[ಏಂಭತ್ತೆಳನೇಯ ಅಧ್ಯಾಯ]
ಭಾಗಸೂಚನಾ
ವೇದಸ್ತುತಿ
(ಶ್ಲೋಕ-1)
ಮೂಲಮ್ (ವಾಚನಮ್)
ಪರೀಕ್ಷಿದುವಾಚ
ಮೂಲಮ್
ಬ್ರಹ್ಮನ್ ಬ್ರ್ರಹ್ಮಣ್ಯನಿರ್ದೇಶ್ಯೇ ನಿರ್ಗುಣೇ ಗುಣವೃತ್ತಯಃ ।
ಕಥಂ ಚರಂತಿ ಶ್ರುತಯಃ ಸಾಕ್ಷಾತ್ ಸದಸತಃ ಪರೇ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಬ್ರಾಹ್ಮಣೋತ್ತಮರೇ! ಪರಬ್ರಹ್ಮ ತತ್ತ್ವವು ಕಾರ್ಯ-ಕಾರಣಗಳಿಂದ ಸರ್ವಥಾ ಅತೀತವಾಗಿದೆ. ಮನಸ್ಸು-ವಾಣಿಯ ಮೂಲಕ ಸಂಕೇತರೂಪದಿಂದಲೂ ಅದನ್ನು ನಿರ್ದೇಶಿಸಲಾಗುವುದಿಲ್ಲ. ಆದರೆ ಶ್ರುತಿಗಳು ಗುಣಗಳ ವಿಷಯದಲ್ಲೇ ಹೇಳಬಲ್ಲವು. ನಿರ್ಗುಣ ತತ್ತ್ವದ ಸ್ವರೂಪವಾದರೋ ಅವುಗಳಿಗೆ ನಿಲುಕಲಾರದು. ಹೀಗಿರುವಾಗ ಶ್ರುತಿಗಳು ನಿರ್ಗುಣ ಬ್ರಹ್ಮವನ್ನು ಹೇಗೆ ಪ್ರತಿಪಾದಿಸುತ್ತವೆ? ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಬುದ್ದೀಂದ್ರಿಯಮನಃಪ್ರಾಣಾನ್ ಜನಾನಾಮಸೃಜತ್ಪ್ರಭುಃ ।
ಮಾತ್ರಾರ್ಥಂ ಚ ಭವಾರ್ಥಂ ಚ ಆತ್ಮನೇಕಲ್ಪನಾಯ ಚ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಂತನು ಮನುಷ್ಯರಿಗಾಗಿ ಮನ, ಬುದ್ಧಿ, ಇಂದ್ರಿಯಗಳನ್ನು ಮತ್ತು ಪ್ರಾಣಗಳನ್ನೂ, ಜೊತೆಗೆ ವಿಷಯಗಳನ್ನು ಸೃಷ್ಟಿಸಿದನು. ಅದರಿಂದ ಅವರು ಆ ವಿಷಯಗಳನ್ನು ಅನುಭವಿಸುತ್ತಾ ಜೀವನ ಧಾರಣಮಾಡಬಲ್ಲರು. ಇದರಿಂದ ಸೃಷ್ಟಿಯ ಪರಂಪರೆಯೂ ನಡೆಯುತ್ತಿರುವುದು ಮತ್ತು ಅವರು ಧರ್ಮವನ್ನು ಆಚರಿಸಬಲ್ಲರು, ಕರ್ಮಫಲವನ್ನು ಭೋಗಿಸಬಲ್ಲರು. ಜೊತೆಗೆ ಅವರು ತಮ್ಮ ಆತ್ಮಸ್ವರೂಪವನ್ನು ಅರಿತುಕೊಂಡು ಸಂಸಾರಬಂಧನದಿಂದ ಮುಕ್ತರೂ ಆಗುವರು. ॥2॥
(ಶ್ಲೋಕ-3)
ಮೂಲಮ್
ಸೈಷಾ ಹ್ಯುಪನಿಷದ್ಬ್ರಾಹ್ಮೀ ಪೂರ್ವೇಷಾಂ ಪೂರ್ವಜೈರ್ಧೃತಾ ।
ಶ್ರದ್ಧಯಾ ಧಾರಯೇದ್ಯಸ್ತಾಂ ಕ್ಷೇಮಂ ಗಚ್ಛೇದಕಿಂಚನಃ ॥
ಅನುವಾದ
ಬ್ರಹ್ಮನನ್ನು ಪ್ರತಿಪಾದಿಸುವ ಈ ಉಪನಿಷತ್ತನ್ನು ಪೂರ್ವಜರಿಗೂ ಪೂರ್ವಜರಾದ ಸನಕಾದಿ ಋಷಿಗಳು ಧರಿಸಿದ್ದರು. ಯಾರಿಗೆ ಯಾವುದೇ ಕಾಮನೆ ಇಲ್ಲವೋ ಅವರೇ ಇದನ್ನು ಶ್ರದ್ಧೆಯಿಂದ ಧರಿಸಬಲ್ಲರು. ಅವರೇ ಕಲ್ಯಾಣ ಸ್ವರೂಪವಾದ ಪರಬ್ರಹ್ಮ ಪರಮಾತ್ಮನನ್ನು ಪಡೆದುಕೊಳ್ಳುತ್ತಾರೆ. ॥3॥
(ಶ್ಲೋಕ-4)
ಮೂಲಮ್
ಅತ್ರ ತೇ ವರ್ಣಯಿಷ್ಯಾಮಿ ಗಾಥಾಂ ನಾರಾಯಣಾನ್ವಿತಾಮ್ ।
ನಾರದಸ್ಯ ಚ ಸಂವಾದಮೃಷೇರ್ನಾರಾಯಣಸ್ಯ ಚ ॥
ಅನುವಾದ
ಈ ವಿಷಯದಲ್ಲಿ ಭಗವಾನ್ ನಾರಾಯಣನಿಗೆ ಸಂಬಂಧಿಸಿದ ಒಂದು ಕಥೆಯನ್ನು ಹೇಳುವೆನು. ಅದರಲ್ಲಿ ದೇವಋಷಿ ನಾರದರು ಮತ್ತು ಋಷಿಶ್ರೇಷ್ಠ ನಾರಾಯಣನ ಸಂವಾದವಿದೆ.॥4॥
(ಶ್ಲೋಕ-5)
ಮೂಲಮ್
ಏಕದಾ ನಾರದೋ ಲೋಕಾನ್ ಪರ್ಯಟನ್ ಭಗವತ್ಪ್ರಿಯಃ ।
ಸನಾತನಮೃಷಿಂ ದ್ರಷ್ಟುಂ ಯಯೌ ನಾರಾಯಣಾಶ್ರಮಮ್ ॥
ಅನುವಾದ
ಒಮ್ಮೆ ಭಗವಂತನ ಪ್ರಿಯಭಕ್ತರಾದ ದೇವಋಷಿ ನಾರದರು ಬೇರೆ-ಬೇರೆ ಲೋಕಗಳಲ್ಲಿ ಸಂಚರಿಸುತ್ತಾ ಸನಾತನ ಋಷಿಗಳಾದ ಭಗವಾನ್ ನಾರಾಯಣನನ್ನು ದರ್ಶಿಸಲು ಬದರಿಕಾಶ್ರಮಕ್ಕೆ ತೆರಳಿದನು. ॥5॥
(ಶ್ಲೋಕ-6)
ಮೂಲಮ್
ಯೋ ವೈ ಭಾರತವರ್ಷೇಸ್ಮಿನ್ ಕ್ಷೇಮಾಯ ಸ್ವಸ್ತಯೇ ನೃಣಾಮ್ ।
ಧರ್ಮಜ್ಞಾನಶಮೋಪೇತಮಾಕಲ್ಪಾದಾಸ್ಥಿತಸ್ತಪಃ ॥
ಅನುವಾದ
ಭಗವಾನ್ ನಾರಾಯಣನು ಮನಷ್ಯರ ಅಭ್ಯುದಯ (ಲೌಕಿಕ ಕಲ್ಯಾಣ)ಕ್ಕಾಗಿ ಮತ್ತು ನಿಃಶ್ರೇಯಸ್ಸಿಗಾಗಿ (ಮೋಕ್ಷ ಪ್ರಾಪ್ತಿಗಾಗಿ) ಈ ಭಾರತ ವರ್ಷದಲ್ಲಿ ಕಲ್ಪದ ಪ್ರಾರಂಭದಿಂದಲೇ ಧರ್ಮ, ಜ್ಞಾನ, ಸಂಯಮದೊಂದಿಗೆ ಮಹಾತಪಸ್ಸನ್ನು ಮಾಡುತ್ತಿದ್ದನು. ॥6॥
(ಶ್ಲೋಕ-7)
ಮೂಲಮ್
ತತ್ರೋಪವಿಷ್ಟಮೃಷಿಭಿಃ ಕಲಾಪಗ್ರಾಮವಾಸಿಭಿಃ ।
ಪರೀತಂ ಪ್ರಣತೋಪೃಚ್ಛದಿದಮೇವ ಕುರೂದ್ವಹ ॥
(ಶ್ಲೋಕ-8)
ಮೂಲಮ್
ತಸ್ಮೈ ಹ್ಯವೋಚದ್ಭಗವಾನ್ಋಷೀಣಾಂ ಶೃಣ್ವತಾಮಿದಮ್ ।
ಯೋ ಬ್ರಹ್ಮವಾದಃ ಪೂರ್ವೇಷಾಂ ಜನಲೋಕನಿವಾಸಿನಾಮ್ ॥
ಅನುವಾದ
ನಾರದರು ಬದರಿಕಾಶ್ರಮಕ್ಕೆ ಹೋಗಿ ಭಗವಾನ್ ನಾರಾಯಣನಿಗೆ ನಮಸ್ಕಾರ ಮಾಡಿ ವಿನಮ್ರಭಾವದಿಂದ ಕುಳಿತು ತತ್ತ್ವದ ಬಗೆಗೆ ಇದೇ ಪ್ರಶ್ನೆಮಾಡಿದರು. ಭಗವಂತನು ಆ ಕಲಾಪಗ್ರಾಮ ವಾಸಿಗಳಾದ ಋಷಿಗಳ ಸಮಕ್ಷಮದಲ್ಲೇ ಈ ವಿಷಯವಾಗಿ ತಿಳಿಸಿದ್ದನು. ಪ್ರಿಯಪರೀಕ್ಷಿತನೇ! ನೀನೂ ಕೂಡ ಈಗ ನನ್ನಲ್ಲಿ ಆ ಬ್ರಹ್ಮನ ವಿಷಯದಲ್ಲೇ ಕೇಳುತ್ತಿರುವೆ. ಬ್ರಹ್ಮನ ಸ್ವರೂಪದ ವಿಷಯದಲ್ಲಿ ನಾನು ನಿನಗೆ ಹೇಳುವುದನ್ನು ನೀನು ಭಗವಾನ್ ನಾರಾಯಣನ ಶಬ್ದಗಳಲ್ಲೇ ಕೇಳು, ಇದನ್ನು ಬಹಳ ಹಿಂದೆ ಸ್ವತಃ ಭಗವಾನ್ ನಾರಾಯಣನು ಜನೋಲೋಕ ನಿವಾಸಿಗಳಾದ ಸನಕಾದಿ ಋಷಿಗಳಿಗೆ ಹೇಳಿದ್ದನು. ಅಲ್ಲಿಯೂ ಬ್ರಹ್ಮವಿಷಯಕವಾದ ಚರ್ಚೆಯೇ ನಡೆಯುತ್ತಿತ್ತು. ॥7-8॥
(ಶ್ಲೋಕ-9)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಸ್ವಾಯಂಭುವ ಬ್ರಹ್ಮಸತ್ರಂ ಜನಲೋಕೇಭವತ್ಪುರಾ ।
ತತ್ರಸ್ಥಾನಾಂ ಮಾನಸಾನಾಂ ಮುನೀನಾಮೂರ್ಧ್ವರೇತಸಾಮ್ ॥
ಅನುವಾದ
ಭಗವಾನ್ ನಾರಾಯಣನು ಹೇಳಿದನು — ಪ್ರಿಯನಾರದನೇ! ಒಮ್ಮೆ ಜನೋಲೋಕದಲ್ಲಿ ಇಂತಹುದೇ ಒಂದು ಬ್ರಹ್ಮಸತ್ರ ನಡೆದಿತ್ತು. ಆ ಸತ್ರವು ಅಲ್ಲಿ ವಾಸಿಸುವ ಬ್ರಹ್ಮಮಾನಸ ಪುತ್ರರಾದ ಸನಕ, ಸನಂದನ, ಸನಾತನ, ಸನತ್ಕುಮಾರ ಇವರ ನಡುವೆ ನಡೆದಿತ್ತು. ಇವರು ನಾಲ್ವರೂ ನೈಷ್ಠಿಕ ಬ್ರಹ್ಮಚಾರಿಗಳಾಗಿದ್ದಾರೆ. ॥9॥
(ಶ್ಲೋಕ-10)
ಮೂಲಮ್
ಶ್ವೇತದ್ವೀಪಂ ಗತವತಿ ತ್ವಯಿ ದ್ರಷ್ಟುಂ ತದೀಶ್ವರಮ್ ।
ಬ್ರಹ್ಮವಾದಃ ಸುಸಂವೃತ್ತಃ ಶ್ರುತಯೋ ಯತ್ರ ಶೇರತೇ ।
ತತ್ರ ಹಾಯಮಭೂತ್ ಪ್ರಶ್ನಸ್ತ್ವಂ ಮಾಂ ಯಮನುಪೃಚ್ಛಸಿ ॥
ಅನುವಾದ
ಆ ಸಮಯದಲ್ಲಿ ನೀನು ಶ್ವೇತ ದ್ವೀಪಾಧಿಪತಿಯಾದ ನನ್ನ ಅನಿರುದ್ಧ ಮೂರ್ತಿಯನ್ನು ದರ್ಶನ ಮಾಡಲು ಹೋಗಿದ್ದೆ. ಆ ಸಮಯದಲ್ಲಿ ಜನೋಲೋಕದಲ್ಲಿ ಬ್ರಹ್ಮನ ವಿಷಯದಲ್ಲಿ ಬಹಳ ಸುಂದರವಾದ ಚರ್ಚೆನಡೆಯಿತು. ಈ ವಿಷಯದಲ್ಲಿ, ಶ್ರುತಿಗಳೂ ಕೂಡ ವರ್ಣಿಸಲಾರವು. ಅಲ್ಲಿ ‘ಶ್ರುತಿಗಳು ಹೇಗೆ ನಿರ್ಗುಣ ಬ್ರಹ್ಮನನ್ನು ವರ್ಣಿಸಬಲ್ಲವು?’ ಎಂದು ನೀನು ನನ್ನಲ್ಲಿ ಕೇಳಿರುವ ಪ್ರಶ್ನೆಯೇ ಪ್ರಸ್ತುತವಾಗಿತ್ತು. ॥10॥
(ಶ್ಲೋಕ-11)
ಮೂಲಮ್
ತುಲ್ಯ ಶ್ರುತತಪಃಶೀಲಾಸ್ತುಲ್ಯಸ್ವೀಯಾರಿಮಧ್ಯಮಾಃ ।
ಅಪಿ ಚಕ್ರುಃ ಪ್ರವಚನಮೇಕಂ ಶುಶ್ರೂಷವೋಪರೇ ॥
ಅನುವಾದ
ಸನಕಾದಿ ನಾಲ್ವರೂ ಋಷಿಗಳು ಶಾಸ್ತ್ರೀಯ ಜ್ಞಾನದಿಂದ ಸಂಪನ್ನರಾಗಿದ್ದರು. ತಪಸ್ಸು, ಶೀಲ-ಸ್ವಭಾವಗಳಲ್ಲಿಯೂ ಸಮಾನರಾಗಿದ್ದರು. ಅವರ ದೃಷ್ಟಿಯಲ್ಲಿ ಶತ್ರು-ಮಿತ್ರ ಉದಾಸೀನ-ಇವರುಗಳು ಒಂದೇ ಆಗಿದ್ದರು. ಅವರು ತಮ್ಮಲ್ಲಿ ಸನಂದನನ್ನು ಪ್ರವಚನಕಾರನನ್ನಾಗಿ ಮಾಡಿ ಉಳಿದ ಮೂವರೂ ಶ್ರೋತೃಗಳಾದರು. ॥11॥
(ಶ್ಲೋಕ-12)
ಮೂಲಮ್ (ವಾಚನಮ್)
ಸನಂದನ ಉವಾಚ
ಮೂಲಮ್
ಸ್ವಸೃಷ್ಟಮಿದಮಾಪೀಯ ಶಯಾನಂ ಸಹ ಶಕ್ತಿಭಿಃ ।
