[ಎರಡನೆಯ ಅಧ್ಯಾಯ]
ಭಾಗಸೂಚನಾ
ವಸುದೇವನ ಬಳಿಗೆ ನಾರದರು ಬರುವುದು, ಅವರಿಗೆ ರಾಜಾ ನಿಮಿ ಹಾಗೂ ಒಂಭತ್ತು ಯೋಗೀಶ್ವರರ ಸಂವಾದವನ್ನು ತಿಳಿಸಿದುದು
(ಶ್ಲೋಕ - 1)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಗೋವಿಂದಭುಜಗುಪ್ತಾಯಾಂ ದ್ವಾರವತ್ಯಾಂ ಕುರೂದ್ವಹ ।
ಅವಾತ್ಸೀನ್ನಾರದೋಭೀಕ್ಷ್ಣಂ ಕೃಷ್ಣೋಪಾಸನಲಾಲಸಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಕುರುನಂದನಾ! ಭಗವಾನ್ ಶ್ರೀಕೃಷ್ಣನ ಬಾಹುಬಲದಿಂದ ಸಂರಕ್ಷಿತ ದ್ವಾರಕಾಪುರಿಯಲ್ಲಿ ಶ್ರೀಕೃಷ್ಣದರ್ಶನದ ಲಾಲಸೆಯಿಂದ ನಾರದ ಮಹರ್ಷಿಗಳು ಮೇಲಿಂದ ಮೇಲೆ ಬಂದು ತಂಗುತ್ತಿದ್ದರು. ॥1॥
(ಶ್ಲೋಕ - 2)
ಮೂಲಮ್
ಕೋ ನು ರಾಜನ್ನಿಂದ್ರಿಯವಾನ್ ಮುಕುಂದಚರಣಾಂಬುಜಮ್ ।
ನ ಭಜೇತ್ ಸರ್ವತೋಮೃತ್ಯುರುಪಾಸ್ಯಮಮರೋತ್ತಮೈಃ ॥
ಅನುವಾದ
ಎಲೈರಾಜನೇ! ಬ್ರಹ್ಮಾದಿ ದೇವತೆಗಳ ಉಪಾಸ್ಯನಾದ ಭಗವಂತನ ಚರಣಕಮಲಗಳ ದಿವ್ಯ ಮಧುರ ಮಕರಂದವನ್ನು ಪಾನಮಾಡದವನು, ಭಜಿಸದವನು, ಅವನ ಅಲೌಕಿಕ ರೂಪಮಾಧುರ್ಯವನ್ನು ನೋಡದವನು, ಮಂಗಲಮಯ ಧ್ವನಿಯನ್ನು ಕೇಳದವನು ಯಾರಿರುವನು? ಏಕೆಂದರೆ, ಅವನು ಎಲ್ಲ ಕಡೆಯಿಂದ ಮೃತ್ಯುವಿನಿಂದ ಮುತ್ತಲ್ಪಟ್ಟವನಾಗಿದ್ದಾನೆ. ॥2॥
ಮೂಲಮ್
(ಶ್ಲೋಕ - 3)
ತಮೇಕದಾ ತು ದೇವರ್ಷಿಂ ವಸುದೇವೋ ಗೃಹಾಗತಮ್ ।
ಅರ್ಚಿತಂ ಸುಖಮಾಸೀನಮಭಿವಾದ್ಯೇದಮಬ್ರವೀತ್ ॥
ಅನುವಾದ
ಒಮ್ಮೆ ಶ್ರೀನಾರದರು ವಸುದೇವನ ಅರಮನೆಗೆ ಬಂದಿದ್ದರು. ವಸುದೇವನು ಆದರಪೂರ್ವಕ ಅವರನ್ನು ಅಭಿನಂದಿಸಿ, ಸುಖಾಸನದಲ್ಲಿ ಕುಳ್ಳಿರಿಸಿ, ಅವರನ್ನು ಯಥಾವಿಧಿಯಿಂದ ಪೂಜಿಸಿದನು. ಮತ್ತೆ ವಂದಿಸಿಕೊಂಡು ಇಂತೆಂದನು ॥3॥
(ಶ್ಲೋಕ - 4)
ಮೂಲಮ್ (ವಾಚನಮ್)
ವಸುದೇವ ಉವಾಚ
ಮೂಲಮ್
ಭಗವನ್ ಭವತೋ ಯಾತ್ರಾ ಸ್ವಸ್ತಯೇ ಸರ್ವದೇಹಿನಾಮ್ ।
ಕೃಪಣಾನಾಂ ಯಥಾ ಪಿತ್ರೋರುತ್ತಮಶ್ಲೋಕವರ್ತ್ಮನಾಮ್ ॥
ಅನುವಾದ
ವಸುದೇವನು ಹೇಳಿದನು — ಮಹಾತ್ಮರಾದ ನಾರದರೇ! ನೀವು ಪುಣ್ಯಶ್ಲೋಕ ಭಗವಂತನ ಮಾರ್ಗಾನುಯಾಯಿಗಳು. ತಮ್ಮ ಸಂಚಾರ(ಯಾತ್ರೆ)ವು ಎಲ್ಲ ಪ್ರಾಣಿಗಳ ಮಂಗಳ ಕ್ಕಾಗಿಯೇ ಇರುತ್ತದೆ. ತಂದೆ-ತಾಯಿಯವರನ್ನೇ ಅವಲಂಬಿಸಿರುವ ಸಣ್ಣ ಮಕ್ಕಳಿಗೆ ಅವರು ಬಳಿಗೆ ಬಂದಾಗ ಪರಮಹರ್ಷವಾಗುವಂತೆ, ನಿಮ್ಮಂತಹ ಮಹಾಪುರುಷರ ಆಗಮನವು ಎಲ್ಲ ಪ್ರಾಣಿಗಳಿಗೆ ಶ್ರೇಯಸ್ಕರವೇ ಆಗಿರುತ್ತದೆ. ॥4॥
(ಶ್ಲೋಕ - 5)
ಮೂಲಮ್
ಭೂತಾನಾಂ ದೇವಚರಿತಂ ದುಃಖಾಯ ಚ ಸುಖಾಯ ಚ ।
ಸುಖಾಯೈವ ಹಿ ಸಾಧೂನಾಂ ತ್ವಾದೃಶಾಮಚ್ಯುತಾತ್ಮನಾಮ್ ॥
ಅನುವಾದ
ಬೇರೆ ದೇವತೆಗಳ ವ್ಯವಹಾರ ಪ್ರಾಣಿಗಳ ಸುಖಕ್ಕಾಗಿಯೂ, ದುಃಖಕ್ಕಾಗಿಯೂ ಆಗಿರುತ್ತದೆ. (ದೇವತೆ ಗಳನ್ನು ವಿಧಿವತ್ತಾಗಿ ಪೂಜಿಸಿದರೆ ಸಂತೋಷಗೊಂಡು ಸುಖಕೊಡುತ್ತಾರೆ, ಪೂಜೆಯಲ್ಲಿ ಕೊರತೆಯಾದರೆ, ಸಿಟ್ಟಾಗಿ ದುಃಖವನ್ನೂ ಕೊಡುತ್ತಾರೆ.) ಆದರೆ ನಿಮ್ಮಂತಹ ಮಹಾತ್ಮರ ಭಗವದ್ಭಕ್ತರ, ಸಂತರ ವ್ಯವಹಾರ ಯಾವಾಗಲೂ ಎಲ್ಲ ಪ್ರಾಣಿಗಳ ಹಿತಕ್ಕಾಗಿಯೇ ಇರುತ್ತದೆ. ॥5॥
(ಶ್ಲೋಕ - 6)
ಮೂಲಮ್
ಭಜಂತಿ ಯೇ ಯಥಾ ದೇವಾನ್ದೇವಾ ಅಪಿ ತಥೈವ ತಾನ್ ।
ಛಾಯೇವ ಕರ್ಮಸಚಿವಾಃ ಸಾಧವೋ ದೀನವತ್ಸಲಾಃ ॥
ಅನುವಾದ
ಜನರು ದೇವತೆಗಳನ್ನು ಉಪಾಸನೆ ಮಾಡುವ ಭಾವಕ್ಕನುಸಾರ ದೇವತೆಗಳು ಫಲನೀಡುತ್ತಾರೆ. ಅವರು ನೆರಳಿನಂತಿರುತ್ತಾರೆ. ಕರ್ಮಕ್ಕನುಸಾರ ಫಲಕೊಡುತ್ತಾರೆ. ಆದರೆ ಸಾಧು ಮಹಾತ್ಮರ ಸ್ವಭಾವ ದೀನರ ಮೇಲೆ ಅಹೈತುಕವಾಗಿ ಕೃಪೆದೋರುವುದೇ ಆಗಿರುತ್ತದೆ. ॥6॥
(ಶ್ಲೋಕ - 7)
ಮೂಲಮ್
ಬ್ರಹ್ಮಂಸ್ತಥಾಪಿ ಪೃಚ್ಛಾಮೋ ಧರ್ಮಾನ್ಭಾಗವತಾಂಸ್ತವ ।
ಯಾಂಛ್ರುತ್ವಾ ಶ್ರದ್ಧಯಾ ಮರ್ತ್ಯೋ ಮುಚ್ಯತೇ ಸರ್ವತೋಭಯಾತ್ ॥
ಅನುವಾದ
ಓ ಬ್ರಹ್ಮಸ್ವರೂಪರೇ! ಶ್ರದ್ಧಾಪೂರ್ವಕ ಶ್ರವಣಿಸುವುದರಿಂದ ಮನುಷ್ಯರು ಎಲ್ಲ ವಿಧದ ಭಯದಿಂದ ಮುಕ್ತರಾಗುವಂತಹ, ಭಾಗವತ ಧರ್ಮದ ಕುರಿತು ಈಗ ನಾನು ನಿಮ್ಮಲ್ಲಿ ಕೇಳುತ್ತೇನೆ. ॥7॥
(ಶ್ಲೋಕ - 8)
ಮೂಲಮ್
ಅಹಂ ಕಿಲ ಪುರಾನಂತಂ ಪ್ರಜಾರ್ಥೋ ಭುವಿ ಮುಕ್ತಿದಮ್ ।
ಅಪೂಜಯಂ ನ ಮೋಕ್ಷಾಯ ಮೋಹಿತೋ ದೇವಮಾಯಯಾ ॥
ಅನುವಾದ
