೮೯

[ಏಂಭತ್ತೋಂಭತ್ತನೇಯ ಅಧ್ಯಾಯ]

ಭಾಗಸೂಚನಾ

ಭೃಗು ಮಹರ್ಷಿಯು ತ್ರಿಮೂರ್ತಿಗಳನ್ನು ಪರೀಕ್ಷಿಸಿದುದು - ಭಗವಂತನು ಸತ್ತು ಹೋಗಿದ್ದ ಬ್ರಾಹ್ಮಣ ಬಾಲಕರನ್ನು ಮರಳಿ ತಂದು ಕೊಟ್ಟಿದ್ದು

(ಶ್ಲೋಕ-1)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಸರಸ್ವತ್ಯಾಸ್ತಟೇ ರಾಜನ್ನೃಷಯಃ ಸತ್ರಮಾಸತ ।
ವಿತರ್ಕಃ ಸಮಭೂತ್ತೇಷಾಂ ತ್ರಿಷ್ವಧೀಶೇಷು ಕೋ ಮಹಾನ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಎಲೈ ಪರೀಕ್ಷಿತನೇ! ಒಮ್ಮೆ ಪವಿತ್ರವಾದ ಸರಸ್ವತೀ ನದಿಯ ತೀರದಲ್ಲಿ ಮಹಾಯಜ್ಞವನ್ನು ಪ್ರಾರಂಭಿಸುವ ಸಲುವಾಗಿ ಮಹಾ-ಮಹಾ ಋಷಿಮುನಿಗಳು ಸೇರಿದರು. ಅವರಲ್ಲಿ ಬ್ರಹ್ಮ-ವಿಷ್ಣು-ಶಿವರಲ್ಲಿ ಎಲ್ಲಕ್ಕಿಂತ ದೊಡ್ಡವರು ಯಾರು? ಎಂಬ ವಿಷಯದಲ್ಲಿ ವಿವಾದ ನಡೆಯುತ್ತಿತ್ತು. ॥1॥

(ಶ್ಲೋಕ-2)

ಮೂಲಮ್

ತಸ್ಯ ಜಿಜ್ಞಾಸಯಾ ತೇ ವೈ ಭೃಗುಂ ಬ್ರಹ್ಮಸುತಂ ನೃಪ ।
ತಜ್ಜ್ಞಪ್ತ್ಯೈ ಪ್ರೇಷಯಾಮಾಸುಃ ಸೋಭ್ಯಗಾದ್ಬ್ರಹ್ಮಣಃ ಸಭಾಮ್ ॥

ಅನುವಾದ

ಪರೀಕ್ಷಿತನೇ! ಅವರೆಲ್ಲರೂ ಈ ವಿಷಯವನ್ನು ತಿಳಿಯಲಿಕ್ಕಾಗಿ ಹಾಗೂ ಬ್ರಹ್ಮ, ವಿಷ್ಣು, ಮಹೇಶ್ವರರನ್ನು ಪರೀಕ್ಷಿಸುವ ಉದ್ದೇಶದಿಂದ ಬ್ರಹ್ಮಮಾನಸ ಪುತ್ರರಾದ ಭೃಗುಮಹರ್ಷಿಗಳನ್ನು ಅವರ ಬಳಿಗೆ ಕಳಿಸಿದರು. ಭೃಗುಮಹರ್ಷಿಗಳು ಮೊಟ್ಟ ಮೊದಲಿಗೆ ಬ್ರಹ್ಮದೇವರ ಸಭೆಗೆ ಹೋದರು. ॥2॥

(ಶ್ಲೋಕ-3)

ಮೂಲಮ್

ನ ತಸ್ಮೈ ಪ್ರಹ್ವಣಂ ಸ್ತೋತ್ರಂ ಚಕ್ರೇ ಸತ್ತ್ವಪರೀಕ್ಷಯಾ ।
ತಸ್ಮೈ ಚುಕ್ರೋಧ ಭಗವಾನ್ ಪ್ರಜ್ವಲನ್ ಸ್ವೇನ ತೇಜಸಾ ॥

ಅನುವಾದ

ಅವರು ಬ್ರಹ್ಮನ ಸತ್ವವನ್ನು ಪರೀಕ್ಷಿಸುವುದಕ್ಕಾಗಿ ಅವನನ್ನು ಸ್ತುತಿಸಲೂ ಇಲ್ಲ. ನಮಸ್ಕರಿಸಲೂ ಇಲ್ಲ. ಇದರಿಂದ ಬ್ರಹ್ಮನು ತನ್ನ ತೇಜದಿಂದ ಉರಿಯುತ್ತಿದ್ದನು. ಅವನು ಕ್ರೋಧಗೊಂಡಿರುವನೆಂದು ತಿಳಿಯಿತು.॥3॥

(ಶ್ಲೋಕ-4)

ಮೂಲಮ್

ಸ ಆತ್ಮನ್ಯುತ್ಥಿತಂ ಮನ್ಯುಮಾತ್ಮಜಾಯಾತ್ಮನಾ ಪ್ರಭುಃ ।
ಅಶೀಶಮದ್ಯಥಾ ವಹ್ನಿಂ ಸ್ವಯೋನ್ಯಾ ವಾರಿಣಾತ್ಮಭೂಃ ॥

ಅನುವಾದ

ಆದರೆ ಸಮರ್ಥನಾದ ಬ್ರಹ್ಮದೇವರು ಇವನಾದರೋ ನನ್ನ ಪುತ್ರನಾಗಿದ್ದಾನೆಂದು ನೋಡಿದಾಗ ತನ್ನ ಮನಸ್ಸಿನಲ್ಲಿ ಎದ್ದ ಕ್ರೋಧಾಗ್ನಿಯನ್ನು ಅರಣಿಮಂಥನದಿಂದ ಉತ್ಪನ್ನವಾದ ಅಗ್ನಿಯನ್ನು ನೀರನ್ನು ಹಾಕಿ ನಂದಿಸುವಂತೆ ವಿವೇಕ ಬುದ್ಧಿಯ ಮೂಲಕ ಮನಸ್ಸಿನಲ್ಲೇ ಅಡಗಿಸಿಕೊಂಡನು. ॥4॥

(ಶ್ಲೋಕ-5)

ಮೂಲಮ್

ತತಃ ಕೈಲಾಸಮಗಮತ್ ಸ ತಂ ದೇವೋ ಮಹೇಶ್ವರಃ ।
ಪರಿರಬ್ಧುಂ ಸಮಾರೇಭೇ ಉತ್ಥಾಯ ಭ್ರಾತರಂ ಮುದಾ ॥

ಅನುವಾದ

ಅಲ್ಲಿಂದ ಭೃಗುಗಳು ಕೈಲಾಸಕ್ಕೆ ಹೋದರು. ದೇವಾಧಿದೇವನಾದ ಭಗವಾನ್ ಶಂಕರನು ತನ್ನ ತಮ್ಮನಾದ ಭೃಗುವು ಬಂದಿರುವನೆಂದು ನೋಡಿದಾಗ ಆನಂದದಿಂದ ಎದ್ದು ನಿಂತು ಆಲಿಂಗಿಸಿಕೊಳ್ಳಲು ಬಾಹುಗಳನ್ನು ಚಾಚಿದನು. ॥5॥

(ಶ್ಲೋಕ-6)

ಮೂಲಮ್

ನೈಚ್ಛತ್ತ್ವಮಸ್ಯುತ್ಪಥಗ ಇತಿ ದೇವಶ್ಚುಕೋಪ ಹ ।
ಶೂಲಮುದ್ಯಮ್ಯ ತಂ ಹಂತುಮಾರೇಭೇ ತಿಗ್ಮಲೋಚನಃ ॥

ಅನುವಾದ

ಆದರೆ ಭೃಗು ಮಹರ್ಷಿಗಳು ಅವನ ಆಲಿಂಗನವನ್ನು ತಿರಸ್ಕರಿಸುತ್ತಾ ಹೇಳುತ್ತಾರೆ ‘ನೀನು ಲೋಕ ಮತ್ತು ವೇದದ ಮರ್ಯಾದೆಯನ್ನು ಉಲ್ಲಂಘಿಸಿರುವೆ. ಇದರಿಂದ ನಾನು ನಿನ್ನನ್ನು ಆಲಿಂಗಿಸಿಕೊಳ್ಳುವುದಿಲ್ಲ.’ ಭೃಗುಗಳ ಮಾತನ್ನು ಕೇಳಿದ ಭಗವಾನ್ ಶಂಕರನು ಕ್ರೋಧದಿಂದ ಉರಿದೆದ್ದು, ಹುಬ್ಬನ್ನು ಮೇಲೇರಿಸಿಕೊಂಡು ತ್ರಿಶೂಲವನ್ನೆತ್ತಿಕೊಂಡು ಭೃಗುವನ್ನು ಕೊಲ್ಲಲು ಬಯಸಿದನು. ॥6॥

(ಶ್ಲೋಕ-7)

ಮೂಲಮ್

ಪತಿತ್ವಾ ಪಾದಯೋರ್ದೇವೀ ಸಾಂತ್ವಯಾಮಾಸ ತಂ ಗಿರಾ ।
ಅಥೋ ಜಗಾಮ ವೈಕುಂಠಂ ಯತ್ರ ದೇವೋ ಜನಾರ್ದನಃ ॥

ಅನುವಾದ

ಆದರೆ ಅದೇ ಸಮಯದಲ್ಲಿ ಸತೀದೇವಿಯು ಅವನ ಚರಣಗಳನ್ನು ಹಿಡಿದುಕೊಂಡು ಬಹಳ ಅನುನಯಗಳಿಂದ ಅವನ ಕ್ರೋಧವನ್ನು ಶಾಂತಗೊಳಿಸಿದಳು. ಮತ್ತೆ ಭೃಗು ಮಹರ್ಷಿಗಳು ಭಗವಾನ್ ವಿಷ್ಣುವಿನ ನಿವಾಸಸ್ಥಾನವಾದ ವೈಕುಂಠಕ್ಕೆ ಹೋದರು. ॥7॥

(ಶ್ಲೋಕ-8)

ಮೂಲಮ್

ಶಯಾನಂ ಶ್ರಿಯ ಉತ್ಸಂಗೇ ಪದಾ ವಕ್ಷಸ್ಯತಾಡಯತ್ ।
ತತ ಉತ್ಥಾಯ ಭಗವಾನ್ ಸಹ ಲಕ್ಷ್ಮ್ಯಾ ಸತಾಂ ಗತಿಃ ॥

(ಶ್ಲೋಕ-9)