ತದಂತೇ ಬೋಧಯಾಂಚಕ್ರುಸ್ತಲ್ಲಿಂಗೈಃ ಶ್ರುತಯಃ ಪರಮ್ ॥
(ಶ್ಲೋಕ-13)
ಮೂಲಮ್
ಯಥಾ ಶಯಾನಂ ಸಮ್ರಾಜಂ ವಂದಿನಸ್ತತ್ಪರಾಕ್ರಮೈಃ ।
ಪ್ರತ್ಯೂಷೇಭ್ಯೇತ್ಯ ಸುಶ್ಲೋಕೈರ್ಬೋಧಯಂತ್ಯನುಜೀವಿನಃ ॥
ಅನುವಾದ
ಸನಂದನರು ಹೇಳುತ್ತಾರೆ — ಪರಮಾತ್ಮನು ತಾನೇ ಸೃಷ್ಟಿಸಿದ್ದ ಜಗತ್ತನ್ನು ತನ್ನೊಳಗೆ ಲೀನವಾಗಿಸಿಕೊಂಡು ತನ್ನ ಶಕ್ತಿಗಳೊಂದಿಗೆ ಯೋಗನಿದ್ರಾವಶನಾಗಿ ಮಲಗಿದ್ದು, ಪ್ರಳಯ ಕಾಲವು ಮುಗಿದು ಪುನಃ ಸೃಷ್ಟಿಯ ಸಮಯವು ಬಂದಾಗ- ಮಲಗಿರುವ ಸಾಮ್ರಾಟನನ್ನು ಎಚ್ಚರಿಸಲು ಪ್ರಾತಃಕಾಲದಲ್ಲಿ ರಾಜೋಪಜೀವಿಗಳಾದ ವಂದಿಜನರು ಬಂದು ಅವನ ಪರಾಕ್ರಮಗಳನ್ನು ಮತ್ತು ಸತ್ಕೀರ್ತಿಯನ್ನು ವರ್ಣಿಸಿ ಎಬ್ಬಿಸುವಂತೆಯೇ-ಶುತ್ರಿಗಳು ಪರಮಾತ್ಮನನ್ನು ಪ್ರತಿಪಾದಿಸುವ ಸೂಕ್ತಗಳಿಂದ ಎಚ್ಚರಗೊಳಿಸಿದವು. ॥12-13॥
(ಶ್ಲೋಕ-14)
ಮೂಲಮ್ (ವಾಚನಮ್)
ಶ್ರುತಯ ಊಚುಃ
ಮೂಲಮ್
ಜಯ ಜಯ ಜಹ್ಯಜಾಮಜಿತ ದೋಷಗೃಭೀತಗುಣಾಂ
ತ್ವಮಸಿ ಯದಾತ್ಮನಾ ಸಮವರುದ್ಧಸಮಸ್ತಭಗಃ ।
ಅಗಜಗದೋಕಸಾಮಖಿಲಶಕ್ತ್ಯವಬೋಧಕ ತೇ
ಕ್ವಚಿದಜಯಾತ್ಮನಾ ಚ ಚರತೋನುಚರೇನ್ನಿಗಮಃ ॥
ಅನುವಾದ
ಶ್ರುತಿಗಳು ಹೇಳುತ್ತವೆ — ಅಜಿತನೇ! ನೀನು ಸರ್ವಶ್ರೇಷ್ಠ ನಾಗಿರುವೆ. ನಿನಗೆ ಜಯವಾಗಲಿ! ಜಯವಾಗಲಿ! ಈ ಚರಾಚರ ಜಗತ್ತಿನ ಆನಂದಾದಿ ಗುಣಗಳನ್ನು ಮರೆಮಾಡುವುದಕ್ಕಾಗಿಯೇ ಈ ಮಾಯೆಯು ಸತ್ತ್ವಾದಿಗುಣಗಳನ್ನು ಸ್ವೀಕರಿಸಿದೆ. ಅಂತಹ ಮಾಯೆಯನ್ನು ನೀನು ನಾಶಗೊಳಿಸು. ಏಕೆಂದರೆ, ನೀನೇ ಸಾಕ್ಷಾತ್ತಾಗಿ ಸಮಸ್ತ ಐಶ್ವರ್ಯಗಳಿಂದ ಪರಿಪೂರ್ಣನಾಗಿರುವೆ. ಆದ್ದರಿಂದ ಮನುಷ್ಯರೇ ಆದಿಯಾಗಿ ಸಮಸ್ತ ಪ್ರಾಣಿಗಳ ಜ್ಞಾನ ವೈರಾಗ್ಯ ಮುಂತಾದ ಶಕ್ತಿಗಳನ್ನು ಜಾಗ್ರತಗೊಳಿಸುವವನೂ ನೀನೇ ಆಗಿರುವೆ. ಕೆಲವೊಮ್ಮೆ ನೀನು ಮಾಯೆಯಿಂದ ಜಗತ್ತಿನ ರೂಪದಲ್ಲಿ ಪ್ರಕಟನಾಗುವೆ. ಕೆಲವೊಮ್ಮೆ ಸಚ್ಚಿದಾನಂದ ಸ್ವರೂಪದಲ್ಲಿ ಸ್ಥಿತನಾಗಿರುವೆ. ಎಂದಾದರೂ ನೀನು ವಿಶ್ವವನ್ನು ನಿರ್ಮಿಸುವ ಸಂಕಲ್ಪವನ್ನೂ ಮಾಡಿದಾಗ ಸೃಷ್ಟಿ, ಸ್ಥಿತಿ, ಸಂಹಾರದ ಲೀಲೆಯನ್ನು ಮಾಡುವೆ. (ಅಥವಾ ಜಗತ್ತಿನ ಕಲ್ಯಾಣಕ್ಕಾಗಿ, ಅವತರಿಸಿಯೂ ಲೀಲೆ ಮಾಡುವೆ.) ಅಂತಹ ನಿನ್ನ ಸಗುಣ ರೂಪವನ್ನು ವರ್ಣಿಸುವುದರಲ್ಲಿ ಶ್ರುತಿಗಳಾದ ನಾವು ಯತ್ಕಿಂಚಿತ್ ಸಮರ್ಥರಾಗುತ್ತೇವೆ. ॥14॥
(ಶ್ಲೋಕ-15)
ಮೂಲಮ್
ಬೃಹದುಪಲಬ್ಧಮೇತದವಯಂತ್ಯವಶೇಷತಯಾ
ಯತ ಉದಯಾಸ್ತಮಯೌ ವಿಕೃತೇರ್ಮೃದಿ ವಾವಿಕೃತಾತ್ ।
ಅತ ಋಷಯೋ ದಧುಸ್ತ್ವಯಿ ಮನೋವಚನಾಚರಿತಂ
ಕಥಮಯಥಾ ಭವಂತಿ ಭುವಿ ದತ್ತಪದಾನಿ ನೃಣಾಮ್ ॥
ಅನುವಾದ
ಪ್ರಭುವೇ! ಈ ಸಮಸ್ತ ಜಗತ್ತು ನಿನ್ನಿಂದಲೇ ಉತ್ಪನ್ನವಾಗಿದೆ. ಅದಕ್ಕಾಗಿ ಈ ಸಂಪೂರ್ಣ ಜಗತ್ತು ಬ್ರಹ್ಮನದೇ ಸ್ವರೂಪವಾಗಿದೆ. ಪರಮಜ್ಞಾನಿಗಳು ಇಡೀ ವಿಶ್ವವನ್ನು ಬ್ರಹ್ಮಮಯವಾಗಿ ಭಾವಿಸುತ್ತಾರೆ. ಏಕೆಂದರೆ, ಇದು ಬ್ರಹ್ಮನಿಂದಲೇ ಉತ್ಪನ್ನವಾಗಿದೆ ಮತ್ತು ಬ್ರಹ್ಮನಲ್ಲೇ ವಿಲೀನಗೊಳ್ಳುವುದು. ಶೇಷವಾಗಿ ಪರಮಾತ್ಮನೇ ಉಳಿಯುವನು. ಅದಕ್ಕಾಗಿ ತತ್ತ್ವದೃಷ್ಟಿಯಿಂದ ಏಕಮಾತ್ರ ಪರಬ್ರಹ್ಮನ ಸತ್ತೆಯೆ ಇದೆ. ಮಣ್ಣಿನಿಂದ ನಿರ್ಮಿಸಿದ ನಾನಾತರಹದ ಪಾತ್ರೆಗಳಲ್ಲಿ ಬೇರೆ-ಬೇರೆ ಆಕೃತಿಗಳು ಇರುತ್ತವೆ. ಪಾತ್ರೆಗಳು ಆಗುವ ಮೊದಲು ಮಣ್ಣೇ ಇತ್ತು; ಪಾತ್ರೆಗಳು ನಾಶವಾದಾಗಲೂ ಮಣ್ಣೇ ಉಳಿಯುತ್ತದೆ. ಮಣ್ಣು ಅವಿಕಾರೀ-ರೂಪದಿಂದ ಒಂದೇ ಆಗಿರುತ್ತದೆ. ಹಾಗೆಯೇ ಪ್ರಪಂಚದ ನಿರ್ಮಾಣವು ನಿನ್ನಿಂದಲೇ ಆಗುವುದರಿಂದ ಇದರ ಆದಿ-ಮಧ್ಯ-ಅಂತ್ಯಗಳಲ್ಲಿ ಅವಿಕಾರೀರೂಪದಿಂದ ನೀನೇ ಇರುತ್ತೀಯೆ. ಪ್ರಕೃತಿಯ ಕಾರ್ಯ ರೂಪವಾದ ಜಗತ್ತಿನಲ್ಲಿ ಪ್ರತಿಕ್ಷಣವೂ ಪರಿವರ್ತನೆಯಾಗುತ್ತಾ ಇರುತ್ತದೆ. ಅದಕ್ಕಾಗಿ ಋಷಿಗಳ ಮನಸ್ಸಿನಿಂದಾಗುವ ಚಿಂತನೆ, ವಾಣಿಯಿಂದ ಹೇಳುವ ಮಾತು, ಅವೆಲ್ಲವೂ ಪರಬ್ರಹ್ಮನ ಚಿಂತನ-ಮನನ, ವರ್ಣನೆಯೇ ಆಗುತ್ತದೆ. ಮನುಷ್ಯನು ಎಲ್ಲೇ ಕಾಲಿಟ್ಟರೂ ಅದು ಪೃಥಿವಿಯ ಮೇಲೆಯೇ ಇಟ್ಟಂತಾಗುವುದು. ಏಕೆಂದರೆ, ಅವೆಲ್ಲವೂ ಪೃಥಿವಿಯ ಸ್ವರೂಪವೇ ಆಗಿದೆ. ಹಾಗೆಯೇ ಅಗ್ನಿ, ವರುಣ, ಇಂದ್ರ ಮುಂತಾದರೂಪಗಳಲ್ಲಿ ಮಾಡುವ ಉಪಾಸನೆಯೆಲ್ಲವೂ ಬ್ರಹ್ಮನ ಉಪಾಸನೆಯೇ ಆಗಿದೆ. ಅದಕ್ಕಾಗಿ ಶ್ರುತಿಗಳಾದ ನಾವು ಯಾವುದೇ ನಾಮ ರೂಪದಿಂದ ವರ್ಣಿಸಿದರೂ ಅದೆಲ್ಲವೂ ನಿನ್ನ ವರ್ಣನೆಯೇ ಆಗುವುದು. ॥15॥
(ಶ್ಲೋಕ-16)
ಮೂಲಮ್
ಇತಿ ತವ ಸೂರಯಸ್ಯಧಿಪತೇಖಿಲಲೋಕಮಲ-
ಕ್ಷಪಣಕಥಾಮೃತಾಬ್ಧಿಮವಗಾಹ್ಯ ತಪಾಂಸಿ ಜಹುಃ ।
ಕಿಮುತ ಪುನಃ ಸ್ವಧಾಮವಿಧುತಾಶಯಕಾಲಗುಣಾಃ
ಪರಮ ಭಜಂತಿ ಯೇ ಪದಮಜಸ್ರಸುಖಾನುಭವಮ್ ॥
ಅನುವಾದ
ಓ ತ್ರೈಲೋಕ್ಯಾಧಿಪತಿಯೇ! ಪರಮಾತ್ಮನೇ! ನಿನ್ನ ತತ್ತ್ವ ರಹಸ್ಯವನ್ನು ತಿಳಿದ ಭಕ್ತರಲ್ಲಿ ಎಷ್ಟೋ ಭಕ್ತರಾದರೋ ನಿನ್ನ ಲೀಲಾ ಕಥಾಮೃತ ಸಾಗರದಲ್ಲಿ ಮುಳುಗಿ ತಮ್ಮ ಪಾಪ-ತಾಪಗಳನ್ನು ತೊಳೆದುಕೊಂಡು ನಿನ್ನನ್ನೇ ಹೊಂದುತ್ತಾರೆ. ಇತರ ಎಷ್ಟೋ ಭಕ್ತರು ಜ್ಞಾನಮಾರ್ಗದ ಮೂಲಕ ರಾಗ-ದ್ವೇಷಾದಿಗಳನ್ನು ಇಲ್ಲವಾಗಿಸಿ ಕರ್ಮವಾಸನೆ ಕ್ಷೀಣವಾದಾಗ ನಿನ್ನ ಸ್ವರೂಪದಲ್ಲೇ ಒಂದಾಗಿ ನಿನ್ನನ್ನೇ ಹೊಂದುತ್ತಾರೆ. ಈ ಪ್ರಕಾರ ನಿನ್ನ ಆ ಭಕ್ತರು ತಮ್ಮ ಅಂತಃ ಕರಣವನ್ನು ಆತ್ಮಜ್ಞಾನದ ಮೂಲಕ ಶಾಂತವೂ, ಪರಿಶುದ್ಧವೂ ಮಾಡಿಕೊಂಡಿರುವರು. ಆದ್ದರಿಂದ ಅವರಿಗೆ ಶರೀರದಲ್ಲಾಗುವ ಕಾಲಧರ್ಮಗಳಾದ ಜರಾ-ಮರಣವೇ ಮುಂತಾದ ದೋಷಗಳೂ ಬಾಧಿಸಲಾರವು. ಅವರಾದರೋ ನಿರಂತರವಾಗಿ ಪರಮಾನಂದವನ್ನು ಅನುಭವಿಸುತ್ತಾ ನಿನ್ನ ಭಜನೆ-ಧ್ಯಾನದಲ್ಲೇ ತೊಡಗಿರುತ್ತಾರೆ. ॥16॥
(ಶ್ಲೋಕ-17)
ಮೂಲಮ್
ದೃತಯ ಇವ ಶ್ವಸಂತ್ಯಸುಭೃತೋ ಯದಿ ತೇನುವಿಧಾ
ಮಹದಹಮಾದಯೋಂಡಮಸೃಜನ್ ಯದನುಗ್ರಹತಃ ।
ಪುರುಷವಿಧೋನ್ವಯೋತ್ರ ಚರಮೋನ್ನಮಯಾದಿಷು
ಯಃ ಸದಸತಃ ಪರಂ ತ್ವಮಥ ಯದೇಷ್ವವಶೇಷಮೃತಮ್ ॥
ಅನುವಾದ
ಪರಮಾತ್ಮನೇ! ಪ್ರಾಣಿಯು ನಿನ್ನ ಭಜನೆ-ಪೂಜೆ ಮುಂತಾದುವನ್ನು ಮಾಡಿದಾಗಲೇ ಅವರ ಜೀವನ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಅವನು ಉಸಿರಾಡುವುದು ಕಮ್ಮಾರನ ತಿದಿಯಂತೆ ವ್ಯರ್ಥವೇ ಆಗಿದೆ. ಮಹತತ್ತ್ವಾದಿ ಇರುವ ತತ್ತ್ವಗಳೆಲ್ಲವೂ ಜಡವಾಗಿವೆ. ಸೃಷ್ಟಿರಚನಾ ಕಾರ್ಯದಲ್ಲಿ ಇವುಗಳು ಸಲವಾಗದಿದ್ದಾಗ ನೀನೇ ಕೃಪೆದೋರಿ ಈ ತತ್ತ್ವಗಳಲ್ಲಿ ಅನುಪ್ರವೇಶ ಮಾಡಿದಾಗಲೇ ಇವು ಸೃಷ್ಟಿನಿರ್ಮಾಣ ಕಾರ್ಯದಲ್ಲಿ ಸಫಲರಾದುವು. ಹೀಗೆ ನಿನ್ನ ಅನುಗ್ರಹದಿಂದಲೇ ಸೃಷ್ಟಿಯ ನಿರ್ಮಾಣವಾಯಿತು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳಲ್ಲಿ ಆಯಾಯ ಶರೀರಕ್ಕನುಸಾರವಾಗಿ ನೀನೇ ಪುರುಷರೂಪದಿಂದ ಇರುತ್ತೀಯೆ. ಇವುಗಳಲ್ಲಿ ಕಡೆಯದಾದ ಆನಂದ ಮಯಕೋಶವು ನಿನ್ನದೇ ಸ್ವರೂಪವಾಗಿದೆ. ಆ ಆನಂದಮಯ ಕೋಶವು ನಿನ್ನನ್ನು ಪಡೆಯುವ ಸ್ಥಾನವಾಗಿದೆ. ನೀನು ಅದರಿಂದಲೂ ಬೇರೆ ಆಗಿರುವೆ. ಸತ್-ಅಸತ್ ಅರ್ಥಾತ್ ಕಾರ್ಯ-ಕಾರಣರೂಪವಾದ ಜಗತ್ತಿಗಿಂತ ನೀನು ಅತೀತನಾಗಿರುವೆ. ಆದ್ದರಿಂದ ಜ್ಞಾನಿಗಳು ಈ ಸಮಗ್ರ ಜಗತ್ತನ್ನು ‘ನೇತಿ-ನೇತಿ’ ಈ ಉಪನಿಷದ್ವಾಕ್ಯದಿಂದ ನಿರಾಕರಣ ಮಾಡಿದ ಮೇಲೆ ಉಳಿಯುವ ಪರಮಾತ್ಮ ತತ್ತ್ವವನ್ನೇ ಋತ್ ಅರ್ಥಾತ್ ಸತ್ಯವೆಂದು ತಿಳಿಯುತ್ತಾರೆ. ಆ ಸತ್ಯ-ತತ್ತ್ವವು ನೀನೇ ಆಗಿರುವೆ. ॥17॥
