೮೮

[ಏಂಭತ್ತೇಂಟನೇಯ ಅಧ್ಯಾಯ]

ಭಾಗಸೂಚನಾ

ವೃಕಾಸುರನ ಕಥೆ

ಮೂಲಮ್ (ವಾಚನಮ್)

ರಾಜೋವಾಚ

(ಶ್ಲೋಕ-1)

ಮೂಲಮ್

ದೇವಾಸುರಮನುಷ್ಯೇಷು ಯೇ ಭಜಂತ್ಯಶಿವಂ ಶಿವಮ್ ।
ಪ್ರಾಯಸ್ತೇ ಧನಿನೋ ಭೋಜಾ ನ ತು ಲಕ್ಷ್ಮ್ಯಾಃ ಪತಿಂ ಹರಿಮ್ ॥

ಅನುವಾದ

ಪರೀಕ್ಷಿದ್ರಾಜನು ಕೇಳುತ್ತಾನೆ — ಪೂಜ್ಯರೇ! ಭಗವಾನ್ ಶಂಕರನು ಸಕಲಭೋಗಪರಿತ್ಯಾಗಿಯು. ಆದರೆ ಅವನನ್ನು ಉಪಾಸಿಸುವ ದೇವಾಸುರ-ಮನುಷ್ಯರು ಪ್ರಾಯಶಃ ಶ್ರೀಮಂತರೂ, ಭೋಗಸಂಪನ್ನರೂ ಆಗುತ್ತಾರೆ. ಇದಕ್ಕೆ ಪ್ರತಿಯಾಗಿ ಭಗವಾನ್ ವಿಷ್ಣುವು ಲಕ್ಷ್ಮೀಪತಿಯು. ಅವನನ್ನು ಉಪಾಸಿಸುವವರು ಪ್ರಾಯಶಃ ಧನಹೀನರೂ, ವಿರಾಗಿಗಳೂ ಆಗಿರುತ್ತಾರೆ. ॥1॥

(ಶ್ಲೋಕ-2)

ಮೂಲಮ್

ಏತದ್ವೇದಿತುಮಿಚ್ಛಾಮಃ ಸಂದೇಹೋತ್ರ ಮಹಾನ್ ಹಿ ನಃ ।
ವಿರುದ್ಧಶೀಲಯೋಃ ಪ್ರಭ್ವೋರ್ವಿರುದ್ಧಾ ಭಜತಾಂ ಗತಿಃ ॥

ಅನುವಾದ

ಇಬ್ಬರೂ ಪ್ರಭುಗಳು ತ್ಯಾಗ ಮತ್ತು ಭೋಗಗಳ ದೃಷ್ಟಿಯಿಂದ ವಿರುದ್ಧ ಸ್ವಭಾವದವರಾಗಿದ್ದಾರೆ. ಆದರೆ ಅವರ ಉಪಾಸಕರಿಗೆ ಅವರ ಸ್ವರೂಪದ ವಿರುದ್ಧ ಫಲವೇ ಸಿಗುತ್ತದೆ. ತ್ಯಾಗಿಯ ಉಪಾಸನೆಯಿಂದ ಭೋಗ ಮತ್ತು ಲಕ್ಷ್ಮೀಪತಿಯ ಉಪಾಸನೆಯಿಂದ ತ್ಯಾಗ ಹೇಗೆ ದೊರೆಯುತ್ತದೆ? ಈ ವಿಷಯದಲ್ಲಿ ನನಗೆ ಸಂದೇಹ ಉಂಟಾಗಿದೆ ದಯವಿಟ್ಟು ಇದನ್ನು ತಿಳಿಸಿರಿ. ॥2॥

(ಶ್ಲೋಕ-3)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶಿವಃ ಶಕ್ತಿಯುತಃ ಶಶ್ವತಿಲಿಂಗೋ ಗುಣಸಂವೃತಃ ।
ವೈಕಾರಿಕಸ್ತೈಜಸಶ್ಚ ತಾಮಸಶ್ಚೇತ್ಯಹಂ ತ್ರಿಧಾ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷತನೇ! ಶಿವನು ಸದಾ ತನ್ನ ಶಕ್ತಿಯಿಂದ ಯುಕ್ತನಾಗಿರುವನು. ಅವನು ಸತ್ತ್ವಾದಿಗುಣಗಳಿಂದ ಕೂಡಿ ಅಹಂಕಾರಕ್ಕೆ ಅಧಿಷ್ಠಾನನೂ ಆಗಿರುವನು. ವೈಕಾರಿಕ, ತೈಜಸ ಮತ್ತು ತಾಮಸ - ಇವು ಅಹಂಕಾರದ ಮೂರು ಭೇದಗಳು. ॥3॥

(ಶ್ಲೋಕ-4)

ಮೂಲಮ್

ತತೋ ವಿಕಾರಾ ಅಭವನ್ ಷೋಡಶಾಮೀಷು ಕಂಚನ ।
ಉಪಧಾವನ್ ವಿಭೂತೀನಾಂ ಸರ್ವಾಸಾಮಶ್ನುತೇ ಗತಿಮ್ ॥

ಅನುವಾದ

ಈ ತ್ರಿವಿಧ ಅಹಂಕಾರದಿಂದ ಹತ್ತು ಇಂದ್ರಿಯಗಳು, ಐದು ಮಹಾಭೂತಗಳು, ಒಂದು ಮನಸ್ಸು - ಹೀಗೆ ಹದಿನಾರು ವಿಕಾರಗಳಾದುವು. ಆದ್ದರಿಂದ ಇವೆಲ್ಲದರ ಅಧಿಷ್ಠಾತೃ ದೇವತೆಗಳಲ್ಲಿ ಯಾರನ್ನೇ ಉಪಾಸನೆ ಮಾಡಿದರೂ ಸಮಸ್ತ ಐಶ್ವರ್ಯಗಳು ದೊರೆಯುತ್ತವೆ. ॥4॥

ಮೂಲಮ್

(ಶ್ಲೋಕ-5)
ಹರಿರ್ಹಿ ನಿರ್ಗುಣಃ ಸಾಕ್ಷಾತ್ ಪುರುಷಃ ಪ್ರಕೃತೇಃ ಪರಃ ।
ಸ ಸರ್ವದೃಗುಪದ್ರಷ್ಟಾ ತಂ ಭಜನ್ ನಿರ್ಗುಣೋ ಭವೇತ್ ॥

ಅನುವಾದ

ಪರೀಕ್ಷಿತನೇ! ಆದರೆ ಶ್ರೀಹರಿಯಾದರೋ ಪ್ರಕೃತಿಗಿಂತ ಆಚೆಗಿರುವ ಪುರುಷೋತ್ತಮನು. ಪ್ರಾಕೃತಗುಣರಹಿತನು. ಅವನು ಸರ್ವಜ್ಞನೂ, ಎಲ್ಲರ ಅಂತಃಕರಣಗಳ ಸಾಕ್ಷಿಯೂ ಆಗಿದ್ದಾನೆ. ಅವನನ್ನು ಭಜಿಸುವವನೂ ಗುಣಾತೀತನಾಗಿ ಹೋಗುತ್ತಾನೆ. ॥5॥

