[ಏಂಭತ್ತಾರನೇಯ ಅಧ್ಯಾಯ]
ಭಾಗಸೂಚನಾ
ಸುಭದ್ರಾಹರಣ - ಭಗವಾನ್ ಶ್ರೀಕೃಷ್ಣನು ಮಿಥಿಲೆಯ ರಾಜನಾದ ಜನಕನ ಅರಮನೆಗೂ ಮತ್ತು ಶ್ರುತದೇವ ಬ್ರಾಹ್ಮಣನ ಮನೆಗೂ ಏಕಕಾಲದಲ್ಲಿ ಪ್ರವೇಶಿಸಿದುದು
(ಶ್ಲೋಕ-1)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಬ್ರಹ್ಮನ್ ವೇದಿತುಮಿಚ್ಛಾಮಃ ಸ್ವಸಾರಂ ರಾಮಕೃಷ್ಣಯೋಃ ।
ಯಥೋಪಯೇಮೇ ವಿಜಯೋ
ಯಾ ಮಮಾಸೀತ್ ಪಿತಾಮಹೀ ॥
ಅನುವಾದ
ಪರೀಕ್ಷಿದ್ರಾಜನು ಕೇಳಿದನು — ಪೂಜ್ಯರೇ! ನನ್ನ ತಾತ ನಾದ ಅರ್ಜುನನು ಶ್ರೀಕೃಷ್ಣ-ಬಲರಾಮರ ತಂಗಿಯಾದ, ನನ್ನ ಅಜ್ಜಿಯಾದ ಸುಭದ್ರೆಯನ್ನು ಹೇಗೆ ಮದುವೆಯಾದನು? ಇದನ್ನು ಕೇಳಲು ನಾನು ಬಹಳ ಉತ್ಸುಕನಾಗಿದ್ದೇನೆ. ॥1॥
(ಶ್ಲೋಕ-2)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಅರ್ಜುನಸ್ತೀರ್ಥಯಾತ್ರಾಯಾಂ ಪರ್ಯಟನ್ನವನೀಂ ಪ್ರಭುಃ ।
ಗತಃ ಪ್ರಭಾಸಮಶೃಣೋನ್ಮಾತುಲೆಯೀಂ ಸ ಆತ್ಮನಃ ॥
(ಶ್ಲೋಕ-3)
ಮೂಲಮ್
ದುರ್ಯೊಧನಾಯ ರಾಮಸ್ತಾಂ ದಾಸ್ಯತೀತಿ ನ ಚಾಪರೇ ।
ತಲ್ಲಿಪ್ಸುಃ ಸ ಯತಿರ್ಭೂತ್ವಾ ತ್ರಿದಂಡೀ ದ್ವಾರಕಾಮಗಾತ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳಿದರು — ಪರೀಕ್ಷಿತನೇ! ಒಮ್ಮೆ ಪ್ರಭಾವಶಾಲಿಯಾದ ಅರ್ಜುನನು ತೀರ್ಥಯಾತ್ರೆಯನ್ನು ಮಾಡುತ್ತಾ ಭೂಮಂಡಲದಲ್ಲಿ ಸಂಚರಿಸುತ್ತಿದ್ದಾಗ ಪ್ರಭಾಸಕ್ಷೇತ್ರಕ್ಕೆ ಆಗಮಿಸಿದನು. ಅಲ್ಲವನು ತಮ್ಮ ಸೋದರ ಮಾವನ ಮಗಳಾದ ಸುಭದ್ರೆಯನ್ನು ದುರ್ಯೋಧನನಿಗೆ ಕೊಟ್ಟು ಮದುವೆ ಮಾಡಲು ಬಲರಾಮನು ನಿಶ್ಚಯಿಸಿದ್ದಾನೆಂದೂ, ಇದಕ್ಕೆ ವಸುದೇವನ ಮತ್ತು ಶ್ರೀಕೃಷ್ಣನ ಸಹಮತವಿಲ್ಲವೆಂದೂ ಕೇಳಿದನು. ಆಗ ಅರ್ಜುನನ ಮನಸ್ಸಿನಲ್ಲಿ ಸುಭದ್ರೆಯನ್ನು ತಾನು ಮದುವೆಯಾಗಬೇಕೆಂಬ ಆಸೆಯು ಅಂಕುರಿಸಿತು. ಇದನ್ನು ಸಾಧಿಸಲಿಕ್ಕಾಗಿ ತ್ರಿದಂಡೀ ಸಂನ್ಯಾಸಿ ವೇಷವನ್ನು ಧರಿಸಿ ಅವನು ದ್ವಾರಕೆಗೆ ಹೋದನು. ॥2-3॥
(ಶ್ಲೋಕ-4)
ಮೂಲಮ್
ತತ್ರ ವೈ ವಾರ್ಷಿಕಾನ್ ಮಾಸಾನವಾತ್ಸೀತ್ಸ್ವಾರ್ಥಸಾಧಕಃ ।
ಪೌರೈಃ ಸಭಾಜಿತೋಭೀಕ್ಷ್ಣಂ ರಾಮೇಣಾಜಾನತಾ ಚ ಸಃ ॥
ಅನುವಾದ
ಅರ್ಜುನನು ಸುಭದ್ರೆಯನ್ನು ಪಡೆದುಕೊಳ್ಳಲು ದ್ವಾರಕೆಯಲ್ಲಿ ವರ್ಷಾಕಾಲದ ನಾಲ್ಕು ತಿಂಗಳು ತಂಗಿದನು. ಅಲ್ಲಿ ನಗರವಾಸಿಗಳೂ, ಬಲರಾಮನೂ ಅವನನ್ನು ಬಹಳವಾಗಿ ಸನ್ಮಾನಿಸಿದರು. ಆದರೆ ಇವನು ಅರ್ಜುನನೆಂದು ಅವರಿಗೆ ತಿಳಿಯಲಿಲ್ಲ. ॥4॥
(ಶ್ಲೋಕ-5)
ಮೂಲಮ್
ಏಕದಾ ಗೃಹಮಾನೀಯ ಆತಿಥ್ಯೇನ ನಿಮಂತ್ರ್ಯ ತಮ್ ।
ಶ್ರದ್ಧಯೋಪಹೃತಂ ಭೈಕ್ಷ್ಯಂ ಬಲೇನ ಬುಭುಜೇ ಕಿಲ ॥
ಅನುವಾದ
ಒಂದುದಿನ ಬಲರಾಮನು ಆತಿಥ್ಯವನ್ನು ನೀಡಲು ಆ ಸಂನ್ಯಾಸಿಯನ್ನು ತಮ್ಮ ಅರಮನೆಗೆ ಕರೆದುಕೊಂಡು ಬಂದನು. ಸಂನ್ಯಾಸಿ ವೇಷಧಾರಿಯಾದ ಅರ್ಜುನನಿಗೆ ಬಲರಾಮನು ಬಹಳ ಶ್ರದ್ಧೆಯೊಂದಿಗೆ ಮೃಷ್ಟಾನ್ನವನ್ನು ಭೋಜನ ಮಾಡಿಸಿದನು. ॥5॥
(ಶ್ಲೋಕ-6)
ಮೂಲಮ್
ಸೋಪಶ್ಯತ್ತತ್ರ ಮಹತೀಂ ಕನ್ಯಾಂ ವೀರಮನೋಹರಾಮ್ ।
ಪ್ರೀತ್ಯುತ್ಫುಲ್ಲೇಕ್ಷಣಸ್ತಸ್ಯಾಂ ಭಾವಕ್ಷುಬ್ಧಂ ಮನೋ ದಧೇ ॥
ಅನುವಾದ
ಅರ್ಜುನನು ಭೋಜನ ಮಾಡುವಾಗ ಅಲ್ಲಿ ವಿವಾಹಯೋಗ್ಯಳಾದ ಪರಮ ಸುಂದರಿಯಾದ ಸುಭದ್ರೆಯನ್ನು ನೋಡಿದನು. ಆಕೆಯ ಸೌಂದರ್ಯವು ಮಹಾ-ಮಹಾವೀರರ ಮನಸ್ಸನ್ನು ಅಪಹರಿಸುವಂತಹುದಿತ್ತು. ಆಕೆಯನ್ನು ನೋಡಿ ಅರ್ಜುನನ ಕಣ್ಣುಗಳು ಅರಳಿದವು. ಅವಳನ್ನು ಪಡೆಯಬೇಕೆಂಬ ಆಕಾಂಕ್ಷೆಯಿಂದ ಅವನ ಮನಸ್ಸು ಕ್ಷುಬ್ಧವಾಯಿತು ಮತ್ತು ಅವಳನ್ನು ಪತ್ನಿಯಾಗಿಸಿಕೊಳ್ಳಬೇಕೆಂದು ನಿಶ್ಚಯಿಸಿದನು.॥6॥
(ಶ್ಲೋಕ-7)
ಮೂಲಮ್
ಸಾಪಿ ತಂ ಚಕಮೇ ವೀಕ್ಷ್ಯ ನಾರೀಣಾಂ ಹೃದಯಂಗಮಮ್ ।
ಹಸಂತೀ ವ್ರೀಡಿತಾಪಾಂಗೀ ತನ್ನ್ಯಸ್ತಹೃದಯೇಕ್ಷಣಾ ॥
ಅನುವಾದ
ಪರೀಕ್ಷಿತನೇ! ನಿನ್ನ ತಾತನಾದ ಅರ್ಜುನನೂ ತುಂಬಾ ಸುಂದರನಾಗಿದ್ದನು. ಅವನ ಸೌಂದರ್ಯಕ್ಕೆ ಆಕರ್ಷಿತರಾಗದ ಸ್ತ್ರೀಯರೇ ಇರಲಿಲ್ಲ. ಅಂತಹ ಸುಂದರ ಪುರುಷನನ್ನು ನೋಡಿದ ಸುಭದ್ರೆಯೂ ಕೂಡ ಅವನನ್ನೇ ಪತಿಯನ್ನಾಗಿ ವರಿಸಲು ನಿಶ್ಚಯಿಸಿದಳು. ಅವಳು ಸ್ವಲ್ಪ ಮುಗುಳ್ನಕ್ಕು ನಾಚಿಕೆಯಿಂದ ಕೂಡಿದ ಓರೆಗಣ್ಣನೋಟದಿಂದ ಅವನನ್ನು ನೋಡಿದಳು. ಆಕೆಯು ತನ್ನ ಹೃದಯವನ್ನು ಅವನಿಗೆ ಸಮರ್ಪಿಸಿಬಿಟ್ಟಳು. ॥7॥