(ಶ್ಲೋಕ-18)
ಮೂಲಮ್
ಉದರಮುಪಾಸತೇ ಯ ಋಷಿವರ್ತ್ಮಸು ಕೂರ್ಪದೃಶಃ
ಪರಿಸರಪದ್ಧತಿಂ ಹೃದಯಮಾರುಣಯೋ ದಹರಮ್ ।
ತತ ಉದಗಾದನಂತ ತವ ಧಾಮ ಶಿರಃ ಪರಮಂ
ಪುನರಿಹ ಯತ್ಸಮೇತ್ಯ ನ ಪತಂತಿ ಕೃತಾಂತಮುಖೇ ॥
ಅನುವಾದ
ಪ್ರಭುವೇ! ಋಷಿಗಳು ನಿನ್ನ ಪ್ರಾಪ್ತಿಗಾಗಿ ಅನೇಕ ಮಾರ್ಗಗಳನ್ನು ಹೇಳಿರುವರು. ಅವರಲ್ಲಿ ಸ್ಥೂಲದೃಷ್ಟಿಯುಳ್ಳವರು ಮಣಿಪೂರ ಚಕ್ರದಲ್ಲಿ (ನಾಭಿಯಲ್ಲಿ) ಅಗ್ನಿ ರೂಪದಿಂದ ನಿನ್ನನ್ನು ಉಪಾಸಿಸುತ್ತಾರೆ. ಇತರ ಅರುಣ ವಂಶದ ಋಷಿಗಳು ಸಮಸ್ತ ನಾಡಿಗಳಿಗೂ ಪ್ರಸರಣ ಸ್ಥಾನ ವೆನಿಸಿದ ಅನಾಹತಚಕ್ರದಲ್ಲಿ (ಹೃದಯದಲ್ಲಿ) ದಹರಾಕಾಶ ರೂಪವಾದ ಬ್ರಹ್ಮನನ್ನು ಉಪಾಸಿಸುತ್ತಾರೆ. ಹೇ ಅನಂತ! ನಿನ್ನನ್ನು ಪಡೆಯುವ ಶ್ರೇಷ್ಠಮಾರ್ಗವಾದ ಹೃದಯದಿಂದ ಮಸ್ತಿಷ್ಕದಲ್ಲಿ ಬ್ರಹ್ಮರಂಧ್ರ (ಸಹಸ್ರಾರ)ದವರೆಗೆ ಹೋಗಿರುವ ಸುಷುಮ್ನಾನಾಡಿಯಾದ ಜೋತಿರ್ಮಯ ಮಾರ್ಗದ ಮೂಲಕ ಯೋಗಿಯು ಮೇಲಕ್ಕೆ ಹೋಗಿ ನಿನ್ನನ್ನು ಪಡೆದುಕೊಳ್ಳುವನು. ಇದಕ್ಕೆ ಅರ್ಚಿರಾದಿ ಮಾರ್ಗವೆಂದು ಹೇಳುತ್ತಾರೆ. ನಿನ್ನನ್ನು ಪಡೆದ ಮೇಲೆ ಜೀವನು ಜನ್ಮ-ಮರಣ ಚಕ್ರದಿಂದ ಬಿಡುಗಡೆ ಹೊಂದುವನು. ॥18॥
(ಶ್ಲೋಕ-19)
ಮೂಲಮ್
ಸ್ವಕೃತವಿಚಿತ್ರಯೋನಿಷು ವಿಶನ್ನಿವ ಹೇತುತಯಾ
ತರತಮತಶ್ಚಕಾಸ್ಸ್ಯನಲವತ್ ಸ್ವಕೃತಾನುಕೃತಿಃ ।
ಅಥ ವಿತಥಾಸ್ವಮೂಷ್ವವಿತಥಂ ತವ ಧಾಮ ಸಮಂ
ವಿರಜಧಿಯೋನ್ವಯಂತ್ಯಭಿವಿಪಣ್ಯವ ಏಕರಸಮ್ ॥
ಅನುವಾದ
ಭಗವಂತನೇ! ನೀನೇ ನಾನಾ ಪ್ರಕಾರದ ಯೋನಿಗಳನ್ನು ನಿರ್ಮಿಸಿ, ಅವುಗಳಲ್ಲಿ ಕಾರಣರೂಪದಿಂದ ಪ್ರವೇಶಿಸಿರುವಂತೆ ಕಾಣುವೆ. ನೀನಾದರೋ ಸರ್ವ ವ್ಯಾಪಕನಾಗಿರುವೆ. ಮತ್ತೆ ನೀನು ಪ್ರವೇಶಮಾಡಿದೆ ಎಂಬ ಮಾತು ಹೇಗೆ ಹೇಳಬಹುದು? ಹೀಗಿದ್ದರೂ ಪ್ರವೇಶಿಸಿದಂತೆಯೇ ಅನಿಸುವುದು. ಅಗ್ನಿಯು ಎಲ್ಲ ಕಡೆಗಳಲ್ಲಿ ಸಮಾನವಾಗಿ ಇದ್ದರೂ ಕಟ್ಟಿಗೆಯ ಆಕೃತಿಯ ಭೇದದಿಂದ ಬೇರೆ-ಬೇರೆ ರೂಪದಲ್ಲಿ ಕಂಡುಬರುವಂತೆಯೇ ನೀನು ಸದಾ ಸರ್ವದಾ ಸರ್ವತ್ರ ಏಕರಸವಾಗಿ ಸಮಭಾವದಿಂದ ವ್ಯಾಪಕನಾಗಿರುವೆ. ಆನಂದ ಸ್ವರೂಪನಾಗಿರುವೆ, ಸತ್ಯಸ್ವರೂಪನಾಗಿರುವೆ. ಹೀಗಿದ್ದರೂ ಕೆಲವು ಕಡೆ ಉತ್ತಮರೂಪದಿಂದಲೂ, ಕೆಲವೆಡೆಗಳಲ್ಲಿ ಕನಿಷ್ಠರೂಪದಲ್ಲಿಯೂ ಕಾಣಿಸಿಕೊಳ್ಳುವೆ. ನಿರ್ಮಲ ಬುದ್ಧಿಯುಳ್ಳ ಮಹಾಪುರುಷರು ಕರ್ಮಗಳ ಫಲದ ಕಾಮನೆಯಿಂದ ರಹಿತರಾಗಿ ಪ್ರಾಪಂಚಿಕ ಸತ್ತೆಯನ್ನು ಹಾಗೂ ಆ ಆಕೃತಿಗಳನ್ನು ಮಿಥ್ಯೆಯೆಂದು ತಿಳಿದು ಹೊರಗಿನ ನಾಮ-ರೂಪಗಳನ್ನು ತ್ಯಜಿಸಿ ತತ್ತ್ವರೂಪದಿಂದ ಏಕಮಾತ್ರ ಪರಮಾತ್ಮಸತ್ತೆಯನ್ನೇ ಯಾವಾಗಲೂ ಎಲ್ಲೆಡೆಯಲ್ಲಿ ಸಾಕ್ಷಾತ್ಕರಿಸಿಕೊಳ್ಳುತ್ತಾರೆ. ॥19॥
(ಶ್ಲೋಕ-20)
ಮೂಲಮ್
ಸ್ವಕೃತಪುರೇಷ್ವಮೀಷ್ವಬಹಿರಂತರಸಂವರಣಂ
ತವ ಪುರುಷಂ ವದಂತ್ಯಖಿಲಶಕ್ತಿಧೃತೋಂಶಕೃತಮ್ ।
ಇತಿ ನೃಗತಿಂ ವಿವಿಚ್ಯ ಕವಯೋ ನಿಗಮಾವಪನಂ
ಭವತ ಉಪಾಸತೇಂಘ್ರಿಮಭವಂ ಭುವಿ ವಿಶ್ವಸಿತಾಃ ॥
ಅನುವಾದ
ಜೀವಿಯ ಎಲ್ಲ ಶರೀರಗಳನ್ನು ನೀನೇ ನಿರ್ಮಾಣ ಮಾಡಿರುವೆ. ಆ ಶರೀರಗಳಲ್ಲಿರುವ ಜೀವನು ಏಕಮಾತ್ರ ನಿನ್ನದೇ ಸನಾತನ ಅಂಶನಾಗಿರುವವನು. (ಮಮೈವಾಂಶೋ ಜೀವಲೋಕೆ ಜೀವ ಭೂತಃ ಸನಾತನಃ - ಭಗವದ್ಗೀತೆ) ಜಡತತ್ತ್ವಗಳಿಂದ ನಿನ್ನ ಸ್ವರೂಪವು ಅತೀತವಾಗಿರುವಂತೆಯೇ ನಿನ್ನದೇ ಅಂಶನಾದ ಕಾರಣ ನಿನಗೆ ಪಿತಾ-ಪುತ್ರರಂತೆ ಸಂಬಂಧವಿದೆ. ಇವನ ವಾಸ್ತವಿಕ ಸ್ವರೂಪವೂ ಜಡದಿಂದ ಪೂರ್ಣವಾಗಿ ಅತೀತವಾಗಿದೆ. ನಿನ್ನಿಂದ ರಚಿಸಲ್ಪಟ್ಟ ಶರೀರಗಳಲ್ಲಿ ಜೀವನು (ಅಂತಃಸಂವರಣಮ್ ಅರ್ಥಾತ್-ಪ್ರಕೃತಿಯ ಕಾರಣದ ಆವರಣ ಮತ್ತು ಬಹಿಃ ಸಂವರಣಮ್ ಅರ್ಥಾತ್ - ಪ್ರಕೃತಿಯ ಕಾರ್ಯರೂಪವಾದ ಶರೀರದ-ಆವರಣ) ಈ ಎರಡೂ ಆವರಣಗಳಿಂದ ರಹಿತನಾಗಿದ್ದಾನೆ. ಅರ್ಥಾತ್-ಜಡ ಪ್ರಕೃತಿಗಿಂತ ಪರನಾಗಿದ್ದಾನೆ. ನಿನ್ನ ವಾಸ್ತವಿಕ ಸ್ವರೂಪವು ಶುದ್ಧ ಚೇತನವು ಆನಂದ ಸ್ವರೂಪವೂ, ಅವಿನಾಶಿಯೂ ಆಗಿರುವಂತೆಯೇ ಜೀವನೂ ಕೂಡ ಚೇತನನೂ, ಶುದ್ಧನೂ, ಸಹಜಸುಖರಾಶಿಯೂ, ಅವಿನಾಶಿಯೂ ಆಗಿರುವನು. ತತ್ತ್ವಜ್ಞಾನಿಗಳು ಇವನನ್ನು ಸಮಸ್ತ ಶಕ್ತಿಗಳನ್ನು ಧರಿಸುವಂತಹ ನಿನ್ನದೇ ಸನಾತನ ಅಂಶವೆಂದು ಭಾವಿಸುತ್ತಾರೆ. ಜೀವಿಯ ಇಂತಹ ಮಹತ್ವವನ್ನು ಅರಿತು ಜ್ಞಾನಿಗಳು ನಿನ್ನ ಚರಣಗಳ ಉಪಾಸನೆಯನ್ನೇ ಮಾಡುತ್ತಾರೆ. ನಿನ್ನ ಚರಣಗಳ ಸೇವೆ-ಪೂಜೆಗಳು ಸಂಸಾರ ಚಕ್ರವನ್ನು ನಾಶಮಾಡುತ್ತವೆ. ಎಲ್ಲ ವಿಧದ ಲೌಕಿಕ-ವೈದಿಕ ಕರ್ಮಗಳ ಸಮರ್ಪಣ ಸ್ಥಾನವೂ ನಿನ್ನ ಈ ಚರಣಕಮಲಗಳೇ ಆಗಿವೆ. ಇಂತಹ ದೃಢನಿಶ್ಚಯದೊಂದಿಗೆ ನಿನ್ನ ಉಪಾಸನೆ ಮಾಡುತ್ತಾ ನಿನ್ನ ಭಕ್ತರು ವೈಕುಂಠಧಾಮಕ್ಕೆ ಹೋಗುತ್ತಾರೆ.॥20॥
ಮೂಲಮ್
(ಶ್ಲೋಕ-21)
ಮೂಲಮ್
ದುರವಗಮಾತ್ಮತತ್ತ್ವನಿಗಮಾಯ ತವಾತ್ತತನೋ-
ಶ್ಚರಿತಮಹಾಮೃತಾಬ್ಧಿಪರಿವರ್ತಪರಿಶ್ರಮಣಾಃ ।
ನ ಪರಿಲಷಂತಿ ಕೇಚಿದಪವರ್ಗಮಪೀಶ್ವರ ತೇ
ಚರಣಸರೋಜಹಂಸಕುಲಸಂಗವಿಸೃಷ್ಟಗೃಹಾಃ ॥
ಅನುವಾದ
ಈಶ್ವರನೇ! ಪರಮಾತ್ಮತತ್ತ್ವದ ಜ್ಞಾನವನ್ನು ಪಡೆಯುವುದು ಬಹಳ ಕಠಿಣವಾಗಿದೆ. ಹೀಗೆ ವಿಚಾರಮಾಡಿ, ಜೀವಿಗಳ ಮೇಲೆ ಅನುಗ್ರಹವನ್ನು ಮಾಡುವುದಕ್ಕಾಗಿ ಹಾಗೂ ಅವರನ್ನು ಸಂಸಾರ ಚಕ್ರದಿಂದ ಬಿಡುಗಡೆಗೊಳಿಸಲು ನೀನು ನಾನಾ ಪ್ರಕಾರದ ಅವತಾರಗಳನ್ನು ಧರಿಸಿ ಅಮೃತ ಸಾಗರದಂತೆ ಲೀಲೆಗಳನ್ನು ಮಾಡುವೆ. ಆ ಸಾಗರದಲ್ಲಿ ಮುಳುಗಿ-ಮುಳುಗಿ ಜೀವನು ಸಾಂಸಾರಿಕ ಕ್ಲೇಶ-ಬಾಧೆಗಳನ್ನು ಶಾಂತೊಳಿಸುವನು. ಸಂಸಾರ ಭ್ರಮಣೆಯ ಬಳಲಿಕೆಯನ್ನು ಕಳೆದುಕೊಳ್ಳುವನು. ಆದ್ದರಿಂದ ನಿನ್ನ ಭಕ್ತರು ನಿನ್ನ ಚರಣ-ಕಮಲಗಳ ಪ್ರೇಮಿಗಳಾದ ಪರಮಹಂಸರ ಸತ್ಸಂಗದಲ್ಲೇ ಅನಂತ ಆನಂದವನ್ನು ಅನುಭವಿಸುತ್ತಾರೆ. ಅವರು ಮತ್ತೆ ಮನೆ ಮಠ, ಪತ್ನೀ-ಪುತ್ರರನ್ನೂ ನೆನೆಯುವುದೂ ಇಲ್ಲ. ಅವರು ಕಥಾಮೃತದ ಆನಂದವಲ್ಲದೆ ಮೋಕ್ಷವನ್ನು ಬಯಸುವುದಿಲ್ಲ. ಏಕೆಂದರೆ, ನಿನ್ನ ಕಥೆಯು ಒಂದು ಅಮೃತದ ತರಂಗಿತ ಸಾಗರವೇ ಆಗಿದೆ. ಅವರ ಚಿತ್ತವು ಪೂರ್ಣರೂಪದಿಂದ ನಿನ್ನಲ್ಲೇ ನೆಲೆಸಿರುತ್ತದೆ. ಆದ್ದರಿಂದ ನೀನು ಅವತರಿಸುವುದೂ ಕೂಡ ಜೀವಿಗಳ ಮೇಲೆ ನಿನ್ನ ಪರಮಾನುಗ್ರಹವೇ ಆಗಿದೆ. ॥21॥