(ಶ್ಲೋಕ-6)

ಮೂಲಮ್

ನಿವೃತ್ತೇಷ್ವಶ್ವಮೇಧೇಷು ರಾಜಾ ಯುಷ್ಮತ್ಪಿತಾಮಹಃ ।
ಶೃಣ್ವನ್ಭಗವತೋ ಧರ್ಮಾನಪೃಚ್ಛದಿದಮಚ್ಯುತಮ್ ॥

ಅನುವಾದ

ಪರೀಕ್ಷಿತ! ಹಿಂದೆ ನಿನ್ನ ತಾತನಾದ ಯುಧಿಷ್ಠಿರನು ಅಶ್ವಮೇಧ ಯಜ್ಞವನ್ನು ಮಾಡಿದಾಗ ಭಗವಂತನಿಂದ ಭಾಗವತಧರ್ಮದ ವರ್ಣನೆಯನ್ನು ಕೇಳುತ್ತಿದ್ದಾಗಲೂ ಅವನು ಇದೇ ಪ್ರಶ್ನೆಯನ್ನು ಕೇಳಿದ್ದನು. ॥6॥

(ಶ್ಲೋಕ-7)

ಮೂಲಮ್

ಸ ಆಹ ಭಗವಾನ್ಸ್ತಸ್ಮೈ ಪ್ರೀತಃ ಶುಶ್ರೂಷವೇ ಪ್ರಭುಃ ।
ನೃಣಾಂ ನಿಃಶ್ರೇಯಸಾರ್ಥಾಯ ಯೋವತೀರ್ಣೋ ಯದೋಃ ಕುಲೇ ॥

ಅನುವಾದ

ಮಹಾರಾಜ! ಮನುಷ್ಯರ ಕಲ್ಯಾಣಕ್ಕಾಗಿಯೇ ಯದುವಂಶದಲ್ಲಿ ಅವರಿಸಿದ ಭಗವಾನ್ ಶ್ರೀಕೃಷ್ಣನು ಸರ್ವಶಕ್ತನಾದ ಪರಮೇಶ್ವರನೇ ಆಗಿದ್ದಾನೆ. ಧರ್ಮರಾಯನ ಪ್ರಶ್ನೆಯನ್ನು ಆಲಿಸಿ, ಅದನ್ನು ಕೇಳಬೇಕೆಂದು ತವಕಿಸುತ್ತಿರುವ ಅವನಲ್ಲಿ ಪರಮಪ್ರೀತಿಯಿಂದ ಹೀಗೆ ಉತ್ತರಿಸತೊಡಗಿದನು. ॥7॥

(ಶ್ಲೋಕ-8)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಯಸ್ಯಾಹಮನುಗೃಹ್ಣಾಮಿ ಹರಿಷ್ಯೇ ತದ್ಧನಂ ಶನೈಃ ।
ತತೋಧನಂ ತ್ಯಜಂತ್ಯಸ್ಯ ಸ್ವಜನಾ ದುಃಖದುಖಿತಮ್ ॥

ಅನುವಾದ

ಭಗವಾನ್ ಶ್ರೀಕೃಷ್ಣನು ಹೇಳಿದನು — ಯುಧಿಷ್ಠಿರನೇ! ನಾನು ಯಾರಿಗೆ ಅನುಗ್ರಹತೋರುವೆನೋ ಅವನ ಸಂಪತ್ತೆಲ್ಲವನ್ನೂ ನಿಧಾನವಾಗಿ ಕಸಿದುಕೊಳ್ಳುವೆನು. ಅವನು ನಿರ್ಧನನಾದಾಗ ಅವನ ನೆಂಟರಿಷ್ಟರೆಲ್ಲರೂ ಆತನು ದುಃಖಿತನಾಗಿದ್ದರೂ ಎಣಿಸದೆ ಬಿಟ್ಟುಬಿಡುತ್ತಾರೆ. ॥8॥

(ಶ್ಲೋಕ-9)

ಮೂಲಮ್

ಸ ಯದಾ ವಿತಥೋದ್ಯೋಗೋ ನಿರ್ವಿಣ್ಣಃ ಸ್ಯಾದ್ಧನೇಹಯಾ ।
ಮತ್ಪರೈಃ ಕೃತಮೈತ್ರಸ್ಯ ಕರಿಷ್ಯೇ ಮದನುಗ್ರಹಮ್ ॥

ಅನುವಾದ

ಮತ್ತೆ ಅವನು ಧನಸಂಗ್ರಹಣೆಗೆ ಉದ್ಯೋಗಶೀಲನಾದಾಗ ನಾನು ಅವನ ಆ ಪ್ರಯತ್ನವನ್ನು ನಿಷ್ಫಲ ಮಾಡಿಬಿಡುತ್ತೇನೆ. ಹೀಗೆ ಪದೇ-ಪದೇ ಅಸಲನಾಗಿ ಅವನ ಮನಸ್ಸು ಧನವನ್ನು ಗಳಿಸುವುದರಿಂದ ವಿರಕ್ತವಾಗುತ್ತದೆ. ಧನದ ಮೇಲಿನ ಆಸೆಯು ದುಃಖಕ್ಕೆ ಕಾರಣವೆಂದರಿತು ನನ್ನ ಭಕ್ತರೊಂದಿಗೆ ಮೈತ್ರಿಯನ್ನು ಬೆಳೆಸುತ್ತಾನೆ. ಆಗ ನಾನು ಅವನ ಮೇಲೆ ಅಹೈತುಕವಾದ ಕೃಪಾವರ್ಷವನ್ನು ಗರೆಯುತ್ತೇನೆ. ॥9॥

ಮೂಲಮ್

(ಶ್ಲೋಕ-10)
ತದ್ಬ್ರಹ್ಮ ಪರಮಂ ಸೂಕ್ಷ್ಮಂ ಚಿನ್ಮಾತ್ರಂ ಸದನಂತಕಮ್ ।
ಅತೋ ಮಾಂ ಸುದುರಾರಾಧ್ಯಂ ಹಿತ್ವಾನ್ಯಾನ್ ಭಜತೇ ಜನಃ ॥

ಅನುವಾದ

ನನ್ನ ಕೃಪೆಯಿಂದ ಅವನಿಗೆ ಪರಮಸೂಕ್ಷ್ಮ ಅನಂತ ಸಚ್ಚಿದಾನಂದ ಸ್ವರೂಪ ಪರಬ್ರಹ್ಮನ ಪ್ರಾಪ್ತಿಯಾಗುತ್ತದೆ. ಹೀಗೆ ನನ್ನ ಅನುಗ್ರಹವೂ, ಆರಾಧನೆಯೂ ಬಹಳ ಕಠಿಣವಾಗಿದೆ. ಅದರಿಂದ ಸಾಮಾನ್ಯ ಜನರು ನನ್ನನ್ನು ಬಿಟ್ಟು ನನ್ನದೇ ರೂಪವಾದ ಬೇರೆ-ಬೇರೆ ದೇವತೆಗಳನ್ನು ಆರಾಧಿಸುತ್ತಾರೆ. ॥10॥