ಮೂಲಮ್

ಸ್ವತಲ್ಪಾದವರುಹ್ಯಾಥ ನನಾಮ ಶಿರಸಾ ಮುನಿಮ್ ।
ಆಹ ತೇ ಸ್ವಾಗತಂ ಬ್ರಹ್ಮನ್ ನಿಷೀದಾತ್ರಾಸನೇ ಕ್ಷಣಮ್ ।
ಅಜಾನತಾಮಾಗತಾನ್ವಃ ಕ್ಷಂತುಮರ್ಹಥ ನಃ ಪ್ರಭೋ ॥

ಅನುವಾದ

ಆ ಸಮಯದಲ್ಲಿ ಭಗವಾನ್ ವಿಷ್ಣುವು ಲಕ್ಷ್ಮೀದೇವಿಯ ತೊಡೆಯ ಮೇಲೆ ತಲೆಯನ್ನಿಟ್ಟು ಒರಗಿದ್ದನು. ಭೃಗುಗಳು ಹೋಗಿ ಅವನ ವಕ್ಷಃಸ್ಥಳಕ್ಕೆ, ಕಾಲಿನಿಂದ ಒದ್ದುಬಿಟ್ಟನು. ಭಕ್ತವತ್ಸಲನಾದ ಭಗವಾನ್ ಮಹಾವಿಷ್ಣುವು ಲಕ್ಷ್ಮೀದೇವಿಯೊಂದಿಗೆ ಎದ್ದು, ಲಗುಬಗೆಯಿಂದ ಹಾಸಿಗೆಯಿಂದ ಕೆಳಗಿಳಿದು ಮುನಿಗಳಿಗೆ ತಲೆಬಾಗಿ ವಂದಿಸಿದನು. ಭಗವಂತನೆಂದನು - ಬ್ರಾಹ್ಮಣಶ್ರೇಷ್ಠರೇ! ತಾವು ಬಂದುದು ಬಹಳ ಚೆನ್ನಾಯ್ತು, ತಮಗೆ ಸ್ವಾಗತ ಕೋರುತ್ತೇವೆ. ಈ ಸುಖಾಸನದಲ್ಲಿ ಕುಳಿತು ವಿಶ್ರಮಿಸಿಕೊಳ್ಳಿ. ಸ್ವಾಮಿ! ತಮ್ಮ ಶುಭಾಗಮನದ ವಿಚಾರತಿಳಿದಿರಲಿಲ್ಲ. ಇಲ್ಲದಿದ್ದರೆ ನಿಮ್ಮನ್ನು ಸ್ವಾಗತಿಸಲು ನಾನೇ ಮುಂದೆ ಬರುತ್ತಿದ್ದೆ. ನನ್ನ ಅಪರಾಧವನ್ನು ಕ್ಷಮಿಸಿಬಿಡಿ. ॥8-9॥

(ಶ್ಲೋಕ-10)

ಮೂಲಮ್

ಅತೀವ ಕೋಮಲೌ ತಾತ ಚರಣೌ ತೇ ಮಹಾಮುನೇ ।
ಇತ್ಯುಕ್ತ್ವಾ ವಿಪ್ರಚರಣೌ ಮರ್ದಯನ್ಸ್ವೇನ ಪಾಣಿನಾ ॥

ಅನುವಾದ

ಮಹಾಮುನಿಗಳೇ! ತಮ್ಮ ಚರಣಗಳು ಅತ್ಯಂತ ಕೋಮಲವಾಗಿದೆ ಎಂದು ಹೇಳಿ ಭೃಗುಗಳ ಚರಣಗಳನ್ನು ಭಗವಂತನು ತನ್ನ ಕೈಗಳಿಂದ ಒತ್ತತೊಡಗಿದನು. ॥10॥

ಮೂಲಮ್

(ಶ್ಲೋಕ-11)
ಪುನೀಹಿ ಸಹಲೋಕಂ ಮಾಂ ಲೋಕಪಾಲಾಂಶ್ಚ ಮದ್ಗತಾನ್ ।
ಪಾದೋದಕೇನ ಭವತಸ್ತೀರ್ಥಾನಾಂ ತೀರ್ಥಕಾರಿಣಾ ॥

ಅನುವಾದ

ಮಹರ್ಷಿಯೇ! ತಮ್ಮ ಚರಣಗಳ ಜಲವು ತೀರ್ಥಗಳನ್ನು ತೀರ್ಥವಾಗಿಸುವಂತಹುದು. ನೀವು ಅದರಿಂದ ಈ ವೈಕುಂಠಲೋಕವನ್ನು, ನನ್ನನ್ನು ಮತ್ತು ಲೋಕಪಾಲಕರನ್ನು ಪವಿತ್ರಗೊಳಿಸಿದಿರಿ. ॥11॥

(ಶ್ಲೋಕ-12)

ಮೂಲಮ್

ಅದ್ಯಾಹಂ ಭಗವನ್ಲಕ್ಷ್ಮ್ಯಾ ಆಸಮೇಕಾಂತಭಾಜನಮ್ ।
ವತ್ಸ್ಯತ್ಯುರಸಿ ಮೇ ಭೂತಿರ್ಭವತ್ಪಾದಹತಾಂಹಸಃ ॥

ಅನುವಾದ

ಪೂಜ್ಯರೇ! ತಮ್ಮ ಚರಣಕಮಲಗಳ ಸ್ಪರ್ಶದಿಂದ ನನ್ನ ಎಲ್ಲ ಪಾಪಗಳು ತೊಳೆದುಹೋದುವು. ಇಂದು ನಾನು ಲಕ್ಷ್ಮೀದೇವಿಯ ಏಕಮಾತ್ರ ಆಶ್ರಯನಾದೆ. ಈಗ ನಿಮ್ಮ ಚರಣಗಳಿಂದ ಅಂಕಿತಗೊಂಡ ನನ್ನ ವಕ್ಷಃಸ್ಥಳದಲ್ಲಿ ಲಕ್ಷ್ಮಿಯು ಸದಾ-ಸರ್ವದಾ ನಿವಾಸ ಮಾಡುವಳು. ॥12॥

(ಶ್ಲೋಕ-13)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಬ್ರುವಾಣೇ ವೈಕುಂಠೇ ಭೃಗುಸ್ತನ್ಮಂದ್ರಯಾ ಗಿರಾ ।
ನಿರ್ವೃತಸ್ತರ್ಪಿತಸ್ತೂಷ್ಣೀಂ ಭಕ್ತ್ಯುತ್ಕಂಠೋಶ್ರುಲೋಚನಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನು ಅತ್ಯಂತ ಗಂಭೀರ ವಾಣಿಯಿಂದ ಹೀಗೆ ಹೇಳಿದಾಗ ಭೃಗುಮುನಿ ಪರಮಸುಖಿಗಳೂ, ತೃಪ್ತರೂ ಆದರು. ಭಕ್ತಿಯ ಉದ್ರೇಕದಿಂದ ಅವರ ಕಂಠವು ಬಿಗಿದುಕೊಂಡಿತು. ಕಣ್ಣುಗಳಲ್ಲಿ ನೀರು ತುಂಬಿಬಂದು, ಮೌನವಾಗಿ ಬಿಟ್ಟರು. ॥13॥

(ಶ್ಲೋಕ-14)

ಮೂಲಮ್

ಪುನಶ್ಚ ಸತ್ರಮಾವ್ರಜ್ಯ ಮುನೀನಾಂ ಬ್ರಹ್ಮವಾದಿನಾಮ್ ।
ಸ್ವಾನುಭೂತಮಶೇಷೇಣ ರಾಜನ್ ಭೃಗುರವರ್ಣಯತ್ ॥

ಅನುವಾದ

ಪರೀಕ್ಷಿತನೇ! ಭೃಗಮುನಿಗಳು ಅಲ್ಲಿಂದ ಮರಳಿ ಯಜ್ಞಕಾರ್ಯ ನಡೆವಲ್ಲಿ ಬ್ರಹ್ಮವಾದಿಗಳಾದ ಮುನಿಗಳ ಸತ್ಸಂಗದಲ್ಲಿ ಬಂದು ಸೇರಿ ಬ್ರಹ್ಮಾ, ಶಿವ ಮತ್ತು ವಿಷ್ಣು ಭಗವಂತರಲ್ಲಿ ನಡೆದುದೆಲ್ಲವನ್ನು ಹೇಳಿದರು. ॥14॥

(ಶ್ಲೋಕ-15)

ಮೂಲಮ್

ತನ್ನಿಶಮ್ಯಾಥ ಮುನಯೋ ವಿಸ್ಮಿತಾ ಮುಕ್ತಸಂಶಯಾಃ ।
ಭೂಯಾಂಸಂ ಶ್ರದ್ದಧುರ್ವಿಷ್ಣುಂ ಯತಃ ಶಾಂತಿರ್ಯತೋಭಯಮ್ ॥

ಅನುವಾದ

ಭೃಗುಮುನಿಗಳ ಅನುಭವವನ್ನು ಕೇಳಿದ ಎಲ್ಲ ಋಷಿ-ಮುನಿಗಳಿಗೆ ಅತ್ಯಂತ ವಿಸ್ಮಯವಾಯಿತು. ಅವರಲ್ಲಿದ್ದ ಸಂದೇಹ ದೂರವಾಯಿತು. ಅಂದಿನಿಂದ ಅವರು ಶಾಂತಿ ಮತ್ತು ಅನುಭವಗಳ ಉದ್ಗಮಸ್ಥಾನವಾದ ಭಗವಾನ್ ವಿಷ್ಣುವನ್ನೇ ಸರ್ವೋತ್ತಮನೆಂದು ಭಾವಿಸಿತೊಡಗಿದರು. ॥15॥

(ಶ್ಲೋಕ-16)

ಮೂಲಮ್

ಧರ್ಮಃ ಸಾಕ್ಷಾದ್ಯತೋ ಜ್ಞಾನಂ ವೈರಾಗ್ಯಂ ಚ ತದನ್ವಿತಮ್ ।
ಐಶ್ವರ್ಯಂ ಚಾಷ್ಟಧಾ ಯಸ್ಮಾದ್ಯಶಶ್ಚಾತ್ಮಮಲಾಪಹಮ್ ॥

ಅನುವಾದ

ಭಗವಾನ್ ವಿಷ್ಣುವಿನಿಂದಲೇ ಸಾಕ್ಷಾತ್ ಧರ್ಮ, ಜ್ಞಾನ, ವೈರಾಗ್ಯ, ಎಂಟು ಬಗೆಯ ಐಶ್ವರ್ಯ ಮತ್ತು ಚಿತ್ತ ವನ್ನು ಶುದ್ಧಗೊಳಿಸುವ ಯಶಸ್ಸು ಪ್ರಾಪ್ತವಾಗುತ್ತದೆ. ॥16॥

(ಶ್ಲೋಕ-17)

ಮೂಲಮ್

ಮುನೀನಾಂ ನ್ಯಸ್ತದಂಡಾನಾಂ ಶಾಂತಾನಾಂ ಸಮಚೇತಸಾಮ್ ।
ಅಕಿಂಚನಾನಾಂ ಸಾಧೂನಾಂ ಯಮಾಹುಃ ಪರಮಾಂ ಗತಿಮ್ ॥