(ಶ್ಲೋಕ-22)
ಮೂಲಮ್
ತ್ವದನುಪಥಂ ಕುಲಾಯಮಿದಮಾತ್ಮಸುಹೃತ್ಪ್ರಿಯವ-
ಚ್ಚರತಿ ತಥೋನ್ಮುಖೇ ತ್ವಯಿ ಹಿತೇ ಪ್ರಿಯ ಆತ್ಮನಿ ಚ ।
ನ ಬತ ರಮಂತ್ಯಹೋ ಅಸದುಪಾಸನಯಾತ್ಮಹನೋ
ಯದನುಶಯಾ ಭ್ರಮಂತ್ಯುರುಭಯೇ ಕುಶರೀರಭೃತಃ ॥
ಅನುವಾದ
ಪರಮಾತ್ಮನೇ! ಈ ಪಾಂಚಭೌತಿಕ ಶರೀರವು ನಿನ್ನನ್ನು ಪಡೆಯುವ ಒಂದು ಸಾಧನವಾಗಿದೆ. ಇದನ್ನು ನಿನ್ನ ಪ್ರಾಪ್ತಿಯ ಮಾರ್ಗಕ್ಕೆ ತೊಡಗಿಸಿದರೆ ಇದೇ ತನ್ನ ಆತ್ಮೀಯ, ಪ್ರಿಯ ಸುಹೃದನಂತೆ ಆಚರಿಸುತ್ತದೆ. ಏಕೆಂದರೆ, ನೀನು ಜೀವಿಯ ಮಿಲನಕ್ಕೆ ಸದಾ ಸಿದ್ಧನಾಗಿರುವೆ. ಅವನ ಮುಂದೆಯೇ ಇರುವೆ. ಹೆಚ್ಚೇನು ಹೇಳಲಿ ನೀನು ಎಲ್ಲರ ಸುಹೃದನೂ, ಪ್ರಿಯನೂ, ಆತ್ಮನೂ ಆಗಿರುವೆ. ಇಂತಹ ಸ್ಥಿತಿಯಲ್ಲಿ ನಿನ್ನ ಕಡೆಯಿಂದ ನಿನ್ನನ್ನು ಪಡೆಯಲು ಸಾಕಷ್ಟು ಸಾಮಗ್ರಿಯನ್ನು ನೀನೇ ಪ್ರಸ್ತುತಪಡಿಸಿರುವೆ. ಹೀಗಿದ್ದರೂ ಜೀವನು ಅಸತ್ ಭೋಗಗಳ ಕಾಮನೆಗಳನ್ನು ಮಾಡುತ್ತಾ ಅವುಗಳಲ್ಲೇ ರಮಿಸಿಹೋಗುತ್ತಾನೆ ಮತ್ತು ಕಾಮನಾ ಪೂರ್ತಿಗಾಗಿ ತೊಡಗುತ್ತಾನೆ. ಇದು ಎಂತಹ ದುಃಖದ ಮಾತಾಗಿದೆ. ಈ ಪ್ರಕಾರವಾಗಿ ಅವರು ತಮ್ಮ ಆತ್ಮವನ್ನೇ ಹನನ ಮಾಡುತ್ತಿದ್ದಾರೆ. ಇಂತಹ ಜೀವಿಗಳು ಶರೀರ ಧರಿಸುವುದು ಒಂದು ರೀತಿಯಿಂದ ಜನ್ಮ-ಮೃತ್ಯವಿನ ಚಕ್ರದಲ್ಲಿ ಅಲೆಯುವುದೇ ಆಗಿದೆ. ಇವರ ಜೀವನವೂ ವ್ಯರ್ಥವೇ ಆಗಿದೆ. ॥22॥
(ಶ್ಲೋಕ-23)
ಮೂಲಮ್
ನಿಭೃತಮರುನ್ಮನೋಕ್ಷದೃಢಯೋಗಯುಜೋ ಹೃದಿಯನ್
ಮುನಯ ಉಪಾಸತೇ ತದರಯೋಪಿ ಯಯುಃ ಸ್ಮರಣಾತ್ ।
ಸಿಯ ಉರಗೇಂದ್ರಭೋಗಭುಜದಂಡವಿಷಕ್ತಧಿಯೋ
ವಯಮಪಿ ತೇ ಸಮಾಃ ಸಮದೃಶೋಂಘ್ರಿಸರೋಜಸುಧಾಃ ॥
ಅನುವಾದ
ಪ್ರಭೋ! ನಿನಗೆ ಎಲ್ಲರ ಕುರಿತು ಸಮಾನ ಭಾವವಿದೆ. ಜೊತೆಗೇ ಸಮಸ್ತ ಜೀವರ ಕುರಿತು ನಿನಗೆ ಅಪಾರ ಕರುಣೆ ಇದೆ. ಇದರ ಪ್ರಮಾಣ-ಪ್ರಾಣಾಯಾಮಾದಿಗಳ ಮೂಲಕ ಮನ ಇಂದ್ರಿಯಗಳನ್ನು ವಶಪಡಿಸಿಕೊಂಡಿರುವ ಯೋಗಿಗಳೂ ನಿನ್ನ ಉಪಾಸನೆಯನ್ನೇ ಮಾಡುತ್ತಾ ನಿನ್ನನ್ನೇ ಹೊಂದುತ್ತಾರೆ. ಅದೇ ಪ್ರಕಾರದಿಂದ ನಿನ್ನನ್ನು ಶತ್ರು ಭಾವದಿಂದ ಸ್ಮರಿಸುವವರೂ (ರಾವಣ, ಕಂಸ, ಶಿಶಿಪಾಲರೇ ಮುಂತಾದವರು) ಕೂಡ ನಿನ್ನನ್ನೇ ಪಡೆದುಕೊಳ್ಳುತ್ತಾರೆ. ಇದಲ್ಲದೆ ಸರ್ಪರಾಜನಂತೆ ನೀಳವಾದ ಭುಜಗಳುಳ್ಳ ನಿನ್ನಲ್ಲೇ ಬುದ್ಧಿಯನ್ನು ನೆಲೆಸಿಬಿಟ್ಟಿರುವ ಗೋಪಿಯರೇ ಆದಿ ಸ್ತ್ರೀಯರು ಹಾಗೂ ಇತರ ಕಾಮಭಾವದಿಂದ ಪ್ರೇಮಿಸುವ ಸ್ತ್ರೀಯರೂ ಕೂಡ ನಿನ್ನನ್ನು ಪ್ರೇಮಭಾವದಿಂದ ಸ್ಮರಿಸಿ ನಿನ್ನನ್ನೇ ಪಡೆದುಕೊಂಡರು. ನಿನ್ನ ಚರಣಕಮಲಗಳನ್ನು ಚೆನ್ನಾಗಿ ಧರಿಸಿಕೊಂಡಿರುವ ಶ್ರುತಿಗಳಾದ ನಾವೂ ಕೂಡ ನಿನ್ನನ್ನೇ ಸೇರುತ್ತೇವೆ. ಅರ್ಥಾತ್ ನಿನ್ನ ಸ್ಮರಣೆಯನ್ನು ಯಾವುದೇ ಭಾವದಿಂದ ಮಾಡಿದರೂ ಕೊನೆಗೆ ನಿನ್ನ ಪ್ರಾಪ್ತಿಯೇ ಆಗುತ್ತದೆ. ಹೀಗೆ ನಿನಗೆ ಎಲ್ಲರ ಕುರಿತು ಸಮಾನ ಭಾವವಿದೆ. ॥23॥
(ಶ್ಲೋಕ-24)
ಮೂಲಮ್
ಕ ಇಹ ನು ವೇದ ಬತಾವರಜನ್ಮಲಯೋಗ್ರಸರಂ
ಯತ ಉದಗಾದೃಷಿರ್ಯಮನು ದೇವಗಣಾ ಉಭಯೇ ।
ತರ್ಹಿ ನ ಸನ್ನ ಚಾಸದುಭಯಂ ನ ಚ ಕಾಲಜವಃ
ಕಿಮಪಿ ನ ತತ್ರ ಶಾಸ ಮವಕೃಷ್ಯ ಶಯೀತ ಯದಾ ॥
ಅನುವಾದ
ಭಗವಂತನೇ! ನೀನೇ ಎಲ್ಲರ ಆದಿಕಾರಣನಾಗಿರುವೆ. ನಿನ್ನಿಂದಲೆ ಮೊಟ್ಟಮೊದಲಿಗೆ ಬ್ರಹ್ಮದೇವರ ಉತ್ಪತ್ತಿಯಾಯಿತು. ಅನಂತರ ಎರಡೂ ಪ್ರಕಾರದ (ಆಧ್ಯಾತ್ಮಿಕ ಮತ್ತು ಆಧಿದೈವಿಕ) ದೇವತೆಗಳು (ಆಧ್ಯಾತ್ಮಿಕ ಅರ್ಥಾತ್ ಶರೀರದಲ್ಲಿರುವ ಮನ-ಇಂದ್ರಿಯಗಳ ಅಭಿಮಾನಿ ದೇವತೆಗಳು.) ಆಧಿದೈವಿಕ (ಅರ್ಥಾತ್-ಹೊರಗಿನ ಇತರ ಲೋಕಪಾಲರು) ಉತ್ಪನ್ನರಾದರು. ಹೀಗೆ ಎಲ್ಲರೂ ನಿನ್ನಿಂದಲೇ ಉತ್ಪನ್ನರಾದವರು ಎಲ್ಲರಿಗೂ ಮೂಲಕಾರಣನಾದ ನಿನ್ನ ವಾಸ್ತವಿಕ ಸ್ವರೂಪವನ್ನು ನಿನ್ನ ಅನಂತರ ಹುಟ್ಟಿದವರು ಹೀಗೆ ತಾನೆ ತಿಳಿಯಬಲ್ಲರು? ಹುಟ್ಟಿದವರ ಸಾವು ನಿಶ್ಚಿತವಾಗಿದೆಯಲ್ಲ! ಅವಿನಾಶಿಯಾದ ನೀನು ಸಮಗ್ರ ಪ್ರಪಂಚವನ್ನು ಅಡಗಿಸಿಕೊಂಡು ಮಲಗಿದ್ದಾಗ ಕಾರಣವಾಗಲೀ, ಕಾರ್ಯವಾಗಲೀ ಇರುವುದಿಲ್ಲ. ಅರ್ಥಾತ್-ಸೂಕ್ಷ್ಮ ಮತ್ತು ಸ್ಥೂಲ ಎರಡು ಬಗೆಯ ಸೃಷ್ಟಿಯೂ ಇರುವುದಿಲ್ಲ. ಕಾಲದ ಅವಯವಗಳೂ ವೇಗವೂ ಇರುವುದಿಲ್ಲ. ಯಾವುದೇ ಶಾಸ್ತ್ರವೂ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ನೀನು ಹೇಗಿದ್ದಿಯೇ ಎಂಬುದರ ಕುರಿತು ಕಲ್ಪನೆಯನ್ನಾದರೂ ಹೇಗೆ ಮಾಡಬಹುದು? ॥24॥
(ಶ್ಲೋಕ-25)
ಮೂಲಮ್
ಜನಿಮಸತಃ ಸತೋ ಮೃತಿಮುತಾತ್ಮನಿ ಯೇ ಚ ಭಿದಾಂ
ವಿಪಣಮೃತಂ ಸ್ಮರಂತ್ಯುಪದಿಶಂತಿ ತ ಆರುಪಿತೈಃ ।
ತ್ರಿಗುಣಮಯಃ ಪುಮಾನಿತಿ ಭಿದಾ ಯದಬೋಧಕೃತಾ
ತ್ವಯಿ ನ ತತಃ ಪರತ್ರ ಸ ಭವೇದವಬೋಧರಸೇ ॥
ಅನುವಾದ
ಈ ಪ್ರಕಾರವಾಗಿ ನಿನ್ನ ವಾಸ್ತವಿಕ ತತ್ತ್ವದ ಜ್ಞಾನ ಪಡೆಯುವುದು ಸುಲಭವಲ್ಲ. ಇದರಿಂದಲೇ ಉಪದೇಶಕರಲ್ಲಿ ಅನೇಕ ಬಗೆಯ ಮತಭೇದಗಳು ಉಂಟಾಗುತ್ತವೆ. ಅವರಲ್ಲಿ ಕೆಲವರು ನಾಸ್ತಿಕವಾದವನ್ನು ಒಪ್ಪುವವರು - ಈ ಪ್ರಪಂಚದ ಉತ್ಪತ್ತಿಯು ಜಡದಿಂದ ಉಂಟಾಗಿದೆ. ಅರ್ಥಾತ್-ಸೀ-ಪುರುಷರ ಸಂಯೋಗದಿಂದ ಪ್ರಕೃತಿಯ ಮೂಲಕ ಈ ಜಗತ್ತಿನ ಉತ್ಪತ್ತಿಯಾಯಿತು. ಉತ್ಪನ್ನವಾದುದು ಒಂದುದಿನ ನಾಶವೂ ಆಗುತ್ತದೆ; ಅದೂ ಪ್ರಕೃತಿಯ ಮೂಲಕವೇ ಎಂದು ಹೇಳುತ್ತಾರೆ. ಕೆಲವರು ದುಃಖದ ನಾಶವಾದ ಬಳಿಕವೇ ಮುಕ್ತಿ ಎಂದೂ ತಿಳಿಯುತ್ತಾರೆ. ಇತರ ಕೆಲವರು ಕರ್ಮ ಮತ್ತು ಅದರ ಫಲವನ್ನು ಸತ್ಯವೆಂದೇ ತಿಳಿಯುತ್ತಾರೆ. ಇನ್ನೂ ಕೆಲವರು ಆತ್ಮನನ್ನು ಅನೇಕ ರೂಪಗಳಲ್ಲಿ ಇದೆ ಎಂದು ಹೇಳುತ್ತಾರೆ. ಇವೆಲ್ಲವನ್ನೂ ಭ್ರಮೆಯಿಂದ ಆರೋಪಿಸಿಯೇ ಹೀಗೆ ಹೇಳುತ್ತಾರೆ. ಕೆಲವರು ಜೀವನನ್ನು ತ್ರಿಗುಣಮಯವೆಂದು ಹೇಳುತ್ತಾರೆ. ವಾಸ್ತವವಾಗಿ ಇವೆಲ್ಲ ಮಾತುಗಳು ಅಜ್ಞಾನದ ಕಾರಣದಿಂದಲೇ ಇವೆ. ನೀನು ಜ್ಞಾನಸ್ವರೂಪನಾಗಿರುವಂತಯೇ ಜೀವನೂ ವಾಸ್ತವವಾಗಿ ಜ್ಞಾನಸ್ವರೂಪನೇ ಆಗಿರುವನು. ಆದರೆ ಅವನು ತನ್ನ ಆತ್ಮಸ್ವರೂಪವನ್ನು ಮರೆತು ಮಾಯೆಯ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿರುವನು. ಇದರಿಂದ ನಾನಾಬಗೆಯ ಭ್ರಮೆಗಳು ಉಪಸ್ಥಿತವಾದುವು. ಜ್ಞಾನಸ್ವರೂಪನಾದ ನಿನ್ನಲ್ಲಿ ಇವೆಲ್ಲ ಭ್ರಮೆಗಳು ಕಿಂಚಿತ್ತಾದರೂ ಇಲ್ಲ. ॥25॥
(ಶ್ಲೋಕ-26)
ಮೂಲಮ್
ಸದಿವ ಮನಸಿವೃತ್ತ್ವಯಿ ವಿಭಾತ್ಯಸದಾಮನುಜಾತ್
ಸದಭಿಮೃಶಂತ್ಯಶೇಷಮಿದಮಾತ್ಮತಯಾತ್ಮವಿದಃ ।
ನ ಹಿ ವಿಕೃತಿಂ ತ್ಯಜಂತಿ ಕನಕಸ್ಯ ತದಾತ್ಮತಯಾ
ಸ್ವಕೃತಮನುಪ್ರವಿಷ್ಟಮಿದಮಾತ್ಮತಯಾವಸಿತಮ್ ॥
ಅನುವಾದ