(ಶ್ಲೋಕ-11)

ಮೂಲಮ್

ತತಸ್ತ ಆಶುತೋಷೇಭ್ಯೋ ಲಬ್ಧರಾಜ್ಯಶ್ರಿಯೋದ್ಧತಾಃ ।
ಮತ್ತಾಃ ಪ್ರಮತ್ತಾ ವರದಾನ್ ವಿಸ್ಮರಂತ್ಯವಜಾನತೇ ॥

ಅನುವಾದ

ಇತರ ದೇವತೆಗಳು ಬೇಗನೇ ಪ್ರಸನ್ನ ರಾಗುತ್ತಾರೆ. ಇಂತಹ ಆಶು-ತೋಷದೇವತೆಗಳ ಭಕ್ತರಿಗೆ ಸಾಮ್ರಾಜ್ಯ ಲಕ್ಷ್ಮಿಯನ್ನು ಕೊಟ್ಟುಬಿಡುತ್ತಾರೆ. ಅದನ್ನು ಪಡೆದ ಅವರು ಉಚ್ಛಂಖಲರೂ, ಪ್ರಮಾದಿಗಳೂ, ಮದೋನ್ಮತ್ತರೂ ಆಗಿ, ತಮ್ಮ ಆರಾಧ್ಯ ದೇವತೆಗಳನ್ನೇ ಮರೆತು ಬಿಡುತ್ತಾರೆ ಹಾಗೂ ಅವರನ್ನು ತಿರಸ್ಕರಿಸುತ್ತಾರೆ. ॥11॥

(ಶ್ಲೋಕ-12)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಶಾಪಪ್ರಸಾದಯೋರೀಶಾ ಬ್ರಹ್ಮವಿಷ್ಣುಶಿವಾದಯಃ ।
ಸದ್ಯಃ ಶಾಪಪ್ರಸಾದೋಂಗ ಶಿವೋ ಬ್ರಹ್ಮಾ ನ ಚಾಚ್ಯುತಃ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿದ್ರಾಜನೇ! ಬ್ರಹ್ಮಾ-ವಿಷ್ಣು-ಮಹೇಶ್ವರ ಇವರು ಮುವರೂ ಶಾಪಾನುಗ್ರಹ ಸಾಮರ್ಥ್ಯವುಳ್ಳವರೇ. ಆದರೆ ಇವರಲ್ಲಿ ಮಹಾದೇವ ಮತ್ತು ಬ್ರಹ್ಮದೇವರು ಬೇಗನೇ ಪ್ರಸನ್ನರಾಗಿ ವರವನ್ನು ಕೊಡುತ್ತಾರೆ. ಹಾಗೆಯೇ ಬಹಳ ಬೇಗ ಕೋಪಗೊಂಡು ಶಾಪವನ್ನೂ ಕೊಟ್ಟು ಬಿಡುತ್ತಾರೆ. ಆದರೆ ಭಗವಾನ್ ವಿಷ್ಣುವು ಹಾಗಲ್ಲ. ॥12॥

(ಶ್ಲೋಕ-13)

ಮೂಲಮ್

ಅತ್ರ ಚೋದಾಹರಂತೀಮಮಿತಿಹಾಸಂ ಪುರಾತನಮ್ ।
ವೃಕಾಸುರಾಯ ಗಿರಿಶೋ ವರಂ ದತ್ತ್ವಾಪ ಸಂಕಟಮ್ ॥

ಅನುವಾದ

ಈ ವಿಷಯದಲ್ಲಿ ಮಹಾತ್ಮರು ಒಂದು ಪ್ರಾಚೀನ ಇತಿಹಾಸವನ್ನು ಹೇಳುತ್ತಾ ಇರುತ್ತಾರೆ. ಭಗವಾನ್ ಶಂಕರನು ಒಮ್ಮೆ ವೃಕಾಸುರನೆಂಬುವನಿಗೆ ವರವನ್ನು ಕೊಟ್ಟು ಸಂಕಟಕ್ಕೊಳಗಾಗಿದ್ದನು. ॥13॥

(ಶ್ಲೋಕ-14)

ಮೂಲಮ್

ವೃಕೋ ನಾಮಾಸುರಃ ಪುತ್ರಃ ಶಕುನೇಃ ಪಥಿ ನಾರದಮ್ ।
ದೃಷ್ಟ್ವಾಶುತೋಷಂ ಪಪ್ರಚ್ಛ ದೇವೇಷು ತ್ರಿಷು ದುರ್ಮತಿಃ ॥

ಅನುವಾದ

ಪರೀಕ್ಷಿತನೇ! ಶಕುನಿಯ ಪುತ್ರನಾದ ವೃಕಾಸುರನ ಬುದ್ಧಿಯು ಬಹಳವಾಗಿ ಕೆಟ್ಟು ಹೋಗಿತ್ತು. ಒಂದು ದಿನ ಅವನು ಎಲ್ಲೋ ಹೋಗುವಾಗ ದೇವರ್ಷಿನಾರದರನ್ನು ನೋಡಿದನು. ಅವರಿಗೆ ವಂದಿಸಿ ಸ್ವಾಮಿ! ಮೂರು ದೇವತೆಗಳಲ್ಲಿ ಶೀಘ್ರವಾಗಿ ಪ್ರಸನ್ನರಾಗುವವರು ಯಾರು? ಎಂದು ಕೇಳಿದನು. ॥14॥

(ಶ್ಲೋಕ-15)

ಮೂಲಮ್

ಸ ಆಹ ದೇವಂ ಗಿರಿಶಮುಪಾಧಾವಾಶು ಸಿದ್ಧ್ಯಸಿ ।
ಯೋಲ್ಪಾಭ್ಯಾಂ ಗುಣದೋಷಾಭ್ಯಾಮಾಶು ತುಷ್ಯತಿ ಕುಪ್ಯತಿ ॥

ಅನುವಾದ

ದೇವರ್ಷಿ ನಾರದರು ಹೇಳಿದರು — ನೀನು ಭಗವಾನ್ ಶಂಕರನನ್ನು ಆರಾಧಿಸು. ಇದರಿಂದ ನಿನ್ನ ಮನೋರಥವು ಬಹುಬೇಗನೇ ಈಡೇರುವುದು. ಅವನು ಅತ್ಯಲ್ಪಗುಣಗಳಿಂದ (ಪ್ರಾರ್ಥನೆಯಿಂದ) ಶೀಘ್ರಾತಿಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಸಣ್ಣ ಅಪರಾಧದಿಂದಲೂ ಕೂಡಲೇ ಕ್ರೋಧಗೊಳ್ಳುವನು. ॥15॥

