುಶಾಸನಮ್ ।
ಕರ್ಮಮೋಕ್ಷಾಯ ಕರ್ಮಾಣಿ ವಿಧತ್ತೇ ಹ್ಯಗದಂ ಯಥಾ ॥

ಅನುವಾದ

ಈಗ ಆರನೆಯವರಾದ ಆವಿರ್ಹೋತ್ರ ಯೋಗೀಶ್ವರರು ಹೇಳುತ್ತಾರೆ — ಕರ್ಮ (ಶಾಸ್ತ್ರವಿಹಿತ ಕರ್ಮ) ಅಕರ್ಮ (ನಿಷಿದ್ಧ ಕರ್ಮ), ವಿಕರ್ಮ (ವಿಹಿತ ಕರ್ಮದ ಉಲ್ಲಂಘನೆ) ಈ ಮೂರರ ವಿಧಾನ ವೇದಗಳ ಮೂಲಕ ಮಾಡಲಾಗಿದೆ; ಜನರಿಂದಲ್ಲ. ವೇದಗಳು ಪರಮಾತ್ಮನ ಸ್ವರೂಪವಾಗಿವೆ. ಆದರೆ ವೇದವಾಣಿಯಲ್ಲಿ ವಿದ್ವಾಂಸರೂ ಮೋಹಿತರಾಗುತ್ತಾರೆ. ಏಕೆಂದರೆ, ವೇದದ ವಾಣಿ ಪರೋಕ್ಷವಾದಾತ್ಮಕವಾಗಿದೆ. (ಶಬ್ದಾರ್ಥ ಬೇರೆಯಾಗಿದ್ದು, ತಾತ್ಪರ್ಯ ಬೇರೆಯಾಗಿರುವುದನ್ನು ಪರೋಕ್ಷವಾದ ಎಂದು ಹೇಳುತ್ತಾರೆ.) ರೋಗನಿವೃತ್ತಿಗಾಗಿ ಔಷಧಿಯನ್ನು ಮಿಠಾಯಿಯೊಳಗಿಟ್ಟು ತಿನ್ನಿಸುವಂತೆ, ಆ ಕರ್ಮಗಳ ಮೂಲಕ ಕರ್ಮ ಬಂಧನದಿಂದ ಮುಕ್ತರಾಗಲಿ ಎಂದು ವೇದಗಳು ಅಜ್ಞಾನಿಗಳನ್ನು ಅನುಶಾಸಿತವಾಗಿಸಲು ಕರ್ಮಗಳ ವಿಧಾನ ಮಾಡುತ್ತವೆ.* ॥43-44॥

ಟಿಪ್ಪನೀ
  • ಸಕಾಮ ಕರ್ಮಗಳ ಅನುಷ್ಠಾನದಲ್ಲಿ ಆಸ್ಥೆ ಇರುವವರು ಲಾಕಾಂಕ್ಷೆಯಿಂದ ಯಜ್ಞಾದಿ ಅನುಷ್ಠಾನ ಮಾಡುತ್ತಾರೆ. ಇದರ ಫಲವಾಗಿ ಸ್ವರ್ಗಾದಿ ಲೋಕಗಳ ಪ್ರಾಪ್ತಿಯೂ ಆಗುತ್ತದೆ. ಅದರಿಂದ ಅವರಿಗೆ ವೇದವಾಣಿಯಲ್ಲಿ ಆಸ್ಥೆ ದೃಢವಾಗುತ್ತದೆ. ಹೀಗೆ ಮಾಡುತ್ತಾ-ಮಾಡುತ್ತಾ ಭಗವತ್ಕೃಪೆಯಿಂದ ಎಂದಾದರೂ ಅವರಿಗೆ ಪರಮಾತ್ಮ ತತ್ತ್ವದ ಜಿಜ್ಞಾಸೆಯೂ ಕೂಡ ಉಂಟಾದರೆ ಅವರು ಸಾರ್ಥಕರಾಗುತ್ತಾರೆ.