ಅನುವಾದ

ಶಾಂತರೂ, ಸಮಚಿತ್ತರೂ, ಅಕಿಂಚನರೂ, ಎಲ್ಲರಿಗೆ ಅಭಯವನ್ನು ಕೊಡುವವರೂ ಆದ ಸಾಧು-ಸಂತರಿಗೆ ಅವನೇ ಏಕಮಾತ್ರ ಪರಮಗತಿಯಾಗಿದ್ದಾನೆ ಎಂದು ಸಮಸ್ತ ಶಾಸ್ತ್ರಗಳು ಹೇಳುತ್ತವೆ. ॥17॥

(ಶ್ಲೋಕ-18)

ಮೂಲಮ್

ಸತ್ತ್ವಂ ಯಸ್ಯ ಪ್ರಿಯಾ ಮೂರ್ತಿರ್ಬ್ರಾಹ್ಮಣಾಸ್ತ್ವಿಷ್ಟದೇವತಾಃ ।
ಭಜಂತ್ಯನಾಶಿಷಃ ಶಾಂತಾ ಯಂ ವಾ ನಿಪುಣಬುದ್ಧಯಃ ॥

ಅನುವಾದ

ಶುದ್ಧಸತ್ತ್ವವೇ ಅವನಿಗೆ ಪ್ರಿಯವಾದ ಶರೀರ. ಬ್ರಾಹ್ಮಣರೇ ಅವನ ಇಷ್ಟದೇವರು. ನಿಷ್ಕಾಮರೂ, ಶಾಂತಸ್ವಭಾವದವರೂ, ವಿವೇಕ ಸಂಪನ್ನರೂ ಅಂತಹ ಶ್ರೀಹರಿಯನ್ನೇ ಭಜಿಸುತ್ತಾರೆ. ॥18॥

(ಶ್ಲೋಕ-19)

ಮೂಲಮ್

ತ್ರಿವಿಧಾಕೃತಯಸ್ತಸ್ಯ ರಾಕ್ಷಸಾ ಅಸುರಾಃ ಸುರಾಃ ।
ಗುಣಿನ್ಯಾ ಮಾಯಯಾ ಸೃಷ್ಟಾಃ ಸತ್ತ್ವಂ ತತ್ತೀರ್ಥಸಾಧನಮ್ ॥

ಅನುವಾದ

ಭಗವಂತನ ಗುಣಮಯಿಮಾಯೆಯು ರಾಕ್ಷಸ ಅಸುರ-ದೇವತೆಗಳೆಂಬ ಮೂರು ರೂಪಗಳನ್ನು ಅವನಲ್ಲಿ ಕಲ್ಪಿಸಿದೆ. ಇವುಗಳಲ್ಲಿ ಸತ್ವಗುಣವೇ ಅವನ ಪ್ರಾಪ್ತಿಯ ಸಾಧನೆಯಾಗಿದೆ. ಅವನು ಸಾಕ್ಷಾತ್ ಸಮಸ್ತ ಪುರುಷಾರ್ಥ ಸ್ವರೂಪನಾಗಿದ್ದಾನೆ. ॥19॥

(ಶ್ಲೋಕ-20)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಸಾರಸ್ವತಾ ವಿಪ್ರಾ ನೃಣಾಂ ಸಂಶಯನುತ್ತಯೇ ।
ಪುರುಷಸ್ಯ ಪದಾಂಭೋಜಸೇವಯಾ ತದ್ಗತಿಂ ಗತಾಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಸರಸ್ವತೀ ತಿರದಲ್ಲಿದ್ದ ಋಷಿಗಳು ತಮಗಾಗಿ ಅಲ್ಲ; ಮನುಷ್ಯರ ಸಂಶಯವನ್ನು ದೂರಗೊಳಿಸಲೆಂದೇ ಈ ಯುಕ್ತಿಯನ್ನು ರಚಿಸಿದ್ದರು. ಪುರುಷೋತ್ತಮ ಭಗವಂತನ ಚರಣ ಕಮಲಗಳ ಸೇವೆ ಮಾಡಿ ಅವರೆಲ್ಲರೂ ಅವನ ಪರಮ ಪದವನ್ನು ಪಡೆದುಕೊಂಡರು. ॥20॥

(ಶ್ಲೋಕ-21)

ಮೂಲಮ್ (ವಾಚನಮ್)

ಸೂತ ಉವಾಚ

ಮೂಲಮ್

ಇತ್ಯೇತನ್ಮುನಿತನಯಾಸ್ಯಪದ್ಮಗಂಧ-
ಪೀಯೂಷಂ ಭವಭಯಭಿತ್ಪರಸ್ಯ ಪುಂಸಃ ।
ಸುಶ್ಲೋಕಂ ಶ್ರವಣಪುಟೈಃ ಪಿಬತ್ಯಭೀಕ್ಷ್ಣಂ
ಪಾಂಥೋಧ್ವಭ್ರಮಣಪರಿಶ್ರಮಂ ಜಹಾತಿ ॥

ಅನುವಾದ

ಸೂತಪುರಾಣಿಕರು ಹೇಳುತ್ತಾರೆ — ಶೌನಕಾದಿ ಋಷಿಗಳೇ! ಹೀಗೆ ವ್ಯಾಸಮುನಿಗಳ ಪುತ್ರರಾದ ಶ್ರೀಶುಕಮಹಾ ಮುನಿಗಳ ಮುಖಾರವಿಂದದಿಂದ ಹೊರಟ ಸುಗಂಧ ಯುಕ್ತವಾದ, ಸಂಸಾರ ಭಯವನ್ನು ಹೋಗಲಾಡಿಸುವ, ಪರಮಪುರುಷನ ಶ್ಲಾಘ್ಯವಾದ ಹರಿಕಥಾಮೃತವನ್ನು ಕಿವಿಗಳಿಂದ ಅಡಿಗಡಿಗೆ ಪಾನಮಾಡುವವರು ಸಂಸಾರದಲ್ಲಿ ಅಲೆದಾಡುವ ಆಯಾಸದಿಂದ ಮುಕ್ತರಾಗುತ್ತಾರೆ. ॥21॥

(ಶ್ಲೋಕ-22)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏಕದಾ ದ್ವಾರವತ್ಯಾಂ ತು ವಿಪ್ರಪತ್ನ್ಯಾಃ ಕುಮಾರಕಃ ।
ಜಾತಮಾತ್ರೋ ಭುವಂ ಸ್ಪೃಷ್ಟ್ವಾ ಮಮಾರ ಕಿಲ ಭಾರತ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಒಮ್ಮೆ ದ್ವಾರಕಾಪಟ್ಟಣದಲ್ಲಿ ಬ್ರಾಹ್ಮಣಿಯೊಬ್ಬಳ ಗರ್ಭದಿಂದ ಒಂದು ಮಗು ಹುಟ್ಟಿತು. ಆದರೆ ಅದು ಭೂಸ್ಪರ್ಶವಾಗುತ್ತಲೇ ತೀರಿಹೋಯಿತು. ॥22॥

(ಶ್ಲೋಕ-23)

ಮೂಲಮ್

ವಿಪ್ರೋ ಗೃಹೀತ್ವಾ ಮೃತಕಂ ರಾಜದ್ವಾರ್ಯುಪಧಾಯ ಸಃ ।
ಇದಂ ಪ್ರೋವಾಚ ವಿಲಪನ್ನಾತುರೋ ದೀನಮಾನಸಃ ॥

ಅನುವಾದ

ಬ್ರಾಹ್ಮಣನು ತನ್ನ ಮೃತ ಬಾಲಕನನ್ನು ಎತ್ತಿಕೊಂಡು ದ್ವಾರಕೆಯ ಮಹಾದ್ವಾರಕ್ಕೆ ಹೋದನು, ಅಲ್ಲಿ ಅದನ್ನಿಟ್ಟು ಅತ್ಯಂತ ದೀನ ಮನಸ್ಸಿನಿಂದ ತವಕಗೊಂಡಿದ್ದ ಅವನು ಈ ರೀತಿ ಹೇಳ ತೊಡಗಿದನು. ॥23॥

(ಶ್ಲೋಕ-24)

ಮೂಲಮ್

ಬ್ರಹ್ಮದ್ವಿಷಃ ಶಠಧಿಯೋ ಲುಬ್ಧಸ್ಯ ವಿಷಯಾತ್ಮನಃ ।
ಕ್ಷತ್ರಬಂಧೋಃ ಕರ್ಮದೋಷಾತ್ಪಂಚತ್ವಂ ಮೇ ಗತೋರ್ಭಕಃ ॥

ಅನುವಾದ

ಬ್ರಾಹ್ಮಣದ್ರೋಹಿಯಾದ, ಧೂರ್ತನಾದ, ಕೃಪಣನಾದ, ವಿಷಯಲಂಟಪನಾದ ರಾಜನ ಕರ್ಮದೋಷದಿಂದಲೇ ನನ್ನ ಮಗುವು ಸತ್ತುಹೋಯಿತು. ಇದರಲ್ಲಿ ಸಂದೇಹವೇ ಇಲ್ಲ. ॥24॥

(ಶ್ಲೋಕ-25)

ಮೂಲಮ್

ಹಿಂಸಾವಿಹಾರಂ ನೃಪತಿಂ ದುಃಶೀಲಮಜಿತೇಂದ್ರಿಯಮ್ ।
ಪ್ರಜಾ ಭಜಂತ್ಯಃ ಸೀದಂತಿ ದರಿದ್ರಾ ನಿತ್ಯದುಃಖಿತಾಃ ॥

ಅನುವಾದ

ಹಿಂಸಾಪರಾಯಣನಾದ, ದುಃಶೀಲನಾದ, ವಿಷಯಲಂಟಪನಾದ ಮನುಷ್ಯನನ್ನು ರಾಜನೆಂದು ಭಾವಿಸಿ ಅವನ ಸೇವೆ ಮಾಡುವ ಪ್ರಜೆಗಳು ದರಿದ್ರರಾಗಿ ದುಃಖದ ಮೇಲೆ ದುಃಖವನ್ನು ಅನು ಭವಿಸುತ್ತಾ ವಿನಾಶಹೊಂದುವರು. ॥25॥

(ಶ್ಲೋಕ-26)

ಮೂಲಮ್

ಏವಂ ದ್ವಿತೀಯಂ ವಿಪ್ರರ್ಷಿಸ್ತೃತೀಯಂ ತ್ವೇವಮೇವ ಚ ।
ವಿಸೃಜ್ಯ ಸ ನೃಪದ್ವಾರಿ ತಾಂ ಗಾಥಾಂ ಸಮಗಾಯತ ॥