ಈ ತ್ರಿಗುಣಾತ್ಮಕ ಜಗತ್ತು ಮನಸ್ಸಿನ ಕಲ್ಪನೆಯೇ ಆಗಿದೆ. ಪ್ರಕೃತಿಯ ಕಾರ್ಯವಾದ್ದರಿಂದ ಅಸತ್ತಾಗಿಯೇ ಇದೆ. ಆದರೆ ಇದರ ಆಧಾರವಾದ ನೀನೇ ಇದರಲ್ಲಿ ಪರಿಪೂರ್ಣನಾಗಿರುವೆ. ಅದಕ್ಕಾಗಿ ಇದು ಅಸತ್ತಾಗಿದ್ದರೂ ಸತ್ಯದಂತೆ ಕಂಡುಬರುತ್ತದೆ. ಆತ್ಮಜ್ಞಾನಿಗೆ ಬ್ರಹ್ಮದೃಷ್ಟಿ ಇರುವುದರಿಂದ ಅವನಿಗೆ ಈ ಇಡೀ ವಿಶ್ವವು ಬ್ರಹ್ಮಮಯವೇ ಆಗಿದೆ. ಅವನು ಇದರಲ್ಲಿ ನಿನ್ನದೇ ಸ್ವರೂಪವನ್ನು ನೋಡುತ್ತಾನೆ. ಅವನು ಮಾಯೆಯನ್ನು ಸ್ವೀಕರಿಸುವುದಿಲ್ಲ. ಚಿನ್ನದಿಂದ ಮಾಡಿದ ಒಡವೆಗಳಲ್ಲಿ ಸುವರ್ಣತತ್ತ್ವವನ್ನು ತಿಳಿದವನು ಒಡವೆಗಳ ಆಕೃತಿಯನ್ನು ಮಿಥ್ಯೆಯೆಂದೇ ತಿಳಿದು, ಚಿನ್ನದ ಬೆಲೆಯನ್ನು ಮಾತ್ರ ಅರಿಯುತ್ತಾನೆ. ಹಾಗೆಯೇ ತತ್ತ್ವ ಜ್ಞಾನಿಯಾದವನು ಮಾಯಾನಿರ್ಮಿತ ಆಕೃತಿಗಳನ್ನು ಮಿಥ್ಯೆಯೆಂದು ತಿಳಿದು, ಅಧಿಷ್ಠಾನ ರೂಪದಲ್ಲಿರುವ ನಿನ್ನನ್ನೇ ನೋಡುತ್ತಾನೆ. ಏಕೆಂದರೆ, ಈ ವಿಶ್ವವನ್ನು ನಿರ್ಮಿಸಿ ನೀನೇ ಇದರಲ್ಲಿ ಪ್ರವಿಷ್ಟನಾಗಿರುವೆ. ॥26॥
(ಶ್ಲೋಕ-27)
ಮೂಲಮ್
ತವ ಪರಿ ಯೇ ಚರಂತ್ಯಖಿಲಸತ್ತ್ವನಿಕೇತತಯಾ
ತ ಉತ ಪದಾಕ್ರಮಂತ್ಯವಿಗಣಯ್ಯ ಶಿರೋ ನಿರ್ಋತೇಃ ।
ಪರಿವಯಸೇ ಪಶೂನಿವ ಗಿರಾ ವಿಬುಧಾನಪಿ ತಾಂ-
ಸ್ತ್ವಯಿ ಕೃತಸೌಹೃದಾಃ ಖಲು ಪುನಂತಿ ನ ಯೇ ವಿಮುಖಾಃ ॥
ಅನುವಾದ
ಈ ಪ್ರಕಾರ ಸಮಸ್ತ ಪ್ರಾಣಿಗಳಲ್ಲಿ ನೀನೇ ಪ್ರಕಾಶಿಸುತ್ತಿರುವೆ ಎಂದು ತಿಳಿದು ನಿನ್ನ ಅನನ್ಯ ಭಕ್ತರಾದವರು ಎಲ್ಲರ ಕುರಿತು ಏಕಾತ್ಮಭಾವವನ್ನಿರಿಸಿಕೊಂಡು ಸಮಸ್ತ ಪ್ರಾಣಿಗಳ ಸೇವೆಯು ನಿನ್ನದೇ ಸೇವೆ ಎಂದು ಭಾವಿಸುತ್ತಾರೆ. ಅಂತಹ ಮಹಾಪುರುಷರ ಎಲ್ಲ ಕ್ರಿಯಾ-ಕಲಾಪಗಳು ನಿನ್ನೊಡನೆಯೇ ಆಗುತ್ತಾ ಇರುತ್ತವೆ. ಅವರು ಮೃತ್ಯುವಿನಿಂದ ಭಯಪಡದೆ ಅದರ ತಲೆಯನ್ನು ಮೆಟ್ಟಿಬಿಡುತ್ತಾರೆ. ಅಂತಹ ಭಕ್ತರ ಮನಸ್ಸು ನಿನ್ನಲ್ಲೇ ನೆಲಸಿದ್ದರಿಂದ ಅವರು ಅತ್ಯಂತ ಪವಿತ್ರರಾಗಿರುತ್ತಾರೆ. ಆದ್ದರಿಂದ ಅವರು ಹುಟ್ಟು-ಸಾವಿನ ಕಟ್ಟಳೆಯಲ್ಲಿ ಸಿಲುಕುವುದಿಲ್ಲ. ಆದರೆ ನಿನ್ನ ಭಕ್ತಿಯಿಂದ ವಿಮುಖರಾದವರು ವಿದ್ವಾಂಸರಾಗಿದ್ದರೂ ಕರ್ಮಫಲವನ್ನು ವರ್ಣಿಸುವ ವೇದವಾಣಿಗಳಲ್ಲೇ ತೊಡಗಿರುತ್ತಾರೆ. ಆ ವಾಣಿಗಳಲ್ಲಿರುವ ಕರ್ಮಫಲದ ಆಸೆಯೇ ಅವರನ್ನು ಕರ್ಮಗಳನ್ನು ಆಚರಿಸಲು ಬಂಧಿಸುತ್ತದೆ. ಪಶುವನ್ನು ಬಂಧಿಸಿ ಅದರಿಂದ ಕೆಲಸ ಮಾಡಿಸಿಕೊಳ್ಳುವಂತೆಯೇ ಅವರು ಆ ವಾಣಿಗಳಲ್ಲಿ ಮೋಸ ಹೋಗಿ ಕರ್ಮಗಳನ್ನು ಮಾಡುತ್ತಲೇ ಇರುತ್ತಾರೆ. ತಮ್ಮ ಪುಣ್ಯ-ಪಾಪಗಳ ಫಲವಾಗಿ ಅವರಿಗೆ ಹುಟ್ಟು-ಸಾವುಗಳ ಚಕ್ರ ಅಂಟಿಕೊಂಡೇ ಇರುತ್ತದೆ. ಆದರೆ ನಿನ್ನ ಭಕ್ತರಾದರೋ ನಿನ್ನನ್ನೇ ಹೊಂದುತ್ತಾರೆ. ಅವರು ಪುನಃ ಜಗತ್ತಿಗೆ ಬರುವುದಿಲ್ಲ. ಆದುದರಿಂದ ನಿನ್ನ ಭಕ್ತಿಯೇ ಜೀವಿಗಳಿಗೆ ಸರ್ವೋತ್ಕೃಷ್ಟ ಸಾಧನವಾಗಿದೆ. ॥27॥
(ಶ್ಲೋಕ-28)
ಮೂಲಮ್
ತ್ವಮಕರಣಃ ಸ್ವರಾಡಖಿಲಕಾರಕಶಕ್ತಿಧರ-
ಸ್ತವ ಬಲಿಮುದ್ವಹಂತಿ ಸಮದಂತ್ಯಜಯಾನಿಮಿಷಾಃ ।
ವರ್ಷಭುಜೋಖಿಲಕ್ಷಿತಿಪತೇರಿವ ವಿಶ್ವಸೃಜೋ
ವಿದಧತಿ ಯತ್ರ ಯೇ ತ್ವಧಿಕೃತಾ ಭವತಶ್ಚಕಿತಾಃ ॥
ಅನುವಾದ
ಪ್ರಭುವೇ! ನೀನು ಮನ, ಬುದ್ಧಿ, ಇಂದ್ರಿಯಾದಿಗಳಿಂದ ರಹಿತನಾಗಿದ್ದರೂ ಸಮಸ್ತ ಇಂದ್ರಿಯಗಳ ಶಕ್ತಿಗಳನ್ನು ಧರಿಸಿರುವ ಸ್ವಯಂಪ್ರಕಾಶ ಸ್ವರೂಪನಾಗಿರುವೆ. ನೀನೇ ಎಲ್ಲರಿಗೆ ಎಲ್ಲ ವಿಧದ ಶಕ್ತಿಯನ್ನು ಕರುಣಿಸುತ್ತಿರುವೆ. ಅದಕ್ಕಾಗಿ ಸಮಸ್ತ ದೇವತೆಗಳು ತಮ್ಮ-ತಮ್ಮ ಉಪಹಾರ ವನ್ನು ನಿನಗೆ ಸಮರ್ಪಿಸುತ್ತಾರೆ. ಮತ್ತೆ ನಿನ್ನಿಂದಲೇ ಆ ವಸ್ತುಗಳನ್ನು ಪ್ರಸಾದವಾಗಿ ಪಡೆದುಕೊಂಡು ಇಂದ್ರಿಯಗಳ ದೇವತೆಗಳರೂಪದಲ್ಲಿ, ಆಯಾಯ ವಿಷಯಗಳನ್ನು ಅನುಭವಿಸುತ್ತಾರೆ. ಭಗವಂತಾ! ಇದೆಲ್ಲವೂ ನಿನ್ನ ಪೂಜೆಯೇ ಆಗಿದೆ. ದೊಡ್ಡ ಸಾಮ್ರಾಟನ ಅಧೀನದಲ್ಲಿರುವ ಮಾಂಡಲಿಕ ರಾಜರು ಪ್ರಜೆಗಳಿಂದ ಕಂದಾಯವನ್ನು ಪಡೆದು ಸಾಮ್ರಾಟನಿಗೆ ಒಪ್ಪಿಸಿ ಅವನಿಂದ ದೊರೆತುದನ್ನು ಅನುಭವಿಸುತ್ತಾರೆ. ಹಾಗೆಯೇ ಈ ದೇವತೆಗಳೂ ನಿನ್ನಿಂದ ಸಮಸ್ತ ಭೋಗಗಳನ್ನು ಪಡೆದುಕೊಂಡು ಅವನ್ನು ಅನುಭವಿಸುತ್ತಾರೆ ಹಾಗೂ ನಿನ್ನಿಂದ ನಿಯಮಿಸಲ್ಪಟ್ಟ ತಮ್ಮ-ತಮ್ಮ ಕಾರ್ಯಗಳನ್ನು ನಿನಗೆ ಹೆದರಿಕೊಂಡೇ ಎಚ್ಚರಿಕೆಯಿಂದ ಮಾಡುತ್ತಾ ಇರುತ್ತಾರೆ. ॥28॥
(ಶ್ಲೋಕ-29)
ಮೂಲಮ್
ಸ್ಥಿರಚರಜಾತಯಃ ಸ್ಯುರಜಯೋತ್ಥನಿಮಿತ್ತಯುಜೋ
ವಿಹರ ಉದೀಕ್ಷಯಾ ಯದಿ ಪರಸ್ಯ ವಿಮುಕ್ತ ತತಃ ।
ನ ಹಿ ಪರಮಸ್ಯ ಕಶ್ಚಿದಪರೋ ನ ಪರಶ್ಚ ಭವೇ-
ದ್ವಿಯತ ಇವಾಪದಸ್ಯ ತವ ಶೂನ್ಯತುಲಾಂ ದಧತಃ ॥
ಅನುವಾದ
ನಿತ್ಯಮುಕ್ತನಾದ ಪರಮೇಶ್ವರನೇ! ನಿನಗೆ ಲೀಲೆ ಯನ್ನು ನಡೆಸಬೇಕೆಂಬ ಇಚ್ಛೆಯುಂಟಾದಾಗ ನಿನ್ನ ಸಂಕಲ್ಪ ಮಾತ್ರದಿಂದ ಸ್ಥಾವರ ಜಂಗಮ ಪ್ರಾಣಿಗಳು ಮತ್ತು ಇತರ ಪದಾರ್ಥಗಳು ಇವೆಲ್ಲದರ ನಾಮ-ರೂಪಾತ್ಮಕವಾದ ಸೃಷ್ಟಿಯಾಗುತ್ತದೆ. ಆ ಸಮಯದಲ್ಲಿ ಹಿಂದಿನ ಸಂಸ್ಕಾರಗಳಿಂದ ಕೂಡಿಕೊಂಡು ಎಲ್ಲ ಪ್ರಾಣಿಗಳು ಉತ್ಪನ್ನವಾಗುತ್ತವೆ. ನೀನಾದರೋ ಆಕಾಶದಂತೆ ಎಲ್ಲದರಲ್ಲಿ ಅಸಂಗನಾಗಿಯೇ ಇರುತ್ತೀಯೆ. ಸರ್ವವ್ಯಾಪಿಯೂ, ಸರ್ವಶ್ರೇಷ್ಠನೂ, ಪರಮನೂ ಆದ ನಿನಗೆ ತನ್ನವರು-ಪರರು ಎಂದು ಯಾರೂ ಇಲ್ಲ. ಹೀಗಿದ್ದರೂ ನಿನ್ನನ್ನು ಭಜಿಸುವವರು ಈ ಜನ್ಮ-ಮೃತ್ಯು ರೂಪವಾದ ಸಂಸಾರದಿಂದ ಪಾರಾಗಿ ಪರಮಪದವನ್ನು ಪಡೆದುಕೊಳ್ಳುವರು. ॥29॥
(ಶ್ಲೋಕ-30)
ಮೂಲಮ್
ಅಪರಿಮಿತಾ ಧ್ರುವಾಸ್ತನುಭೃತೋ ಯದಿ ಸರ್ವಗತಾ-
ಸ್ತರ್ಹಿ ನ ಶಾಸ್ಯತೇತಿ ನಿಯಮೋ ಧ್ರುವ ನೇತರಥಾ ।
ಅಜನಿ ಚ ಯನ್ಮಯಂ ತದವಿಮುಚ್ಯ ನಿಯಂತೃ ಭವೇತ್
ಸಮಮನುಜಾನತಾಂ ಯದಮತಂ ಮತದುಷ್ಟತಯಾ ॥
ಅನುವಾದ
ಸತ್ಯಸ್ವರೂಪನಾದ ಪರಮಾತ್ಮನೇ! ಅಸಂಖ್ಯರಾದ ಪ್ರಾಣಿಗಳನ್ನು ಸತ್ಯರೂ-ಸರ್ವವ್ಯಾಪಿಗಳೂ ಎಂದು ತಿಳಿದುಕೊಂಡರೆ ಇವೆಲ್ಲ ಜೀವರು ನಿನಗೆ ಸಮಾನರೇ ಆಗುವರು. ಮತ್ತೆ ಅಂತಹ ಸ್ಥಿತಿಯಲ್ಲಿ ಅವನ್ನು ನಿಯಂತ್ರಿಸುವುದು ನಿನಗೆ ಅಸಂಭವವಾಗುತ್ತಿತ್ತು. ಏಕೆಂದರೆ, ಶಾಸ್ತ್ರಿತನಾಗುವವನು ಸರ್ವವ್ಯಾಪಕನಾಗಲಾರನು. ಅದರಿಂದಲೇ ಯಾವ ಕಾರಣದಿಂದ ಇದು ಯುಕ್ತವಾಗಿದೆಯೋ ಮತ್ತು ಯಾವುದರಿಂದ ಉತ್ಪನ್ನವಾಗಿದೆಯೋ ಅವನೇ ಇದರ ಶಾಸಕನಾಗ ಬಲ್ಲನು. ಈ ವಿಶ್ವವು ನಿನ್ನಿಂದಲೇ ಉತ್ಪನ್ನವಾಗಿದೆ. ಇದರ ಉಪಾದಾನ ಕಾರಣವೂ ಆಗಿರುವೆ. ನೀನೇ ಇದರ ನಿಯಾಮಕನಾಗಿದ್ದೀಯೆ. ಈ ವಿಶ್ವದಲ್ಲಿ ಇದ್ದುಕೊಂಡು ನೀನೇ ಎಲ್ಲರನ್ನು ಸಮಭಾವದಿಂದ ಶಾಸನ ಮಾಡುತ್ತಿರುವೆ. ಈ ವಿಶ್ವವು ನಿನ್ನದೇ ಸ್ವರೂಪವಾಗಿದೆ. ಆದ್ದರಿಂದ ನಿನ್ನನ್ನು ಬಿಟ್ಟು ಬೇರೆ ಯಾರೂ ಇದರ ನಿಯಾಮಕನಾಗಲಾರನು. ಯಾರಾದರೂ ನಾನು ನಿನ್ನನ್ನು ತಿಳಿದಿದ್ದೇನೆ ಎಂದು ಹೇಳಿದರೆ, ಅವನು ಹೇಳುವುದರಲ್ಲಿ ಮತಿಯ ದೋಷವಿರುವುದರಿಂದ ಸರಿಯಾಗಲಾರದು. ಪರಮಪಿತಾ ಪರಮೇಶ್ವರನಾದ ನಿನ್ನ ಚರಣಗಳಲ್ಲಿ ಶರಣಾಗುವುದೇ ಅಭಯ ಪದವನ್ನು ಪಡೆಯುವ ಸಾಧನವೆಂಬುದಾಗಿ ನಮ್ಮ ಮತವಾಗಿದೆ. ॥30॥
(ಶ್ಲೋಕ-31)
ಮೂಲಮ್