(ಶ್ಲೋಕ-16)

ಮೂಲಮ್

ದಶಾಸ್ಯಬಾಣಯೋಸ್ತುಷ್ಟಃ ಸ್ತುವತೋರ್ವಂದಿನೋರಿವ ।
ಐಶ್ವರ್ಯಮತುಲಂ ದತ್ತ್ವಾ ತತ ಆಪ ಸುಸಂಕಟಮ್ ॥

ಅನುವಾದ

ರಾವಣ ಮತ್ತು ಬಾಣಾಸುರರು ಕೇವಲ ವಂದಿಮಾಗಧರಂತೆ ಶಂಕರನನ್ನು ಸ್ತೋತ್ರ ಮಾಡಿದ್ದರು. ಇದರಿಂದಲೆ ಶಿವನು ಅವರಿಗೆ ಅತುಳವಾದ ಐಶ್ವರ್ಯವನ್ನು ಕೊಟ್ಟಿದ್ದನು. ಬಳಿಕ ರಾವಣನು ಕೈಲಾಸವನ್ನೇ ಎತ್ತಿದುದರಿಂದ ಮತ್ತು ಬಾಣಾಸುರನನಗರ ರಕ್ಷಣೆಯ ಹೊಣೆಯನ್ನು ಹೊತ್ತಿದ್ದರಿಂದ ಶಂಕರನು ಸಂಕಟಕ್ಕೀಡಾದನು. ॥16॥

(ಶ್ಲೋಕ-17)

ಮೂಲಮ್

ಇತ್ಯಾದಿಷ್ಟಸ್ತಮಸುರ ಉಪಾದಾಧಾವತ್ಸ್ವಗಾತ್ರತಃ ।
ಕೇದಾರ ಆತ್ಮಕ್ರವ್ಯೇಣ ಜುಹ್ವಾನೋಗ್ನಿಮುಖಂ ಹರಮ್ ॥

ಅನುವಾದ

ನಾರದರಿಂದ ಉಪದೇಶವನ್ನು ಪಡೆದು ವೃಕಾಸುರನು ಕೇದಾರ ಕ್ಷೇತ್ರಕ್ಕೆ ಹೋಗಿ, ಅಗ್ನಿಯನ್ನು ಶಂಕರನ ಮುಖವೆಂದು ಭಾವಿಸಿ ತನ್ನ ಶರೀರದ ಮಾಂಸಖಂಡಗಳನ್ನೇ ಕಡಿದು ಕಡಿದು ಹೋಮ ಮಾಡುತ್ತಾ ಆರಾಧಿಸತೊಡಗಿದನು. ॥17॥

(ಶ್ಲೋಕ-18)

ಮೂಲಮ್

ದೇವೋಪಲಬ್ಧಿಮಪ್ರಾಪ್ಯ ನಿರ್ವೇದಾತ್ಸಪ್ತಮೇಹನಿ ।
ಶಿರೋವೃಶ್ಚತ್ ಸ್ವಧಿತಿನಾ ತತ್ತೀರ್ಥಕ್ಲಿನ್ನಮೂರ್ಧಜಮ್ ॥

ಅನುವಾದ

ಈ ಪ್ರಕಾರ ಆರು ದಿನಗಳವರೆಗೆ ಉಪಾಸನೆ ಮಾಡಿದರೂ ಭಗವಾನ್ ಶಂಕರನು ಪ್ರಸನ್ನನಾಗದಿದ್ದಾಗ ಅವನಿಗೆ ತುಂಬಾ ದುಃಖವಾಯಿತು. ಏಳನೆಯ ದಿನ ಕೇದಾರ ತೀರ್ಥದಲ್ಲಿ ಸ್ನಾನಮಾಡಿ ಅವನು ಒದ್ದೆಯಾದ ತನ್ನ ತಲೆಯನ್ನೇ ಕತ್ತಿಯಿಂದ ಕಡಿದು ಹೋಮ ಮಾಡಲು ಬಯಸಿದನು. ॥18॥

(ಶ್ಲೋಕ-19)

ಮೂಲಮ್

ತದಾ ಮಹಾಕಾರುಣಿಕಃ ಸ ಧೂರ್ಜಟಿ-
ರ್ಯಥಾ ವಯಂ ಚಾಗ್ನಿರಿವೋತ್ಥಿತೋನಲಾತ್ ।
ನಿಗೃಹ್ಯ ದೋರ್ಭ್ಯಾಂ ಭುಜಯೋರ್ನ್ಯವಾರಯತ್-
ತತ್ಸ್ಪರ್ಶನಾದ್ಭೂಯ ಉಪಸ್ಕೃತಾಕೃತಿಃ ॥

ಅನುವಾದ

ಪರೀಕ್ಷಿತನೇ! ಜಗತ್ತಿನಲ್ಲಿ ಯಾರಾದರೂ ದುಃಖದಿಂದ ಆತ್ಮಹತ್ಯೆ ಮಾಡಿಕೊಳ್ಳಲು ತೊಡಗಿದರೆ ನಾವು ಕರುಣೆಯಿಂದ ಅವನನ್ನು ತಡೆಯುವಂತೆಯೇ ಪರಮ ದಯಾಳುವಾದ ಭಗವಾನ್ ಶಂಕರನು ವೃಕಾಸುರನ ಆತ್ಮಘಾತದ ಮೊದಲೇ ಅಗ್ನಿಕುಂಡದಿಂದ ಯಜ್ಞೇಶ್ವರನಂತೆ ಪ್ರಕಾಶಿಸುತ್ತಾ ಪ್ರಕಟನಾಗಿ ತನ್ನೆರಡೂ ಕೈಗಳಿಂದ ಅವನ ಎರಡೂ ಕೈಗಳನ್ನು ಹಿಡಿದುಕೊಂಡು ಕತ್ತನ್ನು ತುಂಡರಿಸುವುದನ್ನು ತಡೆದನು. ಶಿವನ ಸ್ಪರ್ಶವಾಗುತ್ತಲೇ ವೃಕಾಸುರನ ಅಂಗಾಂಗಗಳು ಮೊದಲಿದ್ದಂತೆ ಹೃಷ್ಟ-ಪುಷ್ಟಗಳಾದವು. ॥19॥

(ಶ್ಲೋಕ-20)

ಮೂಲಮ್

ತಮಾಹ ಚಾಂಗಾಲಮಲಂ ವೃಣೀಷ್ವ ಮೇ
ಯಥಾಭಿಕಾಮಂ ವಿತರಾಮಿ ತೇ ವರಮ್ ।
ಪ್ರಿಯೇಯ ತೋಯೇನ ನೃಣಾಂ ಪ್ರಪದ್ಯತಾ-
ಮಹೋ ತ್ವಯಾತ್ಮಾ ಭೃಶಮರ್ದ್ಯತೇ ವೃಥಾ ॥