ಅನುವಾದ

ಪರೀಕ್ಷಿತನೇ! ಹೀಗೆಯೇ ಎರಡನೇ ಮೂರನೇ ಮಕ್ಕಳು ಹುಟ್ಟುತ್ತಲೇ ಸತ್ತು ಹೋದಾಗ ಆ ಬ್ರಾಹ್ಮಣನು ಮಗುವಿನ ಶವವನ್ನು ಅರಮನೆಯ ಮಹಾದ್ವಾರದಲ್ಲಿಟ್ಟು ಹಿಂದಿನಂತೆಯೇ ಮಾತುಗಳನ್ನಾಡಿದನು. ॥26॥

(ಶ್ಲೋಕ-27)

ಮೂಲಮ್

ತಾಮರ್ಜುನ ಉಪಶ್ರುತ್ಯ ಕರ್ಹಿಚಿತ್ ಕೇಶವಾಂತಿಕೇ ।
ಪರೇತೇ ನವಮೇ ಬಾಲೇ ಬ್ರಾಹ್ಮಣಂ ಸಮಭಾಷತ ॥

ಅನುವಾದ

ಒಂಭತ್ತನೇ ಮಗುವೂ ಸತ್ತು ಅವನು ರಾಜದ್ವಾರಕ್ಕೆ ಬಂದಾಗ ಆ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನ ಬಳಿಯಲ್ಲಿ ಅರ್ಜುನನೂ ಕುಳಿತಿದ್ದನು. ಅವನು ಬ್ರಾಹ್ಮಣನ ಮಾತನ್ನು ಕೇಳಿ ಅವನಲ್ಲಿ ಕೇಳಿದನು. ॥27॥

(ಶ್ಲೋಕ-28)

ಮೂಲಮ್

ಕಿಂಸ್ವಿದ್ ಬ್ರಹ್ಮಂಸ್ತ್ವನ್ನಿವಾಸೇ ಇಹ ನಾಸ್ತಿ ಧನುರ್ಧರಃ ।
ರಾಜನ್ಯಬಂಧುರೇತೇ ವೈ ಬ್ರಾಹ್ಮಣಾಃ ಸತ್ರ ಆಸತೇ ॥

ಅನುವಾದ

ಎಲೈ ಬ್ರಾಹ್ಮಣನೇ! ನೀನು ವಾಸಿಸುವ ದ್ವಾರಕೆಯಲ್ಲಿ ಯಾರೂ ಧನುರ್ಧಾರಿಯಾದ ಕ್ಷತ್ರಿಯನಿಲ್ಲವೇ? ಈ ಯದುವಂಶೀಯರು ಬ್ರಾಹ್ಮಣರಂತೆ ಪ್ರಜಾಪಾಲನೆಯನ್ನು ಬಿಟ್ಟು ಯಾವುದೋ ಯಜ್ಞದಲ್ಲಿ ಕುಳಿತಂತಿದೆ. ॥28॥

(ಶ್ಲೋಕ-29)

ಮೂಲಮ್

ಧನದಾರಾತ್ಮಜಾಪೃಕ್ತಾ ಯತ್ರ ಶೋಚಂತಿ ಬ್ರಾಹ್ಮಣಾಃ ।
ತೇ ವೈ ರಾಜನ್ಯವೇಷೇಣ ನಟಾ ಜೀವಂತ್ಯಸುಂಭರಾಃ ॥

ಅನುವಾದ

ಯಾರ ರಾಜ್ಯದಲ್ಲಿ ಬ್ರಾಹ್ಮಣರು ಪತ್ನೀ-ಪುತ್ರರು-ಧನ ಇವುಗಳನ್ನು ಕಳೆದುಕೊಂಡು ದುಃಖಿಸುವರೋ ಅವರು ನಿಜವಾದ ಕ್ಷತ್ರಿಯರಾಗಿರದೆ ರಾಜರ ವೇಷದಲ್ಲಿರುವ ನಟರೇ ಸರಿ. ಅವರ ಜೀವನವು ವ್ಯರ್ಥವಾದುದು. ॥29॥

(ಶ್ಲೋಕ-30)

ಮೂಲಮ್

ಅಹಂ ಪ್ರಜಾವಾಂ ಭಗವನ್ ರಕ್ಷಿಷ್ಯೇ ದೀನಯೋರಿಹ ।
ಅನಿಸ್ತೀರ್ಣಪ್ರತಿಜ್ಞೋಗ್ನಿಂ ಪ್ರವೇಕ್ಷ್ಯೇ ಹತಕಲ್ಮಷಃ ॥

ಅನುವಾದ

ಬ್ರಾಹ್ಮಣೋತ್ತಮನೇ! ದಂಪತಿಗಳಾದ ನೀವು ಪುತ್ರರ ಮೃತ್ಯುವಿನಿಂದಾಗಿ ಅತ್ಯಂತ ದೀನರಾಗಿರುವಿರಿ ಎಂದು ನಾನು ತಿಳಿಯುತ್ತೇನೆ. ನಾನು ನಿನ್ನ ಸಂತಾನವನ್ನು ರಕ್ಷಿಸಿ ಕೊಡುತ್ತೇನೆ. ನಾನು ನನ್ನ ಪ್ರತಿಜ್ಞೆಯನ್ನು ಈಡೇರಿಸದಿದ್ದರೆ ಅಗ್ನಿಪ್ರವೇಶ ಮಾಡಿ ಪ್ರತಿಜ್ಞಾಭಂಗದ ಪಾಪವನ್ನು ಕಳೆದುಕೊಳ್ಳುವೆನು. ॥30॥

(ಶ್ಲೋಕ-31)

ಮೂಲಮ್ (ವಾಚನಮ್)

ಬ್ರಾಹ್ಮಣ ಉವಾಚ

ಮೂಲಮ್

ಸಂಕರ್ಷಣೋ ವಾಸುದೇವಃ ಪ್ರದ್ಯುಮ್ನೋ ಧನ್ವಿನಾಂ ವರಃ ।
ಅನಿರುದ್ಧೋಪ್ರತಿರಥೋ ನ ತ್ರಾತುಂ ಶಕ್ನುವಂತಿ ಯತ್ ॥

(ಶ್ಲೋಕ-32)

ಮೂಲಮ್

ತತ್ ಕಥಂ ನು ಭವಾನ್ ಕರ್ಮ ದುಷ್ಕರಂ ಜಗದೀಶ್ವರೈಃ ।
ಚಿಕೀರ್ಷಸಿ ತ್ವಂ ಬಾಲಿಶ್ಯಾತ್ ತನ್ನ ಶ್ರದ್ದಧ್ಮಹೇ ವಯಮ್ ॥

ಅನುವಾದ

ಬ್ರಾಹ್ಮಣನೆಂದನು — ಅರ್ಜುನಾ! ಇಲ್ಲಿ ಬಲರಾಮ, ಭಗವಾನ್ ಶ್ರೀಕೃಷ್ಣ, ಧನುಷ್ಮಂತರಲ್ಲಿ ಶ್ರೇಷ್ಠನಾದ ಪ್ರದ್ಯುಮ್ನ, ಅಪ್ರತಿರಥನಾದ ಅನಿರುದ್ಧ-ಇಂತಹ ಮಹಾ-ಮಹಾವೀರರೂ ನನ್ನ ಬಾಲಕರನ್ನು ರಕ್ಷಿಸಲು ಅಸಮರ್ಥರಾಗಿರುವಾಗ ಈ ಜಗದೀಶ್ವರರಿಗೆ ಕಠಿಣವೆನಿಸಿದ ಕಾರ್ಯವನ್ನು ಏಕಾಕಿಯಾದ ನೀನು ಹೇಗೆ ತಾನೇ ಮಾಡ ಬಲ್ಲೇ! ನಿಜವಾಗಿಯೂ ಇದು ನಿನ್ನ ಮೂರ್ಖತೆಯೇ ಆಗಿದೆ. ನಾನಂತೂ ನಿನ್ನ ಮಾತಿನಲ್ಲಿ ಖಂಡಿತವಾಗಿ ವಿಶ್ವಾಸವಿಡುವುದಿಲ್ಲ. ॥31-32॥

(ಶ್ಲೋಕ-33)

ಮೂಲಮ್ (ವಾಚನಮ್)

ಅರ್ಜುನ ಉವಾಚ

ಮೂಲಮ್

ನಾಹಂ ಸಂಕರ್ಷಣೋ ಬ್ರಹ್ಮನ್ ನ ಕೃಷ್ಣಃ ಕಾರ್ಷ್ಣಿರೇವ ಚ ।
ಅಹಂ ವಾ ಅರ್ಜುನೋ ನಾಮ ಗಾಂಡೀವಂ ಯಸ್ಯ ವೈ ಧನುಃ ॥

ಅನುವಾದ

ಅರ್ಜುನನು ಹೇಳಿದನು — ಬ್ರಾಹ್ಮಣೋತ್ತಮನೇ! ನಾನು ಶ್ರೀಕೃಷ್ಣನಾಗಲೀ, ಬಲರಾಮನಾಗಲೀ, ಪ್ರದ್ಯುಮ್ನನಾಗಲೀ ಅಲ್ಲ. ನಾನು ಅರ್ಜುನನಾಗಿದ್ದೇನೆ. ನನ್ನ ಗಾಂಡೀವವೆಂಬ ಧನುಸ್ಸು ವಿಶ್ವವಿಖ್ಯಾತವಾಗಿದೆ. ॥33॥

(ಶ್ಲೋಕ-34)

ಮೂಲಮ್

ಮಾವಮಂಸ್ಥಾ ಮಮ ಬ್ರಹ್ಮನ್ ವೀರ್ಯಂ ತ್ರ್ಯಂಬಕತೋಷಣಮ್ ।
ಮೃತ್ಯುಂ ವಿಜಿತ್ಯ ಪ್ರಧನೇ ಆನೇಷ್ಯೇ ತೇ ಪ್ರಜಾಂ ಪ್ರಭೋ ॥

ಅನುವಾದ

ವಿಪ್ರೋತ್ತಮನೇ! ನೀನು ನನ್ನ ಬಲ ಪೌರುಷಗಳನ್ನು ತಿರಸ್ಕರಿಸಬೇಡ. ನಾನು ನನ್ನ ಪರಾಕ್ರಮದಿಂದ ಭಗವಾನ್ ಶಂಕರನನ್ನು ಸಂತೋಷಗೊಳಿಸಿದ್ದುದನ್ನು ನೀನು ತಿಳಿಯೆ. ಸ್ವಾಮಿ! ಹೆಚ್ಚೇನು ಹೇಳಲಿ. ನಾನು ಯುದ್ಧದಲ್ಲಿ ಸಾಕ್ಷಾತ್ ಮೃತ್ಯುವನ್ನು ಗೆದ್ದು ನಿನ್ನ ಸಂತಾನವನ್ನು ತಂದು ಕೊಡುವೆ. ॥34॥

