೯೦

[ತೋಂಭತ್ತನೇಯ ಅಧ್ಯಾಯ]

ಭಾಗಸೂಚನಾ

ಭಗವಾನ್ ಶ್ರೀಕೃಷ್ಣನ ಲೀಲಾವಿಹಾರ ವರ್ಣನೆ

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸುಖಂ ಸ್ವಪುರ್ಯಾಂ ನಿವಸನ್ದ್ವಾರಕಾಯಾಂ ಶ್ರಿಯಃ ಪತಿಃ ।
ಸರ್ವಸಂಪತ್ಸಮೃದ್ಧಾಯಾಂ ಜುಷ್ಟಾಯಾಂ ವೃಷ್ಣಿಪುಂಗವೈಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಶ್ರಿಯಃಪತಿಯಾದ ಶ್ರೀಕೃಷ್ಣನು ಸಕಲ ವಿಧವಾದ ಸಂಪತ್ತುಗಳಿಂದಲೂ ಸಮೃದ್ಧವಾಗಿದ್ದ ತನ್ನ ದ್ವಾರಕೆಯಲ್ಲಿ ಯಾದವ ಶ್ರೇಷ್ಠರಿಂದ ಪರಿವೃತನಾಗಿ ಸುಖದಿಂದ ವಾಸಮಾಡಿ ಕೊಂಡಿದ್ದನು. ॥1॥

(ಶ್ಲೋಕ-2)

ಮೂಲಮ್

ಸೀಭಿಶ್ಚೋತ್ತಮವೇಷಾಭಿರ್ನವಯೌವನಕಾಂತಿಭಿಃ ।
ಕಂದುಕಾದಿಭಿರ್ಹರ್ಮ್ಯೇಷು ಕ್ರೀಡಂತೀಭಿಸ್ತಡಿದ್ದ್ಯುಭಿಃ ॥

ಅನುವಾದ

ನವಯೌವನ ಕಾಂತಿಯಿಂದ ಬೆಳಗುತ್ತಿದ್ದ, ಶ್ರೇಷ್ಠವಾದ ವೇಷ ಭೂಷಗಳನ್ನು ಧರಿಸಿದ್ದ, ಮಿಂಚಿನಂತೆ ಕಾಂತಿಯುಳ್ಳವರಾಗಿದ್ದು, ಅಂತಃಪುರದಲ್ಲಿ ಚೆಂಡಾಟಗಳನ್ನಾಡುತ್ತಿದ್ದ ಶ್ರೀಕೃಷ್ಣನ ಪ್ರೇಯಸಿಯರಿಂದ ದ್ವಾರಕೆಯು ಬೆಳಗುತ್ತಿತ್ತು. ॥2॥

(ಶ್ಲೋಕ-3)

ಮೂಲಮ್

ನಿತ್ಯಂ ಸಂಕುಲಮಾರ್ಗಾಯಾಂ ಮದಚ್ಯುದ್ಭಿರ್ಮತಂಗಜೈಃ ।
ಸ್ವಲಂಕೃತೈರ್ಭಟೈರಶ್ವೈ ರಥೈಶ್ಚ ಕನಕೋಜ್ಜ್ವಲೈಃ ॥

ಅನುವಾದ

ದ್ವಾರಕೆಯ ಬೀದಿಗಳು ಮದೋದಕವನ್ನು ಸುರಿಸುತ್ತಿದ್ದ ಮಹಾಗಜಗಳಿಂದಲೂ, ವಸ್ತ್ರಾಭರಣಗಳಿಂದ ಸಮಲಂಕೃತರಾದ ಭಟರಿಂದಲೂ, ಶ್ರೇಷ್ಠವಾದ ಕುದುರೆಗಳಿಂದಲೂ, ಕನಕಾಲಂಕಾರಭೂಷಿತವಾದ ರಥಗಳಿಂದಲೂ ನಿಬಿಡವಾಗಿದ್ದವು. ॥3॥

(ಶ್ಲೋಕ-4)

ಮೂಲಮ್

ಉದ್ಯಾನೋಪವನಾಢ್ಯಾಯಾಂ ಪುಷ್ಪಿತದ್ರುಮರಾಜಿಷು ।
ನಿರ್ವಿಶದ್ ಭೃಂಗವಿಹಗೈರ್ನಾದಿತಾಯಾಂ ಸಮಂತತಃ ॥

ಅನುವಾದ

ಅಲ್ಲಿ ಅಡಿಗಡಿಗೂ ಉದ್ಯಾನಗಳೂ ಹೂದೋಟಗಳೂ, ತೋಪುಗಳೂ ಇದ್ದುವು. ಅವುಗಳಲ್ಲಿನ ಮರ ಗಿಡ ಬಳ್ಳಿಗಳು ಹೂವುಗಳಿಂದ ಸಮಲಂಕೃತವಾಗಿದ್ದು, ದುಂಬಿಗಳೂ, ಹಕ್ಕಿಗಳೂ ಕುಳಿತು ಇಂಪಾಗಿ ಹಾಡುತ್ತಿದ್ದವು. ॥4॥

(ಶ್ಲೋಕ-5)

ಮೂಲಮ್

ರೇಮೇ ಷೋಡಶಸಾಹಸ್ರಪತ್ನೀನಾಮೇಕವಲ್ಲಭಃ ।
ತಾವದ್ವಿಚಿತ್ರರೂಪೋಸೌ ತದ್ಗೃಹೇಷು ಮಹರ್ದ್ಧಿಷು ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹದಿನಾರು ಸಾವಿರಕ್ಕಿಂತಲೂ ಅಧಿಕವಾದ ಪತ್ನಿಯರಿಗೆ ಏಕಮಾತ್ರ ವಲ್ಲಭನಾಗಿದ್ದನು. ಪ್ರಭುವಿನ ಪತ್ನಿಯರ ಪ್ರತ್ಯೇಕ ಪ್ರತ್ಯೇಕವಾದ ಅರಮನೆಗಳೂ ಐಶ್ವರ್ಯದಿಂದ ಸಮೃದ್ಧವಾಗಿದ್ದವು. ಎಷ್ಟು ಸಂಖ್ಯೆಯಲ್ಲಿ ಪತ್ನಿಯರಿದ್ದರೋ ಶ್ರೀಕೃಷ್ಣನು ಅಷ್ಟೇ ಸಂಖ್ಯೆಯಲ್ಲಿ ಅದ್ಭುತ ರೂಪಗಳನ್ನು ಧರಿಸಿ ಅವರೊಂದಿಗೆ ವಿಹರಿಸುತ್ತಿದ್ದನು. ॥5॥

(ಶ್ಲೋಕ-6)

ಮೂಲಮ್

ಪ್ರೋತ್ಫುಲ್ಲೋತ್ಪಲಕಲ್ಹಾರಕುಮುದಾಂಭೋಜರೇಣುಭಿಃ ।
ವಾಸಿತಾಮಲತೋಯೇಷು ಕೂಜದ್ವಜಕುಲೇಷು ಚ ॥

(ಶ್ಲೋಕ-7)

ಮೂಲಮ್

ವಿಜಹಾರ ವಿಗಾಹ್ಯಾಂಭೋ ಹ್ರದಿನೀಷು ಮಹೋದಯಃ ।
ಕುಚಕುಂಕುಮಲಿಪ್ತಾಂಗಃ ಪರಿರಬ್ಧಶ್ಚ ಯೋಷಿತಾಮ್ ॥

ಅನುವಾದ

ಎಲ್ಲ ಪತ್ನಿಯರ ಅರಮನೆಗಳಲ್ಲಿಯೂ ಸುಂದರವಾದ ಸರೋವರಗಳಿದ್ದವು. ಅವುಗಳಲ್ಲಿದ್ದ ನಿರ್ಮಲವಾದ ನೀರು ನೈದಿಲೆ, ಕೆಂದಾವರೆ, ಬಿಳಿನೈದಿಲೆ, ಶತಪತ್ರ ಮುಂತಾದ ಬಗೆ-ಬಗೆಯ ಕಮಲ ಪುಷ್ಪಗಳ ಪರಾಗದಿಂದ ಸುಗಂಧಿತವಾಗಿತ್ತು. ಆ ಸರೋವರಗಳಲ್ಲಿ ಹಂಸ, ಸಾರಸ ಮುಂತಾದ ಜಲಚರ ಪಕ್ಷಿಗಳು ನಲಿದಾಡುತ್ತಿದ್ದವು. ಭಗವಾನ್ ಶ್ರೀಕೃಷ್ಣನು ಅಂತಹ ಸುಂದರವಾದ ಸರೋವರಗಳಲ್ಲಿಯೂ, ಕೆಲವೊಮ್ಮೆ ನದಿಗಳಲ್ಲಿಯೂ ತನ್ನ ಪತ್ನಿಯರೊಡನೆ ಜಲಕ್ರೀಡೆಯಾಡುವನು. ಮಹಾನುಭಾವನಾದ ಶ್ರೀಕೃಷ್ಣನು ಹಾಗೆ ಜಲಕ್ರೀಡೆಯಾಡುತ್ತಿದ್ದಾಗ ಪತ್ನಿಯರಿಂದ ಆಲಿಂಗಿಸಲ್ಪಟ್ಟು ಅವರ ಕುಚಕುಂಕುಮಗಂಧಗಳಿಂದ ಲಿಪ್ತವಾದ ವಕ್ಷಃಸ್ಥಳದಿಂದ ಕೂಡಿ ಬಹಳವಾಗಿ ಶೋಭಿಸುತ್ತಿದ್ದನು. ॥6-7॥

(ಶ್ಲೋಕ-8)