(ಶ್ಲೋಕ-8)
ಮೂಲಮ್
ತಾಂ ಪರಂ ಸಮನುಧ್ಯಾಯನ್ನಂತರಂ ಪ್ರೇಪ್ಸುರರ್ಜುನಃ ।
ನ ಲೇಭೇ ಶಂ ಭ್ರಮಚ್ಚಿತ್ತಃ ಕಾಮೇನಾತಿಬಲೀಯಸಾ ॥
ಅನುವಾದ
ಈಗ ಅರ್ಜುನನು ಕೇವಲ ಅವಳ ಚಿಂತೆಯಲ್ಲೇ ಇದ್ದು, ಇವಳನ್ನು ಯಾವಾಗ ಅಪಹರಿಸಿಕೊಂಡು ಹೋಗಬಹುದೆಂದು ಸಂದರ್ಭವನ್ನು ಹುಡುಕುತ್ತಿದ್ದನು. ಸುಭದ್ರೆಯನ್ನು ಪಡೆಯುವ ಉತ್ಕಟ ಕಾಮನೆಯಿಂದ ಅವನ ಚಿತ್ತವು ಚಂಚಲವಾಗಿ, ಅವನಿಗೆ ಸ್ವಲ್ಪವೂ ಶಾಂತಿಯೇ ಇಲ್ಲದಂತಾಯಿತು. ॥8॥
(ಶ್ಲೋಕ-9)
ಮೂಲಮ್
ಮಹತ್ಯಾಂ ದೇವಯಾತ್ರಾಯಾಂ ರಥಸ್ಥಾಂ ದುರ್ಗನಿರ್ಗತಾಮ್ ।
ಜಹಾರಾನುಮತಃ ಪಿತ್ರೋಃ ಕೃಷ್ಣಸ್ಯ ಚ ಮಹಾರಥಃ ॥
ಅನುವಾದ
ಒಮ್ಮೆ ಸುಭದ್ರೆಯು ದೇವರ ದರ್ಶನಕ್ಕಾಗಿ ರಥದಲ್ಲಿ ಕುಳಿತುಕೊಂಡು ದ್ವಾರಕೆಯ ದುರ್ಗದಿಂದ ಹೊರಗೆ ಹೊರಟಳು. ಅದೇ ಸಮಯದಲ್ಲಿ ಅರ್ಜುನನು ವಸುದೇವ-ದೇವಕಿಯ ಮತ್ತು ಶ್ರೀಕೃಷ್ಣನ ಅನುಮತಿಯನ್ನು ಪಡೆದು ಸುಭದ್ರೆಯನ್ನು ಅಪಹರಿಸಿಕೊಂಡು ಹೋದನು. ॥9॥
(ಶ್ಲೋಕ-10)
ಮೂಲಮ್
ರಥಸ್ಥೋ ಧನುರಾದಾಯ ಶೂರಾಂಶ್ಚಾರುಂಧತೋ ಭಟಾನ್ ।
ವಿದ್ರಾವ್ಯ ಕ್ರೋಶತಾಂ ಸ್ವಾನಾಂ ಸ್ವಭಾಗಂ ಮೃಗರಾಡಿವ ॥
ಅನುವಾದ
ರಥಾರೂಢನಾದ ವೀರ ಅರ್ಜುನನು ಧನುಸ್ಸನ್ನು ಎತ್ತಿಕೊಂಡು ತನ್ನನ್ನು ತಡೆಯಲು ಬಂದ ಸೈನಿಕರನ್ನು ಹೊಡೆದು ಓಡಿಸಿದನು. ಸುಭದ್ರೆಯ ಆಪ್ತವರ್ಗವು ಅಳುತ್ತಾ ಗೋಳಾಡುತ್ತಿದ್ದಂತೆ ಸಿಂಹವು ತನಗೆ ಸೇರಬೇಕಾದ ಭಾಗವನ್ನು ನಿರ್ಭಯವಾಗಿ ಎತ್ತಿಕೊಂಡು ಹೋಗುವಂತೆ ಅರ್ಜುನನು ಸುಭದ್ರೆಯನ್ನು ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟುಹೋದನು. ॥10॥
(ಶ್ಲೋಕ-11)
ಮೂಲಮ್
ತಚ್ಛ್ರುತ್ವಾ ಕ್ಷುಭಿತೋ ರಾಮಃ ಪರ್ವಣೀವ ಮಹಾರ್ಣವಃ ।
ಗೃಹೀತಪಾದಃ ಕೃಷ್ಣೇನ ಸುಹೃದ್ಭಿಶ್ಚಾನ್ವಶಾಮ್ಯತ ॥
ಅನುವಾದ
ಈ ಸಮಾಚಾರವನ್ನು ಕೇಳಿದ ಬಲರಾಮನ ಕೋಪವು ಹುಣ್ಣಿಮೆಯ ದಿನ ಸಮುದ್ರವು ಉಕ್ಕೇರುವಂತೆ, ಉಕ್ಕೇರಿಬಂದಿತು. ಆದರೆ ಭಗವಾನ್ ಶ್ರೀಕೃಷ್ಣನು ಹಾಗೂ ಇತರ ಸುಹೃದ್ ಸಂಬಂಧಿಗಳು ಅವನ ಕಾಲುಗಳನ್ನು ಹಿಡಿದುಕೊಂಡು ನಾನಾವಿಧದಿಂದ ಸಮಾಧಾನಪಡಿಸಿದಾಗ ಶಾಂತನಾದನು. ॥11॥
(ಶ್ಲೋಕ-12)
ಮೂಲಮ್
ಪ್ರಾಹಿಣೋತ್ಪಾರಿಬರ್ಹಾಣಿ ವರವಧ್ವೋರ್ಮುದಾ ಬಲಃ ।
ಮಹಾಧನೋಪಸ್ಕರೇಭರಥಾಶ್ವನರಯೋಷಿತಃ ॥
ಅನುವಾದ
ಅನಂತರ ಬಲರಾಮನು ಪ್ರಸನ್ನನಾಗಿ ವಧೂ-ವರರಿಗೆ ಅಪಾರವಾದ ಧನವನ್ನು ನಾನಾಸಾಮಗ್ರಿಗಳನ್ನು, ಆನೆ, ಕುದುರೆ, ರಥ ಮತ್ತು ದಾಸೀ-ದಾಸರನ್ನು ಬಳುವಳಿಯಾಗಿ ಕಳಿಸಿಕೊಟ್ಟನು. ॥12॥
(ಶ್ಲೋಕ-13)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಕೃಷ್ಣಸ್ಯಾಸೀದ್ವಜಶ್ರೇಷ್ಠಃ ಶ್ರುತದೇವ ಇತಿ ಶ್ರುತಃ ।
ಕೃಷ್ಣೈಕಭಕ್ತ್ಯಾ ಪೂರ್ಣಾರ್ಥಃ ಶಾಂತಃ ಕವಿರಲಂಪಟಃ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ವಿದೇಹರಾಜ್ಯದ ರಾಜಧಾನಿಯಾದ ಮಿಥಿಲಾಪಟ್ಟಣದಲ್ಲಿ ಶ್ರುತದೇವನೆಂಬ ಒಬ್ಬ ಗೃಹಸ್ಥ ಬ್ರಾಹ್ಮಣನಿದ್ದನು. ಅವನು ಭಗವಾನ್ ಶ್ರೀಕೃಷ್ಣನ ಪರಮಭಕ್ತನಾಗಿದ್ದನು. ಅವನು ಏಕಮಾತ್ರ ಭಗವದ್ಭಕ್ತಿಯಿಂದ ಪೂರ್ಣಮನೋರಥನೂ, ಪರಮಶಾಂತನೂ, ಜ್ಞಾನಿಯೂ, ವಿರಕ್ತನೂ ಆಗಿದ್ದನು. ॥13॥
(ಶ್ಲೋಕ-14)
ಮೂಲಮ್
ಸ ಉವಾಸ ವಿದೇಹೇಷು ಮಿಥಿಲಾಯಾಂ ಗೃಹಾಶ್ರಮೀ ।
ಅನೀಹಯಾಗತಾಹಾರ್ಯನಿರ್ವರ್ತಿತನಿಜಕ್ರಿಯಃ ॥
ಅನುವಾದ
ಅವನು ಗೃಹಸ್ಥಾಶ್ರಮದಲ್ಲಿ ಇರುತ್ತಿದ್ದರೂ ಜೀವನ ನಿರ್ವಹಣೆಗಾಗಿ ಯಾವುದೇ ಉದ್ಯೋಗವನ್ನು ಮಾಡುತ್ತಿರಲಿಲ್ಲ. ಭಗವಂತನ ದಯೆಯಿಂದ ದೊರೆತುದರಲ್ಲೇ ಜೀವನ ಸಾಗಿಸುತ್ತಿದ್ದನು. ॥14॥
(ಶ್ಲೋಕ-15)
ಮೂಲಮ್
ಯಾತ್ರಾಮಾತ್ರಂ ತ್ವಹರಹರ್ದೈವಾದುಪನಮತ್ಯುತ ।
ನಾಧಿಕಂ ತಾವತಾ ತುಷ್ಟಃ ಕ್ರಿಯಾಶ್ಚಕ್ರೇ ಯಥೋಚಿತಾಃ ॥
ಅನುವಾದ
ಪ್ರಾರಬ್ಧವಶದಿಂದ ಅವನಿಗೆ ಪ್ರತಿದಿನವೂ ಜೀವನನಿರ್ವಾಹಕ್ಕಾಗುವಷ್ಟು ಸಾಮಗ್ರಿಯು ದೊರೆಯುತ್ತಿತ್ತು. ಹೆಚ್ಚಿಗೆ ಮಿಗುತ್ತಿರಲಿಲ್ಲ. ಅವನು ಅಷ್ಟರಲ್ಲೇ ಸಂತುಷ್ಟನಾಗಿದ್ದು ತನ್ನ ವರ್ಣಾಶ್ರಮಕ್ಕನುಸಾರ ಧರ್ಮವನ್ನು ಪಾಲಿಸುವುದರಲ್ಲಿ ತತ್ಪರನಾಗಿರುತ್ತಿದ್ದನು. ॥15॥
