೦೧

[ಮೊದಲನೆಯ ಅಧ್ಯಾಯ]

ಭಾಗಸೂಚನಾ

ಯದುವಂಶಕ್ಕೆ ಋಷಿಗಳ ಶಾಪ

(ಶ್ಲೋಕ - 1)

ಮೂಲಮ್ (ವಾಚನಮ್)

ಶ್ರೀಬಾದರಾಯಣಿರುವಾಚ

ಮೂಲಮ್

ಕೃತ್ವಾ ದೈತ್ಯವಧಂ ಕೃಷ್ಣಃ ಸರಾಮೋ ಯದುಭಿರ್ವೃತಃ ।
ಭುವೋವತಾರಯದ್ಭಾರಂ ಜವಿಷ್ಠಂ ಜನಯನ್ಕಲಿಮ್ ॥

ಅನುವಾದ

ವ್ಯಾಸನಂದನ ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಬಲರಾಮ ಹಾಗೂ ಬೇರೆ ಯಾದವರೊಂದಿಗೆ ಸೇರಿ ಅನೇಕ ದೈತ್ಯರನ್ನು ಸಂಹರಿಸಿ, ಕೌರವ ಪಾಂಡವರಲ್ಲಿ ಭಾರೀ ಕಲಹವನ್ನು ಉಂಟುಮಾಡಿ ಭೂಭಾರವನ್ನು ಇಳಿಸಿದನು. ॥1॥

(ಶ್ಲೋಕ - 2)

ಮೂಲಮ್

ಯೇ ಕೋಪಿತಾಃ ಸುಬಹು ಪಾಂಡುಸುತಾಃ ಸಪತ್ನೈ-
ರ್ದುರ್ದ್ಯೂತಹೇಲನಕಚಗ್ರಹಣಾದಿಭಿಸ್ತಾನ್ ।
ಕೃತ್ವಾ ನಿಮಿತ್ತಮಿತರೇತರತಃ ಸಮೇತಾನ್
ಹತ್ವಾ ನೃಪಾನ್ ನಿರಹರತ್ಕ್ಷಿತಿಭಾರಮೀಶಃ ॥

ಅನುವಾದ

ಪಾಂಡವರನ್ನು ಅವರ ಶತ್ರುಗಳಾದ ಕೌರವರು ಕಪಟ ದ್ಯೂತದಿಂದ ಸೋಲಿಸಿ, ದ್ರೌಪದಿಯ ಮಾನಭಂಗವೇ ಮೊದಲಾದ ಅತ್ಯಾಚಾರಗಳಿಂದ ಕೆಣಕಿದರು. ಅಂತಹ ಪಾಂಡವರನ್ನು ನಿಮಿತ್ತವಾಗಿಸಿ ಭಗವಾನ್ ಶ್ರೀಕೃಷ್ಣನು ಕೌರವ ಪಾಂಡವರ ಎರಡೂ ಪಕ್ಷದಲ್ಲಿ ಸೇರಿದ ರಾಜರನ್ನು ಪರಸ್ಪರ ಕೊಲ್ಲಿಸಿದನು. ಈ ವಿಧವಾಗಿ ಅವನು ಪೃಥ್ವಿಯ ಭಾರವನ್ನು ಇಳಿಸಿದನು. ॥2॥

(ಶ್ಲೋಕ - 3)

ಮೂಲಮ್

ಭೂಭಾರರಾಜಪೃತನಾ ಯದುಭಿರ್ನಿರಸ್ಯ
ಗುಪ್ತೈಃ ಸ್ವಬಾಹುಭಿರಚಿಂತಯದಪ್ರಮೇಯಃ ।
ಮನ್ಯೇವನೇರ್ನನು ಗತೋಪ್ಯಗತಂ ಹಿ ಭಾರಂ
ಯದ್ಯಾದವಂ ಕುಲಮಹೋ ಅವಿಷಹ್ಯಮಾಸ್ತೇ ॥

ಅನುವಾದ

ಅಪ್ರಮೇಯ ಸ್ವರೂಪೀ ಭಗವಾನ್ ಶ್ರೀಕೃಷ್ಣನು ತನ್ನ ಬಾಹುಬಲದಿಂದ ರಕ್ಷಿತ ಯಾದವರ ಮೂಲಕ ಕಂಟಕಪ್ರಾಯರಾದ ರಾಜರನ್ನು ಅವರ ಸೇನೆಯನ್ನೂ ವಿನಾಶಗೊಳಿಸಿದನು. ಈಗಲಾದರೋ ಯಾದವರು ಈ ಭೂಮಿಯಲ್ಲಿ ಇರುವ ಬೇರೆ ಯಾರಿಂದಲೂ ಜಯಿಸಲಾರರು. ಇಂತಹ ಪ್ರಬಲ ಪರಾಕ್ರಮಿ ಯಾದವರು ಭೂಮಂಡಲದಲ್ಲಿ ಜೀವಿಸಿರುವ ತನಕ, ಇಷ್ಟು ಭೂಭಾರ ತಗ್ಗಿದರೂ ಇನ್ನೂ ಪೃಥ್ವಿಯ ಭಾರ ಕಡಿಮೆಯಾಗಿಲ್ಲ ಎಂದೇ ನಾನು ತಿಳಿಯುತ್ತೇನೆ; ಹೀಗೆ ಯೋಚಿಸಿದನು. ॥3॥