ಮೂಲಮ್

ಉಪಗೀಯಮಾನೋ ಗಂಧರ್ವೈರ್ಮೃದಂಗಪಣವಾನಕಾನ್ ।
ವಾದಯದ್ಭಿರ್ಮುದಾ ವೀಣಾಂ ಸೂತಮಾಗಧವಂದಿಭಿಃ ॥

ಅನುವಾದ

ಆ ಸಮಯದಲ್ಲಿ ಗಂಧರ್ವರು ಶ್ರೀಕೃಷ್ಣನ ಧರ್ಮ-ಕೀರ್ತಿಗಳನ್ನು ಗಾನಮಾಡುತ್ತಿದ್ದರು. ಸೂತ-ಮಾಗಧ-ವಂದಿಗಳು ಆನಂದತುಂದಿಲರಾಗಿ ವೀಣಾ, ಮೃದಂಗ, ಮದ್ದಳೆಗಳನ್ನು ನುಡಿಸುತ್ತಿದ್ದರು. ॥8॥

(ಶ್ಲೋಕ-9)

ಮೂಲಮ್

ಸಿಚ್ಯಮಾನೋಚ್ಯುತಸ್ತಾಭಿರ್ಹಸಂತೀಭಿಃ ಸ್ಮ ರೇಚಕೈಃ ।
ಪ್ರತಿಷಿಂಚಿನ್ವಿಚಿಕ್ರೀಡೇ ಯಕ್ಷೀಭಿರ್ಯಕ್ಷರಾಡಿವ ॥

ಅನುವಾದ

ಶ್ರೀಕೃಷ್ಣನ ಪತ್ನಿಯರು ಕಿಲ-ಕಿಲನೆ ನಗುತ್ತಾ ಅವನ ಸುತ್ತಲೂ ನಿಂತು ನೀರ್ಕೋವಿಯಿಂದ ಶ್ರೀಕೃಷ್ಣನ ಮೇಲೆ ನೀರು ಸುರಿಸುವರು. ಇದಕ್ಕೆ ಪ್ರತಿಯಾಗಿ ಶ್ರೀಕೃಷ್ಣನು ಅವರ ಮೇಲೆ ರಭಸದಿಂದ ನೀರುಗ್ಗುತ್ತಾ ಯಕ್ಷಸ್ತ್ರೀಯರೊಡನೆ ಯಕ್ಷರು ಜಲಕ್ರೀಡೆಯಾಡುವಂತೆ ನೀರಾಟವಾಡುತ್ತಿದ್ದನು. ॥9॥

(ಶ್ಲೋಕ-10)

ಮೂಲಮ್

ತಾಃ ಕ್ಲಿನ್ನವಸ ವಿವೃತೋರುಕುಚಪ್ರದೇಶಾಃ
ಸಿಂಚಂತ್ಯ ಉದ್ಧೃತಬೃಹತ್ಕಬರಪ್ರಸೂನಾಃ ।
ಕಾಂತಂ ಸ್ಮ ರೇಚಕಜಿಹೀರಷಯೋಪಗುಹ್ಯ
ಜಾತಸ್ಮರೋತ್ಸವಲಸದ್ವದನಾ ವಿರೇಜುಃ ॥

ಅನುವಾದ

ನೀರಿನ ಎರಚಾಟದಿಂದ ಲಲನೆಯರ ವಸ್ತ್ರಗಳು ನೆನೆಯುತ್ತಿದ್ದವು. ಅವರ ದೊಡ್ಡ-ದೊಡ್ಡ ಮುಡಿಗಳಿಂದ ಪುಷ್ಪಗಳು ಉದುರುತ್ತಿದ್ದವು. ಕೃಷ್ಣನಿಂದ ನೀರನ್ನು ಸುರಿಸಲ್ಪಡುತ್ತಿದ್ದ ಜೀರ್ಕೋವಿಯನ್ನು ಕಿತ್ತುಕೊಳ್ಳುವ ನೆಪದಿಂದ ಪ್ರಮದೆಯರು ಪುರುಷೋತ್ತಮನನ್ನು ಆಲಿಂಗಿಸಿಕೊಳ್ಳುತ್ತಿದ್ದರು. ಅವನ ಸ್ಪರ್ಶದಿಂದ ಪತ್ನಿಯರ ಹೃದಯದಲ್ಲಿ ಪ್ರೇಮ-ಭಾವದ ಅಭಿವೃದ್ಧಿಯಾಗುತ್ತಿತ್ತು. ಅದರಿಂದ ಅವರ ಮುಖಕಮಲಗಳು ವಿಕಸಿತವಾಗಿ ಅವರ ಶೋಭೆಯು ಇನ್ನೂ ಹೆಚ್ಚುತ್ತಿತ್ತು. ॥10॥

(ಶ್ಲೋಕ-11)

ಮೂಲಮ್

ಕೃಷ್ಣಸ್ತು ತತ್ಸ್ತನವಿಷಜ್ಜಿತಕುಂಕುಮಸ್ರಕ್
ಕ್ರೀಡಾಭಿಷಂಗಧುತಕುಂತಲವೃಂದಬಂಧಃ ।
ಸಿಂಚನ್ಮುಹುರ್ಯುವತಿಭಿಃ ಪ್ರತಿಷಿಚ್ಯಮಾನೋ
ರೇಮೇ ಕರೇಣುಭಿರಿವೇಭಪತಿಃ ಪರೀತಃ ॥

ಅನುವಾದ

ಆ ಸಮಯದಲ್ಲಿ ಶ್ರೀಕೃಷ್ಣನ ವನಮಾಲೆಯು ಆ ರಾಣಿಯರ ವಕ್ಷಃಸ್ಥಳಕ್ಕೆ ಹಚ್ಚಿಕೊಂಡ ಕುಂಕುಮಕೇಸರಿಯ ಬಣ್ಣದಿಂದ ಕೆಂಪಾಗುತಿತ್ತು. ನೀರಾಟದ ಸಂಭ್ರಮದಲ್ಲಿ ಶ್ರೀಕೃಷ್ಣನ ಗುಂಗುರು ಕೂದಲುಗಳು ಕೆದರಿ ತಲೆಯಸುತ್ತಲೂ ಹರಡಿಕೊಂಡಿದ್ದವು. ಅವನು ತನ್ನ ರಾಣಿಯರನ್ನು ಮೇಲಿಂದ ಮೇಲೆ ನೀರಿನಿಂದ ನೆನೆಸಿ ಬಿಡುತ್ತಿದ್ದರೆ, ಅವರೂ ಶ್ರೀಕೃಷ್ಣನನ್ನು ನೆನೆಸಿಬಿಡುತ್ತಿದ್ದರು. ಗಜರಾಜನು ಹೆಣ್ಣಾನೆಗಳೊಡನೆ ಸುತ್ತುವರಿದು ಜಲಕ್ರೀಡೆಯಾಡುವಂತೆ ಶ್ರೀಕೃಷ್ಣನು ಪತ್ನಿಯರೊಡನೆ ವಿಹರಿಸಿದನು. ॥11॥

(ಶ್ಲೋಕ-12)

ಮೂಲಮ್

ನಟಾನಾಂ ನರ್ತಕೀನಾಂ ಚ ಗೀತವಾದ್ಯೋಪಜೀವಿನಾಮ್ ।
ಕ್ರೀಡಾಲಂಕಾರವಾಸಾಂಸಿ ಕೃಷ್ಣೋದಾತ್ತಸ್ಯ ಚ ಸಿಯಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಮತ್ತು ಅವರ ಪತ್ನಿಯರು ಕ್ರೀಡೆಯಾಡಿದ ಬಳಿಕ ತಮ್ಮ-ತಮ್ಮ ವಸಾಭರಣಗಳನ್ನು ಕಳಚಿ ಗೀತ-ವಾದ್ಯಗಳಿಂದಲೇ ಜೀವನ ನಿರ್ವಹಿಸುತ್ತಿದ್ದ ನಟ-ನರ್ತಕಿಯರಿಗೆ ಕೊಡುತ್ತಿದ್ದರು. ॥12॥

(ಶ್ಲೋಕ-13)

ಮೂಲಮ್

ಕೃಷ್ಣಸ್ಯೈವಂ ವಿಹರತೋ ಗತ್ಯಾಲಾಪೇಕ್ಷಿತಸ್ಮಿತೈಃ ।
ನರ್ಮಕ್ಷ್ವೇಲಿಪರಿಷ್ವಂಗೈಃ ಸೀಣಾಂ ಕಿಲ ಹೃತಾ ಧಿಯಃ ॥

ಅನುವಾದ

ಪರೀಕ್ಷಿತನೇ! ಈ ರೀತಿಯಿಂದ ಶ್ರೀಕೃಷ್ಣನು ಅವರೊಡನೆ ವಿಹರಿಸುತ್ತಿದ್ದನು. ಶ್ರೀಕೃಷ್ಣನು ಪ್ರಿಯ ವಿಲಾಸಗಳಿಂದಲೂ, ಮಂದ ಗಮನದಿಂದಲೂ, ಕಿರುನಗೆಯಿಂದಲೂ, ಪರಿಹಾಸೋಕ್ತಿಗಳಿಂದಲೂ, ಕಡೆಗಣ್ಣ ನೋಟದಿಂದಲೂ, ಆಲಿಂಗನ ಚುಂಬನಾದಿಗಳಿಂದಲೂ ಸೀಯರ ಮನಸ್ಸನ್ನು, ಸಂಪೂರ್ಣವಾಗಿ ಅಪಹರಿಸಿಬಿಟ್ಟಿದ್ದನು. ॥13॥

(ಶ್ಲೋಕ-14)