(ಶ್ಲೋಕ-16)
ಮೂಲಮ್
ತಥಾ ತದ್ರಾಷ್ಟ್ರಪಾಲೋಂಗ ಬಹುಲಾಶ್ವ ಇತಿ ಶ್ರುತಃ ।
ಮೈಥಿಲೋ ನಿರಹಮ್ಮಾನ ಉಭಾವಪ್ಯಚ್ಯುತಪ್ರಿಯೌ ॥
ಅನುವಾದ
ಪ್ರಿಯ ಪರೀಕ್ಷಿತನೇ! ಆ ದೇಶದ ರಾಜನೂ ಕೂಡ ಬ್ರಾಹ್ಮಣನಂತೆಯೇ ಭಕ್ತಿಯುಳ್ಳವನಾಗಿದ್ದನು. ಮಿಥಿಲಾ ಪಟ್ಟಣದ ಆ ಪ್ರತಿಷ್ಠಿತ ನರಪತಿಯ ಹೆಸರು ಬಹುಲಾಶ್ವನೆಂದಿತ್ತು. ಅವನಲ್ಲಿ ಅಹಂಕಾರ ಲೇಶಮಾತ್ರವೂ ಇರಲಿಲ್ಲ. ಶ್ರುತದೇವ ಮತ್ತು ಬಹುಲಾಶ್ವರಿಬ್ಬರೂ ಭಗವಾನ್ ಶ್ರೀಕೃಷ್ಣನ ಪರಮಭಕ್ತರಾಗಿದ್ದರು. ॥16॥
(ಶ್ಲೋಕ-17)
ಮೂಲಮ್
ತಯೋಃ ಪ್ರಸನ್ನೋ ಭಗವಾನ್ ದಾರುಕೇಣಾಹೃತಂ ರಥಮ್ ।
ಆರುಹ್ಯ ಸಾಕಂ ಮುನಿಭಿರ್ವಿದೇಹಾನ್ಪ್ರಯಯೌ ಪ್ರಭುಃ ॥
ಅನುವಾದ
ಒಮ್ಮೆ ಭಗವಾನ್ ಶ್ರೀಕೃಷ್ಣನು ಅವರಿಬ್ಬರ ಮೇಲೆ ಪ್ರಸನ್ನನಾಗಿ ದಾರುಕನಿಂದ ರಥವನ್ನು ಸಿದ್ಧಗೊಳಿಸಿ, ಆ ರಥವನ್ನು ಹತ್ತಿ ದ್ವಾರಕೆಯಿಂದ ವಿದೇಹ ನಗರಕ್ಕೆ ಪ್ರಯಾಣ ಬೆಳೆಸಿದನು. ॥17॥
(ಶ್ಲೋಕ-18)
ಮೂಲಮ್
ನಾರದೋ ವಾಮದೇವೋತ್ರಿಃ ಕೃಷ್ಣೋ ರಾಮೋಸಿತೋರುಣಿಃ ।
ಅಹಂ ಬೃಹಸ್ಪತಿಃ ಕಣ್ವೋ ಮೈತ್ರೇಯಶ್ಚ್ಯವನಾದಯಃ ॥
ಅನುವಾದ
ಭಗವಂತನೊಂದಿಗೆ ನಾರದರು, ವಾಮದೇವ, ಅತ್ರಿ, ವೇದವ್ಯಾಸರು, ಪರಶುರಾಮರು, ಅಸಿತ, ಆರುಣಿ, ಬ್ರಹಸ್ಪತಿ, ಕಣ್ವ, ಮೈತ್ರೇಯ, ಚ್ಯವನ ಮೊದಲಾದ ಋಷಿಗಳೊಂದಿಗೆ ನಾನೂ (ಶುಕರು) ಅವರಲ್ಲಿ ಸೇರಿಕೊಂಡಿದ್ದೆ. ॥18॥
(ಶ್ಲೋಕ-19)
ಮೂಲಮ್
ತತ್ರ ತತ್ರ ತಮಾಯಾಂತಂ ಪೌರಾ ಜಾನಪದಾ ನೃಪ ।
ಉಪತಸ್ಥುಃ ಸಾರ್ಘ್ಯಹಸ್ತಾ ಗ್ರಹೈಃ ಸೂರ್ಯಮಿವೋದಿತಮ್ ॥
ಅನುವಾದ
ಪರೀಕ್ಷಿತನೇ! ಅವರು ಹೋದಲೆಲ್ಲ ಅಲ್ಲಿಯ ನಾಗರೀಕರೂ, ಗ್ರಾಮನಿವಾಸಿಗಳೂ ಪೂಜಾ ಸಾಮಗ್ರಿಗಳೊಂದಿಗೆ ಉಪಸ್ಥಿತರಿದ್ದರು. ಗ್ರಹಗಳೊಂದಿಗೆ ಸಾಕ್ಷಾತ್ ಸೂರ್ಯನಾರಾಯಣನೇ ಉದಯಿಸಿ ಬಂದಿರುವನೋ ಎಂದು ತಿಳಿದು ಭಗವಂತನನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ॥19॥
(ಶ್ಲೋಕ-20)
ಮೂಲಮ್
ಆನರ್ತಧನ್ವಕುರುಜಾಂಗಲಕಂಕಮತ್ಸ್ಯ-
ಪಾಂಚಾಲಕುಂತಿಮಧುಕೇಕಯಕೋಸಲಾರ್ಣಾಃ ।
ಅನ್ಯೇ ಚ ತನ್ಮುಖಸರೋಜಮುದಾರಹಾಸ-
ಸ್ನಿಗ್ಧೇಕ್ಷಣಂ ನೃಪ ಪಪುರ್ದೃಶಿಭಿರ್ನೃನಾರ್ಯಃ ॥
ಅನುವಾದ
ಪರೀಕ್ಷಿತನೇ! ದಾರಿಯಲ್ಲಿ ಆನರ್ತ, ಧನ್ವ, ಕುರು ಜಾಂಗಲ, ಕಂಕ, ಮತ್ಸ್ಯ, ಪಾಂಚಾಲ, ಕುಂತೀ, ಮಧು, ಕೇಕಯ, ಕೋಸಲ, ಅರ್ಣ ಮೊದಲಾದ ಅನೇಕ ದೇಶದ ನರ-ನಾರಿಯರು ತಮ್ಮ ನೇತ್ರಗಳೆಂಬ ದ್ರೋಣಗಳಿಂದ ಭಗವಾನ್ ಶ್ರೀಕೃಷ್ಣನ ಉನ್ಮುಕ್ತ ಹಾಸ್ಯವನ್ನೂ, ಪ್ರೇಮ ಪೂರ್ಣ ಕಟಾಕ್ಷದಿಂದ ಕೂಡಿದ ಮುಖಾರವಿಂದದ ಮಕರಂದವನ್ನು ಪಾನಮಾಡಿದರು. ॥20॥
(ಶ್ಲೋಕ-21)
ಮೂಲಮ್
ತೇಭ್ಯಃ ಸ್ವವೀಕ್ಷಣವಿನಷ್ಟತಮಿಸ್ರದೃಗ್ಭ್ಯಃ
ಕ್ಷೇಮಂ ತ್ರಿಲೋಕಗುರುರರ್ಥದೃಶಂ ಚ ಯಚ್ಛನ್ ।
ಶೃಣ್ವನ್ ದಿಗಂತಧವಲಂ ಸ್ವಯಶೋಶುಭಘ್ನಂ
ಗೀತಂ ಸುರೈರ್ನೃಭಿರಗಾಚ್ಛನಕೈರ್ವಿದೇಹಾನ್ ॥
ಅನುವಾದ
ಮೂರು ಲೋಕಗಳ ಗುರುವಾದ ಭಗವಾನ್ ಶ್ರೀಕೃಷ್ಣನ ದರ್ಶನದಿಂದ ಆ ಜನರ ಅಜ್ಞಾನದೃಷ್ಟಿಯು ನಾಶವಾಯಿತು. ಪ್ರಭುವು ದರ್ಶನ ಮಾಡುವ ನರ-ನಾರಿಯರಿಗೆ ತನ್ನ ಕರುಣಾದೃಷ್ಟಿಯಿಂದ ಪರಮ ಶ್ರೇಯಸ್ಸನ್ನು, ಆತ್ಮಜ್ಞಾನವನ್ನು ಕರುಣಿಸುತ್ತಾ ಮುಂದರಿಯುತ್ತಿದ್ದನು. ಅಲ್ಲಲ್ಲಿ ಮನುಷ್ಯರು, ದೇವತೆಗಳು-ಸಮಸ್ತ ದಿಕ್ಕುಗಳನ್ನು ಉಜ್ವಲಗೊಳಿಸುವಂತಹ, ಸಮಸ್ತ ಅಶುಭಗಳನ್ನು ನಾಶಮಾಡುವಂತಹ ಭಗವಂತನ ಮಂಗಳ ಕೀರ್ತಿಯನ್ನು ಹಾಡುತ್ತಿದ್ದರು. ಅಂತಹ ಸ್ತೋತ್ರಗಳನ್ನು ಆಲಿಸುತ್ತಾ ಭಗವಾನ್ ಶ್ರೀಕೃಷ್ಣನು ಮಿಥಿಲಾಪಟ್ಟಣವನ್ನು ಸೇರಿದನು. ॥21॥
(ಶ್ಲೋಕ-22)
ಮೂಲಮ್
ತೇಚ್ಯುತಂ ಪ್ರಾಪ್ತಮಾಕರ್ಣ್ಯ ಪೌರಾ ಜಾನಪದಾ ನೃಪ ।
ಅಭೀಯುರ್ಮುದಿತಾಸ್ತಸ್ಮೈ ಗೃಹೀತಾರ್ಹಣಪಾಣಯಃ ॥
ಅನುವಾದ
ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಶುಭಾಗಮನದ ಸಮಾಚಾರವನ್ನು ಕೇಳಿದ ಮಿಥಿಲಾಪುರ ನಿವಾಸಿಗಳ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಕೈಗಳಲ್ಲಿ ವಿವಿಧ ಪೂಜಾಸಾಮಗ್ರಿಗಳನ್ನು ಹಿಡಿದುಕೊಂಡು ಶ್ರೀಕೃಷ್ಣನನ್ನು ಸ್ವಾಗತಿಸಲು ಧಾವಿಸಿ ಬಂದರು. ॥22॥
(ಶ್ಲೋಕ-23)
ಮೂಲಮ್
ದೃಷ್ಟ್ವಾತ ಉತ್ತಮಶ್ಲೋಕಂ ಪ್ರೀತ್ಯುತ್ಫುಲ್ಲಾನನಾಶಯಾಃ ।
ಕೈರ್ಧೃತಾಂಜಲಿಭಿರ್ನೇಮುಃ ಶ್ರುತಪೂರ್ವಾಂಸ್ತಥಾ ಮುನೀನ್ ॥
ಅನುವಾದ
ಭಗವಾನ್ ಶ್ರೀಕೃಷ್ಣನ ದರ್ಶವನ್ನು ಪಡೆದು ಅವರ ಹೃದಯ ಮತ್ತು ಮುಖಕಮಲಗಳು ಆನಂದದಿಂದ ವಿಕಸಿತವಾದುವು. ಅವರೆಲ್ಲರೂ ಭಗವಂತನ ಹಾಗೂ ಮುನಿಗಳ ಹೆಸರುಗಳನ್ನು ಮಾತ್ರ ಕೇಳಿದ್ದರೇ ವಿನಹ ನೋಡಿರಲಿಲ್ಲ. ಈಗ ಪ್ರತ್ಯಕ್ಷವಾಗಿ ನೋಡಿ ಕೈಜೋಡಿಸಿ, ತಲೆತಗ್ಗಿಸಿ ವಂದಿಸಿಕೊಂಡರು. ॥23॥
(ಶ್ಲೋಕ-24)
ಮೂಲಮ್
ಸ್ವಾನುಗ್ರಹಾಯ ಸಂಪ್ರಾಪ್ತಂ ಮನ್ವಾನೌ ತಂ ಜಗದ್ಗುರುಮ್ ।
ಮೈಥಿಲಃ ಶ್ರುತದೇವಶ್ಚ ಪಾದಯೋಃ ಪೇತತುಃ ಪ್ರಭೋಃ ॥
ಅನುವಾದ
ಜಗದ್ಗುರು ಭಗವಾನ್ ಶ್ರೀಕೃಷ್ಣನು ನಮ್ಮ ಮೇಲೆ ಅನುಗ್ರಹಿಸಲಿಕ್ಕಾಗಿಯೇ ಆಗಮಿಸಿರುವನೆಂದು ತಿಳಿದ ಮಿಥಿಲೇಶಬಹುಲಾಶ್ವ ಮತ್ತು ಶ್ರುತ ದೇವರು ಅವನ ಚರಣಗಳಲ್ಲಿ ಬಿದ್ದು ನಮಸ್ಕರಿಸಿಕೊಂಡರು. ॥24॥
(ಶ್ಲೋಕ-25)
ಮೂಲಮ್
ನ್ಯಮಂತ್ರಯೇತಾಂ ದಾಶಾರ್ಹಮಾತಿಥ್ಯೇನ ಸಹ ದ್ವಿಜೈಃ ।
ಮೈಥಿಲಃ ಶ್ರುತದೇವಶ್ಚ ಯುಗಪತ್ಸಂಹತಾಂಜಲೀ ॥
ಅನುವಾದ
ಬಹುಲಾಶ್ವ ಹಾಗೂ ಶ್ರುತದೇವರಿಬ್ಬರೂ ಒಟ್ಟಿಗೆ ಕೈಜೋಡಿಸಿಕೊಂಡು ಮುನಿ ಮಂಡಳಿಯೊಂದಿಗೆ ಭಗವಾನ್ ಶ್ರೀಕೃಷ್ಣನಿಗೆ ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸಿಕೊಂಡರು. ॥25॥
(ಶ್ಲೋಕ-26)
ಮೂಲಮ್
ಭಗವಾಂಸ್ತದಭಿಪ್ರೇತ್ಯ ದ್ವಯೋಃ ಪ್ರಿಯಚಿಕೀರ್ಷಯಾ ।
ಉಭಯೋರಾವಿಶದ್ಗೇಹಮುಭಾಭ್ಯಾಂ ತದಲಕ್ಷಿತಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಇಬ್ಬರ ಪ್ರಾರ್ಥನೆಯನ್ನು ಸ್ವೀಕರಿಸಿ ಇಬ್ಬರನ್ನು ಸಂತೋಷಪಡಿಸಲಿಕ್ಕಾಗಿ ಒಂದೇ ಬಾರಿಗೆ ಬೇರೆ-ಬೇರೆ ರೂಪಗಳಿಂದ ಇಬ್ಬರ ಮನೆಗಳಿಗೂ ತೆರಳಿದನು. ಆದರೆ ಭಗವಾನ್ ಶ್ರೀಕೃಷ್ಣನು ನನ್ನ ಮನೆಗೆ ಬಂದಿರುವನು ಬೇರೆಲ್ಲೂ ಹೋಗಲಿಲ್ಲ ಎಂಬ ವಿಷಯ ತಿಳಿಯಲೇ ಇಲ್ಲ. ॥26॥
(ಶ್ಲೋಕ-27)
ಮೂಲಮ್
ಶ್ರೋತುಮಪ್ಯಸತಾಂ ದೂರಾನ್ ಜನಕಃ ಸ್ವಗೃಹಾಗತಾನ್ ।
ಆನೀತೇಷ್ವಾಸನಾಗ್ರ್ಯೇಷು ಸುಖಾಸೀನಾನ್ಮಹಾಮನಾಃ ॥
(ಶ್ಲೋಕ-28)
ಮೂಲಮ್
ಪ್ರವೃದ್ಧಭಕ್ತ್ಯಾ ಉದ್ಧರ್ಷಹೃದಯಾಸ್ರಾವಿಲೇಕ್ಷಣಃ ।
ನತ್ವಾ ತದಂಘ್ರೀನ್ ಪ್ರಕ್ಷಾಲ್ಯ ತದಪೋ ಲೋಕಪಾವನೀಃ ॥
(ಶ್ಲೋಕ-29)
ಮೂಲಮ್
ಸಕುಟುಂಬೋ ವಹನ್ಮೂರ್ಧ್ನಾ ಪೂಜಯಾಂಚಕ್ರ ಈಶ್ವರಾನ್ ।
ಗಂಧಮಾಲ್ಯಾಂಬರಾಕಲ್ಪಧೂಪದೀಪಾರ್ಘ್ಯಗೋವೃಷೈಃ ॥
ಅನುವಾದ
ದುಷ್ಟ-ದುರಾಚಾರಿ ಅಸತ್ಪುರುಷರು ಯಾರ ಹೆಸರೂ ಕೂಡ ಕೇಳಲಾರರೋ ಅಂತಹ ಭಗವಾನ್ ಶ್ರೀಕೃಷ್ಣನು ಮತ್ತು ಋಷಿ-ಮುನಿಗಳು ತನ್ನ ಮನೆಗೆ ಆಗಮಿಸಿದ್ದನ್ನು ನೋಡಿದ ಮಹಾನುಭಾವನಾದ ಬಹುಲಾಶ್ವನು ಸುಂದರವಾದ ಆಸನಗಳನ್ನು ತರಿಸಿ ಭಗವಂತನನ್ನು ಹಾಗೂ ಋಷಿ-ಮುನಿಗಳನ್ನು ಕುಳ್ಳಿರಿಸಿದನು. ಆ ಸಮಯದಲ್ಲಿ ಬಹುಲಾಶ್ವನಿಗೆ ಪ್ರೇಮ-ಭಕ್ತಿಯ ಉದ್ರೇಕದಿಂದ ಹೃದಯ ತುಂಬಿಬಂತು. ಕಣ್ಣುಗಳಲ್ಲಿ ಆನಂದಾಶ್ರುಗಳು ಚಿಮ್ಮಿದವು. ಅವನು ತನ್ನ ಪರಮಪೂಜ್ಯ ಅತಿಥಿಯ ಚರಣಗಳಲ್ಲಿ ನಮಸ್ಕಾರ ಮಾಡಿ, ಪಾದಗಳನ್ನು ತೊಳೆದು ಆ ಪವಿತ್ರ ಚರಣೋದಕವನ್ನು ತನ್ನ ಕುಟುಂಬದವರೊಂದಿಗೆ ತಲೆಯಲ್ಲಿ ಧರಿಸಿಕೊಂಡನು. ಮತ್ತೆ ಭಗವಂತನನ್ನು ಮತ್ತು ಭಗವತ್ಸ್ವರೂಪಿಗಳಾದ ಋಷಿಗಳನ್ನು ಗಂಧ, ಪುಷ್ಪಮಾಲೆ, ವಸ್ತ್ರಾಲಂಕಾರ, ಧೂಪ, ದೀಪ, ಅರ್ಘ್ಯ, ಗೋ, ವೃಷಭ ಮುಂತಾದುವನ್ನು ಸಮರ್ಪಿಸಿ ಭಕ್ತಿಯಿಂದ ಪೂಜೆಮಾಡಿದನು. ॥27-29॥
(ಶ್ಲೋಕ-30)
ಮೂಲಮ್
ವಾಚಾ ಮಧುರಯಾ ಪ್ರೀಣನ್ನಿದಮಾಹಾನ್ನತರ್ಪಿತಾನ್ ।
ಪಾದಾವಂಕಗತೌ ವಿಷ್ಣೋಃ ಸಂಸ್ಪೃಶನ್ ಶನಕೈರ್ಮುದಾ ॥
ಅನುವಾದ
ಎಲ್ಲ ಜನರೂ ಭೋಜನಾದಿಗಳಿಂದ ತೃಪ್ತರಾದಾಗ ಬಹುಲಾಶ್ವರಾಜನು ಭಗವಾನ್ ಶ್ರೀಕೃಷ್ಣನ ಚರಣಗಳನ್ನು ತನ್ನ ತೊಡೆಯಲ್ಲಿ ಎತ್ತಿಕೊಂಡು ಅತ್ಯಂತ ಆನಂದದಿಂದ ನಿಧಾನವಾಗಿ ಕಾಲುಗಳನ್ನೊತ್ತುತ್ತಾ, ಮಧುರವಾದ ಮಾತುಗಳಿಂದ ಭಗವಂತನನ್ನು ಸ್ತುತಿಸತೊಡಗಿದನು.॥30॥