ಅನುವಾದ

ಭಗವಾನ್ ಶಂಕರನು ಪ್ರಸನ್ನನಾಗಿ ಹೇಳಿದನು ವೃಕಾಸುರನೇ! ಸಾಕು ಮಾಡು ನಿಲ್ಲಿಸು! ನಿನಗೆ ಬೇಕಾದವರನ್ನು ಕೇಳು, ನಾನು ನಿನಗೆ ಕೊಡುತ್ತೇನೆ. ನಾನಾದರೋ ಶರಣಾಗತರಾದ ಭಕ್ತರು ಮಾಡಿದ ಕೇವಲ ನೀರಿನ ಅಭಿಷೇಕದಿಂದಲೇ ಸಂತುಷ್ಟನಾಗುವವನು. ನೀನು ನಿನ್ನ ಶರೀರವನ್ನೇ ವಿನಾಶಗೊಳಿಸಲು ವ್ಯರ್ಥವಾಗಿ ಪ್ರಯತ್ನಿಸುತ್ತಿರುವೆಯಲ್ಲ! ॥20॥

(ಶ್ಲೋಕ-21)

ಮೂಲಮ್

ದೇವಂ ಸ ವವ್ರೇ ಪಾಪೀಯಾನ್ ವರಂ ಭೂತಭಯಾವಹಮ್ ।
ಯಸ್ಯ ಯಸ್ಯ ಕರಂ ಶೀರ್ಷ್ಣಿ ಧಾಸ್ಯೇ ಸ ಮ್ರಿಯತಾಮಿತಿ ॥

ಅನುವಾದ

ಪರೀಕ್ಷಿತನೇ! ಅತ್ಯಂತ ಪಾಪಿಯಾದ ವೃಕಾಸುರನು ಸಮಸ್ತ ಪ್ರಾಣಿಗಳನ್ನು ಭಯಭೀತಗೊಳಿಸುವಂತಹ ವರವನ್ನು ಕೇಳಿದನು - ಸ್ವಾಮಿ! ನಾನು ಯಾರ ತಲೆಯ ಮೇಲೆ ಕೈಯನ್ನಿಡುವೆನೋ ಅವನು ಮರಣಹೊಂದಬೇಕು. ॥21॥

(ಶ್ಲೋಕ-22)

ಮೂಲಮ್

ತಚ್ಛ್ರುತ್ವಾ ಭಗವಾನ್ ರುದ್ರೋ ದುರ್ಮನಾ ಇವ ಭಾರತ ।
ಓಮಿತಿ ಪ್ರಹಸಂಸ್ತಸ್ಮೈ ದದೇಹೇರಮೃತಂ ಯಥಾ ॥

ಅನುವಾದ

ರಾಜೇಂದ್ರ! ಅವನ ಈ ಬೇಡಿಕೆಯನ್ನು ಕೇಳಿದ ಭಗವಾನ್ ರುದ್ರನು ಮನಗುಂದಿದವನಂತಾಗಿ ಕೊಡಲು ಮನಸ್ಸಿಲ್ಲದಿದ್ದರೂ ನಸುನಗುತ್ತಾ ವರವನ್ನು ಕೊಟ್ಟು ಸರ್ಪಕ್ಕೆ ಅಮೃತವನ್ನುಣಿಸಿದಂತೆ - ‘ಸರಿ! ಹಾಗೆಯೇ ಆಗಲಿ’ ಎಂದು ಹೇಳಿದನು. ॥22॥

(ಶ್ಲೋಕ-23)

ಮೂಲಮ್

ಇತ್ಯುಕ್ತಃ ಸೋಸುರೋ ನೂನಂ ಗೌರೀಹರಣಲಾಲಸಃ ।
ಸ ತದ್ವರಪರೀಕ್ಷಾರ್ಥಂ ಶಂಭೋರ್ಮೂರ್ಧ್ನಿ ಕಿಲಾಸುರಃ ।
ಸ್ವಹಸ್ತಂ ಧಾತುಮಾರೇಭೇ ಸೋಬಿಭ್ಯತ್ ಸ್ವಕೃತಾಚ್ಛಿವಃ ॥

ಅನುವಾದ

ಭಗವಾನ್ ಶಂಕರನಿಂದ ಇಂತಹ ಸರ್ವನಾಶಕವಾದ ವರವನ್ನು ಪಡೆದ ವೃಕಾಸುರನ ಮನಸ್ಸಿನಲ್ಲಿ ಮೊದಲಿಗೆ ಪಾರ್ವತಿಯನ್ನು ಅಪಹರಿಸಬೇಕೆಂಬ ಲಾಲಸೆ ಉಂಟಾಯಿತು. ಅದಕ್ಕಾಗಿ ಆ ಅಸುರನು ಶಂಕರನ ವರವನ್ನು ಪರೀಕ್ಷಿಸಲಿಕ್ಕಾಗಿ ಅವನ ತಲೆಯ ಮೇಲೆಯೇ ಕೈಯನ್ನಿಡಲು ಹೊರಟನು. ಇದರಿಂದ ಶಿವನು ತಾನು ಕೊಟ್ಟವರದಿಂದಲೇ ಭಯಗೊಂಡನು. ॥23॥

(ಶ್ಲೋಕ-24)

ಮೂಲಮ್

ತೇನೋಪಸೃಷ್ಟಃ ಸಂತ್ರಸ್ತಃ ಪರಾಧಾವನ್ಸವೇಪಥುಃ ।
ಯಾವದಂತಂ ದಿವೋ ಭೂಮೇಃ ಕಾಷ್ಠಾನಾಮುದಗಾದುದಕ್ ॥

ಅನುವಾದ

ದೈತ್ಯನು ಬೆನ್ನಟ್ಟಿಕೊಂಡು ಬರುವುದನ್ನು ಕಂಡು ಶಂಕರನು ಭಯದಿಂದ ನಡುಗುತ್ತ ಓಡತೊಡಗಿದನು. ಅವನು ಪೃಥಿವಿ, ಸ್ವರ್ಗ, ದಿಗಂತವರೆಗೂ ಓಡಿದನು. ಆದರೂ ಬೆನ್ನಬಿದ್ದ ಅಸುರನನ್ನು ನೋಡಿ ಉತ್ತರದ ಕಡೆಗೆ ಓಡಿದನು. ॥24॥

(ಶ್ಲೋಕ-25)