ಭಗವಾನ್ ವಿಷ್ಣುವು ಮುಕ್ತಿದಾತನು. ಹಿಂದೆ ನಾನು ಆ ಮೋಕ್ಷದಾತನಾದ ಭಗವಂತನ ಉಪಾಸನೆಯನ್ನು ಮೋಕ್ಷಕ್ಕಾಗಿ ಮಾಡದೆ, ಅವನನ್ನು ನನ್ನ ಪುತ್ರರೂಪದಿಂದ ಪಡೆಯಲು ಮಾಡಿದ್ದೆ. ಏಕೆಂದರೆ, ಆಗ ನಾನು ಅವನ ಮಾಯೆಯಿಂದ ಮೋಹಿತನಾಗಿದ್ದೆ. ॥8॥
(ಶ್ಲೋಕ - 9)
ಮೂಲಮ್
ಯಥಾ ವಿಚಿತ್ರವ್ಯಸನಾದ್ಭವದ್ಭಿರ್ವಿಶ್ವತೋಭಯಾತ್ ।
ಮುಚ್ಯೇಮ ಹ್ಯಂಜಸೈವಾದ್ಧಾ ತಥಾ ನಃ ಶಾಧಿ ಸುವ್ರತ ॥
ಅನುವಾದ
ಓ ಭಗವನ್ನಿಷ್ಠರೇ! ಪ್ರಪಂಚದ ದುಃಖಗಳೂ ಕೂಡ ಸುಖದಂತೆ ಭಾಸವಾಗುತ್ತವೆ, ಇದೆಂತಹ ವಿಚಿತ್ರವಾದ ವಿಷಯ, ಆದ್ಯಂತ ದುಃಖರೂಪವಾದ ಇಂತಹ ವಿಚಿತ್ರವ್ಯಸನಗಳಿಂದ (ದುಃಖಗಳಿಂದ) ನಾನು ಆಯಾಸವಿಲ್ಲದೆ, ನಿಶ್ಚಿತವಾಗಿ ಮುಕ್ತನಾಗುವಂತಹ ಸರಳವಾದ ಉಪಾಯವನ್ನು ತಿಳಿಸಿರಿ. ॥9॥
(ಶ್ಲೋಕ - 10)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ರಾಜನ್ನೇವಂ ಕೃತಪ್ರಶ್ನೋ ವಸುದೇವೇನ ಧೀಮತಾ ।
ಪ್ರೀತಸ್ತಮಾಹ ದೇವರ್ಷಿರ್ಹರೇಃ ಸಂಸ್ಮಾರಿತೋ ಗುಣೈಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಎಲೈ ರಾಜನೇ! ಬುದ್ಧಿವಂತನಾದ ವಸುದೇವನು ಈ ಪ್ರಕಾರ ಪ್ರಶ್ನಿಸಿದಾಗ, ದೇವರ್ಷಿ ನಾರದರು ಭಗವಂತನ ಅನಂತ ಕಲ್ಯಾಣಗುಣಗಳನ್ನು ಸ್ಮರಿಸುತ್ತಾ ತನ್ಮಯರಾದರು. ಪ್ರೇಮಾನಂದದಲ್ಲಿ ಮಗ್ನರಾಗಿ ನುಡಿಯತೊಡಗಿದರು. ॥10॥
(ಶ್ಲೋಕ - 11)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ಸಮ್ಯಗೇತದ್ವ್ಯವಸಿತಂ ಭವತಾ ಸಾತ್ವತರ್ಷಭ ।
ಯತ್ಪೃಚ್ಛಸೇ ಭಾಗವತಾನ್ಧರ್ಮಾಂಸ್ತ್ವಂ ವಿಶ್ವಭಾವನಾನ್ ॥
ಅನುವಾದ
ಶ್ರೀನಾರದರು ಹೇಳುತ್ತಾರೆ — ಓ ಯದುವಂಶ ಶಿರೋಮಣಿ! ನೀನು ಇಡೀ ವಿಶ್ವದ ಕಲ್ಯಾಣ ಮಾಡುವಂತಹ ಭಾಗವತ ಧರ್ಮದ ಕುರಿತು ಕೇಳುತ್ತಿರುವೆ. ಈ ನಿನ್ನ ನಿಶ್ಚಯವು ಬಹಳ ಸರಿಯಾಗಿದೆ. ॥11॥
(ಶ್ಲೋಕ - 12)
ಮೂಲಮ್
ಶ್ರುತೋನುಪಠಿತೋ ಧ್ಯಾತ ಆದೃತೋ ವಾನುಮೋದಿತಃ ।
ಸದ್ಯಃ ಪುನಾತಿ ಸದ್ಧರ್ಮೋ ದೇವವಿಶ್ವದ್ರುಹೋಪಿ ಹಿ ॥
(ಶ್ಲೋಕ - 13)
ಮೂಲಮ್
ತ್ವಯಾ ಪರಮಕಲ್ಯಾಣಃ ಪುಣ್ಯಶ್ರವಣಕೀರ್ತನಃ ।
ಸ್ಮಾರಿತೋ ಭಗವಾನದ್ಯ ದೇವೋ ನಾರಾಯಣೋ ಮಮ ॥
ಅನುವಾದ
ಎಲೈ ವಸುದೇವನೇ! ಈ ಭಾಗವತ ಧರ್ಮವನ್ನು ಕಿವಿಗೊಟ್ಟು ಶ್ರವಣಿಸಿದರೆ, ವಾಣಿಯಿಂದ ಕೊಂಡಾಡಿದರೆ, ಮನಸ್ಸಿನಿಂದ ಸ್ಮರಿಸಿದರೆ, ಹೃತ್ಪೂರ್ವಕವಾಗಿ ಆದರಿಸಿದರೆ, ಒಪ್ಪಿಕೊಂಡರೆ ಮನುಷ್ಯನು ಆಗಲೇ ಪುನೀತನಾಗಿ ಹೋಗುತ್ತಾನೆ. ಇದನ್ನು ಆಶ್ರಯಿಸಿದವರು ಎಷ್ಟೇ ದುಷ್ಟನಾಗಿರಲಿ, ಅವನನ್ನೂ ಪವಿತ್ರವಾಗಿಸುವಂತಹ ಮಹಿಮೆ ಈ ಭಾಗವತ ಧರ್ಮದ್ದಾಗಿದೆ. ಭಗವಂತನು ಪರಮ ಕಲ್ಯಾಣ ಸ್ವರೂಪನು. ಅವನ ನಾಮಸ್ಮರಣೆ, ಕೀರ್ತನೆ ಭಾರೀ ಪುಣ್ಯಪ್ರದವಾಗಿದೆ. ಇಂತಹ ದೇವಾಧಿದೇವ ಆದಿಪುರುಷ ಭಗವಾನ್ ನಾರಾಯಣ ಸ್ಮರಣೆಯನ್ನು ನೀನು ನನಗೆ ಮಾಡಿಸಿದೆ. ॥12-13॥
(ಶ್ಲೋಕ - 14)
ಮೂಲಮ್
ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್ ।
ಆರ್ಷಭಾಣಾಂ ಚ ಸಂವಾದಂ ವಿದೇಹಸ್ಯ ಮಹಾತ್ಮನಃ ॥
ಅನುವಾದ
ಈ ವಿಷಯದಲ್ಲಿ ಒಂದು ಪ್ರಾಚೀನ ಇತಿಹಾಸವನ್ನು ಉದಾಹರಣೆಯಾಗಿ ನಿನಗೆ ಅರುಹುತ್ತೇನೆ. ಅದರಲ್ಲಿ ಮಹಾತ್ಮಾ ವಿದೇಹರಾಜ ನಿಮಿಯ ಹಾಗೂ ಋಷಭದೇವರ ಒಂಭತ್ತು ಪುತ್ರರ (ಯೋಗೀಶ್ವರರ) ಸಂವಾದವಿದೆ. ॥14॥
(ಶ್ಲೋಕ - 15)
ಮೂಲಮ್
ಪ್ರಿಯವ್ರತೋ ನಾಮ ಸುತೋ ಮನೋಃ ಸ್ವಾಯಂಭುವಸ್ಯ ಯಃ ।
ತಸ್ಯಾಗ್ನೀಧ್ರಸ್ತತೋ ನಾಭಿರ್ಋಷಭಸ್ತತ್ಸುತಃ ಸ್ಮೃತಃ ॥
ಅನುವಾದ
ಹಿಂದೆ ಸ್ವಾಯಂಭುವ ಮನುವಿನ ಪುತ್ರ ಪ್ರಿಯವ್ರತನೆಂಬುವನಿದ್ದನು. ಅವನಿಂದ ಆಗ್ನೀಧ್ರನಾದನು. ಅವನಿಂದ ನಾಭಿ ಮತ್ತು ನಾಭಿಯ ಪುತ್ರನಾಗಿ ಭಗವಂತನು ಋಷಭ ದೇವನಾಗಿ ಉದಿಸಿದನು. ॥15॥
(ಶ್ಲೋಕ - 16)
ಮೂಲಮ್
ತಮಾಹುರ್ವಾಸುದೇವಾಂಶಂ ಮೋಕ್ಷಧರ್ಮವಿವಕ್ಷಯಾ ।
ಅವತೀರ್ಣಂ ಸುತಶತಂ ತಸ್ಯಾಸೀದ್ಬ್ರಹ್ಮಪಾರಗಮ್ ॥
ಅನುವಾದ
ಆ ಋಷಭದೇವನನ್ನು ಭಗವಾನ್ ವಾಸುದೇವನ ಅಂಶಾವತಾರವೆಂದೇ ತಿಳಿಯಲಾಗಿದೆ. ಅವನು ಮೋಕ್ಷಧರ್ಮದ ಉಪದೇಶ ಕೊಡುವುದಕ್ಕಾಗಿಯೇ ಅವತರಿಸಿದ್ದನು. ಅವನಿಗೆ ನೂರುಮಂದಿ ಪುತ್ರರುದಿಸಿದರು. ಅವರೆಲ್ಲರೂ ವೇದಗಳಲ್ಲಿ ಪಾರಂಗತರಾಗಿದ್ದರು. ॥16॥
(ಶ್ಲೋಕ - 17)
ಮೂಲಮ್
ತೇಷಾಂ ವೈ ಭರತೋ ಜ್ಯೇಷ್ಠೋ ನಾರಾಯಣಪರಾಯಣಃ ।