(ಶ್ಲೋಕ-31)
ಮೂಲಮ್ (ವಾಚನಮ್)
ರಾಜೋವಾಚ
ಮೂಲಮ್
ಭವಾನ್ ಹಿ ಸರ್ವಭೂತಾನಾಮಾತ್ಮಾ ಸಾಕ್ಷೀ ಸ್ವದೃಗ್ವಿಭೋ ।
ಅಥ ನಸ್ತ್ವತ್ಪದಾಂಭೋಜಂ ಸ್ಮರತಾಂ ದರ್ಶನಂ ಗತಃ ॥
ಅನುವಾದ
ಬಹುಲಾಶ್ವರಾಜನು ಹೇಳಿದನು — ಪ್ರಭುವೇ! ನೀನು ಸಮಸ್ತ ಪ್ರಾಣಿಗಳ ಆತ್ಮಸ್ವರೂಪದ ಸಾಕ್ಷಿಯೂ, ಸ್ವಯಂ ಪ್ರಕಾಶನೂ ಆಗಿರುವೆ. ನಾವು ಯಾವಾಗಲೂ ನಿನ್ನ ಚರಣ ಕಮಲಗಳ ಸ್ಮರಣೆಯನ್ನು ಮಾಡುತ್ತಲೇ ಇದ್ದೇವೆ. ಅದರಿಂದಲೆ ನೀನು ನಮಗೆ ದಿವ್ಯದರ್ಶನವನ್ನಿತ್ತು ನಮ್ಮನ್ನು ಕೃತಾರ್ಥರನ್ನಾಗಿ ಮಾಡಿರುವೆ.॥31॥
(ಶ್ಲೋಕ-32)
ಮೂಲಮ್
ಸ್ವವಚಸ್ತದೃತಂ ಕರ್ತುಮಸ್ಮದ್ದೃಗ್ಗೋಚರೋ ಭವಾನ್ ।
ಯದಾತ್ಥೈಕಾಂತಭಕ್ತಾನ್ಮೇ ನಾನಂತಃ ಶ್ರೀರಜಃ ಪ್ರಿಯಃ ॥
ಅನುವಾದ
ಭಗವಂತಾ! ನನ್ನಲ್ಲಿ ಅನನ್ಯವಾದ ಭಕ್ತಿಯಿರುವ ಏಕಾಂತ ಭಕ್ತರು - ನನ್ನ ಸ್ವರೂಪರೇ ಆಗಿದ್ದಾರೆ. ಅವರು ಅನಂತನಿಗಿಂತಲೂ, ಅರ್ಧಾಂಗಿನೀ ಲಕ್ಷ್ಮೀದೇವಿಗಿಂತಲೂ, ಪುತ್ರನಾದ ಬ್ರಹ್ಮದೇವರಿಗಿಂತಲೂ ಹೆಚ್ಚು ಪ್ರಿಯರಾದವರು ಎಂದು ಹೇಳಿರುವ ನಿನ್ನ ಮಾತನ್ನು ಸತ್ಯಗೊಳಿಸುವ ಸಲುವಾಗಿಯೇ ನೀನು ನಮಗೆ ದರ್ಶನವನ್ನು ಕೊಟ್ಟಿರುವೆ. ॥32॥
(ಶ್ಲೋಕ-33)
ಮೂಲಮ್
ಕೋ ನು ತ್ವಚ್ಚರಣಾಂಭೋಜಮೇವಂವಿದ್ವಿಸೃಜೇತ್ಪುಮಾನ್ ।
ನಿಷ್ಕಿಂಚನಾನಾಂ ಶಾಂತಾನಾಂ ಮುನೀನಾಂ ಯಸ್ತ್ವಮಾತ್ಮದಃ ॥
ಅನುವಾದ
ನಿನ್ನ ಇಂತಹ ಪರಮದಯೆಯನ್ನೂ, ಪ್ರೇಮಪರವಶತೆಯನ್ನು ತಿಳಿದಿರುವ ಯಾವನು ತಾನೇ ನಿನ್ನ ಚರಣಕಮಗಳನ್ನು ತ್ಯಜಿಸಬಲ್ಲನು? ನಿನ್ನನ್ನು ಬಿಟ್ಟು ಬೇರೆ ತಮ್ಮದೆಂಬ ಯಾವ ವಸ್ತುವೂ ಇಲ್ಲದಿರುವ ಶಾಂತಾತ್ಮರಾದ ಮುನಿಗಳಿಗೆ ನೀನು ನಿನ್ನನ್ನೇ ಕೊಟ್ಟುಕೊಳ್ಳುವೆ. ॥33॥
(ಶ್ಲೋಕ-34)
ಮೂಲಮ್
ಯೋವತೀರ್ಯ ಯದೋರ್ವಂಶೇ ನೃಣಾಂ ಸಂಸರತಾಮಿಹ ।
ಯಶೋ ವಿತೇನೇ ತಚ್ಛಾಂತ್ಯೈ ತ್ರೈಲೋಕ್ಯವೃಜಿನಾಪಹಮ್ ॥
ಅನುವಾದ
ನೀನು ಯದುವಂಶದಲ್ಲಿ ಅವತರಿಸಿ ಹುಟ್ಟು ಸಾವುಗಳೆಂಬ ಚಕ್ರದಲ್ಲಿ ಸಿಕ್ಕಿ ನರಳುತ್ತಿರುವ ಮನುಷ್ಯರನ್ನು ಉದ್ಧರಿಸುವ ಸಲುವಾಗಿ, ಮೂರು ಲೋಕಗಳ ಪಾಪಗಳನ್ನು ತೊಡೆದು ಹಾಕುವಂತಹ ನಿನ್ನ ಧವಳ ಕೀರ್ತಿಯನ್ನು ವಿಸ್ತರಿಸಿರುವೆ. ॥34॥
(ಶ್ಲೋಕ-35)
ಮೂಲಮ್
ನಮಸ್ತುಭ್ಯಂ ಭಗವತೇ ಕೃಷ್ಣಾಯಾಕುಂಠಮೇಧಸೇ ।
ನಾರಾಯಣಾಯ ಋಷಯೇ ಸುಶಾಂತಂ ತಪ ಈಯುಷೇ ॥
ಅನುವಾದ
ಅಚಿಂತ್ಯ ಮಹಿಮನಾದ, ಪಾಪಹರನಾದ, ತಡೆಯಿಲ್ಲದ ಮೇಧಾಶಕ್ತಿಯುಳ್ಳ ನಾರಾಯಣ ಋಷಿ ಸ್ವರೂಪನೂ, ಶಾಂತತಪಸ್ಕನೂ ಆದ ಶ್ರೀಕೃಷ್ಣ ನಿನಗೆ ನಮಸ್ಕರಿಸುತ್ತೇನೆ. ॥35॥
(ಶ್ಲೋಕ-36)
ಮೂಲಮ್
ದಿನಾನಿ ಕತಿಚಿದ್ಭೂಮನ್ ಗೃಹಾನ್ ನೋ ನಿವಸ ದ್ವಿಜೈಃ ।
ಸಮೇತಃ ಪಾದರಜಸಾ ಪುನೀಹೀದಂ ನಿಮೇಃ ಕುಲಮ್ ॥
ಅನುವಾದ
ಪರಬ್ರಹ್ಮ ಸ್ವರೂಪನೇ! ನೀನು ಕೆಲವು ದಿವಸಗಳಾದರೂ ಋಷಿ ಮುನಿಗಳೊಡನೆ ನಮ್ಮ ಅತಿಥ್ಯವನ್ನು ಸ್ವೀಕರಿಸುತ್ತಾ ನಮ್ಮ ಅರಮನೆಯಲ್ಲೇ ಇದ್ದು, ನಿನ್ನ ಚರಣ ಕಮಲಗಳ ಧೂಳಿನಿಂದ ನಿಮಿವಂಶವನ್ನು ಪವಿತ್ರಗೊಳಿಸು. ॥36॥
(ಶ್ಲೋಕ-37)
ಮೂಲಮ್
ಇತ್ಯುಪಾಮಂತ್ರಿತೋ ರಾಜ್ಞಾ ಭಗವಾನ್ಲೋಕಭಾವನಃ ।
ಉವಾಸ ಕುರ್ವನ್ ಕಲ್ಯಾಣಂ ಮಿಥಿಲಾನರಯೋಷಿತಾಮ್ ॥
ಅನುವಾದ
ಪರೀಕ್ಷಿತನೇ! ಎಲ್ಲರ ಜೀವನದಾತೃವಾದ ಭಗವಾನ್ ಶ್ರೀಕೃಷ್ಣನು ಬಹುಲಾಶ್ವರಾಜನ ಈ ಪ್ರಾರ್ಥನೆಯನ್ನು ಮನ್ನಿಸಿ ಮಿಥಿಲೆಯ ನರ-ನಾರಿಯರ ಕಲ್ಯಾಣವನ್ನುಂಟುಮಾಡುತ್ತಾ ಕೆಲವು ದಿವಸಗಳವರೆಗೆ ಅಲ್ಲೇ ಇದ್ದನು. ॥37॥
(ಶ್ಲೋಕ-38)
ಮೂಲಮ್
ಶ್ರುತದೇವೋಚ್ಯುತಂ ಪ್ರಾಪ್ತಂ ಸ್ವಗೃಹಾನ್ಜನಕೋ ಯಥಾ ।
ನತ್ವಾ ಮುನೀನ್ ಸುಸಂಹೃಷ್ಟೋ ಧುನ್ವನ್ವಾಸೋ ನನರ್ತ ಹ ॥
ಅನುವಾದ
ಪ್ರಿಯ ಪರೀಕ್ಷಿತನೇ! ಇತ್ತ ರಾಜಾಬಹುಲಾಶ್ವ ನಂತೆಯೇ ಶ್ರುತದೇವನೂ ಭಗವಾನ್ ಶ್ರೀಕೃಷ್ಣನನ್ನು ಮತ್ತು ಋಷಿಮುನಿಗಳನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಶ್ರೀಕೃಷ್ಣನಿಗೂ, ಮುನಿಗಳಿಗೂ ನಮಸ್ಕರಿಸಿ ಆನಂದ ತುಂದಿಲನಾಗಿ ವಸ್ತ್ರವನ್ನು ಮೇಲಕ್ಕೆ ಹಾರಿಸುತ್ತಾ ಕುಣಿದಾಡಿದನು. ॥38॥