ಮೂಲಮ್

ಅಜಾನಂತಃ ಪ್ರತಿವಿಧಿಂ ತೂಷ್ಣೀಮಾಸನ್ಸುರೇಶ್ವರಾಃ ।
ತತೋ ವೈಕುಂಠ ಮಗಮದ್ಭಾಸ್ವರಂ ತಮಸಃ ಪರಮ್ ॥

ಅನುವಾದ

ಶಿವನ ಈ ಸಂಕಟದಿಂದ ಪಾರಾಗಿಸಲು ಕೈಲಾಗದೆ ದೊಡ್ಡ-ದೊಡ್ಡ ದೇವತೆಗಳು ಸುಮ್ಮನಾದರು. ಕೊನೆಗೆ ಅವನು ಪ್ರಾಕೃತಿಕ ಅಂಧಕಾರದಿಂದ ಆಚೆಗೆ ಇರುವ ಪ್ರಕಾಶಮಯ ವೈಕುಂಠಕ್ಕೆ ಹೋದನು. ॥25॥

(ಶ್ಲೋಕ-26)

ಮೂಲಮ್

ಯತ್ರ ನಾರಾಯಣಃ ಸಾಕ್ಷಾನ್ನ್ಯಾಸಿನಾಂ ಪರಮಾಗತಿಃ ।
ಶಾಂತಾನಾಂ ನ್ಯಸ್ತದಂಡಾನಾಂ ಯತೋ ನಾವರ್ತತೇ ಗತಃ ॥

ಅನುವಾದ

ಸಾಕ್ಷಾತ್ ಭಗವಾನ್ ಶ್ರೀಮನ್ನಾರಾಯಣನು ಆ ವೈಕುಂಠದಲ್ಲಿ ವಾಸವಾಗಿದ್ದನು. ಸಂನ್ಯಾಸಿಗಳಿಗೆ ಏಕಮಾತ್ರ ಪರಮಗತಿಸ್ವರೂಪನಾದ ಅವನು ಸಮಸ್ತ ಜಗತ್ತಿಗೆ ಅಭಯವನ್ನಿತ್ತು ಶಾಂತಭಾವದಿಂದ ವಿರಾಜಿಸುತ್ತಿದ್ದನು. ವೈಕುಂಠದಲ್ಲಿ ಅವನನ್ನು ನೋಡಿದ ಬಳಿಕ ಮರ್ತ್ಯಲೋಕಕ್ಕೆ ಮರಳಬೇಕಾಗುವುದಿಲ್ಲ. ॥26॥

(ಶ್ಲೋಕ-27)

ಮೂಲಮ್

ತಂ ತಥಾವ್ಯಸನಂ ದೃಷ್ಟ್ವಾ ಭಗವಾನ್ ವೃಜಿನಾರ್ದನಃ ।
ದೂರಾತ್ ಪ್ರತ್ಯುದಿಯಾದ್ಭೂತ್ವಾ ವಟುಕೋ ಯೋಗಮಾಯಯಾ ॥

ಅನುವಾದ

ಶಂಕರನು ಬಹುದೊಡ್ಡ ಸಂಕಟಕ್ಕೆ ಸಿಕ್ಕಿಕೊಂಡಿದ್ದನ್ನು ಕಂಡು ಭಕ್ತಭಯಹಾರಿಯಾದ ಭಗವಂತನು ತನ್ನ ಯೋಗಮಾಯೆಯಿಂದ ಬ್ರಹ್ಮಚಾರಿಯ ರೂಪವನ್ನಾಂತು ನಿಧಾನವಾಗಿ ಬರುತ್ತಿದ್ದ ವೃಕಾಸುರನ ಕಡೆಗೆ ನಡೆಯ ತೊಡಗಿದನು. ॥27॥

(ಶ್ಲೋಕ-28)

ಮೂಲಮ್

ಮೇಖಲಾಜಿನದಂಡಾಕ್ಷೈಸ್ತೇಜಸಾಗ್ನಿರಿವ ಜ್ವಲನ್ ।
ಅಭಿವಾದಯಾಮಾಸ ಚ ತಂ ಕುಶಪಾಣಿರ್ವಿನೀತವತ್ ॥

ಅನುವಾದ

ಆಗ ಭಗವಂತನು ಮೌಂಜಿಯ ಮೇಖಲೆಯನ್ನೂ, ಕೃಷ್ಣಮೃಗ ಚರ್ಮವನ್ನು, ದಂಡವನ್ನೂ, ರುದ್ರಾಕ್ಷಮಾಲೆಯನ್ನು ಧರಿಸಿದ್ದನು. ಅವನು ಪ್ರತಿಯೊಂದು ಅಂಗದಿಂದಲೂ ಧಗಧಗಿಸುತ್ತಿರುವ ದಿವ್ಯಜ್ಯೋತಿಯಿಂದ ಪ್ರಕಾಶಿಸುತ್ತಿದ್ದನು. ಕೈಯಲ್ಲಿ ದರ್ಭೆಗಳನ್ನು ಹಿಡಿದಿದ್ದನು. ವೃಕಾಸುರನನ್ನು ನೋಡುತ್ತಲೇ ಅವನು ಬಹಳ ನಮ್ರತೆಯಿಂದ ಬಾಗಿ ವಂದಿಸಿದನು. ॥28॥

(ಶ್ಲೋಕ-29)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಶಾಕುನೇಯ ಭವಾನ್ ವ್ಯಕ್ತಂ ಶ್ರಾಂತಃ ಕಿಂ ದೂರಮಾಗತಃ ।
ಕ್ಷಣಂ ವಿಶ್ರಮ್ಯತಾಂ ಪುಂಸ ಆತ್ಮಾಯಂ ಸರ್ವಕಾಮಧುಕ್ ॥

ಅನುವಾದ

ಬ್ರಹ್ಮಚಾರಿ ವೇಷಧಾರಿಯಾದ ಭಗವಂತನು ಹೇಳಿದನು — ಶಕುನಿನಂದನ ವೃಕಾಸುರನೇ! ನೀನು ಬಹಳ ಬಳಲಿದವನಂತೆ ಕಂಡು ಬರುತ್ತೀಯೆ. ಇಂದು ನೀನು ಬಹಳ ದೂರದಿಂದ ಬಂದಿರುವೆಯೋ? ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊ. ನೋಡು, ಈ ಶರೀರವು ಎಲ್ಲ ಸುಖಗಳ ಮೂಲವಾಗಿದೆ. ಇದರಿಂದಲೇ ಸಮಸ್ತ ಕಾಮನೆಗಳೂ ಕೈಗೂಡುವವು. ಇದಕ್ಕೆ ಹೆಚ್ಚು ಕಷ್ಟಕೊಡಬಾರದು. ॥29॥

(ಶ್ಲೋಕ-30)

ಮೂಲಮ್

ಯದಿ ನಃ ಶ್ರವಣಾಯಾಲಂ ಯುಷ್ಮದ್ವ್ಯವಸಿತಂ ವಿಭೋ ।
ಭಣ್ಯತಾಂ ಪ್ರಾಯಶಃ ಪುಂಭಿರ್ಧೃತೈಃ ಸ್ವಾರ್ಥಾನ್ಸಮೀಹತೇ ॥