ವಿಖ್ಯಾತಂ ವರ್ಷಮೇತದ್ಯನ್ನಾಮ್ನಾ ಭಾರತಮದ್ಭುತಮ್ ॥
ಅನುವಾದ
ಅವರಲ್ಲಿ ಭರತನೇ ಹಿರಿಯವನಾಗಿದ್ದನು. ಅವನು ಭಗವಾನ್ ನಾರಾಯಣಪರಾಯಣನಾಗಿದ್ದನು. ಅವನ ಹೆಸರಿನಿಂದಲೇ ಈ ದೇಶದ ಹೆಸರು ಭಾರತವರ್ಷವೆಂದು ಪ್ರಸಿದ್ಧವಾಯಿತು. ॥17॥
(ಶ್ಲೋಕ - 18)
ಮೂಲಮ್
ಸ ಭುಕ್ತಭೋಗಾಂ ತ್ಯಕ್ತ್ವೇಮಾಂ ನಿರ್ಗತಸ್ತಪಸಾ ಹರಿಮ್ ।
ಉಪಾಸೀನಸ್ತತ್ಪದವೀಂ ಲೇಭೇ ವೈ ಜನ್ಮಭಿಸಿಭಿಃ ॥
ಅನುವಾದ
ರಾಜರ್ಷಿ ಭರತನು ಸಮಸ್ತ ಭೂಮಂಡಲವನ್ನು ಆಳಿದನು. ಮತ್ತೆ ರಾಜ್ಯವನ್ನು ತ್ಯಜಿಸಿ ಭಗವಂತನ ಆರಾಧನೆಗಾಗಿ, ತಪಸ್ಸಿಗಾಗಿ ಕಾಡಿಗೆ ಹೊರಟು ಹೋದನು. ಅಲ್ಲಿ ಭಗವಂತನ ಉಪಾಸನೆಗೈದು ಮೂರು ಜನ್ಮಗಳಲ್ಲಿ ಭಗವಂತನನ್ನು ಪಡೆದುಕೊಂಡನು. (ಇದೇ ರಾಜರ್ಷಿ ಭರತನು ಎರಡನೇ ಜನ್ಮದಲ್ಲಿ ಜಿಂಕೆಯಾಗಿ ಹುಟ್ಟಿದ್ದನು. ಮೂರನೆಯ ಬ್ರಾಹ್ಮಣಜನ್ಮದಲ್ಲಿ ಜಡಭರತನ ಹೆಸರಿನಿಂದ ಖ್ಯಾತನಾಗಿದ್ದ ಈ ಕಥೆ ಪ್ರಸಿದ್ಧವಾಗಿದೆ.) ॥18॥
(ಶ್ಲೋಕ - 19)
ಮೂಲಮ್
ತೇಷಾಂ ನವ ನವದ್ವೀಪಪತಯೋಸ್ಯ ಸಮಂತತಃ ।
ಕರ್ಮತಂತ್ರಪ್ರಣೇತಾರ ಏಕಾಶೀತಿರ್ದ್ವಿಜಾತಯಃ ॥
ಅನುವಾದ
ಋಷಭದೇವರ ನೂರು ಮಂದಿ ಪುತ್ರರಲ್ಲಿ ಒಂಭತ್ತು ಜನರು ಒಂಭತ್ತು ದ್ವೀಪಗಳ ಅಧಿಪತಿಗಳಾದರು. ಅವು ಭಾರತ ವರ್ಷದ ಸುತ್ತಲೂ ನೆಲೆಸಿವೆ. ಉಳಿದ ಎಂಭತ್ತೊಂದು ಮಂದಿ ಕರ್ಮಕಾಂಡದ ರಚಯಿತರೂ, ಅಗ್ನಿಹೋತ್ರಾದಿಗಳನ್ನು ಮಾಡುವ ಬ್ರಾಹ್ಮಣರಾದರು. ॥19॥
(ಶ್ಲೋಕ - 20)
ಮೂಲಮ್
ನವಾಭವನ್ಮಹಾಭಾಗಾ ಮುನಯೋ ಹ್ಯರ್ಥಶಂಸಿನಃ ।
ಶ್ರಮಣಾ ವಾತರಶನಾ ಆತ್ಮವಿದ್ಯಾವಿಶಾರದಾಃ ॥
(ಶ್ಲೋಕ - 21)
ಮೂಲಮ್
ಕವಿರ್ಹರಿರಂತರಿಕ್ಷಃ ಪ್ರಬುದ್ಧಃ ಪಿಪ್ಪಲಾಯನಃ ।
ಆವಿರ್ಹೋತ್ರೋಥ ದ್ರುಮಿಲಶ್ಚಮಸಃ ಕರಭಾಜನಃ ॥
ಅನುವಾದ
ಹಾಗೂ ಪರಮಾರ್ಥ ತತ್ತ್ವದ ಪ್ರಚಾರಕ ಮಹಾಭಾಗ್ಯವಾನ್ ಒಂಭತ್ತು ಮಂದಿ ಸಂನ್ಯಾಸಿಗಳಾದರು. ಅವರು ದಿಗಂಬರ ಸಂನ್ಯಾಸಿಗಳಾಗಿದ್ದು ಆತ್ಮವಿದ್ಯೆಯಲ್ಲಿ ಪಾರಂಗತರಾಗಿದ್ದರು. ಅವರ ಹೆಸರುಗಳು ಇಂತಿವೆ ಕವಿ, ಹರಿ, ಅಂತರಿಕ್ಷ, ಪ್ರಬುದ್ಧ, ಪಿಪ್ಪಲಾಯನ, ಆವಿರ್ಹೋತ್ರ, ದ್ರುಮಿಲ, ಚಮಸ ಮತ್ತು ಕರಭಾಜನ. ॥20-21॥
(ಶ್ಲೋಕ - 22)
ಮೂಲಮ್
ತ ಏತೇ ಭಗವದ್ರೂಪಂ ವಿಶ್ವಂ ಸದಸದಾತ್ಮಕಮ್ ।
ಆತ್ಮನೋವ್ಯತಿರೇಕೇಣ ಪಶ್ಯಂತೋ ವ್ಯಚರನ್ಮಹೀಮ್ ॥
ಅನುವಾದ
ಇವರೆಲ್ಲ ಮಹಾತ್ಮರು ಈ ಜಡ-ಚೇತನಾತ್ಮಕ ಸಮಸ್ತ ವಿಶ್ವವನ್ನು ಭಗವಂತನ ಸ್ವರೂಪವೆಂದೇ ತಿಳಿಯುತ್ತಿದ್ದರು. ಅದನ್ನು ತನ್ನಿಂದ ಬೇರೆ ಎಂದು ನೋಡುತ್ತಿರಲಿಲ್ಲ. ಅರ್ಥಾತ್ ಎಲ್ಲ ಕಡೆಗಳಲ್ಲಿ ಅವರಿಗೆ ಪರಮಾತ್ಮನೊಬ್ಬನ ದರ್ಶನವೇ ಆಗುತ್ತಿತ್ತು. ಈ ವಿಧವಾಗಿ ಸರ್ವತ್ರ ಆತ್ಮಭಾವವನ್ನಿರಿಸಿಕೊಂಡು ಅದ್ವಿತೀಯ ಪರಮಾತ್ಮನನ್ನೇ ದರ್ಶಿಸುತ್ತಾ ವಿಶ್ವಾದ್ಯಂತ ಸಂಚರಿಸುತ್ತಿದ್ದರು. ॥22॥
(ಶ್ಲೋಕ - 23)
ಮೂಲಮ್
ಅವ್ಯಾಹತೇಷ್ಟಗತಯಃ ಸುರಸಿದ್ಧಸಾಧ್ಯ-
ಗಂಧರ್ವಯಕ್ಷನರಕಿನ್ನರನಾಗಲೋಕಾನ್ ।
ಮುಕ್ತಾಶ್ಚರಂತಿ ಮುನಿಚಾರಣಭೂತನಾಥ-
ವಿದ್ಯಾಧರದ್ವಿಜಗವಾಂ ಭುವನಾನಿ ಕಾಮಮ್ ॥
ಅನುವಾದ
ಮೂರು ಲೋಕಗಳಲ್ಲೆಲ್ಲ ಅವರ ಗತಿ ಅಬಾಧಿತವಾಗಿತ್ತು. ಅವರು ದೇವತೆ, ಸಿದ್ಧ, ಸಾಧ್ಯ, ಗಂಧರ್ವ, ಯಕ್ಷ, ಮನುಷ್ಯ, ಕಿನ್ನರ, ನಾಗಲೋಕ ಹೀಗೆ ಎಲ್ಲ ಲೋಕಗಳಲ್ಲಿ ಸ್ವಚ್ಛಂದವಾಗಿ ವಿಚರಿಸುತ್ತಿದ್ದರು. ಇಷ್ಟೇ ಅಲ್ಲದೆ ಅವರು ಇನ್ನೂ ಕೂಡ ಮುನಿ, ಚಾರಣ, ಭೂತನಾಥ, ವಿದ್ಯಾಧರ, ಬ್ರಾಹ್ಮಣ ಮತ್ತು ಗೋವುಗಳು ಇವರ ಸ್ಥಾನಗಳಲ್ಲಿ ಮುಕ್ತರಾಗಿ ವಿಹರಿಸುತ್ತಿದ್ದರು. ॥23॥
(ಶ್ಲೋಕ - 24)
ಮೂಲಮ್
ತ ಏಕದಾ ನಿಮೇಃ ಸತ್ರಮುಪಜಗ್ಮುರ್ಯದೃಚ್ಛಯಾ ।
ವಿತಾಯಮಾನಮೃಷಿಭಿರಜನಾಭೇ ಮಹಾತ್ಮನಃ ॥
ಅನುವಾದ
ಒಮ್ಮೆ ಅಜನಾಭವರ್ಷದಲ್ಲಿ (ಭಾರತವರ್ಷದಲ್ಲಿ) ಮಹಾತ್ಮಾ ನಿಮಿರಾಜನು ದೊಡ್ಡ-ದೊಡ್ಡ ಋಷಿಗಳಿಂದ ಒಡಗೂಡಿ ಯಜ್ಞ ಮಾಡುತ್ತಿದ್ದನು. ಆಗ ಈ ಒಂಭತ್ತು ಯೋಗೀಶ್ವರರು ನಿಮಿಯ ಯಜ್ಞದಲ್ಲಿ ಸ್ವಾಭಾವಿಕವಾಗಿ ಸಂಚರಿಸುತ್ತಾ ಬಂದು ತಲುಪಿದರು. ॥24॥
(ಶ್ಲೋಕ - 25)
ಮೂಲಮ್
ತಾನ್ದೃಷ್ಟ್ವಾ ಸೂರ್ಯಸಂಕಾಶಾನ್ ಮಹಾಭಾಗವತಾನ್ನೃಪಃ ।
ಯಜಮಾನೋಗ್ನಯೋ ವಿಪ್ರಾಃ ಸರ್ವ ಏವೋಪತಸ್ಥಿರೇ ॥
ಅನುವಾದ