(ಶ್ಲೋಕ-39)
ಮೂಲಮ್
ತೃಣಪೀಠಬೃಸೀಷ್ವೇತಾನಾನೀತೇಷೂಪವೇಶ್ಯ ಸಃ ।
ಸ್ವಾಗತೇನಾಭಿನಂದ್ಯಾಂಘ್ರೀನ್ ಸಭಾರ್ಯೋವನಿಜೇ ಮುದಾ ॥
ಅನುವಾದ
ಶ್ರುತದೇವನು ಮಣೆ, ಚಾಪೆ, ದರ್ಭಾಸನಗಳನ್ನು ಹಾಸಿ ಭಗವಾನ್ ಶ್ರೀಕೃಷ್ಣನನ್ನು ಮತ್ತು ಮುನಿಗಳನ್ನು ಕುಳ್ಳಿರಿಸಿ ಸ್ವಾಗತ ಭಾಷಣಗಳ ಮೂಲಕ ಅವರನ್ನು ಅಭಿನಂದಿಸಿ, ತನ್ನ ಪತ್ನಿಯೊಂದಿಗೆ ಅತ್ಯಂತ ಆನಂದದಿಂದ ಎಲ್ಲರ ಕಾಲುಗಳನ್ನು ತೊಳೆದನು. ॥39॥
(ಶ್ಲೋಕ-40)
ಮೂಲಮ್
ತದಂಭಸಾ ಮಹಾಭಾಗ ಆತ್ಮಾನಂ ಸಗೃಹಾನ್ವಯಮ್ ।
ಸ್ನಾಪಯಾಂಚಕ್ರ ಉದ್ಧರ್ಷೋ ಲಬ್ಧಸರ್ವಮನೋರಥಃ ॥
ಅನುವಾದ
ಬಳಿಕ ಮಹಾಸೌಭಾಗ್ಯಶಾಲಿಯಾದ ಶ್ರುತದೇವನು ಭಗವಂತನ ಹಾಗೂ ಋಷಿಗಳ ಚರಣೋದಕವನ್ನು ಮನೆ-ಕುಟುಂಬದವರಿಗೆ ಸಿಂಪಡಿಸಿ, ತಾನೂ ತಲೆಯಲ್ಲಿ ಧರಿಸಿಕೊಂಡನು. ಆ ಸಮಯದಲ್ಲಿ ಅವನ ಸಕಲ ಮನೋರಥಗಳು ಪೂರ್ಣಗೊಂಡವು. ಅವನು ಹರ್ಷಾತಿರೇಕದಿಂದ ಉನ್ಮತ್ತನಂತಾಗಿದ್ದನು. ॥40॥
(ಶ್ಲೋಕ-41)
ಮೂಲಮ್
ಲಾರ್ಹಣೋಶೀರಶಿವಾಮೃತಾಂಬುಭಿ-
ರ್ಮೃದಾ ಸುರಭ್ಯಾ ತುಲಸೀಕುಶಾಂಬುಜೈಃ ।
ಆರಾಧಯಾಮಾಸ ಯಥೋಪಪನ್ನಯಾ
ಸಪರ್ಯಯಾ ಸತ್ತ್ವವಿವರ್ಧನಾಂಧಸಾ ॥
ಅನುವಾದ
ಅನಂತರ ಅವನು ಫಲ, ಗಂಧ, ಲಾವಂಚದಿಂದ ಸುವಾಸಿತವಾದ, ನಿರ್ಮಲವಾದ, ಸುಮಧುರವಾದ ಶುದ್ಧೋದಕ, ಸುಗಂಧಿತ ವೃತ್ತಿಕೆ, ತುಲಸೀ, ದರ್ಭೆ, ಕಮಲ ಮುಂತಾದ ಸುಲಭವಾಗಿ ದೊರೆಯುವ ಪೂಜಾಸಾಮಗ್ರಿಗಳಿಂದಲೂ, ಸತ್ತ್ವಗುಣವನ್ನು ಹೆಚ್ಚಿಸುವ ಮೃಷ್ಟಾನ್ನದಿಂದಲೂ ಎಲ್ಲರ ಆರಾಧನೆಯನ್ನು ಮಾಡಿದನು. ॥41॥
(ಶ್ಲೋಕ-42)
ಮೂಲಮ್
ಸ ತರ್ಕಯಾಮಾಸ ಕುತೋ ಮಮಾನ್ವಭೂ-
ದ್ಗೃಹಾಂಧಕೂಪೇ ಪತಿತಸ್ಯ ಸಂಗಮಃ ।
ಯಃ ಸರ್ವತೀರ್ಥಾಸ್ಪದಪಾದರೇಣುಭಿಃ
ಕೃಷ್ಣೇನ ಚಾಸ್ಯಾತ್ಮನಿಕೇತಭೂಸುರೈಃ ॥
ಅನುವಾದ
ಆ ಸಮಯದಲ್ಲಿ ಶ್ರುತದೇವನು ತನ್ನಲ್ಲೇ ಹೀಗೆ ಯೋಚಿಸಿದನು - ‘ನಾನಾದರೋ ಮನೆ-ಮಠ ಎಂಬ ಸಂಸಾರದ ಕಗ್ಗತ್ತಲೆಯ ಬಾವಿಯಲ್ಲಿ ಬಿದ್ದ ನಿರ್ಭಾಗ್ಯನಾಗಿದ್ದೇನೆ. ನನಗೆ ಸಮಸ್ತ ತೀರ್ಥಗಳನ್ನು ತೀರ್ಥೀಕರಿಸುವ ಪರಮ ಪವಿತ್ರವಾದ ಪಾದಧೂಳಿಯನ್ನು ಹೊಂದಿರುವ ಭಗವಾನ್ ಶ್ರೀಕೃಷ್ಣನ ಮತ್ತು ಭಾಗವತೋತ್ತಮರ ಸಂಗವು ಹೇಗೆ ತಾನೇ ಪ್ರಾಪ್ತವಾಯಿತು? ॥42॥
(ಶ್ಲೋಕ-43)
ಮೂಲಮ್
ಸೂಪವಿಷ್ಟಾನ್ ಕೃತಾತಿಥ್ಯಾನ್ ಶ್ರುತದೇವ ಉಪಸ್ಥಿತಃ ।
ಸಭಾರ್ಯಸ್ವಜನಾಪತ್ಯ ಉವಾಚಾಂಘ್ರ್ಯಭಿಮರ್ಶನಃ ॥
ಅನುವಾದ
ಅತಿಥಿಗಳೆಲ್ಲರೂ ಆದರದ ಆತಿಥ್ಯವನ್ನು ಸ್ವೀಕರಿಸಿ ಸುಖಾಸನಗಳಲ್ಲಿ ಕುಳಿತನಂತರ ಶ್ರುತದೇವನು ತನ್ನ ಪತ್ನೀ-ಪುತ್ರರೊಡನೆ ಹಾಗೂ ಇತರ ಸಂಬಂಧಿಗಳೊಂದಿಗೆ ಅವರ ಸೇವೆಯಲ್ಲಿ ತೊಡಗಿದನು. ಭಗವಾನ್ ಶ್ರೀಕೃಷ್ಣನ ಚರಣ ಕಮಲಗಳನ್ನು ಹಿಡಿದುಕೊಂಡು ಅವನು ಪರಿ-ಪರಿಯಾಗಿ ಸ್ತುತಿಸಿದನು - ॥43॥
(ಶ್ಲೋಕ-44)
ಮೂಲಮ್ (ವಾಚನಮ್)
ಶ್ರುತದೇವ ಉವಾಚ
ಮೂಲಮ್
ನಾದ್ಯ ನೋ ದರ್ಶನಂ ಪ್ರಾಪ್ತಃ ಪರಂ ಪರಮಪೂರುಷಃ ।
ಯರ್ಹೀದಂ ಶಕ್ತಿಭಿಃ ಸೃಷ್ಟ್ವಾ ಪ್ರವಿಷ್ಟೋ ಹ್ಯಾತ್ಮಸತ್ತಯಾ ॥
ಅನುವಾದ
ಶ್ರುತದೇವನು ಹೇಳಿದನು — ಪ್ರಭೋ! ನೀನು ವ್ಯಕ್ತಾವ್ಯಕ್ತ ರೂಪೀ ಪ್ರಕೃತಿ ಮತ್ತು ಜೀವರಿಂದ ಅತೀತನಾದ ಪುರುಷೋತ್ತಮನಾಗಿರುವೆ. ನೀನು ನನಗೆ ಇಂದೇ ದರ್ಶನ ಕೊಟ್ಟಿರುವೆ ಎಂದೇನಿಲ್ಲ. ನೀನು ನಿನ್ನ ಶಕ್ತಿಗಳಿಂದ ಈ ಜಗತ್ತನ್ನು ಸೃಷ್ಟಿಸಿ, ಆತ್ಮಸತ್ತೆಯ ರೂಪದಿಂದ ಇದರಲ್ಲಿ ಪ್ರವೇಶಿಸಿದೆ. ಅಂದಿನಿಂದಲೂ ನಮಗೆಲ್ಲರಿಗೆ ದೊರೆತಿರುವೆ. ॥44॥
(ಶ್ಲೋಕ-45)
ಮೂಲಮ್
ಯಥಾ ಶಯಾನಃ ಪುರುಷೋ ಮನಸೈವಾತ್ಮಮಾಯಯಾ ।
ಸೃಷ್ಟ್ವಾ ಲೋಕಂ ಪರಂ ಸ್ವಾಪ್ನಮನುವಿಶ್ಯಾವಭಾಸತೇ ॥
ಅನುವಾದ
ಮಲಗಿರುವ ಮನುಷ್ಯನು ಸ್ವಪ್ನಾವಸ್ಥೆಯಲ್ಲಿ ಅವಿದ್ಯಾವಶನಾಗಿ ಮನಸ್ಸಿನಿಂದಲೇ ಸ್ವಪ್ನಜಗತ್ತನ್ನು ಸೃಷ್ಟಿಸಿ, ಆ ಜಗತ್ತಿನಲ್ಲೇ ಅನೇಕ ರೂಪಗಳಿಂದ ಕರ್ಮ ಮಾಡುತ್ತಿರುವಂತೆ ತೋರುತ್ತದೆ. ಹಾಗೆಯೇ ನೀನು ನಿನ್ನಲ್ಲೇ ನಿನ್ನ ಮಾಯೆಯಿಂದ ಜಗತ್ತನ್ನು ರಚಿಸಿ ಅದರಲ್ಲಿ ಪ್ರವಿಷ್ಟನಾಗಿ ಅನೇಕ ರೂಪಗಳಿಂದ ಪ್ರಕಾಶಿಸುತ್ತಿರುವೆ. ॥45॥
(ಶ್ಲೋಕ-46)
ಮೂಲಮ್