ನ ಘಟತ ಉದ್ಭವಃ ಪ್ರಕೃತಿಪೂರುಷಯೋರಜಯೋ-
ರುಭಯಯುಜಾ ಭವಂತ್ಯಸುಭೃತೋ ಜಲಬುದ್ಬುದವತ್ ।
ತ್ವಯಿ ತ ಇಮೇ ತತೋ ವಿವಿಧನಾಮಗುಣೈಃ ಪರಮೇ
ಸರಿತ ಇವಾರ್ಣವೇ ಮಧುನಿ ಲಿಲ್ಯುರಶೇಷರಸಾಃ ॥
ಅನುವಾದ
ಸ್ವಾಮಿಯೇ! ಪ್ರಕೃತಿ ಮತ್ತು ಪುರುಷ ಎರಡೂ ಅಜನ್ಮಾ, ಅನಾದಿಯಾಗಿದೆ. ಆದರೆ ಇವುಗಳಿಂದ ಈ ವಿಶ್ವದ ಉತ್ಪತ್ತಿಯು ಘಟಿಸುವುದಿಲ್ಲ. (ನೀನಾದರೋ ನಿನ್ನ ಸಂಕಲ್ಪ ಮಾತ್ರದಿಂದಲೇ ಅನಂತ ಕೋಟಿ ಬ್ರಹ್ಮಾಂಡಗಳನ್ನು ನಿರ್ಮಾಣ ಮಾಡುತ್ತೀಯೆ.) ನೀರು ಮತ್ತು ಗಾಳಿಯ ಸಂಯೋಗದಿಂದ ನೀರಗುಳ್ಳೆಗಳು ಉಂಟಾಗುತ್ತವೆ ಹಾಗೂ ವಿಲೀನವಾಗುತ್ತವೆ. ಹಾಗೆಯೇ ಪ್ರಾಣಿಗಳೂ ಕೂಡ ಪ್ರಕೃತಿ ಮತ್ತು ಪುರುಷರ ಸಂಯೋಗದಿಂದ ಉತ್ಪನ್ನರಾಗುತ್ತಾರೆ. ಮತ್ತೆ ನದಿಗಳು ತಮ್ಮ ನಾಮ-ರೂಪಗಳನ್ನು ಕಳೆದುಕೊಂಡು ಸಮುದ್ರದಲ್ಲಿ ಒಂದಾಗುವಂತೆ ಕೊನೆಯಲ್ಲಿ ಅನೇಕ ನಾಮ-ಗುಣಗಳೊಂದಿಗೆ ಸರ್ವಶ್ರೇಷ್ಠನಾದ ನಿನ್ನಲ್ಲೇ ಸೇರಿಹೋಗುತ್ತಾರೆ. ಜೇನಿನಲ್ಲಿ ಎಲ್ಲ ಹೂವುಗಳ ರಸವು ಸೇರಿಹೋಗುವಂತೆಯೇ ಎಲ್ಲ ಜೀವರು ನಿನ್ನಲ್ಲೇ ಲೀನವಾಗುತ್ತಾರೆ. ॥31॥
(ಶ್ಲೋಕ-32)
ಮೂಲಮ್
ನೃಷು ತವ ಮಾಯಯಾ ಭ್ರಮಮಮೀಷ್ವವಗತ್ಯ ಭೃಶಂ
ತ್ವಯಿ ಸುಧಿಯೋಭವೇ ದಧತಿ ಭಾವಮನುಪ್ರಭವಮ್ ।
ಕಥಮನುವರ್ತತಾಂ ಭವಭಯಂ ತವ ಯದ್ಭ್ರುಕುಟಿಃ
ಸೃಜತಿ ಮುಹುಸಿಣೇಮಿರಭವಚ್ಛರಣೇಷು ಭಯಮ್ ॥
ಅನುವಾದ
ಪ್ರಭೋ! ನೀನು ಅಜನಾಗಿರುವೆ. ಜ್ಞಾನಿಗಳು ನಿನ್ನ ಚರಣಕಮಲಗಳನ್ನು ದೃಢವಾಗಿ ಆಶ್ರಯಿಸಿ ಅಭಯ ಪದವನ್ನು ಪಡೆಯುವರು. ನಿನ್ನ ಮಾಯೆಯ ಹಿಡಿತಕ್ಕೆ ಸಿಕ್ಕಿಬಿದ್ದು ಜೀವನು ಅಲೆಯುತ್ತಾ ಇದ್ದಾನೆ. ನಿನ್ನ ಚರಣಗಳಲ್ಲಿ ಶರಣಾಗದೆ ಇರುವುದರಿಂದ ಅವನಿಗೆ ನಿನ್ನ ಕಾಲಚಕ್ರವು ಪದೇ-ಪದೇ ಭಯವನ್ನುಂಟು ಮಾಡುತ್ತದೆ. ಮಳೆ, ಸೆಕೆ, ಛಳಿ ಎಂಬ ಮೂರು ಭಾಗವುಳ್ಳ ಸಂವತ್ಸರ ರೂಪವಾದ ಕಾಲಚಕ್ರವು ನಿನ್ನ ಭ್ರೂವಿಲಾಸವಾಗಿದೆ ಎಂಬುದನ್ನು ಚೆನ್ನಾಗಿ ತಿಳಿದು ಜ್ಞಾನಿಗಳು ಪೂರ್ಣ ರೂಪದಿಂದ ನಿನ್ನಲ್ಲಿಯೇ ಭಕ್ತಿಭಾವವನ್ನಿರಿಸುತ್ತಾರೆ. ನಿನ್ನನ್ನು ಅನುಸರಿಸುವವರಿಗೆ ಸಂಸಾರದ ಭಯವು ಉಂಟಾಗಲಾರದು. ಆದ್ದರಿಂದ ಭಗವಂತನೇ! ನಿನಗೆ ಶರಣುಬಂದಿರುವ ಈ ಜೀವರನ್ನು ನೀನೇ ಉದ್ಧರಿಸು. ॥32॥
(ಶ್ಲೋಕ-33)
ಮೂಲಮ್
ವಿಜಿತಹೃಷೀಕವಾಯುಭಿರದಾಂತಮನಸ್ತುರಗಂ
ಯ ಇಹ ಯತಂತಿ ಯಂತುಮತಿಲೋಲಮುಪಾಯಖಿದಃ ।
ವ್ಯಸನಶತಾನ್ವಿತಾಃ ಸಮವಹಾಯ ಗುರೋಶ್ಚರಣಂ
ವಣಿಜ ಇವಾಜ ಸಂತ್ಯಕೃತಕರ್ಣಧರಾ ಜಲಧೌ ॥
ಅನುವಾದ
ಜನ್ಮಾದಿಗಳಿಲ್ಲದ ಪ್ರಭುವೇ! ಪ್ರಾಣಾಯಾಮಾದಿ ಸಾಧನೆಗಳ ಮೂಲಕ ಇಂದ್ರಿಯಗಳ ಮೇಲೆ ಹತೋಟಿ ಪಡೆದಿದ್ದರೂ, ಸದ್ಗುರುವಿನ ಚರಣಗಳನ್ನು ಆಶ್ರಯಿಸದ ಕಾರಣ ಅತ್ಯಂತ ಚಂಚಲವಾದ ಅವನ ಮನೋರೂಪೀ ಕುದುರೆಯು ವಶವಾಗುವುದಿಲ್ಲ. ಅದು ಅವರ ಇಂದ್ರಿಯಗಳನ್ನು ಪದೇ-ಪದೇ ಕ್ಷುಬ್ಧಗೊಳಿಸುತ್ತಾ ಇರುತ್ತದೆ ಮತ್ತು ಅನೇಕ ವಿಪತ್ತುಗಳನ್ನು ಅವರ ಮುಂದೆ ಒಡ್ಡುತ್ತದೆ. ನಾವಿಕನಿಲ್ಲದ ಸಮುದ್ರದ ಹಡಗಿನಲ್ಲಿ ಪ್ರಯಾಣಿಸುವ ವ್ಯಾಪಾರಿಯಂತೆಯೇ ಅವರ ಸ್ಥಿತಿಗತಿಯಾಗುತ್ತದೆ. ಆದ್ದರಿಂದ ಮನೋರೂಪಿ ಕುದುರೆಯನ್ನು ವಶದಲ್ಲಿಟ್ಟುಕೊಳ್ಳಲು, ಪರಮಾನಂದದ ಪ್ರಾಪ್ತಿಗಾಗಿ ಸದ್ಗುರುವಿನ ಚರಣಗಳಲ್ಲಿ ಶರಣಾಗಬೇಕು. ಸದ್ಗುರುವಿನ ರೂಪದಲ್ಲಿ ಸಾಕ್ಷಾತ್ ನೀನೇ ಇರುವೆ. ॥33॥
(ಶ್ಲೋಕ-34)
ಮೂಲಮ್
ಸ್ವಜನಸುತಾತ್ಮದಾರಧನಧಾಮಧರಾಸುರಥೈ-
ಸ್ತ್ವಯಿ ಸತಿ ಕಿಂ ನೃಣಾಂ ಶ್ರಯತ ಆತ್ಮನಿ ಸರ್ವರಸೇ ।
ಇತಿ ಸದಜಾನತಾಂ ಮಿಥುನತೋ ರತಯೇ ಚರತಾಂ
ಸುಖಯತಿ ಕೋ ನ್ವಿಹ ಸ್ವವಿಹತೇ ಸ್ವನಿರಸ್ತಭಗೇ ॥
ಅನುವಾದ
ಭಗವಂತಾ! ನೀನು ಅಖಂಡ ಆನಂದಸ್ವರೂಪನೂ, ಶರಣಾಗತ ಭಕ್ತರಿಗೆ ಆತ್ಮಸ್ವರೂಪನೂ ಆಗಿರುವೆ. ನೀನಿರುವಾಗ ಸ್ವಜನರೆಂದು ಹೇಳಿಕೊಳ್ಳುವ ಪತ್ನೀ-ಪುತ್ರರು, ದೇಹ-ಗೇಹ, ಧನ ಸಂಪತ್ತು, ಭೂಮಿ, ರಥ-ವಾಹನಾದಿಗಳಿಂದ ಏನು ಪ್ರಯೋಜನ? ಈ ಸತ್ಯವನ್ನು ಅರಿಯದ ಜನರು ಆನಂದವನ್ನು ಪಡೆಯಲು ಸಂಸಾರದಲ್ಲಿ ರಮಮಾಣರಾಗುತ್ತಾರೆ ಹಾಗೂ ವಿಷಯಗಳ ಕಡೆಗೆ ಓಡುತ್ತಾ ಇರುತ್ತಾರೆ. ಆ ವಿಷಯಗಳಾದರೋ ಸ್ವರೂಪತಃ ವಿನಾಶವುಳ್ಳದ್ದೂ, ಸಾರಹೀನವೂ ಆಗಿವೆ. ಅವು ಜೀವನಿಗೆ ಯಾವ ಸುಖವನ್ನು ತಾನೇ ಕೊಡಬಲ್ಲವು? ಆದ್ದರಿಂದ ಜೀವಿಯು ಪರಮಾನಂದ ಸ್ವರೂಪನಾದ ನಿನ್ನನ್ನೇ ಭಜಿಸಬೇಕು. ॥34॥
(ಶ್ಲೋಕ-35)
ಮೂಲಮ್
ಭುವಿ ಪುರುಪುಣ್ಯತೀರ್ಥಸದನಾನ್ಯೃಷಯೋ ವಿಮದಾ
ಸ್ತ ಉತ ಭವತ್ಪದಾಂಬುಜಹೃದೋಘಭಿದಂಘ್ರಿಜಲಾಃ ।
ದಧತಿ ಸಕೃನ್ಮನಸ್ತ್ವಯಿ ಯ ಆತ್ಮನಿ ನಿತ್ಯಸುಖೇ
ನ ಪುನರುಪಾಸತೇ ಪುರುಷಸಾರಹರಾವಸಥಾನ್ ॥
ಅನುವಾದ
ಭಗವಂತನೇ! ನಿನ್ನ ಚರಣಗಳನ್ನು ಹೃದಯದಲ್ಲಿ ಧರಿಸಿರುವಂತಹ ಮಹಾಪುರುಷರು ಮದ-ಮತ್ಸರಾದಿ ದೋಷಗಳಿಂದ ರಹಿತರಾಗಿರುತ್ತಾರೆ. ಇಂತಹವರು ಈ ಭೂಮಂಡಲದಲ್ಲಿ ಅತ್ಯಂತ ಪವಿತ್ರರಾಗಿದ್ದು ಸಾಕ್ಷಾತ್ ತೀರ್ಥಸ್ವರೂಪಿಗಳೇ ಆಗಿದ್ದಾರೆ. ಆ ಮಹಾಪುರುಷರ ಚರಣೋದಕವು ಸಮಸ್ತ ಪಾಪ-ತಾಪಗಳನ್ನು ಎಂದೆಂದಿಗೂ ನಾಶಮಾಡುವಂತಹುದು. ನೀನು ನಿತ್ಯಾನಂದ ಸ್ವರೂಪನೂ, ಎಲ್ಲರ ಆತ್ಮರೂಪನೂ ಆಗಿರುವೆ. ನಿನ್ನ ಲೀಲಾ-ಕಥೆಗಳು ನಿರಂತರವಾಗಿಯೂ ಕೇಳಲು ಸಿಗುವಂತಹ ಆ ಮಹಾಪುರುಷರ ಸತ್ಸಂಗದಲ್ಲಿ ಒಮ್ಮೆಯಾದರೂ ತನ್ನ ಮನಸ್ಸನ್ನು ತೊಡಗಿಸಿದರೆ ಮತ್ತೆ ಮನುಷ್ಯರ ಗುಣಗಳನ್ನು ಹರಣ ಮಾಡುವ ಸಂಸಾರದ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುವುದಿಲ್ಲ. ॥35॥
(ಶ್ಲೋಕ-36)
ಮೂಲಮ್
ಸತ ಇದಮುತ್ಥಿತಂ ಸದಿತಿ ಚೇನ್ನನು ತರ್ಕಹತಂ
ವ್ಯಭಿಚರತಿ ಕ್ವ ಚ ಕ್ವ ಚ ಮೃಷಾ ನ ತಥೋಭಯಯುಕ್ ।
ವ್ಯವಹೃತಯೇ ವಿಕಲ್ಪ ಇಷಿತೋಂಧಪರಂಪರಯಾ
ಭ್ರಮಯತಿ ಭಾರತೀ ತ ಉರುವೃತ್ತಿಭಿರುಕ್ಥಜಡಾನ್ ॥
ಅನುವಾದ
ಈ ಜಗತ್ತು ಸತ್ವಸ್ತುವಿನಿಂದ ಉತ್ಪನ್ನವಾಗಿದೆ. ಆದ್ದರಿಂದ ಇದನ್ನೂ ಸತ್ಯವೆಂದೇ ತಿಳಿದುಕೊಂಡರೆ ಆಪತ್ತೇನಿದೆ? ಎಂದು ಪ್ರಶ್ನಿಸಿದರೆ, ಇದರ ಉತ್ತರ - ಈ ಮಾತು ತರ್ಕದಿಂದ ಸಿದ್ಧವಾಗುವುದಿಲ್ಲ. ಏಕೆಂದರೆ, ಇದರಲ್ಲಿ ಅನೇಕತೆಯ ಜೊತೆಗೆ ಅಸತ್ಯವೂ ಕಂಡುಬರುತ್ತದೆ. ಆದ್ದರಿಂದ ಇದನ್ನು ಸತ್ಯವೆಂದು ತಿಳಿಯಲಾಗುವುದಿಲ್ಲ. ವಾಸ್ತವವಾಗಿ ಇದು ವಿದ್ಯೆ ಮತ್ತು ಅವಿದ್ಯೆ ಅರ್ಥಾತ್-ಚೇತನ ಮತ್ತು ಜಡ ಎರಡರಿಂದಲೂ ಸೇರಿಕೊಂಡೇ ಇದೆ. ಪ್ರಭೋ! ಇದರ ಅಧಿಷ್ಠಾನದಲ್ಲಿ ಸತ್ತ್ವರೂಪ ಪರಮಾತ್ಮನಾದ ನೀನೇ ಇರುವೆ. ಜೊತೆಗೆ ಮಾಯೆಯ ಕಾರ್ಯರೂಪೀ ಪ್ರಪಂಚವೂ ಇದೆ. ಅದು ವಿಕಲ್ಪದಿಂದ ಇದೆ, ಆದರೂ ವ್ಯವಹಾರಕ್ಕಾಗಿ ಒಪ್ಪಿಕೊಂಡದ್ದಾಗಿದೆ; ಎನ್ನುವ ಮಾನ್ಯತೆಯೂ ಅಂಧಪರಂಪರೆಯಿಂದ ನಡೆದುಬಂದಿದೆ. ನಿನ್ನ ವಾಣಿಯಾದ ವೇದದ ವಾಸ್ತವಿಕ ತಾತ್ಪರ್ಯ ಜಗತ್ತಿನ ಸತ್ಯತೆಯಲ್ಲಿಲ್ಲ. ಹೀಗಿದ್ದರೂ ಕರ್ಮಕಾಂಡದಲ್ಲಿ ಸಿಕ್ಕಿಹಾಕಿಕೊಂಡ ಜನರು ದೊಡ್ಡ-ದೊಡ್ಡ ಕರ್ಮಲಗಳ ಪ್ರಲೋಭನೆಯಿಂದ ಸ್ವರ್ಗಾದಿಭೋಗಗಳನ್ನೇ ಹಾಗೂ ಭೌತಿಕ ಸುಖವನ್ನೇ ಸುಖವೆಂದು ತಿಳಿಯುತ್ತಾರೆ. ಅವರ ಈ ಮಾನ್ಯತೆಯು ಭ್ರಮೆಯಿಂದ ಹಗ್ಗವನ್ನು ಸರ್ಪವೆಂದು ತಿಳಿಯುವಂತೆಯೇ ಆಗಿದೆ. ಆ ಭ್ರಾಂತಿಯಿಂದ ಹಗ್ಗವೂ ಹಾವಾಗಿ ಕಂಡುಬರುತ್ತದೆ. ಹಾಗೆಯೇ ಈ ಜಗತ್ತಿನ ರೂಪದಲ್ಲಿ ಸಗುಣ ನಿರಾಕಾರ ರೂಪದಿಂದ ಪರಮಾತ್ಮನ ಸತ್ತೆಯೇ ಇದೆ. ಆದರೆ ಮಾಯೆಯ ಪರದೆಯ ಕಾರಣ ಪ್ರಪಂಚವೇ ಸತ್ಯವಾಗಿ ತೋರುವುದು, ಪರಮಾತ್ಮನು ಕಾಣುವುದಿಲ್ಲ. ॥36॥