ಮೂಲಮ್

ಊಚುರ್ಮುಕುಂದೈಕಧಿಯೋಗಿರ ಉನ್ಮತ್ತವಜ್ಜಡಮ್ ।
ಚಿಂತಯಂತ್ಯೋರವಿಂದಾಕ್ಷಂ ತಾನಿ ಮೇ ಗದತಃ ಶೃಣು ॥

ಅನುವಾದ

ರಾಣಿಯರಿಗೆ ಜೀವನ ಸರ್ವಸ್ವವೂ ಏಕಮಾತ್ರ ಹೃದಯೇಶ್ವರನಾದ ಶ್ರೀಕೃಷ್ಣನೇ ಆಗಿದ್ದನು. ಅವರು ಕೆಲವು ವೇಳೆ ಯಾರೊಂದಿಗೂ ಮಾತನ್ನಾಡದೆ ಮೌನವಾಗಿ ಕಮಲನಯನ ಶ್ಯಾಮಸುಂದರನ ಧ್ಯಾನದಲ್ಲೇ ತಲ್ಲೀನರಾಗುತ್ತಿದ್ದರು. ಕೆಲವೊಮ್ಮೆ ಉನ್ಮತ್ತರಂತೆ ಮಾತುಗಳನ್ನಾಡುವರು. ಕೆಲವೊಮ್ಮೆ ಶ್ರೀಕೃಷ್ಣನ ಸನಿಹದಲ್ಲೇ ಇದ್ದರೂ ಪ್ರೇಮೋನ್ಮಾದದ ಕಾರಣ ಅವನ ವಿರಹವನ್ನು ಅನುಭವಿಸುತ್ತಿದ್ದರು ಮತ್ತು ಏನೇನೋ ಮಾತನಾಡುತ್ತಿದ್ದರು. ಮಹಾರಾಜಾ! ಅವರಾಡುತ್ತಿದ್ದ ಮಾತುಗಳನ್ನು ಯಥಾವತ್ತಾಗಿ ಹೇಳುತ್ತೇನೆ, ಕೇಳು. ॥14॥

(ಶ್ಲೋಕ-15)

ಮೂಲಮ್ (ವಾಚನಮ್)

ಮಹಿಷ್ಯ ಊಚುಃ

ಮೂಲಮ್

ಕುರರಿ ವಿಲಪಸಿ ತ್ವಂ ವೀತನಿದ್ರಾ ನ ಶೇಷೇ
ಸ್ವಪಿತಿ ಜಗತಿ ರಾತ್ರ್ಯಾಮೀಶ್ವರೋ ಗುಪ್ತಬೋಧಃ ।
ವಯಮಿವ ಸಖಿ ಕಚ್ಚಿದ್ಗಾಢನಿರ್ಭಿನ್ನಚೇತಾ
ನಲಿನನಯನಹಾಸೋದಾರಲೀಲೇಕ್ಷಿತೇನ ॥

ಅನುವಾದ

ರಾಣಿಯರು ಹೇಳುತ್ತಾರೆ — ಎಲೈ ಕುಕರ ಪಕ್ಷಿಯೇ! ಸರ್ವೇಶ್ವರನಾದ ಶ್ರೀಕೃಷ್ಣನು ಬಾಹ್ಯವಿಷಯಗಳನ್ನು ಮರೆತು ಈ ರಾತ್ರಿಯಲ್ಲಿ ಸುಖವಾಗಿ ನಿದ್ರಿಸುತ್ತಿದ್ದಾನೆ. ನೀನಾದರೋ ನಿದ್ರಿಸುತ್ತಿಲ್ಲ. ಮಾತ್ರವಲ್ಲ ಅಳುತ್ತಿರುವೆ. ಇದರಿಂದ ಪ್ರಭುವಿನ ನಿದ್ರೆಗೆ ಭಂಗವುಂಟಾಗದೇ? ಸಖಿಯೇ! ಕಮಲಾಕ್ಷನಾದ ಶ್ರೀಕೃಷ್ಣನ ಉದಾರವಾದ ಲೀಲಾಕಟಾಕ್ಷವೀಕ್ಷಣದಿಂದ ನನ್ನಂತೆಯೇ ನಿನ್ನ ಮನಸ್ಸು ಕದಡಿ ಹೋಗಿದೆಯೇ? ॥15॥

(ಶ್ಲೋಕ-16)

ಮೂಲಮ್

ನೇತ್ರೇ ನಿಮೀಲಯಸಿ ನಕ್ತಮದೃಷ್ಟಬಂಧು-
ಸ್ತ್ವಂ ರೋರವೀಷಿ ಕರುಣಂ ಬತ ಚಕ್ರವಾಕಿ ।
ದಾಸ್ಯಂ ಗತಾ ವಯಮಿವಾಚ್ಯುತಪಾದಜುಷ್ಟಾಂ
ಕಿಂ ವಾ ಸ್ರಜಂ ಸ್ಪೃಹಯಸೇ ಕಬರೇಣ ವೋಢುಮ್ ॥

ಅನುವಾದ

ಚಕ್ರವಾಕ ಪಕ್ಷಿಯೇ! ನೀನೇಕೆ ರಾತ್ರಿಯಲ್ಲಿ ಕಣ್ಣುಗಳನ್ನು ಮುಚ್ಚಿಕೊಂಡಿರುವೆ? ನಿನ್ನ ಪತಿಯು ದೇಶಾಂತರಕ್ಕೇನಾದರೂ ಹೋಗಿರುವನೇ? ಇದರಿಂದಲೇ ನೀನು ಕರುಣಾಜನಕವಾದ ಸ್ವರದಲ್ಲಿ ಕೂಗಿಕೊಳ್ಳುತ್ತಿರುವೆಯಾ? ಅಯ್ಯೋ ಪಾಪ! ನೀನು ಬಹಳದುಃಖಿಯಾಗಿರುವೆ. ಅಥವಾ ನಮ್ಮಂತೆಯೇ ನಿನ್ನ ಹೃದಯದಲ್ಲಿ ಭಗವಂತನ ದಾಸೀಭಾವವು ಜಾಗ್ರತವಾಗಿದೆಯೇ? ಈ ಕಾರಣದಿಂದಲೇ ನೀನು ಅವನ ಚರಣಗಳಲ್ಲಿ ಏರಿಸಿರುವ ಪುಷ್ಪ ಮಾಲೆಯನ್ನು ನಿನ್ನ ತರುಬಿನಲ್ಲಿ ಧರಿಸಲು ಅಪೇಕ್ಷಿಸುತ್ತಿರುವೆಯಾ? ॥16॥

(ಶ್ಲೋಕ-17)

ಮೂಲಮ್

ಭೋ ಭೋಃ ಸದಾ ನಿಷ್ಟನಸೇ ಉದನ್ವ-
ನ್ನಲಬ್ಧನಿದ್ರೋಧಿಗತಪ್ರಜಾಗರಃ ।
ಕಿಂ ವಾ ಮುಕುಂದಾಪಹೃತಾತ್ಮಲಾಂಛನಃ
ಪ್ರಾಪ್ತಾಂ ದಶಾಂ ತ್ವಂ ಚ ಗತೋ ದುರತ್ಯಯಾಮ್ ॥

ಅನುವಾದ

ಎಲೈ ಸಮುದ್ರವೇ! ನೀನು ನಿರಂತರ ಭೋರ್ಗರೆಯುತ್ತಲೇ ಇರುವೆಯಲ್ಲ! ನಿನಗೆ ನಿದ್ದೆ ಬರುವುದಿಲ್ಲವೇ? ನಿನಗೆ ನಿದ್ರೆ ಬಾರದಿರುವ ರೋಗವೇನಾದರೂ ಉಂಟಾಗಿದೆಯೇ? ಆದರೆ ಹಾಗಲ್ಲ. ನಿನಗೆ ಪ್ರಿಯನಾದ ಶ್ಯಾಮಸುಂದರನು ನಿನ್ನ ಧೈರ್ಯ, ಗಾಂಭೀರ್ಯ ಮೊದಲಾದ ಸ್ವಾಭಾವಿಕ ಗುಣಗಳನ್ನು ಕಿತ್ತು ಕೊಂಡಿರುವನು. ಇದರಿಂದ ನೀನು ನಮ್ಮಂತೆಯೇ ಯಾವುದೇ ಔಷಧಿಯೇ ಇಲ್ಲದ ರೋಗಕ್ಕೆ ತುತ್ತಾಗಿರುವಂತೆ ಕಾಣುತ್ತದೆ. ॥17॥

(ಶ್ಲೋಕ-18)

ಮೂಲಮ್

ತ್ವಂ ಯಕ್ಷ್ಮಣಾ ಬಲವತಾಸಿ ಗೃಹೀತ ಇಂದೋ
ಕ್ಷೀಣಸ್ತಮೋ ನ ನಿಜದೀಧಿತಿಭಿಃ ಕ್ಷಿಣೋಷಿ ।
ಕಚ್ಚಿನ್ಮುಕುಂದಗದಿತಾನಿ ಯಥಾ ವಯಂ ತ್ವಂ
ವಿಸ್ಮೃತ್ಯ ಭೋಃ ಸ್ಥಗಿತಗೀರುಪಲಕ್ಷ್ಯಸೇ ನಃ ॥

ಅನುವಾದ

ಎಲೈ ಚಂದ್ರನೇ! ನೀನು ಬಲವಾದ ಕ್ಷಯರೋಗದಿಂದ ಪೀಡಿತನಾಗಿರುವೆ. ಅದರಿಂದಲೇ ಅತ್ಯಂತ ದುರ್ಬಲನಾಗಿರುವೆ. ಅಯ್ಯೋ! ರಾಮ, ರಾಮ! ಈಗ ನೀನು ನಿನ್ನ ಕಿರಣಗಳಿಂದ ಕತ್ತಲೆಯನ್ನು ಓಡಿಸಲು ಅಸಮರ್ಥನಾಗಿರುವೆ. ನಮ್ಮ ಪ್ರಿಯ ಶ್ಯಾಮಸುಂದರನ ಮಧುರವಾದ ರಹಸ್ಯವಾದ ಮಾತುಗಳನ್ನು ಮರೆತು ಅದನ್ನೇ ಪುನಃ ಸ್ಮರಿಸುತ್ತಾ ನೀನು ಕ್ಷೀಣನೂ, ಮೌನಿಯೂ ಆಗಿರಬಹುದೇ? ॥18॥

(ಶ್ಲೋಕ-19)

ಮೂಲಮ್

ಕಿಂ ತ್ವಾಚರಿತಮಸ್ಮಾಭಿರ್ಮಲಯಾನಿಲ ತೇಪ್ರಿಯಮ್ ।
ಗೋವಿಂದಾಪಾಂಗನಿರ್ಭಿನ್ನೇ ಹೃದೀರಯಸಿ ನಃ ಸ್ಮರಮ್ ॥