ಶೃಣ್ವತಾಂ ಗದತಾಂ ಶಶ್ವದರ್ಚತಾಂ ತ್ವಾಭಿವಂದತಾಮ್ ।
ನೃಣಾಂ ಸಂವದತಾಮಂತರ್ಹೃದಿ ಭಾಸ್ಯಮಲಾತ್ಮನಾಮ್ ॥
ಅನುವಾದ
ಸದಾಕಾಲವೂ ನಿನ್ನ ಲೀಲಾಕಥೆಗಳನ್ನು ಶ್ರವಣ-ಕೀರ್ತನೆ ಮತ್ತು ನಿನ್ನ ಪ್ರತಿಮೆಗಳ ಅರ್ಚನೆ-ವಂದನೆ ಮಾಡುತ್ತಾ, ಪರಸ್ಪರವಾಗಿ ನಿನ್ನ ಕುರಿತಾಗಿಯೇ ಚರ್ಚಿಸುತ್ತಿರುವವರ ಹೃದಯ ಶುದ್ಧವಾಗುತ್ತದೆ ಮತ್ತು ನೀನು ಅದರಲ್ಲಿ ಪ್ರಕಾಶಿತನಾಗುವೆ. ॥46॥
(ಶ್ಲೋಕ-47)
ಮೂಲಮ್
ಹೃದಿಸ್ಥೋಪ್ಯತಿದೂರಸ್ಥಃ ಕರ್ಮವಿಕ್ಷಿಪ್ತಚೇತಸಾಮ್ ।
ಆತ್ಮಶಕ್ತಿಭಿರಗ್ರಾಹ್ಯೋಪ್ಯಂತ್ಯುಪೇತಗುಣಾತ್ಮನಾಮ್ ॥
ಅನುವಾದ
ನೀನು ಸಮಸ್ತರ ಹೃದಯದಲ್ಲಿ ನೆಲೆಸಿದ್ದರೂ ಕಾಮ್ಯ ಕರ್ಮಗಳಲ್ಲಿ ತೊಡಗಿ ಚಂಚಲ ಚಿತ್ತರಾದವರಿಂದ ನೀನು ಬಹಳ ದೂರನಾಗಿರುವೆ. ಆದರೆ ನಿನ್ನ ಗುಣಗಾನದಿಂದ ತಮ್ಮ ಅಂತಃಕರಣವನ್ನು ಸದ್ಗುಣ ಸಂಪನ್ನವಾಗಿಸಿಕೊಂಡವರಿಗೆ ಚಿತ್ತವೃತ್ತಿಗಳಿಂದ ಅಗ್ರಾಹ್ಯನಾದರೂ ನೀನು ಅತ್ಯಂತ ಸಮೀಪದವನಾಗುವೆ. ॥47॥
(ಶ್ಲೋಕ-48)
ಮೂಲಮ್
ನಮೋಸ್ತು ತೇಧ್ಯಾತ್ಮವಿದಾಂ ಪರಾತ್ಮನೇ
ಅನಾತ್ಮನೇ ಸ್ವಾತ್ಮವಿಭಕ್ತಮೃತ್ಯವೇ ।
ಸಕಾರಣಾಕಾರಣಲಿಂಗಮೀಯುಷೇ
ಸ್ವಮಾಯಯಾಸಂವೃತರುದ್ಧದೃಷ್ಟಯೇ ॥
ಅನುವಾದ
ಪ್ರಭೋ! ಅಧ್ಯಾತ್ಮತತ್ತ್ವವನ್ನು ತಿಳಿದ ಜ್ಞಾನಿಗಳಿಗೆ ನೀನು ಆತ್ಮ ಸ್ವರೂಪನಾಗಿ ಅವರ ಹೃದಯದಲ್ಲಿ ಬೆಳಗುವೆ. ದೇಹಾತ್ಮ ಬುದ್ಧಿಯುಳ್ಳವರಿಗೆ ನೀನು ಅವರಿಗೆ ಪ್ರಾಪ್ತವಾಗುವ ಮೃತ್ಯುವಿನ ಸ್ವರೂಪನಾಗಿರುವೆ. ಮಹತ್ತತ್ತ್ವವೇ ಮೊದಲಾದ ಕಾರ್ಯಕಾರಣ ರೂಪವಾದ ಪ್ರಕೃತಿಯ ನಿಯಾಮಕನೂ, ಶಾಸ್ತ್ರಕನೂ ನೀನೇ ಆಗಿರುವೆ. ನಿನ್ನಿಂದಲೇ ಸೃಷ್ಟಿಸಲ್ಪಟ್ಟ ಮಾಯೆಯು ನಿನ್ನನ್ನು ಮುಚ್ಚಲಾರದು. ನೀನು ಮಾಯೆಗೆ ಅತೀತನಾಗಿರುವೆ. ಆದರೆ ಆ ಮಾಯೆಯು ಇತರರ ದೃಷ್ಟಿಯನ್ನು ಮುಚ್ಚಿಬಿಡುತ್ತದೆ. ಅಂತಹ ನಿನಗೆ ನಾನು ನಮಸ್ಕರಿಸುತ್ತೇನೆ. ॥48॥
(ಶ್ಲೋಕ-49)
ಮೂಲಮ್
ಸ ತ್ವಂ ಶಾಧಿ ಸ್ವಭೃತ್ಯಾನ್ ನಃ ಕಿಂ ದೇವ ಕರವಾಮಹೇ ।
ಏತದಂತೋ ನೃಣಾಂ ಕ್ಲೇಶೋ ಯದ್ಭವಾನಕ್ಷಿಗೋಚರಃ ॥
ಅನುವಾದ
ದೇವದೇವ! ನಿನ್ನ ಸೇವಕರಾಗಿರುವ ನಾವು ನಿನ್ನ ಯಾವ ಸೇವೆ ಮಾಡಲಿ ಎಂದು ಆಜ್ಞಾಪಿಸು. ಕಣ್ಣುಗಳಿಂದ ನಿನ್ನ ದರ್ಶನವಾಗುವ ತನಕ ಜೀವರಿಗೆ ಕ್ಲೇಶಗಳಿರುತ್ತವೆ. ನಿನ್ನ ದರ್ಶನವಾಗುತ್ತಲೇ ಸಮಸ್ತ ಕ್ಲೇಶಗಳು ಹೊರಟುಹೋಗುತ್ತವೆ. ॥49॥
(ಶ್ಲೋಕ-50)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ತದುಕ್ತಮಿತ್ಯುಪಾಕರ್ಣ್ಯ ಭಗವಾನ್ ಪ್ರಣತಾರ್ತಿಹಾ ।
ಗೃಹೀತ್ವಾ ಪಾಣಿನಾ ಪಾಣಿಂ ಪ್ರಹಸಂಸ್ತಮುವಾಚ ಹ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಶರಣಾಗತಭಯಹಾರಿಯಾದ ಭಗವಾನ್ ಶ್ರೀಕೃಷ್ಣನು ಶ್ರುತದೇವನ ಪ್ರಾರ್ಥನೆಯನ್ನು ಕೇಳಿ, ತನ್ನ ಕೈಯಿಂದ ಅವನ ಕೈ ಹಿಡಿದುಕೊಂಡು ಮುಗುಳ್ನಗುತ್ತಾ ಇಂತೆಂದನು. ॥50॥
ಮೂಲಮ್
(ಶ್ಲೋಕ-51)
ಮೂಲಮ್ (ವಾಚನಮ್)
ಶ್ರೀಭಗವಾನುವಾಚ
ಮೂಲಮ್
ಬ್ರಹ್ಮಂಸ್ತೇನುಗ್ರಹಾರ್ಥಾಯ ಸಂಪ್ರಾಪ್ತಾನ್ ವಿದ್ಧ್ಯಮೂನ್ ಮುನೀನ್ ।
ಸಂಚರಂತಿ ಮಯಾ ಲೋಕಾನ್ ಪುನಂತಃ ಪಾದರೇಣುಭಿಃ ॥
ಅನುವಾದ
ಭಗವಾನ್ ಶ್ರೀಕೃಷ್ಣನು ಹೇಳಿದನು — ಪ್ರಿಯ ಶ್ರುತದೇವನೇ! ಈ ಮಹಾ-ಮಹಾ-ಋಷಿ-ಮುನಿಗಳು ನಿನ್ನನ್ನು ಅನುಗ್ರಹಿಸಲೆಂದೇ ಇಲ್ಲಿಗೆ ಆಗಮಿಸಿದ್ದಾರೆ. ಇವರು ತಮ್ಮ ಚರಣಕಮಲಗಳ ಧೂಳಿಯಿಂದ ಜನರನ್ನು ಮತ್ತು ಲೋಕಗಳನ್ನು ಪವಿತ್ರಗೊಳಿಸುತ್ತಾ ನನ್ನೊಡನೆ ಸಂಚರಿಸುತ್ತಿರುವರು. ॥51॥
ಮೂಲಮ್
(ಶ್ಲೋಕ-52)
ದೇವಾಃ ಕ್ಷೇತ್ರಾಣಿ ತೀರ್ಥಾನಿ ದರ್ಶನಸ್ಪರ್ಶನಾರ್ಚನೈಃ ।
ಶನೈಃ ಪುನಂತಿ ಕಾಲೇನ ತದಪ್ಯರ್ಹತ್ತಮೇಕ್ಷಯಾ ॥
ಅನುವಾದ
ದೇವತೆಗಳು, ಪುಣ್ಯಕ್ಷೇತ್ರಗಳು, ತೀರ್ಥಗಳು-ಇವೆಲ್ಲ ದರ್ಶನ, ಸ್ಪರ್ಶನ, ಅರ್ಚನ ಮುಂತಾದವುಗಳ ಮೂಲಕ ನಿಧಾನವಾಗಿ ಬಹಳ ದಿನಗಳಲ್ಲಿ ಪವಿತ್ರಗೊಳಿಸು ತ್ತವೆ. ಆದರೆ ಸತ್ಪುರುಷರಾದವರು ತಮ್ಮ ದೃಷ್ಟಿಯಿಂದಲೇ ಪವಿತ್ರರಾಗಿಸಿಬಿಡುತ್ತಾರೆ. ಇಷ್ಟೇ ಅಲ್ಲ. ದೇವತಾದಿಗಳಲ್ಲಿರುವ ಪವಿತ್ರ ಮಾಡುವ ಶಕ್ತಿಯೂ ಕೂಡ ಅವರಿಗೆ ಸಂತರ ದೃಷ್ಟಿಯಿಂದಲೇ ದೊರೆತಿದೆ. ॥52॥