(ಶ್ಲೋಕ - 4)

ಮೂಲಮ್

ನೈವಾನ್ಯತಃ ಪರಿಭವೋಸ್ಯ ಭವೇತ್ ಕಥಂಚಿನ್
ಮತ್ಸಂಶ್ರಯಸ್ಯ ವಿಭವೋನ್ನ ಹನಸ್ಯ ನಿತ್ಯಮ್ ।
ಅಂತಃಕಲಿಂ ಯದುಕುಲಸ್ಯ ವಿಧಾಯ ವೇಣು-
ಸ್ತಂಬಸ್ಯ ವಹ್ನಿಮಿವ ಶಾಂತಿಮುಪೈಮಿ ಧಾಮ ॥

ಅನುವಾದ

ನನ್ನ ಆಶ್ರಯದಲ್ಲಿರುವುದರಿಂದ ಈ ಯಾದವರನ್ನು ಬೇರೆ ಯಾರೂ ಪರಾಭವಗೊಳಿಸಲಾರರು. ಇವರು ಪೂರ್ಣವಾಗಿ ಉಚ್ಛಂಖಲರಾಗುತ್ತಿದ್ದಾರೆ. ಅಪಾರ ಸಂಪತ್ತು-ವೈಭವದಿಂದಾಗಿ ಇವರು ಯಾರ ಶಾಸನವನ್ನೂ ಲೆಕ್ಕಿಸರು. ಆದ್ದರಿಂದ ಬಿದಿರು ಮೇಳೆ ಒಂದಕ್ಕೊಂದರ ಸಂಘರ್ಷದಿಂದ ಉಂಟಾದ ಬೆಂಕಿಯಿಂದ ಬಿದಿರುವನವನ್ನೇ ಸುಡುವಂತೆ ಈ ಯಾದವರಲ್ಲಿ ಪರಸ್ಪರ ಜಗಳ ಉಂಟುಮಾಡಿ ನಾನು ನನ್ನ ಶಾಂತಸ್ವರೂಪ ಪರಮಧಾಮಕ್ಕೆ ತೆರಳುವೆನು. ॥4॥

(ಶ್ಲೋಕ - 5)

ಮೂಲಮ್

ಏವಂ ವ್ಯವಸಿತೋ ರಾಜನ್ ಸತ್ಯಸಂಕಲ್ಪ ಈಶ್ವರಃ ।
ಶಾಪವ್ಯಾಜೇನ ವಿಪ್ರಾಣಾಂ ಸಂಜಹ್ರೇ ಸ್ವಕುಲಂ ವಿಭುಃ ॥

ಅನುವಾದ

ಎಲೈ ರಾಜನೇ! ಸತ್ಯಸಂಕಲ್ಪ, ಸರ್ವಸಮರ್ಥ ಭಗವಂತನು ಹೀಗೆ ನಿಶ್ಚಯಿಸಿ, ಆ ಸರ್ವವ್ಯಾಪೀ ಪರಮಾತ್ಮನು ಬ್ರಾಹ್ಮಣರ ಶಾಪವನ್ನು ನಿಮಿತ್ತವಾಗಿಸಿ ತನ್ನ ಕುಲದ ಸಂಹಾರ ಮಾಡಿಸಿದನು. ॥5॥

(ಶ್ಲೋಕ - 6)

ಮೂಲಮ್

ಸ್ವಮೂರ್ತ್ಯಾ ಲೋಕಲಾವಣ್ಯನಿರ್ಮುಕ್ತ್ಯಾ ಲೋಚನಂ ನೃಣಾಮ್ ।
ಗೀರ್ಭಿಸ್ತಾಃ ಸ್ಮರತಾಂ ಚಿತ್ತಂ ಪದೈಸ್ತಾನೀಕ್ಷತಾಂ ಕ್ರಿಯಾಃ ॥

(ಶ್ಲೋಕ - 7)