ಅನುವಾದ

ಎಲೈ ಮಲಯಾನಿಲವೇ! ನಮ್ಮ ಹೃದಯದಲ್ಲಿ ಸುಪ್ತವಾಗಿದ್ದ ಕಾಮವನ್ನು ಬಡಿದೆಬ್ಬಿಸುತ್ತಿರುವೆಯಲ್ಲ! ನಾವೇನು ನಿನಗೆ ಅಪರಾಧವೆಸಗಿದ್ದೇವೆ? ಅಯ್ಯಾ! ಭಗವಂತನ ಕಟಾಕ್ಷ-ವೀಕ್ಷಣದಿಂದ ನಮ್ಮ ಹೃದಯಗಳು ಮೊದಲೇ ಘಾಸಿಗೊಂಡಿವೆ. ಇದನ್ನು ತಿಳಿಯದೆ ಪುನಃ ನಮ್ಮನ್ನು ಏಕೆ ಸತಾಯಿಸುತ್ತಿರುವೆ? ॥19॥

ಮೂಲಮ್

(ಶ್ಲೋಕ-20)
ಮೇಘ ಶ್ರೀಮಂಸ್ತ್ವಮಸಿ ದಯಿತೋ ಯಾದವೇಂದ್ರಸ್ಯ ನೂನಂ
ಶ್ರೀವತ್ಸಾಂಕಂ ವಯಮಿವ ಭವಾನ್ ಧ್ಯಾಯತಿ ಪ್ರೇಮಬದ್ಧಃ ।
ಅತ್ಯುತ್ಕಂಠಃ ಶಬಲಹೃದಯೋಸ್ಮದ್ವಿಧೋ ಬಾಷ್ಪಧಾರಾಃ
ಸ್ಮೃತ್ವಾ ಸ್ಮೃತ್ವಾ ವಿಸೃಜಸಿ ಮುಹುರ್ದುಃಖದಸ್ತತ್ಪ್ರಸಂಗಃ ॥

ಅನುವಾದ

ಶ್ರೀಮಂತನಾದ ಮೇಘರಾಜನೇ! ನೀನು ಶ್ಯಾಮಲ ವರ್ಣದವನಾದ್ದರಿಂದ ಮೇಘಶ್ಯಾಮನಾದ ನಮ್ಮ ಪ್ರಿಯತಮನಿಗೆ ಅತ್ಯಂತ ಪ್ರಿಯನಾಗಿರುವೆ. ಅದರಿಂದಲೇ ನೀನು ನಮ್ಮಂತೆಯೇ ಪ್ರೇಮಪಾಶದಲ್ಲಿ ಬಿದ್ದು ಅವನನ್ನು ಧ್ಯಾನಮಾಡುತ್ತಿರುವೆ. ನೋಡು! ನೋಡು! ನಿನ್ನ ಹೃದಯವು ಚಿಂತೆಯಿಂದ ತುಂಬಿ ಹೋಗಿದೆ. ನೀನು ಅವನಿಗಾಗಿ ಅತ್ಯಂತ ಉತ್ಕಂಠಿತನಾಗಿರುವೆ. ಅದಕ್ಕೆಂದೇ ಪದೇ-ಪದೇ ಅವನನ್ನು ನೆನೆಯುತ್ತಾ ನಮ್ಮಂತೆಯೇ ಕಣ್ಣೀರ ಧಾರೆಗಳನ್ನು ಸುರಿಸುತ್ತಿರುವೆ. ಶ್ಯಾಮಘನ! ನಿಜವಾಗಿಯೂ ಘನಶ್ಯಾಮನಲ್ಲಿ ಸಂಬಂಧ ಬೆಳೆಸುವುದೆಂದರೆ ದುಃಖಗಳಿಗೆ ಆಮಂತ್ರಣ ಕೊಟ್ಟಂತೆಯೇ ಸರಿ. ॥20॥

(ಶ್ಲೋಕ-21)

ಮೂಲಮ್

ಪ್ರಿಯರಾವಪದಾನಿ ಭಾಷಸೇಮೃತ-
ಸಂಜೀವಿಕಯಾನಯಾ ಗಿರಾ ।
ಕರವಾಣಿ ಕಿಮದ್ಯ ತೇ ಪ್ರಿಯಂ
ವದ ಮೇ ವಲ್ಗಿತಕಂಠ ಕೋಕಿಲ ॥

ಅನುವಾದ

ಎಲೈ ಕೋಗಿಲೆಯೇ! ನೀನು ರಮಣೀಯವಾದ ಕಂಠ ಮಾಧುರ್ಯದಿಂದ ಕೂಡಿರುವೆ. ನಮ್ಮ ಪ್ರಿಯಕರ ಶ್ರೀಕೃಷ್ಣನಂತಯೇ ನೀನು ಕೂಡ ಮೃದುಮಧುರವಾದ, ಸತ್ತವರನ್ನೂ ಬದುಕಿಸುವ ಮಾಧರ್ಯದಿಂದ ಕೂಡಿರುವ ಮಾತುಗಳನ್ನೇ ಆಡುತ್ತಿರುವೆ. ಈಗ ನಿನಗೆ ಪ್ರಿಯವಾದ ಯಾವ ಕಾರ್ಯವನ್ನು ಮಾಡಿಕೊಡಲಿ? ಹೇಳು. ॥21॥

(ಶ್ಲೋಕ-22)

ಮೂಲಮ್

ನ ಚಲಸಿ ನ ವದಸ್ಯುದಾರಬುದ್ಧೇ
ಕ್ಷಿತಿಧರ ಚಿಂತಯಸೇ ಮಹಾಂತಮರ್ಥಮ್ ।
ಅಪಿ ಬತ ವಸುದೇವನಂದನಾಂಘ್ರಿಂ
ವಯಮಿವ ಕಾಮಯಸೇ ಸ್ತನೈರ್ವಿಧರ್ತುಮ್ ॥

ಅನುವಾದ

ಉದಾರ ಬುದ್ಧಿಯುಳ್ಳ ಕ್ಷಿತಿಧರನೇ! ಪರ್ವತವೇ! ನೀನು ಚಲಿಸುವುದಿಲ್ಲ, ಮಾತನಾಡುವುದೂ ಇಲ್ಲ. ಯಾವುದೋ ಗಂಭೀರವಾದ ವಿಷಯವನ್ನು ಕುರಿತು ಆಲೋಚಿಸುತ್ತಿರುವಂತೆ ಕಾಣುತ್ತಿರುವೆ. ನಾವು ನಮ್ಮ ಸ್ತನಗಳಿಂದ ಧರಿಸಲು ಬಯಸುವ ವಾಸುದೇವನ ಚರಣಾರವಿಂದಗಳನ್ನು ನಿನ್ನ ಶಿಖರಗಳಿಂದೇನಾದರೂ ಧರಿಸಲು ಅಪೇಕ್ಷಿಸುತ್ತಿರುವೆಯಾ? ಅದನ್ನೇ ಗಾಢವಾಗಿ ಯೋಚಿಸುತ್ತಿರುವೆಯಾ? ಹೇಳು. ॥22॥

(ಶ್ಲೋಕ-23)

ಮೂಲಮ್

ಶುಷ್ಯದ್ಧ್ರದಾಃ ಕರ್ಶಿಕಾ ಬತ ಸಿಂಧುಪತ್ನ್ಯಃ
ಸಂಪ್ರತ್ಯಪಾಸ್ತಕಮಲಶ್ರಿಯ ಇಷ್ಟಭರ್ತುಃ ।
ಯದ್ವದ್ವಯಂ ಮಧುಪತೇಃ ಪ್ರಣಯಾವಲೋಕಮ್
ಅಪ್ರಾಪ್ಯ ಮುಷ್ಟಹೃದಯಾಃ ಪುರುಕರ್ಶಿತಾಃ ಸ್ಮ ॥

ಅನುವಾದ

ಎಲೈ ಸಮುದ್ರಪತ್ನಿಯರಾದ ನದಿಗಳೇ! ಇದು ಗ್ರೀಷ್ಮ ಋತು. ನಿಮ್ಮ ಮಡುಗಳೆಲ್ಲ ಒಣಗಿ ಹೋಗಿವೆ. ನಿಮ್ಮಲ್ಲಿ ಅರಳಿದ ಕಮಲಗಳ ಸೌಂದರ್ಯವು ಕಂಡುಬರುವುದಿಲ್ಲ. ನೀವು ಬಹಳ ಸೊರಗಿದ್ದೀರಿ. ನಾವು ನಮ್ಮ ಪ್ರಿಯತಮ ಶ್ಯಾಮಸುಂದರನ ಪ್ರೇಮ ತುಂಬಿದ ಓರೆನೋಟವನ್ನು ಪಡೆಯದೆ ನಮ್ಮ ಹೃದಯಗಳು ಬರಿದಾಗಿ ಅತ್ಯಂತ ಸೊರಗಿ ಹೋಗಿದ್ದೇವೆ. ಹಾಗೆಯೇ ನೀವು ಕೂಡ ಮೇಘಗಳ ಮೂಲಕ ನಿಮ್ಮ ಪ್ರಿಯಕರ ಸಮುದ್ರದ ನೀರು ಪಡೆಯದೆ ಹೀಗೆ ದೀನರಾಗಿದ್ದೀರಿ ಎಂದು ತೋರುತ್ತದೆ. ॥23॥

(ಶ್ಲೋಕ-24)

ಮೂಲಮ್

ಹಂಸ ಸ್ವಾಗತಮಾಸ್ಯತಾಂ ಪಿಬ ಪಯೋ
ಬ್ರೂಹ್ಯಂಗ ಶೌರೇಃ ಕಥಾಂ
ದೂತಂ ತ್ವಾಂ ನು ವಿದಾಮ ಕಚ್ಚಿದಜಿತಃ
ಸ್ವಸ್ತ್ಯಾಸ್ತ ಉಕ್ತಂ ಪುರಾ ।
ಕಿಂ ವಾ ನಶ್ಚಲಸೌಹೃದಃ ಸ್ಮರತಿ ತಂ
ಕಸ್ಮಾದ್ಭಜಾಮೋ ವಯಂ
ಕ್ಷೌದ್ರಾಲಾಪಯ ಕಾಮದಂ ಶ್ರಿಯಮೃತೇ
ಸೈವೈಕನಿಷ್ಠಾ ಸಿಯಾಂ ॥