ಈ ಪರಮ ಭಾಗವತ ಮಹಾತ್ಮರು ಸೂರ್ಯನಂತೆ ತಮ್ಮ ಕಾಂತಿಯಿಂದ ಪ್ರಕಾಶಿಸುತ್ತಿದ್ದರು. ಇಂತಹ ಯೋಗೀಶ್ವರರನ್ನು ಕಂಡು ಯಜ್ಞಮಾಡುತ್ತಿದ್ದ ರಾಜಾ ನಿಮಿ, ಮೂರ್ತಿಮಂತ ಅಗ್ನಿ ದೇವರು, ಋತ್ವಿಜಾದಿ ಬ್ರಾಹ್ಮಣರು ಹೀಗೆ ಎಲ್ಲರೂ ಅವರ ಸ್ವಾಗತಕ್ಕಾಗಿ ಎದ್ದುನಿಂತರು. ॥25॥
(ಶ್ಲೋಕ - 26)
ಮೂಲಮ್
ವಿದೇಹಸ್ತಾನಭಿಪ್ರೇತ್ಯ ನಾರಾಯಣಪರಾಯಣಾನ್ ।
ಪ್ರೀತಃ ಸಂಪೂಜಯಾಂಚಕ್ರೇ ಆಸನಸ್ಥಾನ್ಯಥಾರ್ಹತಃ ॥
ಅನುವಾದ
ರಾಜಾ ನಿಮಿಯು ಆ ಒಂಭತ್ತು ಯೋಗೀಶ್ವರರನ್ನು ಭಗವಾನ್ ನಾರಾಯಣ ಪರಾಯಣರೆಂದು ಭಾವಿಸಿ, ಬಹಳ ಹರ್ಷಿತನಾಗಿ ಅವರನ್ನು ಉಚಿತಾಸನಗಳಲ್ಲಿ ಕುಳ್ಳಿರಿಸಿ, ವಿಧಿಪೂರ್ವಕ ಅವರನ್ನು ಪೂಜಿಸಿದನು. ॥26॥
(ಶ್ಲೋಕ - 27)
ಮೂಲಮ್
ತಾನ್ರೋಚಮಾನಾನ್ ಸ್ವರುಚಾ ಬ್ರಹ್ಮಪುತ್ರೋಪಮಾನ್ನವ ।
ಪಪ್ರಚ್ಛ ಪರಮಪ್ರೀತಃ ಪ್ರಶ್ರಯಾವನತೋ ನೃಪಃ ॥
ಅನುವಾದ
ಆ ಯೋಗೀಶ್ವರರು ಸಾಕ್ಷಾತ್ ಬ್ರಹ್ಮಮಾನಸ ಪುತ್ರರಾದ ಸನಕಾದಿಗಳಂತೆ ತಮ್ಮ ಕಾಂತಿಯಿಂದ ಪ್ರಕಾಶಿತರಾಗಿದ್ದರು. ರಾಜಾ ನಿಮಿಯು ವಿನಯದಿಂದ ತಲೆಬಾಗಿ, ಕೈಜೋಡಿಸಿಕೊಂಡು ಪರಮ ಪ್ರೇಮದಿಂದ ಅವರಲ್ಲಿ ಇಂತು ಪ್ರಶ್ನಿಸಿದನು. ॥27॥
(ಶ್ಲೋಕ - 28)
ಮೂಲಮ್ (ವಾಚನಮ್)
ವಿದೇಹ ಉವಾಚ
ಮೂಲಮ್
ಮನ್ಯೇ ಭಗವತಸ್ಸಾಕ್ಷಾತ್ಪಾರ್ಷದಾನ್ವೋ ಮಧುದ್ವಿಷಃ ।
ವಿಷ್ಣೋರ್ಭೂತಾನಿ ಲೋಕಾನಾಂ ಪಾವನಾಯ ಚರಂತಿ ಹಿ ॥
ಅನುವಾದ
ವಿದೇಹರಾಜನಾದ ನಿಮಿಯು ಹೇಳಿದನು — ನಾನು ನಿಮ್ಮನ್ನು ಸಾಕ್ಷಾತ್ ಭಗವಾನ್ ಮಧುಸೂದನನ ಪಾರ್ಷದರೆಂದೇ ತಿಳಿಯುತ್ತೇನೆ. ಭಗವಾನ್ ಮಹಾವಿಷ್ಣುವಿನ ಸೇವಕರು, ದಾಸರು ಸಮಸ್ತ ಲೋಕಗಳನ್ನು ಪವಿತ್ರ ಮಾಡಲೆಂದೇ ಸಂಚರಿಸುತ್ತಾರೆ.॥28॥
(ಶ್ಲೋಕ - 29)
ಮೂಲಮ್
ದುರ್ಲಭೋ ಮಾನುಷೋ ದೇಹೋ ದೇಹಿನಾಂ ಕ್ಷಣಭಂಗುರಃ ।
ತತ್ರಾಪಿ ದುರ್ಲಭಂ ಮನ್ಯೇ ವೈಕುಂಠಪ್ರಿಯದರ್ಶನಮ್ ॥
ಅನುವಾದ
ಈ ಮನುಷ್ಯಜನ್ಮವು ಜೀವರಿಗೆ ತುಂಬಾ ದುರ್ಲಭವಾಗಿದೆ ಹಾಗೂ ಕ್ಷಣ ಭಂಗುರವೂ ಆಗಿದೆ. ಅದರಲ್ಲಿಯೂ ಭಗವಂತನ ಭಕ್ತರಾದ ವರ ದರ್ಶನಭಾಗ್ಯ ದೊರೆಯುವುದು ಇನ್ನೂ ದುರ್ಲಭವಾಗಿದೆ. ॥29॥
(ಶ್ಲೋಕ - 30)
ಮೂಲಮ್
ಅತ ಆತ್ಯಂತಿಕಂ ಕ್ಷೇಮಂ ಪೃಚ್ಛಾಮೋ ಭವತೋನಘಾಃ ।
ಸಂಸಾರೇಸ್ಮಿನ್ ಕ್ಷಣಾರ್ಧೋಪಿ ಸತ್ಸಂಗಃ ಶೇವಧಿರ್ನೃಣಾಮ್ ॥
ಅನುವಾದ
ಆದ್ದರಿಂದ ತ್ರಿಲೋಕಗಳನ್ನು ಪಾವನಗೊಳಿಸುವ ಮಹಾತ್ಮರೇ! ನಾನು ನಿಮ್ಮಗಳಲ್ಲಿ ಆತ್ಯಂತಿಕ ಶ್ರೇಯಸ್ಸಿನ ಕುರಿತು ಕೇಳುತ್ತಿದ್ದೇನೆ. ಏಕೆಂದರೆ, ಈ ಪ್ರಪಂಚದಲ್ಲಿ ಅರೆಕ್ಷಣದ ಸತ್ಸಂಗವೂ ಕೂಡ ಮನುಷ್ಯರಿಗಾಗಿ ಶ್ರೇಷ್ಠ ನಿಧಿಯಾಗಿದೆ. ॥30॥
(ಶ್ಲೋಕ - 31)
ಮೂಲಮ್
ಧರ್ಮಾನ್ ಭಾಗವತಾನ್ಬ್ರೂತ ಯದಿ ನಃ ಶ್ರುತಯೇ ಕ್ಷಮಮ್ ।
ಯೈಃ ಪ್ರಸನ್ನಃ ಪ್ರಪನ್ನಾಯ ದಾಸ್ಯತ್ಯಾತ್ಮಾನಮಪ್ಯಜಃ ॥
ಅನುವಾದ
ನಾನು ಇದರ ಬಗ್ಗೆ ಯೋಗ್ಯ ಅಧಿಕಾರಿ ಎಂದು ತಿಳಿಯುವಿರಾದರೆ ದಯೆಗೈದು ಭಾಗವತ ಧರ್ಮಗಳ ಕುರಿತು ತಿಳಿಸುವರಾಗಿರಿ. ಆ ಭಾಗವತ ಧರ್ಮದಿಂದ ಅಜನ್ಮಾ ಭಗವಂತನು ಪ್ರಸನ್ನನಾಗಿ ತನ್ನ ಶರಣಾಗತ ಭಕ್ತರಿಗೆ ಸ್ವತಃ ತನ್ನನ್ನೇ ಕೊಟ್ಟುಕೊಳ್ಳುವನು. ॥31॥
(ಶ್ಲೋಕ - 32)
ಮೂಲಮ್ (ವಾಚನಮ್)
ಶ್ರೀನಾರದ ಉವಾಚ
ಮೂಲಮ್
ಏವಂ ತೇ ನಿಮಿನಾ ಪೃಷ್ಟಾ ವಸುದೇವ ಮಹತ್ತಮಾಃ ।
ಪ್ರತಿಪೂಜ್ಯಾಬ್ರುವನ್ಪ್ರೀತ್ಯಾ ಸಸದಸ್ಯರ್ತ್ವಿಜಂ ನೃಪಮ್ ॥
ಅನುವಾದ
ಶ್ರೀನಾರದರು ಹೇಳಿದರು — ಎಲೈ ವಸುದೇವನೇ! ಈ ವಿಧವಾಗಿ ಆ ಮಹಾತ್ಮಾ ಯೋಗೀಶ್ವರರಲ್ಲಿ ರಾಜಾ ನಿಮಿಯು ಪ್ರಶ್ನಿಸಿದನು. ಆಗ ಯೋಗೀಶ್ವರರು ಅವನ ಪ್ರಶ್ನೆಯನ್ನು ಪ್ರಶಂಸಿಸುತ್ತಾ, ಆ ಸಭೆಯಲ್ಲಿ ಕುಳಿತಿರುವ ಸದಸ್ಯರನ್ನು ಮತ್ತು ರಾಜನನ್ನು ಸಂಬೋಧಿಸಿ ಹೇಳ ತೊಡಗಿದರು. ॥32॥
(ಶ್ಲೋಕ - 33)
ಮೂಲಮ್ (ವಾಚನಮ್)
ಕವಿರುವಾಚ
ಮೂಲಮ್
ಮನ್ಯೇಕುತಶ್ಚಿದ್ಭಯಮಚ್ಯುತಸ್ಯ
ಪಾದಾಂಬುಜೋಪಾಸನಮತ್ರ ನಿತ್ಯಮ್ ।
ಉದ್ವಿಗ್ನಬುದ್ಧೇರಸದಾತ್ಮಭಾವಾದ್
ವಿಶ್ವಾತ್ಮನಾ ಯತ್ರ ನಿರ್ವತತೇ ಭೀಃ ॥
ಅನುವಾದ