(ಶ್ಲೋಕ-35)

ಮೂಲಮ್

ಏವಂ ವಿಶ್ರಂಭಿತೋ ವಿಪ್ರಃ ಾಲ್ಗುನೇನ ಪರಂತಪ ।
ಜಗಾಮ ಸ್ವಗೃಹಂ ಪ್ರೀತಃ ಪಾರ್ಥವೀರ್ಯಂ ನಿಶಾಮಯನ್ ॥

ಅನುವಾದ

ಪರೀಕ್ಷಿತನೇ! ಅರ್ಜುನನು ಬ್ರಾಹ್ಮಣನಿಗೆ ಈ ಪ್ರಕಾರವಾಗಿ ವಿಶ್ವಾಸವನ್ನುಂಟುಮಾಡಿದಾಗ ಅವನು ಅರ್ಜುನನ ಬಲ-ಪೌರುಷವನ್ನು ಜನರಲ್ಲಿ ಕೊಂಡಾಡುತ್ತಾ ಸಂತೋಷಗೊಂಡು ಮನೆಗೆ ಮರಳಿದನು. ॥35॥

(ಶ್ಲೋಕ-36)

ಮೂಲಮ್

ಪ್ರಸೂತಿಕಾಲ ಆಸನ್ನೇ ಭಾರ್ಯಯಾ ದ್ವಿಜಸತ್ತಮಃ ।
ಪಾಹಿ ಪಾಹಿ ಪ್ರಜಾಂ ಮೃತ್ಯೋರಿತ್ಯಾಹಾರ್ಜುನಮಾತುರಃ ॥

ಅನುವಾದ

ಮತ್ತೊಂದು ಹೆರಿಗೆಯು ಸಮೀಪಿಸಿದಾಗ ಬ್ರಾಹ್ಮಣನು ಕಾತುರನಾಗಿ ಅರ್ಜುನನ ಬಳಿಗೆ ಬಂದು ಹೇಳಿದನು - ‘ಈ ಬಾರಿಯಾದರೂ ನನ್ನ ಮಗುವನ್ನು ಮೃತ್ಯುವಿನಿಂದ ಬದುಕಿಸಿಕೊಡು.’ ॥36॥

(ಶ್ಲೋಕ-37)

ಮೂಲಮ್

ಸ ಉಪಸ್ಪೃಶ್ಯ ಶುಚ್ಯಂಭೋ ನಮಸ್ಕೃತ್ಯ ಮಹೇಶ್ವರಮ್ ।
ದಿವ್ಯಾನ್ಯಸಾಣಿ ಸಂಸ್ಮೃತ್ಯ ಸಜ್ಯಂ ಗಾಂಡೀವಮಾದದೇ ॥

ಅನುವಾದ

ಇದನ್ನು ಕೇಳಿದ ಅರ್ಜುನನು ಶುದ್ಧ ಜಲದಿಂದ ಆಚಮನಮಾಡಿ ಮಹೇಶ್ವರನಿಗೆ ನಮಸ್ಕರಿಸಿ, ದಿವ್ಯಾಸಗಳನ್ನು ಸ್ಮರಿಸಿಕೊಂಡು ಗಾಂಡೀವ ಧನುಸ್ಸಿಗೆ ಹೆದೆಯೇರಿಸಿ ಕೈಗೆತ್ತಿಕೊಂಡನು. ॥37॥

(ಶ್ಲೋಕ-38)

ಮೂಲಮ್

ನ್ಯರುಣತ್ಸೂತಿಕಾಗಾರಂ ಶರೈರ್ನಾನಾಸ ಯೋಜಿತೈಃ ।
ತಿರ್ಯಗೂರ್ಧ್ವಮಧಃ ಪಾರ್ಥಶ್ಚಕಾರ ಶರಪಂಜರಮ್ ॥

ಅನುವಾದ

ಅರ್ಜುನನು ಬಾಣಗಳನ್ನು ಅನೇಕ-ವಿಧದಿಂದ ಅಸ್ತ್ರ-ಮಂತ್ರಗಳಿಂದ ಅಭಿಮಂತ್ರಿಸಿ ಪ್ರಸವಗೃಹಕ್ಕೆ ಸುತ್ತಲೂ ಬಾಣಗಳ ಪಂಜರವನ್ನೇ ನಿರ್ಮಿಸಿದನು. ॥38॥

(ಶ್ಲೋಕ-39)

ಮೂಲಮ್

ತತಃ ಕುಮಾರಃ ಸಂಜಾತೋ ವಿಪ್ರಪತ್ನ್ಯಾರುದನ್ ಮುಹುಃ ।
ಸದ್ಯೋದರ್ಶನಮಾಪೇದೇ ಸಶರೀರೋ ವಿಹಾಯಸಾ ॥

ಅನುವಾದ

ಬಳಿಕ ಬ್ರಾಹ್ಮಣಿಯ ಗರ್ಭದಿಂದ ಒಂದು ಮಗು ಹುಟ್ಟಿತು. ಅದು ಪದೇ-ಪದೇ ಜೋರಾಗಿ ಅಳುತ್ತಿತ್ತು. ಆದರೆ ನೋಡು ನೋಡುತ್ತಾ ಅದು ಸಶರೀರವಾಗಿ ಆಕಾಶದಲ್ಲಿ ಅಂತರ್ಧಾನವಾಯಿತು. ॥39॥

(ಶ್ಲೋಕ-40)

ಮೂಲಮ್

ತದಾಹ ವಿಪ್ರೋ ವಿಜಯಂ ವಿನಿಂದನ್ ಕೃಷ್ಣಸಂನಿಧೌ ।
ವೌಢ್ಯಂ ಪಶ್ಯತ ಮೇ ಯೋಹಂ ಶ್ರದ್ದಧೇ ಕ್ಲೀಬಕತ್ಥನಮ್ ॥

ಅನುವಾದ

ಬ್ರಾಹ್ಮಣನು ಶ್ರೀಕೃಷ್ಣನ ಮುಂದೆಯೇ ಅರ್ಜುನನನ್ನು ನಿಂದಿಸ ತೊಡಗಿದನು. ಅವನೆಂದ - ಅಯ್ಯೋ! ನನ್ನ ಮೂರ್ಖತೆಯನ್ನು ನೋಡಿರಿ. ನಾನು ಈ ನಪುಂಸಕನ ಜಂಬದ ಮಾತುಗಳನ್ನು ನಂಬಿದೆನಲ್ಲ! ॥40॥

(ಶ್ಲೋಕ-41)

ಮೂಲಮ್

ನ ಪ್ರದ್ಯುಮ್ನೋ ನಾನಿರುದ್ಧೋ ನ ರಾಮೋ ನ ಚ ಕೇಶವಃ ।
ಯಸ್ಯ ಶೇಕುಃ ಪರಿತ್ರಾತುಂ ಕೋನ್ಯಸ್ತದವಿತೇಶ್ವರಃ ॥

ಅನುವಾದ

ಪ್ರದ್ಯುಮ್ನ, ಅನಿರುದ್ಧ, ಬಲರಾಮ, ಶ್ರೀಕೃಷ್ಣನಿಂದಲೂ ರಕ್ಷಿಸಲೂ ಸಾಧ್ಯವಾಗದಿದ್ದಾಗ ಯಾರು ತಾನೇ ಸಮರ್ಥನಾಗುವನು? ॥41॥

(ಶ್ಲೋಕ-42)

ಮೂಲಮ್

ಧಿಗರ್ಜುನಂ ಮೃಷಾವಾದಂ ಧಿಗಾತ್ಮಶ್ಲಾಘಿನೋ ಧನುಃ ।
ದೈವೋಪಸೃಷ್ಟಂ ಯೋ ವೌಢ್ಯಾದಾನಿನೀಷತಿ ದುರ್ಮತಿಃ ॥

ಅನುವಾದ

ಮಿಥ್ಯಾವಾದಿಯಾದ ಅರ್ಜುನನಿಗೆ ಧಿಕ್ಕಾರವಿರಲಿ! ಗಾಂಡೀವ ಧನಸ್ಸು ತನ್ನಲ್ಲಿದೆ ಎಂದು ಜಂಬಕೊಚ್ಚಿಕೊಳ್ಳುವ ಆತನಿಗೂ, ಆತನ ಧನುಸ್ಸಿಗೂ ಧಿಕ್ಕಾರವಿಲಿ! ಇವನ ದುರ್ಬುದ್ಧಿಯನ್ನಾದರೂ ನೋಡಿರಲ್ಲ. ಈ ದುರ್ಮತಿಯಾದವನು ಪ್ರಾರಬ್ಧವಶದಿಂದ ನಮ್ಮಿಂದ ಅಗಲಿ ಹೋದ ಆ ಬಾಲಕನನ್ನು ಮರಳಿ ತರಲು ಬಯಸುತ್ತಾನೆ. ॥42॥

(ಶ್ಲೋಕ-43)

ಮೂಲಮ್

ಏವಂ ಶಪತಿ ವಿಪ್ರರ್ಷೌ ವಿದ್ಯಾಮಾಸ್ಥಾಯ ಾಲ್ಗುನಃ ।
ಯಯೌ ಸಂಯಮನೀಮಾಶು ಯತ್ರಾಸ್ತೇ ಭಗವಾನ್ ಯಮಃ ॥

ಅನುವಾದ

ಆ ಬ್ರಾಹ್ಮಣನು ಹೀಗೆ ಅರ್ಜುನನನ್ನು ಹೀನಾಯವಾಗಿ ನಿಂದಿಸಿದಾಗ ಅವನು ಯೋಗಬಲದಿಂದ ಒಡನೆಯೇ ಯಮಧರ್ಮನ ನಿವಾಸವಾದ ಸಂಯಮಿನೀಪುರಿಗೆ ಹೋದನು. ॥43॥

(ಶ್ಲೋಕ-44)

ಮೂಲಮ್

ವಿಪ್ರಾಪತ್ಯಮಚಕ್ಷಾಣಸ್ತತ ಐಂದ್ರೀಮಗಾತ್ ಪುರೀಮ್ ।
ಆಗ್ನೇಯೀಂ ನೈರ್ಋತೀಂ ಸೌಮ್ಯಾಂ ವಾಯವ್ಯಾಂ ವಾರುಣೀಮಥ
ರಸಾತಲಂ ನಾಕಪೃಷ್ಠಂ ಧಿಷ್ಣ್ಯಾನ್ಯನ್ಯಾನ್ಯುದಾಯುಧಃ ॥