ಅನುವಾದ

ಎಲೈ ಹಂಸವೇ! ಬಾ! ಬಾ! ನಿನಗೆ ಸ್ವಾಗತ ಬಯಸುತ್ತೇವೆ. ಈ ಪೀಠದಲ್ಲಿ ಕುಳಿತುಕೋ. ಸ್ವಲ್ಪ ಹಾಲು ಕುಡಿ. ಪ್ರಿಯಹಂಸವೇ! ಶ್ಯಾಮಸುಂದರನ ಸಮಾಚಾರವನ್ನು ಹೇಳು. ನೀನು ಅವನ ದೂತನಾಗಿರುವೆ ಎಂದೇ ನಾವು ಭಾವಿಸುತ್ತೇವೆ. ಯಾರಿಗೂ ವಶನಾಗದಿರುವ ಶ್ಯಾಮಸುಂದರನು ಕುಶಲನಾಗಿರುವನಲ್ಲ? ಅಯ್ಯಾ! ಅವನ ಸ್ನೇಹ ಬಹಳ ಅಸ್ಥಿರ ಹಾಗೂ ಕ್ಷಣಭಂಗುರ. ನೀವೇ ನನಗೆ ಪರಮಪ್ರಿಯರು ಎಂದು ಅವನು ನಮಗೆ ಹೇಳಿದ್ದನು. ಏನು ಅದು ಅವನಿಗೆ ಸ್ಮರಣೆಯಲ್ಲಿದೆಯೇ? ನೀನೇ ಹೇಳು. ಹೋಗು! ಹೋಗು! ನಾವು ನಿನ್ನ ಅನುನಯ-ವಿನಯವನ್ನು ಕೇಳುವುದಿಲ್ಲ. ಅವನೇ ನಮ್ಮನ್ನು ಲಕ್ಷಿಸುವುದಿಲ್ಲವಾದರೆ ನಾವಾದರೂ ಅವನ ಹಿಂದೆ ಏಕೆ ಬೀಳಬೇಕು? ಕ್ಷುದ್ರನಾದ ದೂತನೇ! ನಾವು ಅವನ ಬಳಿಗೆ ಹೋಗುವುದಿಲ್ಲ. ಏನು ಹೇಳಿದ ಅವನು? ನಮ್ಮ ಇಚ್ಛೆಯನ್ನು ಪೂರ್ಣಗೊಳಿಸಲು ಅವನು ಬರಲು ಇಚ್ಛಿಸುವನೇ? ಸರಿ! ಹಾಗಾದರೆ ಅವನನ್ನು ಕರಕೊಂಡು ಬಾ, ಅವನೊಡನೆ ಮಾತನಾಡಲು ಅವಕಾಶಮಾಡಿಕೊಡು. ಆದರೆ ಲಕ್ಷ್ಮಿಯನ್ನು ಎಲ್ಲಾದರು ಜೊತೆಗೆ ಕರೆದುಕೊಂಡು ಬರುವುದು ಬೇಡ. ಹಾಗೇನೆ ಅವನು ಲಕ್ಷ್ಮಿಯನ್ನು ಬಿಟ್ಟು ಇಲ್ಲಿಗೆ ಬರಲು ಇಚ್ಛಿಸುವುದಿಲ್ಲವೇ? ಇದೆಂತಹ ಮಾತು? ಏನು ಸ್ತ್ರೀಯರಲ್ಲಿ ಲಕ್ಷ್ಮಿಯೊಬ್ಬಳಿಗೇ ಭಗವಂತನಲ್ಲಿ ಪ್ರೇಮವಿರುವುದೇ? ಏನು ನಮ್ಮಲ್ಲಿ ಯಾರೂ ಅಂತಹವರಿಲ್ಲವೇ? ॥24॥

(ಶ್ಲೋಕ-25)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಇತೀದೃಶೇನ ಭಾವೇನ ಕೃಷ್ಣೇ ಯೋಗೇಶ್ವರೇಶ್ವರೇ ।
ಕ್ರಿಯಾಮಾಣೇನ ಮಾಧವ್ಯೋ ಲೇಭಿರೇ ಪರಮಾಂ ಗತಿಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಶ್ರೀಕೃಷ್ಣನ ಪತ್ನಿಯರು ಯೋಗೇಶ್ವರನಾದ ಭಗವಂತನಲ್ಲಿ ಇಂತಹ ಅನನ್ಯವಾದ ಪ್ರೇಮಭಾವವನ್ನು ಇಟ್ಟಿದ್ದರು. ಅದರಿಂದಲೇ ಅವರು ಪರಮಪದವನ್ನು ಪಡೆದುಕೊಂಡರು. ॥25॥

(ಶ್ಲೋಕ-26)

ಮೂಲಮ್

ಶ್ರುತಮಾತ್ರೋಪಿ ಯಃ ಸೀಣಾಂ ಪ್ರಸಹ್ಯಾಕರ್ಷತೇ ಮನಃ ।
ಉರುಗಾಯೋರುಗೀತೋ ವಾ ಪಶ್ಯಂತೀನಾಂ ಕುತಃ ಪುನಃ ॥

ಅನುವಾದ

ಭಗವಾನ್ ಶ್ರೀಕೃಷ್ಣನ ಅನಂತ ಲೀಲೆಗಳು ವಿವಿಧ ಪ್ರಕಾರದಿಂದ, ಅನೇಕ ಗೀತಗಳಿಂದ ಹಾಡಲ್ಪಟ್ಟಿವೆ. ಅವನ್ನು ಕೇಳಿದ ಮಾತ್ರದಿಂದಲೇ ಸ್ತ್ರೀಯರ ಮನಸ್ಸು ಬಲವಂತವಾಗಿ ಅವನೆಡೆಗೆ ಆಕರ್ಷಿಸಲ್ಪಡುವಷ್ಟು ಮಧುರವೂ, ಮನೋಹರವು ಆಗಿವೆ. ಹಾಗಿರುವಾಗ ಅವನನ್ನು ಕಣ್ಣಾರೆಕಂಡ ಸ್ತ್ರೀಯರ ವಿಷಯದಲ್ಲಿ ಹೇಳುವುದೇನಿದೆ? ॥26॥

(ಶ್ಲೋಕ-27)

ಮೂಲಮ್

ಯಾಃ ಸಂಪರ್ಯಚರನ್ಪ್ರೇಮ್ಣಾ ಪಾದಸಂವಾಹನಾದಿಭಿಃ ।
ಜಗದ್ಗುರುಂ ಭರ್ತೃಬುದ್ಧ್ಯಾ ತಾಸಾಂ ಕಿಂ ವರ್ಣ್ಯತೇ ತಪಃ ॥

ಅನುವಾದ

ಜಗದ್ಗುರು ಭಗವಾನ್ ಶ್ರೀಕೃಷ್ಣನನ್ನೇ ಪತಿಯೆಂದು ಭಾವಿಸಿದ ಸೌಭಾಗ್ಯವತಿಯರು ಅವನಿಗೆ ಪರಮ ಪ್ರೇಮದಿಂದ ಸ್ನಾನಮಾಡಿಸುವುದು, ಚರಣಗಳನ್ನು ಒತ್ತುವುದು, ಊಟಮಾಡಿಸುವುದು, ಮುಂತಾದ ಅನೇಕ ವಿಧದಿಂದ ಸೇವೆ ಮಾಡಿದರು. ಅವರ ತಪಸ್ಸನ್ನು ಯಾರು ತಾನೇ ವರ್ಣಿಸಬಲ್ಲರು? ॥27॥

(ಶ್ಲೋಕ-28)

ಮೂಲಮ್

ಏವಂ ವೇದೋದಿತಂ ಧರ್ಮಮನುತಿಷ್ಠನ್ ಸತಾಂ ಗತಿಃ ।
ಗೃಹಂ ಧರ್ಮಾರ್ಥಕಾಮಾನಾಂ ಮುಹುಶ್ಚಾದರ್ಶಯತ್ಪದಮ್ ॥

ಅನುವಾದ

ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನು ಸತ್ಪುರುಷರಿಗೆ ಏಕಮಾತ್ರ ಆಶ್ರಯನಾಗಿರುವನು. ಅವನು ವೇದೋಕ್ತ ಧರ್ಮವನ್ನು ಪದೇ-ಪದೇ ಆಚರಿಸಿ - ಮನೆಯೇ, ಧರ್ಮ, ಅರ್ಥ, ಕಾಮ ಇವುಗಳನ್ನು ಸಾಧಿಸುವ ಸ್ಥಳವಾಗಿದೆ ಎಂದು ಜನರಿಗೆ ತೋರಿಸಿ ಕೊಟ್ಟಿರುವನು. ॥28॥

(ಶ್ಲೋಕ-29)

ಮೂಲಮ್

ಆಸ್ಥಿತಸ್ಯ ಪರಂ ಧರ್ಮಂ ಕೃಷ್ಣಸ್ಯ ಗೃಹಮೇಧಿನಾಮ್ ।
ಆಸನ್ ಷೋಡಶಸಾಹಸ್ರಂ ಮಹಿಷ್ಯಶ್ಚ ಶತಾಧಿಕಮ್ ॥

ಅನುವಾದ

ಇದಕ್ಕಾಗಿಯೇ ಅವನು ಗೃಹಸ್ಥೋಚಿತವಾದ ಶ್ರೇಷ್ಠಧರ್ಮವನ್ನು ಆಶ್ರಯಿಸಿ ವ್ಯವಹರಿಸುತ್ತಿದ್ದನು. ಪರೀಕ್ಷಿತನೇ! ಅವನ ರಾಣಿಯರ ಸಂಖ್ಯೆ ಹದಿನಾರುಸಾವಿರದ ಒಂದುನೂರ ಎಂಟು ಇತ್ತು ಎಂದು ನಾನು ಮೊದಲೇ ನಿನಗೆ ಹೇಳಿರುವೆನು. ॥29॥