ಮೊದಲಿಗೆ ಮಹಾತ್ಮಾ ಕವಿ ಯೋಗೀಶ್ವರರು ಹೇಳಿದರು — ಎಲೈ ರಾಜನೇ! (ಆತ್ಯಂತಿಕ ಶ್ರೇಯಸ್ಸಿಗಾಗಿ ನೀನು ಪ್ರಶ್ನಿಸಿರುವೆ. ಅದಕ್ಕಾಗಿ ಅನನ್ಯ ಶರಣಾಗತಿಯೇ ಸರ್ವೋತ್ಕೃಷ್ಟ ಸಾಧನವಾಗಿದೆ.) ಈ ವಿಷಯದಲ್ಲಿ ಭಗವಾನ್ ಅಚ್ಯುತನ ಚರಣಗಳಿಗೆ ಶರಣಾಗುವುದೇ, ಶಾಶ್ವತವಾಗಿ ಭಯರಹಿತನಾಗಲು ಉತ್ತಮೋತ್ತಮ ಸಾಧನವೆಂದು ನಾನು ತಿಳಿಯುತ್ತೇನೆ. ಏಕೆಂದರೆ, ಸಾಂಸಾರಿಕ ಪದಾರ್ಥಗಳಲ್ಲಿ ಆತ್ಮಬುದ್ಧಿ, ಸುಖಬುದ್ಧಿ ಇರುವ ಜನರೂ ಕೂಡ ಭಗವಂತನಿಗೆ ಅನನ್ಯ ಶರಣಾದರೆ ಅದರ ಫಲವಾಗಿ ಅವರ ಅಜ್ಞಾನ ದೂರವಾಗುತ್ತದೆ. ಪ್ರಪಂಚದಲ್ಲಿ ದುಃಖದ ಅನುಭವ ಪಡೆದು ಅವರು ವಿರಕ್ತರಾಗುತ್ತಾರೆ. ಅವರಿಗೆ ಆಧ್ಯಾತ್ಮಿಕ ಪ್ರಸನ್ನತೆ ಪ್ರಾಪ್ತವಾಗಿ, ಅವರ ಭಯ ಪೂರ್ಣರೂಪದಿಂದ ನಿವೃತ್ತವಾಗುತ್ತದೆ. ॥33॥
(ಶ್ಲೋಕ - 34)
ಮೂಲಮ್
ಯೇ ವೈ ಭಗವತಾ ಪ್ರೋಕ್ತಾ ಉಪಾಯಾ ಹ್ಯಾತ್ಮಲಬ್ಧಯೇ ।
ಅಂಜಃ ಪುಂಸಾಮವಿದುಷಾಂ ವಿದ್ಧಿ ಭಾಗವತಾನ್ಹಿ ತಾನ್ ॥
ಅನುವಾದ
ಅವರಿಗೆ ಎಲ್ಲ ಕಡೆಗಳಲ್ಲಿ ಆತ್ಮಭಾವ ಉಂಟಾಗಿ ಸರ್ವತ್ರ, ಸಮಭಾವದಿಂದ ನಿರಂತರ ಪರಮಾತ್ಮನ ಅನುಭವವೇ ಆಗತೊಡಗುತ್ತದೆ. ಸಾಮಾನ್ಯ ಅಜ್ಞಾನಿ ಜನರಿಗೂ ಕೂಡ ತುಂಬಾ ಸುಲಭವಾಗಿ ತನ್ನ ಸಾಕ್ಷಾತ್ಕಾರ ಪ್ರಾಪ್ತಿಯ ಉಪಾಯವನ್ನು ಭಗವಂತನು ತನ್ನ ಶ್ರೀಮುಖದಿಂದ ತಿಳಿಸಿರುವನು. ಅದನ್ನೇ ಭಗವತ್-ಸಂಬಂಧೀ ಭಾಗವತ ಧರ್ಮವೆಂದು ತಿಳಿ. ॥34॥
(ಶ್ಲೋಕ - 35)
ಮೂಲಮ್
ಯಾನಾಸ್ಥಾಯ ನರೋ ರಾಜನ್ ನ ಪ್ರಮಾದ್ಯೇತ ಕರ್ಹಿಚಿತ್ ।
ಧಾವನ್ನಿಮೀಲ್ಯ ವಾ ನೇತ್ರೇ ನ ಸ್ಖಲೇನ್ನ ಪತೇದಿಹ ॥
ಅನುವಾದ
ರಾಜನೇ! ಈ ಭಾಗವತ ಧರ್ಮಗಳನ್ನು ಅವಲಂಬಿಸುವ ಮನುಷ್ಯನು ಎಂದೂ ಯಾವುದೇ ದುಃಖಗಳಿಂದ ಪೀಡಿತನಾಗುವುದಿಲ್ಲ. ಕಣ್ಣುಮುಚ್ಚಿ ಓಡಿದರೂ ಕೂಡ ಅರ್ಥಾತ್ ವಿಧಿ-ವಿಧಾನಗಳಲ್ಲಿ ಕೊರತೆ ಉಂಟಾದರೂ ಮತ್ತೆ ಅವನು ಪತಿತನಾಗಲಾರನು. ಫಲದಿಂದ ವಂಚಿತನೂ ಆಗಲಾರನು. ॥35॥
(ಶ್ಲೋಕ - 36)
ಮೂಲಮ್
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾನುಸೃತಸ್ವಭಾವಾತ್ ।
ಕರೋತಿ ಯದ್ಯತ್ಸಕಲಂ ಪರಸ್ಮೈ
ನಾರಾಯಣಾಯೇತೀ ಸಮರ್ಪಯೇತ್ತತ್ ॥
ಅನುವಾದ
ಮನುಷ್ಯನು ತನ್ನ ಶರೀರದಿಂದಾಗಲೀ, ವಾಣಿಯಿಂದಾಗಲೀ, ಮನಸ್ಸಿನಿಂದಾಗಲೀ, ಇಂದ್ರಿಯಗಳಿಂದಾಗಲೀ, ಬುದ್ಧಿಯಿಂದಾಗಲೀ, ಅಹಂಕಾರದಿಂದಾಗಲೀ, ಅಥವಾ ತನ್ನ ಸ್ವಭಾವಕ್ಕನುಸಾರ ಯಾವುದೇ ಕರ್ಮಮಾಡಿದರೂ ಅದೆಲ್ಲವನ್ನು ಪರಾತ್ಪರ ಭಗವಾನ್ ನಾರಾಯಣನಿಗೆ ಅರ್ಪಿಸಿಬಿಡುವುದೇ ಬಹಳ ಸರಳ, ಸುಲಭ ಉಪಾಯವಾಗಿದೆ. ॥36॥
(ಶ್ಲೋಕ - 37)
ಮೂಲಮ್
ಭಯಂ ದ್ವಿತೀಯಾಭಿನಿವೇಶತಃ ಸ್ಯಾ-
ದೀಶಾದಪೇತಸ್ಯ ವಿಪರ್ಯಯೋಸ್ಮೃತಿಃ ।
ತನ್ಮಾಯಯಾತೋ ಬುಧ ಆಭಜೇತ್ತಂ
ಭಕ್ತ್ಯೈಕಯೇಶಂ ಗುರುದೇವತಾತ್ಮಾ ॥
ಅನುವಾದ
ಭಗವಂತನಲ್ಲದೆ ಬೇರೆ ವಸ್ತುಗಳಲ್ಲಿ ದೇಹ, ಗೇಹಾದಿಗಳಲ್ಲಿ ಆಸಕ್ತಿ ಇರುವುದರಿಂದಲೇ ಅರ್ಥಾತ್ ಅಸತ್ ವಸ್ತುವಿನ ಅಸ್ತಿತ್ವವನ್ನು ಒಪ್ಪಿಕೊಂಡು, ಅದರ ಕುರಿತು ಹೆಚ್ಚಿನ ಪ್ರೀತಿ ಇರುವುದರಿಂದಲೇ ಭಯ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ ಅವನು ಪರಮಾತ್ಮನಿಂದ ವಿಮುಖನಾಗುತ್ತಾನೆ. ಅವನು ಭ್ರಮೆಯಿಂದಾಗಿ ಅನಾತ್ಮವಸ್ತುಗಳಲ್ಲಿ ಆತ್ಮಬುದ್ಧಿಯನ್ನಿರಿಸುತ್ತಾನೆ. ಅದರಿಂದಾಗಿ ತನ್ನ ನಿಜಸ್ವರೂಪವನ್ನು ಮರೆಯುತ್ತಾನೆ. ಭಗವಂತನ ಮಾಯೆಯಿಂದಲೇ ಹೀಗಾಗುತ್ತದೆ. ಆದ್ದರಿಂದ ಬುದ್ಧಿವಂತನಾದವನು ಅಜ್ಞಾನದಿಂದ ಬಿಡುಗಡೆ ಹೊಂದಲು ಅನನ್ಯ ಭಕ್ತಿಪೂರ್ವಕ ಓರ್ವ ಪರಮಾತ್ಮನಿಗೇ ಶರಣಾಗಬೇಕು. ಇದಕ್ಕಾಗಿ ಗುರುವಿನಲ್ಲಿ ಭಗವದ್ಬುದ್ಧಿ ಇರಿಸಬೇಕು. ॥37॥
(ಶ್ಲೋಕ - 38)
ಮೂಲಮ್
ಅವಿದ್ಯಮಾನೋಪ್ಯವಭಾತಿ ಹಿ ದ್ವಯೋ-
ಧ್ಯಾತುರ್ಧಿಯಾ ಸ್ವಪ್ನ ಮನೋರಥೌ ಯಥಾ ।
ತತ್ಕರ್ಮಸಂಕಲ್ಪವಿಕಲ್ಪಕಂ ಮನೋ
ಬುಧೋ ನಿರುಂಧ್ಯಾದಭಯಂ ತತಃ ಸ್ಯಾತ್ ॥
ಅನುವಾದ
ವಾಸ್ತವದಲ್ಲಿ ಪರಮಾತ್ಮತತ್ತ್ವವೇ ಸತ್ಯವಸ್ತುವಾಗಿದೆ. ಆದರೆ ನಾನಾತ್ವ(ಪ್ರಪಂಚ)ವನ್ನು ಚಿಂತಿಸುವವರಿಗೆ ಆ ವಸ್ತುಗಳ ಚಿಂತನೆಯಿಂದ ಬುದ್ಧಿಯಲ್ಲಿ ಅವುಗಳ ಪ್ರತೀತಿ ಉಂಟಾಗುತ್ತದೆ. ಅವನ್ನೇ ಸತ್ ಎಂದು ಒಪ್ಪಿಕೊಂಡಿದ್ದರಿಂದ ಅಸತ್ ಪದಾರ್ಥಗಳ ಸತ್ತೆಯನ್ನು ಸ್ವೀಕರಿಸುತ್ತಾರೆ. ಆದರೆ ಸ್ವಪ್ನಾವಸ್ಥೆಯ ದೃಶ್ಯಗಳು ಎಚ್ಚರವಾದ ಮೇಲೆ ಅವುಗಳ ಮಿಥ್ಯತ್ವ ಅರಿವಿಗೆ ಬರುತ್ತದೆ, ಹಾಗೆಯೇ ಸಾಂಸಾರಿಕ ವಿಷಯಗಳ ಕುರಿತು ಮಾಡಲಾದ ಜಾಗ್ರತ್ ಅವಸ್ಥೆಯ ಮನೋರಥಗಳೂ ಮಿಥ್ಯೆಯೇ ಆಗಿವೆ. ಆದ್ದರಿಂದ ಬುದ್ಧಿವಂತರಾದವರು ಪ್ರಾಪಂಚಿಕ ಕರ್ಮಗಳ ಸಂಬಂಧದಲ್ಲಿ ಸಂಕಲ್ಪ-ವಿಕಲ್ಪಮಾಡುವ ಅಲೆಯುವ ಮನಸ್ಸನ್ನು ತಡೆಯಬೇಕು. ಹೀಗೆ ಮಾಡುವುದರಿಂದಲೇ ಅವರಿಗೆ ಅಭಯಪದದ ಅರ್ಥಾತ್ ಪರಮ ಪದದ ಪ್ರಾಪ್ತಿ ಆಗಿಹೋದೀತು. ॥38॥