(ಶ್ಲೋಕ - 45)

ಮೂಲಮ್

ನಾಚರೇದ್ಯಸ್ತು ವೇದೋಕ್ತಂ ಸ್ವಯಮಜ್ಞೋಜಿತೇಂದ್ರಿಯಃ ।
ವಿಕರ್ಮಣಾ ಹ್ಯಧರ್ಮೇಣ ಮೃತ್ಯೋರ್ಮೃತ್ಯುಮುಪೈತಿ ಸಃ ॥

ಅನುವಾದ

ಸ್ವತಃ ಅಜ್ಞಾನಿಯಾಗಿದ್ದು, ಅಜಿತೇಂದ್ರಿಯನಾಗಿದ್ದು, ವೇದವಿಹಿತ ಕರ್ಮಗಳನ್ನು ಆಚರಿಸದವನು ವಿಹಿತ ಕರ್ಮಗಳ ಉಲ್ಲಂಘನೆಯಿಂದ ಪಾಪಕ್ಕೆ ಭಾಗಿಯಾಗುತ್ತಾನೆ. ತತ್ಲವಾಗಿ ಸತ್ತಬಳಿಕ ಮೃತ್ಯುವನ್ನೇ ಪಡೆಯುತ್ತಾರೆ. ಅರ್ಥಾತ್ ಜನ್ಮ-ಮರಣದ ಚಕ್ರದಲ್ಲಿ ಬಿದ್ದಿರುತ್ತಾನೆ, ಮುಕ್ತನಾಗುವುದಿಲ್ಲ.॥45॥

(ಶ್ಲೋಕ - 46)

ಮೂಲಮ್

ವೇದೋಕ್ತಮೇವ ಕುರ್ವಾಣೋ ನಿಸ್ಸಂಗೋರ್ಪಿತಮೀಶ್ವರೇ ।
ನೈಷ್ಕರ್ಮ್ಯಾಂ ಲಭತೇ ಸಿದ್ಧಿಂ ರೋಚನಾರ್ಥಾ ಲಶ್ರುತಿಃ ॥

ಅನುವಾದ

ವೇದವಿಹಿತ ಕರ್ಮಗಳನ್ನು ಮಾಡುತ್ತಾ ಭಗವಂತನಿಗೆ ಅರ್ಪಿಸುತ್ತಾ, ಅನಾಸಕ್ತಭಾವದಿಂದ ಕರ್ಮಮಾಡುವ ವ್ಯಕ್ತಿಯು ನೈಷ್ಕರ್ಮ್ಯ ರೂಪೀ ಪರಮ ಸಿದ್ಧಿಯನ್ನು ಪಡೆದುಕೊಳ್ಳುತ್ತಾನೆ. ವೇದಗಳಲ್ಲಿ ಸ್ವರ್ಗಾದಿರೂಪೀ ಫಲದ ವರ್ಣನೆಯೂ ಇದೆ. ಅದರ ತಾತ್ಪರ್ಯ ಫಲದ ಸತ್ಯತೆಯಲ್ಲಿರದೆ ವೈದಿಕ ಕರ್ಮಗಳಲ್ಲಿ ಅಭಿರುಚಿ ಉಂಟಾಗಿಸಲೆಂದೇ ಆಗಿದೆ. ॥46॥

(ಶ್ಲೋಕ - 47)

ಮೂಲಮ್

ಯ ಆಶು ಹೃದಯಗ್ರಂಥಿಂ ನಿರ್ಜಿಹೀರ್ಷುಃ ಪರಾತ್ಮನಃ ।
ವಿಧಿನೋಪಚರೇದ್ದೇವಂ ತಂತ್ರೋಕ್ತೇನ ಚ ಕೇಶವಮ್ ॥