ಮೂಲಮ್

ಆಚ್ಛಿದ್ಯ ಕೀರ್ತಿಂ ಸುಶ್ಲೋಕಾಂ ವಿತತ್ಯ ಹ್ಯಂಜಸಾನು ಕೌ ।
ತಮೋನಯಾ ತರಿಷ್ಯಂತೀತ್ಯಗಾತ್ಸ್ವಂ ಪದಮೀಶ್ವರಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಅಖಂಡ ತ್ರಿಲೋಕಕ್ಕೆ ಸೌಂದರ್ಯ, ಮಾಧುರ್ಯವನ್ನು ಕರುಣಿಸುವವನು. ಅವನು ಸೌಂದರ್ಯ ಮಾಧುರ್ಯದ ನಿಧಿಯಾಗಿದ್ದಾನೆ. ಭಗವಂತನ ಶ್ಯಾಮಸುಂದರ ಸ್ವರೂಪವು ಯಾರೇ ಆಗಲೀ ಒಮ್ಮೆ ನೋಡಿದರೆ ಸಾಕು ಅವರ ಕಣ್ಣುಗಳು ಆ ಭಗವಂತನಲ್ಲಿ ಎಂದೆಂದಿಗೂ ನೆಟ್ಟುಹೋಗುವಷ್ಟು ಸುಂದರ, ಮನೋಹರವಾಗಿತ್ತು. ಅವನ ವಾಣಿಯು ಚಿಂತಿಸುವವರ ಚಿತ್ತವು ಮತ್ತೆ ಭಗವಂತನಲ್ಲೇ ಸ್ಥಿರವಾಗಿ ತೊಡಗುವಷ್ಟು ಮಧುರವಾಗಿತ್ತು. ಅವನ ಸುಮಧುರ ಮುರಳಿಯಗಾನ, ತ್ರಿಭಂಗಿ ಲಲಿತ ಭಂಗಿಯು, ಎಲ್ಲ ಪ್ರಾಣಿಗಳು ತಮ್ಮ ಕ್ರಿಯೆಗಳನ್ನು ಮರೆತು, ಕೆಲಸ-ಕಾರ್ಯಗಳನ್ನು ಬಿಟ್ಟು ಅವನೆಡೆಗೆ ಸೆಳೆಯಲ್ಪಡುತ್ತಿದ್ದವು. (ಈ ಪ್ರಕಾರ ಕಣ್ಣುಗಳನ್ನು ಆಕರ್ಷಿಸಿ ಅವರ ಸ್ಥೂಲಶರೀರವನ್ನು, ಚಿತ್ತವನ್ನು ಸೆಳೆದು ಅವರ ಸೂಕ್ಷ್ಮ ಶರೀರವನ್ನು, ಕ್ರಿಯೆಗಳನ್ನು ಆಕೃಷ್ಟವಾಗಿಸಿ, ಕರ್ಮವಾಸನೆಯ ಬೀಜವನ್ನೇ ನಾಶಗೊಳಿಸಿ ಅವರ ಕಾರಣಶರೀರವನ್ನು, ಹೀಗೆ ಎಲ್ಲವನ್ನೂ ತನ್ನತ್ತ ಸೆಳೆದುಕೊಂಡು ಜೀವಿಗಳನ್ನು ಪೂರ್ಣವಾಗಿ ಕರ್ಮಬಂಧನಗಳಿಂದ ಮುಕ್ತವಾಗಿಸುತ್ತಿದ್ದನು.) ಭಗವಂತನು ಈ ಪ್ರಕಾರ ತನ್ನ ಕೀರ್ತಿಯನ್ನು ಭೂಮಂಡಲದಲ್ಲಿ ವಿಸ್ತರಿಸಿದನು. ಆ ಲೀಲೆಗಳನ್ನು ಹಾಡಿ ಕೇಳಿ ಮನುಷ್ಯರು ಆಯಾಸವಿಲ್ಲದೆ ಈ ಅಜ್ಞಾನಾಂಧಕಾರವನ್ನು ದಾಟಿ ಹೋಗುವರು.* ಪರಮ ದಯಾಳು ಭಗವಾನ್ ಶ್ರೀಕೃಷ್ಣನು ಈ ರೀತಿ ತನ್ನ ಪವಿತ್ರ ಯಶಸ್ಸನ್ನು ವಿಸ್ತರಿಸಿ ತನ್ನ ಪರಮಧಾಮಕ್ಕೆ ತೆರಳಿದನು. ॥6-7॥