(ಶ್ಲೋಕ-30)

ಮೂಲಮ್

ತಾಸಾಂ ಸೀರತ್ನಭೂತಾನಾಮಷ್ಟೌ ಯಾಃ ಪ್ರಾಗುದಾಹೃತಾಃ ।
ರುಕ್ಮಿಣೀಪ್ರಮುಖಾ ರಾಜನ್ಸ್ತತ್ಪುತ್ರಾಶ್ಚಾನುಪೂರ್ವಶಃ ॥

ಅನುವಾದ

ಅಂತಹ ಶ್ರೇಷ್ಠ ಸ್ತ್ರೀಯರಲ್ಲಿ ರುಕ್ಮಿಣಿಯೇ ಮೊದಲಾದ ಎಂಟು ಜನ ಪಟ್ಟದರಸಿಯರು ಮತ್ತು ಅವರ ಪುತ್ರರ ಕುರಿತು ನಾನು ಮೊದಲೇ ಕ್ರಮವಾಗಿ ವರ್ಣಿಸಿರುವೆನು. ॥30॥

(ಶ್ಲೋಕ-31)

ಮೂಲಮ್

ಏಕೈಕಸ್ಯಾಂ ದಶ ದಶ ಕೃಷ್ಣೋಜೀಜನದಾತ್ಮಜಾನ್ ।
ಯಾವತ್ಯ ಆತ್ಮನೋ ಭಾರ್ಯಾ ಅಮೋಘಗತಿರೀಶ್ವರಃ ॥

ಅನುವಾದ

ಇವರಲ್ಲದೆ ಇತರ ಶ್ರೀಕೃಷ್ಣನ ಪತ್ನಿಯರಲ್ಲಿ ಪ್ರತಿಯೊಬ್ಬಳಲ್ಲಿಯೂ ಹತ್ತ-ಹತ್ತು ಪುತ್ರರು ಇದ್ದರು. ಇದೇನೋ ಆಶ್ಚರ್ಯದಸಂಗತಿಯಲ್ಲ. ಏಕೆಂದರೆ ಭಗವಂತನು ಸರ್ವಶಕ್ತನೂ, ಸತ್ಯಸಂಕಲ್ಪನೂ ಆಗಿರುವನು. ॥31॥

(ಶ್ಲೋಕ-32)

ಮೂಲಮ್

ತೇಷಾಮುದ್ದಾಮವೀರ್ಯಾಣಾಮಷ್ಟಾದಶ ಮಹಾರಥಾಃ ।
ಆಸನ್ನುದಾರಯಶಸಸ್ತೇಷಾಂ ನಾಮಾನಿ ಮೇ ಶೃಣು ॥

ಅನುವಾದ

ಭಗವಂತನ ಪರಮ ಪರಾಕ್ರಮಿ ಪುತ್ರರಲ್ಲಿ ಹದಿನೆಂಟು ಮಂದಿ ಮಹಾರಥರೇ ಆಗಿದ್ದರು. ಅವರ ಕೀರ್ತಿಯೂ ಇಡೀ ಜಗತ್ತಿನಲ್ಲಿ ಹರಡಿತ್ತು. ಅವರ ಹೆಸರು ಇಂತಿದೆ. ॥32॥

(ಶ್ಲೋಕ-33)

ಮೂಲಮ್

ಪ್ರದ್ಯುಮ್ನಶ್ಚಾನಿರುದ್ಧಶ್ಚ ದೀಪ್ತಿಮಾನ್ ಭಾನುರೇವ ಚ ।
ಸಾಂಬೋ ಮಧುರ್ಬೃಹದ್ಭಾನುಶ್ಚಿತ್ರಭಾನುರ್ವೃಕೋರುಣಃ ॥

(ಶ್ಲೋಕ-34)

ಮೂಲಮ್

ಪುಷ್ಕರೋ ವೇದಬಾಹುಶ್ಚ ಶ್ರುತದೇವಃ ಸುನಂದನಃ ।
ಚಿತ್ರಬಾಹುರ್ವಿರೂಪಶ್ಚ ಕವಿರ್ನ್ಯಗ್ರೋಧ ಏವ ಚ ॥

ಅನುವಾದ

ಪ್ರದ್ಯುಮ್ನ, ಅನಿರುದ್ಧ, ದೀಪ್ತಿ ಮಂತ, ಭಾನು, ಸಾಂಬ, ಮಧು, ಬೃಹದ್ಭಾನು, ಚಿತ್ರಭಾನು, ವೃಕ, ಅರುಣ, ಪುಷ್ಕರ, ವೇದಬಾಹು, ಶ್ರುತದೇವ, ಸುನಂದನ, ಚಿತ್ರಬಾಹು, ವಿರೂಪ, ಕವಿ ಮತ್ತು ನ್ಯಗ್ರೋಧ. ॥33-34॥

(ಶ್ಲೋಕ-35)

ಮೂಲಮ್

ಏತೇಷಾಮಪಿ ರಾಜೇಂದ್ರ ತನುಜಾನಾಂ ಮಧುದ್ವಿಷಃ ।
ಪ್ರದ್ಯುಮ್ನ ಆಸೀತ್ಪ್ರಥಮಃ ಪಿತೃವದ್ರುಕ್ಮಿಣೀಸುತಃ ॥

ಅನುವಾದ

ರಾಜೇಂದ್ರನೇ! ಭಗವಾನ್ ಶ್ರೀಕೃಷ್ಣನ ಈ ಪುತ್ರರಲ್ಲಿ ರುಕ್ಮಿಣಿನಂದನ ಪ್ರದ್ಯುಮ್ನನೇ ಸರ್ವಶ್ರೇಷ್ಠನಾಗಿದ್ದನು. ಅವನು ಸರ್ವಗುಣಗಳಲ್ಲಿ ತಂದೆಯಂತೆಯೇ ಇದ್ದನು. ॥35॥

(ಶ್ಲೋಕ-36)

ಮೂಲಮ್

ಸ ರುಕ್ಮಿಣೋ ದುಹಿತರಮುಪಯೇಮೇ ಮಹಾರಥಃ ।
ತಸ್ಮಾತ್ಸುತೋನಿರುದ್ಧೋಭೂನ್ನಾಗಾಯುತಬಲಾನ್ವಿತಃ ॥

ಅನುವಾದ

ಮಹಾರಥಿ ಪ್ರದ್ಯುಮ್ನನು ರುಕ್ಮಿಯ ಮಗಳೊಂದಿಗೆ ವಿವಾಹವಾಗಿದ್ದನು. ಆಕೆಯ ಗರ್ಭದಲ್ಲಿ ಹತ್ತು ಸಾವಿರ ಆನೆಗಳ ಬಲವುಳ್ಳ ಅನಿರುದ್ಧನು ಹುಟ್ಟಿದನು. ॥36॥

(ಶ್ಲೋಕ-37)

ಮೂಲಮ್

ಸ ಚಾಪಿ ರುಕ್ಮಿಣಃ ಪೌತ್ರೀಂ ದೌಹಿತ್ರೋ ಜಗೃಹೇ ತತಃ ।
ವಜ್ರಸ್ತಸ್ಯಾಭವದ್ಯಸ್ತು ವೌಸಲಾದವಶೇಷಿತಃ ॥

ಅನುವಾದ

ಅನಿರುದ್ಧನು ರುಕ್ಮಿಯ ಮೊಮ್ಮಗಳನ್ನು ವಿವಾಹವಾಗಿ ಅವಳಲ್ಲಿ ವಜ್ರನಾಭನೆಂಬ ಮಗನನ್ನು ಪಡೆದನು. ಬ್ರಾಹ್ಮಣರ ಶಾಪದಿಂದ ಯದುವಂಶವು ನಾಶವಾಗಿ ಹೋದ ಬಳಿಕ ಏಕಮಾತ್ರ ವಜ್ರನಾಭನು ಉಳಿದಿದ್ದನು. ॥37॥

(ಶ್ಲೋಕ-38)

ಮೂಲಮ್

ಪ್ರತಿಬಾಹುರಭೂತ್ತಸ್ಮಾತ್ ಸುಬಾಹುಸ್ತಸ್ಯ ಚಾತ್ಮಜಃ ।
ಸುಬಾಹೋಃ ಶಾಂತಸೇನೋಭೂಚ್ಛತಸೇನಸ್ತು ತತ್ಸುತಃ ॥

ಅನುವಾದ

ವಜ್ರನಾಭನ ಪುತ್ರನು ಪ್ರತಿಬಾಹು, ಪ್ರತಿಬಾಹುವಿಗೆ ಸುಬಾಹು, ಸುಬಾಹುವಿಗೆ ಶಾಂತಸೇನ ಮತ್ತು ಶಾಂತಸೇನನಿಗೆ ಶತಸೇನ ಹುಟ್ಟಿದನು.॥38॥

(ಶ್ಲೋಕ-39)

ಮೂಲಮ್

ನ ಹ್ಯೇತಸ್ಮಿನ್ಕುಲೇ ಜಾತಾ ಅಧನಾ ಅಬಹುಪ್ರಜಾಃ ।
ಅಲ್ಪಾಯುಷೋಲ್ಪವೀರ್ಯಾಶ್ಚ ಅಬ್ರಹ್ಮಣ್ಯಾಶ್ಚ ಜಜ್ಞಿರೇ ॥

ಅನುವಾದ

ಪರೀಕ್ಷಿತನೇ! ಈ ವಂಶದಲ್ಲಿ ಸಂತಾನವಿಲ್ಲದವನೂ, ನಿರ್ಧನನೂ, ಅಲ್ಪಾಯುವೂ ಅಲ್ಪವೀರ್ಯನೂ ಯಾರೂ ಇರಲಿಲ್ಲ. ಅವರೆಲ್ಲರೂ ಬ್ರಾಹ್ಮಣ ಭಕ್ತರಾಗಿದ್ದರು. ॥39॥