ಮೂಲಮ್
(ಶ್ಲೋಕ-37)
ನ ಯದಿದಮಗ್ರ ಆಸ ನ ಭವಿಷ್ಯದತೋ ನಿಧನಾ-
ದನುಮಿತಮಂತರಾ ತ್ವಯಿ ವಿಭಾತಿ ಮೃಷೈಕರಸೇ ।
ಅತ ಉಪಮೀಯತೇ ದ್ರವಿಣಜಾತಿವಿಕಲ್ಪಪಥೈ-
ರ್ವಿತಥಮನೋವಿಲಾಸಮೃತಮಿತ್ಯವಯಂತ್ಯಬುಧಾಃ ॥
ಅನುವಾದ
ಇದರ ಇನ್ನೊಂದು ಮುಖ್ಯ ಪ್ರಮಾಣ - ಈ ಜಗತ್ತು ಉತ್ಪತ್ತಿಗೆ ಮೊದಲು ಇರಲಿಲ್ಲ, ಪ್ರಳಯದ ನಂತರವೂ ಇರಲಾರದು. ಆದುದರಿಂದ ನಡುವೆಯೂ ಮಿಥ್ಯೆಯೇ ಆಗಿದೆ ಎಂಬುದು ಸಿದ್ಧವಾಗುತ್ತದೆ. ಕೆಲವು ಸಮಯದವರೆಗೆ ಇದು ನಿನ್ನಲ್ಲಿ ಕಂಡು ಬರುತ್ತದೆ. ದ್ರವ್ಯ, ಜಾತಿ, ಆಕಾರ ಮುಂತಾದವುಗಳ ಮೂಲಕ ಇವೆಲ್ಲದರ ವ್ಯವಹಾರಕ್ಕಾಗಿ ಅವೆಲ್ಲವುಗಳಿಗೆ ನಾಮ-ರೂಪಗಳನ್ನು ಇರಿಸಲಾಗುತ್ತದೆ. ವಾಸ್ತವವಾಗಿ ಇದೂ ಕೂಡವಾಣಿಯ ವಿಲಾಸವೇ ಆಗಿದೆ. ಅವುಗಳ ಹೆಸರನ್ನೆತ್ತಿ ವ್ಯವಹಾರದಲ್ಲಿ ಬಳಸುವುದೂ ಒಂದು ರೀತಿಯಿಂದ ನಮ್ಮ ಕಲ್ಪನೆಯೇ ಆಗಿದೆ. ಜ್ಞಾನಿಗಳು ಅವೆಲ್ಲವನ್ನು ಮತ್ತು ಅವುಗಳ ವ್ಯವಹಾರವನ್ನು ಮಿಥ್ಯೆಯೆಂದೇ ತಿಳಿಯುತ್ತಾರೆ. ಅವರ ದೃಷ್ಟಿಯಲ್ಲಿ ಎಲ್ಲದರಲ್ಲಿಯೂ ಏಕರಸನಾದ ನೀನೇ ಇರುವೆ. ಅವರು ನಿನ್ನ ಸಾಕ್ಷಾತ್ಕಾರವನ್ನೇ ಪಡೆಯುತ್ತಾರೆ. ಆದರೆ ಅಜ್ಞಾನಿಗಳಿಗೆ ನೀನು ಕಾಣುವುದಿಲ್ಲ; ಪ್ರಾಪಂಚಿಕ ವಸ್ತುಗಳನ್ನೇ ನೋಡುತ್ತಾರೆ ಹಾಗೂ ಅವನ್ನೇ ಸತ್ಯವೆಂದು ತಿಳಿಯುತ್ತಾರೆ. ॥37॥
(ಶ್ಲೋಕ-38)
ಮೂಲಮ್
ಸ ಯದಜಯಾ ತ್ವಜಾಮನುಶಯೀತ ಗುಣಾಂಶ್ಚ ಜುಷನ್
ಭಜತಿ ಸರೂಪತಾಂ ತದನು ಮೃತ್ಯುಮಪೇತಭಗಃ ।
ತ್ವಮುತ ಜಹಾಸಿ ತಾಮಹಿರಿವ ತ್ವಚಮಾತ್ತಭಗೋ
ಮಹಸಿ ಮಹೀಯಸೇಷ್ಟಗುಣಿತೇಪರಿಮೇಯಭಗಃ ॥
ಅನುವಾದ
ಹೀಗೆ ಈ ಜೀವನು ಮಾಯೆಯ ಕಾರಣ ಮಾಯೆ ಯನ್ನು ಸ್ವೀಕರಿಸಿ ಮತ್ತೆ ಗುಣಗಳನ್ನು ಸ್ವೀಕರಿಸಿ ತಾನು ಮಾಯಾಮಯನೇ ಆಗಿ ಹೋಗುತ್ತಾನೆ. ತನ್ನ ಸ್ವರೂಪವಾದ ಸಚ್ಚಿದಾನಂದ ಸ್ವರೂಪವನ್ನು ಪೂರ್ಣವಾಗಿ ಮರೆತು ಬಿಡುತ್ತಾನೆ. ಹೀಗೆ ತನ್ನ ಐಶ್ವರ್ಯವನ್ನು ನಾಶಪಡಿಸಿಕೊಂಡು ಮೃತ್ಯುಮುಖನಾಗುತ್ತಾನೆ ಹಾಗೂ ಜನ್ಮ-ಮರಣ ಚಕ್ರದಲ್ಲಿ ಅಲೆಯುತ್ತಾ ಇರುತ್ತಾನೆ. ಆದರೆ ನೀನು ನಿನ್ನ ಐಶ್ವರ್ಯವನ್ನು ನಿನ್ನ ಬಳಿಯೇ ಇಟ್ಟುಕೊಂಡು ಹಾವು ಪೊರೆಯನ್ನು ಕಳಚುವಂತೆ ಮಾಯೆಯನ್ನು ಬಿಟ್ಟು ಬಿಡುವೆ. ನೀನು ನಿನ್ನದೇ ಆದ ಅಪರಿಮಿತ ಅಣಿಮಾದಿ ಅಷ್ಟಿಸಿದ್ಧಿಗಳಿಂದ ಕೂಡಿಕೊಂಡು ನಿನ್ನ ಐಶ್ವರ್ಯದಲ್ಲೇ ಸ್ಥಿತನಾಗಿರುವೆ. ಜೀವನು ನಿನ್ನ ಅಂಶನಾದ್ದರಿಂದ ಸಚ್ಚಿದಾನಂದ ಸ್ವರೂಪನೇ ಆಗಿದ್ದಾನೆ. ಆದರೆ ಅಲ್ಪವಾದ ಜೀವನು ತನ್ನ ಐಶ್ವರ್ಯವನ್ನು ಕಳೆದುಕೊಳ್ಳುವನು. ಮಹಾನ್ ಆದ ನೀನು ನಿನ್ನ ಮಹಿಮೆಯಲ್ಲೇ ಸ್ಥಿತನಾಗಿರುವೆ. ॥38॥
(ಶ್ಲೋಕ-39)
ಮೂಲಮ್
ಯದಿ ನ ಸಮುದ್ಧರಂತಿ ಯತಯೋ ಹೃದಿ ಕಾಮಜಟಾ
ದುರಧಿಗಮೋಸತಾಂ ಹೃದಿ ಗತೋಸ್ಮೃತಕಂಠಮಣಿಃ ।
ಅಸುತೃಪಯೋಗಿನಾಮುಭಯತೋಪ್ಯಸುಖಂ ಭಗವನ್
ನನಪಗತಾಂತಕಾದನಧಿರೂಢಪದಾದ್ಭವತಃ ॥
ಅನುವಾದ
ಪ್ರಭುವೇ! ಹೃದಯದಲ್ಲಿರುವ ಕಾಮವಾಸನೆಯ ಜಾಲವನ್ನು ಸಂಯಮದ ಮೂಲಕ ಸಮೂಲವಾಗಿ ಕಿತ್ತೊಗೆಯದಿದ್ದರೆ ವಿಷಯಗಳಲ್ಲಿ ಮುಳುಗಿದ ಸಾಧಕರ ಹೃದಯದಲ್ಲಿ ನೀನಿದ್ದರೂ ಕೊರಳ ಕಂಠೀಹಾರವನ್ನು ಮರೆತಂತೆ ನಿನ್ನ ದರ್ಶನ ಪಡೆಯುವುದು ಅವರಿಗೆ ಕಷ್ಟವೇ ಇದೆ. ಈ ಕಾರಣದಿಂದಲೇ ವಿಷಯೀ ಮನುಷ್ಯರು ನಿನ್ನಿಂದ ವಿಮುಖರಾಗಿದ್ದು ಇಂದ್ರಿಯಗಳನ್ನು ಮತ್ತು ಪ್ರಾಣಗಳನ್ನು ತೃಪ್ತಿಪಡಿಸುವುದರಲ್ಲೇ ತೊಡಗಿರುತ್ತಾರೆ. ಅವರು ಮೃತ್ಯುವಿನಿಂದ ಬಿಡುಗಡೆ ಹೊಂದುವುದೇ ಇಲ್ಲ. ನಿನ್ನ ಸ್ವರೂಪವನ್ನು ತಿಳಿಯದ ಕಾರಣ ಮರಣಾನಂತರ ನರಕವನ್ನೂ ಅನುಭವಿಸಬೇಕಾಗುತ್ತದೆ. ಹೀಗೆ ಇಹಲೋಕ ಮತ್ತು ಪರಲೋಕ ಎರಡರಿಂದಲೂ ಅವನಿಗೆ ದುಃಖವೇ ದುಃಖವಿದೆ. ॥39॥
(ಶ್ಲೋಕ-40)
ಮೂಲಮ್
ತ್ವದವಗಮೀ ನ ವೇತ್ತಿ ಭವದುತ್ಥಶುಭಾಶುಭಯೋ-
ರ್ಗುಣವಿಗುಣಾನ್ವಯಾಂಸ್ತರ್ಹಿ ದೇಹಭೃತಾಂ ಚ ಗಿರಃ ।
ಅನುಯುಗಮನ್ವಹಂ ಸಗುಣ ಗೀತಪರಂಪರಯಾ
ಶ್ರವಣಭೃತೋ ಯತಸ್ತ್ವಮಪವರ್ಗಗತಿರ್ಮನುಜೈಃ ॥
ಅನುವಾದ
ಸಗುಣನಾದ ಪರಮಾತ್ಮನೇ! ನಿನ್ನನ್ನು ತಿಳಿದ ಭಕ್ತನು ಪುಣ್ಯ ಪಾಪಗಳ ಫಲಗಳನ್ನು ಇಲ್ಲೇ ತ್ಯಜಿಸಿಬಿಡುತ್ತಾನೆ. ಇವೆರಡೂ ಅವನಿಗೆ ಸಂಬಂಧಿಸಿದ್ದಲ್ಲ. ಅವನು ಇತರ ದೇಹ ಧಾರಿಗಳಿಗೆ ಇರುವ ವಿಧಿ-ನಿಷೇಧಗಳೆಂಬ ವೇದವಾಣಿಯನ್ನು ಸ್ವೀಕರಿಸುವುದಿಲ್ಲ. ಏಕೆಂದರೆ, ಅವನು ತನ್ನ ವಾಸ್ತವಿಕ ಸ್ವರೂಪವನ್ನು ಅರ್ಥಾತ್ ನಿನ್ನನ್ನು ಪಡೆದು ಕೊಂಡುಬಿಟ್ಟಿರುವನು. ನಿನ್ನನ್ನು ಪಡೆಯುವುದೇ ಶಾಸ್ತ್ರಗಳ ಚರಮ ಸಿದ್ಧಾಂತವಾಗಿದೆ. ಭಕ್ತರು ಪ್ರತಿಯುಗದಲ್ಲಿಯೂ ಗೀತ ಪರಂಪರೆಯಿಂದ ನಿನ್ನ ಗುಣಗಳನ್ನು ಹಾಡುತ್ತಾ ಬಂದಿದ್ದಾರೆ. ಅವನ್ನು ಅವನು ಶ್ರವಣಿಸುತ್ತಾನೆ. ಶ್ರವಣ ಮಾಡುತ್ತಾ-ಮಾಡುತ್ತಾ ಅವನ ವೃತ್ತಿಯು ತದಾಕಾರವಾಗಿ ಹೋಗುತ್ತದೆ. ಅವನಿಗೆ ನೀನು ಮೋಕ್ಷ ಸ್ವರೂಪ ಸದ್ಗತಿಯನ್ನು ಕರುಣಿಸುತ್ತೀಯೆ. ॥40॥
(ಶ್ಲೋಕ-41)
ಮೂಲಮ್
ದ್ಯುಪತಯ ಏವ ತೇ ನ ಯಯುರಂತಮನಂತತಯಾ
ತ್ವಮಪಿ ಯದಂತರಾಂಡನಿಚಯಾ ನನು ಸಾವರಣಾಃ ।
ಖ ಇವ ರಜಾಂಸಿ ವಾಂತಿ ವಯಸಾ ಸಹ ಯಚ್ಛ್ರುತಯ-
ಸ್ತ್ವಯಿ ಹಿ ಲಂತ್ಯತನ್ನಿರಸನೇನ ಭವನ್ನಿಧನಾಃ ॥
ಅನುವಾದ
ಭಗವಂತನೇ! ನಿನ್ನೊಳಗೆ ಏಳೇಳು ಆವರಣಗಳ ಸಹಿತ ಅನೇಕ ಬ್ರಹ್ಮಾಂಡಗಳ ಸಮುದಾಯವೇ ಇದೆ. ಅನಂತ ಕೋಟಿ ಬ್ರಹ್ಮಾಂಡ ನಾಯಕನಾದ ನಿನ್ನಲ್ಲಿ ಅವು ಆಕಾಶದಲ್ಲಿ ಹಾರಾಡುತ್ತಿರುವ ಧೂಳಿನ ಕಣಗಳಂತೆ ಸುತ್ತುತ್ತಾ ಇವೆ. ನೀನು ಅನಂತನೂ, ಅಸೀಮನೂ ಆಗಿರುವೆ. ನಿನ್ನ ಆದಿ-ಅಂತ್ಯವನ್ನು ನಿನ್ನಿಂದಲೇ ವರ್ಣಿಸಲಾಗದಿದ್ದಾಗ ಸಾಧಾರಣ ಬೇರೆ ಪ್ರಾಣಿ ಅದನ್ನು ಹೇಗೆ ತಿಳಿಯಬಲ್ಲನು? ಇದೆಂತಹ ಆಶ್ಚರ್ಯವಾಗಿದೆ. ಅವೆಲ್ಲ ಬ್ರಹ್ಮಾಂಡಗಳು ಕಾಲನ ವೇಗದಿಂದ ಸುತ್ತುತ್ತಾ ಇರುತ್ತವೆ. ಶ್ರುತಿಗಳಾದ ನಾವೂ ಕೂಡ ‘ನೇತಿ-ನೇತಿ’ ಎಂಬ ವಾಕ್ಯಗಳ ಮೂಲಕ ಇತರ ಎಲ್ಲವನ್ನು ನಿರಾಕರಣ ಮಾಡಿ ಕೊನೆಗೆ ಶೇಷವಾಗಿ ಉಳಿಯುವ ನಿನ್ನಲ್ಲೇ ಸಫಲರಾಗುತ್ತೇವೆ. ॥41॥