ಟಿಪ್ಪನೀ
  • ಭಗವಂತನು ಎಲ್ಲ ಪ್ರಾಣಿಗಳ ನಿಜವಾದ ಸುಹೃದ್ ಆಗಿದ್ದಾನೆ. ಜೀವಿಗಳ ಉದ್ಧಾರಕ್ಕಾಗಿಯೇ ಅವನು ಅವತಾರ ಲೀಲೆಗಳನ್ನು ನಡೆಸುತ್ತಾನೆ. ಮನುಷ್ಯರು ಭಗವಂತನ ಆ ಲೀಲೆಗಳನ್ನು ಮನನ-ಚಿಂತನ-ಸ್ಮರಣಗೈದು ನಿಜವಾಗಿ ಈ ಮೃತ್ಯುಸಂಸಾರ ಸಾಗರದಿಂದ ದಾಟಿ ಹೋಗುವರು. ಇದರಲ್ಲಿಯೂ ಭಗವಂತನ ಅಸೀಮ ಕೃಪೆಯೇ ತುಂಬಿದೆ. ಆದ್ದರಿಂದ ಭಗವಂತನ ನಾಮದ ಜಪ, ಸ್ವರೂಪದ ಚಿಂತನೆ, ಲೀಲೆಗಳ ಸ್ಮರಣೆ ಮಾಡುವ ಅಭ್ಯಾಸ ಹೆಚ್ಚಿಸಿಕೊಳ್ಳಬೇಕು. ಭಗವಂತನು ಭಗವದ್ಗೀತೆಯಲ್ಲಿ ಹೀಗೆ ಹೇಳಿರುವನು
    ಮಚ್ಚಿತ್ತಾ ಮದ್ಗತಪ್ರಾಣಾ ಬೋಧಯಂತಃ ಪರಸ್ಪರಮ್ । ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥
    (ಭಗವದ್ಗೀತೆ 10/9)
    ನಿರಂತರವಾಗಿ ನನ್ನಲ್ಲಿ ಮನಸ್ಸನ್ನು ತೊಡಗಿಸುವವರು ಮತ್ತು ನನ್ನಲ್ಲೇ ಪ್ರಾಣಗಳನ್ನು ಅರ್ಪಿಸುವ ಭಕ್ತಜನರು, ನನ್ನ ಭಕ್ತಿಯ ಚರ್ಚೆಯ ಮೂಲಕ ತಮ್ಮ ತಮ್ಮಲ್ಲಿ ನನ್ನ ಪ್ರಭಾವವನ್ನು ತಿಳಿಸಿಕೊಡುತ್ತ ಹಾಗೂ ಗುಣ ಮತ್ತು ಪ್ರಭಾವಸಹಿತ ನನ್ನ ಕಥೆಗಳನ್ನು ಹೇಳಿಕೊಳ್ಳುತ್ತಲೇ ನಿರಂತರ ಸಂತುಷ್ಟರಾಗುತ್ತಾರೆ ಮತ್ತು ವಾಸುದೇವನಾದ ನನ್ನಲ್ಲಿಯೇ ರಮಿಸುತ್ತಾರೆ.

(ಶ್ಲೋಕ - 8)

ಮೂಲಮ್ (ವಾಚನಮ್)

ರಾಜೋವಾಚ

ಮೂಲಮ್

ಬ್ರಹ್ಮಣ್ಯಾನಾಂ ವದಾನ್ಯಾನಾಂ ನಿತ್ಯಂ ವೃದ್ಧೋಪಸೇವಿನಾಮ್ ।
ವಿಪ್ರಶಾಪಃ ಕಥಮಭೂದ್ವ ಷ್ಣೀನಾಂ ಕೃಷ್ಣಚೇತಸಾಮ್ ॥

(ಶ್ಲೋಕ - 9)

ಮೂಲಮ್

ಯನ್ನಿಮಿತ್ತಃ ಸ ವೈ ಶಾಪೋ ಯಾದೃಶೋ ದ್ವಿಜಸತ್ತಮ ।
ಕಥಾಮೇಕಾತ್ಮನಾಂ ಭೇದ ಏತತ್ಸರ್ವಂ ವದಸ್ವ ಮೇ ॥

ಅನುವಾದ

ರಾಜಾ ಪರೀಕ್ಷಿತನು ಕೇಳಿದನು — ಈ ಯದುವಂಶೀಯರಾದರೋ ಬ್ರಾಹ್ಮಣಭಕ್ತರಾಗಿದ್ದರು. ಉದಾರರಾಗಿದ್ದು, ಗುರು ಹಿರಿಯರನ್ನು ಆದರಪೂರ್ವಕವಾಗಿ ಸೇವಿಸುವವರಾಗಿದ್ದರು. ಅವರ ಚಿತ್ತ ಸದಾಕಾಲ ಶ್ರೀಕೃಷ್ಣನಲ್ಲೇ ತೊಡಗಿರುತ್ತಿತ್ತು. ಅವರಿಗೆ ಬ್ರಾಹ್ಮಣರ ಶಾಪ ಹೇಗೆ ಉಂಟಾಯಿತು? ಯಾವ ಕಾರಣದಿಂದ ಶಾಪ ಒದಗಿತು? ಆ ಶಾಪ ಏನಾಗಿತ್ತು? ಎಲ್ಲ ಯಾದವರು ಪರಸ್ಪರ ಪ್ರೇಮದಿಂದಲೇ ಕೂಡಿಕೊಂಡಿದ್ದರೂ ಅವರಲ್ಲಿ ಇಂತಹ ಭೇದಭಾವ ಏಕೆ ಉಂಟಾಯಿತು? ವಿರಸ ಹೇಗೆ ಉಂಟಾಯಿತು? ಇದೆಲ್ಲವನ್ನು ತಾವು ನನಗೆ ತಿಳಿಸುವ ಕೃಪೆಮಾಡಬೇಕು. ॥8-9॥