ಅನುವಾದ

ಅಲ್ಲಿ ಬ್ರಾಹ್ಮಣಕುಮಾರನನ್ನು ಕಾಣದಿದ್ದಾಗ ಶಸಧಾರಿಯಾದ ಅವನು ಕ್ರಮವಾಗಿ ಇಂದ್ರ, ಅಗ್ನಿ, ನಿರ್ಋತಿ, ಸೋಮ, ವಾಯು, ವರುಣ ಮೊದಲಾದವರ ಲೋಕಗಳಿಗೆ ಹೋದನು. ಅತಲವೇ ಮೊದಲಾದ ಕೆಳಗಿನ ಲೋಕಗಳಿಗೆ, ಸ್ವರ್ಗದಿಂದ ಮೇಲಕ್ಕಿರುವ ಮಹರ್ಲೋಕಗಳಿಗೂ ಹಾಗು ಇತರ ಸ್ಥಾನಗಳಿಗೂ ಹೋದನು. ॥44॥

(ಶ್ಲೋಕ-45)

ಮೂಲಮ್

ತತೋಲಬ್ಧದ್ವಿಜಸುತೋ ಹ್ಯನಿಸ್ತೀರ್ಣಪ್ರತಿಶ್ರುತಃ ।
ಅಗ್ನಿಂ ವಿವಿಕ್ಷುಃ ಕೃಷ್ಣೇನ ಪ್ರತ್ಯುಕ್ತಃ ಪ್ರತಿಷೇಧತಾ ॥

ಅನುವಾದ

ಆದರೆ ಅವನಿಗೆ ಎಲ್ಲಿಯೂ ಬ್ರಾಹ್ಮಣ ಬಾಲಕನು ಸಿಗಲಿಲ್ಲ. ಅವನ ಪ್ರತಿಜ್ಞೆ ಈಡೇರಲಿಲ್ಲ. ಆಗ ಅವನು ಅಗ್ನಿಪ್ರವೇಶ ಮಾಡಲು ನಿಶ್ಚಯಿಸಿದನು. ಆದರೆ ಭಗವಾನ್ ಶ್ರೀಕೃಷ್ಣನು ಹೀಗೆ ಮಾಡಲು ತಡೆದು ಹೇಳಿದನು - ॥45॥

(ಶ್ಲೋಕ-46)

ಮೂಲಮ್

ದರ್ಶಯೇ ದ್ವಿಜಸೂನೂಂಸ್ತೇ ಮಾವಜ್ಞಾತ್ಮಾನಮಾತ್ಮನಾ ।
ಯೇ ತೇ ನಃ ಕೀರ್ತಿಂ ವಿಮಲಾಂ ಮನುಷ್ಯಾಃ ಸ್ಥಾಪಯಿಷ್ಯಂತಿ ॥

ಅನುವಾದ

ಅಯ್ಯಾ ಅರ್ಜುನ! ನಿನ್ನನ್ನೇ ನೀನು ಹಳಿದುಕೊಳ್ಳಬೇಡ. ನಾನು ನಿನಗೆ ಬ್ರಾಹ್ಮಣನ ಎಲ್ಲ ಬಾಲಕರನ್ನು ತೋರಿಸಿಕೊಡುತ್ತೇನೆ. ಇಂದು ನಿನ್ನನ್ನು ನಿಂದಿಸುವವರೇ ನಾಳೆ ನಿನ್ನ ಕೀರ್ತಿಯನ್ನು ಲೋಕದಲ್ಲಿ ಕೊಂಡಾಡುವರು. ॥46॥

(ಶ್ಲೋಕ-47)

ಮೂಲಮ್

ಇತಿ ಸಂಭಾಷ್ಯ ಭಗವಾನರ್ಜುನೇನ ಸಹೇಶ್ವರಃ ।
ದಿವ್ಯಂ ಸ್ವರಥಮಾಸ್ಥಾಯ ಪ್ರತೀಚೀಂ ದಿಶಮಾವಿಶತ್ ॥

ಅನುವಾದ

ಸರ್ವೇಶ್ವರನಾದ ಭಗವಾನ್ ಶ್ರೀಕೃಷ್ಣನು ಅರ್ಜುನನಿಗೆ ಹೀಗೆ ಹೇಳಿ ಅವನೊಡನೆ ದಿವ್ಯವಾದ ರಥದಲ್ಲಿ ಕುಳಿತು ಪಶ್ಚಿಮ ದಿಕ್ಕಿನ ಕಡೆಗೆ ಪ್ರಯಾಣ ಹೊಟನು. ॥47॥

(ಶ್ಲೋಕ-48)

ಮೂಲಮ್

ಸಪ್ತ ದ್ವೀಪಾನ್ ಸಪ್ತ ಸಿಂಧೂನ್ ಸಪ್ತಸಪ್ತಗಿರೀನಥ ।
ಲೋಕಾಲೋಕಂ ತಥಾತೀತ್ಯ ವಿವೇಶ ಸುಮಹತ್ತಮಃ ॥

ಅನುವಾದ

ಅವರು ಏಳೇಳು ಪರ್ವತಗಳಿದ್ದ ಏಳು ದ್ವೀಪಗಳನ್ನು, ಏಳು ಸಮುದ್ರಗಳನ್ನೂ, ಲೋಕಾ ಲೋಕವೆಂಬ ಪರ್ವತವನ್ನು ದಾಟಿ ಗಾಢಾಂಧಕಾರವನ್ನು ಪ್ರವೇಶಿಸಿದರು. ॥48॥

(ಶ್ಲೋಕ-49)

ಮೂಲಮ್

ತತ್ರಾಶ್ವಾಃ ಶೈಬ್ಯಸುಗ್ರೀವಮೇಘಪುಷ್ಪಬಲಾಹಕಾಃ ।
ತಮಸಿ ಭ್ರಷ್ಟಗತಯೋ ಬಭೂವುರ್ಭರತರ್ಷಭ ॥

ಅನುವಾದ

ಪರೀಕ್ಷಿತನೇ! ಶ್ರೀಕೃಷ್ಣನ ರಥಕ್ಕೆ ಹೂಡಿದ್ದ ಶೈಬ್ಯ, ಸುಗ್ರೀವ, ಮೇಘಪುಷ್ಪ, ಬಲಾಹಕಗಳೆಂಬ ನಾಲ್ಕು ಕುದುರೆಗಳು ಆ ಗಾಂಢಾಂಧಕಾರದಲ್ಲಿ ದಾರಿತಪ್ಪಿ ಏನೂ ತೋಚದೆ ಯದ್ವಾ ತದ್ವಾ ಹೋಗತೊಡಗಿದವು. ॥49॥

ಮೂಲಮ್

(ಶ್ಲೋಕ-50)
ತಾನ್ದೃಷ್ಟ್ವಾ ಭಗವಾನ್ ಕೃಷ್ಣೋ ಮಹಾಯೋಗೇಶ್ವರೇಶ್ವರಃ ।
ಸಹಸ್ರಾದಿತ್ಯಸಂಕಾಶಂ ಸ್ವಚಕ್ರಂ ಪ್ರಾಹಿಣೋತ್ಪುರಃ ॥

ಅನುವಾದ

ಯೋಗೇಶ್ವರರಿಗೂ ಈಶ್ವರನಾದ ಭಗವಾನ್ ಶ್ರೀಕೃಷ್ಣನು ಕುದುರೆಗಳ ಈ ಸ್ಥಿತಿಯನ್ನು ಕಂಡು ಸಾವಿರಾರು ಸೂರ್ಯರಿಗೆ ಸಮಾನವಾದ ಪ್ರಕಾಶವುಳ್ಳ ತನ್ನ ಸುದರ್ಶನಕ್ಕೆ ಮುಂದೆ ಹೋಗುವಂತೆ ಆಜ್ಞಾಪಿಸಿದನು. ॥50॥

(ಶ್ಲೋಕ-51)

ಮೂಲಮ್

ತಮಃ ಸುಘೋರಂ ಗಹನಂ ಕೃತಂ ಮಹದ್
ವಿದಾರಯದ್ಭೂರಿತರೇಣ ರೋಚಿಷಾ ।
ಮನೋಜವಂ ನಿರ್ವಿವಿಶೇ ಸುದರ್ಶನಂ
ಗುಣಚ್ಯುತೋ ರಾಮಶರೋ ಯಥಾ ಚಮೂಃ ॥

ಅನುವಾದ

ಸುದರ್ಶನ ಚಕ್ರವು ತನ್ನ ಜ್ಯೋತಿರ್ಮಯ ತೇಜದಿಂದ ಸಾಕ್ಷಾತ್ ಭಗವಂತನಿಂದಲೇ ಉತ್ಪನ್ನವಾದ ಗಾಢಾಂಧಕಾರವನ್ನು ಸೀಳುತ್ತಾ ಭಗವಾನ್ ರಾಮನ ಬಾಣವು ರಾಕ್ಷಸ ಸೈನ್ಯವನ್ನು ಹೊಕ್ಕು ಧ್ವಂಸ ಮಾಡುವಂತೆ ಮನಸ್ಸಿನ ವೇಗಕ್ಕಿಂತಲೂ ತೀವ್ರವಾದ ವೇಗದಿಂದ ಮುಂದರಿಯಿತು. ॥51॥

(ಶ್ಲೋಕ-52)

ಮೂಲಮ್

ದ್ವಾರೇಣ ಚಕ್ರಾನುಪಥೇನ ತತ್ತಮಃ
ಪರಂ ಪರಂ ಜ್ಯೋತಿರನಂತಪಾರಮ್ ।
ಸಮಶ್ನುವಾನಂ ಪ್ರಸಮೀಕ್ಷ್ಯ ಫಾಲ್ಗುನಃ
ಪ್ರತಾಡಿತಾಕ್ಷೋಪಿದಧೇಕ್ಷಿಣೀ ಉಭೇ ॥

ಅನುವಾದ

ಈ ಪ್ರಕಾರವಾಗಿ ಸುದರ್ಶನ ಚಕ್ರವು ತೋರಿದ ದಾರಿಯಿಂದ ಮುಂದೆ ಹೋಗುತ್ತಾ ರಥವು ಅಂಧಕಾರದ ಕೊನೆಯ ತುದಿಗೆ ತಲುಪಿತು. ಆ ಅಂಧಕಾರದ ಆಚೆ ಸರ್ವ ಶ್ರೇಷ್ಠ ಪರಮಜೋತಿಯು ಎಲ್ಲೆಡೆ ಬೆಳಗುತ್ತಿತ್ತು. ಅದನ್ನು ನೋಡಿ ಅರ್ಜುನನ ಕಣ್ಣುಗಳು ಕೋರೈಸಿದಂತಾಗಿ ಅವನು ತನ್ನ ಕಣ್ಣುಗಳನ್ನು ಮುಚ್ಚಿಕೊಂಡನು. ॥52॥

(ಶ್ಲೋಕ-53)