ಅನುವಾದ

ರಾಜನೇ! ಯಾರು ಪರಬ್ರಹ್ಮಸ್ವರೂಪೀ ಆತ್ಮನ ವಿಷಯ ದಲ್ಲಿರುವ ಅಜ್ಞಾನದ ಗ್ರಂಥಿಯನ್ನು ಪೂರ್ಣವಾಗಿ ಕತ್ತರಿಸಲು ಬಯಸುತ್ತಾನೋ, ಅವನು ವೈದಿಕ ಹಾಗೂ ಆಗಮ ಎರಡೂ ಪದ್ಧತಿಯಿಂದ ಭಗವಂತನ ಆರಾಧನೆ ಮಾಡಬೇಕು.॥47॥

ಮೂಲಮ್

(ಶ್ಲೋಕ - 48)
ಲಬ್ಧಾನುಗ್ರಹ ಆಚಾರ್ಯಾತ್ತೇನ ಸಂದರ್ಶಿತಾಗಮಃ ।
ಮಹಾಪುರುಷಮಭ್ಯರ್ಚೇನ್ಮೂರ್ತ್ಯಾಭಿಮತಯಾತ್ಮನಃ ॥

ಅನುವಾದ

ಮೊದಲಿಗೆ ಸೇವಾದಿಗಳ ಮೂಲಕ ಗುರುಗಳಿಂದ ದೀಕ್ಷೆಯನ್ನು ಪಡೆದು, ಮತ್ತೆ ಅವರಿಂದ ಉಪಾಸನಾವಿಧಿಯನ್ನು ಕಲಿಯಬೇಕು. ನಮಗೆ ಪ್ರಿಯವಾದ, ಇಷ್ಟವಾದ ಭಗವಂತನ ಮೂರ್ತಿಯ ಮೂಲಕ ಭಗವಾನ್ ಪುರುಷೋತ್ತಮನನ್ನು ಪೂಜಿಸಬೇಕು. ॥48॥

(ಶ್ಲೋಕ - 49)

ಮೂಲಮ್

ಶುಚಿಃ ಸಮ್ಮುಖಮಾಸೀನಃ ಪ್ರಾಣಸಂಯಮನಾದಿಭಿಃ ।
ಪಿಂಡಂ ವಿಶೋಧ್ಯ ಸಂನ್ಯಾಸಕೃತರಕ್ಷೋರ್ಚಯೇದ್ಧರಿಮ್ ॥

ಅನುವಾದ

ಸ್ನಾನಾದಿಗಳಿಂದ ಶರೀರವನ್ನು ಮತ್ತು ಸಂತೋಷಾದಿಗಳಿಂದ ಅಂತಃಕರಣವನ್ನು ಶುದ್ಧಮಾಡಬೇಕು. ಇದಾದ ಬಳಿಕ ಭಗವಂತನ ಮೂರ್ತಿಯ ಮುಂದೆ ಕುಳಿತುಕೊಂಡು ಪ್ರಾಣಾಯಾಮಾದಿಗಳಿಂದ ಭೂತಶುದ್ಧಿ-ನಾಡೀಶೋಧನ ಮಾಡಬೇಕು. ಅನಂತರ ವಿಧಿಪೂರ್ವಕ ಮಂತ್ರ, ದೇವತೆ ಇವುಗಳ ನ್ಯಾಸದಿಂದ ಶರೀರ ರಕ್ಷೆಯನ್ನು ಮಾಡಿಕೊಂಡು ಭಗವಂತನನ್ನು ಪೂಜಿಸಬೇಕು. ॥49॥

(ಶ್ಲೋಕ - 50)

ಮೂಲಮ್

ಅರ್ಚಾದೌ ಹೃದಯೇ ಚಾಪಿ ಯಥಾಲಬ್ಧೋಪಚಾರಕೈಃ ।
ದ್ರವ್ಯಕ್ಷಿತ್ಯಾತ್ಮಲಿಂಗಾನಿ ನಿಷ್ಪಾದ್ಯ ಪ್ರೋಕ್ಷ್ಯ ಚಾಸನಮ್ ॥

(ಶ್ಲೋಕ - 51)