(ಶ್ಲೋಕ - 10)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಬಿಭ್ರದ್ವಪುಃ ಸಕಲಸುಂದರಸನ್ನಿವೇಶಂ
ಕರ್ಮಾಚರನ್ ಭುವಿ ಸುಮಂಗಲಮಾಪ್ತಕಾಮಃ ।
ಆಸ್ಥಾಯ ಧಾಮ ರಮಮಾಣ ಉದಾರಕೀರ್ತಿಃ
ಸಂಹರ್ತುಮೈಚ್ಛತ ಕುಲಂ ಸ್ಥಿತಕೃತ್ಯಶೇಷಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಭಗವಾನ್ ಶ್ರೀಕೃಷ್ಣನ ಶ್ರೀವಿಗ್ರಹದಲ್ಲಿ ಸಮಸ್ತ ಸೌಂದರ್ಯರೂಪ ರಾಶಿಯು ರಾರಾಜಿಸುತ್ತಿತ್ತು. ಆ ಪ್ರಭುವು ಈ ಭೂಮಂಡಲದಲ್ಲಿ ಅನೇಕ ಮಂಗಲಮಯ ಶ್ರೇಯಸ್ಕರವಾದ ಕರ್ಮಗಳನ್ನು ಆಚರಿಸಿದನು. ಅವನು ಸ್ವತಃ ಪೂರ್ಣಕಾಮನಾಗಿದ್ದನು. ತನ್ನ ಪರಮಧಾಮದಲ್ಲಿ ಇದ್ದುಕೊಂಡು ತನ್ನಲ್ಲೇ ರಮಮಾಣನಾದ ಉದಾರಕೀರ್ತಿಯುಳ್ಳ ಪ್ರಭುವು ತನ್ನ ಕುಲದ ಸಂಹಾರಮಾಡಲು ಸಂಕಲ್ಪಿಸಿದನು. ಭೂಭಾರ ಹರಣದಲ್ಲಿ ಇದೊಂದೇ ಕಾರ್ಯ ಉಳಿದಿತ್ತು ಎಂದು ಯೋಚಿಸಿದನು. ॥10॥

(ಶ್ಲೋಕ - 11)

ಮೂಲಮ್

ಕರ್ಮಾಣಿ ಪುಣ್ಯನಿವಹಾನಿ ಸುಮಂಗಲಾನಿ
ಗಾಯಜ್ಜಗತ್ಕಲಿಮಲಾಪಹರಾಣಿ ಕೃತ್ವಾ ।
ಕಾಲಾತ್ಮನಾ ನಿವಸತಾ ಯದುದೇವಗೇಹೇ
ಪಿಂಡಾರಕಂ ಸಮಗಮನ್ ಮುನಯೋ ನಿಸೃಷ್ಟಾಃ ॥

(ಶ್ಲೋಕ - 12)

ಮೂಲಮ್

ವಿಶ್ವಾಮಿತ್ರೋಸಿತಃ ಕಣ್ವೋ ದುರ್ವಾಸಾ ಭೃಗುರಂಗಿರಾಃ ।
ಕಶ್ಯಪೋ ವಾಮದೇವೋತ್ರಿರ್ವಸಿಷ್ಠೋ ನಾರದಾದಯಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಅನೇಕ ಮಂಗಲಮಯ ಮತ್ತು ಪುಣ್ಯಕರ ಕರ್ಮಗಳನ್ನು ಮಾಡಿದನು. ಅದನ್ನು ಕೊಂಡಾಡುವವರ ಎಲ್ಲ ಪಾಪಗಳು ನಾಶವಾಗಿ ಹೋಗುತ್ತವೆ. ಇಂತಹ ಪವಿತ್ರ ಕರ್ಮಗಳನ್ನಾಚರಿಸಿ ಈಗ ಅವನು ಕಾಲರೂಪದಿಂದ ವಸುದೇವನ ಮನೆಯಲ್ಲಿ ವಾಸಿಸುತ್ತಿದ್ದನು. ಆಗಲೇ ಅವನು ಅನೇಕ ಮುನಿಗಳನ್ನು ಪಿಂಡಾರಕ(ಪ್ರಭಾಸ)ಕ್ಷೇತ್ರಕ್ಕೆ ಹೋಗಲು ಪ್ರೇರೇಪಿಸಿದನು. ಭಗವಂತನ ಸಂಕಲ್ಪದಂತೆ ಅವರೆಲ್ಲರೂ ಅಲ್ಲಿಗೆ ತೆರಳಿದರು. ಆ ಮುನಿಗಳಲ್ಲಿ ವಿಶ್ವಾಮಿತ್ರ, ಅಸಿತ, ಕಣ್ವ, ದುರ್ವಾಸ, ಭೃಗು, ಅಂಗಿರಾ, ಕಶ್ಯಪ, ವಾಮದೇವ, ಅತ್ರಿ, ವಸಿಷ್ಠ, ನಾರದ ಮುಂತಾದವರಿದ್ದರು. ॥11-12॥

(ಶ್ಲೋಕ - 13)

ಮೂಲಮ್

ಕ್ರೀಡಂತಸ್ತಾನುಪವ್ರಜ್ಯ ಕುಮಾರಾ ಯದುನಂದನಾಃ ।
ಉಪಸಂಗೃಹ್ಯ ಪಪ್ರಚ್ಛುರವಿನೀತಾ ವಿನೀತವತ್ ॥

ಅನುವಾದ

ಒಂದು ದಿನ ಕೆಲವು ಯದುವಂಶೀಯ ಕುಮಾರರು ಆಡುತ್ತಾ ಆಡುತ್ತಾ ಅವರ ಬಳಿಗೆ ತಲುಪಿದರು. ಅವರು ಉದ್ಧಟರಾಗಿದ್ದರು, ಆದರೆ ಕೃತಕ ವಿನಯವನ್ನು ತೋರುತ್ತಾ ಮುನಿಗಳಲ್ಲಿ ಪ್ರಶ್ನಿಸಿದರು. ॥13॥