ಮೂಲಮ್

ತತಃ ಪ್ರವಿಷ್ಟಃ ಸಲಿಲಂ ನಭಸ್ವತಾ
ಬಲೀಯಸೈಜದ್ಬೃಹದೂರ್ಮಿಭೂಷಣಮ್ ।
ತತ್ರಾದ್ಭುತಂ ವೈ ಭವನಂ ದ್ಯುಮತ್ತಮಂ
ಭ್ರಾಜನ್ಮಣಿಸ್ತಂಭಸಹಸ್ರಶೋಭಿತಮ್ ॥

ಅನುವಾದ

ಅನಂತರ ಭಗವಂತನ ರಥವು ದಿವ್ಯ ಜಲರಾಶಿಯಲ್ಲಿ ಪ್ರವೇಶಿಸಿತು. ಅತ್ಯಂತ ಬಲಿಷ್ಠವಾದ ಬಿರುಗಾಳಿಯು ಬೀಸುತ್ತಿದ್ದರಿಂದ ಆ ನೀರಿನಲ್ಲಿ ದೊಡ್ಡ-ದೊಡ್ಡ ಅಲೆಗಳು ಏಳುತ್ತಿದ್ದವು. ಅವು ಜಲರಾಶಿಗೆ ಭೂಷಣಪ್ರಾಯವಾಗಿ ಕಾಣುತ್ತಿದ್ದವು. ಅಲ್ಲಿ ಅತ್ಯಂತ ಸುಂದರವಾದ ಒಂದು ಭವನವಿತ್ತು. ಅದರಲ್ಲಿ ಮಣಿಗಳ ಸಾವಿರಾರು ಕಂಬಗಳು ಹೊಳೆಯುತ್ತಾ ಅದರ ಶೋಭೆಯನ್ನು ಹೆಚ್ಚಿಸಿದ್ದವು. ಹಾಗೂ ಅದರ ಸುತ್ತಲೂ ಉಜ್ವಲ ಜ್ಯೋತಿಯು ಹರಡಿತ್ತು. ॥53॥

(ಶ್ಲೋಕ-54)

ಮೂಲಮ್

ತಸ್ಮಿನ್ ಮಹಾಭೀಮಮನಂತಮದ್ಭುತಂ
ಸಹಸ್ರಮೂರ್ಧನ್ಯಣಾಮಣಿದ್ಯುಭಿಃ ।
ವಿಭ್ರಾಜಮಾನಂ ದ್ವಿಗುಣೋಲ್ಬಣೇಕ್ಷಣಂ
ಸಿತಾಚಲಾಭಂ ಶಿತಿಕಂಠಜಿಹ್ವಮ್ ॥

ಅನುವಾದ

ಅದೇ ಭವನದಲ್ಲಿ ಭಗವಾನ್ ಆದಿಶೇಷನು ವಿರಾಜಮಾನನಾಗಿದ್ದನು. ಅವನ ಶರೀರವು ಅತ್ಯಂತ ಭಯಾನಕವೂ, ಅದ್ಭುತವೂ ಆಗಿತ್ತು. ಅವನಿಗೆ ಸಾವಿರ ಹೆಡೆಗಳಿದ್ದು ಪ್ರತಿಯೊಂದರಲ್ಲಿಯೂ ಸುಂದರ ಮಣಿಗಳು ಹೊಳೆಯುತ್ತಿದ್ದವು. ಪ್ರತಿಯೊಂದು ಹೆಡೆಗೂ ಭಯಂಕರವಾದ ಎರಡೆರಡು ಕಣ್ಣುಗಳಿದ್ದವು. ಅವನ ಶರೀರವೆಲ್ಲವೂ ಕೈಲಾಸದಂತೆ ಬೆಳ್ಳಗಿದ್ದು, ಕಂಠ ಮತ್ತು ನಾಲಗೆಗಳು ನೀಲವಾಗಿದ್ದವು. ॥54॥

(ಶ್ಲೋಕ-55)

ಮೂಲಮ್

ದದರ್ಶ ತದ್ಭೋಗಸುಖಾಸನಂ ವಿಭುಂ
ಮಹಾನುಭಾವಂ ಪುರುಷೋತ್ತಮೋತ್ತಮಮ್ ।
ಸಾಂದ್ರಾಂಬುದಾಭಂ ಸುಪಿಶಂಗವಾಸಸಂ
ಪ್ರಸನ್ನವಕಂ ರುಚಿರಾಯತೇಕ್ಷಣಮ್ ॥

ಅನುವಾದ

ಆ ಆದಿಶೇಷನನ್ನೇ ಸುಖಮಯವಾದ ಹಾಸಿಗೆಯನ್ನಾಗಿಸಿಕೊಂಡು ಸರ್ವವ್ಯಾಪಕನೂ, ಅತ್ಯಂತ ಪ್ರಭಾವ ಶಾಲಿಯೂ ಆದ ಪುರುಷೋತ್ತಮನು ಪವಡಿಸಿರುವುದನ್ನು ಅರ್ಜುನನು ನೋಡಿದನು. ಆ ಪುರುಷೋತ್ತಮನು ನೀಲಮೇಘ ಶ್ಯಾಮನಾಗಿದ್ದನು. ಸುಂದರವಾದ ಪೀತಾಂಬರವನ್ನು ಉಟ್ಟಿದ್ದನು. ಪ್ರಸನ್ನವದವನಾಗಿದ್ದನು. ಸುಂದರವೂ ವಿಶಾಲವೂ ಆದ ಕಣ್ಣುಗಳನ್ನು ಹೊಂದಿದ್ದನು. ॥55॥

(ಶ್ಲೋಕ-56)

ಮೂಲಮ್

ಮಹಾಮಣಿವ್ರಾತಕಿರೀಟಕುಂಡಲ-
ಪ್ರಭಾಪರಿಕ್ಷಿಪ್ತಸಹಸ್ರಕುಂತಲಮ್ ।
ಪ್ರಲಂಬಚಾರ್ವಷ್ಟಭುಜಂ ಸಕೌಸ್ತುಭಂ
ಶ್ರೀವತ್ಸಲಕ್ಷ್ಮಂ ವನಮಾಲಯಾ ವೃತಮ್ ॥

ಅನುವಾದ

ಭಗವಂತನ ಸಾವಿರಾರು ಮುಂಗುರುಳುಗಳು ಮಹಾಮಣಿಗಳ ರಾಶಿಯಿಂದ ಸಿದ್ಧಗೊಳಿಸಿದ ಕಿರೀಟ-ಕುಂಡಲಗಳ ಕಾಂತಿಯಿಂದ ರಾರಾಜಿಸುತ್ತಿದ್ದವು. ನೀಳವಾದ ಅಷ್ಟಭುಜಗಳಿದ್ದವು. ಕೊರಳಲ್ಲಿ ಕೌಸ್ತುಭ ಮಣಿಯಿದ್ದು, ವಕ್ಷಃಸ್ಥಳದಲ್ಲಿ ಶ್ರೀವತ್ಸಲಾಂಛನವು ಶೋಭಿಸುತ್ತಿತ್ತು. ಅವನು ವನಮಾಲೆಯಿಂದ ಸಮಲಂಕೃತನಾಗಿದ್ದನು. ॥56॥

(ಶ್ಲೋಕ-57)

ಮೂಲಮ್

ಸುನಂದನಂದಪ್ರಮುಖೈಃ ಸ್ವಪಾರ್ಷದೈಃ
ಚಕ್ರಾದಿಭಿರ್ಮೂರ್ತಿಧರೈರ್ನಿಜಾಯುಧೈಃ ।
ಪುಷ್ಟ್ಯಾ ಶ್ರಿಯಾ ಕೀರ್ತ್ಯಜಯಾಖಿಲರ್ದ್ಧಿಭಿಃ
ನಿಷೇವ್ಯಮಾಣಂ ಪರಮೇಷ್ಠಿನಾಂ ಪತಿಮ್ ॥

ಅನುವಾದ

ನಂದ, ಸುನಂದ ಮುಂತಾದ ಪಾರ್ಷದರೂ, ಚಕ್ರ-ಸುದರ್ಶನ ಮುಂತಾದ ಆಯುಧಗಳು ಮೂರ್ತಿಮಂತರಾಗಿ, ಪುಷ್ಟಿ-ಶ್ರೀ ಕೀರ್ತಿ-ಅಜಾ ಎಂಬ ನಾಲ್ಕು ಶಕ್ತಿಗಳೂ, ಸಮಸ್ತ ಋದ್ಧಿಗಳೂ, ಬ್ರಹ್ಮಾದಿ ಲೋಕಪಾಲರು ಜಗದೀಶ್ವರನಾದ ಭಗವಂತನನ್ನು ಸೇವಿಸುತ್ತಿರುವುದನ್ನು ಅರ್ಜುನನು ನೋಡಿದನು. ॥57॥

(ಶ್ಲೋಕ-58)

ಮೂಲಮ್

ವವಂದ ಆತ್ಮಾನಮನಂತಮಚ್ಯುತೋ
ಜಿಷ್ಣುಶ್ಚ ತದ್ದರ್ಶನಜಾತಸಾಧ್ವಸಃ ।
ತಾವಾಹ ಭೂಮಾ ಪರಮೇಷ್ಠಿನಾಂ ಪ್ರಭು-
ರ್ಬದ್ಧಾಂಜಲೀ ಸಸ್ಮಿತಮೂರ್ಜಯಾ ಗಿರಾ ॥

ಅನುವಾದ

ಪರೀಕ್ಷಿತನೇ! ಭಗವಾನ್ಶ್ರೀಕೃಷ್ಣನು ತನ್ನದೇ ಸ್ವರೂಪವಾದ ಅನಂತ ಭಗವಂತನಿಗೆ ವಂದಿಸಿದನು. ಅರ್ಜುನನು ಅವನ ದರ್ಶನದಿಂದ ಸ್ವಲ್ಪ ಭಯಗೊಂಡಿದ್ದನು. ಶ್ರೀಕೃಷ್ಣನು ವಂದಿಸಿದ ಬಳಿಕ ಅವನೂ ಭಗವಂತನಿಗೆ ನಮಸ್ಕರಿಸಿದನು. ಕೈಗಳನ್ನು ಜೋಡಿಸಿ ಕೊಂಡುನಿಂತಿದ್ದ ಶ್ರೀಕೃಷ್ಣಾರ್ಜುನರನ್ನು ಕುರಿತು ಪರಬ್ರಹ್ಮ ಸ್ವರೂಪನೂ, ಲೋಕಪಾಲರೆಲ್ಲರ ಪ್ರಭುವೂ ಆದ ಪುರುಷೋತ್ತಮನು ಮೇಘಗಂಭೀರ ವಾಣಿಯಿಂದ ಈ ಮಾತನ್ನು ಹೇಳಿದನು - ॥58॥

(ಶ್ಲೋಕ-59)