(ಶ್ಲೋಕ - 39)
ಮೂಲಮ್
ಶೃಣ್ವನ್ ಸುಭದ್ರಾಣಿ ರಥಾಂಗಪಾಣೇ-
ರ್ಜನ್ಮಾನಿ ಕರ್ಮಾಣಿ ಚ ಯಾನಿ ಲೋಕೇ ।
ಗೀತಾನಿ ನಾಮಾನಿ ತದರ್ಥಕಾನಿ
ಗಾಯನ್ ವಿಲಜ್ಜೋ ವಿಚರೇದಸಂಗಃ ॥
ಅನುವಾದ
ಜಗತ್ತಿನಲ್ಲಿ ಭಗವಂತನ ಜನ್ಮ-ಕರ್ಮಗಳ ಲೀಲೆಗಳ ಬಹಳ ಮಂಗಲಮಯ ಕಥೆಗಳು ಪ್ರಸಿದ್ಧವಾಗಿವೆ. ಇವನ್ನು ಶ್ರವಣ ಮನನ ಮಾಡುವುದೇ ಮನಸ್ಸನ್ನು ಭಗವಂತನಲ್ಲಿ ತೊಡಗಿಸುವ ಉಪಾಯವೆಂದು ಹೇಳಲಾಗಿದೆ. ಹಾಗೆಯೇ ಅವನ ಗುಣಗಳನ್ನು, ಲೀಲೆಗಳನ್ನು ಸ್ಮರಣೆಗೆ ತರುವ ಭಗವಂತನ ಅನೇಕ ನಾಮಗಳು ಪ್ರಸಿದ್ಧವಾಗಿವೆ. ಅಂಜಿಕೆ ನಾಚಿಕೆಬಿಟ್ಟು ಅವನ್ನು ಕೊಂಡಾಡುತ್ತಾ ಇರಬೇಕು. ಯಾವುದೇ ವ್ಯಕ್ತಿ, ವಸ್ತು, ಸ್ಥಾನಗಳಲ್ಲಿ ಆಸಕ್ತಿಯನ್ನಿಡಬಾರದು. ॥39॥
(ಶ್ಲೋಕ - 40)
ಮೂಲಮ್
ಏವಂವ್ರತಃ ಸ್ವಪ್ರಿಯನಾಮಕೀರ್ತ್ಯಾ
ಜಾತಾನುರಾಗೋ ದ್ರುತಚಿತ್ತ ಉಚ್ಚೈಃ ।
ಹಸತ್ಯಥೋ ರೋದಿತಿ ರೌತಿ ಗಾಯ-
ತ್ಯುನ್ಮಾದವನ್ನೃತ್ಯತಿ ಲೋಕಬಾಹ್ಯಃ ॥
ಅನುವಾದ
ಈ ಪ್ರಕಾರ ವಿಶುದ್ಧ ವ್ರತ, ನಿಯಮವನ್ನು ಕೈಗೊಳ್ಳುವವನ ಹೃದಯದಲ್ಲಿ ತನ್ನ ಪರಮಪ್ರಿಯತಮ ಪ್ರಭುವಿನ ನಾಮ-ಕೀರ್ತನೆಯಿಂದ ಭಗವಂತನಲ್ಲಿ ಪ್ರೇಮವು ಅಂಕುರಿಸುತ್ತದೆ. ಅವನ ಚಿತ್ತ ದ್ರವಿತವಾಗುತ್ತದೆ. ಆಗ ಅವನು ಸಾಧಾರಣ ಜನರ ಸ್ಥಿತಿಯಿಂದ ಮೇಲೇರುತ್ತಾನೆ. ಜನರ ಮಾನ್ಯತೆ, ನಂಬಿಕೆಗಳಿಂದ ಅತೀತನಾಗುತ್ತಾನೆ. ದಂಭವಿಲ್ಲದೆ ಸ್ವಾಭಾವಿಕವಾಗಿ ಉನ್ಮತ್ತನಾಗಿ ಕೆಲವೊಮ್ಮೆ ಭಗವಂತನ ಲೀಲೆಗಳನ್ನು ನೋಡುತ್ತಾ ಆನಂದದಲ್ಲಿ ಮುಳುಗಿ ನಗುತ್ತಿರುತ್ತಾನೆ. ಕೆಲವೊಮ್ಮೆ ಗೋಪಿಯರಂತೆ ಪ್ರಭು! ನೀನೆಲ್ಲಿ ಹೋಗಿರುವೆ? ಎಂದು ಬಿದ್ದು-ಬಿದ್ದು ಅಳುತ್ತಾನೆ. ಕೆಲವೊಮ್ಮೆ ಗಟ್ಟಿಯಾಗಿ ಭಗವಂತನನ್ನು ಕೂಗುತ್ತಾನೆ. ಕೆಲವೊಮ್ಮೆ ಮಧುರವಾಗಿ ಅವನ ಗುಣಗಾನ ಮಾಡುತ್ತಾನೆ. ಕೆಲ-ಕೆಲವೊಮ್ಮೆ ತನ್ನ ಪ್ರಿಯತಮನನ್ನು ಕಣ್ಣುಮುಂದೆ ದರ್ಶಿಸುತ್ತಾ ಉನ್ಮಾದದಿಂದ ನೃತ್ಯವಾಡ ತೊಡಗುತ್ತಾನೆ. ಈ ಪ್ರಕಾರ ಅವನ ಎಲ್ಲ ಕ್ರಿಯೆಗಳು ಲೋಕ ವಿಲಕ್ಷಣವಾಗುತ್ತದೆ. ॥40॥
(ಶ್ಲೋಕ - 41)
ಮೂಲಮ್
ಖಂ ವಾಯುಮಗ್ನಿಂ ಸಲಿಲಂ ಮಹೀಂ ಚ
ಜ್ಯೋತೀಂಷಿ ಸತ್ತ್ವಾನಿ ದಿಶೋ ದ್ರುಮಾದೀನ್ ।
ಸರಿತ್ಸಮುದ್ರಾಂಶ್ಚ ಹರೇಃ ಶರೀರಂ
ಯತ್ಕಿಂಚ ಭೂತಂ ಪ್ರಣಮೇದನನ್ಯಃ ॥
ಅನುವಾದ
ರಾಜನೇ! ಆಕಾಶ, ವಾಯು, ಅಗ್ನಿ, ಜಲ, ಪೃಥಿವಿ, ಗೃಹ, ನಕ್ಷತ್ರ, ಪ್ರಾಣಿಗಳು, ದಿಕ್ಕುಗಳು, ವೃಕ್ಷ-ವನಸ್ಪತಿ, ನದಿ, ಸಮುದ್ರ ಇವೆಲ್ಲವೂ ಭಗವಂತನ ಶರೀರವಾಗಿದೆ. ಎಲ್ಲ ರೂಪಗಳಲ್ಲಿ ಸ್ವತಃ ಭಗವಂತನೇ ಪ್ರಕಟನಾಗಿದ್ದಾನೆ. ಹೀಗೆ ತಿಳಿದುಕೊಂಡು ಅವನು ತನ್ನ ಮುಂದೆ ಸುಳಿಯುವುದೆಲ್ಲ ವನ್ನೂ ಭಗವದ್ಭಾವದಿಂದ ನಮಸ್ಕರಿಸುತ್ತಾನೆ. ॥41॥
(ಶ್ಲೋಕ - 42)
ಮೂಲಮ್
ಭಕ್ತಿಃ ಪರೇಶಾನುಭವೋ ವಿರಕ್ತಿ-
ರನ್ಯತ್ರ ಚೈಷ ತ್ರಿಕ ಏಕಕಾಲಃ ।
ಪ್ರಪದ್ಯಮಾನಸ್ಯ ಯಥಾಶ್ನತಃ ಸ್ಯು-
ಸ್ತುಷ್ಟಿಃ ಪುಷ್ಟಿಃ ಕ್ಷುದಪಾಯೋನುಘಾಸಮ್ ॥
ಅನುವಾದ
ಊಟಮಾಡುವಾಗ ಪ್ರತಿಯೊಂದು ತುತ್ತಿಗೂ ತುಷ್ಟಿ (ತೃಪ್ತಿ ಅಥವಾ ಸುಖ), ಪುಷ್ಟಿ (ಜೀವನ ಶಕ್ತಿಯ ಸಂಚಾರ), ಕ್ಷುಧಾನಿವೃತ್ತಿ ಇವು ಮೂರು ಒಂದೇ ಬಾರಿಗೆ ಆಗುತ್ತಾ ಇರುತ್ತದೆ. ಹಾಗೆಯೇ ಭಗವಂತನಿಗೆ ಶರಣಾಗಿ ಅವನ ಭಜನೆ ಮಾಡುವವನಿಗೆ, ಭಜನೆಯ ಪ್ರತಿಯೊಂದು ಕ್ಷಣದಲ್ಲಿ ಭಗವಂತನ ಕುರಿತು ಪ್ರೀತಿ, ತನ್ನ ಪ್ರೇಮಾಸ್ಪದ ಪ್ರಭುವಿನ ಸ್ವರೂಪದ ಅನುಭವ ಹಾಗೂ ಅವನಲ್ಲದ ಇತರ ವಸ್ತುಗಳಲ್ಲಿ ವೈರಾಗ್ಯ ಇವು ಮೂರು ಒಂದೇ ಬಾರಿಗೆ ಪ್ರಾಪ್ತಿಯಾಗುತ್ತವೆ. ॥42॥
(ಶ್ಲೋಕ - 43)
ಮೂಲಮ್
ಇತ್ಯಚ್ಯುತಾಂಘ್ರಿಂ ಭಜತೋನುವೃತ್ತ್ಯಾ
ಭಕ್ತಿರ್ವಿರಕ್ತಿರ್ಭಗವತ್ಪ್ರಬೋಧಃ ।
ಭವಂತಿ ವೈ ಭಾಗವತಸ್ಯ ರಾಜಂ
ಸ್ತತಃ ಪರಾಂ ಶಾಂತಿಮುಪೈತಿ ಸಾಕ್ಷಾತ್ ॥
ಅನುವಾದ