(ಶ್ಲೋಕ - 14)

ಮೂಲಮ್

ತೇ ವೇಷಯಿತ್ವಾ ಸೀವೇಷೈಃ ಸಾಂಬಂ ಜಾಂಬವತೀಸುತಮ್ ।
ಏಷಾ ಪೃಚ್ಛತಿ ವೋ ವಿಪ್ರಾ ಅಂತರ್ವತ್ನ್ಯಸಿತೇಕ್ಷಣಾ ॥

(ಶ್ಲೋಕ - 15)

ಮೂಲಮ್

ಪ್ರಷ್ಟುಂ ವಿಲಜ್ಜತೀ ಸಾಕ್ಷಾತ್ ಪ್ರಬ್ರೂತಾಮೋಘದರ್ಶನಾಃ ।
ಪ್ರಸೋಷ್ಯಂತೀ ಪುತ್ರಕಾಮಾ ಕಿಂಸ್ವಿತ್ ಸಂಜನಯಿಷ್ಯತಿ ॥

ಅನುವಾದ

ಆ ಯದುವಂಶೀ ಬಾಲಕರು ಜಾಂಬವತಿಯ ಪುತ್ರ ಸಾಂಬನಿಗೆ ಸ್ತ್ರೀವೇಷ ತೊಡಿಸಿಕೊಂಡು ಹೋಗಿ ಅವರು ಬ್ರಾಹ್ಮಣರಲ್ಲಿ ವಿಪ್ರವರ್ಯರೇ! ಈ ವಿಶಾಲಾಕ್ಷಿಯಾದ ಸುಂದರಿಯು ಗರ್ಭವತಿಯಾಗಿರುವಳು. ಇವಳು ಪುತ್ರರತ್ನವನ್ನು ಹಡೆಯಬೇಕೆಂದು ಬಯಸುವಳು. ಸ್ವತಃ ನಿಮ್ಮಲ್ಲಿ ಕೇಳಲು ನಾಚಿಕೊಳ್ಳುತ್ತಿರುವಳು. ನಿಮ್ಮ ಜ್ಞಾನ ಅಮೋಘವಾಗಿದೆ. ಆದ್ದರಿಂದ ಇವಳು ಗಂಡುಹಡೆಯುವಳೋ ಹೆಣ್ಣೋ? ಇದನ್ನು ತಿಳಿಸಿರಿ ; ಎಂದು ವಿನಂತಿಸಿಕೊಂಡರು. ॥14-15॥

(ಶ್ಲೋಕ - 16)

ಮೂಲಮ್

ಏವಂ ಪ್ರಲಬ್ಧಾ ಮುನಯಸ್ತಾನೂಚುಃ ಕುಪಿತಾ ನೃಪ ।
ಜನಯಿಷ್ಯತಿ ವೋ ಮಂದಾ ಮುಸಲಂ ಕುಲನಾಶನಮ್ ॥

ಅನುವಾದ

ರಾಜನೇ! ಈ ವಿಧವಾಗಿ ಆ ಕುಮಾರರು ಮುನಿಗಳಲ್ಲಿ ಒತ್ತಾಯಮಾಡಿದಾಗ, ಮುನಿಗಳು ಕುಪಿತರಾಗಿ ನುಡಿದರು ಎಲೈ ಮೂರ್ಖರಿರಾ! ಇವನು ನಿಮ್ಮ ಕುಲವನ್ನು ಸಂಹಾರ ಮಾಡುವಂತಹ ಒನಕೆಯನ್ನು ಹಡೆಯುವನು. ॥16॥

(ಶ್ಲೋಕ - 17)

ಮೂಲಮ್

ತಚ್ಛ್ರುತ್ವಾ ತೇತಿಸಂತ್ರಸ್ತಾ ವಿಮುಚ್ಯ ಸಹಸೋದರಮ್ ।
ಸಾಂಬಸ್ಯ ದದೃಶುಸ್ತಸ್ಮಿನ್ ಮುಸಲಂ ಖಲ್ವಯಸ್ಮಯಮ್ ॥

ಅನುವಾದ

ಇದನ್ನು ಕೇಳಿ ಅವರೆಲ್ಲರೂ ಅತ್ಯಂತ ಭಯಪಟ್ಟರು. ಕೂಡಲೇ ಸಾಂಬನ ಹೊಟ್ಟೆಯನ್ನು ಬಿಚ್ಚಿನೋಡಿದರೆ ನಿಜವಾಗಿಯೇ ಒಂದು ಕಬ್ಬಿಣದ ಒನಕೆಯೇ ಇತ್ತು.* ॥17॥

ಟಿಪ್ಪನೀ
  • ಆ ಬಾಲಕರು ಮುನಿಗಳನ್ನು ಮೋಸಮಾಡಲು ಸಾಂಬನ ಹೊಟ್ಟೆಗೆ ಬಟ್ಟೆಸುತ್ತಿದ್ದರು. ಆದರೆ ವಿಧಿವಶದಿಂದ ಅದು ಕಬ್ಬಿಣದ ಒನಕೆಯಾಗಿಹೋಯಿತು. ಈ ಪ್ರಕಾರ ತಮ್ಮ ಕೃತ್ಯದ ಕುರಿತು ಪಶ್ಚಾತ್ತಾಪಪಟ್ಟರು.