ಮೂಲಮ್

ದ್ವಿಜಾತ್ಮಜಾ ಮೇ ಯುವಯೋರ್ದಿದೃಕ್ಷುಣಾ
ಮಯೋಪನೀತಾ ಭುವಿ ಧರ್ಮಗುಪ್ತಯೇ ।
ಕಲಾವತೀರ್ಣಾವವನೇರ್ಭರಾಸುರಾನ್
ಹತ್ವೇಹ ಭೂಯಸ್ತ್ವರಯೇತಮಂತಿ ಮೇ ॥

ಅನುವಾದ

ಕೃಷ್ಣಾರ್ಜುನರೇ! ನಿಮ್ಮಿಬ್ಬರನ್ನು ನೋಡುವ ಸಲುವಾಗಿಯೇ ಬ್ರಾಹ್ಮಣ ಬಾಲಕರನ್ನು ನನ್ನ ಬಳಿಗೆ ಕರೆತಂದಿರುವೆನು. ನೀವಿಬ್ಬರೂ ಧರ್ಮದ ರಕ್ಷಣೆಗಾಗಿಯೇ ನನ್ನ ಕಲಾಂಶಗಳಿಂದ ಭೂಮಿಯಲ್ಲಿ ಅವತರಿಸಿರುವಿರಿ. ಪೃಥಿವಿಗೆ ಭಾರರೂಪವಾದ ದೈತ್ಯರೆಲ್ಲರನ್ನು ಸಂಹರಿಸಿ ನೀವಿಬ್ಬರೂ ಶೀಘ್ರಾತಿಶೀಘ್ರವಾಗಿ ನನ್ನ ಬಳಿಗೆ ಮರಳಿ ಬನ್ನಿರಿ. ॥59॥

(ಶ್ಲೋಕ-60)

ಮೂಲಮ್

ಪೂರ್ಣಕಾಮಾವಪಿ ಯುವಾಂ ನರನಾರಾಯಣಾವೃಷೀ ।
ಧರ್ಮಮಾಚರತಾಂ ಸ್ಥಿತ್ಯೈ ಋಷಭೌ ಲೋಕಸಂಗ್ರಹಮ್ ॥

ಅನುವಾದ

ನೀವಿಬ್ಬರೂ ಋಷಿಶ್ರೇಷ್ಠರಾದ ನರ-ನಾರಾಯಣರೇ ಆಗಿರುವಿರಿ. ನೀವು ಪೂರ್ಣ ಕಾಮರೂ, ಸರ್ವಶ್ರೇಷ್ಠರೂ, ಆಗಿದ್ದರೂ ಜಗತ್ತಿನ ಸ್ಥಿತಿ ಮತ್ತು ಲೋಕಸಂಗ್ರಹಕ್ಕಾಗಿ ಧರ್ಮವನ್ನು ಆಚರಿಸುತ್ತಾ ಇರಿ. ॥60॥

(ಶ್ಲೋಕ-61)

ಮೂಲಮ್

ಇತ್ಯಾದಿಷ್ಟೌ ಭಗವತಾ ತೌ ಕೃಷ್ಣೌ ಪರಮೇಷ್ಠಿನಾ ।
ಓಮಿತ್ಯಾನಮ್ಯ ಭೂಮಾನಮಾದಾಯ ದ್ವಿಜದಾರಕಾನ್ ॥

(ಶ್ಲೋಕ-62)

ಮೂಲಮ್

ನ್ಯವರ್ತತಾಂ ಸ್ವಕಂ ಧಾಮ ಸಂಪ್ರಹೃಷ್ಟೌ ಯಥಾಗತಮ್ ।
ವಿಪ್ರಾಯ ದದತುಃ ಪುತ್ರಾನ್ ಯಥಾರೂಪಂ ಯಥಾವಯಃ ॥

ಅನುವಾದ

ಪರಬ್ರಹ್ಮ ಸ್ವರೂಪನಾದ ಪುರುಷೋತ್ತಮನು ಕೃಷ್ಣಾರ್ಜುನರಿಗೆ ಹೀಗೆ ಆದೇಶವನ್ನು ನೀಡಲು, ಅವರು ಅದನ್ನು ಸ್ವೀಕರಿಸಿ ಅವನಿಗೆ ನಮಸ್ಕಾರಮಾಡಿ ಅತ್ಯಂತ ಆನಂದದಿಂದ ಬ್ರಾಹ್ಮಣಬಾಲಕರನ್ನು ಕರೆದುಕೊಂಡು ಬಂದದಾರಿಯಿಂದಲೇ ದ್ವಾರಕೆಗೆ ಮರಳಿದರು. ಬ್ರಾಹ್ಮಣನ ಬಾಲಕರು ತಮ್ಮ-ತಮ್ಮ ವಯಸ್ಸಿಗೆ ಅನುಗುಣವಾದ ರೂಪವುಳ್ಳವರಾಗಿಯೂ, ಆಕೃತಿಯುಳ್ಳವರಾಗಿಯೂ ಇದ್ದರು. ಭಗವಾನ್ ಶ್ರೀಕೃಷ್ಣ ಮತ್ತು ಅರ್ಜುನರು ಅವರನ್ನು ಬ್ರಾಹ್ಮಣನಿಗೆ ಒಪ್ಪಿಸಿದರು. ॥61-62॥

(ಶ್ಲೋಕ-63)

ಮೂಲಮ್

ನಿಶಾಮ್ಯ ವೈಷ್ಣವಂ ಧಾಮ ಪಾರ್ಥಃ ಪರಮವಿಸ್ಮಿತಃ ।
ಯತ್ಕಿಂಚಿತ್ಪೌರುಷಂ ಪುಂಸಾಂ ಮೇನೇ ಕೃಷ್ಣಾನುಕಂಪಿತಮ್ ॥

ಅನುವಾದ

ಭಗವಾನ್ ವಿಷ್ಣುವಿನ ಆ ಪರಮ ಧಾಮವನ್ನು ನೋಡಿದ ಅರ್ಜುನನ ಆಶ್ಚರ್ಯಕ್ಕೆ ಪಾರವೇ ಇರಲಿಲ್ಲ. ಜೀವರಲ್ಲಿರುವ ಬಲ-ಪೌರುಷಗಳೆಲ್ಲವೂ ಭಗವಾನ್ ಶ್ರೀಕೃಷ್ಣನ ಕೃಪೆಯ ಫಲವೇ ಆಗಿದೆ ಎಂದು ಅವನು ಅರಿತುಕೊಂಡನು. ॥63॥

(ಶ್ಲೋಕ-64)

ಮೂಲಮ್

ಇತೀದೃಶಾನ್ಯನೇಕಾನಿ ವೀರ್ಯಾಣೀಹ ಪ್ರದರ್ಶಯನ್ ।
ಬುಭುಜೇ ವಿಷಯಾನ್ ಗ್ರಾಮ್ಯಾನೀಜೇ ಚಾತ್ಯೂರ್ಜಿತೈರ್ಮಖೈಃ ॥

ಅನುವಾದ

ಪರೀಕ್ಷಿತನೇ! ಭಗವಂತನು ಇಂತಹ ಅನೇಕ ಐಶ್ವರ್ಯಯುಕ್ತವೂ, ವೀರ್ಯ-ಶೌರ್ಯಗಳಿಂದಲೂ ಪರಿಪೂರ್ಣವಾದ ಲೀಲೆಗಳನ್ನು ಮಾಡಿದನು. ಲೌಕಿಕದೃಷ್ಟಿಯಲ್ಲಿ ಸಾಮಾನ್ಯ ಜನರಂತೆ ಸಾಂಸಾರಿಕ ವಿಷಯಗಳನ್ನು ಅನುಭವಿಸಿದನು ಮತ್ತು ದೊಡ್ಡ-ದೊಡ್ಡ ಮಹಾರಾಜರಂತೆ ಶ್ರೇಷ್ಠವಾದ ಯಜ್ಞಗಳನ್ನು ಮಾಡಿದನು. ॥64॥

(ಶ್ಲೋಕ-65)

ಮೂಲಮ್

ಪ್ರವವರ್ಷಾಖಿಲಾನ್ ಕಾಮಾನ್ಪ್ರಜಾಸು ಬ್ರಾಹ್ಮಣಾದಿಷು ।
ಯಥಾಕಾಲಂ ಯಥೈವೇಂದ್ರೋ ಭಗವಾನ್ಶ್ರೈಷ್ಠ್ಯಮಾಸ್ಥಿತಃ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಆದರ್ಶ ಮಹಾಪುರುಷರಂತೆಯೇ ಆಚರಣೆ ಮಾಡುತ್ತಾ ಬ್ರಾಹ್ಮಣರೇ ಮೊದಲಾದ ಎಲ್ಲ ಪ್ರಜಾಜನರ ಸಮಸ್ತ ಮನೋರಥಗಳನ್ನು ಇಂದ್ರನು ಪ್ರಜೆಗಳಿಗೆ ಸಮಯಕ್ಕೆ ಸರಿಯಾಗಿ ಮಳೆಸುರಿಸುವಂತೆ ಪೂರ್ಣಗೊಳಿಸಿದನು. ॥65॥

(ಶ್ಲೋಕ-66)

ಮೂಲಮ್

ಹತ್ವಾ ನೃಪಾನಧರ್ಮಿಷ್ಠಾನ್ ಘಾತಯಿತ್ವಾರ್ಜುನಾದಿಭಿಃ ।
ಅಂಜಸಾ ವರ್ತಯಾಮಾಸ ಧರ್ಮಂ ಧರ್ಮಸುತಾದಿಭಿಃ ॥

ಅನುವಾದ

ಅವನು ಬಹಳಷ್ಟು ಅಧರ್ಮಿಗಳಾದ ರಾಜನನ್ನು ತಾನೇ ಸಂಹರಿಸಿದನು ಮತ್ತು ಅನೇಕರನ್ನು ಅರ್ಜುನಾದಿಗಳಿಂದ ಕೊಲ್ಲಿಸಿದನು. ಈ ಪ್ರಕಾರವಾಗಿ ಧರ್ಮರಾಜ ಯುಧಿಷ್ಠಿರಾದಿ ಧಾರ್ಮಿಕ ರಾಜರುಗಳಿಂದ ಅವನು ಅನಾಯಾಸವಾಗಿಯೇ ಸಮಸ್ತ ಪೃಥಿವಿಯಲ್ಲಿ ಧರ್ಮಮರ್ಯಾದೆಯನ್ನು ಸ್ಥಾಪಿಸಿದನು. ॥66॥

ಅನುವಾದ (ಸಮಾಪ್ತಿಃ)

ಎಂಭತ್ತೊಂಭತ್ತನೆಯ ಅಧ್ಯಾಯವು ಮುಗಿಯಿತು. ॥89॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ದ್ವಿಜಕುಮಾರಾನಯನಂ ನಾಮ ಏಕೋನನವತಿತಮೋಽಧ್ಯಾಯಃ ॥89॥