(ಶ್ಲೋಕ-53)
ಮೂಲಮ್
ಬ್ರಾಹ್ಮಣೋ ಜನ್ಮನಾ ಶ್ರೇಯಾನ್ಸರ್ವೇಷಾಂ ಪ್ರಾಣಿನಾಮಿಹ ।
ತಪಸಾ ವಿದ್ಯಯಾ ತುಷ್ಟ್ಯಾ ಕಿಮು ಮತ್ಕಲಯಾ ಯುತಃ ॥
ಅನುವಾದ
ಶ್ರುತದೇವ! ಹುಟ್ಟಿ ನಿಂದಲೇ ಬ್ರಾಹ್ಮಣನು ಸಕಲ ಪ್ರಾಣಿಗಳಿಗೂ ಶ್ರೇಷ್ಠನೆನಿಸುತ್ತಾನೆ. ಹೀಗಿರುವಾಗ ಅವನು ತಪಸ್ಸು, ವಿದ್ಯೆ, ಸಂತೋಷ ಮತ್ತು ನನ್ನ ಉಪಾಸನೆ ನನ್ನ ಭಕ್ತಿಯಿಂದ ಕೂಡಿದ್ದರೆ ಹೇಳುವುದೇನಿದೆ? ॥53॥
ಮೂಲಮ್
(ಶ್ಲೋಕ-54)
ನ ಬ್ರಾಹ್ಮಣಾನ್ಮೇ ದಯಿತಂ ರೂಪಮೇತಚ್ಚತುರ್ಭುಜಮ್ ।
ಸರ್ವವೇದಮಯೋ ವಿಪ್ರಃ ಸರ್ವದೇವಮಯೋ ಹ್ಯಹಮ್ ॥
ಅನುವಾದ
ನನಗೆ ಈ ನನ್ನ ಚತುರ್ಭುಜಗಳಿಂದ ಕೂಡಿದ ಶರೀರವೂ ಕೂಡ ಬ್ರಾಹ್ಮಣರಷ್ಟು ಪ್ರಿಯವಲ್ಲ. ಏಕೆಂದರೆ, ಬ್ರಾಹ್ಮಣನು ಸರ್ವವೇದಮಯನಾಗಿದ್ದಾನೆ. ನಾನು ಸರ್ವದೇವಮಯನಾಗಿರುವೆನು. ಸರ್ವದೇವತೆಗಳು ವೇದಕ್ಕೆ ಅಧೀನರಲ್ಲವೇ? ॥54॥
(ಶ್ಲೋಕ-55)
ಮೂಲಮ್
ದುಷ್ಪ್ರಜ್ಞಾ ಅವಿದಿತ್ವೈವಮವಜಾನಂತ್ಯಸೂಯವಃ ।
ಗುರುಂ ಮಾಂ ವಿಪ್ರಮಾತ್ಮಾನಮರ್ಚಾದಾವಿಜ್ಯದೃಷ್ಟಯಃ ॥
ಅನುವಾದ
ದುರ್ಬುದ್ಧಿಯುಳ್ಳ ಮನುಷ್ಯರು ಇದನ್ನು ತಿಳಿಯದೆ ಕೇವಲ ಶಿಲಾ-ಲೋಹವಿಗ್ರಹಗಳಲ್ಲಿಯೇ ಪೂಜ್ಯಬುದ್ಧಿಯನ್ನಿಡುತ್ತಾ, ಗುಣಗಳಲ್ಲಿ ದೋಷವನ್ನೇ ಹುಡುಕುತ್ತಾ, ಸರ್ವರಿಗೂ ಗುರುವಾದ ಬ್ರಾಹ್ಮಣರನ್ನು ಮತ್ತು ನನ್ನನ್ನು ತಿರಸ್ಕಾರ ದೃಷ್ಟಿಯಿಂದ ನೋಡುತ್ತಾರೆ. ॥55॥
(ಶ್ಲೋಕ-56)
ಮೂಲಮ್
ಚರಾಚರಮಿದಂ ವಿಶ್ವಂ ಭಾವಾ ಯೇ ಚಾಸ್ಯ ಹೇತವಃ ।
ಮದ್ರೂಪಾಣೀತಿ ಚೇತಸ್ಯಾಧತ್ತೇ ವಿಪ್ರೋ ಮದೀಕ್ಷಯಾ ॥
ಅನುವಾದ
ಬ್ರಾಹ್ಮಣರು ನನ್ನ ಸಾಕ್ಷಾತ್ಕಾರವನ್ನು ಪಡೆದು ಈ ಚರಾಚರ ಜಗತ್ತು, ಇದರ ಸಂಬಂಧಿಸಿದ ಎಲ್ಲ ಭಾವನೆಗಳು, ಇದರ ಕಾರಣಗಳಾದ ಪ್ರಕೃತಿ-ಮಹತ್ತತ್ತ್ವವೇ ಮೊದಲಾದ ಎಲ್ಲವೂ ಆತ್ಮಸ್ವರೂಪೀ ಭಗವಂತನ ರೂಪಗಳೇ ಆಗಿವೆ ಎಂದು ತಮ್ಮ ಚಿತ್ತದಲ್ಲಿ ನಿಶ್ಚಯಿಸಿಕೊಳ್ಳುವರು. ॥56॥
(ಶ್ಲೋಕ-57)
ಮೂಲಮ್
ತಸ್ಮಾದ್ ಬ್ರಹ್ಮಋಷೀನೇತಾನ್ ಬ್ರಹ್ಮನ್ ಮಚ್ಛ್ರದ್ಧಯಾರ್ಚಯ ।
ಏವಂ ಚೇದರ್ಚಿತೋಸ್ಮ್ಯದ್ಧಾ ನಾನ್ಯಥಾ ಭೂರಿಭೂತಿಭಿಃ ॥
ಅನುವಾದ
ಅದಕ್ಕಾಗಿ ಶ್ರುತದೇವನೇ! ನೀನು ಈ ಮಹರ್ಷಿಗಳನ್ನು ನನ್ನ ಸ್ವರೂಪರೆಂದೇ ತಿಳಿದು ಪೂರ್ಣ ಶ್ರದ್ಧೆಯಿಂದ ಇವರನ್ನು ಪೂಜಿಸು. ನೀನು ಹೀಗೆ ಮಾಡಿದರೆ ಆಯಾಸವಿಲ್ಲದೆ ಸಾಕ್ಷಾತ್ ನನ್ನ ಪೂಜೆಯನ್ನೇ ಮಾಡಿದಂತಾಗುವುದು. ಇಲ್ಲದಿದ್ದರೆ ಬಹುಮೂಲ್ಯ ಪೂಜಾ ಸಾಮಗ್ರಿಗಳಿಂದಲೂ ಮಾಡಿದ ಅರ್ಚನೆಯು ನನ್ನ ಪೂಜೆಯಾಗಲಾರದು. ॥57॥
(ಶ್ಲೋಕ-58)
ಮೂಲಮ್ (ವಾಚನಮ್)
ಶ್ರೀಶುಕ ಉವಾಚ
ಮೂಲಮ್
ಸ ಇತ್ಥಂ ಪ್ರಭುಣಾದಿಷ್ಟಃ ಸಹಕೃಷ್ಣಾನ್ದ್ವಿಜೋತ್ತಮಾನ್ ।
ಆರಾಧ್ಯೈಕಾತ್ಮಭಾವೇನ ಮೈಥಿಲಶ್ಚಾಪ ಸದ್ಗತೀಮ್ ॥
ಅನುವಾದ
ಶ್ರೀಶುಕಮಹಾಮುನಿಗಳು ಹೇಳುತ್ತಾರೆ — ಪರೀಕ್ಷಿತನೇ! ಭಗವಾನ್ ಶ್ರೀಕೃಷ್ಣನ ಈ ಆದೇಶವನ್ನು ಕೇಳಿ ಶ್ರುತದೇವನು ಶ್ರೀಕೃಷ್ಣನನ್ನು ಮತ್ತು ಆ ಬ್ರಹ್ಮರ್ಷಿಗಳನ್ನು ಏಕಾತ್ಮಭಾವನೆಯಿಂದ ಆರಾಧಿಸಿದನು ಹಾಗೂ ಅವರ ಕೃಪೆಯಿಂದ ಅವನು ಭಗವತ್ಸ್ವರೂಪವನ್ನು ಹೊಂದಿದನು. ಬಹುಲಾಶ್ವ ರಾಜನೂ ಅದೇ ಸದ್ಗತಿಯನ್ನು ಪಡೆದನು. ॥58॥
(ಶ್ಲೋಕ-59)
ಮೂಲಮ್
ಏವಂ ಸ್ವಭಕ್ತಯೋ ರಾಜನ್ ಭಗವಾನ್ ಭಕ್ತಭಕ್ತಿಮಾನ್ ।
ಉಷಿತ್ವಾದಿಶ್ಯ ಸನ್ಮಾರ್ಗಂ ಪುನರ್ದ್ವಾರವತೀಮಗಾತ್ ॥
ಅನುವಾದ
ಪ್ರಿಯ ಪರೀಕ್ಷಿತನೇ! ಭಕ್ತನಾದವನು ಭಗವಂತನಲ್ಲಿ ಹೇಗೆ ಭಕ್ತಿಯನ್ನಿಡುವನೋ ಹಾಗೆಯೇ ಭಗವಂತನೂ ಕೂಡ ಭಕ್ತರ ಕುರಿತು ಭಕ್ತಿಯನ್ನಿಡುತ್ತಾನೆ. ಇಬ್ಬರೂ ಭಕ್ತರಿಗೆ ಸಂತೋಷಪಡಿಸಲಿಕ್ಕಾಗಿ ಕೆಲವು ದಿನಗಳವರೆಗೆ ಶ್ರೀಕೃಷ್ಣನು ಮಿಥಿಲೆಯಲ್ಲೆ ಇದ್ದು, ಅವರಿಗೆ ಸಾಧುಸತ್ಪುರಷರ ಮಾರ್ಗದ ಉಪದೇಶವನ್ನಿತ್ತು ದ್ವಾರಕೆಗೆ ಮರಳಿದನು. ॥59॥
ಅನುವಾದ (ಸಮಾಪ್ತಿಃ)
ಎಂಭತ್ತಾರನೆಯ ಅಧ್ಯಾಯವು ಮುಗಿಯಿತು. ॥86॥
ಇತಿ ಶ್ರೀಮದ್ಭಾಗವತೇ ಮಹಾಪುರಾಣೇ ಪಾರಮಹಂಸ್ಯಾಂ ಸಂಹಿತಾಯಾಂ ದಶಮ ಸ್ಕಂಧೇ ಉತ್ತರಾರ್ಧೇ
ಶ್ರುತದೇವಾನುಗ್ರಹೋ ನಾಮ ಷಡಶೀತಿತಮೋಽಧ್ಯಾಯಃ ॥86॥