(ಶ್ಲೋಕ - 18)

ಮೂಲಮ್

ಕಿಂ ಕೃತಂ ಮಂದಭಾಗ್ಯೈರ್ನಃ ಕಿಂ ವದಿಷ್ಯಂತಿ ನೋ ಜನಾಃ ।
ಇತಿ ವಿಹ್ವಲಿತಾ ಗೇಹಾನಾದಾಯ ಮುಸಲಂ ಯಯುಃ ॥

ಅನುವಾದ

ಅವರೆಲ್ಲರೂ ಯೋಚಿಸತೊಡಗಿದರು ನಮ್ಮಗಳ ಭಾಗ್ಯವೇ ಬಹಳ ಕೆಟ್ಟದಾಗಿದೆ. ನಾವೇನು ಮಾಡಿಬಿಟ್ಟೆವು? ನಮಗೆ ಜನರು ಏನನ್ನುವರು? ಈ ಪ್ರಕಾರ ವ್ಯಾಕುಲರಾಗಿ ಅವರೆಲ್ಲರೂ ಆ ಒನಕೆಯನ್ನು ಎತ್ತಿಕೊಂಡು ಮನೆಗೆ ತೆರಳಿದರು. ॥18॥

(ಶ್ಲೋಕ - 19)

ಮೂಲಮ್

ತಚ್ಚೋಪನೀಯ ಸದಸಿ ಪರಿಮ್ಲಾನಮುಖಶ್ರಿಯಃ ।
ರಾಜ್ಞ ಆವೇದಯಾಂಚಕ್ರುಃ ಸರ್ವಯಾದವಸನ್ನಿಧೌ ॥

ಅನುವಾದ

ಆ ಒನಕೆ ಯನ್ನು ಎಲ್ಲ ಯಾದವರ ಮುಂದಿರಿಸಿ ರಾಜಾ ಉಗ್ರಸೇನನಿಗೆ ಎಲ್ಲ ನಿಜಸಂಗತಿಯನ್ನು ಅರುಹಿದರು. ಆಗ ಅವರೆಲ್ಲರ ಮುಖಗಳು ಬಾಡಿಹೋಗಿದ್ದವು. ॥19॥

(ಶ್ಲೋಕ - 20)

ಮೂಲಮ್

ಶ್ರುತ್ವಾಮೋಘಂ ವಿಪ್ರಶಾಪಂ ದೃಷ್ಟ್ವಾ ಚ ಮುಸಲಂ ನೃಪ ।
ವಿಸ್ಮಿತಾ ಭಯಸಂತ್ರಸ್ತಾ ಬಭೂವುರ್ದ್ವಾರಕೌಕಸಃ ॥

ಅನುವಾದ

ಎಲೈ ರಾಜನೇ! ಬ್ರಾಹ್ಮಣರ ಶಾಪವು ಅಮೋಘವಾದುದು. ಎಲ್ಲ ದ್ವಾರಕಾವಾಸಿಗಳು ಬ್ರಾಹ್ಮಣರ ಶಾಪ ವೃತ್ತಾಂತವನ್ನು ಕೇಳಿ, ಆ ಒನಕೆಯನ್ನು ನೋಡಿ, ಬಹುವಿಸ್ಮಿತರಾಗಿ, ಭಯದಿಂದ ನಡುಗಿ ಹೋದರು. ॥20॥

(ಶ್ಲೋಕ - 21)

ಮೂಲಮ್

ತಚ್ಚೂರ್ಣಯಿತ್ವಾ ಮುಸಲಂ ಯದುರಾಜಃ ಸ ಆಹುಕಃ ।
ಸಮುದ್ರಸಲಿಲೇ ಪ್ರಾಸ್ಯಲ್ಲೋಹಂ ಚಾಸ್ಯಾವಶೇಷಿತಮ್ ॥

ಅನುವಾದ

ಯಾದವರ ರಾಜನಾದ ಉಗ್ರಸೇನನು ಆ ಒನಕೆಯನ್ನು ಪುಡಿಮಾಡಿ ಚೂರ್ಣವನ್ನಾಗಿಸಿ, ಅದನ್ನು ಸಮುದ್ರದಲ್ಲಿ ಹಾಕಿಸಿಬಿಟ್ಟನು. ಅದರ ಉಳಿದ ತುದಿಯ ಒಂದು ತುಂಡು ಚೂರಾಗದೆ ಹಾಗೆ ಉಳಿಯಿತು. ಅದನ್ನು ಹಾಗೆಯೇ ಸಮುದ್ರದಲ್ಲಿ ಎಸೆದರು. ॥21॥