ಅನುವಾದ

ನೀನಾದರೋ ಸರ್ವಸಮರ್ಥನಾಗಿರುವೆ. ಈ ಸಮಯದಲ್ಲಿ ನೀನು ಏನು ಮಾಡಬೇಕೆಂದಿರುವೆ? ನಾನು ಕೇಳಲು ಯೋಗ್ಯವಾಗಿದ್ದರೆ ಹೇಳು. ಏಕೆಂದರೆ ಪ್ರಪಂಚದಲ್ಲಿ ಜನರು ಸಹಾಯಕರಿಂದ ಬಹಳಷ್ಟು ಕೆಲಸವನ್ನು ಸಾಧಿಸಿಕೊಳ್ಳುವುದನ್ನು ನೋಡುತ್ತೇವೆ. ॥30॥

(ಶ್ಲೋಕ-31)

ಮೂಲಮ್ (ವಾಚನಮ್)

ಶ್ರೀಶುಕ ಉವಾಚ

ಮೂಲಮ್

ಏವಂ ಭಗವತಾ ಪೃಷ್ಟೋ ವಚಸಾಮೃತವರ್ಷಿಣಾ ।
ಗತಕ್ಲಮೋಬ್ರವೀತ್ತಸ್ಮೈ ಯಥಾಪೂರ್ವಮನುಷ್ಠಿತಮ್ ॥

ಅನುವಾದ

ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನ ಪ್ರತಿಯೊಂದು ಶಬ್ದವು ಅಮೃತದಲ್ಲಿ ಅದ್ದಿ ತೆಗೆದಂತಿತ್ತು. ಅವನ್ನು ಕೇಳಿದಾಗ ಅವನು ಕೊಂಚ ಸುಧಾರಿಸಿಕೊಂಡು ಕ್ರಮವಾಗಿ ತಾನು ಮಾಡಿದ ತಪಸ್ಸು, ಪಡೆದವರ, ಶಂಕರನನ್ನು ಬೆನ್ನಟ್ಟಿ ಹೋದುದೆಲ್ಲವನ್ನು ಮೊದಲಿನಿಂದ ಹೇಳಿದನು. ॥31॥

(ಶ್ಲೋಕ-32)

ಮೂಲಮ್ (ವಾಚನಮ್)

ಶ್ರೀಭಗವಾನುವಾಚ

ಮೂಲಮ್

ಏವಂ ಚೇತ್ತರ್ಹಿ ತದ್ವಾಕ್ಯಂ ನ ವಯಂ ಶ್ರದ್ದಧೀಮಹಿ ।
ಯೋ ದಕ್ಷಶಾಪಾತ್ ಪೈಶಾಚ್ಯಂ ಪ್ರಾಪ್ತಃ ಪ್ರೇತಪಿಶಾಚರಾಟ್ ॥

ಅನುವಾದ

ಶ್ರೀಭಗವಂತನು ಹೇಳಿದನು — ಸರಿ, ಹೀಗೋ ಮಾತು! ಅಯ್ಯಾ! ನಾವು ಆ ಶಿವನ ಮಾತಿನಲ್ಲಿ ವಿಶ್ವಾಸವಿಡುವುದಿಲ್ಲ. ನಿನಗೆ ಇದು ಗೊತ್ತಿಲ್ಲವೇ? ಅವನಾದರೋ ದಕ್ಷ ಪ್ರಜಾಪತಿಯ ಶಾಪದಿಂದ ಪಿಶಾಚಭಾವವನ್ನು ತಳೆದಿರುವನು. ಇಂದು ಅವನೇ ಪ್ರೇತಗಳ, ಪಿಶಾಚಗಳ ಸಾಮ್ರಾಟನಾಗಿದ್ದಾನೆ. ॥32॥

(ಶ್ಲೋಕ-33)

ಮೂಲಮ್

ಯದಿ ವಸ್ತತ್ರ ವಿಶ್ರಂಭೋ ದಾನವೇಂದ್ರ ಜಗದ್ಗುರೌ ।
ತರ್ಹ್ಯಂಗಾಶು ಸ್ವಶಿರಸಿ ಹಸ್ತಂ ನ್ಯಸ್ಯ ಪ್ರತೀಯತಾಮ್ ॥

ಅನುವಾದ

ದಾನವೇಂದ್ರಾ! ನೀನು ಇಷ್ಟು ದೊಡ್ಡವನಾದರೂ ಇಂತಹ ಸಣ್ಣ-ಪುಟ್ಟ ಮಾತುಗಳಲ್ಲಿ ವಿಶ್ವಾಸ ವಿಡುತ್ತೀಯಲ್ಲ? ನೀನು ಈಗಲೂ ಅವನನ್ನು ಜಗದ್ಗುರು ಎಂದು ಭಾವಿಸುವುದಾದರೆ, ಅವನ ಮಾತಿನಲ್ಲಿ ವಿಶ್ವಾಸವಿಡುವೆಯಾದರೆ ಕೂಡಲೇ ನಿನ್ನ ಕೈಯನ್ನು ನಿನ್ನ ತಲೆಯ ಮೇಲೆ ಇಟ್ಟುಕೊಂಡು ಪರೀಕ್ಷಿಸಬಾರದೇ! ॥33॥

(ಶ್ಲೋಕ-34)

ಮೂಲಮ್

ಯದ್ಯಸತ್ಯಂ ವಚಃ ಶಂಭೋಃ ಕಥಂಚಿದ್ದಾನವರ್ಷಭ ।
ತದೈನಂ ಜಹ್ಯಸದ್ವಾಚಂ ನ ಯದ್ವಕ್ತಾನೃತಂ ಪುನಃ ॥

ಅನುವಾದ

ದಾನವ ಶಿರೋಮಣಿ! ಯಾವುದೇ ರೀತಿಯಿಂದ ಶಂಕರನ ಮಾತು ಸುಳ್ಳಾದರೆ ಆ ಅಸತ್ಯವಾದಿಯನ್ನು ಕೊಂದುಬಿಡು. ಇದರಿಂದ ಮತ್ತೆ ಅವನು ಸುಳ್ಳುಹೇಳಲಾರನು. ॥34॥

(ಶ್ಲೋಕ-35)

ಮೂಲಮ್

ಇತ್ಥಂ ಭಗವತಶ್ಚಿತ್ರೈರ್ವಚೋಭಿಃ ಸ ಸುಪೇಶಲೈಃ ।
ಭಿನ್ನಧೀರ್ವಿಸ್ಮೃತಃ ಶೀರ್ಷ್ಣಿ ಸ್ವಹಸ್ತಂ ಕುಮತಿರ್ವ್ಯಧಾತ್ ॥

ಅನುವಾದ

ಪರೀಕ್ಷಿತನೇ! ಭಗವಂತನು ಇಂತಹ ಮೋಹಗೊಳಿಸುವಂತಹ ಅದ್ಭುತವಾದ ಸಿಹಿಯಾದ ಮಾತುಗಳನ್ನು ಕೇಳುತ್ತಲೇ ಅವನ ಬುದ್ಧಿಯು ಮಂಕಾಯಿತು. ಆ ದುರ್ಬುದ್ಧಿಯು ವರದಾನವನ್ನು ಮರೆತು ತನ್ನ ಕೈಯನ್ನೇ ತನ್ನ ತಲೆಯ ಮೇಲಿರಿಸಿಕೊಂಡನು. ॥35॥