(ಶ್ಲೋಕ-42)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಇತ್ಯೇತದ್ ಬ್ರಹ್ಮಣಃ ಪುತ್ರಾ ಆಶ್ರುತ್ಯಾತ್ಮಾನುಶಾಸನಮ್ ।
ಸನಂದನಮಥಾನರ್ಚುಃ ಸಿದ್ಧಾ ಜ್ಞಾತ್ವಾತ್ಮನೋ ಗತಿಮ್ ॥
ಅನುವಾದ
ಭಗವಾನ್ ನಾರಾಯಣನು ಹೇಳಿದನು — ದೇವರ್ಷಿಗಳೇ! ಈ ಪ್ರಕಾರ ಸನಕಾದಿ ಋಷಿಗಳು ಜೀವ (ಆತ್ಮಾ) ಮತ್ತು ಬ್ರಹ್ಮನ ಏಕತೆಯನ್ನು ಹೇಳುವ ಉಪದೇಶವನ್ನು ಕೇಳಿ ಆತ್ಮಸ್ವರೂಪವನ್ನು ಸಾಕ್ಷಾತ್ಕರಿಸಿಕೊಂಡರು. ನಿತ್ಯಸಿದ್ಧರಾಗಿದ್ದರೂ ಅವರ ಉಪದೇಶವನ್ನು ಶ್ರವಣಿಸಿ ಅವರು ಕೃತಕೃತ್ಯರಾಗಿ ಸನಂದನರನ್ನು ಪೂಜಿಸಿದರು. ॥42॥
(ಶ್ಲೋಕ-43)
ಮೂಲಮ್
ಇತ್ಯಶೇಷಸಮಾಮ್ನಾಯಪುರಾಣೋಪನಿಷದ್ರಸಃ ।
ಸಮುದ್ಧೃತಃ ಪೂರ್ವಜಾತೈರ್ವ್ಯೋಮಯಾನೈರ್ಮಹಾತ್ಮಭಿಃ ॥
ಅನುವಾದ
ನಾರದನೇ! ಸನಕಾದಿ ಋಷಿಗಳು ಸೃಷ್ಟಿಯ ಮೊದಲಿಗೆ ಉತ್ಪನ್ನರಾಗಿದ್ದರು. ಆದ್ದರಿಂದ ಅವರು ಎಲ್ಲರ ಪೂರ್ವ ಜರಾಗಿದ್ದಾರೆ. ಆಕಾಶಗಾಮಿಗಳಾದ ಆ ಮಹಾತ್ಮರು ಈ ಪ್ರಕಾರ ಸಮಸ್ತ ವೇದ, ಪುರಾಣ ಮತ್ತು ಉಪನಿಷತ್ತುಗಳು ಸಾರವನ್ನು ತೆಗೆದು ಹೇಳಿದುದು ಸಮಸ್ತ ಶಾಸ್ತ್ರಗಳ ಸಾರವಾಗಿದೆ. ॥43॥
(ಶ್ಲೋಕ-44)
ಮೂಲಮ್
ತ್ವಂ ಚೈತದ್ಬ್ರಹ್ಮದಾಯಾದ ಶ್ರದ್ಧಯಾತ್ಮಾನುಶಾಸನಮ್ ।
ಧಾರಯಂಶ್ಚರ ಗಾಂ ಕಾಮಂ ಕಾಮಾನಾಂ ಭರ್ಜನಂ ನೃಣಾಮ್ ॥
ಅನುವಾದ
ದೇವರ್ಷಿಯೇ! ನೀನೂ ಕೂಡ ಅವರಂತೆಯೇ ಬ್ರಹ್ಮಮಾನಸ ಪುತ್ರನಾಗಿರುವೆ. ಅವರ ಜ್ಞಾನಸಂಪತ್ತಿಗೆ ಅಧಿಕಾರಿಯಾಗಿರುವೆ. ಆದ್ದರಿಂದ ನೀನೂ ಈ ಬ್ರಹ್ಮವಿದ್ಯೆಯನ್ನು ಧರಿಸಿಕೊಂಡು ಸ್ವಚ್ಛಂದ ಭಾವದಿಂದ ಭೂಮಂಡಲದಲ್ಲಿ ಸಂಚರಿಸು. ಈ ವಿದ್ಯೆಯು ಸಮಸ್ತ ವಾಸನೆಗಳನ್ನು ಭಸ್ಮಮಾಡುವಂತಹುದು. ॥44॥
ಮೂಲಮ್
(ಶ್ಲೋಕ-45)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಏವಂ ಸ ಋಷಿಣಾದಿಷ್ಟಂ ಗೃಹೀತ್ವಾ ಶ್ರದ್ಧಯಾತ್ಮವಾನ್ ।
ಪೂರ್ಣಃ ಶ್ರುತಧರೋ ರಾಜನ್ನಾಹ ವೀರವ್ರತೋ ಮುನಿಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪ್ರಿಯ ಪರೀಕ್ಷಿತನೇ! ದೇವಋಷಿನಾರದರು ದೊಡ್ಡ ಸಂಯಮಿಯೂ, ಜ್ಞಾನಿಗಳೂ, ಪೂರ್ಣಕಾಮರೂ, ನೈಷ್ಠಿಕ ಬ್ರಹ್ಮಚಾರಿಗಳೂ ಆಗಿದ್ದಾರೆ. ಭಗವಾನ್ ನಾರಾಯಣನಿಂದ ಕೊಡಲ್ಪಟ್ಟ ಉಪದೇಶವನ್ನು ಅವರು ಬಹಳ ಶ್ರದ್ಧೆಯಿಂದ ಶ್ರವಣಿಸಿ ಇಂತೆಂದರು - ॥45॥
(ಶ್ಲೋಕ-46)
ಮೂಲಮ್ (ವಾಚನಮ್)
ನಾರದ ಉವಾಚ
ಮೂಲಮ್
ನಮಸ್ತಸ್ಮೈ ಭಗವತೇ ಕೃಷ್ಣಾಯಾಮಲಕೀರ್ತಯೇ ।
ಯೋ ಧತ್ತೇ ಸರ್ವಭೂತಾನಾಮಭವಾಯೋಷತೀಃ ಕಲಾಃ ॥
ಅನುವಾದ
ದೇವರ್ಷಿನಾರದರು ಹೇಳಿದರು — ಭಗವಂತನೇ! ನೀನು ಸಚ್ಚಿದಾನಂದ ಸ್ವರೂಪನಾದ ಶ್ರೀಕೃಷ್ಣನೇ ಆಗಿರುವೆ. ನಿನ್ನ ಕೀರ್ತಿಯು ಪರಮ ಪವಿತ್ರವಾಗಿದೆ. ನೀನು ಸಮಸ್ತ ಪ್ರಾಣಿಗಳ ಪರಮ ಕಲ್ಯಾಣಕ್ಕಾಗಿ ಅವರ ಮೇಲೆ ಅನುಗ್ರಹವನ್ನು ತೋರಲು ಮನೋಹರವಾದ ಅವತಾರವನ್ನು ತಾಳುವ ಲೀಲೆಯನ್ನು ಮಾಡುತ್ತಿರುವೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥46॥
(ಶ್ಲೋಕ-47)
ಮೂಲಮ್
ಇತ್ಯಾದ್ಯಮೃಷಿಮಾನಮ್ಯ ತಚ್ಛಿಷ್ಯಾಂಶ್ಚ ಮಹಾತ್ಮನಃ ।
ತತೋಗಾದಾಶ್ರಮಂ ಸಾಕ್ಷಾತ್ ಪಿತುರ್ದ್ವೈಪಾಯನಸ್ಯ ಮೇ ॥
ಅನುವಾದ
ಪ್ರಿಯಪರೀಕ್ಷಿತನೇ! ಹೀಗೆ ಆದಿಋಷಿ ಭಗವಾನ್ ನಾರಾಯಣನಿಗೆ ಮತ್ತು ಅವನ ಶಿಷ್ಯರಿಗೆ ನಮಸ್ಕಾರ ಮಾಡಿ ದೇವರ್ಷಿನಾರದರು ನನ್ನ ತಂದೆಯವರಾದ ಶ್ರೀಕೃಷ್ಣ ದ್ವೈಪಾಯನರ ಆಶ್ರಮಕ್ಕೆ ಹೋದರು. ॥47॥
(ಶ್ಲೋಕ-48)
ಮೂಲಮ್
ಸಭಾಜಿತೋ ಭಗವತಾ ಕೃತಾಸನಪರಿಗ್ರಹಃ ।
ತಸ್ಮೈ ತದ್ವರ್ಣಯಾಮಾಸ ನಾರಾಯಣಮುಖಾಚ್ಛ್ರುತಮ್ ॥
ಅನುವಾದ
ಅಲ್ಲಿ ನನ್ನ ತಂದೆಯವರಾದ ಶ್ರೀವೇದವ್ಯಾಸರು ಅವರನ್ನು ಯಥೋಚಿತವಾಗಿ ಸತ್ಕರಿಸಿದರು. ಅವರು ಸುಖಾಸೀನರಾಗಿ ಕುಳಿತು ಭಗವಾನ್ ನಾರಾಯಣನ ಶ್ರೀಮುಖದಿಂದ ಕೇಳಿದ ಬ್ರಹ್ಮವಿಷಯಕ ಚರ್ಚೆಯನ್ನು ಆದ್ಯಂತವಾಗಿ ತಿಳಿಸಿದರು. ॥48॥
(ಶ್ಲೋಕ-49)
ಮೂಲಮ್
ಇತ್ಯೇತದ್ವರ್ಣಿತಂ ರಾಜನ್ ಯನ್ನಃ ಪ್ರಶ್ನಃ ಕೃತಸ್ತ್ವಯಾ ।
ಯಥಾ ಬ್ರಹ್ಮಣ್ಯನಿರ್ದೇಶ್ಯೇ ನಿರ್ಗುಣೇಪಿ ಮನಶ್ಚರೇತ್ ॥
ಅನುವಾದ
ರಾಜೇಂದ್ರನೇ! ‘‘ಶ್ರುತಿಗಳು ಬ್ರಹ್ಮ ವಸ್ತುವನ್ನು ಹೇಗೆ ಪ್ರತಿಪಾದಿಸ ಬಲ್ಲವು? ಏಕೆಂದರೆ, ನಿರ್ಗುಣ ತತ್ತ್ವವಾದರೋ ಮನಸ್ಸು, ಮಾತಿಗಿಂತ ಅತೀತವಾಗಿದೆ ಮತ್ತು ಪ್ರಕೃತಿ ಗುಣಗಳಿಂದ ರಹಿತವಾಗಿದೆ’’ ಎಂದು ನೀನು ಕೇಳಿದ ಪ್ರಶ್ನೆಗೆ ನಾನು ಉತ್ತರ ಕೊಟ್ಟಂತಾತಯಿತಲ್ಲ! ॥49॥
(ಶ್ಲೋಕ-50)
ಮೂಲಮ್
ಯೋಸ್ಯೋತ್ಪ್ರೇಕ್ಷಕ ಆದಿಮಧ್ಯನಿಧನೇ ಯೋವ್ಯಕ್ತಜೀವೇಶ್ವರೋ
ಯಃ ಸೃಷ್ಟ್ವೇದಮನುಪ್ರವಿಶ್ಯ ಋಷಿಣಾ ಚಕ್ರೇ ಪುರಃ ಶಾಸ್ತಿ ತಾಃ ।
ಯಂ ಸಂಪದ್ಯ ಜಹಾತ್ಯಜಾಮನುಶಯೀ ಸುಪ್ತಃ ಕುಲಾಯಂ ಯಥಾ
ತಂ ಕೈವಲ್ಯನಿರಸ್ತಯೋನಿಮಭಯಂ ಧ್ಯಾಯೇದಜಸ್ರಂ ಹರಿಮ್ ॥
ಅನುವಾದ
ಪ್ರಿಯಪರೀಕ್ಷಿತನೇ! ಭಗವಂತನು ತನ್ನ ಸಂಕಲ್ಪದಿಂದಲೇ ಈ ವಿಶ್ವವನ್ನು ನಿರ್ಮಿಸಿರುತ್ತಾನೆ. ಅವನೇ ಎಲ್ಲರ ಪ್ರೇರಕನೂ ಆಗಿದ್ದಾನೆ. ಆದಿ, ಮಧ್ಯ, ಅಂತ್ಯದಲ್ಲಿ ಅವನೇ ಇರುತ್ತಾನೆ. ಅವನೇ ಅವ್ಯಕ್ತ ಪ್ರಕೃತಿ ಮತ್ತು ಜೀವ ಎರಡರ ಈಶ್ವರನಾಗಿದ್ದಾನೆ. ಅವನೇ ಈ ವಿಶ್ವವನ್ನು ಸೃಷ್ಟಿಸಿ ಜೀವರೂಪದಿಂದ ಇದರಲ್ಲಿ ಪ್ರವೇಶಿಸಿದನು. ಜೀವನು ಸಾಕ್ಷಾತ್ ಪರಮಾತ್ಮನ ಅಂಶನಾದ್ದರಿಂದ ಇವನು ಋಷಿಸ್ವರೂಪನಾಗಿದ್ದಾನೆ. ಇವನಿಗೆ ನಿಲ್ಲಲೆಂದೇ ಪರಮಾತ್ಮನು ದೇಹವನ್ನು ನಿರ್ಮಿಸಿ ಸಮಸ್ತ ಜೀವರ ನಿಯಂತ್ರಣವನ್ನು ಮಾಡುತ್ತಿರುವನು. ಆ ಪರಬ್ರಹ್ಮ ಪರಮಾತ್ಮನನ್ನು ಪ್ರಾಪ್ತಮಾಡಿಕೊಂಡು ಜೀವನು ಮಾಯೆಯನ್ನು ತ್ಯಜಿಸಿ ತನ್ನ ಸ್ವರೂಪವಾದ ಪರಬ್ರಹ್ಮನನ್ನು ಹೊಂದುತ್ತಾನೆ. ಗಾಢನಿದ್ದೆಯಲ್ಲಿ ಮನುಷ್ಯನಿಗೆ ಈ ಪಾಂಚಭೌತಿಕ ಶರೀರದ ಎಚ್ಚರವಿರುವುದಿಲ್ಲವೋ ಹಾಗೆಯೇ ಸತತ ಪರಮಾತ್ಮನನ್ನು ಚಿಂತಿಸುತ್ತಿರುವ ಭಕ್ತನಿಗೆ ಮಾಯಾಮಯ ಪದಾರ್ಥಗಳ ಚಿಂತನೆಯಾಗುವುದಿಲ್ಲ. ಆದ್ದರಿಂದ ಮುಕ್ತನಾಗಲು ಏಕಮಾತ್ರ ಸರಳ ಉಪಾಯವು ಸತತವಾಗಿ ಭಗವಂತನನ್ನು ಸ್ಮರಿಸುವುದೇ ಆಗಿದೆ. ಭಗವಂತನು ಕೈವಲ್ಯ ಸ್ವರೂಪನಾಗಿದ್ದಾನೆ. ಅವನ ಭಜನೆ ಮಾಡುವುದರಿಂದ ಪ್ರಪಂಚದ ಆವಾಗಮನವು ನಾಶವಾಗಿ ಹೋಗುತ್ತದೆ. ಆದ್ದರಿಂದ ಯಾವಾಗಲೂ ಭಗವಂತನನ್ನೇ ಚಿಂತನೆ ಭಜನೆ ಮಾಡುತ್ತಾ ಇರಬೇಕು. ಅದರಲ್ಲೇ ಜೀವಿಯ ಮಂಗಳವಿದೆ, ಅದೇ ನಿರ್ಭಯ ಸ್ಥಾನವಾಗಿದೆ. ಆದ್ದರಿಂದ ಭಗವಂತನಲ್ಲಿ ಶರಣಾಗಬೇಕು. ॥50॥
ಅನುವಾದ (ಸಮಾಪ್ತಿಃ)
ಎಂಭತ್ತೇಳನೆಯ ಅಧ್ಯಾಯವು ಮುಗಿಯಿತು. ॥87॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ನಾರದನಾರಾಯಣಸಂವಾದೇ ವೇದಸ್ತುತಿರ್ನಾಮ ಸಪ್ತಾಶೀತಿತಮೋಧ್ಯಾಯಃ ॥87॥