(ಶ್ಲೋಕ - 22)

ಮೂಲಮ್

ಕಶ್ಚಿನ್ಮತ್ಸ್ಯೋಗ್ರಸೀಲ್ಲೋಹಂ ಚೂರ್ಣಾನಿ ತರಲೈಸ್ತತಃ ।
ಉಹ್ಯಮಾನಾನಿ ವೇಲಾಯಾಂ ಲಗ್ನಾನ್ಯಾಸನ್ಕಿಲೈರಕಾಃ ॥

ಅನುವಾದ

ಕೆಲವು ದಿನಗಳಲ್ಲಿ ಆ ಒನಕೆಯ ಪುಡಿಯು ಸಮುದ್ರದ ಅಲೆಗಳಿಂದಾಗಿ ಸಮುದ್ರತೀರಕ್ಕೆ ಬಂದುಬಿದ್ದಿತು. ಅದರಿಂದ ಐರಕವೆಂಬ ಹುಲ್ಲು ಹುಟ್ಟಿಕೊಂಡಿತು. ತುದಿಯ ಕಬ್ಬಿಣದ ತುಂಡನ್ನು ಮೀನೊಂದು ನುಂಗಿಬಿಟ್ಟಿತು. ॥22॥

(ಶ್ಲೋಕ - 23)

ಮೂಲಮ್

ಮತ್ಸ್ಯೋ ಗೃಹೀತೋ ಮತ್ಸ್ಯಘ್ನೈರ್ಜಾಲೇನಾನ್ಯೈಃ ಸಹಾರ್ಣವೇ ।
ತಸ್ಯೋದರಗತಂ ಲೋಹಂ ಸ ಶಲ್ಯೇ ಲುಬ್ಧಕೋಕರೋತ್ ॥

ಅನುವಾದ

ಆ ಮೀನು ಯಾವನೋ ಬೆಸ್ತನ ಬಲೆಯಲ್ಲಿ ಸಿಕ್ಕಿಬಿತ್ತು. ಓರ್ವ ಬೇಡನು ಆ ಮೀನನ್ನು ಕೊಂಡುಹೋದನು. ಅದರ ಹೊಟ್ಟೆಯಲ್ಲಿ ಅವನಿಗೆ ಕಬ್ಬಿಣದ ಚೂರೊಂದು ದೊರೆಯಿತು. ಅದನ್ನು ಆ ಬೇಡನು ತನ್ನ ಬಾಣದ ತುದಿಗೆ ಜೋಡಿಸಿದನು.* ॥23॥

ಟಿಪ್ಪನೀ
  • ಮೀನಿನ ಹೊಟ್ಟೆಯಲ್ಲಿ ದೊರೆತಿರುವ ಕಬ್ಬಿಣದ ಚೂರನ್ನು ಬಾಣದ ತುದಿಗೆ ಅಳವಡಿಸಿದರೆ, ಅಸಾಧ್ಯಬೇಟೆಯು ಸುಲಭವಾಗಿ ಸಿಗುತ್ತದೆ. ಆ ಬಾಣವು ಅಮೋಘವಾಗುತ್ತದೆ. ಇದೆಲ್ಲ ನಡೆದ ಘಟನೆಗಳು ಸ್ವಯಂ ಭಗವಂತನ ಇಚ್ಛೆಯೇ ಆಗಿತ್ತು.

(ಶ್ಲೋಕ - 24)

ಮೂಲಮ್

ಭಗವಾನ್ಜ್ಞಾತಸರ್ವಾರ್ಥ ಈಶ್ವರೋಪಿ ತದನ್ಯಥಾ ।
ಕರ್ತುಂ ನೈಚ್ಛದ್ವಿಪ್ರಶಾಪಂ ಕಾಲರೂಪ್ಯನ್ವಮೋದತ ॥

ಅನುವಾದ

ಭಗವಂತನು ಎಲ್ಲವನ್ನು ಬಲ್ಲವನಾಗಿದ್ದಾನೆ. ಅವನು ಸರ್ವಸಮರ್ಥನಾಗಿದ್ದಾನೆ. ಬ್ರಾಹ್ಮಣರ ಶಾಪವನ್ನು ವ್ಯರ್ಥವಾಗಿಸುವ ಸಾಮರ್ಥ್ಯ ಅವನಲ್ಲಿದ್ದರೂ ಆ ಕಾಲ ಸ್ವರೂಪೀ ಭಗವಂತನು ಬ್ರಾಹ್ಮಣರ ಶಾಪವನ್ನು ಅನುಮೋದಿಸಿದನು. ॥24॥

ಅನುವಾದ (ಸಮಾಪ್ತಿಃ)

ಮೊದಲನೆಯ ಅಧ್ಯಾಯವು ಮುಗಿಯಿತು. ॥1॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ಏಕಾದಶ ಸ್ಕಂಧೇ ಪ್ರಥಮೋಽಧ್ಯಾಯಃ ॥1॥