ಮೂಲಮ್

ಪಾದ್ಯಾದೀನುಪಕಲ್ಪ್ಯಾಥ ಸನ್ನಿಧಾಪ್ಯ ಸಮಾಹಿತಃ ।
ಹೃದಾದಿಭಿಃ ಕೃತನ್ಯಾಸೋ ಮೂಲಮಂತ್ರೇಣ ಚಾರ್ಚಯೇತ್ ॥

ಅನುವಾದ

ಮೊದಲಿಗೆ ಭಗವಂತನನ್ನು ಹೃದಯದಲ್ಲಿ ಧ್ಯಾನಿಸಿ ಮತ್ತೆ ಅರ್ಚಾವಿಗ್ರಹದಲ್ಲಿ ಆವಾಹಿಸಬೇಕು. ಸಮಯಕ್ಕನುಸಾರ ಲಭ್ಯವಾದ ಎಲ್ಲ ಸಾಮಗ್ರಿಗಳನ್ನು ಶುದ್ಧ ಹಾಗೂ ಪವಿತ್ರಗೊಳಿಸಿ, ನೆಲವನ್ನು ತೊಳೆದು, ಸ್ವತಃ ಸ್ನಾನಾದಿಗಳಿಂದ ಶುದ್ಧನಾಗಿ ಪೂಜಿಸುವ ಭಗವಂತನ ಮೂರ್ತಿ, ಪ್ರತಿಮೆಯನ್ನೂ ಕೂಡ ಮೊದಲೇ ಸಿದ್ಧವಾಗಿಡಬೇಕು. ಎಲ್ಲ ವಸ್ತುಗಳನ್ನು ಮೊದಲೇ ಸಿದ್ಧಪಡಿಸಿ, ಆಸನವನ್ನೂ ಶುದ್ಧಮಾಡಬೇಕು. ಪಾದ್ಯ, ಅರ್ಘ್ಯ, ಧೂಪ, ದೀಪ, ನೈವೇದ್ಯ ಮುಂತಾದುವನ್ನೂ ಮುಂದುಗಡೆ ಸಿದ್ಧಪಡಿಸಬೇಕು. ಮತ್ತೆ ಹೃದಯಾದಿನ್ಯಾಸ ಅಂಗನ್ಯಾಸ, ಕರನ್ಯಾಸಮಾಡಿ ಮೂಲಮಂತ್ರದಿಂದ ಭಗವಂತನನ್ನು ಪೂಜಿಸಬೇಕು. ॥50-51॥

(ಶ್ಲೋಕ - 52)

ಮೂಲಮ್

ಸಾಂಗೋಪಾಂಗಾಂ ಸಪಾರ್ಷದಾಂ
ತಾಂ ತಾಂ ಮೂರ್ತಿಂ ಸ್ವಮಂತ್ರತಃ ।
ಪಾದ್ಯಾರ್ಘ್ಯಾಚಮನೀಯಾದ್ಯೈಃ
ಸ್ನಾನವಾಸೋವಿಭೂಷಣೈ ॥

(ಶ್ಲೋಕ - 53)

ಮೂಲಮ್

ಗಂಧಮಾಲ್ಯಾಕ್ಷತ ಸ್ರಗ್ಭಿರ್ಧೂಪದೀಪೋಪಹಾರಕೈಃ ।
ಸಾಂಗಂ ಸಂಪೂಜ್ಯ ವಿಧಿವತ್ಸ್ತವೈಃ ಸ್ತುತ್ವಾ ನಮೇದ್ಧರಿಮ್ ॥