(ಶ್ಲೋಕ-40)

ಮೂಲಮ್

ಯದುವಂಶಪ್ರಸೂತಾನಾಂ ಪುಂಸಾಂ ವಿಖ್ಯಾತಕರ್ಮಣಾಮ್ ।
ಸಂಖ್ಯಾ ನ ಶಕ್ಯತೇ ಕರ್ತುಮಪಿ ವರ್ಷಾಯುತೈರ್ನೃಪ ॥

ಅನುವಾದ

ಪರೀಕ್ಷಿತನೇ! ಯದುವಂಶದಲ್ಲಿ ಆಗಿಹೋದ ಇಂತಿಂತಹ ಯಶಸ್ವಿಗಳ, ಪರಾಕ್ರಮಿಗಳ ಗಣನೆಯು ಸಾವಿರಾರು ವರ್ಷಗಳಲ್ಲಿಯೂ ಮುಗಿಯಲಾರದು. ॥40॥

(ಶ್ಲೋಕ-41)

ಮೂಲಮ್

ತಿಸ್ರಃ ಕೋಟ್ಯಃ ಸಹಸ್ರಾಣಾಮಷ್ಟಾಶೀತಿಶತಾನಿ ಚ ।
ಆಸನ್ ಯದುಕುಲಾಚಾರ್ಯಾಃ ಕುಮಾರಾಣಾಮಿತಿ ಶ್ರುತಮ್ ॥

ಅನುವಾದ

ಯದುವಂಶದಲ್ಲಿ ಬಾಲಕರಿಗೆ ಕಲಿಸಲು ಮೂರು ಕೋಟಿ ಎಂಭತ್ತೆಂಟು ಲಕ್ಷ ಆಚಾರ್ಯರಿದ್ದರೆಂದು ನಾನು ಕೇಳಿದ್ದೆ. ॥41॥

(ಶ್ಲೋಕ-42)

ಮೂಲಮ್

ಸಂಖ್ಯಾನಂ ಯಾದವಾನಾಂ ಕಃ ಕರಿಷ್ಯತಿ ಮಹಾತ್ಮನಾಮ್ ।
ಯತ್ರಾಯುತಾನಾಮಯುತಲಕ್ಷೇಣಾಸ್ತೇ ಸ ಆಹುಕಃ ॥

ಅನುವಾದ

ಇಂತಹ ಸ್ಥಿತಿಯಲ್ಲಿ ಮಹಾತ್ಮರಾದ ಯದು ವಂಶಿಯರ ಸಂಖ್ಯೆಯನ್ನಾದರೋ ಹೇಗೆ ಹೇಳಬಹುದಾಗಿದೆ. ಮಹಾರಾಜನಾದ ಉಗ್ರಸೇನನೊಡನೆ ಅಂದಾಜು ಒಂದು ನೀಲ (ಒಂದು ಅಂಕೆ ಬರೆದು ಹದಿಮೂರು ಸೊನ್ನೆ ಬರೆಯಬೇಕು.) ಸೈನಿಕರಿದ್ದರು. ॥42॥

(ಶ್ಲೋಕ-43)

ಮೂಲಮ್

ದೇವಾಸುರಾಹವಹತಾ ದೈತೇಯಾ ಯೇ ಸುದಾರುಣಾಃ ।
ತೇ ಚೋತ್ಪನ್ನಾ ಮನುಷ್ಯೇಷು ಪ್ರಜಾ ದೃಪ್ತಾ ಬಬಾಧಿರೇ ॥

ಅನುವಾದ

ಪರೀಕ್ಷಿತನೇ! ಹಿಂದೆ ನಡೆದ ದೇವಾಸುರರ ಸಂಗ್ರಾಮದಲ್ಲಿ ಅಸಂಖ್ಯಾತ ಭಯಂಕರ ಅಸುರರು ಅಸುನೀಗಿದರು. ಅವರೇ ಈಗ ಮನುಷ್ಯರಾಗಿ ಹುಟ್ಟಿ ಮಹಾಗರ್ವಿಷ್ಠರಾಗಿ ಜನರನ್ನು ಪೀಡಿಸತೊಡಗಿದರು. ॥43॥

(ಶ್ಲೋಕ-44)

ಮೂಲಮ್

ತನ್ನಿಗ್ರಹಾಯ ಹರಿಣಾ ಪ್ರೋಕ್ತಾ ದೇವಾ ಯದೋಃ ಕುಲೇ ।
ಅವತೀರ್ಣಾಃ ಕುಲಶತಂ ತೇಷಾಮೇಕಾಧಿಕಂ ನೃಪ ॥

ಅನುವಾದ

ಅವರನ್ನು ನಿಗ್ರಹಿಸುವ ಸಲುವಾಗಿ ಭಗವಂತನ ಆಜ್ಞೆಯಂತೆ ದೇವತೆಗಳೇ ಯದುವಂಶದಲ್ಲಿ ಅವತರಿಸಿದ್ದರು. ಪರೀಕ್ಷಿತನೇ! ಯದುವಂಶದಲ್ಲಿ ಒಳಭೇದಗಳಾಗಿ ಒಂದುನೂರ ಒಂದು ಕುಲಗಳಿದ್ದವು. ॥44॥

(ಶ್ಲೋಕ-45)

ಮೂಲಮ್

ತೇಷಾಂ ಪ್ರಮಾಣಂ ಭಗವಾನ್ ಪ್ರಭುತ್ವೇನಾಭವದ್ಧರಿಃ ।
ಯೇ ಚಾನುವರ್ತಿನಸ್ತಸ್ಯ ವವೃಧುಃ ಸರ್ವಯಾದವಾಃ ॥

ಅನುವಾದ

ಅವರೆಲ್ಲರೂ ಭಗವಾನ್ ಶ್ರೀಕೃಷ್ಣನನ್ನೇ ತಮ್ಮ ಸ್ವಾಮಿಯೆಂದೂ, ಆದರ್ಶನೆಂದೂ ಭಾವಿಸಿದ್ದರು. ಅವನ ಅನುಯಾಯಿಗಳಾದ ಯಾದವರಿಗೆ ಎಲ್ಲ ವಿಧದಿಂದ ಉನ್ನತಿಯಾಯಿತು. ॥45॥

(ಶ್ಲೋಕ-46)

ಮೂಲಮ್

ಶಯ್ಯಾಸನಾಟನಾಲಾಪಕ್ರೀಡಾಸ್ನಾನಾದಿಕರ್ಮಸು ।
ನ ವಿದುಃ ಸಂತಮಾತ್ಮಾನಂ ವೃಷ್ಣಯಃ ಕೃಷ್ಣಚೇತಸಃ ॥

ಅನುವಾದ

ಯದುವಂಶೀಯರ ಚಿತ್ತವು ಮಲಗುವಾಗ, ಕುಳಿತಿರುವಾಗ, ಅಡ್ಡಾಡುವಾಗ, ಆಟವಾಡುವಾಗ, ಮಾತನಾಡುವಾಗ, ಸ್ನಾನಮಾಡುವಾಗ ಮೊದಲಾದ ಎಲ್ಲ ಕರ್ಮಗಳಲ್ಲಿ ಭಗವಾನ್ ಶ್ರೀಕೃಷ್ಣನಲ್ಲೇ ನೆಲೆಸಿದ್ದು, ತಮ್ಮ ಶರೀರದ ಪ್ರಜ್ಞೆಯು ಇರುತ್ತಿರಲಿಲ್ಲ. ತಮ್ಮ ಶರೀರವು ಏನುಮಾಡುತ್ತಿದೆ ಎಂಬುದೂ ಅವರಿಗೆ ಅರಿವಿರಲಿಲ್ಲ. ಶರೀರದ ಎಲ್ಲ ಕ್ರಿಯೆಗಳು ಯಂತ್ರದಂತೆ ತಾನೇ-ತಾನಾಗಿ ನಡೆಯುತ್ತಿದ್ದವು. ॥46॥

(ಶ್ಲೋಕ-47)

ಮೂಲಮ್

ತೀರ್ಥಂ ಚಕ್ರೇ ನೃಪೋನಂ ಯದಜನಿ ಯದುಷು
ಸ್ವಃಸರಿತ್ಪಾದಶೌಚಂ
ವಿದ್ವಿಟ್ಸ್ನಿಗ್ಧಾಃ ಸ್ವರೂಪಂ ಯುಯುರಜಿತಪರಾ
ಶ್ರೀರ್ಯದರ್ಥೇನ್ಯಯತ್ನಃ ।
ಯನ್ನಾಮಾಮಂಗಲಘ್ನಂ ಶ್ರುತಮಥ ಗದಿತಂ
ಯತ್ಕೃತೋ ಗೋತ್ರಧರ್ಮಃ
ಕೃಷ್ಣಸ್ಯೈತನ್ನ ಚಿತ್ರಂ ಕ್ಷಿತಿಭರಹರಣಂ
ಕಾಲಚಕ್ರಾಯುಧಸ್ಯ ॥