ರಾಜನೇ! ಈ ವಿಧವಾಗಿ ಪ್ರತಿಕ್ಷಣ ಪ್ರತಿಯೊಂದು ವೃತ್ತಿಯ ಮೂಲಕ ಭಗವಂತನ ಚರಣ ಕಮಲಗಳನ್ನು ಭಜಿಸುವವನಿಗೆ ಭಗವಂತನ ಕುರಿತು ಪ್ರೇಮಮಯ ಭಕ್ತಿ, ಪ್ರಪಂಚದ ಕುರಿತು ವೈರಾಗ್ಯ, ತನ್ನ ಪ್ರಿಯತಮ ಭಗವಂತನ ಸ್ವರೂಪದ ಜ್ಞಾನ ಇವೆಲ್ಲವೂ ಅವಶ್ಯವಾಗಿ ಉಂಟಾಗುತ್ತವೆ. ಅವನು ಭಾಗವತನಾಗಿ ಹೋಗುತ್ತಾನೆ. ಇವೆಲ್ಲವೂ ಪ್ರಾಪ್ತವಾದಾಗ ಅವನು ಪರಮ ಶಾಂತಿಯನ್ನು ಅನುಭವಿಸತೊಡಗುವನು. (ಆದ್ದರಿಂದ ಶ್ರೇಯೋಕಾಮಿ ಮನುಷ್ಯನು ಭಗವಂತನಿಗೆ ಶರಣಾಗಬೇಕು. ಇದು ಸರ್ವೋತ್ತಮ ಸರಳ ಸಾಧನೆಯಾಗಿದೆ.)॥43॥
(ಶ್ಲೋಕ - 44)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಅಥ ಭಾಗವತಂ ಬ್ರೂತ ಯದ್ಧರ್ಮೋ ಯಾದೃಶೋ ನೃಣಾಮ್ ।
ಯಥಾ ಚರತಿ ಯದ್ಬ್ರೂತೇ ಯೈರ್ಲಿಂಗೈರ್ಭಗವತ್ಪ್ರಿಯಃ ॥
ಅನುವಾದ
ರಾಜಾ ನಿಮಿಯು ಕೇಳಿದನು — ಯೋಗೀಶ್ವರರೇ! ಈಗ ನೀವು ದಯಮಾಡಿ ಭಗವದ್ಭಕ್ತನ ಲಕ್ಷಣಗಳನ್ನು ವರ್ಣಿಸಿರಿ. ಅವನ ಧರ್ಮವೇನು? ಅವನ ಸ್ವಭಾವ ಹೇಗಿರುತ್ತದೆ. ಅವನು ಇತರರೊಂದಿಗೆ ವ್ಯವಹರಿಸುವಾಗ ಅವನ ಆಚರಣೆ ಹೇಗೆ ಇರುತ್ತದೆ? ಹೇಗೆ ಮಾತಾಡು ತ್ತಾನೆ? ಯಾವ ಲಕ್ಷಣಗಳಿಂದ ಅವನು ಭಗವಂತನಿಗೆ ಪ್ರಿಯನಾಗಿರುತ್ತಾನೆ? ॥44॥
(ಶ್ಲೋಕ - 45)
ಮೂಲಮ್ (ವಾಚನಮ್)
ಹರಿರುವಾಚ
ಮೂಲಮ್
ಸರ್ವಭೂತೇಷು ಯಃ ಪಶ್ಯೇದ್ಭಗವದ್ಭಾವಮಾತ್ಮನಃ ।
ಭೂತಾನಿ ಭಗವತ್ಯಾತ್ಮನ್ಯೇಷ ಭಾಗವತೋತ್ತಮಃ ॥
(ಶ್ಲೋಕ - 46)
ಮೂಲಮ್
ಈಶ್ವರೇ ತದಧೀನೇಷು ಬಾಲಿಶೇಷು ದ್ವಿಷತ್ಸು ಚ ।
ಪ್ರೇಮಮೈತ್ರೀಕೃಪೋಪೇಕ್ಷಾ ಯಃ ಕರೋತಿ ಸ ಮಧ್ಯಮಃ ॥
ಅನುವಾದ
ಒಂಭತ್ತು ಯೋಗೀಶ್ವರರಲ್ಲಿ ಎರಡನೆಯವರಾದ ಹರಿಯೋಗಿಗಳು ಇಂತೆಂದರು — ರಾಜನೇ! ಎಲ್ಲಕ್ಕಿಂತ ಶ್ರೇಷ್ಠ ಭಗವದ್ಭಕ್ತನ ಲಕ್ಷಣಗಳನ್ನು ಹೇಳುತ್ತೇನೆ; ಕೇಳು. ಸಮಸ್ತ ಪ್ರಾಣಿಗಳಲ್ಲಿ ಒಂದೇ ಆತ್ಮನಿರುವನು ಎಂದು ಭಾವಿಸಿ, ಭಗವಂತನ ಸತ್ತೆಯನ್ನು ನೋಡುವವನು, ಸಮಸ್ತ ಪ್ರಾಣಿಗಳನ್ನು ಆತ್ಮಸ್ವರೂಪೀ ಭಗವಂತನಲ್ಲಿ ನೋಡುವವನು ಉತ್ತಮ ಭಾಗವತನಾಗಿದ್ದಾನೆ. ಆದರೆ ಭಗವಂತನಲ್ಲಿ ಪ್ರೇಮವನ್ನಿರಿಸಿ, ಅವನ ಭಕ್ತರಲ್ಲಿ ಸಖತನವಿರಿಸುತ್ತಾ, ದುಃಖಿತರ, ಅಜ್ಞಾನಿಗಳ ಮೇಲೆ ದಯೆವಿರಿಸುತ್ತಾ, ಇದ್ದರೂ ಭಗವಂತನನ್ನು ದ್ವೇಷಿಸುವವನನ್ನು ಉಪೇಕ್ಷಿಸುವವನು ಮಧ್ಯಮ ದರ್ಜೆಯ ಭಕ್ತನಾಗಿದ್ದಾನೆ. ॥45-46॥
(ಶ್ಲೋಕ - 47)
ಮೂಲಮ್
ಅರ್ಚಾಯಾಮೇವ ಹರಯೇ ಪೂಜಾಂ ಯಃ ಶ್ರದ್ಧಯೇಹತೇ ।
ನ ತದ್ಭಕ್ತೇಷು ಚಾನ್ಯೇಷು ಸ ಭಕ್ತಃ ಪ್ರಾಕೃತಃ ಸ್ಮೃತಃ ॥
ಅನುವಾದ
ಇದರಿಂದ ಬೇರೆಯಾಗಿ ಭಗವಂತನ ಅರ್ಚಾ-ವಿಗ್ರಹ-ಮೂರ್ತಿಗಳ ಪೂಜೆಯನ್ನೇನೋ ಶ್ರದ್ಧೆಯಿಂದ ಮಾಡುತ್ತಾನೆ, ಆದರೆ ಭಗವಂತನ ಭಕ್ತರಲ್ಲೇ ಅವನಿಗೆ ಶ್ರದ್ಧೆ ಇಲ್ಲ ಎಂದಾಗ ಬೇರೆ ಜನರಲ್ಲಾದರೋ ಶ್ರದ್ಧೆ ಹೇಗೆ ಉಂಟಾದೀತು? ಇಂತಹವನು ಪ್ರಾಕೃತನಾಗಿದ್ದಾನೆ. ಅವನು ಕೆಳದರ್ಜೆಯ ಭಕ್ತನಾಗಿದ್ದಾನೆ. ॥47॥
(ಶ್ಲೋಕ - 48)
ಮೂಲಮ್
ಗೃಹೀತ್ವಾಪೀಂದ್ರಿಯೈರರ್ಥಾನ್ ಯೋ ನ ದ್ವೇಷ್ಟಿ ನ ಹೃಷ್ಯತಿ ।
ವಿಷ್ಣೋರ್ಮಾಯಾಮಿದಂ ಪಶ್ಯನ್ಸ ವೈ ಭಾಗವತೋತ್ತಮಃ ॥
ಅನುವಾದ
ಗುಣಾತೀತ ಅವಸ್ಥೆಯನ್ನು ವರ್ಣಿಸುತ್ತಾ ಹೇಳುತ್ತಾರೆ — ಇಂದ್ರಿಯಗಳ ಮೂಲಕ ವಿಷಯಗಳನ್ನು ಗ್ರಹಿಸುತ್ತಾ, ಅವು ಬಂದು ಹೋಗುವುದರಲ್ಲಿ ಹರ್ಷಿತನಾಗುವುದಿಲ್ಲ, ಅವುಗಳನ್ನು ದ್ವೇಷಿಸುವುದೂ ಇಲ್ಲ. ಈ ವಿಶ್ವವನ್ನು ಭಗವಂತನ ಮಾಯೆಯೆಂದು ತಿಳಿಯುವವನು ಉತ್ತಮ ಭಾಗವತನಾಗಿದ್ದಾನೆ. ॥48॥
(ಶ್ಲೋಕ - 49)
ಮೂಲಮ್
ದೇಹೇಂದ್ರಿಯ ಪ್ರಾಣಮನೋಧಿಯಾಂ ಯೋ
ಜನ್ಮಾಪ್ಯಯಕ್ಷುದ್ಭಯತರ್ಷಕೃಚ್ಛ್ರೈಃ ।
ಸಂಸಾರಧರ್ಮೈರವಿಮುಹ್ಯಮಾನಃ
ಸ್ಮೃತ್ಯಾ ಹರೇರ್ಭಾಗವತಪ್ರಧಾನಃ ॥
(ಶ್ಲೋಕ - 50)
ಮೂಲಮ್
ನ ಕಾಮಕರ್ಮಬೀಜಾನಾಂ ಯಸ್ಯ ಚೇತಸಿ ಸಂಭವಃ ।
ವಾಸುದೇವೈಕನಿಲಯಃ ಸ ವೈ ಭಾಗವತೋತ್ತಮಃ ॥
ಅನುವಾದ
ಜನ್ಮ-ಮೃತ್ಯು, ಹಸಿವು-ಬಾಯಾರಿಕೆ, ಭಯ, ಕಷ್ಟ ಮುಂತಾದ ಪ್ರಾಪಂಚಿಕ ಧರ್ಮಗಳು ದೇಹ, ಇಂದ್ರಿಯ, ಪ್ರಾಣ, ಮನ, ಬುದ್ಧಿ ಇವುಗಳಲ್ಲಿ ಬಂದುಹೋಗುತ್ತಾ ಇರುತ್ತವೆ. ಆದರೆ ಭಗವಂತನ ಸ್ಮೃತಿಯಲ್ಲಿ ನಿಮಗ್ನನಾಗಿದ್ದು, ಅವುಗಳಿಂದ ಬಾಧಿತನಾಗದ ಭಗವದ್ಭಕ್ತನು ಉತ್ತಮ ಶ್ರೇಣಿಯ ಭಕ್ತನಾಗಿದ್ದಾನೆ. ಮನಸ್ಸಿನಲ್ಲಿ ವಿಷಯ-ಭೋಗಗಳ ಇಚ್ಛೆ, ಕರ್ಮ ಪ್ರವೃತ್ತಿ, ಅವುಗಳ ಬೀಜ ವಾಸನೆಗಳು ಉಂಟಾಗದಿರುವವನು, ಏಕಮಾತ್ರ ಭಗವಾನ್ ವಾಸುದೇವನಲ್ಲೇ ವಾಸಿಸುವವನು ಉತ್ತಮ ಭಗವದ್ಭಕ್ತನಾಗಿರುವನು. ॥49-50॥