(ಶ್ಲೋಕ-36)

ಮೂಲಮ್

ಅಥಾಪತದ್ಭಿನ್ನಶಿರಾ ವಜ್ರಾಹತ ಇವ ಕ್ಷಣಾತ್ ।
ಜಯಶಬ್ದೋ ನಮಃಶಬ್ದಃ ಸಾಧುಶಬ್ದೋಭವದ್ದಿವಿ ॥

ಅನುವಾದ

ಸರಿ, ಆ ಕ್ಷಣವೇ ಅವನ ತಲೆ ಒಡೆದು, ಸಿಡಿಲು ಬಡಿದವನಂತೆ ನೆಲಕ್ಕುರುಳಿ ಸತ್ತು ಹೋದನು. ಆ ಸಮಯದಲ್ಲಿ ದೇವತೆಗಳು ಆಕಾಶದಲ್ಲಿ ಸಾಧು! ಸಾಧು! ಎಂದು ಹೇಳುತ್ತಾ ನಮೋ ನಮಃ ಎಂದು ವಂದಿಸುತ್ತಾ ಜಯ-ಜಯಕಾರ ಮಾಡಿದರು. ॥36॥

(ಶ್ಲೋಕ-37)

ಮೂಲಮ್

ಮುಮುಚುಃ ಪುಷ್ಪವರ್ಷಾಣಿ ಹತೇ ಪಾಪೇ ವೃಕಾಸುರೇ ।
ದೇವರ್ಷಿಪಿತೃಗಂಧರ್ವಾ ಮೋಚಿತಃ ಸಂಕಟಾಚ್ಛಿವಃ ॥

ಅನುವಾದ

ಪಾಪಿಯಾದ ವೃಕಾಸುರನ ಮೃತ್ಯುವಿನಿಂದ ದೇವತೆಗಳು, ಪಿತೃಗಳು, ಗಂಧರ್ವರು ಅತ್ಯಂತ ಸಂತೋಷಗೊಂಡು ಪುಷ್ಪವೃಷ್ಟಿಗರೆದರು. ಭಗವಾನ್ ಶಂಕರನು ಅಂತಹ ವಿಕಟ ಸಂಕಟದಿಂದ ಮುಕ್ತನಾದನು. ॥37॥

(ಶ್ಲೋಕ-38)

ಮೂಲಮ್

ಮುಕ್ತಂ ಗಿರಿಶಮಭ್ಯಾಹ ಭಗವಾನ್ ಪುರುಷೋತ್ತಮಃ ।
ಅಹೋ ದೇವ ಮಹಾದೇವ ಪಾಪೋಯಂ ಸ್ವೇನ ಪಾಪ್ಮನಾ ॥

(ಶ್ಲೋಕ-39)

ಮೂಲಮ್

ಹತಃ ಕೋ ನು ಮಹತ್ಸ್ವೀಶ ಜಂತುರ್ವೈ ಕೃತಕಿಲ್ಬಿಷಃ ।
ಕ್ಷೇಮೀ ಸ್ಯಾತ್ ಕಿಮು ವಿಶ್ವೇಶೇ ಕೃತಾಗಸ್ಕೋ ಜಗದ್ಗುರೌ ॥

ಅನುವಾದ

ಆಗ ಭಯಗೊಂಡಿರುವ ಶಂಕರನ ಬಳಿ ಭಗವಾನ್ ಪುರುಷೋತ್ತಮನು ಹೇಳಿದನು - ದೇವಾಧಿದೇವಾ! ಈ ದುಷ್ಟನನ್ನು ಅವನ ಪಾಪಗಳೇ ಕೊಂದುಹಾಕಿದುದು ಸಂತೋಷದ ಮಾತೇ ಸರಿ. ಪರಮೇಶ್ವರನೇ! ಮಹಾಪುರಷರಿಗೆ ಅಪರಾಧವನ್ನು ಮಾಡಿದವರು ಯಾರು ತಾನೇ ಕ್ಷೇಮದಿಂದ ಇರಬಲ್ಲನು? ಮತ್ತೆ ಸಾಕ್ಷಾತ್ ಜಗದ್ಗುರು ವಿಶ್ವೇಶ್ವರನಾದ ನಿನಗೆ ಅಪರಾಧವನ್ನು ಮಾಡಿದ ಯಾರಾದರೂ ಕುಶಲಿಯಾಗಿ ಹೇಗೆ ಇರಬಲ್ಲರು? ॥38-39॥

(ಶ್ಲೋಕ-40)

ಮೂಲಮ್

ಯ ಏವಮವ್ಯಾಕೃತಶಕ್ತ್ಯುದನ್ವತಃ ಪರಸ್ಯ
ಸಾಕ್ಷಾತ್ ಪರಮಾತ್ಮನೋ ಹರೇಃ ।
ಗಿರಿತ್ರಮೋಕ್ಷಂ ಕಥಯೇಚ್ಛಣೋತಿ ವಾ
ವಿಮುಚ್ಯತೇ ಸಂಸೃತಿಭಿಸ್ತಥಾರಿಭಿಃ ॥ 40 ॥

ಅನುವಾದ

ಅನಂತಶಕ್ತಿಗಳ ಸಮುದ್ರನಾದ ಭಗವಂತನ ಒಂದೊಂದು ಶಕ್ತಿಯೂ ಮಾತು-ಮನಸ್ಸಿನ ಸೀಮೆಯಿಂದ ಅತೀತವಾದುದು. ಅವನು ಪ್ರಕೃತಿಗಿಂತ ಪರನಾದ ಸಾಕ್ಷಾತ್ ಪರಮಾತ್ಮನಾಗಿದ್ದಾನೆ. ಶಂಕರನನ್ನು ಈ ಸಂಕಟದಿಂದ ಬಿಡಿಸಿದ ಅವನ ಈ ಲೀಲೆಯನ್ನು ಹೇಳುವವನು, ಕೇಳುವವನು ಸಂಸಾರ ಬಂಧನದಿಂದ ಮತ್ತು ಶತ್ರುಗಳ ಭಯದಿಂದ ಮುಕ್ತನಾಗಿ ಹೋಗುತ್ತಾನೆ. ॥40॥

ಅನುವಾದ (ಸಮಾಪ್ತಿಃ)

ಎಂಭತ್ತೆಂಟನೆಯ ಅಧ್ಯಾಯವು ಮುಗಿಯಿತು. ॥88॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ ರುದ್ರಮೋಕ್ಷಣಂ ನಾಮ ಅಷ್ಟಾಶೀತಿತಮೋಽಧ್ಯಾಯಃ ॥88॥