ಅನುವಾದ

ತಮ್ಮ-ತಮ್ಮ ಉಪಾಸ್ಯದೇವರ ಶ್ರೀವಿಗ್ರಹದ ಹೃದಯಾದಿ ಅಂಗ, ಆಯುಧಾದಿ ಉಪಾಂಗಗಳನ್ನೂ ಮತ್ತು ಪಾರ್ಷದರ ಸಹಿತ ಅವನ ಮೂಲಮಂತ್ರದಿಂದ ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ, ಆಭೂಷಣ, ಗಂಧ, ಪುಷ್ಪ, ದಧಿ, ಅಕ್ಷತೆಯಿಂದ* ತಿಲಕಗೈದು, ಧೂಪ, ದೀಪ, ನೈವೇದ್ಯ ಮುಂತಾದುವನ್ನೂ ವಿಧಿವತ್ತಾಗಿ ಪೂಜಿಸಿ, ಮತ್ತೆ ಸ್ತೋತ್ರಗಳಿಂದ ಸ್ತುತಿಮಾಡಿ ಪರಿವಾರಸಹಿತ ಭಗವಾನ್ ಶ್ರೀಹರಿಯನ್ನು ನಮಸ್ಕರಿಸಬೇಕು. ॥52-53॥

(ಶ್ಲೋಕ - 54)

ಮೂಲಮ್

ಆತ್ಮಾನಂ ತನ್ಮಯಂ ಧ್ಯಾಯನ್ಮೂರ್ತಿಂ ಸಂಪೂಜಯೇದ್ಧರೇಃ ।
ಶೇಷಾಮಾಧಾಯ ಶಿರಸಿ ಸ್ವಧಾಮ್ನ್ಯುದ್ವಾಸ್ಯ ಸತ್ಕೃತಮ್ ॥

ಅನುವಾದ

ತನ್ನನ್ನು ಭಗವನ್ಮಯನೆಂದು ಧ್ಯಾನಮಾಡುತ್ತಾ ಭಗವಂತನ ಮೂರ್ತಿಯನ್ನು ಪೂಜಿಸಬೇಕು. ಪುಷ್ಪ ಪ್ರಸಾದವನ್ನು ತನ್ನ ತಲೆಯಲ್ಲಿ ಧರಿಸಿ, ಆದರದಿಂದ ಭಗವದ್ವಿಗ್ರಹವನ್ನು ಅದರ ಸ್ಥಾನವಾದ ಸಿಂಹಾಸನದಲ್ಲಿ ಸ್ಥಾಪಿಸಿ ಪೂಜೆಯನ್ನು ಮುಗಿಸಬೇಕು. ॥54॥

(ಶ್ಲೋಕ - 55)

ಮೂಲಮ್

ಏವಮಗ್ನ್ಯರ್ಕತೋಯಾದಾವತಿಥೌ ಹೃದಯೇ ಚ ಯಃ ।
ಯಜತೀಶ್ವರಮಾತ್ಮಾನಮಚಿರಾನ್ಮುಚ್ಯತೇ ಹಿ ಸಃ ॥

ಅನುವಾದ

ಈ ಪ್ರಕಾರ ಅಗ್ನಿ, ಸೂರ್ಯ, ಜಲ, ಅತಿಥಿ ಮತ್ತು ತನ್ನ ಹೃದಯದಲ್ಲಿ ಆತ್ಮರೂಪದಿಂದ ಶ್ರೀಹರಿಯ ಪೂಜೆ ಮಾಡುವವನು ಬೇಗನೆ ಮುಕ್ತನಾಗಿ ಹೋಗುತ್ತಾನೆ. ॥55॥

ಟಿಪ್ಪನೀ
  • ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಅಕ್ಷತೆಗಳ ಪ್ರಯೋಗ ಕೇವಲ ತಿಲಕಾಲಂಕಾರದಲ್ಲಿ ಮಾತ್ರ ಮಾಡಬೇಕು. ಪೂಜೆಯಲ್ಲಿ ಮಾಡಬಾರದು. ‘‘ನಾಕ್ಷತೈರರ್ಚಯೇದ್ ವಿಷ್ಣುಂ ನ ಕೇತಕ್ಯಾ ಮಹೇಶ್ವರಮ್’’
ಅನುವಾದ (ಸಮಾಪ್ತಿಃ)

ಮೂರನೆಯ ಅಧ್ಯಾಯವು ಮುಗಿಯಿತು. ॥3॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ತೃತೀಯೋಽಧ್ಯಾಯಃ ॥3॥