(ಶ್ಲೋಕ - 51)
ಮೂಲಮ್
ನ ಯಸ್ಯ ಜನ್ಮ ಕರ್ಮಭ್ಯಾಂ ನ ವರ್ಣಾಶ್ರಮಜಾತಿಭಿಃ ।
ಸಜ್ಜತೇಸ್ಮಿನ್ನಹಂಭಾವೋ ದೇಹೇ ವೈ ಸ ಹರೇಃ ಪ್ರಿಯಃ ॥
ಅನುವಾದ
ಆ ಭಕ್ತನು ಜನ್ಮ ಹಾಗೂ ಕರ್ಮದಿಂದಾಗಿ ಅಥವಾ ವರ್ಣ, ಆಶ್ರಮ, ಜಾತಿಯಿಂದಾಗಿ ಅಥವಾ ಶರೀರದಿಂದಾಗಿ ಎಲ್ಲಿಯೂ ಅಹಂತೆ, ಮಮತೆ ಇಡುವುದಿಲ್ಲ ಮತ್ತು ಇವೆಲ್ಲದರಲ್ಲಿ ಆಸಕ್ತನಾಗಿರುವುದಿಲ್ಲ. ಇಂತಹವನು ಭಗವಂತನಿಗೆ ನಿಶ್ಚಯವಾಗಿ ಬಹುಪ್ರಿಯನಾಗಿರುವನು. ॥51॥
(ಶ್ಲೋಕ - 52)
ಮೂಲಮ್
ನ ಯಸ್ಯ ಸ್ವಃ ಪರ ಇತಿ ವಿತ್ತೇಷ್ವಾತ್ಮನಿ ವಾ ಭಿದಾ ।
ಸರ್ವಭೂತಸಮಃ ಶಾಂತಃ ಸ ವೈ ಭಾಗವತೋತ್ತಮಃ ॥
ಅನುವಾದ
ಧನ, ಶರೀರಾದಿಗಳಲ್ಲಿ ಆಸಕ್ತಿ ಇಲ್ಲದವನು ‘ಇದು ನನ್ನದು, ಇದು ಪರರದು’ ಈ ಪ್ರಕಾರದ ಭೇದವಿರಿಸುವುದಿಲ್ಲ. ಅವನು ಸರ್ವತ್ರ ಸಮಭಾವದಿಂದ ಏಕಮಾತ್ರ ಪರಮಾತ್ಮನನ್ನೇ ನೋಡುವನು. ಯಾವುದೇ ಘಟನೆ ಅಥವಾ ಸಂಕಲ್ಪದಿಂದ ವಿಕ್ಷಿಪ್ತನಾಗದೆ ಸದಾಕಾಲ ಶಾಂತವಾಗಿರುತ್ತಾನೆ. ಅವನು ಖಂಡಿತವಾಗಿಯೇ ಭಗವಂತನ ಉತ್ತಮ ಭಕ್ತನಾಗಿದ್ದಾನೆ. ॥52॥
(ಶ್ಲೋಕ - 53)
ಮೂಲಮ್
ತ್ರಿಭುವನವಿಭವಹೇತವೇಪ್ಯಕುಂಠ-
ಸ್ಮೃತಿರಜಿತಾತ್ಮ ಸುರಾದಿಭಿರ್ವಿಮೃಗ್ಯಾತ್ ।
ನ ಚಲತಿ ಭಗವತ್ಪದಾರವಿಂದಾ-
ಲ್ಲವನಿಮಿಷಾರ್ಧಮಪಿ ಯಃ ಸ ವೈಷ್ಣವಾಗ್ರ್ಯಃ ॥
ಅನುವಾದ
ರಾಜನೇ! ದೊಡ್ಡ-ದೊಡ್ಡ ದೇವತೆ ಮುಂತಾದವರೂ ಕೂಡ ತಮ್ಮ ಮನಸ್ಸು, ಶರೀರ, ಇಂದ್ರಿಯಗಳನ್ನು ತಮ್ಮ ವಶಪಡಿಸಿಕೊಳ್ಳದೆ, ಭಗವಂತನ ಆ ಚರಣಾರವಿಂದಗಳನ್ನು ಹುಡುಕುತ್ತಲೇ ಇರುತ್ತಾರೆ. ಆದರೆ ಅವರೂ ಕೂಡ ಭಗವತ್ಕೃಪೆಯಿಲ್ಲದೆ ಅವನ್ನು ಪಡೆಯಲಾರರು. ಆದರೆ ಭಗವಂತನ ಪ್ರೇಮೀ ಭಕ್ತನ ಚಿತ್ತ ನಿರಂತರ ಆ ಚರಣಗಳ ಸನ್ನಿಧಿಯಲ್ಲಿ ಹಾಗೂ ಸೇವೆಯಲ್ಲಿ ತೊಡಗಿರುತ್ತದೆ. ಅವನಿಗೆ ಯಾರಾದರೂ ಮೂರುಲೋಕದ ರಾಜ್ಯಲಕ್ಷ್ಮಿಯ ಪ್ರಲೋಭನೆ ಒಡ್ಡಿದರೂ ಅವನು ಭಗವತ್ ಸ್ಮೃತಿಯಿಂದ ವಿಚಲಿತನಾಗುವುದಿಲ್ಲ. ಏನೇ ಹೇಳಲೀ, ಅವನು ಆ ರಾಜ್ಯಲಕ್ಷ್ಮಿಯ ಕಡೆಗೆ ಗಮನವನ್ನೇ ಕೊಡುವುದಿಲ್ಲ. ಇಂತಹ ಭಕ್ತನಿಗಾಗಿ ಭಗವಂತನು ಅರೆಕ್ಷಣವೂ ಮರೆಯಾಗುವುದಿಲ್ಲ. ಅವನೂ ಕೂಡ ಭಗವಂತನಿಂದ ಮರೆಯಾಗುವುದಿಲ್ಲ. ಇಂತಹ ಭಗವದ್ಭಕ್ತನು ವೈಷ್ಣವರಲ್ಲಿ ಅಗ್ರಗಣ್ಯನಾಗಿದ್ದಾನೆ. ಎಲ್ಲರಿಂದ ಶ್ರೇಷ್ಠನಾಗಿದ್ದಾನೆ. ॥53॥
(ಶ್ಲೋಕ - 54)
ಮೂಲಮ್
ಭಗವತ ಉರುವಿಕ್ರಮಾಂಘ್ರಿಶಾಖಾ-
ನಖಮಣಿಚಂದ್ರಿಕಯಾ ನಿರಸ್ತತಾಪೇ ।
ಹೃದಿ ಕಥಮುಪಸೀದತಾಂ ಪುನಃ ಸ
ಪ್ರಭವತಿ ಚಂದ್ರ ಇವೋದಿತೇರ್ಕತಾಪಃ ॥
ಅನುವಾದ
ಭಗವಂತನ ಪರಾಕ್ರಮ ಅಸೀಮವಾಗಿದೆ. ಇಂತಹ ಆ ಪ್ರಭುವಿನ ಪಾದನಖ ಚಂದ್ರಿಕೆಯಿಂದ ಶರಣಾಗತ ಭಕ್ತರ ಹೃದಯದ ಸಂತಾಪವು ಒಮ್ಮೆಗೇ ದೂರವಾಗಿಹೋಗುತ್ತದೆ. ಆ ಭಕ್ತನು ಭಗವಂತನ ಭಕ್ತಿಯಲ್ಲೇ ಆನಂದಿತನಾಗಿರುತ್ತಾನೆ. ಭಗವಂತನ ಚರಣಗಳಲ್ಲಿ ಅನನ್ಯ ಶರಣಾಗತಿಯ ಹೊರತು ಅವನು ಎಲ್ಲಿಗೂ ಹೋಗಲಾರನು. ಚಂದ್ರೋದಯವಾದ ಬಳಿಕ ಸೂರ್ಯನ ಪ್ರಖರ ತಾಪ ಬಾಧಿಸದಂತೆ, ಅವನನ್ನು ಕಾಮ, ಕ್ರೋಧಾದಿ ಶತ್ರುಗಳು ಮತ್ತೆ ಪ್ರಭಾವಿತನನ್ನಾಗಿಸಲಾರವು. ॥54॥
(ಶ್ಲೋಕ - 55)
ಮೂಲಮ್
ವಿಸೃಜತಿ ಹೃದಯಂ ನ ಯಸ್ಯ ಸಾಕ್ಷಾ-
ದ್ಧರಿರವಶಾಭಿಹಿತೋಪ್ಯಘೌಘನಾಶಃ ।
ಪ್ರಣಯರಶನಯಾ ಧೃತಾಂಘ್ರಿಪದ್ಮಃ
ಸ ಭವತಿ ಭಾಗವತಪ್ರಧಾನ ಉಕ್ತಃ ॥
ಅನುವಾದ
ಭಗವಂತನ ನಾಮವನ್ನು ವಿವಶನಾಗಿ ಉಚ್ಚರಿಸಿದರೂ ಕೂಡ ಭಗವಂತನು ಅವನ ಸಂಪೂರ್ಣ ಪಾಪರಾಶಿಯನ್ನು ತತ್ಕಾಲವೇ ನಾಶಮಾಡಿಬಿಡುತ್ತಾನೆ. ಅಂತಹ ಸ್ವಯಂ ಭಗವಾನ್ ಶ್ರೀಹರಿಯು ಅವನ ಹೃದಯದಿಂದ ಒಂದು ಕ್ಷಣವೂ ಅಗಲುವುದಿಲ್ಲ. ಏಕೆಂದರೆ, ಅವನು ಪ್ರೇಮ ಸೂತ್ರದಿಂದ ಅವನ ಚರಣಕಮಲಗಳನ್ನು ಗಟ್ಟಿಯಾಗಿ ಕಟ್ಟಿ ಇಟ್ಟಿರುವನು. ನಿಜವಾಗಿ ಇಂತಹವನೇ ಭಗವಂತನ ಭಕ್ತರಲ್ಲಿ ಅಗ್ರೇಸರನಾಗಿರುವನು. ಅವನೇ ಮಹಾಪುರುಷನಾಗಿದ್ದಾನೆ. ॥55॥
ಎರಡನೆಯ ಅಧ್ಯಾಯವು ಮುಗಿಯಿತು. ॥2॥
ಅನುವಾದ (ಸಮಾಪ್ತಿಃ)
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ದ್ವಿತೀಯೋಽಧ್ಯಾಯಃ ॥2॥