ಅನುವಾದ

ಪರೀಕ್ಷಿತನೇ! ವಿಷ್ಣುಪಾದೋದ್ಭವೆಯಾದ ಗಂಗಾದೇವಿಯು ವಿಶ್ವದಲ್ಲೇ ಪವಿತ್ರತಮಳೆಂದು ಪ್ರಸಿದ್ಧಿಯನ್ನು ಹೊಂದಿದ್ದರೂ ಯಾದವಕುಲದಲ್ಲಿ ಶ್ರೀಕೃಷ್ಣನ ಕೀರ್ತಿರೂಪವಾದ ತೀರ್ಥವು ಉದಯಿಸಿದಾಗ ದೇವಗಂಗೆಯ ಮಹಿಮೆಯು ಕಡಿಮೆಯಾಯಿತು. ಶತ್ರು-ಮಿತ್ರರೆಂಬ ಭೇದವೇ ಇಲ್ಲದೆ ಪರಮಪುರುಷನಾದ ಶ್ರೀಕೃಷ್ಣನನ್ನು ಭಜಿಸಿದವರೆಲ್ಲರೂ ಪರಮಪದವನ್ನು ಪಡೆದರು. ಯಾವಳ ಕೃಪಾಕಟಾಕ್ಷವನ್ನು ಸಂಪಾದಿಸಲು ಬ್ರಹ್ಮನೇ ಮೊದಲಾದ ದೇವತೆಗಳು ಯಜ್ಞಮಾಡುವರೋ, ಆಕೆಯೇ ಭಗವಂತನ ಸೇವೆಯಲ್ಲಿ ನಿತ್ಯ-ನಿರಂತರವಾಗಿ ತೊಡಗಿರುವಳು. ಭಗವಂತನ ನಾಮವನ್ನು ಒಂದು ಬಾರಿ ಕೇಳುವುದರಿಂದ, ಉಚ್ಛರಿಸುವುದರಿಂದಲೇ ಸಮಸ್ತ ಅಮಂಗಳಗಳು ನಾಶವಾಗಿ ಹೋಗುತ್ತವೆ. ಋಷಿಗಳ ವಂಶಜರಲ್ಲಿ ಪ್ರಚಲಿತವಾಗಿರುವ ಧರ್ಮಗಳೆಲ್ಲವುಗಳ ಸಂಸ್ಥಾಪಕನು ಭಗವಾನ್ ಶ್ರೀಕೃಷ್ಣನೇ ಆಗಿರುವನು. ಅವನು ತನ್ನ ಕೈಯಲ್ಲಿ ಕಾಲಸ್ವರೂಪವಾದ ಚಕ್ರವನ್ನು ಧರಿಸಿರುವನು. ಪರೀಕ್ಷಿತನೇ! ಇಂತಹ ಸ್ಥಿತಿಯಲ್ಲಿ ಅವನು ಭೂಭಾರ ಹರಣ ಮಾಡಿದುದು ಏನು ತಾನೇ ದೊಡ್ಡ ಮಾತು? ॥47॥

(ಶ್ಲೋಕ-48)

ಮೂಲಮ್

ಜಯತಿ ಜನನಿವಾಸೋ ದೇವಕೀಜನ್ಮವಾದೋ
ಯದುವರಪರ್ಷತ್ಸ್ವೈರ್ದೋರ್ಭಿರಸ್ಯನ್ನಧರ್ಮಮ್ ।
ಸ್ಥಿರಚರವೃಜಿನಘ್ನಃ ಸುಸ್ಮಿತಶ್ರೀಮುಖೇನ
ವ್ರಜಪುರವನಿತಾನಾಂ ವರ್ಧಯನ್ಕಾಮದೇವಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನೇ ಸಮಸ್ತ ಜೀವರ ಆಶ್ರಯಸ್ಥಾನನಾಗಿದ್ದಾನೆ. ಅವನು ಸದಾ-ಸರ್ವದಾ ಸರ್ವತ್ರ-ವ್ಯಾಪ್ತನಾಗಿದ್ದರೂ ಹೆಸರಿಗಷ್ಟೇ ದೇವಕಿಯಗರ್ಭದಲ್ಲಿ ಜನಿಸಿದನು. ಯದುವಂಶದ ವೀರರು ಪಾರ್ಷದರಂತೆ ಅವನ ಸೇವೆ ಮಾಡುತ್ತಾ ಇರುತ್ತಾರೆ. ಅವನು ತನ್ನ ಭುಜಬಲದಿಂದ ಅಧರ್ಮವನ್ನು ನಾಶಗೊಳಿಸಿದನು. ಪರೀಕ್ಷಿತನೇ! ಭಗವಂತನು ಸ್ವಭಾವತಃ ಚರಾಚರ ಜಗತ್ತಿನ ದುಃಖವನ್ನು ಕಳೆಯುತ್ತಿರುವನು. ಅವನ ಮಂದ ಮಧುರವಾದ ಮುಗ್ನುಳಗೆಯಿಂದ ಕೂಡಿದ ಸುಂದರ ಮುಖಾರವಿಂದದಿಂದ ವ್ರಜಸ್ತ್ರೀಯರ ಮತ್ತು ಪುರಸೀಯರ ಹೃದಯದಲ್ಲಿ ಪ್ರೇಮಸಂಚಾರವಾಗುತ್ತಿತ್ತು. ವಾಸ್ತವವಾಗಿ ಸಮಸ್ತ ಜಗತ್ತಿನಲ್ಲಿ ಅವನೇ ವಿಜಯಿಯಾಗಿದ್ದಾನೆ. ಅವನಿಗೆ ಜಯವಾಗಲಿ! ಜಯವಾಗಲಿ! ॥48॥

(ಶ್ಲೋಕ-49)

ಮೂಲಮ್

ಇತ್ಥಂ ಪರಸ್ಯ ನಿಜವರ್ತ್ಮರಿರಕ್ಷಯಾತ್ತ-
ಲೀಲಾತನೋಸ್ತದನುರೂಪವಿಡಂಬನಾನಿ ।
ಕರ್ಮಾಣಿ ಕರ್ಮಕಷಣಾನಿ ಯದೂತ್ತಮಸ್ಯ
ಶ್ರೂಯಾದಮುಷ್ಯ ಪದಯೋರನುವೃತ್ತಿಮಿಚ್ಛನ್ ॥

ಅನುವಾದ

ಪರೀಕ್ಷಿತನೇ! ಪ್ರಕೃತಿಗೆ ಅತೀತನಾದ ಪರಮಾತ್ಮನು ತಾನೇ ಸ್ಥಾಪಿಸಿದ ಧರ್ಮಮರ್ಯಾದೆಯ ರಕ್ಷಣೆಗಾಗಿ ದಿವ್ಯಲೀಲಾ ಶರೀರವನ್ನು ಗ್ರಹಣಮಾಡಿ, ಅದಕ್ಕನುರೂಪವಾಗಿ ಅನೇಕ ಅದ್ಭುತ ಚರಿತ್ರಗಳನ್ನು ಅಭಿನಯಿಸಿದನು. ಅವನ ಒಂದೊಂದು ಕರ್ಮವನ್ನು ಸ್ಮರಿಸುವವರ ಕರ್ಮಬಂಧನಗಳು ಕಡಿದುಹೋಗುತ್ತವೆ. ಯದುವಂಶ ಶಿರೋಮಣಿ ಭಗವಾನ್ ಶ್ರೀಕೃಷ್ಣನ ಚರಣಕಮಲಗಳ ಸೇವೆಯ ಅಧಿಕಾರ ಪಡೆಯಬೇಕಿದ್ದರೆ ಅವನ ಲೀಲೆಗಳನ್ನೇ ಶ್ರವಣಿಸಬೇಕು. ॥49॥

(ಶ್ಲೋಕ-50)

ಮೂಲಮ್

ಮರ್ತ್ಯಸ್ತಯಾನುಸವಮೇಧಿತಯಾ ಮುಕುಂದ-
ಶ್ರೀಮತ್ಕಥಾಶ್ರವಣಕೀರ್ತನಚಿಂತಯೈತಿ ।
ತದ್ಧಾಮ ದುಸ್ತರಕೃತಾಂತಜವಾಪವರ್ಗಂ
ಗ್ರಾಮಾದ್ವನಂ ಕ್ಷಿತಿಭುಜೋಪಿ ಯಯುರ್ಯದರ್ಥಾಃ ॥

ಅನುವಾದ

ಪರೀಕ್ಷಿತನೇ! ಮನುಷ್ಯನು ಪ್ರತಿಕ್ಷಣವೂ ಭಗವಾನ್ ಶ್ರೀಕೃಷ್ಣನ ಮನೋಹರವಾದ ಲೀಲಾಕಥೆಗಳನ್ನು ಹೆಚ್ಚೆಚ್ಚು ಶ್ರವಣ, ಕೀರ್ತನೆ, ಚಿಂತನೆ ಮಾಡತೊಡಗಿದಾಗ ಅವನ ಈ ಭಕ್ತಿಯೇ ಅವನನ್ನು ಭಗವಂತನ ಪರಮ ಧಾಮಕ್ಕೆ ಕೊಂಡೊಯ್ಯುತ್ತದೆ. ಕಾಲನ ಗತಿಯನ್ನು ಮೀರುವುದು ಬಹಳ ಕಷ್ಟವಾಗಿದ್ದರೂ ಭಗವಂತನ ಧಾಮದಲ್ಲಿ ಕಾಲನ ಪ್ರಭಾವ ನಡೆಯುವುದಿಲ್ಲ. ಅದು ಅಲ್ಲಿಗೆ ತಲುಪಲಾರದು. ಅದೇ ಧಾಮದ ಪ್ರಾಪ್ತಿಗಾಗಿ ಅನೇಕ ಸಾಮ್ರಾಟರು ತಮ್ಮ ರಾಜ್ಯಲಕ್ಷ್ಮಿಯನ್ನು ತೊರೆದು ತಪಸ್ಸಿಗಾಗಿ ಅರಣ್ಯಕ್ಕೆ ಹೋದರು. ಅದಕ್ಕಾಗಿ ಮನುಷ್ಯನು ಅವನ ಲೀಲಾಕಥೆಗಳನ್ನು ಶ್ರವಣಿಸುತ್ತಲೇ ಇರಬೇಕು. ॥50॥

ಅನುವಾದ (ಸಮಾಪ್ತಿಃ)

ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥90॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಶ್ರೀಕೃಷ್ಣಚರಿತಾನುವರ್ಣನಂ ನಾಮ ನವತಿತಮೋಧ್ಯಾಯಃ ॥90॥
ಹತ್ತನೆಯ ಸ್ಕಂಧದ ಉತ್ತರಾರ್ಧವು ಸಂಪೂರ್ಣವಾಯಿತು.
ದಶಮ ಸ್ಕಂಧವು ಮುಗಿಯಿತು
ಹರಿಃ ಓಂ ತತ್ಸತ್ ಹರಿಃ ಓಂ ತತ್ಸತ್